Tuesday, September 26, 2006

'ಸರ್ವಸ್ವ'ದ ಬಗ್ಗೆ ಸರ್ವೇಸಾಮಾನ್ಯನ ಒಂದು ಸರ್ವೆ!

ಇಷ್ಟೊತ್ತಿನ ತನಕ ಗೆಳೆಯ ಸಂತೋಷನೊಂದಿಗೆ ಮಾತನಾಡುತ್ತಿದ್ದೆ. ಸಂತೋಷ ಮತ್ತು ನಾನು ಆಗೀಗೊಮ್ಮೆ ಫೋನ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುವ ಸ್ನೇಹಿತರು. ನಮ್ಮ ಮಾತು ತೀರಾ ಭಾವನಾತ್ಮಕವಾಗಿರೊತ್ತೆ. ಸಾಮಾನ್ಯವಾಗಿ ಅದೊಂದು ಚರ್ಚೆಯೇ ಆಗಿರೊತ್ತೆ. ಯಾವುದೋ ಒಂದು topic ಅವನನ್ನು ಕಾಡಲಾರಂಭಿಸಿದಾಗ ಅವನು ನನಗೆ call ಮಾಡುತ್ತಾನೆ. ಆಮೇಲೆ ನಾವಿಬ್ಬರೂ ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಬಹಳಷ್ಟು ಚರ್ಚೆಗಳು ಎಲ್ಲೋ ಶುರುವಾಗಿ ಎಲ್ಲೋ ಹೋಗಿ ಮುಗಿಯುತ್ತವೆ. ಕೆಲವೊಮ್ಮೆ ಅವು right way ನಲ್ಲೇ ಸಾಗುತ್ತವೆ. ಅನೇಕ ಸಲ ಚರ್ಚೆ ದಾರಿ ತಪ್ಪುತ್ತದೆ. ನನ್ನ ಕೆಲ concept ಗಳನ್ನು ಆತ ಒಪ್ಪುವುದಿಲ್ಲ; ಹಾಗೆಯೇ ಅವನ ಕೆಲ ವಾದಗಳನ್ನು ನಾನು ಅಲ್ಲಗಳೆಯುತ್ತೇನೆ. ಒಟ್ಟಿನಲ್ಲಿ ಕೊನೆಯಲ್ಲಿ ಇಬ್ಬರೂ satisfy ಆಗದೇ ಮಾತು ಮುಗಿಸುತ್ತೇವೆ.

ಇವತ್ತು ನಾವು ಮಾತಾಡಿದ್ದು 'ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲನೇ?' ಎಂಬ ವಿಷಯದ ಮೇಲೆ. 'ಹಾಯ್' ನ ಬಾಟಮ್ ಐಟಮ್ ನಲ್ಲಿ ರವಿ ಬೆಳಗೆರೆ ಬರೆದ ಲೇಖನವೊಂದರ ತಳಹದಿಯ ಮೇಲೆ ನಮ್ಮ ವಾದ ಸಾಗಿತ್ತು. ನಾನೆಂದೆ, 'ಹೌದು, ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲ' ಅಂತ. ಆತ ಅದನ್ನು ಒಪ್ಪಲಿಲ್ಲ. ನನ್ನ ವಾದ- ನಾವು ಪ್ರೀತಿಸಿದ ವ್ಯಕ್ತಿ ನಮಗೆ ಸರ್ವಸ್ವವೇ ಅಲ್ಲವೇ? ನೀನೇ ನನ್ನ ಸರ್ವಸ್ವ ಅಂತ ಒಪ್ಪಿಕೊಂಡಿರುತ್ತೇವಲ್ಲವೇ ಅವಳ ಬಳಿ? ಆಕೆಗೆ ನಾನು ಸರ್ವಸ್ವ ಎಂದಾದಾಗ ನಾನು ಆಕೆಯನ್ನು ಸರ್ವಸ್ವ ಅಂದುಕೊಳ್ಳುವುದರಲ್ಲಿ ಯಾವ ತಪ್ಪಿದೆ? ಆಕೆಗೆ ನಾನು ಸರ್ವಸ್ವ ಅಲ್ಲ ಅಂತಾದರೆ, of course, ನನಗೆ ಆಕೆ ಸರ್ವಸ್ವಳಾಗಲಿಕ್ಕೂ ಅರ್ಹಳಲ್ಲ.

ಇಷ್ಟಕ್ಕೂ ಒಬ್ಬ ವ್ಯಕ್ತಿ ನನಗೆ ಸರ್ವಸ್ವ ಯಾವಾಗ ಆಗುತ್ತಾನೆ? ಆತ ನನ್ನೆಲ್ಲಾ need ಗಳನ್ನೂ fulfill ಮಾಡುವವನಾಗಿದ್ದಾಗ. ಬೆಳಗೆರೆಯ ಉದಾಹರಣೆಯನ್ನೇ ಇಲ್ಲಿ ಬಳಸುವುದಾದರೆ, ನಮ್ಮ ಮಗುವಿನ ಮೂಗಿನಲ್ಲಿ ಬಳಪ ಸಿಕ್ಕಿಕೊಂಡಿರುತ್ತದೆ. ನಾವು ಡಾಕ್ಟರ್ ಬಳಿಗೊಯ್ಯುತ್ತೇವೆ. ಆಗಿನ ಆ ಕ್ಷಣದಲ್ಲಿ ಆ ಡಾಕ್ಟರೇ ನಮ್ಮ ಸರ್ವಸ್ವ. ಹೀಗೆ, ನಮ್ಮನ್ನು ಕಷ್ಟದಿಂದ ಪಾರು ಮಾಡುವವರು, ನಮ್ಮ ಅಪೇಕ್ಷೆಯನ್ನು ಈಡೇರಿಸುವವರು ನಮಗೆ ಸರ್ವಸ್ವವಾಗುತ್ತಾರೆ.

ಸಂತೋಷ ನಾನು ಮೊದಲು ಹೇಳಿದ್ದನ್ನೇ ಮತ್ತೆ ಕೈಗೆತ್ತಿಕೊಂಡು ಕೆಣಕಲಾರಂಭಿಸಿದ. 'ಪ್ರೀತಿಸಿದ ವ್ಯಕ್ತಿಯೇ ಸರ್ವಸ್ವ ಅಂದೆಯಲ್ಲಾ, ನೀನು ನಿನ್ನ ತಾಯಿಯನ್ನು ಪ್ರೀತಿಸುತ್ತೀಯ. ಹಾಗಾದರೆ ನೀನು ತಾಯಿಯನ್ನು ಸರ್ವಸ್ವ ಎಂದು ಭಾವಿಸಿದ್ದೀಯಾ? ಪ್ರಾಮಾಣಿಕವಾಗಿ ಉತ್ತರಿಸು.' ನಾನು ಯೋಚಿಸಿದೆ: ಹೌದು, ನನ್ನಮ್ಮ ನನ್ನ ಪಾಲಿಗೆ ಸರ್ವಸ್ವವೇ ಸರಿ. ಹಾಗಿದ್ದಾಗ, ಆಕೆಯೇ ನನ್ನ ಸರ್ವಸ್ವವಾಗಿದ್ದಾಗ, ನಾನ್ಯಾಕೆ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸಬೇಕು? ಅಮ್ಮನಲ್ಲಿ ಇಲ್ಲದ್ದು ಇವಳಲ್ಲಿ ಏನಿದೆ? ಹೌದು, ಸಾಕಷ್ಟಿದೆ. ಅದಕ್ಕಾಗಿಯೇ ನಾನು ಇವಳ ಪ್ರೀತಿಗೆ ಕೈ ಚಾಚಿದ್ದು. ಇವಳು ಅಂತ ಅಷ್ಟೇ ಅಲ್ಲ, ಇವಳ ಪ್ರೀತಿ ಅಲ್ಲದೆಯೂ ನನಗೆ ಇನ್ನೂ ಸಾಕಷ್ಟು ಬೇಕು. ನನಗೆ ಸಂತೋಷನಂತಾ ಉತ್ತಮ ಗೆಳೆಯರ ಸ್ನೇಹ ಬೇಕು, ಬೆಳಗೆರೆಯಂತಾ 'ಗುರುವಲ್ಲದ ಗುರು-ತಂದೆಯಲ್ಲದ ತಂದೆ'ಯ ಬರಹ ಬೇಕು, ಮನಸ್ಸಿಗೆ ಬೇಸರವಾದಾಗ ಮುದ ನೀಡುವಂತಹ ಹಾಡು ಬೇಕು, ನೋಡಲು ಖುಷಿ ನೀಡುವಂತಹ ಸಿನಿಮಾ ಬೇಕು... ನನ್ನ ಬೇಕುಗಳ ಪಟ್ಟಿ ದೊಡ್ಡದಿದೆ. ಇವನ್ನೆಲ್ಲಾ ಕೊಡಮಾಡುವವರು ಆಯಾ ಕ್ಷಣದಲ್ಲಿ ನನ್ನ ಪಾಲಿನ ಸರ್ವಸ್ವಗಳೇ. ಆದರೂ ಒಬ್ಬ ಹುಡುಗಿ ಒಬ್ಬ ಹುಡುಗನಿಗೆ ಕೊಡಬಹುದಾದಂತಹ ಸರ್ವಸ್ವದ ಘಾಢತೆ ಇದೆಯಲ್ಲಾ, ಅದು ಉಳಿದೆಲ್ಲಕ್ಕಿಂತ ಶ್ರೇಷ್ಟವಾದದ್ದು ಅಂತ ನನ್ನ ನಂಬುಗೆ. ಒಬ್ಬ ಹುಡುಗಿ ನನಗೆ ಎಲ್ಲವೂ ಆಗಬಲ್ಲಳು. ಆಕೆ ನನಗೆ ಅತ್ಯುತ್ತಮ ಗೆಳತಿ, ಪ್ರೇಯಸಿ, ಗುರು, ಅಮ್ಮ, ಬಂಧು... ಆಕೆಗೆ ಸರ್ವಸ್ವವೂ ಆಗುವ ಸಾದ್ಯತೆ ಇದೆ. She means everything to me. ಬಹಶಃ ಬೇರೆ ಯಾರಿಗೂ ಈ ಸಾಧ್ಯತೆ ಇಲ್ಲ.

ಸಂತೋಷ ಮತ್ತೆ ನನ್ನನ್ನು cross-question ಮಾಡಿದ: ಹಾಗಾದರೆ 'ಪ್ರೀತಿ' ಮತ್ತು 'ಅವಳಿಗೆ ಸರ್ವಸ್ವವಾಗುವುದು' ('love' and 'being everything to her') ಎರಡೂ ಒಂದೇನಾ? ಒಂದೇ ಎಂತಾದರೆ, ನೀನಾಗ ಹೇಳಿದಂತೆ 'ನಮ್ಮ ಅಪೇಕ್ಷೆಯನ್ನು ಈಡೇರಿಸುವವರೇ ನಮಗೆ ಸರ್ವಸ್ವ'; ಹಾಗಾಗಿ ಪ್ರೀತಿಯೂ ಸಹ ನಿನ್ನ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುವ ಒಂದು ಮಾರ್ಗ ಅಷ್ಟೇನಾ? ನೀನು ಪ್ರೀತಿ ಮಾಡುವುದು ಕೇವಲ ನಿನ್ನ ಅಪೇಕ್ಷೆಗಳ ಈಡೇರಿಕೆಗೋಸ್ಕರವೊ? ನಿರಪೇಕ್ಷ ಪ್ರೇಮವೆಂಬುದಿಲ್ಲವೋ?

ಈ ಬಗ್ಗೆ ಇಬ್ಬರೂ ಸ್ವಲ್ಪ ಚರ್ಚಿಸಿದೆವಾದರೂ, 'ಪ್ರೀತಿ'ಗೆ ಹೊಸ definition ಕೊಡಬೇಕಾದಂತಾದಾಗ, ಅದನ್ನು ಅಲ್ಲಿಗೇ ಕೈಬಿಟ್ಟು ಮತ್ತೆ ವಾಪಾಸು ಬಂದೆವು.

ಇಷ್ಟಕ್ಕೂ 'ಅವಳಿಗೆ ಸರ್ವಸ್ವವಾಗುವುದು' ಅಂದರೇನು? ಅದೊಂದು ಸಾಧ್ಯವಾಗುವಂತಹ ಮಾತಾ? ಯಾವಾಗ 'ಅವಳೇ ನನ್ನ ಸರ್ವಸ್ವ' ಅಂತ ನನಗೆ ಭಾಸವಾಗುತ್ತದೆಯೆಂದರೆ, ನಾನು ಅವಳ ಪ್ರೀತಿಯ ಕೊಳದಲ್ಲಿ ಪೂರ್ತಿ ಮುಳುಗಿಹೋಗಿದ್ದಾಗ. ನಾನು ಯಾರನ್ನು ನೋಡಿದರೂ, ಏನನ್ನು ನೋಡಿದರೂ ಅದರಲ್ಲಿ ಅವಳ ಬಿಂಬವೇ ಕಾಣಿಸುತ್ತದೆ. ಅಮ್ಮನಲ್ಲೂ ಅವಳು, ಗುರುವಿನಲ್ಲೂ ಅವಳು, ಸಿನಿಮಾದ ನಾಯಕಿಯಲ್ಲೂ ಅವಳ ಮುಖ, ಹಾಡಿನ ಗಾಯಕಿಯಲ್ಲೂ ಅವಳ ದನಿ. ಈಕೆ ಹೀಗೆಂದರೆ, ನಾನು ಎಲ್ಲವನ್ನೂ ಅವಳ ಪ್ರೀತಿಯ ಕೊಳದ ನೀರಿನ ಮೂಲಕವೇ ನೋಡುತ್ತಿದ್ದೇನೆ.

ಈ ವಾದದ ಮಧ್ಯೆ ನನಗೆ ಮತ್ತೊಂದು ಅನುಮಾನ ಬಂತು. ಹಾಗಾದರೆ ಈ ಪ್ರೀತಿಯ ಕೊಳ ಬತ್ತಿಹೋದರೆ? 'ನನ್ನ ಸರ್ವಸ್ವ' ಅಂದುಕೊಂಡಿದ್ದ ಅವಳು ಬಿಟ್ಟುಹೋದರೆ? ಸರ್ವಸ್ವವೂ ಹೋದಮೇಲೆ ಉಳಿಯುವುದೇನು? ನಾನೂ ಉಳಿಯಬಾರದಲ್ಲವೇ? ಆದರೂ ಎಷ್ಟೊಂದು ಜನ ಹೀಗಾದಮೇಲೂ ಉಳಿದಿದ್ದಾರಲ್ಲವೇ? ಸರ್ವಸ್ವ ಎಂದುಕೊಂಡಿದ್ದ ಹುಡುಗಿ ಬಿಟ್ಟುಹೋದಮೇಲೂ ಬದುಕಿದ್ದಾರೆ, ಮತ್ತೊಂದು 'ಸರ್ವಸ್ವ'(?) ದೆಡೆಗೆ ಕಣ್-ಚಾಚಿದ್ದಾರೆ. ಹಾಗಾದರೆ ಪ್ರೀತಿ, ಪ್ರೀತಿಸಿದ ಹುಡುಗಿ ಸರ್ವಸ್ವ ಅಲ್ಲವೇ? ಯಾರೂ ಯಾರಿಗೂ 'ಸರ್ವಸ್ವ' ಆಗಲಿಕ್ಕೆ ಸಾಧ್ಯವಿಲ್ಲವೇ? 'ಅವಳೇ ನನ್ನ ಸರ್ವಸ್ವ' ಅಂದುಕೊಳ್ಳುವುದು ಕೇವಲ ಭ್ರಮೆಯೇ? 'Being everything to somebody' ಎಂಬುದು ಕೇವಲ ಆ ಕ್ಷಣದ ಸತ್ಯವೇ? ಅಷ್ಟೇನೇನೋ ಅನ್ನಿಸಿಬಿಟ್ಟಿತು -ಫೋನೀಟ್ಟ ಮೇಲೆ.

ಗೆಳೆಯನಿಗೆ SMS ಮಾಡಿದೆ: 'ಸಂತೋಷ, ಅವಳೇ ಸರ್ವಸ್ವ ಅಲ್ಲದಿರಬಹುದು, ಆದರೆ ಅವಳೇ ನನ್ನ ಸರ್ವಸ್ವ - ಮತ್ತು ಅವಳಿಗೆ ನಾನೇ ಸರ್ವಸ್ವ ಅಂದುಕೊಳ್ಳುವಾಗ ಸಿಗುವ ನಿರಾಳತೆ, ಖುಷಿ ಮತ್ತು ಹಮ್ಮು ಇದೆಯಲ್ಲ, ಅವು ನಿಜಕ್ಕೂ ಉನ್ನತವಾದವು. ಮತ್ತು ಅದಕ್ಕಾಗಿಯಾದರೂ ಪ್ರೀತಿಸಬೇಕು!' ಅಂತ. 'Good Night' ಒಂದು ಆ ಕಡೆಯಿಂದ ಬಂತು.

(೨೫.೦೯.೨೦೦೬; ರಾತ್ರಿ ೧.೩೦)


--------------
ಇಲ್ಲಿ 'ಅವಳು' ಅಂತ ಇರುವಲ್ಲೆಲ್ಲ 'ಅವನು' ಅಂತ, replace ಮಾಡಿಕೊಂಡರೂ ಈ ಲೇಖನದ ದಾಟಿ ಬದಲಾಗಲಾರದು ಅಲ್ಲವೇ? (ಹುಡುಗಿಯರೇ ಉತ್ತರಿಸಬೇಕು!)

Friday, September 22, 2006

ಮಬ್ಬಿನಿಂದ ಕತ್ತಲೆಯೆಡೆಗೆ

ಕರುಣಾಳು ಬಾ ಬೆಳಕೇ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಎಂದು ನಾನು ಹಾಡಿದಾಗ ಕತ್ತಲೆಯೇನು ಇರಲಿಲ್ಲ;
ಮಬ್ಬಿತ್ತು ಅಷ್ಟೆ.

ನೀನು ಬೆಳಕಾಗಿ ಬಂದೆ.
ನಾನು ಖುಷಿಯಲ್ಲಿ ಮುಳುಗಿಹೋದೆ.
ಗಾಳಿ ಬೀಸುವ ಮೊದಲು
ಬಾಗಿಲು
ಭದ್ರಗೊಳಿಸಿಕೊಳ್ಳಬೇಕು ಎಂಬ ಅರಿವು
ನನಗಾದಾಗ ತಡವಾಗಿತ್ತು.

ಜೋರು ಗಾಳಿ ಬೀಸತೊಡಗಿದಾಗ ಭಿನ್ನವಿಸಿಕೊಂಡೆ:
ದೀಪವೂ ನಿನ್ನದೆ
ಗಾಳಿಯೂ ನಿನ್ನದೆ
ಆರದಿರಲಿ ಬೆಳಕು..

ಬೆಳಕು ಉಳಿಯಲಿಲ್ಲ;
ಗಾಳಿ ಬಿಡಲಿಲ್ಲ.
ದೀಪವಾರಿದಾಕ್ಷಣ ಕತ್ತಲು
ಸುತ್ತಮುತ್ತಲೂ.

ಸಣ್ಣ ಬಿಳಿ ಹೊಗೆ ಎದ್ದಿತ್ತೇನೋ-
ಕಾಣಲಿಲ್ಲ ಕತ್ತಲೆಯಲ್ಲಿ.
ಒಳ್ಳೆಯದೇ ಆಯಿತು;
ನನಗೆ ಹೊಗೆ ಎಂದರೆ 'ಹೋಗೇ'.

ಈಗೆಲ್ಲ ಇಲ್ಲಿ ದೀಪ ಉಳಿಸಿ ಹೋದ
ಕಂಪಿನದೇ ರಾಜ್ಯಭಾರ.
ಮತ್ತು ನನ್ನ ಮಂತ್ರಪಠಣ:
ತಮಸೋಮಾ ಜ್ಯೋತಿರ್ಗಮಯ..

Monday, September 18, 2006

ಒಂದು ಪೂರ್ಣ ಕತೆ; ಒಂದು ಅಪೂರ್ಣ ಕತೆ..!

ಕೊಕ್ಕರೆ ಕಥೆ

ಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು. ಅದು ಕೊಕ್ಕರೆಯೊಂದಿಗೆ ಸ್ನೇಹ ಸಂಪಾದಿಸಲು ನೋಡಿತು. 'ಕೊಕ್ಕರೆಯಣ್ಣಾ ಕೊಕ್ಕರೆಯಣ್ಣಾ, ನೀನು ಅದೆಷ್ಟು ಸುಂದರವಾಗಿದ್ದೀಯೆ! ನಿನ್ನ ಮೈಬಣ್ಣ ಅದೆಷ್ಟು ಬಿಳಿ! ಕೋಮಲವಾದ ನಿನ್ನ ಮೈಮಾಟ, ನೀಳವಾದ ಕತ್ತು, ಊದ್ದ-ಚೂಪು ಕೊಕ್ಕು.. ಆಹಾ! ನೀನು ನಿಜಕ್ಕೂ ಸುಂದರಾಂಗ! ನೀನು ನೆಲದ ಮೇಲೆ ಓಡಬಲ್ಲೆಯಷ್ಟೇ ಅಲ್ಲ, ನೀರಿನಲ್ಲಿ ಈಜಬಲ್ಲೆ, ಆಕಾಶದಲ್ಲಿ ಹಾರಬಲ್ಲೆ.. ನನಗೋ, ಆ ಅದೃಷ್ಟ ಇಲ್ಲ...' ಎಂಬುದಾಗಿ ಕೊಕ್ಕರೆಯನ್ನು ಹೊಗಳಲು ಪ್ರಾರಂಭಿಸಿತು. ಕೊಕ್ಕರೆ ನರಿಯ ಹೊಗಳಿಕೆ ಮರುಳಾಯಿತು. ನರಿ ಮತ್ತು ಕೊಕ್ಕರೆ ಸ್ನೇಹಿತರಾದರು. ನರಿ ಹಸಿದಿರುವುದನ್ನು ತಿಳಿದ ಕೊಕ್ಕರೆ, ಒಂದಷ್ಟು ಮೀನುಗಳನ್ನು ಹೆಕ್ಕಿ ನರಿಗೆ ತಿನ್ನಲು ದಡಕ್ಕೆ ಹಾಕಿತು.

ನರಿ ಪ್ರತಿದಿನವೂ ಬರತೊಡಗಿತು. ಕೊಕ್ಕರೆ ನರಿಗೆ ಮೀನುಗಳನ್ನು ಹೆಕ್ಕಿ ಹೆಕ್ಕಿ ಕೊಡುತ್ತಿತ್ತು. ಒಂದು ದಿನ ನರಿ 'ಕೊಕ್ಕರೆಯಣ್ಣಾ, ನೀನು ನಮ್ಮ ಮನೆಗೆ ಒಮ್ಮೆಯೂ ಬಂದೇ ಇಲ್ಲವಲ್ಲ.. ನಾಳೆ ನೀನು ನಮ್ಮ ಮನೆಗೆ ಬಾ, ನನ್ನ ಹೆಂಡತಿ ನಿನಗಾಗಿ ಪಾಯಸ ಮಾಡುತ್ತಾಳೆ' ಎಂದು ಆಹ್ವಾನಿಸಿತು. ನರಿಯ ಕರೆಗೆ ಓಗೊಟ್ಟು ಕೊಕ್ಕರೆ ಮರುದಿನ ನರಿಯ ಮನೆಗೆ ಹೋಗುತ್ತದೆ. ನರಿ ಮತ್ತು ಕೊಕ್ಕರೆ ಮಾತನಾಡುತ್ತಾ ಕುಳಿತಿರುವಾಗ ನರಿಯ ಹೆಂಡತಿ ಒಂದು ಅಗಲವಾದ ಹರಿವಾಣದಲ್ಲಿ ಪಾಯಸವನ್ನು ಸುರಿದು ತಂದು ಕೊಕ್ಕರೆಯ ಮುಂದಿಡುತ್ತದೆ. ಇಬ್ಬರೂ ತಿನ್ನಲಾರಂಭಿಸುತ್ತಾರೆ. ಹರಿವಾಣದಲ್ಲಿ ತಳ ಮುಚ್ಚುವಷ್ಟೇ ಇದ್ದ ಪಾಯಸವನ್ನು ತಿನ್ನಲು ಕೊಕ್ಕರೆಗೆ ಆಗುವುದಿಲ್ಲ. ಅದು ತನ್ನ ಕೊಕ್ಕನ್ನು ಮುಳುಗಿಸಿದರೆ ಒಂದು ಚಮಚದಷ್ಟು ಮಾತ್ರ ಪಾಯಸ ಬಾಯಿಗೆ ಬರುತ್ತಿತ್ತು. ಹಾಗೇ ಅದು ಐದಾರು ಚಮಚ ತಿನ್ನುವುದರೊಳಗೆ ಆ ಕಡೆಯಿಂದ ನರಿ ಬಾಯಿ ಹಾಕಿ ಬರಬರನೆ ತಿನ್ನುತ್ತಾ ಪಾತ್ರೆಯನ್ನು ಖಾಲಿ ಮಾಡಿಬಿಟ್ಟಿತು! ನರಿ ಕೊಕ್ಕರೆಯನ್ನು 'ಹೇಗಿತ್ತು ಪಾಯಸ?' ಅಂತ ಕೇಳಿದ್ದಕ್ಕೆ, ಕೊಕ್ಕರೆ ಸಂಕೋಚಕ್ಕೆ ಬಲಿಯಾಗಿ 'ಚೆನ್ನಾಗಿತ್ತು' ಎಂದು ಹೇಳುತ್ತೆ. ಹಾಗೆಯೇ ಕೊಕ್ಕರೆ ನರಿಯನ್ನು ಮರುದಿನ ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸುತ್ತದೆ.

ಮರುದಿನ ನರಿ ಕೊಕ್ಕರೆಯ ಮನೆಗೆ ಹೋಗುತ್ತದೆ. ಕೊಕ್ಕರೆ ಒಂದು ಪ್ಲಾನ್ ಮಾಡಿರುತ್ತದೆ. ಕೊಕ್ಕರೆ ಒಂದು ಚಿಕ್ಕ ಬೋಗುಣಿಯಲ್ಲಿ ಪಾಯಸವನ್ನು ಹಾಕಿ ತಂದಿಡುತ್ತದೆ. ನರಿಯ ಮೂತಿ ಅದರೊಳಗೆ ತೂರುವುದೇ ಇಲ್ಲ! ಕೊಕ್ಕರೆ ಸಲೀಸಾಗಿ ತನ್ನ ಕೊಕ್ಕಿನಿಂದ ಪಾಯಸವನ್ನು ಹೀರುತ್ತದೆ!

ಹೀಗೆ ಕೊಕ್ಕರೆ ನರಿಯ ಮೇಲೆ ಸೇಡು ತೀರಿಸಿಕೊಳ್ಳುತ್ತದೆ!

ಕಥೆ ಹೇಳಿದ್ದು: ವಿದ್ವಾನ್ ಶ್ರೀ ಎನ್. ರಂಘನಾಥ ಶರ್ಮ
ಸಂದರ್ಭ: ದಿನಾಂಕ ೧೭.೦೯.೨೦೦೬ ರಂದು ಗಿರಿನಗರದ ಶಂಕರ ಮಂಟಪದಲ್ಲಿ ನಡೆದ ಆರ್ಕುಟ್-ಹವ್ಯಕ ಚಕ್ಲಿ-ಚುಡ್ವಾ ಕಂಬಳ ದಲ್ಲಿ
ಉದ್ದೇಶ: ರಂಘನಾಥ ಶರ್ಮರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ೯೨ ವರ್ಷ ವಯಸ್ಸಿನ, ಹಲ್ಲುಗಳೆಲ್ಲಾ ಬಿದ್ದು ಹೋಗಿರುವ ಅವರು, ಕಂಬಳವನ್ನು ಉದ್ಘಾಟಿಸುವುದೇನೋ ಸರಿ, ಆದರೆ ಚಕ್ಲಿಯನ್ನು ತಿನ್ನುವುದೆಂತು?! ಅವರು ತಮ್ಮ ಪರಿಸ್ಥಿತಿಯನ್ನು ಈ ಕಥೆಯೊಂದಿಗೆ ಹೊಂದಿಸಿ ರಸವತ್ತಾಗಿ ಹೇಳಿ ನೆರೆದಿದ್ದವರನ್ನೆಲ್ಲಾ ರಂಜಿಸಿದರು. ಕೊನೆಗೆ ಅವರಿಗೆ ಚಕ್ಲಿಯನ್ನು ಪುಡಿ ಮಾಡಿ ತಿನ್ನಿಸಲಾಯಿತು ಅನ್ನುವುದು ಬೇರೆ ವಿಷಯ!

***

ಈ ಕಥೆಯನ್ನು ಕೇಳುತ್ತಿದ್ದಾಗ ನನಗೆ ನೆನಪಾದದ್ದು, ನಾವೆಲ್ಲಾ ಬಾಲ್ಯದಲ್ಲಿ ಕೇಳಿದ 'ಕಾಗಕ್ಕ-ಗುಬ್ಬಕ್ಕನ ಕಥೆ'. ಸರಳವಾಗಿ ಹೇಳುವುದಾದರೆ, ಆ ಕಥೆ ಹೀಗಿದೆ:


ಕಾಗಕ್ಕ-ಗುಬ್ಬಕ್ಕ ಕಥೆ

ಒಂದೂರಲ್ಲಿ ಕಾಗಕ್ಕ ಮತ್ತೆ ಗುಬ್ಬಕ್ಕ ಫ್ರೆಂಡ್ಸ್ ಆಗಿರ್ತಾರೆ. ಕಾಗಕ್ಕನ ಮನೆ ಮಣ್ಣು ಮತ್ತೆ ತರಗೆಲೆಗಳಿಂದ ಮಾಡಿದ್ದು; ಗುಬ್ಬಕ್ಕನ ಮನೆ ಮರದ ತೊಗಟೆಯಿಂದ ಕಟ್ಟಿದ ಗಟ್ಟಿಮುಟ್ಟಾದ ಮನೆ. ಒಮ್ಮೆ ಜೋರು ಗಾಳಿ-ಮಳೆಯಾದಾಗ ಕಾಗಕ್ಕನ ಮನೆ ತೊಳೆದು ಹೋಗುತ್ತದೆ. ಆಗ ಗುಬ್ಬಕ್ಕ ಕಾಗಕ್ಕನನ್ನು ತನ್ನ ಮನೆಗೆ ಉಳಿದುಕೊಳ್ಳುವುದಕ್ಕೆ ಆಹ್ವಾನಿಸುತ್ತದೆ.

ರಾತ್ರಿ ಎಲ್ಲರೂ ಮಲಗಿದ್ದಾಗ ಕಾಗಕ್ಕ ಗುಬ್ಬಕ್ಕನ ಮೊಟ್ಟೆ-ಮರಿಗಳನ್ನು ತಿನ್ನಲಾರಂಭಿಸುತ್ತದೆ. 'ಕಟ್ ಕಟ್' 'ಕರ ಕರ' ಎಂಬ ಶಬ್ದ ಕೇಳಿ ಗುಬ್ಬಕ್ಕ ಕೇಳುತ್ತೆ: 'ಏನದು ಶಬ್ದ ಕಾಗಕ್ಕಾ?' ಅಂತ. ಅದಕ್ಕೆ ಕಾಗಕ್ಕ ಹೇಳುತ್ತೆ: 'ಏನಿಲ್ಲ, ದನ ಕಾಯೋ ಹುಡುಗ ನಾಕು ಕಡ್ಲೇಕಾಯಿ ಕೊಟ್ಟಿದ್ದ, ತಿನ್ತಾ ಇದ್ದೆ' ಅಂತ. ಬೆಳಗ್ಗೆ ಮುಂಚೆ, ಗುಬ್ಬಕ್ಕ ಏಳೋ ಮೊದಲೇ ಕಾಗಕ್ಕ ಗುಬ್ಬಕ್ಕನ ಗೂಡಿಂದ ಹಾರಿಹೋಗಿಬಿಡುತ್ತೆ.

ಗುಬ್ಬಕ್ಕ ಬೆಳಗ್ಗೆ ಎದ್ದು ನೋಡುತ್ತೆ: ಕಾಗಕ್ಕನೂ ಇಲ್ಲ; ತನ್ನ ಮೊಟ್ಟೆ-ಮರಿಗಳೂ ಇಲ್ಲ! ಕಾಗಕ್ಕನ ಮೇಲೆ ಅದು ಸೇಡು ತೀರಿಸಿಕೊಳ್ಳಬೇಕು ಅಂತ ತೀರ್ಮಾನಿಸುತ್ತೆ...

***
ಆದರೆ friends, ಇದರ ಮುಂದೆ ಮರೆತು ನನಗೆ ಹೋಗಿದೆ! ನನ್ನ ಗೆಳೆಯರನೇಕರ ಬಳಿ ಕೇಳಿದೆ; ಅವರಿಗೂ ನೆನಪಿಲ್ಲ. ಗುಬ್ಬಕ್ಕ ಕಾಗಕ್ಕನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳೊತ್ತೆ ಅಂತ ನನಗೆ ಬೇಕು. Second part of the storey ಬೇಕು. ದಯವಿಟ್ಟು ಗೊತ್ತಿರೋರು ಈ ಕಥೆಯನ್ನು ಪೂರ್ಣಗೊಳಿಸಿಕೊಡಬೇಕು ಅಂತ ನನ್ನ ವಿನಂತಿ..

Friday, September 15, 2006

ಕೊಲೆಗಾರನ ಕಳವಳ

ನಿನ್ನೆ ರಾತ್ರಿ ಏನಾಯಿತೆಂದರೆ....
ಇಲ್ಲ, ಹೆದರಬೇಡಿ, ಅಂಥದ್ದೇನೂ ಆಗಲಿಲ್ಲ-
ಹೇಳಿಕೊಳ್ಳುವಂತದ್ದು;
ಆದರೆ ತಾಳಿಕೊಳ್ಳಲೂ ಆಗಲಿಲ್ಲ-
ಬಾಳೆಕಾಯಿ ಶೆಟ್ಟಿ ಎಂಬ ಹಸಿರು ಹುಳ
ನಾನು ದೀಪವಾರಿಸಿ ಮಲಗಿದ ಮೇಲೆ ಒಳ
ಬಂದು ಪಟಪಟ ಶಬ್ದ ಮಾಡುತ್ತಾ
ನನಗೆ ಕಾಟ ಕೊಡಲು ಶುರುವಿಟ್ಟಾಗ.

ಮೊಬೈಲಿನ ದೀಪ ಹೊತ್ತಿಸಿ
ಕೈಗೆ ಸಿಕ್ಕ ಪೇಪರು ಬಳಸಿ
ಕೈಬೀಸಿ ಜಾಡಿಸಿದಾಗ ಶತ್ರು
ಒಂದೇ ಹೊಡೆತಕ್ಕೆ ನೆಲಕಚ್ಚಿ ಬಿದ್ದು
ವಿಲವಿಲನೆ ಒದ್ದಾಡುವ ಸದ್ದು
ಕೇಳುತ್ತಿರಲು, ನಾನು ಯುದ್ಧ ಗೆದ್ದ
ಖುಷಿಯಲ್ಲಿ, ಹೊದ್ದು ನಿದ್ದೆ ಹೋದೆ.

ಬೆಳಗ್ಗೆ ಎದ್ದು ನೋಡುತ್ತೇನೆ:
ಪಕ್ಕದಲ್ಲೇ ಹೆಣ!
ಅದನ್ನು ಸಾಗಿಸಲು ಹೆಣ-
ಗಾಡುತ್ತಿರುವ ಇರುವೆಗಳ ಬಣ!
ಮಣಭಾರದ ಈ ದೇಹವನ್ನು
ಸಣಕಲು ಇರುವೆಗಳು ಹೇಗಾದರೂ
ಸಾಗಿಸುತ್ತವೋ ಎಂದು ಯೋಚಿಸುತ್ತಾ,
ರೂಮಿನ ಕಸ ಗುಡಿಸದೇ ಹಾಗೇ
ಆಫೀಸಿಗೆ ಬಂದೆ.

ಸಂಜೆ ರೂಮಿಗೆ ಮರಳಿ ನೋಡಿದರೆ
ಹೆಣವೂ ಇಲ್ಲ; ಇರುವೆಗಳೂ ಇಲ್ಲ!
ಏನಾಯಿತು ಹೋಗಿ ವಿಚಾರಿಸೋಣವೆಂದರೆ
ಅವುಗಳ ಗೂಡಿನ ವಿಳಾಸ ನನಗೆ ಗೊತ್ತಿಲ್ಲ

ನಾನು ಕೊಲೆಗಾರನೆಂಬ ಭಾವ ಆವರಿಸಿಕೊಳ್ಳತೊಡಗಿತು...

ಏಕೆ ಬಂದಿತ್ತು ಅದು ನನ್ನ ರೂಮಿಗೆ?
ಅದು ಸತ್ತ ಸುದ್ದಿ ಹೇಗೆ ತಿಳಿಯಿತೋ ಇರುವೆಗಳ ಟೀಮಿಗೆ?

ಬಾಳೆಕಾಯಿ ಶೆಟ್ಟಿ ಸತ್ತದ್ದೇನು ಸುದ್ದಿಯಲ್ಲ ಬಿಡಿ
ಕೊಲೆ ಮಾಡಿದ್ದಕ್ಕೆ ನನಗೆ ಯಾರೂ ತೊಡಿಸುವುದಿಲ್ಲ ಬೇಡಿ
ಗೂಡಿನಲ್ಲಿ ಇರುವೆಗಳೆಲ್ಲಾ ಘರಮ್ ಬಿರಿಯಾನಿ ಮಾಡಿ
ತಿಂದು ತೇಗಿರಬಹುದು;
ಆದರೆ ಅದಲ್ಲ ವಿಷಯ-

...ನಿನ್ನೆ ರಾತ್ರಿ ಬಂದ ನಿದ್ದೆ ಇವತ್ಯಾಕೆ ಬರುತ್ತಿಲ್ಲ ನನಗೆ?

(14.09.2006; ರಾತ್ರಿ 12:30)

Monday, September 11, 2006

ಬಿ.ಆರ್.ಎಲ್. -60: ಸಮಾರಂಭದ ವರದಿ!


ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತುಂಟಕವಿ ಬಿ.ಆರ್.ಎಲ್. ಗೆ ಅರವತ್ತು ವರ್ಷ ವಯಸ್ಸಾಯಿತೇ? Impossible ! ಅದು ಹೇಗೆ ಸಾಧ್ಯ? ನನ್ನ ಅನುಮಾನವನ್ನು ಬಗೆಹರಿಸುವಂತೆ, ನಿಜವಾಗಿಯೂ ಅರವತ್ತಾಗಿದೆ ಎನ್ನುವಂತೆ ಸಾಪ್ತಾಹಿಕದಲ್ಲಿ ಜಯಂತ ಕಾಯ್ಕಿಣಿ ಬಿ.ಆರ್.ಎಲ್. ಕುರಿತು ಬರೆದ ಲೇಖನವೊಂದಿತ್ತು. ಅಭಿನಂದನಾ ಕಾರ್ಯಕ್ರಮಕ್ಕೆ ಬರಲಿರುವವರ list ನೋಡಿದೆ. ಈ ಕಾರ್ಯಕ್ರಮವನ್ನು ನಾನು attend ಮಾಡಲೇಬೇಕು ಅನ್ನಿಸಿತು. Movie ಗೆ ಹೋಗೋಣ ಎಂದು ಗೆಳೆಯರ ಜೊತೆ ಮಾತಾಡಿಕೊಂಡಿದ್ದವನು, ಅದನ್ನೆಲ್ಲಾ cancel ಮಾಡಿ, ಮಧ್ಯಾಹ್ನ ಮೂರರ ಹೊತ್ತಿಗೆ ಸೀದಾ ಕಲಾಕ್ಷೇತ್ರಕ್ಕೆ ನಡೆದೆ.

ಕಾರ್ಯಕ್ರಮವನ್ನು ಮೂರು ಚರಣಗಳಲ್ಲಿ ಆಯೋಜಿಸಿದ್ದರು. ಮೊದಲನೇ ಚರಣದಲ್ಲಿ ಬಿ.ಆರ್.ಎಲ್. ಬರಹಗಳ ಬಗ್ಗೆ ಗೋಷ್ಠಿ, ಎರಡನೇ ಚರಣದಲ್ಲಿ ಬಿ.ಆರ್.ಎಲ್.ರ ಹನಿಗವನಗಳ ಸಂಕಲನ, ಸಿಡಿ ಮತ್ತು mp3 ಬಿಡುಗಡೆ, ಮತ್ತು ಮೂರನೇ ಚರಣದಲ್ಲಿ ಲಕ್ಷ್ಮಣರಾಯರಿಗೆ ಅಭಿನಂದನೆ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ.

ಮೊದಲನೇ ಚರಣದಲ್ಲಿ ಭಾಗವಹಿಸಿದ್ದವರು ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯ ಚೊಕ್ಕಾಡಿ ಮತ್ತು ಎನ್.ಎಸ್. ರಂಗನಾಥ ರಾವ್. ನರಹಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಲಕ್ಷ್ಮೀನಾರಾಯಣ ಭಟ್ಟರು ಬಿ.ಆರ್.ಎಲ್. ರವರ ಜೊತಿಗಿನ ತಮ್ಮ ಅವಿನಾಭಾವ ಸಂಬಂಧದ ಕುರಿತು ಹೇಳಿದರು. 'ಗೋಪಿ'ಗೆ 'ಕಡಿವಾಣ' ಹಾಕಲು ಅವರ ಮನೆಯವರು ಕೇಳಿಕೊಂಡಾಗ ಅವರಿಗೆ ಹೆಣ್ಣು ಹುಡುಕಿಕೊಟ್ಟವರು (ಸುಬ್ಬಾಭಟ್ಟರ ಮಗಳು!) ತಾವೇ ಎಂಬ ಸತ್ಯವನ್ನು ಬಹಿರಂಗಗೊಳಿಸಿದರು. ನಂತರ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಬಿ.ಆರ್.ಎಲ್. ರ ಕಾವ್ಯದ ಬಗ್ಗೆ ಪಕ್ಷಿನೋಟ ಬೀರಿದರು. ತದನಂತರ ರಂಗನಾಥರಾವ್, ಬಿ.ಆರ್.ಎಲ್. ರ ಗದ್ಯದ ಕುರಿತು ಮಾತನಾಡಿದರು.

ಎರಡನೇ ಚರಣದಲ್ಲಿ, ಕವಿ-ಕತೆಗಾರ್ತಿ ಎಂ.ಆರ್. ಕಮಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಆರ್.ಎಲ್. ರ ಹನಿಗವನಗಳ ಸಂಕಲನವನ್ನು ಬಿಡುಗಡೆ ಮಾಡಿದ ಚುಟುಕು ರತ್ನ ದುಂಡೀರಾಜ್, ಆ ಪುಸ್ತಕದಲ್ಲಿನ ಕೆಲ ಹನಿಗವಿತೆಗಳನ್ನು ಓದಿ ಹೇಳಿದರು. ಗಾಯಕ ಶಿವಮೊಗ್ಗ ಸುಬ್ಬಣ್ಣ ಭಾವಗೀತೆಗಳ ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿ, ಸಿಡಿಯಲ್ಲಿರುವ ಗೀತೆಗಳನ್ನು ಪರಿಚಯಿಸಿದರು. 'ಹೇಳಿ ಹೋಗು ಕಾರಣ' mp3 ಬಿಡುಗಡೆ ಮಾಡಿದ ಮುದ್ದುಕೃಷ್ಣ ಅದರಲ್ಲಿರುವ ಹಾಡುಗಳ ಬಗ್ಗೆ ಹೇಳಿದರು.

ಚಹಾ ವಿರಾಮದ ನಂತರ ಶುರುವಾದ ಸಮಾರಂಭದ ಮೂರನೇ ಚರಣದಲ್ಲಿ ವೇದಿಕೆ ಮತ್ತಷ್ಟು ಗಣ್ಯ ವ್ಯಕ್ತಿಗಳಿಂದ ತುಂಬಿತ್ತು. ಅಭಿನಂದನಾ ಸಮಾರಂಭ ಸಮಿತಿಯ ಗೌರವಾಧ್ಯಕ್ಷತೆಯನ್ನು ವಹಿಸಿದ್ದ ಜಿ.ಎಸ್. ಶಿವರುದ್ರಪ್ಪ, ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಯು.ಆರ್. ಅನಂತಮೂರ್ತಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವಿ ಬೆಳಗೆರೆ, ಎಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್ ಮತ್ತಿತರ ನಡುವೆ ಬಿ.ಆರ್.ಎಲ್. ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ ದೃಶ್ಯ ತುಂಬಾ ಚೆನ್ನಾಗಿತ್ತು. ಅಭಿನಂದನಾ ಗ್ರಂಥ 'ಚಿಂತಾಮಣಿ'ಯನ್ನು ಲೋಕಾರ್ಪಣ ಮಾಡಲಾಯಿತು. ಎಚ್ಚೆಸ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ತಮ್ಮ ಮತ್ತು ಲಕ್ಷ್ಮಣರಾಯರ ಸ್ನೇಹ ಸಂಬಂಧವನ್ನು ವಿವರಿಸಿದರು. ಕಾರ್ಯಕ್ರಮದುದ್ದಕ್ಕೂ ಸಿಕ್ಕ ಸಿಕ್ಕ ಕಾಗದಿಂದ ಗಾಳಿ ಬೀಸಿಕೊಳ್ಳುತ್ತ ಕುಳಿತಿದ್ದ ರವಿ ಬೆಳಗೆರೆ ತಮ್ಮ ಆಕರ್ಷಕ ಮಾತಿನಿಂದ ಚಪ್ಪಾಳೆ ಗಿಟ್ಟಿಸಿದರು. ಲಕ್ಷ್ಮಣರಾಯರ ಅನೇಕ ಭಾವಗೀತೆಗಳಿಗೆ ರಾಗ ಸಂಯೋಜಿಸಿ, ಹಾಡಿದ ಸಿ.ಅಶ್ವತ್ಥ್, ಬಿ.ಆರ್.ಎಲ್.ರ ಕಾವ್ಯ ತಮ್ಮನ್ನು ಸೆಳೆದಿದ್ದರ ಬಗ್ಗೆ ಹೇಳಿದರು. ಜಿ.ಎಸ್.ಎಸ್. ಅಭಿನಂದನಾ ಗ್ರಂಥದಲ್ಲಿರುವ ಹೂರಣವನ್ನು ಪ್ರೇಕ್ಷಕರಿಗೆ ಹಂಚಿದರು. ಯು.ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಿ.ಆರ್.ಎಲ್. ರ ಮಹತ್ವವನ್ನು ಕೊಂಡಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ತುಂಟಕವಿ ಬಿ.ಆರ್.ಎಲ್., ತಮ್ಮ ಕಾವ್ಯರಚನೆಗೆ ಸ್ಪೂರ್ತಿಯಾದ, ನೆರವಾದ ಅನೇಕರನ್ನು ಈ ಸಂದರ್ಭದಲ್ಲಿ ನೆನೆದರು.

'ಕನ್ನಡವೇ ಸತ್ಯ' ಖ್ಯಾತಿಯ ಪ್ರಭಾಕರ್ ರಾವ್ ಸಹಕಾರದಲ್ಲಿ ಉಪಾಸನಾ ಮೋಹನ್ ಆಯೋಜಿಸಿದ್ದ ಈ ಕಾರ್ಯಕ್ರಮ ನಿಜಕ್ಕೂ ಚೆನ್ನಾಗಿತ್ತು, ಮನ ಮುಟ್ಟುವಂತಿತ್ತು. ಕೊಟ್ಟ ಕಾಫಿ ತುಂಬಾ ಬಿಸಿಯಿತ್ತು. ಎನ್.ಎಸ್. ರಂಗನಾಥರಾವ್ ಲಕ್ಷ್ಮಣರಾಯರ ಗದ್ಯದ ಕುರಿತು ಮಾತನಾಡುವಾಗ, ಜನಕ್ಕೆ ಅವರ ಗದ್ಯದ ಬಗ್ಗೆ ಹೆಚ್ಚು ಪರಿಚಯವಿಲ್ಲದ್ದರಿಂದ ಪ್ರೇಕ್ಷಕರು ಮಧ್ಯದಲ್ಲೇ ಚಪ್ಪಾಳೆ ಹೊಡೆದರು (ಆದರೂ ಅವರು ಮಾತು ನಿಲ್ಲಿಸಲಿಲ್ಲ!) -ಇಂಥ ಕೆಲವೊಂದು ಅಪಸವ್ಯಗಳು ಸಂಭವಿಸಿದ್ದು ಬಿಟ್ಟರೆ ಇಡೀ ಸಮಾರಂಭದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರ್‍ಏಕ್ಷಕರು ಭಾವನೆಗಳಲ್ಲಿ, ಖುಷಿಯಲ್ಲಿ, ನಗೆಗಡಲಿನಲ್ಲಿ ತೇಲುತ್ತಿದ್ದರು. ಸಮಾರಂಭದ ಪ್ರಯುಕ್ತ ಖ್ಯಾತ ಗಾಯಕರಿಂದ ಬಿ.ಆರ್.ಎಲ್. ರಚನೆಯ ಭಾವಗೀತೆಗಳ ಗಾಯನವೂ ಇತ್ತು.

ಹೊರಗೆ discount ನಲ್ಲಿ ಪುಸ್ತಕಗಳ ಮಾರಾಟ ಇತ್ತು. ನಾನು 'ಸುಬ್ಬಾಭಟ್ಟರ ಮಗಳೇ' ಪುಸ್ತಕ (ಬಿ.ಆರ್.ಎಲ್. ಇದುವರೆಗಿನ ಭಾವಗೀತೆಗಳ ಸಂಕಲನ) ಮತ್ತು 'ಹೇಳಿ ಹೋಗು ಕಾರಣ' mp3 ಕೊಂಡುಕೊಂಡೆ. ಪುಸ್ತಕದ ಮೇಲೆ ಲಕ್ಷ್ಮಣರಾಯರ ಹಸ್ತಾಕ್ಷರ ಪಡೆಯಲು ಹೆಣಗಿದೆನಾದರೂ ಕೊನೆಗೂ ಸಾಧ್ಯವಾಗಲಿಲ್ಲ. ಆ ನಿರಾಶೆ ದೂರಾದದ್ದು ರೂಮಿಗೆ ಮರಳಿ ರಾತ್ರಿಯಿಡೀ ಕುಳಿತು 'ಹೇಳಿ ಹೋಗು ಕಾರಣ' ಸಿಡಿಯಲ್ಲಿದ್ದ ಹಾಡುಗಳನ್ನು ಕೇಳಿಸಿಕೊಂಡಾಗಲೇ.

Thanx to BRL for all that...

Saturday, September 09, 2006

ಗ್ರಹಣ ಮತ್ತು ಚಂದ್ರ

ಎಲ್ಲೋ ಓದಿದ ನೆನಪು:

ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆ ಅದು ಬರೀ ಕಲ್ಲುಗುಂಡು

ಕವಿ ಯಾರೋ ನೆನಪಿಲ್ಲ. ಹೈಸ್ಕೂಲ್ ಕನ್ನಡ ಪಠ್ಯದಲ್ಲಿತ್ತು. ನಮ್ಮ ಮೇಷ್ಟ್ರು ಎಂ.ಜಿ. ಹೆಗಡೆ ಅದನ್ನು ಬಹಳ ಚೆನ್ನಾಗಿ ವಿವರಿಸಿದ್ದರು ಕೂಡ. ಹೇಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ತರಹ ಇರುತ್ತೆ ಎಂಬುದನ್ನ ತುಂಬ ಸುಂದರವಾಗಿ, ಕೇವಲ ನಾಲ್ಕೇ ನಾಲ್ಕು ಸಾಲುಗಳಲ್ಲಿ ಬಿಚ್ಚಿಡುತ್ತದೆ ಆ ಕವನ.

ಇಲ್ಲ, ನಾನಿವತ್ತು ಕವಿತೆಗಳ ಬಗ್ಗೆಯಾಗಲೀ, ದೃಷ್ಟಿಕೋನಗಳ ಬಗ್ಗೆಯಾಗಲೀ, ಬೇರೆ ಬೇರೆ ದೃಷ್ಟಿಕೋನಗಳ ಜನಗಳ ಬಗ್ಗೆಯಾಗಲೀ ಹೇಳುವುದಕ್ಕೆ ಹೊರಟಿಲ್ಲ. ನಾನು ಹೇಳ ಹೊರಟಿರುವುದು ಚಂದಿರನ ಬಗ್ಗೆ.

ಚಂದಿರ. ಅದೆಷ್ಟು ಚಂದದ ಹೆಸರು. ಅದೆಷ್ಟು ಸುಂದರ ಅಂವ. ಚಂದಿರ ಎಂದರೆ ಬೆಳದಿಂಗಳು. ಬೆಳದಿಂಗಳು ಎಂದರೆ ಪ್ರೀತಿ. ಪ್ರೀತಿ ಎಂದರೆ ಅವಳು. ಅವಳು ಎಂದರೆ ಪ್ರೀತಿ.

ಚಂದ್ರ ಎಂದರೆ, ಭಾವನೆಗಳನ್ನು ಸ್ಪುರಿಸುವ ಕೇಂದ್ರ ನನ್ನ ಪಾಲಿಗೆ. ಹುಣ್ಣಿಮೆಯ ರಾತ್ರಿ ಲಕ್ಷ ನಕ್ಷತ್ರಗಳ ನಡುವೆ ತಾನೇ ತಾನಾಗಿ ಮೆರೆಯುವ ಮನ್ಮತ. ಕಪ್ಪು ಕಡಲಲ್ಲಿ ಬೆಳ್ಳಿತುಂಡಿನಂತೆ ತೇಲುವವ. ಹೊಟ್ಟೆಕಿಚ್ಚಾಗೊತ್ತೆ ಅವನನ್ನು ನೋಡಿದರೆ.

ಲೆಕ್ಕ ಇಟ್ಟಿಲ್ಲವಂತೆ ಚಂದ್ರ: ಅದೆಷ್ಟೋ ಮಕ್ಕಳಿಗೆ ಮಾಡಿಸಿದ ಊಟ. ನನಗೆ ಅಮ್ಮನೂ ಹಾಗೇ ಊಟ ಮಾಡಿಸುತ್ತಿದ್ದಿದ್ದಂತೆ. ಚಂದ್ರನಿಗೊಂದು ತುತ್ತು - ನಿನಗೊಂದು ತುತ್ತು ಅಂತ ಹೇಳಿ, ಚಂದ್ರನಿಗೆ ಕೊಟ್ಟಂತೆ ಮಾಡಿ, ನಾನು ಬೆರಗುಗಣ್ಣುಗಳಲ್ಲಿ ಮೇಲ್ನೋಡುತ್ತಿರುವಾಗ, ತೆರೆದ ಬಾಯಿಗೆ ತುತ್ತು ತುರುಕಿ... ಹೀಗೇ ಅದೆಷ್ಟು ತಾಯಂದಿರು ಉಣ್ಣಿಸಿದ ತುತ್ತು ತಿಂದಿದ್ದಾನೋ ಚಂದ್ರ. ಅದಕ್ಕೇ ಅಷ್ಟು ಸ್ಮಾರ್ಟ್ ಅಂವ. ಆದರೆ ಅದು ವಿಚಿತ್ರವೂ ಹೌದು: ಅಷ್ಟೊಂದು ಮನೆಯ ಅಡಿಗೆ ಉಂಡು ಅವನ ಹೊಟ್ಟೆ ಕೆಟ್ಟು ಹೋಗಬೇಕಿತ್ತು! ಆದರೆ ಎಂದೂ ಅಂವ ಕಾಯಿಲೆ ಬಿದ್ದ ವರ್ತಮಾನ ಬಂದಿಲ್ಲ!

ನಿನ್ನೆ ರಾತ್ರಿ ಎಲ್ಲ ರಾತ್ರಿಗಳಂತಲ್ಲ. ನನ್ನ ಗೆಳೆಯ ಚಂದ್ರನಿಗೆ ಗ್ರಹಣ. ಬಿಚ್ಚು ಆಕಾಶದಲ್ಲಿ ನಕ್ಷತ್ರಗಳ ಜಾತ್ರೆ ನೆರೆದಿತ್ತು.. ಕಪ್ಪು ಕಡಲಲ್ಲಿ ತೇಲಿಬಂದ ನನ್ನ ಗೆಳೆಯ.. ಮೇಲೆ ಮೇಲೆ ಬಂದ.. ರಾತ್ರಿ ಹತ್ತೂ ವರೆಯಾಗಿತ್ತೇನೋ: ನಿಧ ನಿಧಾನವಾಗಿ ಅವನ ಒಂದು ಪಾರ್ಶ್ವದಿಂದ ಕಪ್ಪು ಆವರಿಸುತ್ತಾ ಬಂತು... ತುಂಬು ಚಂದಿರನ ಮೇಲ್ಮೈಯ ಮೇಲೆ ಯಾರದೋ ಕಪ್ಪು ನೆರಳು.. ನನಗೆ ಬೇಸರ..

ದುಂಡೀರಾಜರ ಕವನವೊಂದು ಬಿಟ್ಟೂ ಬಿಡದೆ ನೆನಪಾಗುತ್ತಿತ್ತು:

ನಾಚುತ್ತಾ ಆಕೆ
ಎದೆಯ ಮೇಲಿನ ಹೊದಿಕೆ
ಬದಿಗೆ
ಸರಿಸುತ್ತಾ ಹೋದ ಹಾಗೆ
ಪಾಡ್ಯ, ಬಿದಿಗೆ, ತದಿಗೆ..

'ಹುಣ್ಣಿಮೆ' ಎಂಬ ಶೀರ್ಷಿಕೆಯಡಿ ಅದೆಷ್ಟು ಅದ್ಭುತವಾಗಿ ಬರೆದಿದ್ದಾರೆ ಕವಿ! ನಾನು ಚಂದಿರನನ್ನು ನೋಡುತ್ತಾ ಹಾಗೇ ಟೆರೇಸಿನಲ್ಲಿ ಅಡ್ಡಾಡುತ್ತಿದ್ದೆ ಮಧ್ಯರಾತ್ರಿಯವರೆಗೂ. ಒಂದು ಗಂಟೆಯ ಮೇಲೆ ಗ್ರಹಣ ಬಿಟ್ಟಿತು. ನನ್ನನ್ನು ಕವಿದಿದ್ದ ಖಿನ್ನತೆಯೂ ಕಳೆದಂತಾಯ್ತು.

ನಂಜುಳ್ಳೆ ಹೇಳಿದ್ದು


ನಾನು ನಿನಗೇನು ಮಾಡಿದ್ದೆ ಹೇಳು?
ಕೆಸರಿನಾಳದಲ್ಲಿ ನನ್ನ ಪಾಡಿಗೆ ನಾನು ಬೆಚ್ಚಗಿದ್ದೆ
ನೀನೇ ಮೀಟಿ ಹೊರತೆಗೆದೆ ನನ್ನ.

ಒಂದು ಉದ್ದ ಕೋಲಂತೆ
ಅದರ ಒಂದು ತುದಿಗೆ ದಾರವಂತೆ
ದಾರದ ತುದಿಗೆ ಮುಳ್ಳಂತೆ
ಆ ಮುಳ್ಳಿಗೆ ನನ್ನನ್ನು ಚುಚ್ಚುತ್ತಾರಂತೆ
-ಎಲ್ಲಾ ಕೇಳಿ ಗೊತ್ತಿತ್ತು ನನಗೆ;
ಅಂದು ನಿಜವಾಯ್ತು.

ಹೌದು, ಆಗಿನ್ನೂ ನನಗೆ ಜೀವವಿತ್ತು
ದೇಹಕ್ಕೆ ಚುಚ್ಚಿಕೊಂಡ ಮುಳ್ಳು
ನೀನು ನನ್ನನ್ನು ನೀರಿನಲ್ಲಿ ಮುಳು-
ಗಿಸಿದಾಗ ಹಿತವೆನಿಸಿತ್ತು.
ಎಲ್ಲಾ ಸಡಿಲಾಗಿ ನಾನು ಕೊಸರಾಡಿ...

ಆಗಲೇ ಕಂಡಿದ್ದು ಆ ಮೀನು
ಆಸೆ ಪಟ್ಟು ನನ್ನ ಬಳಿಗೆ ಬಂತು
ನನಗೆ ಭಯವಾಗುವ ಮೊದಲೇ
ಬಾಯಿ ಹಾಕಿಬಿಟ್ಟಿತ್ತು, ಪಾಪ
ನಿನ್ನ ಸಂಚಿಗೆ ಬಲಿಯಾಗಿಬಿಟ್ಟಿತ್ತು.

ಆ ಮೀನಿನ ಸಾವಿಗೆ ನಾನೇ ಕಾರಣವಾದೆನಾ ಅನ್ನಿಸಿ
ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದೇನೆ
ಸತ್ತೂ ಬದುಕಿದ್ದೇನೆ.

ನಿನಗೇನೂ ಅನ್ನಿಸುವುದೇ ಇಲ್ಲವಾ?

ಮೀನಿಗೆ ಆಹಾರ ನಾನು;
ಅದನ್ನೇ ಬಲಿತೆಗೆದುಕೊಳ್ಳುವುದನ್ನು ಬಯಸಲಾರೆ.
ನಿನ್ನ ಆಹಾರ ಮೀನು;
ಅದಕ್ಕೇ, ಅದು ಸುಮ್ಮನೆ ಕಣ್ಮುಚ್ಚಿತು
ನೀನು ಯಾರಿಗೂ ಆಹಾರವಲ್ಲ ನೋಡು;
ಹಾಂ, ಗೊತ್ತಾಯಿತು, ಅದಕ್ಕೇ ನೀನು ಹೀಗಾಡುತ್ತೀ.

Tuesday, September 05, 2006

ಸಿಗ್ನಲ್ಲಿನ ಕ್ಷಣದ ಚಿತ್ರಗಳು

ಓಡುತ್ತಿರುವ ಬಸ್ಸುಗಳು ಕಾರುಗಳು ಬೈಕುಗಳು ಎಲ್ಲಾ ಕೆಂಪು ಸಿಗ್ನಲ್ಲು ಬೀಳುತ್ತಿದ್ದಂತೆ ಗಕ್ಕನೆ brake ಹೊಡೆದು ಒಂದು ಕ್ಷಣದ ಮಟ್ಟಿಗೆ ನಿಲ್ಲುತ್ತವೆ. ಹಾಗೆ ಅವು ನಿಲ್ಲುತ್ತಿದ್ದಂತೇ ಕೌಂಟ್‍ಡೌನ್ ಶುರುವಾಗುತ್ತದೆ. ಎಂಬತ್ತು, ಎಪ್ಪತ್ತೊಂಬತ್ತು, ಎಪ್ಪತ್ತೆಂಟು, ಎಪ್ಪತ್ತೇಳು, ಎಪ್ಪತ್ತಾರು.... ಅದು ಮೂರು, ಎರಡು, ಒಂದು, ಸೊನ್ನೆಯಾದ ಮೇಲೆ ಹಸಿರು ಬಣ್ಣದ ದೀಪ ಹೊತ್ತಿಕೊಳ್ಳುತ್ಥದೆ. ಅಷ್ಟರವರೆಗೆ ಕಾಯುವುದೇ ಇದೆ ರಗಳೆ.

ಕೆಲವರು ತಮ್ಮ ವೆಹಿಕಲ್ಲನ್ನು off ಮಾಡಿದ್ದಾರೆ. ಇನ್ನು ಕೆಲವರು ಹಾಗೇ ನಿಲ್ಲಿಸಿಕೊಂಡಿದ್ದಾರೆ. ಎಲ್ಲೈಸಿ ಏಜೆಂಟ್ ಕಾಮತ್ತರ ಗಾಡಿ ಅದೆಷ್ಟೇ brake ಹೊಡೆದರೂ ನಿಲ್ಲದೇ, ಸ್ಕೂಟರಿನ ಮುಂದಿನ ಗಾಲಿ ಎದುರುಗಡೆ ನಿಂತಿದ್ದ ಬಿಎಂಟೀಸಿ ಬಸ್ಸಿನ ಅಡಿಗೇ ಹೋಗಿಬಿಟ್ಟಿದೆ. 'ಇನ್ನೊಂದು ಸ್ವಲ್ಪ ಮುಂದೆ ಹೋಗಿದ್ದಿದ್ರೆ ಹ್ಯಾಂಡಲು ಹೋಗಿ ಬಸ್ಸಿಗೆ ಗುದ್ದೇ ಬಿಟ್ಟಿರೋದು, ಸಧ್ಯ!' ಅಂದ್ಕೊಂಡಿದಾರೆ ಕಾಮತರು. ಹಿಂದಕ್ಕಾದರೂ ತಗೊಳ್ಳಾಣಾಂದ್ರೆ ಕಾರೊಂದು ಬಂದು ಇವರ ಸ್ಕೂಟರಿನ ಹಿಂದೇ, ಒಂದೇ ಒಂದು ಇಂಚು ಗ್ಯಾಪು ಕೊಟ್ಟು ನಿಂತಿದೆ. 'ಅಯ್ಯೋ, ಈ ಬಸ್ಸಿನವನು ಸೀದಾ ಮುಂದೆ ಹೋದ್ರೆ ಸಾಕಿತ್ತು. ಒಂಚೂರು ಹಿಂದೆ ಬಂದ್ರೂ ನಂಗೆ ಗ್ರಾಚಾರ ತಪ್ಪಿದ್ದಲ್ಲ...' -ಕಾಮತರು ಮನಸ್ಸಿನಲ್ಲೇ ದೇವರನ್ನು ನೆನೆಯುತ್ತಿದ್ದಾರೆ.

ಮುಂದೆ, ಸಿಗ್ನಲ್ ಬ್ರೇಕ್ ಮಾಡಿ ಗಾಡಿ ಓಡಿಸಿದ್ದಕ್ಕಾಗಿ ಕಾಲೇಜು ಹುಡುಗನೊಬ್ಬನನ್ನು ಟ್ರಾಫಿಕ್ ಪೋಲೀಸ್ ಹಿಡಿದುಕೊಂಡು ದಂಡ ವಸೂಲಿ ಮಾಡುತ್ತಿದ್ದಾನೆ. ಅವನ ಬೆನ್ನಿಗೆ ಕಚ್ಚಿಕುಳಿತ ಹುಡುಗಿ ಬೆಪ್ಪುತಕಡಿಯಂತೆ ಆ ಪೋಲೀಸನ ಟೋಪಿಯನ್ನೇ ನೋಡುತ್ತಿದ್ದಾಳೆ.

ಜೀಬ್ರಾಲೈನಿಗೆ ಸರಿಯಾಗಿ brake ಹೊಡೆದು ನಿಲ್ಲಿಸಿಕೊಂಡಿರುವ ಗಾಡಿಯಲ್ಲಿ ಕುಳಿತ ಮಾರ್ಕೆಟಿಂಗ್ ವೃತ್ತಿಯಲ್ಲಿರುವ ಅಭಿಜಿತ್ ತನ್ನ ಹೆಲ್ಮೆಟ್ಟಿನ ಕಿಟಕಿಯಿಂದಲೇ ರೋಡ್ ಕ್ರಾಸ್ ಮಾಡುತ್ತಿರುವ ಹುಡುಗಿಯನ್ನು ನೋಡುತ್ತಿದ್ದಾನೆ. ಕೊಳಕಾದ, ಹರುಕು ಅಂಗಿಯ, ಕೈಯಲ್ಲೊಂದು ದೇವರ ಫೋಟೋ ಹಿಡಿದು ದುಡ್ಡು ಕೇಳಲು ಬರುತ್ತಿರುವ ಹುಡುಗನನ್ನು ಕಂಡದ್ದೇ, ಹಸಿರು ಲಾನ್ಸರ್ ಕಾರಿನ ಕಿಟಕಿಯ ಅಪಾರದರ್ಶಕ ಗಾಜು ಮೇಲಕ್ಕೆ ಸರಿದಿದೆ.

ಬಿಎಂಟೀಸಿ ಬಸ್ಸಿನಲ್ಲಿ ಕುಳಿತ ಜನ ಆಕಳಿಸುತ್ತಾ ಕಿಟಿಕಿಯಾಚೆಗೆ ತಲೆಹಾಕಿ ಇನ್ನೂ ಎಷ್ಟು ಸೆಕೆಂಡು ಬಾಕಿಯಿದೆ ಅಂತ ನೋಡುತ್ತಿದ್ದಾರೆ. ಇನ್ನೇನು ಮುಗೀತಾ ಬಂತು; ಆಗಲೇ ನಲವತ್ತೊಂಬತ್ತು, ನಲವತ್ತೆಂಟು, ನಲವತ್ತೇಳು... ಇನ್ನು ಸ್ವಲ್ಪ ಹೊತ್ತು; ಬಸ್ಸು start ಆಗಿ ಬಿಡುತ್ತದೆ.

ಕೈನೆಟಿಕ್ಕಿನ ಹುಡುಗಿ ತನ್ನ ಕೊರಳಲ್ಲಿ ನೇತುಹಾಕಿಕೊಂಡಿರುವ ಮೊಬೈಲನ್ನು ಕೈಗೆತ್ತಿಕೊಂಡು 'missed call' ಯಾರದ್ದು ಅಂತ ನೋಡುತ್ತಿದ್ದಾಳೆ. ಮೊಳಕೈ ತುಂಬಾ ಯಾವ್ಯಾವುದೋ ವೃತ್ತಪತ್ರಿಕೆ, ವಾರಪತ್ರಿಕೆ, ಮ್ಯಾಗಜೀನುಗಳನ್ನು ಜೋಲಿಸಿಕೊಂಡ ಕುಡಿಮೀಸೆಯ ಯುವಕ ಕಾರಿನ ಕಿಟಕಿ, ಆಟೊರಿಕ್ಷಾಗಳ ಅಕ್ಕಪಕ್ಕ ಎಲ್ಲಾ ಓಡಾಡುತ್ತಿದ್ದಾನೆ. ಇನ್ನೊಂದು ಸ್ವಲ್ಪ ಹೊತ್ತಿಗೇ ಇವತ್ತಿನ 'ಸಂಜೆವಾಣಿ' ರಿಲೀಸ್ ಆಗುತ್ತದೆ. ಆಗ ಈ ಯುವಕ, ಕೈ ತುಂಬಾ ಸಂಜೆವಾಣಿಗಳನ್ನೇ ತುಂಬಿಕೊಂಡು, 'ಬಿಸಿ ಬಿಸೀ ಸುದ್ಧಿ...' ಅಂತ ಕೂಗುತ್ತಾ ಓಡಾಡುತ್ತಾನೆ. ಅದರಲ್ಲಿದ್ದುದು ಬಿಸೀ ಸುದ್ಧಿಯೇ ಆಗಿದ್ದಲ್ಲಿ ಇವತ್ತು ರಾತ್ರಿ ಅವನ ಹೊಟ್ಟೆಗೆ ಊಟ ಸಿಕ್ಕುತ್ತದೆ; ಅದಿಲ್ಲದಿದ್ದರೆ ಇಲ್ಲ.

ಸಿಗ್ನಲ್ಲು ಮುಗಿಯುತ್ತಿದೆ: ಅಗೋ, ಆಗಲೇ ಹದಿನೆಂಟು, ಹದಿನೇಳು.... ಉಹೂಂ, ಇನ್ನೂ ಪಾಪ್ ಮ್ಯೂಸಿಕ್ ಹಾಕಿಕೊಂಡು ಕಾರೊಳಗೆ ಕುಳಿತಿರುವ software engineerನ ಸಿಗರೇಟು ಮುಗಿದಿಲ್ಲ. ಅವನು ಬಿಟ್ಟ ಹೊಗೆ ಕಾರೊಳಗೆಲ್ಲಾ ತುಂಬಿಕೊಂಡಿದೆ.

ಅರೆ! ಸಿಗ್ನಲ್ಲು ಮುಗಿಯುತ್ತಿದೆ.. ಒಂಬತ್ತು, ಎಂಟು, ಏಳು... ಎಲ್ಲಾ ತಮ್ಮ ವೆಹಿಕಲ್ಲನ್ನು ಸ್ಟಾರ್ಟ್ ಮಾಡುತ್ತಿದ್ದಾರೆ.. ಇಲ್ಲ, 'ತಾಯಿಯ ಆಶೀರ್ವಾದ' ಎಂಬ ಬೋರ್ಡಿರುವ ಆಟೋ ಅದೇಕೋ ಸ್ಟಾರ್ಟೇ ಆಗುತ್ತಿಲ್ಲ. ಡ್ರೈವರು ಈಗ ಪುಳಕ್ಕನೆ ಕೆಳಗಿಳಿದು, ಹಿಂದೆ ಬಂದು, ಅಡಿಷನಲ್ ಸಿಲಿಂಡರಿಗೆ ಕನೆಕ್ಟ್ ಮಾಡುತ್ತಿದ್ದಾನೆ. ಅಗೋ ಸಿಗ್ನಲ್ಲು ಮುಗಿಯಿತು.. ಎರಡು, ಒಂದು, ಸೊನ್ನೆ..... ಆಟೋ ಸ್ಟಾರ್ಟ್ ಆಗುತ್ತಿದೆ.. ಹಿಂದಿನಿಂದ ಒಂದೇ ಸಮನೆ ಹಾರನ್ನುಗಳ ಶಬ್ದ ಕೇಳಿಬರುತ್ತಿದೆ. ಅಬ್ಬ, ಆಟೋ ಹೊರಟಿತು. ಅದರ ಹಿಂದಿನಿಂದಲೇ, ಕಾಮತ್ತರ ಗಾಡಿಯೂ ಸೇರಿದಂತೆ, ಒಂದೊಂದೇ ವೆಹಿಕಲ್ಲುಗಳು ಭರಭರನೆ ಓಡಹತ್ತಿವೆ: ಬಿಡುಗಡೆಯ ಖುಷಿಯಲ್ಲಿ.

(ಬರೆದದ್ದು: ೨೬.೦೯.೨೦೦೪)

Monday, September 04, 2006

ನನ್ನ ನೆರಳು

ನಮ್ಮೂರಿನ ಮಣ್ಣು ರಸ್ತೆಯಲ್ಲಿ
ಕಡುಗತ್ತಲ ರಾತ್ರಿಯಲ್ಲಿ
ಬೀದಿ ದೀಪಗಳ ಬೆಳಕಿನಲ್ಲಿ ನಡೆಯುತ್ತಿದ್ದೇನೆ.

ಅಲ್ಲೊಂದು ಇಲ್ಲೊಂದು ದೀಪ
ಒಂದರ ಬೆಳಕು ಮುಗಿದ ನಂತರ ಮತ್ತೊಂದರದ್ದು ಶುರುವಾಗುತ್ತದೆ.

ಎದುರುಗಡೆಯ ದೀಪದ ಬೆಳಕು
ನನ್ನ ಮೈಮೇಲೆ ಬಿದ್ದದ್ದೇ
ನನ್ನ ನೆರಳು ಹಿಂದೆ ಸರಿಯುತ್ತದೆ.
ಅದು ನನಗಿಂತ ಉದ್ದ, ಊದ್ದವಾಗುತ್ತದೆ..
ಕ್ರಮೇಣ ಬರುಬರುತ್ತಾ ಚಿಕ್ಕದಾಗುತ್ತಾ ನನ್ನದೇ ಅಳತೆಗೆ ಬರುತ್ತದೆ..
ಕೊನೆಗೆ ನನಗಿಂತಲೂ ಚಿಕ್ಕದಾಗುತ್ತಾ, ದೀಪದ ಕೆಳಗಿನ ಒಂದು ಬಿಂದುವಿನಲ್ಲಿ ಇಲ್ಲವಾಗುತ್ತದೆ.
ಇನ್ನೊಂದು ಹೆಜ್ಜೆ ಮುಂದೆ ಇಟ್ಟರೆ ಸಾಕು:
ನನ್ನ ಮುಂದೆ ಸೃಷ್ಟಿಯಾಗುತ್ತಾ, ದೊಡ್ಡದಾಗುತ್ತಾ,
ನನ್ನ ಮುಂದಿನ ಎಷ್ಟೋ ಜಾಗವನ್ನು ಆಕ್ರಮಿಸಿಕೊಂಡುಬಿಡುತ್ತದೆ.

ನನ್ನ ಚಪ್ಪಲಿ - ಅದರ ಚಪ್ಪಲಿ ಒಂದೇ;
ನನ್ನ ಕಾಲಿನ ತುದಿ ಅದರ ಕಾಲಿನ ತುದಿಗೆ
ಸದಾ ಜಾಯಿಂಟಾಗೇ ಇರುತ್ತೆ;
ಅದಕ್ಕೆ ನನ್ನನ್ನು ಬಿಟ್ಟಿರಲು ಆಗುವುದಿಲ್ಲ;
ನನಗೂ.

ಬೀದಿ ದೀಪಗಳ ಸಾಲು ಮುಗಿಯುವುದೇ ಇಲ್ಲ.
ನಾನು ಈ ಕಪ್ಪನೆಯ ಮನುಷ್ಯನನ್ನು ಹಿಂಬಾಲಿಸುತ್ತಾ,
ಅವನು ನನ್ನನ್ನು ಹಿಂಬಾಲಿಸುತ್ತಾ ಸಾಗುತ್ತಿದ್ದೇವೆ.
ಬರ್‍ನಾದ, ಟ್ಯೂಬಿಲ್ಲದ ಒಂದು ಸ್ಥಳದಲ್ಲಿ ಇವನಿಲ್ಲದೇ ನನಗೆ ಬೇಜಾರು.
ಅಲ್ಲಿ ನನಗೆ ನಾನೂ ಕಾಣಿಸುವುದಿಲ್ಲ.
ಒಂಥರಾ ಭಯವಾಗಲು ಶುರುವಾಗುತ್ತದೆ..
ನಾನು ಬೇಗ ಬೇಗನೆ ನಡೆಯುತ್ತೇನೆ.
ದೂರದಲ್ಲೊಂದು ದೀಪ-ದೀಪದ ಬೆಳಕು: ಚಂದ್ರ-ಬೆಳದಿಂಗಳಂತೆ.

ಮತ್ತೆ ಈತ ಕಾಣಿಸಿಕೊಳ್ಳುತ್ತಾನೆ.
ಹಿಂದಿನಿಂದ ಮುಂದೆ ಬರುತ್ತಾನೆ.
ನನ್ನ ಗೆಳೆಯನಂತೆ, ಬೆಂಗಾವಲಿನವನಂತೆ ಭಾಸವಾಗುತ್ತಾನೆ.
ಆಪ್ತನಾಗುತ್ತಾನೆ.

ಇವನಿಗೆ ಒಂದು ಹೆಸರಿಡಬೇಕು ಅಂದುಕೊಳ್ಳುತ್ತೇನೆ.
ಅಸಲು ಅಸ್ಥಿತ್ವವೇ ಇಲ್ಲದ, ಕಣ್ಣಿರದ, ಬಾಯಿರದ,
ಮಾತನಾಡದ ಈ ಆಕೃತಿಗೇಕೆ ಹೆಸರು ಅನ್ನಿಸುತ್ತದೆ.
ಎಷ್ಟೆಂದರೂ ಅದು ನಾನೇ ಅಲ್ಲವೇ ಅನ್ನಿಸುತ್ತದೆ.
ಹಾಗನಿಸಿದ ಕೂಡಲೇ ಅದರ ಮೇಲೆ ಅಧಿಕಾರೀ ಮನೋಭಾವ ಬರುತ್ತದೆ.
'ಏಯ್, ನೀನ್ಯಾಕೆ ನನಗಿಂತ ಉದ್ದವಾಗಿದ್ದೀಯ?' -ಕೇಳುತ್ತೇನೆ.
ಉತ್ತರವಿಲ್ಲ; ಮೌನ.

ದೀಪದ ಸಾಲಿನ ರಸ್ತೆ ಮುಂದುವರೆದಿದೆ.
ನನಗೋ ಈತನ ಸಂಗಡ ಬೇಸರ ತಂದಿದೆ.
ಈತನಿಂದ ಹೇಗಾದರೂ ಬೇರಾಗಬೇಕು ಅನ್ನಿಸುತ್ತಿದೆ.
ಥಟ್ಟಂತ ಐಡಿಯಾ ಹೊಳೆಯುತ್ತದೆ:
ದೀಪ ಹಿಂದಾದ ಕ್ಷಣವೊಂದರಲ್ಲಿ,
ನಡೆಯುತ್ತಿದ್ದ ನಾನು ಒಂದು ಜಂಪ್ ಮಾಡಿದೆ..
ವ್ಹಾವ್! ಆತ ನನ್ನನ್ನು ಬಿಟ್ಟು, ಸದಾ ಕಾಲಿಗೆ ಹೊಂದಿಕೊಂಡೇ ಇರುವುದನ್ನು ಬಿಟ್ಟು,
ತಾನೂ ಒಂದು ಕುಪ್ಪಳಿಕೆ ಹಾರಿಬಿಡಬೇಕೇ...!
ಮಜಾ ಅಂದರೆ, ನಾನು ನೆಲದಿಂದ ಮೇಲೆ ಹಾರಿದೆ;
ಆತ ನೆಲದಲ್ಲೇ ಹಾರಿದ.

ಸದಾ ನೆಲಕ್ಕೆ ಅಂಟಿಕೊಂಡೇ ಇರಬೇಕಾದ ಅವನ ಸ್ಥಿತಿಯ ಬಗ್ಗೆ ನನಗೆ ಕನಿಕರವಾಗುತ್ತಿದೆ..
ಅವನಿಗೊಂದು ಸ್ವಂತ ಅಸ್ಥಿತ್ವವಿದ್ದಿದ್ದರೆ...
ಬಾಹ್ಯ ರೂಪ ಕೊಡುವಂತಿದ್ದಿದ್ದರೆ...
ಆತನೂ ನನ್ನಂತೆಯೇ ನನ್ನ ಜೊತೆಯಲ್ಲೇ ನಡೆಯುವಂತಿದ್ದಿದ್ದರೆ...

ಬೀದಿದೀಪದ ಸಾಲು ಮುಂದುವರೆದಿದೆ...


(ಬರೆದದ್ದು: ಬೆಂಗಳೂರಿನಲ್ಲಿ, ಜ್ವರದ ತಾಪಕ್ಕೆ ರಜೆ ಹಾಕಿದ ಒಂದು ದಿನ,
ಊರಿನ ನೆನಪಿನ ನೆರಳಲ್ಲಿ.. //೨೦.೦೯.೨೦೦೩)

Saturday, September 02, 2006

ಕಾಣೆಯಾದವರ ಪಟ್ಟಿಯಲ್ಲಿ ನಾನು!

ಗೆಳತಿ ನಿಮ್ಮಿ ಬರೆದುಕೊಟ್ಟ ಆಟೋಗ್ರಾಫಿನ ಕೊನೆಯ ಸೆಂಟೆನ್ಸುಗಳು ಹೀಗಿದ್ದವು:

"Be a good human, be a good student, be a good son, be a good husband, be a good father, be a good citizen... then only your life is worth living"

ಇವು ಕೇವಲ ಆಟೋಗ್ರಾಫ್ ಆಗಿರದೆ, ನನಗೆ ಕೊಡುವ advise ಆಗಿರದೆ, ನೇರವಾಗಿ ನನ್ನ roleಗಳ ಬಗ್ಗೆ ನನಗೇ ಪರಿಚಯ ಮಾಡಿಕೊಡುವ ಪ್ರಯತ್ನವೂ ಆಗಿತ್ತು ಅಂತ ಅನ್ನಿಸೊತ್ತೆ.

ನಿಜ, ನಾವೆಲ್ಲಾ ಬದುಕುವ ಒಂದೇ ಒಂದು ಬದುಕಿನಲ್ಲಿ ಎಷ್ಟೆಲ್ಲಾ ಪಾತ್ರಗಳನ್ನು ನಿರ್ವಹಿಸುತ್ತೇವೆ! ಅಪ್ಪನಿಗೆ ಮಗ, ಅಜ್ಜಿಗೆ ಮೊಮ್ಮಗ, ಮಾವನಿಗೆ ಅಳಿಯ, ಮಾವನ ಮಗಳಿಗೆ ಭಾವಯ್ಯ, ಹೆಂಡತಿಗೆ ಗಂಡ, ಮಗನಿಗೆ ಅಪ್ಪ, ಮೊಮ್ಮಗನಿಗೆ ಅಜ್ಜ! ಊರ ಜನರಿಗೆ ಗ್ರಾಮಸ್ಥ, ಬೇರೆ ಊರಿಗೆ ಹೋದರೆ ನೆಂಟ, ಹೊಸ ಊರಿಗೆ ಹೋದರೆ ಅತಿಥಿ, ಆಫೀಸಿನಲ್ಲಿ ಮ್ಯಾನೇಜರ್ರು, ಆಳಿಗೆ ಯಜಮಾನ, ಅಂಗಡಿಯವನಿಗೆ ಕಸ್ಟಮರ್ರು.... ಹೀಗೇ.

ಈಗ ನನ್ನನ್ನೇ ತೆಗೆದುಕೊಳ್ಳಿ: ಅಪ್ಪ 'ಪಾಪು' ಅನ್ನುತ್ತಾನೆ, ಅಮ್ಮ 'ಅಪ್ಪಿ' ಅನ್ನುತ್ತಾಳೆ, ಮಾವ 'ಗುಂಡ' ಅನ್ನುತ್ತಾನೆ, ಊರ ಹುಡುಗರೆಲ್ಲ 'ಸೂರು' ಅನ್ನುತ್ತಾರೆ, ಪ್ರೀತಿಯ ಕೆಲವು ಗೆಳೆಯರು 'ಸುಶಿ' ಅನ್ನುತ್ತಾರೆ, ಆಫೀಸಿನಲ್ಲಿ ನಾನು 'ಮಿಸ್ಟರ್ ಸುಶ್ರುತ್', ಆಫೀಸಿಗೆ ಬರುವ client ಗಳಿಗೆ 'ಸರ್'!

ಇಷ್ಟೆಲ್ಲಾ designationಗಳ ಮಧ್ಯೆ 'ನಾನು' ಕಳೆದುಹೋಗಿದ್ದೇನೇನೋ ಅಂತ ಒಮ್ಮೊಮ್ಮೆ ಭಯವಾಗುತ್ತದೆ. ಇವುಗಳೆಲ್ಲದರ ಮಧ್ಯೆ 'ನಾನು' ಯಾರು ಎಂಬ ಪ್ರಶ್ನೆ ಒಮ್ಮೊಮ್ಮೆ ಎದ್ದುಬಿಡುತ್ತದೆ. ಅಥವಾ ಇವೆಲ್ಲವೂ ಸೇರಿದರೇ ನಾನಾ? ಹಾಗೆನಿಲ್ಲ; ಇದರಲ್ಲಿ ಒಂದೆರಡು ಪಾತ್ರಗಳನ್ನು ತೆಗೆದರೂ ನಾನು ನಾನಾಗೇ ಇರುತ್ತೇನಲ್ಲಾ, ಎಲ್ಲವನ್ನೂ ತೆಗೆದರೂ.... ಅರೆ! ಹಾಗಾದರೆ ನಾನೆಲ್ಲಿ?

'ನಾನು' ಯಾರು?

Friday, September 01, 2006

ನಾನು ಓದಿದ ಪುಸ್ತಕ (೨)

ದಾಟು: ಜಾತಿ ಸಮಸ್ಯೆಯ ಒಳನೋಟ

ತಿರುಮಲಾಪುರದ ದೇವಸ್ಥಾನದ ಅರ್ಚಕ ವೆಂಕಟರಮಣಯ್ಯನವರ ಮಗಳು ಸತ್ಯಭಾಮಳೂ ಅದೇ ಊರಿನ ಶಾಸಕ ಮೇಲಗಿರಿ ಗೌಡರ ಮಗ ಶ್ರೀನಿವಾಸನೂ ಪ್ರೀತಿಸುತ್ತಿದ್ದಾರೆ, ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ತಿಳಿದು ಕೆರಳುವ ಸತ್ಯಳ ತಂದೆ ಬೆಂಗಳೂರಿಗೆ ಹೋಗಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದು ಬುದ್ಧಿ ಹೇಳುತ್ತಾರೆ. ಶ್ರೀನಿವಾಸನ ಪೋಷಕರೂ ಮಗನಿಗೆ ಬುದ್ಧಿ ಹೇಳುತ್ತಾರೆ. ಆದರೆ ಸತ್ಯ ನಿರ್ಧಾರ ಬದಲಿಸುವುದಿಲ್ಲ; ಶ್ರೀನಿವಾಸ ನಿರ್ಧಾರ ಬದಲಿಸಿ ಬೇರೆ ಮದುವೆಯಾಗುತ್ತಾನೆ.

ಇತ್ತ ಮಗಳನ್ನು ಚಪ್ಪಲಿಯಲ್ಲಿ ಹೊಡೆದು ಬಂದನಂತರ ವೆಂಕಟರಮಣಯ್ಯರವರನ್ನು ಚಿಂತೆ ಆವರಿಸಿಕೊಳ್ಳುತ್ತದೆ. ವೆಂಕಟರಮಣಯ್ಯನವರಿಗೆ ಒಂದು ಚರಿತ್ರೆ ಇರುತ್ತದೆ. ಅವರ ಹೆಂಡತಿ ಪ್ರಾಯದಲ್ಲೇ ತೀರಿಕೊಂಡಿರುತ್ತಾರೆ. ದೇವಸ್ಥಾನದ ಅರ್ಚಕರಾಗಿದ್ದ ಇವರು ಮೊದಮೊದಲು ಹೆದರಿದರೂ, ಕೊನೆಗೂ ದೈಹಿಕ ವಾಂಛೆಗಳನ್ನು ಗೆಲ್ಲಲಾಗದೆ, ಮಾತಂಗಿ ಎಂಬ ಹರಿಜನರ ವಿಧವೆ ಹೆಂಗಸಿನೊಂದಿಗೆ ಸಂಬಂಧವಿರಿಸಿಕೊಳ್ಳುತ್ತಾರೆ. ಈ ಗೌಪ್ಯ ಸಂಬಂಧಕ್ಕೆ ಸುಮಾರು ಮೂರು ವರ್ಷಗಳ ಕಾಲವಾಗಿರುತ್ತದೆ. ಆಗ ಒಂದು ಎಡವಟ್ಟು ಆಗಿಬಿಡುತ್ತದೆ. ಮಾತಂಗಿ ಗರ್ಭವತಿಯಾಗಿಬಿಡುತ್ತಾಳೆ. ಗುಡಿಯ ಅರ್ಚಕರಿಗೆ ಕೆಟ್ಟ ಹೆಸರು ಬರುವುದನ್ನು ಬಯಸದ ಅವಳು ದೂರದ ಊರೊಂದಕ್ಕೆ ಹೋಗಿ, ಅಲ್ಯಾರೊಂದಿಗೋ ಮದುವೆಯಾಗಿ, ಮಗುವನ್ನು ಹೆತ್ತು ಸಾಕಿಕೊಳ್ಳುತ್ತಾಳೆ. ಇದೆಲ್ಲಾ ಆಗಿದ್ದು ಈಗ ಹದಿನೈದಿಪತ್ತು ವರ್ಷಗಳಾಗಿವೆ.

ಈ ಮಧ್ಯೆ ದೇಶದಲ್ಲಿ ಜಾತಿಮತ ಭೇದವೆಲ್ಲಾ ದೂರವಾಗಬೇಕು ಅಂತ ಕ್ರಾಂತಿಯಾಯಿತು. ಹೊಲೆಯ, ಮಾದಿಗರನ್ನು 'ಹರಿಜನರು' ಅಂತ ಕರೆಯಬೇಕು ಎಂದಾಯಿತು. ಅವರೆಲ್ಲರಿಗೂ ದರಖಾಸ್ತಿನಲ್ಲಿ ಸರ್ಕಾರ ಜಮೀನು ಮಂಜೂರು ಮಾಡಿತು. ಮಂಗಳೂರು ಹೆಂಚಿನ ಮನೆ ಕಟ್ಟಿಸಿಕೊಟ್ಟಿತು. ಹರಿಜನರನ್ನು ಅಸ್ಪೃಷ್ಯರನ್ನಾಗಿ ಕಾಣಬಾರದು ಎಂದರು. ಅವರನ್ನು ದೇವಸ್ಥಾನದೊಳಕ್ಕೆ ಬಿಡುವಂತೆಯೂ ಆಯಿತು.

ಈಗ ವೆಂಕಟರಮಣಯ್ಯನವರಿಗೆ ಇವೆಲ್ಲ ನೆನಪಾಗಿ, ಸತ್ಯಳ ವರ್ತನೆ, ವಾದಗಳೊಂದಿಗೆ ಹೋಲಿಸಿಕೊಳ್ಳುವಂತಾಗಿ, ಗೊಂದಲವಾಗಿ, ಅದೇ ಯೋಚನೆ ಮಾಡಿ ಮಾಡಿ, ಹುಚ್ಚೇ ಹಿಡಿದುಬಿಡುತ್ತದೆ. ಅವರು ಮನೆ ಬಿಟ್ಟು, ದೇವಸ್ಥಾನದ ಪೂಜೆ ಬಿಟ್ಟು, ತೋಟದಲ್ಲಿ ಗುಡಿಸಲೊಂದನ್ನು ಕಟ್ಟಿಕೊಂಡು ಬದುಕಲು ಶುರುವಿಡುತ್ತಾರೆ.

ಪ್ರೇಮಭಂಗವಾಗಿ, ವಿಷಯ ಬಹಿರಂಗವಾಗಿ, ಸಮಾಜದಲ್ಲಿ ಹೆಸರು ಕಳೆದುಕೊಂಡು, ಅದರಿಂದಾಗಿ ಕೆಲಸ ಕಳೆದುಕೊಂಡು, ಸೀರೆ ಅಂಗಡಿಯೊಂದರಲ್ಲಿ ಕೂಲಿ ಮಾಡಿಕೊಂಡಿದ್ದ ಸತ್ಯ ಅಪ್ಪನ ಪರಿಸ್ಥಿತಿಯ ಸುದ್ಧಿ ಕೇಳಿ ಊರಿಗೆ ಧಾವಿಸುತ್ತಾಳೆ. ತೋಟದ ಗುಡಿಸಲಿನಲ್ಲಿ ಹುಚ್ಚು ಹಿಡಿದಿದ್ದ ತಂದೆ ವೆಂಕಟರಮಣಯ್ಯ, ಸತ್ಯಳಿಗೆ ಯಜ್ನೋಪವೀತ ಧಾರಣೆ ಮಾಡುತ್ತಾರೆ. 'ಇನ್ನು ಮೇಲೆ ಹೋಮ, ಹವನ ಮಾಡು' ಅಂತ ಭೋದಿಸುತ್ತಾರೆ. ಅವರ ಹುಚ್ಚು ಹುಚ್ಚು ಮಾತುಗಳ ಸಹಾಯದಿಂದಲೇ ಸತ್ಯ ಮಾತಂಗಿಯ ಜತೆಗಿನ ಗೌಪ್ಯ ಸಂಬಂಧದ ಇತಿಹಾಸವನ್ನು ಪತ್ತೆ ಮಾಡುತ್ತಾಳೆ. ಅವರನ್ನು ಮಾನಸಿಕ ರೋಗ ತಜ್ನರ ಬಳಿಗೊಯ್ದು ಕಾಯಿಲೆ ವಾಸಿ ಮಾಡಿಸಿಕೊಂಡು ಬರಬೇಕು ಎಂಬ ಪ್ರಯತ್ನಗಳು ನಡೆಯುತ್ತಿರುವಾಗಲೇ ವೆಂಕಟರಮಣಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸತ್ಯ ತಾನು ಇನ್ನು ಇದೇ ಗುಡಿಸಲಿನಲ್ಲಿ ಬದುಕಬೇಕು ಅಂತ ತೀರ್ಮಾನಿಸುತ್ತಾಳೆ. ಅಪ್ಪ ಬರೆದಿಟ್ಟಿದ್ದ ವಿಲ್ ಅವಳ ನೆರವಿಗೆ ಬರುತ್ತದೆ. ತಾನು ಶೂದ್ರಳಂತೆ ಬದುಕಬೇಕಂತ ನಿರ್ಧರಿಸುತ್ತಾಳೆ. ಮಾತಂಗಿಗಿಂತ ಶೂದ್ರಳಾಗಬೇಕೆಂದುಕೊಳ್ಳುತ್ತಾಳೆ.
ಅತ್ತ ಶ್ರೀನಿವಾಸನ ಹೆಂಡತಿ ಹೆರಿಗೆಯ ಸಮಯದಲ್ಲಿ ತೀರಿಕೊಳ್ಳುತ್ತಾಳೆ. ಶ್ರೀನಿವಾಸ ಒಬ್ಬಂಟಿಯಾಗುತ್ತಾನೆ. ಸತ್ಯಳ ನೆನಪು ಕಾಡಲಾರಂಭಿಸುತ್ತದೆ. ಅವನಿಗೆ ಮತ್ತೊಂದು ಮದುವೆ ಮಾಡುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಅವನ ಪೋಷಕರು 'ಹೋಗಲಿ, ಸತ್ಯಳನ್ನೇ ಮಾಡಿಕೋ ಹಾಗಾದರೆ' ಅನ್ನುತ್ತಾರೆ. ಆದರೆ ಈ ಬಾರಿ ಸತ್ಯಳೇ ಮದುವೆಯನ್ನು ನಿರಾಕರಿಸುತ್ತಾಳೆ ಮತ್ತು ಹರಿಜನರ ಬೆಟ್ಟಯ್ಯನ ಮಗಳು ಮೀರಾಳನ್ನು ಮಾಡಿಕೋ ಎಂದು ಶ್ರೀನಿವಾಸನಿಗೆ ಸಲಹೆ ಕೊಡುತ್ತಾಳೆ. ಅವಳು ಕೊಟ್ಟ ಸಲಹೆಯೇ ಗಟ್ಟಿಯಾಗಿ ಶ್ರೀನಿವಾಸನಿಗೆ ಮೀರಾಳ ಮೇಲೆ ಎಂಥದೋ ಆಕರ್ಷಣೆ ಉಂಟಾಗಿ ಪ್ರೇಮ ಶುರುವಾಗುತ್ತದೆ. ಅವರಿಬ್ಬರೂ ಮದುವೆ ಮಾಡಿಕೊಳ್ಳುವುದು ಅಂತ ತೀರ್ಮಾನಿಸುತ್ತಾರೆ.

ಆದರೆ ಶ್ರೀನಿವಾಸನ ಮನೆಯಿಂದ ಈ ಬಗ್ಗೆ ತೀವ್ರವಾದ ವಿರೋಧ ಬರುತ್ತದೆ. ಬೆಟ್ಟಯ್ಯನವರೂ ಮನಸ್ಪೂರ್ತಿಯಿಂದ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಬುದ್ಧಿ ಹೇಳಿದರೂ ಸರಿಹೋಗದ ಶ್ರೀನಿವಾಸನನ್ನು ತಹಬಂದಿಗೆ ತರಲು ಅವನ ತಂದೆ ಉಪಾಯ ಮಾಡಿ ಸತ್ಯಳ ಅಣ್ಣ ವೆಂಕಟೇಶನನ್ನು ಈ ಕೆಲಸಕ್ಕೆ ನೇಮಿಸುತ್ತಾರೆ. ವೆಂಕಟೇಶ ಶ್ರೀನಿವಾಸನನ್ನು ಕಂಡು 'ಸತ್ಯ ಮೀರಾಳ ಅಣ್ಣ ಮೋಹನದಾಸನನ್ನು ಮದುವೆಯಾಗುತ್ತಿದ್ದಾಳೆ. ನಿನಗೆ ಈ ರೀತಿ ದಡ ಕಾಣಿಸಿ ಅವನನ್ನು ಮದುವೆಯಾಗುವ ಪ್ಲಾನು ಅವಳದು' ಎಂದು ಸುಳ್ಳು ಹೇಳಿ ಕಿವಿ ತಿರುಚುತ್ತಾನೆ. ಸದರಿ ಮೋಹನದಾಸ -ಬೆಟ್ಟಯನವರ ಮಗ- ತಲತಲಾಂತರದಿಂದ ತಮ್ಮನ್ನು ಕೀಳಾಗಿ ಕಾಣುತ್ತಾ ಬಂದಿರುವ ಮೇಲುಜಾತಿಯವರ ಮೇಲೆ ಸದಾ ಕೆಂಡ ಕಾರುವ, ಇವೆಲ್ಲಾ ತೊಲಗಬೇಕಾದರೆ ಕ್ರಾಂತಿಯಾಗಬೇಕು, ಮೇಲು ಜಾತಿಯವರ ಮೇಲೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು ಎಂಬ ತತ್ವವುಳ್ಳ ತರುಣ. 'ಜಾತಿ ಬೇಧವೆಲ್ಲಾ ಸುಳ್ಳು' ಎಂಬ ವಾದವನ್ನು ನಂಬಿದ್ದ ಮತ್ತು ಎಂದೂ ಜಾತಿ ಬೇಧ ಮಾಡದ ಸತ್ಯಳೊಂದಿಗೆ ಅವನಿಗೆ ಪರಿಚಯ ಬೆಳೆಯುತ್ತದೆ. ಅವನ ಅನೇಕ ತತ್ವಗಳನ್ನು ಸತ್ಯ ಒಪ್ಪದಿದ್ದರೂ, ಅವನು ಒತ್ತಾಯಿಸಿದ ಕಾರಣ, ಈ ಜಾತಿಪದ್ಧತಿ, ಹರಿಜನ, ಅಸ್ಪೃಷ್ಯತೆ, ಸಮಾನತೆ -ಇವುಗಳನ್ನೆಲ್ಲಾ ಸಮೀಕರಿಸಿ ಒಂದು ಪುಸ್ತಕ ಬರೆದು ಮೋಹನದಾಸನಿಗೆ ಕೊಡಲು ಒಪ್ಪಿರುತ್ತಾಳೆ. ಇದೇ ಕಾರಣಕ್ಕೆ ಅವಳ ತೋಟದ ಮನೆಗೆ ಪದೇ ಪದೇ ಬಂದು ಹೋಗುತ್ತಿದ್ದ ಮೋಹನದಾಸನ ಬಗ್ಗೆ ತಿಳಿದಿದ್ದ ಶ್ರೀನಿವಾಸ, ಈಗ 'ಸತ್ಯ ಅವನನ್ನೇ ಮದುವೆಯಾಗುತ್ತಿದ್ದಾಳಂತೆ' ಎಂಬ ಸುಳ್ಳು ಸುದ್ಧಿಯನ್ನು ಸುಲಭವಾಗಿ ನಂಬುತ್ತಾನೆ. ತನ್ನಂತಹ ತನ್ನನ್ನೇ ನಿರಾಕರಿಸಿ ಆ ಮಾದಿಗನನ್ನು ಕಟ್ಟಿಕೊಳ್ಳಲು ಹೊರಟಿರುವ ಸತ್ಯಳ ಬಗ್ಗೆ ದ್ವೇಷ ಬೆಳೆಯುತ್ತದೆ. 'ತಾನು ಮಾದಿಗನಿಂತ ಕೀಳಾ?' ಅಂತ ಕೇಳಿಕೊಳ್ಳುತ್ತಾನೆ. ಮೀರಾಳೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಮೀರಾ ಈ ಅವಮಾನ, ಅನ್ಯಾಯವನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮತ್ತು ಶ್ರೀನಿವಾಸ ಅಕ್ಷರಶಃ ಹುಚ್ಚನೇ ಆಗಿಬಿಡಿತ್ತಾನೆ.

ಈ ಮಧ್ಯೆ ಸತ್ಯ ಬರೆದ ಪುಸ್ತಕ ಕ್ರಾಂತಿಯನ್ನೇ ಉಂಟುಮಾಡುತ್ತದೆ. ಮೋಹನದಾಸನ ನೇತೃತ್ವದಲ್ಲಿ ಎಲ್ಲೆಡೆಯಲ್ಲೂ ಹರಿಜನರು ಸಂಘಗಳನ್ನು ಕಟ್ಟಿಕೊಂಡು ಹೋರಾಟಕ್ಕಿಳಿಯುತ್ತಾರೆ. ದೇವಸ್ಥಾನಗಳಿಗೆ ನುಗ್ಗುತ್ತಾರೆ. ಹೋಟೆಲುಗಳಿಗೆ ನುಗ್ಗುತ್ತಾರೆ. ಅವರ ಕ್ರಾಂತಿಯಾತ್ರೆ ತಿರುಮಲಾಪುರಕ್ಕೂ ಬರುತ್ತದೆ. ಜನಗಳ ತೀವ್ರ ಪ್ರತಿರೋಧದ ನಡುವೆಯೂ ಅವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಆದರೆ ಮಂಗಳಾರತಿಯ ಸಂದರ್ಭದಲ್ಲಿ ಮೋಹನದಾಸನಿಗೆ ಅಂತಃಪ್ರಜ್ನೆ ಕೆಲಸ ಮಾಡಿ ಮೂರ್ಚೆ ತಪ್ಪಿ ಬಿದ್ದುಬಿಡುತ್ತಾನೆ.

ಎಚ್ಚರಾಗಿ ಎದ್ದು ಊರುಬಿಟ್ಟು ಹೋದವನಿಗೆ ತನ್ನ ಊರಲ್ಲೇ ತನಗಾದ ಈ ಅವಮಾನವನ್ನು ಸಹಿಸಲಾಗದೆ, ದೇವಸ್ಥಾನವನ್ನೇ, ಮೇಲ್ಜಾತಿಯ ಜನಗಳನ್ನೇ, ಇಡೀ ಊರನ್ನೇ ನಾಶ ಮಾಡುವ ಸಂಚು ಹೂಡುತ್ತಾನೆ. ಡೈನಾಮೈಟ್ ಇಟ್ಟು ಕೆರೆಯನ್ನು ಉಡಾಯಿಸಿಬಿಡುತ್ತಾನೆ. ಇಡೀ ಊರು ಜಲಪ್ರಳಯಕ್ಕೊಳಗಾಗುತ್ತದೆ. ಸತ್ಯ ಮೂಕವಿಸ್ಮಿತಳಾಗಿ ದೂರ ನಿಂತು ನೋಡುತ್ತಾಳೆ.