Monday, December 03, 2018

ಒಳ್ಳೆಯ ಸುದ್ದಿ

ವಾರ್ತಾಪ್ರಸಾರದ ಕೊನೆಯಲ್ಲಿ ಬರುತ್ತಿದ್ದ ಹವಾ ವರ್ತಮಾನ
ಈಗ ದಿನವಿಡೀ ಬಿತ್ತರವಾಗುತ್ತಿದೆ
ಕೆಂಪಗೆ ಹರಿವ ನೀರು, ಕುಸಿದ ಗುಡ್ಡಗಳು, ನಿರಾಶ್ರಿತ ಜನಗಳು,
ಸಹಾಯ ಮಾಡೀ ಎನ್ನುತ್ತಿರುವವರ ಭಯಗ್ರಸ್ತ ಕಂಗಳು
ಹೊರಗೆ ನೋಡಿದರೆ ಮ್ಲಾನ ಕವಿದ ವಾತಾವರಣ
ಮನೆಯ ಒಳಗೂ ಕತ್ತಲೆ ಕತ್ತಲೆ

ಇಂತಹ ಮುಂಜಾನೆ ಬಂದು ನೀನು ಬಾಗಿಲು ತಟ್ಟಿದ್ದೀ
ಕೈಯಲ್ಲೊಂದು ಚೀಲ, ಕಂದು ಸ್ವೆಟರು, ಕೆದರಿದ ಕೂದಲು
ಟೀವಿಯಲ್ಲಿ ಕಾಣುತ್ತಿರುವ ಆ ಆರ್ತರಲ್ಲೊಬ್ಬನೇ
ಎದ್ದು ಬಂದಂತೆ, ದಿಢೀರೆಂದು ಹೀಗೆ ಎದುರಿಗೆ ನಿಂತಿದ್ದೀ
ಮನೆಯಲ್ಲೆಲ್ಲ ಕ್ಷೇಮ ತಾನೇ? ಊರಿಗೇನೂ ಆಗಿಲ್ಲವಷ್ಟೇ?
ಬಾ, ಕುಳಿತುಕೋ ಗೆಳೆಯಾ, ಕೈಚೀಲವನ್ನಿತ್ತ ಕೊಡು

ಮಬ್ಬು ತುಂಬಿಕೊಂಡಿರುವ ಈ ಋತುವಿನಲ್ಲಿ
ಕಳೆಗುಂದಿರುವ ಮನಸಿಗೆ ಹಿತವಾಗುವಂತಹ
ಒಳ್ಳೆಯ ಸುದ್ದಿಗಳ ಹೇಳು
ಬಿಸಿಯಾದ ಚಹಾ ಮಾಡಿಸುವೆ
ಡೇರೆಯ ಗಿಡದಲಿ ಹೂವರಳಿರುವ
ಡೊಂಬರ ಲೋಕೇಶ ಶಾಲೆಗೆ ಹೊರಟಿರುವ
ಮಂಜಿ ಗದ್ದೆಗೆ ತಂದ ಬುತ್ತಿಯಲ್ಲಿ ಎಳ್ಳುಂಡೆಯಿದ್ದ
ಕೆಳಮನೆ ದ್ಯಾವ ಹೊಸ ಜೋಡೆತ್ತು ಕೊಂಡ
ನಲವತ್ತರ ಮಾಲತಿಗೆ ಮದುವೆ ನಿಕ್ಕಿಯಾಗಿರುವ
ಸಂತೆ ಮೈದಾನದ ಮಳಿಗೆಗಳ ಹೆಂಚು ಬದಲಿಸಿದ
ಸಿಹಿ ಸುದ್ದಿಗಳ ಹಂಚಿಕೋ

ಬೇಕಿದ್ದರೆ ನೀನು ತಂದಿರುವ ಹಲಸಿನಕಾಯಿಯ ಚಿಪ್ಸು ಸೀಸನಲ್ಲು,
ಅದು ನಮ್ಮನೆ ಆಲೂಗಡ್ಡೆ ಚಿಪ್ಸಿಗಿಂತ ಶ್ರೇಷ್ಠ ಅಂತ
ಜಗಳಾಡು
ಹಳೆಯ ಗೆಳೆಯರ, ಮಾಡಿದ ಕೀಟಲೆಗಳ ನೆನೆದು
ನಗೋಣ
ಆದರೆ ಹಾಗೆ ನಿಗೂಢವಾಗಿ ನೋಡಬೇಡ
ಯಾವುದೋ ದುಃಖದ ಸುದ್ದಿಯನ್ನೇ ಹೇಳಲು ಬಂದವನಂತೆ
ಮೌನ ಮುರಿಯಲು ಒದ್ದಾಡುತ್ತಿರುವವನಂತೆ ವರ್ತಿಸಬೇಡ
ಈ ವೆದರಿನಲ್ಲಿ ಕಣ್ಣೀರೂ ಬೇಗ ಒಣಗುವುದಿಲ್ಲ ಮಾರಾಯಾ

ಇಕೋ ಟವೆಲು, ಗೀಸರಿನಲ್ಲಿ ನೀರು ಬಿಸಿಯಿದೆ,
ಬೆಚ್ಚಗೆ ಸ್ನಾನ ಮಾಡಿಬಂದು ಈ ಖಿನ್ನಹವೆಯ
ತಿಳಿಗೊಳಿಸುವಂತಹ ಒಳ್ಳೊಳ್ಳೆಯ ಸುದ್ದಿಗಳ ಹೇಳು.


ಹೀಗೇ ಅಲ್ಲವೇ

ಇದುವರೆಗೆ ನಡೆಯುವಾಗ ಹೊಸ್ತಿಲ ಬಳಿ ಕುಳಿತು ದಾಟುತ್ತಿದ್ದ
ಮೆಟ್ಟಿಲ ಬಳಿ ಕುಳಿತು ಹತ್ತುತ್ತಿದ್ದ ಮಗಳು
ಮೊನ್ನೆಯಿಂದ ಬಗ್ಗದೆ ತಗ್ಗದೆ ಮುಂದರಿಯುತ್ತಿದ್ದಾಳೆ
ಅದು ಹೇಗೆ ಧೈರ್ಯ ಮಾಡಿದೆ ಮಗಳೇ ಎಂದರೆ
ಎದೆಯುಬ್ಬಿಸಿ ನಗೆಯಾಡುತ್ತಾಳೆ
ಏನೋ ಸಮಜಾಯಿಷಿ ನೀಡುತ್ತಾಳೆ
ಅವಳದೇ ಭಾಷೆಯಲ್ಲಿ

ಆದರೂ ನನಗದರ್ಥವಾಗುತ್ತದೆ
ಹೀಗೇ ಅಲ್ಲವೇ ನಾನೂ ಮೊದಲ ಸಲ
ಸೈಕಲ್ಲಿನ ಪೆಡಲಿನ ಮೇಲೆ ಹೆಜ್ಜೆಯಿಟ್ಟಿದ್ದು
ಒಳಪೆಡ್ಲಿನಿಂದ ಬಂಪರಿಗೆ
ಬಂಪರಿನಿಂದ ಸೀಟಿಗೆ ಏರಿದ್ದು
ಢವಗುಡುವೆದೆಯ ಸದ್ದನು
ಟ್ರಿಣ್‌ಟ್ರಿಣ್ ಬೆಲ್ ಮಾಡಿಯೇ ಮರೆಸಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಪೇರಲೆ ಮರದ ಕೆಳರೆಂಬೆಗಳ ದಾಟಿ ಮೇಲೇರಿದ್ದು
ತುದಿಯಲಿ ಜೋತ ಹಣ್ಣುಗಳ ಬಗ್ಗಿ ಹಿಡಿದದ್ದು
ಇಡೀ ಗಿಡವೇ ಬಾಗಿ ಹೆರೆಯೇ ಮುರಿಯಿತೆನಿಸಿ 
ಕಣ್ಣು ಮೇಲಾದಾಗಲೂ ಉಸಿರು ಬಿಗಿಹಿಡಿದುಕೊಂಡದ್ದು
ಕೆಳಗಿಳಿಯಲು ಕಾಲು ಸಿಗದೇ ಮೇಲಿಂದಲೇ ಹಾರಿದ್ದು
ಆದ ಗಾಯದ ಉರಿಯನು ಹಣ್ಣಿನ ರುಚಿಯಲಿ ಮಾಯಿಸಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಮಹಾನಗರದ ಬಸ್ಸು ಹತ್ತಿದ್ದು
ಮೆಜೆಸ್ಟಿಕ್ಕಿನ ನುಣ್ಣನೆ ಕಾಂಕ್ರೀಟು ನೆಲದಲಿ ಪಾದವೂರಿದ್ದು
ಹವಾಯಿ ಗಂಧರ್ವ ಪುಟುಪುಟು ಕಾಲೆತ್ತಿಟ್ಟಿದ್ದು 
ಅತ್ತಿತ್ತ ನೋಡುತ್ತ ಹುಸಿನಗೆಯಾಡುತ್ತ
ಎಲ್ಲ ತಿಳಿದವನಂತೆ ತಿಳಿಯದ ದಾರಿಯಲಿ ನಡೆದದ್ದು
ಸಿಗ್ನಲ್ಲು ಬಿದ್ದಾಗ ಪಕ್ಕದವನೊಂದಿಗೇ ರಸ್ತೆ ದಾಟಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಫಳಫಳ ಹೊಳೆವ ರಿಸೆಪ್ಷನ್ನಿನಲ್ಲಿ ಸರತಿಯಲ್ಲಿ ಕಾದದ್ದು
ಹೆಸರು ಕರೆದಾಗ ರೆಸ್ಯೂಮ್ ಹಿಡಿದು ಕದ ತಳ್ಳಿದ್ದು
ಗರಿಗರಿ ಇಸ್ತ್ರಿಯಂಗಿಗಳ ಇಂಗ್ಲೀಷು ವಾಗ್ಝರಿಗೆ
ಹರುಕುಮುರುಕು ಪದಗಳ ಜೋಡಿಸಿ ಉತ್ತರಿಸಿದ್ದು 
ಕೆಲಸದ ಮೊದಲ ದಿನ ತಿರುಗುಕುರ್ಚಿಯಲಿ ಕುಳಿತು
ಮೆಲ್ಲಗೆ ಒರಗಿದ್ದು, ಸುತ್ತಲೂ ನೋಡಿ ನಕ್ಕಿದ್ದು 

ಸರಿಯಿದೆ ಮಗಳೇ
ಹೀಗೇ ನಿನಗೆ ನೀನೇ ಧೈರ್ಯವಾಗಿ
ನಿನಗೆ ನೀನೇ ಸಾಟಿಯಾಗಿ
ಹುಸಿನಗೆ ಮೊಂಡೆದೆ ದೃಢದನಿಯಲಿ
ಇಡುವೆ ಇಂತಹ ಹೆಜ್ಜೆಗಳ ಮುಂದೆಯೂ
ದಡ ಸೇರಿ ಖುಷಿಪಡುವೆ ನಿನ್ನ ಬಗೆಗೇ ನೀನು 
ಚಪ್ಪಾಳೆ ತಟ್ಟುವೆ ನೋಡುತ್ತ ಕನ್ನಡಿಯಲಿ ನಾನು.

Friday, June 01, 2018

ಕಸದಿಂದಲೇ ವಿರಸ

ಹೋಯ್, ವಿಷಲ್ ಊದಿದ ಶಬ್ದ.. ಕಸದವ್ರು ಬಂದಿದಾರೆ ಅನ್ಸುತ್ತೆ ನೋಡ್ರೀ ಅಂತ ಹೆಂಡತಿ ಕೂಗಿದಳು ಅದ್ರೆ ನಾನು ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೇ ಬಿಟ್ಟು ಟೆರೇಸಿಗೆ ಓಡಬೇಕು ಅಂತ ಅರ್ಥ. ಇದು ನಮ್ಮ ಮನೆಯಲ್ಲಿ ಹೆಚ್ಚುಕಮ್ಮಿ ಪ್ರತಿದಿನ ಬೆಳಿಗ್ಗೆ ನಡೆಯುವ ಪ್ರಸಂಗ. ನಮ್ಮ ಮನೆ ಇರುವುದು ರಾಜಧಾನಿಯ ಜನನಿಬಿಡ ವಸತಿ ಪ್ರದೇಶಗಳೊಂದರಲ್ಲಿ, ಕಟ್ಟಡದ ಮೂರನೇ ಮಹಡಿಯಲ್ಲಿ. ಮನೆ ರಸ್ತೆಗೆ ಅಭಿಮುಖವಾಗಿ ಇರದೆ ಕಟ್ಟಡದ ಹಿಂಭಾಗದಲ್ಲಿರುವುದರಿಂದ ನಮಗೆ ರಸ್ತೆಯಲ್ಲಿ ಏನು ನಡೆಯುತ್ತಿದೆ ಅಂತ ನೋಡಬೇಕೆಂದರೆ ಕೆಳಗಿಳಿದು ರಸ್ತೆಗೇ ಬರಬೇಕು ಅಥವಾ ಟೆರೇಸಿಗೆ  ಹೋಗಿ ಬಗ್ಗಬೇಕು. ಮತ್ತೂ ಒಂದು ಸಮಸ್ಯೆಯೆಂದರೆ, ನಮ್ಮ ಮನೆಯ ಸುತ್ತಲೂ ಮೂರ್ನಾಲ್ಕು ರಸ್ತೆಗಳು ಹತ್ತತ್ತಿರದಲ್ಲೇ ಇರುವುದು. ಹೀಗಾಗಿ ಕಸದ ತಳ್ಳುಗಾಡಿಯವರು ಬಂದು ವಿಷಲ್ ಊದಿದಾಗ ಅವರು ನಮ್ಮ ಮನೆಯಿರುವ ರಸ್ತೆಯಲ್ಲೇ ಇದ್ದಾರೋ ಅಥವಾ ಹಿಂದಿನ / ಅಕ್ಕಪಕ್ಕದ ಯಾವುದಾದರೂ ರಸ್ತೆಯಲ್ಲಿದ್ದಾರೋ ಎಂಬುದು ತಿಳಿಯದೇ ಹೋಗುವುದು. ಈ ಕಾರಣದಿಂದ ಪ್ರತಿದಿನ ವಿಷಲ್ ಸದ್ದು ಕೇಳಿದಾಗಲೂ ನಾನು ಟೆರೇಸಿಗೆ ಓಡಿ, ಕಸದ ಗಾಡಿ ನಮ್ಮ ರಸ್ತೆಯಲ್ಲೇ ಇದೆ ಮತ್ತು ಅವರು ಹಸಿ /ಒಣ ಕಸವನ್ನೇ ಸ್ವೀಕರಿಸುತ್ತಿದ್ದಾರೆ ಅಂತ ಖಚಿತಪಡಿಸಿಕೊಂಡು ನಂತರ ಡಸ್ಟ್‌‍ಬಿನ್ನು ಹಿಡಿದು ಕೆಳಗೋಡಬೇಕು. ಹಾಗೆ ನೋಡದೇ ಕೇವಲ ಶಬ್ದವನ್ನಾಧರಿಸಿ ಶಬ್ದವೇಧಿ ಕಲಿತವನ ಗತ್ತಿನಲ್ಲಿ ನಮ್ ರೋಡಲೇ ಇದಾರೆ ಬಿಡು ಅಂದುಕೊಂಡು ಕೆಳಗಿಳಿದೆನೋ, ಖಾಲಿ ರಸ್ತೆ ನೋಡಿಕೊಂಡು, ವಾಸನೆ ಸೂಸುವ ಕಸದ ಬುಟ್ಟಿಯೊಂದಿಗೆ ವಾಪಸ್ ಮೆಟ್ಟಿಲು ಹತ್ತಬೇಕು. 
 
ಬೆಂಗಳೂರಿಗೆ ಬಂದಮೇಲೆ ನಾನು ಅನುಭವಿಸಲು ಶುರುಮಾಡಿದ ಮಹಾನ್ ಕಷ್ಟಗಳಲ್ಲಿ ಇದೂ ಒಂದು. ಊರಲ್ಲಾದರೆ ಈ ಕಸದ ವಿಲೇವಾರಿ ಇಷ್ಟೆಲ್ಲಾ ಕಷ್ಟ ಎಂದೂ ಆದದ್ದಿಲ್ಲ. ಯಾವ ಕಸವಿರಲಿ, ಅದು ಮಣ್ಣಲ್ಲಿ ಕರಗುವ ವಸ್ತು ಎಂದಾದರೆ ಬೀಸಾಡಲು ಗೊಬ್ಬರದ ಗುಂಡಿಯೊಂದು ಇದ್ದೇ ಇರುತ್ತಿತ್ತು. ಕರಗದ ವಸ್ತುವೋ, ಸುಡಲು ಬಚ್ಚಲೊಲೆ ಸಿದ್ಧವಿರುತ್ತಿತ್ತು. ಉಂಡು ಮಿಕ್ಕಿದ ಆಹಾರ ಪದಾರ್ಥ ನಮಗೆ ಎಂದೂ ವ್ಯರ್ಥವೆನಿಸಿದ್ದಿಲ್ಲ: ಅದನ್ನು ತಿನ್ನಲು ಕೊಟ್ಟಿಗೆಯಲ್ಲಿ ಜಾನುವಾರುಗಳು ಕಾಯುತ್ತಿರುತ್ತಿದ್ದವು. ಅನ್ನ ಮಿಕ್ಕರೆ ಹಿಂಡಿಯ ಜೊತೆ, ಸಾರು ಮಿಕ್ಕರೆ ಅಕ್ಕಚ್ಚಿನ ಜೊತೆ ಅವು ಜಾನುವಾರಿನ ಹೊಟ್ಟೆ ಸೇರುತ್ತಿದ್ದವು. ಮನೆ ಗುಡಿಸಿದಾಗ ಸಿಕ್ಕ ಧೂಳನ್ನಾಗಲೀ, ಅಂಗಳ ಗುಡಿಸಿದಾಗ ಸಂಗ್ರಹವಾದ ತರಗೆಲೆಗಳನ್ನಾಗಲೀ, ತಲೆ ಬಾಚಿದಾಗ ಉದುರಿದ ಕೂದಲನ್ನಾಗಲೀ, ಹಣ್ಣು ಬಿಡಿಸಿದಾಗ ಉಳಿದ ಸಿಪ್ಪೆಯನ್ನಾಗಲೀ ಎಲ್ಲಿಗೆಸೆಯಬೇಕು ಅಂತ ನಾವೆಂದೂ ಯೋಚಿಸುವಂತಾಗಿರಲಿಲ್ಲ. ಅವಕ್ಕೆಲ್ಲ ಬೇಕಾದಷ್ಟು ಜಾಗ ಮತ್ತು ಅವಕಾಶ ಹಳ್ಳಿಯ ಮನೆಯಲ್ಲಿರುತ್ತಿತ್ತು.

ಆದರೆ ಬೆಂಗಳೂರಿನ ಮನೆಯಲ್ಲಿ ಹಾಗಲ್ಲ. ಉಪ್ಪಿಟ್ಟಿನ ತಟ್ಟೆಯಲ್ಲಿ ಸಿಕ್ಕ ಒಂದು ಮೆಣಸಿನಕಾಯಿಯ ಚೂರೂ ಬೃಹತ್ ಕಸದಂತೆ ಕಾಣತೊಡಗಿತು. ಅದನ್ನು ತಟ್ಟೆಯಲ್ಲೇ ಬಿಡುವುದೋ ಅಥವಾ ತಿಂದುಬಿಡುವುದೋ? ಬಿಟ್ಟರೆ ಅದನ್ನು ಎಸೆಯುವ ಸಮಸ್ಯೆ; ಹಾಗಂತ ತಿಂದರೆ ಖಾರ ನೆತ್ತಿಗೇರಿ...  

ನಾನು ಮೊದಲಿಗೆ ಇದ್ದ ಬ್ಯಾಚುಲರ್ಸ್ ಬಿಡಾರದಲ್ಲಿ ಇದು ಭಯಂಕರ ಸಮಸ್ಯೆಯಂತೆ ಅನಿಸಿರಲಿಲ್ಲ. ಆ ಮನೆಯಿದ್ದುದು ಗ್ರೌಂಡ್ ಫ್ಲೋರಿನಲ್ಲಿ. ಅಲ್ಲದೇ ತುಂಬಿದ ಕಸದ ಬುಟ್ಟಿಯನ್ನು ಗೇಟಿನ ಹೊರಗೆ ಇಟ್ಟರೆ ಸಾಕು, ಕಸದವರೇ ಅದನ್ನು ಎತ್ತಿ ಗಾಡಿಗೆ ಸುರಿದುಕೊಂಡು ಹೋಗುತ್ತಿದ್ದರು. ಹಾಗೂ ಮರೆತರೂ ಕಸದ ಗಾಡಿಯವರು ಆಗ ಬಾರಿಸುತ್ತಿದ್ದ ಟಿಣಿಟಿಣಿ ಗಂಟೆ ನಮ್ಮ ಕಿವಿಗೇ ರಾಚುತ್ತಿದ್ದುದರಿಂದ ಓಡಿಹೋಗಿ ಕಸ ಸುರಿದು ಬರುವುದು ಸುಲಭವಿತ್ತು. 

ಆದರೆ ಮದುವೆಯಾಗಿ ಈ ಮೂರನೇ ಮಹಡಿಯ ಮನೆಗೆ ಬಂದಮೇಲೆ ಕಸದ ನಿವಾರಣೆಯೊಂದು ದೊಡ್ಡ ತೊಡಕಾಗಿಹೋಯಿತು. ಮೂರನೇ ಮಹಡಿಯಾದ್ರೆ ಏನಾಯ್ತು, ಮನೆ ಚನಾಗಿದ್ಯಲ್ಲ ಎಂದುಕೊಂಡು ಉತ್ಸಾಹದಲ್ಲಿ ಮನೆ ಬಾಡಿಗೆಗೆ ಪಡೆದದ್ದು ಎರಡೇ ತಿಂಗಳೊಳಗೆ ಅರವತ್ತು ಮೆಟ್ಟಿಲುಗಳನ್ನು ಹತ್ತಿಳಿಯುವುದು ಸುಸ್ತಿನ ಕ್ರಿಯೆಯೆನಿಸತೊಡಗಿತು. ದಿನಕ್ಕೆ ಒಂದೆರಡು ಸಲ ಮಾತ್ರ ಹತ್ತಿಳಿಯುವುದು ನಿಜವಾದರೂ, ಅಕಸ್ಮಾತ್ ಏನನ್ನಾದರೂ ಮರೆತು ಬಿಟ್ಟುಬಂದರೆ ಅದನ್ನು ತರಲು ಮತ್ತೆ ಅರವತ್ತು ಮೆಟ್ಟಿಲು ಹತ್ತಿಳಿಯುವುದು ದುಬಾರಿಯೆನಿಸುತ್ತಿತ್ತು. ಎಲ್ಲಕ್ಕಿಂತ ಕಷ್ಟವೆನಿಸಿದ್ದು ಈ ಕಸ ಒಗೆದು ಬರುವ ಪ್ರಕ್ರಿಯೆ. ಈ ಕಸದವರಾದರೂ ನಿಗಧಿತ ಸಮಯಕ್ಕೆ ಬರುತ್ತಾರೋ? ಇಲ್ಲ. ಅವರು ಬರುವ ಸಮಯಕ್ಕೆ ಕಾದು, ನಮ್ಮ ರಸ್ತೆಯಲ್ಲೇ ಇದ್ದಾರೆಂದು ಖಚಿತಪಡಿಸಿಕೊಂಡು, ಕಸದ ಬುಟ್ಟಿ ಹಿಡಿದು ಕೆಳಗೆ ಓಡುವುದು ಪ್ರಯಾಸದ ಕೆಲಸವೆನಿಸಿತು. ಎಷ್ಟೋ ಸಲ ನಾವು ಬೆಳಗಿನ ತಿಂಡಿ ತಿನ್ನುತ್ತಿರುವಾಗಲೋ, ಸ್ನಾನ ಮಾಡಿ ಪೂರ್ತಿ ರೆಡಿಯಾಗಿ ಆಫೀಸಿಗೆ ಹೊರಟಾಗಲೋ, ಅಥವಾ ನಾವಿಬ್ಬರೂ ಆಫೀಸಿಗೆ ಹೋದಮೇಲೆಯೋ ಈ ಕಸದವರು ಬರುತ್ತಿದ್ದುದರಿಂದ ನಮ್ಮ ಮನೆಯಲ್ಲಿ ಒಗೆಯದ ಕಸ ರಾಶಿರಾಶಿಯಾಗಿ ಶೇಖರವಾಗತೊಡಗಿತು. 

ಹೀಗಾಗಿ ನಾವು ಒಂದು ಉಪಾಯ ಕಂಡುಕೊಂಡೆವು. ಮನೆಯಿಂದ ಅನತಿ ದೂರದಲ್ಲಿ ಒಂದು ಖಾಲಿ ಸೈಟ್ ಇರುವುದನ್ನು ಪತ್ತೆ ಹಚ್ಚಿದೆವು. ಅಲ್ಲಿ ಬಹಳಷ್ಟು ಜನ ಕಸ ಒಗೆಯುತ್ತಿದ್ದುದರಿಂದ ಅದೊಂಥರಾ ಅಘೋಷಿತ ಡಂಪಿಂಗ್ ಯಾರ್ಡ್ ಆಗಿತ್ತು. ನಾವು ಎಷ್ಟೇ ಸಾಮಾಜಿಕ ಕಳಕಳಿ ಇರುವವರು, ನಗರವನ್ನು ಸ್ವಚ್ಛವಾಗಿಡುವಲ್ಲಿ ನಮ್ಮ ಪಾತ್ರವೇ ಮುಖ್ಯವೆಂಬ ಅರಿವು ಇರುವವರೂ ಆಗಿದ್ದರೂ, ಮನೆಯಲ್ಲಿ ಸಂಗ್ರಹವಾಗಿದ್ದ ಹೇರಳ ಕಸವನ್ನು ಹಾಗೇ ಇಟ್ಟುಕೊಂಡಿರಲು ಸಾಧ್ಯವಿರುತ್ತಿರಲಿಲ್ಲ. ನಮಗೇ ಖಾಯಿಲೆ ಬರಬಹುದಾದ ಸಾಧ್ಯತೆ ಇತ್ತು. ಆದ್ದರಿಂದ ನಮ್ಮ ಸಾಮಾಜಿಕ ಜವಾಬ್ದಾರಿಗಳಿಗೆಲ್ಲ ಆ ಸಂದರ್ಭದಲ್ಲಿ ತಿಲಾಂಜಲಿಯಿಟ್ಟು, ರಾತ್ರಿ ಹೊತ್ತು ಕಸವನ್ನೆಲ್ಲಾ ಒಂದು ಕವರಿನಲ್ಲಿ ತುಂಬಿಕೊಂಡು ಹೋಗಿ, ಯಾರಿಗೂ ಕಾಣದಂತೆ ಆ ಖಾಲಿ ಸೈಟಿನಲ್ಲಿ ಬೀಸಾಡಿ ಬಂದುಬಿಡುತ್ತಿದ್ದೆವು. ಆಮೇಲೆ ನಗರದ ಎಲ್ಲೆಡೆ ಕಸ ತುಂಬಿ ತುಳುಕ್ತಾ ಇದೆ.. ಜನ ಎಲ್ಲೆಂದರಲ್ಲಿ ಕಸ ಚೆಲ್ತಾರೆ. ಪಾಲಿಕೆಯವರು ಸರಿಯಾಗಿ ಕಾರ್ಯ ನಿರ್ವಹಿಸ್ತಾ ಇಲ್ಲ. ಸರ್ಕಾರ ನಿದ್ದೆ ಮಾಡ್ತಿದೆಯಾ?’ ಅಂತೇನಾದ್ರೂ ಟೀವಿಯಲ್ಲಿ ಸುದ್ದಿ ಬಂದರೆ ನಾವೂ, ಹೂಂ ಕಣ್ರೀ, ಹಾಗೆಲ್ಲಾ ಕಸವನ್ನ ಬೇಕಾಬಿಟ್ಟಿ ಬೀಸಾಡ್ಬಾರ್ದು. ಜನಕ್ಕೆ ಸ್ವಲ್ಪಾನೂ ರೆಸ್ಪಾನ್ಸಿಬಿಲಿಟಿ ಇಲ್ಲ ಅಂತ ನಾಲ್ಕು ಜನರೆದುರಿಗೆ ಅಮಾಯಕರಂತೆ ಹೇಳಿಕೊಳ್ಳುತ್ತಿದ್ದೆವು. 

ನಮ್ಮ ಈ ಗುಪ್ತ ಚಟುವಟಿಕೆ ಹೆಚ್ಚು ಕಾಲ ನಡೆಯಲಿಲ್ಲ. ಒಂದು ದಿನ ಆ ಖಾಲಿ ಸೈಟನ್ನು ಸ್ವಚ್ಛಗೊಳಿಸಿ ಅದರ ಮಾಲೀಕ ಮನೆ ಕಟ್ಟಿಸಲು ಶುರುವಿಟ್ಟರು.  ಹೆಚ್ಚುಕಮ್ಮಿ ಆ ಹೊತ್ತಿನಲ್ಲೇ ಮಾನ್ಯ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಅಭಿಯಾನವೂ ಶುರುವಾಯಿತು. ಜನನಾಯಕರೂ, ಗಣ್ಯವ್ಯಕ್ತಿಗಳೂ, ಸೆಲೆಬ್ರಿಟಿಗಳೂ ಕಸ ಗುಡಿಸುವ ಚಿತ್ರಗಳು ಎಲ್ಲೆಲ್ಲೂ ರಾರಾಜಿಸತೊಡಗಿದವು. ಇದಕ್ಕೆ ಎಲ್ಲೆಡೆಯಿಂದ ಬೆಂಬಲವೂ ಪ್ರಶಂಸೆಗಳೂ ಕೇಳಿಬಂದವು. ನಗರ ಪಾಲಿಕೆಯವರೂ ಹಿಂದಿಗಿಂತ ಹೆಚ್ಚು ಚುರುಕಾದಂತೆ ನನಗೆ ಅನ್ನಿಸಿತು. ಒಣ ಕಸ ಹಸಿ ಕಸಗಳನ್ನು ಬೇರ್ಪಡಿಸಿ ಕೊಡಬೇಕು ಎಂಬ ನಿಯಮ ಬೇರೆ ಜಾರಿಯಾಯಿತು. ಒಣ ಕಸವನ್ನು ಕೆಂಪು ಬುಟ್ಟಿಯಲ್ಲೂ ಹಸಿ ಕಸವನ್ನು ಹಸಿರು ಬುಟ್ಟಿಯಲ್ಲೂ ಹಾಕಬೇಕು ಅಂತೆಲ್ಲ ಜಾಹೀರಾತು ಕೊಟ್ಟರು. ಅದನ್ನು ನೋಡಿ ನಾನು ಅಂಗಡಿಗೆ ಹೋಗಿ ಒಂದು ಕೆಂಪು - ಒಂದು ಹಸಿರು ಬಣ್ಣದ ಡಸ್ಟ್‌ಬಿನ್ ಕೊಡಿ ಅಂತ ಕೇಳಿದೆ. ಅದಕ್ಕವರು ಆ ಬಣ್ಣದ್ದು ಇಲ್ಲ ಸಾರ್, ಬೇರ್ಬೇರೆ ಇದಾವೆ, ಕೊಡ್ಲಾ?’ ಅಂದರು. ನಾನು ಇಲ್ಲ ಇಲ್ಲ, ಕೆಂಪು-ಹಸಿರೇ ಬೇಕು. ಅಡ್ವರ್ಟೈಜ್ ನೋಡ್ಲಿಲ್ವಾ?’ ಅಂದೆ. ಅಂಗಡಿಯವನಿಗೆ ರೇಗಿಹೋಯಿತು: ರೀ, ತಲೆ ಇಲ್ವೇನ್ರೀ ನಿಮ್ಗೆ? ಕೆಂಪು-ಹಸಿರೇ ಇರಕ್ಕೆ ಅದೇನು ಟ್ರಾಫಿಕ್ ಸಿಗ್ನಲ್ ಲೈಟಾ? ಬೇರೆ ಬಣ್ಣದ್ರಲ್ಲಿ ಹಾಕ್ಕೊಟ್ರೆ ಕಸದವ್ರೇನು ಒಯ್ಯಲ್ಲಾ ಅಂತಾರಾ? ಅವ್ರು ಹೇಳಿದ್ರಂತೆ, ಇವ್ರು ಕೇಳಿದ್ರಂತೆ. ಕಾಮನ್‍ಸೆನ್ಸ್ ಇಲ್ಲ ಜನಕ್ಕೆ. ಬೇಕಿದ್ರೆ ತಗಂಡೋಗಿ ಇಲ್ಲಾಂದ್ರೆ ಬಿಡಿಅಂತ ಗೊಣಗಿದ. ಈ ಕಸದ ರಾಶಿಯೊಳಗೆ ಮುಳುಗಿ ನನಗೂ ಸೆನ್ಸ್ ಕಮ್ಮಿಯಾಗಿದೆ ಅನ್ನಿಸಿತು. ಕೆಂಪು-ಹಸಿರು ಎಂಬುದನ್ನು ಕೇವಲ ಪ್ರಾತಿನಿಧಿಕವಾಗಿ ತೋರಿಸಿದ್ದಷ್ಟೇ ಅಲ್ವಾ ಅಂದುಕೊಂಡು, ಯಾವುದೋ ಬಣ್ಣದ ಡಸ್ಟ್‍ಬಿನ್ನುಗಳನ್ನು ಕೊಂಡು ತಂದೆ. 

ಈ ವಿಂಗಡನೆ ಒಂದು ರೀತಿಯಲ್ಲಿ ನಮಗೆ ಒಳ್ಳೆಯದನ್ನೇ ಮಾಡಿತು. ಒಣ-ಹಸಿ ಕಸಗಳನ್ನೆಲ್ಲಾ ಒಟ್ಟಿಗೇ ಒಂದೇ ಬುಟ್ಟಿಗೆ ಹಾಕಿ ಅದು ಆಳೆತ್ತರದ ರಾಶಿಯಾಗಿ ನಮಗೆ ಕಿರಿಕಿರಿಯಾಗುವುದು ತಪ್ಪಿತು. ಅಭ್ಯಾಸವಾಗಲು ಸ್ವಲ್ಪ ದಿನ ಹಿಡಿದರೂ, ಕೊಳೆತು ಹೋಗುವ ಹಸಿ ಕಸದಿಂದ ಬೇರೆಯಾಗಿರುವ ಒಣ ಕಸವನ್ನು ನಾವು ವಾರ-ಹತ್ತು ದಿನಕ್ಕೊಮ್ಮೆ ಬೀಸಾಡಿದರೂ ಸಮಸ್ಯೆಯಿರಲಿಲ್ಲ. ಆದರೆ ಈ ಕಸ ಸಂಗ್ರಹಿಸುವ ಕಾರ್ಮಿಕರೇ ಇದನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲವಾದ್ದರಿಂದ, ನಾವು ಎಷ್ಟೇ ಬೇರ್ಪಡಿಸಿ ಕೊಟ್ಟರೂ ಅವರು ಅದನ್ನೆಲ್ಲಾ ಒಟ್ಟಿಗೆ ಸೇರಿಸಿ ಗಾಡಿಗೆ ಸುರಿದುಕೊಳ್ಳುತ್ತಿದ್ದರು. ಒಂದಷ್ಟು ದಿನಗಳ ನಂತರ ಇನ್ಮೇಲೆ ವಾರಕ್ಕೆರಡು ದಿನ ಮಾತ್ರ ಒಣ ಕಸ ಒಯ್ತೀವಿ, ಅದಕ್ಕೆ ಬೇರೆ ಗಾಡೀನೇ ಬರ್ತದೆ ಎಂದರು. ಈಗ ನನ್ನ ಸಮಸ್ಯೆ ಬಿಗಡಾಯಿಸಿತು. ವಿಷಲ್ ಸದ್ದು ಕೇಳಿದಾಕ್ಷಣ ಟೆರೇಸಿಗೆ ಓಡಿ ಕಸದ ಗಾಡಿಯವರು ನಮ್ಮ ಬೀದಿಯಲ್ಲೇ ಇದ್ದಾರಾ ಅಂತ ಖಚಿತ ಪಡಿಸಿಕೊಳ್ಳುವುದರ ಜೊತೆಗೆ ಅವರು ಯಾವ ಕಸ ತೆಗೆದುಕೊಳ್ಳುತ್ತಿದ್ದಾರೆ ಅಂತಲೂ ನೋಡಿಕೊಂಡು ನಾನು ಕೆಳಗಿಳಿಯಬೇಕಿತ್ತು. ಏಕೆಂದರೆ ಒಣ ಕಸದವರು ಹಸಿ ಕಸ ಒಯ್ಯುತ್ತಿರಲಿಲ್ಲ; ಹಸಿ ಕಸದವರು ಒಣ ಕಸ ಒಯ್ಯುತ್ತಿರಲಿಲ್ಲ. ನಾನು ಕಿವಿಯನ್ನಲ್ಲದೇ ಕಣ್ಣನ್ನೂ ಚುರುಕಾಗಿಸಿಕೊಳ್ಳುವುದು ಅನಿವಾರ್ಯವಾಯಿತು. 

ಈ ನಡುವೆ, ಈ ಕಸದ ಉತ್ಪತ್ತಿಯ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆಯೇ ಅಂತ ನಾವು ಯೋಚಿಸಿದ್ದಿದೆ. ಅವರೆಕಾಯಿ ತಂದು, ಅದನ್ನು ಬಿಡಿಸಿ, ಸಿಪ್ಪೆಯನ್ನು ಬೀಸಾಡುವುದಕ್ಕಿಂತ ಬಿಡಿಸಿದ ಅವರೆ ಕಾಳುಗಳನ್ನೇ ತಂದರೆ? ಇಡೀ ಸ್ವೀಟ್‌ಕಾರ್ನ್ ಕುಂಡಿಗೆ ತರುವುದರ ಬದಲು ಬಿಡಿಸಿಟ್ಟ ಜೋಳವನ್ನೇ ತಂದರೆ? ಪಿಜ್ಜಾ ಆರ್ಡರ್ ಮಾಡಿದಾಗ ಅವರು ತಂದುಕೊಡುವ ರಟ್ಟಿನ ಪೆಟ್ಟಿಗೆಗಳನ್ನು ಅವರೊಂದಿಗೇ ವಾಪಸ್ ಕಳುಹಿಸಿದರೆ? ನಮ್ಮ ಈ ಯೋಜನೆಗಳು ಕೇಳಲಿಕ್ಕೆ ಚೆನ್ನಾಗಿದ್ದವೇ ಹೊರತು ಜಾರಿಗೆ ತರಲು ಕಷ್ಟವಿತ್ತು. ಒಂದು ಕಲ್ಲಂಗಡಿ ಹಣ್ಣು ಕತ್ತರಿಸಿದರೆ ಒಂದು ಬುಟ್ಟಿ ಸಿಪ್ಪೆ ಸಂಗ್ರಹವಾಗುತ್ತಿತ್ತು. ಸೀಜನ್ನಲ್ಲಿ ತಿನ್ಬೇಕು ಅಂತ ಆಸೆಪಟ್ಟು ಶೇಂಗ ತಂದು ಬೇಯಿಸಿದರೆ ಸಿಪ್ಪೆಯ ರಾಶಿಯೇ ದೊಡ್ಡದಾಯಿತು. ನಾಲ್ಕು ಜನರನ್ನು ಕರೆದು ಸಣ್ಣದೊಂದು ಪಾರ್ಟಿ ಮಾಡಿದೆವೆಂದರೆ ಎರಡು ಬುಟ್ಟಿ ಕಸ ತಯಾರಾಯಿತು ಅಂತಲೇ ಅರ್ಥ. ಎಷ್ಟೋ ದಿನ ಈ ಕಸದ ವಿಷಯವಾಗಿಯೇ ನಮ್ಮ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ವಾಗ್ವಾದಗಳಾಗುತ್ತಿದ್ದವು: ನಿನ್ನೆ ಬೆಳಿಗ್ಗೆ ಕಸದವ್ರು ಬಂದಾಗ ನೀವು ಹಾಕಿ ಬರ್ಬೇಕಿತ್ತು, ಈಗ ನೋಡಿ ಹುಳ ಆಗಿದೆ ಅಂತ ಅವಳೂ, ನೀನೇ ಹಾಕಿ ಬಂದಿದ್ರೆ ಗಂಟು ಹೋಗ್ತಿತ್ತಾ ಅಂತ ನಾನೂ ಗರಂ ಆಗುವೆವು. ಯಕಃಶ್ಚಿತ್ ಕಸ ನಮ್ಮಿಬ್ಬರ ನಡುವಿನ ವಿರಸಕ್ಕೆ ಕಾರಣವಾಗುತ್ತಿರುವುದು ನೋಡಿದರೆ ಅದಕ್ಕಿರುವ ಶಕ್ತಿಯ ಬಗ್ಗೆ ಆಶ್ಚರ್ಯವಾಗಿತ್ತಿತ್ತು.

ಊರಿನಿಂದ ಯಾರಾದರೂ ನೆಂಟರು ಬಂದರಂತೂ ಮುಗಿದೇಹೋಯಿತು. ನಮ್ಮ ಈ ಕಸ ನಿರ್ವಹಣೆಯ ಕಷ್ಟ ನೋಡಿ ಅವರಿಗೆ ಬಹುಶಃ ಯಾಕೆ ಬಂದೆವೋ ಅನ್ನಿಸುವಷ್ಟಾಗುತ್ತಿತ್ತು. ಸಂಜೆಯ ಹೊತ್ತಿಗೆ ವಿಷಲ್ ಸದ್ದು ಕೇಳಿದರೂ ಕಸದವ್ರು ಬಂದ್ರು ಅನ್ಸುತ್ತೆ ನೋಡಿ ಅನ್ನುತ್ತಿದ್ದರು. ಕವಳ ಹಾಕುವ ಚಟವಿರುವ ನೆಂಟರಿಗಂತೂ ಇಲ್ಲಿ ಉಗುಳುವುದಕ್ಕೆ ಜಾಗವೇ ಕಾಣದೇ ಒದ್ದಾಡಿಹೋದರು. ಸಿಂಕಿಗೆ ಉಗಿದರೆ ಪೈಪು ಕಟ್ಟಿಕೊಳ್ಳುತ್ತಿತ್ತು, ಕಮೋಡಿಗೆ ಉಗಿಯಲು ಹೇಸಿಗೆ, ಬಾಯ್ತುಂಬಿಕೊಂಡದ್ದನ್ನು ಉಗಿಯಲು ಅವರು ಮೂರು ಮಹಡಿ ಇಳಿದು ರಸ್ತೆಗೇ ಹೋಗಬೇಕಿತ್ತು. ಸಧ್ಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ದಂಡ ಹಾಕುವ ಪದ್ಧತಿಯಿನ್ನೂ ಈ ನಗರದಲ್ಲಿ ಬಂದಿಲ್ಲವಾದ್ದರಿಂದ ಅವರು ಬಚಾವ್ ಆದರು.

ಹಾಗೆ ನೋಡಿದರೆ, ನಾವು ಮನೆ ಬದಲಿಸಲು ತೀರ್ಮಾನಿಸಿದ್ದರ ಹಿಂದಿರುವ ಮುಖ್ಯ ಕಾರಣ ಈ ಕಸದ ನಿರ್ವಹಣೆಗೆ ಮುಕ್ತಿ ಕೊಡುವುದೇ. ನೆಲಮಹಡಿಯಲ್ಲೋ ಮೊದಲ ಮಹಡಿಯಲ್ಲೋ ಮನೆಯಿದ್ದು, ಅಲ್ಲಿಂದ ರಸ್ತೆ ಕಾಣುವಂತಿದ್ದರೆ ಅನುಕೂಲ ಎಂಬುದು ನಮ್ಮ ಭಾವನೆ. ಆದರೆ ನಾವು ಅಂದುಕೊಂಡ ತಕ್ಷಣ ಮನೆ ಸಿಗಬೇಕಲ್ಲ? ನಮಗೆ ಬೇಕಾದ ರೀತಿಯ, ನಮ್ಮ ಜೇಬಿಗೆ ಹೊಂದುವಷ್ಟು ಬಾಡಿಗೆಯ ಮನೆ ಈ ಮಹಾನಗರದಲ್ಲಿ ಸಿಗುವುದು ಸುಲಭವಲ್ಲ. ಅಲ್ಲದೇ ಒಂದು ಮನೆಗೆ ಹೊಂದಿಕೊಂಡಮೇಲೆ ಮತ್ತೊಂದು ಮನೆ ಪೂರ್ತಿಯಾಗಿ ಹಿಡಿಸುವುದು ಕಷ್ಟವೇ. ಒಂದಿಲ್ಲೊಂದು ಕೊರತೆ ಎದ್ದು ಕಾಣುತ್ತದೆ. ನೋಡಲು ಹೋದ ಮನೆಗಳಲ್ಲೆಲ್ಲಾ ನಾನು ಮರೆಯದೇ ಕೇಳುತ್ತಿದ್ದುದು ಒಂದೇ: ಈ ಏರಿಯಾದಲ್ಲಿ ಕಸ ಒಗೀಲಿಕ್ಕೆ ಸರಿಯಾದ ವ್ಯವಸ್ತೆ ಇದೆಯಾ?’ ಅಂತ. ನನ್ನ ಪ್ರಶ್ನೆಗೆ ಆ ಮನೆಯ ಮಾಲೀಕರು ಕಕ್ಕಾಬಿಕ್ಕಿಯಾಗುತ್ತಿದ್ದರು. ಬೋರ್‌ವೆಲ್ ಇದೆಯಾ, ಕಾವೇರಿ ನೀರು ಸರಿಯಾಗಿ ಬರುತ್ತಾ, ಸೆಕ್ಯುರಿಟಿ ಇದೆಯಾ ಅಂತೆಲ್ಲ ಕೇಳೋವ್ರನ್ನ ನೋಡಿದೀವಿ; ಇದೇನ್ರೀ ನೀವು ಕಸದ ಬಗ್ಗೆ ಕೇಳ್ತಿದೀರಾ! ಅಂತ ಕೆಲವು ಮಾಲೀಕರು ಕೇಳಿಯೂಬಿಟ್ಟರು.  ಅಲ್ಲ, ಅದು ಹಂಗಲ್ಲ, ಅದೂ ಇಂಪಾರ್ಟೆಂಟ್ ಅಲ್ವಾ?’ ಅಂತೇನೋ ಹೇಳಿ ನಾನು ಜಾರಿಕೊಂಡೆ.

ಅಂತೂ ಮೊನ್ನೆ ನೋಡಿದ ಒಂದು ಮನೆ ಇಬ್ಬರಿಗೂ ಇಷ್ಟವಾಗಿದೆ. ಮೊದಲ ಮಹಡಿಯಲ್ಲಿ ಮನೆಯಿದ್ದು, ರಸ್ತೆಗೆ ಅಭಿಮುಖವಾಗಿಯೇ ಮುಂಬಾಗಿಲು ಇರುವುದರಿಂದ ಕಸದ ಗಾಡಿಯವರು ಬಂದಿದ್ದು ಸುಲಭವಾಗಿ ತಿಳಿಯುತ್ತದೆ, ಬೀಸಾಡಿ ಬರಬಹುದು ಎಂದುಕೊಂಡಿದ್ದೇವೆ. ಇಲ್ಲಿ ಕಸದ ಗಾಡಿಯವ್ರು ದಿನಾಲೂ ಬರ್ತಾರೆ ಅಂತ ಬೇರೆ ಮಾಲೀಕರು ಹೇಳಿದ್ದಾರೆ.  ಇನ್ನು ಆ ಮನೆಗೆ ಸ್ಥಳಾಂತರವಾಗಿ, ದಿನದಲ್ಲಿ ಸಂಗ್ರಹವಾದ ಕಸವನ್ನು ಮರುದಿನವೇ ಒಗೆದು, ಸ್ವಚ್ಛ ಮತ್ತು ಜವಾಬ್ದಾರಿಯುತ ನಾಗರೀಕರಾಗಿರಲು ಪಣ ತೊಟ್ಟಿದ್ದೇವೆ. ಕಸದಿಂದಲೇ ನಮ್ಮಿಬ್ಬರ ನಡುವೆ ಶುರುವಾಗುತ್ತಿದ್ದ ವಿರಸವಾದರೂ ಕಮ್ಮಿಯಾಗಲಿ ಅಂತ ಮನಸಲ್ಲೇ ಅಂದುಕೊಳ್ಳುತ್ತಿದ್ದೇವೆ. 

[ಹೊಸ ದಿಗಂತ ಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ]

Saturday, March 24, 2018

ಈಗ ಮತ್ತೊಮ್ಮೆ ಮುಖ್ಯಾಂಶಗಳು

ಮತ್ತೊಮ್ಮೆ ಮುಖ್ಯಾಂಶಗಳನ್ನು ಹೇಳಿದಮೇಲೆ
ವಾರ್ತೆ ಮುಗಿದುಹೋಗುತ್ತದೆ
ಹಾಗಂತ ಭೂಮಿ ತಿರುಗುವುದು ನಿಲ್ಲುವುದಿಲ್ಲ
ತನ್ನ ಪರಿಕ್ರಮದಲ್ಲಿ ಸೂರ್ಯನನ್ನು ಸುತ್ತುತ್ತಾ
ಬಿಸಿಲಿಗೋ ಮಳೆಗೋ ಮೈಯೊಡ್ಡುತ್ತಾ
ತಿರುಗುತ್ತಲೇ ಇರುತ್ತದೆ ಅನವರತ
ಹಸಿದ ತುಂಬಿ ತುಂಬಿದ ಹೂವನರಸಿ ಹಾರುತ್ತೆ
ಸಿಗ್ನಲ್ಲಿನ ಕೆಂಪುದೀಪ ವಾಹನಗಳ ನಿಲ್ಲಿಸುತ್ತೆ
ಲಕ್ಷ್ಮಣರೇಖೆಯ ಕಂಡು ಇರುವೆ ದಾರಿ ಬದಲಿಸುತ್ತೆ
ಕಂಕುಳ ಕೂದಲ ಒದ್ದೆ ಮಾಡುತ್ತೆ ಚಿಮ್ಮಿದತ್ತರು

ಹೀಗೆಲ್ಲ ಇದ್ದಾಗ್ಯೂ ಇವಳ್ಯಾಕೆ ನಿಂತಿದಾಳೆ ಹೀಗೆ
ಸಂದಣಿಯ ಜನರ ನಗುವಿಗೂ ಅಲುಗಾಡದೇ
ಮಾಸಲು ಅಂಗಿ ಹರಿದಿದೆ ಅಲ್ಲಲ್ಲಿ
ಲಾಲ್‌ಗಂಧ ತೀಡಿದೆ ಲಲಾಟದಲ್ಲಿ
ಬಿರಿಬಿರಿ ಕಣ್ಣುಗಳು ಒಣಗಿದ ತುಟಿಗಳು
ಹಾಯುತ್ತಿವೆ ಸಾವಿರ ಕಾಲುಗಳು ಪಕ್ಕದಲ್ಲೇ
ಗೊತ್ತಿರುವ ಗಮ್ಯದೆಡೆಗೆ ಬಿಡುಬೀಸಿನಲ್ಲಿ
ಪಕ್ಕದ ಅಂಗಡಿಯ ಬೋರ್ಡಿನ ಹಾಳಾದ ದೀಪ
ಇವಳ ಮೈಮೇಲೆ ಪತರಗುಟ್ಟುತ್ತಿದೆ ಬಿಳಿಬಿಳಿ

ಇಳಿಬಿಟ್ಟ ಎಡಗೈ ತರ್ಪಣಮುದ್ರೆಯಲ್ಲಿದೆ
ಎತ್ತಿ ಹಿಡಿದಿದ್ದಾಳೆ ಬಲಗೈ ಆಶೀರ್ವದಿಸುವಂತೆ
ಅದರಿಂದ ಉದುರುತ್ತಿವೆ ನಾಣ್ಯಗಳು
ಹೊಸವು ಹಳೆಯವು, ಹೊಳೆಯುತ್ತಿವೆ ಫಳಫಳ
ಎದುರು ನಿಂತು ದಿಟ್ಟಿಸಿದರೆ ಥೇಟು ಆ
ಕ್ಯಾಲೆಂಡರಿನ ಲಕ್ಷ್ಮಿಯೇ ಪ್ರತ್ಯಕ್ಷವಾದಂತಿದೆ
ಪುಟ್ಟ ಬಾಲಕಿಯ ರೂಪದಲ್ಲಿ

ಯಾರೂ ಕೆಮರಾ ತರಬೇಡಿ, ದಮ್ಮಯ್ಯ
ಇದು ಬ್ರೇಕಿಂಗ್ ನ್ಯೂಸ್ ಐಟಮ್ ಅಲ್ಲ
ಮುಖ್ಯಾಂಶವಂತೂ ಆಗುವುದಿಲ್ಲ
ಇಲ್ಲ ಇಲ್ಲ, ಈಕೆ ಬೈಟ್ ನೀಡುವುದಿಲ್ಲ
ಕವರ್ ಮಾಡಲು ಎಷ್ಟೆಲ್ಲ ಸುದ್ದಿಗಳಿವೆ ಸುತ್ತ
ಹೊರಡಿ ನೀವು ನಿಮ್ಮ ಮೈಕು ತೆಗೆದುಕೊಂಡು

ನಾನೀಕೆಗೆ ಸ್ನಾನ ಮಾಡಿಸುವೆ,
ಬೇಕಿದ್ದರೆ ನೀವು ನೀರು ಹೊಯ್ಯಿರಿ
ಹೊಸ ಅಂಗಿ ತೊಡಿಸುವೆ,
ಬೇಕಿದ್ದರೆ ನೀವು ಬಳೆ ಇಡಿಸಿರಿ
ಎಣ್ಣೆ ಹಾಕಿ ತಲೆ ಬಾಚುವೆ,
ಬೇಕಿದ್ದರೆ ನೀವು ಸಿಕ್ಕು ಬಿಡಿಸಿರಿ
ಮೊಸರನ್ನವನ್ನು ತುತ್ತು ಮಾಡಿ ತಿನಿಸುವೆ,
ಬೇಕಿದ್ದರೆ ನೀವು ಹಾಲು ಕುಡಿಸಿರಿ
ಕಣ್ಣಾಮುಚ್ಚಾಲೆ ಆಟವಾಡುವೆ,
ಬೇಕಿದ್ದರೆ ನೀವೂ ಬಚ್ಚಿಟ್ಟುಕೊಳ್ಳಿರಿ

ಯಾವುದಕ್ಕೂ ಸ್ವಲ್ಪ ಇಕೋ ಈಕೆಯ ಕೈ ಹಿಡಿದುಕೊಳ್ಳಿ
ಆ ಆಟೋ ನಿಲ್ಲಿಸಿ, ಅದರಲ್ಲಿ ಇವಳನ್ನು ಕೂರಿಸಿಕೊಡಿ

ಓಹ್, ಎಷ್ಟು ಜನ ಸಹಾಯಕ್ಕೆ ಬರ್ತಿದೀರಿ..
ನಂಗೆ ಗೊತ್ತಿತ್ತು ಸಾರ್, ನೀವು ಬರ್ತೀರಿ ಅಂತ
ಒಳ್ಳೆಯತನ ಸತ್ತು ಹೋಗಿಲ್ಲ ಸಾರ್
ನಮ್ಮೆಲ್ಲರ ಕಣ್ಣಲ್ಲೂ ನೀರಿದ್ದೇ ಇದೆ ಸಾರ್.

Wednesday, March 21, 2018

ಗುರುತು

ನಗರದ ಮನೆಗಳಿಗೆ ಶೋಕಿ ಜಾಸ್ತಿ
ಪ್ರತಿ ಹೊಸ ಸಂಸಾರ ಬರುವಾಗಲೂ
ಬಣ್ಣ ಸವರಿ ನಿಲ್ಲುವುದು ಅದರ ಪರಿ
ಏನೆಂದರೆ ಹಾಗೆ ಬಣ್ಣ ಹೊಡೆಯುವವರ ನಿಷ್ಕರುಣೆ
ಅಲ್ಲಿಲ್ಲಿ ಗಾಯಗೊಂಡ ಗೋಡೆ, ಕೆದರಿದ ಕಟ್ಟೆಯಂಚು,
ವಾರ್ಡ್‌ರೋಬಿನ ಬಾಗಿಲಿಗಂಟಿಸಿದ ಬ್ರಾಂಡ್ ಸ್ಟಿಕರು,
ಕೊನೆಗೆ, ಹೊಡೆದ ಮೊಳೆಗಳನ್ನೂ ಇಕ್ಕಳದಿಂದೆಳೆದು ತೆಗೆದು
ಚರ್ಮ ಕಿತ್ತು ಬಂದಲ್ಲೆಲ್ಲ ಪಟ್ಟಿ ಹಚ್ಚಿ ಸಪಾಟು ಮಾಡಿ
ಬಳಿದು ಬಣ್ಣ ರೋಲಾಡಿಸಿ ಎರಡೆರಡು ಸಲ ಮಾಲೀಕನಣತಿಯಂತೆ

ಇಷ್ಟಿದ್ದೂ ನೀವು ಮನೆ ಹೊಕ್ಕು ಗೋಡೆಗೆ ಕಿವಿಗೊಟ್ಟು ಆಲಿಸಿದರೆ
ಹಿಡಿಯುವುದು ಅಸಾಧ್ಯವೇ ಹಳೆಯ ಸ್ವರಗಳ ತಂತು?
ಸ್ಥಿರ ನಿಂತು ಕಣ್ಣು ವಿಶಾಲಗೊಳಿಸಿ ನಿರುಕಿಸಿದರೆ
ಕಾಣದಿರುವುದೆ ನಿಕಟಪೂರ್ವ ನಿವಾಸಿ ಚಿಣ್ಣರ ಗೀಚು?
ಕೈಚಾಚಿ ಸವರಿದರೆ ಅಪ್ಪನ ಫೋಟೋ ನೇತುಬಿಡಲು
ಎಟುಕಲಾರದೆ ಹಳೆಯ ಮೊಳೆ ಹೊಡೆದ ಗುರುತು?

ನಾಡಿಯ ಒಮ್ಮೆ ಹಿಡಿಯುವುದಷ್ಟೇ ಕಷ್ಟ.
ನಂತರ ಮಿಡಿತದ ಲೆಕ್ಕ, ರಕ್ತಸಂಚಾರ,
ಸುಪ್ತ ಮನಸಿನ ಬಯಕೆಗಳು, ಪೂರ್ವಜನ್ಮದ ರಹಸ್ಯಗಳು
ಎಲ್ಲಾ ಖುಲ್ಲಂಖುಲ್ಲಾ.

ಮರಳಿ ಬಂದ ಜಂಗಮಜೀವಿಯೇ, ನಿರಾಶನಾಗಬೇಡ.
ಹುಡುಕು ಎದೆಹೊಕ್ಕು: ಇರಲೇಬೇಕಲ್ಲಿ ಚೂರಾದರೂ
ಕರಗದೆ ಉಳಿದ ನೆನಪಿನ ಹುಡಿ. ಹಿಡಿಯದನು
ನಿನ್ನ ನಡುಗುಬೆರಳುಗಳಲಿ. ಬಳಿಯದನವಳ ಭ್ರುಕುಟಿಗೆ.
ನೋಡೀಗ ನಯನದ್ವಯಗಳರಳುವುದ ನಿನ್ನ ಕಣ್ತುಂಬ.