Sunday, October 04, 2015

ಗಣೇಶ ಹೋದಮೇಲೆ

ಗಣೇಶ ಹೋದಮೇಲೆ ಬೀದಿಯಲ್ಲಿ ಪರಮಮೌನ.
ಮೂರು ದಿನದಿಂದ ಮೊಳಗುತ್ತಿದ್ದ ಮೈಕಿನ ಸದ್ದಡಗಿ
ಸಾಲುಮನೆಗಳ ಸೋಪಾನದಲ್ಲಿ ಹೆಜ್ಜೆಗಳಿಗೆ ಬಾಯಿ ಮರಳುವುದು.
ಕಿಟಕಿಗಳು ತೆರೆಯಲ್ಪಡುವವು. ನೆಂಟರೊಡನೆ ಬಂದಿದ್ದ ಕೀಟಲೆ ಮಕ್ಕಳು
ಹೊರಟುಹೋದಾಗ ತುಂಬುವ ನೀರವದಂತೆ ಕಿವಿಗಳು ಗವ್ವೆನ್ನುವವು.
ಎದ್ದೇಳು ಮಂಜುನಾಥಾ ಎಂದು ಮುಂಜಾನೆಯೇ ಬಡಿದೆಬ್ಬಿಸುವ ಹಾಡಿಲ್ಲ.
ಅನ್ನಸಂತರ್ಪಣೆಗೆ ಸಾಲಾಗಿ ಬನ್ನಿ ಎನ್ನುವವರಿಲ್ಲ. ಮಂತ್ರಪಾರಾಯಣವಿಲ್ಲ.
ಪ್ರತಿಮನೆಗೂ ಬಳ್ಳಿಯಾಗಿ ನೇತುಬಿಟ್ಟಿದ್ದ ಸರಣಿದೀಪಗಳನ್ನೂ ತೆರವುಗೊಳಿಸಿ
ಈಗ ಎಲೆಯುದುರಿದ ಶಿಶಿರದ ಕಾಡಂತೆ ಬೀದಿ ಪಿಚ್ಚೆನಿಸುವುದು.

ಆರ್ಕೆಸ್ಟ್ರಾದಲ್ಲಿ ವನ್ಸ್‌ಮೋರ್ ಬೇಡಿಕೆಗೆ ಕಲಕಲ್ಪಟ್ಟಿದ್ದ ಹೃದಯಸಮುದ್ರದಬ್ಬರವೂ ಇಳಿದು
ತೀರದಲ್ಲೀಗ ಅಲೆಗಳಿಲ್ಲದ ಬೇಸರ. ಬೀದಿಯಲ್ಲೇ ಎದ್ದುನಿಂತಿದ್ದ ವೇದಿಕೆಯೂ
ಸಭಾತ್ಯಾಗ ಮಾಡಿ ದಾರಿಹೋಕರಿಗೆ ಬಣಬಣ. ತರಕಾರಿ ತಳ್ಳುಗಾಡಿಯವನು
ಈ ಜಾಗ ದಾಟಿಹೋಗುವಾಗ ಒಂದು ಕ್ಷಣ ಅನುಮಾನಿಸುವನು; ಅಕಸ್ಮಾತ್ ಕೊತ್ತಂಬರಿ ಕಟ್ಟು
ಕೆಳಗೆ ಜಾರಿಬಿದ್ದರೆ ಗರಿಕೆಹುಲ್ಲು ಗಣೇಶಾರ್ಪಣವಾಯಿತೆಂದು ಹಾಗೇ ಸಾಗುವನು.

53ನೇ ವರ್ಷದ ಗಣೇಶೋತ್ಸವದ ಬ್ಯಾನರು ಇಳಿಸಿಯಾದಮೇಲೆ
ಸಂಘಟಕರ ಮನೆಯ ಕೋಣೆಯಲ್ಲಿ ಲೆಕ್ಕಾಚಾರದ ಸಮಯ.
ತಮಟೆಯ ಬಡಿತಕ್ಕೆ ಕುಣಿದ ಇವರ ಕಾಲುಗಳ ನೋವು ಹ್ಯಾಂಗೋವರಿನೊಂದಿಗೆ
ನಿಧಾನಕೆ ಇಳಿಯುವಾಗ, ಅತ್ತ ಮುಳುಗಿದ ಕೆರೆಯಲ್ಲಿ ವಿಘ್ನೇಶ್ವರ ಹಿತವಾಗಿ ಕರಗುವನು.
ಪಕ್ಕದ ಬೀದಿಯಲ್ಲಾಗಲೇ ಏಳುತ್ತಿರುವ ವೇದಿಕೆಯಲ್ಲಿ ಪುನರಾವಿರ್ಭವಸಲು ಸಜ್ಜಾಗುವನು.
ಸದ್ದುಗದ್ದಲಗಳೆಲ್ಲ ಸಾಲುಮನೆಗಳ ಮೇಲಿಂದ ಹೈಜಂಪು ಮಾಡಿ ಅತ್ತ ಸಾಗುವವು.
ಸಂಭ್ರಮದತಿಥಿ ಟ್ರಾಕ್ಟರಿನಲ್ಲಿ ತನ್ನನ್ನು ದಾಟಿಹೋಗುವಾಗ ಈ ಬೀದಿ
ಇಲ್ಲಿಂದಲೇ ಕೈಬೀಸಿ ಗೆಳೆಯನಿಗೆ ಹಾಯೆನ್ನುವುದು. ಮೋದಕಹಸ್ತ ಕುಲುಕಲ್ಲೆ ಸ್ಪಂದಿಸುವನು.

No comments: