Thursday, November 19, 2015

ಹುಚ್ಚ ವೆಂಕಟ್‌ಗೆ

ನಿನ್ನ ಕೆದರಿದ ತಲೆಗೂದಲು
ರಕ್ತ ತುಂಬಿದ ಕೆಂಗಣ್ಣು
ನೀಲಿಯಂಗಿಯ ವೇಷ
ಉಕ್ಕುಕ್ಕಿ ಬರುವ ಆವೇಶ
ಕೆಮೆರಾದ ಎದೆಯೊಡೆಯುವಂತೆ ದುರುಗುಟ್ಟುವ ಆ ನೋಟ
ಚೂರೇ ಬಾಗಿದ ಕತ್ತು
ಕುಡಿಯುವೆಯೆನ್ನುವ ಲೋಕಲ್ ವಿಸ್ಕಿ

ನಿನ್ನ ಹಳೆಯ ಪ್ರೇಮಕಥೆಗಳು
ಸಿನಿಮಾದೆಡೆಗಿನ ಅಪಾರ ಮೋಹ
ಯಾರನ್ನೂ ಎದುರಿಸುವ ಕಿಚ್ಚು
ಮೇಲೇರೆರಗಿಹೋಗುವ ತಾಕತ್ತು
ಹೃದಯದೊಳಗೆ ತುಂಬಿಕೊಂಡಿರುವ ಕಣ್ಣೀರು

ನಿನ್ನ ಮೇಲೆ ನಿನಗೇ ಇರುವ ವಿಷಾದ
ಲೋಕದೆಡೆಗಿನ ಅತಾರ್ಕಿತ ಭ್ರಮೆಗಳು
ಕುಲುಮೆಯಿಂದೀಗಷ್ಟೆ ತಂದ ಕತ್ತಿಯಲಗಿನಂಥ ಮಾತುಗಳು
ಹೆಮ್ಮಕ್ಕಳ ಕಾಲಿಗೆ ಬೀಳುವೆನೆನ್ನುವ ಗುಣ
ಕಂಬಳಿಹುಳುವಿನ ಹಾರುವ ಕನಸು
ಗಳಿಗೆಗೊಮ್ಮೆ ಗುಟುಕರಿಸುವ ಚಹಾ

ಪುರಾಣದಲ್ಲಿ ಕಥೆಗಳು:
ಉಗ್ರನಾಗಿದ್ದ ನರಸಿಂಹನ ಕೋಪಶಮನ ಮಾಡಲು
ಲಕ್ಷ್ಮಿಯೇ ಪ್ರಾರ್ಥಿಸಿ ಅವನ ಜತೆಯಾದಳಂತೆ..
ಸೊಕ್ಕಿನಿಂದ ಮುನ್ನುಗ್ಗಿ ಹರಿಯುತ್ತಿದ್ದ ಗಂಗೆಯನ್ನು
ಆಪೋಶನ ತೆಗೆದುಕೊಂಡನಂತೆ ಜಹ್ನು ಮಹರ್ಷಿ..
ದೂರ್ವಾಸರ ಕೋಪಶಮನ ಮಾಡಲು
ಲಕ್ಷ್ಮಣ ಸಾವನ್ನೇ ಸ್ವೀಕರಿಸಿದನಂತೆ..

ನರಸಿಂಹ, ಜಾಹ್ನವಿ, ದೂರ್ವಾಸರ ಕೋಪಗಳಿಗೂ
ಕಥೆಯಿದೆ, ಕಾರಣವಿದೆ ಪುರಾಣದಲ್ಲಿ.
ವೆಂಕಟ್, ಹಾಗೇ ನಿನ್ನ ಕೋಪ, ತಾಪ, ಪ್ರತಾಪಗಳಿಗೂ.
ವ್ಯತ್ಯಾಸ ಇಷ್ಟೇ: ಇಲ್ಲಿ ನಿನ್ನನ್ನು ರಕ್ಷಿಸಲು
ಯಾವ ಲಕ್ಷ್ಮಿಯೂ ಇಲ್ಲ, ಜಹ್ನುವೂ ಇಲ್ಲ,
ತ್ಯಾಗಕ್ಯಾರೂ ಸಿದ್ಧರಿಲ್ಲ.

ಮಥನದಲುದ್ಭವಿಸುವ ಹಾಲಾಹಲದ ಹಾಹಾಕಾರ
ನಮಗೆಲ್ಲ ರುಚಿಯೆನಿಸುವ ಹೊತ್ತಿನಲ್ಲಿ ನೀಲಕಂಠನಿಗೇನು ಕೆಲಸ
ನರಕಾಸುರ, ಶಂಬರಾಸುರ, ಕಂಸ, ಶಿಶುಪಾಲರ
ರಾಜ್ಯಭಾರವನ್ನೊಪ್ಪಿಕೊಂಡ ಮೇಲೆ ಕೃಷ್ಣನ ಸುದರ್ಶನ ಚಕ್ರಕಿಲ್ಲ ತಾವು
ಅತ್ಯಾಚಾರ, ಕೊಲೆ, ಸುಲಿಗೆಗಳ ನೋಡಿ ಸುಮ್ಮನಿರುವ ನಮಗೆ
ದುಷ್ಟಸಂಹಾರೀ ರಾಮನ ಅವಶ್ಯಕತೆಯಿಲ್ಲ ಬಿಡು.

ನಿನ್ನ ನೋವು, ನಿರಾಶೆ, ವಿಷಾದ, ಕೋಪಗಳನ್ನು ಹೀರಲು
ಇಲ್ಯಾರೂ ಅವತರಿಸುವುದಿಲ್ಲ. ನೀನು ಬಲಿಪಶು.
ನಾನು ಕೊಲೆಗಾರ.  

['ಸಖಿ' ಪಾಕ್ಷಿಕದಲ್ಲಿ ಪ್ರಕಟಿತ]

1 comment:

Swarna said...

ಈ ಸಾಲುಗಳು ಇಷ್ಟವಾದವು . ಹೌದು ಕೊಲೆಗಾರರೇ ನಾವು , ರಂಜನೆಗಾಗಿ ಕೊಂದ ಮೈ ಮನಗಳ ಲೆಖ್ಕ ತಪ್ಪಿ ಬಹುಕಾಲವಾಯ್ತು.