Tuesday, April 26, 2011

ವರುಷಗಳು ಉರುಳುರುಳಿ...






ಈಗ್ಗೆ ಹಲ ವರುಷಗಳ ಹಿಂದೆ, ನಮ್ಮೂರ ಪಕ್ಕದೂರಿನ ಯುವಕರೊಬ್ಬರು ಆರೆಸ್ಸೆಸ್ ಸಂಘಟನೆಗೆ ಹುಡುಗರನ್ನು ಒಗ್ಗೂಡಿಸುವ ಸಲುವಾಗಿ ಊರೂರು ಸುತ್ತಿ, ಪ್ರತಿ ಊರಲ್ಲೂ ಅಷ್ಟಿಷ್ಟು ಜನರನ್ನು ಒಂದೆಡೆ ಕೂಡಿಸಿ, ಧ್ವಜವಂದನೆ ಮಾಡಿಸಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ..’ ಹಾಡಿಸಿ ಹೋಗಿದ್ದರು. ಆಗ ಅವರ ಜೊತೆ ನಾನೂ ಒಂದಷ್ಟು ಕಾಲ ಓಡಾಡಿಕೊಂಡಿದ್ದೆ. ಇದನ್ನು ನೋಡಿ ನನ್ನ ಅಪ್ಪ-ಅಮ್ಮ, ಇರುವ ಒಬ್ಬನೇ ಮಗ ಎಲ್ಲಿ ದೇಶಸೇವೆ-ಗೀಶಸೇವೆ ಅಂತ ಹೊರಟುಬಿಡುತ್ತಾನೋ ಎಂದು ವ್ಯಾಕುಲರಾಗಿ, ‘ಅದೆಲ್ಲ ನಮ್ಮಂಥವರಿಗಲ್ಲ, ಮನೇಲಿ ಇಬ್ರು-ಮೂವರು ಮಕ್ಕಳು ಇದ್ರೆ ಒಬ್ಬ ಮಗ ಹಿಂಗೆ ಹೋಗೋದು ಸರಿ. ನೀನು ಇನ್ಮೇಲೆ ಅವನ ಹಿಂದೆ ಓಡಾಡ್ಬೇಡ’ ಅಂತ ನನ್ನನ್ನು ಕೂರಿಸಿಕೊಂಡು ಹೇಳಿದ್ದರು. ನನಗಾದರೂ ಆರೆಸ್ಸೆಸ್ ಬಗೆಗಾಗಲೀ, ದೇಶದ ಬಗೆಗಾಗಲೀ, ದೇಶಸೇವೆ ಎಂದರೇನು ಅಂತಾಗಲೀ, ಪುತ್ರವಾತ್ಸಲ್ಯದ ಅರ್ಥವಾಗಲೀ ಆಗ ಗೊತ್ತಿರಲಿಲ್ಲ. ಅಪ್ಪ-ಅಮ್ಮ ಹೇಳಿದಮೇಲೆ ಹೌದಿರಬಹುದು ಅಂದುಕೊಂಡು ಆಮೇಲೆ ಅತ್ತಕಡೆ ತಲೆ ಹಾಕಲಿಲ್ಲ.

ಐದಾರು ತಿಂಗಳ ಹಿಂದೆ ಊರಿಗೆ ಹೋಗಿದ್ದಾಗ, ಮನೆಗೆ ಬಂದಿದ್ದ ಅತ್ತೆ ಮತ್ತು ಅವಳ ಮಕ್ಕಳೊಂದಿಗೆ ಉಪ್ಪು-ಖಾರ ತಿನ್ನುತ್ತ ಅದೂ-ಇದೂ ಹರಟೆ ಹೊಡೆಯುತ್ತ ಹಿತ್ಲಕಡೆ ಕಟ್ಟೆಯ ಮೇಲೆ ಕೂತಿದ್ದೆ.  ಅಷ್ಟೊತ್ತಿನ ತನಕ ಹಳೇ ನೆನಪು, ಅವರಿವರ ಮನೆ ಕತೆ, ಗೋಳಿನ ಬೆಂಗಳೂರಿನ ಬಗ್ಗೆಯೆಲ್ಲ ನನ್ನ ಜೊತೆ ಲೋಕಾರೂಢಿ ಮಾತಾಡುತ್ತಿದ್ದ ಅತ್ತೆ ಇದ್ದಕ್ಕಿದ್ದಂತೆ ‘ಸರೀ, ಈ ವರ್ಷ ಮದುವೆ ಆಗ್‌ತ್ಯಾ?’ ಅಂತ ಕೇಳಿಬಿಟ್ಟಳು. ಈ ವಿಧಿಯ ಸಂಚೇ ಹಾಗೆ, ಯಾವಾಗ ಕೈ ಕೊಡುತ್ತೆ ಹೇಳಲಿಕ್ಕಾಗುವುದಿಲ್ಲ. ಆದರೂ ಧೃತಿಗೆಡದ ನಾನು, ‘ಅಯ್ಯೋ, ಇನ್ನೊಂದೆರ್ಡು ವರ್ಷ ತಡಿ ಮಾರಾಯ್ತಿ’ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಅತ್ತೆ ಮುಂದುವರಿದು, ‘ಹಂಗಲ್ಲಾ, ನೀನೇ ಬೆಂಗಳೂರಲ್ಲಿ ಯಾರನ್ನಾದ್ರೂ ನೋಡಿಕೊಂಡ್ರೂ ಅಡ್ಡಿ ಇಲ್ಲೆ. ಆದರೆ ಎಲ್ಲಾ ಸರಿ ಇದ್ದಾ ನೋಡಿ ಮಾಡ್‌ಕ್ಯ’ ಎಂದಳು. ‘ಎಲ್ಲಾ ಸರಿ ಇರದು ಅಂದ್ರೆ ಎಂತು?’ ನಾನು ಕೇಳಿದೆ. ‘ನಿಂಗ ಸಾಹಿತಿಗಳು ಆದರ್ಶ-ಗೀದರ್ಶ ಅಂತ ಹೊರಟುಬಿಡ್ತಿ. ನೀನು ಮಾಡಿಕೊಳ್ಳೋದಿದ್ರೆ ನಮ್ ಜಾತಿ ಕೂಸಿನ್ನೇ ಮಾಡ್‌ಕ್ಯ. ಹುಡುಗಿ ಮನೆ ಕಡೆಗೂ ಚನಾಗಿರವು. ಕುಂಟಿ, ಕಿವುಡಿ, ನಿನಗಿಂತ ದೊಡ್ಡೋರು, ಡೈವೋರ್ಸಿಗಳು, ಇಂಥವರನ್ನೆಲ್ಲಾ ಮಾಡಿಕೊಳ್ಬೇಡ. ಮೊದಮೊದಲು ಆದರ್ಶ ಅಂತ ಚೊಲೋ ಕಾಣ್ತು. ಆದರೆ ಆಮೇಲೆ ಅದೇ ಒಂದು ಕೊರಗು ಆಗ್ತು..’ ಅಂತೆಲ್ಲ ಹೇಳಿ, ‘ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ’ ಎಂದಳು.

ಅವಳ ಕೊನೆಯ ವಾಕ್ಯ ನನ್ನೊಳಗೇ ಉಳಿದುಕೊಂಡು ಬಿಟ್ಟಿತು: ‘ಆದರ್ಶಗಳು ನಾವು ಪಾಲಿಸಲಲ್ಲ; ಬೇರೆಯವರಿಗೆ ಬೋಧಿಸಲು.’  ಅದೆಷ್ಟೇ ವಿರೋಧಾತ್ಮಕವಾಗಿದ್ದರೂ, ನನ್ನ ಅತ್ತೆ ಹೇಳಿದ ಮಾತು ಅವಳ ಆ ಕ್ಷಣದ, ಪ್ರಾಮಾಣಿಕವಾಗಿ ಹೊರಬಂದ, ಅಂತಃಕರಣದ ಮಾತಾಗಿತ್ತು. ಅವಳ ಹೇಳಿಕೆಯನ್ನಿಟ್ಟುಕೊಂಡು ದಿನವಿಡೀ ವಾದಿಸಬಹುದಿತ್ತಾದರೂ ನಾನು ಸರಿಸರಿಯೆಂದು ತಲೆದೂಗಿದೆ. ಆದರೆ ಆ ವಾಕ್ಯ ಇವತ್ತಿನ ಈ ಕ್ಷಣದವರೆಗೂ ನನ್ನೊಂದಿಗೆ ಬರುತ್ತಿದೆ, ಮನಸಿನೊಂದಿಗೆ ಸೆಣಸುತ್ತಿದೆ.

ಬಹುಶಃ ನನ್ನ ಅತ್ತೆ ಬಾಯಿಬಿಟ್ಟು ಹೇಳಿದ ಆ ಮಾತು ನಾವೆಲ್ಲ ನಮ್ಮ ಆಪ್ತರಿಗೆ ಬಾಯಿಬಿಟ್ಟೋ ಬಿಡದೆಯೋ ಹೇಳುವ ಮಾತು. ‘ಯೋಧ ಜನಿಸಬೇಕು. ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ’ ಎಂಬ ಅಭಿಪ್ರಾಯ ೯೦ ಪ್ರತಿಶತ ಜನರದು. ನಿರ್ಧಾರದ ಗಳಿಗೆಗಳಲ್ಲೆಲ್ಲ ನಮ್ಮನ್ನು ಕಾಡಿದ ದ್ವಂದ್ವ ಅದೇ: ಧ್ಯೇಯವೋ? ಮೋಹವೋ? ಕವಲುದಾರಿಯಲ್ಲಿ ನಿಂತಾಗಲೆಲ್ಲ ನಮಗೆ ಎದುರಾಗುವ ಗೊಂದಲ ಅದೇ: ಜನ ಹೇಳಿದತ್ತ ಹೋಗಲೋ? ನನ್ನ ವಿವೇಕ ಹೇಳಿದತ್ತ ಹೋಗಲೋ? ಇಷ್ಟಕ್ಕೂ ಆದರ್ಶದ ಪಾಲನೆ ನಮ್ಮ ಸಂತೋಷಕ್ಕೋ ಅಥವಾ ಸಮಾಜ ನನ್ನನ್ನು ಪ್ರಶ್ನಿಸುವ ಕಣ್ಣುಗಳಿಂದ ನೋಡುತ್ತಿದೆ ಎಂಬ ಆತಂಕಕ್ಕೋ?

ಈ ಆದರ್ಶದ ಪರಿಕಲ್ಪನೆಯೂ ಒಬ್ಬರಿಂದೊಬ್ಬರಿಗೆ ಭಿನ್ನ. ಜಗತ್ತು ನಮ್ಮ ಮೇಲೆ ಹೇರುವ ಆದರ್ಶಗಳು ಒಂದು ತೂಕದವಾದರೆ ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಆದರ್ಶಗಳು ಇನ್ನೊಂದು ತೆರನವು.  ಬಹುಶಃ ನಮ್ಮ ಆದರ್ಶವನ್ನು ನಾವು ಮೊದಲೇ ಸೆಟ್ ಮಾಡಿಕೊಂಡಿದ್ದರೆ ಆಯ್ಕೆಯ ಕ್ಷಣಗಳಲ್ಲಿ ಗೊಂದಲಗಳಾಗುವುದಿಲ್ಲ. ‘ನನ್ನ ಆದರ್ಶದ ಮಿತಿ ಇಷ್ಟೇ’ ಅಂತ ಜಗತ್ತಿಗೆ ಉತ್ತರಿಸಬಹುದು. ಅಥವಾ ಜಗತ್ತಿಗೆ ಉತ್ತರಿಸುವ ದರ್ದಿಲ್ಲ ಎಂದರೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಅದು ‘ಬುದ್ಧಿವಂತಿಕೆ’ ಆಗಿಹೋಗುತ್ತದಾ? ಹಾಗಾದರೆ ಆದರ್ಶಗಳನ್ನು ಮೈಮೇಲೆ ಹೇರಿಕೊಳ್ಳುವುದೇ ತಪ್ಪಾ? ಬಿಡುಬೀಸಾಗಿ ನಡೆದು, ಮನಸಿಗೆ ತೋಚಿದತ್ತ ಸಾಗುವುದೇ ಸರಿಯಾದ ರೀತಿಯಾ? ಆ ಕ್ಷಣದಲ್ಲಿ ನನಗೆ ಏನನ್ನಿಸುತ್ತದೋ ಅದರಂತೆಯೇ ನಿರ್ಧರಿಸುವುದು ಸರಿಯಾದ ಮಾರ್ಗವಾ? ಗೊತ್ತಿಲ್ಲ.

* * *



ಜಯಂತ ಕಾಯ್ಕಿಣಿ ‘ಚಾರ್‌ಮಿನಾರ್’ ಎಂಬ ನೀಳ್ಗತೆಯೊಂದನ್ನು ಬರೆದಿದ್ದಾರೆ. ನನ್ನನ್ನು ಬಹಳವಾಗಿ ಕಾಡಿದ ಕತೆ ಅದು. ಯುನಿವರ್ಸಿಟಿಗೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾದ ನೈ‌ಋತ್ಯ ಗಾಂವಕರ ಎಂಬ ಯುವಕ, ಕೆಲಸ ಹಿಡಿದು ದುಡ್ಡು ಮಾಡುವುದು ಬಿಟ್ಟು, ಈ ಸಮಾಜಕ್ಕೆ ಒಳ್ಳೆಯದಾಗುವಂಥದ್ದೇನಾದರೂ ಮಾಡಬೇಕು ಎಂದುಕೊಂಡು, ಮನೆ ಬಿಟ್ಟು ಓಡಿ ಬಂದಂತಹ ಮಕ್ಕಳನ್ನು ಮರಳಿ ಮನೆ ಸೇರಿಸುವ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾನೆ. ರೈಲುಗಳಲ್ಲಿ ಟೀ, ಮಜ್ಜಿಗೆ, ವಡೆ, ನ್ಯೂಸ್‌ಪೇಪರು, ತಿಂಡಿಯ ಪೊಟ್ಟಣಗಳನ್ನು ಹಿಡಿದು ಬರುವ ಮಕ್ಕಳಿಂದ ಹಿಡಿದು ಹೋಟೆಲ್‌ಗಳ ಕ್ಲೀನರ್ ಹುಡುಗರವರೆಗೆ, ಅವರ ಪೂರ್ವಾಪರ ವಿಚಾರಿಸಿ ಮತ್ತೆ ಸಾಮಾನ್ಯ ಮಕ್ಕಳನ್ನಾಗಿಸುವ, ಮಕ್ಕಳಿಗೆ ಸಿಗಬೇಕಾದುದನ್ನು ಕೊಡಿಸುವ ಪ್ರಯತ್ನ ಮಾಡುತ್ತಾನೆ. ಪುನರ್ವಸು ಎಂಬ ಹುಡುಗಿ ಅವನ ಈ ಕೆಲಸದಲ್ಲಿ ಸಾಥಿಯಾಗಿ, ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ. ಇನ್ನಾದರೂ ಇವರು ಹಳಿಗೆ ಬಂದಾರು ಎಂದುಕೊಂಡ ಉಭಯ ಪೋಷಕರೂ ನಿರಾಶೆಯಾಗುವಂತೆ ಇವರು ತಮ್ಮ ಸಮಾಜೋದ್ಧಾರದ ಕೆಲಸ ಮುಂದುವರೆಸುತ್ತಾರೆ. ವೈಯಕ್ತಿಕ ಸುಖ-ದುಃಖಗಳು ಗೌಣವಾಗುತ್ತವೆ. ರಸ್ತೆಬದಿ, ರೈಲು, ಬಸ್‌ಸ್ಟಾಂಡು, ಶಾಲೆಯ ಕಟ್ಟೆಗಳ ಮೇಲೇ ಮಲಗೆದ್ದು, ಎಲ್ಲೆಲ್ಲೋ ಏನೇನೋ ತಿನ್ನುತ್ತ, ಅವರು ಈ ಕೆಲಸದಲ್ಲೇ ಮುಳುಗಿಹೋಗಿರುತ್ತಾರೆ.  ಆದರೆ ಯಾವಾಗ ಪುನರ್ವಸು ಗರ್ಭಿಣಿಯಾಗುತ್ತಾಳೋ ಆಗ ಅವರಿಗೂ ಒಂದು ‘ವೈಯಕ್ತಿಕ ಬದುಕು’ ಪ್ರಾಪ್ತವಾಗುತ್ತದೆ. ಬಸುರಿ ಹೆಂಡತಿಗಾಗಿ ಹಾಲು, ಒಳ್ಳೆಯ ಊಟ, ಮನೆ, ಬಟ್ಟೆ, ಆರೈಕೆ, ತಾನು, ತನ್ನದು -ಗಳಂತಹ ಸಂಸಾರದ ಚೌಕಟ್ಟಿಗೆ ಅವರೂ ಒಳಗಾಗಬೇಕಾಗುತ್ತದೆ. ‘ಹಣ’ಕ್ಕೊಂದು ಪ್ರಾಮುಖ್ಯತೆ ಬರುತ್ತದೆ.  ಬೇರೆ ಸಂಸಾರಗಳನ್ನು, ಗೆಳೆಯರ ಮಕ್ಕಳನ್ನು ನೋಡಿದಾಗ ತಾನು ತೆಗೆದುಕೊಂಡ ನಿರ್ಧಾರಗಳು, ತನ್ನ ಆದರ್ಶಗಳು ಎಲ್ಲಾ ಸುಳ್ಳಾಗಿದ್ದವೇ ಎಂಬ ಗೊಂದಲಕ್ಕೆ ಬೀಳುತ್ತಾನೆ ನೈ‌ಋತ್ಯ.

ನಾವು ಪಾಲಿಸಿಕೊಂಡು ಬಂದ ಆದರ್ಶಗಳನ್ನು ಕೈಬಿಡುವ ಕ್ಷಣಗಳಲ್ಲಿ ಆಗುವ ಗೊಂದಲ ತೀವ್ರವಾದದ್ದು. ಬಹುಶಃ ಈ ‘ಆದರ್ಶದ ಪರಿಪಾಲನೆ’ ಎಂಬ ಸಂಗತಿಗೆ ‘ಯಾವುದೋ ಸುಖದ ತ್ಯಾಗ’ ಎಂಬ ಸಂಗತಿ ಲಿಂಕ್ ಆಗಿರಬೇಕು. ಮತ್ತು ಈ ‘ಯಾವುದೋ ಸುಖದ ತ್ಯಾಗ’ ಎಂಬುದು ಮತ್ತೊಬ್ಬರನ್ನು ನೋಡಿದಾಗ ನಮಗನಿಸುವ ಭಾವವಿರಬೇಕು. ಉದಾಹರಣೆಗೆ, ‘ಹಣ ಮಾಡುವುದಕ್ಕಾಗಿ ನಾನು ದುಡಿಯುವುದಿಲ್ಲ; ಸಧ್ಯಕ್ಕೆ ನನಗೆ ಬದುಕಲೆಷ್ಟು ಬೇಕೋ ಅಷ್ಟನ್ನು ಮಾತ್ರ ನಾನು ದುಡಿದುಕೊಳ್ಳುತ್ತೇನೆ’ ಎಂಬ ಧ್ಯೇಯವನ್ನು ನಾನು ಇಟ್ಟುಕೊಂಡರೆ, ಇಡೀ ಜಗತ್ತೇ ಹಣದ ಹಿಂದೆ ಬಿದ್ದಿರುವ ಈ ದಿನಗಳಲ್ಲಿ ನಾನು ಒಂಟಿಯಾಗಿಬಿಡುತ್ತೇನೆ. ನಾನೂ ನನ್ನ ಗೆಳೆಯರ, ಊರವರ, ಸಮಾಜದವರ ಸರಿಸಮಾನನಾಗಿ ಬದುಕಬೇಕು ಎಂಬ ಬಯಕೆಗೂ ನನ್ನ ಆದರ್ಶಕ್ಕೂ ಬೀಳುವ ಜಿದ್ದಾಜಿದ್ದಿ ಇದು. ಗೆಳೆಯ ಕಾರು ತಗೊಂಡ, ಸೈಟು ಖರೀದಿಸಲು ನೋಡುತ್ತಿದ್ದಾನೆ, ಫ್ಲಾಟ್‌ನಲ್ಲಿ ಇದ್ದಾನೆ, ಅಮೆರಿಕೆಗೆ ಹಾರುತ್ತಿದ್ದಾನೆ, ಎಷ್ಟು ಸುಂದರಿ ಹೆಂಡತಿ, ಫೈವ್ ಸ್ಟಾರ್ ಹೋಟೆಲಿಗೆ ಕರೆದೊಯ್ಯುತ್ತಾನೆ, ಮಲ್ಟಿಪ್ಲೆಕ್ಸಿನಲ್ಲೇ ಸಿನೆಮಾ ನೋಡುತ್ತಾನೆ, ಶಾಪಿಂಗ್ ಮಾಡುವುದೇನಿದ್ದರೂ ಮಾಲಿನಲ್ಲೇ -ಎಂಬಿತ್ಯಾದಿ ಬೇಡವೆಂದರೂ ನನ್ನನ್ನು ಚುಚ್ಚುವ ಶೂಲಗಳು; ‘ಬರೀ ಈಗಿನದಷ್ಟೇ ನೋಡಿಕೊಂಡ್ರೆ ಆಗ್ಲಿಲ್ಲ, ನಿನ್ನನ್ನಷ್ಟೇ ಸಂಭಾಳಿಸಿಕೊಂಡ್ರೆ ಆಗ್ಲಿಲ್ಲ; ಫ್ಯೂಚರ್ - ಫ್ಯೂಚರ್ ಬಗ್ಗೆ ಯೋಚಿಸು. ನಿನ್ನ ತಂದೆ-ತಾಯಿಯರನ್ನ ನೋಡ್ಕೋಬೇಕು, ಮದುವೆ ಮಾಡ್ಕೋಬೇಕು, ಆಮೇಲೆ ಮಕ್ಳು-ಮರಿ-ಶಾಲೆ-ಫೀಸು, ಸಂಸಾರವನ್ನ ಸುಖವಾಗಿಡಬೇಕು, ಕೊನೇಕಾಲದಲ್ಲಿ ನಿನಗೇ ಹಣದ ಜರೂರತ್ತು ಬೀಳಬಹುದು... ಇದನ್ನೆಲ್ಲ ಯೋಚಿಸು. ಕಮ್ ಔಟ್ ಆಫ್ ದಟ್ ಕಂಪನಿ ಅಂಡ್ ಜಾಯ್ನ್ ಅ ನ್ಯೂ ಜಾಬ್’ ಎಂದು ನನ್ನನ್ನು ಪ್ರೇರೇಪಿಸುವ ಶಕ್ತಿಗಳು; ‘ಈಗಿನ ಕಾಲದಲ್ಲಿ ಲಾಯಲ್ಟಿ, ಭಾವನೆ, ಆದರ್ಶ ಅಂತೆಲ್ಲ ಯೋಚಿಸ್ತಾ ಕೂತ್ರೆ ಅಷ್ಟೇ ಕತೆ. ದುಡ್ಡಿಗಾಗಿ ಏನು ಮಾಡಲಿಕ್ಕೂ ಹೇಸದ ಜನಗಳ ಮಧ್ಯೆ ನೀನಷ್ಟೇ ಸುಮ್ಮನಿದ್ದು ಏನು ಸಾಧಿಸ್ತೀಯಾ? ಹೇಳ್ತೀನಿ ಕೇಳು: ಮುಂದೆಮುಂದೆ ನಿನ್ನ ಆದರ್ಶಗಳ ಪಾಲನೆಗೂ ಹಣವೇ ಬೇಕಾಗತ್ತೋ ಮೂರ್ಖಾ!’ ಎಂದು ಹೆದರಿಸುವ ಆಪ್ತರು; ‘ಒಂದು ಸಲ ನಿಂಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿಕೊಂಡು ಲೈಫಲ್ಲಿ ಸೆಟಲ್ ಆಗಿ ಕೂತುಬಿಟ್ರೆ ಮುಗೀತಪ್ಪ. ಆಮೇಲೆ ನಿಂಗೆ ಏನು ಬೇಕೋ ಅದು ಮಾಡ್ಕೋ. ಹ್ಯಾಗೆ ಬೇಕೋ ಹಾಗೆ ಬದುಕು’ ಎಂಬ ಹೊಸ ಆಯಾಮದ ಸಲಹೆ -ಇವೆಲ್ಲವುಗಳ ಮಧ್ಯೆ ನಾನು ನಾನಾಗಿ ಉಳಿಯುವುದು ಹೇಗೆ?

ಈ ಸುಖ ಎಂಬ ಊಹನೆಗೆ ಗರಿಷ್ಠ ಮಿತಿಯೇ ಇಲ್ಲದಿರುವುದು ಇವಕ್ಕೆಲ್ಲ ಕಾರಣವಿರಬಹುದು. ಏನೆಲ್ಲ ಇದ್ದೂ ಇವ್ಯಾವುದೂ ಬೇಡ, ಮತ್ತೇನೋ ಬೇಕು ಎಂದು ಹಂಬಲಿಸುವುದು ಅಧ್ಯಾತ್ಮ.  ಆದರೆ ಇಷ್ಟೆಲ್ಲ ಇದ್ದರೂ ಇನ್ನೂ ಬೇಕೆಂಬುದಕ್ಕೆ, ಎಷ್ಟೇ ಅನುಭವಿಸಿದರೂ ಸಾಕೆನಿಸದೇ ಹೋಗುವುದಕ್ಕೆ, ಬರೀ ನಮಗಿಂತ ಮೇಲಿನವರೇ ನಮ್ಮ ಕಣ್ಣಿಗೆ ಚುಚ್ಚುವುದಕ್ಕೆ ತೃಪ್ತಿಯ ಅಳತೆಗೋಲು ಬೆಳೆಯುತ್ತಲೇ ಹೋಗುವುದೇ ಕಾರಣ. ಈ ಎಲ್ಲ ಏನೆಲ್ಲವನ್ನು ಗಳಿಸುವ ಭರಾಟೆಯಲ್ಲಿ ನಾನು ಮುರಿಯಬೇಕಿರುವ ನಿರ್ಧಾರಗಳಿಗೆ ಕೊಟ್ಟುಕೊಳ್ಳಬಹುದಾದ ಸಮರ್ಥನೆಯೇನು? ನಾನು ಬದುಕುತ್ತಿರುವ ಈ ವಾಸ್ತವಿಕ ಜಗತ್ತು ನನ್ನದಲ್ಲ, ನಾನು ಮಾಡುತ್ತಿರುವ ಈ ಕೆಲಸ ನನ್ನದಲ್ಲ, ಐಯಾಮ್ ನಾಟ್ ವ್ಹಾಟ್ ಐಯಾಮ್ -ಎಂಬ, ಆಗಾಗ ನನಗನಿಸುವ ಭಾವ, ಮತ್ತು ಹಾಗಿದ್ದಾಗ್ಯೂ ಇವ್ಯಾವುದನ್ನೂ ಬಿಡಲಾಗದ ಅನಿವಾರ್ಯತೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಸವೆಸುವುದೇ ಬದುಕೇ? ಗೊತ್ತಿಲ್ಲ.

* * *
 










ಭಾನುವಾರ ಬೆಳಬೆಳಗ್ಗೆ ಫೋನಿಸಿದ ಹುಡುಗಿ ಭೈರಪ್ಪನವರ ‘ನಿರಾಕರಣ’ ಓದುತ್ತಿರುವುದಾಗಿ ಹೇಳಿದಳು. ಅದ್ಯಾವುದೋ ಗುಂಗಿನಲ್ಲಿದ್ದ ನಾನು, ‘ಅದರಲ್ಲಿ ಬರುವ ಪಾತ್ರ ನರಹರಿಯ ಹಾಗೆ ನಂಗೂ ಆಗಾಗ ಹಿಮಾಲಯಕ್ಕೆ ಹೋಗಿಬಿಡಬೇಕು ಅಂತ ಅನ್ನಿಸುತ್ತೆ.  ಒಂದಷ್ಟು ಕಾಲ ಸನ್ಯಾಸಿಯ ಥರ ಬದುಕಿ ಬರಬೇಕು ಅಂತ ಇದೆ’ ಎಂದುಬಿಟ್ಟೆ. ಅಷ್ಟೇ, ಫೋನ್ ಕಟ್! ಏನಾಯಿತು ಅಂತ ತಿಳಿಯಲು ಅರ್ಧ ಗಂಟೆಯ ನಂತರ ಬಂದ ಎಸ್ಸೆಮ್ಮೆಸ್ಸನ್ನೇ ಓದಬೇಕಾಯಿತು: ‘ನಿಂಗೆ ಸನ್ಯಾಸಿ ಆಗ್ಬೇಕು ಅಂತೆಲ್ಲ ಇದ್ರೆ ಮೊದಲೇ ಹೇಳ್ಬಿಡು. ನಾನು ನಿನ್ನ ಮದುವೇನೇ ಮಾಡ್ಕೊಳಲ್ಲ.  ಆಮೇಲೆ ಸಂಸಾರ ಬಿಟ್ಟು, ಮಕ್ಕಳನ್ನ ಹರಾಜಿಗೆ ಹಾಕಿ ನೀನು ಹತ್ತಿ ಹೋಗೋದು ಎಲ್ಲಾ ನಂಗೆ ಸಹಿಸಲಿಕ್ಕೆ ಆಗಲ್ಲ. ಎಲ್ಲಾರ ಹಾಗೆ ಡೀಸೆಂಟಾಗಿ ಬದುಕೋ ಹುಡುಗ ಬೇಕು ನಂಗೆ.’   ಆಹ್! ಆಮೇಲೆ ‘ನಾನು ಹೇಳಿದ್ದು ಹಂಗಲ್ಲ, ಹಿಂಗೆ, ನಾನು ದೇವರಾಣೆ ಸನ್ಯಾಸಿ ಆಗಲ್ಲ, ಹೆಂಡತಿ-ಮಕ್ಕಳನ್ನ ಬಿಟ್ಟುಹೋಗುವಷ್ಟು ಬೇಜವಾಬ್ದಾರಿತನ ನಂಗಿಲ್ಲ’ ಅಂತೆಲ್ಲ ಹೇಳಿ ಸಮಾಧಾನ ಮಾಡಬೇಕಾಯ್ತು. ಮೂರು ದಿನ ಮಾತಿಲ್ಲ ಕತೆಯಿಲ್ಲ. ಕೊನೆಗೆ ದೇವರೇ ಡೈರಿಮಿಲ್ಕ್ ರೂಪದಲ್ಲಿ ಬಂದು ಈ ಪ್ರಕರಣಕ್ಕೆ ಸುಖಾಂತ್ಯ ಕೊಟ್ಟ.  ಕ್ಯಾಡ್‌ಬರೀಸಿಗೆ ಥ್ಯಾಂಕ್ಸ್ ಹೇಳಿದೆ.

ಕನಸಿಗೂ, ಆದರ್ಶಕ್ಕೂ, ಹುಚ್ಚಿಗೂ ಸಿಕ್ಕಾಪಟ್ಟೆ ಸಂಬಂಧವಾ? ಕನಸು ಕಾಣುವುದು ಹಾಗೂ ಆದರ್ಶಗಳನ್ನು ಆವಾಹಿಸಿಕೊಳ್ಳುವುದು ಹುಚ್ಚಿನ ಲಕ್ಷಣವಾ? ಗೊತ್ತಿಲ್ಲ.

* * *







ಏನೇನೂ ಗೊತ್ತಿಲ್ಲದ ಕಾಲದಲ್ಲಿ ಶುರು ಮಾಡಿದ್ದು ಈ ಬ್ಲಾಗು. ಆದರೆ ಹೀಗೆಲ್ಲ ನಿಮ್ಮೊಂದಿಗೆ ಮಾತಾಡುತ್ತ ಐದು ವರುಷಗಳೇ ಕಳೆದುಹೋಗಿವೆ. ನಾನು ಬರೆದದ್ದೆಲ್ಲ ಓದಿದ ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಸ್ಪಂದನಗಳು ನನಗೆ ನೀಡಿದ ಆತ್ಮವಿಶ್ವಾಸ ಅಪಾರ. ಥ್ಯಾಂಕ್ಸ್, ಋಣಿ, ಕೃತಜ್ಞ, ಆಭಾರಿ -ಇತ್ಯಾದಿ ಶಬ್ದಗಳು ಈ ಸದ್ದಿಲ್ಲದ ಭಾವಗೀತದ ಬಣ್ಣನೆಗೆ ಏನೇನೂ ಸಾಲವು. ಆದರೂ ಈ ಕ್ಷಣಕ್ಕೆ ಹೊಳೆಯುತ್ತಿರುವವು ಅವೇ.

ದೈನಂದಿನ ಬದುಕಿಗೆ ಇಂಗ್ಲೀಷ್ ಕ್ಯಾಲೆಂಡರ್ ಇಯರ್, ಹಿಂದೂಗಳಿಗೆ ಸಂವತ್ಸರ, ವ್ಯವಹಾರ ಜಗತ್ತಿಗೆ ಫೈನಾನ್ಷಿಯಲ್ ಇಯರ್ -ಇರುವ ಹಾಗೆ ಬ್ಲಾಗಿಗರಿಗೆ ‘ಬ್ಲಾಗೀ ವರ್ಷ.’ ಈ ಬ್ಲಾಗೀ ವರ್ಷ ನನಗೆ ಒಂದಷ್ಟು ಬಹುಮತಿಗಳನ್ನು ತಂದುಕೊಟ್ಟಿತು: ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...ಹೀಗೆ ಹಂಚಿಕೊಳ್ಳಲು ಒಂದಷ್ಟು ಖುಶಿಗಳು. ನಿಮ್ಮೊಂದಿಗೇ ಯಾಕೆ ಹಂಚಿಕೊಳ್ಳಬೇಕು ಎಂದರೆ ಮೇಷ್ಟ್ರಿಗೆ ಯಾಕೆ ಗೌರವ ಕೊಡಬೇಕು ಎಂದಂತಾಗುತ್ತದೆ.

ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು... ಬುಟ್ಟಿಗೆ ಬಿದ್ದುದೆಲ್ಲ ಕವಿತೆಯಾಗಲಿ; ಮರೆತ ಉಸಿರು ಕತೆಯಾಗಲಿ.  ಸಾಗುತ್ತಿರುವ ಪಯಣದಲ್ಲಿ, ಜಾರುತ್ತಿರುವ ಕ್ಷಣಗಳಲ್ಲಿ, ಭಾರ ಭಾರ ಮನಸಿನಲ್ಲಿ ಹೀಗೊಂದು ಪುಟ್ಟ ಪ್ರಾರ್ಥನೆ:

ಜಗುಲಿಕಟ್ಟೆಯ ಮೇಲೆ ನಡೆಯುತ್ತಿದೆ ಜೋರುನಗೆಯಲಿ ಅಂತ್ಯಾಕ್ಷರಿ
ಹೊಸ ಹಾಡು ಹೊಳೆಯುತಿರಲಿ, ಆಟಕಂತ್ಯವಿಲ್ಲದಿರಲಿ
ಕಾದ ಧರಣಿಗೆ ಆಗುತ್ತಿದೆ ರಾತ್ರಿಯಿಡೀ ಮಳೆಯ ಮೇಜವಾನಿ
ಯಾವ ಗೋಡೆಯೂ ಕುಸಿಯದಿರಲಿ, ಮರದ ರೆಂಬೆ ಗಟ್ಟಿಯಿರಲಿ

ತಿರುಗುತ್ತಿರುವ ಆಲೆಮನೆಯ ಕೋಣಗಳಿಗೆ ತಲೆಸುತ್ತು ಬಾರದಿರಲಿ
ಅರಳುತ್ತಿರುವ ಎಲ್ಲ ಹೂವ ಕೊರಳಿಗೂ ದುಂಬಿಯುಸಿರು ತಾಕಲಿ
ಉಪ್ಪಿಟ್ಟು ವಾಕರಿಕೆ ತರಿಸುವ ಮುನ್ನ ಬ್ಯಾಚುಲರುಗಳಿಗೆ ಮದುವೆಯಾಗಲಿ
ವುಡ್ವರ್ಡ್ಸ್ ಕುಡಿದ ಮಗು ಅಳು ನಿಲ್ಲಿಸಲಿ, ಅಪ್ಪನಿಗೆ ತನ್ನಮ್ಮನ ನೆನಪಾಗಲಿ

ಬಿಸಿಲ ಬೇಗೆಗೆ ಇರಲಿ ಇಬ್ಬಟ್ಟಲ ಹಣ್ಣಿನ ಶರಬತ್ತು
ಚಳಿಯ ರಾತ್ರಿಗೆ ಇರಲಿ ತಬ್ಬಿ ಮುತ್ತಿಡುವಷ್ಟು ಮೊಹಬತ್ತು
ಸೂಜಿಯೊಳಗೆ ದಾರ ಪೋಣಿಸುತ್ತಿರುವಜ್ಜಿಗೆ ನೆರವಾಗಲಿ ಮೊಮ್ಮಗಳು
ಮರಳಿ ಬರಲಿ ವನಮಾಲಿ ರಾಧೆಯೆಡೆಗೆ, ಉಲಿಯಲಿ ಮತ್ತೆ ಕೊಳಲು

ಒತ್ತೆಯಲ್ಲಿಟ್ಟ ಹಣ್ಣು ಸಿಹಿಯಾಗಲಿ, ಒಳ್ಳೆ ಸುದ್ದಿಯೇ ಬರಲಿ ಕಾದವರಿಗೆ
ಆಸೆ ಪಟ್ಟ ಹುಡುಗಿಗೆ, ತಂದು ಮುಡಿಸಲಿ ಹುಡುಗ ಪರಿಮಳದ ಕೇದಿಗೆ
ಕಣ್ಣ ಕೆಂಪೆಲ್ಲ ತಿಳಿಯಾಗಲಿ, ಭಾಷ್ಪವೆಲ್ಲ ಮೀಸಲಿರಲಿ ಆನಂದಕೆ
ಅನ್ನವಿರಲಿ ಹಸಿದ ಹೊಟ್ಟೆಗಳಿಗೆ, ಕಾವಿರಲಿ ತಬ್ಬಲಿ ಮೊಟ್ಟೆಗಳಿಗೆ

ಒಲ್ಲದ ಒಪ್ಪಿಗೆಗಳ ನೀಡದಂತೆ ನನ್ನನ್ನು ಅಣಿಗೊಳಿಸು
ನಿರ್ಧಾರದ ಗಳಿಗೆಗಳಲಿ ಮನಸನ್ನು ಗಟ್ಟಿಗೊಳಿಸು
ಕನಸುಗಳನ್ನು ಗುರಿಗಳನ್ನಾಗಿಸುವ ಛಲ ತೊಡಿಸು
ಕವಿತೆಗಳನು ಕವಿಸಮಯಕೇ ಬಿಟ್ಟು ವಾಸ್ತವದಲ್ಲಿ ಬದುಕುವುದ ಕಲಿಸು


ತುಂಬು ಪ್ರೀತಿ,

-ಸುಶ್ರುತ ದೊಡ್ಡೇರಿ

Friday, April 08, 2011

ಎಮ್ಮೆಬಸ್ಸು ಎಂಬ ಪುಷ್ಪಕ ವಿಮಾನ

‘ಫಸ್ಟ್ ಇಂಪ್ರೆಷನ್ ಈಸ್ ದ ಬೆಸ್ಟ್ ಇಂಪ್ರೆಷನ್’ ಎಂಬ ಅದ್ಯಾವುದೋ ಪುಣ್ಯಾತ್ಮ ಮಾಡಿದ ಗಾದೆ ನಮ್ಮೂರ ಬಸ್ಸುಗಳಿಗೂ ಅನ್ವಯಿಸುತ್ತದೆ. ಕಿತ್ತುಹೋಗಿರೋ ಟಾರು ರಸ್ತೆಯಲ್ಲಿ ಗಂಟೆಗೊಂದರಂತೆ ಹಾರನ್ ಮಾಡಿಕೊಂಡು ಚಲಿಸುವ ನಮ್ಮೂರ ಬಸ್ಸುಗಳು ಜನಮನ ಪ್ರೀತಿ ಗಳಿಸಿರುವುದು ತಮ್ಮ ಮೂಲ ಹೆಸರುಗಳೊಂದಿಗೆ. ಹಾಳಾದ ರಸ್ತೆಯಿಂದಾಗಿ ಪದೇಪದೇ ರಿಪೇರಿಗೆ ಬಂದು ಜೇಬಿಗೆ ಸಂಚಕಾರ ತರುವುದಕ್ಕೋ, ಜನರೆಲ್ಲ ಶ್ರೀಮಂತರಾಗಿ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡತೊಡಗಿ ಕಲೆಕ್ಷನ್ ಸರಿಯಾಗಿ ಆಗದಿರುವುದಕ್ಕೋ ಅಥವಾ ಗ್ರಹಚಾರ ಸರಿಯಿಲ್ಲದೆ ಮತ್ತೆಮತ್ತೆ ಅಪಘಾತಗಳಿಗೆ ಈಡಾಗುವುದಕ್ಕೋ ಬೇಸತ್ತು, ಯಾಕೋ ಈ ರೂಟೇ ಸರಿಯಿಲ್ಲ ಅಂತ ಅದರ ಓನರ್ರು ತೀರ್ಮಾನಿಸಿ ಬಸ್ಸಿನ ಸಮೇತ ರೂಟಿನ ಲೈಸೆನ್ಸನ್ನೂ ಮತ್ಯಾರಿಗೋ ಮಾರಾಟ ಮಾಡಿ ಕೈ ತೊಳೆದುಕೊಳ್ಳುವುದು ಒಂದು ವಾರ್ಷಿಕ ವಾಡಿಕೆಯೇ ಆಗಿತ್ತು. ಆದರೆ ಈ ಅರಿವೇನು ಪ್ರಯಾಣಿಕರಿಗೆ ಆಗುತ್ತಿರಲಿಲ್ಲ. ಬಸ್ಸು ಬರಬೇಕಾದ ಸಮಯಕ್ಕೆ ಬರುತ್ತಿತ್ತು, ಕೈ ಮಾಡಿದಲ್ಲಿ ನಿಲ್ಲುತ್ತಿತ್ತು, ಹತ್ತಿಸಿಕೊಂಡು ಹೋಗುತ್ತಿತ್ತು. ಕಾಲು-ಅರ್ಧಗಂಟೆ ಹೆಚ್ಚುಕಮ್ಮಿಯಾಗುವುದಕ್ಕೆಲ್ಲ ಪ್ರಯಾಣಿಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಈ ಓನರ್ ಬದಲಾದಾಗ ಬಸ್ಸಿನ ಬಣ್ಣ ಮತ್ತು ಹೆಸರೂ ಬದಲಾಗುತ್ತಿತ್ತು. ‘ಶ್ರೀ ಲಕ್ಷ್ಮೀ ಟ್ರಾವೆಲ್ಸ್’ ಇದ್ದುದು ‘ಶ್ರೀ ಶಿವಪ್ರಕಾಶ್ ಮೋಟಾರ್ಸ್’ ಆಯಿತು, ‘ಶ್ರೀ ಮಲ್ಲಿಕಾರ್ಜುನ ಎಕ್ಸ್‌ಪ್ರೆಸ್’ ಇದ್ದುದು ‘ಶ್ರೀ ಗಣೇಶ್ ಪ್ರಸಾದ್’ ಆಯಿತು, ‘ಶ್ರೀ ಕೃಷ್ಣಾ ಟ್ರಾನ್ಸ್‌ಪೋರ್ಟ್ಸ್ ಸರ್ವೀಸಸ್’ ಇದ್ದುದು ‘ಶ್ರೀ ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ಸ್’ ಆಯಿತು. ಆದರೆ ಜನ ಮಾತ್ರ ಅವುಗಳ ಮೂಲ ಹೆಸರನ್ನು ಬಿಟ್ಟುಕೊಡಲಿಲ್ಲ. ಲಕ್ಷ್ಮೀ ಬಸ್ಸು, ಮಲ್ಲಿಕಾರ್ಜುನ ಬಸ್ಸು, ಕೃಷ್ಣಾ ಬಸ್ಸು -ಹೀಗೆ ಅವು ತಮ್ಮ ಒರಿಜಿನಲ್ ಹೆಸರುಗಳಿಂದಲೇ ಕರೆಯಲ್ಪಡುತ್ತಿದ್ದವು. ಇದೇ ಸಾಲಿಗೆ ಸೇರುವ ಮತ್ತೊಂದು ಬಸ್ಸು ‘ಎಮ್ಮೆಬಸ್ಸು’.

ಈ ಎಮ್ಮೆಬಸ್ಸಿನ ನಿಜವಾದ ಹೆಸರು ‘ಶ್ರೀ ಎಮ್.ಎಮ್.ಎಸ್. ಅಂಡ್ ಎಸ್.ಟಿ.ಎ.’ ಎಂದು. ಇದರ ಲಾಂಗ್‌ಫಾರ್ಮು ಕಂಡುಹಿಡಿಯಲು ನಾವೊಂದಷ್ಟು ಹುಡುಗರು ಆಗ ಜಾಸೂಸಿ ಮಾಡಿದ್ದುಂಟು. ಎಮ್.ಎಮ್.ಎಸ್. ಎಂದರೆ ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ಎಂದೇನೋ ಕಂಡುಹಿಡಿದೆವು. ಆದರೆ ಈ ಎಸ್.ಟಿ.ಎ. ಎಂದರೇನೆಂದು ತಿಳಿಯಲೇ ಇಲ್ಲ. ಕಂಡಕ್ಟರ್ ಬಳಿ ಕೇಳಿದರೆ, ಇನ್ನೂ ಶಾಲಾಬಾಲಕರಾಗಿದ್ದ ನಮ್ಮನ್ನು ‘ಅದೆಲ್ಲ ನಿಮಗ್ಯಾಕ್ರೋ?’ ಅಂತ ಹೆದರಿಸಿಬಿಟ್ಟರು. ಜನ ಮಾತ್ರ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಶಿಸ್ತಾಗಿ, ಸಿಂಪಲ್ಲಾಗಿ ಅದನ್ನು ‘ಎಮ್ಮೆಬಸ್ಸು’ ಅಂತ ಕರೆದುಬಿಟ್ಟರು! ಅದರ ಓನರ್ರೂ ಬದಲಾಗಿ, ಹೆಸರೂ ಅನೇಕ ಸಲ ಬದಲಾದರೂ ಜನರ ಬಾಯಲ್ಲಿ ಅದು ಇನ್ನೂ ಎಮ್ಮೆಬಸ್ಸಾಗಿಯೇ ಉಳಿದುಕೊಂಡಿದೆ.

ಈ ಎಮ್ಮೆಬಸ್ಸು ನಮ್ಮೂರಿಗೆ ಸಾಗರದಿಂದ ಬರುವ ಕೊನೆಯ ಬಸ್ಸು. ಪೇಟೆಗೆ ಹೋದವರೆಲ್ಲ ಅದೆಷ್ಟೇ ಕೆಲಸವಿದ್ದರೂ ಮುಗಿಸಿಕೊಂಡು ಈ ಎಮ್ಮೆಬಸ್ಸಿಗೆ ಹತ್ತಿಕೊಳ್ಳಬೇಕು. ಅದಿಲ್ಲದಿದ್ದರೆ ದೂರದ ಉಳವಿಯಿಂದ ಕತ್ತಲ ರಾತ್ರಿಯಲ್ಲಿ ನಡೆದುಕೊಂಡು ಬರಬೇಕಾಗುತ್ತದೆ. ಎಮ್ಮೆಬಸ್ಸು ಸಾಗರದಿಂದ ರಾತ್ರಿ ಎಂಟೂ ಮುಕ್ಕಾಲಿಗೆ ಹೊರಡುತ್ತದೆ. ಸಂತೆಗೆ ಹೋದವರು, ಮಂಡಿ ಕೆಲಸಕ್ಕೆ ಹೋದವರು, ನೆಂಟರ ಮನೆಗೆ ಹೋದವರು, ಸಿನೆಮಾಗೆ ಹೋದವರು -ಎಲ್ಲಾ ತರಾತುರಿಯಲ್ಲಿ ಓಡಿಬಂದು ಬಸ್ ಹತ್ತಿ ನಿಟ್ಟುಸಿರು ಬಿಡುವರು. ಮೇನ್ ಬಸ್‌ಸ್ಟಾಂಡಿನಿಂದ ಹೊರಟುಹೋಗಿದ್ದರೂ ಹೊಳೆ ಬಸ್‌ಸ್ಟಾಂಡ್ ಬಳಿ ಈ ಬಸ್ ಐದು ನಿಮಿಷ ನಿಲ್ಲುತ್ತಿದುದರಿಂದ ಜನ ಆಟೋ ಮಾಡಿಸಿಕೊಂಡಾದರೂ ಇಲ್ಲಿಗೆ ಬಂದು ಬಸ್ ಹಿಡಿಯುವರು. ಸಂತೆ ಮುಗಿಸಿ ಬಂದವರ ಚೀಲದಿಂದ ಮೂಲಂಗಿಗಿಡ, ಕೊತ್ತಂಬರಿ ಕಟ್ಟುಗಳು ಇಣುಕುತ್ತಿದ್ದರೆ, ಮಂಡಿಗೆ ಹೋಗಿಬಂದವರ ಜೇಬು ನೋಟಿನಿಂದ ಉಬ್ಬಿರುತ್ತಿತು. ನೆಂಟರ ಮನೆಯಿಂದ ಬಂದವರ ಚೀಲದಲ್ಲಿ ಸಿಹಿತಿಂಡಿಗಳಿದ್ದರೆ ಸಿನೆಮಾ ನೋಡಿ ಬಂದವರ ಮೊಗದಲ್ಲಿ ಭಾರಿ ಗಮ್ಮತ್ತು. ಈ ಎಮ್ಮೆಬಸ್ಸಿಗೆ ಸಾಗರದ ಅಂಗಡಿ, ಮಂಡಿ, ಬ್ಯಾಂಕುಗಳಿಗೆ ಕೆಲಸಕ್ಕೆ ಹೋಗುವ ಒಂದಷ್ಟು ಖಾಯಂ ಪ್ರಯಾಣಿಕರೂ, ಒಂದಷ್ಟು ಕುಡುಕರೂ ಇರುತ್ತಿದ್ದರು. ಬಾಯಿಂದ ಘಮ್ಮನೆ ಪರಿಮಳ ಹೊಮ್ಮಿಸುತ್ತ ಬಿ.ಎಚ್. ರೋಡಿನಲ್ಲಿ ಹತ್ತುತ್ತಿದ್ದ ಈ ಕುಡುಕರನ್ನು ಕಂಡಕ್ಟರು ಕೊನೆಯ ಸೀಟಿನಲ್ಲಿ ಕೂರಿಸುತ್ತಿದ್ದ. ಈ ಬಸ್ಸಿನ ತುಂಬ ದಿನವೆಲ್ಲ ಅಡ್ಡಾಡಿ ಸುಸ್ತಾದ ಪ್ರಯಾಣಿಕರೇ. ಇವರೆಲ್ಲ ಕೂತೋ, ನಿಂತೋ, ಜೋತಾಡುತ್ತಲೋ ತೂಕಡಿಸುತ್ತಿದ್ದರು. ತಮ್ಮೂರಿನ ಹೆಸರನ್ನು ಕ್ಲೀನರ್ ಹುಡುಗ ಜೋರಾಗಿ ಕೂಗುತ್ತಿದ್ದಂತೆಯೇ ಎಚ್ಚರಾಗಿ ಲಘುಬಗೆಯಿಂದ ತಮ್ಮ ಚೀಲದ ಸಮೇತ ಕೆಳಗಿಳಿಯುತ್ತಿದ್ದರು.

ಎಮ್ಮೆಬಸ್ಸಿಗೆ ಬರುವ ಪ್ರಯಾಣಿಕರಲ್ಲಿ ಸಾಗರದ ಸಂಪೂರ್ಣ ಸುದ್ದಿ ಇರುತ್ತಿತ್ತು. ಮಂಡಿಯಲ್ಲಿ ಅಡಿಕೆಯ ರೇಟು ಎಷ್ಟಾಯಿತು, ಈರುಳ್ಳಿ ರೇಟು ಕಮ್ಮಿಯಾಯಿತಾ, ಅದೇನೋ ಗಲಾಟೆಯಂತೆ ಹೌದಾ, ನಾಳೆ ಬಂದ್ ಮಾಡ್ತಾರಂತಾ, ಓಸಿ ನಂಬರ್ ಎಷ್ಟು -ಹೀಗೆ. ಅಡಿಕೆ ಬೇಯಿಸುತ್ತ ಅಲ್ಲೇ ಚಳಿ ಕಾಯಿಸುತ್ತ ಕೂತ ಮಂದಿಗೆ, ಕಣ ಕಾಯಲು ಲಾಟೀನು ಹಿಡಿದು ಹೊರಟವರಿಗೆ, ಪಕ್ಕದ ಮನೆಯಿಂದ ಟೀವಿ ನೋಡಿ ಹೊರಬೀಳುತ್ತಿದ್ದವರಿಗೆ -ಈ ಬಾತ್ಮೀದಾರ ಎಲ್ಲ ವರದಿ ನೀಡಿಯೇ ಮುಂದುವರೆಯಬೇಕು. ಸ್ಟ್ರೀಟ್‌ಲೈಟ್ ಬೆಳಕಿನಲ್ಲಿ ಕಂಗೊಳಿಸುತ್ತ, ಕಪ್ಪು ಭೂತದಂತೆ ಬ್ಯಾಟರಿ ಬಿಟ್ಟುಕೊಂಡು ನಡೆದು ಬರುತ್ತಿರುವ ಇಂತಹ ವಕ್ತಾರರಿಗಾಗಿಯೇ ಕಾಯುತ್ತ ಊರ ಜನ ಕಟ್ಟೆ ಮೇಲೆ ಕೂತಿರುವರು.

ಎಮ್ಮೆಬಸ್ಸಿಗೆ ಸಂಬಂಧಿಸಿದ ಮತ್ತೊಂದು ಮಜಾ ವಿಷಯವೆಂದರೆ, ಈ ಬಸ್ಸಿಗೆ ಹೆಂಗಸರೇನಾದರೂ ಬರುವವರಿದ್ದರೆ ಅವರನ್ನು ಕರೆದುಕೊಂಡು ಬರಲು ಬ್ಯಾಟರಿ ಹಿಡಿದು ಗಂಡಸರು ಹೋಗಬೇಕಿದ್ದುದು. ಈ ರಾತ್ರಿಹೊತ್ತು ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಹೋಗುವ ಕಲ್ಪನೆಯೇ ಥ್ರಿಲ್ಲಿಂಗ್ ಆಗಿರುತ್ತಿತ್ತು. ಚಿಕ್ಕವನಿದ್ದಾಗ ಅಜ್ಜನ ಮನೆಗೆ ಹೋಗಿರುತ್ತಿದ್ದ ನಾನು, ಅಮ್ಮನೊಂದಿಗೆ ವಾಪಸು ಈ ಬಸ್ಸಿಗೇ ಬರುವಂತಹ ಸಂದರ್ಭವೇನಾದರೂ ಬಂದರೆ, ಅಪ್ಪ ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಬಂದಿರುತ್ತಿದ್ದ. ಅಷ್ಟೊತ್ತಿನತನಕ ಬಸ್ಸಿನೊಳಗೆ ಬೆಳಕಿನಲ್ಲಿ, ಸ್ಪೀಕರಿನಿಂದ ತೇಲಿಬರುತ್ತಿದ್ದ ಯಾವುದೋ ಸಿನೆಮಾ ಹಾಡಿನ ಲಹರಿಯಲ್ಲಿ, ಅಮ್ಮನ ಪಕ್ಕ ಬೆಚ್ಚಗೆ ಕೂತಿರುತ್ತಿದ್ದ ನನಗೆ, ಊರು ಬಂದು ಬಸ್ಸಿಳಿಯುತ್ತಿದ್ದಂತೆ, ಎಲ್ಲಾ ಕಡೆ ಕತ್ತಲೆಯೇ ಆವರಿಸಿ ಹೆದರಿಕೆಯಾಗುತ್ತಿತ್ತು. ಕತ್ತಲ ಕೂಪದಲ್ಲಿ ನಮ್ಮನ್ನು ಬಿಟ್ಟು, ಕಂಡಕ್ಟರು ‘ರೈಟ್’ ಅಂದದ್ದೇ ಬೆಳಕಿನ ಪೆಟ್ಟಿಗೆಯಂತೆ ಮುಂದೆ ಸಾಗಿಹೋಗುತ್ತಿದ್ದ ಬಸ್ಸು, ನನಗೆ ಪುಷ್ಪಕ ವಿಮಾನದಂತೆ ಕಾಣಿಸುತ್ತಿತ್ತು. ಥೇಟರಿನಿಂದ ಹೊರಬಿದ್ದಾಗ ನಿಜಲೋಕಕ್ಕೆ ಹೊಂದಿಕೊಳ್ಳಲು ಆಗುವ ಕಷ್ಟದಂತೆ ಈ ಕತ್ತಲಿಗೆ ಹೊಂದಿಕೊಳ್ಳಲು ಕೆಲಕ್ಷಣಗಳೇ ಹಿಡಿಯುತ್ತಿದ್ದವು. ನಮ್ಮನ್ನು ಕರೆದುಕೊಂಡು ಹೋಗಲು ಬಂದಿರುತ್ತಿದ್ದ ಅಪ್ಪ, ಆಗ ನಮ್ಮ ಮುಖಕ್ಕೇ ಬ್ಯಾಟರಿ ಬಿಟ್ಟು ನಾವೇ ಹೌದು ಅಂತ ಕನ್‌ಫರ್ಮ್ ಮಾಡಿಕೊಂಡು, ನನ್ನ ಕೈಹಿಡಿದು ಊರಿನ ಇಳಕಲು ಇಳಿಸುತ್ತಿದ್ದ. ದೆವ್ವಭೂತಗಳು ಅಕ್ಕಪಕ್ಕದ ಮರ-ಮಟ್ಟಿಗಳಲ್ಲಿ ಕೂತು ಹಾಯ್ ಎನ್ನುತ್ತಿದ್ದ ಈ ಚಳಿಯ ರಾತ್ರಿ ನಾನು ಅಪ್ಪನ ಕೈ ಗಟ್ಟಿಯಾಗಿ ಹಿಡಿದು ನಡುಗುತ್ತಾ ಮನೆ ಸೇರುತ್ತಿದ್ದೆ. ಇದೇ ಎಮ್ಮೆಬಸ್ಸಿಗೆ ಬರುವ ಅತ್ತಿಗೆಯನ್ನು ಕರೆತರಲು ನಾನೊಬ್ಬನೇ ಯಾವತ್ತು ಬಸ್‌ಸ್ಟಾಂಡಿಗೆ ಹೋದೆನೋ ಅವತ್ತೇ ನಾನು ಭಯ ಗೆದ್ದ ಶೂರನಾದೆ. ನನಗೆ ನಾನೇ ‘ದೊಡ್ಡವನಾದೆ ಮಗನೇ’ ಎಂದುಕೊಂಡೆ.

ಹಿಂದೊಂದು ಕಾಲದಲ್ಲಿ, ನಮ್ಮೂರ ಕಡೆ ಕಾಡು ದಟ್ಟವಾಗಿದ್ದ ದಿನಗಳಲ್ಲಿ, ಈ ಕೊನೆಯ ಬಸ್ಸಿಗೆ ಬರಲು ಹೆಂಗಸರೇನು, ಗಂಡಸರೂ ಭಯ ಪಡುತ್ತಿದ್ದರಂತೆ. ‘ಇಲ್ಲೆಲ್ಲ ಇಷ್ಟೆಲ್ಲ ಮನೆ ಇರ್ಲೆ. ಊರಿಗೆ ಇದ್ದಿದ್ದು ಬರೀ ನಾಲ್ಕೇ ಮನೆ. ರಸ್ತೆ ಎಡಬಲಕ್ಕೂ ಎತ್ತೆತ್ತರದ ಮರಗಳು, ದಟ್ಟ ಮಟ್ಟಿ ಇದ್ದಿದ್ದ. ಹುಲಿ, ಕಾಡೆಮ್ಮೆ ಎಲ್ಲಾ ಓಡಾಡ್ತಿದ್ದ. ಒಂದ್ಸಲ ಹುಲಿ ಗುರ್‌ಗುಟ್ಟಿದ್ದು ಕೇಳ್ಚು ಅಂದ್ರೆ, ಎದೆಯೆಲ್ಲ ಥರಗುಟ್ಟಿಹೋಗ್ತಿತ್ತು. ಅಲ್ದೇ ಗುಡುಸ್ಲು ಮಾವಿನಮರದ ಹತ್ರ ಬರ್ತಿದ್ದಂಗೇ ಸಾಲಾಗಿ ಕೊಳ್ಳಿದೆವ್ವ ಹೋಗ್ತಿರೋದು ಕಾಣ್ತಿತ್ತು, ಹೆಂಗೆ ಗೊತಿದಾ? ಗಾಯತ್ರಿ ಬಲದಮೇಲೇ ಜೀವ ಹಿಡ್ಕಳಕ್ಕಾಗಿತ್ತು. ಗುಡುಸ್ಲು ಮಾರೆಮ್ಮಂಗೆ ಹಣ್‌ಕಾಯಿ ಹೇಳಿಕೊಂಡಮೇಲೇ, ಅವು ದಾರಿ ಬಿಟ್ಟುಕೊಡ್ತಿದ್ದದ್ದು’ ಅಂತ ಅಜ್ಜ ಹೇಳುವಾಗ, ಇಂತಹ ಅನುಭವಗಳಿಗ್ಯಾವುದಕ್ಕೂ ಫಕ್ಕಾಗದ ನನ್ನ ಬಗ್ಗೆ ನನಗೇ ಬೇಸರವಾಗುತ್ತಿತ್ತು. ಅಷ್ಟೇ ಅಲ್ಲ, ಆಗಿನ ಜನಗಳ ಮೌಢ್ಯವೋ, ನಂಬಿಕೆಯ ಪರಾಕಾಷ್ಠೆಯೋ ಅಥವಾ ಎಲ್ಲವನ್ನೂ ಉತ್ಪ್ರೇಕ್ಷಿಸಿ ಹೇಳುವ ಅವರ ಕಥೆಗಾರಿಕೆಯ ಬಗೆಯೋ, ಸಾಗರದಿಂದ ಬರುವ ಈ ಕೊನೇಬಸ್ಸು ಪಡವಗೋಡಿನ ಬಳಿಯ ಒಂದು ಭೂತದಕಲ್ಲಿನ ಬಳಿ ಪ್ರತಿದಿನ ಆಫ್ ಆಗಿ ನಿಂತುಬಿಡುತ್ತಿತ್ತಂತೆ! ಡ್ರೈವರೂ ಕಂಡಕ್ಟರೂ ಇಳಿದುಹೋಗಿ, ತೆಂಗಿನಕಾಯಿ ಒಡೆದು, ಉದ್ದಂಡ ನಮಸ್ಕಾರ ಹಾಕಿಬಂದಮೇಲೇ ಬಸ್ಸು ಮುಂದೆ ಹೋಗುತ್ತಿದ್ದುದಂತೆ! ಅದಿಲ್ಲವೆಂದರೆ ತಿಪ್ಪರಲಾಗ ಹೊಡೆದರೂ ಬಸ್ಸು ನಿಂತಲ್ಲಿಂದ ಕದಲುತ್ತಿರಲಿಲ್ಲವಂತೆ! ಅದೇ ನಂಬಿಕೆ ಮುಂದುವರೆದುಬಂದು, ಈಗ ಆ ಕಲ್ಲಿನ ಸುತ್ತ ಒಂದು ಗುಡಿಯನ್ನೇ ಕಟ್ಟಲಾಗಿದೆ. ಅದರ ಬಳಿ ಈಗಲೂ ಕೆಲ ಬಸ್ಸುಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಿ ಮುಂದುವರೆಯುತ್ತಾರೆ.

ಈ ಎಮ್ಮೆಬಸ್ಸಿಗೆ ಒಮ್ಮೊಮ್ಮೆ ಅಚಾನಕ್ ನೆಂಟರು ಬಂದುಬಿಡುತ್ತಿದ್ದರು. ಫೋನಿನ್ನೂ ನಮ್ಮ ಮನೆಗೆ ಬಂದಿಲ್ಲದ ಕಾಲದಲ್ಲಿ ಆಗಂತುಕರಂತೆ ಬಂದಿಳಿಯುತ್ತಿದ್ದ ಇವರು, ಶಾಲೆಗೆ ಧಾಳಿಯಿಡುವ ಇನ್ಸ್‌ಪೆಕ್ಟರಂತೆ ಭಾಸವಾಗುತ್ತಿದ್ದರು. ಆಗಷ್ಟೆ ಊಟ ಮುಗಿಸಿ, ಕಸಮುಸುರೆ ಮುಗಿಸಿ ಮಲಗಲಣಿಯಾಗುತ್ತಿದ್ದ ನಮಗೆ ಈಗ ಇವರನ್ನು ಉಪಚರಿಸಲೇಬೇಕಾದ ಅನಿವಾರ್ಯತೆ. ಅವರಾದರೂ, ತಮ್ಮ ಊರಿಗೆ ಹೋಗಬೇಕಿದ್ದ ಬಸ್ ಬಾರದೆಯೋ, ಕೆಟ್ಟುಹೋಗಿಯೋ, ತಪ್ಪಿಹೋಗಿಯೋ ಆಗಿ, ಮತ್ಯಾವುದೇ ಗತ್ಯಂತರವಿರದೇ ನಮ್ಮಲ್ಲಿಗೆ ಬಂದವರಾಗಿರುತ್ತಿದ್ದರು. ಇವರಿಗೆ ಅನೇಕ ಸಲ ಊಟವಾಗಿರುತ್ತಿರಲಿಲ್ಲ. ಆಗ, ಇವರಿಗಾಗಿ ನಾವು ಹೊಸದಾಗಿ ಅಡುಗೆ ಮಾಡಿ ಬಡಿಸಬೇಕಿತ್ತು. ಅಮ್ಮ ಅಸಹನೆಯಿಂದಲೇ ಮತ್ತೆ ಅಡುಗೆಮನೆ ಪ್ರವೇಶಿಸುತ್ತಿದ್ದಳು.

ಹೇಗೆ ಎಮ್ಮೆಬಸ್ಸಿಗೆ ಆಗಂತುಕರು ಬಂದಾಗ ಅಸಹನೆಯಾಗುತ್ತಿತ್ತೋ ಹಾಗೇ ಈ ಬಸ್ಸಿಗೆ ಬರಬೇಕಾದವರು ಬಾರದಿದ್ದರೆ ಆತಂಕವಾಗುತ್ತಿತ್ತು. ಪೇಟೆಗೆ ಹೋಗಿದ್ದ ಅಪ್ಪ, ತವರಿಗೆ ಹೋಗಿದ್ದ ಅಮ್ಮ, ಕಾಲೇಜಿಗೆ ಹೋಗಿದ್ದ ಅತ್ತಿಗೆ ಅಥವಾ ಬರುತ್ತೇನೆ ಎಂದು ಫೋನಿಸಿದ್ದ ಯಾರೋ ನೆಂಟರು -ಬಾರದೇ ಹೋದಾಗ ಮನೆಮಂದಿಗೆಲ್ಲ ಟೆನ್ಷನ್ ಶುರುವಾಗುತ್ತಿತ್ತು. ಎಮ್ಮೆಬಸ್ಸು ಮುಂಚೆಯೇ ಬಂತೇ, ಬಸ್ ತಪ್ಪಿಸಿಕೊಂಡರೇ, ಬಸ್ಸಿನಲ್ಲಿ ನಿದ್ರೆ ಬಂದು ಸ್ಟಾಪ್ ತಪ್ಪಿಹೋಯಿತೇ, ಆಗಲೇ ಸದ್ದು ಮಾಡುತ್ತ ಹೋದದ್ದು ಬಸ್ ಅಲ್ಲ ಲಾರಿಯೇ -ಹೀಗೆ ಒಬ್ಬೊಬ್ಬರೂ ತಮಗೆ ತಿಳಿದಂತೆ ಆಲೋಚಿಸುತ್ತ ಆತಂಕದ ಶಮನದಲ್ಲಿ ಮಗ್ನರಾಗಿರುತ್ತಿದ್ದೆವು.

ನಮ್ಮೆಲ್ಲರ ಚಿಂತೆಯನ್ನು ನಿವಾರಿಸುವಂತೆ ಎಮ್ಮೆಬಸ್ಸು ಅಂದು ತಡವಾಗಿ ಬರುತ್ತಿತ್ತು. ನಮ್ಮೂರ ಬಸ್‌ಸ್ಟಾಂಡ್ ಬಳಿ ರಾಗವಾಗಿ ಹಾರನ್ ಮಾಡುತ್ತಿತ್ತು. ನಮ್ಮ ಮನೆಗೆ ಬರಬೇಕಾದವರನ್ನು ಸುರಕ್ಷಿತವಾಗಿ ಇಳಿಸುತ್ತಿತ್ತು. ಕ್ಲೀನರ್ ಹುಡುಗ ಹೊಡೆದ ಶೀಟಿ ಇಲ್ಲಿಯವರೆಗೂ ಕೇಳಿಸುತ್ತಿತ್ತು. ನಿದ್ದೆಗಣ್ಣ ಪ್ರಯಾಣಿಕರನ್ನು ತೂಗುತ್ತಾ ಕತ್ತಲನ್ನು ಬದಿಗೆ ಸರಿಸುತ್ತಾ ಕಿಟಕಿ-ಕಿಟಕಿಗಳಿಂದ ಬೆಳಕು ಚೆಲ್ಲುತ್ತಾ ಮಾಯಾಪೆಟ್ಟಿಗೆಯಂತೆ ಮುಂದೆ ಸಾಗುತ್ತಿತ್ತು.

[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ. ]

- - -
[ಈ ಪ್ರಬಂಧದಲ್ಲೊಂದು ತಪ್ಪಿದೆ.  ಎಮ್.ಎಮ್.ಎಸ್.ನ ಲಾಂಗ್‌ಫಾರ್ಮು  'ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ' ಅಲ್ಲ.  'ಮೊಹಮ್ಮದ್ ಮೀರ್ ಸಾಹೆಬ್' ಅಂತಲಂತೆ.  ಮತ್ತು ಎಸ್.ಟಿ.ಎ. ಎಂದರೆ  'ಸಾಗರ-ತೀರ್ಥಹಳ್ಳಿ-ಆಗುಂಬೆ'.  ಮೊಹಮ್ಮದ್ ಮೀರ್ ಎಂಬ ಸಾಗರದವರೊಬ್ಬರು ನಡೆಸುತ್ತಿದ್ದ ಈ ಬಸ್ಸು ಮೊದಲು ಸಾಗರ-ತೀರ್ಥಹಳ್ಳಿ-ಆಗುಂಬೆ ರೂಟಿನಲ್ಲಿ ಚಲಿಸುತ್ತಿತ್ತಂತೆ. ಬರೆದು ಕಳುಹಿಸಿಯಾದಮೇಲೆ ನನಗೆ ತಿಳಿದದ್ದು  ಇದು.]