Tuesday, December 06, 2016

ಜಾತ್ರೆ ಮುಗಿದ ಬೀದಿ

ಜಾತ್ರೆಯಲ್ಲಿ ನಾನು ಭೇಟಿಯಿಡದ ಅಂಗಡಿಗಳಲ್ಲಿ ಏನಿತ್ತು?
ಹೊಸಾತಂಗಿಗಿಷ್ಟದ ನವಿಲಿನಾಕಾರದ ಹೇರ್‌ಕ್ಲಿಪ್ಪು,
ಮಡದಿಗೊಪ್ಪುವ ಬಣ್ಣದ ಟಾಪಿಗೆ ಮ್ಯಾಚಾಗುವ ಕಿವಿಯೋಲೆ,
ನೆರೆಮನೆ ಪುಟ್ಟಿಗೆ ಪುಟ್ಟಸೀರೆಯುಡಿಸಿದ ದಿನಕ್ಕೊಂದು ಮುಂದಲೆಬೊಟ್ಟು,
ಅತ್ತೆಮಗನಿಗೆ ಕೊಟ್ಟೂದಿಸಬಹುದಾಗಿದ್ದ ಈಷ್ಟುದ್ದದ ಪೀಪಿ,
ಮನೆಯ ವಾಸ್ತುಬಾಗಿಲಿಗೆ ಇಳಿಬಿಡಬಹುದಾಗಿದ್ದ ಪಿಳಿಪಿಳಿ ತೋರಣ...

ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು,
ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು,
ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು,
ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು

ನಾನು ಕೊಳ್ಳದ ಬಲೂನು ಕೊನೆಗೂ ಬಿಕರಿಯಾಗದೆ,
ಜಾತ್ರೆ ಮುಗಿದ ದಿನ ಅದರ ಬಾಯಿಗೆ ಕಟ್ಟಿದ್ದ ಗಂಟು ಬಿಚ್ಚಿ
ಅದರೊಳಗಿದ್ದ ಉಸಿರನ್ನೆಲ್ಲ ಫುಸ್ಸನೆ ಹೊರತೆಗೆದು
ಇಷ್ಟು ಸಣ್ಣಕಾದ ರಬ್ಬರಿನ ಮುದ್ದೆಯನ್ನು ಕೈಚೀಲದೊಳಗಿಟ್ಟು
ಗುಡಾರ ಸಮೇತ ಮತ್ಯಾವ ಊರಿಗೆ ಹೋದ ಆ ಅಂಗಡಿಯವ?
ಇಂದು ಎಲ್ಲಿ ತೇರು? ಯಾವ ದೇವರಿಗೆ ಉತ್ಸವ?

ನಾನು ಖರೀದಿಸದ ವಸ್ತುಗಳೆಲ್ಲ ಇನ್ಯಾವುದೋ ಊರಲ್ಲೀಗ
ವಿಕ್ರಯಕ್ಕಿರಬಹುದು. ಕೊನೆಗೂ ಎಲ್ಲಕ್ಕೂ ಯೋಗದ ನಂಟು:
ಯಾವ ಕ್ಲಿಪ್ಪು ಯಾರ ಮುಡಿಗೋ
ಯಾವ ಓಲೆ ಯಾರ ಕಿವಿಗೋ
ಹಸಿರು ತೋರಣ ಯಾರ ಮನೆ ಸಂಭ್ರಮಕ್ಕೋ
ಚೌಕಾಶಿಗೊಗ್ಗದೆ ನಾ ಬಿಟ್ಟುಬಂದ ಆ
ಚಿತ್ರಖಚಿತ ತಟ್ಟೆಯಲ್ಲಿ ಯಾರಿಗೆ ಊಟವೋ

ಜಾತ್ರೆ ಮುಗಿದ ಬೀದಿ ಬಿಕೋ ಎನ್ನುತ್ತಿದೆ
ಮೂಲೆಮೂಲೆಗೂ ಹರಡಿರುವ ಕಸದ ತುಣುಕುಗಳು
ಸಂಭ್ರಮ ಗಿಜಿಗಿಜಿ ವ್ಯಾಪಾರ ಲಾಭ ನಷ್ಟಗಳ ಕತೆ ಹೇಳುತ್ತಿವೆ
ಬಿಕರಿಯಾಗದ ಬಲೂನಿನೊಳಗಿಂದ ಹೊರಬಿದ್ದ ಉಸಿರು
ಇನ್ನೂ ಇಲ್ಲೇ ಹರಿದಾಡುತ್ತಿರಬೇಕು:
ಅದಕ್ಕೇ ಈ ಬೀದಿ ಈ ಕಾವಳದ ರಾತ್ರಿಯಲ್ಲೂ ಬೆಚ್ಚಗಿದೆ.

Monday, November 14, 2016

ವಾಗತಿ

ಇಲ್ಲರಳಿದ್ದಲ್ಲರಳದೇ ಎಂದವರು ಕಿತ್ತು
ಕೊಟ್ಟಿದ್ದ ಸೇವಂತಿಗೆ ಗಿಡದ ಹಿಳ್ಳು
ಯಾಕೋ ಮುದುಡಿದೆ ಕೊಟ್ಟೆಯಲ್ಲಿ
ವಾಗತಿಯೆಲ್ಲಾ ಮಾಡಿಯಾಗಿತ್ತು ಸರಿಯಾಗಿಯೇ
ಸುಡಿಮಣ್ಣು, ಎರೆಗೊಬ್ಬರ, ಹೊತ್ತೊತ್ತಿಗೆ ನೀರು
ಕಮ್ಮಿ ಮಾಡಿರಲಿಲ್ಲ ಏನೂ
ಆದರೂ ಜೋತಿದೆ ನೆಲದತ್ತ ಬಾಡಿ
ಬಿಟ್ಟುಕೊಟ್ಟಂತೆ ಬದುಕುಳಿವ ಆಸೆ

ಹೀಗಾಗಿದ್ದು ಇದೇ ಮೊದಲೇನಲ್ಲ
ಹಾಗಂತ ಯಾರ ಮೇಲೂ ಆರೋಪವಿಲ್ಲ
ಎಲ್ಲೆಲ್ಲಿಂದಲೋ ಬಂದು ಬೇರೂರಿದವರೇ ತುಂಬಿದ
ಸರ್ವಪ್ರಬೇಧದ ಶಾಂತಿಯ ಅಂಗಳವಿದು
ಇನ್ನೇನು ಹೊರಡುವ ಹೊತ್ತಿಗೆ ಅತ್ತೆ ಕಿತ್ತುಕೊಟ್ಟ
ಗೆಂಟೆಹೂವು, ಬೇಡ ಎಂದರೂ ಕೇಳದೆ ಶಾಂತಕ್ಕ
ಹೆರೆ ಮುರಿದುಕೊಟ್ಟ ಕೆಂಪು ದಾಸವಾಳ,
ಭಾರೀ ಆಸೆಪಟ್ಟು ಅಮ್ಮ ತವರಿಂದ ತಂದ
ತಿಳಿಹಳದಿ ಲಿಲ್ಲಿ... ಇಲ್ಲಿ ಚಿಗುರಿ ನಳನಳಿಸುತ್ತಿದೆ.

ತಂದುಕೊಟ್ಟದ್ದಿದೆ ನಾನೂ- ಗುಂಡಿಯಿಂದೆತ್ತಿ ಗೊಬ್ಬರ
ಹಾಯಿಸಿದ್ದಿದೆ ನೀರು- ಟ್ಯಾಂಕಿನಿಂದೆಳೆದು ಪೈಪು
ಕುಳಿತದ್ದೂ ಇದೆ- ಗಿಡ ಅಡ್ಡಟಿಸಿಲೊಡೆವ ಬೆರಗ ನೋಡುತ
ಭಾವಿಸಿದ್ದಿದೆ- ಅರಳಿದ ಹೂಗಳೆಲ್ಲ ಅಮ್ಮನ
ಕಣ್ಣಿಂದ ಹೊರಟ ಸಂಭ್ರಮದ ಕಿರಣಗಳೇ ಎಂದು
ದುಃಖಿಸಿದ್ದಿದೆ ಕ್ಷಣ ನಗರದ ಗಿಜಿಗಿಜಿಯಲ್ಲಿ ಕೂತು
ಊರ ಮನೆಯಂಗಳದ ಸೊಬಗ ನೆನೆದು

ಇವತ್ತಿಲ್ಲಿ ಮತ್ತೊಂದು ಬೆಳಗು
ನಾಲ್ಕು ದಿನ ತುಳಸೀಗಿಡಕ್ಕೆ ನೀರು ಹಾಕಲು ಹೇಳಿ ಹೋಗಿದ್ದಾರೆ
ಪ್ರವಾಸ ಹೊರಟ ಪಕ್ಕದ ಮನೆಯವರು
ಊರಿಂದ ಬಂದ ಅಮ್ಮ ಬಗ್ಗಿಬಗ್ಗಿ ಹನಿಸುತ್ತಿದ್ದಾಳೆ ಪಾಟಿಗೆ
ಅಲ್ಲಿ ಅಂಗಳದಲ್ಲಿ ತಾನೂರಿಬಂದ ಡೇರೆಗಿಡದ ಕೊಟ್ಟೆಗಳಿಗೆ
ಅಪ್ಪ ಬೆಳಿಗ್ಗೆ ನೀರು ಹಾಕಿದರೋ ಇಲ್ಲವೋ ಎಂದು ಯೋಚಿಸುತ್ತ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಚಿತ್ರ

ಅಂಗಡಿಗೆ ಹೊದಿಸಿದ ಗಾಜು
ಹೋಟೆಲಿನ ಟೇಬಲ್ಲಿನ ಮೇಲಿನ ಗಾಜು
ತುಂಬ ದಿನದಿಂದ ಚಲಿಸದೆ ನಿಂತ ಕಾರಿನ ಗಾಜು-
ಗಳ ಮೇಲೆ ಕೂತ ಧೂಳಿನ ಮೇಲೆಯೇ
ಚಿತ್ರ ಬಿಡಿಸುವ ವ್ಯಕ್ತಿಯೊಬ್ಬನನ್ನು ಮೊನ್ನೆ ನೋಡಿದೆ.

ಬಹಳ ಆಸಕ್ತಿಕರ ಎನಿಸಿ ಹಿಂಬಾಲಿಸಿದೆ.
ಆತ ಗಾಜುಹೊದಿಕೆಗಳ ಹುಡುಕಿಕೊಂಡು ಹೋಗುವುದೇ
ಕುತೂಹಲಕಾರಿಯಾಗಿತ್ತು. ಸುಮಾರು ದಿನದಿಂದ
ಒರೆಸದ ಗಾಜುಗೋಡೆಗಳು, ಚಾಲಕನಿಲ್ಲದೆ ಸುಮ್ಮನೆ ನಿಂತ
ಕಾರುಗಳು, ಕಛೇರಿಯೊಂದರ ಮೂಲೆಗಿರಿಸಿದ ಅಲಕ್ಷಿತ
ಟೀಪಾಯಿ, ಪಬ್ಲಿಕ್ ಟಾಯ್ಲೆಟ್ಟಿನ ಸಿಂಕಿನ ಮೇಲಿನ ಕನ್ನಡಿ,
ಕೆಲವೊಮ್ಮೆ, ಮುಚ್ಚಿದ ಮನೆಯ ಕಿಟಕಿಯ ಗಾಜು-
ಧೂಳು ಕೂತ ಯಾವ ನುಣ್ಣನೆ ವಸ್ತು ಕಂಡರೂ
ಇವನ ಮುಖ ಫಳಫಳ ಅರಳುತ್ತಿತ್ತು.
ಸುತ್ತಮುತ್ತ ಯಾರೂ ಇಲ್ಲದ ಸಮಯ ನೋಡಿ
ಕಳ್ಳನಂತೆ ಹೆಜ್ಜೆಯಿಡುತ್ತ ಧೂಳಾಕ್ರಮಿತ ವಸ್ತುವಿನ ಬಳಿ ಸಾಗಿ
ಅತ್ತಿತ್ತ ಮತ್ತೊಮ್ಮೆ ನೋಡಿ ಎಲ್ಲ ಪೂರ್ವನಿರ್ಧಾರಿತವೋ,
ಲೆಕ್ಕಾಚಾರ-ತಯಾರಿಯೆಲ್ಲಾ ಮನಸಲ್ಲೇ ಆಗಿತ್ತೋ ಎಂಬಂತೆ
ತನ್ನ ನಿಪುಣ ಬೆರಳುಗಳಿಂದ ಪಟಪಟನೆ ಚಿತ್ರ ಬರೆದು
ಅಲ್ಲಿಂದ ಪರಾರಿಯಾಗುತ್ತಿದ್ದ. ಕೆಲ ಚಿತ್ರಗಳ ಕೆಳಗೆ
ಅಡಿಬರಹವನ್ನೂ ಬರೆಯುತ್ತಿದ್ದ.

ಒಂದು ದಿವಸ ಇವನನ್ನು ಹಿಡಿದು ನಿಲ್ಲಿಸಿ ವಿಚಾರಿಸಿದೆ.
ಅವನು ಏನು ಹೇಳಿದ ಎಂದು ನಿಮಗೆ ಹೇಳುವುದಿಲ್ಲ.
ಆದರೆ ಮರುದಿನದಿಂದ ನಾನವನ ಹಿಂಬಾಲಿಸಲಿಲ್ಲ.

ಬದಲಿಗೆ, ಅವ ಬಿಡಿಸಿ ಬಿಟ್ಟುಹೋದ ಚಿತ್ರಗಳ ಬಳಿ
ಮರೆಯಾಗಿ ನಿಂತು ಕಾಯತೊಡಗಿದೆ.
ಮೊದಲ ದಿನ ಮಳೆ ಬಂದು ಗಾಜುಗೋಡೆಯ ಮೇಲಣ ಚಿತ್ರ
ತೊಳೆದುಹೋಯಿತು. ಇನ್ನೊಂದು ದಿನ ಕಾರಿನ ಹಿಂದೆ ನಿಂತು ಕಾದೆ.
ಅದರ ಚಾಲಕ ಆ ಚಿತ್ರದೆಡೆ ಕಣ್ಣೂ ಹಾಯಿಸದೆ
ಕಾರೇರಿ ಬುರ್ರನೆ ಹೊರಟುಹೋದ.
ಹೋಟೆಲಿನ ಮೂಲೆಟೇಬಲಿನಿಂದ ಅನತಿದೂರದಲ್ಲಿ ಕೂತು
ನಿರೀಕ್ಷಿಸತೊಡಗಿದೆ. ಕ್ಲೀನರ್ ಹುಡುಗ ಎತ್ತಲೋ ನೋಡುತ್ತ
ಇದನೊರೆಸಿಬಿಟ್ಟ. ತಡೆಯಬೇಕೆಂದು ಕೈಚಾಚಿದರೆ
ಏನ್ಕೊಡ್ಲಿ ಸಾರ್ ಅಂತ ನನ್ನ ಬಳಿಯೇ ಬಂದ.

ಅರಸುವಾಸೆಯನ್ನಿನ್ನೇನು ಬಿಡಬೇಕೆನ್ನುವಷ್ಟರಲ್ಲಿ
ಮನೆಯಿಂದ ಹೊರಬಂದ ಯುವತಿಯೊಬ್ಬಳು
ಕಿಟಕಿಯ ತಿಳಿಧೂಳ ಮೇಲಣ ರೇಖೆಗಳ ಅಳಿಸಲು ಹಿಂಜರಿದು
ಕೈಬಟ್ಟೆ ಸಮೇತ ನಿಂತದ್ದು ಕಾಣಿಸಿತು. ಕಾದೆ.
ಏನನಿಸಿತೋ, ಸ್ವಲ್ಪ ಹೊತ್ತಲ್ಲಿ ಆ ರೇಖೆಗಳಿಗೆ ಇನ್ನಷ್ಟು ಸೇರಿಸಿ
ಚಿತ್ರವನ್ನೇ ಬದಲಿದಳು. ಆಮೇಲಾಕೆ ಒಳಹೋಗಿ ಆ ರೇಖೆಗಳಿಂದ
ಒಳತೂರುವ ಬೆಳಕು ನೆಲಹಾಸಿನ ಮೇಲೆ ಮೂಡಿಸಿದ
ಚಿತ್ತಾರ ನೋಡುತ್ತ ಕೂತಳೆಂದು ನಾನು ಕಲ್ಪಿಸಿದೆ.

ಅಂದು ನಾನು ಮನೆಗೆ ತೆರಳಿ ಆ ಹುಡುಗಿ
ಬೆಳಕು ಮೂಡಿಸಿದ ಚಿತ್ರವನ್ನೇ ತನ್ನ ಬೆರಳುಗಳಿಂದ
ಬದಲಿಸಲು ಯತ್ನಿಸುತ್ತಿರುವ ಚಿತ್ರ ಬಿಡಿಸಿದೆ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಏಯ್ತ್ ಮೇನ್

ಅಲ್ಲೇ ನಮಗೆಲ್ಲ ಎಚ್ಚರಾದದ್ದು
ಕ್ಲೀನರಿನ ಕೂಗಿಗೆ ದಡಬಡಾಯಿಸಿ ಎದ್ದಿದ್ದು
ಕಣ್ಣೊರಿಸಿಕೊಂಡು ಕಿಟಕಿಯಿಂದಾಚೆ ನೋಡಿದ್ದು
ಹೊಸದೇ ಲೋಕ ತಲುಪಿದ ಬೆರಗಲ್ಲಿ
ಹೊಸದೇನೋ ಇಲ್ಲಿಂದಲೇ ತೆರೆದುಕೊಳ್ಳುವುದೆಂಬ ಭ್ರಮೆಯಲ್ಲಿ
ಹೊಸಬದುಕಿಗಿದೆ ಹೆಬ್ಬಾಗಿಲೆಂಬ ಹುಸಿಖುಷಿಯಲ್ಲಿ
ಕಣ್ಕಣ್ಬಿಟ್ಟು ನೋಡಿದ್ದು ಹೊಸ ಬೆಳಗನ್ನು
ಹೊಚ್ಚಹೊಸದೇ ಆದ ಭಯದಲ್ಲಿ

ಕೈಚಾಚಿದರೆ ಸಿಗುವಷ್ಟು ಸಮೀಪ ಚಲಿಸುವ ವಾಹನಗಳು
ತಲೆಯೆಷ್ಟೆತ್ತಿದರೂ ದಿಟ್ಟಿಗೆ ನಿಲುಕದಷ್ಟೆತ್ತರದ ಕಟ್ಟಡಗಳು
ತಿರುತಿರುಗಿ ಎಣಿಸಿದರೂ ಲೆಕ್ಕ ಸಿಗದಷ್ಟು ಜನಗಳು-
ತುಂಬಿದ ನಗರಿಗೆ ಬಂದು ತಲುಪಿಯೇಬಿಟ್ಟ ದಿಗ್ಭ್ರಾಂತಿಯಲ್ಲಿ
ಕೂತ ಬಸ್ಸಿನ ಸೀಟಲ್ಲೇ ಚಡಪಡಿಸಿದ್ದು
ಎಲ್ಲ ತಿಳಿದವನ ಗತ್ತಲ್ಲಿ ಪಕ್ಕ ಕೂತಿದ್ದ ಅಪರಿಚಿತನಿಗೆ
ಈ ತಳಮಳ ತಿಳಿಯದಂತೆ ಎಚ್ಚರ ವಹಿಸಿದ್ದು, ಒಣನಗೆ ಬೀರಿದ್ದು

ಯಾರ ಉನ್ಮಾದವನ್ನೂ ಹುಸಿ ಮಾಡದು ನಗರ
ಸೋಗೆಯಟ್ಟಲ ಕೆಳಗಿನ ಹಕ್ಕಿಮರಿಯನ್ನು ಕುಕಿಲಕರೆಯಲ್ಲೇ
ತನ್ನ ಐಷಾರಾಮಿ ಗೂಡಿಗೆ ಸೆಳೆದುಕೊಂಡ ನಗರ
ಗುಣಮಟ್ಟದ ಗುಟುಕನ್ನೇ ಕೊಟ್ಟು ಪೊರೆಯಿತು
ಹೊಟ್ಟೆ ತುಂಬತೊಡಗಿದಂತೆ ಗುಟುಕಿನ ಲೆಕ್ಕ ಮರೆಯಿತು
ಏಯ್ತ್ ಮೇನಿನ ನಂತರದ ಮೇನುಗಳು ಏನಾದವು?
ಇಳಿಯುವವರು ಘನಗಾಂಭೀರ್ಯದಿಂದ ಅವರವರ
ನಿಲ್ದಾಣದಲ್ಲಿಳಿಯುತ್ತಿದ್ದರು, ಲಗೇಜೆಲ್ಲ ಸರಿಯಿದೆಯೇ
ಎಂದು ಮತ್ತೊಮ್ಮೆ ನೋಡಿ ಖಚಿತಪಡಿಸಿಕೊಂಡು
ಹೊಸ ನಿಲ್ದಾಣಗಳು ಹೊಸ ಮುಖಗಳು ಹೊಸ ಹೆಸರುಗಳು
ಎಂಥ ಪುಳಕವಿತ್ತು ಹೊಸ ಅನುಭವಕೆ ಒಳಗಾಗುವುದರಲ್ಲಿ
ಗೂಡೊಳಗಿನ ತಂಪು-ಬಿಸಿಗಳ ಹದವರಿತ ಹವೆಗೆ
ಎಂಥ ಮೈಮರೆಸುವ ತಾಕತ್ತಿತ್ತು-
ತಪ್ಪಿಸುವಂತೆ ಉರುಳಿದ ದಿನಗಳ ಎಣಿಕೆ

ಆಮೇಲೆ ಅದೆಷ್ಟು ಸಲ ಊರಿಂದ ಬರುತ್ತ
ಇದೇ ಏಯ್ತ್ ಮೇನನ್ನು ಬೈದುಕೊಂಡಿದ್ದು
ಕೊನೆಯಿರದಿರಲಿ ಎಂದುಕೊಂಡಿದ್ದ ರಾತ್ರಿ
ಅನವರತವಿರಲಿ ಎಂದುಕೊಂಡಿದ್ದ ಪಯಣ
ಮುಗಿದೇಹೋದದ್ದಕ್ಕೆ ಕ್ರುದ್ಧನಾದದ್ದು

ತಮ್ಮ ಫೋನ್ ಮಾಡಿದ್ದ
ಟೆಲಿಫೋನಿಕ್ ಇಂಟರ್ವ್ಯೂನಲ್ಲೇ ಆಯ್ಕೆಯಾಗಿದೆ,
ಕಾಲ್ ಲೆಟರ್ ಬಂದಿದೆ, ನಾನೂ ಬರ್ತಿದ್ದೀನಿ ಅಣ್ಣಾ ಸಿಟಿಗೆ-
ಎಂದವನ ದನಿಯ ತುಂಬ ಉಕ್ಕುವುತ್ಸಾಹವಿತ್ತು.
ಅಲಾರ್ಮ್ ಕೂಗಿ ಹೇಳುತ್ತಿದೆ ಬೆಳಗಾಯಿತೆಂದು
ಇಷ್ಟೊತ್ತಿಗೆ ಅವನ ಬಸ್ಸೂ ಏಯ್ತ್ ಮೇನಿನ ಬಳಿ ಬಂದಿರುತ್ತೆ
ಕ್ಲೀನರ್ ಹುಡುಗ ಕೂಗಿ ಎಬ್ಬಿಸಿರುತ್ತಾನೆ
ಧಿಗ್ಗನೆದ್ದು ಕೂತ ಅವನು ಕಣ್ಣೊರೆಸಿಕೊಳ್ಳುತ್ತ
ಮೊಬೈಲ್ ಹೊರತೆಗೆದು ನನಗೆ ಡಯಲ್ ಮಾಡುತ್ತಾನೆ
ಅಣ್ಣಾ, ನಾನು ಬಂದೇಬಿಟ್ಟೆ, ಬಾ ಪಿಕ್ ಮಾಡಲು.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಕಲ್ಲುಗಳು

ಮೊದಲು ಇಡೀ ಭೂಮಿಯೇ ಸೂರ್ಯನಿಂದ ಸಿಡಿದು ಬಂದ
ಒಂದು ದೊಡ್ಡ ಕಲ್ಲುಬಂಡೆಯಾಗಿತ್ತಂತೆ
ಆಮೇಲೆ ಅದೇನಾಯಿತೋ, ಸೃಷ್ಟಿಗೌಪ್ಯ,
ನದಿ ಸಮುದ್ರ ಗಿಡ ಮರ ಪ್ರಾಣಿ ಪಕ್ಷಿ
ಬೆಟ್ಟ ಬಯಲು ಹಿಮ ಮರಳು ಕೊನೆಗೊಬ್ಬ ಮನುಷ್ಯ
ಈ ಕಲ್ಲುಗಳೇನು ಪೂರ್ತಿ ಕರಗಿದವೇ?
ಕೆಲವು ದೊಡ್ಡ ಬಂಡೆಗಳು ಹಾಗೇ ಉಳಿದವು
ಇನ್ನು ಕೆಲವು ಹದಾ ಸೈಜಿಗೆ ಬಂದು ಉರುಳಿದವು
ಮತ್ತೆ ಹಲವು ಸಣ್ಸಣ್ಣ ಚೂರಾಗಿ ಮರಳಾಗಿ ಮಣ್ಣಾಗಿ
ಗುರುತೇ ಸಿಗದಂತೆ ಬದಲಾಗಿಹೋದವು
ಬದಲಾವಣೆಗೆ ಜಗ್ಗದ ಕೆಲ ಕಲ್ಲುಗಳು
ಏಕಶಿಲಾಪರ್ವತ ಅಂತೆಲ್ಲ ಹೆಸರು ಮಾಡಿದವು

ಈ ಮನುಷ್ಯನೊಬ್ಬ ಅಸಾಮಾನ್ಯ ಪ್ರಾಣಿಯಾಗಿಬಿಟ್ಟ
ಕಲ್ಲುಗಳನ್ನು ಕಡಿದು ಕೆತ್ತಿ ಆಕಾರವೊಂದಕ್ಕೆ ತಂದು
ಕಲ್ಲ ಮೇಲೆ ಕಲ್ಲಿಟ್ಟು ಕಟ್ಟಡಗಳನ್ನು ಕಟ್ಟಿದ
ದೊಡ್ಡ ಕಲ್ಲ ಮೇಲೆ ಸಣ್ಣ ಕಲ್ಲಿಂದ ಜಜ್ಜಿ ಮಸಾಲೆಯರೆದ
ಕಲ್ಲನೊಡೆಯಲೆಂದೇ ಡೈನಮೈಟುಗಳನ್ನು ಕಂಡುಹಿಡಿದ
ದೊಡ್ಡ ಕಲ್ಲುಗಳಿಂದ ದೊಡ್ಡ ಮೂರ್ತಿಗಳನ್ನು ಕೆತ್ತಿದ
ಸಣ್ಣ ಕಲ್ಲುಗಳಿಗೆ ಉಳಿಪೆಟ್ಟು ಕೊಟ್ಟು ಸಣ್ಣಮೂರ್ತಿಗಳನಾಗಿಸಿದ
ಅವುಗಳನ್ನು ದೇವರು ಅಂತಲೂ ಕರೆದ, ಸೃಷ್ಟಿಕರ್ತನೇ ಇವನೆಂದ

ಕಲ್ಲುಗಳಿಂದಲೇ ನೆಲಹಾಸು, ಕಲ್ಲುಗಳಿಂದಲೇ ಬಚ್ಚಲಿಗೆ ಚಪ್ಪಡಿ,
ಕಲ್ಲಿನಿಂದಲೇ ಜಲ್ಲಿ, ಕಲ್ಲಿನಲೇ ಕೊರೆದ ನಾಮಫಲಕ
ಕೊನೆಕೊನೆಗೆ ಏನೋ ಮಾಡಲು ಹೋಗಿ ಏನೇನೋ ಆಗಿ
ಎಲ್ಲಾ ಗೊಂದಲಕ್ಕೊಳಗಾಗಿ ತಲೆಬಿಸಿಯಾಗಿ ಮುಂದೇನೆಂದರಿಯದೆ
ನೆಮ್ಮದಿಯರಸಿ ಸಾವನದುರ್ಗದ ನೆತ್ತಿಗೆ ಚಾರಣ ಹೊರಟ

ಮೊನ್ನೆ ಆ ಪ್ರತಿಭಟನೆ ನಡೆದ ಸ್ಥಳಕ್ಕೆ ಹೋಗಿದ್ದೆ
ರಸ್ತೆ ತುಂಬಾ ಸಣ್ಣ ಸಣ್ಣ ಕಲ್ಲುಗಳು
ತಲೆಯೆತ್ತಿ ನೋಡಿದರೆ ಒಡೆದ ಕಿಟಕಿಗಾಜುಗಳು
ಎತ್ತಲಿಂದಲೋ ಕಲ್ಲೊಂದು ತೂರಿಬಂತು
ಎಲ್ಲಿಯವನೋ ನೀನು ಅಂತೇನೋ ಬೈಗುಳ..
ಜೀವ ಉಳಿದರೆ ಸಾಕೆಂದು ಓಡಿಬಂದೆ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ.]

Monday, October 10, 2016

ಗಮನ

ಇದೊಂದು ತಕ್ಷಣಕ್ಕೆ ನಮ್ಮ ಗಮನಕ್ಕೆ ಬರಲೇ ಇಲ್ಲ:
ಚಿಲಿಪಿಲಿಗುಡುತ್ತಾ ಪುಟುರ್ರನೆ ರೆಕ್ಕೆಬಡಿಯುತ್ತಾ
ಮನೆಯೊಳಕ್ಕೂ ಹೊರಕ್ಕೂ ಹಾರುತ್ತಿದ್ದ ಗುಬ್ಬಿಗಳು
ನಿಧಾನಕ್ಕೆ ಕಮ್ಮಿಯಾಗುತ್ತಾ ಕೊನೆಗೆ ನಿಶ್ಶೇಷವಾದದ್ದು.

ಗುಬ್ಬಿಗಳು ಏಕೆ ಕಾಣೆಯಾದವೆಂದು ಯಾರಿಗೂ ಗೊತ್ತಾಗಲಿಲ್ಲ.
ಕೆಲವರು ಮೊಬೈಲ್ ಸಿಗ್ನಲುಗಳೇ ಕಾರಣವೆಂದರು
ಕೆಲವರು ಸಿಮೆಂಟ್ ಕಟ್ಟಡದಲ್ಲವಕ್ಕೆ ಗೂಡು ಕಟ್ಟಲಾಗದೆಂದರು
ಇನ್ನು ಕೆಲವರು ಇಲೆಕ್ಟ್ರಿಕ್ ತಂತಿಗಳದೇ ದೋಷವೆಂದರು
ಮತ್ತೆ ಕೆಲವರಂದರು: ಅವಕ್ಕೆ ತಿನ್ನಲಿಕ್ಕೇ ಆಹಾರವಿಲ್ಲೆಂದು
ನಿಖರ ಕಾರಣ ಮಾತ್ರ ಕೊನೆಗೂ ತಿಳಿಯಲಿಲ್ಲ

ವಾಸ್ತುಬಾಗಿಲ ಮೇಲಣ ಬಾಗುಫೋಟೋಗಳ ಹಿಂದೆ
ಅವು ಪೇರಿಸುತ್ತಿದ್ದ ಹುಲ್ಲಕಡ್ಡಿಗಳು ಬಿದ್ದು ಆಗುತ್ತಿದ್ದ ಕಸ
ಕಮ್ಮಿಯಾದುದಕ್ಕೆ ಅಮ್ಮ ಖುಷಿಪಟ್ಟಳು
ಗಂಟೆಗೊಮ್ಮೆ ಗುಡಿಸೋದು ತಪ್ಪಿತು ಎಂದಳು
ಕಿಚಪಿಚ ಗಲಾಟೆ ಇಲ್ಲದೆ ಟೀವಿ ನೋಡಲು
ಅನುಕೂಲವಾದುದಕ್ಕೆ ಅಜ್ಜಿಗೆ ಸಂತೋಷವಾಯಿತು
ಒಳಮನೆಯ ಕತ್ತಲಲ್ಲವು ಹಾಕಿದ ಪಿಷ್ಟಿ ಅಕಸ್ಮಾತ್ ಮೆಟ್ಟಿ
ಥೋಥೋಥೋ ಎನ್ನುತ್ತಾ ಬಚ್ಚಲಿಗೋಡುತ್ತಿದ್ದ ಅಪ್ಪ
ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟ
ಗುಬ್ಬಿಗಳು ಇಲ್ಲವಾದುದಕ್ಕೆ ಎಲ್ಲರೂ ನಿರಾಳವಾದಂತಿತ್ತು

ಇನ್ನೊಂದು ನಾವು ಗಮನಿಸಿರಲೇ ಇಲ್ಲ:
ಈ ಧುತ್ತನೆ ಆವರಿಸಿದ ಮೌನಕ್ಕೆ ಗುಬ್ಬಿಗಳೊಂದಿಗೇ ಜತೆಯಾದದ್ದು
ಸಾಯುವ ಮುನ್ನ ಚಿಕ್ಕಪ್ಪ ತಾನೇ ಕೈಯಾರೆ ಮಾಡಿ
ಜಗುಲಿ ಬಾಗಿಲಲ್ಲಿ ನೇತು ಬಿಟ್ಟಿದ್ದ ಗಾಳಿಘಂಟೆಗಳು.
ಗಾಳಿ ಬಂದಾಗ ಟಿಂಟಿಣಿಗುಡಲೆಂದೇ ಅದನ್ನಾತ ತಯಾರಿಸಿದ್ದರೂ
ಅದರಿಂದ ಸದ್ದು ಮೀಟುತ್ತಿದ್ದುದು ಮಾತ್ರ ಗುಬ್ಬಿಗಳು
ಚಿಕ್ಕಪ್ಪ ಇಲ್ಲವಾದಮೇಲೆ ಅವನ ಮೆಲುದನಿಯನ್ನೇ ಅನುಕರಿಸುವಂತೆ
ಗುಬ್ಬಿಗಳ ಕಾಲು-ರೆಕ್ಕೆಗಳ ಸ್ಪರ್ಶಕ್ಕೆ ದನಿ ಹೊಮ್ಮಿಸುತ್ತಿದ್ದ
ಗಾಳಿಘಂಟೆಗಳು ಚಿಕ್ಕಮ್ಮನೆದೆ ತಂತಿಯನ್ನೂ ಝಲ್ಲೆನಿಸುತ್ತಿದ್ದವಿರಬೇಕು

ನಿಜ, ಇದೊಂದನ್ನು ನಾವು ಗಮನಿಸಿರಲೇ ಇಲ್ಲ:
ಗುಬ್ಬಿಗಳು ಅದೃಶ್ಯವಾಗುತ್ತ ಹೋದಂತೆ ಚಿಕ್ಕಮ್ಮನೂ
ಮೌನಿಯಾಗುತ್ತಾ ಹೋದಳು ಎಂಬುದು.
ಕೋಣೆಯ ಕಿಟಕಿ ಬಳಿ ಕೂತು ಅವಳು
ಗುಬ್ಬಿಗಳಿಗಾಗಿ ಕಾಯುತ್ತಿದ್ದಳು ಎಂಬುದು.
ಅವುಗಳ ಸ್ಪರ್ಶಮಾತ್ರದಿಂದ ಹೊಮ್ಮುವ
ಘಂಟೆನಿನಾದಕ್ಕೆ ಕಿವಿಯಾಗಿದ್ದಳು ಎಂಬುದು.
ಆಹ್ಲಾದದ ಸಿಹಿಗಾಳಿಯಾದರೂ ನೂಕಿದರೆ
ಘಂಟೆಗಳು ಟಿಂಟಿಣಿಗುಟ್ಟಬಹುದೆಂದು ನಿರುಕಿಸುತ್ತಿದ್ದಳು ಎಂಬುದು.

ಹೌದು, ಇದು ನಮ್ಮ ಗಮನಕ್ಕೆ ಬಂದಿರಲೇ ಇಲ್ಲ:
ಗುಬ್ಬಿಗಳ ನಿರ್ಗಮನದೊಂದಿಗೆ ಚಿಕ್ಕಮ್ಮನ
ಸಣ್ಣ ಸಂತಸವೂ ಸಹಗಮನ ಮಾಡಿತ್ತೆಂಬುದು.

Thursday, September 15, 2016

ಹನಿಕೇಕ್

ಐದು ನಿಮಿಷ ಬಿಟ್ಟು ತಿನ್ನೋಣ
ಎಂದು ತೆಗೆದಿಟ್ಟಿದ್ದ ಹನಿಕೇಕಿಗೆ ಇರುವೆ ಮುತ್ತಿವೆ
ಹಾಗಂತ ಮುನ್ಸೂಚನೆ ಇರಲಿಲ್ಲವೆಂದಲ್ಲ
ಆದರೆ ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ
ಕುರುಂಜಿ ಹೂವಿಗಾಗಿ ಮತ್ತೆ ಹನ್ನೆರಡು ವರ್ಷ ಕಾಯ್ತೀಯಾ
ಅನ್ನುತ್ತಾನೆ ಜಾಹೀರಾತಿನಲ್ಲಿ ಅಪರಿಚಿತ ನಟ
ಇರುವೆಗಳಿಗೆ ಹೆದರಬಾರದು ಎಂಬುದೂ ಒಪ್ಪುವ ಮಾತಲ್ಲ
ನ್ಯಾಯಾಲಯದಿಂದಲೇ ಅನ್ಯಾಯ ನೀರಿಲ್ಲದ ನೋವು
ಕಲ್ಲು ತೂರಾಟ ಬೆಂಕಿ ಗಲಾಟೆ ಕರ್ಫ್ಯೂ
ಮುಚ್ಚಿದ ಅಂಗಡಿ-ಮುಂಗಟ್ಟುಗಳು -ಇಂತಹ ದಾರುಣ ದಿನದ
ಹಸಿದ ಹೊಟ್ಟೆಯ ಮಧ್ಯಾಹ್ನ ಮೃಷ್ಟಾನ್ನದಂತೆ ಸಿಕ್ಕ
ಒಂದು ಹನಿಕೇಕನ್ನು ದಕ್ಕಿಸಿಕೊಳ್ಳಲಾಗದ ದುಃಖ
ಯಾವ ದುಃಖಕ್ಕೂ ಕಮ್ಮಿಯಲ್ಲ

ಆದರೆ ಇರುವೆಯ ಕಷ್ಟವನ್ನೂ ಕೊಂಚ ನೋಡಬೇಕಲ್ಲ
ಎಷ್ಟು ದಿವಸದಿಂದ ಹಸಿದಿದ್ದವೋ ಏನೋ
ಅವುಗಳ ಆರ್ತನಾದಕ್ಕೆ ಕಿವಿಗೊಡುವವರಾರು
ಇಟ್ಟ ತಟ್ಟೆಗೆ ಮೆತ್ತಿದ ಸಿಹಿಯನ್ನೇ ಮೆಲ್ಲುವ ಅಲ್ಪತೃಪ್ತರೂ
ಅಂತಸ್ತಂತಸ್ತಾಗಿ ಮೇಲೇರುತ್ತಿರುವ ಸಾಹಸಿಗರೂ
ಪದರಪದರಗಳ ನಡುವೆ ಸಿಲುಕಿ ಸೆಣಸುತ್ತಿರುವ ಹೋರಾಟಗಾರರೂ
ಕಿಂಡಿಗಳೊಳಗೆ ತೂರಿ ಒಳಹೊಕ್ಕಿರುವ ಉತ್ಖನನಕಾರರೂ
ಒಂದು ಹನಿಕೇಕಿಗೆ ಇರುವೆ ಮುತ್ತಿದರೆ
ಎಷ್ಟೆಲ್ಲ ನೋಡಲು ಸಿಗುತ್ತದೆ -ಹಸಿವನೇ ಮರೆಸುವಂತೆ.

ಹಾಗಂತ ನೋಡುತ್ತ ಮೈಮರೆಯಬಾರದು
ನಮ್ಮ ಪ್ರಯತ್ನ ನಾವು ಮಾಡಲೇಬೇಕು
ಯಕಃಶ್ಚಿತ್ ಇರುವೆಗಳೊಂದಿಗೆ ಎಂತ ಹೋರಾಟ
ಹಣಿಯುವುದಿದ್ದರೆ ಆನೆಯನ್ನು ಕೆಡವು ಎನ್ನುತ್ತಾರೆ ಕೆಲವರು
ಆದರೆ ಹಸಿದ ಮನುಷ್ಯ ಇರುವೆಗಿಂತ ಕುಬ್ಜ
ಹನಿಕೇಕಿನೆದುರು ಮೃದು ಧೋರಣೆ ಸಲ್ಲದು

ದಡಬಡಿಸಿ ಚಾಕು ಹುಡುಕಿ ಇನ್ನೂ ಶತ್ರುವಿನಾಕ್ರಮಣವಾಗದ
ಭಾಗಗಳ ಜಾಲಾಡಿ ನಾಜೂಕಾಗಿ ಕತ್ತರಿಸಿ
ಮೆದುಮೆದು ಮಲ್ಲಿಗೆ ನೆಲಕ್ಕೆ ಬೀಳದಂತೆ
ನೇರವಾಗಿ ಬಾಯಿಗಿಡಬೇಕು
ಮೋಸ ಮಾಡಿದರೂ ಹಾಗೆ ಮಾಡಬೇಕು
ಇರುವೆಗೂ ತಿಳಿಯದಂತೆ
ಇರುವೆಯೂ ತನ್ನ ತಿಳಿವ ಬೆಳಕಲ್ಲಿ ಗೆದ್ದಂತೆ ಪರಿಭಾವಿಸಿ
ಮೋಸಹೋಗಿದ್ದೇ ತಿಳಿಯದೆ - ಹೊಟ್ಟೆ ತುಂಬಿದ್ದೇ ಗೆಲುವೆಂದುಕೊಂಡು
ನಾನೂ ಇರುವೆಯ ಎದುರು ಗೆದ್ದಿದ್ದೇ ಗೆಲುವೆಂದುಕೊಂಡು.

Wednesday, September 07, 2016

ಕರ್ಮಣ್ಯೇವಾಧಿಕಾರಸ್ತೇ

ಲೋಕಲ್ ರೈಲುಗಳು ಮಾತ್ರ ನಿಲ್ಲುವ ಸಣ್ಣ ಪಟ್ಟಣದ ಸ್ಟೇಷನ್ನಿನ ತಡರಾತ್ರಿಯ ನೀರವದಲ್ಲಿ ಬ್ಯಾಂಡ್‌ಸೆಟ್ ತಂಡವೊಂದರ ಐವರು ಸಮವಸ್ತ್ರಧಾರಿಗಳ ಗುಂಪು ಪ್ಲಾಟ್‌ಫಾರ್ಮಿನ ಮೂಲೆಯಲ್ಲಿ ಕೂತಿದೆ. ಎಲ್ಲಿಂದ ಬಂದವರೋ, ಎಲ್ಲಿಗೆ ಹೊರಟವರೋ- ಕಾಯುತ್ತ ಕೂತು ಬಹಳ ಹೊತ್ತಾದ ಕುರುಹಂತೆ ಎಲ್ಲರೂ ತೂಕಡಿಸುತ್ತಿದ್ದಾರೆ. ಅತ್ತ ದಿಕ್ಕಿಂದ ಕ್ಷೀಣ ಸದ್ದಿನೊಡನೆ ಬರುವ ಯಾವ ಬೆಳಕೇ ಕಂಡರೂ ಧಿಗ್ಗನೆ ಎಚ್ಚರಗೊಂಡು ದಡಬಡಿಸಿ ತಮ್ಮ ಸಲಕರಣೆಗಳನೆಲ್ಲ ಬಗಲಿಗೇರಿಸಿ ಸುಸ್ತು ತುಂಬಿದ ನಿದ್ರೆಗಣ್ಣನ್ನು ಇಷ್ಟಗಲ ಮಾಡಿಕೊಂಡು ಪ್ಲಾಟ್‌ಫಾರ್ಮಿನ ತುದಿಗೆ ಹೋಗಿ ನಿಲ್ಲುವರು. ಪೋಂಕನೆ ಸದ್ದು ಮಾಡುತ್ತ ಹಳಿಗಳ ಮೇಲೆ ಹಾಯುವ ಎಕ್ಸ್‌ಪ್ರೆಸ್ ರೈಲಿನ ರಭಸದಲ್ಲೇ ಇರುವ ನಿರ್ದಯೆಗೆ ಕಂಗಾಲಾಗುವರು. ಮತ್ತದೇ ಮೂಲೆಗೆ ಸರಿದು ಅದದೇ ಜಾಗದಲ್ಲಿ ತಮ್ಮ ಬಗಲ ಚೀಲಗಳನ್ನಿರಿಸಿ ಕುಕ್ಕರಿಸುವರು. ಎಲ್ಲಿ ಯಾರ ಮದುವೆ ದಿಬ್ಬಣವೋ, ಯಾರ ಶವಯಾತ್ರೆಯೋ, ಯಾವ ರಾಜಕಾರಣಿಯ ವಿಜಯದ ಮೆರವಣಿಗೆಯೋ, ಯಾವ ದೇವರ ಪಲ್ಲಕ್ಕಿಯುತ್ಸವವೋ, ಯಾವ ಮಠಾಧಿಪತಿಗೆ ಪೂರ್ಣಕುಂಭ ಸ್ವಾಗತವೋ- ತಮ್ಮ ಉಸಿರನ್ನೂ ಕಸುವನ್ನೂ ಅರ್ಪಿಸಿ ಸದ್ದಲ್ಲೇ ಸಂಭ್ರಮ ಹೆಚ್ಚಿಸಿ, ಟಪ್ಪಾಂಗುಚ್ಚಿ ಕುಣಿಸಿ ಧೂಳೆಬ್ಬಿಸಿ, ಪಡೆದು ರಿಯಾಯಿತಿ ಜತೆ ಕೊಟ್ಟ ಹಣ, ಈಗ ಈ ನಿಲ್ದಾಣದ ಮೌನದಲ್ಲಿ ಚಳಿಗೆ ಗಢಗಢ ನಡುಗುತ್ತ ಹಳಿಗಳನ್ನೇ ನೋಡುತ್ತ ಕೂತಿರುವರು. ಅವರ ಬಾಜೂ ಇರುವ ಕ್ಲಾರಿಯೋನೆಟ್ಟು- ಟ್ರಂಪೆಟ್ಟುಗಳೊಳಗೆ ಇನ್ನೂ ಸಿಕ್ಕಿಕೊಂಡಿರುವ ಉಸಿರು, ಕಿವಿಯಿಟ್ಟು ಕೇಳಿದರೆ ಬಟ್ಟೆಚೀಲದಲ್ಲಿನ ಡ್ರಮ್ಮುಗಳಿಂದ ಇನ್ನೂ ಹೊಮ್ಮುತ್ತಿರುವ ಡಂಕ್ಕಣಕ ಧ್ವನಿ, ಅವರ ಯೂನಿಫಾರ್ಮು-ಟೋಪಿಗಳ ಮೇಲೆ ಕೂತಿರುವ ಧೂಳಿನಲ್ಲಿ ಇನ್ನೂ ಅಡಗಿರುವ ಟಪ್ಪಾಂಗುಚ್ಚಿಯ ಹೆಜ್ಜೆಲಯ- ಯಾವುದೂ ಈ ನಿಶ್ಶಬ್ದವ ಕಲಕುವ ಗೋಜಿಗೆ ಹೋಗುತ್ತಿಲ್ಲ. ಆದರೂ, ಹಳಿಗಳಾಚೆಯಿಂದ ಅನಾಮತ್ ಹಾರಿಬಂದು ಡ್ರಮ್ಮಿಗೆ ಬಡಿದ ಜೀರುಂಡೆ ಹೊಮ್ಮಿಸಿದ ಶಬ್ದ ತಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ಕೆಲವರು ಹೇಳುವುದುಂಟು: ಈ ಬ್ಯಾಂಡ್‌ಸೆಟ್ಟಿನವರು ಅವಕಾಶವಾದಿಗಳೆಂದು. ಅದು ಸುಳ್ಳೇ ಇರಬೇಕು. ಹಾಗಿದ್ದಿದ್ದರೆ, ಈ ದರವೇಶಿ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಬದಲು ತಮ್ಮ ಚೀಲಗಳಿಂದ ಬ್ಯಾಂಡ್‌ಸೆಟ್ ಹೊರತೆಗೆದು ಸ್ಟೇಶನ್ ಮಾಸ್ತರನೂ, ಅಳಿದುಳಿದ ಪ್ರಯಾಣಿಕರೂ ಬೆಚ್ಚಿಬೀಳುವಂತೆ ಗದ್ದಲವೆಬ್ಬಿಸಿ ಯಾವುದಾದರೂ ರೈಲು ನಿಲ್ಲುವಂತೆ ಮಾಡಿ ಅದನ್ನೇರಿ ಇಲ್ಲಿಂದ ಈಗಾಗಲೇ ಜಾಗ ಖಾಲಿ ಮಾಡಿರುತ್ತಿದ್ದರು. ಇವರು ಅವಕಾಶ ಕೊಟ್ಟಾಗ ವಾದ್ಯ ನುಡಿಸುವವರು ಅಷ್ಟೇ. ಸಂದರ್ಭವಿಲ್ಲವೆಂದರೆ ತಮ್ಮ ಪೀಪಿಯ ಮೂತಿಗೆ ಬಿರಡೆ ಹಾಕಿ ಡ್ರಮ್ಮಿನ ಕಡ್ಡಿಗಳನ್ನು ಚೀಲದೊಳಗಿರಿಸಿ, ಹೀಗೆ ಅನಂತದತ್ತ ದಿಟ್ಟಿನೆಟ್ಟು ಯಾವುದೋ ಲೋಕದಿಂದ ಬರುವ ರೈಲಿಗಾಗಿ ಕೂತಲ್ಲೆ ಜೋಲಿ ಹೊಡೆಯುತ್ತಾ ಇಡೀರಾತ್ರಿ ಕಾಯುವರು: ಕೆಲವೇ ಗಂಟೆ ಮೊದಲು ತಾವಿದ್ದ ಜಾಗದ ಸಂಭ್ರಮಕ್ಕೋ ದುಃಖಕ್ಕೋ ಗದ್ದಲಕ್ಕೋ ಶಾರೀರವಾದುದ ಮರೆತು, ಏನನ್ನೂ ಅಂಟಿಸಿಕೊಳ್ಳದೆ, ಹಗುರವಾಗಿಯೇ ಉಳಿದು.

Tuesday, September 06, 2016

ಶಿಕ್ಷಕರ ದಿನದಂದು ಪಿ.ಟಿ. ಮೇಷ್ಟ್ರು ನೆನಪಾಗಿ...

ಶಾಲೆಯಲ್ಲಿರುತ್ತಿದ್ದಾಗ ನಿಮ್ಮ ನೆಚ್ಚಿನ ಮೇಷ್ಟ್ರು ಯಾರಾಗಿದ್ದರು? ತಿಪ್ಪರಲಾಗ ಹೊಡೆದರೂ ಬಿಡಿಸಲಾಗದ ಲೆಕ್ಕಗಳನ್ನು ಬಿಡಿಸಲು ಹೇಳುತ್ತಿದ್ದ ಗಣಿತದ ಮೇಷ್ಟ್ರೇ? ಎಷ್ಟೇ ಉರು ಹೊಡೆದರೂ ಮರೆಯುವ ಇಸವಿಗಳನ್ನು ನೆನಪಿಡಲು ಹೇಳುತ್ತಿದ್ದ ಇತಿಹಾಸದ ಮೇಷ್ಟ್ರೇ? ಮುಟ್ಟಲೇ ಹೇಸಿಗೆಯಾಗುವ ಕಪ್ಪೆಯನ್ನು ಕತ್ತರಿಸಲು ಹೇಳುತ್ತಿದ್ದ ವಿಜ್ಞಾನ ಶಿಕ್ಷಕರೇ? ಮೀನಿಂಗು, ಸಿನಾನಿಮ್ಮು, ಪ್ಯಾಸಿವ್ ವಾಯ್ಸು, ನೆಗೆಟಿವ್ ಸೆಂಟೆನ್ಸು ಅಂತೆಲ್ಲ ನಾಲಿಗೆ, ಪೆನ್ನು, ತಲೆಗಳಿಗೆ ಕಷ್ಟ ಕೊಡುತ್ತಿದ್ದ ಇಂಗ್ಲೀಷ್ ಮೇಡಮ್ಮೇ? ಲಘು, ಗುರು, ಛಂದಸ್ಸು, ಸಮಾಸ, ವ್ಯಾಕರಣ, ರಾಘವಾಂಕನ ಕಾವ್ಯ ಅಂತೆಲ್ಲ ಹೇಳುತ್ತ ಮಧ್ಯಾಹ್ನದ ತರಗತಿಯಲ್ಲಿ ಬೋರು ಹೊಡೆಸುತ್ತಿದ್ದ ಕನ್ನಡ ಬೋಧಕರೇ?

ಅಥವಾ- ಬಿಳೀ ಅಂಗಿ, ಬಿಳೀ ಪ್ಯಾಂಟು, ಬಿಳ್‌ಬಿಳೀ ಶೂ ಧರಿಸಿ ಬರುತ್ತಿದ್ದ, ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಅಕೋ ಮೂಲೆಯಲ್ಲಿ ಅಟೆನ್ಷನ್ ಪೊಸಿಷನ್ನಿನಲ್ಲಿ ನಿಂತಿರುತ್ತಿದ್ದ, ಇಳಿಬಿಸಿಲಿನ ಆಟದ ತರಗತಿಗಳಲ್ಲಿ ದೊಡ್ಡ ಬಯಲಿಗೆ ಕರೆದೊಯ್ದು, ನಿಮ್ಮನ್ನೇ ಕಂಬ ಹತ್ತಿಸಿ ನಿಮ್ಮಿಂದಲೇ ನೆಟ್ ಕಟ್ಟಿಸಿ ನಿಮ್ಮಿಂದಲೇ ಸರ್ವ್ ಮಾಡಿಸಿ ವಾಲಿಬಾಲ್ ಆಡಿಸುತ್ತಿದ್ದ, ಫುಟ್‌ಬಾಲಿನ ನಾಭಿಗೆ ಬಾಲದ ನಾಝಲ್ ಒತ್ತಿ ಹಿಡಿದು ಸೈಕಲ್ ಪಂಪಿನಿಂದ ಗಾಳಿ ಹೊಡೆಯಲು ಹೇಳುತ್ತಿದ್ದ, ಗೋಲ್‌ಪಾಯಿಂಟ್‌ವರೆಗೆ ನಿಮ್ಮೊಂದಿಗೇ ಬಾಲಿನ ಹಿಂದೆ ಓಡಿ ಬರುತ್ತಾ ಪಾಸ್ ಮಾಡುವ ಟ್ರಿಕ್ ಹೇಳಿಕೊಡುತ್ತಿದ್ದ, ‘ಇವತ್ತು ನಂಗೆ ಓಡ್ಲಿಕ್ಕೆ ಆಗಲ್ಲ’ ಅಂದ ಹುಡುಗಿಯ ಸಣ್ಣ ಮುಖ ನೋಡಿಯೇ ವಿಷಯ ಅರ್ಥ ಮಡಿಕೊಳ್ಳುತ್ತಿದ್ದ, ಅಷ್ಟೊಳ್ಳೆಯ ಪಿಟಿ-ಮೇಷ್ಟ್ರೇ?

ನೀವೇನಾದರೂ ಅಕೌಂಟ್ಸನ್ನೋ ಕಾಮರ್ಸನ್ನೋ ನಿಮ್ಮ ಉದ್ಯೋಗದ ಕ್ಷೇತ್ರವನ್ನಾಗಿ ತೆಗೆದುಕೊಂಡವರಾಗಿದ್ದರೆ, ಮೂಲಸೂತ್ರಗಳನ್ನು ಎಂದೂ ಮರೆಯದಂತೆ ಹೇಳಿಕೊಟ್ಟಿದ್ದಕ್ಕೆ ಹೈಸ್ಕೂಲಿನ ಗಣಿತದ ಮೇಷ್ಟ್ರಿಗೆ ನೀವು ಕೃತಜ್ಞರಾಗಿರಬಹುದು. ಇಲ್ಲವೇ, ಒಂದ್ಯಾವುದೋ ತರಗತಿಯಲ್ಲಿ ಭಗತ್‌ಸಿಂಗನ ಶೌರ್ಯದ ಕತೆಯನ್ನು ಮೈನವಿರೇಳಿಸುವಂತೆ ಹೇಳಿದ ಇತಿಹಾಸದ ಮೇಷ್ಟ್ರ ಪಾಠ ನಿಮಗೆ ಇನ್ನೂ ನೆನಪಿರಬಹುದು. ಜೀವಶಾಸ್ತ್ರ ತೆಗೆದುಕೊಳ್ಳುತ್ತಿದ್ದ ಅವಿವಾಹಿತ ಟೀಚರ್ರು, ‘ಮಾನವ ಜೀವಿಯಲ್ಲಿ ಸಂತಾನಪ್ರಕ್ರಿಯೆ’ ಎಂಬ ಅಧ್ಯಾಯವನ್ನು ಅತ್ಯಂತ ಮುಜುಗರ ಪಟ್ಟುಕೊಂಡು ಓದಿಹೇಳಿದ್ದು ಮರೆತಿಲ್ಲದಿರಬಹುದು. ಸಂಸ್ಕೃತ ಪಂಡಿತರು ‘ಹೇಲತಾ, ಹೇಲತೇ, ಹೇಲತಾಃ’ವನ್ನು ಕಂಠಪಾಠ ಮಾಡಿಸುತ್ತಿದ್ದುದು ನೆನಪಾದರೆ ಈಗಲೂ ನಗು ಬರಬಹುದು. ಎಲ್ಲ ಶಿಕ್ಷಕರೂ ಒಂದಲ್ಲಾ ಒಂದು ದಿನ, ಒಂದಲ್ಲಾ ಒಂದು ಘಳಿಗೆಯಲ್ಲಿ ನೆನಪಿಗೆ ಬರಬಹುದು.

ಆದರೆ ನಮ್ಮ ಸ್ಮೃತಿಪಟಲದಲ್ಲಿ ಅವರೊಬ್ಬ ಪಿಟಿ-ಮೇಷ್ಟ್ರು ಸಹ ಇದ್ದಾರಾ? ಅಥವಾ ಹೈಸ್ಕೂಲು ಮುಗಿಯುತ್ತಿದ್ದಂತೆ ಹೆಚ್ಚುಕಮ್ಮಿ ನಿಂತೇಹೋದ ಗುಂಡು ಎಸೆತ, ಜಾವಲಿನ್ ಥ್ರೋ, ಕೋಕೋ, ಕಬ್ಬಡ್ಡಿ, ರಿಲೇ ಆಟಗಳ ಹಾಗೆ ಅವರೂ ನಮ್ಮ ನೆನಪಿನ ಕೋಶದಿಂದ ಮರೆಯಾಗಿಹೋದರಾ? ಶಾಲೆಯ ದಿನಗಳು ಮುಗಿದು ಕಾಲೇಜು ಸೇರುವಷ್ಟರಲ್ಲಿ ಆ ಎಲ್ಲ ಆಟಗಳನ್ನು ಬಿಟ್ಟು, ಊರಲ್ಲಿ ಹುಡುಗರನ್ನು ಸಂಘಟಿಸಿಕೊಂಡು ಕ್ರಿಕೆಟ್ಟೊಂದೇ ಸರ್ವಶ್ರೇಷ್ಠ ಆಟವೆಂಬಂತೆ ಆಡುತ್ತಾ, ವಿದ್ಯಾಭ್ಯಾಸ ಮುಗಿದು ದುಡಿಯುವವರಾದಮೇಲಂತೂ ಯಾವ ಆಟ ಆಡುವುದಕ್ಕೂ ಸಮಯವಿಲ್ಲವೆಂಬಂತೆ ಬಿಜಿಯಾಗಿ, ಭಾರತದ ಕ್ರಿಕೆಟ್ ಇದ್ದಾಗಲೆಲ್ಲಾ ಟೀವಿಯಲ್ಲಿ ಮುಳುಗಿ, “ನಮ್ ಕೋಹ್ಲಿ ಮುಂದೆ ನಿಮ್ ತೆಂಡೂಲ್ಕರ್ ಏನು ಮಹಾ?” ಎಂದು ಕೇಳುವ ಹೊಸ ಹುಡುಗರಿಗೆ ಉತ್ತರಿಸಲು ತಿಳಿಯದೇ ಒದ್ದಾಡುತ್ತಾ, ಬೊಜ್ಜು ಬೆಳೆಸಿಕೊಂಡು ಓಡಾಡುವ ಅಂಕಲ್-ಆಂಟಿಯರಾಗಿಬಿಟ್ಟೆವಾ? ಇವತ್ತು ನಾವು ಟೀವಿಯಲ್ಲಿ ನೋಡುವ ಏಷ್ಯನ್, ಕಾಮನ್‌ವೆಲ್ತ್, ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ತಮ್ತಮ್ಮ ದೇಶವನ್ನು ಪ್ರತಿನಿಧಿಸುತ್ತಾ, ಪದಕವನ್ನು ಗೆಲ್ಲಲ್ಲೇಬೇಕು ಅಂತ ಒದ್ದಾಡುತ್ತಾ, ಸೋತಾಗ ದುಃಖದಿಂದ – ಗೆದ್ದಾಗ ಆನಂದದಿಂದ ಕಣ್ಣೀರಿಡುತ್ತಾ, ಗೆಲುವೊಂದನ್ನೇ ಮಂತ್ರವಾಗಿಸಿಕೊಂಡು ಬೆವರು ಹರಿಸುತ್ತಿರುವ ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಇದ್ದಿರಬಹುದಾದ ಒಬ್ಬ ಮೆಡ್ಲಿಸ್ಕೂಲ್-ಹೈಸ್ಕೂಲ್ ಸ್ಪೋರ್ಟ್ಸ್ ಟೀಚರನ್ನು ನಾವು ಕಲ್ಪಿಸಿಕೊಂಡೆವಾ?

ಎಂದೂ ಅಪ್ರಿಯರಾಗಿರಲಿಲ್ಲ ನಮಗೆ ಪಿಟಿ-ಮೇಷ್ಟ್ರು. ಯಾವತ್ತೂ ಹೊಡೆಯಲಿಲ್ಲ. ಯಾವಾಗಲೂ ಹೆದರಿಸಲಿಲ್ಲ. ಎಲ್ಲೂ ಪ್ರಶ್ನೆಪತ್ರಿಕೆಯಲ್ಲಿ ಕಷ್ಟದ ಪ್ರಶ್ನೆಗಳನ್ನು ಹೆಣೆದು ನಮ್ಮನ್ನು ಫೇಲ್ ಮಾಡಲಿಲ್ಲ. ನೋಟ್ಸ್ ಬರೆಸಲಿಲ್ಲ, ಹೋಮ್‌ವರ್ಕ್ ಕೊಡಲಿಲ್ಲ. ಪಿಟಿ-ಮೇಷ್ಟ್ರು ನಮಗೆ ಆಟ ಹೇಳಿಕೊಟ್ಟರು. ನಮ್ಮನ್ನು ಓಡಿಸಿದರು. ನಮ್ಮೊಂದಿಗೆ ಆಟವಾಡಿದರು. ನಮಗೆ ಕವಾಯತು ಮಾಡಿಸಿದರು. ‘ಕಮಾನ್, ಯು ಕ್ಯಾನ್ ಡೂ ಇಟ್’ ಎಂದು ಹುರಿದುಂಬಿಸಿದರು. ಲೆಫ್ಟ್-ರೈಟ್ ಲೆಫ್ಟ್-ರೈಟ್ ಎಂದು ಕೂಗುತ್ತಾ ನಮ್ಮ ಹೆಜ್ಜೆಗಳಿಗೆ ಶಿಸ್ತು ಕಲಿಸಿದರು. ತಮ್ಮ ಉಸಿರನ್ನು ವಿಷಲ್‌ನ ಶಬ್ದ ಹೊರಡಿಸಲು ಖರ್ಚು ಮಾಡಿದರು. ನಮ್ಮ ದೇಹಗಳನ್ನು ಹಗುರು ಮಾಡಿದರು.

ಪಿಟಿ-ಮೇಷ್ಟ್ರು ನಮ್ಮನ್ನು ಯಾವ್ಯಾವುದೋ ಊರಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಸಮವಸ್ತ್ರದಲ್ಲಿ ಕರೆದುಕೊಂಡು ಹೋದರು. ಹತ್ತಾರು ಶಾಲೆಗಳ ಹುಡುಗ-ಹುಡುಗಿಯರೊಂದಿಗೆ ನಾವು ಬೆರೆತೆವು. ನಮ್ಮ ಮೇಷ್ಟ್ರು ಬೇರೆ ಶಾಲೆಯ ಪಿಟಿ-ಮೇಷ್ಟ್ರುಗಳೊಂದಿಗೆ ಕೈ ಕುಲುಕಿ ಮಾತಾಡುವುದನ್ನು ಹೆಮ್ಮೆಯಿಂದ ನೋಡಿದೆವು. ಪಕ್ಕದೂರ ಶಾಲೆಯ ಹುಡುಗರೊಂದಿಗೆ ನಾವು ಕಬ್ಬಡ್ಡಿ ಆಡುವಾಗ ನಮ್ಮ ಮೇಷ್ಟ್ರು ಔಟಾದ ಹುಡುಗರೊಂದಿಗೆ ನಿಂತು ಶಕ್ತಿಯಾದರು. ದಡಿಯ ಎದುರಾಳಿ ಎರಗಿ ಬಂದಾಗ ‘ಬಕಾಪ್’ ಅಂದು ಧೈರ್ಯ ತುಂಬಿದರು. ಉದ್ದಜಿಗಿತದ ದೂರವನ್ನು ಪಟ್ಟಿ ಹಿಡಿದು ಅಳೆದರು. ಬಿದ್ದು ಮಾಡಿಕೊಂಡ ಮಳ್ಳಂಡೆ ಗಾಯಕ್ಕೆ ಟಿಂಚರ್ ಹಚ್ಚಿದರು. ವಿದ್ಯಾರ್ಥಿನಿಯರ ರಿಲೇಯಲ್ಲಿ ಓಡಿ ಸುಸ್ತಾಗಿ ಬಂದ ಹುಡುಗಿಗೆ ಗ್ಲುಕೋಸು ತಿನ್ನಿಸಿದರು. ಕೋಕೋ ಆಟದಲ್ಲಿ ತಾವೇ ಕಂಬವಾಗಿ ನಿಂತ ಅವರನ್ನು ನಾವು ಪ್ರದಕ್ಷಿಣೆ ಹಾಕಿದೆವು.

ಹೊರಗೆ ಮಳೆ ಬಂದ ದಿನ, ಈ ದೈಹಿಕ ಶಿಕ್ಷಣದ ಮೇಷ್ಟ್ರು ನಮ್ಮನ್ನು ಕ್ಲಾಸ್‌ರೂಮಿನೊಳಗೇ ಕೂರಿಸಿಕೊಂಡು ದೇಶವಿದೇಶಗಳ ಕ್ರೀಡಾಪಟುಗಳ ಸಾಧನೆಯ ಕಥೆ ಹೇಳಿದರು. ಮಿಲ್ಕಾ‌ಸಿಂಗ್ ಫ್ಲೈಯಿಂಗ್ ಸಿಖ್ ಆದ ಕಥೆಯನ್ನೂ, ಬ್ಲಾಕ್ ಪೀಲೆ ಹೇಗೆ ಫುಟ್‌ಬಾಲ್ ಪ್ರಿಯರಿಗೆ ಜ್ವರ ಹಿಡಿಸಿದ್ದ ಎಂಬುದನ್ನೂ, ಮೊಹಮ್ಮದ್ ಅಲಿ ಬಾಕ್ಸಿಂಗಿನ ದಂತಕಥೆಯಾದ ಪರಿಯನ್ನೂ, ಮಣಿಪುರದ ಒಂದು ಸಣ್ಣ ಹಳ್ಳಿಯಿಂದ ಬಂದ ಮೇರಿಕೋಮ್ ವಿಶ್ವ ಮಟ್ಟಕ್ಕೆ ಏರಿದ ಸಾಹಸವನ್ನೂ ಮೈಜುಮ್ಮೆನಿಸುವಂತೆ ವಿವರಿಸಿ ಹೇಳಿದರು. “ಬರೀ ಕ್ರಿಕೆಟ್ ಕ್ರಿಕೆಟ್ ಅಂತ ಒಂದೇ ಜಪ ಮಾಡ್ಬೇಡ್ರೋ.. ಕ್ರಿಕೆಟ್ ಅಲ್ಲದೇನೂ ಬಹಳಷ್ಟು ಆಟಗಳು ಇವೆ ಜಗತ್ತಲ್ಲಿ. ಅವುಗಳ ಕಡೇನೂ ಗಮನ ಹರಿಸಿ” ಅಂತ ಕಿವಿಮಾತು ಹೇಳಿದರು.

ಆಟೋಟಗಳಲ್ಲಿ ಮುಂದಿರುವ, ಲಘು ಶರೀರದ ಹುಡುಗ-ಹುಡುಗಿಯರು ಪಿಟಿ-ಮೇಷ್ಟ್ರಿಗೆ ಹೆಚ್ಚು ಪ್ರಿಯರಾಗುತ್ತಿದ್ದರು. ಆ ವಿದ್ಯಾರ್ಥಿಗಳಿಗಾದರೂ ಅಷ್ಟೇ, ಪಿಟಿ-ಮೇಷ್ಟ್ರು ಉಳಿದೆಲ್ಲರಿಗಿಂತ ಅಚ್ಚುಮೆಚ್ಚು. ಶಾಲಾ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ವಲಯ ಮಟ್ಟಕ್ಕೆ, ವಲಯ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ತಾಲೂಕು-ಜಿಲ್ಲಾ ಮಟ್ಟಗಳಿಗೆ ಪಿಟಿ-ಮೇಷ್ಟ್ರು ಬಸ್ಸಿನಲ್ಲಿ ಕರೆದುಕೊಂಡು ಹೋಗುವರು. ಅಲ್ಲಿ ಆ ವಿದ್ಯಾರ್ಥಿಯ ಲಗೇಜುಗಳನ್ನು ತಾವೇ ಹೊತ್ತು ಅವನ ಜತೆಜತೆಗೆ ನಡೆವರು. ಅಲ್ಲಿಂದ ತನ್ನ ವಿದ್ಯಾರ್ಥಿ ಗೆದ್ದು ತಂದ ಪದಕಗಳನ್ನು ಹೆಮ್ಮೆಯಿಂದ ಇಡೀ ಶಾಲೆಗೆ ತೋರಿಸುವರು. ಬಡ ವಿದ್ಯಾರ್ಥಿಯೊಬ್ಬ ಆಟದಲ್ಲಿ ಸಮರ್ಥನಿದ್ದಾನೆ ಎನಿಸಿದರೆ ತಮ್ಮದೇ ದುಡ್ಡಿನಲ್ಲಿ ಅವನಿಗೆ ಸ್ಪೋರ್ಟ್ಸ್ ಶೂ ಕೊಡಿಸುವರು. ಸಣ್ಣ ಸಾಧನೆಗಳಿಗೂ ಬೆನ್ನು ತಟ್ಟುವರು. ಸೋಲುಗಳಿಗೆ ಖಿನ್ನರಾಗದೇ ದೊಡ್ಡ ಗಮ್ಯಗಳೆಡೆಗೆ ಹೇಗೆ ನಡೆಯುವುದು ಎಂದು ಹೇಳಿಕೊಡುವರು.

ಇವತ್ತು ವಿಕಾಸ್ ಗೌಡ ಡಿಸ್ಕಸ್ ಎಸೆವ ಕಸುವಿನಲ್ಲಿ, ಸೈನಾ ನೆಹ್ವಾಲ್ ಸರ್ವ್ ಮಾಡುವಾಗಿನ ಚಾಕಚಕ್ಯತೆಯಲ್ಲಿ, ಅಭಿನವ್ ಬಿಂದ್ರಾ ದೃಷ್ಟಿ ಕದಲಿಸದಂತೆ ಗುರಿ ಇಡುವಲ್ಲಿ, ದೀಪಾ ಕರ್ಮಕಾರ್, ಸಾಕ್ಷಿ ಮಲಿಕ್, ಪಿವಿ ಸಿಂಧು ಮುಂತಾದವರು ದೇಶಕ್ಕೆ ಹೆಮ್ಮೆ ತಂದಿರುವಲ್ಲಿ –ಹಿಂದೆಲ್ಲೋ ಅವರುಗಳ ಶಾಲಾದಿನಗಳಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಹುರಿದುಂಬಿಸಿದ ಪಿಟಿ-ಮೇಷ್ಟ್ರು ಸಹ ಇರುತ್ತಾರೆ. ಸುಸ್ತಾಗಿ ನಿಂತ ಬಾಲಕನಿಗೆ ನೀರು-ಗ್ಲುಕೋಸು ಕೊಟ್ಟು ಪ್ರೋತ್ಸಾಹದ ಮಾತನ್ನಾಡಿರುತ್ತಾರೆ. ಶಿಸ್ತಿನ ಮೊದಲ ಪಾಠ ಮಾಡಿರುತ್ತಾರೆ. ಈಗ ಟೀವಿಯ ಮುಂದೆ ಕೂತಿರುವ ಆ ಮೇಷ್ಟ್ರು, ತನ್ನ ವಿದ್ಯಾರ್ಥಿ ಯಾವುದೋ ದೇಶದಲ್ಲಿ ಕ್ರೀಡಾಂಗಣದಲ್ಲಿ ಆಡಿ ಗೆಲ್ಲುತ್ತಿರುವುದನ್ನು ನೋಡಿ, “ನನ್ ಸ್ಟುಡೆಂಟು.. ನನ್ ಸ್ಟುಡೆಂಟು” ಅಂತ ಹೆಮ್ಮೆಯಿಂದ ತುಂಬುಗಣ್ಣಾಗಿ ಅಕ್ಕಪಕ್ಕದವರನ್ನೆಲ್ಲ ಕರೆದು ತೋರಿಸಿರುತ್ತಾರೆ.


ನಮಗೆ ಅಕ್ಷರ-ವಿದ್ಯೆ ಹೇಳಿಕೊಟ್ಟ ಗುರುಗಳನ್ನು ನೆನೆಯುವ ಶಿಕ್ಷಕರ ದಿನದ ಈ ಸಂದರ್ಭದಲ್ಲಿ, ನಮ್ಮ ಶಾಲಾದಿನಗಳ ಶನಿವಾರದ ಮುಂಜಾನೆಗಳ ಚಳಿ ಓಡಿಸುತ್ತಿದ್ದ, ನಮಗೆ ವಿವಿಧ ಆಟಗಳನ್ನು ಕಲಿಸಿದ, ನಮ್ಮೊಂದಿಗೇ ಕಲೆತು ಆಟವಾಡಿದ, ಸದಾ ಉತ್ಸಾಹದ ನಗು ಬೀರುತ್ತಿರುತ್ತಿದ್ದ ಪಿಟಿ-ಮೇಷ್ಟ್ರನ್ನೂ ನೆನಪು ಮಾಡಿಕೊಳ್ಳೋಣ. ಅವರಿಗೊಂದು ಶುಭಾಶಯ ಹೇಳೋಣ. 

[ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]

Saturday, July 02, 2016

ಬೇಡ್ಕಣಿ ಕ್ರಾಸ್

ಬೇಡ್ಕಣಿ ಕ್ರಾಸಿನಲ್ಲಿ ವಾಹನ ಸವಾರರು ಮೈಮರೆಯಬಾರದು.
ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಇಳಿವ ಅಷ್ಟಗಲದ ಜಾರು-
ರಸ್ತೆಯಲ್ಲಿ ಬ್ರೇಕು ಗೀಕು ಸರಿಯಾಗಿರದ ಸೈಕಲ್ಲಿನಲ್ಲಂತೂ ಹೋಗಲೇಬಾರದು.
ಅದೆಷ್ಟೋ ಅಪಘಾತಗಳಿಗೆ ಸಾಕ್ಷಿಯಾಗಿರುವ ಈ ತಿರುವಿನಲ್ಲಿ,
ಸಂಜೆಯಾದರೆ ಸಾಕು, ನಿಮ್ಮ ಮಗ್ನತೆ ಭಗ್ನಗೊಳಿಸಲು ನೂರೆಂಟಾಕರ್ಷಣೆಗಳು-
ಆ ತಿರುವ ಕೊನೆಯೇ ದಿಗಂತವೆಂಬಂತೆ ಅಲ್ಲೇ ಇಳಿವ ಕೆಂಪುಸೂರ್ಯ;
ಕತ್ತೆತ್ತಿದರೆ ಸಗ್ಗವಿಲ್ಲಿಯೇ ಎನ್ನುವ ಬೆಟ್ಟಸಾಲು;
ಅತ್ತಿತ್ತ ನೋಡಿದರೋ ದಿಕ್ಕೆಟ್ಟ ನವಿಲುಗಳು, ಹಾರುವ ಗಿಣಿವಿಂಡು,
ಗಿಡ್ಡಮರದ ಟೊಂಗೆಯಲ್ಲಿ ಕಿಲಿಗುಡುತ್ತ ಕುಣಿವ ಪಿಕಳಾರ.
ಅಪರೂಪಕ್ಕೆ ನುಣುಪಾಗಿರುವ ರಸ್ತೆಯಂದಕ್ಕೆ ಮನಸೋತು
ಪೆಡಲು ತುಳಿದಿರೋ, ಓಹೋ ಹಿಂದೆ ದಬ್ಬುವ ತೂರುಗಾಳಿ.

ಇವ್ಯಾವಕ್ಕೂ ಚಿತ್ತ ಕಲಕದೇ ದಿಟ್ಟತನದಲಿ ನೀವು
ರಸ್ತೆಯೆಡೆಗೇ ದಿಟ್ಟಿಯಿಟ್ಟು ನಡೆದಿರೋ- ಊಹುಂ,
ಆ ತಿರುವಿನಲ್ಲೇ ಸಿಗುತ್ತಾಳವಳು ಎಷ್ಟೋ ವರ್ಷದ ತರುವಾಯ.
ಜತೆಗೆ ಇದ್ದಕ್ಕಿದ್ದಂತೆ ಸುರಿಯತೊಡಗುವ ಮುಂಗಾರು ಮಳೆ.
ಬಿಡಿಸಿ ಹಿಡಿದ ಪುಟ್ಟ ಕೆಂಪು ಕೊಡೆ ಬೀಸಿ ಬಂದ ಅಡ್ಡಗಾಳಿಗೆ
ಉಲ್ಟಾ ಆಗಿ, ತುಂತುರು ನೀರ ಹನಿಗಳು ಅರಗಿಣಿಯ ಕೆನ್ನೆ,
ಅರೆಮುಚ್ಚಿದ ಕಣ್ಣು, ಅರೆಬಿರಿದ ತುಟಿಗಳ ಮೇಲೂ ಸೇಚನಗೊಂಡು,
ತ್ವರಿತ ಆತಂಕದ ಮೋಡಗಳು ಅವಳ ಮೊಗಕವಿದು

ನೀವದೇ ಹಳೆಯ ಪಡ್ಡೆ ಪ್ರೇಮಿಯಾಗಿ ಪರಿವರ್ತಿತರಾಗಿ
ಅದೇ ದೌರ್ಬಲ್ಯದ ಅದೇ ಹಳೆಹುಡುಗನಾಗಿ ಕ್ಷಣದಲ್ಲಿ
ಅವಳಿಗೆ ಸಹಾಯ ಮಾಡಲು ಹೋಗಿ,
ಮತ್ತೇನೋ ಹೊಳೆದು ಥಟ್ಟನೆ, ಮೋರೆ ತಿರುಗಿಸಿ, ಹತಾಶ ನಾಯಕನಾಗಿ...

ಬೇಡ್ಕಣಿ ಕ್ರಾಸು ಜುಗಾರಿ ಕ್ರಾಸಿನಂತಲ್ಲ. ಮಳ್ಗದ್ದೆ ಇಳಕಲಿನ ಹಾಗೂ ಅಲ್ಲ.
ಲಿಂಗ್ದಳ್ಳಿಯ ತಿರುವಿಗೂ, ಅಮಚಿ ಸೇತುವೆಗೂ ಹೋಲಿಕೆಯೇ ಸಲ್ಲ.
ಸಿಲ್ಕ್ಬೋರ್ಡ್ ಜಂಕ್ಷನ್ನಿನಂತೆ ಜಂಗುಳಿಯೂ ಇಲ್ಲ-
ಹಿಂದಡಿಯಿಡಲು. ತರೆಮರೆಸಿಕೊಳ್ಳಲು. ಕಳೆದುಹೋಗಲು.
ಮತ್ತೆ ಮನುಷ್ಯನಾಗಲು.

*
ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಇದೆಲ್ಲ ಮಾಯವಾಗಿ,
ಈಗಷ್ಟೆ ಕಂಡ ಅವಳು, ಹಳದಿ ಚೂಡಿ, ಬಣ್ಣಕೊಡೆ,
ಸೋಕಿದ ಮಳೆನೀರು, ದಡಬಡಾಯಿಸಿ ಧಾವಿಸಿದ ನೀವು
-ಎಲ್ಲ ಬರಿ ಭ್ರಮೆಯೆಂದರಿವಾಗಿ...
ಬಿಕೋರಸ್ತೆಯ ಮಧ್ಯದಲಿ ಬಿರ್ರನೆ ಚಲಿಸುತ್ತಿರುವ ನಿಮ್ಮ ಸೈಕಲ್
ಮತ್ತು ಎದುರಿಗೆ ಬರುತ್ತಿರುವ ಬೃಹತ್ ಲಾರಿ:
ಹ್ಯಾಂಡಲ್ ಎತ್ತ ತಿರುಗಿಸಬೇಕೆಂದು ಹೊಳೆಯದೆ
ಗಲಿಬಿಲಿಗೊಂಡು ಅತ್ತಿತ್ತ ನೋಡುವಷ್ಟರಲ್ಲಿ...

ಬೇಡ್ಕಣಿ ಕ್ರಾಸಿನಲ್ಲಿ ವಾಹನ ಸವಾರರು ಮೈಮರೆಯಬಾರದು. 

Thursday, June 02, 2016

ಸಾಸ್ವೆ ಮಾವು

ಬಿಗ್‌ಬಜಾರಿನ ಪ್ರಖರ ದೀಪಬೆಳಕಲಿ
ಬೆಲೆಯ ಲೇಬಲ್ಲು ಹೊದ್ದು ಕೂತದ್ದಿಲ್ಲ..
ಮೇಳಗಳ ಮಳಿಗೆಯಲಿ ಮಂತ್ರಿವರ್ಯರ ಬಾಯಿ
ಸಿಹಿಮಾಡಿ ಫೋಟೋಗೆ ಪೋಸು ಕೊಟ್ಟದ್ದಿಲ್ಲ..
ರಟ್ಟಪೆಟ್ಟಿಗೆಯಲಿ ಘನಮಾಡಿ ತುಂಬಿಸಲ್ಪಟ್ಟು
ದೇಶಾಂತರ ರಫ್ತಾದದ್ದೂ ಇಲ್ಲ..
ಬೀದಿಬದಿಯ ತಳ್ಳುಗಾಡಿಯಲಿ ಬೀಳದಂತೆ ಪೇರಿಸ್ಪಟ್ಟು
ಮಾರಾಟವಾಗುವ ಭಾಗ್ಯ ಸಹ ಇಲ್ಲ..

ಕಾನನದ ಮಾಮರವೊಂದು ಮೈತುಂಬ ಪೂತು
ಇಬ್ಬನಿ ಬಿಸಿಲು ಗಾಳಿ ಮಳೆ ಕೋಗಿಲೆಕೂಗನ್ನೆಲ್ಲ ಸಹಿಸಿ
ಗೊಂಚಲುಗಳಲಿ ಮಿಡಿತೂಗಿ ಹಟಹಿಡಿದು ಮಾಗಿ ಹಣ್ಣಾಗಿ
ರಸದುಂಬಿ ಬೀಗಿ ಸಿಹಿಯಾಗಿ ಕೆಂಪಾಗಿ ಸಫಲತೆಯ ಪಡೆದು

ಊರ ಪೋರರಿಗೀಗ ಹಬ್ಬ.. ಹಿತ್ತಿಲ ಹಿಂದಿನ ಕಾಲುದಾರಿಯಲಿ
ಪುಟ್ಟಪಾದಗಳ ಓಡು. ಬಾಗುಮಟ್ಟಿಗಳೂ ತುರುಚಿಗಿಡಗಳೂ ಲೆಕ್ಕಕ್ಕಿಲ್ಲ.
ಮನೆಗಳನು ಮುಚ್ಚಿದರೂ ತೆರೆದೇ ಇರುವ ಈ ಕಾಡದಾರಿ
ಸೈಕಲ್ಲಿನಲ್ಲಿ ಬಂದವರನ್ನೂ ಟಯರ್ ಓಡಿಸಿಕೊಂಡು ಬಂದವರನ್ನೂ
ಒಟ್ಟಿಗೇ ತಲುಪಿಸುತ್ತದೆ ಸಾಸ್ವೆ ಮಾವಿನಮರದ ಬುಡಕೆ..

ತಣ್ಣೆಳಲ ಕೆಳಗೀಗ ಸರೀ ಬಡಿಗೆಗಾಗಿ ಹುಡುಕಾಟ
ಕಲ್ಲಲ್ಲೇ ಬೀಳಿಸುವೆವೆನ್ನುವ ಧೀರರ ಹಾರಾಟ
ಬೀಸಿ ಒಗೆದರೆ, ಪಕ್ಕದೂರ ನಾಚುಪೋರಿಯೂ ಮನಮೆಚ್ಚುವಂತೆ ಫಲಧಾರೆ
ಓಡಿ ಆಯುವ ಭರದಲ್ಲಿ ಚೂರೇ ಕೈತಾಕಿ ಕಣ್ತುಂಬ ಸಂಭ್ರಮತಾರೆ

ಬಡಿದು ಬೀಳಿಸಿ ಹೆಕ್ಕಿ ಗುಡ್ಡೆಹಾಕಿ ಇಡೀ ಹಣ್ಣು ಬಾಯೊಳಗಿಟ್ಟು
ರಸಹೀರಿ ಹೊಟ್ಟೆ ತುಂಬುವವರೆಗೂ ತಿಂದು ಕುಣಿದು ಕುಪ್ಪಳಿಸಿ
ನಾನಾ ಆಟವಾಡಿ ದಣಿದು ಅಲ್ಲೇ ತುಸು ವಿರಮಿಸಿ
ಇನ್ನೂ ಉಳಿದ ಹಣ್ಣುಗಳು ಬಕ್ಕಣದಲ್ಲೂ ಪುಟ್ಟ ಕೈಚೀಲದಲ್ಲೂ
ತುಂಬಿಸಲ್ಪಟ್ಟು ಮನೆ ಸೇರಿ, ಇಂದು ಮಧ್ಯಾಹ್ನದೂಟದ
ಸಾಸ್ವೆಯಲಿ ತೇಲುವ ಪುಟ್ಪುಟ್ಟ ಹಣ್ಣುಗಳು..
ಮೇಯ್ದು ಸಂಜೆ ಕೊಟ್ಟಿಗೆಗೆ ಮರಳಿದ ಗೌರಿ
ಹಾಕಿದ ಸಗಣಿಯಲ್ಲೂ ಪುಟ್ಪುಟ್ಟ ಓಟೆಗಳು.

ಸಾಸ್ವೆ ಮಾವಿನಹಣ್ಣು ಯಾವ ಮಾರ್ಕೆಟ್ಟಿನಲ್ಲೂ ಸಿಗುತ್ತಿಲ್ಲ...
ಆಪೋಸು ರಸಪುರಿಗಳ ನೀಟಾಗಿ ಕತ್ತರಿಸಿ ಸಿಪ್ಪೆ ಸಹ ತೆಗೆದು
ಪಿಂಗಾಣಿ ಬಟ್ಟಲಲಿ ಜೋಡಿಸಿ ಟೇಬಲಿನ ಮೇಲಿಟ್ಟಿದ್ದಾರೆ ಚಮಚದೊಂದಿಗೆ..
ಏಸಿಯಿಂದ ಬಂದ ತಂಪುಗಾಳಿಯಲ್ಲಿ ತೇಲಿಬರುತ್ತಿದೆ ಆ
ಕಾಡಮಾವಿನ ಮರದ ಸಾಸ್ವೆಹಣ್ಣಿನ ರುಚಿಯ ನೆನಪು..
ನೂರುಮರ ನಡುವೆ ಹೆಸರಿಲ್ಲದೆ ಹಸಿರಾಗಿ ತೂಗುವ ತುಂಬುತರು..
ಕಾಡುತ್ತಿದೆ ಆ ಕಾಡಹಾದಿ.. ಯಾರಾದರೂ ತಂದುಕೊಟ್ಟಿದ್ದರೆ
ರಾತ್ರಿಯಡುಗೆಗೆ ಸಾಸ್ವೆಗಾಗುತ್ತಿತ್ತು ಎಂದು ನಿಟ್ಟುಸಿರಿಡುವ ಅಮ್ಮ.

Wednesday, May 25, 2016

ಎಲ್ಲ ಹಕ್ಕಿಗಳಿಗೂ ಗೂಡು

‘ಯಾರಿಗೂ ಹೇಳ್ಬೇಡಿ’ ಅನ್ನೋ ಕೋಡ್ಲು ರಾಮಕೃಷ್ಣ ನಿರ್ದೇಶನದ ಸಿನೆಮಾ ನೋಡ್ತಿದ್ದೆ. ನೀವೂ ನೋಡಿರುತ್ತೀರಿ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗದ ಒಂದಷ್ಟು ಮಹಿಳೆಯರ ಕನಸನ್ನು ಬಂಡವಾಳ ಮಾಡಿಕೊಳ್ಳುವ ಒಬ್ಬಾತ, ತನ್ನ ಬುದ್ಧಿವಂತಿಕೆ ಮತ್ತು ನಯವಾದ ಮಾತುಗಳಿಂದ ಹೇಗೆ ಅವರನ್ನು ವಂಚಿಸುತ್ತಾನೆ ಎಂಬುದು ಸಿನೆಮಾ ಕತೆ. ಸಿನೆಮಾ ಪೂರ್ತಿ ಇರುವುದು ಒಂದು ವಟಾರದಲ್ಲಿನ ಗೃಹಿಣಿಯರ ಸ್ವಂತ ಮನೆ ಮಾಡುವ ಮಹದಾಸೆಯ ಸುತ್ತ. ಬಾಡಿಗೆ ಮನೆಯ ಸಂಕಷ್ಟಗಳೂ, ಸ್ವಂತ ಮನೆ ಇಲ್ಲ ಎಂಬುದು ಒಂದು ಮಾನಸಿಕ ಕೊರಗೇ ಆಗಿಬಿಡುವ ಪರಿಯೂ, ಸ್ವಗೃಹವೆಂಬ ಮರೀಚಿಕೆಯ ಬೆನ್ನೇರಿ ಹೊರಟ ಬಡ ಮತ್ತು ಮಧ್ಯಮ ವರ್ಗದವರ ಪಾಡು –ಎಲ್ಲವೂ ಈ ಚಿತ್ರದಲ್ಲಿ ಅತ್ಯದ್ಭುತವಾಗಿ ಬಿಂಬಿತವಾಗಿವೆ ಎಂದರೆ ನೀವು ‘ಚೆನ್ನಾಗ್ ಹೇಳಿದ್ರಿ’ ಎನ್ನದೇ ಇರಲಾರಿರಿ.

ನಮ್ಮ ಶಾಲೆಯ ಎರಡನೆಯ ಇಯತ್ತೆಯ ಕನ್ನಡ ಪಠ್ಯದಲ್ಲಿ ‘ನಮ್ಮ ಮನೆ’ ಎಂಬ ಪಾಠವೊಂದಿತ್ತು. ಈ ಪಾಠದಲ್ಲಿ ಇದ್ದ ಮನೆ, ಒಳಾಂಗಣ, ಮನೆಯಲ್ಲಿನ ಪೀಠೋಪಕರಣಗಳು, ಮನೆಯ ಹೊರಗಿನ ವಾತಾವರಣಗಳ ವಿವರಗಳನ್ನೆಲ್ಲ ನಾವು ವಿದ್ಯಾರ್ಥಿಗಳು ನಮ್ನಮ್ಮ ಮನೆಗಳಿಗೆ ಹೋಲಿಸಿ ರೋಮಾಂಚಿತರಾಗುತ್ತಿದ್ದೆವು.  ನಮ್ಮ ಮಾಸ್ತರರೂ ಈ ಪಾಠ ಮಾಡಿದ ಮರುದಿನದ ಹೋಂವರ್ಕಾಗಿ ನಮ್ನಮ್ಮ ಮನೆಗಳ ಸ್ವರೂಪವನ್ನು ವಿವರವಾಗಿ ಬರೆದುಕೊಂಡು ಬರುವಂತೆ ಹೇಳಿರುತ್ತಿದ್ದರು. ನಮ್ಮ ಮನೆಯನ್ನು ಕೂಲಂಕುಷವಾಗಿ ನಾವು ನೋಡಿದ್ದೂ ಆಗಲೇ. ಮನೆಗೆ ಎಷ್ಟು ಮೆಟ್ಟಿಲಿದೆ, ಜಗುಲಿಯಲ್ಲಿ ಎಷ್ಟು ಕುರ್ಚಿಯಿದೆ, ಅಡುಗೆಮನೆಯ ನಾಗಂದಿಗೆ ನಮ್ಮ ಕೈಗೆ ಸಿಗದಂತಿದೆ, ಅಪ್ಪ-ಅಮ್ಮ ಮಲಗುವ ಮಂಚದ ಕೆಳಗೇನಿದೆ, ಅಜ್ಜಿಯ ಕೋಲು ಯಾಕೆ ಬಾಗಿಲ ಹಿಂದೇ ಅಡಗಿಕೊಂಡಿರುತ್ತೆ, ನಾಯಿ ಜಾಕಿಯ ಮಲಗುವ ಮೂಲೆಗೆ ಕಟ್ಟಿದ ಸರಪಳಿ ಎಷ್ಟುದ್ದವಿದೆ ಎಂಬೆಲ್ಲ ವಿವರಗಳು ಅದೇ ಮೊದಲ ಸಲ ದಾಖಲಾದವು.

ನಮ್ಮ ಮನೆಯ ಮಾಡು ಸೋಗೆಯಿಂದ ಹೆಂಚಿಗೆ ಬಡ್ತಿ ಪಡೆದ ಕತೆಯನ್ನು ಅಪ್ಪ ಆಗಾಗ ಹೇಳುತ್ತಿದ್ದ. ಅಜ್ಜ ಕಟ್ಟಿಸಿದ್ದ ಮಣ್ಣು ಗೋಡೆಯ ಮನೆಗೆ ಹೆಂಚು ಹೊದಿಸುವ ಮೂಲಕವೇ ತನ್ನ ಅಧಿಕಾರವನ್ನು ಶುರು ಮಾಡಿದ ಅಪ್ಪ, ಆಮೇಲೆ ಆ ಮನೆ ಕೆಡವಿ ಹೊಸ ಮನೆ ಕಟ್ಟಿಸುವ ಮಟ್ಟಕ್ಕೆ ಬೆಳೆದದ್ದು ಒಂದು ಸಾಹಸಗಾಥೆಯೇ. ಅನೇಕ ಮಳೆಗಾಲಗಳನ್ನು ಕಂಡಿದ್ದ ಆ ನಮ್ಮ ಮನೆಯ ಮಣ್ಣಿನ ಗೋಡೆಗಳನ್ನು ಇಲಿಗಳು ಕೊರೆದು ದೊರಗು ಮಾಡಿದ್ದರೆ, ಬಾಗಿಲು-ಕಿಟಕಿ-ಕಂಬಗಳನ್ನು ವರಲೆ ಹುಳುಗಳು ತಿಂದು ಜೀರ್ಣ ಮಾಡಿದ್ದವು.  ಹೆಂಚಿನ ಮಾಡಿಗೆ ಹಾಕಿದ್ದ ಅಡಿಕೆ ದಬ್ಬೆಗಳಂತೂ ಪೂರ್ತಿ ಲಡ್ಡಾಗಿ ಜೋರು ಗಾಳಿಯೋ ಮಳೆಯೋ ಬಂದರೆ ಸೂರೇ ಕಳಚಿ ಬೀಳಬಹುದೆಂಬ ಭಯವೂ ಇತ್ತು. ಮನೆಗೆ ಬಂದ ನೆಂಟರು ಅಕಸ್ಮಾತ್ ಕತ್ತೆತ್ತಿ ಮೇಲೆ ನೋಡಿದರೆ ಬೆಚ್ಚಿ ಬೀಳುವಂತೆ ಮಾಡು ಒಂದು ಕಡೆ ವಾಲಿತ್ತು ಸಹ. ಹೀಗಾಗಿ ಈ ಅಭ್ಯಾಗತರನ್ನು ಭಯಮುಕ್ತಗೊಳಿಸಲು ನಾವು ಬಿಳಿಯ ಸಿಮೆಂಟ್ ಚೀಲಗಳನ್ನು ಹೊಲಿದು ದೊಡ್ಡ ಶೀಟ್ ಮಾಡಿ ಇಡೀ ಮನೆಗೆ ‘ಫಾಲ್ ಸೀಲಿಂಗ್’ ಥರ ಹೊದಿಸಿಬಿಟ್ಟಿದ್ದೆವು. ಜೋರು ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದ್ದ ನೀರು ಈ ಫಾಲ್ ಸೀಲಿಂಗ್ ಮೇಲೆ ಶೇಖರಗೊಂಡು ಅಲ್ಲಲ್ಲೇ ಜೋತುಕೊಂಡಿರುತ್ತಿತ್ತು. ಹಾಗೆ ಶೇಖರಗೊಂಡ ನೀರನ್ನು ನಾವು ಅಲ್ಲಲ್ಲೇ ಒಂದು ದಬ್ಬಣ ಹೆಟ್ಟಿ ಕೆಳಗೆ ಬಕೆಟ್ ಹಿಡಿದು ಬಸಿದುಕೊಳ್ಳುತ್ತಿದ್ದೆವು.

ಅಡಿಕೆಗೆ ರೇಟ್ ಬಂದ ಒಂದು ವರ್ಷ ಅಪ್ಪ ಈ ಮನೆ ಕೆಡವಿ ಹೊಸ ಮನೆ ಕಟ್ಟಿಸುವುದಾಗಿ ಘೋಷಿಸಿದ. ಆಟವಾಡುವಾಗ ಮರಳಿನಲ್ಲೋ, ಮಣ್ಣಿನಲ್ಲೋ, ಕೋಲಿನಿಂದಲೋ ಮನೆ ಕಟ್ಟಿಯಷ್ಟೇ ಗೊತ್ತಿದ್ದ ನನಗೆ, ಹೊಸದೊಂದು ವಾಸದ ಮನೆ ಕಟ್ಟಬೇಕು ಎಂದರೆ ಅದಕ್ಕೆ ಎಷ್ಟು ಹಣ ಬೇಕು, ಅಪ್ಪ ಅದನ್ನು ಎಲ್ಲಿಂದ ಹೊಂದಿಸುತ್ತಾನೆ, ಎಷ್ಟು ಪರಿಶ್ರಮ ಬೇಕು –ಎಂಬ್ಯಾವುದರ ಅರಿವೂ ಇರಲಿಲ್ಲವಷ್ಟೇ? ಆದರೆ ಅಪ್ಪನಿಗೆ ಅದು ಹೇಗೆ ಎಲ್ಲಾ ಕೂಡಿ ಬಂತೋ, ಎರಡು ವರ್ಷದೊಳಗೆ ಹೊಸ ಮನೆ ಎದ್ದು ನಿಂತಿತು.  ಆ ಮನೆ ಕಟ್ಟುವಷ್ಟು ಕಾಲ ನಾವು ಬಾವಿಮನೆಯ ಪುಟ್ಟ ಜಾಗದಲ್ಲಿ ಇದ್ದುದು.  ಹಳೇ ಮನೆ ಕೆಡವುವ ಭಾವಪೂರ್ಣ ಸನ್ನಿವೇಶದಿಂದ ಹೊಸ ಮನೆಗೆ ಒಕ್ಕಲಾಗುವ ಸಂತೋಷದ ಘಳಿಗೆಯವರೆಗೆ ದಿನಗಳು ನೋಡನೋಡುತ್ತ ಕಳೆದವು.  ಫೌಂಡೇಶನ್ ಹಾಕುವುದೇನು, ದಿನವೂ ಕ್ಯೂರಿಂಗ್ ಮಾಡುವುದೇನು, ಮರಳು-ಜಲ್ಲಿಗಳ ಲಾರಿಗಳಿಗೆ ಕಾಯುವುದೇನು, ಮಟಗೋಲಿಟ್ಟು ಅಳೆಯುತ್ತ ಇಟ್ಟಿಗೆಗಳನ್ನು ಜೋಡಿಸುವ ಮೇಸ್ತ್ರಿಯ ಕೆಲಸ ನೋಡುವುದೇನು, ಬಂದವರೆಲ್ಲ ಹೊಸಹೊಸ ಐಡಿಯಾ ಕೊಡುವುದೇನು, ವಾಸ್ತು ಪ್ರಕಾರ ಕಟ್ಟಿ ಅಂತ ಹೆದರಿಸುವವರೇನು, ಕಳ್ಳನಾಟಕ್ಕಾಗಿ ರಾತ್ರಿ ಕಾರ್ಯಾಚರಣೆ ನಡೆಸುವುದೇನು, ವಾಸ್ತುಬಾಗಿಲಿಗೆ ಆಚಾರಿ ಹೂಬಳ್ಳಿ ಕೆತ್ತುವಾಗ ಪಕ್ಕ ನಿಂತು ವೀಕ್ಷಿಸುವುದೇನು, ಸ್ಲಾಬ್ ಹಾಕುವ ದಿನ ನೂರಾರು ಕೆಲಸಗಾರರಿಗೆ ಅಡುಗೆ ಮಾಡುವುದೇನು... ಓಹೋಹೋ! ಮೇಸ್ತ್ರಿಗಳು, ಆಚಾರಿಗಳು, ವೈರಿಂಗಿನವರು, ಟೈಲ್ಸ್ ಹಾಕುವವರು, ಪೇಂಟಿಂಗ್ ಮಾಡುವವರು –ಹೀಗೆ ಬೇರೆಬೇರೆ ವಿಭಾಗದ ಹತ್ತಾರು ಜನಗಳ ಜೊತೆಗೆ ಹೆಣಗಾಡುತ್ತ, ಮನೆ ಕಟ್ಟಿ ಮುಗಿಯಿತು ಎಂಬಷ್ಟರಲ್ಲಿ ‘ಮನೆ ಕಟ್ಟಿ ನೋಡು’ ಅನ್ನೋ ಹಿರಿಯರ ಮಾತು ಅಕ್ಷರಶಃ ಸತ್ಯ ಎಂಬ ಅರಿವು ನಮಗೆಲ್ಲ ಆಗಿತ್ತು. ಅಂತೂ ಅಪ್ಪ ಸಾಧಿಸಿಯೇಬಿಟ್ಟಿದ್ದ. ನೂತನ ಗೃಹಪ್ರವೇಶಕ್ಕೆ ಬಂದವರೆಲ್ಲ ‘ಚನಾಗಿದೆ’, ‘ಸಖತ್ ಪ್ಲಾನ್ ಮಾಡಿ ಕಟ್ಸಿದೀರಿ’, ‘ಎಲ್ಲೂ ಸ್ವಲ್ಪ ಜಾಗಾನೂ ವೇಸ್ಟ್ ಮಾಡಿಲ್ಲ’ ಅಂತೆಲ್ಲ ಹೊಗಳಿ ನಮ್ಮ ಹಿಗ್ಗು ಹೆಚ್ಚಿಸಿದ್ದರು.

ಅಂತೂ ಊರ ಮೊದಲ ಆರ್ಸಿಸಿ ಮನೆಯಾಗಿ ನಮ್ಮ ಮನೆ ಥಳಥಳ ಹೊಳೆಯಿತು. ಹಿಂದೆಯೇ ಕಟ್ಟಲ್ಪಟ್ಟ, ನಮ್ಮ ಮನೆಗಿಂತ ಬೃಹತ್ತಾದ, ಮೆತ್ತು-ಮೇಲ್ಮೆತ್ತುಗಳೂ ಇರುವ, ಆದರೂ ಹಳೇ ಶೈಲಿಯ ಹೆಂಚು ಹೊದಿಸಿದ ನಮ್ಮೂರ ಅನೇಕ ಮನೆಗಳಿಗಿಂತ ನಮ್ಮ ಮನೆಯೇ ಪುಟ್ಟಗೆ ಚೆನ್ನಾಗಿದೆ ಅಂತ ನಮಗೆ ನಾವೇ ಅಂದುಕೊಂಡೆವು. ‘ನಿಮ್ಮನೆ ಹಳ್ಳಿಮನೆ ಥರಾನೇ ಇಲ್ಲ, ಪೇಟೆ ಮನೆ ಇದ್ದಂಗಿದೆ’ ಅಂತ ಯಾರಾದರೂ ಹೇಳಿದರೆ ಅದು ಹೊಗಳಿದ್ದೋ ತೆಗಳಿದ್ದೋ ಗೊತ್ತಾಗದೆ ಒದ್ದಾಡಿದೆವು. ಸಿಮೆಂಟಿನ ಗೋಡೆಗಳಿಗೆ ಕನ್ನ ಕೊರೆಯಲಾಗದೆ ಇಲಿಗಳು ಈಗ ಹಳೆಯ ಕೊಟ್ಟಿಗೆಮನೆ ಸೇರಿದವು. ಪಾಲಿಶ್ ವಾಸನೆಯ ಮರಮಟ್ಟುಗಳು ಗೆದ್ದಲು ಹುಳುಗಳಿಗೆ ಇಷ್ಟವಾಗಲಿಲ್ಲ. ಹೀಗಾಗಿ, ಹಳೇಮನೆಯಲ್ಲಿ ಅನೇಕ ಜೀವಿಗಳೊಂದಿಗೆ ಒಂದಾಗಿ ಸಹಜೀವನ ನಡೆಸುತ್ತಿದ್ದ ನಾವು, ಈ ಹೊಸಮನೆಯಲ್ಲಿ ಮನುಷ್ಯರು ಮಾತ್ರ ಜೀವಿಸುವಂತಾಯ್ತು. ನಮ್ಮ ಪುಣ್ಯಕ್ಕೆ ಒಂದೆರಡು ತಿಂಗಳಲ್ಲಿ ಹಲ್ಲಿಗಳೂ, ನೊಣಗಳೂ ಮನೆಯೊಳಗೆ ಸೇರಿಕೊಂಡು ನಮಗೆ ಕಂಪನಿ ಕೊಟ್ಟವು.

‘ದಟ್ಟ ಹಸಿರು-ಅಲ್ಲಲ್ಲಿ ಮನೆ’ ಎಂಬಂತಿರುವ ಹಳ್ಳಿಯಿಂದ, ‘ಎಲ್ಲೆಲ್ಲೂ ಮನೆಗಳು-ಅಲ್ಲಲ್ಲಿ ಹಸಿರು’ ಎಂಬಂತಿರುವ ನಗರಕ್ಕೆ ಬಂದಮೇಲೆ ಮನೆಗಳ ಬಗ್ಗೆ ಇರುವ ನನ್ನ ಕಲ್ಪನೆಯೇ ಬದಲಾಯಿತು. ಮನೆ ಎಂದರೆ ಬರೀ ಕಟ್ಟಡವಲ್ಲ, ಅದೊಂದು ಸಜೀವ ಭಾವಕೋಶ ಎಂದುಕೊಂಡಿದ್ದ ನನ್ನ ಊಹನೆಯನ್ನು ತೊಡೆದುಹಾಕಿದ್ದು ಈ ನಗರ. ಮನೆ ಎಂದರೆ ಕಳೆ ತುಂಬಿದ ಅಂಗಳ, ಜಗುಲಿಯ ಟೇಬಲ್ಲಿನ ಮೇಲಿನ ಕವಳದ ಹರಿವಾಣ, ನಡುಮನೆಯ ಕತ್ತಲು, ಅಡುಗೆಮನೆ ಗ್ಯಾಸ್ಕಟ್ಟೆ ಮೇಲೆ ಕೂತು ಹೇಳಿದ ಕತೆ, ಬೆಡ್ರೂಮಿನ ಮಂಚದ ಕೆಳಗೆ ಪೇರಿಸಿರುವ ಚೀನೀಕಾಯಿ, ಹಿತ್ತಿಲ ಕಟ್ಟೆಯ ಹರಟೆಗೆ ಸಾಥಿಯಾಗುವ ತಂಗಾಳಿ, ಬಾವಿಯ ನೀರಲ್ಲಿ ಪ್ರತಿಫಲಿತ ಗಡಗಡೆಯ ಬಿಂಬ, ಕೊಟ್ಟಿಗೆಯಲ್ಲಿನ ಹೊಸ ಪುಟ್ಟಿಕರುವಿನ ಜಿಗಿತ, ಅಟ್ಟದ ಕಂಬಕ್ಕೆ ಸಿಕ್ಕಿಸಿದ ಕುಡುಗೋಲು ...ಎಂಬೆಲ್ಲ ಚಿತ್ರಗಳನ್ನು ಅಳಿಸಿಹಾಕಿ, ಮನೆ ಎಂದರೆ ಒಂದೋ-ಎರಡೋ-ಮೂರೋ ಬಿ‌ಎಚ್ಕೆಗಳಲ್ಲಿ ಅಳೆಯಲ್ಪಡುವ, ಬಾಡಿಗೆಗೆ ಕೊಡಲೆಂದೇ ಕಟ್ಟಿಸಿದ ಬೆಂಕಿಪೊಟ್ಟಣಗಳಂತ ಅಚೇತನ ನಿಕೇತನಗಳು ಎಂಬ ವಿಷಯ ಅರಗಿಸಿಕೊಳ್ಳಲೇ ಕಷ್ಟವಾಗಿತ್ತು.

ಆದರೆ ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವುದೇ ಮನುಷ್ಯನ ಸ್ವಭಾವವಲ್ಲವೇ? ಹೀಗಾಗಿ ದುಡಿಮೆಯ ಜಿದ್ದಿಗೆ ಬಿದ್ದು ನಗರ ಸೇರಿದ ನಾನೂ ಈ ಪುಟ್ಪುಟ್ಟ ಮನೆಗಳಲ್ಲೇ ಸೌಂದರ್ಯ ಹುಡುಕುವ ಅನಿವಾರ್ಯತೆಗೆ ಸಿಲುಕಿದೆ. ಬಾಡಿಗೆ ಮನೆಗೆಂದು ಬೀದಿಬೀದಿ ಅಲೆಯುವ, ಟು-ಲೆಟ್ ಬೋರ್ಡುಗಳನ್ನು ದೂರದಿಂದಲೇ ಗುರುತಿಸುವ, ರಿಯಲ್ ಎಸ್ಟೇಟ್ ಏಜೆಂಟುಗಳ ಜತೆ ಗುದ್ದಾಡುವ, ಓನರುಗಳ ಜತೆ ವ್ಯವಹರಿಸುವ, ಒಂದು ಮನೆಯಿಂದ ಮತ್ತೊಂದು ಮನೆಗೆ ಆಗಾಗ ಪೆಟ್ಟಿಗೆ ಕಟ್ಟುವ ಜಾಣ್ಮೆ ಬೆಳೆಸಿಕೊಂಡೆ. ಹೀಗೆ ಮನೆಯೊಂದನ್ನು ಪ್ರವೇಶಿಸುವಾಗ ಯಾರೋ ತೊಟ್ಟು ಬಿಟ್ಟ ಬಟ್ಟೆ ತೊಡುತ್ತಿದ್ದೇನೆ ಎನ್ನುವಂತ ಅವಮಾನವೇನೂ ಆಗುತ್ತಿರಲಿಲ್ಲ. ಈ ಮನೆಗಳೂ ಈಗಾಗಲೇ ಯಾರ್ಯಾರೋ ಇದ್ದು ಹೋಗಿದ್ದ ಜಾಗವಿದು ಎಂಬ ಲಕ್ಷಣಗಳನ್ನೆಲ್ಲ ತೊಡೆದುಹಾಕುವಂತೆ ಒಮ್ಮೆ ಬಣ್ಣ ಹೊಡೆಸಿಕೊಂಡು, ಸಣ್ಣ-ಪುಟ್ಟ ರಿಪೇರಿ ಮಾಡಿಸಿಕೊಂಡು ಚಂದ ಪ್ರಸಾದನಕ್ಕೊಳಗಾಗಿ ಹೊಸ ಅತಿಥಿಯನ್ನು ಸ್ವಾಗತಿಸುವವು.  ನಗರಕ್ಕೆ ಬ್ಯಾಚುಲರ್ರಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ, ಟೆರೇಸಿನ ಮೇಲಿನ ಒಂಟಿಕೋಣೆಯಿಂದ ಗ್ರೌಂಡ್ ಫ್ಲೋರಿನ ಥ್ರೀ ಬಿ‌ಎಚ್ಕೆ ಮನೆಯವರೆಗೆ, ಒಂಟಿಯಿಂದ ಜಂಟಿಯಾಗಿ ಮಕ್ಕಳೊಂದಿಗನಾಗಿ ಸಂಸಾರವನ್ನು ಬೆಳೆಸುತ್ತ ಸದೃಢನಾಗುತ್ತ ಹೋಗುವುದನ್ನು ಈ ನಿರ್ಜೀವ ಕಟ್ಟಡಗಳು ತಮ್ಮ ಸಿಮೆಂಟಿನ ಕಣ್ಣುಗಳಿಂದ ನೋಡುವವು.  ಬರೀ ಒಂದು ಚಾಪೆ, ಬಟ್ಟೆಗಂಟು, ನಾಲ್ಕು ಪಾತ್ರೆಗಳೊಂದಿಗೆ ಶುರುವಾಗಿದ್ದ ಅವನ ಜೀವನ, ಬೆಳೆಯುತ್ತ ಬೆಳೆಯುತ್ತ ಒಂದು ಲಾರಿಯಲ್ಲಿ ಹಿಡಿಸಲಾಗದಷ್ಟು ಸಾಮಗ್ರಿಗಳ ಆಗರವಾಗುವುದಕ್ಕೆ ನಗರದ ಮನೆಗಳು ಸಾಕ್ಷಿಯಾಗುವವು.

ಮತ್ತು ಹಾಗೆ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ವರ್ಗವಾಗುತ್ತ ಈಗ ಗ್ರೌಂಡ್ ಫ್ಲೋರಿನ ಮನೆಯಲ್ಲಿರುವ ಈತನ ಮುಂದಿನ ವಾಸ್ತವ್ಯ ‘ಸ್ವಂತ ಮನೆ’ಯಲ್ಲಿ ಎಂಬುದೂ ಸ್ಪಷ್ಟ. ‘ಪ್ರತಿ ಸಲ ಮನೆ ಬದಲಿಸ್ಬೇಕಾದ್ರೂ ಸಾಮಾನು ಸೇರ್ಸೀ ಸೇರ್ಸೀ ಸಾಕಾಯ್ತು ನಂಗೆ.. ಇನ್ನೊಂದ್ ವರ್ಷ ಬಿಟ್ಟು ನೀವು ಮತ್ತೆ ಶಿಫ್ಟ್ ಮಾಡ್ತೀನಿ ಅಂದ್ರೆ ನಾನಂತೂ ಬರಲ್ಲ. ಸ್ವಂತ ಮನೆ ಮಾಡಿ, ಪರ್ಮನೆಂಟಾಗಿ ಒಕ್ಕಲಾಗೋಣ’ ಎಂಬ ಹೆಂಡತಿಯ ಚಿತಾವಣೆಗೆ ಮಣಿದ ಗಂಡ ನಿಧಾನಕ್ಕೆ ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ಸೇವಿಂಗ್ಸ್ ಇದೆ, ಚೀಟಿ ಹಣ ಎಷ್ಟು ಬರಬಹುದು, ನನ್ನ ಯೋಗ್ಯತೆಗೆ ಎಷ್ಟು ಸಾಲ ಸಿಗಬಹುದು ಎಂಬೆಲ್ಲ ಲೆಕ್ಕಾಚಾರಕ್ಕೆ ಬೀಳುತ್ತಾನೆ.  ‘ಈಗೆಲ್ಲಾ ಸೈಟ್ ತಗೊಂಡು ಮನೆ ಕಟ್ಟಿಸಿ ಉದ್ಧಾರ! ಅಲ್ಲದೇ ಸೈಟ್ ಸಿಕ್ಕರೂ ಅದು ನಗರದ ಹೊರಭಾಗದಲ್ಲಿ ಸಿಗೋದು. ಅಲ್ಲಿ ಮನೆ ಕಟ್ಟಿಕೊಂಡು ಅಷ್ಟೆಲ್ಲ ದೂರದ ಆಫೀಸಿಗೆ ಈ ಟ್ರಾಫಿಕ್ಕಲ್ಲಿ ದಿನಾ ಓಡಾಡ್ತೀಯಾ? ಸುಮ್ನೇ ಒಂದು ಫ್ಲಾಟ್ ತಗೋ. ಈ ಬಾಡಿಗೆ ಕಟ್ಟೋ ದುಡ್ಡಲ್ಲೇ ಸಾಲದ ಕಂತು ಕಡ್ಕೊಂಡು ಹೋದ್ರೆ ಆಯ್ತು’ ಎಂಬ ಗೆಳೆಯರ ಸಲಹೆ ಇವನನ್ನು ಯೋಚಿಸುವಂತೆ ಮಾಡುತ್ತದೆ. ನಿಜವಾಗಿಯೂ ಫ್ಲಾಟ್ ಕೊಳ್ಳುವಷ್ಟು ಹಣ, ಆಮೇಲೆ ಆ ಸಾಲ ತೀರಿಸುವಷ್ಟು ಶಕ್ತಿ ತನ್ನಲ್ಲಿದೆಯಾ ಎಂಬ ವಿಶ್ಲೇಷಣೆಗೆ ತೊಡಗುತ್ತಾನೆ. ದಿನವೂ ನ್ಯೂಸ್ಪೇಪರುಗಳಲ್ಲಿ ನೋಡಿ ಉಪೇಕ್ಷಿಸುತ್ತಿದ್ದ ಜಾಹೀರಾತುಗಳೆಡೆಗೆ ಕಣ್ಣು ಹಾಯುತ್ತದೆ. ಯಾರೋ ಎಲ್ಲೋ ಮನೆ ಖರೀದಿಗಿದೆ ಎಂದಾಗ ಕಿವಿ ನೆಟ್ಟಗಾಗುತ್ತದೆ.

ನಗರದ ತುಂಬ ಮಾರಲೆಂದೇ ಕಟ್ಟಿದ ಅಪಾರ್ಟ್ಮೆಂಟುಗಳು, ಬಾಡಿಗೆ ಕೊಡಲೆಂದೇ ಕಟ್ಟಿದ ಮನೆಗಳ ನಡುವಿನ ರಸ್ತೆಯಲ್ಲಿ ನಿರಾಶ್ರಿತ ಉದ್ಯೋಗಾಕಾಂಕ್ಷಿ ಒಂಟಿಯಾಗಿ ನಡೆಯುತ್ತಾನೆ. ಪಾರ್ಕಿನ ಬೆಂಚಿನ ಮೇಲೆ ಕೂತು, ಅಲ್ಲೇ ಪಕ್ಕದ ಮರದ ಮೇಲೆ ಹೊಸ ಗೂಡು ಕಟ್ಟುತ್ತಿರುವ ಹಕ್ಕಿಯೊಂದರ ಚುರುಕು ಕೆಲಸ ನೋಡುತ್ತಾನೆ. ಚಿಲಿಪಿಲಿಗುಟ್ಟಲೂ ಸಮಯವಿಲ್ಲವೆಂಬಂತೆ ಹೊಂಚಿ ತಂದ ಕಡ್ಡಿಗಳನ್ನು ಜೋಡಿಸಿ ಹೊಲಿಯುವಲ್ಲಿ ನಿರತವಾಗಿರುವ ಹಕ್ಕಿ, ಆ ಗಡಿಬಿಡಿಯಲ್ಲೂ ಓರೆಗಣ್ಣಲ್ಲಿ ಇವನೆಡೆಗೆ ನೋಡುತ್ತದೆ. ಆ ನೋಟದಿಂದ, ಚಿಕ್ಕವನಿದ್ದಾಗ ಹಕ್ಕಿ ಹಿಡಿಯಲು ತನ್ನೊಂದಿಗೆ ಕಾಡಿಗೆ ಬರುತ್ತಿದ್ದ ಗೆಳೆಯನ ನೆನಪಾಗುತ್ತದೆ. ಕಳೆದ ಸಲ ಊರಿಗೆ ಬಂದಾಗ ಫೋನ್ ನಂಬರ್ ಕೊಟ್ಟುಹೋಗಿದ್ದು ಹೊಳೆದು, ಪಾಕೀಟಿನಲ್ಲಿ ತಡಕಾಡಿ, ಅಲ್ಲೇ ಕಾಯ್ನ್ ಬೂತಿನಿಂದ ಒಂದು ಫೋನ್ ಮಾಡಿಯೇಬಿಡುತ್ತಾನೆ. ‘ಬಾರೋ ಗೆಳೆಯಾ... ಕೆಲಸ ಸಿಕ್ಕು ಬಾಡಿಗೆ ಮನೆ ತೆಗೆದುಕೊಳ್ಳುವಷ್ಟು ಚೈತನ್ಯ ಬರುವವರೆಗೂ ನಮ್ಮನೆಯಲ್ಲೇ ಇರು. ಸ್ವಲ್ಪಾನೂ ಸಂಕೋಚ ಪಟ್ಕೋಬೇಡ’ ಎಂಬ ಭರವಸೆ ಅತ್ತಲಿಂದ ಸಿಕ್ಕಿದ್ದು ಈತನ ಮುಖಭಾವದಿಂದಲೇ ಗೊತ್ತಾಗುತ್ತದೆ. ಎಲ್ಲ ಹಕ್ಕಿಗಳಿಗೂ ಗೂಡು ಕಲ್ಪಿಸುವ ಈ ನಗರದ ಅಗಾಧತೆ ಮತ್ತು ಇನ್ನೂ ಉಳಿದುಕೊಂಡಿರುವ ಆತ್ಮೀಯತೆಯೆಡೆಗೆ ಬೆರಗಾಗುತ್ತದೆ. ಪಾರ್ಕಿನ ಮರದ ಹಕ್ಕಿಯೆಡೆಗೆ ಕೃತಜ್ಞತೆಯಲ್ಲಿ ಕಣ್ಣು ಮಿಟುಕಿಸುತ್ತಾನೆ.

ನಗರದ ಏಕತಾನತೆ ಎಲ್ಲರಿಗೂ ಈಗ ಬೇಸರ ತಂದಿದೆ. ಮೊನ್ನೆ ಹೆಂಡತಿ ಹೇಳುತ್ತಿದ್ದಳು: ‘ಇನ್ನೊಂದಷ್ಟು ವರ್ಷ ಇಲ್ಲಿದ್ದು ದುಡ್ಡು ಮಾಡಿಕೊಂಡು ಊರಿಗೆ ಹೋಗಿಬಿಡೋಣ. ಹೇಗೂ ನಿಮ್ಮಪ್ಪ ಕಟ್ಟಿಸಿದ ಮನೆ ಗಟ್ಟಿಮುಟ್ಟಾಗಿ ಚೆನ್ನಾಗಿದೆ. ಅದರ ಮೇಲೆ ಇನ್ನೊಂದು ಫ್ಲೋರ್ ಕಟ್ಟಿಸಿ ಮೇಲೆ ಹೆಂಚು ಹೊದಿಸೋಣ. ಮತ್ತೆ ಆರ್ಸಿಸಿ ಬೇಡ. ಹಳ್ಳಿಮನೆ ಅಂದ್ರೆ ಹಳ್ಳಿಮನೆ ಥರಾನೇ ಇರ್ಬೇಕು. ಬೇಕಿದ್ರೆ ಪಕ್ಕದಲ್ಲಿ ಒಂದು ಸೋಗೆಯ ಗುಡಿಸಲು ಕಟ್ಟಿಸಿ ಹೋಮ್ಸ್ಟೇ ಶುರು ಮಾಡೋಣ. ಈಗಂತೂ ಈ ಪೇಟೆ ಮಂದಿಗೆ ಹಸಿರು-ನೀರು-ಮಣ್ಣು ರಸ್ತೆ ಇರೋ ಹಳ್ಳಿಗಳಿಗೆ ಹೋಗಿ ಗುಡಿಸಲುಗಳಂತಹ ಮನೆಯಲ್ಲಿ ಇದ್ದು ವೀಕೆಂಡ್ ಕಳೆದು ಬರೋದು ಶೋಕಿಯಾಗಿಬಿಟ್ಟಿದೆ. ಒಂದು ವೆಬ್ಸೈಟ್ ಮಾಡಿ ಸ್ವಲ್ಪ ಪ್ರಚಾರ ಕೊಟ್ರೆ ಆಯ್ತು’ ಅಂತ.

ಹತ್ತಾರು ವರ್ಷದ ಹಿಂದೆ, ಊರಿಗೆ ಒಂದೇ ಆರ್ಸಿಸಿ ಮನೆ ಅಂತ ನಾವು ಖುಷಿ ಪಟ್ಟಿದ್ದು ನೆನಪಾಯಿತು. ಈಗ ಊರಲ್ಲೂ ಅನೇಕ ಹೊಸಮನೆಗಳು ಎದ್ದುನಿಂತಿವೆ. ಒಂದೆಡೆ ಆಧುನಿಕತೆಯ ಹೆಸರಲ್ಲಿ ತಳುಕು-ಬಳುಕು ಮೆರೆಯುತ್ತಿದ್ದರೆ, ಇನ್ನೊಂದೆಡೆ ಪುರಾತನಕ್ಕೆ ಮರಳುವ – ಅದೇ ಚಂದ ಎಂದು ಹೇಳುವ ಮನಸುಗಳೂ ಜಾಸ್ತಿಯಾಗುತ್ತಿವೆ. ಗಗನಚುಂಬಿ ಕಟ್ಟಡಗಳು, ಇಟಾಲಿಯನ್ ಸ್ಟೈಲ್ ಕಿಚನ್, ಫಳಫಳ ಗ್ರಾನೈಟ್ ನೆಲಹಾಸು, ಪಿಂಗಾಣಿಯ ಸಿಂಕು, ಬಿಳಿಬಿಳಿ ಬಚ್ಚಲಲ್ಲಿನ್ನ ಬಾತ್ಟಬ್ಬು, ಇತ್ಯಾದಿಗಳ ಮೆರವಣಿಗೆಯ ಜತೆಜತೆಯಲ್ಲೇ, ಹಳ್ಳಿಯ ಸಾದಾಸೀದಾ ಮನೆಗಳು, ಮರದ ಕೆತ್ತನೆ ಕಂಬಗಳು, ಕೆಂಪು ಗಾರೆ ನೆಲ, ಮಾಳಿಗೆಯ ಮುಚ್ಚಿಗೆ, ಬಚ್ಚಲ ಹಂಡೆಯ ನೀರು, ಹಳೆಯ ಪೀಠೋಪಕರಣಗಳಿಂದ ಕೂಡಿದ ತಾವುಗಳೆಡೆಗಿನ ಆಕರ್ಷಣೆ ಹೆಚ್ಚಾಗುತ್ತಿದೆ. ಸರಳತೆಯಲ್ಲೇ ಮನೆಗಳಿಗೊಂದು ಆಪ್ತತೆ ಬರುತ್ತದೆ ಎಂಬ ಭಾವ ಮತ್ತಷ್ಟು ದೃಢವಾಗುತ್ತಿದೆ.

ಅಪ್ಪನಿಗೆ ಫೋನ್ ಮಾಡಿ ಹೆಂಡತಿ ಹೇಳಿದ ವಿಚಾರ ಅರುಹುತ್ತೇನೆ. ‘ಈಗ ಇರೋ ಮನೇನೆ ಗುಡಿಸಿ-ಸಾರಿಸಿ ಮಾಡೋರ್ ಇಲ್ಲ, ಇನ್ನು ಮೇಲೆ ಬೇರೆ ಕಟ್ಟಿಸಿದ್ರೆ ಏನೋ ಗತಿ?’ ಅಂತ ಕೇಳುತ್ತಾನೆ. ‘ತಾಳು ತಾಳು, ಅದೆಲ್ಲಾ ಬೇರೇನೇ ಪ್ಲಾನ್ ಇದೆ’ ಅಂತಂದು ನಗುತ್ತಾ ನಾನು ಫೋನ್ ಇಡುತ್ತೇನೆ.  ಈ ಸಂಭಾಷಣೆಯನ್ನು ಕದ್ದಾಲಿಸಿದ ಅಡುಗೆ ಮನೆಯ ಮೂಲೆಯಲ್ಲಿದ್ದ ಒಂದಷ್ಟು ಇರುವೆಗಳು ಎಲ್ಲಿ ತಮಗೆ ಶಿಕ್ಷೆಯಾಗುತ್ತದೋ ಎಂಬ ಭಯಕ್ಕೊಳಗಾದಂತೆ ಚುರುಕಾಗಿ ಓಡಿ ಗೂಡು ಸೇರಿಕೊಳ್ಳುತ್ತವೆ.

[ವಿಶ್ವವಾಣಿ 'ವಿರಾಮ'ದ 'ಮನೆ' ಬಗೆಗಿನ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.]

Friday, April 29, 2016

ಸಂಭ್ರಮಿಸಲೊಂದು ನಿಮಿತ್ತ



ಯಾವಾಗ ಶುರುವಾಯಿತೋ ಬೆಳ್ಳಿಗೆರೆಗಳ ಅಟ್ಟಹಾಸ ಅಪ್ಪನ ಕೇಶರಾಶಿಯ ನಡುವೆ: ಈಗ ಕನ್ನಡಿ ಸ್ಟಾಂಡಿನ ಮೇಲೊಂದು ಪುಟ್ಟ ಬೋಗುಣಿ ಕತ್ತಲ ಕರಗಿಸಿ ಮಾಡಿದ ಕರೀ ಕಣಕ- ಜತೆಗೊಂದು ಕೆದರಿದ ಬ್ರಶ್ಶು. ಮೊದಮೊದಲು ಅಲಕ್ಷಿಸಿ, ಕೊನೆಗೆ ತುಸುವೇ ಮುತುವರ್ಜಿ ವಹಿಸಿ ಬಾಗಿಸಿ ವಾಲಿಸಿ ಎತ್ತರಿಸಿ ಕೈಯುದ್ದ ಮಾಡಿ ಸರೀ ಹಿಡಿದು ಕನ್ನಡಿ ಚೂರ್ಚೂರೆ ನಾಚಿಕೆ, ಚೂರ್ಚೂರೆ ಹಿಂಜರಿಕೆ, ಚೂರ್ಚೂರೆ ಅಂಜಿಕೆ- ವಯಸು ಮುಚ್ಚಿಡಲು ಮರೆಮಾಚಲು ಮುಂದೂಡಲು ಹರಸಾಹಸ. ನಿಧಾನಕೆ ಅಮ್ಮನಿಗೂ ವಯಸ್ಸಾದ ಹಾಗೆ ಭಾಸ... ಮೇಲ್ಮೆತ್ತಿನಲ್ಲಿ ಹಾಗೇ ಬಿಟ್ಟ ಹಳೆಯ ಕುರ್ಚಿಗೆ ಬಿಂದಿಲು ಹಿಡಿದು, ವರಲೆ ಹುಳುಗಳ ಸುಗ್ರಾಸ ಕೂಳಿಗೆ ಅಷ್ಟಷ್ಟೆ ಕರಗುವ ಕೋಳು. ಅಪ್ಪ ತೋಟಕ್ಕೆ ಹೋದ ಸಮಯ ನೋಡಿ ಅಮ್ಮನ ಮುಂಗುರುಳು ಸವರುವ ಕರಿಕುಸುಮಗಳು. ‘ಥೋ ಥೋ, ಸರಿಯಾಗಲ್ಯೇ, ಹಂಗಲ್ದೇ’ -ಅನುನಯದಿಂದಲೇ ಅಮ್ಮನಿಗೆ ಸಹಾಯ ಮಾಡುವ ಅಪ್ಪ. ಈಗಲೂ ಸಿಗ್ಗಿಗೆ ಕೆಂಪಡರುವ ಅಮ್ಮನ ಮುದ್ದುಮೊಗ. ಕನ್ನಡಿಗಂತೂ ಭೇದಭಾವವಿಲ್ಲ. ಮೊಸರಲ್ಲಿ ಕಲಸಿ ಚಪ್ಚಪ್ಪೆನಿಸುತ್ತ ಸವರುತ್ತಿದ್ದಾಳೆ ಹೆಂಡತಿ ನನ್ನದೇ ತಲೆಗೆ ಇಂದು ಮದರಂಗಿ. ಕೇಳಿದವರಿಗೆ ಕ್ಲೋರಿನ್ ನೀರಿನ ಸ್ನಾನದ ನೆಪ; ಸಿಟಿಲೈಫಿಗೆ ಶಾಪ. ಬೋರಿಗೆ ಬರುವ ಬೈಕಿನ ಎಂಜಿನ್ನು. ಸವೆಸವೆದೇ ಹರಿದ ಬನಿಯನ್ನು. ಅಂಚೆ ಕಚೇರಿಯ ಮುಂದಣ ಡಬ್ಬಿಗೆ ತುಕ್ಕು ಹಿಡಿಯದಂತೆ ಕೆಂಪು ಮಾಲೀಶು. ಇವತ್ತು ಊಟದ ತಟ್ಟೆಯಲ್ಲೊಂದು ಬಿಳಿಗೂದಲು ಸಿಕ್ಕು ಅಪ್ಪನದೋ, ಅಮ್ಮನದೋ, ನನ್ನದೋ ತಿಳಿಯದೇ ಜೋರು ನಗೆ. ಮೇಯಲು ಬೆಟ್ಟಕ್ಕೆ ಹೋಗಿ ಎಂದೋ ಕಳೆದುಹೋಗಿದ್ದ ದನವೊಂದು ಮನೆ ಹುಡುಕಿಕೊಂಡು ಬಂದು ಆಶ್ಚರ್ಯ, ಸಂತೋಷ, ಗೋಗ್ರಾಸ. ತಳಸಾರಿದ ಬಾವಿಯಲ್ಲಿ ಜಲವೊಡೆದ ಹಾಗೆ ಎಲ್ಲಿಲ್ಲದ ಉಲ್ಲಾಸ. ಸಂಭ್ರಮಿಸಲೊಂದು ಸಣ್ಣ ನಿಮಿತ್ತ. ಬಣ್ಣ ಬೇಗಡೆಯೆಲ್ಲ ಆಯಾ ಕ್ಷಣದ ಚಿತ್ತ. * * * ನನ್ನೀ ಬ್ಲಾಗು ‘ಮೌನಗಾಳ’ ಶುರುವಾಗಿ ಮೊನ್ನೆ 26ಕ್ಕೆ ಹತ್ತು ವರ್ಷ ಸಂದಿತು. ಅಂಬೆಗಾಲಲ್ಲಿ ಪ್ರಾರಂಭವಾದ ಈ ಗೀಚಿನ ನಡಿಗೆ ಕೆಲವೊಮ್ಮೆ ಬಿರುಸಾಗಿ, ಕೆಲವೊಮ್ಮೆ ಕುಂಟುತ್ತ, ಕೆಲವೊಮ್ಮೆ ಓಟವಾಗಿ, ಕೆಲವೊಮ್ಮೆ ಸಮವೇಗವಾಗಿ ಸಾಗಿ, ಒಮ್ಮೊಮ್ಮೆ ಮಾಗಿದಂತೆ ಮತ್ತೊಮ್ಮೆ ಮಾಸಿದಂತೆ ಎನಿಸಿ, ಆಗಾಗ ಬಣ್ಣ ಬೇಗಡೆ ಹಚ್ಚಿಕೊಂಡು ಅಲ್ಲೇ ಚಿಗುರಿ ಮೈತಳೆದು ಹೊಳೆದು ಬೆಳೆದು ಮತ್ಮತ್ತೆ ಸೊರಗಿ ಮತ್ಮತ್ತೆ ಎದ್ದು ನನಗೆ ಖುಷಿ ಕೊಡುತ್ತಾ ಮುಂದುವರೆದಿದೆ. ಈ ಪಯಣದಲಿ ಜತೆಗಾರರಾದ ನಿಮಗೆಲ್ಲಾ ಆಭಾರಿಯೆನ್ನುತ್ತಾ...

Friday, April 15, 2016

ರಾಮಭಕ್ತ ತುಳಸೀದಾಸ

ಯಮುನಾ ನದಿ ತುಂಬಿ ಹರಿಯುತ್ತಿತ್ತು. ರಾಂಬೋಲ ಹಿಂದೆಮುಂದೆ ಸಹ ನೋಡದೆ ಅದರಲ್ಲಿ ಧುಮುಕಿದ. ಆಚೆ ದಡ ತಲುಪಿ ಹೆಂಡತಿ ರತ್ನಾವತಿಯನ್ನು ಕಾಣುವ ತವಕದಲ್ಲಿ ತೆರೆಗಳನ್ನು ತೆತ್ತೈಸುತ್ತ ಈಜಿದ. ಆದರೆ ಅಷ್ಟೆಲ್ಲ ಧಾವಂತದಲ್ಲಿ ಬಂದ ಗಂಡನಿಗೆ ರತ್ನಾವತಿ, ನಿನಗೆ ನನ್ನ ಬಗೆಗಿರುವಷ್ಟೇ ಆರಾಧನೆ ದೇವರ ಬಗೆಗೆ ಇದ್ದಿದ್ದರೆ ಇಷ್ಟೊತ್ತಿಗೆ ಮಹಾಸಾಧಕನಾಗಿರುತ್ತಿದ್ದೆ ಎಂದುಬಿಟ್ಟಳು. ಅಷ್ಟೇ: ರಾಂಬೋಲ ಮತ್ತೆ ಸಂಸಾರದತ್ತ ತಿರುಗಿ ನೋಡಲಿಲ್ಲ. ಸಂತನಾದ. ತುಳಸೀದಾಸನಾದ.

ತುಳಸಿದಾಸರು ಹುಟ್ಟಿದ್ದು ಈಗಿನ ಉತ್ತರ ಪ್ರದೇಶದಲ್ಲಿರುವ ಚಿತ್ರಕೂಟದಲ್ಲಿ. ರಾಂಬೋಲನೆಂಬುದು ಅವರ ಹುಟ್ಟುಹೆಸರು.  ವಾಲ್ಮೀಕಿಯ ಅಪರಾವತಾರವೆಂದೇ ಕರೆಯಲ್ಪಡುವ ಅವರು, ವೈರಾಗ್ಯ ದೀಕ್ಷೆ ಹೊತ್ತ ನಂತರ, ಗುರು ನರಹರಿದಾಸ ಮತ್ತು ಶೇಷ ಸನಾತನರ ಮೂಲಕ, ಸಂಸ್ಕೃತವನ್ನೂ, ವೇದ-ವೇದಾಂಗಗಳನ್ನೂ, ಜ್ಯೋತಿಷ್ಯವನ್ನೂ, ಮೂಲ ರಾಮಾಯಣವನ್ನೂ, ಹಿಂದೂ ಸಂಸ್ಕೃತಿಯನ್ನೂ ಅಧ್ಯಯನ ಮಾಡಿದರು. ಚಿತ್ರಕೂಟದ ತಮ್ಮ ಮನೆಯ ಬಳಿ ರಾಮಾಯಣದ ಕಥೆಯನ್ನು ಹೇಳುತ್ತಾ ಬಹುಕಾಲ ಕಳೆದರು.

ನಂತರ ಅವರು ವಾರಣಾಸಿ, ಪ್ರಯಾಗ, ಅಯೋಧ್ಯೆ, ಬದರಿ, ದ್ವಾರಕೆ, ರಾಮೇಶ್ವರ, ಮಾನಸ ಸರೋವರ ...ಹೀಗೆ ದೇಶಾದ್ಯಂತ ಯಾತ್ರೆ ಕೈಗೊಂಡರು.  ತಂಗಿದೆಡೆಯೆಲ್ಲ ರಾಮಾಯಣದ ಕಥೆ ಹೇಳುವರು. ತಮ್ಮ ಕೃತಿಗಳಲ್ಲಿ ತುಳಸೀದಾಸರು ಹೇಳಿಕೊಳ್ಳುವಂತೆ, ವಾರಣಾಸಿಯಲ್ಲಿ ಅವರು ಪಾರಾಯಣ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಪ್ರತಿದಿನವೂ ತಮ್ಮ ಪಾರಾಯಣ ಕೇಳಲು ಮೊಟ್ಟಮೊದಲು ಬಂದು ಕೂತು, ಕಟ್ಟಕಡೆಯಲ್ಲಿ ತೆರಳುವುದನ್ನು ಗಮನಿಸಿದರು. ಒಂದು ದಿನ ಅವನನ್ನು ಹಿಂಬಾಲಿಸಿದರು. ಆತ ಕಾಡಿನೆಡೆಗೆ ತೆರಳುತ್ತಿರುವುದನ್ನು ಕಂಡು ಇವರ ಅನುಮಾನ ಬಲವಾಯಿತು. ಅವನ ಕಾಲು ಹಿಡಿದು ತನ್ನ ನಿಜರೂಪ ತೋರಿಸುವಂತೆ ಬೇಡಿಕೊಂಡರು. ತುಳಿಸೀದಾಸರ ಅನುಮಾನದಂತೆ ಆತ ಸಾಕ್ಷಾತ್ ಹನುಮಂತನಾಗಿದ್ದ.  ತುಳಸೀದಾಸರು ತನಗೆ ರಾಮನ ದರ್ಶನ ಮಾಡಿಸುವಂತೆ ಹನುಮನಲ್ಲಿ ಬೇಡಿಕೊಂಡರು. ಆಗ ಹನುಮ ತುಳಸೀದಾಸರಿಗೆ ವಾಪಸು ಚಿತ್ರಕೂಟಕ್ಕೆ ತೆರಳುವಂತೆ ಸೂಚಿಸುತ್ತಾನೆ. ಅಲ್ಲಿ ತುಳಸೀದಾಸರಿಗೆ ರಾಮ ಒಂದು ಮಗುವಿನ ರೂಪದಲ್ಲಿ ದರ್ಶನವೀಯುತ್ತಾನೆ. ನಂತರ ಪ್ರಯಾಗದಲ್ಲಿ ತುಳಸಿಗೆ ಯಾಜ್ನವಲ್ಕ್ಯರ, ಭಾರದ್ವಾಜ ಮುನಿಗಳ ಸಂದರ್ಶನವೂ ಆಗುತ್ತದೆ.

ತುಳಸೀದಾಸರು ಸುಪ್ರಸಿದ್ಧ ರಾಮಚರಿತಮಾನಸವನ್ನು ಬರೆಯಲು ಪ್ರಾರಂಭಿಸಿದ್ದು 1631ರ ವಿಕ್ರಮ ಸಂವತ್ಸರದ ರಾಮನವಮಿಯಂದು. ಭಾರತ ಆಗ ಮೊಘಲರ ಆಳ್ವಿಕೆಯಲ್ಲಿತ್ತು. ಸುಮಾರು ಎರಡೂವರೆ ವರ್ಷದ ಅವಧಿಯಲ್ಲಿ ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟಗಳಲ್ಲಿ ರಾಮಚರಿತಮಾನಸ ರಚಿಸಲ್ಪಟ್ಟಿತು. ತುಳಸೀದಾಸರು ಸಂಸ್ಕೃತದಲ್ಲಿ ಪಾರಂಗತರಾಗಿದ್ದರೂ, ರಾಮಚರಿತಮಾನಸವನ್ನು ಅವರು ಅವಧಿ ಎಂಬ ಪೂರ್ವಭಾರತದ ಜನರ ಆಡುಭಾಷೆಯಲ್ಲಿ (ಹಿಂದಿಯ ಪ್ರಾದೇಶಿಕ ಭಾಷೆ) ಬರೆದರು. ಇದರಿಂದಾಗಿ ಆಗಿನ ಕಾಲದ ಸಂಸ್ಕೃತ ವಿದ್ವಾಂಸರ ಟೀಕೆಗೂ ಗುರಿಯಾಗಿದ್ದರು.  ಆದರೆ ತುಳಸೀದಾಸರ ಬಯಕೆ ಪುಣ್ಯಕಥೆ ರಾಮಾಯಣವನ್ನು ಅತಿಸಾಮಾನ್ಯ ಮನುಷ್ಯನಿಗೂ ತಲುಪಿಸುವುದಾಗಿತ್ತು. ಹೀಗಾಗಿ ಅವರು ತಮ್ಮ ನಿಲುವಿಗೆ ನಿಷ್ಠರಾಗಿ ಕಾವ್ಯರಚನೆ ಮುಂದುವರೆಸಿದರು. ಏಳು ಕಾಂಡಗಳಲ್ಲಿ ರಚಿಸಲ್ಪಟ್ಟಿರುವ, ವಾಲ್ಮೀಕಿ ರಾಮಾಯಣದ ಅವತರಿಣಿಕೆಯಾಗಿರುವ ರಾಮಚರಿತಮಾನಸದ ವಿಶೇಷತೆಯೆಂದರೆ, ಪ್ರತಿ ಸಾಲಿನಲ್ಲೂ ’, ’, ಅಥವಾ ಅಕ್ಷರ ಇದ್ದೇ ಇದೆ. ತನ್ಮೂಲಕ ತುಳಸೀದಾಸರು ತಮ್ಮ ಪ್ರಾಣದೇವರಾದ ಸೀತಾರಾಮರು ಪ್ರತಿ ಸಾಲಿನಲ್ಲೂ ಇರುವಂತೆ ನೋಡಿಕೊಂಡಿದ್ದಾರೆ.  ಮೂರೂವರೆ ಶತಮಾನದ ಹಿಂದೆ ಬರೆಯಲ್ಪಟ್ಟಿದ್ದರೂ ಸಹ ಇವತ್ತಿಗೂ ಅದು ಭಾರತೀಯ ಕಾವ್ಯ ಪರಂಪರೆಯ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಡುತ್ತದೆ. ಇವತ್ತಿಗೂ ಲಕ್ಷಾಂತರ ರಾಮಭಕ್ತರಿಂದ ಹಾಡಲ್ಪಡುತ್ತದೆ.

ರಾಮಚರಿತಮಾನಸವಲ್ಲದೇ, ಬದುಕನ್ನೂ-ಜಗವನ್ನೂ ಎರಡೆರಡೇ ಸಾಲುಗಳಲ್ಲಿ ಕಟ್ಟಿಕೊಡುವ ಐನೂರಕ್ಕೂ ಹೆಚ್ಚು ದೋಹಾಗಳನ್ನೂ, ಭಗವಾನ್ ಕೃಷ್ಣನೆಡೆಗಿನ ಭಕ್ತಿಗೀತೆಗಳನ್ನೂ ತುಳಸಿ ರಚಿಸಿದರು. ಅವರ ರಾಮಸ್ತುತಿ ಗೀತಾವಲಿ ಹಿಂದೂಸ್ತಾನೀ ಗಾಯಕರ ಅಚ್ಚುಮೆಚ್ಚು. ಅವರ ವಿನಯಪತ್ರಿಕಾ’, ಷಡ್ವೈರಿಗಳಿಂದ ಕೂಡಿದ ಕಲಿಯುಗದ ಭಕ್ತನೊಬ್ಬ ರಾಮನ ಆಸ್ಥಾನದಲ್ಲಿ ನಿಂತು ಅಹವಾಲು ಸಲ್ಲಿಸುವ ರೀತಿಯಲ್ಲಿರುವ ಅತ್ಯುತ್ಕೃಷ್ಟ ಕಾವ್ಯ. ಅದು ಪ್ರಪಂಚದ ಹಲವು ಭಾಷೆಗಳಿಗೆ ಅನುವಾದವಾಗಿದೆ.  ಹನುಮಾನ್ ಚಾಲೀಸಾವಂತೂ ಪ್ರತಿಮನೆಯ ಭಜನೆಯಾಗಿರುವುದು ಸತ್ಯ.

ಹದಿನಾರನೇ ಶತಮಾನದಲ್ಲಿ ಬಾಳಿದ್ದ ತುಳಸೀದಾಸರು ಅವರ ಕಾಲಾನಂತರವೂ ಉಳಿದಿರುವುದು ಅವರ ಕಾವ್ಯದ ಮೂಲಕ. ಅವರ ಪ್ರತಿ ರಚನೆಯಲ್ಲೂ ರಾಮಭಕ್ತಿ ಎದ್ದು ಕಾಣುತ್ತದೆ. ರಾಮಾಯಣವನ್ನು ತಮ್ಮ ಪ್ರವಚನಗಳ ಮೂಲಕ, ಬರಹದ ಮೂಲಕ ಜನಮಾನಸಕ್ಕೆ ತಲುಪಿಸಿದ ಕೀರ್ತಿ ತುಳಸೀದಾಸರದ್ದು. ಅವರು ನಮ್ಮ ದೇಶ ಕಂಡ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾಗಿ ಇಂದಿಗೂ ಪ್ರಸ್ತುತ.

['ಧರ್ಮಭಾರತೀ' ಪತ್ರಿಕೆಗಾಗಿ ಬರೆದದ್ದು.] 

Thursday, March 31, 2016

ಹೋಳಿಯ ಮರುದಿನ

ಹೋಳಿಹಬ್ಬದ ಮರುದಿನ ಎಲ್ಲೆಂದರಲ್ಲಿ ಕಾಮನಬಿಲ್ಲು
ಜೋಡುರಸ್ತೆಯಲ್ಲಿ, ಸಣ್ಣ ಗಲ್ಲಿಯಲ್ಲಿ, ಕಾರಿಡಾರಿನಲ್ಲಿ,
ಮರದ ಬುಡದಲ್ಲಿ, ಉದ್ಯಾನದ ಬೆಂಚಿನಲ್ಲಿ, ಚಪ್ಪಲಿ ಸ್ಟಾಂಡಿನಲ್ಲಿ
ಚೆಲ್ಲಿದ ಬಣ್ಣ. ಮುಂಜಾನೆ ಮಬ್ಬಲ್ಲಿ ಕಣ್ಣುಜ್ಜುತ್ತಲೇ ಬಾಗಿಲು ತೆರೆದರೆ
ಹೂಕುಂಡದ ಪುಟ್ಟಗಿಡದಲ್ಲೊಂದು ಕೆಂಪುಹೂ.
ಬಚ್ಚಲ ಪೈಪಿನಿಂದ ಧಾರಾಕಾರ ಹೊರಹರಿವ ಬಣ್ಣನೀರು;
ಮುಖ ತೊಳೆದಷ್ಟೂ ತೆರೆಯುತ್ತ ಹೋಗುವ ಹೊಸ ಪದರಗಳು;
ತಲೆಗೂದಲ ಸಿಕ್ಕುಗಳಲಿ ಶಾಂಪೂಗಂತೂ ಸಿಕ್ಕಾಪಟ್ಟೆ ಕೆಲಸ;
ಬಿಳಿಯಂಗಿ ಇನ್ನು ಬಳಸಲಾಗದಂತಾದುದಕ್ಕೆ ಒಳಗೇ ಬೇಗುದಿ;
ವಿವರ್ಣವಿಶ್ವಕ್ಕೆ ಹೊಂದಿಕೊಳ್ಳಲು ಅಂದಿಡೀ ಕಷ್ಟ ಪಡುವ ಕಣ್ಣು.

ಆ ರಾತ್ರಿ ಬಹುಳದ ಚಂದ್ರ ಬೆಳ್ಳಗೇ ಏಳುವನು.
ತಾರಸಿಯ ಮೌನದಲ್ಲಿ ಕಾಲಿಡುವಾಗ ಕೌಮುದಿ ಕೇಳುವುದು:
ಬಳಿಸಿಕೊಂಡ ಬಣ್ಣ ಬಲು ಸುಲಭದಲ್ಲಳಿಸುವುದು.
ಬಳಿದುಕೊಂಡ ಬಣ್ಣ ಕಳಚುವುದು ಹೇಗೆ?

ತಂತಿಯಲ್ಲೊಣಗುತ್ತಿರುವ ಅಂಗಿ, ತೊಳೆದ ಅಂಗಳದ ಒದ್ದೆನೆಲ,
ಗೋಡೆಯಲ್ಲಿ ಚಟ್ಟು ಹೊಯ್ದ ಅವಳ ಕೈಯಚ್ಚು
ಎಂದೋ ಬಂದಿದ್ದ ಆಪ್ತಮಿತ್ರನ ಪತ್ರ
ಜಾನಪದ ಸಿರಿಯಜ್ಜಿಯ ಹಾಡಿನಲ್ಲಿನ ಮುಗ್ಧತೆ
ಎಲ್ಲವೂ ಸೇರಿಸುತ್ತಿವೆ ಬೆಳದಿಂಗಳೊಂದಿಗೆ ತಮ್ಮ ದನಿ.
ಪಿಚಕಾರಿಯಲ್ಲುಳಿದ ಓಕುಳಿ ಕುಲುಕದೇ ಕಾಯುತ್ತಿದೆ ಉತ್ತರಕ್ಕೆ.

ತತ್ತರಿಸುತ್ತೇನೆ ಈ ದಾಳಿಗೆ. ಕೆಳಗೋಡಿ ತಿಕ್ಕಿತಿಕ್ಕಿ
ತೊಳೆಯುತ್ತೇನೆ ಮೊಕ. ಶವರಿನಡಿ ಕೊನೆಯಿಲ್ಲದಂತ
ಭರ್ಜರಿ ಅಭ್ಯಂಜನ. ಬುರುಬುರು ಬರುವ ಬುರುಗು.
ಬಚ್ಚಲ ತುಂಬ ಸಾಬೂನಿನ ಘಮಘಮ ಪರಿಮಳ.
ಓಹೋ ಸ್ವಚ್ಛವಾದೆನೇ ಬಣ್ಣವೆಲ್ಲ ಕರಗಿತೇ ನಿರಭ್ರನಾದೆನೇ
-ಎಂದು ಮತ್ತೆಮತ್ತೆ ನೀರೆರೆದುಕೊಂಡು ಬಿಳಿಯ ಟವೆಲಿನಲ್ಲಿ
ಮೈಯೊರೆಸಿಕೊಂಡು ಶುಭ್ರ ಹೊಸಬಟ್ಟೆ ಧರಿಸಿ...

ಮೂರ್ನಾಲ್ಕು ದಿನಗಳಲ್ಲಿ ನಗರ ತನ್ನ ಕಾಲುದಾರಿ,
ಕಟ್ಟಡ ಸೋಪಾನ, ಮರದಿಂದೆದ್ದುಬಂದ ಬೇರು,
ಎಷ್ಟೋ ದಿನದಿಂದ ಅಲ್ಲೇ ನಿಂತಿರುವ ವಾಹನ,
ಮುಚ್ಚಿದಂಗಡಿಯ ಶಟರಿಗೆ ಹಾಕಿದ ಬೀಗ-ಗಳಿಗೆ
ಮೆತ್ತಿದ ಬಣ್ಣವನ್ನೆಲ್ಲ ನಿವಾರಿಸಿಕೊಂಡು ಸರಳ ಸುಂದರ
ನಿತ್ಯನಿರ್ಮಲ ಯೋಗಮುದ್ರೆ ಧರಿಸಿ ನಿಂತಿದೆ.


ನನ್ನ ಕಿವಿಯಲ್ಲಿ ಮಾತ್ರ ಇನ್ನೂ ಸ್ವಲ್ಪ ಬಣ್ಣ ಉಳಿದಿರುವ ಶಂಕೆ.

Tuesday, March 01, 2016

ಖಾಲಿ ಟೆರೇಸು ಮತ್ತು ಒಂಟಿ ರೂಮು

ಒಂದಾನೊಂದು ಕಾಲದಲ್ಲಿ ಈ ನಗರದಲ್ಲೂ ಹೆಂಚಿನ ಮನೆಗಳೂ, ಸೋಗೆಯ ಗುಡಿಸಲುಗಳೂ ಇದ್ದವಂತೆ. ನಗರ ಬೆಳೆದಂತೆ, ಜನರು ಸಿರಿವಂತರಾದಂತೆ, ಅವಶ್ಯಕತೆಗಳು ಅಧಿಕವಾದಂತೆ, ಹೊಸ ಅನ್ವೇಷಣೆಗಳ ಉತ್ಪನ್ನವೇ ಚೆನ್ನ ಎಂಬ ನಿಲುವು ಜಾಸ್ತಿಯಾಗುತ್ತ ಹೋದಂತೆ ಹೆಂಚು-ಸೋಗೆಯ ಮನೆಗಳು ಮಾಯವಾಗತೊಡಗಿ ಆರ್‌ಸಿಸಿ ಮನೆಗಳು ನಗರಾದ್ಯಂತ ತಲೆಯೆತ್ತತೊಡಗಿದವು. ಅಲ್ಲಿಲ್ಲಿ ಇದ್ದ ಶೀಟಿನ ಮನೆಗಳನ್ನೂ ಕೆಡವಿ ಸ್ಲಾಬ್ ಹಾಕಲಾಯಿತು. ಪರವೂರಿನಿಂದ ಇಲ್ಲಿಗೆ ಬಂದು ಬಾಡಿಗೆಗೆ ಮನೆ ಹುಡುಕುವವರೂ ಮೌಲ್ಡ್ ಇರೋ ಮನೆ ಬೇಕಪ್ಪ ನಮಗೆ, ಶೀಟ್ ಆಗಲ್ಲ ಎಂದು ರಿಯಲ್ ಎಸ್ಟೇಟ್ ಏಜೆಂಟುಗಳಿಗೆ ತಾಕೀತು ಮಾಡತೊಡಗಿದರು.  ಸೋಗೆ ಹೊಚ್ಚಿದ ಮನೆಗಳು ಗುಡಿಸಲುಗಳು ಎಂದೂ, ಹೆಂಚಿನ ಮನೆಗಳು ಹಳೆಯ ಕಾಲದ ಅವಾಸ್ತವಿಕ ವ್ಯವಸ್ಥೆಗಳೆಂದೂ, ಶೀಟಿನ ಮನೆಗಳು ಭಯಂಕರ ಸೆಖೆ ಸುಂದರವಲ್ಲದವೆಂದೂ ನಮ್ಮ ಕಲ್ಪನೆಯಲ್ಲಿ ಮಾರ್ಪಾಟಾದವು.  ಮಹಡಿಯ ಮೇಲೆ ಮಹಡಿಯನ್ನು ಕಟ್ಟಿಸಿಕೊಳ್ಳುತ್ತ ಆರ್‌ಸಿಸಿ ಮನೆಗಳು ಒಂದರ ಪಕ್ಕ ಒಂದರಂತೆ ನಗರದ ತುಂಬ ಸಪಾಟಾಗಿ ಎದ್ದೆದ್ದು ನಿಂತವು.

ಈ ನಗರವೇನಾದರೂ ಸಮತಲದಲ್ಲಿದ್ದರೆ, ಮನೆಗಳೆಲ್ಲಾ ಇಂತಿಷ್ಟೇ ಎತ್ತರವಿರಬೇಕು ಎಂಬ ನಿಯಮವೇನಾದರೂ ಇದ್ದಿದ್ದರೆ, ಎಲ್ಲ ಮನೆಗಳನ್ನೂ ಸೇರಿಸಿ ಒಂದೇ ತಾರಸಿ ಹಾಕಿ ಮುಚ್ಚಿ, ಅದರ ಮೇಲೊಂದು ಉಪನಗರವನ್ನೇ ಸೃಷ್ಟಿಸಿಬಿಡಬಹುದಿತ್ತೇನೋ. ಆದರೆ ಹಾಗಾಗಲಿಲ್ಲ. ಇಂಚು ಜಾಗವೂ ಲಕ್ಷಗಟ್ಟಲೆ ಬೆಲೆ ಬಾಳುವ ಈ ನಗರದಲ್ಲಿ, ವಿವಿಧ ಎತ್ತರದ ವಿವಿಧ ಆಕಾರದ ಮನೆಗಳು ತಮ್ಮ ನಡುವೆ ಇಷ್ಟಿಷ್ಟೇ ಅಂತರವಿಟ್ಟುಕೊಂಡು ವಿವಿಧ ಭಂಗಿಯಲ್ಲಿ ರಸ್ತೆಯ ಪಕ್ಕದಲ್ಲಿ ಕ್ಯೂ ನಿಂತವು. ಯಾರು ಅಟೆನ್ಷನ್ ಹೇಳಿದರೋ ಏನೋ, ಇವು ಮಾತ್ರ ಮುಂದೆ ಹೆಜ್ಜೆಯಿಡದೆ, ಭಂಗಿ ಬದಲಿಸದೇ ನಿಂತಲ್ಲೇ ನಿಂತುಬಿಟ್ಟವು. ಮಾಲೀಕರ ಅವಶ್ಯಕತೆಗೆ ತಕ್ಕಂತೆಯೋ, ಆರ್ಥಿಕ ಸ್ಥಿತಿಗನುಗುಣವಾಗಿಯೋ, ಸರ್ಕಾರದ ನಿಯಮದ ಅನ್ವಯವೋ, ಹೀಗೆ ಪೆಟ್ಟಿಗೆಗಳಂತೆ ಮೇಲ್ಮೇಲೆ ಏಳುವ ಈ ಮನೆಗಳ ಬೆಳವಣಿಗೆ ಯಾವುದೋ ನಿಗಧಿತ ಎತ್ತರ ತಲುಪಿದಾಕ್ಷಣ ನಿಂತುಬಿಡುವುದು. ಆ ಕಟ್ಟಕಡೆಯಲ್ಲಿ ಹಾಕಲ್ಪಟ್ಟ ತಾರಸಿಗೆ ಇನ್ನು ಜೀವಮಾನವಿಡೀ ಬಿಸಿಲು-ಮಳೆಯುಣ್ಣುತ್ತ ಹಾಗೇ ಬಿದ್ದಿರುವ ಶಾಪ.

ಕಟ್ಟಿದ ಕೆಲಕಾಲದವರೆಗೆ ಕ್ಯೂರಿಂಗಿನ ನೀರು ಕುಡಿದು ಗಟ್ಟಿಯಾಗುವ ತಾರಸಿ, ಮುಂದೆ ಬರುವ ಸಕಲ ಕಷ್ಟ-ಸುಖಗಳನ್ನೂ ಎದುರಿಸಲು ಸಿದ್ದವಾಗುವುದು. ಹರವಾಗಿರುವ ತನ್ನೆದೆಯನ್ನು ಬಿಸಿಲಿಗೊಡ್ಡಿ ಧೈರ್ಯವಾಗಿ ನಿಲ್ಲುವುದು. ಸಂಜೆಮಳೆಗೆ ಮೈಯೊಡ್ಡಿ ಸ್ನಾನ ಮಾಡಿ ಸ್ವಚ್ಛವಾಗುವುದು.  ಮಾಘೀಚಳಿಯಲ್ಲಿ ತನ್ನ ಕಾಂಕ್ರೀಟೊಡಲ ಸಿಮೆಂಟಿನ ಕಣಗಳಿಗೆಲ್ಲ ಪರಸ್ಪರ ತಬ್ಬಿ ಹಿಡಿದುಕೊಳ್ಳುವಂತೆ ಹೇಳಿ ಆದಷ್ಟೂ ಬೆಚ್ಚಗಿರಲು ಪ್ರಯತ್ನಿಸುವುದು. ಅಪರೂಪಕ್ಕೆ ವೃಷ್ಟಿಯಾದ ಆಲಿಕಲ್ಲುಗಳನ್ನು ತನ್ನ ಬೊಗಸೆಯೊಡ್ಡಿ ಹಿಡಿದು, ಆಯಲು ಬರುವ ಚಿಣ್ಣರಿಗಾಗಿ ಕರಗಿಸದೇ ಕಾಯುವುದು. ಪ್ರತಿ ಸಂಜೆ ದಪ್ಪ ಹೆಜ್ಜೆಯಿಟ್ಟು ವಾಕ್ ಮಾಡುವ ಆಂಟಿಯನ್ನು ಚೂರೂ ಬೈದುಕೊಳ್ಳದೇ ನಡೆಸುವುದು. ಮಕ್ಕಳ ಪ್ಲಾಸ್ಟಿಕ್ ಬಾಲಿನ ಕ್ರಿಕೆಟ್ಟಿಗೆ ತಾನೇ ಪಿಚ್ ಆಗುವುದು. ಹಾರಿ ಬರುವ ದೂರಮರದ ಹಣ್ಣೆಲೆಯನ್ನು, ಹಪ್ಪಳ-ಸಂಡಿಗೆಗಳೊಂದಿಗೆ, ಜತನದಿಂದ ಒಣಗಿಸುವುದು. ರಾತ್ರಿಯ ಹೊತ್ತು ನಕ್ಷತ್ರ ತುಂಬಿದ ಆಕಾಶ ನೋಡುತ್ತ, ಇತ್ತಲಿಂದ ಅತ್ತ ಸಾಗುವ ತುಂಬುಚಂದಿರನನ್ನು ಕಣ್ತುಂಬಿಕೊಳ್ಳುತ್ತ, ಆಗೀಗ ಸದ್ದು ಮಾಡುತ್ತ ಹೋಗುವ ವಿಮಾನಗಳನ್ನು ಬೆರಗಿನಿಂದ ವೀಕ್ಷಿಸುತ್ತ, ಜಾರಿ ಬೀಳುವ ಉಲ್ಕೆಯನ್ನು ಒಮ್ಮೆಯಾದರೂ ಹಿಡಿಯಬೇಕು ಅಂತ ಆಸೆಪಡುತ್ತಾ ನಿದ್ದೆ ಹೋಗುವುದು.

ಈ ತಾರಸಿಯ ಮೇಲೆ, ಸದಾ ಇದರ ಗೆಳೆಯರಂತೆ, ಅಡ್ಡಡ್ಡ ಎಳೆದ ಒಂದಷ್ಟು ತಂತಿಗಳು. ಬಟ್ಟೆ ಒಣಗಿಸಲೆಂದು ಕಟ್ಟಿದ ಈ ತಂತಿಗಳು ಆಗಾಗ ಗಾಳಿಗೆ ಪರಸ್ಪರ ತಾಗಿ ಹೊರಡಿಸುವ ನಾದ ತಾರಸಿಯ ಪಾಲಿಗೆ ಸಂಗೀತೋತ್ಸವ. ತನ್ನನ್ನೇ ಒಂದು ತಂಬೂರಿ ಹಾಗೆ, ಆ ತಂತಿಗಳನ್ನು ತಂಬೂರಿಯ ತಂತಿಗಳ ಹಾಗೆ ಕಲ್ಪಿಸಿಕೊಂಡು ತಾರಸಿ ರೋಮಾಂಚನಗೊಳ್ಳುವುದು. ಈ ತಂತಿಗಳ ಮೇಲೆ ಒಣಹಾಕಿದ ಬಟ್ಟೆಗಳು ಟಪ್ಟಪ್ ಉದುರಿಸುವ ನೀರ ಹನಿಗಳೂ ತಾರಸಿಗೆ ಇಷ್ಟ. ಆಗಾಗ ಆಯತಪ್ಪಿ ಬೀಳುವ ಬಟ್ಟೆಗಳನ್ನು ಈ ಮನೆಬಿಟ್ಟು ಹೊರಹಾರದಂತೆ ತಾರಸಿ ತನ್ನ ಪ್ಯಾರಾಪಿಟ್ಟಿನ ಮೂಲಕ ತಡೆಯುವುದು.

ತಾರಸಿಯ ಮೇಲೆ ಒಂದೋ ಎರಡು ನೀರಿನ ಟ್ಯಾಂಕುಗಳು. ತಾರಸಿಯಿಂದ ಸ್ವಲ್ಪ ಎತ್ತರಕ್ಕೇರಿಸಿ ಕಟ್ಟಿದ ಕಟ್ಟೆಯ ಮೇಲೆ ಇವುಗಳ ಆವಾಸಸ್ಥಾನ. ದಿನಕ್ಕೊಮ್ಮೆ ತುಂಬಿ ಉಕ್ಕುವ ನೀರು ತಾರಸಿಯನ್ನು ಸ್ವಲ್ಪವೇ ತೋಯಿಸಿ, ಯಾವುದೋ ಆಕಾರ ಮೂಡಿಸಿ, ಹಾಗೇ ಬಿಸಿಲಿಗಾವಿಯಾಗುವುದು. ಈ ಟ್ಯಾಂಕು, ತನ್ನ ಸನಿಹದಲ್ಲೇ ಸ್ಥಾಪಿಸಲ್ಪಟ್ಟಿರುವ, ಸೂರ್ಯನ ಶಕ್ತಿ ತನಗೆ ಮಾತ್ರ ಅರಿವಿದೆ ಎಂಬಂತೆ ನಿಂತಿರುವ, ಬಾಗು ಸೋಲಾರ್ ಪ್ಯಾನೆಲ್ಲಿಗೂ ನೀರೊದಗಿಸುತ್ತದೆ. ದೊಡ್ಡ ಟ್ಯಾಂಕು ಪಕ್ಕದ ಟೆರೇಸಿನಲ್ಲಿರುವ ತನಗಿಂತ ಚಿಕ್ಕದಾದ ಟ್ಯಾಂಕನ್ನು ತನ್ನ ತಮ್ಮನಂತೆ ಆದರಿಸುತ್ತದೆ. ಎಲ್ಲರೂ ಮಲಗಿದ ಒಂದು ನಟ್ಟಿರುಳು, ಕರೆಂಟು ಸಹ ಹೋಗಿ ಜಗದೆಲ್ಲ ಯಂತ್ರಗಳೂ ನಿಂತು, ರಸ್ತೆಯಲ್ಲಿ ಯಾವ ವಾಹನವೂ ಓಡಾಡದ ಅಪರೂಪದ ತೃಣಮೌನದ ಹೊತ್ತಲ್ಲಿ, ಎಲ್ಲರ ಮನೆಯ ಟೆರೇಸಿನ ಮೇಲಿನ ಟ್ಯಾಂಕುಗಳು ತಮ್ಮೊಡಲ ನೀರನ್ನು ಜುಳುಜುಳುಗುಡಿಸುತ್ತ ಮಾತಾಡಿಕೊಳ್ಳುತ್ತವೆ ಮತ್ತು ಈ ಗುಟ್ಟು ಯಾರಿಗೂ ತಿಳಿಯದಂತೆ ಎಚ್ಚರ ವಹಿಸುತ್ತವೆ. ಆಶ್ಚರ್ಯ ಎಂದರೆ, ಈ ರಹಸ್ಯದ ಅರಿವಿರುವ ತಾರಸಿಯ ಮೇಲೆ ಇರಿಸಲಾಗಿರುವ ನಾಲ್ಕೈದು ಹೂಕುಂಡಗಳಲ್ಲಿ ಅರಳಿದ ಹೂಗಳೂ ಈ ವಿಷಯದಲ್ಲಿ ಬಾಯಿಬಿಡದೇ ಸುಮ್ಮನಿರುವುದು.

ಸ್ವಲ್ಪ ಬುದ್ಧಿವಂತಿಕೆ ಇರುವ, ಬಾಡಿಗೆಯ ಆಸೆ ಹೆಚ್ಚಿದ ಅಥವಾ ಸರ್ಕಾರದ ನಿಯಮವನ್ನು ಉಲ್ಲಂಘಿಸುವ ಧೈರ್ಯ ತೋರಿದ ಮಾಲೀಕರು ಮತ್ತು ಬಿಲ್ಡರುಗಳು, ಈ ಟ್ಯಾಂಕುಗಳನ್ನು ಇಡಲು ಕಟ್ಟೆ ಕಟ್ಟುವ ಬದಲು ಒಂದು ಪುಟ್ಟ ರೂಮು ಕಟ್ಟಿಬಿಟ್ಟರು. ಈ ರೂಮಿಗೆ ಹೊಂದಿಕೊಂಡಂತೆ ಒಂದು ಶೌಚಗೃಹ.  ಕೆಲ ರೂಮುಗಳೊಳಗೆ ಸಣ್ಣದೊಂದು ಅಡುಗೆ ಕಟ್ಟೆಯೂ ಮೂಡಿತು. ಟೆರೇಸಿನ ಮೇಲಿನ ಈ ಒಂಟಿಕೋಣೆಗಳು ಬ್ಯಾಚುಲರುಗಳ ವಾಸಕ್ಕೆ ಬಾಗಿಲು ತೆರೆದು ನಿಂತವು.  ಕೆಲಸ ಅರಸಿ ನಗರಕ್ಕೆ ಬರುವ ಬ್ಯಾಚುಲರುಗಳ ಪಾಲಿಗೆ ಇವೇ ಅರಮನೆಗಳಾದವು. ಒಬ್ಬರೋ ಇಬ್ಬರೋ ಸೇರಿ, ಓನರಿನ ಜತೆ ಮಾತಾಡಿ ಬಾಡಿಗೆ ಹೊಂದಿಸಿ, ತಮ್ಮ ಪುಟ್ಟ ಬಟ್ಟೆಗಂಟು ಮತ್ತು ಆರೆಂಟು ಪಾತ್ರೆಗಳ ಅಡುಗೆ ಸಾಮಾನಿನೊಂದಿಗೆ ಈ ಗೂಡು ಹೊಕ್ಕುಬಿಟ್ಟರೆ ಆಮೇಲೆ ಅದೇ ಅವರ ಸ್ವರ್ಗ. ಒಳಗೆ ಇಷ್ಟೇ ಜಾಗವಿರುವ ಕೋಣೆ, ಎದುರು ಎಷ್ಟೆಲ್ಲ ಜಾಗವಿರುವ ವಿಶಾಲ ಟೆರೇಸು. ಅಂಚಿಗೆ ಬಂದು, ಪ್ಯಾರಾಪಿಟ್ಟಿಗೆ ಒರಗಿ, ಬಗ್ಗಿ ನೋಡಿದರೆ ಕೆಳಗೆ ಹುಳುಗಳಂತೆ ಓಡಾಡುವ ಜನಗಳು, ಆಟಿಕೆಗಳಂತೆ ಕಾಣುವ ವಾಹನಗಳು. ಸ್ವಚ್ಛಂದ ಬೀಸುವ ಗಾಳಿಗೆ ತೋಳ್ಬಿಚ್ಚಿ ನಿಂತರೆ ಜಗವನ್ನೇ ಮರೆಸುವ ಮಾಯಾಶಕ್ತಿ.

ರೂಮನ್ನಷ್ಟೇ ಬಾಡಿಗೆಗೆ ಪಡೆದಿದ್ದರೂ ಬ್ಯಾಚುಲರುಗಳ ಪಾಲಿಗೆ ಎದುರಿನ ಟೆರೇಸು ಸಹ ಅದರಲ್ಲಿ ಸೇರಿಕೊಂಡಂತೆ. ಟೆರೇಸೂ ಸಹ ಎಂದೂ ಆ ರೂಮನ್ನು ಬೇರೆಯಾಗಿ ಕಂಡಿಲ್ಲ. ಅದು ತನ್ನ ಮಡಿಲ ಮಗುವಂತೆ, ತನ್ನ ಅವಿಭಾಜ್ಯ ಅಂಗದಂತೆ ಭಾವಿಸಿದೆ. ಹೀಗಾಗಿ, ಬ್ಯಾಚುಲರುಗಳು ರೂಮಿನೊಳಗಿನಗಿಂತ ಹೆಚ್ಚಿನ ಸಮಯವನ್ನು ಕಳೆಯುವುದು ಈ ಖಾಲಿ ಟೆರೇಸಿನಲ್ಲೇ. ಬಾಡಿಗೆ ಮಾತಾಡಿದ್ದೇನೂ ಜಾಸ್ತಿಯಾಗ್ಲಿಲ್ಲ ಕಣೋ, ಇಷ್ಟು ದೊಡ್ಡ ಟೆರೇಸು ಫ್ರೀ ಸಿಕ್ಕಿದ್ಯಲ್ಲ?’ ಅಂತ ತಮಗೆ ತಾವೇ ಹೇಳಿಕೊಂಡು ಸಮರ್ಥಿಸಿಕೊಳ್ಳುವರು. ಟೆರೇಸಿನಲ್ಲಿ ಅಡ್ಡಾದಿಡ್ಡಿ ಎಳೆದಿರುವ ವಿವಿಧ ಕೇಬಲ್ಲುಗಳನ್ನು ಇವರು ಸರಿಸಿ ಒಂದು ಮೂಲೆಗೆ ತಳ್ಳುವರು. ಫೋನಿನಲ್ಲಿ ಮಾತಾಡುತ್ತಾ, ಹಾಡು ಕೇಳುತ್ತಾ, ಹರಟೆ ಹೊಡೆಯುತ್ತಾ, ದಿಗಂತದೆಡೆಗೆ ನೋಡುತ್ತಾ ಈ ಟೆರೇಸಿನ ತುಂಬಾ ಅಡ್ಡಾಡುವರು. ಇಲ್ಲಿವರು ಸಿಗರೇಟು ಹಚ್ಚಿದರೆ ಯಾವ ಗ್ರೌಂಡ್ ಫ್ಲೋರಿನ ಅಜ್ಜನೂ ಕೆಮ್ಮುವುದಿಲ್ಲ. ಇಲ್ಲಿವರು ಎಷ್ಟು ಹೊತ್ತು ಶೂನ್ಯದೆಡೆಗೆ ನೋಡುತ್ತ ನಿಂತರೂ ಯಾವ ದಾರಿಹೋಕನೂ ಯಾಕೆಂದು ವಿಚಾರಿಸುವುದಿಲ್ಲ.  ಬೇಸಿಗೆಯಲ್ಲಿ ರೂಮಿನೊಳಗೆ ಮಲಗಲು ತುಂಬಾ ಸೆಖೆಯಾಯಿತಾ? ಟೆರೇಸಿನಲ್ಲಿ ಒಂದು ಚಾಪೆ ಹಾಸಿ ಅಡ್ಡಾದರೆ ಆಕಾಶಕಂಬಳಿಯಡಿ ಹಾಯಾದ ನಿದ್ರೆ. ಶನಿವಾರ ಸಂಜೆಗೆ ಗೆಳೆಯರು ಬಂದರಾ? ಟೆರೇಸಿನಲ್ಲಿ ನಾಲ್ಕು ಸ್ಟೂಲು ಹಾಕಿ, ನಡುವೆ ಒಂದು ಟೀಪಾಯಿಯಿಟ್ಟು, ಅದರ ಮೇಲೆ ಬಾಟಲಿಗಳನ್ನೂ ಕರಿದ ತಿಂಡಿಗಳನ್ನೂ ಇರಿಸಿ ಭರ್ಜರಿ ಪಾರ್ಟಿ. ಸಿಕ್ಕಾಪಟ್ಟೆ ಗಲಾಟೆ ಮಾಡ್ತೀರಿ ಅಂತ ಓನರು ತಕರಾರು ತೆಗೆದರಾ? ಇನ್ಯಾವುದೋ ಇಂಥದೇ ಟೆರೇಸಿನ ಮೇಲಿನ ರೂಮಿಗೆ ಗಂಟುಮೂಟೆ ಕಟ್ಟಿ ಹೊರಟರಾಯಿತು.

ಎಷ್ಟೋ ವರ್ಷಗಳಿಂದ ಬ್ಯಾಚುಲರುಗಳಿಗೂ, ವಿದ್ಯಾರ್ಥಿಗಳಿಗೂ, ಕೆಲವೊಮ್ಮೆ ಪುಟ್ಟ ಸಂಸಾರಗಳಿಗೂ ಆಶ್ರಯದಾಯಿಯಾಗಿರುವ ಈ ಒಂಟಿಕೋಣೆಗಳು, ದೊಡ್ಡ ಮನೆ ಬಾಡಿಗೆಗೆ ಪಡೆದರೆ ಪ್ರತಿ ತಿಂಗಳು ತೆರಬೇಕಿದ್ದ ಬಾಡಿಗೆ ಹಣದಲ್ಲಿ ನಾಲ್ಕು ಕಾಸು ಉಳಿಸುವಲ್ಲಿ ಮಹತ್ವದ ಪಾತ್ರವನ್ನೇ ವಹಿಸಿವೆ. ಇಲ್ಲಿ ಉಳಿದ ರೂಪಾಯಿ ಯಾವುದೋ ಊರಿನಲ್ಲಿರುವ ಅಮ್ಮನಿಗೆ ಮನಿಯಾರ್ಡರ್ ಆಗಿದೆ. ತಂಗಿಯ ಬಳೆಯಾಗಿ ಘಲ್ಲೆಂದಿದೆ. ಟೆರೇಸಿನ ಪುಟ್ಟ ಕೋಣೆಯಲ್ಲೇ ಇದ್ದು ಓದಿದ ಹುಡುಗ ದೊಡ್ಡ ನೌಕರಿ ಹಿಡಿದು ಕೈತುಂಬ ಸಂಬಳ ಗಳಿಸಿ ಹೊಸ ಮನೆ ಕಟ್ಟಿಸಿದ್ದಾನೆ.


ಎಲ್ಲಾ ಗೊತ್ತಿದ್ದೂ ಏನೂ ತಿಳಿಯದಂತೆ ಸುಮ್ಮನೆ ಮಲಗಿದೆ ತಾರಸಿ. ಬಟ್ಟೆ ಒಣಗಿಸಲೆಂದು ತಾರಸಿಗೆ ಬಂದ ಕೆಲಸದವಳು, ಬೀಗ ಹಾಕಿದ ಕೋಣೆಯ ತೆರೆದ ಕಿಟಕಿಯಿಂದ ಹಣಿಕಿ ನೋಡಿ, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು, ಹೌಹಾರಿ ವಾಪಸು ಹೋಗಿದ್ದಾಳೆ. ಎದುರು ಮನೆಯ ಬಾಲ್ಕನಿಯಲ್ಲಿ ಪ್ರತಿ ಮುಂಜಾನೆ ಕಾಣುವ ಚೆಲುವೆಯ ಮೇಲೆ ಒಂಟಿಕೋಣೆಯ ಹುಡುಗನಿಗೆ ಮನಸಾಗಿದೆ. ಟೆರೇಸಿನ ತುತ್ತತುದಿಯಲ್ಲಿ ನಿಂತು, ಗಾಳಿಗೆ ಹಾರುವ ಅವಳ ರೇಷ್ಮೆಗೂದಲನ್ನು ಇಲ್ಲಿಂದಲೇ ನೇವರಿಸುತ್ತಾನೆ. ಅವಳಿಂದೊಂದು ಸಣ್ಣ ಇಷಾರೆ ಸಿಕ್ಕರೆ ಸಾಕು, ಇವನು ಟೆರೇಸಿಗಿಂತಲೂ ಎತ್ತರದಲ್ಲಿ ತೇಲುತ್ತಾನೆ. ಟೆರೇಸು ತನ್ನ ಮೈತುಂಬ ಮರಳ ನವಿರೇಳಿಸಿಕೊಂಡು ಈ ಬೆರಗನ್ನು ಎವೆಯಿಕ್ಕದೆ ನೋಡುತ್ತದೆ. 

[ವಿಶ್ವವಾಣಿಯ ಸಾಪ್ತಾಹಿಕ 'ವಿರಾಮ'ದಲ್ಲಿ ಪ್ರಕಟಿತ.]