Wednesday, February 15, 2012

ಯೋಧ ಮತ್ತು ಒಂದು ಮಗು

ಈ ಊರೂ ಮುಂಚೆ ಎಲ್ಲ ಊರಿನಂತೆಯೇ ಇತ್ತು.
ಮನೆಯೆದುರಿಗೇ ಬಸ್ಸುಗಳು ಓಡಾಡುತ್ತಿದ್ದವು.
ಇನ್ನೂ ಸೈಕಲ್ಲೋಡಿಸಲು ಬರದ ಹುಡುಗರು
ಟಯರುಗಳ ಹಿಂದೆ ಕೋಲು ಹಿಡಿದು ಓಡುತ್ತಿದ್ದರು.
ಕಾಯಿನ್ ಫೋನಿನ ಸಣ್ಣ ತೆರೆಯಲ್ಲಿ ಕಳೆಯುತ್ತಿರುವ
ಸಮಯ ಗಮನಿಸುತ್ತ ಜನ ಮಾತಾಡುತ್ತಿದ್ದರು.
ಕಾಲಿಂಗ್ ಬೆಲ್ ಇಲ್ಲದ ಮನೆಗಳ ಬಾಗಿಲ ಚಿಲಕವನ್ನೇ
ಟಕ್ಕಟಕ್ಕೆಂದು ಬಡಿದು, ಇಲ್ಲವೇ ಪ್ರೀತಿಸುವವರ ಪ್ರೀತಿಯ
ಹೆಸರು ಕೂಗಿ ಕರೆದು ಒಳಗೆ ಸೇರಿಕೊಳ್ಳುತ್ತಿದ್ದರು.
ಸಂಜೆಯ ಹೊತ್ತಿಗೆ ಊರವರೆಲ್ಲ ಮೊಂಬತ್ತಿ ಹಿಡಿದು
ಪ್ರಾರ್ಥನೆಗೆಂದು ದೇವಾಲಯದ ಕಡೆಗೆ ಹೆಜ್ಜೆ ಹಾಕುತ್ತಿದ್ದರು.

ಆಮೇಲೆ ಅದೇನಾಯಿತೋ, ದೇಶ ಧರ್ಮ ಸೇಡು ಹಣ ಶತ್ರು ಆಕ್ರಮಣ
ಅಥವಾ ಮತ್ತೇನೋ ಕಾರ್ಯಕಾರಣ, ಚಿರತೆಯ ತರಹದ ಬಟ್ಟೆ
ಧರಿಸಿದ ಮನುಷ್ಯರು ಬಂದೂಕುಗಳನ್ನು ಹಿಡಿದು ಇವರ
ಸೌಖ್ಯದ ನೆಲೆಗಳ ಮೇಲೆ ನುಗ್ಗಿದರು. ಚಾಕು ಚೂರಿ ಸುತ್ತಿಗೆ
ಹಗ್ಗ ದೊಡ್ಡ ಕಲ್ಲು ತಣ್ಣಗೆ ಕೊರೆವ ನೀರು ನಿರಾಹಾರ ಬಲಾತ್ಕಾರ
ಓಹೋ, ಬಂದೂಕೊಂದೇ ಏಕೆ, ಕೊಲ್ಲಲೂ ವಿಧವಿಧ ವಿಧಾನ.
ರುಧಿರದ ವರ್ಣ, ಸಾವಿನ ಚೀತ್ಕಾರ, ಭಯದಿಂದ ಕಂಪಿಸುವಕ್ಷಿ-
ಯೋಧನ ಹೃದಯಕ್ಕದೇ ಮುದ, ಮೆರೆದರೇನೆ ತೃಪ್ತಿ ಅಟ್ಟಹಾಸ.

ಇಲ್ಲೊಂದು ಪಾಪಕ್ಕೆ ಹುಟ್ಟಿದ ಶಿಶು. ಒಬ್ಬ ಯುದ್ಧ ಮರೆತ ಯೋಧ.
ತಾಯೀ ನಿನ್ನೆದೆಯಲ್ಲಿ ಹಾಲಿಲ್ಲವೇ? ನೀನಿದರ ಅಮ್ಮನಲ್ಲವೇ?
ಇದರಳು ನಿನಗೆ ಕೇಳಿಸುತ್ತಿಲ್ಲವೇ? ನಿನ್ನ ಕಣ್ಣೇಕೆ ಹಾಗೆ ಬಿಳುಚಿಕೊಂಡಿವೆ?
ಹೆಣ್ಣು ಹಾಗೆಲ್ಲ ನಿರ್ಭೀತಿಯಿಂದ ಒಬ್ಬಳೇ ನಡೆಯಬಾರದಮ್ಮಾ.
ಇಕೋ, ನಾನು ಬರುತ್ತೇನೆ ನಿನ್ನ ಸಂಗಡ. ಸುರಕ್ಷಿತ ಜಾಗ ತಲುಪಿಸುತ್ತೇನೆ.
ನಿನ್ನ ಮಗು ಮಾಡಿಕೊಂಡ ಹೊಲಸು ನಾನು ತೊಳೆಯುತ್ತೇನೆ.
ಹೊಸ ಬದುಕು ನಿರ್ಮಿಸಿಕೊಡುತ್ತೇನೆ. ಈ ಬೊಮ್ಮಟಿಗೆ ಹಾಲುಣಿಸು.

ಒಬ್ಬ ತಾಯಿಯ ಎದೆಯಲ್ಲಿ ಹಾಲೊಸರಲು ಎಷ್ಟು ಗಂಟೆ ಬೇಕು
ಒಬ್ಬ ತಾಯಿಯ ಹೃದಯದಲ್ಲಿ ಮಮಕಾರ ಮೂಡಲು ಎಷ್ಟು ಗಳಿಗೆ ಬೇಕು
ಒಬ್ಬ ತಾಯಿಯ ಬಾಯಲ್ಲಿ ಜೋಗುಳ ಮಿಡಿಯಲು ಎಷ್ಟು ಹೊತ್ತು ಬೇಕು
ಒಬ್ಬ ತಾಯಿ ತನ್ನ ಮಗುವನ್ನೆತ್ತಿ ಮುದ್ದು ಮಾಡಲು ಎಷ್ಟು ಕಾಲ ಬೇಕು
ಒಬ್ಬ ತಾಯಿಯ ನೋವು ಅರ್ಥ ಮಾಡಿಕೊಳ್ಳಲೆಷ್ಟು ಜನುಮ ಬೇಕು

ರಣರಂಗದಲ್ಲಿರುವವ ಆಡುವ ಮಾತುಗಳಲ್ಲ ಇವು. ಕನಸಿನಿಂದ ಬೆಚ್ಚಿ
ಎದ್ದೇಳುವವನು ಯೋಧನಾಗಿರಲು ಅರ್ಹನಲ್ಲ. ಬದುಕಿಸುವವರಿಗಲ್ಲ ಯುದ್ಧ;
ಕೊಲ್ಲುವವರಿಗೆ. ಎಸೆದಿದ್ದಾನೆ ಅದಕ್ಕೆಂದೇ ಬಂದೂಕು ನೀರಿಗೆ.
ಕುಡಿಸಿದ್ದಾನೆ ಗುಲಾಬಿ ತುಟಿಗಳ ಕಂದನಿಗೆ ಹಾಲು. ಆಗಿದ್ದಾನೆ ತಾನೇ ತಾಯಿ.

[Savior ಎಂಬ ಸಿನೆಮಾ ನೋಡಿ.]

9 comments:

nenapina sanchy inda said...

Wow PuttaNNa entire movies' emotion is captured in your poem...salute you!!!
ms akka

ಮನಸು said...

tumba chennagide.. ondu film story kavana mukhena tandiddeeri..tumba ista aytu

Swarna said...

Very nice. Will watch the movie.
Swarna

ಮಹಿಮಾ said...

sushi tumbaa chennagiddu

ಮೌನರಾಗ said...

ತುಂಬಾ ಚೆನ್ನಾಗಿದೆ....

Subrahmanya said...

ನೀವು ಸಿನಿಕರಲ್ಲ ಎನ್ನುವುದು ಇಂತಹ ಒಳ್ಳೆಯ ಕವನದಿಂದಲೇ ನಿಕ್ಕಿಯಾಗುತ್ತದೆ !. ಚಿಂತನೆಗೆ ಹಚ್ಚುವ ಕವನ, ಚೆನ್ನಾಗಿದೆ.

rashmi said...

chennagide..

VENU VINOD said...

ವಾಹ್..ಮೆಚ್ಚದಿರಲು ಸಾಧ್ಯವೇ ಇಲ್ಲ..ಅಂತಹ ಕವನವಿದು..

Sushrutha Dodderi said...

@ malthakka,
ಥ್ಯಾಂಕ್ಸ್ ಮಾಲ್ತಕ್ಕ. ಮೂವೀನ ರೆಫರ್ ಮಾಡಿದ್ದಕ್ಕೆ.

ಥ್ಯಾಂಕ್ಯೂ ಆಲ್. :-)