Showing posts with label Greetings. Show all posts
Showing posts with label Greetings. Show all posts

Monday, August 24, 2020

ಕೊವಿಡ್ ಕಾಲದ ಗಣಪಗೆ

ಮಾಸ್ಕು ಹಾಕ್ಕೊಂಡ್ ಮಾರ್ಕೆಟ್ಗೋಗಿ
ಬಣ್ಣಾ ಬಣ್ಣದ್ ಹೂವಾ ತಂದು
ಸೋಪಿನ್ ನೀರಾಗ್ ತಿಕ್ಕೀ ತೊಳ್ದು
ನಿನ್ನಾ ಮುಡಿಗೆ ಇಟ್ಟೀವ್ನಿ

ಎಷ್ಟೇ ಕಾಸ್ಟ್ಲೀ ಆಗಿದ್ರೂನೂ
ಹಬ್ಬಾ ಅಂದ್ರೆ ಬಿಡ್ಲಿಕ್ಕಿಲ್ಲ
ಥರಥರದ್ ಹಣ್ಣಾ ಕೊಂಡು ತಂದು
ಉಪ್ಪಿನ ನೀರಲಿ ತೊಳೆದಿವ್ನಿ

ವೈರಸ್ಸೆಲ್ಲಾ ಸತ್ತೋಗ್ಲಿ ಅಂತ
ಮೋದಕ ಚಕ್ಕುಲಿ ಪಂಚ್ಕಜ್ಜಾಯ
ಎರ್ಡೆರ್ಡ್ ಸರ್ತಿ ಹುರ್ದು ಕರ್ದು
ನೈವೇದ್ಯಕ್ಕೆ ಮಡಗೀವ್ನಿ

ಕರ್ಪೂರೇನೂ ಊದ್ಬತ್ಯೇನು
ಬತ್ತಿ ಸೈತ ಸ್ಯಾನಿಟೈಸ್ ಮಾಡಿ
ಮಂಟಪಾ ಕಟ್ವಾಗ್ ದೂರ್ದೂರ್ ನಿಂತು
ಎಲ್ಲಾ ಕ್ರಮ ತಗೊಂಡೀವಿ

ಕ್ವಾರಂಟೈನಲ್ ಇರೋ ನಾವು
ಸಂದ್‌ಸಂದ್ ಬಟ್ಟೇ ತೊಟ್ಟೂಕೊಂಡು
ಸೊಂಡ್ಲಾ ಗಣಪ್ನೇ ಕಾಯೋ ಅಂತ
ನಿನ್ ಮುಂದ್ ಬಂದು ಅಡ್ಡಾಗೀವಿ

ಕಷ್ಟಾನೆಲ್ಲಾ ಕಳೀತೀಯಂತೆ
ಯಿಘ್ನಾನೆಲ್ಲಾ ತೊಡೀತೀಯಂತೆ
ಈ ಕೊರೋನಾ ಏನು ದೊಡ್ದು ನಿಂಗೆ
ಹೊಡ್ದೋಡ್ಸದ್ನಾ ಕೈ ಮುಗಿತೀವಿ

ಜೈಜೈ ಗಣಪಾ ಜೈಜೈ ಗಣಪಾ
ಸಿವನಾ ಮಗನೇ ಹರಸೋ ಯಪ್ಪಾ
ಮೊದ್ಲೀನಂಗೆ ಎಲ್ಲಾ ಮರಳಿಸಿ
ನಗುವಿನ ಹೂವಾ ಅರಳಿಸೋ ಗಣಪಾ.

Sunday, September 01, 2019

ಗಣೇಶನಿಗೊಂದು ಮುಖ


ಆಗಷ್ಟೆ ಕೊಯ್ದು ತಂದ ಕಳಿತ ಮಿದು
ಹಣ್ಣನೊತ್ತಿ ಕತ್ತರಿಸಿದಾಗ ಚಿಮ್ಮಿದ ರಸದಂತೆ
ಚೆಲ್ಲಿದೆ ರಕ್ತ ಹೊಸ್ತಿಲ ಅಕ್ಕಪಕ್ಕ
ಚೀರಿಕೊಂಡಿದ್ದಾಳೆ ಪಾರ್ವತಿ ಕಮರಿ ಬಿದ್ದಿದ್ದಾಳೆ
ಮತ್ತೆ ಎದ್ದಿದ್ದಾಳೆ ಕಣ್ಣೀರು ಕೆನ್ನೆಗೆ ತಾಕಿ ಎಚ್ಚರಾಗಿ
ನೀರಾರಿದ ಕಣ್ಣೀಗ ಕೆಂಪಾಗಿದೆ
ಏರೇರಿಳಿವ ಎದೆ ಬಿಗಿಮುಷ್ಟಿ ಕಂಪಿಸುತಿದೆ ಕೈಕಾಲು
ಅದುರುತುಟಿಗಳ ನಡುವಿಂದುಕ್ಕಿ ಬರುತ್ತಿದೆ ಜ್ವಾಲಾಮುಖಿ
ತತ್ತರಗುಟ್ಟುತಿದೆ ಇಡೀ ಕೈಲಾಸ
ಅಲ್ಲೋಲಕಲ್ಲೋಲವಾಗುತಿದೆ ಸೃಷ್ಟಿ ಚಂಡಿಕಾವತಾರಕೆ

ಮಣಿದಿಹನು ಶಿವ ಆಜ್ಞಾಪಿಸಿಹನು
ಉತ್ತರಕೆ ಮುಖ ಮಾಡಿ ಮಲಗಿದ
ಯಾವುದೇ ಜೀವಿಯ ರುಂಡವನು
ಕತ್ತರಿಸಿ ತನ್ನಿ ದಿನವುರುಳುವುದರೊಳಗೆ

ಹೊರಟಿದ್ದಾರೆ ಆಜ್ಞಾಪಾಲಾಕರು ದಂಡಿಯಾಗಿ
ಹರಿತ ಕತ್ತಿ ಹಿಡಿದು ಸೇನೆಯಂತೆ
ನುಗ್ಗಿದ್ದಾರೆ ಗುಡ್ಡವೇರಿಳಿದು ಮಹಾಕಾನು
ಎಲ್ಲಿದೆ ತಲೆ ಎಲ್ಲಿದೆ ತಲೆ ಎಲ್ಲಿದೆ ತಲೆ
ನಮ್ಮ ಗಣಾಧಿಪನಾಪನಿಗೆ ಒಂದು ಚಂದದ ತಲೆ

ಇಟ್ಟು ಜೋಡಿಸಬರಬೇಕು ಪೂಜಿಸಿದ ಹೂಗಳ
ಹಾಗೂ ಕೂರಿಸಲು ಬರಬೇಕೊಂದು ವಜ್ರಖಚಿತ ಕಿರೀಟ
ಮೊರದಗಲ ಕಿವಿಯಿರಲಿ ಕೇಳಲು ಎಲ್ಲರಹವಾಲು
ಸಿಕ್ಕಿಸುವಂತಿರಬೇಕಲ್ಲಿ ಚಿಗುರಿದ ದೂರ್ವೆಕಟ್ಟು
ದೊಡ್ಡ ನಾಮವ ಬಳಿದರೆ ಚಂದವೆನಿಸಬೇಕು ಹಣೆಯಗಲ
ಸನ್ನೆಯಲೆ ಎಲ್ಲವನು ಸೂಚಿಸುವ ಸೂಕ್ಷ್ಮ ಕಣ್ಣು
ಲೋಕಗಳ ದೂರವನಿಲ್ಲಿಂದಲೆ ಅಳೆವ ತೀಕ್ಷ್ಣ ಕಣ್ಣು
ಉದ್ದ ಮೂಗಿರಬೇಕು ಅವನಿಗೆ
ದೂರದಿಂದಲೆ ಗ್ರಹಿಸುವಂತೆ ಅಡುಗೆಮನೆಯ
ನಾಗಂದಿಗೆಯ ಮೇಲಿಟ್ಟ ಮೋದಕದ ಘಮ
ಮರುಳಾಗಬೇಕೀ ಚೆಲ್ವನಿಗೆ
ಭಾದೃಪದಕೆ ಹೊಸ ಸೀರೆಯುಟ್ಟ ಸಖಿಯರೆಲ್ಲ
ಎಲ್ಲ ಮುತ್ತಿಟ್ಟು ಮುದ್ದಿಸುವಂತೆ ಉಬ್ಬುಕೆನ್ನೆ
ನೈವೇದ್ಯಕಿಟ್ಟ ಸಕಲ ಭಕ್ಷ್ಯಗಳ ಅಗಿದು
ಪುಡಿ ಮಾಡಬಲ್ಲ ಗಟ್ಟಿ ದಂತಪಂಕ್ತಿ
ಇರಲಿ ಬೆದರಿಸಲು ದರ್ಪಿಷ್ಟರ ಒಂದುದ್ದ ಕೋರೆ
ಇರಲಿ ಬಿಚ್ಚುಗುರುಳು ಪೊಗುವಂತೆ ಮನಸೂರೆ
ಕಟ್ಟಲು ಬರಲಿ ಜುಟ್ಟು ಓಡಲೆಣಿಸುವ ತುಂಟನ ಹಿಡಿದು ಅಮ್ಮ
ಹರಸುವಂತಿರಲವನ ಮೊಗ, ಮೊಗದಿಂದಲೇ ನಮ್ಮ

ಮಲಗಿದ್ದಾನಲ್ಲಿ ಮೋಕ್ಷಕ್ಕೆ ಕಾಯುತಿರುವ ಗಜಾಸುರ
ಹಾದಿಗಡ್ಡವಾಗಿ ಹುಲ್ಲಹಾಸಮೇಲೆ ಉತ್ತರಾಭಿಮುಖಿ
ಸುತ್ತ ನೆರೆದ ಕರವಾಳಖಚಿತರಿಗೆ ನಿಬ್ಬೆರಗಾಗುವಂತೆ
ಸ್ವಯಂ ನೆರವಾಗಿ ತ್ಯಜಿಸಿ ಮಹಾಮಹಿಮ ತನ್ನ ಶಿರ

ಜೀವ ತಳೆದಿಹನಿಲ್ಲಿ ಕೈಲಾಸದಲ್ಲಿ ಗಜಾನನ
ನಿಟ್ಟುಸಿರಿಟ್ಟು ಹೆಮ್ಮೆಯಲಿ ನೋಡುತಿಹ ತಂದೆ
ಖುಷಿಯಲಿ ಕಣ್ಣೀರ್ಗರೆವ ತಾಯಿ
ಕುಣಿದಿಹುದು ಗಣಕೋಟಿ ಪುಷ್ಪವರ್ಷಕೆ ತೋಯುತ
ಸುಂದರವದನನ ಹಿಡಿದೆತ್ತಿ ಕೊಂಡಾಡುತ
ಜೈಕಾರಗೈದು ಒಕ್ಕೊರಲಿನಲಿ:
ನೀನೆ ನಮ್ಮ ನಾಯಕ ನೀನೆ ನಮ್ಮ ಪಾಲಕ
ನೀನೆ ಪ್ರಥಮಪೂಜಿತ ಸಕಲ ವಿಘ್ನನಿವಾರಕ.

* *
ವಾರಣವದನ ಆಗಮನ ನಿಮ್ಮ ಮನೆಗೆ ಆನಂದ ತರಲಿ. ಶುಭಾಶಯಗಳು.

Wednesday, January 20, 2016

ಹೊಸ ಅಂಗಿ ಧರಿಸಿದ ಹುಮ್ಮಸ್ಸಿನಲ್ಲಿ...

ಈಗಷ್ಟೆ ಕವರಿನಿಂದ ಹೊರತೆಗೆದು ಧರಿಸಿದ ಹೊಸ ಅಂಗಿಯಂತಿದೆ ಎರಡು ಸಾವಿರದ ಹದಿನಾರು. ಇನ್ನೂ ಒಂದೂ ನೆರಿಗೆ ಬಿದ್ದಿಲ್ಲ. ಗರಿಗರಿಯಿದೆ. ಕಮ್ಮಗೆ ಪರಿಮಳ ಬೀರುತ್ತಿದೆ. ಫಳಫಳ ಹೊಳೆಯುತ್ತಿದೆ. ಹೊಸ ಅಂಗಿ ಅಂತ ನೋಡಿದಾಕ್ಷಣ ಗೊತ್ತಾಗುವಂತಿದೆ. ಗೋಡೆಯ ಮೇಲಿನ ಹೊಸ ಕ್ಯಾಲೆಂಡರಿನಂತೆ ಈ ಅಂಗಿಯಲ್ಲೂ ಚೌಕಳಿಗಳು. ಎಷ್ಟಿವೆ ಚೌಕಳಿಗಳು? ಮುನ್ನೂರರವತ್ತೈದಿದೆಯಾ? ಅಥವಾ ಒಂದು ಜಾಸ್ತಿಯಿದೆಯಾ? ಎಣಿಸಲಿಕ್ಕೆ ಯಾರಿಗೂ ಪುರುಸೊತ್ತಿಲ್ಲ. ಹೊಸ ಅಂಗಿ ಧರಿಸಿದ ಖುಷಿಯಲ್ಲಿ, ಹಮ್ಮಿನಲ್ಲಿ, ಭಿಮ್ಮಿನಲ್ಲಿ, ಹೊಸ ಉತ್ಸಾಹದಲ್ಲಿ ಹೊರಟಿದ್ದೇವೆ ನಡೆದು.

ಹಳೆಯ ಅಂಗಿ ಅಗೋ ಅಲ್ಲಿ ಮೂಲೆ ಸೇರಿದೆ. ಬಳಸಿ ಬಳಸಿ ಅದು ಪೂರ್ತಿ ಮಾಸಲಾಗಿದೆ. ಅದನ್ನಿನ್ನು ಧರಿಸಲಾಗದು. ಹಳೆಯ ಕ್ಯಾಲೆಂಡರಿನಂತೆ, ತನ್ನ ಕೆಲಸ ಇಲ್ಲಿಗೆ ಮುಗಿಯಿತೆಂಬಂತೆ, ವಿನಮ್ರವಾಗಿ ಪುಟ್ಟಗೆ ಮುರುಟಿಕೊಂಡು ನಿಶ್ಶಬ್ದಕ್ಕದು ಮೊರೆ ಹೋಗಿದೆ. ಹಾಗಂತ ಅದನ್ನು ಇಷ್ಟು ಬೇಗ ಮರೆಯಲಾದೀತೇ? ಅದರ ಚೌಕಳಿಗಳಲ್ಲಿ ಪೂರ್ತಿ ಒಂದು ವರ್ಷದ ಅಸಂಖ್ಯ ನೆನಪುಗಳಿವೆ, ಅಲ್ಲಲ್ಲಿ ಕಲೆಯ ಗುರುತಿದೆ, ಕೆಲವೆಡೆ ನೂಲು ಕಿತ್ತುಬಂದಿದೆ, ಒಗೆದು ಗಟ್ಟಿ ಹಿಂಡಿದ ನೋವಿದೆ, ಎಂದೋ ಹೊಡೆದ ಪರ್ಫ್ಯೂಮಿನ ಘಮ ಇನ್ನೂ ಅದರ ಕಂಕುಳಲ್ಲಿ ಉಳಿದುಕೊಂಡಿದೆ. ಸರಿಯಾಗಿ ಪರಿಶೀಲಿಸಿದರೆ, ಆ ಅಂಗಿಯ ಜೇಬಲ್ಲಿ ಒಂದೆರಡು ಹರಕಲು ನೋಟುಗಳೂ ಸಿಕ್ಕಾವು. ಸಿಹಿಸುದ್ದಿ ಬಂದ ದಿನ ಕೊಂಡ ಚಾಕಲೇಟಿನ ಜರಿ ಇನ್ನೂ ಉಳಕೊಂಡಿರಬಹುದು. ಒಮ್ಮೆ ಹಿಂತಿರುಗಿ ನೋಡೋಣ. ಎರಡು ಹೆಜ್ಜೆ ಹಿಂದಿಟ್ಟು, ಆ ಅಂಗಿಯನ್ನೊಮ್ಮೆ ಕೈಯಲ್ಲಿ ಹಿಡಿದು ಕಣ್ಣಗಲಿಸಿ ನೋಡೋಣ. ಮೂಗಿನ ಬಳಿ ತಂದು ಉಸಿರೆಳೆದು ನೋಡೋಣ. ಮೈಗೊತ್ತಿಕೊಂಡು ಹಳೆಯ ನೆನಪುಗಳನ್ನು ಆಹ್ವಾನಿಸಿಕೊಡು ಆಸ್ವಾದಿಸಲಾದೀತೇ ನೋಡೋಣ.

ಹೀಗೇ ಒಂದು ವರ್ಷದ ಹಿಂದೆ, ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ, ಜನಗಳೆಲ್ಲಾ ಹೊಸ ವರ್ಷ ಬಂತೆಂದು ಸಂಭ್ರಮಿಸಿ ಪಟಾಕಿ ಹೊಡೆದು ಕುಣಿದಾಡುವಾಗ ಧರಿಸಿದ ಶರ್ಟು ಅದು. ಹೀಗೇ ಚಳಿಯಿತ್ತು. ಚೂರು ನಶೆಯಿತ್ತು. ಅವರೆಕಾಳಿನ ಸಿಪ್ಪೆ ಬೀದಿಯಲ್ಲೆಲ್ಲ ಹಾಸಿತ್ತು. ನಾವು ಹೊಸ ವರ್ಷವನ್ನು ತೋಳ್ಬಿಚ್ಚಿ ಸ್ವಾಗತಿಸಿದ್ದೆವು. ಸಂತಸದಿಂದ ಎರಡು ಸಾವಿರದ ಹದಿನೈದರಲ್ಲಿ ಅಡಿಯಿಟ್ಟಿದ್ದೆವು.  ಮುಂದಿನ ಹೆಜ್ಜೆಗಳಲ್ಲಿ ಅದೆಷ್ಟೋ ಸಂತೋಷ-ದುಃಖದ, ನಲಿವು-ಬಿಕ್ಕಳಿಕೆಯ, ಗೆಲುವು-ಸೋಲಿನ, ಆತಂಕ-ನಿರಾಳದ ದಿನಗಳನ್ನು ನಾವು ಅನುಭವಿಸಿದೆವು. ನಮ್ಮ ವೈಯಕ್ತಿಕ ಹರುಷ-ದುಗುಡಗಳೊಡನೆ ಎದುರಿನವರ ನಗು-ಅಳುಗಳಿಗೂ ಸ್ಫಂದಿಸಿದೆವು. ಪ್ರಪಂಚದ ಆಗುಹೋಗುಗಳಿಗೆ ನಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆವು.

ಅಲ್ಲೆಲ್ಲೋ ಬಿಹಾರದಲ್ಲಿ ನಡೆದ ಚುನಾವಣೆಯ ದೃಶ್ಯಗಳನ್ನು ನಾವಿಲ್ಲಿ ಕೂತು ಟೀವಿಯಲ್ಲಿ ನೋಡಿ ಚರ್ಚಿಸಿದೆವು. ದೆಹಲಿಯಲ್ಲಿ ಆಪ್ ಗೆಲ್ತು ಅಂದಾಗ ಅರೇ! ಎಂದುದ್ಘರಿಸಿದೆವು. ವಿಧಾನಸಭೆಯೊಳಗೆ ಕೂತು ರಾಜಕಾರಣಿಗಳು ವಾಗ್ವಾದ ಮಾಡಿಕೊಳ್ಳುತ್ತಿದ್ದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಿಲುವುಗಳನ್ನು ಮಂಡಿಸಿದೆವು.ಇನ್ನು ಡಿಜಿಟಲ್ ಇಂಡಿಯಾ ಎಂದಾಗ ಅನುಮಾನದೊಂದಿಗೇ ಅದನ್ನು ಸ್ವಾಗತಿಸಿದೆವು. ಕಳಂಕಿತ ಲೋಕಾಯುಕ್ತರು ಯಾವಾಗ ಕೆಳಗಿಳಿಯುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ನಮ್ಮನ್ನು ಕಾಡಿತು. ವಿಶ್ವವೇ ಯೋಗ ದಿನವನ್ನಾಚರಿಸುವಾಗ ಹೆಮ್ಮೆಯಿಂದ ಬೀಗಿದೆವು. ಪ್ರಧಾನಿಗಳ ವಿದೇಶ ಪ್ರವಾಸ-ಪಾಕಿಸ್ತಾನ ಭೇಟಿಯನ್ನೂ, ಮುಖ್ಯಮಂತ್ರಿಗಳ ಭಾಗ್ಯ ಯೋಜನೆಗಳನ್ನು ಕೆಲವರು ಸ್ವಾಗತಿಸಿದರೆ ಕೆಲವರು ಗೇಲಿ ಮಾಡಿದ್ದಕ್ಕೆ ಸಾಕ್ಷಿಯಾದೆವು.

ಮಂಗಳ ಗ್ರಹವನ್ನು ಸುತ್ತುತ್ತಿರುವ ಮಾಮ್ ವರ್ಷ ಪೂರೈಸಿದ್ದಕ್ಕೆ ನಾವಿಲ್ಲಿ ಸಿಹಿ ಹಂಚಿಕೊಂಡೆವು. ಸೆನ್ಸೆಕ್ಸ್ ಮೇಲೇರಿದಾಗ ಕಾಲರ್ ಏರಿಸಿದ್ದೂ, ಪೆಟ್ರೋಲ್ ಬೆಲೆ ಇಳಿದಾಗ ಖುಷಿಯಾದದ್ದೂ ನಾವೇ. ರೈತರ ಆತ್ಮಹತ್ಯೆಗಳು ಸರ್ಕಾರಗಳನ್ನು ಕಂಗೆಡಿಸಿದ್ದಷ್ಟೇ ಅಲ್ಲ, ಸಾರ್ವಜನಿಕರೆಲ್ಲ ಇದಕ್ಕೆ ಕಾರಣವನ್ನೂ ಪರಿಹಾರವನ್ನೂ ಯೋಚಿಸುವಂತಾಯಿತು. ಎತ್ತಿನಹೊಳೆ, ಕಳಸಾ-ಬಂಡೂರಿ ಯೋಜನೆಗಳ ಬಗ್ಗೆ ನಡೆದ ಪ್ರತಿಭಟನೆಗಳಲ್ಲಿ ನಾವೂ ಘೋಷಣೆ ಕೂಗಿದೆವು.

ಪ್ರಪಂಚದಾದ್ಯಂತದ ಉಗ್ರರ ಅಟ್ಟಹಾಸ ಕಂಡು ನಾವೆಲ್ಲ ಕ್ರುದ್ಧರಾದದ್ದು ನಿಜ. ಇದ್ದಲ್ಲೇ ಚಡಬಡಿಸಿದ್ದು, ಶಾಪ ಹಾಕಿದ್ದು, ಅಸಹಾಯಕತೆಯಿಂದ ಕುದ್ದಿದ್ದೂ ಸತ್ಯ. ಯಾಕೂಬನನ್ನು ಗಲ್ಲಿಗೇರಿಸುವ ಹಿಂದಿನ ಮಧ್ಯರಾತ್ರಿ ಕೋರ್ಟ್ ಕಲಾಪ ನಡೆಸಿದ್ದು ತಿಳಿದಾಗ ಹೀಗೂ ಉಂಟೇ? ಎಂಬಂತೆ ಕಣ್ಣರಳಿಸಿದ್ದೂ ನಿಜ. ಭಾರೀ ಭೂಕಂಪಕ್ಕೆ ನೇಪಾಳ ನಲುಗಿದಾಗ, ಮಹಾಮಳೆಗೆ ಚೆನ್ನೈ ತತ್ತರಿಸಿದಾಗ ನಮ್ಮ ಹೃದಯ ಕರಗಿ, ಅತ್ತ ಸಹಾಯಹಸ್ತ ಚಾಚಿದೆವು.

ಇಷ್ಟದ ನಾಯಕ-ನಾಯಕಿಯರ, ಇಷ್ಟದ ನಿರ್ದೇಶಕರ ಸಿನಿಮಾಗೆ ಕ್ಯೂನಲ್ಲಿ ನಿಂತು ಟಿಕೀಟು ಖರೀದಿಸಿ ಫಸ್ಟ್ ಡೇ ಫಸ್ಟ್ ಶೋ ನೋಡಿದೆವು. ಕಡಿಮೆ ಸ್ಟಾರ್ ಸಿಕ್ಕ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆದ್ದು, ನಾವು ಮೆಚ್ಚಿದ ಸಿನಿಮಾಗಳು ಎರಡು ವಾರವೂ ಓಡದೇ ಇದ್ದಾಗ ಇದಕ್ಕೆಲ್ಲ ಯಾರು ಹೊಣೆ ಅಂತ ನಮಗೆ ತಿಳಿಯದಾಯಿತು. ಸಲ್ಮಾನ್ ಖಾನ್ ನಿರ್ದೋಷಿ ಅಂತ ತೀರ್ಮಾನವಾದಾಗ ರಿಯಲೀ? ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದೇನು ಬಜರಂಗಿ ಬಾಯಿಜಾನ್ ಚೆನ್ನಾಗಿದೆ ಅಂತ ಪ್ರಶಂಸಿವುದಕ್ಕೆ ಅಡ್ಡಿಯಾಗಲಿಲ್ಲ.

ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ನಿನಲ್ಲಿ ನಂ. ೧ ಸ್ಥಾನಕ್ಕೇರಿದಾಗ ನಮ್ಮ ಮನೆ ಮಗಳೇ ಗೆದ್ದಷ್ಟು ಖುಷಿ ಪಟ್ಟೆವು. ವಿರಾಟ್ ಕೊಹ್ಲಿ ಕಪ್ ಎತ್ತಿದಾಗ ಆದಷ್ಟೇ ಸಂತೋಷ, ಡಿವಿಲಿಯರ್ಸ್ ಚಮತ್ಕಾರಿಕ ಹೊಡೆತಗಳ ಮೂಲಕ ದಾಖಲೆಗಳನ್ನು ಸೃಷ್ಟಿಸುವಾಗಲೂ ಆಗಿದ್ದು ಸುಳ್ಳಲ್ಲ. ಸೆಹವಾಗ್-ಜಹೀರ್ ನಿವೃತ್ತರಾದಾಗ ಅವರ ವೈಭವದ ದಿನಗಳನ್ನು ನೆನೆದೆವು. 

ಅಬ್ದುಲ್ ಕಲಾಮ್ ಇನ್ನಿಲ್ಲವೆಂದಾಗ ಇಡೀ ದೇಶ ಕಣ್ಣೀರಾಯಿತು. ಸಾಹಿತಿ ಕಲ್ಬುರ್ಗಿ ಗುಂಟೇಗಿ ಬಲಿ ಎಂಬ ಸುದ್ದಿ ಬೆಳಗಾಮುಂಚೆ ಕೇಳಿ ಬೆಚ್ಚಿಬಿದ್ದೆವು.  ವಿಚಾರವಾದಿಗಳ ಹತ್ಯೆ ವಿರೋಧಿಸಿ ನಡೆದ ಪ್ರಶಸ್ತಿ ವಾಪಸಾತಿ ಅಭಿಯಾನ ಭರ್ಜರಿ ಚರ್ಚೆಗೆ ಘ್ರಾಸವಾಯಿತು. ಅಸಹಿಷ್ಣುತೆಯ ವಿವಾದ ಭುಗಿಲೆದ್ದಾಗ ಛೇ ಛೇ, ನಮ್ಮ ದೇಶದ ಬಗ್ಗೆ ನಾವೇ ಹೀಗೆ ಮಾತಾಡೋದಾ ಅಂತ ನಮ್ಮನಮ್ಮಲ್ಲಿ ಕೇಳಿಕೊಂಡೆವು.

ಗಣ್ಯ ವ್ಯಕ್ತಿಗಳು ಕಣ್ಮರೆಯಾದಾಗ ಆಪ್ತರನ್ನು ಕಳೆದುಕೊಂಡ ಭಾವ ಅನುಭವಿಸಿದೆವು. ದೇಶವನ್ನು ಪ್ರತಿನಿಧಿಸುವವರು ಪ್ರಶಸ್ತಿ ಗೆದ್ದಾಗ ಆನಂದಬಾಷ್ಪ ಸುರಿಸಿದೆವು. ಇಂಡಿಯಾ ಶೈನಿಂಗ್ ಎಂದಾಗ ನಮ್ಮ ಮೊಗದಲ್ಲೂ ಅದು ಪ್ರತಿಫಲಿಸಿತು.  ಐಸಿಸ್ ಉಗ್ರರ ಉಪಟಳಕ್ಕೊಳಗಾದ ಸಿರಿಯಾದಲ್ಲಿ ಮಡಿದ ಪುಟ್ಟ ಮಗುವಂದು ಮಕಾಡೆ ಮಲಗಿರುವ ಚಿತ್ರಕ್ಕೆ ಇಡೀ ವಿಶ್ವದ ಕಣ್ಣು ತೇವಗೊಳಿಸುವ ಶಕ್ತಿಯಿತ್ತು.

ನಮ್ಮೆಲ್ಲ ಅರಿವು, ಅಜ್ಞಾನ, ಗಡಿಬಿಡಿ, ನಿಲುವು, ಪೂರ್ವಾಗ್ರಹ, ಹಿಂಜರಿಕೆ, ಬಲ, ಅಸಹಾಯಕತೆಗಳ ಜೊತೆಯಲ್ಲೇ ನಾವು ನಮ್ಮವರ, ನೆರೆಯವರ, ಊರವರ, ನಾಗರೀಕರ, ರಾಜ್ಯದ, ದೇಶದ, ವಿಶ್ವದ ವಿದ್ಯಮಾನಗಳಿಗೆ ತುಡಿದೆವು. ಬಿತ್ತಿ ಬೆಳೆದದ್ದಕ್ಕೆ ಒಳ್ಳೆಯ ಬೆಲೆ ಸಿಕ್ಕಾಗ ಸಂತೃಪ್ತಿಯಿಂದ ಉಂಡದ್ದೂ, ಬೇಕಾದ ವಸ್ತು ಕೊಳ್ಳಲು ದುಬಾರಿಯೆನಿಸಿದಾಗ ನಾಲಿಗೆ ಕಚ್ಚಿಕೊಂಡಿದ್ದೂ, ಒಳ್ಳೆಯ ವ್ಯಾಪಾರವಾದ ದಿನ ಖುಷಿಯಿಂದ ಗುನುಗುತ್ತ ಮನೆಗೆ ಹೋದದ್ದು, ಸಂಬಳ ಬಂದ ದಿನ ಪಾರ್ಟಿ ಮಾಡಿದ್ದೂ, ಟ್ರಾಫಿಕ್ಕನ್ನು ಬೈದುಕೊಳ್ಳುತ್ತಲೇ ಗಂಡಾಗುಂಡಿಯ ರಸ್ತೆಯಲ್ಲಿ ಓಡಾಡಿದ್ದೂ, ಕಂಡ ಕನಸು ನನಸಾದಾಗ ಹಿಗ್ಗಲ್ಲಿ ಉಬ್ಬಿದ್ದೂ, ಒಡೆದ ಗಾಜು ನೋಡುತ್ತ ಮರುಗಿದ್ದೂ ನಾವೇ.  ಬಿಸಿಲಲ್ಲಿ ಬಾಯಾರಿದಾಗ ಹದಮಜ್ಜಿಗೆ ಕುಡಿದು ತೇಗಿದೆವು, ಮಳೆಯ ಹಾಡು ಕೇಳಿದಾಗ ಬಣ್ಣದ ಕೊಡೆ ಹಿಡಿದು ಅಂಗಳದಲ್ಲಿ ಕುಣಿದೆವು, ಚಳಿಗೆ ಹಿಮ್ಮಡಿ ಒಡೆದಾಗ ಮುಲಾಮು ಹಚ್ಚಿ ಹಿತನೋವಲ್ಲಿ ನರಳಿದೆವು.


ಹಳೆಯ ಅಂಗಿ ಹಿಡಿದು ನಿಧಾನಕ್ಕದರ ಮೇಲೆ ಕೈಯಾಡಿಸುತ್ತಿದ್ದರೆ ಅದೆಷ್ಟು ನೆನಪುಗಳು... ಅದೆಷ್ಟು ಚಿತ್ರಗಳು ಒಂದು ಕೊಲಾಜಿನಲ್ಲಿ... ಅದೆಷ್ಟು ಭಾವಗಳನುದ್ಧೀಪಿಸುವ ಶಕ್ತಿ ಈ ಪುಟ್ಟ ಅರಿವೆಗೆ... ಈಗ ಅಂಥದೇ ಮತ್ತೊಂದು ಅಂಗಿ ಧರಿಸಿ ನಿಂತಿದ್ದೇವೆ. ಗೊತ್ತು ನಮಗೆ: ಇದೂ ಹಾಗೇ ನೀರು-ಗಾಳಿ-ಬೆಳಕುಗಳಿಗೆ ಒಡ್ಡಲ್ಪಡುತ್ತದೆ. ಇದನ್ನೂ ನೆನೆ ಹಾಕಬೇಕು, ಒಗೆಯಬೇಕು, ಹಿಂಡಬೇಕು, ಒಣಹಾಕಬೇಕು, ಇಸ್ತ್ರಿ ಮಾಡಬೇಕು. ಇದೂ ಸ್ವಲ್ಪ ಕಾಲಕ್ಕೆ ಮಾಸಲಾಗುತ್ತದೆ. ಆಶಯವಿಷ್ಟೇ: ಇದರ ಚೌಕಳಿಗಳಲ್ಲಿ ನಲಿವುಗಳಿಗೆ, ಗೆಲುವುಗಳಿಗೆ, ಸಿಹಿಘಳಿಗೆಗಳಿಗೆ, ನೆಮ್ಮದಿಯ ನಿಟ್ಟುಸಿರುಗಳಿಗೆ ಹೆಚ್ಚಿನ ಜಾಗವಿರಲಿ. ತೊಟ್ಟಷ್ಟು ದಿನ ನಮ್ಮನ್ನು ಬೆಚ್ಚಗಿಟ್ಟಿರಲಿ. ನಂತರವೂ ಸವಿನೆನಪಾಗಿ ನಮ್ಮೊಂದಿಗೆ ಇರಿಸಿಕೊಳ್ಳುವಂತಿರಲಿ. ಹೊಸ ವರುಷ ನಮಗೆಲ್ಲಾ ಶುಭಪ್ರದವಾಗಿರಲಿ. 

['ವಿಶ್ವವಾಣಿ'ಗಾಗಿ ಬರೆದುಕೊಟ್ಟಿದ್ದು. 17.01.2016ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿತ.]

Thursday, December 31, 2015

2016ರಲ್ಲಿ ಸುಖನಿದ್ರೆಯನ್ನೂ ಸವಿಗನಸನ್ನೂ ಹಾರೈಸುತ್ತಾ...

ಅಣ್ಣಮ್ಮನುತ್ಸವಕ್ಕೆಂದು ಬಂದಿರುವ ರಥರೂಪೀ ಲಾರಿ ದೇವಸ್ಥಾನದೆದುರು ಸಿಂಗರಗೊಂಡು ಕಾಯುತ್ತಿದೆ;
ಪವರ್ ಬ್ಯಾಂಕೊಂದು ಮೊಬೈಲನ್ನು ಮಗುವಂತೆ ಮಡಿಲಲ್ಲಿಟ್ಟುಕೊಂಡು ಚಾರ್ಜೂಡಿಸುತ್ತಿದೆ;
ನೇರ ರಸ್ತೆಯಲ್ಲಿ ಸಾಗುತ್ತಿರುವ ಬೈಕೊಂದರ ಆರಿಸಲು ಮರೆತ ಇಂಡಿಕೇಟರ್ ವಿಲಕ್ಷಣ ಮಿಂಚುತ್ತಿದೆ;
ನಿನ್ನೆ ಉದ್ಘಾಟಿಸಿದ ಹೊಸ ಟೂತ್‌ಬ್ರಶ್ಶು ಕೆದರಿದ ಕುಸುಮಗಳ ಹಳೇ ಬ್ರಶ್ಶನ್ನು ಬಾತ್ರೂಮಿನಲ್ಲಿ ಅಣಕಿಸುತ್ತಿದೆ;
ಬಿಗ್‌ಬಾಸ್ ಮನೆಯಲ್ಲಿ ಸಣ್ಣ ವಿಷಯಕ್ಕೆ ನಡೆದ ಜಗಳದಿಂದ ಎಲ್ಲರಿಗೂ ಮನಸ್ತಾಪವಾಗಿದೆ;
ಫೋರ್ಕಿಗೆ ಸಿಕ್ಕಿಕೊಂಡಿರುವ ಗೋಬಿ ಮಂಚೂರಿ ಟೊಮೆಟೋ ಸಾಸಿನಲ್ಲಿ ಮುಳುಗೆದ್ದು ಮತ್ತಷ್ಟು ಕೆಂಪಾಗಿದೆ;
ಕ್ಯಾಂಡಿಕ್ರಶ್ ಆಟದಲ್ಲಿ ಶತಪ್ರಯತ್ನ ಮಾಡಿದರೂ ಕೊನೆಯಲ್ಲೊಂದು ಜೆಲ್ಲಿ ಉಳಿದೇಹೋಗಿದೆ;
ಕಾಶೀಯಾತ್ರೆಗೆ ಹೋದವರ ಬೀಗ ಹಾಕಿದ ಮನೆಯ ದೇವರ ಗೂಡಿನಲ್ಲಿ ಜೇಡ ಬಲೆ ಕಟ್ಟಿದೆ;
ಸುರಿದ ಹಸಿಕಸದಲ್ಲಿ ಶ್ಯಾಂಪೂ ಸ್ಯಾಚೆಟ್ಟೊಂದು ಸಿಕ್ಕಿದ್ದಕ್ಕೇ ಕಸದವಳೊಂದಿಗೆ ನಡುಬೀದಿಯಲ್ಲಿ ರಂಪವಾಗಿದೆ;
ಕೊಯ್ಲಿನ ನಂತರ ಪೇರಿಸಿರುವ ಬಿಳಿಹುಲ್ಲಿನ ಗೊಣಬೆ ಗದ್ದೆಯಲ್ಲೆದ್ದ ಗುಮ್ಮಟದಂತೆ ಕಂಡಿದೆ;
ರಂಗನತಿಟ್ಟಿನ ಪಕ್ಷಿಧಾಮಕ್ಕೆ ವಲಸೆ ಬಂದಿರುವ ಪೆಲಿಕನ್ ಹಕ್ಕಿ ಅವಸರವಸರದಲ್ಲೊಂದು ಗೂಡು ಕಟ್ಟಿದೆ;
ನೆಚ್ಚಿನ ನಟನ ಸಿನೆಮಾಗೆ ಬಾಲ್ಕನಿ ಕ್ಯೂನಲ್ಲಿ ನಿಂತ ಕಟ್ಟಕಡೆಯ ವ್ಯಕ್ತಿಗೆ ಟಿಕೀಟು ಸಿಗದಿರುವ ಆತಂಕ ಕಾಡಿದೆ;
ಓಪನರಿನಿಕ್ಕಳದೆಳೆತಕ್ಕೆ ಮುಚ್ಚಳವಿತ್ತ ನೀಳ ಬಾಟಲಿಯೊಂದು ಪಬ್ಬಮಬ್ಬಲ್ಲಿ ನಶೆಯ ನೊರೆಯುಕ್ಕಿಸುತ್ತಿದೆ.

- - -
ನೀವಡಿಯಿಡುತ್ತಿರುವ ಹೊಸ ವರ್ಷದ ಹೊಸ ಕ್ಯಾಲೆಂಡರಿನ ಬಣ್ಣಬಣ್ಣದ ಖಾನೆಗಳಲ್ಲಿ ಹೂ ಹಾಸಿರಲಿ. ನಿಮ್ಮಿಷ್ಟದ ಹಾಡೇ ಕೇಳುತ್ತಿರಲಿ ಕಿವಿಯಲ್ಲಿ. ಸಿಹಿಯೇ ಸಿಗಲಿ ಬಾಯಾಡಲು. ನೆನೆದಾಗೆಲ್ಲ ಬರಲಿ ಕೊಡೆ ಹಿಡಿದು ನಿಮ್ಮೊಲವಿನವರು. ಬಿರುಗಾಳಿಯೆಂದುಕೊಂಡದ್ದು ತಂಗಾಳಿಯಾಗಲಿ. ಕಣ್ಮುಚ್ಚಿದಾಕ್ಷಣ ನಿದ್ರೆ ಬರುವಷ್ಟು ನೆಮ್ಮದಿ ವರುಷವಿಡೀ ಇರಲಿ. ಆ ನಿದ್ರೆಯಲ್ಲೂ ಚಂದಗನಸುಗಳೇ ಬೀಳಲಿ.

ಶುಭಾಶಯಗಳು.

Monday, November 09, 2015

ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೊಂದು ಹೂಗುಚ್ಛ ಕೊಟ್ಟು...

ನಾವೆಲ್ಲ ಪಟಾಕಿಯನ್ನು ಹೆದರುತ್ತಲೇ ಒಪ್ಪಿಕೊಂಡಿದ್ದು. ಚಿಕ್ಕವರಿದ್ದಾಗ ಪಟಾಕಿ ಮಾಡುವ ಭಾರೀ ಸದ್ದಿಗೆ, ಧಿಗ್ಗನೆ ಸಿಡಿಯುವ ಅದರ ರೀತಿಗೆ, ಹೊಮ್ಮಿಸುವ ಬೆಂಕಿಗೆ ನಾವೆಲ್ಲ ಹೆದರಿದವರೇ. ಪಟಾಕಿಯೇನು, ಸುರುಸುರುಬತ್ತಿ ಹಿಡಕೊಳ್ಳಲಿಕ್ಕೂ ನಮಗೆ ಭಯವಿತ್ತು. ಅದರ ಚಿಮ್ಮುಕಿಡಿಗಳು ಎಲ್ಲಿ ಕೈಗೆ ತಾಕುತ್ತವೋ ಎಂಬ ಅಂಜಿಕೆಯೊಂದಿಗೇ ನಾವದನ್ನು ನಮ್ಮ ಪುಟ್ಟ ಕೈಗಳಲ್ಲಿ ಹಿಡಿದು ಆರತಿ ಬೆಳಗಿದ್ದು. ಈ ನಮ್ಮ ಭಯವನ್ನು ಸ್ವಲ್ಪ ಹೋಗಲಾಡಿಸಿದ್ದು ನೆಲಗುಮ್ಮ. ಇದನ್ನು ಪಟಾಕಿಯ ಪಟ್ಟಿಗೇ ಸೇರಿಸಬೇಕೋ ಬಾಂಬಿನ ಗುಂಪಿಗೆ ತಳ್ಳಬೇಕೋ ಗೊತ್ತಿಲ್ಲ.  ಹೆಚ್ಚುಕಮ್ಮಿ ಆಟಂಬಾಂಬಿನ ಸೈಜೇ ಇರುತ್ತಿದ್ದ ಇದನ್ನು ಬೀಸಿ ನೆಲಕ್ಕೋ ಗೋಡೆಗೋ ಒಗೆದರೆ ಸಾಕು, ಢಂ ಎಂದು ಸಿಡಿಯುತ್ತಿತ್ತು.  ಸಿನೆಮಾಗಳಲ್ಲಿ ಬಾಂಬನ್ನು ವಿಲನ್ನುಗಳು ಹಲ್ಲಲ್ಲಿ ಕಚ್ಚಿ ಎಸೆದಾಗ ಅದು ದೂರ ಹೋಗಿ ಸಿಡಿದು ಭರ್ಜರಿ ಹೊಗೆಯೂ ಧೂಳೂ ಎದ್ದು ಅಲ್ಲಿದ್ದವರೆಲ್ಲಾ ಮಟಾಶ್ ಆಗುವುದನ್ನು ನೋಡಿದ್ದರಿಂದ, ನೆಲಗುಮ್ಮವನ್ನು ಪ್ರಯೋಗಿಸಿದ ನಾವೂ ವಿಲನ್ ಆದಂತೆ ಭಾವಿಸಿದೆವು. 

ಸ್ವಲ್ಪ ದೊಡ್ಡವರಾದಂತೆ ನಮ್ಮ ಧೈರ್ಯ ಇನ್ನೂ ಹೆಚ್ಚಿತು. ನೆಲಗುಮ್ಮದಿಂದ ನಿಧಾನಕ್ಕೆ ಪಿಸ್ತೂಲಿಗೆ ಭಡ್ತಿ ಪಡೆದೆವು. ಸಣ್ಸಣ್ಣ ಮದ್ದಿನ ರೋಲನ್ನು ಪಿಸ್ತೂಲಿನೊಳಗೆ ಸಿಕ್ಕಿಸಿ, ಟ್ರಿಗರ್ ಎಳೆದು ಚಟಾರ್ ಎನಿಸುವುದನ್ನು ಕಲಿತೆವು. ಈ ಮದ್ದಿನ ರೋಲು ನಮ್ಮನ್ನು ವಿಲನ್ ರೋಲಿನಿಂದ ಹೀರೋ ರೋಲಿಗೆ ಕರೆದೊಯ್ಯಿತು. ಹೀರೋ ಆದಮೇಲೆ ಕೇಳಬೇಕೇ?  ಈಗ ನಮಗಿಂತ ಚಿಕ್ಕ ಮಕ್ಕಳು ಪಿಸ್ತೂಲು ಹಿಡಿದ ನಮ್ಮನ್ನು ನೋಡಿ ಹೆದರುತ್ತಿದ್ದರು.  ನಾವೀಗ ಸರಪಟಾಕಿಗಳನ್ನು ಹೊಡೆಯುವಷ್ಟು ಜೋರಾದೆವು. ಮೊದಲೇ ಡೇಂಜರಿನ ಸಂಕೇತವೆಂಬಂತೆ ಕೆಂಬಣ್ಣವನ್ನು ಹೊಂದಿರುತ್ತಿದ್ದ, ಉದ್ದ ಹೊಟ್ಟೆಯ, ಅಷ್ಟೇ ಉದ್ದದ ಬತ್ತಿಯನ್ನು ಹೊಂದಿರುತ್ತಿದ್ದ ಈ ಪಟಾಕಿಗಳನ್ನು ಸರದಿಂದ ಬಿಡಿಸಿ, ಬತ್ತಿಯ ತುದಿಯ ಹೊದಿಕೆಯನ್ನು ಚೂರೇ ಕಿತ್ತು ತೆಗೆದು, ಮನೆಯಿಂದ ದೂರ ಅದನ್ನು ಪ್ರತಿಷ್ಟಾಪಿಸಿ, ಸುರಕ್ಷಿತ ಅಂತರದಲ್ಲಿ ನಿಂತು, ಊದಿನಕಡ್ಡಿಯಿಂದ ಬತ್ತಿಗೆ ಕಿಡಿ ತಾಕಿಸಿ, ಓಡಿ ಬಂದು ಕಿವಿ ಮುಚ್ಚಿ ನಿಲ್ಲುವುದು. ಇದರಲ್ಲಿ ಢಂ ಅನ್ನುವವೆಷ್ಟೋ, ಟುಸ್ ಅನ್ನುವವೆಷ್ಟೋ.

ಹೀರೋ ಇಮೇಜು ಜಾಸ್ತಿಯಾಗುತ್ತ ಹೋದಂತೆ ನಾವು ಹೊಡೆಯುವ ಪಟಾಕಿಗಳ ಗಾತ್ರವೂ ದೊಡ್ಡದಾಗುತ್ತಾ ಹೋಯ್ತು. ಆನೆ ಪಟಾಕಿಗಳೂ, ಲಕ್ಷ್ಮೀ ದಡಾಕಿಗಳೂ, ಆಟಂಬಾಂಬುಗಳೂ ನಮ್ಮಿಂದ ಸಿಡಿಯಲ್ಪಟ್ಟವು. ಬಿರುಸಿನ ಕುಡಿಕೆಗಳು ಮನೆಯೆದುರು ಕಾರಂಜಿ ಸೃಷ್ಟಿಸಿದರೆ, ರಾಕೆಟ್ಟುಗಳು ಆಕಾಶದಲ್ಲಿ ಪರ್ಯಾಯ ನಕ್ಷತ್ರಗಳ ಹೊಮ್ಮಿಸಿದವು. ನೆಲಚಕ್ರಗಳು ಮನೆಯೊಳಗೆಲ್ಲ ತಿರುಗಿದವು. ಗೆಳೆಯರೆಲ್ಲ ಸೇರಿ ಪಟಾಕಿಯಿಂದ ಪ್ರಯೋಗಗಳನ್ನೂ ಮಾಡಿದೆವು. ಬೀದಿನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಹಚ್ಚಿ ಓಡಿಸುವುದೂ, ಪಟಾಕಿಯನ್ನು ಸಗಣಿಯಲ್ಲಿಟ್ಟು ಸಿಡಿಸಿ ಸುತ್ತಮುತ್ತೆಲ್ಲ ಸಗಣಿಮಯವಾಗುವುದು ನೋಡಿ ಖುಷಿ ಪಡುವುದೂ, ಲಕ್ಷ್ಮೀ ದಡಾಕಿಗೆ ಬೆಂಕಿ ತಾಗಿಸಿ ಅದರ ಮೇಲೊಂದು ಡಬ್ಬಿ ಕವುಚಿ ಓಡಿ ಬಂದು ಪಟಾಕಿ ಸಿಡಿದಾಗ ಡಬ್ಬಿ ಆಕಾಶಕ್ಕೆ ಹಾರುವುದು ನೋಡಿ ಚಪ್ಪಾಳೆ ತಟ್ಟುವುದೂ, ಸಿಡಿಯದೇ ಉಳಿದ ಟುಸ್-ಪಟಾಕಿಗಳನ್ನೆಲ್ಲ ಬಿಡಿಸಿ ಅದರ ಮದ್ದನ್ನೆಲ್ಲಾ ಸೇರಿಸಿ ದೊಡ್ಡ ಪಟಾಕಿ ಮಾಡಿ ಉಡಾಯಿಸುವುದೂ ಹೀಗೆ ನಾನಾ ರೀತಿಯ ಕ್ರಿಯಾಶೀಲ ಕಿತಾಪತಿಗಳನ್ನು ಮಾಡಿ ಹಿರಿಯರಿಂದ ಬೈಗುಳ-ಒದೆತಗಳನ್ನು ಹಬ್ಬದುಡುಗುರೆಯಾಗಿ ಪಡೆದೆವು.

ಉರಿದದ್ದೆಲ್ಲಾ ತಣ್ಣಗಾಗುತ್ತವೆ ಎಂಬಂತೆ ಪಟಾಕಿಯ ಬಗೆಗಿದ್ದ ನಮ್ಮ ವ್ಯಾಮೋಹವೂ ನಿಧಾನಕ್ಕೆ ಕಮ್ಮಿಯಾಯಿತು. ಮುಂಚೆ ಒಂದೊಂದೇ ಪಟಾಕಿ ಹಚ್ಚುತ್ತಿದ್ದವರು ಈಗ ಸರಕ್ಕೇ ಬೆಂಕಿಯಿಡತೊಡಗಿದೆವು. ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಕೊಳ್ಳುತ್ತಿದ್ದವರು, ಈಗ ಒಂದು ಪ್ಯಾಕು ಗರ್ನಾಲು ಹೊಡೆದ್ರೆ ಸಾಕು ಬಿಡೋ ಈ ಹಬ್ಬಕ್ಕೆ ಅನ್ನೋ ಹಂತಕ್ಕೆ ಬಂದೆವು. ಮಕ್ಕಳ್ಯಾರಾದರೂ ಸಿಕ್ಕಾಪಟ್ಟೆ ಪಟಾಕಿ ಹೊಡೆಯುತ್ತಿದ್ದರೆ ಥೂ, ಡಿಸ್ಟರ್ಬೆನ್ಸು ಅಂತ ಹಲ್ಲು ಕಿವುಚಿದೆವು. ನಮ್ಮ ಮನೆ ಮಕ್ಕಳೇ ಪಟಾಕಿ ಬೇಕೆಂದು ಹಟ ಮಾಡಿದಾಗ ಅದನ್ನು ತಪ್ಪಿಸುವ, ಮನವೊಲಿಸುವ ಪ್ರಯತ್ನ ಮಾಡಿದೆವು.

ಇದಕ್ಕೆಲ್ಲ ಪೂರಕವೆಂಬಂತೆ ಈಗ ದೀಪಾವಳಿಯಲ್ಲಿ ಪಟಾಕಿ ಸುಡುವುದಕ್ಕೆ ನಿರ್ಬಂಧ ಹೇರಬೇಕು ಎಂಬ ಕೂಗು ಜೋರಾಗಿದೆ. ಜನ ಕೋರ್ಟ್ ಮೆಟ್ಟಿಲೇರಿದ್ದಾರೆ. ಏನು ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ ಜಾರಿಯಾಗಿಯೇಬಿಡುತ್ತದೇನೋ ಎಂಬ ಹಂತ ತಲುಪಿದ್ದ ಕೇಸು, ಈಗ ಸ್ವಲ್ಪ ಸಡಿಲಾದಂತಿದೆ. ಆದರೆ ಹಿಂದೆಂದಿಗಿಂತಲೂ ಈಗ ಪಟಾಕಿಯೆಡೆಗಿನ ಅಸಮಾಧಾನ ಜಾಸ್ತಿಯಾಗಿದೆ.

ಇಷ್ಟಕ್ಕೂ ಮನುಷ್ಯ ಈ ಪಟಾಕಿಯಂತಹ ಒಂದು ವಸ್ತುವನ್ನು ಯಾಕಾದರೂ ತಯಾರಿಸಿದ ಎಂಬುದು ಕುತೂಹಲದ ವಿಷಯ. ದೊಡ್ಡದಾಗಿ ಶಬ್ದ ಮಾಡುವ ವಸ್ತುವೊಂದು ಮನುಷ್ಯನಿಗೆ ಖುಷಿ ಕೊಡುವಂತಾದದ್ದು ಹೇಗೆ? ಹಬ್ಬಗಳಲ್ಲಿ, ವಿಜಯೋತ್ಸವಗಳಲ್ಲಿ ಭಾರೀ ಶಬ್ದವನ್ನುಂಟುಮಾಡಿದಾಗ ಅದು ಮಜ ನೀಡುತ್ತದೆ ಎಂಬ ಕಲ್ಪನೆ ನಮ್ಮ ಮನಸ್ಸುಗಳಲ್ಲಿ ನೆಲೆಯಾಗಿದ್ದಾದರೂ ಹೇಗೆ? ಫ್ಲವರ್ ಪಾಟ್, ರಾಕೆಟ್, ಭೂಚಕ್ರದಂತಹ ಸಿಡಿಮದ್ದುಗಳು ಕಣ್ಣಿಗೆ ಸಂಭ್ರಮವನ್ನಾದರೂ ತರುತ್ತವೆ; ಆದರೆ ಸದ್ದು ಮಾಡುವ ಪಟಾಕಿ? ಅದು ಬೆಚ್ಚಿಬೀಳಿಸುವುದೇ ಹೆಚ್ಚು! ಬಹುಶಃ ಈ ಬೆಚ್ಚಿಬೀಳುವ, ಭಯಕ್ಕೊಳಗಾಗುವ, ಬೇರೆಯವರನ್ನು ಭಯಕ್ಕೊಳಪಡಿಸುವ ಥ್ರಿಲ್ಗಾಗಿಯೇ ಈ ಪಟಾಕಿಗಳ ಸೃಷ್ಟಿಯಾಗಿರಬೇಕು. ಆಮೇಲೆ ಅದೊಂದು ಸಂಪ್ರದಾಯವೇ ಆಗಿಹೋಯಿತು. ಹಬ್ಬ ಬಂತೆಂದರೆ ಪಟಾಕಿ, ಕ್ರಿಕೆಟ್ ಮ್ಯಾಚಿನಲ್ಲಿ ಇಂಡಿಯಾ ಗೆದ್ದಿತೆಂದರೆ ಪಟಾಕಿ, ಚುನಾವಣೆಯಲ್ಲಿ ನಮ್ಮ ಸ್ಫರ್ಧಿ ಗೆದ್ದನೆಂದರೆ ಪಟಾಕಿ... ಎಲ್ಲೆಲ್ಲೂ ಸರಣಿ ಸದ್ದುಗಳದೇ ಮೇಲುಗೈ.

ಹೀಗೆ ನಮ್ಮ ಸಂಭ್ರಮಗಳಲ್ಲಿ ಹಾಸುಹೊಕ್ಕಾಗಿರುವ ಪಟಾಕಿಯನ್ನೇ ಈಗ ನಿಷೇಧಿಸಿಬಿಟ್ಟರೆ? ನಿಜ, ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹೊಡೆಯಲ್ಪಡುವ ಪಟಾಕಿಯಿಂದಾಗಿ ಸೃಷ್ಟಿಯಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ, ಪಟಾಕಿಯಿಂದಾಗಿ ಮೈಕೈ ಸುಟ್ಟುಕೊಳ್ಳುವ ಅದೆಷ್ಟೋ ಚಿಣ್ಣರು, ಕಣ್ಣು-ಕಿವಿಗಳಿಗೆ ಹಾನಿ ಮಾಡಿಕೊಳ್ಳುವವರು, ವಯೋವೃದ್ಧರಿಗೆ-ಉಸಿರಾಟದ ತೊಂದರೆಯಿರುವವರಿಗೆ ಪಟಾಕಿಗಳಿಂದಾಗಿ ಆಗುವ ತೊಂದರೆ, ಬೀದೆಯಲ್ಲ ತುಂಬುವ ಕಸ... ಎಲ್ಲವನ್ನೂ ಗಣನೆಗೆ ತೆಗೆದುಕೊಂಡಾಗ ಪಟಾಕಿಯಿಲ್ಲದ ದೀಪಾವಳಿಯೇ ಸರಳ-ಸುಂದರ ಎನಿಸುತ್ತದೆ. ಆದರೆ ಅದನ್ನು ಸಂಪೂರ್ಣ ಬ್ಯಾನ್ ಮಾಡಿಬಿಟ್ಟರೆ ಹಬ್ಬದ ಕಳೆಯೇ ಹೊರಟುಹೋಗುತ್ತದೆಯೇ? ನಾವನುಭವಿಸಿದ ಮೋಜು-ಮಸ್ತಿಗಳನ್ನು ಮಕ್ಕಳು ಅನುಭವಿಸುವುದು ಬೇಡವೇ?

ಹಳ್ಳಿಗಳಲ್ಲಾದರೆ ದೀಪಾವಳಿ ಹಬ್ಬದಂದು, ಹಬ್ಬದ ಹಿಂದೆ-ಮುಂದೆ ಅನೇಕ ಕಾರ್ಯ ಚಟುವಟಿಕೆಗಳಿರುತ್ತವೆ. ಭೂರೆಹಬ್ಬ, ಗಂಗಾಪೂಜೆ, ಅಭ್ಯಂಜನ ಸ್ನಾನ, ಗೋಪೂಜೆ, ಲಕ್ಷ್ಮೀ ಪೂಜೆ, ದನ ಬೆದರಿಸುವ ಆಟ, ಬಲೀಂದ್ರನಿಗೆ ನೈವೇದ್ಯ, ಊರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹಬ್ಬದ ಪಾಡ್ಯ, ಭರ್ಜರಿ ಹಬ್ಬದೂಟ, ಗುರಿಗಾಯಿ ಆಟ, ಹಬ್ಬ ಕಳುಹಿಸುವ ಕೆಲಸ, ಕಾರ್ತೀಕ ದೀಪೋತ್ಸವ, ಅಂಟಿಗೆ ಪಿಂಟಿಗೆ... ಹೀಗೆ ಪಟಾಕಿ ಹೊಡೆಯಲೂ ಸಮಯವಿಲ್ಲದಷ್ಟು ಸಂಪ್ರದಾಯಗಳೂ, ಸಂಭ್ರಮಗಳೂ, ಕೆಲಸಗಳೂ ಇರುತ್ತವೆ.  ಆದರೆ ನಗರಗಳಲ್ಲಿ ದೀಪಾವಳಿ ಎಂದರೆ ಬಹುತೇಕ ಪಟಾಕಿ ಹೊಡೆಯುವುದೇ ಆಗಿಹೋಗಿದೆ.  ಮನೆಯ ದೇವರಿಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಹೋಗಿಬಂದು, ನೆಂಟರೋ-ಅಕ್ಕಪಕ್ಕದ ಮನೆಯವರೋ ಬಂದರೆ ಅವರನ್ನು ಉಪಚರಿಸಿ, ಊಟ ಮಾಡುವುದು ಬಿಟ್ಟರೆ ಆಮೇಲೆಲ್ಲಾ ಪಟಾಕಿ ಸುಡುವುದೇ ಹಬ್ಬ. ಹೀಗಾಗಿ, ಹಳ್ಳಿಗಳಲ್ಲಾದರೂ ಪಟಾಕಿಯಿಲ್ಲದ ದೀಪಾವಳಿಯನ್ನು ಕಲ್ಪಿಸಿಕೊಳ್ಳಬಹುದು, ಆದರೆ ನಗರಗಳಲ್ಲಿ ಮಾತ್ರ ಅದು ತುಂಬಾ ಕಷ್ಟ.

ಇಷ್ಟಲ್ಲದೇ, ಪಟಾಕಿಗೆ ನಿರ್ಬಂಧ ಹೇರಿದ್ದೇ ಹೌದಾದರೆ ಪಟಾಕಿ ಉದ್ಯಮಗಳ ಕಥೆ ಏನು? ಅವರಿಗಾಗುವ ನಷ್ಟವನ್ನು ತುಂಬಿಕೊಡುವವರು ಯಾರು?  ಆ ಉದ್ಯಮದಲ್ಲಿ ಕೆಲಸ ಮಾಡುವ ಸಾವಿರಾರು ಜನರ ಕಥೆಯೇನು? ಎಂಬಂತಹ ವಾದಗಳೂ ಕೇಳಿಬರುತ್ತಿವೆ.  ಹೀಗಾಗಿ ಪಟಾಕಿಯನ್ನು ಬ್ಯಾನ್ ಮಾಡುವುದು ಸರ್ಕಾರಗಳಿಗೂ ಅಷ್ಟು ಸುಲಭದ ವಿಷಯವಾಗಿ ಉಳಿದಿಲ್ಲ.

ಸಂಪೂರ್ಣ ಕಡಿವಾಣ ಸಾಧ್ಯವಾಗದೇ ಹೋದರೂ, ಪಟಾಕಿ ಸುಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮಲ್ಲಿ ಜಾಗೃತಿ ಮೂಡುವ ಅವಶ್ಯಕತೆ ಇದೆಯೆಂದೆನಿಸುತ್ತದೆ. ಈ ವರ್ಷದ ದೀಪಾವಳಿ ಅಂಥದೊಂದು ನಿಲುವಿಗೆ ನಾಂದಿಯಾಗಬಲ್ಲುದೇ? ಪಕ್ಕದ ಮನೆಯ ತಾತ ಬಂದು, ಪಟಾಕಿ ಹೊಡೀಬೇಡ್ರಪ್ಪಾ, ತೊಂದ್ರೆ ಆಗುತ್ತೆ ಅಂತ ಕೇಳಿಕೊಂಡರೆ, ಅವರ ಕೋರಿಕೆಯನ್ನು ಮನ್ನಿಸುವಷ್ಟಾದರೂ ಸಹಿಷ್ಣುತೆ ನಮ್ಮಲ್ಲಿ ಮೂಡಬಹುದೇ? ಇಷ್ಟಕ್ಕೂ ದೀಪಾವಳಿ ದೀಪಗಳ ಹಬ್ಬವೇ ಹೊರತು ಪಟಾಕಿಗಳ ಹಬ್ಬ ಅಲ್ಲ.  ಹೀಗಾಗಿ, ಈ ವರ್ಷದ ದೀಪಾವಳಿಯನ್ನು ಸಿಡಿಮದ್ದಿಲ್ಲದೆ ಆಚರಿಸಲು ಸಾಧ್ಯವಾ?


ಹಾಗಾದರೆ ಏನು ಮಾಡಬಹುದು? ಪಟಾಕಿ ಬೇಕೇಬೇಕು ಅಂತ ಹಟ ಮಾಡುವ ಮಕ್ಕಳನ್ನು ಹೇಗೆ ಸುಮ್ಮನಿರಿಸುವುದು?  ಈ ವರ್ಷ ದೀಪಾವಳಿಯಂದು, ಮಕ್ಕಳನ್ನೆಲ್ಲ ಕೂರಿಸಿಕೊಂಡು, ಜೇಡಿಮಣ್ಣು, ಬಾಟಲಿನ ಮುಚ್ಚಳ, ಹಿಂಡಿದ ನಿಂಬೆಯ ಸಿಪ್ಪೆ ಮುಂತಾದವುಗಳಿಂದ ದೀಪಗಳನ್ನು ನಾವೇ ತಯಾರಿಸಿ ಮನೆ ಮುಂದೆ ಸಾಲುಸಾಲು ದೀಪ ಹಚ್ಚೋಣ.  ಬಣ್ಣದ ಕಾಗದಗಳನ್ನು ತಂದು ವಿವಿಧ ಆಕಾರದ ಆಕಾಶಬುಟ್ಟಿಗಳನ್ನು ತಯಾರಿಸಿ ಮನೆ ಮುಂದೆ ತೂಗಿಬಿಡೋಣ.  ಹೂವು-ತೋರಣ-ಬಣ್ಣದ ಕಾಗದಗಳಿಂದ ಮನೆಯನ್ನು ಸಿಂಗರಿಸೋಣ.  ರಸ್ತೆಯಲ್ಲಿ ದೊಡ್ಡದಾಗಿ ರಂಗೋಲಿ ಹಾಕಿ ಬಣ್ಣ ತುಂಬೋಣ. ಮಾರುಕಟ್ಟೆಯಲ್ಲಿ ಕೆಲವೆಡೆ ಬಣ್ಣದ ಪಟಾಕಿ ಸಿಗುತ್ತದೆ: ಇದನ್ನು ಸಿಡಿಸಿದಾಗ ಬೆಂಕಿ ಮತ್ತು ಶಬ್ದದ ಬದಲು ಬಣ್ಣದ ಬುಗ್ಗೆ ಏಳುತ್ತದೆ. ಇಂಥದನ್ನು ಬಳಸಲು ಯತ್ನಿಸೋಣ.  ಹಳ್ಳಿಗಳಲ್ಲಿ ನಡೆಯುವ ಆಚರಣೆಗಳಲ್ಲಿ ಕೆಲವನ್ನಾದರೂ ನಗರಗಳಲ್ಲಿ ಸಾಕಾರಗೊಳಿಸಲಾದೀತೇ ಅಂತ ಯೋಚಿಸೋಣ. ಬೀದಿಯ ಮಕ್ಕಳನ್ನೆಲ್ಲ ಕೂಡಿಸಿ ಸಣ್ಣ ಮನರಂಜನೆ ಕಾರ್ಯಕ್ರಮ ಏರ್ಪಡಿಸೋಣ, ಆಟ ಆಡಿಸೋಣ. ಆಪ್ತೇಷ್ಟರೆಲ್ಲ ಸೇರಿ ಹಾಡಿ ನಲಿಯೋಣ. ಎದುರಿಗೆ ಸಿಕ್ಕವರಿಗೆ ಶುಭಾಶಯ ಕೋರೋಣ.  ನಾವೆಲ್ಲ ಇಷ್ಟೆಲ್ಲ ಸಂಭ್ರಮಿಸುವಾಗ ಬೆಳಕನ್ನು ನೋಡುವ ಭಾಗ್ಯವೇ ಇಲ್ಲದ ಅಂಧರು ಇರುವ ಶಾಲೆ-ವಸತಿ ನಿಲಯಗಳಿಗೆ ಭೇಟಿ ಕೊಟ್ಟು, ಅವರೊಂದಿಗೆ ಸ್ವಲ್ಪ ಕಾಲ ಕಳೆದು ರಂಜಿಸಿ ಬಂದರೆ ಬೆಳಕಿನ ಹಬ್ಬಕ್ಕೊಂದು ಸಾರ್ಥಕ್ಯವೂ ಸಿಕ್ಕೀತು.  ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೆ ಹೊಸ ಬದುಕಿನ ಭರವಸೆಯ ಹೂಗುಚ್ಛವನ್ನೂ, ಸಿಹಿಯ ಹೋಳಿಗೆಯನ್ನೂ ಕೊಡುವ ನಿಟ್ಟಿನಲ್ಲಿ ಯೋಚಿಸೋಣ. ದೀಪಾವಳಿ ಎಲ್ಲರ ಬಾಳಿಗೂ ಹೊಸ ಬೆಳಕು ತರುವಂತಾಗಲಿ. ಶುಭಾಶಯಗಳು.

[ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದದ್ದು.]

Wednesday, December 31, 2014

2014 ಎಂಬ ಡಾರ್ಕ್ ಚಾಕಲೇಟ್..


೨೦೧೪ ಎಂಬ ಡಾರ್ಕ್ ಚಾಕಲೇಟ್ ಬಾರ್ ಮುಗಿಯಲು ಬಂದಿದೆ. ಕಳೆದ ವರ್ಷ ಇದೇ ಹೊತ್ತಿಗೆ ಇಷ್ಟುದ್ದಕೆ ಕಂಡಿದ್ದ ಚಾಕಲೇಟ್, ಚೂರುಚೂರೇ ತಿನ್ನುತ್ತ ತಿನ್ನುತ್ತ ಈಗ ಕೊನೆಯ ಬೈಟ್ ಮಾತ್ರ ಉಳಿದಿದೆ. 2014 ಹೇಗಿತ್ತು? ಥೇಟ್ ಡಾರ್ಕ್ ಚಾಕಲೇಟಿನಂತೆಯೇ ಇತ್ತು: ಸ್ವಲ್ಪ ಸಿಹಿ, ಸ್ವಲ್ಪ ಕಹಿ, ಅಲ್ಲಲ್ಲಿ ಒಂದೆರಡು ದ್ರಾಕ್ಷಿ, ಗೋಡಂಬಿ! ಕೆಲವರಿಗೆ ಚಾಕಲೇಟ್ ಬಾರ್ ಜೊತೆ ಸರ್‌ಪ್ರೈಸ್ ಗಿಫ್ಟ್ ಐಟಮ್ ಸಹ ಸಿಕ್ಕಿದ್ದುಂಟು. ಇನ್ನು ಕೆಲವರ ಚಾಕಲೇಟ್ ತಿನ್ನುವಾಗಲೇ ಕೈಜಾರಿ ಬಿದ್ದು ಸಮಸ್ಯೆಗೆ ಸಿಲುಕಿದ್ದೂ ಉಂಟು.

ಕಳೆದ ವರ್ಷ ನಿಜಕ್ಕೂ ರಂಗುರಂಗಾಗಿತ್ತು. ಹಲವು ಬದಲಾವಣೆಗಳು, ಹೊಸತುಗಳು, ಹೆಮ್ಮೆ ಪಡಬಹುದಾದ ಸಾಧನೆಗಳು, ಗೆಲುವುಗಳು, ಪ್ರಶಸ್ತಿಗಳು, ಸಂತೋಷದ ಸುದ್ದಿಗಳು ಇದ್ದವು. ಹಾಗೆಯೇ, ಒಂದಷ್ಟು ಹಿನ್ನಡೆಗಳು, ಸೋಲುಗಳು, ಅವಮಾನಗಳು, ನೋವಿನ ಸಂಗತಿಗಳೂ ಇದ್ದವು.

2014ನೇ ಇಸವಿಯನ್ನು ಭಾರತದ ಮಹಾಚುನಾವಣಾ ವರ್ಷ ಅಂತಲೇ ಕರೆಯಲಾಗಿತ್ತು. ಒಂಭತ್ತು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಹೊಸ ಭರವಸೆ, ಅಪಾರ ನಿರೀಕ್ಷೆ ಮತ್ತೆ ಒಂದಷ್ಟು ಅನುಮಾನಗಳನ್ನು ಹೊತ್ತ ಹೊಸ ಸರ್ಕಾರದ ಆಡಳಿತ ಶುರುವಾಯಿತು. ವಿದೇಶಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ದನಿ ಮೊಳಗಿತು. ರಾಜಕೀಯ ಲೋಕದಲ್ಲಾದ ಬದಲಾವಣೆಯಿಂದ, ವಿಶ್ವದ ಬಲಾಡ್ಯ ರಾಷ್ಟ್ರಗಳು ದೊಡ್ಡ ಮಟ್ಟದಲ್ಲಿ ಭಾರತದ ಕಡೆ ದೃಷ್ಟಿ ಹರಿಸಿದ ವರ್ಷ ಇದು. ಹೊಸ ಸರ್ಕಾರದ ಯೋಜನೆ ಸ್ವಚ್ಛ ಭಾರತ ಅಭಿಯಾನ ಸಾಕಷ್ಟು ಸುದ್ದಿ ಮಾಡಿತು. ಕರ್ನಾಟಕದ ಸರ್ಕಾರವೂ ತನ್ನ ಕೆಲವು ಹೊಸ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸಿತು. ಹಾಗೆಯೇ ಎರಡೂ ಸರಕಾರಗಳು ಕೆಲವು ವಿವಾದ, ಈಡೇರಿಸಲಾಗದ ಭರವಸೆಗಳಿಂದ ಮಾತಿಗೀಡಾದವು. ಆಂಧ್ರ ಪ್ರದೇಶವು ಇಬ್ಭಾಗವಾಗಿ ತೆಲಂಗಾಣವೆಂಬ ಹೊಸ ರಾಜ್ಯ ರಚನೆಯಾಯಿತು. ಮಂತ್ರಿ ಶಶಿ ತರೂರರ ಪತ್ನಿಯ ನಿಗೂಢ ಸಾವು ವರ್ಷಾರಂಭದಲ್ಲಿ ಸಾಕಷ್ಟು ಚರ್ಚೆಗೀಡಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಸಂಬಂಧಿತ ಕೋರ್ಟ್ ಆದೇಶದಿಂದ ಬಂಧನಕ್ಕೊಳಗಾದರು. ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಕಾರು ಅಪಘಾತದಲ್ಲಿ ನಿಧನರಾದರು.

ಮಾಮ್ ನೌಕೆಯನ್ನು ಮಂಗಳ ಗ್ರಹದ ಕಕ್ಷೆ ಸೇರಿಸುವುದರ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು. ಹಾಗೆಯೇ ಮಾನವಸಹಿತ ಬಾಹ್ಯಾಕಾಶ ಪಯಣಕ್ಕೆ ಮೊದಲ ಹೆಜ್ಜೆಯಾಗಿ ಮಾಡಿದ ಪ್ರಾಯೋಗಿಕ ಉಡಾವಣೆ ಸಹ ಯಶಸ್ವಿಯಾಗುವುದರೊಂದಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಸಾಧನೆ ಮೆರೆಯಿತು. ಈ ವರ್ಷದಲ್ಲಿ ವಿಶ್ವಾದ್ಯಂತ ಹಲವು ಹೊಸ ಆವಿಷ್ಕಾರಗಳು ಆದವು.  ಸ್ಮಾರ್ಟ್‍ಫೋನುಗಳು ಎಲ್ಲರ ಕೈಯಲ್ಲಿ ನಲಿದಾಡುವಷ್ಟು ಜನರೂ ತಂತ್ರಜ್ಞಾನಕ್ಕೆ ಹೊಂದಿಕೊಂಡರು. 240ಕ್ಕೂ ಹೆಚ್ಚು ಜನರಿದ್ದ ಮಲೇಶಿಯಾದ ವಿಮಾನವೊಂದು ಹೇಳಹೆಸರಿಲ್ಲದಂತೆ ಕಣ್ಮರೆಯಾದದ್ದು ಟೆಕ್ನಾಲಜಿ ಇಷ್ಟು ಮುಂದುವರೆದಿರುವ ಈ ಕಾಲದಲ್ಲೂ ಹೇಗೆ ಸಾಧ್ಯ ಅಂತ ಜನ ಕೇಳಿಕೊಳ್ಳುವಂತಾಯ್ತು.

ಭಯೋತ್ಪಾದನೆಯೆಂಬುದು ಈ ವರ್ಷವೂ ತನ್ನ ಕರಾಳ ಮುದ್ರೆಯನ್ನು ಛಾಪಿಸಿತು. ವಿಶ್ವದ ಹಲವೆಡೆ ಉಗ್ರರು ಅಟ್ಟಹಾಸ ಮೆರೆದರು. ಪೇಶಾವರದ ಶಾಲೆಯೊಂದರಲ್ಲೇ ನೂರಾರು ಅಮಾಯಕ ಮಕ್ಕಳ ರಕ್ತ ಹರಿದು ಜಗತ್ತೇ ಬೆಚ್ಚಿ ಬೀಳುವಂತಾಯಿತು.  ದೇಶದಲ್ಲಿ ಅನೇಕ ಭಾಗಗಳಲ್ಲಿ ನಕ್ಸಲ್ ದಾಳಿಗಳಾದವು. ದೇಶ-ದೇಶಗಳ, ರಾಜ್ಯ-ರಾಜ್ಯಗಳ ಗಡಿ ಗಲಾಟೆ ಅಂತ್ಯವನ್ನೇನು ಕಾಣಲಿಲ್ಲ.  ದೇಶದೆಲ್ಲೆಡೆ ದಾಖಲಾದ ಅತ್ಯಾಚಾರ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿದ್ದಷ್ಟೇ ಅಲ್ಲ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ ಬೀದಿಗಿಳಿದು ಪ್ರತಿಭಟಿಸಿದರು. ಮಹಿಳೆಯರ, ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಪಡುವಂತಹ ಸ್ಥಿತಿಗೆ ಕೊನೆ ಯಾವಾಗ ಎಂದು ಜನ ಮೇಲೆ ನೋಡುವಂತಾಯಿತು. ಕಾಶ್ಮೀರದಲ್ಲಿ ಉಂಟಾದ ಪ್ರವಾಹಕ್ಕೆ ನೂರಾರು ಜನ ಸಾವಿಗೀಡಾದರೆ ಸಾವಿರಾರು ಜನ ವಸತಿ-ವಸ್ತುಗಳನ್ನು ಕಳೆದುಕೊಂಡರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅನೇಕ ಬಹುಮತಿಗಳು, ಗೌರವಗಳು ಈ ವರ್ಷ ದೊರಕಿದವು. ಭೈರಪ್ಪನವರಿಗೆ ಘೋಷಣೆಯಾದ ರಾಷ್ಟ್ರೀಯ ಪ್ರಾಧ್ಯಾಪಕ ಗೌರವ, ನಾ. ಡಿಸೋಜಾರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಕುಂವೀಯವರಿಗೆ ಬಂದ ನೃಪತುಂಬ ಪ್ರಶಸ್ತಿ, ಕಿಞ್ಞಣ್ಣ ರೈರವರಿಗೆ ಸಿಕ್ಕ ಪಂಪ ಪ್ರಶಸ್ತಿ... ಹೀಗೆ ಹಲವು ಹಿರಿ-ಕಿರಿಯ ಸಾಹಿತಿಗಳಿಗೆ ಪ್ರಶಸ್ತಿ-ಮನ್ನಣೆಗಳು ದೊರೆತವು. ಹಾಗೆಯೇ ಯು.ಆರ್. ಅನಂತಮೂರ್ತಿ, ಯಶವಂತ ಚಿತ್ತಾಲರಂತ ಹಿರಿಯ ಸಾಹಿತಿಗಳ ನಿಧನ ಕನ್ನಡ ನಾಡಿಗೆ ದುಃಖ ತಂದಿತು. ದೇವರ ಕಲ್ಲಿನ ಮೇಲೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಹೇಳಿಕೆಯಂತಹ ಕೆಲವು ಮಾತುಗಳು ಸಭೆ-ಸಮಾರಂಭಗಳಲ್ಲಿ ಹೊರಬಿದ್ದು ವಿವಾದವನ್ನೂ ಸೃಷ್ಟಿಸಿದವು. ದೇವನೂರು ಮಹಾದೇವ ಅವರು ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡದ ಸರ್ಕಾರದ ನೀತಿಯನ್ನು ವಿರೋಧಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದರು. 

ಕನ್ನಡದಲ್ಲಿ ನೂರಾರು ಹೊಸ ಸಿನಿಮಾಗಳು ಬಿಡುಗಡೆಯಾದವು. ಕೆಲವು ರೀಮೇಕ್, ಕೆಲವು ಸ್ವಮೇಕ್. ಕೆಲವು ಗೆದ್ದವು, ಕೆಲವು ಸೋತವು. ‘ಉಳಿದವರು ಕಂಡಂತೆ’ ತರಹದ ಹೊಸ ಪ್ರಯತ್ನವನ್ನು ಜನ ಮೆಚ್ಚಿಕೊಂಡರು. ರಂಗಭೂಮಿಯಲ್ಲೂ ಅನೇಕ ಪ್ರಯೋಗಗಳಾದವು. ಸಿ.ಆರ್. ಸಿಂಹ, ವಿ.ಕೆ. ಮೂರ್ತಿ, ಮಾಯಾ ರಾವ್ ಸೇರಿದಂತೆ ಕೆಲವು ಕಲಾವಿದರು ನಮ್ಮನ್ನಗಲಿದರು. ಬಾಲಿವುಡ್ಡಿನಲ್ಲಿ ಹ್ಯಾಪಿ ನ್ಯೂ ಇಯರ್, ಬ್ಯಾಂಗ್ ಬ್ಯಾಂಗ್ ಮುಂತಾದ ಚಿತ್ರಗಳು ಸದ್ದು ಮಾಡಿದರೆ, ರಜನೀಕಾಂತ್ ತಮ್ಮ ಲಿಂಗಾ ಮೂಲಕ ಸೂಪರ್‌ಸ್ಟಾರ್‌ಗಿರಿ ಮೆರೆದರು.

ಇಲ್ಲಿ ಕ್ರಿಕೆಟ್ಟಿಗೆ ಮಾತ್ರ ಮನ್ನಣೆ, ಜನ ಕ್ರಿಕೆಟ್ ಬಿಟ್ಟು ಬೇರೆ ಏನೂ ನೋಡೋದೇ ಇಲ್ಲ ಈ ದೇಶದಲ್ಲಿ ಅನ್ನೋ ಮಾತಿಗೆ ಅಪವಾದದಂತೆ ಈ ವರ್ಷ ಕಬಡ್ಡಿ ಆಟ ಜನಪ್ರಿಯವಾಯಿತು. ಒಂದು ಕಡೆ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ಗಳ ವಿರುದ್ಧದ ಏಕದಿನ ಸರಣಿಗಳನ್ನು ಗೆಲ್ಲುತ್ತಿದ್ದರೆ, ಇತ್ತ ಸ್ಪೋರ್ಟ್ಸ್ ಛಾನೆಲ್ಲುಗಳು ಪ್ರೊ-ಕಬಡ್ಡಿ ಸರಣಿಯನ್ನು ನಿರಂತರ ಪ್ರಸಾರ ಮಾಡಿದವು.  ಜನ ಎರಡನ್ನೂ ಮುಗಿಬಿದ್ದು ನೋಡಿದರು. ವರ್ಷಾಂತ್ಯದಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳೆರಡೂ ಕಬಡ್ಡಿ ವಿಶ್ವಕಪ್ ಗೆದ್ದುಕೊಂಡವು. ಮೇರಿ ಕೋಮ್ ಏಶಿಯನ್ ಗೇಮ್ಸ್ ಬಾಕ್ಸಿಂಗಿನಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್ವೆಲ್ತ್ ಗೇಮ್ಸಿನಲ್ಲಿ ಭಾರತ 64 ಪದಕಗಳನ್ನು ಬಾಚಿಕೊಂಡಿತು. ಸೈನಾ ನೆಹವಾಲ್, ಜೋಕೋವಿಕ್‌ರ ವಿಕ್ರಮಗಳನ್ನೂ ನಾವೆಲ್ಲ ನೋಡಿ ಖುಷಿಪಟ್ಟೆವು.

...ಹೀಗೇ ಹಿಂದೆ ನೋಡುತ್ತ ಹೋದರೆ ಅದೆಷ್ಟೋ ಖುಷಿಯ ಸುದ್ದಿಗಳು, ಹಿಗ್ಗಿನ ನಡೆಗಳು, ಗೆಲುವಿನ ಕುಣಿತಗಳು, ಕಳಿತು ಸಿಹಿಯಾದ ಫಲಗಳು, ಇಂಥದ್ದೂಂತ ಅರ್ಥೈಸಲಾಗದ ಘಟನೆಗಳು, ವಿಷಾದದ ಕ್ಷಣಗಳು, ಜರ್ಜರಿತರಾಗಿ ಕುಸಿದ ಗಳಿಗೆಗಳು, ಯಾರೋ ಹಿಡಿದೆತ್ತಿ ಕೂರಿಸಿದ ನಿಸ್ವಾರ್ಥ ಕ್ಷಣಗಳು, ಆವರಿಸಿದ ದಟ್ಟ ಕಾರ್ಮೋಡದ ನಡುವೆಯೂ ಹೊಳೆದ ಬೆಳ್ಳಿಗೆರೆಗಳು... ಪಾಕಿಸ್ತಾನದ ಮಲಾಲಾ, ಭಾರತದ ಕೈಲಾಶ್ ಸತ್ಯಾರ್ಥಿ ಇವರುಗಳಿಗೆ ಪ್ರತಿಷ್ಠಿತ ನೋಬೆಲ್ ಶಾಂತಿ ಪುರಸ್ಕಾರ ದೊರೆತಿದ್ದು ಈ ವರ್ಷದ ಬೆಳ್ಳಿಚುಕ್ಕಿಗಳಲ್ಲೊಂದು.

ಇವೆಲ್ಲ ಲೋಕದ ಸುಖ-ದುಃಖಗಳಾದವು. ನಾವು ನೋಡಿದ, ಕೇಳಿದ, ಓದಿದ ಸುದ್ದಿಗಳಾದವು. ನಮ್ಮೆದುರಿನವರ ಕತೆಯಾಯಿತು. ಆದರೆ ನಮ್ಮ ಬದುಕಿನಲ್ಲಿ ಏನಾಯಿತು? ನಮ್ಮ ವೈಯಕ್ತಿಕ ಬದುಕಿನಲ್ಲಿ ಮೇಲೇರಿದ್ದು, ಕೆಳಗಿಳಿದದ್ದು, ಸಂಭ್ರಮಾಚರಣೆ ಮಾಡಿದ್ದು, ಶೋಕದಲ್ಲಿ ಮಿಂದೆದ್ದದ್ದು, ನಕ್ಕಿದ್ದು, ಬಿಕ್ಕಳಿಸಿದ್ದು, ಮುಂದೇನೆಂದು ತೋಚದೆ ನಿಂತಿದ್ದು, ಮೌನದಲಿ ಆಲೋಚಿಸಿದ್ದು... ಕಾಣುವವರ, ಕಾಣದವರ ನಲಿವು-ನೋವುಗಳಿಗೆ ಸ್ಪಂದಿಸುತ್ತಾ ನಾವೂ ಒಂದು ವರ್ಷ ಹಳಬರಾದೆವು. ನಮ್ಮಿಷ್ಟದವರು ಗೆದ್ದಾಗ ನಾವೂ ಪ್ರಫುಲ್ಲಗೊಂಡೆವು, ಅವರ ನಗು ನೋಡಿ ನಾವೂ ಮುಖವರಳಿಸಿದೆವು; ನೋವು ಕಂಡಾಗ ನಾವೂ ಮುಗುಮ್ಮಾದೆವು, ಸಹಾಯ ಹಸ್ತ ಚಾಚಿದೆವು; ಅನ್ಯಾಯ ಕಂಡಾಗ ಪ್ರತಿಭಟಿಸಿದೆವು: ಕೆಲವೊಮ್ಮೆ ಬೀದಿಗಿಳಿದು, ಕೆಲವೊಮ್ಮೆ ಫೇಸ್‌ಬುಕ್ಕಿನ ಗೋಡೆಯಲ್ಲಿ, ಇನ್ನು ಕೆಲವೊಮ್ಮೆ ಮೌನದಲ್ಲಿ.

ಕಾಲದ ಹಕ್ಕಿ ಹಾರುತ್ತ ಹಾರುತ್ತ ಒಂದು ದೊಡ್ಡ ಯೋಜನವನ್ನೇ ದಾಟಿದೆ. ಈಗ ಮುಂದೆ ನೋಡಿದರೆ 2015 ಎಂಬ ಹೊಸದೇ ಆದ ಚಾಕಲೇಟ್ ಬಾರ್ ಚಂದದ ಝರಿ ಹೊದ್ದು ಫಳಫಳ ಹೊಳೆಯುತ್ತ ನಿಂತಿದೆ. ಹೊಸ ವರ್ಷದೆಡೆಗೆ ಆಶಾವಾದಿಗಳಾಗಿ ಹೆಜ್ಜೆ ಹಾಕಬೇಕಿದೆ. ಹೊಸ ಚಾಕಲೇಟಿನ ರ್ಯಾಪರ್ ಬಿಚ್ಚಿ ತೆರೆದು, ಹೊಸ ರುಚಿಯ ಆಸ್ವಾದಿಸಲು ತಯಾರಾಗಬೇಕಿದೆ. ಹೊಸ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ಹೊಸ ಕನಸು ಕಾಣಬೇಕಿದೆ.

‘ಹೊಸ ವರ್ಷವಾ, ಏನಿದೆ ಅದರಲ್ಲಿ, ಏನಿದೆ ಹೊಸತನ’ –ಎನ್ನದೇ, ಹೊಸ ಕ್ಯಾಲೆಂಡರ್ ತಂದು ಜಗುಲಿಯಲ್ಲಿ ನೇತುಹಾಕಬೇಕಿದೆ. ಹೊಸ ವರ್ಷ ಎಂದಾಕ್ಷಣ ಎಲ್ಲ ವಸ್ತು, ಊರು, ಕೆಲಸ, ಒಡನಾಡುವ ವ್ಯಕ್ತಿಗಳೂ ಹೊಸದೇ ಆಗಬೇಕಿಲ್ಲ. ಹೊಸತನಕ್ಕೆ ಹಂಬಲಿಸುವ ಮನಕ್ಕೆ ಮತ್ತೇನೂ ಬೇಡ: ಅದೇ ಹಳೇ ಪುಸ್ತಕಕ್ಕೆ ಒಂದು ಹೊಸ ಬೈಂಡ್, ಕಳೆದ ವರ್ಷದ ಆಕಾಶಬುಟ್ಟಿಗೆ ಬೇರೆ ಬಣ್ಣದ ಬಲ್ಬ್, ಹಳೆಯ ಕನ್ನಡಕಕ್ಕೆ ಹೊಸ ಫ್ರೇಮ್, ಮೊಬೈಲಿಗೊಂದು ಕಲರ್ ಕಲರ್ ಕವರ್, ಹೊಲದ ಬೇಲಿಯ ಗೂಟಗಳಿಗೆ ಹೊಸದಾಗಿ ಕಟ್ಟಿದ ದಬ್ಬೆ, ಒಗ್ಗರೆಣೆಗೆ ಸ್ವಲ್ಪ ವ್ಯತ್ಯಾಸ ಮಾಡಿ ಹಾಕಿದ ಸಂಬಾರ ಪದಾರ್ಥ, ದಿನಚರಿಯಲ್ಲಿ ಮಾಡಿಕೊಂಡ ಕೊಂಚ ಬದಲಾವಣೆ, ಡೆಸ್ಕ್‍ಟಾಪಿಗೆ ಹೊಸದೊಂದು ವಾಲ್‌ಪೇಪರ್ ಹಾಕಿದರೂ ಸಾಕು- ಏನೋ ಹೊಸತನ ನಮ್ಮನ್ನಾವರಿಸುತ್ತದೆ. ಹೊಸ ಉಲ್ಲಾಸದ ಹೂಮಳೆಯಾಗುತ್ತದೆ. ಹೊಸ ಉತ್ಸಾಹಕ್ಕದು ನಾಂದಿಯಾಗುತ್ತದೆ.

ಅಂತಹ ಸಣ್ಣಸಣ್ಣ ಹೊಸತನಗಳನ್ನು ಬೆರೆಸಿ ತಯಾರಿಸಿದ ಚಾಕಲೇಟನ್ನು ಹೊಸ ವರ್ಷವೆಂಬ ಬಣ್ಣದ ಬುಟ್ಟಿಯಲ್ಲಿಟ್ಟುಕೊಂಡು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಬರುತ್ತಿರುವ ಕಾಲದ ಹಕ್ಕಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳೋಣ. ಹೊಸ ಚಾಕಲೇಟಿನಲ್ಲಿ ಜಾಸ್ತಿ ಸಿಹಿಯಿರಲಿ, ಕಮ್ಮಿ ಕಹಿಯಿರಲಿ, ಹೆಚ್ಚೆಚ್ಚು ಗೋಡಂಬಿ-ದ್ರಾಕ್ಷಿಗಳು ಸಿಗಲಿ ಅಂತ ಹಾರೈಸೋಣ. ಹೊಸ ವರುಷದ ಶುಭಾಶಯಗಳು.

[ಉದಯವಾಣಿ  ಸಾಪ್ತಾಹಿಕಕ್ಕಾಗಿ ಬರೆದುಕೊಟ್ಟಿದ್ದು. 'ಹಕ್ಕಿ ಹಾರುತಿದೆ ನೋಡಿದಿರಾ? ಅದು ಕಾಲದ ಹಕ್ಕಿ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು.]

Wednesday, December 29, 2010

ಇಹವ ಮರೆಸುವ ನಶೆಯ ಬೇಡುತ...

ನನ್ನ ಬೆಂಗಳೂರಿನ ಬ್ಯಾಚುಲರ್ಸ್ ಬಿಡಾರಕ್ಕೆ ಬಂದವರನೇಕರು “ಅರೆ, ನೀನು ಮನೇಲಿ ಟೀವೀನೇ ಇಟ್ಕೊಂಡಿಲ್ವಾ?” ಅಂತ ಕೇಳುತ್ತಾರೆ. ಅದ್ಯಾಕೋ, ಟೀವಿ ನನಗೊಂದು ಅವಶ್ಯಕ ವಸ್ತು ಅಂತ ಇದುವರೆಗೆ ಅನ್ನಿಸಿಯೇ ಇಲ್ಲ. ಇಷ್ಟಕ್ಕೂ ಯಾರಾದರೂ -ಅದರಲ್ಲೂ ನಗರವಾಸಿಗಳು- ಟೀವಿ ಇಟ್ಟುಕೊಳ್ಳುವುದಾದರೂ ಯಾಕೆ ಅಂತ ನಾನು ಯೋಚಿಸಿದ್ದಿದೆ. ಆಗ ನನಗೆ ಹೊಳೆದ ಕೆಲ ಪಾಯಿಂಟುಗಳು ಇವು: (೧) ನಿಮ್ಮ ಮನೆಯಲ್ಲಿ ದಿನವಿಡೀ ಮನೆಯಲ್ಲೇ ಇರುವವರಿದ್ದರೆ, ಐ.ಇ., ಕೆಲಸಕ್ಕೆ ಹೋಗದ ಹೆಂಡತಿ, ವಯಸ್ಸಾದ ತಂದೆ-ತಾಯಿ, ನಿರುದ್ಯೋಗಿ ಸಹೋದರಿ ಅಥವಾ ಸಹೋದರ -ಇವರ ಮನರಂಜನೆಗೆ ಟೀವಿ ಬೇಕಾದೀತು. ಅಥವಾ ನಿಮ್ಮದೇ ಬಿಡುವಿನ ವೇಳೆಯಲ್ಲಿ ಮನರಂಜನೆಗೆ ಬೇರ್ಯಾವುದೇ ಆಕರ ನಿಮಗಿಲ್ಲದಿದ್ದರೆ ಟೀವಿಯ ಮೊರೆ ಹೋಗಬಹುದು. (೨) ನಿತ್ಯದ -ಕ್ಷಮಿಸಿ- ಕ್ಷಣಕ್ಷಣದ ಸುದ್ದಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ನಿಮಗಿದ್ದರೆ, ಉದಾಹರಣೆಗೆ, (ಅ) ಶೇರುಪೇಟೆಯಲ್ಲಿ ಇಂಥಾ ಶೇರಿನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಬ) ಇಂಥಾ ಶಾಸಕನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಕ) ಸರ್ಕಾರದ ಯಾವ ಹಗರಣ ೧೦.೫೦ಕ್ಕೆ ಬಯಲಾಗಿತ್ತು, ೧೦.೫೨ಕ್ಕೆ ಯಾವುದಾಯಿತು, (ಡ) ಬಂಗಾರಪ್ಪ ೧೦.೫೦ಕ್ಕೆ ಯಾವ ಪಕ್ಷದಲ್ಲಿದ್ದರು, ೧೦.೫೨ಕ್ಕೆ ಯಾವುದಕ್ಕೆ ಹಾರಿದರು, ಇತ್ಯಾದಿ. (೩) ನೀವು ಕ್ರಿಕೆಟ್, ಇತ್ಯಾದಿ ಆಟದ ಹುಚ್ಚಿನವರಾಗಿದ್ದರೆ. (೪) ನೀವೇ ನಿತ್ಯ ಟೀವಿಯಲ್ಲಿ ಬರುವವರಾಗಿದ್ದರೆ! ಉದಾ, ನೀವು- ನಟ/ನಟಿ/ ಲೈಮ್‌ಲೈಟಿನಲ್ಲಿರುವ ತಾರೆ, ಸಂದರ್ಶಕ, ಯಾಂಕರು, ಹಳ್ಳಿಗೋ ಕಾಡಿಗೋ ಸುಡುಗಾಡಿಗೋ ಹೋಗೋ ಪ್ಯಾಟೆ ಹುಡ್ಗಿ -ಆಗಿದ್ದರೆ. (೫) ನೀವು ಅಮೃತಾಂಜನದ ವಾಸನೆಯ ವ್ಯಸನಿಯಾಗಿದ್ದರೆ, ಅಂದರೆ, ಟೀವಿ ನೋಡಿ ತಲೆನೋವು ಬರಿಸಿಕೊಂಡು ಅಮೃತಾಂಜನ ಸವರಿಕೊಂಡು ಸುಖ ಅನುಭವಿಸುವ ಜಾತಿಯವರಾಗಿದ್ದರೆ ....ನಿಮಗೆ ಟೀವಿ ಬೇಕಾಗಬಹುದು.

ನನಗೆ ಈ ಯಾವ ನಂಬರೂ ತಾಳೆ ಹೊಂದದ ಕಾರಣ ನಾನು ಟೀವಿ ಇಟ್ಟುಕೊಂಡಿಲ್ಲ ಅಂತ ಅಂದುಕೊಂಡಿದ್ದೇನೆ. ಅಲ್ಲದೇ ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ವಾಪಸು ತಲುಪುವ ನಾನು, ಆಮೇಲೆ ಅಡುಗೆ ಮಾಡಿಕೊಂಡು ಉಂಡು, ಪಾತ್ರೆ-ಗೀತ್ರೆ ತೊಳೆದು, ಆ-ಈ ಮ್ಯಾಗಜೀನುಗಳನ್ನು ಓದಿ ಮುಗಿಸಿ, ಪುಸ್ತಕದ ಗೂಡಿನಲ್ಲಿರುವ ಓದದ ಪುಸ್ತಕಗಳನ್ನು ಓದಿ, ಹಾರ್ಡ್‌ಡಿಸ್ಕಿನಲ್ಲಿರುವ ಸಿನೆಮಾ ನೋಡಿ, ಅಷ್ಟರಮೇಲೆ ಬರೆಯುವ ತಲುಬು ಬಂದರೆ ಬರೆದು -ಇಷ್ಟೆಲ್ಲಾ ಮಾಡುವಷ್ಟರಲ್ಲಿ ಬೆಳಗಾಗಲಿಕ್ಕೆ ಇನ್ನು ನಾಲ್ಕೇ ತಾಸಿರುವುದು ಎಂಬ ಸತ್ಯ ಹೊಳೆದು, ಆಹ್- ಇನ್ನು ಟೀವಿ ಎಷ್ಟೊತ್ತಿಗೆ ನೋಡಲಿ, ನಿದ್ರೆ ಎಷ್ಟೊತ್ತಿಗೆ ಮಾಡಲಿ! (ಇದನ್ನೆಲ್ಲಾ ಹೇಳುವುದೂ ಕಷ್ಟ; ಜನ ಮದ್ವೆ ಮಾಡ್ಕೋ ಅಂತಾರೆ!) ಅಲ್ಲದೇ, ನನಗೆ ಜಾಹೀರಾತುಗಳ ಮಧ್ಯದಲ್ಲಿ ಅಷ್ಟಿಷ್ಟು ಸಿನೆಮಾ ನೋಡುವುದಕ್ಕಾಗಲಿ, ಹೇಳಿದ ಸುದ್ದಿಯನ್ನೇ ಹೇಳುವ ನ್ಯೂಸ್‌ಚಾನಲುಗಳನ್ನು ಸಹಿಸಿಕೊಳ್ಳುವುದಕ್ಕಾಗಲೀ, ಹುಚ್ಚುಚ್ಚು ಚರ್ಚೆಗಳ ಕಾಮಿಡಿ ಕಂಡು ಸುಮ್ಮನಿರುವುದಕ್ಕಾಗಲೀ, ಒಂದು ಹಾಡಿನ ಬಂಡಿಯಲ್ಲಿ ಸೋತಿದ್ದಕ್ಕೆ ಪುಟ್ಟ ಮಕ್ಕಳನ್ನು ಜೀವನವೇ ಮುಗಿಯಿತೇನೋ ಎಂಬಂತೆ ತೋರಿಸುವ ರಿಯಾಲಿಟಿ ಶೋಗಳನ್ನು ನೋಡುವುದಕ್ಕಾಗಲಿ, ಸಂಸಾರದ ಸಮಸ್ಯೆಗಳ ಧಾರಾವಾಹಿಗಳನ್ನು ನೋಡಿ ಜೀವನದ ಬಗ್ಗೆ ಜಿಗುಪ್ಸೆ ತಾಳುವುದಕ್ಕಾಗಲೀ ಬಿಲ್‌ಕುಲ್ ಇಷ್ಟವಿಲ್ಲ. ಕ್ರಿಕೆಟ್ಟೊಂದನ್ನು ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೆನೇನೋ, ಆದರೆ ಬಹಳಷ್ಟು ಮ್ಯಾಚುಗಳು ನನ್ನ ಆಫೀಸಿನ ಸಮಯದಲ್ಲೇ ಇದ್ದು, ಕ್ರಿಕ್ಕಿನ್ಫೋದವನು ಪ್ರತಿ ಬಾಲಿಗೂ ಕಮೆಂಟರಿ ಕೊಟ್ಟು ಉಪಕಾರ ಮಾಡುತ್ತಾನಾದ್ದರಿಂದ -ಟೀವಿ ಇನ್ನೂ ನನ್ನ ಮನೆಗೆ ಪ್ರವೇಶ ಪಡೆದಿಲ್ಲ.

ಆದರೆ ಈ ಟೀವಿ ಇಲ್ಲದಿರುವುದರಿಂದ ನನಗಾಗದಿದ್ದ ಸಾಕ್ಷಾತ್ಕಾರವೊಂದು ಮೊನ್ನೆ ಗೆಳೆಯನ ಮನೆಯಲ್ಲಿ ಟೀವಿ ನೋಡುತ್ತಿದ್ದಾಗ ಆಗಿಹೋಯಿತು! ನನಗೆ ಜೀವನದ ಕಷ್ಟಗಳು ಮತ್ತು ಭವಿಷ್ಯದ ಪ್ರಪಂಚದ ಬಗೆಗೆ ಇದ್ದ ಕೆಲ ಕಲ್ಪನೆಗಳು ಅತಿರಂಜಿತವಾಗಿದ್ದವೇನೋ ಅನ್ನಿಸಲು ಶುರುವಾಗಿಬಿಟ್ಟಿತು. ಈ ಟೀವಿ ಜಾಹೀರಾತುಗಳು ಬಹಳವೇ ಆಕರ್ಷಕವಾಗಿರುತ್ತವೆ. ಅವುಗಳನ್ನು ನೋಡುತ್ತ ನೋಡುತ್ತ ನಾನು ಜೀವನ ಎಂದರೆ ನೀರು ಕುಡಿದಷ್ಟು ಸರಾಗ ಎಂಬಂತಹ ತೀರ್ಮಾನಕ್ಕೆ ಬಂದೆ. ಅಡುಗೆ ಮಾಡುವುದು ಈಗೊಂದು ಸಮಸ್ಯೆಯೇ ಅಲ್ಲ- ಕೈಲಾಶ್ ಕುಕ್ಕರ್, ಮಿಕ್ಸಿ, ಗ್ರೈಂಡರ್, ಜ್ಯೂಸ್ ಮೇಕರ್, ತವಾ -ಏನು ಬೇಕಾದರೂ ಇದೆ. ಒಂದು ನಿಮಿಷದಲ್ಲಿ ಹೊಸ ಸೊಸೆ ಅಡುಗೆ ಮಾಡಿ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಾಳೆ. ಸೆಖೆಯಾಯಿತೋ ಕೇತಾನ್ ಫ್ಯಾನಿದೆ, ಸುವಾಸನೆಯೂ ಬೇಕೆಂದರೆ ಏಸಿಯಿದೆ. ಸೊಳ್ಳೆ ಬಂತೋ, ಆಲೌಟ್ ಹಚ್ಚಿ. ಸಂತೂರಿನಿಂದ ಸ್ನಾನ ಮಾಡಿದರೆ ನನ್ನ ಮಮ್ಮಿಯೂ ಹುಡುಗಿಯಾಗುತ್ತಾಳೆ. ಕೋಂಪ್ಲಾನ್ ಕುಡಿದರೆ ಮಾವಿನಕಾಯಿ ಕೈಗೇ ಸಿಗುತ್ತದೆ. ತಲೆಹೊಟ್ಟಾದರೆ ಹೆಡ್ಡೆಂಡ್ ಶೋಲ್ಡರ್ಸ್, ತಲೆನೋವಾದರೆ ಮೆಂಥಾಲ್ ಪ್ಲಸ್, ತಲೆಬಿಸಿಯಾದರೆ ನವರತ್ನ ತೈಲ, ತಲೆ ತಿರುಗಿದರೆ ತಂಪು ಪಾನೀಯ. ಏಶಿಯನ್ ಪೇಯಿಂಟ್ಸ್ ಬಳಿದರೆ ಇದ್ದ ಮನೆಯೇ ಹೊಸತಾಗುತ್ತದೆ, ಡೈರಿಮಿಲ್ಕ್ ತಿನ್ನಿಸಿದರೆ ಉದ್ವಿಗ್ನ ಹೆಂಡತಿ ಶಾಂತಳಾಗುತ್ತಾಳೆ, ವ್ಹಿಸ್ಪರ್ ಹಾಕಿಕೊಂಡ ಹೆಣ್ಣುಮಕ್ಕಳು ಕುಣಿದಾಡತೊಡಗುತ್ತಾರೆ, ಏನಾದ್ರೂ ಏಕ್ಸ್ ಸ್ಪ್ರೇ ಮಾಡ್ಕೊಂಡ್ರೋ- ಸೆಕ್ಸೀ ಹುಡ್ಗೀರೆಲ್ಲಾ ನಿಮ್ ಕಡೀಗೇ! ಆಕ್ವಾಗಾರ್ಡಿನ ನೀರು ಕುಡಿದರೆ, ಲೈಫ್‌ಬಾಯ್‌ನಿಂದ ಸ್ನಾನ ಮಾಡಿದರೆ, ಡೆಟ್ಟಾಲ್‌ನಿಂದ ಕೈ ತೊಳೆದರೆ, ಕೋಲ್ಗೇಟ್‌ನಿಂದ ಹಲ್ಲು ತಿಕ್ಕಿದರೆ, ಡಾಬರ್ ಛವನ್‌ಪ್ರಾಶ್ ತಿಂದರೆ -ನಿಮಗೆ ಯಾವ ಖಾಯಿಲೆಯೂ ಬರುವುದಿಲ್ಲ. ವಯಸ್ಸಾದ ಮೇಲೂ ಚಿಂತೆಯಿಲ್ಲ, ಪೆನ್ಷನ್ ಪ್ಲಾನುಗಳಿವೆ. ಸತ್ತರೆ ವಿಮೆಯಿದೆ, ದೂರದೂರಿನ ಮಗನಿಗೆ ಸುದ್ದಿ ಮುಟ್ಟಿಸಲು ಯಾವಾಗಲೂ ಸಿಗುವ ವೋಡಫೋನ್ ನೆಟ್ವರ್ಕ್ ಇದೆ, ಅವನು ಮನೆ ಮುಟ್ಟಲು ಸೂಪರ್‌ಫಾಸ್ಟ್ ಬೈಕು-ಕಾರುಗಳಿವೆ. ಇನ್ನೇನು ಬೇಕು ಬದುಕಿಗೆ?

“ಈ ಥರ ಎಲ್ಲಾದರ ಬಗ್ಗೇನೂ ವ್ಯಂಗ್ಯ ಮಾಡಬಹುದು” ಅಂದ ಗೆಳೆಯ. ಅದು ನಿಜ. ಆದರೆ ಇವುಗಳ ಬಗ್ಗೆ  ಕನಿಷ್ಟ ವ್ಯಂಗ್ಯವನ್ನಾದರೂ ಮಾಡದಿದ್ದರೆ ನಾನು ಈ ದಿಕ್ಕುತಪ್ಪಿರುವ ಜಗತ್ತಿನಲ್ಲಿ ಆಶಾವಾದಿಯಾಗಿ ಉಳಿಯುವುದಾದರೂ ಹೇಗೆ ಎನ್ನುವುದು ನನ್ನ ಪ್ರಶ್ನೆ. ಎಷ್ಟು ಉಗಿದರೂ ಒರೆಸಿಕೊಳ್ಳುವ, ಒಂದು ಗುಲಗುಂಜಿಯಷ್ಟೂ ಮರ್ಯಾದೆ ಇರುವವರ ಹಾಗೆ ಕಾಣದ ರಾಜಕಾರಣಿಗಳ ಹೊಲಸು, ಲಂಚಕೋರ ಸರ್ಕಾರಿ ಅಧಿಕಾರಿಗಳ ದರ್ಪ, ದಿನಸಿ-ಆಟೋ-ಬ್ಯಾಂಕು-ಹೋಟೆಲ್-ಮಠ-ಐಟಿ-ಮೀಡಿಯಾ-ಆಟ ಎಲ್ಲೆಡೆ ತೋರುವ ಮೋಸ, ಇವತ್ತು ಇಷ್ಟು ಚಂದ ಎದುರಿಗೆ ಮಾತಾಡಿದ ವ್ಯಕ್ತಿಯ ಬಗ್ಗೆ ನಾಳೆ ಬರುವ ಆರೋಪ .....ಇವನ್ನೆಲ್ಲ ಇದ್ದಿದ್ದನ್ನು ಇದ್ದ ಹಾಗೇ - ‘ಲೈಟ್’ ಆಗಿ ತೆಗೆದುಕೊಳ್ಳುವುದು ಹೇಗೆ? ಲೇವಡಿ ಸಹ ಮಾಡದಿದ್ದರೆ, ನಾಳೆ ಇವರುಗಳೊಂದಿಗೇ ವ್ಯವಹರಿಸುವುದಾದರೂ ಹೇಗೆ? ಒಂಥರಾ ಇಡೀ ಜಗತ್ತೇ ದುಡ್ಡಿನ ಹಿಂದೆ ಬಿದ್ದು ಓಡುತ್ತಿರುವಾಗ, ನನ್ನನ್ನು ಬಿಟ್ಟು ಉಳಿದೆಲ್ಲರೂ ಬುದ್ಧಿವಂತರಂತೆ - ವಾಸ್ತವವಾದಿಗಳಂತೆ ಕಾಣುತ್ತಿರುವಾಗ, ನಾನು ಮಾತ್ರ ಭಾವನೆ, ಪ್ರೀತಿ, ಕರುಣೆ, ನಿಷ್ಠೆ, ಪ್ರಾಮಾಣಿಕತೆ ಅಂತೆಲ್ಲ ಆದರ್ಶಗಳನ್ನು ಮೈಮೇಲೆ ಹೇರಿಕೊಂಡು ಹುಚ್ಚನಾಗಿದ್ದೇನೆಯೇ? ಅಥವಾ ಬೇರೊಬ್ಬನ ದೃಷ್ಟಿಯಲ್ಲಿ ನಾನೂ ಭ್ರಷ್ಟನೇ?

೨೦೧೦ರ ಇಡೀ ವರ್ಷದ ನ್ಯೂಸ್‌ಪೇಪರುಗಳನ್ನು ತಿರುವಿ ಹಾಕಿದರೆ, ಪ್ರತಿದಿನ ಒಂದಲ್ಲಾ ಒಂದು ಹಗರಣ - ಒಂದಲ್ಲಾ ಒಂದು ಕ್ಷೇತ್ರದಲ್ಲಿ ಇದ್ದೇ ಇತ್ತು. ಅದಿಲ್ಲದಿದ್ದರೆ ದುರಂತ. ಖುಶಿಯ ಸುದ್ದಿ ಓದಿದ್ದು ನೆನಪಿಗೇ ಇಲ್ಲದಷ್ಟು. ಅದೇನು ಮಾಧ್ಯಮಗಳೇ ಅವನ್ನು ನಮ್ಮ ಕಣ್ಣಿಗೆ ರಾಚುವಂತೆ ಕಟ್ಟಿಕೊಟ್ಟವೋ ಅಥವಾ ನಮಗೇ ಅವನ್ನು ಚಪ್ಪರಿಸಿಕೊಂಡು ಸವಿಯುವುದು ಅಭ್ಯಾಸವಾಗಿಹೋಯಿತೋ, ಅರಿಯೆ. ನಾಳೆ ಏನಾದರೂ ಸಂತಸದ ವಾರ್ತೆಯಿರಬಹುದು ಅಂತ ಕಾತರಿಸುವುದಕ್ಕೂ ಇವತ್ತು ಭರವಸೆಯೇ ಉಳಿದಿಲ್ಲವಾಗಿದೆ.

ಹೀಗಿದ್ದಾಗಲೂ ಹೊಸ ವರ್ಷ ಬಂದಿದೆ. ಹೊಸ ಕನಸು ಕಾಣಬೇಕಿದೆ. ಹೊಸ ಹಾಡು ಕೇಳಬೇಕಿದೆ. ಹೊಸ ಗಾಳಿಗೆ ಮೈಯೊಡ್ಡಬೇಕಿದೆ. ಹೊಸ ಸ್ಪರ್ಷಕ್ಕೆ ರೋಮಾಂಚಗೊಳ್ಳಬೇಕಿದೆ. ಬತ್ತಿದ ಪುಪ್ಪುಸಗಳಲಿ ಹೊಸ ಉಸಿರು ತುಂಬಬೇಕಿದೆ. ಮನೆಯ ಬಾಗಿಲಿಗೆ ತೋರಣ ಕಟ್ಟಬೇಕಿದೆ. ಅಂಗಳದಲ್ಲಿ ರಂಗೋಲಿ ಹಾಕಬೇಕಿದೆ. ದಾರಿ ಸಾರಿಸಿ ಎಲ್ಲ ಒಪ್ಪ ಮಾಡಬೇಕಿದೆ. ಹೊಸ ಬಟ್ಟೆಯುಟ್ಟು ಸಿಹಿಯಡುಗೆ ಮಾಡಿ ಹೊಸದೇನಕ್ಕೋ ಕಾಯಬೇಕಿದೆ.

ಇಸವಿ ಎರಡುಸಾವಿರದ ಹನ್ನೊಂದು ಎಲ್ಲರ ಮನಸಿಗೂ ಹಿತ ತರಲಿ. ಇಹವ ಮರೆಸುವ ನಶೆ ಕೊಡಲಿ. ಇನಿತು ಕಹಿಗೆ ಬೊಗಸೆ ಸಿಹಿಯಿರಲಿ. ಶುಭಾಶಯಗಳು.

Friday, January 01, 2010

ಕುಂಟಾಬಿಲ್ಲೆ ಪಟ

ಆ ಕ್ಯಾಲೆಂಡರನ್ನು ಮೊಳೆಯಿಂದ ಕಳಚಿ ಕೆಳಗಿಳಿಸಿ
ಸುರುಳಿ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ
ನಾಗಂದಿಗೆಯ ಮೇಲೆ ಬೀಸಾಡುವ ಮುನ್ನ
ಯಾಕೋ ಏನೋ ಅನ್ನಿಸಿ ಕೊಳವೆಯನ್ನು ಕಿವಿಗೆ ಹಿಡಿದರೆ
ನೂರಾರು ರಾಗಗಳ ಮಿಶ್ರ ಕಲರವ..

ಕುತೂಹಲ ಕೆರಳಿ ಸುರುಳಿಯನ್ನು ಬಿಚ್ಚಿ
ಒಂದೊಂದು ಪುಟದ ಒಂದೊಂದೆ ಮನೆಯ ದಿಟ್ಟಿಸಿದರೆ

ಕುಂಟಾಬಿಲ್ಲೆ ಆಟದಂತೆ ಈ ಮನೆಯಿಂದ ಮುಂದಿನ ಮನೆಗೆ
ಹಾರುತ್ತ ಹಾರುತ್ತ ನಡೆದ ನನ್ನ ಹೆಜ್ಜೆಯಚ್ಚು,
ಅದರಲ್ಲಿ ತುಂಬಿ ನಿಂತಿರುವ ಏನೇನೋ ಸದ್ದು:

ಬಿಡದೇ ನಕ್ಕ ದನಿ, ಸೆರೆಯುಬ್ಬಿ ಅತ್ತ ಬಿಕ್ಕು,
ಯಾರೋ ಬೈದ ಸದ್ದು, ನರಳಿದ ಮರ್ಮರ,
ಖುಶಿಯಲ್ಲಿ ಕಿರುಚಿದ ಪ್ರತಿಧ್ವನಿ, ಬಿಟ್ಟ ನಿಟ್ಟುಸಿರು..

ಬ್ಯಾಲೆನ್ಸ್ ಮಾಡುವುದರಲ್ಲೇ ದಿನ ಮುಗಿಯುತ್ತಿದ್ದ,
ದೆಸೆಯೇ ಗೊತ್ತಿಲ್ಲದೆ ಸುಮ್ಮನೆ ಮನೆಯಿಂದ ಮನೆಗೆ
ಹಾರುತ್ತ ನಡೆದಿದ್ದ ನನ್ನ ಒಂಟಿಹೆಜ್ಜೆ ಗುರುತುಗಳು
ತೀರ ಅಪೂರ್ಣ ಎನ್ನಿಸಿ, ಮತ್ತೊಮ್ಮೆ ಇದೇ ಮನೆಗಳಲ್ಲಿ
ನಡೆದು ಅಲ್ಲೇ ಉಳಿದ ಕನಸುಗಳ ನನಸಾಗಿಸಲೇ
ಅರ್ಧಕ್ಕೆ ಬಿಟ್ಟ ವ್ರತಗಳ ಪೂರ್ತಿ ಮಾಡಲೇ
ದಾಟಲಾಗದ ಮೈಲಿಗಲ್ಲುಗಳ ದಾಟಲೇ
ಪೂರೈಸದ ಕೆಲಸಗಳ ಕೈಂಕರ್ಯದಲ್ಲಿ ತೊಡಗಲೇ
ಎಂದು ಯೋಚಿಸುತ್ತಿದ್ದವನನ್ನು ನೋಡಿ

ಎರಡುಸಾವಿರದ ಹತ್ತರ ಕುಂಟಾಬಿಲ್ಲೆ ಪಟ
ಕೇಕೆ ಹಾಕಿ ನಕ್ಕು ಹೊಸ ಆಟಕ್ಕೆ ಕರೆಯಿತು.

[ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.]

Friday, October 16, 2009

ಗೊಂದಲದ ಮಬ್ಬು ತೊಡೆಯಲಿ ದೀಪಾವಳಿ

ರಾತ್ರಿ ಹೊತ್ತು ಈ ರಾಜಧಾನಿಯ ಗಗನಚುಂಬಿ ಕಟ್ಟಡವೊಂದರ ಟೆರೇಸಿನ ತುದಿಗೆ ಹೋಗಿ ಒಮ್ಮೆ ಗಟ್ಟಿ ಕಣ್ಮುಚ್ಚಿ ತೆರೆದರೆ, ಭೂಮ್ಯಾಕಾಶಗಳ ಕೂಡುರೇಖೆಯೇ ಕಾಣದಂತಹ ಎದುರಿನ ಸಾದ್ಯಂತ ಕಪ್ಪು ಅವಕಾಶವೆಂಬುದು ಕಾರ್ತೀಕ ಮಾಸದ ಲಕ್ಷದೀಪೋತ್ಸವದಂತೆ ಕಾಣಿಸುತ್ತದೆ. ಕೆಲವು ಪ್ರಶಾಂತ ಹಣತೆಗಳು, ಕೆಲವು ಮಿನುಗುತ್ತಿರುವ ಹಣತೆಗಳು, ಇನ್ನು ಕೆಲವು ಚಲಿಸುತ್ತಿರುವ ಹಣತೆಗಳು. ರಾತ್ರಿ ಆಗುತ್ತ ಆಗುತ್ತ ಹೋದಂತೆ ಒಂದೊಂದೇ ಹಣತೆಗಳು ಆರುತ್ತ ಆರುತ್ತ ಹೋಗುತ್ತವೆ. ಬೆಳಗಾಗುವಷ್ಟರಲ್ಲಿ ಅಷ್ಟೂ ಹಣತೆಗಳು ಆರಿ ಅಲ್ಲಿ ಬರೀ ಕಟ್ಟಡ ಸಮೂಹವೂ, ನೀಲಾಕಾಶವೂ, ಅಲ್ಲೇ ಎಲ್ಲೋ ಕಸರತ್ತು ಮಾಡಿ ಹಿಂದಿನಿಂದ ಹಣುಕುತ್ತಿರುವ ದಿನಕರನೂ ಕಾಣಿಸುತ್ತಾರೆ.

ನಿಧಾನಕ್ಕೆ ಕೆಳಗಿಳಿದು ಬಂದು, ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ ರಸ್ತೆಯ ಮೇಲೆ ಬಿಡುಬೀಸಾಗಿ ನಡೆದು, ಗೂಡಂಗಡಿಯೊಂದರಲ್ಲಿ ನಾಲ್ಕು ಕಾಸು ಕೊಟ್ಟು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಜತೆಗೇ ಪ್ಲಾಸ್ಟಿಕ್ ಕಪ್ಪಿನ ಚಹಾ. ಬದಿಯ ಕಟ್ಟೆಯಲ್ಲಿ ಕೂತು ಬಿಸಿ ಚಹಾ ಹೀರುತ್ತಾ ದಿನಪತ್ರಿಕೆ ಬಿಚ್ಚಿದರೆ, ಉತ್ತರ ಕರ್ನಾಟಕದ ಮಂದಿಗೆ ನೆರೆ ಪರಿಹಾರದ ಹಂಚಿಕೆಯ ಬಗ್ಗೆ ಶುರುವಾಗಿರುವ ವಿವಾದಗಳು, ಮುಖ್ಯಮಂತ್ರಿಗಳು ಈ ವರ್ಷ ಅಲ್ಲಿಯೇ ದೀಪಾವಳಿ ಆಚರಿಸುತ್ತಿರುವ ಸುದ್ದಿಯೂ, ಒಬಾಮಾಗೆ ಕೊಟ್ಟ ನೊಬೆಲ್ ಕುರಿತ ಜಿಜ್ಞಾಸೆಗಳೂ, ಇನ್ನೂ ಹಂದಿಜ್ವರ ಹುಬ್ಬುತ್ತಲೇ ಇದೆ ಎಂಬ ಕಳವಳದ ವಾರ್ತೆಯೂ, ದ್ರಾವಿಡ್‌ಗೆ ಈ ಸಲವೂ ಅವಕಾಶ ಸಿಗಲಿಲ್ಲ ಎಂಬ ನಿರಾಶಾದಾಯಕ ಸಾಲೂ, ಬೀಟಿ ಬದನೇಕಾಯಿಯೂ ಕಾಣಿಸುತ್ತದೆ. ಚಹಾ ಮುಗಿಯುವಷ್ಟರಲ್ಲಿ ಸುದ್ದಿಪರ್ಯಟನೆಯೂ ಮುಗಿದು, ವಾಚು ನೋಡಿದ್ದೇ ಆಫೀಸಿಗೆ ತಡವಾಯ್ತೆಂಬ ಜ್ಞಾನೋದಯ ಆಗಿ ದಡಬಡನೆ ಓಡಲು ಶುರುವಿಡುತ್ತೇನೆ.

ಮೊನ್ನೆ ಗೆಳತಿಯೊಬ್ಬಳಿಗೆ ಫೋನಿಸಿ "ಹಬ್ಬಕ್ಕೆ ಯಾವತ್ತು ಊರಿಗೆ ಹೊರಡ್ತಿದೀಯಾ? ಶುಕ್ರವಾರಾನಾ?" ಅಂತ ಕೇಳಿದೆ. ಅವಳದಕ್ಕೆ "ಇಲ್ಲ, ಶನಿವಾರ ನಮ್ಗೆ ಆಫೀಸ್ ಇದೆ" ಅಂದಳು. "ಅರೆ, ಗೌರ್ಮೆಂಟ್ ಹಾಲಿಡೇ ಅಲ್ವೇನೇ?" ಅಂತ ಕೇಳಿದೆ. "ನಾವು ಒಂದು ದಿನದ ಸಂಬಳವನ್ನ ರಿಲೀಫ್ ಫಂಡ್‌ಗೆ ಕೊಡ್ತಿದೀವಿ.. ಅದಕ್ಕೇ ಒಂದು ದಿನ ಎಕ್ಸ್‌ಟ್ರಾ ಕೆಲಸ ಮಾಡ್ತಿದೀವಿ" ಅಂದಳು. ನನಗೆ ಅವಳ ತರ್ಕ ಅರ್ಥವಾಗಲಿಲ್ಲ: "ಅಲ್ಲಾ ಮಾರಾಯ್ತಿ, ರಿಲೀಫ್ ಫಂಡ್‌ಗೆ ಕೊಡಿ ಯಾರು ಬೇಡ ಅಂದ್ರು. ಒಂದು ದಿನದ ಸಂಬಳ ಕಟ್ ಮಾಡ್ಕೊಳ್ಳಲಿಕ್ಕೆ ಹೇಳು ನಿಮ್ ಬಾಸ್‌ಗೆ! ಆದ್ರೆ ಕೆಲಸ ಯಾಕೆ ಜಾಸ್ತಿ ಮಾಡ್ಬೇಕು?" ಅಂತ ಪ್ರಶ್ನಿಸಿದೆ. "ಕೆಲಸ ಮಾಡಿದ್ರೇನೆ ನಮ್ ದೇಶ ಮುಂದೆ ಬರೋದು ಕಣೋ" ಅಂದಳು. ಈಗಂತೂ ನಂಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ನೆರೆ ಪರಿಹಾರಕ್ಕೂ, ಇವರು ರಜಾದಿನ ಕೆಲಸ ಮಾಡುವುದಕ್ಕೂ, ದೇಶ ಮುಂದುವರೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಯೋಚಿಸಲೂ ಆಗಲಿಲ್ಲ. "ಸರಿ ಬಿಡು" ಅಂತ ಫೋನಿಟ್ಟೆ.

ಈಗ ಕೆಲ ದಿನಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ನಾನು ಕೃಷಿಕಾರ್ಯ ಕೈಗೊಂಡಿದ್ದೇನೆ. ಸ್ಟ್ರಾಬೆರಿ, ಗೋಧಿ, ಸೋಯಾಬೀನು, ಕುಂಬಳಕಾಯಿ, ಭತ್ತ, ಇತ್ಯಾದಿ ಬೆಳೆಗಳು ಒಳ್ಳೆಯ ಫಸಲು ಬಂದು ಲಾಭವಾಗಿದೆ. ಸುಮಾರು ಗೆಳೆಯರು ಚೆರ್ರಿ, ಅಂಜೂರ, ನಿಂಬೆ, ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವೂ ಫಲ ನೀಡುತ್ತಿವೆ. ಜಮೀನಿನ ಮೂಲೆಯಲ್ಲೊಂದು ರೆಸ್ಟ್‌ಟೆಂಟ್ ಹಾಕಿಕೊಂಡಿದ್ದೇನೆ. ಸಧ್ಯದಲ್ಲೇ ಟ್ರಾಕ್ಟರ್ ಕೊಳ್ಳುವ ಆಲೋಚನೆಯಿದೆ. ಬೀಟಿ ಬದನೆಕಾಯಿಯ ಬೀಜ ಸಿಕ್ಕರೆ ಬಿತ್ತೋಣ ಅಂತ ಇತ್ತು, ಮಾರ್ಕೆಟ್ಟಿನಲ್ಲೆಲ್ಲೂ ಕಾಣಿಸಲಿಲ್ಲ.

ಉತ್ತರ ಕರ್ನಾಟಕದ ನೆರೆ ನಿರಾಶ್ರಿತರ ಚಿತ್ರ ಕಣ್ಮುಂದಿದೆ. ಎಲ್ಲವನ್ನೂ ಎಂದರೆ ಎಲ್ಲವನ್ನೂ ಕಳೆದುಕೊಂಡಿರುವ ಆ ಜನಗಳು ಪಕ್ಕದಲ್ಲೇ ಇರುವಾಗ ನಾವು ಹೇಗೆ ಸಂಭ್ರಮದಿಂದ ಹಬ್ಬ ಆಚರಿಸುವುದು ಎಂಬ ಕೊರಗು ಮನದಲ್ಲಿದ್ದರೂ ಎಲ್ಲರೂ ಸಂಭ್ರಮದಿಂದಲೇ ದೀಪಾವಳಿಗೆ ತಯಾರಾಗುತ್ತಿದ್ದೇವೆ. ಸ್ಲೀಪರ್ ಕೋಚ್ ಸಿಗಲಿಲ್ಲವಲ್ಲ ಅಂತ ಕೈಕೈ ಹಿಸುಕಿಕೊಂಡಿದ್ದೇವೆ. ಡಿಸ್‌ಕೌಂಟ್ ಹಾಕಿರುವ ಅಂಗಡಿಗಳನ್ನು ಹೊಕ್ಕು ಬಟ್ಟೆ ಖರೀದಿಸಿದ್ದೇವೆ. ಗರಿಗರಿ ಪಟಾಕಿಗಳು ಬಾಕ್ಸಿನಲ್ಲಿ ಬೆಚ್ಚಗೆ ಕೂತಿವೆ. ಅವಕ್ಕೆ ಸುರುಳಿ ಸುತ್ತಲ್ಪಟ್ಟಿರುವ ಕಾಗದದಲ್ಲಿ ಕಳೆದ ವರ್ಷ ಪಟಾಕಿ ದುರಂತದಲ್ಲಿ ಸತ್ತ ಕುಟುಂಬದ ವರದಿಯಿದೆ.

ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ, ಇಂದು ತೆಗೆದುಕೊಂಡ ತೀರ್ಮಾನಗಳು ನಾಳೆಯ ಹೊತ್ತಿಗೆ ಹಾಸ್ಯಾಸ್ಪದವೆನ್ನಿಸುವ, ಈಗ ತರ್ಕಿಸಿದ್ದ ರೀತಿ ಮರುದಿನದ ಹೊತ್ತಿಗೆ ನಮಗೇ ಸಣ್ಣತನವೆನ್ನಿಸುವ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿರುವ ನಾವು ಇದೆಂತಹ ದಾರದ ಮೇಲೆ ನಡೆಯುತ್ತಿದ್ದೇವೆ? ಇದೆಂತಹ ಅಂಧಃಕಾರ ಕವಿದಿದೆ ನಮ್ಮನ್ನು? ಎತ್ತ ಹೋಗುತ್ತಿದ್ದೇವೆ? ರಾತ್ರಿ ಹಣತೆಯಂತೆ ಕಂಡ ದೀಪಗಳು ಸುಳ್ಳು, ಇಂಟರ್ನೆಟ್ಟಿನಲ್ಲಿ ಬೆಳೆದ ಭತ್ತ ಹುಸಿ, ಸಿಡಿದ ಮರುಕ್ಷಣ ಇಲ್ಲವಾಗುವ ಪಟಾಕಿಯ ಸದ್ದಿನಂತಹ ಮಾಧ್ಯಮದ ವರದಿಗಳು ಕೇವಲ ಮರುಳು, ನೆರೆ ಸಂತ್ರಸ್ತರೆಡೆಗೆ ನನ್ನ ಹೃದಯ ಮಿಡಿದಿದ್ದೂ ಡಾಂಬಿಕ. ಆದರೂ, ಇಲ್ಲ, ನಾನು ಹಣತೆಗಳನ್ನು ಕಂಡದ್ದು, ಚೆರ್ರಿ ಮರದಲ್ಲಿ ಹಣ್ಣು ಬಿಟ್ಟಾಗ ಖುಶಿಗೊಂಡದ್ದು, ಓದುತ್ತಿರುವಷ್ಟಾದರೂ ಹೊತ್ತು ನಾನೂ ಪತ್ರಿಕೆಯಲ್ಲಿ ಮುಳುಗಿದ್ದದ್ದು, ನೆರೆ ಹಾನಿಯ ಚಿತ್ರಗಳನ್ನು ನೋಡಿದಾಗ ಕರುಳು ಚುರುಕ್ ಎಂದದ್ದು ಸತ್ಯವಲ್ಲವಾ? ಊಹುಂ, ತಿಳಿಯುತ್ತಿಲ್ಲ.

ದೀಪಾವಳಿಯ ಬೆಳಕು ಈ ನಮ್ಮ ಗೊಂದಲದ ಮನಸ್ಥಿತಿಯನ್ನು ಕೊಂಚ ಮಟ್ಟಿಗಾದರೂ ತಿಳಿಗೊಳಿಸುತ್ತದೆ, ಮಬ್ಬಿನಲ್ಲೊಂದು ಪುಟ್ಟ ಬೆಳಕು ಮೂಡಿಸುತ್ತದೆ ಅಂತ ಹಾರೈಸೋಣ. ಶುಭಾಶಯಗಳು.

Wednesday, August 19, 2009

ಬಾರಯ್ಯ ಲಂಬೋದರ

ಬಿದ್ದ ಮೊದಲ ಮಳೆಗೇ ಚಿಗಿತು ಬೆಳೆದು ಚಪ್ಪರವನ್ನೆಲ್ಲ ಹರಡಿ ಹೂವರಳಿಸಿಕೊಂಡು ಪರಾಗಸ್ಪರ್ಶಕ್ಕೆ ಚಿಟ್ಟೆ ಬರುವದನ್ನೇ ಕಾಯುತ್ತಿರುವ ಅವರೆಯ ಬಳ್ಳಿಯ ಅಸಹನೆಯ ಕ್ಷಣ ಇದು. ರಿಸೆಷನ್ನಿನ ಪರಿಣಾಮದಿಂದಾಗಿ ಊರಿಂದ ಬಂದು ಮೂರು ತಿಂಗಳಾದರೂ ಕೆಲಸವೊಂದು ಸಿಗದೇ ಕಂಗಾಲಾಗಿರುವಾಗ, ಮನೆಯಿಂದ ಫೋನಿಸಿದ ಅಪ್ಪ 'ಸಾಕು, ಹಬ್ಬಕ್ಕೆ ಬರಕ್ಕರೆ ಬಟ್ಟೆ ಎಲ್ಲಾ ವಾಪಾಸ್ ತಗಂಡ್ ಬಂದ್ಬಿಡು. ಯಾಕೋ ಗ್ರಹಬಲ ಇದ್ದಂಗಿಲ್ಲೆ ಈಗ. ಇನ್ನೊಂದು ಆರು ತಿಂಗ್ಳು ಬಿಟ್ಟು ಮತ್ತೆ ಟ್ರೈ ಮಾಡ್ಲಕ್ಕಡ' ಎಂದದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತರುಣನ ಕಣ್ಣೀರಿನ ಹತಾಶ ಕ್ಷಣ ಇದು. ಹೇಳದೇ ಕೇಳದೇ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಾದ ಹುಚ್ಚುಮಳೆಗೆ ತೇಲಿಸಿಕೊಂಡು ಹೋದ ತಗ್ಗು ಪ್ರದೇಶದಲ್ಲಿನ ಜೋಪಡಿಯ ಕುಟುಂಬದ ಮಕ್ಕಳ ನಿರ್ಭಾವುಕ ಕಣ್ಣುಗಳಲ್ಲಿ ನಿಂತಿರುವ ಕತ್ತಲೆಯ ಕ್ಷಣ ಇದು. ಮೊದಲು ಸಾಧಾರಣ ನೆಗಡಿ, ಕೆಮ್ಮು ಅಂತ ಅಲಕ್ಷ್ಯ ಮಾಡಿ ಆಮೇಲೆ ಜ್ವರ ಬಂದಾಗ ಮಾತ್ರೆ ನುಂಗಿಸಿ ಆಗಲೂ ವಾಸಿಯಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 'ಸಧ್ಯಕ್ಕೆ ಫೀವರ್ ಕೇಸಸ್ ತಗೊಳ್ತಿಲ್ಲ ನಾವು' ಎಂದು ಮುಖವಾಡ ಧರಿಸಿದ ನರ್ಸು ಕೈಚೆಲ್ಲಿದಾಗ ಒಮ್ಮೆ ಗಂಡನನ್ನೂ ಮತ್ತೊಮ್ಮೆ ತನ್ನ ಮಾಂಗಲ್ಯವನ್ನೂ ನೋಡಿಕೊಂಡು ಬೆಚ್ಚಿದ ಗೃಹಿಣಿಯ ಕ್ಷಣ ಇದೂ,

-ಭಾದೃಪದ ಬಂದಿದೆ! ದೇವಲೋಕದಲ್ಲೂ ಆತಂಕದ, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಭುವಿಯೆಡೆಗೆ ಹೊರಟು ನಿಂತಿರುವ ಗೌರಿ-ಗಣೇಶರನ್ನು ಶಿವ ತಡೆದು ನಿಲ್ಲಿಸಿದ್ದಾನೆ: "ನಿಲ್ಲಿ, ಭೂಲೋಕಕ್ಕೆ ಮಾತ್ರ ಹೋಗಬೇಡಿ. ಅಲ್ಲಿ ಎಚ್ವನ್ ಎನ್ವನ್ ಇದೆ! ನಿಮಗೂ ಬಂದೀತು. ತೀರಾ ಹೋಗಲೇಬೇಕೆಂದಿದ್ದರೆ ಮುಖವಾಡ ಧರಿಸಿ ಹೋಗಿ. ಅದಕ್ಕೆ ಒಂದೇ ತೊಟ್ಟು ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ಇಲ್ಲದಿದ್ದರೆ ವಾಪಸು ಬರುವಾಗ ಸೋಂಕು ನಿಮ್ಮೊಂದಿಗೇ ದೇವಲೋಕಕ್ಕೂ ಬಂದೀತು!" ತಂದೆ ಎಚ್ಚರಿಸಿದರೂ ವಿನಾಯಕನಿಗೆ ಯೋಚನೆ: ವಿಘ್ನವಿನಾಶಕನಾದ ನಾನೇ ಹೆದರಿ ಕುಳಿತರೆ ಇನ್ನು ಭೂಲೋಕದಲ್ಲಿಹ ಸಾಮಾನ್ಯ ಜನರ ಪಾಡೇನು? ಏನಾದರಾಗಲಿ, ನಾನು ಹೋಗಿಯೇ ತೀರುತ್ತೇನೆ. ಅಲ್ಲದೇ ಮೋದಕ, ಚಕ್ಕುಲಿ ತಿನ್ನದೇ ವರ್ಷವಾಯಿತು. ಭಕ್ತರು ಮಾಡಿಟ್ಟುಕೊಂಡದ್ದು ವೇಸ್ಟಾಗಿ ಡಸ್ಟ್‌ಬಿನ್ನು ಸೇರುವುದು ತರವಲ್ಲ. ಆದರೂ ಈ ಎಚ್1ಎನ್1 ಬಗ್ಗೆ ಗೂಗಲ್ಲಿನಲ್ಲಿ ಹುಡುಕಿ ತಿಳಿದುಕೊಂಡೇ ಹೋಗೋಣವೆಂದು ಕಂಪ್ಯೂಟರ್ ಮುಂದೆ ಕುಳಿತರೆ, ರಾಕ್ಷಸ ಲೋಕದವರು ಗಣೇಶನ ಸಿಸ್ಟಮ್ಮನ್ನು ಹ್ಯಾಕ್ ಮಾಡಿಬಿಟ್ಟಿದ್ದಾರೆ! ಇದೊಳ್ಳೆ ಫಜೀತಿಗೆ ಬಂತಲ್ಲಪ್ಪಾಂತ ಗಣೇಶ ಛಕ್ಕನೆ ತನ್ನ ಐಫೋನ್ ತೆಗೆದು ಅಶ್ವಿನೀದೇವತೆಗಳಿಗೆ ಫೋನಿಸಿ ಬೇಗನೆ ಬಂದು ಸಿಸ್ಟಮ್ ಸರಿ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದಾನೆ.

ಎಲ್ಲ ಸರಿಯಾಗಿ, ಈ ಹಂದಿಜ್ವರವೆಂಬುದು ಒಂದು ಮಾರಣಾಂತಿಕ ಕಾಯಿಲೆಯೆಂಬುದು ಪಕ್ಕಾ ಆಗಿ, ಗಣೇಶ ಮಾಸ್ಕ್ ಧರಿಸಿ ಇಲಿಯನ್ನೇರಿ ಭುವಿಯತ್ತ ಹೊರಟಿದ್ದಾನೆ. ಯಾವುದೋ ಹಳ್ಳಿಯ ಗದ್ದೆಯ ಬದಿಯಲ್ಲಿ ಬಿದ್ದುಕೊಂಡಿದ್ದ ಜೇಡಿಮಣ್ಣು, ಕಲಾವಿದನ ಸ್ಪರ್ಶದಿಂದ ಒಂದು ರೂಪ ಪಡೆದು ಬಣ್ಣ ಬಳಿಸಿಕೊಂಡು ಶಹರಕ್ಕೆ ಬಂದು ಬೀದಿಬದಿಯಲ್ಲಿ ನೀಟಾಗಿ ಸಾಲಿನಲ್ಲಿ ಕುಳಿತು, ಬಿಕರಿಯಾಗಿ ಯಾರದೋ ಮನೆಗೆ ಹೋಗಿ ದೇವರಾಗಿಬಿಡುವ ಪವಿತ್ರ ಕ್ಷಣವನ್ನು ಕಲ್ಪಿಸಿಕೊಳ್ಳುತ್ತಾ ರೋಮಾಂಚಿತವಾಗಿದೆ. ಬೇಳೆಯ ಬೆಲೆ ನೂರು, ಅಕ್ಕಿಯ ಬೆಲೆ ನಲವತ್ತು, ಸಕ್ಕರೆಯ ಬೆಲೆ ಮೂವತ್ತೈದು ಅಂತೆಲ್ಲ ಏರಿದ್ದರೂ ಗ್ರಾಹಕ ಬೆವರುತ್ತಾ ತನ್ನ ಕೈಚೀಲದಲ್ಲಿ ಪುಟ್ಟ ಪುಟ್ಟ ಪೊಟ್ಟಣಗಳಲ್ಲಿ ಎಲ್ಲವನ್ನೂ ಹೊತ್ತು ಮನೆಯ ಕಡೆ ಹೊರಟಿದ್ದಾನೆ. ಕಾಗದಗಳಿಂದ ತನ್ನನ್ನು ಸುತ್ತಿ ಸುತ್ತಿ ಸುತ್ತಿಸಿಕೊಂಡು ಕೂತಿರುವ ಪಟಾಕಿಯ ಮದ್ದು, ಕಿಡಿಯೊಂದು ತಾಕಿದರೆ ಸಾಕು ಸಿಡಿದು ಹೊರಬಂದು ಮುಕ್ತವಾಗಲಿಕ್ಕೆ ಕಾಯುತ್ತಿದೆ. ತಿಂಗಳಿಂದ ಜನರ ಹೊಸಬಟ್ಟೆಗಳನ್ನು ಹೊಲಿಯುವುದರಲ್ಲೇ ಗರ್ಕನಾಗಿರುವ ದರ್ಜಿಗೆ ತನ್ನ ಹೊಲಿಗೆ ಬಿಟ್ಟಿರುವ ಹಳೇ ಪಜಾಮವನ್ನು ಸರಿ ಮಾಡಿಕೊಳ್ಳುವುದಕ್ಕೂ ಬಿಡುವಿಲ್ಲ. ಆರ್ಕೆಸ್ಟ್ರಾಗಳಲ್ಲಿ ಕಿರುಚಲು ಬೃಹತ್ ಧ್ವನಿವರ್ದಕಗಳು ಗಂಟಲು ಸರಿ ಮಾಡಿಕೊಳ್ಳುತ್ತಿವೆ. ಅಕ್ಕಿಹಿಟ್ಟು ನಾದಲ್ಪಟ್ಟು ಮುಟ್ಟಿನಿಂದ ಅಷ್ಟಕೋನ ಹೊಂದಿ ಹೊರಬಂದು ಚಕ್ರಾಕಾರದಲ್ಲಿ ಸುತ್ತಲ್ಪಟ್ಟು ಕುದಿವ ಎಣ್ಣೆಯಲಿ ಕರಿದು ಗರಿಗರಿಯಾಗಿ ಚಕ್ಕುಲಿಯಾಗಿ ಹೊರಹೊಮ್ಮಿ ತಟ್ಟೆಯಲಿ ಜೋಡಿಸಿ ನೈವೇದ್ಯಗಲೆಂದು ಎದುರು ನೋಡುತ್ತಿದೆ. ಬಣ್ಣದ ಕಾಗದಗಳಿಗೆ ಮಂಟಪದ ಕಂಬವನಪ್ಪುವ ಕನಸು, ಗಿಡದಲರಳಿರುವ ಹೂವು-ನೆಲದಿ ಹಬ್ಬಿರುವ ದೂರ್ವೆಗಳಿಗೆ ಬಾಡುವ ಮುನ್ನ ಕರಿವದನನ ಚರಣದಲ್ಲಿರುವ ತವಕ, ಕರ್ಪೂರಕ್ಕೆ ಮಂಗಳಾರತಿ ತಟ್ಟೆಯ ಪ್ರದಕ್ಷಿಣೆಯಲ್ಲೇ ಕರಗಿಹೋಗುವ ಕಾತರ. ಹೇಗೆ ಉಳಿದಾನು ಬಾರದೇ ವಿಘ್ನೇಶ್ವರ?

ಬಾರಿನ ಹುಡುಗನಿಗೆ ವಾರ ರಜೆ ಸಿಕ್ಕಿದೆ. ಊರಿಗೆ ಹೋಗುವ ಮುನ್ನ ಅಪ್ಪನಿಗೊಂದು ಪಂಚೆ, ಅಮ್ಮನಿಗೆ ಸೀರೆ, ತಂಗಿಗೆ ಮಿಡಿ ಕೊಳ್ಳಬೇಕಿದೆ. ಯಾವ ಅಂಗಡಿ ನೋಡಿದರೂ ಡಿಸ್ಕೌಂಟು ಹಾಕಿದ್ದಾರೆ. ಗಾಜಿನ ಬಾಗಿಲನ್ನು ತಳ್ಳಿಕೊಂಡು ಒಳಗೆ ಹೋದರೆ ಒಟ್ಟೊಟ್ಟಿಗೇ ಮುತ್ತಿಕೊಳ್ಳುವ ಸೇಲ್ಸ್‌ಬಾಯ್ಸ್ 'ಯೆಸ್, ಏನ್ ಬೇಕು ಸರ್?' ಅಂತ ಕೇಳಿದ್ದಾರೆ. ಬೆವರಲೂ ಬಿಡದ ಏಸಿ, ಕಣ್ತಪ್ಪಿಸಲೂ ಬಿಡದ ಕನ್ನಡಿ, ನೆಪಗಳಿಗೂ ಅವಕಾಶ ಕೊಡದಂತೆ ಕಾಡುತ್ತಿರುವ ಸೇಲ್ಸ್‌ಬಾಯ್ಸ್, ಎಷ್ಟೇ ಡಿಸ್ಕೌಂಟಿದ್ದರೂ ಕೊಳ್ಳಲಾಗದಷ್ಟು ಬೆಲೆ ಕಂಡು ಹುಡುಗ ಕಕ್ಕಾಬಿಕ್ಕಿಯಾಗಿದ್ದಾನೆ. ಕೂಡಿಸಿದ ಹಣವೆಲ್ಲ ಹಬ್ಬವೊಂದಕ್ಕೇ ಖಾಲಿಯಾಗುತ್ತಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ. ವಿಘ್ನೇಶ್ವರ ಈಗ ಕಣ್ಣು-ಕಿವಿಗಳಿಗೂ ಮಾಸ್ಕ್ ಏರಿಸಿಕೊಂಡಿದ್ದಾನೆ.

ಅಡಾಪ್ಟರಿಗೆ ಕನೆಕ್ಟಾಗಿರುವ ಯಾರದೋ ಮೊಬೈಲು ಸದ್ದಿಲ್ಲದೇ ಛಾರ್ಜ್ ಆಗುತ್ತಿದೆ. ಯಾರೋ ಹಾಡಿರುವ ಸಿಡಿಗಳು ಡ್ರೈವಿನಲ್ಲಿ ನಿಶ್ಯಬ್ದ ರಿಪ್ ಆಗುತ್ತಿವೆ. ಸಕ್ಕರೆಪಾಕ ಕುಡಿದು ಕುಡಿದು ಜಾಮೂನು ಗರ್ಲ್‌ಫ್ರೆಂಡಿಗಿಂತ ಸಿಹಿಯಾಗುತ್ತಿದೆ. ಕವಿಯ ಲೇಖನಿಯೊಡಲ ನೀಲಿ ಇಂಕು ಬಿಳೀ ಕಾಗದದ ಮೇಲೆ ಅಚ್ಚಾಗುತ್ತ ಹೋದಹಾಗೇ ಸುಂದರ ಕವಿತೆಯೊಂದು ಪಡಿಮೂಡಿದೆ. ಕಾಡಿನ ಕತ್ತಲಲ್ಲಿ ವ್ಯರ್ಥವಾಗುತ್ತಿರುವ ಮಿಣುಕುಹುಳಗಳ ಬೆಳಕು ನಿದ್ದೆಹೋದ ಮಗುವಿನ ಮುಗುಳ್ನಗೆಯಾಗಿ ಹೊಮ್ಮಿ ತೊಟ್ಟಿಲೆಲ್ಲ ತುಂಬಿಕೊಂಡಿದೆ. ಹುಡುಗಿಯ ಕನಸಿನಲ್ಲಿ ಬಂದ ಹುಡುಗ ಕೈಹಿಡಿದು ಲಾಲ್‌ಭಾಗಿನ ಕ್ಯಾಮೆರಾಗಳಿಂದಲೂ ತಪ್ಪಿಸಿ ಎಲ್ಲಿಗೋ ಕರೆದೊಯ್ಯುತ್ತಿದ್ದಾನೆ. ಕಲಾಸಿಪಾಳ್ಯದ ಬೀದಿನಾಯಿಗೆ ಯಾರೋ ಸುಳಿದಂತಾಗಿ ಎಚ್ಚರಾಗಿ ಅತ್ತಿತ್ತ ನೋಡುತ್ತಿದೆ. ವಿಘ್ನೇಶ್ವರನನ್ನು ಹೊತ್ತ ಇಲಿಗೆ ಓಡಿ ಓಡಿ ಸುಸ್ತಾಗಿದೆ. "ಇನ್ನೇನು ಸ್ವಲ್ಪ ದೂರ.. ಬಂದೇಬಿಡ್ತು ಭೂಮಿ" ಅಂತ ಆತ ಸಮಾಧಾನ ಮಾಡುತ್ತಿದ್ದಾನೆ.

ಹಬ್ಬದ ಸಂಭ್ರಮ ಎಲ್ಲ ಜೀವಿಗಳಿಗೂ ಹಬ್ಬಲಿ. ಬಂದ ವಿಘ್ನೇಶ್ವರ ಭವದ ಭೀತಿಗಳನ್ನೆಲ್ಲ ಕಳೆಯಲಿ. ಬದುಕುಗಳಿಗೆ ಸಂತಸ ಬೆರೆಯಲಿ.

ಶುಭಾಶಯಗಳು.

Thursday, March 26, 2009

ಹಾರಯಿಕೆ

ಫಾಲ್ಗುಣದ ಕೊನೆ ಸಂಜೆ, ಹೊತ್ತು ಮುಳುಗುವ ಸಮಯ,
ರವಿ ಕಂಡು ಕುಂಕುಮಕೆ ಹೊಟ್ಟೆಕಿಚ್ಚು;
ತನ್ನ ಕೊಕ್ಕಿನ ಕೆಂಪೆ ಹೆಚ್ಚೆಂಬ ಭ್ರಮೆ ಕಳೆದು,
ಗೂಡ ದಾರಿಯಲಿರ್ದ ಗಿಳಿಮೊಗವು ಪೆಚ್ಚು ||

ಇರುಳು ಇಳಿಯಲೆಬೇಕು, ಹಗಲು ಅಳಿಯಲೆಬೇಕು,
ಇಲ್ಲದಿರೆ ಇಳೆಗಿಲ್ಲ ನಾಳೆಯಾ ನಲಿವು;
ಮುಗಿದು ಚಂದ್ರನ ಪಾಳಿ, ತಾರೆ ತೆರೆಮರೆ ಸರಿದು
ಅರಳಿದರೆ ಅರುಣಪ್ರಭೆ ಮಧುಮಾಸವು ||

ಚೈತ್ರವೆಂದರೆ ಹಸಿರು, ನಭದಲ್ಲಿ ಮೇಘಗಳು,
ಝರಿನೀರು ಜರಿದು ಧರೆ ಧುಮುಕುವಾ ಸದ್ದು;
ಎಲ್ಲೊ ತಪ್ಪಲಿನಲ್ಲಿ ನಾಟ್ಯವಾಡಲು ನವಿಲು,
ಸೆಟೆದು ನೂಪುರ ಸೆರಿಗೆ ಮೈಕೊಡವಿ ಸಜ್ಜು ||

ಸಿರಿಸೂರೆಯಾಗಿರುವ ಮಾಮರದ ಎಲೆಮರೆಯೇ
ಪರಪುಟ್ಟ ಹಕ್ಕಿಗೆ ಸರಿಯಾದ ಗೊತ್ತು;
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||

ಋತುರಾಜನಾರ್ಭಟದಿ ಕಳೆದು ಕಹಿಯೆಲ್ಲ
ಹಿತಭಾವ ಹೃದಯದಲಿ ನೆಲೆಯೂರಲಿ;
ಜೀವಜೀವಪ್ರೀತಿ ಎಂದೂ ಮುಗಿಯದೆ ಇರಲಿ
ವರುಷವಿಡೀ 'ವಿರೋಧಿ' ಬರಿ ಹೆಸರಿಗಿರಲಿ ||

Thursday, January 01, 2009

ಕೀನ್ಯಾದ ಕಾಡಲ್ಲಿ ಹೊಸ ವರ್ಷ ಬಂದಂತೆ

ಅಗೋ ಅಲ್ಲಿ ಮತ್ತೆ ಬಂದು ನಿಂತಿದೆ ಹೊಸ ವರ್ಷ.. ನಾನೂ ನೋಡುತ್ತಿದ್ದೇನೆ ಇಪ್ಪತ್ಮೂರು ವರ್ಷಗಳಿಂದ, ಸ್ವಲ್ಪವೂ ನಾಚಿಕೆಯಿಲ್ಲ ಈ ಹೊಸ ವರ್ಷಕ್ಕೆ, ಪ್ರತೀ ವರ್ಷ ಬರುತ್ತದೆ.. ನನಗಂತೂ ಇದನ್ನು ಸ್ವಾಗತಿಸೀ ಸ್ವಾಗತಿಸಿ, ಇದು ಬಂತು ಅಂತ ಆಪ್ತರಿಗೆಲ್ಲಾ ಶುಭಾಶಯ ಕೋರಿ, ಇದೇ ಸಂದರ್ಭ ಅಂತ ಗ್ರೀಟಿಂಗು-ಪ್ರೀಟಿಂಗು ಪ್ರಿಪೇರು ಮಾಡಿ, ಬರೆದು-ಬಿಡಿಸಿ ಎಲ್ಲರಿಗೂ ಕಳಿಸಿ, ಅವರಿಂದಲೂ ತರಹೇವಾರಿ ಶುಭಾಶಯಗಳು ವಾಪಸು ಬಂದು, ಅವುಗಳ ವೈವಿಧ್ಯತೆಗೇ ಮಾರುಹೋಗಿ ಮೆಚ್ಚಿಕೊಂಡು ಸಂಭ್ರಮಿಸಿ ಸಂಭ್ರಮಿಸಿ.... ಥೂ, ಬೇಸರ ಬಂದುಬಿಟ್ಟಿದೆ. ಸರೀನಪ್ಪ, ಒಂದ್ ವರ್ಷ ಬಂತು ಆಯ್ತು ಹೋಯ್ತು ಅಂತ ಇಲ್ವಾ ಹಾಗಾದ್ರೆ? ಬಹುಶಃ ಈ ಹೊಸ ವರ್ಷಕ್ಕೆ ಒಂದು ತರಹದ ಹುಂಬ ಜಂಬ: ತಾನು ಬರ್ತಿದೀನಿ ಅಂದಕೂಡಲೇ ಈ ಜನಗಳೆಲ್ಲಾ ಖುಶಿಯಿಂದ ಸ್ವಾಗತಿಸಲಿಕ್ಕೆ ತಯಾರಾಗ್ತಾರೆ ಅಂತ.. ಅದಕ್ಕೇ, ನಾನು ಈ ವರ್ಷ ಏನೇನೂ ಸೆಲೆಬ್ರೇಟ್ ಮಾಡಬಾರ್ದು, ಬಂದ ಹೊಸ ವರ್ಷಕ್ಕೆ ಸ್ವಲ್ಪಾನೂ ಗೌರವ ತೋರಿಸದೇ ಅವಮಾನ ಮಾಡ್ಬೇಕು ಅಂತ ತೀರ್ಮಾನಿಸಿದೀನಿ!

ಆದರೆ ಹಾಗೆ ಸುಮ್ಮನೆ ಕುಳಿತಿರಲು ಆಗುತ್ತಾ? ಕನ್ವರ್ಷನ್ನು ಟೆರರಿಸಮ್ಮು ರಿಸಿಷನ್ನು ರೀ‌ಎಲೆಕ್ಷನ್ನು ವೋಟಿಂಗು ಕಾಸ್ಟ್ ಕಟಿಂಗು ಅಯ್ಯೋ ಬಿಟ್‌ಹಾಕಿ ಸಾರ್, ದಿನಾ ಇದ್ದದ್ದೇ ರಗಳೆ, ಹೊಸ ವರ್ಷ ಬಂದಿದೆ, ಪಾರ್ಟಿ ಮಾಡೋಣ ಬನ್ನಿ, ಎಂಜಾಯ್ ಮಾಡಿ, ಅದೇ ಲೈಫು -ಕೈ ಹಿಡಿದು ಎಳೆಯುತ್ತಿದ್ದಾರೆ ಗೆಳೆಯರು! ರೆಸಾರ್ಟುಗಳೆಲ್ಲಾ ಆಲ್ರೆಡೀ ಬುಕ್ಕುಡು, ಎಂಟ್ರಿ ಫಾರ್ ಕಪಲ್ಸ್ ಓನ್ಲೀ, ಇಡೀ ಫ್ಯಾಮಿಲಿನೇ ಹೋದ್ರೆ ಡಿಸ್ಕೌಂಟು, ಓನ್ಲೀ ಟೂ ಥೌಸಂಡ್ ಪರ್ ಹೆಡ್ಡು (ಫ್ರೀ ಬಿಯರ್ರು; ಫುಡ್ಡಿಗೆ ಎಕ್ಸ್‌ಟ್ರಾ ದುಡ್ಡು), ವರ್ಷಕ್ಕೊಂದೇ ಇಯರೆಂಡು, ರಾತ್ರಿಯಿಡೀ ಗ್ಲಾಸ್ ಎತ್ತು, ಬಾಟಮ್ಸ್ ಅಪ್ಪು, ಎಂಜಿ ರಸ್ತೆಗೆ ಹೋದರೆ ಡೈರೆಕ್ಟಾಗಿ ಯಾರನ್ನಾದ್ರೂ ಅಪ್ಪು, ಹೇಳೋರಿಲ್ಲಾ ಕೇಳೋರಿಲ್ಲ, ಮುಂಜಾನೆ ಹೊತ್ತಲ್ಲಿ-ಕಂಪ್ಲೀಟ್ ಮತ್ತಲ್ಲಿ ಡ್ರೈವ್ ಮಾಡ್ಕೊಂಡ್ ಹೊರಡು, ಯಾರಿಗಾದ್ರೂ ಗುದ್ದು, ನೋ ಪ್ರಾಬ್ಲಮ್ಮು, ಅವ್ರೂ ನಶೇನಲ್ಲೇ ಇರ್ತಾರೆ, ವಿಷ್ ಮಾಡು, ಕೈ ಕುಲುಕು, ಮುಂದೆ ಹೋಗ್ತಿರು. ಹೊಸ ವರ್ಷ, ನಮ್ದೇಯಾ ಅಂತ ತಿಳ್ಕೋ, ಮಸ್ತ್ ಮಜಾ ಮಾಡು. ಈ ವರ್ಷ ಬಿಟ್ಕೊಂಡ್ರೆ ಮತ್ತೆ ನೆಕ್‌ಸ್ಟಿಯರ್ರೇ ಬರೋದು, ಸೋ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡ. ಹೊಸಬಟ್ಟೆ ಕೇಕು ಸ್ವೀಟು ಗಿಫ್ಟು ವೋಡ್ಕಾ ವ್ಹಿಸ್ಕಿ ಪಾರ್ಟಿ ಬೇಕಾಬಿಟ್ಟಿ ಕ್ರ್ಯಾಕರ್ರು ಬ್ಯಾನರ್ರು ಕ್ಯಾಲೆಂಡರು ಹ್ಯಾಪಿನಿವ್ವಿಯರ್ರು ಒಟ್ನಲ್ಲಿ ಖುಶ್ ಖುಶ್ ಆಗಿ ಇರು. ಜಸ್ಟ್ ಸೇ ಚಿಯರ್ಸ್.

‘ಏನಾಗ್ತಾ ಇದೆ ನಮ್ಮ ಸಂಸ್ಕೃತಿ? ಎಲ್ಲಾ ಪಾಶ್ಚಿಮಾತ್ಯ ದೇಶದವರನ್ನ ಅನುಕರಿಸ್ತಾ ಇದೀವಿ. ಇದು ಒಳ್ಳೇದಲ್ಲ..’ ರುದ್ರಾಕ್ಷಿ ಸರ ಹಿಡಿದ ವಿಭೂತಿ ಹಣೆಪಟ್ಟಿಯ ವೃದ್ಧ ಗೊಣಗುತ್ತಾನೆ. ‘ಛೇ ಅಜ್ಜಾ ನಿಂಗೆ ಅವೆಲ್ಲಾ ಗೊತ್ತಾಗಲ್ಲ. ಹೊಸವರ್ಷ ಹ್ಯಾಸ್ ಕಮ್ಮು, ವಿ ಹ್ಯಾವ್ ಟು ವೆಲ್‌ಕಮ್ಮು! ನೀನು ಸುಮ್ನೇ ಕೂತಿರು. ಈಗ ಅಯಾಮ್ ಗೋಯಿಂಗ್ ಫಾರ್ ಶಾಪಿಂಗು ವಿಥ್ ಮೈ ಗರ್ಲ್‌ಫ್ರೆಂಡು’ ಮೊಮ್ಮಗ ತಿರುಗಿ ಹೇಳುತ್ತಾನೆ.

ನಾನು ಮೂಕವೀಕ್ಷಕನಂತೆ ಕುಳಿತಿದ್ದೇನೆ ಎಂದಿನಂತೆ. ಛಂದ ಪುಸ್ತಕ ಮೊನ್ನೆ ಹೊರತಂದ ‘ಲೇರಿಯೊಂಕ’ ಎಂಬ ಕಾದಂಬರಿ ಹಿಡಿದು. ಪ್ರಶಾಂತ್ ಬೀಚಿ ಅನುವಾದಿಸಿರುವ ಹೆನ್ರಿ ಆರ್. ಓಲೆ ಕುಲೆಟ್‌ರವರ ಕಾದಂಬರಿ ‘ಲೇರಿಯೊಂಕ’. ಕೀನ್ಯಾ ದೇಶದ ಮಾಸಾಯಿ ಜನಾಂಗದ ದನಗಾಹಿ ಹುಡುಗನೊಬ್ಬ ಅಕ್ಷರ ಕಲಿಯಲು ಹೊರಡುವ ಕತೆ ಅದು. ಅದೆಷ್ಟು ರೋಚಕವಾಗಿದೆ ಕತೆ ಎಂದರೆ, ಇನ್ನೂರಾ ಮೂವತ್ತೆರಡು ಪುಟಗಳ ಕಾದಂಬರಿಯನ್ನು ನಾಳೆಗಿಟ್ಟುಕೊಳ್ಳಲೂ ಆಗದೇ ನಾನು ಒಂದೇ ಸಿಟ್ಟಿಂಗಿಗೆ ಓದಿ ಮುಗಿಸಿಬಿಟ್ಟೆ.

ದಟ್ಟ ಆಫ್ರಿಕನ್ ಕಾಡುಗಳಲ್ಲಿ ಅದು ನಡೆಯುವಾಗ ನಮಗೆ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ನೆನಪಾಗುತ್ತದೆ. ಭರ್ಜಿ ಎಸೆದು ಪ್ರಾಣಿಗಳನ್ನು ಹೊಡೆದು ತಿನ್ನುವ ನಿರೂಪಣೆ ಓದುವಾಗ ಕೆದಂಬಾಡಿ ಜತ್ತಪ್ಪ ರೈರವರ ‘ಬೇಟೆಯ ನೆನಪುಗಳು’ ನೆನಪಾಗುತ್ತದೆ. ಲೇರಿಯೊಂಕ ಎಂಬ ಆ ಹುಡುಗ ತನ್ನ ಮುದ್ದು ಶೈಲಿಯಲ್ಲಿ ಕತೆ ಹೇಳುತ್ತಾ ಹೋಗುವಾಗ ಎಲ್ಲೋ ಒಂದು ಕಡೆ ‘ಆಲ್ಕೆಮಿಸ್ಟ್’ ನೆನಪಾಗುತ್ತದೆ. ನಿರಾಶ್ರಿತನಂತೆ ಕೇವಲ ಬದುಕುಳಿಯುವ ಛಲದಿಂದ ನಡೆಯುತ್ತ ನಡೆಯುತ್ತ ಹೋಗುವಾಗ ‘ಮಹಾಪಲಾಯನ’ ನೆನಪಾಗುತ್ತದೆ. ಕಲಿತು ಬಂದ ಹುಡುಗನನ್ನು ಊರು ಒಪ್ಪಲು ನಿರಾಕರಿಸುವ ದೃಶ್ಯ ಓದುವಾಗ ‘ಕಾನೂರು ಹೆಗ್ಗಡಿತಿ’ಯ ಹೂವಯ್ಯ ನೆನಪಾಗುತ್ತಾನೆ. ಹೀಗೆ ಓದಿನುದ್ದಕ್ಕೂ ಹಳೆಯ ಓದಿನ ಚಿತ್ರಗಳನ್ನು ಕೆದಕುತ್ತಾ ಹೋಗುವ ಇದು, ‘ಓದುವ ಸುಖ’ ಅಂತಾರಲ್ಲ, ಅದನ್ನನುಭವಿಸಲಿಕ್ಕೆ ಇರುವ ತಕ್ಕ ಉಪಕರ. ನಾವು ಆ ಹಳೆಯ ಕಾದಂಬರಿ-ಪುಸ್ತಕಗಳನ್ನೆಲ್ಲಾ ಎಷ್ಟು ಚೆನ್ನಾಗಿ ಓದಿಬಿಟ್ಟಿರುತ್ತೇವೆಂದರೆ, ಈ ಕಾದಂಬರಿ ಓದುವಾಗ ಆ ಕಾದಂಬರಿಯ ಚಿತ್ರಗಳೆಲ್ಲಾ ನಾವೇ ಈ ಹಿಂದೆ ಕಣ್ಣಾರೆ ಕಂಡವೇನೋ ಎಂಬಂತೆ ಬ್ಯಾಕ್‌ಗ್ರೌಂಡಿನಲ್ಲಿ ತೇಲುತ್ತಿರುತ್ತವೆ.

ಈ ಅನಕ್ಷರಸ್ಥ ಕಾಡುಜನಗಳ ದುನಿಯಾ, ಅವರ ಬದುಕುವ ರೀತಿ, ಮುಗ್ಧತೆ, ನಂಬಿಕೆಗಳು ಅದೆಷ್ಟು ಬೇರೆಯೇ ಆಗಿವೆ ಎಂದರೆ, ನಮ್ಮ ಮುಂದುವರೆದ ಜಗತ್ತಿನೊಂದಿಗೆ ಅವು ಯಾವ ರೀತಿಯಲ್ಲೂ ಬೆರೆಯಲಾರವು. ಆದರೆ ಅದನ್ನು ಬೆರೆಸಲಿಕ್ಕಿರುವ ‘ಕಲಬಶ’ದಂತೆ ಭಾಸವಾಗುತ್ತದೆ ಶಿಕ್ಷಣ. ತಮ್ಮ ಜನಾಂಗದ ಹುಡುಗನೊಬ್ಬ ಸುಶಿಕ್ಷಿತನಾಗಲು ಹೊರಟನೆಂದರೆ ಆತ ವಾಪಸು ಬರುವುದಿಲ್ಲ, ಬಂದರೂ ಆತ ನಮ್ಮವನಾಗಿ ಉಳಿಯುವುದಿಲ್ಲ ಎಂದು ನಂಬಿದ್ದ ಮಾಸಾಯಿಗಳು, ಕೊನೆಗೆ ‘ಒಂದು ಕೈಯಲ್ಲಿ ಭರ್ಜಿ, ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಿಯಲು ಸಾಧ್ಯ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅದಕ್ಕೆ ಆಗ ಆಫ್ರಿಕಾದಲ್ಲಿದ್ದ ಸ್ವಾತಂತ್ರ್ಯ ಚಳುವಳಿಯೂ ಇಂಬು ಕೊಡುತ್ತದೆ. ನಗರ, ಶಾಲೆ, ಓದು, ವಿದ್ಯೆ, ಅಕ್ಷರ -ಇತ್ಯಾದಿ ಶಬ್ದಗಳ ಪರಿಚಯವೇ ಇಲ್ಲದಿದ್ದ ಲೇರಿಯೊಂಕ ವಿದ್ಯಾವಂತನಾಗಿ ಮರಳಿ ಬರುವಾಗ -ಕಾದಂಬರಿ ಓದುತ್ತಿರುವ ನಮ್ಮ ಮೈಯೂ ಒಮ್ಮೆ ಜುಮ್ಮೆನ್ನುತ್ತದೆ; ಉತ್ಸಾಹದಿಂದ ನರನಾಡಿಗಳಲ್ಲಿ ರಕ್ತದ ಚಲನೆ ವೇಗಗೊಳ್ಳುತ್ತದೆ.

೧೯೫೦ರ ದಶಕದಲ್ಲಿನ ಕೀನ್ಯಾದ ಚಿತ್ರಣ ಈ ಕಾದಂಬರಿಯಲ್ಲಿದೆ. ಜಾಗತೀಕರಣ, ಕ್ರಿಸ್ತೀಕರಣಗಳಂತಹ ವಿಷಯಗಳೂ ಇಲ್ಲಿ ಇರುವುದರಿಂದ ವಿಮರ್ಶಕರಿಗೆ ಕೆಲಸ ಸಿಕ್ಕಿದೆ. ಪಾಶ್ಚಿಮಾತ್ಯ ಅಂತಲ್ಲ; ಹೊರ ಜಗತ್ತಿನ ಗಾಳಿಯ ಸೋಂಕೇ ಇಲ್ಲದೆ ಇದ್ದ ಕೀನ್ಯಾ (ಅಥವಾ ಆ ಮಾಸಾಯಿ ಪ್ರದೇಶ) ಈಗ ಹೇಗಿರಬಹುದು? ಕಾದಂಬರಿಯ ಕೊನೆಯಲ್ಲೇ ಅದು ಬದಲಾಗುವ ಮುನ್ಸೂಚನೆಗಳನ್ನು ಕೊಟ್ಟಿದ್ದಾರೆ ಲೇಖಕರು. ಇನ್ನು ಭಾರತ ಬದಲಾದ ಬಗ್ಗೆ ಅಥವಾ ಬದಲಾಗುತ್ತಿರುವ ಬಗ್ಗೆ ಮಾತನಾಡದಿರುವುದೇ ಲೇಸು! ಕಾದಂಬರಿಯಲ್ಲಿ ಬರುವ ಒಂದು ಸನ್ನಿವೇಶ ಹೀಗಿದೆ: ಹಾದಿ ಮಧ್ಯದಲ್ಲಿ ಶಾಲೆಗೆ ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಲೇರಿಯೊಂಕನಿಗೆ ಲಿವಿಂಗ್‌ಸ್ಟೋನ್ ಎಂಬ, ಅದಾಗಲೇ ಓದಿ-ಕಲಿತು ಬಂದಿದ್ದ ತಮ್ಮದೇ ಜನಾಂಗದವನ ಪರಿಚಯವಾಗುತ್ತದೆ. ಲಿವಿಂಗ್‌ಸ್ಟೋನ್ ಬಳಿ ಲೇರಿಯೊಂಕ ಕೇಳುತ್ತಾನೆ: "ಒಬ್ಬ ಓದಿ, ವಿದ್ಯಾವಂತನಾಗಿ ಬಂದು ಮತ್ತೆ ಈ ಅನಾಗರೀಕರ ಮಧ್ಯೆ ಅವರಂತೆ ಇರುವುದು ಹೇಗೆ ಸಾಧ್ಯ?" ಅದಕ್ಕೆ ಲಿವಿಂಗ್‌ಸ್ಟೋನ್ ಕಣ್ಣಲ್ಲಿ ನೀರು ತಂದುಕೊಂಡು ಹೇಳುತ್ತಾನೆ: "ದಯವಿಟ್ಟು ಇವರನ್ನು ಅನಾಗರೀಕರು ಎಂದು ಕರೆಯಬೇಡ. ನಿಜ ಹೇಳಬೇಕೆಂದರೆ, ಶಾಲೆಗೆ ಹೋಗಿರುವ ಬಹಳಷ್ಟು ಮಂದಿಗಿಂತ ಇವರು ನಾಗರೀಕರು. ನಮ್ಮಲ್ಲಿ ದ್ವಂದ್ವ ಇದೆ, ನಾವು ನಮ್ಮದೂ ಅಲ್ಲದ ವಿದೇಶಿಯರದೂ ಅಲ್ಲದ ಒಂದು ಕಳೆದುಹೋದ ಸಂಸ್ಕೃತಿಯಲ್ಲಿ ಇದ್ದೇವೆ ಅಷ್ಟೇ."

ಇಷ್ಟು ಇಷ್ಟವಾಗುವಂತೆ ಕಾದಂಬರಿಯನ್ನು ಕನ್ನಡಕ್ಕೆ ತಂದ ಪ್ರಶಾಂತ್ ಬೀಚಿಗೂ, ಪ್ರಕಟಿಸಿದ ವಸುಧೇಂದ್ರರಿಗೂ ಥ್ಯಾಂಕ್ಸ್ ಹೇಳಿ ಒಂದು ಮೇಯ್ಲ್ ಮಾಡಬೇಕು ಎಂದುಕೊಂಡು ಖುರ್ಚಿಯಿಂದ ಏಳುತ್ತೇನೆ. ಹೊರಗಾಗಲೇ ಹೊಸ ವರ್ಷ ಬಂದುಬಿಟ್ಟಿದೆ. ಸೈಲೆಂಟ್ ಮೋಡಿನಲ್ಲಿದ್ದ ಮೊಬೈಲಿನ ತುಂಬಾ ‘ಹ್ಯಾಪಿ ನ್ಯೂ ಇಯರ್’ ಎಸ್ಸೆಮ್ಮೆಸ್ಸುಗಳು, ಮಿಸ್ಡ್ ಕಾಲುಗಳು. ಮೇಯ್ಲ್ ಬಾಕ್ಸ್ ತೆರೆದರೆ ಅಲ್ಲೂ ಶುಭಾಶಯಗಳು. ಹಾಸಿಗೆ ಬಿಚ್ಚಿಟ್ಟುಕೊಂಡು, ಆದಷ್ಟೂ ಮಂದಿಗೆ ಈಗಲೇ ರಿಪ್ಲೇ ಮಾಡಿ, ‘ನಮ್ಮ ಹೊಸವರ್ಷ ಯುಗಾದಿಗೆ ಶುರು ಆಗೋದು’ ಎಂದ ಗೆಳತಿಗೂ ಶುಭಾಶಯ ಕಳುಹಿಸಿ, ಇದೊಂದು ಬ್ಲಾಗ್‌ಪೋಸ್ಟ್ ಬರೆದು ಮಲಗುತ್ತಿದ್ದೇನೆ. ಕೀನ್ಯಾದ ಕಾಡಲ್ಲೂ ಬಂದಿರಬಹುದು ಹೊಸ ವರ್ಷ.. ಇನ್ನೇನು ನನಗೆ ಬೀಳಲಿರುವ ಕನಸಲ್ಲಿ ಲೇರಿಯೊಂಕ ಓಡುತ್ತಿರುತ್ತಾನೆ.. ಹಸುರಿನ ಹಳುವಿನಲ್ಲಿ ನುಸುಳಿ ಹಾರಿ ಓಡೋಡಿ ತನ್ನ ಗೆಳೆಯ ಲಿವಿಂಗ್‌ಸ್ಟೋನ್‌ನನ್ನು ಕಂಡು ಬಿಗಿದಪ್ಪಿ ಹೇಳುತ್ತಿರುತ್ತಾನೆ ‘ಹ್ಯಾಪಿ ನ್ಯೂ ಇಯರ್’.. ಸುತ್ತಲ ಹುಡುಗರೆಲ್ಲ ಅದನ್ನೇ ಪುನರುಚ್ಚರಿಸುತ್ತಾ ಕುಣಿದಾಡುತ್ತಾ ಕೈ ಕೈ ಹಿಡಿದು ಇವರನ್ನೇ ಸುತ್ತುತ್ತಾ...

ನಿಮಗೂ ಹೊಸ ವರುಷದಲ್ಲಿ ಒಳ್ಳೊಳ್ಳೇದೇ ಆಗಲಿ. ಶುಭಾಶಯಗಳು.

Thursday, October 23, 2008

ಆಕಾಶಬುಟ್ಟಿ

ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.

ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.

'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!

'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!

ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..

'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!

ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..

ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..

ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.

ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!

ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.

ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.

ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.

* *

ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.

Tuesday, September 02, 2008

ಚೌತಿಯ ಮುನ್ನಾದಿನ, ಗಣೇಶವಾಹನನ ನೆನೆದು...

ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ |

ಕುವೆಂಪುರವರ ಕಥನಕವನ 'ಬೊಮ್ಮನಹಳ್ಳಿಯ ಕಿಂದರಿಜೋಗಿ' ಶುರುವಾಗುವುದೇ ಹೀಗೆ. ಎಲ್ಲಾ ಹಳ್ಳಿಗಳಂತೆ ಅದೂ ಒಂದು ಹಳ್ಳಿ. ಆದರೆ ಅಲ್ಲಿ ಇಲಿಗಳ ಕಾಟ! ಇಲಿ ಯಾವೂರಲ್ಲಿಲ್ಲ ಹೇಳಿ? ಎಲ್ಲಾ ಊರಲ್ಲೂ ಎಲ್ಲರ ಮನೆಯಲ್ಲೂ ಇದ್ದದ್ದೇ ಇಲಿ ಕಾಟ. ಆದರೆ ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ ಮಿತಿ ಮೀರಿದೆ. ಎಷ್ಟು ಅಂತೀರಾ? ಅಲ್ಲಿನ ಇಲಿಗಳಿಗೆ ಹೆದರಿಕೆ ಬೆದರಿಕೆ ಒಂದೂ ಇಲ್ಲ.. ಅವು ನಾಯಿ, ಬೆಕ್ಕುಗಳನ್ನೇ ಕಡಿಯುತ್ತವೆ..! ಅಡುಗೆ ಭಟ್ಟನ ಕೈಯ ಸಟುಗವನ್ನು ಭೀತಿಯಿಲ್ಲದೇ ನೆಕ್ಕುತ್ತವೆ..! ಟೋಪಿ ಒಳಗೇ ಗೂಡು ಮಾಡಿಕೊಳ್ಳುತ್ತವೆ, ಪೇಟದ ಒಳಗೆ ಆಟವಾಡ್ತವೆ, ಗೋಡೆಗೆ ತಗುಲಿಸಿದಂಗಿಯ ಜೇಬನು ದಿನವೂ ಜಪ್ತಿಯ ಮಾಡುತ್ತವೆ..! ಮಲಗಿದ್ದ ಶೇಶಕ್ಕ ಬೆಳಗೆದ್ದು ನೋಡುವಾಗ ಕೇಶವೇ ಇಲ್ಲ! ಸಿದ್ದೋಜೈಗಳು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಅವರ ಜೇಬಿನಿಂದ ಇಲಿಯೊಂದು ಛಂಗನೆ ನೆಗೆದು, ಮಕ್ಕಳೆಲ್ಲಾ ಗೇಲಿ ಮಾಡಿ, ಮೇಷ್ಟರಿಗೆ ತುಂಬಾ ಅವಮಾನವಾಗುತ್ತದೆ.

ಇಲಿಗಳ ಕೊಲ್ಲಲು ಜನಗಳು ಮಾಡಿದ ನಾನಾ ಯತ್ನ ನಿಶ್ಫಲವಾಗಲು ಊರ ಗೌಡ ಈ ಇಲಿಗಳನ್ನು ಕೊಂದವರಿಗೆ ಆರು ಸಾವಿರ ನಾಣ್ಯಗಳನ್ನು ಕೊಡುವುದಾಗಿ ಘೋಶಿಸುತ್ತಾನೆ. ಆಗ ಬರುತ್ತಾನೆ ನಮ್ಮ ಕಿಂದರಿಜೋಗಿ.. ಅವನು ಕಿಂದರಿ ಊದಿದ್ದೇ ಇಲಿಗಳೆಲ್ಲ ಬುಳಬುಳನೆ ಹೊರಬರುತ್ತವೆ, ಜೋಗಿಯನ್ನೇ ಹಿಂಬಾಲಿಸುತ್ತವೆ. ಯಾವ್ಯಾವ ಥರದ ಇಲಿಗಳು ಅವು: ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ, ಸಣ್ಣಿಲಿ, ದೊಡ್ಡಿಲಿ, ಸುಂಡಿಲಿ, ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ -ಎಲ್ಲಾ ಬಂದುವಂತೆ ಓಡೋಡಿ... ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ, ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ, ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು... ಹೀಗೆ ಕುವೆಂಪುರವರ ಶಬ್ದ ಭಂಡಾರದೊಳಗಿದ್ದ ಇಲಿಗಳೆಲ್ಲ ಹೊರಬರುತ್ತವೆ.

ಜೋಗಿ ಕಿಂದರಿ ಊದುತ್ತಾ ಊದುತ್ತಾ ಇಲಿಗಳನ್ನೆಲ್ಲಾ ಮೋಡಿ ಮಾಡಿ ಅವೆಲ್ಲಾ ಹೊಳೆಯಲ್ಲಿ ಮುಳುಗಿ ಸಾಯುವಂತೆ ಮಾಡುತ್ತಾನೆ. ಆಮೇಲಿನ ಕಥೆ ನಿಮಗೆ ಗೊತ್ತೇ ಇದೆ: ಗೌಡ ಮಾತಿಗೆ ತಪ್ಪುತ್ತಾನೆ; ಹೇಳಿದಂತೆ ಆರು ಸಾವಿರ ನಾಣ್ಯ ಕೊಡುವುದಿಲ್ಲ. ಆಗ ಜೋಗಿ ಮತ್ತೆ ಕಿಂದರಿ ಊದುತ್ತಾನೆ, ಊರಿನ ಮಕ್ಕಳೆಲ್ಲಾ ಅವನ ಹಿಂದೆ ಹೋಗುತ್ತವೆ, ಬೆಟ್ಟವೊಂದು ಬಾಯಿ ತೆರೆಯುತ್ತದೆ, ಅದರೊಳಗೆ ಜೋಗಿ - ಅವನ ಹಿಂದೆಯೇ ಮಕ್ಕಳು - ಕೊನೆಗೆ ಉಳಿದವನೊಬ್ಬನೇ ಕುಂಟ. 'ಅಯ್ಯೋ ಹೋಯಿತೆ ಆ ನಾಕ! ಅಯ್ಯೋ ಬಂದಿತೆ ಈ ಲೋಕ!'

* * *

ಇಲಿಗಳ ಜೊತೆ ಗುದ್ದಾಡುವುದು ಕಷ್ಟ. ಮನೆಯೊಳಗೆ ಒಂದು ಇಲಿ ಹೊಕ್ಕಿಕೊಂಡಿತೆಂದರೇ ತಲೆಬಿಸಿ ನಿಭಾಯಿಸಲಿಕ್ಕಾಗುವುದಿಲ್ಲ; ಇನ್ನು ನೂರಾರು ಇಲಿಗಳು ಸೇರಿಬಿಟ್ಟರೆ ಗತಿಯೇನು ಹೇಳಿ? ಈ ಇಲಿಗಳ ವಾಸಕ್ಕೆ ಸಂದಿಗೊಂದಿಯೇ ಆಗಬೇಕು. ಓಡಾಟಕ್ಕೆ ಗೋಡೆಬದಿಯೇ ಆಗಬೇಕು. ರಾಜಾರೋಶವಾಗಿ ಕೋಣೆಯ ಮಧ್ಯದಲ್ಲಿ ಇವು ಓಡಾಡುವುದನ್ನು ನಾನು ಕಂಡಿದ್ದೇ ಇಲ್ಲ. ಉಗ್ರಾಣದಲ್ಲಿನ ಚೀಲಗಳನ್ನು ಕೊರೆಯುವುದು, ಸ್ಟ್ಯಾಂಡಿನಲ್ಲಿನ ಬಟ್ಟೆಗಳನ್ನು ತೂತು ಮಾಡುವುದು, ಗ್ಯಾಸ್‍ಕಟ್ಟೆಯ ಮೇಲಿದ್ದ ಕಾಯಿಕಡಿಯನ್ನು ಎತ್ತಿಕೊಂಡು ಹೋಗುವುದು -ಇತ್ಯಾದಿ ಕಿತಾಪತಿ ಕೆಲಸಗಳನ್ನು ಮಾಡುವುದೇ ಇವುಗಳ ಜಾಯಮಾನ. ಹಾಕಿದಷ್ಟನ್ನು ತಿಂದುಕೊಂಡು, ಶಿಸ್ತಾಗಿ ಓಡಾಡಿಕೊಂಡಿದ್ದು, ಕೋಣೆಯಲ್ಲಿ ಒಂದು ಕಡೆ ಮಲಗೆದ್ದು ಹೋಗುವಂತಿದ್ದರೆ ಇವನ್ನೂ ನಾಯಿ-ಬೆಕ್ಕುಗಳಂತೆ ಸಾಕಬಹುದಿತ್ತೇನೋ ಎಂದು ನಾನು ಯೋಚಿಸಿದ್ದಿದೆ.

ಈ ಇಲಿಗಳ ಮೂಗು ಬಹು ಚುರುಕು. ಹತ್ತಾರು ಮಾರು ದೂರದಲ್ಲಿ ಬಿದ್ದಿರುವ ಕಾಯಿಚೂರಿನ ಪರಿಮಳವನ್ನೂ ಇವು ಗ್ರಹಿಸಿ, ಅಲ್ಲಿಗೆ ಧಾವಿಸಿ, ಅದನ್ನು ಗುಳುಂ ಮಾಡಬಲ್ಲವು. ಬಹುಶಃ ಗಣೇಶ ಈ ಇಲಿಯನ್ನೇ ತನ್ನ ವಾಹನವನ್ನಾಗಿ ಆರಿಸಿಕೊಂಡಿರುವ ಹಿಂದೆ ಈ ಕಾರಣವೂ ಇದ್ದಿರಬಹುದು. ಸದಾ ಹಸಿದ ಹೊಟ್ಟೆಯ ಈ ಟೊಣಪನಿಗೆ ಆಹಾರ ಎಲ್ಲಿದೆ ಎಂದು ಪತ್ತೆಹಚ್ಚಿ, ಅಲ್ಲಿಗೆ ಕರೆದೊಯ್ದು ಕೊಡಿಸುವ ಆಶ್ವಾಸನೆಯನ್ನು ಇಲಿ ಕೊಟ್ಟಿರಬೇಕು. ಹಾಗಾಗೇ ಇವನು ಇಲಿಗೆ ತನ್ನ ಟ್ರಾವೆಲ್ ಕಾಂಟ್ರಾಕ್ಟ್ ವಹಿಸಿಕೊಟ್ಟಿರುವುದು. ಹಾಗೆ ನೋಡಿದರೆ, ಪ್ರಥಮಪೂಜಿತ ಗಣೇಶನ ವಾಹನವನ್ನು ನಾವೆಲ್ಲಾ ಅರ್ಚಿಸಿ ಗೌರವಿಸಬೇಕು. ಆಫ್ಟರಾಲ್ ಒಬ್ಬ ಮಂತ್ರಿಯ ಕಾರಿಗೆ - ಅದರ ಡ್ರೈವರಿಗೆ ಎಷ್ಟು ಗೌರವ ಇರುತ್ತದೆ ಯೋಚಿಸಿ? ಮೊದಲು ಅವನಿಗೆ ಸೆಲ್ಯೂಟ್ ಹೊಡೆದೇ 'ಸಾಯೇಬ್ರು ಯಾವ ಮೂಡಲ್ಲವ್ರೆ?' ಅಂತ ಕೇಳೋದಿಲ್ಲವಾ? ಅಂಥಾದ್ದರಲ್ಲಿ, ಗಜಮುಖನ ವಾಹನವೆಂದಾದರೂ ನಾವು ಇಲಿಗೆ ಸ್ವಲ್ಪ ಕನ್ಸಿಡರೇಶನ್ ಕೊಡಬಹುದಿತ್ತು. ಆದರೆ ಅದರದ್ದು ಅದೇನು ಕರ್ಮವೋ ಏನೋ, ಜನ ಅದನ್ನು ತಮ್ಮ ಆಜನ್ಮ ಶತ್ರುವೆಂಬಂತೆ ಪರಿಗಣಿಸಿಬಿಟ್ಟಿದ್ದಾರೆ. ಕಣ್ಣಿಗೆ ಬಿದ್ದರೆ ಹೊಡೆಯಲಿಕ್ಕೆ ದೊಣ್ಣೆ ಎಲ್ಲಿದೆ ಹುಡುಕುತ್ತಾರೆ.

ನಮ್ಮ ಹಳೆ ಮನೆಯಲ್ಲಿ ಇಲಿಗಳ ಕಾಟ ಜೋರಿತ್ತು. ಅದು ಮಣ್ಣುಗೋಡೆಯ ಮನೆಯಾಗಿದ್ದರಿಂದ ಇವಕ್ಕೆ ಬಿಲ ತೋಡಲಿಕ್ಕೆ ಬಹಳ ಸುಲಭವಾಗಿತ್ತು. ರಾತ್ರಿಯಾಯಿತೆಂದರೆ ಸಾಕು, ಕೊಟ್ಟಿಗೆ ಮನೆಯಿಂದಲೋ ಮತ್ತೆಲ್ಲಿಂದಲೋ ಮನೆಯೊಳಗೆ ಟುಕುಟುಕನೆ ಆಗಮಿಸುತ್ತಿದ್ದ ಇವು ಕಣ್ಣು ಮಿಟುಕಿಸುವುದರೊಳಗೆ ಒಳಗೆಲ್ಲೋ ಹೋಗಿ ಸೇರಿಕೊಂಡುಬಿಡುತ್ತಿದ್ದವು. ಮಂಚದಡಿಗೋ, ಕಪಾಟಿನ ಕೆಳಗೋ ಅಡಗಿಕೊಂಡಿರುತ್ತಿದ್ದ ಇವು ನಾವು ಲೈಟೆಲ್ಲಾ ಆಫ್ ಮಾಡಿ ಮಲಗಿದಮೇಲೆ ಕಾರ್ಯಾಚರಣೆಗೆ ಇಳಿಯುತ್ತಿದ್ದವು. ಸೀದಾ ಅಡುಗೆಮನೆಗೆ ಹೋಗಿ ಸ್ಟ್ಯಾಂಡ್ ಹತ್ತಿ ಢಣಾರನೆ ಯಾವುದಾದರೂ ಪಾತ್ರೆ ಕೆಡವುವುದೋ, ಗೋಡೌನಿಗೆ ಹೋಗಿ ಕೊರಕೊರ ಎಂದು ಹೊಸ ಕನ್ನ ಕೊರೆಯುವುದೋ ಮಾಡುತ್ತಾ, ತಮ್ಮತಮ್ಮಲ್ಲೇ ಕಿಚಪಿಚ ಎಂದು ಕಾನ್ವರ್ಸೇಶನ್ ಮಾಡಿಕೊಳ್ಳುತ್ತಾ ನಮ್ಮ ನಿದ್ದೆಗೆಡಿಸುತ್ತಿದ್ದವು. ಆಗ ಅಜ್ಜಿ "ಥೋ, ಈ ಇಲಿ ಕಾಲದಲ್ಲಿ ಆಗಲ್ಯೇ" ಎಂದು ಗೊಣಗುತ್ತಾ ಲೈಟ್ ಹಾಕಿದ್ದೇ ತಡ, ಸದ್ದು ಬಂದ್! ಅಡುಗೆಮನೆಗೆ ಹೋಗಿ ಬಿದ್ದಿದ್ದ ಪಾತ್ರೆ ಎತ್ತಿಟ್ಟು ಬಂದು, ದೀಪವಾರಿಸಿ ಮಲಗಿದ ಐದು ನಿಮಿಷಕ್ಕೆ ಮತ್ತೆ ಶುರುವಾಗುತ್ತಿತ್ತು ಸದ್ದು..!

ನೋಡೀ, ವಿನಾಕಾರಣ ಈ ಮಲಗಿದ್ದ ಮನುಷ್ಯನ ನಿದ್ದೆ ಕೆಡಿಸುವುದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಆಗ ಆತನ ಕೋಪ ನೆತ್ತಿಗೇರಿಬಿಡುತ್ತದೆ. ಆತ ತನ್ನ ನಿದ್ರಾಹರಣಕ್ಕೆ ಕಾರಣರಾದವರನ್ನು ಮುಗಿಸಲಿಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಅದಕ್ಕೆ ನನ್ನ ಅಜ್ಜಿಯೇ ಉದಾಹರಣೆ. ಅಜ್ಜಿಯ ಮಂಚದ ಪಕ್ಕದಲ್ಲಿ ಯಾವಾಗಲೂ ಒಂದು ದೊಣ್ಣೆ ಇರುತ್ತಿತ್ತು. ನಿದ್ದೆಗಣ್ಣ ಆಕೆ ಅದನ್ನು ಕೈಗೆತ್ತಿಕೊಳ್ಳುತ್ತಿದ್ದಳು. 'ಎಲಾ ಇಲಿಯೇ, ಎಲ್ಲಿರುವೆ ನೀನು? ನನ್ನ ಮುಂದೆ ನಿನ್ನಾಟವೇನೂ ನಡೆಯದು. ಇಗೋ, ನಿನ್ನ ಆಯುಷ್ಯ ಇಂದಿಗೆ ಮುಗಿಯಿತೆಂದೇ ತಿಳಿದುಕೋ' ಎಂದು ಮನಸಿನಲ್ಲಿಯೇ ಅಬ್ಬರಿಸಿ, ರಣಚಂಡಿ ಅವತಾರ ತಾಳಿ ಇಲಿ ಎಲ್ಲೈತೆ ಎಲ್ಲೈತೆ ಎಂದು ಹುಡುಕುತ್ತಾ ಮನೆಯನ್ನೆಲ್ಲಾ ಜಾಲಾಡಿ ಒಂದಾದರೂ ಇಲಿಯನ್ನು ಹೊಡೆದು ತನ್ನ ದೊಣ್ಣೆಗೆ ಸವರಿದ್ದ ನೆತ್ತರನ್ನು 'ಜೋಗಿ' ಚಿತ್ರದ ಶಿವರಾಜ್‍ಕುಮಾರ್ ಸ್ಟೈಲಲ್ಲಿ ನೋಡಿ ಸಂತೃಪ್ತಿ ಪಟ್ಟುಕೊಂಡ ನಂತರವೇ ಮಲಗುತ್ತಿದ್ದಳು. ಅಷ್ಟರಲ್ಲೇ ಒಂದೆರಡು ರೌಂಡು ಸಣ್ಣ ನಿದ್ರೆಗಳನ್ನು ಪೂರೈಸಿ ಎಚ್ಚರಾಗಿರುತ್ತಿದ್ದ ನಾನು, ಅಜ್ಜಿ ಈ ಹತ್ಯಾಕಾಂಡಕ್ಕೆ ಮುಂದಾಗುವಾಗ ಅವಳ ಹಿಂದೆಯೇ ಹೋಗಿ, ಅವಳು ಕೊಲೆ ಎಸಗುವುದನ್ನು ಕಣ್ತುಂಬ ನೋಡಿ, ಆಮೇಲಷ್ಟೇ 'ಕ್ರೈಂ ಡೈರಿ' ವೀಕ್ಷಕನಂತೆ ನಿದ್ರೆ ಹೋಗುತ್ತಿದ್ದೆ.

ಈ ದೇವರು ಎಂಬಾತ, ಪ್ರಾಣಿಗಳಿಗೆ ಬುದ್ಧಿಶಕ್ತಿಯನ್ನು ಅಲಾಟ್ ಮಾಡುವಾಗ ತುಂಬಾನೇ ಪಕ್ಷಪಾತ ಮಾಡಿಬಿಟ್ಟ. ಮನುಷ್ಯನಿಗೆ ಸಿಕ್ಕಾಪಟ್ಟೆ ಬುದ್ಧಿ ಕೊಟ್ಟು, ಉಳಿದ ಪ್ರಾಣಿಗಳಿಗೆ ತಮ್ಮ ಆಹಾರ ಹುಡುಕಿಕೊಳ್ಳಲಿಕ್ಕೆ - ಬದುಕಿಕೊಳ್ಳಲಿಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬುದ್ಧಿ ಕೊಟ್ಟ. ಈ ಮನುಷ್ಯ ಏನು ಮಾಡಿದಾ, ಇಲಿಗತ್ತರಿ - ಇಲಿಬೋನು ಇತ್ಯಾದಿ ಮಷಿನ್ನುಗಳನ್ನು ಕಂಡುಹಿಡಿದ. ಇಲಿಪಾಶಾಣದಂತಹ ವಿಷಗಳನ್ನು ಕಂಡುಹಿಡಿದ. 'ಪ್ರತಿದಿನ ನಿದ್ರೆ ಕೆಡಿಸಿಕೊಂಡು ಇಲಿ ಹೊಡೆಯುವುದ್ಯಾಕ? ಇಟ್ಟರೆ ಒಂದು ಹಿಡಿ ಪಾಶಾಣ ಸಾಕ!' ಎಂದು ಜಾಹೀರಾತು ಮಾದರಿಯಲ್ಲಿ ತನಗೆ ತಾನೇ ಹೇಳಿಕೊಂಡು, ಇಲಿಗೆ ಪ್ರಿಯವಾಗುವ ಯಾವುದೇ ತಿಂಡಿಯ ಜೊತೆ ಈ ಪುಡಿಯನ್ನು ಕಲಸಿ, ಅದು ಓಡಾಡುವ ದಾರಿಯಲ್ಲಿ ಇಟ್ಟುಬಿಟ್ಟ. ಇಲಿ ಪಾಪ ವಾಸನೆ ಗ್ರಹಿಸಿಕೊಂಡು ಬಂತು, 'ತನಗಾಗಿಯೇ' ಎಂಬಂತೆ ಇಟ್ಟಿರುವ ಆಹಾರವನ್ನು ತಿಂತು, ಅಟ್ಟದ ಮೇಲೋ ಗೋಡೌನಿನ ಮೂಲೆಗೋ ಹೋಗಿ ಸತ್ತಿತು. ಆಮೇಲೆ ಮನೆಯಿಡೀ ದುರ್ನಾತ! "ಓಹ್ ಎಲ್ಲೋ ಇಲಿ ಸತ್ತಿದ್ದು ಕಾಣ್ತು" ಎನ್ನುತ್ತಾ ಮೂಗಿಗೆ ಸೆರಗು ಮುಚ್ಚಿಕೊಳ್ಳುವ ಅಮ್ಮ; ಬ್ಯಾಟರಿ ಬಿಟ್ಟುಕೊಂಡು ಹುಡುಕುವ ಅಪ್ಪ; ಗೂಡಚರ ಸಂಸ್ಥೆಯ ವಕ್ತಾರನಂತೆ ಕತ್ತಲ ಮೂಲೆಯಲ್ಲಿ ಹಾರಾಡುವ ನೊಣಗಳಿಂದಾವೃತ ಹೆಣವನ್ನು ಪತ್ತೆಹಚ್ಚುತ್ತಿದ್ದ ನಾನು; ನಂತರ ಶವದ ವಿಲೇವಾರಿ.

ಇವೆಲ್ಲಾ ಸ್ವಲ್ಪ ರಗಳೆಯ ವಿಷಯ ಎನ್ನಿಸಿತು ನಮಗೆ. ಅಲ್ಲದೇ ಈ ಪಾಶಾಣವನ್ನು ತಿಂದಮೇಲೆ ಕುಡಿಯಲಿಕ್ಕೆ ನೀರೇನಾದರೂ ಸಿಕ್ಕಿಬಿಟ್ಟರೆ ಇಲಿ ಬದುಕಿಕೊಂಡುಬಿಡುತ್ತಿತ್ತು. ವಿಷ ತಿಂದೂ ಅರಗಿಸಿಕೊಂಡು ತನ್ನ ಬಾಸ್ ಗಣೇಶನ ಬಳಿ 'ನಿನ್ನಪ್ಪ ವಿಷಕಂಠನಿಗಿಂತ ನಾನೇನು ಕಮ್ಮಿ?' ಎಂಬಂತೆ ಮೀಸೆ ತಿರುವುತ್ತಿತ್ತು. ಈ ಬಾರಿ ಅಜ್ಜಿ ಇಲಿಗತ್ತರಿ ಎಂಬ ಹತಾರವನ್ನು ಉಪಯೋಗಿಸಿದಳು. ಒಂದು ಸಣ್ಣ ಕಾಯಿಚೂರನ್ನೋ, ಬೋಂಡವನ್ನೋ ಈ ಕತ್ತರಿಯ ಮಧ್ಯಕ್ಕೆ ಸಿಕ್ಕಿಸಬೇಕು. ಇದೊಂದು ಭಾರೀ ಅಪಾಯದ ಅಸ್ತ್ರ. ಇದನ್ನು ಹೂಡಿ ಇಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಕೈಯೇ ತುಂಡಾಗುವ ಸಾಧ್ಯತೆ ಇರುತ್ತದೆ. ತಿಂಡಿಯನ್ನು ತಿನ್ನಲಿಕ್ಕೆಂದು ಈ ಕತ್ತರಿಯನ್ನೇರಿ ಇಲಿ ಬಾಯಿ ಹಾಕಿದ್ದೇ ಇದರ ಎರಡಲಗುಗಳೂ ಮುಚ್ಚಿಕೊಂಡು, ಇಲಿ ಮಧ್ಯದಲ್ಲಿ ಸಿಕ್ಕಿಕೊಂಡು, 'ಸ್ಪಾಟ್ ಡೆತ್' ಆಗುತ್ತದೆ! ಅಜ್ಜಿ ಪರಮಾನಂದತುಂದಿಲಳಾಗಿ ಮರುದಿನ ಅದನ್ನು ಹೊರಗೆಸೆಯುತ್ತಾಳೆ. ಕಾಗೆಗಳು 'ಥ್ಯಾಂಕ್ಸ್ ಫಾರ್ ದಿ ಬ್ರೇಕ್‍ಫಾಸ್ಟ್' ಅಂತಂದು ಕಚ್ಚಿಕೊಂಡು ಹೋಗುತ್ತವೆ.

ಇಲಿಗತ್ತರಿಯ ನಂತರ ನಮ್ಮ ಮನೆಗೆ ಬಂದ ಇಲಿಸಂಹಾರೀ ಯಂತ್ರ ಇಲಿಬೋನು. ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದ ಇದು, ಶತ್ರುವನ್ನು ಕೊಲ್ಲುತ್ತಿರಲಿಲ್ಲ; ಸಜೀವ ಸೆರೆ ಹಿಡಿಯುತ್ತಿತ್ತು! ಅಗೇನ್ ಇದರ ಪ್ರಯೋಗಕ್ಕೆ ಬೇಕಾದ ಮದ್ದೂ ಒಂದು ಕಾಯಿಚೂರು ಅಥವಾ ಕರಿದ ತಿಂಡಿ. ಬೋನಿನೊಳಗೆ ಇಳಿಬಿಟ್ಟಿದ್ದ ಕೊಕ್ಕೆಗೆ ತಿಂಡಿಯನ್ನು ಸಿಕ್ಕಿಸಿಡುವುದು. ಕತ್ತಲಲ್ಲಿ ಇಲಿ ಇದರೊಳಗೆ ಹೋಗಿ ತಿಂಡಿಯನ್ನು ಕಚ್ಚಿದಾಕ್ಷಣ ಬೋನಿನ ಬಾಗಿಲು ಹಾಕಿಕೊಂಡು ಇಲಿ ಬಂಧಿಯಾಗಿಬಿಡುತ್ತಿತ್ತು! ಬೆಳಗ್ಗೆ ಎದ್ದು ನೋಡಿದರೆ, ದಿಕ್ಕೆಟ್ಟು ಜೈಲಿನೊಳಗೆ ಅತ್ತಿತ್ತ ಓಡಾಡುತ್ತಾ, ಕಿಂಡಿಗಳಿಂದ ತನ್ನ ಮೂತಿಯನ್ನು ಹೊರತೂರಿಸುತ್ತಾ ಒದ್ದಾಡುತ್ತಿರುವ ಇಲಿರಾಯ! ನನಗೆ ಖುಷಿಯೋ ಖುಷಿ. ಸದ್ಧಾಂ ಸಿಕ್ಕಿಬಿದ್ದಾಗ ಅಮೇರಿಕನ್ನರೂ ಅಷ್ಟು ಹಾರಾಡಿದ್ದರೋ ಇಲ್ಲವೋ, ನಾನಂತೂ ಬೋನೆತ್ತಿಕೊಂಡು ಕೇಕೆ ಹಾಕುತ್ತಾ ಇಡೀ ಮನೆಯೆಲ್ಲಾ ಹಾರಾಡುತ್ತಿದ್ದೆ. ನಂತರ ಒಂದು ಬಕೆಟ್ಟಿಗೆ ನೀರು ತುಂಬಿ ಅದರಳೊಗೆ ಬೋನನ್ನು ಮುಳುಗಿಸುವುದು. ಇಲಿ ಉಸಿರುಗಟ್ಟಿ ಸಾಯುತ್ತಿತ್ತು.

ಹಾಗಂತ ಇಲಿಗಳು ನಮ್ಮ ಯುದ್ಧತಂತ್ರಗಳಿಂದ ತಪ್ಪಿಸಿಕೊಂಡು ಹೋದ ಘಟನೆಗಳೂ ಇಲ್ಲದಿಲ್ಲ. ಇಲಿಗತ್ತರಿಯಂತಹ ಅಪಾಯಕಾರಿ ಶಸ್ತ್ರದಲ್ಲೂ ಸಿಕ್ಕಿ ಸಾಯದೇ ಅದರಲ್ಲಿಟ್ಟಿದ್ದ ತಿಂಡಿಯನ್ನಷ್ಟೇ ಇವು ಎಗರಿಸಿಕೊಂಡು ಹೋದದ್ದಿದೆ. ಇಲಿ ತುಂಬಾ ಲೈಟ್‍ವೆಯ್ಟ್ ಆಗಿದ್ದರೆ ಆಗ ಕತ್ತರಿ ಆಪರೇಟ್ ಆಗುತ್ತಲೇ ಇರಲಿಲ್ಲ. ಇಲಿ ಆರಾಮಾಗಿ ತಿಂಡಿ ತಿಂದುಕೊಂಡು ಹೋಗಿಬಿಡುತ್ತಿತ್ತು. (ಈ ಗುಟ್ಟು ಎಲ್ಲಾ ಇಲಿಗಳಿಗೂ ಗೊತ್ತಾಗಿದ್ದರೆ, ಅವೆಲ್ಲಾ ಡಯಟ್ ಮಾಡಿ ತೂಕ ಇಳಿಸಿಕೊಂಡು ಕತ್ತರಿಯನ್ನು ಒಂದು ನಿಶ್ಪ್ರಯೋಜಕ ಅಸ್ತ್ರವನ್ನಾಗಿ ಮಾಡಿಬಿಡುತ್ತಿದ್ದವೇನೋ?!) ಮತ್ತೆ ಕೆಲ ಶಕ್ತಿಶಾಲೀ ಹೆಗ್ಗಣಗಳು ಬೋನಿನ ಬಾಗಿಲನ್ನು ತಳ್ಳಿಕೊಂಡು ಹೊರಗೋಡಿಹೋದದ್ದೂ ಇದೆ. ಕೆಲ ಪುಟಾಣಿ ಇಲಿಗಳು ಬೋನಿನಲ್ಲಿ ಸಿಕ್ಕಿಬಿದ್ದರೂ, ಬೋನಿನ ಸಣ್ಣ ಕಿಂಡಿಯಿಂದಲೇ ತೂರಿ, ತಿಂಡಿಯನ್ನೂ ತಿಂದು ಪರಾರಿಯಾಗಿ ನಮಗೆ ಚಳ್ಳೇಹಣ್ಣು ತಿನ್ನಿಸಿದ್ದಿದೆ.

ಇಷ್ಟಕ್ಕೂ ಇಲಿ ಕಾಟದ ಪರಿಹಾರಕ್ಕೆ ಎಲ್ಲರಂತೆ ನಾವೂ ಬೆಕ್ಕು ಸಾಕಲಿಲ್ಲವೇ ಎಂದು ನೀವು ಯೋಚಿಸಬಹುದು. ನಮ್ಮ ಪಕ್ಕದ ಮನೆಯಲ್ಲಿ ಸಾಕಿದ್ದರು. ಆದರೆ ಅದು ಮರಿಬೆಕ್ಕು. ಅದಕ್ಕೆ ಯಾವ ಇಲಿಯೂ ಹೆದರುತ್ತಿರಲಿಲ್ಲ. ಅವು ಗುಂಪಾಗಿ ಬಂದು 'ಇಲಿಗೆ ಚೆಲ್ಲಾಟ; ಬೆಕ್ಕಿಗೆ ಪ್ರಾಣಸಂಕಟ' ಎಂಬಂತೆ ಬೆಕ್ಕನ್ನೇ ಹೆದರಿಸುತ್ತಿದ್ದವು. ದಡಿಯ ಹೆಗ್ಗಣಗಳನ್ನು ಕಂಡರಂತೂ ಈ ಬೆಕ್ಕಿನ ಮರಿ ತಾನೇ ಓಡಿ ಹೋಗುತ್ತಿತ್ತು. ಇದನ್ನು ನೋಡಿದ್ದ ನನಗೆ ಬೆಕ್ಕು ಸಾಕುವ ತಲುಬು ಬರಲೇ ಇಲ್ಲ. ಅಲ್ಲದೇ ಹಿಂದೊಮ್ಮೆ ನಾಯಿಮರಿ ಸಾಕಿ, ಅದು ನನಗೆ ಅತಿಯಾಗಿ ಹೊಂದಿಕೊಂಡುಬಿಟ್ಟು, ನಾನು ಹೋದಲ್ಲೆಲ್ಲಾ ಹಚ್ ನೆಟ್‍ವರ್ಕಿನಂತೆ ನನ್ನ ಹಿಂದೆಯೇ ಬರತೊಡಗಿ, ಒಂದು ದಿನ ತೋಟಕ್ಕೆ ಹೋಗುತ್ತಿದ್ದಾಗ ನನ್ನ ಹಿಂದೆ ಬಂದ ಇದನ್ನು ಪಟೇಲರ ಮನೆಯ ನಾಯಿ ಕಚ್ಚಿ ಕೊಂದು ಹಾಕಿದ ಮೇಲೆ ನಾನು ಇನ್ನು ಯಾವ ಪ್ರಾಣಿಯನ್ನೂ ಸಾಕಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೆ. ಪ್ರೀತಿಪಾತ್ರ ಸಾಕುಪ್ರಾಣಿಗಳನ್ನು ಕಳೆದುಕೊಳ್ಳುವ ದುಃಖ ಯಾವ ದುಃಖಕ್ಕೂ ಕಮ್ಮಿಯಲ್ಲ.

ನಾವು ಹೊಸ ಮನೆಗೆ ಬಂದಮೇಲೆ ಇಲಿಗಳ ಕಾಟ ಪ್ರಾಯಶಃ ನಿಂತೇ ಹೋಯಿತು. ಸಿಮೆಂಟ್ ಗೋಡೆ-ಟೈಲ್ಸ್ ನೆಲ ಅವಕ್ಕೆ ಸರಿ ಬರಲಿಲ್ಲವೇನೋ, 'ನಿಮ್ಮ ಹೊಸಮನೆ ನಿಮಗೇ ಇರ್ಲಿ' ಅಂತ ಬಿಟ್ಟುಕೊಟ್ಟು ಅವು ಹಳೆಯ ಕೊಟ್ಟಿಗೆ ಮನೆ, ಕಟ್ಟಿಗೆ ಮನೆ, ಬಚ್ಚಲು ಮನೆಗಳಲ್ಲೇ ಸಂಸಾರ ಹೂಡಿದವು. ಹಿಂಡಿಚೀಲಕ್ಕೆ ತೂತು ಮಾಡುವುದು, ಗೋಧಿಬೂಸ ಮೆಲ್ಲುವುದು, ಜಾನುವಾರುಗಳಿಗೆಂದು ಇಟ್ಟಿದ್ದ ಆಹಾರವನ್ನು ತಿನ್ನುವುದು -ಇತ್ಯಾದಿ ಕಡಿಮೆ ಪ್ರಮಾಣದ ಕಾಟ ಕೊಡುವುದರಲ್ಲಿ ನಿರತವಾದವು. ಕೊಟ್ಟಿಗೆ ಕಡೆ ಹೋದಾಗ ಎಲ್ಲೋ ಒಮ್ಮೊಮ್ಮೆ 'ಹಾಯ್' ಎಂದು ಕಣ್ಮರೆಯಾಗುತ್ತಿದ್ದ ಇವನ್ನು ನಾವೂ ಕಡೆಗಣಿಸಿದೆವು.

ಕಳೆದ ಬಾರಿ ಗಣೇಶ ಚತುರ್ಥಿಗೆ ನಾನು ಊರಿಗೆ ಹೋದಾಗ, ಅಮ್ಮ ಹೇಳಿದ ಮಜಾ ಘಟನೆಯೊಂದನ್ನು ಹಂಚಿಕೊಂಡು ನಾನು ಈ ಲೇಖನವನ್ನು ಮುಗಿಸುತ್ತೇನೆ. ಚೌತಿಗೆ ಒಂದು ವಾರವಿರಬೇಕಾದರೆ ಬಚ್ಚಲು ಮನೆಯಲ್ಲಿಟ್ಟಿದ್ದ ಅಪ್ಪನ ರೇಸರ್ ಸೆಟ್ ಕಾಣೆಯಾಯಿತಂತೆ. ಅಪ್ಪ ಅಲ್ಲಿಲ್ಲಿ ಹುಡುಕಿದ, ಸಿಗದಿದ್ದರಿಂದ ಹೊಸ ರೇಸರ್ ಕೊಂಡು ಶೇವಿಂಗ್ ಮಾಡಿಕೊಂಡ. ಮಾರನೇ ದಿನ ನೋಡಿದರೆ ಮೈಸೋಪು ಇಲ್ಲ! ಹೊಸ ಸೋಪು.. ನಿನ್ನೆ ತಾನೇ ಒಡೆದದ್ದು.. ಹನ್ನೆರಡು ರೂಪಾಯಿ.. ಶೋಧಿಸಿದರು. ಸಿಕ್ಕಲಿಲ್ಲ. ಹೊಸ ಸೋಪಿನ ಪ್ಯಾಕು ಒಡೆದರು. ಅದರ ಮರುದಿನ ಮೈ ತಿಕ್ಕುವ ಬ್ರಶ್ ಇಲ್ಲ! 'ಎಲಾ! ಇದು ಇಲಿಗಳದ್ದೇ ಕೆಲಸ' ಅಂತ ಗೊತ್ತಾಯಿತು. ಅಮ್ಮ-ಅಪ್ಪ ಸೇರಿ ಹುಡುಕಿದರು. ಬಾವಿಕಟ್ಟೆಯ ಸಂದಿಗೆ ಒಂದು ಬಿಲ. ಅದರ ಬಾಗಿಲಲ್ಲಿ ಕಳೆದುಹೋಗಿದ್ದ ರೇಸರ್ ಸೆಟ್ಟು, ಅರ್ಧಮರ್ಧ ಕೊರೆಯಲ್ಪಿಟ್ಟಿದ್ದ ಸೋಪು, ಹರಿದು ಕೆದರಿಹೋಗಿದ್ದ ಬ್ರಶ್ಶು!

ಕಥೆ ಕೇಳಿ ನನಗೆ ನಗುವೋ ನಗು. ಬಹುಶಃ ಚೌತಿಗೆ ಗಣೇಶಾರೂಢ ಇಲಿ, ಚಂದ ಶೇವಿಂಗ್-ಗೀವಿಂಗ್ ಮಾಡಿಕೊಂಡು, ಸ್ನಾನ ಮಾಡಿ ಫ್ರೆಶ್ಶಾಗಿ ಬರುತ್ತೇನೋ ಎಂದುಕೊಂಡು ಕಾಯತೊಡಗಿದೆವು... ಅಡುಗೆ ಮನೆಯಿಂದ ಕಾಯಿಕಡುಬು - ಚಕ್ಕುಲಿಯ ಪರಿಮಳ.

* * *

ಮೂಷಿಕವಾಹನನ ಆಗಮನ ನಿಮ್ಮ ಮನೆಗೆ ಸಂತಸ ತರಲಿ. ಶುಭಾಶಯಗಳು.

Friday, April 04, 2008

ಎಲ್ಲ ಎಲ್ಲೆಗಳನೂ ಮೀರಿ ಬರುತಿರುವ ಸರ್ವಧಾರಿ...

ಪೆನ್ನು ಪುಟ್ಟಿ ಮತ್ತೆ ಸಿಟ್ಟು ಮಾಡಿಕೊಂಡಿದ್ದಾಳೆ! ಬ್ಲಾಗರ್ಸ್ ಮೀಟಿನ ಬಗ್ಗೆ ಬಂದ ಪ್ರತಿಕ್ರಿಯೆಗಳು, ಆಮೇಲಾದ ಗಲಾಟೆ, ಎಲ್ಲಾ ನೋಡಿ ಮುನಿದು ಮುದುಡಿಹೋಗಿದ್ದ ಮನಸು ಇನ್ನೂ ಪೂರ್ತಿ ರಿಪೇರಿಯಾದಂತಿಲ್ಲ. ಜತೆಗೆ ಅಕಾಲದಲ್ಲಿ ಸುರಿಯತೊಡಗಿದ ವರ್ಷಧಾರೆ ನನಗೆ ನೆಗಡಿಯನ್ನು ಕರುಣಿಸಿ, ನಾನು ಸೀನೀ ಸೀನೀ ಸೀನಿ, ಕರ್ಚೀಫಿನಿಂದ ಮೂಗೊರೆಸಿಕೊಂಡೂ ಕೊಂಡು, ಕನ್ನಡಿ ನೋಡಿಕೊಂಡರೆ ಮೂಗಿನ ಬದಲು ಅಲ್ಲಿ ಅರಳಿದ ಕೆಂಡಸಂಪಿಗೆ ಕಾಣುವಂತಾಗಿ, 'ವಿಕ್ಸ್ ಸೇದುವುದರಲ್ಲೂ ಒಂಥರಾ ಸುಖವಿದೆ ಕಣೋ' ಅಂತೆಲ್ಲಾ ಅವರಿವರ ಬಳಿ ಹಲುಬುತ್ತಾ, ತೀರಾ ಅಬ್ಬೇಪಾರಿಯಂತಾಗಿ ಹೋಗಿದ್ದೇನೆ.

ಬರೆಯಬೇಕಿದೆ ಏನಾದರೂ.. ನಾನು ಪ್ರತಿ ಹಬ್ಬಕ್ಕೂ ಸಾಮಾನ್ಯವಾಗಿ ಗೆಳೆಯರಿಗೆ, ನೆಂಟರಿಗೆ ನಾನೇ ತಯಾರಿಸಿದ ಗ್ರೀಟಿಂಗ್ಸ್ ಕಳುಹಿಸುತ್ತೇನೆ. ಆ ಗ್ರೀಟಿಂಗನ್ನೇ ಬ್ಲಾಗಿನಲ್ಲೂ ಹಾಕುತ್ತಿದ್ದೆ. ಆದರೆ ಈ ಯುಗಾದಿಗೆ ಅದನ್ನೂ ಮಾಡಲಾಗುತ್ತಿಲ್ಲ.

ಬರೀ ಭಾವನೆಗಳನ್ನು ಬರೆಯಬಾರದು ಎಂದುಬಿಟ್ಟರು ಅವರು.. ನಾನೂ ಒಪ್ಪಿಬಿಟ್ಟೆ. ಸೀರಿಯಸ್ಸಾಗಿ ಬರೆಯೋಣವೆಂದು ಸೀರಿಯಸ್ಸಾಗಿಯೇ ಕುಳಿತೆ ಮೊನ್ನೆ ರಾತ್ರಿ. ಆದರೆ ಏನೆಂದರೆ ಏನೂ ಬರೆಯಲಾಗಲಿಲ್ಲ. ಕೊನೆಗೆ ಬೇಸತ್ತು, ಪೆನ್ನು ಬೀಸಾಡಿ, ಒಂದು ವಾಕ್ ಹೋಗಿ ಬಂದರೆ ಸರಿಯಾಗಬಹುದೆಂದು, ರೂಂಮೇಟನ್ನೆಳೆದುಕೊಂಡು ಹೊರ ಹೊರಟೆ. ಆಗಸ ಮಿಂಚುತ್ತಿತ್ತು. ಯಾವಾಗ ಬೇಕಿದ್ದರೂ ಮಳೆ ಬರಬಹುದಿತ್ತು. ನಮ್ಮ ಮನೆಯಿಂದ ಹೊರಟು ಮೊದಲು ರೈಟಿಗೆ ಹೋಗಿ ಆಮೇಲೆ ಲೆಫ್ಟಿಗೆ ತಿರುಗಿ ಮತ್ತೆ ರೈಟಿಗೆ ತಿರುಗಿದರೆ ಅದು ಮಲ್ಲೇಶ್ವರಂಗೆ ಹೋಗುವ ಹದಿನೇಳನೇ ಕ್ರಾಸ್ ರಸ್ತೆ. ಪಕ್ಕದಲ್ಲೊಂದು ಗೂಡಂಗಡಿ. ಅಲ್ಲಿ ಚಿಕ್ಕಿ ತಗೊಂಡು ತಿನ್ನುತ್ತಾ ಹೋಗುವುದು.. ಒಂದು ಬ್ರಿಜ್ ಸಿಗುತ್ತದೆ. ಹನ್ನೊಂದೂ ವರೆಗೆ ಸರಿಯಾಗಿ ಆ ಬ್ರಿಜ್ಜಿನಡಿ ಪೋಂಕನೆ ಸದ್ದು ಮಾಡುತ್ತಾ ಒಂದು ರೈಲು ಹೋಗುತ್ತದೆ. ಅದನ್ನು ನೋಡಿಕೊಂಡು ಹಾಗೇ ಸ್ವಲ್ಪ ಮುಂದೆ ಹೋಗುತ್ತೇವೆ.. ಅಲ್ಲಿ ನಮಗೊಂದು ಜೋಡಿ ಬಲೂನು ಸಿಗುತ್ತದೆ. ಒಂದು ಬಿಳೀ, ಇನ್ನೊಂದು ನೀಲಿ. ಎರಡೂ ಬಲೂನುಗಳ ಮೇಲೂ ಅಲ್ಲಲ್ಲಿ ಕರೀ ಚುಕ್ಕಿಗಳು. ನನ್ನ ರೂಂಮೇಟು ಅದನ್ನು ಕಂಡವನೇ ಓಡಿ ಹೋಗಿ, 'ಏಯ್ ನನ್ ಮಗ್ನೇ.. ಓಡೀಬೇಡಲೇ..' ಎಂಬ ನನ್ನ ಕೂಗು ಕೇಳುವುದರೊಳಗೇ, ಒಂದು ಬಲೂನನ್ನು ಕಾಲಲ್ಲಿ ಗುದ್ದಿ ಒಡೆದು ಬಿಡುತ್ತಾನೆ. 'ಪಾಠ್' ಎಂಬ ಶಬ್ದವೊಂದು ಇದೀಗ ತಾನೇ ದೂರಾದ ರೈಲಿನ ಶಬ್ದದೊಂದಿಗೆ ಲೀನವಾಗುತ್ತದೆ.

ಇನ್ನುಳಿದ, ಮೊಲದ ಮರಿಯಂತಹ ಬಿಳೀ ಬಲೂನನ್ನು ನಾನು ಎತ್ತಿಕೊಳ್ಳುತ್ತೇನೆ. ಅದರ ಮೈಯನ್ನು ಕೈಯಲ್ಲಿ ನೇವರಿಸುತ್ತೇನೆ. ಎಷ್ಟೊಂದು ನೆನಪುಗಳು ಆ ಸ್ಪರ್ಶದಲ್ಲಿ..! ಅಮ್ಮನ ಕೈ ಹಿಡಿದು ಅಪ್ಪನ ಜೊತೆ ಹೋಗಿ ಮಳ್ಗದ್ದೆ ಜಾತ್ರೆಯಲ್ಲಿ ಕೊಂಡಿದ್ದ ಬಲೂನು, ಸಾಗರದ ಜಾತ್ರೆಯಲ್ಲಿ ಭಾಗ್ಯತ್ಗೆ ಕೊಡಿಸಿದ್ದ ಬಲೂನು, ಬೆಂಕ್ಟಳ್ಳಿ ಪುಟ್ಟಿಗೆ ಊದಿಕೊಡುವಾಗಲೇ ಒಡೆದುಹೋಗಿದ್ದ ಬಲೂನು (ಆಮೇಲೆ ಅವಳು ಅತ್ತಿದ್ದು-ಹೊಸ ಬಲೂನು ಬೇಕೂ ಎಂದು ಹಟ ಮಾಡಿದ್ದು-ಕೊನೆಗೆ ವಿಧಿಯಿಲ್ಲದೇ ಸೈಕಲ್ಲೇರಿ ಕರ್ಕಿಕೊಪ್ಪದಿಂದ ಬಲೂನು ತಂದುಕೊಟ್ಟಿದ್ದು), ಕಾಲೇಜಿನಲ್ಲಿ ಗೆಟ್-ಟುಗೇದರ್ ದಿನ ಊದಿ ಕೊಡಲೆಂದು 'ಅವಳು' ಕೊಟ್ಟಿದ್ದ ಹಾರ್ಟ್ ಶೇಪ್ ರೆಡ್ ಬಲೂನ್, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದಿದ್ದ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ನೀಲಾಕಾಶಕ್ಕೆ ತೇಲಿಬಿಟ್ಟಿದ್ದ ಸಾವಿರ ಸಾವಿರ ಕಂತೆ ಕಂತೆ ಬಲೂನ್, ಚಂದ್ರಗುತ್ತಿ ಗುಡ್ಡದಲ್ಲಿ ಬಲೂನಿಂತೆಯೇ ಹಾರಿಹೋಗಿ ಕನಸಿನಂತೆ ಕಣ್ಮರೆಯಾಗಿದ್ದ ಬಿಳೀ ಕವರ್... ಆಹಾ.. ಊದಿದಷ್ಟೂ ಹಿಗ್ಗುವ ಬಲೂನಿನಂತೆ ನೆನಪುಗಳು.

ಮಳೆ ಬರತೊಡಗುತ್ತದೆ.. ನಾ ಕಾಣದ ಯಾವುದೋ ವ್ಯಕ್ತಿಯ ಉಸಿರನ್ನು ತುಂಬಿಕೊಂಡಿರುವ ಈ ಬಲೂನನ್ನು ಎದೆಗವಚಿಕೊಂಡು ಮನೆಗೆ ಬರುತ್ತೇನೆ. ಇನ್ನೊಂದು ಬಲೂನ್ ಒಡೆದದ್ದಕ್ಕಾಗಿ ನನ್ನಿಂದ ಬೈಸಿಕೊಂಡ ರೂಂಮೇಟ್ ಪೆಚ್ಚಾಗಿ ನಡೆದು ಬರುತ್ತಾನೆ ನನ್ನ ಹಿಂದೆ. ರೂಮಿಗೆ ಹೋಗಿ, ಸ್ಕೆಚ್ ಪೆನ್ನಿನಿಂದ ಆ ಬಿಳೀ ಬಲೂನಿನ ಮೇಲೆ ಒಂದು ಕಣ್ಣು ಬಿಡಿಸುತ್ತೇನೆ, ಪುಟ್ಟ ಮೂಗು, ಬಿರಿದ ತುಟಿ, ಎರಡು ಹುಬ್ಬುಗಳ ಮಧ್ಯೆ ಒಂದು ಚುಕ್ಕಿ ಇಟ್ಟರೆ ಥೇಟ್ ಅವಳ ಮುಖದಂತೆಯೇ ಕಾಣತೊಡಗುತ್ತದೆ ಬಲೂನ್.. ಕೆಳಗೆ ಅವಳ ಹೆಸರು ಬರೆಯುತ್ತೇನೆ. ಬಲೂನನ್ನು ತಬ್ಬಿಕೊಂಡು ತುಂಬ ಹೊತ್ತು ಹಾಗೆಯೇ ಕೂರುತ್ತೇನೆ. ಭಾವನೆಗಳ ಬಗ್ಗೆ ಬರೆಯಬಾರದು ಎಂದು ನಿಶ್ಚೈಸಿಕೊಂಡಿದ್ದು ಮರೆತುಹೋಗುತ್ತದೆ. ಸುಮಾರು ಹೊತ್ತಿನ ಮೇಲೆ ಯೋಚನೆಯಾಗುತ್ತದೆ. ಯೋಚಿಸಿದರೆ ಏನೂ ಹೊಳೆಯುವುದೇ ಇಲ್ಲ.


ಹೊಗೇನಕಲ್ಲಿನಲ್ಲಿ ನಡೆಯುತ್ತಿರುವ ಗಡಿ ವಿವಾದ, ಅದಕ್ಕಾಗಿ ಎಲ್ಲೆಲ್ಲೂ ಆಗುತ್ತಿರುವ ಪ್ರತಿಭಟನೆ, ಸತ್ಯಾಗ್ರಹ, ಗಲಾಟೆ, ದೊಂಬಿಗಳು.. ಈಗ ಎರಡು ವರ್ಷದ ಹಿಂದೆ ನಾನು, ಸಂತೋಷ, ರಾಘು ಹೋಗಿದ್ದೆವು ಹೊಗೇನಕಲ್‌ಗೆ. ಎಲ್ಲಿ ನೋಡಿದರೂ ಹುರಿದ ಕೆಂಪು ಮೀನಿನ ಮಾರಾಟ, ವಾಕರಿಕೆ ಬರುವಷ್ಟು ವಾಸನೆ, ಮಸಾಜ್ ಮಾಡುವವರ - ದೋಣಿಯವರ ದುಂಬಾಲು... ಸುಂದರ ಪ್ರವಾಸೀ ತಾಣವನ್ನು ಇಷ್ಟೊಂದು 'ಕಮರ್ಶಿಯಲೈಸ್' ಮಾಡಿದ್ದಕ್ಕಾಗಿ ನಾವು ಬೈದುಕೊಳ್ಳುತ್ತಾ, ಕೊನೆಗೆ ಒಂದು ತೆಪ್ಪ (ದೋಣಿ)ವನ್ನು ಚೌಕಾಶಿ ಮಾಡಿ ನೂರೈವತ್ತು ರೂಪಾಯಿಗೆ ಬುಕ್ ಮಾಡಿ ಯಾನ ಹೊರಟಿದ್ದೆವು.. ತೆಪ್ಪ ನಡೆಸಲಿಕ್ಕೆ ಸರ್ಕಾರದ ಲೈಸೆನ್ಸ್ ಬೇಕಂತೆ. ತಿಂಗಳಿಗೆ ಇಂತಿಷ್ಟು ಎಂದು ಅವರು ಕಟ್ಟಬೇಕು. ಅಲ್ಲದೇ ಪ್ರತೀ ಬೋಟ್ ಡ್ರೈವರ್ ಪ್ರತೀ ವಿಹಾರಕ್ಕೂ ಮುನ್ನ ದುಡ್ಡು ಕಟ್ಟಿ ಟಿಕೇಟ್ ಪಡೆದುಕೊಳ್ಳಬೇಕು. 'ಕಷ್ಟ ಸಾರ್.. ಇಷ್ಟೆಲ್ಲಾ ಮಾಡ್ಕೊಂಡು, ನಾವು ಕಾಸು ಮಾಡಿ ಹೆಂಡ್ರು ಮಕ್ಳುನ್ನ ಸಾಕೋದು ಅಂದ್ರೆ..' ಎಂದಿದ್ದ ದೋಣಿ ನಡೆಸುವವ. ಅವನ ಹೆಸರು ಸೆಲ್ವನ್. ಅವನ ಹೆಂಡತಿ ಕರ್ನಾಟಕದವಳು. ನಮ್ಮ ತೆಪ್ಪ ಅರ್ಧ ತಾಸಿನ ಮೇಲೆ ನೀರಿನ ಮಧ್ಯಕ್ಕೆಲ್ಲೋ ಬಂದಿದ್ದಾಗ 'ನೋಡೀ, ಇದೇ ತಮಿಳುನಾಡು-ಕರ್ನಾಟಕದ ಗಡಿ.. ಇದೇ, ಇಲ್ಲೇ ಬರುತ್ತೆ' ಎಂದಿದ್ದ ಸೆಲ್ವನ್. ಹೊಳೆಯ ಕೆಳಗೆಲ್ಲೋ ಮುಳುಗಿದ್ದ ಗಡಿ ನಮಗೆ ಕಂಡೇ ಇರಲಿಲ್ಲ. ಕರ್ನಾಟಕದ ರಾಜಧಾನಿಯಿಂದ ತಮಿಳುನಾಡಿಗೆ ಬಂದಿದ್ದ ನಮಗೆ, ಕನ್ನಡತಿಯೊಬ್ಬಳ ಗಂಡ ಸೆಲ್ವನ್ ತೋರಿಸಿದ್ದ ಗಡಿರೇಖೆ, ಊಹುಂ, ಕಣ್ಣಿಗಷ್ಟೇ ಅಲ್ಲ; ಮನಸಿಗೂ ಕಂಡಿರಲಿಲ್ಲ.. ಎಲ್ಲ ಎಲ್ಲೆಗಳನ್ನೂ ಮೀರಿ ಹೋಗುತ್ತಿತ್ತದು ವಿಹಾರ.. ಈಗಲ್ಲಿ ವಿವಾದ. ದೋಣಿ ಸಂಚಾರ ನಿಶೇಧವಾಗಿದೆಯಂತೆ. ಹೊಡೆದಾಟಗಳಾಗುತ್ತಿವೆಯಂತೆ. ಸೆಲ್ವನ್ ಮತ್ತವನ ಕುಟುಂಬ ಈಗ ಏನಾಗಿರಬಹುದು? ಯೋಚಿಸಿದರೆ ಮಂಕು ಕವಿಯುತ್ತದೆ.

ಚುನಾವಣೆ ಹತ್ತಿರಾಗುತ್ತಿದೆ. ಕ್ಷೇತ್ರ ಮರುವಿಂಗಡನೆ ಈ ದಿನಾಂಕದೊಳಗೆ ಆಗುತ್ತದೆ, ನಾಮಪತ್ರ ಸಲ್ಲಿಕೆಗೆ ಇದು ಕೊನೇ ದಿನ, ಬ್ಯಾನರ್ ಕಟ್ಟಲು ಇದು ಕೊನೇ ದಿನ, ನಾಮಪತ್ರ ಹಿಂತೆಗೆದುಕೊಳ್ಳಲು ಇದು ಕೊನೇ ದಿನ, ಈ ದಿನ ಚುನಾವಣೆ... ದಿನಾಂಕಗಳು ನಿಗಧಿಯಾಗುತ್ತಿವೆ, ಗಡಿಗಳು ಸೃಷ್ಟಿಯಾಗುತ್ತಿವೆ. ಮೊನ್ನೆ ನಾನು ಯೋಚಿಸುತ್ತಿದ್ದೆ: ಹೀಗೆ ನಾನು ಸಣ್ಣಪುಟ್ಟದ್ದಕ್ಕೆಲ್ಲ ತಲೆಕೆಡಿಸಿಕೊಂಡು, ಬೇಸರಗೊಂಡು, ಮೂಡೌಟ್ ಮಾಡಿಕೊಂಡು ಕೂರುತ್ತೇನೆ. ಆದರೆ ಪ್ರತಿದಿನ ಟೆನ್ಷನ್ ಮಾಡಿಕೊಳ್ಳುತ್ತಾ, ಒಬ್ಬರ ಮೇಲೊಬ್ಬರು ಆಪಾದನೆ ಹೊರಿಸುತ್ತಾ, ಜಗಳವಾಡುತ್ತಲೇ ಇರುತ್ತಾರಲ್ಲಾ ರಾಜಕಾರಣಿಗಳು, ಅವರಿಗೆ ಸ್ವಲ್ಪವೂ ಬೇಜಾರಾಗೊಲ್ಲವಾ? ಯಾವನಾದರೂ ಒಬ್ಬ ರಾಜಕಾರಣಿಗೆ "ಅಯ್ಯೋ ಸಾಕಾಗಿ ಹೋಯ್ತಪ್ಪ ಈ ರಾಜಕೀಯ! ಈ ಓಡಾಡೋದು, ಇವತ್ತು ಕಿತ್ತಾಡಿಕೊಂಡವರ ಜೊತೆಯೇ ನಾಳೆ ಮೈತ್ರಿಗಾಗಿ ಹೋಗುವುದು, ಜನರಿಗೆ ಸುಳ್ಳೇ ಆಶ್ವಾಸನೆಗಳನ್ನ ಕೊಡೋದು, ಎಲೆಕ್ಷನ್ನಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡೋದು, ಕೊನೆಗೆ ಗೆದ್ದು ಬಂದು ಅಧರ್ಮಮಾರ್ಗದಲ್ಲಿ ದುಡ್ಡು ಮಾಡೋದು.. ಎಲ್ಲಾ ಬೇಜಾರ್ ಬಂದುಹೋಯ್ತು! ಇಷ್ಟು ವರ್ಷ ರಾಜಕೀಯ ಮಾಡಿದ್ದು ಸಾಕು. ಇನ್ನು ಹಾಯಾಗಿ ಹೆಂಡತಿ-ಮಕ್ಕಳ ಜೊತೆ ಮನೇಲಿರ್ತೀನಿ" ಅಂತ ಅನ್ನಿಸಿಲ್ಲವಲ್ಲ? ಯೋಚಿಸಿದರೆ ಆಶ್ಚರ್ಯವಾಗತ್ತೆ, ಅಸಹ್ಯವಾಗತ್ತೆ. ಅದಕ್ಕೇ, ನಾನು ಯೋಚಿಸಬಾರದೆಂದು ನಿರ್ಧರಿಸುತ್ತೇನೆ.

ಇವತ್ತು ರಾತ್ರಿ ಯುಗಾದಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದೇನೆ. ಸಾಕಾಗಿದೆ ಬೆಂಗಳೂರು. ಸಾಕಾಗಿದೆ ಟ್ರಾಫಿಕ್ಕು. ಸಾಕಾಗಿದೆ ಗಲಾಟೆ. ಸಾಕಾಗಿದೆ ಮಾತು. ಬೇಕಾಗಿದೆ: ಅಮ್ಮನ ಮಡಿಲು, ಅಪ್ಪನ ಜೊತೆ ಮೌನ, ತೊಂಭತ್ತಕ್ಕೂ ಹೆಚ್ಚು ಸಂವತ್ಸರಗಳನ್ನು ಕಂಡಿರುವ ಅಜ್ಜನೊಂದಿಗೆ ಮೆಲು ಸಂವಾದ, ಕೊಟ್ಟಿಗೆಯ ಕರುವಿನ ನೀಲಿ ಕಣ್ಣಲ್ಲಿ ಕಾಣಬೇಕಿರುವ ನನ್ನ ಬಿಂಬ... ಈ ಸಲದ ಚೈತ್ರ, ಫಾಲ್ಗುಣದ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಬರುತ್ತಿದ್ದಾನೆ: ಎಲ್ಲ ಗಡಿಗಳನ್ನೂ ಮೀರಿ.. ಹಿತ್ತಿಲ ಪೇರಲೆ ಗಿಡದಲ್ಲಿ ಹಣ್ಣಾಗಿವೆಯಂತೆ.. ಮಳೆಗಾಲಕ್ಕೆ ಮುನ್ನವೇ ಗಿಡಗಳೆಲ್ಲ ಚಿಗುರಿವೆಯಂತೆ.. ಬಾವಿಯಲ್ಲಿ ನೀರು ಬಂದಿದೆಯಂತೆ.. ಅಂಗಳದಲ್ಲಿ ಕಳೆ ಹಬ್ಬಿದೆಯಂತೆ.. ಅಪ್ಪನ ಬಾಯಲ್ಲಿ ವರ್ಣನೆ ಕೇಳುತ್ತಿದ್ದರೆ, ಅದೆಷ್ಟು ಬೇಗ ರಾತ್ರಿಯಾಗುತ್ತದೋ, ಬಸ್ಸು ಬರುತ್ತದೋ, ಊರು ತಲುಪುತ್ತೇನೋ ಎಂದು ತುಡಿಯುತ್ತಿದ್ದೇನೆ!

ನಿಮಗೆಲ್ಲಾ, ಯುಗಾದಿಯ ಹಾರ್ದಿಕ ಶುಭಾಶಯಗಳು..

Friday, December 28, 2007

ಹೊಸ ವರುಷದ ಜೋಳಿಗೆಯಲ್ಲಿ...

ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..

ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.

ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.

ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.

ಮತ್ತೆ ಬಿಳೀ ಖಾಲಿ ಹಾಳೆ..

ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.

ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.

ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.

ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.

ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.

ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.

ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.

ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'

ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...

* * *

ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.

ಶುಭಾಶಯಗಳು.

Tuesday, November 06, 2007

ದೀಪವಾಗಬೇಕಿದೆ...

ಜನಿಯ ನೆರವಿಗೆ ಅದೆಷ್ಟೊಂದು ಚಿಕ್ಕೆಗಳು..! ದಿಟ್ಟಿ ಹಾಯಿಸಿದಷ್ಟೂ ವಿಸ್ತರಿಸಿರುವ, ದಿಗಂತದಂತೆ ಕಂಡರೂ ಅಂತ್ಯವಲ್ಲದ ಈ ಅಗಾಧ ನಭದ ಅಧಿಪತಿ ಚಂದಿರನ ಒಡ್ಡೋಲಗದಲ್ಲಿ ಅದೆಷ್ಟು ಕೋಟಿ ಕೋಟಿ ತಾರೆಗಳ ಒಟ್ಟಿಲು..! ಸುತ್ತ ಕವಿದಿರುವ ತಿಮಿರದ ಕಣಗಳ ಅಪ್ಪುಗೆಗೆ ಸಿಲುಕಿ ಕುಳಿತಿರುವ ನನ್ನ ನೆರವಿಗೆ ಬರುವ ಯಾವ ಕರುಣೆಯನ್ನೂ ತೋರದೇ ಅಲ್ಲಲ್ಲೇ ತಮ್ಮ ತಮ್ಮ ಗ್ರಹಗಳಿಗೆ ಬೆಳಕು ನೀಡುತ್ತಾ ನಿಶ್ಚಿಂತೆಯಿಂದಿರುವ ನಕ್ಷತ್ರಗಳು..! ಚಂದ ತುಂಬಿದ ಚಂದ್ರಮ, ಚಿಕ್ಕೆ ತುಂಬಿದ ಗಗನ, ಕನಸು ತುಂಬಿದ ನಿದ್ರೆ ...ಎಂದೇನೇನೋ ಸುಳ್ಳೇ ಭರವಸೆಗಳನಿತ್ತು ಸಂಜೆಯಾಗುತ್ತಿದ್ದಂತೆಯೇ ಮತ್ಯಾವುದೋ ದೇಶದವರಿಗೆ ಬೆಳಗು ಮಾಡಲು, ಅಲ್ಲಿಯ ಹಕ್ಕಿಗಳನ್ನು ಗೂಡಿನಿಂದ ಪುರ್ರನೆ ಹಾರಿಸಲು ಓಡಿ ಹೋದ ಸೂರ್ಯ... ಬೇಗ ಬಾ ಭೂಪಾ, ಈ ಅಂಧಃಕಾರವ ಕಳೆ...

ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...

ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.

ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."

ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?

ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?

ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...

ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...

Thursday, September 13, 2007

ಗಣೇಶ ಬಂದು ಹೋದ

ಸರ್ವಜಿತು ಸಂವತ್ಸರದ ಭಾದೃಪದ ಶುಕ್ಲದ ಚೌತಿಯ ದಿನ. ಬೆಳಗ್ಗೆ ನಾಲ್ಕು ಗಂಟೆಯಾಗುತ್ತಿತ್ತು. ಈಶ್ವರ ಬಂದು ಗಣೇಶನನ್ನು ಎಬ್ಬಿಸಿದ:

“ಏಳು ಮಗನೇ.. ಗಂಟೆ ನಾಲ್ಕಾಗುತ್ತಿದೆ. ಇವತ್ತು ಚೌತಿ, ಭುವಿಗೆ ಹೋಗಬೇಕು ನೀನು. ಜನ ಎಲ್ಲಾ ಕಾಯ್ತಿರ್ತಾರೆ ಚಕ್ಲಿ, ಮೋದಕ, ಪಂಚಕಜ್ಜಾಯ, ಇನ್ನೂ ಏನೇನೋ ಮಾಡ್ಕೊಂಡು.. ಏಳು.. ಎದ್ದೇಳು.. ಡ್ರೆಸ್ ಮಾಡ್ಕೊಂಡು ಹೊರಡುವ ಹೊತ್ತಿಗೆ ತಡವಾಗೊತ್ತೆ..”

‘ಮೋದಕ’ ಶಬ್ದ ಕೇಳಿದ್ದೇ ತಡ, ಗಣೇಶ ದಡಬಡಿಸಿ ಎದ್ದ. ಅವನಿಗಾಗಲೇ ಹಸಿವಾಗಲಿಕ್ಕೆ ಶುರುವಾಯಿತು. ಅಲ್ಲೇ ಪಕ್ಕದ ಟೀಪಾಯಿಯ ಮೇಲಿಟ್ಟಿದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ. ತನ್ನ ತರಹದ್ದೇ ಸಾವಿರಾರು ರೂಪಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಂದೊಂದು ದಿಕ್ಕಿಗೂ ಒಬ್ಬೊಬ್ಬರು ಹೋಗುವಂತೆ ಪ್ಲಾನ್ ಮಾಡಿದ. ಅದರಲ್ಲೇ ಒಂದು ರೂಪ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಹೊರಟಿತು.

ಇಲಿ ಜೋರಾಗಿ ಓಡುತ್ತಿತ್ತು. ಗಣೇಶ ಬೈದ: "ಏಯ್ ಸ್ವಲ್ಪ ನಿಧಾನ ಹೋಗೋ.. ಸಿಕ್ಕಾಪಟ್ಟೆ ಜಂಪ್ ಆಗ್ತಿದೆ..!"

"ಹೂಂ ಕಣಣ್ಣ.. ಈ ವರ್ಷ ಮಳೆ ಜಾಸ್ತಿ ಆಗಿರೋದ್ರಿಂದ ರೋಡೆಲ್ಲ ಪೂರ್ತಿ ಹಾಳಾಗ್ ಹೋಗಿದೆ.. ಎಲ್ಲಾ ಆ ವರುಣಂದೇ ತಪ್ಪು!" ಇಲಿ ತಪ್ಪನ್ನು ವರುಣನ ಮೇಲೆ ಹೊರಿಸಿತು.

“ಅಲ್ಲಾ, ಇಷ್ಟು ವರ್ಷ ಮಳೆ ಇಲ್ಲ ಅಂತ ಜನ ಒದ್ದಾಡ್ತಿದ್ರು. ಸುಮಾರು ಜನ ನನ್ ಮುಂದೆ ಅಪ್ಲಿಕೇಶನ್ ಇಟ್ಟು ‘ವರುಣಂಗೆ ಸ್ವಲ್ಪ ಶಿಫಾರಸು ಮಾಡ್ಸಯ್ಯಾ’ ಅಂದಿದ್ರು. ನಂಗೂ ದೂರು ತಗೊಂಡೂ ತಗೊಂಡೂ ಬೇಜಾರ್ ಬಂದುಹೋಗಿತ್ತು. ಅದಕ್ಕೇ ನಾನೇ ವರುಣನ ಹತ್ರ ಹೇಳಿ ಈ ವರ್ಷ ಸ್ವಲ್ಪ ಜಾಸ್ತಿ ಮಳೆ ಗ್ರಾಂಟ್ ಮಾಡ್ಸಿದೆ. ಈಗ ನೋಡಿದ್ರೆ...”

“ಹ್ಮ್.. ಏನೂ ಮಾಡ್ಲಿಕ್ಕಾಗಲ್ಲ ಬಿಡಣ್ಣಾ.. ಆದ್ರೆ ಇಷ್ಟೆಲ್ಲಾ ರಸ್ತೆ ಹಾಳಾಗಿದ್ರೂ ಸರ್ಕಾರದವ್ರು ಇತ್ಲಾಗೆ ಗಮನಾನೇ ಕೊಡದೆ ಬರೀ ‘ಅಧಿಕಾರ ಹಸ್ತಾಂತರ’ ‘ಅಧಿಕಾರ ಹಸ್ತಾಂತರ’ ಅಂತ ಹೇಳ್ತಾ ಕೂತಿದಾರಲ್ಲಾ, ಏನ್ ಮಾಡೋಣ ಹೇಳು ಇವ್ರಿಗೆ?”

“ಏನದು ಅಧಿಕಾರ ಹಸ್ತಾಂತರ?”

“ಅದೇ ಕುಮಾರಸ್ವಾಮಿ ಇದಾರಲ್ಲಾ..?”

“ಯಾರು ನನ್ನ ಅಣ್ಣಾನಾ?”

“ಅವ್ರಲ್ಲ ಒಡೆಯಾ, ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕುಮಾರಸ್ವಾಮಿ, ಅವ್ರು ಯಡಿಯೂರಪ್ಪನವ್ರಿಗೆ ಎರಡೂವರೆ ವರ್ಷ ಆದ್ಮೇಲೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡ್ತೀನಿ ಅಂದಿದ್ರಂತೆ. ಈಗ ನೋಡಿದ್ರೆ ‘ಅಪ್ಪನ್ ಕೇಳ್ಬೇಕು’ ಅಂತಿದಾರಂತೆ!”

“ಅಯ್! ಹೌದಾ! ಹಾಗಾದ್ರೆ ಆ ಕುಮಾರಸ್ವಾಮಿಗೆ ಒಂದು ಶಾಪ ಕೊಟ್ಬಿಡ್ಲಾ?”

“ಸುಮ್ನಿರೀ ಒಡೆಯಾ.. ನಮಗ್ಯಾಕೆ ರಾಜಕೀಯ.. ಏನಾದ್ರೂ ಮಾಡ್ಕೊಂಡು ಸಾಯ್ಲಿ.. ಅವ್ರಪ್ಪ ದೇವೇಗೌಡ್ರು ಬೇರೆ ದಿನಾ ಯಾವ್ಯಾವ್ದೋ ದೇವ್ರಿಗೆಲ್ಲಾ ಹರಕೆ ಹೊತ್ಕೋತಿದಾರೆ.. ನೀನೀಗ ಶಾಪ ಕೊಡೋದು, ಕೊನೆಗೆ ಮತ್ತಿನ್ಯಾರೋ ಬಂದು ‘ಗೌಡ್ರು ನಂಗೆ ಹರಕೆ ಹೊತ್ಕೊಂಡಿದಾರೆ, ಅವ್ರ ಆಸೇನಾ ನಾನು ಈಡೇರಿಸ್ಲೇಬೇಕು, ನಿನ್ ಶಾಪ ಹಿಂದಕ್ ತಗೋ’ ಅಂದ್ರೆ ಕಷ್ಟ. ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”

“ಹ್ಮ್.. ನೀ ಹೇಳೋದೂ ಒಂದ್ರೀತಿ ಸರಿ ಇಲಿರಾಯ..”

ಬೆಂಗಳೂರಿನ ಬೀದಿಬೀದಿಗಳಲ್ಲೂ ಶಾಮಿಯಾನಾ ಹಾಕಿ, ಸ್ಟೇಜು ಕಟ್ಟಿ, ದೊಡ್ಡ ದೊಡ್ಡ ಬಣ್ಣಬಣ್ಣದ ಮಡಿ ಉಟ್ಟ ತನ್ನದೇ ಮೂರ್ತಿಗಳನ್ನಿಟ್ಟಿದುದನ್ನು ನೋಡುತ್ತಾ, ಖುಷಿ ಪಡುತ್ತಾ, ಗಣೇಶ ಮುಂದೆ ಸಾಗಿದ. ಒಂದೊಂದೇ ಭಕ್ತರ ಮನೆ ಮೆಟ್ಟಿಲು ಹತ್ತಿಳಿದು ಬರಲಾರಂಭಿಸಿದ. ಎಲ್ಲರ ಮನೆಯಲ್ಲೂ ಪೂಜೆ ನಡೆಯುತ್ತಿತ್ತು. ಭಟ್ಟರಿಗಂತೂ ಪುರುಸೊತ್ತೇ ಇರಲಿಲ್ಲ. ಐದೇ ನಿಮಿಷದಲ್ಲಿ ಮಿಣಿಮಿಣಿಮಿಣಿ ಮಂತ್ರ ಹೇಳಿ ಪೂಜೆ ಮುಗಿಸಿ, ದುಡ್ಡಿಸಕೊಂಡು, ಮುಂದಿನ ಮನೆಗೆ ಹೋಗುತ್ತಿದ್ದರು. ಯಾರದೋ ಮನೆಯಲ್ಲಿ ಗಣೇಶ ಮೊಬೈಲಿನಲ್ಲೇ ಮಂತ್ರ ಪಠಣ ಮಾಡಿಸಿಕೊಂಡು ಪೂಜೆ ಮುಗಿಸಿಕೊಂಡ. ಮತ್ತಿನ್ಯಾರೋ ಭೂಪ ಕಂಪ್ಯೂಟರ್ ಮುಂದೆ ಕೂತು ಗೂಗಲ್ಲಿನಲ್ಲಿ ಸರ್ಚ್ ಮಾಡಿ ಆನ್‌ಲೈನ್ ಪೂಜೆ ಮಾಡಿ ಮುಗಿಸಿಬಿಟ್ಟ! ಪರಮೇಶ್ವರ ಪುತ್ರನಿಗೆ ಪರಮಾಶ್ಚರ್ಯ! ದೇವಲೋಕಕ್ಕೆ ಮರಳಿದಮೇಲೆ ಸರಸ್ವತಿಯನ್ನು ಕಂಡು ‘ನಿನ್ನ ಆಶೀರ್ವಾದದಿಂದ ಭೂಲೋಕದಲ್ಲಿ ಜನ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ’ ಎಂದು ಹೇಳಬೇಕೆಂದುಕೊಂಡ.

ಸಂಜೆ ಹೊತ್ತಿಗೆ ಈ ಬೀದಿ ಶಾಮಿಯಾನಾ ಸ್ಟೇಜುಗಳಿಂದ ಕರ್ಕಶವಾದ ದನಿ ಕೇಳಿಬರುತ್ತಿತ್ತು. ಗಣೇಶ ಏನಾಯಿತೆಂದು ನೋಡಲಾಗಿ, ತನ್ನ ಮೂರುತಿಯ ಎದುರು ನಿಂತು ಒಂದಷ್ಟು ತರುಣಿಯರೂ-ತರುಣರೂ ‘ಕೆಂಚಾಲೋ ಮಂಚಾಲೋ..’ ಎಂದು ಹಾಡುತ್ತಿದ್ದರು. “ಇದ್ಯಾವ ಭಾಷೆ?” ಕೇಳಿದ ಗಣೇಶ ಇಲಿಯ ಬಳಿ. ಇಲಿ “ಗೊತ್ತಿಲ್ಲ” ಅಂತು. ಸ್ಲೀವ್‌ಲೆಸ್ ಹುಡುಗಿಯರನ್ನು ಬ್ರಹ್ಮಚಾರಿ ಗಣೇಶ ನೋಡದಾದ. ಮೈಕಿನ ದನಿ ಕೇಳೀ ಕೇಳೀ ಗಣೇಶನಿಗೆ ತಲೆನೋವು ಬಂತು.

ರಾತ್ರಿ ಹನ್ನೊಂದರ ಹೊತ್ತಿಗೆ ಲಾರಿಗಳ ಮೇಲೆ ಆ ದೊಡ್ಡ ದೊಡ್ಡ ಮೂರ್ತಿಗಳನ್ನೆಲ್ಲ ಇಟ್ಟುಕೊಂಡು ಜನ ಕೆರೆಯ ಕಡೆ ಹೊರಟರು. ಗಣೇಶನೂ ಇಲಿಯ ಮೇಲೆ ಕೂತು ಅವರನ್ನು ಫಾಲೋ ಮಾಡಿದ. ಲಾರಿಯ ಎದುರಿಗೆ ‘ಢಂಕಣಕ ಢಂಕಣಕ’ ಅಂತ ಬಡಿಯುತ್ತ ಒಂದಷ್ಟು ಜನ ತೈತೈ ಎಂದು ಕುಣಿದಾಡುತ್ತಿದ್ದರು. ತನ್ನಪ್ಪ ನಟರಾಜನಿಗಿಂತ ಜೋರಾಗಿ ಕುಣಿಯುತ್ತಿರುವ ಈ ಮಂದಿಯನ್ನು ನೋಡಿ ಗಣೇಶ ದಂಗಾದ. ಅವರೆಲ್ಲರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. “ಏನದು ವಾಸನೆ?” ಕೇಳಿದ ಗಣೇಶ. ಈ ಬಾರಿ ಹಾವು ಉತ್ತರಿಸಿತು: “ನೀವೆಲ್ಲಾ ಸಂತಸದ ಘಳಿಗೆಗಳಲ್ಲಿ ಮಧುಪಾನ ಮಾಡ್ತೀರಲ್ವಾ? ಹಾಗೇನೇ ಇವ್ರೂ ಮಾಡಿದಾರೆ.” “ಓಹ್ ಹಾಗಾ, ಎಲ್ಲಾ ಓಕೆ; ಆದ್ರೆ ವಾಸ್ನೆ ಯಾಕೆ?” “ಇದು ಆ ಮಧುವಿಗಿಂತ ಸ್ವಲ್ಪ ಸ್ಟ್ರಾಂಗು, ಅದಕ್ಕೇ ವಾಸ್ನೆ!”

ಮೂರ್ತಿಗಳನ್ನೆಲ್ಲಾ ಕೆರೆಯೊಳಗೆ ಮುಳುಗಿಸಿದರು. ಅವುಗಳ ಜೊತೆಗೇ ಹೂವು, ಹಣ್ಣು, ಕಾಯಿ, ಕುಂಕುಮ, ಅರಿಶಿಣ.. ಮಣ್ಣ ಗಣೇಶ ನಿಧನಿಧಾನವಾಗಿ ಕೆರೆಯ ನೀರಿನಲ್ಲಿ ಕರಗತೊಡಗಿದ. ಅವನ ಮೈಯ ಬಣ್ಣ ಕೆರೆಯ ನೀರಿನೊಂದಿಗೆ ಬೆರೆಯತೊಡಗಿತು. ಇಡೀ ಕೆರೆಗೆ ಕೆರೆ ಕೊಳಚೆ ಗುಂಡಿಯಂತೆ ಕಾಣತೊಡಗಿತು..

ಇಲಿಯೂ, ಹಾವೂ ಬೆರಗುಗಣ್ಣುಗಳಿಂದ ಇವನ್ನೆಲ್ಲಾ ನೋಡಿದವು.. ಗಣೇಶನಿಗಂತೂ ತಾನೇ ಆ ಕೆರೆಯ ನೀರಿನಲ್ಲಿ ಕರಗುತ್ತಿದ್ದಂತೆ, ತನ್ನ ಅಂತಃಸತ್ವವೇ ಅಲ್ಲಿ ಲೀನವಾಗುತ್ತಿದ್ದಂತೆ ಭಾಸವಾಗತೊಡಗಿತು.. ಹೊಟ್ಟೆ ತೊಳೆಸಲಾರಂಭಿಸಿತು.. ಇಲಿಗೆ ಆದೇಶವಿತ್ತ: “ಇಲ್ಲಿನ್ನು ಅರೆಕ್ಷಣ ಇರಲಾರೆ.. ಬೇಗ ನಡೆ.. ದೇವಲೋಕಕ್ಕೆ ಹೋಗೋಣ..” ಬೆಕ್ಕು ಕಂಡವನಂತೆ ಇಲಿರಾಯ ಓಡತೊಡಗಿದ.

ಗಣೇಶ ಮರುದಿನ ಬೆಳಗ್ಗೆ ಎದ್ದು ಭೂಲೋಕದತ್ತ ಬಗ್ಗಿ ನೋಡಿದರೆ ಒಂದಷ್ಟು ಜೆಸಿಬಿ ಯಂತ್ರಗಳು, ಮಿನಿ ಕ್ರೇನುಗಳು ಕೆರೆಯ ಹೂಳೆತ್ತುತ್ತಿದ್ದವು. ಅರೆಬರೆ ಕರಗಿದ ಗಣೇಶನ ಮೂರ್ತಿಗಳನ್ನು ದಡಕ್ಕೆಳೆದು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದವು. ಅವನ್ನೆಲ್ಲಾ ಒಡೆದು ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದಾಗಿ ಜನ ಮಾತಾಡಿಕೊಳ್ಳುತ್ತಿರುವುದು ದೇವಲೋಕದವರೆಗೂ ಕೇಳುತ್ತಿತ್ತು. ಹಿಂದಿನ ದಿನ ಹೊಟ್ಟೆಬಿರಿಯೆ ತಿಂದಿದ್ದ ತಿಂಡಿಗಳನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಗಣೇಶ ಟಾಯ್ಲೆಟ್ಟಿನತ್ತ ನಡೆದ.

[ಎಲ್ಲರಿಗೂ ಚೌತಿಯ ಶುಭಾಷಯಗಳು.]