Saturday, July 01, 2017

ಗೋಷ್ಠಿ

ಅದೆಲ್ಲ ಯಾರಿಗೂ ತಿಳಿಯದ್ದೇನಲ್ಲ
ಒಂದು ಬಟ್ಟಲು ಕಾಫಿಯಲೆಷ್ಟು ನೊರೆಯಿರಬೇಕು
ಅದು ಎಷ್ಟು ಬಿಸಿ, ಎಷ್ಟು ಸಿಹಿ, ಎಷ್ಟು ಕರಿ, ಎಷ್ಟು ಕಹಿ,
ಮತ್ತು ಒಂದು ಕಪ್ಪಿನಲ್ಲೆಷ್ಟು ಕಾಫಿಯಿರಬೇಕೆಂಬ ಲೆಕ್ಕಾಚಾರ
ಆದಿಪುರಾಣಗಳಿಗಿಂತ ಹಳೆಯದು
ಯಾವ ಆಧುನಿಕ ಸಂಶೋಧನೆಯೂ ಕಾಫಿಯ ಕಪ್ಪು ಹಿಡಿದು
ಬಾಗಿಲಿಗೊರಗಿ ನಿಂತು ಆವಿ ಬೆರೆತ ಹೊಗೆತೆರೆಯ ಮೂಲಕ ಹೊರ-
ನೋಡುತ್ತ ಮೈಮರೆಯಬಾರದು ಅಂತ ಹೇಳಿಲ್ಲ ಸದ್ಯ.
ಸಂಶೋಧಕರಿಗೂ ಬೇಕಲ್ಲ ಸ್ವಲ್ಪವಾದರೂ ಮೈಮರೆವು:
ನಾಲಿಗೆಯ ಮೇಲೊಂದು ರುಚಿಯ ಲೇಯರು?

ಆದರೆ ಮಾತ್ರ, ಡಿಕಾಕ್ಷನ್ನಿಗೆಂದು ನೀರು ಕುದಿಯಲಿಟ್ಟು
ಮೈಮರೆಯುವಂತಿಲ್ಲ. ನೀರು ಕುದ್ದು ಕುದ್ದು ಆವಿಯಾಗಿ
ತಳಕಂಡ ಪಾತ್ರೆ ಬರದ ವಾತಾವರಣವ ಸೃಷ್ಟಿಸಿ
ಪರಿಹಾರ ಪಡೆಯಲು ನೂರಾರು ಅರ್ಜಿ ನಮೂನೆ
ಭರ್ತಿ ಮಾಡಿ ಅಲೆದಲೆದು... ಅಯ್ಯೋ, ಎಷ್ಟೆಲ್ಲ ತಲೆಬಿಸಿ!
ನೀರಿನ ಕುದಿವ ಬಿಂದುವ ಕಣ್ಣಲ್ಲೇ ಗ್ರಹಿಸುವುದೂ
ಒಂದು ಕಲೆ ಕಾಣಾ ಎಂದು ದಾಸರು ಬರೆದ ಪದ
ಯಾಕೋ ಯಾರಿಗೂ ಸಿಗುತ್ತಿಲ್ಲ ಈ ಕ್ಷಣಕ್ಕೆ

ಹಾಗೆಂದೇ, ಸಮಶೀತೋಷ್ಣ ವಲಯದಲ್ಲಿ ನೀರು ಕುದಿ
ಬರುವ ಮೊದಲೇ ಹುಡುಕಬೇಕಿದೆ ಕಾಫಿಪುಡಿ ಡಬ್ಬಿ.
ಯಾವುದೇ ವಿಧೇಯಕ ಪಾಸಾಗಲೂ ತೊಳೆದ ಫಿಲ್ಟರಿನ
ಕೆಳಮನೆ ಮೇಲ್ಮನೆಗಳು ಒಂದಾಗಲೇ ಬೇಕು.
ಸಾವಿರ ಕಿಂಡಿಗಳ ತಳ ಮುಚ್ಚುವಂತೆ
ಸುರಿಯಬೇಕು ಕಾಫಿಪುಡಿ ಇಟ್ಟು ಚಮಚದ ಲೆಕ್ಕ.
ಕುದ್ದ ನೀರಿನ ಪಾತ್ರೆಯನಿಕ್ಕಳದಿಂದೆತ್ತಿ
ಮೈಕೈ ಸುಟ್ಟುಕೊಳ್ಳದಂತೆ ಹುಷಾರಾಗಿ ಹೊಯ್ದು
ಪರಿಮಳ ಸಮೇತ ಮುಚ್ಚುವಷ್ಟರಲ್ಲಿ ಬಾಗಿಲು,

ಕಣ್ಣಿಗೆ ನಿದ್ರೆಮಂಪರನೆರಚುವುದು ಉರುಳುವಿರುಳ
ಗಳಿಗೆಗಳನಳೆಯುತ್ತಿರುವ ಗಡಿಯಾರದ ಮುಳ್ಳು.
ಬೆಳಗಾದಮೇಲೆ ಕವಿತೆ ಆರಂಭಕ್ಕೇ ಮರಳುವುದು:
ಎಷ್ಟು ನೊರೆ, ಎಷ್ಟು ಬಿಸಿ, ಎಷ್ಟು ಸಿಹಿ, ಎಷ್ಟು ಕರಿ, ಎಷ್ಟು ಕಹಿ..

ಎಲ್ಲ ಸರಿಯೇ. ತಪ್ಪಾದದ್ದೆಲ್ಲೆಂದರೆ,
ಮೇಲ್ಮನೆಯಿಂದ ಕೆಳಮನೆಗಿಳಿವ ಕಪ್ಪುಹನಿಗಳು
ಅಹೋರಾತ್ರಿ ನಡೆಸಿದ ಥಟ್ತಟ ಥಟ್ತಟ ಲಯವಾದ್ಯಗೋಷ್ಠಿಯಲಿ
ಒಬ್ಬರಾದರೂ ಜಾಗರ ಮಾಡಿ ಭಾಗವಹಿಸದೇ ಇದ್ದುದು.


[ಫೇಸ್‌ಬುಕ್ಕಿನಲ್ಲಿ ನಡೆದ ಕಾಫಿ-ಚಹಾ ಕಾವ್ಯಸರಣಿಗೆ ಸಂವಾದಿಯಾಗಿ ಬರೆದದ್ದು.]