Showing posts with label ಮಾವು. Show all posts
Showing posts with label ಮಾವು. Show all posts

Friday, June 10, 2022

ಮಾವಿನ ರುಚಿಯ ಮಾಯೆ

ನಾವೆಲ್ಲ ನಮ್ಮ ಪಠ್ಯಪುಸ್ತಕದಲ್ಲಿ ಓದಿದ್ದೇ: ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ಬಳ್ಳಗಳಲ್ಲಿಟ್ಟು ರಸ್ತೆಯ ಇಕ್ಕೆಲಗಳಲ್ಲೂ ಕೂತು ಮಾರುತ್ತಿದ್ದರು -ಎಂದು. ಅಂತಹ ವೈಭೋಗವನ್ನು ಕಣ್ಣಾರೆ ನೋಡುವ ಅದೃಷ್ಟವನ್ನಂತೂ ನಾವು ಪಡೆಯಲಿಲ್ಲ. ಚಿನ್ನ-ಬೆಳ್ಳಿ-ವಜ್ರಗಳೆಲ್ಲ ಅತ್ಯಮೂಲ್ಯ ದ್ರವ್ಯಗಳಾಗಿ ಮಾರ್ಪಟ್ಟು, ಗಾಜು ಹೊದಿಸಿದ ಹವಾನಿಯಂತ್ರಿತ ಜ್ಯುವೆಲರಿ ಅಂಗಡಿಗಳಲ್ಲಿ ಸ್ಥಾಪಿತವಾಗಿ, ರಸ್ತೆಯಲ್ಲಿ ನಡೆಯುವಾಗ ಅತ್ತ ನೋಡಲೂ ಭಯವಾಗುವಷ್ಟು ಬೆಲೆ ಹೊಂದಿರುವಾಗ, ಹಿಂದೊಮ್ಮೆ ಅವು ರಸ್ತೆ ಬದಿಗೆ ಮಾರಲ್ಪಡುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದಾಯಕ ವಿಷಯ.  ಆದರೆ ಹೆಚ್ಚುಕಮ್ಮಿ ಚಿನ್ನದ ಬಣ್ಣವನ್ನೇ ಹೊಂದಿದ ಒಂದು ಬಗೆಯ ಹಣ್ಣುಗಳು ಏಪ್ರಿಲ್-ಮೇ-ಜೂನ್ ತಿಂಗಳಲ್ಲಿ ರಸ್ತೆ ಬದಿಯಲ್ಲಿ ವಿಕ್ರಯಗೊಳ್ಳುವುದನ್ನು ನೀವು ನೋಡಿರಬಹುದು. ತಳ್ಳುಗಾಡಿಗಳಲ್ಲೂ, ಹಣ್ಣಿನಂಗಡಿಗಳಲ್ಲೂ, ಸಂತೆಬುಟ್ಟಿಗಳಲ್ಲೂ, ಇವನ್ನು ಮಾರಲೆಂದೇ ಶುರುವಾದ ಮೇಳಗಳಲ್ಲೂ ಈ ಹಣ್ಣುಗಳು ರಾಶಿರಾಶಿ ಸಂಖ್ಯೆಯಲ್ಲಿ ಜಮೆಯಾಗಿ ಪಾದಚಾರಿಗಳ-ದಾರಿಹೋಕರ ಕಣ್ಮನಗಳನ್ನು ಸೆಳೆಯುವವು. ಅದೆಷ್ಟೇ ಗತ್ತಿನಿಂದ ಯಾವುದೋ ಯೋಚನೆಯಲ್ಲಿ ನೇರಮುಖಿಯಾಗಿ ನೀವು ಸಾಗುತ್ತಿದ್ದರೂ ಈ ಹಣ್ಣುಗಳು ತಮ್ಮ ಪರಿಮಳಮಾತ್ರದಿಂದ ನಿಮ್ಮ ಗಮನವನ್ನು ಸೆಳೆಯದೇ ಇರಲಾರವು. ಚಿನ್ನ-ಬೆಳ್ಳಿಗಳಂತಲ್ಲದೆ ಜನಸಾಮಾನ್ಯರೂ ಕೊಳ್ಳಬಹುದಾದ ಬೆಲೆಯನ್ನು ಹೊಂದಿದ್ದು, ಕೊಂಡು ತಿಂದರೆ ಯಾವ ಆಭರಣ ಧರಿಸಿದರೂ ಸಿಗಲಾರದಷ್ಟು ಆನಂದವನ್ನು ಜಿಹ್ವೆಯ ಮೂಲಕ ತನುಮನಗಳಿಗೆ ಕೊಡುವವು ಈ ಹಣ್ಣುಗಳು. ಇಷ್ಟೆಲ್ಲ ಹೇಳಿದಮೇಲೆ ಈ ಹಣ್ಣುಗಳು ಯಾವುವು ಎಂದು ರಸಪ್ರಜ್ಞೆ ಹೊಂದಿದ ಬುದ್ಧಿವಂತರಾದ ನಿಮಗೆ ತಿಳಿದೇಹೋಗಿರುತ್ತದೆ: ನೀವು ಊಹಿಸಿದಂತೆ, ನಾವು ಈಗ ಸವಿಯಲು ಹೊರಟಿರುವುದು ಹಣ್ಣುಗಳ ರಾಜ, ರಾಜಾಧಿರಾಜ, ರಾಜಮಾರ್ತಾಂಡ ಶ್ರೀಶ್ರೀಶ್ರೀ ಮಾವಿನಹಣ್ಣನ್ನು!

ಎಲ್ಲ ಬಹುಪರಾಕುಗಳಿಗೂ ಯೋಗ್ಯ ಈ ಮಾವಿನಹಣ್ಣು. ಜಗತ್ತಿನಲ್ಲಿ ಬೆಣ್ಣೆಹಣ್ಣು ಇಷ್ಟವಿಲ್ಲ ಎನ್ನುವವರು ಸಿಗಬಹುದು, ಹಲಸಿನಹಣ್ಣಿನ ಮೇಣಕ್ಕೆ ಅಂಜಿ ದೂರ ನಿಲ್ಲುವವರು ಕಾಣಬಹುದು, ಅನಾನಸ್ ತಿಂದರೆ ಉಷ್ಣ ಎಂದು ವರ್ಜಿಸಿದವರು ಇರಬಹುದು, ಆದರೆ ಮಾವಿನಹಣ್ಣು ಇಷ್ಟವಿಲ್ಲ ಎನ್ನುವವರು ವಿರಳ. ಅದರ ರುಚಿಯೇ ಹಾಗೆ! ಸುಮಾರು ಮೂವತ್ತಕ್ಕೂ ಹೆಚ್ಚಿನ ತಳಿಗಳಲ್ಲಿ ಲಭ್ಯವಿರುವ ಈ ಹಣ್ಣು ತನ್ನ ವಿಶಿಷ್ಟ ಒನಪು, ಕಂಪು ಮತ್ತು ಸ್ವಾದದಿಂದ ಹೆಸರು ಮಾಡಿದೆ. ನೀಳ ಅಥವಾ ಗುಂಡು ಮುಖ ಹೊಂದಿದ್ದು, ಗಲ್ಲದ ಬಳಿ ತುಸು ವಾರೆಯಾಗಿ ಚೂಪನೆ ಮೂತಿ ಹೊಂದಿರುವ, ಹಸಿರು-ಹಳದಿ-ಕೆಂಪು ಬಣ್ಣಗಳ ಮಿಶ್ರಣದಲ್ಲಿ ನಳನಳಿಸುವ ಈ ಹಣ್ಣನ್ನು ನೋಡಿದರೇ ಒಲವಾಗುವುದು; ಇನ್ನು ತಿಂದರೆ?

ಹಸಿದು ಹಲಸು, ಉಂಡು ಮಾವುಎಂಬ ನಾಣ್ಣುಡಿಯಂತೆ ಮಾವಿನ ಹಣ್ಣನ್ನು ಊಟವಾದ ಬಳಿಕ ತಿನ್ನುವವರೇ ಹೆಚ್ಚು. ಮೊದಲೇ ತುಂಬಿರುವ ಹೊಟ್ಟೆ; ಇನ್ನು ಈ ಹಣ್ಣಿಗೆಲ್ಲಿ ಜಾಗ? –ಎಂಬುದೆಲ್ಲಾ ಸೌಜನ್ಯಕ್ಕೆ ಆಡುವ ಮಾತುಗಳು.  ಮಾವಿನಹಣ್ಣನ್ನು ಸೇರಿಸಲು ಹೊಟ್ಟೆಯಲ್ಲಿ ಜಾಗ ಸದಾ ಇದ್ದೇ ಇರುತ್ತದೆ. ಅದಕ್ಕೆಂದೇ ದೇವರು ಜಟರದಲ್ಲಿ ಸೆಪರೇಟ್ ಕಂಪಾರ್ಟ್‌ಮೆಂಟ್ ಸೃಷ್ಟಿಸಿರುತ್ತಾನೆ. ಮತ್ತದು ಮಾವಿನ ಹಣ್ಣಿನ ಸೀಸನ್ನಿನಲ್ಲಿ ತೆರೆಯಲ್ಪಡುತ್ತದೆ. ನಿಮ್ಮ ಹಲ್ಲು, ನಾಲಿಗೆ, ಅನ್ನನಾಳ, ಜೀರ್ಣಾಂಗವ್ಯೂಹಗಳೆಲ್ಲ ಮಾವಿನಹಣ್ಣನ್ನು ಸೇವಿಸಲೆಂದೇ ತಯಾರಾಗುತ್ತವೆ. ಹೀಗಾಗಿ ಟೇಬಲ್ಲಿನ ಮೇಲಿನ ಬಾಸ್ಕೆಟ್ಟಿನಲ್ಲಿ ಕಮ್ಮಗೆ ಕುಳಿತಿರುವ ಮಾವಿನಹಣ್ಣನ್ನು ತಿನ್ನಲೊಲ್ಲೆ ಎಂದು ನಿರಾಕರಿಸಿವುದು ಎಂದಿಗೂ ಸಲ್ಲದು.

ಮಾವಿನಹಣ್ಣನ್ನು ತಿನ್ನುವ ಬಗೆ ಸಾಮಾನ್ಯವಾಗಿ ಅದರ ಗಾತ್ರ ಮತ್ತು ತಿನ್ನುವವರ ಫಲಪ್ರೀತಿಯನ್ನು ಅವಲಂಭಿಸಿರುತ್ತದೆ. ಗಾತ್ರ ಬಹಳ ದೊಡ್ಡದಿದೆಯೋ, ಅದನ್ನು ಕತ್ತರಿಸಿ ಹೋಳುಗಳನ್ನಾಗಿ ಮಾಡಿ ತಿನ್ನುತ್ತಾರೆ. ಗಾತ್ರ ಚಿಕ್ಕದಿದೆಯೋ, ‘, ಇಡೀ ಹಣ್ಣೇ ತಿನ್ನೋ ಮಾರಾಯಾಅಂತ ಪುಸಲಾಯಿಸುವವರು ಪಕ್ಕದಲ್ಲಿದ್ದಾರೋ, ಮತ್ತೆ ಯೋಚಿಸುವ ಗೊಡವೆಯೇ ಇಲ್ಲ. ಹಾಗೆ ಹಣ್ಣನ್ನು ಇಡಿಯಾಗಿ ತಿನ್ನುವುದರಲ್ಲೂ ಹಲವು ಬಗೆಯಿದೆ: ಕೆಲವರು ಒಂದು ಕಡೆಯಿಂದ ಶುರು ಮಾಡಿ ಸಿಪ್ಪೆ ಸಮೇತ ತಿನ್ನುತ್ತಾರೆ. ಇನ್ನು ಕೆಲವರು ಮೊದಲು ಸಿಪ್ಪೆಯನ್ನೆಲ್ಲ ಹಲ್ಲಿನಿಂದ ಕಚ್ಚಿ ಎಳೆದು ತೆಗೆದು, ಸಿಪ್ಪೆಗಂಟಿದ ಹಣ್ಣನ್ನು ಕೆರಚಿ ತಿಂದು, ನಂತರ ಸಿಪ್ಪೆರಹಿತ ಹಣ್ಣಿನ ಗುಳವನ್ನು ಆಸ್ವಾದಿಸಿ, ಕೊನೆಯಲ್ಲಿ ಓಟೆಯನ್ನು ಸೀಪುತ್ತಾರೆ. ಮತ್ತೆ ಕೆಲವರು ಹಣ್ಣಿನ ತಳದಲ್ಲಿ ಕಚ್ಚಿ ಸಣ್ಣ ರಂದ್ರ ಮಾಡಿ ಹಣ್ಣಿನೊಳಗಿನ ಸಾರಸತ್ವವನ್ನೆಲ್ಲ ಅಲ್ಲಿಂದಲೇ ಸೀಪಿ ಎಳೆದುಕೊಂಡು ಮುಗಿಸುತ್ತಾರೆ. ಹಣ್ಣಿನೊಳಗೆ ಹುಳಗಳಿದ್ದರೆ ಎಂಬ ಭಯವಿರುವ ಕೆಲವರು, ಹಣ್ಣನ್ನು ಎರಡ್ಮೂರು ಭಾಗವನ್ನಾಗಿ ಕತ್ತರಿಸಿ ಪರೀಕ್ಷಿಸಿ ನಂತರ ಎಲ್ಲವನ್ನೂ ತಿನ್ನುತ್ತಾರೆ.

ಮಾವಿನಹಣ್ಣನ್ನು ಇಡಿಯಾಗಿ ತಿನ್ನಲು ಎಂದಿಗೂ ಮುಜುಗರ ಪಟ್ಟುಕೊಳ್ಳಬಾರದು. ಅವರಿವರು ನೋಡುತ್ತಿದ್ದಾರೆ, ಸಿಪ್ಪೆಯನ್ನು ಹಲ್ಲಿನಿಂದ ಕಚ್ಚಿ ಎಳೆದರೆ ಚೆನ್ನಾಗಿ ಕಾಣುವುದಿಲ್ಲವೇನೋ, ಇಡೀ ಹಸ್ತ ರಸಮಯವಾಗುತ್ತದೆ, ಒಳಗೆ ಹುಳ ಇರಬಹುದೇನೋ, ತಿನ್ನುವಾಗ ರಸ ಮೊಣಕೈವರೆಗೂ ಇಳಿಯಬಹುದು, ಅದನ್ನು ನೆಕ್ಕಬೇಕಾಗಬಹುದು, ಒಂದೆರಡು ಹನಿ ನೆಲದ ಮೇಲೂ ಬೀಳಬಹುದು, ಧರಿಸಿದ ಬಟ್ಟೆ ಚೂರು ಕಲೆಯಾಗಬಹುದು, ಓಟೆಯನ್ನು ಚೀಪುತ್ತಾ ಕೂರುವುದು ಚೀಪ್ಆಗತ್ತೋ... ಅಯ್ಯೋ, ಯೋಚಿಸುತ್ತಾ ಕುಳಿತರೆ ನೂರಾರು ತಲೆಬಿಸಿಗಳು!  ಆದರೆ ಮಾವುಪ್ರಿಯರಾದ ನೀವು ಈ ಯಾವುದಕ್ಕೂ ಅಂಜಬಾರದು: ಊಟ ತನ್ನಿಚ್ಚೆ, ನೋಟ ಪರರಿಚ್ಚೆಎಂಬ ಉಕ್ತಿಯೇ ಇದೆ. ಆ ಮಾತಿನಲ್ಲಿ ಗಟ್ಟಿಯಾದ ನಂಬಿಕೆಯಿಡಬೇಕು. ಹಣ್ಣುಗಳ ರಾಜನನ್ನೇ ಕೈಯಲ್ಲಿ ಹಿಡಿದಿದ್ದೀರಿ ಎಂಬುದನ್ನು ಮನಸಿಗೆ ತಂದುಕೊಳ್ಳಬೇಕು. ಹೊರಗೆ ನಡೆಯುತ್ತಿರುವ ನಾನಾ ಕ್ಷುದ್ರ ಸಂಗತಿಗಳನ್ನು ಮರೆಯಬೇಕು. ನೀವು ಮತ್ತು ಮಾವು ಇಬ್ಬರೇ ಇರುವ ಈ ಲೋಕದಲ್ಲಿ ಕಣ್ಮುಚ್ಚಿ ಈ ಹಣ್ಣನ್ನು ಆಸ್ವಾದಿಸಬೇಕು: ಮಹದಾನಂದವು ನಿಮ್ಮದಾಗುವ ಪರಿಯನ್ನು ಅನುಭವಿಸಬೇಕು.

ಮಾವಿನಹಣ್ಣಿನ ಸೀಸನ್ನಿನಲ್ಲಿ ಒಂದಷ್ಟಾದರೂ ಹಣ್ಣುಗಳನ್ನು ತಿನ್ನದಿರುವುದು ಮಹಾಪರಾಧ. ಆಲ್ಫೋನ್ಸೋ, ರಸಪುರಿ, ಬಾದಾಮಿ, ಸಿಂಧೂರ, ಮಲಗೋವ, ಬೈಗನಪಲ್ಲಿ, ನೀಲಂ, ಮಲ್ಲಿಕಾ... ಹೀಗೆ ಹತ್ತಾರು ತಳಿಯ ಬೇರೆಬೇರೆ ಸ್ವಾದದ ಹಣ್ಣುಗಳು ಮಾರುಕಟ್ಟೆಯಲ್ಲಿ ಪ್ರತಿವರ್ಷವೂ ಸುಲಭವಾಗಿ ದೊರಕುತ್ತವೆ.  ಈ ಕಾಲದಲ್ಲಿ ಏರ್ಪಡಿಸಲಾಗುವ ಮಾವುಮೇಳಗಳಿಗೆ ಹೋದರಂತೂ ಇನ್ನೂ ಹಲವು ವಿಧದ ಮಾವು ದೊರೆಯುವುದು. ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕ ವಿಧಾನದಲ್ಲಿ ಬೆಳೆದ ಹಣ್ಣುಗಳೆಂಬ ಲೇಬಲ್ಲೂ ಇಲ್ಲಿ ಕಾಣುವುದು. ನಿಮ್ಮ ಅಭಿರುಚಿ ಮತ್ತು ಹಣ ತೆರುವ ಸಾಮರ್ಥ್ಯಕ್ಕನುಗುಣವಾಗಿ ಹಣ್ಣುಗಳನ್ನು ಕೊಳ್ಳಬಹುದು. ಇನ್ನು ನಿಮ್ಮದೇ ತೋಪಿನಲ್ಲಿ ಬೆಳೆದ ಹಣ್ಣೋ: ಕೇಳುವುದೇ ಬೇಡ, ಮನಸೋ ಇಚ್ಛೆ ತಿನ್ನಬಹುದು. ನಿಮ್ಮ ನೆಂಟರಿಷ್ಟರೋ ಕಲೀಗುಗಳೋ ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದುಕೊಟ್ಟರೆ ಬೇಡ ಎನ್ನಬೇಡಿ. ಒಳ್ಳೆಯದು ಎಲ್ಲಿಂದ ಬಂದರೂ ಪಡೆದುಕೋ ಅಂತ ಮಹಾಗ್ರಂಥಗಳಲ್ಲೇ ಹೇಳಿಬಿಟ್ಟಿದ್ದಾರೆ: ನಿಸ್ಸಂಕೋಚವಾಗಿ ಸ್ವೀಕರಿಸಿ.

ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ, ಕಾಡು-ಮೇಡು ಅಲೆದು ಗೊತ್ತಿದ್ದವರಿಗೆ, ಸ್ವಂತ ಮಾವಿನ ತೋಟ ಇರುವವರಿಗೆ ತಾಜಾ ಮಾವಿನಹಣ್ಣು ತಿನ್ನುವ ಅಭಿಯೋಗ ದೊರಕುವುದು. ಮರದಲ್ಲೇ ಬೆಳೆದು ಹಣ್ಣಾದ ಮಾವನ್ನು ಅಲ್ಲೇ ಕೊಯ್ದು ತಿನ್ನುವ ಮಜವೇ ಬೇರೆ. ಎತ್ತರದ ಮರವಾಗಿದ್ದರೆ, ಕಳಿತು ನೆಲಕ್ಕುದುರಿದ ಅಥವಾ ಬಡಿಗೆ ಎಸೆದು ಬೀಳಿಸಿದ ಅಥವಾ ದೋಟಿಯಿಂದೆಳೆದ ಅಥವಾ ಮರ ಹತ್ತಿ ಇಳಿಸಿದ ಹಣ್ಣನ್ನು ಅದೇ ಮರದ ನೆರಳಲ್ಲಿ ಕುಳಿತು ಸವಿಯುವುದು ಬೇರೆಯದೇ ಅನುಭೂತಿ.  ಪುಟ್ಟಪುಟ್ಟ ಕಾಟುಮಾವಿನ ಹಣ್ಣುಗಳನ್ನು ಇಡಿಯಾಗಿ ಬಾಯಲ್ಲಿಟ್ಟು ಹುಳಿ-ಸಿಹಿ ರಸವನ್ನು ನುಂಗಿ ಓಟೆಯನ್ನು ಉಗುಳುವ ಖುಷಿ ಅನುಭವಿಸಿದವರಿಗಷ್ಟೇ ಗೊತ್ತು. ಕೆಲವು ಗಡ್ಡವಿರುವ ಕಸಿಮಾವಿನ ಹಣ್ಣುಗಳ ಓಟೆಯನ್ನು ಅದರ ಸಿಹಿಯಂಶ ಹೋಗುವವರೆಗೂ ಗಂಟೆಗಟ್ಟಲೆ ಸೀಪುತ್ತಾ ಕೂರುವುದು ಚಿಕ್ಕಮಕ್ಕಳಿಗೆ ಇಷ್ಟದ ಕೆಲಸ.

ಹಾಗಂತ ಮಾವಿನಹಣ್ಣನ್ನು ಕತ್ತರಿಸಿ ತಿನ್ನುವುದು ತಪ್ಪೇನಲ್ಲ. ಅದರಿಂದಲೂ ಹಲವು ಪ್ರಯೋಜನಗಳಿವೆ. ಬಹಳ ಮುಖ್ಯವಾಗಿ, ಹಣ್ಣಿನೊಳಗೆ ಹುಳುಗಳಿದ್ದರೆ ಅಥವಾ ಹಣ್ಣು ಒಳಗೊಳಗೇ ಕೊಳೆತಿದ್ದರೆ ಕತ್ತರಿಸಿದಾಗ ಕಣ್ಣಿಗೆ ಬೀಳುತ್ತದೆ. ಆಗ ಅದನ್ನು ಸುಮ್ನೇ ದುಡ್ ದಂಡಅಂತ ಬೈದುಕೊಂಡು ಬೀಸಾಡಬಹುದು. ಮಲಗೋವಾದಂತಹ ದೊಡ್ಡಗಾತ್ರದ ಹಣ್ಣುಗಳನ್ನು ಕತ್ತರಿಸಿ, ಸಿಪ್ಪೆ ತೆಗೆದು, ಸಣ್ಣಸಣ್ಣ ಹೋಳುಗಳನ್ನಾಗಿ ಮಾಡಿ ತಟ್ಟೆಯಲ್ಲಿಟ್ಟುಕೊಂಡು, ಬೆಳದಿಂಗಳ ಟೆರೇಸಿನಲ್ಲಿ ಮೂರ್ನಾಲ್ಕು ಜನ ಸುತ್ತ ಕೂತು ಚಮಚದಲ್ಲೋ ಫೋರ್ಕಿನಲ್ಲೋ ತಿನ್ನುವುದು ಯಾವ ಪಾರ್ಟಿಗೂ ಕಮ್ಮಿಯಲ್ಲ. ಹಾಗೆ ಹೆಚ್ಚಿದಾಗ ಉಳಿದ ಓಟೆಗಂಟಿದ ಗುಳವನ್ನು ತಿನ್ನಲು ಮಕ್ಕಳಿಗೆ ಕೊಡಬಹುದು. ಉಳಿದ ಹೋಳುಗಳನ್ನು ಫ್ರಿಜ್ಜಿನಲ್ಲಿಟ್ಟು ಮರುದಿನ ಟಿಫಿನ್ ಬಾಕ್ಸಿನಲ್ಲಿ ಆಫೀಸಿಗೆ ಒಯ್ದು ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.

ಮಾವಿನಹಣ್ಣು ಬಳಸಿ ಹಲವು ಖಾದ್ಯಗಳನ್ನು ತಯಾರಿಸುವುದು ಸಾಮಾನ್ಯ. ಹೀಗೆ ತಯಾರಿಸುವಾಗ, ಒಂದೆರಡು ಹೋಳುಗಳು, ಕೊನೆಯಲ್ಲಿನ ಓಟೆ ತಮಗೆ ಸಿಕ್ಕೇ ಸಿಗುತ್ತದೆ ಎಂಬ ಅರಿವಿರುವ ಮಕ್ಕಳು, ಅಡುಗೆಮನೆಯಲ್ಲೇ ಸುಳಿಯುತ್ತಿರುತ್ತಾರೆ. ಮಾವಿನಹಣ್ಣಿನ ಕಾಲ ಮಕ್ಕಳಿಗೂ ಖುಷಿಯ ಕಾಲ.

ಮಾವಿನ ಮರವೊಂದು ತನ್ನ ಎಲೆ, ಚಿಗುರು, ಹೂವು, ನೆರಳು, ಕೋಗಿಲೆಯುಲಿ, ಮಿಡಿ, ಕಾಯಿ, ಹಣ್ಣು ಎಲ್ಲವುಗಳಿಂದ ಸಂಭ್ರಮವನ್ನು ಪಸರಿಸುವ ಪರಿಯೇ ಅದ್ಭುತ. ಎಲ್ಲ ಹಣ್ಣುಗಳನ್ನೂ ಅವುಗಳು ದೊರಕುವ ಕಾಲದಲ್ಲಿ ತಿಂದುಬಿಡಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಮಾವಿನಹಣ್ಣಿನ ಕಾಲ. ನೀವಿನ್ನು ತಡ ಮಾಡಬೇಡಿ. ಒಂದು ಕೈಚೀಲ ಹಿಡಿದು ಸಂತೆಗೋ ಮಾರುಕಟ್ಟೆಗೋ ಮಾವಿನತೋಪಿಗೋ ಧಾವಿಸಿ. ತಾಜಾ ಹಣ್ಣುಗಳನ್ನು ಕೈಯಲ್ಲಿ ಹಿಡಿಯಿರಿ. ಇಡಿಯಾಗಿ ತಿನ್ನಿ. ಓಟೆಯನ್ನು ಮಣ್ಣಿಗೆಸಿಯಿರಿ. ಬರುವ ಮಳೆಗಾಲದಲ್ಲಿ ಆ ಓಟೆ ಅಲ್ಲೇ ಬೇರು ಬಿಟ್ಟು ಮೇಲೆ ಹಸಿರಾಗಿ ಕುಡಿಯೊಡೆಯುವುದು. ಅದೇ ಮುಂದೆ ಗಿಡವಾಗಿ ಮರವಾಗಿ ಹೂಬಿಟ್ಟು ಕಾಯಾಗಿ ಹಣ್ಣಾಗಿ ನಿಮ್ಮ ಮೊಮ್ಮಕ್ಕಳು ಆ ಹಣ್ಣನ್ನು ಆಹಾಎಂದು ತಿಂದು ಚಪ್ಪರಿಸುವರು. ಸಿಹಿಯ ಸಡಗರವು ಮುಂದಿನ ತಲೆಮಾರಿಗೆ ಹಾಗೆಯೇ ವರ್ಗವಾಗುವುದು. 

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]

Thursday, June 02, 2016

ಸಾಸ್ವೆ ಮಾವು

ಬಿಗ್‌ಬಜಾರಿನ ಪ್ರಖರ ದೀಪಬೆಳಕಲಿ
ಬೆಲೆಯ ಲೇಬಲ್ಲು ಹೊದ್ದು ಕೂತದ್ದಿಲ್ಲ..
ಮೇಳಗಳ ಮಳಿಗೆಯಲಿ ಮಂತ್ರಿವರ್ಯರ ಬಾಯಿ
ಸಿಹಿಮಾಡಿ ಫೋಟೋಗೆ ಪೋಸು ಕೊಟ್ಟದ್ದಿಲ್ಲ..
ರಟ್ಟಪೆಟ್ಟಿಗೆಯಲಿ ಘನಮಾಡಿ ತುಂಬಿಸಲ್ಪಟ್ಟು
ದೇಶಾಂತರ ರಫ್ತಾದದ್ದೂ ಇಲ್ಲ..
ಬೀದಿಬದಿಯ ತಳ್ಳುಗಾಡಿಯಲಿ ಬೀಳದಂತೆ ಪೇರಿಸ್ಪಟ್ಟು
ಮಾರಾಟವಾಗುವ ಭಾಗ್ಯ ಸಹ ಇಲ್ಲ..

ಕಾನನದ ಮಾಮರವೊಂದು ಮೈತುಂಬ ಪೂತು
ಇಬ್ಬನಿ ಬಿಸಿಲು ಗಾಳಿ ಮಳೆ ಕೋಗಿಲೆಕೂಗನ್ನೆಲ್ಲ ಸಹಿಸಿ
ಗೊಂಚಲುಗಳಲಿ ಮಿಡಿತೂಗಿ ಹಟಹಿಡಿದು ಮಾಗಿ ಹಣ್ಣಾಗಿ
ರಸದುಂಬಿ ಬೀಗಿ ಸಿಹಿಯಾಗಿ ಕೆಂಪಾಗಿ ಸಫಲತೆಯ ಪಡೆದು

ಊರ ಪೋರರಿಗೀಗ ಹಬ್ಬ.. ಹಿತ್ತಿಲ ಹಿಂದಿನ ಕಾಲುದಾರಿಯಲಿ
ಪುಟ್ಟಪಾದಗಳ ಓಡು. ಬಾಗುಮಟ್ಟಿಗಳೂ ತುರುಚಿಗಿಡಗಳೂ ಲೆಕ್ಕಕ್ಕಿಲ್ಲ.
ಮನೆಗಳನು ಮುಚ್ಚಿದರೂ ತೆರೆದೇ ಇರುವ ಈ ಕಾಡದಾರಿ
ಸೈಕಲ್ಲಿನಲ್ಲಿ ಬಂದವರನ್ನೂ ಟಯರ್ ಓಡಿಸಿಕೊಂಡು ಬಂದವರನ್ನೂ
ಒಟ್ಟಿಗೇ ತಲುಪಿಸುತ್ತದೆ ಸಾಸ್ವೆ ಮಾವಿನಮರದ ಬುಡಕೆ..

ತಣ್ಣೆಳಲ ಕೆಳಗೀಗ ಸರೀ ಬಡಿಗೆಗಾಗಿ ಹುಡುಕಾಟ
ಕಲ್ಲಲ್ಲೇ ಬೀಳಿಸುವೆವೆನ್ನುವ ಧೀರರ ಹಾರಾಟ
ಬೀಸಿ ಒಗೆದರೆ, ಪಕ್ಕದೂರ ನಾಚುಪೋರಿಯೂ ಮನಮೆಚ್ಚುವಂತೆ ಫಲಧಾರೆ
ಓಡಿ ಆಯುವ ಭರದಲ್ಲಿ ಚೂರೇ ಕೈತಾಕಿ ಕಣ್ತುಂಬ ಸಂಭ್ರಮತಾರೆ

ಬಡಿದು ಬೀಳಿಸಿ ಹೆಕ್ಕಿ ಗುಡ್ಡೆಹಾಕಿ ಇಡೀ ಹಣ್ಣು ಬಾಯೊಳಗಿಟ್ಟು
ರಸಹೀರಿ ಹೊಟ್ಟೆ ತುಂಬುವವರೆಗೂ ತಿಂದು ಕುಣಿದು ಕುಪ್ಪಳಿಸಿ
ನಾನಾ ಆಟವಾಡಿ ದಣಿದು ಅಲ್ಲೇ ತುಸು ವಿರಮಿಸಿ
ಇನ್ನೂ ಉಳಿದ ಹಣ್ಣುಗಳು ಬಕ್ಕಣದಲ್ಲೂ ಪುಟ್ಟ ಕೈಚೀಲದಲ್ಲೂ
ತುಂಬಿಸಲ್ಪಟ್ಟು ಮನೆ ಸೇರಿ, ಇಂದು ಮಧ್ಯಾಹ್ನದೂಟದ
ಸಾಸ್ವೆಯಲಿ ತೇಲುವ ಪುಟ್ಪುಟ್ಟ ಹಣ್ಣುಗಳು..
ಮೇಯ್ದು ಸಂಜೆ ಕೊಟ್ಟಿಗೆಗೆ ಮರಳಿದ ಗೌರಿ
ಹಾಕಿದ ಸಗಣಿಯಲ್ಲೂ ಪುಟ್ಪುಟ್ಟ ಓಟೆಗಳು.

ಸಾಸ್ವೆ ಮಾವಿನಹಣ್ಣು ಯಾವ ಮಾರ್ಕೆಟ್ಟಿನಲ್ಲೂ ಸಿಗುತ್ತಿಲ್ಲ...
ಆಪೋಸು ರಸಪುರಿಗಳ ನೀಟಾಗಿ ಕತ್ತರಿಸಿ ಸಿಪ್ಪೆ ಸಹ ತೆಗೆದು
ಪಿಂಗಾಣಿ ಬಟ್ಟಲಲಿ ಜೋಡಿಸಿ ಟೇಬಲಿನ ಮೇಲಿಟ್ಟಿದ್ದಾರೆ ಚಮಚದೊಂದಿಗೆ..
ಏಸಿಯಿಂದ ಬಂದ ತಂಪುಗಾಳಿಯಲ್ಲಿ ತೇಲಿಬರುತ್ತಿದೆ ಆ
ಕಾಡಮಾವಿನ ಮರದ ಸಾಸ್ವೆಹಣ್ಣಿನ ರುಚಿಯ ನೆನಪು..
ನೂರುಮರ ನಡುವೆ ಹೆಸರಿಲ್ಲದೆ ಹಸಿರಾಗಿ ತೂಗುವ ತುಂಬುತರು..
ಕಾಡುತ್ತಿದೆ ಆ ಕಾಡಹಾದಿ.. ಯಾರಾದರೂ ತಂದುಕೊಟ್ಟಿದ್ದರೆ
ರಾತ್ರಿಯಡುಗೆಗೆ ಸಾಸ್ವೆಗಾಗುತ್ತಿತ್ತು ಎಂದು ನಿಟ್ಟುಸಿರಿಡುವ ಅಮ್ಮ.

Monday, July 09, 2007

ಗಂಗಮ್ಮನ ಜೀರಿಗೆ

ನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಓದಿ: ನನ್ನ ಅಮ್ಮನಿಗೆ ಹುಳಿ ಅಂದ್ರೆ ಪಂಚಪ್ರಾಣ. ಅವಳು ಮಾಡಿದ ಅಡುಗೆ ಯಾವಾಗಲೂ ಹುಳ್‍ಹುಳ್ಳಗಿರುತ್ತದೆ. ಅದಕ್ಕೇ ಅಪ್ಪ ಅದನ್ನು ಬಡಿಸಿಕೊಳ್ಳುವ ಮುನ್ನ ಪ್ಲೇಟಿನ ತುದಿಗೆ ಒಂದೇ ಒಂದು ಹನಿ ಬಿಟ್ಟುಕೊಂಡು, ನಾಲಿಗೆಯಿಂದ ಚಪ್ಪರಿಸಿ ಎಷ್ಟು ಹುಳಿಯಾಗಿದೆ ಎಂದು ನೋಡಿ, ಆ ನಂತರ ಅನ್ನಕ್ಕೆ ಬಡಿಸಿಕೊಳ್ಳುತ್ತಾನೆ. ಏಕೆಂದರೆ ಅಪ್ಪನಿಗೆ ಹುಳಿ ದೂರ.

ಅಮ್ಮನ ನೆನಪನ್ನು ಹತ್ತಿಕ್ಕಲಾಗದೇ ಊಟ ಮಾಡುತ್ತಲೇ ಮನೆಗೆ ಫೋನಿಸಿದೆ. ಫೋನಿತ್ತಿದವಳು ಅಮ್ಮನೇ. ಊರಲ್ಲಿ ಜೋರು ಮಳೆಯಂತೆ. 'ಹುಚ್ಚಾಪಟ್ಟೆ ಗಾಳಿ ಸಹ' ಎಂದಳು ಅಮ್ಮ. ಹುಣಸೇಹಣ್ಣಿನ ಗೊಜ್ಜಿಗೆ ಹುಳಿ ಜಾಸ್ತಿಯಾಗಿರುವುದನ್ನು ಹೇಳಿದ ನಾನು 'ಈ ವರ್ಷ ಗಂಗಮ್ಮನ ಜೀರಿಗೆ ಫಸಲು ಬಂದಿದೆಯಾ?' ಎಂದು ಕೇಳಲು ಮರೆಯಲಿಲ್ಲ. ಈ ಗಂಗಮ್ಮನ ಜೀರಿಗೆ ಎಂಬುದು ನಮ್ಮ ಸೀಮೆಯಲ್ಲೆಲ್ಲಾ ಫೇಮಸ್ಸಾಗಿರುವ ಒಂದು ಮಾವಿನ ಮರ. ನಮ್ಮೂರಲ್ಲಿ ಪ್ರಮೋದ ಅಂತ ಎರಡನೇ ಕ್ಲಾಸಿಗೆ ಹೋಗುವ ಒಬ್ಬ ಹುಡುಗನಿದ್ದಾನೆ. ಪ್ರಮೋದನ ಅಪ್ಪ ಪ್ರಕಾಶಣ್ಣ. ಪ್ರಕಾಶಣ್ಣನ ಅಪ್ಪ ಸೀತಾರಾಮಣ್ಣ. ಸೀತಾರಾಮಣ್ಣನ ಅಪ್ಪ ಶೀನಪ್ಪಜ್ಜ. ಶೀನಪ್ಪಜ್ಜನ ಅಮ್ಮ ಗಂಗಮ್ಮ. ಈ ಗಂಗಮ್ಮ ತನ್ನ ತವರಿನಿಂದ ತಂದಿದ್ದ ಮಾವಿನಕಾಯಿಯಿಂದ ಗೊಜ್ಜು ಮಾಡಿ ಅದರ ಓಟೆಯನ್ನು ತೋಟದಲ್ಲಿ ಎಸೆದಿದ್ದಂತೆ. ಹಾಗೆ ಎಸೆಯಲ್ಪಟ್ಟಿದ್ದ ಓಟೆ, ಬಂದ ಮುಂಗಾರು ಮಳೆಯ ಹನಿಗಳ ಮಾಯಾಸಿಂಚನಸ್ಪರ್ಶಕ್ಕೆ ಒಳಗಾಗಿ, ಅಲ್ಲೇ ನೆಲದಲ್ಲಿ ಬೇರೂರಿ, ಮೇಲೆ ಪುಟ್ಟ ಮೊಳಕೆಯಾಗಿ ಒಡೆದು, ಗಿಡವಾಗಿ ಬೆಳೆದು, ಆಮೇಲೆ ಮರವಾಗಿ, ಈಗ ಹೆಮ್ಮರವಾಗಿ ನಿಂತಿರುವುದು ಒಂದು ಇತಿಹಾಸ. ಈ ಮರ ಎಷ್ಟು ದೊಡ್ಡದಾಗಿದೆಯೆಂದರೆ, ಇದನ್ನು ಒಂದು ರೌಂಡು ಸುತ್ತಿ ಬರಲು ಕನಿಷ್ಟ ಎರಡು ನಿಮಿಷ ಬೇಕು. ಸೀತಾರಾಮಣ್ಣನ ಮನೆ ತೋಟಕ್ಕೂ ಮಹಾಬಲಗಿರಿಯಣ್ಣನ ಮನೆ ತೋಟಕ್ಕೂ ಮಧ್ಯೆ ಹಾಕಲಾಗಿರುವ ಜಂಬಿಟ್ಟಿಗೆ ಪಾಗಾರ ಇದರ ಕಾಂಡದವರೆಗೆ ಬಂದು ನಿಲ್ಲುತ್ತದೆ. ಮತ್ತೆ ಕಾಂಡ ಮುಗಿದಮೇಲೆ ಆ ಕಡೆಯಿಂದ ಮುಂದುವರೆಯುತ್ತದೆ.

ನಾಲ್ಕಾರು ತಲೆಮಾರುಗಳನ್ನು ಕಂಡಿರುವ ಈ ಮರ ಈಗ ತನ್ನ ವಿನಾಶದ ಅಂಚಿನಲ್ಲಿದೆ ಎಂದರೆ ಅದಕ್ಕೆ ಅವಮಾನ ಮಾಡಿದಂತೆ. ಸ್ವರ್ಗದಲ್ಲಿರುವ ಗಂಗಮ್ಮ ನಿಮ್ಮನ್ನು ಶಪಿಸಿಯಾಳು. ಈ ಮರಕ್ಕೆ ವಯಸ್ಸಾಗಿದೆ ನಿಜ. ಪೂರ್ತಿ ಲಡ್ಡಾಗಿದೆ ನಿಜ. ತೋಟಕ್ಕೆ ಅಡಿಕೆ ಹೆಕ್ಕಲು ಹೋದಾಗ ಜೋರು ಗಾಳಿ ಬೀಸಿದರೆ ಇದರ ಕೊಂಬೆಗಳು ಮುರಕೊಂಡು ತಲೆಮೇಲೇ ಬೀಳುತ್ತವೆ ನಿಜ. ಹಾಗಂತ ನೀವಿದರ ಆಯಸ್ಸೇ ಮುಗಿದಿದೆ ಎಂದು ತೀರ್ಮಾನಿಸುವಂತಿಲ್ಲ. ಮರ ಲಡ್ಡಾದರೂ ಅದರ ಕಾಯಿಯ ಹುಳಿ ಮುಕ್ಕೇ? ಗಂಗಮ್ಮನ ಜೀರಿಗೆ ಮರ ಈಗ ಪೂರ್ತಿ ಜೀರ್ಣವಾಗಿರುವುದರಿಂದ ಅದನ್ನು ಹತ್ತಿ ಮಿಡಿ ಇಳಿಸುವ ಸಾಹಸವನ್ನು ಇತ್ತೀಚಿನ ವರ್ಷಗಳಲ್ಲಿ ಯಾರೂ ಮಾಡಿಲ್ಲ. ಮರದಲ್ಲಿ ಫಸಲು ಬಂದರೆ ಅದು ಹಣ್ಣಾಗಿ ಉದುರುವವರೆಗೂ ಕಾಯಬೇಕು. ಉದುರಿದ ಹಣ್ಣನ್ನೇ ಹೆಕ್ಕಿಕೊಂಡು ಬಂದು, ಅದರ ಹುಳಿ ಹಿಂಡಿ, ನೀರುಗೊಜ್ಜನ್ನೋ ಮಂದನಗೊಜ್ಜನ್ನೋ ಮಾಡಿ ಉಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ ಊರ ಜನ. ಈ ಮರ ಶೀನಪ್ಪಜ್ಜನ ಮನೆಗೆ ಸೇರಿದ ಆಸ್ತಿಯಾದರೂ ಅವರ ಮನೆಯವರೇನು ಯಾರು ಬಂದು ಹಣ್ಣು ಹೆಕ್ಕಿಕೊಂಡು ಹೋದರೂ ಆಕ್ಷೇಪಿಸುವುದಿಲ್ಲ.

ಗಂಗಮ್ಮನ ಜೀರಿಗೆ ಅದರ ಹುಳಿಗಿಂತಲೂ ಪರಿಮಳಕ್ಕೆ ಪ್ರಸಿದ್ಧ. ಈಗ ಐದಾರು ವರ್ಷಗಳ ಹಿಂದೆ ಕೊನೆಕಾರ ಶೀನ ಭಾರೀ ಧೈರ್ಯ ಮಾಡಿ ಈ ಮರ ಹತ್ತಿದ್ದ. ಸುಮಾರಿನವರೆಲ್ಲ ಹತ್ತುವ ಮರವೇ ಅಲ್ಲ ಇದು. ಸುಮಾರು ಎಂಟು ಅಂಕಣಕ್ಕಿರುವ ಇದಕ್ಕೆ ಏಣಿ ಹಾಕಿ, ಹಗ್ಗ ಬಿಗಿದು, ಏನೇನೋ ಕಸರತ್ತು ಮಾಡಿ ಮರ ಹತ್ತಿದ್ದ ಶೀನ. ಆದಷ್ಟೂ ಮೇಲೆ ಹೋಗಿ ಜಾಸ್ತಿ ಮಿಡಿ ಬಂದಿದ್ದ ಒಂದಷ್ಟು ರೆಂಬೆಗಳನ್ನು ಕಡಿದು ಉರುಳಿಸಿದ್ದ. ಆಗ ಈ ಮಿಡಿಗಳನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ ಜನಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು. 'ಒಂದು ಹತ್ತು ಮಿಡಿ ಸಿಕ್ಕಿದ್ರೆ ಸಾಕಿತ್ತೇ, ನಮ್ಮನೆ ಉಪ್ಪಿನ್‍ಕಾಯಿ ಜೊತಿಗೆ ಸೇರುಸ್ತಿದ್ದಿ' ಎಂದ ಸರೋಜಕ್ಕನಿಂದ ಹಿಡಿದು 'ಕೊನಿಗೆ ಎರ್ಡು ಚಮಚ ಸೊನೆನಾದ್ರೂ ಸಿಕ್ಕಿದ್ರೇ...' ಎಂದು ಆಸೆ ಪಟ್ಟುಕೊಂಡ ಗೌರಕ್ಕನವರೆಗೆ ಊರ ಜನಗಳ ಸಾಲಿತ್ತು. ಊರವರಷ್ಟೇ ಅಲ್ಲ, ಇಡೀ ಸೀಮೆಯವರು, ಅಷ್ಟೇ ಏಕೆ, ಬೆಂಕಟವಳ್ಳಿಯಿಂದ ನನ್ನ ಮಾವ ಫೋನ್ ಮಾಡಿ 'ಜೀರಿಗೆ ಮಾವಿನ ಮಿಡಿ ಇಳಿಸಿದ್ರಡ, ಸುದ್ದಿ ಗೊತ್ತಾತು, ಒಂದು ನಾಲ್ಕು ಮಿಡಿ ನಮ್ಮನಿಗೆ ಎತ್ತಿಡಕ್ಕಾಗ್ತಾ ನೊಡಿ' ಎಂದು ಅರ್ಜಿ ಇಟ್ಟಿದ್ದ! ಹೀಗೆ, ಆ ವರ್ಷ ನಮ್ಮೂರಿನ ಗಂಗಮ್ಮನ ಜೀರಿಗೆಯ ಮಿಡಿಗಳು ಯಾವ್ಯಾವುದೋ ಊರಿನ ಯಾರ್ಯಾರದೋ ಮನೆಯ ಅಡುಗೆಮನೆ ನಾಗಂದಿಗೆ ಮೇಲಿದ್ದ ಉಪ್ಪಿನಕಾಯಿ ಜಾರಿಯ ಒಡಲು ಸೇರಿಕೊಂಡುಬಿಟ್ಟವು.

ನೀವು ಏರಿಸಿದ್ದ ಹುಬ್ಬನ್ನು ಈಗಾಗಲೇ ಇಳಿಸಿರುತ್ತೀರಿ ಎಂದು ನನಗೆ ನಂಬಿಕೆ ಇದ್ದರೂ 'ಊರಲ್ಲಿ ಗಾಳಿಮಳೆ' ಎಂದಾಕ್ಷಣ ನನಗೆ ಈ ಜೀರಿಗೆ ಮಾವಿನ ಮರ ನೆನಪಾದದ್ದು ಯಾಕೆ ಎಂಬ ನಿಮ್ಮ ಸಂಶಯವನ್ನು ನಾನು ಈಗ ಪರಿಹರಿಸುತ್ತೇನೆ. ನಾನು ಊರಲ್ಲಿದ್ದಾಗ ಮನೆಯಲ್ಲಿದ್ದರೆ ಈ ಗಂಗಮ್ಮನ ಜೀರಿಗೆ ಹಣ್ಣು ಹೆಕ್ಕುವ ಪಾಳಿ ನನ್ನದಾಗಿರುತ್ತಿತ್ತು. ಜೋರು ಗಾಳಿ ಬೀಸಿದರೆ, ಮಳೆ ಬಂದರೆ ಮರ ಹಣ್ಣುಗಳನ್ನು ಉದುರಿಸುತ್ತಿತ್ತು. ಇದನ್ನು ಅರಿತಿದ್ದ ಊರ ಜನ ಅಲ್ಲಿಗೆ ಮುತ್ತಿಗೆ ಹಾಕುತ್ತಿದ್ದರು. ಅದರಲ್ಲೂ ಮಾಬ್ಲಗಿರಣ್ಣ ಮತ್ತು ಅನ್‍ಪೂರ್ಣಕ್ಕ! ಅವರಿಗೆ ಕಾಂಪಿಟಿಶನ್ ಕೊಡಲಿಕ್ಕೆ ನಾನು! ನಮ್ಮನೆ ಎದುರುಗಡೆಯೇ ತೋಟಕ್ಕೆ ಇಳಿಯಲಿಕ್ಕೆ ಒಂದು ದಾರಿಯಿದೆ. ಗಾಳಿ ಬೀಸತೊಡಗಿ, ಮಾಬ್ಲಗಿರಣ್ಣ ನಮ್ಮನೆ ಎದುರಿಗೆ ಚಬ್ಬೆ ಹಿಡಿದು ತೋಟಕ್ಕೆ ಇಳಿದದ್ದು ಕಂಡಿತೋ, ನಾನು ಪುಸಕ್ಕನೆ ಗೇಟು ದಾಟಿ ನಡೆದು ಮೇಲ್ಗಡೆ ತೋಟಕ್ಕೆ ಇಳಿಯುವ ದಾರಿಯಲ್ಲಿ ಇಳಿದು, ಮಾಬ್ಲಗಿರಣ್ಣ ಬರುವ ಮೊದಲೇ ಮರದ ಜಾಗವನ್ನು ತಲುಪಿಬಿಡುತ್ತಿದ್ದೆ! 'ಏನೋ? ಸಿಕ್ಚನೋ?' ಎಂದ ಮಾಬ್ಲಗಿರಣ್ಣನಿಗೆ 'ಇಲ್ಯಾ, ಎರಡೇ ಸಿಕ್ಕಿದ್ದು' ಎನ್ನುತ್ತಾ ಕೈಯಲ್ಲಿದ್ದ ಎರಡು ಹಣ್ಣನ್ನು ಮಾತ್ರ ತೋರಿಸಿ ತುಂಬಿದ್ದ ಚೀಲವನ್ನು ಲುಂಗಿಯಿಂದ ಮುಚ್ಚಿಕೊಳ್ಳುತ್ತಿದ್ದೆ.

ಅಮ್ಮ ಈ ವರ್ಷವೂ ಗಂಗಮ್ಮನ ಜೀರಿಗೆ ಫಸಲು ಬಂದಿರುವುದನ್ನು ಹೇಳಿದಳಲ್ಲದೇ ನಾನು ಮಾಡಿದ ಹುಣಸೇಹಣ್ಣಿನ ಗೊಜ್ಜಿಗೆ ಇನ್ನಷ್ಟು ಬೆಲ್ಲ ಹಾಕುವುದರ ಮೂಲಕ ಹುಳಿ ಕಮ್ಮಿ ಮಾಡಬಹುದೆಂದೂ ಹೇಳಿದಳು. ಆದರೆ ಅವಳು ಹೇಳುವ ಹೊತ್ತಿಗಾಗಲೇ ನನ್ನ ಊಟ ಮುಗಿಯಲು ಬಂದಿತ್ತಾದ್ದರಿಂದ ಆ ಸಲಹೆಯಿಂದ ಪ್ರಯೋಜನವೇನು ಆಗಲಿಲ್ಲ. ಊಟ ಮುಗಿದು, ಫೋನಿಟ್ಟು, ಎದ್ದು ಕೈ ತೊಳೆದು ತೇಗುವಾಗ ಅದೇ ಗಂಗಮ್ಮನ ಜೀರಿಗೆಯ ಪರಿಮಳ ನನ್ನ ನೆನಪಿನಾಳದಿಂದ ತೇಲಿ ಬಂದದ್ದು ಮಾತ್ರ ನಿಮ್ಮ ನಾಲಿಗೆಯಡಿ ಜಿನುಗಿದ ನೀರಿನಷ್ಟೇ ಸತ್ಯ.

[ಈ ಲೇಖನ, ದಿನಾಂಕ ೨೬.೦೮.೨೦೦೭ರ ವಿಜಯ ಕರ್ನಾಟಕ - ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದೆ.]