Monday, April 10, 2023

ದರ್ಶಿನಿ ಹೋಟೆಲುಗಳೆಂಬ ಅನ್ನಪೂರ್ಣೆಯರು

ಸಣ್ಣ ಊರಿನಿಂದ ಮಹಾನಗರಕ್ಕೆ ಬರುವವರಿಗೆ ಅಚ್ಚರಿಯೆನಿಸುವ ಹಲವು ಸಂಗತಿಗಳು ಇಲ್ಲಿ ಅಡಿಗಡಿಗೂ ಕಾಣಸಿಗುತ್ತವೆ. ಅಬ್ಬಾ ಎನಿಸುವಂತಹ ಇಲ್ಲಿನ ಟ್ರಾಫಿಕ್ಕು, ರಸ್ತೆಯಿಕ್ಕೆಲದ ಥಳಥಳ ಕಟ್ಟಡಗಳು, ಐಷಾರಾಮಿ ಬಂಗಲೆಯಿಂದ ಹೊರಬಂದು ಸುಂಯ್ಯನೆ ಕಣ್ಮುಂದೆ ಹಾಯುವ ಕಾರುಗಳು, ತರಾತುರಿಯೇ ಜೀವನಕ್ರಮವೆಂಬಂತೆ ಓಡುತ್ತಲೇ ಇರುವ ಜನ, ಮಾಲುಗಳ ಎಸ್ಕಲೇಟರುಗಳು, ಪಾರ್ಕುಗಳಲ್ಲಿನ ನಗೆಕ್ಲಬ್ಬುಗಳು.... ಹೀಗೆ ನಮ್ಮೂರಲ್ಲಿಲ್ಲದ ಸಂಗತಿಗಳೆಲ್ಲ ಇಲ್ಲಿ ವಿಸ್ಮಯದ ಚಿತ್ರಗಳಾಗಿ ಕಾಣುವವು. ಇಂತಹ ನಗರದಲ್ಲಿ ಹೊಸದೆನ್ನಿಸಿದ ವಿಷಯಗಳ ಪಟ್ಟಿಗೇ ಸೇರಿಸಬಹುದಾದ ಇನ್ನೊಂದು ವಿಶೇಷವೆಂದರೆ ಇಲ್ಲಿನ ಗಲ್ಲಿಗಲ್ಲಿಯಲ್ಲೂ ಇರುವ ದರ್ಶಿನಿ ಹೋಟೆಲುಗಳು.
 
ಹಳ್ಳಿ ಅಥವಾ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದವರಿಗೆ, ಚಿಕ್ಕವರಿದ್ದಾಗ ಎಂದೋ ಅಪ್ಪ-ಅಮ್ಮರ ಜೊತೆ ಪೇಟೆಗೆ ಹೋದಾಗ ಅವರಿಗೆ ಉಮೇದು ಬಂದು ಕಾಫಿಯನ್ನೋ ಚಹಾವನ್ನೋ ಕುಡಿಯಲು ಹೋಟೆಲು ಅಥವಾ ಖಾನಾವಳಿಗೆ ಕರೆದೊಯ್ದರೆ, ಅಲ್ಲಿದ್ದ ರಾಶಿರಾಶಿ ಕುರ್ಚಿಗಳು ನಮ್ಮನ್ನು ಸ್ವಾಗತಿಸುತ್ತಿದ್ದ ನೆನಪು ಇದ್ದೇ ಇರುತ್ತದೆ. ಸ್ವಲ್ಪ ದೊಡ್ಡವರಾಗಿ ಶಾಲೆ-ಕಾಲೇಜುಗಳಿಗೆ ಹೋಗುವವರಾಗಿ, ನಾವೇ ಪೇಟೆ ಸುತ್ತಿ ಸಾಮಾನು ತರುವವರಾದಮೇಲೆ, ಉಳಿಸಿದ ದುಡ್ಡಲ್ಲಿ ಆಗಾಗ ಹೋಟೆಲಿಗೆ ಹೋದರೂ ಬೇಕಾದಷ್ಟು ಕುರ್ಚಿಗಳು ಅಲ್ಲಿದ್ದೇ ಇರುತ್ತಿದ್ದವು. ನಾವು ಘನಗಾಂಭೀರ್ಯದಿಂದ ಆ ಕುರ್ಚಿಯನ್ನಲಂಕರಿಸುವುದೂ, ಸರ್ವರ್ ಬಂದು ನಮ್ಮ ಆರ್ಡರ್ ಪಡೆದು ಹೋಗುವುದೂ, ರಾಗವಾಗಿ ಎರಡ್ ಮಸ್ಸಾಲೆಅಂತಲೋ ಒಂದ್ ಪ್ಲೇಟ್ ಇಡ್ಲಿ ವಡಾಅಂತಲೋ ಕೂಗಿ ಹೇಳುವುದೂ, ನಮಗೆ ಅರೆಬರೆಯಷ್ಟೇ ಕಾಣುವಂತಿದ್ದ ಅಡುಗೆಮನೆಯಿಂದ ಚಶ್ಎಂದು ಮಸಾಲೆ ದೋಸೆಯನ್ನು ಕಾವಲಿಗೆ ಹೊಯ್ದ ಸದ್ದು ಕೇಳುವುದೂ ಸರ್ವೇಸಾಮಾನ್ಯವಾಗಿತ್ತು. ದೂರದ ಗಲ್ಲಾಪೆಟ್ಟಿಗೆಯಲ್ಲಿ ಗರಿಗರಿ ವಸ್ತ್ರ ಧರಿಸಿ ಕೂತಿದ್ದ ಹೋಟೆಲಿನ ಮಾಲೀಕರು ಸದಾ ದುಡ್ಡು ಎಣಿಸುತ್ತಲೇ ಇರುತ್ತಿದ್ದರು.  ಅವರ ಹಿಂದಿದ್ದ ದೇವರ ಫೋಟೋಗಳ ಸುತ್ತ ಇರುತ್ತಿದ್ದ ಪಿಳಿಪಿಳಿ ದೀಪಗಳ ಸರಮಾಲೆ ಮತ್ತು ಅಲ್ಲೇ ಸಿಕ್ಕಿಸಿದ್ದ ಊದಿನಕಡ್ಡಿಯಿಂದ ಹೊರಟ ಹೊಗೆ, ಆ ಮಾಲೀಕರ ಮೇಲೊಂದು ದೈವೀಕ ಕಳೆಯನ್ನು ಕಲ್ಪಿಸಿ, ಅವರ ಮೇಲೆ ಭಯ-ಭಕ್ತಿ ಹೊಮ್ಮಿಸುವಂತೆ ಮಾಡುತ್ತಿದ್ದವು.  ನಾವು ಆರ್ಡರ್ ಮಾಡಿದ ಭಕ್ಷ್ಯ ಬರುವವರೆಗೆ ಕುರ್ಚಿಯ ತುದಿಯಲ್ಲಿ ಕೂತು ಚಡಪಡಿಸುತ್ತಾ, ಪಕ್ಕದವರದು ಮೊದಲೇ ಬಂದರೆ ನಮಗೆ ಇದ್ದಕ್ಕಿದ್ದಂತೆ ಹಸಿವು ಜಾಸ್ತಿಯಾದಂತಾಗಿ ಗಡಿಬಿಡಿಯನ್ನು ವ್ಯಕ್ತಪಡಿಸುತ್ತಾ, ಸರ್ವರು ತಿಂಡಿಯನ್ನು ಟ್ರೇನಲ್ಲಿಟ್ಟು ಬೇರೆ ಯಾವುದೋ ಟೇಬಲಿಗೆ ಸರ್ವ್ ಮಾಡಲು ಬರುವಾಗ ನಮಗೇ ತಂದನೆಂದು ಭ್ರಮಿಸುತ್ತಾ ಕಾಯುತ್ತಿದ್ದೆವು.  ಇನ್ನೇನು ಪ್ರಳಯವಾಗುತ್ತೆ ಅನ್ನುವಾಗ ಅವನು ನಮ್ಮ ತಿಂಡಿ ತಂದುಕೊಡುತ್ತಿದ್ದ. ನಾವೂ ಮುಗಿಲು ಕಳಚಿ ಬಿದ್ದವರಂತೆ ಅದನ್ನು ಮುಕ್ಕುತ್ತಿದ್ದೆವು. ಹಣ ಕೊಟ್ಟು ತಿನ್ನುವ ಕಾರಣಕ್ಕೋ ಏನೋ, ಹೋಟೆಲಿನ ಆಹಾರ ಸದಾ ರುಚಿಯೆನಿಸುತ್ತಿತ್ತು.  ಮತ್ತೇನಾದ್ರೂ ಬೇಕಾ ಸರ್?’ ಅಂತ ಸರ್ವರ್ ಕೇಳಿದಾಗ, ಇನ್ನೂ ಸಾಕಷ್ಟು ತಿನ್ನುವಷ್ಟು ಜಾಗ ಹೊಟ್ಟೆಯಲ್ಲಿದ್ದರೂ, ಬರಲಿರುವ ಬಿಲ್ಲಿಗೆ ಹೆದರಿ ಹೆಹೆ, ಏನೂ ಬೇಡ. ಬಿಲ್ ಕೊಡಿಎನ್ನುತ್ತಿದ್ದೆವು. ಇಷ್ಟೇ ಸಣ್ಣ ಚೀಟಿಯಾದರೂ, ದ್ರೌಪದಿಯ ಸ್ವಯಂವರದಲ್ಲಿ ರಾಜಾಧಿರಾಜರೆಲ್ಲ ಎತ್ತಲು ವಿಫಲರಾಗುವ ಬಿಲ್ಲಿನಷ್ಟೇ ಭಾರವಾದ ಮೊತ್ತವಿರುವ ಬಿಲ್ಲನ್ನು ಆ ಸರ್ವರ್ ಸೋಂಪು ತುಂಬಿದ ತಟ್ಟೆಯಲ್ಲಿಟ್ಟು ತರುವಾಗ, ಈತ ಟಿಪ್ಸ್ ಪಡೆಯಲೆಂದೇ ಅತಿವಿನಯದಿಂದ ವರ್ತಿಸುತ್ತಿದ್ದಾನೇನೋ ಎಂಬ ಅನುಮಾನ ಬರುತ್ತಿದ್ದುದು ಸುಳ್ಳಲ್ಲ. ಆಡಿಟರುಗಳು ಅಕೌಂಟ್ಸ್ ಮಾಡುವಾಗಲಾದರೂ ಅಷ್ಟೆಲ್ಲಾ ಪರಿಶೀಲಿಸುತ್ತಾರೋ ಇಲ್ಲವೋ, ಈ ಹೋಟೆಲಿನ ಬಿಲ್ಲನ್ನು ಮಾತ್ರ ಸರಿಯಾಗಿದೆಯೇ ಎಂದು ಮೇಲಿಂದ ಕೆಳಗೆ ನೋಡುವುದು ನಾವು ತಪ್ಪಿಸುತ್ತಿರಲಿಲ್ಲ. ಕಷ್ಟ ಪಟ್ಟು ಕಿಸೆಯಿಂದ ಹಣ ತೆಗೆದು ಆ ತಟ್ಟೆಯಲ್ಲಿರಿಸಿ, ಸರ್ವರ್ ಅದನ್ನು ಪಡೆದು ಹೋಗಿ, ಚಿಲ್ಲರೆ ವಾಪಸು ತಂದಿಟ್ಟಾಗ, ಅವನಿಗೆ ಟಿಪ್ಸ್ ಕೊಡಬೇಕೋ ಬೇಡವೋ ಎಂಬ ಗೊಂದಲ. ಈ ಟಿಪ್ಸ್ ಕೊಡುವ ಮೊತ್ತವೂ ಯಾರ ಜೊತೆಗೆ ಹೋಟೆಲಿಗೆ ಹೋಗಿದ್ದೇವೆ, ಅವರಿವರು ಗಮನಿಸುತ್ತಿದ್ದಾರೆಯೇ ಎಂಬುದರ ಮೇಲೆ ಅವಲಂಬಿತ. ಕೊಟ್ಟ ಟಿಪ್ಸ್ ಕಮ್ಮಿಯಾಯಿತೋ ಜಾಸ್ತಿಯಾಯಿತೋ ಅಂತ ತಲೆ ಕೆಡಿಸಿಕೊಳ್ಳುತ್ತ ಹೋಟೆಲಿನಿಂದ ಹೊರಬೀಳುವಷ್ಟರಲ್ಲಿ ಸಾಕಷ್ಟು ಸಮಯ ಕಳೆದುಹೋಗಿರುತ್ತಿತ್ತು ಮತ್ತು ಎಷ್ಟೋ ಸಲ ತಿಂದ ತಿಂಡಿಯ ರುಚಿಯೂ ಮರೆತುಹೋಗಿರುತ್ತಿತ್ತು.
 
ಈ ತರಹದ ಸಮಸ್ಯೆಗಳೆಲ್ಲ ಬಗೆಹರಿದುದು ದರ್ಶಿನಿ ಹೋಟೆಲುಗಳ ದರ್ಬಾರು ಶುರುವಾದಮೇಲೆ.  ರೆಸ್ಟುರೆಂಟುಗಳಷ್ಟು ಜಾಗವನ್ನೂ ಬೇಡದ ಈ ದರ್ಶಿನಿಗಳು ಸಣ್ಣ ಜಾಗದಲ್ಲಿ ಚಿಕ್ಕದಾಗಿ ಚೊಕ್ಕವಾಗಿ ತಮ್ಮಿಡೀ ಹರಹನ್ನು ತೆರೆದಿಟ್ಟು ಹಸಿದವರನ್ನು ಆಕರ್ಷಿಸುವವು. ಇಲ್ಲಿ ಕೌಂಟರಿನಲ್ಲಿ ಕುಳಿತ ಕ್ಯಾಶಿಯರ್ ಚುರುಕಾದ ವ್ಯಕ್ತಿ. ಅವನ ಹಿಂದೆ ದರ್ಶಿನಿಯಲ್ಲಿ ದೊರಕುವ ತಿಂಡಿಯ ಪಟ್ಟಿ ಮತ್ತು ಪ್ರತಿ ತಿಂಡಿಯ ಬೆಲೆ. ಕೇಳಿದ ತಿಂಡಿಯ ಚೀಟಿಯನ್ನು ಟಕ್ಕಟಕ್ಕನೆ ಮುದ್ರಿಸಿ, ಹಣ ಪಡೆದು ಚಿಲ್ಲರೆ ಕೊಡುವ. ಆ ಚೀಟಿಯನ್ನೊಯ್ದು, ಗಾಜಿನ ಕಿಟಕಿಗಳ ಹಿಂದೆ ನಮಗೆಂದೇ ಕಾಯುತ್ತಿರುವ ಅಣ್ಣನಿಗೆ ಕೊಟ್ಟರೆ ಸಾಕು, ಬಿಸಿಬಿಸಿ ತಿಂಡಿ ಕ್ಷಣಮಾತ್ರದಲ್ಲಿ ನಮ್ಮೆದುರಲ್ಲಿ. ಅದನ್ನೆತ್ತಿಕೊಂಡು ಹೋಗಿ, ಎತ್ತರದ ಕಟ್ಟೆಗಳ ಮೇಲಿಟ್ಟುಕೊಂಡು ಮೆಲ್ಲತೊಡಗಿದರೆ, ಅಕ್ಕಪಕ್ಕದವರೆಲ್ಲ ಅದೃಶ್ಯರಾಗಿ ನಮ್ಮ ತಿಂಡಿ ಮಾತ್ರ ನಮ್ಮ ಕಣ್ಣೆದುರಿದ್ದು, ಕೈಗೂ ಬಾಯಿಗೂ ಪರಿಚಿತವಾದ ಕೆಲಸ ಶುರುವಾಗುತ್ತಿತ್ತು.
 
ಈ ಸ್ವಯಂಸಹಾಯ ಪದ್ಧತಿಯು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಮಯವನ್ನು ಉಳಿಸುವಲ್ಲಿ ನೆರವಾಯಿತು. ಈ ಮಹಾನಗರದಲ್ಲಂತೂ ವೀಕೆಂಡು ಅಥವಾ ರಜಾದಿನಗಳಲ್ಲಿ ಪ್ರಸಿದ್ಧ ಹೋಟೆಲುಗಳಿಗೆ ಹೋಗಿಬಿಟ್ಟರೆ ಕುರ್ಚಿ ಹಿಡಿಯಲೂ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ.  ಕೆಲವು ಹೋಟೆಲುಗಳಲ್ಲಿ ಹೆಸರು ಬರೆಸಿ ಕಾಯಬೇಕು.  ಇನ್ನು ಕೆಲವು ಹೋಟೆಲುಗಳಲ್ಲಿ, ನಾವು ಕುಳಿತು ಉಣ್ಣುತ್ತಿರುವಾಗಲೇ ನಮ್ಮ ಹಿಂದೆ ಬಂದು ನಿಂತು ನಾವು ಏಳುವುದನ್ನೇ ಕಾಯುವ ಜನ. ಅಂತೂ ನಮ್ಮ ಸರದಿ ಬಂದು, ಆ ಹೆಸರು ಬರೆದುಕೊಳ್ಳುವವ ನಮ್ಮ ಹೆಸರನ್ನು ಕೋರ್ಟಿನಲ್ಲಿ ಕಟಕಟೆಗೆ ಕರೆಯುವ ದನಿಯಲ್ಲಿ ಕರೆದು, ನಾವು ಒಳಹೊಕ್ಕು, ಕುರ್ಚಿಯೊಂದನ್ನು ಅಲಂಕರಿಸಿ, ಎಷ್ಟೋ ಸಮಯದ ನಂತರ ಆ ಟಿಪ್‌ಟಾಪ್ ಮನುಷ್ಯ ಬಂದು ಮೆನುಕಾರ್ಡ್ ಕೊಟ್ಟುಹೋಗಿ, ಮತ್ತೆಷ್ಟೋ ಸಮಯದ ತರುವಾಯ ಅವನು ವಾಪಸು ಬಂದು ನಮಗೆ ಬೇಕಾದ ಆಹಾರವನ್ನು ಬರೆದುಕೊಂಡು ಹೋಗಿ, ಎನ್ನೂ ಎಷ್ಟೋ ಘಳಿಗೆ ಕಳೆದಮೇಲೆ ಆ ಆಹಾರವನ್ನೆಲ್ಲ ಸಪ್ಲಾಯರೆಂಬ ಮಹಾಶಯ ತಂದುಕೊಟ್ಟು, ನಾವು ಮೊದಲ ತುತ್ತು ಬಾಯಿಗಿಡುವಷ್ಟರಲ್ಲಿ ಹಲವು ಶತಮಾನಗಳೇ ಕಳೆದುಹೋಗಿರುತ್ತದೆ.  ಒಂದು ಒಳ್ಳೆಯ ಹೋಟೆಲಿಗೆ ಹೋಗಿ ಕುಳಿತು ಊಟ ಮಾಡಿ ಬರಬೇಕು ಎಂದರೆ ಅದಕ್ಕೆಂದೇ ಕನಿಷ್ಟ ಎರಡು ತಾಸು ಮೀಸಲಿಡಬೇಕು. ಆ ಅವಧಿಯಲ್ಲಿ ಮನೆಯಲ್ಲೇ ಅಡುಗೆ ತಯಾರಿಸಿ ಉಣ್ಣಬಹುದು!
 
ಆದರೆ ದರ್ಶನಿಗಳಲ್ಲಿ ಹಾಗಲ್ಲ. ಹೆಚ್ಚು ರಶ್ ಇದ್ದರೆ ಸ್ವಲ್ಪ ತಡವಾಗಬಹುದಾದರೂ, ಸರ್ವೀಸ್ ಸೆಕ್ಷನ್ನಿನಲ್ಲಿಯಷ್ಟು ತಡವಾಗಲಿಕ್ಕೆ ಶಕ್ಯವೇ ಇಲ್ಲ. ಇನ್ನೊಂದು ಮುಖ್ಯ ಅಂಶವೆಂದರೆ, ಇಲ್ಲಿನ ಬಿಲ್ ಭಾರವೂ ಕಡಿಮೆ. ಸ್ವಯಂಸಹಾಯ ಪದ್ಧತಿಯಲ್ಲಿ ನಿಂತು ತಿನ್ನಲು ತೆರುವ ಹಣಕ್ಕಿಂತ ಜಾಸ್ತಿ ಹಣವನ್ನು ಅದೇ ಹೋಟೆಲಿನ ಸರ್ವೀಸ್ ಸೆಕ್ಷನ್ನಿನಲ್ಲಿ ಕುಳಿತು ಅದೇ ಭಕ್ಷ್ಯವನ್ನು ತಿಂದರೆ ತೆರಬೇಕು. ಹವಾನಿಯಂತ್ರಿತ ವ್ಯವಸ್ಥೆಯ ವಿಭಾಗದಲ್ಲಾದರೆ ಅದರ ಬೆಲೆ ಇನ್ನೂ ಹೆಚ್ಚು.  ಹೀಗಾಗಿ, ಕಿಸೆಗೆ ಹಗುರವೆನಿಸುವ, ಹೊಟ್ಟೆಯನ್ನು ತುಂಬಿಸುವ, ಸಮಯವನ್ನೂ ಉಳಿಸುವ ದರ್ಶಿನಿಗಳು ಇಲ್ಲಿ ಹೆಚ್ಚೆಚ್ಚು ಜನಪ್ರಿಯವಾದವು ಎನಿಸುತ್ತೆ.
 
ಏಕೆಂದರೆ ಮಹಾನಗರದಲ್ಲಿ ಈ ಮೂರೂ ಬಹಳ ಮುಖ್ಯವಾದವು: ಹಣ, ಹಸಿವು ಮತ್ತು ಸಮಯ. ಹಣ ಗಳಿಸಬೇಕು, ಹಸಿವು ತಣಿಸಬೇಕು, ಸಮಯ ಉಳಿಸಬೇಕು. ಏನೇನೋ ಕನಸುಗಳನ್ನು ಹೊತ್ತು ಬಂದವರಿಂದಲೇ ತುಂಬಿದೆ ನಗರ. ಕ್ಯಾಂಪಸ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗಿ, ನೌಕರಿ-ಸಂಬಳ-ಇರಲೊಂದು ತಾವುಗಳೆಲ್ಲ ಖಾಯಂ ಆದಮೇಲೇ ಇಲ್ಲಿಗೆ ಬರುವ ಅದೃಷ್ಟವಂತರಿಂದ ಹಿಡಿದು, ಏನಾದರೂ ಉದ್ಯೋಗ ಸಿಕ್ಕರೆ ಸಾಕಪ್ಪಾ ದೇವರೇ ಎಂದು ಬರುವ ಆರ್ತರವರೆಗೆ ನಗರ ಎಲ್ಲರನ್ನೂ ಸ್ವಾಗತಿಸುತ್ತದೆ. ಎಷ್ಟೋ ಜನ, ಅದರಲ್ಲೂ ಮೊದಲ ಸಲ ಮಹಾನಗರಕ್ಕೆ ಬಂದವರು ಇಲ್ಲಿಯ ಅಗಾಧತೆಯನ್ನು ಕಂಡು ಅವಾಕ್ಕಾಗುತ್ತಾರೆ. ಬೆನ್ನಿನ ಚೀಲದೊಂದಿಗೆ ಬಸ್ಸಿನಿಂದಲೋ ರೈಲಿನಿಂದಲೋ ಇಳಿಯುವ ಈ ಡವಡವ ಎದೆಯ ಬಿಡುಗಣ್ಣಿನ ಯುವಕ-ಯುವತಿಯರು, ದೂರದೂರಿನಿಂದ ದಿನವಿಡೀ ಪಯಣಿಸಿ ಹೊಟ್ಟೆ ಹಸಿಯುತ್ತಿದ್ದರೂ ಹೋಟೆಲಿಗೆ ನುಗ್ಗಲು ಹಿಂಜರಿಯುವರು. ಇಂತವರಿಗೆಂದೇ ತೆರೆದಿರುವವು ದರ್ಶಿನಿಗಳು ಮತ್ತು ಮೊಬೈಲ್ ಕ್ಯಾಂಟೀನುಗಳೆಂಬ ಅನ್ನಪೂರ್ಣೆಯರು. ಮಹಾನಗರದ ವ್ಯವಸ್ಥೆಯಲ್ಲಿನ ಒಂದು ಬಹಳ ದೊಡ್ಡ ಖುಷಿಯ ಅಂಶವೆಂದರೆ, ಇಲ್ಲಿ ಥಳಥಳ ಫೈವ್ ಸ್ಟಾರ್ ಹೋಟೆಲುಗಳೂ  ಇವೆ; ಬೀದಿಬದಿ ತಳ್ಳುಗಡಿಯಲ್ಲಿ ದೊರಕುವ ಆಹಾರವೂ ಇದೆ. ತಳ್ಳುಗಾಡಿಯ ಅಣ್ಣ ಕೊಡುವ ಅನ್ನ-ಸಾಂಬಾರು, ಎಗ್‌ರೈಸು, ತಟ್ಟೆ ಇಡ್ಲಿಗಳು ಹಣದ ಮುಗ್ಗಟ್ಟಿರುವವನ ಹೊಟ್ಟೆ ತುಂಬಿಸುತ್ತದೆ. ಅಲ್ಲೇ ಪಕ್ಕದ ಗೂಡಂಗಡಿಯಲ್ಲಿ ಸಿಗುವ ಚಹಾ ಕರುಳನ್ನು ಬೆಚ್ಚಗಾಗಿಸುತ್ತೆ.  ಜಗ್ಗಿನಲ್ಲಿಟ್ಟಿರುವ ನೀರನ್ನು ನೀವು ಎಷ್ಟು ಎತ್ತಿ ಕುಡಿದರೂ ನಯಾಪೈಸೆ ಕೊಡಬೇಕಿಲ್ಲ. ನಾರ್ಮಲ್ ವಾಟರ್ರಾ ಮಿನರಲ್ ವಾಟರ್ರಾ?’ ಅಂತ ಯಾವ ವೇಯ್ಟರೂ ಕೇಳಿ ನಿಮ್ಮನ್ನಿಲ್ಲಿ ಬೆಚ್ಚಿ ಬೀಳಿಸುವುದಿಲ್ಲ.
 
ನಗರಕ್ಕೆ ವಲಸೆ ಬಂದು ಕೆಲಸಕ್ಕೆ ಸೇರಿದವರಿಗೆಲ್ಲ ಸೆಂಟ್ರಲೈಸ್ಡ್ ಏಸಿ ಇರುವ ಆಫೀಸೂ, ಮೇಲ್ಗಡೆ ಮಹಡಿಯಲ್ಲಿ ಕೆಫೆಟೇರಿಯಾವೂ ಇರುವ ವ್ಯವಸ್ಥೆ ಸಿಗುವುದಿಲ್ಲವಷ್ಟೇ? ಇಲ್ಲಿನ ಅರ್ಧ ಜನಕ್ಕೆ ಓಡುವುದೇ ಕೆಲಸ. ಸೇಲ್ಸ್‌ಮೆನ್ನುಗಳು, ಡೆಲಿವರಿ ಬಾಯ್ಸು, ಒಂದು ಕಛೇರಿಯಿಂದ ಮತ್ತೊಂದು ಕಛೇರಿಗೆ ಓಡಾಡುವ ಕೆಲಸವಿರುವವರು, ಹಗಲು ಒಂದು ಕಡೆ ಕೆಲಸ ಸಂಜೆ ಮತ್ತೊಂದು ಕಡೆ ಪಾರ್ಟ್ ಟೈಮ್ ಜಾಬ್ ಇರುವ ಜನರು ಹೀಗೆ ಇಲ್ಲಿ ಇರುವ ಇಪ್ಪತ್ನಾಲ್ಕು ಗಂಟೆಯಲ್ಲಿ ಸಮಯವನ್ನು ಹೊಂದಿಸುವುದೇ ಕಷ್ಟ. ಹೀಗಾಗಿ ವಾರದ ದಿನಗಳಲ್ಲಿ ಆರಾಮಾಗಿ ಕುಳಿತು ಉಣ್ಣಲೂ ಇವರಿಗೆ ಪುರುಸೊತ್ತಿಲ್ಲ. ಸಿಕ್ಕ ಆಹಾರವನ್ನು ಕಣ್ಣಿಗೋ ಮೂಗಿಗೋ ಬಾಯಿಗೋ ತುರುಕಿಕೊಂಡು ಹೊಟ್ಟೆ ತುಂಬಿಸಿಕೊಂಡರೆ ಅದೇ ದೊಡ್ಡ ವಿಷಯ. ಆಮೇಲೆ ಮತ್ತೆ ಬೈಕು ಹತ್ತಿಯೋ ಬಸ್ಸಿಗೆ ನೇತಾಡಿಕೊಂಡೋ ಆಟೋ ಹಿಡಿದೋ ಓಡುವುದೇ. ಇವರಿಗೆಲ್ಲ ದರ್ಶಿನಿಗಳು ನಿಜವಾದ ವರದಾನ. ಅಕೋ ಅಲ್ಲಿ ದಡಬಡನೆ ಒಂದು ರೈಸ್‌ಬಾತ್ ತಿಂದು, ಮೂಲೆಯ ಸಿಂಕಿನಲ್ಲಿ ಕೈ ತೊಳೆದುಕೊಂಡು, ಕರ್ಚೀಫಿನಲ್ಲಿ ಕೈ-ಬಾಯಿ ಒರೆಸಿಕೊಳ್ಳುತ್ತಾ ಓಡುತ್ತಿರುವ ಅಂಕಲ್ ಕ್ಷಣಮಾತ್ರದಲ್ಲಿ ರಸ್ತೆ ದಾಟಿ ಮಾಯವಾದರಲ್ಲ, ಅವರಿಗೆ ಮಧ್ಯಾಹ್ನ ಎರಡೂ ಇಪ್ಪತ್ತಕ್ಕೆ ಸರಿಯಾಗಿ ಯಾರೋ ದೊಡ್ಡ ಮನುಷ್ಯರು ಅಪಾಯಿಂಟ್‌ಮೆಂಟ್ ಕೊಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಿ ಅವರನ್ನು ಒಪ್ಪಿಸಿ ಒಂದು ಇನ್ಷುರೆನ್ಸ್ ಪಾಲಿಸಿ ಮಾಡಿಸಬೇಕಿದೆ. ಅದು ಸಫಲವಾದರೆ ಈ ತಿಂಗಳ ಮನೆಯ ಬಾಡಿಗೆಯನ್ನು ಸರಿಯಾದ ಸಮಯಕ್ಕೆ ಕೊಡಲು ಸಾಧ್ಯವಾಗುತ್ತದೆ.
 
ದರ್ಶಿನಿ ಹೋಟೆಲುಗಳಲ್ಲಿನ ಪಾರ್ಸೆಲ್ ವ್ಯವಸ್ಥೆಯೂ ಅಷ್ಟೇ ಜನಪ್ರಿಯವಾದುದು. ಕುಳಿತು ತಿನ್ನುವುದಿರಲಿ, ನಿಂತು ತಿನ್ನಲೂ ಪುರುಸೊತ್ತಿಲ್ಲದವರು ಆಹಾರವನ್ನು ಪಾರ್ಸೆಲ್ ಮಾಡಿಸಿ ಒಯ್ಯುವರು. ಅದನ್ನವರು ತಮ್ಮ ಕೆಲಸದ ಸ್ಥಳಕ್ಕೆ ಒಯ್ದು ಕೆಲಸ ಮಾಡುತ್ತಲೇ ತಿನ್ನುವರು.  ಇನ್ನು ಕೆಲವರು ಮನೆಯಲ್ಲಿ ಆರಾಮಾಗಿ ಕುಳಿತು ತಿನ್ನುವ ಸಲುವಾಗಿ, ಮನೆಯಲ್ಲಿರುವ - ಹೊರಗೆ ಬರಲಾಗದವರ ಸಲುವಾಗಿ, ಆಸ್ಪತ್ರೆಯಲ್ಲಿ ದಾಖಲಾಗಿರುವ ಆಪ್ತರ ಸಲುವಾಗಿ ಪಾರ್ಸೆಲ್ ಒಯ್ಯುವರು. ಇತ್ತೀಚಿಗೆ ಜನಪ್ರಿಯವಾಗಿರುವ ಸ್ವಿಗ್ಗಿ, ಜೊಮ್ಯಾಟೋ ತರಹದ ಮನೆಗೇ ಆಹಾರ ತಲುಪಿಸುವ ವ್ಯವಸ್ಥೆಗಳಿಗೂ ಇದೇ ಪಾರ್ಸೆಲ್ ಕೌಂಟರುಗಳಲ್ಲಿ ಡಬ್ಬಿಗಳು ಕಟ್ಟಲ್ಪಡುವುದು. ದಿನವೂ ತನ್ನ ರೂಮಿನಲ್ಲಿ ಅನ್ನ ಮಾತ್ರ ಬೇಯಿಸಿಕೊಂಡು ಸಾಂಬಾರನ್ನು ಹತ್ತಿರದ ದರ್ಶಿನಿಯಿಂದ ಒಯ್ಯುವ ಬ್ಯಾಚುಲರ್ ಹುಡುಗನಿಗೆ ಪಾರ್ಸೆಲ್ ಕಟ್ಟಿಕೊಡುವವನು ಈ ಹಬ್ಬದ ದಿನ ಒಂದು ಜಹಾಂಗೀರನ್ನೂ - ಒಂದು ಮಸಾಲೆವಡೆಯನ್ನೂ ಉಚಿತವಾಗಿ ಕಟ್ಟಿಕೊಟ್ಟಿದ್ದಾನೆ. ಇದರಿಂದಾಗಿ, ಬ್ಯಾಚುಲರ್ ರೂಮಿನಲ್ಲಿಂದು ಮೃಷ್ಟಾನ್ನ ಭೋಜನವಾಗಿದೆ. 
 
ಉಳ್ಳವರನ್ನೂ ಏನೂ ಇರದವರನ್ನೂ ಸಮಾನಾಸ್ಥೆಯಿಂದ ಮಡಿಲಲ್ಲಿಟ್ಟುಕೊಂಡು ಸಲಹುವ ಸಂಕಲ್ಪ ತೊಟ್ಟಿರುವ ನಗರ ತನ್ನ ಫೈವ್ ಸ್ಟಾರ್ ಹೋಟೆಲುಗಳು, ಮಲ್ಟಿ ಕ್ಯುಸಿನ್ ರೆಸ್ಟುರೆಂಟುಗಳು, ದರ್ಶಿನಿ ಹೋಟೆಲುಗಳು, ಮೊಬೈಲ್ ಕ್ಯಾಂಟೀನುಗಳು, ತಳ್ಳುಗಾಡಿಗಳಲ್ಲಿನ ಆಹಾರ ವ್ಯಾಪಾರ ವ್ಯವಸ್ಥೆಯ ಮೂಲಕ ಎಲ್ಲರ ಹೊಟ್ಟೆ ತುಂಬಿಸುತ್ತಿದೆ. ಇನ್ನೂ ಇಬ್ಬನಿ ಬೀಳುತ್ತಿರುವ ಮುಂಜಾನೆ, ವಾಕಿಂಗು ಮುಗಿಸಿದ ಗಡಿಬಿಡಿಯ ನಾಗರೀಕರನ್ನು ಸ್ವಾಗತಿಸಲು ರೆಸ್ಟುರೆಂಟುಗಳು ತಮ್ಮ ಸಣ್ಣ ಬಾಗಿಲು ತೆರೆದು ನಿಂತಿದ್ದರೆ, ದರ್ಶಿನಿಗಳು ನಿಚ್ಛಳ ಗಾಳಿ-ಬೆಳಕುಗಳಿಗೆ ಪೂರ್ತಿಯಾಗಿ ತೆರೆದುಕೊಂಡು ಸಜ್ಜಾಗಿ ನಿಂತಿವೆ. ಬಿಳಿ ಶೂ ತಲೆಗೊಂದು ಕ್ಯಾಪ್ ಧರಿಸಿದ ನೀವು ದಡಬಡಾಯಿಸಿ ಈ ಹೋಟೆಲಿಗೆ ನುಗ್ಗಿ ಒಂದು ಪ್ಲೇಟು ಇಡ್ಲಿ-ವಡೆಗೆ ಚೀಟಿ ಪಡೆದು ಕೌಂಟರಿನಲ್ಲಿ ಕೊಡುತ್ತಿದ್ದೀರಿ.  ಸಾಂಬಾರ್ ಡಿಪ್ಪಾ ಸೆಪರೇಟಾ?’ -ಕೇಳುತ್ತಿದ್ದಾನೆ ಕೌಂಟರಿನ ಸಮವಸ್ತ್ರಧಾರೀ ಅಣ್ಣ. ಎರಡು ಇಡ್ಲಿ, ಒಂದು ಗರಿಗರಿ ವಡೆ, ಮೇಲೆ ಸುರಿದ ಕೆಂಪನೆ ಸಾಂಬಾರು ಈಗ ನಿಮ್ಮ ಕೈಯಲ್ಲಿದೆ. ಕುದಿಕುದಿ ನೀರಲ್ಲಿರುವ ಚಮಚವನ್ನು ತೆಗೆದುಕೊಂಡು, ತಟ್ಟೆಯನ್ನು ಎತ್ತರದ ಟೇಬಲ್ಲಿನ ಮೇಲಿಟ್ಟುಕೊಂಡು ಚೂರ್ಚೂರೇ ಮುರಿದು ಮೆಲ್ಲತೊಡಗಿದರೆ, ಚುರುಗುಟ್ಟುವ ಹೊಟ್ಟೆಯಿಂದಾಗಿ ಕ್ರುದ್ಧನಾಗಿದ್ದ ಪರಮಾತ್ಮ ನಿಧನಿಧಾನವಾಗಿ ಶಾಂತನಾಗುತ್ತಾನೆ. ಮೂಲೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಈ ಎಲ್ಲ ಚಟುವಟಿಕೆಗಳನ್ನು ದಾಖಲಿಸುತ್ತಾ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದೆ. 
 
[ಕನ್ನಡಪ್ರಭ ಯುಗಾದಿ ವಿಶೇಷಾಂಕ-2023ರಲ್ಲಿ ಪ್ರಕಟಿತ]

No comments: