Thursday, December 31, 2015

2016ರಲ್ಲಿ ಸುಖನಿದ್ರೆಯನ್ನೂ ಸವಿಗನಸನ್ನೂ ಹಾರೈಸುತ್ತಾ...

ಅಣ್ಣಮ್ಮನುತ್ಸವಕ್ಕೆಂದು ಬಂದಿರುವ ರಥರೂಪೀ ಲಾರಿ ದೇವಸ್ಥಾನದೆದುರು ಸಿಂಗರಗೊಂಡು ಕಾಯುತ್ತಿದೆ;
ಪವರ್ ಬ್ಯಾಂಕೊಂದು ಮೊಬೈಲನ್ನು ಮಗುವಂತೆ ಮಡಿಲಲ್ಲಿಟ್ಟುಕೊಂಡು ಚಾರ್ಜೂಡಿಸುತ್ತಿದೆ;
ನೇರ ರಸ್ತೆಯಲ್ಲಿ ಸಾಗುತ್ತಿರುವ ಬೈಕೊಂದರ ಆರಿಸಲು ಮರೆತ ಇಂಡಿಕೇಟರ್ ವಿಲಕ್ಷಣ ಮಿಂಚುತ್ತಿದೆ;
ನಿನ್ನೆ ಉದ್ಘಾಟಿಸಿದ ಹೊಸ ಟೂತ್‌ಬ್ರಶ್ಶು ಕೆದರಿದ ಕುಸುಮಗಳ ಹಳೇ ಬ್ರಶ್ಶನ್ನು ಬಾತ್ರೂಮಿನಲ್ಲಿ ಅಣಕಿಸುತ್ತಿದೆ;
ಬಿಗ್‌ಬಾಸ್ ಮನೆಯಲ್ಲಿ ಸಣ್ಣ ವಿಷಯಕ್ಕೆ ನಡೆದ ಜಗಳದಿಂದ ಎಲ್ಲರಿಗೂ ಮನಸ್ತಾಪವಾಗಿದೆ;
ಫೋರ್ಕಿಗೆ ಸಿಕ್ಕಿಕೊಂಡಿರುವ ಗೋಬಿ ಮಂಚೂರಿ ಟೊಮೆಟೋ ಸಾಸಿನಲ್ಲಿ ಮುಳುಗೆದ್ದು ಮತ್ತಷ್ಟು ಕೆಂಪಾಗಿದೆ;
ಕ್ಯಾಂಡಿಕ್ರಶ್ ಆಟದಲ್ಲಿ ಶತಪ್ರಯತ್ನ ಮಾಡಿದರೂ ಕೊನೆಯಲ್ಲೊಂದು ಜೆಲ್ಲಿ ಉಳಿದೇಹೋಗಿದೆ;
ಕಾಶೀಯಾತ್ರೆಗೆ ಹೋದವರ ಬೀಗ ಹಾಕಿದ ಮನೆಯ ದೇವರ ಗೂಡಿನಲ್ಲಿ ಜೇಡ ಬಲೆ ಕಟ್ಟಿದೆ;
ಸುರಿದ ಹಸಿಕಸದಲ್ಲಿ ಶ್ಯಾಂಪೂ ಸ್ಯಾಚೆಟ್ಟೊಂದು ಸಿಕ್ಕಿದ್ದಕ್ಕೇ ಕಸದವಳೊಂದಿಗೆ ನಡುಬೀದಿಯಲ್ಲಿ ರಂಪವಾಗಿದೆ;
ಕೊಯ್ಲಿನ ನಂತರ ಪೇರಿಸಿರುವ ಬಿಳಿಹುಲ್ಲಿನ ಗೊಣಬೆ ಗದ್ದೆಯಲ್ಲೆದ್ದ ಗುಮ್ಮಟದಂತೆ ಕಂಡಿದೆ;
ರಂಗನತಿಟ್ಟಿನ ಪಕ್ಷಿಧಾಮಕ್ಕೆ ವಲಸೆ ಬಂದಿರುವ ಪೆಲಿಕನ್ ಹಕ್ಕಿ ಅವಸರವಸರದಲ್ಲೊಂದು ಗೂಡು ಕಟ್ಟಿದೆ;
ನೆಚ್ಚಿನ ನಟನ ಸಿನೆಮಾಗೆ ಬಾಲ್ಕನಿ ಕ್ಯೂನಲ್ಲಿ ನಿಂತ ಕಟ್ಟಕಡೆಯ ವ್ಯಕ್ತಿಗೆ ಟಿಕೀಟು ಸಿಗದಿರುವ ಆತಂಕ ಕಾಡಿದೆ;
ಓಪನರಿನಿಕ್ಕಳದೆಳೆತಕ್ಕೆ ಮುಚ್ಚಳವಿತ್ತ ನೀಳ ಬಾಟಲಿಯೊಂದು ಪಬ್ಬಮಬ್ಬಲ್ಲಿ ನಶೆಯ ನೊರೆಯುಕ್ಕಿಸುತ್ತಿದೆ.

- - -
ನೀವಡಿಯಿಡುತ್ತಿರುವ ಹೊಸ ವರ್ಷದ ಹೊಸ ಕ್ಯಾಲೆಂಡರಿನ ಬಣ್ಣಬಣ್ಣದ ಖಾನೆಗಳಲ್ಲಿ ಹೂ ಹಾಸಿರಲಿ. ನಿಮ್ಮಿಷ್ಟದ ಹಾಡೇ ಕೇಳುತ್ತಿರಲಿ ಕಿವಿಯಲ್ಲಿ. ಸಿಹಿಯೇ ಸಿಗಲಿ ಬಾಯಾಡಲು. ನೆನೆದಾಗೆಲ್ಲ ಬರಲಿ ಕೊಡೆ ಹಿಡಿದು ನಿಮ್ಮೊಲವಿನವರು. ಬಿರುಗಾಳಿಯೆಂದುಕೊಂಡದ್ದು ತಂಗಾಳಿಯಾಗಲಿ. ಕಣ್ಮುಚ್ಚಿದಾಕ್ಷಣ ನಿದ್ರೆ ಬರುವಷ್ಟು ನೆಮ್ಮದಿ ವರುಷವಿಡೀ ಇರಲಿ. ಆ ನಿದ್ರೆಯಲ್ಲೂ ಚಂದಗನಸುಗಳೇ ಬೀಳಲಿ.

ಶುಭಾಶಯಗಳು.

Thursday, November 19, 2015

ಹುಚ್ಚ ವೆಂಕಟ್‌ಗೆ

ನಿನ್ನ ಕೆದರಿದ ತಲೆಗೂದಲು
ರಕ್ತ ತುಂಬಿದ ಕೆಂಗಣ್ಣು
ನೀಲಿಯಂಗಿಯ ವೇಷ
ಉಕ್ಕುಕ್ಕಿ ಬರುವ ಆವೇಶ
ಕೆಮೆರಾದ ಎದೆಯೊಡೆಯುವಂತೆ ದುರುಗುಟ್ಟುವ ಆ ನೋಟ
ಚೂರೇ ಬಾಗಿದ ಕತ್ತು
ಕುಡಿಯುವೆಯೆನ್ನುವ ಲೋಕಲ್ ವಿಸ್ಕಿ

ನಿನ್ನ ಹಳೆಯ ಪ್ರೇಮಕಥೆಗಳು
ಸಿನಿಮಾದೆಡೆಗಿನ ಅಪಾರ ಮೋಹ
ಯಾರನ್ನೂ ಎದುರಿಸುವ ಕಿಚ್ಚು
ಮೇಲೇರೆರಗಿಹೋಗುವ ತಾಕತ್ತು
ಹೃದಯದೊಳಗೆ ತುಂಬಿಕೊಂಡಿರುವ ಕಣ್ಣೀರು

ನಿನ್ನ ಮೇಲೆ ನಿನಗೇ ಇರುವ ವಿಷಾದ
ಲೋಕದೆಡೆಗಿನ ಅತಾರ್ಕಿತ ಭ್ರಮೆಗಳು
ಕುಲುಮೆಯಿಂದೀಗಷ್ಟೆ ತಂದ ಕತ್ತಿಯಲಗಿನಂಥ ಮಾತುಗಳು
ಹೆಮ್ಮಕ್ಕಳ ಕಾಲಿಗೆ ಬೀಳುವೆನೆನ್ನುವ ಗುಣ
ಕಂಬಳಿಹುಳುವಿನ ಹಾರುವ ಕನಸು
ಗಳಿಗೆಗೊಮ್ಮೆ ಗುಟುಕರಿಸುವ ಚಹಾ

ಪುರಾಣದಲ್ಲಿ ಕಥೆಗಳು:
ಉಗ್ರನಾಗಿದ್ದ ನರಸಿಂಹನ ಕೋಪಶಮನ ಮಾಡಲು
ಲಕ್ಷ್ಮಿಯೇ ಪ್ರಾರ್ಥಿಸಿ ಅವನ ಜತೆಯಾದಳಂತೆ..
ಸೊಕ್ಕಿನಿಂದ ಮುನ್ನುಗ್ಗಿ ಹರಿಯುತ್ತಿದ್ದ ಗಂಗೆಯನ್ನು
ಆಪೋಶನ ತೆಗೆದುಕೊಂಡನಂತೆ ಜಹ್ನು ಮಹರ್ಷಿ..
ದೂರ್ವಾಸರ ಕೋಪಶಮನ ಮಾಡಲು
ಲಕ್ಷ್ಮಣ ಸಾವನ್ನೇ ಸ್ವೀಕರಿಸಿದನಂತೆ..

ನರಸಿಂಹ, ಜಾಹ್ನವಿ, ದೂರ್ವಾಸರ ಕೋಪಗಳಿಗೂ
ಕಥೆಯಿದೆ, ಕಾರಣವಿದೆ ಪುರಾಣದಲ್ಲಿ.
ವೆಂಕಟ್, ಹಾಗೇ ನಿನ್ನ ಕೋಪ, ತಾಪ, ಪ್ರತಾಪಗಳಿಗೂ.
ವ್ಯತ್ಯಾಸ ಇಷ್ಟೇ: ಇಲ್ಲಿ ನಿನ್ನನ್ನು ರಕ್ಷಿಸಲು
ಯಾವ ಲಕ್ಷ್ಮಿಯೂ ಇಲ್ಲ, ಜಹ್ನುವೂ ಇಲ್ಲ,
ತ್ಯಾಗಕ್ಯಾರೂ ಸಿದ್ಧರಿಲ್ಲ.

ಮಥನದಲುದ್ಭವಿಸುವ ಹಾಲಾಹಲದ ಹಾಹಾಕಾರ
ನಮಗೆಲ್ಲ ರುಚಿಯೆನಿಸುವ ಹೊತ್ತಿನಲ್ಲಿ ನೀಲಕಂಠನಿಗೇನು ಕೆಲಸ
ನರಕಾಸುರ, ಶಂಬರಾಸುರ, ಕಂಸ, ಶಿಶುಪಾಲರ
ರಾಜ್ಯಭಾರವನ್ನೊಪ್ಪಿಕೊಂಡ ಮೇಲೆ ಕೃಷ್ಣನ ಸುದರ್ಶನ ಚಕ್ರಕಿಲ್ಲ ತಾವು
ಅತ್ಯಾಚಾರ, ಕೊಲೆ, ಸುಲಿಗೆಗಳ ನೋಡಿ ಸುಮ್ಮನಿರುವ ನಮಗೆ
ದುಷ್ಟಸಂಹಾರೀ ರಾಮನ ಅವಶ್ಯಕತೆಯಿಲ್ಲ ಬಿಡು.

ನಿನ್ನ ನೋವು, ನಿರಾಶೆ, ವಿಷಾದ, ಕೋಪಗಳನ್ನು ಹೀರಲು
ಇಲ್ಯಾರೂ ಅವತರಿಸುವುದಿಲ್ಲ. ನೀನು ಬಲಿಪಶು.
ನಾನು ಕೊಲೆಗಾರ.  

['ಸಖಿ' ಪಾಕ್ಷಿಕದಲ್ಲಿ ಪ್ರಕಟಿತ]

Monday, November 09, 2015

ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೊಂದು ಹೂಗುಚ್ಛ ಕೊಟ್ಟು...

ನಾವೆಲ್ಲ ಪಟಾಕಿಯನ್ನು ಹೆದರುತ್ತಲೇ ಒಪ್ಪಿಕೊಂಡಿದ್ದು. ಚಿಕ್ಕವರಿದ್ದಾಗ ಪಟಾಕಿ ಮಾಡುವ ಭಾರೀ ಸದ್ದಿಗೆ, ಧಿಗ್ಗನೆ ಸಿಡಿಯುವ ಅದರ ರೀತಿಗೆ, ಹೊಮ್ಮಿಸುವ ಬೆಂಕಿಗೆ ನಾವೆಲ್ಲ ಹೆದರಿದವರೇ. ಪಟಾಕಿಯೇನು, ಸುರುಸುರುಬತ್ತಿ ಹಿಡಕೊಳ್ಳಲಿಕ್ಕೂ ನಮಗೆ ಭಯವಿತ್ತು. ಅದರ ಚಿಮ್ಮುಕಿಡಿಗಳು ಎಲ್ಲಿ ಕೈಗೆ ತಾಕುತ್ತವೋ ಎಂಬ ಅಂಜಿಕೆಯೊಂದಿಗೇ ನಾವದನ್ನು ನಮ್ಮ ಪುಟ್ಟ ಕೈಗಳಲ್ಲಿ ಹಿಡಿದು ಆರತಿ ಬೆಳಗಿದ್ದು. ಈ ನಮ್ಮ ಭಯವನ್ನು ಸ್ವಲ್ಪ ಹೋಗಲಾಡಿಸಿದ್ದು ನೆಲಗುಮ್ಮ. ಇದನ್ನು ಪಟಾಕಿಯ ಪಟ್ಟಿಗೇ ಸೇರಿಸಬೇಕೋ ಬಾಂಬಿನ ಗುಂಪಿಗೆ ತಳ್ಳಬೇಕೋ ಗೊತ್ತಿಲ್ಲ.  ಹೆಚ್ಚುಕಮ್ಮಿ ಆಟಂಬಾಂಬಿನ ಸೈಜೇ ಇರುತ್ತಿದ್ದ ಇದನ್ನು ಬೀಸಿ ನೆಲಕ್ಕೋ ಗೋಡೆಗೋ ಒಗೆದರೆ ಸಾಕು, ಢಂ ಎಂದು ಸಿಡಿಯುತ್ತಿತ್ತು.  ಸಿನೆಮಾಗಳಲ್ಲಿ ಬಾಂಬನ್ನು ವಿಲನ್ನುಗಳು ಹಲ್ಲಲ್ಲಿ ಕಚ್ಚಿ ಎಸೆದಾಗ ಅದು ದೂರ ಹೋಗಿ ಸಿಡಿದು ಭರ್ಜರಿ ಹೊಗೆಯೂ ಧೂಳೂ ಎದ್ದು ಅಲ್ಲಿದ್ದವರೆಲ್ಲಾ ಮಟಾಶ್ ಆಗುವುದನ್ನು ನೋಡಿದ್ದರಿಂದ, ನೆಲಗುಮ್ಮವನ್ನು ಪ್ರಯೋಗಿಸಿದ ನಾವೂ ವಿಲನ್ ಆದಂತೆ ಭಾವಿಸಿದೆವು. 

ಸ್ವಲ್ಪ ದೊಡ್ಡವರಾದಂತೆ ನಮ್ಮ ಧೈರ್ಯ ಇನ್ನೂ ಹೆಚ್ಚಿತು. ನೆಲಗುಮ್ಮದಿಂದ ನಿಧಾನಕ್ಕೆ ಪಿಸ್ತೂಲಿಗೆ ಭಡ್ತಿ ಪಡೆದೆವು. ಸಣ್ಸಣ್ಣ ಮದ್ದಿನ ರೋಲನ್ನು ಪಿಸ್ತೂಲಿನೊಳಗೆ ಸಿಕ್ಕಿಸಿ, ಟ್ರಿಗರ್ ಎಳೆದು ಚಟಾರ್ ಎನಿಸುವುದನ್ನು ಕಲಿತೆವು. ಈ ಮದ್ದಿನ ರೋಲು ನಮ್ಮನ್ನು ವಿಲನ್ ರೋಲಿನಿಂದ ಹೀರೋ ರೋಲಿಗೆ ಕರೆದೊಯ್ಯಿತು. ಹೀರೋ ಆದಮೇಲೆ ಕೇಳಬೇಕೇ?  ಈಗ ನಮಗಿಂತ ಚಿಕ್ಕ ಮಕ್ಕಳು ಪಿಸ್ತೂಲು ಹಿಡಿದ ನಮ್ಮನ್ನು ನೋಡಿ ಹೆದರುತ್ತಿದ್ದರು.  ನಾವೀಗ ಸರಪಟಾಕಿಗಳನ್ನು ಹೊಡೆಯುವಷ್ಟು ಜೋರಾದೆವು. ಮೊದಲೇ ಡೇಂಜರಿನ ಸಂಕೇತವೆಂಬಂತೆ ಕೆಂಬಣ್ಣವನ್ನು ಹೊಂದಿರುತ್ತಿದ್ದ, ಉದ್ದ ಹೊಟ್ಟೆಯ, ಅಷ್ಟೇ ಉದ್ದದ ಬತ್ತಿಯನ್ನು ಹೊಂದಿರುತ್ತಿದ್ದ ಈ ಪಟಾಕಿಗಳನ್ನು ಸರದಿಂದ ಬಿಡಿಸಿ, ಬತ್ತಿಯ ತುದಿಯ ಹೊದಿಕೆಯನ್ನು ಚೂರೇ ಕಿತ್ತು ತೆಗೆದು, ಮನೆಯಿಂದ ದೂರ ಅದನ್ನು ಪ್ರತಿಷ್ಟಾಪಿಸಿ, ಸುರಕ್ಷಿತ ಅಂತರದಲ್ಲಿ ನಿಂತು, ಊದಿನಕಡ್ಡಿಯಿಂದ ಬತ್ತಿಗೆ ಕಿಡಿ ತಾಕಿಸಿ, ಓಡಿ ಬಂದು ಕಿವಿ ಮುಚ್ಚಿ ನಿಲ್ಲುವುದು. ಇದರಲ್ಲಿ ಢಂ ಅನ್ನುವವೆಷ್ಟೋ, ಟುಸ್ ಅನ್ನುವವೆಷ್ಟೋ.

ಹೀರೋ ಇಮೇಜು ಜಾಸ್ತಿಯಾಗುತ್ತ ಹೋದಂತೆ ನಾವು ಹೊಡೆಯುವ ಪಟಾಕಿಗಳ ಗಾತ್ರವೂ ದೊಡ್ಡದಾಗುತ್ತಾ ಹೋಯ್ತು. ಆನೆ ಪಟಾಕಿಗಳೂ, ಲಕ್ಷ್ಮೀ ದಡಾಕಿಗಳೂ, ಆಟಂಬಾಂಬುಗಳೂ ನಮ್ಮಿಂದ ಸಿಡಿಯಲ್ಪಟ್ಟವು. ಬಿರುಸಿನ ಕುಡಿಕೆಗಳು ಮನೆಯೆದುರು ಕಾರಂಜಿ ಸೃಷ್ಟಿಸಿದರೆ, ರಾಕೆಟ್ಟುಗಳು ಆಕಾಶದಲ್ಲಿ ಪರ್ಯಾಯ ನಕ್ಷತ್ರಗಳ ಹೊಮ್ಮಿಸಿದವು. ನೆಲಚಕ್ರಗಳು ಮನೆಯೊಳಗೆಲ್ಲ ತಿರುಗಿದವು. ಗೆಳೆಯರೆಲ್ಲ ಸೇರಿ ಪಟಾಕಿಯಿಂದ ಪ್ರಯೋಗಗಳನ್ನೂ ಮಾಡಿದೆವು. ಬೀದಿನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಹಚ್ಚಿ ಓಡಿಸುವುದೂ, ಪಟಾಕಿಯನ್ನು ಸಗಣಿಯಲ್ಲಿಟ್ಟು ಸಿಡಿಸಿ ಸುತ್ತಮುತ್ತೆಲ್ಲ ಸಗಣಿಮಯವಾಗುವುದು ನೋಡಿ ಖುಷಿ ಪಡುವುದೂ, ಲಕ್ಷ್ಮೀ ದಡಾಕಿಗೆ ಬೆಂಕಿ ತಾಗಿಸಿ ಅದರ ಮೇಲೊಂದು ಡಬ್ಬಿ ಕವುಚಿ ಓಡಿ ಬಂದು ಪಟಾಕಿ ಸಿಡಿದಾಗ ಡಬ್ಬಿ ಆಕಾಶಕ್ಕೆ ಹಾರುವುದು ನೋಡಿ ಚಪ್ಪಾಳೆ ತಟ್ಟುವುದೂ, ಸಿಡಿಯದೇ ಉಳಿದ ಟುಸ್-ಪಟಾಕಿಗಳನ್ನೆಲ್ಲ ಬಿಡಿಸಿ ಅದರ ಮದ್ದನ್ನೆಲ್ಲಾ ಸೇರಿಸಿ ದೊಡ್ಡ ಪಟಾಕಿ ಮಾಡಿ ಉಡಾಯಿಸುವುದೂ ಹೀಗೆ ನಾನಾ ರೀತಿಯ ಕ್ರಿಯಾಶೀಲ ಕಿತಾಪತಿಗಳನ್ನು ಮಾಡಿ ಹಿರಿಯರಿಂದ ಬೈಗುಳ-ಒದೆತಗಳನ್ನು ಹಬ್ಬದುಡುಗುರೆಯಾಗಿ ಪಡೆದೆವು.

ಉರಿದದ್ದೆಲ್ಲಾ ತಣ್ಣಗಾಗುತ್ತವೆ ಎಂಬಂತೆ ಪಟಾಕಿಯ ಬಗೆಗಿದ್ದ ನಮ್ಮ ವ್ಯಾಮೋಹವೂ ನಿಧಾನಕ್ಕೆ ಕಮ್ಮಿಯಾಯಿತು. ಮುಂಚೆ ಒಂದೊಂದೇ ಪಟಾಕಿ ಹಚ್ಚುತ್ತಿದ್ದವರು ಈಗ ಸರಕ್ಕೇ ಬೆಂಕಿಯಿಡತೊಡಗಿದೆವು. ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಕೊಳ್ಳುತ್ತಿದ್ದವರು, ಈಗ ಒಂದು ಪ್ಯಾಕು ಗರ್ನಾಲು ಹೊಡೆದ್ರೆ ಸಾಕು ಬಿಡೋ ಈ ಹಬ್ಬಕ್ಕೆ ಅನ್ನೋ ಹಂತಕ್ಕೆ ಬಂದೆವು. ಮಕ್ಕಳ್ಯಾರಾದರೂ ಸಿಕ್ಕಾಪಟ್ಟೆ ಪಟಾಕಿ ಹೊಡೆಯುತ್ತಿದ್ದರೆ ಥೂ, ಡಿಸ್ಟರ್ಬೆನ್ಸು ಅಂತ ಹಲ್ಲು ಕಿವುಚಿದೆವು. ನಮ್ಮ ಮನೆ ಮಕ್ಕಳೇ ಪಟಾಕಿ ಬೇಕೆಂದು ಹಟ ಮಾಡಿದಾಗ ಅದನ್ನು ತಪ್ಪಿಸುವ, ಮನವೊಲಿಸುವ ಪ್ರಯತ್ನ ಮಾಡಿದೆವು.

ಇದಕ್ಕೆಲ್ಲ ಪೂರಕವೆಂಬಂತೆ ಈಗ ದೀಪಾವಳಿಯಲ್ಲಿ ಪಟಾಕಿ ಸುಡುವುದಕ್ಕೆ ನಿರ್ಬಂಧ ಹೇರಬೇಕು ಎಂಬ ಕೂಗು ಜೋರಾಗಿದೆ. ಜನ ಕೋರ್ಟ್ ಮೆಟ್ಟಿಲೇರಿದ್ದಾರೆ. ಏನು ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ ಜಾರಿಯಾಗಿಯೇಬಿಡುತ್ತದೇನೋ ಎಂಬ ಹಂತ ತಲುಪಿದ್ದ ಕೇಸು, ಈಗ ಸ್ವಲ್ಪ ಸಡಿಲಾದಂತಿದೆ. ಆದರೆ ಹಿಂದೆಂದಿಗಿಂತಲೂ ಈಗ ಪಟಾಕಿಯೆಡೆಗಿನ ಅಸಮಾಧಾನ ಜಾಸ್ತಿಯಾಗಿದೆ.

ಇಷ್ಟಕ್ಕೂ ಮನುಷ್ಯ ಈ ಪಟಾಕಿಯಂತಹ ಒಂದು ವಸ್ತುವನ್ನು ಯಾಕಾದರೂ ತಯಾರಿಸಿದ ಎಂಬುದು ಕುತೂಹಲದ ವಿಷಯ. ದೊಡ್ಡದಾಗಿ ಶಬ್ದ ಮಾಡುವ ವಸ್ತುವೊಂದು ಮನುಷ್ಯನಿಗೆ ಖುಷಿ ಕೊಡುವಂತಾದದ್ದು ಹೇಗೆ? ಹಬ್ಬಗಳಲ್ಲಿ, ವಿಜಯೋತ್ಸವಗಳಲ್ಲಿ ಭಾರೀ ಶಬ್ದವನ್ನುಂಟುಮಾಡಿದಾಗ ಅದು ಮಜ ನೀಡುತ್ತದೆ ಎಂಬ ಕಲ್ಪನೆ ನಮ್ಮ ಮನಸ್ಸುಗಳಲ್ಲಿ ನೆಲೆಯಾಗಿದ್ದಾದರೂ ಹೇಗೆ? ಫ್ಲವರ್ ಪಾಟ್, ರಾಕೆಟ್, ಭೂಚಕ್ರದಂತಹ ಸಿಡಿಮದ್ದುಗಳು ಕಣ್ಣಿಗೆ ಸಂಭ್ರಮವನ್ನಾದರೂ ತರುತ್ತವೆ; ಆದರೆ ಸದ್ದು ಮಾಡುವ ಪಟಾಕಿ? ಅದು ಬೆಚ್ಚಿಬೀಳಿಸುವುದೇ ಹೆಚ್ಚು! ಬಹುಶಃ ಈ ಬೆಚ್ಚಿಬೀಳುವ, ಭಯಕ್ಕೊಳಗಾಗುವ, ಬೇರೆಯವರನ್ನು ಭಯಕ್ಕೊಳಪಡಿಸುವ ಥ್ರಿಲ್ಗಾಗಿಯೇ ಈ ಪಟಾಕಿಗಳ ಸೃಷ್ಟಿಯಾಗಿರಬೇಕು. ಆಮೇಲೆ ಅದೊಂದು ಸಂಪ್ರದಾಯವೇ ಆಗಿಹೋಯಿತು. ಹಬ್ಬ ಬಂತೆಂದರೆ ಪಟಾಕಿ, ಕ್ರಿಕೆಟ್ ಮ್ಯಾಚಿನಲ್ಲಿ ಇಂಡಿಯಾ ಗೆದ್ದಿತೆಂದರೆ ಪಟಾಕಿ, ಚುನಾವಣೆಯಲ್ಲಿ ನಮ್ಮ ಸ್ಫರ್ಧಿ ಗೆದ್ದನೆಂದರೆ ಪಟಾಕಿ... ಎಲ್ಲೆಲ್ಲೂ ಸರಣಿ ಸದ್ದುಗಳದೇ ಮೇಲುಗೈ.

ಹೀಗೆ ನಮ್ಮ ಸಂಭ್ರಮಗಳಲ್ಲಿ ಹಾಸುಹೊಕ್ಕಾಗಿರುವ ಪಟಾಕಿಯನ್ನೇ ಈಗ ನಿಷೇಧಿಸಿಬಿಟ್ಟರೆ? ನಿಜ, ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹೊಡೆಯಲ್ಪಡುವ ಪಟಾಕಿಯಿಂದಾಗಿ ಸೃಷ್ಟಿಯಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ, ಪಟಾಕಿಯಿಂದಾಗಿ ಮೈಕೈ ಸುಟ್ಟುಕೊಳ್ಳುವ ಅದೆಷ್ಟೋ ಚಿಣ್ಣರು, ಕಣ್ಣು-ಕಿವಿಗಳಿಗೆ ಹಾನಿ ಮಾಡಿಕೊಳ್ಳುವವರು, ವಯೋವೃದ್ಧರಿಗೆ-ಉಸಿರಾಟದ ತೊಂದರೆಯಿರುವವರಿಗೆ ಪಟಾಕಿಗಳಿಂದಾಗಿ ಆಗುವ ತೊಂದರೆ, ಬೀದೆಯಲ್ಲ ತುಂಬುವ ಕಸ... ಎಲ್ಲವನ್ನೂ ಗಣನೆಗೆ ತೆಗೆದುಕೊಂಡಾಗ ಪಟಾಕಿಯಿಲ್ಲದ ದೀಪಾವಳಿಯೇ ಸರಳ-ಸುಂದರ ಎನಿಸುತ್ತದೆ. ಆದರೆ ಅದನ್ನು ಸಂಪೂರ್ಣ ಬ್ಯಾನ್ ಮಾಡಿಬಿಟ್ಟರೆ ಹಬ್ಬದ ಕಳೆಯೇ ಹೊರಟುಹೋಗುತ್ತದೆಯೇ? ನಾವನುಭವಿಸಿದ ಮೋಜು-ಮಸ್ತಿಗಳನ್ನು ಮಕ್ಕಳು ಅನುಭವಿಸುವುದು ಬೇಡವೇ?

ಹಳ್ಳಿಗಳಲ್ಲಾದರೆ ದೀಪಾವಳಿ ಹಬ್ಬದಂದು, ಹಬ್ಬದ ಹಿಂದೆ-ಮುಂದೆ ಅನೇಕ ಕಾರ್ಯ ಚಟುವಟಿಕೆಗಳಿರುತ್ತವೆ. ಭೂರೆಹಬ್ಬ, ಗಂಗಾಪೂಜೆ, ಅಭ್ಯಂಜನ ಸ್ನಾನ, ಗೋಪೂಜೆ, ಲಕ್ಷ್ಮೀ ಪೂಜೆ, ದನ ಬೆದರಿಸುವ ಆಟ, ಬಲೀಂದ್ರನಿಗೆ ನೈವೇದ್ಯ, ಊರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹಬ್ಬದ ಪಾಡ್ಯ, ಭರ್ಜರಿ ಹಬ್ಬದೂಟ, ಗುರಿಗಾಯಿ ಆಟ, ಹಬ್ಬ ಕಳುಹಿಸುವ ಕೆಲಸ, ಕಾರ್ತೀಕ ದೀಪೋತ್ಸವ, ಅಂಟಿಗೆ ಪಿಂಟಿಗೆ... ಹೀಗೆ ಪಟಾಕಿ ಹೊಡೆಯಲೂ ಸಮಯವಿಲ್ಲದಷ್ಟು ಸಂಪ್ರದಾಯಗಳೂ, ಸಂಭ್ರಮಗಳೂ, ಕೆಲಸಗಳೂ ಇರುತ್ತವೆ.  ಆದರೆ ನಗರಗಳಲ್ಲಿ ದೀಪಾವಳಿ ಎಂದರೆ ಬಹುತೇಕ ಪಟಾಕಿ ಹೊಡೆಯುವುದೇ ಆಗಿಹೋಗಿದೆ.  ಮನೆಯ ದೇವರಿಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಹೋಗಿಬಂದು, ನೆಂಟರೋ-ಅಕ್ಕಪಕ್ಕದ ಮನೆಯವರೋ ಬಂದರೆ ಅವರನ್ನು ಉಪಚರಿಸಿ, ಊಟ ಮಾಡುವುದು ಬಿಟ್ಟರೆ ಆಮೇಲೆಲ್ಲಾ ಪಟಾಕಿ ಸುಡುವುದೇ ಹಬ್ಬ. ಹೀಗಾಗಿ, ಹಳ್ಳಿಗಳಲ್ಲಾದರೂ ಪಟಾಕಿಯಿಲ್ಲದ ದೀಪಾವಳಿಯನ್ನು ಕಲ್ಪಿಸಿಕೊಳ್ಳಬಹುದು, ಆದರೆ ನಗರಗಳಲ್ಲಿ ಮಾತ್ರ ಅದು ತುಂಬಾ ಕಷ್ಟ.

ಇಷ್ಟಲ್ಲದೇ, ಪಟಾಕಿಗೆ ನಿರ್ಬಂಧ ಹೇರಿದ್ದೇ ಹೌದಾದರೆ ಪಟಾಕಿ ಉದ್ಯಮಗಳ ಕಥೆ ಏನು? ಅವರಿಗಾಗುವ ನಷ್ಟವನ್ನು ತುಂಬಿಕೊಡುವವರು ಯಾರು?  ಆ ಉದ್ಯಮದಲ್ಲಿ ಕೆಲಸ ಮಾಡುವ ಸಾವಿರಾರು ಜನರ ಕಥೆಯೇನು? ಎಂಬಂತಹ ವಾದಗಳೂ ಕೇಳಿಬರುತ್ತಿವೆ.  ಹೀಗಾಗಿ ಪಟಾಕಿಯನ್ನು ಬ್ಯಾನ್ ಮಾಡುವುದು ಸರ್ಕಾರಗಳಿಗೂ ಅಷ್ಟು ಸುಲಭದ ವಿಷಯವಾಗಿ ಉಳಿದಿಲ್ಲ.

ಸಂಪೂರ್ಣ ಕಡಿವಾಣ ಸಾಧ್ಯವಾಗದೇ ಹೋದರೂ, ಪಟಾಕಿ ಸುಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮಲ್ಲಿ ಜಾಗೃತಿ ಮೂಡುವ ಅವಶ್ಯಕತೆ ಇದೆಯೆಂದೆನಿಸುತ್ತದೆ. ಈ ವರ್ಷದ ದೀಪಾವಳಿ ಅಂಥದೊಂದು ನಿಲುವಿಗೆ ನಾಂದಿಯಾಗಬಲ್ಲುದೇ? ಪಕ್ಕದ ಮನೆಯ ತಾತ ಬಂದು, ಪಟಾಕಿ ಹೊಡೀಬೇಡ್ರಪ್ಪಾ, ತೊಂದ್ರೆ ಆಗುತ್ತೆ ಅಂತ ಕೇಳಿಕೊಂಡರೆ, ಅವರ ಕೋರಿಕೆಯನ್ನು ಮನ್ನಿಸುವಷ್ಟಾದರೂ ಸಹಿಷ್ಣುತೆ ನಮ್ಮಲ್ಲಿ ಮೂಡಬಹುದೇ? ಇಷ್ಟಕ್ಕೂ ದೀಪಾವಳಿ ದೀಪಗಳ ಹಬ್ಬವೇ ಹೊರತು ಪಟಾಕಿಗಳ ಹಬ್ಬ ಅಲ್ಲ.  ಹೀಗಾಗಿ, ಈ ವರ್ಷದ ದೀಪಾವಳಿಯನ್ನು ಸಿಡಿಮದ್ದಿಲ್ಲದೆ ಆಚರಿಸಲು ಸಾಧ್ಯವಾ?


ಹಾಗಾದರೆ ಏನು ಮಾಡಬಹುದು? ಪಟಾಕಿ ಬೇಕೇಬೇಕು ಅಂತ ಹಟ ಮಾಡುವ ಮಕ್ಕಳನ್ನು ಹೇಗೆ ಸುಮ್ಮನಿರಿಸುವುದು?  ಈ ವರ್ಷ ದೀಪಾವಳಿಯಂದು, ಮಕ್ಕಳನ್ನೆಲ್ಲ ಕೂರಿಸಿಕೊಂಡು, ಜೇಡಿಮಣ್ಣು, ಬಾಟಲಿನ ಮುಚ್ಚಳ, ಹಿಂಡಿದ ನಿಂಬೆಯ ಸಿಪ್ಪೆ ಮುಂತಾದವುಗಳಿಂದ ದೀಪಗಳನ್ನು ನಾವೇ ತಯಾರಿಸಿ ಮನೆ ಮುಂದೆ ಸಾಲುಸಾಲು ದೀಪ ಹಚ್ಚೋಣ.  ಬಣ್ಣದ ಕಾಗದಗಳನ್ನು ತಂದು ವಿವಿಧ ಆಕಾರದ ಆಕಾಶಬುಟ್ಟಿಗಳನ್ನು ತಯಾರಿಸಿ ಮನೆ ಮುಂದೆ ತೂಗಿಬಿಡೋಣ.  ಹೂವು-ತೋರಣ-ಬಣ್ಣದ ಕಾಗದಗಳಿಂದ ಮನೆಯನ್ನು ಸಿಂಗರಿಸೋಣ.  ರಸ್ತೆಯಲ್ಲಿ ದೊಡ್ಡದಾಗಿ ರಂಗೋಲಿ ಹಾಕಿ ಬಣ್ಣ ತುಂಬೋಣ. ಮಾರುಕಟ್ಟೆಯಲ್ಲಿ ಕೆಲವೆಡೆ ಬಣ್ಣದ ಪಟಾಕಿ ಸಿಗುತ್ತದೆ: ಇದನ್ನು ಸಿಡಿಸಿದಾಗ ಬೆಂಕಿ ಮತ್ತು ಶಬ್ದದ ಬದಲು ಬಣ್ಣದ ಬುಗ್ಗೆ ಏಳುತ್ತದೆ. ಇಂಥದನ್ನು ಬಳಸಲು ಯತ್ನಿಸೋಣ.  ಹಳ್ಳಿಗಳಲ್ಲಿ ನಡೆಯುವ ಆಚರಣೆಗಳಲ್ಲಿ ಕೆಲವನ್ನಾದರೂ ನಗರಗಳಲ್ಲಿ ಸಾಕಾರಗೊಳಿಸಲಾದೀತೇ ಅಂತ ಯೋಚಿಸೋಣ. ಬೀದಿಯ ಮಕ್ಕಳನ್ನೆಲ್ಲ ಕೂಡಿಸಿ ಸಣ್ಣ ಮನರಂಜನೆ ಕಾರ್ಯಕ್ರಮ ಏರ್ಪಡಿಸೋಣ, ಆಟ ಆಡಿಸೋಣ. ಆಪ್ತೇಷ್ಟರೆಲ್ಲ ಸೇರಿ ಹಾಡಿ ನಲಿಯೋಣ. ಎದುರಿಗೆ ಸಿಕ್ಕವರಿಗೆ ಶುಭಾಶಯ ಕೋರೋಣ.  ನಾವೆಲ್ಲ ಇಷ್ಟೆಲ್ಲ ಸಂಭ್ರಮಿಸುವಾಗ ಬೆಳಕನ್ನು ನೋಡುವ ಭಾಗ್ಯವೇ ಇಲ್ಲದ ಅಂಧರು ಇರುವ ಶಾಲೆ-ವಸತಿ ನಿಲಯಗಳಿಗೆ ಭೇಟಿ ಕೊಟ್ಟು, ಅವರೊಂದಿಗೆ ಸ್ವಲ್ಪ ಕಾಲ ಕಳೆದು ರಂಜಿಸಿ ಬಂದರೆ ಬೆಳಕಿನ ಹಬ್ಬಕ್ಕೊಂದು ಸಾರ್ಥಕ್ಯವೂ ಸಿಕ್ಕೀತು.  ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೆ ಹೊಸ ಬದುಕಿನ ಭರವಸೆಯ ಹೂಗುಚ್ಛವನ್ನೂ, ಸಿಹಿಯ ಹೋಳಿಗೆಯನ್ನೂ ಕೊಡುವ ನಿಟ್ಟಿನಲ್ಲಿ ಯೋಚಿಸೋಣ. ದೀಪಾವಳಿ ಎಲ್ಲರ ಬಾಳಿಗೂ ಹೊಸ ಬೆಳಕು ತರುವಂತಾಗಲಿ. ಶುಭಾಶಯಗಳು.

[ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದದ್ದು.]

Friday, October 30, 2015

ಗದ್ದೆಹಾದಿ

ಬಸ್ ನಿಲ್ದಾಣದಿಂದ ಮನೆಗೆ ಹೋಗಲು
ಗದ್ದೆಹಾದಿಯೇ ಹತ್ತಿರ ಎಂಬ ಮಾತು ಆಗ ಎಲ್ಲರ ಬಾಯಲ್ಲಿ..
ನಡಿಗೆಗೆ ಬಹುದೂರವೆಂದು ವರ್ಜಿಸಲ್ಪಟ್ಟ ಮುಖ್ಯರಸ್ತೆ
ಬಿಸಿಲಲ್ಲಿ ಬಣಗುಡುತ್ತ ಹೊರಗೆ ಬಿದ್ದುಕೊಂಡಿರುತ್ತಿತ್ತು.
ನಡೆದು ನಡೆದೇ ಸವೆದಿದ್ದ ಒಳಹಾದಿಯ ಗದ್ದೆಬದುವಿನ ಮೇಲೆ
ಹೆಜ್ಜೆಯ ಮೇಲೊಂದೆಜ್ಜೆಯನಿಕ್ಕುತ ನಡೆಯುತ್ತಿದ್ದರೆ
ಬಾಗಿದ ಭತ್ತದ ತೆನೆಗಳು ತಾಗಿ ಮೊಣಕಾಲಿಗೆ ಕಚಗುಳಿ..
ಟುರ್ರನೆ ಹಾರುವ ಸಣ್ಣ ಪೊದೆಯ ಹಿಂದಡಗಿದ್ದ ಪುಟ್ಟಹಕ್ಕಿ
ಸರ್ರನೆ ಸರಿಯುವ ಮಟ್ಟಿಯ ಮರೆಯ ಬಿಳಿಹಾವು
ಅಂಚಿಗೆ ಕಾಲಿಟ್ಟರೆ, ಜರ್ರನೆ ಜಾರುವ ಒದ್ದೆಬದು.

ಗಂಡಸರು ಪಂಚೆ ಮಡಿಚಿ ಕಟ್ಟಿಕೊಂಡೂ, ಹೆಂಗಸರು ಸೀರೆ
ಸ್ವಲ್ಪವೇ ಎತ್ತಿಕೊಂಡೂ ಅರಲು ತಾಗದಂತೆ ಹುಷಾರಾಗಿ ಅಡಿಯಿಡುವರು.
ನಡುವೆ ಸಿಕ್ಕ ಊದ್ದನೆ ಸಾರವನ್ನು ಚಪ್ಪಲ್ಲಿ ಕೈಯಲ್ಲಿ ಹಿಡಿದು
ಥರಥರಗುಡುತ್ತ ದಾಟಿಬಿಟ್ಟರೆ ನಂತರದ ತಂಪುಹಾದಿಯಲ್ಲಿ ನಿಟ್ಟುಸಿರು.

ವಾಹನಗಳು ಅಗ್ಗವಾದವೋ ಜನರು ಸಿರಿವಂತರಾದರೋ,
ಮುಖ್ಯರಸ್ತೆಯಲ್ಲಿ ಮೋಟಾರುಗಳ ಸಶಬ್ದ ಸಂಚಾರ ಹೆಚ್ಚಾಯಿತು.
ಕೆಂಪುರಸ್ತೆ ಟಾರು ಹೊಯ್ಯಿಸಿಕೊಂಡು ಪೂರ ಕಪ್ಪಾಯಿತು.
ಹೊಸಹುಡುಗರ ಪ್ಯಾಂಟೂ, ಲಲನೆಯರ ಲೆಗ್ಗಿಂಗೂ ಕೆಸರಸ್ಪರ್ಶಕ್ಕೆ
ಹೆದರಿ ಗದ್ದೆಹಾದಿಯ ತ್ಯಜಿಸಿದವು. ಒಳಹಾದಿಗಿಂತ ಥಳಗುಟ್ಟುವ
ಬಳಸುದಾರಿಯೇ ಬಳಕೆಗನುಕೂಲವೆನಿಸಿದ ಘಳಿಗೆ
ಮುಖ್ಯರಸ್ತೆ ವಿಜಯೋತ್ಸವದಲಿ ವಿಜ್ರಂಭಿಸಿತು.

ಗದ್ದೆಹಾದಿಯ ಮೇಲೀಗ ಚುಪುರಾಗಿ ಬೆಳೆದ ಹುಲ್ಲು
ಹಳ್ಳದ ಬಳಿಯ ಇಳಿಜಾರಿನಲಿ ಬರೀ ಜುಳುಜುಳು ಗುಲ್ಲು
ಮನುಷ್ಯರ ಕಾಣದೇ ಬೆದರಿರುವ ಬೆರ್ಚಪ್ಪಗಳು
ಕನಸಿನಿಂದೇಳದೇ ಮಲಗಿರುವ ಮರಿ ಗೀಜಗಗಳು

ಇವತ್ತು ಸಕ್ಕರೆಯಂತೆ ಇಬ್ಬನಿ ಬೀಳುತ್ತಿದೆ.
ಬೇಲಿಬದಿಯ ಸಾಲು ಸಿತಾಳೆ ಗಿಡಗಳಿಂದುದುರಿದ
ಹೂಪಕಳೆಗಳು ರಾಜಕುವರಿಯ ಮೃದುಕಾಲ ಸ್ಪರ್ಶಕ್ಕೆ ಕಾದಿವೆಯಂತೆ;

ಗೆಳತೀ, ಇವತ್ತು ಗದ್ದೆಹಾದಿಯಲ್ಲಿ ಹೋಗೋಣ, ಬಾ. 

Sunday, October 04, 2015

ಗಣೇಶ ಹೋದಮೇಲೆ

ಗಣೇಶ ಹೋದಮೇಲೆ ಬೀದಿಯಲ್ಲಿ ಪರಮಮೌನ.
ಮೂರು ದಿನದಿಂದ ಮೊಳಗುತ್ತಿದ್ದ ಮೈಕಿನ ಸದ್ದಡಗಿ
ಸಾಲುಮನೆಗಳ ಸೋಪಾನದಲ್ಲಿ ಹೆಜ್ಜೆಗಳಿಗೆ ಬಾಯಿ ಮರಳುವುದು.
ಕಿಟಕಿಗಳು ತೆರೆಯಲ್ಪಡುವವು. ನೆಂಟರೊಡನೆ ಬಂದಿದ್ದ ಕೀಟಲೆ ಮಕ್ಕಳು
ಹೊರಟುಹೋದಾಗ ತುಂಬುವ ನೀರವದಂತೆ ಕಿವಿಗಳು ಗವ್ವೆನ್ನುವವು.
ಎದ್ದೇಳು ಮಂಜುನಾಥಾ ಎಂದು ಮುಂಜಾನೆಯೇ ಬಡಿದೆಬ್ಬಿಸುವ ಹಾಡಿಲ್ಲ.
ಅನ್ನಸಂತರ್ಪಣೆಗೆ ಸಾಲಾಗಿ ಬನ್ನಿ ಎನ್ನುವವರಿಲ್ಲ. ಮಂತ್ರಪಾರಾಯಣವಿಲ್ಲ.
ಪ್ರತಿಮನೆಗೂ ಬಳ್ಳಿಯಾಗಿ ನೇತುಬಿಟ್ಟಿದ್ದ ಸರಣಿದೀಪಗಳನ್ನೂ ತೆರವುಗೊಳಿಸಿ
ಈಗ ಎಲೆಯುದುರಿದ ಶಿಶಿರದ ಕಾಡಂತೆ ಬೀದಿ ಪಿಚ್ಚೆನಿಸುವುದು.

ಆರ್ಕೆಸ್ಟ್ರಾದಲ್ಲಿ ವನ್ಸ್‌ಮೋರ್ ಬೇಡಿಕೆಗೆ ಕಲಕಲ್ಪಟ್ಟಿದ್ದ ಹೃದಯಸಮುದ್ರದಬ್ಬರವೂ ಇಳಿದು
ತೀರದಲ್ಲೀಗ ಅಲೆಗಳಿಲ್ಲದ ಬೇಸರ. ಬೀದಿಯಲ್ಲೇ ಎದ್ದುನಿಂತಿದ್ದ ವೇದಿಕೆಯೂ
ಸಭಾತ್ಯಾಗ ಮಾಡಿ ದಾರಿಹೋಕರಿಗೆ ಬಣಬಣ. ತರಕಾರಿ ತಳ್ಳುಗಾಡಿಯವನು
ಈ ಜಾಗ ದಾಟಿಹೋಗುವಾಗ ಒಂದು ಕ್ಷಣ ಅನುಮಾನಿಸುವನು; ಅಕಸ್ಮಾತ್ ಕೊತ್ತಂಬರಿ ಕಟ್ಟು
ಕೆಳಗೆ ಜಾರಿಬಿದ್ದರೆ ಗರಿಕೆಹುಲ್ಲು ಗಣೇಶಾರ್ಪಣವಾಯಿತೆಂದು ಹಾಗೇ ಸಾಗುವನು.

53ನೇ ವರ್ಷದ ಗಣೇಶೋತ್ಸವದ ಬ್ಯಾನರು ಇಳಿಸಿಯಾದಮೇಲೆ
ಸಂಘಟಕರ ಮನೆಯ ಕೋಣೆಯಲ್ಲಿ ಲೆಕ್ಕಾಚಾರದ ಸಮಯ.
ತಮಟೆಯ ಬಡಿತಕ್ಕೆ ಕುಣಿದ ಇವರ ಕಾಲುಗಳ ನೋವು ಹ್ಯಾಂಗೋವರಿನೊಂದಿಗೆ
ನಿಧಾನಕೆ ಇಳಿಯುವಾಗ, ಅತ್ತ ಮುಳುಗಿದ ಕೆರೆಯಲ್ಲಿ ವಿಘ್ನೇಶ್ವರ ಹಿತವಾಗಿ ಕರಗುವನು.
ಪಕ್ಕದ ಬೀದಿಯಲ್ಲಾಗಲೇ ಏಳುತ್ತಿರುವ ವೇದಿಕೆಯಲ್ಲಿ ಪುನರಾವಿರ್ಭವಸಲು ಸಜ್ಜಾಗುವನು.
ಸದ್ದುಗದ್ದಲಗಳೆಲ್ಲ ಸಾಲುಮನೆಗಳ ಮೇಲಿಂದ ಹೈಜಂಪು ಮಾಡಿ ಅತ್ತ ಸಾಗುವವು.
ಸಂಭ್ರಮದತಿಥಿ ಟ್ರಾಕ್ಟರಿನಲ್ಲಿ ತನ್ನನ್ನು ದಾಟಿಹೋಗುವಾಗ ಈ ಬೀದಿ
ಇಲ್ಲಿಂದಲೇ ಕೈಬೀಸಿ ಗೆಳೆಯನಿಗೆ ಹಾಯೆನ್ನುವುದು. ಮೋದಕಹಸ್ತ ಕುಲುಕಲ್ಲೆ ಸ್ಪಂದಿಸುವನು.

Saturday, September 12, 2015

ಜೊನಾಥನ್‌ಗೆ

ನೀನು ಹುಟ್ಟಿದ ದಿನ ಹುಣ್ಣಿಮೆಯೇ ಆಗಿರಬೇಕು
ಸಮುದ್ರದಡದಲಿ ಅಲೆಗಳ ಹುಚ್ಚುಮೊರೆತ
ಮೊಟ್ಟೆಯಿಂದ ಹೊರಬಂದರೂ ಚಿಪ್ಪಿನಿಂದ ಹೊರಬರಲು ದಿನಗಳೇ ಹಿಡಿಯಿತು
ಮೊದಲ ಹೆಜ್ಜೆ ಯಾವ ದಿಕ್ಕಿಗಿರಿಸಿದೆ?
ನೆನೆದರೀಗಲೂ ಪುಳಕ: ಉಕ್ಕುನೊರೆಗಳ ಸೊಕ್ಕುತೆರೆಗಳ ಮೇಲೇರಿಳಿದು ಈಜಿದ್ದು,
ಶಾರ್ಕು ತಿಮಿಂಗಿಲಗಳ ಭಾರೀ ಉರಗಗಳ ಬಾಯಿಂದ ತಪ್ಪಿಸಿಕೊಂಡಿದ್ದು..
ಚಿಪ್ಪು ಗಟ್ಟಿಯಾಗುತ್ತ ಹೋದಂತೆ, ಅಮ್ಮನಾಸರೆಯೆ ಬಿಟ್ಟು ಹೊರಹೊರಟಂತೆ,
ತಲೆಯೆತ್ತಿ ನಡೆದೆ. ವಿಷ್ಣುವಿನವತಾರವೇ ಆದ ನಿನಗೆ ದೀರ್ಘಾಯುಷ್ಯದಾಶೀರ್ವಾದ
ಅದಾರು ಮಾಡಿದ್ದರೋ ತಿಳಿಯೆ. ಜಾತಕ ಬೇರೆ ಎಟಕುತ್ತಿಲ್ಲ.

ಮಳೆಗಾಲಗಳ ಕಥೆ ಹೇಳು ಜೊನಾಥನ್, ಎಷ್ಟು ಬೇಸಿಗೆಗಳ ಕಂಡೆ?
ಬಿರುಗಾಳಿಗಳ ಕಥೆ ಹೇಳು ಜೊನಾಥನ್, ಎಷ್ಟು ವಿರಹಗಳನುಂಡೆ?
ಮಹಾಯುದ್ಧಗಳ ಕಥೆ ಹೇಳು ಜೊನಾಥನ್, ಎಷ್ಟು ವಿದ್ರೋಹಗಳಿಗೆ ಸಾಕ್ಷಿಯಾದೆ?

ಸಂಗಾತಗಳ ಸಂಭ್ರಮವ ನೆನೆದು ನಗುವಾಗ,
ಸಂಗಾತಿಗಳಿಟ್ಟ ಮೊಟ್ಟೆಗಳ ಮೂಸಿ ನೋಡಿದ ಪರಿಮಳ
ಈಗಲೂ ನಿನ್ನ ಮೂಗನರಳಿಸುವಾಗ, ಅರೆಕುರುಡಲ್ಲಿ ನಿಧಾನಕ್ಕೆ ಹೆಜ್ಜೆ ಹಾಕುವಾಗ
ನೆನಪ ಭಾರವನ್ನೇ ನೀನು ಚಿಪ್ಪ ಮೇಲಿಟ್ಟು ನಡೆಯುತ್ತಿರುವಂತೆ ಭಾಸ..

ಯಾವ ರಾಣಿ ಎಂದು ಎಂಥ ಯುವರಾಜನನ್ನು ಹೆತ್ತಳು
ಯಾವ ಸೇನಾಧಿಪತಿ ಯಾವ ರಾಜ್ಯದ ಮೇಲೆ ದಂಡೆತ್ತಿಹೋದ
ಯಾವ ಜೀವಸಂಕುಲ ಹೇಗೆ ಬೆಳೆದು ನಳನಳಿಸಿ ನಶಿಸಿಹೋಯಿತು
ಯಾವ ನದಿಯ ದಿಕ್ಕು ಬದಲಿಸಲಾಯ್ತು, ವಿಕಿರಣಗಳ ಶಾಪ ಎಲ್ಲಿಗೆ ತಟ್ಟಿತು
ಯಾವ ಸಾಮ್ರಾಜ್ಯ ಒಡೆದು ಚೂರಾಯ್ತು, ಸುಂದರಿಯ ನತ್ತು ಹೇಗೆ ಕಳೆಯಿತು

ಎಲ್ಲ ಪ್ರಶ್ನೆಗಳಿಗೂ ನಿನ್ನಲ್ಲುತ್ತರವಿದೆ. ಅವರ ಧ್ವಜವನ್ನಿಳಿಸಿ ನಮ್ಮ ಧ್ವಜವೇರಿಸಿ
ಮೆರೆದ ಸಾಹಸಗಳನ್ನೂ, ಆಕಾಶಕ್ಕೇರಿದ ರಾಕೆಟ್ಟುಗಳನ್ನೂ,
ಹಿಮಕಂದರಳಿಗೆ ಜಾರಿಬಿದ್ದ ಮುಕುಟಗಳನ್ನೂ, ಮರಳಿ ಬಂದ ಪತ್ರಗಳ ಸಂಕಟಗಳನ್ನೂ,
ಸಾಲುಗಟ್ಟಿ ನಡೆದ ಇರುವೆಗಳು ತಲುಪಿದ ಹುತ್ತವನ್ನೂ, ಕಮರಿದ ಬೆಳಕುಗಳನ್ನೂ
ನೀ ನೋಡಿ ಬಲ್ಲೆ. ಸುಕ್ಕುಗಟ್ಟಿದ ಚರ್ಮದೊಳಗೆ ಹೆಪ್ಪುಗಟ್ಟಿದ ನಿಟ್ಟುಸಿರುಗಳಲಿ
ಈ ಜಗಹೃದಯದ ಉಶ್ವಾಸ ನಿಶ್ವಾಸಗಳೆಲ್ಲ ಅಡಗಿದಂತಿದೆ.

ಕಥೆ ಹೇಳು ಜೋ, ನಿನ್ನ ಚಿಪ್ಪ ಮೇಲೆ ಬಿದ್ದು ಜಾರಿದ ಮಳೆಹನಿಗಳ ಕಥೆ ಹೇಳು.
ಕೂತ ಧೂಳನ್ನು ಹಾರಿಸಿದ ಗಾಳಿಯ ಕಥೆ ಹೇಳು.
ತಿಂದ ಹಣ್ಣುಗಳ, ಮಳೆಹುಳಗಳ, ಬ್ರೆಡ್ಡಚೂರುಗಳ ರುಚಿ ಹಂಚಿಕೋ.
ಸಾವಿರ ಋತುಗಳ ತಿರುವಿನಲಿ ಕಂಡ ಚಿತ್ರಗಳ ನನಗೆ ದಯಪಾಲಿಸು.
ಇತಿಹಾಸಕಾರನಾಗುವ ಹಂಬಲದಿಂದಲ್ಲ, ಕಥೆ ಕೇಳುವ ಖುಷಿಗಾಗಿ
ನಿನ್ನ ಬೆನ್ನು ಬಿದ್ದಿದ್ದೇನೆ. ಕತ್ತೇರಿಸಿ ಹೇಳು. ರಾತ್ರಿಗಳು ಕರಗಿ ಹಗಲಾಗಲಿ.
ಹಗಲಳಿದು ಮುಸ್ಸಂಜೆಯಾಗಲಿ. ನಾನು ಇಲ್ಲೇ ಕೂತಿರುವೆ ನಿನ್ನ ಸಂಗಡ.

ಕಥೆ ಹೇಳು ಜೊನಾಥನ್, ಆ ಕಥೆ ಹೇಳು.

[ಜೊನಾಥನ್ ಎಂಬುದು ಸುಮಾರು 182 ವರ್ಷ ವಯಸ್ಸಿನ ಆಮೆ. ದಕ್ಷಿಣ ಅಟ್ಲಾಂಟಿಕ್ ಸಾಗರದ ಬಳಿಯಿರುವ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸವಿದೆ. ಸದ್ಯಕ್ಕೆ ಜೀವಂತವಿರುವ ಅತೀ ಹಿರಿಯ ಸರೀಸೃಪ ಇದೆಂದು ನಂಬಲಾಗಿದೆ. ವಿಕಿ ಲಿಂಕ್: Jonathan (tortoise)]

Monday, July 06, 2015

ಕಳಲೆ

ಕಳಲೆ ಕತ್ತರಿಸಲು ಹರಿತ ಮೆಟಗತ್ತಿ ಬೇಕು. 
ಮೆಟಗತ್ತಿಯಿದ್ದರೆ ಸಾಕೆ? ಗಟ್ಟಿಗಿತ್ತಿ ಸೊಸೆಯ ನಿಪುಣ ಕೈ ಬೇಕು
ಕಪ್ಪಿನೊಳಗಿನ ಬಿಳಿಯನೆಷ್ಟು ತೆಗೆಯಬೇಕೆಂದು ಗೊತ್ತಿರಬೇಕು
ತಿಳಿನೀರಿನೊಳಗೆ ಮುಳುಗಿಸಿ ಒತ್ತೊತ್ತಿ ಹಿಂಡಿಂಡಿ ಬಗ್ಗಿಸಿ ದಬರಿಯಿಂದ 
ಹೊಸನೀರು ತುಂಬಿ ಮುಚ್ಚಿಟ್ಟು ಕಾಯುವ ತಾಳುಮೆ ಬೇಕು
ಹುಳಿಗಿಷ್ಟು, ಪಲ್ಯಕ್ಕಿಷ್ಟು, ಸಾಸ್ವೆಗಿಷ್ಟೆಂದು ತೆಗೆದಿಟ್ಟೂ 
ಉಪ್ಪಿನಕಾಯಿಗೂ ಇಷ್ಟು ಉಳಿಸುವ ಜಾಣ್ಮೆ ಬೇಕು 
ಕತ್ತರಿಸುಳಿದ ವಿಷಸಿಪ್ಪೆ ಯಾವ ಜಾನುವಾರ ಬಾಯಿಗೂ ಸಿಗದಂತೆ 
ಗೊಬ್ಬರಗುಂಡಿಗೆಸೆಯುವ ಎಚ್ಚರಿಕೆಯಿರಬೇಕು

ಇಷ್ಟಿದ್ದರೆ ಸಾಕೆ? ಇದಕ್ಕೂ ಮುನ್ನ, ಬಿದ್ದ ಮಳೆ ಮೊಳೆಯುವ ಮೊದಲೇ 
ಕಳಲೆ ತರಲು ಕುಡಗೋಲು ಹಿಡಿದು ಬಿದಿರಕಾನು ನುಗ್ಗಲೊಬ್ಬ ಗಂಡಸು ಬೇಕು
ಪದರ ಪದರಾಗಿ ಹಾಸಿದ ದರಕೆಲೆಗಳ ನಡುವೆ ಮುಚ್ಚಿರುವ 
ಕೂಳೆ ಕಪ್ಪದಂತೆ ಹುಷಾರಾಗಿ ಹೆಜ್ಜೆ ಹಾಕಬೇಕು 
ಸರ್ಪಮಂದಿರವಂತೆ ಮೆಳೆಗಳೊಡಲು ಎಂದು ಯಾವ ಕವಿಯೂ 
ಎಚ್ಚರಿಸದಿದ್ದರೂ ಧಿಗ್ಗನೆ ಹೆಡೆಯೆತ್ತಿ ನಿಂತ ಹಾವನೆದುರಿಸುವ ಛಾತಿ ಬೇಕು
ತಗ್ಗಿ ಬಗ್ಗಿ ನಡೆದು ಬುಡಕ್ಕೆ, ಮೊಳಕೆಯ ಜುಟ್ಟು ಹಿಡಿಯುವಾಗ, ಅಮ್ಮಬಿದಿರಿಗೆ 
ನೋವಾಗದಂತೆ ಶಾಪ ತಗುಲದಂತೆ ಸದ್ದಾಗದಂತೆ ನಾಜೂಕಾಗಿ ಕೊಯ್ಯಬೇಕು
ಸಂಗ್ರಹಿಸಿದ ಕಪ್ಪು ಮಿನಾರುಗಳನ್ನು ಹೊರೆಕಟ್ಟಿ ರಟ್ಟೆಯ ಮೇಲಿಟ್ಟು ತರುವಾಗ ಮನೆಗೆ
ಖಾಕಿಧಾರಿಗಳ್ಯಾರ ಕಣ್ಣಿಗೂ ಅಪ್ಪಿತಪ್ಪಿ ಸಹ ಬೀಳದ ಹಾಗೆ ಬಿಡುಗಣ್ಣಾಗಿರಬೇಕು

ಇಷ್ಟಾದರೆ ಆಯಿತೇ? ಕತ್ತರಿಸಿದಾಗ ಸಿಕ್ಕ ಗಾಲಿಗಳನೆಲ್ಲ ಸೇರಿಸಿ 
ಕೋಲು ತೂರಿಸಿ ಹಗ್ಗ ಕಟ್ಟಿ ದೊಡ್ಡ ಗಾಡಿ ಮಾಡಿಕೊಡಲೊಬ್ಬ ಚಿಕ್ಕಪ್ಪ ಬೇಕು 
ತೇರ ಹಗ್ಗ ಹಿಡಿದೆಳೆದು ಮನೆಯೆಲ್ಲ ಓಡಿಸಿ ಹೊಸ್ತಿಲ ಗಡಿ ದಾಟಿಸಿ 
ಕಟ್ಟೆ ಅಂಗಳ ದಣಪೆಯಾಚೆಗೂ ಓಡಲು ಮಕ್ಕಳು ಬೇಕು
ಗಾರೆನೆಲವೆಲ್ಲ ಗೆರೆಗೆರೆಗಳಾಗಿ ಜಾರಿ ಬೀಳುವಷ್ಟು ಗಲೀಜಾಗಿ
ಮನೆಯೇ ಬಿದಿರಜಂಪೆಯಂತಾದರೂ ನಗುತ್ತಲೇ ಒರೆಸುವ ಚಿಕ್ಕಮ್ಮ ಬೇಕು
ತೆಳ್ಳಗೆ ತಾಳಿಹೊಡೆದ ಬಿಳಿಹೋಳುಗಳ ಪರಿಮಳದ ಚಕ್ರಸುಳಿಯಲಿ ಸಿಗದೆ 
ಮಸಾಲೆಯರೆದು ಮಾಡಿದಡುಗೆಯ ತಿಂದು ಚಪ್ಪರಿಸಿ ಆಹಾ ಎನ್ನಲೊಬ್ಬ ಅಜ್ಜ ಬೇಕು
ಅಚ್ಚಮೆಣಸಿನಪುಡಿಯ ಸ್ವಚ್ಛ ಕೈಯಿಂದ ತೆಗೆದು ತಕ್ಕಷ್ಟೆ ಉಪ್ಪುಹುಳಿ ಬೆರೆಸಿ ಭರಣಿ ಮುಚ್ಚಳವನ್ನು 
ಕೆಡದಂತೆ ಬಿಗಿಯಾಗಿ ಮುಚ್ಚಿ ನಾಗಂದಿಗೆಯಲಿಡಲೊಬ್ಬ ಅನುಭವಸ್ತ ಅಜ್ಜಿ ಬೇಕು

ಕಳಲೆ ಸವಿಯಲು, ಬಿದಿರ ಮೆಳೆಯಂತೆ ಒಟ್ಟಾಗಿ ಒಪ್ಪಾಗಿ ಇರುವ ತುಂಬುಸಂಸಾರ ಬೇಕು 
ನೆನೆಸಿಟ್ಟ ನೀರಲ್ಲೆ ವಿಷಕಳೆದು ರುಚಿತಳೆದ ಕಳಲೆಯಂತೆ ವಿಶಾಲ ಹೃದಯವಿರಬೇಕು.
ಜತೆಗೆ, ಕೊಳಲಿಗೆಂದು ಬಿಡದೆ ಕಳಲೆಯಲ್ಲೆ ಬಿದಿರ ಕತ್ತರಿಸುವಷ್ಟು ನಿರ್ದಯತೆಯೂ ಇರಬೇಕು. 

Tuesday, June 30, 2015

ಜೂನ್ ಎಂಬ ಮಳೆಮಾಸ

ಇರುವುದು ಮೂವತ್ತೊಂದೇ ದಿನಗಳಾದರೂ ಮುನ್ನೂರು ದಿನಗಳಿವೆಯೇನೋ ಎನಿಸುವಷ್ಟು ಬಿಸಿಲು ಮೇ ತಿಂಗಳಲ್ಲಿ. ದಿನಗಳನ್ನೆಣಿಸೆಣಿಸಿ ಸುಸ್ತಾಗಿ, ಅದ್ಯಾವಾಗ ಈ ಬೇಸಿಗೆಯ ಬೃಹನ್ಮಾಸ ಮುಗಿಯುತ್ತದೋ ಎನ್ನುತ್ತಾ ಉಸ್ಸೆಂದು ಕೂತಿದ್ದೇವೆ ಕುರ್ಚಿಯಲ್ಲಿ. ಕೈಗೆ ಸಿಕ್ಕಿದ ಯಾರದೋ ಮದುವೆಯ ಇನ್ವಿಟೇಶನ್ ಕಾರ್ಡೇ ಬೀಸಣಿಗೆಯಾಗಿದೆ. ಗುಂಡಿ ತೆರೆದಂಗಿ, ಹಣೆಮೇಲೆ ಮೂಡಿದ ಬೆಮರ್ಮಣಿಗಳು, ಆಗಾಗ ಬಿಡುವ ನಿಟ್ಟುಸಿರು, ಕುಡಿದಷ್ಟೂ ಬೇಕೆನಿಸುವ ತಣ್ಣನೆ ನೀರು, ಹಾಗೇ ಕತ್ತೆತ್ತಿ ನೋಡಿದರೆ ಇನ್ನೂ ಮೇ ತಿಂಗಳನ್ನೇ ಮೇಲ್ಮೈಯಾಗಿಸಿಕೊಂಡಿರುವ ಕ್ಯಾಲೆಂಡರು. ಎಲ್ಲೋ ಋತುರಾಜನಿಗೆ ಕರುಣೆ ಬಂದು ತಣ್ಣನೆಯದೊಂದು ಗಾಳಿ ಬೀಸಿದರೆ ಆ ಕ್ಯಾಲೆಂಡರಿನ ಪುಟಗಳು ಪಟಪಟನೆ ಬಡಿದುಕೊಂಡು ಕೆಳಗಿರುವ ಜೂನು ಹಣುಕಿ ನೋಡಿ ‘ಹೇ ಬಂದೆ, ಮುಂದೆ ನನ್ನದೇ ರಾಜ್ಯಭಾರ’ ಅನ್ನುತ್ತದೆ.

ಜೂನಿನ ಬಗ್ಗೆ ಅದೆಂಥದೋ ಮಮಕಾರ. ಮಳೆಮಾಸವೆಂಬ ಮುದ್ದು. ನೋಡಿ ನೋಡಿ ಬೇಸತ್ತಿದ್ದ ಮೇಯ ಪುಟವನ್ನು ತಿರುಗಿಸಿದ್ದೇ ಮ್ಯಾಜಿಕ್ಕಿನಂತೆ ಮಳೆಗಾಲ ಶುರುವಾಗಿಬಿಡುತ್ತದೇನೋ ಎಂಬ ಭ್ರಮೆ.  ಜೂನ್ ಪುಟದ ತಾರೀಖಿನ ಅಂಕಿಗಳಿಗೆ ಬೇರೆಯದೇ ಬಣ್ಣ, ಬೇರೆಯದೇ ಶೈಲಿ, ಬೇರೆಯದೇ ಒನಪಿದ್ದಂತೆ ಭಾಸ.  ಚಾತಕ ಪಕ್ಷಿಯ ತೆರೆದ ಕೊಕ್ಕಿನೊಳಗೆ ಬಿದ್ದ ಮಳೆಹನಿ, ಬಾಯಿಯನ್ನು ಒದ್ದೆ ಮಾಡಿ, ಗಂಟಲಿನೊಳಗೆ ತಣ್ಣಗೆ ಇಳಿದು, ಹೊಟ್ಟೆ ಸೇರಿ, ಅಲ್ಲಿದ್ದ ಕಾಳು-ಹುಳ-ಹಪ್ಪಟೆಗಳನ್ನು ತೇಲಿಸಿದಂತೆ ಕಲ್ಪನೆ. ಸೋನೆಯಿಂದ ಶುರುವಾಗುವುದು ಜೂನು. ಬಾನು ಮುಂಗಾರು ಮೋಡಗಳಿಂದಾವೃತವಾದಾಗಲೇ ಬರುವುದು ಜೂನು.

ಜೂನಿನ ಚೌಕ ದಿನಗಳಲ್ಲಿ ನಡೆಯುತ್ತ ಹೋದಂತೆ ಮಳೆ ಜಾಸ್ತಿಯಾಗುತ್ತ ಹೋಗುತ್ತದೆ. ನಾಗಂದಿಗೆಯಲ್ಲಿದ್ದ ಛತ್ರಿಯನ್ನಿಳಿಸಿ, ಹೊರಬಂದು ಬಿಚ್ಚಿದರೆ ಇಡೀ ಆಕಾಶವೇ ಕಪ್ಪಾಗಿದೆ. ಛತ್ರಿಯ ದಿಗಂತಗಳು ಕೈಗೆಟುಕುವಂತಿವೆ. ಬಣ್ಣದ ಛತ್ರಿಯಲ್ಲಂತೂ ಕಾಮನಬಿಲ್ಲೇ ಇದೆ. ಮಡಿಚಿಟ್ಟಿದ್ದ ರೈನ್‌ಕೋಟುಗಳ ನೆರಿಗೆ ಮುರಿಯುವ ಹೊತ್ತು ಇದು. ಬಿಳಿಹುಲ್ಲಿನ ಗೊಣಬೆಗೆ ನೀಲಿ ಟಾರ್ಪಲಿನಂಗಿ. ಗದ್ದೆ ಬದುವಿನಲ್ಲಿ ಸಾಲಾಗಿ ನಡೆಯುತ್ತಿರುವ ಕಂಬಳಿಕೊಪ್ಪೆ ಹೊದ್ದ ರೈತರನ್ನು ಪಕ್ಕನೆ ನೋಡಿದರೆ ಕಪ್ಪು ದೇವರ ಮೂರುತಿಗಳೆಲ್ಲ ಒಟ್ಟಿಗೆ ಎಲ್ಲಿಗೋ ಹೊರಟಂತೆ ಕಾಣಿಸುತ್ತದೆ.

ಕೆರೆಗಳಿಗೆ ಹೊಸನೀರು ಬಂದಿದೆ. ಈಗಷ್ಟೆ ದೊಗರಿನಿಂದ ಹೊರಬಂದು ಈಜಿನಭ್ಯಾಸ ಶುರುಮಾಡಿರುವ ಮರಿಮೀನುಗಳ ಬಾಯೊಳಗೆ ಕೆಸರುನೀರು ಹೋಗಿ ವಾಕರಿಕೆ ಬಂದಿದೆ. ಕಪ್ಪೆಗಳಿಗಿದು ಸಂತಾನೋತ್ಪತ್ತಿಯ ಕಾಲ. ಬಸುರಿ ಕಪ್ಪೆಗೆ ನೀಲಿಹುಳ ತಿನ್ನುವ ಬಯಕೆ. ಹಡೆದ ಕಂದಗಳ ಹಾರಾಟ ಕಂಡು ಅದು ಉದುರಿಸಿದ ಆನಂದಭಾಷ್ಪಕ್ಕೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಹೆಚ್ಚಿದೆ. ತೋಟದ ಹೊಟ್ಟುಗೆರೆಯಲ್ಲಿ ಜವಳಾಗಿದೆ. ಬಾವಿಗೆ ಬಂದ ಹೊಸ ನೀರು ಕೆಂಪಾಗಿದೆ.  ಅಷ್ಟುದ್ದ ಹಗ್ಗವನ್ನು ಕೆಳಗಿಳಿಸಲು ನೂರು ಸುತ್ತು ತಿರುಗಬೇಕಿದ್ದ ಗಡಗಡೆ ಇನ್ನು ಹತ್ತು ಸುತ್ತು ತಿರುಗಿದರೆ ಸಾಕಪ್ಪಾ ಅಂತ ಖುಷಿಯಾಗಿದೆ. ಮಲಗಿದಲ್ಲೇ ಮಲಗಿ ಬೇಸರವಾಗಿದ್ದ ಕಾರಿನ ವೈಪರುಗಳು ಕೆಲಸ ಸಿಕ್ಕ ಭರದಲ್ಲಿ ಗಾಜನ್ನು ವೇಗವಾಗಿ ಒರೆಸುತ್ತಿವೆ. ನಗರದ ಗುಂಡಿಬಿದ್ದ ರಸ್ತೆಯಲ್ಲಿ ದೊಡ್ಡ ಮೊಸಳೆಯೇ ಪ್ರತ್ಯಕ್ಷವಾಗಿ ಸರ್ಕಾರಕ್ಕೆ ಎಚ್ಚರಾಗಿದೆ. ಡಾಂಬರು ಸವರಿದ ಸಣ್ಣ ಜಲ್ಲಿಕಲ್ಲುಗಳಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

ಶಾಲೆಗಳು ಶುರುವಾಗಿವೆ. ಎಷ್ಟೊಂದು ಅಪ್ಪ-ಅಮ್ಮರ ಕನಸುಗಳು ಪುಟ್ಟ ಛತ್ರಿ ಹಿಡಿದೋ, ರೈನ್‌ಕೋಟು ತೊಟ್ಟೋ ಶಾಲೆಯತ್ತ ನಡೆದಿವೆ. ಪಾಟಿಚೀಲದೊಳಗಿನ ಸಣ್ಣ ಡಬ್ಬಿಯಲ್ಲಿನ ಚಪಾತಿ ಚೂರುಗಳಲ್ಲಿ ಕಾವಲಿ ಮೇಲಿನ ಬಿಸಿಯಲ್ಲದೇ ನಾದಿದ ಕೈಯ ಬಿಸುಪೂ ಸೇರಿಕೊಂಡಿದೆ. ಮಕ್ಕಳಷ್ಟೇ ಅಲ್ಲ, ಮೇಷ್ಟ್ರುಗಳೂ ಸ್ವೆಟರ್ ತೊಟ್ಟು ಬಂದಿದ್ದಾರೆ. ಕಪ್ಪುಹಲಗೆಯ ಮೇಲೆ ಚಾಕ್‍ಪೀಸ್ ಮೂಡಿಸುತ್ತಿರುವ ಚೀಂವ್‌ಚೀಂವ್ ಸದ್ದನ್ನು ವರ್ಷಧಾರೆಯ ಸದ್ದು ನುಂಗಿದೆ. ಜಾರುವ ನೆಲದಲ್ಲಿ ಜೂಟ್-ಮುಟ್ಟಾಟ ಆಡುವಾಗ ಬಿದ್ದು ಮಂಡಿ ತರಚಿಕೊಂಡ ಹುಡುಗನಿಗೆ ಟಿಂಚರ್ ಹಚ್ಚಲಾಗುತ್ತಿದೆ. ಆತನ ಅಳುವನ್ನು ಇಡೀ ಕ್ಲಾಸು ಕಾರಿಡಾರಿನಲ್ಲಿ ನಿಂತು ಯೂನಿಫಾರ್ಮಿನಲ್ಲಿ ನೋಡುತ್ತಿದೆ.

ಮಳೆಗಾಲದೊಂದಿಗೇ ಪಾಪಿ ಆಶಾಢವೂ ಬಂದಿದೆ. ಹೆಂಡತಿಯ ಜೊತೆ ಬೆಚ್ಚನೆ ಸಮಯವನ್ನು ಕಳೆಯುವ ಕನಸು ಕಾಣುತ್ತಿದ್ದ ನವವಿವಾಹಿತನಿಗೆ ಆಶಾಭಂಗವಾಗಿದೆ. ಒಂದೇ ಕೊಡೆಯಲ್ಲಿ ಹೆಂಡತಿಯನ್ನು ಬಸ್‌ಸ್ಟಾಂಡಿನವರೆಗೆ ಬಿಟ್ಟುಬರಲು ಹೋದವ ‘ಈಗಿನ ಕಾಲದಲ್ಲಿ ಈ ಆಶಾಢ-ಗೀಶಾಢ ಎಲ್ಲಾ ಏನೂ ಇಲ್ಲ ಕಣೇ. ಒಂದೆರ್ಡು ದಿನ ಅಮ್ಮನ ಮನೇಲಿ ಇದ್ದಂಗೆ ಮಾಡಿ ಏನಾದ್ರೂ ನೆಪ ಹೇಳಿ ವಾಪಾಸ್ ಬಂದ್ಬಿಡು’ ಅಂತ ಕಿವಿಯಲ್ಲಿ ಹೇಳಿದ್ದಾನೆ. ಹೆಂಡತಿ ಆ ಕ್ಷಣಕ್ಕೆ ತಲೆಯಾಡಿಸಿದರೂ ತವರಿನ ಬಸ್ಸು ಹತ್ತುವಾಗ ಹುಸಿನಗೆ ನಕ್ಕದ್ದು ಕಂಡಕ್ಟರಿಗೆ ಮಾತ್ರ ಕಂಡಿದೆ. ಮನೆಗೆ ಬಂದ ಪುಣ್ಯಾತ್ಮ ಎರಡು ದಿನ ಕಳೆದು, ಒಂದು ವಾರ ಕಳೆದರೂ ಹೆಂಡತಿಯ ಪತ್ತೆಯಿಲ್ಲದೇ ಕಂಗೆಟ್ಟಿದ್ದಾನೆ. ಫೋನು ಮಾಡಿ ಮಾತಾಡೋಣ ಎಂದರೆ ಮೊಬೈಲು ತಾಕುತ್ತಿಲ್ಲ.  ಗಾಳಿಮಳೆಗೆ ಎಲ್ಲೋ ಮರ ಬಿದ್ದು ಲ್ಯಾಂಡ್‌ಲೈನು ಸತ್ತುಹೋಗಿದೆ. ಸಣ್ಣಗೆ ಪ್ರತೀಕಾರದ ಸಂಚು ಹೂಡಿದ್ದಾನೆ: ‘ಅವಳು ಇಲ್ದೇ ಇದ್ರೆ ಏನು, ನಾನೇ ಇವತ್ತು ಮಜಾ ಹೊಡ್ದು ಉಡಾಯಿಸ್ತೀನಿ’ ಅಂತ ಮನಸಲ್ಲೇ ಅಂದುಕೊಂಡು, ಮಾರ್ಕೆಟ್ಟಿಗೆ ಹೋಗಿ, ಕಡಲೆಹಿಟ್ಟು-ಮೆಣಸಿನಕಾಯಿಗಳನ್ನೆಲ್ಲ ತಂದು, ಮೈಕೈಯನ್ನೆಲ್ಲಾ ಹಿಟ್ಟು ಮಾಡಿಕೊಳ್ಳುತ್ತಾ ಕಲಸಿ, ಭರ್ಜರಿ ಬಜ್ಜಿ-ಬೋಂಡಗಳನ್ನು ಕರಿದು, ಅಕ್ಕ-ಪಕ್ಕದ ಮನೆಯ ಹುಡುಗರನ್ನೂ ಕರೆದು ತಿನ್ನಿಸಿ, ತಾನೂ ತಿಂದು ಸಂಭ್ರಮಿಸಿದ್ದಾನೆ. ‘ಏನೂ, ಹೆಂಡತಿ ಊರಿಗೆ ಹೋದ್ಲು ಅಂತ ಪಾರ್ಟೀನಾ?’ ಅಂತ ಕೇಳಿದ ಪಕ್ಕದ ಮನೆಯ ಹಿರಿಯರಿಗೆ ‘ಹೆಹೆ.. ಹಂಗೇನಿಲ್ಲಾ.. ಹಿಂಗೇ, ಸುಮ್ನೇ’ ಅಂತಂದು ಜಾರಿಕೊಂಡಿದ್ದಾನೆ. ವಾಪಸು ಬಂದ ಹೆಂಡತಿಗೆ ತನ್ನ ಸಾಹಸವನ್ನೆಲ್ಲ ಹೇಳಿ ಹೇಗೆ ಉರಿಸಬಹುದು ಅಂತ ನೆನೆದುಕೊಂಡು, ಮಿರ್ಚಿಯ ಖಾರಕ್ಕೆ ಬಾಯಿ ಸೆಳೆದಿದ್ದಾನೆ.

ಶಾಲೆ, ಮಳೆ, ಆಶಾಢವಷ್ಟೇ ಅಲ್ಲ, ರಂಜಾನ್ ಮಾಸ ಸಹ ಬಂದಿದೆ ಜೂನಿನೊಂದಿಗೆ. ಮಳೆಗಾಲದಲ್ಲಿ ಏಕೋ ಹಸಿವೂ ಸ್ವಲ್ಪ ಜಾಸ್ತಿ. ಉಪವಾಸ ಆಚರಿಸುತ್ತಿರುವವರು ಸಂಜೆಯ ಹೊತ್ತಿಗೆ ಇಫ್ತಾರಿಗಾಗಿ ಕಾಯುತ್ತಿದ್ದಾರೆ. ರಂಜಾನ್ ಮಾಸದ ಇಫ್ತಾರ್ ಭೋಜನಕ್ಕಾಗಿಯೇ ತೆರೆದಿರುವ ವಿಶೇಷ ಖಾದ್ಯದಂಗಡಿ-ಹೋಟೆಲುಗಳು ಘಮಘಮಿಸುತ್ತ ಹಸಿದವರನ್ನು ಸ್ವಾಗತಿಸಿವೆ. ತೂಗುಬಿಟ್ಟ ನೂರು ಕ್ಯಾಂಡಲ್ ಬಲ್ಬಿನ ಸಾಲುಸಾಲು ತಿಂಡಿಯಂಗಡಿಗಳು ಚಳಿರಾತ್ರಿಗೆ ವಿಚಿತ್ರ ಮಾದಕತೆಯನ್ನೇ ತಂದಿವೆ. ತಡರಾತ್ರಿಯವರೆಗೆ ನಡೆಯುವ ಈ ಬಗೆಬಗೆಯ ತಿನಿಸುಗಳ-ಮಾಂಸದಡುಗೆಗಳ ಮೇಳ ಮಳೆಗಾಲದ ಜಾತ್ರೆಯಂತೆ ಆಕರ್ಷಕವಾಗಿದೆ.

ಜೂನು ಪ್ರವರ್ಧಮಾನಕ್ಕೆ ಬರವಷ್ಟರಲ್ಲಿ ಮಳೆಯೂ ಪ್ರಬಲವಾಗಿದೆ. ರಾತ್ರಿಯಿಡೀ ಸುರಿವ ಮಳೆ ನೋಡುತ್ತಾ ಕೂಗೀಕೂಗೀ ಜೀರುಂಡೆಗೆ ಗಂಟಲುನೋವು ಬಂದಿದೆ. ಕೋಡಿಯಲ್ಲೀಗ ಪ್ರವಾಹದೋಪಾದಿಯಲ್ಲಿ ನೀರು ಹರಿಯುತ್ತಿದೆ. ಬಾವಿಯ ನೀರು ಕೈಗೆ ಸಿಗುವಷ್ಟು ಮೇಲೆ ಬಂದಿದೆ. ಕರೆಂಟು ಹೋಗಿ ಮೂರು ದಿನವಾಗಿದೆ. ಜಲಪಾತಗಳು ಭೋರ್ಗರೆಯುತ್ತಿವೆ. ಅಂಗಳದ ತುಂಬ ಚುಪುರು ಕಳೆ ಬೆಳೆದು ಎಲ್ಲೆಲ್ಲೂ ಹಸಿರೇ ಕಾಣುತ್ತಿದೆ. ‘ಈ ಸೀಸನ್ನಿನ ಲಾಸ್ಟ್ ಟೈಮು’ ಅಂದುಕೊಂಡು ತಂದ ಮಾವಿನಹಣ್ಣಿನಲ್ಲಿ ಹುಳುಗಳು ಸಿಕ್ಕಿವೆ.  ಪಕ್ಕದ ಮನೆಯ ಬಚ್ಚಲೊಲೆಯಿಂದ ಹಲಸಿನ ಬೀಜ ಸುಟ್ಟ ವಾಸನೆ ಬರುತ್ತಿದೆ.

ನಗರದಲ್ಲಿ ಟಿಕಾಣಿ ಹೂಡಿರುವ ಯಕ್ಷಗಾನ ಮೇಳದ ಕಲಾವಿದರು ಆಟ ಮುಗಿದ ಜಾವ ನ್ಯೂಸ್‌ಪೇಪರ್ ಓದಿ ಮಲಗಿದ್ದಾರೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಆದ ಅವಾಂತರ, ಮರ ಬಿದ್ದು ಆದ ತೊಂದರೆಗಳ ಸುದ್ದಿ ಅವರಿಗೆ ಊರ ನೆನಪು ತಂದು ಕಳವಳವಾಗಿದೆ. ರಸ್ತೆಗಳಲ್ಲಿ ನಿಂತ ನೀರು ಆರುವಷ್ಟರಲ್ಲಿ ಮತ್ತೆ ಮಳೆ ಬಂದಿದೆ. ಫ್ಲೈ‌ಓವರಿನ ಕಟಾಂಜನಕ್ಕೆ ಅಂಟಿನಿಂತಿದ್ದ, ಎಂಥಾ ಭಾರೀ ಲಾರಿ ಹಾಯ್ದರೂ ಜಗ್ಗದ ಮಳೆನೀರಹನಿಗಳು, ಸುಂದರ ಹುಡುಗಿಯ ಸ್ಕೂಟಿ ಸಾಗಿದ್ದೇ ಸಳಸಳನೆ ಉದುರಿವೆ. ಹಾಗೆ ಉದುರಿದ ಹನಿಗಳು ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೈಮೇಲೆ ಬಿದ್ದು, ಅವನಿಗೆ ಪುಳಕವಾಗಿ ಕತ್ತೆತ್ತಿ ಮೇಲೆ ನೋಡಿದರೆ, ಓಡುತ್ತಿರುವ ಪಿಂಕ್ ಸ್ಕೂಟಿಯ ಹುಡುಗಿಯ ಹಾರುತ್ತಿರುವ ವೇಲು ಹಾಯ್ ಎಂದಿದೆ.

ಮಾಗುತ್ತಿರುವ ಜೂನಿನೊಂದಿಗೆ ಮಳೆಗಾಲಕ್ಕೂ ಜನ ಹೊಂದಿಕೊಂಡಿದ್ದಾರೆ. ಗದ್ದೆಗಳಲ್ಲಿ ಚಟುವಟಿಕೆ ಜೋರಾಗಿದೆ. ತೋಟದ ಕಾದಿಗೆಗಳಲ್ಲಿ ನೀರು ಸರಿಯಾಗಿಯೇ ನಿಂತಿದೆ. ಅಡಿಕೆ ಮರಗಳಿಗೆ ಬಂದ ಕೊಳೆರೋಗಕ್ಕೆ ಔಷಧಿ ಹೊಡೆಸಲು ತಯಾರಿ ನಡೆದಿದೆ. ಒಂದು ದಿನ ಹೊಳವು ಕೊಟ್ಟರೆ ಸಾಕು, ಸ್ಲಾಬ್ ಹಾಕಿ ಮುಗಿಸಬಹುದಿತ್ತು ಅಂತ ಮೇಸ್ತ್ರಿಗಳು ಅರ್ಧ ಕಟ್ಟಿದ ಮನೆಯ ಹೊರಗೆ ನಿಂತು ಮಾತಾಡಿಕೊಳ್ಳುತ್ತಿದ್ದಾರೆ. ಮರದಡಿಯಲಿ ನಿಂತ ಪ್ರೇಮಿ ತನ್ನ ಹುಡುಗಿಗೆ ಜರ್ಕಿನ್ ತೊಡಿಸಿ ತಾನು ತೋಯುತ್ತಲೇ ಉಳಿದು ಸಿನೆಮಾ ಹೀರೋ ಥರ ಮಿಂಚಿದ್ದಾನೆ.

ಜೂನ್ ತಿಂಗಳು ಮುಗಿಯಲು ಬಂದಿದೆ. ತನ್ನ ಕೊಡಪಾನದಲ್ಲಿದ್ದ ಚೂರುಪಾರು ನೀರನ್ನೆಲ್ಲ ಅದು ಈಗ ಕೊಡವಿ ಕೊಡವಿ ಚೆಲ್ಲುತ್ತಿದೆ. ಜುಲಾಯಿ ತನ್ನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಮಳೆಗಾಲದ ಮಾಂತ್ರಿಕ ಕೋಲನ್ನು ಕೈಯಲ್ಲಿ ಹಿಡಿದು ರಿಲೇ ಓಡುತ್ತಿರುವ ಜೂನು ಅಗೋ ಅಲ್ಲಿ ನಿಂತು ತನ್ನನ್ನೇ ಕಾಯುತ್ತಿರುವ ಜುಲಾಯಿಗೆ ಅದನ್ನು ವರ್ಗಾಯಿಸಿ ಜವಾಬ್ದಾರಿ ಕಳೆದುಕೊಳ್ಳುವ ತವಕದಲ್ಲಿದೆ. ಕ್ಯಾಲೆಂಡರಿನ ಹಾಳೆಗಳು ಮತ್ತೆ ಪಟಪಟನೆ ಹಾರುತ್ತಿವೆ. ಜುಲಾಯಿ ನಿಂತಲ್ಲೇ ಚಡಪಡಿಸುತ್ತ ಜೂನು ತರುವ ಮಳೆಗಾಲದ ಮಂತ್ರದಂಡಕ್ಕಾಗಿ ಕಾಯುತ್ತಿದೆ.


[ಈ ಲಹರಿಯು, ಒಂದಷ್ಟು ಬದಲಾವಣೆಗಳೊಂದಿಗೆ, 28.06.2015ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಗೊಂಡಿದೆ.]

Monday, April 13, 2015

ಮೇಲುಕೋಟೆಯಲ್ಲಿ...

ಮೇಲುಕೋಟೆಯ ದಾರಿಯಿಕ್ಕೆಲದಲ್ಲಿ ಉಸಿರು ಬೀರುವ ಹಸಿರ ಹೊಲ
ಕಲ್ಲಕಮಾನು ಸ್ವಾಗತಕ್ಕೆ, ಬಿರಿಬಿಡದ ಗಟ್ಟಿಯೊಣನೆಲ ಕೆಂಪಗೆ ಆಕಾಶ ನೋಡುತ್ತ.
ಟವೆಲು ಸುತ್ತಿದ ಮುದುಕ ಕಟ್ಟೆ ಮೇಲೆ, ಹೂಬುಟ್ಟಿಯಜ್ಜಿ ದಾರಿಬದಿಗೆ
ಮರದ ತೇರಿನ ಗಾಲಿಗೆ ವರಲೆ ಹುಳುಗಳ ಮುತ್ತಿಗೆ
ಒಡೆದ ತೆಂಗಿನ ಚಿಪ್ಪಿನೊಡಕು ಗರುಡಗಂಬದ ನೆತ್ತಿ ಮೇಲಿನ ಹಸಿದ ಹೊಟ್ಟೆಯ ಕಾಗೆಗೆ
ತಳ್ಳುಗಾಡಿಯ ಗಾಜುಕವಚದ ಹಿಂದೆ ದೊನ್ನೆಕಲಶದ ಗೋಪುರ
ಚೆಲುವನಾರಾಯಣನ ಕತ್ತಲ ಮೂರುತಿಗೆ ಪುಳಿಯೊಗರೆ ಪರಿಮಳದಭಿಷೇಕ

ಸದ್ದಿಲ್ಲದೆ ಬಂದ ನಲ್ಲಿನೀರು ಸಿಂಕಿನಲ್ಲಿದ್ದ ಪಾತ್ರೆಯನ್ನೆಲ್ಲ ತಾನೇ ತೊಳೆದಂತೆ,
ಮೇಲುಕೋಟೆಯಲ್ಲಿದ್ದಾಗ ಮಳೆ ಬರಬೇಕು ಅಂತೊಂದು ಅವ್ಯಕ್ತ ಆಸೆ..
ಅಲ್ಲಲ್ಲಿ ಎದ್ದ ಧೂಳನ್ನೆಲ್ಲ ತೆಪ್ಪಗಾಗಿಸಿ ಕರಗಿಸಿ ಹರಿವ ಕೆಂಪು ನೀರು
ಬಂಡೆಗಳ ಮೇಲೆ ಚಿತ್ರ ಬಿಡಿಸುವುದು. ಕಿವಿರುಗಳಿಗೆ ತಾಕಿದ ಹೊಸನೀರಿಗೆ
ಕಲ್ಯಾಣಿಯಲ್ಲಿನ ಮೀನು ಪುಳಕಗೊಳ್ವುದು. ಸೂರಂಚಿನ ದೋಣಿಗೆ ಬೊಗಸೆಯೊಡ್ಡಿ ನಿಂತ
ಹುಡುಗನ ಕೈ ದಣಿಯುವುದು, ಸಂಜೆಬೆಳಕಲ್ಲೂ ಚಳ್ಳನೆ ಹೊಳೆದ ಕೋಲ್ಮಿಂಚಿಗೆ
ಮೈ ನಡುಗುವುದು.  ತೋಯುತ್ತಲೇ ನಡೆಯುತ್ತಿರುವ
ಬೈರಾಗಿಗಳ ಕಮಂಡಲದೊಳಗಿನ ತೀರ್ಥದ ಮಟ್ಟ ಹೆಚ್ಚುವುದು.

ಟೆರಕೋಟಾ ಒಡವೆ ಧರಿಸಿದ ಹುಡುಗಿ ಈ ಮಳೆಯಲ್ಲಿ ನೆನೆಯುವುದಿಲ್ಲ.
ಕಿವಿಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಂಡವಳು ಕಲ್ಲ ಮಂಟಪದತ್ತ ಓಡುವಳು.
ತಾರಸಿಯ ಚಿತ್ತಾರದಿಂದೊಸರುವ ನೀರು, ಅಡ್ಡಗಾಳಿಗೆ ಸಿಕ್ಕು ತನ್ನತ್ತಲೇ ಧಾವಿಸುವ
ತುಂತುರುಗಳಿಗೂ ಆಕೆ ಹೆದರುವಳು. ಚೂರೇ ಎತ್ತಿದ ಚೂಡಿಯ ತುದಿಗೆ ತಾಕಿದ ಕೆಸರನ್ನಾಕೆ
ಈಗ ತೊಳೆದು ಸ್ವಚ್ಛಗೊಳಿಸಳು.  ಸರಕ್ಕನೆ ಮಂಟಪ ಹೊಕ್ಕ ಬಿಳಿ ಹಕ್ಕಿ
ರೆಕ್ಕೆ ಕೊಡವದಿರಲೆಂದು ಪ್ರಾರ್ಥಿಸುವಳು.

ನಗರದವರೆಗೂ ಚಾಚಿದೆ ಮೇಲುಕೋಟೆಯುಟ್ಟ ಸೀರೆಯ ಸೆರಗಿನಂಥ
ಕಪ್ಪು ಟಾರು ರಸ್ತೆ.  ಗಾಳಿಗೆ ಅಡ್ಡಬಿದ್ದ ದೊಡ್ಡ ಮರದಿಂದ ದಾರಿಯಲ್ಲಿ ಸಿಲುಕಿರುವ
ಚುಪುರು ಗಡ್ಡದ ಹುಡುಗ ನಿಂತಲ್ಲೇ ಚಡಪಡಿಸುತ್ತಿದ್ದಾನೆ.
ಆ ಮರದ ಬಾಗುಕೊಂಬೆಯಲ್ಲಿದ್ದ ಗೂಡೂ ಕಳಚಿಬಿದ್ದು ಮೊಟ್ಟೆಗಳೊಡೆದಿವೆ.
ಇಳಿಯುತ್ತಿರುವ ಕತ್ತಲೆಯ ನೋಡುತ್ತ ಕಲ್ಲುಮಂಟಪದಡಿ ನಿಂತಿರುವ ಹುಡುಗಿಯ
ಬೆದರುಗಣ್ಣುಗಳು ಬಿಳಿಹಕ್ಕಿಗೆ ತನ್ನ ಮೊಟ್ಟೆಗಳಂತೆ ಕಾಣುತ್ತಿವೆ.
ಕವಿಮನೆಯೊಳಗಿನ ಅಲಮಾರಿನಲ್ಲಿ ಜೋಡಿಸಿಟ್ಟ ಪುಸ್ತಕದಲ್ಲಿನ ಕವಿತೆಯೊಂದು
ಪಿಸುಗುಡುತ್ತಿದೆ: ಇಂದಿನೀ ಮಳೆ ಕಮ್ಮಿಯಾಗಲಿ, ಹನಿ ಕಡಿಯಲಿ.

Wednesday, April 01, 2015

ಮೊಗ್ಗಿನ ಜಡೆಯ ಫೋಟೋ

ಫೋಟೋಗ್ರಾಫರ್ ಆಗಬೇಕು ಅಂತ ನಾನು ಕನಸು ಕಂಡಿರಲಿಲ್ಲವಾದರೂ ಕನಿಷ್ಟ ಒಂದು ಕ್ಯಾಮರಾ ನನ್ನ ಬಳಿ ಇರಬೇಕು ಅಂತ ಅಂದುಕೊಂಡಿದ್ದು ಸುಳ್ಳಲ್ಲ.  ಮದುವೆ-ಉಪನಯನಗಳಂತಹ ಶುಭ ಕಾರ್ಯಗಳಲ್ಲೋ, ಸಭೆ-ಸಮಾರಂಭಗಳಲ್ಲೋ ಅಥವಾ ನಮ್ಮ ಶಾಲೆಯ ವಾರ್ಷಿಕೋತ್ಸವಗಳಲ್ಲೋ ಹಾಜರಿರುತ್ತಿದ್ದ ಕ್ಯಾಮರಾಮನ್‌ಗಳ ಸುತ್ತ ನಾವು ಹುಡುಗರ ದಂಡೇ ಇರುತ್ತಿತ್ತು.  ಊರಲ್ಲಿ ಯಾರ ಕೈಯಲ್ಲಾದರೂ ಕ್ಯಾಮರಾ ಇರುವುದು ಕಂಡರೆ ನಾನು ಅವರ ಹಿಂದೆಯೇ ಸುತ್ತುತ್ತಿರುತ್ತಿದ್ದೆ.  ಈ ಕ್ಯಾಮರಾ ಹಿಡಿದವರೆಲ್ಲ ನನಗೆ ನಿಜಕ್ಕೂ ಜಾದೂಗಾರರಂತೆಯೇ ಕಾಣುತ್ತಿದ್ದರು. ಅವರ ಕೊರಳಲ್ಲಿ ನೇತಾಡುವ ಕಪ್ಪು ಬಣ್ಣದ ಕ್ಯಾಮರಾ, ಕೊಕ್ಕರೆಯ ತಲೆಯಂತೆ ಮೇಲೆ ಹೋಗಿ ಬಾಗಿದ್ದ ದೊಡ್ಡ ಫ್ಲಾಶು, ಕಿಸೆಯಿಂದಲೋ ಅಥವಾ ಹೆಗಲ ಚೀಲದಿಂದಲೋ ಅವರು ಆಗಾಗ ತೆಗೆದು ಬದಲಾಯಿಸುತ್ತಿದ್ದ ರೋಲುಗಳು, ಹಾಂಗೆ ಚೂರು ಬಗ್ಗಿ ಒಂದೇ ಕಣ್ಣಲ್ಲಿ ಕ್ಯಾಮರಾ ಮೂಲಕ ಅವರು ನಮ್ಮನ್ನೇ ನೋಡುತ್ತಿದ್ದ ರೀತಿ, ‘ಇದೇ, ಇಲ್ನೋಡಿ, ರೆಡೀ, ಸ್ಮೈಲ್’ ಎಂದು ಹೇಳಿ ಎಂಥಾ ನಗದವರನ್ನೂ ನಗಿಸುತ್ತಿದ್ದ ಅವರ ಪರಿ, ‘ಕ್ಲಿಕ್’ ಎಂಬ ಸದ್ದಿನೊಂದಿಗೆ ಮಿಂಚು ಹೊರಡಿಸುವ ಅವರ ಕ್ಯಾಮರಾ, ಆಮೇಲೆ ವಾರವೋ ತಿಂಗಳೋ ಆದಮೇಲೆ ಅವರು ತಂದು ಕೊಡುತ್ತಿದ್ದ ಫೋಟೋಗಳು, ಫ್ಲಾಶಿನ ಬೆಳಕು ನೋಡಲಾಗದೆ ಕಣ್ಮುಚ್ಚಿದ ಅಥವಾ ಅಗತ್ಯಕ್ಕಿಂತ ಜಾಸ್ತಿ ನಕ್ಕ ಅಥವಾ ವಿಚಿತ್ರ ಗಾಂಭೀರ್ಯದ-ಗಂಟು ಮೋರೆಯ ನಮ್ಮ ಪೆದ್ದು ಪೋಸನ್ನು ಹಾಗ್ಹಾಗೇ ಸೆರೆಹಿಡಿದಿರುತ್ತಿದ್ದ ಆ ಫೋಟೋಗಳು... ಇವೆಲ್ಲ ಯಾರ ಮನಸನ್ನು ತಾನೇ ಸೆಳೆಯದಿರಲು ಸಾಧ್ಯ? ಆ ಫೋಟೋಗ್ರಾಫರಿನ, ಆ ಕಪ್ಪು ಕ್ಯಾಮರಾದ, ಆ ಕನಸಿನ ಮೋಡಿ ಅದೆಷ್ಟು ಗಾಢವಾಗಿತ್ತೆಂದರೆ, ನಾನು ಪೇಪರಿನಲ್ಲಿಯೇ ಕ್ಯಾಮರಾ ಮಾಡಿ, ‘ಕ್ಲಿಕ್’ ‘ಕ್ಲಿಕ್’ ಎಂದು ಬಾಯಲ್ಲಿ ಸದ್ದು ಮಾಡುತ್ತ ಅಪ್ಪ, ಅಮ್ಮ, ಅಜ್ಜಿಯರೆಲ್ಲರ ಫೋಟೋಗಳನ್ನೆಲ್ಲ ಆ ಕಾಲದಲ್ಲೇ ತೆಗೆದಿದ್ದೆ. ತೊಳೆದು ಪ್ರಿಂಟ್ ಹಾಕುವ ಲ್ಯಾಬ್ ಮಾತ್ರ ಈ ಜಗತ್ತಿನಲ್ಲಿರಲಿಲ್ಲ ಅಷ್ಟೇ.

ನನಗಷ್ಟೇ ಅಲ್ಲದೇ ನನ್ನ ಅಜ್ಜಿಗೂ ಫೋಟೋಗಳಿಗೆ ಪೋಸು ಕೊಡುವುದೆಂದರೆ ಬಹಳ ಆಸೆ. ಅಪ್ಪ-ಅಮ್ಮನ ಮದುವೆಯ ಅಲ್ಬಮ್ಮಿನ ಭಾಗಶಃ ಫೋಟೋಗಳಲ್ಲಿ ಆಕೆ ಅದು ಹೇಗೋ ಬಂದು ಸೇರಿಕೊಂಡಿದ್ದಾಳೆ. ಊರಲ್ಲೂ ಯಾರ ಮನೆಯಲ್ಲೇ ಶುಭಕಾರ್ಯವಾಗಿ ಫೋಟೋಗ್ರಾಫರ್ ಕರೆಸಿದರೂ ಅಜ್ಜಿ ಅಲ್ಲಿಗೆ ಧಾವಿಸುತ್ತಿದ್ದಳು. ಆ ಶುಭಕಾರ್ಯವಾಗಿ ಸ್ವಲ್ಪ ದಿನಗಳ ನಂತರ, ಅದರ ಫೋಟೋಗಳು ಪ್ರಿಂಟಾಗಿ ಬಂದಮೇಲೆ ಒಂದು ದಿನ ಊರವರನ್ನೆಲ್ಲ ಫೋಟೋ ಅಲ್ಬಮ್ ನೋಡಲೆಂದು ಸಾಮಾನ್ಯವಾಗಿ ಕರೆಯುತ್ತಿದ್ದರು. ಆಗ ತಾನು ಸುಮಾರು ಫೋಟೋಗಳಲ್ಲಿ ಕಾಣಿಸಿಕೊಂಡಿರುವುದನ್ನು ಕಂಡು ಅಜ್ಜಿ ಖುಷಿಯಾಗಿ ಬರುತ್ತಿದ್ದಳು. ‘ಅಯ್ಯೋಯೋಯೋ! ವರಮಾಲಕ್ಷ್ಮಕ್ಕಂತು ಎಲ್ಲಾ ಫೋಟೋದಗೂ ಇದ್ಲೇ!’ ಅಂತ ಯಾರಾದರೂ ಹೇಳಿದರೆ ಅಜ್ಜಿಗೆ ಇನ್ನೂ ಖುಷಿ!  ಇನ್ನು ನಾವು ಹುಡುಗರಂತೂ, ಫೋಟೋಗ್ರಾಫರ್ ಇನ್ನೇನು ಫೋಟೋ ಕ್ಲಿಕ್ ಮಾಡಬೇಕು ಎನ್ನುವಷ್ಟರಲ್ಲಿ ಹೋಗಿ ಅಡ್ಡ ನಿಂತಿರುತ್ತಿದ್ದರಿಂದ, ಬಹಳಷ್ಟು ಫೋಟೋಗಳಲ್ಲಿ ಅವಲಕ್ಷಣದಂತೆ ನಮ್ಮ ಪೆಕರ ಮೋರೆ ಇದ್ದೇ ಇರುತ್ತಿತ್ತು.

ಅಪ್ಪ ಒಮ್ಮೆ ಪಕ್ಕದೂರಿನವರೊಬ್ಬರಿಂದ ಒಂದು ಕ್ಯಾಮರಾ ಇಸಕೊಂಡು ಬಂದಿದ್ದ. ಜೇನು ಸಾಕಣೆ ಶಿಬಿರದ ಸಂಚಾಲಕನಾಗಿದ್ದ ಅಪ್ಪ, ಆಗ ತನಗೆ ವಹಿಸಿದ್ದ ಪ್ರಾಜೆಕ್ಟಿಗಾಗಿ ಕೆಲವು ಫೋಟೋಗಳನ್ನು ತೆಗೆಯುವುದಿತ್ತು. ಆ ಕ್ಯಾಮರಾ ನನ್ನ ಕೈಗೆ ಸಿಗದಂತೆ ಅಪ್ಪ ಗಾಡ್ರೇಜಿನಲ್ಲಿ ಇಟ್ಟಿದ್ದರೂ ಡಿಟೆಕ್ಟಿವ್ ಕೆಲಸ ಮಾಡಿದ ನಾನು ಅದನ್ನು ಪತ್ತೆಹಚ್ಚಿಯೇಬಿಟ್ಟೆ. ಆ ಕ್ಯಾಮರವನ್ನು ಅಪ್ಪ ಇಲ್ಲದಿದ್ದಾಗ ಹೊರಗೆ ತೆಗೆದು, ಅಮ್ಮ-ಅಜ್ಜಿಯರ ಫೋಟೋ, ಸುಮಾರಷ್ಟು ಹೂಗಳ, ದನಕರುಗಳ, ನಮ್ಮೂರ ಕೆರೆಯ, ತೋಟದ ಫೋಟೋಗಳನ್ನೆಲ್ಲ ತೆಗೆದೆ. ಬಹಳ ಹುಮ್ಮಸ್ಸಿನಿಂದ ಹಿಂದೆಮುಂದೆ ಯೋಚಿಸದೆ ಕ್ಯಾಮರಾ ಕದ್ದು ಬಳಸಿದ್ದ ನನಗೆ, ಮೂವತ್ತಾರು ಫೋಟೋಗಳ ರೋಲ್ ಮುಗಿದಮೇಲೆ ಏನು ಮಾಡಬೇಕು ಅಂತ ಹೊಳೆಯಲೇ ಇಲ್ಲ. ಅಪ್ಪನಿಗೆ ಗೊತ್ತಾಗದಂತೆ ಅದನ್ನು ಡೆವಲಪ್ ಮಾಡಿಸಲಿಕ್ಕಂತೂ ಸಾಧ್ಯವಿರಲಿಲ್ಲ. ಹಾಗಾಗಿ, ಸುಮ್ಮನೆ ಆ ರೋಲನ್ನು ರಿವೈಂಡ್ ಮಾಡಿ ಏನೂ ಆಗದವನಂತೆ ಕ್ಯಾಮರಾವನ್ನು ಮೊದಲಿದ್ದ ಜಾಗದಲ್ಲೇ ತಂದು ಇಟ್ಟುಬಿಟ್ಟೆ.  ಅಪ್ಪ ನಂತರ ಅದನ್ನು ತನ್ನ ಪ್ರಾಜೆಕ್ಟಿಗೆಂದು ಒಯ್ದು ಸುಮಾರಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಂದ. ಆಮೇಲದನ್ನು ಡೆವಲಪ್ ಮಾಡಿಸಲು ನೆಗೆಟಿವ್ ಹಾಕಿಸಿದರೆ, ಸ್ಟುಡಿಯೋದವನು ‘ಒಂದೂ ಫೋಟೋ ಸರಿ ಬಂದಿಲ್ಲ ಸರ್. ಎಲ್ಲಾ ಡಬಲ್ ಇಂಪ್ರೆಶನ್ ಬಂದಂಗಿದೆ’ ಅಂದನಂತೆ. ಅಪ್ಪನಿಗೆ ಏನಂತ ಅರ್ಥವಾಗಲಿಲ್ಲ. ಮನೆಗೆ ಬಂದವ ‘ಪ್ರಾಜೆಕ್ಟ್ ಎಲ್ಲಾ ಹಾಳಾಯಿತು, ಯಾಕೆ ಹೀಗಾಯ್ತು ಗೊತ್ತಾಗ್ತಿಲ್ಲ’ ಅಂತ ದುಸುದುಸು ಮಾಡಿದ. ನಾನು ಏನೂ ತಿಳಿಯದವನಂತೆ ಇದ್ದೆ.  ಆದರೆ ಅಮ್ಮ ಬಾಯಿಬಿಟ್ಟುಬಿಟ್ಟಳು: ‘ಅಯ್ಯೋ ಫೋಟನಾ? ಅಪ್ಪಿ ಆ ಕ್ಯಾಮರಾ ಹಿಡ್ಕಂಡು ಎಂತೋ ಆಟ ಆಡ್ತಿದಿದ್ದ ನೋಡಿ’ ಅಂತ. ಆಮೇಲೆ ಏನಾಯಿತು ಅಂತ ನಾನು ಹೇಳಬೇಕಿಲ್ಲವಲ್ಲ.

ನಮ್ಮ ಮನೆಯಲ್ಲಿ ಬಹಳ ಕಾಲದವರೆಗೂ ಎರಡು ಅಲ್ಬಮ್ಮುಗಳು ಇದ್ದವು. ಒಂದು, ‘ಅಪ್ಪ-ಅಮ್ಮನ ಮದುವೆಯ ಅಲ್ಬಮ್’.   ಇನ್ನೊಂದು, ‘ಇತ್ಯಾದಿ ಅಲ್ಬಮ್’.  ಮೊದಲನೆಯ ಅಲ್ಬಮ್ಮಿನಲ್ಲಿ ಅಪ್ಪ-ಅಮ್ಮನ ಮದುವೆಯ ಬ್ಲಾಕ್ ಅಂಡ್ ವ್ಹೈಟ್ ಫೋಟೋಗಳು. ಅದರಲ್ಲಿದ್ದ ಸುಮಾರು ಇಪ್ಪತ್ತು ಫೋಟೋಗಳಲ್ಲಿ ನಾಲ್ಕು ಮಾತ್ರ ಕಲರ್ ಫೋಟೋಗಳು. ಆಗ ಕಲರ್ ಫೋಟೋ ಪ್ರಿಂಟ್ ಹಾಕಿಸುವುದು ಭಯಂಕರ ದುಬಾರಿಯಾಗಿದ್ದರಿಂದ ನಾಲ್ಕನ್ನು ಮಾತ್ರ ಕಲರ್ ಮಾಡಿಸಿ ಇನ್ನುಳಿದದ್ದೆಲ್ಲ ಬ್ಲಾಕ್ ಅಂಡ್ ವ್ಹೈಟಿನಲ್ಲೇ ತೆಗೆಸಿದ್ದಾಗಿತ್ತಂತೆ. ಆ ಫೋಟೋಗಳಲ್ಲೆಲ್ಲ ಯವ್ವನದ ಹುರುಪಿನ ಅಪ್ಪ, ಇನ್ನೂ ಹುಡುಗಿಯಂತಿರುವ ನಾಚಿಕೆಯ ಅಮ್ಮ, ಹಾಗೂ ಇನ್ನೂ ಮಂಡೆ ಹಣ್ಣಾಗದ ಅಜ್ಜ-ಅಜ್ಜಿಯರು ಪೋಸು ಕೊಟ್ಟಿರುವರು.  ಇನ್ನು ಈ ‘ಇತ್ಯಾದಿ ಅಲ್ಬಮ್’ನಲ್ಲಿ ಹೆಚ್ಚಿಗೆ ಇರುವುದು ನನ್ನ ಫೋಟೋಗಳು. ನಾನು ಅಂಬೆಗಾಲಿಕ್ಕುವ ಪಾಪುವಾಗಿರುವ ಫೋಟೋದಿಂದ ಕಾಲೇಜಿನ ಟೂರ್ ಫೋಟೊಗಳವರೆಗೆ ಎಲ್ಲ ಒಂದೇ ಅಲ್ಬಮ್ಮಿನಲ್ಲಿ.  ಮತ್ತೆ ಅದರಲ್ಲಿ, ನಾನು ವೇಷಧಾರಿಯಾಗಿರುವ ಫೋಟೋಗಳೇ ಹೆಚ್ಚಿರುವುದು. ಶಾಲೆಯ ವಾರ್ಷಿಕೋತ್ಸವಗಳಲ್ಲಿ ಅರ್ಜುನನಾಗಿಯೋ, ಧರ್ಮರಾಯನಾಗಿಯೋ, ವೀರ ಅಭಿಮನ್ಯುವಾಗಿಯೋ, ಪರಶುರಾಮನಾಗಿಯೋ ಇರುವ ಫೋಟೋಗಳು. ಅದು ಬಿಟ್ಟರೆ ನಾನು ಗಣ್ಯ ಅತಿಥಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋಗಳು, ಶಾಲೆ-ಕಾಲೇಜುಗಳ ನನ್ನ ಬ್ಯಾಚಿನವರೊಂದಿಗಿನ ಗ್ರೂಪ್ ಫೋಟೋಗಳು. ಈ ಫೋಟೋಗಳನ್ನು ನೋಡಿದಾಗಲೆಲ್ಲ ನಾನು ಅಭಿನಯಿಸಿದ ಆ ಪಾತ್ರಗಳೂ, ಅವುಗಳ ಡೈಲಾಗುಗಳೂ ಅಥವಾ ಮಾಡಿದ ಭಾಷಣಗಳೂ ನೆನಪಿಗೆ ಬರುವವು.  ಆ ಅಲ್ಬಮ್ಮಿನ ಖಾಲಿ ಉಳಿದ ಕೊನೆಯ ಕೆಲ ಖಾನೆಗಳಲ್ಲಿ ನನ್ನ ಅತ್ತೆ-ಅತ್ತಿಗೆಯರ ಕೆಲ ಫೋಟೋಗಳೂ ಜಾಗ ಪಡೆದುಕೊಂಡಿವೆ.

ಒಂದು ಸಲ ಸರ್ಕಾರದ ಯಾವುದೋ ಯೋಜನೆಯಡಿ, ಪ್ರತಿ ಮನೆಗೂ ಶೌಚಾಲಯ ನಿರ್ಮಾಣಕ್ಕೆ ಹಣ ಕೊಡುತ್ತಾರೆ ಅಂತ ಆಯಿತು. ಗ್ರಾಮ ಪಂಚಾಯತಿ ಆಫೀಸಿನಲ್ಲಿ ಪೈಪು-ಕಮೋಡುಗಳನ್ನು ಕೊಡುತ್ತಾರೆ ಅಂತಲೂ, ಅದನ್ನು ಬಳಸಿ ನಾವು ಶೌಚಾಲಯ ಕಟ್ಟಿಸಬೇಕೆಂದೂ, ಆ ನಂತರ ಅದರದೊಂದು ಫೋಟೋ ಕೊಟ್ಟರೆ ನಿರ್ಮಾಣದ ಖರ್ಚಿನ ಲೆಕ್ಕಕ್ಕೆ ಮೂರು ಸಾವಿರ ರೂಪಾಯಿ ಕೊಡುತ್ತಾರೆಂದೂ ಆಯಿತು.  ಆದರೆ ನಮ್ಮೂರು ಅದಾಗಲೇ ಸಾಕಷ್ಟು ಮುಂದುವರೆದ ಸಾಕ್ಷರರ ಊರಾಗಿದ್ದರಿಂದ ಹೆಚ್ಚುಕಮ್ಮಿ ಎಲ್ಲರ ಮನೆಯಲ್ಲೂ ಶೌಚಾಲಯಗಳಿದ್ದವು.  ಆದರೂ ಸರ್ಕಾರದಿಂದ ಎಲ್ಲೋ ಅಪರೂಪಕ್ಕೆ ಹಣ ಬರುತ್ತದೆ ಎಂದಾಗ ಬಿಡಲಿಕ್ಕಾಗುತ್ತದೆಯೇ? ಹೀಗಾಗಿ, ಊರವರೆಲ್ಲ ಒಂದು ಪ್ಲಾನು ಮಾಡಿದರು. ಮೊದಲು ಎಲ್ಲರೂ ಪಂಚಾಯತಿಗೆ ಹೋಗಿ ಸೈನು ಮಾಡಿ ಕಮೋಡು ಎತ್ತಿಕೊಂಡು ಬರುವುದು, ನಂತರ ತಮ್ಮ ಮನೆಯಲ್ಲಿ ಅದಾಗಲೇ ಇರುವ ಶೌಚಾಲಯಕ್ಕೆ ಬಣ್ಣ ಬಳಿಸಿಯೋ, ಸ್ವಚ್ಛ ಮಾಡಿಯೋ, ಹೊಸ ಹೆಂಚು ಹೊದಿಸಿದಂತೆಯೋ ಮಾಡಿ, ಅದರ ಪಕ್ಕದಲ್ಲಿ ತಾವು ನಿಂತು ಫೋಟೋ ತೆಗೆಸಿಕೊಳ್ಳುವುದು! ಈ ಪ್ಲಾನಿಗೆ ಎಲ್ಲರೂ ಒಪ್ಪಿ, ಹಾಗೆಯೇ ಮಾಡಿ, ಒಂದು ದಿನ ಪೇಟೆಯಿಂದ ಫೋಟೋಗ್ರಾಫರ್ ಒಬ್ಬನನ್ನು ಕರೆಸಿ, ಎಲ್ಲ ಮನೆಯ ಯಜಮಾನರುಗಳು ತಮ್ಮತಮ್ಮ ಮನೆಯ ಟಾಯ್ಲೆಟ್ಟಿನ ಪಕ್ಕ ನಿಂತು ಫೋಟೋ ತೆಗೆಸಿಕೊಂಡರು. ವಾರದ ನಂತರ ಆ ಫೋಟೋಗ್ರಾಫರು ವಾಪಸು ಬಂದು ಎಲ್ಲರಿಗೂ ಆ ಫೋಟೋಗಳ ಎರಡೆರೆಡು ಪ್ರತಿ ಕೊಟ್ಟುಹೋದ. ‘ಒಂದೇ ಕಾಪಿ ಸಾಕಿತ್ತಲ್ಲಯ್ಯಾ?’ ಅಂದವರಿಗೆ, ‘ಇರ್ಲಿ ಇಟ್ಕಳಿ ಸಾರ್! ಅಪರೂಪದ ಫೋಟೋ ಇದು’ ಅಂತ ಹೇಳಿದ. ಹಾಗೆ ತೆಗೆಸಿದ ಅಪ್ಪನ ಒಂದು ಫೋಟೋ ಸಹ, ಅಪ್ಪ-ಅಮ್ಮನ ಮದುವೆಯ ಅಲ್ಬಮ್ಮಿನ ಕೊನೆಯ ಖಾನೆಗಳಲ್ಲಿ ಸೇರಿಕೊಂಡಿತು. ಮನೆಗೆ ಯಾರಾದರೂ ಹೊಸ ನೆಂಟರು ಬಂದಾಗ ಅವರಿಗೆ ಅಲ್ಬಮ್ ನೋಡಲೆಂದು ಕೊಟ್ಟರೆ, ಒಳ್ಳೆಯ ಮೂಡಿನಲ್ಲಿ ನಗುಮೊಗದಿಂದ ಫೋಟೋಗಳನ್ನು ನೋಡುತ್ತಿರುತ್ತಿದ್ದ ಅವರು, ಕೊನೆಯಲ್ಲಿ ಅಪ್ಪ ಬಕೀಟು ಹಿಡಿದು ಸಂಡಾಸಿನ ಪಕ್ಕ ನಿಂತಿರುವ ಫೋಟೋ ಕಂಡು ಕಕ್ಕಾಬಿಕ್ಕಿಯಾಗುತ್ತಿದ್ದರು.

ಕ್ಯಾಮರಾಗಳ ತಂತ್ರಜ್ಞಾನ ನಾವು ಊಹಿಸದಷ್ಟು ವೇಗದಲ್ಲಿ ಬೆಳೆಯಿತು. ರೋಲ್ ಕ್ಯಾಮರಾಗಳು ಹೋಗಿ ಡಿಜಿಟಲ್ ಕ್ಯಾಮರಾಗಳು ಬಂದವು. ಒಂದು ರೋಲಿನಲ್ಲಿ ಕೇವಲ ಮೂವತ್ತಾರು ಚಿತ್ರಗಳನ್ನು ತೆಗೆಯಬಹುದಾಗಿದ್ದ ಆ ಕಾಲದಿಂದ, ಒಂದು ಪುಟ್ಟ ಮೆಮರಿ ಕಾರ್ಡಿನಲ್ಲಿ ಖರ್ಚೇ ಇಲ್ಲದೆ ಸಾವಿರಾರು ಫೋಟೋ ಕ್ಲಿಕ್ಕಿಸಿ ಇಡಬಹುದಾದ ಕಾಲ ಬಂತು. ನಾವು ತೆಗೆದ ಫೋಟೋ ಹೇಗೆ ಬಂದಿದೆ ಅಂತ ನೋಡಲು ಗ್ರೀನ್‌ರೂಮಿಗೆ ಹೋಗಿ ಡೆವಲಪ್ ಆಗುವವರೆಗೆ ಕಾಯಬೇಕಿದ್ದ ಆ ಕಾಲದಿಂದ,  ಸೆರೆಹಿಡಿದ ಚಿತ್ರವನ್ನು ಮರುಕ್ಷಣವೇ ಪರದೆಯಲ್ಲಿ ನೋಡಬಹುದಾದ ಕಾಲ ಬಂತು. ಮೆಗಪಿಕ್ಸಲ್‌ಗಳು ಅಗಲವಾದವು, ಜೂಮುಗಳು ಉದ್ದವಾದವು, ಅಪರ್ಚರ್, ಎಕ್ಸ್‌ಪೋಶರ್, ವ್ಹೈಟ್ ಬ್ಯಾಲೆನ್ಸ್, ಐ‌ಎಸ್‌ಓ ಎಲ್ಲವನ್ನೂ ಸುಲಭವಾಗಿ ಸೆಟ್ ಮಾಡಬಲ್ಲ ಮಾಡರ್ನ್ ಕ್ಯಾಮರಾಗಳು ಬಂದವು. ಸೂಪರ್ ಶಾರ್ಪ್ ಲೆನ್ಸುಗಳು ಬಂದವು. ಮೊಬೈಲುಗಳಲ್ಲೇ ಕ್ಯಾಮರಾಗಳು ಬಂದು, ತಮ್ಮ ಇಷ್ಟದ ಅಥವಾ ಅವಶ್ಯದ ಕ್ಷಣವನ್ನು ಎಲ್ಲಿ, ಯಾರು, ಯಾವಾಗ ಬೇಕಾದರೂ ಸೆರೆಹಿಡಿಯಬಹುದಾದಂತ ಸೌಲಭ್ಯ ದೊರಕಿತು. ತೆಗೆದ ಫೋಟೋಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದಕ್ಕೆ ಪಿಕಾಸಾ, ಫ್ಲಿಕರ‍್ನಂತಹ ತಾಣಗಳು ಸಿಕ್ಕವು. ಆರ್ಕುಟ್, ಫೇಸ್‌ಬುಕ್, ಗೂಗಲ್ ಪ್ಲಸ್‌ನಂತಹ ಸಾಮಾಜಿಕ ಜಾಲತಾಣಗಳು ನಮ್ಮ ಫೋಟೋಗ್ರಫಿಯ ಉಚಿತ ಪ್ರದರ್ಶನಕ್ಕೆ ವೇದಿಕೆಯಾದವು. ಸೆಲೆಬ್ರಿಟಿಗಳು ತೆಗೆದುಕೊಂಡ ಸೆಲ್ಫೀಗಳು ಎಲ್ಲೆಡೆ ರಾರಾಜಿಸಿದವು.

ಹೇಳೀಕೇಳೀ ಜಗದ್ವಿಖ್ಯಾತ ಛಾಯಾಗ್ರಾಹಕ ಡಾ| ಡಿ.ವಿ. ರಾವ್ ಅವರ ಊರಿನಲ್ಲಿ ಹುಟ್ಟಿದವನು ನಾನು, ನನಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಬಾರದೆ ಇರುತ್ತದೆಯೇ? ಚಿಕ್ಕವನಿದ್ದಾಗ ನನಗೆ ಕ್ಯಾಮರಾ ಬಗೆಗಿದ್ದುದು ‘ನಾನೂ ಫೋಟೋ ತೆಗೆಯಬೇಕು’ ಎಂಬ ಆಸೆಯಷ್ಟೇ.  ಆದರೆ ಬುದ್ಧಿ ಬಲಿತಮೇಲೆ ಶುರುವಾದದ್ದು ‘ನಾನೂ ಫೋಟೋಗ್ರಫಿ ಮಾಡಬೇಕು’ ಎಂಬ ಆಸಕ್ತಿ. ನಾನೂ ಕೆಲಸ ಹಿಡಿದು ದುಡಿಯುವವನಾದಮೇಲೆ, ಸಂಬಳದಲ್ಲಿ ಉಳಿಸಿದ ಹಣದಿಂದ ಒಂದು ಪಾಯಿಂಟ್-ಅಂಡ್-ಶೂಟ್ ಕ್ಯಾಮರಾ ಕೊಂಡುಕೊಂಡೆ. ಆಮೇಲೆ ಎಲ್ಲಿಗೆ ಹೋಗಬೇಕಾದರೂ ಆ ಕ್ಯಾಮರಾ ಹಿಡಿದುಕೊಂಡು ಹೋಗುವುದು ಚಟವಾಯಿತು. ಅದೃಷ್ಟವೋ ದುರಾದೃಷ್ಟವೋ, ನಾನು ಪ್ರೀತಿಸಿದ ಹುಡುಗಿಯೂ ಫೋಟೋ ಹುಚ್ಚಿನವಳು. ಹೀಗಾಗಿ ನನ್ನ ಕ್ಯಾಮರಾಗೆ ಮತ್ತು ನನ್ನ ಫೋಟೋಗ್ರಫಿಯ ಪ್ರಯೋಗಗಳಿಗೆ ಖಾಯಂ ರೂಪದರ್ಶಿ ಸಿಕ್ಕಂತಾಯಿತು. ಅವಳು ಹೆಂಗೆಂಗೋ ನಿಂತು ಫೋಟೋ ತೆಗಿ ಅಂತ ಹೇಳುವುದೂ, ಅವಳನ್ನು ಹಂಗಂಗೇ ತೆಗೆಯಲು ನಾನು ಒದ್ದಾಡುವುದೂ ಶುರುವಾಯಿತು. ಆಮೇಲೆ ಆ ಫೋಟೋಗೆ ಇನ್ನಷ್ಟು ಮೆರುಗು ಕೊಡಲು ಕಂಪ್ಯೂಟರಿನಲ್ಲಿ ಹೆಣಗಾಡುವುದು, ‘ಒಂಚೂರೂ ಚನಾಗ್ ತೆಗ್ದಿಲ್ಲ ನೀನು’ ಅಂತ ಅವಳು ದೂರುವುದು, ‘ನೀನ್ ಇದ್ದಂಗ್ ಬಿದ್ದಿದೆ’ ಅಂತ ನಾನು ಸಮರ್ಥಿಸಿಕೊಳ್ಳುವುದು, ಹೀಗೆ ಆ ಕ್ಯಾಮೆರಾ ಮತ್ತು ಅದರಲ್ಲಿ ತೆಗೆದ ಫೋಟೋಗಳು ನಮ್ಮ ನಡುವಿನ ಸಾಮರಸ್ಯಕ್ಕೆ ಪೂರಕವಾಗಿ ಕೆಲಸ ಮಾಡತೊಡಗಿದವು.

ನನ್ನ ಫೋಟೋಹುಚ್ಚಿನ ಹುಡುಗಿಯೊಂದಿಗೆ ಮದುವೆ ನಿಶ್ಚಯವಾದಮೇಲೆ, ಮದುವೆಯ ಫೋಟೋಗ್ರಫಿಗೆ ಯಾರನ್ನು ಕರೆಸಬೇಕು ಅಂತ ಮನೆಯಲ್ಲಿ ಚರ್ಚೆಯಾಯಿತು.  ಹೆಚ್ಚು ವೋಟ್ ಬಂದಿದ್ದು ಬೆಳೆಯೂರು ಸದಾಶಿವಣ್ಣನಿಗೇ. ಈ ಬೆಳೆಯೂರು ಸದಾಶಿವಣ್ಣ ನಮ್ಮ ಭಾಗದಲ್ಲೆಲ್ಲ ಬಹು ಜನಪ್ರಿಯರಾಗಿರುವ ಇವೆಂಟ್ ಫೋಟೋಗ್ರಾಫರ್. ನನ್ನ ಅಪ್ಪ-ಅಮ್ಮನ ಮದುವೆಯ ಫೋಟೋಗಳನ್ನು ತೆಗೆದವರೂ ಅವರೇ.  ನಾನು ಮಗುವಾಗಿದ್ದಾಗಿನ ಸುಮಾರು ಫೋಟೋಗಳು, ಶಾಲೆಯ ಯೂನಿಯನ್‌ಡೇಗಳಲ್ಲಿನ ವಿವಿಧ ವೇಷದ ಫೋಟೋಗಳು, ಹೈಸ್ಕೂಲ್ ಬಿಡುವಾಗಿನ ಬ್ಯಾಚ್‌ಫೋಟೋ... ಹೀಗೆ ನಮ್ಮ ಕುಟುಂಬದ ಬಹುತೇಕ ಫೋಟೋಗಳನ್ನು ಆ ಕಾಲದಿಂದ ತೆಗೆಯುತ್ತ ಬಂದವರು ಸದಾಶಿವಣ್ಣ.  ನಮ್ಮ ಭಾಗದ ಬಹಳಷ್ಟು ಕುಟುಂಬಗಳ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತ, ಆ ಕುಟುಂಬಗಳ ಸದಸ್ಯರ ಬೆಳವಣಿಗೆಗಳನ್ನು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ನೋಡುತ್ತಾ ಬಂದವರು ಅವರು. ಆದರೆ ಅಪ್ಪ, ತನಗೆ ಇತ್ತೀಚೆಗೆ ಮತ್ತೊಬ್ಬ ಫೋಟೋಗ್ರಾಫರ್ ಪರಿಚಿತನಾಗಿದ್ದಾನೆಂದೂ, ಆತ ಬಹಳ ಚೆನ್ನಾಗಿ ಫೋಟೋ ತೆಗೆಯುತ್ತಾನೆ ಅಂತಲೂ, ಅವನ ಬಳಿ ಈಗಾಗಲೇ ಮಾತಾಡಿರುವುದರಿಂದ ಅವನಿಗೇ ವಹಿಸುವುದು ಅಂತ ತೀರ್ಮಾನವಾಯಿತು.  ಆ ಫೋಟೋಗ್ರಾಫರ್ ನಮ್ಮ ಮದುವೆಯ ಹಿಂದಿನ ದಿನ ಮನೆಗೆ ಬಂದ. ನೋಡಲು ತುಂಬಾ ಕಪ್ಪಗಿದ್ದ ಅವನನ್ನು ನೋಡಿ ಅಮ್ಮ ನನ್ನನ್ನೂ ಅಪ್ಪನನ್ನೂ ಒಳಗೆ ಕರೆದು ಸಣ್ಣ ದನಿಯಲ್ಲಿ “ಇಷ್ಟ್ ಕೆಟ್ಟದಾಗಿದಾನೆ. ಇಂವ ಎಂಥಾ ಫೋಟೋಗ್ರಾಫರ್ ಅಂತ ಕರೆಸಿದೀರಿ?” ಅಂತ ಕೇಳಿದಳು.  “ಅಂವ ನೋಡಕ್ಕೆ ಹೆಂಗಿದ್ರೆ ಏನು, ಅವನು ತೆಗೆಯೋ ಫೋಟೋಗಳು ಚನಾಗಿದ್ರೆ ಆಯ್ತಲ್ವಾ?” ಅಂತ ಹೇಳಿ ನಾವು ಅಮ್ಮನಿಗೆ ಸಮಾಧಾನ ಮಾಡಿದ್ದಾಯ್ತು.

ಅಂತೂ ನಮ್ಮ ಮದುವೆಯ ಫೋಟೋಗಳನ್ನು ಅದೇ ಫೋಟೋಗ್ರಾಫರ್ ತೆಗೆದ. ನಮ್ಮ ಮದುವೆಯ ಪ್ರತಿ ಸಂಪ್ರದಾಯದ, ಉಡುಗೊರೆ ಕೊಡುವ-ತೆಗೆದುಕೊಳ್ಳುವ ಫೋಟೋಗಳನ್ನೆಲ್ಲ ಆತ ತೆಗೆದ.  ಅಥವಾ, ಇನ್ನೊಂದರ್ಥದಲ್ಲಿ, ಆತ ಹೇಗೆ ಪೋಸ್ ಕೊಡಿ ಅಂತ ಹೇಳಿದನೋ ಹಾಗೆಲ್ಲ ನಾವು ಸಂಪ್ರದಾಯವನ್ನು ಆಚರಿಸಿದೆವು.  ಮದುವೆಯಾಗಿ ಹದಿನೈದು ದಿನಗಳ ನಂತರ ಆತ ದೊಡ್ಡ ಕರಿಷ್ಮಾ ಅಲ್ಬಮ್ಮನ್ನೂ, ಅದರಷ್ಟೇ ಭಾರದ ಬಿಲ್ಲನ್ನೂ ತಂದುಕೊಟ್ಟ.  ಆದರೆ ನಮ್ಮ ನೂರಾರು ಹಲ್ಕಿರಿದ ಫೋಟೋಗಳನ್ನು ತೆಗೆದಿದ್ದ, ಹೆಚ್ಚುಕಮ್ಮಿ ಎಲ್ಲ ಸಂದರ್ಭಗಳನ್ನೂ ಸೆರೆಹಿಡಿದಿದ್ದ ಅವನು ಎರಡು ದೊಡ್ಡ ತಪ್ಪು ಮಾಡಿದ್ದ: ಒಂದು, ನಾನು ನನ್ನ ಹೆಂಡತಿಗೆ ತಾಳಿ ಕಟ್ಟುವ ಫೋಟೋನೇ ಮಿಸ್ ಆಗಿತ್ತು; ಇನ್ನೊಂದು, ನನ್ನ ಹೆಂಡತಿಯ ಮೊಗ್ಗಿನ ಜಡೆಯ ಫೋಟೋ ಇರಲಿಲ್ಲ! ಮಜಾ ಎಂದರೆ, ಈ ಫೋಟೋಗ್ರಾಫರ್‌ನ ಜೊತೆ, ನಮ್ಮ ಮದುವೆಯ ದಿನ ಅಷ್ಟೊಂದು ಗೆಳೆಯರು ಮತ್ತು ನೆಂಟರು ತಮ್ಮ ಕ್ಯಾಮರಾ, ಮೊಬೈಲುಗಳಲ್ಲಿ ಫೋಟೋ ತೆಗೆದುಕೊಂಡಿದ್ದರಾದರೂ, ನಂತರ ಆ ಎಲ್ಲರಿಂದ ಫೋಟೋಗಳನ್ನು ತರಿಸಿಕೊಂಡು ನೋಡಿದರೂ ಯಾರ ಬಳಿಯೂ ಈ ಎರಡು ಫೋಟೋಗಳು ಇರಲಿಲ್ಲ!  ಇಷ್ಟೊಂದು ಕ್ಯಾಮರಾಗಳಿದ್ದೂ ಹೀಗಾಗಿದ್ದು ಈ ಕಾಲ, ಆಧುನಿಕತೆ ಮತ್ತು ವ್ಯವಸ್ಥೆಯ ವ್ಯಂಗ್ಯದಂತಿತ್ತು.

ಇದರಿಂದ ಎಲ್ಲಕ್ಕಿಂತ ಹೆಚ್ಚು ವ್ಯಘ್ರಳಾದದ್ದು ನನ್ನ ಹೆಂಡತಿ: “ಅಂವ ಎಂಥಾ ವೇಸ್ಟ್ ಫೋಟೋಗ್ರಾಫರ್ರು! ಇಡೀ ಮದುವೇಲಿ ಮುಖ್ಯವಾಗಿರೋದೇ ತಾಳಿ ಕಟ್ಟೋದು, ಅದರ ಫೋಟೋನೇ ತೆಗೆದಿಲ್ವಲ್ಲಾ! ನಾನು ಮೊಗ್ಗಿನ ಜಡೆ ಹಾಕ್ಕೊಂಡು ಎಷ್ಟ್ ಚನಾಗ್ ತಯಾರಾಗಿದ್ದೆ!  ಹಿಂದುಗಡೆಯಿಂದ ಒಂದು ಫೋಟೋ ತೆಗೀಬೇಕು ಅಂತ ಅವನಿಗೆ ತಿಳೀಲಿಲ್ವಾ ಹಾಗಾದ್ರೆ? ನಾವೇನು ಇನ್ನೊಂದ್ಸಲ ಇಷ್ಟು ಗ್ರಾಂಡಾಗಿ ತಯಾರಾಗಿ, ಇಷ್ಟು ಜನರ ನಡುವೆ, ಮಂಟಪದ ಕೆಳಗೆ ಮತ್ತೆ ತಾಳಿ ಕಟ್ಟಲಿಕ್ಕೆ ಆಗತ್ತಾ?  ಹೋಗ್ಲಿ, ಮಾಂಗಲ್ಯಧಾರಣೆಯ ಫೋಟೋ ಇಲ್ದಿದ್ರೆ ಪರ್ವಾಗಿಲ್ಲ, ನೀನು ತಾಳಿ ಕಟ್ಟಿದೀಯ ಅನ್ನೋಕೆ ಸಾಕ್ಷಿಯಾಗಿ ನನ್ನ ಕೊರಳಲ್ಲಿ ತಾಳಿ ಇದೆ, ಆದ್ರೆ ನನ್ನ ಮೊಗ್ಗಿನ ಜಡೆಯ ಫೋಟೋ? ಮುಂದೆ ಯಾವತ್ತೂ ನಂಗೆ ಮೊಗ್ಗಿನ ಜಡೆ ಹಾಕ್ಕೊಳ್ಳೋ ಅವಕಾಶವೂ ಇಲ್ಲ. ಮೊಗ್ಗಿನ ಜಡೇಲಿ ನಾ ಹೆಂಗೆ ಕಾಣ್ತಿದ್ದೆ ಅಂತ ಈಗ ನೋಡ್ಕೊಳ್ಳೋಣ ಅಂದ್ರೂ ಒಂದು ಫೋಟೋ ಇಲ್ಲ. ಅದರ ಫೋಟೋ ಫೇಸ್‌ಬುಕ್ಕಲ್ಲಿ ಹಾಕಿದ್ರೆ ಎಷ್ಟು ಲೈಕ್ಸ್ ಬರ್ತಿತ್ತು.. ಎಲ್ಲಾ ಲಾಸು..” ಅಂತೆಲ್ಲ ಹಪಹಪಿಸಿದಳು. ಫೇಸ್‌ಬುಕ್ಕಿನ ಲೈಕುಗಳ ನಷ್ಟಕ್ಕಿಂತ ದೊಡ್ಡ ನಷ್ಟ ಈ ಜಗತ್ತಿನಲ್ಲಿ ಮತ್ತೊಂದಿಲ್ಲವಾದ್ದರಿಂದ, ಅವಳನ್ನು ಸಮಾಧಾನ ಮಾಡಲು ನನಗೂ ತಿಳಿಯಲಿಲ್ಲ.  ಆದರೂ “ಮುಂದೆ ಯಾವತ್ತಾದರೂ ಒಂದು ದಿನ ನಿನಗೆ ಮೊಗ್ಗಿನ ಜಡೆ ತಂದು ಮುಡಿಸಿ ಫೋಟೋ ತೆಗೆದುಕೊಡುತ್ತೇನೆ” ಅಂತ ಹೇಳಿ ನಂಬಿಸಲು ಯತ್ನಿಸಿದೆ. ಅದಕ್ಕಾಕೆ, “ಇನ್ನೂ ಮದುವೆ ಆಗಿ ಹದಿನೈದು ದಿನ ಆಗಿದೆ, ಹೆಂಡತೀನ ಓಲೈಸೋಕೆ ಸುಳ್ಳು ಹೇಳೋ ಟೆಕ್ನಿಕ್ಕು ಆಗಲೇ ಶುರುಮಾಡಿಕೊಂಡೆ” ಅಂತ ಬೈದಳು.

ನಾನು ಇತ್ತೀಚೆಗೊಂದು ಡಿ‌ಎಸ್ಸೆಲ್ಲಾರ್ ಕ್ಯಾಮರಾ ಕೊಂಡುಕೊಂಡೆ. ದುಬಾರಿ ಬೆಲೆಯ ವಸ್ತು ಕೊಳ್ಳುವಾಗ ಸಾಮಾನ್ಯವಾಗಿ ಆಕ್ಷೇಪಿಸುವ ಹೆಂಡತಿ ಈ ಸಲ ಏನೂ ಅನ್ನಲಿಲ್ಲ. “ಈ ಕ್ಯಾಮರಾದಲ್ಲಿ ನಿನ್ ಫೋಟೋ ತೆಗ್ದು ಫೇಸ್‌ಬುಕ್ಕಿಗೆ ಹಾಕಿದ್ರೆ ಅರ್ಧ ಗಂಟೆಯೊಳಗೆ ನೂರು ಲೈಕ್ಸ್ ಬರುತ್ತೆ ನೋಡು” ಎಂಬ ನನ್ನ ಆಮಿಷಕ್ಕೆ ಬಲಿಯಾದ ಅವಳು ಹಿಂದೆಮುಂದೆ ಸಹ ಯೋಚಿಸದೆ ಓಕೇ ಎಂದುಬಿಟ್ಟಳು. ‘ಡಿ‌ಎಸ್ಸೆಲ್ಲಾರ್ ಹಿಡಿದ ಪ್ರತಿ ಕೋತಿಯೂ ತಾನು ದೊಡ್ಡ ಫೋಟೋಗ್ರಾಫರ್ ಅಂದುಕೊಳ್ಳುತ್ತದೆ’ ಎಂಬ ಮಾತನ್ನು ಸುಳ್ಳು ಮಾಡದಿರಲು ನಾನೂ ನನ್ನ ಪ್ರೊಫೈಲಿನಲ್ಲಿ, ಬ್ಲಾಗರ್, ರೈಟರ್ ಇತ್ಯಾದಿಗಳ ಜತೆ ‘ಫೋಟೋಗ್ರಾಫರ್’ ಅಂತ ಸೇರಿಸಿದೆ.

ದುಬಾರಿ ಬೆಲೆಯ ಕ್ಯಾಮರಾ ಹಿಡಿದ ಈ ಹೊಸ ಫೋಟೋಗ್ರಾಫರನಿಗೆ ಮೊದಲ ಅಸೈನ್‌ಮೆಂಟ್ ಬರುವುದೂ ತಡವಾಗಲಿಲ್ಲ. ಮೊನ್ನೆ ಹಬ್ಬಕ್ಕೆಂದು ಮಾವನ ಮನೆಗೆ ಹೋಗಿದ್ದಾಗ, ನನ್ನ ನಾದಿನಿಗೆ ವರ ಹುಡುಕಲು ಸಧ್ಯದಲ್ಲೇ ಶುರುಮಾಡುವುದಾಗಿಯೂ, ಅವಳ ಜಾತಕದೊಂದಿಗೆ ಕೊಡಲು ಒಂದಷ್ಟು ಫೋಟೋಗಳು ಬೇಕು ಅಂತಲೂ, ಒಳ್ಳೇ ಸ್ಟುಡಿಯೋಗೆ ಹೋಗಿ ತೆಗೆಸಬೇಕು ಅಂತಲೂ ನನ್ನ ಅತ್ತೆ-ಮಾವ ಹೇಳಿದರು.  ಅಲ್ಲೇ ಇದ್ದ ನನ್ನ ಹೆಂಡತಿ, “ಅಯ್ಯೋ, ಮನೇಲೇ ಫೋಟೋಗ್ರಾಫರ್ರನ್ನ ಇಟ್ಕೊಂಡು ಸ್ಟುಡಿಯೋಗೆ ಯಾಕೆ ಹೋಗ್ಬೇಕು? ನಿಮ್ ಅಳಿಯಾನೇ ಎಷ್ಟ್ ಫೋಟೋ ಬೇಕಾದ್ರೂ ತೆಕ್ಕೊಡ್ತಾನೆ” ಅಂದಳು.  ನಾನು ಹೌದೌದೆಂದು ತಲೆಯಾಡಿಸಿದೆ.  ಜತೆಗೆ ನಾದಿನಿಗೆ ಒಂದು ಷರತ್ತನ್ನೂ ಹಾಕಿದೆ: “ಒಳ್ಳೊಳ್ಳೇ ಫೋಟೋಸ್ ತೆಕ್ಕೊಡ್ತೀನಿ. ಆದ್ರೆ ನಿನ್ ಮದುವೆ ದಿವಸ ನಿನ್ನ ಮೊಗ್ಗಿನ ಜಡೆಯನ್ನ ಹತ್ತು ನಿಮಿಷದ ಮಟ್ಟಿಗೆ ನಂಗೆ ಕೊಡಬೇಕು” ಅಂತ.  ಕಕ್ಕಾಬಿಕ್ಕಿಯಾದ ಅವಳು “ಅದ್ಯಾಕೆ ಭಾವಾ?” ಅಂತ ಕೇಳಿದಳು. “ಅದೆಲ್ಲಾ ಆಮೇಲ್ ಹೇಳ್ತೀನಿ” ಅಂತ ಜಾರಿಕೊಂಡೆ.   ಸರಿ, ನಾದಿನಿ ಚಂದದ ಸೀರೆಯುಟ್ಟು ಹತ್ತಿರದ ಪಾರ್ಕಿನಲ್ಲಿ ವಿವಿಧ ಭಂಗಿಗಳಲ್ಲಿ ನಿಂತು ಒಂದಷ್ಟು ಪೋಸ್ ಕೊಟ್ಟಳು. ನಾನು ಸೆರೆಹಿಡಿದೆ. ಅವನ್ನೆಲ್ಲ ಅದೇ ಊರಿನ ಲ್ಯಾಬ್ ಒಂದಕ್ಕೆ ಹೋಗಿ ಪ್ರಿಂಟ್ ಹಾಕಲು ಕೊಟ್ಟೆ. ಆ ಫೋಟೋಗಳನ್ನು ಕಂಪ್ಯೂಟರ್ ಪರದೆಯಲ್ಲಿ ನೋಡಿದ ಲ್ಯಾಬಿನವನು “ನೀವು ಫೋಟೋಗ್ರಾಫರ್ರಾ ಸಾರ್? ಎಷ್ಟ್ ಒಳ್ಳೊಳ್ಳೇ ಫೋಟೋಸ್ ತೆಗ್ದಿದೀರಾ ಸಾರ್.. ಗ್ರೇಟ್ ಸಾರ್” ಅಂದ.  ತಿರುವಲಾಗದಂತೆ ಅವತ್ತು ಬೆಳಗ್ಗೆಯಷ್ಟೇ ಮೀಸೆ ಟ್ರಿಮ್ ಮಾಡಿಕೊಂಡಿದ್ದಕ್ಕೆ ಅರೆಕ್ಷಣ ಬೇಸರವಾಯಿತು.

ಈಗ ನಾನು ತೆಗೆದ ಆ ಫೋಟೋಗಳು ಪ್ರಿಂಟಾಗಿ ಬಂದು, ನಾದಿನಿಯ ಜಾತಕದೊಂದಿಗೆ ಸೇರಿ ಹಂಚಲ್ಪಟ್ಟು, ಅವಳಿಗೊಂದು ಮದುವೆ ನಿಶ್ಚಯವಾಗಿ, ಮದುವೆಯ ದಿನ ಸ್ವಲ್ಪ ಸಮಯಕ್ಕಾದರೂ ಅವಳ ಮೊಗ್ಗಿನ ಜಡೆಯನ್ನು ಇಸಕೊಂಡು ಬಂದು, ನನ್ನ ಹೆಂಡತಿಗೆ ಮುಡಿಸಿ, ಅದರ ಫೋಟೋ ತೆಗೆದು, ಹೇಗಾದರೂ ನಮ್ಮ ಮದುವೆಯ ಅಲ್ಬಮ್ಮಿಗೆ ಸೇರಿಸುವ, ಹಾಗೇ ಫೇಸ್‌ಬುಕ್ಕಿಗೆ ಅಪ್‌ಲೋಡ್ ಮಾಡಿ ಸಾವಿರಾರು ಲೈಕುಗಳನ್ನು ಪಡೆಯುವ ಕನಸು ಕಾಣುತ್ತಿದ್ದೇನೆ.  ಬ್ಯಾಗಿನಲ್ಲಿ ಉದ್ದಕೆ ಮಲಗಿರುವ ಕ್ಯಾಮರಾ ತಾನು ರೆಡಿ ಅಂತ ಲೆನ್ಸಿನ ಕಣ್ಣು ಮಿಟುಕಿಸುತ್ತಿದೆ.

[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ.]

Wednesday, February 25, 2015

ಅನವರತ ಎಂಬ ನೀಳ್ಗವಿತೆ

ಇದು ನಾನು ಬರೆದ ನೀಳ್ಗವಿತೆ. ಎರಡು ವರ್ಷದ ಹಿಂದೆ ಬರೆಯಲು ಶುರುಮಾಡಿದ ಈ ಕವಿತೆ ಮುಗಿದದ್ದು ಇತ್ತೀಚೆಗೆ. ಈ ಕವಿತೆಯನ್ನು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಸಂಪಾದಕತ್ವದ "ಚುಕ್ಕುಬುಕ್ಕು" ಪ್ರಕಟಿಸಿದೆ. ಇದಕ್ಕೆ ಕಲಾಕಾರ ರಘು ಅಪಾರ ಒಪ್ಪುವ ಚಿತ್ರಗಳನ್ನು ಬಿಡಿಸಿದ್ದಾರೆ.  ಇವರಿಬ್ಬರಿಗೂ ಹಾಗೂ ಪೂರ್ತಿ ಚುಕ್ಕುಬುಕ್ಕು ಟೀಮ್‌ಗೂ (ಸೌಮ್ಯ & ಸಿದ್ದಾರ್ಥ್ ಕಲ್ಯಾಣ್‌ಕರ್) ನನ್ನ ಧನ್ಯವಾದ.  ಚುಕ್ಕುಬುಕ್ಕುವಿನಲ್ಲಿ ಪ್ರಕಟವಾಗುವ ಮೊದಲೇ ಒಂದಷ್ಟು ಆಪ್ತರಿಗೆ ಈ ಕವಿತೆಯ ಪಿಡಿಎಫ್ ಮೇಲ್ ಮಾಡಿದ್ದೆ.  ಅದನ್ನು ಓದಿ ಪ್ರತಿಕ್ರಿಯಿಸಿದವರಿಗೂ ಥ್ಯಾಂಕ್ಸ್.  ಈ ಕವಿತೆಯ ಬಗ್ಗೆ ನಾನು ಬರೆದ ಟಿಪ್ಪಣಿ ಸಹ ಚುಕ್ಕುಬುಕ್ಕುವಿನಲ್ಲಿದೆ. ಈ ಪ್ರಯೋಗವನ್ನು ನೀವೂ ಓದಿ ಅಂತ...

ಅನವರತ -ಒಂದು ನೀಳ್ಗವಿತೆ 

ಕವಿತೆಯ ಬಗೆಗಿನ ಟಿಪ್ಪಣಿ