Tuesday, December 16, 2008

ಸುಗ್ಗಿಗಾಗಿ ಹಾಕಿದ ಚಪ್ಪರ

ಈ ಭಯೋತ್ಪಾದನೆ ಕೃತ್ಯ ನಡೆದ ಮೇಲೆ, ನಾವೆಲ್ಲಾ ಬ್ಲಾಗಿಗೆ ಕಪ್ಪು ಪಟ್ಟಿ ಬಳಿದುಕೊಂಡಮೇಲೆ ಒಂಥರಾ ಫುಲ್ ಸೀರಿಯಸ್‍ನೆಸ್ ಆವರಿಸಿಕೊಂಡುಬಿಟ್ಟಿದೆ! ಬಾಂಬು-ಟೆರರಿಸಂನಂತಹ ’ಸ್ಪೋಟಕ’ ವಿಷಯವನ್ನು ಬಿಟ್ಟು ಬೇರೆ ಏನೂ ಸಾಧಾರಣ ವಿಷಯ ಬರೀಲಿಕ್ಕೆ ಮನಸಾಗುತ್ತಲೇ ಇಲ್ಲ! ಹೀಗಾಗಿ, ನಾನು ಈ ’ಬರೆಯುವ’ ಗೋಜಿಗೇ ಹೋಗದೇ, ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಆಲೋಚನೆ ಮಾಡುತ್ತಿದ್ದೇನೆ.

ಕಳೆದ ವಾರ ಊರಿಗೆ ಹೋಗಿದ್ದೆ. ಊರಲ್ಲಿ ಸುಗ್ಗಿಯ ಸಿದ್ಧತೆ ನಡೆದಿತ್ತು. ನಮ್ಮನೆ ಪಕ್ಕದಲ್ಲಿ, ಅಡಿಕೆ ಸುಲಿಯಲು ಕೂರುವವರಿಗಾಗಿ ಆಳುಗಳು ಚಪ್ಪರ ಹಾಕುತ್ತಿದ್ದರು. ’ಸುಮ್ಮನೇ ಇರಲಿ’ ಎಂದು ಕ್ಲಿಕ್ಕಿಸಿದ ಅದರ ಒಂದಷ್ಟು ಫೋಟೋಗಳನ್ನು ಇಲ್ಲಿ ಹಾಕುತ್ತಿದ್ದೇನೆ.

ಒಂದು ಕಡೆಯಿಂದ ನಾವು ಯುವಕರೆಲ್ಲಾ ಹಳ್ಳಿ ಬಿಟ್ಟು ಪಟ್ಟಣಗಳಿಗೆ ಬರುತ್ತಿದ್ದೇವೆ. ನನ್ನ ಅಥವಾ ನನ್ನ ಆಸುಪಾಸಿನ ವಯಸ್ಸಿನ ಯುವಕರು ಯಾರೂ ಉಳಿದಿಲ್ಲ ನಮ್ಮೂರಲ್ಲಿ ಸಧ್ಯ. ಬರೀ ಹಿರಿತಲೆಗಳೇ ತುಂಬಿಕೊಂಡಿವೆ. ಮತ್ತೊಂದು ಕಡೆ, ಈ ಹಿರಿಯರಿಗೆ ಕೆಲಸ ಮಾಡಿಸಿಕೊಳ್ಳಲು ಆಳುಗಳೂ ಸಿಗುತ್ತಿಲ್ಲ. ಅಂಗಳ ಮಾಡುವುದಕ್ಕೆ, ಅಟ್ಟ-ಚಪ್ಪರ ಹಾಕುವುದಕ್ಕೆ, ಕೊನೆ ಕೊಯ್ಲಿಗೆ, ನೇಣು ಹಿಡಿಯಲಿಕ್ಕೆ, ಅಡಿಕೆ ಹೆಕ್ಕಲಿಕ್ಕೆ, ಆಮೇಲೆ ಹೊರಲಿಕ್ಕೆ -ಆಳು ಸಿಗದೇ, ಸುಗ್ಗಿ ಮಾಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ನಮ್ಮೂರಲ್ಲಿ ಸುಮಾರು ಮನೆಗಳಲ್ಲಿ ಈ ವರ್ಷ ಫಸಲುಗುತ್ತಿಗೆ ಕೊಡುವುದೇ ಸೈ ಎಂದು ಯೋಚಿಸುತ್ತಿದ್ದಾರೆ. ಹಾಗಾಗಿ, ಈಗ ನಾನು ತೆಗೆದಿರುವ ಈ ಫೋಟೋಗಳು ಮುಂದೊಂದು ದಿನ ’ಡಾಕ್ಯುಮೆಂಟರಿ’ಗಳಾದರೂ ಅಚ್ಚರಿಯಲ್ಲ!






















ಓದಿಲ್ಲದಿದ್ದಲ್ಲಿ: ಸುಗ್ಗಿ ವ್ಯಾಳ್ಯಾಗ..

Tuesday, December 02, 2008

ಅಟೆನ್ಷನ್ ಬ್ಲಾಗರ್ಸ್!!

ಮುಂಬಯಿ ಗೆಳತಿ ನೀಲಾಂಜಲ, ತಮ್ಮ ಬ್ಲಾಗಿನಲ್ಲಿ ಬ್ಲಾಗಿಗರಿಗೆ ಒಂದು ಕರೆ ಇತ್ತಿದ್ದಾರೆ. ಅತ್ತ ನಿಮ್ಮ ಗಮನ ಸೆಳೆಯಲು ಈ ಪೋಸ್ಟು. ದಯವಿಟ್ಟು ಎಲ್ಲರೂ ಸ್ಪಂದಿಸಿ.

ಇದರಿಂದ ಏನೋ ದೊಡ್ಡ ಸಾಧನೆಯಾಗತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲರೂ ಸ್ಪಂದಿಸಿದರೆ ’ಏನಾದರೂ ಒಂದು’ ಆದೀತೇನೋ ಎಂಬ ಆಸೆ. ಏನಾದರೂ.. ಯಟ್ ಲೀಸ್ಟ್..

ಏನಾದರೂ ಮಾಡೋಣ. ಇದನ್ನೆಲ್ಲಾ ನೋಡುತ್ತಾ ತೀರಾ ಸುಮ್ಮನೆ ಕೂತಿರುವುದು ಬೇಡ. ಭಯೋತ್ಪಾದಕ ಕೃತ್ಯದ ಲೈವ್ ಶೋ, ರಾಜಕಾರಣಿಗಳ ಹೊಲಸು ಮುಖವನ್ನು ನೋಡುತ್ತಾ ಹಲ್ಲು ಕಡಿದದ್ದು ಸಾಕು. ಒದ್ದೆಯಾಗುವ ಮನಸು ಮಾಡೋಣ.