Friday, August 24, 2007

ವರಮಹಾಲಕ್ಷ್ಮೀ ವ್ರತ

ಎನ್ನ ಅಜ್ಜಿ ಹೆಸ್ರು ವರಮಹಾಲಕ್ಷ್ಮೀ ಹೇಳಿ. ಅವ್ಳು ವರ್ಮಾಲಕ್ಷ್ಮೀ ಹಬ್ಬದ್ ದಿನ ಹುಟ್ಟಿದ್ರಿಂದ ಆ ಹೆಸ್ರು ಇಟ್ಟಿದ್ದಡ. ಹಂಗಾಗಿ ಇವತ್ತು ಅಜ್ಜಿ ಬರ್ತ್-ಡೇ! ಇದ್ದಿದ್ದಿದ್ರೆ ಫೋನ್ ಮಾಡಿ ವಿಶ್ ಮಾಡ್ಲಾಗಿತ್ತು. ಆದ್ರೆ ತೀರ್ಕ್ಯಂಡು ಒಂದೂವರೆ ವರ್ಷಾತು.

ಅವ್ಳು ಒಂದ್ಸಲ ಎಂಥ ಮಾಡಿದ್ಲಡಪಾ ಅಂದ್ರೆ, ಪ್ಯಾಟಿಗೆ ಹೋಗಿದ್ಲಡ. ಸಾಗ್ರ ಪ್ಯಾಟಿಗೆ. ಅಲ್ಲಿ ಸಾಮಾನೆಲ್ಲ ತಗಂಡು, ಹಂಗೇ ಗಣ್ಪತಿ ದೇವ್‍ಸ್ಥಾನದ್ ರಸ್ತೇಲ್ ಬರ್ತಿರಕ್ಕರೆ ಯಶೋಧ ಹೇಳಿ ಪುರಪ್ಪೆಮನೆ ಊರಿನವ್ಳು ಒಬ್ಳು ಕಂಡ್ಲಡ ಅಜ್ಜಿಗೆ. ಅಜ್ಜಿಗೆ ಅವ್ಳುನ್ನ ಮಾತಾಡಿಸ್ಲಾಗ ಹೇಳಿ ಕಾಣ್ಚಡ. ಎಂಥಕೆ ಹಂಗೆ ಕಾಣ್ಚೇನ ನಂಗೊತ್ತಿಲ್ಲೆ. ಸರಿ, ಈಗ ಯಶೋಧಕ್ಕನಿಂದ ಹೆಂಗಾರು ಮಾಡಿ ತಪ್ಪಿಸ್ಕ್ಯಳವಲಪಾ ಅಂತ ನೋಡ್ತಿರಕ್ಕರೆ, ಯಶೋಧಕ್ಕ ಅಲ್ಲೇ ಯಾವ್ದೋ ಅಂಗಡಿ ಹೊಕ್ಚಡ. ಅವ್ಳು ಅತ್ಲಾಗ್ ಹೊಕ್ಕಿದ್ದೇ ತಡ, ನಮ್ಮನೆ ಅಜ್ಜಿ ಫಾಸ್ಟಾಗಿ ಆ ಅಂಗ್ಡಿ ಕ್ರಾಸ್ ಮಾಡಿ ಮುಂದೆ ಹೋತಡ.

ಇನ್ನೂ ನಾಕು ಹೆಜ್ಜೆ ಇಟ್ಟಿರ್ಲೆ, ಅಷ್ಟೊತ್ತಿಗೆ ಯಶೋಧಕ್ಕ ಇತ್ಲಾಗ್ ತಿರುಗ್ಚಡ, ಅಜ್ಜಿನ ನೋಡ್ಬುಡ್ಚಡ! ಅಜ್ಜಿ ಸ್ಪೀಡಾಗಿ ನೆಡಿತಾ ಇತ್ತಾ, ಯಶೋಧಕ್ಕ ಹಿಂದಕ್ಕಿಂದ "ಹೋಯ್ ವರಮಾಲಕ್ಷ್ಮೀ.. ನಿಂತ್ಕಳೇ.. ಆನು ಯಶೋಧಾ.. ಹೋಯ್ ವರ್ಮಾಲಕ್ಷ್ಮೀ.." ಅಂತ ಜೋರಾಗಿ ಕರದ್ ಕೇಳ್ಚಡ. ಆದ್ರೆ ಅಜ್ಜಿಗೆ ತಿರುಗಿ ನೋಡ್ಲಾಗ ಹೇಳಿ. ಹಂಗಾಗಿ ನಮ್ಮನೆ ಅಜ್ಜಿ ಎಂಥ ಪ್ಲಾನ್ ಮಾಡ್ಚಡ ಗೊತಿದಾ? ಹಂಗೇ ಜೋರಾಗ್ ನೆಡ್ಕೋತ್ಲೇ "ಆಂ? ಆನು ವರಮಾಲಕ್ಷ್ಮೀ ಅಲ್ದೇ!" ಅಂತ ಹೇಳಿ ಮುಂದಕ್ ಹೋಗ್ಬುಡ್ಚಡ!

ಹೆಂಗೆ ನಮ್ಮನೆ ಅಜ್ಜಿ?! ಅವ್ಳು ಹಂಗೇ ಸೈಯಿ, ಏನಾರು ಮಾಡಕ್ಕು ಅಂತ ವ್ರತ ಕೈಗೊಂಡ್ರೆ ಮಾಡಿಯೇ ತೀರೋದು! ಗ್ರೇಟು ಅಲ್ದಾ?!

Friday, August 17, 2007

ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ

ನಾಗರ ಪಂಚಮಿಗೆ ನಮ್ಮನೆಯಲ್ಲಿ ಯಾವಾಗಲೂ ಎಳ್ಳುಂಡೆಯನ್ನೇ ಮಾಡುವುದು. ಬೆಳಗ್ಗೆ ಬೇಗ ಸ್ನಾನ ಮಾಡಿ, ಮಡಿಯಲ್ಲೇ ಬೆಲ್ಲದ ಪಾಕ ಮಾಡಿ, ಅದರಲ್ಲಿ ಹುರಿದ ಎಳ್ಳು ಸೇರಿಸಿ, ಮತ್ತೊಂದಷ್ಟು ಶೇಂಗ ಅದೂ ಇದೂ ಬೆರೆಸಿ, ಪಾಕ ಬಂದಮೇಲೆ ಇಳಿಸಿ, ಇನ್ನೂ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟುತ್ತಿದ್ದ ಅಮ್ಮ... ಸ್ನಾನವಾಗಿದ್ದರೆ ಉಂಡೆ ಕಟ್ಟಲು ಸಹಾಯ ಮಾಡುತ್ತಿದ್ದ ನಾನು... ಬಿಸಿಗೆ ಕೈ ಉರಿಹುಟ್ಟಿ, ಉಂಡೆ ಕಟ್ಟಲಾಗದೇ, 'ಉಫ್ ಉಫ್' ಎನ್ನುತ್ತಾ ಕೈ ನೋಡಿಕೊಳ್ಳುತ್ತಿದ್ದ ನನಗೆ 'ಸಾಕು, ನಿಂಗೆ ಬರಿಯಕ್ಕಾಗದಿಲ್ಲೆ ಕೊನಿಗೆ.. ಗುಳ್ಳೆ ಬರ್ತು.. ನಂಗಾದ್ರೆ ಅಡಿಕೆ ಸುಲ್ದೂ ಸುಲ್ದೂ ಕೈ ಜಡ್ಡುಗಟ್ಟಿದ್ದು..' ಎನ್ನುತ್ತಿದ್ದ ಅಮ್ಮ... ಅಮ್ಮ ಆಚೆ ತಿರುಗಿದ್ದಾಗ ಒಂದು ಪುಟ್ಟ ಉಂಡೆಯನ್ನು ಬಾಯಿಗೆ ಸೇರಿಸುತ್ತಿದ್ದ ನಾನು... ಫಕ್ಕನೆ ಇತ್ತ ತಿರುಗಿದ ಅಮ್ಮ 'ಏಯ್ ಇನ್ನೂ ನೈವೇದ್ಯ ಆಗಲ್ಲೆ.. ನಾಗರ ಹಾವಿಗೆ ಸಿಕ್ಕಾಪಟ್ಟೆ ಮಡಿ..' ಎಂದು ಹೆದರಿಸುತ್ತಿದ್ದ ಅಮ್ಮ... ಹೊರಗೋಡಿಹೋಗುತ್ತಿದ್ದ ನಾನು...

ಆಗ ಭಾಗ್ಯತ್ಗೆಯೂ ನಮ್ಮನೆಯಲ್ಲೇ ಓದಲಿಕ್ಕಿದ್ದಳು. ಅಜ್ಜ, ಅಜ್ಜಿ ಮತ್ತು ಭಾಗ್ಯತ್ಗೆಯರನ್ನು ಮನೆಯಲ್ಲಿ ಬಿಟ್ಟು ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಮಡಿ ಉಟ್ಟ ಅಪ್ಪ, ಅಮ್ಮ, ನಾನು ಅರಳೀಕಟ್ಟೆ ಬಳಿಯಿರುವ ನಾಗರ ಕಲ್ಲಿಗೆ ಪೂಜೆ ಮಾಡಲು ಹೊರಡುತ್ತಿದ್ದೆವು. ಒಂದು ದೊಡ್ಡ ಹರಿವಾಣದಲ್ಲಿ ದೀಪದ ಗಿಣಗಲು, ಕುಂಕುಮ ಪಂಚವಾಳ, ಊದುಬತ್ತಿ, ಕರ್ಪೂರ, ತೆಂಗಿನಕಾಯಿ, ಪುಟ್ಟ ಘಂಟೆ, ತಾಳಿಸೌಟು ಹಿಡಿದು ಮುಂದೆ ನಡೆಯುತ್ತಿದ್ದ ಅಪ್ಪ; ಝಾಂಗ್ಟೆ, ಮಣೆ, ಬಾಳೆ ಎಲೆ ಹಿಡಿದು ಅಪ್ಪನ ಹಿಂದೆ ನಡೆಯುತ್ತಿದ್ದ ನಾನು; ದಾರಿಯಲಿ ಸಿಕ್ಕ ಗಂಗಕ್ಕನಿಗೆ 'ನಿಮ್ಮನೆ ಪೂಜ್ಯಾತನೇ?' ಎಂದು ಕೇಳುತ್ತಾ ನೈವೇದ್ಯಕ್ಕೆ ಹಾಲು, ಎಳ್ಳುಂಡೆ, ಸಕ್ಕರೆ ಹಿಡಿದು ಹಿಂದಿನಿಂದ ಬರುತ್ತಿದ್ದ ಅಮ್ಮ...

ಅರಳೀಕಟ್ಟೆಯ ಬಳಿ ಬೀಸುತ್ತಿದ್ದ ಗಾಳಿಯಲ್ಲಿ ದೀಪ ಹಚ್ಚುವುದು ಪ್ರಯಾಸದ ಕೆಲಸವಾಗಿರುತ್ತಿತ್ತು. ಹಚ್ಚಿದ ದೀಪ ನಿಲ್ಲುತ್ತಲೇ ಇರಲಿಲ್ಲ. 'ಹಾವೇನಾದ್ರೂ ಬೈಂದಾ ನೋಡು.. ಒಂದೊಂದ್ಸಲ ನಾವು ಪೂಜೆ ಸರಿಯಾಗಿ ಮಾಡ್ತ್ವಾ ಇಲ್ಯಾ ಅಂತ ನೋಡಕ್ಕೆ ಬರ್ತಡ..' ಎಂದು ಪ್ರತಿವರ್ಷವೂ ಹೇಳುತ್ತಿದ್ದ ಅಮ್ಮ, ಕಾತರಿಸಿ ನೋಡುತ್ತಿದ್ದ ನಾನು, ಒಂದು ವರ್ಷವೂ ಪ್ರತ್ಯಕ್ಷವಾಗದ ಹಾವು.. ಅದಾಗಲೇ ಊರವರನೇಕರು ಪೂಜೆ ಮಾಡಿ ಹೋಗಿರುತ್ತಿದ್ದರು. ಕಲ್ಲಿನ ಮೇಲೆ ಸುರಿದಿರುತ್ತಿದ್ದ ಅರಿಶಿಣ, ಕುಂಕುಮ.. ಕೆಂಪು ದಾಸವಾಳದ ಹೂಗಳು, ಪುಟ್ಟ ತುಂಬೆ ಹೂಗಳು.. ಕಲ್ಲಿನ ಬುಡದಲ್ಲಿಟ್ಟಿರುತ್ತಿದ್ದ ನೈವೇದ್ಯದ ಸಿಹಿ.. ಅದಕ್ಕೆ ಮುತ್ತಲು ಸಾಲುಗಟ್ಟಿ ಬರುತ್ತಿದ್ದ ಕಟ್ಟಿರುವೆಗಳು.. ಯಾರೋ ಹಚ್ಚಿಟ್ಟುಹೋಗಿದ್ದ ಊದುಬತ್ತಿ ಹೊಗೆಯ ಪರಿಮಳದೊಂದಿಗೆ ಬೆರೆಯುತ್ತಿದ್ದ ನಮ್ಮನೆ ಊದುಬತ್ತಿಯ ಪರಿಮಳ.. ಅಪ್ಪ ಚುಟುಕಾಗಿ ಪೂಜೆ ಮುಗಿಸಿ, ನಾವು ಅರಳೀಕಟ್ಟೆ ಸುತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಪ್ರಸಾದ ಕೊಟ್ಟು, ಮನೆಗೆ ಮರಳುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿರುತ್ತಿತ್ತು. ಅಷ್ಟರಲ್ಲಾಗಲೇ ಅಜ್ಜಿ-ಭಾಗ್ಯತ್ಗೆ ಸೇರಿ ಊಟಕ್ಕೆ ರೆಡಿ ಮಾಡಿಟ್ಟಿರುತ್ತಿದ್ದರು. ಮನೆ ದೇವರಿಗೆ ಪೂಜೆ ಮಾಡಿ, ಮಡಿ ಬಿಚ್ಚಿಹಾಕಿ ಅಪ್ಪ ಊಟಕ್ಕೆ ಬಂದಮೇಲೆ ಬಾಳೆಯ ಮೇಲೆ ಅನ್ನ ಬೀಳುತ್ತಿತ್ತು. ಬಿಸಿ ಬಿಸಿ ಗಮ್ಮತ್ ಊಟ. ಸಿಹಿ ಊಟ ಮಾಡಿದಮೇಲೆ ಕವಳ ಹಾಕಲೇಬೇಕು. ಅಜ್ಜನ ಬಳಿ ಕಾಡಿ, ಒಂದೊಳ್ಳೆ ಕವಳ ಮಾಡಿಸಿಕೊಂಡು, ಅದಕ್ಕೆ ಸಕ್ಕರೆ, ಕೊಬ್ರಿ ಹಾಕಿಸಿಕೊಂಡು, ನಾನು ಭಾಗ್ಯತ್ಗೆ ಬಾಯಿಗಿಟ್ಟುಕೊಳ್ಳುತ್ತಿದ್ದೆವು. ಆಮೇಲೆ ಕನಿಷ್ಟ ಎರಡು ತಾಸು ನಿದ್ರೆ.

ನಾಗರ ಪಂಚಮಿಯ ದಿನ, ಸಂಭ್ರಮವೆಂಬುದು ಬೆಳಗಿನಿಂದ ಮಧ್ಯಾಹ್ನದ ವರೆಗೆ ರಾಕ್ ಮ್ಯೂಸಿಕ್ಕಿನಂತೆ ಸಾಗಿ, ಮಧ್ಯಾಹ್ನದ ನಂತರ ಕನ್ನಡ ಚಿತ್ರಗೀತೆಯಂತೆ ಮುಂದುವರೆದು, ಸಂಜೆಯ ಮೇಲೆ ಭಾವಗೀತೆಯಾಗಿ, ರಾತ್ರಿಯಾಗುವಷ್ಟರಲ್ಲಿ ಅಮ್ಮನ ಮೆಲುದನಿಯ ಹಾಡಿನಂತೆ ಆಗಿಬಿಡುತ್ತಿತ್ತು. ಏಕೆಂದರೆ, ನಾಗರ ಪಂಚಮಿಯ ರಾತ್ರಿ ಮನೆಯವರೆಲ್ಲರಿಗೂ ಬೆರಳುಗಳಿಗೆ ಮದರಂಗಿ ಕಟ್ಟಿಸಿಕೊಳ್ಳುವ ರಾತ್ರಿ.. ಅಂದು ಸಂಜೆ ನಾಲ್ಕರ ಹೊತ್ತಿಗೇ ಶೆಟ್ಟಿ ಮಾಬ್ಲನ ಮನೆಗೆ ಮದರಂಗಿ ಸೊಪ್ಪು ಕೊಯ್ಯಲು ನಾವು ಹುಡುಗರು ಹೋಗುತ್ತಿದ್ದೆವು. ಅವರ ಮನೆ ಅಂಗಳದಲ್ಲಿ ದೊಡ್ಡವೆರಡು ಮದರಂಗಿ ಗಿಡಗಳಿದ್ದವು. ನಾನು, ಗುಂಡ, ಮಧು, ಭಾವನ, ಶ್ವೇತ.. ಹೀಗೆ ಮಕ್ಕಳೆಲ್ಲ ಕವರು ಹಿಡಿದು ಹೋಗುತ್ತಿದ್ದುದು. ಸಾಕೆನಿಸುವಷ್ಟು ಕೊಯ್ದು, ಮನೆಗೆ ಓಡೋಡಿ ಬಂದು ಅಮ್ಮನಿಗೋ ಅಜ್ಜಿಗೋ ಬೀಸಲು ಕೊಟ್ಟು ನಾವು ಹಾಲವಾಣದ ಮರ ಹುಡುಕಿಕೊಂಡು ಬ್ಯಾಣಕ್ಕೆ ಹೋಗುತ್ತಿದ್ದೆವು. ದೊಡ್ಡದೊಡ್ಡ ಎಲೆಗಳನ್ನು ನಾವು ಕೊಯ್ದು ತರುವಷ್ಟರಲ್ಲಿ ಒಳ್ಳುಕಲ್ಲ ಮುಂದಿಂದ ಅಮ್ಮ ಅಥವಾ ಅಜ್ಜಿ ಮದರಂಗಿ ಚಟ್ನಿಯೊಂದಿಗೆ ನಿಧಾನಕ್ಕೆ ಏಳುತ್ತಿರುತ್ತಿದ್ದರು. ಬೀಸಿದ್ದಕ್ಕೇ ಅವರ ಕೈ ಎಷ್ಟು ಕೆಂಪಾಗುತ್ತಿತ್ತು..! ಅವತ್ತು ಸ್ವಲ್ಪ ಬೇಗನೇ ಊಟ ಮಾಡಿ, ಎಲ್ಲಾ ಕೆಲಸಗಳನ್ನೂ ಮುಗಿಸಿ, ಉಚ್ಚೆ-ಗಿಚ್ಚೆ ಮಾಡಿ ಬಂದು, ಹಾಸಿಗೆ ಸಹ ಹಾಸಿಟ್ಟುಕೊಂಡು, ಮದರಂಗಿ ಕಟ್ಟಿಸಿಕೊಳ್ಳಲಿಕ್ಕೆ ಅಣಿಯಾಗುತ್ತಿದ್ದೆವು ಎಲ್ಲರೂ..

ಆ ರಾತ್ರಿ ಮನೆಯಲ್ಲೊಂದು ಹದವಾದ ಆಪ್ತ ವಾತಾವರಣವಿರುತ್ತಿತ್ತು.. ಅಪ್ಪನೇ ಎಲ್ಲರಿಗೂ ಮದರಂಗಿ ಚಟ್ನಿ ಕಟ್ಟುತ್ತಿದ್ದುದು.. ಮೊದಲು ನನ್ನ ಪುಟ್ಟ ಪುಟ್ಟ ಬೆರಳುಗಳಿಗೆ, ಉಗುರಿನ ಮೇಲೆ ಚಟ್ನಿಯನ್ನು ಮೆತ್ತಿ, ಹಾಲವಾಣದ ಎಲೆಯಿಂದ ಅದನ್ನು ಮುಚ್ಚಿ, ದಾರ ಕಟ್ಟುತ್ತಾ 'ಬಿಗಿ ಸಾಕಾ?' ಕೇಳುತ್ತಿದ್ದ. ನಾನು 'ಸಾಕು' ಎಂದಾಕ್ಷಣ ಅಲ್ಲಿಗೇ ನಿಲ್ಲಿಸಿ ಗಂಟು ಹಾಕುತ್ತಿದ್ದ. ನನ್ನೆಲ್ಲಾ ಕೈಬೆರಳುಗಳಿಗೆ ಕಟ್ಟಿಯಾದಮೇಲೆ ಭಾಗ್ಯತ್ಗೆಗೆ. ಅವಳು ಸಾಮಾನ್ಯವಾಗಿ ಒಂದೇ ಕೈಗೆ ಕಟ್ಟಿಸಿಕೊಳ್ಳುತ್ತಿದ್ದುದ್ದು. ಏಕೆಂದರೆ ಇನ್ನೊಂದು ಕೈಯಲ್ಲಿ ಹಿಂದಿನ ದಿನ ತಾನೆ ಹಚ್ಚಿದ ನೈಲ್‍ಪಾಲಿಶ್ ಇರುತ್ತಿತ್ತು! ಆಮೇಲೆ ಅಮ್ಮನಿಗೆ. ಅಮ್ಮ ಹಾಗೆ ಕಟ್ಟಿಸಿಕೊಳ್ಳುವಾಗ ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಬರೀ ನನ್ನನ್ನು ನೋಡುತ್ತಿದ್ದಳು. ನಾನು ಅಮ್ಮನ ಕೈಬೆರಳನ್ನು ಅಪ್ಪ ಕಟ್ಟುತ್ತಿದ್ದ ಹಗ್ಗ ಸುತ್ತಿ ಸುತ್ತಿ ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಆಮೇಲೆ, ಕವಳ ತುಪ್ಪಿ ಬಂದ ಅಜ್ಜಿಯೂ 'ಯಂಗೂ ಒಂದು ಬೆಟ್ಟಿಗೆ ಕಟ್ಟಾ ಮಾಣಿ' ಎಂದು ಕೈ ಒಡ್ಡುತ್ತಿದ್ದಳು. ಮನೆಯಲ್ಲಿದ್ದಿದ್ದರೆ ಅಜ್ಜನೂ ಒಂದು ಬೆರಳಿಗೆ ಕಟ್ಟಿಸಿಕೊಳ್ಳುತ್ತಿದ್ದ. ಆದರೆ ಎಲ್ಲರ ಬೆರಳಿಗೂ ಕಟ್ಟುತ್ತಿದ್ದ ಅಪ್ಪನಿಗೆ ಮಾತ್ರ ಮದರಂಗಿ ಇಲ್ಲ! ಅಪ್ಪನಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವಾದ್ದರಿಂದ ಅವನೇನು ಇದರಿಂದ ಬೇಸರಿಸಿಕೊಳ್ಳುತ್ತಿರಲಿಲ್ಲ. ಕೆಲ ವರ್ಷ ನಾನು ಕೈಬೆರಳುಗಳಿಗಷ್ಟೇ ಅಲ್ಲದೇ ಕಾಲ್ಬೆರಳುಗಳಿಗೂ ಮದರಂಗಿ ಕಟ್ಟಿಸಿಕೊಂಡದ್ದಿದೆ! ಆಗ ಅಜ್ಜ "ಆ 'ಇನ್ನೊಂದ್ ಬೆರಳು' ಎಂಥಕ್ ಬಿಡ್ತ್ಯಾ ಮಾಣಿ.. ಅದ್ಕೂ ಕಟ್ಟಕ್ಕೆ ಹೇಳಾ!" ಎನ್ನುತ್ತಾ ದೊಡ್ಡಕೆ ನಗೆಯಾಡುತ್ತಿದ್ದ. ನಾನು ಮುಸಿಮುಸಿ ನಗುತ್ತಿದ್ದೆ. ಭಾಗ್ಯತ್ಗೆ 'ಇಶಿಶೀ..!' ಎನ್ನುತ್ತಿದ್ದಳು.

ಹೀಗೆ ಬೆರಳುಗಳಿಗೆಲ್ಲ ಮದರಂಗಿಯ ಬ್ಯಾಂಡೇಜ್ ಕಟ್ಟಿಸಿಕೊಂಡು ಹಾಸಿಗೆ ಮೇಲೆ ಮಲಗುತ್ತಿದ್ದ ನಮಗೆ ಅಪ್ಪ ಹೊದಿಕೆ ಹೊಚ್ಚುತ್ತಿದ್ದ. ಆ ರಾತ್ರಿ ಸೊಳ್ಳೆಗಳಿಗಂತೂ ಸುಗ್ಗಿ! ಏಕೆಂದರೆ ಸೊಳ್ಳೆ ನಮ್ಮ ಕಾಲ ಮೇಲೋ ಮುಖದ ಮೇಲೋ ಕೂತು ಕಚ್ಚುತ್ತಿದ್ದರೆ ಅಲ್ಲಾಡಿಸಿ ಓಡಿಸಬಹುದೇ ಹೊರತು ಹೊಡೆಯುವಂತಿಲ್ಲ! ಅದೆಂತಹ ಪರಾಧೀನ ಪರಿಸ್ಥಿತಿ ಎಂದರೆ, ತುರಿಸಿದರೂ ನಾವಾಗೇ ತುರಿಸಿಕೊಳ್ಳುವಂತಿಲ್ಲ! ಅಪ್ಪ ನನಗೆ 'ಎಲ್ಲಿ ತುರುಸ್ತು?' ಎಂದು ಕೇಳುತ್ತಾ ತುರುಸಿಕೊಟ್ಟದ್ದೂ ಇದೆ. ಎಲ್ಲಿ ಈ ಬ್ಯಾಂಡೇಜ್ ಕಳಚಿ ಹೋಗಿಬಿಡುತ್ತದೋ ಎಂಬ ಚಿಂತೆಯಲ್ಲಿ ನನಗೆ ಬಹಳ ಹೊತ್ತಾದ ಮೇಲೆ ನಿದ್ರೆ ಬರುತ್ತಿತ್ತು. ಆ ನಿದ್ರೆಯಲ್ಲಿ ಕನಸೇನಾದರೂ ಬಿದ್ದಿದ್ದರೆ ಅದು ಕೆಂಪು ಕೆಂಪು ಕೆಂಪಾಗಿರುತ್ತಿತ್ತು.

'ಎಲ್ಲೀ, ಸುಶ್ರುತನ್ ಕೈ ಎಷ್ಟು ಕೆಂಪಗಾಯ್ದು ನೋಡನ..?' ಎನ್ನುತ್ತಾ ಬೆಳಗ್ಗೆ ನನ್ನನ್ನು ಎಬ್ಬಿಸುತ್ತಿದ್ದುದು ಭಾಗ್ಯತ್ಗೆಯೇ. ಅವಳು ಅದಾಗಲೇ ಎದ್ದು ಕೈ ತೊಳೆದುಕೊಂಡು ಬಂದಿರುತ್ತಿದ್ದಳು. ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನ ಕೈಯ ಬ್ಯಾಂಡೇಜುಗಳನ್ನು ಕೀಳುತ್ತಿದ್ದೆ. ಕೆಲ ಬೆರಳುಗಳದು ನಿದ್ರೆಯಲ್ಲೇ ಕಿತ್ತುಹೋಗಿರುತ್ತಿತ್ತು. ಆದರೂ ಅವು ಕೆಂಪಾಗಿರುತ್ತಿದ್ದವು. ನನಗೆ 'ಕೆಂಪೆಲ್ಲಾ ಅಳಿಸಿಹೋದರೇ?' ಅಂತ ಕೈ ತೊಳೆಯಲಿಕ್ಕೆ ಅಂಜಿಕೆ.. 'ಏ ಅಳ್ಸದಿಲ್ಲೆ ಮರಾಯ.. ನನ್ ಕೈ ನೋಡು..' ಎನ್ನುತ್ತಾ ಭಾಗ್ಯತ್ಗೆ ಒತ್ತಾಯ ಮಾಡಿ ಕೈ ತೊಳೆಸುತ್ತಿದ್ದಳು. ಪುಟ್ಟ ಪುಟ್ಟ ಬೆರಳುಗಳ ತುದಿ ಕೆಂಪಕೆಂಪಗೆ ಆಗಿರುವುದು ನೋಡಿ ಕಣ್ಣ ತುಂಬಾ ಸಡಗರ.. ಆದರೆ ಅತ್ತಿಗೆಯದು ಇನ್ನೂ ಕೆಂಪಾಗಿರುವುದು ನೋಡಿ ಹೊಟ್ಟೆಕಿಚ್ಚು.. 'ಹುಡುಗ್ರಿಗೆ ಇಷ್ಟೇ ಕೆಂಪಾಗದು' ಎಂದವಳಂದಾಗ ಸುಪ್ತ ಸಮಾಧಾನ..

ಶಾಲೆಗೆ ಹೊರಟಾಗ ಒಟ್ಟಿಗೆ ಸಿಗುತ್ತಿದ್ದ ಮಧು, ಗುಂಡ, ಭಾವನಾ ಎಲ್ಲರಿಗೂ ನನ್ನ ಕೈ ತೋರಿಸಿ, ಅವರ ಕೈ ನೋಡಿ, ಅವರದು ನನಗಿಂತ ಕೆಂಪಗಾಗಿದ್ದರೆ ಹೊಟ್ಟೆ ಉರಿದುಕೊಳ್ಳುತ್ತಾ, ನನ್ನದೇ ಹೆಚ್ಚು ಕೆಂಪಿದ್ದರೆ ಖುಷಿ ಪಡುತ್ತಾ ನಡೆಯುತ್ತಿದ್ದರೆ ಸೀತಾರಾಮಣ್ಣನ ಮನೆ ದಾಟಿದ್ದೂ, ಡಾಕ್ಟ್ರು ಮನೆ ದಾಟಿದ್ದೂ ಗೊತ್ತಾಗದಷ್ಟು ಬೇಗ ಶಾಲೆ ಬರುತ್ತಿತ್ತು. ಶಾಲೆಯಲ್ಲೂ ಅವತ್ತಿಡೀ 'ನಿಮ್ಮನೆಲಿ ಯಾರು ಬೀಸಿದ್ದು?' 'ಸುಣ್ಣ ಹಾಕಿ ಬೀಸಿದ್ದಿದ್ರಾ?' 'ಶ್ರೀಮತತ್ತೆ ಬೀಸಿರೆ ಇನ್ನೂ ಕೆಂಪಗಾಗ್ತಿತ್ತು' ಇತ್ಯಾದಿ ಸಂಭಾಷಣೆ ಮುಂದುವರೆಯುತ್ತಿತ್ತು. ಕೈ ಬೆರಳ ತುದಿಯ ಮದರಂಗಿಯ ಕೆಂಪು, ಉಗುರು ತೆಗೆಯುತ್ತ ತೆಗೆಯುತ್ತ ಹೋದಂತೆ, ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು.

ಅದೇ ಸಮಯಕ್ಕೆ ಮಾಬ್ಲನ ಮನೆ ಮದರಂಗಿ ಗಿಡದ ರೆಂಬೆಗಳು ಮತ್ತೆ ಎಲೆಯಂಗಿ ತೊಡುವ, ಹಸಿರಾಗುವ, ನಾಗರ ಪಂಚಮಿಯ ದಿನ ಎಲೆ ಉರುಬಿಸಿಕೊಂಡು ಚಟ್ನಿಯಾಗಿ ನಮ್ಮ ಪುಟ್ಟ ಬೆರಳುಗಳ ಕೆಂಬಣ್ಣವಾಗುವ ಕನಸು ಕಾಣಲು ಅಣಿಯಾಗುತ್ತಿದ್ದವು.

Monday, August 13, 2007

ಮರ, ಬಳ್ಳಿ ಮತ್ತು ಕವಿ

ಆ ಬಳ್ಳಿಯನ್ನು ಮೊದಲ ಬಾರಿ ನೋಡಿದಾಗಲೇ
ಅದು ಮರವೊಂದರೆಡೆಗೆ ವಾಲುತ್ತಿರುವುದು
ನನಗೆ ಗೊತ್ತಾಗುತ್ತಿತ್ತು...

ಅದರ ಎಲೆ-ಕಣ್ಣುಗಳು ಇನ್ನೂ ಎಳೆಯವಿದ್ದವು.
ಪಕ್ಕದ ಮರವೊಂದನ್ನು ಬಿಟ್ಟು ಮತ್ತಿನ್ನೇನೂ ದಕ್ಕುತ್ತಿರಲಿಲ್ಲ
ಅದರ ನೋಟಕ್ಕೆ...

ಮರ ತನಗಾಗಿಯೇ ನೆರಳನ್ನು ಸೂಸುತ್ತಿದೆ,
ಮರ ತನಗಾಗಿಯೇ ಗಾಳಿಯನ್ನು ಬೀಸುತ್ತಿದೆ,
ಮರ ತನಗಾಗಿಯೇ ಪ್ರೇಮಪರ್ಣಗಳನ್ನು ಬೀಳಿಸುತ್ತಿದೆ-
ಎಂದೆಲ್ಲ ಭಾವಿಸಿ, ಮರವನ್ನು ಸಮೀಪಿಸಿತು.

ಮರವನ್ನು ತಾಕಿದಾಗ ಬಳ್ಳಿಗೆ ರೋಮಾಂಚನ.
ಮರದ ಕಾಂಡದ ಒರಟೊರಟು ತೊಗಟೆ,
ಅನುರಾಗದ ಕಂಪ ಹೊತ್ತ ಬೀಸುಗಾಳಿ,
ಆಗಾಗ ಮೈಗೆ ತಾಕುತ್ತಿದ್ದ ಉದುರೆಲೆಗಳು-
ಎಲ್ಲಾ ಬಳ್ಳಿಗೆ ಇಷ್ಟ ಇಷ್ಟ.
ಸಂಚರಿಸುತ್ತಿದ್ದ ಪಿಸುಮಾತಿನ ಸಂದೇಶಗಳು
ಬಳ್ಳಿಯ ಪತ್ರಹರಿತ್ತಿನ ಸಂವಹನ ವೇಗವನ್ನು ಹೆಚ್ಚಿಸುತ್ತಿದ್ದವು.

ಬಳ್ಳಿಗೆ ಗೊತ್ತಿಲ್ಲದ್ದೆಂದರೆ, ಮರದ ಆಚೆ
ಇನ್ನೂ ಅನೇಕ ಬಳ್ಳಿಗಳು ಹಬ್ಬಿರುವುದು,
ಮರ ಎಲ್ಲಾ ಬಳ್ಳಿಗಳಿಗೂ ಇವಿವೇ ರೋಮಾಂಚನ,
ನೆರಳು, ಸುಖ, ಜತೆಗಿರುವ ಅಭಯ, ಭರವಸೆಗಳನಿತ್ತಿರುವುದು.

ಕಾಲ ಸರಿಯುತ್ತಾ, ಬಳ್ಳಿ ಬೆಳೆಯುತ್ತಾ,
ಒಂದು ಕವಲೊಡೆದ ದಾರಿಯ ಬಳಿ ಬಂದಾಗ,
ರೆಂಬೆಯ ತೋಳು ತಪ್ಪಿ ಬೀಳುವಂತಾದಾಗ, ಮುಂದೇನೆಂದು ತಿಳಿಯದೆ,
ಕಾಡಿದ ಅಭದ್ರತೆಗೆ ಹೆದರಿ, ಕೇಳುತ್ತೆ ಅದು ಮರದ ಬಳಿ:
"ನೀನು ನನ್ನ ಪ್ರೀತಿಸ್ತೀಯಲ್ಲ? ನನ್ನನ್ನೆಂದೂ ಬಿಡೋಲ್ಲವಲ್ಲ?"

ಮರ ತಿರಸ್ಕರಿಸೊತ್ತೆ.

"ನನ್ನ ಪಾಡಿಗೆ ನಾನಿದ್ದೆ.
ನೀನಾಗೇ ಬಂದು ನನ್ನ ತಬ್ಬಿದೆ,
ಏನೇನೋ ಪರಿಕಲ್ಪಿಸಿಕೊಂಡೆ,
ಸ್ನೇಹವನ್ನೇ ಪ್ರೇಮವೆಂದು ಭಾವಿಸಿದರೆ,
ನನ್ನ ಸಹಜ ಅಭಿವ್ಯಕ್ತಿಗಳನ್ನೇ ಅನುರಾಗವೆಂದುಕೊಂಡುಬಿಟ್ಟರೆ
ಅದು ನನ್ನ ತಪ್ಪಾ?" ಎಂದೆಲ್ಲಾ ಗೊಣಗಿ
ಕಳ್ಳನಂತೆ ಸುಮ್ಮನಾಗುತ್ತದೆ.

ಬಳ್ಳಿಗೆ ಮರದ ಆಶ್ರಯ ಒಮ್ಮಿಂದೊಮ್ಮೆಲೇ ತಪ್ಪಿಹೋಗಿ,
ಬಾಗಿ, ಕತ್ತರಿಸಿ ಬೀಳುತ್ತದೆ.
ನೋವು ತಾಳಲಾರದೇ ಕಣ್ಣೆಲೆಗಳಿಂದ
ನೀರುದುರಿಸುತ್ತದೆ...
ಬಾಡತೊಡಗುತ್ತದೆ...
ಸಾಯುತ್ತೇನೆನ್ನುತ್ತದೆ...

ಅದರ ಕಷ್ಟವನ್ನು ನೋಡಲಾರದೆ ನಾನದರ ಬಳಿಸಾರುತ್ತೇನೆ...
ಸಮಾಧಾನ ಹೇಳುತ್ತೇನೆ...
ನೀರೆರೆಯುತ್ತೇನೆ...
ಗೊಬ್ಬರ ಹಾಕುತ್ತೇನೆ...
"ಆದದ್ದಾಯ್ತು, ಅದೇ ಮರದ ನೆನಪಲ್ಲಿ ಕೊರಗಬೇಡ,
ನೋಡಲ್ಲಿ, ಪಕ್ಕದಲ್ಲಿನ್ನೂ ಅನೇಕ ಮರಗಳಿವೆ" ಎನ್ನುತ್ತೇನೆ;
ಹೊಸ ಕನಸು ಕಾಣಲು ಪ್ರೇರೇಪಿಸುತ್ತೇನೆ.

"ಸಾಧ್ಯವೇ ಇಲ್ಲ...
ಹೇಗೆ ಮರೆಯಲಿ ಆ ಮರದ ಸ್ಪರ್ಶಸುಖವನ್ನು?
ಹೇಗೆ ಅಲ್ಲಗಳೆಯಲಿ ಅದರ ಸಂದೇಶಗಳಲ್ಲಿ ತುಂಬಿರುತ್ತಿದ್ದ ಅನುರಾಗವನ್ನು?
ಹೇಗೆ ಸುಳ್ಳೆನ್ನಲಿ ಅದು ಪ್ರೇಮವಾಗಿರಲೇ ಇಲ್ಲವೆಂದು?

ಅಥವಾ, ಉಹೂಂ, ಹೇಗೆ ಬಿಟ್ಟಿರಲಿ
ಇಷ್ಟು ದಿನ ಜತೆಗಿದ್ದ ಮರವನ್ನು?"

ಬಳ್ಳಿಯ ಹುಚ್ಚುತನವನ್ನು ನೋಡಿ ಬೇಸತ್ತ ನಾನು
ಒಂದು ನೀಳ ನಿಶ್ವಾಸ ಬಿಟ್ಟು ಈ ನೇವರಿಕೆಯಿಂದ ನಿವೃತ್ತನಾಗುತ್ತೇನೆ.
ಅದರ ಕನವರಿಕೆಗಳನ್ನು ಕಡೆಗಣಿಸುತ್ತೇನೆ.
ಕಾರುಣ್ಯದ ಕಣ್ಣನ್ನು ಕೊಂಚ ಬದಿಗೆ ಸರಿಸುತ್ತೇನೆ.

ಆದರೆ, ಎಂದಿನಂತೆ, ಕಾಲವೇ ಎಲ್ಲವನ್ನೂ ಸರಿಪಡಿಸುತ್ತದೆ:
ಒಂದು ಶುಭದಿನ, ತಾನು ಮತ್ತೆ ಚಿಗುರುತ್ತಿರುವ,
ಚೇತರಿಸಿಕೊಳ್ಳುತ್ತಿರುವ ಸುದ್ದಿಯನ್ನು ಬಳ್ಳಿ ಹೇಳಿಕೊಳ್ಳುತ್ತದೆ.
ನಾನು ಸಂಭ್ರಮಿಸಿ ಅಲ್ಲಿಗೆ ಧಾವಿಸಿ ನೋಡುತ್ತೇನೆ:

ನನ್ನ ಸಾಂತ್ವನದ ನೀರು-ಗೊಬ್ಬರಗಳ ಸಾರ್ಥಕತೆ
ಅಲ್ಲಿ ಕುಡಿಯಾಗಿ ಒಡೆದಿರುವುದು ಗೋಚರಿಸುತ್ತದೆ.
ಹರಿತ್ತಿನ ಹರಿವು, ಬಳ್ಳಿಯ ಹಸಿವು ಎಲ್ಲಾ ಸಹಜವಾಗುತ್ತಿರುವುದು ಕಾಣಿಸುತ್ತದೆ.
ಬಣ್ಣದ ಹೂವರಳಿಸಿಕೊಳ್ಳುವ ಹೊಸ ಕನಸನ್ನು ಬಳ್ಳಿಗೆ ಕೊಟ್ಟು,
ಶುಭ ಹರಸಿ, ಇವನ್ನೆಲ್ಲಾ ಬರೆಯಲು ಕೂತ ನಾನು
ಈ ಕವಿತೆಯ ಕವಿಯಷ್ಟೇ ಆಗಿ ಉಳಿದುಬಿಡುತ್ತೇನೆ.

Thursday, August 09, 2007

ಬೆಳ್ಬೆಳ್ಗೆ ಖುಷಿ!

ಬೆಳ್ಬೆಳ್ಗೆ ಎರಡು ಒಳ್ಳೇ ಬ್ಲಾಗುಗಳನ್ನು ನೋಡಿ, ಮುದುರಿಕೊಂಡಿದ್ದ ಮನಸ ಹೂ ಮತ್ತೆ ಅರಳಿದಂತಾಯಿತು. ಒಂದು, December Stud ಎಂಬ, ಇನ್ನೂ ಯಾರೆಂದು ಕಂಡುಹಿಡಿಯಲಾಗದವರ 'A Paradise for Dreamers' ಬ್ಲಾಗಿನಲ್ಲಿ ಓದಿದ ಹಾಡು. ಇನ್ನೊಂದು, 'ಮೀರಾ ಎಂಬ ನಿಶುವಿನ ಅಮ್ಮ' ಪೋಸ್ಟ್ ಮಾಡಿರುವ ತಮ್ಮ ಮಗನ ಕನ್ನಡ ಅಕ್ಷರಮಾಲೆ ಕಲಿಕೆಯ ಹಾಡು. "ಈಗಲೂ 'ರ' ಹೊರಳದ ಅವನ ನಾಲಿಗೆಯಲ್ಲಿ ಯರಲವ, ಯಲಲವ ಆಗೇ ನಲಿಯೋದು. ಕೆಲವೊಮ್ಮೆ ಅದು ಯಲವಲ-ವೂ ಆಗಿ, ಹಾಗೆ ಆದಾಗಲೆಲ್ಲ 'ಅಯ್ಯೊ ಈ ಕನ್ನಡ ಅಕ್ಷರ ಮಾಲೆ ಎಷ್ಟು ಮುದ್ದಾಗಿದೆಯಲ್ಲ' ಅನ್ನಿಸಿ, ನಿಶುವಿನ ಮೇಲೂ, ಕನ್ನಡದ ಮೇಲೂ ಒಟ್ಟೊಟ್ಟಿಗೇ ಮುದ್ದು ಉಕ್ಕಿ ಬರುವುದೂ ಉಂಟು" ಎಂದು ಅವರು ಬರೆದ ಸಾಲುಗಲೇ ನಿಶುವಿನ ಮೇಲೆ ಮುದ್ದು ತರುವಂತಿವೆ.


ಇವನ್ನು ಓದಿ, ಕೇಳಿ ಖುಷಿ ಪಡುವ ಭಾಗ್ಯ ನಿಮ್ಮದೂ ಆಗಲೀಂತ ಇಲ್ಲಿ ಅವುಗಳ ಲಿಂಕು ಕೊಡುತ್ತಿದ್ದೇನೆ:

Saturday, August 04, 2007

ಹನಿಯ ಅಸಮಾಧಾನ


'ಇನ್ಮೇಲಿಂದ ಏನೂ ಬರೀಬಾರ್ದು. ಬರಿಯೋದಾದ್ರೆ ಜೋಗಿ ಸರ್ ಹಂಗೆ, ರಶೀದ್ ಸರ್ ಹಂಗೆ, ಅಥ್ವಾ ಸಿಂಧು ಅಕ್ಕನ ಹಂಗೆ ಫುಲ್ ಸೀರಿಯಸ್ಸಾಗಿ ಬರೀಬೇಕು.. ನಾನು ಇದುವರೆಗೆ ಬರೆದಿದ್ದೆಲ್ಲ ಜೊಳ್ಳು.. ಓದಿ ಮರೆತುಹೋಗುವಂಥದ್ದು.. ಛೇ! ನಾನು ಇಷ್ಟರೊಳಗೆ ಓದಿದ್ದು ಏನೂ ಅಲ್ಲ.. ಇನ್ನೂ ತುಂಬಾ ಓದೋದಿದೆ.. ಬರೀ ಓದೋದಲ್ಲ, ಸಾಹಿತ್ಯವನ್ನ ಸ್ಟಡಿ ಮಾಡ್ಬೇಕು.. ಈ ಬ್ಲಾಗು, ಗಾಳ, ರೀಡರ್ರು, ಕಾಮೆಂಟು, ಹಿಟ್ಸು.. ಊಹುಂ, ಇನ್ನು ನನ್ ಕೈಲಾಗಲ್ಲ.. ಎಲ್ಲಾ ಬುಲ್‍ಶಿಟ್' ಎಂದು ನಾಲ್ಕು ಕಾಲಿನ ಬಿಳೀ ಪ್ಲಾಸ್ಟಿಕ್ ಖುರ್ಚಿಯ ಮೇಲೆ ಕುಳಿತ ನಾನು ಸಿಟ್ಟುಮಾಡಿಕೊಂಡು ಪೆನ್ನಿನ ಮೂತಿಯನ್ನು ಕ್ಯಾಪಿನಿಂದ ಮುಚ್ಚಿ ಟೇಬಲ್ಲಿನ ಮೇಲೆ ಬೀಸಾಡುತ್ತೇನೆ. ಪೆನ್ನು ಓರಣವಾಗಿ ಜೋಡಿಸಿಡದ ಪುಸ್ತಕವೊಂದಕ್ಕೆ ಬಡಿದು ಬೌನ್ಸ್ ಆಗಿ ನೆಲಕ್ಕೆ ಬಿದ್ದು ಸಣ್ಣ ಸದ್ದು ಮಾಡಿ ಎಡಕ್ಕೆ ವಾಲಿ ಕಪ್ಪು ಬೆಕ್ಕಿನ ಮರಿಯಂತೆ ಮಲಗಿಕೊಳ್ಳುತ್ತದೆ.

ನಾನದನ್ನು ನೋಡುತ್ತೇನೆ. ಏನೇನೂ ಪಾಪ ಮಾಡಿರದ ಪೆನ್ನು.. ಇಷ್ಟರೊಳಗೆ ಎಂದೂ ಕೈಕೊಡದ ಪೆನ್ನು.. ಹಾಳೆಗೆ ತಾಕಿಸಿದರೆ ಸಾಕು, ತನ್ನೊಡಲ ಕಪ್ಪು ಶಾಯಿಯನ್ನು ಧಾರಾಕಾರ ಸುರಿಸುವ ಪೆನ್ನು.. ಬಿಳಿ ಹಾಳೆಯ ಮೈಮೇಲೆಲ್ಲಾ ಓಡಾಡುತ್ತಾ ಕಚಗುಳಿಯಿಡುವ ಪೆನ್ನು.. ಈಗ ಮೇಜಿನ ಕಾಲಬುಡದಲ್ಲಿ ಬೆಕ್ಕಿನ ಮರಿಯಂತೆ ಮುದ್ದಾಗಿ ಬಿದ್ದುಕೊಂಡಿದೆ.. ಅಲ್ಲಿಂದಲೇ 'ನನ್ನನ್ನು ಎತ್ತಿಕೋ.. ಮ್ಯಾಂವ್ ಮ್ಯಾಂವ್..' ಎನ್ನುತ್ತಿದೆ.. ನನಗೆ ಅದರ ಮೇಲೆ ಮೋಹ ಉಕ್ಕಿ ಬರುತ್ತದೆ.. ಬೆಕ್ಕಿನ ಮರಿಯನ್ನು ಎತ್ತಿಕೊಳ್ಳುತ್ತೇನೆ.. ಅದರ ನೀಳ ಕಾಯದ ಮೇಲೆ ಅಲ್ಲಲ್ಲಿ ಹತ್ತಿರುವ ಧೂಳನ್ನು 'ಉಫ್' ಎಂದು ಊದಿ ಹಾರಿಸುತ್ತೇನೆ.. ಮೈ ಸವರುತ್ತೇನೆ.. ಕ್ಯಾಪು ತೆಗೆದು ಕಣ್ಣೆದುರು ಹಿಡಿದು ಅದರ ಚೂಪು ಮೂತಿಯನ್ನು ದುರುಗುಟ್ಟಿ ನೋಡುತ್ತೇನೆ..

ನನ್ನ ಮನಸಿನೊಳಗೆ ಅನೇಕ ದಿನಗಳಿಂದ ಅದೇನೋ ಅಸಮಾಧಾನದ ಹೊಗೆ ತುಂಬಿಕೊಂಡು ಬಿಟ್ಟಿದೆ. ತುಂಬಾ ನೋವು ಕೊಡುತ್ತಿದೆ. ಏನು ಎಂದು ಸಹ ಅರ್ಥವಾಗುತ್ತಿಲ್ಲ ಸರಿಯಾಗಿ.. ಮಾಡುವ ಕೆಲಸಗಳಲ್ಲಿ ಗಮನವಿರಿಸಲು ಆಗುತ್ತಿಲ್ಲ, ಏನನ್ನೂ ಓದಲಾಗುತ್ತಿಲ್ಲ, ಯೋಚಿಸಲಾಗುತ್ತಿಲ್ಲ, ಸುಮ್ಮನೆ ಕುಳಿತಿರಲೂ ಆಗುತ್ತಿಲ್ಲ.. ಚಡಪಡಿಸುತ್ತಿರುವಂತೆ ಮಾಡುವ ಚಡಪಡಿಕೆ.. ಏನಾಗಿದೆ ನನಗೆ? 'ಲವ್ ಫೇಲ್ಯೂರಾ?' ಕೇಳುತ್ತಾರೆ ಗೆಳೆಯರು. 'ಏಯ್ ಸುಮ್ನಿರ್ರೋ' ಸಿಡುಕುತ್ತೇನೆ ನಾನು.

ನನಗೆ ಒಮ್ಮೆ ಈ ಪೆನ್ನಿನ ಮೂತಿಯಿಂದ ಚುಚ್ಚಿಕೊಳ್ಳಬೇಕೆನಿಸುತ್ತಿದೆ. ಚಕ್ಕನೆ ಕೈಯನ್ನು ಮಡಿಚಿ, ಪೆನ್ನನ್ನು ಮುಷ್ಟಿಯಲ್ಲಿ ಹಿಡಿದು, ಮೂತಿಯನ್ನು ನನ್ನ ಕಡೆಗೇ ಮುಖ ಮಾಡಿ, ಕಣ್ಮುಚ್ಚಿಕೊಂಡು, ವೇಗದಿಂದ ಮೈಗೆಲ್ಲೋ ಚುಚ್ಚಿಕೊಳ್ಳುತ್ತೇನೆ.. ಚುಳ್ಳನೆ ನೋವಾಗುತ್ತದೆ.. ಚುಚ್ಚಿದ ಕೈಯನ್ನು ಹಾಗೇ ಹಿಡಿದುಕೊಂಡಿದ್ದೇನೆ.. ಇಲ್ಲ, ಈ ನೋವು ನನ್ನ ಮನದೊಳಡಗಿರುವ ನೋವನ್ನು ಶಮನ ಮಾಡುವಲ್ಲಿ ಸಫಲವಾಗುತ್ತಿಲ್ಲ.. ಜೋರಾಗಿ ಒತ್ತುತ್ತೇನೆ.. ಊಹೂಂ, ಏನೂ ಆಗುತ್ತಲೇ ಇಲ್ಲ.. 'ಒಂದು ನೋವನ್ನು ಕೊಲ್ಲುವುದಕ್ಕೆ ಅದಕ್ಕಿಂತ ದೊಡ್ಡ ನೋವು ಸಾಕು' ಎಂಬ ನನ್ನ ಆಲೋಚನೆ ಸುಳ್ಳಾಗುತ್ತಿದೆ.. ಅಥವಾ ಆ ಒಳಗಿನ ನೋವು ಈ ಬಾಹ್ಯ ನೋವಿಗಿಂತ ಎಷ್ಟೋ ದೊಡ್ಡದಿದೆ.. ಅದರ ಮುಂದೆ ಇದು ಏನೂ ಅಲ್ಲ..

ನನ್ನ ಮುಚ್ಚಿದ ಕಣ್ಣಿನಿಂದ ನೀರು ಒಸರುತ್ತದೆ.. ಹೀಗೆ ಚುಚ್ಚಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎಂಬ ಅರಿವು ಮೂಡುತ್ತದೆ.. ಕೈಯ ಬಿಗಿಯನ್ನು ಸಡಿಲ ಮಾಡುತ್ತೇನೆ.. ಸುಸ್ತಾದ ಪೆನ್ನು ಜಾರಿ ಮತ್ತೆ ಕೆಳಗೆ ಬೀಳುತ್ತದೆ.. ಕಣ್ಣು ಬಿಡುತ್ತೇನೆ.. ಬಿದ್ದ ಪೆನ್ನಿನ ದೈನ್ಯ ಮುಖವನ್ನು ನೋಡುವ ಆಸೆಯಾಗುವುದಿಲ್ಲ.. ಎಡಗೈಯಲ್ಲಿ ಇನ್ನೂ ಅದರ ಕ್ಯಾಪು ಇದೆ.. ಅದನ್ನು ಮೇಜಿನ ಮೇಲೆ ನಿಧಾನಕ್ಕೆ ಇರಿಸಿ, ಮೊಣಕೈಯನ್ನು ಮೇಜಿಗಾನಿಸಿ, ಬಾಗಿ ಮುಖವಿಟ್ಟು ಮತ್ತೆ ಕಣ್ಮುಚ್ಚಿಕೊಳ್ಳುತ್ತೇನೆ.. ಕನಸು ಬೀಳಿಸಲೆಂದೇ ನಿದ್ರೆ ಬರುತ್ತದೆ..

ಕನಸಿನಲ್ಲಿ ನಾನೊಂದು ನದೀತೀರದತ್ತ ನಡೆದಿದ್ದೇನೆ. ಮೋಡ ಕವಿದ ಮುಗಿಲು.. ಕಾಣದ ಸೂರ್ಯ ಸೂಸುತ್ತಿರುವ ಬೆಳಕು.. ಬೀಸುತ್ತಿರುವ ಮಂದ-ಶೀತಲ-ಮಾರುತ.. ತೀರದಲೊಂದು ಬೋಳು ಮರ.. ನಾನು ಅದರ ಬುಡದಲ್ಲಿ ಕುಕ್ಕರಗಾಲಲ್ಲಿ ಕುಳಿತುಕೊಳ್ಳುತ್ತೇನೆ.. ಅಗಾಧ ವಿಸ್ತಾರದ ಪ್ರಶಾಂತ ನದಿಯನ್ನು ನಿರುಕಿಸುತ್ತೇನೆ.. ಪ್ರಶಾಂತವೆಂಬಂತೆ ಭಾಸವಾಗುತ್ತದೆ ಅಷ್ಟೆ; ಅದರೊಡಲಿನಲ್ಲೂ ಭೋರ್ಗರೆತದ ಮೊರೆತವಿದೆ.. ಪ್ರತಿ ಹನಿಯ ಹೃದಯದಲ್ಲೂ ಓಡಿ ಕನಸಿನ ಸಾಗರವ ಸೇರುವ ಆತುರವಿದೆ.. ಇನ್ನೂ ಎಷ್ಟೋ ದೂರ ಹರಿಯಬೇಕಲ್ಲ ಎಂಬ ಅಸಮಾಧಾನವಿದೆ.. ಆದರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಕ್ರಮಿಸುತ್ತಿದೆ ನದಿ.. ಸುಸ್ತಾಯಿತೆನಿಸಿದಾಗ ಮಡುವೊಂದರಲ್ಲಿ ಸ್ವಲ್ಪ ಹೊತ್ತು ನಿಲ್ಲುತ್ತದೆ.. ವಿರಮಿಸಿ ಮತ್ತೆ ಮುಂದುವರೆಯುತ್ತದೆ.. ನನಗೆ ಈ ನದಿಯಿಂದ ಗೊತ್ತಿದ್ದೂ ಗೊತ್ತಿಲ್ಲದಂತಿದ್ದ ಪಾಠವೊಂದನ್ನು ಕಲಿತಂತೆನಿಸುತ್ತದೆ.. ಎಚ್ಚರಾಗುತ್ತದೆ..

ಹರಿಯುತ್ತಿದ್ದರೆ ಮಾತ್ರ ಸೇರಬಹುದು ಸಾಗರವನ್ನು... ನಿಂತರೆ ನಿಂತಲ್ಲೇ ಇರುತ್ತೇವೆ... ಅಲ್ಲಲ್ಲಿ ನಿಂತು ಮತ್ತಷ್ಟು ರಭಸವನ್ನು ಒಡಗೂಡಿಸಿಕೊಂಡು, ಮಧ್ಯೆ ಮಧ್ಯೆ ಇನ್ನಷ್ಟು ನದಿಗಳನ್ನು ಸೇರಿಸಿಕೊಂಡು ಮುಂದುವರೆದಾಗಲೇ ಸಾಕಾರದ ಸಾಗರವ ಸೇರಲು ಸಾಧ್ಯವೆಂಬ ಸಾಕ್ಷಾತ್ಕಾರವಾಗುತ್ತದೆ. ಬಗ್ಗಿ ಮತ್ತೆ ಪೆನ್ನನ್ನು ಎತ್ತಿಕೊಳ್ಳುತ್ತೇನೆ.. ಅವಶ್ಯಕತೆಯೇ ಇಲ್ಲದಿದ್ದ ಈ ಬರಹವನ್ನು ಬರೆಯುತ್ತಾ ನನ್ನ ಮೊಬೈಲಿಗೆ ಹ್ಯಾಂಡ್ಸ್‍ಫ್ರೀ ಸಿಕ್ಕಿಸಿ ಎಫ್ಫೆಮ್ಮನ್ನು ಆನ್ ಮಾಡುತ್ತೇನೆ.. ಸ್ಪೀಕರಿನಿಂದ ಹೊರಟ ಹಾಡು ಕಿವಿಯೊಳಗೆ ಮೊಳಗಿ ಕೊನೆಗೆ ಗುನುಗಾಗಿ ನನ್ನ ಬಾಯಿಂದಲೇ ಹೊರಬರುತ್ತದೆ:

ನನ್ನ ಹಾಡು ನನ್ನದು.. ನನ್ನ ರಾಗ ನನ್ನದು.. ನನ್ನ ತಾಳ ನನ್ನದು..