Showing posts with label ಮಳೆ. Show all posts
Showing posts with label ಮಳೆ. Show all posts

Monday, June 26, 2017

ಮಗಳು ನೋಡಿದ ಮಳೆ

ಹುಟ್ಟಿ ನಾಲ್ಕು ತಿಂಗಳಾಗಿ ತನ್ನಮ್ಮನ ಊರಿನಲ್ಲಿರುವ ನನ್ನ ಮಗಳಿಗೆ ಇದು ಮೊದಲ ಮಳೆಗಾಲ. ಕಡುನೀಲಿ ಸ್ವೆಟರು, ತಲೆ-ಕಿವಿ ಮುಚ್ಚುವಂತೆ ಟೋಪಿ, ಕೈ-ಕಾಲುಗಳಿಗೆ ಸಾಕ್ಸು ತೊಡಿಸಿ ಬಾಗಿಲ ಬಳಿ ಒಂದು ಮೆತ್ತನೆ ಹಾಸು ಹಾಸಿ ಅವಳನ್ನು ಮಲಗಿಸಿದರೆ, ಹೊರಗೆ ಹೊಯ್ಯುತ್ತಿರುವ ಮಳೆಯನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ಪಿಳಿಪಿಳಿ ನೋಡುತ್ತಾಳೆ. ಆಕಾಶ ಎಂದರೇನು, ಭೂಮಿ ಎಂದರೇನು, ಮೋಡ ಎಂದರೇನು, ಮಳೆ ಎಂದರೇನು -ಯಾವುದೂ ಗೊತ್ತಿಲ್ಲದ ಮಗಳು, ಹನಿಗಳು ಮನೆಯ ಮೇಲೆ ಉಂಟುಮಾಡುತ್ತಿರುವ ತಟ್ತಟ ತಟ್ತಟ ಸದ್ದನ್ನು ಕುತೂಹಲದಿಂದ ಆಲಿಸುತ್ತಾಳೆ. ಬೇಸಿಗೆ ಮಳೆಯ ಗುಡುಗು-ಸಿಡಿಲುಗಳಿಗೆ ಬೆಚ್ಚಿಬೀಳುತ್ತಿದ್ದವಳು ಈಗ ಶಾಂತಸ್ವರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಹೀಗೆ ಕಣ್ಣಾಗಿ-ಕಿವಿಯಾಗಿ ನಮ್ರ ಪುಳಕವನ್ನನುಭವಿಸುತ್ತಿರುವಾಗ, ಅವಳ ಪಕ್ಕ ಕೂತ ನನಗೆ, ಕಳೆದ ಮಳೆಗಾಲಗಳ ನೆನಪುಗಳು.. ನಾನಾದರೂ ನೂರಾರು ಮಳೆಗಾಲಗಳ ಕಂಡವನೇ? ಅಲ್ಲ. ಆದರೆ, ಹೀಗೆ ಮೊದಲ ಮಳೆಗಾಲದ ಅನುಭವಕ್ಕೆ ಒಳಗಾಗುತ್ತಿರುವ ಮಗಳ ಬಳಿ ಕುಳಿತಾಗ, ನಾನು ಕಂಡ ಮೂವತ್ತು-ಚಿಲ್ಲರೆ ಮಳೆಗಾಲಗಳು, ತುಳಿದ ಕೆಸರು, ತೊಯ್ದ ಛತ್ರಿಗಳು, ಮಳೆ ನೋಡಲೆಂದೇ ನಾನು ಮಾಡಿದ ಪ್ರವಾಸಗಳು, ಅಲ್ಲಿ ಕಂಡ ಚಿತ್ರಗಳೆಲ್ಲ ಯಾಕೋ ಒಂದೊಂದೆ ಕಣ್ಮುಂದೆ ಬರುತ್ತಿವೆ..

ಅದೇ ಬಾನು, ಅದೇ ಭೂಮಿ, ಆದರೆ ಪ್ರತಿ ಊರಿನ ಮಳೆಯೂ ಬೇರೆಯೇ. ಪ್ರತಿ ಮಳೆಗಾಲವೂ ಭಿನ್ನವೇ. “ನಮ್ ಕಾಲದ್ ಮಳೆ ಈಗೆಲ್ಲಿ? ನಾವ್ ನೋಡಿದಂಥಾ ಮಳೆಗಾಲ ನೀವು ಒಂದು ವರ್ಷಾನೂ ನೋಡಿಲ್ಲ” –ಅಂತ ಅಜ್ಜ ಆಗಾಗ ಹೇಳುತ್ತಲೇ ಇರುತ್ತಿದ್ದ. ಹಾಗಾತ ಹೇಳುವಾಗ ಆಗಿನ ದಟ್ಟ ಕಾನನ, ತುಂಬುಬೆಟ್ಟಗಳು, ಒಂಟೊಂಟಿ ಮನೆ, ಬಿಡದೆ ಧೋ ಎಂದು ಸುರಿಯುತ್ತಿರುವ ಮಳೆಯ ಕಲ್ಪನೆಯೇ ಮೈ ಜುಮ್ಮೆನಿಸುತ್ತಿತ್ತು. ಹಾಗಂತ ನಾನೇನು ಮಳೆಯನ್ನೇ ಕಾಣದವನಲ್ಲ. ಮಲೆನಾಡಿನಲ್ಲಿ ಹುಟ್ಟಿ ಬೆಳೆದವನಿಗೆ, ಜೂನ್ ತಿಂಗಳು ಬಂತು ಎಂದೊಡನೆ ಶುರುವಾಗುತ್ತಿದ್ದ ಮಳೆಗಾಲವನ್ನು ಸೆಪ್ಟೆಂಬರಿನ ಅಂತ್ಯದವರೆಗೂ ಅನುಭವಿಸಲು ಸಿಕ್ಕೇ ಸಿಗುತ್ತಿತ್ತು. ಮಳೆ ನೋಡಲು ನಾನು ಯಾವುದೇ ಊರಿಗೆ ಹೋಗಬೇಕಿರಲಿಲ್ಲ. ಕೆಲ ವರ್ಷಗಳಂತೂ ಹನಿ ಕಡಿಯದಂತೆ ಮಳೆಯಾಗುತ್ತಿತ್ತು. ಶಾಲೆಗೆ ಹೋಗುವಾಗ ಅಲ್ಲಿಲ್ಲಿ ಗುಂಡಿಯಲ್ಲಿ ನಿಂತ ನೀರನ್ನು ಪಚಕ್ಕನೆ ಹಾರಿಸುತ್ತ ಹೋಗುವುದು ನಿತ್ಯದ ಖುಷಿಯ ಆಟವಾಗಿತ್ತು. ಸಂಜೆಯಾಯಿತೆಂದರೆ ವಟರುಗಪ್ಪೆಗಳ ಗಾಯನ. ಎಂದು ಬರುವುದೆಂದು ಹೇಳಲಾಗದಂತೆ ಹೋಗಿರುವ ಕರೆಂಟು. ಲಾಟೀನಿನ ಚುಟುಕು ಬೆಳಕು. ಕರಿದ ಹಲಸಿನ ಹಪ್ಪಳ. ಸೂರಂಚಿಂದ ಸುರಿಯುತ್ತಲೇ ಇರುತ್ತಿದ್ದ ಧಾರೆಧಾರೆ ನೀರು. ಕೈಯೊಡ್ಡಿದರೆ ಹಿಮಾನುಭವ.

ಕೂತುಬಿಡಬಹುದಿತ್ತು ಬೇಕಿದ್ದರೆ ಹಾಗೆಯೇ ಮಳೆಯ ನೋಡುತ್ತ. ರಸ್ತೆಯಲ್ಲಿ ಕಂಬಳಿಕೊಪ್ಪೆ ಹೊದ್ದು ಸಾಗುತ್ತಿದ್ದ ರೈತರನ್ನು ಮಾತಾಡಿಸುತ್ತ. ಗದ್ದೆಯ ಬದುವಿನಲ್ಲಿ ಜಾರುತ್ತ. ಪೈರಿನ ಗಾಳಿ ಅನುಭವಿಸುತ್ತ. ಗೇರುಬೀಜವ ಸುಟ್ಟು ತಿನ್ನುತ್ತ. ಜಲವೊಡೆದು ತುಂಬಿ ಬರುವ ಬಾವಿಯನ್ನಾಗಾಗ ಬಗ್ಗಿ ನೋಡುತ್ತ. ಆದರೆ ಭಯಂಕರ ಜರೂರಿತ್ತೇನೋ ಎಂಬಂತೆ ನಗರಕ್ಕೆ ಬಂದುಬಿಟ್ಟೆ. ಇಲ್ಲಿ ಮಳೆ ಬಂದರೆ ಜನ ಬೈದುಕೊಳ್ಳುವರು. ಜೋರು ಮಳೆಯಾದರೆ ರಸ್ತೆಯೇ ಕೆರೆಯಾಗುತ್ತಿತ್ತು. ನಮ್ಮೂರಲ್ಲಿ ಕೋಡಿ ಬಿದ್ದಾಗ ಹರಿವಂತೆ ಇಲ್ಲಿನ ಚರಂಡಿಯಲ್ಲೂ ಭರಪೂರ ನೀರು ಹರಿಯುತ್ತಿತ್ತು. ಜನಗಳು ಅದರಲ್ಲಿ ಬಿದ್ದು ತೇಲಿಹೋದರಂತೆ ಎಂದೆಲ್ಲ ಸುದ್ದಿ ಬರುತ್ತಿತ್ತು. ನಗರದ ಮಳೆ ಭಯ ಹುಟ್ಟಿಸುವಂತಾಗಿಹೋಗಿತ್ತು. ಜನ ಮಳೆಗೆ ಶಾಪ ಹಾಕುತ್ತಿದ್ದರು. ಆದರದು ಮಳೆಯ ತಪ್ಪಾಗಿರಲಿಲ್ಲ. ಗಾಂಧಿ ಬಜಾರಿನಲ್ಲಿ ಸುರಿದರೆ ಕವಿತೆಯಾದೇನು ಎಂಬಾಸೆಯಲ್ಲಿ ಮಳೆ ಸುರಿಯುತ್ತಿದ್ದರೂ ಕೊನೆಗೂ ಅದು ಅಚ್ಚಾಗುತ್ತಿದ್ದುದು ದುರಂತ ಕತೆಯಾಗಿ.

ನಗರದ ಮಳೆಯೊಂದಿಗೆ ದೋಸ್ತಿ ಸಾಧ್ಯವೇ ಆಗಲಿಲ್ಲ. ಇಲ್ಲೇ ಹೀಗೇ ಇದ್ದರೆ ನಾನೂ ಮಳೆಯನ್ನು ಬೈಯುವ ನಾಗರೀಕನಾಗುತ್ತೀನೇನೋ ಎಂಬ ಭಯ ಕಾಡಿದ್ದೇ, ಒಂದಷ್ಟು ಗೆಳೆಯರನ್ನು ಒಟ್ಟು ಮಾಡಿಕೊಂಡು, ರಾತ್ರೋರಾತ್ರಿ ಹೊರಟು, ಕುರಿಂಜಾಲು ಬೆಟ್ಟದ ತಪ್ಪಲು ಸೇರಿದೆ. ಮಾನ್ಸೂನ್ ಟ್ರೆಕ್ಕಿನ ಮಜವೇ ಬೇರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹುಟ್ಟಿ ಆಗಷ್ಟೆ ತೆವಳಲು ಶುರುವಿಟ್ಟುಕೊಳ್ಳುತ್ತಿರುವ ಇಂಬಳಗಳ ತುಳಿಯುತ್ತ ಬೆಟ್ಟವನ್ನೇರುತ್ತಿದ್ದರೆ, ತೊಟ್ಟ ರೈನ್‌ಕೋಟಿನ ಅಂಚಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳಿಗೆ ನಮ್ಮ ಮೇಲೆ ಅದೆಂತು ಪ್ರೀತಿ..! ಅಡ್ಡಗಾಳಿಗೆ ಮುಖಕ್ಕೆ ಬಡಿಯುತ್ತಿರುವ ನೀರಪದರಕ್ಕೆ ಎಲ್ಲ ಜಂಜಡಗಳನ್ನೂ ಕಳಚಿ ನಿರ್ಭಾರಗೊಳಿಸುವ ತಾಕತ್ತು. ಚಿಗುರಲಣಿಯಾಗುತ್ತಿರುವ ಚುಪುರು ಹುಲ್ಲು ಕಾಲಿಗೆ ತಾಕುವಾಗ ಎಂಥವರನ್ನೂ ಮೈಮರೆಸುವ ಶಕ್ತಿ ಎಲ್ಲಿಂದ ಬಂತು?  ಮೇಲೇರುತ್ತ ಏರುತ್ತ ಹೋದಂತೆ ದೇಹ ಹಗುರಗೊಳ್ಳುತ್ತ, ಅಕ್ಕಪಕ್ಕದ ಪರ್ವತಶ್ರೇಣಿಗಳೆಲ್ಲ ಸೌಂದರ್ಯದ ಖನಿಗಳಾಗಿ ರೂಪುಗೊಂಡು, ದೃಶ್ಯವೈಭವವ ಕಣ್ಮುಂದೆ ಜಾಹೀರು ಮಾಡುವಾಗ, ಎರಡೂ ಕೈ ಚಾಚಿ ನಾನೇ ಹಕ್ಕಿಯಂತಾಗಿ ತೇಲುತ್ತಿರುವ ಅನುಭವ. ಶೃಂಗ ತಲುಪಿಯಾಯಿತೋ, ನಾನೇ ಮೋಡದೊಳಗೆ! ನಾಲ್ಕಡಿ ದೂರದಲ್ಲಿರುವ ಗೆಳೆಯರೂ ಈಗ ಕಾಣರು. ಬಿಳಿಯ ತಿಳಿಯೊಳಗೆ ಸೇರಿಕೊಂಡಿರುವ ನಮಗೀಗ ಈ ಇಳೆಯಲ್ಲಿ ಹೆಸರಿಲ್ಲ.

ಸ್ವಲ್ಪ ಹೊಳವಾದಂತೆ ಕಂಡ ಕ್ಷಣ, ಒದ್ದೆ ಬಂಡೆಯೊಂದರ ಮೇಲೆ ಕುಳಿತು ಬುತ್ತಿಯ ಗಂಟು ಬಿಚ್ಚಿ ಹೊಟ್ಟೆ ತುಂಬಿಸಿಕೊಳ್ಳುವಾಗ, ಅದೋ ದೂರದ ಬೆಟ್ಟವನ್ನೊಮ್ಮೆ ನೋಡಬೇಕು.. ಇಲ್ಲಿ ಬಿಡುವು ಕೊಟ್ಟ ಮಳೆಯೀಗ ಅಲ್ಲಿ ಸುರಿಯುತ್ತಿದೆ. ಹೇಗೆ ಕರಿಮೋಡ ಕರಗಿ ಕರಗಿ ಬೀಳುವುದು ಸ್ಫುಟವಾಗಿ ಕಾಣುತ್ತಿದೆ.. ಯಾವಾಗದು ಖಾಲಿಯಾಗುವುದು? ಜತೆಗೆ ಬಂದ ಗೆಳೆಯ ಈಗ ಹಾಡಲು ಶುರುವಿಡುತ್ತಾನೆ. ಎಂದೋ ಕೇಳಿ ಮರೆತಿದ್ದ ಹಾಡು ಇಂದು ಇಲ್ಲಿ ಹೇಗೆ ಆಪ್ತವಾಗುತ್ತಿದೆ.. ಘಳಿಗೆಗಳ್ಯಾಕೆ ಸರಿಯಬೇಕು ಇಂತಲ್ಲಿ? ಬೆಟ್ಟದಂಚಿಗೆ ಬಂದು ಬಗ್ಗಿ ನೋಡಿದರೆ ಇಡೀ ಕಂದರವೇ ಹಾಲಾಗಿದೆ. ರುದ್ರರಮಣೀಯ ಎಂಬ ಪದಪುಂಜ ಪೋಣಿಸಿದ ವ್ಯಕ್ತಿ ಇಲ್ಲಿಗೆ ಬಂದೇಬಂದಿರುತ್ತಾನೆ.

ಎಂಥ ಬೆಟ್ಟವೇರಿದವನೂ ಮತ್ತೆ ಕೆಳಗಿಳಿಯಲೇಬೇಕು ಎಂಬಂತೆ, ಬ್ಯಾಚುಲರ್ ದಿನಗಳಲ್ಲಿ ಗೆಳೆಯರೊಂದಿಗೆ ಹುಚ್ಚಾಪಟ್ಟೆ ಟ್ರೆಕಿಂಗ್ ಹೋಗುತ್ತಿದ್ದವನು ಸಂಸಾರಸ್ಥನಾದಮೇಲೆ ಆ ಪರಿಯ ತಿರುಗಾಟ ಕಮ್ಮಿಯಾಗಿಹೋಯಿತು. ಆದರೆ ಮಳೆಯ ನಾಡಿನ ಸೆಳೆತವೇನು ಕಳೆಯಲಿಲ್ಲ. ಹೆಂಡತಿಯೊಡಗೂಡಿ ಮಡಿಕೇರಿಗೋ ಚಿಕ್ಕಮಗಳೂರಿಗೋ ಮಳೆಗಾಲದಲ್ಲೊಮ್ಮೆ ಭೇಟಿ ಕೊಡುವುದು ಸಂಪ್ರದಾಯವಾಯಿತು. ಮಡಿಕೇರಿಯ ಮಳೆ ಮತ್ತೆ ಬೇರೆಯೇ. ಇಲ್ಲಿನ ಗೆಸ್ಟ್‌ಹೌಸುಗಳ ಗೋಡೆಗಳಿಗೂ ಬೆವರು. ಎಲ್ಲೆಲ್ಲು ತಣಸು. ಸಂಜೆಯಾಯಿತೆಂದರೆ ಹಕ್ಕಿಗಳಂತೆ ಎಲ್ಲರೂ ಗೂಡು ಸೇರಿಕೊಳ್ಳುವರು. ರಾತ್ರಿಯ ಚಳಿಗಾಳಿಯೋಡಿಸಲು ಎಲ್ಲ ರೆಸಾರ್ಟುಗಳ ಮಗ್ಗುಲಲ್ಲರಳುವ ಕ್ಯಾಂಪ್‌ಫೈರುಗಳು. ಅದರ ಸುತ್ತ ಮೈಮರೆತು ಕುಣಿಯುವ ಮತ್ತ-ಉನ್ಮತ್ತ ಮಂದಿ. ಇದು ಒಗ್ಗದ ಜೀವಗಳೋ, ಬಿಸಿಬಿಸಿ ಕಾಫಿಯ ಬಟ್ಟಲು ಹಿಡಿದು ಅಕೋ ತಮ್ಮ ರೂಮಿನ ಕಿಟಕಿಯ ಬಳಿ ಆರಾಮಕುರ್ಚಿ ಹಾಕಿ ಆಸೀನರು. ಸುರಿಮಳೆಯ ಮುಂದೆರೆಯಲ್ಲಿ ಹಬೆಯಾಡುವ ಕಾಫಿಗೂ ಇಲ್ಲಿ ನಶೆಯೇರುವ ಮಾಯೆ. ಮಡಿಕೇರಿ-ಮಳೆ-ಮಂಜು-ಮತ್ತು  –ಎಲ್ಲವೂ ಇಲ್ಲಿ ಸಮಾನಾರ್ಥಕ ಪದಗಳು.

ಈ ತಂಬೆಲರಿನಲ್ಲಿ ಕಾಫಿತೋಟಗಳನ್ನು ಸುತ್ತುವುದೂ ಒಂದು ರಸಾನುಭವ. ಅದೂ ಜತೆಗಾತಿಯೊಡನೆ ಒಂದೇ ಛತ್ರಿಯಡಿ ಹೆಜ್ಜೆಯಿಡುವಾಗ ಸಣ್ಣ ಬಿಸಿಲಿಗೂ ಮೂಡುವ ಕಾಮನಬಿಲ್ಲು. ಅಲ್ಲೇ ತೋಟದ ಮಗ್ಗುಲಲ್ಲಿರುವ ಕೆರೆಯಲ್ಲೀಗ ಕೆನ್ನೀರಿನ ಭರಾಟೆ. ಎಲ್ಲೆಡೆಯಿಂದಲೂ ಬಂದು ಧುಮ್ಮಿಕ್ಕುತ್ತಿರುವ ನೀರು. ಹೀಗೆ ಕೆರೆಯ ಮೇಲೆ ಬೀಳುತ್ತಿರುವ ಮಳೆಹನಿಗಳು ಈ ಕೆನ್ನೀರಿನೊಂದಿಗೆ ಬೆರೆತು ತಾವೂ ಕೆಂಪಾಗಲು ಎಷ್ಟು ಕ್ಷಣ ಬೇಕು? ಮಳೆ ತೆರವಾದಾಗ ಉಳಿದ ತುಂಬುಕೆರೆಯ ನೀರು ತಿಳಿಯಾಗಲು ಎಷ್ಟು ದಿನ ಬೇಕು? ಕೆರೆ ತುಂಬಿ ಕಟ್ಟೆಯೊಡೆದು ಸಣ್ಣ ಅವಳೆಗಳಲ್ಲಿ ಸಾಗಿ ದೊಡ್ಡ ಧಾರೆಯೊಂದಿಗೆ ಬೆರೆತು ನದಿಯಾಗಿ ಚಿಮ್ಮುತ್ತ ಸಾಗಿ ಸಮುದ್ರ ಸೇರಲು ಎಷ್ಟು ಕಾಲ ಬೇಕು? ಸಮುದ್ರದ ದಾರಿಯಲ್ಲದು ಎಷ್ಟು ಜಲಪಾತಗಳ ಸೃಷ್ಟಿಸಿತು? ಎಷ್ಟು ಕೆಮೆರಾಗಳಲ್ಲಿ ಸೆರೆಯಾಯಿತು? ಪ್ರತಿ ಹನಿಯ ಹಣೆಯಲ್ಲೂ ಬರೆದಿರುತ್ತದಂತೆ ಅದು ಸಾಗಬೇಕಾದ ದಾರಿ, ಸೇರಬೇಕಾದ ಗಮ್ಯ. ಆದರೆ ಅದರ ಹಣೆ ನೋಡಿ ಭವಿಷ್ಯ ಹೇಳುವವರಾರು? ಕೆರೆಯ ಕಟ್ಟೆಯ ಮೇಲೆ ನಿಂತು ಒಂದೇ ಸಮನೆ ನೋಡುತ್ತಿದ್ದರೆ ಎಲ್ಲ ಕಲಸಿದಂತಾಗಿ ಕಣ್ಮಂಜು.

ಮಳೆಗಾಲವೀಗ ಕಮ್ಮಿಯಾಗಿದೆ. ಋತುವಿಡೀ ಸುರಿಯಬೇಕಿದ್ದ ಮಳೆಯೀಗ ಮಿತವಾಗಿದೆ. ಯಾವ್ಯಾವಾಗಲೋ ಬರುವಷ್ಟು ಅನಿಯಮಿತವಾಗಿದೆ. ಊರಿನಿಂದ ಬರುವ ಫೋನಿನಲ್ಲಿ ಬರದ ಗೋಳಿನ ಕತೆಯೇ ಜಾಸ್ತಿ. ಎಲ್ಲರ ಮನೆಯಲ್ಲೂ ಖಾಲಿ ಬಾವಿಗಳು. ನಾವು ಮಾಡಿದ ತಪ್ಪಿಗೆ ನಾವೇ ಅನುಭವಿಸುತ್ತಿದ್ದೇವೆ.

ಆದರೂ ಭರವಸೆ ಹೋಗಿಲ್ಲ. ನಾವು ಹತಾಶರಾಗಿಲ್ಲ. ಕ್ಯಾಲೆಂಡರಿನ ಪುಟ ತಿರುಗಿಸುತ್ತಲೇ ಆಕಾಶದೆಡೆಗೆ ನೋಡುತ್ತೇವೆ ತಲೆಯೆತ್ತಿ. ಕಾರ್ಮೋಡಗಳು ಮೇಳೈಸುವುದನ್ನು ಕಾತರಿಸಿ ಈಕ್ಷಿಸುತ್ತೇವೆ. ಬಿಸಿಲಿನ ಝಳದ ನಡುವೆ ಸಣ್ಣದೊಂದು ತಂಗಾಳಿ ಬಂದರೂ ಇವತ್ತು ಮಳೆಯಾಗಿಯೇ ಆಗುತ್ತದೆ ಅಂತ ದೇವರ ಮುಂದೆ ಕಾಯಿಯಿಟ್ಟು ಕಾಯುತ್ತೇವೆ. ವರುಣನಿನ್ನೂ ನಿಷ್ಕರುಣಿಯಾಗಿಲ್ಲ. ಸಂಜೆಯಾಗುತ್ತಿದ್ದಂತೆಯೇ ಶುರುವಾಗಿದೆ ಥಟಥಟ ಹನಿಗಳ ಲೀಲೆ. ಜೋರಾಗಿದೆ ನೋಡನೋಡುತ್ತಿದ್ದಂತೆಯೇ. ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಒಳ ತಂದಿದ್ದೇವೆ. ಕಟ್ಟೆಯ ಮೇಲೆ ನಿಂತು ಹೃನ್ಮನಗಳನೆಲ್ಲ ತೆರೆದು ಮುಂಗಾರಿನ ಮೊದಲ ಮಳೆಗೆ ಒಡ್ಡಿಕೊಂಡಿದ್ದೇವೆ. ಒಳಮನೆಯ ನಾಗಂದಿಗೆಯಲ್ಲಿದ್ದ ಛತ್ರಿಯನ್ನು ಕೆಳಗಿಳಿಸಿ ತಂದು ಧೂಳು ಕೊಡವಿ ಬಿಡಿಸಿ ಹೊರಟುಬಿಟ್ಟಿದ್ದೇವೆ ತೋಟ-ಗದ್ದೆಗಳೆಡೆಗೆ. ಹೊಂಡದ ಮೀನಿಗೂ ಈಗ ಹೊಸನೀರ ಸಹವಾಸ. ಗೂಡೊಳಗಿನ ಗೀಜಗದ ಮರಿಗೀಗ ಎಲ್ಲಿಲ್ಲದ ಆತಂಕ. ಮಣ್ಣ ಪದರದ ಕೆಳಗೆಲ್ಲೋ ಹುದುಗಿರುವ ಹೂಗಿಡದ ಬೀಜಕ್ಕೂ ತಲುಪಿದೆ ಮಳೆಬಂದ ಸುದ್ದಿ: ಅದರ ಮೊಳಕೆಯೊಡೆವ ಸಂಭ್ರಮಕ್ಕೆ ತರಾತುರಿಯಲಿ ಸಾಗುತ್ತಿರುವ ಇರುವೆಗಳು ಸಾಕ್ಷಿಯಾಗಿವೆ. ಈ ಸಲ ಮುಂಗಾರು ಜೋರು ಎನ್ನುತ್ತಿದ್ದಾರೆ ಹವಾಮಾನ ತಜ್ಞರು. ಈ ಒಳ್ಳೆಯ ವರ್ತಮಾನ ಅಡಕೆಯ ಮರಗಳ ತುದಿಯ ಒಣಗಿದ ಸುಳಿಗೂ ಮುಟ್ಟಿದಂತಿದೆ: ಉಲ್ಲಾಸದಿಂದ ತೂಗುತ್ತಿವೆ ಅವು ತಲೆ -ಒಂದಕ್ಕೊಂದು ತಾಕುವಂತೆ.

ಮಗಳ ಪಕ್ಕ ಕುಳಿತು ಮಳೆಯ ಲೋಕದೊಳಗೆ ಮುಳುಗಿ ತೋಯುತ್ತಿದ್ದರೆ ಊರಿನಿಂದ ಅಮ್ಮನ ಫೋನು: ಒಂದು ವಾರದಿಂದ ಮಳೆ ಪರವಾಗಿಲ್ಲ ಅಂತಲೂ, ನಿನ್ನೆಯಷ್ಟೇ ಸೌತೆಬೀಜ ಹಾಕಿದೆ ಅಂತಲೂ, ಬಾವಿಗೆ ಸ್ವಲ್ಪಸ್ವಲ್ಪವೇ ನೀರು ಬರುತ್ತಿದೆ ಅಂತಲೂ ಹೇಳಿದಳು. ಮೊಮ್ಮಗಳು ಅಲ್ಲಿಗೆ ಬರುವಷ್ಟರಲ್ಲಿ ನೀರಿನ ಸಮೃದ್ಧಿಯಾಗಿರುತ್ತದೆ ಅಂತ ಹೇಳಿದವಳ ದನಿಯಲ್ಲಿ ಖುಷಿಯಿತ್ತು.

ಮಳೆಯ ನೋಡುತ್ತ ಆಟವಾಡುತ್ತಿದ್ದ ಮಗಳು ಈಗ ನಿದ್ದೆ ಹೋಗಿದ್ದಾಳೆ. ವರ್ಷಧಾರೆ ಮಾತ್ರ ಹೊರಗೆ ಮುಂದುವರೆದಿದೆ. ಮಗಳಿಗೆ ನಿದ್ದೆ ಬಂದಿದ್ದು ಈ ಮಳೆಯ ಜೋಗುಳದಿಂದಲೋ ಅಥವಾ ನನ್ನ ಮಳೆಗಾಲದ ಕತೆಗಳ ಮೌನಾಖ್ಯಾನ ಕೇಳಿಯೋ ತಿಳಿಯದಾಗಿದೆ. ಹೆಂಡತಿ ಮಗಳನ್ನು ಎತ್ತಿಕೊಂಡು ಹೋಗಿ ತೊಟ್ಟಿಲಲ್ಲಿ ಮಲಗಿಸಿದ್ದಾಳೆ. ಅತ್ತೆ ಬಿಸಿಬಿಸಿ ಕಷಾಯ ತಂದುಕೊಟ್ಟಿದ್ದಾರೆ. ಬಾಗಿಲ ಬಳಿ ನಿಂತು ಒಂದು ಕೈಯಲ್ಲಿ ಕಷಾಯದ ಬಟ್ಟಲು ಹಿಡಿದು ಇನ್ನೊಂದು ಕೈಯನ್ನು ಸುರಿಮಳೆಗೊಡ್ಡಿದ್ದೇನೆ. ಬೊಗಸೆ ತುಂಬಿ ತುಂಬಿ ಹರಿಯುತ್ತಿದೆ ನಿಷ್ಕಲ್ಮಶ ಸಲಿಲ ಸಳಸಳ.

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]

Wednesday, March 31, 2010

ತೋಯ್ದೆ!

ನಿನ್ನೆ ಸಂಜೆ ಬೆಂಗಳೂರಿಗೆ ಮಳೆ ಬಂತು.

ನಾನು ತೋಯ್ದೆ. :-) :-) :-)



Tuesday, June 30, 2009

ಬಾರದ ಮಳೆಯ ದಿನದಲ್ಲಿ ನನ್ನದೊಂದಿಷ್ಟು ಬಡಬಡಿಕೆ

ಮೌಸ್ ಅಲ್ಲಾಡಿಸಿದರೆ ಸಾಕು, ಇದೆಲ್ಲ ತನ್ನದೇ ಎಂಬಂತೆ ಕಂಪ್ಯೂಟರ್ ಸ್ಕ್ರೀನಿನ ತುಂಬ ಓಡಾಡುವ ಈ ಬಿಳೀ ಹೊಟ್ಟೆಯ ಕಪ್ಪು ಅಲಗುಗಳ ಪುಟ್ಟ ಬಾಣವನ್ನು ಸ್ಕ್ರೀನಿನ ಕೆಳಾಗಡೆ ಬಲಮೂಲೆಗೆ ಒಯ್ದು ಒಂದು ಕ್ಷಣ ಬಿಟ್ಟರೆ ಪುಟ್ಟ ಅಸಿಸ್ಟೆಂಟ್ ಬಾಕ್ಸೊಂದು ಮೂಡಿ Tuesday, June 30, 2009 ಎಂದು ತೋರಿಸುತ್ತಿದೆ ಮುದ್ದಾಗಿ. ಅಂದರೆ ಜುಲೈ ತಿಂಗಳು ಬರಲಿಕ್ಕೆ ಇನ್ನು ಕೇವಲ ಒಂದು ದಿವಸ ಬಾಕಿ.

ನಾನು ಕಳೆದ ತಿಂಗಳ 26ನೇ ತಾರೀಖಿನ ಬೆಳಗ್ಗೆ ಎದ್ದು ಮುಂಬಾಗಿಲು ತೆರೆದಾಗ 'ಈ ವರ್ಷ ಮಳೆ ಜಾಸ್ತಿ. ಮೇ 28ರಿಂದಲೇ ಮಾನ್ಸೂನ್ ಶುರುವಾಗಲಿದೆ. ಆಗಲೇ ಕೇರಳಕ್ಕೆ ಬಂದಿದೆ' ಅಂತೆಲ್ಲ ದೊಡ್ಡಕ್ಷರಗಳಲ್ಲಿ ಬರೆದುಕೊಂಡಿದ್ದ ನ್ಯೂಸ್‍ಪೇಪರು ಬಾಗಿಲಲ್ಲಿ ಬಿದ್ದಿತ್ತು. ನನಗೆ ಖುಶಿಯಾಯಿತು. ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ? ನಾನು ತಕ್ಷಣವೇ ಮನೆಗೆ ಫೋನ್ ಮಾಡಿ ಅಪ್ಪನ ಬಳಿ 'ಅಮ್ಮನ ಹತ್ರ ಸೌತೆ ಬೀಜ ಎಲ್ಲ ರೆಡಿ ಮಾಡಿ ಇಟ್ಕಳಕ್ಕೆ ಹೇಳು, ಇನ್ನು ಎರಡು ದಿನದಲ್ಲಿ ಮಳೆಗಾಲ ಶುರು ಆಗ್ತಡ. ಹವಾಮಾನ ತಜ್ಞರು ಹೇಳಿಕೆ ಕೊಟ್ಟಿದ ಪೇಪರಲ್ಲಿ. ಕಟ್ಟಿಗೆ ಎಲ್ಲಾ ಸೇರುವೆ ಆಯ್ದಾ ಹೆಂಗೆ? ಹಿತ್ಲಿನ ಬೇಲಿ ಗಟ್ಟಿ ಮಾಡ್ಸಿ ಆತಾ?' ಅಂತೆಲ್ಲ ಕೇಳಿದೆ. ಬೆಳಬೆಳಗ್ಗೆ ಫೋನ್ ಮಾಡಿ ಮನೆಯ ಬಗ್ಗೆ ಕಾಳಜಿ ತೋರಿಸುತ್ತಿರುವ ಮಗನ ಬಗ್ಗೆ ಅಭಿಮಾನ ಬಂದು ಅಪ್ಪ 'ಮಗನೇ, ನಮಗೂ ಗೊತ್ತಾಯ್ದು ವಿಷಯ. ಟಿವಿ9 ಬ್ರೇಕಿಂಗ್ ನ್ಯೂಸಲ್ಲಿ ನಿನ್ನೇನೆ ತೋರ್ಸಿದ್ದ. ನೀನೇನು ತಲೆಬಿಸಿ ಮಾಡ್‍ಕ್ಯಳಡ. ನಾವು ಮಳೆಗಾಲಕ್ಕೆ ರೆಡಿ ಆಯಿದ್ಯ' ಎಂದ. ನಾನು ರೂಮಿನಲ್ಲಿ ಟಿವಿ ಇಟ್ಟುಕೊಂಡಿಲ್ಲವಾದ್ದರಿಂದ ಟಿವಿ9ಅಲ್ಲಿ ನಿನ್ನೆಯೇ ತೋರಿಸಿರುವುದು ನನಗೆ ಗೊತ್ತಿರಲಿಲ್ಲ. ಅಪ್ಪ ನನಗಿಂತ ಫಾಸ್ಟ್ ಆಗಿರುವುದು ಗೊತ್ತಾಗಿ ಬೆಪ್ಪಾದೆ. ಮುಂದುವರೆದಿರುವ ತಂತ್ರಜ್ಞಾನ, ಶ್ರೀಘ್ರ ಮತ್ತು ವೇಗದ ಮಾಹಿತಿ ಸಂವಹನ, ಮುಂಬರುವ ಮಳೆಯನ್ನು ಇಂದೇ-ಈಗಲೇ ಹೇಳುವ ವಿಜ್ಞಾನಿಗಳ ಚಾಕಚಕ್ಯತೆ ಎಲ್ಲವೂ ಆ ಬೆಳಗಿನ ಜಾವದಲ್ಲಿ ನನಗೆ ಆಪ್ಯಾಯಮಾನವಾಗಿ ಕಂಡಿತು.

ಹವಾಮಾನ ತಜ್ಞರು ಹೇಳಿದಂತೆ ಅಂದು ಸಂಜೆಯೇ ಬೆಂಗಳೂರಿಗೆ ಮೋಡಗಳ ಆಗಮನವಾಯಿತು. ರಾತ್ರಿ ಹೊತ್ತಿಗೆ ಅವೆಲ್ಲಾ ಧಡಬಡಾಂತ ಗುಡುಗು-ಸಿಡಿಲುಗಳಾಗಿ ಶಬ್ದ ಮಾಡುತ್ತಾ ಧೋ ಮಳೆ ಸುರಿಸತೊಡಗಿದವು. ಬೆಂಗಳೂರಿನ ರಸ್ತೆಗಳ ಮೇಲೆ ಬಿದ್ದ ಮಳೆನೀರು, ಪಕ್ಕಕ್ಕೆ ಹರಿದು ಇಂಗೋಣವೆಂದರೆ ಬರೀ ಕಾಂಕ್ರೀಟು-ಚಪ್ಪಡಿ ಹಾಸಿಕೊಂಡ ಫುಟ್‌ಪಾತೇ ಇದ್ದು ಎಲ್ಲೂ ಮಣ್ಣುನೆಲ ಕಾಣದೆ, ಹಾಗೇ ಟಾರ್ ರಸ್ತೆಯ ಮೇಲೆ ಸುಮಾರು ಹೊತ್ತು ಹರಿದು, ತಗ್ಗಿದ್ದಲ್ಲೆಲ್ಲ ನಿಂತು ಯೋಚಿಸಿತು. ಕೊನೆಗೆ ಬೇರೆ ದಾರಿ ಕಾಣದೆ, ಮೋರಿಗೆ ಹಾರಿ ಕೊಳಚೆ ನೀರಿನೊಂದಿಗೆ ಬೆರೆತು ಸಾಗರಮುಖಿಯಾಗುವುದೇ ತನಗುಳಿದಿರುವ ಮಾರ್ಗ ಎಂದದು ತೀರ್ಮಾನಿಸಿತು. ಪುಣ್ಯಕ್ಕೆ ಅದಕ್ಕೆ ಸುಮಾರೆಲ್ಲ ತೆರೆದ ಪಾಟ್‌ಹೋಲುಗಳು ಸಿಕ್ಕಿದ್ದರಿಂದ, ಬೇಗ ಬೇಗನೆ ಮೋರಿ ಸೇರಲಿಕ್ಕೆ ಅನುಕೂಲವಾಯಿತು. ಮೋರಿ ಸೇರುವ ರಭಸದಲ್ಲಿ ಅದು ಮನುಷ್ಯರನ್ನೂ, ಪ್ರಾಣಿಗಳನ್ನೂ, ಸಾಮಾನು-ಸರಂಜಾಮುಗಳನ್ನೂ ಜತೆಗೆ ಸೇರಿಸಿಕೊಂಡಿತು.

ಆಮೇಲೆ ಅಪ್ಪ ಫೋನ್ ಮಾಡಿದಾಗ 'ಬೆಂಗಳೂರಲ್ಲಿ ಭಾರೀ ಮಳೆಯಂತೆ. ಟಿವಿ9ಅಲ್ಲಿ ತೋರಿಸ್ತಿದ್ದ. ಒಬ್ಬ ಹುಡುಗ ಕೊಚ್ಚಿಕೊಂಡು ಹೋಯ್‍ದ್ನಡ. ನೀನು ಓಡಾಡಕ್ಕರೆ ಹುಷಾರಿ' ಅಂತೆಲ್ಲ ಎಚ್ಚರಿಸಿದ. ಬೆಂಗಳೂರಿನಲ್ಲಿ ಹುಷಾರಾಗಿರಬೇಕು ಎಂಬುದು ನನಗೂ ಗೊತ್ತಿತ್ತು. ನಿನ್ನೆಯಷ್ಟೇ ನನ್ನ ಫ್ರೆಂಡು ಅಲ್ಲೆಲ್ಲೋ ಬೈಕು ನಿಲ್ಲಿಸಿದ್ದಾಗ ಮರದ ಕೊಂಬೆ ಮುರಿದುಕೊಂಡು ಬಿದ್ದು, ಪಾಪ ಬೈಕಿನ ಮುಂಭಾಗ ಫಡ್ಚ ಆಗಿ ಹೋಗಿತ್ತಂತೆ. 'ಈಗಷ್ಟೇ ಗ್ಯಾರೇಜಲ್ಲಿ ಬಿಟ್ಟು ಬಂದೆ ಮಾರಾಯಾ. ಐದಾರು ಸಾವಿರ ಖರ್ಚು ಇದೆ ಅಂದ್ರು. ಇನ್ಷೂರೆನ್ಸ್ ಕ್ಲೇಮ್ ಮಾಡ್ಲಿಕ್ಕೆ ಆಗತ್ತಾ ನೋಡ್ಬೇಕು' ಅಂತ ಹೇಳ್ತಿದ್ದ. ನಾವು ಎಷ್ಟೇ ಹುಷಾರಾಗಿದ್ದರೂ ಹೀಗೆಲ್ಲ ತಲೆ ಮೇಲೆ ಮುರಕೊಂಡು ಬೀಳುವ ಕೊಂಬೆಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಆಗುತ್ತಾ? ಮೇಲೆ ನೋಡುತ್ತ ನಡೆದರೆ ಚರಂಡಿಗೆ ಬೀಳ್ತೀವಿ ಅಥವಾ ಯಾವುದಾದರೂ ಆಂಟಿಗೆ ಡಿಕ್ಕಿ ಹೊಡೆದು ಕಪಾಳಮೋಕ್ಷಕ್ಕೆ ಗುರಿಯಾಗುತ್ತೀವಿ. ಇದನ್ನೆಲ್ಲ ಹೇಳಿದರೆ ಅಪ್ಪ ಇನ್ನಷ್ಟು ಗಾಭರಿಯಾದಾನು ಅಂತ ಸುಮ್ಮನಾದೆ. ಬೆಳೆದ ಮಗ ಯಾರೋ ಅಪರಿಚಿತ ಹೆಂಗಸಿಂದ ಸಾರ್ವಜನಿಕರ ಎದುರು ಕೆನ್ನೆ ಏಟು ತಿನ್ನುವುದನ್ನು ಯಾವ ತಂದೆಯೂ ಸಹಿಸಿಕೊಳ್ಳಲಾರ.

ನಾಲ್ಕಾರು ದಿನ ಹೊಡೆದ ಮಳೆ ಆಮೇಲೆ ವಾಪಸು ಹೋಗಿಬಿಟ್ಟಿತು. ಕೊನೆಗೆ ಗೊತ್ತಾಯಿತು, ಅದು ಬಂದಿದ್ದು ಮುಂಗಾರೇ ಅಲ್ಲ; ಕಳೆದ ವರ್ಷದ ಹಳೇಮೋಡಗಳ ಪೆಂಡಿಂಗ್ ಮಳೆ ಅಥವಾ ಅಲ್ಲೆಲ್ಲೋ ಸಾಗರದಲ್ಲೆದ್ದ ಚಂಡಮಾರುತದ ಪರಿಣಾಮ ಅಂತ. ಕಾರ್ಪೋರೇಶನ್ ಕೆಲಸಗಾರರು ಮೂರ್ನಾಲ್ಕು ದಿನ ಕೊಳಚೆಯನ್ನು ಶೋಧಿಸಿದರೂ ಕೊಚ್ಚಿ ಹೋಗಿದ್ದ ಹುಡುಗನ ಶವ ಸಿಗಲಿಲ್ಲ. ಆಮೇಲೆ ಬಂದ ದೇಶದ ಸೈನಿಕರಿಗೂ ಅಪಜಯವಾಯಿತು. ಅಪ್ಪ ಫೋನಿನಲ್ಲೂ, ಪತ್ರಕರ್ತರು ಪೇಪರಿನಲ್ಲೂ ನನಗೆ ಆಗಾಗ ಈ ಮಾಹಿತಿಗಳನ್ನು ಕೊಡುತ್ತಿದ್ದರು. ಅಂದು ಬೆಳಗ್ಗೆ ನನ್ನ ಕಲೀಗು 'ಸೆಕ್ಯೂರಿಟೀನೇ ಇಲ್ಲ ಕಣಯ್ಯಾ ಈ ಬೆಂಗಳೂರಲ್ಲಿ. ನೋಡು, ಇಷ್ಟೆಲ್ಲ ಅವ್ಯವಸ್ಥೆ ಆಗ್ತಿದೆ ಇಲ್ಲಿ. ಆದ್ರೆ ಸರ್ಕಾರ ಸ್ವಲ್ಪಾನಾದ್ರೂ ಸೀರಿಯಸ್ಸಾಗಿದೆಯಾ ಅಂತ? ಅವರವರಲ್ಲೇ ಕಿತ್ತಾಟ ಮಾಡಿಕೊಳ್ತಾ ಹೆಂಗೆ ನಾಚಿಕೆ ಇಲ್ಲದವರ ಥರ ಇದಾರೆ' ಅಂತ, ಟೈಮ್ಸಾಫಿಂಡಿಯಾದ ಪೇಜುಗಳನ್ನು ತಿರುಗಿಸುತ್ತಾ ಕೆಂಪು ಮುಖ ಮಾಡಿಕೊಂಡು ಉಗಿದ. ವರ್ಲ್ಡ್‌ಕಪ್ಪಿನಿಂದ ಹೊರಬಂದ ಭಾರತದ ಆಟಗಾರರೊಂದಿಗೇ ಮುಖ್ಯ ಪೇಪರಿನ ಪುಟಗಳೂ ಮುಗಿದು, ಕೊನೆಗೆ ಬ್ಯಾಂಗಲೂರ್ ಟೈಮ್ಸ್‌ನಲ್ಲಿನ ಒಂದಷ್ಟು ಚಿತ್ರಗಳನ್ನು ನೋಡಿದ ಮೇಲೆ ಅವನ ಮುಖ ಸ್ವಲ್ಪ ಪ್ರಶಾಂತವಾದಂತೆ ಕಂಡಿತು.

ಈ ಮಧ್ಯೆ, ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ವಿದ್ಯುತ್ ಕೊರತೆ ಆಗುವುದಿಲ್ಲ, ಮಳೆ ಇನ್ನೇನು ಶುರುವಾಗಲಿದೆ, ಈ ವರ್ಷ ಜಾಸ್ತಿಯೇ ಆಗಲಿರುವುದಾಗಿ ಹವಾಮಾನ ತಜ್ಞರು ಧೃಡಪಡಿಸಿರುವುದಾಗಿ ಇಂಧನ ಸಚಿವರು ಹೇಳಿಕೆ ಕೊಟ್ಟರು ಅಂತ ಗೊತ್ತಾಯಿತು. ಇಂಧನ ಸಚಿವರೇ ಹೇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಬಿಡು ಅಂತ ನಾನೂ ಸಮಾಧಾನ ಮಾಡಿಕೊಂಡೆ. ಅಪ್ಪ ಫೋನ್ ಮಾಡಿ ಊರ ಕಡೆ ಏನೇನೋ ಗಲಾಟಿಗಳೆಲ್ಲ ಆಗುತ್ತಿದೆ ಅಂತ ಹೇಳಿದ. ಊರಿನ ಮಹಿಳಾ ಮಂಡಳಿಗೆ ಸರ್ಕಾರದಿಂದ ಸ್ಯಾಂಕ್ಷನ್ ಆಗಿದ್ದ ಹಣವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಂದಿದ್ದು ಗೊತ್ತಾಗಿದೆಯಂತಲೂ, ಆತ ಕಾಂಗ್ರೆಸ್ ಪರ ಕಾರ್ಯಕರ್ತನಾದ್ದರಿಂದ, ಜನರೆಲ್ಲ ಸಭೆ ಸೇರಿ, ಸಧ್ಯದ ಬಿಜೆಪಿ ಸರ್ಕಾರದ ಸಹಾಯ ಪಡೆದು ಆತನಿಗೊಂದು ಗತಿ ಕಾಣಿಸಲಿಕ್ಕೆ ತೀರ್ಮಾನಿಸಿದ್ದಾರೆ ಅಂತ ಅಪ್ಪ ಹೇಳಿದ. 'ಇಲ್ಲಿನ ಪೇಪರ್ರಲ್ಲೆಲ್ಲಾ ಬರ್ತಾ ಇದೆ, ಟಿವಿ9ಅಲ್ಲೂ ಬಂದ್ರೂ ಬರಬಹುದು, ನೋಡು' ಅಂದ. ಛೇ, ಈ ನೆಪದಲ್ಲಾದರೂ ಟಿವಿಯಲ್ಲಿ ನಮ್ಮೂರನ್ನೆಲ್ಲ ನೋಡುವ ಅವಕಾಶ ಸಿಗುತ್ತಿತ್ತು, ನನ್ನ ರೂಮಿನಲ್ಲೂ ಟಿವಿ ಇರಬೇಕಿತ್ತು ಅಂತ ಅಲವತ್ತುಕೊಂಡೆ. ಕೊನೆಗೆ ಅಪ್ಪನೇ ದನಿ ತಗ್ಗಿಸಿ 'ಈ ಜನಕ್ಕೆ ಬೇರೆ ಕೆಲಸ ಇಲ್ಲೆ. ಅದಕ್ಕೇ ಸುಮ್ನೆ ಏನಾದ್ರೂ ತಕರಾರು ಎತ್ತತಾ ಇದ್ದ. ಮಳೇನಾದ್ರೂ ಶುರು ಆಗಿದ್ರೆ ಎಲ್ರೂ ಗದ್ದೆ-ತೋಟ ಅಂತ ಹೋಗಿ ಬ್ಯುಸಿ ಆಗ್ತಿದ್ದ' ಅಂದ. ನನಗೆ ಅದೂ ಸರಿ ಎನ್ನಿಸಿತು.

ನನ್ನ ರೂಂಮೇಟು ಅದ್ಯಾವುದೋ ವೆಬ್‌ಸೈಟು ಓಪನ್ ಮಾಡಿಕೊಂಡು 'ನೋಡು, ಇದರಲ್ಲಿ ವೆದರ್ ಫೋರ್‌ಕಾಸ್ಟ್ ತೋರಿಸ್ತಾರೆ. ಆಲ್‌ಮೋಸ್ಟ್ ಅಕ್ಯುರೇಟಾಗಿರತ್ತೆ' ಅಂತ ಹೇಳಿದ. ನಾನೂ ನೋಡಿದೆ. ವಿಶ್ವದ ಭೂಪಟದಂತಿದ್ದ ಚಿತ್ರದ ಮೇಲ್ಮೈಯಲ್ಲಿ ತೆರೆಗಳಂತೆ ಬೆಳ್ಳಬೆಳ್ಳಗೆ ಅಲ್ಲಲ್ಲಿ ಕಾಣುತ್ತಿತ್ತು. 'ಇವು ಮೋಡಗಳು. ನೋಡು, ಹೇಗೆ ನಿಧಾನಕ್ಕೆ ಮೂವ್ ಆಗ್ತಿವೆ ಅಂತ.. ಈಗ ಇಂಡಿಯಾದ ಹತ್ರಾನೇ ಬಂದಿದೆ ಅಲ್ವಾ? ಇನ್ನೇನು ನಾಲ್ಕು ದಿವಸದಲ್ಲಿ ಶುರು ಆಗಿಬಿಡತ್ತೆ ಮಾನ್ಸೂನು' ಅಂದ ರೂಂಮೇಟು. ನನಗೆ ಮತ್ತೆ ಖುಶಿಯಾಯಿತು. ಬಾನಲ್ಲಿ ಓಡೋ ಮೇಘದ ಚಲನೆಯನ್ನೂ ತೋರಿಸುವ ವಿಜ್ಞಾನಿಗಳ ಜಾಣ್ಮೆಯ ಬಗ್ಗೆ ಮನಸ್ಸಿನಲ್ಲಿಯೇ ಶ್ಲಾಘಿಸಿದೆ.

ಆದರೆ ಈಗ ಎರಡ್ಮೂರು ದಿನಗಳ ಪೇಪರಿನಲ್ಲಿನ ದೊಡ್ಡಕ್ಷರಗಳು ಬೇರೇನೋ ಹೇಳುತ್ತಿವೆ. 'ಬರ'-ವಂತೆ! ಬರಮಾಡಿಕೊಳ್ಳಲಿಕ್ಕೆ ದೇಶದ ಜನತೆ ತಯಾರಾಗಬೇಕು ಅಂತೆಲ್ಲ ಹೇಳಿಕೆ ಕೊಟ್ಟಿದ್ದಾರೆ ಮಂತ್ರಿಗಳು. ಮಳೆಗಾಲ ಬರುತ್ತದೆ ಎಂದಾದರೆ ತಯಾರಿ ಬೇಕು, ಬರಕ್ಕೆ ಏನು ತಯಾರಿ ಮಾಡಿಕೊಳ್ಳುವುದು? ಕಡಿಮೆ ನೀರು ಕುಡಿಯಬೇಕೇ, ದಿನವೂ ಸ್ನಾನ ಮಾಡುವುದನ್ನು ಬಿಡಬೇಕೇ, ಟಿಶ್ಯೂ ಪೇಪರ್ ಬಳಸಬೇಕೇ? ಅರ್ಥವೇ ಆಗದೇ ಕಕ್ಕಾಬಿಕ್ಕಿಯಾಗುತ್ತೇನೆ ನಾನು. ವಿದ್ಯುತ್ತಂತೂ ಇಲ್ಲವೇ ಇಲ್ಲವಂತೆ. ಇನ್ನು ಹನ್ನೊಂದು ದಿನಗಳಲ್ಲಿ ಜಲಾಶಯಗಳೆಲ್ಲ ಖಾಲಿಯಾಗುತ್ತವೆಯಂತೆ. ಆಮೇಲೆ ಎಲ್ಲೆಲ್ಲೂ ಕತ್ತಲೆ ಆವರಿಸುತ್ತದಂತೆ. ಪೇಪರ್ರೋದಿ 'ವಾರೆವ್ಹಾ!' ಎಂದೆ ನಾನು.

ಕೆಲ ವರ್ಷಗಳ ಹಿಂದೆ ಹೀಗೇ ಮಳೆ ಶುರುವಾಗದೇ ಇದ್ದಾಗ ನಾವೆಲ್ಲಾ ನಮ್ಮ ಸೀಮೆಯ ದೇವರಿಗೆ ಪರ್ಜನ್ಯ ಮಾಡಿದ್ದೆವು. ನೂರಾರು ಜನ ಸೇರಿ, ಹತ್ತಿರದಲ್ಲಿದ್ದ ಕೆರೆಯಿಂದ ಕೊಡಪಾನಗಳಲ್ಲಿ ನೀರನ್ನು ತುಂಬಿ ತುಂಬಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸುತ್ತ ಗರ್ಭಗುಡಿಯ ತುಂಬ ನೀರು ತುಂಬಿ ದೇವರನ್ನು ಮುಳುಗಿಸಿಬಿಟ್ಟಿದ್ದೆವು! ಹಾಗೆ ಮುಳುಗಿಸುತ್ತಿದ್ದಂತೆಯೇ ಮಳೆಹನಿಗಳು ಬೀಳತೊಡಗಿ ಜನಗಳೆಲ್ಲ ಹರ್ಷೋದ್ಘಾರ ಮಾಡಿದ್ದೆವು. ಕೋಡನಕಟ್ಟೆಯ ಸಿದ್ಧಿವಿನಾಯಕನ ಮಹಿಮೆಗೆ ಬೆರಗಾಗಿದ್ದೆವು. ಈಗಲೂ ಹಾಗೇ ಮಾಡೋಣವಾ ಅಂದರೆ ಹಿರೇಭಟ್ಟರು ಹೇಳುತ್ತಿದ್ದಾರೆ, 'ಈಗ ಮಾಡಿದ್ರೆ ಏನೂ ಉಪಯೋಗ ಇಲ್ಲೆ.. ಜನಗಳಲ್ಲಿ ಭಕ್ತಿ, ಶ್ರದ್ಧೆಯೇ ಇಲ್ಲೆ. ಪರ್ಜನ್ಯ ಮಾಡೋಣ ಅಂದ್ರೆ ಕೊಡಪಾನದಲ್ಲಿ ಯಾಕೆ ನೀರು ಒಯ್ಯಬೇಕು, ಡೈರೆಕ್ಟಾಗಿ ಒಂದು ಪೈಪ್ ಎಳೆದು ಪಂಪ್‌ಸೆಟ್ಟಲ್ಲಿ ಎತ್ತಿ ಸೀದಾ ದೇವರ ನೆತ್ತಿ ಮೇಲೇ ನೀರು ಬೀಳಹಂಗೆ ಮಾಡ್ಲಕ್ಕಲಾ ಅಂತ ಹೇಳ್ತಾರೆ ಈಗಿನ್ ಹುಡುಗ್ರು..! ದೇಶದ ತುಂಬ ಅನಾಚಾರ. ಹಿಂಗಾದ್ರೆ ಮಳೆಯೂ ಇಲ್ಲೆ ಬೆಳೆಯೂ ಇಲ್ಲೆ.' ನನಗೆ ಹತಾಶೆಯಾಗುತ್ತದೆ.

ಮಂತ್ರಿಗಳೆಲ್ಲ ರೆಸಾರ್ಟಿನಲ್ಲಿ ಕುಳಿತು ಇದಕ್ಕೆ ಪರಿಹಾರವೇನು ಅಂತ ಮಂಥನ ಮಾಡುತ್ತಿದ್ದಾರೆ. ನ್ಯೂಸ್‌ಪೇಪರ್ರು, ಟಿವಿ9 ಎಲ್ಲಾ ಕಡೆ ಬರಲಿರುವ ಬರದ ಬಗ್ಗೆ ಚರ್ಚೆ. ನಾನೂ ಇಲ್ಲೇ ಕೂತು ಯೋಚಿಸುತ್ತಿದ್ದೇನೆ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಹೇಗೆ ಅಂತ. ಆದರೆ ಕಲ್ಲುಬಂಡೆಗಳ ಸಂದಿಯೊಳಗೆಲ್ಲೋ ಅಡಗಿ ಕುಳಿತುಕೊಂಡಿರುವ ಅವನ್ನು ಹುಡುಕುವುದೇ ಕಷ್ಟದ ಕೆಲಸ. ಮಳೆ ಬಂದಮೇಲೆಯೇ ಅವು ಹೊರಗೆ ಬರುವುದು. ಇಲ್ಯಾರೋ ಹೇಳುತ್ತಿದ್ದಾರೆ, 'ಅದು ಕಪ್ಪೆ ಅಲ್ಲ; ಕತ್ತೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಆಗುತ್ತೆ' ಅಂತ. ಹಾಗಾದರೆ ಕೆಲಸ ಸುಲಭ. ಬೆಂಗಳೂರಿನಲ್ಲಿ ಕತ್ತೆಗಳಿಗೇನು ಬರವಿಲ್ಲ. 'ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ದೇಶಕ್ಕೆ ಒಳಿತಾಗುವಂಥದ್ದೇನಾದರೂ ಮಾಡುವುದು ಒಳ್ಳೆಯದು, ಕತ್ತೆ ಹುಡುಕಲಿಕ್ಕೆ ಹೋಗೋಣ ಬನ್ನಿ' ಅಂತ ನನ್ನ ಕಲೀಗುಗಳಿಗೆ ಹೇಳಿದರೆ, 'ನೀನೀಗ ಮಾಡ್ತಿರೋದು ಕತ್ತೆ ಕಾಯೋ ಕೆಲಸವೇ ಅಲ್ಲವೇನೋ' ಅಂತ ಅವರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದಾರೆ. ನಾನು ಹ್ಯಾಪ ಮೋರೆ ಹಾಕಿಕೊಂಡು ಕುಳಿತಿದ್ದೇನೆ.

ಹೊರಗೆ ನೋಡಿದರೆ ಕಣ್ಣು ಕುಕ್ಕುವ ಬಿಸಿಲು. ನನ್ನೊಳಗೆ ಶುಷ್ಕ ಕತ್ತಲೆ.

Thursday, November 27, 2008

ಮೋಡ ಕವಿದ ವಾತಾವರಣ

‘ಸ್ಥಳೀಯ ಹವಾ ಮುನ್ಸೂಚನೆಯಂತೆ, ಬೆಂಗಳೂರು ಮತ್ತು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ’ -ಊರಲ್ಲಿದ್ದಾಗ, ರೇಡಿಯೋ-ಟೀವಿಗಳ ಹವಾ ವರ್ತಮಾನದಲ್ಲಿ ಪ್ರತಿದಿನ ಕೇಳಿಬರುತ್ತಿದ್ದ ಸಾಲು. ‘ಇದೇನು ಬೆಂಗಳೂರಿನಲ್ಲಿ ಯಾವಾಗಲೂ ಮೋಡ ಕವಿದ ವಾತಾವರಣ ಇರುತ್ತದಾ?’ ಅಂತ ನಮಗೆ ಆಶ್ಚರ್ಯವಾಗುತ್ತಿತ್ತು. ಆದರೆ ನಾನು ಬೆಂಗಳೂರಿಗೆ ಬರುವಷ್ಟರಲ್ಲಿ ಬೆಂಗಳೂರು ‘ಉದ್ಯಾನನಗರಿ’ಯೆಂಬ ಬಿರುದಿಗೆ ತದ್ವಿರುದ್ಧವಾಗಿ ತನ್ನ ಹಸಿರು ಬಟ್ಟೆಯನ್ನೆಲ್ಲಾ ಬಿಚ್ಚಿಹಾಕಲು ಶುರು ಮಾಡಿತ್ತು. ಹಾಗಾಗಿ ನಾನು ಇಂಟರ್‌ವ್ಯೂಗೆಂದು ಕಂಪನಿ-ಕಂಪನಿ ಅಲೆಯುವಾಗ, ಬಿಸಿಲೆಂಬುದು ಇಂಟರ್‌ವ್ಯೂವರುಗಳಿಗಿಂತ ಭಯಾನಕವಾಗುವ ಹಂತಕ್ಕೆ ಮುಟ್ಟಿತ್ತು. ಈಗಂತೂ ಹಸಿರು ನೋಡಲು ಕಬ್ಬನ್ ಪಾರ್ಕು-ಲಾಲ್‌ಭಾಗುಗಳಿಗೇ ಹೋಗಬೇಕು ಎಂಬಂತಹ ಪರಿಸ್ಥಿತಿ. ಇಲ್ಲಿ ನನ್ನ ಆಫೀಸಿನ ಬಳಿ ರೇಸ್‌ಕೋರ್ಸ್ ರಸ್ತೆ ಅಗಲೀಕರಣ ಅಂತ ಅಷ್ಟೂ ಮರಗಳನ್ನು ಉರುಳಿಸಿದ್ದಾರೆ. ಅದನ್ನು ಮುಗಿಸಿ, ಪ್ಯಾಲೇಸ್ ರಸ್ತೆಯ ಕಡೆ ಹೋಗುತ್ತಿವೆ ಬುಲ್ಡೋಜರ್-ಜೆಸಿಬಿಗಳು. ಸಂಕಟವಾಗುತ್ತದೆ.

ಆದರೆ ಅದೇನೋ ತಮಿಳುನಾಡಿನಲ್ಲಿ ಡಿಪ್ರೆಶನ್ನಂತೆ, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸೂರ್ಯರಶ್ಮಿ ನಾಪತ್ತೆ! ‘ವ್ಹಾಟ್ ಎ ರೋಮಾಂಟಿಕ್ ವೆದರ್..! ಊಟೀಲಿ ಇದ್ದಹಾಗಿದೆ’ ಎನ್ನುವ ಫ್ರೆಂಡು, ‘ಸುಶ್ರುತ್, ಈ ವೆದರಲ್ಲಿ ಕೆಲಸ ಮಾಡಬಾರ್ದು ಕಣ್ರೀ.. ಒಂದು ಕ್ಯಾಂಪ್‌ಫೈರ್ ಹಾಕ್ಕೊಂಡು ಚಿಲ್ಲಾಗಿ ಕೂತು ವ್ಹಿಸ್ಕಿ ಹಾಕ್ಬೇಕು!’ ಎನ್ನುವ ಕಲೀಗು, ಒಂದೇ ಒಂದು ಮೆಸೇಜು ಸಹ ಕಳುಹಿಸದೇ ಜೀವ ತಿನ್ನುವ ಹುಡುಗಿ... ಛೇ! ಲೈಫು!

ಐಟಿ ಇಂಡಸ್ಟ್ರಿ ಕುಸಿತ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಎಂಪ್ಲಾಯ್‌ಮೆಂಟ್ ರೇಶಿಯೋ ಕುಸಿತ, ಶೇರ್‌ಮಾರ್ಕೆಟ್ ಕುಸಿತ -ಇತ್ಯಾದಿ ಕುಸಿತಗಳ್ಯಾವುವೂ ನಮ್ಮ ಲೀಗಲ್ ಇಂಡಸ್ಟ್ರಿಯ ಮೇಲೆ ಯಾವುದೇ ಪರಿಣಾಮ ಉಂಟುಮಾಡದಿದ್ದರೂ, ಈ ಇದೇನೋ ‘ವಾಯುಭಾರ ಕುಸಿತ’ ಮಾತ್ರ ನನ್ನೆಲ್ಲಾ ಕಲೀಗುಗಳನ್ನೂ ನಿರುತ್ಸಾಹಿಗಳನ್ನಾಗಿ ಮಾಡಿಬಿಟ್ಟಿದೆ! ಬೆಳಗ್ಗೆಯಿಂದ ಏನೆಂದರೆ ಏನೂ ಕೆಲಸ ಮಾಡದೇ ಕುಳಿತಿದ್ದೇವೆ ಎಲ್ಲರೂ. ಇದ್ದುದರಲ್ಲೇ ನಮ್ಮನ್ನು ಬೆಚ್ಚಗಿಟ್ಟಿರುವುದು ಎಂದರೆ, ಮುಂಬಯಿಯಲ್ಲಿ ಆಗಿರುವ ಸರಣಿ ಬಾಂಬ್ ಸ್ಪೋಟಗಳು. ನ್ಯೂಸ್ ಛಾನೆಲ್ ವರದಿಗಾರರ ಮೇಲಂತೂ ಒಂದು ತರಹದ ‘ಮೋದ ಕವಿದ ವಾತಾವರಣ’ ಸೃಷ್ಟಿಯಾಗಿಬಿಟ್ಟಿದೆ. ಸಿ‌ಎನ್ನೆನ್ ಐಬಿ‌ಎನ್, ಎನ್‌ಡಿಟಿವಿ ಮುಂತಾದ ಛಾನೆಲ್ಲುಗಳು ತಾಜ್, ಒಬೇರಾಯ್, ನಾರಿಮನ್ ಪಾಯಿಂಟುಗಳ ಪಕ್ಕದಲ್ಲಿ ನಿಂತು ಲೈವ್ ವರದಿ ಮಾಡುತ್ತಿವೆ: ‘ನಹೀ ಬತಾ ಸಕ್ತೇ.. ಒಳಗಡೆ ಎಷ್ಟು ಜನ ಇದಾರೆ ಅಂತ ಹೇಳಕ್ಕೇ ಆಗಲ್ಲ’.. ‘ಅದೋ ಸ್ಪೆಶಲ್ ಸ್ಕ್ವಾಡ್ ಬಂತು’.. ‘ಹಾಂ, ಗುಂಡಿನ ಶಬ್ದ ಕೇಳಿಸ್ತಿದೆಯಾ? ಕ್ಯಾನ್ಯೂ ಹಿಯರ್?’.. ‘ಇಗೋ, ಇದೀಗ ಎನ್‌ಕೌಂಟರ್ ಶುರು ಆಗ್ತಿದೆ’.. ‘ತಾಜ್ ಹೋಟೆಲಿನಲ್ಲಿ ಸಿಕ್ಕಿಹಾಕಿಕೊಂಡಿರೋರು ಒಬ್ಬರು ನಂಗೆ ಎಸ್ಸೆಮ್ಮೆಸ್ ಮಾಡಿದಾರೆ’... ಎಲ್ಲರೂ ಉಸಿರು ಬಿಗಿಹಿಡಿದು ನೋಡುತ್ತಿದ್ದೇವೆ.. ಅಬ್ಬ! ಈ ಟೆರರಿಸಂ ಮತ್ತು ಬಾಂಬ್ ಸ್ಪೋಟಗಳು ನಮ್ಮ ದೈನಂದಿನ ಜೀವನಕ್ಕೆ ಎಂತಹ ಒಂದು ‘ಥ್ರಿಲ್’ ತಂದುಬಿಟ್ಟವು! ಎಲ್ಲಿ ಯಾವಾಗ ಸಿಡಿಯೊತ್ತೆ ಅಂತಲೇ ಹೇಳಕ್ಕಾಗಲ್ಲ! ಕೋರ್ಟಿಗೆ ಹೋಗಿರೋ ಕಲೀಗು ವಾಪಸು ಬರ್ತಾನೋ ಇಲ್ವೋ ಯಾರಿಗ್ಗೊತ್ತು? ಇವತ್ತು ನಾನೇ ಆಫೀಸಿನಿಂದ ಮನೆಗೆ ವಾಪಸು ಹೋಗ್ತೀನೋ ಇಲ್ವೋ? ಹಹ್!

ಆದರೆ ಇನ್ನು ಸ್ವಲ್ಪ ಕಾಲಕ್ಕೆ ಇದೂ ನಮಗೆ ಅಭ್ಯಾಸವಾಗಿಬಿಡಬಹುದೇನೋ? ಮುಂಬಯಿಯ ಗೆಳತಿಯೊಬ್ಬಳಿಗೆ ಪಿಂಗ್ ಮಾಡಿ ‘ಪರಿಸ್ಥಿತಿ ಹೇಗಿದೆ ನೀನಿರೋ ಜಾಗದಲ್ಲಿ?’ ಅಂತ ಕೇಳಿದೆ. ‘ಯಾಸ್ ಎವೆರಿಡೇ! ನಾರ್ಮಲ್ ಇದೆ. ನಾನು ಆಫೀಸಿನಲ್ಲಿದೀನಿ. ನನ್ ಗಂಡನೂ ಆಫೀಸಿಗೆ ಹೋಗಿದಾನೆ. ಸ್ಕೂಲುಗಳಿಗೆ ರಜೆ ಕೊಟ್ಟಿರೋದ್ರಿಂದ ಕೆಲ ಮಕ್ಕಳು ಹೊರಗೆ ಆಡ್ತಿರೋದು ಇಲ್ಲಿ ಕಿಟಕಿಯಿಂದ ಕಾಣ್ತಿದೆ. ನೀವೆಲ್ಲಾ ನೋಡ್ತಿರೋ ಹಾಗೆ ನಾನೂ ಟೀವಿಯಲ್ಲಿ ನೋಡ್ತಿದೀನಿ’ ಅಂದಳು. ಅಚ್ಚರಿಯಾಯಿತು. ‘ಛೇ! ಮತ್ತೆ ನಾನ್ಯಾಕೆ ಬೆಳಗ್ಗೆಯಿಂದ ಒಳ್ಳೇ ಸಸ್ಪೆನ್ಸ್ ಪಿಚ್ಚರ್ ನೋಡಿದಹಾಗೆ ನ್ಯೂಸ್ ನೋಡುತ್ತಿದ್ದೇನೆ?’ ಅನ್ನಿಸಿ, ಸಿ‌ಎನ್ನೆನ್ ವೆಬ್‌ಸೈಟ್‌ನ ವಿಂಡೋವನ್ನು ತಟ್ಟನೆ ಕ್ಲೋಸ್ ಮಾಡಿದೆ.

ಮತ್ತೆ ಮೋಡ ಕವಿಯಿತು. ಕೊಂಚ ಎದ್ದು ಹೋಗಿ, ಪಕ್ಕದ ಕಿಟಕಿಯ ಗಾಜಿನ ಮೇಲೆ ನಿಂತಿರುವ ಮಳೆನೀರ ಹನಿಗಳ ಮೂಲಕ ಹೊರಗೆ ನೋಡಿದರೆ, ಕಪ್ಪು ಜಾಕೆಟ್ಟನ್ನು ಬೆಚ್ಚಗೆ ಹೊದ್ದುಕೊಂಡಿರುವ ಪಕ್ಕದ ಆಫೀಸಿನ ಹುಡುಗಿ ತನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವುದು ಕಾಣುತ್ತಿದೆ. ತಂಡಿಯಾಗಿರುವ ಅದರ ಎಂಜಿನ್ ಏನೆಂದರೂ ಸ್ಟಾರ್ಟ್ ಆಗುತ್ತಿಲ್ಲ. ‘ಕೆಳಗಿಳಿದು ಹೋಗಿ ಸಹಾಯ ಮಾಡಲಾ?’ ಅಂದುಕೊಳ್ಳುತ್ತೇನೆ. ಮತ್ತೆ, ‘ಮೈಯೆಲ್ಲಾ ಒದ್ದೆಯಾಗುತ್ತದೆ, ಬೇಡ’ ಅಂತ ಸುಮ್ಮನಾಗುತ್ತೇನೆ.

ವಾಪಸು ಬಂದು ಕಂಪ್ಯೂಟರ್ ಮುಂದೆ ಕೂತರೆ, ಯಾರೋ ಪಿಂಗ್ ಮಾಡುತ್ತಾರೆ: ‘ಶೇಮ್‌ಲೆಸ್ ಯಾರ್.. ಈ ಯುಪಿ‌ಎ ಸರ್ಕಾರ, ನಮ್ಮ ಪೋಲೀಸ್ ವ್ಯವಸ್ಥೆ.....’ ನಾನು ಸೈನ್‌ಔಟ್ ಆಗುತ್ತೇನೆ. ಗೂಗಲ್ ರೀಡರ್ ಹೊಸ ಬ್ಲಾಗ್ ಅಪ್‌ಡೇಟ್‌ಗಳನ್ನು ತೋರಿಸುತ್ತಿದೆ. ಅಲ್ಲೂ ಶುರುವಾಗಿಬಿಟ್ಟಿದೆ: ‘ಪ್ರತೀಕಾರ’, ‘ಪ್ರತಿಧಾಳಿ’, ‘ಪ್ರತಿಭಟನೆ’, ‘ಈ ಮುಸ್ಲಿಮರಿದ್ದಾರಲ್ಲಾ...’ ಚರ್ಚೆಗಳು. ವಾದಗಳು. ಬೆಚ್ಚಗೆ, ಅವರವರ ಆಫೀಸು-ಮನೆಗಳಲ್ಲಿ ಕೂತು.

ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ.