Tuesday, June 17, 2025

ಬಡಿಸುವ ಬಳಗ

ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್‌ಲೈನ್ ನಂಬರಿಗೆ ಫೋನು ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್ ಆದನಂತರ ಫೋನ್ ಎತ್ತಿದ ಅಮ್ಮ, “ಎಂತಾದ್ರೂ ಅರ್ಜೆಂಟ್ ವಿಷಯ ಇದ್ರೆ ಹೇಳು. ಇಲ್ಲೇಂದ್ರೆ ಸಂಜೆ ವಾಪಸ್ ಮಾಡ್ತಿ. ನಾನು ಭದ್ರಾವತಿಗೆ ಬಡಿಸಕ್ಕೆ ಬೈಂದಿ. ಈಗ ಎರಡನೇ ಪಂಕ್ತಿ.  ಫುಲ್ ಬಿಜಿ” ಅಂತ ಹೇಳಿ, ನನ್ನ ಉತ್ತರಕ್ಕೂ ಕಾಯದೇ ಫೋನು ಕಟ್ ಮಾಡಿದಳು.  ಅಲ್ಲೇ ಊರು, ಪಕ್ಕದೂರು, ಪಕ್ಕದ ಸೀಮೆ ಅಂತ ಬಡಿಸಲು ಹೋಗುತ್ತಿದ್ದ ಅಮ್ಮ ಈ ಸಲ 70 ಮೈಲಿ ದೂರದ ಭದ್ರಾವತಿಗೆ ಬಡಿಸಲು ಬಂದಿರುವುದು ತಿಳಿದು ‘ಎಲಾ’ ಅಂದುಕೊಂಡೆ.  ಇನ್ನಷ್ಟು ಕಾಲ ಕಳೆದರೆ ಅಮ್ಮ ಒಂದು ದಿನ ಬೆಂಗಳೂರಿಗೂ ಬಡಿಸಲು ಬರಬಹುದೇನೋ ಅಂದುಕೊಂಡು ನಕ್ಕೆ.

ಅಮ್ಮ ಹೀಗೆ ಶುಭಕಾರ್ಯದ ಮನೆಗಳಿಗೆ ಊಟ ಬಡಿಸಲು ಹೋಗುವುದು ಹೊಸದೇನಲ್ಲ. ಆಕೆ ಒಂದು ಬಡಿಸುವ ಬಳಗವನ್ನು ಸೇರಿಕೊಂಡು, ಹೀಗೆ ಬಿಡುವಿನ ದಿನಗಳಲ್ಲಿ ಯಾವುದಾದರೂ ಶುಭಕಾರ್ಯಗಳಿದ್ದು ಕರೆ ಬಂದರೆ, ಆ ತಂಡದೊಂದಿಗೆ ಹೋಗಿ ಊಟವನ್ನು ಬಡಿಸಿ ಅಲ್ಲಿಯೇ ಊಟ ಮಾಡಿ ಬರುವುದು ನಾಲ್ಕೈದು ವರ್ಷಗಳಿಂದ ರೂಢಿಯಾಗಿದೆ. ಈ ಬಡಿಸುವ ಬಳಗ ಎಂಬುದು ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾಗದಲ್ಲಿ ಸಾಮಾನ್ಯವಾಗಿಹೋಗಿದೆ. ಮನೆಯಲ್ಲಿ ಮದುವೆ-ಮುಂಜಿ-ಚೌಲ-ತಿಥಿ ಮೊದಲಾದ ಕಾರ್ಯಕ್ರಮವಿದೆ ಎಂದಾದರೆ, ಓಲಗದವರು, ಮಂಟಪ ಕಟ್ಟುವವರು, ಪುರೋಹಿತರು, ಕೆಲಸದವರು, ಅಡುಗೆಯವರು ಇತ್ಯಾದಿ ಸೇವೆಯವರ ಜೊತೆ ಈ ಊಟಕ್ಕೆ ಬಡಿಸುವ ಬಳಗದವರಿಗೂ ಕರೆ ಕೊಡುವುದನ್ನು ಮರೆಯುವಂತಿಲ್ಲ. ಸೀಮೆಯ ಒಂದಷ್ಟು ಉತ್ಸಾಹಿ ಗಂಡಸರು-ಹೆಂಗಸರು ಸೇರಿ ಕಟ್ಟಿಕೊಂಡಿರುವ ಈ ‘ಬಡಿಸೋ ಸೆಟ್’ನ ನಾಯಕ ಅಥವಾ ನಾಯಕಿಗೆ ತಿಂಗಳುಗಳ ಮೊದಲೇ ಫೋನು ಮಾಡಿ ಬುಕ್ ಮಾಡಿಕೊಂಡಿದ್ದರೆ ಬಚಾವ್, ಅದಿಲ್ಲದಿದ್ದರೆ ಶುಭಕಾರ್ಯಗಳ ಸೀಸನ್ನುಗಳಲ್ಲಿ ಇವರು ಸಿಗುವುದೇ ಕಷ್ಟ.

ಮೊದಲಾದರೆ ಹೀಗಿರಲಿಲ್ಲ. ಊರಿನ ಯಾವುದೇ ಶುಭಕಾರ್ಯ, ತಿಥಿ ಅಥವಾ ಜನ ಸೇರುವ ಸಾಂಸ್ಕೃತಿಕ ಕಾರ್ಯಕ್ರಮವಿರಲಿ, ಗ್ರಾಮಸ್ಥರೇ ಪಂಚೆ-ಶಲ್ಯದೊಡನೆ ಬಂದು, ನೆಂಟರ ಪಂಕ್ತಿಗಳಿಗೆಲ್ಲ ಬಡಿಸಿ, ಕೊನೆಯ ಪಂಕ್ತಿಗೆ ತಾವು ಕುಳಿತು ಊಟ ಮಾಡಿ ಬರುತ್ತಿದ್ದರು.  ಯಾರದೇ ಮನೆಯಲ್ಲಿ ಜನ ಸೇರುವ ಯಾವುದೇ ಕಾರ್ಯಕ್ರಮವಿರಲಿ, ಗ್ರಾಮಸ್ಥರು ಎಲ್ಲ ಕೆಲಸಗಳಿಗೂ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಛತ್ರ-ಕಲ್ಯಾಣ ಮಂಟಪಗಳ ದರಬಾರು ಶುರುವಾಗುವ ಮೊದಲು ಎಲ್ಲ ಕಾರ್ಯಕ್ರಮಗಳೂ ಸ್ವಗೃಹಗಳಲ್ಲೇ ನಡೆಯುತ್ತಿದ್ದುದು.   ‘ನಮ್ಮೂರಲ್ಲಿ ಗ್ರಾಮಸ್ಥರ ಸಹಕಾರ-ಒಗ್ಗಟ್ಟು ತುಂಬಾ ಚೆನ್ನಾಗಿದೆ. ಹೀಗಾಗಿ ಎಷ್ಟು ದೊಡ್ಡ ಕಾರ್ಯ ಮಾಡೋಕೂ ಹಿಂಜರಿಕೆ ಇಲ್ಲ’ ಎಂದು ಮನೆಯ ಯಜಮಾನರು ನಿರಾಳವಾಗಿರುತ್ತಿದ್ದರು.   ಮನೆಯ ಅಂಗಳ ಹದಗೊಳಿಸುವುದು, ಚಪ್ಪರ ಹಾಕವುದು, ತೋರಣ ಕಟ್ಟುವುದು, ಮಂಟಪ ನಿರ್ಮಿಸುವುದು, ಕಾರ್ಯದ ಹಿಂದಿನ ದಿನ ದೊನ್ನೆ-ಬಾಳೆ ತಯಾರಿಸುವುದು, ಅಡುಗೆಗೆ ತರಕಾರಿ ಹೆಚ್ಚುವುದು, ಊಟ ಬಡಿಸುವುದು, ನಂತರ ಬಾಳೆಯೆಲೆ ತೆಗೆದು ನೆಲವನ್ನು ಸ್ವಚ್ಛಗೊಳಿಸುವುದು –ಎಲ್ಲವೂ ಗ್ರಾಮಸ್ಥರ ನೆರವಿನಿಂದಲೇ ಆಗುತ್ತಿದ್ದುದು. ಊರಲ್ಲೊಬ್ಬರ ಮನೆಯಲ್ಲಿ ಕಾರ್ಯಕ್ರಮ ಎಂದರೆ ಅದು ನಮ್ಮ ಮನೆಯದೇ ಕಾರ್ಯಕ್ರಮ ಎಂಬಂತೆ ಊರವರೆಲ್ಲ ಒಂದಾಗಿ ಅಲ್ಲಿರುತ್ತಿದ್ದರು ಮತ್ತು ಸಂಭ್ರಮಿಸುತ್ತಿದ್ದರು.

ಎಷ್ಟೇ ವಿಜ್ರಂಭಣೆಯ ಕಾರ್ಯವಾದರೂ ಎಲ್ಲರೂ ಕೊನೆಗೆ ಮಾತನಾಡುವುದು ‘ಊಟ ಹೇಗಿತ್ತು’ ಅಂತಲೇ ಎಂಬ ಮಾತಿದೆ.  ಹೀಗಾಗಿ ಒಳ್ಳೆಯ ಬಾಣಸಿಗರನ್ನು ಕರೆಸಿ ಒಳ್ಳೊಳ್ಳೆಯ ಅಡುಗೆ ಮಾಡಿಸುವ ಎಚ್ಚರ ಸಾಮಾನ್ಯವಾಗಿ ಯಜಮಾನರಿಗಿರುತ್ತದೆ. ರುಚಿಕಟ್ಟಾದ ಊಟ ತಯಾರಿಸಿದರೆ ಸಾಕೇ? ಅದನ್ನು ಬಂದವರಿಗೆ ಅಚ್ಚುಕಟ್ಟಾಗಿ ಬಡಿಸಬೇಕಷ್ಟೇ? ಹೀಗೆ ಬಡಿಸುವಲ್ಲಿ ನಾವೆಲ್ಲ ಗ್ರಾಮಸ್ಥರು ತುದಿಗಾಲಲ್ಲಿ ನಿಲ್ಲುತ್ತಿದ್ದೆವು. ಮೊದಲೇ ಸ್ವಚ್ಛಗೊಳಿಸಿದ ಬಾಳೆಯೆಲೆಗಳನ್ನು ಸಾಲಾಗಿ ಇರಿಸಿ, ಪ್ರತಿ ಎಲೆಯ ಪಕ್ಕವೂ ನೀರಿನ ಲೋಟವನ್ನಿರಿಸಿ, ನಂತರ ಎಡೆಶೃಂಗಾರಕ್ಕೆ ಪದಾರ್ಥಗಳನ್ನು ಬಡಿಸುವುದು. ಜನವೆಲ್ಲ ಬಂದು ಕುಳಿತು, ಊಟ ಶುರುಮಾಡಲು ಅಣತಿ ಸಿಕ್ಕ ನಂತರ, ಅನ್ನ-ಸಾರುವಿನಿಂದ ಶುರುವಾಗುವ ಬಡಿಸುವ ಸಾಲು ಕೊನೆಯ ಮಜ್ಜಿಗೆಯವರೆಗೆ ಅವ್ಯಾಹತ ನಡೆಯಬೇಕು. ಮೊದಲಿಗೆ ಯಾವ ಪದಾರ್ಥ ಹೋಗಬೇಕು, ನಂತರ ಯಾವ ಪದಾರ್ಥ, ಯಾವು ಖಾದ್ಯವನ್ನು ಬಾಳೆಯ ಯಾವ ಭಾಗದಲ್ಲಿ ಬಡಿಸಬೇಕು, ಯಾವುದಕ್ಕೆ ಎಷ್ಟು ಒತ್ತಾಯ ಮಾಡಬೇಕು –ಎಲ್ಲವನ್ನೂ ತಿಳಿದ ಅನುಭವಸ್ಥರೊಬ್ಬರು ಇದರ ಮೇಲ್ವಿಚಾರಕರಾಗಿ ನಿಂತಿರುವರು. ಅವರ ಸೂಚನೆಯಂತೆ ಬಡಿಸುವ ಕಾರ್ಯ ನಡೆಯುವುದು. ಊಟಕ್ಕೆ ನಿರೀಕ್ಷೆಗಿಂತ  ಜಾಸ್ತಿ ಜನ ಬಂದುಬಿಟ್ಟಿದ್ದರೆ, ಮಾಡಿಸಿದ ಯಾವುದಾದರೂ ಪದಾರ್ಥ ಕಡಿಮೆಯಾಗುವ ಸಾಧ್ಯತೆಯಿದ್ದರೆ, ಅದನ್ನು ಬಡಿಸುವಾಗ ಹೆಚ್ಚು ಒತ್ತಾಯ ಮಾಡುವಂತಿಲ್ಲ. ಅದೇ ಯಾವುದಾದರೂ ಪದಾರ್ಥ ಹೇರಳವಾಗಿದ್ದರೆ ಕೈಬಿಚ್ಚಿ ಬಡಿಸಬಹುದು: ಒಂದು ಜಿಲೇಬಿ ಹಾಕುವಲ್ಲಿ, ‘ದಾಕ್ಷಿಣ್ಯ ಮಾಡ್ಕೋಬೇಡಿ’ ಅಂತ ಹೇಳಿ ಎರಡು ಜಿಲೇಬಿ ಹಾಕಬಹುದು! ಮುಂದಿನ ಪಂಕ್ತಿಗೆ ತಿಳಿಸಾರು ಕಮ್ಮಿಯಾಗುವಂತೆ ಕಂಡರೆ ಸ್ವಲ್ಪ ನೀರು-ಉಪ್ಪು ಬೆರೆಸಿ ಇರುವುದನ್ನೇ ‘ಉದ್ದ’ ಮಾಡುವ ಕಲೆಯೂ ಈ ಮೇಲ್ವಿಚಾರಕರಿಗೆ ಸಿದ್ಧಿಸಿರುತ್ತೆ.  ಬಡಿಸುವವರಲ್ಲೂ ಹೆಚ್ಚು ನೈಪುಣ್ಯವಿರುವವರು ಅನ್ನ-ಸಾಂಬಾರು-ಸಿಹಿಗಳಂತಹ ದೊಡ್ಡ ಪದಾರ್ಥಗಳನ್ನು ವಹಿಸಿಕೊಂಡರೆ, ಅನನುಭವಿ ಚಿಕ್ಕ ಮಕ್ಕಳು ನೀರು ಬಡಿಸುವುದಕ್ಕೆ ಮೀಸಲು. ಹಿಂದೆ ನೆಲದಮೇಲೇ ಊಟ ಹಾಕಬೇಕಿದ್ದ ಕಾಲದಲ್ಲಿ ಬಗ್ಗಿ ಬಗ್ಗಿ ಬಡಿಸಿ ಕೊನೆಯ ಪಂಕ್ತಿಯ ಹೊತ್ತಿಗೆ ಬಡಿಸುವವರು ಸುಸ್ತಾಗಿಹೋಗುತ್ತಿದ್ದರು.  ಟೇಬಲ್ಲು-ಕುರ್ಚಿಗಳು ಬಂದಮೇಲೆ ಇದು ಸ್ವಲ್ಪ ಸುಲಭವಾಯಿತು.

ಹೀಗೆ ಬಡಿಸುವ ಜವಾಬ್ದಾರಿ ವಹಿಸಿಕೊಂಡ ಗ್ರಾಮಸ್ಥರು ಕೊನೆಯ ಪಂಕ್ತಿಗೆ ಊಟಕ್ಕೆ ಕೂರುವುದು ರೂಢಿ. ಕೆಲವೊಮ್ಮೆ ಕೊನೆಯ ಪಂಕ್ತಿಯ ಹೊತ್ತಿಗೆ ಮಾಡಿಸಿದ ಒಂದೆರಡು ಪದಾರ್ಥಗಳು ಖಾಲಿಯಾಗಿಬಿಟ್ಟಿರುತ್ತವೆ ಮತ್ತು ಅಷ್ಟೊತ್ತಿಗೆ ಬಹಳ ಸಮಯವೂ ಆಗಿ ಹಸಿವಾಗಿರುತ್ತದೆ.  ಹೀಗಾಗಿ, ಈ ಬಡಿಸುವ ಜನ ದೊಡ್ಡ ಪಾತ್ರೆಯಿಂದ ಎತ್ತಿಕೊಂಡು ಇನ್ನೇನು ಖಾಲಿಯಾಗಲಿರುವ ಬಜ್ಜಿ ತಿನ್ನುವುದೋ, ನೀರ್ಗೊಜ್ಜು ಕುಡಿಯುವುದೋ ಮಾಡಿ ಬುದ್ಧಿವಂತಿಕೆಯಿಂದ ಹೊಟ್ಟೆ ತುಂಬಿಸಿಕೊಂಡಿರುತ್ತಾರೆ. ಕೊನೆಯ ಪಂಕ್ತಿಗೆ ಊಟಕ್ಕೆ ಕೂರುವುದರ ಮಜವೂ ಬೇರೆಯೇ. ಅವರವರಲ್ಲೇ ಷರತ್ತು ಕಟ್ಟಿಕೊಂಡು ಜಿಲೇಬಿ ತಿನ್ನುವುದಿರಬಹುದು, ಹಾಡು-ಗ್ರಂಥಗಳನ್ನು ಎಸೆಯುವುದಿರಬಹುದು, ಪರಸ್ಪರ ತಮಾಷೆ ಮಾಡಿಕೊಳ್ಳುವುದಿರಬಹುದು –ಒಟ್ಟಿನಲ್ಲಿ ಕೊನೆಯ ಪಂಕ್ತಿ ಮುಗಿಯಲು ಹಿಂದಿನ ಪಂಕ್ತಿಗಳಿಗಿಂತ ಜಾಸ್ತಿ ಸಮಯ ಬೇಕು.

ಮಲೆನಾಡು-ಕರಾವಳಿಗಳ ಹಲವು ಊರುಗಳಲ್ಲಿ ಶುಭಕಾರ್ಯದ ಮನೆಗಳಲ್ಲಿ ಹೀಗೆ ಗ್ರಾಮಸ್ಥರೇ ನೆರವಾಗುವ ಪದ್ಧತಿ ಈಗಲೂ ಇದೆಯಾದರೂ, ಪ್ರಾಯಶಃ ಯುವಜನತೆಯು ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಿರುವುದರಿಂದ ಗ್ರಾಮಸ್ಥರೇ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗಿದೆ. ಹೀಗಾಗಿ ಹಲವು ಕೆಲಸಗಳಿಗೆ ಹೊರಗುತ್ತಿಗೆ ಕೊಡುವುದು ಅನಿವಾರ್ಯವಾಗಿದೆ. ಈ ಅನಿವಾರ್ಯತೆಯಿಂದಾಗಿಯೇ ಹುಟ್ಟಿಕೊಂಡಿರುವುದು ‘ಬಡಿಸುವ ಬಳಗ’ಗಳು.

ಮೊದಮೊದಲು ಎಲ್ಲೋ ತಾಲೂಕಿಗೆ ಒಂದೆರಡು ಇದ್ದ ಈ ಬಡಿಸುವ ತಂಡಗಳು ಈಗ ಊರಿಗೊಂದರಂತೆ ಇವೆ. ಪೈಪೋಟಿಯಂತೆ ಬಡಿಸುವ ಗುತ್ತಿಗೆ ವಹಿಸಿಕೊಳ್ಳುವ ಇವು ಆಸಕ್ತಿ ಮತ್ತು ಅವಶ್ಯಕತೆಯಿರುವವರಿಗೆ ಆದಾಯ ತರುವ ಉದ್ಯೋಗವನ್ನೂ ಸೃಷ್ಟಿಸಿವೆ.  ಲವಲವಿಕೆಯ ಗೆಳೆಯ-ಗೆಳತಿಯರ ಈ ಬಳಗಗಳು ದೂರದೂರುಗಳಿಗೂ ಪಯಣಿಸಿ ಅಪರಿಚಿತರಿಗೆ ಉಣಬಡಿಸಿ, ತಾವೂ ಊಟ ಮಾಡಿ, ಬಡಿಸಿದ್ದಕ್ಕೆ ಹಣ ಪಡೆದು ಸಂಜೆಯೊಳಗೆ ಮನೆ ಸೇರಿಕೊಳ್ಳುವವು. ಕೆಲವು ಕಲ್ಯಾಣಮಂಟಪಗಳಲ್ಲಿ ಖಾಯಂ ಆಗಿ ನಿಯೋಜನೆಗೊಂಡಿರುವ ಬಡಿಸುವ ಬಳಗಗಳೂ ಇವೆ. ಬಡಿಸಲು ಸ್ವಯಂಸೇವಕರ ಕೊರತೆಯಿರುವ ಊರುಗಳಲ್ಲಿ ಈ ಬಳಗಗಳು ವರದಾನವೂ ಆಗಿವೆ. ಶಾಲೆ-ಕಾಲೇಜುಗಳಿಗೆ ಹೋಗುವ ಹುಡುಗರಿಗೆ ‘ಕೈಕಾಸು’ ಮಾಡಿಕೊಳ್ಳುವ ದಾರಿಯೂ ಆಗಿದೆ. ಎಷ್ಟೋ ಬಡ-ಮಧ್ಯಮ ವರ್ಗದ ಹುಡುಗರು, ತಮ್ಮ ಶಾಲೆ-ಕಾಲೇಜುಗಳಿಗೆ ರಜೆಯಿದ್ದ ದಿನಗಳಲ್ಲಿ ಇಂತಹ ಬಡಿಸುವ ತಂಡಗಳಲ್ಲಿ ಸೇರಿಕೊಂಡು ತಮ್ಮ ಖರ್ಚಿಗೆ, ಓದಿನ ಫೀಸಿಗೆ ದುಡ್ಡು ಮಾಡಿಕೊಳ್ಳುತ್ತಾರೆ. ಬೇಸಿಗೆ ರಜೆ ಮುಗಿಯುವಷ್ಟರಲ್ಲಿ ಎಷ್ಟೋ ಹುಡುಗರ ಕಾವಿ ಪಂಚೆಗಳು ಸವೆದು ಹೋಗಿರುತ್ತವೆ.

ರಾತ್ರಿ ನಾವು ಊಟಕ್ಕೆ ತಯಾರಿ ನಡೆಸುತ್ತಿದ್ದಾಗ, ಭದ್ರಾವತಿಯಿಂದ ವಾಪಸು ಬಂದ ಅಮ್ಮ ಫೋನ್ ಮಾಡಿ, ಇವತ್ತು ತಾನು ಬಡಿಸಲು  ಹೋಗಿದ್ದ ಮದುವೆಮನೆಗೆ ದೊಡ್ಡದೊಡ್ಡ ರಾಜಕಾರಣಿಗಳು - ಸಿನೆಮಾ ನಟನಟಿಯರು ಬಂದಿದ್ದರೆಂದೂ, ಅವರಿಗೆಲ್ಲ ಊಟ ಬಡಿಸಿ ತನಗೆ ಖುಷಿಯಾಯ್ತು ಅಂತಲೂ ಹೇಳಿದಳು.  ‘ಸೆಲ್ಫಿ ತೆಕ್ಕಂಡಿದ್ದಿ. ಅಪ್ಪ ಬಂದಕೂಡ್ಲೇ ಕಳಿಸಕ್ಕೆ ಹೇಳ್ತಿ’ ಎಂದಳು. ಯಾರದೋ ಮದುವೆಗೆ ಬಂದಿದ್ದ ಯಾವುದೋ ಸೆಲೆಬ್ರಿಟಿಗಳಿಗೆ ಯಾರೋ ತಯಾರಿಸಿದ ಅಡುಗೆಯನ್ನು ಬಡಿಸಿ ಖುಷಿ ಪಡುವ ಅಮ್ಮ ಮತ್ತು ಈ ವ್ಯವಸ್ಥೆಯ ಬಗ್ಗೆ ಯೋಚಿಸುತ್ತಾ, ಅಪ್ಪ ಕಳುಹಿಸಲಿರುವ ಸೆಲ್ಫಿಗೆ ಕಾಯುತ್ತಾ, ನಾವು ಊಟದ ತಯಾರಿ ಮುಂದುವರೆಸಿದೆವು.

[ಈ ಬರಹದ ಸಂಕ್ಷಿಪ್ತ ರೂಪವು 2024ರ 'ಕಾಲನಿರ್ಣಯ' ಕ್ಯಾಲೆಂಡರಿನಲ್ಲಿ ಪ್ರಕಟಗೊಂಡಿದೆ.]