Monday, July 13, 2009

ಪ್ರಣತಿಯಿಂದ ಗಮಕ ಸುಧಾ ಧಾರೆ

"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು ಮುಂದುವರೆಸುತ್ತಿದ್ದರು:

"...ವಿಮಲ ರಾಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ಧಾತಾರ
ರಾವಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜಗವ ಗದುಗಿನ ವೀರನಾರಯಣ|

-ಎಂಬಲ್ಲಿಗೆ ಒಂದು ಕೆಮ್ಮು, ರಾಯರ ಪಕ್ಕ ವ್ಯಾಖ್ಯಾನಕ್ಕೆಂದು ಕೂತಿರುತ್ತಿದ್ದ ಸಾಗರದ ಮಧ್ಯಸ್ತರಿಂದ!

ಅದು ನಮ್ಮೂರಿನ ದೇವಸ್ಥಾನದ ಪ್ರಾಂಗಣ. ನಮ್ಮೂರಿನದು ಶ್ರೀಕೃಷ್ಣನ ದೇವಸ್ಥಾನವಾದ್ದರಿಂದ, ಪ್ರತಿವರ್ಷದ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ನಡೆಯುತ್ತಿತ್ತು. ಅಷ್ಟಮಿಯ ಮರುದಿನ, ಕೃಷ್ಣ ಜಯಂತಿಯಂದು ಸಂಜೆ, ಏನಾದರೂ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಸಾಮಾನ್ಯವಾಗಿ ಅದು 'ಗಮಕ ವಾಚನ ಮತ್ತು ವ್ಯಾಖ್ಯಾನ' ಕಾರ್ಯಕ್ರಮವೇ ಆಗಿರುತ್ತಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಗಮಕಿ ಹೊಸಬಾಳೆ ಸೀತಾರಾಮರಾಯರಿಂದ ಗಮಕ ವಾಚನ ಮತ್ತು ಸಾಗರದ ನೀ.ನಾ. ಮಧ್ಯಸ್ತರಿಂದ ಅದರ ವ್ಯಾಖ್ಯಾನ. ನಮ್ಮ ಮತ್ತು ಅಕ್ಕಪಕ್ಕದ ಗ್ರಾಮಸ್ಥರನ್ನೊಳಗೊಂಡ ಸುಮಾರು ನೂರು ಪ್ರೇಕ್ಷಕರು ಆ ಕಾರ್ಯಕ್ರಮದಲ್ಲಿ ಇರುತ್ತಿದ್ದರು. ಚಿಕ್ಕ ಮಕ್ಕಳಾಗಿದ್ದ ನಾವು, ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ'ಯ ಅನೇಕ ಭಾಗಗಳನ್ನು ಕೇಳಿದ್ದು ಹಾಗೆ.

ಆಮೇಲೆ ಒಂದೆರಡು ವರ್ಷ, ಕೆರೆಕೊಪ್ಪದ ನರಹರಿ ಶರ್ಮರ ವಾಚನ ಮತ್ತು ನಿಸರಾಣಿ ರಾಮಚಂದ್ರರ ವ್ಯಾಖ್ಯಾನದಲ್ಲಿ ಗಮಕ ಕಾರ್ಯಕ್ರಮ ನಡೆಯಿತು. ಈ ಹೊಸ-ಯುವ ಜೋಡಿಯನ್ನು ಗ್ರಾಮಸ್ಥರು ಮೆಚ್ಚಿಕೊಂಡರಾದರೂ, ಎಷ್ಟೋ ವರ್ಷಗಳಿಂದ ಗಮಕ ಕಾರ್ಯಕ್ರಮವನ್ನೇ ಕೇಳೀ ಕೇಳಿ ಬೇಸರ ಬಂದಿತ್ತು. ಹೀಗಾಗಿ, ಗಮಕದ ಬದಲು ಈಗ ಕೆಲ ವರ್ಷಗಳಿಂದ ಬೇರೆ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮೂರಿನ ದೇವಸ್ಥಾನದಲ್ಲಿ ನಡೆಯುತ್ತಿದೆ.

* * *

ನಾನು ಹೋಗುತ್ತಿದ್ದ ನಿಸರಾಣಿ ಹೈಸ್ಕೂಲಿನಲ್ಲಿ, ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಮಹತ್ವ ಕೊಡುತ್ತಿದ್ದರು. ಅಂದರೆ, ಮಕ್ಕಳಲ್ಲಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರತೆಗೆಯಲು ಅನೇಕ ಕಾರ್ಯಕ್ರಮಗಳು - ಸ್ಪರ್ಧೆಗಳು ಅಲ್ಲಿ ನಡೆಯುತ್ತಿದ್ದವು. ಅದರಲ್ಲಿ ಗಮಕ ತರಗತಿಯೂ ಒಂದು. 'ಗಮಕ ಕಲಾ ಪರಿಷತ್'ನ ಆಶ್ರಯದಲ್ಲಿ, ಆಸಕ್ತ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳುಗಳ ಗಮಕ ತರಗತಿ ಮತ್ತು ಕೊನೆಯಲ್ಲೊಂದು ಪರೀಕ್ಷೆ ಇರುತ್ತಿತ್ತು. ನರಹರಿ ಶರ್ಮರೇ ತರಗತಿ ತೆಗೆದುಕೊಳ್ಳುತ್ತಿದ್ದುದು. ನಾನೂ ಸೇರಿದ್ದೆ. ಹೇಳಿಕೊಳ್ಳಬಹುದಾದ ಒಂದು ಖುಶಿಯ ವಿಷಯ ಎಂದರೆ, ಆ ವರ್ಷದ ಗಮಕ ಪರೀಕ್ಷೆಯಲ್ಲಿ ನಾನೇ ಶಾಲೆಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದೆ! ಅದಾದಮೇಲೆ, ಎಸ್ಸೆಸ್ಸೆನ್ ಮೇಡಂ ಕ್ಲಾಸಿನಲ್ಲಿ ನನ್ನ ಕಾಲೆಳೆಯ ಬೇಕೆಂದೆನಿಸಿದಾಗಲೆಲ್ಲ 'ಸುಶ್ರುತ, ಒಂದು ಭಾವಗೀತೆ ಹಾಡೋ' ಅಂತಲೋ ಚಿತ್ರಗೀತೆ ಹಾಡೋ ಅಂತಲೋ ಜನಪದ ಗೀತೆ ಹಾಡೋ ಅಂತಲೋ ಹೇಳುತ್ತಿದ್ದರು. ಅದು ಹೇಗೋ ಗಮಕದಲ್ಲೊಂದು ಬಾಯ್ಕಳೆದು ಹಾಡಿ ಸರ್ಟಿಫಿಕೇಟು ಗಿಟ್ಟಿಸಿದ್ದು ಬಿಟ್ಟರೆ, ಈ ಭಾವಗೀತೆಯನ್ನಾಗಲೀ ಚಿತ್ರಗೀತೆಯನ್ನಾಗಲೀ ಜನಪದ ಗೀತೆಯನ್ನಾಗಲೀ ನಾನು ಬಾತ್‌ರೂಮು ಮತ್ತು ಏಕಾಂತದಲ್ಲಿ ಬಿಟ್ಟು ಬೇರೆಲ್ಲೂ ಹಾಡಿದ್ದೇ ಇಲ್ಲ. ಒಟ್ಟಿನಲ್ಲಿ ಎಸ್ಸೆಸ್ಸೆನ್ ಮೇಡಂರ ತಮಾಷೆಯಿಂದಾಗಿ ಕ್ಲಾಸು ಕಿಸಕಿಸ ನಗೆಯಲ್ಲಿ ಮುಳುಗುತ್ತಿತ್ತು.

* * *

ಈಗ ಇವೆಲ್ಲ ನೆನಪಾದದ್ದು ಪ್ರಣತಿಯಿಂದ ನಾವು ಆಯೋಜಿಸಿರುವ 'ಗಮಕ ಸುಧಾ ಧಾರೆ' ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ವಿಷಯ ಬಂದಾಗ. ಹೌದು, ಬರುವ ಶನಿವಾರ- ಜುಲೈ 18ರ ಸಂಜೆ 5 ಗಂಟೆಗೆ, ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ರಸಋಷಿ ಕುವೆಂಪು ನೆನಪಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ವಿರಳವಾಗುತ್ತಿರುವ ಈ ಕಲೆಯನ್ನು ಮತ್ತೆ ಪ್ರಚುರಪಡಿಸುವುದು ಪ್ರಣತಿಯ ಧ್ಯೇಯಗಳಲ್ಲೊಂದಾದ 'ಸಂಸ್ಕೃತಿ'ಯ ಕೆಲಸ. ಪ್ರಣತಿಗೆ ಇದು ಹೆಮ್ಮೆಯ ನಾಲ್ಕನೇ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ನೀವೆಲ್ಲ ಬರಲೇಬೇಕು ಅಂತ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.




Tuesday, July 07, 2009

ಬೆಟ್ಟದಿಂದ ಬಂದ ಪತ್ರ

ಡಿಯರ್ ಫ್ರೆಂಡ್,

ಮತ್ಯಾವುದೋ ಪರ್ವತದ ಮೇಲಿದ್ದೇನೆ. ‘ಎಲ್ಲಿ? ಯಾವೂರು?’ ಅಂತೆಲ್ಲ ಹೇಳುವುದಿಲ್ಲ. ಕನಿಷ್ಟ, ಪರ್ವತದ ಶೃಂಗದಲ್ಲಿದ್ದಾಗಲಾದರೂ ಊರು-ಕೇರಿ-ಹೆಸರುಗಳನ್ನು ಮರೆಯಬೇಕು ಅಂತ ನನಗನ್ನಿಸೊತ್ತೆ. ಇಲ್ಲಿ ಈ ಕ್ಷಣದಲ್ಲಿ ನನಗೆ ಎಲ್ಲ ಪರ್ವತಗಳ ನೆತ್ತಿಯೂ ಒಂದೇ ಅನ್ನಿಸುತ್ತಿದೆ. ಊರು, ಕೇರಿ, ಹೆಸರುಗಳನ್ನೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತ ಏರುತ್ತ ಏರುತ್ತ ತುತ್ತ ತುದಿಗೆ ಬಂದು ನಿಂತಿರುವ ಈ ಕ್ಷಣದಲ್ಲಿ ಕೈ ಚಾಚಿದರೆ ಆಕಾಶ, ಬಗ್ಗಿ ನೋಡಿದರೆ ಪ್ರಪಾತ, ಸುತ್ತೆಲ್ಲ ಶೂನ್ಯ ಎಂಬಂತಿರುವ ಈ ಜಾಗಕ್ಕೆ ಹೆಸರಾದರೂ ಯಾಕೆ ಬೇಕು ಹೇಳು?

ನನಗೂ ಗೊತ್ತಿಲ್ಲ ಸ್ಪಷ್ಟವಾಗಿ: ಏಕೆ ಹೀಗೆ ಚಾರಣಗಳಿಗೆ ಬರುತ್ತೇವೆ ನಾವು ಅಂತ. ಜಗದ ಜನವೆಲ್ಲ ತಮ್ತಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ತತ್ಪರರಾಗಿರುವಾಗ ನಾವು ಹೀಗೆ ದುಡ್ಡು ಖರ್ಚು ಮಾಡಿಕೊಂಡು, ಸಮಯ ವ್ಯಯಿಸಿ, ಸುಸ್ತು ಮಾಡಿಕೊಳ್ಳುತ್ತಾ ಬೆಟ್ಟ ಏರುವ ದರ್ದಾದರೂ ಏನಿರಬಹುದು? ಅಮ್ಮನಂತೂ ಯಾವಾಗಲೂ ಬೈಯುತ್ತಾಳೆ. ಅವಳಿಗೆ ತಿಳಿಸಿ ಹೇಳಲಿಕ್ಕಂತೂ ಇನ್ನೂ ನನಗೆ ಆಗಿಲ್ಲ. ಆದರೂ, ಸಾವನದುರ್ಗದ ಮೇಲಿನ ಮೌನ ನಂದಿಯ ಪಕ್ಕ ನಿಂತು ನೋಡಿದ ಮಳೆ, ದೇವರಾಯನದುರ್ಗದಲ್ಲಿ ಕಳೆದ ಕಾವಳದ ರಾತ್ರಿ, ಸಿದ್ದರ ಬೆಟ್ಟದ ನಿಗೂಢ ಗುಹೆಗಳು, ಕುಮಾರ ಪರ್ವತದಿಂದ ಕಂಡ ಅಮೋಘ ದೃಶ್ಯ, ದೇವಕಾರಿನ ಜಲಪಾತದ ಸೆಳೆತ, ಕೋಟೆಬೆಟ್ಟದ ಮೇಲೆ ಬೀಳುತ್ತಿದ್ದ ಹಿಮ -ಊಹುಂ, ಅವು ಮತ್ತೆಲ್ಲೂ - ಮತ್ತಿನ್ನೆಲ್ಲೂ ಸಿಗೊಲ್ಲ ಬಿಡು.

ಹಾಗೇ ಈ ಪರ್ವತದ ಶೃಂಗದಿಂದ ಕಾಣುತ್ತಿರುವ ದೃಶ್ಯ. ಇಲ್ಲಿಂದ ನೋಡುವಾಗ ಅದು ಜ್ವಾಲಾಮುಖಿಯಿಂದ ಉಕ್ಕಿ ಹರಿಯುತ್ತಿರುವ ಲಾವಾದಂತೆ ಕಾಣಿಸುತ್ತಿದೆ. ನನ್ನ ಕೆಮೆರಾದಿಂದ ಅದರ ಫೋಟೋ ತೆಗೆಯುತ್ತಿದ್ದ ಚಿನ್ಮಯ ಇನ್ನು ಸ್ವಲ್ಪ ಹೊತ್ತಿನಲ್ಲಿ ಅದು ಆಸ್ಟ್ರೇಲಿಯಾ ಮ್ಯಾಪಿನಂತೆ ಕಾಣಬಹುದು ಎಂದು ಹೇಳಿದ. ಆಸ್ಟ್ರೇಲಿಯಾ ಏನು, ಹೀಗೇ ಇನ್ನೂ ಸ್ವಲ್ಪ ಕೆಳಗಿಳಿದರೆ ಭಾರತದ ದಕ್ಷಿಣದಂಚಿನಂತೆಯೂ ಕಾಣಿಸಬಹುದು ಎನ್ನಿಸಿತು ನನಗೆ. ನಮ್ಮ ಬಟ್ಟೆ-ಆಹಾರವನ್ನೆಲ್ಲ ಸ್ವಲ್ಪ ಕೆಳಗೆ-ತಪ್ಪಲಿನಂತಹ ಜಾಗದಲ್ಲಿಟ್ಟು ಮೇಲೆ ಶೃಂಗಕ್ಕೆ ಬಂದಿದ್ದೇವೆ ನಾವು. ಶೃಂಗಕ್ಕೆ ಹತ್ತಿರದಲ್ಲೇ ಇರುವ ಮೋಡಗಳು ಕೆಳಗಿಳಿಯುತ್ತಿರುವ ಕತ್ತಲೆಯ ಪರಾಗಗಳನ್ನು ಮಧ್ಯದಲ್ಲೇ ತಡೆದು ಚಳಿಯನ್ನು ಜತೆ ಮಾಡಿ ಕಳುಹಿಸುತ್ತಿವೆ. ಆ ಪರಾಗಗಳು ನಮ್ಮ ಮೈಗೆ ತಾಕಿದ್ದೇ ತಡ, ರೋಮಗಳೆಲ್ಲ ಕುಸುಮದಂತೆ ಅರಳಿ ಎದ್ದು ನಿಂತಿವೆ.

“ಶೃಂಗದಲ್ಲಿದ್ದಾಗ ಕತ್ತಲಾದದ್ದು ಗೊತ್ತಾಗುವುದಿಲ್ಲ. ಕೆಳಗಿಳಿಯುವಾಗ ಕಷ್ಟ” ಎಂದ ಪ್ರವೀಣ. ಹೌದೆನಿಸಿತು ನನಗೆ. ಈಗಷ್ಟೇ ಮುಳುಗಿದ್ದ ಸೂರ್ಯ ಇಲ್ಲಿ. ನಮನ್ನೆಲ್ಲ ಕತ್ತಲೆಯಲ್ಲಿ ಬಿಟ್ಟು ಇಲ್ಲಿ ಹೀಗೆ ಪಶ್ಚಿಮದ ದಿಗಂತದಲ್ಲಿ ಕಣ್ಮರೆಯಾಗಿ, ಅಲ್ಲಿ ಬೇರ‍್ಯಾವುದೋ ದೇಶದ ಜನರಿಗೆ ಬೆಳಗು ಮಾಡಿ ಅಲ್ಲಿಯ ಬೆಡಗಿಯರನ್ನು ಮನೆಯಿಂದ ಹೊರ ಕರೆಸಿ ಅವರ ಸೌಂದರ್ಯವನ್ನು ಕಣ್ಮಿಟುಕಿಸದೇ ಸಂಜೆಯವರೆಗೂ ನೋಡಿಕೊಂಡು, ನಾಳೆ ಬೆಳಗಾಗುತ್ತಿದ್ದಂತೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮುಗ್ಧ ಸೋಗಿನಲ್ಲಿ ಇಲ್ಲಿ ಮತ್ತೆ ಹಾಜರಾಗುವ ಈ ಸೂರ್ಯನನ್ನು ಕಂಡಾಗಲೆಲ್ಲ ನನಗೆ ಅಸೂಯೆ. ಇರಬಹುದು ಅಂವ ದೊಡ್ಡವ. ಇರಬಹುದು ಅಂವ ಬೆಳಕಿನ ಅಧಿಪತಿ. ಇರಬಹುದು ಆತ ಜಗದೊಡೆಯ. ಆದರೆ ಆತ ಸಾಚಾ ಅಂತೂ ಅಲ್ಲ. ಒಮ್ಮೆ ಆತ ಮುಳುಗುತ್ತಿದ್ದಾಗ ಅವನ ಹಿಂದೆಯೇ ಹೋಗಿ ಅವನ ಮೋಸವನ್ನೆಲ್ಲ ಸಾಬೀತು ಮಾಡಿ ಬರಬೇಕು ಅಂತಿದೆ ನನಗೆ. ಆದರೆ ಆತ ಬುದ್ಧಿವಂತ: ಬೆಳ್ಳಿ ಚಂದಿರನನ್ನೂ ಕೋಟಿತಾರೆಗಳನ್ನೂ ನನ್ನ ಕಾವಲಿಗಿಟ್ಟೇ ಹೋಗುತ್ತಾನೆ ಪ್ರತಿದಿನ. ಇವುಗಳಿಂದ ತಪ್ಪಿಸಿಕೊಳ್ಳುವುದಿದೆಯೇ?

ಆಗಲೇ ಬೀಳತೊಡಗಿದ್ದ ಇಬ್ಬನಿಯಿಂದಾಗಿ ನೆಲ ಜಾರುತ್ತಿದೆ. “ತಪ್ಪಿ ಒಣಗಿದ ಹುಲ್ಲಿನ ಮೇಲೇನಾದರೂ ಕಾಲಿಟ್ಟರೆ ಸೀದಾ ಕೆಳಗೇ” -ಗೆಳೆಯರು ಎಚ್ಚರಿಸುತ್ತಿದ್ದಾರೆ. ಬಲು ಹುಷಾರಿನಿಂದ ಇಳಿಯುತ್ತಿದ್ದೇನೆ. ತಪ್ಪಲಿಗೆ ಮುಟ್ಟುವಷ್ಟರಲ್ಲಿ ಕತ್ತಲೆ ಪೂರ್ತಿ ಆವರಿಸಿದೆ. ಚಳಿ ತೀಕ್ಷ್ಣವಾಗುತ್ತಿದೆ. ಸರಸರನೆ ನಮ್ಮ ಜಾಕೀಟುಗಳನ್ನು ಧರಿಸಿ, ಬ್ಯಾಗುಗಳಲ್ಲಿದ್ದ ಪೆನ್‌ಟಾರ್ಚುಗಳನ್ನು ಹೊರತೆಗೆದು, ಕ್ಯಾಂಪ್‌ಫೈರ್ ಮಾಡಲಿಕ್ಕೆ ಕಟ್ಟಿಗೆ ಒಟ್ಟುಗೂಡಿಸಲಿಕ್ಕೆ ಹೊರಡುತ್ತೇವೆ ನಾವು. ನಾವು ಪಕ್ಕದ ಹಳ್ಳಿಯಿಂದ ಕರೆದುಕೊಂಡು ಬಂದಿದ್ದ ಗೈಡುಗಳು ಇನ್ನೊಂದು ತಾಸಿನೊಳಗೆ ಬರುತ್ತೇವೆ ಎಂದು ಹೇಳಿ ಎತ್ತಲೋ ಮಾಯವಾಗಿಬಿಟ್ಟಿದ್ದಾರೆ. ಅವರಾದರೂ ಇದ್ದಿದ್ದರೆ ಕಟ್ಟಿಗೆ ತರಲಿಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರು. “ರಾತ್ರಿಯಿಡೀ ಉರೀಬೇಕು ಅಂದ್ರೆ ದೊಡ್ಡ ದೊಡ್ಡ ಕುಂಟೆಯೇ ಬೇಕು. ಈ ಸಣ್ಣ ಜಿಗ್ಗು-ಪುಡಿ ಕಟ್ಟಿಗೆಯೆಲ್ಲಾ ಹತ್ತು ನಿಮಿಷದಲ್ಲಿ ಉರಿದು ಹೋಗ್ತವೆ” ವಿನು ಹೇಳುತ್ತಿದ್ದಾನೆ. ಹೌದು, ದೊಡ್ಡ ದಿಮ್ಮಿಗಳೇ ಬೇಕು. ಇಲ್ಲಿ ಒಣಗಿದ ಮರಗಳೇನೋ ಬಹಳ ಇವೆ, ಆದರೆ ಇವನ್ನೆಲ್ಲಾ ಈ ಕತ್ತಲಿನಲ್ಲಿ ಕಡಿದು ಹೊತ್ತು ಅಲ್ಲಿಗೆ ಸಾಗಿಸುವುದೇ ತಲೆನೋವು.

ಚಳಿ ಈ ರಾತ್ರಿ ನಮಗೊಂದು ಗತಿ ಕಾಣಿಸಲಿಕ್ಕೆ ಸಂಚು ಹೂಡಿದಂತಿದೆ. ಹೊತ್ತಿಕೊಂಡ ಸಣ್ಣ ಬೆಂಕಿಯ ಬೆಳಕು ಎಲ್ಲರ ಮುಖಕ್ಕೂ ಕೆಂಪಿನ ಬಣ್ಣ ಬಳಿಯುತ್ತಿದೆ. ರವ್ಯಾ ಏನೋ ಡೈಲಾಗು ಹೊಡೆಯುತ್ತಿದ್ದಾನೆ: “ಇಷ್ಟು ದೊಡ್ಡ ಬೆಂಕಿ ಆದ್ರೂ ಶಾಖ ದೇಹದ ಎಲ್ಲಾ ಭಾಗಕ್ಕೂ ಮುಟ್ತಾನೇ ಇಲ್ಲ ಮಾರಾಯಾ..!” ಎಲ್ಲರೂ ನಗುತ್ತಿದ್ದೇವೆ. ಈ ಚಳಿಯಲ್ಲಿ ನಗೆಯ ದನಿಯೂ ಬೇರೆ ತರಹ ಕೇಳಿಸುತ್ತದೆ. ಅಥವಾ ಅದೊಂಥರಾ ಭ್ರಮೆಯಿರಬಹುದು. ಈಗ ನಮ್ಮ ಗೈಡುಗಳು ದೌಡಾಯಿಸಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ಬಾಟಲಿಗಳು. ಬಿಳೀ ಬಣ್ಣದ ಸಾರಾಯಿ. ರಾತ್ರಿ ನಾವು ಮಲಗಿದ್ದಾಗ ಇವರು ನಿದ್ರಿಸದೇ ಬೆಂಕಿಗೆ ಕೊಳ್ಳಿ ಮುಂದೂಡುತ್ತಾ ಬೆಳಗಿನವರೆಗೂ ಕುಡಿಯುತ್ತಲೇ ಇರುತ್ತಾರಂತೆ. ಅಷ್ಟೆಲ್ಲಾ ಕುಡಿದರೂ ಇವರಿಗೆ ನಿದ್ರೆ ಬರುವುದಿಲ್ಲವಾ ಅಂತ ನನಗೆ ಆಶ್ಚರ್ಯ. ಬಹುಶಃ ನಾವು ಎದ್ದಮೇಲೆ ಇವರು ಮಲಗಬಹುದು ಅಂತ ಎಲ್ಲರೂ ತಮಾಷೆ ಮಾಡಿಕೊಂಡೆವು.

ತಂದಿದ್ದ ಚಪಾತಿಯನ್ನು ಹಂಚಿಕೊಂಡು ತಿಂದೆವು. ಸ್ವಲ್ಪ ಹೊತ್ತು ಹರಟೆಯೂ ಮುಗಿಯಿತು. ಇನ್ನೇನು ಕೆಲಸ? ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡು ಮಲಗಿ ನಿದ್ರೆ ಹೋಗುವುದು ಅಷ್ಟೇ. ಜಾಕೇಟಿನ ಸಮೇತ ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿ ಮಲಗಿಕೊಂಡಿದ್ದೇನೆ. ಮುಖದ ಜಾಗದಷ್ಟನ್ನೇ ಜಿಪ್ ತೆರೆದು ಉಸಿರಾಡಲಿಕ್ಕೆ ಅನುಕೂಲ ಮಾಡಿಕೊಂಡಿದ್ದೇನೆ. ಗುಡ್‌ನೈಟುಗಳ ವಿನಿಮಯವೂ ಮುಗಿದು ಈಗ ಬರೀ ಬೆಂಕಿಯ ಚಟಪಟ ಸದ್ದು. ಇನ್ನು ನಿದ್ರೆ ಬರುವವರೆಗೂ ಚುಕ್ಕೆಗಳನ್ನು ಎಣಿಸಬಹುದು. ರಂಗೋಲಿಯ ಎಳೆಯಂತೆ ಕಂಡು ಮಾಯವಾಗುವ ಉಲ್ಕಾಪಾತವನ್ನು ಬೆರಗಿಲೆ ನೋಡಬಹುದು.

ಈಗ ಈ ಚುಕ್ಕೆರಾಶಿಯ ಮುನ್ನೆಲೆಯಲ್ಲಿ ನಾವು ಸಂಜೆ ನೋಡಿದ್ದ ಜ್ವಾಲಾಮುಖಿಯ ಚಿತ್ರ ಮೂಡುತ್ತಿದೆ. ಆಕಾಶಕ್ಕೇ ಬೆಂಕಿ ಬಿದ್ದಂತೆ ಭಾಸ. ಕಪ್ಪು ಪರದೆ ಹರಿದು ಇನ್ನೇನು ನಮ್ಮ ಮೈಮೇಲೇ ಬೀಳಬಹುದು ಎಂಬಂತೆ ಭ್ರಮೆ. ಭಯವಾಗಿ ಬೆಚ್ಚಿ ಕಣ್ಮಿಟುಕಿಸಿದೆ. ಚಿತ್ರ ಮಾಯವಾಯಿತು. ಸ್ವಲ್ಪ ಹೊತ್ತು ಗಟ್ಟಿಯಾಗಿ ಕಣ್ಮುಚ್ಚಿಕೊಂಡಿದ್ದೆ. ಈಗ ಚುಕ್ಕೆಗಳೂ ಇಲ್ಲದ ಕಣ್ಣೊಳಗಿನ ಕತ್ತಲೆಯ ಕಡುಕಪ್ಪು ಪರದೆಯ ಮೇಲೆ ಸಂಜೆ ನೋಡಿದ್ದ ವಿಹಂಗಮ ಸೂರ್ಯಾಸ್ತದ ದೃಶ್ಯ ಮೂಡುತ್ತಿದೆ. ಸೂರ್ಯ ನನ್ನ ಅಕ್ಷಿಪಟಲದ ಮೇಲ್ತುದಿಯಿಂದ ಕೆಳಕೆಳಗೆ ಇಷ್ಟಿಷ್ಟೇ ಇಳಿಯುತ್ತಿದ್ದಾನೆ. ಹಾಗೇ ಇಳಿದಿಳಿದು ಪೂರ್ತಿಯಾಗಿ ಅಸ್ತಂಗತನಾಗಿ ಕಣ್ಣಗುಡ್ಡೆಯನ್ನೊಮ್ಮೆ ಹಿಂದಿನಿಂದ ಬಳಸಿ ಸ್ವಲ್ಪವೇ ಹೊತ್ತಿನಲ್ಲಿ ಮತ್ತೆ ಮುಂದೆ ಮೂಡಿ ಬರುತ್ತಿದ್ದಾನೆ. ನಾನು ಬೆಳಗೇ ಆದಂತೆನಿಸಿ ಫಕ್ಕನೆ ಎದ್ದು ಕುಳಿತೆ. ಕಣ್ಬಿಟ್ಟರೆ ಸೂರ್ಯ ಮಾಯವಾಗಿ ಎದುರಿಗೆ ಉರಿಯುತ್ತಿರುವ ಚಳಿಬೆಂಕಿ. ಅದರ ಪಕ್ಕ ಕುಳಿತು, ಈ ಜಗದ ಪರಿವೆಯೇ ಇಲ್ಲದಂತೆ ಬಾಟಲಿಯನ್ನು ಬಾಯಿಗಿಟ್ಟು ಸಂಪೂರ್ಣ ಮೇಲಕ್ಕೆತ್ತಿ ಅಕ್ಷರಶಃ ನಕ್ಷತ್ರಗಳನ್ನೆಣೆಸುತ್ತಿದ್ದಾರೆ ನಮ್ಮ ಗೈಡುಗಳು. ನಾನು ದಿಗ್ಗನೆ ಎದ್ದು ಕೂತದ್ದು ನೋಡಿ ಇನ್ನೂ ನಿದ್ದೆ ಬಂದಿರದ ನಿಧಿ “ಏನಾಯ್ತೋ ದೋಸ್ತಾ?” ಎಂದು ಕೇಳುತ್ತಿದ್ದಾನೆ. ಏನಿಲ್ಲ ಅಂತಂದು ನಾನು ಮತ್ತೆ ಮಲಗಿಕೊಳ್ಳುತ್ತಿದ್ದೇನೆ. ಈಗ ಹಟ ತೊಟ್ಟು, ಚುಕ್ಕಿಪರದೆ ಮೇಲೆ ಮೊದಲು ಬೆಟ್ಟ ಮೂಡಿ ಆ ನಂತರ ಅದರ ಮೇಲೆ ಲಾವಾ ಇಳಿಯುತ್ತಿರುವಂತೆ ಕಲ್ಪಿಸಿಕೊಳ್ಳಬೇಕು. ನನ್ನ ಕಲ್ಪನೆಯಂತೆಯೇ ಚಿತ್ರ ಆವಿರ್ಭವಿಸುತ್ತಿದೆ..

ನಾವು ಶೃಂಗದಲ್ಲಿದ್ದಾಗ ನೋಡಿದ್ದು ಪಕ್ಕದ ಚಿಕ್ಕ ಬೆಟ್ಟದ ಮೇಲೆ ಉರಿಯುತ್ತಿದ್ದ ಕಾಡಿನ ಬೆಂಕಿಯ ಚಿತ್ರ. ಮಧ್ಯದಿಂದೆಲ್ಲೋ ಹೊತ್ತಿಕೊಂಡು, ಒಣಗಿದ ಹುಲ್ಲನ್ನು ತನ್ನ ಸುತ್ತಲಿಂದಲೂ ಆವರಿಸುತ್ತಾ ಕೆಳಗಿಳಿಯುತ್ತಿದ್ದ ಅದು, ದೂರದಿಂದ ನಮಗೆ ಲಾವಾದ ಹಾಗೆಯೇ ಕಾಣುತ್ತಿತ್ತು. ಬಹುಶಃ ಯಾರೋ ಹಳ್ಳಿಗರು ಸೇದಿ ಎಸೆದ ಬೀಡಿಯಿಂದ ಹೊತ್ತಿದ್ದೋ ಅಥವಾ ಯಾರೋ ಬೇಕೆಂದೇ ಹಚ್ಚಿ ಹೋದದ್ದೋ ಇರಬೇಕು. ಹುಲ್ಲು ಒಣಗಿರುವ ಈ ಶಿಶಿರದ ಕಾಲದಲ್ಲಿ ಜನ ಹೀಗೆ ಬೇಕೆಂದೇ ಬೆಂಕಿ ಹಾಕುವುದುಂಟು. ಆಗ ಒಣಹುಲ್ಲೆಲ್ಲ ಉರಿದುಹೋಗಿ, ಬರುವ ಮಳೆಗಾಲದಲ್ಲಿ ಹೊಸ ಹುಲ್ಲು ಪುಷ್ಕಳವಾಗಿ ಮೊಳೆತು ಚಿಗುರಿ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ. ಮುಂದಿನ ವರ್ಷ ದನಕರುಗಳಿಗೆ ಒಳ್ಳೆಯ ಮೇವು ದೊರೆಯುತ್ತದೆ.

ನಮ್ಮ ಮನೆಯ ಹುಲ್ಲಿನ ಹಿತ್ತಿಲಿಗೆ ಪ್ರತಿವರ್ಷ ಅಪ್ಪ ಮಳೆಗಾಲ ಹಿಡಿಯುವುದಕ್ಕೂ ಮುನ್ನ ಒಮ್ಮೆ ಹೀಗೇ ಬೆಂಕಿ ಹಾಕಿ ಸುಡುತ್ತಿದ್ದುದು ನೆನಪಾಗುತ್ತಿದೆ... ಬೆಂಕಿ ಹಾಕಿದಾಗ, ಅದು ಅಲ್ಲಲ್ಲಿದ್ದ ಗೇರುಗಿಡಗಳ ಬಳಿ ಹೋಗದಂತೆ, ಹಿತ್ತಿಲ ಬೇಲಿಗೆ ಹೊತ್ತಿಕೊಳ್ಳದಂತೆ ಮತ್ತು ಪಕ್ಕದ ಮನೆಯ ಹಿತ್ತಿಲಿಗೆ ಹಾಯದಂತೆ, ಹಸಿರು ಸೊಪ್ಪಿನ ಚಂಡೆ ಹಿಡಿದು ಸಂರಕ್ಷಿಸುವ ಕೆಲಸ ನನ್ನದಾಗಿತ್ತು. ಸಿಕ್ಕಿರುವ ಈ ಜವಾಬ್ದಾರಿಯಿಂದಾಗಿ ನನಗೆ ಖುಶಿಯೋ ಖುಶಿ. ಬೆಂಕಿ ಮೈಗೆ ತಾಗೀತು, ಹುಷಾರು ಅಂತ ಅಮ್ಮ ಮನೆಯಿಂದ ನೂರು ಸಲ ಹೇಳಿ ಕಳುಹಿಸಿರುತ್ತಿದ್ದಳು. ಅಪ್ಪನೂ ಕೂಗಿ ಕೂಗಿ ಎಚ್ಚರಿಸುತ್ತಿದ್ದ. ನಾನು ಮಾತ್ರ ಆವೇಶ ಬಂದವನಂತೆ ಹಸಿರು ಚಂಡೆಯನ್ನು ಹಿಡಿದು ಬೆಂಕಿಯ ಹಿಂದೆಯೇ ಓಡುತ್ತಾ ಬಡಿದು ಬಡಿದು ನಂದಿಸುತ್ತಿದ್ದೆ.

ಕೆಲವೊಮ್ಮೆ, ಇಂತಹ ಬಿರುಬೇಸಗೆ ಕಾಲದ ರಾತ್ರಿಯಲ್ಲಿ, ಇದ್ದಕ್ಕಿದ್ದಂತೆ ನಮ್ಮ ತೋಟದ ಮೇಲಣ ಕಾಡಿಗೆ ಬೆಂಕಿ ಹೊತ್ತಿಕೊಂಡುಬಿಡುತ್ತಿತ್ತು. ಆ ಕಾಡಿನ ಬೆಂಕಿಯನ್ನು ನಾವು ‘ಗುಡ್ಡೆ ಗರಕು’ ಅಂತ ಕರೆಯುತ್ತಿದ್ದೆವು. ಆಗ ಮೈಲುಗಳವರೆಗೂ ತೇಲಿಬರುತ್ತಿದ್ದ ಆ ಒಣಗಿದ ಹುಲ್ಲು-ಸೊಪ್ಪುಗಳು ಸುಟ್ಟ ವಾಸನೆಗೆ ಊರವರೆಲ್ಲ ಎಚ್ಚೆತ್ತುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ “ಹೋಯ್, ಸೊಪ್ಪಿನ್ ಬೆಟ್ಟಕ್ಕೆ ಬೆಂಕಿ ಬಿದ್ದಿದು. ನೋಡಿ ಅಲ್ಲಿ, ಆಚೆ ದಿಂಬದಲ್ಲಿ ಹೆಂಗೆ ಕೆಂಪಗೆ ಕಾಣ್ತಾ ಇದ್ದು.. ಎಲ್ಲಾ ನೀರು ತಗಂಡು ಹೊರಡಿ” ಎಂದು ಊರವರೆಲ್ಲ ಕೂಗುತ್ತ-ಕಿರುಚಾಡುತ್ತಾ, ಗುಡ್ಡದ ಕಡೆ ಓಡುತ್ತಿದ್ದರು. ನಾವೂ ಕೊಡಪಾನದ ತುಂಬ ನೀರು ಹಿಡಿದು, ಕೈಗೊಂದು ಕತ್ತಿ ತೆಗೆದುಕೊಂಡು ಓಡುತ್ತಿದ್ದೆವು. ಬೆಂಕಿ ಬೆಟ್ಟದಿಂದ ಕೆಳಗಿಳಿದು ನಮ್ಮ ಅಡಕೆ ತೋಟಗಳ ಬಳಿ ಬರುವುದರೊಳಗೆ ಆರಿಸಬೇಕಿರುತ್ತಿತ್ತು. ಜೋರಾಗಿ ಗಾಳಿಯೇನಾದರೂ ಬೀಸುತ್ತಿದ್ದರೆ ಬೆಂಕಿ ಅತಿ ವೇಗವಾಗಿ ಹಬ್ಬುತ್ತಿತ್ತು. ಕತ್ತಲೆಯಲ್ಲಿನ ಬೆಂಕಿಯ ಜತೆಗಿನ ಹೋರಾಟದ ಆ ನೋಟ ಭೀಷಣವಾಗಿರುತ್ತಿತ್ತು.

ನನಗೆ ನಿದ್ರೆ ಬರುತ್ತಿರುವುದರಿಂದಲೋ ಏನೋ, ಆಕಾಶಪರದೆಯ ಮೇಲೆ ಮೂಡಿದ್ದ ಬೆಟ್ಟದ ಬೆಂಕಿ, ಬೀಳುತ್ತಿರುವ ಭಾರೀ ಇಬ್ಬನಿಗೆ ಆರಿ ತಣ್ಣಗಾಗುತ್ತಿದೆ. ಈಗ ಬರೀ ನಕ್ಷತ್ರಗಳಿಗೆ ಹೊತ್ತಿಕೊಂಡಿರುವ ಬೆಂಕಿ ಉಳಿದಿದ್ದು, ಅವೆಲ್ಲ ಕೆಂಪಕೆಂಪಗೆ ಹೊಳೆಯುತ್ತಿವೆ. ಯಾವಾಗ ಆರುತ್ತವೋ ಅವು, ನೋಡಿ ನೋಡಿ ನನ್ನ ಕಣ್ಣು ಉರಿಯುತ್ತಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬೀಳಲಿರುವ- ನನ್ನ ಕಣ್ಣಿಗೇ ಬೆಂಕಿ ಹೊತ್ತಿ ಧಗಧಗಿಸುತ್ತಿರುವ ಕನಸಿಗಾಗಿ -ನಾನೀಗ ನಿದ್ರೆ ಮಾಡಲೇಬೇಕಿದೆ.

ಎಷ್ಟೋ ಸಮಯ ಕಳೆದಿರಬಹುದು. ಎಷ್ಟೆಂದರೆ, ಚಾರಣದ ಸುಸ್ತೆಲ್ಲ ಕಳೆದು ಹೋಗುವಷ್ಟು ಸಮಯ. ಮೈಮರೆತು ನಿದ್ರೆ ಮಾಡಿಬಿಟ್ಟಿದ್ದೇನೆ. “ದೋಸ್ತಾ, ದೋಸ್ತಾ” ಪಕ್ಕದ ಗೆಳೆಯ ತಟ್ಟಿ ಎಬ್ಬಿಸುತ್ತಿದ್ದಾನೆ. ಕಣ್ಬಿಡುತ್ತಿದ್ದೇನೆ. ಎದುರಿನ ಆಕಾಶದ ಬಣ್ಣವೇ ಬದಲಾಗಿದೆ ಈಗ. ಯಾರೋ ಕಲೆಗಾರ ಮೂಡಣ ದಿಕ್ಕಿಗೆ ನೇತುಬಿಟ್ಟಿರುವ ಕೆಂಪು-ಹಳದಿ ಬಣ್ಣಗಳ ಜವನಿಕೆಯಲ್ಲಿ ಮೂಡಿ ಬರುತ್ತಿದ್ದಾನೆ ಅಂವ: ಖದೀಮ ಸೂರ್ಯ. ಶುದ್ಧ ಗುಂಡಗಿದ್ದಾನೆ. ಪರದೇಶದ ಚೆಂದುಳ್ಳಿ ಚೆಲುವೆಯರ ಸಂಗಡ ಚೆಲ್ಲಾಟವಾಡಿ ಬಂದವ ಬೆಳ್ಳಗೆ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದಾನೆ. ಪಕ್ಕದ ಬೆಟ್ಟವನ್ನು ನೋಡಿದರೆ ಅಲ್ಲಿ ಬೆಂಕಿಯಿಲ್ಲ. ಎದುರಿಗೆ ನಾವು ಮಾಡಿದ್ದ ಕ್ಯಾಂಪ್‌ಫೈರ್ ಇಲ್ಲ. ಮೇಲೆ ಕೆಂಪಗೆ ಉರಿಯುತ್ತಿದ್ದ ತಾರೆಗಳಿಲ್ಲ. ನನ್ನ ಕಣ್ಣಲ್ಲೀಗ ಉರಿಯಿಲ್ಲ. ನಾನು ನಿದ್ರಿಸಿದ್ದಾಗ ಎಲ್ಲವನ್ನೂ ನುಂಗಿಬಿಟ್ಟನೇ ಈ ಜಾದೂಗಾರ? ಇಂತಹ ಸೂರ್ಯೋದಯವನ್ನು ಕಣ್ಣಾರೆ ಕಾಣದೆ ಯಾವ ಕುವೆಂಪು ತಾನೇ ಬರೆದಾರು ಹಾಗೆ ನಾಯಿಗುತ್ತಿ ಮತ್ತು ತಿಮ್ಮಿ ಕಂಡ ದೃಶ್ಯದ ವರ್ಣನೆಯನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ? ಅಥವಾ ಕಾಣದೆಯೂ ಬರೆಯಬಲ್ಲವರಾಗಿದ್ದರು ಎಂತಲೇ ಅವರು ರಸ‌ಋಷಿಯೇ?

“ಬಿಸಿಲು ಏರುವುದರೊಳಗೆ ಕೆಳಗಿಳಿದುಕೊಳ್ಳಬೇಕು. ಅದಿಲ್ಲದಿದ್ದರೆ ಆಗುವುದೇ ಇಲ್ಲ ಆಮೇಲೆ” ಪ್ರವೀಣ ಹೆದರಿಸಿದ. ಬೆಳಗಿನ ತಿಂಡಿಗೆಂದೇ ತಂದಿದ್ದ ಕುಟ್ಟವಲಕ್ಕಿಯನ್ನು ತಿಂದು ನಾವು ನೀರು ಕುಡಿದೆವು. ಇನ್ನೂ ಸಾರಾಯಿಯ ಅಮೃತಲೋಕದಲ್ಲಿ ತೇಲುತ್ತ ನಿದ್ದೆ ಹೊಡೆಯುತ್ತಿದ್ದ ಗೈಡುಗಳು ಮೈ ಮುರಿಯುತ್ತಾ ಎದ್ದರು. ಸ್ಲೀಪಿಂಗ್ ಬ್ಯಾಗುಗಳನ್ನು ಮಡಿಸಿ, ದೊಡ್ಡ ಬ್ಯಾಗುಗಳನ್ನು ಹೆಗಲಿಗೇರಿಸಿ ನಾವು ಅವರೋಹಣಕ್ಕಣಿಯಾದೆವು.

ಕ್ಯಾಂಪ್‌ಫೈರು ಸೃಷ್ಟಿಸಿದ್ದ ಬೂದಿಯ ಗುಡ್ಡೆಯನ್ನೊಮ್ಮೆ ಕಣ್ತುಂಬ ನೋಡಿ, ಸುಟ್ಟು ಕಪ್ಪಗಾಗಿದ್ದ ಪಕ್ಕದ ಬೆಟ್ಟದ ಮೇಲ್ಮೈಯನ್ನೊಮ್ಮೆ ಕಡೆಗಣ್ಣಿನಿಂದ ನಿರುಕಿಸಿ, ತಾರೆಗಳಿಲ್ಲದ ಆಕಾಶದ ದಿಗಂತದೆಡೆಗೆ ನಡೆಯುವವನಂತೆ, ಬೆಟ್ಟದ ಇಳಿಜಾರಿನಲ್ಲಿ ಹೆಜ್ಜೆ ಎತ್ತಿಡುತ್ತಿದ್ದೇನೆ. ಬೆಂಕಿಯುಂಡೆಯಂತಾಗುತ್ತಿರುವ ಪಾಪಿ ಸೂರ್ಯ ಹಿಂದಿನಿಂದ ಗಹಗಹಿಸಿ ನಗುತ್ತಿದ್ದಾನೆ. ಇನ್ನೇನು, ಮೂರ್ನಾಲ್ಕು ತಾಸುಗಳಲ್ಲಿ ನಾವು ಕೆಳಗಿರುತ್ತೇವೆ. ಮತ್ತೆ ನಮ್ಮ ಊರು, ಕೇರಿ, ಹೆಸರು, ಮರೆತುಹೋಗಿದ್ದ ಅದೆಷ್ಟೋ ಕೊಸರುಗಳು. ಆದರೂ ಇಷ್ಟು ಹೊತ್ತಾದರೂ ಇವನ್ನೆಲ್ಲ ಮರೆತಿದ್ದೆನಲ್ಲ ಮಾರಾಯ, ಚಾರಣದ ಹಾದಿಗೊಂದು ನಮಸ್ಕಾರ!

ಮತ್ತೆ ಹೇಗಿದ್ದೀ? ಯಾವಾಗ ಸಿಗುತ್ತೀ? ಪತ್ರ ಬರೆ. ಸಧ್ಯಕ್ಕೆ, ಟಾಟಾ...

(೨೬ನೇ ಜನವರಿ ೨೦೦೯)

ಗಯ್ಸ್, ಲಾಸ್ಟ್ ಟ್ರೆಕ್ ಹೋಗ್ಬಂದು ಆರ್ ತಿಂಗ್ಳ ಮೇಲಾತು. ಎಂತ ಮಾಡ್ತಾ ಇದ್ದಿ? ವೈನಾಟ್ ಅ ಮಾನ್ಸೂನ್ ಟ್ರೆಕ್? ;)

Tuesday, June 30, 2009

ಬಾರದ ಮಳೆಯ ದಿನದಲ್ಲಿ ನನ್ನದೊಂದಿಷ್ಟು ಬಡಬಡಿಕೆ

ಮೌಸ್ ಅಲ್ಲಾಡಿಸಿದರೆ ಸಾಕು, ಇದೆಲ್ಲ ತನ್ನದೇ ಎಂಬಂತೆ ಕಂಪ್ಯೂಟರ್ ಸ್ಕ್ರೀನಿನ ತುಂಬ ಓಡಾಡುವ ಈ ಬಿಳೀ ಹೊಟ್ಟೆಯ ಕಪ್ಪು ಅಲಗುಗಳ ಪುಟ್ಟ ಬಾಣವನ್ನು ಸ್ಕ್ರೀನಿನ ಕೆಳಾಗಡೆ ಬಲಮೂಲೆಗೆ ಒಯ್ದು ಒಂದು ಕ್ಷಣ ಬಿಟ್ಟರೆ ಪುಟ್ಟ ಅಸಿಸ್ಟೆಂಟ್ ಬಾಕ್ಸೊಂದು ಮೂಡಿ Tuesday, June 30, 2009 ಎಂದು ತೋರಿಸುತ್ತಿದೆ ಮುದ್ದಾಗಿ. ಅಂದರೆ ಜುಲೈ ತಿಂಗಳು ಬರಲಿಕ್ಕೆ ಇನ್ನು ಕೇವಲ ಒಂದು ದಿವಸ ಬಾಕಿ.

ನಾನು ಕಳೆದ ತಿಂಗಳ 26ನೇ ತಾರೀಖಿನ ಬೆಳಗ್ಗೆ ಎದ್ದು ಮುಂಬಾಗಿಲು ತೆರೆದಾಗ 'ಈ ವರ್ಷ ಮಳೆ ಜಾಸ್ತಿ. ಮೇ 28ರಿಂದಲೇ ಮಾನ್ಸೂನ್ ಶುರುವಾಗಲಿದೆ. ಆಗಲೇ ಕೇರಳಕ್ಕೆ ಬಂದಿದೆ' ಅಂತೆಲ್ಲ ದೊಡ್ಡಕ್ಷರಗಳಲ್ಲಿ ಬರೆದುಕೊಂಡಿದ್ದ ನ್ಯೂಸ್‍ಪೇಪರು ಬಾಗಿಲಲ್ಲಿ ಬಿದ್ದಿತ್ತು. ನನಗೆ ಖುಶಿಯಾಯಿತು. ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ? ನಾನು ತಕ್ಷಣವೇ ಮನೆಗೆ ಫೋನ್ ಮಾಡಿ ಅಪ್ಪನ ಬಳಿ 'ಅಮ್ಮನ ಹತ್ರ ಸೌತೆ ಬೀಜ ಎಲ್ಲ ರೆಡಿ ಮಾಡಿ ಇಟ್ಕಳಕ್ಕೆ ಹೇಳು, ಇನ್ನು ಎರಡು ದಿನದಲ್ಲಿ ಮಳೆಗಾಲ ಶುರು ಆಗ್ತಡ. ಹವಾಮಾನ ತಜ್ಞರು ಹೇಳಿಕೆ ಕೊಟ್ಟಿದ ಪೇಪರಲ್ಲಿ. ಕಟ್ಟಿಗೆ ಎಲ್ಲಾ ಸೇರುವೆ ಆಯ್ದಾ ಹೆಂಗೆ? ಹಿತ್ಲಿನ ಬೇಲಿ ಗಟ್ಟಿ ಮಾಡ್ಸಿ ಆತಾ?' ಅಂತೆಲ್ಲ ಕೇಳಿದೆ. ಬೆಳಬೆಳಗ್ಗೆ ಫೋನ್ ಮಾಡಿ ಮನೆಯ ಬಗ್ಗೆ ಕಾಳಜಿ ತೋರಿಸುತ್ತಿರುವ ಮಗನ ಬಗ್ಗೆ ಅಭಿಮಾನ ಬಂದು ಅಪ್ಪ 'ಮಗನೇ, ನಮಗೂ ಗೊತ್ತಾಯ್ದು ವಿಷಯ. ಟಿವಿ9 ಬ್ರೇಕಿಂಗ್ ನ್ಯೂಸಲ್ಲಿ ನಿನ್ನೇನೆ ತೋರ್ಸಿದ್ದ. ನೀನೇನು ತಲೆಬಿಸಿ ಮಾಡ್‍ಕ್ಯಳಡ. ನಾವು ಮಳೆಗಾಲಕ್ಕೆ ರೆಡಿ ಆಯಿದ್ಯ' ಎಂದ. ನಾನು ರೂಮಿನಲ್ಲಿ ಟಿವಿ ಇಟ್ಟುಕೊಂಡಿಲ್ಲವಾದ್ದರಿಂದ ಟಿವಿ9ಅಲ್ಲಿ ನಿನ್ನೆಯೇ ತೋರಿಸಿರುವುದು ನನಗೆ ಗೊತ್ತಿರಲಿಲ್ಲ. ಅಪ್ಪ ನನಗಿಂತ ಫಾಸ್ಟ್ ಆಗಿರುವುದು ಗೊತ್ತಾಗಿ ಬೆಪ್ಪಾದೆ. ಮುಂದುವರೆದಿರುವ ತಂತ್ರಜ್ಞಾನ, ಶ್ರೀಘ್ರ ಮತ್ತು ವೇಗದ ಮಾಹಿತಿ ಸಂವಹನ, ಮುಂಬರುವ ಮಳೆಯನ್ನು ಇಂದೇ-ಈಗಲೇ ಹೇಳುವ ವಿಜ್ಞಾನಿಗಳ ಚಾಕಚಕ್ಯತೆ ಎಲ್ಲವೂ ಆ ಬೆಳಗಿನ ಜಾವದಲ್ಲಿ ನನಗೆ ಆಪ್ಯಾಯಮಾನವಾಗಿ ಕಂಡಿತು.

ಹವಾಮಾನ ತಜ್ಞರು ಹೇಳಿದಂತೆ ಅಂದು ಸಂಜೆಯೇ ಬೆಂಗಳೂರಿಗೆ ಮೋಡಗಳ ಆಗಮನವಾಯಿತು. ರಾತ್ರಿ ಹೊತ್ತಿಗೆ ಅವೆಲ್ಲಾ ಧಡಬಡಾಂತ ಗುಡುಗು-ಸಿಡಿಲುಗಳಾಗಿ ಶಬ್ದ ಮಾಡುತ್ತಾ ಧೋ ಮಳೆ ಸುರಿಸತೊಡಗಿದವು. ಬೆಂಗಳೂರಿನ ರಸ್ತೆಗಳ ಮೇಲೆ ಬಿದ್ದ ಮಳೆನೀರು, ಪಕ್ಕಕ್ಕೆ ಹರಿದು ಇಂಗೋಣವೆಂದರೆ ಬರೀ ಕಾಂಕ್ರೀಟು-ಚಪ್ಪಡಿ ಹಾಸಿಕೊಂಡ ಫುಟ್‌ಪಾತೇ ಇದ್ದು ಎಲ್ಲೂ ಮಣ್ಣುನೆಲ ಕಾಣದೆ, ಹಾಗೇ ಟಾರ್ ರಸ್ತೆಯ ಮೇಲೆ ಸುಮಾರು ಹೊತ್ತು ಹರಿದು, ತಗ್ಗಿದ್ದಲ್ಲೆಲ್ಲ ನಿಂತು ಯೋಚಿಸಿತು. ಕೊನೆಗೆ ಬೇರೆ ದಾರಿ ಕಾಣದೆ, ಮೋರಿಗೆ ಹಾರಿ ಕೊಳಚೆ ನೀರಿನೊಂದಿಗೆ ಬೆರೆತು ಸಾಗರಮುಖಿಯಾಗುವುದೇ ತನಗುಳಿದಿರುವ ಮಾರ್ಗ ಎಂದದು ತೀರ್ಮಾನಿಸಿತು. ಪುಣ್ಯಕ್ಕೆ ಅದಕ್ಕೆ ಸುಮಾರೆಲ್ಲ ತೆರೆದ ಪಾಟ್‌ಹೋಲುಗಳು ಸಿಕ್ಕಿದ್ದರಿಂದ, ಬೇಗ ಬೇಗನೆ ಮೋರಿ ಸೇರಲಿಕ್ಕೆ ಅನುಕೂಲವಾಯಿತು. ಮೋರಿ ಸೇರುವ ರಭಸದಲ್ಲಿ ಅದು ಮನುಷ್ಯರನ್ನೂ, ಪ್ರಾಣಿಗಳನ್ನೂ, ಸಾಮಾನು-ಸರಂಜಾಮುಗಳನ್ನೂ ಜತೆಗೆ ಸೇರಿಸಿಕೊಂಡಿತು.

ಆಮೇಲೆ ಅಪ್ಪ ಫೋನ್ ಮಾಡಿದಾಗ 'ಬೆಂಗಳೂರಲ್ಲಿ ಭಾರೀ ಮಳೆಯಂತೆ. ಟಿವಿ9ಅಲ್ಲಿ ತೋರಿಸ್ತಿದ್ದ. ಒಬ್ಬ ಹುಡುಗ ಕೊಚ್ಚಿಕೊಂಡು ಹೋಯ್‍ದ್ನಡ. ನೀನು ಓಡಾಡಕ್ಕರೆ ಹುಷಾರಿ' ಅಂತೆಲ್ಲ ಎಚ್ಚರಿಸಿದ. ಬೆಂಗಳೂರಿನಲ್ಲಿ ಹುಷಾರಾಗಿರಬೇಕು ಎಂಬುದು ನನಗೂ ಗೊತ್ತಿತ್ತು. ನಿನ್ನೆಯಷ್ಟೇ ನನ್ನ ಫ್ರೆಂಡು ಅಲ್ಲೆಲ್ಲೋ ಬೈಕು ನಿಲ್ಲಿಸಿದ್ದಾಗ ಮರದ ಕೊಂಬೆ ಮುರಿದುಕೊಂಡು ಬಿದ್ದು, ಪಾಪ ಬೈಕಿನ ಮುಂಭಾಗ ಫಡ್ಚ ಆಗಿ ಹೋಗಿತ್ತಂತೆ. 'ಈಗಷ್ಟೇ ಗ್ಯಾರೇಜಲ್ಲಿ ಬಿಟ್ಟು ಬಂದೆ ಮಾರಾಯಾ. ಐದಾರು ಸಾವಿರ ಖರ್ಚು ಇದೆ ಅಂದ್ರು. ಇನ್ಷೂರೆನ್ಸ್ ಕ್ಲೇಮ್ ಮಾಡ್ಲಿಕ್ಕೆ ಆಗತ್ತಾ ನೋಡ್ಬೇಕು' ಅಂತ ಹೇಳ್ತಿದ್ದ. ನಾವು ಎಷ್ಟೇ ಹುಷಾರಾಗಿದ್ದರೂ ಹೀಗೆಲ್ಲ ತಲೆ ಮೇಲೆ ಮುರಕೊಂಡು ಬೀಳುವ ಕೊಂಬೆಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಆಗುತ್ತಾ? ಮೇಲೆ ನೋಡುತ್ತ ನಡೆದರೆ ಚರಂಡಿಗೆ ಬೀಳ್ತೀವಿ ಅಥವಾ ಯಾವುದಾದರೂ ಆಂಟಿಗೆ ಡಿಕ್ಕಿ ಹೊಡೆದು ಕಪಾಳಮೋಕ್ಷಕ್ಕೆ ಗುರಿಯಾಗುತ್ತೀವಿ. ಇದನ್ನೆಲ್ಲ ಹೇಳಿದರೆ ಅಪ್ಪ ಇನ್ನಷ್ಟು ಗಾಭರಿಯಾದಾನು ಅಂತ ಸುಮ್ಮನಾದೆ. ಬೆಳೆದ ಮಗ ಯಾರೋ ಅಪರಿಚಿತ ಹೆಂಗಸಿಂದ ಸಾರ್ವಜನಿಕರ ಎದುರು ಕೆನ್ನೆ ಏಟು ತಿನ್ನುವುದನ್ನು ಯಾವ ತಂದೆಯೂ ಸಹಿಸಿಕೊಳ್ಳಲಾರ.

ನಾಲ್ಕಾರು ದಿನ ಹೊಡೆದ ಮಳೆ ಆಮೇಲೆ ವಾಪಸು ಹೋಗಿಬಿಟ್ಟಿತು. ಕೊನೆಗೆ ಗೊತ್ತಾಯಿತು, ಅದು ಬಂದಿದ್ದು ಮುಂಗಾರೇ ಅಲ್ಲ; ಕಳೆದ ವರ್ಷದ ಹಳೇಮೋಡಗಳ ಪೆಂಡಿಂಗ್ ಮಳೆ ಅಥವಾ ಅಲ್ಲೆಲ್ಲೋ ಸಾಗರದಲ್ಲೆದ್ದ ಚಂಡಮಾರುತದ ಪರಿಣಾಮ ಅಂತ. ಕಾರ್ಪೋರೇಶನ್ ಕೆಲಸಗಾರರು ಮೂರ್ನಾಲ್ಕು ದಿನ ಕೊಳಚೆಯನ್ನು ಶೋಧಿಸಿದರೂ ಕೊಚ್ಚಿ ಹೋಗಿದ್ದ ಹುಡುಗನ ಶವ ಸಿಗಲಿಲ್ಲ. ಆಮೇಲೆ ಬಂದ ದೇಶದ ಸೈನಿಕರಿಗೂ ಅಪಜಯವಾಯಿತು. ಅಪ್ಪ ಫೋನಿನಲ್ಲೂ, ಪತ್ರಕರ್ತರು ಪೇಪರಿನಲ್ಲೂ ನನಗೆ ಆಗಾಗ ಈ ಮಾಹಿತಿಗಳನ್ನು ಕೊಡುತ್ತಿದ್ದರು. ಅಂದು ಬೆಳಗ್ಗೆ ನನ್ನ ಕಲೀಗು 'ಸೆಕ್ಯೂರಿಟೀನೇ ಇಲ್ಲ ಕಣಯ್ಯಾ ಈ ಬೆಂಗಳೂರಲ್ಲಿ. ನೋಡು, ಇಷ್ಟೆಲ್ಲ ಅವ್ಯವಸ್ಥೆ ಆಗ್ತಿದೆ ಇಲ್ಲಿ. ಆದ್ರೆ ಸರ್ಕಾರ ಸ್ವಲ್ಪಾನಾದ್ರೂ ಸೀರಿಯಸ್ಸಾಗಿದೆಯಾ ಅಂತ? ಅವರವರಲ್ಲೇ ಕಿತ್ತಾಟ ಮಾಡಿಕೊಳ್ತಾ ಹೆಂಗೆ ನಾಚಿಕೆ ಇಲ್ಲದವರ ಥರ ಇದಾರೆ' ಅಂತ, ಟೈಮ್ಸಾಫಿಂಡಿಯಾದ ಪೇಜುಗಳನ್ನು ತಿರುಗಿಸುತ್ತಾ ಕೆಂಪು ಮುಖ ಮಾಡಿಕೊಂಡು ಉಗಿದ. ವರ್ಲ್ಡ್‌ಕಪ್ಪಿನಿಂದ ಹೊರಬಂದ ಭಾರತದ ಆಟಗಾರರೊಂದಿಗೇ ಮುಖ್ಯ ಪೇಪರಿನ ಪುಟಗಳೂ ಮುಗಿದು, ಕೊನೆಗೆ ಬ್ಯಾಂಗಲೂರ್ ಟೈಮ್ಸ್‌ನಲ್ಲಿನ ಒಂದಷ್ಟು ಚಿತ್ರಗಳನ್ನು ನೋಡಿದ ಮೇಲೆ ಅವನ ಮುಖ ಸ್ವಲ್ಪ ಪ್ರಶಾಂತವಾದಂತೆ ಕಂಡಿತು.

ಈ ಮಧ್ಯೆ, ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ವಿದ್ಯುತ್ ಕೊರತೆ ಆಗುವುದಿಲ್ಲ, ಮಳೆ ಇನ್ನೇನು ಶುರುವಾಗಲಿದೆ, ಈ ವರ್ಷ ಜಾಸ್ತಿಯೇ ಆಗಲಿರುವುದಾಗಿ ಹವಾಮಾನ ತಜ್ಞರು ಧೃಡಪಡಿಸಿರುವುದಾಗಿ ಇಂಧನ ಸಚಿವರು ಹೇಳಿಕೆ ಕೊಟ್ಟರು ಅಂತ ಗೊತ್ತಾಯಿತು. ಇಂಧನ ಸಚಿವರೇ ಹೇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಬಿಡು ಅಂತ ನಾನೂ ಸಮಾಧಾನ ಮಾಡಿಕೊಂಡೆ. ಅಪ್ಪ ಫೋನ್ ಮಾಡಿ ಊರ ಕಡೆ ಏನೇನೋ ಗಲಾಟಿಗಳೆಲ್ಲ ಆಗುತ್ತಿದೆ ಅಂತ ಹೇಳಿದ. ಊರಿನ ಮಹಿಳಾ ಮಂಡಳಿಗೆ ಸರ್ಕಾರದಿಂದ ಸ್ಯಾಂಕ್ಷನ್ ಆಗಿದ್ದ ಹಣವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಂದಿದ್ದು ಗೊತ್ತಾಗಿದೆಯಂತಲೂ, ಆತ ಕಾಂಗ್ರೆಸ್ ಪರ ಕಾರ್ಯಕರ್ತನಾದ್ದರಿಂದ, ಜನರೆಲ್ಲ ಸಭೆ ಸೇರಿ, ಸಧ್ಯದ ಬಿಜೆಪಿ ಸರ್ಕಾರದ ಸಹಾಯ ಪಡೆದು ಆತನಿಗೊಂದು ಗತಿ ಕಾಣಿಸಲಿಕ್ಕೆ ತೀರ್ಮಾನಿಸಿದ್ದಾರೆ ಅಂತ ಅಪ್ಪ ಹೇಳಿದ. 'ಇಲ್ಲಿನ ಪೇಪರ್ರಲ್ಲೆಲ್ಲಾ ಬರ್ತಾ ಇದೆ, ಟಿವಿ9ಅಲ್ಲೂ ಬಂದ್ರೂ ಬರಬಹುದು, ನೋಡು' ಅಂದ. ಛೇ, ಈ ನೆಪದಲ್ಲಾದರೂ ಟಿವಿಯಲ್ಲಿ ನಮ್ಮೂರನ್ನೆಲ್ಲ ನೋಡುವ ಅವಕಾಶ ಸಿಗುತ್ತಿತ್ತು, ನನ್ನ ರೂಮಿನಲ್ಲೂ ಟಿವಿ ಇರಬೇಕಿತ್ತು ಅಂತ ಅಲವತ್ತುಕೊಂಡೆ. ಕೊನೆಗೆ ಅಪ್ಪನೇ ದನಿ ತಗ್ಗಿಸಿ 'ಈ ಜನಕ್ಕೆ ಬೇರೆ ಕೆಲಸ ಇಲ್ಲೆ. ಅದಕ್ಕೇ ಸುಮ್ನೆ ಏನಾದ್ರೂ ತಕರಾರು ಎತ್ತತಾ ಇದ್ದ. ಮಳೇನಾದ್ರೂ ಶುರು ಆಗಿದ್ರೆ ಎಲ್ರೂ ಗದ್ದೆ-ತೋಟ ಅಂತ ಹೋಗಿ ಬ್ಯುಸಿ ಆಗ್ತಿದ್ದ' ಅಂದ. ನನಗೆ ಅದೂ ಸರಿ ಎನ್ನಿಸಿತು.

ನನ್ನ ರೂಂಮೇಟು ಅದ್ಯಾವುದೋ ವೆಬ್‌ಸೈಟು ಓಪನ್ ಮಾಡಿಕೊಂಡು 'ನೋಡು, ಇದರಲ್ಲಿ ವೆದರ್ ಫೋರ್‌ಕಾಸ್ಟ್ ತೋರಿಸ್ತಾರೆ. ಆಲ್‌ಮೋಸ್ಟ್ ಅಕ್ಯುರೇಟಾಗಿರತ್ತೆ' ಅಂತ ಹೇಳಿದ. ನಾನೂ ನೋಡಿದೆ. ವಿಶ್ವದ ಭೂಪಟದಂತಿದ್ದ ಚಿತ್ರದ ಮೇಲ್ಮೈಯಲ್ಲಿ ತೆರೆಗಳಂತೆ ಬೆಳ್ಳಬೆಳ್ಳಗೆ ಅಲ್ಲಲ್ಲಿ ಕಾಣುತ್ತಿತ್ತು. 'ಇವು ಮೋಡಗಳು. ನೋಡು, ಹೇಗೆ ನಿಧಾನಕ್ಕೆ ಮೂವ್ ಆಗ್ತಿವೆ ಅಂತ.. ಈಗ ಇಂಡಿಯಾದ ಹತ್ರಾನೇ ಬಂದಿದೆ ಅಲ್ವಾ? ಇನ್ನೇನು ನಾಲ್ಕು ದಿವಸದಲ್ಲಿ ಶುರು ಆಗಿಬಿಡತ್ತೆ ಮಾನ್ಸೂನು' ಅಂದ ರೂಂಮೇಟು. ನನಗೆ ಮತ್ತೆ ಖುಶಿಯಾಯಿತು. ಬಾನಲ್ಲಿ ಓಡೋ ಮೇಘದ ಚಲನೆಯನ್ನೂ ತೋರಿಸುವ ವಿಜ್ಞಾನಿಗಳ ಜಾಣ್ಮೆಯ ಬಗ್ಗೆ ಮನಸ್ಸಿನಲ್ಲಿಯೇ ಶ್ಲಾಘಿಸಿದೆ.

ಆದರೆ ಈಗ ಎರಡ್ಮೂರು ದಿನಗಳ ಪೇಪರಿನಲ್ಲಿನ ದೊಡ್ಡಕ್ಷರಗಳು ಬೇರೇನೋ ಹೇಳುತ್ತಿವೆ. 'ಬರ'-ವಂತೆ! ಬರಮಾಡಿಕೊಳ್ಳಲಿಕ್ಕೆ ದೇಶದ ಜನತೆ ತಯಾರಾಗಬೇಕು ಅಂತೆಲ್ಲ ಹೇಳಿಕೆ ಕೊಟ್ಟಿದ್ದಾರೆ ಮಂತ್ರಿಗಳು. ಮಳೆಗಾಲ ಬರುತ್ತದೆ ಎಂದಾದರೆ ತಯಾರಿ ಬೇಕು, ಬರಕ್ಕೆ ಏನು ತಯಾರಿ ಮಾಡಿಕೊಳ್ಳುವುದು? ಕಡಿಮೆ ನೀರು ಕುಡಿಯಬೇಕೇ, ದಿನವೂ ಸ್ನಾನ ಮಾಡುವುದನ್ನು ಬಿಡಬೇಕೇ, ಟಿಶ್ಯೂ ಪೇಪರ್ ಬಳಸಬೇಕೇ? ಅರ್ಥವೇ ಆಗದೇ ಕಕ್ಕಾಬಿಕ್ಕಿಯಾಗುತ್ತೇನೆ ನಾನು. ವಿದ್ಯುತ್ತಂತೂ ಇಲ್ಲವೇ ಇಲ್ಲವಂತೆ. ಇನ್ನು ಹನ್ನೊಂದು ದಿನಗಳಲ್ಲಿ ಜಲಾಶಯಗಳೆಲ್ಲ ಖಾಲಿಯಾಗುತ್ತವೆಯಂತೆ. ಆಮೇಲೆ ಎಲ್ಲೆಲ್ಲೂ ಕತ್ತಲೆ ಆವರಿಸುತ್ತದಂತೆ. ಪೇಪರ್ರೋದಿ 'ವಾರೆವ್ಹಾ!' ಎಂದೆ ನಾನು.

ಕೆಲ ವರ್ಷಗಳ ಹಿಂದೆ ಹೀಗೇ ಮಳೆ ಶುರುವಾಗದೇ ಇದ್ದಾಗ ನಾವೆಲ್ಲಾ ನಮ್ಮ ಸೀಮೆಯ ದೇವರಿಗೆ ಪರ್ಜನ್ಯ ಮಾಡಿದ್ದೆವು. ನೂರಾರು ಜನ ಸೇರಿ, ಹತ್ತಿರದಲ್ಲಿದ್ದ ಕೆರೆಯಿಂದ ಕೊಡಪಾನಗಳಲ್ಲಿ ನೀರನ್ನು ತುಂಬಿ ತುಂಬಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸುತ್ತ ಗರ್ಭಗುಡಿಯ ತುಂಬ ನೀರು ತುಂಬಿ ದೇವರನ್ನು ಮುಳುಗಿಸಿಬಿಟ್ಟಿದ್ದೆವು! ಹಾಗೆ ಮುಳುಗಿಸುತ್ತಿದ್ದಂತೆಯೇ ಮಳೆಹನಿಗಳು ಬೀಳತೊಡಗಿ ಜನಗಳೆಲ್ಲ ಹರ್ಷೋದ್ಘಾರ ಮಾಡಿದ್ದೆವು. ಕೋಡನಕಟ್ಟೆಯ ಸಿದ್ಧಿವಿನಾಯಕನ ಮಹಿಮೆಗೆ ಬೆರಗಾಗಿದ್ದೆವು. ಈಗಲೂ ಹಾಗೇ ಮಾಡೋಣವಾ ಅಂದರೆ ಹಿರೇಭಟ್ಟರು ಹೇಳುತ್ತಿದ್ದಾರೆ, 'ಈಗ ಮಾಡಿದ್ರೆ ಏನೂ ಉಪಯೋಗ ಇಲ್ಲೆ.. ಜನಗಳಲ್ಲಿ ಭಕ್ತಿ, ಶ್ರದ್ಧೆಯೇ ಇಲ್ಲೆ. ಪರ್ಜನ್ಯ ಮಾಡೋಣ ಅಂದ್ರೆ ಕೊಡಪಾನದಲ್ಲಿ ಯಾಕೆ ನೀರು ಒಯ್ಯಬೇಕು, ಡೈರೆಕ್ಟಾಗಿ ಒಂದು ಪೈಪ್ ಎಳೆದು ಪಂಪ್‌ಸೆಟ್ಟಲ್ಲಿ ಎತ್ತಿ ಸೀದಾ ದೇವರ ನೆತ್ತಿ ಮೇಲೇ ನೀರು ಬೀಳಹಂಗೆ ಮಾಡ್ಲಕ್ಕಲಾ ಅಂತ ಹೇಳ್ತಾರೆ ಈಗಿನ್ ಹುಡುಗ್ರು..! ದೇಶದ ತುಂಬ ಅನಾಚಾರ. ಹಿಂಗಾದ್ರೆ ಮಳೆಯೂ ಇಲ್ಲೆ ಬೆಳೆಯೂ ಇಲ್ಲೆ.' ನನಗೆ ಹತಾಶೆಯಾಗುತ್ತದೆ.

ಮಂತ್ರಿಗಳೆಲ್ಲ ರೆಸಾರ್ಟಿನಲ್ಲಿ ಕುಳಿತು ಇದಕ್ಕೆ ಪರಿಹಾರವೇನು ಅಂತ ಮಂಥನ ಮಾಡುತ್ತಿದ್ದಾರೆ. ನ್ಯೂಸ್‌ಪೇಪರ್ರು, ಟಿವಿ9 ಎಲ್ಲಾ ಕಡೆ ಬರಲಿರುವ ಬರದ ಬಗ್ಗೆ ಚರ್ಚೆ. ನಾನೂ ಇಲ್ಲೇ ಕೂತು ಯೋಚಿಸುತ್ತಿದ್ದೇನೆ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಹೇಗೆ ಅಂತ. ಆದರೆ ಕಲ್ಲುಬಂಡೆಗಳ ಸಂದಿಯೊಳಗೆಲ್ಲೋ ಅಡಗಿ ಕುಳಿತುಕೊಂಡಿರುವ ಅವನ್ನು ಹುಡುಕುವುದೇ ಕಷ್ಟದ ಕೆಲಸ. ಮಳೆ ಬಂದಮೇಲೆಯೇ ಅವು ಹೊರಗೆ ಬರುವುದು. ಇಲ್ಯಾರೋ ಹೇಳುತ್ತಿದ್ದಾರೆ, 'ಅದು ಕಪ್ಪೆ ಅಲ್ಲ; ಕತ್ತೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಆಗುತ್ತೆ' ಅಂತ. ಹಾಗಾದರೆ ಕೆಲಸ ಸುಲಭ. ಬೆಂಗಳೂರಿನಲ್ಲಿ ಕತ್ತೆಗಳಿಗೇನು ಬರವಿಲ್ಲ. 'ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ದೇಶಕ್ಕೆ ಒಳಿತಾಗುವಂಥದ್ದೇನಾದರೂ ಮಾಡುವುದು ಒಳ್ಳೆಯದು, ಕತ್ತೆ ಹುಡುಕಲಿಕ್ಕೆ ಹೋಗೋಣ ಬನ್ನಿ' ಅಂತ ನನ್ನ ಕಲೀಗುಗಳಿಗೆ ಹೇಳಿದರೆ, 'ನೀನೀಗ ಮಾಡ್ತಿರೋದು ಕತ್ತೆ ಕಾಯೋ ಕೆಲಸವೇ ಅಲ್ಲವೇನೋ' ಅಂತ ಅವರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದಾರೆ. ನಾನು ಹ್ಯಾಪ ಮೋರೆ ಹಾಕಿಕೊಂಡು ಕುಳಿತಿದ್ದೇನೆ.

ಹೊರಗೆ ನೋಡಿದರೆ ಕಣ್ಣು ಕುಕ್ಕುವ ಬಿಸಿಲು. ನನ್ನೊಳಗೆ ಶುಷ್ಕ ಕತ್ತಲೆ.

Monday, June 22, 2009

ಒಂದು ಸ್ನೇಹ; ಒಂದು ಮೋಹ

ಅಲ್ಲೇ, ಮಂಟಪದ ಪಕ್ಕದಲ್ಲೇ ನಿಂತಿದ್ದೆ ನಾನು. ಯಾರೋ ಅಕ್ಷತೆಯ ಕಾಳುಗಳನ್ನು ಹಂಚಿ ಹೋದರು. ಮೊಳಗತೊಡಗಿದ ಗಟ್ಟಿಮೇಳದಲ್ಲಿ ಪುರೋಹಿತರ ‘ಮಾಂಗಲ್ಯಂ ತಂತು ನಾನೇನಾ..’ ಮುಳುಗುತ್ತಿದ್ದಹಾಗೇ ನಾನು ಅಕ್ಷತೆಯನ್ನು ಅವರತ್ತ ತೂರಿದೆ. ಪಟಪಟನೆ ಸದ್ದಾಯಿತು. ತಗ್ಗಿಸಿದ ಮೊಗದಲ್ಲಿನ ಅವಳ ಮುಗುಳ್ನಗೆಯನ್ನು ಕದ್ದು ನೋಡುತ್ತಾ ಅವನು ತಾಳಿ ಕಟ್ಟಿದ. ನನ್ನ ಅತ್ಯಾಪ್ತ ಗೆಳತಿ ಭಾವನಾ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಳು.

ಹಂಚಿದ ಸಿಹಿಯನ್ನು ಬಾಯಿಗಿಟ್ಟುಕೊಳ್ಳುತ್ತಾ ನಾನು ಕಲ್ಯಾಣ ಮಂಟಪದ ಸಭಾಂಗಣದ ಸಾಲು ಖುರ್ಚಿಗಳೆಡೆ ನಡೆದೆ. ಇದೇನು ಸೆಖೆ! ಹಹ್! ಬಾಗಿಲ ಬಳಿ ಪಾನಕ ಇಟ್ಟಿರಬೇಕು, ಕುಡಿಯಬೇಕೆಂದುಕೊಂಡೆ. ನಾನು ಪಾನಕ ತೆಗೆದುಕೊಳ್ಳುತ್ತಿರಬೇಕಾದರೆ ಯಾರೋ ಹೆಗಲಿನ ಮೇಲೆ ಕೈ ಹಾಕಿದಂತಾಗಿ ತಿರುಗಿ ನೋಡಿದರೆ ಚಂದ್ರು! ಚಂದ್ರು ಅಂದ್ರೆ ಚಂದ್ರಶೇಖರ, ನನ್ನ ಎಕ್ಸ್-ಕಲೀಗು. "ಅರೆ ವ್ಹಾ, ಈಗ ಬರ್ತಿದಿಯೇನೋ ದೇವ್ರೂ?" ಎನ್ನುತ್ತಾ ಅವನಿಗೊಂದು ಪಾನಕದ ಗ್ಲಾಸ್ ಕೊಟ್ಟು, ಇಬ್ಬರೂ ದೂರದ ಖುರ್ಚಿಯೊಂದರೆಡೆಗೆ ಹೋಗಿ ಕುಳಿತೆವು. ಮಂಟಪದಲ್ಲಿದ್ದ ಭಾವನಾ ಚಂದ್ರುವನ್ನು ನೋಡಿ ಮುಗುಳ್ನಕ್ಕಳು. ಚಂದ್ರು ಕೈ ಮಾಡಿದ.

"ಇದು ಹೇಗಯ್ಯಾ ಆಯ್ತು? ಆದ್ರೂ ನೀನು ಹೇಗೋ ಇಷ್ಟೊಂದು ಖುಶಿಯಿಂದ ಇದೀಯಾ? ನಾನೇನೋ ನೀನು ಮದುವೆಗೆ ಬರೋದೇ ಇಲ್ಲ ಅಂದ್ಕೊಂಡಿದ್ದೆ.. ರೂಮಲ್ಲಿ ಒಬ್ನೇ ದೇವದಾಸ್ ಥರ ಕುಡೀತಾ ಕೂತಿರೋ ಚಿತ್ರಾನಾ ಕಲ್ಪಿಸಿಕೊಂಡು ಬಂದಿದ್ದೆ" ಸಣ್ಣ ದನಿಯಲ್ಲಿ ಹೇಳಿದ ಚಂದ್ರು. ಚಂದ್ರುವಿನಿಂದ ನಿರೀಕ್ಷಿಸದ ಪ್ರತಿಕ್ರಿಯೆಯೇನು ಅಲ್ಲ ಇದು.. ಚಂದ್ರುವೇನು, ಬಹುಶಃ ನನ್ನ ಸ್ನೇಹಿತರೆಲ್ಲರನ್ನೂ ಕಾಡ್ತಿರೋ ಪ್ರಶ್ನೇನೂ ಹೌದು: "ಭಾವನಾ ಮತ್ತು ಅಂಶು ಲವರ‍್ಸ್ ಆಗಿರ್ಲಿಲ್ವಾ? ಅಷ್ಟೊಂದು ಕ್ಲೋಸ್ ಇದ್ರು ಮತ್ತೆ? ಯಾವಾಗ ನೋಡಿದ್ರೂ ಒಟ್ಟೊಟ್ಟಿಗೆ ಇರ್ತಿದ್ರು.. ಈಗ ಭಾವನಾ ಯಾರನ್ನೋ ಮದುವೆ ಆಗ್ತಿದಾಳೆ.. ಮತ್ತೆ ಅಂಶು ತಮ್ಮ ಮನೆಯದೇ ಮದುವೆಯೇನೋ ಅನ್ನೋ ಹಾಗೆ ಸಂಭ್ರಮದಿಂದ ಓಡಾಡ್ತಿದಾನೆ.. ಇದು ಹ್ಯಾಗೆ ಸಾಧ್ಯ?"

ಹೇಳಬೇಕು ಎಲ್ಲರಿಗೂ ಒಂದು ತಂಪು ಸಂಜೆಯಲ್ಲಿ ಕೂರಿಸಿಕೊಂಡು: ಭಾವನಾ ಎಂಬ ನನ್ನ ಪ್ರೀತಿಯ ಗೆಳತಿಯ ಬಗ್ಗೆ. ಭಾವನಾ ಎಂಬ ಪ್ರವಾದಿಯ ಬಗ್ಗೆ. ನನ್ನ ಭಾವಕೋಶದ ಶಕ್ತಿಯ ಬಗ್ಗೆ. ನನ್ನನ್ನು ಇಲ್ಲಿಯವರೆಗೆ ಕರೆತಂದ ಮಾಯಾಯುಕ್ತಿಯ ಬಗ್ಗೆ. ಧೃತಿಯ ಮತ್ತೊಂದಾವೃತಿಯ ಬಗ್ಗೆ. ಭಾವನಾ ಮತ್ತು ಅಂಶು ಪ್ರೇಮಿಗಳಾಗಿರಲಿಲ್ಲ. ಅವರು ಅಪ್ಪಟ ಸ್ನೇಹಿತರಾಗಿದ್ದರು. ಸ್ನೇಹವೆಂಬ ಶಬ್ದದ ಅರ್ಥವನ್ನು ಹೊಸ ಬಣ್ಣಗಳಲ್ಲಿ ಬರೆದಿದ್ದರು ಅಂತ.

ಕವಿಸಮಯ ಜಾರಿಗೆ ಬಂದ ಯಾವುದೋ ಕವಿ ‘ಕಾರಿರುಳ ಖಿನ್ನತೆಯಲ್ಲಿ ಬೆಳುದಿಂಗಳಿಳಿದಂತೆ, ಮುಂಗಾರು ಮೂಡಿದಂತೆ, ತಂಗಾಳಿ ತೀಡಿದಂತೆ...’ ಎಂದೆಲ್ಲ ಬರೆಯುತ್ತಿದ್ದ ಘಳಿಗೆಯಲ್ಲೇ ಇತ್ತ ನನ್ನ ಸ್ನೇಹಕ್ಷೇತ್ರದಲ್ಲಿ ಕಾಲಿಟ್ಟವಳು ಭಾವನಾ. ಇಂಟರ್‌ವ್ಯೂಗೆಂದು ನನ್ನ ಸರದಿಗಾಗಿ ಕಾಯುತ್ತ ಕೂತಿದ್ದ ಆ ರಿಸೆಪ್ಷನ್ ಹಾಲಿನ ಏಸಿಯ ಗಾಳಿಯ ಮೌನವನ್ನು ಒಮ್ಮೆಲೇ ಕಲಕುವಂತೆ "ನೀವೂ ಮಲ್ಲೇಶ್ವರಮ್ಮಾ?" ಅಂತ ಕೇಳಿದ್ದಳು. "ಹೂಂ, ನಿಮಗೆ ಹೇಗೆ ಗೊತ್ತಾಯ್ತು?" ಅವಳ ಮುಖವನ್ನು ನೇರವಾಗಿ ನೋಡದೇ ಕೇಳಿದೆ. "ನಿಮ್ಮ ಕೈಯಲ್ಲಿರೋ ರೆಸ್ಯೂಮ್‌ನಿಂದ ಗೊತ್ತಾಯ್ತು" ಉತ್ತರಿಸಿದಳು. ನನಗಿಂತ ಮೊದಲು ಅವಳಿಗೆ ಕರೆ ಬಂತು. ನನ್ನೆದುರಿಂದ ಎದ್ದು ಹೋಗುವಾಗ ಕಂಡ ಅವಳ ರೆಸ್ಯೂಮಿನಿಂದ ಹೆಸರು ಭಾವನಾ ಅಂತ ಗೊತ್ತಾಯ್ತು. ಹತ್ತು ನಿಮಿಷದ ನಂತರ ಹೊರಬಂದ ಭಾವನಾ, ಹೆದರಿಕೆಯಿಂದ ಚಡಪಡಿಸುತ್ತಾ ಕೂತಿದ್ದ ನನ್ನ ಬಳಿ ಬಂದು ಸಣ್ಣ ದನಿಯಲ್ಲಿ "ಏನೂ ನರ್ವಸ್ ಆಗ್ಬೇಡಿ.. ಇಂಟರ್‌ವ್ಯೂವರ್ ಇಸ್ ಟೂ ಕೂಲ್. ಸ್ವಲ್ಪಾನೂ ಟೆನ್ಷನ್ ಮಾಡಿಕೊಳ್ಳದೇ ಅಟೆಂಡ್ ಮಾಡಿ. ಆಲ್ ದಿ ಬೆಸ್ಟ್!" ಅಂದು ನಗೆಹೂವಿನೊಂದಿಗೆ ಹೊರಟು ಹೋಗಿದ್ದಳು.

ಆಮೇಲೆ ಆ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದ್ದು, ಕೆಲಸದ ಮೊದಲ ದಿನ ರಿಸೆಪ್ಷನ್‌ನಲ್ಲಿ ಮತ್ತೆ ಸಿಕ್ಕಿದ್ದು, ತೀರಾ ಹಳೆಯ ಪರಿಚಿತರಂತೆ ಒಬ್ಬರಿಗೊಬ್ಬರು ಕೈ ಕುಲುಕಿ ಪರಸ್ಪರ ‘ಕಂಗ್ರಾಟ್ಸ್’ ಹೇಳಿಕೊಂಡಿದ್ದು ...ಆಹ್, ಎಲ್ಲಾ ನಮ್ಮ ಸ್ನೇಹದ ಡಾಕ್ಯುಮೆಂಟರಿಯ ಅಡಿಯಲ್ಲಿ ನೆನಪಾಗಿ ಬೆಚ್ಚಗಿವೆ. ಮಧ್ಯಾಹ್ನ ಒಟ್ಟಿಗೇ ಕಾಫಿ ಕುಡಿಯುವಾಗ ಹೇಳಿದ್ದೆ: "ನೀವವತ್ತು ಹಾಗೆ ಹುರಿದುಂಬಿಸಿ ಹೋಗಿರದಿದ್ದರೆ ನಾನು ಇಂಟರ್‌ವ್ಯೂನ ಅಷ್ಟೊಂದು ನಿರ್ಭಯವಾಗಿ ಫೇಸ್ ಮಾಡ್ಲಿಕ್ಕೆ ಆಗ್ತಾನೇ ಇರ್ಲಿಲ್ಲ, ಇಲ್ಲಿವತ್ತು ಹೀಗೆ ಮತ್ತೆ ಸಿಗ್ತಾನೂ ಇರ್ಲಿಲ್ಲ" -ಅಂತ.

ಭಾವನಾ ಅತ್ಯಂತ ಚಟುವಟಿಕೆಯ, ಆತ್ಮವಿಶ್ವಾಸದ ಹುಡುಗಿ. ಆಕೆಯ ಚುರುಕು ನಡಿಗೆ, ಸೆಳೆಯುವ ಕಣ್ಣು, ಅಸ್ಖಲಿತ ಭಾಷೆ ಮತ್ತು ಯಾರೊಂದಿಗಾದರೂ ಅಷ್ಟು ಬೇಗನೆ ಬೆರೆಯುವ ರೀತಿ -ಎಲ್ಲಾ ಕೆಲವೇ ತಿಂಗಳಲ್ಲಿ ಕಂಪನಿಯ ಪ್ರಶಂಸೆಗೆ ಒಳಗಾದವು. ಹಾಗೆಯೇ ನನ್ನ ಸಂಕೋಚ, ಸೋಮಾರಿತನ, ಕೀಳರಿಮೆಯ ಸ್ವಭಾವ ಮತ್ತು ಹಳ್ಳಿಯಿಂದ ಬಂದ ಭಾಷೆಯ ದುರ್ಬಲತೆ -ಅಲ್ಲೇ ಉಳಿಯುವಂತೆ ಮಾಡಿದವು. ಭಾವನಾ ಸೀನಿಯರ್ ಆದಳು; ನಾನು ಹಿಂದೆಯೇ ಉಳಿದೆ.

ಅದೊಮ್ಮೆ ನಾನು ಮಾಡಿದ ಪುಟ್ಟ ತಪ್ಪಿನಿಂದಾಗಿ ಅನಾಹುತವೊಂದು ಆಗುವುದಿತ್ತು. ಎಮ್.ಡಿ. ಕೆಂಡಾಮಂಡಲವಾಗಿದ್ದರು. ಆದರೆ ಭಾವನಾ ಅದರ ಸಂಪೂರ್ಣ ಹೊಣೆಗಾರಿಕೆ ಹೊತ್ತು, ಜಾಣ್ಮೆಯಿಂದ ನಿರ್ವಹಿಸಿ, ನನ್ನನ್ನು ಸಂಕಷ್ಟದಿಂದ ಪಾರು ಮಾಡಿದಳು. ನನಗೆ ಒಂದೇ ಪ್ರಶ್ನೆ: ಇದ್ಯಾಕೆ ಈ ಪರಿ ನನ್ನನ್ನು ಹಚ್ಚಿಕೊಳ್ಳುತ್ತಾಳೆ ಈ ಹುಡುಗಿ? ಭಾವನಾ ಮತ್ತು ನಾನು ಪ್ರತಿದಿನ ಒಟ್ಟಿಗೇ ಊಟ ಮಾಡುವುದು, ಕಂಪನಿಯ ಬಸ್ಸಿನಲ್ಲಿ ಓಡಾಡುವಾಗ ಒಟ್ಟಿಗೇ ಕೂರುವುದು, ಇಬ್ಬರ ಮನೆಯೂ ಇರುವುದು ಒಂದೇ ಏರಿಯಾದಲ್ಲಾದ್ದರಿಂದ ಭಾನುವಾರಗಳಲ್ಲಿ ಸಹ ಸಿಗುವುದು. ಅವಳ ನನ್ನನ್ನು ತನ್ನ ಮನೆಗೆ ಕರೆಯುತ್ತಾಳೆ. ಮನೆಯಲ್ಲೆಲ್ಲರಿಗೂ ‘ಮೈ ಕಲೀಗ್ ಅಂಡ್ ಬೆಸ್ಟ್ ಫ್ರೆಂಡ್’ ಅಂತ ಪರಿಚಯಿಸಿದ್ದಾಳೆ. ನನ್ನ ರೂಮಿಗೆ ಬರುತ್ತಾಳೆ. ಪ್ರಪಂಚದ ಎಲ್ಲ ವಿಷಯವನ್ನೂ ಮಾತಾಡುತ್ತಾಳೆ. ನನ್ನಂತಹ ಮೌನಿಯನ್ನೂ ಮಾತಾಡುವಂತೆ ಮಾಡುತ್ತಾಳೆ. ಒಳ್ಳೆಯ ಪುಸ್ತಕಗಳನ್ನು ರೆಫರ್ ಮಾಡುತ್ತಾಳೆ. ಎಲ್ಲಾ ತರಹದ ಎಸ್ಸೆಮ್ಮೆಸ್ಸುಗಳನ್ನೂ ಫಾರ್ವರ್ಡ್ ಮಾಡುತ್ತಾಳೆ. ನಾನು ಒಬ್ಬ ಹುಡುಗಿಯೊಂದಿಗೆ ಇಷ್ಟು ಸಲಿಗೆಯಿಂದ ಬೆರೆಯುತ್ತಿದ್ದುದು ಇದೇ ಮೊದಲು... ಕೇಳಿಕೊಳ್ಳುತ್ತೇನೆ ಮತ್ತೆ: ಇದು ಪ್ರೀತಿಯಾ? ಅವಳೊಂದಿಗೆ ಶಾಪಿಂಗ್-ಗೀಪಿಂಗ್ ಅಂತ ಹೋದಾಗ ಎದುರಾಗುವ ಚಂದ ಹುಡುಗಿಯರನ್ನು ನನಗೆ ತೋರಿಸಿ ಕಿಚಾಯಿಸುವುದು.. "ಒಂದು ಗರ್ಲ್‌ಫ್ರೆಂಡ್ ಮಾಡ್ಕೊಳೋ ಬೇಗ" ಅನ್ನೋದು... ಏನು ಇವೆಲ್ಲಾ? ಏಕಾಂತದ ಕ್ಷಣಗಳಲ್ಲಿ ಕಾಡುತ್ತದೆ ತುಮುಲ: ಒಬ್ಬ ಹುಡುಗನೊಂದಿಗೆ ಒಬ್ಬ ಹುಡುಗಿ ಇಷ್ಟೊಂದು ಕ್ಲೋಸ್ ಆಗಿ ಇರಬಹುದಾ? ಇದು ಕೇವಲ ಸ್ನೇಹವಾ? ಕಲೀಗುಗಳ ಮಧ್ಯೆಯಂತೂ ನಮ್ಮ ಒಡನಾಟ ದೊಡ್ಡ ಗಾಸಿಪ್ಪು. ಹಾಗಾದರೆ ಅವರು ಹೇಳುವಂತೆ ಇದು ಪ್ರೇಮವಾ?

ಆದರೆ ಹಾಗಂದುಕೊಳ್ಳಲಿಕ್ಕೇ ನನಗೆ ಧೈರ್ಯವಾಗುತ್ತಿರಲಿಲ್ಲ.. ಬಹುಶಃ ಭಾವನಾಳ ಆ ಆತ್ಮವಿಶ್ವಾಸದ ಗಟ್ಟಿತನವೇ ನನಗೆ ಆಕೆಯನ್ನು ನನ್ನ ಪ್ರೇಯಸಿಯೆಂದು ಕಲ್ಪಿಸಿಕೊಳ್ಳಲಿಕ್ಕೆ ಹಿಂಜರಿಯುವಂತೆ ಮಾಡುತ್ತಿತ್ತು. ನನಗೆ ಭಾವನಾಳನ್ನು ಒಬ್ಬ ಫ್ರೆಂಡ್ ಅಂತ ಅಂದುಕೊಂಡರೇನೇ ಹೆಚ್ಚು ಹಿತವೆನಿಸುತ್ತಿತ್ತು. ನನ್ನ ದುಃಖಗಳನ್ನು ತನ್ನೊಂದಿಗೆ ಹಂಚಿಕೊಳ್ಳಬಲ್ಲವಳು, ನನ್ನ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲವಳು, ನಾನು ಮೂಡಿನಲ್ಲಿಲ್ಲದಿದ್ದಾಗ ಹುರಿದೊಂಬಿಸಿ ನಗಿಸುವವಳು, ನನ್ನ ಸಣ್ಣ ಗೆಲುವುಗಳನ್ನು ತುಂಬು ಪ್ರೀತಿಯಿಂದ ಅಭಿನಂದಿಸುವವಳು ಮತ್ತು ನನ್ನಲ್ಲಿ ಹೊಸ ಕನಸುಗಳನ್ನು ಚಿಗುರಿಸಿ ಅವುಗಳನ್ನು ನನ್ನವಾಗಿಸಿಕೊಳ್ಳುವಂತೆ ಪ್ರೇರೇಪಿಸುವವಳು -ಇಂತಹ ಗೆಳತಿಯೊಬ್ಬಳು ನನಗೆ ಬೇಕಿದ್ದಳು. ಮತ್ತು ಭಾವನಾ ಅವೆಲ್ಲವೂ ಆಗಿದ್ದಳು. ನಾನೂ ಕಂಪನಿಯ ಕೆಲಸಗಳಲ್ಲಿ ಸಾಧನೆಗೈದಿದ್ದು, ನನಗೊಂದು ರೆಕಗ್ನಿಷನ್ ಸಿಗುವಂತಾದದ್ದು -ಎಲ್ಲಾ ಭಾವನಾಳ ಕೃಪೆಯಿಂದಲೇ. ಅದ್ಯಾವುದೋ ಮುಹೂರ್ತದಲ್ಲಿ ನಿರ್ಧರಿಸಿಬಿಟ್ಟಿದ್ದೆ: ನನಗೆ ಇದಕ್ಕಿಂತ ಹೆಚ್ಚಿನದೇನೂ ಬೇಡ ಭಾವನಾಳಿಂದ. ಇದನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದಿಲ್ಲ. ಇದು ಪ್ರೀತಿಯಾಗಿರಬೇಕಾದ ಅವಶ್ಯಕತೆಯೇ ಇಲ್ಲ. ಆಕೆ ನನ್ನ ಗೆಳತಿಯಾಗೇ ಇರಲಿ.

ಪ್ರಾಜೆಕ್ಟೊಂದನ್ನು ಮುಗಿಸಲಿಕ್ಕಾಗಿ ಭಾವನಾ ಡೆಲ್ಲಿಗೆ ಹೋಗಬೇಕಾಗಿ ಬಂತು. ಆಕೆ ತನ್ನೊಬ್ಬಳಿಂದ ಡೆಡ್‌ಲೈನ್ ಒಳಗೆ ಇದನ್ನು ಮುಗಿಸಲು ಸಾಧ್ಯವೇ ಇಲ್ಲ ಅಂತ ನನ್ನನ್ನೂ ಜತೆಗೆ ಕರೆದೊಯ್ದಳು. ರೂಮ್ ಬುಕ್ ಮಾಡುವಾಗ ಒಂದೇ ರೂಮ್ ಸಾಕು ಎಂದಳು. ಐದು ದಿನಗಳ ಪ್ರಾಜೆಕ್ಟ್ ಮುಗಿಸಿ ವಾಪಸಾಗುವಾಗ ವಿಮಾನದ ಸೀಟಿಗೊರಗಿ ಮಾತಾಡಿದಳು ಭಾವನಾ:

"ನಿಂಗೆ ಆಶ್ಚರ್ಯ ಅಲ್ವಾ ನಾನು ನಿಂಜೊತೆ ಯಾಕೆ ಇಷ್ಟೊಂದು ಕ್ಲೋಸಾಗಿ ಇರ್ತೀನಿ ಅಂತ? ಅದರ ಜೊತೆಗೇ ಮನಸ್ಸಿನಲ್ಲಿ ನೂರಾರು ಅನುಮಾನದ ಪ್ರಶ್ನೆಗಳು ಅಲ್ವಾ? ಬಾಯಿಬಿಟ್ಟು ಕೇಳಲಿಕ್ಕೆ ಸಾಧ್ಯವೇ ಇಲ್ಲದಷ್ಟು ಹಿಂಜರಿಕೆ ಅಲ್ವಾ? ಹೂಂ..?" ಮಾತು ಬೆಳೆಯುವ ಮುನ್ನವೇ ಹೇಳಿಬಿಟ್ಟೆ: "ನೀನು ‘ಮೈ ಆಟೋಗ್ರಾಫ್’ ಸಿನಿಮಾ ನೋಡಿದೀಯಾ ಭಾವನಾ? ಅದರಲ್ಲಿನ ಮೀನಾಳ ಪಾತ್ರ ನಂಗೆ ತುಂಬಾ ಇಷ್ಟ.. ಆಕೆ ಸುದೀಪ್‌ನನ್ನು ಕೇವಲ ಸ್ನೇಹದ ಬಲದಿಂದ ಬೆಳೆಸೋ ರೀತಿ, ಫೆಂಟಾಸ್ಟಿಕ್! ಅವಳ ಬಿಹೇವಿಯರ್, ಅವಳ ಮ್ಯಾನರಿಸಂ, ಅವಳ ವ್ಯಕ್ತಿತ್ವದ ಉನ್ನತಿ... ಓಹ್! ಯು ನೋ ವ್ಹಾಟ್? ನಂಗೆ ನಿನ್ನಲ್ಲಿ ಮೀನಾ ಕಾಣ್ತಾಳೆ.. ನೀನು ಕೇಳಿದ ಪ್ರಶ್ನೆಗಳೆಲ್ಲಾ ಸತ್ಯ. ಆದರೆ ನಂಗೆ ಅದ್ಯಾವುದಕ್ಕೂ ಉತ್ತರ ಬೇಡ. ನೀನು ಕೇವಲ ನನ್ನ ಗೆಳತಿಯಾಗಿದ್ದರೆ ಸಾಕು.. ಮೈ ಬೆಸ್ಟ್ ಫ್ರೆಂಡ್, ಲೈಕ್ ನೌ!"

ಭಾವನಾಳಿಗಾದ ಖುಶಿಯನ್ನು ವ್ಯಕ್ತಪಡಿಸಲು ಅವಳ ಇಷ್ಟಗಲ ಅರಳಿದ ಮುಖಕ್ಕೂ ಸಾಧ್ಯವಾಗಲಿಲ್ಲ. "ಥ್ಯಾಂಕ್ಯೂ ಡಿಯರ್.. ಥ್ಯಾಂಕ್ಯೂ ವೆರಿ ಮಚ್! ನನ್ನ ಭಾರ ಕಡಿಮೆ ಮಾಡಿದೆ. ಜಗತ್ತು ಏನೇ ಆದ್ರೂ ನಾವಿಬ್ಬರೂ ಫ್ರೆಂಡ್ಸ್. ಮುಂದಿನ ತಿಂಗಳು ನನ್ನ ಮದುವೆ. ನಿನ್ನ ಬಳಿ ಹೇಳಿಕೊಳ್ಳದೇ ಮುಚ್ಚಿಟ್ಟಿದ್ದ ಸಂಗತಿ ಅಂದ್ರೆ ಇದೊಂದೇ, ಸಾರಿ.." ಅಂದು ಬ್ಯಾಗಿನಿಂದ ಇನ್ವಿಟೇಶನ್ ತೆಗೆದು ಕೊಟ್ಟಳು. ವಿಮಾನದ ಕಿಟಕಿಯಿಂದ ನೋಡಿದವನಿಗೆ ಮುಗಿಲು ಮುಗಿಯುವುದೇ ಇಲ್ಲವೇನೋ ಅನ್ನಿಸಿತು.

* * *

ಇಡೀ ಕಲ್ಯಾಣ ಮಂಟಪ ಸುತ್ತಾಡಿಕೊಂಡು ಬಂದ ಚಂದ್ರು ಯೋಚನಾಮಗ್ನನಾಗಿ ಕೂತಿದ್ದ ನನ್ನನ್ನು ತಟ್ಟಿ ಎಬ್ಬಿಸಿ ಕೇಳಿದ: "ಅಂತೂ ಈಗ ಶುರುವಾಯ್ತಾ ಡಿಪ್ರೆಶನ್ನು? ಎಲ್ಲಾ ಮುಗಿದ ಮೇಲೆ? ಆವಾಗ್ಲೇ ಒಂದು ಪ್ರಪೋಸ್ ಮಾಡೋ ಅಂದ್ರೆ ಕೇಳಲಿಲ್ಲ... ಇನ್ನು ಅವಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗೀ ಕೊರಗೀ.. .." ಚಂದ್ರುವಿನ ಅಭಿನಯಕ್ಕೆ ನಕ್ಕೆ ನಾನು. ಇವರಿಗೆ ನಂಬಿಕೆ ಬರುವಂತೆ ತಿಳಿಸಿ ಹೇಳಲಿಕ್ಕಾದರೂ ಆಗುತ್ತಾ ಇದನ್ನೆಲ್ಲಾ? ಸಾಧ್ಯವೇ ಇಲ್ಲವೆನಿಸಿತು.. ಮಂಟಪದತ್ತ ನೋಡಿದೆ. ಗಂಡನೊಂದಿಗೆ ಇನ್ನೂ ಏನೇನೋ ಪೂಜೆ, ಹವನಗಳಲ್ಲಿ ಮುಳುಗಿದ್ದಳು ಭಾವನಾ. ಅವಳು ಸೆಖೆಯಲ್ಲಿ ಬೆವರುತ್ತಾ ಕಷ್ಟ ಪಡುತ್ತಿದ್ದುದನ್ನು ಕಂಡು ಈ ಬೇಸಿಗೆ ಕಾಲದಲ್ಲೇ ಯಾಕೆ ಎಲ್ಲರೂ ಮದುವೆಯಾಗುತ್ತಾರೋ ಅನ್ನಿಸಿತು.

[ಪ್ರಕಟ: ಕನ್ನಡ ಪ್ರಭದ 'ಸಖಿ' ಪಾಕ್ಷಿಕ . ಟಾಪಿಕ್: Intimate friendship between a boy n girl]

^^^^^^^^^^^^

"..ಅವಳ ಸೌಂದರ್ಯಕ್ಕೆ ಆ ಅಪರಾತ್ರಿ ಕೂಡ ಬೆರಗಾದಂತಿತ್ತು. ಹಚ್ಚಿಟ್ಟ ದೀಪಕ್ಕೆ ಹಾಲು ಬೆರೆಸಿದಂಥ ಬಣ್ಣ. ತನಗಿರುವ ಶ್ರದ್ಧೆಯನ್ನೆಲ್ಲ ಬಳಸಿ ಅವಳ ರೂಪು ತಿದ್ದಿರಬೇಕು ಭಗವಂತ. ಅವಳ ಕಣ್ಣುಗಳಲ್ಲಿದ್ದುದು ಸಾತ್ವಿಕ ಚೆಲುವು. ನಕ್ಕರೆ ಅದೆಂಥದೋ ಸೌಮ್ಯ ಕಳೆ. ಒಂದು ಕೆನ್ನೆಯ ಮೇಲೆ ಮಾತ್ರ ಗುಳಿ ನೆಗ್ಗುತ್ತದೆ. ಮುಂದಲೆಯಲ್ಲಿ ಸುಳಿದಿರುಗಿದ ಮಿನ್ನಾಗರಗಳಂತಹ ದಟ್ಟ ಗುಂಗುರು ಕೂದಲು. ಅವಳ ಹುಬ್ಬುಗಳಲ್ಲಿ ಒಂದು ಕಾನ್ಫಿಡೆನ್ಸು ಸರಿದಾಡುತ್ತದೆ. ಕೆಳ ತುಟಿಗೆ ಮೆತ್ತಿಕೊಂಡಂತಿರುವ ಪುಟ್ಟ ಮಚ್ಚೆಯಲ್ಲಿ ಅದೆಂಥದೋ ಅಮಾಯಕತೆ..."

ನಾನು ಮೊದಲ ವರುಷದ ಕಾಲೇಜು ಹುಡುಗನಾಗಿದ್ದಾಗ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ‘ಹೇಳಿ ಹೋಗು ಕಾರಣ’ ಧಾರಾವಾಹಿ ಬರುತ್ತಿತ್ತು. ಡಾಕ್ಟರಾಗಬೇಕೆಂದು ಬೀದಿಯಲ್ಲಿ ನಿಂತು ಕನಸು ಕಂಡ ಹುಡುಗಿ ಪ್ರಾರ್ಥನಾಳನ್ನು ಮಿಠಾಯಿ ಅಂಗಡಿ ಹುಡುಗ ಹಿಮವಂತ ಚನ್ನರಾಯಪಟ್ಟಣದಿಂದ ಶಿವಮೊಗ್ಗದವರೆಗೆ ನಡೆಸಿಕೊಂಡು ಬಂದಿದ್ದ. ಮನೆಯನ್ನು ತಿರಸ್ಕರಿಸಿ, ಹಿಮವಂತನೆಂಬ ಹುಡುಗನೆಡೆಗೆ ಅದ್ಯಾವುದೋ ನಂಬಿಕೆ ಇರಿಸಿ ಬರಿಗೈಯಲ್ಲಿ ಹೊರಟ ಅವಳ ಬಲಗಾಲ ಹೆಬ್ಬೆರಳಿಗೆ ಎಡವಿ ಗಾಯವಾಗಿತ್ತು. ಶಿವಮೂರ್ತಿ ಸರ್ಕಲ್ಲಿನ ಬಳಿಯ ಒಂದೇ ಕೋಣೆಯ ಹಿಮವಂತನ ಗೂಡಿನೊಳಗೆ ದಾಖಲಾದ ಹುಡುಗಿ ಬೆಳಗ್ಗೆ ಎದ್ದು, ಸ್ನಾನ ಮಾಡಿ ಬಂದು, ಪದ್ಮಾಸನ ಹಾಕಿ ಕುಳಿತು ‘ಯಾಕುಂದೇಂದು ತುಷಾರ ಹಾರ ಧವಳಾ..’ ಅಂತ ಪ್ರಾರ್ಥನೆ ಮಾಡುತ್ತಿದ್ದಳು. ಹಿಮವಂತನೆಡೆಗೆ ಅವಳಿಗೊಂದು ದೈವೀಕ ಪ್ರೀತಿಯಿತ್ತು. ಆರಾಧನೆಯಿತ್ತು. ನಿಷ್ಠೆಯಿತ್ತು.

ಮತ್ತು ನನಗದು ಇಷ್ಟವಾಗಿತ್ತು! ಕಾಲೇಜಿನ ಹುಡುಗಿಯರಲ್ಲೆಲ್ಲಾ ಪ್ರಾರ್ಥನಾಳನ್ನು ಹುಡುಕುತ್ತಿದ್ದೆ. ಮನೆಗೆ ಬಂದು ಮತ್ತೆ ಪತ್ರಿಕೆ ತೆರೆದು ‘ಆ ಹುಡುಗಿ ಪ್ರಾರ್ಥನಾಳೊಂದಿಗೆ ಮ್ಯಾಚ್ ಆಗುತ್ತಾಳಾ?’ ಅಂತ ನೋಡುತ್ತಿದ್ದೆ. ಕಣ್ಣಲ್ಲಿ ಸಾತ್ವಿಕ ಚೆಲುವು, ನಗುವಿನಲ್ಲಿ ಸೌಮ್ಯ ಕಳೆ, ಒಂದೇ ಕೆನ್ನೆ ಮೇಲೆ ಗುಳಿ, ಹುಬ್ಬಿನಲ್ಲಿ ಕಾನ್ಫಿಡೆನ್ಸು, ಕೆಳತುಟಿ ಕೆಳಗಿನ ಮಚ್ಚೇಲಿ ಅಮಾಯಕತೆ! ಹಹ್! ಕೆನ್ನೆ ಮೇಲೆ ಗುಳಿ ಬೀಳೋ ಹುಡುಗಿಯರೇನೂ ಬಹಳ ಇದ್ದರು; ಆದರೆ ಈ ಮಚ್ಚೆ ಮಾತ್ರ ನಂಗೆ ಸಿಗಲೇ ಇಲ್ಲ! ಮತ್ತೆ ಇನ್ನುಳಿದ ಗುಣವಿಶೇಷಣಗಳನ್ನೆಲ್ಲಾ ಗುರುತಿಸುವುದು ಹೇಗೆಂದೇ ನನಗಾಗ ಗೊತ್ತಿರಲಿಲ್ಲ. ಹೀಗಾಗಿ, ನನ್ನ ಪ್ರಾರ್ಥನಾಳಂತಹ ಹುಡುಗಿಯ ಹುಡುಕಾಟ ಅವಿರತವಾಗಿಬಿಟ್ಟಿತು.

ಆದರೆ, ಅಂತಹ-ಹಾಗಿದ್ದ ಪ್ರಾರ್ಥನಾ, ದಾವಣಗೆರೆಗೆ ಮೆಡಿಕಲ್ ಓದಲಿಕ್ಕೆಂದು ಹೋಗಿ, ಅವಳಿಗೆ ಹೊರ ಪ್ರಪಂಚದ ಪರಿಚಯ ಆಗಿ, ಮನಸು ಹಕ್ಕಿಯಾಗಿ, ದೇಬಶಿಶು ಎಂಬ ಬುದ್ಧಿವಂತ ಫ್ಲರ್ಟ್‌ನ ಮೋಹಕ್ಕೆ ಬೀಳುತ್ತಾಳೆ. ತನ್ನನ್ನೇ ಪ್ರಪಂಚವೆಂದು ಭಾವಿಸಿದ್ದ, ಕೇವಲ ತನಗಾಗಿಯೇ-ತನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿಯೇ ದೂರದೂರಿನಲ್ಲಿ ಹಗಲೂ-ರಾತ್ರಿ ದುಡಿಯುತ್ತಿದ್ದ ಹಿಮವಂತನಿಗೆ ವ್ಯವಸ್ಥಿತವಾಗಿ ಮೋಸ ಮಾಡುವ ಸಂಚು ಹೂಡುತ್ತಾಳೆ. ದೇಬುವಿನ ರೂಪ, ಬುದ್ಧಿ, ಶ್ರೀಮಂತಿಕೆಗಳ ಮುಂದೆ ಹಿಮವಂತ ಏನೂ ಅಲ್ಲ ಅಂತ ಅನ್ನಿಸುತ್ತದೆ. ‘ಹಿಮವಂತ ದೇವರಂಥವನು, ನಿಜ. ಆದರೆ ದೇವರನ್ನು ಯಾರಾದರೂ ಪ್ರೀತಿಸಲಿಕ್ಕೆ-ಮದುವೆಯಾಗಲಿಕ್ಕೆ ಆಗುತ್ತದಾ?’ ಅಂತ ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಾಳೆ. ಕೊನೆಗೆ ಕಾದಂಬರಿ ಏನೇನೋ ಆಗಿ ಮುಗಿಯುತ್ತದೆ.

ಈ ಮಧ್ಯೆ, ನನ್ನ ರಾತ್ರಿಯ ಕನಸುಗಳ ರ್ಯಾಂಪಿನ ಮೇಲೆ, ಕಾಲೇಜಿನ ಒಬ್ಬೊಬ್ಬ ಹುಡುಗಿಯೂ ತುಟಿ ಕೆಳಗೆ ಕಾಡಿಗೆಯಿಂದ ಕಪ್ಪು ಚುಕ್ಕಿ ಇಟ್ಟುಕೊಂಡು, ಮುಖಕ್ಕೆ ಫೇರೆಂಡ್ ಲವ್ಲೀ ಹಚ್ಚಿ ತಿಕ್ಕಿ ‘ಕಳೆ’, ‘ಸಾತ್ವಿಕ ಚೆಲುವು’ ಎಲ್ಲಾ ಹೆಚ್ಚಿಸಿಕೊಂದು, ಹುಬ್ಬಿನಲ್ಲಿ ಕಾನ್ಫಿಡೆನ್ಸಿನಂತಹದೇ ಏನನ್ನೋ ಕುಣಿಸುತ್ತಾ ಬಂದು ‘ಯಾಕುಂದೇಂದು..’ ಹೇಳಿ ಹೋಗುತ್ತಿದ್ದಳು. ಬಹುಶಃ ಆ ದಿನಗಳಲ್ಲಿ ನನ್ನನ್ನು ನಾನು ಹಿಮವಂತ ಅಂತ ಬಲವಾಗಿ ಕಲ್ಪಿಸಿಕೊಂಡಿದ್ದೆನಿರಬೇಕು! ಯಾವಾಗ ಪ್ರಾರ್ಥನಾ ಹಿಮವಂತನಿಗೆ ಮೋಸ ಮಾಡುವುದು ಖಚಿತ ಆಯಿತೋ, ಆ ಕನಸುಗಳೆಲ್ಲಾ ಸಡನ್ನಾಗಿ ಬಂದ್ ಆಗಿ ನಿದ್ರೆ ಖಾಲಿ ಹೊಡೆಯತೊಡಗಿತು.

[ಪ್ರಕಟ: ವಿಜಯ ಕರ್ನಾಟಕ ಸಾಪ್ತಾಹಿಕ. ಟಾಪಿಕ್: Crush at a novel character.]

Thursday, June 04, 2009

ನೀತಿ

ಮೊಟ್ಟೆಯೊಡೆದು ಹೊರಬಂದರೂ
ಚಿಪ್ಪಿನೊಳಗೆ ತೂರಿಕೊಳ್ಳುವ ಸವಲತ್ತು
ಸುಸ್ತಾದರೆ, ನಾಚಿಕೆಯಾದರೆ,
ನಿದ್ರೆ ಬಂದರೆ ಅಥವಾ ಬಂದರೆ ಆಪತ್ತು.

ಏಕೆ ಅರ್ಥವೇ ಆಗುವುದಿಲ್ಲ ನಿನಗೆ..?
ನನ್ನ ಕನಸುಗಳನ್ನು ನೀನೂ
ಕಾಣಬಲ್ಲೆಯಾದರೆ ಮಾತ್ರ
ನೀನು ನನ್ನವನು. ನಾವು ಒಂದು.

ಇಷ್ಟಕ್ಕೂ ಮೊಲದೊಂದಿಗೆ ನನಗೀಗ
ಸ್ಪರ್ಧೆಯೇ ಇಲ್ಲ. ಗೆದ್ದಾಗಿದೆ ಎಂದೋ.
ಮೊಲಕ್ಕೂ ಈಗ ಬುದ್ಧಿ ಬಂದಿದೆ;
ಹಾಗೆಲ್ಲ ನಿದ್ದೆ ಮಾಡುವುದಿಲ್ಲ.

ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ.

ಆಕಾಶದಲ್ಲಿದ್ದಾಗ ನೀನು
ಜನ ನಕ್ಕರೆಂದು ಸಿಡುಕಿ
ಕೆಳಗುರುಳಿದರೆ ಬಿಟ್ಟು ಕಚ್ಚಿದ ಕೊಕ್ಕೆ-
ಪಾಪ, ತಪ್ಪು ಹೊತ್ತೊಯ್ದ ಹಕ್ಕಿಗಳದಲ್ಲ.

ಎರಡು ಚಿಪ್ಪುಗಳನ್ನು ಒಂದಾಗಿಸಿದರೆ
ಅದೊಂದು ಗೋಲ. ಇರಬಹುದು ಒಳಗೆ ಸೆಖೆ.
ಸಹಿಸಬೇಕು ಮುತ್ತಾಗುವಾಗ ಹನಿ;
ಕಾಯಬೇಕು ಜೀವ ಬರುವವರೆಗೂ ಹೊರಗೆ.