Showing posts with label ಪುಸ್ತಕ ಬಿಡುಗಡೆ. Show all posts
Showing posts with label ಪುಸ್ತಕ ಬಿಡುಗಡೆ. Show all posts

Monday, August 10, 2009

Thank you!












ಇನ್ನಷ್ಟು ಚಿತ್ರಗಳು: ಇಲ್ಲಿ, ಇಲ್ಲಿ ಮತ್ತು ಇಲ್ಲಿ.

ಈ ಖುಶಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದ, ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್!

Monday, August 03, 2009

ಖುಶಿಯ ಕರೆಯೋಲೆ



ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು, ನಂಗೆ ಖುಶಿಯಾಗಿದೆ! :-)

ಯಾಕೇಂದ್ರೆ, ನನ್ನದೊಂದು ಲಲಿತ ಪ್ರಬಂಧಗಳ ಸಂಕಲನ ಹೊರಬರುತ್ತಿದೆ. 'ಹೊಳೆಬಾಗಿಲು' ಅಂತ ಹೆಸರಿಟ್ಟಿದ್ದೇನೆ. ನಮ್ಮೆಲ್ಲರ ಪ್ರೀತಿಯ ಜೋಗಿ, ಇದಕ್ಕೆ ಮುನ್ನುಡಿ ಬರೆದು ಕೊಟ್ಟಿದಾರೆ. 'ಪ್ರೀತಿಯ ಹುಡುಗಿ'ಯ ಪ್ರೀತಿಯ ಹುಡುಗ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡ್ತಾರೆ. ಪುಸ್ತಕದೊಳಗೆ ಗೆಳೆಯ ಕಲಾಕಾರ ರಾಘು ಬಿಡಿಸಿದ ರೇಖಾಚಿತ್ರಗಳಿವೆ. ನನ್ನ ಕಾಟ ಎಲ್ಲಾ ಸಹಿಸಿಕೊಂಡು ಮುಖಪುಟ ರೂಪಿಸಿಕೊಟ್ಟದ್ದು ನೆಂಟ ರವೀಶ. ನಮ್ಮದೇ ಸಂಸ್ಥೆ ಪ್ರಣತಿ ಪ್ರಕಟಿಸ್ತಿರೋ ಈ ಪುಸ್ತಕ, ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ಯೋಜನೆಯಲ್ಲಿ ಆಯ್ಕೆಯಾಗಿತ್ತು.

ಅವತ್ತೇ ಡಾರ್ಲಿಂಗ್ ಶ್ರೀನಿಧಿಯ ಕವನಗುಚ್ಛ 'ಹೂವು ಹೆಕ್ಕುವ ಸಮಯ'ವೂ ಬಿಡುಗಡೆಯಾಗ್ತಿದೆ. ಅದರ ಬಗ್ಗೆ ಮಾತಾಡೋರು ರಾಧಾ-ಮಾಧವರು ಹರಸಿಹರೇನೋ ಎಂಬಂತೆ ಬರೆವ ಕವಿ ಎಚ್ಚೆಸ್ವಿ. ಜೋಗಿ ಸರ್ ಆಗೋದೇ ಇಲ್ಲ ಅಂದ್ರೂನೂ "ನೀವು ವೇದಿಕೆ ಮೇಲೆ ಇರಲೇಬೇಕು" ಅಂತ ನಾವು ಹಟ ಮಾಡಿ ಒಪ್ಪಿಸಿದ್ದೇವೆ. ಅವರು ಒಪ್ಪಿಕೊಂಡಿದಾರೆ.

ಮನೆಗೆ ಫೋನ್ ಮಾಡಿ ಅಪ್ಪ-ಅಮ್ಮ ಇಬ್ರೂ ಬನ್ನಿ ಅಂತ ಹೇಳಿದ್ರೆ "ಮಗನೇ ಮಳೇ ಅಂದ್ರೆ ಮಳೆ. ತ್ವಾಟಕ್ಕೆ ಕೊಳೆ ಔಷಧಿ ಹೊಡೆಸ್ತಾ ಇದ್ದಿ. ಅಲ್ದೇ ಅಜ್ಜನ್ನ ಒಬ್ಬವನ್ನೇ ಬಿಟ್ಟಿಕ್ ಬರಕ್ಕೆ ಆಗದಿಲ್ಲೆ. ಯಾರಾದ್ರೂ ಒಬ್ಬರಾದ್ರೂ ಬರಕ್ಕೆ ಟ್ರೈ ಮಾಡ್ತ್ಯ" ಅಂತ ಹೇಳಿದ್ದಾರೆ.

ಇನ್ನೇನು ಉಳೀತು? ಈ ಖುಶಿಯೆಲ್ಲ ಡಬಲ್ ಆಗಲಿಕ್ಕೆ ನೀವು ಬರಬೇಕು. ಈ ಅಕ್ಷರಗಳನ್ನೇ ಅಕ್ಷತೆ ಅಂದ್ಕೊಂಡು ಸ್ವೀಕರಿಸಿ. ನಾನು, ನಿಧಿ ಮತ್ತು ಪ್ರಣತಿಯ ಗೆಳೆಯರೆಲ್ಲ ನಿಮ್ಮನ್ನ ಎದುರುಗೊಳ್ಳಲಿಕ್ಕೆ ಕಾಫಿ ಸಮೇತ ಕಾಯ್ತಿರ್ತೀವಿ. ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಹಾಲ್‌ನಲ್ಲಿ ಬರೋ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ. ಇನ್ವಿಟೇಶನ್ ಇಲ್ಲಿದೆ.

ತಪ್ಪಿಸಿದ್ರೆ ನಮಗೆ ಬೇಜಾರಾಗತ್ತೆ. ಹಾಗೆ ಮಾಡ್ಬೇಡಿ.

ಕಾಯುತ್ತಾ,

ಪ್ರೀತಿಯಿಂದ,

-ಸು

Thursday, February 07, 2008

ಚಿತ್ರಚಾಪ -ಇದು ಮೊದಲ ತೊದಲು

ಸೂರ್ಯ ತನ್ನತ್ತ ವಾಲುತ್ತಲೇ ಪಶ್ಚಿಮದ ದಿಗಂತ ನಾಚಿ ಕೆಂಪಾಗಿಬಿಟ್ಟಿತ್ತು. ಹಕ್ಕಿಗಳು ಗುಂಪುಗುಂಪಾಗಿ ಮನೆ ಕಡೆ ಹೊರಟಿದ್ದವು. ಸಂಜೆ, ತನ್ನ ಸೌಂದರ್ಯಕ್ಕೆ ತಾನೇ ಮೈಮರೆತಂತಿತ್ತು. ಗಂಧರ್ವ ಲೋಕದತ್ತ ನಡೆಯುವವರಂತೆ ಸುಮಂತ ಮತ್ತು ರಾಜಿ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದರು. ಸುಮಂತ ರಾಜಿಗಾಗಿ ಹಿತ್ತಿಲ ಬೇಲಿಯ ಗಿಡದಲ್ಲಿದ್ದ ಗೌರಿ ಹೂವನ್ನು ಕೊಯ್ದುಕೊಟ್ಟ. ಸಂಜೆ ಮುಗಿಲ ಬಣ್ಣ ಗೌರಿ ಹೂವಿನ ಬಣ್ಣಕ್ಕೇ ತಿರುಗಿತು. ಸ್ವಲ್ಪ ಮುಂದೆ ನಡೆದ ಸುಮಂತ, ಮುತ್ತುಗದ ಹೂವಿನ ಗೊಂಚಲೊಂದನ್ನು ಕೊಯ್ದು ತಾನೇ ರಾಜಿಯ ಮುಡಿಗೇರಿಸಿದಮೇಲಂತೂ ಸಂಜೆಗೆ ಅಲ್ಲೇ ರಾತ್ರಿಯ ಮಾದಕತೆ ಪ್ರಾಪ್ತವಾಗಿಬಿಟ್ಟಿತು.

ಶಾಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪುಗಳಲ್ಲಿ ಕೆಲಸ ಮಾಡಿ ಗೊತ್ತಿದ್ದ ಸುಮಂತ ರಾಜಿಗಾಗಿ ಮರ ಹತ್ತಿ ಸೀತೆಪೇರಲೆ ಹಣ್ಣನ್ನು ಕೊಯ್ದು ಕೊಟ್ಟ. ಮುಂದೆ ಅವರು ಪರಗಿ ಮಟ್ಟಿ ನುಗ್ಗಿ ಪುಟ್ಟ ಪುಟ್ಟ ಪರಗಿ ಹಣ್ಣುಗಳನ್ನು ಒಂದು ಮುಷ್ಟಿಯಾಗುವಷ್ಟು ಸಂಗ್ರಹಿಸಿದರು. ಒಂದೊಂದೇ ಹಣ್ಣನ್ನು ಬಾಯಿಗೆ ಎಸೆದುಕೊಳ್ಳುತ್ತಾ ಅವರು ಕಾಲುದಾರಿಯಲ್ಲಿ ಸಾಗಿದರು. ಒಂದು ದೊಡ್ಡ ಚಂದ್ರಪೇರಲೆ ಹಣ್ಣಿನ ಗಿಡ ಸಿಕ್ಕಿತು. ಮರದ ಮೇಲ್ಗಡೆ ಎತ್ತರದಲ್ಲಿ ಎರಡು ದೋರಗಾಯಿಗಳು ಕಂಡವು. ಸುಮಂತ ಬಡಿಗೆ ಬೀಸಿ ಒಂದನ್ನು ಕೆಡವಿದ. ‘ನಿಂಗಿಲ್ವಲ್ಲೋ?’ ಎಂದ ರಾಜಿಗೆ ‘ಪರ್ವಾಗಿಲ್ಲ, ನೀನು ತಿನ್ನು’ ಎಂದ. ಆದರೂ ರಾಜಿ ತಾನೇ ಬಡಿಗೆ ತಗೊಂಡು ಬೀಸಲಿಕ್ಕೆ ನೋಡಿದಳು. ಆದರೆ ಅವಳು ಎಸೆದದ್ದು ಆ ರೆಂಬೆಯ ಹತ್ತಿರಕ್ಕೂ ಹೋಗಲಿಲ್ಲ. ಸುಮಂತ ರಾಜಿಯನ್ನು ರೇಗಿಸಿದ. ಅದಕ್ಕೆ ರಾಜಿಯ ಮುಖ ಕೆಂಪಾದದ್ದು ಕಂಡು ಸಂಜೆ ತಾನು ಕಪ್ಪಾಗತೊಡಗಿತು.

ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ಒಡಗೂಡತೊಡಗಿದವು. ಮಳೆಗಾಲದಲ್ಲಿ ನೀರಾಗಿ ಸುರಿದೂ ಅಳಿದುಳಿದಿದ್ದ ಮೋಡಗಳು ಅದ್ಯಾವುದೋ ಮಾಯೆಯ ಗಾಳಿಗೆ ಒತ್ತಿಕೊಂಡು ಸೀದಾ ಇಲ್ಲಿಗೆ ಬಂದಿದ್ದವು. ಆಗಲೇ ಕತ್ತಲಾವರಿಸಲಾರಂಭಿಸಿದ್ದರಿಂದ ಸುಮಂತನಿಗಾಗಲೀ ರಾಜಿಗಾಗಲೀ ಈ ಪರಿಣಾಮ ತಕ್ಷಣ ಗೊತ್ತಾಗಲಿಲ್ಲ. ತಣ್ಣನೆಯ ಗಾಳಿ ಬೀಸಲಾರಂಭಿಸಿದಾಗ ಅವರು ಆಗಸದತ್ತ ನೋಡಿದರು.

“ಓಹ್! ಮಳೆ ಬರುವಂತಿದೆ ಕಣೇ ರಾಜೀ..” ಎಂದ ಸುಮಂತ.
“ಅಯ್ಯೋ.. ಬೇಗ ಬೇಗ ಮನೆ ಸೇರಿಕೊಳ್ಳೋಣ ಬನ್ನಿ..” ರಾಜಿ ಅವಸರಿಸಿದಳು.

ಅವರು ಕಾಡ ತಂಪು, ಹೂಗಳ ಕಂಪು, ಜೀರುಂಡೆಗಾನದ ಇಂಪು ಮತು ಸಂಜೆಯ ಕೆಂಪನ್ನು ಸವಿಯುತ್ತಾ ತುಂಬಾ ಮುಂದೆ ಬಂದುಬಿಟ್ಟಿದ್ದರು. ಈಗ ವಾಪಸು ಹೋಗಲಿಕ್ಕೆ ಕನಿಷ್ಟ ಅರ್ಧಗಂಟೆ ಹಾದಿ ಸವೆಸಬೇಕಿತ್ತು. ನಡೆಯತೊಡಗಿದರು. ಮಿಂಚು-ಗುಡುಗುಗಳು ಶುರುವಾದವು. ರಾಜಿ ಸುಮಂತನ ಕೈ ಹಿಡಕೊಂಡಳು. ಸರಸರನೆ ಹೆಜ್ಜೆ ಹಾಕಿದರು. ಮಳೆ ಹನಿಗಳು ಬೀಳತೊಡಗಿದವು...


* * *

ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.

ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ 'ಪುಸ್ತಕ ಲೋಕ'ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು... ಹೇಗೋ ಏನೋ ಅರಿಯೆವು... ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ...

ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ
ಸಮಯ: ಬೆಳಗ್ಗೆ 10:30
ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ನಿಮಗಾಗಿ ಕಾಯುತ್ತಿರುತ್ತೇನೆ.. ಯಾಕೇಂದ್ರೆ, ನೀವು ಬಂದೇ ಬರ್ತೀರಿ ಅಂತ ನಂಗೊತ್ತು...

ಪ್ರೀತಿಯಿಂದ,

-ಸು