Tuesday, March 21, 2017

ನಿವೇದನೆ

ಸೀದಾ ಹೆದ್ದಾರಿಯ ಮೇಲೇ ಸಾಗುತ್ತವೆ ರಾತ್ರಿಯ ಬಸ್ಸುಗಳು
ಆದರೆ ಹಗಲಿನ ಬಸ್ಸುಗಳಿಗೆ ಪ್ರತಿ ನಗರ ಬಂದಾಗಲೂ
ಹೆದ್ದಾರಿಯಿಂದ ಕೆಳಗಿಳಿದು ನಗರದ ಒಳಹೊಕ್ಕು
ಮುಖ್ಯನಿಲ್ದಾಣಕ್ಕೆ ಭೇಟಿಯಿತ್ತೇ ಬರುವ ದರ್ದು
ರಾತ್ರಿಯಲ್ಲಿ ಕಣ್ಣು ಕುಕ್ಕುವ ವಾಹನಗಳು
ಹಗಲಲ್ಲಿ ಮೈಮೇಲೇ ಬರುತ್ತವೆ ಓತಪ್ರೋತ
ದಿಗಿಲು ಹುಟ್ಟಿಸುತ್ತವೆ ಅಪ್ಪಳಿಸುವ ಬಿಸಿಲ ಝಳದಂತೆ

ಹಗಲ ಪಯಣದಲ್ಲಿ ಮೈಮರೆವಿನ ನಿದ್ರೆಯಿಲ್ಲ
ತಾನಿಳಿವ ನಿಲ್ದಾಣ ಬಂತೇ ಬಂತೇ ಬಂತೇ
ಎಂಬ ಆತಂಕದಲ್ಲೇ ಕಿಟಕಿಯಿಂದ ಹೊರಗೆ ನೋಡುತ್ತ
ಚಲಿಸುವ ಬೋರ್ಡುಗಳಲ್ಲಿನ ವಿಳಾಸ ಓದಲು ಯತ್ನಿಸುತ್ತ
ಸಣ್ಣ ಚೀಟಿಯಲ್ಲಿ ಕಾಕಲಿಪಿಯಲ್ಲಿ ಬರೆದ ಪದಗಳಿಗೆ
ಹೊಂದಾಣಿಕೆಯಾಗುವ ಯಾವ ಶಬ್ದ ಕಂಡರೂ
ಹೌಹಾರಿ ಪಕ್ಕ ಕುಳಿತವನ ಬಳಿ ವಿಚಾರಿಸಿ
ವಿಶ್ವಾಸ ಸಾಕಾಗದೆ ಕಂಡಕ್ಟರ್ ಬಳಿಯೂ ಕೇಳಿ

ಆದರೂ ಗಡಿಬಿಡಿಯಲ್ಲಿ ತಪ್ಪು ನಿಲ್ದಾಣದಲ್ಲೇ ಇಳಿದಿದ್ದಾನೆ
ಮಹಾನಗರದ ಹೊಸಾ ಗಲಿಬಿಲಿ ಅತಿಥಿ
ಬ್ಯಾಟರಿ ಮುಗಿದ ಮೊಬೈಲು, ನೆನಪಿಲ್ಲದ ಗೆಳೆಯನ ನಂಬರು
ಭ್ರಮಿತನಂತೆ ನೋಡುತ್ತಿದ್ದಾನೆ ಅತ್ತ ಇತ್ತ ಸುತ್ತ ಮುತ್ತ
ಚೀಟಿಯ ಮಡಿಕೆಗಳ ಮತ್ತೆಮತ್ತೆ ಬಿಡಿಸುತ್ತಾ
ಗೂಡಂಗಡಿಗಳ ದಾರಿಹೋಕರ ಸೆಕ್ಯುರಿಟಿ ಗಾರ್ಡುಗಳ
ಬಳಿ ಹೋಗಿ ಆತಂಕದ ಕಣ್ಣಲ್ಲಿ ಒಣಗಿದ ದನಿಯಲ್ಲಿ
ಯಾಚಿಸುತ್ತಿದ್ದಾನೆ ಅತಂತ್ರ ವಿಧಾನಸಭೆಯ ಮತಾಕಾಂಕ್ಷಿ
ಆಟೋವಾಲಾಗಳಿಗೋ ಇವನ ನಡಿಗೆಯಲ್ಲೇ ಪತ್ತೆಯಾಗಿದೆ
ಕುರಿಗೆ ಯದ್ವಾತದ್ವಾ ರೇಟು ಹೇಳಿ ಇನ್ನಷ್ಟು ದಿಕ್ಕು ತಪ್ಪಿಸಿ

ಕಟ್ಟಡಗಳ ಮಧ್ಯದ ಸಣ್ಣ ಒಣಿಯಲ್ಲಿಳಿಯುತ್ತಿದ್ದಾನೆ ಸಂಜೆಸೂರ್ಯ
ಎತ್ತಲೋ ಸಾಗುತ್ತಿರುವ ಕವಿತೆಯ ರಕ್ಷಿಸಲು ಬರುವ
ತಿರುವಿನಂತೆ ಎದುರಾಗುತ್ತಿದ್ದಾರೆ ಒಬ್ಬ ವಾಕಿಂಗ್ ಅಂಕಲ್
ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ ಕಳವಳದ ಕಂದನಿಗೆ
ಸುಲಭಗೊಳಿಸುತ್ತಿದ್ದಾರೆ ತಿಳಿಯಾಗಿ ಬಿಡಿಸಿ ದಾರಿಯ ಚಿತ್ರ
ಕುಲುಕುತ್ತಿದ್ದಾರೆ ಕೈ, ನಗುಮೊಗದಿಂದ ಚೆಲ್ಲಿ ಬೆಳಕು

ನಡೆದಿದ್ದಾನೆ ಅಭ್ಯಾಗತ ಆ ಬೆಳಕ ಬಲದಲ್ಲಿ
ನಕ್ಷೆಯ ದೆಸೆಯಿಂದ ಸುಲಭವಾದ ತಿರುವುಗಳು
ಅಕ್ಷಯವೆನಿಸುವ ಟ್ರಾಫಿಕ್ಕಿನ ಪಕ್ಕದ ಕಾಲುದಾರಿಯೀಗ
ಸುರಕ್ಷಿತವೆನಿಸುತ್ತಿರುವಾಗ, ಅವರು ಹೇಳಿದ್ದ ಗುರುತುಗಳು
ತತ್ತಕ್ಷಣ ಕಣ್ಣಿಗೆ ಬೀಳುತ್ತಿರುವಾಗ, ಅತ್ತ ದಿಕ್ಕಿಂದ ತನ್ನನ್ನೇ
ಹುಡುಕಿಕೊಂಡು ಬರುತ್ತಿರುವ ಗೆಳೆಯನ ಕಂಡು
ಹೃದಯ ತುಂಬಿಬಂದು ಓಡಿ ಬಿಗಿದಪ್ಪಿಕೊಂಡು

ಕಥೆಗಳಿಗಷ್ಟೇ ಏಕೆ, ಕವಿತೆಗಳಿಗೂ ಸಿಗಲಿ ಸುಖಾಂತ್ಯ
ಅನಾಥ ಸಾಲುಗಳಿಗೆ ಸಿಗಲಿ ಸೋಗೆಯದಾದರೂ ಸೂರು
ದೊರೆಯಲಿ ಸಹಾಯಹಸ್ತ ಕಳೆದು ಹೋದ ಶಬ್ದಗಳಿಗೆ
ನಗಲಿ ಕವಿತೆ ನಿಸೂರಿನ ಲಘುವಲ್ಲಿ, ನೆರಳಲ್ಲಿನ ಹೂವಂತೆ.

(World Poetry Day ನೆಪದಲ್ಲಿ ಬರೆದದ್ದು)

1 comment:

Madhooo said...

ಬಹಳ ಚೆನ್ನಾಗಿದೆ. ಕೊನೆಯ ನಾಲ್ಕು ಸಾಲುಗಳು ತುಂಬಾ ಇಷ್ಟವಾಯಿತು. :)