-ಬೆಕ್ಕು-
ಮಾಳಬೆಕ್ಕೊಂದು ಬಾಗಿಲು ತೆರೆದಿರುವ ಸಮಯ ನೋಡಿ
ಸದ್ದಿಲ್ಲದೆ ಒಳಬಂದು ಮನೆಯನ್ನೆಲ್ಲ ಸುತ್ತಾಡಿ
ಬಂದ ದಾರಿಯಿಂದಲೇ ಹೊರಟುಹೋಯಿತು
ಅಡುಗೆಮನೆಯ ಕಟ್ಟೆಯ ಮೇಲೂ
ಊಟದಮನೆಯ ಮೇಜಿನ ಮೇಲೂ
ಚೂರೇ ತೆರೆದ ಕಪಾಟಿನೊಳಗೂ
ಏನೂ ಸಿಗಲಿಲ್ಲ ಅದಕ್ಕೆ
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಅಂತೇನು ಎಂದೂ ಅದನ್ನು ನಾನು ಆದರಿಸದಿದ್ದರೂ
ಸಾಧಾರಣ ದಿನಗಳಾಗಿದ್ದರೆ ಹಸಿದ ಮುಸುಡಿ ನೋಡಿ
ಒಂದು ಕುಡ್ತೆ ಹಾಲಾದರೂ ಕೊಡುತ್ತಿದ್ದೆ
ಒಮ್ಮೆ ಎತ್ತಿ ಆಡಿಸಿ ಬಿಡುತ್ತಿದ್ದೆ ಹೊರಗೆ
ಆದರೀಗ ಕೇಡುಗಾಲ, ಬೇಕೆಂದಾಗ ಬೀದಿಗಿಳಿವ ಹಾಗಿಲ್ಲ
ಇರುವ ಅರ್ಧ ಗಿಂಡಿ ಹಾಲನ್ನೇ ಕಾಪಾಡಿಕೊಳ್ಳಬೇಕು
ಮಧ್ಯಾಹ್ನದ ಚಹಾಕ್ಕೆ ಸಂಜೆಯ ಕಾಫಿಗೆ ರಾತ್ರಿ ಮಗಳಿಗೆ
ಉಳಿಸಬೇಕು ಬೊಗಸೆ ನಾಳೆಯ ಬೆಡ್ಕಾಫಿಗೆ
ಈ ಕಷ್ಟಕಾಲದಲ್ಲಿ ಇರುವುದನ್ನೇ
ಹಂಚಿ ಉಣ್ಣಬೇಕು ಎನ್ನುವರು
ಆದರೆ ಈ ಕಳ್ಳಬೆಕ್ಕನ್ನು ನಂಬುವುದು ಹೇಗೆ
ಯಾರ್ಯಾರ ಮನೆ ಹೊಕ್ಕು ಬಂದಿದೆಯೋ
ಎಂತೆಂಥ ಪ್ರದೇಶಗಳ ಪ್ರವೇಶಿಸಿ ಬಂದಿದೆಯೋ
ಎಂತೆಂಥವರು ಹಿಡಿದು ಮುದ್ದಿಸಿದ್ದಾರೋ
ಎಲ್ಲಿ ಸೋಂಕಿತರು ಎಲ್ಲಿ ಶಂಕಿತರು ಎಲ್ಲಿ ಗುಣಮುಖರು
ಎಲ್ಲರನ್ನೂ ಎಲ್ಲದನ್ನೂ ಶಂಕೆಯಿಂದಲೇ
ನೋಡುವಂತಾಗಿರುವ ಜೀವಭಯದ ಈ ದಿನಗಳಲ್ಲಿ
ಇಲ್ಲಾ, ಆ ಬೆಕ್ಕು ಒಳ್ಳೆಯದೇ ಇರಬಹುದು
ದುರುದ್ಧೇಶವೊಂದೂ ಇರಲಾರದು ಅದಕ್ಕೆ
ಸೊಕ್ಕೂ ಇಳಿದಿರಬಹುದು ಹಸಿವಿನ ಈ ಋತುವಿನಲ್ಲಿ
ಆದರೂ ಹಿಡಿ ಅನ್ನವಿಕ್ಕಲು ನಾನು ಮುಂದಾಗಲಿಲ್ಲ ಯಾಕೆ
ಮನೆ ಮಗಳು ಮಡದಿ ಮುಂದಿನ ದಿನಗಳು
ಭೀಕರ ದೃಶ್ಯಗಳೆಲ್ಲ ಕಣ್ಮುಂದೆ ಬಂದು
ಕೈ ನಡುಗಿ ಮನಸು ಹಿಂಜರಿದು ಹೆಜ್ಜೆ ಮುಂದಿಡದೆ
* * *
-ಪಾಪಪ್ರಜ್ಞೆ-
ಹಸಿದು ಬಂದ ಬೆಕ್ಕು ಹಸಿದುಕೊಂಡೇ ಹೊರಗೋಡಿತು
ಹಾಗೆ ಮನೆಬಾಗಿಲಿಗೆ ಬಂದವರಿಗೆ ಇಲ್ಲಾ
ಎನ್ನುವುದು ನಮ್ಮ ಸಂಸ್ಕೃತಿಯಲ್ಲ
ಅಯ್ಯೋ ಸಂಸ್ಕೃತಿ ಗಿಂಸ್ಕೃತಿಗಳ ಮಾತು ಬಿಡಿ ಸ್ವಾಮಿ
ಬದುಕಿಕೊಂಡರೆ ಸಾಕಾಗಿದೆ
ರಸ್ತೆ ತುಂಬಾ ಜನ
ಮುಕ್ತ ಸಂಚಾರ
ಮೈಮೇಲೇ ಎರಗುವ ಮಂದಿ
ಎಲ್ಲರಿಗೂ ಏನೇನೋ ಕಾರ್ಯಕಾರಣ
ಇವರ್ಯಾರನ್ನೂ ಎಂದೂ ತಡೆದಿರಲಿಲ್ಲ ನಾವು
ಈಗ ಏನಿದು ಪಿರಿಪಿರಿ
ನನ್ನ ಪ್ರಕಾರ ಅವರದು ತಪ್ಪು
ಅವರ ಪ್ರಕಾರ ನನ್ನದು ತಪ್ಪು
ಅರೆ, ಆ ಬೆಕ್ಕು ಎಲ್ಲಿ ಹೋಯಿತು
ಬಾಗಿಲಿನಿಂದ ಹೊರಗೋಡಿದ್ದು
ಸಣ್ಣ ಕಿಟಕಿಯಿಂದ ನುಸುಳಿ
ಹಾಗೇ ಕಟಾಂಜನ ಹತ್ತಿ
ಮೆ
ಟ್ಟಿ
ಲಿ
ಳಿ
ದು
ಪ್ಯಾರಾಪಿಟ್ಟಿನ ಪುಟ್ಟ ಕಟ್ಟೆಯಮೇಲೆ
ಹೆ ಜ್ಜೆ ಯ ಮೇ ಲೊಂ ದ್ಹೆ ಜ್ಜೆ ಯ ನಿ ಕ್ಕು ತ
ಮತ್ತೊಂದು ಮನೆಗೆ ಹೋಯಿತೇ
ಅಲ್ಲದಕ್ಕೆ ಆಹಾರ ಸಿಕ್ಕಿತೇ
ಮತ್ತೆ ರಸ್ತೆಗಿಳಿಯಿತೇ
ಈ ಜನಜಂಗುಳಿಯಲ್ಲಿ
ಸಾವಿರ ಕಾಲುಗಳ ನಡುವೆ ಜಾಗ ಮಾಡಿಕೊಂಡು
ನುಸುಳಿ ನುಸುಳಿ ನುಸುಳಿ
ಒಂದು ಮಾಳಬೆಕ್ಕು
ಈಗ ಮತ್ಯಾರದೋ ಮನೆಯೊಳಗೋ
ಅಥವಾ ತಿರುಗಿ ನನ್ನದೇ ಮನೆಯೊಳಗೋ
ಅಥವಾ ನನ್ನ ಮನದೊಳಗೋ
ಟೀವಿಯಲ್ಲಿ ದೃಶ್ಯಗಳು
ಉದ್ದುದ್ದ ಕ್ಯೂ ನಿಂತ ಮಂದಿ
ಅರ್ಧ ಲೀಟರು ಉಚಿತ ಹಾಲಿಗೆ
ಜನಧನ ಖಾತೆಯ ಐನೂರು ರೂಪಾಯಿಗೆ
ತವರಿಗೆ ತೆರಳುವ ಕನಸಿಗೆ
* * *
-ಚಾರಣ-
ಅನಿವಾರ್ಯವಿರಲಿಲ್ಲ
ಅವಶ್ಯಕತೆಯಂತೂ ಅಲ್ಲವೇ ಅಲ್ಲ
ಆದರೂ ನಡೆಯುತ್ತಿದ್ದೆವು ಭಾರಬ್ಯಾಗು ಬೆನ್ನಿಗೇರಿಸಿ
ದಣಿಯಲೆಂದೇ ನಡೆದದ್ದು
ಮಣಿಯಲೆಂದೇ ಬೆಟ್ಟವೇರಿದ್ದು
ಡೆಕತ್ಲಾನಿನಲ್ಲಿ ಕೊಂಡ ಶೂ
ಅಮೆಜಾನಿನಿಂದ ತರಿಸಿದ ಹೈಕಿಂಗ್ ಬ್ಯಾಗ್
ಉಪ್ಪು ಸೇರಿಸಿ ಹುರಿದ ಗೋಡಂಬಿ
ಚಪ್ಪರಿಸಲು ಮತ್ತಷ್ಟು ಕುರುಕಲು ತಿಂಡಿ
ಸುಸ್ತು ಮರೆಸಲು ಜೋಕು ದಂಡಿದಂಡಿ
ಆದರೆ ಒಂದು ಕೊರಗು ಉಳಿದೇ ಹೋಗಿತ್ತು
ಎಡಕುಮರಿಯ ಸುರಂಗಮಾರ್ಗದಲಿ ಹಾಯುವ
ಆ ಹಳಿಗಳ ಮೇಲೊಮ್ಮೆ ನಡೆಯಬೇಕೆಂಬುದು..
ಹಾಗೆಯೇ ದೂಧ್ಸಾಗರ್ ಜಲಪಾತವನ್ನು
ಹಳಿಗಳ ಮೇಲೆ ನಡೆದುಹೋಗಿಯೇ ನೋಡಬೇಕೆಂದು
ಇವತ್ತು ಪೇಪರಿನಲ್ಲಿ ಹೆಣಗಳು
ಹಳಿಗಳ ಮೇಲೆ ಮಲಗಿಯೇ ಜೀವ ಬಿಟ್ಟವರು
ಪಕ್ಕದಲ್ಲೊಂದಷ್ಟು ಒಣ ರೊಟ್ಟಿಚೂರು
ಅಲ್ಲಾ ಆ ಬೆಕ್ಕು ಬಯಸಿದ್ದಾದರೂ ಏನನ್ನ
ಒಂದು ಹಿಡಿ ಹಾಲು-ಅನ್ನ
ಇಷ್ಟಕ್ಕೂ ಅದು ಆ ಬೆಕ್ಕಿನ ಹಕ್ಕು:
ಅಷ್ಟೆಲ್ಲ ದಿನ ನನ್ನ ಮಗಳನ್ನು ಆಡಿಸಿದ್ದಕ್ಕೆ
ಮೃದುಮೈಯ ಬೆಚ್ಚನೆ ಸ್ಪರ್ಶ ಕೈಗೊದಗಿಸಿದ್ದಕ್ಕೆ
ಉಗುರಿನಿಂದೊಮ್ಮೆಯೂ ಪರಚದೆ ಬಿಟ್ಟಿದ್ದಕ್ಕೆ
ಏ ಸಾಕು ಬಿಡಿ ಗುರುಗಳೇ
ಅಷ್ಟೆಲ್ಲ ತಲೆಬಿಸಿ ಮಾಡ್ಕೊಂಡ್ರೆ ಹ್ಯಾಗೆ
ಉಂಡಾಡಿ ಜೀವ, ನಮ್ಮನೇಲಿಲ್ದಿದ್ರೆ ಮತ್ತೊಂದ್ಮನೆ
ಹಿಂಗೇ ಮುಂದುವರೆದ್ರೆ ನಮ್ ಲೈಫೂ ಕಷ್ಟಾನೇ ಇದೆ
ನಾವು ಯಾರ ಮನೆ ಬಾಗಿಲಿಗೆ ಹೋಗೋಣ
ತಳುಕು ಹಾಕ್ಬೇಡಿ ಹಾಗೆಲ್ಲ ಯಾವುದನ್ನು ಯಾವುದಕ್ಕೋ
* * *
-ಪ್ರಾರ್ಥನೆ-
ಇಂದಿನಿಂದ ದೇವಾಲಯಗಳಲ್ಲಿ ಆನ್ಲೈನ್ ದರ್ಶನ
ಅವರವರ ಮನೆಯಿಂದಲೆ ನೈವೇದ್ಯ
ಯುಪಿಐ ಮೂಲಕ ಕಾಣಿಕೆ
ಕೊರಿಯರಿನಲ್ಲಿ ಪ್ರಸಾದ
ಮೃಗಖಗಾದಿಗಳಿಗೆಲ್ಲ ಅಲ್ಲಲ್ಲೆ ಆಹಾರವಿತ್ತ
ಕಾಗಿನೆಲೆಯಾದಿಕೇಶವರಾಯನೇ,
ಇದನೆಲ್ಲ ಬೇಗ ಮುಗಿಸು
ಆ ಬೆಕ್ಕು ಹಸಿವಿನಿಂದ ಕಂಗೆಡದಿರಲಿ
ಕಳುಹಿಸಿಕೊಡು ಶ್ರಮಿಕ ಎಕ್ಸ್ಪ್ರೆಸ್ಸಿನಲ್ಲಿ ಹೇಗಾದರೂ
ಕೊನೆಗೊಳಿಸು ಈ ಶಂಕಾಪ್ರವೃತ್ತಿಯ ನನ್ನಿಂದ
ಹಾರ್ದಿಕ ನಗುವ ಮರಳಿಸು ಎದೆಯೊಳಗೆ
ಹಂಚಿ ತಿನಲುಗೊಡು ಸಹಪಂಕ್ತಿಯಲಿ ಕೂತು ಇದ್ದದ್ದ.
Tuesday, May 26, 2020
Wednesday, April 22, 2020
ಬೇರೆ ವಿಶೇಷಗಳೇ ಇಲ್ಲದ ದಿನಗಳಲ್ಲಿ..
ಪ್ರಿಯ ದೋಸ್ತಾ,
ನಾನೂ-ನೀನೂ ಒಟ್ಟಿಗೇ ಈ ನಗರಕ್ಕೆ ಬಂದಿದ್ದು. ಅರೆಬರೆ ಓದಿಕೊಂಡು, ಹಸಿಬಿಸಿ ಮೆತ್ತಿಕೊಂಡು,
ಹುಸಿಧೈರ್ಯ ತುಂಬಿಕೊಂಡು ಮುಖ್ಯ ನಿಲ್ದಾಣದಲ್ಲಿ ಬಸ್ಸಿನಿಂದಿಳಿದಿದ್ದು ಬಗಲ ಚೀಲಗಳ ಸಮೇತ.
ಆಗಷ್ಟೆ ತೆರೆದುಕೊಳ್ಳುತ್ತಿದ್ದ ಮುಂಜಾನೆ. ಸೂರ್ಯಕಿರಣಗಳು ನಿಲ್ದಾಣದ ಮೇಲ್ಚಾವಣಿಯ
ಚುಂಬಿಸುತ್ತಿದ್ದವು. ಸಿಟಿಬಸ್ಸುಗಳು ದಿನದ ಮೊದಲ ಸುತ್ತಿಗೆ ಹೊರಡಲು ಅಣಿಯಾಗಿದ್ದವು.
ಮೂಲೆಯಂಗಡಿಯ ಚಹಾದ ಬೋಗುಣಿಯಿಂದೆದ್ದ ಹಬೆ ಅದರ ಸೊಗಡನ್ನು ಎಲ್ಲೆಡೆ ಹರಡುತ್ತಿತ್ತು. ಹುರುಪಿನಲ್ಲಿದ್ದ
ಕಂಡಕ್ಟರು-ಡ್ರೈವರುಗಳು ಅದಾಗಲೇ ಶುರುವಾಗಿದ್ದ ಗಿಜಿಗಿಜಿಯ ಚದುರಿಸುವಂತೆ ತಮ್ಮ ಬಸ್ಸುಗಳ ಹಾದಿಯನ್ನು
ಉಚ್ಛಕಂಠದಲ್ಲಿ ಉಚ್ಛರಿಸುತ್ತಾ ಆಹ್ವಾನಿಸುತ್ತಿದ್ದರು.
ಹಾಗೆ ನಾವು ಬಂದಿಳಿದಾಗ ನಮಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಮಹಾನಗರ
ಎಂದರೇನು, ಸಿಗ್ನಲ್ಲಿನಲ್ಲಿ ರಸ್ತೆ ದಾಟುವುದು ಎಂದರೇನು,
ಸಿಟಿಬಸ್ಸುಗಳಲ್ಲಿ ಸಂಚರಿಸುವುದು ಹೇಗೆ, ನಾವಿಳಿಯಬೇಕಾದ ನಿಲ್ದಾಣವ ಪತ್ತೆ ಹಚ್ಚುವುದು
ಹೇಗೆ,
ಎಲ್ಲಿ ಉಳಕೊಳ್ಳುವುದು, ಕೆಲಸ ಹುಡುಕುವುದು ಹೇಗೆ, ಇಂಟರ್ವ್ಯೂಗಳನ್ನು ಎದುರಿಸುವುದು
ಹೇಗೆ,
ಸಂಬಳಕ್ಕಾಗಿ ದುಡಿಯುವುದು ಎಂದರೇನು, ಯಾರದೋ ಆದೇಶಗಳನ್ನು ಪಾಲಿಸುತ್ತ ಒಂದು
ಸಂಸ್ಥೆಗೆ ನಿಷ್ಠನಾಗಿ ಕೆಲಸ ಮಾಡುವ ಪರಿಯೇನು, ದುಡಿದ ಹಣವನ್ನು ಇಷ್ಟಿಷ್ಟೇ ಖರ್ಚು
ಮಾಡುತ್ತಾ ತಿಂಗಳಿಡೀ ಸಂಬಾಳಿಸುವುದು ಹೇಗೆ... ಏನೂ ಗೊತ್ತಿಲ್ಲದೆ ಈ ನಗರಿಗೆ
ಬಂದುಬಿಟ್ಟಿದ್ದೆವು. ಅವರಿವರು ಕೊಟ್ಟ ಅಷ್ಟಿಷ್ಟು ಸಲಹೆಗಳು, ಎಲ್ಲೋ ಕೇಳಿದ
ಆಣಿಮುತ್ತುಗಳು, ಮತ್ತೆಲ್ಲೋ ಓದಿಕೊಂಡ ಪಾಠಗಳು, ಅಸ್ಪಷ್ಟ
ಇಂಗ್ಲೀಷು, ಅರ್ಧಮರ್ಧ ಕಂಪ್ಯೂಟರ್ ನಾಲೆಜ್ಜುಗಳನ್ನು ಎದೆಗವಚಿಕೊಂಡು ಇಲ್ಲಿಗೆ
ಪದಾರ್ಪಣೆ ಮಾಡಿದ್ದೆವು.
ಆಮೇಲೆ ಇಲ್ಲಿ ತಿಂಗಳಾನುಗಟ್ಟಲೆ ಅಲೆದಾಡಿ ಕೆಲಸ ಗಿಟ್ಟಿಸಿಕೊಂಡದ್ದು,
ನೆಂಟರಿಷ್ಟರ ಮನೆಯಲ್ಲಿ ಉಳಕೊಂಡಿದ್ದು, ನೀನೆಲ್ಲೋ ನಾನೆಲ್ಲೋ ಆದದ್ದು, ಬೆಳಬೆಳಗ್ಗೆ
ತರಾತುರಿಯಲ್ಲಿ ಬಸ್ಸು ಹಿಡಿಯಲು ಓಡಿದ್ದು, ಕೆಲಸ ಸರಿಯಾಗಿ ಮಾಡಲು ತಿಳಿಯದೆ
ಬೈಸಿಕೊಂಡಿದ್ದು, ಮೊದಲ ಸಂಬಳ ಬಂದಾಗ ಬೀಗಿದ್ದು, ಬಂದ ಸಂಬಳ
ಎರಡೇ ವಾರದಲ್ಲಿ ಖಾಲಿಯಾದಾಗ ತತ್ತರಗುಟ್ಟಿದ್ದು, ಮತ್ತೊಬ್ಬರ ನೋಡುತ್ತಲೇ ತಿಳಿಯದ್ದ ಕಲಿತದ್ದು, ಕ್ಲಾಸು-ಕರೆಸ್ಪಾಂಡೆನ್ಸು
ಅಂತ ಮತ್ತೇನೇನೋ ಕೋರ್ಸುಗಳ ಮಾಡಿಕೊಂಡಿದ್ದು, ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ
ಹಾರಿದ್ದು, ನಿಧಾನಕ್ಕೆ ಬದುಕು ಕಟ್ಟಿಕೊಳ್ಳುತ್ತ ಹೋಗಿದ್ದು...
ಈ ನಗರ ನಮಗೆ ಎಷ್ಟೆಲ್ಲ ಕಲಿಸಿತು. ಪ್ರತಿದಿನವೂ ಹೊಸತನ್ನು ಹೇಳಿಕೊಟ್ಟಿತು.
ನಮ್ಮ ಮುಗ್ಧತೆಯ ಕಳೆಯುತ್ತ ಹೋಯಿತು. ಬಿದ್ದೆವು, ಎದ್ದೆವು, ಬೆಳೆಯುತ್ತ
ಹೋದೆವು. ಗಳಿಕೆ, ಉಳಿಕೆ, ವಸ್ತುಗಳು,
ವಾಹನಗಳು, ಮದುವೆ, ಮನೆ, ಮಡದಿ,
ಮಕ್ಕಳು... ಎಲ್ಲವನ್ನು ಹೊಂದಿದೆವು ಇದೇ ನಗರದಲ್ಲಿ. ಈ ನಗರ ಎಂದಿಗೂ ನಮ್ಮನ್ನು
ಉಪೇಕ್ಷಿಸಲಿಲ್ಲ.
ಈ ನಗರಕ್ಕೆ ನಾವೇನು ಮೊದಲಿಗರಲ್ಲ. ಇದು ಎಲ್ಲರನ್ನೂ ಹೆಚ್ಚುಕಮ್ಮಿ
ಹೀಗೆಯೇ ಬೆಳೆಸಿದೆ. ಹೆದರಿ ಹಿಮ್ಮೆಟ್ಟಿ ಹೋದವರು ಇಲ್ಲದಿಲ್ಲ. ಆದರೆ ಇದು ಎಂಥವರಿಗೂ ಧೈರ್ಯ
ಹೇಳದೇ ಉಳಿದಿಲ್ಲ. ಹುಮ್ಮಸ್ಸು ತುಂಬುವುದರಲ್ಲಿ ಲೋಪ ಮಾಡಿಲ್ಲ. ಆರ್ತರಾದವರಿಗೆ ಭರವಸೆಯ ಕೈಚಾಚುವುದರಲ್ಲಿ
ಹಿಂದೆ ಬಿದ್ದಿಲ್ಲ. ತನ್ನ ಗಗನಚುಂಬಿ ಕಟ್ಟಡಗಳಲ್ಲಿ, ಥಳಥಳ ಹೊಳೆವ
ಹೊದಿಕೆಯ ಭವನಗಳಲ್ಲಿ, ಇರುವೆ ಸಾಲಿನಂಥ ಟ್ರಾಫಿಕ್ಕಿನಲ್ಲಿ, ಗಿಜಿಗುಟ್ಟುವ
ಸಂದಣಿಯಲ್ಲಿ ಉತ್ಸಾಹದ ಬೆಳಕನ್ನೇ ಪ್ರತಿಫಲಿಸಿದೆ. ಉಳ್ಳವರಿಗೆ ಪಂಚತಾರಾ ಹೋಟೆಲುಗಳಲ್ಲೂ, ಭರಿಸಲಾಗದವರಿಗೆ
ದರ್ಶಿನಿಗಳಲ್ಲೂ, ಅದೂ ಇಲ್ಲದವರಿಗೆ ಬೀದಿಬದಿಯಲ್ಲೂ ಊಟ ಹಾಕಿದೆ. ವಿಲ್ಲಾಗಳಲ್ಲೋ,
ಅಪಾರ್ಟ್ಮೆಂಟುಗಳಲ್ಲೋ, ಮಹಡಿಮನೆಗಳಲ್ಲೋ, ಒಂಟಿರೂಮುಗಳಲ್ಲೋ, ಜೋಪಡಿಗಳಲ್ಲೋ,
ಫ್ಲೈಓವರ್ ಕೆಳಗಿನ ಅಖಂಡ ನೆಲದಲ್ಲೋ ಮಲಗಿಸಿ ಜೋಗುಳ ಹಾಡಿದೆ. ಛಲ ಬಿಡದವರೆಲ್ಲ ಇಲ್ಲಿ ಹೇಗೋ
ಬಚಾವಾಗಿದ್ದಾರೆ.
ಆದರೆ ಇದೇನಾಗಿ ಹೋಯಿತು ಈಗ? ಗ್ರಹಣ
ಬಡಿದಂತೆ ಮ್ಲಾನಗೊಂಡಿದೆ ನಗರ. ಕಣ್ಣಿಗೇ ಕಾಣದ ವೈರಾಣುವೊಂದು ಇಡೀ ನಗರದ ಉತ್ಸಾಹವನ್ನು ಆಪೋಶನ
ತೆಗೆದುಕೊಂಡಿದೆ. ರಸ್ತೆಗಳು ಖಾಲಿ. ನಿಲ್ದಾಣಗಳು ಖಾಲಿ. ಪಾದಚಾರಿ ಮಾರ್ಗಗಳು ಖಾಲಿ. ಎಂದೂ
ತುಂಬಿರುತ್ತಿದ್ದ ಮಾಲುಗಳು, ಥಿಯೇಟರುಗಳು, ಹೋಟೆಲುಗಳು,
ಅಂಗಡಿಗಳು ಈಗ ಬಣಬಣ. ಉಪವನದ ಗೇಟು ಹಾಕಲಾಗಿದೆ. ಬಹುಮಹಡಿಯ ವಾಣಿಜ್ಯ ಕಟ್ಟಡಕ್ಕೆ ಬೀಗ
ಜಡಿಯಲಾಗಿದೆ. ವೈನ್ಸ್ಟೋರಿನ ಶಟರ್ ಎಳೆಯಲಾಗಿದೆ. ಒಳಗಿರುವವರನ್ನೂ ತೋರುತ್ತಿದ್ದ ಕಾಫಿಡೇಗಳ
ಗಾಜುಮುಖ ಬಾಡಿದೆ. ಹೊರಗಿರುವವರಿಗೂ ಮನರಂಜನೆಯೊದಗಿಸುತ್ತಿದ್ದ ಎಲೆಕ್ಟ್ರಿಕ್ ಶೋರೂಮುಗಳ ದೊಡ್ಡ
ಪರದೆಯ ಟೀವಿಗಳು ಆಫಾಗಿವೆ. ಕೆಳಗಿರುವವರನ್ನು ಮೇಲಕ್ಕೊಯ್ಯುತ್ತಿದ್ದ ಬಜಾರಿನ ಲಿಫ್ಟುಗಳಿಗೆ
ಜಂಗು ಹಿಡಿಯುತ್ತಿದೆ. ಸಾಲುದೀಪಗಳ ಮೆರವಣಿಗೆಯಂತೆ ಸಾಗುತ್ತಿದ್ದ ಮೆಟ್ರೋದ ಸುಳಿವಿಲ್ಲ. ಫುಟ್ಬೋರ್ಡಿನಲ್ಲಿ
ಪಯಣಿಗರ ನೇತಾಡಿಸುತ್ತ ಓಡುತ್ತಿದ್ದ ದೊಡ್ಡ ಬಸ್ಸುಗಳ ಸದ್ದಿಲ್ಲ. ಟಕ್ಕನೆ ತಿರುವಿ ಟಕ್ಕನೆ
ನಿಲ್ಲುತ್ತಿದ್ದ ಆಟೋಗಳು ಕಾಣುತ್ತಿಲ್ಲ. ಸ್ಕೈವಾಕುಗಳು, ಅಂಡರ್ಪಾಸುಗಳು,
ಫ್ಲೈಓವರುಗಳು, ಗ್ರೇಡ್ ಸೆಪರೇಟರುಗಳು, ಜಂಕ್ಷನ್ನುಗಳಲ್ಲಿ ಜನರ ಹಾಜರಾತಿಯೇ
ಇಲ್ಲ. ಸಿಗ್ನಲ್ಲಿನ ದೀಪಗಳಿಗೆ ಬಣ್ಣಗುರುಡಾಗಿದೆ.
ಇದು ನಾವು ನೋಡಿದ ನಗರ ಅಲ್ಲವೇ ಅಲ್ಲ. ಹೀಗೆ ವಾರಗಟ್ಟಲೆ-ತಿಂಗಳುಗಟ್ಟಲೆ
ಈ ನಗರ ಸ್ಥಬ್ದವಾಗಿದ್ದು ಇಲ್ಲವೇ ಇಲ್ಲ. ಎಂತಹ ಪ್ರಖರ ಬಂದ್ ಆದರೂ, ಯಾವ ಜನನಾಯಕ
ಸತ್ತರೂ, ಎಷ್ಟೇ ಬಿಗಿಯ ಕರ್ಫ್ಯೂ ಹಾಕಿದ್ದರೂ ಸಂಜೆಯ ಹೊತ್ತಿಗೆ ನಗರ ದೀಪಗಳನ್ನು ಬೆಳಗುತ್ತಾ
ಮತ್ತೆ ಗರಿಗೆದರಿ ನಿಲ್ಲುತ್ತಿತ್ತು. ಪಾನಿಪುರಿ ಅಂಗಡಿಗಳಿಂದ ಪರಿಮಳ ಹೊಮ್ಮುತ್ತಿತ್ತು. ಐಸ್ಕ್ರೀಮ್
ಪಾರ್ಲರು ಅರಸಿ ಜೋಡಿಗಳು ನಡೆಯುತ್ತಿದ್ದವು. ಸೇಬುವಿನಂತಹ ಬಲೂನನ್ನು ಬಲಗೈಯಲ್ಲಿ ಚಿಮ್ಮಿಸುತ್ತ ಮಕ್ಕಳು
ಬೀದಿಯಲ್ಲಾಡುತ್ತಿದ್ದವು.
ಕನಸಿನಲ್ಲೂ ಊಹಿಸಲಾಗದ ರೀತಿಯಲ್ಲಿ ಭೀತಿಯ ಪೊರೆಯೊಂದು ನಗರವನ್ನು
ಆವರಿಸಿಬಿಟ್ಟಿದೆ. ನಮ್ಮನ್ಯಾರು ತಡೆಯಬಲ್ಲರು ಎಂಬ ದರ್ಪದಲ್ಲಿ ಓಡುತ್ತಿದ್ದ ಮನುಷ್ಯನಿಗೆ
ತಡೆಯಾಗಿದೆ. ಧಾವಂತವೇ ದಿನಚರಿಯಾಗಿದ್ದವರ ಮುಂದೆ ಗೋಡೆಯೊಂದು ಎದ್ದುನಿಂತಿದೆ. ವೇಗದೂತರನ್ನೆಲ್ಲ ಒಂದೇ ಹುರಿಯಿಂದ ಕಟ್ಟಿಹಾಕಲಾಗಿದೆ. ಹಣ,
ಹುದ್ದೆ, ಹೆಸರು, ಮೇಲುಗೈಗಳ ಹಂಬಲವ ಹೇರಿಕೊಂಡು ನಮ್ಮನ್ನೇ
ವಾಹನವೆಂದುಕೊಂಡು ನುಗ್ಗುತ್ತಿದ್ದವರೆಲ್ಲ ನಡುದಾರಿಯಲ್ಲಿ ನಿಂತುಬಿಟ್ಟಿದ್ದೇವೆ ಹಠಾತ್: ಒಂದು
ಬೃಹತ್ ಟ್ರಾಫಿಕ್ ಜಾಮಿನಲ್ಲಿ ಸಿಲುಕಿದವರಂತೆ. ಇಲ್ಲಿಂದ ಮುಂದೆ ನೋಡಿದರೆ ತುದಿಯೇ ಕಾಣುತ್ತಿಲ್ಲ.
ಜತೆಗೆ ನಮ್ಮ ಹಾಗೆಯೇ ನಿಂತಿರುವ ಇಡೀ ವಿಶ್ವಸಮೂಹ. ಕೆಲವರು ನಮಗಿಂತ ಮುಂದಿರುವಂತೆಯೂ ಹಲವರು
ನಮಗಿಂತ ಹಿಂದಿರುವಂತೆಯೂ ಕಾಣುವರು. ಆದರೆ ಈ
ಸರತಿಸಾಲು ಮುಂದುವರೆಯುವಂತೆಯೇ ಕಾಣುತ್ತಿಲ್ಲ. ಈ
ಜಾಮ್ ಕ್ಲಿಯರ್ ಮಾಡಿ ಕೊಡಲು ಯಾವ ಪೊಲೀಸೂ ಬರುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ.
ಹಾಗಾದರೆ ಮುಂದೇನು ಕಥೆ? ಇವೆಲ್ಲ ಎಷ್ಟು ದಿನ? ಹೀಗೆ ಇನ್ನೆಷ್ಟು
ಕಾಲ ನಿಂತಿರಲು ಸಾಧ್ಯ? ಈ ದುಸ್ಥಿತಿಗೆ ಕಂಗೆಟ್ಟು, ಊರು
ಸೇರಿಕೊಳ್ಳುವ ಸಲುವಾಗಿ, ನೂರಾರು ಮೈಲಿ ನಡೆದು ಸಾಗಿರುವ ದಿನಗೂಲಿ ಕಾರ್ಮಿಕರ ದೃಶ್ಯ ನಮ್ಮ ಕಣ್ಣ
ಮುಂದಿದೆ. ದುಡಿಮೆಯಿಲ್ಲದೆ ಹೈರಾಣಾಗಿರುವ ಅದೆಷ್ಟೋ ಕುಟುಂಬಗಳ ಕಥೆ ದಿನದಿನವೂ ಕೇಳಿಬರುತ್ತಿದೆ.
ಅವರೆಲ್ಲ ಎಷ್ಟು ದಿನ ತಡೆದಾರು? ನಮ್ಮೆಲ್ಲರನ್ನು ಸಾಕಿ ಸಲಹುತ್ತಿದ್ದ ಈ ನಗರ
ನಿಸ್ಸಹಾಕವಾಗಿ ನೋಡುತ್ತಿದೆ. ಇದರ ತಾಯಿಗುಣ ಮುಗಿಯಿತೆ? ನಾವೆಲ್ಲ ನಮ್ಮ
ನಮ್ಮ ಊರುಗಳಿಗೆ ಮರಳುವ ಸಮಯ ಬಂದಿತೆ? ಸರಿ, ನಮಗಾದರೆ
ವಾಪಸು ಹೋಗಲು ‘ಊರು’ ಎಂಬುದೊಂದಿದೆ. ಅಂಥದ್ದೊಂದು ಆಯ್ಕೆ
ಇಲ್ಲದಿರುವ, ಇಲ್ಲೇ ಹುಟ್ಟಿ ಬೆಳೆದವರ, ಬೇರೂ ಇಲ್ಲದೇ ಇಲ್ಲಿ ಗಟ್ಟಿ ತಳವೂರಲೂ
ಆಗಿರದ ಅಬ್ಬೇಪಾರಿಗಳ ಗತಿಯೇನು? ಅವರೆಲ್ಲಿಗೆ ಹೋಗಬೇಕು?
ಊರಿನಿಂದ ಫೋನ್ ಮಾಡಿದಾಗೆಲ್ಲ ಅಮ್ಮ ಕೇಳುತ್ತಾಳೆ: “ಮತ್ತೇನು
ವಿಶೇಷ?” ಏನು ಹೇಳಲಿ?
ಎಲ್ಲೆಡೆ ಒಂದೇ ಸುದ್ದಿ ಈಗ. ಬೇರೆ ವಿಶೇಷಗಳೇ
ಇಲ್ಲದ ದಿನಗಳು ಇವು... ಟೀವಿ ಹಚ್ಚಿದರೆ ಅದೇ ಸುದ್ದಿ, ಫೋನೆತ್ತಿದರೆ
ಅದೇ ಸುದ್ದಿ, ಇಂಟರ್ನೆಟ್ ತೆರೆದರೆ ಅದೇ ಸುದ್ದಿ. “ಹೆಚ್ಚು
ಹಬ್ಬಿಸುತ್ತಿರುವವರು ಅವರೇ.. ಸರ್ಕಾರದ ಆದೇಶಗಳನ್ನೂ ಪಾಲಿಸುತ್ತಿಲ್ಲ. ಇಂಥವರ ಮೇಲೆ ಕಾನೂನು
ಕ್ರಮ ಕೈಗೊಳ್ತಿಲ್ಲ ಯಾಕೆ?”; “ಇಪ್ಪತ್ತು
ಪರ್ಸೆಂಟ್ ಜನ ಮಾಡ್ತಿರೋ ತಪ್ಪಿಗೆ ಮನೆಯೊಳಗೆ ಕೂತಿರೋ ನಾವು ಎಂಬತ್ತು ಪರ್ಸೆಂಟ್ ಜನ ಯಾಕೆ
ಅನುಭವಿಸಬೇಕು?”; “ಚೀನಾವೇ ಸೃಷ್ಟಿಸಿದ ವೈರಸ್ ಇದು.. ಇನ್ನು ಮುಂದೆ ಚೀನಾ ತಯಾರಿಸಿದ
ವಸ್ತುಗಳನ್ನು ಖರೀದಿಸಬಾರದು”; “ತನ್ನ ದೇಶಕ್ಕೆ ಇಷ್ಟೊಂದು
ನಷ್ಟ ಉಂಟುಮಾಡಿರೋದಕ್ಕೆ ದೊಡ್ಡಣ್ಣನಿಗೆ ಭಯಂಕರ ಸಿಟ್ಟು ಬಂದಿದೆಯಂತೆ. ಈ ವೈರಸ್
ನಿರ್ಮೂಲವಾಗುತ್ತಿದ್ದಂತೆ ವಿಶ್ವರಾಷ್ಟ್ರಗಳನ್ನೆಲ್ಲ ಒಗ್ಗೂಡಿಸಿ ಚೀನಾ ಮೇಲೆ ಯುದ್ಧ
ಮಾಡ್ತಾರಂತೆ”; “ಎಕಾನಮಿ ಹತ್ತಿಪ್ಪತ್ತು ವರ್ಷ ಹಿಂದೆ ಹೋಗಿ ಎಷ್ಟೋ ಜನ ಕೆಲಸ
ಕಳ್ಕೊಳ್ತಾರಂತೆ.. ಉದ್ಯಮಿಗಳು ಮಣ್ಣು ಮುಕ್ತಾರಂತೆ”; “ಇದಕ್ಕೆ
ಔಷಧಿ ಬರಲಿಕ್ಕೆ ಇನ್ನೂ ಎರಡು ವರ್ಷ ಬೇಕಂತೆ”; “ನಗರಗಳಲ್ಲಿ ದುಡ್ಡು ಮಾಡೋ ಕಥೆ ಮುಗೀತು.
ಇನ್ನೇನಿದ್ರೂ ಹಳ್ಳಿಯ ಬದುಕು, ಕೃಷಿಗೆ ಬೆಲೆ” …ತರಹೇವಾರಿ
ಮಾತುಗಳು, ವಾದಗಳು, ಚರ್ಚೆಗಳು. ಎಲ್ಲವೂ ಯೋಚನೆಗೆ ಹಚ್ಚುವಂತವೇ. ಭವಿಷ್ಯದ ಬಗ್ಗೆ ಆತಂಕ
ಹುಟ್ಟಿಸುವಂತವೇ.
ದುಡಿಮೆಯಿದ್ದರೆ ನಗರ. ಹಣವಿದ್ದರೆ ನಗರ. ಇಲ್ಲಿ ಕಾಯಕವೇ ಕೈಲಾಸ. ಅದಿಲ್ಲದಿದ್ದರೆ
ಇಲ್ಲಿ ಬದುಕುಳಿಯುವುದು ಕಷ್ಟಸಾಧ್ಯ. ಧನಿಕನಿಗೂ ಹತ್ತಾರು ಬಾದ್ಯತೆಗಳು. ಕೂಡಿಟ್ಟ ಹೊನ್ನು
ಎಷ್ಟು ದಿನವೂ ಬಾಳದು. ಬಡವನಂತೆ ಧನಿಕನಿಗೂ ಇದು ತಟ್ಟಿಯೇ ತಟ್ಟುತ್ತದೆ. ಹೀಗಿರುವಾಗ ಎಲ್ಲರ
ಸಹನೆಯ ಕಟ್ಟೆಯೂ ಒಡೆಯುವುದು ನಿಶ್ಚಿತ.
ಇಲ್ಲ, ಇದು ಸರಿಹೋಗಲೇ ಬೇಕು. ಯಾವ ರುಜಿನಕ್ಕೂ
ಹೆದರಿ ಮನೆಯೊಳಗೆ ಕೂತಿರಲಾಗದು ದೀರ್ಘಕಾಲ. ಇದನ್ನು ನಾವು ಎದುರಿಸಲೇಬೇಕು. ನಿಂತಿರುವ ಈ ನಗರದ
ಯಂತ್ರಕ್ಕೆ ಮತ್ತೆ ಚಾಲನೆ ದೊರಕಲೇಬೇಕು. ನಿಧಾನವಾಗಿಯಾದರೂ ಅದು ತಿರುಗಲು ಶುರುಮಾಡಲೇಬೇಕು. ನಾವೆಲ್ಲ
ಕಬ್ಬಿನಂತೆ ಅದಕೆ ಬೈಯೊಡ್ಡಿಕೊಳ್ಳಲೇಬೇಕು. ಮತ್ತೆ ಕಾರ್ಖಾನೆಗಳ ಊದುಕೊಳವೆಗಳಿಂದ ಹೊಗೆ
ಹೊಮ್ಮಬೇಕು. ಮತ್ತೆ ರೆಸ್ಟುರೆಂಟುಗಳ ಪಾಕಶಾಲೆಯಲ್ಲಿ ಒಲೆಗಳು ಹೊತ್ತಿಕೊಳ್ಳಬೇಕು. ಮತ್ತೆ ಎರಡು
ಕೊಂಡರೆ ಒಂದು ಫ್ರೀ ಕೊಡುವ ಬಟ್ಟೆಯಂಗಡಿಗಳು ತೆರೆಯಬೇಕು. ಬೀದಿಬದಿ ಮರಗಳಿಂದುದುರಿದ ಬಣ್ಣಪುಷ್ಪಗಳ ಮೇಲೆ
ವಾಹನಚಕ್ರಗಳು ಉರುಳಬೇಕು. ಮಾರ್ಕೆಟ್ಟಿನಲ್ಲಿ ತರಕಾರಿಗೆ ಮುಗಿಬಿದ್ದು ಚೌಕಾಶಿ ಮಾಡಬೇಕು. ಥಿಯೇಟರಿನ ಗಾಂಧಿಕ್ಲಾಸಿನಲ್ಲಿ ಶಿಳ್ಳೆಗಳು
ಮೊಳಗಬೇಕು. ಪಾರ್ಕಿನ ಮೂಲೆಯಲ್ಲಿ ಲಾಫ್ಟರ್ ಕ್ಲಬ್ಬಿನ ಸದಸ್ಯರು ಹುಚ್ಚುಚ್ಚಾಗಿ ನಗಬೇಕು. ಶಾಲೆ-ಕಾಲೇಜುಗಳು ಪ್ರಾರಂಭವಾಗಿ ಹೊಸ ಪ್ರೇಮಗಳು
ಮೊಳೆಯಬೇಕು. ಮದುವೆಗೂ ಮೊದಲೇ ನಡೆದ ರಿಸೆಪ್ಷನ್ನಿನಲ್ಲಿ ಉಡುಗೊರೆಗೆ ಸಾಲುಗಟ್ಟಬೇಕು. ಸಂಗೀತಕಾರಂಜಿಯಿಂದ
ನೀರು ಚಿಮ್ಮಬೇಕು, ಗೂಡಂಗಡಿಯವ ಮೊಘಾಯ್ ಪಾನ್ ಸುತ್ತಿಕೊಡಬೇಕು, ಗೋಲ್ಗಪ್ಪಾವಾಲಾ
ಕೈಯದ್ದಿ ಪುರಿಗಳಲ್ಲಿ ಪಾನಿ ತುಂಬಿಸಿಕೊಡಬೇಕು, ಹೂವಾಡಗಿತ್ತಿ ಮಾಲೆಮಲ್ಲಿಗೆಯನು ಮೊಳದಲ್ಲಳೆದುಕೊಡಬೇಕು.
ಇದೆಲ್ಲ ಸರಿಹೋಗಲೇಬೇಕು.
ಸಿಗದೇ ಎಷ್ಟು ವರ್ಷವಾಯಿತು... ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಮನೆಗೆ
ಬಾ. ಒಟ್ಟಿಗೇ ಕೂತು ಊಟ ಮಾಡೋಣ.
ಪ್ರೀತಿಯಿಂದ,
-ಸು
Friday, February 28, 2020
ಮಾರಿಜಾತ್ರೆ ಎಂಬ ಸಂಭ್ರಮ
ಒಂದು ಅನಿರ್ದಿಷ್ಟ ಮಧ್ಯಾಹ್ನ ಕಾಫಿ ಕುಡಿಯುವಾಗ ಯಾರೋ ವಿಷಯ ಪ್ರಸ್ತಾಪ
ಮಾಡುತ್ತಾರೆ: "ಈ ವರ್ಷ ಸಾಗರದಲ್ಲಿ ಮಾರಿಜಾತ್ರೆ". ತಕ್ಷಣ ಎಲ್ಲರಿಂದಲೂ
ಉದ್ಘಾರ: "ಓಹ್ ಹೌದಲಾ.. ಅದಕ್ಕೇ,
ರಸ್ತೆಗಳನ್ನೆಲ್ಲಾ
ರಿಪೇರಿ ಮಾಡ್ತಿರೋದು. ಮಾರಿಗುಡಿ ರೋಡು ಬಂದ್ ಮಾಡಿರೋದು. ಮೊನ್ನೆ ವಿನಾಯಕರಾಯರ ಅಂಗಡೀಲಿ ಹೇಳ್ತಿದ್ರು, ಭಾನುವಾರ ಅಂಗಡಿ
ಮುಚ್ಚಿ ಎಲ್ಲಾ ಕ್ಲೀನ್ ಮಾಡ್ಬೇಕು ಅಂತ.. ಯಾಕಪ್ಪಾ
ಅಂದ್ಕಂಡಿದ್ದೆ.. ಮಾರಿಜಾತ್ರೆ ಅಂದ್ಮೇಲೆ ಒಂದು ರೌಂಡು ಎಲ್ಲಾ
ಚಂದ ಮಾಡ್ಲೇಬೇಕಲ್ಲ!". ದೊಡ್ಡವರ ಮಾತು ಕೇಳುತ್ತ ಅಲ್ಲೇ ಓಡಾಡುತ್ತಿದ್ದ ಚಿಣ್ಣರಿಗೆ ಆಗಲೇ ಸಂಭ್ರಮ ಶುರುವಾಗುತ್ತದೆ. ಕಣ್ಣಲ್ಲಿ ನಕ್ಷತ್ರಪಟಾಕಿ.
ಜಾತ್ರೆಯಲ್ಲಿ ತಾವು ಏನೇನು ಕೊಳ್ಳಬಹುದು, ಹೇಗೆಲ್ಲ
ಮಜಾ ಮಾಡಬಹುದು, ಎಷ್ಟೆಲ್ಲ ತಿನ್ನಬಹುದು.. ಅಮ್ಮನೂ
ಮನಸಲ್ಲೇ ಪಟ್ಟಿ ಮಾಡತೊಡಗುತ್ತಾಳೆ: ಜಗುಲಿಗೆ ಒಂದು ಕನ್ನಡಿ ಸ್ಟಾಂಡು, ಸೇವಂತಿಗೆ
ಗಿಡ ನೆಡಲು ಐದಾರು ಪಾಟುಗಳು, ಕಡಿಮೆ ಬೆಲೆಗೆ ಸಿಕ್ಕರೆ ಒಂದು ಕುಟ್ಟಾಣಿ,
ತಮ್ಮನ
ಮಗಳಿಗೆ ಬಣ್ಣದ ಹೇರ್ಬ್ಯಾಂಡು, ಶೋಕೇಸಿನಲ್ಲಿಡಲು ಚಂದದ ಗೊಂಬೆಗಳು..
ಅಜ್ಜಿಗೂ ಈ ಸಲದ ಜಾತ್ರೆಗೆ ಒಂದು ಸಂಜೆ
ಹೋಗಿಬರಬೇಕೆಂಬ ತಲುಬು: "ಸಾಗರದ ಜಾತ್ರೆಗೆ ಹೋಗದೇ ಯಾವ ಕಾಲ
ಆಯ್ತು.. ಈ ವರ್ಷನಾದ್ರೂ ಹೋಗಿ, ಒಂದು ಚೌರಿ ತಂದ್ಕೋಬೇಕು" -ತನಗೇ ತಾನೇ ಗೊಣಗಿಕೊಳ್ಳುತ್ತಾಳೆ. ಅಪ್ಪನೋ, ಅದಾಗಲೇ ಮನೆಗೆ
ಬಂದು ಬಿದ್ದಿರುವ ಯಕ್ಷಗಾನದ ಪ್ಯಾಂಪ್ಲೆಟ್ಟುಗಳನ್ನು
ಓದುವುದರಲ್ಲಿ ಮಗ್ನ: "ಗುರುವಾರ ಸಂಜೆ ಹೋದ್ರೆ, ಜಾತ್ರೆ ಪೂರೈಸಿಕೊಂಡು, ಆಟ ನೋಡಿಕೊಂಡು ಬರಬಹುದು. ತೆಂಕು-ಬಡಗು
ಕೂಡಾಟ. ಒಳ್ಳೊಳ್ಳೇ ಕಲಾವಿದರೂ ಇದಾರೆ.
ಹೊಸಕೊಪ್ಪದ ರಾಘು ಹೋಗ್ತಾನೆ ಅಂತಾದ್ರೆ ಅವನ ಕಾರಲ್ಲೇ ಹೋಗಿ ಬರಬಹುದು" -ಕ್ಯಾಲೆಂಡರಿನಲ್ಲಿ
ಗುರುತು ಹಾಕಿಕೊಳ್ಳುತ್ತಾನೆ.
ಜಾತ್ರೆಗೆ ಇನ್ನೂ ಒಂದು ತಿಂಗಳಿದೆ ಎನ್ನುವಾಗಲೇ ಸಾಗರ ಸಂಭ್ರಮಕ್ಕೆ ಸಿದ್ಧವಾಗುತ್ತದೆ. ಅಂಗಡಿಯವರೆಲ್ಲ ತಮ್ಮ ಸಾಮಗ್ರಿಗಳನ್ನು ಕೆಳಗಿಳಿಸಿ, ಅರೆಗಳನ್ನು ಸ್ವಚ್ಛಗೊಳಿಸಿ, ಧೂಳು ಕೂತ ಫ್ಯಾನಿನ ಪಂಕಗಳನ್ನು ಒರೆಸಿ, ಗಾಜಿನ ಬಾಟಲಿಗಳನ್ನು ತೊಳೆದೊಣಗಿಸಿ, ಬಣ್ಣ ಹೋದ ಗೋಡೆಗಳಿಗೆ ತೇಪೆ ಹಚ್ಚಿ ಸಿಂಗರಿಸುತ್ತಾರೆ. ಮುನಿಸಿಪಾಲಿಟಿಯವರೂ ಎಚ್ಚರಗೊಂಡು ಕಿತ್ತುಹೋದ ಟಾರು ರಸ್ತೆಗಳನ್ನು ಮುಚ್ಚಿ ಸಪಾಟು ಮಾಡುತ್ತಾರೆ. ಮಾರಿಗುಡಿಯ ಅರ್ಚಕರು ಹೊಸ ಮಡಿ ಕೊಳ್ಳುತ್ತಾರೆ. ಅಕ್ಕಪಕ್ಕದ ಗ್ರಂಥಿಕೆ ಅಂಗಡಿಗಳಲ್ಲಿ ತೆಂಗಿನಕಾಯಿ, ಅರಿಶಿಣ-ಕುಂಕುಮ, ಅಗರಬತ್ತಿ-ಕರ್ಪೂರಗಳ ದಾಸ್ತಾನು ಜಾಸ್ತಿಯಾಗುತ್ತದೆ. ಬರುವ ವಾಹನಗಳನ್ನೂ-ಜನಗಳನ್ನೂ ಹೇಗೆ ಸಂಬಾಳಿಸಬೇಕು, ಎಲ್ಲೆಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು, ಎಲ್ಲೆಲ್ಲಿ ಬ್ಯಾರಿಕೇಡ್ ಹಾಕಬೇಕು ಎಂಬುದಾಗಿ ಪೋಲೀಸರು ತಾಲೀಮು ನಡೆಸುತ್ತಾರೆ. "ಈ ಸಲದ ಜಾತ್ರೆಯಲ್ಲಿ ಒಂದು ದೋಸೆ ಕೌಂಟರ್ ಮಾಡ್ಲೇಬೇಕು" ಅಂತ ಪ್ಲಾನ್ ಮಾಡಿರುವ ಶ್ರೀಧರನಾಯ್ಕ, ಸ್ಟಾಲ್ ಇಡಲು ಬಾಡಿಗೆ ಎಷ್ಟು ಅಂತ ಅವರಿವರನ್ನು ವಿಚಾರಿಸುತ್ತಾನೆ. ಈಗಾಗಲೇ ರಚನೆಯಾಗಿರುವ ಜಾತ್ರಾ ಕಮಿಟಿಯಲ್ಲಿ, ಮಾಡಬೇಕಿರುವ ವ್ಯವಸ್ಥೆಗಳ ಬಗ್ಗೆ, ರಥೋತ್ಸವದ ಸಿದ್ಧತೆಯ ಬಗ್ಗೆ ಚರ್ಚೆ ನಡೆಯುತ್ತದೆ.
ಶಾಲಾಪರೀಕ್ಷೆಗಳಿಗೆ ಇನ್ನೊಂದು ತಿಂಗಳು ಇದೆ ಎನ್ನುವಾಗ ಬರುತ್ತದೆ ಜಾತ್ರೆ. ಒಂದು ಕಡೆ ಪರೀಕ್ಷೆಗೆ ಓದಿಕೊಳ್ಳಬೇಕಾದ ಅನಿವಾರ್ಯತೆ, ಇನ್ನೊಂದು ಕಡೆ ಜಾತ್ರೆಗೆ ತಪ್ಪಿಸಲಾಗದ ಇಕ್ಕಟ್ಟು. ಗೆಳೆಯರೆಲ್ಲ ಸೇರಿ ಶನಿವಾರ ಸಂಜೆ ಹೋಗುವುದು ಅಂತ ತೀರ್ಮಾನವಾಗಿದೆ. ಅಪ್ಪ-ಅಮ್ಮರ ಬಳಿ ದುಂಬಾಲು ಬಿದ್ದು ಹತ್ತತ್ತು ರೂಪಾಯಿಯಂತೆ ಹಣ ಸಂಗ್ರಹ ಈಗಿನಿಂದಲೇ ಶುರುವಾಗಿದೆ. ಕೊನೇ ಘಳಿಗೆಯಲ್ಲಿ ಅಜ್ಜನ ಬಳಿ ಕೇಳಿದರೆ ಐವತ್ತು ರೂಪಾಯಿಯಾದರೂ ಕೊಡದೇ ಇರನು. ತೊಟ್ಟಿಲಿಗೆ ಮೂವತ್ತು, ದೋಣಿಗೆ ಇಪ್ಪತ್ತು, ಮೃತ್ಯುಕೂಪಕ್ಕೆ ಹದಿನೈದು, ಐಸ್ಕ್ರೀಮು-ಮಸಾಲ ಮಂಡಕ್ಕಿ-ಬತ್ತಾಸು ತಿನ್ನಲು ಇಂತಿಷ್ಟು, ನಾಟಕ ನೋಡಲು ಎಷ್ಟಿದೆಯೋ.. ಎಲ್ಲಾ ಅಂದಾಜು ಮಾಡಿ ಲೆಕ್ಕ ಹಾಕಿ, ಹಣ ಉಳಿದರೆ ಇನ್ನೊಂದು ರೌಂಡು ಪೇಟೆ ಸುತ್ತಲಾದೀತೇ ಎಂಬ ಯೋಚನೆಯೂ ಇದೆ. ಅಂಗಡಿಯಿಂದ ಸಾಮಾನು ತರಲು ಹೋದ ಪುಟ್ಟಪೋರ, ಅಮ್ಮನಿಗೆ ಸುಳ್ಳು ಲೆಕ್ಕ ತೋರಿಸಿ ಹತ್ತು ರೂಪಾಯಿ ಉಳಿಸಿದ್ದಾನೆ ಜಾತ್ರೆಯಲ್ಲಿ ಕೋನ್ ಐಸ್ಕ್ರೀಮ್ ಕೊಳ್ಳಲು.
ಅಂತೂ ಎಲ್ಲರೂ ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿತು. ಜಾತ್ರೆ ನಾಳೆಯೆಂದರೆ, ಇವನಿಗೆ ಹಿಂದಿನ ರಾತ್ರಿಯಿಂದಲೇ ತವಕ. ನಾಳೆ ಏನೆಲ್ಲ ಮಾಡಬಹುದೆಂಬ ಕಲ್ಪನೆಯಲ್ಲಿ ರಾತ್ರಿಯಿಡೀ ನಿದ್ರೆಯಿಲ್ಲ. ಹೌದೂ, ಇಷ್ಟಕ್ಕೂ ಅವಳು ಬರಬಹುದಾ? ತಿಂಗಳ ಹಿಂದೆ ಸಿಕ್ಕಿದ್ದಳು. ಕೇಳಿದರೆ, ಬಟ್ಟಲುಗಂಗಳ ಮಿಟುಕಿಸುತ್ತ, "ಅಮ್ಮ ಹೋಗು ಅಂದ್ರೆ ಬರ್ತೀನಿ" ಅಂದಿದ್ಲು ನಾಚುತ್ತಾ. ಬಂದರೆ ಆ ನೂಕುನುಗ್ಗಲಿನಲ್ಲಿ ಸಿಗುತ್ತಾಳೋ ಇಲ್ಲವೋ? ಸಿಕ್ಕರೆ ಎಷ್ಟು ಚಂದ.. ಜಾತ್ರೆಪೇಟೆಯ ಜಂಗುಳಿಯಲ್ಲಿ ಕೈಕೈ ಹಿಡಿದು ನಡೆಯಬಹುದು. ತೊಟ್ಟಿಲಿನ ಗೂಡಿನಲ್ಲಿ ಇಬ್ಬರೇ ಕೂತು ಆಕಾಶಕ್ಕೇರಬಹುದು. ತೊಟ್ಟಿಲು ಧಿಗ್ಗನೆ ಕೆಳಗಿಳಿಯುವಾಗ, ಅವಳೆದೆ ಢವಗುಟ್ಟುವಾಗ, ಕೈಯದುಮಿ ಬೆಚ್ಚಗೆ ಧೈರ್ಯ ತುಂಬಬಹುದು. ಗೂಡಂಗಡಿಯಲ್ಲಿ ಅವಳಿಷ್ಟದ ಬಣ್ಣದ ಬಳೆ ಕೊಡಿಸಿ, ನೋಯುವ ಕೈ ಲೆಕ್ಕಿಸದೆ ಬಳೆಗಾರ ಬಳೆ ಅವಳಿಗೆ ತೊಡಿಸುವಾಗ, ಸಣ್ಣ ಕಣ್ಣೀರ ಹನಿಯಲ್ಲಿ ಜತೆಯಾಗಬಹುದು. ಬಂಗಾರಬಣ್ಣದ ಕಿವಿಯೋಲೆಯನ್ನವಳು ಆಸೆ ಪಟ್ಟು ಕೊಂಡಾಗ ನಾನೇ ಹಣ ಕೊಟ್ಟು ಯಜಮಾನನಂತೆ ಮೆರೆಯಬಹುದು. ಆ ರಾತ್ರಿ ಸುದೀರ್ಘವೆನಿಸುತ್ತದೆ.
ಬೆಳಿಗ್ಗೆ ಎದ್ದು ತಯಾರಾಗಿ ಹೊರಟರೆ ಬಸ್ಸುಗಳೆಲ್ಲ ತುಂಬಿ ತುಳುಕುತ್ತಿವೆ. ಟಾಪಿನಲ್ಲೂ ಜನ! ಹೊಸದಾಗಿ ಹತ್ತು 'ಜಾತ್ರಾ ವಿಶೇಷ' ಬಸ್ಸುಗಳನ್ನು ಬಿಟ್ಟಿದ್ದರೂ ಎಲ್ಲ ಬಸ್ಸುಗಳೂ ರಶ್ಶು. ಜತೆಗೆ ಒಂದರ ಹಿಂದೆ ಒಂದರಂತೆ ಹೋಗುತ್ತಿರುವ ಬೈಕುಗಳು. ಪಕ್ಕದೂರಿನ ಗೋಪಾಲ ಪೂಜಾರಿಯಂತೂ ತನ್ನ ಟ್ರಾಕ್ಟರಿನಲ್ಲಿ ಊರವರನ್ನೆಲ್ಲ ಕೂರಿಸಿಕೊಂಡು ಹೊರಟಿದ್ದಾನೆ. ಅಲ್ಲದೇ ಆ ಟ್ರಾಕ್ಟರಿನ ಇಕ್ಕೆಲಕ್ಕೂ ಬಾಳೆಕಂದಿನ ಸಿಂಗಾರ ಬೇರೆ! ಬಸ್ಸ್ಟಾಂಡಿನಲ್ಲಿ ನಿಂತವರಿಗೆ ಕೈ ಮಾಡುತ್ತ ಅವರೆಲ್ಲ ‘ಹೋ!’ ಎಂದು ಕೂಗುತ್ತಿದ್ದಾರೆ. ಅಂತೂ ಗುದ್ದಾಡಿಕೊಂಡು ಸಾಗರ ತಲುಪಿದ್ದಾಗಿದೆ.
ಜಾತ್ರೆಪೇಟೆಗೆ ಬಂದು ನೋಡಿದರೆ, ನಿಲ್ಲಲೆಲ್ಲಿ ಜಾಗವಿದೆ! ಸಾಗರದ ತುಂಬ ಜನಸಾಗರ! ಎಲ್ಲರೂ ತಳ್ಳಿಕೊಂಡು ಹೋಗುವವರೇ. ರಸ್ತೆಯ ಎರಡೂ ಬದಿಗೆ ಸಾಲು ಸಾಲು ಅಂಗಡಿಗಳು. ಎಲ್ಲೆಲ್ಲೂ ಝಗಮಗ ದೀಪಗಳು. ಮಕ್ಕಳ ಆಟಿಕೆಗಳ ಅಂಗಡಿಗಳು, ಅಲಂಕಾರಿಕ ವಸ್ತುಗಳ ದುಖಾನುಗಳು, ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳು, ತಿಂಡಿ-ತಿನಿಸುಗಳ ಮುಂಗಟ್ಟುಗಳು, ಅಲ್ಲಲ್ಲಿ ಉಚಿತ ನೀರು-ಮಜ್ಜಿಗೆ ಹಂಚುವ ಕಾರ್ಯಕರ್ತರು... ಓಹೋಹೋ! ಎಲ್ಲಿ ನೋಡಿದರೂ ಜನ ಎಲ್ಲಿ ನೋಡಿದರೂ ಜಂಗುಳಿ. ಕಿವಿಗಡಚಿಕ್ಕುವ ಪೀಪಿಯ ಶಬ್ದ. ಯಾರೋ ನೆಂಟರು ಸಿಕ್ಕರು ಅಂತ ಅಲ್ಲೇ ಮಾತಾಡಿಸುತ್ತ ನಿಂತವರು, ಎರಡು ಬಕೆಟ್ಟು ನೂರು ರೂಪಾಯಿಗೆ ಕೊಡಿ ಅಂತ ಅಂಗಡಿಯವನ ಬಳಿ ಬಗ್ಗಿ ಚೌಕಾಶಿ ಮಾಡುತ್ತಿರುವವರು, ಮಿರ್ಚಿ ತಿಂದು ಖಾರ ನೆತ್ತಿಗೇರಿ ಚಹಾ ಕುಡಿಯುತ್ತಿರುವವರು, ಹಾಕಿಸಿಕೊಂಡಿದ್ದ ತೆಳು ಕವರು ಒಡೆದು ಬೀದಿ ತುಂಬ ಮಂಡಕ್ಕಿ ಚೆಲ್ಲಿಕೊಂಡು ತಬ್ಬಿಬ್ಬಾದವರು.. ಒಬ್ಬರೇ ಇಬ್ಬರೇ! ಇವರೆಲ್ಲರ ನಡುವೆಯೇ ತೂರಿಕೊಂಡು ಹೋಗಬೇಕಿದೆ ನಾವೂ.
ಮಾರಿಕಾಂಬಾ ದೇವಸ್ಥಾನದ ಎದುರು ಸಾವಿರ ಜನಗಳ ಕ್ಯೂ ಇದೆ. ದೊಡ್ಡ ಪೆಂಡಾಲಿನ ಕೆಳಗೆ ನಿಂತ ಎಲ್ಲರ ಕೈಯಲ್ಲೂ ಹಣ್ಣು-ಕಾಯಿಯ ಕೈಚೀಲ. ಮೈತುಂಬ ಭಕ್ತಿ. ಎಲ್ಲರಿಗೂ ಅಮ್ಮನ ಕೆಂಪು ಮೊಗವ ಕಣ್ತುಂಬಿಕೊಂಡು ಕೈ ಮುಗಿದು ಬರುವ ತವಕ. ಮನೆಯಲ್ಲಿ ಯಾರಿಗೂ ಖಾಯಿಲೆ-ಕಸಾಲೆ ಬರದಂತೆ ಕಾಪಾಡಮ್ಮಾ ಅಂತ ಬೇಡಿಕೊಂಡು, ಕೈಲಾದಷ್ಟು ಕಾಣಿಕೆ ಹಾಕಬೇಕಿದೆ. ಪ್ರಸಾದದ ಹೂವನ್ನು ತಲೆಮೇಲೆ ಹಾಕಿಕೊಂಡು ಧನ್ಯತೆಯನ್ನನುಭವಿಸಬೇಕಿದೆ.
ಆಮೇಲೆ ಜಾತ್ರೆಬೀದಿಯ ಸುತ್ತುವುದು ಇದ್ದಿದ್ದೇ. ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು, ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು, ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು, ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು.. ಅಮ್ಮನ ಒರಟು ಕೈ ಸೇರಲೆಂದೇ ಕಾಯುತ್ತಿರುವ ಹಸಿರು ಬಳೆಗಳು, ಅಜ್ಜನ ಚಳಿಗಾಗಲು ತಯಾರಿರುವ ಕೆಂಪು ಮಂಕಿಕ್ಯಾಪು, ತಂಗಿ ವರ್ಷಗಳಿಂದ ಹುಡುಕುತ್ತಿದ್ದ ನವಿಲಿನ ಚಿತ್ರದ ಕ್ಲಿಪ್ಪು, ಅಕ್ಕನ ಮಗನಿಗೆ ಆಡಲು ಜೆಸಿಬಿ, ಹಟ ಮಾಡಿದ ಅವನ ಅಣ್ಣನಿಗೆ ಕೆಂಪು ದೀಪದ ಕೊಂಬುಗಳು.. ಆದರೆ ಅದ್ಯಾಕೋ ಅಪ್ಪ ಮಾತ್ರ ಏನನ್ನೂ ಕೊಳ್ಳುವುದೇ ಇಲ್ಲ ಜಾತ್ರೆಯಲ್ಲಿ. ಇಂತವನ್ನೆಲ್ಲ ಎಷ್ಟೋ ನೋಡಿದವನಂತೆ, ತಾನು ಇದನ್ನೆಲ್ಲ ಮೀರಿದವನಂತೆ, ಗಂಭೀರವಾಗಿ ಎಲ್ಲರನ್ನೂ ಕರೆದುಕೊಂಡು ಜಾತ್ರೆಬೀದಿ ಸುತ್ತುತ್ತಿದ್ದಾನೆ.
ಅತ್ತ ನೆಹರು ಮೈದಾನದಲ್ಲಿ ಅಷ್ಟೆತ್ತರದಲ್ಲಿ ಸುತ್ತುತ್ತಿರುವ ಜಿಯಾಂಟ್ ವೀಲು ಎಲ್ಲರನ್ನೂ ಕರೆಯುತ್ತಿದೆ. "ನಾನು ಹತ್ತೋದಿಲ್ಲ, ನಂಗೆ ತಲೆ ತಿರುಗುತ್ತೆ" ಅಂದ ಹೆಂಡತಿಯನ್ನೂ ಬಿಡದೇ ಎಳಕೊಂಡು ಹೋಗಿದ್ದಾನೆ ಹೊಸಬಿಸಿಯ ಗಂಡ. ಅತ್ತಿತ್ತ ತೂಗುತ್ತಿರುವ ದೋಣಿಯಲ್ಲಿ ಜನಗಳ ಕೇಕೆ. ಕೆಲವರಿಗೆ ಟೊರಾಟೊರಾವನ್ನು ಹತ್ತಿ ಒಂದು ಕೈ ನೋಡಿಯೇಬಿಡುವ ತಲುಬಾದರೆ, ಇನ್ನು ಕೆಲವರಿಗೆ ಆಟವಾಡುತ್ತಿರುವ ತಮ್ಮ ಮಕ್ಕಳನ್ನು ದೂರದಲ್ಲಿ ನಿಂತು ನೋಡುವುದರಲ್ಲೇ ಖುಷಿ. ಮೃತ್ಯುಕೂಪದಲ್ಲಿ ಜೀವದ ಹಂಗು ತೊರೆದು ಕೈ ಬಿಟ್ಟು ಬೈಕು ಓಡಿಸುವವರನ್ನು ನೋಡಿ ಹಲವರು ಬೆರಗಾದರೆ, ಮಿನಿ ಸರ್ಕಸ್ಸಿನಲ್ಲಿ ಹಗ್ಗ ಹಿಡಿದು ತೇಲುವ ನೀಳಕಾಯದ ಬೆಡಗಿಯರ ನೋಡಿ ಹಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶಂಕರ ಭಟ್ಟರು ಇಪ್ಪತ್ತು ರೂಪಾಯಿ ಖರ್ಚು ಮಾಡಿ ರಿಂಗ್ ಎಸೆದು ಒಂದು ಸೋಪಿನ ಡಬ್ಬಿ ಗೆದ್ದು ಸಾಧನೆ ಮಾಡಿದ್ದಾರೆ. ಮಾಯಾಕನ್ನಡಿಯೆದುರು ನಿಂತು ತನ್ನದೇ ಕುಬ್ಜರೂಪ ನೋಡಿ ಪಕ್ಕದ ಮನೆ ರಾಧಕ್ಕ ಬಿದ್ದುಬಿದ್ದು ನಕ್ಕಿದ್ದಾಳೆ. ಕೊಂಡ ಬಲೂನನ್ನು ಹತ್ತು ನಿಮಿಷದೊಳಗೆ ಒಡೆದುಕೊಂಡದ್ದಕ್ಕೆ ಪುಟ್ಟ ಅಮ್ಮನಿಂದ ಸರಿಯಾಗಿ ಬೈಸಿಕೊಂಡಿದ್ದಾನೆ.
ಕತ್ತಲಾದಂತೆ ಜಂಗುಳಿ ಇನ್ನಷ್ಟು ಜಾಸ್ತಿಯಾಗಿದೆ. ಈಗಷ್ಟೆ ಬಂದ ಕೆಲವರಿಗೆ ಜಾತ್ರೆಯನ್ನೆಲ್ಲ ನೋಡಿ ಮುಗಿಸಬೇಕಿರುವ ತರಾತುರಿಯಾದರೆ, ಮಧ್ಯಾಹ್ನವೇ ಬಂದವರಿಗೆ ಊರಿಗೆ ಹೊರಡುವ ಗಡಿಬಿಡಿ. ಆ ನೂಕಿನಲ್ಲಿ ಪಿಕ್ಪಾಕೆಟ್ ಮಾಡುವವರಿಂದ ಪರ್ಸು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವವರು, ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಗಟ್ಟಿಯಾಗಿ ಅವರ ಕೈ ಹಿಡಕೊಂಡವರು, ಇಂಥಲ್ಲಿ ಸಿಗುತ್ತೇನೆಂದು ಹೇಳಿದವರ ಕಾಯುತ್ತ ನಿಂತವರು, ರಾತ್ರಿಯ ನಾಟಕ ಶುರುವಾಗಲು ಇನ್ನೂ ಸಮಯವಿದೆಯೆಂದು ಸುಮ್ಮನೆ ಕಟ್ಟೆಯ ಮೇಲೆ ಕೂತವರು.. ಹೀಗೆ ಕಾವಳಕ್ಕೆ ಇನ್ನಷ್ಟು ಮೆರುಗು ನೀಡುತ್ತ ಜಾತ್ರೆಬೀದಿ ಜನಗಳನ್ನು ಪೊರೆಯುತ್ತಿದೆ. ಸಾವಿರ ದೀಪಗಳಿಂದ ಇರುಳನ್ನು ಬೆಳಗುತ್ತಿದೆ. ನಡುರಾತ್ರಿಯಾದರೂ ತೆರೆದಿರುವ ಅಂಗಡಿಗಳು, ಕಾವಲಿಯ ಮೇಲೆ ಸೃಷ್ಟಿಯಾಗುತ್ತಿರುವ ನೂರು ವಿಧದ ದೋಸೆಗಳ ವೃತ್ತಗಳು, ಬೆಂಡು-ಬತ್ತಾಸು ಕಟ್ಟಿಸಿಕೊಳ್ಳಲು ಮುಗಿಬಿದ್ದಿರುವ ಜನಗಳು, ಮ್ಯಾಜಿಕ್ ಶೋ ನೋಡಿ ತಲೆದೂಗುತ್ತ ಹೊರಬರುತ್ತಿರುವವರು... ಭಕ್ತಿ ಖುಷಿ ಉನ್ಮಾದ ಆತಂಕ ಎಲ್ಲವೂ ತುಂಬಿರುವ ಜಾತ್ರೆ ನಸುಕಿನವರೆಗೂ ಎಚ್ಚರಿರುತ್ತದೆ ಕಣ್ಣು ಸಹ ಮುಚ್ಚೊಡೆಯದೆ.
ಅಷ್ಟು ಸಂಭ್ರಮದ, ಅಂತಹ ಸಡಗರದ, ಆ ಪರಿ ಗದ್ದಲದ, ಎಷ್ಟೋ ದಿನಗಳ ಕಾತರದ, ಲಕ್ಷ ಲಕ್ಷ ಜನಗಳು ಪಾಲ್ಗೊಂಡ ಜಾತ್ರೆ ಎಂಟು ದಿನಗಳಲ್ಲಿ ಮುಗಿಯುತ್ತದೆ. ಜಾತ್ರೆ ಮುಗಿದಮೇಲೂ ಒಂದಷ್ಟು ದಿನ ಬೀದಿಬದಿಯ ಅಂಗಡಿಗಳು ಹಾಗೆಯೇ ಇರುತ್ತವೆ. ಈಗ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಎಂದು ಕೊಳ್ಳಲು ಕೆಲವರು ಪೇಟೆಗೆ ಬರುವರು. ಮೈದಾನದಲ್ಲಿನ ಮನರಂಜನಾ ಆಟಗಳು ಇನ್ನೂ ಇವೆ. ತೊಟ್ಟಿಲು ಇನ್ನೂ ತಿರುಗುತ್ತಿದೆ. ಕಾಲೇಜು ಹುಡುಗರು ಕ್ಲಾಸು ಬಂಕ್ ಮಾಡಿ ಬಿರುಬಿಸಿಲ ಮಧ್ಯಾಹ್ನವೇ ತೊಟ್ಟಿಲು ಹತ್ತಿ ಕುಣಿಯುತ್ತಿದ್ದಾರೆ. ಅತ್ತ ಅಗ್ಗಕ್ಕೆ ಸಿಕ್ಕಿತು ಅಂತ ತಂದುಕೊಂಡ ಬಕೇಟಿನ ಹಿಡಿಕೈ ಎರಡೇ ದಿನಕ್ಕೆ ಮುರಿದು ಮನೆಯೊಡತಿ ಪೆಚ್ಚುಮೋರೆ ಹಾಕಿಕೊಂಡಿದ್ದಾಳೆ. ಜಾತ್ರೆಯಿಂದ ತಂದಿದ್ದ ಆಟದ ಸಾಮಾನು ವಾರದೊಳಗೆ ಬೇಸರ ಬಂದು ಹುಡುಗರು ಕ್ರಿಕೆಟ್ಟು-ವೀಡಿಯೋ ಗೇಮುಗಳಿಗೆ ಮರಳಿದ್ದಾರೆ.
ಜಾತ್ರೆ ಮುಗಿದ ಬೀದಿಯಲ್ಲೀಗ ಮೌನ. ವ್ಯಾಪಾರಿಗಳೆಲ್ಲ ತಮ್ಮ ಗುಡಾರದೊಂದಿಗೆ ಗದ್ದಲವನ್ನೂ ಬಳುಗಿ ಕೊಂಡೊಯ್ದರೋ ಎನ್ನುವಂತೆ. ಜಾತ್ರೆ ನಡೆದಿತ್ತೆಂಬುದಕ್ಕೆ ಕುರುಹಾಗಿ ಬೀದಿಯ ತುಂಬ ಕಸ. ಅಂಗಡಿಯವರು ಮಳಿಗೆ ಹಾಕಲು ತೋಡಿದ ಸಣ್ಣ ಗುಂಡಿಗಳು, ಪಕ್ಕದಲ್ಲೆದ್ದ ಮಣ್ಣ ಹೆಂಟೆ. ಮಾರಮ್ಮನೂ ದೈನಿಕದ ಮಂಗಳರಾತಿಗೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದಾಳೆ. ಅವಳ ಗುಡಿಯೆದುರು ಹಾಕಿದ್ದ ಶಾಮಿಯಾನಾ ಈಗ ತೆರವಾಗಿ ಬೀದಿಗೆ ಬಿಸಿಲು ರಾಚುತ್ತಿದೆ. ವಾಹನಗಳು ಯಾವಾಗಿನಂತೆ ರಸ್ತೆಯಲ್ಲಿ ಓಡಾಡತೊಡಗಿವೆ. ಪೇಟೆ ಮೈಮುರಿದುಕೊಂಡು ಮತ್ತೆ ನಿತ್ಯವ್ಯಾಪಾರಕ್ಕೆ ತೆರೆದುಕೊಂಡಿದೆ. ಹಕ್ಕಿಗಳು ಮರಗಳಿಗೆ ಮರಳಿವೆ. ಜಾತ್ರೆಗೆ ಸಂಭ್ರಮವನ್ನು ಹೊತ್ತುತಂದಿದ್ದ ವ್ಯಾಪಾರಿಗಳೆಲ್ಲ ಈಗ ಮತ್ತಾವುದೋ ಊರಿನಲ್ಲಿ ಡೇರೆ ಹಾಕಿದ್ದಾರೆ. ಅವರು ಮತ್ತೆ ಯಾವಾಗ ಬರುವರೋ, ಎಷ್ಟು ಬೇಗ ಮೂರು ವರ್ಷ ಕಳೆವುದೋ ಎಂದು ಸಾಗರ ಕಾಯುತ್ತದೆ.
ಜಾತ್ರೆಗೆ ಇನ್ನೂ ಒಂದು ತಿಂಗಳಿದೆ ಎನ್ನುವಾಗಲೇ ಸಾಗರ ಸಂಭ್ರಮಕ್ಕೆ ಸಿದ್ಧವಾಗುತ್ತದೆ. ಅಂಗಡಿಯವರೆಲ್ಲ ತಮ್ಮ ಸಾಮಗ್ರಿಗಳನ್ನು ಕೆಳಗಿಳಿಸಿ, ಅರೆಗಳನ್ನು ಸ್ವಚ್ಛಗೊಳಿಸಿ, ಧೂಳು ಕೂತ ಫ್ಯಾನಿನ ಪಂಕಗಳನ್ನು ಒರೆಸಿ, ಗಾಜಿನ ಬಾಟಲಿಗಳನ್ನು ತೊಳೆದೊಣಗಿಸಿ, ಬಣ್ಣ ಹೋದ ಗೋಡೆಗಳಿಗೆ ತೇಪೆ ಹಚ್ಚಿ ಸಿಂಗರಿಸುತ್ತಾರೆ. ಮುನಿಸಿಪಾಲಿಟಿಯವರೂ ಎಚ್ಚರಗೊಂಡು ಕಿತ್ತುಹೋದ ಟಾರು ರಸ್ತೆಗಳನ್ನು ಮುಚ್ಚಿ ಸಪಾಟು ಮಾಡುತ್ತಾರೆ. ಮಾರಿಗುಡಿಯ ಅರ್ಚಕರು ಹೊಸ ಮಡಿ ಕೊಳ್ಳುತ್ತಾರೆ. ಅಕ್ಕಪಕ್ಕದ ಗ್ರಂಥಿಕೆ ಅಂಗಡಿಗಳಲ್ಲಿ ತೆಂಗಿನಕಾಯಿ, ಅರಿಶಿಣ-ಕುಂಕುಮ, ಅಗರಬತ್ತಿ-ಕರ್ಪೂರಗಳ ದಾಸ್ತಾನು ಜಾಸ್ತಿಯಾಗುತ್ತದೆ. ಬರುವ ವಾಹನಗಳನ್ನೂ-ಜನಗಳನ್ನೂ ಹೇಗೆ ಸಂಬಾಳಿಸಬೇಕು, ಎಲ್ಲೆಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು, ಎಲ್ಲೆಲ್ಲಿ ಬ್ಯಾರಿಕೇಡ್ ಹಾಕಬೇಕು ಎಂಬುದಾಗಿ ಪೋಲೀಸರು ತಾಲೀಮು ನಡೆಸುತ್ತಾರೆ. "ಈ ಸಲದ ಜಾತ್ರೆಯಲ್ಲಿ ಒಂದು ದೋಸೆ ಕೌಂಟರ್ ಮಾಡ್ಲೇಬೇಕು" ಅಂತ ಪ್ಲಾನ್ ಮಾಡಿರುವ ಶ್ರೀಧರನಾಯ್ಕ, ಸ್ಟಾಲ್ ಇಡಲು ಬಾಡಿಗೆ ಎಷ್ಟು ಅಂತ ಅವರಿವರನ್ನು ವಿಚಾರಿಸುತ್ತಾನೆ. ಈಗಾಗಲೇ ರಚನೆಯಾಗಿರುವ ಜಾತ್ರಾ ಕಮಿಟಿಯಲ್ಲಿ, ಮಾಡಬೇಕಿರುವ ವ್ಯವಸ್ಥೆಗಳ ಬಗ್ಗೆ, ರಥೋತ್ಸವದ ಸಿದ್ಧತೆಯ ಬಗ್ಗೆ ಚರ್ಚೆ ನಡೆಯುತ್ತದೆ.
ಶಾಲಾಪರೀಕ್ಷೆಗಳಿಗೆ ಇನ್ನೊಂದು ತಿಂಗಳು ಇದೆ ಎನ್ನುವಾಗ ಬರುತ್ತದೆ ಜಾತ್ರೆ. ಒಂದು ಕಡೆ ಪರೀಕ್ಷೆಗೆ ಓದಿಕೊಳ್ಳಬೇಕಾದ ಅನಿವಾರ್ಯತೆ, ಇನ್ನೊಂದು ಕಡೆ ಜಾತ್ರೆಗೆ ತಪ್ಪಿಸಲಾಗದ ಇಕ್ಕಟ್ಟು. ಗೆಳೆಯರೆಲ್ಲ ಸೇರಿ ಶನಿವಾರ ಸಂಜೆ ಹೋಗುವುದು ಅಂತ ತೀರ್ಮಾನವಾಗಿದೆ. ಅಪ್ಪ-ಅಮ್ಮರ ಬಳಿ ದುಂಬಾಲು ಬಿದ್ದು ಹತ್ತತ್ತು ರೂಪಾಯಿಯಂತೆ ಹಣ ಸಂಗ್ರಹ ಈಗಿನಿಂದಲೇ ಶುರುವಾಗಿದೆ. ಕೊನೇ ಘಳಿಗೆಯಲ್ಲಿ ಅಜ್ಜನ ಬಳಿ ಕೇಳಿದರೆ ಐವತ್ತು ರೂಪಾಯಿಯಾದರೂ ಕೊಡದೇ ಇರನು. ತೊಟ್ಟಿಲಿಗೆ ಮೂವತ್ತು, ದೋಣಿಗೆ ಇಪ್ಪತ್ತು, ಮೃತ್ಯುಕೂಪಕ್ಕೆ ಹದಿನೈದು, ಐಸ್ಕ್ರೀಮು-ಮಸಾಲ ಮಂಡಕ್ಕಿ-ಬತ್ತಾಸು ತಿನ್ನಲು ಇಂತಿಷ್ಟು, ನಾಟಕ ನೋಡಲು ಎಷ್ಟಿದೆಯೋ.. ಎಲ್ಲಾ ಅಂದಾಜು ಮಾಡಿ ಲೆಕ್ಕ ಹಾಕಿ, ಹಣ ಉಳಿದರೆ ಇನ್ನೊಂದು ರೌಂಡು ಪೇಟೆ ಸುತ್ತಲಾದೀತೇ ಎಂಬ ಯೋಚನೆಯೂ ಇದೆ. ಅಂಗಡಿಯಿಂದ ಸಾಮಾನು ತರಲು ಹೋದ ಪುಟ್ಟಪೋರ, ಅಮ್ಮನಿಗೆ ಸುಳ್ಳು ಲೆಕ್ಕ ತೋರಿಸಿ ಹತ್ತು ರೂಪಾಯಿ ಉಳಿಸಿದ್ದಾನೆ ಜಾತ್ರೆಯಲ್ಲಿ ಕೋನ್ ಐಸ್ಕ್ರೀಮ್ ಕೊಳ್ಳಲು.
ಅಂತೂ ಎಲ್ಲರೂ ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿತು. ಜಾತ್ರೆ ನಾಳೆಯೆಂದರೆ, ಇವನಿಗೆ ಹಿಂದಿನ ರಾತ್ರಿಯಿಂದಲೇ ತವಕ. ನಾಳೆ ಏನೆಲ್ಲ ಮಾಡಬಹುದೆಂಬ ಕಲ್ಪನೆಯಲ್ಲಿ ರಾತ್ರಿಯಿಡೀ ನಿದ್ರೆಯಿಲ್ಲ. ಹೌದೂ, ಇಷ್ಟಕ್ಕೂ ಅವಳು ಬರಬಹುದಾ? ತಿಂಗಳ ಹಿಂದೆ ಸಿಕ್ಕಿದ್ದಳು. ಕೇಳಿದರೆ, ಬಟ್ಟಲುಗಂಗಳ ಮಿಟುಕಿಸುತ್ತ, "ಅಮ್ಮ ಹೋಗು ಅಂದ್ರೆ ಬರ್ತೀನಿ" ಅಂದಿದ್ಲು ನಾಚುತ್ತಾ. ಬಂದರೆ ಆ ನೂಕುನುಗ್ಗಲಿನಲ್ಲಿ ಸಿಗುತ್ತಾಳೋ ಇಲ್ಲವೋ? ಸಿಕ್ಕರೆ ಎಷ್ಟು ಚಂದ.. ಜಾತ್ರೆಪೇಟೆಯ ಜಂಗುಳಿಯಲ್ಲಿ ಕೈಕೈ ಹಿಡಿದು ನಡೆಯಬಹುದು. ತೊಟ್ಟಿಲಿನ ಗೂಡಿನಲ್ಲಿ ಇಬ್ಬರೇ ಕೂತು ಆಕಾಶಕ್ಕೇರಬಹುದು. ತೊಟ್ಟಿಲು ಧಿಗ್ಗನೆ ಕೆಳಗಿಳಿಯುವಾಗ, ಅವಳೆದೆ ಢವಗುಟ್ಟುವಾಗ, ಕೈಯದುಮಿ ಬೆಚ್ಚಗೆ ಧೈರ್ಯ ತುಂಬಬಹುದು. ಗೂಡಂಗಡಿಯಲ್ಲಿ ಅವಳಿಷ್ಟದ ಬಣ್ಣದ ಬಳೆ ಕೊಡಿಸಿ, ನೋಯುವ ಕೈ ಲೆಕ್ಕಿಸದೆ ಬಳೆಗಾರ ಬಳೆ ಅವಳಿಗೆ ತೊಡಿಸುವಾಗ, ಸಣ್ಣ ಕಣ್ಣೀರ ಹನಿಯಲ್ಲಿ ಜತೆಯಾಗಬಹುದು. ಬಂಗಾರಬಣ್ಣದ ಕಿವಿಯೋಲೆಯನ್ನವಳು ಆಸೆ ಪಟ್ಟು ಕೊಂಡಾಗ ನಾನೇ ಹಣ ಕೊಟ್ಟು ಯಜಮಾನನಂತೆ ಮೆರೆಯಬಹುದು. ಆ ರಾತ್ರಿ ಸುದೀರ್ಘವೆನಿಸುತ್ತದೆ.
ಬೆಳಿಗ್ಗೆ ಎದ್ದು ತಯಾರಾಗಿ ಹೊರಟರೆ ಬಸ್ಸುಗಳೆಲ್ಲ ತುಂಬಿ ತುಳುಕುತ್ತಿವೆ. ಟಾಪಿನಲ್ಲೂ ಜನ! ಹೊಸದಾಗಿ ಹತ್ತು 'ಜಾತ್ರಾ ವಿಶೇಷ' ಬಸ್ಸುಗಳನ್ನು ಬಿಟ್ಟಿದ್ದರೂ ಎಲ್ಲ ಬಸ್ಸುಗಳೂ ರಶ್ಶು. ಜತೆಗೆ ಒಂದರ ಹಿಂದೆ ಒಂದರಂತೆ ಹೋಗುತ್ತಿರುವ ಬೈಕುಗಳು. ಪಕ್ಕದೂರಿನ ಗೋಪಾಲ ಪೂಜಾರಿಯಂತೂ ತನ್ನ ಟ್ರಾಕ್ಟರಿನಲ್ಲಿ ಊರವರನ್ನೆಲ್ಲ ಕೂರಿಸಿಕೊಂಡು ಹೊರಟಿದ್ದಾನೆ. ಅಲ್ಲದೇ ಆ ಟ್ರಾಕ್ಟರಿನ ಇಕ್ಕೆಲಕ್ಕೂ ಬಾಳೆಕಂದಿನ ಸಿಂಗಾರ ಬೇರೆ! ಬಸ್ಸ್ಟಾಂಡಿನಲ್ಲಿ ನಿಂತವರಿಗೆ ಕೈ ಮಾಡುತ್ತ ಅವರೆಲ್ಲ ‘ಹೋ!’ ಎಂದು ಕೂಗುತ್ತಿದ್ದಾರೆ. ಅಂತೂ ಗುದ್ದಾಡಿಕೊಂಡು ಸಾಗರ ತಲುಪಿದ್ದಾಗಿದೆ.
ಜಾತ್ರೆಪೇಟೆಗೆ ಬಂದು ನೋಡಿದರೆ, ನಿಲ್ಲಲೆಲ್ಲಿ ಜಾಗವಿದೆ! ಸಾಗರದ ತುಂಬ ಜನಸಾಗರ! ಎಲ್ಲರೂ ತಳ್ಳಿಕೊಂಡು ಹೋಗುವವರೇ. ರಸ್ತೆಯ ಎರಡೂ ಬದಿಗೆ ಸಾಲು ಸಾಲು ಅಂಗಡಿಗಳು. ಎಲ್ಲೆಲ್ಲೂ ಝಗಮಗ ದೀಪಗಳು. ಮಕ್ಕಳ ಆಟಿಕೆಗಳ ಅಂಗಡಿಗಳು, ಅಲಂಕಾರಿಕ ವಸ್ತುಗಳ ದುಖಾನುಗಳು, ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳು, ತಿಂಡಿ-ತಿನಿಸುಗಳ ಮುಂಗಟ್ಟುಗಳು, ಅಲ್ಲಲ್ಲಿ ಉಚಿತ ನೀರು-ಮಜ್ಜಿಗೆ ಹಂಚುವ ಕಾರ್ಯಕರ್ತರು... ಓಹೋಹೋ! ಎಲ್ಲಿ ನೋಡಿದರೂ ಜನ ಎಲ್ಲಿ ನೋಡಿದರೂ ಜಂಗುಳಿ. ಕಿವಿಗಡಚಿಕ್ಕುವ ಪೀಪಿಯ ಶಬ್ದ. ಯಾರೋ ನೆಂಟರು ಸಿಕ್ಕರು ಅಂತ ಅಲ್ಲೇ ಮಾತಾಡಿಸುತ್ತ ನಿಂತವರು, ಎರಡು ಬಕೆಟ್ಟು ನೂರು ರೂಪಾಯಿಗೆ ಕೊಡಿ ಅಂತ ಅಂಗಡಿಯವನ ಬಳಿ ಬಗ್ಗಿ ಚೌಕಾಶಿ ಮಾಡುತ್ತಿರುವವರು, ಮಿರ್ಚಿ ತಿಂದು ಖಾರ ನೆತ್ತಿಗೇರಿ ಚಹಾ ಕುಡಿಯುತ್ತಿರುವವರು, ಹಾಕಿಸಿಕೊಂಡಿದ್ದ ತೆಳು ಕವರು ಒಡೆದು ಬೀದಿ ತುಂಬ ಮಂಡಕ್ಕಿ ಚೆಲ್ಲಿಕೊಂಡು ತಬ್ಬಿಬ್ಬಾದವರು.. ಒಬ್ಬರೇ ಇಬ್ಬರೇ! ಇವರೆಲ್ಲರ ನಡುವೆಯೇ ತೂರಿಕೊಂಡು ಹೋಗಬೇಕಿದೆ ನಾವೂ.
ಮಾರಿಕಾಂಬಾ ದೇವಸ್ಥಾನದ ಎದುರು ಸಾವಿರ ಜನಗಳ ಕ್ಯೂ ಇದೆ. ದೊಡ್ಡ ಪೆಂಡಾಲಿನ ಕೆಳಗೆ ನಿಂತ ಎಲ್ಲರ ಕೈಯಲ್ಲೂ ಹಣ್ಣು-ಕಾಯಿಯ ಕೈಚೀಲ. ಮೈತುಂಬ ಭಕ್ತಿ. ಎಲ್ಲರಿಗೂ ಅಮ್ಮನ ಕೆಂಪು ಮೊಗವ ಕಣ್ತುಂಬಿಕೊಂಡು ಕೈ ಮುಗಿದು ಬರುವ ತವಕ. ಮನೆಯಲ್ಲಿ ಯಾರಿಗೂ ಖಾಯಿಲೆ-ಕಸಾಲೆ ಬರದಂತೆ ಕಾಪಾಡಮ್ಮಾ ಅಂತ ಬೇಡಿಕೊಂಡು, ಕೈಲಾದಷ್ಟು ಕಾಣಿಕೆ ಹಾಕಬೇಕಿದೆ. ಪ್ರಸಾದದ ಹೂವನ್ನು ತಲೆಮೇಲೆ ಹಾಕಿಕೊಂಡು ಧನ್ಯತೆಯನ್ನನುಭವಿಸಬೇಕಿದೆ.
ಆಮೇಲೆ ಜಾತ್ರೆಬೀದಿಯ ಸುತ್ತುವುದು ಇದ್ದಿದ್ದೇ. ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು, ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು, ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು, ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು.. ಅಮ್ಮನ ಒರಟು ಕೈ ಸೇರಲೆಂದೇ ಕಾಯುತ್ತಿರುವ ಹಸಿರು ಬಳೆಗಳು, ಅಜ್ಜನ ಚಳಿಗಾಗಲು ತಯಾರಿರುವ ಕೆಂಪು ಮಂಕಿಕ್ಯಾಪು, ತಂಗಿ ವರ್ಷಗಳಿಂದ ಹುಡುಕುತ್ತಿದ್ದ ನವಿಲಿನ ಚಿತ್ರದ ಕ್ಲಿಪ್ಪು, ಅಕ್ಕನ ಮಗನಿಗೆ ಆಡಲು ಜೆಸಿಬಿ, ಹಟ ಮಾಡಿದ ಅವನ ಅಣ್ಣನಿಗೆ ಕೆಂಪು ದೀಪದ ಕೊಂಬುಗಳು.. ಆದರೆ ಅದ್ಯಾಕೋ ಅಪ್ಪ ಮಾತ್ರ ಏನನ್ನೂ ಕೊಳ್ಳುವುದೇ ಇಲ್ಲ ಜಾತ್ರೆಯಲ್ಲಿ. ಇಂತವನ್ನೆಲ್ಲ ಎಷ್ಟೋ ನೋಡಿದವನಂತೆ, ತಾನು ಇದನ್ನೆಲ್ಲ ಮೀರಿದವನಂತೆ, ಗಂಭೀರವಾಗಿ ಎಲ್ಲರನ್ನೂ ಕರೆದುಕೊಂಡು ಜಾತ್ರೆಬೀದಿ ಸುತ್ತುತ್ತಿದ್ದಾನೆ.
ಅತ್ತ ನೆಹರು ಮೈದಾನದಲ್ಲಿ ಅಷ್ಟೆತ್ತರದಲ್ಲಿ ಸುತ್ತುತ್ತಿರುವ ಜಿಯಾಂಟ್ ವೀಲು ಎಲ್ಲರನ್ನೂ ಕರೆಯುತ್ತಿದೆ. "ನಾನು ಹತ್ತೋದಿಲ್ಲ, ನಂಗೆ ತಲೆ ತಿರುಗುತ್ತೆ" ಅಂದ ಹೆಂಡತಿಯನ್ನೂ ಬಿಡದೇ ಎಳಕೊಂಡು ಹೋಗಿದ್ದಾನೆ ಹೊಸಬಿಸಿಯ ಗಂಡ. ಅತ್ತಿತ್ತ ತೂಗುತ್ತಿರುವ ದೋಣಿಯಲ್ಲಿ ಜನಗಳ ಕೇಕೆ. ಕೆಲವರಿಗೆ ಟೊರಾಟೊರಾವನ್ನು ಹತ್ತಿ ಒಂದು ಕೈ ನೋಡಿಯೇಬಿಡುವ ತಲುಬಾದರೆ, ಇನ್ನು ಕೆಲವರಿಗೆ ಆಟವಾಡುತ್ತಿರುವ ತಮ್ಮ ಮಕ್ಕಳನ್ನು ದೂರದಲ್ಲಿ ನಿಂತು ನೋಡುವುದರಲ್ಲೇ ಖುಷಿ. ಮೃತ್ಯುಕೂಪದಲ್ಲಿ ಜೀವದ ಹಂಗು ತೊರೆದು ಕೈ ಬಿಟ್ಟು ಬೈಕು ಓಡಿಸುವವರನ್ನು ನೋಡಿ ಹಲವರು ಬೆರಗಾದರೆ, ಮಿನಿ ಸರ್ಕಸ್ಸಿನಲ್ಲಿ ಹಗ್ಗ ಹಿಡಿದು ತೇಲುವ ನೀಳಕಾಯದ ಬೆಡಗಿಯರ ನೋಡಿ ಹಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶಂಕರ ಭಟ್ಟರು ಇಪ್ಪತ್ತು ರೂಪಾಯಿ ಖರ್ಚು ಮಾಡಿ ರಿಂಗ್ ಎಸೆದು ಒಂದು ಸೋಪಿನ ಡಬ್ಬಿ ಗೆದ್ದು ಸಾಧನೆ ಮಾಡಿದ್ದಾರೆ. ಮಾಯಾಕನ್ನಡಿಯೆದುರು ನಿಂತು ತನ್ನದೇ ಕುಬ್ಜರೂಪ ನೋಡಿ ಪಕ್ಕದ ಮನೆ ರಾಧಕ್ಕ ಬಿದ್ದುಬಿದ್ದು ನಕ್ಕಿದ್ದಾಳೆ. ಕೊಂಡ ಬಲೂನನ್ನು ಹತ್ತು ನಿಮಿಷದೊಳಗೆ ಒಡೆದುಕೊಂಡದ್ದಕ್ಕೆ ಪುಟ್ಟ ಅಮ್ಮನಿಂದ ಸರಿಯಾಗಿ ಬೈಸಿಕೊಂಡಿದ್ದಾನೆ.
ಕತ್ತಲಾದಂತೆ ಜಂಗುಳಿ ಇನ್ನಷ್ಟು ಜಾಸ್ತಿಯಾಗಿದೆ. ಈಗಷ್ಟೆ ಬಂದ ಕೆಲವರಿಗೆ ಜಾತ್ರೆಯನ್ನೆಲ್ಲ ನೋಡಿ ಮುಗಿಸಬೇಕಿರುವ ತರಾತುರಿಯಾದರೆ, ಮಧ್ಯಾಹ್ನವೇ ಬಂದವರಿಗೆ ಊರಿಗೆ ಹೊರಡುವ ಗಡಿಬಿಡಿ. ಆ ನೂಕಿನಲ್ಲಿ ಪಿಕ್ಪಾಕೆಟ್ ಮಾಡುವವರಿಂದ ಪರ್ಸು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವವರು, ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಗಟ್ಟಿಯಾಗಿ ಅವರ ಕೈ ಹಿಡಕೊಂಡವರು, ಇಂಥಲ್ಲಿ ಸಿಗುತ್ತೇನೆಂದು ಹೇಳಿದವರ ಕಾಯುತ್ತ ನಿಂತವರು, ರಾತ್ರಿಯ ನಾಟಕ ಶುರುವಾಗಲು ಇನ್ನೂ ಸಮಯವಿದೆಯೆಂದು ಸುಮ್ಮನೆ ಕಟ್ಟೆಯ ಮೇಲೆ ಕೂತವರು.. ಹೀಗೆ ಕಾವಳಕ್ಕೆ ಇನ್ನಷ್ಟು ಮೆರುಗು ನೀಡುತ್ತ ಜಾತ್ರೆಬೀದಿ ಜನಗಳನ್ನು ಪೊರೆಯುತ್ತಿದೆ. ಸಾವಿರ ದೀಪಗಳಿಂದ ಇರುಳನ್ನು ಬೆಳಗುತ್ತಿದೆ. ನಡುರಾತ್ರಿಯಾದರೂ ತೆರೆದಿರುವ ಅಂಗಡಿಗಳು, ಕಾವಲಿಯ ಮೇಲೆ ಸೃಷ್ಟಿಯಾಗುತ್ತಿರುವ ನೂರು ವಿಧದ ದೋಸೆಗಳ ವೃತ್ತಗಳು, ಬೆಂಡು-ಬತ್ತಾಸು ಕಟ್ಟಿಸಿಕೊಳ್ಳಲು ಮುಗಿಬಿದ್ದಿರುವ ಜನಗಳು, ಮ್ಯಾಜಿಕ್ ಶೋ ನೋಡಿ ತಲೆದೂಗುತ್ತ ಹೊರಬರುತ್ತಿರುವವರು... ಭಕ್ತಿ ಖುಷಿ ಉನ್ಮಾದ ಆತಂಕ ಎಲ್ಲವೂ ತುಂಬಿರುವ ಜಾತ್ರೆ ನಸುಕಿನವರೆಗೂ ಎಚ್ಚರಿರುತ್ತದೆ ಕಣ್ಣು ಸಹ ಮುಚ್ಚೊಡೆಯದೆ.
ಅಷ್ಟು ಸಂಭ್ರಮದ, ಅಂತಹ ಸಡಗರದ, ಆ ಪರಿ ಗದ್ದಲದ, ಎಷ್ಟೋ ದಿನಗಳ ಕಾತರದ, ಲಕ್ಷ ಲಕ್ಷ ಜನಗಳು ಪಾಲ್ಗೊಂಡ ಜಾತ್ರೆ ಎಂಟು ದಿನಗಳಲ್ಲಿ ಮುಗಿಯುತ್ತದೆ. ಜಾತ್ರೆ ಮುಗಿದಮೇಲೂ ಒಂದಷ್ಟು ದಿನ ಬೀದಿಬದಿಯ ಅಂಗಡಿಗಳು ಹಾಗೆಯೇ ಇರುತ್ತವೆ. ಈಗ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಎಂದು ಕೊಳ್ಳಲು ಕೆಲವರು ಪೇಟೆಗೆ ಬರುವರು. ಮೈದಾನದಲ್ಲಿನ ಮನರಂಜನಾ ಆಟಗಳು ಇನ್ನೂ ಇವೆ. ತೊಟ್ಟಿಲು ಇನ್ನೂ ತಿರುಗುತ್ತಿದೆ. ಕಾಲೇಜು ಹುಡುಗರು ಕ್ಲಾಸು ಬಂಕ್ ಮಾಡಿ ಬಿರುಬಿಸಿಲ ಮಧ್ಯಾಹ್ನವೇ ತೊಟ್ಟಿಲು ಹತ್ತಿ ಕುಣಿಯುತ್ತಿದ್ದಾರೆ. ಅತ್ತ ಅಗ್ಗಕ್ಕೆ ಸಿಕ್ಕಿತು ಅಂತ ತಂದುಕೊಂಡ ಬಕೇಟಿನ ಹಿಡಿಕೈ ಎರಡೇ ದಿನಕ್ಕೆ ಮುರಿದು ಮನೆಯೊಡತಿ ಪೆಚ್ಚುಮೋರೆ ಹಾಕಿಕೊಂಡಿದ್ದಾಳೆ. ಜಾತ್ರೆಯಿಂದ ತಂದಿದ್ದ ಆಟದ ಸಾಮಾನು ವಾರದೊಳಗೆ ಬೇಸರ ಬಂದು ಹುಡುಗರು ಕ್ರಿಕೆಟ್ಟು-ವೀಡಿಯೋ ಗೇಮುಗಳಿಗೆ ಮರಳಿದ್ದಾರೆ.
ಜಾತ್ರೆ ಮುಗಿದ ಬೀದಿಯಲ್ಲೀಗ ಮೌನ. ವ್ಯಾಪಾರಿಗಳೆಲ್ಲ ತಮ್ಮ ಗುಡಾರದೊಂದಿಗೆ ಗದ್ದಲವನ್ನೂ ಬಳುಗಿ ಕೊಂಡೊಯ್ದರೋ ಎನ್ನುವಂತೆ. ಜಾತ್ರೆ ನಡೆದಿತ್ತೆಂಬುದಕ್ಕೆ ಕುರುಹಾಗಿ ಬೀದಿಯ ತುಂಬ ಕಸ. ಅಂಗಡಿಯವರು ಮಳಿಗೆ ಹಾಕಲು ತೋಡಿದ ಸಣ್ಣ ಗುಂಡಿಗಳು, ಪಕ್ಕದಲ್ಲೆದ್ದ ಮಣ್ಣ ಹೆಂಟೆ. ಮಾರಮ್ಮನೂ ದೈನಿಕದ ಮಂಗಳರಾತಿಗೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದಾಳೆ. ಅವಳ ಗುಡಿಯೆದುರು ಹಾಕಿದ್ದ ಶಾಮಿಯಾನಾ ಈಗ ತೆರವಾಗಿ ಬೀದಿಗೆ ಬಿಸಿಲು ರಾಚುತ್ತಿದೆ. ವಾಹನಗಳು ಯಾವಾಗಿನಂತೆ ರಸ್ತೆಯಲ್ಲಿ ಓಡಾಡತೊಡಗಿವೆ. ಪೇಟೆ ಮೈಮುರಿದುಕೊಂಡು ಮತ್ತೆ ನಿತ್ಯವ್ಯಾಪಾರಕ್ಕೆ ತೆರೆದುಕೊಂಡಿದೆ. ಹಕ್ಕಿಗಳು ಮರಗಳಿಗೆ ಮರಳಿವೆ. ಜಾತ್ರೆಗೆ ಸಂಭ್ರಮವನ್ನು ಹೊತ್ತುತಂದಿದ್ದ ವ್ಯಾಪಾರಿಗಳೆಲ್ಲ ಈಗ ಮತ್ತಾವುದೋ ಊರಿನಲ್ಲಿ ಡೇರೆ ಹಾಕಿದ್ದಾರೆ. ಅವರು ಮತ್ತೆ ಯಾವಾಗ ಬರುವರೋ, ಎಷ್ಟು ಬೇಗ ಮೂರು ವರ್ಷ ಕಳೆವುದೋ ಎಂದು ಸಾಗರ ಕಾಯುತ್ತದೆ.
[ಸಾಗರ ವಾರ್ತಾ ಪತ್ರಿಕೆಯ ವಿಶೇಷಾಂಕದಲ್ಲಿ ಪ್ರಕಟಿತ]
Wednesday, January 29, 2020
ಕೆಲವೊಂದು ಕೆಲಸ
ಎಲ್ಲರೂ ಎಲ್ಲ ಕೆಲಸ ಮಾಡಲಾಗದು
ನಿರ್ದಿಷ್ಟ ಕಾರ್ಯಗಳಿಗೆ ನಿರ್ದಿಷ್ಟ ವ್ಯಕ್ತಿಗಳೇ ಬೇಕು
ಸ್ಯಾಂಡ್ವಿಚ್ಚನ್ನು ಹೆಂಡತಿಯೇ ಮಾಡಬೇಕು
ಹೋಳಿಗೆಯನ್ನು ಅಮ್ಮನೇ ಮಾಡಬೇಕು
ಹಾಗೆಯೇ ಉಪ್ಪಿನಕಾಯಿಯನ್ನು ಅಜ್ಜಿಯೇ ಮಾಡಬೇಕು
ಮಾವಿನಮಿಡಿಗಳನ್ನು ಚೂರೂ ಪೆಟ್ಟಾಗದಂತೆ ತೊಳೆದು
ಕೈಸಾಲೆಯ ಮೂಲೆಯಲ್ಲಿ ಅಜ್ಜನ ಮೃದು ಸಾಟಿಪಂಚೆ ಹಾಸಿ
ಮಿಡಿಗಳನ್ನು ಒಂದಕ್ಕೊಂದು ತಾಕದಂತೆ ಹರಡಬೇಕು
ಯಾವ ಬಾಣಲೆ ಎಷ್ಟು ಉಪ್ಪು ಯಾವ ಹುಟ್ಟು ಎಷ್ಟು ಬೆಂಕಿ:
ಉಪ್ಪು ಕಪ್ಪಾಗದಂತೆ ಹುರಿಯುವ ಗುಟ್ಟು ಅಜ್ಜಿಗೆ ಮಾತ್ರ ಗೊತ್ತು
ಒಣಗಬೇಕು ಮಿಡಿಗಳು ಬಾಡಬಾರದು, ತೊಟ್ಟು ಪೂರ ಮುರಿಯಬಾರದು
ಚಟ್ಟಬೇಕು ಮಿಡಿಗಳು ಬಾಯಿಗೆ ಬಟ್ಟೆ ಕಟ್ಟಿದ ಭರಣಿಯ ಕತ್ತಲೊಡಲಲ್ಲಿ
ಉಪ್ಪೆಲ್ಲ ಕರಗಿ ಹಣಿಯಾಗಿ
ಹಸಿರು ಮಿಡಿಗಳು ತಿರುಗಿದಾಗ ನಸುಹಳದಿಗೆ
ಕದ್ದು ತಿನ್ನಲು ಬರುವ ಮೊಮ್ಮಗಳ ಮೇಲೆ
ನಿಗಾ ಇಡಲು ಅಜ್ಜಿಯ ಕನ್ನಡಕದ ಕಣ್ಗಳೇ ಆಗಬೇಕು
ಅಮ್ಮನಾದರೆ ಗದರಬೇಕು, ಅಜ್ಜಿ 'ಕೂಸೇ' ಎಂದರೂ ಸಾಕು
ಮತ್ತು ಅಜ್ಜಿಯೇ ಎತ್ತಿಕೊಡಬೇಕು ಮೊಮ್ಮಗಳಿಗೆ ಹುಷಾರಾಗಿ
ಒಣಗಿದ ಸುಕ್ಕುಕೈಗಳಿಂದ ಚಟ್ಟಿದ ರುಚಿರುಚಿ ಮಿಡಿ
ಅಚ್ಛಖಾರದ ಪುಡಿಯ ಸ್ವಚ್ಛ ಹುಟ್ಟಿನಿಂದ ತೆಗೆದು
ಭರಣಿಯೊಡಲಿಗೆ ಹೊಯ್ಯುವಾಗ ಹೊಮ್ಮಿ ಬರುವ ಘಾಟಿಗೆ
ಜಾಸ್ತಿಯಾದರೂ ಅಸ್ತಮಾ, ಅಜ್ಜಿ ಹೆದರುವುದಿಲ್ಲ
ಕಾಳು-ಕಡಿಗಳ ಹುರಿದು ಬೀಸಿ ಸುರಿವಾಗ
ಸುಸ್ತಿಗೆ ಕಣ್ಕತ್ತಲು ಬಂದರೂ ಕೆಳಗೆ ಕೂರುವುದಿಲ್ಲ
ಕತ್ತಲೆ ನಡುಮನೆಯ ನಾಗಂದಿಗೆಗೆ ಜಾಡಿಯನ್ನೇರಿಸುವಾಗ
ಹರಿಯದಿದ್ದರೂ ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ
ಅಮ್ಮನಿಗೆ ಉಪ್ಪಿನಕಾಯಿ ಮಾಡಲು ಬರುವುದಿಲ್ಲವೆಂದಲ್ಲ
ಹೆಂಡತಿಯೂ ಮಾಡಬಲ್ಲಳು ರೆಸಿಪಿಯೋದಿ
ಆದರೂ ಉಪ್ಪಿನಕಾಯಿಯನ್ನು ಅಜ್ಜಿಯೇ ಮಾಡಬೇಕು
ಕೆಲವೊಂದು ಕೆಲಸವನ್ನು ಅವರೇ ಮಾಡಿದರೆ ಚಂದ
ಕೆಲವೊಂದು ಮಾತನ್ನು ಅವರೇ ಆಡಿದರೆ ಚಂದ.
ನಿರ್ದಿಷ್ಟ ಕಾರ್ಯಗಳಿಗೆ ನಿರ್ದಿಷ್ಟ ವ್ಯಕ್ತಿಗಳೇ ಬೇಕು
ಸ್ಯಾಂಡ್ವಿಚ್ಚನ್ನು ಹೆಂಡತಿಯೇ ಮಾಡಬೇಕು
ಹೋಳಿಗೆಯನ್ನು ಅಮ್ಮನೇ ಮಾಡಬೇಕು
ಹಾಗೆಯೇ ಉಪ್ಪಿನಕಾಯಿಯನ್ನು ಅಜ್ಜಿಯೇ ಮಾಡಬೇಕು
ಮಾವಿನಮಿಡಿಗಳನ್ನು ಚೂರೂ ಪೆಟ್ಟಾಗದಂತೆ ತೊಳೆದು
ಕೈಸಾಲೆಯ ಮೂಲೆಯಲ್ಲಿ ಅಜ್ಜನ ಮೃದು ಸಾಟಿಪಂಚೆ ಹಾಸಿ
ಮಿಡಿಗಳನ್ನು ಒಂದಕ್ಕೊಂದು ತಾಕದಂತೆ ಹರಡಬೇಕು
ಯಾವ ಬಾಣಲೆ ಎಷ್ಟು ಉಪ್ಪು ಯಾವ ಹುಟ್ಟು ಎಷ್ಟು ಬೆಂಕಿ:
ಉಪ್ಪು ಕಪ್ಪಾಗದಂತೆ ಹುರಿಯುವ ಗುಟ್ಟು ಅಜ್ಜಿಗೆ ಮಾತ್ರ ಗೊತ್ತು
ಒಣಗಬೇಕು ಮಿಡಿಗಳು ಬಾಡಬಾರದು, ತೊಟ್ಟು ಪೂರ ಮುರಿಯಬಾರದು
ಚಟ್ಟಬೇಕು ಮಿಡಿಗಳು ಬಾಯಿಗೆ ಬಟ್ಟೆ ಕಟ್ಟಿದ ಭರಣಿಯ ಕತ್ತಲೊಡಲಲ್ಲಿ
ಉಪ್ಪೆಲ್ಲ ಕರಗಿ ಹಣಿಯಾಗಿ
ಹಸಿರು ಮಿಡಿಗಳು ತಿರುಗಿದಾಗ ನಸುಹಳದಿಗೆ
ಕದ್ದು ತಿನ್ನಲು ಬರುವ ಮೊಮ್ಮಗಳ ಮೇಲೆ
ನಿಗಾ ಇಡಲು ಅಜ್ಜಿಯ ಕನ್ನಡಕದ ಕಣ್ಗಳೇ ಆಗಬೇಕು
ಅಮ್ಮನಾದರೆ ಗದರಬೇಕು, ಅಜ್ಜಿ 'ಕೂಸೇ' ಎಂದರೂ ಸಾಕು
ಮತ್ತು ಅಜ್ಜಿಯೇ ಎತ್ತಿಕೊಡಬೇಕು ಮೊಮ್ಮಗಳಿಗೆ ಹುಷಾರಾಗಿ
ಒಣಗಿದ ಸುಕ್ಕುಕೈಗಳಿಂದ ಚಟ್ಟಿದ ರುಚಿರುಚಿ ಮಿಡಿ
ಅಚ್ಛಖಾರದ ಪುಡಿಯ ಸ್ವಚ್ಛ ಹುಟ್ಟಿನಿಂದ ತೆಗೆದು
ಭರಣಿಯೊಡಲಿಗೆ ಹೊಯ್ಯುವಾಗ ಹೊಮ್ಮಿ ಬರುವ ಘಾಟಿಗೆ
ಜಾಸ್ತಿಯಾದರೂ ಅಸ್ತಮಾ, ಅಜ್ಜಿ ಹೆದರುವುದಿಲ್ಲ
ಕಾಳು-ಕಡಿಗಳ ಹುರಿದು ಬೀಸಿ ಸುರಿವಾಗ
ಸುಸ್ತಿಗೆ ಕಣ್ಕತ್ತಲು ಬಂದರೂ ಕೆಳಗೆ ಕೂರುವುದಿಲ್ಲ
ಕತ್ತಲೆ ನಡುಮನೆಯ ನಾಗಂದಿಗೆಗೆ ಜಾಡಿಯನ್ನೇರಿಸುವಾಗ
ಹರಿಯದಿದ್ದರೂ ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ
ಅಮ್ಮನಿಗೆ ಉಪ್ಪಿನಕಾಯಿ ಮಾಡಲು ಬರುವುದಿಲ್ಲವೆಂದಲ್ಲ
ಹೆಂಡತಿಯೂ ಮಾಡಬಲ್ಲಳು ರೆಸಿಪಿಯೋದಿ
ಆದರೂ ಉಪ್ಪಿನಕಾಯಿಯನ್ನು ಅಜ್ಜಿಯೇ ಮಾಡಬೇಕು
ಕೆಲವೊಂದು ಕೆಲಸವನ್ನು ಅವರೇ ಮಾಡಿದರೆ ಚಂದ
ಕೆಲವೊಂದು ಮಾತನ್ನು ಅವರೇ ಆಡಿದರೆ ಚಂದ.
Friday, December 20, 2019
ಅಟ್ಟಣಿಗೆ
ವಾಪಸು ಬರುವಾಗ ಪ್ರಶಾಂತ ಅನ್ಯಮನಸ್ಕನಾಗಿದ್ದ. ಯಾವುದೋ ಎಫ್ಫೆಮ್ ಛಾನೆಲ್ಲಿನಲ್ಲಿ ಆರ್ಜೆಯೊಬ್ಬಳು ‘ಡು ಯು ಥಿಂಕ್ ವಿ ನೀಡ್ ಟು ಛೇಂಜ್ ಅವರ್ ಲೈಫ್ಸ್ಟೈಲ್? ಮೆಸೇಜ್ ಮಿ ಆನ್.....’ ಅಂತೇನೋ ಉಲಿಯುತ್ತಿದ್ದಳು. ಸಿಟ್ಟು ಬಂದು ಎಫ್ಫೆಮ್ ಆಫ್ ಮಾಡಿದ. ಕಾರಿನ ತುಂಬ ಮೌನ ಆವರಿಸಿತು. ಆದರೂ ಆ ಆರ್ಜೆ ಕೇಳಿದ ಪ್ರಶ್ನೆ ಕಿವಿಯಲ್ಲಿ ಕೊರೆಯತೊಡಗಿತು. ಜೀವನಶೈಲಿ ಬದಲಾಯಿಸೋದು ಅಂದ್ರೆ ಏನು? ಈಗ ನಾನು ಬದುಕ್ತಿರೋ ಶೈಲಿ ಸರಿಯಿಲ್ವಾ? ಹೇಗೆ ಬದುಕೋದು ಸರಿ?
ಮನೆ ಮುಟ್ಟಿದರೆ ಮೊಬೈಲ್ ಹಿಡಿದಿದ್ದ ರೇಖಾ ಯಾವುದೋ ಶಾಪಿಂಗ್ ಸೈಟಿನಲ್ಲಿ ಒಂದಷ್ಟು ವಸ್ತುಗಳನ್ನು ಕಾರ್ಟಿಗೆ ಹಾಕಿಕೊಂಡು ‘ನೋಡು ಪ್ರಶ್, ಈ ಕಲರ್ ಟಾಪ್ ನಂಗೆ ಒಪ್ಪುತ್ತಾ?’ ಅಂದಳು. ‘ಏ.. ಹೊತ್ತುಗೊತ್ತು ಇಲ್ವಾ ನಿಂಗೆ? ಯಾವಾಗ ನೋಡಿದ್ರೂ ಶಾಪಿಂಗು. ತಗೊಂಡಾದ್ರೂ ತಗೊಳ್ತೀಯಾ? ಅದೂ ಇಲ್ಲ. ಕಾರ್ಟಿಗೆ ಹಾಕೋದು, ಕೊನೆಗೆ ರಿಮೋವ್ ಮಾಡೋದು.. ಇಪ್ಪತ್ನಾಲ್ಕು ಗಂಟೆ ಆ ಮೊಬೈಲ್ ಹಿಡ್ಕಂಡಿರ್ತೀಯ. ಮೊದ್ಲು ತೆಗ್ದು ಪಕ್ಕಕ್ಕಿಡು ಅದನ್ನ’ ರೇಗಿದ. ಗಂಡನ ಮೂಡು ಸರಿಯಿಲ್ಲ ಎಂಬುದು ಹೆಂಡತಿಗೆ ಅರ್ಥವಾಯಿತು. ಜತೆಗೇ ಬೆಳಿಗ್ಗೆ ನಡೆದ ಘಟನೆಯೂ ನೆನಪಾಯಿತು. ‘ಸಾರಿ, ಹೋದ ಕೆಲಸ ಏನಾಯ್ತು? ಅಡ್ಮಿಟ್ ಮಾಡ್ಕೊಂಡ್ರಾ? ಹೆಚ್ಚಿಗೆ ಏನೂ ಪೆಟ್ಟು ಆಗಿಲ್ವಂತಾ?’ ಕೇಳಿದಳು. ‘ಮಾಡ್ಕೊಂಡ್ರು. ತುಂಬಾ ನೋವು ಅನುಭವಿಸ್ತಿರೋದು ನೋಡಿದ್ರೆ ಸ್ಪೈನಲ್ ಕಾರ್ಡಿಗೆ ಏಟು ಬಿದ್ದಿದೆಯಾ ಟೆಸ್ಟ್ ಮಾಡ್ಬೇಕು. ಮೊದಲು ಇಷ್ಟು ಟೆಸ್ಟ್ ಮಾಡಿಸಿ ಅಂತ ಎಕ್ಸರೇ, ಸ್ಕಾನಿಂಗ್, ಬ್ಲಡ್ ಟೆಸ್ಟ್ ಅಂತ ಸುಮಾರೆಲ್ಲ ಪಟ್ಟಿ ಬರ್ಕೊಟ್ರು. ಮೊದಲಿಗೆ ಹತ್ತು ಸಾವಿರ ರೂಪಾಯಿ ಕಟ್ಟಬೇಕು ಅಂದ್ರು. ಅಷ್ಟರಲ್ಲಿ ಅವನ ಸಂಬಂಧಿಕರೋ-ಊರವರೋ ಯಾರೋ ಮೂರ್ನಾಲ್ಕು ಜನ ಬಂದ್ರು. ಅವರೆಲ್ಲ ಹೊಂಚಿ ಕಲೆ ಹಾಕಿದರೂ ಒಟ್ಟು ಆರು ಸಾವಿರ ಇತ್ತು ಅವರ ಬಳಿ. ಅವನ ಹೆಂಡತಿ ಒಂದೇ ಸಮನೆ ಅಳ್ತಾ ಇದ್ಲು. ಪಾಪ ಅನ್ನಿಸ್ತು. ಮತ್ತೇನ್ ಮಾಡೋದು? ನಾನೇ ಇನ್ನು ನಾಲ್ಕು ಸಾವಿರಕ್ಕೆ ಕಾರ್ಡ್ ಸ್ವೈಪ್ ಮಾಡಿ ಬಂದೆ’ ಅಂತ ಹೇಳಿದ. ‘ನಾಲ್ಕು ಸಾವಿರ ಕೊಟ್ಯಾ? ಇಟ್ಸ್ ಅ ಬಿಗ್ ಅಮೌಂಟ್!’ ಅಂದ ರೇಖಾಗೆ, ‘ಆ ಪಕ್ಕದಮನೆ ಓನರ್ ಬರ್ಲಿ ಬಡ್ಡಿಮಗ, ಜಬರದಸ್ತಿ ಮಾಡಿಯಾದ್ರೂ ವಸೂಲಿ ಮಾಡ್ತೀನಿ’ ಅಂದ.
ಹಣ ಹಾಗೆ ಖರ್ಚಾದುದಕ್ಕೆ ತಲೆಬಿಸಿಯಾಗಿದ್ದಕ್ಕಿಂತಲೂ ಪ್ರಶಾಂತನಿಗೆ ಬೆಳಗಿನ ಆ ಘಟನೆಯ ಶಾಕ್ನಿಂದ ಹೊರಬರಲು ಆಗಲೇ ಇಲ್ಲ. ರೂಮಿಗೆ ಹೋಗಿ ಬಟ್ಟೆ ಬದಲಿಸಿದ. ಆಫೀಸಿಗೆ ಬರೋದಿಲ್ಲ ಅಂತ ಮ್ಯಾನೇಜರಿಗೆ ಮೆಸೇಜು ಮಾಡಿದ. ರೇಖಾ ತಿಂಡಿ ಕೊಡಲು ಬಂದರೆ ಹಸಿವಿಲ್ಲ ಅಂತ ತಟ್ಟೆಯನ್ನು ದೂರ ತಳ್ಳಿದ. ‘ಕಮಾನ್ ಪ್ರಶ್.. ಎವೆರಿಥಿಂಗ್ ವಿಲ್ ಬಿ ಆಲ್ರೈಟ್.. ಅವನು ಹುಷಾರಾಗಿ ವಾಪಸ್ ಬರ್ತಾನೆ. ಯಾರೋ ನಮಗೆ ಸಂಬಂಧವಿಲ್ಲದವರಿಗೆ ಏನೋ ಆಗಿದ್ದಕ್ಕೆ ಇಷ್ಟೊಂದು ತಲೆ ಹಾಳು ಮಾಡ್ಕೊಂಡಿದೀಯಲ್ಲ.. ಆ ಸಮಯದಲ್ಲಿ ಏನು ಮಾಡಬಹುದಿತ್ತೋ ಅದನ್ನ ನಾವು ಮಾಡಿದೀವಿ. ಹೌದು, ಅದು ಕರ್ತವ್ಯ, ಮಾನವೀಯತೆ. ಸಹಾಯ ಮಾಡಿದ್ವಿ. ಅದಕ್ಕಿಂತ ಜಾಸ್ತಿ ನಾವು ಇನ್ನೇನೂ ಮಾಡೋಕೆ ಸಾಧ್ಯ ಇರ್ಲಿಲ್ಲ..’ ಅಂತೆಲ್ಲ ರೇಖಾ ಸಮಾಧಾನ ಮಾಡಿದರೂ, ಬೆಳಿಗ್ಗೆ ಕೇಳಿದ ಆ ‘ಧಡಾರ್’ ಶಬ್ದ ಪ್ರಶಾಂತನ ತಲೆಯಿಂದ ಇಳಿಯಲಿಲ್ಲ.
ಆದದ್ದಿಷ್ಟು: ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ತಯಾರಾದ ಪ್ರಶಾಂತನಿಗೆ ಹೆಂಡತಿ ತಟ್ಟೆಯಲ್ಲಿ ಪಾಸ್ತಾ ತಂದುಕೊಟ್ಟಳು. ತಟ್ಟೆಯನ್ನು ಟೇಬಲ್ಲಿನ ಮೇಲಿಟ್ಟುಕೊಂಡು, ಒಂದು ಕೈಯಲ್ಲಿ ಮೊಬೈಲು ಇನ್ನೊಂದು ಕೈಯಲ್ಲಿ ಚಮಚ ಹಿಡಿದು ತಿಂಡಿಯ ಶಾಸ್ತ್ರ ನಡೆಸುತ್ತಿದ್ದಾಗ ಹೊರಗಿನಿಂದ ಧಡಾರನೆ ಶಬ್ದ ಕೇಳಿಸಿತು. ಇಬ್ಬರೂ ಹೊರಹೋಗಿ ಬಗ್ಗಿ ಕೆಳಗೆ ನೋಡಿದರೆ, ವ್ಯಕ್ತಿಯೊಬ್ಬ ಹೋ ಅಂತ ನರಳುತ್ತಿದ್ದ. ಪಕ್ಕದ ಸೈಟಿನಲ್ಲಿ ಮನೆ ಕಟ್ಟುತ್ತಿದ್ದ ಮೇಸ್ತ್ರಿಗಳು ಎರಡನೇ ಫ್ಲೋರಿನ ಸೆಂಟ್ರಿಂಗ್ ಹಾಕಲು ಅಟ್ಟಣಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ತಮಿಳಿನಲ್ಲಿ ದೊಡ್ಡ ದನಿಯಲ್ಲಿ ಮಾತಾಡಿಕೊಳ್ಳುತ್ತಾ, ಕರಣೆ-ಬಾಣಲಿ-ಇನ್ನಿತರ ಸಲಕರಣೆಗಳಿಂದ ಸದ್ದು ಮಾಡುತ್ತಾ, ಎರಡು ತಿಂಗಳಿನಿಂದ ಅಲ್ಲೇ ಕೆಳಗಡೆ ಹಾಕಿಕೊಂಡಿದ್ದ ಸಣ್ಣದೊಂದು ಬಿಡಾರದಲ್ಲಿ ಮೂರ್ನಾಲ್ಕು ಜನರ ಸಂಸಾರ ವಾಸವಾಗಿತ್ತು. ‘ಬೆಳಗಾದರೆ ಇವರದ್ದೊಂದು ರಗಳೆ’ ಅಂತ ಎಷ್ಟೋ ದಿನ ರೇಖಾ ಸಿಡಿಮಿಡಿ ಮಾಡುವುದೂ ಇತ್ತು. ಇಷ್ಟೇ ಸಣ್ಣ ಜಾಗದಲ್ಲಿ ಮರಳು-ಸಿಮೆಂಟು-ಇಟ್ಟಿಗೆಗಳನ್ನು ಸಾಗಿಸುತ್ತಾ, ಅಷ್ಟೆತ್ತರದಲ್ಲಿ ಅಟ್ಟಣಿಗೆಗಳನ್ನು ಹಾಕಿಕೊಂಡು ಅವರು ಕಟ್ಟಡ ಕಟ್ಟಲು ಮಾಡುವ ಸಾಹಸ ಯಾವ ಸರ್ಕಸ್ಸಿಗೂ ಕಮ್ಮಿಯಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಅದು ಹೇಗೋ ಅಟ್ಟಣಿಗೆಯ ಕಂಬವೊಂದು ಮುರಿದುಕೊಂಡು, ಅಷ್ಟು ಎತ್ತರದಿಂದ ಆ ಮೇಸ್ತ್ರಿ ಆಯ ತಪ್ಪಿ ಬಿದ್ದಿದ್ದಾನೆ. ಹೊರಗೋಡಿ ಬಂದ ರೇಖಾ-ಪ್ರಶಾಂತರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಬಿದ್ದವನು ಒಂದೇ ಸಮನೆ ಹೊಯ್ದುಕೊಳ್ಳುತ್ತಿದ್ದ. ಅವನ ಹೆಂಡತಿಯೂ-ಸಹಕೆಲಸಗಾರರು ಅಯ್ಯಯ್ಯೋ ಅಂತ ಬಾಯಿ ಬಡಿದುಕೊಂಡು ಅಳತೊಡಗಿದರು. ಕೆಳಗಡೆ ಒಂದಷ್ಟು ಜನ ಸೇರಿದರು. ರೇಖಾ-ಪ್ರಶಾಂತರೂ ಕೆಳಗಿಳಿದು ಹೋದರು. ಯಾರೋ ‘ಆಂಬುಲೆನ್ಸಿಗೆ ಫೋನ್ ಮಾಡ್ರೀ ಆಂಬುಲೆನ್ಸಿಗೆ ಫೋನ್ ಮಾಡ್ರೀ’ ಅಂದರು. ಎಲ್ಲರೂ ಮುಖಮುಖ ನೋಡಿಕೊಂಡರು. ‘ವನ್ ಜೀರೋ ಏಟ್ ಕಣ್ರೀ.. ಬೇಗ ಮಾಡ್ರೀ’ ಅಂದರು ಮತ್ಯಾರೋ. ‘ಓನರ್ ಕರೆಸ್ರೀ.. ನಂಬರ್ ಇದೆಯೇನ್ರೀ ಯಾರ ಹತ್ರನಾದ್ರೂ.. ಕಾಂಟ್ರಾಕ್ಟರ್ಗೆ ಹೇಳ್ಬೇಕು’ ಅಂತೆಲ್ಲ ಕೆಲವರು ಬಡಬಡಿಸುತ್ತಿದ್ದರು. ಪ್ರಶಾಂತ ತನ್ನ ಮೊಬೈಲಿನಿಂದ ಆಂಬುಲೆನ್ಸಿಗೆ ಫೋನು ಮಾಡಿದ. ಅವರು ಯಾವ ಏರಿಯಾ ಅಂತ ಕೇಳಿಕೊಂಡು ‘ಹತ್ತಿರದ ಆಂಬುಲೆನ್ಸಿಗೆ ಕನೆಕ್ಟ್ ಮಾಡ್ತೀವಿ, ಲೈನಿನಲ್ಲೇ ಇರಿ’ ಅಂದರು. ಮೂರ್ನಾಲ್ಕು ನಿಮಿಷ ಆದರೂ ಕನೆಕ್ಟ್ ಆದಹಾಗೆ ಕಾಣಲಿಲ್ಲ. 'ಆಂಬುಲೆನ್ಸ್ ಬರೋತನಕ ಕಾಯಕ್ಕಾಗತ್ತೇನ್ರೀ? ಯಾವುದಾದ್ರೂ ಆಟೋ ಬಂದ್ರೆ ಹತ್ತಿರದ ಆಸ್ಪತ್ರೆಗೆ ಒಯ್ದು ಬಿಡೋಕೆ ಹೇಳ್ಬಹುದಿತ್ತು’ ಅಂದರು ಮತ್ಯಾರೋ. ಅಲ್ಲಿದ್ದವರ್ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವಂತೆ ಕಾಣಲಿಲ್ಲ. ತಮಗ್ಯಾಕೆ ಇಲ್ಲದ ಉಸಾಬರಿ ಅಂತ ಎಲ್ಲರೂ ಹೆದರಿಕೊಂಡಂತೆ ಕಂಡರು. ಪ್ರಶಾಂತನ ತಾಳ್ಮೆ ಮೀರುತ್ತಿತ್ತು. ರೇಖಾಳ ಬಳಿ ‘ಮೇಲೆ ಹೋಗಿ ಕಾರ್ ಕೀ ಬೀಸಾಕು’ ಅಂದವನೇ, ಅಲ್ಲಿದ್ದವರೊಂದಿಗೆ ಕೈ ಜೋಡಿಸಿ, ಒದ್ದಾಡುತ್ತಿದ್ದ ವ್ಯಕ್ತಿಯನ್ನು ಹೊತ್ತುತಂದು ತನ್ನ ಕಾರಿನ ಹಿಂದಿನ ಸೀಟಲ್ಲಿ ಮಲಗಿಸಿದ. ಮೇಸ್ತ್ರಿಯ ಹೆಂಡತಿಯೂ ಮತ್ತೊಂದಿಬ್ಬರು ಕೆಲಸಗಾರರೂ ಕಾರು ಹತ್ತಿ ಮುದುಡಿ ಕುಳಿತುಕೊಂಡರು. ವ್ಯಕ್ತಿ ನರಳುತ್ತಲೇ ಇದ್ದ. ಹತ್ತಿರದ ಆಸ್ಪತ್ರೆಗೆ ಕರೆತಂದು, ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಸ್ಟ್ರೆಚರಿನಲ್ಲಿ ಎಮರ್ಜೆನ್ಸಿ ವಾರ್ಡಿಗೆ ಸೇರಿಸುವಷ್ಟರಲ್ಲಿ ಪ್ರಶಾಂತ ಪೂರ್ತಿ ಬೆವರಿಹೋಗಿದ್ದ.
ಹಾಗೆ ಸೇರಿಸುವಾಗ ಅದೊಂದು ದುಬಾರಿ ಆಸ್ಪತ್ರೆ ಎಂಬುದೂ, ಅಲ್ಲಿಗೆ ಸೇರಿಸಿದರೆ ಅಲ್ಲಾಗುವ ವೆಚ್ಛವನ್ನು ಈ ಬಡ ಕೂಲಿ ಕಾರ್ಮಿಕರಿಗೆ ಭರಿಸಲು ಆಗುತ್ತದಾ ಎಂಬುದೂ ಪ್ರಶಾಂತನಿಗೆ ಹೊಳೆಯಲಿಲ್ಲ. ಹೊಳೆದಿದ್ದರೂ ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆ ಹುಡುಕಿಕೊಂಡು ಅಲೆಯುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಅವರ ಬಳಿ ಹಣ ಕಮ್ಮಿ ಬಿದ್ದಾಗ ಇದು ತನ್ನದೇ ಜವಾಬ್ದಾರಿಯೇನೋ ಎಂಬಂತೆ ಹಿಂದೆಮುಂದೆ ನೋಡದೇ ಕಾರ್ಡ್ ಉಜ್ಜಿ ಬಂದಿದ್ದ.
ಪ್ರಶಾಂತನಿಗೆ ಬೆಳಗಾಮುಂಚೆ ನಡೆದ ಆ ಘಟನೆಯಿಂದ ಅದೆಷ್ಟು ಆಘಾತವಾಯಿತು ಎಂದರೆ, ದಿನವಿಡೀ ಹುಚ್ಚುಚ್ಚಾಗಿ ಮನೆಯಿಡೀ ಓಡಾಡುತ್ತಾ ಇದ್ದುಬಿಟ್ಟ. ತಾನು, ತನ್ನ ಸಂಸಾರ, ಕೈತುಂಬ ಸಂಬಳ ಬರುವ ಕೆಲಸ, ವೀಕೆಂಡು ಬಂತೆಂದರೆ ಪಾರ್ಟಿ-ಸಿನೆಮಾ-ಶಾಪಿಂಗ್ ಎಂದು ನಗರವನ್ನು ಸುತ್ತುವ ಚಾಳಿ, ಬಿಡುಗಡೆಯಾದ ಹೊಸ ಫೋನುಗಳನ್ನು ಕೊಳ್ಳುವ ರೀತಿ, ನೆಟ್ಫ್ಲಿಕ್ಸು-ಹಾಟ್ಸ್ಟಾರ್ ಅಂತ ಇದ್ದಬದ್ದ ಪ್ಯಾಕೇಜುಗಳನ್ನು ಹಾಕಿಕೊಂಡು ದಿನಕ್ಕೊಂದು ಸಿನೆಮಾ ನೋಡುವ ಸೌಲಭ್ಯ, ಬೇಕಾದ ಪುಸ್ತಕಗಳನ್ನು ಖರೀದಿಸಿಯೇ ಓದುವ ಗತ್ತು... ಹೀಗೆ ಹಣದಿಂದ ಕೊಳ್ಳಲಾಗುವ ಸುಖವನ್ನೆಲ್ಲ ಖರೀದಿಸಿ ಅನುಭವಿಸುತ್ತಿರುವ ತಾನು ಮತ್ತು ಒಪ್ಪೊತ್ತಿನ ಊಟಕ್ಕಾಗಿ ಮುಗಿಲೆತ್ತರದ ಅಟ್ಟಣಿಗೆಯ ಮೇಲೆ ಸರ್ಕಸ್ ಮಾಡುವ ಆ ಮೇಸ್ತ್ರಿ –ಎಷ್ಟೊಂದು ವ್ಯತ್ಯಾಸ ನಮ್ಮ ನಡುವೆ! ನನಗೆ ಇಂತಹದ್ದೇನಾದರೂ ಅಪಘಾತವಾಗಿ ಆಸ್ಪತ್ರೆ ಸೇರಿದ್ದರೆ ಕಂಪನಿ ಆಸ್ಪತ್ರೆಯ ಅಷ್ಟೂ ವೆಚ್ಛವನ್ನು ಭರಿಸುತ್ತಿತ್ತು. ಅಷ್ಟರ ಮಟ್ಟಿನ ಲೈಫ್ ಸೆಕ್ಯುರಿಟಿ ತನಗಿದೆ. ಆದರೆ ಆ ಮೇಸ್ತ್ರಿಗೆ?
ಪ್ರಶಾಂತನಿಗೆ ತಾನು ಬದುಕುತ್ತಿರುವ ರೀತಿಯೇ ಸರಿಯಿಲ್ಲ ಎನ್ನಿಸಿಬಿಟ್ಟಿತು. ಆಸ್ಪತ್ರೆಯ ವೆಚ್ಛವನ್ನೂ ಭರಿಸಲಾಗದ ಆ ಮೇಸ್ತ್ರಿಯ ಕುಟುಂಬಕ್ಕೆ ತನ್ನ ಆಡಂಬರದ ಜೀವನಶೈಲಿಯಿಂದ ಅವಮಾನ ಮಾಡುತ್ತಿದ್ದೇನೆ ಅನ್ನಿಸಿತು. ಥಳಥಳ ಹೊಳೆವ ನೆಲದ ಡಬಲ್ ಬೆಡ್ರೂಮ್ ಫ್ಲಾಟಿನ ತನ್ನ ಮನೆಯ ಪಕ್ಕದಲ್ಲಿ ಇಷ್ಟೇ ಸಣ್ಣ ಗೂಡಿನಲ್ಲಿ ಮತ್ತೊಂದು ಕುಟುಂಬವೂ ಬಾಳುತ್ತಿರುವುದು ಈ ಮಹಾನಗರದ ವ್ಯಂಗ್ಯದಂತೆ ಭಾಸವಾಯಿತು. ಎಫ್ಫೆಮ್ಮಿನ ಆರ್ಜೆ ಹೇಳುತ್ತಿದ್ದುದು ನೆನಪಾಯ್ತು: ನನ್ನ ಜೀವನಶೈಲಿ ಬದಲಿಸಿಕೊಳ್ಳಬೇಕಾ ಹಾಗಾದರೇ?
ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಪ್ರಶಾಂತ, ಕಾರು ಹತ್ತಿ ನೇರ ಆಸ್ಪತ್ರೆಯೆಡೆಗೆ ಧಾವಿಸಿದ. ಯಾವ ವಾರ್ಡಿನಲ್ಲಿದ್ದಾರೆಂದು ವಿಚಾರಿಸೋಣವೆಂದರೆ ಆ ಮೇಸ್ತ್ರಿಯ ಹೆಸರೂ ಕೇಳಿಕೊಂಡಿರಲಿಲ್ಲ. ರಿಸೆಪ್ಷನ್ನಿನಲ್ಲಿ ಹೀಗೆ ನಿನ್ನೆ ಎಮರ್ಜನ್ಸಿಯೆಂದು ತಾನು ಒಬ್ಬನನ್ನು ತಂದು ಸೇರಿಸಿದ್ದಾಗಿ ಹೇಳಿಕೊಂಡಾಗ ಆ ರಿಸೆಪ್ಷನಿಸ್ಟ್, ‘ಓಹ್ ಅವರಾ? ಅವರು ನಿನ್ನೆಯೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋದ್ರಲ್ಲಾ.. ಇಲ್ಲಿ ನಮಗೆ ಆಗಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗ್ತೇವೆ ಅಂತ ಹೇಳಿ ಸಂಜೆಯೇ ಹೊರಟುಹೋದರು’ ಅಂದಳು. ಪ್ರಶಾಂತನಿಗೆ ನಿರಾಶೆಯಾಯಿತು. ಯಾವ ಆಸ್ಪತ್ರೆಗೆ ಹೋದರೋ ಏನೋ, ಹುಡುಕಿಕೊಂಡು ಹೋಗುವುದಂತೂ ಸಾಧ್ಯವಿರಲಿಲ್ಲ. ಸುಮ್ಮನೆ ಮನೆಗೆ ಮರಳಿದ.
ಇಷ್ಟೆಲ್ಲ ಆದರೂ ಆ ಪಕ್ಕದ ಮನೆಯ ಮಾಲೀಕನಾಗಲೀ, ಗುತ್ತಿಗೆದಾರನಾಗಲೀ ಈ ಕಡೆ ಸುಳಿದಿರಲಿಲ್ಲ. ತನ್ನೆದುರೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಈಗ ಎಲ್ಲಿದ್ದಾನೆಂಬುದೂ ತಿಳಿಯುವಂತಿರಲಿಲ್ಲ. ಪ್ರಶಾಂತನಿಗೆ ಎಲ್ಲವೂ ಖಾಲಿಖಾಲಿ, ಯಾವುದಕ್ಕೂ ಅರ್ಥವಿಲ್ಲ ಎನಿಸಿತು. ರೇಖಾ ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಪ್ರಶಾಂತ ಸರಿಯಾಗಲಿಲ್ಲ.
ಸುಮಾರು ಹದಿನೈದು ದಿನ ಕಳೆದಮೇಲೆ, ಸ್ಥಗಿತವಾಗಿದ್ದ ಪಕ್ಕದ ಕಟ್ಟಡದ ಕೆಲಸಗಳು ಮತ್ತೆ ಶುರುವಾದ ಸೂಚನೆಯಂತೆ ಟಣಟಣ ಸದ್ದುಗಳು ಬೆಳಗ್ಗೆಯೇ ತೇಲಿಬರತೊಡಗಿದವು. ಲಘುಬಗೆಯಿಂದ ಎದ್ದ ಪ್ರಶಾಂತ ಹೊರಹೋಗಿ ನೋಡಿದ. ಮೇಸ್ತ್ರಿಗಳು ಮುರಿದುಬಿದ್ದಿದ್ದ ಅಟ್ಟಣಿಗೆಯನ್ನು ಮತ್ತೆ ಜೋಡಿಸುತ್ತಿದ್ದರು. ಅಂದು ಬಿದ್ದು ಪೆಟ್ಟುಮಾಡಿಕೊಂಡಿದ್ದ ಆ ಮೇಸ್ತ್ರಿಯೂ ಅಲ್ಲಿದ್ದ. ಅವನ ಬಲಗೈಗೆ ಬೆಳ್ಳನೆ ಬ್ಯಾಂಡೇಜ್ ಇತ್ತು. ಇವನನ್ನು ಕಂಡವನೇ, ‘ಸಾರ್.. ನಮಸ್ಕಾರ ಸಾರ್.. ನೀವು ಅವತ್ತು ಎಂಥಾ ಉಪಕಾರ ಮಾಡಿದ್ರಿ ಸಾರ್.. ನೀವು ಟೇಮಿಗೆ ಸರಿಯಾಗಿ ಕಾರಲ್ಲಿ ಕರ್ಕಂಡ್ ಹೋಗದಿದ್ರೆ ನನ್ ಕಥೆ ಏನಾಗ್ತಿತ್ತೋ ಏನೋ.. ತುಂಬಾ ಹೆಲ್ಪ್ ಆಯ್ತು ಸಾರ್.. ತುಂಬಾ ಥ್ಯಾಕ್ಸ್ ಸಾರ್’ ಅಂತ ಒಂದೇ ಸಮನೆ ಹೇಳಿದ. ಅವನ ಹೆಂಡತಿಯೂ ಕಣ್ಣೀರು ಸುರಿಸುತ್ತಾ ತಮಿಳಿನಲ್ಲಿ ಏನೇನೋ ಹೇಳಿದಳು. ‘ಅಲ್ಲಪ್ಪಾ, ನಾನು ಅಷ್ಟೆಲ್ಲಾ ಮಾಡಿ ಆ ಆಸ್ಪತ್ರೆಗೆ ಸೇರಿಸಿದ್ರೆ ನೀವು ಹೇಳದೇಕೇಳದೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋಗಿಬಿಟ್ಟಿದೀರಲ್ಲಪ್ಪಾ.. ನಾನು ಮರುದಿನ ಹೋಗಿ ವಿಚಾರಿಸಿದ್ರೆ ನೀವು ಅಲ್ಲಿಲ್ಲ’ ಕೇಳಿದ ಪ್ರಶಾಂತ. ‘ಅಯ್ಯೋ ಅಂಥಾ ಆಸ್ಪತ್ರೆಲೆಲ್ಲಾ ನಮ್ಮಂತೋರು ಇರಕ್ಕಾಯ್ತದಾ ಸಾರ್.. ಅದುಕ್ಕೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೇರ್ಕಂಡ್ವಿ. ಅಲ್ಲಿ ಎಲ್ಲಾ ಫ್ರೀ ಸಾರ್.. ನಮ್ದು ಕಾರ್ಡ್ ಇರ್ತದಲ್ಲಾ, ಪಿಎಂದು ಅದೆಂಥದೋ ಸ್ಕೀಮಿಂದು, ಅದ್ರಲ್ಲಿ ಎಲ್ಲಾ ಫ್ರೀಯಾಗಿ ಆಯ್ತು ಸಾರ್. ದೇವ್ರು ದೊಡ್ಡೋನು ಸಾರ್.. ಅಷ್ಟು ಎತ್ರದಿಂದ ಬಿದ್ರೂ ಕೈ ಒಂದು ಮುರ್ದಿದ್ದು ಬಿಟ್ರೆ ಮತ್ತೇನೂ ಆಗ್ಲಿಲ್ಲ’ ಅಂದ ಮೇಸ್ತ್ರಿ.
ಪ್ರಶಾಂತನಿಗೆ ಸ್ವಲ್ಪ ನಿರಾಳವಾಯಿತು. ಅಟ್ಟಣಿಗೆಯ ಅಡ್ಡಗಂಬಗಳ ನಡುವಿಂದ ತಂಗಾಳಿ ತೇಲಿಬಂತು. ಮನೆಯೊಳಗೆ ಬಂದು ಉಲ್ಲಾಸದಿಂದ ಅತ್ತಿತ್ತ ಓಡಾಡಿದ. ಸುಮಾರು ದಿನಗಳ ನಂತರ ಪಾಸ್ತಾ ರುಚಿಯೆನಿಸಿತು. ರೇಖಾ ಅವನ ಭುಜ ತಟ್ಟಿ, ಕಿಟಕಿಯಿಂದ ಹೊರಗಡೆ ನೋಡು ಅಂತ ಸೂಚಿಸಿದಳು. ಅಲ್ಲಿ ಆ ಮೇಸ್ತ್ರಿ ಅಟ್ಟಣಿಗೆಯ ಮೇಲೆ ನಿಂತುಕೊಂಡು, ಬ್ಯಾಂಡೇಜು ಸುತ್ತಿದ ಒಂದು ಕೈಯನ್ನು ಗೋಡೆಗೆ ಆನಿಸಿಕೊಂಡು, ಇನ್ನೊಂದು ಕೈಯಲ್ಲಿ ಫೋನು ಹಿಡಕೊಂಡು ಯಾವುದೋ ವೀಡಿಯೋ ನೋಡುತ್ತಿದ್ದ. ಗಮನಿಸಿದರೆ ಅದೊಂದು ಒಳ್ಳೆಯ ಹೊಸ ಸ್ಮಾರ್ಟ್ಫೋನ್ ಹಾಗೆ ಕಾಣುತ್ತಿತ್ತು. ಪ್ರಶಾಂತನಿಗೆ ಕುತೂಹಲ ತಡೆಯಲಾಗದೆ ಹೊರಗಡೆ ಹೋಗಿ, ‘ಏನಪ್ಪಾ, ಹೊಸ ಫೋನ್ ತಗಂಡಂಗಿದೆ?’ ಅಂತ ಕೇಳಿದ. ‘ಹೌದೂ ಸಾರ್. ಆಸ್ಪತ್ರೆಗೆ ನೋಡಕ್ಕೆ ಬರ್ತಾರಲ್ಲ ಸಾರ್ ತುಂಬಾ ಜನ, ಅವ್ರೆಲ್ಲ ಅಷ್ಟಿಷ್ಟು ಕಾಸು ಕೊಡ್ತಾರೆ ಸಾರ್.. ನಾನು ಅಡ್ಮಿಟ್ ಆಗಿದ್ದಾಗ ಯಾರೋ ದೊಡ್ ಮನುಸ್ರು ಬಂದು ಐದು ಸಾವ್ರ ಕೊಟ್ರು ಸಾರ್.. ಎಲ್ಲಾ ಸೇರಿ ಹತ್ತನ್ನೆರ್ಡ್ ಸಾವ್ರ ಆಯ್ತು ಸಾರ್.. ಈಗ ಕೈಗೆ ಸುತ್ತಿರೋ ಬ್ಯಾಂಡೇಜ್ ಬಿಚ್ಚಗಂಟ ಕೆಲ್ಸ ಮಾಡ್ದೇ ಸುಮ್ನೇ ಕೂತಿರ್ಬೇಕಲ್ಲ ಸಾರ್, ಅದ್ಕೇ ಮೊಬೈಲಾಗೆ ವೀಡ್ಯ ಆದ್ರೂ ನೋಡನ ಅಂತ ತಗಂಡೆ ಸಾರ್.. ನಮ್ ಹೆಂಗುಸ್ರು ಬೈದ್ರು ಸಾರ್, ಆದ್ರೂ ನಾನು ತಗಂಡೆ ಸಾರ್’ ಅಂದ. ಪ್ರಶಾಂತ ಮನಸಿನಲ್ಲೇ ‘ಎಲಾ ಇವನಾ!’ ಅಂದುಕೊಂಡ. ತಾನು ಆವತ್ತು ಇವನ ಹೆಸರಲ್ಲಿ ಹಣ ಕಟ್ಟಿದ್ದು ತಪ್ಪಾಯಿತಾ, ಇವನು ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡುತ್ತಿಲ್ಲವಲ್ಲ, ಅಥವಾ ಇವನಿಗೆ ಅದು ಗೊತ್ತೇ ಇಲ್ಲವಾ.. ಏನಾದರಾಗಲಿ, ನಾನಾಗೇ ಕೇಳಿ ಸಣ್ಣವನಾಗುವುದು ಬೇಡ ಅಂತ ಪ್ರಶಾಂತ ಸುಮ್ಮನಾದ.
ಒಳಬಂದಾಗ ರೇಖಾ ಹೇಳಿದಳು: ‘ಗೊತ್ತಾಯ್ತಾ ಪ್ರಶ್, ಇಷ್ಟೇ ಲೈಫು. ನಾವು ಸುಮ್ಮನೇ ಏನೇನೋ ತಲೆಕೆಡಿಸ್ಕೊಂಡು ಕೂತ್ಕೋತೀವಿ. ನಮಗಿರೋದು ಅವರಿಗಿಲ್ಲ, ನಾವು ಹೀಗಿರೋದು ತಪ್ಪು ಅಂತೆಲ್ಲ. ಆದ್ರೆ ಎವೆರಿವನ್ ಎಂಜಾಯ್ಸ್ ಲಕ್ಷುರಿ ಇನ್ ದೇರ್ ಓನ್ ಲಿಮಿಟ್ಸ್.. ನಮಗೆ ಇದು ಲಕ್ಷುರಿ, ಅವರಿಗೆ ಅದು ಲಕ್ಷುರಿ. ಎಲ್ಲರದ್ದೂ ಜೀವನ ಹೇಗೋ ಸಾಗುತ್ತೆ. ಅವನು ಅಟ್ಟಣಿಗೆಯಲ್ಲಿ ನಿಂತು ಮೊಬೈಲು ನೋಡ್ತಾನೆ, ನಾವು ಸೋಫಾದಲ್ಲಿ ಕೂತು ನೋಡ್ತೀವಿ; ಅಷ್ಟೇ ವ್ಯತ್ಯಾಸ. ಎಲ್ಲರೂ ಒಂದು ಎತ್ತರದಲ್ಲಿ ಬದುಕ್ತಾರೆ. ನಾಳೆ ನಿನ್ನ ಕೆಲಸ ಹೋದ್ರೆ ನಾವೂ ಈ ಅಟ್ಟಣಿಗೆಯಿಂದ ಕೆಳಗೆ ಬೀಳ್ತೀವಿ. ಸೋ, ತುಂಬಾ ಯೋಚನೆ ಮಾಡೋಕೆ ಹೋಗಬಾರದು.’
ಯಾವಾಗ ನೋಡಿದರೂ ಶಾಪಿಂಗು, ಕಿಟ್ಟಿಪಾರ್ಟಿ, ನೇಲ್ಪಾಲೀಶಿನ ಶೇಡುಗಳಲ್ಲಿ ಮುಳುಗಿರುವ ರೇಖಾ ಇವತ್ತು ದೊಡ್ಡ ದಾರ್ಶನಿಕಳಂತೆ ಭಾಸವಾದಳು. ಪ್ರಶಾಂತ ಅವಳನ್ನು ಅಭಿಮಾನದಿಂದ ನೋಡಿದ. ಫೇಸ್ಬುಕ್ಕಿನ ಇವೆಂಟ್ ರಿಮೈಂಡರ್ ಇವತ್ತಿನಿಂದ ‘ಬೆಂಗಳೂರು ಪುಸ್ತಕ ಪರಿಷೆ ಶುರು’ ಅಂತ ತೋರಿಸುತ್ತಿತ್ತು. ಒಬ್ಬನೇ ಡ್ರೈವ್ ಮಾಡಿಕೊಂಡು ಅರಮನೆ ಮೈದಾನಕ್ಕೆ ಬಂದ. ಸಾವಿರ ಸಾವಿರ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಮಳಿಗೆಯೊಂದಕ್ಕೆ ನುಗ್ಗಿದವನೇ ಹೊಸದಾಗಿ ಬಂದ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ಅತ್ಯಾದರದಿಂದ ಅದರ ಮುಖಪುಟವನ್ನು ಸವರಿ, ಹಣದ ಚೀಟಿಯತ್ತ ನೋಡದೇ ವ್ಯಾಲೆಟ್ಟಿಗೆ ಕೈ ಹಾಕಿದ.
[ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]
ಮನೆ ಮುಟ್ಟಿದರೆ ಮೊಬೈಲ್ ಹಿಡಿದಿದ್ದ ರೇಖಾ ಯಾವುದೋ ಶಾಪಿಂಗ್ ಸೈಟಿನಲ್ಲಿ ಒಂದಷ್ಟು ವಸ್ತುಗಳನ್ನು ಕಾರ್ಟಿಗೆ ಹಾಕಿಕೊಂಡು ‘ನೋಡು ಪ್ರಶ್, ಈ ಕಲರ್ ಟಾಪ್ ನಂಗೆ ಒಪ್ಪುತ್ತಾ?’ ಅಂದಳು. ‘ಏ.. ಹೊತ್ತುಗೊತ್ತು ಇಲ್ವಾ ನಿಂಗೆ? ಯಾವಾಗ ನೋಡಿದ್ರೂ ಶಾಪಿಂಗು. ತಗೊಂಡಾದ್ರೂ ತಗೊಳ್ತೀಯಾ? ಅದೂ ಇಲ್ಲ. ಕಾರ್ಟಿಗೆ ಹಾಕೋದು, ಕೊನೆಗೆ ರಿಮೋವ್ ಮಾಡೋದು.. ಇಪ್ಪತ್ನಾಲ್ಕು ಗಂಟೆ ಆ ಮೊಬೈಲ್ ಹಿಡ್ಕಂಡಿರ್ತೀಯ. ಮೊದ್ಲು ತೆಗ್ದು ಪಕ್ಕಕ್ಕಿಡು ಅದನ್ನ’ ರೇಗಿದ. ಗಂಡನ ಮೂಡು ಸರಿಯಿಲ್ಲ ಎಂಬುದು ಹೆಂಡತಿಗೆ ಅರ್ಥವಾಯಿತು. ಜತೆಗೇ ಬೆಳಿಗ್ಗೆ ನಡೆದ ಘಟನೆಯೂ ನೆನಪಾಯಿತು. ‘ಸಾರಿ, ಹೋದ ಕೆಲಸ ಏನಾಯ್ತು? ಅಡ್ಮಿಟ್ ಮಾಡ್ಕೊಂಡ್ರಾ? ಹೆಚ್ಚಿಗೆ ಏನೂ ಪೆಟ್ಟು ಆಗಿಲ್ವಂತಾ?’ ಕೇಳಿದಳು. ‘ಮಾಡ್ಕೊಂಡ್ರು. ತುಂಬಾ ನೋವು ಅನುಭವಿಸ್ತಿರೋದು ನೋಡಿದ್ರೆ ಸ್ಪೈನಲ್ ಕಾರ್ಡಿಗೆ ಏಟು ಬಿದ್ದಿದೆಯಾ ಟೆಸ್ಟ್ ಮಾಡ್ಬೇಕು. ಮೊದಲು ಇಷ್ಟು ಟೆಸ್ಟ್ ಮಾಡಿಸಿ ಅಂತ ಎಕ್ಸರೇ, ಸ್ಕಾನಿಂಗ್, ಬ್ಲಡ್ ಟೆಸ್ಟ್ ಅಂತ ಸುಮಾರೆಲ್ಲ ಪಟ್ಟಿ ಬರ್ಕೊಟ್ರು. ಮೊದಲಿಗೆ ಹತ್ತು ಸಾವಿರ ರೂಪಾಯಿ ಕಟ್ಟಬೇಕು ಅಂದ್ರು. ಅಷ್ಟರಲ್ಲಿ ಅವನ ಸಂಬಂಧಿಕರೋ-ಊರವರೋ ಯಾರೋ ಮೂರ್ನಾಲ್ಕು ಜನ ಬಂದ್ರು. ಅವರೆಲ್ಲ ಹೊಂಚಿ ಕಲೆ ಹಾಕಿದರೂ ಒಟ್ಟು ಆರು ಸಾವಿರ ಇತ್ತು ಅವರ ಬಳಿ. ಅವನ ಹೆಂಡತಿ ಒಂದೇ ಸಮನೆ ಅಳ್ತಾ ಇದ್ಲು. ಪಾಪ ಅನ್ನಿಸ್ತು. ಮತ್ತೇನ್ ಮಾಡೋದು? ನಾನೇ ಇನ್ನು ನಾಲ್ಕು ಸಾವಿರಕ್ಕೆ ಕಾರ್ಡ್ ಸ್ವೈಪ್ ಮಾಡಿ ಬಂದೆ’ ಅಂತ ಹೇಳಿದ. ‘ನಾಲ್ಕು ಸಾವಿರ ಕೊಟ್ಯಾ? ಇಟ್ಸ್ ಅ ಬಿಗ್ ಅಮೌಂಟ್!’ ಅಂದ ರೇಖಾಗೆ, ‘ಆ ಪಕ್ಕದಮನೆ ಓನರ್ ಬರ್ಲಿ ಬಡ್ಡಿಮಗ, ಜಬರದಸ್ತಿ ಮಾಡಿಯಾದ್ರೂ ವಸೂಲಿ ಮಾಡ್ತೀನಿ’ ಅಂದ.
ಹಣ ಹಾಗೆ ಖರ್ಚಾದುದಕ್ಕೆ ತಲೆಬಿಸಿಯಾಗಿದ್ದಕ್ಕಿಂತಲೂ ಪ್ರಶಾಂತನಿಗೆ ಬೆಳಗಿನ ಆ ಘಟನೆಯ ಶಾಕ್ನಿಂದ ಹೊರಬರಲು ಆಗಲೇ ಇಲ್ಲ. ರೂಮಿಗೆ ಹೋಗಿ ಬಟ್ಟೆ ಬದಲಿಸಿದ. ಆಫೀಸಿಗೆ ಬರೋದಿಲ್ಲ ಅಂತ ಮ್ಯಾನೇಜರಿಗೆ ಮೆಸೇಜು ಮಾಡಿದ. ರೇಖಾ ತಿಂಡಿ ಕೊಡಲು ಬಂದರೆ ಹಸಿವಿಲ್ಲ ಅಂತ ತಟ್ಟೆಯನ್ನು ದೂರ ತಳ್ಳಿದ. ‘ಕಮಾನ್ ಪ್ರಶ್.. ಎವೆರಿಥಿಂಗ್ ವಿಲ್ ಬಿ ಆಲ್ರೈಟ್.. ಅವನು ಹುಷಾರಾಗಿ ವಾಪಸ್ ಬರ್ತಾನೆ. ಯಾರೋ ನಮಗೆ ಸಂಬಂಧವಿಲ್ಲದವರಿಗೆ ಏನೋ ಆಗಿದ್ದಕ್ಕೆ ಇಷ್ಟೊಂದು ತಲೆ ಹಾಳು ಮಾಡ್ಕೊಂಡಿದೀಯಲ್ಲ.. ಆ ಸಮಯದಲ್ಲಿ ಏನು ಮಾಡಬಹುದಿತ್ತೋ ಅದನ್ನ ನಾವು ಮಾಡಿದೀವಿ. ಹೌದು, ಅದು ಕರ್ತವ್ಯ, ಮಾನವೀಯತೆ. ಸಹಾಯ ಮಾಡಿದ್ವಿ. ಅದಕ್ಕಿಂತ ಜಾಸ್ತಿ ನಾವು ಇನ್ನೇನೂ ಮಾಡೋಕೆ ಸಾಧ್ಯ ಇರ್ಲಿಲ್ಲ..’ ಅಂತೆಲ್ಲ ರೇಖಾ ಸಮಾಧಾನ ಮಾಡಿದರೂ, ಬೆಳಿಗ್ಗೆ ಕೇಳಿದ ಆ ‘ಧಡಾರ್’ ಶಬ್ದ ಪ್ರಶಾಂತನ ತಲೆಯಿಂದ ಇಳಿಯಲಿಲ್ಲ.
ಆದದ್ದಿಷ್ಟು: ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ತಯಾರಾದ ಪ್ರಶಾಂತನಿಗೆ ಹೆಂಡತಿ ತಟ್ಟೆಯಲ್ಲಿ ಪಾಸ್ತಾ ತಂದುಕೊಟ್ಟಳು. ತಟ್ಟೆಯನ್ನು ಟೇಬಲ್ಲಿನ ಮೇಲಿಟ್ಟುಕೊಂಡು, ಒಂದು ಕೈಯಲ್ಲಿ ಮೊಬೈಲು ಇನ್ನೊಂದು ಕೈಯಲ್ಲಿ ಚಮಚ ಹಿಡಿದು ತಿಂಡಿಯ ಶಾಸ್ತ್ರ ನಡೆಸುತ್ತಿದ್ದಾಗ ಹೊರಗಿನಿಂದ ಧಡಾರನೆ ಶಬ್ದ ಕೇಳಿಸಿತು. ಇಬ್ಬರೂ ಹೊರಹೋಗಿ ಬಗ್ಗಿ ಕೆಳಗೆ ನೋಡಿದರೆ, ವ್ಯಕ್ತಿಯೊಬ್ಬ ಹೋ ಅಂತ ನರಳುತ್ತಿದ್ದ. ಪಕ್ಕದ ಸೈಟಿನಲ್ಲಿ ಮನೆ ಕಟ್ಟುತ್ತಿದ್ದ ಮೇಸ್ತ್ರಿಗಳು ಎರಡನೇ ಫ್ಲೋರಿನ ಸೆಂಟ್ರಿಂಗ್ ಹಾಕಲು ಅಟ್ಟಣಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ತಮಿಳಿನಲ್ಲಿ ದೊಡ್ಡ ದನಿಯಲ್ಲಿ ಮಾತಾಡಿಕೊಳ್ಳುತ್ತಾ, ಕರಣೆ-ಬಾಣಲಿ-ಇನ್ನಿತರ ಸಲಕರಣೆಗಳಿಂದ ಸದ್ದು ಮಾಡುತ್ತಾ, ಎರಡು ತಿಂಗಳಿನಿಂದ ಅಲ್ಲೇ ಕೆಳಗಡೆ ಹಾಕಿಕೊಂಡಿದ್ದ ಸಣ್ಣದೊಂದು ಬಿಡಾರದಲ್ಲಿ ಮೂರ್ನಾಲ್ಕು ಜನರ ಸಂಸಾರ ವಾಸವಾಗಿತ್ತು. ‘ಬೆಳಗಾದರೆ ಇವರದ್ದೊಂದು ರಗಳೆ’ ಅಂತ ಎಷ್ಟೋ ದಿನ ರೇಖಾ ಸಿಡಿಮಿಡಿ ಮಾಡುವುದೂ ಇತ್ತು. ಇಷ್ಟೇ ಸಣ್ಣ ಜಾಗದಲ್ಲಿ ಮರಳು-ಸಿಮೆಂಟು-ಇಟ್ಟಿಗೆಗಳನ್ನು ಸಾಗಿಸುತ್ತಾ, ಅಷ್ಟೆತ್ತರದಲ್ಲಿ ಅಟ್ಟಣಿಗೆಗಳನ್ನು ಹಾಕಿಕೊಂಡು ಅವರು ಕಟ್ಟಡ ಕಟ್ಟಲು ಮಾಡುವ ಸಾಹಸ ಯಾವ ಸರ್ಕಸ್ಸಿಗೂ ಕಮ್ಮಿಯಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಅದು ಹೇಗೋ ಅಟ್ಟಣಿಗೆಯ ಕಂಬವೊಂದು ಮುರಿದುಕೊಂಡು, ಅಷ್ಟು ಎತ್ತರದಿಂದ ಆ ಮೇಸ್ತ್ರಿ ಆಯ ತಪ್ಪಿ ಬಿದ್ದಿದ್ದಾನೆ. ಹೊರಗೋಡಿ ಬಂದ ರೇಖಾ-ಪ್ರಶಾಂತರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಬಿದ್ದವನು ಒಂದೇ ಸಮನೆ ಹೊಯ್ದುಕೊಳ್ಳುತ್ತಿದ್ದ. ಅವನ ಹೆಂಡತಿಯೂ-ಸಹಕೆಲಸಗಾರರು ಅಯ್ಯಯ್ಯೋ ಅಂತ ಬಾಯಿ ಬಡಿದುಕೊಂಡು ಅಳತೊಡಗಿದರು. ಕೆಳಗಡೆ ಒಂದಷ್ಟು ಜನ ಸೇರಿದರು. ರೇಖಾ-ಪ್ರಶಾಂತರೂ ಕೆಳಗಿಳಿದು ಹೋದರು. ಯಾರೋ ‘ಆಂಬುಲೆನ್ಸಿಗೆ ಫೋನ್ ಮಾಡ್ರೀ ಆಂಬುಲೆನ್ಸಿಗೆ ಫೋನ್ ಮಾಡ್ರೀ’ ಅಂದರು. ಎಲ್ಲರೂ ಮುಖಮುಖ ನೋಡಿಕೊಂಡರು. ‘ವನ್ ಜೀರೋ ಏಟ್ ಕಣ್ರೀ.. ಬೇಗ ಮಾಡ್ರೀ’ ಅಂದರು ಮತ್ಯಾರೋ. ‘ಓನರ್ ಕರೆಸ್ರೀ.. ನಂಬರ್ ಇದೆಯೇನ್ರೀ ಯಾರ ಹತ್ರನಾದ್ರೂ.. ಕಾಂಟ್ರಾಕ್ಟರ್ಗೆ ಹೇಳ್ಬೇಕು’ ಅಂತೆಲ್ಲ ಕೆಲವರು ಬಡಬಡಿಸುತ್ತಿದ್ದರು. ಪ್ರಶಾಂತ ತನ್ನ ಮೊಬೈಲಿನಿಂದ ಆಂಬುಲೆನ್ಸಿಗೆ ಫೋನು ಮಾಡಿದ. ಅವರು ಯಾವ ಏರಿಯಾ ಅಂತ ಕೇಳಿಕೊಂಡು ‘ಹತ್ತಿರದ ಆಂಬುಲೆನ್ಸಿಗೆ ಕನೆಕ್ಟ್ ಮಾಡ್ತೀವಿ, ಲೈನಿನಲ್ಲೇ ಇರಿ’ ಅಂದರು. ಮೂರ್ನಾಲ್ಕು ನಿಮಿಷ ಆದರೂ ಕನೆಕ್ಟ್ ಆದಹಾಗೆ ಕಾಣಲಿಲ್ಲ. 'ಆಂಬುಲೆನ್ಸ್ ಬರೋತನಕ ಕಾಯಕ್ಕಾಗತ್ತೇನ್ರೀ? ಯಾವುದಾದ್ರೂ ಆಟೋ ಬಂದ್ರೆ ಹತ್ತಿರದ ಆಸ್ಪತ್ರೆಗೆ ಒಯ್ದು ಬಿಡೋಕೆ ಹೇಳ್ಬಹುದಿತ್ತು’ ಅಂದರು ಮತ್ಯಾರೋ. ಅಲ್ಲಿದ್ದವರ್ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವಂತೆ ಕಾಣಲಿಲ್ಲ. ತಮಗ್ಯಾಕೆ ಇಲ್ಲದ ಉಸಾಬರಿ ಅಂತ ಎಲ್ಲರೂ ಹೆದರಿಕೊಂಡಂತೆ ಕಂಡರು. ಪ್ರಶಾಂತನ ತಾಳ್ಮೆ ಮೀರುತ್ತಿತ್ತು. ರೇಖಾಳ ಬಳಿ ‘ಮೇಲೆ ಹೋಗಿ ಕಾರ್ ಕೀ ಬೀಸಾಕು’ ಅಂದವನೇ, ಅಲ್ಲಿದ್ದವರೊಂದಿಗೆ ಕೈ ಜೋಡಿಸಿ, ಒದ್ದಾಡುತ್ತಿದ್ದ ವ್ಯಕ್ತಿಯನ್ನು ಹೊತ್ತುತಂದು ತನ್ನ ಕಾರಿನ ಹಿಂದಿನ ಸೀಟಲ್ಲಿ ಮಲಗಿಸಿದ. ಮೇಸ್ತ್ರಿಯ ಹೆಂಡತಿಯೂ ಮತ್ತೊಂದಿಬ್ಬರು ಕೆಲಸಗಾರರೂ ಕಾರು ಹತ್ತಿ ಮುದುಡಿ ಕುಳಿತುಕೊಂಡರು. ವ್ಯಕ್ತಿ ನರಳುತ್ತಲೇ ಇದ್ದ. ಹತ್ತಿರದ ಆಸ್ಪತ್ರೆಗೆ ಕರೆತಂದು, ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಸ್ಟ್ರೆಚರಿನಲ್ಲಿ ಎಮರ್ಜೆನ್ಸಿ ವಾರ್ಡಿಗೆ ಸೇರಿಸುವಷ್ಟರಲ್ಲಿ ಪ್ರಶಾಂತ ಪೂರ್ತಿ ಬೆವರಿಹೋಗಿದ್ದ.
ಹಾಗೆ ಸೇರಿಸುವಾಗ ಅದೊಂದು ದುಬಾರಿ ಆಸ್ಪತ್ರೆ ಎಂಬುದೂ, ಅಲ್ಲಿಗೆ ಸೇರಿಸಿದರೆ ಅಲ್ಲಾಗುವ ವೆಚ್ಛವನ್ನು ಈ ಬಡ ಕೂಲಿ ಕಾರ್ಮಿಕರಿಗೆ ಭರಿಸಲು ಆಗುತ್ತದಾ ಎಂಬುದೂ ಪ್ರಶಾಂತನಿಗೆ ಹೊಳೆಯಲಿಲ್ಲ. ಹೊಳೆದಿದ್ದರೂ ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆ ಹುಡುಕಿಕೊಂಡು ಅಲೆಯುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಅವರ ಬಳಿ ಹಣ ಕಮ್ಮಿ ಬಿದ್ದಾಗ ಇದು ತನ್ನದೇ ಜವಾಬ್ದಾರಿಯೇನೋ ಎಂಬಂತೆ ಹಿಂದೆಮುಂದೆ ನೋಡದೇ ಕಾರ್ಡ್ ಉಜ್ಜಿ ಬಂದಿದ್ದ.
ಪ್ರಶಾಂತನಿಗೆ ಬೆಳಗಾಮುಂಚೆ ನಡೆದ ಆ ಘಟನೆಯಿಂದ ಅದೆಷ್ಟು ಆಘಾತವಾಯಿತು ಎಂದರೆ, ದಿನವಿಡೀ ಹುಚ್ಚುಚ್ಚಾಗಿ ಮನೆಯಿಡೀ ಓಡಾಡುತ್ತಾ ಇದ್ದುಬಿಟ್ಟ. ತಾನು, ತನ್ನ ಸಂಸಾರ, ಕೈತುಂಬ ಸಂಬಳ ಬರುವ ಕೆಲಸ, ವೀಕೆಂಡು ಬಂತೆಂದರೆ ಪಾರ್ಟಿ-ಸಿನೆಮಾ-ಶಾಪಿಂಗ್ ಎಂದು ನಗರವನ್ನು ಸುತ್ತುವ ಚಾಳಿ, ಬಿಡುಗಡೆಯಾದ ಹೊಸ ಫೋನುಗಳನ್ನು ಕೊಳ್ಳುವ ರೀತಿ, ನೆಟ್ಫ್ಲಿಕ್ಸು-ಹಾಟ್ಸ್ಟಾರ್ ಅಂತ ಇದ್ದಬದ್ದ ಪ್ಯಾಕೇಜುಗಳನ್ನು ಹಾಕಿಕೊಂಡು ದಿನಕ್ಕೊಂದು ಸಿನೆಮಾ ನೋಡುವ ಸೌಲಭ್ಯ, ಬೇಕಾದ ಪುಸ್ತಕಗಳನ್ನು ಖರೀದಿಸಿಯೇ ಓದುವ ಗತ್ತು... ಹೀಗೆ ಹಣದಿಂದ ಕೊಳ್ಳಲಾಗುವ ಸುಖವನ್ನೆಲ್ಲ ಖರೀದಿಸಿ ಅನುಭವಿಸುತ್ತಿರುವ ತಾನು ಮತ್ತು ಒಪ್ಪೊತ್ತಿನ ಊಟಕ್ಕಾಗಿ ಮುಗಿಲೆತ್ತರದ ಅಟ್ಟಣಿಗೆಯ ಮೇಲೆ ಸರ್ಕಸ್ ಮಾಡುವ ಆ ಮೇಸ್ತ್ರಿ –ಎಷ್ಟೊಂದು ವ್ಯತ್ಯಾಸ ನಮ್ಮ ನಡುವೆ! ನನಗೆ ಇಂತಹದ್ದೇನಾದರೂ ಅಪಘಾತವಾಗಿ ಆಸ್ಪತ್ರೆ ಸೇರಿದ್ದರೆ ಕಂಪನಿ ಆಸ್ಪತ್ರೆಯ ಅಷ್ಟೂ ವೆಚ್ಛವನ್ನು ಭರಿಸುತ್ತಿತ್ತು. ಅಷ್ಟರ ಮಟ್ಟಿನ ಲೈಫ್ ಸೆಕ್ಯುರಿಟಿ ತನಗಿದೆ. ಆದರೆ ಆ ಮೇಸ್ತ್ರಿಗೆ?
ಪ್ರಶಾಂತನಿಗೆ ತಾನು ಬದುಕುತ್ತಿರುವ ರೀತಿಯೇ ಸರಿಯಿಲ್ಲ ಎನ್ನಿಸಿಬಿಟ್ಟಿತು. ಆಸ್ಪತ್ರೆಯ ವೆಚ್ಛವನ್ನೂ ಭರಿಸಲಾಗದ ಆ ಮೇಸ್ತ್ರಿಯ ಕುಟುಂಬಕ್ಕೆ ತನ್ನ ಆಡಂಬರದ ಜೀವನಶೈಲಿಯಿಂದ ಅವಮಾನ ಮಾಡುತ್ತಿದ್ದೇನೆ ಅನ್ನಿಸಿತು. ಥಳಥಳ ಹೊಳೆವ ನೆಲದ ಡಬಲ್ ಬೆಡ್ರೂಮ್ ಫ್ಲಾಟಿನ ತನ್ನ ಮನೆಯ ಪಕ್ಕದಲ್ಲಿ ಇಷ್ಟೇ ಸಣ್ಣ ಗೂಡಿನಲ್ಲಿ ಮತ್ತೊಂದು ಕುಟುಂಬವೂ ಬಾಳುತ್ತಿರುವುದು ಈ ಮಹಾನಗರದ ವ್ಯಂಗ್ಯದಂತೆ ಭಾಸವಾಯಿತು. ಎಫ್ಫೆಮ್ಮಿನ ಆರ್ಜೆ ಹೇಳುತ್ತಿದ್ದುದು ನೆನಪಾಯ್ತು: ನನ್ನ ಜೀವನಶೈಲಿ ಬದಲಿಸಿಕೊಳ್ಳಬೇಕಾ ಹಾಗಾದರೇ?
ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಪ್ರಶಾಂತ, ಕಾರು ಹತ್ತಿ ನೇರ ಆಸ್ಪತ್ರೆಯೆಡೆಗೆ ಧಾವಿಸಿದ. ಯಾವ ವಾರ್ಡಿನಲ್ಲಿದ್ದಾರೆಂದು ವಿಚಾರಿಸೋಣವೆಂದರೆ ಆ ಮೇಸ್ತ್ರಿಯ ಹೆಸರೂ ಕೇಳಿಕೊಂಡಿರಲಿಲ್ಲ. ರಿಸೆಪ್ಷನ್ನಿನಲ್ಲಿ ಹೀಗೆ ನಿನ್ನೆ ಎಮರ್ಜನ್ಸಿಯೆಂದು ತಾನು ಒಬ್ಬನನ್ನು ತಂದು ಸೇರಿಸಿದ್ದಾಗಿ ಹೇಳಿಕೊಂಡಾಗ ಆ ರಿಸೆಪ್ಷನಿಸ್ಟ್, ‘ಓಹ್ ಅವರಾ? ಅವರು ನಿನ್ನೆಯೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋದ್ರಲ್ಲಾ.. ಇಲ್ಲಿ ನಮಗೆ ಆಗಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗ್ತೇವೆ ಅಂತ ಹೇಳಿ ಸಂಜೆಯೇ ಹೊರಟುಹೋದರು’ ಅಂದಳು. ಪ್ರಶಾಂತನಿಗೆ ನಿರಾಶೆಯಾಯಿತು. ಯಾವ ಆಸ್ಪತ್ರೆಗೆ ಹೋದರೋ ಏನೋ, ಹುಡುಕಿಕೊಂಡು ಹೋಗುವುದಂತೂ ಸಾಧ್ಯವಿರಲಿಲ್ಲ. ಸುಮ್ಮನೆ ಮನೆಗೆ ಮರಳಿದ.
ಇಷ್ಟೆಲ್ಲ ಆದರೂ ಆ ಪಕ್ಕದ ಮನೆಯ ಮಾಲೀಕನಾಗಲೀ, ಗುತ್ತಿಗೆದಾರನಾಗಲೀ ಈ ಕಡೆ ಸುಳಿದಿರಲಿಲ್ಲ. ತನ್ನೆದುರೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಈಗ ಎಲ್ಲಿದ್ದಾನೆಂಬುದೂ ತಿಳಿಯುವಂತಿರಲಿಲ್ಲ. ಪ್ರಶಾಂತನಿಗೆ ಎಲ್ಲವೂ ಖಾಲಿಖಾಲಿ, ಯಾವುದಕ್ಕೂ ಅರ್ಥವಿಲ್ಲ ಎನಿಸಿತು. ರೇಖಾ ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಪ್ರಶಾಂತ ಸರಿಯಾಗಲಿಲ್ಲ.
ಸುಮಾರು ಹದಿನೈದು ದಿನ ಕಳೆದಮೇಲೆ, ಸ್ಥಗಿತವಾಗಿದ್ದ ಪಕ್ಕದ ಕಟ್ಟಡದ ಕೆಲಸಗಳು ಮತ್ತೆ ಶುರುವಾದ ಸೂಚನೆಯಂತೆ ಟಣಟಣ ಸದ್ದುಗಳು ಬೆಳಗ್ಗೆಯೇ ತೇಲಿಬರತೊಡಗಿದವು. ಲಘುಬಗೆಯಿಂದ ಎದ್ದ ಪ್ರಶಾಂತ ಹೊರಹೋಗಿ ನೋಡಿದ. ಮೇಸ್ತ್ರಿಗಳು ಮುರಿದುಬಿದ್ದಿದ್ದ ಅಟ್ಟಣಿಗೆಯನ್ನು ಮತ್ತೆ ಜೋಡಿಸುತ್ತಿದ್ದರು. ಅಂದು ಬಿದ್ದು ಪೆಟ್ಟುಮಾಡಿಕೊಂಡಿದ್ದ ಆ ಮೇಸ್ತ್ರಿಯೂ ಅಲ್ಲಿದ್ದ. ಅವನ ಬಲಗೈಗೆ ಬೆಳ್ಳನೆ ಬ್ಯಾಂಡೇಜ್ ಇತ್ತು. ಇವನನ್ನು ಕಂಡವನೇ, ‘ಸಾರ್.. ನಮಸ್ಕಾರ ಸಾರ್.. ನೀವು ಅವತ್ತು ಎಂಥಾ ಉಪಕಾರ ಮಾಡಿದ್ರಿ ಸಾರ್.. ನೀವು ಟೇಮಿಗೆ ಸರಿಯಾಗಿ ಕಾರಲ್ಲಿ ಕರ್ಕಂಡ್ ಹೋಗದಿದ್ರೆ ನನ್ ಕಥೆ ಏನಾಗ್ತಿತ್ತೋ ಏನೋ.. ತುಂಬಾ ಹೆಲ್ಪ್ ಆಯ್ತು ಸಾರ್.. ತುಂಬಾ ಥ್ಯಾಕ್ಸ್ ಸಾರ್’ ಅಂತ ಒಂದೇ ಸಮನೆ ಹೇಳಿದ. ಅವನ ಹೆಂಡತಿಯೂ ಕಣ್ಣೀರು ಸುರಿಸುತ್ತಾ ತಮಿಳಿನಲ್ಲಿ ಏನೇನೋ ಹೇಳಿದಳು. ‘ಅಲ್ಲಪ್ಪಾ, ನಾನು ಅಷ್ಟೆಲ್ಲಾ ಮಾಡಿ ಆ ಆಸ್ಪತ್ರೆಗೆ ಸೇರಿಸಿದ್ರೆ ನೀವು ಹೇಳದೇಕೇಳದೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋಗಿಬಿಟ್ಟಿದೀರಲ್ಲಪ್ಪಾ.. ನಾನು ಮರುದಿನ ಹೋಗಿ ವಿಚಾರಿಸಿದ್ರೆ ನೀವು ಅಲ್ಲಿಲ್ಲ’ ಕೇಳಿದ ಪ್ರಶಾಂತ. ‘ಅಯ್ಯೋ ಅಂಥಾ ಆಸ್ಪತ್ರೆಲೆಲ್ಲಾ ನಮ್ಮಂತೋರು ಇರಕ್ಕಾಯ್ತದಾ ಸಾರ್.. ಅದುಕ್ಕೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೇರ್ಕಂಡ್ವಿ. ಅಲ್ಲಿ ಎಲ್ಲಾ ಫ್ರೀ ಸಾರ್.. ನಮ್ದು ಕಾರ್ಡ್ ಇರ್ತದಲ್ಲಾ, ಪಿಎಂದು ಅದೆಂಥದೋ ಸ್ಕೀಮಿಂದು, ಅದ್ರಲ್ಲಿ ಎಲ್ಲಾ ಫ್ರೀಯಾಗಿ ಆಯ್ತು ಸಾರ್. ದೇವ್ರು ದೊಡ್ಡೋನು ಸಾರ್.. ಅಷ್ಟು ಎತ್ರದಿಂದ ಬಿದ್ರೂ ಕೈ ಒಂದು ಮುರ್ದಿದ್ದು ಬಿಟ್ರೆ ಮತ್ತೇನೂ ಆಗ್ಲಿಲ್ಲ’ ಅಂದ ಮೇಸ್ತ್ರಿ.
ಪ್ರಶಾಂತನಿಗೆ ಸ್ವಲ್ಪ ನಿರಾಳವಾಯಿತು. ಅಟ್ಟಣಿಗೆಯ ಅಡ್ಡಗಂಬಗಳ ನಡುವಿಂದ ತಂಗಾಳಿ ತೇಲಿಬಂತು. ಮನೆಯೊಳಗೆ ಬಂದು ಉಲ್ಲಾಸದಿಂದ ಅತ್ತಿತ್ತ ಓಡಾಡಿದ. ಸುಮಾರು ದಿನಗಳ ನಂತರ ಪಾಸ್ತಾ ರುಚಿಯೆನಿಸಿತು. ರೇಖಾ ಅವನ ಭುಜ ತಟ್ಟಿ, ಕಿಟಕಿಯಿಂದ ಹೊರಗಡೆ ನೋಡು ಅಂತ ಸೂಚಿಸಿದಳು. ಅಲ್ಲಿ ಆ ಮೇಸ್ತ್ರಿ ಅಟ್ಟಣಿಗೆಯ ಮೇಲೆ ನಿಂತುಕೊಂಡು, ಬ್ಯಾಂಡೇಜು ಸುತ್ತಿದ ಒಂದು ಕೈಯನ್ನು ಗೋಡೆಗೆ ಆನಿಸಿಕೊಂಡು, ಇನ್ನೊಂದು ಕೈಯಲ್ಲಿ ಫೋನು ಹಿಡಕೊಂಡು ಯಾವುದೋ ವೀಡಿಯೋ ನೋಡುತ್ತಿದ್ದ. ಗಮನಿಸಿದರೆ ಅದೊಂದು ಒಳ್ಳೆಯ ಹೊಸ ಸ್ಮಾರ್ಟ್ಫೋನ್ ಹಾಗೆ ಕಾಣುತ್ತಿತ್ತು. ಪ್ರಶಾಂತನಿಗೆ ಕುತೂಹಲ ತಡೆಯಲಾಗದೆ ಹೊರಗಡೆ ಹೋಗಿ, ‘ಏನಪ್ಪಾ, ಹೊಸ ಫೋನ್ ತಗಂಡಂಗಿದೆ?’ ಅಂತ ಕೇಳಿದ. ‘ಹೌದೂ ಸಾರ್. ಆಸ್ಪತ್ರೆಗೆ ನೋಡಕ್ಕೆ ಬರ್ತಾರಲ್ಲ ಸಾರ್ ತುಂಬಾ ಜನ, ಅವ್ರೆಲ್ಲ ಅಷ್ಟಿಷ್ಟು ಕಾಸು ಕೊಡ್ತಾರೆ ಸಾರ್.. ನಾನು ಅಡ್ಮಿಟ್ ಆಗಿದ್ದಾಗ ಯಾರೋ ದೊಡ್ ಮನುಸ್ರು ಬಂದು ಐದು ಸಾವ್ರ ಕೊಟ್ರು ಸಾರ್.. ಎಲ್ಲಾ ಸೇರಿ ಹತ್ತನ್ನೆರ್ಡ್ ಸಾವ್ರ ಆಯ್ತು ಸಾರ್.. ಈಗ ಕೈಗೆ ಸುತ್ತಿರೋ ಬ್ಯಾಂಡೇಜ್ ಬಿಚ್ಚಗಂಟ ಕೆಲ್ಸ ಮಾಡ್ದೇ ಸುಮ್ನೇ ಕೂತಿರ್ಬೇಕಲ್ಲ ಸಾರ್, ಅದ್ಕೇ ಮೊಬೈಲಾಗೆ ವೀಡ್ಯ ಆದ್ರೂ ನೋಡನ ಅಂತ ತಗಂಡೆ ಸಾರ್.. ನಮ್ ಹೆಂಗುಸ್ರು ಬೈದ್ರು ಸಾರ್, ಆದ್ರೂ ನಾನು ತಗಂಡೆ ಸಾರ್’ ಅಂದ. ಪ್ರಶಾಂತ ಮನಸಿನಲ್ಲೇ ‘ಎಲಾ ಇವನಾ!’ ಅಂದುಕೊಂಡ. ತಾನು ಆವತ್ತು ಇವನ ಹೆಸರಲ್ಲಿ ಹಣ ಕಟ್ಟಿದ್ದು ತಪ್ಪಾಯಿತಾ, ಇವನು ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡುತ್ತಿಲ್ಲವಲ್ಲ, ಅಥವಾ ಇವನಿಗೆ ಅದು ಗೊತ್ತೇ ಇಲ್ಲವಾ.. ಏನಾದರಾಗಲಿ, ನಾನಾಗೇ ಕೇಳಿ ಸಣ್ಣವನಾಗುವುದು ಬೇಡ ಅಂತ ಪ್ರಶಾಂತ ಸುಮ್ಮನಾದ.
ಒಳಬಂದಾಗ ರೇಖಾ ಹೇಳಿದಳು: ‘ಗೊತ್ತಾಯ್ತಾ ಪ್ರಶ್, ಇಷ್ಟೇ ಲೈಫು. ನಾವು ಸುಮ್ಮನೇ ಏನೇನೋ ತಲೆಕೆಡಿಸ್ಕೊಂಡು ಕೂತ್ಕೋತೀವಿ. ನಮಗಿರೋದು ಅವರಿಗಿಲ್ಲ, ನಾವು ಹೀಗಿರೋದು ತಪ್ಪು ಅಂತೆಲ್ಲ. ಆದ್ರೆ ಎವೆರಿವನ್ ಎಂಜಾಯ್ಸ್ ಲಕ್ಷುರಿ ಇನ್ ದೇರ್ ಓನ್ ಲಿಮಿಟ್ಸ್.. ನಮಗೆ ಇದು ಲಕ್ಷುರಿ, ಅವರಿಗೆ ಅದು ಲಕ್ಷುರಿ. ಎಲ್ಲರದ್ದೂ ಜೀವನ ಹೇಗೋ ಸಾಗುತ್ತೆ. ಅವನು ಅಟ್ಟಣಿಗೆಯಲ್ಲಿ ನಿಂತು ಮೊಬೈಲು ನೋಡ್ತಾನೆ, ನಾವು ಸೋಫಾದಲ್ಲಿ ಕೂತು ನೋಡ್ತೀವಿ; ಅಷ್ಟೇ ವ್ಯತ್ಯಾಸ. ಎಲ್ಲರೂ ಒಂದು ಎತ್ತರದಲ್ಲಿ ಬದುಕ್ತಾರೆ. ನಾಳೆ ನಿನ್ನ ಕೆಲಸ ಹೋದ್ರೆ ನಾವೂ ಈ ಅಟ್ಟಣಿಗೆಯಿಂದ ಕೆಳಗೆ ಬೀಳ್ತೀವಿ. ಸೋ, ತುಂಬಾ ಯೋಚನೆ ಮಾಡೋಕೆ ಹೋಗಬಾರದು.’
ಯಾವಾಗ ನೋಡಿದರೂ ಶಾಪಿಂಗು, ಕಿಟ್ಟಿಪಾರ್ಟಿ, ನೇಲ್ಪಾಲೀಶಿನ ಶೇಡುಗಳಲ್ಲಿ ಮುಳುಗಿರುವ ರೇಖಾ ಇವತ್ತು ದೊಡ್ಡ ದಾರ್ಶನಿಕಳಂತೆ ಭಾಸವಾದಳು. ಪ್ರಶಾಂತ ಅವಳನ್ನು ಅಭಿಮಾನದಿಂದ ನೋಡಿದ. ಫೇಸ್ಬುಕ್ಕಿನ ಇವೆಂಟ್ ರಿಮೈಂಡರ್ ಇವತ್ತಿನಿಂದ ‘ಬೆಂಗಳೂರು ಪುಸ್ತಕ ಪರಿಷೆ ಶುರು’ ಅಂತ ತೋರಿಸುತ್ತಿತ್ತು. ಒಬ್ಬನೇ ಡ್ರೈವ್ ಮಾಡಿಕೊಂಡು ಅರಮನೆ ಮೈದಾನಕ್ಕೆ ಬಂದ. ಸಾವಿರ ಸಾವಿರ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಮಳಿಗೆಯೊಂದಕ್ಕೆ ನುಗ್ಗಿದವನೇ ಹೊಸದಾಗಿ ಬಂದ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ಅತ್ಯಾದರದಿಂದ ಅದರ ಮುಖಪುಟವನ್ನು ಸವರಿ, ಹಣದ ಚೀಟಿಯತ್ತ ನೋಡದೇ ವ್ಯಾಲೆಟ್ಟಿಗೆ ಕೈ ಹಾಕಿದ.
[ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]
Subscribe to:
Posts (Atom)