Tuesday, May 20, 2008

ವರ್ಷ ಬರೆದ ಕವನ ಮತ್ತು...

ನನ್ನ ಅತ್ತೆಯ ಮಗಳು ವರ್ಷ, ಹೊಸನಗರದ ರಾಮಚಂದ್ರಾಪುರ ಮಠದವರು ನಡೆಸುವ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಾಳೆ. ಈಗವಳು ಎಂಟನೇ ತರಗತಿ. ಇತ್ತೀಚೆಗೆಲ್ಲೋ ಅತ್ತೆ ಮನೆಗೆ ಫೋನಿಸಿದ್ದಾಗ ಪತ್ರಿಕೆಯೊಂದರಲ್ಲಿ ಪ್ರಕಟವಾದ ನನ್ನ ಕತೆಯ ಬಗ್ಗೆ ಮಾತನಾಡುತ್ತಾ ಅತ್ತೆ “ಏ ನಮ್ಮನೆ ಪುಟ್ಟಿಯೂ ಕವನ ಬರದ್ದೋ” ಎಂದಳು. ತಕ್ಷಣ excite ಆದ ನಾನು “ಓಹ್ ಎಂಥ ಬರದ್ಲೇ? ಓದಿ ಹೇಳು ನೋಡನ” ಎಂದೆ. ಆದರೆ ಅತ್ತೆ ಅದು ತನ್ನ ಬಳಿ ಈಗ ಇಲ್ಲವೆಂದೂ, ಈ ವಾರದಲ್ಲಿ ಒಮ್ಮೆ ಫೋನ್ ಮಾಡಿ ಕೊಡುವುದಾಗಿಯೂ ಹೇಳಿ ಫೋನಿಟ್ಟಳು.

ಹಾಗೆ ಆಶ್ವಾಸನೆಯಿತ್ತ ಅತ್ತೆ ಮತ್ತೆ ಫೋನ್ ಮಾಡಲೇ ಇಲ್ಲ. ಮೊನ್ನೆ ಕೆಂಡಸಂಪಿಗೆಯಲ್ಲಿ ‘ಮಕ್ಕಳ ಸಂಪಿಗೆ’ ಎಂಬ ಹೊಸ section ಶುರುವಾಗಿರುವುದು ಕಣ್ಣಿಗೆ ಬಿತ್ತು. ಅದಕ್ಕೆ ವರ್ಷ ಬರೆದ ಕವನವನ್ಯಾಕೆ ಕಳುಹಿಸಬಾರದು ಎಂಬಾಲೋಚನೆ ಬಂದು ಮತ್ತೆ ನಾನೇ ಅತ್ತೆ ಮನೆಗೆ ಫೋನಿಸಿದೆ. ಅದೃಷ್ಟಕ್ಕೆ ವರ್ಷಳಿಗೆ ಈಗ ರಜೆ ಶುರುವಾಗಿ ಮನೆಗೆ ಬಂದಿದ್ದರಿಂದ ಅವಳೇ ಫೋನಿಗೆ ಸಿಕ್ಕಿದಳು. ಹೆಂಗಿದ್ದೆ, ಏನು, ಎಂತು, ಎಷ್ಟ್ ದಿನ ರಜ, ಎಲ್ಲಾ ಮುಗಿದ ಮೇಲೆ “ಏಯ್ ಅದೆಂಥೋ ಕವನ ಬರದ್ಯಡಲೇ ನೀನು, ಕೊಡು ನೋಡನ, ನಾನು ಅದನ್ನ ಇಲ್ಲಿ publish ಮಾಡುಸ್ತಿ” ಅಂತ ಕೇಳಿದೆ.

ಸ್ವಲ್ಪ ಸಮಯದ ಬಳಿಕ ಫೋನಿಸಿದ ವರ್ಷ ತಾನು ಬರೆದ ಹನಿಗವನಗಳನ್ನು ಓದಿ ಹೇಳಿದಳು. ನಾನು ಬರೆದುಕೊಂಡೆ:


ನನ್ನನ್ನು ಸೃಷ್ಟಿಸಿದ ಭಗವಂತ, ಸಾರಿ
ಬ್ರಹ್ಮಾಂಡವೆಂಬ ಮಾಯಾಜಾಲದಲಿ ಬಿದ್ದೆ ಜಾರಿ
ಅಲ್ಲಂತೂ ಸೋತುಹೋದೆ ಬಾರಿ ಬಾರಿ
ಮತ್ತೆ ನಿನ್ನಲ್ಲಿ ಬರಲು ಮರೆತೆ ದಾರಿ


ರಂಗಾ, ನಾನೇನು ಮಾಡಿದೆ?
ನನ್ನನ್ನು ಏಕೆ ಭುವಿಗೆ ತಂದೆ?
ಈಗ ನೀನು ನನಗೆ ಕಾಣದಾದೆ
ಆದಷ್ಟು ಬೇಗ ನೀನು ದೊರಕಬಾರದೆ?


ನಮ್ಮೆಲ್ಲರ ತಾಯಿ ಗೋವು
ಇದನ್ನು ರಕ್ಷಿಸಬೇಕು ನಾವು
ರಕ್ಷಿಸದಿದ್ದರೆ ಆಕೆಗಾಗುವುದು ನೋವು
ಆಕೆಗೆ ನೋವಾದರೆ ನಮಗೆ ಬರುವುದು ಸಾವು

* *

ವರ್ಷ ಬರೆದ ಕವನಗಳನ್ನು ಕೇಳಿ ನನಗೆ ಅದೆಷ್ಟು ತಲೆಬಿಸಿಯಾಯಿತೆಂದರೆ, “ಪುಟ್ಟೀ, ನೀನೀಗ ಎಷ್ಟನೇ ಕ್ಲಾಸು?” ಅಂತ ಮತ್ತೊಮ್ಮೆ confirm ಮಾಡಿಕೊಳ್ಳುವ ಸಲುವಾಗಿ ಕೇಳಿದೆ. “ಎಂಟು ಮಾರಾಯಾ” ಎಂದಳು. “ಸರಿ, ನಾನು ಮತ್ತೆ ಫೋನ್ ಮಾಡ್ತಿ” ಅಂತಂದು ಕಟ್ ಮಾಡಿಬಿಟ್ಟೆ. ಕೆಂಡಸಂಪಿಗೆಗೆ ಕಳುಹಿಸುವ ಆಲೋಚನೆಯನ್ನೇ ಕೈಬಿಟ್ಟೆ.

ನನಗೆ ಅದೆಷ್ಟು ಆತಂಕವಾಯಿತೆಂದರೆ, ಒಬ್ಬ ಎಂಟನೇ ತರಗತಿಯ ಹುಡುಗಿ ಬರೆಯಬಹುದಾದ ಕವನಗಳಾ ಇವು? ಹದಿಮೂರು-ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯೊಬ್ಬಳು ಚಿಂತಿಸಬಹುದಾದ ವಿಷಯಗಳೇ ಅವಳ ಕವನದ ವಸ್ತು?

ಈಗ ಮೂರು ವರ್ಷದ ಹಿಂದೆ ವರ್ಷಳನ್ನು ಗುರುಕುಲಕ್ಕೆ ಸೇರಿಸುವ ಪ್ರಸ್ತಾಪ ಬಂದಾಗ object ಮಾಡಿದವರಲ್ಲಿ ನಾನೂ ಒಬ್ಬ. ಮಕ್ಕಳನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯರಿಂದ ದೂರ ಮಾಡಿ ಬೇರೆಲ್ಲೋ ಇಟ್ಟು ಬೆಳೆಸುವುದು ಸರಿಯಲ್ಲ ಎಂಬುದು ನನ್ನ ವಾದವಾಗಿತ್ತು. ಮಕ್ಕಳು, ಕನಿಷ್ಟ ಹದಿನಾಲ್ಕು-ಹದಿನೈದು ವರ್ಷ ವಯಸ್ಸಿನವರೆಗಾದರೂ ಮನೆಯವರೊಂದಿಗೆ ಇದ್ದು ಬೆಳೆಯಬೇಕು. ತೀರಾ ಅನಿವಾರ್ಯವಿದ್ದರೆ ಸರಿ. ಊರಲ್ಲಿ ಓದಿಸಲಿಕ್ಕೆ ಅವಕಾಶವಿಲ್ಲದಿದ್ದರೆ, ಶಾಲೆ ಇಲ್ಲದಿದ್ದರೆ, ಅಥವಾ ಆರ್ಥಿಕ ದೌರ್ಬಲ್ಯ ಇದ್ದರೆ ಹೀಗೆ ಮಠದಲ್ಲಿ ಬಿಡುವುದೋ, ಯಾರಾದರೂ ಓದಿಸಲು ಮುಂದೆ ಬಂದರೆ ಅವರ ಮನೆಯಲ್ಲಿ ಬಿಡುವುದೋ, ಏನಾದರೂ ಮಾಡುವುದು ಅನಿವಾರ್ಯ.

ಆದರೆ ವರ್ಷಳ ಸಂದರ್ಭದಲ್ಲಿ ಅಂತಹ ಸಮಸ್ಯೆಯೇನೂ ಇರಲಿಲ್ಲ. ಅಲ್ಲದೇ ರಾಮಚಂದ್ರಾಪುರ ಮಠದ ಗುರುಕುಲವೂ ಅದಾಗ ತಾನೇ ಪ್ರಾರಂಭವಾಗಿದ್ದಾದ್ದರಿಂದ ನನಗಂತೂ ಅದರ ಕಾರ್ಯಕ್ಷಮತೆಯ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಅವನ್ನೆಲ್ಲ ಅತ್ತೆಯ ಬಳಿ ಹೇಳಿಕೊಂಡರೆ, ಅತ್ತೆ ಒಪ್ಪಲೇ ಇಲ್ಲ. “ಇಲ್ಲೆ, ಅಲ್ಲಿ high quality education ಕೊಡ್ತ್ವಡ. ಅಲ್ಲೇನು ಬಡವರ ಮಕ್ಕಳು ಮಾತ್ರ ಇಲ್ಲೆ; ತುಂಬಾ ಶ್ರೀಮಂತರು ಸಹ ತಮ್ಮ ಮಕ್ಕಳನ್ನ ಬಿಟ್ಟಿದ.. Free ಏನೂ ಅಲ್ಲ; fees ಕಟ್ಟವು. ತುಂಬಾ strict ಆಗಿ ನೆಡಸ್ತ್ವಡ. ವ್ಯವಸ್ಥೆಯೂ ಎಲ್ಲಾ ಚೊಲೋ ಇದ್ದಡ. ನಮ್ಮಲ್ ಇವ್ರು (ಅಂದರೆ ನನ್ನ ಮಾವ) ಹೋಗಿ ನೋಡ್ಕ್ಯಂಡ್ ಬೈಂದ. ಮೊದ್ಲು parents interview ಸಹ ತಗಳ್ತ್ವಡ. ನಮ್ಮನೆ ಕೂಸಿನ್ನ ಸೇರ್ಸದೇ ಸೈ” ಎಂದಳು. ಅಷ್ಟೆಲ್ಲಾ ಇದ್ದಮೇಲೆ ಚೆನ್ನಾಗಿಯೇ ಇರಬಹುದು ಅಂತ ನಾನೂ ಸುಮ್ಮನಾದೆ.

ಅದಾಗಿ ಒಂದು ವರ್ಷದ ನಂತರ ನಾನೊಮ್ಮೆ ಊರಿಗೆ ಹೋಗಿದ್ದಾಗ, ಅಮ್ಮನೊಂದಿಗೆ ಮಠಕ್ಕೆ ಹೋಗುವ ಪ್ರಸಂಗ ಬಂತು. ’ಪುಟ್ಟಿಯನ್ನೂ ನೋಡಿದಂತಾಯಿತು’ ಅಂತ ನಾನೂ ಖುಶಿಯಿಂದಲೇ ಹೊರಟೆ. ಮಠ ತಲುಪಿ, ಗುರುಕುಲ ಎಲ್ಲಿದೆ ಅಂತ ಹುಡುಕಿ ಹೊರಟರೆ ಅಲ್ಲಿ ಏನಿದೆ? ಗುಡಿಸಲುಗಳಂತೆ ಕಟ್ಟಿ ಬಿಸಾಕಿದ ಐದಾರು ಶೆಡ್ಡುಗಳು. ಪಂಚೆ ಉಟ್ಟು, ಶಲ್ಯ ಹೊದ್ದು, ವಿಭೂತಿ ಬಳಿದುಕೊಂಡು ವಟುಗಳಂತೆ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರುವ ಒಂದಷ್ಟು ಗಂಡು ಮಕ್ಕಳು. ಲಂಗ-ದಾವಣಿ ಧರಿಸಿ ಓಡಾಡುತ್ತಿರುವ ಹೆಣ್ಣು ಮಕ್ಕಳು.. ’ಇಲ್ಲಿ ವರ್ಷ ಅನ್ನೋ ಹುಡುಗಿ ಎಲ್ಲಿರ್ತಾಳೆ?’ ಅಂತ ಯಾರೋ ಹುಡುಗರನ್ನು ಕೇಳಿದೆವು. ಅವರು ಒಂದು ಗುಡಿಸಲನ್ನು ತೋರಿಸಿದರು. ಹಿಂದಿನ ದಿನ ಜೋರು ಮಳೆ ಹೊಯ್ದಿದ್ದರಿಂದ ಅಲ್ಲೆಲ್ಲಾ ಪೂರ್ತಿ ಕೆಸರಿತ್ತು. ಉಟ್ಟಿದ್ದ ನನ್ನ ಬಿಳಿ ಪಂಚೆ ಕೊಳೆಯಾಗದಂತೆ ಕಷ್ಟ ಪಟ್ಟು ಕಾಲಿಡುತ್ತಾ ಆ ಗುಡಿಸಲನ್ನು ಪ್ರವೇಶಿಸಿದೆವು.

ವರ್ಷ ಎದುರಿಗೇ ಸಿಕ್ಕಿಬಿಟ್ಟಳು. ತನ್ನ ಸಹಪಾಠಿಯೊಬ್ಬಳಿಗೆ ಜಡೆ ಹೆಣೆಯುತ್ತ ಕೂತಿದ್ದಳು. ನಮ್ಮ ಅನಿರೀಕ್ಷಿತ ಆಗಮನದಿಂದ ವರ್ಷ ಆಶ್ಚರ್ಯಗೊಂಡಳು. ಆ ಗುಡಿಸಲಿನಲ್ಲಿ ಇದ್ದುದು ಒಂದೇ ಕೊಠಡಿ. ಕೊಠಡಿಯ ಒಂದು ಗೊಡೆಗೆ ನೇತುಬಿಟ್ಟಿದ ಬೋರ್ಡು. ಮತ್ತೊಂದು ಗೋಡೆಗೆ ಹೊಂದಿಸಿಟ್ಟಿದ್ದ ಕಬ್ಬಿಣದ ಸ್ಟ್ಯಾಂಡುಗಳು -ಮಕ್ಕಳ ಪುಸ್ತಕ, ಊಟದ ತಟ್ಟೆಗಳು, ಇತ್ಯಾದಿಗಳು ಆ ಸ್ಟ್ಯಾಂಡಿನಲ್ಲಿ. ಕೊಠಡಿಯ ಮತ್ತೊಂದು ಮೂಲೆಯಲ್ಲಿ ಟ್ರಂಕುಗಳು. ಮಕ್ಕಳು ತಮ್ಮ ತಮ್ಮ ಮನೆಯಿಂದ ತಂದವು. ಅದರಲ್ಲಿ ಅವರ ಬಟ್ಟೆಬರೆಗಳು. ಒಂದೇ ಕೋಣೆಯಲ್ಲಿ ಊಟ, ಪಾಠ, ವಸತಿ -ಎಲ್ಲಾ. ಇನ್ನೂ ಪೂರ್ತಿ ಕಟ್ಟಿಯೇ ಆಗಿರದಿದ್ದ ಗುಡಿಸಲಿನ ಕಿಟಕಿಗಳಿಗೆ ಇನ್ನೂ ಚೌಕಟ್ಟು-ಸರಳುಗಳನ್ನು ಕೂರಿಸಿರಲಿಲ್ಲ. ಗುಡಿಸಲಿನ ಗೋಡೆಯನ್ನು ಸುಮಾರು ಏಳು ಅಡಿಗಳವರೆಗೆ ಕಟ್ಟಿದ್ದರು; ಅದರ ಮೇಲೆ ಮೂರ್ನಾಲ್ಕು ಅಡಿ ಹಾಗೇ gap ಬಿಟ್ಟಿದ್ದರು. ಮೇಲೆ cement sheet ಹೊಚ್ಚಿದ್ದರು. ಸಿಡಿಲು-ಗಾಳಿ-ಮಳೆ ಅಂತ ಏನಾದರೂ ಬಂದರೆ ಒಳಗಿರುವವರ ಗತಿ ಏನಾಗಬಹುದೆಂದು ಕಲ್ಪಿಸಿಕೊಂಡು ನಾನು ತತ್ತರಿಸಿ ಹೋದೆ. ‘ಮಠಕ್ಕೆ ಅಷ್ಟೆಲ್ಲಾ ದುಡ್ಡು ಬರ್ತು, ವ್ಯವಸ್ಥೆನಾದ್ರೂ ಸರಿಯಾಗಿ ಮಾಡಕ್ಕಾಗದಿಲ್ಯಾ?’ ಅಂತ ಸಿಟ್ಟಿನಲ್ಲಿ ನಾನೂ ಅಮ್ಮನ ಬಳಿ ಯಾವುದೋ ಪತ್ರಿಕೆಯವರ ದನಿಯಲ್ಲಿ ಗೊಣಗಿಕೊಂಡುಬಿಟ್ಟೆ. ಮಕ್ಕಳನ್ನು ಹೀಗೆ ಒಂದೇ ಕೋಣೆಯಲ್ಲಿ ಕೂಡಿ ಹಾಕಿಬಿಟ್ಟರೆ ಹೇಗೆ? ಸ್ವಲ್ಪವಾದರೂ ಲವಲವಿಕೆ ಬೇಡವೇ?

ಮನೆಯಲ್ಲಿ ತಂದೆ-ತಾಯಿ-ಅಜ್ಜ-ಅಜ್ಜಿ-ತಮ್ಮ ಎಲ್ಲರ ಜೊತೆ ಇದ್ದುಕೊಂಡು, ಬೆಳಗ್ಗೆ ಮುಂಚೆ ಎದ್ದು ಸ್ವಲ್ಪ ಹೊತ್ತು ಓದಿಕೊಂಡು, ಸ್ನಾನ ಮಾಡಿ ತಿಂಡಿ ತಿಂದು, ಊರ ಮಕ್ಕಳೊಂದಿಗೆ ಶಾಲೆಗೆ ಹೋಗಿ, ಸಾಲಾಗಿ ನಿಂತು ಪ್ರಾರ್ಥನೆ ಮಾಡಿ, ಬೆಳಗಿನಿಂದ ಸಂಜೆಯವರೆಗೆ ಪಾಠ ಕೇಳಿ, ಆಟವಾಡಿ, ಶಾಲಾ ಆವರಣದ ಕಸ ಹೆಕ್ಕಿ, ಮಧ್ಯ ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ಉಂಡು, ಸಂಜೆ ಹೊತ್ತಿಗೆ ಗೆಳೆಯರೊಂದಿಗೆ ಕೂಗಾಡುತ್ತಾ, ಕೌಳಿ ಹಣ್ಣು - ನೇರಳೆ ಹಣ್ಣು ಅಂತ ತಿನ್ನುತ್ತಾ ಮನೆಗೆ ಬಂದು, ತಡವಾದುದಕ್ಕೆ ಅಮ್ಮನ ಬಳಿ ಬೈಸಿಕೊಂಡು, ಕೈಕಾಲು ತೊಳೆದುಬಂದು ಅವಲಕ್ಕಿ-ಮೊಸರು ತಿಂದು, ದೇವರ ಮುಂದೆ ಕೂತು ಭಜನೆ ಮಾಡಿ, ಓದಿಕೊಂಡು - ಹೋಮ್ ವರ್ಕ್ ಮಾಡಿಕೊಂಡು, ಊಟದ ಸಮಯದಲ್ಲಿ ಅಮ್ಮನಿಗೆ ಸ್ವಲ್ಪ ಸಹಾಯ ಮಾಡಿಕೊಂಡು ಊಟ ಮಾಡಿ, ಟೀವಿ ನೋಡುತ್ತಾ ಹಾಗೇ ತೂಕಡಿಕೆ ಬಂದು, ಮೆತ್ತಿಗೆ ಹೋಗಿ ಬೆಚ್ಚನೆ ಹಾಸಿಗೆಯಲ್ಲಿ ಮಲಗಿ ನಿದ್ರೆ ಹೋಗಿ... ... ವರ್ಷ ಇವೆಲ್ಲವನ್ನೂ miss ಮಾಡಿಕೊಳ್ಳುತ್ತಿದ್ದಾಳಲ್ಲ ಎನಿಸಿ ಬೇಜಾರಾಯಿತು.

ಮಠದ ವ್ಯವಸ್ಥೆಯನ್ನೂ, ಪುಟ್ಟಿಯನ್ನೂ ನೋಡಿ ತುಂಬಾ ಸಂಕಟವಾಯಿತು. ಅಲ್ಲಿದ್ದ ಮಕ್ಕಳೆಲ್ಲ ತೀರಾ ಅನಾಥ ಮಕ್ಕಳಂತೆ ಕಾಣಿಸುತ್ತಿದ್ದರು. ನಾವು ಹೋಗುವಾಗ ವರ್ಷಳಿಗೆಂದು ಒಂದಷ್ಟು ಹಣ್ಣು, ಬಿಸ್ಕೆಟ್ಸು, ಚಾಕಲೇಟ್ಸು ತೆಗೆದುಕೊಂಡು ಹೋಗಿದ್ದೆವು. ಎಲ್ಲರಿಗೂ ಹಂಚಿಕೊಂಡು ತಿನ್ನಬೇಕಾಗಬಹುದೆಂದು ಏಳೆಂಟು ಬಿಸ್ಕೇಟ್ ಪ್ಯಾಕೇ ತಗೊಂಡು ಹೋಗಿದ್ದೆವು. ಅದನ್ನು ಹೊರತೆಗೆದು ಕೊಡಲು ಹೋದರೆ ವರ್ಷ ಸ್ವೀಕರಿಸಲೇ ಇಲ್ಲ. ’ಇಲ್ಲಿ ಚಾಕ್ಲೇಟು ಬಿಸ್ಕೇಟು ಏನೂ ತಿನ್ನೋ ಹಾಗಿಲ್ಲ’ ಎಂದಳು. ’ಅದ್ಯಾಕೆ ಹಾಗೆ?’ ಅಂತ ಕೇಳಿದೆ. ’ಅಂಗಡಿಯಲ್ಲಿ ಸಿಗುವ ಸಿದ್ಧ ಆಹಾರಗಳ್ಯಾವುದನ್ನೂ ತಿನ್ನುವ ಹಾಗಿಲ್ಲ. ಅವೆಲ್ಲಾ ಪೇಟೆ ತಿನಿಸುಗಳು; ನಮ್ಮ ಸಂಕೃತಿಗೆ ಹೊಂದುವುದಿಲ್ಲ ಅಂತ ಗುರೂಜಿ ಹೇಳಿದ್ದಾರೆ’ ಎಂಬ ಉತ್ತರ ಬಂತು. ನಾನು ನಿಬ್ಬೆರಗಾಗಿ ಹೋದೆ. ಪುಟ್ಟಿ ನಮ್ಮ ಜೊತೆ ಸರಿಯಾಗಿ ಮಾತನಾಡಲೇ ಇಲ್ಲ. ಆಕೆಗೆ ಹಾಗೆ ನಾವು ಅವಳಿರುವಲ್ಲಿಗೆ ಹೋದದ್ದು ಇಷ್ಟವಾಗಲಿಲ್ಲವೇನೋ ಎನಿಸಿ, ಸ್ವಲ್ಪ ಹೊತ್ತಷ್ಟೇ ಇದ್ದು ನಾವು ವಾಪಸು ಬಂದೆವು: ಬಿಸ್ಕೇಟು-ಚಾಕ್ಲೇಟುಗಳ ಸಮೇತ.

ಊರಿಗೆ ಬಂದವನೇ ಅತ್ತೆಗೆ ಫೋನ್ ಮಾಡಿ ಇಂಥಾ ಕಡೆ ಪುಟ್ಟಿಯನ್ನು ಬಿಟ್ಟಿರುವುದಕ್ಕಾಗಿ ಸರಿಯಾಗಿ ಬೈದೆ. ನನ್ನ ಅಸಮಾಧಾನವನ್ನೆಲ್ಲ ಸಾವಧಾನದಿಂದ ಕೇಳಿದ ಅತ್ತೆ ‘ಅದನ್ನೆಲ್ಲಾ ವ್ಯವಸ್ಥಿತವಾಗಿ ಮಾಡ್ತ.. ಇನ್ನೊಂದು ಐದಾರು ತಿಂಗಳು ಅಷ್ಟೇ. ಮಠದವರು ಹೇಳಿದ್ದ’ ಎಂದಳು.

ಮತ್ತೊಮ್ಮೆ ಊರಿಗೆ ಹೋಗಿದ್ದಾಗ ರಜೆಗೆಂದು ನಮ್ಮ ಮನೆಗೆ ಬಂದಿದ್ದ ಪುಟ್ಟಿ ಸಿಕ್ಕಳು. ಈ ಬಾರಿ ಅವಳನ್ನು ಕೂರಿಸಿಕೊಂಡು ಮಠದಲ್ಲಿ ಏನೇನು ಕಲಿಸುತ್ತಿದ್ದಾರೆ, ಅಲ್ಲಿಯ ಪಠ್ಯಕ್ರಮವೇನು, ಪಾಠ-ಪ್ರವಚನವೆಲ್ಲಾ ಹೇಗೆ ನಡೆಯುತ್ತಿದೆ, ಎಂದೆಲ್ಲ ಕೇಳಿದೆ. ಬೆಳಗ್ಗೆ ನಾಲ್ಕು ಗಂಟೆಗೆ ಮಕ್ಕಳನ್ನೆಲ್ಲಾ ಎಬ್ಬಿಸುತ್ತಾರಂತೆ. ಎದ್ದಕೂಡಲೇ ಧ್ಯಾನ, ಆಮೇಲೆ- ಶೌಚ, ಉಪಹಾರ, ಪ್ರಾರ್ಥನೆ, ಪ್ರದೇಶ ಸ್ವಚ್ಚತೆ, ಪಾರಾಯಣ, ಪ್ರವಚನ, ಭೋಜನ, ವಿಶ್ರಾಂತಿ, ಪಾಠ, ಆಟ, ಭಜನೆ, ವ್ಯಾಸಂಗ, ಊಟ, ಫಲ, ನಿದ್ರೆ... “ಓಹ್! ನಿನ್ನ ಪಟ್ಟಿಯಲ್ಲಿ ಪಾಠ-ಓದು-ಬರಹಕ್ಕಿಂತ ಭಜನೆ, ಪಾರಾಯಣಗಲೇ ಜಾಸ್ತಿ ಇದ್ದಲೇ ಮಾರಾಯ್ತಿ?” ಅಂತ ತಮಾಶೆ ಮಾಡಿದೆ. ಮನೆಗೆ ವರ್ಷ ಬಂದಿದ್ದಾಳೆಂದು ಅವಳಿಗಿಷ್ಟವಾಗುವ ವಿಶೇಷ ಅಡುಗೆಯನ್ನೇನಾದರೂ ಮಾಡೋಣ ಅಂತ ಅಮ್ಮ ಅವಳ ಬಳಿ ಕೇಳಿದರೆ ‘ಅಯ್ಯೋ ಅದು ತಾಮಸ ಗುಣ; ಇದು ರಾಜಸ ಗುಣ; ಅದು ಬ್ಯಾಡ; ಇದನ್ನ ತಿನ್ನಲಾಗ’ ಎಂದೆಲ್ಲಾ ಹಲುಬಲು ಶುರು ಮಾಡಿದಳು. ‘ಕೂಸೇ ನಿಂಗೆ ತಲೆ ಕೆಟ್ಟಿದ್ದು’ ಅಂತ ಬೈದೆ.

ಮಠದಲ್ಲಿ ಹೆಣ್ಣುಮಕ್ಕಳಿಗೆ ಮುಖ್ಯವಾಗಿ ಕಲುಹಿಸುತ್ತಿರುವುದು ಅಂಗಳ ಸಾರಿಸುವುದು, ಕಟ್ಟಿಗೆ ತರುವುದು, ಮನೆ-ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ರಂಗೋಲಿ ಹಾಕುವುದು, ಜಡೆ ಹೆಣೆದುಕೊಳ್ಳುವುದು, ಭಜನೆ ಮಾಡುವುದು, ಧ್ಯಾನ ಮಾಡುವುದು, ಇತ್ಯಾದಿ. ಅವರ final ಉದ್ದೇಶ ಹೆಣ್ಣು ಮಕ್ಕಳನ್ನು ಉತ್ತಮ ಗೃಹಿಣಿಯರನ್ನಾಗಿ ಮಾಡುವುದು; ಗಂಡು ಮಕ್ಕಳನ್ನು ಸುಸಂಕೃತರನ್ನಾಗಿ ಮಾಡುವುದು. ಅದಕ್ಕೇ ಮಠವೇ ಆಗಬೇಕಾ? ಗುರುಕುಲದಲ್ಲಿ ಕೂಡಿ ಹಾಕಿಯೇ ಹೇಳಿಕೊಡಬೇಕಾ? ಮನೆಯ ಪರಿಸರದಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇದ್ದು ಕಲಿಯಲಿಕ್ಕಾಗುವುದಿಲ್ಲವಾ? ನನ್ನ ಪ್ರಶ್ನೆಗೆ ಅತ್ತೆ ಸಮರ್ಪಕವಾದ ಉತ್ತರ ಕೊಡುವುದಿಲ್ಲ. ‘ಇಲ್ಲ, ಮಠದವರು ಭರವಸೆ ಕೊಟ್ಟಿದಾರೆ. ಅಲ್ಲಿರುವ ಮಕ್ಕಳು ಹತ್ತನೇ ತರಗತಿ ಮುಗಿಸಿ ಹೊರಬೀಳುವಾಗ ಯಾವುದೇ ಬೆಂಗಳೂರಿನ standard school ನ ಮಕ್ಕಳಿಗಿಂತ ಕಡಿಮೆಯೇನೂ ಇಲ್ಲದಂತೆ ತಯಾರಾಗಿರುತ್ತಾರೆ ಅಂತ. ನೋಡುವಂತೆ ನೀನು’ ಎನ್ನುತ್ತಾಳೆ ಅತ್ತೆ. ಈಗ ಅಲ್ಲಿ ಇಂಗ್ಲೀಷಿನಲ್ಲಿ ಮಾತನಾಡುವುದನ್ನು ಹೇಳಿಕೊಡುತ್ತಿದ್ದಾರಂತೆ, ಕಂಪ್ಯೂಟರ್ ಕಲುಹಿಸುತ್ತಿದ್ದಾರಂತೆ.

ಆದರೆ ವರ್ಷಳ ಭವಿಷ್ಯದ ಬಗ್ಗೆ ನನ್ನ ಆತಂಕವಂತೂ ಸ್ವಲ್ಪವೂ ಕಮ್ಮಿಯಾಗಿಲ್ಲ. ಅವಳು ಓದಿಕೊಂಡು ಮುಂದೇನೋ ಡಾಕ್ಟರೋ ಇಂಜಿನಿಯರೋ ಆಗದಿದ್ದರೆ ಇಲ್ಲ; ಆದರೆ ಮಠದಿಂದ ಹೊರಬಿದ್ದಮೇಲೆ ಈ ಮುಂದುವರೆದಿರುವ ಜಗತ್ತಿನೊಂದಿಗೆ ಹೊಂದಿಕೊಳ್ಳಲಿಕ್ಕಾದರೂ ಅವಳಿಂದ ಆದೀತೇ ಎಂಬ ಅನುಮಾನ ನನ್ನದು.

ರಾಮಚಂದ್ರಾಪುರ ಮಠ, ರಾಘವೇಶ್ವರ ಭಾರತೀ ಸ್ವಾಮಿಗಳ ಪೀಠಾರೋಹಣದ ನಂತರ ಪಡೆದ ಪ್ರಸಿದ್ಧಿ ಎಲ್ಲರಿಗೂ ಗೊತ್ತಿರುವುದೇ. ರಾಘವೇಶ್ವರರು ಹಾಕಿಕೊಂಡಿರುವ ಯೋಜನೆಗಳು, ಅವರ ಕನಸುಗಳು, ಆದರ್ಶಗಳು, ಗೋವಿಗಾಗಿ ಸಮರ -ಎಲ್ಲಾ ಬಹಳ ದೊಡ್ಡವಿವೆ. ನನಗೂ ಅವುಗಳ ಬಗ್ಗೆ ಗೌರವವಿದೆ. ಜನಗಳೆಲ್ಲಾ ಸಹಕರಿಸಿ ಅವೆಲ್ಲಾ ಸಾಕಾರಗೊಂಡದ್ದೇ ಹೌದಾದರೆ ಅದೊಂದು ಸಾಧನೆಯೇ. ಮಠದ ಪ್ರಸಿದ್ಧಿಯಿಂದಾಗಿಯೇ ಅಲ್ಲಿಗೆ ’ನಡೆದುಕೊಳ್ಳುವವರ’ ಸಂಖ್ಯೆಯೂ ಜಾಸ್ತಿಯೇ ಇದೆ. ಅಂಥವರು ತಮ್ಮ ಮಕ್ಕಳನ್ನು ತಂದು ಗುರುಕುಲದಲ್ಲಿ ಬಿಡುವುದೂ ಸಾಮಾನ್ಯ. ಮಠ ಅನೇಕ ವಿವಾದಗಳಿಗೆ ಸಹ ಗುರಿಯಾಗಿದೆ. ಈಗ ಅದನ್ನು ಮತ್ತೊಂದು ವಿವಾದಕ್ಕೆ ತಳ್ಳುವುದು ನನ್ನುದ್ದೇಶವೂ ಅಲ್ಲ. ಆದರೆ... ನನ್ನ ಪ್ರೀತಿಯ ವರ್ಷ ಪುಟ್ಟಿ ಹೀಗಾದ ಬಗ್ಗೆ ಯೋಚಿಸಿದಾಗ ಮಾತ್ರ ನನಗೆ ಸಂಕಟವಾಗುತ್ತದೆ. ಏನು ಮಾಡಬೇಕೆಂದೇ ತಿಳಿಯುವುದಿಲ್ಲ.

ಹಾಗಂತ ಇದು ಕೇವಲ ವರ್ಷ ಪುಟ್ಟಿಯ ಸಮಸ್ಯೆಯೂ ಅಲ್ಲವಂತೆ. ಅತ್ತೆ ಹೇಳಿದಳು, ಗುರುಕುಲ ಹೊರತಂದಿರುವ ‘ಪ್ರತಿಭಾ ಲೋಕ’ ಎಂಬ ಹೆಸರಿನ ಪುಸ್ತಕದಲ್ಲಿ ವರ್ಷಳ ಸಹಪಾಠಿಗಳೇನಕರು ಬರೆದ ಕವನ/ಬರಹಗಳ ದಾಟಿಯೂ ಹೀಗೆಯೇ ಇದೆ ಎಂದು. ನಾವು ಬೆಂಗಳೂರಿನ ಪಬ್ಬು-ನೈಟ್‌ಕ್ಲಬ್ಬುಗಳನ್ನೂ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೂ ನೋಡಿ ಬೈದುಕೊಳ್ಳುತ್ತಾ ‘where are we heading to?’ ಅಂತ ಕೇಳಿಕೊಳ್ಳುತ್ತೇವೆ ನಿಜ. ಆದರೆ ವರ್ಷಳ ಕವನ ಓದಿದಾಗಲೂ ನಾನು ಅದೇ ಪ್ರಶ್ನೆ ಕೇಳಿಕೊಳ್ಳಬೇಕಾಯಿತು ಎಂಬುದು ವಿಷಾದನೀಯ. ಎರಡೂ ಸಹ ‘too much’ ಎಂಬುದು ನನ್ನ ಅಭಿಪ್ರಾಯ.

ಮತ್ತೆ ನಾನು ಹೀಗೆಲ್ಲಾ ಬರೆದು ಪ್ರಕಟಿಸಿದ್ದೇನೆ ಎಂಬುದು ಗೊತ್ತಾದರೆ ವರ್ಷ, ಅತ್ತೆ, ಅತ್ತೆಯ ಮನೆಯವರು, ನನ್ನ ಅಪ್ಪ-ಅಮ್ಮ -ಎಲ್ಲರೂ ಬೇಜಾರ ಮಾಡಿಕೊಳ್ಳುತ್ತಾರೆ, ನನಗೆ ಗೊತ್ತು. ಮಠದವರಿಗೆ, ಮಠದ ಅನುಯಾಯಿಗಳಿಗೆ ಗೊತ್ತಾದರಂತೂ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ ಗೊತ್ತಿಲ್ಲ. ನೇರವಾಗಿ ತಮ್ಮ ಬಳಿಯೇ ಕೇಳಿ ನಿಷ್ಕರ್ಷೆ ಮಾಡಿಕೊಳ್ಳಬಹುದಿತ್ತು ಎನ್ನುತ್ತಾರೇನೋ? ನನಗೂ ಇದನ್ನೆಲ್ಲ ಬರೆಯಬಾರದು ಅಂತಲೇ ಇತ್ತು. ಆದರೂ ಬರೆದುಬಿಟ್ಟೆ.

72 comments:

Anonymous said...

ಒಳ್ಳೆಯ ಬರಹ.
ಒಂದು ರೀತಿಯಲ್ಲಿ ಯೋಚಿಸಿದರೆ ಯಾವುದೇ ಆಧುನಿಕತೆಯ ಸೋಂಕಿಲ್ಲದ ಈ ರೀತಿಯ ಶಿಕ್ಷಣ ಸರಿಯೆನಿಸುತ್ತದೆ. ಆದರೆ ಯಾವುದು ಸರಿ ಯಾವುದು ತಪ್ಪೆಂದು ತಿಳಿಯದ ವಯಸ್ಸಿನವರನ್ನು ಪರಿಸ್ಥಿತಿಗೆ 'ದೂಡುವುದು' (ಶಬ್ದ ಪ್ರಯೋಗ ತಪ್ಪಾಗಿದ್ದರೆ ಕ್ಷಮಿಸಿ) ಎಷ್ಟು ಸರಿ?
ಅತಿ ಕಟ್ಟುನಿಟ್ಟಾದ ಪರಿಸರದಲ್ಲಿ ಬೇಳೆದವರು ಹೊರ ಪ್ರಪಂಚದ ಸ್ವಚ್ಚಂದ ಪರಿಸರಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ. ಸ್ವಚ್ಚಂದತೆಯ ದುರ್ಬಳಕೆಯಾಗುವ ಸಾಧ್ಯತೆಗಳು ಜಾಸ್ತಿ.(ಕೊಟ್ಟಿಗೆಯಲ್ಲಿ ಹುಟ್ಟಿ ಬೆಳೆದ ಕರು ರಸ್ತೆಗೆ ಬಂದಾಗ ಕಿವಿಗೆ ಗಾಳಿಹೊಕ್ಕು ಹುಚ್ಚೆದ್ದು ಕುಣಿಯುವಂತೆ).

ಚಿಕ್ಕ ಮಕ್ಕಳು ಚಿಕ್ಕವರಂತೇ ಇದ್ದು, ಚಿಕ್ಕಮಕ್ಕಳಂತೇ ಯೋಚಿಸಿದರೆ ಚೆನ್ನ. ಮಕ್ಕಳ ಬಾಯಲ್ಲಿ ಆಧ್ಯಾತ್ಮಿಕ, ವೈರಾಗ್ಯಕ್ಕೆ ಸಂಬಂದಿಸಿದ ಮಾತುಗಳನ್ನು ಕೇಳಲು ಬಹುಶಃ ಯಾವ ತಂದೆತಾಯಿಯರೂ ಬಯಸುವುದಿಲ್ಲ.

Vijaya said...

Hey Sush,
odi onthara aaytu ... nam samaajadalli yaake ella illa atee vrushti illa anavrushti aagutte? balance strike maadodu sikkapatte kashta alwa? nimma samskruti ulsbeku nija, aadre hennu makkalu munde horagina prapanchadalli swatantravaagi badukodannoo kaleebekalva? olle education na adhukanite anno hesru kottu dooshisodu yeshtu sari alwo, haage nam samskruti ulstideevi anno hesrinalli bari olle gruhini aagokke tayaaru maadodu sari all antha nanna anisike.
viparyasa andre, idanella sari alla anda maathrakke namanna neevu city noru, nam culture nimge gotilla, ulskolo aase illa, etc .. etc... anta apavaada bere horstaare. Such hypocrisy!!!

Vijaya said...

adu "namma samskruti ulsbeku nija..." antha odko :-) ... typo.

Parisarapremi said...

ಯಾಕ್ರೀ ಟೂ ಮಚ್ಚು???

ಎಲ್ಲಾ ಅವರವರ ಪೂರ್ವ ಪುಣ್ಯ ವಿಶೇಷ ಬಿಡಿ.. ಈಗ ನೀವು ಇಪ್ಪತ್ತೆರಡಕ್ಕೇ ಮೋಟುಗೋಡೇಲಿ ಬರೆಯಲ್ವಾ?? ;-)

Harisha - ಹರೀಶ said...

ಈ ಕ್ಷಣಕ್ಕೆ ಏನ್ ಹೇಳಕ್ಕು ತಿಳೀತಾ ಇಲ್ಲೆ.. SSLC ಮುಗಿಯೋ ಅಷ್ಟರಲ್ಲಿ ಅವು ಬೇರೆಯವರಿಗೆ ಸರಿಸಾಟಿಯಾಗಿ ಓದಿನಲ್ಲಿ ಇರ್ತ ಅಂತಾದ್ರೆ ಈ ರೀತಿ ಶಿಕ್ಷಣದಲ್ಲಿ ಏನೂ ತಪ್ಪಿಲ್ಲೆ ಅಂತಾನೆ ಅನ್ಸ್ತು... ಹಾಗಾಗ್ಲಿ ಅಂತ ಆಶಿಸ್ತಿ.. ಆದ್ರೆ ಯಾರು ಯಾವುದರ ಬಗ್ಗೆ ಕವನ ಬರೀತ ಅನ್ನೋದು ಅವರ ಪರಿಸರ ಅಷ್ಟೆ ಅಲ್ಲ, ಅವರ ವೈಚಾರಿಕತೆಯ ಮೇಲೂ ಅವಲಂಬಿಸಿರ್ತು ಅಲ್ದ?

ಅಮರ said...

ಮಠದಲ್ಲಿನ ವಿಧ್ಯಾರ್ಥಿಗಳ ಪರಿಸ್ಥಿಯ ಬಗ್ಗೆ ಬರೆಯಬಾರದಿತ್ತು ಅಂದು ಕೊಂಡರು ಬರೆದು ಬಿಟ್ಟೆ ಅಂದರಲ್ಲ.... ಆ ದ್ವಂದ್ವ ಬೇಡ ನಿನ್ನ ಪರಿದಿಯಲ್ಲಿ ಕಂಡ ಸತ್ಯವನ್ನ ಹೇಳೊದರಲ್ಲಿ ಮುಜುಗರ ಯಾಕೆ?? ಮಠಗಳಾದರೆ ಏನು??? ಅವಕ್ಕೂ ಸಾಮಾಜಿಕ ಜವಾಬ್ದಾರಿ ಇದ್ದೆ ಇದೆ ತಾನೆ ...... ಸುಸಂಸ್ಕೃತರು ತಮ್ಮ ಮಕ್ಕಳಾಗಲಿ ಎಂದು ಅಲ್ಲಿಗೆ ಕಳುಹಿಸುವ ತಂದೆ ತಾಯಂದಿರ ಕಳಕಳಿಯನ್ನ ಅವರು ಗೌರವಿಸಬೇಕು ತಾನೆ?? ಮಠ ಆದ್ರು ಅಷ್ಟೆ ಶಾಲೆ ಆದ್ರು ಅಷ್ಟೆ... ನನ್ನ ನೆನಪಿನಂಗಳದಲ್ಲು ಈ ತರಹದ್ದೆ ಒಂದು ಕಥೆ ಇದೆ ......... ನಮ್ಮ ಊರಿನದ್ದೆ ಯಾವತ್ತಾದರು ಹಂಚಿ ಕೊಳ್ಳುವೆ . ... :)

ವಿ.ರಾ.ಹೆ. said...

ಕೆಲವು ಅರೆ ಬೆಂದ ಅಲೋಚನೆಗಳಿಂದ ಕೂಡಿದೆ ಬರಹ. ಮನೆ ಚೆನ್ನಾಗಿಟ್ಟುಕೊಳ್ಳುವುದು ಕಲಿಸಿದರೆ ಗೃಹಿಣಿಯರಾಗಲು ಟ್ರೈನಿಂಗು ಕೊಟ್ಟಂತೆ ಎಂಬುದು ಮತ್ತು ಸುಸಂಸ್ಕೃತರನ್ನಾಗಿ ಮಾಡಿದರೆ ಅವರು ಈಗಿನ fwd ಜಗತ್ತಿಗೆ ಹೊಂದಿಕೊಳ್ಳಲು ತೊಂದರೆಯಾಗುತ್ತದೆ ಎಂಬ ನಿನ್ನ ಅಭಿಪ್ರಾಯವೇ ವಿಚಿತ್ರವೆನಿಸಿತು.

ಇನ್ನುಳಿದಂತೆ, ಸಾಮಾನ್ಯವಾಗಿ ಯಾವುದೇ ರೆಸಿಡೆನ್ಶಿಯಲ್ ಸ್ಕೂಲುಗಳ ಮಕ್ಕಳನ್ನು ನೋಡಿದರೂ ಬೇಜಾರಾಗೇ ಆಗುತ್ತದೆ. ನೀ ಹೇಳಿದಂತೆ ಅಲ್ಲಿ ಆ ಪರಿ ಅವ್ಯವಸ್ಥೆ ಇದ್ದರೆ ಅದು ತಪ್ಪು. ಆದರೆ ನಿನ್ನ ಮಾವ ನೋಡಿಕೊಂಡು ಬಂದು ಅವರಿಗೆ ಸರಿಯೆನಿಸಿದ ಮೇಲೆ ಸೇರಿಸಿದ್ದಲ್ವಾ? ಬೆಂಗಳೂರಿನಲ್ಲಿರುವ ನಿನ್ನ ಅಪೇಕ್ಷೆ ಮತ್ತು ಅವರ ಅಪೇಕ್ಷೆ ಬೇರೆ ಬೇರೆ ಇದ್ದದ್ದೇ ನಿನಗೆ ಈ ಪರಿ ಕಿರಿಕಿರಿಯಾಗಲು ಕಾರಣವಿರಬಹುದಾ ಅಂತ !

ಅವಳು ಮಠದಲ್ಲಿದ್ದು ಆ ತರ ಕವನ ಬರೆದಿದ್ದಕ್ಕೆ ನಿನಗೆ ಮಠದ ಮೇಲೆ ಅಸಮಾಧಾನ. ಅದೇ ಮನೆಯಲ್ಲೇ ಇದ್ದು ಬರೆದಿದ್ದರೆ ಯಾರನ್ನು ದೂಷಿಸುತ್ತಿದ್ದೆ? ಈ ನಿಟ್ಟಿನಲ್ಲಿ ಮೇಲೆ ಪರಿಸರಪ್ರೇಮಿ ಮತ್ತು ಹರೀಶರ ಅಭಿಪ್ರಾಯ ಸರಿಯಿರಬಹುದಲ್ವಾ?

Sushrutha Dodderi said...

ವಿಕಾಸ್, ಹರೀಶ್, ಅರುಣ್,

ಮನೆಯಲ್ಲಿದ್ದಾಗ, ಎಲ್ಲ ಮಕ್ಕಳಂತೆ ಸರ್ಕಾರಿ ಶಾಲೆಗೋ ಪ್ರೈವೇಟ್ ಸ್ಕೂಲ್‍ಗೋ ಹೋಗಿ ಬರುವ ಮಕ್ಕಳಿಗೆ ತಮ್ಮ ಬದುಕಿನ ದಾರಿಯನ್ನು choose ಮಾಡಿಕೊಳ್ಳಲಿಕ್ಕೆ options ಇರುತ್ತದೆ. ಆದರೆ ಇಂತಹ ಪರಿಸರದಲ್ಲಿ ಇದ್ದು ಓದುವಾಗ ಅವರು ಬೇರೆ ಯಾರೋ direct ಮಾಡಿದ ದಾರಿಯಲ್ಲೇ ಸಾಗಬೇಕಾಗುತ್ತದೆ. ಮಠದವರು 'ಇಂಥದ್ದನ್ನು ತಿನ್ನಬಾರದು, ದಿನಾ ಇಷ್ಟು ಹೊತ್ತು ಧ್ಯಾನ ಮಾಡಬೇಕು, ತಂದೆ-ತಾಯಿ-ಬಂಧನಗಳು ಎಲ್ಲಾ ಪ್ರಾಪಂಚಿಕ, ಅವಕ್ಕಿಂತ ಆನಂದ ಆಧ್ಯಾತ್ಮದಲ್ಲಿದೆ' ಎಂದೆಲ್ಲಾ teach ಮಾಡಿಬಿಟ್ಟರೆ, restrict ಮಾಡಿಬಿಟ್ಟರೆ ಆ ಎಳೆಯ ಮಕ್ಕಳ ಮೇಲೆ ಆಗುವ ಪರಿಣಾಮವೇನು ಎಂಬುದನ್ನೂ ಯೋಚಿಸಿ. ಅವರಿಗೆ ಆ ವಯಸ್ಸಿನಲ್ಲಿ ಯಾವುದು ಸರಿ - ಯಾವುದು ತಪ್ಪು ಎಂಬ ಬಗ್ಗೆ ಸ್ವಂತ ನಿರ್ಧಾರಗಳಿಗೆ ಬರುವ ಪಕ್ವತೆ ಇರುವುದಿಲ್ಲ. ಅಂತಹ ವಯಸ್ಸಿನ ಮಕ್ಕಳನ್ನು ಒಂದೆಡೆ ಕೂಡಿ ಹಾಕಿ ಅವರನ್ನು ವೈರಾಗ್ಯದತ್ತ ಒಯ್ಯುವುದು ಎಷ್ಟು ಸರಿ?

ವರ್ಷ ಪುಟ್ಟಿ ಮುಂದೊಂದು ದಿನ ತನಗೆ ಈ ಲೌಕಿಕದಲ್ಯಾವುದರೂ ಆಸಕ್ತಿ ಇಲ್ಲ; ತಾನು ಸನ್ಯಾಸಿನಿಯಾಗುತ್ತೇನೆ ಎಂದು ನಿಂತರೆ ಅದಕ್ಕೆ ಯಾರು ಹೊಣೆ? ಇದು ಕೇವಲ ವರ್ಷ ಪುಟ್ಟಿಯ ಸಮಸ್ಯೆಯಲ್ಲಿ ನೋಡಿ? ಮಠದಲ್ಲಿ ಎಂಭತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳೂ ನೂರಿಪ್ಪತ್ತಕ್ಕೂ ಹೆಚ್ಚು ಗಂಡು ಮಕ್ಕಳೂ ವ್ಯಾಸಂಗ ಮಾಡುತ್ತಿದ್ದಾರಂತೆ.

ಇಷ್ಟಾಗ್ಯೂ, ಒಬ್ಬ ಹುಡುಗಿ ಉತ್ತಮ ಗೃಹಿಣಿಯಾಗುವುದಕ್ಕೆ ಮಠದವರು ಟ್ರೈನಿಂಗ್ ಕೊಡಬೇಕಾ? ಅವಳು ಅಂಗಳ ಬಳಿಯುವುದನ್ನು ಕಲಿತು ಏನು ಮಾಡಬೇಕಿದೆ? ಎಲ್ಲರ ಮನೆ ಅಂಗಳಕ್ಕೂ ಕಾಂಕ್ರೀಟ್ ಹಾಕಲಾಗಿದೆ; ಬಳಿಯುವ ಪ್ರಶ್ನೆಯೇ ಇಲ್ಲ. ಅವಳು ಹೆಂಡತಿಯಾಗಿ ಹೋಗುವ ಬೆಂಗಳೂರಿನ ಗಂಡನ ಮನೆಯಲ್ಲಿ -ಥರ್ಡ್ ಫ್ಲೋರಿನಲ್ಲಿರುವ ಗ್ರಾನೈಟ್ ನೆಲದ ಅಪಾರ್ಟ್‌‍ಮೆಂಟಿನ ಹೊರಗೆ ರಂಗೋಲಿ ಹಾಕುವುದಕ್ಕೂ ಜಾಗವಿಲ್ಲ! ಅಲ್ಲ, ಇವನ್ನೆಲ್ಲಾ ಕಲಿಸುವುದು ತಪ್ಪು ಅಂತಲ್ಲ; ಬರೀ ಇವನ್ನೇ ಕಲಿಸಿದರೆ?!

ಹರೀಶ್,
"ಪರಿಸರ ಅಷ್ಟೆ ಅಲ್ಲ, ಅವರ ವೈಚಾರಿಕತೆಯ ಮೇಲೂ ಅವಲಂಬಿಸಿರ್ತು ಅಲ್ದ?" -ಆ ವಯಸ್ಸಿನಲ್ಲಿ ಎಂಥ ವೈಚಾರಿಕತೆ ಮಾರಾಯಾ? ಸ್ವಂತದ್ದಾ? ಅದು ಯಾರೋ ಬಲವಂತವಾಗಿ ಹೇರಿದ್ದಲ್ದಾ?

ವಿಕಾಸ್,
"ಸುಸಂಸ್ಕೃತರನ್ನಾಗಿ ಮಾಡಿದರೆ ಅವರು ಈಗಿನ fwd ಜಗತ್ತಿಗೆ ಹೊಂದಿಕೊಳ್ಳಲು ತೊಂದರೆಯಾಗುತ್ತದೆ ಎಂಬ ನಿನ್ನ ಅಭಿಪ್ರಾಯ..." -ಕಷ್ಟ ವಿಕಾಸ್. ವರ್ಷ ಬೆಂಗಳೂರಿನ ಸಾಫ್ಟ್‍ವೇರ್ ಇಂಜಿನಿಯರೊಬ್ಬನನ್ನು ಮದುವೆಯಾಗಿ ಹೋದರೆ, ಅನಿವಾರ್ಯವಾಗಿಯಾದರೂ ಅವನು attend ಮಾಡಬೇಕಾದ ಪಾರ್ಟಿಗಳಿಗೆ ಅವನ ಜೊತೆ ಹೋಗಿ 'ಕಂಪನಿ' ಕೊಟ್ಟು, ನಾನ್‍ವೆಜ್ ಹೋಟೆಲಿನಲ್ಲಿ ಕೂತು ವೆಜ್ ಫ್ರೈಡ್‍ರೈಸ್ ತಿಂದು, ಸಮಯವೇ ಇಲ್ಲದ ಶೆಡ್ಯೂಲಿನಲ್ಲಿ ಬ್ರೆಡ್ಡನ್ನೋ ಫ್ರಿಜ್ಜಿನ ಐಟಮ್ಮನ್ನೋ ತಿಂದು ಇರಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳಲಿಕ್ಕೆ ಅವಳಿಗೆ ಕಷ್ಟವಾಗಲಾರದಾ? ಆಗಲಿಲ್ಲ ಅಂದರೆ well and good!

ಅರುಣ್,
ಮೋಟುಗೋಡೆಯ ಜೊತೆ ನಾನು ಮೌನಗಾಳಕ್ಕೂ ಬರೆಯುತ್ತಿದ್ದೇನೆ.
ಅದ್ಯಾರದು ಪೂರ್ವ ಮತ್ತೆ ಪುಣ್ಯ? ;)

ವಿ.ರಾ.ಹೆ. said...
This comment has been removed by the author.
ವಿ.ರಾ.ಹೆ. said...

ಸರಿ, ಇನ್ಮೇಲೆ ಎಲ್ಲಾ ಶಾಲೆಗಳಲ್ಲೂ ಹುಡುಗಿಯರು ಬೆಂಗಳುರಿನ ಸಾಫ್ಟ್ ವೇರ್ ಎಂಜಿಯರನ್ನ ಮದುವೆಯಾಗಿ ಹೋಗಲು ಏನೇನು ಮಾಡಬೇಕು ನಂತರ ಮದುವೆಯಾದ ಮೇಲೆ ಅವನ ಜೊತೆ ಪಾರ್ಟಿ ಮಾಡುವುದು ಹೇಗೆ, ನಾನ್ ವೆಜ್ ತಿನ್ನುವುದು ಹೇಗೆ, ತಂಗಳು ತಿನ್ನುವುದು ಹೇಗೆ , ಥರ್ಡ್ ಫ್ಲೋರಿನಲ್ಲಿ ಜೀವನ ಮಾಡುವುದು ಹೇಗೆ ಅಂತ ಸಣ್ಣಕ್ಕಿಂದ್ದಾಂಗಿಂದ್ಲೇ ಕಲಿಸಲು ಮತ್ತು ಅಷ್ಟನ್ನು ಮಾತ್ರ ಕಲಿಸಲು ಒತ್ತಾಯ ಹೇರೋಣ. ಬೇರೆಲ್ಲಾ ಕಲಿತು ಮಾಡೋದೇನಿದೆ ಅಲ್ವಾ? :)

ಕರ್ಮಕಾಂಡ !

Parisarapremi said...

ನಿಮ್ಮದೇ ಪೂರ್ವ ಪುಣ್ಯ. ಇಪ್ಪತ್ತೆರಡಕ್ಕೆ ನಾರ್ಮಲ್ ಹುಡುಗರು ಏನು ಬರೀತಾರೋ ಅದಕ್ಕಿಂತ ಹತ್ತರಷ್ಟು ಎತ್ತರದಲ್ಲಿ ಯೋಚಿಸೋ ನಿಮ್ಮದೇ ವಿಶೇಷ ಕಣ್ರೀ.. ಹಣೆಬರಹಕ್ಕೆ ಹೊಣೆ ಯಾರು!! ಇಲ್ಲಿ ಯಾವುದೂ ಟೂ ಮಚ್ಚಲ್ಲ.. ;-)

ರಂಜನಾ ಹೆಗ್ಡೆ said...

ಸುಶ್ & ವಿಕಾಸ್,
ನೀವಿಬ್ಬರು ಯಾಕೋ ವಿರುದ್ಧ ದಿಕ್ಕಿನಲ್ಲಿ ನಿಂತು ಮಾತಾಡ್ತಾ ಇದ್ದಿರಾ.
ಸಮಸ್ಯೆಯನ್ನ ಯಾರು ಸರಿ ಆಗಿ ತಿಳಿದುಕೊಳ್ಳೊ ಪ್ರಯತ್ನ ಮಾಡ್ತಾ ಇಲ್ಲಾ ಅನ್ನಿಸುತ್ತೆ.
ಕೇವಲ software ನಾ ಮದುವೆ ಆಗಿ ಅವಳು ಹೊಂದಿಕೊಂಡು ಹೋಗುವಷ್ಟೆ ಸಮಸ್ಯೆ ಅಲ್ಲ.

ನನ್ನ ಅಭಿಪ್ರಾಯದಲ್ಲಿ ಮಕ್ಕಳನ್ನಾ ಯಾವದೇ situation ನಲ್ಲಾದರು ಹೊಂದಿಕೊಂಡು ಹೋಗುವ ಹಾಗೆ ಬೆಳೆಸಬೇಕು ಅನ್ನಿಸುತ್ತೆ.

ಮಕ್ಕಳನ್ನ ಮನೆಯಲ್ಲಿಟ್ಟುಕೊಂಡು ಅಪ್ಪ ಅಮ್ಮನ ಪ್ರೀತಿಯಲ್ಲಿಯೇ ಬೆಳೆಸಬೇಕು. ಆಗಲೇ ಮಕ್ಕಳ್ಳು ಉತ್ತಮ ಪ್ರಜೆ ಆಗುತ್ತಾರೆ.

ವಿ.ರಾ.ಹೆ. said...

@ರಂಜನಾ
ಅದು ಹೌದು ರಂಜನಾ, ನೀವು ಹೇಳೋದು ೧೦೦% ಸರಿ.
ಅಂದ ಹಾಗೆ, ನಿಮ್ಮ ಕಡೆ ಮಠದವ್ರು ಎಲ್ಲಾ ಮಕ್ಕಳು ಕಡ್ಡಾಯವಾಗಿ ಅಲ್ಲಿಗೆ ಬರ್ಲೇ ಬೇಕು ಅಂತ ನಿಯಮ ಏನೂ ಮಾಡಿಲ್ಲ ತಾನೆ? ಮಾಡಿದ್ದರೆ ಹೇಳಿ.. ಅಲ್ಲಿ ಬಿಡಿಸಿ ಬೇರೆ ಯಾವುದಾದರೂ ಶಾಲೆಗೆ ಸೇರಿಸಿ ಮುಂದಿನ ಸಿಟಿ ಬದುಕಿಗೆ ಹೊಂದಿಕೊಳ್ಳುವಂತೆ ಈಗಿಂದಲೇ ಕಲಿಸೋಣ. :) ಮುಂದೆ ಹೇಗಿದ್ದರೂ ಪಿಜ್ಜಾ ತಿನ್ನುವುದು ನೀನು.. ಸುಮ್ನೆ ಈಗ ದೋಸೆ ತಿಂದು ಹಿಂದುಳಿಯಬೇಡ ಅಂತ ಹೇಳಿಕೋಡೋಣ.:)

Sushrutha Dodderi said...

@ ವಿಕಾಸ್

ಸಾಫ್ಟ್‍ವೇರ್ ಇಂಜಿನಿಯರ್ರಿಗೆ ಮದುವೆಯಾಗಿ ಹೋಗುವ ಪ್ರಸಂಗವನ್ನು ನಾನು ಉದಾಹರಣೆಯಾಗಿ ಬಳಸಿದ್ದು ಅಷ್ಟೇ. 'ಬೆಂಗಳೂರು, ಸಾಫ್ಟ್‌ವೇರ್ ಎಂಜಿನಿಯರ್ರು, ಅಪಾರ್ಟ್‌‍ಮೆಂಟು, ಥರ್ಡ್ ಫ್ಲೋರು, ಪಾರ್ಟಿ, ನಾನ್ ವೆಜ್ಜು, ಬ್ರೆಡ್ಡು, ಫ್ರಿಜ್ಜು' ಇತ್ಯಾದಿ ಶಬ್ದಗಳನ್ನು ಆ ಉದಾಹರಣೆಯ ಮುಂದುವರಿಕೆಗಾಗಿ ಬಳಸಿಕೊಳ್ಳಬೇಕಾಯಿತು.

ಮತ್ತೆ- ಹಳ್ಳಿಯ ಮನೆ, ಅಡಿಕೆ ತೋಟ, ಕೆಂಪಿ ಗಾರೆ ನೆಲದ ಭವಂತಿ ಮನೆ, ಸಗಣಿ ಹಾಕಿ ಸಾರಿಸಿದ ಅಂಗಳ, ಈಗಷ್ಟೇ ಮಾಡಿದ ಫ್ರೆಶ್ ಮಾವಿನ್ ಕಾಯಿ ಗೊಜ್ಜು, ತಂಬುಳಿ, ಬೀಸ್ಗೊಜ್ಜು (ಒಳ್ಳಲ್ಲೇ ಬೀಸಿದ್ದು!) ಇತ್ಯಾದಿ ಶಬ್ದಗಳು ಅವಳು ಮದುವೆಯಾಗುವ ಸಂದರ್ಭದಲ್ಲಿ existence ನಲ್ಲಾದರೂ ಇರುತ್ತವಾ ಎಂಬುದು ಬೇರೆಯದೇ ಚರ್ಚೆಯ ಪ್ರಾಕ್ಟಿಕಲ್ ಪ್ರಶ್ನೆ; ಅದಿರಲಿ.

ಗುರುಕುಲದ motto ಏನಾಗಿತ್ತು ಮತ್ತು ಅದು ಎಷ್ಟು ಸರಿ (ಪ್ರಸ್ತುತ) ಎಂಬುದನ್ನು ನಾನಿಲ್ಲಿ ಚರ್ಚೆಗಿಟ್ಟಿದ್ದು. ಪಿಜ್ಜಾ ತಿನ್ನುವುದನ್ನಾಗಲೀ, ಹೋಟೆಲ್ಲಿಗೆ ಹೋಗುವುದನ್ನಾಗಲೀ, (ಕಲಿಸಬೇಕು ಅಂತ ನಾನೆಲ್ಲೂ ಹೇಳಿಲ್ಲ; ಕೊಟ್ಟ ಉದಾಹರಣೆಯನ್ನೇ ಹಿಡಿದುಕೊಂಡು ನೀನು ಏನೇನೋ ಹೇಳುತ್ತಿದ್ದೀಯೆ); ಆದರೆ ಅವೆಲ್ಲ ತಪ್ಪು, ಅಪರಾಧ ಎಂಬ ಭಾವನೆಯನ್ನು ಮಕ್ಕಳಲ್ಲಿ ತುಂಬಿದಾಗ ಅವರಿಗೆ ಮುಂದೆ ತೊಂದರೆಯಾಗುತ್ತದೆ ಅಂತ ನನಗನಿಸಿತು. ನಿನಗೆ ಹಾಗೆ ಅನಿಸದಿದ್ದರೆ ಹೋಗ್ಲಿ ಬಿಡು!

ಮತ್ತೆ ವರ್ಷಳೂ ಅಲ್ಲಿ ಓದಿ ಕಲಿತು ಸುಜ್ಞಾನೆಯಾಗಿ ಸುಸಂಕೃತಳಾಗಿ ಹೊರಬಂದು ಈ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಂಡು ಬಾಳುವೆ ನಡೆಸುವಂತಾದರೆ ಖುಶಿಯೇ ಅಲ್ಲವಾ? ಆ ಲಕ್ಷಣಗಳು ನನಗೆ ಅವಳಲ್ಲಿ ಕಾಣಿಸದೇ ಹೋದ್ದರಿಂದ ಆತಂಕಗೊಂಡು ನಾನು ಇಷ್ಟೆಲ್ಲ ಬರೆಯಬೇಕಾಯಿತು.

ಏಕೆಂದರೆ, "ಬ್ರಹ್ಮಾಂಡವೆಂಬ ಮಾಯಾಜಾಲದಲಿ ಬೀಳುವುದು" ಎಂದರೆ ಏನು ಅಂತ ನನಗೇ ಗೊತ್ತಿಲ್ಲ!!

Harisha - ಹರೀಶ said...
This comment has been removed by the author.
Harisha - ಹರೀಶ said...

ಸುಶ್ರುತ, ನೀ ಹೇಳಿದ ಆಧುನಿಕತೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ನನ್ನದೊಂದು ಮಾತು.

ನಾನು ಓದಿದ ೧೬ ವರ್ಷವೂ ಅಪ್ಪ-ಅಮ್ಮನ ಜೊತೆಗೇ ಇದ್ದವನು. ನೀನು ಉದಾಹರಿಸಿದಂತೆ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್. ಹಾಗಿದ್ದರೂ ಇವತ್ತಿಗೂ ನನಗೆ ನಾನ್-ವೆಜ್ ಹೋಟೆಲ್ಲಿಗೆ ಹೋಗುವುದು ಎಂದರೆ ಅಸಹ್ಯ ತರಿಸುತ್ತದೆ. ಹೀಗಿರುವಾಗ ಕೇವಲ ಮಠದಲ್ಲಿ ಓದಿದ್ದಕ್ಕೇ ಹಾಗಾಗಿದೆ ಎಂದು ಹೇಳುವುದು ಎಷ್ಟು ಸರಿ?

ಇನ್ನೊಂದು ವಿಷಯ. ಯಾರೇ ಆಗಲಿ, ಹಿಂದಿನ ಕಟ್ಟುಪಾಡು, ಸಂಪ್ರದಾಯಗಳಿಗೆ ಹೊಂದಿಕೊಳ್ಳಲು ಬರುತ್ತದೆ ಎಂದಾದರೆ ಆಧುನಿಕತೆಗೆ ಹೊಂದಿಕೊಳ್ಳುವುದು ಖಂಡಿತ ಸಾಧ್ಯ. ಹೆಚ್ಚೆಂದರೆ ಅವರ ಮನಸ್ಸಿನಲ್ಲಿ ಸ್ವಲ್ಪ ತೊಳಲಾಟಗಲಾಗಬಹುದು ಅಷ್ಟೆ. ಅದೇ ಸಂಪೂರ್ಣ ಆಧುನಿಕತೆಗೆ ಹೊಂದಿಕೊಂಡ ಒಬ್ಬ ಹುಡುಗಿ ಹಳ್ಳಿ ಬದುಕಿಗೆ, ಹಿರಿಯರೊಂದಿಗೆ ಹೊಂದಿಕೊಂದಿರುವುದನ್ನು ತೋರಿಸು ನೋಡೋಣ?

ಭಾರತ ದೇಶ ಹಳ್ಳಿಗಳ ದೇಶ ಎನ್ನುವವರೂ ನಾವೇ; ನಗರವಾಸಕ್ಕೆ ಸಿದ್ಧವಾಗುವಂತೆ ಶಿಕ್ಷಣ ಕೊಡಬೇಕು ಎನ್ನುವವರೂ ನಾವೇ. ಅವಿಭಕ್ತ ಕುಟುಂಬ ಉತ್ತಮ ಹಾಗೆ ಹೀಗೆ, ಅದಿದ್ದರೆ ಚೆನ್ನಾಗಿ ಎಂದು ಹಲುಬುವವರೂ ನಾವೇ; ಆದರೆ ದಿನೇ ದಿನೇ ಹಿರಿಯರ ಮೇಲಿನ ಭಕ್ತಿ ಕಮ್ಮಿಯಾಗಲು, ವರ್ಷ ಪೂರ್ತಿ ಸೇವೆ ಮಾಡಬೇಕಾದ ತಂದೆ ತಾಯಿಯರಿಗೆ ವರ್ಷಕ್ಕೊಂದು (Mother's day ಮೊನ್ನೆ ತಾನೆ ಆಯ್ತಲ್ಲ?) ದಿನ ಮೀಸಲಿಡಲು ಕಲಿಸುವ ಕಾನ್ವೆಂಟ್ ಗೆ ಸೇರಿಸುವವರೂ ನಾವೇ.

ನೀನು ಹೇಳುತ್ತಿರುವುದು ವಿರೋಧಾಭಾಸ ಎನ್ನಿಸುತ್ತಿಲ್ಲವೇ? ಯೋಚನೆ ಮಾಡು.

ಹಾಗಂತ ಮಠ ಮಾಡಿದ್ದೆಲ್ಲ ಸರಿ ಎನ್ನುವವನು ನಾನಲ್ಲ. ಅದರಲ್ಲೂ ಲೋಪ ದೋಷಗಳಿರುತ್ತವೆ. ಯಾವ ಶಿಕ್ಷಣ ಸಂಸ್ಥೆಯೂ ಪ್ರಾರಂಭವಾದ ಕೂಡಲೇ ಅತ್ಯುತ್ತಮ ಶಿಕ್ಷಣ ಕೇಂದ್ರವಾಗುವುದಿಲ್ಲ. ಅದಕ್ಕೂ ಕೆಲ ಸಮಯ ಬೇಕಾಗುತ್ತದೆ. ಕಾಯುವುದು ಒಳಿತು.

You spoke too soon ಅನ್ನೋದು ನನ್ನ ಅಭಿಪ್ರಾಯ.

ತೇಜಸ್ವಿನಿ ಹೆಗಡೆ said...

ಸುಶ್ರುತ,

ಲೇಖನದ ಓಘ ತುಂಬಾ ಚೆನ್ನಾಗಿದೆ.. ಕೆಲವೊಂದು ಮಾತುಗಳು ತುಂಬಾ ಯೋಚನೆಗೀಡು ಮಾಡುವಂತಿವೆ.. ಆದರೆ ಪುಟ್ಟಿಯ ಪ್ರತಿ ನಿನಗಿರುವ ಅಪಾರ ಕಾಳಜಿಯೋ (ಅದು ಸಹಜ ಕೂಡ) ಇಲ್ಲಾ ಈ ಮಠಗಳ ಪ್ರತಿ ನಿನಗಿರುವ ಬಲವಾದ ಗುಮಾನಿಯೋ ಎನೋ ಒಂದು ಲೇಖನವನ್ನು ಹಲವಾರು ಗೊಂದಲಗಳಿಗೆ ಹಾಗೂ ವಿವಾದಾತ್ಮಕ ವಿಮರ್ಶೆಗಳಿಗೆ ಎಳೆಯುವಂತಿದೆ. ಇವುಗಳನ್ನು ಈ ರೀತಿ ಕೇವಲ ಕಮೆಂಟ್ ಗಳ ಮೂಲಕ ಚರ್ಚಿಸಲಾಗದು.. ಚರ್ಚಿಸಲೂ ಬಾರದು..ಇಂತಹ ಇಬ್ಬಗೆಯ ಗೊಂದಲಗಳಿಗೆ ಕೇವಲ ಕಾಲ ಮತ್ರ ಉತ್ತರಿಸಬಹುದೇನೋ. ಒಂದಂತೂ ಸತ್ಯ ಯಾವುದೂ ನಿಃಸ್ವಾರ್ಥ ಸೇವೆಯಲ್ಲ.. ಈ ಕಾಲದಲ್ಲಿ ಎಲ್ಲವೂ ಸ್ವಾರ್ಥ ಪರವೇ. ಹಾಗಾಗಿ.. ಸಂಪೂರ್ಣ ಸಫಲತೆ ಯಾವ ಕಾರ್ಯದಲ್ಲೂ ಕಾಣಸಿಗದೇನೋ?!

ಕೊನೆಯಲ್ಲಿ:- ಆಶ್ರಮದಲ್ಲಿರುವ ಪುಟ್ಟ, ಪುಟ್ಟಿಯಂತವರೆಲ್ಲಾ ಎಲ್ಲಾ ರಂಗದಲ್ಲೂ ಸಫಲತೆಯ ಕಾಣುವಂತಾಗಲಿ ಎಂದು ಹಾರೈಸುವೆ.

ravihara said...

ತುಂಬಾ ಚೆನ್ನಾಗಿದೆ ಪುಟ್ಟಿಯ ಕವನ... ಮೂಗಿನ ಮೇಲೆ ಬೆರಳಿಡಿಸುವಂತಿದೆ!

Ultrafast laser said...

ಸುಶ್ರುತನ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಇಲ್ಲಿ ಪ್ರಶ್ನೆ- ಸಾಫ್ಟ್ ವೇರ್ ಇಂಜಿನಿಯರ್ ನ ಹೆಂಡತ್ಹಿಯಾಗುವ ಹಾಗೆ ಟ್ರೈನಿಂಗ್ ಕೊಡಬೇಕು ಎನ್ನುವುದಲ್ಲ, ಮೂಲ ಪ್ರಶ್ನೆ ಇರುವುದು- ಸಮಾಜದ ಮುಖ್ಯವಾಹಿನಿ ಇಂದ ಹೊರಗಿಟ್ಟು ಸಮಾಜಮುಖಿಯಲ್ಲದ ಹಾಗೂ ಪ್ರಸ್ತುತ ಬದುಕಿಗೆ ಬಹುತೀಕ ಅಪ್ರಸ್ತುತವಾದ 'ವಿದ್ಯೆ' ಗಳನ್ನು ಕಲಿಸಿದರೆ ಮುಂದೆ ಆ ವಿಧ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಏನು?. ಮುಂದೆ ಆ ಮಠದ ಪ್ರತಿ ವಿಧ್ಯರ್ಥಿಗೂ ರಾಘವೆಶ್ವರರು ಪ್ರತ್ ಪ್ರತ್ಯೀಕ ಮಠ ಕಟ್ಟುತ್ತಾರ?.
ಪಂಜರದಲ್ಲೀ ಹುಟ್ಟಿ ಬೆಳೆದು ಸಾಕಲ್ಪಟ್ಟ ಗಿಣಿ , ಕಾಲಾಂತರದಲ್ಲಿ ಕಾಡಿಗೆ ಬಂದರೆ ಉಳಿದ ಪಕ್ಷಿಗಳೊಂದಿಗೆ ಸ್ಪರ್ದಾತ್ಮಕ ವಾತಾವರಣದಲ್ಲಿ ಹೊಂದಿಕೊಳ್ಳಬಹುದೆ?.
ನಮ್ಮ ಸಂಸ್ಕೃತಿ, ಧರ್ಮ ಹಾಗೂ ಆಚರಣೆಗಳ ಬಗೆಗೆ ಒಲವಿರುವುದು ಬೇರೆ, ಆದರೆ ನಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ ಹೊರ ಪ್ರಪಂಚಕ್ಕೆ ಹೊಂದಿಕೊಳ್ಳುವುದು ಬದುಕಿನ ಅನಿವಾರ್ಯಗಳಲ್ಲಿ ಒಂದು. ಶಾಸ್ತ್ರ ಬರಲಿ ಬಾರದಿರಲಿ, ಮೊದಲು ಈಜು ಗೊತ್ತಿರಬೇಕು.
ಸುಶ್ರುತನ ಒಳನೋಟ ಸತ್ವಯುತವಾಗಿದೆ.

Dr.D.M.Sagar (Original)

ಯಜ್ಞೇಶ್ (yajnesh) said...

ಸುಶ್ರುತ,

ಗುರುಕುಲದ ಪ್ರದಾನ ಆಚಾರ್ಯ ಶ್ರೀ ಜಗದೀಶ ಶರ್ಮಾ ನಿನ್ನೇ ನಿನ್ನ ಲೇಖನದ ಬಗ್ಗೆ ರಾತ್ರಿ ಉತ್ತರಿಸಿದ ಕಮೆಂಟ್ ಯಾಕೆ ಡಿಲೀಟ್ ಮಾಡಿದ್ದು ಯಾಕೆ ಅಂತ ಅರ್ಥವಾಗ್ಲಿಲ್ಲ. ಗುರುಕುಲದ ಬಗ್ಗೆ ಅದರಲ್ಲಿ ಮಾಹಿತಿಯಿತ್ತು. ಇದು ಜನರಿಗೆ ತಪ್ಪು ಮಾಹಿತಿ ಕೊಟ್ಟ ಹಾಗೆ ಅಲ್ಲವೇ. ಡಿಲೀಟ್ ಮಾಡಿದ್ದೇಕೆ ಎಂದು ಕೇಳಬಹುದೇ? ಅದರಲ್ಲಿ ಗುರುಕುಲ ನೀವೆಂದುಕೊಂಡ ಹಾಗಿಲ್ಲ, ನಿಮ್ಮ ಸಲಹೆಗಳಿಗೆ ಸ್ವಾಗತ ಅಂತೆಲ್ಲ ಇತ್ತು. ಅದನ್ನು ನಾನು ನೋಡಿದ್ದೇನೆ.

ಪ್ರತ್ಯಕ್ಷ ನೋಡಿದರೂ ಪ್ರಾಮಾಣಿಸಿ ನೋಡು ಅನ್ನೋ ಗಾದೆ ಎಲ್ಲರಿಗೂ ಪರಿಚಿತ. ಪುಟ್ಟಿ ಬರೆದ ಕವನಗಳನ್ನಾದರಿಸಿ ಗುರುಕುಲವನ್ನು ಓರೆ ಹಚ್ಚೋದು ಎಷ್ಟು ಸರಿ? ಹಿಂದೆ ಇದ್ದ ಗುರುಕುಲಕ್ಕೂ ಈಗ ಇರುವ ಗುರುಕುಲಕ್ಕೂ ಏನು ವ್ಯತ್ಯಾಸವೇನೂ ಎಂದರಿತು ಲೇಖನ ಬರಿಯೋದು ಉತ್ತಮ.

ಹಾಂ, ಗುರುಕುಲದ ವೆಬ್ ಸೈಟ್ ಸದ್ಯದಲ್ಲೆ ಲೋಕಾರ್ಪಣಗೊಳ್ತಾಯಿದೆ.ಅದರಲ್ಲಿ ಗುರುಕುಲ ಎಂದರೇನು, ಗುರುಕುಲದ ಉದ್ದೇಶವೇನು, ಗುರುಕುಲದ ಕಾರ್ಯಕ್ರಮಗಳು, ಕಲಿಕಾ ವಿದಾನಗಳ ಬಗ್ಗೆ ಮಾಹಿತಿಯಿರುತ್ತದೆ.

ನಿಮಗೆ ಗುರುಕುಲದ ಬಗ್ಗೆ ಸಲಹೆಗಳಿದ್ದರೆ ಸ್ವಾಗತ.

ನನ್ನ ಕಮೆಂಟು ಡಿಲೀಟ್ ಆಗೊಲ್ಲವೆಂದುಕೊಂಡಿದ್ದೇನೆ.

ಯಜ್ಞೇಶ್ (yajnesh) said...
This comment has been removed by the author.
ಯಜ್ಞೇಶ್ (yajnesh) said...

ನಿಮ್ಮ ಗಮನಕ್ಕೆ,

"ರಂಗಾ, ನಾನೇನು ಮಾಡಿದೆ?
ನನ್ನನ್ನು ಏಕೆ ಭುವಿಗೆ ತಂದೆ?
ಈಗ ನೀನು ನನಗೆ ಕಾಣದಾದೆ
ಆದಷ್ಟು ಬೇಗ ನೀನು ದೊರಕಬಾರದೆ?"

ಇಲ್ಲಿ ರಂಗ ಎಂದರೇ, ಯಾವುದೋ ಹುಡುಗನ ಬಗ್ಗೆ ಬರೆದಿದ್ದಲ್ಲ. ಅಷ್ಟಾಂಗಯೋಗ ದಲ್ಲಿ ಪರಿಣಿತಿಯನ್ನು ಪಡೆದ ಶ್ರೀರಂಗ ಮಹಾಗುರುಗಳು. ವರ್ಷಾ, ಯಾವುದೋ ಹುಡುಗನ ಬಗ್ಗೆ ಬರಿತಾಯಿದಾಳೆ ಅಂತ ತಿಳಿದುಕೊಳ್ಳಬೇಡಿ.

venu said...

Shri sushruta dodderi yavaru dayavittu kelagina vishayagalannu gamanisi.

1. Gurukuladalli iruva 140 makkaligagi iruva computers - 9
2. Library - 20000 books worth 15 lakhs
3. Home Theotre - to watch all type of good movies (with LCD projector with 20*20 screen)
4. Tumba susajjitavada 'science lab'
5. Nruthya, sangeeta (sugama, karnataki, hindustani), kolalu, mrudanga, yakshagana, chitrakale, gamaka, harikata vyakyana, shilpa - ivastu vidye gala kalike (interest iddorige maatra)
6. english, hindi, kannada, sanskrit bhashegala kalike
7.Aakashakaayagala veekshanegagi 'binoculars
8.prati 15 dinakkomme makkale nataka baredu, nirdeshisi, vastravinyasa sangeeta needi pradarshisuttare
9. Makkala sampadakatwadalli 'pratibhaloka' yemba paakshika
10. 15 dinakkomme 'kavinamana' yemba vishishta vada yella bhasheya kavigala parichaya karyakrama
11. karnataka dalli prasaara golluva yella patrike gurukulada library yelli sabhya
12. dinakke 6 newspapers
Mr. Sushruta dayavittu ulida shaalegalige compare maadi nodi....

idiste alla, prati tingalige omme ISRO Scientists galu bandu makkalige scientific vishayagala bagge mahiti needuttare

e varsha 9 ne taragati oduttiruva makkalige 10 ne class na patagalu almost mugita bandide yante!!!

Mr. Sushruta ivistu mahiti galu nannaliruvavu..... aste

Dayavittu mahiti illade kevala nimagondu lekhana baroyo uddeshadinda yeneno baredare hege???

Unknown said...

ವೇಣು ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರ.

ಸುಶ್ರುತ,

ಬಹುಶಃ ನಿನಗೆ ಗುರುಕುಲದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅನ್ಸತ್ತೆ. ಮಾಹಿತಿಯಿಲ್ಲ ಅಂದ್ರೆ ಅದಕ್ಕೆ ಸಂಬಂದಪಟ್ಟ ವ್ಯಕ್ತಿಗಳ ಹತ್ತಿರ ವಿಚಾರ ಮಾಡಿ, ವಿಮರ್ಶಿಸಿ ಬರೆದರೆ ಒಳ್ಳೇದು. ಅನಗತ್ಯ ಅಪಪ್ರಚಾರ ಮಾಡೋದು ತರವಲ್ಲ.

ಹಿಂದಿನ ಕಾಲದ ಜನರ ಆಯಸ್ಸು ಈಗಿನ ಕಾಲದವರಿಗಿಂತ ಬಹಳ ಜಾಸ್ತಿಯಿತ್ತು. ಯಾಕೆ ಗೊತ್ತಾ? ಅದು ಅವರ ಆಹಾರ ಮತ್ತು ಕೆಲಸದಿಂದ. ಸರಿಯಾದ ಸಮಯಕ್ಕೆ ಆಹಾರ ತಗೋತ್ತಾತಿದ್ರು. ಹೊರಗಡೆ ಸಿಕ್ಕ ಜಂಕ್ ಫುಡ್ ಮತ್ತು ಹೋಟೆಲ್ ಗಳಲ್ಲಿ ತಿನ್ತಾಯಿರಲಿಲ್ಲ. ನಾವು ದಿನನಿತ್ಯ ಹೊರಗಡೆ ತಿನ್ನೋದು. ತಿನ್ನೋಕಿಂತ ಮುಂಚೆ ಒಮ್ಮೆ ಹೋಟೆಲ್ ನ ಒಳಗೆ ಹೋಗಿ ನೋಡಿದ್ರೆ ನಮಗೆ ಗೊತ್ತಾಗತ್ತೆ ನಾವು ಎಷ್ಟು ಪೌಷ್ಟಿಕ ಆಹಾರ ತಗೋತಾಯಿದ್ದೀವಿ ಅಂತ.

ಗೆಳೆಯ, ನಮ್ಮ ಆಹಾರಕ್ಕೂ ಮತ್ತು ಯೋಚನೆಗೂ ಬಹಳ ಸಂಬಂದವಿದೆ. ರಾಜಸ, ತಾಮಸ ಆಹಾರಗಳು ಯಾವುದು, ಯಾವ ಸಮಯದಲ್ಲಿ ಯಾವುದನ್ನು ತೆಗೆದುಕೊಂಡರೆ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ಏನು ವ್ಯತ್ಯಾಸವಾಗತ್ತೆ ಅಂತ ತಿಳಿದುಕೊಂಡರೆ ಒಳ್ಳೇದು. ಗುರುಕುಲದಲ್ಲಿ ಅದರ ಬಗ್ಗೆ ಮಾಹಿತಿಯನ್ನೂ ಕೊಡ್ತಾರೆ. ಅದಕ್ಕೆ ಪುಟ್ಟಿ ವರ್ಷ ಹಾಗೆ ಹೇಳಿದ್ದು. ಅದು ಕೆಲವರಿಗೆ ಅಪಥ್ಯವಾಗಿರಬಹುದು.

ನಮಗೆ ಮೊದಲು ಜೀವನ ಅಂದ್ರೆ ಎನೂ ಅಂತ ಗೊತ್ತಿರಬೇಕು. ಜೀವನದ ಗುರಿಯೇನು, ಒತ್ತಡವನ್ನು ಹೇಗೆ ನಿಭಾಯಿಸಬೇಕು, ಜೀವನದಲ್ಲಿ ಯಾವುದು ಮುಖ್ಯ, ಆದ್ಯಾತ್ಮವೇಕೆ ಬೇಕು. ಅದನ್ನೂ ಸಹ ಗುರುಕುಲದಲ್ಲಿ ಹೇಳಿ ಕೊಡ್ತಾರೆ. ಯಾವ ಶಾಲೆಯಲ್ಲಿ ಅದನ್ನು ಹೇಳಿಕೊಡ್ತಾರೆ ಹೇಳು?

ಸುಮ್ಮ ಸುಮ್ಮನೆ ಮನಸ್ಸಿಗನಿಸಿದ್ದನ್ನು ಬರೀಬೇಡ. ಇದು ನಿನ್ನ ಸ್ವಂತ ಬ್ಲಾಗ್ ಆಗಿದ್ದರೂ ಇದನ್ನ ಎಲ್ಲರೂ ಒದ್ತಾರೆ. ನಿನ್ನ ಲೇಖನ ಓದಿದ ಯಾರೋ ಪುಟಗೋಸಿಗಳು ತಮಗನಿಸಿದ ಹುಚ್ಚು ಹುಚ್ಚು ಅನಿಸಿಕೆಗಳನ್ನು ಇಲ್ಲಿ ಹಾಕಿರೋದು ಗೊತ್ತಾಗತ್ತೆ. ಗುರುಕುಲದಲ್ಲಿ ನೀನು ಸನ್ಯಾಸಿ ಆಗು ಅಂತ ಯಾರು ಹೇಳಿದ್ದಾರೆ? ಗುರುಕುಲದಲ್ಲಿ ಜೀವನಕ್ಕೆ ಸಂಬಂದಪಟ್ಟ ವಿಷಯಗಳಿಗೆ ಪ್ರಾಮುಖ್ಯತೆ ಹೆಚ್ಚು. ಈಗಿನ ಕಾಲದ ಶಾಲೆಗಳು ವ್ಯಾಪರೀಕರಣವಾಗ್ತಾಯಿದೆ. ನಮ್ಮ ಪುರಾತನ ಸಂಸ್ಕೃತಿಯನ್ನು ನೆನಪು ಮಾಡಿಕೊಡೋ ಶಾಲೆಗಳು ಬಹಳ ಕಡಿಮೆ. ನಮ್ಮ ಸಂಸ್ಕೃತಿ ಯಾಕೆ ಬೇಕು ಅನ್ನೋರಿಗೆ ಇಂತಹ ಶಾಲೆಗಳ ಅವಶ್ಯಕತೆಯಿರೋದಿಲ್ಲ.

ಸುಮ್ಮನೆ ಶಾಲೆಗೆ ಹೋಗಿ ಕಲಿತು, ಗೊತ್ತು ಗುರಿಯಿಲ್ಲದ ಜೀವನ ಸಾಗ್ಸೋದಕ್ಕಿಂತ, ಮೊದಲು ಜೀವನ ಎಂದರೇನು ಅಂತ ತಿಳ್ಕೊಳ್ಳೋದು ಒಳ್ಳೇದು.

ಗುರುಕುಲದ ಎಷ್ಟೋ ಜನ ವಿದ್ಯಾರ್ಥಿಗಳು ಇಂಟರ್ ನೆಟ್ ಉಪಯೋಗಿಸ್ತಾರೆ ಗೊತ್ತಾ????
ಅದರಲ್ಲಿ ಕೆಲವರು ಆರ್ಕುಟ್ ಸಹ ಉಪಯೋಗಿಸ್ತಾರೆ. ಅದಾದರು ನಿನಗೆ ಗೊತ್ತಾ?

ಬಹುಶಃ ನಿನಗೆ ಅವರು ಬರೆದ ಕವನ ಅರ್ಥ ಮಾಡ್ಕೊಳ್ಳೋಕೆ ಆಗ್ತಾಯಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಒಂದು ಪತ್ರಿಕೆ ನಡೆಸ್ತಾರೆ ಅಂದ್ರೆ ಎಷ್ಟು ಹೆಮ್ಮೆ ಅಲ್ವಾ???

Unknown said...

ವೇಣು, ಗುರುಕುಲದಲ್ಲಿ ಅಷ್ಟು ವಿಷಯಗಳ ಬಗ್ಗೆ ಮಾಹಿತಿ ನೀಡ್ತಾರಾ???

ಅಬ್ಬಾ. ತುಂಬಾ ಒಳ್ಳೇ ಕೆಲಸವಾಗ್ತಾಯಿದೆ. ಬಹುಶಃ ಇಲ್ಲಿ ಬರೆದ ಕೆಲವರನ್ನು ಅಲ್ಲಿ ಸೇರಿಸಿದರೆ ಒಳ್ಳೇದು ಅನ್ಸತ್ತೆ. ಜೀವನ ಅಂದ್ರೆ ಎನೂ ಅಂತ ಅವರಿಗೂ ತಿಳಿಯತ್ತೆ. ಇದು ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿದ್ದಲ್ಲ. ಕುಂಬಳಕಾಯಿ ಕಳ್ಳ.... ಅಂತ ತಿಳ್ಕೊಂಡ್ರೆ ನಂದೇನು ಅಭ್ಯಂತರವಿಲ್ಲ. ಹ್ಹಿ ಹ್ಹಿ ಹ್ಹಿ.

ಈಗ ಯಾವ ಶಾಲೆಯಲ್ಲಿ ಇಷ್ಟು ವಿಷಯ ಹೇಳಿ ಕೊಡ್ತಾರೆ ಅಂತ ಸುಶ್ರುತರವರೇ ಸ್ವಲ್ಪ ಹೇಳ್ತಿರಾ? ಸುಮನ್ನೇ ಲೇಖನ ಬರಿಯೋದಲ್ಲ. ನೀವು ಬರೆದಿದ್ದನ್ನ ಸಮರ್ಥಿಸಿ. ಇಲ್ಲದಿದ್ದರೆ ಕ್ಷಮೆಯಾಚಿಸಿ.

ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಹೇಳೋದಕ್ಕಿಂತ ಮುಂಚೆ ನಾವೇನು ಸಮಾಜಕ್ಕೆ ಮಾಡ್ತಾಯಿದ್ದೀವಿ ಅನ್ನೋದು ಮುಖ್ಯ.

ಸುಪ್ತದೀಪ್ತಿ suptadeepti said...

ಸುಶ್, ನೀನು ನೋಡಿ ಬಂದದ್ದನ್ನು, ನಿಮ್ಮ ಪುಟ್ಟಿಯ ಜೊತೆ ಮಾತಾಡಿದ್ದನ್ನು ನಾವೆಲ್ಲ ನೋಡದೆ, ಕೇಳದೆ... ಬರೀ ನಿನ್ನ ಬರಹದ ಆಧಾರದ ಮೇಲೆ ನಮ್ಮ ಅಭಿರ್ಪಾಯ ಬರೆದರೆ ಅದೂ ಕೂಡಾ one-way and biased view ಆಗತ್ತೆ. ನೀನು ಬರೆದ ಲೇಖನ, ಒಬ್ಬ ಕಸಿನ್ ಮತ್ತು ಒಬ್ಬ ಲೇಖಕನಾಗಿ ಬರೆದದ್ದು. ಅದನ್ನು ಪ್ರಶ್ನಿಸುವ ಕೆಲ್ಸ ಮಾಡಲ್ಲ.

ನಿನ್ನ ಗೊಂದಲ ನನಗೆ ಅರ್ಥವಾಗತ್ತೆ. ಟೂ-ಮಚ್... ಎಲ್ಲ ಕಡೆ ಅದೇ ಕಾಣುತ್ತಿರುವುದು ಸುಳ್ಳಲ್ಲ.

Unknown said...

ಒರಿಜಿನಲ್ ಡಾ.ಡಿ.ಎಮ್. ಸಾಗರ್ ಅವರೇ,

ತಮಗೆ ಎನಾದ್ರು ಗುರುಕುಲದ ಬಗ್ಗೆ ಮಾಹಿತಿಯಿದೆಯಾ??

"ಮುಂದೆ ಆ ಮಠದ ಪ್ರತಿ ವಿಧ್ಯರ್ಥಿಗೂ ರಾಘವೆಶ್ವರರು ಪ್ರತ್ ಪ್ರತ್ಯೀಕ ಮಠ ಕಟ್ಟುತ್ತಾರ?" ನಿಮಗೆ ಯಾರು ಗುರುಕುಲದಲ್ಲಿ ಸನ್ಯಾಸಕ್ಕೆ ಒತ್ತುಕೊಡ್ತಾರೆ ಅಂತ ಹೇಳಿದ್ರು. ಬರಿಯೋಕೆ ಬರತ್ತೆ ಅಂತ ಬರಿಯೋದಲ್ಲ ಸ್ವಾಮಿ. ಏನು ಅಂತ ತಿಳ್ಕೊಳ್ಳಬೇಕು. ಆಮೇಲೆ ಬರೀಬೇಕು.

ಇಪ್ಪತ್ತು ಸಾವಿರ ಪುಸ್ತಕ ಬಂಡಾರ,ಆಸಕ್ತಿಯಿರೋರಿಗೆ ಸಂಗೀತ, ನೃತ್ಯ, ಕೊಳಲು, ಮೃದಂಗ, ಯಕ್ಷಗಾನ, ಚಿತ್ರಕಲೆ, ಗಮಕ, ಹರಿಕಥ ವಾಖ್ಯಾನ, ಶಿಲ್ಪಕಲೆ, ಇಂಗ್ಲೀಷ್ , ಕನ್ನಡ, ಹಿಂದಿ, ನಾಟಕ ರಚನೆ, ನಿರ್ದೇಶನ, ಕವಿನಮನ, ಸಾಹಿತ್ಯ ಪರಿಚಯ, ಸಂಸ್ಕೃತಿ ಪರಿಚಯ, ಹೋಮ್ ಥಿಯೇಟರ್ , ದಿನಕ್ಕೆ ಆರು ಪತ್ರಿಕೆ ಓದೋ ಸೌಲಭ್ಯ, ಧ್ಯಾನ, ಎಲ್ಲ ಎಲ್ಲಿ ಹೇಳಿಕೊಡ್ತಾರೆ ಸ್ವಾಮಿ. ಸ್ವಲ್ಪ ಹೇಳ್ತೀರಾ? ದೂರದಲ್ಲೇಲ್ಲೋ ಕುಳಿತು ಮಠದ ಬಗ್ಗೆ ಕಲ್ಪನೆ ಮಾಡಿಕೊಂಡು ಬರಿತೀರಲ್ಲ..

ಹೆತ್ತ ತಂದೆ ತಾಯಿಗಳು ಹುಚ್ಚರಾ? ತಮ್ಮ ಮಕ್ಕಳ ಬಗ್ಗೆ ಅವರಿಗೆ ಕಾಳಜಿ ಇರೋಲ್ವಾ? ಇಲ್ಲಿ ಬರಿಯೋರಿಗಿಂತ ಜಾಸ್ತಿ ಅವರಿಗೆ ಕಾಳಜಿ ಇರತ್ತೆ ಸ್ವಾಮಿ.

ಇಷ್ಟರ ಒಳಗೆ ಗುರುಕುಲದಲ್ಲಿ ಓದಿದ ಯಾವ ಹುಡುಗಿ/ಹುಡುಗ ಸನ್ಯಾಸಿಯಾದ್ರು ಅಂತ ಹೇಳ್ತೀರಾ? ಸುಶ್ರುತ ಅವರೇ, ನೀವು ಹೇಳಿ.

Manu said...

ಅಯ್ಯೋ, ನಿ೦ಗಕ್ಕೆಲ್ಲ ತಲೆ ಸಮ ಇದ್ದ೦ಗೆ ಕಾಣ್ತಿಲ್ಲೆ. ಇವ ದೊಡ್ಡೇರಿ ಮಳ್ಳು ಬರದ್ನ ನಿ೦ಗ ಇಷ್ಟೆಲ್ಲಾ ಕಾಮೆ೦ಟ್ ಮಾಡ್ತ್ರಲ.

"ಹ೦ದಿ ಜೊತೆಗೆ ಕೆಸ್ರಲ್ಲಿ ಕುಸ್ತಿ ಮಾಡಿದ್ರೆ ಮಜ ಸಿಗದು ಹ೦ದಿಗೇ" ಅಲ್ದ?

ಇತಿ, ದೊಡ್ಡೇರಿ ಪಾರಾಯಣ೦ ಸಮಾಪ್ತಿಃ

Pavitra Joshi said...

Hello Idenidru sumne hottogadde iddavke sari as per my knowlege evry parents are free to know the Climate of " GURUKULA " before admitting their child there so i think Being a 'HAVYAKA' we must proud about our own school which is educating our children in a cultural way so Plz...... ignore the comments of guy's who think's themselves they are great writers

Sushrutha Dodderi said...

@ ಯಜ್ಞೇಶಣ್ಣ

ನೀನು ಹೇಳಿದ ಹಾಗೆ ಜಗದೀಶ ಶರ್ಮರು ಮಾಡಿದ್ದಾರೆ ಎಂದ ಕಮೆಂಟನ್ನ ನಾನು delete ಮಾಡಿಲ್ಲ. ನಿನ್ನೆ ಸಂಜೆ ಐದು ಗಂಟೆಗೆ ಕಂಪ್ಯೂಟರ್ ಮುಂದಿನಿಂದ ಎದ್ದ ನಾನು ಮತ್ತೆ ಕೂರ್ತಿರೋದು ಈಗಲೇ (12.30 PM). ನೋಡಿದರೆ ಇಲ್ಲಿ ಏನೇನೋ ಆಗಿಹೋಗಿದೆ! ಗುರುಕುಲದ ಪ್ರಧಾನ ಆಚಾರ್ಯರೇ ನನ್ನ ಲೇಖನ ಓದಿ ಆಸ್ಥೆ ವಹಿಸಿ ಪ್ರತಿಕ್ರಿಯಿಸ್ತಾರೆ ಅಂದ್ರೆ ಅದಕ್ಕಿಂತ ಸಂತೋಷದ ವಿಷಯ ಮತ್ತೇನಿದೆ? ನಾನ್ಯಾಕೆ ಡಿಲೀಟ್ ಮಾಡ್ಲಿ?

Anonymous said...

ಸುಶ್ರುತರೇ,
ಸ್ವಲ್ಪ ತಾಳಿ.ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ.
ಇಶ್ಟು ಹೊತ್ತು ಜಗಳವಾಡಿ ಕೂ೦ಡಿರಲ್ಲ? ಆ ಗುರುಕುಲ ನಿಮ್ಮ ಕನಸಿನಲ್ಲಿ ಬ೦ದದ್ದೋ?ಅಥವಾ ಕಲ್ಪನೆಯೋ?
ನನಗೇಕೆ ಈ ಪ್ರಶ್ನೆ ಬ೦ತೆ೦ದರೆ ನಾನೂ ಒಬ್ಬ ಆ ಗುರುಕುಲದ ವಿದ್ಯಾರ್ಥಿ.ನಿಮ್ಮ ಲೇಖನ ಒದಿದ ಕೂಡಲೇ 'ಕುರುಡರು ಆನೆಯನ್ನು ವರ್ಣಿಸಿದ ಕಥೆ ನೆನಪಾಯ್ಥುe' ಕಣ್ರಿ.
ಸರಿ, ವಿಶಯಕ್ಕೆ ಬರೊಣ.
ನಾನು ವರ್ಶಾಳ೦ತೆ ನೀವು ಹೇಳಿದ ಆಧುನಿಕ ಶಿಕ್ಶಣವನ್ನು ಪಡೆಯಲು ಬ೦ದವನಲ್ಲ.ನಾನೊಬ್ಬ 'ವೇದ' ವಿದ್ಯಾರ್ಥಿ. ವರ್ಶ ಗುರುಕುಲದಲ್ಲಿ ಇರ್ತಾ ಕೇವಲ ೪ವರ್ಶವಾಯ್ತು.ನಾನು ಇರ್ತಾ ೮ ವರ್ಶಗಳು ಕಳೆದಿವೆ.
ಈಗ ಹೇಳಿ ಸುಶ್ರುತರೇ,ನಿಮ್ಮ ಕಲ್ಪನೆಯಲ್ಲಿ ನಾನು ಎನಾಗಬೇಕಿತ್ತು;ಸ೦? ಅಥವಾ ಆಧುನಿಕತೆ ಎ೦ದರೇನೆ೦ದು ಗೊತ್ತಿಲ್ಲದ ದಡ್ಡಶಿಖಾಮಣಿನಾ?
ಇಲ್ಲ ಕಣ್ರಿ,ಹಾಗೇನೂ ಆಗಿಲ್ಲ.
ನಾನು ಸಹ ಗುರುಕುಲದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸ್ತೀನಿ!!!!!!!!
ನನಗೆ ಆಧುನಿಕತೆಯ ಜೊತೆ ಬೆರೆಯಲು ಬರುತ್ತೆ.ಹಾ, ಇದನ್ನು ಕಲಿತದ್ದು ಗುರುಕುಲದಲ್ಲಿ!!!
ಈ ಕಾಮೆ೦ಟ್ ಬರೆದದ್ದು ನಾನೇ. ಇದು ನನ್ನದೆ ಮೈಲ್ ಐಡಿಯಿ೦ದ ಕಳಿಸ್ತಿರೋದು.ನನ್ನದೊ೦ದು ಆರ್ಕೂಟ್ ಸಹ ಇದೆ.
ಇದನ್ನೆಲ್ಲ ನನಗೆ ಕಲಿಸಿರುವುದು ,ನಿಮ್ಮ ಬಾಯ್ಚಟ ತೀರಿಸಿಕೊಳ್ಳಲು ವಿಶಯ ವಾಗಿರುವ ಅದೇ ಗುರುಕುಲ.
ಈಗ ಹೇಳಿ,ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇ೦ಟರ್ನೆಟ್ ಬಗ್ಗೆ ಎಶ್ಟು ಗೊತ್ತು?
ನಾನು ಗುರುಕುಲದಲ್ಲಿದ್ದು, ಗುರುಕುಲದಿ೦ದ ಆಧುನಿಕತೆಯ ಬಗ್ಗೆ ಸಾಕಶ್ಟು ತಿಳಿದಿದೆ.ಮೂರ್ತಿವೆತ್ತ ಆಧುನಿಕರ ಪರಿಚಯವೂ ಉ೦ಟು.ಆದರೆ ,ಅವರ ಜೊತೆ ಇರುವಾಗ ಸ್ವಲ್ಪವೂ ತೊ೦ದರೆಯಾಗಿಲ್ಲ.ಅ೦ದರೆ,ನಮಗೆ ನಿಮ್ಮ ಜೊತೆ ಹೊ೦ದಿಕೊಳ್ಳಲು ಸಾಧ್ಯವಿದೆ ಎ೦ದಾಯಿತು.ಹಾಗಾದರೆ,
ನಿಮಗೆ ನಮ್ಮ ಜೊತೆ ಹೊ೦ದಿಕೊಳ್ಳಲು ಸಾಧ್ಯವೇ???ಸ್ವಲ್ಪ ಯೋಚಿಸಿ.

ಇನ್ನೂ ಇದೆ, ಮುಗಿದಿಲ್ಲ. ಮುಗಿಯುವುದೂ ಇಲ್ಲ;ನೀವು ಸರಿಯಾಗುವವರೆಗೆ.
ಇನ್ನೊಮ್ಮೆ ಮತನಾಡೋಣಾ.

ಇದನ್ನು ಅಳಿಸುವುದನ್ನು ಮರೆಯಬೇಡಿ; ಏಕೆ೦ದರೆ ನಿಜ ವಿಶಯ ಹರಾಜಾದೀತು.

My3 Hegde. said...

Hello All, and Special hello to Sushruth Dodderi,

Hmm.... Gurukulada maahiti baryakidre complete nimge gottirle anistu aldaa :) Hogli bidi...

yaavde vishyada bagge comment maadodu bhaaree sulabha, idu nankinta obba kathegaararaada nime hechchu gottiddikku... Nodi Dodderi yavre, neeve mention maadiddi, nimma atte maglu estella olle kavan abaradda anta.. idu ondu positive aagi nimagyaake kaantille? baree sakala soulabhya kotta namma convent school galalli idanna nodake saadhyana?

adoo alde naanu nanna swantha anubhavadalli helodaadre alliro makkalu enannoo miss maadkata ille.. badalaagi namkinta jaasti vicharana, namkinta kadme age lle kalitidda... alliro makkala hospitality, avra nadate neevu nodidraa?

namma school galalli koodu balve itta? classmate ge jade haako drushya nodtidraa?? kandita ille..

nanna abhipraayadalli, mata da gurukula namma samskruti ya nelegattina jotege aadhunikateyannoo parichayisuva olle shaale...

alli avyavaste anta mention maadidrala, adella howdaaa :)....

Arun Shouri helo prakaara, yaavde 1 sookshma vicharada bagge ( as i believe this is sookshma vichara) ene comment mododaadroo (either it may be good or wrong) naavu aa janara, sthalada jote atleast 1 varshada varegooo continous relationship itkandiraku... nange gottille neevu itkaindra ilya anta.. aadre suppose neevu contimuous relationship iddoo hinge baraddi andre aashcharyaaa aagtu.. ille andre... Its Fine!!

Manu said...

ಸು ಸು ಸು ಸು ಸುಶ್ರುತ ಅವರೆ, ಯಜ್ನೇಶ ಇಲ್ಲಿ ಆಸ್ತೆ ವಹಿಸ್ಕೊ೦ಡಿರೋದು ನಿಮ್ಮ ಬಗ್ಗೆನೇ ಹೊರತು ನಿಮ್ಮ ಲೇಖನ ಅಥವಾ ವಿಚಾರದ ಬಗ್ಗೆ ಅಲ್ಲ ಎ೦ಬುದು ಸರ್ವರ ಆ೦ಬೋಣ. ಏನ೦ತೀರಿ?
ಅದೇನೋ ಹೇಳ್ತಾರಲ್ಲ, "ಆಪತ್ಕಾಲೇ ನಾಸ್ತಿ ಮರ್ಯಾದಾ" ಅ೦ತ. ಹಾಗೆ.

Manu said...

ಮನ್ನಿಸಿ ವಾಚಕರೆ, ನನ್ನ ಕೊನೆಯ ಕಾಮೆ೦ಟಿನಲ್ಲಿ ಸ್ವಲ್ಪ ಪ್ರಮಾದವಾದ್ದರಿ೦ದ ಮತ್ತೊಮ್ಮೆ ನಿಮಗಾಗಿ ಇದನ್ನ ಪ್ರಸ್ತುತಪಡಿಸುತ್ತಿದ್ದೇನೆ. ತಕೊಳ್ಳಿ.

ಸು ಸು ಸು ಸು ಸುಶ್ರುತ ಅವರೆ, ಜಗದೀಶ ಶರ್ಮರು ಇಲ್ಲಿ ಆಸ್ತೆ ವಹಿಸ್ಕೊ೦ಡಿರೋದು ನಿಮ್ಮ ಬಗ್ಗೆನೇ ಹೊರತು ನಿಮ್ಮ ಲೇಖನ ಅಥವಾ ವಿಚಾರದ ಬಗ್ಗೆ ಅಲ್ಲ ಎ೦ಬುದು ಸರ್ವರ ಆ೦ಬೋಣ. ಏನ೦ತೀರಿ?
ಅದೇನೋ ಹೇಳ್ತಾರಲ್ಲ, "ಆಪತ್ಕಾಲೇ ನಾಸ್ತಿ ಮರ್ಯಾದಾ" ಅ೦ತ. ಹಾಗಾಯ್ತು ನಿಮ್ ಕಥೆ.

Adharam Madhuram..... said...

Hi Sushrut

The title of Original Post Should be

"VARSHA BAREDA KAVANA MATTU NANAGE HOGADA HOTTU"

Ganesha Lingadahalli said...

ಸುಶ್,
ಆನೂ ಇದ್ರ ಬಗ್ಗೆ ಒಂದ್ ಸಾರಿ ಗಲಾಟಿ ಮಾಡಿದ್ದಿ, ಮಠದ ಅಂಗ್ಳದಾಗೇ!!
ಆದ್ರೆ ಯಂತ ಮಾಡದು,.... "ಬಿನ್ನಹಕೆ ಬಾಯಿಲ್ಲವಯ್ಯಾ"....

Unknown said...

ರಂಜನಾ ಹೆಗ್ಡೆಯವರೆ,
ನಾನು ನಿಮ್ಮ "ಮಕ್ಕಳನ್ನ ಮನೆಯಲ್ಲಿಟ್ಟುಕೊಂಡು ಅಪ್ಪ ಅಮ್ಮನ ಪ್ರೀತಿಯಲ್ಲಿಯೇ ಬೆಳೆಸಬೇಕು. ಆಗಲೇ ಮಕ್ಕಳ್ಳು ಉತ್ತಮ ಪ್ರಜೆ ಆಗುತ್ತಾರೆ." ಮಾತನ್ನ ಸುತರಾಂ ಒಪ್ಪದಿಲ್ಲೆ. ಆನು 6ನೇ ತರಗತಿ (ಅಂದ್ರೆ ಹೆಚ್ಚುಕಡ್ಮೆ 11ನೆ ವರ್ಷದಿಂದ) ಒಂದು ವಸತಿ ಶಾಲೆಯಲ್ಲಿ ಬೆಳದ್ದಿ. ನಾನು ಒಬ್ಬ ಉತ್ತಮ ಪ್ರಜೆಯಲ್ಲ ಅಂತ ನನಗಂತು ಅನಿಸೊದಿಲ್ಲೆ, ಹಾಗಂತ ನನ್ನ ತರಹನೆ ಭಾರತಾದ್ಯಂತ ಇರೊ 500+ ನವೋದಯ ಶಾಲೆಯಲ್ಲಿ ಒದಿದವರು (ಪ್ರತಿವರ್ಷ ಸುಮಾರು 40000 ಮಕ್ಕಳು) ಕೂಡಾ ಒಳ್ಳೆಯ ಪ್ರಜೆಗಳೆ ಆಗಿದಾರೆ ಅಂತ ನನ್ನ ಬಾವನೆ.

ಶುಶ್ರುತ ಅವರಿಗೆ,
ಯಾವುದೆ ಒಂದು ಕನಸು ಪ್ರಾರಂಬದಲ್ಲೆ ಉತ್ತಮ ಸ್ಥಿತಿಗೆ ಬರುತ್ತದೆ ಅನ್ನಿಸುವುದಿಲ್ಲ, ಅದಕ್ಕೆ ಒಂದು ಅಡಿಪಾಯ ಬೇಕು. so, few people thought of becoming early bricks in the dream building. I do understand that there may be issues, but we should help to solve those and build a better institution.

I keep debating with my friends who are in field of teaching, with my teachers who taught me, with people who manage schools. Every school has problems. Here is a example of a highend school in B'lore (one of my friend told the experience in such school, where a kid pays 50k per month). In that school teachers are not supposed to rectify students if they make mistakes, even if they misbehave, etc etc. A teacher should just teach his/her subject and come out of class. nothing extra. (ofcourse this poor teacher won't be having any respect from the kids, and also from management). I prefer people learning ಸಂಸೃತಿ is better than people learning technology. (rather given the fact (according what our Venu ji told), students at mata are getting better education).

Unknown said...

to all,
to blindly blaming shushrutha in this case is not good too, we don't gain anything from fighting here, rather, I liked the fact that by this thread we got a insight from Venu ji about whats happening at maTa.
Any idea to get a proper shape, we need more criticism and more thought about it from all the angles. I feel the doubts Shushruta had are valid in some sense (given the fact he didn't, rather many of us here) didn't knew whats happening back at the maTa. Yes, its arguable that he could have clarified with many who knew about it before writing, but i think thats what he is, he prefers penning down his thoughts. Now think about it this way, there are not just few, but lot more people who don't understand the effort of maTa to keep the culture intact in us. If we keep blaming each other, we won't stop any day, rather I think just tell them whats happening and thats it. If they like it fine, if they don't, they will never, no point in arguing.

These are my thoughts.

ಶ್ರೀಹರ್ಷ ನಡಹಳ್ಳಿ said...

ನಂಗೆ ಅರ್ಥ ಆಗ್ದೇ ಇರೋದು ಅಂದ್ರೆ, ಬ್ಲಾಗ್ ಚೆನ್ನಾಗಿಲ್ಲೆ ಅಂತ ಎಲ್ಲ ಕಾಮೆಂಟ್ ಮಾಡಿದ್ವ ಅಥ್ವಾ ಮಠ ದ ವಿಷಯ ಬರ್ದಿದ್ದಕ್ಕೆ ಕಾಮೆಂಟ್ ಮಾಡಿದ್ವ??

ಈಗೀಗ ಸುಮಾರು ಕಡೆ ಈ ಥರ ಆಗ್ತಾ ಇದ್ದು. ನಂಗೂ ಈ ಅನುಭವ ಆಯ್ದು. ಮಠದ ಬಗ್ಗೆ (ವಿರುದ್ದವಾಗಿ) ನಮಗೆ ಅನ್ಸಿದ್ದನ್ನು ಹೇಳಿದ್ರೂ ಅದನ್ನ ವಿರೋಧಿಸೋ ರೀತಿ ನೋಡಿದ್ರೆ ನಮ್ಮನ್ನ ಹೆದ್ರುಸ್ತಾ ಇದ್ದ ಹಂಗೆ ಅನ್ನಿಸ್ತು. ಒಂದಿಬ್ರನ್ನ ಬಿಟ್ರೆ (ಅವ್ರಿಗೇ ಗೊತ್ತಾಗ್ತು ಅಂತ ನಾ ತಿಳ್ಕೈಂದಿ!!) ಸುಶ್ರುತನ ಬ್ಲಾಗ್ ಸರಿ ಇಲ್ಲೆ ಅಂತ ಬರ್ದವ್ರೆಲ್ಲ ಅವನ್ನ "ಬುಲ್ಲಿಯಿಂಗ್" ಮಾಡ್ತಾ ಇದ್ದ ಅನ್ಸ್ತು. ಮಠದ ವಿರುದ್ದ ಮಾತಾಡಿದವ್ರ ಬಾಯನ್ನ ಹೀಗೆ ಮುಚ್ಚಿಸೊ ಪ್ರಯತ್ನ ಇದು ಅಂತ ನಂಗೆ ಅನ್ನಿಸ್ತು.
ಮಠದ ವಿರುದ್ದವಾಗಿ ಯಾರೂ ತಮ್ಮ "ಅಭಿಪ್ರಾಯ" ಕೂಡಾ ವ್ಯಕ್ತಪಡಿಸಹಂಗಿಲ್ಲ್ಯಾ? ನಂಗೆ ಮಠದ ವಿರುದ್ದವಾಗಿ ಯಾವುದೇ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಇಲ್ಲೆ. (ಪರವಾಗೂ ಕೂಡ!!) ಮಠ ಒಳ್ಳೆ ಕೆಲ್ಸ ಮಾಡಿದ್ರೆ ಹೊಗಳಕ್ಕೆ ನನಗೆ ಯಾವುದೇ ಮುಜುಗರನೂ ಇಲ್ಲೆ. ಹಾಗೇ, ಮಠದ ಯಾವುದೇ ಕೆಲಸ ಸರಿ ಇಲ್ಲೆ ಅಂತ "ನಂಗೆ" ಅನ್ನಿಸಿದರೆ, ಆ ಅಭಿಪ್ರಾಯ ವ್ಯಕ್ತಪಡಿಸೊ ಹಕ್ಕೂ ಕೂಡ ನಂಗೆ ಇದ್ದು. ಬಹುಷಃ ಸುಶ್ರುತ ಕೂಡ ಇದನ್ನ ಒಪ್ತ ಅಂತ ತಿಳದ್ದಿ.

ಇನ್ನೊಂದು ವಿಷಯ ಅಂದ್ರೆ ನಂಗೆ ಅನ್ಸಿದ ಹಂಗೆ ಸುಶ್ರುತ ಎಲ್ಲೂ ತಾ ಹೇಳಿದ್ದೇ ಸರಿ ಅಂತ ಹೇಳ್ಕ್ಯಳಲ್ಲೆ. ಅವ ಬರ್ದಿದ್ದು ಅವ್ನಿಗೆ ಅನ್ಸಿದ ವಿಷಯ. ಅದು ಸರಿ ಇಲ್ಲೆ ಅನ್ಸಿದ್ರೆ ವಿರೋಧಿಸಕ್ಕೂ ಒಂದು ಕ್ರಮ ಬೇಕು. ಇಲ್ಲಿ ಅವ್ನಿಗೆ ಮಠದ ಪರವಾಗಿ ಅಥ್ವಾ ವಿರೋಧವಾಗಿ ಬರಿಯಕ್ಕೆ ಯಾರೂ ದುಡ್ಡು ಕೊಡ್ತಾ ಇಲ್ಲೆ ಅಂತ ಎಲ್ಲ ನೆನಪಿಟ್ಟುಕೊಂಡರೆ ಸಾಕು.

SHILU..... said...

Nanu Shilesh anta. gurukulakke kaleda March nalli 'shilpa kale' yannu nanage tilida mattige makkalige helikodalu hogiddagina kelavu anubhavagalannu hanchikollalu bayasuttene....

Prati varsha nedeyuva 'chatrostava' (school unionday) noduva bhagya e varsha nannadagittu. Alli nededa sparde gala sankye "48"!!!!!!!!!!. Yella reetiya atotagala habba adu. Mostly naavu adiruvudirali hesarannu kelirada sparde galiddavu.

Innondu important vishya andre prati makkala 'birthday' galanna gurukula acharisuttade. Adu hege gotta?? Huttu habba acharisi kolluva makkala parents galige bara heli avarinda 'ayushya homa' gurukulada kharchinalliye madisi, yella makkaligu vishesha uta yerpadisi, vinutana mattu ondu memorable event agi.

iveradu naanu observe madida gurukulada visheshate galu.

hagagi shri Sushruta avaru yavudo 'purvagraha peedita' (pre-concept) ragi heege gurukulada bagge comments madiddare anta nanna anisike.....

Unknown said...

ಆತ್ಮೀಯ, ಶ್ರೀಹರ್ಷರೇ,

ಇಲ್ಲಿ ಯಾರೂ ರೌಡಿಸಂ ಮಾಡ್ತಾಯಿಲ್ಲ. ನೀವು ಸರಿ ಇಲ್ಲ ಅಂತ ಯಾರಾದ್ರು ಅಪಪ್ರಚಾರ (ನೇರವಾಗಿ ಅಲ್ಲದಿದ್ದರೂ) ಮಾಡ್ತಾಯಿದ್ದರೆ, ನೀವು ಸುಮ್ಮನೆ ಇರ್ತೀರಾ ಅಥವಾ ನಿಮ್ಮನ್ನು ಸಮರ್ಥಿಸುತ್ತೀರಾ? ಇದು ಮಠಕ್ಕೆ ಸಂಬಂದಿಸಿದ್ದ ವಿಷಯ. ಹಾಗಾದರೆ ಗುರುಗಳು ಬಂದು ಇಲ್ಲಿ ಉತ್ತರ ಕೊಡಬೇಕೆ? ಮಠದ ಸಂಪರ್ಕದಲ್ಲಿದ್ದವರು ತಮ್ಮ ನೀನು ಹೇಳಿದ್ದು ಸ್ವಲ್ಪ ಯಡವಟ್ಟಾಯ್ದು, ಹಂಗೆಲ್ಲಾ ಅಲ್ಲಿ ಇಲ್ಲೆ, ಸಣ್ಣ ಹುಡುಗಿ ಬರೆದ ಕವನ/ಹೇಳಿದ್ದು ಕೇಳಿ ಗುರುಕುಲ ಅಳಿಯಕೆ ಬತ್ತಲ್ಲೆ ಅಂತ ಹೇಳ್ದ.

ಶ್ರೀಹರ್ಷರೇ, ನೀವು ಸುಶ್ರುತ ಬರೆದಿದ್ದು ಮತ್ತು ಗುರುಕುಲದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ವೇಣು ಬರೆದಿದ್ದನ್ನು ಓದಿ. ಆಗ ಗೊತ್ತಾಗತ್ತೆ ಯಾರು ಪೂರ್ವಾಗ್ರಹ ಪೀಡಿತರಾಗಿ ಬರೆದಿದ್ದು. ಶ್ರೀ ವೇಣು ಹೇಳಿದ್ದು ವಸ್ಥುಸ್ಥಿತಿ ಸ್ವಾಮಿ. ನೀವು ಬೇಕಾದ್ರೆ ಗುರುಕುಲದ ವಿದ್ಯಾರ್ಥಿಗಳ ಹತ್ತಿರ ಕೇಳಿ ನೋಡಿ. ಕೃಷ್ಣಾನಂದ ಮಠದ ಗುರುಕುಲದ ವಿದ್ಯಾರ್ಥಿ. ಅವನೇ ಗುರುಕುಲ ಹೇಗೆ ಅಂತ ಬರೆದಿದ್ದಾನೇ. ಹಾಂ, ಅವನೂ ವೇದ ಕಲಿತಾಯಿರಬಹುದು, ಆದ್ರೂ ಆರ್ಕುಟ್ ಅಂದ್ರೆ ಏನೂ, ಈ ಮೈಲ್ ಅಂದ್ರೆ ಏನೂ, ಪತ್ರಿಕೆ ಅಂದ್ರೆ ಏನೂ ಅಂತ ಅವನಿಗೆ ಅರಿವಿದೆ ಸ್ವಾಮಿ. ಅದು ಬಂದಿದ್ದು ಗುರುಕುಲದಿಂದ ಸ್ವಾಮೀ...

ಯಾವುದೇ ಒಂದು ವಿಷಯವನ್ನು ಮಂಡಿಸುವಾಗ ಅದಕ್ಕೆ ಸರಿಯಾದ ಸಮರ್ಥನೆಯಿರಬೇಕು. ಸುಮ್ಮನೆ ಮನಸ್ಸಿಗೆ ಬಂದಂತೆ ಬರೆಯೋದಲ್ಲ. ಇಷ್ಟೆಲ್ಲಾ ಬರೆದ ಸುಶ್ರುತ ತಾನು ಬರೆದಿದ್ದು ಸರಿ ಅಂತ ಸಮರ್ಥಿಸಲಿ. ಅವನ ಸಲಹೆಗಳಿಂದ ಗುರುಕುಲಕ್ಕೆ ಸಹಾಯ ಆದ್ರೆ ತುಂಬಾ ಸಂತೋಷ ಸ್ವಾಮಿ. ಅದನ್ನು ಬಿಟ್ಟು ಬರೆದು ಮಜ ತಗೊಳ್ಳೋದು ಸರಿನಾ.

ಮಠದ ವಿರುದ್ದ ಯಾರೂ ಅಭಿಪ್ರಾಯ ವ್ಯಕಪಡಿಸ ಹಾಗಿಲ್ಲ ಅಂತ ಯಾರು ಹೇಳಿದ್ದು ಸ್ವಾಮಿ. ಗುರುಗಳು ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸುತ್ತಾರೆ. ಅವರ ಹತ್ತಿರ ವಿಚಾರ ವಿನಿಮಯ ಮಾಡಬಹುದಲ್ಲ.

ಈಗ ಹೇಳಿ ಯಾರು ಪೂರ್ವಾಗ್ರಹ ಪೀಡಿತರು?

Unknown said...
This comment has been removed by the author.
ಜಗದೀಶಶರ್ಮಾ said...

ಆತ್ಮೀಯರೇ,
ವಂದನೆಗಳು.
ನಾನು ಜಗದೀಶ ಶರ್ಮಾ.ನೀವು ಚರ್ಚಿಸುತ್ತಿರುವ ಗುರುಕುಲದ ಪ್ರಧಾನಾಚಾರ್ಯ.
ನಿನ್ನೆಯಿಂದ ನಿಮ್ಮ ಚರ್ಚೆಯನ್ನು ಗಮನಿಸುತ್ತಿದ್ದೆ. ರಾತ್ರಿ ಪ್ರತಿಕ್ರಿಯೆ ಕಳುಹಿಸಿದೆ.ಅದು ಪಬ್ಲಿಷ್ ಆಗಲಿಲ್ಲ.ಈಗ ಮತ್ತೆ ಪ್ರತಿಕ್ರಿಯಿಸುತ್ತಿದ್ದೇನೆ.
ಯಾವುದೇ ಶಿಕ್ಷಣವೂ ವರ್ತಮಾನವನ್ನು ಮರೆತು ರೂಪುಗೊಳ್ಳುವಂತಿಲ್ಲ.ಬೊಧನೆ,ಇಂದು ಮತ್ತು ನಾಳೆಯನ್ನು ಬದಿಗೊತ್ತಿ ನಿನ್ನೆಯನ್ನೇ ವಿಷಯವನ್ನಾಗಿಸಿಕೊಂಡರೆ ಅದು ವಿದ್ಯಾರ್ಥಿಯ ಹತ್ಯೆಯೇ ಸರಿ.
ಮುಂದೇನಾಗಬೇಕೆನ್ನುವ ಗುರಿ;
ಇಂದೇನಾಗಿದ್ದೇವೆನ್ನುವ ಅರಿವು;
ಹಿಂದೆ ಹೇಗಿತ್ತೆನ್ನುವ ಅನುಭವ -
ಈ ಮೂರು ಬೆಳೆವ ಮಗುವಿಗೆ ನೀಡಲೇಬೇಕಾದವುಗಳು.ಈ ಮೂರು ಇದ್ದರೆ ಮಾತ್ರ ಅದು ನೈಜ ಶಿಕ್ಷಣ.
"ಗುರುಕುಲ" ಪರಿಕಲ್ಪನೆಗೊಂಡದ್ದು ಇದಕ್ಕಾಗಿ.ನಿನ್ನೆ - ಇಂದು - ನಾಳೆಗಳ ಸಮ್ಮಿಲನ ಇರಬೇಕು;ಬೇರು ಮರೆಯದ ಜಗದಗಲ ಹರವಿನ ಮರಗಳಾಗಿ ಮಕ್ಕಳನ್ನು ಬೆಳೆಸಬೇಕು.ಇದು ಗುರುಕುಲದ ಆಶಯ.
ಹಾಗಾಗಿ "ಗುರುಕುಲದಲ್ಲಿ ಇಂದಿನ ಬದುಕಿಗಾಗಿ ವ್ಯಕ್ತಿಗಳನ್ನು ಸಿದ್ಧಪಡಿಸುತ್ತಿಲ್ಲ"- ಎನ್ನುವ ಮಾತು ಅಸಂಗತವಾಗುತ್ತದೆ.

ಹೆಚ್ಚು ಮಾತು ಬೆಳೆಸುವುದಿಲ್ಲ.

ಹೇಳುವುದಿಷ್ಟೇ-
ಗುರುಕುಲ ಮತ್ತು ಗುರುಕುಲದ ಕ್ರಮ ಹಾಗೂ ಗುರುಕುಲದ ಸಿದ್ಧಾಂತಗಳನ್ನು ಪೂರ್ಣ ಅರಿಯದೇ ಚರ್ಚೆ ಬೆಳೆಯುತ್ತಿದೆ.ನೀವಂದುಕೊಂಡಂತೆ ಗುರುಕುಲವಿಲ್ಲ;ಇರಲೂ ಬಾರದು.
ನಿಮ್ಮ ಕಾಳಜಿ ಅಭಿನಂದನೀಯ.ದೂರದೂರಿನಲ್ಲಿ ಕುಳಿತೂ ಹುಟ್ಟೂರ ಬಗ್ಗೆ ಚಿಂತಿಸುವ ನಿಮ್ಮ ಗುಣ ಇಷ್ಟವಾಗಿದೆ.ಅದರೊಟ್ಟಿಗೆ ನಿಮ್ಮೆಲ್ಲರ ಸಾಮಾಜಿಕ ಚಿಂತನೆಯೂ ಪ್ರಶಂಸಾರ್ಹ.

ಗೆಳೆಯರೇ,
ನೀವೇಕೆ ಒಮ್ಮೆ ಗುರುಕುಲಕ್ಕೆ ಬರಬಾರದು? ಬಂದು ಸ್ವತಃ ನೋಡಬಾರದು? ನೋಡಿ ಮುಕ್ತವಾಗಿ ಚರ್ಚಿಸಬಾರದು?

ಬನ್ನಿ, ಆತ್ಮೀಯರೇ,
ಕುಳಿತು ಮಾತನಾಡುವ.
ನಿಮ್ಮ ಸಲಹೆಗಳಿಗೂ ಸ್ವಾಗತವಿದೆ.
ನಿಮ್ಮ ಸಹಕಾರವೂ ಬೇಕಾಗಿದೆ.

Unknown said...

ಸುಶ್ರುತ ಮತ್ತು ಮಿತ್ರರಿಗೆ ನಮಸ್ಕಾರ.

ಈ ಅಗಾಧ ಬ್ರಹ್ಮಾಂಡದಲ್ಲಿ ಇದೇ ತಪ್ಪು ಇದು ಸರಿ ಎನ್ನುವ ವಿಷಯದಲ್ಲಿ ತೀರ್ಮಾನ ಬಲು ಕಷ್ಟ. ಮುಕ್ತ ಕಾಮಿ ಎಂದು ಮಾಧ್ಯಮಗಳು ಬಿಂಬಿಸಿದ ಓಶೋ ರಜನೀಶ್ ರನ್ನು ಹೀನಾಯ ಬೈಯ್ದವರು ಬಹಳ ಜನ ಇದ್ದಾರೆ. ಅವರು ಹೇಳುವ ಜೀವನ ಪದ್ದತಿ ಎಂದರೆ "ಯಾವುದನ್ನೂ ತಲೆಯೊಳಗೆ ಇಟ್ಟುಕೊಂಡು ರುಗ್ಣರಾಗಬೇಡಿ ಆದಷ್ಟು ಹೊರಗೆ ಚೆಲ್ಲಿ ಆಗ ಮನಸ್ಸು ಹೊಸತನ್ನು ಹುಡುಕುತ್ತದೆ". ಅದನ್ನು ಅಪಾರ್ಥ ಮಾಡಿಕೊಂಡು ಬರ್ಬಾದ್ ಆದವರೂ ಇದ್ದಾರೆ ಅರ್ಥ ಮಾಡಿಕೊಂಡು ಸುಖವಾಗಿದ್ದವರೂ ಇದ್ದಾರೆ. ರಾಮಾಯಣ ಮಹಾಭಾರತ ಓದಿ ಸತ್ಯ ಧರ್ಮದಿಂದ ಇದ್ದರೆ ರಾಮ ಧರ್ಮರಾಯರಂತೆ ಒದ್ದಾಡಬೇಕಾಗುತ್ತದೆ ಕೌರವ ರಾವಣ ರಂತೆ ಇದ್ದರೆ ಸಾಯೋವರೆಗೂ ಸುಖಪಡುವುದೇ ಲೇಸು ಅನ್ನ ಬಹುದು.
ಗುರುಕುಲದ ವಿಷಯದಲ್ಲಿ ಕಟ್ಟಡ ಎಲ್ಲಾ ಪರಿಪೂರ್ಣ ವಾಗಿಲ್ಲದಿರಬಹುದು. ಆದರೆ ನಾನು ಕಣ್ಣಾರೆ ಕಂಡಂತೆ ಅಲ್ಲಿನ ಮಕ್ಕಳಲ್ಲಿ ಆತ್ಮಸ್ಥೈರ್ಯ ಬಹಳ ಇದೆ.ಉತ್ತಮವಾಗಿ ಬದುಕಲು ಅದೇ ಬಹಳ ಮುಖ್ಯ. ತಪ್ಪಿದ್ದು ಸರಿಪಡಿಸುವ ಹಾಗೂ ಇದ್ದದ್ದರಲ್ಲಿ ಒಳ್ಳೆಯದನ್ನು ಹೆಕ್ಕುವ ಮನಸ್ಥಿತಿ ಬಹಳ ಮುಖ್ಯ. ಅದಕ್ಕೆ ಗುರುಕುಲದ ಶಿಕ್ಷಣ ಅಗತ್ಯ. ಸ್ವಲ್ಪ ಸಮಯ ಕಾಯುವ ತಾಳ್ಮೆ ಇದ್ದರೆ ಉತ್ತಮ ಫಲಿತಾಂಶ ಸಿಗಬಹುದು. ಅಕಸ್ಮಾತ್ ಸಿಗದೆಯೂ ಇರಬಹುದು. ಆವಾಗ ತಿದ್ದುಪಡಿ ಅವಶ್ಯ.
ಕೊನೆಯದಾಗಿ: ಕಾಮೆಂಟ್ ಗಳಲ್ಲಿ ಕೆಲವರು ಶುಶ್ರುತರನ್ನು ಅಪಾರ್ಥ ಮಾಡಿಕೊಂಡಂತಿದೆ, ಇನ್ನು ಕೆಲವರು ಮಠವನ್ನು ಅಪಾರ್ಥಮಾಡಿಕೊಂಡಂತಿದೆ. ಎರಡೂ ಸಲ್ಲ. ಕಾರಣ ಒಮ್ಮೆ ಯೋಚಿಸಿ ನಮಗೆ ನಾವೇ ಇನ್ನೂ ಅರ್ಥವಾಗಿಲ್ಲ.(ಅರ್ಥವಾಗಿದೆ ಎಂಬ ಪೊಳ್ಳು ನಂಬಿಕೆಯಲ್ಲಿ ಬದುಕು ಅಷ್ಟೆ)

-ಆರ್.ಶರ್ಮಾ.ತಲವಾಟ

Unknown said...

ಸುಶಿ,
ನಿನ್ನ ಅಭಿಪ್ರಾಯಗಳು,ಕಾಳಜಿ ಒಪ್ಪುವಂತದ್ದೇ,ಆದರೆ ನಾನು ಕೂಡ ಒಂದು ಸುಂದರ ಗುರುಕುಲದ ಪರಿಸರದಲ್ಲಿ ೨ ವರ್ಷ ಇದ್ದು ಬಂದವಳು,ಆದರೆ ಅಲ್ಲಿಯ ಮಕ್ಕಳು ಬರೆಯುತ್ತಿದ್ದ ಕವನಗಳು ನಿನ್ನ ವರ್ಷ ಪುಟ್ಟಿಯಂತಾಗಿರಲಿಲ್ಲ,ತುಂಬಾ ಸಂತಾಪವಾಗುತ್ತಿದೆ,ನಮ್ಮ ಸಂಸ್ಕೃತಿಯನ್ನು ಉಳಿಸಲು ಒಂದು ಬಾಲ್ಯವನ್ನು ಬಲಿಕೊಡಬೇಕಾ?ಅದಿಷ್ಟೆ ಅಲ್ಲ,ಇನ್ನೂ ಕೆಲ ಮೂಲಭೂತ ಸಮಸ್ಯೆಗಳಿವೆ,ಈ ಚರ್ಚೆಗೆ ನಿನ್ನ ಲೇಖನ ವೇದಿಕೆಯಾಗಲಿ,ಹಾಗೆ ನಾನು ಕೂಡ ಗುರುಕುಲ ವಿರೋಧಿಯಲ್ಲ,ಆದರೆ ಮೂಲಭೂತ ಹಕ್ಕುಗಳ ಪ್ರಶ್ನೆ ಬಂದಾಗ ಒಂದು ಸಂಸ್ಥೆಗಿಂತಲೂ ಒಂದು ಜೀವನ ಮುಖ್ಯ ಅಂತ ಭಾವಿಸುವವಳು,ಇಲ್ಲಿರುವ ಬರಹಗಳು,ಕಾಲೆಳೆಯುವಿಕೆ ಎಲ್ಲಾ ಬಿಡು,ನಿನ್ನ ಬರಹದ ಹಿಂದಿರುವ ಒಂದು ಉತ್ತಮ ಕಾಳಜಿ,ಶ್ರದ್ಧೆ ನೋಡಿದಾಗ ಅದರ ಪರಿಣಾಮವೂ ಉತ್ತಮವಾದದ್ದೇ ಆಗಲಿದೆ ಅನ್ನಿಸುತ್ತದೆ,ಭಲೇ!ಮೆಚ್ಚಿದೆ ತಮ್ಮ, ನಿನ್ನ ಧೈರ್ಯ ಮತ್ತು ಸತ್ಯಪ್ರಜ್ಞೆಗೆ,ಇದು ಸಂಬಂಧಿಸಿದವರ ಕಣ್ಣು ತೆರೆಸಿದರೆ ಸಾಕು, ಬಾಲಂಗೋಚಿಗಳ,ಬೇಳೆ ಬೇಯಿಸಿಕೊಳ್ಳುವವರ ಮಾತು ಬಿಡು,ಎಲ್ಲಿ ಹೋದರೂ ಅವರ ಸಂಖ್ಯೆ ಸಾವಿರ,ಸಾವಿರ.ಮುಂದೆ ಸುಧಾರಣೆಯಾದಾಗ ಉತ್ತಮವಾದ್ದನ್ನೇ ಬರೆಯೋಣವಂತೆ,ಸತ್ಯ ಹೇಳಲು,ಚರ್ಚೆ ಮಾಡಲು ಅವಕಾಶವಿದ್ದೇ ಇದೆ,ಇದನ್ನು ಯಾರಿಂದಲೂ ಕಿತ್ತುಕೊಳ್ಳಲಾಗದು,ನಿನ್ನ ಈ ಪ್ರಯತ್ನ ಮೆಚ್ಚುವಂತಹದ್ದು,ನಿನ್ನ ಕಾಳಜಿ ಉತ್ತಮ ಮಟ್ಟದ್ದು, ಒಂದು ಉತ್ತಮ ಕಾರ್ಯಕ್ಕೆ ಅಡ್ಡಿ ಆತಂಕಗಳು ಸಹಜ,ನಿನ್ನ ಲೇಖನ ಆ ಅಡ್ಡಿ ಆತಂಕಗಳ ನಿವಾರಣೆಗೆ ದಿಕ್ಸೂಚಿಯಾದೀತೆಂಬ ನಂಬಿಕೆ ನನ್ನದು, ಎಷ್ಟೆಂದರೂ ನಾವು "ಕೃಣ್ವಂತೋ ವಿಶ್ವಮಾರ್ಯಮ್" ಎಂಬ ನಂಬಿಕೆಯ ಮೇಲೆ ಜೀವಿಸುವವರಲ್ಲವೇ?

Unknown said...

ಗುರುಕುಲದ ಪ್ರದಾನಾಚಾರ್ಯರಿಂದ ಬಂದ ಕಮೆಂಟನ್ನೂ ನೋಡಿ ಕೆಲವರು ಉತ್ತರಿಸುತ್ತಿದ್ದು, ಇನ್ನೂ ಗುರುಕುಲದ ಪರಿಚಯವಾಗಿಲ್ಲವೆನಬಹುದು.

ಹೇಳಿದ್ದೆ ಹೇಳೋ ಕಿಸ್ಬಾಯಿ ದಾಸ ಅಂದ ಹಂಗೆ, ಹೇಳಿದ್ದನೆ ಮತ್ತೆ ಹೇಳೋ ಹಾಗಿದೆ.

ಸುಶ್ರುತನ ಲೇಖನದಲ್ಲಿ ಕಾಳಜಿ ಕಾಣ್ತಾಯಿದೆ. ಅವನ ಜಾಗದಲ್ಲಿ ಯಾರೇ ಇದ್ದರೂ ಈ ಕಾಳಜಿ ಬರೋದು ಸಹಜ.
ಆದರೆ ಗುರುಕುಲದಲ್ಲಿ ಅದು ಆಗ್ತಾಯಿದೆಯೇ ಅನ್ನೋದು ತಿಳಿಯುವ ತಾಳ್ಮೆಯಿರಬೇಕು. ಅವನ ಲೇಖನವನ್ನು ಗಮನಿಸಿದಾಗ ಗುರುಕುಲದಲ್ಲಿ ಮಕ್ಕಳಿಗೆ ಬರೀ ಆದ್ಯಾತ್ಮ ಹೇಳಿ ಕೊಡ್ತಾರೆ, ಗುಡ್ಸದು, ಬಳಿಯದು ಹೇಳಿ ಕೊಡ್ತಾರೆ ಮುಂತಾದವುಗಳಿವೆ. ಈಗಾಗಲೆ ಕೆಲವರು ಗುರುಕುಲದಲ್ಲಿ ಎನು ಹೇಳಿ ಕೊಡ್ತಾರೆ ಅಂತ ಹೇಳಿದ್ದಾರೆ. ಗುರುಕುಲದ ವಿದ್ಯಾರ್ಥಿಯು ಸಹ ಉತ್ತರಿಸಿದ್ದಾನೆ. ಅಲ್ಲಿ ಯಾರ ಮೇಲೂ ಇದ್ದನ್ನೇ ಕಲೀಬೇಕೂ ಅಂತ ಒತ್ತಡವಿಲ್ಲ. ಸಂಗೀತದಲ್ಲಿ ಆಸಕ್ತಿಯಿದ್ದರೆ ಅದರಲ್ಲಿ ಭಾಗವಹಿಸಬಹುದು, ಇಲ್ಲದಿದ್ದರೆ ಇಲ್ಲ. ಒಂದು ವಿದ್ಯಾರ್ಥಿ ಕಲಿಯೋಕೆ ಅಲ್ಲಿ ಇರೋ ಶಿಕ್ಷಣ ವಿದಾನ, ಅಲ್ಲಿ ಶಿಕ್ಷಕ ವರ್ಗ ಬಹಳ ಮುಖ್ಯ. ಅಲ್ಲಿ ಇರೋ ಕಟ್ಟಡ ಅಲ್ಲ. ಉತ್ತಮ ಕಟ್ಟದ ಅವಶ್ಯಕತೆಯಿದೆ. ಆದರೆ ಕಟ್ಟದ ಮಾತ್ರವಿದ್ದರೆ ಸಾಲದು. ಗುರುಕುಲದಲ್ಲಿ ಭಾರತೀಯ ಸಂಕೃತಿಯ ಜೊತೆಗೆ ಆಧುನಿಕ ಶಿಕ್ಷಣದ ಸೌಲಭ್ಯವೂ ಇದೆ.

ಎಲ್ಲವೂ ಒಂದೇ ದಿನದಲ್ಲಿ ಆಗೊಲ್ಲ. ಅದಕ್ಕೆ ಸಮಯ ಬೇಕೂ. ಗುರುಕುಲ ಸರಿಯಾದ ಮಾರ್ಗದರ್ಶನದಲ್ಲಿ ನಡಿತಾಯಿದೆ.

ಇಲ್ಲಿ ಯಾರೂ ಬೇಳೆ ಬೇಯಿಸ್ಕೋತಾಯಿಲ್ಲ. ಸುಶ್ರುತ ಬರೆದಿದ್ದಕ್ಕೂ ಅಲ್ಲಿ ಇರೋದಕ್ಕೂ ಎನು ವ್ಯತ್ಯಾಸ ಅನ್ನೋದು ಚರ್ಚಿತವಾಗ್ತಾಯಿದೆ. ಆದ್ರೆ ಕೆಲವರು ಬಂದು ತಲೆ ಬುಡವಿಲ್ಲದೆ ಮಾತಾಡ್ತಾಯಿದ್ದಾರೆ. ಇಲ್ಲಿ ಇಷ್ಟು ಜನ ಬಂದು ಭಾಗವಹಿಸಿದ್ದೀರಲ್ಲ, ಅದ್ರಲ್ಲಿ ಎಷ್ಟು ಜನ ಗುರುಕುಲ ನೋಡಿದ್ದೀರಾ? ಎಷ್ಟು ಜನರಿಗೆ ಅಲ್ಲಿ ಎನಾಗ್ತಾಯಿದೆ ಅಂತ ಅರಿವಿದೆ. ದೂರದಲ್ಲಿ ಎಲ್ಲೋ ಕುಳಿತು ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಬರಿತಾಯಿದ್ದೀರ.

ನಿಜವಾದ ಕಾಳಜಿ ಇದ್ದರೆ ಗುರುಕುಲದ ಬಗ್ಗೆ ಮಾಹಿತಿ ಸಂಗ್ರಹಿಸಿ. ಅದಕ್ಕೆ ಸಂಬಂದಪಟ್ಟವರ ಹತ್ತಿರ ಕೇಳಿ.

ಸುಶ್ರುತರೇ, ಎಲ್ಲಿ ಹೋದ್ರಿ? ಬನ್ನಿ, ನಿಮ್ಮ ಅಭಿಪ್ರಾಯಗಳ ನೈಜವಾ ಅಂತ ಹೇಳಿ. ಚರ್ಚೆಗೆ ಬನ್ನಿ. ಅದನ್ನು ಬಿಟ್ಟು ಲೇಖನ ಬರೆದು ಕಾಣೆಯಾಗಿದ್ದೀರಲ್ಲ!!! ನೀವು ಹೇಳಿದ್ದು ಸತ್ಯ ಹೌದೋ ಅಥವಾ ಅಲ್ಲವೋ ಎಂದು ತೀರ್ಮಾನವಾಗ್ಲಿ.

ನಿಮ್ಮ ಗಮನಕ್ಕೆ ಒಂದು ಮಾಹಿತಿಃ ವರ್ಷಾಳ ಚಿಕ್ಕಪ್ಪನ ಮಗ ಗುರುಕುಲಕ್ಕೆ ಸೇರ್ತಾಯಿದ್ದಾನಂತೆ. ಗುರುಕುಲದವರು ನೀನೂ ಬಾಪ್ಪ ಎಂದು ಕೇಳ್ಕೊಂಡಿಲ್ಲ. ಅವನ ಮನೆಯವರೇ ಆಸಕ್ತಿಯಿಂದ ಸೇರಿಸ್ತಾಯಿದ್ದಾರಂತೆ. ಗುರುಕುಲದ ಒಬ್ಬ ಆಚಾರ್ಯರಿಂದ ನನಗೆ ಮಾಹಿತಿ ಬಂತು.

SHILU..... said...

hi friends
26kke naanu gurukulakke hokta iddi
Jagadisha sharma avaru helidante neevella bandu alliya parisaradalli ondu dina iddu aa mele gurukulada bagge avara hattirane charchisi
ATI KADIME JANARIGE KAANUVA E BLOGNALLI YAAKE??????

Shree said...

ಸುಶ್,
ಮೊದಲನೆಯದಾಗಿ, ನಿನ್ನ ಈ ಪೋಸ್ಟ್ 'ಸೂಪರ್-HIT', ಅಭಿನಂದನೆಗಳು :)
ಹಾಗೆಯೇ, ಈ ಪೋಸ್ಟ್-ನಿಂದಾಗಿ ಕೆಲವರಾದರೂ ಅಂತರ್ಜಾಲದಲ್ಲಿ ಬ್ಲಾಗುಗಳತ್ತ ಹೊಸದಾಗಿ ಕಾಲಿಟ್ಟಿದ್ದಾರೆ, ನಿನ್ನ ಸಾಧನೆ ಇದು, ಅಭಿನಂದನೆಗಳು :)
ಕೇವಲ ಒಂದೇ ಒಂದು ವಿಚಾರಧಾರೆ ಸರಿಯೆಂದು ನಂಬಿ ಸಾಗುತ್ತಿರುವ ಹೊತ್ತಿನಲ್ಲಿ ಹೊಸ ದಿಕ್ಕಿನೆಡೆಗೆ ದೃಷ್ಟಿ ಹಾಯಿಸುವ ಯತ್ನ ಮಾಡಿದ್ದೀ, ಅದಕ್ಕೂ ಅಭಿನಂದನೆಗಳು.
ಸುಶ್ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದವರೆಲ್ಲ ಅಗತ್ಯವಾಗಿ ಇದನ್ನೂ ಓದಿ. http://hisushrutha.blogspot.com/2007/05/blog-post.html
ಇದನ್ನೂ ಅವನೇ ಬರೆದಿದ್ದು.

Ultrafast laser said...

ಶ್ರೀ ಜಗದೀಶ್ ಶರ್ಮರೆ,
ಮಠದ ಪ್ರಧಾನಾಚಾರ್ಯರಾಗಿ ಮಠದ ಬಗೆಗಿನ ವಿವಾದಾಸ್ಪದ(?) ಬರಹಕ್ಕೆ ತಮ್ಮ ಧನಾತ್ಮಕ ಪ್ರತಿಕ್ರಿಯೆ ಅಭಿನಂದನಾರ್ಹ. ತಾವೆಂದಂತೆ, ಮಠದ ಶಿಕ್ಷಣ ಪದ್ದತಿಯಲ್ಲಿ ನಿನ್ನೆ-ಇಂದು- ಹಾಗೂ ನಾಳೆಗಳ ಸಮಗ್ರೀಕರಣ ಒಂದು ಒಳ್ಳೆಯ ಅಪ್ಪ್ರೋಚ್ ಎಂದು ನನ್ನ ಭಾವನೆ. ನನ್ನ ಪೂರ್ವಗ್ರಹವಲ್ಲದ ಹಾಗೂ ಕೇವಲ ಕುತೂಹಲಪೂರ್ಣವಾದ ಪ್ರಶ್ನೆ ಎಂದರೆ - ಅಂತಹ ನಿನ್ನೆ-ಇಂದು-ಹಾಗೂ ನಾಳೆಗಳ ಸಮಗ್ರ ಗುರುಕುಲ ಪ್ರಗತಿಯನ್ನು ಸಾಧಿಸಲು ಯಾವ ಶಿಕ್ಷಣ ಪದ್ದತಿಯನ್ನು ಅನುಸರಿಸುತ್ತಿದ್ದೀರಿ?, ಹಾಗೂ ಮಠದ ಶಿಕ್ಷಣ ಪದ್ಧತಿ ಉಳಿದ ಸಮಾಜದ ಮುಖ್ಯವಾಹಿನಿಯ ಶಿಕ್ಷಣ ಪದ್ದತಿಗಿಂತ ಹೀಗೆ ಭಿನ್ನ ಎನ್ನುವುದನ್ನು ತಿಳಿಯಪಡಿಸುವಿರ?. ಅನ್ತೆಯೀ, ವಿದ್ಯಾರ್ಥಿಗಳ ಆಹಾರ ವಿಹಾರಗಳಲ್ಲಿ ಅನುಸರಿಸಲೇಬೇಕಾದ ನಿಯಮಗಳೇನು?.

ಮನು!, "ಅಯ್ಯೋ, ನಿ೦ಗಕ್ಕೆಲ್ಲ ತಲೆ ಸಮ ಇದ್ದ೦ಗೆ ಕಾಣ್ತಿಲ್ಲೆ. ಇವ ದೊಡ್ಡೇರಿ ಮಳ್ಳು ಬರದ್ನ ನಿ೦ಗ ಇಷ್ಟೆಲ್ಲಾ ಕಾಮೆ೦ಟ್ ಮಾಡ್ತ್ರಲ.

"ಹ೦ದಿ ಜೊತೆಗೆ ಕೆಸ್ರಲ್ಲಿ ಕುಸ್ತಿ ಮಾಡಿದ್ರೆ ಮಜ ಸಿಗದು ಹ೦ದಿಗೇ" ಅಲ್ದ? " - ಅಪರೂಪದವರು ನೀವು. ಮಾತಿನಲ್ಲಿ ಮಾತ್ರವಲ್ಲ, ಬರಹದಲ್ಲೂ ಉಗ್ಗು ಕಾಣಿಸಬಹುದು ಎನ್ನುವದಕ್ಕೆ ಪ್ರತ್ಯಕ್ಷ ಉದಾಹರಣೆ ನಿಮ್ಮದು. ಇಲ್ಲಿ ಹಂದಿ ಯಾರು?. ಮಠದ ಗುರುಕುಲ ಶಿಕ್ಷಣದ ಬಗೆಗೆ ಆರೋಗ್ಯಕರ ಚರ್ಚೆ ಹುಟ್ಟುಹಾಕಿ ತದ್ವಾರಾ ಸತ್ಯದ ಹುತ್ತದಲ್ಲಿ ಕೈ ಇಡುತ್ತಿರುವ ಸುಶ್ರುತನ? ಅಥವಾ ಅಪ್ಪಟ ಅನಾಗರಿಕ ಶೈಲಿಯಲ್ಲಿ ಪ್ರತಿಕ್ರಿಯಿಸಿದ ನೀವಾ?.

ಮಠವಿರಲಿ, ಸಾಮಾಜಿಕ ಸಂಸ್ಥೆ ಇರಲಿ ಅಥವಾ ಯಾವುದೇ ವಿದ್ಯಾ ಸಂಸ್ಥೆ ಇರಬಹುದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಹಾಗೂ ಪ್ರಶ್ನಾರ್ಹವಲ್ಲದ್ದು ಯಾವುದೂ ಇಲ್ಲ. ಅಂತಹ ಚರ್ಚೆ ಇಂದ ಸತ್ಯ ಅನಾವರಣ ಗೋಳ್ಳುತ್ತದೆ ಎಂದಾದರೆ ಅದನ್ನು ಸ್ವಾಗತಿಸೋಣ ಎನ್ನುವುದು ನನ್ನ ವಿನಮ್ರ ಸೂಚನೆ.
D.M.Sagar

Unknown said...

ಶಿವರಾಮ್ ಅವರೆ,ನೀವು ಲೇಖನವನ್ನ ನಾನೆ ಸರಿ ಎಂಬ ದೃಷ್ಟಿಯಿಂದ ನೋಡ್ತಾ ಇದ್ದೀರ ಅಂತ ನನಗನ್ನಿಸುತ್ತೆ,ಸುಶಿ ಹೇಳ್ತಾ ಇರೋದನ್ನ ಸಮಷ್ಟಿ ದೃಷ್ಟಿಯಿಂದ ನೋಡಿ,ಆಗ ನಾ ಹೇಳಿದ್ದು ನಿಮಗೆ ಅರ್ಥ ವಾಗಬಹುದು,

ಹಾಗೇ ನಿಮಗೆ ಗೊತ್ತಿಲ್ಲದೇ ಇರಬಹುದು,ಕಡ್ಡೀನ ಗುಡ್ಡ ಮಾಡಿ,ತಮ್ಮ ಬೇಳೆ ಬೇಯಿಸ್ಕೊಳ್ಳೋರು ಇದ್ದಾರೆ,ಅವರಿಗೆ ಲೇಖನಕ್ಕಿಂತ ಅವರ ಅನರ್ಥಕರವಾದ ಕಮೆಂಟ್ ಹಾಕೋದೆ ಕಾಯಕ ಆಗಿ ಹೋಗಿದೆ,ಹಾಗೇ ಇಲ್ಲಿ ಸುಮ್ಮಸುಮ್ಮನೇ ತಮ್ಮ ಅಭಿಪ್ರಾಯಗಳನ್ನು ಮಂದಿಸಿ ಮಜ ತಗೊಳ್ಳೋರು ಜಾಸ್ತಿ ಆಗಿದ್ದಾರೆ,ಯಾವ ಸಂಸ್ಥೆಯೂ ಸೌಕರ್ಯಗಳಿಲ್ಲ ಅಂತ ಹೇಳೀಕೊಳ್ಳಲ್ಲ ,ಅಲ್ಲಿಗೆ ಹೋಗಿ ಅನುಭವಿಸಿದಾಗಲೇ ಅರ್ಥ ಆಗೋದು ಅಲ್ಲಿ ಏನು ಕೊರತೆ ಇದೆ ಅಂತ,ಸುಮ್ಮನೇ ನಾನೂ ಅಂತ ಶಿಕ್ಷಣ ಪದ್ದತೀಲೇ ಓದಿರೋದು ಅಂತ ಬಂದ್ರೆ ಸಮಸ್ಯೆಯ ಮೂಲ ಹುಡುಕ್ಲಿಕ್ಕೆ ಆಗಲ್ಲ,ಏನೇ ಇರಲಿ ಸುಶಿಯ ಲೇಖನಕ್ಕೆ ಹ್ಯಾಟ್ಸ್ ಆಫ಼್! ತುಂಬಾ ಜನರ ಅಭಿಪ್ರಾಯ ಧುರಭಿಪ್ರಾಯಗಳನ್ನು ನೋಡುವಂತಾಯಿತು.

ಜಗದೀಶಶರ್ಮಾ said...

ಶ್ರೀ ಡಿ.ಎಮ್ . ಸಾಗರ್ ಅವರೇ,
ವಂದನೆಗಳು ತಮಗೆ.

ಚರ್ಚೆ ವ್ಯಕ್ತಿಗತ ನೆಲೆಯಲ್ಲಿ ಮುಂದುವರೆಯುತ್ತಿದೆ. ನನಗೆ ಅಪರಿಚಿತರಾದ ಸುಶ್ರುತರ ಪರ- ವಿರೋಧದ ಚರ್ಚೆ ಇದಾಗಿದೆ ಎನ್ನುವುದು ನನ್ನ ಅನಿಸಿಕೆ. ಇಂತಹ ಅನಾರೋಗ್ಯಕರ ವಾತಾವರಣದಲ್ಲಿ ಮಾತನಾಡುವುದು ಸಹ್ಯವೆನಿಸುತ್ತಿಲ್ಲ. ನಾನು ಹೇಳ ಬೇಕಾದುದನ್ನು ಸ್ವಯಂ ಪ್ರೇರಿತನಾಗಿ ಹೇಳಿಯಾಗಿದೆ.
ಇನ್ನೂ ಅರಿವಿನ ನೈಜ ಹಸಿವಿರುವವರು ಗುರುಕುಲಕ್ಕೆ ಬಂದು ಮುಕ್ತವಾಗಿ ಮಾತನಾಡಲು ಪ್ರೀತಿಯಿಂದ ಆಮಂತ್ರಿಸಿದ್ದೇನೆ.
ಬನ್ನಿ, ಮಾತನಾಡೋಣ.

ಶಾಂತಲಾ ಭಂಡಿ (ಸನ್ನಿಧಿ) said...
This comment has been removed by the author.
ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ವರ್ಷ ಬರೆದ ಕವನ ಚೆನ್ನಾಗಿದೆ. ಹಾಗೆಯೇ ನೀ ಬರೆದ ಲೇಖನ ಕೂಡ ಚೆನ್ನಾಗಿದೆ.

Ultrafast laser said...

Mr.Jagadeesh Sharma,
As you didnot answer/address my questions, it becomes apparent that the transparency of the education in the mutt is strongly questionable and debatable. This supports Sushrutha's writings and other voices in the forum too.
No personal arguments are going on here.
Give a gun-shot answer to the question- Why are you escaping from my genuine questions?. Instead, claming that personal arguments are going on here!?.

Dr.D.M.Sagar

Sushrutha Dodderi said...

ಪ್ರಿಯ ಜಗದೀಶ್ ಶರ್ಮರಿಗೆ ನಮಸ್ಕಾರ.

ಗುರುಕುಲದ ಬಗ್ಗೆ ಚರ್ಚೆಯಾಗುತ್ತಿರುವಾಗ ನೀವದನ್ನು ಗಮನಿಸಿ ಪ್ರತಿಕ್ರಿಯಿಸಿದ್ದು ನೋಡಿ ಖುಶಿಯಾಯಿತು. ನೀವು ನಿನ್ನೆ ಮಾಡಿದ್ದೆ ಎಂದ ಕಮೆಂಟ್ ಬಂದಿಲ್ಲ.

ನಾನು ಯಾಕೆ ಈ ಬರಹವನ್ನು ಬರೆಯಬೇಕಾಯಿತು -ಅಥವಾ- ಇಂಥದ್ದೊಂದು ಲೇಖನ ನನ್ನಿಂದ ಯಾಕೆ ಬರೆಯಲ್ಪಟ್ಟಿತು ಎಂಬುದನ್ನ ನಾನು ಈಗಾಗಲೇ ಲೇಖನದಲ್ಲೇ ಹೇಳಿದ್ದೇನೆ; ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ:

ಮೊನ್ನೆ ಭಾನುವಾರ ವರ್ಷಳಿಂದ ಈ ಕವನಗಳನ್ನು ಓದಿಸಿ ನಾನು ಬರೆದುಕೊಂಡಮೇಲೆ, ಇರುವೆಯ ಬಗ್ಗೆಯೋ, ನವಿಲಿನ ಬಗ್ಗೆಯೋ, ಅಪ್ಪ ಅಮ್ಮರ ಬಗ್ಗೆಯೋ ಬರೆದಿರಬಹುದು ಎಂದುಕೊಂಡಿದ್ದ ನನಗೆ, ತಲೆಬಿಸಿಯಾಯಿತು. ಆಕೆ ’ಇಂತಹ’ ಕವನಗಳನ್ನು ಬರೆದದ್ದು ಕಂಡು, ಇದ್ಯಾಕೆ ಹೀಗಾಯಿತು ಅಂತ ಯೋಚಿಸಿದಾಗ ಹಳೆಯದೆಲ್ಲ ನೆನಪಾಯಿತು: ವರ್ಷಳನ್ನು ಗುರುಕುಲಕ್ಕೆ ಸೇರಿಸಿದ ಸಮಯ, ನಾನು ಗುರುಕುಲಕ್ಕೆ ಹೋಗಿದ್ದಾಗ ನೋಡಿದ್ದ ಪರಿಸ್ಥಿತಿ, ನಂತರ ವರ್ಷ ಸಿಕ್ಕಾಗ ಅವಳು ನನ್ನೊಂದಿಗೆ ಆಡಿದ ಮಾತುಗಳು, ಈಗ ವರ್ಷ ಬರೆದ ಕವನ... (ಇಲ್ಲ, ರಂಗ ಎಂದರೆ ಯಾವುದೋ ಹುಡುಗ ಅಂತ ಅಪಾರ್ಥ ಮಾಡಿಕೊಳ್ಳುವಷ್ಟು ಮೂರ್ಖ ನಾನಲ್ಲ; ಓದುಗರೂ ಅಲ್ಲ!) ಇದನ್ನೆಲ್ಲ ನೋಡಿದಾಗ ನನ್ನಲ್ಲಿ ಮೂಡಿದ instant ಪ್ರತಿಕ್ರಿಯೆ ಅದು: Whats going on here? -ಅಂತ. ಆ ಕವನಗಳನ್ನು ನನ್ನ ಕೆಲ ಸ್ನೇಹಿತರಿಗೂ ತೋರಿಸಿದೆ; ಅವರೂ ವರ್ಷಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಮತ್ತು ಅದನ್ನೇ ನಾನು ಬರೆದದ್ದು. ನಾನು ಮಠದ ಆಗಿನ ಪರಿಸ್ಥಿತಿ ಹೀಗಿತ್ತು ಎಂಬುದನ್ನು ಬರೆದಿದ್ದೇನೆ. ಶೈಲೇಶ್ ಅವರು ತಾವು ಮಠಕ್ಕೆ ಹೋದಾಗಿನ ಅನುಭವಗಳನ್ನು ಬರೆದಿದ್ದಾರೆ. ಮಠದ ಬಗ್ಗೆ ನನಗೆ ಯಾವುದೇ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಇಲ್ಲ. ನಾನೂ ಸುಮಾರು ಸಲ ಮಠಕ್ಕೆ ಹೋಗಿದ್ದೇನೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಗೋಸಮ್ಮೇಳನದ ಬಗ್ಗೆ ಖುಶಿಗೊಂಡು ಎರಡೆರೆಡು ಲೇಖನಗಳನ್ನು ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ನಾನು ಈ ಲೇಖನವನ್ನು ಬರೆದದ್ದು ವರ್ಷಳ ಮತ್ತು ಅಲ್ಲಿರುವ ವರ್ಷಳಂತಹ ಇನ್ನೂ ಅನೇಕ ವಿದ್ಯಾರ್ಥಿಗಳ ಕಾಳಜಿಯಿಂದಾಗಿ ಅಷ್ಟೇ. ವರ್ಷ ಊರಲ್ಲಿದ್ದುಕೊಂಡು ಹೀಗೆಲ್ಲಾ ಕವನ ಬರೆದಿದ್ದರೂ ಸಹ ನಾನು ’ಮಕ್ಕಳನ್ನು ಹೀಗೆ ಬೆಳೆಸುವುದು ಸರಿಯಲ್ಲವೇನೋ?’ ಎಂಬ ನನ್ನ ಅಭಿಪ್ರಾಯವನ್ನು ಬರೆಯುತ್ತಿದ್ದೆ; ಚರ್ಚೆಗಿಡುತ್ತಿದ್ದೆ. ಆದರೆ ಇಲ್ಲಿ ಬಂದಿರುವ ಭರಪೂರ ಪ್ರತಿಕ್ರಿಯೆಗಳನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ.

ಹಾಗಂತ, ’ಇಲ್ಲಿ ಪ್ರತಿಕ್ರಿಯಿಸಿರುವವರು ಪುಟಗೋಸಿಗಳು’ ಎಂದುದನ್ನೂ, ’ಅವರನ್ನು ಗುರುಕುಲಕ್ಕೆ ಸೇರಿಸಬೇಕು’ ಎಂಬ ವ್ಯಂಗ್ಯವನ್ನೂ, ’ಇವ ದೊಡ್ಡೇರಿ ಮಳ್ಳು’ ಎಂದು ಹಾಸ್ಯ ಮಾಡಿದ್ದನ್ನೂ, ’ಹಂದಿ’ ಎಂಬ ಶಬ್ದ ಬಳಕೆಯನ್ನೂ, ’ಸು ಸು ಸು’ ಎಂದಿದ್ದನ್ನೂ (ಏನು ಕೀಬೋರ್ಡಿನಲ್ಲಿ ಕೀ ಸಿಕ್ಕಿಹಾಕಿಕೊಂಡಿತ್ತಾ ಸ್ವಾಮೀ?), ’ಬಾಯ್ಚಟ ತೀರಿಸಿಕೊಳ್ಳಲು ಬರೆದದ್ದು’ ಎಂಬ ಅಪವಾದವನ್ನಾಗಲೀ (ಛೇ! ಮಠದಲ್ಲಿ ಓದುತ್ತಿದ್ದೂ ಹೀಗೆಲ್ಲಾ ಬರೆಯಬಹುದಾ ಕೃಷ್ಣಾ??!), ’ಹೊತ್ತು ಹೋಗದೇ ಬರೆದದ್ದು’ ಎಂಬ ಹೇಳಿಕೆಯನ್ನೂ -ಸ್ಪಷ್ಟವಾಗಿ ಖಂಡಿಸುತ್ತೇನೆ. ಬೇಸರವಾಗುತ್ತದೆ ಸುಸಂಕೃತರು ಎನಿಸಿಕೊಂಡವರು ಹೀಗೆಲ್ಲಾ ಬರೆದದ್ದು ನೋಡಿ!

ಪ್ರಿಯ ಜಗದೀಶಣ್ಣ, ನನಗೂ ಈ ರೀತಿಯಲ್ಲಿ ಚರ್ಚೆಯನ್ನು ಬೆಳೆಸುವ ಮನಸಿಲ್ಲ. ಯಾಕೋ ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ, ನನ್ನ ಕಾಳಜಿಯೇ ವ್ಯರ್ಥವಾದೀತು, ಇದರಿಂದ ವರ್ಷಳಿಗೇ ತೊಂದರೆಯಾದೀತು ಎನಿಸುತ್ತಿದೆ!

ಗುರುಕುಲದಲ್ಲಿ ಈಗಿರುವ ವ್ಯವಸ್ಥೆಗಳ ಬಗ್ಗೆ ಪಟ್ಟಿ ಮಾಡಿದ ವೇಣು ಗೆ ಥ್ಯಾಂಕ್ಸ್. ಶಿವರಾಮ್, ನನ್ನ ’ಅಭಿಪ್ರಾಯ’ಗಳು ನನ್ನ ಅಭಿಪ್ರಾಯಗಳು. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೀರಿ, ಸಂತೋಷ. ಇಲ್ಲಿ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ಅವರಿಗೂ ಥ್ಯಾಂಕ್ಸ್.

ಇದು ಇನ್ನೂ ಮುಂದುವರೆದರೆ ನಾನದಕ್ಕೆ ಪ್ರತಿಕ್ರಿಯಿಸಲಾರೆ. ಗುರುಕುಲಕ್ಕೆ ಖಂಡಿತಾ ಬರುತ್ತೇನೆ. ನನಗೂ ನೋಡಬೇಕು ಅನಿಸುತ್ತಿದೆ.

ಜವಾಬ್ದಾರಿಯಿಂದ,

-ಸುಶ್ರುತ

NiTiN Muttige said...

ಸುಶ್ರುತ ದೊಡ್ಡೇರಿ ,,
ನಿಮ್ಮ ಇ "ಸೂಪರ್ ಹಿಟ್ " ಲೇಖನ ಓದಿದ ಮೇಲೆ ಅನಿಸಿದ್ದು.." ದಿನ ಪತ್ರಿಕೆಯ ಆಧುನೀಕ varadigaararu taavu ಕುಳಿತ A/c rOmina ಒಳಗೆ ಕುಳಿತು ,horagaDe ನಡೆಯುವ ಸುದ್ದಿ ಬರೆಯುತ್ತಾರಲ್ಲ ಹಾಗೆ..."
ಮತ್ತೆ nivu katheyanna ಚೆನ್ನಾಗಿ bareyuttira ಎನ್ನುವುದು manadaTTaayitu.
ವರದಿಗಾರರು ಸುದ್ದಿ ಇರುವಲ್ಲಿ ಹೋಗಿ ಸುದ್ದಿ ಮಾಡಿದರೆ ಎಲ್ಲಿ ತಮ್ಮ "standerd" ಹೋಗುತ್ತೋ ಅಂತಾ ಕುಲ್ಹಿತಲ್ಲೇ ವರದಿ ಮಾಡಿ,೧ ಕ್ಕೆ ೨ ಮಾಡುವಂತೆ,"ಲಾಲ್ಬಾಗ್ " ಪಕ್ಕ ಕುಳಿತು ಎಲ್ಲರಿಗು ಹೂವನ್ನು ಇಡುತ್ತಿದ್ದಿರಾ..
* ಲೇಖನ ಬರೆಯುವಾಗ ನಾವು ಕಲೆ ಹಾಕಿದ ಮಾಹಿತಿಯನ್ನು ಕೊನೆ ಪ್ರತಿ ಸಿದ್ದವಾದಗಳು ಒಮ್ಮೆ ನೋಡುವುದು ಉತ್ತಮ ಲೇಖಕನ ಜವಬ್ದಾರಿ.ಯಾಕೆಂದರೆ,ನಾವು ಮಾಹಿತಿ ಕಲೆ ಹಾಕಿದಕ್ಕು ,ಲೇಖನ ಬರೆಯುವಾಗಿನ ಸ್ತಿತಿಗು ಅಜಗಜಾಂತರ ವ್ಯತ್ಯಾಸವಾಗ ಬಹುದಲ್ಲ??
೨ ವರ್ಷದ ಹಿಂದೆ ಹೋದಾಗ ಹಾಗೆ ಇತ್ತು ಅಂತಾ Igalu ಹಾಗೆ ಇರುತ್ತದೆ ಎಂದು ತಿಳಿದಿರುವ ನೀವು, ಖಂಡಿತ ಒಮ್ಮೆ "ಗುರುಕುಲ"ವನ್ನು ನೋಡಿಬರಬೇಕು....
ಮತ್ತೆ ನಿಮ್ಮ ಪದ ಪುಂಜಗಳು ... "ಕಟ್ಟಿ ಬಿಸಾಕಿದ sheDDUgaLu...." .. ಮಠಕ್ಕೆ ೧೪೦ ವಿಧ್ಯಾರ್ಥಿಗಳನ್ನು saakalu ಆಗದೆ ಇರೋವಷ್ಟು ಏನು ಕಷ್ಟ ಅಥವಾ ಕಂಜುಸಿ ಬುದ್ದಿ ಬಂದಿಲ್ಲ..
* ನಿಮ್ಮ ಪ್ರಕಾರ ಶಾಲೆ ಅಂದರೆ ೫ ಅಂತಸ್ತು ಇರಲೇಬೇಕು ಅಂದರೆ ಮಾತ್ರ ಶಾಲೆ ಅಂತಾನ? ಮಠ ದ ಪರಿಸರದಲ್ಲಿ ಯಾವ ರೀತಿ ಇರಬೇಕೋ ,ವಿಶಿಷ್ಟ ವಾಗಿ, ಗ್ರಾಮೀಣ ಹಾಗು ಆಧುನಿಕ ೨ ರೂಪಗಳನ್ನು ಮೈದೆಳೆದಿದೆ "ಗುರುಕುಲ". ಅಲ್ಲಿ ೧ ಆದರು sheDDUgaLAnnu ತೋರಿಸಲು ನಿಮ್ಮಿಂದಾ ಸಾಧ್ಯವಿದೆಯ??
*ನೀವು (ನಾವು) ನಮ್ಮ ತನವನ್ನು ಎಷ್ಟು ಮರೆತಿದ್ದೇವೆ ಅಂದರೆ ನೀವು (naavu) ಆ ೮ ನೆ ತರಗತಿಯ "ಪುಟ್ಟಿಯ" ಹತ್ತಿರ ಕಲಿಯ ಬೇಕಾಯಿತು. ಅದು ನಿಮಗೆ ಹಿಡಿಸದೇ ಇರುವುದು ನೀವೆ ಬರೆದು ಕೊಂಡಿದ್ದಿರ!! " ’ಅಂಗಡಿಯಲ್ಲಿ ಸಿಗುವ ಸಿದ್ಧ ಆಹಾರಗಳ್ಯಾವುದನ್ನೂ ತಿನ್ನುವ ಹಾಗಿಲ್ಲ. ಅವೆಲ್ಲಾ ಪೇಟೆ ತಿನಿಸುಗಳು; ನಮ್ಮ ಸಂಕೃತಿಗೆ ಹೊಂದುವುದಿಲ್ಲ " ಎಂದು ಅವಳು ಹೇಳಬೇಕಾದರೆ ನೀವು ಅವಳನ್ನು ಮೆಚಕಾಬೇಕಾಗಿತ್ತು. ಅದನ್ನು ಬಿಟ್ಟು, "ಫಿಜ್ಜ" "biscuit" ಇದ್ದರೆ ಮಾತ್ರ ಹೊಟ್ಟೆ ತುಂಬುತ್ತದೆ ಎಂದು ತಿಳಿದಿರುವ ನಿಮಗೆ ಹೇಗೆ ಅರ್ಥ ಆಗುತ್ತೆ ಬಿಡಿ.
*ನಿಮ್ಮ ಪ್ರಕಾರ ಹುಡುಗಿಯರಿಗೆ ಸಂಸ್ಕ್ರತಿ ಅವಶ್ಯವಿಲ್ಲ ಎಂದಾಯ್ತು.ಸಂಸ್ಕ್ರತಿ ಕೇವಲ ಮನೆ ಮುಂದೆ ಹಾಕುವ ರಂಗೊಲಿಗೆ ಸೀಮಿತವಲ್ಲ.ನಮ್ಮ ಜೀವನದ ರೀತಿ ನಿತಿಗು ಇರುತ್ತೆ.
ಬೆಂಗಳುರಿನಲ್ಲೇ ಜಗತ್ತಿನ ಅತ್ಯಂತ ದೊಡ್ಡ ಕಂಪನಿ ಲಿ ಕೆಲಸ ಮಾಡುವ ನನ್ನ ಪರಚಿತರೊಬ್ಬರು, ದಿನಾ ಬೆಳಿಗ್ಗೆ ಮನೆ ಮುಂದೆ ರಂಗೋಲಿ ಹಾಕಿ ಧ್ಯಾನ ಮಾಡುತ್ತಾರೆ.ನಗರಕ್ಕೆ ಬಂದ ಮೇಲೆ ಎಲ್ಲ "ಬಿಡುವುದಕ್ಕಿಂತ" ,"ಬಿಡುತ್ತಾರೆ" ಎಂದು ತಿಳಿದುಕೊಳ್ಳುವ ಬದಲು, ನಾವು ಅದನ್ನು ಉಳಿಸಿ ಕೊಳ್ಳಬಹುದಲ್ಲ?? ಉಳಿಸಲು ಪ್ರೆರೆಪಿಸ ಬಹುದಲ್ಲ?? ನಿವೆಕೆ ರಂಗೋಲಿ ಹಾಕ್ತಿರ ಅಂಥಾ ನಾವೇ ಅವರಲ್ಲಿ ಕೇಳಿದರೆ ಅವರು ಹಾಕುವ ಮನಸನ್ನಾದರೂ ಹೇಗೆ ಮಾಡ್ತಾರಪ್ಪ??
*ನಗರಕ್ಕೆ ಬರೋರಿಗೆಲ್ಲ ಸಂಸ್ಕ್ರತಿ ಬೇಡ, ಹಳ್ಳಿಗಳಲ್ಲಿ ಬೇಕು ಅಂಥ ತಾನೆ ನಿಮ್ಮ ಮಾತಿನ ಅರ್ಥ??ಅದಕ್ಕೆ ನಗರದಲ್ಲಿ ನಡೆಯಬಾರ್ದೆ ಇರೋದೆಲ್ಲ ನಡಿತಾ ಇರೋದು....
*ತಂಬುಲಿ,ಮಾವಿನ ಕಾಯಿ ಗೊಜ್ಜು ಇರ್ತ ಕೆಲಿದ್ರಿ.... ಅದನ್ನು ಕಲ್ತಕಂದು ಮಾಡ್ತಾ ಇದ್ರೆ ಇದ್ದೆ ಇರ್ತು.. ಅದೇ "ಫಿಜ್ಜ" "biscuit" ಹೇಳಿ ತಿಂತಾ ಇದ್ರೆ ಕಡಿಗೆ ಮಠ ದ "ಗುರುಕುಲ" ಕ್ಕೆ ಹೋಗಿ ಕಲ್ತಕಂಡು ಬರವು.. ಅಲ್ಲಿ ವಿಧ್ಯಾರ್ಥಿಗಳು ನಮ್ಮನ್ನೆಲ್ಲಾ ಸ್ವಾಗತಿಸುತ್ತಾ ಇರ್ತ,, ನಮ್ಮ ಸಂಸ್ಕ್ರತಿನೆ ಮರೆತವರಿವರು ಆಧುನಿಕತೆ ಬೆನ್ನು ಹತ್ತಿ ಹೇಳಿ....!!

*ಮಠದ ಬಗ್ಗೆ ವಿರೋಧವಾಗಿ ಬರೆದರೆ ಯಾರು ನಿನಗೆ ಬೈತ್ವಿಲ್ಲೇ hedrada, ಗುರುಗಳು ಹೇಳೋದು ಅದೇ,ಎಂತಾದರು ತಪ್ಪು ಆದ್ರೆ ಹೇಳಿ ಹೇಳಿ..ಆದ್ರೆ ಇ ರಿತಿ ತಪ್ಪು ಮಾಹಿತಿ niiDi ಹಾದಿ ತಪ್ಪಿಸುವ ಕೆಲಸ ಆದ್ರೆ ಯಾರು ಸುಮ್ಮನಿರ್ತ??

*ಮತ್ತೆ "ವರ್ಷ" La kavanadalli ಕಾಣದೆ ಇರುವುದನ್ನು ಏನು ಕಂಡೆ ಗೊತ್ತಾಗಲಿಲ್ಲ...ಕೆಲವರು ಬೇಗ ಬೆಲೆಯ ಬಹುದು.. ಇನ್ನು ಕೆಲವರು ನಿಧಾನವಾಗಿ ಬೆಳೆಯುತ್ತಾರೆ,ಇನ್ನು ಕೆಲವರು ವಯಸ್ಸಿಗೆ ತಕ್ಕ ಹಾಗೆ ಬೆಳೆಯಬಹುದು.,ಎಷ್ಟು ಜನ ಚಿಕ್ಕ ವಯಸಲ್ಲೇ "ಹಿರಿಯ" ಸಾಧನೆ ಮಾಡ್ಲಿಲ್ಲ??
"ನಮ್ಮೆಲ್ಲರ ತಾಯಿ ಗೋವು
ಇದನ್ನು ರಕ್ಷಿಸಬೇಕು ನಾವು
ರಕ್ಷಿಸದಿದ್ದರೆ ಆಕೆಗಾಗುವುದು ನೋವು
ಆಕೆಗೆ ನೋವಾದರೆ ನಮಗೆ ಬರುವುದು saavu "
ಆಕೆಗಿರುವ ಕಾಳಜಿಯನ್ನು ನೋಡಿ.. ನಿಮ್ಮ it.. ಬಿಟಿ ಗೆ govina ನೋವು ಹೇಗೆ ಗೊತ್ತಾಗಬೇಕು?? ಅಷ್ಟಕ್ಕೂ ಗೋವಿನ ನೋವು " ಬೆಂಗಳೂರಿನ ೩ ನೆ ಮಹಡಿಯಲ್ಲಿ ಕುಲಿತಿರುವವರಿಗೆ, ಪಾರ್ಟಿ , ಕ್ಲಬ್ " ಇವರಿಗೆಲ್ಲಾ ಹೇಗೆ ಗೊತ್ತಾಗತ್ತೆ??

ಗುರುಕುಲದ ಪ್ರಧಾನಾಚಾರ್ಯರೆ ಹೇಳಿದ ಹಾಗೆ ಯಾಕೆ ಎಲ್ಲರು ಗುರುಕುಲ ನೋಡಿ ಬರಬಾರದು??


@ #%&ಶ್ರಿಹರ್ಷಾ#%&
ಮಠದ ವಿರುದ್ದ ಯಾರು ಮಾತಡಲಾಗ ಹೇಳಿ "ಫರ್ಮಾನು" ಹೊಡ್ಸಿದ್ವಿಲ್ಲೇ. ಇದ್ದಿದ್ದಿದ್ದಹಂಗೆ ಹೇಳಿದ್ರೆ ಎಲ್ಲ ಕೇಳ್ತಾ...
ಇಲ್ಲಿ ಕಾಮೆಂಟ್ ಮಾಡ್ತಾ ಇಪ್ಪ್ವಕು ಯಾರು ದುಡ್ಡು ಕೊಟ್ಟು ಮಾಡ್ಸ್ತಾ ಇಲ್ಲೇ...


@#%&ಶ್ರೀನಿಧಿ#%&
ಅಂದ್ರೆ ಕೆಲವರನ್ನಾದ್ರು ಬ್ಲಾಗ್ ಗೆ ಎಂಟ್ರಿ ಮಾಡ್ಸವು ಹೇಳಿ "ಇ ಸೂಪರ್ ಹಿಟ್" ಪೋಸ್ಟ್ ನ ಪೋಸ್ಟ್ ಮಾದಲಾಗಿದೆಯೋ ಹೆಂಗೆ??!!ಇಲ್ಲಿ "ಸುಶ್" ಬಗ್ಗೆ ಯಾರಿಗೂ ಅಸಮಾಧಾನ ಇಲ್ಲೇ. ಕೇವಲ ಬರೆದ ಬರಹಕ್ಕೆ ಮಾತ್ರ ಕಾಮೆಂಟ್ ಮಾಡ್ತಾ ಇದ್ದ..

ಶರಶ್ಚಂದ್ರ ಕಲ್ಮನೆ said...

ಹಾಯ್ ಸುಶ್,

ಇಲ್ಲಿ ಎರಡು ತರದ ಜನ ಬರಿತಾ ಇದ್ದ ಅನ್ನಿಸ್ತಿದ್ದು. ಒಬ್ರು ಮಠನ ಹಚ್ಚಿಕೊಂಡಿರವ್ರು, ಮತ್ತೊಬ್ರು ಅಷ್ಟೊಂದು ಹಚ್ಚಿಕೊಳ್ಳದೆ ಇದ್ದವ್ರು. ನೀನು ತೀರಾ ತಲೆ ಕೆಡಿಸಿಕೊಳ್ಳಡ. ನೀನು ಕಂಡಿದ್ದು, ನಿನಗೆ ಅನಿಸಿದ್ದು ನೀನು ಬರದ್ದೆ. ಅದನ್ನ ತಪ್ಪು ಅಥವಾ ಸರಿ ಅಂಥ ತೀರ್ಮಾನ ಕೊಡಕ್ಕೆ ಯಾರೂ ಆಗ್ತಲ್ಲೆ. ನೀನು ನೋಡಿ ಬಂದ ಮೇಲೆ ಗುರುಕುಲ ಇಂಪ್ರೂವ್ ಆಯ್ದೇನ. ನಿನಗೆ ಇದ್ದ ಕಾಳಜಿ ನೋಡಿ ಸಂತೋಷ ಆತು. ಕೆಲವರು ಬರೆದಿದ್ದು ನೋಡಿದ್ರೆ "ಊರಿಗೆ ಬಾ ಕಾಲು ಮುರಿತಿ" ಅನ್ನ ಹಂಗಿದ್ದು. ಎಲ್ಲರೂ ಸ್ವಲ್ಪ ತಾಳ್ಮೆಇಂದ ಇದ್ದಿದ್ರೆ ಚನ್ನಾಗಿರ್ತಿತ್ತು. ತಿನ್ನ ಆಹಾರನ ರಾಜಸ-ತಾಮಸನ ಅಂತ ವಿಮರ್ಶಿಸಿ ತಿನ್ನಕ್ಕಾಗ್ತಲ್ಲೆ. ಹಂಗೆ ಮಾಡಿದ್ರೆ ಅದಕ್ಕೆ ಪಥ್ಯ ಅನ್ಲಕ್ಕು. ಲೇಖನ ಚನ್ನಾಗಿ ಬರದ್ದೆ.

Manu said...

ಆತ್ಮೀಯರೇ,

ನಾನು ಮನು ಪ್ರಭಾಕರ್,

ನಿನ್ನೆಯಿಂದ ಬಹಳಷ್ಟು ಜನ ನನಗೆ ಫೋನ್ ಮಾಡಿ ನೀನು ಯಾಕೆ ಹಾಗೆ ಕಮೆಂಟ್ ಮಾಡಿದ್ದೀಯ ಅಂತ ಕೇಳಿದರು. ಯಾವ ಕಮೆಂಟು ಅಂತ ಕೇಳಿದಾಗ ಸುಶ್ರುತನ ಬ್ಲಾಗ್ ನಲ್ಲಿ ಏನೇನೋ ಕಮೆಂಟ್ ಮಾಡ್ತಾಯಿದೀಯ ಅಂದ್ರು.
ಕೊನೆಗೆ ನನಗರಿವಾಗಿದ್ದು ಬೇರೆ ಯಾರೋ ಮನು ಎಂಬುವವರು ಬರೆದ ಕಮೆಂಟನ್ನು ನಾನು ಬರೆದಿರಬಹುದೆಂದು ತಿಳಿದು ಅವರು ನನಗೆ ಫೋನಾಯಿಸಿದ್ದು ಅಂತ.

ಮೇಲೆ ಕಮೆಂಟ್ ಬರೆದ ಮನು ಯಾರೆಂದು ನನಗೆ ಗೊತ್ತಿಲ್ಲ. ಅದು ನನ್ನ ಕಮೆಂಟು ಅಲ್ಲ.

-ಮನು ಪ್ರಭಾಕರ್

prajavani said...

"ಹಾಯ್ ದೊಡ್ಡೇರಿ."

ಏನೇ ಆಗಲಿ ಬ್ಲಾಗ್ ಅಂತ ಗೊತ್ತಿಲ್ದೇ ಇದ್ದೋರಿಗೂ ಅದರ ಪರಿಚಯ ಮಾಡಿದ ಹಾಗೆ ಆಯ್ತು. ಎಂತೆಂತಾ ಒಳ್ಳೆ ಕಥೆ ಬರೆದಿದ್ದ ನಿನಗೆ ಓದುಗರು ಸಿಕ್ಕಿದ್ರೋ ಇಲ್ವೋ ಗೊತ್ತಿಲ್ಲ.ಆದರೆ ಇದಕ್ಕಂತೂ ಬರಾಪೂರ್. ನೆಗೇಟೀವ್ ಪ್ರಪಂಚ ಇದು. ಪಬ್ಲಿಕ್ ನ್ನು ರೀಚ್ ಆಗ್ಬೇಕು ಅಂತಾದ್ರೆ ನೆಗೇಟೀವ್ ವೇ ತುಂಬಾ ಫಾಸ್ಟ್. (ರವಿ ಬೆಳೆಗೆರೆ, ಲಂಕೆಶ್ ಮುಂತಾದವರು ಆಯ್ದುಕೊಂಡು ದುಡ್ಡು ದೋಚಿದ್ದೂ ಇದನ್ನೆ) ಈ ತರಹದ ಹುಚ್ಚಿನಲ್ಲಿ (ಹುಚ್ಚು ಅಂತ ಯಾಕಂದೆ ಅಂತಂದ್ರೆ ಜನ ಹಿಂದೆ ಬಿದ್ದಾಗ ಆವರಿಸಿಕೊಳ್ಳುವ ಉನ್ಮಾದ) ನೀನು ಕತೆ ಬರೆಯುವುದನ್ನು ಬಿಟ್ಟುಬಿಡಬೇಡ. ನಮಗೆ ನಿನ್ನ ಕತೆ ಬೇಕು ದೊರೆ. ಸಾಧ್ಯವಾದರೆ ಗುರುಕುಲ ಅಂದರೆ ಹ್ಯಾಗಿರಬೇಕು ಅಲ್ಲಿನ ಶಿಕ್ಷಣಕ್ಕೆ ನೀನು ಏನು ಕೊಡುಗೆ ಕೊಡಬಲ್ಲೆ? ಎಂಬಂತಹ ಯೋಚನೆ ಹೊರಬರಲಿ. ತಪ್ಪು ತೋರಿಸುವುದು ನನ್ನಂತಹ ಅಬ್ಬೆಪಾರಿಯ್ತೂ ಮಾಡಬಲ್ಲ. ನಿಮ್ಮಂತಹವರು ಸರಿಪಡಿಸಲು ಮುಂದಾಗಬೇಕು.ವರ್ಷ ಬರೆದ ಕವನ ಅವಳ ಅಂತರಾಳದ ನುಡಿ ಅಲ್ಲ. ಅಲ್ಲಿ ಇಲ್ಲಿ ನಿತ್ಯ ಕೇಳಿದ್ದು ತಾನಿದ್ದ ಜಾಗದಲ್ಲಿ ಬೆಲೆ ಸಿಕ್ಕಿದ್ದು ಬರೆದಿದೆ ಆ ಮಗು. ಆಕೆಯ ಬಗ್ಗೆ ನೆಗೇಟೀವ್ ಯೋಚನೆ ಬೇಡ. ಇಸ್ಕಾನ್ ಸ್ವಾಮಿಗಳಿದ್ದಾರಲ್ಲ ಅವರೆಲ್ಲಾ (ಬಹುಪಾಲು ಜನ)ಓದಿದ್ದು ಕಾನ್ವೆಂಟ್ ಶಿಕ್ಷಣದಲ್ಲಿ. ಎಂ.ಬಿ.ಬಿ.ಎಸ್ ಮುಗಿಸಿ ಸನ್ಯಾಸ ಸ್ವೀಕರಿಸಿದ್ದಾರೆ. ಹಾಗಾಗಿ ಜೀವನಕ್ಕೂ ಶಿಕ್ಷಣಕ್ಕೂ ಸಂಬಂಧವೇ ಇಲ್ಲವೇನೋ ಅಂತ ಒಮ್ಮೊಮ್ಮೆ ಅನ್ನಿಸುತ್ತದೆ. ಕೇವಲ ಹೇಳುತ್ತಾ ಕುಳಿತರೆ ಅರ್ಥವಿಲ್ಲ ಮಾಡಿ ತೋರಿಸಬೇಕು. ಉತ್ತಮ ಸಾಮಾಜಿಕ ಕಳಕಳಿ ಹೊಂದಿರುವ ಸುಶ್ರುತ ದೊಡ್ಡೇರಿ ಯವರು ಗುರುಕುಲಕ್ಕೆ ಹೊಸ ರೂಪುರೇಷೆ ಒದಗಿಸಲಿ ಹಾಗೂ ಅವರ ಮುಂದಿನ ಬ್ಲಾಗ್ ನಲ್ಲಿ ಗುರುಕುಲದ ಬದಲಾವನೆಯಲ್ಲಿ ನನ್ನ ಪಾತ್ರ ಎಂಬ ಲೇಖನ ಬರಲಿ ಎಂದು ಆಶಿಸುವ
-ತಟಸ್ಥ

Naveen Hegde said...

Dear Mr S Dodderi,
I would really appreciate your writing skills but not the way you are putting it to the public. Freedom of writing is being able to write freely without censorship. But to be honest, the right to freedom of writing, speech is not absolute in any country, although the degree of freedom varies greatly. So that means everyone has the right to write anything unless and until it won't affects others emotion. I presume that being a writer as well as an educated person you must be knowing all those things.

Well commenting on the above topic it’s seems you are not much aware of anything about Math, Math’s Gurukula etc.

Dear Mr.Dodderi initially I would like to know few things from you.

What was the reason that you deleted few comments, which are opposed to u? Mr.Dodderi when you have published your so-called "Super-Hit"(as mentioned by ur friend)thoughts on the Web then if some one is giving you their opinion wherein you are supposed to accept as it is. If you can’t accept the opinions from the public, can’t take their views into your topic then why are you posting the topic over the BLOGS.


Have you ever had a chance to talk to Gurukulas students other than your Varsha?

ದೊಡ್ಡೇರಿ ಅವರೇ, ನೀವೆ ಹೇಳಿದ ಹಾಗೆ ವರ್ಷಾ ಅವರನ್ನ ನೀವು Gurukuladalli ನೋಡಿದ್ದು ಎರಡು ವರುಷದ ಹಿಂದೆ. ಬದಲಾವಣೆ ದಿನ ನಿತ್ಯದ ಸಂಗತಿ. ಅದು ನಿಮಗೂ ಕೂಡ ಚೆನ್ನಾಗಿ ಗೊತ್ತು. ಎರಡು ವರ್ಷದಲ್ಲಿ ಒಮ್ಮೆ ಆದರು ನೀವು ಗುರುಕುಲಕ್ಕೆ ಭೇಟಿ ಕೊಟ್ಟಿದ್ದಿರಾ? ವೇಣು ಅವರು ಹಾಕಿದ ಪೋಸ್ಟ್ ಸ್ವಲ್ಪ್ಪನೋಡಿ. ಏನೇನೂ ಇದೆ ಅನ್ನುವುದರ ಬಗ್ಗೆ ಚಿಕ್ಕ ಮಾಹಿತಿ ಸಿಗುತ್ತದೆ. ಕೆಲವೊಬ್ಬರು ಇಲ್ಲಿ Modern and Tradition education ಬಗ್ಗೆ ಮಾತಾಡಿದ್ದಾರೆ. ಏನು ಹಾಗಂದರೆ ಎಂದು ಯಾರಿಗಾದರೂ ಗೊತ್ತಿದಿಯಾ? Education ಏನು ಎಂದ್ದು ಗೊತ್ತಿಲ್ಲದ್ದ ಜನ ನಮ್ಮ ಸಮಾಜಕ್ಕೆ ಏನು ಕೊಟ್ಟರು. ತಮನ್ನು buddijivigalu, sudharanavadigalu ಎಂದ್ದು ಕರೆದುಕೊಳ್ಳುವ ಇವರು ಏನು ಮಾಡಿದ್ದರೆ ಎಂದ್ದು ನೋಡಿದರೆ ಕೇವಲ ಸಿಗುವುದು Criticism astte. ನಮ್ಮ jivana ನಮ್ಮ kainalli idiye ಹೊರತು innobara hattira ಅಲ್ಲ. ಅದಕ್ಕೆ Nitin Hegde ಅವರು sariyada ಒಂದು software engineer avaraa example kottidare. ಆದರೆ ಜಗದೀಶ ಶರ್ಮ ಅವರಾ post ಯಾರು delete ಮಾಡಿದ್ದೂ ಅನ್ನುವುದಕ್ಕೆ answer ನಿವೇ ಕೊಡಬೇಕೇ ವಿನಃ ಬೇರೆ ಯಾರು ಅಲ್ಲ.


ಶ್ರೀಹರ್ಷ ಅವರೇ ನೀವು ಎಷ್ಟು ಸಲ Mathkke ಬನ್ದಿದಿರ? Mathdalli ನಿಮಗೆ nagumukada swagatha sigutadeye ಹೊರತು ಅಲ್ಲಿ yaru nimannu hedarisuva ಕೆಲಸ maduvudilla. ಏನು gottilade enenu ಹೇಳಲು hogabedi. ನಿಮಗೆ gottidare ದಯವಿಟ್ಟು ಹೇಳಿ ನಿಮಗೆ yavaga a ಅನುಭವ agide antta ನಾನು ತಿಳಿದು ಕೊಳ್ಳುತ್ತೇನೆ .


Dodderi ಅವರೇ ನೀವು e lekhanada lekakaru ಇದಕ್ಕೆ bandda pratikiyege reply madale ಬೇಕು. haage ಕುಳಿತು kolla ಬೇಡಿ. Yarige Mathada ಬಗ್ಗೆ, ಏನು vichara (bahalasttu ಜನರಿಗೆ alppa swlppa gottiddu hige agide endu ನನ್ನ ಅನಿಸಿಕೆ)gottilavu Jagadishnna helida hage ದಯವಿಟ್ಟು ommme ಅಲ್ಲಿಗೆ ಹೋಗಿ ಬನ್ನಿ.

ಯಾರೋ ಬರೆದಿದ್ದರೆ ಎ ಲೇಖನ ಸೂಪರ್-ಹಿಟ್ ಅನ್ತ್ತ. ಏನು ಇದರ ಅರ್ಥ. ನಿಮಾ ಬ್ಲಾಗನ್ನು "ಸೂಪರ್ ಹಿಟ್" ಆಪಲೇ ಮಠ ದ ಬಗ್ಗೆ ನೆ ಕಾಮೆಂಟ್ ಮಾಡಿದ್ರೆ ಸಾಧ್ಯ ಅಲ್ದಾ?.. ನಿಜವಾದ ಸಮಸ್ಯೆ ತಿಳಿಸಿದರೆ ಎಲ್ಲರು ಒಪುತ್ತಾರೆ.ಏನು ಗೊತ್ತಿಲ್ಲದೆ "ಸೂಪರ್ ಹಿಟ್" ಆಗಲು ಬರೆದರೆ,ಪ್ರಚಾರ ದೃಷ್ಟಿಯಿಂದ ಮಾಡಿದ್ದು ಅಂತಾ ಅಂದುಕೊಳಬೇಕಾಗುತ್ತದೆ..

ಒಂದು organizationnannu develop ಮಾಡೋದು ಚಿಕ್ಕ ಕೆಲಸವಲ್ಲ. ನಿಮ್ಮ ಹತ್ತಿರ ಅದನ್ನು ಮಾಡ್ಲಿಕ್ಕೆ ಆಗದೆ ಇದ್ದರೆ ಮಾಡುತಿರುವರ ಬಗ್ಗೆ ಅಪಪ್ರಚಾರ ಮಾಡೋದನ್ನಾದರು ನಿಲ್ಲಿಸಿ.

ಮೇಲೆ ತಟಸ್ತ್ತರು ಹೇಳಿದ ಹಾಗೆ ಒಂದ್ದು organization develope ಮಾಡಲು ನಿಮ್ಮ ಸಲಹೆ ಸೂಚನೆಗಳನ್ನು ಕೊಡಿ.

Unknown said...

ಆತ್ಮೀಯ ಗೆಳೆಯರೇ,

ಬಹುಶಃ ನೀವೆಲ್ಲಾ "ಮಕ್ಕಳಿಗೆ ಎಂತಹ ಶಿಕ್ಷಣ ಬೇಕು" ಅನ್ನುವ ಲೇಖನ ಮಾಲಿಕೆಯನ್ನು ಶ್ರೀಮಠದ ಮಾಸಪತ್ರಿಕೆಯಾದ "ಧರ್ಮಭಾರತೀ" ಯಲ್ಲಿ ಓದಿಲ್ಲವೆಂದುಕೊಂಡಿದ್ದೇನೆ. ಈ ಲೇಖನ ಮಾಲಿಕೆಯಲ್ಲಿ ಸಮಾಜದ ಗಣ್ಯರು, ಚಿಂತಕರು ತಮ್ಮ ಲೇಖನವನ್ನು ಬರೆದಿದ್ದಾರೆ. ಧರ್ಮಭಾರತೀ ಪತ್ರಿಕೆ ಒಂದು ಧಾರ್ಮಿಕ ಪತ್ರಿಕೆ, ಅದರಿಂದ ನಮಗೆ ಪ್ರಯೋಜನವಾಗೊಲ್ಲ ಅಂತ ಕೆಲವರಿಗನಿಸಿರಬಹುದು. ಆದರೆ ಅದರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ವಿಷಯಗಳನ್ನು ಒಳಗೊಂಡಿದ್ದು ಅದರ ಸಾರಥ್ಯವನ್ನು ಗುರುಕುಲದ ಪ್ರದಾನಾಚಾರ್ಯರಾದ ಶ್ರೀ ಜಗದೀಶ ಶರ್ಮಾರವರು ನಿರ್ವಹಿಸುತ್ತಿದ್ದಾರೆ. ಅದೀಗ ಅಂತರಜಾಲದಲ್ಲಿ ಲಭ್ಯವಿದ್ದು ತಾವು ಬಿಡುವಾದಾಗ ಧರ್ಮಭಾರತೀ ಈ-ಪತ್ರಿಕೆಯನ್ನು ಓದಿ. http://dharmabharathi.org

ಇದೇನು ಗುರುಕುಲದಿಂದ ಧರ್ಮಭಾರತೀ ಕಡೆ ಹೋಗ್ತಾಯಿದೀನಿ ಅಂತ ಕುತೂಹಲಗೊಳ್ಳಬೇಡಿ, ಸ್ವಲ್ಪ ತಾಳ್ಮೆಯಿಂದ ಓದಿ. ಶ್ರೀ ಮಠ ಇದ್ದಕಿದ್ದ ಹಾಗೆ ಗುರುಕುಲ ಹಾಗಿರಬೇಕು, ಹಿಗಿರಬೇಕು ಅಂತ ತೀರ್ಮಾನ ತೆಗೆದುಕೊಂಡಿಲ್ಲ. ಒಂದು ಸ್ಪಷ್ಟ ಗುರಿಯನ್ನಿಟ್ಟುಕೊಂಡು ಪ್ರಾರಂಭವಾಗಿದ್ದು.

ಈಗಿನ ಆಧುನಿಕ ಶೈಕ್ಷಣಿಕ ರೀತಿಯನ್ನು ಗಮನಿಸುತ್ತಿದ್ದೀರಾ? ಚಿಕ್ಕ ಚಿಕ್ಕ ಮಕ್ಕಳು ಹೊತ್ತುಕೊಂಡು ಹೋಗೋ ಬ್ಯಾಗ್ ಎಷ್ಟು ಬಾರವಾಗಿರತ್ತೆ ಅಂತ ಗಮನಿಸಿದ್ದೀರಾ? ನಮ್ಮ ಪಠ್ಯ ಪುಸ್ತಕಗಳು ನಮ್ಮ ಜೀವನದಲ್ಲಿ ಬಹಳ ಸಹಾಯವಾಗತ್ತೆ ಅಂತ ಅನಿಸೊತ್ತಾ? ನಮಗೆ ತುಂಬಾ ಮುಖ್ಯವಾದುದು ಜೀವನ ಅಂದ್ರೆ ಏನು, ಜೀವನದ ಗುರಿಯೇನು, ಜೀವನ ಹೇಗೆ ಸಾಗಿಸಬೇಕು ಅನ್ನೋದು. ಅದು ನಮ್ಮ ಆಧುನಿಕ ಶೈಕ್ಷಣಿಕ ಪದ್ದತಿಯಲ್ಲಿ ಇದೆಯಾ? ಬೆಳೆಯುವ ಮಕ್ಕಳಿಗೆ ಮನೆಯಿಂದ, ಸಮಾಜದಿಂದ ಬರುವ ಒತ್ತಡವೇನು ಗಮನಿಸಿದ್ದೀರಾ? ನೀನು ಅದನ್ನು ಓದಬೇಕು, ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು ಮುಂತಾದವು... ಅದರ ಹಿಂದಿನ ಮೂಲಾರ್ಥ ಹಣಗಳಿಕೆ, ದುಡ್ಡೇ ದೊಡ್ಡಪ್ಪ ಎನ್ನುವ ವಾಖ್ಯ ಅಲ್ಲವೇ? ಪ್ರತಿಯೊಬ್ಬರೂ ಡಾಕ್ಟರ್, ಇಂಜಿನೀಯರ್ ಆದ್ರೆ ಮುಂದೆ ನಾವು ಎನ್ ತಿನ್ಬೇಕು ಹೇಳಿ. ಹಳ್ಳಿಯ ಪ್ರತಿಯೊಬ್ಬರೂ ಪೇಟೆಯತ್ತ ಮುಖಮಾಡಿದರೆ ಮುಂದೆ ಪರಿಸ್ಥಿತಿ ಹೇಗಾಗಬಹುದು. ಇದಕ್ಕೆ ಮೂಲಕಾರಣ ಶಿಕ್ಷಣದ ವ್ಯವಸ್ಥೆ. ಈಗಿನ ಆಧುನಿಕ ಶಿಕ್ಷಣದಲ್ಲಿ ಒದ್ತಾಯಿರೋ ಮಕ್ಕಳಿಗೆ ಶಿಕ್ಷಕರು ಕೊಡೋ ಹೋಂ ವರ್ಕ್ ಎಷ್ಟಿರತ್ತೆ ಗೊತ್ತಾ? ಬಹುಶಃ ಇಲ್ಲಿ ಎಲ್ಲ ಅವಿವಾಹಿತರಿದ್ದೀರಿ, ಅದಕ್ಕೆ ನಿಮಗರಿವಿಗೆ ಬಂದಿಲ್ಲ. ಮನೆಗೆ ಬಂದ ಮಗು ಟ್ಯೂಷನ್ ಗೆ ಹೋಗ್ಬೇಕು, ಅಮ್ಮ ಸಂಗೀತ ಕ್ಲಾಸಿಗೆ ಸೇರ್ಸಿದಾಳೆ, ಅದಕ್ಕೆ ಹೋಗ್ಬೇಕು. ಸಂಜೆ ಮನೆಗ ಬಂದು ಹೋಂ ವರ್ಕ್ ಮಾಡಬೇಕು ಮುಂತಾದವು. ಆ ಮಕ್ಕಳಿಗೆ ಆಡಲು ಸಮಯ ಇರತ್ತಾ? ಮಕ್ಕಳಿಗೆ ಮನರಂಜನೆ ಎನಿರತ್ತೆ ಹೇಳಿ? ಬರೀ ಕಾರ್ಟೂನ್ ನೆಟ್ವರ್ಕ್ ಅಂತಹ ಚಾನೆಲ್ ಗಳನ್ನು ನೋಡ್ತಾರೆ... ನಮ್ಮ ಪುರಾತನ ಶೈಲಿ ಹೇಗಿತ್ತು, ನಮ್ಮ ಪೂರ್ವಜರು ಹೇಗಿದ್ದರೂ, ನಮ್ಮ ಭಾರತ ಯಾಕೆ ಪ್ರಸಿದ್ದಿ ಪಡೆದಿತ್ತು ಅಂತ ಅರಿವಿರಲ್ಲ. ಅದೆಲ್ಲಾ ಹೋಗಲಿ ಮನೆಗೆ ಯಾರಾದ್ರು ಬಂದರೆ "ಬನ್ನಿ ಕುಳಿತುಕೊಳ್ಳಿ" ಅಂತ ಹೇಳೋಕಾದ್ರು ಗೊತ್ತಿರತ್ತಾ? ಅದೂ ಇಲ್ಲ. ಯಾಕೆ ಹೀಗೆ ಅಂದ್ರೆ ಅವರಿಗೆ ಜೀವನದ ಬಗ್ಗೆ ಸರಿಯಾದ ಸಂಸ್ಕಾರವಿರಲ್ಲ. ಮನೆಯವರು ಅವರಿಗೆ ಸರಿಯಾದ ಸಂಸ್ಕಾರ ನೀಡಿರಲ್ಲ. ಮನೆಯವರಿಗೆ ಸಂಸ್ಕಾರ ಅಂದ್ರೆ ಏನೂ ಅಂತನೇ ಅರಿವಿರಲ್ಲ. ನಾವು ಇಷ್ಟೆಲ್ಲಾ ಬರೀತೀವಿ, ಮಾತಾಡ್ತೀವಿ..ಇದಕ್ಕೆ ಮೂಲ ಕಾರಣ ಯಾರು ಗೊತ್ತೆ..ನಮ್ಮ ಅಪ್ಪ ಅಮ್ಮರು, ಅಜ್ಜ ಮುತ್ತಾತರು. ಅವರಿಂದ ಬಂದ ಸಂಸ್ಕಾರದಿಂದ ನಾವು ಇದು ಸರಿ ಇದು ತಪ್ಪು ಅಂತ ವಿಮರ್ಶೆ ಮಾಡ್ತೀವಿ. ಆದರೆ ಈಗಿನ ಕಾಲದ ವಿದ್ಯಾರ್ಥಿಗಳಿಗೆ ಆ ಸಂಸ್ಕಾರವಿಲ್ಲ. ಈಗಿನವರಿಗೆ ಜೆನರಲ್ ನಾಲೆಡ್ಜ್ ಬಹಳ ಕಡಿಮೆ.

"ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು" . ಇಂದಿನ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ ಮುಂದೆ ಪ್ರಜೆಯಾದಾಗ ತಮ್ಮ ಜವಾಬ್ದಾರಿಯನ್ನರಿತು ತಮಗೆ ಎಲ್ಲ ಸೌಕರ್ಯವನ್ನಿತ್ತ ಸಮಾಜಕ್ಕೆ, ದೇಶಕ್ಕೆ ಒಳಿತನ್ನು ಮಾಡ್ತಾರೆ. ಸರಿಯಾದ ಶಿಕ್ಷಣ ನೀಡದೇ ಇದ್ದರೆ ಮುಂದೆ ಪ್ರಜೆಯಾದಾಗ ಬೇರೆಯವರ ಉಸಾಬರಿ ನಮಗೇಕೆ, ನಮ್ಮ ಸಂಸಾರ ಚೆನ್ನಾಗಿದ್ದರೆ ಆಯ್ತು ಅಂತ ಅದನ್ನೇ ನೋಡ್ತಾರೆ. ಹಾಗಾದ್ರೆ ನಮ್ ಸಮಾಜ, ದೇಶವನ್ನು ಮುಂದೆ ನಡೆಸೋರು ಯಾರು? ಏನೂ ಅರಿಯದ, ದೇಶದ ಬಗ್ಗೆ ಗಂದ ಗಾಳಿಯಿರದ, ಹಣದ ಮದದಿಂದ ತೇಲಾಡ್ತಾಯಿರೋ ರಾಜಕಾರಣಿಗಳು ಅಲ್ವಾ? ಆಗ ನಾವು ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಹೇಳ್ತೇವೆ ಹೊರತು ಅದನ್ನು ತಡೆಯುವ ಪ್ರಯತ್ನಕ್ಕೆ ಹೋಗೊಲ್ಲ. ಅದಕ್ಕೆ ಹೇಳಿದ್ದು ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಬೇಕು.

ಶಿಕ್ಷಣವೆಂದರೆ ಬರೀ ಪಾಠಗಳಲ್ಲ, ಅದರ ಜೊತೆಗೆ ಜಿವನದ ಬಗ್ಗೆ ಶಿಕ್ಷಣವಾಗಬೇಕು. ಜೀವನದ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು. ಅದಾದರೆ ಅವರು ಉತ್ತಮ ಜೀವನ ಸಾಧಿಸುತ್ತಾರೆ. ಅವರು ಜೀವನದಲ್ಲಿ ಹಣಗಳಿಸದಿರಬಹುದು. ಆದರೆ ಜೀವನ ಹೇಗೆ ಅನ್ನೋದನ್ನ ತಿಳಿದುಕೊಂಡಿರುತ್ತಾರೆ.

ಬೆಳೆಯುವ ಮಕ್ಕಳ ಮನಸ್ಸು ಯಾವುದು ಸರಿ, ಯಾವುದು ತಪ್ಪು ಅಂತ ಸರಿಯಾಗಿ ವಿಮರ್ಶೆ ಮಾಡುವ ಹಂತದಲ್ಲಿರೊಲ್ಲ. ಅಂತಹ ಮಕ್ಕಳಿಗೆ ಇಂದಿನ ಆಧುನಿಕ ಶಿಕ್ಷಣದ ಜೊತೆ, ಸಂಗೀತ, ಸಾಹಿತ್ಯ, ಕಲೆ, ನಾಟಕ, ಧಾರ್ಮಿಕ ವಿಷಗಳನ್ನು ಮನದಟ್ಟು ಮಾಡಿಕೊಡಬೇಕು. ಯಾರ ಮೇಲೂ ಒತ್ತಡವಿರಬಾರದು. ಯಾವುದು ಸರಿ, ಯಾವುದ ತಪ್ಪು ಅಂತ ಅವರಿಗೆ ತಿಳಿಹೇಳಬೇಕು. ಮನೆಗೆ ಬಂದ ಅಥಿತಿಗಳನ್ನು ಹೇಗೆ ಸ್ವಾಗತಿಸಬೇಕು ಎನ್ನುವ ಅರಿವಿರಬೇಕು. ನಮ್ಮ ಸುತ್ತಮುತ್ತಲಿನ ಸಮಾಜ, ದೇಶದಲ್ಲಿ ಎನಾಗ್ತಯಿದೆ ಅಂತ ಅವರಿಗೆ ತಿಳಿದಿರಬೇಕು.
ಸಮಾಜದಲ್ಲಿ ನನ್ನ ಕರ್ತವ್ಯವೇನು ಅನ್ನೋ ಅರಿವಿರಬೇಕು. ನಾವು ತೆಗೆದುಕೊಳ್ಳೋ ಅಹಾರ ಎಷ್ಟು ಮುಖ್ಯ ಅನ್ನೋದು ತಿಳಿದಿರಬೇಕು. ರಾಜಸ ಆಹಾರ, ತಾಮಸ ಆಹಾರ ಅನ್ನೋದು ಗೊತ್ತಿರಬೇಕು. ನಾವು ಆರೋಗ್ಯವಾಗಿದ್ದರೆ ತಾನೆ ನಮ್ಮ ಆಯಸ್ಸು ಜಾಸ್ತಿಯಾಗೋದು. ನಾವೇ ಸರಿಯಾದ ಆಹಾರ ತೆಗೆದುಕೊಳ್ಳದೇ ಇದ್ದರೆ ನಮ್ಮ ಆಯಸ್ಸು ಜಾಸ್ತಿಯಿರತ್ತಾ. ಅದಕ್ಕೆ ಮನುಷ್ಯನ ಆಯಸ್ಸು ಕಡಿಮೆಯಾಗ್ತಾ ಬಂದಿರುವುದು. ಚಿಕ್ಕ ವಯಸ್ಸಿನಲ್ಲಿ ಹೊಸ ಹೊಸ ರೋಗಗಳು ಆವಿಷ್ಕಾರಗೊಳ್ತಾಯಿರೋದು.

ಸರಿಯಾದ ಆಹಾರ ತಗೋಬೇಕು ಅಂದ್ರೆ ಪಥ್ಯ ಮಾಡಿದ ಹಾಗಲ್ಲ. ನಾವು ತೆಗೆದುಕೊಳ್ಳೋ ಆಹಾರದಲ್ಲಿ ಉಪ್ಪು, ಹುಳಿ, ಕಾರ ಇರಬೇಕು, ಪ್ರಮಾಣ ಸರಿಯಾಗಿರಬೇಕು. ಅವನೆಷ್ಟು ಸಿಹಿ (ಸ್ವೀಟ್ ) ಆಗಿ ಮಾತಾಡ್ತಾನೆ ಅಂತ ಹೇಳ್ತೀವಿ. ಇಲ್ಲಿ ಸಿಹಿ ಅಂದರೆ ಇಲ್ಲಿ ಒಳ್ಳೇದು ಅಂತ ಆಯ್ತು. ಹಾಗೆ ನಮ್ಮ ಆಹಾರದಲ್ಲಿ ಉಪ್ಪು ಹುಳಿಗಿಂತ ಸಿಹಿ ಸ್ವಲ್ಪ ಜಾಸ್ತಿಯಿರಬೇಕು ಅಂತ ಆಯುರ್ವೇದ ಹೇಳತ್ತೆ. ಹಾಗಂತ ಬರೀ ಸಿಹಿ ತಿಂದರೆ ಸಕ್ಕರ ಕಾಯಿಲೆ ಬರತ್ತೆ.

"ಪರಿವರ್ತನೆ ಜಗದ ನಿಯಮ"
ಈಗಿನ ಪರಿಸ್ಥಿತಿಯಲ್ಲಿ ಪ್ರಪಂಚ ಹಿಂದೆ ನಡೆದ ಬಂದ ದಾರಿಯತ್ತ ಮತ್ತೆ ಕಣ್ಣು ಹಾಯಿಸೋದನ್ನ ನಾವು ಕಾಣ್ತೇವೆ. ಇಲ್ಲಿ ಬಹಳಷ್ಟು ಜನ ಇಂಜಿನೀಯರ್ಸ್ ಇದ್ದೀರ. ನೀವು ಒತ್ತಡವನ್ನು ಹೇಗೆ ನಿಭಾಯಿಸ್ತೀರಾ ಅಂತ ನಿಮ್ಮಲ್ಲೆ ನೀವು ಪ್ರಶ್ನಿಸಿ. ಒತ್ತಡದಲ್ಲಿ ಬದುಕುವವರ ಆಯಸ್ಸು ಬಹಳ ಕಡಿಮೆ. ಮನುಷ್ಯನಿಗೆ ಒತ್ತಡ ನಿರ್ವಹಿಸೋ ಕಲೆ ಗೊತ್ತಿರಬೇಕು. ಅದಕ್ಕೆ ಈಗ ಬಹಳ ಇಂಜಿನೀಯರ್ಸ್ ಯೋಗ, ಧ್ಯಾನಕ್ಕೆ ಮೊರೆಹೋಗಿದ್ದು.ಇದು ಸಣ್ಣವರಿದ್ದಾಗ ತಿಳಿದಿದ್ದರ ಉತ್ತಮವಾಗಿತ್ತು. ಇನ್ನೂ ಕೆಲವರು ಒತ್ತಡ ನಿಭಾಯಿಸಲು ಅರಿಯದೇ ಡ್ರಿಂಕ್ಸ್ , ಸಿಗರೇಟಿಗೆ ಶರಣಾಗಿದ್ದಾರೆ. ಈಗ ಪ್ರಪಂಚ ಮತ್ತೆ ಯೋಗವೆಂದರೇನು, ಧ್ಯಾನವೆಂದರೇನು ಮುಂತಾದ ವಿಷಗಳತ್ತ ಬಹಳ ಗಮನಹರಿಸ್ತಾಯಿವೆ. ಅದರಲ್ಲೂ ಪಾಶ್ಚ್ಯಾತ್ಯರು ಭಾರತದತ್ತ ಮುಖ ಮಾಡಿದ್ದಾರೆ. ನಾವು ಭಾರತೀಯರು ಅದನ್ನೆಲ್ಲ ಮರೆತು ಈಗ ಮತ್ತೆ ಅದರತ್ತ ಪಯಣಿಸುವ ಹಾಗಾಗಿದೆ. ನಮ್ಮ ಭಾರತದಲ್ಲಿ ಇದ್ದಂತಹ ಪರಂಪರೆ ಬೇರೆ ಯಾವ ದೇಶದಲ್ಲಿ ಇತ್ತು ಹೇಳಿ.. ಎಲ್ಲೂ ಇಲ್ಲ. ಅದರನ್ನು ಹುಡುಕಿ ತೆಗೆಯುವ ಕೆಲಸವಾಗಬೇಕು. ಶ್ರೀರಾಮಚಂದ್ರಾಪುರ ಮಠ ಅದರತ್ತ ಗಮನ ಹರಿಸ್ತಾಯಿದೆ. ಇಲ್ಲಿ ಬರೀ ಧಾರ್ಮಿಕಕ್ಕೆ ಮಾತ್ರ ಗಮನ ಹರಿಸ್ತಾಯಿಲ್ಲ. ಬೇರೆ ಬೇರೆ ವಿಷಯಗಳ ಬಗ್ಗೆನೂ ಗಮನ ಹರಿಸ್ತಾಯಿದ್ದಾರೆ. ಅದರಲ್ಲಿ ಶಿಕ್ಷಣವೂ ಒಂದು. ಈ ಎಲ್ಲ ವಿಷಯಗಳ ಬಗ್ಗೆ ಗುರುಕುಲ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡ್ತಾಯಿದೆ.

ಶ್ರೀಮಠ ೨೬ ವಿದ್ಯಾಸಂಸ್ಥೆಗಳನ್ನು ನಡೆಸ್ತಾಯಿದೆ. http://dharmabharathi.org/educationinstitution.html
ಆ ಎಲ್ಲ ಸಂಸ್ಥೆಗಳ ಜವಾಬ್ದಾರಿ ಶ್ರೀ ಜಗದೀಶ ಶರ್ಮಾ ರವರು ನಿರ್ವಹಿಸುತ್ತಿದ್ದಾರೆ. ಪ್ರಾಚೀನ ಶಿಕ್ಷಣದಲ್ಲಿ, ಯೋಗ, ಧ್ಯಾನದಲ್ಲಿ ಬಹಳ ಅನುಭವವಿರುವ ಶೀ ಶಂಕರನಾರಾಯಣ ಜೋಯ್ಸ್ ರವರು, ಧಾರ್ಮೀಕ ಕ್ಷೇತ್ರದಲ್ಲಿ ತುಂಬಾ ತಿಳಿದಿರುವ ವಯೋವೃದ್ದರಾದ ಶ್ರೀರಾಮಭದ್ರ ಆಚಾರ್ಯರೂ, ವಿಜ್ನಾನದಲ್ಲಿ ಇಡೀ ಪ್ರಪಂಚವೇ ಹುಬ್ಬೇರಿಸುತ್ತಿರುವ ಇಸ್ರೋ ಸಂಸ್ಥೆಯ ಮುಖ್ಯಸ್ಥರು, ಸಂಗೀತ, ಸಾಹಿತ್ಯ, ಕಲೆ ಮುಂತಾದ ಕ್ಷೇತ್ರದಲ್ಲಿ ಪರಿಣಿತರು ಗುರುಕುಲದಲ್ಲಿ ಭಾಗವಹಿಸುತ್ತಿದ್ದಾರೆ. ನಮಗೆ ದೊರಕದ ಈ ಒಂದು ಅವಕಾಶ ನಮ್ಮ ಮಕ್ಕಳಿಗೆ ಸಿಗ್ತಾಯಿದೆಯಲ್ಲ ಅಂತ ಹೆಮ್ಮೆ ಪಡೋಣ. ಅದರ ಅಭಿವೃದ್ದಿಗೆ ನಮ್ಮ ಸಹಕಾರ ನೀಡೋಣ. ಸುಂದರ ಸಮಾಜ ನಿರ್ಮಿಸೋಣ.

ಇಲ್ಲಿ ಏನೇನೋ ಚರ್ಚೆ ನಾಡಿತಾಯಿದೆ ಅಂತ ಗುರುಕುಲವಾಗಲಿ ಅಥವಾ ಶ್ರೀಮಠವಾಗಲೀ ಚಿಂತಿತವಾಗಿಲ್ಲ. ಇದರಿಂದ ಉತ್ತಮ ಸಲಹೆಗಳು ಬಂದರೆ ಮಾತ್ರ ಸ್ವೀಕರಿಸುತ್ತದೆ. ಗುರುಕುಲ ನಡಿತಾ ಬಹಳ ವರ್ಷಗಳಾಯ್ತು. ಹಾಗೆನೂ ಮುಂದೆ ನಡೆಯತ್ತೆ. ಇದರಲ್ಲಿ ಭಾಗವಹಿಸಿದರೆ ನಿಮಗೆ ಲಾಭವಾಗಬಹುದು. ಇಷ್ಟವಿಲ್ಲದಿದ್ದರೆ ಬೇಡ.
ಆದರೆ ವಿಷಯ ಮಂಡಿಸುವಾಗ ಗಮನವಿರಲಿ.

ಹಿಂದೊಮ್ಮೆ ಗುರುಗಳನ್ನು ಬೇಟಿಯಾದಾಗ ಬೆಂಗಳೊರಿನಲ್ಲಿ ಮಠಕ್ಕೆ ಬಹಳ ಯುವಕರು ಬಂದು ಸೇವೆ ಮಾಡ್ತಾರೆ. ಬಹಳ ಸಂತೋಷವಾಗತ್ತೆ ಅಂದಿದ್ರು. ಅವರಲ್ಲಿ ಕೆಲವರ ಹೆಸರನ್ನೂ ಹೇಳಿದ್ದರು. ವೇಣು, ರಾಘವೇಂದ್ರ ಹೆಗಡೆ, ಯಜ್ನೇಶ, ಗಿರಿ, ನವೀನ, ಶ್ರೀನಿಧಿ, ಸುಮ ಮುಂತಾದವರು...ಅವರಲ್ಲಿ ಹೆಚ್ಚಿನವರು ಇಂಜಿನೀಯರ್ಸ್ ಅಂತನೂ ಹೇಳಿದ್ರು. ಈ ಬ್ಲಾಗನ್ನು ಎಲ್ಲ ಬಂದು ಓದ್ತಾಯಿದ್ದಾರೆ ಅನ್ನೋ ವಿಷಯ ಗುರುಕುಲದಿಂದ ತಿಳಿಯಿತು. ಆದರೆ ಯಾರೂ ಯಾವುದು ಸರಿ, ಯಾವುದು ತಪ್ಪು ಅಂತ ಹೇಳದೇ ಇದ್ದಿದ್ದು ಆಶ್ಚ್ಯರ್ಯವಾಗ್ತಾಯಿದೆ. ಬ್ಲಾಗಿನ ವಿಷಯವನ್ನು ಗುರುಗಳ ಗಮನಕ್ಕೆ ತಂದರೆ ಒಳ್ಳೇದು ಅನ್ನಿಸೊತ್ತೆ. ಹಾಂ... ಗುರುಗಳು ಇದರ ಬಗ್ಗೆ ಸ್ವಲ್ಪಾನೂ ಯೋಚಿಸೊಲ್ಲ. ಆದರೂ ಕೆಲವರ ಬಣ್ಣ ಬಯಲಾಗಬಹುದು.

ಸದ್ಯಕ್ಕೆ ಇಷ್ಟು ಸಾಕು.

ಶ್ರೀನಿಧಿ.ಡಿ.ಎಸ್ said...

ನಿತಿನ್ ಮುತ್ತಿಗೆ ಗೆ:

ಅಣ್ಣಾ ತಂದೆ- ನಾನಲ್ಲಪಾ ಹಾಂಗೆ ಬರ್ದಿದ್ದು!! ಅದ್ ಬೇರೆ ಶ್ರೀ! ಬೇರೆದೆಲ್ಲಾ ಇಷ್ಟಿಷ್ಟುದ್ದ ಬರದ್ದೆ, ಎಂತೆಂತೋ ಆಪಾದ್ನೆ ಮಾಡಕಾರೆ ನೋಡಲೇನ್ ಧಾಡಿ?!

ಮತ್ತು ನಿತಿನ್ ಮುತ್ತಿಗೆಯ ಗ್ರಹಿಕೆಗೆ:

ಬೆಂಗಳೂರಿನಲ್ಲಿ ಕೂತು ಬ್ಲಾಗು ಬರೆಯುವ ಎಲ್ಲರೂ IT,BT ಅಲ್ಲ, ಮತ್ತು ಪಾರ್ಟಿ - ಕ್ಲಬ್ಬು ಗಳಿಗೆ ಹೋಗಬೇಕಾಗಿಯೂ ಇಲ್ಲ!

ಸುಮ್ಮನೆ ಚರ್ಚೆ ಬೆಳಸಲಾಗುತ್ತಿದೆ. ಜಗದೀಶ ಶರ್ಮರು ಉತ್ತರಿಸಿದ್ದಾರೆ, ಮತ್ತು ಸುಶ್ರುತ ತಾನು ಯಾಕೆ ಬರೆಯಬೇಕಾಯಿತು ಅನ್ನುವುದನ್ನೂ ಹೇಳಿದ್ದಾನೆ.

ತೀರಾ ಬ್ಲಾಗು ಹಿಟ್ಟಾಗಬೇಕು ಅಂತ ಇದನ್ನ ಬರೆಯುವ ಅನಿವಾರ್ಯತೆ ಮತ್ತು ಮೆಂಟಾಲಿಟಿ ಸುಶ್ ಗೆ ಖಂಡಿತಾ ಇಲ್ಲ.ಆತ ಈ ಹಿಂದೆ ಮಠದ ಬಗ್ಗೆ "ಹೊಗಳಿಯೇ" ಬರೆದ ಎರಡೆರೆಡು ಬರಹಗಳನ್ನು ಇಲ್ಲಿ ಆತನನ್ನ ಅಥವಾ ಆತನ ವಿಚಾರಧಾರೆಯನ್ನು ಖಂಡಿಸುತ್ತಿರುವ ಒಬ್ಬರಾದರೂ ಓದಿದ್ದೀರಾ?

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್...
ಹಿಂದೊಮ್ಮೆ ಓದಿದ ಕೆಳಗಿನ ಲೇಖನಗಳ ನೆನಪಾಗಿ ಮತ್ತೆ ಓದಿಕೊಂಡೆ. ಇವೂ ಚೆನ್ನಾಗಿವೆ ಕಣೋ ಯಾವತ್ತಿನ ನಿನ್ನ ಲೇಖನಗಳಂತೆ.


http://hisushrutha.blogspot.com/2007/05/blog-post.html

http://hisushrutha.blogspot.com/2007/05/blog-post_09.html

ನಮ್ಮ ಮಠದ ಬಗೆಗಿನ ನಿನ್ನ ಪ್ರೀತಿ ಈ ರೀತಿಯಲ್ಲಿ ಲೇಖನಗಳಾಗಿ ಹೊರಬಂದಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆ. ನಮ್ಮದೆನ್ನುವ ಪ್ರೀತಿ ನಿನ್ನ ಲೇಖನದಲ್ಲಿ ಹಳಹಳಿಕೆಯಾಗಿ ಬಂದಿರುವುದೇ ಹೊರತು ನೀನೇನೂ ಯಾರನ್ನೂ ಖಂಡಿಸುತ್ತಿಲ್ಲವಲ್ಲ! ನಮ್ಮದೇ ಮಠದವರು ತಮ್ಮವನೇ ಆದ ಚಿಕ್ಕವನೊಬ್ಬನಿಂದ ಕ್ಷುಲ್ಲಕ ತಪ್ಪಾಗಿ, ಒಪ್ಪಿಕೊಂಡ ಮೇಲೂ ತಮ್ಮ ಮಗುವಿನ ತಪ್ಪೆಂದು ಪರಿಗಣಿಸಿ ಮಡಿಲೊಳಗೆ ಹಾಕಿಕೊಳ್ಳದೇ ಖಂಡಿತವಾಗಿ ಇರಲಾರ್ರು ಅನ್ನುವುದಂತೂ ಸತ್ಯ ಅನ್ನುವುದು ನನ್ನ ಭಾವನೆ.
ಸುಶ್...
ನನ್ನ ಕಮೆಂಟಿಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಿಲ್ಲ.
ಇದು ನನ್ನ ವೈಯಕ್ತಿಕ ಭಾವನೆ.

Emperor said...

ನಮಸ್ಕಾರ,

ಇದುವರೆಗಿನ ಆಗುಹೋಗುಗಲನ್ನು ನೋಡಿದರೆ, ಇಲ್ಲಿ ಲೇಖನದ ಅ೦ತರಾಳದ ಮಾತನ್ನು ಗಮನಿಸಿದ್ದಕ್ಕಿ೦ತ ಜಾಸ್ತಿ ಲೇಖಕರ ವಿರುದ್ದದ ವಾಗ್ದಾಳಿಯೇ ಹೆಚ್ಹು ಪ್ರಚುರವಾಗಿದೆ. ಇದು ಯಾವ ರೀತಿಯಿ೦ದ ಸೂಕ್ತ ಎ೦ದು ನನ್ನ ಅರಿವನ್ನು ಮೀರಿದ್ದು ಎ೦ಬುದು ನನ್ನ ಅಭಿಪ್ರಾಯ.

ಲೇಖಕನ ಅಭಿಪ್ರಾಯ ತಪ್ಪೇ ಇರಬಹುದು, ಅಥವಾ ಅದು ವಾಸ್ತವದ ಪರಿಮಿಯನ್ನು ಒಳಗೊ೦ಡಿರದೇ ಇರಬಹುದು. ಅದು ಬರಹಗಾರನ ಅನುಭವಕ್ಕೆ ಸ೦ಬ೦ದಪಟ್ಟ ವಿಷಯ.

ನನಗೆ ತಿಳಿದ ಮಟ್ಟಿಗೆ, ಇಲ್ಲಿ ನೆಗೆಟಿವ್ ಆಗಿ ಮು೦ದುವರೆದಿದ್ದು ವಾಚಕರೇ ಹೊರತು ಲೇಖಕನಲ್ಲ. ಒಬ್ಬ ಸುಶ್ರುತನ ಬರಹಕ್ಕೆ, ಲ೦ಕೇಶ್, ರವಿ ಬೆಳಗೆರೆ ಎಲ್ಲರನ್ನೂ ಒಳಸೇರಿಸಿದ್ದು ಯಾಕೆ ಎನ್ನುವುದು ಹಾಸ್ಯಾಸ್ಪದ.

ಒಟ್ಟಿನಲ್ಲಿ, ಬರಹಗಾರನನ್ನು ಖ೦ಡಿಸುವುದಾದರೆ ಅದಕ್ಕೆ ಎಷ್ಟೋ ಅತ್ಯ್ತುತ್ತಮವಾದ ದಾರಿಯಿತ್ತು. ಇಲ್ಲಿ ಬಹಳಷ್ಟು ಜನಕ್ಕೆ ಲೇಖಕನ ವಿರುದ್ದ ವಾಗ್ಡಾಳಿ ಪ್ರಿಯವಾಗಿತ್ತೇ ಹೊರತು ಆತನ ಅಭಿಪ್ರಾಯದ ಬಗೆಗಿನ ಗ೦ಭೀರ ಚಿ೦ತನೆಯಲ್ಲ.

NiTiN Muttige said...

ಶ್ರೀನಿಧಿ ಗೆ;
ದಯವಿಟ್ಟು ತಪ್ಪು ತಿಳುವಳಿಕೆಗೆ ಕ್ಷಮೆ ಇರಲಿ.....

ಆಪಾದನೆ ಮಾದವ್ಕೆ ಎಲ್ಲದು ಆಪಾದನೆ ತರನೇ ಕಾಣ್ತು!!
""ಬೆಂಗಳೂರಿನಲ್ಲಿ ಕೂತು ಬ್ಲಾಗು ಬರೆಯುವ ಎಲ್ಲರೂ IT,BT ಅಲ್ಲ, ಮತ್ತು ಪಾರ್ಟಿ - ಕ್ಲಬ್ಬು ಗಳಿಗೆ ಹೋಗಬೇಕಾಗಿಯೂ ಇಲ್ಲ!" ಎಂದು ಹೇಳುವ ನಿಮಗೆ i ಬ್ಲಾಗ್ ನಲ್ಲಿರುವ "ನಾನ್ ವೆಜ್ ಹೋಟೆಲ್" ಲಿ ತಿನ್ನುವುದು ... ಮುಂತಾದ ವಿಷಯಗಳು ಎಲ್ಲರು ಮಾಡುತ್ತಾರಾ? ಉನ್ನತ ಹುದ್ದೆಯಲ್ಲಿದ್ದರು "ಸರಿ"ಯಾಗಿರುವರು ಇರುವಾಗ ಸುಶೃತನ ಮಾತಿನಂತೆ hodare ಎಲ್ಲರು IT BT yavaranne maduveyaagabEku!!! ನಾನ್ವೆಜ್ ಹೋಟೆಲ್ ಲೇ ತಿನ್ನಬೇಕು!!

ಸುಮ್ಮನೆ ಚರ್ಚೆ ಬೆಳೆಸಲಾಗುತ್ತಿದೆ ಎನ್ನುವ nivu, ಇಲ್ಲಿ ಯಾರಾದರು ಸುಮ್ಮನೆ ಟೈಮ್ ಪಾಸ್ಸ್ ಗೆ ಚರ್ಚೆ ಮಾಡ್ತಾ ಇದ್ದಿರ ಅನಕೊಂದ್ರ?? ಇಲ್ಲಿರುವುದು ಸುಳ್ಳು maahiti ನೆ ನಿಜ ಎಂದು ನೋಡಿದವರು ತಿಳುಯಬಾರದು ಹೇಳೇ ಕಾಮೆಂಟ್ maaDtairodappa... .
sush hogaLi barediddaralli ತಪ್ಪು ಮಾಹಿತಿ iddiddare ಯಾರು ಸುಮ್ಮನೆ irodillagittu...

"ಬೇರೆದೆಲ್ಲಾ ಇಷ್ಟಿಷ್ಟುದ್ದ ಬರದ್ದೆ, ಎಂತೆಂತೋ ಆಪಾದ್ನೆ ಮಾಡಕಾರೆ ನೋಡಲೇನ್ ಧಾಡಿ?! "
ninu ೧ ಹೆಸರು tappagi aagidakke "dhaaDi" heLa ಪದ upayOgisakare, ನಿನ್ನ ಗೆಳೆಯ haakida posT ನಲ್ಲಿ nanaginta ಅದೆಷ್ಟೋ uddake ಬರೆದು , baRediruva ಅವರಿಗೆ paramarShisuva vyavadhaana iralillave??ಅವರಿಗೆ noDuva dhaaDi ellogittaDa??

prajavani said...

hai empeor

ನೀವು ಹೇಳಿದ್ದು ಸರಿ. ಆದರೆ ಒಂದು ಸಮಸ್ಯೆ ಗೊತ್ತಾ. ಬರಹಗಳು ಎಂದರೆ ಸಂತೆಯಲ್ಲಿ ಕವಳದ ಸಂಚಿ ತೆಗೆದಂತೆ. ಒಮ್ಮೆ ಬರೆದು ಸಾರ್ವಜನಿಕರಿಗೆ ಬಿಟ್ಟರೆ ಅದು ಬಹುರೂಪ ತಾಳುತ್ತದೆ. ಇಲ್ಲಿ ಲಂಕೇಶ್ ರವಿ ಬೆಳೆಗೆರೆ ಏಕೆ ಬಂದರು ಅಂತ ಸ್ವಲ್ಪ ಯೋಚಿಸಿ, ಹಾಗೆ ಯೋಚಿಸದೆ ಹಾಸ್ಯಾಸ್ಪದ ಅನ್ನಬೇಡಿ. ಇದು ಬಹಳ ಗಂಭೀರವಾದ ವಿಷಯ. ಅದ್ಭುತ ಬರಹಗಾರ ಲಂಕೆಶ್ ಹಾಗೂ ರವಿಬೆಳೆಗೆರೆ ಲೋಕದ ತಪ್ಪು ತಿದ್ದಲು ಹೋಗಿ ಅವರಲ್ಲಿದ್ದ ಕತೆಗಾರ ಕೊನೆ ಕೊನೆಗೆ ಸಾಯುತ್ತಾ ಹೋದ.ನಮ್ಮ ಸುಶ್ರುತನಲ್ಲಿರುವ ಕತೆಗಾರ( ನನಗೆ ಅವರ ಕತೆಗಳನ್ನು ಮಯೂರ ಮುಂತಾದ ಪತ್ರಿಕೆಯಲ್ಲಿ ಓದಿ ಮಾತ್ರಾ ಗೊತ್ತು, ವ್ಯಕ್ತಿ ಪರಿಚಯ ಇಲ್ಲ) ಕಾಮೆಂಟ್ ಗಳ ಭರಾಟೆಯಲ್ಲಿ ಗುಂಗು ಹತ್ತಿಸಿಕೊಂಡು ಕಳೆದು ಹೋದರೆ ನಮ್ಗೆ ಲಾಸ್ ಅಲ್ಲವೇ? ಆ ಕಳಕಳಿಯಿಂದ ಬರೆದದ್ದು. ಸಲಹೆ ಸೂಚನೆ ಕೊಟ್ಟರೆ ಅಡ್ಡಿಯಿಲ್ಲ. ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಕತೆಗಾರರ ಸಮಸ್ಯೆ ಎಂದರೆ ಅವರುಗಳು ಅವರ ಬಗ್ಗೆ ಸಣ್ಣ ಕಾಮೆಂಟ್ ಗೂ ಮಿಡಿಯುತ್ತಾರೆ.ಯೋಚಿಸುತ್ತಾರೆ. ಮತ್ತು ಅಲ್ಲಿಯೇ ಕಳೆದುಹೋಗುತ್ತಾರೆ.
-ತಟಸ್ಥ

Naveen Hegde said...

ಆತ್ಮೀಯರೆ,
ದಯವಿಟ್ಟು ತಪ್ಪು ತಿಳಿದು ಕೊಳ್ಳ ಬೇಡಿ. ನಮಗೂ ದೊಡ್ಡೇರಿ ಅವರ ಮೇಲೆ ತುಂಬ್ಬ ಗೌರವ ಇದೆ. ಇಲ್ಲಿ ಯಾರು ಅವರ ಬಗ್ಗೆ ಮಾತಾಡುತಿಲ್ಲ. ಅವರು ಬರೆದ ಲೇಖನದ ಮೇಲೆ ಚರ್ಚೆ ಮಾಡುತ್ತ ಇದ್ದಾರೆ. ಮಠ ಯಾವತ್ತು ರೌನ್ದಿಸ್ಮ್ಗೆ ಹೋಗುವುದಿಲ್ಲ. ಯಾರು ಬರುತ್ತಾರೋ ಅವರನ್ನ ನಗು ಮುಖದಿದ್ದ ಸ್ವಾಗತಿಸುತ್ತಾರೆ. ಅದನ್ನ ದೊಡ್ದೆರಿಯವರೇ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ನಿಜ ಮೇಲೆ ಯಾರೋ ಒಬ್ಬರು ಹೇಳಿದ್ದರು, ಆಪಾದ್ನೆ ಮಾಡಕಾರೆ ನೋಡಲೇನ್ (ಧಾಡಿ (ನಾನು ಇದನ್ನು ಉಪಯೋಗಿಸುವದಿಲ್ಲ) )?! ನೀವು ಹೇಳಿದ್ದು ಸತ್ಯ, ಅದನ್ನೇ ನಾವೆಲ್ಲ್ಲ ಹೇಳ್ತ್ತ ಇರೋದು. ಏನೋ ಯಾವತ್ತೋ ನೋಡಿದನ್ನ ಇವಾಗ ಅದನ್ನ ಉತ್ತ್ಪ್ರೇಕ್ಷೆ ಮಾಡಿ ಹೇಳೋ ಅವಶ್ಯಕತೆ ಇರಲಿಲ್ಲ ಅನ್ನುವದು ನನ್ನ ಭಾವನೆ.
ನಮ್ಮ ಚಿಂತನೆ ನಾಲಕ್ಕು ಜನರಿಗೆ ಒಳ್ಳೇದು ಆಗಬೇಕೆ ವಿನಃ ನಾಲಕ್ಕು ಜನರಿಗೆ ತೊಂದರೆ ಆಗಬಾರದು. ಈ ದಿಸೆಯಲ್ಲಿ ನಮ್ಮನ್ನು ಒಂದುಗುಡಿಸಿದ ದೊಡ್ದೆರಿಯವರಿಗೆ ದನ್ಯವಾದಗಳು. ಮೇಲೆ ಎಲ್ಲರು ಹೇಳಿದ ಹಾಗೇ, ಹೇಗೆ ನೀವು ಒಂದು systemnnu ಬದಲಾಯಿಸುತ್ತಿರ ಅನ್ನೋ ಬಗ್ಗೆ ನಿಮ್ಮ ಚಿಂತನೆಗಳನ್ನು, ಗುರುಕುಲಕ್ಕೆ ಭೇಟಿ ನೀಡಿದ ನಂತರ ನಮ್ಮೆಲರ ಮುಂದ್ದೆ ತರುತಿರ ಎಂದ್ದು ಆಶಿಸುತ್ತೇನೆ.
ಇನ್ನೊಮ್ಮೆ ಎಲ್ಲರಿಗು ತಿಳಿಹೇಳುವುದು ಎನೆದರೆ ಯಾರು ಬರಹಗಾರರನ್ನು ಕೆಟ್ಟದಾಗಿ ನೋಡ್ತ್ತ ಇಲ್ಲ. ಅವರ ಲೇಖನದ ಬಗ್ಗೆ ವಿಮರ್ಶ್ಹೆ ಮಾಡ್ತ್ತ ಇರೋದು astte. ಇದು ಲೇಖಕರನ್ನು ಖಂಡಿಸುವ ಉದ್ದೇಶ ಅಲ್ಲವೇ ಅಲ್ಲ. ಬರಹಗಾರ ವಾಸ್ತವ ಸಂಗತಿಯನ್ನು ಕೊಡಬೇಕೇ ವಿನಃ ತಪ್ಪು ಮಾಹಿತಿಯನ್ನು ಅಲ್ಲ. ಅದನ್ನ ಹೇಳ್ತ್ತ ಇರೋದು.ಚರ್ಚೆ ತುಂಬ ಅಯಿತು ಅಲ್ವ. ಇಲ್ಲಿಗೆ ನಿಲ್ಲಿಸಿ ಬಿಡೋಣ.
(ಎಲ್ಲಾದ್ರು grammar mistake ಇದ್ದರೆ ಕ್ಷಮೆ ಇರಲಿ)

ಶ್ರೀನಿಧಿ.ಡಿ.ಎಸ್ said...

nithin,

sushrutha has taken those lines - non veg hotel, etc as example, and told tht too. u read tht correctly and then argue.

NiTiN Muttige said...

ಕರೆಕ್ಟ್ ಆಗೇ ನೋಡಕಂಡೆ ವಾದ ಮಾಡ್ತಾ ಇದ್ನಪ್ಪ.... ..

ನೋಡದೆ ಎಲ್ಲ ವಾದ ಮಾಡ ಅವಶ್ಯಕತೆ ಇಲ್ಲೇ....

Unknown said...

ಹ ಹ ಹ. ಇದು ದೊಡ್ಡೇರಿಯವರ ಜನಪ್ರಿಯತೆಗೆ ಸಾಕ್ಷಿ. ಬರ್ಯೋದಕ್ಕೇನು ಸ್ವಾಮಿ, ಯಾರ್ ಬೇಕಾದ್ರೂ ಬರೀಬೋದು, ಬಾಯಿಗೆ ಬ೦ದಿದ್ನ! ವರ್ಷ ಅವರು ಬರ್ದಿರೋ ಕವನದ ಬಗ್ಗೆ ವೈಚಾರಿಕವಾಗಿ ಮಾತಾಡಿದ 'ಸು' ಅವರು ತಮ್ಮ ಸ್ವ೦ತ ಲೇಖನದ ಬಗೆಗೆ ಸ್ವಲ್ಪಾನೂ ಯೋಚ್ನೆ ಮಾಡ್ದೆ ಇರೋದು ಅವರ ಶಿಕ್ಷ್ಯಣದ ಸ್ವರೂಪವನ್ನು ತಿಳ್ಸತ್ತೆ. ಅಲ್ರೀ, ಒ೦ದು ಸ೦ಘಟನೆ ಬಗ್ಗೆ, ಒ೦ದು ಸ೦ಸ್ಥೆ ಬಗ್ಗೆ ಹಿ೦ದೆ-ಮು೦ದೆ ಗೊತ್ತಿಲ್ದೆ ಮಾತಾಡೋದು ಆರೋಗ್ಯವ೦ತ ಮನುಷ್ಯನ ಲಕ್ಷಣವೇ? ಸನ್ಮಾನ್ಯ "emperor" ಅವರು ಅದ್ಯಾಕೆ ವಾಚಕರನ್ನ ಬೈದಿದಾರೋ ಗೊತ್ತಿಲ್ಲ. ಬರಹದ " effectiveness", ಸಾಮಾಜಿಕ ಕಳಕಳಿ, ವಾಚಕರ/ಓದುಗರ ಚಿ೦ತನೆಗಳಿ೦ದ ಮೊದಲುಗೊಳ್ಳತ್ತೆ. ವಾಚಕರಿಲ್ಲದ ಬರಹಗಳು ಕೇವಲ ಅಕ್ಷರಗಳಷ್ಟೇ. ಅದಕ್ಕೆ ಅರ್ತ ಸಿಗಬೇಕಾದರೆ ಅದು ಸಮಾಜದ ವಿವಿದ ಸ್ತರಗಳಲ್ಲಿ ಹ೦ಚಿಕೆಯಾಗಿ, ಒಪ್ಪಿಕೆಯಾಗಬೇಕು.

ಒಟ್ನಲ್ಲಿ, ಈ ಲೇಖನದ ಉದ್ದೇಶ ಜನಪ್ರಿಯತೆಯೇ ಹೊರತು ಸಾಮಾಜಿಕ ಕಾಳಜಿ, ಅಥವಾ ಆರೋಗ್ಯಕರ ಚಿ೦ತನೆಯಲ್ಲ.
ಬಿಡ್ರಿ ಸ್ವಾಮಿ, ಕೆಲ್ಸ ಇಲ್ದಿರೋ ಆಚಾರಿ --- ಕೆತ್ತಿದ್ನ೦ತೆ.

ಶ್ರೀನಿಧಿ.ಡಿ.ಎಸ್ said...

sushrutha -

better u close this! As u have spoken to the principal of the school, and u got clarity! beLe beyiskoLLoru, bere jaga hudkli!

Sushrutha Dodderi said...

Dear Readers,

ನಾನು ಗುರುಕುಲದ ಪ್ರಧಾನ ಆಚಾರ್ಯರಾದ ಜಗದೀಶ ಶರ್ಮರೊಂದಿಗೆ ಮಾತನಾಡಿದ್ದೇನೆ. ಅವರು ಆರೋಗ್ಯಕರ ಚರ್ಚೆಗಾಗಿ ತಮ್ಮಲ್ಲಿಗೇ ಬರಲಿಕ್ಕೆ ಆಹ್ವಾನಿಸಿದ್ದಾರೆ. ಸಧ್ಯದಲ್ಲೇ ನಾನು ಗುರುಕುಲಕ್ಕೆ ಹೋಗಿ ಬರಲಿದ್ದೇನೆ.

ನನಗೆ ಮಠದ ಬಗ್ಗೆ ಬರೆದು ಜನಪ್ರಿಯತೆ ಗಳಿಸಬೇಕಾದ ಅವಶ್ಯಕತೆ ಏನೇನೂ ಇಲ್ಲ. ನಾನು ಇಲ್ಲಿ ಯಾರು ಮಾಡಿದ ಪ್ರತಿಕ್ರಿಯೆಯನ್ನೂ delete ಮಾಡಿಲ್ಲ. ಆದರೆ ಇದು ಈ ರೀತಿಯಲ್ಲಿ ಮುಂದುವರೆಯುವುದನ್ನು ನೋಡುತ್ತಾ ನನಗೆ ಸುಮ್ಮನಿರಲು ಆಗುತ್ತಿಲ್ಲ. ಇದು ಚರ್ಚೆಯಾಗಿಯೇ ಉಳಿದಿಲ್ಲ. ನನ್ನ ಸೌಜನ್ಯಕ್ಕೂ, ಸಹನೆಗೂ ಮಿತಿಯಿದೆ.

I've enabled comment moderation. ಇನ್ನು ಮುಂದೆ ನಿಮಗೆ ನನ್ನ ಬ್ಲಾಗಿನಲ್ಲಿ ಪ್ರತಿಕ್ರಿಯಿಸಲು ಅವಕಾಶವಿಲ್ಲ. ಇನ್ನೂ ಮಾತನಾಡಬೇಕಿರುವವರು, ಅಭಿಪ್ರಾಯ ವ್ಯಕ್ತಪಡಿಸಬೇಕೆಂದಿರುವವರು ತಮ್ಮ ಬ್ಲಾಗಿನಲ್ಲೋ, ಮತ್ಯಾವುದೋ ವೇದಿಕೆಯಲ್ಲೋ ಚರ್ಚಿಸಬಹುದು.

ನನ್ನ ಬರಹದ ಉದ್ಧೇಶ, ಆಶಯ ಮತ್ತು ಕಾಳಜಿ -ಅರ್ಥವಾಗಬೇಕಾದವರಿಗೆ ಆಗಿದೆ. ನನಗಷ್ಟು ಸಾಕು.

Thank you,

ಸುಶ್ರುತ