Friday, December 28, 2007

ಹೊಸ ವರುಷದ ಜೋಳಿಗೆಯಲ್ಲಿ...

ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..

ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.

ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.

ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.

ಮತ್ತೆ ಬಿಳೀ ಖಾಲಿ ಹಾಳೆ..

ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.

ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.

ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.

ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.

ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.

ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.

ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.

ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'

ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...

* * *

ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.

ಶುಭಾಶಯಗಳು.

Tuesday, December 18, 2007

ವಡಪ್ಪೆಯ ಎಡವಟ್ಟುಗಳು!

ಹೌದು, ವಡಪ್ಪೆ ತಿಂದಿದ್ರ ಬಗ್ಗೆ ಬರಿಯಕ್ಕು ನೋಡು ಸಂದೀಪಾ!

ತಿಂದುಂಡಿದ್ರ ಬಗ್ಗೇನೆಲ್ಲ ಏನು ಬರಿಯೋದು, ಮಾಡಿದ್ರ ಬಗ್ಗೆ ಬರೀಬೇಕು. ನಿಜ ಹೇಳಬೇಕೂಂದ್ರೆ, ವಡಪ್ಪೆ ಮಾಡಿದ್ದಷ್ಟೇ, ತಿಂದಿದ್ದು ಅಷ್ಟರಲ್ಲೇ ಇದೆ! ಆದರೆ ಮಾಡಲು ನಾವು ಪಟ್ಟ ಸಾಹಸಗಳಿವೆಯಲ್ಲ, ಅದನ್ನು ಬರೆಯದಿದ್ದರೆ ತಪ್ಪಾದೀತು.

ಅದು ಏನಾಯಿತೆಂದರೆ.... ತಾಳಿ, ಅದನ್ನು ಹೇಳುವ ಮುನ್ನ ಸ್ವಲ್ಪ ಬ್ಯಾಕ್‍ಗ್ರೌಂಡ್ ಹೇಳ್ಕೋಬೇಕು: ನನ್ನ ರೂಂಮೇಟು ವಿನೂಗೆ ಅಡುಗೆ ಮಾಡಿಕೊಂಡು ತಿನ್ನೋದು ಅಂದ್ರೆ ಒಂದು ಕ್ರೇಜು. ಈ ಮಳ್ಗದ್ದೆ ಊರೋರು ಮತ್ತೆ ನಡಳ್ಳಿ ಊರೋರು ತಿನ್ನೋದ್ರಲ್ಲಿ ಎತ್ತಿದ್ ಕೈಯಿ ಅಂತ ಕ್ಯಾಸನೂರು ಸೀಮೆಲೆಲ್ಲ ಹೆಸರುವಾಸಿ. ಅವರು ಎಷ್ಟ್ರ ಮಟ್ಟಿಗೆ ಹೆಸರುವಾಸಿ ಅಂದ್ರೆ, 'ಕ್ಯಾಸನೂರು ಸೀಮೆಯವ್ರು ತಿನ್ನೋದ್ರಲ್ಲಿ ಎತ್ತಿದ್ ಕೈ' ಅಂತ ಬೇರೆ ಸೀಮೆಯವ್ರೆಲ್ಲ ಮಾತಾಡ್ಕೋತಾರೆ! ಐ ಮೀನ್, ನಾ ಹೇಳಿದ್ದು ನಿಮ್ಗೆ ಅರ್ಥ ಆಯ್ತಲ್ಲ? ಮಳಲಗದ್ದೆ ಮತ್ತು ನಡಹಳ್ಳಿ ಊರಿನವರ ಭೋಜನ ಪ್ರಿಯತೆ ಸುತ್ನಾಲ್ಕು ಸೀಮೆಗಳಲ್ಲಿ ಕ್ಯಾಸನೂರು ಸೀಮೆಗೇ ಒಂದು ಹೆಸರನ್ನು ತಂದುಕೊಟ್ಟಿದೆ. ಲಗ್ನದ ಮನೆಗಳಲ್ಲಿ, ಗಂಡು ಅಥವಾ ಹೆಣ್ಣು ಕ್ಯಾಸನೂರು ಸೀಮೆಯದು ಅಂತಾದ್ರೆ ಛತ್ರದ ಅಡುಗೆ ಮನೆಯಲ್ಲಿ ಮಾತುಕತೆ ನಡೆದಿರುತ್ತದೆ: "ಹೋಯ್, ಬಪ್ಪೋರು ಯಾರು ಗೊತಿದಲ, ಕ್ಯಾಸ್ನೂರು ಸೀಮ್ಯೋರು. ಐಟಮ್ಮೆಲ್ಲ ಸ್ವಲ್ಪ್ ಸ್ವಲ್ಪ ಜಾಸ್ತಿ ಮಾಡವು!"

ಉಳಿದೆಲ್ಲ ವಿಷಯಗಳಲ್ಲಿ ಓಕೆಯಾದರೂ, ವಿನೂಗೆ ನಾನು ತಿನ್ನುವ ವಿಷಯದಲ್ಲಿ ಕಂಪನಿ ಅಲ್ಲವೇ ಅಲ್ಲ. ನಾನು ತಿನ್ನುವುದು ಗುಬ್ಬಿ ತಿಂದಂತೆ ತುದೀ ಬೆರಳುಗಳಲ್ಲಿ ನಾಲ್ಕು ಅಗುಳು. ಅವನದೋ ಇಡೀ ಹಸ್ತ ಬಳಸಿ ಬಳುಗಿ, ಸುರಿದು, ಕತ್ತರಿಸಿ ಮಾಡುವ ಊಟ. ಪ್ರತಿ ರಾತ್ರಿ ಊಟ ಮಾಡುವಾಗ ನಮ್ಮನೆಯಲ್ಲಿ ಇದೇ ಕಾರಣಕ್ಕೆ ಮಾತುಗಳು. ಆಫೀಸಿನಿಂದ ಹೊರಡುವುದು ಸ್ವಲ್ಪ ತಡವಾದರೂ ನಾನು ಅವನಿಗೆ ಫೋನ್ ಹಚ್ಚಿ 'ಏಯ್ ಹೋಟ್ಲಲ್ಲೆ ಊಟ ಮಾಡ್ಕೊಂಡು ಹೋಗೋಣ ಮಾರಾಯಾ' ಅನ್ನುತ್ತೇನೆ. ಅವನು ನನ್ನ ಮಾತನ್ನು ಅಲ್ಲೇ ತುಂಡರಿಸಿ 'ಮನೇಲೆ ಅಡುಗೆ ಮಾಡೋಣ ಬಾ. ನೀ ಕಾಯಿ ಹೆರ್ಕೊಡು ಸಾಕು. ನಾನು ಅಡುಗೆ ಮಾಡ್ತೀನಿ' ಅನ್ನುತ್ತಾನೆ. ನಾನು ಸ್ಟ್ರಾಂಗ್ ಕಾಫಿ, ಖಾರದ ಚಿಪ್ಸು, ಚಾಕ್ಲೇಟು, ಬಿಸ್ಕೇಟು, ಕೇಕು ಎಂದೇನೇನೋ ಹಾಳುಮೂಳನ್ನೆಲ್ಲ ತಿಂದುಕೊಂಡು ಓಡಾಡಿಕೊಂಡಿರುತ್ತೇನೆ. ಅವನು ಹಾಲು, ಕಷಾಯ, ಹಣ್ಣು, ಹಂಪಲು ಇತ್ಯಾದಿಗಳಲ್ಲಿ ಮುಳುಗಿರುತ್ತಾನೆ.

ಇಂಥಾ ವಿನೂ 'ಒಂದು ಭಾನ್ವಾರ ತಿಂಡಿಗೆ ವಡಪ್ಪೆ ಮಾಡವಲೇ ಭಟ್ಟಾ' ಅಂತ ಅವಾಗಿವಾಗ ಹೇಳುತ್ತಿದ್ದ. ಆಗೆಲ್ಲ ನಾನು ಆ ವಡಪ್ಪೆ ಮಾಡಲು ಬೇಕಾಗುವ ಸಮಯ, ಶ್ರಮಗಳನ್ನು ನೆನೆಸಿಕೊಂಡೇ ಒಳಗೊಳಗೇ ಹಿಂಜರಿಯುತ್ತಿದ್ದೆ. ಬಹುಶಃ ನನ್ನ ಹಿಂಜರಿಕೆಯನ್ನು ನೋಡೀ ನೋಡಿ ಬೇಸತ್ತ ವಿನು ತಾನೊಬ್ಬನೇ ಕೂತು ಇದಕ್ಕೆ ಪರಿಹಾರ ಏನೆಂದು ಯೋಚಿಸಿದ್ದಾನೆ. ಆಗ ಅವನಿಗೆ ನೆನಪಾದದ್ದೇ ಸಂದೀಪ! ವಿನಾಯಕನಿಗೆ ಸಂದೀಪನಿಗಿಂತ ಬೆಸ್ಟ್ ಪಾರ್ಟನರ್ ಮತ್ತಿನ್ಯಾರು ಸಿಗಲಿಕ್ಕೆ ಸಾಧ್ಯ? ಸರಿ, ಅದೊಂದು ಭಾನುವಾರ ಅವನು ನನ್ನ ಕಣ್ತಪ್ಪಿಸಿ (ಸಾರಿ, ಕಿವಿ) ಸಂದೀಪನಿಗೆ ಫೋನ್ ಮಾಡಿದ್ದಾನೆ. ಇಬ್ಬರೂ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ: ವಡಪ್ಪೆ ಮಾಡಲೇಬೇಕು.

ಸಂದೀಪ ಸಂಜೆ ಆರರ ಹೊತ್ತಿಗೆ ನನಗೆ ಫೋನ್ ಮಾಡಿದ: "ಎಲ್ಲಾ ರೆಡಿನನಾ?"
"ಏಂತು?" ನಾನು ಕೇಳಿದೆ.
"ಅದೇ ವಡಪ್ಪೆ"
"ವಡಪ್ಪೆ?!"
"ಹಾಂ, ವಿನಾಯ್ಕ ಹೇಳಲ್ಯಾ? ಇವತ್ ನಿಮ್ಮನೆಲಿ ವಡಪ್ಪೆ ಮಾಡವು ಅಂತ ಆಯ್ದಲಾ.. ನಾ ಬರ್ತಾ ಇದ್ದಿ. ಹಿಟ್ಟು ಕಲ್ಸಿಟ್ಟಿರಿ!"
"!"

ವಿಶೇಷವೆಂದರೆ, ವಡಪ್ಪೆಯ ಬಗ್ಗೆ ಅಷ್ಟೊಂದು ನಿರಾಸಕ್ತಿ ಹೊಂದಿದ್ದ ನಾನೂ ಅದೇಕೋ ಇದ್ದಕ್ಕಿದ್ದಂತೆ ಹುಜುರತ್ತಾಗಿಬಿಟ್ಟೆ! ನಾನೂ-ವಿನು ಹೋಗಿ ಒಂದು ಕೇಜಿ ಅಕ್ಕಿ ಹಿಟ್ಟು ತಂದೆವು. ಈರುಳ್ಳಿ, ಹಸಿಮೆಣಸು, ತೆಂಗಿನಕಾಯಿ, ವಳ್ಳೆಣ್ಣೆ ತಂದು ಸಂದೀಪ ಬರುವ ಹೊತ್ತಿಗೆ ನಾವು ಸಕಲ ಶಸ್ತ್ರಸನ್ನದ್ಧರಾಗಿ ಕೂತಿದ್ದೆವು. ಸಂದೀಪ ಬಂದಮೇಲೆ ಈರುಳ್ಳಿ ಹೆಚ್ಚಲು ಕೂತೆವು. ಸಣ್ಣಕೆ ಹೆಚ್ಚಬೇಕು ಎಂದಾಯಿತು. ವಿನು ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದು ದೊಡ್ಡಕಾತು ಅಂತ ಸಂದೀಪ ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದೂ ದೊಡ್ಡಕಾತು ಅಂತ ನಾ ಹೆಚ್ಚಿದೆ. ನಾ ಹೆಚ್ಚಿದ್ದು ದೊಡ್ಡಕಾತು ಅಂತ ಹೇಳಲು ಯಾರೂ ಇರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಕಣ್ಣೀರು ಸುರಿಸುತ್ತ ಪೂರ್ತಿ ಈರುಳ್ಳಿಯನ್ನು ನಾನೇ ಹೆಚ್ಚಬೇಕಾಯಿತು. ಆಮೇಲೆ ಹಸಿಮೆಣಸು ಕತ್ತರಿಸಿ ಹಾಕಿದೆವು. ಕಾಯಿಯನ್ನು ಪುಟ್ಟ ಪುಟ್ಟ ಚೂರುಗಳನ್ನಾಗಿ ಕತ್ತರಿಸಿ ಮಿಕ್ಸ್ ಮಾಡಿದೆವು. ನಂತರ ಸುಮಾರು ಅರ್ಧ ಕೆಜಿ ಹಿಟ್ಟು ಬೇಸಿನ್ನಿಗೆ ಹಾಕಿಕೊಂಡು ಅದಕ್ಕೆ ನೀರು-ಎಣ್ಣೆ ಹಾಕಿ, ಹೆಚ್ಚಿದ್ದ ಈರುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಸ್ವಲ್ಪ ಉಪ್ಪು ಎಲ್ಲಾ ಹಾಕಿ ಕಲಸಲು ಶುರು ಮಾಡಿದೆವು. ಸ್ವಲ್ಪ ಗಟ್ಟಿಯಾಯಿತು ಎನಿಸಿತು. ನೀರು ಹಾಕಿದೆವು. ನೀರು ಜಾಸ್ತಿಯಾಯಿತು ಎನ್ನಿಸಿತು. ಹಿಟ್ಟು ಹಾಕಿದೆವು. ಮತ್ತೆ ಗಟ್ಟಿಯಾಯಿತೆನ್ನಿಸಿ ನೀರು ಹಾಕಿದೆವು... ಹೀಗೇ ಜಾಸ್ತಿಯಾಗುತ್ತಾ ಕಮ್ಮಿಯಾಗುತ್ತಾ ಅಂತೂ ಹಿಟ್ಟು ಹದಕ್ಕೆ ಬಂತು ಎನಿಸುವಷ್ಟರಲ್ಲಿ ಹಿಟ್ಟಿನ ಪ್ಯಾಕೆಟ್ಟು ಖಾಲಿಯಾಗಿತ್ತು!

ಸರಿ, ಹಿಟ್ಟೇನೋ ಹದಕ್ಕೆ ಬಂತು, ಈಗ ಅದನ್ನು ತಟ್ಟಿ ಕಾವಲಿಯ ಮೇಲೆ ಹಾಕಬೇಕಲ್ಲ... ತಟ್ಟಲಿಕ್ಕೇನಿದೆ ನಮ್ಮ ಬಳಿ? ಸಂದೀಪನ ಬಳಿ ಬರುವಾಗ ಬಾಳೆ ಎಲೆ ತಗೋಂಬಾ ಎಂದಿದ್ದೆವು. ಎಲ್ಲೂ ಸಿಕ್ಕಲಿಲ್ಲವಂತೆ, ಅವನು ತಂದಿರಲಿಲ್ಲ. ಈಗ ಇರುವುದರಲ್ಲಿಯೇ ಏನರಲ್ಲಾದರೂ ಅಡ್ಜಸ್ಟ್ ಮಾಡಬೇಕಾಯ್ತಲ್ಲ.. ನಾವು ಮೊದಲು ಆಯ್ದುಕೊಂಡದ್ದು ಪ್ಲಾಸ್ಟಿಕ್ ಕವರುಗಳು!

ದಪ್ಪ ಪ್ಲಾಸ್ಟಿಕ್ ಕವರೊಂದನ್ನು ಹುಡುಕಿ, ನೀಟಾಗಿ ಕತ್ತರಿಸಿ ಅದರ ಮೇಲೆ ಒಂದು ಮುಷ್ಟಿ ಹಿಟ್ಟಿಟ್ಟು ತಟ್ಟಿದ್ದಾಯ್ತು. ತಟ್ಟಿದ ವಡಪ್ಪೆಗೆ ನಾಲ್ಕಲ್ಲ, ಐದು ತೂತು ಮಾಡಿದ್ದಾಯ್ತು. ಒಲೆಯ ಮೇಲೆ ಕಾವಲಿ ಕಾಯುತ್ತಿತ್ತು. ಸಂದೀಪ ಎತ್ತಿಕೊಟ್ಟ. 'ಕಾವ್ಲಿ ಮೇಲೆ ಹಾಕ್ತಿದ್ದಾಂಗೆ ಕವರ್ ಎತ್ಕ್ಯಳವು' ಎಂದು ಕಾಶನ್ ಕೊಟ್ಟ. 'ಏಯ್ ಎತ್ತಿರೆ ಸೈ ತಗಳಾ' ಎಂದು ಭಾರೀ ಹುರುಪಿನಿಂದ ನಾನೇ ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಮಗುಚಿಯೇಬಿಟ್ಟೆ! ಆದರೆ ನಾನು ಕವರನ್ನು ಎತ್ತುವುದರೊಳಗೇ ಕಾದಿದ್ದ ಕಾವಲಿಗೆ ಪ್ಲಾಸ್ಟಿಕ್ಕೆಲ್ಲ ಮೆತ್ತಿಕೊಂಡು, ಕರಗಿ, ಹೊಗೆಯೆದ್ದು, ಕಮರು ಅಡುಗೆಮನೆಯನ್ನೆಲ್ಲ ತುಂಬಿಕೊಂಡು, ಸಂದೀಪ-ವಿನಾಯಕರ ಮೂಗು ತಲುಪಿ, ಅದನ್ನವರ ಮೆದುಳು ಪ್ರೊಸೆಸ್ ಮಾಡಿ, ಇದು ಪ್ಲಾಸ್ಟಿಕ್ ಸುಟ್ಟ ವಾಸನೆ ಎಂಬುದವರಿಗೆ ಹೊಳೆದು, 'ಏಯ್ ಎಂಥಾತಾ??' ಎಂದು ಕೇಳುವುದಕ್ಕೂ ನಾನು 'ಅಯ್ಯೋ ಹಿಡ್ಕಂಡೇಬುಡ್ಚ!' ಅನ್ನುವುದಕ್ಕೂ ಸರಿಹೋಯಿತು. ಆದರೂ ಅವರು ಅಡುಗೆಮನೆಗೆ ನುಗ್ಗುವುದರೊಳಗೆ ನಾನು ಹರಸಾಹಸ ಮಾಡಿ ಅಷ್ಟಿಷ್ಟು ಪ್ಲಾಸ್ಟಿಕ್ಕು ಎತ್ತಿ ಮರ್ಯಾದೆ ಉಳಿಸಿಕೊಳ್ಳುವ ಯತ್ನ ಮಾಡಿದೆ. ನಮ್ಮ ಮೊದಲ ವಡಪ್ಪೆ ಹೀಗೆ ವೇಸ್ಟಾಯಿತು. ಆಮೇಲೆ ಕಾವಲಿಯನ್ನು ನೆನೆಸಿ, ಕಾಯಿಸಿ, ಕೆರಚಿ, ವ್ಹಿಮ್ ಹಚ್ಚಿ ಏನೇನೋ ಮಾಡಿ ತೊಳೆದು ಕ್ಲೀನ್ ಮಾಡಿದೆವು.

ನಮ್ಮ ಮುಂದಿನ ಪ್ರಯೋಗಕ್ಕೆ ಕತ್ತರಿಸಲ್ಪಟ್ಟದ್ದು ರಟ್ಟುಗಳು! ಬಟ್ಟೆ ಕಂಪನಿಯವರು ನಮ್ಮ ಅಂಗಿಗಳಿಗೆ ರೇಟ್ ಹೆಚ್ಚಿಸಲು ಮುಚ್ಚಿ ಕೊಟ್ಟಿದ್ದ ಚಂದನೆಯ ಬಾಕ್ಸ್‍ಗಳನ್ನು ಕತ್ತರಿಸಿದೆವು. ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ನಾನು ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಹಾಕಿದೆ. ಆದರೆ ಈ ವಡಪ್ಪೆ ಹಿಟ್ಟಿಗೆ ಈ ಅಂಗಿ ಬಾಕ್ಸಿನ ಮೇಲೆ ಅದೇನೋ ಪ್ರೀತಿಯೋ ಏನೋ, ನಾನೆಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಅದು ರಟ್ಟಿನಿಂದ ಬಿಡಲೇ ಇಲ್ಲ! ಹಾಲಿನಲ್ಲಿ ಕೂತಿದ್ದ ಅವರು 'ಎಂಥಾತಾ ಎಂಥಾತಾ' ಎನ್ನುತ್ತಿದ್ದರು. ನಾನು ರಟ್ಟಿನಿಂದ ಹಿಟ್ಟು ಬಿಡಿಸುವುದರಲ್ಲೇ ಮಗ್ನನಾಗಿದ್ದೆ. ನನ್ನಿಂದ ಯಾವುದೇ ರಿಪ್ಲೇ ಬಾರದಿದ್ದುದನ್ನು ನೋಡಿ ಅವರೇ ಅಡುಗೆಮನೆಗೆ ಬಂದರು. ನನ್ನ ಕಷ್ಟದ ಬಗ್ಗೆ ಸಂತಾಪ ವ್ಯಕ್ತಪಡಿಸುವುದನ್ನು ಬಿಟ್ಟು ಮತ್ತಿನ್ನೇನೋ ಮಾಡುವುದು ಅವರಿಗೂ ಸಾಧ್ಯವಿರಲಿಲ್ಲ. ಹೀಗೆ ನಮ್ಮ ಎರಡನೇ ಪ್ರಯೋಗವೂ ಫೇಲಾಯಿತು.

ನಾವು ಈಗಾಗಲೇ ಹೇಗೆಹೇಗೋ ಅಷ್ಟಿಷ್ಟು ಬೆಂದು ತಯಾರಾಗಿದ್ದ ವಡಪ್ಪೆಯ ಚೂರುಗಳನ್ನು ಮೂವರೂ ಹಂಚಿಕೊಂಡು ತಿಂದಿದ್ದೆವು. ಅದು ಅದೆಷ್ಟು ರುಚಿಯಾಗಿಬಿಟ್ಟಿತ್ತು ಅಂದ್ರೆ, ನಾವು ವಡಪ್ಪೆ ಮಾಡುವುದನ್ನು ಎಟ್ಟೆನಿಕಾಸ್ಟ್ ಮುಂದುವರಿಸಲೇಬೇಕಿತ್ತು.

ಈ ಬಾರಿ ಹೊಸ ಪ್ರಯೋಗಕ್ಕೆ ಮುನ್ನಾಗುವ ಮೊದಲು ನಾವು ಸ್ವಲ್ಪ ಹೊತ್ತು ಯೋಚಿಸಿದೆವು. ಬಟ್ಟೆಯ ಮೇಲೆ ತಟ್ಟುವುದು ನಮ್ಮ ಐಡಿಯಾವಾಗಿತ್ತು. ವಿನಾಯಕನ ಹಳೆಯ ಶಾಲೊಂದನ್ನು ಕಪಾಟಿನಿಂದ ತೆಗೆದೆವು. 'ಮೊನ್ನೆಯಷ್ಟೇ ತೊಳೆದದ್ದು' ಅಂತ ವಿನು ಅಂದ. ನಾವು ನಂಬಿದೆವು. ಕತ್ತರಿಸಿ ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ಎರಡೆರೆಡು ಬಾರಿ ಪ್ರಯೋಗಿಸಿ ಮುಖಭಂಗವಾಗಿದ್ದ ನಾನು ಈ ಬಾರಿ ಮುಗುಮ್ಮಾಗಿ ಪೇಪರ್ರೋದುತ್ತ ಕುಳಿತಿದ್ದೆ. ವಿನು ವಡಪ್ಪೆ ತಟ್ಟಲ್ಪಟ್ಟಿದ್ದ ಬಟ್ಟೆಯನ್ನು ಹಿಡಿದು ಅಡುಗೆಮನೆ ಹೊಕ್ಕ -ನಾನು ಮೊದಲ ಬಾರಿ ಹೊಕ್ಕಷ್ಟೇ ಗತ್ತಿನಿಂದ. ನಾನು ಪೇಪರ್ರನ್ನು ಕೈಯಲ್ಲಿ ಹಿಡಿದಿದ್ದೆನಷ್ಟೇ, ಕಿವಿಯೆಲ್ಲಾ ಇದೀಗ ಅಡುಗೆಮನೆಯಿಂದ ಕೇಳಿಬರಬಹುದಾದ ವಿನಾಯಕನ 'ಛೇ ತೂ' ಗಳನ್ನೇ ನಿರೀಕ್ಷಿಸುತ್ತಿತ್ತು. ಆದರೆ ನಾನು ನಿಬ್ಬೆರಗಾಗುವಂತೆ ವಿನು 'ಆಹಾಹ! ಏನು ಸಲೀಸಾಗಿ ಬಿಡ್ಚಲೇ! ನಾ ಆಗ್ಲೇನೇ ಹೇಳಿದ್ದಿ ಬಟ್ಟೆ ಮೇಲ್ ಹಾಕನ ಅಂತ' ಎನ್ನುತ್ತಾ ಖಾಲಿ ಬಟ್ಟೆಯನ್ನು ಹಿಡಿದು ಬಂದ. ನಾನು ಬೆಪ್ಪನಂತೆ ಮಿಕಿಮಿಕಿ ನೋಡಿದೆ. ಅಂತೂ ನಾವು ಮೂವರು ಗಂಡುಗಲಿಗಳ ಸಾಹಸದಿಂದ ಸುಂದರ ವಡಪ್ಪೆಯೊಂದು ಕಾವಲಿಯ ಮೇಲೆ ಬೆಂದು ಕೆಂಪಾಗಿ ಹೊರಬಂತು. ನಮಗೆ ದ್ರೌಪದಿಯನ್ನೇ ಗೆದ್ದಷ್ಟು ಖುಷಿ!

ಆಮೇಲೆಲ್ಲ ಸುಲಭವಾಯಿತು. ಒಂದರ ಮೇಲೊಂದು ವಡಪ್ಪೆ ತಟ್ಟಿದೆವು. ಐದೇ ನಿಮಿಷದಲ್ಲಿ ಕಾಯಿಚಟ್ನಿ ತಯಾರಾಯಿತು. ಊರಿಂದ ತಂದಿದ್ದ ಜೋನಿ ಬೆಲ್ಲವಂತೂ ಇತ್ತು. ತುಪ್ಪದ ಬಾಟ್ಲಿಯೂ ಇತ್ತು. ಆದರೆ ಪೂರ್ತಿ ವಡಪ್ಪೆ ತಟ್ಟಿಯಾಗಿ, ಅವು ಬೆಂದು, ನಾವು ಪ್ಲೇಟೆಲ್ಲ ಹಾಕಿಕೊಂಡು, ಮಧ್ಯದಲ್ಲಿ ಸಿದ್ಧವಾಗಿದ್ದ ವಡಪ್ಪೆ ಗುಡ್ಡೆ ಇಟ್ಟುಕೊಂಡು ಕೂರುವ ಹೊತ್ತಿಗೆ ಎರಡು ಎಡವಟ್ಟುಗಳಾಗಿದ್ದವು:

ಮಾಡುತ್ತ ಮಾಡುತ್ತಲೇ ನಾವು ಸುಮಾರು ವಡಪ್ಪೆಗಳನ್ನು ತಿಂದುಬಿಟ್ಟಿದ್ದರಿಂದ ನಮ್ಮೆಲ್ಲರ ಹೊಟ್ಟೆಯೂ ತುಂಬಿಹೋಗಿತ್ತು. ಮತ್ತು ಎಂಟು ಗಂಟೆಗೆ ಶುರು ಮಾಡಿದ್ದ ನಮ್ಮ ವಡಪ್ಪೆ ತಯಾರಿಕೆ ಫ್ಯಾಕ್ಟರಿ ಮುಗಿದಾಗ ರಾತ್ರಿ ಹನ್ನೊಂದೂವರೆ ಆಗಿತ್ತು! ಇನ್ನೆಲ್ಲಿಂದ ತಿನ್ನುವುದು? ಒಂದು ಕಡೆಗೆ ನಿದ್ರೆ ಎಳೆಯುತ್ತಿತ್ತು. ಸಂದೀಪ ಜೋಕಿನ ಮೇಲೆ ಜೋಕು ಹೇಳುತ್ತಿದ್ದ. ಚಟ್ನಿ ಬೇರೆ ಖಾರವಾಗಿತ್ತು. ನನಗಂತೂ ನಗುವುದೋ ಅಳುವುದೋ ಒಂದೂ ಗೊತ್ತಾಗದೆ, ತಿಂಗಳಿಗೆ ಕನಿಷ್ಟ ನಾಲ್ಕು ದಿನ ಸ್ವಲ್ಪವೂ ಬೇಸರಿಸಿಕೊಳ್ಳದೆ ಬೆಳಗ್ಗೆ ತಿಂಡಿಗೆ ವಡಪ್ಪೆ ಮಾಡುವ ಅಮ್ಮನನ್ನು ನೆನೆಸಿಕೊಳ್ಳುತ್ತಾ, ಚೂರು ಚೂರೇ ಮುರಿಯುತ್ತ ಮೆಲ್ಲತೊಡಗಿದೆ. ತಲಾ ಎರಡು ವಡಪ್ಪೆ ತಿನ್ನುವುದರೊಳಗೆ ನಾವೆಲ್ಲ ಸುಸ್ತು! 'ನಾಳೆ ತಿಂದ್ರಾತು ತಗಳಾ' ಎಂದು ಗೊಣಗಿಕೊಂಡು ಮಲಗಿದೆವು. ಸಂದೀಪನೂ ಆ ರಾತ್ರಿ ನಮ್ಮನೆಯಲ್ಲೇ ಉಳಿದ.

ಆದರೆ ಬೆಳಗ್ಗೆ ಮತ್ತೆ ಅದೇ ವಡಪ್ಪೆಯನ್ನು ತಿನ್ನುವ ಉತ್ಸಾಹ ಯಾರಿಗೂ ಇರಲಿಲ್ಲ. ಹೀಗಾಗಿ, ಆ ಉಳಿದ ವಡಪ್ಪೆಗಳು ನಮ್ಮನೆ ಗ್ಯಾಸ್ ಕಟ್ಟೆ ಮೇಲೆ ಮೂರ್ನಾಲ್ಕು ದಿನ ಕೂತಿದ್ದು, ಆಮೇಲೆ ಡಸ್ಟ್‍ಬಿನ್ನು ಸೇರಿ, ನಂತರ ಕಸ ಸಂಗ್ರಹಿಸುವವರ ತಳ್ಳುಗಾಡಿ ಹತ್ತಿ, ಆಮೇಲೆ ದೊಡ್ಡದೊಂದು ಲಾರಿಯಲ್ಲಿ ಕೂತು ರಾಜಧಾನಿಯ ಬೀದಿಯಲ್ಲಿ ಮೆರವಣಿಗೆ ಹೋಗಿ, ನಮಗ್ಯಾರಿಗೂ ಗೊತ್ತಿಲ್ಲದ ತಗ್ಗು ಪ್ರದೇಶವೊಂದರಲ್ಲಿ ಅಂತರ್ಧಾನವಾಗಿಹೋದವು.