Friday, February 29, 2008

ಸಾಗರದ ಜಾತ್ರೆಯಲಿ...

ಸಾಗರದ ಜಾತ್ರೆಯಲಿ ಸಾಗರದಷ್ಟು ಜನ
ತಿರುಗುವ ತೊಟ್ಟಿಲು, ಬಳೆಯಂಗಡಿ, ಬತ್ತಾಸು ಬೆಂಡು
ಖಾರಾ ಮಂಡಕ್ಕಿ, ಪೀಪಳಿ ಶಬ್ದ, ಬಾವಿಯೊಳಗೆ ಬೈಕು
ಪ್ರತಿದಿನವು ತೆರಳುವಿವನು.

ಇಂದು ನಾಲ್ಕನೆಯ ದಿನ, ಇಂದೆಂದಿನಂತಲ್ಲ:
ಮಾರಮ್ಮನಾ ಕಣ್ಗೆಂಪು ತುಸು ಹೆಚ್ಚೆ ಇಹುದು;
ಆ ರೌದ್ರ ಭಯಬಣ್ಣ ಹಸಿರಾಗಲಿಹುದು:
ಇನ್ನೇನು ಬರಲಿಹಳು ಮಾವನಾ ಮಗಳು.

ನಿನ್ನೆ ಮುಸ್ಸಂಜೆಯೇ ಬಂದಿತ್ತು ದೂರವಾಣಿಯ ಕರೆ:
ಮುಂಜಾನೆ ಬಸ್ಸಿಗೆ ಬರುತಿಹಳು ಎಂದು;
'ಭಾವನೆಂದರೆ ಸಾಕು, ಅದೇನು ಪ್ರೀತಿಯೋ ಕಾಣೆ
ಗರಿಗೆದರಿ ಆಗುವಳು ತಾನೆ ನವಿಲು' -ಎಂದಿದ್ದರು ಅತ್ತೆ!

ಮೊದಲ ಬಸ್ಸಿದೋ ಬಂತು, ನೂಕು ನುಗ್ಗಲು, ಛೇ!
ಮುದುಡಿ ಹೋಗಿಹಳೋ ಏನೋ ನನ್ನ ನಲ್ಲೆ?
ಇಳಿದರೂ ಇಷ್ಟು ಜನ, ತೋರುತಿಲ್ಲವೇಕವಳ ಮುಖ
ತಪ್ಪಿಸಿಕೊಂಡಳೇ ಮೊದಲ ಗಾಡಿ ತಡವಾಗಿ ಹೊರಟು?

ಇಲ್ಲ ಇಲ್ಲ ಇಲ್ಲ, ಅಲ್ಲಿ ನೋಡಿ ಅಲ್ಲಿ:
ಸಿರಿಗಂಗೆ ಇಳಿದಂತೆ ಜರತಾರಿ ಉಟ್ಟು
ಮೆಟ್ಟಿಲಲ್ಲೇ ನಿಂತು ಅರಸುತಿರುವಳು ಎನಗೆ
'ಇಲ್ಲಿ ಇರುವೆನು ಏ, ಹೀಗೆ ಬಾರೇ.'

ತೇರದಾರಿಯಲಿರುವ ಅಂಗಡಿಗಳೆಲ್ಲ
ತಮಗಾಗಿಯೇ ತೆರೆದಿಹವು ಎನ್ನುವಂತೆ;
ನೋಡುತಿರುವವು ಇವಳ ಮಿಟುಕಿಸದ ಕಣ್ಣು
ಇದ ನೋಡುವುದರಲ್ಲೇ ನಿರತ ನನ್ನ ಕಣ್ಣು!

ಅಮ್ಮನಾ ಗುಡಿಯೆದುರು ಉದ್ದ ಜನ ಸಾಲು
ಮೆಲ್ಲ ಕರಗುವ ಮಂದಿ; ತುದಿಯಲೆಲ್ಲೋ ನಾವು
ಮುಂದೆ ನಿಂದವಳ ಮುಡಿಯ ಮಲ್ಲಿಗೆಯ ಪರಿಮಳವು
ಎನ್ನ ನಾಸಿಕಗೀಗ ಇಷ್ಟ ಇಷ್ಟ.

ನನ್ನ ಸಂಭ್ರಮಕಂತು ಪಾರವೇ ಇಲ್ಲ;
ಏಕೆ ಗೊತ್ತೆ? ಕಾಯ್ವೊಡೆದು ಬೇಡ್ವಾಗ
ನಸು ನಕ್ಕಿಹಳು ದೇವಿ ಹರಸುತ್ತ:
'ಮುಂದಿನ ವರ್ಷವೇ ಮದುವೆ; ಚಿಂತೆ ಬೇಡ' -ಎಂದು!

ಗದ್ದಲದ ಜಂಗುಳಿಯಲೂ ಇಬ್ಬರೇ ನಾವೀಗ
ಮಾರು ದೂರದ ಬಳಿಕ ಕೈ-ಕೈ ಬೆಸೆದು;
ಭಯವೆಲ್ಲ ದೂರಾಗಿ, ಮನವೆಲ್ಲ ಹಾಯಾಗಿ
ಜಾತ್ರೆಗೇ ಹೊಸ ಕಳೆಯು ಪ್ರಾಪ್ತವಾಗಿರಲು

ಚೆನ್ನಯ್ಯಗಂತೂ ಕರುಣೆಯೇ ಇಲ್ಲ ಸೈ,
ತೊಡಿಸುತಿರುವನಲ್ಲ ಬಳೆ, ನೋಯುತಿದ್ದರು ಇವಳ ಕೈ!
'ಯಾಕೆ ಬೇಕಿತ್ತೋ ನಿನಗಾದರು?' ಎಂದು ನಾ ಮುನಿದರೆ,
ಇವಳು, 'ನಿಮಗದೆಲ್ಲ ತಿಳಿಯದು' ಎನ್ವಳಲ್ಲ!

ಜಾತ್ರೆಯಾ ಗದ್ದಲದಿ ಈ ಬಳೆಯ ದನಿಯೀಗ
ತನ್ನದೇ ಸ್ವರಪಥದಿ ತೇಲುತಿಹುದು;
ಅಲ್ಲಿ ತೊಟ್ಟಿಲ ಮೇಲೆ, ಅಗೋ ದೋಣಿಯ ಮೇಲೆ
ಈ ಜೋಡಿ ಸಂಭ್ರಮದಿ ಪಾಲ್ಗೊಳ್ಳುತಿಹುದು.

[ಸಾಗರದಲ್ಲಿ ಜಾತ್ರೆ ನಡೆಯುತ್ತಿದೆ. ನನಗೆ ಹೋಗಲಾಗುತ್ತಿಲ್ಲ. :(]

Thursday, February 21, 2008

ಅಮ್ಮ ಬಂದಿದ್ದಳು..

ಅಮ್ಮ ಬಂದಿದ್ದಳು.

ಮಗನ ಪುಸ್ತಕ ಬಿಡುಗಡೆಯಾಗುತ್ತಿರುವುದು ಒಂದು ನೆಪವಾಗಿತ್ತಷ್ಟೇ. ಆದರೆ ಅವಳು ನಿಜವಾಗಿಯೂ ಬಂದದ್ದು ಬೆಂಗಳೂರು ನೋಡುವುದಕ್ಕೆ. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳೇ ಕಳೆದುಹೋಗಿದ್ದವು. ಮೊದಲೆರಡು ವರ್ಷ ಇದನ್ನು ಅರ್ಥ ಮಾಡಿಕೊಳ್ಳಲಿಕ್ಕೆ, ಇಲ್ಲಿ ಸೆಟಲ್ ಆಗಲಿಕ್ಕೇ ವ್ಯಯವಾಗಿಹೋಯಿತು. ಕಳೆದ ಒಂದು-ಒಂದೂ ವರೆ ವರ್ಷದಿಂದ ನಾನು ಅಮ್ಮನನ್ನು ಬೆಂಗಳೂರಿಗೆ ಬರುವಂತೆ ತುಂಬಾ ತುಂಬಾ ಕರೆಯುತ್ತಿದ್ದೆ. ಆದರೆ ಅವಳು ಮಳೆಗಾಲ, ಸುಗ್ಗಿ, ಅಜ್ಜಂಗೆ ಹುಷಾರಿಲ್ಲೆ, ಇತ್ಯಾದಿ ಏನೇನೋ ಕಾರಣವೊಡ್ಡಿ ಬರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಳು. ಮುಂದಿನ ಬಾರಿ ಊರಿಗೆ ಹೋದಾಗ ಏನಾದರಾಗಲಿ, ಅಮ್ಮನನ್ನು ಕರೆದುಕೊಂಡೇ ಬರುವುದು ಅಂತಲೂ ಪ್ಲಾನ್ ಮಾಡಿದ್ದೆ. ಈ ಮಧ್ಯೆ ಪದೇ ಪದೇ ಮುಂದೂಡಲ್ಪಡುತ್ತಿದ್ದ ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಅಂತೂ ಫೆಬ್ರುವರಿ ಹತ್ತಕ್ಕೆ ಖಾಯಂ ಎಂದಾದಾಗ ನಾನು ಮನೆಗೆ ಫೋನ್ ಮಾಡಿದೆ. ಮೊದಲು ಅಪ್ಪ ತಾನೇ ಬರುವುದಾಗಿ ಹೇಳಿದ. ಆಮೇಲೆ ಬಹುಶಃ ಏನೇನೋ ಮಾಡಿ ಅಮ್ಮನಿಗೆ ಧೈರ್ಯ ತುಂಬಿ ಒಪ್ಪಿಸಿದ್ದಾನೆ. ನನ್ನ ಅಜ್ಜನ ಮನೆಯ ಊರಿನವರೊಬ್ಬರು ಬುಧವಾರ ರಾತ್ರಿ ಬೆಂಗಳೂರಿಗೆ ಹೊರಡುವವರಿದ್ದಾರೆ ಎಂಬ ಸುದ್ಧಿಯನ್ನು ಸಂಗ್ರಹಿಸಿದ್ದಾರೆ. ಅವರ ಜೊತೆಯೇ ಅಮ್ಮನೂ ಹೊರಡುವುದು ಎಂದು ತೀರ್ಮಾನವಾಗಿದೆ. ಆವೊತ್ತು ರಾತ್ರಿ ಅಮ್ಮ ಫೋನ್ ಮಾಡಿ ತಾನೇ ಬರುತ್ತಿರುವುದಾಗಿ ಘೋಷಿಸಿಬಿಟ್ಟಳು! ನನಗಾದ ಸಂಭ್ರಮ ಅಷ್ಟಿಷ್ಟಲ್ಲ.

ಆ ಭಾನುವಾರ ನಾನೂ ನನ್ನ ರೂಂಮೇಟೂ ಸೇರಿ ಇಡೀ ಮನೆಯನ್ನು ಗುಡಿಸಿ, ಸಾರಿಸಿ, ಫಿನಾಯಿಲ್ ಹಾಕಿ ತೊಳೆದು ಸ್ವಚ್ಚ ಮಾಡಿದೆವು. ಹೇಗ್‍ಹೇಗೋ ತುರುಕಿಟ್ಟಿದ್ದ ಬಟ್ಟೆಗಳನ್ನು ಚಂದ ಮಾಡಿ ಮಡಿಚಿ ಜೋಡಿಸಿಟ್ಟೆವು. ಅಂಡರ್‌ವೇರನ್ನು ಎಲ್ಲೆಂದರಲ್ಲಿ ನೇತುಹಾಕಿದರೆ ಕೊಲೆ ಮಾಡುವುದಾಗಿ ರೂಂಮೇಟಿಗೆ ಬೆದರಿಕೆ ಹಾಕಿದೆ. ಹಳೆಯ ನ್ಯೂಸ್‍ಪೇಪರುಗಳನ್ನು ಮಾರಿದೆವು. ನನ್ನ ಲೈಬ್ರರಿಯಲ್ಲಿ ಮನೆ ಮಾಡಿಕೊಂಡಿದ್ದ ಜಿರಲೆಗಳು ಸ್ವರ್ಗದ ದಾರಿ ಹಿಡಿದವು. ಗ್ಯಾಸ್ ಕಟ್ಟೆ ಫಳಫಳನೆ ಹೊಳೆಯಲಾರಂಭಿಸಿತು. ಅಮ್ಮನನ್ನು ಬರಮಾಡಿಕೊಳ್ಳಲಿಕ್ಕೆ ನಮ್ಮ ಮನೆ ಸಜ್ಜಾಗಿ ನಿಂತಿತು!

ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ನನ್ನ ಮೊಬೈಲು ರಿಂಗಾಯಿತು. ಹೊದಿಕೆಯೊಳಗೆಲ್ಲೋ ಹುದುಗಿದ್ದ ಕೈ ಹೊರಬಂದು ಶಬ್ದವನ್ನರಸಿ ಮೊಬೈಲನ್ನು ಹಿಡಿದು ಕಿವಿಯ ಬಳಿ ತಂದು ಆನ್ಸರ್ ಬಟನ್ನನ್ನು ಒತ್ತಿತು. "ಅಪ್ಪೀ, ನಾ ಬಂದು ಮುಟ್ಟಿದಿ! ಮೆಜೆಸ್ಟಿಕ್ಕಲ್ಲಿ ಅಮರ್ ಹೋಟ್ಲ್ ಹತ್ರ ಇದ್ದಿ. ಬರ್ತ್ಯಾ?" ಅಮ್ಮ! ನನ್ನ ಅಮ್ಮ! ಇಲ್ಲೇ, ಬಳಿಯ ಮೆಜೆಸ್ಟಿಕ್ಕಿನಿಂದ ಮಾತಾಡುತ್ತಿದ್ದಾಳೆ! ನಾನು ಹೌಹಾರಿ ಎದ್ದೆ. ದಡದಡನೆ ಹಾಸಿಗೆಯನ್ನು ಮಡಿಚಿಟ್ಟು, ಮುಖಕ್ಕೆ ನೀರು ಚುಮುಕಿಸಿಕೊಂಡು, ಕೈಗೆ ಸಿಕ್ಕಿದ ಒಂದು ಪ್ಯಾಂಟು ಸಿಕ್ಕಿಸಿಕೊಂಡು, ಗಾಡಿಯನ್ನು ಕಾಂಪೌಂಡಿನಿಂದ ಹೊರತಂದು ಹೊರಟೆ... ಮುಂಜಾನೆಯ ಗಾಳಿಯನ್ನು ಸುಯ್ಯನೆ ಸೀಳಿಕೊಂಡು ಓಡುತ್ತಿತ್ತು ಬೈಕು.. ಹತ್ತೇ ನಿಮಿಷದಲ್ಲಿ ಮೆಜೆಸ್ಟಿಕ್ಕಿನಲ್ಲಿದ್ದೆ. ಬೈಕು ಪಾರ್ಕ್ ಮಾಡಿ ಅಮರ್ ಹೋಟೆಲ್ ಬಳಿ ಬಂದರೆ ಅಲ್ಲಿ ನಿಂತಿದ್ದಳು ಅಮ್ಮ.. ನನ್ನ ಅಮ್ಮ.. ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು. ನನ್ನ ಮುಖ ಕಾಣುತ್ತಿದ್ದಂತೆಯೇ "ಅದೇ! ಅಪ್ಪಿ ಬಂದ!" ಅಂತ ತನ್ನ ಪಕ್ಕದಲ್ಲಿದ್ದ ತವರೂರಿನ ಮಾಬ್ಲೇಶ್ವರಣ್ಣನಿಗೆ ತೋರಿಸಿದಳು. ನಾನು ಅಮ್ಮನ ಬಳಿ ಹೋದೆ. "ಬಸ್ಸಲ್ಲಿ ನಿದ್ದೆ ಬಂತಾ ಅಮಾ?" ಕೇಳಿದೆ. "ನಿದ್ಯಾ? ಒಂದು ನಿಮ್ಷ ಕಣ್ಮುಚ್ಚಿದ್ಲಾ ಕೇಳು ಅವ್ಳುನ್ನ! ಹೊಟ್ಟೆ ತೊಳುಸ್ತಿತ್ತಡ.. ರಾತ್ರಿಡೀ ಕಿಟಕಿ ಹೊರಗೆ ನೋಡ್ಕ್ಯೋತ್ ಕೂತಿದ್ದ. ನೀನು ವಾಪಾಸ್ ಹೋಗಕ್ಕರೆ ಬಲಬದಿ ಸೀಟಲ್ಲೆ ಕೂರ್‍ಸಿ ಕಳ್ಸು. ಈಗ ಹೆಂಗರು ಈ ಕಡೆ ಸೈಡ್ ಪೂರ್ತಿ ನೋಡ್‍ಕೈಂದ. ವಾಪಸ್ ಹೋಗಕ್ಕರೆ ಆ ಕಡೆನು ನೋಡ್ಲಿ!" ಮಾಬ್ಲೇಶ್ವರಣ್ಣ ಹೇಳಿದ. ನಾನು ಜೋರಾಗಿ ನಕ್ಕೆ. ಮೇಷ್ಟ್ರು, ಮನೆಯವರ ಬಳಿ ಕಂಪ್ಲೇಂಟ್ ಮಾಡುವಾಗ ಪಕ್ಕದಲ್ಲಿ ತಲೆ ತಗ್ಗಿಸಿ ನಿಂತಿರುವ ಶಾಲಾಬಾಲಕನಂತೆ ಅಮ್ಮ ಪೆಚ್ಚಾಗಿ ನಿಂತಿದ್ದಳು.

ಮಹಾಬಲೇಶ್ವರಣ್ಣನಿಗೆ ಥ್ಯಾಂಕ್ಸ್ ಹೇಳಿ, ವಾಪಸು ಹೋಗುವುದರೊಳಗೆ ನಮ್ಮನೆಗೊಮ್ಮೆ ಬಂದು ಹೋಗುವಂತೆ ಕರೆದು, ಅಮ್ಮನ ದೊಡ್ಡ-ವಜ್ಜೆ ಏರ್‌ಬ್ಯಾಗನ್ನು ತೆಗೆದುಕೊಂಡೆ. ಅಮ್ಮ ನನ್ನ ಹಿಂದೆಯೇ ಬಂದಳು. ನನ್ನ ಹೊಸ ಬೈಕು ಹತ್ತುವಾಗ "ಇದು ಅಪ್ಪನ್ ಬೈಕ್ ತರ ಇಲ್ಲೆ, ಸಿಕ್ಕಾಪಟ್ಟೆ ಎತ್ತರ" ಎಂದಳು. ಲೇಡೀಸ್ ಹ್ಯಾಂಡ್ ಇಲ್ಲದ್ದರಿಂದ ಎಲ್ಲಿ ಹಿಡಕೊಳ್ಳುವುದು ಅಂತ ಗೊಂದಲಕ್ಕೆ ಬಿದ್ದಳು. ನನ್ನ ಹೆಗಲನ್ನೆ ಹಿಡಕೋ ಎಂದೆ. "ನಿಧಾನ ಓಡ್ಸು" ಎಂದಳು. ಬ್ಯಾಗನ್ನು ಪೆಟ್ರೋಲ್ ಟ್ಯಾಂಕಿನ ಮೇಲಿಟ್ಟುಕೊಂಡು ನಿಧಾನವಾಗಿ ಹೊರಟರೆ ಇನ್ನೂ ಶುರುವೇ ಆಗದಿದ್ದ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬೈಕು ಓಡುವಾಗ ಅಮ್ಮ ಹಿಂದೆ ಕಣ್ಮುಚ್ಚಿ ಕೂತಿದ್ದಳು.

ಅಮ್ಮನಿಗೆ ಮನೆ ತೋರಿಸಿದೆ. ಕಾಯ್ಲ್ ಹಾಕಿ ನೀರು ಕಾಯಿಸುವುದನ್ನು ಹೇಳಿಕೊಟ್ಟೆ. ಕಾಫಿಪುಡಿ ಯಾವ ಡಬ್ಬಿಯಲ್ಲಿದೆ ಎಂದು ತೋರಿಸಿಕೊಟ್ಟೆ. ಈಳಿಗೆ ಮಣೆ ಇಲ್ಲದೆ ಚಾಕುವಿನಲ್ಲಿ ತರಕಾರಿ ಹೆಚ್ಚಲು ಹೆದರಿದ್ದಕ್ಕೆ ನಾನೇ ಹೆಚ್ಚಿಕೊಟ್ಟೆ. ಅಮ್ಮ ಊರಿಂದ ಕೊಬ್ರಿ ಮಿಠಾಯಿ ಮಾಡಿಕೊಂಡು ಬಂದಿದ್ದಳು. ನೆಲ್ಲಿಸಟ್ಟು ತಂದಿದ್ದಳು. ಹಲಸಿನ ಹಪ್ಪಳ ತಂದಿದ್ದಳು. 'ಓಹೋ! ಮಗನ ಮನೇಲಿ ಅಡುಗೆ-ಗಿಡುಗೆ ಮಾಡಿಕೊಂಡು ಹದಿನೈದು ದಿನ ಇದ್ದು ಹೋಗಿ..' ಎಂದ ಓನರ್ರಿಗೆ 'ಇಲ್ಲ, ನಮ್ಮ ಮಾವನವ್ರಿಗೆ ಅರಾಮಿರಲ್ಲ.. ಒಂದು ವಾರ ಅಷ್ಟೇ. ಹೋಗ್ಬೇಕು ಊರಿಗೆ' ಎಂದಳು ಅಮ್ಮ.

ಪುಸ್ತಕ ಬಿಡುಗಡೆಯಲ್ಲಿ ನಾನು ಮಾತಾಡಿದ್ದು ನೋಡಿ ಅಮ್ಮ ಖುಷಿಯಾಗಿದ್ದಳು. ಮನೆಗೆ ಫೋನ್ ಮಾಡಿದ್ದಾಗ ಅಪ್ಪನ ಬಳಿ 'ಅಪ್ಪಿ ಚನಾಗ್ ಮಾತಾಡಿದ.. ನಾ ಅಂವ ಮಾತಾಡಿದ್ದೇ ನೋಡಿರ್ಲೆ' ಅಂದಳು. ಅಮ್ಮನನ್ನು ಬೆಂಗಳೂರಿನ ನೆಂಟರ ಮನೆಗಳಿಗೆ ಕರೆದೊಯ್ದೆ. ಸಿಗ್ನಲ್ಲುಗಳಲ್ಲಿ ರಸ್ತೆ ದಾಟುವುದು ಹೇಗೆ ಎಂದು ಹೇಳಿಕೊಟ್ಟೆ. ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ. ಮೆಜೆಸ್ಟಿಕ್ಕಿನ ಫ್ಲೈಓವರ್ರಿನ ಮೇಲ್ಗಡೆ ನಿಲ್ಲಿಸಿಕೊಂಡು 'ಈ ಕಡೆ ಸಿಟಿ ಬಸ್‍ಸ್ಟ್ಯಾಂಡು, ಆ ಕಡೆ ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡು, ಹೀಗೇ ಹೋದ್ರೆ ರೈಲ್ವೇ ಸ್ಟೇಶನ್ನು, ಆ ಕಡೆ ಗಾಂಧಿನಗರ' ಅಂತ ತೋರಿಸಿದೆ. ಸಿಗ್ಮಾ ಮಾಲ್‍ಗೆ ಕರೆದುಕೊಂಡು ಹೋಗಿ ಎಸ್ಕಲೇಟರ್ ಬಳಿ ಹೋಗಿ ನಿಂತರೆ ಹೆದರಿಕೊಂಡು ನಿಂತುಬಿಟ್ಟಳು. ಹತ್ತೋದೇ ಇಲ್ಲ ಎಂದಳು. ಕೈ ಹಿಡಿದುಕೊಂಡು 'ನೋಡೂ, ಹೀಗೆ ಮೆಟ್ಲು ಬರ್ತಿದ್ದಂಗೆ ಎರಡೂ ಹೆಜ್ಜೆನೂ ಇಟ್ಬಿಡು, ತಂತಾನೇ ಮೇಲೆ ಹೋಗ್ತು.. ಹೆದ್ರಡ' ಎಂದೆ. ಮೆಟ್ಟಿಲು ಮೇಲೇರುತ್ತಿದ್ದಾಗ ಅವಳ ಎದೆ ಡವಗುಟ್ಟುತ್ತಿದ್ದುದು ನಡುಗುತ್ತಿದ್ದ ಕೈಯಿಂದಲೇ ಗೊತ್ತಾಗುತ್ತಿತ್ತು. ಬಿಗ್ ಬಜಾರಿನಲ್ಲಿ ಶಾಪಿಂಗ್ ಮಾಡೋದು ಎಂದರೆ ಹೇಗೆ ಅಂತ ತೋರಿಸಿದೆ. 'ಶೆಟ್ರ್ ಅಂಗಡೀಲಿ ಪಟ್ಟಿ ಹಿಡ್ಕಂಡ್ ಸಾಮಾನ್ ಹಾಕ್ಸೋ ರಗಳೇನೆ ಇಲ್ಲೆ.. ನಮ್ಗೇನು ಬೇಕೋ ಎಲ್ಲ ಈ ಗಾಡಿಲಿ ಇಟ್ಕಂಡು ಹೋಗಿ ಲಾಸ್ಟಿಗೆ ಬಿಲ್ ಮಾಡ್ಸಿದ್ರೆ ಆತು.. ದುಡ್ ಕೊಡೋದೂ ಬ್ಯಾಡ; ಕಾರ್ಡ್ ಕೊಟ್ರೆ ಸಾಕು' ಎಂದೆ.

ಪುಟ್ಟ ತಳ್ಳುಗಾಡಿಯಂತಹ ಅಂಗಡಿಯಲ್ಲಿ ಟೋಪಿ ಹಾಕಿಕೊಂಡವನೊಬ್ಬ ಏನೋ ಮಾರುತ್ತಿದ್ದುದನ್ನು ನೋಡಿ 'ಅದೇನು?' ಅಂದಳು. 'ಅದು ಸ್ವೀಟ್ ಕಾರ್ನ್' ಎಂದು ಹೇಳಿ, ಒಂದು ರೆಗ್ಯುಲರ್ ಕಪ್ ತಗೊಂಡು ತಿನ್ನಿಸಿದೆ. 'ಇಷ್ಟು ಸಣ್ಣ ಲೋಟಕ್ಕೆ ನಲ್ವತ್ತು ರೂಪಾಯಿಯಾ? ಎಂಥಿದ್ದು ಇದ್ರಲ್ಲಿ? ಸುಮ್ನೆ ದುಡ್ ದಂಡ' ಎಂದಳು. ಗುಂಡಿ ಒತ್ತಿ ಲಿಫ್ಟ್‍ಗೆ ಕಾಯತೊಡಗಿದೆ. ಬಾಗಿಲು ತೆರೆದುಕೊಂಡಕೂಡಲೇ ಒಳನುಗ್ಗಿ ಅಮ್ಮನನ್ನು 'ಬಾ' ಅಂತ ಒಳಗೆಳೆದುಕೊಂಡೆ. ತಕ್ಷಣ ಬಾಗಿಲು ಮುಚ್ಚಿಕೊಂಡು ನಾವು ಕೆಳಹೋಗತೊಡಗಿದಾಗ ಅಮ್ಮನ ಕೈಯಲ್ಲಿದ್ದ ಸ್ವೀಟ್‍ಕಾರ್ನ್ ಕಪ್ಪು ಬೀಳುವಂತಾಗಿ 'ಅಯ್ಯೋ ಇದೆಂಥಾತು?' ಎಂದಳು. 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು.

ಅಮ್ಮನ ಕಣ್ಗಳೊಳಗೆ ವಿಧಾನಸೌಧ ಪ್ರತಿಫಲಿಸುತ್ತಿದ್ದಾಗ 'ಇಲ್ಲೇ ನೋಡು.. ನಮ್ಮ ಮಂತ್ರಿಗಳೆಲ್ಲ ಕೂತು ದಾದಾಗಿರಿ ಮಾಡೋದು' ಎಂದು ನಕ್ಕೆ. ಅಕ್ಕಪಕ್ಕದವರೆಲ್ಲ ನಮ್ಮನ್ನೇ ನೋಡಿದರು. ಆಮೇಲವಳನ್ನು ಕರೆದುಕೊಂಡು ಹೈಕೋರ್ಟಿನ ಕೆಂಪು ತೋರಿಸುತ್ತಾ ಕಬ್ಬನ್ ಪಾರ್ಕಿನ ಹಸಿರಿನೊಳಗೆ ನುಗ್ಗಿದೆ. 'ಇಲ್ಲೆಂತ ಮರಗಿಡ ನೋಡದು! ನಮ್ಮೂರ್ ಕಾಡು ಇದ್ರಕಿಂತ ಎಷ್ಟೋ ಚೊಲೋ ಇದ್ದು. ನೆಡಿ ಹೋಪನ!' ಎಂದಳು. ಇದ್ದುದರಲ್ಲೇ ಲಾಲ್‍ಭಾಗಿನ ಹೂಗಿಡಗಳು ಅವಳಿಗೆ ಇಷ್ಟವಾಯಿತು. ಗುಲಾಬಿ ತೋಟ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಳು. ಯಾವುದೋ ಹೂವು ನೋಡುತ್ತ 'ಇದ್ರದ್ದೊಂದು ಹೆರೆ ಕೊಡ್ತಿದ್ವೇನ.. ನಮ್ಮನೆ ಅಂಗಳದಲ್ಲಿ ಇಲ್ಲೇ ಇಲ್ಲೆ ಈ ಥರದ್ದು' ಎಂದಳು. ಒಳ್ಳೆಯದೊಂದು ಹೋಟೆಲ್ಲಿಗೆ ಕರೆದೊಯ್ದು ಊಟ ಮಾಡಿಸಿದೆ. ಫಿಂಗರ್ ಬೌಲ್‍ನಲ್ಲಿ ಕೈ ತೊಳೆದದ್ದು ಸರಿಯಾಗದೆ ವಾಶ್ ಬೇಸಿನ್ ಬಳಿ ಹೋದಳು. ಅದೇ ಸಂದರ್ಭದಲ್ಲಿ ನಾನು ಅವಳಿಗೆ ಕಾಣದಂತೆ ಬಿಲ್ ದುಡ್ಡು ಕೊಟ್ಟೆ. ಬೆಂಗಳೂರಿನ ಟ್ರಾಫಿಕ್ಕಿಗಾದರೂ ಅವಳು ಹೆದರಿದಳೋ ಇಲ್ಲವೋ, ಆದರೆ ಇಸ್ಕಾನಿನ ಬಂಗಾರದ ಶೋಕೇಸಿನೊಳಗಿನ ಕೃಷ್ಣಾರಾಧೆಯರೆದುರು ಮಾತ್ರ ಅಮ್ಮ ಕೈಮುಗಿಯುವುದನ್ನೂ ಮರೆತು ಸುಮ್ಮನೆ ನೋಡುತ್ತ ನಿಂತುಬಿಟ್ಟಳು. ನನಗಂತೂ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ'ದ ಅಮ್ಮನೇ ನನ್ನ ಅಮ್ಮನಲ್ಲಿ ಕಾಣುತ್ತಿದ್ದಳು. ಎಲ್ಲ ಅಮ್ಮಂದಿರೂ ಹೀಗೇನೇನೋ ಅಂದುಕೊಂಡೆ.

ಒಂದು ದಿನ ಮಾತ್ರ ಅಮ್ಮನನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಆಫೀಸಿಗೆ ಹೋಗಿದ್ದೆ. ವಾಪಸು ಬರುವ ಹೊತ್ತಿಗೆ, ನನ್ನ ತೊಳೆಯಬೇಕಿದ್ದ ಬಟ್ಟೆಗಳನ್ನೆಲ್ಲ ತೊಳೆದುಹಾಕಿ, ಸಾಂಬಾರು ಬಟ್ಟಲಿನ ಖಾಲಿ ಹೊಡೆಯುತ್ತಿದ್ದ ಕುಳಿಗಳೊಳಗೆ ಎಲ್ಲವನ್ನೂ ಮಟ್ಟಸವಾಗಿ ತುಂಬಿಸಿಟ್ಟು, ನನ್ನ ಬಾಚಣಿಗೆಯಲ್ಲಿ ಸಿಕ್ಕಿಕೊಂಡಿದ್ದ ಕಸವನ್ನೆಲ್ಲ ಚೊಕ್ಕ ಮಾಡುತ್ತ ಕೂತಿದ್ದಳು. 'ಅಮ್ಮಾ ಎಂಥಕಮ್ಮ ಇದ್ನೆಲ್ಲ ಮಾಡಕ್ ಹೋದೆ.. ಒಂದು ದಿನ ಆರಾಮಾಗಿ ಮನೇಲಿರು ಅಂತ ಬಿಟ್ಟಿಕ್ ಹೋಗಿದ್ದಲ್ದಾ?' ಎಂದು ನಾನು ಸಿಡಿಗುಟ್ಟಿದರೆ, 'ಮನೇಲಿ ಸುಮ್ನೆ ಕೂತ್ಕಂಡು ಎಂಥ ಮಾಡ್ಲಾ ನಾನು? ಬೇಜಾರ್ ಬಂದುಹೋಗ್ತು.. ಊರಲ್ಲಾದ್ರೆ ಅಡಕೆ ಸುಲಿಯಕ್ಕೆ ಹೋಗ್ಲಕ್ಕು, ತೋಟಕ್ ಹೋಗಿ ಬರ್ಲಕ್ಕು, ಹಿತ್ಲಿಗೆ ಹೋಗಿ ಗೇರ್‌ಪೀಠ ಹೆಕ್ಲಕ್ಕು, ಕೊಟ್ಟಿಗೆ ಕೆಲಸ ಇರ್ತು.... ಇಲ್ಲಿ ಎಂತೆಂತು ಕೆಲ್ಸಿಲ್ಲೆ! ಅಕ್ಕಪಕ್ಕದ ಮನೆಯವ್ರು ಯಾರಾದ್ರೂ ಮಾತಾಡಕ್ಕೆ ಬರ್ತ್ವನ ಅಂದ್ರೆ ಅದೂ ಇಲ್ಲೆ.. ಇದೆಂಥ ಬೆಂಗ್ಳೂರೇನ!' ಎಂದಳು ಅಮ್ಮ. 'ಅದ್ಕೇನಮ್ಮ, ಇಲ್ಲಿ ಹೆಂಗಸ್ರು ಗಂಡಸ್ರು ಎಲ್ಲಾ ಕೆಲಸಕ್ಕೆ ಹೋಗ್ತ' ಎಂದೆ. 'ಹೂಂ, ಹೌದಪ್ಪಾ.. ನೀನೂ ಕೆಲ್ಸಕ್ಕೆ ಹೋಗೋ ಹುಡುಗೀನೇ ಮದುವೆ ಮಾಡ್ಕ್ಯ! ಅದಿಲ್ಲೇಂದ್ರೆ ನನ್ ಸೊಸಿಗೆ ಮನೇಲ್ ಕೂತ್ಗಂಡು ಹುಚ್ ಹಿಡಿತು ಅಷ್ಟೇ!' ಎಂದಳು. ಅಷ್ಟೊತ್ತಿಗೆ ಮೊಬೈಲು ಪೀಂಗುಟ್ಟಿತು. 'ಅತ್ಗೇನ ಅಮ್ಮಂಗೆ ಪರಿಚಯ ಮಾಡ್ಸಿಕೊಟ್ಯಾ?' ಅಂತ ಮಧು ಎಸ್ಸೆಮ್ಮೆಸ್ ಮಾಡಿದ್ದ. ಸುಮ್ನೇ ಒಂದು ಸ್ಮೈಲೀ ಹಾಕಿ ರಿಪ್ಲೇ ಮಾಡಿದೆ.

ಚಿಕ್ಕಪೇಟೆಯ ಸ್ಯಾರಿ ಸೆಂಟರೊಂದಕ್ಕೆ ಕರೆದೊಯ್ದು ಅಮ್ಮನಿಗೆ ಸೀರೆ ಕೊಡಿಸಿದೆ. 'ಅದು ಚನಾಗಿಲ್ಲೆ, ಇದು ಚನಾಗಿಲ್ಲೆ, ಇದ್ನ ತಗಂಡ್ ಹೋದ್ರೆ ವೀಣತ್ತೆ ಎಂತ ಹೇಳ್ತ್ಲೇನ, ಮಡಿ ಸೀರೆ ಥರ ಕಾಣ್ತು ಅನ್ಸ್ತು, ಇದು ಪ್ಯೂರ್ ರೇಶ್ಮೆ ಹೌದಾ ಅಲ್ದಾ, ಇಷ್ಟೆಲ್ಲ ರೇಟ್ ಕೊಟ್ಟು ಇಲ್ಲಿ ತಗಳಕ್ಕಿಂತ ಸಾಗರದಲ್ಲಿ ತಗಂಡ್ರ್‍ಏ ಚೀಪಾಗ್ತು' ಎಂದೇನೇನೋ ಗೊಣಗುತ್ತಲೇ ಅಂತೂ ಅಮ್ಮ ಒಂದು ಸೀರೆ ಕೊಂಡಳು. ಮನೆಗೆ ಬಂದಮೇಲೂ ಅದನ್ನು ನಾಕ್ನಾಕು ಬಾರಿ ತೆರೆದು ನೋಡಿ ಸವರಿ 'ಚನಾಗಿದ್ದು ಅಲ್ದನಾ?' ಎಂದು ಕೇಳಿದಳು. 'ಹೈಕ್ಲಾಸ್ ಇದ್ದು ಬಿಡು ಚಿಕ್ಕೀ' ಎಂದು ನನ್ನ ರೂಂಮೇಟೂ ಶಿಫಾರಸು ಮಾಡಿದಮೇಲೇ ಅವಳಿಗೆ ಸ್ವಲ್ಪ ಸಮಾಧಾನ ಆಗಿದ್ದು!

ಅಮ್ಮನನ್ನು ವಾಪಸು ಕಳುಹಿಸಿಕೊಡಲಿಕ್ಕೆ ನನ್ನ ಮನಸಿನ್ನೂ ತಯಾರಾಗಿರಲೇ ಇಲ್ಲ. ಆದರೆ ಆಗಲೇ ವಾರವಾಗಿಬಿಟ್ಟಿತ್ತು. ಅಜ್ಜನನ್ನು ನೋಡಿಕೊಳ್ಳುವುದಕ್ಕೆ ಮತ್ತು ಅಡುಗೆ ಮಾಡಿ ಹಾಕಲಿಕ್ಕೆಂದು ಮನೆಗೆ ಬಂದಿದ್ದ ವೀಣತ್ತೆ ತಾನು ನಾಳೆ ವಾಪಸು ಹೋಗುತ್ತಿರುವುದಾಗಿ ಹೇಳಿದಳು ಫೋನಿನಲ್ಲಿ. ಅಮ್ಮ ಇವತ್ತು ರಾತ್ರಿ ಹೊರಡಲೇಬೇಕಿತ್ತು. ಗಜಾನನ ಬಸ್ಸು ಬಂದು, ಏರ್‌ಬ್ಯಾಗನ್ನು ಡಿಕ್ಕಿಯಲ್ಲಿರಿಸಿ, ಅಮ್ಮನನ್ನು ಹತ್ತಿಸಿ, ಪುಶ್‍ಬ್ಯಾಕ್ ಸೀಟನ್ನು ಹಿಂದೆ ಮಾಡಿಕೊಟ್ಟು ಕೂರಿಸಿ, ವಾಂತಿ ಬಂದರೆ ಕವರಿನಲ್ಲಿಯೇ ಮಾಡುವಂತೆ ಹೇಳಿ, ಹೋಗ್ಬಾ ಎಂದು ನಾನು ಕೆಳಗಿಳಿದೆ. ಬಸ್ಸು ಹೊರಟು ನಾನು ಕೈ ಬೀಸುವಾಗ ಯಾವ್ಯಾವುದೋ ಸಿನೆಮಾಗಳ ಇಂಥದೇ ಸೀನುಗಳೆಲ್ಲ ಕಣ್ಮುಂದೆ ಬಂದು ನಿಂತಿದ್ದವು. ಆದರೆ ಕಣ್ಣು ತುಂಬಿಕೊಂಡಿದ್ದರಿಂದ ಅವು ಸರಿಯಾಗಿ ಕಾಣುತ್ತಿರಲಿಲ್ಲ.

ಬೆಳಗ್ಗೆ ಎಂಟೂವರೆಗೆ ಮನೆಗೆ ಫೋನ್ ಮಾಡಿದರೆ ಅಜ್ಜ ಎತ್ತಿಕೊಂಡು 'ಅಪ್ಪ ಕರ್ಕಂಬರಕ್ಕೆ ಬಸ್‍ಸ್ಟ್ಯಾಂಡಿಗೆ ಹೋಯ್ದ.. ಈಗ ಹೋತು ಕಾಣ್ತು ಪಾಳಾ ಬಸ್ಸು.. ಅದೇ ಅಲ್ಲಿ ಡಾಕ್ಟ್ರು ಮನೆ ಹತ್ರ ಬರ್ತಾ ಇದ್ದಂಗೆ ಕಾಣ್ತಪ' ಎಂದ. ಏರ್‌ಬ್ಯಾಗ್ ಹಿಡಿದ ಅಪ್ಪನ ಪಕ್ಕ ಅಮ್ಮ ನಿಧಾನವಾಗಿ ನಡೆದುಕೊಂಡು, ಎದುರಿಗೆ ಸಿಕ್ಕಿ 'ಓಹೋಹೋಹೋ! ಬೆಂಗ್ಳೂರಿಗ್ ಹೋಗ್ಬಂದಾತಾ ಸವಾರಿ?' ಎಂದು ಕೇಳಿರಬಹುದಾದ ಸರೋಜಕ್ಕನಿಗೆ ಬೆಂಗಳೂರಿನ ಕಥೆಯನ್ನೆಲ್ಲ ಹೇಳುತ್ತ, ಆಮೇಲೆ ರತ್ನಾವತಿ ಚಿಕ್ಕಿ ಒತ್ತಾಯ ಮಾಡಿದಳು ಅಂತ ಹಾಗೇ ಅವಳ ಮನೆ ಹೊಕ್ಕು ಮಗ ಕೊಡಿಸಿದ ರೇಶ್ಮೆ ಸೀರೆ ತೋರಿಸಿ, ಚಂದ್ರಕ್ಕನ ಮನೆ ಹುಡುಗ್ರಿಗೆ ಸ್ವೀಟ್ಸ್ ಕೊಟ್ಟು... ಎಲ್ಲಾ ಮಾಡಿಕೊಂಡು ಅಮ್ಮ ಮನೆ ಮುಟ್ಟುವ ಹೊತ್ತಿಗೆ ಇನ್ನೂ ಅರ್ಧ ತಾಸಾದರೂ ಬೇಕು ಬಿಡು ಎಂದುಕೊಳ್ಳುತ್ತಾ 'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು' ಎಂದು ಅಜ್ಜನಿಗೆ ಹೇಳಿ ಫೋನಿಟ್ಟೆ. ಆಫೀಸಿಗೆ ಹೊರಡಲು ತಯಾರಾಗತೊಡಗಿದೆ. ಮನೆ ಮತ್ತು ಮನ ಎರಡೂ ಬಿಕೋ ಎನ್ನುತ್ತಿದ್ದವು.

Monday, February 11, 2008

ನನಸಾದ ಕನಸುಗಳ ಪಟ್ಟಿಗೆ 'ಚಿತ್ರಚಾಪ'

ತೀರಾ ಎಂದಿನಂತೇನಿರಲಿಲ್ಲ ನಿನ್ನೆ ದಿನ. ಆರೂ ವರೆಗೆ ಅಲಾರ್ಮ್ ಕೂಗಿತು; ಕಾಯ್ಲ್ ಬಕೇಟಿನಲ್ಲಿದ್ದ ನೀರನ್ನು ಕಾಯಿಸಿತು; ಊರಿಂದ ಬಂದಿದ್ದ ಅಮ್ಮ ತಿಂಡಿ ಮಾಡಿಕೊಟ್ಟಳು; ಕುರ್ತಾದ ಕಂಕುಳಿಗೆ ಡಿಯೋಡರೆಂಟ್ ಸ್ಪ್ರೇ ಆಯಿತು; ಸ್ವಿಚ್ ಒತ್ತಿದ್ದಕ್ಕೇ ಗಾಡಿ ಸ್ಟಾರ್ಟ್ ಆಯಿತು; ಮುಕ್ಕಾಲು ಗಂಟೆಯ ನಂತರ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಣ್ಣೆದುರಿಗಿತ್ತು!

ಎಷ್ಟು ಬಾರಿ ಹೋಗಿಲ್ಲ ಅಲ್ಲಿಗೆ? ಯಾರ್ಯಾರದೋ ಪುಸ್ತಕ ಬಿಡುಗಡೆಗಳು, ಏನೋ ಘೋಷ್ಠಿ, ಮತ್ತೇನೋ ಸಂಗೀತ ಕಛೇರಿ... ಆಗೆಲ್ಲ ತಲೆಬಾಗಿಲಲ್ಲಿ ನಿಂತು ಯಾರೋ ನನ್ನನ್ನು 'ಬನ್ನಿ ಸಾರ್..' ಎನ್ನುತ್ತಾ ಮುಗುಳ್ನಗೆಯೊಂದಿಗೆ ಸ್ವಾಗತಿಸುತ್ತಿದ್ದರು. ಆದರೆ ಈ ಬಾರಿ ಹಾಗಲ್ಲ... ಇವತ್ತು ನಮ್ಮದೇ ಪುಸ್ತಕ ಬಿಡುಗಡೆ! ನಾವೇ ನಿಂತು ಸ್ವಾಗತಿಸಬೇಕು ಜನರನ್ನು! ಆಹ್!


ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು ಅಂತ ಎಲ್ಲರೂ ಹೇಳಿದರು. ನಿಮ್ಮಲ್ಲನೇಕರು ಬಂದಿದ್ದಿರಿ.. ಬರಲಿಕ್ಕಾಗದವರು ಶುಭಾಶಯ ಹೇಳಿದ್ದೀರಿ.. ಖುಷಿಯಾಯ್ತು ... ... ಇಷ್ಟೇ ಹೇಳಲಿಕ್ಕೆ ಸಾಧ್ಯವಾಗುತ್ತಿರುವುದು ನನಗೆ ಸಧ್ಯ. ಉಳಿದಿದ್ದನ್ನೆಲ್ಲ ಈ ಫೋಟೋಗಳು ಹೇಳುತ್ತಿವೆ. ಥ್ಯಾಂಕ್ಸ್.. ಥ್ಯಾಂಕ್ಸ್ ಒನ್ಸ್ ಅಗೇನ್!




ಥ್ಯಾಂಕ್ಸ್!

Thursday, February 07, 2008

ಚಿತ್ರಚಾಪ -ಇದು ಮೊದಲ ತೊದಲು

ಸೂರ್ಯ ತನ್ನತ್ತ ವಾಲುತ್ತಲೇ ಪಶ್ಚಿಮದ ದಿಗಂತ ನಾಚಿ ಕೆಂಪಾಗಿಬಿಟ್ಟಿತ್ತು. ಹಕ್ಕಿಗಳು ಗುಂಪುಗುಂಪಾಗಿ ಮನೆ ಕಡೆ ಹೊರಟಿದ್ದವು. ಸಂಜೆ, ತನ್ನ ಸೌಂದರ್ಯಕ್ಕೆ ತಾನೇ ಮೈಮರೆತಂತಿತ್ತು. ಗಂಧರ್ವ ಲೋಕದತ್ತ ನಡೆಯುವವರಂತೆ ಸುಮಂತ ಮತ್ತು ರಾಜಿ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದರು. ಸುಮಂತ ರಾಜಿಗಾಗಿ ಹಿತ್ತಿಲ ಬೇಲಿಯ ಗಿಡದಲ್ಲಿದ್ದ ಗೌರಿ ಹೂವನ್ನು ಕೊಯ್ದುಕೊಟ್ಟ. ಸಂಜೆ ಮುಗಿಲ ಬಣ್ಣ ಗೌರಿ ಹೂವಿನ ಬಣ್ಣಕ್ಕೇ ತಿರುಗಿತು. ಸ್ವಲ್ಪ ಮುಂದೆ ನಡೆದ ಸುಮಂತ, ಮುತ್ತುಗದ ಹೂವಿನ ಗೊಂಚಲೊಂದನ್ನು ಕೊಯ್ದು ತಾನೇ ರಾಜಿಯ ಮುಡಿಗೇರಿಸಿದಮೇಲಂತೂ ಸಂಜೆಗೆ ಅಲ್ಲೇ ರಾತ್ರಿಯ ಮಾದಕತೆ ಪ್ರಾಪ್ತವಾಗಿಬಿಟ್ಟಿತು.

ಶಾಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪುಗಳಲ್ಲಿ ಕೆಲಸ ಮಾಡಿ ಗೊತ್ತಿದ್ದ ಸುಮಂತ ರಾಜಿಗಾಗಿ ಮರ ಹತ್ತಿ ಸೀತೆಪೇರಲೆ ಹಣ್ಣನ್ನು ಕೊಯ್ದು ಕೊಟ್ಟ. ಮುಂದೆ ಅವರು ಪರಗಿ ಮಟ್ಟಿ ನುಗ್ಗಿ ಪುಟ್ಟ ಪುಟ್ಟ ಪರಗಿ ಹಣ್ಣುಗಳನ್ನು ಒಂದು ಮುಷ್ಟಿಯಾಗುವಷ್ಟು ಸಂಗ್ರಹಿಸಿದರು. ಒಂದೊಂದೇ ಹಣ್ಣನ್ನು ಬಾಯಿಗೆ ಎಸೆದುಕೊಳ್ಳುತ್ತಾ ಅವರು ಕಾಲುದಾರಿಯಲ್ಲಿ ಸಾಗಿದರು. ಒಂದು ದೊಡ್ಡ ಚಂದ್ರಪೇರಲೆ ಹಣ್ಣಿನ ಗಿಡ ಸಿಕ್ಕಿತು. ಮರದ ಮೇಲ್ಗಡೆ ಎತ್ತರದಲ್ಲಿ ಎರಡು ದೋರಗಾಯಿಗಳು ಕಂಡವು. ಸುಮಂತ ಬಡಿಗೆ ಬೀಸಿ ಒಂದನ್ನು ಕೆಡವಿದ. ‘ನಿಂಗಿಲ್ವಲ್ಲೋ?’ ಎಂದ ರಾಜಿಗೆ ‘ಪರ್ವಾಗಿಲ್ಲ, ನೀನು ತಿನ್ನು’ ಎಂದ. ಆದರೂ ರಾಜಿ ತಾನೇ ಬಡಿಗೆ ತಗೊಂಡು ಬೀಸಲಿಕ್ಕೆ ನೋಡಿದಳು. ಆದರೆ ಅವಳು ಎಸೆದದ್ದು ಆ ರೆಂಬೆಯ ಹತ್ತಿರಕ್ಕೂ ಹೋಗಲಿಲ್ಲ. ಸುಮಂತ ರಾಜಿಯನ್ನು ರೇಗಿಸಿದ. ಅದಕ್ಕೆ ರಾಜಿಯ ಮುಖ ಕೆಂಪಾದದ್ದು ಕಂಡು ಸಂಜೆ ತಾನು ಕಪ್ಪಾಗತೊಡಗಿತು.

ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ಒಡಗೂಡತೊಡಗಿದವು. ಮಳೆಗಾಲದಲ್ಲಿ ನೀರಾಗಿ ಸುರಿದೂ ಅಳಿದುಳಿದಿದ್ದ ಮೋಡಗಳು ಅದ್ಯಾವುದೋ ಮಾಯೆಯ ಗಾಳಿಗೆ ಒತ್ತಿಕೊಂಡು ಸೀದಾ ಇಲ್ಲಿಗೆ ಬಂದಿದ್ದವು. ಆಗಲೇ ಕತ್ತಲಾವರಿಸಲಾರಂಭಿಸಿದ್ದರಿಂದ ಸುಮಂತನಿಗಾಗಲೀ ರಾಜಿಗಾಗಲೀ ಈ ಪರಿಣಾಮ ತಕ್ಷಣ ಗೊತ್ತಾಗಲಿಲ್ಲ. ತಣ್ಣನೆಯ ಗಾಳಿ ಬೀಸಲಾರಂಭಿಸಿದಾಗ ಅವರು ಆಗಸದತ್ತ ನೋಡಿದರು.

“ಓಹ್! ಮಳೆ ಬರುವಂತಿದೆ ಕಣೇ ರಾಜೀ..” ಎಂದ ಸುಮಂತ.
“ಅಯ್ಯೋ.. ಬೇಗ ಬೇಗ ಮನೆ ಸೇರಿಕೊಳ್ಳೋಣ ಬನ್ನಿ..” ರಾಜಿ ಅವಸರಿಸಿದಳು.

ಅವರು ಕಾಡ ತಂಪು, ಹೂಗಳ ಕಂಪು, ಜೀರುಂಡೆಗಾನದ ಇಂಪು ಮತು ಸಂಜೆಯ ಕೆಂಪನ್ನು ಸವಿಯುತ್ತಾ ತುಂಬಾ ಮುಂದೆ ಬಂದುಬಿಟ್ಟಿದ್ದರು. ಈಗ ವಾಪಸು ಹೋಗಲಿಕ್ಕೆ ಕನಿಷ್ಟ ಅರ್ಧಗಂಟೆ ಹಾದಿ ಸವೆಸಬೇಕಿತ್ತು. ನಡೆಯತೊಡಗಿದರು. ಮಿಂಚು-ಗುಡುಗುಗಳು ಶುರುವಾದವು. ರಾಜಿ ಸುಮಂತನ ಕೈ ಹಿಡಕೊಂಡಳು. ಸರಸರನೆ ಹೆಜ್ಜೆ ಹಾಕಿದರು. ಮಳೆ ಹನಿಗಳು ಬೀಳತೊಡಗಿದವು...


* * *

ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.

ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ 'ಪುಸ್ತಕ ಲೋಕ'ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು... ಹೇಗೋ ಏನೋ ಅರಿಯೆವು... ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ...

ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ
ಸಮಯ: ಬೆಳಗ್ಗೆ 10:30
ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ನಿಮಗಾಗಿ ಕಾಯುತ್ತಿರುತ್ತೇನೆ.. ಯಾಕೇಂದ್ರೆ, ನೀವು ಬಂದೇ ಬರ್ತೀರಿ ಅಂತ ನಂಗೊತ್ತು...

ಪ್ರೀತಿಯಿಂದ,

-ಸು

Monday, February 04, 2008

ಕಮಲ ಹೇಳಿದ ಕತೆ

ನಮಸ್ಕಾರ. ನನ್ನ ಹೆಸರು ಕಮಲ. 'ಇವರು' ನನ್ನನ್ನು 'ಕಮಲು' ಅಂತ ಕರೀತಾರೆ. ಆಗ ನನಗೆ ಒಂಥರಾ ನಾಚಿಕೆಯಾಗುತ್ತೆ. ಯಾಕೆಂದರೆ, ಎಲ್ಲರೆದುರಿಗೆ ಇವರು 'ಕಮಲಾ..' ಅಂತಲೇ ಕೂಗುವುದು; ಆದರೆ ಯಾರೂ ಇಲ್ಲವೆಂದಾಗ, ನಾವಿಬ್ಬರೇ ಇರುವ ಏಕಾಂತ ಸಮಯಗಳಲ್ಲಿ ಮಾತ್ರ, ಒಲುಮೆ ದೇವತೆ ನದಿಯಾಗಿ ಮೈಯಲ್ಲಿ ಸಂಚರಿಸುವಂತೆ 'ಕಮಲೂ..' ಎಂದು ಕೂಗುತ್ತಾರೆ. ಈ ಅಡುಗೆ ಮನೆಯ ಅಗ್ಗಿಷ್ಟಿಕೆಗೂ ಗೊತ್ತು: ಆ ಕರೆಗೂ ಪ್ರೀತಿಗೂ ವ್ಯತ್ಯಾಸವಿಲ್ಲವೆಂದು. ಅದಕ್ಕೇ, ಒಲೆಯ ಮೇಲಿಂದ ಅನ್ನದ ಚರಿಗೆಯನ್ನು ಇಳಿಸುವಾಗಲೂ, ಆ ಹಬೆಯ ದಗೆಯಲ್ಲೂ ರೋಮಾಂಚಿತಳಾಗುತ್ತೇನೆ ನಾನು. ಸಾರಿನಲ್ಲಿ ತೇಲುತ್ತಿರುವ ಈ ಸಣ್ಣ ಮೀನುಗಳು ಹೊಟ್ಟೆ ಸೇರಿಬಿಟ್ಟರೆ ಆಯಿತು: ಚಿಮಣಿ ದೀಪ ಆರಿಸಿ ನಾವು ಮಲಗಿಬಿಡುತ್ತೇವೆ. ಹೊದ್ದ ಕಂಬಳಿಯಡಿಯಲ್ಲಿ ದೊಡ್ಡ ಮೀನೊಂದು ಎಚ್ಚರಗೊಳ್ಳುತ್ತದೆ.

ಪೇಟೆಗೆ ಹೋಗಿ ನಾಲ್ಕು ದಿವಸವಾಗಿದ್ದ ಇವರು ಇವತ್ತು ತಾನೇ ವಾಪಸಾಗಿದ್ದಾರೆ. ಬರುವಾಗ ಇನ್ನು ಮೂರ್‍ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಸಾಮಾನುಗಳನ್ನು ತಂದಿದ್ದಾರೆ. ಈ ಊರಿನವರೆಲ್ಲ ಹೀಗೇ. ಪೇಟೆಗೆ ಹೋಗುವುದೇ ಎರಡೋ-ಮೂರೋ ತಿಂಗಳಿಗೊಮ್ಮೆ. ಮೈಲಿ ನಡೆದು, ಹೊಳೆದಂಡೆ ತಲುಪಿ, ದೋಣಿ ಆಚೆ ದಡದಲ್ಲಿದ್ದರೆ 'ಕೂಹೂಯ್..' ಎಂದು ಕೂಗಿ-ಕಿರುಚಿ ಕರೆದು ಈಚೆ ದಡಕ್ಕೆ, ಅದರಲ್ಲಿ ಕೂತು ಹೊಳೆ ದಾಟಿ, ಮತ್ತೆ ಮೈಲಿ ನಡೆದು.... ದಿನಕ್ಕೊಂದೇ ಬಸ್ಸು ನಮ್ಮೂರಿಗೆ ಇರುವುದು.. ಅದು ತಪ್ಪಿದರೆ ಪೂರ್ತಿ ಹನ್ನೆರಡು ಮೈಲಿ ನಡೆಯಬೇಕು.. ಸುತ್ತ ಗುಡ್ಡ; ಮಧ್ಯೆ ಈ ಊರು..

ಈ ಬಾರಿ ಪೇಟೆಯಿಂದ ಬರುವಾಗ ಇವರು ನನಗೊಂದು ಹೊಸ ಸೀರೆ ತಂದಿದ್ದಾರೆ. ಹೊರಡುವಾಗಲೇ ಕೇಳಿದ್ದರು: 'ಪ್ಯಾಟಿಂದ ನಿಂಗೇನು ತರ್‍ಬೇಕೇ ಕಮಲೂ?' ಅಂತ. 'ನಂಗೇನೂ ಬ್ಯಾಡ' ಅಂದಿದ್ದೆ. ಆದರೂ ತಂದಿದ್ದಾರೆ. ಗೊತ್ತಿತ್ತು ನನಗೆ -ಮೊನ್ನೆ ಅಡುಗೆ ಮಾಡುತ್ತಿದ್ದ ನಾನು ಇದ್ದಕ್ಕಿದ್ದಂತೆ ಎದ್ದು ಗದ್ದೆ ಹಳುವಿಗೆ ಓಡಿ ಬಗ್ಗಿ ಕಾರಿಕೊಂಡ ಮೇಲೆ, ಮತ್ತೆ ನಾಲ್ಕೈದು ಬಾರಿ ವಾಂತಿಯಾದದ್ದು ನೋಡಿದ ಮೇಲೆ ರಾಯರ ಮುಖದಲ್ಲಿ ಮೂಡಿ ಸ್ಥಾಪಿತವಾಗಿದ್ದ ಮುಗುಳ್ನಗೆಯ ರಾಜ್ಯಭಾರ ಗಮನಿಸಿದಾಗಲೇ ಅಂದುಕೊಂಡಿದ್ದೆ- ತಂದೇ ತರುತ್ತಾರೆ ಪೇಟೆಯಿಂದ ನನಗಾಗಿ ಏನಾದರೂ ಅಂತ. ನಾನು ಚೊಚ್ಚಿಲ ಬಸುರಿ.. ಮದುವೆಯಾಗಿ ನಾಲ್ಕು ತಿಂಗಳಾಯಿತು.

ಇವರು ಹೀಗೆ ಪೇಟೆಗೆ ಹೋದಾಗಲೆಲ್ಲ ನಾನು ಇವರ ಅಣ್ಣ -ನನ್ನ ಭಾವಮೈದುನ- ನ ಮನೆಯಲ್ಲಿ ತಂಗಿರುತ್ತೇನೆ. ಅಕ್ಕ ಒಳ್ಳೆಯವಳು. ಅವಳಿಗೆ ಎರಡು ಮಕ್ಕಳು. ಮೊನ್ನೆ ಅಲ್ಲಿಗೆ ಬೆಂಗಳೂರಿನಿಂದ ಆರು ಜನ ಹುಡುಗರು ಬಂದಿದ್ದರು. ಎಲ್ಲಾ ಸಾಗರ-ಶಿರಸಿ-ಶಿವಮೊಗ್ಗದ ಕಡೆಯವರಂತೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವುದಂತೆ. ಅವರಲ್ಲೊಬ್ಬಾತ ಕಳೆದ ವರ್ಷ ಇಲ್ಲಿಗೆ ಬಂದಿದ್ದನಂತೆ. ನಮ್ಮೂರು ಎಂದರೆ ಅವನಿಗೇನೋ ಆಕರ್ಷಣೆಯಂತೆ. ತನ್ನ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಬಂದಿದ್ದ.

ನಮ್ಮೂರಿಗೆ ಹೀಗೆ ಪ್ರವಾಸಿಗರು ಬಂದುಹೋಗುವುದು ಹೊಸದಾಗಿಯೇನು ಉಳಿದಿಲ್ಲ. "ಈಗ ನಾಲ್ಕು ವರ್ಷವಾಯ್ತು, ತಿಂಗಳಾ ಎರಡ್ಮೂರು ತಂಡ ಬರ್ತದೆ ಹೀಂಗೆ.." ಅನ್ನುತ್ತಿದ್ದರು ಭಾವ. ನಮ್ಮೂರಿನ ಹಿಂದೆ, ಇದೇ ಹೀಗೇ ನಮ್ಮ ಮನೆಯ ಹಿಂದಿನಿಂದ ಗುಡ್ಡ ಹತ್ತಿ, ಮೂರ್ನಾಕು ಮೈಲಿ ನಡೆದು ಹೋದರೆ, ಅಲ್ಲೊಂದು ಜಲಪಾತವಿದೆಯಂತೆ. ನಾನಿನ್ನೂ ನೋಡಿಲ್ಲ. ನನ್ನ ಮದುವೆಯಾಗಿ ಇನ್ನೂ ನಾಲ್ಕು ತಿಂಗಳಾಯಿತು ಅಷ್ಟೇ ಅಂತ ಹೇಳಿದೆನಲ್ಲವೇ? ಇವರ ಬಳಿ ಸುಮಾರು ಸಲ ಕೇಳಿದೆ; ಆದರೆ ಒಮ್ಮೆಯೂ ನನ್ನನ್ನು ಕರೆದುಕೊಂಡು ಹೋಗುವ ಮನಸು ಮಾಡಲಿಲ್ಲ. ನನಗೆ ಒಬ್ಬಳೇ ಹೋಗಲಿಕ್ಕೆ ಭಯ. ಅಕ್ಕನನ್ನು ಕರೆದರೆ ಅವಳು ಯಾವಾಗಲೂ ಏನಾದರೂ ಕೆಲಸವಿದೆ ಅನ್ನುತ್ತಾಳೆ. ಕಾಡಿನಲ್ಲಿ ಹುಲಿ, ಕಾಡೆಮ್ಮೆಗಳು ಬೇರೆ ಇವೆಯಂತೆ. ಹೌದು, ಈಗೊಂದು ಹದಿನೈದು ದಿನದ ಹಿಂದೆ -ರಾತ್ರಿ ಹನ್ನೆರಡರ ಜಾವ- ಹುಲಿ ಗುರುಗುಡುತ್ತಿದ್ದುದನ್ನು ನಾನೇ ಕೇಳಿದ್ದೇನೆ.. ಬೆಚ್ಚಿ ಇವರನ್ನು ತಬ್ಬಿದ್ದೇನೆ...

ನಮ್ಮೂರಿಗೆ ಜಲಪಾತ ನೋಡಲಿಕ್ಕೆ ಮಾತ್ರವಲ್ಲ ಹೀಗೆ ಪ್ರವಾಸಿಗರು ಬರುವುದು.. ಅವರಿಗೆ ಈ ಊರೊಂದು ಶಾಪಗ್ರಸ್ತ ಗಂಧರ್ವರ ಸ್ವರ್ಗದಂತೆ ಭಾಸವಾಗುತ್ತದಂತೆ. ಶಾಪವೇ? ಏನು ಶಾಪ ಎಂದಿರಾ? ಈ ಊರೆಂಬ ಊರು ಇನ್ನು ಕೆಲವೇ ತಿಂಗಳಲ್ಲಿ ನಾಮಾವಶೇಷವಾಗಲಿದೆ. ಸರ್ಕಾರದವರು ಇದನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇಗೋ, ಇಲ್ಲೇ ಪಕ್ಕದಲ್ಲೇ ಎದ್ದು ನಿಂತಿದೆಯಲ್ಲಾ ಅಣು ವಿದ್ಯುತ್ ಸ್ಥಾವರ, ಆಚೆ ಪಕ್ಕ ದೊಡ್ಡದೊಂದು ಡ್ಯಾಮ್, ಅದಕ್ಕಾಗಿ ಈ ಊರೂ, ಅಕ್ಕಪಕ್ಕದ ಹಳ್ಳಿಗಳೂ ಬಲಿಯಾಗುತ್ತಿವೆ.

ಬೆಂಗಳೂರಿನಿಂದ ಬಂದ ಹುಡುಗರಿಗೆ ಭಾವ ಹೇಳುತ್ತಿದ್ದರು "ಈ ಊರಲ್ಲಿ ಮೊದಲು ನೂರ್-ನೂರೈವತ್ತು ಮನೆಗಳಿದ್ವು.. ಈಗ ಒಂದೊಂದೆ ಮನೆಗಳವರು ಬಿಟ್ ಹೋಗ್ತಾ, ನಿಧಾನಕ್ಕೆ ಊರು ಖಾಲಿಯಾಗ್ತಿದೆ.. ಸಧ್ಯಕ್ಕೆ ಒಂದು ನಲ್ವತ್ತು ಮನೆಗಳಿಗೆ ಜೀವ ಇರ್ಬವ್ದು.. ಅವೂ ಇನ್ನೊಂದು ನಾಕೈದು ತಿಂಗ್ಳೊಳಗೆ ಖಾಲಿಯಾಗ್ತಾವೆ.. ಎಲ್ಲಾ ಖಾಲಿ ಮನೆಗ್ಳು.. ನಮ್ಗೆ ನಾಟ್ಕ ಪ್ರಾಕ್ಟೀಸ್ ಮಾಡಕ್ಕೆ ಚೊಲೋ ಆಗಿದೆ.. ಹಹ್ಹ!"

"ಗೌರ್ಮೆಂಟು ಪರಿಹಾರ ಸಿಗ್ತಾ?" ಕೇಳಿದರು ಅವರಲ್ಯಾರೋ.

"ಹುಂ! ಎಕರೆಗೆ ಇಪ್ಪತ್ನಾಕು ಸಾವ್ರ ಅಂತ ಪಿಕ್ಸ್ ಮಾಡಿದಾರೆ. ನಮ್ದು ಗದ್ದೆ, ಈ ಮನೆ ಜಾಗ ಎಲ್ಲಾ ಕೊಟ್ರೆ ಒಂದು ಐವತ್ ಸಾವ್ರ ಸಿಗ್ಬಹುದೇನೋ.. ಅದನ್ನ ತಗೊಂಡು ಊರು ಬಿಡ್ಬೇಕಂತೆ. ಹುಂ! ಐವತ್ ಸಾವ್ರ ಇಟ್ಕೊಂಡು ಏನ್ ಮಾಡ್ಲಿಕ್ಕಾಗ್ತದೆ ಈಗಿನ ಕಾಲದಲ್ಲಿ..? ನಮ್ ತಾತ-ಮುತ್ತಾತನ ಕಾಲದಿಂದಲೂ ವಾಸವಾಗಿರೋ ಊರು ಇದು.. ಇದನ್ನ ಬಿಟ್ಟು ಈಗ ಏಕಾಏಕಿ ಎಲ್ಲಿಗೇಂತ ಹೋಗೋದು?"

ಹುಡುಗರು ಭಾವನ ಮಾತಿಗೆ ಹೌದೌದೆಂದು ಹೇಳಿ, ನಾಲ್ಕು ಸಮಾಧಾನದ ಮಾತು ಸೇರಿಸುತ್ತಿದ್ದರು: "ನಿಮ್ಗೆಲ್ಲ ಅಲ್ಲಿ ಕೆಲಸನಾದ್ರೂ ಕೊಡಬಹುದಿತ್ತು.." "ಅಯ್ಯೋ..! ಅಲ್ಲಿರೋರೆಲ್ಲ ತಮಿಳ್‍ನಾಡು, ಕೇರ್‍ಅಳ ಕಡ್ಯೋರು.. ಇಲ್ಲಿಯೋರಿಗೆ ಏನೂ ಕೆಲ್ಸ ಕೊಡಲ್ಲ.."

ರಾತ್ರಿ ಅವರೆಲ್ಲ ಭಾವನ ಮನೆಯ ಜಗುಲಿಯಲ್ಲೇ ಮಲಗಿದ್ದರು. ಈ ಊರಿನ ಕೊನೆಕೊನೆಯ ನೆಂಟರಂತೆ ಕಾಣಿಸುವ ಅವರಿಗೆ ನಾನು-ಅಕ್ಕ ಸೇರಿ ಅಡುಗೆ ಮಾಡಿ ಹಾಕಿದೆವು. ನಮ್ಮ ಮನೆಯ ಕುಚ್ಚುಲಕ್ಕಿ ಅನ್ನವನ್ನೇ, ಬೇಳೆಯಿಲ್ಲದೇ ಬರೀ ಕಾಯಿ ಬೀಸಿ ಹಾಕಿ ಮಾಡಿದ್ದ ಹುಳಿಯನ್ನೇ, ರುಚಿರುಚಿಯೆಂದುಕೊಂಡು ಉಂಡರು.

ನಿನ್ನೆ ಬೆಳಗ್ಗೆ ಅವರೆಲ್ಲ ಜಲಪಾತ ನೋಡಲಿಕ್ಕೆಂದು ಹೊರಟರು. ಮಧ್ಯಾಹ್ನ ಒಂದರ ಒಳಗೆ ಬರುತ್ತೇವೆ ಎಂದಿದ್ದವರು ಮೂರಾದರೂ ಬಾರದ್ದು ನೋಡಿ ಭಾವ ಆತಂಕ ಮಾಡಿಕೊಂಡಿದ್ದರು. ಅಂತೂ ಮೂರೂವರೆ ಹೊತ್ತಿಗೆ ಅವರೆಲ್ಲ ವಾಪಸು ಬಂದರು. ದಾರಿಯಲ್ಲಿ ಎರಡ್ಮೂರು ಕಡೆ ದೊಡ್ಡ ದೊಡ್ಡ ಬಂಡೆಗಳನ್ನು ಹತ್ತುವುದು ತುಂಬಾ ಕಷ್ಟವಾಯಿತೆಂದು ಹೇಳಿದರು ಭಾವನ ಬಳಿ. ಜಲಪಾತ ಅದ್ಭುತ, ಅಮರಾವತಿಯ ಸದೃಶ ಎಂದೆಲ್ಲ ಹೊಗಳಿದರು. ತಮ್ಮ ಕ್ಯಾಮೆರಾದಲ್ಲಿ ತೆಗೆದಿದ್ದ ಫೋಟೋಗಳನ್ನು ನಮಗೆಲ್ಲ ತೋರಿಸಿದರು. ಟೀವಿಯಲ್ಲಿ ಕಾಣುವಂತೆ ನೀರು ಬೀಳುವುದನ್ನೂ ತೋರಿಸಿದರು. ನನಗಂತೂ ಅದನ್ನು ನೋಡಿದ ಮೇಲೆ, ಈ ಊರು ಬಿಡುವುದರೊಳಗೆ ಒಮ್ಮೆ ಆ ಜಲಪಾತವನ್ನು ನೋಡಲೇಬೇಕೆಂಬ ಆಸೆಯಾಗಿದೆ. ಹೇಳಬೇಕು ಇವರ ಬಳಿ...

ಬಿಗಿಯಪ್ಪುಗೆಯಿಂದ ಕೊಂಚ ಸಡಿಲಿಸಿಕೊಂಡು ಹೇಳುತ್ತೇನೆ: "ಹೋಯ್.. ಮೊನ್ನೆ ಬೆಂಗ್ಳೂರಿಂದ ಆರು ಜನ ಹುಡುಗ್ರು ಬಂದಿದ್ರು.. ಭಾವನ್ ಮನೇಲಿ ಉಳ್ಕೊಂಡಿದ್ರು.. ಅವ್ರು ಜಲಪಾತದ ಫೋಟ ಎಲ್ಲ ತೋರ್ಸಿದ್ರು.. ಎಷ್ಟು ಚನಾಗದೆ! ಅಲ್ಲಾ, ಎಲ್ಲೆಲ್ಲಿಂದೆಲ್ಲ ಇದ್ನ ನೋಡಕ್ಕೇಂತ ಬರ್ತಾರೆ; ಇನ್ನೂ ನಾವೇ ನೋಡಿಲ್ಲಾಂದ್ರೆ ಹೇಗೆ?"

ಇವರು ಸಿಡುಕುತ್ತಾರೆ "ಥೋ ನಿಂದೊಳ್ಳೆ ಕಾಟ ಮಾರಾಯ್ತಿ..! ಅಲ್ಲಿ ಏನಿದೆ ಅಂತ? ಸುಮ್ನೆ ಎತ್ರದಿಂದ ನೀರು ಬೀಳ್ತದೆ ಅಷ್ಟೆ. ಅದ್ನ ನೋಡಕ್ಕೆ ಅಲ್ಲಿಗೆ ಹೋಗ್ಬೇಕಾ? ನೋಡು, ಅದೇ ನೀರೇ ಇಲ್ಲಿಗೆ ಹರಿದು ಬರೋದು.. ನೀನು ದಿನಾ ಕುಡಿಯೋದು ಅದೇ ನೀರು.. ಅಲ್ದೇ ನೀವು ಹೆಂಗಸ್ರೆಲ್ಲ ಹೋಗೋಂತ ದಾರೀನೇ ಅಲ್ಲ ಅದು.. ಆ ದೊಡ್‍ದೊಡ್ ಬಂಡೇನೆಲ್ಲ ಹತ್ತಿಳ್ದು ನೀನು ಹೋಗ್ಯಾತು ಉದ್ಧಾರ.. ಅದೂ ಅಲ್ದೇ ಈ ಸ್ಥಿತೀಲಿ.." ಎನ್ನುತ್ತಾ ನನ್ನ ಹೊಟ್ಟೆಯ ಮೇಲೆ ಕೈಯಾಡಿಸಿದರು. ನಾನು ಮಗ್ಗುಲಾದೆ.

ನನಗ್ಯಾಕೋ ಇವತ್ತು ನಿದ್ರೆಯೇ ಬರುತ್ತಿಲ್ಲ.. ಆ ಹುಡುಗರೇನೋ ಸರಿಯಾಗಿ ಉಂಡು, ಇಲ್ಲಿಯ ಎಲ್ಲವನ್ನೂ ಹೊಗಳಿ, ನಮ್ಮ ಪರಿಸ್ಥಿತಿ-ಭವಿಷ್ಯದ ಬಗ್ಗೆ ಎರಡು ವಿಷಾದದ ಮಾತಾಡಿ, ನಮ್ಮ ಫೋಟೋಗಳನ್ನೂ ತೆಗೆದುಕೊಂಡು, ಟಾಟಾ ಮಾಡಿ, ದೋಣಿ ಹತ್ತಿ ನಡೆದುಬಿಟ್ಟರು. ಇಷ್ಟು ಹೊತ್ತಿಗೆ ನಮ್ಮೂರು ಅವರಿಗೆ ಮರೆತೇ ಹೋಗಿರಬಹುದು. ಅಥವಾ ಗೆಳೆಯರ ಬಳಿ ಹೇಳಿಕೊಂಡು ನೆನಪನ್ನೇ ಕಮ್ಮಗೆ ಮೆಲ್ಲುತ್ತಿರಬಹುದು. ಅಥವಾ ನಿದ್ರೆ ಹೋಗಿರಬಹುದು. ಅವರ್‍ಯಾರಿಗೂ ಭವಿಷ್ಯದ ಬಗ್ಗೆ, ನೆಲೆಯ ಬಗ್ಗೆ ಚಿಂತೆಯಿಲ್ಲ.. ಈ ಊರು ಅವರಿಗೊಂದು ಪ್ರವಾಸೀ ಸ್ಥಳ; ಅಷ್ಟೇ. ಊಟ ಮಾಡುವಾಗ ಅವರಲ್ಲೊಬ್ಬ ಹೇಳುತ್ತಿದ್ದ, ಪಕ್ಕದವನಿಗೆ: "ಬದುಕು ಸುಂದರ, ಅಲ್ಲವೇ ದೋಸ್ತಾ?" ಆದರೆ.... ನಮ್ಮ ಬದುಕು?

ಅಷ್ಟಿಷ್ಟು ಓದಿಕೊಂಡಿರುವ, ತೀರಾ ದೊಡ್ಡದಲ್ಲದಿದ್ದರೂ ಸಣ್ಣ ಪೇಟೆಯಲ್ಲಿ ಹುಟ್ಟಿ ಬೆಳೆದಿರುವ ನನ್ನನ್ನು, ಇಂತಹ ಮುಳುಗುತ್ತಿರುವ ಹಳ್ಳಿಯೊಂದಕ್ಕೆ ಮದುವೆ ಮಾಡಿಕೊಡುವ ಮುನ್ನ ಅಪ್ಪ ಯೋಚಿಸಿರಲಿಲ್ಲವೆಂದಲ್ಲ.. ಒಂದು ಬೆಂಕಿಪೊಟ್ಟಣ ಬೇಕೆಂದರೂ ಹನ್ನೆರಡು ಮೈಲಿ ಸಾಗಬೇಕು ಇಲ್ಲಿ. ಕರೆಂಟೇ ಇಲ್ಲ; ಚಿಮಣಿ ದೀಪ. ಆದರೆ ಅಪ್ಪನ ಯೋಜನೆಯೇ ಬೇರೆಯಿತ್ತು: "ಹೆಂಗಿದ್ರೂ ನಮ್ಮೊಬ್ಳೇ ಮಗಳು ನೀನು.. ಮನೆಯಾಳ್ತನ.. ಇನ್ನು ಮೂರ್ನಾಕು ತಿಂಗಳು ಅಷ್ಟೇ. ಆಮೇಲೆ ಎಲ್ಲಾ ಆ ಹಳ್ಳೀನ ಬಿಟ್ಟು ಹೊರಡ್ತಾರೆ. ನೀನೂ-ನಿನ್ ಗಂಡ ಇಲ್ಲೇ ಬಂದು ಇರುವಂತ್ರಿ. ಪರಿಹಾರದ ದುಡ್ಡಲ್ಲಿ ನಿನ್ ಗಂಡ ಒಂದು ಅಂಗಡಿ ಹಾಕ್ಕೊಳ್ಲಿ. ಜೀವನಕ್ಕೇನೂ ತೊಂದ್ರೆ ಇಲ್ಲ" ನನಗೂ ಈ ಯೋಜನೆ ಸರಿಯೆನಿಸಿತ್ತು. ದೂರದ ನೆಂಟರದೇ ಸಂಬಂಧ. ಅಲ್ಲದೇ ನಾನು ಹುಟ್ಟಿದ ಮನೆಯಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇರಬಹುದಲ್ಲಾ ಎಂಬ ಖುಷಿ ಬೇರೆ.

ಆದರೆ ಇವರ ಸ್ವಾಭಿಮಾನವೇ ಅದಕ್ಕೀಗ ಅಡ್ಡಿಯಾಗಿದೆ. ಹೆಂಡತಿಯ ಮನೆಯಲ್ಲಿರುವುದಕ್ಕೆ ಇವರಿಗೆ ಅವಮಾನವಂತೆ. ಬೇರೆಲ್ಲಿಗಾದರೂ ಹೋಗಿ ಹೇಗಾದರೂ ಬದುಕೋಣ ಎನ್ನುತ್ತಿದ್ದಾರೆ. ಈ ಊರವರೆಲ್ಲ ಸೇರಿ ಆಗೀಗ ನಾಟಕ ಆಡುತ್ತಾರೆ. ಅದರಲ್ಲಿ ಇವರೂ ಪಾತ್ರ ಮಾಡುತ್ತಾರೆ. ಆ ನಾಟಕಗಳಲ್ಲಿ ಆಡುವ ನಾಯಕನ ಆದರ್ಶದ ಮಾತುಗಳನ್ನೇ ತಮಗೂ ಆರೋಪಿಸಿಕೊಂಡುಬಿಟ್ಟಿದ್ದಾರೆ ಇವರು.. ನೆಲೆಯೇ ನಾಶವಾಗುತ್ತಿದ್ದರೂ ಸ್ವಾಭಿಮಾನ ಬಿಡದು. ಎಲ್ಲಿಗಾದರೂ ಎಂದರೆ ಎಲ್ಲಿಗೆ ಹೋಗುವುದು? ಹೋಗಿ ಏನು ಮಾಡುವುದು? ಪುಸಲಾಯಿಸಿ ಕೇಳಿದರೆ ಸುಮ್ಮನೆ ಸಿಡುಕುತ್ತಾರೆ.

ಯಾವುದೋ ಊರುಗಳವರಿಗೆ ಕರೆಂಟು ಕೊಡುವ ಭರದಲ್ಲಿ ನಾವು ನಮ್ಮ ಊರನ್ನು ಕಳೆದುಕೊಳ್ಳುತ್ತಿದ್ದೇವೆ... ನಮ್ಮ ಮನೆಗಳ ಚಿಮಣಿ ದೀಪಗಳನ್ನು ನಂದಿಸಿ, ಅದನ್ನೂ ಚೀಲದೊಳಗೆ ತುಂಬಿಕೊಂಡು ಹೊರಡಬೇಕಿದೆ ನಾವು... ಎಲ್ಲಿಗೆ? ಯೋಚಿಸಿದಷ್ಟೂ ಕತ್ತಲೆ ದಟ್ಟವಾಗುತ್ತದೆ.. ಇವರು ನನ್ನನ್ನು ತಮ್ಮ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತಾರೆ.. ನಾನು ಕಳೆದುಹೋಗುತ್ತೇನೆ.

ನೈಜ ಮತ್ತು ಕಾಲ್ಪನಿಕ ಕತೆಗಳು

ನನ್ನ 'ಬಿರ್‌ಗೇಡ್' ಕತೆ ಮುಂದುವರೆಯುವುದನ್ನು ನೀವೆಲ್ಲ ಕಾಯುತ್ತಿದ್ದಿರಬಹುದು. ನಾನೂ ಮುಂದುವರೆಸೋಣ ಅಂದುಕೊಂಡೆ. ಬರೆದೂ ಬರೆದೆ. ಆದರೆ ಯೋಚಿಸಿದಂತೆಲ್ಲ ನನ್ನ ಕಲ್ಪನೆಯಲ್ಲಿ ಆ ಕತೆ ಮುಂದುವರೆಯುತ್ತಲೇ ಇದೆ..! ಅದೆಲ್ಲಾದರೂ ಕಾದಂಬರಿ-ಗೀದಂಬರಿ ಆಗಿಬಿಟ್ಟೀತೇನೋ ಎಂಬ ಭಯ ನನಗೆ!

ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಕಟ್ಟಲ್ಪಡುತ್ತಿರುವುದು ಈ 'Brigade Gateway' ಎಂಬ ದೊಡ್ಡ apartment building. ಆವತ್ತೊಂದು ಶನಿವಾರ ಸಂಜೆ ಬೇರೇನೂ ಕೆಲಸವಿಲ್ಲದೆ, ಕಿಲೋಮೀಟರುಗಟ್ಟಲೆ ಅಗಲಕ್ಕಿರುವ ಅದರ ಸುತ್ತ, ಹೀಗೇ ಸುಮ್ಮನೆ ಒಂದು walk ಹೋಗಿಬಂದೆ. ಹಾಗೆ ಅದನ್ನು ಸುತ್ತುತ್ತಿದ್ದಾಗ ಮೂಡಿದ ಕತೆ ಅದು. ಅದು ಹೇಗೆ ಮೂಡಿತೋ ಎಷ್ಟು ಮೂಡಿತೋ ಅಷ್ಟನ್ನೇ ಮನೆಗೆ ಬಂದವನು ಬರೆದಿಟ್ಟುಬಿಟ್ಟೆ. ನನಗ್ಯಾಕೋ ಅದು incomplete ಅಂತ ಅನ್ನಿಸಲೇ ಇಲ್ಲ. ಹೀಗಾಗಿ ಅದನ್ನು ಮುಂದುವರೆಸಲಿಕ್ಕೆ ಹೋಗಲೇ ಇಲ್ಲ. ಬರೆದದ್ದನ್ನು ಹಾಗೇ ಟೈಪ್ ಮಾಡಿ ಬ್ಲಾಗಿಗೂ ಪೋಸ್ಟ್ ಮಾಡಿಬಿಟ್ಟೆ. ಆದರೆ ನಿಮ್ಮಲ್ಲನೇಕರು 'ಇದು incomplete ಅನ್ನಿಸ್ತಿದೆ' ಎನ್ನತೊಡಗಿದ ಮೇಲೆ ನನಗೂ ಹಾಗೇ ಎನಿಸಲು ಶುರುವಾಯಿತು! ಸರಿ, ನಾನು ಕಲ್ಪನೆಯಲ್ಲೇ ಆ ಕತೆಯನ್ನು ಬೆಳೆಸತೊಡಗಿದೆ.

ಹೇಗೆ ಬೇಕಾದರೂ ಬೆಳೆಸಬಹುದಿತ್ತು ನಾನು. ಪೂರ್ಣಿಮಾ ಬೆಂಗಳೂರಿಗೆ ಬಂದದ್ದು, ಅವಳಿಗೆ ನಗರದ ಏಕತಾನತೆ -ಇಷ್ಟು ದೊಡ್ಡ ಬಂಗಲೆಯಲ್ಲಿ ತಾನೊಬ್ಬಳೇ ಇರುವುದು- ಬೇಸರ ಬರುವುದು, ಒಂದು ದಿನ ಅಚಾನಕ್ಕಾಗಿ ಬಾಲ್ಯವೇ ಮರುಕಳಿಸಿದಂತೆ ನಾಗರತ್ನ ಅವಳ ಮನೆಗೆ ಬಂದದ್ದು, ಹಳೆಯ ನೆನಪುಗಳು ಮರುಕಳಿಸಿದ್ದು, ನಾಗರತ್ನಳ ಬದುಕಿಗೂ ತನ್ನ ಬದುಕಿಗೂ ಇರುವ ಕೇವಲ ಸಿರಿವಂತಿಕೆಯಲ್ಲಿನ ವ್ಯತ್ಯಾಸವನ್ನು ಬ್ರಿಗೇಡ್ ಗೇಟ್‌ವೇ ಅಪಾರ್ಟ್‍ಮೆಂಟಿನ ಗೋಡೆಗಳು ಪಿಸುಗುಡುವುದು... ಎಲ್ಲವನ್ನೂ ಬರೆಯಬಹುದಿತ್ತು. ಗಂಡನ 'party daily' ಸಂಸ್ಕೃತಿಯನ್ನು ಸಹಿಸದ ಪೂರ್ಣಿಮಾ, ಕುಡಿದು ಬರುವ ಗಂಡನ ಬಗ್ಗೆ ಸಿಟ್ಟು ತೋರುವ ನಾಗರತ್ನ... ಪೂರ್ಣಿಮಾಳ ಗಂಡ ಅಮೇರಿಕಾಗೆ ಹೋಗುವುದನ್ನೂ, ನಾಗರತ್ನಳ ಗಂಡ ಬೇರೆ ಯಾರೊಂದಿಗೋ ಸಂಬಂಧ ಬೆಳೆಸುವುದನ್ನೂ... ಹೇಗೆ ಬೇಕಾದರೂ ಬರೆಯಬಹುದಿತ್ತು.

ಅಷ್ಟೆಲ್ಲ ಬರೆದರೂ ಅದು 'complete' ಆಗುತ್ತಿತ್ತೇ? I doubt! 'ಕತೆ, ಹರಿಯುವ ನದಿಗೆ ಒಂದು ಚೌಕಟ್ಟು ಹಾಕುತ್ತದೆ' ಎಂದಿದ್ದರು ಯಾರೋ.. ಯಾರು ಜೋಗಿಯಾ? ಚಿತ್ತಾಲರಾ? ತೇಜಸ್ವಿಯಾ? ಯಾರೋ. ನಿಜ, ಯಾವ ಕತೆಯೂ ಮುಗಿಯುವುದಿಲ್ಲ. ನಾವೇ ಮುಗಿಸಬೇಕು. ಅದು ಕಾಲ್ಪನಿಕ ಕತೆಗಳ ದುರಂತ ಮತ್ತು ಲಾಭ.

ಆದರೆ ನೈಜ ಕತೆಗಳು ಕಲ್ಪನೆಯ ಕತೆಗಳಂತಲ್ಲ. ಇಲ್ಲಿ ವಾಸ್ತವಕ್ಕೆ ಅಪಚಾರವಾಗಬಾರದು. ಗೊತ್ತಿಲ್ಲದ ವಿವರಗಳಿಗೆ ಅಷ್ಟಿಷ್ಟು ಕಲ್ಪನೆಯನ್ನು ಬೆರೆಸಿದರೂ ಅದು ಸತ್ಯಕ್ಕೆ ದೂರವಾಗಬಾರದು. ಮತ್ತು ಬರೆದದ್ದು 'ವರದಿ'ಯಾಗದೇ 'ಕಥೆ'ಯಾಗಬೇಕು! ಕಷ್ಟ!

ಕಳೆದ ವಾರ ನಾವು ಆರು ಹುಡುಗರು ಮುಗಿದುಹೋಗುತ್ತಿರುವ ಹಳ್ಳಿಯೊಂದಕ್ಕೆ ಚಾರಣ ಹೋಗಿದ್ದೆವು. ಪಕ್ಕದಲ್ಲಿರುವ ಅಣು ವಿದ್ಯುತ್ ಸ್ಥಾವರ ಮತ್ತು ಡ್ಯಾಮ್ ಒಂದರ ಭದ್ರತಾ ದೃಷ್ಟಿಯಿಂದ ಸರ್ಕಾರ ಆ ಹಳ್ಳಿಯನ್ನು ವಶಪಡಿಸಿಕೊಳ್ಳುತ್ತಿದೆ. ಇನ್ನು ಐದಾರು ತಿಂಗಳೊಳಗೆ ಆ areaದ ಸುತ್ತ ಒಂದು compound ಏಳುತ್ತದೆ. ಅಲ್ಲಿಗೆ ಸಾರ್ವಜನಿಕ ಪ್ರವೇಶ ನಿಶೇಧವಾಗುತ್ತದೆ. ಅಲ್ಲಿನ ಮುಗ್ಧ ಜನಗಳ ಬದುಕು ಎತ್ತಂಗಡಿಯಾಗುತ್ತಿದೆ. ಅಲ್ಲಿನ ಸ್ನಿಗ್ಧ ಸೌಂದರ್ಯ ಮುಚ್ಚಿಹೋಗಲಿದೆ. ಜಲಪಾತದ ಹರಿವು ಮಾತ್ರ ಅನವರತವಾಗಿ ಉಳಿಯಲಿದೆ.

ಅದರ ಸುತ್ತ ಹೆಣೆದ ಕತೆಯಲ್ಲದ ಕತೆ ಈಗ ನಿಮ್ಮ ಮುಂದಿದೆ. ಇದೂ ನಿಮಗೆ incomplete ಅನ್ನಿಸಿದರೆ, I am sorry! ತಲುಬು ತೀರಾ ಕಾಡಿದರೆ 'ಬಿರ್‌ಗೇಡ್' ಕತೆಯ ಮುಂದುವರೆದ ಭಾಗವನ್ನು ಯಾವತ್ತಾದರೂ post ಮಾಡುತ್ತೇನೆ. ಆದರೆ 'ಕಮಲ ಹೇಳಿದ ಕತೆ'ಯನ್ನು ಮಾತ್ರ ನಾನು ಮುಂದುವರೆಸಲಾರೆ. ಏಕೆಂದರೆ, ಇದನ್ನು ಹೇಗೆ ಮುಂದುವರೆಸಬೇಕೆಂದು ನನಗೆ ಗೊತ್ತಿಲ್ಲ. ಏಕೆಂದರೆ, ಇದು ಹೇಗೆ ಮುಂದುವರೆಯುತ್ತದೆಂದು ಅವರಿಗೂ ಗೊತ್ತಿಲ್ಲ!