Monday, May 26, 2008

ಮಂಡೆಕಸ

ಅಜ್ಜಿ ಅದನ್ನು ಹಿತ್ಲಕಡೆ ಬಾಗಿಲಿನ ಚಿಲಕಕ್ಕೆ ಸಿಕ್ಕಿಸುತ್ತಿದ್ದಳು. ಅಮ್ಮನಿಗೆ ಅದಕ್ಕೇ ಸಿಟ್ಟು: “ಶೀ! ಅದೆಂತು ಬಾಗ್ಲು ಚಿಲ್ಕಕ್ ಸಿಕ್ಸಿಡ್‌ತ್ರಪ! ಒಂಥರಾ ಆಗ್ತು ಮುಟ್ಯೋದ್ರೆ! ಒಂಚೂರ್ ಮುಂದೆ ಹೋಗಿ ಬಿಸಾಕಿಕ್ ಬರ್ಲಕ್ಕು. ಯಾರರು ನೋಡಿರೆ ಚೊಲೋ ಕಾಣ್ತಲ್ಲೆ..” ಅಜ್ಜಿಗೆ ಹಾಗೆ ಹೇಳಿಸಿಕೊಂಡೂ ಹೇಳಿಸಿಕೊಂಡೂ ಅಭ್ಯಾಸವಾಗಿಬಿಟ್ಟಿತ್ತಾದ್ದರಿಂದ ಅಮ್ಮನ ಸಿಡುಕಿಗೆ ನಿರುಮ್ಮಳವಾಗಿ ಉತ್ತರಿಸುತ್ತಿದ್ದಳು: “ಹಾಕಿರ್ ಸೈ ತಗಳೇ! ಈಗ್ಯಾರ್ ಬರ್ತ ನಮ್ಮನಿಗೆ? ಎಲ್ಲರ ಕೂದ್ಲೂ ಉದುರ್ತು!” ಹಾಗನ್ನುತ್ತಾ ಅಜ್ಜಿ ತನ್ನ ತಲೆಕೂದಲ ಶಿಂಬಿಯನ್ನು ಚಿಲಕದಿಂದ ಎತ್ತಿಕೊಂಡು ಹೋಗಿ ಹೊರಗಡೆ ಎಸೆದು ಬರುತ್ತಿದ್ದಳು. ಅದನ್ನು ನಮ್ಮ ಮನೆಯಲ್ಲಿ ‘ಮಂಡೆಕಸ’ ಎಂದು ಕರೆಯಲಾಗುತ್ತಿತ್ತು.

ಅಜ್ಜಿಯ ಕೂದಲು ಎಷ್ಟು ಉದುರುತ್ತಿತ್ತು..! “ಥೋ, ಪಿತ್ತ ಕಾಣ್ತು! ಕಡಿತೂ ಅಂದ್ರೆ ಕಡಿತು! ಬಾಚ್‌ಕ್ಯಂಡ್ರೆ ಉದುರ್ತು! ಹಾಳ್ ಬೀಳ್ಳಿ!” -ತನ್ನ ತಲೆಕೂದಲಿಗೆ ತಾನೇ ಬೈದುಕೊಳ್ಳುತ್ತಿದ್ದಳು. ಅಜ್ಜಿ ಪ್ರತಿ ಸಂಜೆ, ಮದ್ದಿನ್ ಮೇಲಿನ್ ನಿದ್ದೆ ಮಾಡಿ ಎದ್ದಮೇಲೆ, ಒಂದು ನ್ಯೂಸ್‌ಪೇಪರ್ ಇಟ್ಟುಕೊಂಡು, ಹಿತ್ಲಕಡೆ ಮೆಟ್ಟಿಲ ಮೇಲೋ, ಹಾಲಿನ ನೆಲದ ಮೇಲೋ ಕೂತು, ತಲೆ ಬಾಚಿಕೊಳ್ಳುತ್ತಿದ್ದಳು. ಆಕೆ ತನ್ನ ಪ್ರಾಯದಲ್ಲಿ ಸಾಗರದ ಮಾರಿಜಾತ್ರೆಯಿಂದ ತಂದ ಸಣ್ಣ ಹೇನಿನ ಬಾಚಣಿಗೆ ಬಳಸುತ್ತಿದ್ದಳು. ಆ ಹಣಿಗೆಗೆ ಇಪ್ಪತ್ತಕ್ಕಿಂತಲೂ ಜಾಸ್ತಿ ವರ್ಷ ವಯಸ್ಸಾಗಿತ್ತು, ಅಜ್ಜಿಯ ತಲೆ ಬಾಚುವುದು ಅದಕ್ಕೆ ಕರ‘ತಲಾ'ಮಲಕವಾಗಿತ್ತು. ಕೆಂಪು-ಕಪ್ಪು ಬಣ್ಣವಿದ್ದ ಆ ಬಾಚಣಿಗೆ, ಅಜ್ಜಿಯ ತಲೆಗೂದಲು ಕಡುಗಪ್ಪು ಬಣ್ಣದಿಂದ ವಿರಳಗಪ್ಪು ಆಗತೊಡಗಿ ಕೊನೆಗೆ ಪೂರ್ತಿ ಬಿಳಿಯಾದುದಕ್ಕೆ ಸಾಕ್ಷಿಯಾಗಿತ್ತು. ಅದರೊಳಗೆ ಸಿಕ್ಕಿಕೊಂಡ ಕಸವನ್ನು ಅಜ್ಜಿ ಹದಿನೈದು ದಿನಕ್ಕೊಮ್ಮೆ ತನ್ನ ಬಳೆಗೆ ನೇತುಬಿಟ್ಟುಕೊಂಡಿರುತ್ತಿದ್ದ ಸೇಫ್ಟಿ ಪಿನ್ನಿನಿಂದ ತೆಗೆಯುತ್ತಿದ್ದಳು. ಹಾಗೆ ಚೊಕ್ಕಟಗೊಳಿಸಿದ ಬಾಚಣಿಗೆಯನ್ನು ತನ್ನ ಮಂಚದಲ್ಲಿ - ಹಾಸಿಗೆಯ ಕೆಳಗೆ ಜೋಪಾನ ಮಾಡಿ ಇಡುತ್ತಿದ್ದಳು. ಹಣಿಗೆ ಹಾಸಿಗೆಯಡಿ ಮರುಸಂಜೆಯವರೆಗೂ ಕುಂಭಕರ್ಣನಂತೆ ಬೆಚ್ಚಗೆ ನಿದ್ರೆ ಹೋಗುತ್ತಿತ್ತು.

ಊಟ ಮಾಡುವಾಗ ಒಮ್ಮೊಮ್ಮೆ ತಲೆಗೂದಲು ಸಿಕ್ಕಿಬಿಡುತ್ತಿತ್ತು. ಬಿಳಿ ಅನ್ನಕ್ಕೆ ಹುಳಿ ಹಾಕಿ ಕಲಸಿ ತುತ್ತು ಮಾಡಿ ಬಾಯ ಬಳಿ ತರುವಷ್ಟರಲ್ಲಿ ಅದು ತಟ್ಟೆಯಿಂದ ಬಾಯಿಯವರೆಗೂ ಬಾಲವಾಗಿ ಬಂದಿರುತ್ತಿತ್ತು. ಸಿಕ್ಕಿಬಿದ್ದ ಕಳ್ಳನಂತೆ ಅದನ್ನು ನೋಡಲಾಗುತ್ತಿತ್ತು. “ಏ ಏ ಏ..! ಯಾರದ್ದು ಇದು? ಬಿಳೀ ಕೂದ್ಲು! ಅಜ್ಜಿದೇಯ!” -ಸಿಕ್ಕಿಬಿದ್ದ ಕೂದಲನ್ನು ಕೈಯಲ್ಲಿ ಎತ್ತಿ ಹಿಡಿದು ಎಲ್ಲರಿಗೂ ತೋರಿಸಿ ಹೇಳುತ್ತಿದ್ದೆ. “ಓಹೊಹೋ! ಯಂದಂತು ಅಲ್ಲ. ಗೌರಿದೇ ಸೈ. ಆನು ಇವತ್ತು ಅಡುಗೆಮನೆ ಕಡೀಗೇ ಬರ್ಲೆ” -ಅಜ್ಜಿ ಅಮ್ಮನ ಮೇಲೆ ತಪ್ಪು ಹೊರಿಸುತ್ತಿದ್ದಳು. “ಹೂಂ! ಬಿಳೀ ಕೂದ್ಲು! ನೋಡಿರ್ ಕಾಣ್ತಲ್ಯಾ? ನಿಂಗ್ಳುದ್ದೇಯಾ! ಹಾರಿ ಬಂದು ಬಿದ್ದಿಕ್ಕು” -ಅಮ್ಮ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧಳಿರುತ್ತಿರಲಿಲ್ಲ. ಆ ಕೂದಲು ಅಪ್ಪನ ಬಾಳೆಯಲ್ಲೇನಾದರೂ ಸಿಕ್ಕಿದ್ದರೆ ಅವನು ಸಿಟ್ಟು ಮಾಡಿಕೊಂಡು ಅದಿಷ್ಟೂ ಅನ್ನವನ್ನು ಬಿಟ್ಟು ಬೇರೆ ಬಾಳೆ ಹಾಕಿಸಿಕೊಳ್ಳುತ್ತಿದ್ದ ಅಥವಾ ಆ ಹೊತ್ತು ಊಟವನ್ನೇ ಬಿಟ್ಟುಬಿಡುತ್ತಿದ್ದ. ಅಜ್ಜಿಗೋ ಅಮ್ಮನಿಗೋ ಹಾಗೆ ಕೂದಲು ಸಿಕ್ಕಿದರೆ ಅವರು ಯಾರಿಗೂ ಹೇಳುತ್ತಲೇ ಇರಲಿಲ್ಲ; ಸುಮ್ಮನೆ ತೆಗೆದಿಟ್ಟುಬಿಡುತ್ತಿದ್ದರು. ನನಗೆ ಸಿಕ್ಕಿದ್ದರಿಂದ ಎಲ್ಲರಿಗೂ ತೋರಿಸಿ, ಅಜ್ಜಿ-ಅಮ್ಮರನ್ನು ವಾದಕ್ಕೆ ಹಚ್ಚಿಸಿ, ಗೊಂದಲದ ವಾತಾವರಣ ಸೃಷ್ಟಿಸಿ, ಮಜಾ ತೆಗೆದುಕೊಳ್ಳುತ್ತಾ ನಾನು ಊಟ ಮುಂದುವರೆಸುತ್ತಿದ್ದೆ. ಸಿಕ್ಕಿಬಿದ್ದದ್ದು ಕರೀ ಕೂದಲು ಮತ್ತು ಸಣ್ಣ ಗಾತ್ರದ್ದು ಅಂತಾದರೆ ಮಾತ್ರ ತೊಂದರೆ ಜಾಸ್ತಿಯಾಗುತ್ತಿತ್ತು. ಏಕೆಂದರೆ, ಆಗ ಅಮ್ಮನೊಂದಿಗೆ ಅಪ್ಪ ಮತ್ತು ನಾನು -ಇಬ್ಬರೂ ತಪ್ಪಿತಸ್ಥರ ಗುಂಪು ಸೇರುತ್ತಿದ್ದೆವು!

ಅಮ್ಮನ ಕೂದಲೂ ಸಿಕ್ಕಾಪಟ್ಟೆ ಉದುರುತ್ತಿತ್ತು. ಅಮ್ಮ ಅದಕ್ಕೆ ಸಾಕಷ್ಟು ಪ್ರಯೋಗಗಳನ್ನೂ ಮಾಡುತ್ತಿದ್ದಳು. ಸೋಪು ಬದಲಿಸಿ ನೋಡಿದಳು, ಶೀಗೆಕಾಯಿ ಬಳಸಿ ನೋಡಿದಳು, ಕಡ್ಲೆಹಿಟ್ಟು ಹಚ್ಚಿಕೊಂಡು ನೋಡಿದಳು.. ಆದರೂ ‘ಹೇರ್ಪಾತ’ ಮುಂದುವರೆದೇ ಇತ್ತು. “ಹಿಂಗೇ ಉದುರ್ತಾ ಇದ್ರೆ ಒಂದ್ ದಿನ ಬೋಳ್ ಮಂಡೆ ಆಗ್ತೇನ ಅಪ್ಪೀ ನಂದು! ಹೊರಬೈಲಗೆ ಒಬ್ಳಿಗೆ ಹಂಗೇ ಆಯ್ದಡ ಪಾಪ!” ಎನ್ನುತ್ತಿದ್ದಳು ನನ್ನ ಬಳಿ. ಭಾಗ್ಯತ್ಗೆ ಮನೆಯಲ್ಲಿದ್ದಾಗಲಂತೂ ದಿನಕ್ಕೊಂದು ಹೆಸರಿನ ಶ್ಯಾಂಪೂ ತಂದು ನನ್ನ ಅಮ್ಮನಿಗೆ ಕೊಡುತ್ತಿದ್ದಳು. ಅಮ್ಮನಿಗೆಂದು ತಂದ ಶ್ಯಾಂಪೂವನ್ನು ತಾನೇ ಹೆಚ್ಚಾಗಿ ಬಳಸುತ್ತಿದ್ದಳು. ಮತ್ತೆ ಆಗ, ಒಂದು ಕಡೆ ಕಿವಿ ಕತ್ತರಿಸಿಕೊಂಡು ಬಚ್ಚಲು ಮನೆಯ ಗೂಡಿನಲ್ಲಿ ಸುಂದರಿಯಂತೆ ನಿಂತು ಕಂಗೊಳಿಸುತ್ತಾ ನನ್ನ ಚಿತ್ತವನ್ನಾಕರ್ಷಿಸುತ್ತಿದ್ದ ಆ ಬಣ್ಣ ಬಣ್ಣದ ಪಳಪಳನೆ ಹೊಳೆಯುವ ಶ್ಯಾಂಪೂ ಸ್ಯಾಚೆಟ್ಟುಗಳನ್ನು, ಅತ್ತಿಗೆಗಾಗಲೀ ಅಮ್ಮನಿಗಾಗಲೀ ಗೊತ್ತಾಗದಂತೆ ಮೃದುವಾಗಿ ಒತ್ತಿ, ಅದರೊಡಲ ಬಿಳೀ ದ್ರವವನ್ನು ಚೂರೇ ಚೂರು ಕೈಗೆ ಹಾಕಿಕೊಂಡು ಮೂಸಿ ನೋಡಿ ತಲೆಗೆ ತಿಕ್ಕಿಕೊಂಡು ನೊರೆ ನೊರೆ ನೊರೆ ಬರಿಸಿಕೊಂಡು ನೀರು ಹೊಯ್ದುಕೊಂಡು ಮಜಾ ಮಾಡುವ ಯೋಗ ನನ್ನದಾಗುತ್ತಿತ್ತು.

ಅಪ್ಪ ಎರಡು ತಿಂಗಳಿಗೊಮ್ಮೆ ಉಳವಿಗೆ ನನ್ನನ್ನು ಚೌರ ಮಾಡಿಸುವ ಸಲುವಾಗಿ ಸೈಕಲ್ಲಿನಲ್ಲಿ ಕರೆದೊಯ್ಯುತ್ತಿದ್ದ. ನನ್ನನ್ನು ರಾಜುವಿನ ಚೌರದಂಗಡಿಯಲ್ಲಿ ಬಿಟ್ಟು, ತಾನು ಅಕ್ಕಿಹಿಟ್ಟು ಮಾಡಿಸಿಕೊಂಡು ಅರ್ಧಗಂಟೆಯಲ್ಲಿ ಬರುವುದಾಗಿ ಹೇಳಿ ಹೋಗಿಬಿಡುತ್ತಿದ್ದ. ನಾನು ಕುಳಿತ ಬೆಂಚಿನಲ್ಲಿ ಇನ್ನೂ ಅನೇಕರು ತಮ್ಮ ಸರತಿ ಕಾಯುತ್ತಾ, ಪೇಪರ್ರೋದುತ್ತಾ ಕೂತಿರುತ್ತಿದ್ದರು. ಚುಕುಚುಕು ಸದ್ದು ಮಾಡುತ್ತಾ ರಾಜುವಿನ ಕತ್ತರಿ ಕನ್ನಡಿ ಮುಂದೆ ಕೂತವನ ತಲೆಯ ಮೇಲೆ ಓಡಾಡುತ್ತಿತ್ತು. ಹಾಗೆ ಕೂತವನ ತಲೆಗೂದಲು ಆ ಕುರ್ಚಿಯ ಸುತ್ತಲೂ, ಅವನ ಮೈಮೇಲೆ ಹೊಚ್ಚಿದ ಬಿಳೀ ವಸ್ತ್ರದ ಮೇಲೂ ಬಿದ್ದಿರುತ್ತಿತ್ತು. ಜಾಹೀರಾತುಗಳಲ್ಲಿ ಹೇಳುವ ‘ಕೇಶರಾಶಿ’ ಎಂಬ ಪದ ಬಹುಶಃ ಇದನ್ನು ನೋಡಿಯೇ ಚಾಲ್ತಿಗೆ ಬಂದದ್ದೇನೋ ಎಂದು ನಾನು ಅಂದುಕೊಳ್ಳುತ್ತಿದ್ದೆ. ಚೌರದಂಗಡಿಯ ಮೂಲೆಯಲ್ಲಿ ಒಂದು ಸಿಮೆಂಟಿನ ಚೀಲದ ತುಂಬಾ ವಾಕರಿಕೆ ಬರುವಷ್ಟು ಕೂದಲಿರುತ್ತಿತ್ತು. ಅದನ್ನು ಏನು ಮಾಡುತ್ತಾರೆ ಎಂದು ನನಗೆ ಚಿಂತೆಯಾಗುತ್ತಿತ್ತು. ಕನ್ನಡಿ ಮುಂದೆ ಕೂತಿದ್ದವನ ಚೌರ ಮುಗಿದು, ಅವನು ದರ್ಪದಿಂದೆಂಬಂತೆ ಎರಡ್ಮೂರು ಸಲ ‘ಎಲ್ಲಾ ಸರಿಯಾಗಿದೆಯೇ?’ ಎಂದು ಸಾವಿರ ಬಿಂಬಗಳಲ್ಲಿ ತನ್ನನ್ನು ನೋಡಿಕೊಂಡು, ಥೇಟು ರಾಜಕುಮಾರನಂತೆ ಸಿಂಹಾಸನದಿಂದ ಇಳಿದು ಹೋಗುತ್ತಿದ್ದಂತೆಯೇ, ಮತ್ತೊಬ್ಬ ಗದ್ದುಗೆ ಏರುತ್ತಿದ್ದ.

ಬಹಳ ಸಲ, ಅಪ್ಪ ವಾಪಸು ಬರುವವರೆಗೂ ರಾಜು ನನ್ನನ್ನು ಚೌರಕ್ಕೆ ಕರೆಯುತ್ತಲೇ ಇರಲಿಲ್ಲ. ‘ದೊಡ್ಡ ದೊಡ್ಡ’ ಜನಗಳೆಲ್ಲ ಬರುತ್ತಲೇ ಇರುತ್ತಿದ್ದುದರಿಂದ, ಸಣ್ಣಕಿದ್ದ ನಾನು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೆ. “ಅಪ್ಪ ಬರೂದು ಇನ್ನೂ ತಡ ಇತ್ತಲ ಮಾಣೀ? ನಿಂದು ಇವ್ರುದ್ದಾದ್ಮೇಲ್ ಮಾಡ್ತೆ” -ಎಂದು ರಾಜು ಮತ್ಯಾರನ್ನೋ ಕರೆದುಬಿಡುತ್ತಿದ್ದ. ಕಾದೂ ಕಾದೂ ನನಗಂತೂ ಆಕಳಿಕೆ ಬರುತ್ತಿತ್ತು. ಅಪ್ಪ ಬಂದು, “ಏ, ಒಂದು ತಾಸು ಆಯ್ತಲಾ ರಾಜೂ ಇವನ್ನ ಬಿಟ್ ಹೋಗಿ? ಬೇಗ ಕಟಿಂಗ್ ಮಾಡಿ ಕಳ್ಸು ಮಾರಾಯಾ” ಎಂದಮೇಲೆ, ನನಗೆ ಸಿಂಹಾಸನವೇರುವ ಅವಕಾಶ ಸಿಗುತ್ತಿತ್ತು. ರಾಜು, ತನ್ನ ಒಂದು ಕೈಯಲ್ಲಿ ಬಾಚಣಿಗೆ - ಮತ್ತೊಂದು ಕೈಯಲ್ಲಿ ಕತ್ತರಿ ಹಿಡಿದು, ಅಷ್ಟೆಲ್ಲಾ ಬುದ್ಧಿ, ದಡ್ಡತನ, ಯೋಚನೆ, ಭಾವನೆ ತುಂಬಿದ್ದ ನನ್ನ ತಲೆಯನ್ನು, ಯಕಃಶ್ಚಿತ್ ಒಂದು ಚೆಂಡಿನಂತೆ ಹೇಗೆ ಬೇಕೆಂದರೆ ಹಾಗೆ ಆಡಿಸುತ್ತಿದ್ದ. ಚೌರ ಮುಗಿದು ಅಪ್ಪ ದುಡ್ಡು ಕೊಡುವಾಗ, ನನ್ನ ತಲೆಕೂದಲೂ ಆ ಕೆಳಗೆ ಬಿದ್ದಿದ್ದ ಕೇಶರಾಶಿಯಲ್ಲಿ ಒಂದಾದುದನ್ನು ನೋಡುತ್ತಾ ಕ್ಲೇಶ ಮನಸ್ಸಿನಿಂದ ಸೈಕಲ್ಲೇರುತ್ತಿದ್ದೆ.

ಬೆಂಕಟವಳ್ಳಿಯಲ್ಲಿ ನನ್ನ ಅಜ್ಜ ಸತ್ತ ಸುದ್ದಿ ಬಂದಾಗ ಶಾಲೆಯಿಂದ ನೇರವಾಗಿ ಅಲ್ಲಿಗೆ ಹೋದೆ. ಹಿತ್ಲಕಡೆ ಲಾಯದಲ್ಲಿ ಅಮ್ಮ, ಅಜ್ಜಿ, ನೆಂಟರು, ಊರ ಹೆಂಗಸರು -ಎಲ್ಲಾ ಕೂತಿದ್ದರು. ಅಜ್ಜಿ ಅಳುತ್ತಿದ್ದಳು. ತುಂಬಾ ಸಂಪ್ರದಾಯಸ್ಥೆಯಾಗಿದ್ದ ನನ್ನ ಅಜ್ಜಿ, ತಾನು ಕೇಶಮುಂಡನ ಮಾಡಿಸಿಕೊಳ್ಳುವುದಾಗಿ, ‘ಮಡಿ’ ಮಾಡಿಕೊಳ್ಳುವುದಾಗಿ ಹಟಕ್ಕೆ ಬಿದ್ದಿದ್ದಳು. “ಈಗಿನ ಕಾಲದಲ್ಲಿ ಹಂಗೆಲ್ಲ ಯಾರೂ ಮಾಡ್‌ಸ್ಕ್ಯಳದಿಲ್ಲೆ. ಮಳ್ಳನು ನಿಂಗೆ?” ಎಂದು ಹೆಂಗಸರೆಲ್ಲಾ ಬೈದು ಸಮಾಧಾನ ಮಾಡಿದರು. ಅವರು ಆಡಿಕೊಳ್ಳುತ್ತಿದ್ದ ಮಾತುಗಳು ನನಗೆ ಸರಿಯಾಗಿ ಅರ್ಥವಾಗದೇ, ಅಮ್ಮನ ಬಳಿ ಹೋಗಿ “ಅಮ್ಮಾ ಅಜ್ಜಿಗೆ ಎಂಥ ಮಾಡ್ತ್ವಡ?” ಎಂದು ಕೇಳಿದೆ. “ಎಂಥೂ ಇಲ್ಲೆ. ಅವ್ಳಿಗೆ ಮುತ್ತಜ್ಜಿಗೆ ಇತ್ತಲಾ, ಹಂಗೇ ಬೋಳುಮಂಡೆ ಮಾಡ್ಕ್ಯಳವು ಅಂತ ಇತ್ತಡ, ನಾವೆಲ್ಲ ಬ್ಯಾಡ ಅಂದ್ಯ” ಎಂದಳು ಅಮ್ಮ. ಅಜ್ಜಿಯ ಜಡೆಯನ್ನೇ ಕತ್ತರಿಸಿ, ತಲೆ ಬೋಳಿಸಿಬಿಟ್ಟರೆ... ಆಹ್! ಅದೆಷ್ಟು ಭೀಕರವಾಗಿ ಕಾಣಬಹುದೆಂದು ಕಲ್ಪಿಸಿಕೊಂಡು ನಾನು ಹೆದರಿ ಹೊರಗೆ ಓಡಿಬಂದುಬಿಟ್ಟೆ. ಅಷ್ಟರಲ್ಲಾಗಲೇ ತಲೆ ಬೋಳಿಸಿಕೊಂಡು ಸ್ನಾನಕ್ಕೆ ಹೊರಟಿದ್ದ ಮಾವಂದಿರು “ಗುಂಡಾ, ಶಾಲೆಯಿಂದ ಬಂದ್ಯಾ? ಅಜ್ಜ ಹೋಗ್ಬುಟ!” ಎಂದರು.

ಬೆಂಗಳೂರಿಗೆ ಬಂದು ಜಾಬಿಗಾಗಿ ಅಲೆಯುತ್ತಿದ್ದೆ. ತಿಂಗಳಾದರೂ ಸಿಕ್ಕಿರಲಿಲ್ಲ. ‘ಹೆದ್ರಿಕೆ ಆಗೋ ಹಾಗೆ ಕಾಣ್ತಿದೀಯ. ನಾಳೆ ಯಾವುದೋ ಒಳ್ಳೇ ಕಂಪನೀಲಿ ಇಂಟರ್‌ವ್ಯೂ ಇದೆ ಅಂತ ಬೇರೆ ಹೇಳ್ತಿದೀಯ. ಹೋಗಿ ಕಟಿಂಗ್ ಆದ್ರೂ ಮಾಡಿಸ್ಕೊಂಡು ಬಾ’ ಎಂದರು ನಾನು ಉಳಿದುಕೊಂಡಿದ್ದ ನೆಂಟರ ಮನೆಯವರು. ಹೊರಟೆ. ‘ಮಾಡರ್ನ್ ಜೆಂಡ್ಸ್ ಸಲೂನ್’ -ಬೋರ್ಡು ಕಣ್ಣಿಗೆ ಬಿತ್ತು. ‘ಹೂಂ, ನಾನೂ ಮಾಡರ್ನ್ ಜೆಂಡ್ಸೇ’ ಎಂದುಕೊಂಡು ಶಾಪಿನ ಒಳಹೊಕ್ಕೆ. ಎಲ್ಲೆಲ್ಲೂ ಗ್ಲಾಸು, ಕನ್ನಡಿ. ಕಟಿಂಗ್ ಮಾಡಿಸಿಕೊಳ್ಳುತ್ತಿದ್ದವರು, ಡೈ ಮಾಡಿಸಿಕೊಳ್ಳುತ್ತಿದ್ದವರು, ಮುಖಕ್ಕೆ ಬೆಳ್ಳಗೆ ಏನನ್ನೋ ಮೆತ್ತಿಸಿಕೊಂಡು ಕೂತಿದ್ದವರು, ತಲೆಗೆ ಪರಿಮಳದೆಣ್ಣೆ ಹಾಕಿಸಿಕೊಂಡು ತಟ್ಟಿಸಿಕೊಳ್ಳುತ್ತಿದ್ದವರು... ನಾನೂ ಸಿಂಹಾಸನವನ್ನೇರಿ ಕೂತೆ.

ಇನ್‌ಶರ್ಟ್ ಮಾಡಿದ್ದ ಕಟಿಂಗ್‌ನವ “ಸಾರ್, ಶಾರ್ಟಾ ಮೀಡಿಯಮ್ಮಾ?” -ಕೇಳಿದ.
“ಊಮ್.. ಮೀಡಿಯಮ್ಮೇ ಇರ್ಲಿ” -ಉತ್ತರಿಸಿದೆ.
“ಲಾಕ್ ಬಿಡ್ಲಾ ಸರ್?”
“ಏನ್ರೀ ಅದು?”
“ಲಾಕು ಸರ್.. ಕಿವಿ ಪಕ್ಕ.. ಉದ್ದಕೆ..?” ಕತ್ತರಿಯನ್ನು ಕಿವಿಯ ಪಕ್ಕ ಆಡಿಸುತ್ತಾ ಕೇಳಿದ.
ನನಗೆ ಕಚಗುಳಿಯಾದಂತಾಗಿ “ರೀ, ಲಾಕೂ ಬ್ಯಾಡ ಕೀನೂ ಬ್ಯಾಡ! ಸುಮ್ನೇ ಕಟಿಂಗ್ ಮಾಡ್ರೀ!” ರೇಗಿದೆ.
“ಸರ್ ಶೇವಿಂಗೂ ಮಾಡ್ಲಾ?” ಕೇಳಿದ.
“ಹೂಂ ಮಾಡಿ” ಎಂದೆ.

ಹತ್ತು ನಿಮಿಷದಲ್ಲಿ ಎಲ್ಲಾ ಮುಗಿದು ಕೆಳಗಿಳಿದೆ. ಜೇಬಿನಿಂದ ಐವತ್ತರ ನೋಟು ತೆಗೆದು “ಹೆಹ್ಹೆ! ಛೇಂಜ್ ಇಲ್ಲ..” ಎನ್ನುತ್ತಾ ಕೊಟ್ಟೆ. ಅವನು ಐದು ರೂಪಾಯಿ ವಾಪಸು ಕೊಟ್ಟ. ಮತ್ತೊಬ್ಬರನ್ನು ಕುರ್ಚಿಗೆ ಕರೆದ. ನಾನು ನಿಂತೇ ಇದ್ದೆ. ಅವನು ನನ್ನನ್ನು ನೋಡಿದ. “ಮತ್ತೇನಾದ್ರೂ ಆಗ್ಬೇಕಿತ್ತಾ ಸಾರ್?” ಕೇಳಿದ. “ಏನಿಲ್ಲ, ಛೇಂಜ್ ಬರೀ ಐದು ರೂಪಾಯಿ ಕೊಟ್ರಿ..?” ಎಂದೆ. “ಸರಿ ಆಯ್ತಲ್ಲಾ ಸಾರ್! ಕಟಿಂಗು - ಶೇವಿಂಗು: ಫಾರ್ಟಿಫೈವ್ ರುಪೀಸ್!” ಮರುಮಾತಾಡದೇ ಹಿಂತಿರುಗಿ ಹೊರಟೆ. ‘ರಾಜು ಶಾಪಿನ ಏಳು ರೂಪಾಯಿ ಎಲ್ಲಿ, ಈ ನಲವತ್ತೈದು ರೂಪಾಯಿ ಎಲ್ಲಿ? ಅಬ್ಬಾ ಬೆಂಗಳೂರೇ!’ -ಎಂದುಕೊಳ್ಳುತ್ತಾ ತಲೆದೂಗಿದೆ. “ನಿಂಗೆ ಎಷ್ಟ್ ತಲೆ ಇದೆ! ಬೆಂಗ್ಳೂರಿಗೆ ಹೋದ್ರೆ ಏನಾದ್ರೂ ಒಂದು ಮಾಡಿ ದುಡ್ಡು ಮಾಡ್ತೀಯಾ ಬಿಡು” ಎಂದು ನಾನು ಇಲ್ಲಿಗೆ ಹೊರಡುವ ಮುನ್ನ ಕೆಲ ಗೆಳೆಯರು ಹೇಳಿದ್ದು ನೆನಪಾಯಿತು. ನಿಜಕ್ಕೂ ನನ್ನ ತಲೆಯ ಬೆಲೆ ನನಗೆ ಗೊತ್ತಾದದ್ದು ಈಗಲೇ! ‘ಹೌದಪ್ಪಾ ಹೌದು!’ ಎಂದುಕೊಂಡೆ. ಇನ್ನು ಈ ಬೆಂಗಳೂರಿನಲ್ಲಿ ಇಂತಹ ಅದೆಷ್ಟು ‘ಚೌರ’ ಮಾಡಿಸಿಕೊಳ್ಳಬೇಕಿದೆಯೋ ಎಂದುಕೊಳ್ಳುತ್ತಾ, ನಾಳೆಯ ಕೆಲಸವಾದರೂ ಆದರೆ, ಕನಿಷ್ಟ ಚೌರಕ್ಕೆ ಸಾಕಾಗುವಷ್ಟು ಸಂಬಳವನ್ನಾದರೂ ಅವರು ಕೊಟ್ಟರೆ ಸಾಕಪ್ಪಾ ಎಂದು ಆಶಿಸುತ್ತಾ, ನೆಂಟರ ಮನೆ ದಾರಿ ಹಿಡಿದೆ.

Tuesday, May 20, 2008

ವರ್ಷ ಬರೆದ ಕವನ ಮತ್ತು...

ನನ್ನ ಅತ್ತೆಯ ಮಗಳು ವರ್ಷ, ಹೊಸನಗರದ ರಾಮಚಂದ್ರಾಪುರ ಮಠದವರು ನಡೆಸುವ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಾಳೆ. ಈಗವಳು ಎಂಟನೇ ತರಗತಿ. ಇತ್ತೀಚೆಗೆಲ್ಲೋ ಅತ್ತೆ ಮನೆಗೆ ಫೋನಿಸಿದ್ದಾಗ ಪತ್ರಿಕೆಯೊಂದರಲ್ಲಿ ಪ್ರಕಟವಾದ ನನ್ನ ಕತೆಯ ಬಗ್ಗೆ ಮಾತನಾಡುತ್ತಾ ಅತ್ತೆ “ಏ ನಮ್ಮನೆ ಪುಟ್ಟಿಯೂ ಕವನ ಬರದ್ದೋ” ಎಂದಳು. ತಕ್ಷಣ excite ಆದ ನಾನು “ಓಹ್ ಎಂಥ ಬರದ್ಲೇ? ಓದಿ ಹೇಳು ನೋಡನ” ಎಂದೆ. ಆದರೆ ಅತ್ತೆ ಅದು ತನ್ನ ಬಳಿ ಈಗ ಇಲ್ಲವೆಂದೂ, ಈ ವಾರದಲ್ಲಿ ಒಮ್ಮೆ ಫೋನ್ ಮಾಡಿ ಕೊಡುವುದಾಗಿಯೂ ಹೇಳಿ ಫೋನಿಟ್ಟಳು.

ಹಾಗೆ ಆಶ್ವಾಸನೆಯಿತ್ತ ಅತ್ತೆ ಮತ್ತೆ ಫೋನ್ ಮಾಡಲೇ ಇಲ್ಲ. ಮೊನ್ನೆ ಕೆಂಡಸಂಪಿಗೆಯಲ್ಲಿ ‘ಮಕ್ಕಳ ಸಂಪಿಗೆ’ ಎಂಬ ಹೊಸ section ಶುರುವಾಗಿರುವುದು ಕಣ್ಣಿಗೆ ಬಿತ್ತು. ಅದಕ್ಕೆ ವರ್ಷ ಬರೆದ ಕವನವನ್ಯಾಕೆ ಕಳುಹಿಸಬಾರದು ಎಂಬಾಲೋಚನೆ ಬಂದು ಮತ್ತೆ ನಾನೇ ಅತ್ತೆ ಮನೆಗೆ ಫೋನಿಸಿದೆ. ಅದೃಷ್ಟಕ್ಕೆ ವರ್ಷಳಿಗೆ ಈಗ ರಜೆ ಶುರುವಾಗಿ ಮನೆಗೆ ಬಂದಿದ್ದರಿಂದ ಅವಳೇ ಫೋನಿಗೆ ಸಿಕ್ಕಿದಳು. ಹೆಂಗಿದ್ದೆ, ಏನು, ಎಂತು, ಎಷ್ಟ್ ದಿನ ರಜ, ಎಲ್ಲಾ ಮುಗಿದ ಮೇಲೆ “ಏಯ್ ಅದೆಂಥೋ ಕವನ ಬರದ್ಯಡಲೇ ನೀನು, ಕೊಡು ನೋಡನ, ನಾನು ಅದನ್ನ ಇಲ್ಲಿ publish ಮಾಡುಸ್ತಿ” ಅಂತ ಕೇಳಿದೆ.

ಸ್ವಲ್ಪ ಸಮಯದ ಬಳಿಕ ಫೋನಿಸಿದ ವರ್ಷ ತಾನು ಬರೆದ ಹನಿಗವನಗಳನ್ನು ಓದಿ ಹೇಳಿದಳು. ನಾನು ಬರೆದುಕೊಂಡೆ:


ನನ್ನನ್ನು ಸೃಷ್ಟಿಸಿದ ಭಗವಂತ, ಸಾರಿ
ಬ್ರಹ್ಮಾಂಡವೆಂಬ ಮಾಯಾಜಾಲದಲಿ ಬಿದ್ದೆ ಜಾರಿ
ಅಲ್ಲಂತೂ ಸೋತುಹೋದೆ ಬಾರಿ ಬಾರಿ
ಮತ್ತೆ ನಿನ್ನಲ್ಲಿ ಬರಲು ಮರೆತೆ ದಾರಿ


ರಂಗಾ, ನಾನೇನು ಮಾಡಿದೆ?
ನನ್ನನ್ನು ಏಕೆ ಭುವಿಗೆ ತಂದೆ?
ಈಗ ನೀನು ನನಗೆ ಕಾಣದಾದೆ
ಆದಷ್ಟು ಬೇಗ ನೀನು ದೊರಕಬಾರದೆ?


ನಮ್ಮೆಲ್ಲರ ತಾಯಿ ಗೋವು
ಇದನ್ನು ರಕ್ಷಿಸಬೇಕು ನಾವು
ರಕ್ಷಿಸದಿದ್ದರೆ ಆಕೆಗಾಗುವುದು ನೋವು
ಆಕೆಗೆ ನೋವಾದರೆ ನಮಗೆ ಬರುವುದು ಸಾವು

* *

ವರ್ಷ ಬರೆದ ಕವನಗಳನ್ನು ಕೇಳಿ ನನಗೆ ಅದೆಷ್ಟು ತಲೆಬಿಸಿಯಾಯಿತೆಂದರೆ, “ಪುಟ್ಟೀ, ನೀನೀಗ ಎಷ್ಟನೇ ಕ್ಲಾಸು?” ಅಂತ ಮತ್ತೊಮ್ಮೆ confirm ಮಾಡಿಕೊಳ್ಳುವ ಸಲುವಾಗಿ ಕೇಳಿದೆ. “ಎಂಟು ಮಾರಾಯಾ” ಎಂದಳು. “ಸರಿ, ನಾನು ಮತ್ತೆ ಫೋನ್ ಮಾಡ್ತಿ” ಅಂತಂದು ಕಟ್ ಮಾಡಿಬಿಟ್ಟೆ. ಕೆಂಡಸಂಪಿಗೆಗೆ ಕಳುಹಿಸುವ ಆಲೋಚನೆಯನ್ನೇ ಕೈಬಿಟ್ಟೆ.

ನನಗೆ ಅದೆಷ್ಟು ಆತಂಕವಾಯಿತೆಂದರೆ, ಒಬ್ಬ ಎಂಟನೇ ತರಗತಿಯ ಹುಡುಗಿ ಬರೆಯಬಹುದಾದ ಕವನಗಳಾ ಇವು? ಹದಿಮೂರು-ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯೊಬ್ಬಳು ಚಿಂತಿಸಬಹುದಾದ ವಿಷಯಗಳೇ ಅವಳ ಕವನದ ವಸ್ತು?

ಈಗ ಮೂರು ವರ್ಷದ ಹಿಂದೆ ವರ್ಷಳನ್ನು ಗುರುಕುಲಕ್ಕೆ ಸೇರಿಸುವ ಪ್ರಸ್ತಾಪ ಬಂದಾಗ object ಮಾಡಿದವರಲ್ಲಿ ನಾನೂ ಒಬ್ಬ. ಮಕ್ಕಳನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯರಿಂದ ದೂರ ಮಾಡಿ ಬೇರೆಲ್ಲೋ ಇಟ್ಟು ಬೆಳೆಸುವುದು ಸರಿಯಲ್ಲ ಎಂಬುದು ನನ್ನ ವಾದವಾಗಿತ್ತು. ಮಕ್ಕಳು, ಕನಿಷ್ಟ ಹದಿನಾಲ್ಕು-ಹದಿನೈದು ವರ್ಷ ವಯಸ್ಸಿನವರೆಗಾದರೂ ಮನೆಯವರೊಂದಿಗೆ ಇದ್ದು ಬೆಳೆಯಬೇಕು. ತೀರಾ ಅನಿವಾರ್ಯವಿದ್ದರೆ ಸರಿ. ಊರಲ್ಲಿ ಓದಿಸಲಿಕ್ಕೆ ಅವಕಾಶವಿಲ್ಲದಿದ್ದರೆ, ಶಾಲೆ ಇಲ್ಲದಿದ್ದರೆ, ಅಥವಾ ಆರ್ಥಿಕ ದೌರ್ಬಲ್ಯ ಇದ್ದರೆ ಹೀಗೆ ಮಠದಲ್ಲಿ ಬಿಡುವುದೋ, ಯಾರಾದರೂ ಓದಿಸಲು ಮುಂದೆ ಬಂದರೆ ಅವರ ಮನೆಯಲ್ಲಿ ಬಿಡುವುದೋ, ಏನಾದರೂ ಮಾಡುವುದು ಅನಿವಾರ್ಯ.

ಆದರೆ ವರ್ಷಳ ಸಂದರ್ಭದಲ್ಲಿ ಅಂತಹ ಸಮಸ್ಯೆಯೇನೂ ಇರಲಿಲ್ಲ. ಅಲ್ಲದೇ ರಾಮಚಂದ್ರಾಪುರ ಮಠದ ಗುರುಕುಲವೂ ಅದಾಗ ತಾನೇ ಪ್ರಾರಂಭವಾಗಿದ್ದಾದ್ದರಿಂದ ನನಗಂತೂ ಅದರ ಕಾರ್ಯಕ್ಷಮತೆಯ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಅವನ್ನೆಲ್ಲ ಅತ್ತೆಯ ಬಳಿ ಹೇಳಿಕೊಂಡರೆ, ಅತ್ತೆ ಒಪ್ಪಲೇ ಇಲ್ಲ. “ಇಲ್ಲೆ, ಅಲ್ಲಿ high quality education ಕೊಡ್ತ್ವಡ. ಅಲ್ಲೇನು ಬಡವರ ಮಕ್ಕಳು ಮಾತ್ರ ಇಲ್ಲೆ; ತುಂಬಾ ಶ್ರೀಮಂತರು ಸಹ ತಮ್ಮ ಮಕ್ಕಳನ್ನ ಬಿಟ್ಟಿದ.. Free ಏನೂ ಅಲ್ಲ; fees ಕಟ್ಟವು. ತುಂಬಾ strict ಆಗಿ ನೆಡಸ್ತ್ವಡ. ವ್ಯವಸ್ಥೆಯೂ ಎಲ್ಲಾ ಚೊಲೋ ಇದ್ದಡ. ನಮ್ಮಲ್ ಇವ್ರು (ಅಂದರೆ ನನ್ನ ಮಾವ) ಹೋಗಿ ನೋಡ್ಕ್ಯಂಡ್ ಬೈಂದ. ಮೊದ್ಲು parents interview ಸಹ ತಗಳ್ತ್ವಡ. ನಮ್ಮನೆ ಕೂಸಿನ್ನ ಸೇರ್ಸದೇ ಸೈ” ಎಂದಳು. ಅಷ್ಟೆಲ್ಲಾ ಇದ್ದಮೇಲೆ ಚೆನ್ನಾಗಿಯೇ ಇರಬಹುದು ಅಂತ ನಾನೂ ಸುಮ್ಮನಾದೆ.

ಅದಾಗಿ ಒಂದು ವರ್ಷದ ನಂತರ ನಾನೊಮ್ಮೆ ಊರಿಗೆ ಹೋಗಿದ್ದಾಗ, ಅಮ್ಮನೊಂದಿಗೆ ಮಠಕ್ಕೆ ಹೋಗುವ ಪ್ರಸಂಗ ಬಂತು. ’ಪುಟ್ಟಿಯನ್ನೂ ನೋಡಿದಂತಾಯಿತು’ ಅಂತ ನಾನೂ ಖುಶಿಯಿಂದಲೇ ಹೊರಟೆ. ಮಠ ತಲುಪಿ, ಗುರುಕುಲ ಎಲ್ಲಿದೆ ಅಂತ ಹುಡುಕಿ ಹೊರಟರೆ ಅಲ್ಲಿ ಏನಿದೆ? ಗುಡಿಸಲುಗಳಂತೆ ಕಟ್ಟಿ ಬಿಸಾಕಿದ ಐದಾರು ಶೆಡ್ಡುಗಳು. ಪಂಚೆ ಉಟ್ಟು, ಶಲ್ಯ ಹೊದ್ದು, ವಿಭೂತಿ ಬಳಿದುಕೊಂಡು ವಟುಗಳಂತೆ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರುವ ಒಂದಷ್ಟು ಗಂಡು ಮಕ್ಕಳು. ಲಂಗ-ದಾವಣಿ ಧರಿಸಿ ಓಡಾಡುತ್ತಿರುವ ಹೆಣ್ಣು ಮಕ್ಕಳು.. ’ಇಲ್ಲಿ ವರ್ಷ ಅನ್ನೋ ಹುಡುಗಿ ಎಲ್ಲಿರ್ತಾಳೆ?’ ಅಂತ ಯಾರೋ ಹುಡುಗರನ್ನು ಕೇಳಿದೆವು. ಅವರು ಒಂದು ಗುಡಿಸಲನ್ನು ತೋರಿಸಿದರು. ಹಿಂದಿನ ದಿನ ಜೋರು ಮಳೆ ಹೊಯ್ದಿದ್ದರಿಂದ ಅಲ್ಲೆಲ್ಲಾ ಪೂರ್ತಿ ಕೆಸರಿತ್ತು. ಉಟ್ಟಿದ್ದ ನನ್ನ ಬಿಳಿ ಪಂಚೆ ಕೊಳೆಯಾಗದಂತೆ ಕಷ್ಟ ಪಟ್ಟು ಕಾಲಿಡುತ್ತಾ ಆ ಗುಡಿಸಲನ್ನು ಪ್ರವೇಶಿಸಿದೆವು.

ವರ್ಷ ಎದುರಿಗೇ ಸಿಕ್ಕಿಬಿಟ್ಟಳು. ತನ್ನ ಸಹಪಾಠಿಯೊಬ್ಬಳಿಗೆ ಜಡೆ ಹೆಣೆಯುತ್ತ ಕೂತಿದ್ದಳು. ನಮ್ಮ ಅನಿರೀಕ್ಷಿತ ಆಗಮನದಿಂದ ವರ್ಷ ಆಶ್ಚರ್ಯಗೊಂಡಳು. ಆ ಗುಡಿಸಲಿನಲ್ಲಿ ಇದ್ದುದು ಒಂದೇ ಕೊಠಡಿ. ಕೊಠಡಿಯ ಒಂದು ಗೊಡೆಗೆ ನೇತುಬಿಟ್ಟಿದ ಬೋರ್ಡು. ಮತ್ತೊಂದು ಗೋಡೆಗೆ ಹೊಂದಿಸಿಟ್ಟಿದ್ದ ಕಬ್ಬಿಣದ ಸ್ಟ್ಯಾಂಡುಗಳು -ಮಕ್ಕಳ ಪುಸ್ತಕ, ಊಟದ ತಟ್ಟೆಗಳು, ಇತ್ಯಾದಿಗಳು ಆ ಸ್ಟ್ಯಾಂಡಿನಲ್ಲಿ. ಕೊಠಡಿಯ ಮತ್ತೊಂದು ಮೂಲೆಯಲ್ಲಿ ಟ್ರಂಕುಗಳು. ಮಕ್ಕಳು ತಮ್ಮ ತಮ್ಮ ಮನೆಯಿಂದ ತಂದವು. ಅದರಲ್ಲಿ ಅವರ ಬಟ್ಟೆಬರೆಗಳು. ಒಂದೇ ಕೋಣೆಯಲ್ಲಿ ಊಟ, ಪಾಠ, ವಸತಿ -ಎಲ್ಲಾ. ಇನ್ನೂ ಪೂರ್ತಿ ಕಟ್ಟಿಯೇ ಆಗಿರದಿದ್ದ ಗುಡಿಸಲಿನ ಕಿಟಕಿಗಳಿಗೆ ಇನ್ನೂ ಚೌಕಟ್ಟು-ಸರಳುಗಳನ್ನು ಕೂರಿಸಿರಲಿಲ್ಲ. ಗುಡಿಸಲಿನ ಗೋಡೆಯನ್ನು ಸುಮಾರು ಏಳು ಅಡಿಗಳವರೆಗೆ ಕಟ್ಟಿದ್ದರು; ಅದರ ಮೇಲೆ ಮೂರ್ನಾಲ್ಕು ಅಡಿ ಹಾಗೇ gap ಬಿಟ್ಟಿದ್ದರು. ಮೇಲೆ cement sheet ಹೊಚ್ಚಿದ್ದರು. ಸಿಡಿಲು-ಗಾಳಿ-ಮಳೆ ಅಂತ ಏನಾದರೂ ಬಂದರೆ ಒಳಗಿರುವವರ ಗತಿ ಏನಾಗಬಹುದೆಂದು ಕಲ್ಪಿಸಿಕೊಂಡು ನಾನು ತತ್ತರಿಸಿ ಹೋದೆ. ‘ಮಠಕ್ಕೆ ಅಷ್ಟೆಲ್ಲಾ ದುಡ್ಡು ಬರ್ತು, ವ್ಯವಸ್ಥೆನಾದ್ರೂ ಸರಿಯಾಗಿ ಮಾಡಕ್ಕಾಗದಿಲ್ಯಾ?’ ಅಂತ ಸಿಟ್ಟಿನಲ್ಲಿ ನಾನೂ ಅಮ್ಮನ ಬಳಿ ಯಾವುದೋ ಪತ್ರಿಕೆಯವರ ದನಿಯಲ್ಲಿ ಗೊಣಗಿಕೊಂಡುಬಿಟ್ಟೆ. ಮಕ್ಕಳನ್ನು ಹೀಗೆ ಒಂದೇ ಕೋಣೆಯಲ್ಲಿ ಕೂಡಿ ಹಾಕಿಬಿಟ್ಟರೆ ಹೇಗೆ? ಸ್ವಲ್ಪವಾದರೂ ಲವಲವಿಕೆ ಬೇಡವೇ?

ಮನೆಯಲ್ಲಿ ತಂದೆ-ತಾಯಿ-ಅಜ್ಜ-ಅಜ್ಜಿ-ತಮ್ಮ ಎಲ್ಲರ ಜೊತೆ ಇದ್ದುಕೊಂಡು, ಬೆಳಗ್ಗೆ ಮುಂಚೆ ಎದ್ದು ಸ್ವಲ್ಪ ಹೊತ್ತು ಓದಿಕೊಂಡು, ಸ್ನಾನ ಮಾಡಿ ತಿಂಡಿ ತಿಂದು, ಊರ ಮಕ್ಕಳೊಂದಿಗೆ ಶಾಲೆಗೆ ಹೋಗಿ, ಸಾಲಾಗಿ ನಿಂತು ಪ್ರಾರ್ಥನೆ ಮಾಡಿ, ಬೆಳಗಿನಿಂದ ಸಂಜೆಯವರೆಗೆ ಪಾಠ ಕೇಳಿ, ಆಟವಾಡಿ, ಶಾಲಾ ಆವರಣದ ಕಸ ಹೆಕ್ಕಿ, ಮಧ್ಯ ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ಉಂಡು, ಸಂಜೆ ಹೊತ್ತಿಗೆ ಗೆಳೆಯರೊಂದಿಗೆ ಕೂಗಾಡುತ್ತಾ, ಕೌಳಿ ಹಣ್ಣು - ನೇರಳೆ ಹಣ್ಣು ಅಂತ ತಿನ್ನುತ್ತಾ ಮನೆಗೆ ಬಂದು, ತಡವಾದುದಕ್ಕೆ ಅಮ್ಮನ ಬಳಿ ಬೈಸಿಕೊಂಡು, ಕೈಕಾಲು ತೊಳೆದುಬಂದು ಅವಲಕ್ಕಿ-ಮೊಸರು ತಿಂದು, ದೇವರ ಮುಂದೆ ಕೂತು ಭಜನೆ ಮಾಡಿ, ಓದಿಕೊಂಡು - ಹೋಮ್ ವರ್ಕ್ ಮಾಡಿಕೊಂಡು, ಊಟದ ಸಮಯದಲ್ಲಿ ಅಮ್ಮನಿಗೆ ಸ್ವಲ್ಪ ಸಹಾಯ ಮಾಡಿಕೊಂಡು ಊಟ ಮಾಡಿ, ಟೀವಿ ನೋಡುತ್ತಾ ಹಾಗೇ ತೂಕಡಿಕೆ ಬಂದು, ಮೆತ್ತಿಗೆ ಹೋಗಿ ಬೆಚ್ಚನೆ ಹಾಸಿಗೆಯಲ್ಲಿ ಮಲಗಿ ನಿದ್ರೆ ಹೋಗಿ... ... ವರ್ಷ ಇವೆಲ್ಲವನ್ನೂ miss ಮಾಡಿಕೊಳ್ಳುತ್ತಿದ್ದಾಳಲ್ಲ ಎನಿಸಿ ಬೇಜಾರಾಯಿತು.

ಮಠದ ವ್ಯವಸ್ಥೆಯನ್ನೂ, ಪುಟ್ಟಿಯನ್ನೂ ನೋಡಿ ತುಂಬಾ ಸಂಕಟವಾಯಿತು. ಅಲ್ಲಿದ್ದ ಮಕ್ಕಳೆಲ್ಲ ತೀರಾ ಅನಾಥ ಮಕ್ಕಳಂತೆ ಕಾಣಿಸುತ್ತಿದ್ದರು. ನಾವು ಹೋಗುವಾಗ ವರ್ಷಳಿಗೆಂದು ಒಂದಷ್ಟು ಹಣ್ಣು, ಬಿಸ್ಕೆಟ್ಸು, ಚಾಕಲೇಟ್ಸು ತೆಗೆದುಕೊಂಡು ಹೋಗಿದ್ದೆವು. ಎಲ್ಲರಿಗೂ ಹಂಚಿಕೊಂಡು ತಿನ್ನಬೇಕಾಗಬಹುದೆಂದು ಏಳೆಂಟು ಬಿಸ್ಕೇಟ್ ಪ್ಯಾಕೇ ತಗೊಂಡು ಹೋಗಿದ್ದೆವು. ಅದನ್ನು ಹೊರತೆಗೆದು ಕೊಡಲು ಹೋದರೆ ವರ್ಷ ಸ್ವೀಕರಿಸಲೇ ಇಲ್ಲ. ’ಇಲ್ಲಿ ಚಾಕ್ಲೇಟು ಬಿಸ್ಕೇಟು ಏನೂ ತಿನ್ನೋ ಹಾಗಿಲ್ಲ’ ಎಂದಳು. ’ಅದ್ಯಾಕೆ ಹಾಗೆ?’ ಅಂತ ಕೇಳಿದೆ. ’ಅಂಗಡಿಯಲ್ಲಿ ಸಿಗುವ ಸಿದ್ಧ ಆಹಾರಗಳ್ಯಾವುದನ್ನೂ ತಿನ್ನುವ ಹಾಗಿಲ್ಲ. ಅವೆಲ್ಲಾ ಪೇಟೆ ತಿನಿಸುಗಳು; ನಮ್ಮ ಸಂಕೃತಿಗೆ ಹೊಂದುವುದಿಲ್ಲ ಅಂತ ಗುರೂಜಿ ಹೇಳಿದ್ದಾರೆ’ ಎಂಬ ಉತ್ತರ ಬಂತು. ನಾನು ನಿಬ್ಬೆರಗಾಗಿ ಹೋದೆ. ಪುಟ್ಟಿ ನಮ್ಮ ಜೊತೆ ಸರಿಯಾಗಿ ಮಾತನಾಡಲೇ ಇಲ್ಲ. ಆಕೆಗೆ ಹಾಗೆ ನಾವು ಅವಳಿರುವಲ್ಲಿಗೆ ಹೋದದ್ದು ಇಷ್ಟವಾಗಲಿಲ್ಲವೇನೋ ಎನಿಸಿ, ಸ್ವಲ್ಪ ಹೊತ್ತಷ್ಟೇ ಇದ್ದು ನಾವು ವಾಪಸು ಬಂದೆವು: ಬಿಸ್ಕೇಟು-ಚಾಕ್ಲೇಟುಗಳ ಸಮೇತ.

ಊರಿಗೆ ಬಂದವನೇ ಅತ್ತೆಗೆ ಫೋನ್ ಮಾಡಿ ಇಂಥಾ ಕಡೆ ಪುಟ್ಟಿಯನ್ನು ಬಿಟ್ಟಿರುವುದಕ್ಕಾಗಿ ಸರಿಯಾಗಿ ಬೈದೆ. ನನ್ನ ಅಸಮಾಧಾನವನ್ನೆಲ್ಲ ಸಾವಧಾನದಿಂದ ಕೇಳಿದ ಅತ್ತೆ ‘ಅದನ್ನೆಲ್ಲಾ ವ್ಯವಸ್ಥಿತವಾಗಿ ಮಾಡ್ತ.. ಇನ್ನೊಂದು ಐದಾರು ತಿಂಗಳು ಅಷ್ಟೇ. ಮಠದವರು ಹೇಳಿದ್ದ’ ಎಂದಳು.

ಮತ್ತೊಮ್ಮೆ ಊರಿಗೆ ಹೋಗಿದ್ದಾಗ ರಜೆಗೆಂದು ನಮ್ಮ ಮನೆಗೆ ಬಂದಿದ್ದ ಪುಟ್ಟಿ ಸಿಕ್ಕಳು. ಈ ಬಾರಿ ಅವಳನ್ನು ಕೂರಿಸಿಕೊಂಡು ಮಠದಲ್ಲಿ ಏನೇನು ಕಲಿಸುತ್ತಿದ್ದಾರೆ, ಅಲ್ಲಿಯ ಪಠ್ಯಕ್ರಮವೇನು, ಪಾಠ-ಪ್ರವಚನವೆಲ್ಲಾ ಹೇಗೆ ನಡೆಯುತ್ತಿದೆ, ಎಂದೆಲ್ಲ ಕೇಳಿದೆ. ಬೆಳಗ್ಗೆ ನಾಲ್ಕು ಗಂಟೆಗೆ ಮಕ್ಕಳನ್ನೆಲ್ಲಾ ಎಬ್ಬಿಸುತ್ತಾರಂತೆ. ಎದ್ದಕೂಡಲೇ ಧ್ಯಾನ, ಆಮೇಲೆ- ಶೌಚ, ಉಪಹಾರ, ಪ್ರಾರ್ಥನೆ, ಪ್ರದೇಶ ಸ್ವಚ್ಚತೆ, ಪಾರಾಯಣ, ಪ್ರವಚನ, ಭೋಜನ, ವಿಶ್ರಾಂತಿ, ಪಾಠ, ಆಟ, ಭಜನೆ, ವ್ಯಾಸಂಗ, ಊಟ, ಫಲ, ನಿದ್ರೆ... “ಓಹ್! ನಿನ್ನ ಪಟ್ಟಿಯಲ್ಲಿ ಪಾಠ-ಓದು-ಬರಹಕ್ಕಿಂತ ಭಜನೆ, ಪಾರಾಯಣಗಲೇ ಜಾಸ್ತಿ ಇದ್ದಲೇ ಮಾರಾಯ್ತಿ?” ಅಂತ ತಮಾಶೆ ಮಾಡಿದೆ. ಮನೆಗೆ ವರ್ಷ ಬಂದಿದ್ದಾಳೆಂದು ಅವಳಿಗಿಷ್ಟವಾಗುವ ವಿಶೇಷ ಅಡುಗೆಯನ್ನೇನಾದರೂ ಮಾಡೋಣ ಅಂತ ಅಮ್ಮ ಅವಳ ಬಳಿ ಕೇಳಿದರೆ ‘ಅಯ್ಯೋ ಅದು ತಾಮಸ ಗುಣ; ಇದು ರಾಜಸ ಗುಣ; ಅದು ಬ್ಯಾಡ; ಇದನ್ನ ತಿನ್ನಲಾಗ’ ಎಂದೆಲ್ಲಾ ಹಲುಬಲು ಶುರು ಮಾಡಿದಳು. ‘ಕೂಸೇ ನಿಂಗೆ ತಲೆ ಕೆಟ್ಟಿದ್ದು’ ಅಂತ ಬೈದೆ.

ಮಠದಲ್ಲಿ ಹೆಣ್ಣುಮಕ್ಕಳಿಗೆ ಮುಖ್ಯವಾಗಿ ಕಲುಹಿಸುತ್ತಿರುವುದು ಅಂಗಳ ಸಾರಿಸುವುದು, ಕಟ್ಟಿಗೆ ತರುವುದು, ಮನೆ-ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ರಂಗೋಲಿ ಹಾಕುವುದು, ಜಡೆ ಹೆಣೆದುಕೊಳ್ಳುವುದು, ಭಜನೆ ಮಾಡುವುದು, ಧ್ಯಾನ ಮಾಡುವುದು, ಇತ್ಯಾದಿ. ಅವರ final ಉದ್ದೇಶ ಹೆಣ್ಣು ಮಕ್ಕಳನ್ನು ಉತ್ತಮ ಗೃಹಿಣಿಯರನ್ನಾಗಿ ಮಾಡುವುದು; ಗಂಡು ಮಕ್ಕಳನ್ನು ಸುಸಂಕೃತರನ್ನಾಗಿ ಮಾಡುವುದು. ಅದಕ್ಕೇ ಮಠವೇ ಆಗಬೇಕಾ? ಗುರುಕುಲದಲ್ಲಿ ಕೂಡಿ ಹಾಕಿಯೇ ಹೇಳಿಕೊಡಬೇಕಾ? ಮನೆಯ ಪರಿಸರದಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇದ್ದು ಕಲಿಯಲಿಕ್ಕಾಗುವುದಿಲ್ಲವಾ? ನನ್ನ ಪ್ರಶ್ನೆಗೆ ಅತ್ತೆ ಸಮರ್ಪಕವಾದ ಉತ್ತರ ಕೊಡುವುದಿಲ್ಲ. ‘ಇಲ್ಲ, ಮಠದವರು ಭರವಸೆ ಕೊಟ್ಟಿದಾರೆ. ಅಲ್ಲಿರುವ ಮಕ್ಕಳು ಹತ್ತನೇ ತರಗತಿ ಮುಗಿಸಿ ಹೊರಬೀಳುವಾಗ ಯಾವುದೇ ಬೆಂಗಳೂರಿನ standard school ನ ಮಕ್ಕಳಿಗಿಂತ ಕಡಿಮೆಯೇನೂ ಇಲ್ಲದಂತೆ ತಯಾರಾಗಿರುತ್ತಾರೆ ಅಂತ. ನೋಡುವಂತೆ ನೀನು’ ಎನ್ನುತ್ತಾಳೆ ಅತ್ತೆ. ಈಗ ಅಲ್ಲಿ ಇಂಗ್ಲೀಷಿನಲ್ಲಿ ಮಾತನಾಡುವುದನ್ನು ಹೇಳಿಕೊಡುತ್ತಿದ್ದಾರಂತೆ, ಕಂಪ್ಯೂಟರ್ ಕಲುಹಿಸುತ್ತಿದ್ದಾರಂತೆ.

ಆದರೆ ವರ್ಷಳ ಭವಿಷ್ಯದ ಬಗ್ಗೆ ನನ್ನ ಆತಂಕವಂತೂ ಸ್ವಲ್ಪವೂ ಕಮ್ಮಿಯಾಗಿಲ್ಲ. ಅವಳು ಓದಿಕೊಂಡು ಮುಂದೇನೋ ಡಾಕ್ಟರೋ ಇಂಜಿನಿಯರೋ ಆಗದಿದ್ದರೆ ಇಲ್ಲ; ಆದರೆ ಮಠದಿಂದ ಹೊರಬಿದ್ದಮೇಲೆ ಈ ಮುಂದುವರೆದಿರುವ ಜಗತ್ತಿನೊಂದಿಗೆ ಹೊಂದಿಕೊಳ್ಳಲಿಕ್ಕಾದರೂ ಅವಳಿಂದ ಆದೀತೇ ಎಂಬ ಅನುಮಾನ ನನ್ನದು.

ರಾಮಚಂದ್ರಾಪುರ ಮಠ, ರಾಘವೇಶ್ವರ ಭಾರತೀ ಸ್ವಾಮಿಗಳ ಪೀಠಾರೋಹಣದ ನಂತರ ಪಡೆದ ಪ್ರಸಿದ್ಧಿ ಎಲ್ಲರಿಗೂ ಗೊತ್ತಿರುವುದೇ. ರಾಘವೇಶ್ವರರು ಹಾಕಿಕೊಂಡಿರುವ ಯೋಜನೆಗಳು, ಅವರ ಕನಸುಗಳು, ಆದರ್ಶಗಳು, ಗೋವಿಗಾಗಿ ಸಮರ -ಎಲ್ಲಾ ಬಹಳ ದೊಡ್ಡವಿವೆ. ನನಗೂ ಅವುಗಳ ಬಗ್ಗೆ ಗೌರವವಿದೆ. ಜನಗಳೆಲ್ಲಾ ಸಹಕರಿಸಿ ಅವೆಲ್ಲಾ ಸಾಕಾರಗೊಂಡದ್ದೇ ಹೌದಾದರೆ ಅದೊಂದು ಸಾಧನೆಯೇ. ಮಠದ ಪ್ರಸಿದ್ಧಿಯಿಂದಾಗಿಯೇ ಅಲ್ಲಿಗೆ ’ನಡೆದುಕೊಳ್ಳುವವರ’ ಸಂಖ್ಯೆಯೂ ಜಾಸ್ತಿಯೇ ಇದೆ. ಅಂಥವರು ತಮ್ಮ ಮಕ್ಕಳನ್ನು ತಂದು ಗುರುಕುಲದಲ್ಲಿ ಬಿಡುವುದೂ ಸಾಮಾನ್ಯ. ಮಠ ಅನೇಕ ವಿವಾದಗಳಿಗೆ ಸಹ ಗುರಿಯಾಗಿದೆ. ಈಗ ಅದನ್ನು ಮತ್ತೊಂದು ವಿವಾದಕ್ಕೆ ತಳ್ಳುವುದು ನನ್ನುದ್ದೇಶವೂ ಅಲ್ಲ. ಆದರೆ... ನನ್ನ ಪ್ರೀತಿಯ ವರ್ಷ ಪುಟ್ಟಿ ಹೀಗಾದ ಬಗ್ಗೆ ಯೋಚಿಸಿದಾಗ ಮಾತ್ರ ನನಗೆ ಸಂಕಟವಾಗುತ್ತದೆ. ಏನು ಮಾಡಬೇಕೆಂದೇ ತಿಳಿಯುವುದಿಲ್ಲ.

ಹಾಗಂತ ಇದು ಕೇವಲ ವರ್ಷ ಪುಟ್ಟಿಯ ಸಮಸ್ಯೆಯೂ ಅಲ್ಲವಂತೆ. ಅತ್ತೆ ಹೇಳಿದಳು, ಗುರುಕುಲ ಹೊರತಂದಿರುವ ‘ಪ್ರತಿಭಾ ಲೋಕ’ ಎಂಬ ಹೆಸರಿನ ಪುಸ್ತಕದಲ್ಲಿ ವರ್ಷಳ ಸಹಪಾಠಿಗಳೇನಕರು ಬರೆದ ಕವನ/ಬರಹಗಳ ದಾಟಿಯೂ ಹೀಗೆಯೇ ಇದೆ ಎಂದು. ನಾವು ಬೆಂಗಳೂರಿನ ಪಬ್ಬು-ನೈಟ್‌ಕ್ಲಬ್ಬುಗಳನ್ನೂ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೂ ನೋಡಿ ಬೈದುಕೊಳ್ಳುತ್ತಾ ‘where are we heading to?’ ಅಂತ ಕೇಳಿಕೊಳ್ಳುತ್ತೇವೆ ನಿಜ. ಆದರೆ ವರ್ಷಳ ಕವನ ಓದಿದಾಗಲೂ ನಾನು ಅದೇ ಪ್ರಶ್ನೆ ಕೇಳಿಕೊಳ್ಳಬೇಕಾಯಿತು ಎಂಬುದು ವಿಷಾದನೀಯ. ಎರಡೂ ಸಹ ‘too much’ ಎಂಬುದು ನನ್ನ ಅಭಿಪ್ರಾಯ.

ಮತ್ತೆ ನಾನು ಹೀಗೆಲ್ಲಾ ಬರೆದು ಪ್ರಕಟಿಸಿದ್ದೇನೆ ಎಂಬುದು ಗೊತ್ತಾದರೆ ವರ್ಷ, ಅತ್ತೆ, ಅತ್ತೆಯ ಮನೆಯವರು, ನನ್ನ ಅಪ್ಪ-ಅಮ್ಮ -ಎಲ್ಲರೂ ಬೇಜಾರ ಮಾಡಿಕೊಳ್ಳುತ್ತಾರೆ, ನನಗೆ ಗೊತ್ತು. ಮಠದವರಿಗೆ, ಮಠದ ಅನುಯಾಯಿಗಳಿಗೆ ಗೊತ್ತಾದರಂತೂ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ ಗೊತ್ತಿಲ್ಲ. ನೇರವಾಗಿ ತಮ್ಮ ಬಳಿಯೇ ಕೇಳಿ ನಿಷ್ಕರ್ಷೆ ಮಾಡಿಕೊಳ್ಳಬಹುದಿತ್ತು ಎನ್ನುತ್ತಾರೇನೋ? ನನಗೂ ಇದನ್ನೆಲ್ಲ ಬರೆಯಬಾರದು ಅಂತಲೇ ಇತ್ತು. ಆದರೂ ಬರೆದುಬಿಟ್ಟೆ.

Saturday, May 10, 2008

ಬೇಸರದ ಬಣ್ಣ

ಒಂದು ಬೇಸಿಗೆ ರಾತ್ರಿ, ನಿದ್ರೆ ಬಾರದೆ ದೀರ್ಘ,
ಬದುಕು ಕೇಳಿತು ಮನಸ:
"ಕುಳಿತೆ ಏಕೆ ಸುಮ್ಮನೆ? ಮುಗಿವುದೆಂದೀ ಬೇಸರ?"

"ಬೇಸರಕೆ ಬಣ್ಣವಿಲ್ಲ..
ಅದಕೇ, ಅದು ಕಾಣುವುದಿಲ್ಲ..
ಕಂಡಿದ್ದರೆ ಹಿಡಿದು ದಬ್ಬಬಹುದಿತ್ತು ಆಚೆ;
ದೂರ ಮಾಡಬಹುದಿತ್ತು; ನಿವಾರಿಸಿಕೊಳ್ಳಬಹುದಿತ್ತು..
ಪಾಪಿ, ಕಾಣುವುದೇ ಇಲ್ಲ; ಎಲ್ಲಿದೆಯೆಂದೇ ತಿಳಿಯುವುದಿಲ್ಲ.."

ಸ್ವಲ್ಪ ಸಮಯದ ಬಳಿಕ:
"ಇಲ್ಲ ಇಲ್ಲ, ಬೇಸರಕೆ ಬಣ್ಣವಿದೆ..!
ಬೇಸರದ ಬಣ್ಣ ಬೂದು..
ಬೂದು ಬಣ್ಣ ಮಂಜಿನಲ್ಲಿ ಕಾಣುವುದಿಲ್ಲ..
ಬೇಸರ ಆವರಿಸಿದಾಗಲೆಲ್ಲ ಕಣ್ಣು ಮಂಜಾಗುತ್ತದೆ..
ಅದಕೇ, ಅದು ಕಾಣುವುದಿಲ್ಲ.."

ರಾತ್ರಿ ಮುಂದುವರೆದಂತೆ:
"ಇಲ್ಲ ಇಲ್ಲ, ಬೇಸರವೆಂದರೆ ಹೊಗೆ!
ಹೊಗೆ ಹಬ್ಬಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ..
ಇದು ಬೆಂಕಿ ಉರಿದಾರಿದಮೇಲೆ ಉಂಟಾಗಿರುವ ಹೊಗೆ..
ಗೊತ್ತಾಗಲಿಲ್ಲ ಬೆಂಕಿ ಉರಿವಾಗ;
ತಿಳಿಯಲಿಲ್ಲ ತುಪ್ಪ ಎರೆವಾಗ..
ಈಗರ್ಥವಾಗುತ್ತಿದೆ: ನನ್ನ ಬೇಸರಕೆ ನಾನೇ ಕಾರಣ"

"ಕಾರಣ ತಿಳಿಯಿತಲ್ಲ, ಮತ್ತೀಗ ಬೇಸರವ ದೂರ ಮಾಡಬಹುದಲ್ಲ?
ಹೊಗೆಯ ಬಣ್ಣ ಬಿಳಿ.."

"ಹ್ಮ್.. ಕೈಯಾಡಿಸಿ ಕಣ್ಣೆದುರಿಂದ ಹೋಗಲಾಡಿಸಬಹುದಷ್ಟೇ..
ಆದರೆ ನನ್ನೊಳಹೊಕ್ಕು ಕೋಶಗಳಿಗೆ ಮೆತ್ತಿ ಕೂತಿರುವ ಹೊಗೆಯ
ಒರೆಸಿ ಚೊಕ್ಕ ಮಾಡಲಿ ಹೇಗೆ?
ಅದ ತೊಳೆಯಲಿಕ್ಕಿರುವ ಒಂದೆ ಔಷಧಿ ವಿಷ!
ಆದರೆ.. ಬಳಸಲು ಹಿಂಜರಿವುದಲ್ಲ ಜೀವ, ನಿನ್ನದೆಂಥಾ ಪಾಶ!"

"ಇಲ್ಲ, ತಪ್ಪು ತಿಳಿದಿರುವಿ ನೀನು..
ಮನದಿ ಮನೆ ಮಾಡಿರುವ ಹೊಗೆಬಿಳಿಯ ಬಣ್ಣಕೆ
ಚೂರೆ ಹೊಸ ನೀರೆರೆ.. ಕಣ್ಣ ಪಟ್ಟಕ ಮಾಡಿ, ಬೆಳಕ ಹಾಯಿಸಿ,
ನವದೃಷ್ಟಿಯಿಂ ನೋಡು..
ಬಿಳಿಬಣ್ಣದೊಳಗಿರ್ಪ ನವಿರೇಳು ವರ್ಣಗಳು
ಇಂದ್ರಚಾಪವಾಗಿ ಹರಡುವ ಇಂದ್ರಜಾಲವ ನೋಡು.. .. ..

ಹೊಮ್ಮಿತೇ ವದನದಲಿ ಹೊಸದೊಂದು ಕಾಂತಿ?"

"ಹೌದು.. ವಿಷದ ವಿಷಾದ ವಿಷಯವಿನ್ಯಾಕೆ?
ಕಾಮನಬಿಲ್ಲು ಚಿಮ್ಮಿಸುತಿರುವ ಉತ್ಸಾಹದಂಬುಗಳು
ಬೇಸರವ ಹೊಡೆದೋಡಿಸಿ ಆಯ್ತಲ್ಲ ಗೆಳೆಯ?
ಒಡಗೂಡಿ ಬಾಳೋಣ, ಬಾ ಬದುಕೇ,
ಮುಗಿಯಿತೀ ಕ್ಲೇಶಕಾವಳದಿರುಳು,
ಇನ್ನು ನಿನ್ನೊಳಗೆ ನಾನು; ನನ್ನೊಡನೆ ನೀನು
ದಾರಿ ಮುಂದಿದೆ ನಮಗೆ; ನಡೆ,
ಕಾಲ ಚಿಮ್ಮುವ ಮುನ್ನ ಸೇರಿ ಸಾಗೋಣ."

Friday, May 02, 2008

ಅಡ್ಜಸ್ಟ್‌ಮೆಂಟ್ಸ್

ಇತ್ತೀಚೆಗೆ ಪದೇ- ಪದೇ ನಾನು ನೆನಪು ಮಾಡಿಕೊಳ್ಳುತ್ತಿದ್ದ ಸೂರಿ, ಇವತ್ತು ಸ್ಯಾಂಕಿ ಕೆರೆಯ ದಂಡೆಯ ಮೇಲೆ ಅಚಾನಕ್ಕಾಗಿ ಸಿಕ್ಕಿಬಿಟ್ಟ. ಸ್ವಲ್ಪ ದಪ್ಪಗಾಗಿದ್ದ. ಅಥವಾ ಹೊಟ್ಟೆ ಬಂದಿದ್ದರಿಂದ ಹಾಗೆ ಕಾಣಿಸುತ್ತಿದ್ದ. ತನ್ನ ಕಿರುಬೆರಳ ಕುಣಿಕೆಯೊಂದಿಕೆ ತಳುಕು ಹಾಕಿಕೊಂಡಿದ್ದ ಮತ್ತೊಂದು ಕಿರುಬೆರಳ ಜೀವವನ್ನು 'ಮೈ ವೈಫ್' ಎಂದು ಹೇಳಿ ಪರಿಚಯಿಸಿಕೊಟ್ಟ. ನನಗೆ ಅಚ್ಚರಿಯಾದರೂ ತೋರಗೊಡದೆ, ಕುಲುಕಲೆಂದು ಕೈಚಾಚುವಷ್ಟರಲ್ಲಿ ಆಕೆ 'ನಮಸ್ತೇ' ಎಂದು ಕೈಮುಗಿದಳು. ನಾನೂ ಕೈಯನ್ನು ಹಿಂದೆಳೆದುಕೊಂಡು, ಮತ್ತೊಂದು ಕೈಯೊಂದಿಗೆ ಜೋಡಿಸಿ ನಮಸ್ಕರಿಸಿ ಮುಗುಳ್ನಕ್ಕೆ. 'ಏನೋ ಇದೆಲ್ಲಾ?' ಎನ್ನುವಂತೆ ನೋಡಿದ ನನ್ನ ಬಳಿ ಸೂರಿ 'ಲೈಫು ಮ್ಯಾನ್.. ಅಡ್ಜಸ್ಟ್‌ಮೆಂಟ್ಸ್ ಮಾಡ್ಕೋಬೇಕಲ್ಲ!' ಎಂದು ನಕ್ಕ. ಮಳೆ ಬರುವಂತಿದ್ದರಿಂದ, ಐದಾರು ನಿಮಿಷ ಮಾತಾಡಿ, ಕಾರ್ಡಿಗಾಗಿ ಪರ್ಸ್ ತೆಗೆದು ಹುಡುಕಿ, ಅದು ಖಾಲಿಯಾಗಿದ್ದರಿಂದ, ತನ್ನ ಹೊಸ ಮೊಬೈಲ್ ನಂಬರ್ ಕೊಟ್ಟು, ನನ್ನಿಂದ ಮಿಸ್-ಕಾಲ್ ಕೊಡಿಸಿಕೊಂಡು, ಹೆಸರು ಫೀಡ್ ಮಾಡಿ ಸೇವ್ ಮಾಡಿಕೊಂಡು, ಮುಂದಿನ ಭಾನುವಾರ ತಮ್ಮ ಮನೆಗೆ ಬರಲೇಬೇಕೆಂದು ನನ್ನನ್ನು ಕರೆದು, ಸೂರಿ ಹೆಂಡತಿಯೊಂದಿಗೆ ಹೊರಟು ಹೋದ.

ಸ್ಯಾಂಕಿಯ ವಿಶಾಲ ನೀರ ಮೇಲ್ಮೈಯಿಂದ ಬೀಸಿ ಬರುತ್ತಿದ್ದ ತಂಪು ಗಾಳಿಗೆ ಮೈಯೊಡ್ಡಿ ನಾನು ಸ್ವಲ್ಪ ಹೊತ್ತು ಹಾಗೇ ನಿಂತೆ. ಕೆಲ ಕ್ಷಣಗಳುರುಳಿದ ಮೇಲೆ, ಹತ್ತಿರದ ಬೆಂಚೊಂದರಲ್ಲಿ ಕೂತಿದ್ದ 'ಜೋಡಿಹಕ್ಕಿ'ಗಳಿಗೆ ನನ್ನ ಇರುವಿನಿಂದ ಕಿರಿಕಿರಿ ಆಗುತ್ತಿರುವುದನ್ನು ಗಮನಿಸಿ, ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮುಂದೆಲ್ಲಾದರೂ ನಿಲ್ಲೋಣವೆಂದು ಹುಡುಕಿದರೆ ಎಲ್ಲ ಬೆಂಚುಗಳಲ್ಲೂ ಜೋಡಿಹಕ್ಕಿಗಳೇ ಇದ್ದವು. ನಾನು ಎಲ್ಲಿ ನಿಂತರೂ ಮತ್ತೊಬ್ಬರಿಗೆ ಕಿರಿಕಿರಿಯೇ ಎಂದೆನಿಸಿ, ಮದುವೆಯಾದ ಹೊಸತರಲ್ಲಿ ನನಗೂ ಹಾಗೇ ಅನ್ನಿಸುತಿತ್ತು ಎಂಬುದನ್ನು ಜ್ಞಾಪಕ ಮಾಡಿಕೊಂಡು, ಪಾರ್ಕುಗಳಿಗೆ ಒಂಟೊಂಟಿ ಬರುವುದಕ್ಕಿಂತ ಅನಾಥ ಭಾವ ಮತ್ತೊಂದಿಲ್ಲ ಎಂದುಕೊಳ್ಳುತ್ತ ಅಲ್ಲಿಂದ ಹೊರಬಿದ್ದು, ಹತ್ತಿರದ ಹೋಟೆಲೊಂದರಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆ. ಅಷ್ಟೊತ್ತಿನ ತನಕ ತುಟಿ ಕಚ್ಚಿ ತಡೆದುಕೊಂಡಿದ್ದ ಮೋಡಗಳು ಈಗ ಮಳೆ ಸುರಿಸತೊಡಗಿದವು. ಜತೆಗೇ, ನಾಲ್ಕು ವರ್ಷಗಳ ಹಿಂದಿನ ನನ್ನ ಪೇಯಿಂಗ್ ಗೆಸ್ಟ್ ಹೌಸಿನ ದಿನಗಳು ನೆನಪ ಕೋಶದಿಂದ ಹೊರಬಂದು, ಕಂಪ್ಯೂಟರ್ ಮುಂದೆ ಕೂತ ನನ್ನೆದುರು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡುಬಿಟ್ಟವು.

***

ಹಾಗೆ ಹರಡಿಕೊಂಡ ಚೂರುಗಳಲ್ಲೊಂದು, ನಾನಾಗ ಭೇಟಿ ಮಾಡಿದ ಸೂರಿ. ಸೂರಿ ಎಂದರೆ ಸುರೇಂದ್ರನ್. ಎಂದಿನಂತಹುದೇ ಒಂದು ಇಳಿಸಂಜೆ, ನಾನು ಆಫೀಸಿನಿಂದ ಬಂದು ಪ್ಯಾಂಟ್ ಬಿಚ್ಚಿ ಹಾಕಿ ಬರ್ಮುಡಾ ತೊಟ್ಟುಕೊಳ್ಳುತ್ತಿದ್ದಾಗ ರೂಮಿಗೆ ನುಗ್ಗಿದ ಈತ "ಹಾಯ್, ಐಯಾಮ್ ಸುರೇಂದ್ರನ್" ಎನ್ನುತ್ತಾ ಕೈ ಚಾಚಿದ್ದ. ಒಂದು ಕೈಯಲ್ಲಿ ಬರ್ಮುಡಾದ ಕಸೆ ಹಿಡಿದುಕೊಂಡು ಇನ್ನೊಂದು ಕೈಯನ್ನು ಅವನಿಗೆ ಕೊಟ್ಟು ಕುಲುಕಲು ಬಿಟ್ಟಿದ್ದೆ. "ತುಮಾರಾ ನಾಮ್ ನಹೀ ಬತಾಯಾ?" -ಅವನು ಎಚ್ಚರಿಸಿದ. ನಾನು ಚಡ್ಡಿ ಕಳಚಿ ಬೀಳದಂತೆ ಎಚ್ಚರ ವಹಿಸುವುದರಲ್ಲೇ ಮಗ್ನನಾಗಿದ್ದೆ. "ಓಹ್ ಸಾರಿ! ಐಯಾಮ್ ಅಂಶು. ಅಂಶುಮಂತ್. ಫ್ರಮ್ ಶಿಮೊಗಾ" ಇನ್ನೂ ಅವನ ವಶದಲ್ಲೇ ಇದ್ದ ನನ್ನ ಕೈಯನ್ನು ಬಿಡಿಸಿಕೊಳ್ಳುತ್ತಾ ಹೇಳಿದೆ. "ಶೀಮೋವಾ? ವ್ಹೇರೀಸ್ ದಟ್? ವ್ಹಿಚ್ ಸ್ಟೇಟ್?" -ಕೇಳಿದ. "ನಾಟ್ ಶೀಮೋವಾ ಮ್ಯಾನ್, ಶಿವಮೊಗ್ಗ. ಇಟ್ಸ್ ಇನ್ ಕರ್ನಾಟಕ ಓನ್ಲೀ. ಇನ್ ಫ್ಯಾಕ್ಟ್, ವ್ಹೇರ್ ಆರ್ ಯೂ ಫ್ರಮ್?" ಚಡ್ಡಿ ಹಾಕಿಕೊಂಡಾಗಿತ್ತಾದ್ದರಿಂದ ನಾನೂ ಸ್ವಲ್ಪ ಗಟ್ಟಿಯಾಗೇ ಕೇಳಿದೆ. "ಓಹ್.. ಕರ್ನಾಟಕ ಇಟ್ಸೆಲ್ಫ್? ಹಾಗಾದ್ರೆ ನಾನು ನಿಂಜೊತೆ ಕನ್ನಡದಲ್ಲೇ ಮಾತಾಡ್ಬಹುದು. ನಾನು ಕೇರಳದಿಂದ ಬಂದಿರೋದು.. ಕ್ಯಾಲಿಕಟ್ ಗೊತ್ತಾ? ಹಾಂ, ಕ್ಯಾಲಿಕಟ್ಟಿನ ಪುಟ್ಟ ಹಳ್ಳಿಯೊಂದರಿಂದ ಬಂದಿದ್ದೇನೆ.. ಇನ್ಶುರೆನ್ಸ್, ಮ್ಯೂಚುವಲ್ ಫಂಡ್ಸ್ ಏಜೆನ್ಸಿ ಮಾಡ್ತೇನೆ.. ಊರಲ್ಲಿ ನಮ್ಮ ಪಕ್ಕದ ಮನೆಯವರು ಕನ್ನಡದವರು.. ಹೀಗಾಗಿ, ನಂಗೂ ಕನ್ನಡ ಅಭ್ಯಾಸ ಆಗಿದೆ!" -ಅವನು ಹೇಳಿದ. "ಕೂಲ್! ನಾನು ಸಿ.ಎ. ಮಾಡ್ತಿದ್ದೇನೆ. ಇಂಟರ್‌ಮೀಡಿಯೇಟ್ ಮುಗಿದಿದೆ. ಈಗ ಫೈನಲ್" -ಅಷ್ಟಂದು ನಾನು ಕಾಲು ತೊಳೆಯಲೆಂದು ಬಾತ್ ರೂಮ್ ಕಡೆ ಹೊರಟೆ.

ನಾನು ಈ ಪೀಜಿಯಲ್ಲಿ ವಾಸಿಸುತ್ತಾ ಹತ್ತತ್ತಿರ ಮೂರು ತಿಂಗಳಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲಿ ನಾನು ಕಲಿತಿದ್ದ ದೊಡ್ಡ ಪಾಠವೆಂದರೆ ಯಾರನ್ನೂ ಹೆಚ್ಚಿಗೆ ಹಚ್ಚಿಕೊಳ್ಳಲು ಹೋಗಬಾರದು ಎಂಬುದು. ದಿನಾ ಒಬ್ಬೊಬ್ಬರು ಹೊಸಬರು ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಬೆಂಗಳೂರಿನ ಪ್ರತಿ ಗಲ್ಲಿಗೊಂದರಂತೆ ತೆರೆದು ನಿಂತಿರುವ ಪೇಯಿಂಗ್‌ಗೆಸ್ಟ್ ಹೌಸ್‌ಗಳೆಂಬ ಈ ವಸತಿ ಗೃಹಗಳು ಬ್ಯಾಚುಲರುಗಳ ಪಾಲಿಗೆ ಸ್ವರ್ಗವೇ ಆಗಿದ್ದರೂ ಇವು ವ್ಯವಹರಿಸುವ ರೀತಿ, ಇಲ್ಲಿನ ವ್ಯವಸ್ಥೆಗಳಂತೂ ನರಕ ಸದೃಶ. ಯಾರೇ ಬರಲಿ; ಎರಡು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಕೊಟ್ಟುಬಿಟ್ಟರೆ ಸಾಕು, ಮಾಲೀಕ ಅವರನ್ನು ಒಳಬಿಟ್ಟುಕೊಳ್ಳುತ್ತಾನೆ. ಬಂದ ವ್ಯಕ್ತಿಗೆ ಒಂದು ಕಪಾಟು ಅಥವಾ ಗಾಡ್ರೇಜಿನಲ್ಲಿ ಒಂದು ಖಾನೆ, ಮಲಗಿಕೊಳ್ಳಲಿಕ್ಕೆ ಒಂದು ಮಂಚ ಗೊತ್ತುಮಾಡಿಕೊಟ್ಟು ಹೋಗಿಬಿಡುತ್ತಾನೆ ಮಾಲೀಕ. ಹಾಗೆ ಬಂದ ಪ್ರತಿ ವ್ಯಕ್ತಿಯೂ ತನ್ನ ಏರ್‌ಬ್ಯಾಗಿನಲ್ಲಿನ ಬಟ್ಟೆಗಳನ್ನು ತೆಗೆದು ಕಪಾಟಿನಲ್ಲಿ ನೀಟಾಗಿ ಹ್ಯಾಂಗರಿಗೆ ನೇತುಹಾಕುತ್ತಾನೆ. ನಂತರ ಆ ಬ್ಯಾಗಿನಿಂದ ಹೊರಬೀಳುತ್ತವೆ ಅವನದೇ ಸೋಪು, ಟೂತ್ ಬ್ರಶ್ಶು, ಪೇಸ್ಟು, ಶ್ಯಾಂಪೂ, ಶೇವಿಂಗ್ ಕಿಟ್ಟು, ಅಮ್ಮ ಕಳುಹಿಸಿಕೊಟ್ಟ ಸಣ್ಣ ಉಪ್ಪಿನಕಾಯಿ ಬಾಟಲಿ, ಪುಟ್ಟ ದೇವರ ಫೋಟೋ... ಪ್ರತಿ ವ್ಯಕ್ತಿಗೂ ಅವನದೇ ದೇವರು, ಜಾತಿ, ಧರ್ಮ, ಭಾಷೆ, ರುಚಿ, ಕೆಲಸ, ಊರ ನೆನಪು, ರಾತ್ರಿಯ ಕನಸಲ್ಲಿ ಬರುವ ಅವನದೇ ಹುಡುಗಿ... ಇಷ್ಟೆಲ್ಲ ಖಾಸಗಿತನ ಇರುವ ಒಬ್ಬ ಬೇರೆಯದೇ ಆದ ವ್ಯಕ್ತಿ ಇಲ್ಲಿ ಹೀಗೆ ಈ ಪೀಜಿಯ ಚಿಕ್ಕ ಜಾಗದಲ್ಲಿ ತನ್ನ ಬದುಕನ್ನು ಪುಟ್ಟದಾಗಿ-ಒಪ್ಪವಾಗಿ ಜೋಡಿಸಿಟ್ಟುಕೊಂಡು ಎಲ್ಲರೊಂದಿಗೆ ಬದುಕಲು ಶುರುಮಾಡುತ್ತಾನೆ.

ನಾನು ಈ ಪೀಜಿಗೆ ಬಂದಾಗ ಇದಿನ್ನೂ ಆಗ ತಾನೇ ಶುರುವಾಗಿದ್ದ ಪೀಜಿಯಾಗಿತ್ತು. ಎಲ್ಲಾ ಹೊಸದಾಗಿತ್ತು, ಸ್ವಚ್ಚವಾಗಿತ್ತು, ಒಂದಿಬ್ಬರು ಹುಡುಗರು ಮಾತ್ರ ಇದ್ದರು. ನಂತರ ಇದರ ಮಾಲೀಕ ಜನಗಳನ್ನು ತುರುಕುತ್ತಾ ಬಂದ. ಬರುಬರುತ್ತಾ ನನಗೆ ಇದೊಂದು ದನದ ದೊಡ್ಡಿಯಂತೆ ಭಾಸವಾಗತೊಡಗಿತು. ಬರುವವರಿಗೆ ಯಾವ ಕಟ್ಟಳೆಗಳೂ ಇರಲಿಲ್ಲವಾದ್ದರಿಂದ ಕುಡಿದುಕೊಂಡು ಬಂದು ಬಾಗಿಲಲ್ಲಿ ಕಾರಿಕೊಳ್ಳುವವರು, ಮಾತನಾಡಿಸಿದರೆ ಮೈಮೇಲೇ ಬರುವವರು, ರಾತ್ರಿಯಿಡೀ ದೊಡ್ಡದಾಗಿ ಟೀವಿ ಹಾಕಿಕೊಂಡು ಕೂರುವವರು, ಮೊಬೈಲಿನಲ್ಲಿ ಕಿರುಚಾಡುತ್ತಲೇ ಇರುವವರು, ರೌಡಿಗಳು ಎಲ್ಲಾ ಪೀಜಿಯೊಳಗೆ ಸೇರಿಕೊಂಡರು. ಕೆಲಸದವಳು ಬೇರೆ ಪ್ರತಿದಿನ ಬಂದು ಸರಿಯಾಗಿ ಗುಡಿಸಿ ಸ್ವಚ್ಚ ಮಾಡುತ್ತಿರಲಿಲ್ಲ, ಮನೆ ತುಂಬಾ ಕಸ ತುಂಬಿಕೊಂಡಿರುತ್ತಿತ್ತು. ಬಾತ್‌ರೂಮು, ಟಾಯ್ಲೆಟ್ಟುಗಳ ಕಡೆಯಂತೂ ತಲೆ ಹಾಕುವುದಕ್ಕೂ ಹೇಸಿಗೆಯಾಗುವಂತಹ ಪರಿಸ್ಥಿತಿ ಬಂದಮೇಲೆ ನಾನೊಂದು ದಿನ ಮಾಲೀಕರ ಬಳಿ ಜಗಳ ಮಾಡಿಕೊಂಡು ಈ ಪೀಜಿ ಬಿಟ್ಟು, ಬೇರೆ ಏರಿಯಾದಲ್ಲಿ ಒಂದು ಸಿಂಗಲ್ ರೂಮ್ ಬಾಡಿಗೆ ತಗೊಂಡು ಇರತೊಡಗಿದೆ. ನಾನು ಹಾಗೆ ಏಕಾ‌ಏಕೀ ಬಿಟ್ಟಿದ್ದರಿಂದ ಅದಾಗಲೇ ಆಪ್ತರಾಗಿದ್ದ ಕೆಲ ರೂಂಮೇಟುಗಳಿಗೆ ಹೇಳಲೂ ಆಗಿರಲಿಲ್ಲ. ಆಮೇಲೂ ಬೇರೆ ಏನೇನೋ ಕೆಲಸಗಳ ಬ್ಯುಸಿಯಲ್ಲಿ ಸಿಲುಕಿಕೊಂಡು ಫೋನ್ ಸಹ ಮಾಡಲಾಗದೇ ಅವರಲ್ಲನೇಕರ ಸಂಪರ್ಕವೇ ಕಡಿದುಹೋಗಿಬಿಟ್ಟಿತು. ಅಕಸ್ಮಾತ್ ಎದುರಿಗೆ ಸಿಕ್ಕಿದರೆ ಕೈಕುಲುಕಿ 'ಏನಪ್ಪಾ.. ನೀವೆಲ್ಲ ದೊಡ್ ಮನುಷ್ಯರಾಗಿಬಿಟ್ಟಿದೀರಿ.. ನಾವೆಲ್ಲ ಎಲ್ಲಿ ಕಾಣ್ತೀವೀ..' ಎಂದೇನೇನೋ ಹೇಳುತ್ತಿದ್ದರು ಅವರು.

ಆದರೆ ಸುರೇಂದ್ರನ್ ಜೊತೆ ನಾನು ಸಂಪರ್ಕದಲ್ಲೇ ಇದ್ದೆ. ಆಗೊಮ್ಮೆ ಈಗೊಮ್ಮೆ ಮಲ್ಲೇಶ್ವರಂ ಏಯ್ತ್ ಕ್ರಾಸಿನಲ್ಲಿ 'ಹಕ್ಕಿ'ಗಳನ್ನು ನೋಡುತ್ತಾ ನಾನು ನಡೆಯುತ್ತಿರಬೇಕಾದರೆ ಸೂರಿ ಒಡಾಯುತ್ತಿದ್ದ. 'ಏಯ್ ಸ್ಲೋ ಮ್ಯಾನ್.. ಎದುರುಗಡೆ ನೋಡ್ಕೊಂಡು ನಡಿ..!' ಅಂತಿದ್ದ. ನಗುತ್ತಿದ್ದೆವು. ಆಮೇಲೆ ಜನತಾ ಹೋಟೆಲಿನಲ್ಲೊಂದು ಮಸಾಲೆ ದೋಸೆ-ಕಾಫಿ ಅಥವಾ ಆಶಾ ಸ್ವೀಟ್ಸ್‌ನಲ್ಲಿ ಡ್ರೈ ಜಾಮೂನ್-ಬಾದಾಮ್ ಮಿಲ್ಕ್ ಆಗುತ್ತಿತ್ತು. ಬ್ಯುಸಿನೆಸ್ ಹೇಗೆ ನಡೀತಿದೆ, ಕಂಪನಿ ಬದಲಿಸಬೇಕೆಂದಿರುವುದು, ಸೆನ್‌ಸೆಕ್ಸು, ನೋಡಿದ ಹೊಸ ಸಿನೆಮಾ, ಸಿ.ಎ. ಫೈನಲ್ ಎಕ್ಸಾಮಿಗೆ ನನ್ನ ತಯಾರಿ... ಮಾತಿಗೆ ಆಹಾರವಾಗುತ್ತಿದ್ದ ಕೆಲ ವಿಷಯಗಳು. ಸೂರಿಯ ನಿಷ್ಕಲ್ಮಶ ನಗೆ ನನಗೆ ತುಂಬಾ ಇಷ್ಟ. ಅದಕ್ಕೇ, ನನಗೆ ಸೂರಿ ಇಷ್ಟ.

ಪೀಜಿಗೆ ಬರುತ್ತಿದ್ದ ಹತ್ತಾರು ಹುಡುಗರ ನಡುವೆ ಸೂರಿ ನನಗೆ ಹತ್ತಿರಾಗುವುದಕ್ಕೆಕಾರಣ ಆ ದಿನ ನಡೆದ ಘಟನೆಯೇ ಇರಬೇಕು. ನನ್ನ ರೂಮಿನಲ್ಲಿ ಮತ್ತೊಬ್ಬ ಹುಡುಗನಿದ್ದ: ರೆಡ್ಡಿ ಅಂತ. ಅವನ ಪೂರ್ತಿ ಹೆಸರು ಸೋಮಶೇಖರ ರೆಡ್ಡಿಯೋ ಏನೋ ಇರಬೇಕು. ಆದರೆ ನಾವೆಲ್ಲ ಅವನನ್ನು ಕರೆಯುತ್ತಿದ್ದುದು ಬರೀ ರೆಡ್ಡಿ ಅಂತ. ಬಳ್ಳಾರಿಯವನು. ರಾಜಕೀಯ ಪಡಸಾಲೆಗೆ ಸೇರಿದವನು. ತನ್ನ ಕ್ಷೇತ್ರದ ಯಾವುದೋ ಎಂಪಿ ತನಗೆ 'ಭಾಳಾ ಕ್ಲೋಸು' ಅಂತಲೂ, ಅವರು ತಮ್ಮ ಕ್ವಾರ್ಟರ್ಸಿನಲ್ಲಿಯೇ ಇರಲು ಹೇಳುತ್ತಾರಾದರೂ ತಾನು ಬೇಡವೆಂದು ಇಲ್ಲಿದ್ದೇನೆಂದೂ ಹೇಳುತ್ತಿದ್ದ. ನಮ್ಮ ಅರಿವಿನಾಚೆಗೇ ಉಳಿಯುವ ವಿಧಾನಸೌಧದ ಒಳಗಿನ ಅದೆಷ್ಟೋ ವರ್ಣರಂಜಿತ ಸುದ್ದಿಗಳನ್ನು ನಿದ್ರೆ ಬರುವವರೆಗೂ ಹೇಳುತ್ತಿದ್ದ. "ಪಾರ್ಟನರಾ, ನಿಮ್ಮುನ್ ಒಂದ್ಸಲ ವಿಧಾನಸೌಧಕ್ ಕರ್ಕೊಂಡ್ ಹೋಗ್ತೇನ್ರೀ.. ನಿಮ್ ಮಂತ್ರಿಗ್ಳು ನಿಮ್ಮೂರಿಗೆ ಬಂದಾಗ ಇರ್ತಾರಲಾ, ಅದಕ್ಕೆ ಪೂರಾ ಡಿಫರೆಂಟಾಗಿರೋ ಅದೇ ಮಂತ್ರಿಗ್ಳನ್ನ ನೀವಿಲ್ಲಿ ಕಾಣ್ಬಹುದು..!" ಅಂತಿದ್ದ.

ಇಂಥಾ ರೆಡ್ಡಿಗೆ ಆಗಾಗ ಕುಡಿಯುವ ಖಯಾಲಿ ಇತ್ತು. ಒಳ್ಳೆಯ ರೆಸ್ಟೊರೆಂಟಿಗೆ ಹೋಗಿ, ತುಂಬಾ ಪ್ಯಾಶನೇಟ್ ಆಗಿ ಕುಡಿಯುತ್ತಿದ್ದ. ಆವತ್ತೊಂದು ದಿನ ದಾರಿಯಲ್ಲಿ ಸಿಕ್ಕ ಸೂರಿಯನ್ನೂ ಕರೆದುಕೊಂಡು ಹೋಗಿದ್ದಾನೆ. ಸೂರಿ ಕುಡಿಯುವವನಲ್ಲ. ಆದರೆ 'ಪಿಯೋ ಪಿಯೋ.. ಕುಚ್ ನಹೀ ಹೋಗಾ..' ಎಂದ ರೆಡ್ಡಿಯ ಒತ್ತಾಯಕ್ಕೆ ಮಣಿದಿದ್ದಾನೆ. ಆ ರೆಸ್ಟೊರೆಂಟಿನ ಮಬ್ಬುಗತ್ತಲೆಯ ಭೂಮಿಕೆ, ತೇಲಿ ಬರುತ್ತಿದ್ದ ಬೆಳ್ಳಿತೆರೆಯ ಹಾಡು, ಗಾಳಿಯಲ್ಲಿ ಲೀನವಾಗುತ್ತಿದ್ದ ಸಿಗರೇಟಿನ ಹೊಗೆ ಸೂರಿಯನ್ನು ಭಾವನಾಲೋಕದಲ್ಲಿ ತೇಲುವಂತೆ ಮಾಡುವಲ್ಲಿ, ನೆನಪ ಬಂಡಿಹಾದಿಯಲ್ಲಿ ಹಿಂದಕ್ಕೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ.

ರಾತ್ರಿ ಹನ್ನೊಂದೂವರೆ ಆಗುತ್ತಿತ್ತು. ಯಾವುದೋ ಪುಸ್ತಕ ಹಿಡಿದು ಕೂತಿದ್ದೆ. "ಪಾರ್ಟನರಾ.. ಹೊರಾಗ್ ಬರ್ರೀ.. ಈಗ ಸುರೇಂದ್ರನ್ ಹಾಡ್ತಾರಾ.. ಇಲ್ಲೇ ಹಾಲಿಗ್ ಬರ್ರೀ.." ರೆಡ್ಡಿ ರೂಮಿನ ಬಾಗಿಲು ತಟ್ಟಿ ಕರೆಯುತ್ತಿದ್ದ. ಸೀರಿಯಸ್ಸಾಗಿ ಓದುತ್ತಿದ್ದೆನಾದಾರೂ ಒಲ್ಲದ ಮನಸ್ಸಿನಿಂದಲೇ ಹೊರಬಂದೆ.

ಸೂರಿ ಕುಡಿದಿದ್ದ. ನನ್ನ ಮುಖ ಕಂಡವನೇ ವಿಚಿತ್ರವಾಗಿ ನಕ್ಕ. 'ಬರ್ರೀ' 'ಬರ್ರೀ' ಎನ್ನುತ್ತಾ ರೆಡ್ಡಿ ಎಲ್ಲ ರೂಮುಗಳ ಬಾಗಿಲು ತಟ್ಟುತ್ತಿದ್ದ. ಪೀಜಿಯಲ್ಲಿದ್ದ ಹನ್ನೆರಡು ಚಿಲ್ಲರೆ ಹುಡುಗರೆಲ್ಲ ತಾವು ಧರಿಸಿದ್ದ ಚಡ್ಡಿ, ಲುಂಗಿ, ನೈಟ್ ಟ್ರಾಕುಗಳ ಮೇಲೇ, ಕಿವಿಗೆ ಸಿಕ್ಕಿಸಿಕೊಂಡಿದ್ದ ಎಫ್ಫೆಮ್ಮುಗಳ ಸಮೇತ ಹೊರಬಂದರು. ಹಾಲಿನಲ್ಲಿ ಉರಿಯುತ್ತಿದ್ದ ಟೀವಿಯ ದನಿಯನ್ನು ಮ್ಯೂಟ್ ಮಾಡಲಾಯಿತು. ಸೂರಿಯನ್ನು ಹಾಲಿನ ಮಧ್ಯದಲ್ಲಿದ್ದ ಸೋಫಾದ ಮೇಲೆ ಕೂರಿಸಲಾಯಿತು. ಎಲ್ಲರೂ ಸೂರಿಯನ್ನೇ ನೋಡುತ್ತಿದ್ದರು. "ಹೂಂ, ಶುರೂ ಕರೋ!" ರೆಡ್ಡಿ ಚಲಾವಣೆ ಕೊಟ್ಟ. ಸೂರಿ ಹಾಡತೊಡಗಿದ:

ಮೇರೇ ನಯನಾ, ಸಾವನ್ ಭಾದೋ
ಫಿರ್ ಭೀ ಮೇರಾ ಮನ್ ಪ್ಯಾಸಾ...

ಹೊರಗೆ ನಿಶ್ಯಬ್ದವನ್ನಾಳುತ್ತಾ ಧೋ ಸುರಿಯುತ್ತಿದ್ದ ಕತ್ತಲೆ. ಒಳಗೆ ಕಿಶೋರ್! ಸೂರಿ ಜೋಶಿನಲ್ಲಿದ್ದ. ಪೀಜಿಯ ಅಷ್ಟೂ ಹುಡುಗರೂ ಅಲ್ಲಾಡದೇ ನಿಂತು ಆಲಿಸುತ್ತಿದ್ದರು. ಸ್ಟ್ಯಾಂಡಿನ ಫೋಟೋದಲ್ಲಿದ್ದ ಹಸನ್ಮುಖಿ ದೇವರು, ಗೂಡಿನಲ್ಲಿ ಮುಚ್ಚಳ ತೆರೆಯುವುದನ್ನೇ ಕಾಯುತಿದ್ದ ಟಿಫಿನ್ ಕ್ಯಾರಿಯರ್, ಮೂಲೆಯಲ್ಲಿ ಸುಸ್ತಾರಿಸಿಕೊಳ್ಳುತ್ತಿದ್ದ ಚಪ್ಪಲಿಗಳು, ಮ್ಯೂಟಾಗಿದ್ದ ಟೀವಿಯಲ್ಲಿ ಚಲಿಸುತ್ತಿದ್ದ ಚಿತ್ರಗಳು... ಎಲ್ಲವೂ ಹಾಡು ಕೇಳಿದವು. ಸೂರಿ ದನಿಯೇರಿಸಿದಾಗೆಲ್ಲ ಹುಡುಗರು 'ವ್ಹಾವ್ ವ್ಹಾವ್!' ಎನ್ನುತ್ತಿದ್ದರು. ಸೂರಿ ಇಲ್ಲಿರಲೇ ಇಲ್ಲ. ನಾವೂ!

ಹಾಡು ಮುಗಿಯುತ್ತಿದ್ದಂತೆ ಟೆರೇಸು ಹಾರಿ ಹೋಗುವಂತೆ ಚಪ್ಪಾಳೆ. ನಾನೂ ಚಪ್ಪಾಳೆ ತಟ್ಟಿದೆ. ಸೂರಿಗೆ ಇಷ್ಟೊಳ್ಳೆ ಕಂಠವಿರಬಹುದೆಂದು ನಾನು ಊಹಿಸಿರಲೂ ಇಲ್ಲ. 'ಬಹುತ್ ಅಛ್ಛಾ ಗಾಯಾ..' 'ಸುರೇಂದ್ರನ್, ಒನ್ ಮೋರ್' ಇತ್ಯಾದಿ ಪ್ರಶಂಸೆ, ಮೊರೆ, ಗದ್ದಲ. ಸೂರಿ ಕರಗಿಹೋಗಿದ್ದ. ಕಳೆದುಹೋಗಿದ್ದ. ತನಗೆ ಇದ್ದಕ್ಕಿದ್ದಂತೆ ಲಭಿಸಿದ ಜನಪ್ರಿಯತೆ, ಬೇಡಿಕೆ, ಕ್ಷಣದಲ್ಲಿ ತಾನು ಪೀಜಿಯ ಹುಡುಗರ ಕಣ್ಣಲ್ಲಿ ಹೀರೋ ಆಗಿಹೋದ ವಿಸ್ಮಯಕ್ಕೆ ಅವನ ಹೃದಯ ಅವನನ್ನು ಮತ್ತಷ್ಟು ಭಾವುಕನನ್ನಾಗಿ ಮಾಡಿಬಿಟ್ಟಿತ್ತು. ಸೂರಿ ಹಾಡುವುದರ ಬದಲು ಅಳಲಿಕ್ಕೆ ಶುರುಮಾಡಿದ.

"ಯು ಆರ್ ಮೈ ಗಾಡ್ಸ್.. ಐ ಲವ್ ಯು ಆಲ್.." ಎಂದೇನೇನೋ ಅನ್ನುತ್ತಾ ಬಿಕ್ಕತೊಡಗಿದ. "ಸ್ವಲ್ಪ ಕುಡಿಸೇನ್ರೀ.. ಅದ್ಕೇ ಇಷ್ಟು ಟೈಟ್ ಆಗ್ಯಾನ..!" ರೆಡ್ಡಿ ನನ್ನ ಕಿವಿಯಲ್ಲಿ ಉಸುರಿದ. ಎಲ್ಲರೂ ಸೂರಿಯ ಬೆನ್ನು ತಟ್ಟಿ 'ಏ ಕಮಾನ್ ಸುರೇಂದ್ರನ್.. ಇಟ್ಸ್ ಓಕೇ.. ಚಲೋ, ಏನಾದ್ರೂ ತಿಂದು ಮಲ್ಕೋ' ಎನ್ನುತ್ತಾ ಸಮಾಧಾನ ಮಾಡಲು ಯತ್ನಿಸುತ್ತಿದ್ದರು. ಸೂರಿಯ ಅಳು ನಿಲ್ಲಲೇ ಇಲ್ಲ. ಬದಲಿಗೆ, ಆ ಅಳುವಿನೊಂದಿಗೆ, ಹಳೆಯ ಮಧುರ ದಿನಗಳ ವಿಷಾದದ ಕತೆ, ಸೂರಿಯ ಬಾಯಿಂದ ಬಿಕ್ಕು ಬಿಕ್ಕಾಗಿ ಹೊರಬರತೊಡಗಿತು.

ಸೂರಿ, ಕೇರಳದ ಕ್ಯಾಲಿಕಟ್ ಜಿಲ್ಲೆಯ ತುಷಾರಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವನು. ಅಪ್ಪನನ್ನು ನೋಡಿದ ನೆನಪಿಲ್ಲ. ಇವನಿಗೆ ವರುಷ ಮೂರಾಗುವುದರೊಳಗೇ ಸಾಬೂನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆತ ದುರಂತವೊಂದರಲ್ಲಿ ಕೊನೆಯುಸಿರೆಳೆದಿದ್ದ. ಅಮ್ಮನ ಆರೈಕೆಯಲ್ಲೇ ಅಕ್ಕನೊಂದಿಗೆ ಆಟವಾಡುತ್ತಾ ಬೆಳೆದವನು ಸೂರಿ. ತುಷಾರಗಿರಿಯಲ್ಲಿ ಒಂದು ಜಲಾಪಾತವಿದೆ. ಅಷ್ಟೇನು ದೊಡ್ಡದಲ್ಲದಿದ್ದರೂ ತಕ್ಕ ಮಟ್ಟಿಗೆ ಜನಪ್ರಿಯವಾಗಿರುವ ಜಲಪಾತ ಅದು. ಮನೆಯಲ್ಲಿ ತೀರಾ ಬಡತನವೇನು ಇರಲಿಲ್ಲ. ಅಪ್ಪ ಸತ್ತಮೇಲೆ, ತುಷಾರಗಿರಿಗೆ ಬರುವ ಪ್ರವಾಸಿಗರಿಗಾಗಿ ಮನೆಯಲ್ಲೇ ಒಂದು ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾಳೆ ಅಮ್ಮ. ಕಾರ್ಖಾನೆಯಿಂದ ಗಂಡನ ಹೆಸರಲ್ಲಿ ಬರುತ್ತಿದ್ದ ಹಣ ಮತ್ತು ಈ ಅಂಗಡಿಯಿಂದ ಬರುತ್ತಿದ್ದ ಅಷ್ಟಿಷ್ಟು ಲಾಭಗಳಿಂದ ಅಮ್ಮ ಸಲೀಸಾಗಿಯೇ ಸಂಸಾರವನ್ನು ತೂಗಿಸುತ್ತಿದ್ದಳು. ಹುಡುಗರನ್ನು ಶಾಲೆಗೆ ಕಳುಹಿಸುತ್ತಿದ್ದಳು. ಈ ಅಕ್ಕ-ತಮ್ಮ ಶಾಲೆಯಿಂದ ಬಂದೊಡನೆ ಪಕ್ಕದ ಮನೆಗೆ ಟೀವಿ ನೋಡಲು ಹೋಗುತ್ತಿದ್ದುದಂತೆ. ಅಕ್ಕನಿಗೆ ಹಾಡುಗಳು ಜಾಸ್ತಿ ಇರುವ ಸಿನೆಮಾ ಇಷ್ಟವಾದರೆ ತಮ್ಮನಿಗೆ ಫೈಟಿಂಗ್ ಇರುವ ಸಿನೆಮಾ. ಪ್ರತಿರಾತ್ರಿ ನಿದ್ರೆ ಬರುವವರೆಗೂ ಅಕ್ಕ-ತಮ್ಮ ಅಂತ್ಯಾಕ್ಷರೀ ಆಡುತ್ತಿದ್ದರಂತೆ. ಅಕ್ಕನಿಗೆ ಎಷ್ಟು ಹಾಡು ಬರುತ್ತಿದ್ದವು...! ಅಕ್ಕ ಹಾಕಿದ ಸವಾಲಿಗೆ ತಮ್ಮನಿಗೆ ಹಾಡು ತಿಳಿಯದೇ 'ಸೋತೆ' ಎಂದು ಒಪ್ಪಿಕೊಳ್ಳುವಂತಹ ಸಂದರ್ಭ ಬಂದಾಗ ಅಡುಗೆ ಮಾಡುತ್ತಿರುತ್ತಿದ್ದ ಅಮ್ಮ ಹಾಡು ಹೇಳಿಕೊಡುತ್ತಿದ್ದರಂತೆ. ಅವರು ಯಾವಾಗಲೂ ಮಗನ ಪರ. ಅಕ್ಕ ಅದಕ್ಕೇ ಸಿಟ್ಟಾಗಿ ಅಮ್ಮನ ಬಳಿ ಜಗಳಕ್ಕೆ ಹೋಗುತ್ತಿದ್ದುದಂತೆ. ಆಗ ಅಮ್ಮ ಅವಳಿಗೆ ಸಮಾಧಾನ ಮಾಡಿ, ಮಕ್ಕಳಿಬ್ಬರಿಗೂ ಹಾಲು ಕೊಟ್ಟು ಮಲಗಿಸುತ್ತಿದ್ದುದಂತೆ.

ಸೂರಿಗೊಬ್ಬ ಪ್ರೇಯಸಿಯಿದ್ದಳು. ತುಷಾರಗಿರಿ ಹತ್ತಿರದ ತಾಮರಶ್ಶೇರಿ ಎಂಬ ಊರಿನವಳು. ಡಿಗ್ರಿ ಓದುತ್ತಿದ್ದಾಗಿನ ಕ್ಲಾಸ್‌ಮೇಟು. ಅವಳನ್ನು ಹೋಲಿಸಲು ಹೊಸ ಉಪಮೆಗಳೂ ಇಲ್ಲ, ಹಳೆಯದನ್ನೇ ಬಳಸಲು ನನಗೆ ಇಷ್ಟವಿಲ್ಲ; ಅಷ್ಟು ಚೆನ್ನಾಗಿದ್ದಳಂತೆ ಆಕೆ! ಅವಳು ತುಂಬಾ ಕೀಟಲೆ ಮಾಡುವ, ಮಾತುಕೋರ ಹುಡುಗಿ. ಆಕೆಯ ಕಣ್ಣಲ್ಲೊಂದು ಕ್ರಿಯಾಶೀಲತೆಯ ಹೊಳಪಿತ್ತಂತೆ, ಝಳಪಿತ್ತಂತೆ. ಆಕೆಗೆ ತಾನೊಬ್ಬ ಮಾಡೆಲ್ ಆಗಬೇಕೆಂಬ ಆಸೆ ಇತ್ತಂತೆ. 'ಈ ಪ್ರಪಂಚವನ್ನೆಲ್ಲ ಒಮ್ಮೆ ಬೈಕಲ್ಲಿ ಸುತ್ತಿಬರಬೇಕು. ಬದುಕಿನಲ್ಲಿ ಥ್ರಿಲ್ ಇರಬೇಕು ಕಣೋ..' ಎನ್ನುತ್ತಿದ್ದಳಂತೆ. ಆದರೆ ಸೂರಿ ತುಂಬಾ ಮುಗ್ಧ, ಸಭ್ಯ ಸ್ವಭಾವದ, ಮೌನವನ್ನೇ ನೆಚ್ಚಿಕೊಂಡ ವ್ಯಕ್ತಿ. ಇಂಥವನ ಪ್ರೀತಿಯನ್ನು ಆ ಹುಡುಗಿ ಹೇಗೆ ಒಪ್ಪಿಕೊಂಡಳು?

ಸೂರಿಯ ಪ್ರಕಾರ, ಆಕೆ ಅವನ ಮುಗ್ಧತೆಯನ್ನು ನೋಡಿಯೇ ಒಪ್ಪಿಕೊಂಡಳು. ಸೂರಿ ಪ್ರಪೋಸ್ ಮಾಡಿದಾಗ ಅವನ ಕಣ್ಣಲ್ಲಿದ್ದ ನಿರ್ಮಲ ಪ್ರೀತಿ, 'ಹುಡುಗೀ ದಯವಿಟ್ಟು ನೀನು ನನ್ನ ಪ್ರೀತಿಯನ್ನು ಒಪ್ಪಿಕೋ... ಇಲ್ಲವೆನ್ನಬೇಡ' ಎಂಬ ಯಾಚನೆಯನ್ನು ತಿರಸ್ಕರಿಸಲಾಗದೇ ಒಪ್ಪಿಕೊಂಡಳು. ಸೂರಿಯ ಒಳ್ಳೆಯತನ, ನಿಷ್ಠೆ, ಕಪಟವೆಂದರೇನೆಂಬುದನ್ನೇ ಅರಿಯದ ಅವನ ಮನಸು ಮತ್ತು ಅವನಿಗೆ ತನ್ನೆಡೆಗಿದ್ದ ಆರಾಧನೆಯಂತಹ ಪ್ರೀತಿ ಎಲ್ಲಾ ಅವಳಿಗೂ ಇಷ್ಟವಾಗುತ್ತಿದ್ದವು.

"ಆದರೆ ಈ ಒಳ್ಳೆಯತನ, ಮೃದುತ್ವ, ಮುಗ್ಧತೆ ಎಲ್ಲಾ ಸ್ವಲ್ಪ ದಿನಕ್ಕೇ ಆಕೆಗೆ ಬೇಸರ ಉಂಟುಮಾಡ್ತು. ನಾವೂ ಎಲ್ಲರಂತೆ ಮದುವೆ ಆಗಿ, ಮಕ್ಕಳನ್ನು ಮಾಡಿಕೊಂಡು, ನಂತರ ಅವರು ಶಾಲೆಯಲ್ಲಿ ಮೇಡಂ ಹೇಳಿಕೊಟ್ಟದ್ದನ್ನೆಲ್ಲಾ ಚಾಚೂ ತಪ್ಪದೆ ನಮ್ಮೆದುರು ಒಪ್ಪಿಸುವಾಗ ಅವರ ಸಿಂಬಳ ಒರೆಸುತ್ತಾ ಉಜ್ವಲ ಭವಿಷ್ಯದ ಕನಸನ್ನು ಕಾಣುವುದು -ಎಲ್ಲಾ ಅವಳ ಪ್ರಕಾರ ಸಿಲ್ಲಿ ಅಂತೆ, ಸ್ಟುಪಿಡ್ ಅಂತೆ. ಅದೊಂದು ದಿನ ಆಕೆ ತನಗೆ ಟೀವಿ ಚಾನೆಲ್ಲೊಂದರಲ್ಲಿ ನಿರೂಪಕಿಯಾಗಲು ಕರೆ ಬಂದಿದೆಯೆಂದೂ, ತಾನು ಹೈದರಾಬಾದಿಗೆ ಮೂರು ತಿಂಗಳ ತರಬೇತಿಗಾಗಿ ಹೋಗುತ್ತಿರುವುದಾಗಿಯೂ ಹೇಳಿ ಟಾಟಾ ಮಾಡಿ ಹೋಗಿಬಿಟ್ಟಳು. ಆಮೇಲೆ ಅವಳ ಬದುಕೇ ಬದಲಾಗಿಬಿಟ್ಟಿತು. ತುಷಾರಗಿರಿ-ತಾಮರಶ್ಶೇರಿಯಂತಹ ಪುಟ್ಟ ಪರಿಸರದಲ್ಲಿ ಬದುಕಿದ್ದ ಅವಳಿಗೆ, ಹೈದರಾಬಾದು ಪ್ರಪಂಚದ ವೈಶಾಲ್ಯತೆಯನ್ನು ಪರಿಚಯ ಮಾಡಿಸಿಕೊಟ್ಟಿತು. ಪ್ರಪಂಚ ವಿಶಾಲವಾಗಿದೆ ಎಂದಾದಾಗ ಸೂರಿಯಂತಹ ಒಬ್ಬ ಸಾಮಾನ್ಯ ಹಳ್ಳಿಯ ಹುಡುಗ, ಮುಂದೆ ಏನೋ ಡಿಗ್ರಿ-ಪಗ್ರಿ ಮಾಡಿಕೊಂಡು ಸಣ್ಣದೊಂದು ಕೆಲಸ ಹಿಡಿದು ಹೊಟ್ಟೆ ಹೊರೆದುಕೊಳ್ಳಲಿರುವ ಹುಡುಗ, ಎಲ್ಲೋ ಒಂದೆರಡು ವರ್ಷ ಇಷ್ಟದಿಂದ ಜತೆಗೆ ಓಡಾಡಿಕೊಂಡಿದ್ದ ಹುಡುಗ, ಸಾಧಾರಣವಾಗಿಯೇ ಕ್ಷುಲ್ಲಕವಾಗಿ ಕಾಣುತ್ತಾನೆ. ಹುಡುಗಿ ನನ್ನೊಂದಿಗಿನ ಸಂಬಂಧವನ್ನು ಕಡಿದುಕೊಂಡಳು. 'ಪ್ರೀತಿ-ಪ್ರೇಮ-ಮದುವೆಗಿಂತ ದೊಡ್ಡದಾದ್ದು ಈ ಪ್ರಪಂಚದಲ್ಲಿ ತುಂಬಾ ಇದೆ ಕಣೋ ಸುರೇನ್.. ಎಕ್ಸ್‌ಪ್ಯಾಂಡ್ ಯುವರ್ ವ್ಯೂ..' ಎಂದೆಲ್ಲ ಉಪದೇಶ ಮಾಡಿದಳು. ಇರಬಹುದು ಪ್ರಪಂಚದಲ್ಲಿ ಪ್ರೀತಿಗಿಂತ ಮಿಗಿಲಾದ್ದು; ಆದರೆ ಆಕೆಯನ್ನು ಪ್ರಪಂಚಕ್ಕಿಂತಲೂ ಮಿಗಿಲಾಗಿ ಪ್ರೀತಿಸ್ತಿದ್ದ ನಾನು ಮಾತ್ರ ಛಿದ್ರವಾಗಿಹೋದೆ" -ಸೂರಿ ಅಲವತ್ತುಕೊಂಡ.

ಸೂರಿಯ ಪ್ರಲಾಪನೆಯಂತಹ ಕತೆಯನ್ನು ಕೇಳುತ್ತಿದ್ದ ಪೀಜಿಯ ಹುಡುಗರು ಸ್ವಲ್ಪ ಹೊತ್ತಿನ ಬಳಿಕ ಆಕಳಿಸುತ್ತಾ ನಿದ್ರೆ ಬರುತ್ತಿದೆಯೆಂದು ಒಬ್ಬೊಬ್ಬರೇ ರೂಮು ಸೇರಿ ಬಾಗಿಲು ಹಾಕಿಕೊಂಡರು. ಕುಡಿದಿದ್ದ ರೆಡ್ಡಿಯೂ ಸದ್ದು ಮಾಡದೇ ಹೋಗಿ ಮಲಗಿಕೊಂಡ. ಕೊನೆಗೆ ನಾನೊಬ್ಬನೇ ಉಳಿದಿದ್ದರಿಂದ ಅನಿವಾರ್ಯವಾಗಿ, ಮತ್ತು ಇಂತಹ ಸಂದರ್ಭಗಳಲ್ಲಿ 'ಜಾರಿಕೊಳ್ಳುವ ನಾಜೂಕು' ಅರಿಯದ ನಾನು, ಯಾವಾಗಲೂ ಆಗುವಂತೆ ಈಗಲೂ ಸಿಲುಕಿಕೊಂಡೆ. ಸೂರಿಯ ಕತೆ ಮುಗಿಯುವವರೆಗೂ ಪಕ್ಕದಲ್ಲೇ ಕೂತೆ.

ಡಿಗ್ರಿ ಮುಗಿಸಿದ ಸೂರಿ ದುಡಿಮೆಗೊಂದು ಕೆಲಸವನ್ನರಸಿಕೊಂಡು ಬೆಂಗಳೂರಿಗೆ ಬಂದ. ಸ್ಟಾಕ್ ಬ್ರೋಕರಿಂಗ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಇನ್ಶುರೆನ್ಸ್ ಏಜೆಂಟಾದ. ಮ್ಯೂಚುವಲ್ ಫಂಡ್‌ಗಳನ್ನು ಡೀಲ್ ಮಾಡಿದ. ಏನೇನೋ ಮಾಡಿದ, ನಾನಾ ವಿಧದಲ್ಲಿ ದುಡಿದ. 'ಮನೆಗೇನು ಹಣ ಕಳುಹಿಸುವುದು ಬೇಡ, ನೀನು ನಿನ್ನ ಕಾಲ ಮೇಲೆ ನಿಂತುಕೋ ಸಾಕು' ಎಂದು ಅಮ್ಮ ಹೇಳಿಬಿಟ್ಟಿದ್ದಳು. "ನಾನೀಗ ದುಡೀತಿದೀನಿ. ದುಡ್ಡು ಮಾಡೋದು ಹೇಗೇಂತ ಕಲ್ತಿದೀನಿ. ಬೆಂಗಳೂರು ಹೈದರಾಬಾದಿಗಿಂತ ದೊಡ್ಡದಿದೆ. ಪ್ರಪಂಚ ವಿಶಾಲವಾಗಿರುವುದರ ಅರಿವನ್ನು ನನಗೂ ಇದು ಮಾಡಿಕೊಟ್ಟಿದೆ. ದಿನೇದಿನೇ ಬ್ಯುಸಿನೆಸ್ ಮೈಂಡೆಡ್ ಆಗ್ತಿದೀನಿ. ಆದ್ರೆ ಸ್ಟಿಲ್, ನಾನಿನ್ನೂ ಆ ಮುಗ್ಧತೆ, ಒಳ್ಳೆಯತನ, ಸಂಕೋಚದ ಸ್ವಭಾವಗಳಿಂದ ಹೊರಬರಲಿಕ್ಕೆ ಸಾಧ್ಯವಾಗಿಲ್ಲ ಅಂಶುಮಂತ್... ಯು ನೋ ವ್ಹಾಟ್, ಅವಳು ಈಗ ಟೀವಿ ಚಾನೆಲ್ಲೊಂದರಲ್ಲಿ ಆಂಕರ್. ಪ್ರತಿದಿನ ಟೀವಿಯಲ್ಲಿ ಬರ್ತಾಳೆ. ಅದಕ್ಕೇ ನಾನು ಆ ಚಾನೆಲ್ ನೋಡೋದೇ ಇಲ್ಲ. ಆದರೂ ಎಲ್ಲಾದರೂ ಚಾನೆಲ್ ಬದಲಿಸುವಾಗ ಅರೆಕ್ಷಣ ಆಕೆ ಕಾಣಿಸ್ತಾಳೆ. ನನ್ನೆದೆಗೇ, ಯು ನೋ, ನನ್ನ ಎದೆಗೇ ನೈಫ್ ಹಾಕಿದ ಹಾಗೆ ಆಗತ್ತೆ... ನಂಗೆ ಅಳೂನೇ ಬರುತ್ತೆ... ಐ ನೋ, ಆಕೆ ನನಗೆ ಸಿಗೋದಿಲ್ಲ... ಆದ್ರೆ ಅವಳಲ್ದೇ ನಾನು ಬೇರಿನ್ಯಾರ ಜತೆಗೂ ಪ್ರೀತಿ, ಪ್ರೇಮ, ಮದುವೆಗಳ ಕನಸನ್ನ ಕಟ್ಟಲಾರೆ..." ಸೂರಿಯ ಬಿಕ್ಕು ಮುಂದುವರೆದಿತ್ತು.

ಅಷ್ಟೊತ್ತಿಗೆ ಮನೆಯ ಮಾಲೀಕರು ಬಂದು, ರಾತ್ರಿ ಒಂದು ಗಂಟೆಯಾದರೂ ಇನ್ನೂ ಲೈಟು ಉರಿಸಿಕೊಂಡು ಗಲಾಟೆ ಮಾಡುತ್ತಿರುವುದಕ್ಕಾಗಿ ಸರಿಯಾಗಿ ಬೈದರು. ಕೊನೆಗೆ ನಾನು ಹೇಗೆ- ಹೇಗೋ ಮಾಡಿ ಸೂರಿಗೆ ಸಮಾಧಾನ ಮಾಡಿ, ಕ್ಯಾರಿಯರ್‌ನಲ್ಲಿದ್ದ ಊಟ ಮಾಡಿಸಿ, ಮಲಗಿಸಿದೆ.

ನಂತರ ರೂಮಿಗೆ ಹೋಗಿ ಮಲಗಿದರೆ ನನಗೆ ನಿದ್ರೆಯೇ ಬರುತ್ತಿರಲಿಲ್ಲ. ಅಂದು ಸಂಜೆ ಬಂದು ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಸೂರಿ, ಇಂದು ಕುಡಿದು ಬಂದಾಗ ಹೊಸಬನಂತೆ ಕಾಣುತ್ತಿದ್ದ ಸೂರಿ, ಮತ್ತಿನ ಖುಷಿಯಲ್ಲಿ ದನಿಯೆತ್ತಿ ಹಾಡಿದ ಸೂರಿ, ನಂತರ ಹಳೆಯದನ್ನು ನೆನಪಿಸಿಕೊಂಡು ಚಿಕ್ಕ ಮಗುವಿನಂತೆ ಅಳತೊಡಗಿದ್ದ ಸೂರಿ, ಕೇವಲ ಒಂದು ತಿಂಗಳಿಂದ ಪರಿಚಯವಿರುವ ನನ್ನ ಬಳಿ ಅತ್ಯಾಪ್ತ ಗೆಳೆಯನ ಬಳಿ ಹೇಳಿಕೊಳ್ಳುವಂತೆ ತನ್ನ ಕತೆಯನ್ನೆಲ್ಲಾ ಹೇಳಿಕೊಂಡ ಸೂರಿ... ಊಹುಂ, ನನಗೆ ಆ ರಾತ್ರಿ ನಿದ್ರೆ ಬರಲೇ ಇಲ್ಲ...

***

ಹೊರಗೆ ಮಳೆ ನಿಂತಂತೆನಿಸುತ್ತದೆ. ಯಾವುದೋ ಕಂಪನಿಯ ಬ್ಯಾಲೆನ್ಸ್ ಶೀಟ್ ಮಾಡಲು ಕಂಪ್ಯೂಟರ್ ಮುಂದೆ ಕೂತ ನಾನು, ಏನೂ ಮಾಡದೇ ಹಳೆಯ ನೆನಪುಗಳಲ್ಲೇ ಮಗ್ನನಾಗಿ, ಯೋಚಿಸುತ್ತಾ ಅದರಲ್ಲೇ ಮುಳುಗಿಹೋಗಿಬಿಟ್ಟಿದ್ದೆ. ಬಾಗಿಲು ತೆರೆದು ಟೆರೇಸಿಗೆ ಬಂದು ಸಿಗರೇಟ್ ಹಚ್ಚಲು ಕಡ್ಡಿ ಗೀರಿದೆ. ಥೂ ಗಾಳಿ! ಕಡ್ಡಿ ಆರಿಹೋಯಿತು. ನಾನಿನ್ನೂ ಈ ಸಿಗರೇಟು ಸೇದಲು ಶುರು ಮಾಡಿ ಒಂದು ವಾರವಾಯಿತು. 'ಮೊದಮೊದಲು ಹೀಗೆಯೇ. ಆಮೇಲೆ ಫ್ಯಾನಿನ ಗಾಳಿಯ ಕೆಳಗೂ ಹಚ್ಚಬಹುದು!' ಗೆಳೆಯ ಹೇಳಿದ್ದು ನೆನಪಾಗಿ ಮತ್ತೊಂದು ಕಡ್ಡಿ ಗೀರಿದೆ. ಹೊತ್ತಿಕೊಂಡ ಸಿಗರೇಟಿನೊಡಲ ತಂಬಾಕಿನ ಹೊಗೆ ಫಿಲ್ಟರ್ ಆಗಿ ನನ್ನ ಬಾಯಿ, ಗಂಟಲ ನಾಳ, ಶ್ವಾಸಕೋಶವನ್ನೆಲ್ಲ ಆವರಿಸಿ, ಮೈ ಬೆಚ್ಚಗೆ ಮಾಡಿತು. ನೆನಪು, ಯೋಚನೆ ಮುಂದುವರೆಯಿತು.

ಆ ದಿನದ ಆ ಘಟನೆಯ ನಂತರ ಸೂರಿ ನನಗೆ ಆಪ್ತನಾಗಿ ಹೋದ. ನಾನೊಮ್ಮೆ ತುಷಾರಗಿರಿಗೆ ಪ್ರವಾಸ ಹೋಗಿದ್ದಾಗ ಸೂರಿಯ ಮನೆಗೆ ಹೋಗಿ ಬಂದಿದ್ದೆ. ಸೂರಿಯ ಅಮ್ಮ ನನ್ನ ಅಮ್ಮನಂತೆಯೇ ಕಂಡಿದ್ದಳು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಸೂರಿಯ ಅಕ್ಕ, ಸೇವಾಸಾಗರದಲ್ಲಿ ಟೀಚರ್ ಆಗಿ ಕೆಲಸ ಮಾಡುವ ನನ್ನ ಅಕ್ಕನಿಗಿಂತ ಭಿನ್ನಳೆಂದು ಎನಿಸಲೇ ಇಲ್ಲ. 'ಈ ವರ್ಷ ಅಕ್ಕನಿಗೆ ಮದುವೆ ಮಾಡ್ಬೇಕು ಮಾರಾಯಾ' ಎಂದು ಸೂರಿ ಹೇಳುವಾಗ, ನನ್ನ ಮೇಲಿರುವ ಜವಾಬ್ದಾರಿಯ ನೆನಪಾಗುತ್ತಿತ್ತು.

ನಾನು ಪೀಜಿ ಬಿಟ್ಟು, ಸೂರಿಯ ಮೊಬೈಲು - ಜತೆಗೇ ನನ್ನ ನಂಬರು ಕಳೆದುಹೋಗಿ, ಅವನು ಬೇರೆ ನಂಬರು ತಗೊಂಡಿದ್ದರಿಂದ ಮತ್ತು, ನನ್ನದೂ ಸಿ.ಎ. ಫೈನಲ್ ಮುಗಿದು, ಭರ್ಜರಿ ಫಲಿತಾಂಶದೊಂದಿಗೇ ಪಾಸಾಗಿ, ನಂತರ ನನ್ನದೇ ಸ್ವಂತ ಆಫೀಸು ಎಂದೆಲ್ಲ ಮಾಡಿಕೊಂಡು, ಬೇರೆ ಕಡೆ ಮನೆ ಮಾಡಿಕೊಂಡು, ಸೂರಿ ಓಡಾಡುವ ಜಾಗಗಳೂ ನನ್ನ ವ್ಯವಹಾರ ಕಕ್ಷೆಯೂ ಬದಲಾಗಿಹೋದ್ದರಿಂದ ನನಗವನ ಸಂಪರ್ಕವೇ ಕಡಿದುಹೋಯಿತು. ಆದರೆ ನನಗೆ 'ಮೇರೇ ನಯನಾ...' ಹಾಡು ಕೇಳಿದಾಗಲೆಲ್ಲ ಸೂರಿ ನೆನಪಾಗುತ್ತಿದ್ದ. ಆ ರಾತ್ರಿ ನೆನಪಾಗುತ್ತಿತ್ತು. ನನ್ನನ್ನು ಪೀಜಿಯ ಆ ದಿನಗಳಿಗೆ ದಿಗ್ಗನೆ ಒಯ್ದು ಬಿಟ್ಟುಬಿಡಬಲ್ಲ ನೌಕೆಯಂತಾಗಿತ್ತು ಆ ಹಾಡು.

ಆಮೇಲೆ ನನ್ನ ಅಕ್ಕನ ಮದುವೆಯಾಯಿತು. ಈಗ ವರುಷದ ಹಿಂದೆ ನನ್ನ ಮದುವೆಯೂ ಆಯಿತು. ನನ್ನ ಹೆಂಡತಿ ಸಾಫ್ಟ್‌ವೇರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಾಳೆ. ಪ್ರತಿದಿನ ಕ್ಯಾಬ್ ಬಂದು ಅವಳನ್ನು ಕರೆದುಕೊಂಡು ಹೋಗುತ್ತದೆ, ವಾಪಸು ತಂದು ಬಿಡುತ್ತದೆ. ಬೆಳಗ್ಗೆ ಏಳಕ್ಕೆ ಹೋದವಳು ರಾತ್ರಿ ಎಂಟರ ಹೊತ್ತಿಗೆ ಸುಸ್ತಾಗಿ ಮನೆ ಸೇರುತ್ತಾಳೆ. ಒಮ್ಮೊಮ್ಮೆ ನೈಟ್ ಶಿಫ್ಟು ಬೇರೆ.

ಅವಳು ಕೆಲಸಕ್ಕೆ ಹೋಗುವುದು ನನ್ನ ಅಭಿಲಾಷೆಯೇನೂ ಆಗಿರಲಿಲ್ಲ. ಅವಳು ಮನೆಯಲ್ಲೇ ಅಡುಗೆ ಮಾಡಿಕೊಂಡು ಇದ್ದರೆ ಸಾಕು ಅಂತ ಇತ್ತು. ಆದರೆ ಆಕೆಯೇ ಇಷ್ಟಪಟ್ಟು, ಹಟ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು. 'ಮನೇಲಿ ಕೂತು ಏನ್ ಮಾಡ್ಲಿ? ಓದಿದ್ದೆಲ್ಲ ಸುಮ್ನೇನಾ? ಬರೀ ನಿಂಗೆ ಹೆಂಡತಿಯಾಗಿ ಇರಲಿಕ್ಕಾ?' ಅಂತ ಕೇಳಿದ ದಿನ ಜೀನ್ಸ್ ಪ್ಯಾಂಟು-ಟೈಟ್ ಟಾಪಿನಲ್ಲಿದ್ದ ಅವಳು ನನ್ನೆದುರಿಗೆ ದಿಟ್ಟವಾಗಿ ನಿಂತಿದ್ದಳು. ಅವಳಿಗೆ ಉತ್ತರಿಸಲಾಗದೇ ನಾನು ತತ್ತರಿಸಿದ್ದೆ.

ಅಂದು ನಾನೊಬ್ಬನೇ ಕೂತು ಚಿಂತಿಸಿದ್ದೆ: ಹೆಂಡತಿ ಕೆಲಸಕ್ಕೆ ಹೋಗಬಾರದೆಂದು ನಾನು ಬಯಸುತ್ತಿರುವುದಕ್ಕೆ ಕಾರಣ ನನ್ನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯೇ ಎಂದು. ನಾನು ಹುಟ್ಟಿದ, ಬೆಳೆದ ಪರಿಸರವೇ ಹಾಗಿತ್ತು. ಅಪ್ಪನಿಲ್ಲದೇ, ಅಮ್ಮನ ಆಜ್ಞಾರಾಧಕನಾಗಿಯೇ ಬೆಳೆದವ ನಾನು. ಮನೆಯಲ್ಲಿ ಬಡತನವಿದ್ದುದರಿಂದ ಮತ್ತು ಸಮಾಜ ನಮ್ಮನ್ನು ಬೇರೆಯೇ ಆಗಿ ನೋಡುತ್ತಿದ್ದುದರಿಂದ ನನಗೆ ಅಷ್ಟಾಗಿ ಜನಗಳ ಸಂಪರ್ಕವಿರಲಿಲ್ಲ. ನನ್ನ ಅಕ್ಕನನ್ನು ನೋಡಿ, ಓಹ್ ಹೆಣ್ಣುಮಕ್ಕಳೆಂದರೆ ಹೀಗಿರಬೇಕು ಎಂದುಕೊಂಡಿದ್ದೆ. ಕಷ್ಟಪಟ್ಟು, ನಿದ್ದೆಗೆಟ್ಟು ಓದಿ ಸಿ.ಎ. ಮುಗಿಸಿಕೊಂಡಿದ್ದೆ. ಸಿ.ಎ.ಯನ್ನು ಮೊದಲನೇ ಪ್ರಯತ್ನದಲ್ಲೇ ಪಾಸ್ ಮಾಡಿಕೊಳ್ಳಲಿಕ್ಕೆ ತಪಸ್ಸು ಬೇಕು. ನಾನದನ್ನು ಸಾಧಿಸಿದ್ದೆ. ಈಗ ನನ್ನದೇ ಆಫೀಸು ಮಾಡಿಕೊಂಡು, ನನಗೂ ಕ್ಲೈಂಟುಗಳು ಸಿಗತೊಡಗಿ, ಬದುಕಿನಲ್ಲಿ ಭದ್ರವಾಗಿ ನೆಲೆಯೂರಿ ನಿಲ್ಲಬೇಕು ಎಂದುಕೊಂಡು, ನಾನೂ ದುಡ್ಡು ಮಾಡತೊಡಗಿ... ಲೆಕ್ಕಾಚಾರದಿಂದ ಬದುಕುವುದೇ ಸರಿ ಎಂದುಕೊಳ್ಳುತ್ತಾ, ಟೂರು, ಪಾರ್ಟಿ, ಸಿನೆಮಾ, ಶಾಪಿಂಗು ಎಂದೆಲ್ಲ ದುಂದು ಮಾಡುವುದು ತಪ್ಪು ಎಂದೆಲ್ಲ ನನಗೆ ನಾನೇ ಅಂದುಕೊಂಡು...

ಆದರೆ ನನ್ನ ಹೆಂಡತಿ ನನಗೆ ತದ್ವಿರುದ್ಧ ಸ್ವಭಾವದವಳು. ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೂ, ಒಬ್ಬಳೇ ಮಗಳಾದ್ದರಿಂದ ತಂದೆ-ತಾಯಿ ಅವಳಿಗೆ ಯಾವುದೇ ರೀತಿಯಲ್ಲಿ ಕಡಿವಾಣ ಹಾಕಿರಲಿಲ್ಲ. ಶಾಲೆ, ಕಾಲೇಜು, ಓಡಾಟ, ಓದು, ಖರ್ಚು ಇತ್ಯಾದಿಗಳ್ಯಾವುದಕ್ಕೂ 'ಕೇರ್' ಮಾಡದೇ, ತನಗೆ ಹೇಗೆ ಇಷ್ಟ ಬಂತೋ ಹಾಗೆ ಬದುಕಿದವಳು, ಬೆಳೆದವಳು. ನಮ್ಮ ಮದುವೆಯಾಗಿ ಒಂದು ವಾರವೂ ಕಳೆದಿರಲಿಲ್ಲ; ಅದೊಂದು ರಾತ್ರಿ ಆಕೆ 'ಏಯ್ ನಾವು ನಮ್ ನಮ್ಮ ಫಸ್ಟ್ ಲವ್‌ಗಳ ಬಗ್ಗೆ ಮಾತಾಡೋಣ್ವಾ ಇವತ್ತು?' ಅಂತ ಕೇಳಿದ್ದಳು. ಅವಳಿಗೆ ಹೈಸ್ಕೂಲಿನಲ್ಲೇ ಮೊದಲ ಪ್ರೇಮವಾಗಿತ್ತಂತೆ. ನಂತರ ಕಾಲೇಜಿನಲ್ಲಂತೂ ಇವಳಿಗೆ ಪ್ರಪೋಸ್ ಮಾಡಿದ್ದ ಹುಡುಗರ ಸಂಖ್ಯೆ ಲೆಕ್ಕಕ್ಕಿಲ್ಲವಂತೆ. ಇವಳೂ ಅವರಲ್ಲಿ ಸುಮಾರು ಹುಡುಗರ ಬಳಿ ಫ್ಲರ್ಟ್ ಮಾಡುತ್ತಾ ಸುತ್ತಾಡಿಕೊಂಡಿದ್ದಳಂತೆ. ಆದರೆ ನನ್ನ ಶಾಲೆ-ಕಾಲೇಜಿನ ದಿನಗಳಲ್ಲಿ ಇಂತಹ ಯಾವುದೇ ಅನುಭವಗಳಿಗೆ ನಾನು ಒಳಗಾಗಲೇ ಇಲ್ಲ. ಓದುವುದಕ್ಕಾಗಿಯೇ ಕಾಲೇಜಿಗೆ ಹೋಗುವುದು ಎಂದುಕೊಳ್ಳುತ್ತಿದ್ದೆ ಮತ್ತು ನಾನು ಸದಾ ನನ್ನ ಬಗ್ಗೆ ಕೀಳರಿಮೆಯಿಂದ ನರಳುತ್ತಿರುತ್ತಿದ್ದೆ.. 'ನಂಗೆ ಆ ಥರ ಫಸ್ಟ್ ಲವ್ವು ಸೆಕೆಂಡ್ ಲವ್ವು ಅಂತೆಲ್ಲ ಯಾರೂ ಇರ್ಲಿಲ್ಲ ಕಣೇ' ಎಂದು ನಾನೆಂದಾಗ 'ಥೂ! ಯು ಆರ್ ಎ ಟೇಸ್ಟ್‌ಲೆಸ್ ಫೆಲೋ!' ಎಂದು ದೂರಿದ್ದಳು ಆಕೆ. ಆಕೆಯ ಕನಸಿನ ಹುಡುಗ ಸಿಗರೇಟ್ ಸೇದುವವನಾಗಿದ್ದನಂತೆ, ಪಾರ್ಟಿಗಳಿಗೆ ತನ್ನನ್ನು ಕರೆದುಕೊಂಡು ಹೋಗಿ ಕುಡಿಯುತ್ತಿದ್ದನಂತೆ, ರಾಕ್ ಮ್ಯೂಸಿಕ್ಕಿಗೆ ಡಾನ್ಸ್ ಮಾಡುತ್ತಿದ್ದನಂತೆ.. 'ಮತ್ತೆ ಇದ್ಯಾವುದೂ ಇಲ್ಲದ ನನ್ನನ್ಯಾಕೆ ಮದುವೆಯಾಗಲಿಕ್ಕೆ ಒಪ್ಪಿದೆ?' ಅಂತ ನಾನು ಕೇಳಿದ್ದಕ್ಕೆ 'ನಾನೇನೂ ಮನಃಪೂರ್ವಕವಾಗಿ ಒಪ್ಪಿದ್ದಲ್ಲ. ಅಪ್ಪ-ಅಮ್ಮ ಹಟ ಮಾಡಿದರು ಅಂತ ಒಪ್ಪಿದೆ. ಅಲ್ಲದೇ ನೀನು ಇಷ್ಟೊಂದು ಪೇಲವ ವ್ಯಕ್ತಿತ್ವದ ಹುಡುಗ ಅಂತ ಗೊತ್ತಿರಲೂ ಇಲ್ಲ' ಎಂದು ಮುನಿದು ನುಡಿದಿದ್ದಳು.

ಆವೊತ್ತು ನನಗೆ ಸೂರಿ ತುಂಬಾ ತುಂಬಾ ನೆನಪಾಗಿದ್ದ.. ಅವಳಿಗೆ ನಿದ್ರೆ ಬಂದಮೇಲೆ ನಾನೊಬ್ಬನೇ ಎದ್ದು ಹೋಗಿ ಸೀಡಿ ಹುಡುಕಿ ಪ್ಲೇಯರಿಗೆ ಹಾಕಿ 'ಮೇರೇ ನಯನಾ' ಹಾಡು ಮತ್ತೊಮ್ಮೆ ಕೇಳಿದ್ದೆ. ಸಣ್ಣಕೆ ಬಿಕ್ಕಿದ್ದೆ, ಬೆಚ್ಚಿದ್ದೆ. ನಾನೊಬ್ಬ 'ಅಭಿರುಚಿಗಳೇ ಇಲ್ಲದ ಹುಡುಗ', 'ಪೇಲವ ವ್ಯಕ್ತಿತ್ವದ ಹುಡುಗ' ಎಂಬ ಅವಳ ಚುಚ್ಚುಮಾತು ಆಮೇಲಿಂದ ನನ್ನನ್ನು ಕೊರೆಯಲಾರಂಭಿಸಿತು. ಅಭಿರುಚಿಗಳನ್ನು ಹೇಗೆ ಬೆಳೆಸಿಕೊಳ್ಳುವುದು ಅರ್ಥವಾಗಲಿಲ್ಲ. ಆಮೇಲೆ ಅನ್ನಿಸಿತು: ಅವಳ ಕಾಲ್‌ಸೆಂಟರ್ ಕೆಲಸ, ಶಿಫ್ಟುಗಳು, ವಿದೇಶೀ ಜನಗಳೊಂದಿಗೆ ದಿನವೂ ಮಾತು-ವ್ಯವಹಾರ, ತರಹೇವಾರಿ ಗೆಳೆಯರು, ಡ್ರೆಸ್‌ಕೋಡ್, ಪಾರ್ಟಿ-ಔಟಿಂಗ್ ಅಂತ ಹೋಗುವುದು... ನನ್ನದೋ, ಪುಟ್ಟ ಆಫೀಸು, ಇದೇ ಬೆಂಗಳೂರಿನ ಅಷ್ಟಿಷ್ಟು ಸಣ್ಣ-ಪುಟ್ಟ ಕಂಪನಿಗಳ ಕ್ಲೈಂಟುಗಳು, ಇದೇ ಅಕೌಂಟ್ಸು, ಬಂದು-ಹೋಗುವ ಕನ್ನಡದಲ್ಲೇ ಮಾತನಾಡುವ ಜನಗಳು, ನೆಗಡಿಯಾದರೆ ಕಷಾಯ ಕುಡಿಯುವ ನಾನು... ಹೀಗೆ ಅವಳ ಪ್ರಪಂಚವೇ ಬೇರೆ, ನನ್ನ ಪ್ರಪಂಚವೇ ಬೇರೆ. ಆಕೆ ಮತ್ತು ನಾನು ಸಂಪೂರ್ಣ ಬೇರೆಯದೇ ಆದ ಅಭಿರುಚಿಗಳುಳ್ಳ, ನೆಲೆಗಳುಳ್ಳ, ದಾರಿಗಳುಳ್ಳ, ಕನಸುಗಳುಳ್ಳ ವ್ಯಕ್ತಿಗಳು-ಎಂದು. ಆದರೂ... ಆದರೂ... ನಾನೊಬ್ಬ ಅಭಿರುಚಿಗಳೇ ಇಲ್ಲದವನು, ಪೇಲವ ವ್ಯಕ್ತಿತ್ವದವನು ಎಂಬ ಅವಳ ಆಕ್ಷೇಪಣೆಗಳಿಗೆ ನಾನು ಎದುರುತ್ತರ ಹೇಳಲಾರದೇ ಹೋಗಿದ್ದೇನೆ. ನಾನು ಬದಲಾಗಬೇಕೆಂದು ತೀರ್ಮಾನಿಸಿದ್ದೇನೆ. ಆದರೆ ಆ ನನ್ನ ತೀರ್ಮಾನ ಸರಿಯೇ ತಪ್ಪೇ ಎಂಬ ಬಗ್ಗೆ ಇನ್ನೂ ಗೊಂದಲದಲ್ಲಿದ್ದೇನೆ.

ಅವಳಿಗಾಗಿ ಬದಲಾಗಬೇಕೆಂದು ನಾನೇಕೆ ಹಂಬಲಿಸುತ್ತಿದ್ದೇನೆ? ನಾನೇಕೆ ಸಿಗರೇಟು ಸೇದುವುದನ್ನು ಕಲಿಯುತ್ತಿದ್ದೇನೆ? ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನನಗಿಷ್ಟವಿಲ್ಲದ ಕೆಲಸಗಳನ್ನು ಮಾಡುವುದು, ನನ್ನ ಆದರ್ಶಗಳನ್ನು ಬಲಿ ಕೊಡುವುದು -ಇದೇ ನನ್ನ ಬದುಕಾಗಿ ಹೋಯಿತೇ?

ಸೂರಿ ಹೇಗೆ ಬದುಕಿನೊಂದಿಗೆ ರಾಜಿ ಮಾಡಿಕೊಂಡ? 'ಅವಳಿಲ್ಲದೆ ಬದುಕಿಲ್ಲ' ಎನ್ನುತ್ತಿದ್ದ ಸೂರಿ ಈಗ ಮತ್ಯಾವುದೋ ಹುಡುಗಿಯನ್ನು ಮದುವೆ ಮಾಡಿಕೊಂಡು, ಆಕೆಯೊಂದಿಗೆ ಪ್ರಪಂಚ ಸುತ್ತುತ್ತಾ, ಕೇಳಿದವರಿಗೆ 'ಮೈ ವೈಫ್' ಎಂದು ಪರಿಚಯಿಸಿಕೊಳ್ಳುವಷ್ಟರ ಮಟ್ಟಿಗೆ ಹೇಗೆ ಬದಲಾದ? ಹಾಗೆ ತನ್ನ ಮನಸ್ಸನ್ನು ಪರಿವರ್ತಿಸಿಕೊಳ್ಳಲು ಅವನು ಪಟ್ಟಿರಬಹುದಾದ ಪಾಡುಗಳೇನು? ಅಥವಾ ಯಾವುದೋ ಅನಿವಾರ್ಯತೆಗೆ ಸಿಕ್ಕಿ ಹೀಗಾದನೇ? ಬದುಕಿನಲ್ಲಿ ನಾವಂದುಕೊಂಡದ್ದು ಆಗದೇ ಮತ್ತಿನ್ನು ಹೇಗೋ ಬದುಕುವ ಸಂಭವ ಬಂದಾಗಲೆಲ್ಲ 'ಅಡ್ಜಸ್ಟ್‌ಮೆಂಟ್ಸ್ ಮ್ಯಾನ್' ಎಂದು ಹೇಳಿ ನುಣುಚಿಕೊಳ್ಳುವುದು ಬುದ್ಧಿವಂತಿಕೆಯಾ? ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳುತ್ತ ಸಾಗುವುದೇ ಬದುಕಾ? ಪರಿಸ್ಥಿತಿಗೆ ತಕ್ಕಂತೆ ನಮ್ಮ ಜೀವನಶೈಲಿಯನ್ನು, ಕನಸುಗಳನ್ನು, ಆದರ್ಶಗಳನ್ನು ಬದಲಾಯಿಸಿಕೊಳ್ಳುತ್ತಾ, ತಿದ್ದಿಕೊಳ್ಳುತ್ತಾ ಹೋಗುವುದೇ ಸರಿಯಾ? ಈಗ ನಾನೂ ಸೂರಿಯಂತೆ ಬದಲಾಗಬೇಕಿದೆಯಾ?

ಗೊತ್ತಿಲ್ಲ... ಸೂರಿಯೊಂದಿಗೇ ಕೂತು ಮಾತಾಡಬೇಕು ಈ ವಿಷಯವಾಗಿ. ಮುಂದಿನ ಭಾನುವಾರ ಅವನ ಮನೆಗೆ ಹೋಗಬೇಕು. ಅವರ ಮದುವೆಗೆ ಹೋಗಲಾಗದ್ದಕ್ಕೆ ಏನಾದರೂ ಉಡುಗೊರೆ ಒಯ್ಯಬೇಕು. ಆ ದಂಪತಿಗಳನ್ನು ನಮ್ಮ ಮನೆಗೆ ಕರೆಯಬೇಕು. ಅವನ ಬಳಿ ಇನ್ನೊಮ್ಮೆ ಆ ಹಾಡು ಹಾಡಿಸಬೇಕು...

ಮುಗಿಯಲು ಬಂದಿದ್ದ ಸಿಗರೇಟನ್ನು ಕಾಲಲ್ಲಿ ಹೊಸಕಿ ಹಾಕುತ್ತೇನೆ. ಮೊಬೈಲಿನ ರಿಮೈಂಡರಿನಲ್ಲಿ ಭಾನುವಾರದ ದಿನಾಂಕಕ್ಕೆ 'ವಿಸಿಟ್ ಸೂರಿ ಮನೆ' ಎಂದು ನೋಟ್ ಮಾಡಿಕೊಳ್ಳುತ್ತೇನೆ. ತಡವಾಗಿ ಬರುವ ಅವಳಿಗೆ ಅನುಕೂಲವಾಗಲೆಂದು ಮುಂಬಾಗಿಲನ್ನು ಕೀಯಿಂದ ಲಾಕ್ ಮಾಡಿ, ರೂಮಿಗೆ ಬಂದು ಹಾಸಿಗೆಯಲ್ಲಿ ಪವಡಿಸುತ್ತೇನೆ.

['ದ ಸಂಡೇ ಇಂಡಿಯನ್' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ.]