Monday, May 29, 2017

ಕವಿತೆಯಲ್ಲಿ ಎಲ್ಲವನ್ನೂ ಹೇಳಲಾಗುವುದಿಲ್ಲ

ಚಂದ್ರ ಬೆಳದಿಂಗಳಲ್ಲಿ ಓಡಾಡುತ್ತಾನೆ ಎಂದೆ
ಚಂದ್ರನಿರುವುದರಿಂದಲೇ ಬೆಳದಿಂಗಳು ಎಂದಳು
ಟೆರೇಸಿನಲ್ಲಿ ವಾದ ಬೇಡ, ಹುಣ್ಣಿಮೆಯ ರಾತ್ರಿ,
ಉಬ್ಬರದ ದನಿ ಕಾದ ಕಿವಿಗಳಿಗೆ ತಂಗಾಳಿಯಲ್ಲಿ ತಲುಪುತ್ತದೆ
ಎಂದು ಮನೆಯೊಳಗೆ ಕರೆತಂದೆ
ಚಂದ್ರ ಬಾನಲ್ಲೆ ಉಳಿದ

ನಮ್ಮ ಮನೆ ಹೆಂಚಿನ ಮನೆಯಾಗಿರಬೇಕಿತ್ತು
ಅಲ್ಲೊಂದು ಬೆಳಕಿಂಡಿಯಿರಬೇಕಿತ್ತು ಎಂದಳು
ತನ್ನ ಕನಸಿನ ಮನೆಯ ಚಿತ್ರ ಬಿಡಿಸಿದಳು
ಹೇಗೆ ಸಣ್ಣ ಕಿಂಡಿಯಲ್ಲಿ ಬೆಳದಿಂಗಳು ಕೋಲಾಗಿ ಇಳಿಯುವುದು
ಒಂಟಿತಾರೆ ನೇರ ಬಂದಾಗ ಆ ಕಿಂಡಿ ಕಣ್ಣಂತೆ ಕಾಣುವುದು
ನಿಶಾಚರಿ ಹಕ್ಕಿ ಹಾದುಹೋದರೆ ರೆಪ್ಪೆ ಮಿಡಿಯುವುದು
ಎಂದೆಲ್ಲ ಹೇಳಿ ತಾರಸಿಯ ಶಪಿಸುತ್ತ ಭಾವುಕಳಾದಳು

ಆಮೇಲೆ ನಾನು ನಮ್ಮೂರ ಕತೆ ಹೇಳಿದೆ
ಒಮ್ಮೆ ಊರವರೆಲ್ಲ ಕೂಡಿ ಹೊಳೆಯ ಬಳಿ ಬೆಳದಿಂಗಳೂಟಕ್ಕೆ ಹೋದದ್ದು
ಎಲ್ಲರೂ ತಂತಮ್ಮ ಮನೆಯಿಂದ ತಂದ ಬುತ್ತಿ ಹಂಚಿ ತಿಂದದ್ದು
ಅಂತ್ಯಾಕ್ಷರಿ ಹಾಡಿ ನಕ್ಕಿದ್ದು
ಹೊಳೆಯ ಮೀನುಗಳು ಅಂದು ತಡವಾಗಿ ಮಲಗಿದ್ದು
ಬ್ರಹ್ಮಕಮಲವೊಂದು ಮೊದಲ ಸಲ ಮನುಷ್ಯರನ್ನು
ನಡುರಾತ್ರಿ ನೋಡಿ ಆಶ್ಚರ್ಯಗೊಂಡದ್ದು

ಆಕೆ ನಿದ್ರೆ ಬಂದು ಮಲಗಿದಳು
ಟೆರೇಸಿಗೆ ಬಂದು ಕತ್ತೆತ್ತಿದರೆ ಆಕಾಶದಲ್ಲಿ ಚಂದ್ರನಿಲ್ಲ
ಮೋಡಗಳೊಡಲಲಿ ಮರೆಯಾಗಿರಬೇಕೆಂದುಕೊಂಡು
ವಾಪಸು ರೂಮಿಗೆ ಬಂದರೆ ಚಂದ್ರ ಹಾಸಿಗೆಯಲ್ಲಿ
ವಿಶೇಷವೆಂದರೆ ಅವನಿಗೊಂದು ಜಡೆ
ಕುಂಕುಮಬೊಟ್ಟು ಫಳಫಳ ಹೊಳೆವ ಮೂಗುತಿ

ಕವಿತೆಗೆ ಮೀರಿದ ವಿಷಯವೆಂದರೆ
ನಾನು ರಾತ್ರಿಯಿಡೀ ನಿರ್ನಿದ್ರೆ ಕುಳಿತು
ಆ ಚಂದ್ರನ ಚಂದವ ನೋಡುತ್ತಿದ್ದುದು.

1 comment:

mounayaana said...

ಕೆ.ಎಸ್.ನ. ನೆನಪಾದರು.