Friday, October 30, 2015

ಗದ್ದೆಹಾದಿ

ಬಸ್ ನಿಲ್ದಾಣದಿಂದ ಮನೆಗೆ ಹೋಗಲು
ಗದ್ದೆಹಾದಿಯೇ ಹತ್ತಿರ ಎಂಬ ಮಾತು ಆಗ ಎಲ್ಲರ ಬಾಯಲ್ಲಿ..
ನಡಿಗೆಗೆ ಬಹುದೂರವೆಂದು ವರ್ಜಿಸಲ್ಪಟ್ಟ ಮುಖ್ಯರಸ್ತೆ
ಬಿಸಿಲಲ್ಲಿ ಬಣಗುಡುತ್ತ ಹೊರಗೆ ಬಿದ್ದುಕೊಂಡಿರುತ್ತಿತ್ತು.
ನಡೆದು ನಡೆದೇ ಸವೆದಿದ್ದ ಒಳಹಾದಿಯ ಗದ್ದೆಬದುವಿನ ಮೇಲೆ
ಹೆಜ್ಜೆಯ ಮೇಲೊಂದೆಜ್ಜೆಯನಿಕ್ಕುತ ನಡೆಯುತ್ತಿದ್ದರೆ
ಬಾಗಿದ ಭತ್ತದ ತೆನೆಗಳು ತಾಗಿ ಮೊಣಕಾಲಿಗೆ ಕಚಗುಳಿ..
ಟುರ್ರನೆ ಹಾರುವ ಸಣ್ಣ ಪೊದೆಯ ಹಿಂದಡಗಿದ್ದ ಪುಟ್ಟಹಕ್ಕಿ
ಸರ್ರನೆ ಸರಿಯುವ ಮಟ್ಟಿಯ ಮರೆಯ ಬಿಳಿಹಾವು
ಅಂಚಿಗೆ ಕಾಲಿಟ್ಟರೆ, ಜರ್ರನೆ ಜಾರುವ ಒದ್ದೆಬದು.

ಗಂಡಸರು ಪಂಚೆ ಮಡಿಚಿ ಕಟ್ಟಿಕೊಂಡೂ, ಹೆಂಗಸರು ಸೀರೆ
ಸ್ವಲ್ಪವೇ ಎತ್ತಿಕೊಂಡೂ ಅರಲು ತಾಗದಂತೆ ಹುಷಾರಾಗಿ ಅಡಿಯಿಡುವರು.
ನಡುವೆ ಸಿಕ್ಕ ಊದ್ದನೆ ಸಾರವನ್ನು ಚಪ್ಪಲ್ಲಿ ಕೈಯಲ್ಲಿ ಹಿಡಿದು
ಥರಥರಗುಡುತ್ತ ದಾಟಿಬಿಟ್ಟರೆ ನಂತರದ ತಂಪುಹಾದಿಯಲ್ಲಿ ನಿಟ್ಟುಸಿರು.

ವಾಹನಗಳು ಅಗ್ಗವಾದವೋ ಜನರು ಸಿರಿವಂತರಾದರೋ,
ಮುಖ್ಯರಸ್ತೆಯಲ್ಲಿ ಮೋಟಾರುಗಳ ಸಶಬ್ದ ಸಂಚಾರ ಹೆಚ್ಚಾಯಿತು.
ಕೆಂಪುರಸ್ತೆ ಟಾರು ಹೊಯ್ಯಿಸಿಕೊಂಡು ಪೂರ ಕಪ್ಪಾಯಿತು.
ಹೊಸಹುಡುಗರ ಪ್ಯಾಂಟೂ, ಲಲನೆಯರ ಲೆಗ್ಗಿಂಗೂ ಕೆಸರಸ್ಪರ್ಶಕ್ಕೆ
ಹೆದರಿ ಗದ್ದೆಹಾದಿಯ ತ್ಯಜಿಸಿದವು. ಒಳಹಾದಿಗಿಂತ ಥಳಗುಟ್ಟುವ
ಬಳಸುದಾರಿಯೇ ಬಳಕೆಗನುಕೂಲವೆನಿಸಿದ ಘಳಿಗೆ
ಮುಖ್ಯರಸ್ತೆ ವಿಜಯೋತ್ಸವದಲಿ ವಿಜ್ರಂಭಿಸಿತು.

ಗದ್ದೆಹಾದಿಯ ಮೇಲೀಗ ಚುಪುರಾಗಿ ಬೆಳೆದ ಹುಲ್ಲು
ಹಳ್ಳದ ಬಳಿಯ ಇಳಿಜಾರಿನಲಿ ಬರೀ ಜುಳುಜುಳು ಗುಲ್ಲು
ಮನುಷ್ಯರ ಕಾಣದೇ ಬೆದರಿರುವ ಬೆರ್ಚಪ್ಪಗಳು
ಕನಸಿನಿಂದೇಳದೇ ಮಲಗಿರುವ ಮರಿ ಗೀಜಗಗಳು

ಇವತ್ತು ಸಕ್ಕರೆಯಂತೆ ಇಬ್ಬನಿ ಬೀಳುತ್ತಿದೆ.
ಬೇಲಿಬದಿಯ ಸಾಲು ಸಿತಾಳೆ ಗಿಡಗಳಿಂದುದುರಿದ
ಹೂಪಕಳೆಗಳು ರಾಜಕುವರಿಯ ಮೃದುಕಾಲ ಸ್ಪರ್ಶಕ್ಕೆ ಕಾದಿವೆಯಂತೆ;

ಗೆಳತೀ, ಇವತ್ತು ಗದ್ದೆಹಾದಿಯಲ್ಲಿ ಹೋಗೋಣ, ಬಾ. 

Sunday, October 04, 2015

ಗಣೇಶ ಹೋದಮೇಲೆ

ಗಣೇಶ ಹೋದಮೇಲೆ ಬೀದಿಯಲ್ಲಿ ಪರಮಮೌನ.
ಮೂರು ದಿನದಿಂದ ಮೊಳಗುತ್ತಿದ್ದ ಮೈಕಿನ ಸದ್ದಡಗಿ
ಸಾಲುಮನೆಗಳ ಸೋಪಾನದಲ್ಲಿ ಹೆಜ್ಜೆಗಳಿಗೆ ಬಾಯಿ ಮರಳುವುದು.
ಕಿಟಕಿಗಳು ತೆರೆಯಲ್ಪಡುವವು. ನೆಂಟರೊಡನೆ ಬಂದಿದ್ದ ಕೀಟಲೆ ಮಕ್ಕಳು
ಹೊರಟುಹೋದಾಗ ತುಂಬುವ ನೀರವದಂತೆ ಕಿವಿಗಳು ಗವ್ವೆನ್ನುವವು.
ಎದ್ದೇಳು ಮಂಜುನಾಥಾ ಎಂದು ಮುಂಜಾನೆಯೇ ಬಡಿದೆಬ್ಬಿಸುವ ಹಾಡಿಲ್ಲ.
ಅನ್ನಸಂತರ್ಪಣೆಗೆ ಸಾಲಾಗಿ ಬನ್ನಿ ಎನ್ನುವವರಿಲ್ಲ. ಮಂತ್ರಪಾರಾಯಣವಿಲ್ಲ.
ಪ್ರತಿಮನೆಗೂ ಬಳ್ಳಿಯಾಗಿ ನೇತುಬಿಟ್ಟಿದ್ದ ಸರಣಿದೀಪಗಳನ್ನೂ ತೆರವುಗೊಳಿಸಿ
ಈಗ ಎಲೆಯುದುರಿದ ಶಿಶಿರದ ಕಾಡಂತೆ ಬೀದಿ ಪಿಚ್ಚೆನಿಸುವುದು.

ಆರ್ಕೆಸ್ಟ್ರಾದಲ್ಲಿ ವನ್ಸ್‌ಮೋರ್ ಬೇಡಿಕೆಗೆ ಕಲಕಲ್ಪಟ್ಟಿದ್ದ ಹೃದಯಸಮುದ್ರದಬ್ಬರವೂ ಇಳಿದು
ತೀರದಲ್ಲೀಗ ಅಲೆಗಳಿಲ್ಲದ ಬೇಸರ. ಬೀದಿಯಲ್ಲೇ ಎದ್ದುನಿಂತಿದ್ದ ವೇದಿಕೆಯೂ
ಸಭಾತ್ಯಾಗ ಮಾಡಿ ದಾರಿಹೋಕರಿಗೆ ಬಣಬಣ. ತರಕಾರಿ ತಳ್ಳುಗಾಡಿಯವನು
ಈ ಜಾಗ ದಾಟಿಹೋಗುವಾಗ ಒಂದು ಕ್ಷಣ ಅನುಮಾನಿಸುವನು; ಅಕಸ್ಮಾತ್ ಕೊತ್ತಂಬರಿ ಕಟ್ಟು
ಕೆಳಗೆ ಜಾರಿಬಿದ್ದರೆ ಗರಿಕೆಹುಲ್ಲು ಗಣೇಶಾರ್ಪಣವಾಯಿತೆಂದು ಹಾಗೇ ಸಾಗುವನು.

53ನೇ ವರ್ಷದ ಗಣೇಶೋತ್ಸವದ ಬ್ಯಾನರು ಇಳಿಸಿಯಾದಮೇಲೆ
ಸಂಘಟಕರ ಮನೆಯ ಕೋಣೆಯಲ್ಲಿ ಲೆಕ್ಕಾಚಾರದ ಸಮಯ.
ತಮಟೆಯ ಬಡಿತಕ್ಕೆ ಕುಣಿದ ಇವರ ಕಾಲುಗಳ ನೋವು ಹ್ಯಾಂಗೋವರಿನೊಂದಿಗೆ
ನಿಧಾನಕೆ ಇಳಿಯುವಾಗ, ಅತ್ತ ಮುಳುಗಿದ ಕೆರೆಯಲ್ಲಿ ವಿಘ್ನೇಶ್ವರ ಹಿತವಾಗಿ ಕರಗುವನು.
ಪಕ್ಕದ ಬೀದಿಯಲ್ಲಾಗಲೇ ಏಳುತ್ತಿರುವ ವೇದಿಕೆಯಲ್ಲಿ ಪುನರಾವಿರ್ಭವಸಲು ಸಜ್ಜಾಗುವನು.
ಸದ್ದುಗದ್ದಲಗಳೆಲ್ಲ ಸಾಲುಮನೆಗಳ ಮೇಲಿಂದ ಹೈಜಂಪು ಮಾಡಿ ಅತ್ತ ಸಾಗುವವು.
ಸಂಭ್ರಮದತಿಥಿ ಟ್ರಾಕ್ಟರಿನಲ್ಲಿ ತನ್ನನ್ನು ದಾಟಿಹೋಗುವಾಗ ಈ ಬೀದಿ
ಇಲ್ಲಿಂದಲೇ ಕೈಬೀಸಿ ಗೆಳೆಯನಿಗೆ ಹಾಯೆನ್ನುವುದು. ಮೋದಕಹಸ್ತ ಕುಲುಕಲ್ಲೆ ಸ್ಪಂದಿಸುವನು.