ಅವಳ ಮುಗುಳ್ನಗೆ
ನನ್ನನ್ನು ತನ್ನೆದುರು ಪಲ್ಟಿ
ಹೊಡೆಸಿಕೊಂಡ ಉಲ್ಟಾ
ಕಾಮನಬಿಲ್ಲು!
* * *
ಗುಟ್ಟು
ಗೊತ್ತಾಯ್ತೇನೇ?
ಅಂಕಿ ಅಂಶಗಳ ಪ್ರಕಾರ ಈಗ
ಹುಡುಗಿಯರ ಸಂಖ್ಯೆ ಕಡಿಮೆ ಇದೆಯಂತೆ.
ಅಂದರೆ, ನೂರಕ್ಕೆ ಐದು ಹುಡುಗರಿಗೆ ಮದುವೆಯಿಲ್ಲವಂತೆ!
ಆದರೂ ನಾನು ಮಾತ್ರ ಇಷ್ಟೊಂದು
ತಲೆಬಿಸಿಯಿಲ್ಲದವನಂತಿರುವುದಕ್ಕೆ ಕಾರಣ
ನನಗೆ ಗೊತ್ತು - ನಿನಗೆ ಗೊತ್ತು; ಅಲ್ಲವಾ?
* * *
ಅವಳ ಕೆನ್ನೆ
ಅವಳ ಕೆನ್ನೆ 'ಹೊಳೆ'ಯಂತೆ.
ದಡದಲ್ಲಿ ನಿಂತವರು ಎಸೆಯುವ
ಜೋಕಿನ ಕಲ್ಲುಗಳಿಗೆ
ಬೀಳುವುದಲ್ಲಿ 'ಕುಳಿ'.
* * *
ಮದರಂಗಿ
ನಾಗರ ಪಂಚಮಿಯ ಮರುದಿನ
ಅವಳ ಕೈಯ ಮದರಂಗಿಯಲ್ಲಿ
ನನ್ನ ಇನಿಶಿಯಲ್ಲು ಹುಡುಕಿ
ಸುಸ್ತಾದೆ!
* * *
ಚಳಿ ಮತ್ತು ಅವಳು
ಮಾಘ ಮಾಸ ಜಾರಿಯಲ್ಲಿದೆ.
ಹುಡುಗಿಗೀಗ ಚಳಿಯೋ ಚಳಿ.
ಅವಳು ದಿನವೂ ಸ್ವೆಟರ್ ಹಾಕಿಕೊಂಡು ಬರುತ್ತಿದ್ದಾಳೆ.
'ಚಳಿ ಓಡಿಸಲಿಕ್ಕೆ ಇನ್ನೂ ಅನೇಕ ವಿಧಾನಗಳಿವೆ ಕಣೆ'
ಅಂತ ಹೇಳೋಣವೆಂದುಕೊಳ್ಳುತ್ತೇನೆ;
ಆದರೆ ಹಾಗೆ ಹೇಳಿದರೆ
ನಾನು ಪೋಲಿ ಹುಡುಗನಾಗಿಬಿಡುತ್ತೇನೆ.
ಛೇಛೆ! ಹಾಗಾಗಬಾರದು..!
* * *
ಕಾವ್ಯ
ಅವನು ಒಬ್ಬ ಕವಿ. ಕಾಲೇಜೊಂದರಲ್ಲಿ ಲೆಕ್ಚರರ್ ಕೂಡ.
ಅವತ್ತಿನ ಕ್ಲಾಸಿನಲ್ಲಿ ಅದೇಕೋ ಕಾವ್ಯದ ಬಗ್ಗೆ ಹೇಳುತ್ತಿದ್ದ:
"ಮನಸ್ಸಿಗೆ ತುಂಬಾ ದುಃಖ ಆಬೇಕು; ಅಥವಾ ತುಂಬಾ ಸಂತೋಷ ಆಗ್ಬೇಕು. ಅನೇಕರ ಕಷ್ಟಗಳನ್ನು ನೋಡ್ಬೇಕು; ಜೊತೆಗೇ ತುಂಬಾ ಸುಖದಲ್ಲಿರುವವರನ್ನೂ ನೋಡ್ಬೇಕು.... ಅವಾಗ್ಲೇ ಕಾವ್ಯ ಹುಟ್ಟೋದು.."
ಹಿಂದಿನ ಬೆಂಚಿನ ಕೆಲ ಪಡ್ಡೆ ಹುಡುಗರು ಕಿಸಕ್ಕನೆ ನಕ್ಕುಬಿಟ್ಟರು.
ಫಸ್ಟ್ ಬೆಂಚಿನಲ್ಲಿ ಕುಳಿತಿದ್ದ ಹುಡುಗಿ ಕಾವ್ಯ ತಲೆ ತಗ್ಗಿಸಿದಳು.
* * *
ಒಂದು ಓಲೆ
ದೀಪಾ,
ನಿಜಕ್ಕೂ ನೀನು ಗ್ರೇಟ್ ಕಣೇ. ಒಂದೇ ಒಂದರೆಕ್ಷಣ ನೀನಿರದಿದ್ದರೆ ನನ್ನ ಬಾಳು ಶೂನ್ಯ. ಅಂಧಃಕಾರದಲ್ಲಿ ಬದುಕುವುದು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ಮನುಷ್ಯನಷ್ಟೇ ಏಕೆ? ಮತ್ಯಾವ ಜೀವಿಗೂ ಸಾಧ್ಯವಿಲ್ಲ. ಅಂದ್ಮೇಲೆ ನೀನಿಲ್ಲದೇ ಜಗವಿಲ್ಲ!
ನೀನು ನಿನ್ನನ್ನೇ ಸುಟ್ಟುಕೊಂಡು ಪರರಿಗೆ ಬೆಳಕು ನೀಡುವ ಕ್ರಿಯೆ ಅದ್ಭುತ. ಕೆಲವು ಮನುಷ್ಯರೂ ಹಾಗೇ ಇರುತ್ತಾರಲ್ಲವೇ? ಅವರು ತಮಗಾಗಿ ಜೀವಿಸುವುದೇ ಇಲ್ಲ. ದುಡ್ಡು, ಆಸ್ತಿ, ಸಂಪತ್ತನ್ನೆಲ್ಲಾ ಮಾಡಿ, ಅವನ್ನು ಸ್ವಲ್ಪವೂ ಅನುಭವಿಸದೇ ಮಣ್ಣಾಗುತ್ತಾರೆ. ಅವೆಲ್ಲವನ್ನೂ ಅನುಭವಿಸುವವರು ಅವರ ಮಕ್ಕಳು.
ಇಲ್ಲ, ಇದು ತಪ್ಪು ಕಣೇ. ಈಗಿನ ಕಾಲದಲ್ಲೂ ಹೀಗೆ ಬದುಕುವುದು ಸ್ವಲ್ಪವೂ ಸರಿಯಿಲ್ಲ. ಮೊದಲು ನೀನು ನಿನ್ನ ಜೀವನವನ್ನು ಬೆಳಗಿಕೋ. ನಿನ್ನ ಬುಡದ ಕತ್ತಲೆಯನ್ನು ನೀಗಿಕೋ. ಅದರೆಡೆಗೆ ಬೆಳಕು ಚೆಲ್ಲು. ಆ ನಂತರ ಪರರ ಚಿಂತೆ. ಅವರು ತನ್ತಾನೇ ನಿನ್ನನ್ನು ಬಯಸಿ ಬರುತ್ತಾರೆ. ನಿನ್ನ ಬೆಳಕನ್ನರಸಿ ಬರುತ್ತಾರೆ.
ಬೆಳಗು ದೀಪಾ.. ಬೆಳಗು. ಜಗವನ್ನೇ ಬೆಳಗು. ಗಾಳಿ ಬರುತ್ತದೆ; ಸಹಿಸಿಕೋ. ಅಸಾಧ್ಯವಾದದ್ದು ಯಾವುದೂ ಇಲ್ಲ ಈ ಜಗದಲ್ಲಿ. ನಿನಗೆ ಪ್ರೋತ್ಸಾಹಿಗಳು ಇದ್ದೇ ಇರುತ್ತಾರೆ. ಸೂರ್ಯನಂತೆ, ಚಂದ್ರನಂತೆ ವಿಖ್ಯಾತಳಾಗು. ಲಕ್ಷನಕ್ಷತ್ರಗಳ ಕೇಂದ್ರಬಿಂದುವಾಗು.
ಪ್ರೀತಿಯಿಂದ,
-ಸು