ಕಳೆದ ವಾರ ಊರಿಗೆ ಹೋಗಿದ್ದೆ. ಊರಲ್ಲಿ ಸುಗ್ಗಿಯ ಸಿದ್ಧತೆ ನಡೆದಿತ್ತು. ನಮ್ಮನೆ ಪಕ್ಕದಲ್ಲಿ, ಅಡಿಕೆ ಸುಲಿಯಲು ಕೂರುವವರಿಗಾಗಿ ಆಳುಗಳು ಚಪ್ಪರ ಹಾಕುತ್ತಿದ್ದರು. ’ಸುಮ್ಮನೇ ಇರಲಿ’ ಎಂದು ಕ್ಲಿಕ್ಕಿಸಿದ ಅದರ ಒಂದಷ್ಟು ಫೋಟೋಗಳನ್ನು ಇಲ್ಲಿ ಹಾಕುತ್ತಿದ್ದೇನೆ.
ಒಂದು ಕಡೆಯಿಂದ ನಾವು ಯುವಕರೆಲ್ಲಾ ಹಳ್ಳಿ ಬಿಟ್ಟು ಪಟ್ಟಣಗಳಿಗೆ ಬರುತ್ತಿದ್ದೇವೆ. ನನ್ನ ಅಥವಾ ನನ್ನ ಆಸುಪಾಸಿನ ವಯಸ್ಸಿನ ಯುವಕರು ಯಾರೂ ಉಳಿದಿಲ್ಲ ನಮ್ಮೂರಲ್ಲಿ ಸಧ್ಯ. ಬರೀ ಹಿರಿತಲೆಗಳೇ ತುಂಬಿಕೊಂಡಿವೆ. ಮತ್ತೊಂದು ಕಡೆ, ಈ ಹಿರಿಯರಿಗೆ ಕೆಲಸ ಮಾಡಿಸಿಕೊಳ್ಳಲು ಆಳುಗಳೂ ಸಿಗುತ್ತಿಲ್ಲ. ಅಂಗಳ ಮಾಡುವುದಕ್ಕೆ, ಅಟ್ಟ-ಚಪ್ಪರ ಹಾಕುವುದಕ್ಕೆ, ಕೊನೆ ಕೊಯ್ಲಿಗೆ, ನೇಣು ಹಿಡಿಯಲಿಕ್ಕೆ, ಅಡಿಕೆ ಹೆಕ್ಕಲಿಕ್ಕೆ, ಆಮೇಲೆ ಹೊರಲಿಕ್ಕೆ -ಆಳು ಸಿಗದೇ, ಸುಗ್ಗಿ ಮಾಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ನಮ್ಮೂರಲ್ಲಿ ಸುಮಾರು ಮನೆಗಳಲ್ಲಿ ಈ ವರ್ಷ ಫಸಲುಗುತ್ತಿಗೆ ಕೊಡುವುದೇ ಸೈ ಎಂದು ಯೋಚಿಸುತ್ತಿದ್ದಾರೆ. ಹಾಗಾಗಿ, ಈಗ ನಾನು ತೆಗೆದಿರುವ ಈ ಫೋಟೋಗಳು ಮುಂದೊಂದು ದಿನ ’ಡಾಕ್ಯುಮೆಂಟರಿ’ಗಳಾದರೂ ಅಚ್ಚರಿಯಲ್ಲ!