Thursday, February 07, 2008

ಚಿತ್ರಚಾಪ -ಇದು ಮೊದಲ ತೊದಲು

ಸೂರ್ಯ ತನ್ನತ್ತ ವಾಲುತ್ತಲೇ ಪಶ್ಚಿಮದ ದಿಗಂತ ನಾಚಿ ಕೆಂಪಾಗಿಬಿಟ್ಟಿತ್ತು. ಹಕ್ಕಿಗಳು ಗುಂಪುಗುಂಪಾಗಿ ಮನೆ ಕಡೆ ಹೊರಟಿದ್ದವು. ಸಂಜೆ, ತನ್ನ ಸೌಂದರ್ಯಕ್ಕೆ ತಾನೇ ಮೈಮರೆತಂತಿತ್ತು. ಗಂಧರ್ವ ಲೋಕದತ್ತ ನಡೆಯುವವರಂತೆ ಸುಮಂತ ಮತ್ತು ರಾಜಿ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದರು. ಸುಮಂತ ರಾಜಿಗಾಗಿ ಹಿತ್ತಿಲ ಬೇಲಿಯ ಗಿಡದಲ್ಲಿದ್ದ ಗೌರಿ ಹೂವನ್ನು ಕೊಯ್ದುಕೊಟ್ಟ. ಸಂಜೆ ಮುಗಿಲ ಬಣ್ಣ ಗೌರಿ ಹೂವಿನ ಬಣ್ಣಕ್ಕೇ ತಿರುಗಿತು. ಸ್ವಲ್ಪ ಮುಂದೆ ನಡೆದ ಸುಮಂತ, ಮುತ್ತುಗದ ಹೂವಿನ ಗೊಂಚಲೊಂದನ್ನು ಕೊಯ್ದು ತಾನೇ ರಾಜಿಯ ಮುಡಿಗೇರಿಸಿದಮೇಲಂತೂ ಸಂಜೆಗೆ ಅಲ್ಲೇ ರಾತ್ರಿಯ ಮಾದಕತೆ ಪ್ರಾಪ್ತವಾಗಿಬಿಟ್ಟಿತು.

ಶಾಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪುಗಳಲ್ಲಿ ಕೆಲಸ ಮಾಡಿ ಗೊತ್ತಿದ್ದ ಸುಮಂತ ರಾಜಿಗಾಗಿ ಮರ ಹತ್ತಿ ಸೀತೆಪೇರಲೆ ಹಣ್ಣನ್ನು ಕೊಯ್ದು ಕೊಟ್ಟ. ಮುಂದೆ ಅವರು ಪರಗಿ ಮಟ್ಟಿ ನುಗ್ಗಿ ಪುಟ್ಟ ಪುಟ್ಟ ಪರಗಿ ಹಣ್ಣುಗಳನ್ನು ಒಂದು ಮುಷ್ಟಿಯಾಗುವಷ್ಟು ಸಂಗ್ರಹಿಸಿದರು. ಒಂದೊಂದೇ ಹಣ್ಣನ್ನು ಬಾಯಿಗೆ ಎಸೆದುಕೊಳ್ಳುತ್ತಾ ಅವರು ಕಾಲುದಾರಿಯಲ್ಲಿ ಸಾಗಿದರು. ಒಂದು ದೊಡ್ಡ ಚಂದ್ರಪೇರಲೆ ಹಣ್ಣಿನ ಗಿಡ ಸಿಕ್ಕಿತು. ಮರದ ಮೇಲ್ಗಡೆ ಎತ್ತರದಲ್ಲಿ ಎರಡು ದೋರಗಾಯಿಗಳು ಕಂಡವು. ಸುಮಂತ ಬಡಿಗೆ ಬೀಸಿ ಒಂದನ್ನು ಕೆಡವಿದ. ‘ನಿಂಗಿಲ್ವಲ್ಲೋ?’ ಎಂದ ರಾಜಿಗೆ ‘ಪರ್ವಾಗಿಲ್ಲ, ನೀನು ತಿನ್ನು’ ಎಂದ. ಆದರೂ ರಾಜಿ ತಾನೇ ಬಡಿಗೆ ತಗೊಂಡು ಬೀಸಲಿಕ್ಕೆ ನೋಡಿದಳು. ಆದರೆ ಅವಳು ಎಸೆದದ್ದು ಆ ರೆಂಬೆಯ ಹತ್ತಿರಕ್ಕೂ ಹೋಗಲಿಲ್ಲ. ಸುಮಂತ ರಾಜಿಯನ್ನು ರೇಗಿಸಿದ. ಅದಕ್ಕೆ ರಾಜಿಯ ಮುಖ ಕೆಂಪಾದದ್ದು ಕಂಡು ಸಂಜೆ ತಾನು ಕಪ್ಪಾಗತೊಡಗಿತು.

ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ಒಡಗೂಡತೊಡಗಿದವು. ಮಳೆಗಾಲದಲ್ಲಿ ನೀರಾಗಿ ಸುರಿದೂ ಅಳಿದುಳಿದಿದ್ದ ಮೋಡಗಳು ಅದ್ಯಾವುದೋ ಮಾಯೆಯ ಗಾಳಿಗೆ ಒತ್ತಿಕೊಂಡು ಸೀದಾ ಇಲ್ಲಿಗೆ ಬಂದಿದ್ದವು. ಆಗಲೇ ಕತ್ತಲಾವರಿಸಲಾರಂಭಿಸಿದ್ದರಿಂದ ಸುಮಂತನಿಗಾಗಲೀ ರಾಜಿಗಾಗಲೀ ಈ ಪರಿಣಾಮ ತಕ್ಷಣ ಗೊತ್ತಾಗಲಿಲ್ಲ. ತಣ್ಣನೆಯ ಗಾಳಿ ಬೀಸಲಾರಂಭಿಸಿದಾಗ ಅವರು ಆಗಸದತ್ತ ನೋಡಿದರು.

“ಓಹ್! ಮಳೆ ಬರುವಂತಿದೆ ಕಣೇ ರಾಜೀ..” ಎಂದ ಸುಮಂತ.
“ಅಯ್ಯೋ.. ಬೇಗ ಬೇಗ ಮನೆ ಸೇರಿಕೊಳ್ಳೋಣ ಬನ್ನಿ..” ರಾಜಿ ಅವಸರಿಸಿದಳು.

ಅವರು ಕಾಡ ತಂಪು, ಹೂಗಳ ಕಂಪು, ಜೀರುಂಡೆಗಾನದ ಇಂಪು ಮತು ಸಂಜೆಯ ಕೆಂಪನ್ನು ಸವಿಯುತ್ತಾ ತುಂಬಾ ಮುಂದೆ ಬಂದುಬಿಟ್ಟಿದ್ದರು. ಈಗ ವಾಪಸು ಹೋಗಲಿಕ್ಕೆ ಕನಿಷ್ಟ ಅರ್ಧಗಂಟೆ ಹಾದಿ ಸವೆಸಬೇಕಿತ್ತು. ನಡೆಯತೊಡಗಿದರು. ಮಿಂಚು-ಗುಡುಗುಗಳು ಶುರುವಾದವು. ರಾಜಿ ಸುಮಂತನ ಕೈ ಹಿಡಕೊಂಡಳು. ಸರಸರನೆ ಹೆಜ್ಜೆ ಹಾಕಿದರು. ಮಳೆ ಹನಿಗಳು ಬೀಳತೊಡಗಿದವು...


* * *

ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.

ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ 'ಪುಸ್ತಕ ಲೋಕ'ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು... ಹೇಗೋ ಏನೋ ಅರಿಯೆವು... ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ...

ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ
ಸಮಯ: ಬೆಳಗ್ಗೆ 10:30
ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ನಿಮಗಾಗಿ ಕಾಯುತ್ತಿರುತ್ತೇನೆ.. ಯಾಕೇಂದ್ರೆ, ನೀವು ಬಂದೇ ಬರ್ತೀರಿ ಅಂತ ನಂಗೊತ್ತು...

ಪ್ರೀತಿಯಿಂದ,

-ಸು

27 comments:

Seema S. Hegde said...

ಬರಲ್ಲಂತೂ ಆಗ್ತಿಲ್ಲೆ.
ದೂರದಿಂದಲೇ ಈ ಹಾರೈಕೆ... ಭವಿಷ್ಯ ಉಜ್ವಲವಾಗಲಿ!

ಅಹರ್ನಿಶಿ said...

ನ೦ಗೂ ಬರೋಕೆ ಆಗೊಲ್ಲ ಕಣಪ್ಪಾ?
ಬೇಜಾರ್ ಮಾಡ್ಕೋಬೇಡ.ನಿಮ್ಮ ಬರವಣಿಗೆಯ ವೇಗ ಈಗಾಗಲೇ ದೂರದ ಆಫ್ರಿಕಾಕ್ಕೂ ತಲುಪಿದೆ.ನಮ್ಮ ಹಾರೈಕೆಗಳೂ ಶರವೇಗದಲ್ಲಿ ನಿಮ್ಮನ್ನು ತಲುಪಲಿ.ಹೆಚ್ಚು ಹೆಚ್ಚು ಬರೆಯಲು, ಬರೆದದ್ದನ್ನ ಪುಸ್ತಕವಾಗಿಸಲು ಪ್ರೇರೇಪಣೆಯಾಗಲಿ.

sritri said...

ಉತ್ಸಾಹಿ ಗೆಳೆಯರ ಮೊದಲ ಪ್ರಯತ್ನಕ್ಕೆ ಶುಭ ಹಾರೈಕೆಗಳು

Unknown said...

Nimma modala prayathnakke nanna haardika abhinandanegalu
Chandru

Sanath said...

ee weekend ..benagalorige baruva plan ide.
idannu aa plan ge add madbeku.

ಅನಂತ said...

ಶುಭಾಶಯಗಳು ಸುಶ್ರುತ.. ;)

ಸಿಂಧು sindhu said...

ಶುಭಾಶಯಗಳು ಸುಶ್ರುತ ಮತ್ತು ಗೆಳೆಯರಿಗೆ,

ನಿಮ್ಮ ಬರಹಗಳನ್ನೋದಿ ನಾವು ಓದುಗರ ಮನದಲ್ಲಿ ಇಂದ್ರಚಾಪ ಮೂಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಒಳಿತಾಗಲಿ, ಪ್ರೀತಿ ತುಂಬಲಿ,
ಪ್ರೀತಿಯಿಂದ
ಸಿಂಧು

Shashi Dodderi said...

wow it is a great effort, good wishes for that, if I would have been in banglore I would have attended this. Next time when I come to Banglore, I will buy and read this book, this is the only way you can show gratitude and appreciation.....

ನಾವಡ said...

ಸುಶ್ರುತ, ಅರುಣ್, ಶ್ರೀನಿವಾಸ್, ಅನ್ನಪೂರ್ಣ,
ನಿಮ್ಮ ಮೊದಲ ಪ್ರಯತ್ನಕ್ಕೆ ಶುಭ ಹಾರೈಕೆಗಳು. ಒಳ್ಳೆಯದಾಗಲಿ.
ನಾನು ಬೆಂಗಳೂರಿನಲ್ಲಿದ್ರೆ ಖಂಡಿತವಾಗಿ ಬರುತ್ತಿದ್ದೆ, ಯಾಕಂದ್ರೆ ನಮ್ಮ ಭಾನುವಾರದ "ಅಡ್ಡೆ’ ಗಳಲ್ಲಿ ಅದೂ ಒಂದು.

ಮತ್ತೊಮ್ಮೆ ಹಾರೈಕೆಗಳೊಂದಿಗೆ,
ನಾವಡ

ರಾಜೇಶ್ ನಾಯ್ಕ said...
This comment has been removed by the author.
ರಾಜೇಶ್ ನಾಯ್ಕ said...

ಐವರಿಗೂ ಶುಭಾಶಯಗಳು. ಬೇರೆ ಊರಿನಲ್ಲಿರುವ ನನ್ನಂಥವರು 'ಚಿತ್ರಚಾಪ' ತರಿಸಿಕೊಳ್ಳುವುದು ಹೇಗೆಂದು ತಿಳಿಸಿದರೆ ಉಪಕಾರವಾಗುವುದು.

ವಿಕ್ರಮ ಹತ್ವಾರ said...

Congrats & All the best!!

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ...
ಅಭಿನಂದನೆಗಳು.
"ಚಿತ್ರಛಾಪ" ಟೈಟಲ್ ತುಂಬಾ ಇಷ್ಟವಾಯ್ತು. ಐವರಿಗೂ ಶುಭಾವಗಲಿ. ಪುಸ್ತಕ ಮುಂಬರುವ ನಿಮ್ಮ ಪುಸ್ತಕಗಳಿಗೆ ದೀಪವಾಗಲಿ.

12:38 AM

ನನ್ ಮನೆ said...

ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು..

ಬರೋಕಂತೂ. ಆಗೋಲ್ಲ.. ಕಣೋ.. ನಿಮ್ಮ ಈ ಪ್ರಯತ್ನ ನಮ್ಮಂತ - ನಿಮ್ಮಂತವರಿಗೆ ಮಾದರಿಯಾಗಲಿ..
ಮತ್ತೊಮ್ಮೆ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು...

ನಿಮ್ಮವ
-ವೀರೇಶ ಹೊಗೆಸೊಪ್ಪಿನವರ

Tina said...

ಸುಶ್ರುತ,
ನಿಮ್ಮ ಈ ಹೊಸ ಪ್ರಯತ್ನದ ಬಗ್ಗೆ ಓದಿ,ಬಹಳ ಸಂತಸ.
ಬ್ಲಾಗುಗಳಾಚೆಗೂ ಯಾನ ಮಾಡಲೆಳಸಿರುವ ನೀವು ನಾಲ್ವರಿಗೆ ಸಹಬ್ಲಾಗಿಗಳಾದ ನನ್ನ ಶುಭಾಕಾಂಕ್ಷೆಗಳು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂಬ ಹಾರಯಿಕೆಯೊಡನೆ.
-ಟೀನಾ.

ಪಯಣಿಗ said...

ನಿಮ್ಮೆಲ್ಲರ ಪಯಣಕೆ ಶುಭಾಶಯ..

Archu said...

shubhavaagali..
preetiyinda,
archana

Parisarapremi said...

all the best, sushrutha... :-)

chetana said...

ಸುಶ್ರುತ ಮತ್ತು ಇಂದ್ರಚಾಪ ಬಳಾಗಕ್ಕೆ ಶುಭ ಹಾರೈಕೆಗಳು
- ಚೇತನಾ

ಸುಪ್ತದೀಪ್ತಿ suptadeepti said...

ತಡವಾಗಿ ಈ-ಪತ್ರ ಮತ್ತು ಬ್ಲಾಗ್ ನೋಡುತ್ತಿದ್ದೇನೆ.

ನಿಮ್ಮೆಲ್ಲರ ಹುರುಪಿಗೆ, ಉತ್ಸಾಹಕ್ಕೆ, ಒಳ್ಳೆಯ ಪ್ರಯತ್ನಕ್ಕೆ ಶುಭಾಶಯಗಳು. ಭಾನುವಾರದ ಬೆಳಗು ಇನ್ನೊಂದು ಹೊಸ ದಿಕ್ಕನ್ನು ಬೆಳಗಿಸಲಿ. ಕಾರ್ಯಕ್ರಮ ಯಶಸ್ವಿಯಾಗಲಿ. ನಿಮ್ಮನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕಾಗಿ ವಸುಧೇಂದ್ರ ಅವರಿಗೆ ನನ್ನ ನಮಸ್ಕಾರಗಳನ್ನೂ ವಂದನೆಗಳನ್ನೂ ತಿಳಿಸಿ.

ತನ್ ಹಾಯಿ said...

ಮೊದಲ ತೊದಲೇ ಮುಂದಿನ ಮಾತಲ್ವೇ.. ಶುಭ ಹಾರೈಕೆಗಳು.. ಹೀಗೆ ಮುಂದುವರಿಯಿರಿ..

Ultrafast laser said...

ಸುಶ್ರುತನನ್ನು ನಾನು ಬಾಲ್ಯದಿಂದ ಬಲ್ಲೆ, ಆದರೆ ಆತನ ನಿಮ್ನ ನೋಟದಲ್ಲಿ ಬದುಕನ್ನು ಸೆರೆಹಿದಿಯಬಹುದಾದ ಸೂಕ್ಷ್ಮ ಒಳನೋಟಗಳು ಇರಬಹುದೆಂದು ಉಹಿಸಲಿಕ್ಕೆ ಸಾದ್ಯವಿರಲಿಲ್ಲ. ಗದ್ಯದಲ್ಲಿ ಒಳ್ಳೆಯ ಹಿಡಿತವಿದೆ. ಸುಶ್ರುತನಿಗೂ ಹಾಗು ಉಳಿದ ಬರಹಗಾರರಿಗೂ ಅಭಿನಂದನೆಗಳು ಹಾಗು ಉಜ್ವಲ ಭವಿಷ್ಯದ ಹಾರೈಕೆಗಳು.

D.M.Sagar

click4nothing said...

http://www.baanuli.com/topheading.php?catid=4&id=1291

ಪುಸ್ತಕ ಬಿಡುಗಡೆಯಾಗಿದ್ದಕ್ಕೆ ಅಭಿನಂದನೆಗಳು....

nishu mane said...

ದಟ್ಸ ಕನ್ನಡದಲ್ಲಿ ಬಂದ ಒರದಿ ನೋಡಿ ಇಲ್ಲಿ ಬಂದೆ. ಮುಂಚೇನೇ ಬಂದು ನೋಡಿದ್ದರೂ ಬೆಂಗಳೂರಿಗೆ ಬರಲು ಆಗ್ತಿರಲಿಲ್ಲ! ಇಂದ್ರಚಾಪ ಮೂಡಿಸಿರೋ ನಿಮಗೆಲ್ಲ ಅಭಿನಂದನೆಗಳು. ನಿಮ್ಮ ಬರವಣಿಗೆ, ಪ್ರಕಟಣೆ ಎಲ್ಲ ಮುಂದೆಯೂ ಸರಾಗವಾಗಿ ಮುಂದುವರಿಯಲಿ.

ಮೀರ.

Anveshi said...

ಹ್ಯಾಟ್ಸ್ ಆಫ್ ಸುಶ್ರುತ ಮತ್ತು ಬಳಗ...

ಚಿತ್ರ ಚಾಪಕ್ಕೆ ಯಶಸ್ಸು ಕೋರುತ್ತೇವೆ. ಬರವಣಿಗೆ ಎಗ್ಗಿಲ್ಲದೆ ಮುಂದುವರಿಸಿ... ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ದಷ್ಟಪುಷ್ಟವಾಗಲಿ.

Prashanth M said...

namaskaara, pustaka biDugaDeya viShaya monneyaShTE tiLiyitu...

pustaka elli-hEge doreyuttade tiLisutteera??

Sushrutha Dodderi said...

prashant,

ಬೆಂಗಳೂರಿನ 'ಅಂಕಿತ ಪುಸ್ತಕ' ಮತ್ತೆ 'ಸಪ್ನಾ ಬುಕ್ ಹೌಸ್'ಗಳಲ್ಲಿ 'ಚಿತ್ರಚಾಪ' ಸಿಗತ್ತೆ. ಹಾಗೇ info@pranati.in ಗೆ ಒಂದು ಈಮೇಲ್ ಕಳುಹಿಸಿದ್ರೆ ಅವರು ನಿಮಗೆ ಸಹಾಯ ಮಾಡ್ತಾರೆ.