Tuesday, December 15, 2009

ಹೂಮಾಲೆ

-ಸಂಜೆ-

ಬಿಡಿ ಮುಡಿಯುವಂತಿಲ್ಲ
ಅಬ್ಬಲಿಗೆಯನ್ನು
ಕಟ್ಟಲೇಬೇಕು ಮಾಲೆ

ಹನಿಸಿದ ನೀರ
ತುಂತುರುಗಳಿನ್ನೂ
ಇರುವಾಗಲೇ ಗುಚ್ಚುಗಳ
ಸಂದಿಯಲಿ

ಕೀಳಬೇಕು ಹೂವ
ಬಿಡಿಸಿ ತೊಟ್ಟ ಬಂಧ
ತುಂಬುವನಕ ಬುಟ್ಟಿ


-ರಾತ್ರಿ-

ಕಚ್ಚಿ ಹಲ್ಲಿಂದ
ಕತ್ತರಿಸಿದ ದಾರ
ಸುತ್ತಿ ಬೆರಳಿಂದ ಮಾಡಿ
ಗಂಟು

ನಾಲ್ಕು ನಾಲ್ಕು
ಆಚೆ ಈಚೆ
ಒಟ್ಟು ನೂರು ಹೂವು

ಹಳದಿ-ಕೆಂಪು
ಮಾಲೆ ಮೇಲೆ
ಕರಗಿ ಚಿಮಣಿ
ದೀಪ ಬೆಳಕು

ಹೂವ ಬಣ್ಣ ಹೆಚ್ಚಿತೆ?
ಚಳಿಯ ರಾತ್ರಿ,
ಸೆಳೆವ ನಿದ್ರೆ
ಬೆರಳ ವೇಗ ಕಸಿಯಿತೆ?

ಎಷ್ಟು ಮಾಲೆ
ಒಟ್ಟು ಎಂಬ
ಲೆಕ್ಕ ತಪ್ಪಿ ಹೋಯಿತೆ?


-ಉಷೆ-

ಬಿಳಿಯಂಗಿ
ನೀಲಿ ಲಂಗ
ಕೆಂಪು ರಿಬ್ಬನ್ನು
ಎರಡೂ ಜುಟ್ಟಿಗೆ

ಹೆದ್ದಾರಿಯಲಿಹ ಶಾಲೆಗೆ
ಮೈಲಿಯೆರಡು
ಕಾಲ್ನಡಿಗೆ

ಹಾಯುವ ಕಾರು
ತುಂಬಿದ ಬಸ್ಸು
ಸೆಳೆಯಲೆಬೇಕು
ಎಲ್ಲರ ಕಣ್ಣು

ಬಾಗಿದಂತೆ
ಮರದ ಟೊಂಗೆ
ಎತ್ತರದಲಿ
ಹಿಡಿದು ಕೈ

ತೂಗಬೇಕು ಕೂಗಬೇಕು
'ಮಾಲೆ ಆಣಿಗೆರಡು'
ನಿಂತರೊಂದು ವಾಹನ,
ಕೇಳ್ದ ಬೆಲೆಗೆ ಕ್ರಯವು

'ನೂರು ಹೂವ ಮಾಲೆ
ಮುಡಿದು ಮುಂದೆ ದಾರಿ ಸಾಗಿರಿ
ಚೈತ್ರಗಂಧ ಹಿಂದೇ ಬರುವ
ಮೋಡಿಯನ್ನು ನೋಡಿರಿ'


-ಮಧ್ಯಾಹ್ನ-

ಶಾಲೆಯ ಊಟದ ಸಮಯದಿ
ಈಕೆಗೆ ಏಕೋ ಏನೋ
ತರಾತುರಿ

ಮೂಲೆಯಲಿರುವ ಅಂಗಡಿಯಲ್ಲಿ
ಕೂತಿಹ ನಸುನಗು
ವ್ಯಾಪಾರಿ

ಕೂಡಿಹ ಚಿಲ್ಲರೆ ಕಾಸಿಗೆ
ಸಿಕ್ಕದೆ ಹೊಸ ರಿಬ್ಬನ್,
ಹೇರ್‌ಕ್ಲಿಪ್, ಪ್ಲಾಸ್ಟಿಕ್
ಗುಲಾಬಿ?

Wednesday, December 02, 2009

ಒಂದು ಹೆಸರಿಡದ ಪ್ರಬಂಧ

ಬಹುಶಃ ಈ ಕಷ್ಟವನ್ನು ಬಹಳಷ್ಟು ಜನ ಅನುಭವಿಸಿರುತ್ತಾರೆ. ಸ್ವಲ್ಪ ನಮಗೆ ಏನಾದರೂ ‘ಬರೆಯಲಿಕ್ಕೆ’ ಬರುತ್ತದೆ ಎಂದಾದರೆ ಸಾಕು, ಜನ ‘ನಮ್ಗೂ ಬರ್ಕೊಡು’ ಅಂತ ಮುತ್ತಿಕೊಂಡುಬಿಡುತ್ತಾರೆ.

ಊರಲ್ಲಿ ಅಪ್ಪನಿಗೆ ಇಂಥದೇ ಕಷ್ಟ ತಗುಲಿಹಾಕಿಕೊಳ್ಳುತ್ತಿತ್ತು. ಏನಾದರೂ ಅರ್ಜಿ ಬರೆಸುವುದಿದ್ದರೆ, ವರದಿ ಬರೆಸುವುದಿದ್ದರೆ, ಸನ್ಮಾನ ಪತ್ರ ಬರೆಸುವುದಿದ್ದರೆ ಜನ ಅಪ್ಪನ ಬಳಿ ಬರುತ್ತಿದ್ದರು. ಅಪ್ಪನ ಕೈಬರಹ ಸಹ ಅಷ್ಟೇ ಚಂದ ಇರುವುದರಿಂದ ಬರೆದದ್ದನ್ನು ಪ್ರಿಂಟ್ ಮಾಡಿಸುವ ಅವಶ್ಯಕತೆ ಸಹ ಇರುತ್ತಿರಲಿಲ್ಲ.

ಅರ್ಜಿ, ವರದಿ ಅಷ್ಟೇ ಅಲ್ಲದೇ ಅಪ್ಪನ ಬಳಿ ಬೋರ್ಡು, ಬ್ಯಾನರ್ರು, ಛತ್ರಿಯ ಮೇಲೆ ಹೆಸರು ಬರೆಸುವುದಕ್ಕೂ ಜನ ಬರುತ್ತಿದ್ದರು. ಕಪ್ಪು ಕೊಡೆಯ ಒಳಗೆ ಪೆನ್ಸಿಲ್ಲಿನಿಂದ ನೀಟಾಗೆರಡು ಗೆರೆ ಎಳೆದುಕೊಂಡು, ಜೀರೋ ಪಾಯಿಂಟ್ ಕುಂಚವನ್ನು ಪುಟ್ಟ ಆಯಿಲ್ ಪೇಯಿಂಟ್ ಡಬ್ಬಿಯೊಳಗೆ ಅದ್ದಿ ತೆಗೆದ ಬಣ್ಣದಿಂದ ‘ಜಿ. ನಾರಾಯಣರಾವ್, ದೊಡ್ಡೇರಿ’ ಅಂತಲೋ ‘ಸುಜಾತಾ ರಾಘವೇಂದ್ರ, ದೊಡ್ಡೇರಿ’ ಅಂತಲೋ ನಾಲಿಗೆ ಕಚ್ಚಿಕೊಂಡು, ತದೇಕಚಿತ್ತದಿಂದ ಬರೆಯುತ್ತಿದ್ದ ಅಪ್ಪ. ಪಕ್ಕದಲ್ಲಿ ಕೂತು ಅದನ್ನೇ ನೋಡುತ್ತಿದ್ದ ನನಗೆ ‘ಹಂದಾಡ್ಸಡ ಮತ್ತೆ.. ಅಪ್ಪ ಬೈತ’ ಅಂತ ಅಮ್ಮ ಅಡುಗೆಮನೆಯಿಂದ ಎಚ್ಚರಿಕೆ ಕೊಡುತ್ತಿದ್ದಳು. ಆದರೆ ಹಾಗೆ ನೋಡಿ ನೋಡಿಯೇ ಬಂತೋ ಅಥವಾ ಅಪ್ಪನ ಜೀನ್ಸಿನಲ್ಲೇ ಬಂದಿತ್ತೋ, ನನ್ನ ಕೈಬರಹವೂ ಮುದ್ದಾಗಿ ರೂಪುಗೊಂಡುಬಿಟ್ಟಿತು. ಶಾಲೆಯ ಪ್ರತಿವರ್ಷದ ‘ದುಂಡಕ್ಷರ ಸ್ಪರ್ಧೆ’ಯಲ್ಲೂ ನನಗೇ ಮೊದಲ ಬಹುಮಾನ ಬರುತ್ತಿದ್ದುದು. ಪರಿಣಾಮವಾಗಿ, ಈ ಬೋರ್ಡು ಬರೆಯುವ, ಛತ್ರಿ ಮೇಲೆ ಹೆಸರು ಬರೆಯುವ ಕೆಲಸ ಕೆಲವೇ ವರ್ಷಗಳಲ್ಲಿ ಅಪ್ಪನಿಂದ ನನಗೆ ವರ್ಗಾವಣೆಯಾಯ್ತು. ಅಪ್ಪನೇ ತನಗೆ ಯಾರಾದರೂ ಏನನ್ನಾದರೂ ಬರೆದುಕೊಡಲಿಕ್ಕೆಂದು ಕೊಟ್ಟದ್ದನ್ನು ನನಗೆ ವರ್ಗಾಯಿಸುತ್ತಿದ್ದ. ನಾನೂ ಖುಶಿಯಿಂದಲೇ ಅವನ್ನೆಲ್ಲ ಮಾಡುತ್ತಿದ್ದೆ.

ಆದರೆ ನಿಜವಾದ ಸಮಸ್ಯೆ ಶುರುವಾದದ್ದು ನಾನು ಕನ್ನಡದಲ್ಲಿ ಕತೆ-ಕವಿತೆ ಬೇರೆ ಬರೀತೀನಿ ಅನ್ನೋದು ಜನಕ್ಕೆ ಗೊತ್ತಾದಾಗ! ಈ ಕತೆ-ಕವಿತೆ ಬರಿಯೋರು ಇಡೀ ಪದಕೋಶವನ್ನೇ ಜಗಿದು ನುಂಗಿ ಜಠರದಲ್ಲಿಟ್ಟುಕೊಂಡಿರುತ್ತಾರೆ ಎಂದು ತಪ್ಪು ತಿಳಿದುಕೊಂಡಿರುವ ಜನ, ಅವಕಾಶ ಸಿಕ್ಕಾಗಲೆಲ್ಲ ನಮ್ಮನ್ನು ಪರೀಕ್ಷೆಗೊಡ್ಡುತ್ತಿರುತ್ತಾರೆ. ನಾವು ಯಾವುದೋ ಬ್ಯುಸಿಯಲ್ಲಿ ಮುಳುಗಿದ್ದಾಗ ಧಡಾರನೆ ಬಂದು, “ಈ ಶಬ್ದದ ಅರ್ಥ ಏನು?” ಅಂತಲೋ “ಇದಕ್ಕೆ ಕನ್ನಡದಲ್ಲಿ ಏನಂತಾರೆ?” ಅಂತಲೋ ನಾಲ್ಕು ಜನರ ಎದುರಿಗೆ ಕೇಳಿ ಅಲ್ಲೇ ನಿಂತುಬಿಡುತ್ತಾರೆ. ‘ಈ ನನ್ ಮಗನ ಮಾನ ಹರಾಜ್ ಹಾಕ್ಬೇಕು’ ಎಂದುಕೊಂಡು ಇಂತಹ ಸಂದರ್ಭಗಳನ್ನೇ ಕಾಯುತ್ತಿದ್ದ ನಮ್ಮ ನಸೀಬು ಆ ಕ್ಷಣದಲ್ಲೇ ಕೈ ಕೊಟ್ಟು, ನಾವು ಅದೆಷ್ಟೇ ಪ್ರಯತ್ನಪಟ್ಟರೂ ಆ ಶಬ್ದ ಗಂಟಲಿಂದ ಈಚೆಗೇ ಬರದೇ ಇರುವಂತೆ ಮಾಡುತ್ತದೆ. “ಹೆಹೆ, ಅದಾ.. ಹೆಹೆ..” ಎನ್ನುತ್ತಾ ನಾವು ಪೆಚ್ಚುನಗೆ ನಗುವಂತೆ ಮಾಡುತ್ತದೆ.

ಇರಲಿ, ಏನೋ ತಮಗೆ ಗೊತ್ತಿಲ್ಲದ್ದು ನಮಗೆ ಗೊತ್ತಿರಬಹುದು ಅಂತ ನಮ್ಮ ಬಳಿ ಬರುವ ಜನ ಇವರು. ಆದರೆ ನನಗೆ ವಿಪರೀತ ಕೋಪ ಬರುವುದು “ನನ್ ಹೆಂಡತಿಗೆ ಡೆಲಿವರಿ ಆಯ್ತು ಇವತ್ತು.. ಗಂಡು ಮಗು.. ‘ಸ’ ಅಕ್ಷರದಿಂದ ಶುರು ಆಗೋ ಒಂದು ಚಂದದ ಹೆಸರು ಹುಡುಕ್ಕೊಡು ಪ್ಲೀಸ್..” ಎನ್ನುತ್ತಾ ಯಾರಾದರೂ ಬಂದಾಗ. ಅಲ್ಲಾ ಸಾರ್, ಡೆಲಿವರಿ ಆಗಿರೋದು ಅವನ ಹೆಂಡತಿಗೆ, ಡೆಲಿವರಿ ಆಗೋಹಾಗೆ ಮಾಡಿರೋದು ಅವನು, ಈಗ ‘ಸ’ ಅಕ್ಷರದಿಂದ ಶುರುವಾಗೋ ಹೆಸರು ಹುಡುಕೋ ಕೆಲಸ ಮಾತ್ರ ನನಗೆ ವಹಿಸೋದು ಯಾವ ರೀತೀಲಿ ಸರಿ? ಅಲ್ಲಾ, ಅದರ ಅರ್ಥ ಬೇರೆ ಯಾವುದಾದರೂ ಕೆಲಸ ನಂಗೆ ವಹಿಸ್ಬೇಕಿತ್ತು ಅಂತ ಅಲ್ಲ, ಡೋಂಟ್ ಮಿಸ್ಟೇಕ್ ಮಿ, ನಾ ಹೇಳಿದ್ದು, ಈ ಜವಾಬ್ದಾರಿ-ತಲೆಬಿಸಿ ನನಗ್ಯಾಕೆ ಅಂತ? ಅದನ್ನೆಲ್ಲಾ ಅವನ ಬಳಿ ಹೇಳೋ ಹಾಗಿಲ್ಲ, ಏನೋ ಪಾಪ, ಅಪರೂಪಕ್ಕೆ ಅಪ್ಪ ಆಗಿದಾನೆ, ಫುಲ್ ಜೋಶಲ್ಲಿ ಇದಾನೆ, ನಾನು ಕನ್ನಡ ರತ್ನಕೋಶ ತೆರೆದಾದರೂ, ಗೂಗಲ್ ಸರ್ಚ್ ಮಾಡಿಯಾದರೂ ಅವನು ಹೇಳಿದ ಅಕ್ಷರದಿಂದ ಶುರು ಆಗೋ ಹೆಸರು ಹುಡುಕಿ ಹೇಳಬೇಕು.

ಇದೂ ಓಕೆ. ಮುಂದ್ಯಾವತ್ತೋ ‘ಅಂಕಲ್’ ಅಂತ ಮುದ್ದು ದನಿಯಿಂದ ನನ್ನನ್ನು ಕರೆಯಬಹುದಾದ ಮಗುವೊಂದಕ್ಕೆ ಹೆಸರು ಕೊಟ್ಟೆನಲ್ಲಾ ಅಂತ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಕೆಲ ಗೆಳೆಯರು ಅದೆಂತಹ ಕೆಳ ಮಟ್ಟಕ್ಕೆ ಇಳಿಯುತ್ತಾರೆ ಅಂದ್ರೆ, ‘ನನ್ ಗರ್ಲ್‌ಫ್ರೆಂಡಿಗೆ ಕಳ್ಸೋಕೆ ಒಂದು ಒಳ್ಳೇ ಎಸ್ಸೆಮ್ಮೆಸ್ ಬರ್ಕೊಡೋ’ ಅಂತೆಲ್ಲ ಕೇಳುತ್ತಾರೆ. ಸ್ವಾಮೀ, ನಮ್ ನಮ್ ಗರ್ಲ್‌ಫ್ರೆಂಡ್ಸಿಗೆ ಎಸ್ಸೆಮ್ಮೆಸ್ ಕಳುಹಿಸ್ಕೊಂಡು ಇದ್ರೆ ಸಾಕಾಗಿರತ್ತೆ, ಇನ್ನು ಬೇರೆಯವರ ಗರ್ಲ್‌ಫ್ರೆಂಡ್ಸಿಗೆ ಎಸ್ಸೆಮ್ಮೆಸ್ ಬರೆದುಕೊಡುವ ಕಷ್ಟವನ್ನೂ ನಾವೇ ತೆಗೆದುಕೊಳ್ಳಬೇಕು ಎಂದರೆ! ‘ಒಬ್ಳಿಗೆ ಕಳ್ಸಿದ್ನೇ ಮತ್ತೊಬ್ಳಿಗೆ ಕಳುಹಿಸಿದ್ರೆ ಆಯ್ತು, ಅವ್ರಿಗ್ ಹೆಂಗ್ ಗೊತ್ತಾಗತ್ತೆ?’ಅಂತ ನೀವು ಕೇಳಬಹುದು, ಇಲ್ಲಾ ಗುರುಗಳೇ, ಅದು ಸಿಕ್ಕಾಪಟ್ಟೆ ಡೇಂಜರಸ್ಸು! “ನೋಡೇ, ನನ್ ಬಾಯ್‌ಫ್ರೆಂಡ್ ಎಷ್ಟ್ ಚಂದ ಎಸ್ಸೆಮ್ಮೆಸ್ ಕಳ್ಸಿದಾನೆ.. ಹಿ ಲವ್ಸ್ ಮಿ ಲೈಕ್ ಎನಿಥಿಂಗ್” ಎನ್ನುತ್ತಾ ತನ್ನ ರೂಮ್‌ಮೇಟಿನ ಮುಖಕ್ಕೆ ಮೊಬೈಲಿನ ಪರದೆಯನ್ನು ಇವಳು ಒಡ್ಡಿದ್ದೇ ತಡ, “ಹೆಹ್! ನಂಗೂ ಬಂದಿದೆ ಆ ಎಸ್ಸೆಮ್ಮೆಸ್. ನನ್ ಬಾಯ್‌ಫ್ರೆಂಡ್ ಕಳ್ಸಿರೋದು” ಎಂದವಳು ಮೂಗು ಮುರಿಯುತ್ತಾಳೆ. ಯು ಅಂಡರ್‌ಸ್ಟೂಡ್ ದ ಕೇಸ್ ರೈಟ್? ನಾನು ನನ್ ಗರ್ಲ್‌ಫ್ರೆಂಡಿಗೆ ಕಳುಹಿಸಿದ್ದ ಎಸ್ಸೆಮ್ಮೆಸ್ಸನ್ನೇ ಗೆಳೆಯನಿಗೂ ‘ಪಾಪ, ಅವನ್ ಗರ್ಲ್‌ಫ್ರೆಂಡಿಗೂ ಕಳುಹಿಸಿಕೊಳ್ಳಲಿ’ ಅಂತ ಫಾರ್ವರ್ಡ್ ಮಾಡಿದ್ದೇ ಆಗಿದ್ದು ತಪ್ಪು! ನೀತಿಯೆಂದರೆ, ಒಂದೇ ಹಾಸ್ಟೆಲ್ಲಿನಲ್ಲಿರೋ ಹುಡುಗಿಯರನ್ನು ಲವ್ ಮಾಡುತ್ತಿರುವ ಇಬ್ಬರು ಗೆಳೆಯರು ಹುಷಾರಾಗಿರಬೇಕು.

ಸರಿ, ಇವೆಲ್ಲ ಟೆಕ್ನಿಕಲ್ ಆಸ್ಪೆಕ್ಟ್ಸ್ ಆಯ್ತು. ಹೇಗೋ, ಸಂಭಾಳಿಸಬಹುದು ಅಂದುಕೊಳ್ಳೋಣ. ಈಗ ಕೆಲ ತಿಂಗಳ ಹಿಂದೆ ನನ್ನ ಎಕ್ಸ್-ಕಲೀಗೊಬ್ಬ ಫೋನ್ ಮಾಡಿದ್ದ. “ಸುಶ್ರುತ್, ನಮ್ಮನೆಗೊಂದು ಹೊಸ ನಾಯಿಮರಿ ತಂದ್ವಿ. ಅದಕ್ಕೆ ಇಡ್ಲಿಕ್ಕೆ ಒಂದು ಹೆಸರು ಹೇಳ್ತೀರಾ ಪ್ಲೀಸ್? ಕನ್ನಡದ್ದು ಬೇಕು. ಇಂಗ್ಲೀಷಿಂದ್ರ ಥರ ಇರ್ಬೇಕು. ಹೊಸಾ ಥರಾ ಇರ್ಬೇಕು. ಪ್ರಕೃತಿಗೆ ಸಂಬಂಧಿಸಿದ್ದಾಗಿರ್ಬೇಕು. ಕರೀಲಿಕ್ಕೆ ಈಜಿ ಇರ್ಬೇಕು. ಹೆಣ್ಣು ನಾಯಿ” ಅಂತ ಅರ್ಜಿಯಿಟ್ಟ. ನಾಯಿಗೆ ಹೆಸರಿಡುವುದು ಎಷ್ಟು ಕಷ್ಟದ ವಿಷಯ ಅಂತ ನನಗೆ ಅರಿವಾದದ್ದು ಆಗಲೇ. ನೋಡಿ, ಮೊದಲನೆಯದಾಗಿ ಅದು ಕನ್ನಡದ ಶಬ್ದ ಆಗಿರಬೇಕು, ಆದರೂ ಇಂಗ್ಲೀಷಿನದರಂತೆ ಧ್ವನಿಸಬೇಕು, ಹಿಂದೆಲ್ಲೂ ಕೇಳಿಲ್ಲ ಎನಿಸಬೇಕು, ಪರಿಸರಕ್ಕೆ ಸಂಬಂಧಿಸಿರಬೇಕು, ಎರಡ್ಮೂರು ಅಕ್ಷರಗಳಲ್ಲಿರಬೇಕು, ಸ್ತ್ರೀಲಿಂಗವಾಗಿರಬೇಕು -ಇಷ್ಟೆಲ್ಲಾ ಆಗಿದ್ದೂ ಅದು ನಾಯಿ ಹೆಸರು ಅಂತ ಗೊತ್ತಾಗಬೇಕು! ನಾಯಿಗೆ ಕವಿತಾ, ಕಾವೇರಿ, ಕನಕಮ್ಮ, ಕರುಮಾರಿಯಮ್ಮ ಅಂತೆಲ್ಲ ಹೆಸರಿಡಲಿಕ್ಕೆ ಆಗುವುದಿಲ್ಲ. ಮನುಷ್ಯರ ಹೆಸರೇ ಬೇರೆ ನಾಯಿನೇಮೇ ಬೇರೆ. ಬುದ್ದೀನೆಲ್ಲಾ ಖರ್ಚು ಮಾಡಿ, ಮಿನ್ನು, ಸರು, ಕೀಚು, ಬಾನು, ವರ್ಣಿ, ವೀಚಿ, ಸಿಂಪಿ -ಇತ್ಯಾದಿ ಹೆಸರುಗಳನ್ನು ಟೈಪಿಸಿ ಕಳುಹಿಸಿದೆ. ಆಮೇಲೊಮ್ಮೆ ಅವರ ಮನೆಗೆ ಹೋದಾಗ ಪೋರ್ಟಿಕೋದಲ್ಲಿ ಕಟ್ಟಿಹಾಕಿದ್ದ ನಾಯಿಯ ಬಳಿಗೆ ಕರೆದೊಯ್ದ ಅವನು, “ಸಿಂಪೀ, ಇವರೇ ನೋಡು, ನಿಂಗೆ ಹೆಸರು ಕೊಟ್ಟವರು” ಅಂತ ನನ್ನನ್ನು ನಾಯಿಗೆ ಪರಿಚಯಿಸಿಕೊಟ್ಟ. ಸಿಂಪಿ ಕೆಕ್ಕರಿಸಿಕೊಂಡು ನೋಡುತ್ತಿತ್ತು.

ಅದಾಗಿ ಕೆಲ ದಿವಸಕ್ಕೇ, ಮೈಸೂರಿನ ಗೆಳೆಯನೊಬ್ಬ ಫೋನಿಸಿ “ಗುರೂ, ಫ್ರೀ ಇದೀಯಾ?” ಅಂತ ಕೇಳಿದ. “ಹೂಂ, ಹೇಳು ಗುರು” ಎಂದೆ. “ಒಂದು ಶವವಾಹನಕ್ಕೆ ಹೆಸರು ಹೇಳಯ್ಯಾ” ಅಂತ ಕೇಳಿದ. ಕೂತಿದ್ದ ಜಾಗದಿಂದೊಮ್ಮೆ ಜಿಗಿದು ಕೂತೆ! “ಏನಂದೇ?” ಅಂತ ಮತ್ತೊಮ್ಮೆ ಕೇಳಿದೆ. “ಹೂಂ ಗುರು. ನಮ್ಮ ಟ್ರಸ್ಟ್ ಹೆಸರಲ್ಲಿ ಮೈಸೂರಿಗೆ ಒಂದು ಉಚಿತ ಶವವಾಹನ ವ್ಯವಸ್ಥೆ ಮಾಡ್ಬೇಕು ಅಂತ ನಮ್ ತಂದೆ ಡಿಸೈಡ್ ಮಾಡಿದಾರೆ. ಅದಕ್ಕೊಂದು ಚಂದದ ಹೆಸರು ಬೇಕಾಗಿತ್ತು. ನಿನ್ ನೆನಪಾಯ್ತು, ಹಾಗೇ ಕಾಲ್ ಮಾಡ್ದೆ” ಅಂದ. ನಾನು ಕನ್ನಡಪ್ರೇಮಿಯೂ ಬರಹಗಾರನೂ ಆದುದರ ಬಗ್ಗೆ ಮೊದಲ ಬಾರಿ ವಿಷಾದ ಪಟ್ಟುಕೊಂಡದ್ದೇ ಆವಾಗ! ಹೋಗೀ ಹೋಗಿ ಶವವಾಹನಕ್ಕೆ ಹೆಸರಿಡಬೇಕಾದರೆ ಜನಕ್ಕೆ ನನ್ನ ನೆನಪಾಗುವ ಹಾಗೆ ಆಯ್ತಲ್ಲಾ, ಛೇ ಅನ್ನಿಸಿತು. ಉರಿದು ಉಕ್ಕಿ ಬರುತ್ತಿದ್ದ ದುಃಖ-ಸಿಟ್ಟುಗಳನ್ನು ತಡೆಹಿಡಿದು, ‘ಕೈಲಾಸಮುಖಿ’, ‘ವೈಕುಂಟಯಾತ್ರೆ’, ‘ಮುಕ್ತಿಬಂಡಿ’, ‘ಸಮಾಧಿಯೆಡೆಗೆ’ ಅಂತೆಲ್ಲ ಏನೇನೋ ಅವನಿಗೆ ಸೂಚಿಸಿದೆ. ಎಲ್ಲಾ ಕೇಳಿಸಿಕೊಂಡಾದಮೇಲೆ, “ಅವೆಲ್ಲಾ ಆಲ್ರೆಡಿ ಇದಾವೆ ಗುರೂ, ಏನಾದ್ರೂ ಕ್ರಿಯೇಟಿವ್ವಾಗಿ ಹೇಳೋ” ಅಂದ. ದುಃಖ-ಸಿಟ್ಟು ಉಕ್ಕಿ ಬಿದ್ದೇಬಿಟ್ಟಿತು: “ಹೆಣ ಒಯ್ಯೋ ಗಾಡಿಯಲ್ಲೂ ಎಂಥಾ ಕ್ರಿಯೇಟಿವಿಟಿನಯ್ಯಾ? ನಂಗೇನೂ ಹೊಳೀತಿಲ್ಲ. ಏನಾದ್ರೂ ಇಟ್ಕೊಂಡು ಸಾಯಿ” ಅಂತ ಕಿರುಚಿ ಫೋನಿಟ್ಟಿದ್ದೆ.

ಅವತ್ತಿಡೀ ಮೂಡು ಹಾಳಾಗಿಯೇ ಇತ್ತು. ಇನ್ನು ಮೇಲೆ ಯಾರೇ ಇಂತಹ ಸಹಾಯ ಕೇಳಿದರೂ ಮಾಡಿಕೊಡಬಾರದು ಅಂತ ತೀರ್ಮಾನಿಸಿದೆ. ಮಾಡಿಕೊಡುವುದಿದ್ದರೂ ‘ಛಾರ್ಜ್’ ಮಾಡಬೇಕು ಅಂತ ಅಂದುಕೊಂಡೆ. ಈ ತರಹದ ಸಲಹೆ ನೀಡುವುದನ್ನೇ ನನ್ನ ವೃತ್ತಿಯಾಗಿ ಮಾಡಿಕೊಂಡರೆ ಹೇಗೆ ಅಂತಲೂ ಯೋಚಿಸಿದೆ. ಕೊನೆಗೆ, ಉಕ್ಕಿಬಿದ್ದಿದ್ದ ದುಃಖ-ಸಿಟ್ಟುಗಳು ತಣ್ಣಗಾದಮೇಲೆ, ‘ಇವೆಲ್ಲಾ ಏನು ಬಹಳ ದೊಡ್ಡ ಕೆಲಸಗಳಾ? ಅಥವಾ ಹೀಗೆ ಕೊಡುವ ಸಣ್ಣಪುಟ್ಟ ಸಲಹೆಗಳಿಂದ ನಾನೇನಾದರೂ ಕಳೆದುಕೊಳ್ಳುತ್ತೇನಾ? ಇವೇನು ಮಹದುಪಕಾರಗಳಾ?’ ಅಂತೆಲ್ಲ ನನಗೆ ನಾನೇ ಪ್ರಶ್ನಿಸಿಕೊಂಡು, ಸಿಕ್ಕ ಉತ್ತರ ಕಂಡು ನಾಚಿಕೊಂಡು, ‘ನಾನು ಮಾಡುತ್ತಿರುವ ಸಾವಿರಾರು ಪಾಪಕಾರ್ಯಗಳಿಂದಾಗಿ ನರಕದಲ್ಲಿ ನನಗೆ ವಿಧಿಸಬಹುದಾದ ಶಿಕ್ಷೆಯಲ್ಲಿ ಸ್ವಲ್ಪವಾದರೂ ಕನ್ಸಿಷನ್ ದೊರೆತೀತು ಬಿಡು’ ಅಂತ ಸಮಾಧಾನ ಮಾಡಿಕೊಂಡಿದ್ದೆ.

ಇವೆಲ್ಲ ನೆನಪಾದದ್ದು ಮೊನ್ನೆ ದುಬಾಯಿಯಲ್ಲಿರುವ ಗೆಳೆಯನೊಬ್ಬ ತನ್ನ ಮಗುವಿನ ಫೋಟೋ ಮೇಯ್ಲ್ ಮಾಡಿ ‘ಇದನ್ನ ತರಂಗಕ್ಕೆ ಕಳುಹಿಸ್ತಾ ಇದೀನಿ. ಇದಕ್ಕೊಂದು ಕ್ಯಾಪ್ಷನ್ ಲೈನು ಕೊಡು’ ಅಂತ ಕೇಳಿದಾಗ. ಆದರೆ ಈ ಸಲ ನಾನು ಹೆಚ್ಚಿಗೆ ರಿಸ್ಕ್ ತೆಗೆದುಕೊಳ್ಳದೇ ಆ ಮೇಯ್ಲನ್ನು ನನ್ನ ಕೆಲ ಕನ್ನಡ ಬಲ್ಲ ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ‘ಇಂತಹ’ ಕೆಲಸಗಳಲ್ಲಿ ಹುಡುಗಿಯರು -ಅದರಲ್ಲೂ ಗೃಹಿಣಿಯರು- ಬಹಳ ಚುರುಕಿರುತ್ತಾರೆ ಎಂಬುದು ನನ್ನ ನಂಬುಗೆಯಾಗಿತ್ತು. ನಂಬುಗೆ ಉಳಿಯಿತು ಕೂಡಾ, ಅವರ ರಿಪ್ಲೇಗಳನ್ನು ನೋಡಿ. ಆ ಎಲ್ಲ ಪ್ರತಿಕ್ರಿಯೆಗಳನ್ನೂ ಒಟ್ಟಿಗೆ ಹಾಕಿ ದುಬಾಯಿ ಗೆಳೆಯನಿಗೆ ಕಳುಹಿಸಿದೆ. ಕೊನೆಗವನು ಅದರಲ್ಲಿ ಯಾವ ಸಾಲು ಆಯ್ದು ಕಳುಹಿಸಿದನೋ, ಅದು ತರಂಗದಲ್ಲಿ ಪ್ರಕಟವಾಯ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನಾನು ಮಾತ್ರ ಇದನ್ನೇ ಬಂಡವಾಳವಾಗಿಸಿಕೊಂಡು ಬರೆದ ಈ ಪ್ರಬಂಧವನ್ನು, ಹೆಸರಿಡದೇ, ತರಂಗಕ್ಕೇ ಕಳುಹಿಸುತ್ತಿದ್ದೇನೆ. ಇನ್ನೆಲ್ಲಾ ಸಂಪಾದಕರ ಕಷ್ಟ.

[ಇದನ್ನ ಹೀಗೇ ತರಂಗಕ್ಕೆ ಕಳುಹಿಸಿದ್ದೆ. ಆದ್ರೆ ಉದಯವಾಣಿಯವರು ಇದನ್ನು ಅಪಹರಿಸಿ ತಮ್ಮ ಸಾಪ್ತಾಹಿಕ ಸಂಪದದಲ್ಲಿ ಹಾಕಿಕೊಂಡಿದ್ದಾರೆ (of course, ಹೆಸರಿಡದೆ; ಕೊನೆಯ ಪ್ಯಾರಾ ಕಿತ್ತುಹಾಕಿ!). ಅವರೆಡೆಗೆ ನಂದೊಂದು ಕೇಜಿ ಕೋಪ. :x ;) ]

Tuesday, November 17, 2009

ಇದು ಬರೀ ಮಕ್ಕಳಾಟವಲ್ಲ!

ದಿನವಿಡೀ ಚಡಪಡಿಕೆ. ಕಣ್ಮುಚ್ಚಿದರೂ ಅವವೇ ಚಿತ್ರಗಳು. ಆಫೀಸಿನ ಬಿಝಿಯಲ್ಲೂ ಅದೇ ಧ್ಯಾನ. ದಿನಕ್ಕೆರಡು ಬಾರಿ ಹೋಗಿ ನೋಡದಿದ್ದರೆ ಸಮಾಧಾನವಿಲ್ಲ. ನಿಮ್ಮ ಕಂಪ್ಯೂಟರಿನ ಹತ್ತಿರವೇ ಸುಳಿದಾಡುತ್ತಿರುವ ಮ್ಯಾನೇಜರಿನ ಬಗ್ಗೆ ಕೋಪ. ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿ ಏನೋ ಕನಸು ಬಿದ್ದಂತಾಗಿ ಎಚ್ಚರಾಗಿ ದಿಗ್ಗನೆ ಎದ್ದು ಕೂರುತ್ತೀರಿ.

ಇದ್ಯಾವುದಪ್ಪಾ ಹೊಸ ಕಾಯಿಲೆ ಅಂತ ಗಾಭರಿಯಾದಿರಾ? ಹೌದು, ವಿಶ್ವಾದ್ಯಂತ ಕೋಟ್ಯಂತರ ಜನರ ನಿದ್ದೆ ಕೆಡಿಸಿರುವ ಈ ಕಾಯಿಲೆಯ ಹೆಸರು ಫಾರ್ಮ್‌ವಿಲ್ಲೆ ಎಂಬ ಆಟದ ಅಡಿಕ್ಷನ್ನು! ಅಂತರ್ಜಾಲದ ಜನಪ್ರಿಯ ಸ್ನೇಹಸಂವಹನ ತಾಣವಾದ ಫೇಸ್‌ಬುಕ್‌ನಲ್ಲಿರುವ ಈ ಆಟದ ಮೋಡಿಗೆ ಒಳಗಾದಿರಾದರೆ ಈ ಕಾಯಿಲೆ ನಿಮಗೂ ತಗುಲಿಕೊಂಡಿತು ಅಂತಲೇ ಅರ್ಥ!

ಏನಿದು ಫಾರ್ಮ್‌ವಿಲ್ಲೆ? ಫೇಸ್‌ಬುಕ್ಕಿನಲ್ಲಿ ನಿಮ್ಮದೊಂದು ಖಾತೆ ಇದೆಯಾದರೆ ಈ ಆಟ ಆಡಬಹುದು. ಈ ಆಟಕ್ಕೆ ಸೇರಿಕೊಂಡ ತಕ್ಷಣ ನಿಮಗೆ ಒಂದಷ್ಟು ಜಮೀನನ್ನು ಕೊಡಲಾಗುತ್ತದೆ. ಈ ಜಮೀನಿನಲ್ಲಿ ನೀವು ಕೃಷಿ ಕಾರ್ಯ ಕೈಗೊಳ್ಳಬಹುದು. ಮೊದಲಿಗೆ ನೆಲವನ್ನು ಉಳುಮೆ ಮಾಡಬೇಕು. ನಂತರ ಮಾರುಕಟ್ಟೆಗೆ ಹೋಗಿ, ಅಲ್ಲಿ ಲಭ್ಯವಿರುವ ವಿವಿಧ ಬಗೆಯ ಬೀಜಗಳಲ್ಲಿ ನಿಮಗೆ ಬೇಕಾದ್ದನ್ನು ಕೊಂಡು ತಂದು ಉಳುಮೆ ಮಾಡಿದ ಜಾಗದಲ್ಲಿ ಬಿತ್ತಬೇಕು. ಹೀಗೆ ಬಿತ್ತಲ್ಪಟ್ಟ ಬೀಜ, ಒಂದು ನಿರ್ಧಿಷ್ಟ ಕಾಲಾವಧಿಯಲ್ಲಿ ಗಿಡವಾಗಿ ಬೆಳೆದು ಕೊಯ್ಲಿಗೆ ಅಣಿಯಾಗುತ್ತದೆ. ಸುಗ್ಗಿಯಿಂದ ಬಂದ ಹಣದಿಂದ ಮತ್ತೆ ಉಳುಮೆ ಮಾಡಿ ಬೀಜಗಳನ್ನು ಬಿತ್ತಬಹುದು. ಮಾರುಕಟ್ಟೆಯಲ್ಲಿ ಸ್ಟ್ರಾಬೆರಿ, ಬದನೆ, ಕುಂಬಳ, ಸೀತಾಫಲ, ಭತ್ತ, ಮುಂತಾದ ಬೀಜಗಳಿರುತ್ತವೆ. ಅವಕ್ಕೆ ನಿರ್ಧಿಷ್ಟ ಬೆಲೆಯೂ ನಿಗಧಿಯಾಗಿರುತ್ತದೆ. ಸ್ಟ್ರಾಬೆರಿಗೆ ಹತ್ತು ರೂಪಾಯಿಯಾದರೆ ಗೋಧಿಗೆ ಮೂವತ್ತೈದು ರೂಪಾಯಿ. ಸ್ಟ್ರಾಬೆರಿ ಕೇವಲ ನಾಲ್ಕು ತಾಸುಗಳಲ್ಲಿ ಬೆಳೆದು ಕೊಯ್ಲಿಗೆ ತಯಾರಾಗುತ್ತದೆ. ಗೋಧಿ ಬೆಳೆಯಲು ಮೂರು ದಿವಸ ಬೇಕು. ಬೆಳೆದ ಸ್ಟ್ರಾಬೆರಿಯ ಬೆಲೆ ಮೂವತ್ತೈದು ರೂಪಾಯಿಯಾದರೆ ಗೋಧಿಗೆ ನೂರಾ ಹದಿನೈದು ರೂಪಾಯಿ. ನಿರ್ಧಿಷ್ಟ ಸಮಯದೊಳಗೆ ಸುಗ್ಗಿ ಮಾಡದಿದ್ದರೆ ಬೆಳೆ ಒಣಗಿಹೋಗುತ್ತದೆ.

ನಿಮ್ಮ ಜಮೀನಿನಲ್ಲಿ ಬಾಳೆ, ಸೇಬು, ನಿಂಬೆ, ದಾಳಿಂಬೆ ಇತ್ಯಾದಿ ಮರಗಳನ್ನೂ ಬೆಳೆಸಬಹುದು. ಇವೂ ಮೂರ್ನಾಲ್ಕು ದಿನಗಳಿಗೊಮ್ಮೆ ಫಲ ಕೊಡುತ್ತವೆ. ಕತ್ತರಿಸಿ ಮಾರಾಟ ಮಾಡಿದ ಮೇಲೆ ಮತ್ತೆ ಮೂರ್ನಾಲ್ಕು ದಿನದಲ್ಲಿ ಹಣ್ಣು ಬಿಡುತ್ತದೆ. ಕೃಷಿಯಷ್ಟೇ ಅಲ್ಲದೆ, ಫಾರ್ಮ್‌ವಿಲ್ಲೆಯಲ್ಲಿ ಹೈನುಗಾರಿಕೆಯನ್ನೂ ಮಾಡಬಹುದು. ಹಸು, ಮೇಕೆ, ಕುದುರೆ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಸಾಕಬಹುದು. ಹಸುವಿನಿಂದ ಹಾಲು ಸಿಕ್ಕರೆ ಕೋಳಿಯಿಂದ ಮೊಟ್ಟೆ ಸಿಗುತ್ತದೆ.

ನೀವು ಕೃಷಿಯಲ್ಲಿ ನೈಪುಣ್ಯತೆ ಹೊಂದುತ್ತ ಹೋದಂತೆ ಹೆಚ್ಚು ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯಲಿಕ್ಕೆ ಮಾರುಕಟ್ಟೆಯಲ್ಲಿ ಬೀಜಗಳು ದೊರೆಯತೊಡಗುತ್ತವೆ. ಅವಶ್ಯಕತೆ ಜಾಸ್ತಿಯಾದಂತೆ ನೀವು ಟ್ರಾಕ್ಟರ್, ಸೀಡರ್, ಹಾರ್ವೆಸ್ಟರ್ ಇತ್ಯಾದಿ ಯಂತ್ರೋಪಕರಣಗಳನ್ನು ಕೊಳ್ಳಬಹುದು. ಇವುಗಳಿಂದಾಗಿ ಉಳುಮೆ, ಬಿತ್ತನೆ, ಕೊಯ್ಲುಗಳು ತ್ವರಿತ ಗತಿಯಲ್ಲಿ ಆಗುತ್ತವೆ. ಹಣ ಸಂಪಾದಿಸುತ್ತ ಹೋದಂತೆ ನೀವು ಜಮೀನನ್ನು ವಿಸ್ತರಿಸಬಹುದು, ಫಾರ್ಮ್‌ಹೌಸ್ ಕಟ್ಟಿಕೊಳ್ಳಬಹುದು, ಬಾವಿ ತೆಗೆಸಬಹುದು, ಕಾಂಪೌಂಡ್ ವಾಲ್ ಕಟ್ಟಿಸಬಹುದು, ತೋರಣಬಾಗಿಲು-ಏರ್‌ಬಲೂನುಗಳಂತಹ ವಸ್ತುಗಳಿಂದ ಜಮೀನನ್ನು ಅಲಂಕರಿಸಬಹುದು, ಹಸುಗಳು ಜಾಸ್ತಿಯಾದರೆ ಡೇರಿ ಕಟ್ಟಿಸಬಹುದು. ಅಷ್ಟೇ ಅಲ್ಲ, ನಿಮ್ಮ ಪಕ್ಕದ ಜಮೀನಿಗೆ ಹೋಗಿ ಅವರಿಗೆ ಸಹಾಯ ಮಾಡಬಹುದು (ಉದಾ: ಕಳೆ ಕಿತ್ತುಕೊಡುವುದು, ಕಾಟ ಕೊಡುವ ಕಾಗೆ-ನರಿಗಳನ್ನು ಓಡಿಸುವುದು, ಕೀಟನಾಶಕ ಸಿಂಪಡಿಸುವುದು, ಯಾವುದಾದರೂ ಸಸಿ ಅಥವಾ ಪ್ರಾಣಿಯನ್ನು ಉಡುಗೊರೆಯಾಗಿ ಕೊಡುವುದು). ಇದರಿಂದಾಗಿ ನಿಮಗೆ ಅನುಭವ ಜಾಸ್ತಿಯಾಗುತ್ತದಲ್ಲದೇ ಸ್ವಲ್ಪ ಹಣವೂ ಸಿಗುತ್ತದೆ. ಕೃಷಿಯಲ್ಲಿ ಸಾಧನೆ ಮಾಡುತ್ತ ಹೋದಂತೆ ನಿಮಗೆ ಹಲವು ಅವಾರ್ಡುಗಳು, ಬಿರುದುಗಳು ದೊರೆಯುತ್ತ ಹೋಗುತ್ತವೆ.

ಕೆಲವೇ ವರ್ಷಗಳ ಹಿಂದಿನ ನೆನಪು: ನಾನು ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಹೊಸರುಚಿಯ ಪುಟವನ್ನು ಹಿಡಿದು ಅಡುಗೆಮನೆಯಲ್ಲಿ ಅಮ್ಮನಿಗೆ ಅದನ್ನು ಮಾಡಿಕೊಡುವಂತೆ ಹಟ ಮಾಡುತ್ತಿದ್ದೆ. ಆಗ ಅಲ್ಲಿಗೆ ಬಂದ ಅಜ್ಜಿ, "ಅಪ್ಪೀ, ನೀ ಸುಮ್ನಿರು. ಪುಸ್ತಕದ ಬದನೇಕಾಯಿ ತಿನ್ನಕ್ಕೆ ಬರದಿಲ್ಲೆ" ಅಂತ ಹೇಳಿದ್ದಳು. ಅಂದರೆ, ಅಜ್ಜಿಯ ಪ್ರಕಾರ, ಭೌತಿಕವಲ್ಲದ, ಅನುಭವಜನ್ಯವಲ್ಲದ, ಕೈಯಾರೆ ಮಾಡದ ಯಾವ ಕೆಲಸ / ತಯಾರಾದ ವಸ್ತುವೂ ಉಪಯೋಗಕ್ಕೆ ಬಾರದ್ದು ಅಂತ. ಹಾಗಾದರೆ, ಇಲ್ಲಿ ನಾವೆಲ್ಲ ಹುಚ್ಚಿಗೆ ಬಿದ್ದವರಂತೆ ಮಾಡುತ್ತಿರುವುದು ಏನು? ಬಾಳೆಗಿಡದಲ್ಲಿ ಗೊನೆ ತೂಗಿದಾಗ ಬೀಗಿದ್ದು, ಸರಿಯಾದ ಸಮಯಕ್ಕೆ ಕೊಯ್ಲು ಮಾಡದಿದ್ದರೆ ಬೆಳೆ ಎಲ್ಲಿ ಹಾಳಾಗುತ್ತದೋ ಅಂತ ಟೆನ್ಷನ್ ಮಾಡಿಕೊಂಡದ್ದು, ಟ್ರಾಕ್ಟರ್ ಬಳಸಲಿಕ್ಕೆ ಇಂಧನ ಖಾಲಿಯಾಯ್ತಲ್ಲ ಅಂತ ಖಿನ್ನಗೊಂಡದ್ದು, ಕಲ್ಲಂಗಡಿ ಮಾರಿದಾಗ ಬಂದ ದುಪ್ಪಟ್ಟು ಹಣ ಕಂಡು ಖುಶಿಯಾದದ್ದು, ದಾರಿ ತಪ್ಪಿ ಬಂದಿದ್ದ ಆಮೆಗೆ ಮನೆ ಕಲ್ಪಿಸಿ ತೃಪ್ತಿ ಪಟ್ಟುಕೊಂಡದ್ದು, ಯಾವುದೋ ಕಾಡುಪ್ರಾಣಿ ಹೊಲಕ್ಕೆ ನುಗ್ಗಿದಂತೆ ಕನಸು ಕಂಡು ನಿದ್ದೆಯಿಂದ ಎಚ್ಚೆತ್ತದ್ದು.... ಇವಕ್ಕೆಲ್ಲ ಏನರ್ಥ? ಕೇವಲ ಕಂಪ್ಯೂಟರ್ ಪರದೆಯ ಮೇಲಣ ಹುಸಿ ಚಿತ್ರಗಳನ್ನು ನಿಜವೆಂದೇ ಭಾವಿಸಿ ಶ್ರದ್ಧೆಯಿಂದ, ಖಂಡಿತ ಮನಃಪೂರ್ವಕವಾಗಿ ಈ ಆಟದಂತಹ ಆಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿರುವುದು ಇದ್ಯಾವ ಸೀಮೆಯ ಮರುಳು? ಊರಿನಲ್ಲಿರುವ ತೋಟ-ಗದ್ದೆಗಳಲ್ಲಿ ವ್ಯವಸಾಯ ಮಾಡುವುದು ಬಿಟ್ಟು, ನಗರಗಳಲ್ಲಿ ನೆಲೆಸಿರುವ ನಾವು ಕಂಪ್ಯೂಟರ್ ಮುಂದೆ ಕೂತು ಥೇಟ್ ರೈತನ ರೀತಿ ಆಲೋಚಿಸುತ್ತಿರುವುದು-ವರ್ತಿಸುತ್ತಿರುವುದು ವ್ಯಂಗ್ಯದ ಪರಾಕಾಷ್ಠೆಯೇ, ವಿಪರ್ಯಾಸದ ಪರಮಾವಧಿಯೇ ಅಥವಾ ಮೂರ್ಖತನದ ತುರೀಯ ಸ್ಥಿತಿಯೇ?

ಗೊತ್ತಿಲ್ಲ! ಆದರೆ, ಅಂತರ್ಜಾಲ ವಿಶ್ವಕೋಶ ವಿಕಿಪೀಡಿಯಾ ಪ್ರಕಾರ, ವಿಶ್ವದಾದ್ಯಂತ ಇದುವರೆಗೆ ಸುಮಾರು ಆರೂವರೆ ಕೋಟಿ ಜನ ಈ ಹುಚ್ಚಿಗೆ ಬಲಿಯಾಗಿದ್ದಾರೆ. ಸಧ್ಯದ ಫೇಸ್‌ಬುಕ್ಕಿನ ಅತ್ಯಂತ ಜನಪ್ರಿಯ ಆಟವೂ ಇದಾಗಿದೆ. ಇದಕ್ಕೆ ಬಲಿಯಾಗಿರುವ ವಿದ್ಯಾರ್ಥಿಗಳು ಪಠ್ಯಪುಸ್ತಕ ಬದಿಗಿಟ್ಟು ಬಂದು ಹಸುವಿನ ಹಾಲು ಕರೆಯುತ್ತಿದ್ದರೆ ಮುದುಕರು ಬೆನ್ನು ಬಗ್ಗಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಅಷ್ಟೂ ಗಿಡಗಳಲ್ಲೂ ಹಣ್ಣು ಬಿಟ್ಟಿದ್ದು ನೋಡಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಕೆಲ ಗಂಡಸರು ಲಕ್ಷಗಟ್ಟಲೆ ಹಣ ಮಾಡಿ ಖುಶಿ ಪಡುತ್ತಿದ್ದರೆ, ಗೃಹಿಣಿಯರಿಗೆ ಹಣಕ್ಕಿಂತ ತಮ್ಮ ಜಮೀನನ್ನು ಅಲಂಕರಿಸುವುದರಲ್ಲೇ ಆನಂದ. ಜಮೀನಿನ ತುಂಬ ದ್ರಾಕ್ಷಿ ಬೆಳೆದಿದ್ದೇವೆ; ತಿನ್ನಲಿಕ್ಕೆ ಬರುತ್ತಿಲ್ಲ, ಕೆಚ್ಚಲ ತುಂಬ ಹಾಲು ತುಂಬಿ ನಿಂತಿದೆ ಹಸು; ಕುಡಿಯಲಿಕ್ಕೆ ಸಿಗುತ್ತಿಲ್ಲ, ಮನೆಯೆದುರಿನ ಅಂಗಳದ ತುಂಬ ಗುಲಾಬಿಯಿದೆ; ಮುಡಿಯಲಿಕ್ಕೆ ಆಗುತ್ತಿಲ್ಲ, ಜೇಬಿನ ತುಂಬ ಹಣವಿದೆ; ಕಂಪ್ಯೂಟರಿನ ಮುಂದಿಂದ ಎದ್ದು ಬಂದರೆ ಬಳಸಲಿಕ್ಕೆ ಬರುವುದಿಲ್ಲ!

ಕನ್ನಡಿಯೊಳಗಿನ ಗಂಟು ಎಂದರೆ ಇದೇನಾ?!

[ವಿಜಯ ಕರ್ನಾಟಕದ ಸಾಪ್ತಾಹಿಕ ಲವಲvkಗಾಗಿ ಬರೆದದ್ದು]

Thursday, October 29, 2009

ಉಪ್ಪು-ಖಾರ

ಹಸಿರು ಸಮುದ್ರದಂತೆ ಅಂಗಳದ ತುಂಬೆಲ್ಲ
ಹಬ್ಬಿಕೊಂಡಿರುವ ಬಳ್ಳಿಯ ದೊಡ್ಡ ಎಲೆಗಳ
ಮರೆಯಲ್ಲೆಲ್ಲೋ ಅಡಗಿದೆ ಒಂದು
ಮಿಡಿ ಸೌತೆಕಾಯಿ ನಮಗಾಗಿಯೇ.
ಕಿತ್ತು ತರಬೇಕು, ಗೆಳೆಯಾ
ಜತೆಗೆ ಸೂಜಿಮೆಣಸು ಬೇಕು
ಮತ್ತಿಷ್ಟೇ ಉಪ್ಪು, ಇದ್ದರೆ
ವಾಟೆಪುಡಿ; ಇಲ್ಲವೇ ನಿಂಬೆಹುಳಿ

ಕೂರಬೇಕು ಸುತ್ತ, ಮಧ್ಯದಲ್ಲಿ ತಟ್ಟೆ
ಮೆಣಸಿನಕಾಯಿ ನುರಿದ ಉರಿಯ
ಭುಗುಭುಗು ಬೆರಳನ್ನು ಚಾಚಿ ಎತ್ತಿಕೊಳ್ಳಬೇಕು
ಹೋಳುಗಳನ್ನು ಒಂದೊಂದೇ
ಕರುಂಕುರುಂ ಸದ್ದಿನ ಬ್ರಹ್ಮಾನಂದದಲ್ಲಿ
ತೇಲಿ ಮುಳುಗಬೇಕು, ಗೆಳೆಯಾ
ಜೋರು ನಗೆಯನಾಡಬೇಕು

ಒಂಟಿಜೀವಿಗಳೆಲ್ಲ ಸೌತೆಕಾಯಿಯನ್ನು ಬರಿದೇ ತಿನ್ನುವರು
ದುಃಖಿಗಳು ಸಾರಿಗೆ ಕತ್ತರಿಸಿ ಹಾಕಿ ಬೇಯಿಸಿ ಬಿಡುವರು
ಉಪ್ಪು-ಖಾರ ಸವಿಯಲಿಕ್ಕೆ ಗೆಳೆಯರಿರಬೇಕು
ಖಾರಕ್ಕೆ ಬಾಯಿ ಸೆಳೆವಾಗ ನಲಿವು ಇರಬೇಕು
ನಕ್ಕು ನಕ್ಕು ನೆತ್ತಿಗೆ ಸಿಕ್ಕಾಗ ಖಾರ,
ಬೇಕು ಬೆನ್ನಿಗೆ ಗುದ್ದಲಿಕ್ಕೆ ನಿನ್ನದೊಂದು ಕೈ
ಕಣ್ಣಂಚಿಂದ ಹನಿಯುದುರಿದ್ದು
ಖಾರಕ್ಕೋ ಆನಂದಕ್ಕೋ ತಿಳಿಯದೆ ಹೋಗಬೇಕು

ಎಲ್ಲಿದ್ದೆ, ಏನಾಗಿದ್ದೆ, ಹೇಗೆ ಬಂದೆ, ಮುಂದೆ ಏನು-
ಅಂತೆಲ್ಲ ಕೇಳುವುದೇ ಇಲ್ಲ ನಾನು...
ಇರು ಇಲ್ಲೇ, ಉಳಿದಿದೆ ಮಸಾಲೆ ಇನ್ನೂ
ಬಳ್ಳಿಯಲ್ಲಿ ಇನ್ನೂ ಒಂದು ಸೌತೆಮಿಡಿ ಇದೆಯಂತೆ..
ಅದರ ತಿರುಳಿನಲ್ಲಿ ಅಸಂಖ್ಯ ಮುತ್ತಿನ ಹರಳುಗಳು
ಒತ್ತೊತ್ತಾಗಿ ಕೂತಿವೆಯಂತೆ ನೋಡಲು-
ನನ್ನ - ನಿನ್ನ.

ಇರು ಇಲ್ಲೇ, ಕೊಯ್ದು ತರುತ್ತೇನೆ ಕ್ಷಣದಲ್ಲಿ.

[ಊರಿಂದ ಕಾಣೆಯಾಗಿದ್ದ ಗೆಳೆಯ ಗುಂಡ, ಮೂರು ವರ್ಷಗಳ ನಂತರ ಮರಳಿ ಬಂದಿದ್ದಾನಂತೆ ಎಂಬ ಸುದ್ದಿ ಕೇಳಿ..]

Friday, October 16, 2009

ಗೊಂದಲದ ಮಬ್ಬು ತೊಡೆಯಲಿ ದೀಪಾವಳಿ

ರಾತ್ರಿ ಹೊತ್ತು ಈ ರಾಜಧಾನಿಯ ಗಗನಚುಂಬಿ ಕಟ್ಟಡವೊಂದರ ಟೆರೇಸಿನ ತುದಿಗೆ ಹೋಗಿ ಒಮ್ಮೆ ಗಟ್ಟಿ ಕಣ್ಮುಚ್ಚಿ ತೆರೆದರೆ, ಭೂಮ್ಯಾಕಾಶಗಳ ಕೂಡುರೇಖೆಯೇ ಕಾಣದಂತಹ ಎದುರಿನ ಸಾದ್ಯಂತ ಕಪ್ಪು ಅವಕಾಶವೆಂಬುದು ಕಾರ್ತೀಕ ಮಾಸದ ಲಕ್ಷದೀಪೋತ್ಸವದಂತೆ ಕಾಣಿಸುತ್ತದೆ. ಕೆಲವು ಪ್ರಶಾಂತ ಹಣತೆಗಳು, ಕೆಲವು ಮಿನುಗುತ್ತಿರುವ ಹಣತೆಗಳು, ಇನ್ನು ಕೆಲವು ಚಲಿಸುತ್ತಿರುವ ಹಣತೆಗಳು. ರಾತ್ರಿ ಆಗುತ್ತ ಆಗುತ್ತ ಹೋದಂತೆ ಒಂದೊಂದೇ ಹಣತೆಗಳು ಆರುತ್ತ ಆರುತ್ತ ಹೋಗುತ್ತವೆ. ಬೆಳಗಾಗುವಷ್ಟರಲ್ಲಿ ಅಷ್ಟೂ ಹಣತೆಗಳು ಆರಿ ಅಲ್ಲಿ ಬರೀ ಕಟ್ಟಡ ಸಮೂಹವೂ, ನೀಲಾಕಾಶವೂ, ಅಲ್ಲೇ ಎಲ್ಲೋ ಕಸರತ್ತು ಮಾಡಿ ಹಿಂದಿನಿಂದ ಹಣುಕುತ್ತಿರುವ ದಿನಕರನೂ ಕಾಣಿಸುತ್ತಾರೆ.

ನಿಧಾನಕ್ಕೆ ಕೆಳಗಿಳಿದು ಬಂದು, ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ ರಸ್ತೆಯ ಮೇಲೆ ಬಿಡುಬೀಸಾಗಿ ನಡೆದು, ಗೂಡಂಗಡಿಯೊಂದರಲ್ಲಿ ನಾಲ್ಕು ಕಾಸು ಕೊಟ್ಟು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಜತೆಗೇ ಪ್ಲಾಸ್ಟಿಕ್ ಕಪ್ಪಿನ ಚಹಾ. ಬದಿಯ ಕಟ್ಟೆಯಲ್ಲಿ ಕೂತು ಬಿಸಿ ಚಹಾ ಹೀರುತ್ತಾ ದಿನಪತ್ರಿಕೆ ಬಿಚ್ಚಿದರೆ, ಉತ್ತರ ಕರ್ನಾಟಕದ ಮಂದಿಗೆ ನೆರೆ ಪರಿಹಾರದ ಹಂಚಿಕೆಯ ಬಗ್ಗೆ ಶುರುವಾಗಿರುವ ವಿವಾದಗಳು, ಮುಖ್ಯಮಂತ್ರಿಗಳು ಈ ವರ್ಷ ಅಲ್ಲಿಯೇ ದೀಪಾವಳಿ ಆಚರಿಸುತ್ತಿರುವ ಸುದ್ದಿಯೂ, ಒಬಾಮಾಗೆ ಕೊಟ್ಟ ನೊಬೆಲ್ ಕುರಿತ ಜಿಜ್ಞಾಸೆಗಳೂ, ಇನ್ನೂ ಹಂದಿಜ್ವರ ಹುಬ್ಬುತ್ತಲೇ ಇದೆ ಎಂಬ ಕಳವಳದ ವಾರ್ತೆಯೂ, ದ್ರಾವಿಡ್‌ಗೆ ಈ ಸಲವೂ ಅವಕಾಶ ಸಿಗಲಿಲ್ಲ ಎಂಬ ನಿರಾಶಾದಾಯಕ ಸಾಲೂ, ಬೀಟಿ ಬದನೇಕಾಯಿಯೂ ಕಾಣಿಸುತ್ತದೆ. ಚಹಾ ಮುಗಿಯುವಷ್ಟರಲ್ಲಿ ಸುದ್ದಿಪರ್ಯಟನೆಯೂ ಮುಗಿದು, ವಾಚು ನೋಡಿದ್ದೇ ಆಫೀಸಿಗೆ ತಡವಾಯ್ತೆಂಬ ಜ್ಞಾನೋದಯ ಆಗಿ ದಡಬಡನೆ ಓಡಲು ಶುರುವಿಡುತ್ತೇನೆ.

ಮೊನ್ನೆ ಗೆಳತಿಯೊಬ್ಬಳಿಗೆ ಫೋನಿಸಿ "ಹಬ್ಬಕ್ಕೆ ಯಾವತ್ತು ಊರಿಗೆ ಹೊರಡ್ತಿದೀಯಾ? ಶುಕ್ರವಾರಾನಾ?" ಅಂತ ಕೇಳಿದೆ. ಅವಳದಕ್ಕೆ "ಇಲ್ಲ, ಶನಿವಾರ ನಮ್ಗೆ ಆಫೀಸ್ ಇದೆ" ಅಂದಳು. "ಅರೆ, ಗೌರ್ಮೆಂಟ್ ಹಾಲಿಡೇ ಅಲ್ವೇನೇ?" ಅಂತ ಕೇಳಿದೆ. "ನಾವು ಒಂದು ದಿನದ ಸಂಬಳವನ್ನ ರಿಲೀಫ್ ಫಂಡ್‌ಗೆ ಕೊಡ್ತಿದೀವಿ.. ಅದಕ್ಕೇ ಒಂದು ದಿನ ಎಕ್ಸ್‌ಟ್ರಾ ಕೆಲಸ ಮಾಡ್ತಿದೀವಿ" ಅಂದಳು. ನನಗೆ ಅವಳ ತರ್ಕ ಅರ್ಥವಾಗಲಿಲ್ಲ: "ಅಲ್ಲಾ ಮಾರಾಯ್ತಿ, ರಿಲೀಫ್ ಫಂಡ್‌ಗೆ ಕೊಡಿ ಯಾರು ಬೇಡ ಅಂದ್ರು. ಒಂದು ದಿನದ ಸಂಬಳ ಕಟ್ ಮಾಡ್ಕೊಳ್ಳಲಿಕ್ಕೆ ಹೇಳು ನಿಮ್ ಬಾಸ್‌ಗೆ! ಆದ್ರೆ ಕೆಲಸ ಯಾಕೆ ಜಾಸ್ತಿ ಮಾಡ್ಬೇಕು?" ಅಂತ ಪ್ರಶ್ನಿಸಿದೆ. "ಕೆಲಸ ಮಾಡಿದ್ರೇನೆ ನಮ್ ದೇಶ ಮುಂದೆ ಬರೋದು ಕಣೋ" ಅಂದಳು. ಈಗಂತೂ ನಂಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ನೆರೆ ಪರಿಹಾರಕ್ಕೂ, ಇವರು ರಜಾದಿನ ಕೆಲಸ ಮಾಡುವುದಕ್ಕೂ, ದೇಶ ಮುಂದುವರೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಯೋಚಿಸಲೂ ಆಗಲಿಲ್ಲ. "ಸರಿ ಬಿಡು" ಅಂತ ಫೋನಿಟ್ಟೆ.

ಈಗ ಕೆಲ ದಿನಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ನಾನು ಕೃಷಿಕಾರ್ಯ ಕೈಗೊಂಡಿದ್ದೇನೆ. ಸ್ಟ್ರಾಬೆರಿ, ಗೋಧಿ, ಸೋಯಾಬೀನು, ಕುಂಬಳಕಾಯಿ, ಭತ್ತ, ಇತ್ಯಾದಿ ಬೆಳೆಗಳು ಒಳ್ಳೆಯ ಫಸಲು ಬಂದು ಲಾಭವಾಗಿದೆ. ಸುಮಾರು ಗೆಳೆಯರು ಚೆರ್ರಿ, ಅಂಜೂರ, ನಿಂಬೆ, ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವೂ ಫಲ ನೀಡುತ್ತಿವೆ. ಜಮೀನಿನ ಮೂಲೆಯಲ್ಲೊಂದು ರೆಸ್ಟ್‌ಟೆಂಟ್ ಹಾಕಿಕೊಂಡಿದ್ದೇನೆ. ಸಧ್ಯದಲ್ಲೇ ಟ್ರಾಕ್ಟರ್ ಕೊಳ್ಳುವ ಆಲೋಚನೆಯಿದೆ. ಬೀಟಿ ಬದನೆಕಾಯಿಯ ಬೀಜ ಸಿಕ್ಕರೆ ಬಿತ್ತೋಣ ಅಂತ ಇತ್ತು, ಮಾರ್ಕೆಟ್ಟಿನಲ್ಲೆಲ್ಲೂ ಕಾಣಿಸಲಿಲ್ಲ.

ಉತ್ತರ ಕರ್ನಾಟಕದ ನೆರೆ ನಿರಾಶ್ರಿತರ ಚಿತ್ರ ಕಣ್ಮುಂದಿದೆ. ಎಲ್ಲವನ್ನೂ ಎಂದರೆ ಎಲ್ಲವನ್ನೂ ಕಳೆದುಕೊಂಡಿರುವ ಆ ಜನಗಳು ಪಕ್ಕದಲ್ಲೇ ಇರುವಾಗ ನಾವು ಹೇಗೆ ಸಂಭ್ರಮದಿಂದ ಹಬ್ಬ ಆಚರಿಸುವುದು ಎಂಬ ಕೊರಗು ಮನದಲ್ಲಿದ್ದರೂ ಎಲ್ಲರೂ ಸಂಭ್ರಮದಿಂದಲೇ ದೀಪಾವಳಿಗೆ ತಯಾರಾಗುತ್ತಿದ್ದೇವೆ. ಸ್ಲೀಪರ್ ಕೋಚ್ ಸಿಗಲಿಲ್ಲವಲ್ಲ ಅಂತ ಕೈಕೈ ಹಿಸುಕಿಕೊಂಡಿದ್ದೇವೆ. ಡಿಸ್‌ಕೌಂಟ್ ಹಾಕಿರುವ ಅಂಗಡಿಗಳನ್ನು ಹೊಕ್ಕು ಬಟ್ಟೆ ಖರೀದಿಸಿದ್ದೇವೆ. ಗರಿಗರಿ ಪಟಾಕಿಗಳು ಬಾಕ್ಸಿನಲ್ಲಿ ಬೆಚ್ಚಗೆ ಕೂತಿವೆ. ಅವಕ್ಕೆ ಸುರುಳಿ ಸುತ್ತಲ್ಪಟ್ಟಿರುವ ಕಾಗದದಲ್ಲಿ ಕಳೆದ ವರ್ಷ ಪಟಾಕಿ ದುರಂತದಲ್ಲಿ ಸತ್ತ ಕುಟುಂಬದ ವರದಿಯಿದೆ.

ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ, ಇಂದು ತೆಗೆದುಕೊಂಡ ತೀರ್ಮಾನಗಳು ನಾಳೆಯ ಹೊತ್ತಿಗೆ ಹಾಸ್ಯಾಸ್ಪದವೆನ್ನಿಸುವ, ಈಗ ತರ್ಕಿಸಿದ್ದ ರೀತಿ ಮರುದಿನದ ಹೊತ್ತಿಗೆ ನಮಗೇ ಸಣ್ಣತನವೆನ್ನಿಸುವ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿರುವ ನಾವು ಇದೆಂತಹ ದಾರದ ಮೇಲೆ ನಡೆಯುತ್ತಿದ್ದೇವೆ? ಇದೆಂತಹ ಅಂಧಃಕಾರ ಕವಿದಿದೆ ನಮ್ಮನ್ನು? ಎತ್ತ ಹೋಗುತ್ತಿದ್ದೇವೆ? ರಾತ್ರಿ ಹಣತೆಯಂತೆ ಕಂಡ ದೀಪಗಳು ಸುಳ್ಳು, ಇಂಟರ್ನೆಟ್ಟಿನಲ್ಲಿ ಬೆಳೆದ ಭತ್ತ ಹುಸಿ, ಸಿಡಿದ ಮರುಕ್ಷಣ ಇಲ್ಲವಾಗುವ ಪಟಾಕಿಯ ಸದ್ದಿನಂತಹ ಮಾಧ್ಯಮದ ವರದಿಗಳು ಕೇವಲ ಮರುಳು, ನೆರೆ ಸಂತ್ರಸ್ತರೆಡೆಗೆ ನನ್ನ ಹೃದಯ ಮಿಡಿದಿದ್ದೂ ಡಾಂಬಿಕ. ಆದರೂ, ಇಲ್ಲ, ನಾನು ಹಣತೆಗಳನ್ನು ಕಂಡದ್ದು, ಚೆರ್ರಿ ಮರದಲ್ಲಿ ಹಣ್ಣು ಬಿಟ್ಟಾಗ ಖುಶಿಗೊಂಡದ್ದು, ಓದುತ್ತಿರುವಷ್ಟಾದರೂ ಹೊತ್ತು ನಾನೂ ಪತ್ರಿಕೆಯಲ್ಲಿ ಮುಳುಗಿದ್ದದ್ದು, ನೆರೆ ಹಾನಿಯ ಚಿತ್ರಗಳನ್ನು ನೋಡಿದಾಗ ಕರುಳು ಚುರುಕ್ ಎಂದದ್ದು ಸತ್ಯವಲ್ಲವಾ? ಊಹುಂ, ತಿಳಿಯುತ್ತಿಲ್ಲ.

ದೀಪಾವಳಿಯ ಬೆಳಕು ಈ ನಮ್ಮ ಗೊಂದಲದ ಮನಸ್ಥಿತಿಯನ್ನು ಕೊಂಚ ಮಟ್ಟಿಗಾದರೂ ತಿಳಿಗೊಳಿಸುತ್ತದೆ, ಮಬ್ಬಿನಲ್ಲೊಂದು ಪುಟ್ಟ ಬೆಳಕು ಮೂಡಿಸುತ್ತದೆ ಅಂತ ಹಾರೈಸೋಣ. ಶುಭಾಶಯಗಳು.

Tuesday, September 22, 2009

ಡಬ್ಬಿ ಪ್ರೀತಿಯ ಅಮ್ಮ

ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್‌ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ ವಾಪಸ್ ಕಳ್ಸು. ಹೊತ್ಗಂಬರ್ಲಿ ಅಪ್ಪ!” ಎಂದಳು. ಮೊಬೈಲಿನ ವಾಲ್ಯೂಮು ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಅವಳು ಹೇಳಿದ್ದು ಅಪ್ಪನಿಗೂ ಕೇಳಿಸಿತಿರಬೇಕು, “ನೋಡು, ನಾನು ಆರಾಮಾಗ್ ಬರವು ಅನ್ನೋದು ಸ್ವಲ್ಪನೂ ಇಲ್ಲೆ ಅವ್ಳಿಗೆ. ಯಾವಾಗ್ ನೋಡಿದ್ರೂ ಡಬ್ಬೀದೇ ಚಿಂತೆ!” ಎಂದ ಅಪ್ಪ. ನಾನು ಜೋರಾಗಿ ನಕ್ಕೆ.

ನಾನು ಪ್ರತಿ ಸಲ ಊರಿಗೆ ಹೊರಡುವ ಹಿಂದಿನ ದಿನ ಅಮ್ಮನಿಗೆ ಫೋನ್ ಮಾಡಿ ಇಲ್ಲಿಂದ ಏನಾದ್ರೂ ತರಬೇಕಾ ಅಂತ ಕೇಳಿದರೆ ಅವಳು ಹೇಳುವುದು ಒಂದೇ: “ಡಬ್ಬಿ ವಾಪಸ್ ತಗಂಬಾ ಸಾಕು”. ನನ್ನ ಅಮ್ಮನಿಗೆ ಡಬ್ಬಿಗಳ ಮೇಲೆ ಪ್ರೇಮ! ಹಾಗೆ ನೋಡಿದರೆ ಈ ಡಬ್ಬಿಯೆಂಬುದು ಎಲ್ಲಾ ಗೃಹಿಣಿಯರ ಪ್ರೀತಿಗೆ, ಪೊಸೆಸಿವ್‌ನೆಸ್‌ಗೆ ಒಳಗಾಗಿರುವ ವಸ್ತು. ಅಡುಗೆಮನೆಯ ಶೆಲ್ಫು-ನಾಗಂದಿಗೆಯ ಮೇಲೆ ಬೆಪ್ಪಣ್ಣಗಳಂತೆ ಸಾಲಾಗಿ ಕುಳಿತುಕೊಂಡಿರುವ ಇವುಗಳಲ್ಲಿ ಅದೆಂತಹ ಆಕರ್ಷಣೆಯಿದೆಯೋ, ಯಾರಿಗೆ ಏನನ್ನೇ ತುಂಬಿ ಕಳುಹಿಸುವುದಿದ್ದರೂ ಕೊಡುವಾಗ “ಡಬ್ಬಿ ಒಂದು ವಾಪಸ್ ಕಳ್ಸೋದು ಮರೀಬೇಡಿ” ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ಮೊದಲೆಲ್ಲ ನಮ್ಮ ಮನೆಯಲ್ಲಿ ತಗಡಿನ ಡಬ್ಬಿಗಳಿದ್ದವು. ನಾನು ಮಗುವಾಗಿದ್ದಾಗ ತಂದಿದ್ದ ಒಂದು ನೆಸ್ಟಮ್ಮಿನ ಡಬ್ಬಿಯಂತೂ ಅದೆಷ್ಟು ವರ್ಷಗಳ ಕಾಲ ಇತ್ತು ಎಂದರೆ, ನಾನು ದೊಡ್ಡವನಾಗಿ, ಇಂಗ್ಲೀಷ್ ಓದಲು-ಬರೆಯಲು ಕಲಿತು, ಆ ಡಬ್ಬಿಯ ಮೇಲೆ ಬರೆದಿದ್ದ ‘ನೆಸ್ಟಮ್’ ಎಂಬ ಶಬ್ದವನ್ನು ಓದಿದಾಗ ಅಮ್ಮ “ಹೂಂ, ಅದು ನೀ ಪಾಪು ಆಗಿದ್ದಾಗ ತಂದಿದ್ದು. ಒಂದು ಚಮಚ ನೆಸ್ಟಮ್ ತಿನ್ಸಕ್ಕರೆ ಎಷ್ಟ್ ಕಾಟ ಕೊಡ್ತಿದ್ದೆ ಗೊತ್ತಿದಾ? ದನವಿನ್ ಕರ, ಬೆಕ್ಕಿನ್ ಮರಿ, ಚಂದ್ರ, ಪೋಲೀಸು -ಎಲ್ಲವಕ್ಕೂ ಒಂದೊಂದು ಚಮಚ ತಿನ್ಸಿದ್ ಮೇಲೇ ನೀನು ತಿಂತಿದ್ದಿದ್ದು!” ಎನ್ನುತ್ತಿದ್ದಳು. ಮಗುವಾಗಿದ್ದ ನನ್ನನ್ನೆತ್ತಿಕೊಂಡು ಅಮ್ಮ, ಒಂದು ಕೈಯಲ್ಲಿ ನೆಸ್ಟಮ್ ಖಾದ್ಯದ ಬಟ್ಟಲನ್ನು ಹಿಡಿದು, ಕೊಟ್ಟಿಗೆ, ಅಂಗಳ, ರಸ್ತೆಯನ್ನೆಲ್ಲಾ ಸುತ್ತುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡು ನಾನು ಖುಶಿ ಪಡುತ್ತಿದ್ದೆ. ಅದೇ ಚಿತ್ರದ ನೆನಪಿನ ಲಹರಿಯಲ್ಲಿರುತ್ತಿದ್ದ ಅಮ್ಮ, “ಅರ್ಧ ನೆಸ್ಟಮ್ ಡಬ್ಬಿ ನಿನ್ನ ಮುಖ-ಮುಸುಡಿಗೆ ಬಡಿಯಕ್ಕೇ ಆಯ್ದು ಬಿಡು!” ಎಂದು ನಗುತ್ತಿದ್ದಳು. ಹೀಗೆ, ನಮ್ಮನೆಯ ಅಡುಗೆ ಮನೆ ನಾಗಂದಿಗೆ ಮೇಲೆ ಕೊತ್ತುಂಬರಿ ಕಾಳನ್ನು ಅರ್ಧದವರೆಗೆ ತುಂಬಿಸಿಕೊಂಡು ಮುಗುಮ್ಮಾಗಿ ಕೂತಿದ್ದ ಆ ನೆಸ್ಟಮ್ ಡಬ್ಬಿ, ಆಗಾಗ ಅಮ್ಮನಿಗೆ ಸಿಹಿಸಿಹಿ ನೆನಪನ್ನೂ ನನಗೆ ಕಲ್ಪನೆಯನ್ನೂ ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತಿತ್ತು.

ಈ ತಗಡಿನ ಡಬ್ಬಿಗಳ ಸಮಸ್ಯೆಯೆಂದರೆ, ಇವುಗಳ ಒಡಲಲ್ಲಿ ಏನಿದೆ ಅಂತ ಪ್ರತಿ ಸಲ ಮುಚ್ಚಳ ತೆಗೆದೇ ನೋಡಬೇಕು. ಹೀಗಾಗಿ ನಾನು, ಆಯಾ ಡಬ್ಬಿಗಳ ಮೇಲೆ ಆಯಾ ವಸ್ತುವಿನ ಹೆಸರನ್ನು ಬರೆದ ಪಟ್ಟಿ ಅಂಟಿಸಿರುತ್ತಿದ್ದೆ. ಆದರೆ ಪಟ್ಟಿ ಕಿತ್ತು ಹೋದ ಡಬ್ಬಿಗಳದೇ ಸಮಸ್ಯೆ. ಅಮ್ಮನಾದರೆ ಕೈಯಲ್ಲಿ ಹಿಡಿದು ಕುಲುಕಿದಾಗ ಬರುವ ಶಬ್ದದಿಂದಲೇ ಒಳಗಿರುವುದು ಕಡಲೆ ಬೇಳೆಯೋ ಉದ್ದಿನ ಬೇಳೆಯೋ ಅಂತ ಪತ್ತೆ ಮಾಡುತ್ತಿದ್ದಳು. ಆದರೆ ಅಮ್ಮ ‘ರಜೆ’ಯಲ್ಲಿದ್ದಾಗ ಅಡುಗೆ ಮಾಡುವ ಪಾಳಿಯನ್ನು ವಹಿಸಿಕೊಳ್ಳುತ್ತಿದ್ದ ಅಪ್ಪನಿಗೆ ಇದು ಗೊತ್ತಾಗುತ್ತಿರಲಿಲ್ಲ. ಸಾಸಿವೆ ಕಾಳಿಗೂ ತೊಗರಿ ಬೇಳೆಗೂ ವ್ಯತ್ಯಾಸ ಗುರುತಿಸುವುದು ಸುಲಭ; ಆದರೆ ಒಂದೇ ಸೈಜಿನ - ಒಂದೇ ತೂಕದ ಬೇಳೆಗಳ ನಡುವಿನ ಶಬ್ದವ್ಯತ್ಯಾಸ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುಕಮ್ಮಿ ಶಬ್ದವೇದಿ ಕಲಿತವರಷ್ಟೇ ಜಾಣ್ಮೆ ಬೇಕು.

ಈ ಸಮಸ್ಯೆ ದೂರವಾದದ್ದು ಪಾರದರ್ಶಕ ಪ್ಲಾಸ್ಟಿಕ್ ಡಬ್ಬಿಗಳು ಬಂದಮೇಲೆ. “ಎಲ್ಲಾರ್ ಮನೇಲೂ ಈಗ ಪ್ಲಾಸ್ಟಿಕ್ ಡಬ್ಬಿ. ಬೇಳೆ-ಕಾಳು ತುಂಬಿಸಿ ನಾಗಂದಿಗೆ ಮೇಲೆ ಇಟ್ರೆ ನೀಟಾಗಿ ಎಲ್ಲಾ ಕಾಣ್ತು. ಈ ಸಲ ಸಾಗರಕ್ಕೆ ಹೋದಾಗ ನಮ್ಮನಿಗೂ ಐದಾರು ಡಬ್ಬಿ ತಗಂಬನ್ನಿ” ಎಂಬ ಅಮ್ಮನ ಚಿತಾವಣೆಯನ್ನು ಪಾಲಿಸಿದ ಅಪ್ಪ, ಆ ಸಲ ಸಾಗರದಿಂದ ಬರುವಾಗ ವಿನಾಯಕ ರಾಯರ ಅಂಗಡಿಯಿಂದ ಆರು ಚಾಕ್ಲೇಟ್ ಡಬ್ಬಿ ತಂದ. ಈ ಚಾಕ್ಲೇಟ್ ಡಬ್ಬಿಗಳ ಮೇಲಿದ್ದ ಆಲ್ಫೆನ್ಲೀಬೇ, ಇಕ್ಲೇರ್ಸ್, ಹಾಜ್‌ಮುಲಾ ಇತ್ಯಾದಿ ಸ್ಟಿಕ್ಕರುಗಳನ್ನು ಕಿತ್ತು ತೆಗೆಯುವ ಕೆಲಸ ನನಗೆ ಬಂತು. ಮತ್ತೆ ಇವುಗಳಲ್ಲಿ ಇನ್ನೂ ಆಯಾ ಚಾಕ್ಲೇಟಿನ ಫ್ಲೇವರಿನ ಪರಿಮಳ ಇರುತ್ತಿತ್ತು. ಮುಚ್ಚಳ ತೆರೆದರೆ ಸಾಕು, ಆ ಚಾಕ್ಲೇಟಿನ ರುಚಿಯೇ ನೆನಪಾಗಿ ಬಾಯಲ್ಲಿ ನೀರು ಬರುತ್ತಿತ್ತು. ಅದಕ್ಕೇ, ತುಂಬಾ ಬೇಜಾರಾಗಿ ನಾನು, “ಖಾಲಿ ಡಬ್ಬಿ ತರೋದಕ್ಕಿಂತ ತುಂಬಿದ್ದೇ ತರ್ಲಾಗಿತ್ತು” ಅಂತ ಅಪ್ಪನಿಗೆ ಹೇಳಿದೆ. ಅಪ್ಪನಿಗೆ ಇದ್ಯಾಕೋ ದುಬಾರಿ ವ್ಯವಹಾರ ಆಯ್ತಲ್ಲಾ ಅನಿಸಿರಬೇಕು, “ವಿನಾಯಕ ರಾಯರ ಅಂಗಡೀಲಿ ಇದ್ದಿದ್ದು ಅಷ್ಟೂ ಖಾಲಿ ಚಾಕ್ಲೇಟ್ ಡಬ್ಬಿ! ಇದೇ, ಇದೊಂದರಲ್ಲಿ ಎರಡು ಉಳಿದಿತ್ತು, ಜೇಬಲ್ ಇಟ್ಕಂಡ್ ಬೈಂದಿ” ಎನ್ನುತ್ತಾ, ಎರಡು ಚಾಕ್ಲೇಟ್ ತೆಗೆದು ಕೊಟ್ಟ. ಅವನು ಸುಳ್ಳು ಹೇಳುತ್ತಿದ್ದಾನೆ ಅಂತ ಗೊತ್ತಾದರೂ ನಾನು ಅದನ್ನು ಇಸಕೊಂಡು, ಖುಶಿಯಿಂದ ಸ್ಟಿಕರ್ ಕೀಳುವುದನ್ನು ಮುಂದುವರೆಸಿದೆ. ಈಗ ಬೇಡವಾದ ಹಳೆಯ ತಗಡಿನ ರೌಂಡು ಡಬ್ಬಿಗಳಿಗೆ ತೂತು ಮಾಡಿ, ಮಧ್ಯೆ ದಾರ ಪೋಣಿಸಿ ಬುಲ್ಡೇಜರ್ ಮಾಡಿ ಮನೆ ತುಂಬಾ ಶಬ್ದ ಮಾಡುತ್ತಾ ಓಡಾಡಿಸಿದೆ.

ಆ ಚಾಕ್ಲೇಟ್ ಡಬ್ಬಿಗಳು ನಮ್ಮ ಮನೆಯಲ್ಲಿ ಸುಮಾರು ವರ್ಷ ಕಾಲ ಚಲಾವಣೆಯಲ್ಲಿದ್ದವು. ಉದ್ದು, ಹೆಸರು, ತೊಗರಿ, ಕಡಲೆ, ಕೊತ್ತಂಬರಿಯಾದಿಯಾಗಿ ಅನೇಕ ಬಣ್ಣಬಣ್ಣದ ದವಸ ಧಾನ್ಯಗಳನ್ನು ಇವು ತಮ್ಮೊಡಲಲ್ಲಿಟ್ಟುಕೊಂಡು ಸಂರಕ್ಷಿಸುತ್ತಿದ್ದವು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ವರ್ಷಕ್ಕೊಮ್ಮೆ, ಮಳೆಗಾಲಕ್ಕೆ ಮುನ್ನ, ಕಾಳು-ಬೇಳೆಗಳನ್ನು ತರಿಸಿ, ಹಸನು ಮಾಡಿ ಡಬ್ಬಿಗಳಲ್ಲಿ ತುಂಬಿಡುತ್ತಿದ್ದೆವು. ಹಾಗೆ ತುಂಬಿಡುವ ಮುನ್ನ ಡಬ್ಬಿಯನ್ನು ತೊಳೆದು, ಬಿಸಿಲಲ್ಲಿ ಒಣಗಿಸಿ, ಒರೆಸಿ ಇಡಬೇಕಿತ್ತು. ಪ್ರತಿ ವರ್ಷವೂ ಮೆಂತೆಕಾಳನ್ನೇ ತುಂಬಿಸಿಕೊಂಡಿರಬೇಕೆಂದು ಸಣ್ಣ ಡಬ್ಬಿಯ ಮುಖ ಕಹಿಯಾಗುವುದನ್ನೂ, ಪ್ರತಿ ವರ್ಷವೂ ಒಣಮೆಣಸಿನ ಕಾಯಿ ತುಂಬಿಸಿಕೊಂಡಿರಬೇಕೆಂದು ದೊಡ್ಡ ಡಬ್ಬಿ ಮಾಡಿದ ಸಿಟ್ಟಿಗೆ ಅದರ ಮುಖ ಕೆಂಪಾಗುವುದನ್ನೂ ನಾನು ಗಮನಿಸುತ್ತಿದ್ದೆ. ಇವೆಲ್ಲವುಗಳಿಗಿಂತ ಭಿನ್ನವಾಗಿದ್ದು ತಮ್ಮದೇ ಗತ್ತಿನಿಂದ ಮೆರೆಯುತ್ತಿದ್ದುದು ಉಪ್ಪಿನಕಾಯಿಯ ಪಿಂಗಾಣಿ ಜಾಡಿ ಮತ್ತೆ ತನ್ನೊಳಗೆ ಅಮ್ಮನ ಚಿಲ್ಲರೆ ಕಾಸನ್ನು ಅಡಗಿಸಿಟ್ಟುಕೊಂಡಿರುತ್ತಿದ್ದ ಸಾಸಿವೆಕಾಳಿನ ಡಬ್ಬಿ -ಎರಡೇ.

ನಮ್ಮ ಮನೆಯಲ್ಲಿ ಒಂದಷ್ಟು ಗಾಜಿನ ಡಬ್ಬಿಗಳೂ ಇದ್ದವು. ಕಡಗಾಯಿ, ಕುಚ್ಚುಮಾವಿನಕಾಯಿ, ಸಕ್ಕರೆ, ಇತ್ಯಾದಿ ವಸ್ತುಗಳನ್ನು ಅವುಗಳಲ್ಲಿ ತುಂಬಿಸಿ ಅಡುಗೆಮನೆ ಪಕ್ಕದ ಚಿಕ್ಕ ಕಾಲುದಾರಿಯಲ್ಲಿದ್ದ ಕಪಾಟಿನಲ್ಲಿ ಅಮ್ಮ ಅವನ್ನು ಇಟ್ಟಿರುತ್ತಿದ್ದಳು. ಒಮ್ಮೆ ನನ್ನ ಅತ್ತಿಗೆ ಅದರ ಮೇಲ್ಗಡೆ ಅರೆಯಲ್ಲಿ ತಾನೇ ಅಡಗಿಸಿಟ್ಟುಕೊಂಡಿದ್ದ ಚಾಕ್ಲೇಟುಗಳನ್ನು ತೆಗೆದುಕೊಳ್ಳಲೆಂದು ಕಪಾಟಿನ ಕೆಳಾಗಡೆ ಅರೆಯ ಮೇಲೆ ಕಾಲಿಡುತ್ತಿದ್ದಂತೆಯೇ ಇಡೀ ಕಪಾಟೇ ಅವಳ ಮೇಲೆ ಮಗುಚಿ ಬಿದ್ದು, ಗಾಜಿನ ಡಬ್ಬಿಗಳೆಲ್ಲ ಒಡೆದುಹೋದವು. ಸದ್ದು ಕೇಳಿ ಓಡಿ ಬಂದ ನಾನು, ಆವರಣದ ತುಂಬಾ ಚೆಲ್ಲಿದ್ದ ಬಣ್ಣಬಣ್ಣದ ದ್ರವದ ಮಧ್ಯೆ ಅತ್ತಿಗೆ ಬಿದ್ದುಕೊಂಡಿರುವ ದೃಶ್ಯ ಕಂಡು, ಹೆದರಿ ಕಿಟಾರನೆ ಕಿರುಚಿಕೊಂಡಿದ್ದೆ. ಪುಣ್ಯಕ್ಕೆ ಸ್ವಲ್ಪ ಕೈಗೆ ಗಾಯವಾಗಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿರಲಿಲ್ಲ ಅವಳಿಗೆ. ಸ್ಥಳಕ್ಕೆ ಧಾವಿಸಿದ ಅಮ್ಮ ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊಂಡಿದ್ದ ಕುಚ್ಚುಮಾವಿನಕಾಯಿ ನೆಲದ ಪಾಲಾದುದಕ್ಕೆ ತೀವ್ರವಾಗಿ ಬೇಸರ ಪಟ್ಟುಕೊಂಡಳು. ವಾರದವರೆಗೂ ಆ ವಾತಾವರಣದಲ್ಲಿ ಕುಚ್ಚುಮಾವಿನಕಾಯಿಯ ಪರಿಮಳ ಸುಳಿದಾಡುತ್ತಿತ್ತು.

ನಾವು ಹೊಸ ಮನೆಗೆ ಬಂದಮೇಲೆ, ಅಲ್ಲಿಯ ಶೆಲ್ಫಿನಲ್ಲಿ ಈ ಚಾಕ್ಲೇಟ್ ಡಬ್ಬಿಗಳು ತುಂಬಾ ಹಳತಿನಂತೆ ಕಾಣತೊಡಗಿದವು. ಇವು ಒಂದೊಂದೂ ಬೇರೆ ಬೇರೆ ಸೈಜು, ಬೇರೆ ಬೇರೆ ಆಕಾರದಲ್ಲಿದ್ದವು. ಆಗಲೇ ಪಾಲಿಶ್ ಕಳೆದುಕೊಂಡು, ಒಂಥರಾ ಬೆಳ್ಳಬೆಳ್ಳಗಾಗಿ ಮುದುಕಿಯರಂತೆ ಕಾಣುತ್ತಿದ್ದವು. ಮತ್ತೆ ಊರಲ್ಲಿ ಈಗ ಎಲ್ಲರ ಮನೆಗೂ ಬಂದುಬಿಟ್ಟಿದ್ದ ಟಪ್ಪರ್‌ವೇರಿನ ಆಕರ್ಷಕ ಪೆಟ್-ಜಾರ್‌ಗಳು ಅಮ್ಮನ ಕಣ್ಣನ್ನು ಕುಕ್ಕುತ್ತಿದ್ದವು. ಫೇಶಿಯಲ್ ಮಾಡಿಸಿಕೊಂಡ ಸ್ಲೀವ್‌ಲೆಸ್ ನಟಿಯರಂತೆ ಥಳಥಳಿಸುತ್ತ, ಒಂದೇ ಬಣ್ಣದ ಮುಚ್ಚಳಗಳನ್ನು ಹೊಂದಿ ಚಂದಗೆ ನಳನಳಿಸುತ್ತಿದ್ದ ಇವನ್ನು ನಮ್ಮ ಮನೆಯ ಶೆಲ್ಫಿನ ಮೇಲೆ ಕಲ್ಪಿಸಿಕೊಂಡು ಅಮ್ಮ ಹಿರಿಹಿಗ್ಗಿದಳು. ಅದಾಗಲೇ ಬೆಂಗಳೂರಿಗೆ ಸೇರಿಕೊಂಡಿದ್ದ ನನ್ನ ಬಳಿ ಫೋನಿನಲ್ಲಿ “ಅಪ್ಪೀ, ಈ ಸಲ ಬರಕ್ಕರೆ ಒಂದು ಕೆಜಿ ಸೈಜಿಂದು ಒಂದಷ್ಟ್ ಬಾಕ್ಸ್ ತಗಂಬಾ” ಅಂತ ಸಣ್ಣಗೆ ಹೇಳಿದಳು. ನಾನು ಅಮ್ಮನಿಗೆ ಖುಶಿಯಾಗಲಿ ಅಂತ, ಮೂರು ಸೈಜಿನ ಆರರಂತೆ ಒಟ್ಟು ಹದಿನೆಂಟು ಟಪ್ಪರ್‌ವೇರ್ ಡಬ್ಬಿ ಒಯ್ದು ಕೊಟ್ಟೆ. ಅಷ್ಟೇ ಅಲ್ಲ, ಅವಳನ್ನು ಸಾಗರಕ್ಕೆ ಕರೆದುಕೊಂಡು ಹೋಗಿ ಐದಾರು ದೊಡ್ಡ ದೊಡ್ಡ ಸ್ಟೀಲ್ ಡಬ್ಬಿಗಳನ್ನೂ ಕೊಡಿಸಿದೆ. ಅಷ್ಟನ್ನೆಲ್ಲಾ ಒಟ್ಟಿಗೆ ಮನೆಗೆ ತಂದುಕೊಂಡ ಅಮ್ಮ ಮುಗ್ದವಾಗಿ ಕೇಳಿದ್ದು ಒಂದೇ ಪ್ರಶ್ನೆ: “ಈಗ ಈ ಚಾಕ್ಲೇಟ್ ಡಬ್ಬೀನೆಲ್ಲ ಎಂಥ ಮಾಡದು?!”

ಅಷ್ಟೆಲ್ಲಾ ಡಬ್ಬಿ ಮನೆಯಲ್ಲಿದ್ದರೂ ಪ್ರತಿ ಸಲ ಮನೆಗೆ ಹೊರಟಾಗಲೂ ‘ಡಬ್ಬಿ ತಗಂಬಾ’ ಎಂದು ನೆನಪಿಸುವ ಅಮ್ಮನ ಬಗ್ಗೆ ನನಗೆ ಪ್ರೀತಿಲೇಪಿತ ಕೋಪ ಬಂದು ಕೊನೆಗದು ಮುದ್ದಾಗಿ ಪರಿವರ್ತಿತವಾಗಿ “ಅಯ್ಯೋ ಅಡ್ಡಿಲ್ಲೆ ಮಾರಾಯ್ತೀ” ಎಂದು ನಗುತ್ತಾ ಫೋನಿಡುವಂತೆ ಮಾಡುತ್ತದೆ. ಬೆಂಗಳೂರಿನ ಪುಟ್ಟ ಮನೆಯ ಪುಟ್ಟ ಕಿಚನ್ನಿನ ಪುಟ್ಟ ನಾಗಂದಿಗೆಯ ಮೇಲೆ ಬಿದ್ದುಕೊಂಡಿರುವ ಖಾಲಿ ಡಬ್ಬಿಗಳನ್ನು ಚೀಲದೊಳಗೆ ತುಂಬಿ ಊರಿನ ಬಸ್ಸಿನ ರಶ್ಶಿನೊಳಗೆ ತೂರಿಸುವಾಗ ರೂಮ್‌ಮೇಟ್ ರೇಗಿಸುತ್ತಾನೆ: ‘ಥೂ, ಡಬ್ಬಾ ನನ್ ಮಗನೇ!’. ನಾನು ತಕ್ಷಣ ಸರಿ ಮಾಡುತ್ತೇನೆ: ‘ಡಬ್ಬಾ ನನ್ ಮಗ ಅಲ್ಲ; ಡಬ್ಬಿಪ್ರೀತಿಯ ಅಮ್ಮನ ಮಗ’ ಅಂತ.

[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ.]

Wednesday, September 09, 2009

ಹಾರು

ಪಾರಿವಾಳಕ್ಕಿಂತ ಬಿಳಿಯ ಬಣ್ಣದ ಹಕ್ಕಿಗಳು
ಬಂದು ಒಳ ಸೇರಿಕೊಂಡುಬಿಟ್ಟಿವೆ...
ಹೊತ್ತೊತ್ತಿಗೆ ಕಾಳೊಂದು ಸಿಕ್ಕುತ್ತಿರುವಾಗ
ಹೊರ ಹಾರುವುದಾದರೂ ಏಕೆ ಎಂಬಂತ
ನಿಶ್ಚಿಂತೆಯಲ್ಲಿ ಸ್ಥಿರವಾಗಿಬಿಟ್ಟಿವೆ ಇಲ್ಲೇ.

ಕೆಲ ಹಕ್ಕಿಗಳಿಗೆ ಇದು ಗೂಡು;
ಕೆಲವಕ್ಕೆ ಪಂಜರ.

ಇಲ್ಲಿ ಹೊಸ ಕನಸುಗಳು ಗರ್ಭ ಕಟ್ಟುವುದಿಲ್ಲ;
ಗುಂಪಲ್ಲಿ ಅನುರಣಿಸುವ ಕಚ್ಚಾಟದ ಕಿಚಿಪಿಚಿಗಳು
ತೀರ್ಮಾನವಾಗುವುದಿಲ್ಲ;
ಅನಾವೃತಗೊಳ್ಳುವ ಹೃದಯದ ಚಿಲಿಪಿಲಿಗಳಿಗೆ
ಕಿವಿಯೇ ಇಲ್ಲ.

ಇಂತಹ ನೆಲೆಯಲ್ಲಿ ಅದ್ಯಾಕೆ ಅದೊಂದು ಹಕ್ಕಿ
ಹಾಗೆ ಕುಳಿತಿದೆ ಮೌನದಲ್ಲಿ?
ಗೂಡಿನೊಳಗೂ ಗೂಡು ರಚಿಸಿಕೊಂಡು ನಿ-
ಗೂಢವಾಗಿದೆ?
ಬಂದ ಹೊಸ-ಅಸಭ್ಯ ಹಕ್ಕಿಗೂ ಅಚ್ಚರಿ:
ಏಕೆ ತನ್ನ 'ತಾದಿಂ ತರಿಕಿಟ ತಾ'ಗಳನ್ನು ಮೆಚ್ಚುಗೆಯ
ಕಣ್ಣಿಂದ ಈಕ್ಷಿಸುತ್ತಿದೆ?
ಸಾವಕಾಶ ಎತ್ತುತ್ತಿದೆ ಕೈ- ಒಪ್ಪಿಗೆಯ ಮತಕ್ಕೆ-
ಬರುವಂತೆ ಆಮೆ ಚಿಪ್ಪಿಂದ ಹೊರಗೆ?
ನಿಬದ್ಧಗಳ ಹರಿದು ಹಾರುವ ತನ್ನಾಲೋಚನೆಗೆ
ಹೇಗೆ ಅರಳಿಸುತ್ತಿದೆ ಮಂದಸ್ಮಿತ ಕಣ್ಣಲ್ಲೇ..

ಸುತ್ತ ನಿಶ್ಯಬ್ದವಿದ್ದಾಗ ಪಿಸುಮಾತೇ ಗದ್ದಲವಾಗುತ್ತದೆ.
"ಹಾರಿ ಹೋಗುವುದು ಎಂದರೆ
ನೀನಂದುಕೊಂಡಿರುವುದಕ್ಕಿಂತ ಸುಲಭ ಚೀಫ್..
ರೆಕ್ಕೆಗಳನ್ನು ಬಿಚ್ಚಿ ವಿಹಂಗಮ
ತೂರಿ ಸರಳುಗಳ ನಡುವಿನ ಪುಟ್ಟ ಅವಕಾಶದಲ್ಲಿ
ಸೇರಿಬಿಡಬಹುದು ಗಗನ..
ಬಚ್ಚಿಟ್ಟುಕೊಳ್ಳಬಹುದು ಬೇಕಿದ್ದರೆ,
ಚಿಕ್ಕೆಗಳ ಹಿಂದೆ.. ಬಾ,
ಹೊರಡು"

-ಎಂದೆಲ್ಲ ಹೇಳಿದ್ದ ನೀನು
ಈಗ ಹೀಗ್ಯಾಕೆ ಅಲ್ಲಾಡದೇ ಮಲಗಿರುವೆ?
ಹೊರಗೆ ಬೆಚ್ಚಗೆ ಮಲಗಿದೆ ಲೋಕ..
ಅರೆ ಎಚ್ಚರದಲ್ಲಿ ತಾಯಿ ಕೊಟ್ಟ ಮೊಲೆಯಿಂದ
ಮಗು ಹೀರುತ್ತಿರುವ ಹಾಲಿನಲ್ಲಿ
ನಾಳೆ ಬೆಳಿಗ್ಗೆ ಅರಳಲಿರುವ ಮೊಗ್ಗುಗಳೊಡಲ
ಮಕರಂದವೆಲ್ಲ ಕರಗಿದೆ..
ಚಂದಿರನ ಬೆಳಕನ್ನು ಹೊತ್ತ ದೊಡ್ಡ ಮೋಡಗಳು
ಎತ್ತಲೋ ಹೋಗುತ್ತಿವೆ..
ಗಂಟೆಯ ಮುಳ್ಳಿನ ನಿಧಾನಗತಿಯನ್ನು
ಸೆಕೆಂಡಿನ ಮುಳ್ಳು ಹಾಸ್ಯ ಮಾಡುತ್ತಿದೆ..

ಇಂಥಲ್ಲಿ,
ನೀನ್ಯಾಕೆ ಮಲಗಿದ್ದೀಯ ಹೀಗೆ ರೆಕ್ಕೆಗಳ ಮಡಚಿ?
ದುಂಬಿಗೆ ಮೋಸದ ಅರಿವಾಗುವ ಮುನ್ನ,
ಮೋಡ ಕರಗಿ ಸುರಿಯುವ ಮುನ್ನ,
ಚಿಕ್ಕ ಮುಳ್ಳು ಸೂರ್ಯನಿಗೆ ಪುಕಾರು ಹೇಳುವ ಮುನ್ನ,

ಸೇರಿ ಬಿಡೋಣ ಗೌಪ್ಯದ ಗರ್ಭ.
ಬಾ ಮ್ಯಾಕ್, ಹೊರಡು.

[One Flew over the Cuckoo's Nest ಸಿನೆಮಾ ನೋಡಿ..]

Saturday, September 05, 2009

ನೆನೆ ನೆನೆ ಈ ದಿನ

ನಾವು ಹೈಸ್ಕೂಲಿಂದ ಕಾಲೇಜಿಗೆ ಸೇರ್ತಿದ್ದ ಹಾಗೇ ಮೇಷ್ಟ್ರುಗಳೆಲ್ಲ ಲೆಕ್ಚರರುಗಳಾಗಿಬಿಟ್ಟಿದ್ದರು. ಆದರೆ ನಮಗೆ ಮಾತ್ರ ಇನ್ನೂ ಅವರನ್ನು ಲೆಕ್ಚರರ್ ಅಂತ ಕರೀಲಿಕ್ಕೆ ಮನಸು ಒಪ್ತಿರ್ಲಿಲ್ಲ. ಹಿಂದಿನವರ ಹಾಗೆ ಇವರೂ ಕಪ್ಪು ಬೋರ್ಡಿನ ಪಕ್ಕ ನಿಂತು ಏನೇನೋ ಹೇಳಿ ನಮ್ಮಂತ ಮುಗ್ಧ ಹುಡುಗರನ್ನು ಮರುಳು ಮಾಡಿ ನಿದ್ದೆಗೆ ನೂಕುತಿದ್ದರು. ಹಾಗಿದ್ದಾಗ, ನಾವು ಮಾತ್ರ ‘ಶಾಲೆ’ ಅಂತ ಹೋಗಲು ಶುರು ಮಾಡಿದಾಗಿಂದ ಸ್ಟುಡೆಂಟ್ಸು; ಇವರು ಹೇಗೆ ಮೇಷ್ಟ್ರಿಂದ ಹೆಡ್ ಮೇಷ್ಟ್ರಾಗಿ ಲೆಕ್ಚರರ್ರಾಗಿ ಪ್ರೊಫೆಸರ್ರಾಗಿ ಪ್ರಿನ್ಸಿಪಾಲಾಗಿ ಏನೇನೆಲ್ಲಾ ಆಗೋದು? ಓಹೋ, ಅದಕ್ಕೇ ನಾವು ಅವರನ್ನು ಮೇಷ್ಟ್ರು ಅಂತಲೇ ಕನ್ಸಿಡರ್ ಮಾಡ್ತಿದ್ವು. ವಯಸ್ಸಾಗಿದ್ದಕ್ಕೋ ಕಾಲ ಕಾಲದಿಂದ ಬೋಧಿಸುತ್ತಲೇ ಬಂದಿದ್ದಕ್ಕೋ ಏನೋ, ಅವರಿಗೂ ಬೋಧನೆಯಲ್ಲಿ ಅಂತಹ ಉತ್ಸಾಹ ಇರಲಿಲ್ಲ. ನಾವು ಕಪಿಚೇಷ್ಟೆ ಮಾಡಿದಾಗೆಲ್ಲ ಅವರು ಎಚ್ಚರಿಸ್ತಿದ್ರು: "ನೀವೀಗ ಮೊದ್ಲಿನಂಗೆ ಹೈಸ್ಕೂಲ್ ಸ್ಟುಡೆಂಟ್ಸ್ ಅಲ್ಲ, ಕಾಲೇಜು ಇದು. ಸೀರಿಯಸ್ಸಾಗಿರೋದನ್ನ ಕಲೀರಿ" ಅಂತ. ನಿದ್ದೇನಲ್ಲೂ ಸೀರಿಯಸ್‌ನೆಸ್ಸು ಅಂದ್ರೆ ಹ್ಯಾಗೆ ಸಾರ್? ಆದರೆ, ಹೈಸ್ಕೂಲಿನವರಿಗೂ ಇವರಿಗೂ ಇರ್ತಿದ್ದ ಒಂದೇ ವ್ಯತ್ಯಾಸ ಅಂದ್ರೆ, ಅವರು ಬರೀ ಕನ್ನಡದಲ್ಲಿ ಪಾಠ ಮಾಡೋರು; ಇವರು ಇಂಗ್ಲೀಷ್ ಬಳಸೋರು. ಹಳೆಯ ಜನ್ಮದಲ್ಲಿ ಮಾಡಿದ್ದ ಕರ್ಮಗಳಿಂದಾಗಿ ಇಂಗ್ಲೀಷು ನಮಗೆ ಅರ್ಥ ಆಗ್ತಿರಲಿಲ್ಲ. ಹೀಗಾಗಿ ನಿದ್ದೆ ಇನ್ನೂ ಸಲೀಸಾಗಿ ಬರ್ತಿತ್ತು.

ನನ್ನ ಹಾಗೇ ನನ್ನ ಸಹಪಾಠಿಗಳೂ ಸಹ ಸೈನ್ಸು ಸಿಗಲಿಲ್ಲ ಅಂತ ಕಾಮರ್ಸಿಗೆ ಸೇರಿದವರೇ ಆಗಿದ್ರು. ಸೇರಿದ ಮೇಲೆ, "ಇದೇ ಅರ್ಥ ಆಗ್ತಿಲ್ಲ, ಇನ್ನು ಅದು ಸಿಕ್ಕಿದ್ರೆ ಅಧೋಗತಿ" ಅಂತ ನಮಗೆ ನಾವೇ ಸಮಾಧಾನಾನೂ ಮಾಡ್ಕೊಂಡಿದ್ವಿ. ಓದು, ಪರೀಕ್ಷೆ, ಗುರುನಿಷ್ಠೆ, ಭವಿಷ್ಯ ಇತ್ಯಾದಿಯೆಲ್ಲವನ್ನೂ ಕಸದ ತೊಟ್ಟಿಯೊಳಗಿನ ಕಾಗದದ ಚೂರಿನೊಂದಿಗೆ ಮಲಗಿಸಿ ನಾವೂ ನಿರರ್ಗಳ ತೂಕಡಿಸುತ್ತಿದ್ದೆವು, ಎಚ್ಚರದಲ್ಲಿ ಕೀಟಲೆ ಮಾಡ್ತಾ ಇದ್ದೆವು. ಇಂತಹ ನಮ್ಮನ್ನು ನಿದ್ದೆಯಿಂದ ಬಡಿದೆಬ್ಬಿಸಿದ್ದು ಅಲೋಕ್ ಎಂಬ ಲೆಕ್ಚರರು.

ಬೋರು ಹೊಡೆಸ್ತಿದ್ದ ಸಿನಿಮಾದಲ್ಲಿ ಇದ್ದಕ್ಕಿದ್ದಂಗೆ ಹೀರೋ ಎಂಟ್ರಿ ಆಗೋ ಹಾಗೆ ಈ ಪಾರ್ಟ್-ಟೈಮ್ ಲೆಕ್ಚರರು ಬಂದದ್ದು ಕಾಲೇಜು ಶುರುವಾಗಿ ಹದಿನೈದು ದಿವಸಗಳ ನಂತರ. ಕಾಮರ್ಸ್ ವಿಷಯವನ್ನು ತೆಗೆದುಕೊಳ್ಳುತ್ತಿದ್ದೀನಿ ಅಂತ ಹೇಳಿದ ಅವರನ್ನು ನಾವು ಪಿಳಿಪಿಳಿ ಕಣ್ಣಿಂದ ನೋಡಿದೆವು. ಈ ಲೆಕ್ಚರರು ಇನ್ನೂ ಯುವಕರಿದ್ದರು, ಜೀನ್ಸ್ ಹಾಕಿಕೊಂಡಿದ್ದರು, ರಾಷ್ಟ್ರಗೀತೆ ಹಾಡುವವರಂತೆ ಬರೀ ಬ್ಲಾಕ್‌ಬೋರ್ಡಿನ ಬಳಿ ಅಟೆನ್ಷನ್ ಪೊಸಿಷನ್ನಿನಲ್ಲಿ ನಿಂತಿರದೆ ಇಡೀ ಕ್ಲಾಸ್‌ರೂಮ್ ತುಂಬಾ ಚಕಚಕನೆ ಓಡಾಡುತ್ತಿದ್ದರು. ಅವರ ಕಂಠದ ಮೋಡಿ ಎಂಥದಿತ್ತೆಂದರೆ, ನಮ್ಮಂಥಾ ನಮಗೂ ಇಂಗ್ಲೀಷು ಭಾಷೆಯ ಪಾಠ ಅರ್ಥವಾಗತೊಡಗಿ, ನಮ್ಮ ತಲೆಯ ಬಗ್ಗೆಯೇ ನಮಗೆ ಅಚ್ಚರಿ ಮೂಡಿ, ತೂಕಡಿಕೆಯಲ್ಲದ ಕಾರಣವೊಂದಕ್ಕೆ ಮೊದಲ ಬಾರಿ ತಲೆದೂಗುವಂತಾಯಿತು.

ಅಲೋಕ್, ನಮಗೆ ಸುಲಭವಾಗಿ ಅರ್ಥವಾಗಲಿ ಎಂಬುದ್ಧೇಶದಿಂದ ಪಾಠವನ್ನೆಲ್ಲಾ ಉದಾಹರಣೆಗಳ ಮೂಲಕವೇ ತೂಗಿಸುತ್ತಿದ್ದರು. ಒಂದು ದಿನ, ನಾವೆಲ್ಲ ವಿದ್ಯಾರ್ಥಿಗಳನ್ನೂ ಪಾರ್ಟ್‌ನರುಗಳನ್ನಾಗಿ ಮಾಡಿ ಒಂದು ಕಾಲ್ಪನಿಕ ಪಾರ್ಟ್‌ನರ್‌ಶಿಪ್ ಫರ್ಮ್ ಸ್ಥಾಪಿಸಿಸಿದರು. ನಾವೆಲ್ಲಾ ತಲಾ ಹತ್ತು ರೂಪಾಯಿ ಹಾಕಿದೆವು. ಹಾಗೆ ಕೂಡಿಸಿದ ಹಣ ಒಟ್ಟಾಗಿ ಸಂಸ್ಥೆಯ ‘ಕ್ಯಾಪಿಟಲ್’ ಆಯಿತು. ನಂತರ ಆ ಹಣದಿಂದ ನಾವು ಹೊಸದೊಂದು ಉದ್ಯೋಗ ಶುರು ಮಾಡುವುದು ಅಂತ ತೀರ್ಮಾನಿಸಿದೆವು. ನಮಗೆಲ್ಲ ಮನೆಯಲ್ಲಿ ಮಾಡುವುದನ್ನು ನೋಡಿ ಗೊತ್ತಿದ್ದ ಹಲಸಿನಕಾಯಿ ಹಪ್ಪಳ ಮತ್ತು ಸಂಡಿಗೆ ಮಾಡುವುದೇ ಆ ಉದ್ಯೋಗ! ಕ್ಯಾಪಿಟಲ್ಲಿಗೆ ಹಣ ಕೊಟ್ಟಿರದ ಸಹಪಾಠಿಯೊಬ್ಬ ತಾನು ಹಲಸಿನಕಾಯಿಯನ್ನೇ ತನ್ನ ‘ಶೇರ್’ ಆಗಿ ತರುವುದಾಗಿ ಹೇಳಿದ. ಮರುದಿನ ಆತ ಬ್ಯಾಗ್ ಬದಲು ದೊಡ್ಡದೆರಡು ಹಲಿಸಿನಕಾಯಿ ಹೆಗಲಿನ ಮೇಲೆ ಹೊತ್ತುಕೊಂಡು ಬರುವ ಅಮೋಘ ದೃಶ್ಯವನ್ನು ಕಾರಿಡಾರಿನಲ್ಲಿ ನಿಂತ ನಾವೆಲ್ಲ ಕಣ್ತುಂಬ ನೋಡಿದೆವು. ಬೇರೆ ಡಿಪಾರ್ಟ್‌ಮೆಂಟಿನ ಹುಡುಗರು ಚಪ್ಪಾಳೆ ತಟ್ಟಿ ನಗಾಡಿದರು.

ನಂತರ ಆ ಹಲಸಿನಕಾಯಿ ಕಡಿದು, ಮೈಕೈಯೆಲ್ಲ ಅಂಟು ಮಾಡಿಕೊಳ್ಳುತ್ತ ನಾವು ತೊಳೆ ಬಿಡಿಸಿದೆವು. ಕಾಲೇಜಿನ ಕ್ಯಾಂಟೀನ್ ಮ್ಯಾನೇಜರ್ ಸಮ್ಮತಿ ಪಡೆದು, ಅಡುಗೆ ಭಟ್ಟನಿಗೆ ಸ್ವಲ್ಪ ದುಡ್ಡು ಕೊಟ್ಟು, ಬಿಡಿಸಿದ ತೊಳೆಗಳನ್ನು ಗ್ರೈಂಡರಿಗೆ ಹಾಕಿ, ಉಪ್ಪು-ಹುಳಿ-ಖಾರ ಎಲ್ಲಾ ಬೆರೆಸಿ ಬೀಸಿದ್ದಾಯ್ತು. ಹದ ಹೇಳಲು ಹೋಗಿ ದೊಡ್ಡಸ್ತಿಕೆ ತೋರಿದ ಕೆಲ ಹುಡುಗರನ್ನು ಹುಡುಗಿಯರು ಬೆದರಿಸಿ ಓಡಿಸಿದರು. ಹಾಗೇ ಅಕ್ಕಿಯಿಂದ ಸಂಡಿಗೆ ಹಿಟ್ಟೂ ತಯಾರಿಸಿದೆವು. ನಂತರ ನಾಲ್ಕು ಮೀಟರ್ ಬಟ್ಟೆ ಖರೀದಿಸಿ ತಂದು, ತಯಾರಾದ ಖಾದ್ಯವನ್ನು ಹುಡುಗರೂ-ಹುಡುಗಿಯರೂ ಸೇರಿ, ಬಾಳೆಲೆಯಲ್ಲಿ ತಟ್ಟಿ ತಟ್ಟಿ ಆ ಬಟ್ಟೆಯ ಮೇಲೆ ಒಣಗಿಸಿದೆವು. ಒಣಗುವವರೆಗೆ ಕಾಗೆ, ನಾಯಿಗಳು ಅವನ್ನು ಹೊತ್ತೊಯ್ಯದಂತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಪೀರಿಯಡ್ಡಿಗೊಬ್ಬರಂತೆ ಹೊತ್ತುಕೊಂಡೆವು. ಎರಡು ದಿನದಲ್ಲಿ ಹಪ್ಪಳ ಒಣಗಿ ತಯಾರಾಯಿತು.

ಸರಿ, ಈಗ ತಯಾರಾದ ಉತ್ಪನ್ನಗಳನ್ನು ಮಾರಾಟ ಮಾಡಬೇಕಲ್ಲ? ಕಾಲೇಜಿನಲ್ಲೇ ನಾಳೆ ಸಂಜೆ ಒಂದು ಕೌಂಟರ್ ತೆರೆದು, ಹಪ್ಪಳ-ಸಂಡಿಗೆಗಳನ್ನು ಕರಿದು ಮಾರುವುದು ಅಂತ ತೀರ್ಮಾನವಾಯ್ತು. "ಬರೀ ಹಪ್ಳ-ಸಂಡಿಗಿ ಅಂದ್ರ ಯಾರ್ ತಗೋಂತಾರ? ಜತೀಗೆ ಮಿರ್ಚಿ-ಭಜಿನೂ ಇರ್ಬೇಕು" ಅಂತ ಧಾರವಾಡದ ಬಸವರಾಜ್ ಹೇಳಿದ. ಸರಿ, ಕರಿಯೋದೇ ಕರೀತಿದ್ದೇವೆ, ಅದೇ ಎಣ್ಣೇಲಿ ಇದ್ನೂ ಕರಿಯೋಣ ಅಂತ ಅವನ ಸಲಹೆ ಅಂಗೀಕರಿಸಿದೆವು. ಅಷ್ಟರಲ್ಲಿ ನಮ್ಮ ಅಕೌಂಟ್ಸ್ ನೋಡಿಕೊಳ್ಳುತ್ತಿದ್ದ ರಶ್ಮಿ "ಮಿರ್ಚಿ ಮಾಡೋಕೆ ಸಂಸ್ಥೆಯಲ್ಲಿ ಹಣ ಇಲ್ಲ" ಅಂದಳು. ಸಾಲ ಮಾಡುವುದು ಅನಿವಾರ್ಯವಾಯಿತು. ನಮಗಾದರೂ ಯಾರಿದ್ದಾರೆ? "ಪ್ರಿನ್ಸಿಪಾಲರನ್ನೇ ಕೇಳೋಣ ನಡೀರಿ" ಅಂತ ಅಲೋಕ್ ಸರ್ ಹೇಳಿದರು. ಪ್ರಿನ್ಸಿಪಾಲರ ಬಳಿ ಹೋಗಿ "ನೀವೇ ಬ್ಯಾಂಕು, ಸಾಲ ಕೊಡಿ" ಅಂತ ಕೇಳಿದೆವು. ಮೊದಲು ಅವರು ಕಕ್ಕಾಬಿಕ್ಕಿಯಾದರೂ ವಿಷಯ ತಿಳಿದ ಮೇಲೆ ನಗುತ್ತಾ ಐನೂರು ರೂಪಾಯಿ ಕೊಟ್ಟರು.

ಮರುದಿನ ಇದ್ದಕ್ಕಿದ್ದಂತೆ ಒಂದು ಸಣ್ಣ ಮಳೆ ಬಂದು ನಮ್ಮ ವ್ಯಾಪಾರಕ್ಕೆ ಶುಭ ಮುಹೂರ್ತ ಕಲ್ಪಿಸಿಕೊಟ್ಟಿತು. ಕ್ಯಾಂಟೀನಿನ ಅಡುಗೆ ಭಟ್ಟರು ಕಾರಿಡಾರಿನ ಮೂಲೆಯಲ್ಲೊಂದು ಒಲೆ ಹೂಡಿ, ದೊಡ್ಡ ಬಾಣಲಿ ಇಟ್ಟು ಎಣ್ಣೆ ಹೊಯ್ದು, ಹಪ್ಪಳ-ಸಂಡಿಗೆ-ಮಿರ್ಚಿ ಕರಿಯಲು ಶುರುವಿಟ್ಟೇಬಿಟ್ಟರು! ಅದರ ಪರಿಮಳವೆಂಬುದು ಎರಡು ಫ್ಲೋರುಗಳಲ್ಲಿದ್ದ ವಿವಿಧ ಡಿಪಾರ್ಟ್‌ಮೆಂಟಿನ ಮುನ್ನೂರೂ ಚಿಲ್ಲರೆ ಮೂಗುಗಳಿಗೆ ತಲುಪಿ, ಕ್ಲಾಸುಗಳಲ್ಲಿ ಸಂಚಲನ ಉಂಟುಮಾಡಿತು. ಲೆಕ್ಚರರುಗಳೂ ವಿಚಲಿತಗೊಂಡು ಬೇಗ ಬೇಗ ತರಗತಿ ಮುಗಿಸಿದರು. ಎಲ್ಲಾ ಧಡಧಡನೆ ಕೆಳಗಿಳಿದು ಬಂದು ನಾವು ಮಾಡಿಕೊಂಡಿದ್ದ ಕೌಂಟರಿಗೆ ಮುತ್ತಿಗೆ ಹಾಕಿದರು. ಈ ನೂಕಿನಲ್ಲಿ ನುಗ್ಗುವುದಕ್ಕಾಗದೇ ಹುಡುಗಿಯರು ಹೊರಗೇ ಉಳಿದದ್ದರಿಂದ ಅವರಿಗಾಗಿ ನಾವು ವಿಶೇಷ ಕೌಂಟರ್ ತೆರೆಯಬೇಕಾಯಿತು. ಲೆಕ್ಚರರುಗಳಿಗೆ ಸ್ಟಾಫ್ ರೂಮಿಗೇ ಸಪ್ಲೈ ಮಾಡಿದೆವು. ಎಲ್ಲರೂ ದುಡ್ಡು ಕೊಟ್ಟು ಖರೀದಿಸಿ, ನಂತರ ಕ್ಯಾಂಟೀನಿನಲ್ಲಿ ಟೀ ಕುಡಿದರು. ಅರ್ಧ ಗಂಟೆಯೊಳಗೆ, ನಮಗೆ ಸ್ವಲ್ಪವೂ ಉಳಿಯದಂತೆ ಎಲ್ಲ ಐಟೆಮ್ಮುಗಳೂ ಮಾರಾಟವಾಗಿಹೋದವು. ಮಿರ್ಚಿ ಸಿಗದಿದ್ದುದಕ್ಕೆ ಬಸವರಾಜನ ಮುಖವಂತೂ ಮೆಣಸಿನಕಾಯಿಯಷ್ಟೇ ಸಣ್ಣಗಾಯಿತು. ಕೊನೆಗೆ ಪಾತ್ರೆಯ ತಳದಲ್ಲಿದ್ದ ಚೂರುಗಳನ್ನೇ ಅವನಿಗೆ ತಿನ್ನಿಸಿ ಸಮಾಧಾನ ಮಾಡಿದೆವು.

ಅಂತೂ ಈ ಮಾರಾಟದಿಂದಾಗಿ ನಮಗೆ ದುಪ್ಪಟ್ಟು ಲಾಭವಾಯಿತು. ಲಾಭದ ಹಣದಲ್ಲಿ ಮೊದಲು ತೀರಿಸಿದ್ದು ಪ್ರಿನ್ಸಿಪಾಲರಿಂದ ಪಡೆದಿದ್ದ ಸಾಲ! ಅವರಂತೂ ಬ್ಯಾಂಕಿನ ನಿಯಮಗಳಿಗೆ ವಿರುದ್ಧವಾಗಿ, ಸಂಕೋಚದ ಪರಮಾವಧಿಯಂತೆ "ಪರ್ವಾಗಿಲ್ಲ ನೀವೇ ಇಟ್ಕೊಳಿ" ಅಂದುಬಿಟ್ಟರು! ಆಮೇಲೆ ಉಳಿದ ಹಣವನ್ನು ನಾವೆಲ್ಲ ನಮ್ಮ ನಮ್ಮ ಹೂಡಿಕೆಯ ಅನುಪಾತದಲ್ಲೇ ಹಂಚಿಕೊಂಡೆವು. ಅಂದಿನ ಕಾಲೇಜು ಮುಚ್ಚುವುದರೊಳಗೆ ಎಲ್ಲಾ ನಿಯಮಗಳನ್ನೂ ಪಾಲಿಸಿ ಸಂಸ್ಥೆಯನ್ನು ‘ವೈಂಡಪ್’ ಸಹ ಮಾಡಿದೆವು.

ಅಲೋಕ್ ಸರ್, ಇಂತಹ ಪ್ರಯೋಗಗಳನ್ನು ಮಾಡಿಸುವುದರೊಂದಿಗೆ, ನಮ್ಮೆಲ್ಲರ ಪ್ರೀತಿಗೆ ಪಾತ್ರರಾದರು. ಅವರ ಕ್ಲಾಸಿಗೆ ಒಬ್ಬರೂ ತಪ್ಪಿಸಿಕೊಳ್ಳುತ್ತಿರಲಿಲ್ಲ, ಕ್ಲಾಸಿನಲ್ಲಿ ಯಾರೂ ನಿದ್ದೆ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ, ಜಗದಚ್ಚರಿಯಂತೆ ಎರಡು ತಿಂಗಳಲ್ಲಿ ನಮ್ಮಲ್ಲನೇಕರಿಗೆ ನಮ್ಮ ಕೋರ್ಸಿನ ಬಗ್ಗೆ ಆಸಕ್ತಿ, ಆದರ, ಅಭಿಮಾನಗಳು ಮೂಡತೊಡಗಿ, ಕಾಲೇಜು, ಪ್ರಿನ್ಸಿಪಾಲರು ಮತ್ತು ಎಲ್ಲ ಲೆಕ್ಚರರುಗಳ ಬಗ್ಗೆಯೂ ಗೌರವ ಭಾವ ಬೆಳೆಯಿತು. ಅದು ವರ್ಷದ ಕೊನೆಯ ಪರೀಕ್ಷೆಯ ಫಲಿತಾಂಶದಲ್ಲೂ ಪ್ರತಿಫಲಿಸಿದ್ದು ಸುಳ್ಳಲ್ಲ.

[ವಿಜಯ ಕರ್ನಾಟಕ ಸಾಪ್ತಾಹಿಕ - ಶಿಕ್ಷಕರ ದಿನ ವಿಶೇಷ ಸಂಚಿಕೆಗಾಗಿ ಬರೆದದ್ದು]

Wednesday, August 19, 2009

ಬಾರಯ್ಯ ಲಂಬೋದರ

ಬಿದ್ದ ಮೊದಲ ಮಳೆಗೇ ಚಿಗಿತು ಬೆಳೆದು ಚಪ್ಪರವನ್ನೆಲ್ಲ ಹರಡಿ ಹೂವರಳಿಸಿಕೊಂಡು ಪರಾಗಸ್ಪರ್ಶಕ್ಕೆ ಚಿಟ್ಟೆ ಬರುವದನ್ನೇ ಕಾಯುತ್ತಿರುವ ಅವರೆಯ ಬಳ್ಳಿಯ ಅಸಹನೆಯ ಕ್ಷಣ ಇದು. ರಿಸೆಷನ್ನಿನ ಪರಿಣಾಮದಿಂದಾಗಿ ಊರಿಂದ ಬಂದು ಮೂರು ತಿಂಗಳಾದರೂ ಕೆಲಸವೊಂದು ಸಿಗದೇ ಕಂಗಾಲಾಗಿರುವಾಗ, ಮನೆಯಿಂದ ಫೋನಿಸಿದ ಅಪ್ಪ 'ಸಾಕು, ಹಬ್ಬಕ್ಕೆ ಬರಕ್ಕರೆ ಬಟ್ಟೆ ಎಲ್ಲಾ ವಾಪಾಸ್ ತಗಂಡ್ ಬಂದ್ಬಿಡು. ಯಾಕೋ ಗ್ರಹಬಲ ಇದ್ದಂಗಿಲ್ಲೆ ಈಗ. ಇನ್ನೊಂದು ಆರು ತಿಂಗ್ಳು ಬಿಟ್ಟು ಮತ್ತೆ ಟ್ರೈ ಮಾಡ್ಲಕ್ಕಡ' ಎಂದದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತರುಣನ ಕಣ್ಣೀರಿನ ಹತಾಶ ಕ್ಷಣ ಇದು. ಹೇಳದೇ ಕೇಳದೇ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಾದ ಹುಚ್ಚುಮಳೆಗೆ ತೇಲಿಸಿಕೊಂಡು ಹೋದ ತಗ್ಗು ಪ್ರದೇಶದಲ್ಲಿನ ಜೋಪಡಿಯ ಕುಟುಂಬದ ಮಕ್ಕಳ ನಿರ್ಭಾವುಕ ಕಣ್ಣುಗಳಲ್ಲಿ ನಿಂತಿರುವ ಕತ್ತಲೆಯ ಕ್ಷಣ ಇದು. ಮೊದಲು ಸಾಧಾರಣ ನೆಗಡಿ, ಕೆಮ್ಮು ಅಂತ ಅಲಕ್ಷ್ಯ ಮಾಡಿ ಆಮೇಲೆ ಜ್ವರ ಬಂದಾಗ ಮಾತ್ರೆ ನುಂಗಿಸಿ ಆಗಲೂ ವಾಸಿಯಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 'ಸಧ್ಯಕ್ಕೆ ಫೀವರ್ ಕೇಸಸ್ ತಗೊಳ್ತಿಲ್ಲ ನಾವು' ಎಂದು ಮುಖವಾಡ ಧರಿಸಿದ ನರ್ಸು ಕೈಚೆಲ್ಲಿದಾಗ ಒಮ್ಮೆ ಗಂಡನನ್ನೂ ಮತ್ತೊಮ್ಮೆ ತನ್ನ ಮಾಂಗಲ್ಯವನ್ನೂ ನೋಡಿಕೊಂಡು ಬೆಚ್ಚಿದ ಗೃಹಿಣಿಯ ಕ್ಷಣ ಇದೂ,

-ಭಾದೃಪದ ಬಂದಿದೆ! ದೇವಲೋಕದಲ್ಲೂ ಆತಂಕದ, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಭುವಿಯೆಡೆಗೆ ಹೊರಟು ನಿಂತಿರುವ ಗೌರಿ-ಗಣೇಶರನ್ನು ಶಿವ ತಡೆದು ನಿಲ್ಲಿಸಿದ್ದಾನೆ: "ನಿಲ್ಲಿ, ಭೂಲೋಕಕ್ಕೆ ಮಾತ್ರ ಹೋಗಬೇಡಿ. ಅಲ್ಲಿ ಎಚ್ವನ್ ಎನ್ವನ್ ಇದೆ! ನಿಮಗೂ ಬಂದೀತು. ತೀರಾ ಹೋಗಲೇಬೇಕೆಂದಿದ್ದರೆ ಮುಖವಾಡ ಧರಿಸಿ ಹೋಗಿ. ಅದಕ್ಕೆ ಒಂದೇ ತೊಟ್ಟು ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ಇಲ್ಲದಿದ್ದರೆ ವಾಪಸು ಬರುವಾಗ ಸೋಂಕು ನಿಮ್ಮೊಂದಿಗೇ ದೇವಲೋಕಕ್ಕೂ ಬಂದೀತು!" ತಂದೆ ಎಚ್ಚರಿಸಿದರೂ ವಿನಾಯಕನಿಗೆ ಯೋಚನೆ: ವಿಘ್ನವಿನಾಶಕನಾದ ನಾನೇ ಹೆದರಿ ಕುಳಿತರೆ ಇನ್ನು ಭೂಲೋಕದಲ್ಲಿಹ ಸಾಮಾನ್ಯ ಜನರ ಪಾಡೇನು? ಏನಾದರಾಗಲಿ, ನಾನು ಹೋಗಿಯೇ ತೀರುತ್ತೇನೆ. ಅಲ್ಲದೇ ಮೋದಕ, ಚಕ್ಕುಲಿ ತಿನ್ನದೇ ವರ್ಷವಾಯಿತು. ಭಕ್ತರು ಮಾಡಿಟ್ಟುಕೊಂಡದ್ದು ವೇಸ್ಟಾಗಿ ಡಸ್ಟ್‌ಬಿನ್ನು ಸೇರುವುದು ತರವಲ್ಲ. ಆದರೂ ಈ ಎಚ್1ಎನ್1 ಬಗ್ಗೆ ಗೂಗಲ್ಲಿನಲ್ಲಿ ಹುಡುಕಿ ತಿಳಿದುಕೊಂಡೇ ಹೋಗೋಣವೆಂದು ಕಂಪ್ಯೂಟರ್ ಮುಂದೆ ಕುಳಿತರೆ, ರಾಕ್ಷಸ ಲೋಕದವರು ಗಣೇಶನ ಸಿಸ್ಟಮ್ಮನ್ನು ಹ್ಯಾಕ್ ಮಾಡಿಬಿಟ್ಟಿದ್ದಾರೆ! ಇದೊಳ್ಳೆ ಫಜೀತಿಗೆ ಬಂತಲ್ಲಪ್ಪಾಂತ ಗಣೇಶ ಛಕ್ಕನೆ ತನ್ನ ಐಫೋನ್ ತೆಗೆದು ಅಶ್ವಿನೀದೇವತೆಗಳಿಗೆ ಫೋನಿಸಿ ಬೇಗನೆ ಬಂದು ಸಿಸ್ಟಮ್ ಸರಿ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದಾನೆ.

ಎಲ್ಲ ಸರಿಯಾಗಿ, ಈ ಹಂದಿಜ್ವರವೆಂಬುದು ಒಂದು ಮಾರಣಾಂತಿಕ ಕಾಯಿಲೆಯೆಂಬುದು ಪಕ್ಕಾ ಆಗಿ, ಗಣೇಶ ಮಾಸ್ಕ್ ಧರಿಸಿ ಇಲಿಯನ್ನೇರಿ ಭುವಿಯತ್ತ ಹೊರಟಿದ್ದಾನೆ. ಯಾವುದೋ ಹಳ್ಳಿಯ ಗದ್ದೆಯ ಬದಿಯಲ್ಲಿ ಬಿದ್ದುಕೊಂಡಿದ್ದ ಜೇಡಿಮಣ್ಣು, ಕಲಾವಿದನ ಸ್ಪರ್ಶದಿಂದ ಒಂದು ರೂಪ ಪಡೆದು ಬಣ್ಣ ಬಳಿಸಿಕೊಂಡು ಶಹರಕ್ಕೆ ಬಂದು ಬೀದಿಬದಿಯಲ್ಲಿ ನೀಟಾಗಿ ಸಾಲಿನಲ್ಲಿ ಕುಳಿತು, ಬಿಕರಿಯಾಗಿ ಯಾರದೋ ಮನೆಗೆ ಹೋಗಿ ದೇವರಾಗಿಬಿಡುವ ಪವಿತ್ರ ಕ್ಷಣವನ್ನು ಕಲ್ಪಿಸಿಕೊಳ್ಳುತ್ತಾ ರೋಮಾಂಚಿತವಾಗಿದೆ. ಬೇಳೆಯ ಬೆಲೆ ನೂರು, ಅಕ್ಕಿಯ ಬೆಲೆ ನಲವತ್ತು, ಸಕ್ಕರೆಯ ಬೆಲೆ ಮೂವತ್ತೈದು ಅಂತೆಲ್ಲ ಏರಿದ್ದರೂ ಗ್ರಾಹಕ ಬೆವರುತ್ತಾ ತನ್ನ ಕೈಚೀಲದಲ್ಲಿ ಪುಟ್ಟ ಪುಟ್ಟ ಪೊಟ್ಟಣಗಳಲ್ಲಿ ಎಲ್ಲವನ್ನೂ ಹೊತ್ತು ಮನೆಯ ಕಡೆ ಹೊರಟಿದ್ದಾನೆ. ಕಾಗದಗಳಿಂದ ತನ್ನನ್ನು ಸುತ್ತಿ ಸುತ್ತಿ ಸುತ್ತಿಸಿಕೊಂಡು ಕೂತಿರುವ ಪಟಾಕಿಯ ಮದ್ದು, ಕಿಡಿಯೊಂದು ತಾಕಿದರೆ ಸಾಕು ಸಿಡಿದು ಹೊರಬಂದು ಮುಕ್ತವಾಗಲಿಕ್ಕೆ ಕಾಯುತ್ತಿದೆ. ತಿಂಗಳಿಂದ ಜನರ ಹೊಸಬಟ್ಟೆಗಳನ್ನು ಹೊಲಿಯುವುದರಲ್ಲೇ ಗರ್ಕನಾಗಿರುವ ದರ್ಜಿಗೆ ತನ್ನ ಹೊಲಿಗೆ ಬಿಟ್ಟಿರುವ ಹಳೇ ಪಜಾಮವನ್ನು ಸರಿ ಮಾಡಿಕೊಳ್ಳುವುದಕ್ಕೂ ಬಿಡುವಿಲ್ಲ. ಆರ್ಕೆಸ್ಟ್ರಾಗಳಲ್ಲಿ ಕಿರುಚಲು ಬೃಹತ್ ಧ್ವನಿವರ್ದಕಗಳು ಗಂಟಲು ಸರಿ ಮಾಡಿಕೊಳ್ಳುತ್ತಿವೆ. ಅಕ್ಕಿಹಿಟ್ಟು ನಾದಲ್ಪಟ್ಟು ಮುಟ್ಟಿನಿಂದ ಅಷ್ಟಕೋನ ಹೊಂದಿ ಹೊರಬಂದು ಚಕ್ರಾಕಾರದಲ್ಲಿ ಸುತ್ತಲ್ಪಟ್ಟು ಕುದಿವ ಎಣ್ಣೆಯಲಿ ಕರಿದು ಗರಿಗರಿಯಾಗಿ ಚಕ್ಕುಲಿಯಾಗಿ ಹೊರಹೊಮ್ಮಿ ತಟ್ಟೆಯಲಿ ಜೋಡಿಸಿ ನೈವೇದ್ಯಗಲೆಂದು ಎದುರು ನೋಡುತ್ತಿದೆ. ಬಣ್ಣದ ಕಾಗದಗಳಿಗೆ ಮಂಟಪದ ಕಂಬವನಪ್ಪುವ ಕನಸು, ಗಿಡದಲರಳಿರುವ ಹೂವು-ನೆಲದಿ ಹಬ್ಬಿರುವ ದೂರ್ವೆಗಳಿಗೆ ಬಾಡುವ ಮುನ್ನ ಕರಿವದನನ ಚರಣದಲ್ಲಿರುವ ತವಕ, ಕರ್ಪೂರಕ್ಕೆ ಮಂಗಳಾರತಿ ತಟ್ಟೆಯ ಪ್ರದಕ್ಷಿಣೆಯಲ್ಲೇ ಕರಗಿಹೋಗುವ ಕಾತರ. ಹೇಗೆ ಉಳಿದಾನು ಬಾರದೇ ವಿಘ್ನೇಶ್ವರ?

ಬಾರಿನ ಹುಡುಗನಿಗೆ ವಾರ ರಜೆ ಸಿಕ್ಕಿದೆ. ಊರಿಗೆ ಹೋಗುವ ಮುನ್ನ ಅಪ್ಪನಿಗೊಂದು ಪಂಚೆ, ಅಮ್ಮನಿಗೆ ಸೀರೆ, ತಂಗಿಗೆ ಮಿಡಿ ಕೊಳ್ಳಬೇಕಿದೆ. ಯಾವ ಅಂಗಡಿ ನೋಡಿದರೂ ಡಿಸ್ಕೌಂಟು ಹಾಕಿದ್ದಾರೆ. ಗಾಜಿನ ಬಾಗಿಲನ್ನು ತಳ್ಳಿಕೊಂಡು ಒಳಗೆ ಹೋದರೆ ಒಟ್ಟೊಟ್ಟಿಗೇ ಮುತ್ತಿಕೊಳ್ಳುವ ಸೇಲ್ಸ್‌ಬಾಯ್ಸ್ 'ಯೆಸ್, ಏನ್ ಬೇಕು ಸರ್?' ಅಂತ ಕೇಳಿದ್ದಾರೆ. ಬೆವರಲೂ ಬಿಡದ ಏಸಿ, ಕಣ್ತಪ್ಪಿಸಲೂ ಬಿಡದ ಕನ್ನಡಿ, ನೆಪಗಳಿಗೂ ಅವಕಾಶ ಕೊಡದಂತೆ ಕಾಡುತ್ತಿರುವ ಸೇಲ್ಸ್‌ಬಾಯ್ಸ್, ಎಷ್ಟೇ ಡಿಸ್ಕೌಂಟಿದ್ದರೂ ಕೊಳ್ಳಲಾಗದಷ್ಟು ಬೆಲೆ ಕಂಡು ಹುಡುಗ ಕಕ್ಕಾಬಿಕ್ಕಿಯಾಗಿದ್ದಾನೆ. ಕೂಡಿಸಿದ ಹಣವೆಲ್ಲ ಹಬ್ಬವೊಂದಕ್ಕೇ ಖಾಲಿಯಾಗುತ್ತಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ. ವಿಘ್ನೇಶ್ವರ ಈಗ ಕಣ್ಣು-ಕಿವಿಗಳಿಗೂ ಮಾಸ್ಕ್ ಏರಿಸಿಕೊಂಡಿದ್ದಾನೆ.

ಅಡಾಪ್ಟರಿಗೆ ಕನೆಕ್ಟಾಗಿರುವ ಯಾರದೋ ಮೊಬೈಲು ಸದ್ದಿಲ್ಲದೇ ಛಾರ್ಜ್ ಆಗುತ್ತಿದೆ. ಯಾರೋ ಹಾಡಿರುವ ಸಿಡಿಗಳು ಡ್ರೈವಿನಲ್ಲಿ ನಿಶ್ಯಬ್ದ ರಿಪ್ ಆಗುತ್ತಿವೆ. ಸಕ್ಕರೆಪಾಕ ಕುಡಿದು ಕುಡಿದು ಜಾಮೂನು ಗರ್ಲ್‌ಫ್ರೆಂಡಿಗಿಂತ ಸಿಹಿಯಾಗುತ್ತಿದೆ. ಕವಿಯ ಲೇಖನಿಯೊಡಲ ನೀಲಿ ಇಂಕು ಬಿಳೀ ಕಾಗದದ ಮೇಲೆ ಅಚ್ಚಾಗುತ್ತ ಹೋದಹಾಗೇ ಸುಂದರ ಕವಿತೆಯೊಂದು ಪಡಿಮೂಡಿದೆ. ಕಾಡಿನ ಕತ್ತಲಲ್ಲಿ ವ್ಯರ್ಥವಾಗುತ್ತಿರುವ ಮಿಣುಕುಹುಳಗಳ ಬೆಳಕು ನಿದ್ದೆಹೋದ ಮಗುವಿನ ಮುಗುಳ್ನಗೆಯಾಗಿ ಹೊಮ್ಮಿ ತೊಟ್ಟಿಲೆಲ್ಲ ತುಂಬಿಕೊಂಡಿದೆ. ಹುಡುಗಿಯ ಕನಸಿನಲ್ಲಿ ಬಂದ ಹುಡುಗ ಕೈಹಿಡಿದು ಲಾಲ್‌ಭಾಗಿನ ಕ್ಯಾಮೆರಾಗಳಿಂದಲೂ ತಪ್ಪಿಸಿ ಎಲ್ಲಿಗೋ ಕರೆದೊಯ್ಯುತ್ತಿದ್ದಾನೆ. ಕಲಾಸಿಪಾಳ್ಯದ ಬೀದಿನಾಯಿಗೆ ಯಾರೋ ಸುಳಿದಂತಾಗಿ ಎಚ್ಚರಾಗಿ ಅತ್ತಿತ್ತ ನೋಡುತ್ತಿದೆ. ವಿಘ್ನೇಶ್ವರನನ್ನು ಹೊತ್ತ ಇಲಿಗೆ ಓಡಿ ಓಡಿ ಸುಸ್ತಾಗಿದೆ. "ಇನ್ನೇನು ಸ್ವಲ್ಪ ದೂರ.. ಬಂದೇಬಿಡ್ತು ಭೂಮಿ" ಅಂತ ಆತ ಸಮಾಧಾನ ಮಾಡುತ್ತಿದ್ದಾನೆ.

ಹಬ್ಬದ ಸಂಭ್ರಮ ಎಲ್ಲ ಜೀವಿಗಳಿಗೂ ಹಬ್ಬಲಿ. ಬಂದ ವಿಘ್ನೇಶ್ವರ ಭವದ ಭೀತಿಗಳನ್ನೆಲ್ಲ ಕಳೆಯಲಿ. ಬದುಕುಗಳಿಗೆ ಸಂತಸ ಬೆರೆಯಲಿ.

ಶುಭಾಶಯಗಳು.

Monday, August 10, 2009

Thank you!












ಇನ್ನಷ್ಟು ಚಿತ್ರಗಳು: ಇಲ್ಲಿ, ಇಲ್ಲಿ ಮತ್ತು ಇಲ್ಲಿ.

ಈ ಖುಶಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದ, ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್!

Monday, August 03, 2009

ಖುಶಿಯ ಕರೆಯೋಲೆ



ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು, ನಂಗೆ ಖುಶಿಯಾಗಿದೆ! :-)

ಯಾಕೇಂದ್ರೆ, ನನ್ನದೊಂದು ಲಲಿತ ಪ್ರಬಂಧಗಳ ಸಂಕಲನ ಹೊರಬರುತ್ತಿದೆ. 'ಹೊಳೆಬಾಗಿಲು' ಅಂತ ಹೆಸರಿಟ್ಟಿದ್ದೇನೆ. ನಮ್ಮೆಲ್ಲರ ಪ್ರೀತಿಯ ಜೋಗಿ, ಇದಕ್ಕೆ ಮುನ್ನುಡಿ ಬರೆದು ಕೊಟ್ಟಿದಾರೆ. 'ಪ್ರೀತಿಯ ಹುಡುಗಿ'ಯ ಪ್ರೀತಿಯ ಹುಡುಗ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡ್ತಾರೆ. ಪುಸ್ತಕದೊಳಗೆ ಗೆಳೆಯ ಕಲಾಕಾರ ರಾಘು ಬಿಡಿಸಿದ ರೇಖಾಚಿತ್ರಗಳಿವೆ. ನನ್ನ ಕಾಟ ಎಲ್ಲಾ ಸಹಿಸಿಕೊಂಡು ಮುಖಪುಟ ರೂಪಿಸಿಕೊಟ್ಟದ್ದು ನೆಂಟ ರವೀಶ. ನಮ್ಮದೇ ಸಂಸ್ಥೆ ಪ್ರಣತಿ ಪ್ರಕಟಿಸ್ತಿರೋ ಈ ಪುಸ್ತಕ, ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ಯೋಜನೆಯಲ್ಲಿ ಆಯ್ಕೆಯಾಗಿತ್ತು.

ಅವತ್ತೇ ಡಾರ್ಲಿಂಗ್ ಶ್ರೀನಿಧಿಯ ಕವನಗುಚ್ಛ 'ಹೂವು ಹೆಕ್ಕುವ ಸಮಯ'ವೂ ಬಿಡುಗಡೆಯಾಗ್ತಿದೆ. ಅದರ ಬಗ್ಗೆ ಮಾತಾಡೋರು ರಾಧಾ-ಮಾಧವರು ಹರಸಿಹರೇನೋ ಎಂಬಂತೆ ಬರೆವ ಕವಿ ಎಚ್ಚೆಸ್ವಿ. ಜೋಗಿ ಸರ್ ಆಗೋದೇ ಇಲ್ಲ ಅಂದ್ರೂನೂ "ನೀವು ವೇದಿಕೆ ಮೇಲೆ ಇರಲೇಬೇಕು" ಅಂತ ನಾವು ಹಟ ಮಾಡಿ ಒಪ್ಪಿಸಿದ್ದೇವೆ. ಅವರು ಒಪ್ಪಿಕೊಂಡಿದಾರೆ.

ಮನೆಗೆ ಫೋನ್ ಮಾಡಿ ಅಪ್ಪ-ಅಮ್ಮ ಇಬ್ರೂ ಬನ್ನಿ ಅಂತ ಹೇಳಿದ್ರೆ "ಮಗನೇ ಮಳೇ ಅಂದ್ರೆ ಮಳೆ. ತ್ವಾಟಕ್ಕೆ ಕೊಳೆ ಔಷಧಿ ಹೊಡೆಸ್ತಾ ಇದ್ದಿ. ಅಲ್ದೇ ಅಜ್ಜನ್ನ ಒಬ್ಬವನ್ನೇ ಬಿಟ್ಟಿಕ್ ಬರಕ್ಕೆ ಆಗದಿಲ್ಲೆ. ಯಾರಾದ್ರೂ ಒಬ್ಬರಾದ್ರೂ ಬರಕ್ಕೆ ಟ್ರೈ ಮಾಡ್ತ್ಯ" ಅಂತ ಹೇಳಿದ್ದಾರೆ.

ಇನ್ನೇನು ಉಳೀತು? ಈ ಖುಶಿಯೆಲ್ಲ ಡಬಲ್ ಆಗಲಿಕ್ಕೆ ನೀವು ಬರಬೇಕು. ಈ ಅಕ್ಷರಗಳನ್ನೇ ಅಕ್ಷತೆ ಅಂದ್ಕೊಂಡು ಸ್ವೀಕರಿಸಿ. ನಾನು, ನಿಧಿ ಮತ್ತು ಪ್ರಣತಿಯ ಗೆಳೆಯರೆಲ್ಲ ನಿಮ್ಮನ್ನ ಎದುರುಗೊಳ್ಳಲಿಕ್ಕೆ ಕಾಫಿ ಸಮೇತ ಕಾಯ್ತಿರ್ತೀವಿ. ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಹಾಲ್‌ನಲ್ಲಿ ಬರೋ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ. ಇನ್ವಿಟೇಶನ್ ಇಲ್ಲಿದೆ.

ತಪ್ಪಿಸಿದ್ರೆ ನಮಗೆ ಬೇಜಾರಾಗತ್ತೆ. ಹಾಗೆ ಮಾಡ್ಬೇಡಿ.

ಕಾಯುತ್ತಾ,

ಪ್ರೀತಿಯಿಂದ,

-ಸು

Monday, July 20, 2009

ಒಳಪೆಡ್ಲು

ಸೈಕಲ್ ಹೊಡೆಯುವುದು ನೀವಂದುಕೊಂಡಷ್ಟೇನು ಸಲೀಸಲ್ಲ
ಮೊದಲು ಟಯರ್ ಓಡಿಸುವುದನ್ನು ಕಲಿಯಬೇಕು
ಆ ಕಪ್ಪು ಸಣಕಲು ರಿಂಗಿನ ಬೆನ್ನು ಅಂಡುಗಳಿಗೆ ತಟ್ಟುತ್ತ
ಮೈಲಿ ದೂರದವರೆಗೆ ಅದರೊಂದಿಗೇ ಓಡಬೇಕು
ಸಣ್ಣ ಕಲ್ಲು-ಗುಂಡಿಗಳನ್ನು ಹಾರಿ ದಾಟುವಾಗ ಅದು
ದಿಕ್ಕು ತಪ್ಪದಂತೆ ಕಾಯಬೇಕು

ಆಮೇಲೆ ಅಣ್ಣನಿಂದಲೋ ಪಕ್ಕದ ಮನೆಯ
ಗೆಳೆಯನಿಂದಲೋ ಸೈಕಲ್ಲನ್ನು ಬೇಡಿ ಪಡೆದು
ಎಡಗೈಯಿಂದ ಹ್ಯಾಂಡಲು, ಬಲಗೈಯಿಂದ ಸೀಟು ಹಿಡಿದು
ವಾಲಿಸಿದರೂ ಬೀಳಿಸದಂತೆ ನಡೆಸುವುದನ್ನು ಕಲಿಯಬೇಕು.
ನಂತರ ಜಗದೆಲ್ಲ ದೇವರಿಂದ ಅಷ್ಟಿಷ್ಟೇ
ಧೈರ್ಯವನ್ನು ಪ್ರಾರ್ಥಿಸಿ ಪಡೆದು ನಿಧಾನವಾಗಿ
ಎಡಗಾಲನ್ನೆತ್ತಿ ಎಡ ಪೆಡಲಿನ ಮೇಲೆ ಇಟ್ಟು
ಜೀಕಿ ಜೀಕಿ ತೇಲಬೇಕು

ಬ್ಯಾಲೆನ್ಸ್ ತಪ್ಪಿ ಬಿದ್ದಾಗ ಗೆಳೆಯರು ಕೇಕೆ
ಹಾಕಿ ನಗುವುದನ್ನು ಸಹಿಸಿಕೊಳ್ಳಬೇಕು
ಆದ ಮಳ್ಳಂಡೆ ಗಾಯಕ್ಕೆ ಅಮ್ಮ ಕೊಬ್ರಿ ಎಣ್ಣೆ
ಹಚ್ಚಿಯಾದಮೇಲೆ, ಬಲಗಾಲನ್ನು ನಾಯಿ
ಉಚ್ಚೆ ಹೊಯ್ಯುವಾಗ ಮಾಡುವಂತೆ ಎತ್ತಿ,
ಬಂಪರಿನೊಳತೂರಿಸಿ ಬಲ ಪೆಡಲಿನ ಮೇಲಿಟ್ಟು-

ಎದುರು ಏನಾಗುತ್ತಿದೆ ಗಮನಿಸಬೇಕು.
ದಾರಿ ತಪ್ಪಿದ ಮಗನಂತೆ ಮಟ್ಟಿಯ
ಕಡೆ ಹೋಗುತ್ತಿರುವ ಸೈಕಲ್‌ರಾಯನಿಗೆ
ಬುದ್ಧಿ ಹೇಳಬೇಕು.

ಒಳಪೆಡ್ಲು ಕಲಿತ ಮೇಲಿನ್ನು ಬಂಪರು.
ಸೀಟಿನ ಮೂತಿಯಿಂದ ಹೊರಟ ಈ ಸರಳಿನ ಮೇಲಿಂದ
ಕಾಲನ್ನು ಬಳಸಿ ಪೆಡಲಿನ ಮೇಲಿಟ್ಟು
ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಕುಂಡೆಯನ್ನು
ಜರುಗಿಸುತ್ತಾ ತುಳಿಯಬೇಕು.
ಹಿಂಗಾಲಿಗೆ ಬಡಿಯುವ ಚೈನಿನ ಆಯಿಲ್ಲಿನ
ಕಪ್ಪನ್ನು ಸೀಮೆ ಎಣ್ಣೆ ಬಳಸಿ ತೊಳೆಯಬೇಕು

ಬಂಪರಿನಿಂದ ಸೀಟು ಬರೀ ಅರ್ಧ ಫೀಟು
ಕೂತುಬಿಟ್ಟರೆ ಸಾಕು, ಜಗವೇ ಡಿಫೀಟು
ಎಲ್ಲರಿಗಿಂತ ಎತ್ತರದಲ್ಲಿ ತಾನೇ ಕೂತಂತೆ.
ಆದರೂ, ಇಲ್ಲೂ ಟೆನ್ಷನ್ ತಪ್ಪಿದ್ದಲ್ಲ.
ಎಷ್ಟೇ ಸುಸ್ತಾದರೂ ತುಳಿಯುತ್ತಲೇ ಇರಬೇಕು
ಎದುರು ಸೀತಕ್ಕ ಅಡ್ಡ ಬಂದರೆ ಟ್ರಿಣ್‌ಟ್ರಿಣ್ ಮಾಡಬೇಕು.
ಕಾಲಿಗೆ ನೆಲ ಸಿಕ್ಕದ ಸವಾರನ ಅವಸ್ಥೆ ಕಂಡು
ಹೆದರಿ ಆಕೆ ಪಕ್ಕಕ್ಕೆ ಸರಿದರೆ ಬಚಾವು,
ಇಲ್ಲದಿದ್ದರೆ ಅಪ್ಪನಿಗೆ ಹೋಗುವ ಕಂಪ್ಲೇಂಟಿಗೆ,
ದಾಸಾಳ ಬರ್ಲಿನ ಚುರುಕ್ ಏಟಿಗೆ ತಯಾರಾಗಬೇಕು.

ಸೈಕಲ್ ಕಲಿಯುವುದು ನೀವಂದುಕೊಂಡಷ್ಟೇನು ಸುಲಭವಲ್ಲ.
ಇನ್ನು,
ಬದುಕಿನಲ್ಲಿ ಮೇಲೆ ಬರುವ ಬಗ್ಗೆ ಕವನ ಬರೆಯಬೇಕಿಲ್ಲ.

Monday, July 13, 2009

ಪ್ರಣತಿಯಿಂದ ಗಮಕ ಸುಧಾ ಧಾರೆ

"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು ಮುಂದುವರೆಸುತ್ತಿದ್ದರು:

"...ವಿಮಲ ರಾಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ಧಾತಾರ
ರಾವಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜಗವ ಗದುಗಿನ ವೀರನಾರಯಣ|

-ಎಂಬಲ್ಲಿಗೆ ಒಂದು ಕೆಮ್ಮು, ರಾಯರ ಪಕ್ಕ ವ್ಯಾಖ್ಯಾನಕ್ಕೆಂದು ಕೂತಿರುತ್ತಿದ್ದ ಸಾಗರದ ಮಧ್ಯಸ್ತರಿಂದ!

ಅದು ನಮ್ಮೂರಿನ ದೇವಸ್ಥಾನದ ಪ್ರಾಂಗಣ. ನಮ್ಮೂರಿನದು ಶ್ರೀಕೃಷ್ಣನ ದೇವಸ್ಥಾನವಾದ್ದರಿಂದ, ಪ್ರತಿವರ್ಷದ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ನಡೆಯುತ್ತಿತ್ತು. ಅಷ್ಟಮಿಯ ಮರುದಿನ, ಕೃಷ್ಣ ಜಯಂತಿಯಂದು ಸಂಜೆ, ಏನಾದರೂ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಸಾಮಾನ್ಯವಾಗಿ ಅದು 'ಗಮಕ ವಾಚನ ಮತ್ತು ವ್ಯಾಖ್ಯಾನ' ಕಾರ್ಯಕ್ರಮವೇ ಆಗಿರುತ್ತಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಗಮಕಿ ಹೊಸಬಾಳೆ ಸೀತಾರಾಮರಾಯರಿಂದ ಗಮಕ ವಾಚನ ಮತ್ತು ಸಾಗರದ ನೀ.ನಾ. ಮಧ್ಯಸ್ತರಿಂದ ಅದರ ವ್ಯಾಖ್ಯಾನ. ನಮ್ಮ ಮತ್ತು ಅಕ್ಕಪಕ್ಕದ ಗ್ರಾಮಸ್ಥರನ್ನೊಳಗೊಂಡ ಸುಮಾರು ನೂರು ಪ್ರೇಕ್ಷಕರು ಆ ಕಾರ್ಯಕ್ರಮದಲ್ಲಿ ಇರುತ್ತಿದ್ದರು. ಚಿಕ್ಕ ಮಕ್ಕಳಾಗಿದ್ದ ನಾವು, ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ'ಯ ಅನೇಕ ಭಾಗಗಳನ್ನು ಕೇಳಿದ್ದು ಹಾಗೆ.

ಆಮೇಲೆ ಒಂದೆರಡು ವರ್ಷ, ಕೆರೆಕೊಪ್ಪದ ನರಹರಿ ಶರ್ಮರ ವಾಚನ ಮತ್ತು ನಿಸರಾಣಿ ರಾಮಚಂದ್ರರ ವ್ಯಾಖ್ಯಾನದಲ್ಲಿ ಗಮಕ ಕಾರ್ಯಕ್ರಮ ನಡೆಯಿತು. ಈ ಹೊಸ-ಯುವ ಜೋಡಿಯನ್ನು ಗ್ರಾಮಸ್ಥರು ಮೆಚ್ಚಿಕೊಂಡರಾದರೂ, ಎಷ್ಟೋ ವರ್ಷಗಳಿಂದ ಗಮಕ ಕಾರ್ಯಕ್ರಮವನ್ನೇ ಕೇಳೀ ಕೇಳಿ ಬೇಸರ ಬಂದಿತ್ತು. ಹೀಗಾಗಿ, ಗಮಕದ ಬದಲು ಈಗ ಕೆಲ ವರ್ಷಗಳಿಂದ ಬೇರೆ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮೂರಿನ ದೇವಸ್ಥಾನದಲ್ಲಿ ನಡೆಯುತ್ತಿದೆ.

* * *

ನಾನು ಹೋಗುತ್ತಿದ್ದ ನಿಸರಾಣಿ ಹೈಸ್ಕೂಲಿನಲ್ಲಿ, ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಮಹತ್ವ ಕೊಡುತ್ತಿದ್ದರು. ಅಂದರೆ, ಮಕ್ಕಳಲ್ಲಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರತೆಗೆಯಲು ಅನೇಕ ಕಾರ್ಯಕ್ರಮಗಳು - ಸ್ಪರ್ಧೆಗಳು ಅಲ್ಲಿ ನಡೆಯುತ್ತಿದ್ದವು. ಅದರಲ್ಲಿ ಗಮಕ ತರಗತಿಯೂ ಒಂದು. 'ಗಮಕ ಕಲಾ ಪರಿಷತ್'ನ ಆಶ್ರಯದಲ್ಲಿ, ಆಸಕ್ತ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳುಗಳ ಗಮಕ ತರಗತಿ ಮತ್ತು ಕೊನೆಯಲ್ಲೊಂದು ಪರೀಕ್ಷೆ ಇರುತ್ತಿತ್ತು. ನರಹರಿ ಶರ್ಮರೇ ತರಗತಿ ತೆಗೆದುಕೊಳ್ಳುತ್ತಿದ್ದುದು. ನಾನೂ ಸೇರಿದ್ದೆ. ಹೇಳಿಕೊಳ್ಳಬಹುದಾದ ಒಂದು ಖುಶಿಯ ವಿಷಯ ಎಂದರೆ, ಆ ವರ್ಷದ ಗಮಕ ಪರೀಕ್ಷೆಯಲ್ಲಿ ನಾನೇ ಶಾಲೆಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದೆ! ಅದಾದಮೇಲೆ, ಎಸ್ಸೆಸ್ಸೆನ್ ಮೇಡಂ ಕ್ಲಾಸಿನಲ್ಲಿ ನನ್ನ ಕಾಲೆಳೆಯ ಬೇಕೆಂದೆನಿಸಿದಾಗಲೆಲ್ಲ 'ಸುಶ್ರುತ, ಒಂದು ಭಾವಗೀತೆ ಹಾಡೋ' ಅಂತಲೋ ಚಿತ್ರಗೀತೆ ಹಾಡೋ ಅಂತಲೋ ಜನಪದ ಗೀತೆ ಹಾಡೋ ಅಂತಲೋ ಹೇಳುತ್ತಿದ್ದರು. ಅದು ಹೇಗೋ ಗಮಕದಲ್ಲೊಂದು ಬಾಯ್ಕಳೆದು ಹಾಡಿ ಸರ್ಟಿಫಿಕೇಟು ಗಿಟ್ಟಿಸಿದ್ದು ಬಿಟ್ಟರೆ, ಈ ಭಾವಗೀತೆಯನ್ನಾಗಲೀ ಚಿತ್ರಗೀತೆಯನ್ನಾಗಲೀ ಜನಪದ ಗೀತೆಯನ್ನಾಗಲೀ ನಾನು ಬಾತ್‌ರೂಮು ಮತ್ತು ಏಕಾಂತದಲ್ಲಿ ಬಿಟ್ಟು ಬೇರೆಲ್ಲೂ ಹಾಡಿದ್ದೇ ಇಲ್ಲ. ಒಟ್ಟಿನಲ್ಲಿ ಎಸ್ಸೆಸ್ಸೆನ್ ಮೇಡಂರ ತಮಾಷೆಯಿಂದಾಗಿ ಕ್ಲಾಸು ಕಿಸಕಿಸ ನಗೆಯಲ್ಲಿ ಮುಳುಗುತ್ತಿತ್ತು.

* * *

ಈಗ ಇವೆಲ್ಲ ನೆನಪಾದದ್ದು ಪ್ರಣತಿಯಿಂದ ನಾವು ಆಯೋಜಿಸಿರುವ 'ಗಮಕ ಸುಧಾ ಧಾರೆ' ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ವಿಷಯ ಬಂದಾಗ. ಹೌದು, ಬರುವ ಶನಿವಾರ- ಜುಲೈ 18ರ ಸಂಜೆ 5 ಗಂಟೆಗೆ, ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ರಸಋಷಿ ಕುವೆಂಪು ನೆನಪಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ವಿರಳವಾಗುತ್ತಿರುವ ಈ ಕಲೆಯನ್ನು ಮತ್ತೆ ಪ್ರಚುರಪಡಿಸುವುದು ಪ್ರಣತಿಯ ಧ್ಯೇಯಗಳಲ್ಲೊಂದಾದ 'ಸಂಸ್ಕೃತಿ'ಯ ಕೆಲಸ. ಪ್ರಣತಿಗೆ ಇದು ಹೆಮ್ಮೆಯ ನಾಲ್ಕನೇ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ನೀವೆಲ್ಲ ಬರಲೇಬೇಕು ಅಂತ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.




Tuesday, July 07, 2009

ಬೆಟ್ಟದಿಂದ ಬಂದ ಪತ್ರ

ಡಿಯರ್ ಫ್ರೆಂಡ್,

ಮತ್ಯಾವುದೋ ಪರ್ವತದ ಮೇಲಿದ್ದೇನೆ. ‘ಎಲ್ಲಿ? ಯಾವೂರು?’ ಅಂತೆಲ್ಲ ಹೇಳುವುದಿಲ್ಲ. ಕನಿಷ್ಟ, ಪರ್ವತದ ಶೃಂಗದಲ್ಲಿದ್ದಾಗಲಾದರೂ ಊರು-ಕೇರಿ-ಹೆಸರುಗಳನ್ನು ಮರೆಯಬೇಕು ಅಂತ ನನಗನ್ನಿಸೊತ್ತೆ. ಇಲ್ಲಿ ಈ ಕ್ಷಣದಲ್ಲಿ ನನಗೆ ಎಲ್ಲ ಪರ್ವತಗಳ ನೆತ್ತಿಯೂ ಒಂದೇ ಅನ್ನಿಸುತ್ತಿದೆ. ಊರು, ಕೇರಿ, ಹೆಸರುಗಳನ್ನೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತ ಏರುತ್ತ ಏರುತ್ತ ತುತ್ತ ತುದಿಗೆ ಬಂದು ನಿಂತಿರುವ ಈ ಕ್ಷಣದಲ್ಲಿ ಕೈ ಚಾಚಿದರೆ ಆಕಾಶ, ಬಗ್ಗಿ ನೋಡಿದರೆ ಪ್ರಪಾತ, ಸುತ್ತೆಲ್ಲ ಶೂನ್ಯ ಎಂಬಂತಿರುವ ಈ ಜಾಗಕ್ಕೆ ಹೆಸರಾದರೂ ಯಾಕೆ ಬೇಕು ಹೇಳು?

ನನಗೂ ಗೊತ್ತಿಲ್ಲ ಸ್ಪಷ್ಟವಾಗಿ: ಏಕೆ ಹೀಗೆ ಚಾರಣಗಳಿಗೆ ಬರುತ್ತೇವೆ ನಾವು ಅಂತ. ಜಗದ ಜನವೆಲ್ಲ ತಮ್ತಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ತತ್ಪರರಾಗಿರುವಾಗ ನಾವು ಹೀಗೆ ದುಡ್ಡು ಖರ್ಚು ಮಾಡಿಕೊಂಡು, ಸಮಯ ವ್ಯಯಿಸಿ, ಸುಸ್ತು ಮಾಡಿಕೊಳ್ಳುತ್ತಾ ಬೆಟ್ಟ ಏರುವ ದರ್ದಾದರೂ ಏನಿರಬಹುದು? ಅಮ್ಮನಂತೂ ಯಾವಾಗಲೂ ಬೈಯುತ್ತಾಳೆ. ಅವಳಿಗೆ ತಿಳಿಸಿ ಹೇಳಲಿಕ್ಕಂತೂ ಇನ್ನೂ ನನಗೆ ಆಗಿಲ್ಲ. ಆದರೂ, ಸಾವನದುರ್ಗದ ಮೇಲಿನ ಮೌನ ನಂದಿಯ ಪಕ್ಕ ನಿಂತು ನೋಡಿದ ಮಳೆ, ದೇವರಾಯನದುರ್ಗದಲ್ಲಿ ಕಳೆದ ಕಾವಳದ ರಾತ್ರಿ, ಸಿದ್ದರ ಬೆಟ್ಟದ ನಿಗೂಢ ಗುಹೆಗಳು, ಕುಮಾರ ಪರ್ವತದಿಂದ ಕಂಡ ಅಮೋಘ ದೃಶ್ಯ, ದೇವಕಾರಿನ ಜಲಪಾತದ ಸೆಳೆತ, ಕೋಟೆಬೆಟ್ಟದ ಮೇಲೆ ಬೀಳುತ್ತಿದ್ದ ಹಿಮ -ಊಹುಂ, ಅವು ಮತ್ತೆಲ್ಲೂ - ಮತ್ತಿನ್ನೆಲ್ಲೂ ಸಿಗೊಲ್ಲ ಬಿಡು.

ಹಾಗೇ ಈ ಪರ್ವತದ ಶೃಂಗದಿಂದ ಕಾಣುತ್ತಿರುವ ದೃಶ್ಯ. ಇಲ್ಲಿಂದ ನೋಡುವಾಗ ಅದು ಜ್ವಾಲಾಮುಖಿಯಿಂದ ಉಕ್ಕಿ ಹರಿಯುತ್ತಿರುವ ಲಾವಾದಂತೆ ಕಾಣಿಸುತ್ತಿದೆ. ನನ್ನ ಕೆಮೆರಾದಿಂದ ಅದರ ಫೋಟೋ ತೆಗೆಯುತ್ತಿದ್ದ ಚಿನ್ಮಯ ಇನ್ನು ಸ್ವಲ್ಪ ಹೊತ್ತಿನಲ್ಲಿ ಅದು ಆಸ್ಟ್ರೇಲಿಯಾ ಮ್ಯಾಪಿನಂತೆ ಕಾಣಬಹುದು ಎಂದು ಹೇಳಿದ. ಆಸ್ಟ್ರೇಲಿಯಾ ಏನು, ಹೀಗೇ ಇನ್ನೂ ಸ್ವಲ್ಪ ಕೆಳಗಿಳಿದರೆ ಭಾರತದ ದಕ್ಷಿಣದಂಚಿನಂತೆಯೂ ಕಾಣಿಸಬಹುದು ಎನ್ನಿಸಿತು ನನಗೆ. ನಮ್ಮ ಬಟ್ಟೆ-ಆಹಾರವನ್ನೆಲ್ಲ ಸ್ವಲ್ಪ ಕೆಳಗೆ-ತಪ್ಪಲಿನಂತಹ ಜಾಗದಲ್ಲಿಟ್ಟು ಮೇಲೆ ಶೃಂಗಕ್ಕೆ ಬಂದಿದ್ದೇವೆ ನಾವು. ಶೃಂಗಕ್ಕೆ ಹತ್ತಿರದಲ್ಲೇ ಇರುವ ಮೋಡಗಳು ಕೆಳಗಿಳಿಯುತ್ತಿರುವ ಕತ್ತಲೆಯ ಪರಾಗಗಳನ್ನು ಮಧ್ಯದಲ್ಲೇ ತಡೆದು ಚಳಿಯನ್ನು ಜತೆ ಮಾಡಿ ಕಳುಹಿಸುತ್ತಿವೆ. ಆ ಪರಾಗಗಳು ನಮ್ಮ ಮೈಗೆ ತಾಕಿದ್ದೇ ತಡ, ರೋಮಗಳೆಲ್ಲ ಕುಸುಮದಂತೆ ಅರಳಿ ಎದ್ದು ನಿಂತಿವೆ.

“ಶೃಂಗದಲ್ಲಿದ್ದಾಗ ಕತ್ತಲಾದದ್ದು ಗೊತ್ತಾಗುವುದಿಲ್ಲ. ಕೆಳಗಿಳಿಯುವಾಗ ಕಷ್ಟ” ಎಂದ ಪ್ರವೀಣ. ಹೌದೆನಿಸಿತು ನನಗೆ. ಈಗಷ್ಟೇ ಮುಳುಗಿದ್ದ ಸೂರ್ಯ ಇಲ್ಲಿ. ನಮನ್ನೆಲ್ಲ ಕತ್ತಲೆಯಲ್ಲಿ ಬಿಟ್ಟು ಇಲ್ಲಿ ಹೀಗೆ ಪಶ್ಚಿಮದ ದಿಗಂತದಲ್ಲಿ ಕಣ್ಮರೆಯಾಗಿ, ಅಲ್ಲಿ ಬೇರ‍್ಯಾವುದೋ ದೇಶದ ಜನರಿಗೆ ಬೆಳಗು ಮಾಡಿ ಅಲ್ಲಿಯ ಬೆಡಗಿಯರನ್ನು ಮನೆಯಿಂದ ಹೊರ ಕರೆಸಿ ಅವರ ಸೌಂದರ್ಯವನ್ನು ಕಣ್ಮಿಟುಕಿಸದೇ ಸಂಜೆಯವರೆಗೂ ನೋಡಿಕೊಂಡು, ನಾಳೆ ಬೆಳಗಾಗುತ್ತಿದ್ದಂತೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮುಗ್ಧ ಸೋಗಿನಲ್ಲಿ ಇಲ್ಲಿ ಮತ್ತೆ ಹಾಜರಾಗುವ ಈ ಸೂರ್ಯನನ್ನು ಕಂಡಾಗಲೆಲ್ಲ ನನಗೆ ಅಸೂಯೆ. ಇರಬಹುದು ಅಂವ ದೊಡ್ಡವ. ಇರಬಹುದು ಅಂವ ಬೆಳಕಿನ ಅಧಿಪತಿ. ಇರಬಹುದು ಆತ ಜಗದೊಡೆಯ. ಆದರೆ ಆತ ಸಾಚಾ ಅಂತೂ ಅಲ್ಲ. ಒಮ್ಮೆ ಆತ ಮುಳುಗುತ್ತಿದ್ದಾಗ ಅವನ ಹಿಂದೆಯೇ ಹೋಗಿ ಅವನ ಮೋಸವನ್ನೆಲ್ಲ ಸಾಬೀತು ಮಾಡಿ ಬರಬೇಕು ಅಂತಿದೆ ನನಗೆ. ಆದರೆ ಆತ ಬುದ್ಧಿವಂತ: ಬೆಳ್ಳಿ ಚಂದಿರನನ್ನೂ ಕೋಟಿತಾರೆಗಳನ್ನೂ ನನ್ನ ಕಾವಲಿಗಿಟ್ಟೇ ಹೋಗುತ್ತಾನೆ ಪ್ರತಿದಿನ. ಇವುಗಳಿಂದ ತಪ್ಪಿಸಿಕೊಳ್ಳುವುದಿದೆಯೇ?

ಆಗಲೇ ಬೀಳತೊಡಗಿದ್ದ ಇಬ್ಬನಿಯಿಂದಾಗಿ ನೆಲ ಜಾರುತ್ತಿದೆ. “ತಪ್ಪಿ ಒಣಗಿದ ಹುಲ್ಲಿನ ಮೇಲೇನಾದರೂ ಕಾಲಿಟ್ಟರೆ ಸೀದಾ ಕೆಳಗೇ” -ಗೆಳೆಯರು ಎಚ್ಚರಿಸುತ್ತಿದ್ದಾರೆ. ಬಲು ಹುಷಾರಿನಿಂದ ಇಳಿಯುತ್ತಿದ್ದೇನೆ. ತಪ್ಪಲಿಗೆ ಮುಟ್ಟುವಷ್ಟರಲ್ಲಿ ಕತ್ತಲೆ ಪೂರ್ತಿ ಆವರಿಸಿದೆ. ಚಳಿ ತೀಕ್ಷ್ಣವಾಗುತ್ತಿದೆ. ಸರಸರನೆ ನಮ್ಮ ಜಾಕೀಟುಗಳನ್ನು ಧರಿಸಿ, ಬ್ಯಾಗುಗಳಲ್ಲಿದ್ದ ಪೆನ್‌ಟಾರ್ಚುಗಳನ್ನು ಹೊರತೆಗೆದು, ಕ್ಯಾಂಪ್‌ಫೈರ್ ಮಾಡಲಿಕ್ಕೆ ಕಟ್ಟಿಗೆ ಒಟ್ಟುಗೂಡಿಸಲಿಕ್ಕೆ ಹೊರಡುತ್ತೇವೆ ನಾವು. ನಾವು ಪಕ್ಕದ ಹಳ್ಳಿಯಿಂದ ಕರೆದುಕೊಂಡು ಬಂದಿದ್ದ ಗೈಡುಗಳು ಇನ್ನೊಂದು ತಾಸಿನೊಳಗೆ ಬರುತ್ತೇವೆ ಎಂದು ಹೇಳಿ ಎತ್ತಲೋ ಮಾಯವಾಗಿಬಿಟ್ಟಿದ್ದಾರೆ. ಅವರಾದರೂ ಇದ್ದಿದ್ದರೆ ಕಟ್ಟಿಗೆ ತರಲಿಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರು. “ರಾತ್ರಿಯಿಡೀ ಉರೀಬೇಕು ಅಂದ್ರೆ ದೊಡ್ಡ ದೊಡ್ಡ ಕುಂಟೆಯೇ ಬೇಕು. ಈ ಸಣ್ಣ ಜಿಗ್ಗು-ಪುಡಿ ಕಟ್ಟಿಗೆಯೆಲ್ಲಾ ಹತ್ತು ನಿಮಿಷದಲ್ಲಿ ಉರಿದು ಹೋಗ್ತವೆ” ವಿನು ಹೇಳುತ್ತಿದ್ದಾನೆ. ಹೌದು, ದೊಡ್ಡ ದಿಮ್ಮಿಗಳೇ ಬೇಕು. ಇಲ್ಲಿ ಒಣಗಿದ ಮರಗಳೇನೋ ಬಹಳ ಇವೆ, ಆದರೆ ಇವನ್ನೆಲ್ಲಾ ಈ ಕತ್ತಲಿನಲ್ಲಿ ಕಡಿದು ಹೊತ್ತು ಅಲ್ಲಿಗೆ ಸಾಗಿಸುವುದೇ ತಲೆನೋವು.

ಚಳಿ ಈ ರಾತ್ರಿ ನಮಗೊಂದು ಗತಿ ಕಾಣಿಸಲಿಕ್ಕೆ ಸಂಚು ಹೂಡಿದಂತಿದೆ. ಹೊತ್ತಿಕೊಂಡ ಸಣ್ಣ ಬೆಂಕಿಯ ಬೆಳಕು ಎಲ್ಲರ ಮುಖಕ್ಕೂ ಕೆಂಪಿನ ಬಣ್ಣ ಬಳಿಯುತ್ತಿದೆ. ರವ್ಯಾ ಏನೋ ಡೈಲಾಗು ಹೊಡೆಯುತ್ತಿದ್ದಾನೆ: “ಇಷ್ಟು ದೊಡ್ಡ ಬೆಂಕಿ ಆದ್ರೂ ಶಾಖ ದೇಹದ ಎಲ್ಲಾ ಭಾಗಕ್ಕೂ ಮುಟ್ತಾನೇ ಇಲ್ಲ ಮಾರಾಯಾ..!” ಎಲ್ಲರೂ ನಗುತ್ತಿದ್ದೇವೆ. ಈ ಚಳಿಯಲ್ಲಿ ನಗೆಯ ದನಿಯೂ ಬೇರೆ ತರಹ ಕೇಳಿಸುತ್ತದೆ. ಅಥವಾ ಅದೊಂಥರಾ ಭ್ರಮೆಯಿರಬಹುದು. ಈಗ ನಮ್ಮ ಗೈಡುಗಳು ದೌಡಾಯಿಸಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ಬಾಟಲಿಗಳು. ಬಿಳೀ ಬಣ್ಣದ ಸಾರಾಯಿ. ರಾತ್ರಿ ನಾವು ಮಲಗಿದ್ದಾಗ ಇವರು ನಿದ್ರಿಸದೇ ಬೆಂಕಿಗೆ ಕೊಳ್ಳಿ ಮುಂದೂಡುತ್ತಾ ಬೆಳಗಿನವರೆಗೂ ಕುಡಿಯುತ್ತಲೇ ಇರುತ್ತಾರಂತೆ. ಅಷ್ಟೆಲ್ಲಾ ಕುಡಿದರೂ ಇವರಿಗೆ ನಿದ್ರೆ ಬರುವುದಿಲ್ಲವಾ ಅಂತ ನನಗೆ ಆಶ್ಚರ್ಯ. ಬಹುಶಃ ನಾವು ಎದ್ದಮೇಲೆ ಇವರು ಮಲಗಬಹುದು ಅಂತ ಎಲ್ಲರೂ ತಮಾಷೆ ಮಾಡಿಕೊಂಡೆವು.

ತಂದಿದ್ದ ಚಪಾತಿಯನ್ನು ಹಂಚಿಕೊಂಡು ತಿಂದೆವು. ಸ್ವಲ್ಪ ಹೊತ್ತು ಹರಟೆಯೂ ಮುಗಿಯಿತು. ಇನ್ನೇನು ಕೆಲಸ? ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡು ಮಲಗಿ ನಿದ್ರೆ ಹೋಗುವುದು ಅಷ್ಟೇ. ಜಾಕೇಟಿನ ಸಮೇತ ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿ ಮಲಗಿಕೊಂಡಿದ್ದೇನೆ. ಮುಖದ ಜಾಗದಷ್ಟನ್ನೇ ಜಿಪ್ ತೆರೆದು ಉಸಿರಾಡಲಿಕ್ಕೆ ಅನುಕೂಲ ಮಾಡಿಕೊಂಡಿದ್ದೇನೆ. ಗುಡ್‌ನೈಟುಗಳ ವಿನಿಮಯವೂ ಮುಗಿದು ಈಗ ಬರೀ ಬೆಂಕಿಯ ಚಟಪಟ ಸದ್ದು. ಇನ್ನು ನಿದ್ರೆ ಬರುವವರೆಗೂ ಚುಕ್ಕೆಗಳನ್ನು ಎಣಿಸಬಹುದು. ರಂಗೋಲಿಯ ಎಳೆಯಂತೆ ಕಂಡು ಮಾಯವಾಗುವ ಉಲ್ಕಾಪಾತವನ್ನು ಬೆರಗಿಲೆ ನೋಡಬಹುದು.

ಈಗ ಈ ಚುಕ್ಕೆರಾಶಿಯ ಮುನ್ನೆಲೆಯಲ್ಲಿ ನಾವು ಸಂಜೆ ನೋಡಿದ್ದ ಜ್ವಾಲಾಮುಖಿಯ ಚಿತ್ರ ಮೂಡುತ್ತಿದೆ. ಆಕಾಶಕ್ಕೇ ಬೆಂಕಿ ಬಿದ್ದಂತೆ ಭಾಸ. ಕಪ್ಪು ಪರದೆ ಹರಿದು ಇನ್ನೇನು ನಮ್ಮ ಮೈಮೇಲೇ ಬೀಳಬಹುದು ಎಂಬಂತೆ ಭ್ರಮೆ. ಭಯವಾಗಿ ಬೆಚ್ಚಿ ಕಣ್ಮಿಟುಕಿಸಿದೆ. ಚಿತ್ರ ಮಾಯವಾಯಿತು. ಸ್ವಲ್ಪ ಹೊತ್ತು ಗಟ್ಟಿಯಾಗಿ ಕಣ್ಮುಚ್ಚಿಕೊಂಡಿದ್ದೆ. ಈಗ ಚುಕ್ಕೆಗಳೂ ಇಲ್ಲದ ಕಣ್ಣೊಳಗಿನ ಕತ್ತಲೆಯ ಕಡುಕಪ್ಪು ಪರದೆಯ ಮೇಲೆ ಸಂಜೆ ನೋಡಿದ್ದ ವಿಹಂಗಮ ಸೂರ್ಯಾಸ್ತದ ದೃಶ್ಯ ಮೂಡುತ್ತಿದೆ. ಸೂರ್ಯ ನನ್ನ ಅಕ್ಷಿಪಟಲದ ಮೇಲ್ತುದಿಯಿಂದ ಕೆಳಕೆಳಗೆ ಇಷ್ಟಿಷ್ಟೇ ಇಳಿಯುತ್ತಿದ್ದಾನೆ. ಹಾಗೇ ಇಳಿದಿಳಿದು ಪೂರ್ತಿಯಾಗಿ ಅಸ್ತಂಗತನಾಗಿ ಕಣ್ಣಗುಡ್ಡೆಯನ್ನೊಮ್ಮೆ ಹಿಂದಿನಿಂದ ಬಳಸಿ ಸ್ವಲ್ಪವೇ ಹೊತ್ತಿನಲ್ಲಿ ಮತ್ತೆ ಮುಂದೆ ಮೂಡಿ ಬರುತ್ತಿದ್ದಾನೆ. ನಾನು ಬೆಳಗೇ ಆದಂತೆನಿಸಿ ಫಕ್ಕನೆ ಎದ್ದು ಕುಳಿತೆ. ಕಣ್ಬಿಟ್ಟರೆ ಸೂರ್ಯ ಮಾಯವಾಗಿ ಎದುರಿಗೆ ಉರಿಯುತ್ತಿರುವ ಚಳಿಬೆಂಕಿ. ಅದರ ಪಕ್ಕ ಕುಳಿತು, ಈ ಜಗದ ಪರಿವೆಯೇ ಇಲ್ಲದಂತೆ ಬಾಟಲಿಯನ್ನು ಬಾಯಿಗಿಟ್ಟು ಸಂಪೂರ್ಣ ಮೇಲಕ್ಕೆತ್ತಿ ಅಕ್ಷರಶಃ ನಕ್ಷತ್ರಗಳನ್ನೆಣೆಸುತ್ತಿದ್ದಾರೆ ನಮ್ಮ ಗೈಡುಗಳು. ನಾನು ದಿಗ್ಗನೆ ಎದ್ದು ಕೂತದ್ದು ನೋಡಿ ಇನ್ನೂ ನಿದ್ದೆ ಬಂದಿರದ ನಿಧಿ “ಏನಾಯ್ತೋ ದೋಸ್ತಾ?” ಎಂದು ಕೇಳುತ್ತಿದ್ದಾನೆ. ಏನಿಲ್ಲ ಅಂತಂದು ನಾನು ಮತ್ತೆ ಮಲಗಿಕೊಳ್ಳುತ್ತಿದ್ದೇನೆ. ಈಗ ಹಟ ತೊಟ್ಟು, ಚುಕ್ಕಿಪರದೆ ಮೇಲೆ ಮೊದಲು ಬೆಟ್ಟ ಮೂಡಿ ಆ ನಂತರ ಅದರ ಮೇಲೆ ಲಾವಾ ಇಳಿಯುತ್ತಿರುವಂತೆ ಕಲ್ಪಿಸಿಕೊಳ್ಳಬೇಕು. ನನ್ನ ಕಲ್ಪನೆಯಂತೆಯೇ ಚಿತ್ರ ಆವಿರ್ಭವಿಸುತ್ತಿದೆ..

ನಾವು ಶೃಂಗದಲ್ಲಿದ್ದಾಗ ನೋಡಿದ್ದು ಪಕ್ಕದ ಚಿಕ್ಕ ಬೆಟ್ಟದ ಮೇಲೆ ಉರಿಯುತ್ತಿದ್ದ ಕಾಡಿನ ಬೆಂಕಿಯ ಚಿತ್ರ. ಮಧ್ಯದಿಂದೆಲ್ಲೋ ಹೊತ್ತಿಕೊಂಡು, ಒಣಗಿದ ಹುಲ್ಲನ್ನು ತನ್ನ ಸುತ್ತಲಿಂದಲೂ ಆವರಿಸುತ್ತಾ ಕೆಳಗಿಳಿಯುತ್ತಿದ್ದ ಅದು, ದೂರದಿಂದ ನಮಗೆ ಲಾವಾದ ಹಾಗೆಯೇ ಕಾಣುತ್ತಿತ್ತು. ಬಹುಶಃ ಯಾರೋ ಹಳ್ಳಿಗರು ಸೇದಿ ಎಸೆದ ಬೀಡಿಯಿಂದ ಹೊತ್ತಿದ್ದೋ ಅಥವಾ ಯಾರೋ ಬೇಕೆಂದೇ ಹಚ್ಚಿ ಹೋದದ್ದೋ ಇರಬೇಕು. ಹುಲ್ಲು ಒಣಗಿರುವ ಈ ಶಿಶಿರದ ಕಾಲದಲ್ಲಿ ಜನ ಹೀಗೆ ಬೇಕೆಂದೇ ಬೆಂಕಿ ಹಾಕುವುದುಂಟು. ಆಗ ಒಣಹುಲ್ಲೆಲ್ಲ ಉರಿದುಹೋಗಿ, ಬರುವ ಮಳೆಗಾಲದಲ್ಲಿ ಹೊಸ ಹುಲ್ಲು ಪುಷ್ಕಳವಾಗಿ ಮೊಳೆತು ಚಿಗುರಿ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ. ಮುಂದಿನ ವರ್ಷ ದನಕರುಗಳಿಗೆ ಒಳ್ಳೆಯ ಮೇವು ದೊರೆಯುತ್ತದೆ.

ನಮ್ಮ ಮನೆಯ ಹುಲ್ಲಿನ ಹಿತ್ತಿಲಿಗೆ ಪ್ರತಿವರ್ಷ ಅಪ್ಪ ಮಳೆಗಾಲ ಹಿಡಿಯುವುದಕ್ಕೂ ಮುನ್ನ ಒಮ್ಮೆ ಹೀಗೇ ಬೆಂಕಿ ಹಾಕಿ ಸುಡುತ್ತಿದ್ದುದು ನೆನಪಾಗುತ್ತಿದೆ... ಬೆಂಕಿ ಹಾಕಿದಾಗ, ಅದು ಅಲ್ಲಲ್ಲಿದ್ದ ಗೇರುಗಿಡಗಳ ಬಳಿ ಹೋಗದಂತೆ, ಹಿತ್ತಿಲ ಬೇಲಿಗೆ ಹೊತ್ತಿಕೊಳ್ಳದಂತೆ ಮತ್ತು ಪಕ್ಕದ ಮನೆಯ ಹಿತ್ತಿಲಿಗೆ ಹಾಯದಂತೆ, ಹಸಿರು ಸೊಪ್ಪಿನ ಚಂಡೆ ಹಿಡಿದು ಸಂರಕ್ಷಿಸುವ ಕೆಲಸ ನನ್ನದಾಗಿತ್ತು. ಸಿಕ್ಕಿರುವ ಈ ಜವಾಬ್ದಾರಿಯಿಂದಾಗಿ ನನಗೆ ಖುಶಿಯೋ ಖುಶಿ. ಬೆಂಕಿ ಮೈಗೆ ತಾಗೀತು, ಹುಷಾರು ಅಂತ ಅಮ್ಮ ಮನೆಯಿಂದ ನೂರು ಸಲ ಹೇಳಿ ಕಳುಹಿಸಿರುತ್ತಿದ್ದಳು. ಅಪ್ಪನೂ ಕೂಗಿ ಕೂಗಿ ಎಚ್ಚರಿಸುತ್ತಿದ್ದ. ನಾನು ಮಾತ್ರ ಆವೇಶ ಬಂದವನಂತೆ ಹಸಿರು ಚಂಡೆಯನ್ನು ಹಿಡಿದು ಬೆಂಕಿಯ ಹಿಂದೆಯೇ ಓಡುತ್ತಾ ಬಡಿದು ಬಡಿದು ನಂದಿಸುತ್ತಿದ್ದೆ.

ಕೆಲವೊಮ್ಮೆ, ಇಂತಹ ಬಿರುಬೇಸಗೆ ಕಾಲದ ರಾತ್ರಿಯಲ್ಲಿ, ಇದ್ದಕ್ಕಿದ್ದಂತೆ ನಮ್ಮ ತೋಟದ ಮೇಲಣ ಕಾಡಿಗೆ ಬೆಂಕಿ ಹೊತ್ತಿಕೊಂಡುಬಿಡುತ್ತಿತ್ತು. ಆ ಕಾಡಿನ ಬೆಂಕಿಯನ್ನು ನಾವು ‘ಗುಡ್ಡೆ ಗರಕು’ ಅಂತ ಕರೆಯುತ್ತಿದ್ದೆವು. ಆಗ ಮೈಲುಗಳವರೆಗೂ ತೇಲಿಬರುತ್ತಿದ್ದ ಆ ಒಣಗಿದ ಹುಲ್ಲು-ಸೊಪ್ಪುಗಳು ಸುಟ್ಟ ವಾಸನೆಗೆ ಊರವರೆಲ್ಲ ಎಚ್ಚೆತ್ತುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ “ಹೋಯ್, ಸೊಪ್ಪಿನ್ ಬೆಟ್ಟಕ್ಕೆ ಬೆಂಕಿ ಬಿದ್ದಿದು. ನೋಡಿ ಅಲ್ಲಿ, ಆಚೆ ದಿಂಬದಲ್ಲಿ ಹೆಂಗೆ ಕೆಂಪಗೆ ಕಾಣ್ತಾ ಇದ್ದು.. ಎಲ್ಲಾ ನೀರು ತಗಂಡು ಹೊರಡಿ” ಎಂದು ಊರವರೆಲ್ಲ ಕೂಗುತ್ತ-ಕಿರುಚಾಡುತ್ತಾ, ಗುಡ್ಡದ ಕಡೆ ಓಡುತ್ತಿದ್ದರು. ನಾವೂ ಕೊಡಪಾನದ ತುಂಬ ನೀರು ಹಿಡಿದು, ಕೈಗೊಂದು ಕತ್ತಿ ತೆಗೆದುಕೊಂಡು ಓಡುತ್ತಿದ್ದೆವು. ಬೆಂಕಿ ಬೆಟ್ಟದಿಂದ ಕೆಳಗಿಳಿದು ನಮ್ಮ ಅಡಕೆ ತೋಟಗಳ ಬಳಿ ಬರುವುದರೊಳಗೆ ಆರಿಸಬೇಕಿರುತ್ತಿತ್ತು. ಜೋರಾಗಿ ಗಾಳಿಯೇನಾದರೂ ಬೀಸುತ್ತಿದ್ದರೆ ಬೆಂಕಿ ಅತಿ ವೇಗವಾಗಿ ಹಬ್ಬುತ್ತಿತ್ತು. ಕತ್ತಲೆಯಲ್ಲಿನ ಬೆಂಕಿಯ ಜತೆಗಿನ ಹೋರಾಟದ ಆ ನೋಟ ಭೀಷಣವಾಗಿರುತ್ತಿತ್ತು.

ನನಗೆ ನಿದ್ರೆ ಬರುತ್ತಿರುವುದರಿಂದಲೋ ಏನೋ, ಆಕಾಶಪರದೆಯ ಮೇಲೆ ಮೂಡಿದ್ದ ಬೆಟ್ಟದ ಬೆಂಕಿ, ಬೀಳುತ್ತಿರುವ ಭಾರೀ ಇಬ್ಬನಿಗೆ ಆರಿ ತಣ್ಣಗಾಗುತ್ತಿದೆ. ಈಗ ಬರೀ ನಕ್ಷತ್ರಗಳಿಗೆ ಹೊತ್ತಿಕೊಂಡಿರುವ ಬೆಂಕಿ ಉಳಿದಿದ್ದು, ಅವೆಲ್ಲ ಕೆಂಪಕೆಂಪಗೆ ಹೊಳೆಯುತ್ತಿವೆ. ಯಾವಾಗ ಆರುತ್ತವೋ ಅವು, ನೋಡಿ ನೋಡಿ ನನ್ನ ಕಣ್ಣು ಉರಿಯುತ್ತಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬೀಳಲಿರುವ- ನನ್ನ ಕಣ್ಣಿಗೇ ಬೆಂಕಿ ಹೊತ್ತಿ ಧಗಧಗಿಸುತ್ತಿರುವ ಕನಸಿಗಾಗಿ -ನಾನೀಗ ನಿದ್ರೆ ಮಾಡಲೇಬೇಕಿದೆ.

ಎಷ್ಟೋ ಸಮಯ ಕಳೆದಿರಬಹುದು. ಎಷ್ಟೆಂದರೆ, ಚಾರಣದ ಸುಸ್ತೆಲ್ಲ ಕಳೆದು ಹೋಗುವಷ್ಟು ಸಮಯ. ಮೈಮರೆತು ನಿದ್ರೆ ಮಾಡಿಬಿಟ್ಟಿದ್ದೇನೆ. “ದೋಸ್ತಾ, ದೋಸ್ತಾ” ಪಕ್ಕದ ಗೆಳೆಯ ತಟ್ಟಿ ಎಬ್ಬಿಸುತ್ತಿದ್ದಾನೆ. ಕಣ್ಬಿಡುತ್ತಿದ್ದೇನೆ. ಎದುರಿನ ಆಕಾಶದ ಬಣ್ಣವೇ ಬದಲಾಗಿದೆ ಈಗ. ಯಾರೋ ಕಲೆಗಾರ ಮೂಡಣ ದಿಕ್ಕಿಗೆ ನೇತುಬಿಟ್ಟಿರುವ ಕೆಂಪು-ಹಳದಿ ಬಣ್ಣಗಳ ಜವನಿಕೆಯಲ್ಲಿ ಮೂಡಿ ಬರುತ್ತಿದ್ದಾನೆ ಅಂವ: ಖದೀಮ ಸೂರ್ಯ. ಶುದ್ಧ ಗುಂಡಗಿದ್ದಾನೆ. ಪರದೇಶದ ಚೆಂದುಳ್ಳಿ ಚೆಲುವೆಯರ ಸಂಗಡ ಚೆಲ್ಲಾಟವಾಡಿ ಬಂದವ ಬೆಳ್ಳಗೆ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದಾನೆ. ಪಕ್ಕದ ಬೆಟ್ಟವನ್ನು ನೋಡಿದರೆ ಅಲ್ಲಿ ಬೆಂಕಿಯಿಲ್ಲ. ಎದುರಿಗೆ ನಾವು ಮಾಡಿದ್ದ ಕ್ಯಾಂಪ್‌ಫೈರ್ ಇಲ್ಲ. ಮೇಲೆ ಕೆಂಪಗೆ ಉರಿಯುತ್ತಿದ್ದ ತಾರೆಗಳಿಲ್ಲ. ನನ್ನ ಕಣ್ಣಲ್ಲೀಗ ಉರಿಯಿಲ್ಲ. ನಾನು ನಿದ್ರಿಸಿದ್ದಾಗ ಎಲ್ಲವನ್ನೂ ನುಂಗಿಬಿಟ್ಟನೇ ಈ ಜಾದೂಗಾರ? ಇಂತಹ ಸೂರ್ಯೋದಯವನ್ನು ಕಣ್ಣಾರೆ ಕಾಣದೆ ಯಾವ ಕುವೆಂಪು ತಾನೇ ಬರೆದಾರು ಹಾಗೆ ನಾಯಿಗುತ್ತಿ ಮತ್ತು ತಿಮ್ಮಿ ಕಂಡ ದೃಶ್ಯದ ವರ್ಣನೆಯನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ? ಅಥವಾ ಕಾಣದೆಯೂ ಬರೆಯಬಲ್ಲವರಾಗಿದ್ದರು ಎಂತಲೇ ಅವರು ರಸ‌ಋಷಿಯೇ?

“ಬಿಸಿಲು ಏರುವುದರೊಳಗೆ ಕೆಳಗಿಳಿದುಕೊಳ್ಳಬೇಕು. ಅದಿಲ್ಲದಿದ್ದರೆ ಆಗುವುದೇ ಇಲ್ಲ ಆಮೇಲೆ” ಪ್ರವೀಣ ಹೆದರಿಸಿದ. ಬೆಳಗಿನ ತಿಂಡಿಗೆಂದೇ ತಂದಿದ್ದ ಕುಟ್ಟವಲಕ್ಕಿಯನ್ನು ತಿಂದು ನಾವು ನೀರು ಕುಡಿದೆವು. ಇನ್ನೂ ಸಾರಾಯಿಯ ಅಮೃತಲೋಕದಲ್ಲಿ ತೇಲುತ್ತ ನಿದ್ದೆ ಹೊಡೆಯುತ್ತಿದ್ದ ಗೈಡುಗಳು ಮೈ ಮುರಿಯುತ್ತಾ ಎದ್ದರು. ಸ್ಲೀಪಿಂಗ್ ಬ್ಯಾಗುಗಳನ್ನು ಮಡಿಸಿ, ದೊಡ್ಡ ಬ್ಯಾಗುಗಳನ್ನು ಹೆಗಲಿಗೇರಿಸಿ ನಾವು ಅವರೋಹಣಕ್ಕಣಿಯಾದೆವು.

ಕ್ಯಾಂಪ್‌ಫೈರು ಸೃಷ್ಟಿಸಿದ್ದ ಬೂದಿಯ ಗುಡ್ಡೆಯನ್ನೊಮ್ಮೆ ಕಣ್ತುಂಬ ನೋಡಿ, ಸುಟ್ಟು ಕಪ್ಪಗಾಗಿದ್ದ ಪಕ್ಕದ ಬೆಟ್ಟದ ಮೇಲ್ಮೈಯನ್ನೊಮ್ಮೆ ಕಡೆಗಣ್ಣಿನಿಂದ ನಿರುಕಿಸಿ, ತಾರೆಗಳಿಲ್ಲದ ಆಕಾಶದ ದಿಗಂತದೆಡೆಗೆ ನಡೆಯುವವನಂತೆ, ಬೆಟ್ಟದ ಇಳಿಜಾರಿನಲ್ಲಿ ಹೆಜ್ಜೆ ಎತ್ತಿಡುತ್ತಿದ್ದೇನೆ. ಬೆಂಕಿಯುಂಡೆಯಂತಾಗುತ್ತಿರುವ ಪಾಪಿ ಸೂರ್ಯ ಹಿಂದಿನಿಂದ ಗಹಗಹಿಸಿ ನಗುತ್ತಿದ್ದಾನೆ. ಇನ್ನೇನು, ಮೂರ್ನಾಲ್ಕು ತಾಸುಗಳಲ್ಲಿ ನಾವು ಕೆಳಗಿರುತ್ತೇವೆ. ಮತ್ತೆ ನಮ್ಮ ಊರು, ಕೇರಿ, ಹೆಸರು, ಮರೆತುಹೋಗಿದ್ದ ಅದೆಷ್ಟೋ ಕೊಸರುಗಳು. ಆದರೂ ಇಷ್ಟು ಹೊತ್ತಾದರೂ ಇವನ್ನೆಲ್ಲ ಮರೆತಿದ್ದೆನಲ್ಲ ಮಾರಾಯ, ಚಾರಣದ ಹಾದಿಗೊಂದು ನಮಸ್ಕಾರ!

ಮತ್ತೆ ಹೇಗಿದ್ದೀ? ಯಾವಾಗ ಸಿಗುತ್ತೀ? ಪತ್ರ ಬರೆ. ಸಧ್ಯಕ್ಕೆ, ಟಾಟಾ...

(೨೬ನೇ ಜನವರಿ ೨೦೦೯)

ಗಯ್ಸ್, ಲಾಸ್ಟ್ ಟ್ರೆಕ್ ಹೋಗ್ಬಂದು ಆರ್ ತಿಂಗ್ಳ ಮೇಲಾತು. ಎಂತ ಮಾಡ್ತಾ ಇದ್ದಿ? ವೈನಾಟ್ ಅ ಮಾನ್ಸೂನ್ ಟ್ರೆಕ್? ;)

Tuesday, June 30, 2009

ಬಾರದ ಮಳೆಯ ದಿನದಲ್ಲಿ ನನ್ನದೊಂದಿಷ್ಟು ಬಡಬಡಿಕೆ

ಮೌಸ್ ಅಲ್ಲಾಡಿಸಿದರೆ ಸಾಕು, ಇದೆಲ್ಲ ತನ್ನದೇ ಎಂಬಂತೆ ಕಂಪ್ಯೂಟರ್ ಸ್ಕ್ರೀನಿನ ತುಂಬ ಓಡಾಡುವ ಈ ಬಿಳೀ ಹೊಟ್ಟೆಯ ಕಪ್ಪು ಅಲಗುಗಳ ಪುಟ್ಟ ಬಾಣವನ್ನು ಸ್ಕ್ರೀನಿನ ಕೆಳಾಗಡೆ ಬಲಮೂಲೆಗೆ ಒಯ್ದು ಒಂದು ಕ್ಷಣ ಬಿಟ್ಟರೆ ಪುಟ್ಟ ಅಸಿಸ್ಟೆಂಟ್ ಬಾಕ್ಸೊಂದು ಮೂಡಿ Tuesday, June 30, 2009 ಎಂದು ತೋರಿಸುತ್ತಿದೆ ಮುದ್ದಾಗಿ. ಅಂದರೆ ಜುಲೈ ತಿಂಗಳು ಬರಲಿಕ್ಕೆ ಇನ್ನು ಕೇವಲ ಒಂದು ದಿವಸ ಬಾಕಿ.

ನಾನು ಕಳೆದ ತಿಂಗಳ 26ನೇ ತಾರೀಖಿನ ಬೆಳಗ್ಗೆ ಎದ್ದು ಮುಂಬಾಗಿಲು ತೆರೆದಾಗ 'ಈ ವರ್ಷ ಮಳೆ ಜಾಸ್ತಿ. ಮೇ 28ರಿಂದಲೇ ಮಾನ್ಸೂನ್ ಶುರುವಾಗಲಿದೆ. ಆಗಲೇ ಕೇರಳಕ್ಕೆ ಬಂದಿದೆ' ಅಂತೆಲ್ಲ ದೊಡ್ಡಕ್ಷರಗಳಲ್ಲಿ ಬರೆದುಕೊಂಡಿದ್ದ ನ್ಯೂಸ್‍ಪೇಪರು ಬಾಗಿಲಲ್ಲಿ ಬಿದ್ದಿತ್ತು. ನನಗೆ ಖುಶಿಯಾಯಿತು. ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ? ನಾನು ತಕ್ಷಣವೇ ಮನೆಗೆ ಫೋನ್ ಮಾಡಿ ಅಪ್ಪನ ಬಳಿ 'ಅಮ್ಮನ ಹತ್ರ ಸೌತೆ ಬೀಜ ಎಲ್ಲ ರೆಡಿ ಮಾಡಿ ಇಟ್ಕಳಕ್ಕೆ ಹೇಳು, ಇನ್ನು ಎರಡು ದಿನದಲ್ಲಿ ಮಳೆಗಾಲ ಶುರು ಆಗ್ತಡ. ಹವಾಮಾನ ತಜ್ಞರು ಹೇಳಿಕೆ ಕೊಟ್ಟಿದ ಪೇಪರಲ್ಲಿ. ಕಟ್ಟಿಗೆ ಎಲ್ಲಾ ಸೇರುವೆ ಆಯ್ದಾ ಹೆಂಗೆ? ಹಿತ್ಲಿನ ಬೇಲಿ ಗಟ್ಟಿ ಮಾಡ್ಸಿ ಆತಾ?' ಅಂತೆಲ್ಲ ಕೇಳಿದೆ. ಬೆಳಬೆಳಗ್ಗೆ ಫೋನ್ ಮಾಡಿ ಮನೆಯ ಬಗ್ಗೆ ಕಾಳಜಿ ತೋರಿಸುತ್ತಿರುವ ಮಗನ ಬಗ್ಗೆ ಅಭಿಮಾನ ಬಂದು ಅಪ್ಪ 'ಮಗನೇ, ನಮಗೂ ಗೊತ್ತಾಯ್ದು ವಿಷಯ. ಟಿವಿ9 ಬ್ರೇಕಿಂಗ್ ನ್ಯೂಸಲ್ಲಿ ನಿನ್ನೇನೆ ತೋರ್ಸಿದ್ದ. ನೀನೇನು ತಲೆಬಿಸಿ ಮಾಡ್‍ಕ್ಯಳಡ. ನಾವು ಮಳೆಗಾಲಕ್ಕೆ ರೆಡಿ ಆಯಿದ್ಯ' ಎಂದ. ನಾನು ರೂಮಿನಲ್ಲಿ ಟಿವಿ ಇಟ್ಟುಕೊಂಡಿಲ್ಲವಾದ್ದರಿಂದ ಟಿವಿ9ಅಲ್ಲಿ ನಿನ್ನೆಯೇ ತೋರಿಸಿರುವುದು ನನಗೆ ಗೊತ್ತಿರಲಿಲ್ಲ. ಅಪ್ಪ ನನಗಿಂತ ಫಾಸ್ಟ್ ಆಗಿರುವುದು ಗೊತ್ತಾಗಿ ಬೆಪ್ಪಾದೆ. ಮುಂದುವರೆದಿರುವ ತಂತ್ರಜ್ಞಾನ, ಶ್ರೀಘ್ರ ಮತ್ತು ವೇಗದ ಮಾಹಿತಿ ಸಂವಹನ, ಮುಂಬರುವ ಮಳೆಯನ್ನು ಇಂದೇ-ಈಗಲೇ ಹೇಳುವ ವಿಜ್ಞಾನಿಗಳ ಚಾಕಚಕ್ಯತೆ ಎಲ್ಲವೂ ಆ ಬೆಳಗಿನ ಜಾವದಲ್ಲಿ ನನಗೆ ಆಪ್ಯಾಯಮಾನವಾಗಿ ಕಂಡಿತು.

ಹವಾಮಾನ ತಜ್ಞರು ಹೇಳಿದಂತೆ ಅಂದು ಸಂಜೆಯೇ ಬೆಂಗಳೂರಿಗೆ ಮೋಡಗಳ ಆಗಮನವಾಯಿತು. ರಾತ್ರಿ ಹೊತ್ತಿಗೆ ಅವೆಲ್ಲಾ ಧಡಬಡಾಂತ ಗುಡುಗು-ಸಿಡಿಲುಗಳಾಗಿ ಶಬ್ದ ಮಾಡುತ್ತಾ ಧೋ ಮಳೆ ಸುರಿಸತೊಡಗಿದವು. ಬೆಂಗಳೂರಿನ ರಸ್ತೆಗಳ ಮೇಲೆ ಬಿದ್ದ ಮಳೆನೀರು, ಪಕ್ಕಕ್ಕೆ ಹರಿದು ಇಂಗೋಣವೆಂದರೆ ಬರೀ ಕಾಂಕ್ರೀಟು-ಚಪ್ಪಡಿ ಹಾಸಿಕೊಂಡ ಫುಟ್‌ಪಾತೇ ಇದ್ದು ಎಲ್ಲೂ ಮಣ್ಣುನೆಲ ಕಾಣದೆ, ಹಾಗೇ ಟಾರ್ ರಸ್ತೆಯ ಮೇಲೆ ಸುಮಾರು ಹೊತ್ತು ಹರಿದು, ತಗ್ಗಿದ್ದಲ್ಲೆಲ್ಲ ನಿಂತು ಯೋಚಿಸಿತು. ಕೊನೆಗೆ ಬೇರೆ ದಾರಿ ಕಾಣದೆ, ಮೋರಿಗೆ ಹಾರಿ ಕೊಳಚೆ ನೀರಿನೊಂದಿಗೆ ಬೆರೆತು ಸಾಗರಮುಖಿಯಾಗುವುದೇ ತನಗುಳಿದಿರುವ ಮಾರ್ಗ ಎಂದದು ತೀರ್ಮಾನಿಸಿತು. ಪುಣ್ಯಕ್ಕೆ ಅದಕ್ಕೆ ಸುಮಾರೆಲ್ಲ ತೆರೆದ ಪಾಟ್‌ಹೋಲುಗಳು ಸಿಕ್ಕಿದ್ದರಿಂದ, ಬೇಗ ಬೇಗನೆ ಮೋರಿ ಸೇರಲಿಕ್ಕೆ ಅನುಕೂಲವಾಯಿತು. ಮೋರಿ ಸೇರುವ ರಭಸದಲ್ಲಿ ಅದು ಮನುಷ್ಯರನ್ನೂ, ಪ್ರಾಣಿಗಳನ್ನೂ, ಸಾಮಾನು-ಸರಂಜಾಮುಗಳನ್ನೂ ಜತೆಗೆ ಸೇರಿಸಿಕೊಂಡಿತು.

ಆಮೇಲೆ ಅಪ್ಪ ಫೋನ್ ಮಾಡಿದಾಗ 'ಬೆಂಗಳೂರಲ್ಲಿ ಭಾರೀ ಮಳೆಯಂತೆ. ಟಿವಿ9ಅಲ್ಲಿ ತೋರಿಸ್ತಿದ್ದ. ಒಬ್ಬ ಹುಡುಗ ಕೊಚ್ಚಿಕೊಂಡು ಹೋಯ್‍ದ್ನಡ. ನೀನು ಓಡಾಡಕ್ಕರೆ ಹುಷಾರಿ' ಅಂತೆಲ್ಲ ಎಚ್ಚರಿಸಿದ. ಬೆಂಗಳೂರಿನಲ್ಲಿ ಹುಷಾರಾಗಿರಬೇಕು ಎಂಬುದು ನನಗೂ ಗೊತ್ತಿತ್ತು. ನಿನ್ನೆಯಷ್ಟೇ ನನ್ನ ಫ್ರೆಂಡು ಅಲ್ಲೆಲ್ಲೋ ಬೈಕು ನಿಲ್ಲಿಸಿದ್ದಾಗ ಮರದ ಕೊಂಬೆ ಮುರಿದುಕೊಂಡು ಬಿದ್ದು, ಪಾಪ ಬೈಕಿನ ಮುಂಭಾಗ ಫಡ್ಚ ಆಗಿ ಹೋಗಿತ್ತಂತೆ. 'ಈಗಷ್ಟೇ ಗ್ಯಾರೇಜಲ್ಲಿ ಬಿಟ್ಟು ಬಂದೆ ಮಾರಾಯಾ. ಐದಾರು ಸಾವಿರ ಖರ್ಚು ಇದೆ ಅಂದ್ರು. ಇನ್ಷೂರೆನ್ಸ್ ಕ್ಲೇಮ್ ಮಾಡ್ಲಿಕ್ಕೆ ಆಗತ್ತಾ ನೋಡ್ಬೇಕು' ಅಂತ ಹೇಳ್ತಿದ್ದ. ನಾವು ಎಷ್ಟೇ ಹುಷಾರಾಗಿದ್ದರೂ ಹೀಗೆಲ್ಲ ತಲೆ ಮೇಲೆ ಮುರಕೊಂಡು ಬೀಳುವ ಕೊಂಬೆಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಆಗುತ್ತಾ? ಮೇಲೆ ನೋಡುತ್ತ ನಡೆದರೆ ಚರಂಡಿಗೆ ಬೀಳ್ತೀವಿ ಅಥವಾ ಯಾವುದಾದರೂ ಆಂಟಿಗೆ ಡಿಕ್ಕಿ ಹೊಡೆದು ಕಪಾಳಮೋಕ್ಷಕ್ಕೆ ಗುರಿಯಾಗುತ್ತೀವಿ. ಇದನ್ನೆಲ್ಲ ಹೇಳಿದರೆ ಅಪ್ಪ ಇನ್ನಷ್ಟು ಗಾಭರಿಯಾದಾನು ಅಂತ ಸುಮ್ಮನಾದೆ. ಬೆಳೆದ ಮಗ ಯಾರೋ ಅಪರಿಚಿತ ಹೆಂಗಸಿಂದ ಸಾರ್ವಜನಿಕರ ಎದುರು ಕೆನ್ನೆ ಏಟು ತಿನ್ನುವುದನ್ನು ಯಾವ ತಂದೆಯೂ ಸಹಿಸಿಕೊಳ್ಳಲಾರ.

ನಾಲ್ಕಾರು ದಿನ ಹೊಡೆದ ಮಳೆ ಆಮೇಲೆ ವಾಪಸು ಹೋಗಿಬಿಟ್ಟಿತು. ಕೊನೆಗೆ ಗೊತ್ತಾಯಿತು, ಅದು ಬಂದಿದ್ದು ಮುಂಗಾರೇ ಅಲ್ಲ; ಕಳೆದ ವರ್ಷದ ಹಳೇಮೋಡಗಳ ಪೆಂಡಿಂಗ್ ಮಳೆ ಅಥವಾ ಅಲ್ಲೆಲ್ಲೋ ಸಾಗರದಲ್ಲೆದ್ದ ಚಂಡಮಾರುತದ ಪರಿಣಾಮ ಅಂತ. ಕಾರ್ಪೋರೇಶನ್ ಕೆಲಸಗಾರರು ಮೂರ್ನಾಲ್ಕು ದಿನ ಕೊಳಚೆಯನ್ನು ಶೋಧಿಸಿದರೂ ಕೊಚ್ಚಿ ಹೋಗಿದ್ದ ಹುಡುಗನ ಶವ ಸಿಗಲಿಲ್ಲ. ಆಮೇಲೆ ಬಂದ ದೇಶದ ಸೈನಿಕರಿಗೂ ಅಪಜಯವಾಯಿತು. ಅಪ್ಪ ಫೋನಿನಲ್ಲೂ, ಪತ್ರಕರ್ತರು ಪೇಪರಿನಲ್ಲೂ ನನಗೆ ಆಗಾಗ ಈ ಮಾಹಿತಿಗಳನ್ನು ಕೊಡುತ್ತಿದ್ದರು. ಅಂದು ಬೆಳಗ್ಗೆ ನನ್ನ ಕಲೀಗು 'ಸೆಕ್ಯೂರಿಟೀನೇ ಇಲ್ಲ ಕಣಯ್ಯಾ ಈ ಬೆಂಗಳೂರಲ್ಲಿ. ನೋಡು, ಇಷ್ಟೆಲ್ಲ ಅವ್ಯವಸ್ಥೆ ಆಗ್ತಿದೆ ಇಲ್ಲಿ. ಆದ್ರೆ ಸರ್ಕಾರ ಸ್ವಲ್ಪಾನಾದ್ರೂ ಸೀರಿಯಸ್ಸಾಗಿದೆಯಾ ಅಂತ? ಅವರವರಲ್ಲೇ ಕಿತ್ತಾಟ ಮಾಡಿಕೊಳ್ತಾ ಹೆಂಗೆ ನಾಚಿಕೆ ಇಲ್ಲದವರ ಥರ ಇದಾರೆ' ಅಂತ, ಟೈಮ್ಸಾಫಿಂಡಿಯಾದ ಪೇಜುಗಳನ್ನು ತಿರುಗಿಸುತ್ತಾ ಕೆಂಪು ಮುಖ ಮಾಡಿಕೊಂಡು ಉಗಿದ. ವರ್ಲ್ಡ್‌ಕಪ್ಪಿನಿಂದ ಹೊರಬಂದ ಭಾರತದ ಆಟಗಾರರೊಂದಿಗೇ ಮುಖ್ಯ ಪೇಪರಿನ ಪುಟಗಳೂ ಮುಗಿದು, ಕೊನೆಗೆ ಬ್ಯಾಂಗಲೂರ್ ಟೈಮ್ಸ್‌ನಲ್ಲಿನ ಒಂದಷ್ಟು ಚಿತ್ರಗಳನ್ನು ನೋಡಿದ ಮೇಲೆ ಅವನ ಮುಖ ಸ್ವಲ್ಪ ಪ್ರಶಾಂತವಾದಂತೆ ಕಂಡಿತು.

ಈ ಮಧ್ಯೆ, ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ವಿದ್ಯುತ್ ಕೊರತೆ ಆಗುವುದಿಲ್ಲ, ಮಳೆ ಇನ್ನೇನು ಶುರುವಾಗಲಿದೆ, ಈ ವರ್ಷ ಜಾಸ್ತಿಯೇ ಆಗಲಿರುವುದಾಗಿ ಹವಾಮಾನ ತಜ್ಞರು ಧೃಡಪಡಿಸಿರುವುದಾಗಿ ಇಂಧನ ಸಚಿವರು ಹೇಳಿಕೆ ಕೊಟ್ಟರು ಅಂತ ಗೊತ್ತಾಯಿತು. ಇಂಧನ ಸಚಿವರೇ ಹೇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಬಿಡು ಅಂತ ನಾನೂ ಸಮಾಧಾನ ಮಾಡಿಕೊಂಡೆ. ಅಪ್ಪ ಫೋನ್ ಮಾಡಿ ಊರ ಕಡೆ ಏನೇನೋ ಗಲಾಟಿಗಳೆಲ್ಲ ಆಗುತ್ತಿದೆ ಅಂತ ಹೇಳಿದ. ಊರಿನ ಮಹಿಳಾ ಮಂಡಳಿಗೆ ಸರ್ಕಾರದಿಂದ ಸ್ಯಾಂಕ್ಷನ್ ಆಗಿದ್ದ ಹಣವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಂದಿದ್ದು ಗೊತ್ತಾಗಿದೆಯಂತಲೂ, ಆತ ಕಾಂಗ್ರೆಸ್ ಪರ ಕಾರ್ಯಕರ್ತನಾದ್ದರಿಂದ, ಜನರೆಲ್ಲ ಸಭೆ ಸೇರಿ, ಸಧ್ಯದ ಬಿಜೆಪಿ ಸರ್ಕಾರದ ಸಹಾಯ ಪಡೆದು ಆತನಿಗೊಂದು ಗತಿ ಕಾಣಿಸಲಿಕ್ಕೆ ತೀರ್ಮಾನಿಸಿದ್ದಾರೆ ಅಂತ ಅಪ್ಪ ಹೇಳಿದ. 'ಇಲ್ಲಿನ ಪೇಪರ್ರಲ್ಲೆಲ್ಲಾ ಬರ್ತಾ ಇದೆ, ಟಿವಿ9ಅಲ್ಲೂ ಬಂದ್ರೂ ಬರಬಹುದು, ನೋಡು' ಅಂದ. ಛೇ, ಈ ನೆಪದಲ್ಲಾದರೂ ಟಿವಿಯಲ್ಲಿ ನಮ್ಮೂರನ್ನೆಲ್ಲ ನೋಡುವ ಅವಕಾಶ ಸಿಗುತ್ತಿತ್ತು, ನನ್ನ ರೂಮಿನಲ್ಲೂ ಟಿವಿ ಇರಬೇಕಿತ್ತು ಅಂತ ಅಲವತ್ತುಕೊಂಡೆ. ಕೊನೆಗೆ ಅಪ್ಪನೇ ದನಿ ತಗ್ಗಿಸಿ 'ಈ ಜನಕ್ಕೆ ಬೇರೆ ಕೆಲಸ ಇಲ್ಲೆ. ಅದಕ್ಕೇ ಸುಮ್ನೆ ಏನಾದ್ರೂ ತಕರಾರು ಎತ್ತತಾ ಇದ್ದ. ಮಳೇನಾದ್ರೂ ಶುರು ಆಗಿದ್ರೆ ಎಲ್ರೂ ಗದ್ದೆ-ತೋಟ ಅಂತ ಹೋಗಿ ಬ್ಯುಸಿ ಆಗ್ತಿದ್ದ' ಅಂದ. ನನಗೆ ಅದೂ ಸರಿ ಎನ್ನಿಸಿತು.

ನನ್ನ ರೂಂಮೇಟು ಅದ್ಯಾವುದೋ ವೆಬ್‌ಸೈಟು ಓಪನ್ ಮಾಡಿಕೊಂಡು 'ನೋಡು, ಇದರಲ್ಲಿ ವೆದರ್ ಫೋರ್‌ಕಾಸ್ಟ್ ತೋರಿಸ್ತಾರೆ. ಆಲ್‌ಮೋಸ್ಟ್ ಅಕ್ಯುರೇಟಾಗಿರತ್ತೆ' ಅಂತ ಹೇಳಿದ. ನಾನೂ ನೋಡಿದೆ. ವಿಶ್ವದ ಭೂಪಟದಂತಿದ್ದ ಚಿತ್ರದ ಮೇಲ್ಮೈಯಲ್ಲಿ ತೆರೆಗಳಂತೆ ಬೆಳ್ಳಬೆಳ್ಳಗೆ ಅಲ್ಲಲ್ಲಿ ಕಾಣುತ್ತಿತ್ತು. 'ಇವು ಮೋಡಗಳು. ನೋಡು, ಹೇಗೆ ನಿಧಾನಕ್ಕೆ ಮೂವ್ ಆಗ್ತಿವೆ ಅಂತ.. ಈಗ ಇಂಡಿಯಾದ ಹತ್ರಾನೇ ಬಂದಿದೆ ಅಲ್ವಾ? ಇನ್ನೇನು ನಾಲ್ಕು ದಿವಸದಲ್ಲಿ ಶುರು ಆಗಿಬಿಡತ್ತೆ ಮಾನ್ಸೂನು' ಅಂದ ರೂಂಮೇಟು. ನನಗೆ ಮತ್ತೆ ಖುಶಿಯಾಯಿತು. ಬಾನಲ್ಲಿ ಓಡೋ ಮೇಘದ ಚಲನೆಯನ್ನೂ ತೋರಿಸುವ ವಿಜ್ಞಾನಿಗಳ ಜಾಣ್ಮೆಯ ಬಗ್ಗೆ ಮನಸ್ಸಿನಲ್ಲಿಯೇ ಶ್ಲಾಘಿಸಿದೆ.

ಆದರೆ ಈಗ ಎರಡ್ಮೂರು ದಿನಗಳ ಪೇಪರಿನಲ್ಲಿನ ದೊಡ್ಡಕ್ಷರಗಳು ಬೇರೇನೋ ಹೇಳುತ್ತಿವೆ. 'ಬರ'-ವಂತೆ! ಬರಮಾಡಿಕೊಳ್ಳಲಿಕ್ಕೆ ದೇಶದ ಜನತೆ ತಯಾರಾಗಬೇಕು ಅಂತೆಲ್ಲ ಹೇಳಿಕೆ ಕೊಟ್ಟಿದ್ದಾರೆ ಮಂತ್ರಿಗಳು. ಮಳೆಗಾಲ ಬರುತ್ತದೆ ಎಂದಾದರೆ ತಯಾರಿ ಬೇಕು, ಬರಕ್ಕೆ ಏನು ತಯಾರಿ ಮಾಡಿಕೊಳ್ಳುವುದು? ಕಡಿಮೆ ನೀರು ಕುಡಿಯಬೇಕೇ, ದಿನವೂ ಸ್ನಾನ ಮಾಡುವುದನ್ನು ಬಿಡಬೇಕೇ, ಟಿಶ್ಯೂ ಪೇಪರ್ ಬಳಸಬೇಕೇ? ಅರ್ಥವೇ ಆಗದೇ ಕಕ್ಕಾಬಿಕ್ಕಿಯಾಗುತ್ತೇನೆ ನಾನು. ವಿದ್ಯುತ್ತಂತೂ ಇಲ್ಲವೇ ಇಲ್ಲವಂತೆ. ಇನ್ನು ಹನ್ನೊಂದು ದಿನಗಳಲ್ಲಿ ಜಲಾಶಯಗಳೆಲ್ಲ ಖಾಲಿಯಾಗುತ್ತವೆಯಂತೆ. ಆಮೇಲೆ ಎಲ್ಲೆಲ್ಲೂ ಕತ್ತಲೆ ಆವರಿಸುತ್ತದಂತೆ. ಪೇಪರ್ರೋದಿ 'ವಾರೆವ್ಹಾ!' ಎಂದೆ ನಾನು.

ಕೆಲ ವರ್ಷಗಳ ಹಿಂದೆ ಹೀಗೇ ಮಳೆ ಶುರುವಾಗದೇ ಇದ್ದಾಗ ನಾವೆಲ್ಲಾ ನಮ್ಮ ಸೀಮೆಯ ದೇವರಿಗೆ ಪರ್ಜನ್ಯ ಮಾಡಿದ್ದೆವು. ನೂರಾರು ಜನ ಸೇರಿ, ಹತ್ತಿರದಲ್ಲಿದ್ದ ಕೆರೆಯಿಂದ ಕೊಡಪಾನಗಳಲ್ಲಿ ನೀರನ್ನು ತುಂಬಿ ತುಂಬಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸುತ್ತ ಗರ್ಭಗುಡಿಯ ತುಂಬ ನೀರು ತುಂಬಿ ದೇವರನ್ನು ಮುಳುಗಿಸಿಬಿಟ್ಟಿದ್ದೆವು! ಹಾಗೆ ಮುಳುಗಿಸುತ್ತಿದ್ದಂತೆಯೇ ಮಳೆಹನಿಗಳು ಬೀಳತೊಡಗಿ ಜನಗಳೆಲ್ಲ ಹರ್ಷೋದ್ಘಾರ ಮಾಡಿದ್ದೆವು. ಕೋಡನಕಟ್ಟೆಯ ಸಿದ್ಧಿವಿನಾಯಕನ ಮಹಿಮೆಗೆ ಬೆರಗಾಗಿದ್ದೆವು. ಈಗಲೂ ಹಾಗೇ ಮಾಡೋಣವಾ ಅಂದರೆ ಹಿರೇಭಟ್ಟರು ಹೇಳುತ್ತಿದ್ದಾರೆ, 'ಈಗ ಮಾಡಿದ್ರೆ ಏನೂ ಉಪಯೋಗ ಇಲ್ಲೆ.. ಜನಗಳಲ್ಲಿ ಭಕ್ತಿ, ಶ್ರದ್ಧೆಯೇ ಇಲ್ಲೆ. ಪರ್ಜನ್ಯ ಮಾಡೋಣ ಅಂದ್ರೆ ಕೊಡಪಾನದಲ್ಲಿ ಯಾಕೆ ನೀರು ಒಯ್ಯಬೇಕು, ಡೈರೆಕ್ಟಾಗಿ ಒಂದು ಪೈಪ್ ಎಳೆದು ಪಂಪ್‌ಸೆಟ್ಟಲ್ಲಿ ಎತ್ತಿ ಸೀದಾ ದೇವರ ನೆತ್ತಿ ಮೇಲೇ ನೀರು ಬೀಳಹಂಗೆ ಮಾಡ್ಲಕ್ಕಲಾ ಅಂತ ಹೇಳ್ತಾರೆ ಈಗಿನ್ ಹುಡುಗ್ರು..! ದೇಶದ ತುಂಬ ಅನಾಚಾರ. ಹಿಂಗಾದ್ರೆ ಮಳೆಯೂ ಇಲ್ಲೆ ಬೆಳೆಯೂ ಇಲ್ಲೆ.' ನನಗೆ ಹತಾಶೆಯಾಗುತ್ತದೆ.

ಮಂತ್ರಿಗಳೆಲ್ಲ ರೆಸಾರ್ಟಿನಲ್ಲಿ ಕುಳಿತು ಇದಕ್ಕೆ ಪರಿಹಾರವೇನು ಅಂತ ಮಂಥನ ಮಾಡುತ್ತಿದ್ದಾರೆ. ನ್ಯೂಸ್‌ಪೇಪರ್ರು, ಟಿವಿ9 ಎಲ್ಲಾ ಕಡೆ ಬರಲಿರುವ ಬರದ ಬಗ್ಗೆ ಚರ್ಚೆ. ನಾನೂ ಇಲ್ಲೇ ಕೂತು ಯೋಚಿಸುತ್ತಿದ್ದೇನೆ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಹೇಗೆ ಅಂತ. ಆದರೆ ಕಲ್ಲುಬಂಡೆಗಳ ಸಂದಿಯೊಳಗೆಲ್ಲೋ ಅಡಗಿ ಕುಳಿತುಕೊಂಡಿರುವ ಅವನ್ನು ಹುಡುಕುವುದೇ ಕಷ್ಟದ ಕೆಲಸ. ಮಳೆ ಬಂದಮೇಲೆಯೇ ಅವು ಹೊರಗೆ ಬರುವುದು. ಇಲ್ಯಾರೋ ಹೇಳುತ್ತಿದ್ದಾರೆ, 'ಅದು ಕಪ್ಪೆ ಅಲ್ಲ; ಕತ್ತೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಆಗುತ್ತೆ' ಅಂತ. ಹಾಗಾದರೆ ಕೆಲಸ ಸುಲಭ. ಬೆಂಗಳೂರಿನಲ್ಲಿ ಕತ್ತೆಗಳಿಗೇನು ಬರವಿಲ್ಲ. 'ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ದೇಶಕ್ಕೆ ಒಳಿತಾಗುವಂಥದ್ದೇನಾದರೂ ಮಾಡುವುದು ಒಳ್ಳೆಯದು, ಕತ್ತೆ ಹುಡುಕಲಿಕ್ಕೆ ಹೋಗೋಣ ಬನ್ನಿ' ಅಂತ ನನ್ನ ಕಲೀಗುಗಳಿಗೆ ಹೇಳಿದರೆ, 'ನೀನೀಗ ಮಾಡ್ತಿರೋದು ಕತ್ತೆ ಕಾಯೋ ಕೆಲಸವೇ ಅಲ್ಲವೇನೋ' ಅಂತ ಅವರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದಾರೆ. ನಾನು ಹ್ಯಾಪ ಮೋರೆ ಹಾಕಿಕೊಂಡು ಕುಳಿತಿದ್ದೇನೆ.

ಹೊರಗೆ ನೋಡಿದರೆ ಕಣ್ಣು ಕುಕ್ಕುವ ಬಿಸಿಲು. ನನ್ನೊಳಗೆ ಶುಷ್ಕ ಕತ್ತಲೆ.

Monday, June 22, 2009

ಒಂದು ಸ್ನೇಹ; ಒಂದು ಮೋಹ

ಅಲ್ಲೇ, ಮಂಟಪದ ಪಕ್ಕದಲ್ಲೇ ನಿಂತಿದ್ದೆ ನಾನು. ಯಾರೋ ಅಕ್ಷತೆಯ ಕಾಳುಗಳನ್ನು ಹಂಚಿ ಹೋದರು. ಮೊಳಗತೊಡಗಿದ ಗಟ್ಟಿಮೇಳದಲ್ಲಿ ಪುರೋಹಿತರ ‘ಮಾಂಗಲ್ಯಂ ತಂತು ನಾನೇನಾ..’ ಮುಳುಗುತ್ತಿದ್ದಹಾಗೇ ನಾನು ಅಕ್ಷತೆಯನ್ನು ಅವರತ್ತ ತೂರಿದೆ. ಪಟಪಟನೆ ಸದ್ದಾಯಿತು. ತಗ್ಗಿಸಿದ ಮೊಗದಲ್ಲಿನ ಅವಳ ಮುಗುಳ್ನಗೆಯನ್ನು ಕದ್ದು ನೋಡುತ್ತಾ ಅವನು ತಾಳಿ ಕಟ್ಟಿದ. ನನ್ನ ಅತ್ಯಾಪ್ತ ಗೆಳತಿ ಭಾವನಾ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಳು.

ಹಂಚಿದ ಸಿಹಿಯನ್ನು ಬಾಯಿಗಿಟ್ಟುಕೊಳ್ಳುತ್ತಾ ನಾನು ಕಲ್ಯಾಣ ಮಂಟಪದ ಸಭಾಂಗಣದ ಸಾಲು ಖುರ್ಚಿಗಳೆಡೆ ನಡೆದೆ. ಇದೇನು ಸೆಖೆ! ಹಹ್! ಬಾಗಿಲ ಬಳಿ ಪಾನಕ ಇಟ್ಟಿರಬೇಕು, ಕುಡಿಯಬೇಕೆಂದುಕೊಂಡೆ. ನಾನು ಪಾನಕ ತೆಗೆದುಕೊಳ್ಳುತ್ತಿರಬೇಕಾದರೆ ಯಾರೋ ಹೆಗಲಿನ ಮೇಲೆ ಕೈ ಹಾಕಿದಂತಾಗಿ ತಿರುಗಿ ನೋಡಿದರೆ ಚಂದ್ರು! ಚಂದ್ರು ಅಂದ್ರೆ ಚಂದ್ರಶೇಖರ, ನನ್ನ ಎಕ್ಸ್-ಕಲೀಗು. "ಅರೆ ವ್ಹಾ, ಈಗ ಬರ್ತಿದಿಯೇನೋ ದೇವ್ರೂ?" ಎನ್ನುತ್ತಾ ಅವನಿಗೊಂದು ಪಾನಕದ ಗ್ಲಾಸ್ ಕೊಟ್ಟು, ಇಬ್ಬರೂ ದೂರದ ಖುರ್ಚಿಯೊಂದರೆಡೆಗೆ ಹೋಗಿ ಕುಳಿತೆವು. ಮಂಟಪದಲ್ಲಿದ್ದ ಭಾವನಾ ಚಂದ್ರುವನ್ನು ನೋಡಿ ಮುಗುಳ್ನಕ್ಕಳು. ಚಂದ್ರು ಕೈ ಮಾಡಿದ.

"ಇದು ಹೇಗಯ್ಯಾ ಆಯ್ತು? ಆದ್ರೂ ನೀನು ಹೇಗೋ ಇಷ್ಟೊಂದು ಖುಶಿಯಿಂದ ಇದೀಯಾ? ನಾನೇನೋ ನೀನು ಮದುವೆಗೆ ಬರೋದೇ ಇಲ್ಲ ಅಂದ್ಕೊಂಡಿದ್ದೆ.. ರೂಮಲ್ಲಿ ಒಬ್ನೇ ದೇವದಾಸ್ ಥರ ಕುಡೀತಾ ಕೂತಿರೋ ಚಿತ್ರಾನಾ ಕಲ್ಪಿಸಿಕೊಂಡು ಬಂದಿದ್ದೆ" ಸಣ್ಣ ದನಿಯಲ್ಲಿ ಹೇಳಿದ ಚಂದ್ರು. ಚಂದ್ರುವಿನಿಂದ ನಿರೀಕ್ಷಿಸದ ಪ್ರತಿಕ್ರಿಯೆಯೇನು ಅಲ್ಲ ಇದು.. ಚಂದ್ರುವೇನು, ಬಹುಶಃ ನನ್ನ ಸ್ನೇಹಿತರೆಲ್ಲರನ್ನೂ ಕಾಡ್ತಿರೋ ಪ್ರಶ್ನೇನೂ ಹೌದು: "ಭಾವನಾ ಮತ್ತು ಅಂಶು ಲವರ‍್ಸ್ ಆಗಿರ್ಲಿಲ್ವಾ? ಅಷ್ಟೊಂದು ಕ್ಲೋಸ್ ಇದ್ರು ಮತ್ತೆ? ಯಾವಾಗ ನೋಡಿದ್ರೂ ಒಟ್ಟೊಟ್ಟಿಗೆ ಇರ್ತಿದ್ರು.. ಈಗ ಭಾವನಾ ಯಾರನ್ನೋ ಮದುವೆ ಆಗ್ತಿದಾಳೆ.. ಮತ್ತೆ ಅಂಶು ತಮ್ಮ ಮನೆಯದೇ ಮದುವೆಯೇನೋ ಅನ್ನೋ ಹಾಗೆ ಸಂಭ್ರಮದಿಂದ ಓಡಾಡ್ತಿದಾನೆ.. ಇದು ಹ್ಯಾಗೆ ಸಾಧ್ಯ?"

ಹೇಳಬೇಕು ಎಲ್ಲರಿಗೂ ಒಂದು ತಂಪು ಸಂಜೆಯಲ್ಲಿ ಕೂರಿಸಿಕೊಂಡು: ಭಾವನಾ ಎಂಬ ನನ್ನ ಪ್ರೀತಿಯ ಗೆಳತಿಯ ಬಗ್ಗೆ. ಭಾವನಾ ಎಂಬ ಪ್ರವಾದಿಯ ಬಗ್ಗೆ. ನನ್ನ ಭಾವಕೋಶದ ಶಕ್ತಿಯ ಬಗ್ಗೆ. ನನ್ನನ್ನು ಇಲ್ಲಿಯವರೆಗೆ ಕರೆತಂದ ಮಾಯಾಯುಕ್ತಿಯ ಬಗ್ಗೆ. ಧೃತಿಯ ಮತ್ತೊಂದಾವೃತಿಯ ಬಗ್ಗೆ. ಭಾವನಾ ಮತ್ತು ಅಂಶು ಪ್ರೇಮಿಗಳಾಗಿರಲಿಲ್ಲ. ಅವರು ಅಪ್ಪಟ ಸ್ನೇಹಿತರಾಗಿದ್ದರು. ಸ್ನೇಹವೆಂಬ ಶಬ್ದದ ಅರ್ಥವನ್ನು ಹೊಸ ಬಣ್ಣಗಳಲ್ಲಿ ಬರೆದಿದ್ದರು ಅಂತ.

ಕವಿಸಮಯ ಜಾರಿಗೆ ಬಂದ ಯಾವುದೋ ಕವಿ ‘ಕಾರಿರುಳ ಖಿನ್ನತೆಯಲ್ಲಿ ಬೆಳುದಿಂಗಳಿಳಿದಂತೆ, ಮುಂಗಾರು ಮೂಡಿದಂತೆ, ತಂಗಾಳಿ ತೀಡಿದಂತೆ...’ ಎಂದೆಲ್ಲ ಬರೆಯುತ್ತಿದ್ದ ಘಳಿಗೆಯಲ್ಲೇ ಇತ್ತ ನನ್ನ ಸ್ನೇಹಕ್ಷೇತ್ರದಲ್ಲಿ ಕಾಲಿಟ್ಟವಳು ಭಾವನಾ. ಇಂಟರ್‌ವ್ಯೂಗೆಂದು ನನ್ನ ಸರದಿಗಾಗಿ ಕಾಯುತ್ತ ಕೂತಿದ್ದ ಆ ರಿಸೆಪ್ಷನ್ ಹಾಲಿನ ಏಸಿಯ ಗಾಳಿಯ ಮೌನವನ್ನು ಒಮ್ಮೆಲೇ ಕಲಕುವಂತೆ "ನೀವೂ ಮಲ್ಲೇಶ್ವರಮ್ಮಾ?" ಅಂತ ಕೇಳಿದ್ದಳು. "ಹೂಂ, ನಿಮಗೆ ಹೇಗೆ ಗೊತ್ತಾಯ್ತು?" ಅವಳ ಮುಖವನ್ನು ನೇರವಾಗಿ ನೋಡದೇ ಕೇಳಿದೆ. "ನಿಮ್ಮ ಕೈಯಲ್ಲಿರೋ ರೆಸ್ಯೂಮ್‌ನಿಂದ ಗೊತ್ತಾಯ್ತು" ಉತ್ತರಿಸಿದಳು. ನನಗಿಂತ ಮೊದಲು ಅವಳಿಗೆ ಕರೆ ಬಂತು. ನನ್ನೆದುರಿಂದ ಎದ್ದು ಹೋಗುವಾಗ ಕಂಡ ಅವಳ ರೆಸ್ಯೂಮಿನಿಂದ ಹೆಸರು ಭಾವನಾ ಅಂತ ಗೊತ್ತಾಯ್ತು. ಹತ್ತು ನಿಮಿಷದ ನಂತರ ಹೊರಬಂದ ಭಾವನಾ, ಹೆದರಿಕೆಯಿಂದ ಚಡಪಡಿಸುತ್ತಾ ಕೂತಿದ್ದ ನನ್ನ ಬಳಿ ಬಂದು ಸಣ್ಣ ದನಿಯಲ್ಲಿ "ಏನೂ ನರ್ವಸ್ ಆಗ್ಬೇಡಿ.. ಇಂಟರ್‌ವ್ಯೂವರ್ ಇಸ್ ಟೂ ಕೂಲ್. ಸ್ವಲ್ಪಾನೂ ಟೆನ್ಷನ್ ಮಾಡಿಕೊಳ್ಳದೇ ಅಟೆಂಡ್ ಮಾಡಿ. ಆಲ್ ದಿ ಬೆಸ್ಟ್!" ಅಂದು ನಗೆಹೂವಿನೊಂದಿಗೆ ಹೊರಟು ಹೋಗಿದ್ದಳು.

ಆಮೇಲೆ ಆ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದ್ದು, ಕೆಲಸದ ಮೊದಲ ದಿನ ರಿಸೆಪ್ಷನ್‌ನಲ್ಲಿ ಮತ್ತೆ ಸಿಕ್ಕಿದ್ದು, ತೀರಾ ಹಳೆಯ ಪರಿಚಿತರಂತೆ ಒಬ್ಬರಿಗೊಬ್ಬರು ಕೈ ಕುಲುಕಿ ಪರಸ್ಪರ ‘ಕಂಗ್ರಾಟ್ಸ್’ ಹೇಳಿಕೊಂಡಿದ್ದು ...ಆಹ್, ಎಲ್ಲಾ ನಮ್ಮ ಸ್ನೇಹದ ಡಾಕ್ಯುಮೆಂಟರಿಯ ಅಡಿಯಲ್ಲಿ ನೆನಪಾಗಿ ಬೆಚ್ಚಗಿವೆ. ಮಧ್ಯಾಹ್ನ ಒಟ್ಟಿಗೇ ಕಾಫಿ ಕುಡಿಯುವಾಗ ಹೇಳಿದ್ದೆ: "ನೀವವತ್ತು ಹಾಗೆ ಹುರಿದುಂಬಿಸಿ ಹೋಗಿರದಿದ್ದರೆ ನಾನು ಇಂಟರ್‌ವ್ಯೂನ ಅಷ್ಟೊಂದು ನಿರ್ಭಯವಾಗಿ ಫೇಸ್ ಮಾಡ್ಲಿಕ್ಕೆ ಆಗ್ತಾನೇ ಇರ್ಲಿಲ್ಲ, ಇಲ್ಲಿವತ್ತು ಹೀಗೆ ಮತ್ತೆ ಸಿಗ್ತಾನೂ ಇರ್ಲಿಲ್ಲ" -ಅಂತ.

ಭಾವನಾ ಅತ್ಯಂತ ಚಟುವಟಿಕೆಯ, ಆತ್ಮವಿಶ್ವಾಸದ ಹುಡುಗಿ. ಆಕೆಯ ಚುರುಕು ನಡಿಗೆ, ಸೆಳೆಯುವ ಕಣ್ಣು, ಅಸ್ಖಲಿತ ಭಾಷೆ ಮತ್ತು ಯಾರೊಂದಿಗಾದರೂ ಅಷ್ಟು ಬೇಗನೆ ಬೆರೆಯುವ ರೀತಿ -ಎಲ್ಲಾ ಕೆಲವೇ ತಿಂಗಳಲ್ಲಿ ಕಂಪನಿಯ ಪ್ರಶಂಸೆಗೆ ಒಳಗಾದವು. ಹಾಗೆಯೇ ನನ್ನ ಸಂಕೋಚ, ಸೋಮಾರಿತನ, ಕೀಳರಿಮೆಯ ಸ್ವಭಾವ ಮತ್ತು ಹಳ್ಳಿಯಿಂದ ಬಂದ ಭಾಷೆಯ ದುರ್ಬಲತೆ -ಅಲ್ಲೇ ಉಳಿಯುವಂತೆ ಮಾಡಿದವು. ಭಾವನಾ ಸೀನಿಯರ್ ಆದಳು; ನಾನು ಹಿಂದೆಯೇ ಉಳಿದೆ.

ಅದೊಮ್ಮೆ ನಾನು ಮಾಡಿದ ಪುಟ್ಟ ತಪ್ಪಿನಿಂದಾಗಿ ಅನಾಹುತವೊಂದು ಆಗುವುದಿತ್ತು. ಎಮ್.ಡಿ. ಕೆಂಡಾಮಂಡಲವಾಗಿದ್ದರು. ಆದರೆ ಭಾವನಾ ಅದರ ಸಂಪೂರ್ಣ ಹೊಣೆಗಾರಿಕೆ ಹೊತ್ತು, ಜಾಣ್ಮೆಯಿಂದ ನಿರ್ವಹಿಸಿ, ನನ್ನನ್ನು ಸಂಕಷ್ಟದಿಂದ ಪಾರು ಮಾಡಿದಳು. ನನಗೆ ಒಂದೇ ಪ್ರಶ್ನೆ: ಇದ್ಯಾಕೆ ಈ ಪರಿ ನನ್ನನ್ನು ಹಚ್ಚಿಕೊಳ್ಳುತ್ತಾಳೆ ಈ ಹುಡುಗಿ? ಭಾವನಾ ಮತ್ತು ನಾನು ಪ್ರತಿದಿನ ಒಟ್ಟಿಗೇ ಊಟ ಮಾಡುವುದು, ಕಂಪನಿಯ ಬಸ್ಸಿನಲ್ಲಿ ಓಡಾಡುವಾಗ ಒಟ್ಟಿಗೇ ಕೂರುವುದು, ಇಬ್ಬರ ಮನೆಯೂ ಇರುವುದು ಒಂದೇ ಏರಿಯಾದಲ್ಲಾದ್ದರಿಂದ ಭಾನುವಾರಗಳಲ್ಲಿ ಸಹ ಸಿಗುವುದು. ಅವಳ ನನ್ನನ್ನು ತನ್ನ ಮನೆಗೆ ಕರೆಯುತ್ತಾಳೆ. ಮನೆಯಲ್ಲೆಲ್ಲರಿಗೂ ‘ಮೈ ಕಲೀಗ್ ಅಂಡ್ ಬೆಸ್ಟ್ ಫ್ರೆಂಡ್’ ಅಂತ ಪರಿಚಯಿಸಿದ್ದಾಳೆ. ನನ್ನ ರೂಮಿಗೆ ಬರುತ್ತಾಳೆ. ಪ್ರಪಂಚದ ಎಲ್ಲ ವಿಷಯವನ್ನೂ ಮಾತಾಡುತ್ತಾಳೆ. ನನ್ನಂತಹ ಮೌನಿಯನ್ನೂ ಮಾತಾಡುವಂತೆ ಮಾಡುತ್ತಾಳೆ. ಒಳ್ಳೆಯ ಪುಸ್ತಕಗಳನ್ನು ರೆಫರ್ ಮಾಡುತ್ತಾಳೆ. ಎಲ್ಲಾ ತರಹದ ಎಸ್ಸೆಮ್ಮೆಸ್ಸುಗಳನ್ನೂ ಫಾರ್ವರ್ಡ್ ಮಾಡುತ್ತಾಳೆ. ನಾನು ಒಬ್ಬ ಹುಡುಗಿಯೊಂದಿಗೆ ಇಷ್ಟು ಸಲಿಗೆಯಿಂದ ಬೆರೆಯುತ್ತಿದ್ದುದು ಇದೇ ಮೊದಲು... ಕೇಳಿಕೊಳ್ಳುತ್ತೇನೆ ಮತ್ತೆ: ಇದು ಪ್ರೀತಿಯಾ? ಅವಳೊಂದಿಗೆ ಶಾಪಿಂಗ್-ಗೀಪಿಂಗ್ ಅಂತ ಹೋದಾಗ ಎದುರಾಗುವ ಚಂದ ಹುಡುಗಿಯರನ್ನು ನನಗೆ ತೋರಿಸಿ ಕಿಚಾಯಿಸುವುದು.. "ಒಂದು ಗರ್ಲ್‌ಫ್ರೆಂಡ್ ಮಾಡ್ಕೊಳೋ ಬೇಗ" ಅನ್ನೋದು... ಏನು ಇವೆಲ್ಲಾ? ಏಕಾಂತದ ಕ್ಷಣಗಳಲ್ಲಿ ಕಾಡುತ್ತದೆ ತುಮುಲ: ಒಬ್ಬ ಹುಡುಗನೊಂದಿಗೆ ಒಬ್ಬ ಹುಡುಗಿ ಇಷ್ಟೊಂದು ಕ್ಲೋಸ್ ಆಗಿ ಇರಬಹುದಾ? ಇದು ಕೇವಲ ಸ್ನೇಹವಾ? ಕಲೀಗುಗಳ ಮಧ್ಯೆಯಂತೂ ನಮ್ಮ ಒಡನಾಟ ದೊಡ್ಡ ಗಾಸಿಪ್ಪು. ಹಾಗಾದರೆ ಅವರು ಹೇಳುವಂತೆ ಇದು ಪ್ರೇಮವಾ?

ಆದರೆ ಹಾಗಂದುಕೊಳ್ಳಲಿಕ್ಕೇ ನನಗೆ ಧೈರ್ಯವಾಗುತ್ತಿರಲಿಲ್ಲ.. ಬಹುಶಃ ಭಾವನಾಳ ಆ ಆತ್ಮವಿಶ್ವಾಸದ ಗಟ್ಟಿತನವೇ ನನಗೆ ಆಕೆಯನ್ನು ನನ್ನ ಪ್ರೇಯಸಿಯೆಂದು ಕಲ್ಪಿಸಿಕೊಳ್ಳಲಿಕ್ಕೆ ಹಿಂಜರಿಯುವಂತೆ ಮಾಡುತ್ತಿತ್ತು. ನನಗೆ ಭಾವನಾಳನ್ನು ಒಬ್ಬ ಫ್ರೆಂಡ್ ಅಂತ ಅಂದುಕೊಂಡರೇನೇ ಹೆಚ್ಚು ಹಿತವೆನಿಸುತ್ತಿತ್ತು. ನನ್ನ ದುಃಖಗಳನ್ನು ತನ್ನೊಂದಿಗೆ ಹಂಚಿಕೊಳ್ಳಬಲ್ಲವಳು, ನನ್ನ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲವಳು, ನಾನು ಮೂಡಿನಲ್ಲಿಲ್ಲದಿದ್ದಾಗ ಹುರಿದೊಂಬಿಸಿ ನಗಿಸುವವಳು, ನನ್ನ ಸಣ್ಣ ಗೆಲುವುಗಳನ್ನು ತುಂಬು ಪ್ರೀತಿಯಿಂದ ಅಭಿನಂದಿಸುವವಳು ಮತ್ತು ನನ್ನಲ್ಲಿ ಹೊಸ ಕನಸುಗಳನ್ನು ಚಿಗುರಿಸಿ ಅವುಗಳನ್ನು ನನ್ನವಾಗಿಸಿಕೊಳ್ಳುವಂತೆ ಪ್ರೇರೇಪಿಸುವವಳು -ಇಂತಹ ಗೆಳತಿಯೊಬ್ಬಳು ನನಗೆ ಬೇಕಿದ್ದಳು. ಮತ್ತು ಭಾವನಾ ಅವೆಲ್ಲವೂ ಆಗಿದ್ದಳು. ನಾನೂ ಕಂಪನಿಯ ಕೆಲಸಗಳಲ್ಲಿ ಸಾಧನೆಗೈದಿದ್ದು, ನನಗೊಂದು ರೆಕಗ್ನಿಷನ್ ಸಿಗುವಂತಾದದ್ದು -ಎಲ್ಲಾ ಭಾವನಾಳ ಕೃಪೆಯಿಂದಲೇ. ಅದ್ಯಾವುದೋ ಮುಹೂರ್ತದಲ್ಲಿ ನಿರ್ಧರಿಸಿಬಿಟ್ಟಿದ್ದೆ: ನನಗೆ ಇದಕ್ಕಿಂತ ಹೆಚ್ಚಿನದೇನೂ ಬೇಡ ಭಾವನಾಳಿಂದ. ಇದನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದಿಲ್ಲ. ಇದು ಪ್ರೀತಿಯಾಗಿರಬೇಕಾದ ಅವಶ್ಯಕತೆಯೇ ಇಲ್ಲ. ಆಕೆ ನನ್ನ ಗೆಳತಿಯಾಗೇ ಇರಲಿ.

ಪ್ರಾಜೆಕ್ಟೊಂದನ್ನು ಮುಗಿಸಲಿಕ್ಕಾಗಿ ಭಾವನಾ ಡೆಲ್ಲಿಗೆ ಹೋಗಬೇಕಾಗಿ ಬಂತು. ಆಕೆ ತನ್ನೊಬ್ಬಳಿಂದ ಡೆಡ್‌ಲೈನ್ ಒಳಗೆ ಇದನ್ನು ಮುಗಿಸಲು ಸಾಧ್ಯವೇ ಇಲ್ಲ ಅಂತ ನನ್ನನ್ನೂ ಜತೆಗೆ ಕರೆದೊಯ್ದಳು. ರೂಮ್ ಬುಕ್ ಮಾಡುವಾಗ ಒಂದೇ ರೂಮ್ ಸಾಕು ಎಂದಳು. ಐದು ದಿನಗಳ ಪ್ರಾಜೆಕ್ಟ್ ಮುಗಿಸಿ ವಾಪಸಾಗುವಾಗ ವಿಮಾನದ ಸೀಟಿಗೊರಗಿ ಮಾತಾಡಿದಳು ಭಾವನಾ:

"ನಿಂಗೆ ಆಶ್ಚರ್ಯ ಅಲ್ವಾ ನಾನು ನಿಂಜೊತೆ ಯಾಕೆ ಇಷ್ಟೊಂದು ಕ್ಲೋಸಾಗಿ ಇರ್ತೀನಿ ಅಂತ? ಅದರ ಜೊತೆಗೇ ಮನಸ್ಸಿನಲ್ಲಿ ನೂರಾರು ಅನುಮಾನದ ಪ್ರಶ್ನೆಗಳು ಅಲ್ವಾ? ಬಾಯಿಬಿಟ್ಟು ಕೇಳಲಿಕ್ಕೆ ಸಾಧ್ಯವೇ ಇಲ್ಲದಷ್ಟು ಹಿಂಜರಿಕೆ ಅಲ್ವಾ? ಹೂಂ..?" ಮಾತು ಬೆಳೆಯುವ ಮುನ್ನವೇ ಹೇಳಿಬಿಟ್ಟೆ: "ನೀನು ‘ಮೈ ಆಟೋಗ್ರಾಫ್’ ಸಿನಿಮಾ ನೋಡಿದೀಯಾ ಭಾವನಾ? ಅದರಲ್ಲಿನ ಮೀನಾಳ ಪಾತ್ರ ನಂಗೆ ತುಂಬಾ ಇಷ್ಟ.. ಆಕೆ ಸುದೀಪ್‌ನನ್ನು ಕೇವಲ ಸ್ನೇಹದ ಬಲದಿಂದ ಬೆಳೆಸೋ ರೀತಿ, ಫೆಂಟಾಸ್ಟಿಕ್! ಅವಳ ಬಿಹೇವಿಯರ್, ಅವಳ ಮ್ಯಾನರಿಸಂ, ಅವಳ ವ್ಯಕ್ತಿತ್ವದ ಉನ್ನತಿ... ಓಹ್! ಯು ನೋ ವ್ಹಾಟ್? ನಂಗೆ ನಿನ್ನಲ್ಲಿ ಮೀನಾ ಕಾಣ್ತಾಳೆ.. ನೀನು ಕೇಳಿದ ಪ್ರಶ್ನೆಗಳೆಲ್ಲಾ ಸತ್ಯ. ಆದರೆ ನಂಗೆ ಅದ್ಯಾವುದಕ್ಕೂ ಉತ್ತರ ಬೇಡ. ನೀನು ಕೇವಲ ನನ್ನ ಗೆಳತಿಯಾಗಿದ್ದರೆ ಸಾಕು.. ಮೈ ಬೆಸ್ಟ್ ಫ್ರೆಂಡ್, ಲೈಕ್ ನೌ!"

ಭಾವನಾಳಿಗಾದ ಖುಶಿಯನ್ನು ವ್ಯಕ್ತಪಡಿಸಲು ಅವಳ ಇಷ್ಟಗಲ ಅರಳಿದ ಮುಖಕ್ಕೂ ಸಾಧ್ಯವಾಗಲಿಲ್ಲ. "ಥ್ಯಾಂಕ್ಯೂ ಡಿಯರ್.. ಥ್ಯಾಂಕ್ಯೂ ವೆರಿ ಮಚ್! ನನ್ನ ಭಾರ ಕಡಿಮೆ ಮಾಡಿದೆ. ಜಗತ್ತು ಏನೇ ಆದ್ರೂ ನಾವಿಬ್ಬರೂ ಫ್ರೆಂಡ್ಸ್. ಮುಂದಿನ ತಿಂಗಳು ನನ್ನ ಮದುವೆ. ನಿನ್ನ ಬಳಿ ಹೇಳಿಕೊಳ್ಳದೇ ಮುಚ್ಚಿಟ್ಟಿದ್ದ ಸಂಗತಿ ಅಂದ್ರೆ ಇದೊಂದೇ, ಸಾರಿ.." ಅಂದು ಬ್ಯಾಗಿನಿಂದ ಇನ್ವಿಟೇಶನ್ ತೆಗೆದು ಕೊಟ್ಟಳು. ವಿಮಾನದ ಕಿಟಕಿಯಿಂದ ನೋಡಿದವನಿಗೆ ಮುಗಿಲು ಮುಗಿಯುವುದೇ ಇಲ್ಲವೇನೋ ಅನ್ನಿಸಿತು.

* * *

ಇಡೀ ಕಲ್ಯಾಣ ಮಂಟಪ ಸುತ್ತಾಡಿಕೊಂಡು ಬಂದ ಚಂದ್ರು ಯೋಚನಾಮಗ್ನನಾಗಿ ಕೂತಿದ್ದ ನನ್ನನ್ನು ತಟ್ಟಿ ಎಬ್ಬಿಸಿ ಕೇಳಿದ: "ಅಂತೂ ಈಗ ಶುರುವಾಯ್ತಾ ಡಿಪ್ರೆಶನ್ನು? ಎಲ್ಲಾ ಮುಗಿದ ಮೇಲೆ? ಆವಾಗ್ಲೇ ಒಂದು ಪ್ರಪೋಸ್ ಮಾಡೋ ಅಂದ್ರೆ ಕೇಳಲಿಲ್ಲ... ಇನ್ನು ಅವಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗೀ ಕೊರಗೀ.. .." ಚಂದ್ರುವಿನ ಅಭಿನಯಕ್ಕೆ ನಕ್ಕೆ ನಾನು. ಇವರಿಗೆ ನಂಬಿಕೆ ಬರುವಂತೆ ತಿಳಿಸಿ ಹೇಳಲಿಕ್ಕಾದರೂ ಆಗುತ್ತಾ ಇದನ್ನೆಲ್ಲಾ? ಸಾಧ್ಯವೇ ಇಲ್ಲವೆನಿಸಿತು.. ಮಂಟಪದತ್ತ ನೋಡಿದೆ. ಗಂಡನೊಂದಿಗೆ ಇನ್ನೂ ಏನೇನೋ ಪೂಜೆ, ಹವನಗಳಲ್ಲಿ ಮುಳುಗಿದ್ದಳು ಭಾವನಾ. ಅವಳು ಸೆಖೆಯಲ್ಲಿ ಬೆವರುತ್ತಾ ಕಷ್ಟ ಪಡುತ್ತಿದ್ದುದನ್ನು ಕಂಡು ಈ ಬೇಸಿಗೆ ಕಾಲದಲ್ಲೇ ಯಾಕೆ ಎಲ್ಲರೂ ಮದುವೆಯಾಗುತ್ತಾರೋ ಅನ್ನಿಸಿತು.

[ಪ್ರಕಟ: ಕನ್ನಡ ಪ್ರಭದ 'ಸಖಿ' ಪಾಕ್ಷಿಕ . ಟಾಪಿಕ್: Intimate friendship between a boy n girl]

^^^^^^^^^^^^

"..ಅವಳ ಸೌಂದರ್ಯಕ್ಕೆ ಆ ಅಪರಾತ್ರಿ ಕೂಡ ಬೆರಗಾದಂತಿತ್ತು. ಹಚ್ಚಿಟ್ಟ ದೀಪಕ್ಕೆ ಹಾಲು ಬೆರೆಸಿದಂಥ ಬಣ್ಣ. ತನಗಿರುವ ಶ್ರದ್ಧೆಯನ್ನೆಲ್ಲ ಬಳಸಿ ಅವಳ ರೂಪು ತಿದ್ದಿರಬೇಕು ಭಗವಂತ. ಅವಳ ಕಣ್ಣುಗಳಲ್ಲಿದ್ದುದು ಸಾತ್ವಿಕ ಚೆಲುವು. ನಕ್ಕರೆ ಅದೆಂಥದೋ ಸೌಮ್ಯ ಕಳೆ. ಒಂದು ಕೆನ್ನೆಯ ಮೇಲೆ ಮಾತ್ರ ಗುಳಿ ನೆಗ್ಗುತ್ತದೆ. ಮುಂದಲೆಯಲ್ಲಿ ಸುಳಿದಿರುಗಿದ ಮಿನ್ನಾಗರಗಳಂತಹ ದಟ್ಟ ಗುಂಗುರು ಕೂದಲು. ಅವಳ ಹುಬ್ಬುಗಳಲ್ಲಿ ಒಂದು ಕಾನ್ಫಿಡೆನ್ಸು ಸರಿದಾಡುತ್ತದೆ. ಕೆಳ ತುಟಿಗೆ ಮೆತ್ತಿಕೊಂಡಂತಿರುವ ಪುಟ್ಟ ಮಚ್ಚೆಯಲ್ಲಿ ಅದೆಂಥದೋ ಅಮಾಯಕತೆ..."

ನಾನು ಮೊದಲ ವರುಷದ ಕಾಲೇಜು ಹುಡುಗನಾಗಿದ್ದಾಗ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ‘ಹೇಳಿ ಹೋಗು ಕಾರಣ’ ಧಾರಾವಾಹಿ ಬರುತ್ತಿತ್ತು. ಡಾಕ್ಟರಾಗಬೇಕೆಂದು ಬೀದಿಯಲ್ಲಿ ನಿಂತು ಕನಸು ಕಂಡ ಹುಡುಗಿ ಪ್ರಾರ್ಥನಾಳನ್ನು ಮಿಠಾಯಿ ಅಂಗಡಿ ಹುಡುಗ ಹಿಮವಂತ ಚನ್ನರಾಯಪಟ್ಟಣದಿಂದ ಶಿವಮೊಗ್ಗದವರೆಗೆ ನಡೆಸಿಕೊಂಡು ಬಂದಿದ್ದ. ಮನೆಯನ್ನು ತಿರಸ್ಕರಿಸಿ, ಹಿಮವಂತನೆಂಬ ಹುಡುಗನೆಡೆಗೆ ಅದ್ಯಾವುದೋ ನಂಬಿಕೆ ಇರಿಸಿ ಬರಿಗೈಯಲ್ಲಿ ಹೊರಟ ಅವಳ ಬಲಗಾಲ ಹೆಬ್ಬೆರಳಿಗೆ ಎಡವಿ ಗಾಯವಾಗಿತ್ತು. ಶಿವಮೂರ್ತಿ ಸರ್ಕಲ್ಲಿನ ಬಳಿಯ ಒಂದೇ ಕೋಣೆಯ ಹಿಮವಂತನ ಗೂಡಿನೊಳಗೆ ದಾಖಲಾದ ಹುಡುಗಿ ಬೆಳಗ್ಗೆ ಎದ್ದು, ಸ್ನಾನ ಮಾಡಿ ಬಂದು, ಪದ್ಮಾಸನ ಹಾಕಿ ಕುಳಿತು ‘ಯಾಕುಂದೇಂದು ತುಷಾರ ಹಾರ ಧವಳಾ..’ ಅಂತ ಪ್ರಾರ್ಥನೆ ಮಾಡುತ್ತಿದ್ದಳು. ಹಿಮವಂತನೆಡೆಗೆ ಅವಳಿಗೊಂದು ದೈವೀಕ ಪ್ರೀತಿಯಿತ್ತು. ಆರಾಧನೆಯಿತ್ತು. ನಿಷ್ಠೆಯಿತ್ತು.

ಮತ್ತು ನನಗದು ಇಷ್ಟವಾಗಿತ್ತು! ಕಾಲೇಜಿನ ಹುಡುಗಿಯರಲ್ಲೆಲ್ಲಾ ಪ್ರಾರ್ಥನಾಳನ್ನು ಹುಡುಕುತ್ತಿದ್ದೆ. ಮನೆಗೆ ಬಂದು ಮತ್ತೆ ಪತ್ರಿಕೆ ತೆರೆದು ‘ಆ ಹುಡುಗಿ ಪ್ರಾರ್ಥನಾಳೊಂದಿಗೆ ಮ್ಯಾಚ್ ಆಗುತ್ತಾಳಾ?’ ಅಂತ ನೋಡುತ್ತಿದ್ದೆ. ಕಣ್ಣಲ್ಲಿ ಸಾತ್ವಿಕ ಚೆಲುವು, ನಗುವಿನಲ್ಲಿ ಸೌಮ್ಯ ಕಳೆ, ಒಂದೇ ಕೆನ್ನೆ ಮೇಲೆ ಗುಳಿ, ಹುಬ್ಬಿನಲ್ಲಿ ಕಾನ್ಫಿಡೆನ್ಸು, ಕೆಳತುಟಿ ಕೆಳಗಿನ ಮಚ್ಚೇಲಿ ಅಮಾಯಕತೆ! ಹಹ್! ಕೆನ್ನೆ ಮೇಲೆ ಗುಳಿ ಬೀಳೋ ಹುಡುಗಿಯರೇನೂ ಬಹಳ ಇದ್ದರು; ಆದರೆ ಈ ಮಚ್ಚೆ ಮಾತ್ರ ನಂಗೆ ಸಿಗಲೇ ಇಲ್ಲ! ಮತ್ತೆ ಇನ್ನುಳಿದ ಗುಣವಿಶೇಷಣಗಳನ್ನೆಲ್ಲಾ ಗುರುತಿಸುವುದು ಹೇಗೆಂದೇ ನನಗಾಗ ಗೊತ್ತಿರಲಿಲ್ಲ. ಹೀಗಾಗಿ, ನನ್ನ ಪ್ರಾರ್ಥನಾಳಂತಹ ಹುಡುಗಿಯ ಹುಡುಕಾಟ ಅವಿರತವಾಗಿಬಿಟ್ಟಿತು.

ಆದರೆ, ಅಂತಹ-ಹಾಗಿದ್ದ ಪ್ರಾರ್ಥನಾ, ದಾವಣಗೆರೆಗೆ ಮೆಡಿಕಲ್ ಓದಲಿಕ್ಕೆಂದು ಹೋಗಿ, ಅವಳಿಗೆ ಹೊರ ಪ್ರಪಂಚದ ಪರಿಚಯ ಆಗಿ, ಮನಸು ಹಕ್ಕಿಯಾಗಿ, ದೇಬಶಿಶು ಎಂಬ ಬುದ್ಧಿವಂತ ಫ್ಲರ್ಟ್‌ನ ಮೋಹಕ್ಕೆ ಬೀಳುತ್ತಾಳೆ. ತನ್ನನ್ನೇ ಪ್ರಪಂಚವೆಂದು ಭಾವಿಸಿದ್ದ, ಕೇವಲ ತನಗಾಗಿಯೇ-ತನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿಯೇ ದೂರದೂರಿನಲ್ಲಿ ಹಗಲೂ-ರಾತ್ರಿ ದುಡಿಯುತ್ತಿದ್ದ ಹಿಮವಂತನಿಗೆ ವ್ಯವಸ್ಥಿತವಾಗಿ ಮೋಸ ಮಾಡುವ ಸಂಚು ಹೂಡುತ್ತಾಳೆ. ದೇಬುವಿನ ರೂಪ, ಬುದ್ಧಿ, ಶ್ರೀಮಂತಿಕೆಗಳ ಮುಂದೆ ಹಿಮವಂತ ಏನೂ ಅಲ್ಲ ಅಂತ ಅನ್ನಿಸುತ್ತದೆ. ‘ಹಿಮವಂತ ದೇವರಂಥವನು, ನಿಜ. ಆದರೆ ದೇವರನ್ನು ಯಾರಾದರೂ ಪ್ರೀತಿಸಲಿಕ್ಕೆ-ಮದುವೆಯಾಗಲಿಕ್ಕೆ ಆಗುತ್ತದಾ?’ ಅಂತ ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಾಳೆ. ಕೊನೆಗೆ ಕಾದಂಬರಿ ಏನೇನೋ ಆಗಿ ಮುಗಿಯುತ್ತದೆ.

ಈ ಮಧ್ಯೆ, ನನ್ನ ರಾತ್ರಿಯ ಕನಸುಗಳ ರ್ಯಾಂಪಿನ ಮೇಲೆ, ಕಾಲೇಜಿನ ಒಬ್ಬೊಬ್ಬ ಹುಡುಗಿಯೂ ತುಟಿ ಕೆಳಗೆ ಕಾಡಿಗೆಯಿಂದ ಕಪ್ಪು ಚುಕ್ಕಿ ಇಟ್ಟುಕೊಂಡು, ಮುಖಕ್ಕೆ ಫೇರೆಂಡ್ ಲವ್ಲೀ ಹಚ್ಚಿ ತಿಕ್ಕಿ ‘ಕಳೆ’, ‘ಸಾತ್ವಿಕ ಚೆಲುವು’ ಎಲ್ಲಾ ಹೆಚ್ಚಿಸಿಕೊಂದು, ಹುಬ್ಬಿನಲ್ಲಿ ಕಾನ್ಫಿಡೆನ್ಸಿನಂತಹದೇ ಏನನ್ನೋ ಕುಣಿಸುತ್ತಾ ಬಂದು ‘ಯಾಕುಂದೇಂದು..’ ಹೇಳಿ ಹೋಗುತ್ತಿದ್ದಳು. ಬಹುಶಃ ಆ ದಿನಗಳಲ್ಲಿ ನನ್ನನ್ನು ನಾನು ಹಿಮವಂತ ಅಂತ ಬಲವಾಗಿ ಕಲ್ಪಿಸಿಕೊಂಡಿದ್ದೆನಿರಬೇಕು! ಯಾವಾಗ ಪ್ರಾರ್ಥನಾ ಹಿಮವಂತನಿಗೆ ಮೋಸ ಮಾಡುವುದು ಖಚಿತ ಆಯಿತೋ, ಆ ಕನಸುಗಳೆಲ್ಲಾ ಸಡನ್ನಾಗಿ ಬಂದ್ ಆಗಿ ನಿದ್ರೆ ಖಾಲಿ ಹೊಡೆಯತೊಡಗಿತು.

[ಪ್ರಕಟ: ವಿಜಯ ಕರ್ನಾಟಕ ಸಾಪ್ತಾಹಿಕ. ಟಾಪಿಕ್: Crush at a novel character.]

Thursday, June 04, 2009

ನೀತಿ

ಮೊಟ್ಟೆಯೊಡೆದು ಹೊರಬಂದರೂ
ಚಿಪ್ಪಿನೊಳಗೆ ತೂರಿಕೊಳ್ಳುವ ಸವಲತ್ತು
ಸುಸ್ತಾದರೆ, ನಾಚಿಕೆಯಾದರೆ,
ನಿದ್ರೆ ಬಂದರೆ ಅಥವಾ ಬಂದರೆ ಆಪತ್ತು.

ಏಕೆ ಅರ್ಥವೇ ಆಗುವುದಿಲ್ಲ ನಿನಗೆ..?
ನನ್ನ ಕನಸುಗಳನ್ನು ನೀನೂ
ಕಾಣಬಲ್ಲೆಯಾದರೆ ಮಾತ್ರ
ನೀನು ನನ್ನವನು. ನಾವು ಒಂದು.

ಇಷ್ಟಕ್ಕೂ ಮೊಲದೊಂದಿಗೆ ನನಗೀಗ
ಸ್ಪರ್ಧೆಯೇ ಇಲ್ಲ. ಗೆದ್ದಾಗಿದೆ ಎಂದೋ.
ಮೊಲಕ್ಕೂ ಈಗ ಬುದ್ಧಿ ಬಂದಿದೆ;
ಹಾಗೆಲ್ಲ ನಿದ್ದೆ ಮಾಡುವುದಿಲ್ಲ.

ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ.

ಆಕಾಶದಲ್ಲಿದ್ದಾಗ ನೀನು
ಜನ ನಕ್ಕರೆಂದು ಸಿಡುಕಿ
ಕೆಳಗುರುಳಿದರೆ ಬಿಟ್ಟು ಕಚ್ಚಿದ ಕೊಕ್ಕೆ-
ಪಾಪ, ತಪ್ಪು ಹೊತ್ತೊಯ್ದ ಹಕ್ಕಿಗಳದಲ್ಲ.

ಎರಡು ಚಿಪ್ಪುಗಳನ್ನು ಒಂದಾಗಿಸಿದರೆ
ಅದೊಂದು ಗೋಲ. ಇರಬಹುದು ಒಳಗೆ ಸೆಖೆ.
ಸಹಿಸಬೇಕು ಮುತ್ತಾಗುವಾಗ ಹನಿ;
ಕಾಯಬೇಕು ಜೀವ ಬರುವವರೆಗೂ ಹೊರಗೆ.

Friday, May 29, 2009

ದೇವದಾಸ

ನನ್ನ ಕನಸುಗಳ ಲಲಾಟದಲ್ಲಿ
ಹುಟ್ಟುವಾಗಲೇ ಸಾವಿನ ಷರಾ
ಬರೆದಿರುತ್ತದೆ.
ಸತ್ತಾಗ ಆಗುವ ಶೋಕಕ್ಕೆ
ಒಂದು ಸಿಗರೇಟು ಸಾಕು.
ಸುಟ್ಟು ಉಳಿಯುವ ಅದರ
ಚಿತೆಯ ಬೂದಿಗೆ ಕಣ್ಣೀರ ಹನಿಗಳು ಸೇರಿ
ಹೊಸ ಚಿಗುರು ಒಡೆಯುತ್ತದೆ.
ಬೂದಿಯಿಂದ ಅರಳಿದ ಬಳ್ಳಿ
ಬೂದುಗುಂಬಳವಾಗಿ ಬೀದಿಯ ಜನವೆಲ್ಲ
ಬಿದ್ದೂ ಬಿದ್ದು ನಗುತ್ತಿದ್ದರೆ, ಈ
ಕಾಯಿಯನ್ನೇ ನೆಚ್ಚಿ ಇನ್ನೂ ತಬ್ಬಿ ಕುಳಿತಿರುವ ನಾನು
ಮದಿರೆಯ ನಶೆಯ ಜತೆ ನಿಧನಿಧಾನವಾಗಿ ಬಾಡಿ
ಕುಂಬಳದೊಂದಿಗೇ ಕೊಳೆತು
ಇಲ್ಲವಾಗುತ್ತೇನೆ.

ನನ್ನ ಹೃದಯದ ಒಳಗೆ
ಕನ್ನೆಯಾಗಿಯೆ ಇದ್ದ ಇನ್ನೆಷ್ಟೊ ಕನಸುಗಳು
ಕಮ್ಮಗರಳಿರೆ ಮೊಳಕೆ, ಅಣಿ-
ಬ್ರಹ್ಮಲಿಪಿ ಬರೆಯಲು ಅದೆಷ್ಟೊಂದು ಕೈಗಳು!

Wednesday, May 20, 2009

ರಿಂಗ್‌ರೋಡು

ಎಲ್ಲ ರಸ್ತೆಗಳೂ ನಗರಿಯ
ಕಣ್ಣು ಮೂಗು ಎದೆ ಹೊಕ್ಕುಳು ತೊಡೆ
ಸಂದಿ ಗೊಂದಿಗಳನ್ನು ಹೊಕ್ಕು ಹಾದು
ಹೋಗುತ್ತಿದ್ದರೆ ಇದು ಮಾತ್ರ ಹೊರಗೇ
ಉಳಿದಿದೆ. ಇಡೀ ನಗರಿಯನ್ನೇ
ತನ್ನ ಬಾಹುಗಳಿಂದ ಬಳಸಿ ನಿಂತಿದೆ.

ಇಲ್ಲಿ, ಇಲ್ಲಿಂದ ಹೊರಟರೆ ಇಲ್ಲಿಗೇ ಬರಬಹುದು..

ದಾರಿ ತಪ್ಪಿಸುವವರೇ ಹೆಚ್ಚಿರುವ ಈ ಊರಿನಲ್ಲಿ
ತಪ್ಪು ದಾರಿ ಹಿಡಿದರೂ ಮರಳಿ ಅಲ್ಲಿಗೇ ತಂದು
ಬಿಡುವ ಪುಣ್ಯಾತ್ಮ ಈ ರಸ್ತೆ.

ಮನೆಯಲ್ಲಿ ಅಮ್ಮ ಹೇಳಿ ಕಳುಹಿಸಿದ್ದಳು,
ಹಾಗೆ ಅಂತಹ ಒಳ್ಳೆಯವರ ಸಂಗ ಮಾಡು ಎಂದು..

ಆದರೆ ನನಗೆ ಜಯನಗರದಿಂದ ರಾಜಾಜಿನಗರಕ್ಕೆ
ಹೋಗಬೇಕಿದೆ,
ರಿಂಗ್‌ರೋಡು ಹಿಡಿದರೆ ಪ್ರಯೋಜನವಿಲ್ಲ.
ಎಂಜಿ ರೋಡಿನಲ್ಲಿ ಹೋದವರ್ಯಾರೂ ಮಹಾತ್ಮರಾಗಿಲ್ಲ;
ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಅಡ್ಡಾಡಿದವರು ದೊರೆಗಳಾಗಿಲ್ಲ.

ನಾಗರೀಕನಾಗ ಬಂದವನಿಗೆ ದಾರಿ ತಪ್ಪಿದರೂ ಚಿಂತಿಲ್ಲ;
ಹೊಸ ದಾರಿ ಸಿಕ್ಕಂತಾಗುತ್ತದೆ..
ಇದೇ-ಇಂಥದೇ ದಾರಿಯಲ್ಲಿ ಹೋಗಬೇಕೆನ್ನುವ ತಲೆಬಿಸಿಯೆಲ್ಲಾ
ಗುರಿಯಿದ್ದವನಿಗೆ.. ಅನಿಕೇತನನಿಗೆ ಯಾವ ದಾರಿಯಾದರೂ
ಆದೀತು: ರಿಂಗ್‌ರಸ್ತೆಯೊಂದನ್ನು ಬಿಟ್ಟು.

ತೀರಾ ತಪ್ಪಿಯೇ ಹೋದರೆ ದಾರಿ, ಮೆಜೆಸ್ಟಿಕ್ಕಿಗೆ ಹೋದರಾಯಿತು:
ಅಲ್ಲಿಂದ ಬದುಕನ್ನೇ ಪುನರಾರಂಭಿಸಬಹುದು.
ಗುಟ್ಟು: ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!

Wednesday, May 06, 2009

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ..

ಜಯಂತ್ ಬರೆದಿದ್ದರು ಒಮ್ಮೆ: "ನಗರಗಳಲ್ಲಿ ಊಳಿಗ ಮಾಡಿಕೊಂಡಿರುವ ಏಕಾಕಿ ಜೀವಿಗಳು ಹೆದರುವುದು ಯಾವುದಕ್ಕೆ? ಇದ್ದಕ್ಕಿದ್ದಂತೆ ಎದ್ದೇಳುವ ಕೋಮು ಗಲಭೆ, ಲಾಕೌಟ್, ಬಂದ್, ಕರ್ಫ್ಯೂಗಳಿಗೇ? ಊಹೂಂ, ಅದಕ್ಕೆಲ್ಲ ಅವರು ಹೆದರುವುದಿಲ್ಲ. ಹೋಟೆಲುಗಳೆಲ್ಲ ಮುಚ್ಚಿದ್ದರೆ ರಸ್ತೆಬದಿಯ ಶೇಂಗಾ ತಿಂದು ನೀರು ಕುಡಿದು ಬದುಕಿರಬಲ್ಲರು ಅವರು. ಊರಿನ ವಿಳಾಸದಿಂದ ಬರುವ ಹಠಾತ್ ಟೆಲಿಗ್ರಾಮುಗಳಿಗೆ? ಊಹುಂ, 'ತಂದೆ ತೀರಿಕೊಂಡಿದಾನೆ, ಹೊರಡು', 'ಅಮ್ಮನಿಗೆ ಸೀರಿಯಸ್, ಹೊರಡು' ಇಂತಹ ತಂತಿಗಳನ್ನು ಆತ ಊಹಿಸಿ ಊಹಿಸಿಯೇ ಗಟ್ಟಿಯಾಗಿಬಿಟ್ಟಿರುತ್ತಾನೆ. ರಸ್ತೆಯಲ್ಲೆದುರಾಗುವ ಆಕ್ಸಿಡೆಂಟ್‍ನಲ್ಲಿ ಸತ್ತ ಅನಾಥ ಶವಗಳನ್ನು ಕಂಡಾಗಲೇ? ಊಹುಂ, ನಿತ್ಯ ಕಾಣುವ ಇಂತಹ ದೃಶ್ಯಗಳನ್ನು ನೋಡೀ ನೋಡಿ ಆತ ತನ್ನ ಸಾವೂ ಇಂಥದ್ದರಲ್ಲೇ ಆಗೋದು ಅಂತ ಯಾವತ್ತೋ ಮನಸಿಗೆ ಹೇಳಿಕೊಂಡುಬಿಟ್ಟಿರುತ್ತಾನೆ. ಹೆದರುವುದಿಲ್ಲ.

ಹಾಗಾದರೆ ದೂರದೂರಿನಿಂದ ಬಂದು ನಗರದಲ್ಲಿ ಅಡ್ನಾಡಿ ಬದುಕು ಬಾಳಿಕೊಂಡಿರುವ ಈ ಮನುಷ್ಯ ಏನಕ್ಕೂ ಹೆದರುವುದೇ ಇಲ್ಲವೇ? ಇಲ್ಲ, ಆತ ಸಹ ಹೆದರುತ್ತಾನೆ. ಕೇವಲ ಒಂದೇ ವಿಷಯಕ್ಕೆ: ಕಾಯಿಲೆ ಬೀಳುವುದಕ್ಕೆ! ನಿಜ, ಕಾಯಿಲೆ ಬೀಳುವ ಕಲ್ಪನೆಗೆ ಸಹ ಆತ ಭಯದಿಂದ ಕಂಪಿಸಬಲ್ಲ. ಹೇಳುವವರಿಲ್ಲದ ಕೇಳುವವರಿಲ್ಲದ ಈ ಕುರೂಪಿ ನಗರಿಯಲ್ಲಿ ಕಾಯಿಲೆ ಬೀಳುವುದಕ್ಕಿಂತ ದೊಡ್ಡ ಯಾತನೆ ಮತ್ತೊಂದಿಲ್ಲ. ಇಡೀ ಜಗತ್ತೇ ತನ್ನನ್ನು ಬಿಟ್ಟು ಮುಂದೆ ಸಾಗಿದಂತೆನಿಸುತ್ತದೆ. ಯಾರಿಗೂ ಅವನ ಕೈ ಹಿಡಿದು ಆಸ್ಪತ್ರೆಗೆ ಕರೆದೊಯ್ಯುವ ದರ್ದಿಲ್ಲ. ಯಾರೂ ಅವನಿಗೆ ಗಂಜಿ ಬೇಯಿಸಿ ಹಾಕುವುದಿಲ್ಲ. ಯಾರೂ ಪಕ್ಕದಲ್ಲಿ ಕೂತು ಹಣೆಗೆ ಒದ್ದೆ ಬಟ್ಟೆ ಹಾಕಿ ತೆಗೆಯುವುದಿಲ್ಲ. ಕಾಯಿಲೆ ಬಿದ್ದ ಏಕಾಂಗಿ ಮನುಷ್ಯನಷ್ಟು ನತದೃಷ್ಟ ವ್ಯಕ್ತಿ ಶಹರದಲ್ಲಿ ಮತ್ಯಾರೂ ಇಲ್ಲ.."

ಮೊನ್ನೆ ಜ್ವರದ ಕಣ್ಣಲ್ಲಿ ಇದನ್ನು ಮತ್ತೆ ಓದುವಾಗ ಎಷ್ಟೊಂದು ಹೌದು ಹೌದು ಅನ್ನಿಸಿತು.. ಕಣ್ಣು ಸಹ ಬಿಡಲಾಗದಷ್ಟು ಜೋಂಪು. ಭಾರ ತಲೆ. ಮಂಪರು. ಎದ್ದು ಹೋಗಿ ಒಂದು ಲೋಟ ನೀರು ಕುಡಿಯೋಣವೆಂದರೆ ಇದೇನಿದು ಏಳಲಿಕ್ಕೇ ಆಗುತ್ತಿಲ್ಲ..? ಆಫೀಸಿಗೆ ಫೋನ್ ಮಾಡಿ ಬರಲಾಗುತ್ತಿಲ್ಲ ಎಂದರೆ "ನಿನ್ನೆ ಆರಾಮಾಗೇ ಇದ್ರಲ್ಲ, ಅದು ಹೇಗೆ ಇದ್ದಕ್ಕಿದ್ದಂಗೆ ಜ್ವರ ಬಂತು?" -ಸಂಶಯದ ಪ್ರಶ್ನೆ. ಹೌದು ಸಾರ್, ನಂಗೂ ಗೊತ್ತಿಲ್ಲ. ಆದರೆ ಜ್ವರ ಬಂದಿದೆ. ಸುಳ್ಳು ಹೇಳ್ತಿಲ್ಲ ಸಾರ್. ಬರಲಿಕ್ಕೆ ಆಗಲ್ಲ. ಲೀವ್ ಬೇಕು. ಅಯ್ಯೋ, ಯಾಕೆ ಅರ್ಥವೇ ಆಗ್ತಿಲ್ಲ ನಾನು ಹೇಳ್ತಿರೋದು?

ಛೇ, ಇವತ್ತೇ ಯಾಕೆ ಇಷ್ಟೊಂದು ಕ್ಲೈಂಟ್ ಕಾಲ್‌ಗಳು? ಯಾರು ಇವರಿಗೆಲ್ಲ ನನ್ನ ಮೊಬೈಲ್ ನಂಬರ್ ಕೊಟ್ಟಿದ್ದು? ಯಾವಾಗಲೂ ತಡವಾಗಿ ಹೋಗುವ ರೂಂಮೇಟ್ ಇವತ್ತೇ ಯಾಕೆ ಬೇಗ ಹೋದ ಆಫೀಸಿಗೆ? ಕಷ್ಟ ಪಟ್ಟು ಎದ್ದು ಹೋಗಿ ಎರಡು ಲೋಟ ನೀರು ಕುಡಿಯುತ್ತೇನೆ.. ಸ್ವಲ್ಪ ಚೈತನ್ಯ ಬಂದಂತೆನಿಸುತ್ತದೆ.. ಬೇಕರಿಗೆ ಹೋಗಿ ಬ್ರೆಡ್-ಜಾಮ್ ತಂದುಕೊಳ್ಳುತ್ತೇನೆ. ಹಸಿವೆನಿಸಿದರೂ ಎರಡು ಬ್ರೆಡ್ ಮೇಲೆ ತಿನ್ನಲಿಕ್ಕೇ ಆಗುತ್ತಿಲ್ಲವಲ್ಲ, ಏನಾಗಿದೆ ನನಗೆ? ಕಾಫಿ ಕುಡಿಯಬೇಕು. ಸ್ಟ್ರಾಂಗ್ ಕಾಫಿ. ಥೂ, ಕಹಿ ಕಹಿ. ಇಲ್ಲೇ ಇಟ್ಟಿದ್ದೆನಲ್ಲ ಕ್ರೋಸಿನ್ ಸ್ಟ್ರಿಪ್ಪು, ಎಲ್ಲಿ ಹೋಯ್ತು? ನುಂಗಿ ಬೆಚ್ಚಗೆ ಹೊದ್ದು ಮಲಗಿದರೆ ಮಧ್ಯಾಹ್ನದೊಳಗೆ ಎಲ್ಲಾ ವಾಸಿಯಾಗುತ್ತೆ.

ಎಷ್ಟೋ ಹೊತ್ತಿನ ಮೇಲೆ ಎಚ್ಚರಾಗೊತ್ತೆ.. ಎಲ್ಲಿದ್ದೇನೆ ನಾನು? ಏನಾಗಿದೆ ನನಗೆ? ಸಮಯವೆಷ್ಟು ಈಗ? ಆಂ, ನಾಲ್ಕೂವರೆಯೇ? ಆಗಲೇ ಸಂಜೆಯಾಯಿತಾ? ಮೈಯೇಕೆ ಹೀಗೆ ಸುಡುತ್ತಿದೆ ಇನ್ನೂ? ಥರ್ಮಾಮೀಟರ್ ಎಲ್ಲಿ? ಏನೂ, ನೂರಾಮೂರು ಡಿಗ್ರಿಯಾ? ಛೇಛೆ, ಕಣ್ಣೇ ಮಂಜಾಗಿರಬೇಕು ನನಗೆ..

ನಾಲ್ಕು ದಿವಸಗಳಾಗಿವೆ.. ಎರಡು ಬಾರಿ ಡಾಕ್ಟರ್ ಬಳಿ ಹೋಗಿ ಬಂದದ್ದಾಯ್ತು. ಇಂಜೆಕ್ಷನ್ ಬೇಡ, ಟ್ಯಾಬ್ಲೆಟ್ಸಲ್ಲೇ ಗುಣ ಆಗುತ್ತೆ, ವೈರಲ್ ಫೀವರ್ ಎಂದಿದ್ದರು ಡಾಕ್ಟರು. ಆದರೆ ಇದ್ಯಾಕೋ ನನಗೆ ಹುಷಾರಾಗುವ ಲಕ್ಷಣವೇ ಕಾಣುತ್ತಿಲ್ಲ.. ರೂಂಮೇಟು ಪಾಪ ಕಾದಾರಿದ ನೀರು ಕುಡಿ ಅಂತ ಕಾಯಿಸಿಟ್ಟು ಹೋಗಿದ್ದಾನೆ. ತಿಳಿಸಾರು, ಮೆತ್ತನೆ ಅನ್ನ ಮಾಡಿಕೊಟ್ಟಿದ್ದಾನೆ. ಗಂಜಿ ಬೇಕು ಎಂದರೆ ಕುಕ್ಕರನ್ನು ಐದು ಸಲ ಕೂಗಿಸಿದ್ದಾನೆ. ಮನೆಯಲ್ಲಿ ಒಬ್ಬನೇ ಭೂತದ ಥರ ಮಲಗಿಕೊಂಡಿದ್ದೇನೆ. ಯಾವುದಾದರೂ ಪುಸ್ತಕವನ್ನಾದರೂ ಓದೋಣವೆಂದರೆ ಅದನ್ನು ಹಿಡಿದುಕೊಳ್ಳಲೂ ತ್ರಾಣವಿಲ್ಲ. ಸ್ವಲ್ಪ ಓದುವಷ್ಟರಲ್ಲೇ ಸುಸ್ತು ಸುಸ್ತು. ಮನೆಗೆ ಇನ್ನೂ ಹೇಳಿಲ್ಲ. ಹೇಳಿದರೆ ಟೆನ್ಷನ್ ಮಾಡಿಕೊಳ್ಳುತ್ತಾರೆ. "ಈಗ್ಲೇ ಕಳುಸ್ತೀನಿ ಅಮ್ಮನ್ನ" ಅಂತಾನೆ ಅಪ್ಪ. ಬೇಡ, ಇನ್ನೂ ಒಂದೆರಡು ದಿನ ನೋಡೋಣ; ಹಾಗೇ ಆರಾಮಾಗಬಹುದು. ಒಂದಿಬ್ಬರು ಫ್ರೆಂಡ್ಸು ಬಂದು ನೋಡಿಕೊಂಡು ಹೋಗಿದ್ದಾರೆ. "ಗ್ಲುಕೋಸು, ಎಳನೀರು ಅಥ್ವಾ ಜ್ಯೂಸು ಕುಡೀತಿರು, ಅದಿಲ್ಲಾಂದ್ರೆ ಲಿಕ್ವಿಡ್ ಕಂಟೆಂಟ್ಸ್ ಇಲ್ದೇ ಡಿಹೈಡ್ರೇಷನ್ ಆಗುತ್ತೆ" ಎಂದಿದ್ದಾನೆ ಕಲೀಗು ಫೋನಿನಲ್ಲಿ. ಹೌದು, ವಿಪರೀತ ಬಾಯಾರಿಕೆ. ಹೀಟು. ಈ ಪರಿ ಡಜನ್‍ಗಟ್ಟಲೆ ಮಾತ್ರೆ ತಿಂದರೆ ಮತ್ತಿನ್ನೇನಾಗತ್ತೆ?

ಬಹುಶಃ ನನಗೆ ಜ್ವರ ಬಂದು ಏಳೆಂಟು ದಿನಗಳೇ ಆಗಿವೆ.. ಆಫೀಸಿಗೆ ಹೊರಟ ರೂಂಮೇಟು ಎಬ್ಬಿಸುತ್ತಿದ್ದಾನೆ: "ಏಯ್ ಏಳು.. ಏಳು ಸಾಕು.. ಇದ್ಯಾಕೋ ಟೈಫಾಯ್ಡಿಗೆ ಎಳೆಯೋ ಹಾಗಿದೆ. ಮೊದಲು ಹೋಗಿ ಬ್ಲಡ್ಡು, ಯೂರಿನ್ನು ಟೆಸ್ಟ್ ಮಾಡ್ಸೋಣ, ನಡಿ.." ಥೂ, ಈ ಆಟೋ ಯಾಕೆ ಹೀಗೆ ಕುಲುಕಾಡುತ್ತೆ? ಸಿರಿಂಜ್ ಚುಚ್ಚಿ ರಕ್ತವನ್ನು ಎಳೆದುಕೊಳ್ಳುತ್ತಿದ್ದಾರೆ ಸರ್ಜನ್.. ರಿಪೋರ್ಟು ಮಧ್ಯಾಹ್ನ ಸಿಗುತ್ತೆ ಅಂತಿದಾರೆ.. ಅಲ್ಲಿಯವರೆಗೆ ನಾನೇನು ಮಾಡಲಿ? ಇಲ್ಲೇ ಬೆಂಚಿನ ಮೇಲೆ ಮಲಗಿರಲಾ? "ಇದು ಪ್ಯಾರಾಟೈಫಾಯ್ಡ್. ತುಂಬಾನೇ ನಿಶ್ಯಕ್ತಿ ಆಗಿದೆ ನಿಮಗೆ. ಡ್ರಿಪ್ ಹಾಕ್ಬೇಕು. ಅಡ್ಮಿಟ್ ಆಗಿಬಿಡಿ ಈಗಲೇ" ಕನ್ನಡಕದ ಡಾಕ್ಟರು ಒಂದೇ ಸಮನೆ ಮಾತಾಡುತ್ತಿದ್ದಾರೆ. ಅಯ್ಯೋ ಬೇಡ ಡಾಕ್ಟ್ರೇ.. ಇಲ್ಲಿ ನಾನು ಅಡ್ಮಿಟ್ ಆಗಲ್ಲ.. ನನ್ನ ನೋಡ್ಕೊಳ್ಳೋರು ಯಾರೂ ಇಲ್ಲ.. ನಾನು ಊರಿಗೆ ಹೋಗ್ತೇನೆ.. ಬೇಕಾದ್ರೆ ಅಲ್ಲೇ ಯಾವುದಾದರೂ ಹಾಸ್ಪಿಟಲ್‍ಗೆ ಹೋಗ್ತೇನೆ.. ಊರಿಗೆ ಹೋದರೆ ಸಾಕು, ಅಮ್ಮನ ಕೈತುತ್ತೂಟ ಉಂಡರೆ ಎಲ್ಲ ಆರಾಮಾಗುತ್ತೆ.. ನನ್ನ ಬಿಟ್ಬಿಡಿ ಈಗ..

ಮನೆಗೆ ಫೋನ್ ಮಾಡಿ ಹೇಳ್ತಿದ್ದೇನೆ.. "ಯಾಕೆ ಇಷ್ಟೆಲ್ಲ ಆದ್ರೂ ಹೇಳ್ಲಿಲ್ಲ ನಮಗೆ? ನಾವೆಲ್ಲಾ ಇರೋದು ಏನಕ್ಕೆ? ಈಗ ಒಬ್ನೇ ಹ್ಯಾಗೆ ಬರ್ತೀಯಾ?" ಇಲ್ಲಮ್ಮಾ, ಸ್ಲೀಪರ್ ಕೋಚ್ ಬಸ್ಸು.. ಊರಿಗೆ ಹೋಗೋರು ಯಾರಾದ್ರೂ ಇದ್ದೇ ಇರ್ತಾರೆ.. ಅಪ್ಪಂಗೆ ಬಸ್‍ಸ್ಟಾಂಡ್ ಹತ್ರ ಬರ್ಲಿಕ್ಕೆ ಹೇಳು ಅಷ್ಟೇ.. ಏನು ಭಯ ಬೇಡ..

ನಾನು ಹೋಗುವಷ್ಟರಲ್ಲೇ ನನಗೆ ಟೈಫಾಯ್ಡ್ ಆಗಿರುವುದು ಊರಿಗೆಲ್ಲ ಸುದ್ದಿಯಾಗಿಬಿಟ್ಟಿದೆ! ಎಲ್ಲರೂ ಕೇಳುವವರೇ: ಜ್ವರನಂತೆ? ಈಗ ಹೇಗಿದೆ? ತುಂಬಾ ಕೇರ್ ತಗೋಬೇಕು.. ಖಾರದ ಪದಾರ್ಥ ಸ್ವಲ್ಪಾನು ತಿನ್ಬೇಡ.. ಛೇ ಪಾಪ, ಒಂದು ವಾರದಲ್ಲಿ ಹೆಂಗೆ ತೆಳ್ಳಗಾಗಿ ಹೋಗಿದೀಯ ನೋಡು.. "ಮದ್ದಾಲೆ ಚಕ್ಕೆ ಕಷಾಯ ಮಾಡಿಕೊಡಿ ಅವಂಗೆ, ಎಂಥಾ ಜ್ವರ ಇದ್ರೂ ಎರಡೇ ದಿನದಲ್ಲಿ ಓಡಿಹೋಗುತ್ತೆ.. ನಮ್ಮನೆ ಸರೋಜಂಗೆ ಅದ್ರಲ್ಲೇ ಹುಶಾರಾಗಿದ್ದು" ಗಣಪತಿ ಭಟ್ಟರು ಸಲಹೆ ಕೊಡುತ್ತಿದ್ದಾರೆ. ಅಮ್ಮನಿಗಂತೂ ಉಪಚಾರ ಮಾಡಿದಷ್ಟೂ ಸಾಕಾಗ್ತಿಲ್ಲ.. ರವೆಗಂಜಿ ಮಾಡ್ಕೊಡ್ಲಾ? ಬಾರ್ಲಿ ನೀರು ಬತ್ತಿಸಿದ್ದಿದೆ ಕುಡೀತೀಯಾ? ಇವತ್ತು ಮಧ್ಯಾಹ್ನದ ಅಡುಗೆಗೆ ಏನು ಮಾಡ್ಲಿ? ಒಂದೆಲಗನ ತಂಬುಳಿ ಪರ್ವಾಗಿಲ್ವಾ? ಇಲ್ಲೇ ಹಾಲಲ್ಲಿ ಮಲ್ಕೋ.. ರೂಮಲ್ಲಿ ಸೆಖೆ ಅಂದ್ರೆ ಸೆಖೆ.

ಆ ಕಡೆ ಈ ಕಡೆ ಶತಪತ ಮಾಡುವ ಅಪ್ಪ. ಪಿಸುಗಣ್ಣೀರು ಹಾಕುವ ಅಜ್ಜ. ಬರೀ ಗಲಾಟಿ ಮಾಡುವ ಬೇಸಿಗೆ ರಜೆಗೆ ಬಂದಿರುವ ನೆಂಟರ ಮಕ್ಕಳು. ಒಂದೇ ಸಮನೆ ರಿಂಗಾಗುವ ಫೋನು. ಬೆಂಕಟವಳ್ಳಿಯಿಂದ ಮಾವನಂತೆ.. ನಾನು ಈಗ ಹೇಗಿದ್ದೀನಿ ಅಂತ ಕೇಳೋಕೆ ಮಾಡಿದ್ದಂತೆ. ಅತ್ತೆ ನಾಳೆ ಬರ್ತಿದ್ದಾಳಂತೆ. ನನ್ನ ನೋಡಿಕೊಂಡು ಹೋಗಲಿಕ್ಕೆ. ಛೇ! ನಂಗೇನು ಮಾರಣಾಂತಿಕ ಕಾಯಿಲೆ ಬಂದಿದೆಯೇನಪ್ಪಾ? ಜ್ವರ ಅಷ್ಟೇ. ಯಾಕೆ ಈ ಆಪ್ತೇಷ್ಟರಿಗೆ ಈ ಪರಿ ಕಾಳಜಿ? ಕನಸಿನಲ್ಲಿ ಯಾರೋ ಹೇಳುತ್ತಿದ್ದಾರೆ: ಅದು ಹಾಗಲ್ಲ, ನೀನು ಆರಾಮಾಗಿದ್ದಾಗ ಯಾರೂ ಬಾರದೇ ಇದ್ರೂ ನಡೆಯುತ್ತೆ, ಆದರೆ ತೊಂದರೇಲಿ ಇದ್ದಾಗ ಬಂದು ವಿಚಾರಿಸಿಕೊಂಡು ಹೋಗಬೇಕು.. ಅದೇ ನಿಯಮ.. ಸ್ನೇಹ, ಬಂಧುತ್ವ, ನೆರೆಹೊರೆ ಅಂದರೆ ಅದು.. ಕಷ್ಟದಲ್ಲಿದ್ದಾಗ ನೆರವಾಗೋದು. ನಗರಗಳಲ್ಲಿ ಅದೆಲ್ಲ ಇಲ್ಲ. ನೀನು ವಾರಗಟ್ಟಲೆ ಮಲಗಿದ್ರೂ ಅಕ್ಕಪಕ್ಕದ ಮನೆಯ ಒಬ್ಬರಾದ್ರೂ ಬಂದು ಕೇಳಿದ್ರಾ- ಯಾಕಪ್ಪಾ ಏನಾಗಿದೆ ಯಾಕೆ ಆಫೀಸಿಗೆ ಹೋಗ್ತಿಲ್ಲ ಅಂತ? ಅಲ್ಲಿ ಜನಗಳಿಗೆ ಮನುಷ್ಯತ್ವವನ್ನು ಪ್ರಕಟಿಸಲಿಕ್ಕೆ ಸಮಯವೂ ಇಲ್ಲ; ಪ್ರಜ್ಞೆಯೂ ಇಲ್ಲ.

"ಥೂ ಅಮ್ಮಾ, ಇದೇನಿದು ಕಿಚಿಪಿಚಿ ಕಿರುಚಾಟ? ನಿದ್ರೆ ಮಾಡ್ಲಿಕ್ಕೇ ಬಿಡ್ತಿಲ್ಲ?" ಮಗ್ಗುಲಿನಲ್ಲಿ ಮಲಗಿದ ನಾನು ಅಂಗಾತವಾಗುತ್ತ ಗೊಣಗುತ್ತೇನೆ. "ಗುಬ್ಬಚ್ಚಿಗಳು ಕಣೋ.. ಪಾಪ ಗೂಡು ಕಟ್ಕೊಳ್ತಿವೆ.. ಎರಡು ದಿನದಿಂದ ಹುಲ್ಲು ಹೆಕ್ಕಿ ತರೋದು, ಜೋಡಿಸಿ ಜೋಡಿಸಿ ಇಡೋದು -ಇದೇ ಕೆಲಸ ಸರಭರ. ಅವು ನೆಲಕ್ಕೆ ಬೀಳಿಸಿದ ಹುಲ್ಲುಕಡ್ಡಿಗಳನ್ನ ಗುಡಿಸೋ ಕೆಲಸ ಒಂದು ನಂಗೆ ಹೆಚ್ಚಿಗೆ ಅಷ್ಟೇ!" ಅರೆ, ಈ ಅಮ್ಮನಿಗೇಕೆ ಈ ಗುಬ್ಬಚ್ಚಿಗಳ ಮೇಲೆ ಕರುಣೆ? ಬೇರೆ ಎಲ್ಲಾದ್ರೂ ಕಟ್ಟಿಕೋಬಹುದಪ್ಪ ಗೂಡು.. ನಮ್ಮನೆ ಸಜ್ಜಾನೇ ಬೇಕಾ? ಗಲಾಟೆ ಅಂದ್ರೆ ಗಲಾಟೆ. "ಬೇರೆ ಕಡೆ ಅಂದ್ರೆ ಎಲ್ಲಿಗೆ ಹೋಗ್ತಾವೋ ಪಾಪ? ಅದ್ರಲ್ಲಿ ಹೆಣ್ಣುಹಕ್ಕಿ ಬಸುರಿ ಇರ್ಬೇಕು.. ಹೊಟ್ಟೆ ನೋಡಿದ್ರೆ ಹಾಗೇ ಅನ್ಸುತ್ತಪ್ಪ.." ಸಂಭ್ರಮದ ದನಿಯಲ್ಲಿ ಹೇಳುತ್ತಿದ್ದಾಳೆ ಅಮ್ಮ.

ಹತ್ತು ದಿನ ಆದ್ರೂ ಇನ್ನೂ ಹೋಗಿಲ್ಲ ಜ್ವರ.. ನೂರಾ ಎರಡು ಡಿಗ್ರಿ.. ಸೊರಬದ ಡಾಕ್ಟರ್ ಬಳಿ ಹೋಗುವುದು ಅಂತ ತೀರ್ಮಾನವಾಗಿದೆ. "ಎರಡು ಡ್ರಿಪ್ ಹಾಕಿದ್ರೆ ಎಲ್ಲ ಸರಿ ಆಗುತ್ತೆ.. ನೀವ್ ಏನೂ ಹೆದರ್ಬೇಡಿ.. ನಾನು ಸರಿ ಮಾಡಿ ಕಳುಸ್ತೀನಿ ನಿಮ್ಮ ಮಗನ್ನ" ಡಾ| ಎಂ.ಕೆ. ಭಟ್ಟರು ಹುರುಪುನಿಂದಲೇ ಹೇಳುತ್ತಿದ್ದಾರೆ. ಸಲೈನಿನ ಹನಿಗಳು ಒಂದೊಂದೆ ಒಂದೊಂದೇ ಆಗಿ ಸೇರಿಕೊಳ್ಳುತ್ತಿವೆ ದೇಹದಲ್ಲಿ.. ಸ್ವಲ್ಪ ಚೇತರಿಕೆ ಕಾಣಿಸುತ್ತಿದೆ ಈಗ.. ಇನ್ನು ಎರಡು ದಿನ. ಇದೊಂದು ಕೋರ್ಸ್ ಟ್ಯಾಬ್ಲೆಟ್ ತಗೊಂಡ್ರೆ ಫುಲ್ ರೆಡಿಯಾಗ್ತೀನಿ. ಹಾಗಂತ ನಂಗೇ ಅನ್ನಿಸ್ತಿದೆ.

...ಒಂದು ದಿನ ಮುಂಜಾನೆ ಥಟ್ಟನೆ ಎಚ್ಚರಾದಂತಾಗಿ ಕಣ್ಣು ಬಿಡುತ್ತೇನೆ. ಆಹ್ಲಾದವೆನಿಸುವ ಹಾಗೆ ಸೂರ್ಯರಶ್ಮಿ ಕಣ್ಣಿಗೆ ಬೀಳುತ್ತಿದೆ. ಅಪ್ಪ ಹತ್ತಿರ ಬಂದು ಡಿಗ್ರಿ ಕಡ್ಡಿ ಇಟ್ಟು ನೋಡುತ್ತಿದ್ದಾನೆ. ಇಲ್ಲ, ಜ್ವರ ಇಲ್ಲ; ನಾರ್ಮಲ್ ಟೆಂಪರೇಚರ್! ಹೌದು, ಜ್ವರ ಹೊರಟುಹೋಗಿದೆ. ನಿಜವಾಗಿಯೂ. ಆಹ್, ಅಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಓಡುತ್ತಿದ್ದಾಳೆ. ಅಜ್ಜ ಉಟ್ಟ ಸಾಟಿಪಂಚೆಯಿಂದಲೇ ಒರೆಸಿಕೊಳ್ಳುತ್ತಿದ್ದಾನೆ ಕಂಬನಿ. ಸುತ್ತ ನಿಂತ ಮಕ್ಕಳು "ಹಂಗಾದ್ರೆ ಇವತ್ತಿಂದ ನಮ್ ಜೊತೆ ಕ್ರಿಕೆಟ್ ಆಡ್ಬಹುದು ನೀನು?" ಕೇಳುತ್ತಿದ್ದಾರೆ ಉತ್ಸಾಹದಲ್ಲಿ. "ಪೂರ್ತಿ ರಿಕವರ್ ಆಗ್ಲಿಕ್ಕೆ ಇನ್ನೂ ಒಂದು ತಿಂಗಳು ಬೇಕು ನಿಂಗೆ. ಈಗ್ಲೇ ಹೊರಡ್ತೀನಿ ಬೆಂಗಳೂರಿಗೆ ಅಂತೆಲ್ಲ ಹಟ ಮಾಡ್ಬೇಡ. ವಾರ ಬಿಟ್ಟು ಹೋಗು" -ತಾಕೀತು ಅಪ್ಪನಿಂದ.

ಮಂಚದಿಂದಿಳಿದು ಮುಚ್ಚೆಕಡೆ ಬಾಗಿಲಿನೆಡೆಗೆ ಹೊರಟಿದ್ದೇನೆ. ಫಕ್ಕನೆ ಮೈಮೇಲೆ ಏನೋ ಬಿದ್ದಂತಾಗಿದೆ. ಏನಿದು? ಒಂದು ಹುಲ್ಲುಕಡ್ಡಿ. ಮೇಲೆ ನೋಡುತ್ತೇನೆ. ಒತ್ತೊತ್ತಾಗಿ ಚಂದವಾಗಿ ಜೋಡಿಸಿ ನಿರ್ಮಿತವಾಗಿರುವ ಗೂಡಿನಿಂದ ಬಸುರಿ ಗುಬ್ಬಚ್ಚಿ ಹೊರಗಿಣುಕಿ ನೋಡುತ್ತಿದೆ ನನ್ನನ್ನೇ: "..ಚಿಲಿಪಿಲಿ ಚಿಲಿಪಿಲಿ.." ಹೇ... ನನಗೆ ಒಮ್ಮೆಲೆ ಖುಶಿ ಉಕ್ಕಿ ಬರುತ್ತಿದೆ.. ಎಲ್ಲಿಂದಲೋ ಪುರ್ರನೆ ಹಾರಿಬಂದ ಗಂಡುಹಕ್ಕಿ ಗೂಡಿನ ಬಳಿ ಕೂತು ಹೆಂಡತಿಗೆ ಅದೇನೋ ಹೇಳುತ್ತಿದೆ. ಅಂದು ಗಲಾಟೆಯಂತೆ ಕೇಳಿದ್ದ ಇವುಗಳ ಮಾತು ಇಂದು ಹಿತವಾಗಿ ಕಲರವದಂತೆ ಕೇಳಿಸುತ್ತಿದೆ. ಎವೆ ಬಡಿಯದೇ ನೋಡುತ್ತಿದ್ದೇನೆ ನಾನು. ಪುಟ್ಟ ಸಂಸಾರಕ್ಕೆ ಇನ್ನೇನು ಬಂದು ಸೇರಲಿರುವ ಹೊಸದೊಂದು ಜೀವಕ್ಕೆ ಸ್ವಾಗತ ಕೋರುವ ತಯಾರಿಯಲ್ಲಿವೆ ಗುಬ್ಬಚ್ಚಿ ದಂಪತಿಗಳು.

* * *

ಈ ನಡುವೆ, ಏಪ್ರಿಲ್ ೨೬ಕ್ಕೆ ನನ್ನ ಬ್ಲಾಗಿನ ಮೂರನೇ ವರ್ಷದ ಹುಟ್ಟುಹಬ್ಬ ಕಳೆದುಹೋಗಿದೆ! ಸಿಂಗಾರಬಂಗಾರವಾಗಿ ಕಂಗೊಳಿಸಬೇಕಿದ್ದ ನನ್ನ ಬ್ಲಾಗು, ಪಾಪ ಒಡೆಯನ ಅನಾರೋಗ್ಯದಿಂದ ಯಾವುದೇ ಆಚರಣೆಯಿಲ್ಲದೆ ಸೊರಗಿ ಬೇಸರದಲ್ಲಿ ನಿಂತಿದೆ. ಸಮಾಧಾನ ಮಾಡಲು ನಾನು ಕರ್ಚೀಫು ಹುಡುಕುತ್ತಿದ್ದೇನೆ.

ನಾನು ಬ್ಲಾಗು ಶುರು ಮಾಡುವಾಗ ಕನ್ನಡದಲ್ಲಿದ್ದ ಬ್ಲಾಗುಗಳು ಬೆರಳೆಣಿಕೆಯಷ್ಟು. ಬ್ಲಾಗು ಎಂದರೇನು, ಬರಹ ಎಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು, ಯುನಿಕೋಡ್ ಬಳಸುವುದು ಹೇಗೆ, ಲಿಂಕಿಂಗ್ ಮಾಡುವುದು ಹೇಗೆ, ಬೇರೆಯವರಿಗೆ ನನ್ನದೂ ಒಂದು ಬ್ಲಾಗ್ ಇದೆ ಅಂತ ತಿಳಿಸುವುದು ಹೇಗೆ -ಇತ್ಯಾದಿ ಸಹಸ್ರ ಪ್ರಶ್ನೆಗಳಿದ್ದವು ನನ್ನ ಮುಂದೆ.

ಹೈಸ್ಕೂಲು ಕಾಲದಿಂದ ಬರೆಯುತ್ತಿದ್ದರೂ ಅವನ್ನು ಯಾರಿಗೂ ತೋರಿಸದೇ ಮುಚ್ಚಿಡುತ್ತ ಬಂದಿದ್ದ ನನಗೆ, ನನ್ನ ಬರಹಗಳು ಬೇರೆಯವರೂ ಓದುವಂತಿದೆಯೋ ಇಲ್ಲವೋ ಎಂಬುದೇ ದೊಡ್ಡ ಕುತೂಹಲವಾಗಿತ್ತು. ಬಹುಶಃ ನಾನು ಬ್ಲಾಗ್ ಶುರು ಮಾಡಿದ್ದು ಅದನ್ನು ಪರೀಕ್ಷಿಸಲೆಂದೇ ಇರಬೇಕು! ತೀರಾ ಪತ್ರಿಕೆಗಳಿಗೆ ನಾನು ಬರೆದ ಕತೆ-ಕವನ ಕಳುಹಿಸಿ ಅವು ರಿಜೆಕ್ಟ್ ಆಗಿ ವಾಪಸು ಬರುವುದಕ್ಕಿಂತ ಈ ಬ್ಲಾಗಿಂಗು ಸೇಫು ಅನ್ನಿಸಿತು ನನಗೆ. ಇಲ್ಲಿ ಇದನ್ನು ಅಕಸ್ಮಾತಾಗಿ ಯಾರಾದರೂ ಓದಿ ಚೆನ್ನಾಗಿದೆ ಅಂದುಬಿಟ್ಟರೆ ನಾನು ಗೆದ್ದೆ; ಅದಿಲ್ಲದಿದ್ದರೆ ಬೇಸರವಂತೂ ಇಲ್ಲ. ಯಾರೂ ಓದಲೇ ಇಲ್ಲವೇನೋ ಅಂದುಕೊಂಡು ಸುಮ್ಮನಿದ್ದರಾಯಿತು! ಬ್ಲಾಗು, ನನ್ನ ಬರಹಗಳ ಪ್ರಯೋಗಕ್ಕೊಂದು ವೇದಿಕೆಯಾಗಲಿ - ಆದೀತು ಎಂಬುದು ನನ್ನ ಆಶಯವಾಗಿತ್ತು.

ನಾನು ಬ್ಲಾಗಿಂಗ್ ಶುರುಮಾಡುವಾಗ ಇದ್ದ ಕನ್ನಡ ಬ್ಲಾಗುಗಳಲ್ಲಿ ಹೆಚ್ಚಿನವು ಪರ್ಸನಲ್ ಬ್ಲಾಗುಗಳೇ ಆಗಿದ್ದವು. ಕೆಲವರು ಕತೆ-ಕವನ ಬರೆಯುತ್ತಿದ್ದರು. ಇನ್ನುಳಿದಂತೆ ಪ್ರವಾಸ ಕಥನಗಳು, ಲಹರಿಗಳು, ಲಲಿತ ಪ್ರಬಂಧಗಳು, ಹೆಚ್ಚೆಂದರೆ ಯಾವುದೋ ಕಾರ್ಯಕ್ರಮದ ವರದಿ. ಬ್ಲಾಗುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಂತೆ ಬ್ಲಾಗರುಗಳಲ್ಲೇ ಕ್ಲಾಸಿಫಿಕೇಶನ್ನುಗಳು, ಗುಂಪುಗಳು ಪ್ರಾರಂಭವಾದವು. ಬ್ಲಾಗ್ ಜಗತ್ತಿಗೆ ರಾಜಕೀಯ, ಸ್ತ್ರೀವಾದ, ಧೋರಣೆಗಳು, ಎಡಪಂಥ-ಬಲಪಂಥ, ವಿಚಾರವಾದ, ಕಮ್ಯೂನಲಿಸಮ್ಮು, ಟೆರರಿಸಮ್ಮು, ಪಾರ್ನು, ಸೆಲೆಬ್ರಿಟಿಗಳು(!), ಪರಸ್ಪರ ಆರೋಪಗಳು, ಕಚ್ಚಾಟಗಳು, ಪ್ರತಿಕ್ರಿಯಾ ಪ್ರತಿಭಟನೆ -ಇತ್ಯಾದಿ ಸಾಮಾನ್ಯ ಮನುಷ್ಯರಿಗೆ ಅರ್ಥವಾಗದ ಎಲ್ಲಾ ವಿಚಾರಗಳೂ ಕಾಲಿಟ್ಟವು.

ಒಬ್ಬ ಬರೆದ ಒಂದು ಬರಹವನ್ನೇ ಎದುರಿಗಿಟ್ಟುಕೊಂಡು "ಆತ ಇಂಥವ" ಅಂತ ಹಣೆಪಟ್ಟಿ ಕೊಡುವ ಪರಿ ಶುರುವಾಯ್ತು. ಅವನಿಗೊಂದು ವಿರೋಧಿ ಗುಂಪೇ ತಯಾರಾಗಿ ಹೋಗಿದೆಯೇನೋ ಎಂಬಂತೆ ಆತನ ಮುಂದಿನ ಬರಹಗಳಿಗೆಲ್ಲವಕ್ಕೂ ಬೈಗುಳಗಳ ಸುರಿಮಳೆಯೇ ಬೀಳತೊಡಗಿದವು. ಅನಾನಿಮಸ್ ಹೆಸರಿನಲ್ಲಿ, ಬೇರೆಯವರ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಜಾಸ್ತಿಯಾದವು. 'ರೆಸ್ಪಾನ್ಸಿಬಲ್ ಕಮೆಂಟಿಂಗ್'ಅನ್ನು ಕಲಿಯಲು ನಮಗಿನ್ನು ಕಾಲವೇ ಬೇಕೇನೋ ಅಂತ ನಾವು ಆಕಾಶ ನೋಡುವಂತಾಯಿತು. ಸಮಸ್ಯೆಯೆಂದರೆ, ಆವಾಗಿನಿಂದಲೂ ಕತೆ-ಕವನ-ಲಹರಿ ಅಂತ ಬರೆದುಕೊಂಡು ಬಂದಿದ್ದ ನನ್ನಂಥವರಿಗೆ, ಎಲ್ಲೋ ಆಫೀಸಿನ ಬಿಡುವಿನ ವೇಳೆಯಲ್ಲಿ ರಿಲಾಕ್ಸ್ ಆಗೋಣ ಅಂತ ಬ್ಲಾಗ್‍ಗಳ ಕಡೆಗೆ ಕಣ್ಣು ಹಾಯಿಸಿದರೆ, ಬರೀ ಇಂತಹ ಸೀರಿಯಸ್ಸಾದ ಚರ್ಚೆಗಳೋ, ಚರ್ಚೆಯಾಗಿ ಉಳಿದಿರದ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳೇ ಕಣ್ಣಿಗೆ ಬೀಳತೊಡಗಿ -ಛೇ, ಇದೇನಪ್ಪಾ ಆಗಿಹೋಯ್ತು ಕನ್ನಡ ಬ್ಲಾಗಿಂಗ್ ಪರಿಸ್ಥಿತಿ ಅಂತ ಬೇಸರ ಪಟ್ಟುಕೊಳ್ಳುವಂತಾಯ್ತು.

ಇರಲಿ, ಯಾವುದೇ ಮಾಧ್ಯಮದಲ್ಲಿ ಆಗುವಂತೆ ಇವೂ ಸಹ ಬ್ಲಾಗ್ ಮಾಧ್ಯಮದಲ್ಲಿ ಕನ್ನಡ ಬೆಳೆಯುತ್ತಿರುವ ಲಕ್ಷಣಗಳು ಅಂತ ಸಧ್ಯ ನಾನಂತೂ ಸಮಾಧಾನ ಮಾಡಿಕೊಂಡಿದ್ದೇನೆ.

ಇತ್ತೀಚೆಗೆ ಪ್ರತಿಕ್ರಿಯೆಗಳಿಗಾಗಿ ದಾಹ ಪಡುವ, ಒತ್ತಡ ಹೇರುವ ಬ್ಲಾಗರುಗಳು ಒಂದು ದೊಡ್ಡ ತಲೆನೋವಾಗಿದ್ದಾರೆ. ಬ್ಲಾಗರ್-ಬ್ಲಾಗರುಗಳ ನಡುವೆಯೇ ವೈಮನಸ್ಸುಗಳು ಉಂಟಾಗಿವೆ. ಬ್ಲಾಗರುಗಳಿಗಾಗಿ ಕಮ್ಯೂನಿಟಿಗಳಾಗಿವೆ, ಪರಸ್ಪರ ಪರಿಚಯಕ್ಕೆ-ಸ್ನೇಹಕ್ಕೆ ವೇದಿಕೆಗಳಾಗಿವೆ. ನನ್ನ ಗೂಗಲ್ ರೀಡರಿನಲ್ಲಿಯೇ ಹೆಚ್ಚುಕಮ್ಮಿ ಆರುನೂರು ಕನ್ನಡ ಬ್ಲಾಗುಗಳ ಫೀಡ್ ಇದೆ. ಇಪ್ಪತ್ತು ದಿನಗಳ ರಜೆಯಿಂದ ಮೊನ್ನೆ ವಾಪಸು ಬಂದು ನೋಡಿದರೆ ೧೦೦೦+ ಅಪ್‍ಡೇಟ್‍ಗಳನ್ನು ತೋರಿಸುತ್ತಿದೆ ರೀಡರ್! ಯಾವಾಗ ಓದಿ ಮುಗಿಸುತ್ತೇನೋ?

ಅವೆಲ್ಲ ಏನೇ ಇದ್ದರೂ, ಮುಂಬಯಿಯಲ್ಲಿ ಭಯೋತ್ಪಾದಕರ ದಾಳಿಯಾದಾಗ ಒಬ್ಬ ಬ್ಲಾಗರ್ ನೀಡಿದ ಕರೆಗೆ ಸ್ಪಂದಿಸಿ ನಾವು ಎಷ್ಟೊಂದು ಬ್ಲಾಗರುಗಳು ನಮ್ಮ ಬ್ಲಾಗುಗಳ ಹಣೆಗೆ ಕಪ್ಪುಪಟ್ಟಿ ಹಚ್ಚಿಕೊಂಡಿದ್ದು; ಯಾರದೋ ಬ್ಲಾಗಿನ ಹುಟ್ಟುಹಬ್ಬ ಎಂದರೆ ಅಲ್ಲಿ ಹೋಗಿ ಅವರಿಗೆ ಶುಭಾಶಯ ಹೇಳುವುದು; ಒಬ್ಬರ ಬ್ಲಾಗ್ ಮೆಚ್ಚಿ ಮತ್ತೊಬ್ಬರು ಬರೆಯುವುದು; ಕಮ್ಯೂನಿಟಿಗಳಲ್ಲಿ ಬ್ಲಾಗರುಗಳು ಪರಸ್ಪರ ಸ್ನೇಹ ಬಯಸಿ ರಿಕ್ವೆಸ್ಟ್ ಕಳುಹಿಸುವುದು -ಎಲ್ಲಾ ಖುಶಿ ಪಡಬೇಕಾದ ವಿಷಯಗಳೇ. ಎಷ್ಟೊಂದು ಬ್ಲಾಗರುಗಳು ಪೋಸ್ಟಿನಿಂದ ಪೋಸ್ಟಿಗೆ ಪಕ್ವವಾಗುತ್ತ ಹೋಗಿರುವುದು ನಮ್ಮ ಕಣ್ಮುಂದಿದೆ. ಯಾವಾಗ ಮುಂದಿನ ಪೋಸ್ಟು ಅಂತ ಕಾಯುವಂತೆ ಮಾಡುವ ಬಹಳಷ್ಟು ಬ್ಲಾಗರ್ ಗೆಳೆಯ-ಗೆಳತಿಯರು ನಮ್ಮೊಂದಿಗಿದ್ದಾರೆ. ಈಗೀಗ ಬ್ಲಾಗುಗಳು ಇವೆಂಟ್ ನೋಟಿಫಿಕೇಶನ್‍ನಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಪರಿಸರ, ಸಮಾಜ, ಪುಸ್ತಕ, ಸಂಗೀತ, ಸಿನೆಮಾಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಬ್ಲಾಗುಗಳು ಶುರುವಾಗಿವೆ. ಅನೇಕ ಹಿರಿಯರು ಉತ್ಸಾಹದಿಂದ ಬ್ಲಾಗಿಸುತ್ತಿದ್ದಾರೆ. ಸುಮಾರು ಬ್ಲಾಗರುಗಳು ಬ್ಲಾಗ್ ಮುಚ್ಚುತ್ತಿದ್ದೇನೆ, ಅಲ್ಪವಿರಾಮ, ಪೂರ್ಣವಿರಾಮ ಅಂತೆಲ್ಲ ಹೇಳಿಕೆ ಕೊಟ್ಟೂ ನಂತರ ಮತ್ತೆ ಬರೆಯಲು ಶುರು ಮಾಡಿದ್ದಾರೆ.. ಹಾಗೇ ಇದು: ಬಿಟ್ಟೇನೆಂದರೂ ಬಿಡದೀ ಮಾಯೆ!

ಬಹುಶಃ ಬ್ಲಾಗಿಂಗಿನ ದೊಡ್ಡ ಲಾಭವೆಂದರೆ ಇದು ನಮ್ಮ ಪ್ರತಿಭೆಗೆ ಕಲ್ಪಿಸಿಕೊಡುವ ವೇದಿಕೆ, ಆ ಪ್ರತಿಭೆಯನ್ನು ಮುಂದುವರೆಸಲು ಸಿಗುವ ಪ್ರೋತ್ಸಾಹ, ತಿದ್ದಿಕೊಳ್ಳಲು ಅವಕಾಶಗಳು, ಗಳಿಸಿಕೊಡುವ 'ಐಡೆಂಟಿಟಿ' ಮತ್ತು ಸಂಪಾದಿಸಿಕೊಡುವ ಹೊಸ ಸ್ನೇಹಗಳು. ಅದು ದುರುಪಯೋಗವಾಗದಂತೆ ಕಾಯ್ದುಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮೂರು ವರ್ಷಗಳಿಂದ ಕನ್ನಡ ಬ್ಲಾಗಿಂಗನ್ನು ಶ್ರದ್ಧೆಯಿಂದಲೇ ಗಮನಿಸಿಕೊಂಡು ಬರುತ್ತಿರುವ ಒಬ್ಬ ಬ್ಲಾಗರ್ ಆಗಿ ನಾನು ಇಷ್ಟೆಲ್ಲ ಬರೆಯಬೇಕಾಯ್ತು ಅಷ್ಟೇ.

ಒಂದೊಂದೇ ಹುಲ್ಲುಕಡ್ಡಿ ಸೇರಿಸುತ್ತ ನಾವೇ ಕಟ್ಟಿಕೊಂಡಿರುವ ಗುಬ್ಬಚ್ಚಿ ಗೂಡು ಇದು.. ಇಲ್ಲಿ ಕಚ್ಚಾಟಗಳು ಬೇಡ. ಪರಸ್ಪರ ಪ್ರೀತಿಯಿಂದ ಇರೋಣ. ಗುಬ್ಬಚ್ಚಿ ಗೂಡಿನಿಂದ ಹೊರಬೀಳುವ ಚಿಲಿಪಿಲಿ ಕಲರವ ಕೇಳುಗರ ಕಿವಿಗೆ ಇಂಪಾಗಿರಲಿ; ನಮ್ಮ ವರ್ತನೆ ನೋಡುಗರ ಕಣ್ಣಿಗೆ ತಂಪಾಗಿರಲಿ.

ಈ ಮೂರು ವರ್ಷದ ಹಾದಿಯಲ್ಲಿ ಸಿಕ್ಕ ಎಲ್ಲರಿಗೂ ನನ್ನ ಧನ್ಯವಾದ. ಪಯಣ ಮುಂದುವರೆಯುತ್ತದೆ. ಹ್ಯಾಪಿ ಬ್ಲಾಗಿಂಗ್. ಲವ್ಯೂ ಆಲ್!

Wednesday, April 15, 2009

ಮೀಸೆ ತೆಗೆದಾಗ..

ನನ್ನ ಮಹತ್ವದ ಯೋಜನೆಗಳಲ್ಲಿ ಇಂಥವು ಬಹಳ: ಹೇಗಾದರೂ ಮಾಡಿ, ಇನ್ನು ಯಾರೂ ‘ಕಡ್ಡಿ ಫೈಲ್ವಾನ್’ ಅಂತ ಕರೆಯದ ಹಾಗೆ ದಪ್‍ಪ್‍ಪ್ಪ ಆಗಬೇಕು (ಚಿಕನ್ ತಿನ್ನು, ಪ್ರತಿದಿನ ಒಂದೇ ಒಂದು ಪಿಂಟ್ ಬಿಯರ್ ಕುಡಿ -ಗೆಳೆಯರ ಸಲಹೆಗಳು). ಈ ತಿಂಗಳ ಒಂದನೇ ತಾರೀಖಿನಿಂದ ಜಿಮ್ಮಿಗೆ ಸೇರಿಕೊಂಡು ಬಿಡಬೇಕು (ಸುಮಾರು ಒಂದನೇ ತಾರೀಖುಗಳು ಕಳೆದುಹೋಗಿವೆ). ಇಷ್ಟರೊಳಗೆ ಯಾರಿಂದಲೂ ಕಂಡುಹಿಡಿಯಲಾಗದ ವಸ್ತುವೊಂದನ್ನು ಕಂಡುಹಿಡಿಯಬೇಕು (ಬಚಾವ್, ನಾನು ವಿಜ್ಞಾನಿಯಲ್ಲ). ಒಂದು ದಿನ, ಯಾರೆಂದರೆ ಯಾರಿಗೂ ಹೇಳದೇ, ಸಿಕ್ಕಿದ ಟ್ರೈನ್ ಹತ್ತಿ, ಗೊತ್ತೇ ಇಲ್ಲದ ಊರಿಗೆ ಹೋಗಿಬಿಡಬೇಕು. ಒಂದು ತಿಂಗಳು ಅಲ್ಲಿ ಭೂಗತನಾಗಿದ್ದು ವಾಪಸು ಬರಬೇಕು (ಇದನ್ನು ಮಾತ್ರ ಮಾಡಿಯೇ ತೀರುವವನಿದ್ದೇನೆ!).

ಇವುಗಳ ಸಾಲಿಗೇ ಸೇರುವ ನನ್ನ ಮತ್ತೊಂದು ಯೋಜನೆ ಎಂದರೆ, ‘ಒಮ್ಮೆ ಮೀಸೆ ಬೋಳಿಸಿ ನೋಡಬೇಕು’ ಎಂಬುದು! ನೀವು ಕೇಳಬಹುದು, ‘ಮೀಸೆ ತೆಗೆಯುವುದು ಅಂತಹ ಮಹತ್ವದ ಯೋಜನೆ ಹೇಗೆ? ಅದೇನು ಹಿಮಾಲಯ ಹತ್ತಿಳಿಯೋ ಹಾಗಾ?’ ಎಂದು. ನನ್ನ ಪ್ರಕಾರ ಅದು ಮಹತ್ವದ ಯೋಜನೆಯೇ. ಏಕೆಂದರೆ, ನನಗೆ ಬೋಳಿಸಬೇಕೆಂದಿರುವುದು ನನ್ನದೇ ಮೀಸೆ! (೧) ನೀವು ಯಾವಾಗಲೂ ಮೀಸೆ ತೆಗೆದಿರುವವರೇ ಆಗಿದ್ದರೆ ಅಥವಾ (೨) ನೀವು ಪದೇ ಪದೇ ಮೀಸೆ ತೆಗೆದು-ಮತ್ತೆ ಬಿಟ್ಟು-ಮತ್ತೆ ತೆಗೆದು -ನಿಮ್ಮ ಮುಖವನ್ನು ಫ್ರೆಂಚು, ಗಡ್ಡ, ಲಾಕು ಅಂತೆಲ್ಲ ಪ್ರಯೋಗಗಳಿಗೆ ಒಳಪಡಿಸುವ ಗುಂಪಿಗೆ ಸೇರಿದವರಾದರೆ ಅಥವಾ (೩) ನೀವು ಇನ್ನೂ ಮೀಸೆಯೇ ಬಂದಿಲ್ಲದ ಎಳೆಯ ಹುಡುಗನಾಗಿದ್ದರೆ ಅಥವಾ (೪) ನೀವು ಹೆಂಗಸಾಗಿದ್ದರೆ -ನಾನೀಗ ಹೇಳುತ್ತಿರುವುದು ಸರಿಯಾಗಿ ಅರ್ಥವಾಗದೇ ಹೋಗಬಹುದು. ಅಥವಾ ತಮಾಷೆ ಅನ್ನಿಸಬಹುದು. ಆದರೆ ನೀವು ‘ಮೀಸೆ ತೆಗೆದರೆ ನಾನು ಹೇಗೆ ಕಾಣುತ್ತೇನೋ’ ಎಂಬ ಭಯ ಇರುವ ನನ್ನಂಥವರ ಗುಂಪಿಗೆ ಸೇರಿದವರಾದರೆ ನನ್ನ ಕಷ್ಟ ನಿಮಗೆ ಅರ್ಥವಾಗುತ್ತದೆ.

ನನಗೆ ನನ್ನ ಮೂಗಿನ ಕೆಳಗೆ ಯಾವಾಗ ಈ ಕಪ್ಪು ಕೂದಲುಗಳು ಮೂಡಿದವೆಂಬ ದಿನಾಂಕ ನೆನಪಿಲ್ಲ. ನಮ್ಮ ಎಸ್ಸೆಸ್ಸೆಲ್ಸಿ ಬ್ಯಾಚಿನ ಗ್ರೂಪ್ ಫೋಟೋದಲ್ಲಿ ಹೌದೋ ಇಲ್ಲವೋ ಎಂಬಂತೆ ಕಾಣುವ ಇದು, ಕಾಲೇಜ್ ಗ್ರೂಪ್ ಫೋಟೋದಲ್ಲಿ ಸ್ವಲ್ಪ ಢಾಳಾಗೇ ಕಾಣುತ್ತೆ. ಬಹುಶಃ ನಾನು ಹೈಸ್ಕೂಲಿನ ಡೆಸ್ಕಿನ ಮೇಲೆ ಕೈವಾರದಿಂದ ಚಿತ್ರ ಕೊರೆಯುತ್ತಿದ್ದಾಗಲೇ ನನ್ನ ಮೇಲ್ದುಟಿಗಳ ಮೇಲೆ ಶುರುವಾದ ಈ ಶ್ಮಶ್ರುಬೆಳೆ, ಹಾಗೇ ಅವ್ಯಾಹತವಾಗಿ ಮುಂದುವರೆದು ಕಾಲೇಜಿನ ರಿಸಲ್ಟ್ ನೋಡಲು ಹೋಗುವ ವೇಳೆಗೆ ಕಟಾವಿಗೆ ಬಂದಿರಬೇಕು. ಅದಕ್ಕೇ ಮತ್ತೆ, ರಿಸಲ್ಟ್ ನೋಡಿ ವಾಪಸ್ ಬರುತ್ತಿದ್ದಾಗ ಸಿಕ್ಕ ಸದಾಶಿವನೆಂಬ ಹೈಸ್ಕೂಲು ಗೆಳೆಯ ನನ್ನನ್ನು ನಿಲ್ಲಿಸಿ ‘ಓಹ್, ಸುಶ್ರುತ ಅಲ್ಲೇ ನೀನು? ಗುರ್ತೇ ಸಿಕ್ಕದಿಲ್ಲಲಾ ಮಾರಾಯಾ! ಆವಾಗ ಸಣ್ಣಕ್ ಇದ್ದೆ; ಈಗ ಮೀಸೆ-ಗೀಸೆ ಬಂದು ಒಳ್ಳೇ ದೊಡ್ ಗಂಡ್ಸಿನ್ ಹಂಗೆ ಕಾಣ್ತಿದೀಯಾ’ ಅಂದದ್ದು!

ಮತ್ತು ಅವತ್ತೇ ನಾನು ಯಾರಿಗೂ ಕಾಣದಂತೆ ಅಪ್ಪನ ರೇಸರ್ ಸೆಟ್ಟಿನ ಜೊತೆಗಿದ್ದ ಪುಟ್ಟ ಕತ್ತರಿಯಿಂದ ಹಾಗೆ ಉದ್ದುದ್ದ ಬೆಳೆದಿದ್ದ ಮೀಸೆಯ ಕೂದಲುಗಳನ್ನು ಕತ್ತರಿಸಿ ‘ಟ್ರಿಮ್’ ಮಾಡಿಕೊಂಡದ್ದು! ಅಪ್ಪನಿಗೆ ಗೊತ್ತಾದರೂ ಸುಮ್ಮನಿದ್ದದ್ದು!

ಅದೆಲ್ಲಾ ಇರಲಿ, ಒಂದಂತೂ ಸತ್ಯ: ನನಗೆ ಬರಬೇಕಿದ್ದ ಕಾಲಕ್ಕೆ ಮೀಸೆ ಬಂದಿತ್ತು. ಕನ್ನಡಿ ನೋಡಿಕೊಂಡಾಗಲೆಲ್ಲ ‘ನೀನು ಗಂಡಸು ಕಣೋ’ ಅಂತ ಹೇಳುತ್ತಿತ್ತು. ಮತ್ತೆ, ಆವಾಗ ‘ಹವ್ಯಕ ಬ್ರಾಹ್ಮಣರಲ್ಲಿ ವಧುಗಳ ಕೊರತೆ’ ಇನ್ನೂ ಶುರುವಾಗಿರದಿದ್ದರಿಂದಲೋ ಏನೋ, ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ ಎಂಬ ಕಾಶಿನಾಥನ ಚಿತ್ರಗೀತೆ ನನ್ನ ಗುನುಗುಗಳಲ್ಲೊಂದಾಗಿತ್ತು.

ನಾನು ನೀವಿದ್ದಕ್ಕೇ ಖುಶಿಯಾಯ್ತೋ ಎಂಬಂತೆ ಮೀಸೆ ಬೆಳೆಯುತ್ತಾ ಹೋಯ್ತು. ಬೆಂಗಳೂರಿನಲ್ಲಿ ವಿವಿಧ ರೀತಿಯ ಮೀಸೆ ಬಿಟ್ಟವರೆಲ್ಲ ಕಾಣುತ್ತಿದ್ದರು. ರಾಜ್‌ಕುಮಾರ್ ಥರ ಸಣ್ಣಮೀಸೆ, ವೀರಪ್ಪನ್ ಥರ ಹುರಿಮೀಸೆ, ಚಾಪ್ಲಿನ್ ಥರ ಪುಟ್ಟ ಮೀಸೆ (ಪ್ಲೀಸ್, ಉದಾಹರಣೆಗಾಗಿ ಹೇಳಿದ್ದು ಅಷ್ಟೇ), ಹಾಗೇ ಚೂಪುಮೀಸೆ, ಚುಪುರುಮೀಸೆ, ಬಿಲ್ಲಿನಂತಹ ಮೀಸೆ, ಇನ್ನೂ ಏನೇನೋ. ಆದರೆ ಇವರೆಲ್ಲರಿಗಿಂತ ನನಗೆ ಈ ಮೀಸೆ ತೆಗೆದವರೇ ಗ್ರೇಟ್ ಗಂಡಸರಂತೆ ಕಾಣುತ್ತಿದ್ದರು. ಅವರಂತೆ ನಾನೂ ಒಮ್ಮೆ ಮೀಸೆಯನ್ನು ಪೂರ್ತಿಯಾಗಿ ತೆಗೆದು ನೋಡಬೇಕು ಅಂತ ಅನ್ನಿಸುತ್ತಿತ್ತು. ಆದರೆ ಧೈರ್ಯ ಸಾಲುತ್ತಿರಲಿಲ್ಲ.

ನನ್ನ ಹಳೆಯ ಆಫೀಸಿನ ಕಲೀಗು ವಿಕ್ರಮ್, ನಾನು ಜಾಬ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗದೇ ಇರುತ್ತಿದ್ದುದಕ್ಕೆ ಕಾರಣ ನನ್ನ ಮೀಸೆಯೇ ಅಂತ ವಾದಿಸುತ್ತಿದ್ದ. ಅವನ ಪ್ರಕಾರ ಮೀಸೆಯಿದ್ದವರು ಇನ್ನೂ ‘ಪ್ರೌಢತ್ವ ಪ್ರಾಪ್ತವಾಗದವರು’. ಮೀಸೆ ತೆಗೆದರೂ ಗಂಡಸಿನ ಹಾಗೆ ಕಾಣಿಸುವವನೇ ನಿಜವಾದ ಗಂಡಸು ಎಂಬುದವನ ತರ್ಕವಾಗಿತ್ತು. "ನೀವು ಒಮ್ಮೆ ಮೀಸೆ ತೆಗ್ದು ನೋಡಿ ಸುಶ್ರುತ್.. ಆಗ ಮುಖದಲ್ಲಿ ಸೀರಿಯಸ್‌ನೆಸ್ ಬರುತ್ತೆ. ಹ್ಯಾಗೆ ಪಟ್ಟಂತ ಸೆಲೆಕ್ಟ್ ಆಗ್ತೀರೋ ನೋಡಿ ಜಾಬ್‌ಗೆ!" ಅಂದಿದ್ದ ವಿಕ್ರಮ್.

ಆದರೆ ಮೀಸೆ ತೆಗೆದುಬಿಟ್ಟರೆ ನಾನೆಲ್ಲಿ ಹುಡುಗಿ ಥರ ಕಾಣ್ತೀನೋ ಎಂಬುದು ನನ್ನ ಭಯ. ಕನ್ನಡಿ ಮುಂದೆ ನಿಂತಾಗ ನನ್ನ ತೋರುಬೆರಳುಗಳಿಂದ ಮೀಸೆ ಮುಚ್ಚಿಕೊಂಡು ನಾನು ಮೀಸೆ ತೆಗೆದಾಗ ಹೇಗೆ ಕಾಣಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಕಲ್ಪನೆಯೇ ಸರಿಯಾಗಿ ಆಗುತ್ತಿರಲಿಲ್ಲ. ಕೊನೆಗೆ ಫೋಟೋಶಾಪಿನಲ್ಲಿ ನನ್ನ ಫೋಟೋದ ಮೀಸೆ ಅಳಿಸಿ ನೋಡಿದೆ. ಆಗ ಅದೊಂಥರಾ ಪ್ರೇತದ ಹಾಗೆ ಕಂಡಿತು. ನೋಡಿದ ನನ್ನ ಕಲೀಗುಗಳು ನಗಾಡಿಬಿಟ್ಟರು. ಇದರ ಸಹವಾಸವೇ ಬೇಡ ಅಂತ ಸುಮ್ಮನಾಗಿಬಿಟ್ಟೆ.

ಮೊನ್ನೆ ನನ್ನ ರೂಮ್‌ಮೇಟು ಊರಿಗೆ ಹೋಗಿದ್ದ ಭಾನುವಾರ ನಾನೊಬ್ಬನೇ ಮನೆಯಲ್ಲಿದ್ದೆ. ಮಾಡಲಿಕ್ಕೇನೂ ಕೆಲಸವಿರಲಿಲ್ಲ, ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಸ್ನಾನಕ್ಕೆ ಹೊರಟವನಿಗೆ ಕನ್ನಡಿ ಕಂಡಿದ್ದೇ ಅಪಶಕುನವಾಗಿಹೋಯಿತು. ಈ ಕನ್ನಡಿ ದಾಡಿ ಮಾಡದ ನನ್ನ ಮುಖವನ್ನು ಪ್ರಾಮಾಣಿಕವಾಗಿ ಹಾಗೇ ತೊರಿಸಿಬಿಟ್ಟಿತು. ತಕ್ಷಣ ‘ಓಹ್, ಶೇವಿಂಗ್ ಮಾಡ್ಕೋಬೇಕು’ ಎಂಬುದು ಹೊಳೆದುಬಿಟ್ಟಿತು. ಸರಿ, ಮುಖದ ತುಂಬ ಕ್ರೀಮ್ ಹಚ್ಚಿಕೊಂಡು, ‘ಜಿಲೆಟ್ಟಿ ಸಖತ್ತಾಗಿ ಬರುತ್ತೆ’ ಅಂದಿದ್ದ ಗೆಳೆಯನ ಮಾತು ಕೇಳಿ ತಂದುಕೊಂಡಿದ್ದ ರೇಸರಿನಿಂದ ಶೇವ್ ಮಾಡಿಕೊಳ್ಳತೊಡಗಿದೆ. ಈ ಏರ್?ಟೆಲ್ ಕಂಪನಿಯವರಿಗೆ ಭಾನುವಾರವೂ ರಜೆ ಇಲ್ಲವೋ ಅಥವಾ ಉಪೇಂದ್ರ ಮಾತಾಡಿದ ಕಾಲರ್‌ಟ್ಯೂನನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವವರೆಗೆ ನಿದ್ದೆ ಮಾಡುವುದಿಲ್ಲ ಅಂತ ಹರಕೆ ಹೊತ್ತುಕೊಂಡಿದ್ದಾರೋ ಏನೋ, ಸರಿಯಾಗಿ ನನ್ನ ರೇಸರ್ ಕಪಾಳದಿಂದ ಕೆಳಕ್ಕಿಳಿಯುತ್ತಿದ್ದಾಗ ರಿಂಗ್ ಮಾಡಿದರು. ಅದ್ಯಾವಾಗ ಆ ಪರಿ ಹೈ ವಾಲ್ಯೂಮಿನಲ್ಲಿಟ್ಟುಕೊಂಡಿದ್ದೆನೋ ಏನೋ, ಒಳ್ಳೇ ಅಕ್ಕಚ್ಚಿಗೆ ಕೊಡದ ಜರ್ಸಿ ದನದ ಥರ ಕೂಗಿಕೊಂಡಿತು ನನ್ನ ಮೊಬೈಲು. ಬೆಚ್ಚಿಬಿದ್ದವನಂತೆ ತಿರುಗಿ ನೋಡಿದೆ, ಓಡಿ ಹೋಗಿ ಟೀಪಾಯಿಯ ಮೇಲಿದ್ದ ಮೊಬೈಲನ್ನು ಕ್ರೀಮ್ ಹತ್ತದಂತೆ ಹುಷಾರಾಗಿ ಕಿವಿಗಿಟ್ಟುಕೊಂಡೆ, ಉಪ್ಪಿ ಶುರುಮಾಡುತ್ತಿದ್ದಂತೆಯೇ ‘ಥೂ, ಈ ಏರ್‌ಟೆಲ್ ಮನೆ ಹಾಳಾಗ!’ ಅಂತ ಬೈದುಕೊಂಡು ಕಟ್ ಮಾಡಿದೆ, ತಿರುಗಿ ಬಂದು ಕನ್ನಡಿಯೆದುರು ನಿಂತೆ. ಜಿಲೆಟ್ಟಿ ಒಂದು ಮಹತ್ಕಾರ್ಯ ಮಾಡಿತ್ತು.

ನನಗೆ ಅದುವರೆಗೆ ಕಲ್ಪನೆಯೇ ಇರಲಿಲ್ಲ: ಈ ಜಿಲೆಟ್ಟಿ, ಮೊಬೈಲು, ಉಪೇಂದ್ರ, ಏರ್‌ಟೆಲ್ಲು, ಕನ್ನಡಿ ಎಲ್ಲರಿಗೂ ನನ್ನ ಮೀಸೆಯ ಮೇಲೆ ಅದೆಂತಹ ಹೊಟ್ಟೆಕಿಚ್ಚಿತ್ತು ಅಂತ. ಅಷ್ಟು ವರ್ಷಗಳಿಂದ ಒಬ್ಬ ಮುತ್ತೈದೆ ಹಣೆಯ ಕುಂಕುಮವನ್ನು ಜೋಪಾನವಾಗಿ ಕಾಯ್ದುಕೊಂಡು ಬರುವಂತೆ ನಿಗಾ ವಹಿಸಿಕೊಂಡು ಬಂದಿದ್ದ ನನ್ನ ಮೀಸೆಯ ಬಲಭಾಗವನ್ನು ಜಿಲೆಟ್ಟಿ ಕ್ಷಣದಲ್ಲಿ ಸವರಿಹಾಕಿತ್ತು! ಕರೆಂಟ್ ಹೊಡೆದವನಂತೆ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿ ನೋಡಿಕೊಂಡೆ. ನನ್ನ ಪ್ರತಿಬಿಂಬವೂ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿತೇ ಹೊರತು ಮೀಸೆಯ ಸವರಿದ ಜಾಗದಲ್ಲಿ ಏನೂ ಬದಲಾವಣೆ ಆಗಲಿಲ್ಲ. ನನಗೆ ಸಿ‌ಇಟಿ ಫೇಲಾದಷ್ಟು ಬೇಸರವಾಗಿ ಕುಸಿದು ಕುಳಿತೆ.

ಸಿನಿಮಾಗಳಲ್ಲಿ ಇಂತಹ ಪ್ರಕರಣ ನಡೆದದ್ದು ನೋಡಿ ಗೊತ್ತಿತ್ತೇ ಹೊರತು ನನಗೆ ಇಷ್ಟು ಹತ್ತಿರದಲ್ಲಿ ದುರ್ಘಟನೆಯೊಂದು ಸಂಭವಿಸಿದಾಗ ಏನು ಮಾಡಬೇಕೆಂದೂ ಗೊತ್ತಿರಲಿಲ್ಲ. ಮೀಸೆಯೆಂದರೆ ಮುಖದ ಮೇಲಿನ ಕಪ್ಪು ಕಾಮನಬಿಲ್ಲಿನಂತೆ. ಅದಿದ್ದರೇನೇ ಗಂಡಸಿನ ಮುಖಕ್ಕೊಂದು ಲಕ್ಷಣ. ಅದೇ ಇಲ್ಲದಿದ್ದರೆ?

ಪಾರ್ಶ್ವವಾಯು ಹೊಡೆದವನಂತೆ ಕೂತಿದ್ದ ನನ್ನನ್ನು ಕರೆದೊಯ್ಯಲು ಯಾವ ಆಂಬುಲೆನ್ಸೂ ಬರುವ ಲಕ್ಷಣ ಕಾಣಲಿಲ್ಲ. ಒಂದೆರಡು ಹನಿ ಕಣ್ಣೀರಾದರೂ ಉದುರಿಸೋಣವೆಂದುಕೊಂಡವನು ಸೀನ್ ಸ್ವಲ್ಪ ಜಾಸ್ತಿ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. ಅರ್ಧ ಭಾಗ ಮಾತ್ರ ಉಳಿದಿದ್ದ ನನ್ನ ಮೀಸೆಯನ್ನು ಮತ್ತೊಮ್ಮೆ ಕಣ್ತುಂಬ ನೋಡಿಕೊಂಡೆ. ಜಿಲೆಟ್ಟಿಗೆ ಬಲಿಯ ಜೀವ ಪೂರ್ತಿ ತೆಗೆದುಕೊಳ್ಳುವಂತೆ ಸೂಚಿಸಿದೆ.

ಸ್ನಾನ ಮಾಡಿ ಹೊರಬರುವಾಗ ‘ಸಧ್ಯ, ಇವತ್ತು ರೂಮ್‌ಮೇಟ್ ಮನೇಲಿಲ್ಲ’ ಅಂತ ನಿಟ್ಟುಸಿರು ಬಿಟ್ಟೆ. ಒಬ್ಬನೇ ಇದ್ದಾಗ ಅವಮಾನವಾಗುವುದಕ್ಕೂ ನಾಲ್ಕು ಜನರ ಎದುರಿಗೇ ಆಗುವುದಕ್ಕೂ ವ್ಯತ್ಯಾಸವಿರುತ್ತದೆ. ಅವನಿದ್ದಿದ್ದರೆ ನನ್ನ ಶೇವಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಉಗಿಯುತ್ತಿದ್ದ. ಈಗಾದರೆ ಹಾಗಲ್ಲ; ನಾನು ಮನುಷ್ಯಲೋಕವನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧನಾಗಲಿಕ್ಕೆ ಸಮಯವಿದೆ. ಹಾಗಂದುಕೊಂಡು, ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತೆ. ಜಗತ್ತಿನ ಪೆಕರರ ಸಂಘದ ಅಧ್ಯಕ್ಷನೇ ನಾನಿರಬೇಕು ಅನ್ನಿಸಿತು. ಸಾವರಿಸಿಕೊಂಡೆ. ಸಮಾಧಾನ ಮಾಡಿಕೊಂಡೆ. ಒಂದಲ್ಲಾ ಒಂದು ದಿನ ಮೀಸೆ ತೆಗೆದು ನೋಡಬೇಕು ಅಂದುಕೊಂಡಿದ್ದ ನನ್ನ ಯೋಜನೆಯಂತೂ ಈಡೇರಿದೆ, ಇನ್ನು ಯಾರು ಏನೇ ಅಂದರೂ ಶಾಂತಚಿತ್ತದಿಂದ ಸ್ವೀಕರಿಸಬೇಕು ಅಂತ ತೀರ್ಮಾನಿಸಿದೆ. ನನಗೆ ನಾನೇ ‘ಬಾಲಿವುಡ್ ಹೀರೋ ಹಾಗೆ ಕಾಣ್ತಿದೀಯಾ ಬಿಡು’ ಅಂತ ಬೆನ್ತಟ್ಟಿಕೊಂಡೆ.

ದಿನವೂ ಹೋಗುವ ಹೋಟೆಲ್ಲಿಗೆ ಹೋಗಲು ಭಯವಾಗಿ ಹೊಸ ಹೋಟೆಲ್ಲಿಗೆ ಹೋದೆ. ಆದರೂ ಕ್ಯಾಶಿಯರ್ರಿನಿಂದ ಹಿಡಿದು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಆವತ್ತು ಯಾವ ಗೆಳೆಯರನ್ನೂ ಕಾಣಲು ಹೋಗಲಿಲ್ಲ. ಮರುದಿನ ಆಫೀಸಿಗೆ ಹಿಂಜರಿಯುತ್ತಲೇ ಹೋದೆ. ಕಲೀಗುಗಳ ಹೋ ನಗು. "ಗರ್ಲ್ ಫ್ರೆಂಡ್ ಚುಚ್ಚುತ್ತೆ ಅಂದ್ಲೇನ್ರೀ?"ಯಿಂದ "ಯಕ್ಷಗಾನದಲ್ಲಿ ಸ್ತ್ರೀಪಾತ್ರ ಮಾಡೋಕೆ ಹೋಗಿದ್ಯಾ?" ತನಕ ಪ್ರತಿಕ್ರಿಯೆಗಳು, ಹೀಯಾಳಿಕೆಗಳು, ಕಾಲೆಳೆಯುವಿಕೆಗಳು. ಅಷ್ಟು ದಿನ ಒಂದೂ ಮಾತಾಡದ ಕಲೀಗೊಬ್ಬಳು "ಐ ಲೈಕ್ ಗಯ್ಸ್ ವಿಥ್ ಮಸ್ಟಾಕ್" ಎಂದುಬಿಟ್ಟಳು. ಆದರೂ ‘ನೆನಪಿಗಿರಲಿ’ ಅಂತ ಒಂದೆರಡು ಫೋಟೋ ನಾನೇ ತೆಗೆದುಕೊಂಡೆ. ಧೈರ್ಯ ಮಾಡಿ ಆರ್ಕುಟ್ಟಿಗೂ ಹಾಕಿದೆ. ಕೆಲವರು ‘ಹಾರಿಬಲ್’ ಅಂದರು, ಕೆಲವರು ‘ಮದುವೆ ಯಾವಾಗ?’ ಕೇಳಿದರು, ಇನ್ನು ಕೆಲವರು ‘ಕೆಟ್ಟದಾಗಿ ಕಾಣ್ತೀಯ. ತಕ್ಷಣ ಛೇಂಜ್ ಮಾಡ್ದಿದ್ರೆ ಒದೆ ತಿಂತೀಯ’ ಅಂತ ಬೆದರಿಕೆ ಹಾಕಿದರು. ರೂಮ್‌ಮೇಟು ತಾನಿಲ್ಲದಾಗ ಇಂತಹ ಅಚಾತುರ್ಯವೊಂದು ಘಟಿಸಿದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ. ಮೊನ್ನೆ ಮೇಫ್ಲವರಿಗೆ ಹೋಗಿದ್ದಾಗ ಮೋಹನ್ ಸರ್ ಕೈಕುಲುಕಿ ‘ಬೇಗ ಮೀಸೆ ಬರ್ಲಿ’ ಅಂತ ಹಾರೈಸಿಬಿಟ್ಟರು!

ಕಳೆದುಕೊಂಡಾಗಲೇ ಇದ್ದುದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ.. ನನ್ನ ಮೀಸೆ, ಅದು ಇಲ್ಲವಾದಮೇಲೆ ಅದಕ್ಕೆ ಭಾರೀ ಡಿಮಾಂಡ್ ಶುರುವಾಗಿದೆ. ಆದಷ್ಟೂ ಬೇಗ ಬೆಳೆಯಲಪ್ಪಾ ಅಂತ ನಂಬದ ದೇವರಲ್ಲೆಲ್ಲಾ ಪ್ರಾರ್ಥಿಸುತ್ತಿದ್ದೇನೆ. ಮೊರೆ ಕೇಳಿದೆಯಿರಬೇಕು, ಈಗ ಈ ಮಾನಿಟರ್ ಆಫ್ ಮಾಡಿದರೆ ಕಾಣುವ ನನ್ನ ಬಿಳೀ ಮೋರೆಯ ಅಸ್ಪಷ್ಟ ಪ್ರತಿಬಿಂಬದಲ್ಲಿ, ಸಣ್ಣ ಸಣ್ಣ ಕಪ್ಪುಚುಕ್ಕಿಗಳು ಒತ್ತೊತ್ತಾಗಿ ಮೂಡಿರುವುದು ಗೋಚರಿಸುತ್ತಿದೆ. ರಾತ್ರಿಯ ಆಕಾಶವನ್ನು ‘ಇನ್ವರ್ಟ್ ಕಲರ್ಸ್’ ಮಾಡಿದ ಹಾಗೆ.