Wednesday, May 10, 2017

ಬುದ್ಧಪೂರ್ಣಿಮೆ

ಬೋರು ಕೊರೆಯುವ ಲಾರಿ
ರಾತ್ರಿಯಾದದ್ದರಿತು ಸದ್ದು ನಿಲ್ಲಿಸಿದೆ
ಇಡೀ ರಸ್ತೆಗೆ ಮೌನವಪ್ಪಳಿಸಿದೆ ಒಡನೆ
ಕಬ್ಬಿಣದ ಭಾರಕೊಳವೆಗಳ ಜತೆ ದಿನಪೂರ್ತಿ
ಕೆಲಸ ಮಾಡಿರುವ ಹುಡುಗರು
ಮಲಗಿಬಿಟ್ಟಿದ್ದಾರೀಗ ಲಾರಿಯ ಬ್ಯಾನೆಟ್ಟೇರಿ
ತೆಳ್ಳನೆ ಚಾದರ ಹೊದ್ದು.

ದೂರದಲ್ಲೆಲ್ಲೋ ಮಿಂಚು
ಮಳೆಯಾಗುತ್ತಿರಬಹುದು ಅವಳೂರಿನಲ್ಲಿ
ಆಕಾಶಕ್ಕೆ ಕೈಚಾಚಿ ನಿಂತ ಕ್ರೇನು
ತಾಕುತ್ತಿದೆ ಬುದ್ಧನಂದದ ಚಂದ್ರನ
ರಿವರ್ಸ್ ಗೇರಿನಲ್ಲಿರುವ ಕಾರು
ಜೋಗುಳಗೀತೆ ಹಾಡುತ್ತಿದೆ
ತಿರುಗುವ ವೇಗಕ್ಕೆ ಮಾಯವಾಗುವ
ಫ್ಯಾನಿನ ರೆಕ್ಕೆಯ ಮೇಲೇಕೆ ಚಂದಚಿತ್ತಾರ?

ಫ್ರಿಜ್ಜಿನಲ್ಲಿಟ್ಟಿದ್ದ ನುಗ್ಗೆಕಾಯಿ ಹುಳಿ
ಮತ್ತೂ ರುಚಿಯಾಗಿದೆ ಮರುದಿನಕ್ಕೆ.
ಗೊತ್ತಿತ್ತದು ಮುನ್ನಾದಿನವೇ:
ಕೆಲ ಸಾರುಗಳು ಸಾರವತ್ತಾಗುವುದು
ಮಾರನೇದಿನವೇ ಎಂದು.
ಹಾಗಂತ ಮಾಡಿದ ದಿನ ಅದನ್ನುಣ್ಣದೇ
ಫ್ರಿಜ್ಜಿನಲ್ಲಿಡಲಾಗುವುದೇ ಹಾಗೇ?
ಅಳಿದುಳಿದ ಹುಳಿಗಷ್ಟೇ ಲಭ್ಯ
ನಾಲಿಗೆಯ ಚಪ್ಪರಿಕೆಯ ಸದ್ದು ಕೇಳುತ್ತ
ಗಂಟಲೊಳಗಿಳಿವ ಭಾಗ್ಯ.

ದುಃಖಕ್ಕೆ ಅಭೀಪ್ಸೆಯೇ ಮೂಲ;
ಆದರೆ ಆಶಯಗಳಿಗಿಲ್ಲ ಯಾವುದೇ ವಿತಾಳ.
ಅವಳೂರ ಮಳೆ ಧಾವಿಸಲಿ ಇಲ್ಲಿಗೂ
ತೋಯಿಸಲಿ ಬೋರಿನ ಲಾರಿಯನುಳಿದು ಮತ್ತೆಲ್ಲ.
ಒತ್ತರಿಸಿ ಬರಲಿ ಮೋಡ ತುಂಬುವಂತೆ ಆಕಾಶ
ಆದರೂ ಮುಚ್ಚದಿರಲಿ ಸ್ಮಿತವದನ ಚಂದಿರನ.
ಸದೃಶವಾಗಲಿ ಪಂಕದ ಮೇಲಿನ ಚಿತ್ರ
ಖುಷಿಯಾಗುವಂತೆ ನಯನಗಳಿಗೆ.
ಉಲಿಯುತಿರಲಿ ಲಾಲಿಹಾಡು ತೊಟ್ಟಿಲುಗಳಲಿ
ಆವರಿಸುವಂತೆ ನಿದ್ರೆ ಎಲ್ಲ ಶಿಶುಗಳಿಗೆ.
ಮಿಗಲಿ ರುಚಿಯ ಪದಾರ್ಥ ನಾಳೆಗೂ
ಕೆಡದಿರಲಿ ಸದಭಿರುಚಿ ಯಾರಲೂ.

No comments: