Tuesday, December 16, 2008

ಸುಗ್ಗಿಗಾಗಿ ಹಾಕಿದ ಚಪ್ಪರ

ಈ ಭಯೋತ್ಪಾದನೆ ಕೃತ್ಯ ನಡೆದ ಮೇಲೆ, ನಾವೆಲ್ಲಾ ಬ್ಲಾಗಿಗೆ ಕಪ್ಪು ಪಟ್ಟಿ ಬಳಿದುಕೊಂಡಮೇಲೆ ಒಂಥರಾ ಫುಲ್ ಸೀರಿಯಸ್‍ನೆಸ್ ಆವರಿಸಿಕೊಂಡುಬಿಟ್ಟಿದೆ! ಬಾಂಬು-ಟೆರರಿಸಂನಂತಹ ’ಸ್ಪೋಟಕ’ ವಿಷಯವನ್ನು ಬಿಟ್ಟು ಬೇರೆ ಏನೂ ಸಾಧಾರಣ ವಿಷಯ ಬರೀಲಿಕ್ಕೆ ಮನಸಾಗುತ್ತಲೇ ಇಲ್ಲ! ಹೀಗಾಗಿ, ನಾನು ಈ ’ಬರೆಯುವ’ ಗೋಜಿಗೇ ಹೋಗದೇ, ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಆಲೋಚನೆ ಮಾಡುತ್ತಿದ್ದೇನೆ.

ಕಳೆದ ವಾರ ಊರಿಗೆ ಹೋಗಿದ್ದೆ. ಊರಲ್ಲಿ ಸುಗ್ಗಿಯ ಸಿದ್ಧತೆ ನಡೆದಿತ್ತು. ನಮ್ಮನೆ ಪಕ್ಕದಲ್ಲಿ, ಅಡಿಕೆ ಸುಲಿಯಲು ಕೂರುವವರಿಗಾಗಿ ಆಳುಗಳು ಚಪ್ಪರ ಹಾಕುತ್ತಿದ್ದರು. ’ಸುಮ್ಮನೇ ಇರಲಿ’ ಎಂದು ಕ್ಲಿಕ್ಕಿಸಿದ ಅದರ ಒಂದಷ್ಟು ಫೋಟೋಗಳನ್ನು ಇಲ್ಲಿ ಹಾಕುತ್ತಿದ್ದೇನೆ.

ಒಂದು ಕಡೆಯಿಂದ ನಾವು ಯುವಕರೆಲ್ಲಾ ಹಳ್ಳಿ ಬಿಟ್ಟು ಪಟ್ಟಣಗಳಿಗೆ ಬರುತ್ತಿದ್ದೇವೆ. ನನ್ನ ಅಥವಾ ನನ್ನ ಆಸುಪಾಸಿನ ವಯಸ್ಸಿನ ಯುವಕರು ಯಾರೂ ಉಳಿದಿಲ್ಲ ನಮ್ಮೂರಲ್ಲಿ ಸಧ್ಯ. ಬರೀ ಹಿರಿತಲೆಗಳೇ ತುಂಬಿಕೊಂಡಿವೆ. ಮತ್ತೊಂದು ಕಡೆ, ಈ ಹಿರಿಯರಿಗೆ ಕೆಲಸ ಮಾಡಿಸಿಕೊಳ್ಳಲು ಆಳುಗಳೂ ಸಿಗುತ್ತಿಲ್ಲ. ಅಂಗಳ ಮಾಡುವುದಕ್ಕೆ, ಅಟ್ಟ-ಚಪ್ಪರ ಹಾಕುವುದಕ್ಕೆ, ಕೊನೆ ಕೊಯ್ಲಿಗೆ, ನೇಣು ಹಿಡಿಯಲಿಕ್ಕೆ, ಅಡಿಕೆ ಹೆಕ್ಕಲಿಕ್ಕೆ, ಆಮೇಲೆ ಹೊರಲಿಕ್ಕೆ -ಆಳು ಸಿಗದೇ, ಸುಗ್ಗಿ ಮಾಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ನಮ್ಮೂರಲ್ಲಿ ಸುಮಾರು ಮನೆಗಳಲ್ಲಿ ಈ ವರ್ಷ ಫಸಲುಗುತ್ತಿಗೆ ಕೊಡುವುದೇ ಸೈ ಎಂದು ಯೋಚಿಸುತ್ತಿದ್ದಾರೆ. ಹಾಗಾಗಿ, ಈಗ ನಾನು ತೆಗೆದಿರುವ ಈ ಫೋಟೋಗಳು ಮುಂದೊಂದು ದಿನ ’ಡಾಕ್ಯುಮೆಂಟರಿ’ಗಳಾದರೂ ಅಚ್ಚರಿಯಲ್ಲ!






















ಓದಿಲ್ಲದಿದ್ದಲ್ಲಿ: ಸುಗ್ಗಿ ವ್ಯಾಳ್ಯಾಗ..

Tuesday, December 02, 2008

ಅಟೆನ್ಷನ್ ಬ್ಲಾಗರ್ಸ್!!

ಮುಂಬಯಿ ಗೆಳತಿ ನೀಲಾಂಜಲ, ತಮ್ಮ ಬ್ಲಾಗಿನಲ್ಲಿ ಬ್ಲಾಗಿಗರಿಗೆ ಒಂದು ಕರೆ ಇತ್ತಿದ್ದಾರೆ. ಅತ್ತ ನಿಮ್ಮ ಗಮನ ಸೆಳೆಯಲು ಈ ಪೋಸ್ಟು. ದಯವಿಟ್ಟು ಎಲ್ಲರೂ ಸ್ಪಂದಿಸಿ.

ಇದರಿಂದ ಏನೋ ದೊಡ್ಡ ಸಾಧನೆಯಾಗತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲರೂ ಸ್ಪಂದಿಸಿದರೆ ’ಏನಾದರೂ ಒಂದು’ ಆದೀತೇನೋ ಎಂಬ ಆಸೆ. ಏನಾದರೂ.. ಯಟ್ ಲೀಸ್ಟ್..

ಏನಾದರೂ ಮಾಡೋಣ. ಇದನ್ನೆಲ್ಲಾ ನೋಡುತ್ತಾ ತೀರಾ ಸುಮ್ಮನೆ ಕೂತಿರುವುದು ಬೇಡ. ಭಯೋತ್ಪಾದಕ ಕೃತ್ಯದ ಲೈವ್ ಶೋ, ರಾಜಕಾರಣಿಗಳ ಹೊಲಸು ಮುಖವನ್ನು ನೋಡುತ್ತಾ ಹಲ್ಲು ಕಡಿದದ್ದು ಸಾಕು. ಒದ್ದೆಯಾಗುವ ಮನಸು ಮಾಡೋಣ.

Thursday, November 27, 2008

ಮೋಡ ಕವಿದ ವಾತಾವರಣ

‘ಸ್ಥಳೀಯ ಹವಾ ಮುನ್ಸೂಚನೆಯಂತೆ, ಬೆಂಗಳೂರು ಮತ್ತು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ’ -ಊರಲ್ಲಿದ್ದಾಗ, ರೇಡಿಯೋ-ಟೀವಿಗಳ ಹವಾ ವರ್ತಮಾನದಲ್ಲಿ ಪ್ರತಿದಿನ ಕೇಳಿಬರುತ್ತಿದ್ದ ಸಾಲು. ‘ಇದೇನು ಬೆಂಗಳೂರಿನಲ್ಲಿ ಯಾವಾಗಲೂ ಮೋಡ ಕವಿದ ವಾತಾವರಣ ಇರುತ್ತದಾ?’ ಅಂತ ನಮಗೆ ಆಶ್ಚರ್ಯವಾಗುತ್ತಿತ್ತು. ಆದರೆ ನಾನು ಬೆಂಗಳೂರಿಗೆ ಬರುವಷ್ಟರಲ್ಲಿ ಬೆಂಗಳೂರು ‘ಉದ್ಯಾನನಗರಿ’ಯೆಂಬ ಬಿರುದಿಗೆ ತದ್ವಿರುದ್ಧವಾಗಿ ತನ್ನ ಹಸಿರು ಬಟ್ಟೆಯನ್ನೆಲ್ಲಾ ಬಿಚ್ಚಿಹಾಕಲು ಶುರು ಮಾಡಿತ್ತು. ಹಾಗಾಗಿ ನಾನು ಇಂಟರ್‌ವ್ಯೂಗೆಂದು ಕಂಪನಿ-ಕಂಪನಿ ಅಲೆಯುವಾಗ, ಬಿಸಿಲೆಂಬುದು ಇಂಟರ್‌ವ್ಯೂವರುಗಳಿಗಿಂತ ಭಯಾನಕವಾಗುವ ಹಂತಕ್ಕೆ ಮುಟ್ಟಿತ್ತು. ಈಗಂತೂ ಹಸಿರು ನೋಡಲು ಕಬ್ಬನ್ ಪಾರ್ಕು-ಲಾಲ್‌ಭಾಗುಗಳಿಗೇ ಹೋಗಬೇಕು ಎಂಬಂತಹ ಪರಿಸ್ಥಿತಿ. ಇಲ್ಲಿ ನನ್ನ ಆಫೀಸಿನ ಬಳಿ ರೇಸ್‌ಕೋರ್ಸ್ ರಸ್ತೆ ಅಗಲೀಕರಣ ಅಂತ ಅಷ್ಟೂ ಮರಗಳನ್ನು ಉರುಳಿಸಿದ್ದಾರೆ. ಅದನ್ನು ಮುಗಿಸಿ, ಪ್ಯಾಲೇಸ್ ರಸ್ತೆಯ ಕಡೆ ಹೋಗುತ್ತಿವೆ ಬುಲ್ಡೋಜರ್-ಜೆಸಿಬಿಗಳು. ಸಂಕಟವಾಗುತ್ತದೆ.

ಆದರೆ ಅದೇನೋ ತಮಿಳುನಾಡಿನಲ್ಲಿ ಡಿಪ್ರೆಶನ್ನಂತೆ, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸೂರ್ಯರಶ್ಮಿ ನಾಪತ್ತೆ! ‘ವ್ಹಾಟ್ ಎ ರೋಮಾಂಟಿಕ್ ವೆದರ್..! ಊಟೀಲಿ ಇದ್ದಹಾಗಿದೆ’ ಎನ್ನುವ ಫ್ರೆಂಡು, ‘ಸುಶ್ರುತ್, ಈ ವೆದರಲ್ಲಿ ಕೆಲಸ ಮಾಡಬಾರ್ದು ಕಣ್ರೀ.. ಒಂದು ಕ್ಯಾಂಪ್‌ಫೈರ್ ಹಾಕ್ಕೊಂಡು ಚಿಲ್ಲಾಗಿ ಕೂತು ವ್ಹಿಸ್ಕಿ ಹಾಕ್ಬೇಕು!’ ಎನ್ನುವ ಕಲೀಗು, ಒಂದೇ ಒಂದು ಮೆಸೇಜು ಸಹ ಕಳುಹಿಸದೇ ಜೀವ ತಿನ್ನುವ ಹುಡುಗಿ... ಛೇ! ಲೈಫು!

ಐಟಿ ಇಂಡಸ್ಟ್ರಿ ಕುಸಿತ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಎಂಪ್ಲಾಯ್‌ಮೆಂಟ್ ರೇಶಿಯೋ ಕುಸಿತ, ಶೇರ್‌ಮಾರ್ಕೆಟ್ ಕುಸಿತ -ಇತ್ಯಾದಿ ಕುಸಿತಗಳ್ಯಾವುವೂ ನಮ್ಮ ಲೀಗಲ್ ಇಂಡಸ್ಟ್ರಿಯ ಮೇಲೆ ಯಾವುದೇ ಪರಿಣಾಮ ಉಂಟುಮಾಡದಿದ್ದರೂ, ಈ ಇದೇನೋ ‘ವಾಯುಭಾರ ಕುಸಿತ’ ಮಾತ್ರ ನನ್ನೆಲ್ಲಾ ಕಲೀಗುಗಳನ್ನೂ ನಿರುತ್ಸಾಹಿಗಳನ್ನಾಗಿ ಮಾಡಿಬಿಟ್ಟಿದೆ! ಬೆಳಗ್ಗೆಯಿಂದ ಏನೆಂದರೆ ಏನೂ ಕೆಲಸ ಮಾಡದೇ ಕುಳಿತಿದ್ದೇವೆ ಎಲ್ಲರೂ. ಇದ್ದುದರಲ್ಲೇ ನಮ್ಮನ್ನು ಬೆಚ್ಚಗಿಟ್ಟಿರುವುದು ಎಂದರೆ, ಮುಂಬಯಿಯಲ್ಲಿ ಆಗಿರುವ ಸರಣಿ ಬಾಂಬ್ ಸ್ಪೋಟಗಳು. ನ್ಯೂಸ್ ಛಾನೆಲ್ ವರದಿಗಾರರ ಮೇಲಂತೂ ಒಂದು ತರಹದ ‘ಮೋದ ಕವಿದ ವಾತಾವರಣ’ ಸೃಷ್ಟಿಯಾಗಿಬಿಟ್ಟಿದೆ. ಸಿ‌ಎನ್ನೆನ್ ಐಬಿ‌ಎನ್, ಎನ್‌ಡಿಟಿವಿ ಮುಂತಾದ ಛಾನೆಲ್ಲುಗಳು ತಾಜ್, ಒಬೇರಾಯ್, ನಾರಿಮನ್ ಪಾಯಿಂಟುಗಳ ಪಕ್ಕದಲ್ಲಿ ನಿಂತು ಲೈವ್ ವರದಿ ಮಾಡುತ್ತಿವೆ: ‘ನಹೀ ಬತಾ ಸಕ್ತೇ.. ಒಳಗಡೆ ಎಷ್ಟು ಜನ ಇದಾರೆ ಅಂತ ಹೇಳಕ್ಕೇ ಆಗಲ್ಲ’.. ‘ಅದೋ ಸ್ಪೆಶಲ್ ಸ್ಕ್ವಾಡ್ ಬಂತು’.. ‘ಹಾಂ, ಗುಂಡಿನ ಶಬ್ದ ಕೇಳಿಸ್ತಿದೆಯಾ? ಕ್ಯಾನ್ಯೂ ಹಿಯರ್?’.. ‘ಇಗೋ, ಇದೀಗ ಎನ್‌ಕೌಂಟರ್ ಶುರು ಆಗ್ತಿದೆ’.. ‘ತಾಜ್ ಹೋಟೆಲಿನಲ್ಲಿ ಸಿಕ್ಕಿಹಾಕಿಕೊಂಡಿರೋರು ಒಬ್ಬರು ನಂಗೆ ಎಸ್ಸೆಮ್ಮೆಸ್ ಮಾಡಿದಾರೆ’... ಎಲ್ಲರೂ ಉಸಿರು ಬಿಗಿಹಿಡಿದು ನೋಡುತ್ತಿದ್ದೇವೆ.. ಅಬ್ಬ! ಈ ಟೆರರಿಸಂ ಮತ್ತು ಬಾಂಬ್ ಸ್ಪೋಟಗಳು ನಮ್ಮ ದೈನಂದಿನ ಜೀವನಕ್ಕೆ ಎಂತಹ ಒಂದು ‘ಥ್ರಿಲ್’ ತಂದುಬಿಟ್ಟವು! ಎಲ್ಲಿ ಯಾವಾಗ ಸಿಡಿಯೊತ್ತೆ ಅಂತಲೇ ಹೇಳಕ್ಕಾಗಲ್ಲ! ಕೋರ್ಟಿಗೆ ಹೋಗಿರೋ ಕಲೀಗು ವಾಪಸು ಬರ್ತಾನೋ ಇಲ್ವೋ ಯಾರಿಗ್ಗೊತ್ತು? ಇವತ್ತು ನಾನೇ ಆಫೀಸಿನಿಂದ ಮನೆಗೆ ವಾಪಸು ಹೋಗ್ತೀನೋ ಇಲ್ವೋ? ಹಹ್!

ಆದರೆ ಇನ್ನು ಸ್ವಲ್ಪ ಕಾಲಕ್ಕೆ ಇದೂ ನಮಗೆ ಅಭ್ಯಾಸವಾಗಿಬಿಡಬಹುದೇನೋ? ಮುಂಬಯಿಯ ಗೆಳತಿಯೊಬ್ಬಳಿಗೆ ಪಿಂಗ್ ಮಾಡಿ ‘ಪರಿಸ್ಥಿತಿ ಹೇಗಿದೆ ನೀನಿರೋ ಜಾಗದಲ್ಲಿ?’ ಅಂತ ಕೇಳಿದೆ. ‘ಯಾಸ್ ಎವೆರಿಡೇ! ನಾರ್ಮಲ್ ಇದೆ. ನಾನು ಆಫೀಸಿನಲ್ಲಿದೀನಿ. ನನ್ ಗಂಡನೂ ಆಫೀಸಿಗೆ ಹೋಗಿದಾನೆ. ಸ್ಕೂಲುಗಳಿಗೆ ರಜೆ ಕೊಟ್ಟಿರೋದ್ರಿಂದ ಕೆಲ ಮಕ್ಕಳು ಹೊರಗೆ ಆಡ್ತಿರೋದು ಇಲ್ಲಿ ಕಿಟಕಿಯಿಂದ ಕಾಣ್ತಿದೆ. ನೀವೆಲ್ಲಾ ನೋಡ್ತಿರೋ ಹಾಗೆ ನಾನೂ ಟೀವಿಯಲ್ಲಿ ನೋಡ್ತಿದೀನಿ’ ಅಂದಳು. ಅಚ್ಚರಿಯಾಯಿತು. ‘ಛೇ! ಮತ್ತೆ ನಾನ್ಯಾಕೆ ಬೆಳಗ್ಗೆಯಿಂದ ಒಳ್ಳೇ ಸಸ್ಪೆನ್ಸ್ ಪಿಚ್ಚರ್ ನೋಡಿದಹಾಗೆ ನ್ಯೂಸ್ ನೋಡುತ್ತಿದ್ದೇನೆ?’ ಅನ್ನಿಸಿ, ಸಿ‌ಎನ್ನೆನ್ ವೆಬ್‌ಸೈಟ್‌ನ ವಿಂಡೋವನ್ನು ತಟ್ಟನೆ ಕ್ಲೋಸ್ ಮಾಡಿದೆ.

ಮತ್ತೆ ಮೋಡ ಕವಿಯಿತು. ಕೊಂಚ ಎದ್ದು ಹೋಗಿ, ಪಕ್ಕದ ಕಿಟಕಿಯ ಗಾಜಿನ ಮೇಲೆ ನಿಂತಿರುವ ಮಳೆನೀರ ಹನಿಗಳ ಮೂಲಕ ಹೊರಗೆ ನೋಡಿದರೆ, ಕಪ್ಪು ಜಾಕೆಟ್ಟನ್ನು ಬೆಚ್ಚಗೆ ಹೊದ್ದುಕೊಂಡಿರುವ ಪಕ್ಕದ ಆಫೀಸಿನ ಹುಡುಗಿ ತನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವುದು ಕಾಣುತ್ತಿದೆ. ತಂಡಿಯಾಗಿರುವ ಅದರ ಎಂಜಿನ್ ಏನೆಂದರೂ ಸ್ಟಾರ್ಟ್ ಆಗುತ್ತಿಲ್ಲ. ‘ಕೆಳಗಿಳಿದು ಹೋಗಿ ಸಹಾಯ ಮಾಡಲಾ?’ ಅಂದುಕೊಳ್ಳುತ್ತೇನೆ. ಮತ್ತೆ, ‘ಮೈಯೆಲ್ಲಾ ಒದ್ದೆಯಾಗುತ್ತದೆ, ಬೇಡ’ ಅಂತ ಸುಮ್ಮನಾಗುತ್ತೇನೆ.

ವಾಪಸು ಬಂದು ಕಂಪ್ಯೂಟರ್ ಮುಂದೆ ಕೂತರೆ, ಯಾರೋ ಪಿಂಗ್ ಮಾಡುತ್ತಾರೆ: ‘ಶೇಮ್‌ಲೆಸ್ ಯಾರ್.. ಈ ಯುಪಿ‌ಎ ಸರ್ಕಾರ, ನಮ್ಮ ಪೋಲೀಸ್ ವ್ಯವಸ್ಥೆ.....’ ನಾನು ಸೈನ್‌ಔಟ್ ಆಗುತ್ತೇನೆ. ಗೂಗಲ್ ರೀಡರ್ ಹೊಸ ಬ್ಲಾಗ್ ಅಪ್‌ಡೇಟ್‌ಗಳನ್ನು ತೋರಿಸುತ್ತಿದೆ. ಅಲ್ಲೂ ಶುರುವಾಗಿಬಿಟ್ಟಿದೆ: ‘ಪ್ರತೀಕಾರ’, ‘ಪ್ರತಿಧಾಳಿ’, ‘ಪ್ರತಿಭಟನೆ’, ‘ಈ ಮುಸ್ಲಿಮರಿದ್ದಾರಲ್ಲಾ...’ ಚರ್ಚೆಗಳು. ವಾದಗಳು. ಬೆಚ್ಚಗೆ, ಅವರವರ ಆಫೀಸು-ಮನೆಗಳಲ್ಲಿ ಕೂತು.

ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ.

Monday, November 17, 2008

ಟೀವಿಯಲ್ಲಿ ನಾವು

"ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?" ಅಂತ ನಾಗೇಗೌಡ್ರು ಕೇಳಿದಾಗ, "ಹುಂ, ನಿನ್ನೆ ತಾನೇ ನೋಡಿದ್ನಲ್ಲ? ಯಾಕೆ?" ಅಂದೆ. "ಅದ್ರಲ್ಲಿ ನಾನೂ ಯಾಕ್ಟ್ ಮಾಡಿದೀನಿ, ನೋಡ್ಲಿಲ್ವಾ?" ಅಂದರು. "ನೀವಾ?! ಎಲ್ಲಿ? ಯಾವ ಸೀನಲ್ಲಿ?" ಆಶ್ಚರ್ಯದಿಂದ ಕೇಳಿದೆ. ಅವರಂದ್ರು, "ಅದೇ, ಪೋಲೀಸ್ ಕಮಿಷನರ್ ಮೀಟಿಂಗ್ ಕರೆದಿರ್ತಾರಲ್ಲ, ಆಗ ಸುತ್ಲೂ ಸುಮಾರ್ ಪೋಲೀಸ್ರು ಕೂತಿರ್ತಾರೆ.. ಅವ್ರಲ್ಲಿ ಒಬ್ಬ ಪೋಲೀಸ್ ನಾನಾಗಿದ್ದೆ!" "ಓಹ್, ಹೌದಾ? ನಾನು ಗಮನಿಸ್ಲೇ ಇಲ್ಲ.. ಛೇ, ಸುಮ್ನೇ ದುಡ್ಡು ಕೊಟ್ಟು ಹೋದ್ವಲ್ರೀ ನಿನ್ನೆ ನಾವು.. ನೀವು ಯಾಕ್ಟ್ ಮಾಡಿದೀರ ಅಂದ್ಮೇಲೆ ನಮ್ಗೆ ಫ್ರೀ ಟಿಕೇಟ್ ಕೊಡಿಸ್ತಿದ್ರಿ.. ಮಿಸ್ ಮಾಡ್ಕೊಂಡ್ಬಿಟ್ವಿ!" ನಗುತ್ತಾ ಹೇಳಿದೆ. "ಹೆಹ್ಹೆ! ಅದ್ಕೇನಂತೆ, ಮತ್ತೊಂದ್ಸಲ ಹೋಗ್ಬನ್ನಿ. ಕೊಡಿಸ್ತೀನಿ ಟಿಕೇಟು.. ನನ್ನನ್ನೇ ನೋಡ್ಲಿಲ್ಲ ನೀವು ಅಂದ್ಮೇಲೆ ಮತ್ತೊಂದ್ಸಲ ನೋಡೋದು ಸರಿ ಇದೆ.." ಎಂದು ನಗುತ್ತಾ ಖುರ್ಚಿಯಿಂದ ಎದ್ದರು ನಾಗೇಗೌಡ್ರು.

ಈ ನಾಗೇಗೌಡ್ರು ನಮ್ಮ ಕ್ಲೈಂಟು. ಸಿನಿಮಾವೊಂದರಲ್ಲಿ ನಾವು ಇರೋದು ಅಂದ್ರೆ ಅದು ನಿಜಕ್ಕೂ ಹೇಳಿಕೊಳ್ಳಬೇಕಾದ ವಿಷಯವೇ. ಒಂದು ಸಿನಿಮಾ ಅಂದರೆ ಲಕ್ಷಗಟ್ಟಲೇ ಜನ ನೋಡುತ್ತಾರೆ. ಒಂದು ಕ್ಷಣದಲ್ಲಿ ಬಂದು ಹೋಗುವ ಸೀನೇ ಇರಬಹುದು, ಆದರೂ ಅದೊಂದು ಖುಶಿಯ ವಿಷಯವೇ ತಾನೇ? ಹೀಗಾಗಿ ನಾಗೇಗೌಡ್ರು ನನಗೆ ಮತ್ತೊಮ್ಮೆ ಸಿನಿಮಾ ನೋಡಲು ಟಿಕೇಟ್ ತೆಗೆಸಿಕೊಡುತ್ತೀನಿ ಅಂದಿದ್ದರಲ್ಲಿ ಅತಿಶಯೋಕ್ತಿಯೇನೂ ಕಾಣಲಿಲ್ಲ. ಆದರೆ ‘ಸ್ಲಂ ಬಾಲ’ ಪಿಚ್ಚರ್ರು ಮತ್ತೊಮ್ಮೆ ನೋಡುವಷ್ಟೆಲ್ಲಾ ಚೆನ್ನಾಗಿಯೇನೂ ಇಲ್ಲವಾದ್ದರಿಂದ ನಾನು ನಾಗೇಗೌಡ್ರು ಟಿಕೇಟು ತೆಗೆಸಿಕೊಟ್ಟರೂ ಹೋಗುವುದು ಅನುಮಾನ.

* * *

ಹಿಂದೊಮ್ಮೆ ನನ್ನ ಅಜ್ಜ ‘ಸೂರಪ್ಪ’ ಎಂಬ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ. ಅಜ್ಜ ಆಗ ಮೈಸೂರಿನಲ್ಲಿದ್ದ, ಅಲ್ಲಿನ ಯಾವುದೋ ಛತ್ರದಲ್ಲಿ ಇವನು ಅಡುಗೆಗೆ ಹೋಗಿದ್ದಾಗ ಅಲ್ಲಿ ಶೂಟಿಂಗ್ ನಡೆಯುತ್ತಿತ್ತಂತೆ. ಅವತ್ತಿನ ಚಿತ್ರೀಕರಣದಲ್ಲಿ ಭಟ್ಟರ ಅಸಿಸ್ಟೆಂಟ್ ಪಾತ್ರ ಮಾಡಲು ವಯಸ್ಸಾದ ಯಾರಾದರೂ ಒಬ್ಬರು ಬೇಕಿತ್ತು. ನಿರ್ದೇಶಕರು ಅಲ್ಲೇ ಓಡಾಡುತ್ತಿದ್ದ ಅಜ್ಜನನ್ನು ‘ಪಾತ್ರ ಮಾಡುತ್ತೀರಾ?’ ಅಂತ ಕೇಳಿದರಂತೆ. ಅಜ್ಜ ಡ್ರೆಸ್ ಸಮೇತ ತಯಾರಿದ್ದ, (ಹಿಂದೆಲ್ಲಾ ಯಕ್ಷಗಾನ ಕುಣಿದು ರೂಢಿಯಿದ್ದವನು ಅವನು), ‘ಸರಿ’ ಅಂದ! ಡೈರೆಕ್ಟರು ಮತ್ತೊಂದಷ್ಟು ಎಕ್ಸ್‌ಟ್ರಾ ವಿಭೂತಿ ಪಟ್ಟಿ ಬಳಿಸಿ, ಎರಡ್ಮೂರು ಟೇಕ್ ತಗೊಂಡು, ಅಜ್ಜನ ಅಭಿನಯವನ್ನು ಸೆರೆ ಹಿಡಿದೇಬಿಟ್ಟರು.

ಅದಾದನಂತರ ಮನೆಗೆ ಫೋನ್ ಮಾಡಿದ್ದಾಗ ಅಜ್ಜ ಇದರ ಬಗ್ಗೆ ಹೇಳಿದ್ದ. ಸಾಗರಕ್ಕೆ ಆ ಸಿನಿಮಾ ಮೂರ್ನಾಲ್ಕು ತಿಂಗಳ ನಂತರ ಬಂತು. ಹೋಗಲಾಗದೇ ಇದ್ದೀತೇ? ನನಗೆ ಒಂದು ವಾರದಲ್ಲಿ ಪರೀಕ್ಷೆ ಇದ್ದರೂ ಅಪ್ಪನೊಂದಿಗೆ ಹೋಗಿ ಸಿನಿಮಾ ನೋಡಿ ಬಂದಿದ್ದೆ. ಅಜ್ಜ ಪರದೆಯ ಮೇಲಿರುವುದು ಮೂರರಿಂದ ನಾಲ್ಕು ಸೆಕೆಂಡು, ಸಿನಿಮಾದ ಕೊನೆಯಲ್ಲಿ. ಎರಡೂ ಕಾಲು ತಾಸು ಸಿನಿಮಾವನ್ನು ‘ಅಜ್ಜ ಈಗ ಬರುತ್ತಾನೆ, ಈಗ ಬರುತ್ತಾನೆ’ ಅಂತ ಕಾದು ಕಾದು, ಪ್ರತಿ ಸೀನಿನಲ್ಲಿ ಜಂಗುಳಿ ಕಂಡಾಗಲೂ ‘ಇದರಲ್ಲೆಲ್ಲಾದರೂ ಅಜ್ಜ ಮಿಸ್ ಆಗಿಬಿಟ್ಟರೆ ಕಷ್ಟ’ ಅಂತ ಕಣ್ಣು ಕೀಲಿಸಿಕೊಂಡು ನೋಡಿ, ಇಂಟರ್‌ವೆಲ್ಲಿನಲ್ಲಿ ಹ್ಯಾಪ ಮೋರೆ ಹಾಕಿಕೊಂಡು ಕಡಲೆ ತಿಂದು, ಸಿನಿಮಾ ಮುಗಿಯಲು ಬರುತ್ತಿದ್ದಾಗ ‘ಅಯ್ಯೋ ಅಜ್ಜ ಬರಲೇ ಇಲ್ವಲ್ಲಪ್ಪಾ’ ಅಂದುಕೊಳ್ಳುತ್ತಿರುವಾಗಲೇ ಗೂನು ಬೆನ್ನಿನ ನನ್ನ ಅಜ್ಜ ಕುಂಟುತ್ತಾ ಬಂದಿದ್ದ..! ಅವನು ಕಣ್ ಕಣ್ ಬಿಡುತ್ತಾ ದೊಡ್ಡ ಭಟ್ಟರ ಪಕ್ಕ ನಿಂತಿದ್ದು ನೋಡಿ ನಾನಂತೂ ಖುಶಿಯಿಂದ ಚಪ್ಪಾಳೆ ತಟ್ಟುತ್ತಾ ಕುಣಿದಾಡಿಬಿಟ್ಟಿದ್ದೆ. ನನ್ನ ಹಿಂದು-ಮುಂದಿನ ಸೀಟಿನವರು ‘ಈ ಸೀನಿನಲ್ಲಿ ಚಪ್ಪಾಳೆ ತಟ್ಟುವಂಥದ್ದು ಏನಿದೆ?’ ಎಂದು ವಿಚಿತ್ರವಾಗಿ ನನ್ನನ್ನೇ ನೋಡಿದ್ದರು.

ಊರಿಗೆ ಬಂದು, ಸುಮಾರು ಜನರಿಗೆ ಹೇಳಿ, ಅವರೂ ಹೋಗಿ ನೋಡಿಕೊಂಡು ಬಂದಿದ್ದರು. ‘ಅಯ್ಯೋ, ಹೌದೇ ವರಮಾಲಕ್ಷ್ಮಕ್ಕ, ಅನಂತಣ್ಣ ಘನಾಗ್ ಕಾಣ್ತ’ ಅಂತ ಶ್ರೀಮತಕ್ಕ ನನ್ನ ಅಜ್ಜಿಯ ಬಳಿ ಹೇಳಿದಾಗ ‘ಹೌದನೇ?’ ಎನ್ನುತ್ತಾ ನಾಚಿದ್ದಳು ಅಜ್ಜಿ. ನಾನು ಅಜ್ಜನಿಗೆ ಫೋನ್ ಮಾಡಿ ‘ಅಜ್ಜಾ, ಸಖ್ಖತ್ತಾಗ್ ಯಾಕ್ಟ್ ಮಾಡಿದ್ದೆ ನೀನು’ ಎಂದು ಉಬ್ಬಿಸಿದ್ದೆ ಸಹ.

ಆಮೇಲೆ ಆ ಸಿನಿಮಾ ಟೀವಿಯಲ್ಲೂ ಪ್ರಸಾರವಾಗಿತ್ತು. ಆಗ ಊರವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು. ಎಲ್ಲರ ಮನೆಯಲ್ಲೂ ಟೀವಿಯಿದ್ದರೂ, ಪಾತ್ರಧಾರಿಯ ಮನೆಯಲ್ಲೇ ಕೂತು ಸಿನಿಮಾ ನೋಡುವುದರಲ್ಲಿ ಇರುವ ಥ್ರಿಲ್ ಹೆಚ್ಚಲ್ಲವೇ! ಕರೆಂಟು ಹೋಗುವುದು-ಬರುವುದು ಆಗುತ್ತಿತ್ತು.. ಜಾಹೀರಾತುಗಳಂತೂ ಅವತ್ತೇ ಜಾಸ್ತಿಯಿದ್ದಂತ್ತಿತ್ತು.. ಈಗಾಗಲೇ ಸಿನಿಮಾ ನಾನು ನೋಡಿಬಿಟ್ಟಿದ್ದರಿಂದ ‘ತಲೆಬಿಸಿ ಮಾಡ್ಕ್ಯಳಡಿ.. ಈಗಲ್ಲ, ಲಾಸ್ಟಿಗೆ ಬರ್ತ ಅಜ್ಜ’ ಎಂದು, ಎಲ್ಲಾ ತಿಳಿದವನಂತೆ, ಎಲ್ಲರಿಗೂ ಸಮಾಧಾನ ಮಾಡುತ್ತಿದ್ದೆ.. ಅಂತೂ ಅಜ್ಜ ಬರುವ ಕೊನೆಯ ಸೀನ್ ಹತ್ತಿರ ಬಂದಾಗ, ‘ಹೂಂ, ಈಗ್ಲೇಯ, ಎಲ್ಲಾ ನೋಡ್ತಿರಿ, ಈಗ ಬರ್ತ ಅಜ್ಜ..’ ಎನ್ನುತ್ತಿದ್ದೆ, ಅಷ್ಟರಲ್ಲಿ.... ಇಲ್ಲ, ಕರೆಂಟು ಹೋಗಲಿಲ್ಲ, ಅಜ್ಜ ಬಂದ! (ಸಾಮಾನ್ಯವಾಗಿ ನಮ್ಮೂರಿನ ಕರೆಂಟು ಇಂತಹ ಸಮಯವನ್ನೇ ಕಾಯುತ್ತಿರುತ್ತದೆ ಹೋಗುವುದಕ್ಕೆ: ಕ್ರಿಕೆಟ್ ಮ್ಯಾಚಿನ ಕೊನೆಯ ಓವರು, ಸಿನಿಮಾದ ಕ್ಲೈಮ್ಯಾಕ್ಸ್ ಸೀನು, ಧಾರಾವಾಹಿಯ ಕೊನೇ ಕ್ಷಣ, ಹೀಗೆ. ಆದರೆ ಅವತ್ತು ಪುಣ್ಯಕ್ಕೆ ಹೋಗಲಿಲ್ಲ.) ‘ಓಹೋಹೋ! ಅನಂತಣ್ಣ!’ ಎಂದು ಎಲ್ಲರೂ ಒಕ್ಕೊರಲಿನಿಂದ ಉದ್ಘರಿಸಿದರು. ಅಜ್ಜಿಯಂತೂ ಟೀವಿಯ ಬುಡಕ್ಕೇ ಹೋಗಿ ತನ್ನ ಪತಿದೇವರನ್ನು ನೋಡಿದಳು. ‘ಹೌದೇ ಹೌದಲೇ!’ ಎಂದಳು. ಆದ ಆನಂದಕ್ಕೆ ಅವಳ ಕಣ್ಣಿಂದ ಒಂದೆರಡು ಹನಿಗಳೂ ಉದುರಿದವು. ಆಮೇಲೆ ಅಮ್ಮ ಎಲ್ಲರಿಗೂ ಸಕ್ಕರೆ ಹಂಚಿದಳು, ಈ ಹೆರಿಗೆ ಆದಕೂಡಲೇ ಹಂಚುತ್ತಾರಲ್ಲಾ, ಹಾಗೆ.

* * *

ದೂರದರ್ಶನದ ‘ಚಂದನ’ ವಾಹಿನಿಯಲ್ಲಿ ‘ಥಟ್ ಅಂತ ಹೇಳಿ?!’ ಎಂಬ ಕ್ವಿಜ್ ಕಾರ್ಯಕ್ರಮವೊಂದು ಬರುತ್ತದೆ. ಡಾ| ನಾ. ಸೋಮೇಶ್ವರ ಅವರು ನಡೆಸಿಕೊಡುವ ಬಹು ಜನಪ್ರಿಯ ಕಾರ್ಯಕ್ರಮ ಅದು. ಅಪ್ಪನಿಗೆ ತಾನೊಮ್ಮೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಹಂಬಲ ಬಂತು. ದೂರದರ್ಶನಕ್ಕೆ ಪತ್ರ ಹಾಕಿದ. ಇಂತಹ ದಿನ ಬರಬೇಕೆಂದು ಕರೆ ಬಂತು. ಅಪ್ಪ ನನಗೆ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ.

ಅಪ್ಪನನ್ನು ಕರೆದುಕೊಂಡು ದೂರದರ್ಶನ ಕಛೇರಿಗೆ ಹೋದೆ. ಹೆಸರು ಬರೆಸುವುದು, ಸಹಿ ಪಡೆಯುವುದು, ಮೊಬೈಲ್ ತೆಗೆದಿಟ್ಟುಕೊಳ್ಳುವುದು ಇತ್ಯಾದಿ ಪ್ರೊಸೀಜರ್ರುಗಳೆಲ್ಲ ಮುಗಿದು, ‘ಶ್ ಶ್’ ಎನ್ನುತ್ತಾ ಸ್ಟುಡಿಯೋದೊಳಗೆ ನಮ್ಮನ್ನು ಬಿಡಲಾಯಿತು. ಸ್ಟುಡಿಯೋವೊಂದರ ಒಳಗೆ ನಾನು ಮತ್ತು ಅಪ್ಪ ಇದೇ ಮೊದಲು ಕಾಲಿಡುತ್ತಿದ್ದುದು.. ಅಲ್ಲಿ ಅದಾಗಲೇ ಸಂಚಿಕೆಯೊಂದರ ಚಿತ್ರೀಕರಣ ನಡೆಯುತ್ತಿತ್ತು. ಸೋಮೇಶ್ವರರು ಎದುರಿಗೆ ಕೂತ ಮೂವರು ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಎಸೆಯುತ್ತಿದ್ದರು. ನಮ್ಮನ್ನು ದೂರದಲ್ಲಿ ಇದ್ದ ಖುರ್ಚಿಗಳಲ್ಲಿ ಶಬ್ದ ಮಾಡದಂತೆ ಕೂತಿರುವಂತೆ ಸೂಚಿಸಲಾಯಿತು. ಮುಂದಿನ ಚಿತ್ರೀಕರಣಕ್ಕೆ ತಾನು ಹೋಗಬೇಕಲ್ಲವೇ- ಅಪ್ಪ ಎಲ್ಲವನ್ನೂ ಕುತೂಹಲದಿಂದ ನೋಡಿಕೊಳ್ಳುತ್ತಿದ್ದ.. ಫೋಕಸ್ ಲೈಟುಗಳು, ಸ್ಕ್ರೀನುಗಳು, ಬ್ಯಾಕ್‌ಗ್ರೌಂಡಿನ ಬಣ್ಣಗಳನ್ನು ಲೇಸರ್ ರೇಗಳಿಂದ ಬದಲಿಸುವುದು, ಮೇಲ್ಗಡೆ ಕೋಣೆಯಲ್ಲಿ ಕೂತ ಡೈರೆಕ್ಟರ್ ಕೊಡುವ ಸೂಚನೆಗಳನ್ನು ಪಾಲಿಸುವ ಕೆಮೆರಾದವರು... ಸೋಮೇಶ್ವರರೂ ಕಿವಿಗೆ ಒಂದು ಇಯರ್‌ಫೋನ್ ಹಾಕಿಕೊಂಡಿರುತ್ತಾರೆ, ಚಿತ್ರೀಕರಣದ ಮಧ್ಯೆ ಅಲ್ಲಲ್ಲಿ ‘ಕಟ್’, ‘ರಿಪೀಟ್’ ಇತ್ಯಾದಿ ಪ್ರಸಂಗಗಳು ನಡೆದಿರುತ್ತವೆ ಅಂತೆಲ್ಲ ಗೊತ್ತಾಗಿದ್ದೇ ಆವಾಗ ನಮಗೆ..!

ನಿಧಾನಕ್ಕೆ ಪಕ್ಕದಲ್ಲಿದ್ದ ಅಪ್ಪನ ಮುಖವನ್ನು ನೋಡಿದೆ ನಾನು.. ಅಪ್ಪ ಸ್ವಲ್ಪ ಹೆದರಿದ್ದಂತೆ, ನರ್ವಸ್ ಆಗಿದ್ದಂತೆ ಕಂಡಿತು.. ಆ ಚಿತ್ರೀಕರಣದ ನಂತರ ಅಪ್ಪನನ್ನು ವೇದಿಕೆಗೆ ಕರೆದರು. ಅಪ್ಪ ನನ್ನತ್ತ ಬಾಗಿ ‘ಹೋಗ್ಬರ್ತಿ ಹಂಗರೆ’ ಎಂದ.. ಪ್ರತಿ ಪರೀಕ್ಷೆಗೆ ಹೋಗುವಾಗಲೂ ನನಗೆ ‘ಚನಾಗ್ ಮಾಡು.. ಟೆನ್ಷನ್ ಮಾಡ್ಕ್ಯಳಡ..’ ಅಂತೆಲ್ಲ ಹೇಳಿ ಕಳುಹಿಸುತ್ತಿದ್ದವ ಅಪ್ಪ.. ಅಪ್ಪ ಈಗ ಪರೀಕ್ಷೆಗೆ ಹೊರಟ ಪುಟ್ಟ ವಿದ್ಯಾರ್ಥಿಯಂತೆಯೇ ಕಾಣಿಸಿದ.. ‘ಆಲ್ ದಿ ಬೆಸ್ಟ್!’ ಎಂದು ಕೈ ಅದುಮಿದೆ.. ಅಪ್ಪನೊಂದಿಗೆ ಭಾಗವಹಿಸುವ ಮತ್ತಿಬ್ಬರು ಸ್ಪರ್ಧಿಗಳೂ ವೇದಿಕೆಗೆ ಬಂದರು.. ಸಿಟ್ಟಿಂಗ್ ಪೊಸಿಷನ್, ವಾಯ್ಸ್ ಟೆಸ್ಟಿಂಗ್, ಬಜರ್ ಒತ್ತುವುದನ್ನು ಹೇಳಿಕೊಡುವುದು, ಎಲ್ಲಾ ಮುಗಿಯಿತು. ಸೋಮೇಶ್ವರರು ಡ್ರೆಸ್ ಬದಲಿಸಿಕೊಂಡು ಬಂದರು. ಕೆಮೆರಾದವರೆಲ್ಲಾ ತಯಾರಾದ ಮೇಲೆ, ಮೇಲಿದ್ದ ಡೈರೆಕ್ಟರ್ ‘ಸ್ಟಾರ್ಟ್’ ಎಂದಿದ್ದೇ ತಡ,

‘ಸ್ವಾಗತಾ.. ಸುಸ್ವಾಗತಾ.. ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ..!’ ಎಂದು ಸೋಮೇಶ್ವರರು ತಮ್ಮ ಎಂದಿನ ಶೈಲಿಯಲ್ಲಿ ಶುರು ಮಾಡಿಯೇ ಬಿಟ್ಟರು! ಇದೊಂಥರಾ ತೀರಾ ನಾಟಕೀಯವೆನಿಸಿತಾದರೂ ನಾನು ಉತ್ಸಾಹ ತಡೆಯಲಾರದೇ ಖುರ್ಚಿಯಿಂದೊಮ್ಮೆ ಎದ್ದು ಕೂತೆ! ಸ್ಪರ್ಧಿಗಳ ಪರಿಚಯವಾಯಿತು, ಪ್ರಶ್ನೆಗಳು ಒಂದಾದ ನಂತರ ಒಂದು ಬರಲಾರಂಭಿಸಿದವು.. ಮನೆಯಲ್ಲಿ ಟೀವಿ ಮುಂದಿರುವಾಗ ಅಷ್ಟೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತ್ತಿದ್ದ ಅಪ್ಪ ಇಲ್ಲಿ ತಡವರಿಸಲಾರಂಭಿಸಿದ.. ನನಗೆ ಜಯಂತ ಕಾಯ್ಕಿಣಿಯವರ ‘ಟಿಕ್ ಟಿಕ್ ಗೆಳೆಯ’ ಕಥೆ ನೆನಪಾಗುತ್ತಿತ್ತು.. ಎರಡ್ಮೂರು ಪ್ರಶ್ನೆಗಳಿಗೆ ಅಪ್ಪ ತಪ್ಪು ಉತ್ತರ ಕೊಟ್ಟ. ಮಧ್ಯೆ ಒಮ್ಮೆ ಬ್ಯಾಕ್‌ಗ್ರೌಂಡ್ ಲೈಟ್ ಏನೋ ತೊಂದರೆ ಕೊಟ್ಟು ಚಿತ್ರೀಕರಣ ಕಟ್ ಮಾಡಿ ನಿಲ್ಲಿಸಿದರು. ಆಗ ಅಪ್ಪ ದೂರದಲ್ಲಿ ಕತ್ತಲಲ್ಲಿ ಕೂತಿದ್ದ ನನ್ನನ್ನು ನೋಡಿ ಮುಗುಳ್ನಕ್ಕ. ನಾನು ಕೈ ಮಾಡಿದೆ. ಮತ್ತೆ ಕಾರ್ಯಕ್ರಮ ಮುಂದುವರೆಯಿತು. ಕೊನೆಯಲ್ಲಿ ಅಪ್ಪ ಐದು ಪುಸ್ತಕಗಳನ್ನು ಗೆದ್ದುಕೊಂಡು ಕೆಳಗಿಳಿದು ಬಂದ. ‘ಕಂಗ್ರಾಜುಲೇಷನ್ಸ್!’ ಎಂದರೆ, ‘ಎಂಥಾ, ಫುಲ್ ಟೆನ್ಷನ್ ಆಗಿಹೋತು.. ಎಷ್ಟ್ ಸುಲಭದ ಪ್ರಶ್ನೆ ಇತ್ತು.. ಥೋ..!’ ಎಂದು ಅಲವತ್ತುಕೊಳ್ಳುತ್ತಲೇ ಅಪ್ಪ ಸ್ಟುಡಿಯೋದಿಂದ ಹೊರಬಂದ.

ಅಪ್ಪನಿಗೆ ಎಳನೀರು ಕುಡಿಸುತ್ತಾ ಮನೆಗೆ ಫೋನ್ ಮಾಡಿದೆ. ‘ಐದೇ ಪುಸ್ತಕವಾ? ಅಷ್ಟೂ ಪುಸ್ತಕ ತಗಂಬರ್ತಿ ನೋಡು ಅಂತ ಹೇಳಿ ಕೊಚ್ಕ್ಯಂಡ್ ಹೋಯ್ದ ಇಲ್ಲಿಂದ.. ಬರ್ಲಿ ಇರು!’ ಎಂದಳು ಅಮ್ಮ. ನಾನು ನಕ್ಕೆ. ಕಾರ್ಯಕ್ರಮ ಪ್ರಸಾರವಾದ ದಿನ ಮತ್ತೆ ನಮ್ಮ ಮನೆಯಲ್ಲಿ ಊರವರೆಲ್ಲಾ ಸೇರಿದ್ದರಂತೆ. ರಾತ್ರಿ ಫೋನಿಸಿದ ನನ್ನ ಬಳಿ ಅಮ್ಮ ‘ಇಶೀ, ಕಪ್ಪಗ್ ಕಾಣ್ತಿದ್ವಪ.. ಎಂಥೇನ, ಪೌಡರ್ ಆದ್ರೂ ಹಚ್ಕ್ಯಂಡ್ ಹೋಗ್ಲಾಗಿತ್ತು. ನಿಂಗೆ ಹೇಳಕ್ಕಾಗಲ್ಯಾ?’ ಎಂದಳು!

* * *

‘ಅಜ್ಜ ಬಂದ, ಮಗ ಬಂದ, ಇನ್ನು ಮೊಮ್ಮಗ ಬಪ್ದು ಯಾವಾಗ ಟೀವಿಲಿ?’ ಊರವರು ಕೇಳುತ್ತಿದ್ದರು..

ಆವತ್ತು ಆಫೀಸಿನಲ್ಲಿದ್ದೆ. ಸೋಮವಾರದ ಬ್ಯುಸಿ. ಶ್ರೀನಿಧಿ ಫೋನಿಸಿದ: ‘ದೋಸ್ತಾ ಆಫೀಸಲ್ಲಿದ್ಯಾ? ನಮ್ ಛಾನೆಲ್ಲಿಗೆ ನಿಂದೊಂದು ಸಣ್ಣ ಸಂದರ್ಶನ ಬೇಕು. ಬರ್ತಿದ್ದಿ ಈಗ ಅಲ್ಲಿಗೆ!’ ಹಹ್! ನನ್ನ ಸಂದರ್ಶನವಾ? ಏನಾಗಿದೆ ಇವನಿಗೆ ಅನ್ನಿಸಿತು. ‘ನಂದಾ? ಯಾಕೆ? ಏನು?’ ಕೇಳಿದೆ. ‘ಏನಿಲ್ಲಾ, ನಮ್ಮ ಛಾನೆಲ್ಲಿನಲ್ಲಿ ಯಾವ ತರಹದ ಕಾರ್ಯಕ್ರಮಗಳನ್ನು ನೀನು ನಿರೀಕ್ಷಿಸ್ತೀಯ ಅಂತ ಐದು ನಿಮಿಷ ಮಾತಾಡು ಸಾಕು’ ಎಂದ. ನಾನು ಟೀವಿಯನ್ನೇ ನೋಡುವವನಲ್ಲ, ಇನ್ನು ಇದು ಹೇಗೆ ಹೇಳಲಿ?! ಆದರೂ ನಿಧಿ ಬಿಡಲಿಲ್ಲ. ಅವನೇ ಏನೇನೋ ಟಿಪ್ಸ್ ಕೊಟ್ಟ. ‘ಸರಿ ಮಾರಾಯ’ ಅಂತ ಒಪ್ಪಿಕೊಂಡೆ. ಈ ಸಲ ನನ್ನ ಕಲೀಗುಗಳು ‘ಆಲ್ ದಿ ಬೆಸ್ಟ್’ ಹೇಳಿದರು. ಆಫೀಸಿನ ಪಕ್ಕದ ಪಾರ್ಕಿನ ಎದುರು ನನ್ನನ್ನು ನಿಲ್ಲಿಸಿ ‘ಹೂಂ, ಮಾತಾಡು!’ ಎಂದ ನಿಧಿ; ನಾನು ಬೆವರತೊಡಗಿದೆ.

ಅದು ಪ್ರಸಾರವಾದ ದಿನ ನಮ್ಮೂರಿನಲ್ಲಿ ಕರೆಂಟ್ ಇರಲಿಲ್ಲ. ಅಪ್ಪ ಬೇರೆ ಊರಿನ ಆ ಛಾನೆಲ್ ಬರುವ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದ. ನಾನು ಆಗ ಆಫೀಸಿನಲ್ಲಿದ್ದೆ, ಹಾಗಾಗಿ ನೋಡಲು ಆಗಲಿಲ್ಲ. ನನ್ನ ಹೆಸರಿನ ಕೆಳಗೆ ‘ಉದಯೋನ್ಮುಖ ಸಾಹಿತಿ’ ಅಂತೇನೋ ತೋರಿಸಿದ್ದರಂತೆ. ನನಗೆ ಮೈ ಉರಿದುಹೋಗಿ ನಿಧಿ ಸಿಕ್ಕಾಗ ಕೊಲೆ ಮಾಡಬೇಕು ಅಂದುಕೊಂಡಿದ್ದೆ. ಕೊನೆಗೆ, ‘ಪಾಪ, ಎಷ್ಟಂದ್ರೂ ನನ್ ಡಾರ್ಲಿಂಗ್ ಅಲ್ವಾ?’ ಅಂತ ಬಿಟ್ಟುಬಿಟ್ಟೆ. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ, ಈಗ ದಿನಕ್ಕೊಮ್ಮೆ ಅವನು ಫೋನ್ ಮಾಡಿ ‘ಏನಾದ್ರೂ ಬರೆಯೋ..’ ಎಂದು ಕಾಟ ಕೊಡುವಾಗ ಅನ್ನಿಸುತ್ತಿದೆ. ;)

Friday, October 31, 2008

ಎಲ್ಲಾದರೂ ಇರು...

ರಚನೆ: ಕುವೆಂಪು; ರಾಗ ಸಂಯೋಜನೆ: ಸಿ. ಅಶ್ವತ್ಥ್; ಗಾಯಕ: ಡಾ| ರಾಜ್‍ಕುಮಾರ್; ನಿರ್ದೇಶನ ಮತ್ತು ಚಿತ್ರೀಕರಣ: ಟಿ.ಎಸ್. ನಾಗಾಭರಣ





ನನ್ನಿಷ್ಟದ ವೀಡಿಯೋ ಇದು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Thursday, October 23, 2008

ಆಕಾಶಬುಟ್ಟಿ

ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.

ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.

'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!

'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!

ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..

'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!

ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..

ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..

ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.

ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!

ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.

ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.

ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.

* *

ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.

Wednesday, September 24, 2008

ಪನ್ನೀರಿನ ಹುಡುಗಿ

ಶಹರದ ಛತ್ರದಿ ಗೆಳೆಯನ ಮದುವೆ
ಕರೆದಿಹ ತಪ್ಪದೇ ಬರಬೇಕೆಂದು
'ಆರತಕ್ಷತೆಗೂ ಬಾರದೆ ಇದ್ದರೆ
ಮಾತೇ ಆಡಿಸೆ' ಎಂದಿಹನು

ಗರಿಗರಿ ಜುಬ್ಬಾ, ಬಗಲಿಗೆ ಅತ್ತರು,
ಹೊಸ ಶೂಗೂನೂ ಪಾಲೀಶು!
ನಾನೂ ಭಾವೀ ಮದುಮಗನಲ್ಲವೇ?
ಇಷ್ಟೂ ಇರದಿರೆ ಬರಿ-ವೇಷ್ಟು!

ದಂಪತಿಗೆಂದೊಂದುಡುಗೊರೆ ಹಿಡಿದು
ಹೊರಟೆನು ನಯ ನಾಜೂಕಿನಲಿ
ಛತ್ರದ ತೋರಣ ಬಾಗಿಲು ಕೋರಿತು
ಸ್ವಾಗತ ಭಾರೀ ಸಂಭ್ರಮದಿ

ಬಾಗಿಲ ಪಕ್ಕದಿ ಗೆಳತಿಯರೊಡನೆ
ನಿಂತಿಹಳ್ಯಾರೋ ಸುಂದರಿಯು
ಬೆಳ್ಳಿಯ ಬಣ್ಣದ ದಾನಿಯ ತುಂಬಾ
ಹಿಡಿದು ಸಿಂಪಿಸಲ್ ಪನ್ನೀರು

ಸೋಕಿರೆ ನನಗೂ ಪರಿಮಳ ನೀರು
ಆಗಿದೆ ಮನಮೈ ರೋಮಾಂಚನವು
ಮುನಿಸನು ನಟಿಸುತ ದಿಟ್ಟಿಸೆ ನಾನು
ಚೆಲುವೆ ಕಿಲಾಡಿಗೆ ನಾಚಿಕೆಯು!

ಛತ್ರವೇ ಇದು? ಕಿನ್ನರ ಲೋಕವೇ?-
ನನಗೋ ದಿಗ್ಭ್ರಮೆ; ಅರೆ ಮರುಳು
ಮರೆತಿಹೆ ನಿಂತಿಹ ಸ್ಥಳವನೆ ಅರೆಚಣ;
ಈ ಚೆಲುವೆಗೋ, ನಗೆ-ಜೋರು!

ಹಂಸದ ಬಣ್ಣದ ಸೀರೆಯ ಹುಡುಗಿ,
ಕೈ ಬೆರಳುಗಳಿಗೆ ಮದರಂಗಿ
ಹಿಮಾಲಯದ ತರು ಬಿಟ್ಟರೆ ಕೆಂಪುಹೂ
ಹೀಗೆಯೆ ಕಾಣಲುಬಹುದೇನೋ?

ನೂಕುನುಗ್ಗಲಲಿ ಸರಿದೆಹೆ ನಾನೂ
ಛತ್ರದ ಸಭೆಯ ಅಂಗಳಕೆ
ಉಡುಗೊರೆ ಸಾಲೋ ಉದ್ದವೇ ಉದ್ದ
ಕಾಯಲೇಬೇಕು ಹಾ, ಆಕಳಿಕೆ!

ಯಾರಿರಬಹುದು ಆ ಎಳೆತರಳೆ-
ಗಂಡಿನ ಕಡೆಯವಳೆ? ಹೆಣ್ಣಿನ ಕಡೆಯವಳೆ?
ಸಭೆಯೊಳಗೊಮ್ಮೆ ಹಾದು ಹೋಗಿರೆ
ಓಹ್! ಕೋಲ್ಮಿಂಚೊಂದು ಹೊಳೆದಂತೆ

ಏನೋ ನೆವದಲಿ ಸುಳಿದಾಡುವಳು
ನನಗೆ ತಿಳಿಯದೆ ಇದರ ಒಳಗುಟ್ಟು?
'ಅಯ್ಯೋ ಹುಡುಗಿ, ನಾ ಮೆಚ್ಚಿಯಾಗಿದೆ
ಸಾಕು ಬಿಡು ನೀ ಈ ಕಸರತ್ತು!'

ಲಗ್ನದ ಗದ್ದಲ ತುಂಬಿದ ಮನೆಯಲಿ
ಇಬ್ಬರು ಕಳ್ಳರು ಇರುವವರೀಗ
ನೋಟವ ಕದ್ದರೆ ಸದ್ದೇ ಆಗದು
ಪ್ರೇಮ ಅರಳುವುದು ಬಲುಬೇಗ

ಮಂಟಪದಲ್ಲಿ ನಿಂತಿಹ ಜೋಡಿಯು
ನಾನು-ಅವಳೇ ಆದಂತೆ;
ಊಟದ ತಟ್ಟೆಯ ಹೋಳಿಗೆಯಲ್ಲೂ
ಅವಳಾ ಮುಖವೇ ಕಂಡಂತೆ!

ನನಗೂ ತಿಳಿದಿದೆ: ಇಂತಹ ಪ್ರೀತಿಗೆ
ಆಯಸ್ಸೆಂಬುದು ಬಲು ಕಮ್ಮಿ
ಛತ್ರದ ಹೊಸ್ತಿಲ ದಾಟಲು ಮರೆವುದು
ಅನಿವಾರ್ಯವೇ ಹೂಂ, ಸರಿಯೆನ್ನಿ.

ಆದರೂ ಈಕೆಯು ಬರುವಳು ಸಂಗಡ
ಜುಬ್ಬದ ವಸಂತ ಪರಿಮಳವಾಗಿ;
ಪನ್ನೀರಿನ ಘಮ ಸುಳಿದಾಗೆಲ್ಲ
ನೆನಪಾಗುವಳು ಕಾಡುವ ಕಣ್ಣಾಗಿ.

[ನನ್ನ ಬ್ಲಾಗಿನ ನೂರನೇ ಪೋಸ್ಟು]

Tuesday, September 02, 2008

ಚೌತಿಯ ಮುನ್ನಾದಿನ, ಗಣೇಶವಾಹನನ ನೆನೆದು...

ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ |

ಕುವೆಂಪುರವರ ಕಥನಕವನ 'ಬೊಮ್ಮನಹಳ್ಳಿಯ ಕಿಂದರಿಜೋಗಿ' ಶುರುವಾಗುವುದೇ ಹೀಗೆ. ಎಲ್ಲಾ ಹಳ್ಳಿಗಳಂತೆ ಅದೂ ಒಂದು ಹಳ್ಳಿ. ಆದರೆ ಅಲ್ಲಿ ಇಲಿಗಳ ಕಾಟ! ಇಲಿ ಯಾವೂರಲ್ಲಿಲ್ಲ ಹೇಳಿ? ಎಲ್ಲಾ ಊರಲ್ಲೂ ಎಲ್ಲರ ಮನೆಯಲ್ಲೂ ಇದ್ದದ್ದೇ ಇಲಿ ಕಾಟ. ಆದರೆ ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ ಮಿತಿ ಮೀರಿದೆ. ಎಷ್ಟು ಅಂತೀರಾ? ಅಲ್ಲಿನ ಇಲಿಗಳಿಗೆ ಹೆದರಿಕೆ ಬೆದರಿಕೆ ಒಂದೂ ಇಲ್ಲ.. ಅವು ನಾಯಿ, ಬೆಕ್ಕುಗಳನ್ನೇ ಕಡಿಯುತ್ತವೆ..! ಅಡುಗೆ ಭಟ್ಟನ ಕೈಯ ಸಟುಗವನ್ನು ಭೀತಿಯಿಲ್ಲದೇ ನೆಕ್ಕುತ್ತವೆ..! ಟೋಪಿ ಒಳಗೇ ಗೂಡು ಮಾಡಿಕೊಳ್ಳುತ್ತವೆ, ಪೇಟದ ಒಳಗೆ ಆಟವಾಡ್ತವೆ, ಗೋಡೆಗೆ ತಗುಲಿಸಿದಂಗಿಯ ಜೇಬನು ದಿನವೂ ಜಪ್ತಿಯ ಮಾಡುತ್ತವೆ..! ಮಲಗಿದ್ದ ಶೇಶಕ್ಕ ಬೆಳಗೆದ್ದು ನೋಡುವಾಗ ಕೇಶವೇ ಇಲ್ಲ! ಸಿದ್ದೋಜೈಗಳು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಅವರ ಜೇಬಿನಿಂದ ಇಲಿಯೊಂದು ಛಂಗನೆ ನೆಗೆದು, ಮಕ್ಕಳೆಲ್ಲಾ ಗೇಲಿ ಮಾಡಿ, ಮೇಷ್ಟರಿಗೆ ತುಂಬಾ ಅವಮಾನವಾಗುತ್ತದೆ.

ಇಲಿಗಳ ಕೊಲ್ಲಲು ಜನಗಳು ಮಾಡಿದ ನಾನಾ ಯತ್ನ ನಿಶ್ಫಲವಾಗಲು ಊರ ಗೌಡ ಈ ಇಲಿಗಳನ್ನು ಕೊಂದವರಿಗೆ ಆರು ಸಾವಿರ ನಾಣ್ಯಗಳನ್ನು ಕೊಡುವುದಾಗಿ ಘೋಶಿಸುತ್ತಾನೆ. ಆಗ ಬರುತ್ತಾನೆ ನಮ್ಮ ಕಿಂದರಿಜೋಗಿ.. ಅವನು ಕಿಂದರಿ ಊದಿದ್ದೇ ಇಲಿಗಳೆಲ್ಲ ಬುಳಬುಳನೆ ಹೊರಬರುತ್ತವೆ, ಜೋಗಿಯನ್ನೇ ಹಿಂಬಾಲಿಸುತ್ತವೆ. ಯಾವ್ಯಾವ ಥರದ ಇಲಿಗಳು ಅವು: ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ, ಸಣ್ಣಿಲಿ, ದೊಡ್ಡಿಲಿ, ಸುಂಡಿಲಿ, ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ -ಎಲ್ಲಾ ಬಂದುವಂತೆ ಓಡೋಡಿ... ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ, ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ, ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು... ಹೀಗೆ ಕುವೆಂಪುರವರ ಶಬ್ದ ಭಂಡಾರದೊಳಗಿದ್ದ ಇಲಿಗಳೆಲ್ಲ ಹೊರಬರುತ್ತವೆ.

ಜೋಗಿ ಕಿಂದರಿ ಊದುತ್ತಾ ಊದುತ್ತಾ ಇಲಿಗಳನ್ನೆಲ್ಲಾ ಮೋಡಿ ಮಾಡಿ ಅವೆಲ್ಲಾ ಹೊಳೆಯಲ್ಲಿ ಮುಳುಗಿ ಸಾಯುವಂತೆ ಮಾಡುತ್ತಾನೆ. ಆಮೇಲಿನ ಕಥೆ ನಿಮಗೆ ಗೊತ್ತೇ ಇದೆ: ಗೌಡ ಮಾತಿಗೆ ತಪ್ಪುತ್ತಾನೆ; ಹೇಳಿದಂತೆ ಆರು ಸಾವಿರ ನಾಣ್ಯ ಕೊಡುವುದಿಲ್ಲ. ಆಗ ಜೋಗಿ ಮತ್ತೆ ಕಿಂದರಿ ಊದುತ್ತಾನೆ, ಊರಿನ ಮಕ್ಕಳೆಲ್ಲಾ ಅವನ ಹಿಂದೆ ಹೋಗುತ್ತವೆ, ಬೆಟ್ಟವೊಂದು ಬಾಯಿ ತೆರೆಯುತ್ತದೆ, ಅದರೊಳಗೆ ಜೋಗಿ - ಅವನ ಹಿಂದೆಯೇ ಮಕ್ಕಳು - ಕೊನೆಗೆ ಉಳಿದವನೊಬ್ಬನೇ ಕುಂಟ. 'ಅಯ್ಯೋ ಹೋಯಿತೆ ಆ ನಾಕ! ಅಯ್ಯೋ ಬಂದಿತೆ ಈ ಲೋಕ!'

* * *

ಇಲಿಗಳ ಜೊತೆ ಗುದ್ದಾಡುವುದು ಕಷ್ಟ. ಮನೆಯೊಳಗೆ ಒಂದು ಇಲಿ ಹೊಕ್ಕಿಕೊಂಡಿತೆಂದರೇ ತಲೆಬಿಸಿ ನಿಭಾಯಿಸಲಿಕ್ಕಾಗುವುದಿಲ್ಲ; ಇನ್ನು ನೂರಾರು ಇಲಿಗಳು ಸೇರಿಬಿಟ್ಟರೆ ಗತಿಯೇನು ಹೇಳಿ? ಈ ಇಲಿಗಳ ವಾಸಕ್ಕೆ ಸಂದಿಗೊಂದಿಯೇ ಆಗಬೇಕು. ಓಡಾಟಕ್ಕೆ ಗೋಡೆಬದಿಯೇ ಆಗಬೇಕು. ರಾಜಾರೋಶವಾಗಿ ಕೋಣೆಯ ಮಧ್ಯದಲ್ಲಿ ಇವು ಓಡಾಡುವುದನ್ನು ನಾನು ಕಂಡಿದ್ದೇ ಇಲ್ಲ. ಉಗ್ರಾಣದಲ್ಲಿನ ಚೀಲಗಳನ್ನು ಕೊರೆಯುವುದು, ಸ್ಟ್ಯಾಂಡಿನಲ್ಲಿನ ಬಟ್ಟೆಗಳನ್ನು ತೂತು ಮಾಡುವುದು, ಗ್ಯಾಸ್‍ಕಟ್ಟೆಯ ಮೇಲಿದ್ದ ಕಾಯಿಕಡಿಯನ್ನು ಎತ್ತಿಕೊಂಡು ಹೋಗುವುದು -ಇತ್ಯಾದಿ ಕಿತಾಪತಿ ಕೆಲಸಗಳನ್ನು ಮಾಡುವುದೇ ಇವುಗಳ ಜಾಯಮಾನ. ಹಾಕಿದಷ್ಟನ್ನು ತಿಂದುಕೊಂಡು, ಶಿಸ್ತಾಗಿ ಓಡಾಡಿಕೊಂಡಿದ್ದು, ಕೋಣೆಯಲ್ಲಿ ಒಂದು ಕಡೆ ಮಲಗೆದ್ದು ಹೋಗುವಂತಿದ್ದರೆ ಇವನ್ನೂ ನಾಯಿ-ಬೆಕ್ಕುಗಳಂತೆ ಸಾಕಬಹುದಿತ್ತೇನೋ ಎಂದು ನಾನು ಯೋಚಿಸಿದ್ದಿದೆ.

ಈ ಇಲಿಗಳ ಮೂಗು ಬಹು ಚುರುಕು. ಹತ್ತಾರು ಮಾರು ದೂರದಲ್ಲಿ ಬಿದ್ದಿರುವ ಕಾಯಿಚೂರಿನ ಪರಿಮಳವನ್ನೂ ಇವು ಗ್ರಹಿಸಿ, ಅಲ್ಲಿಗೆ ಧಾವಿಸಿ, ಅದನ್ನು ಗುಳುಂ ಮಾಡಬಲ್ಲವು. ಬಹುಶಃ ಗಣೇಶ ಈ ಇಲಿಯನ್ನೇ ತನ್ನ ವಾಹನವನ್ನಾಗಿ ಆರಿಸಿಕೊಂಡಿರುವ ಹಿಂದೆ ಈ ಕಾರಣವೂ ಇದ್ದಿರಬಹುದು. ಸದಾ ಹಸಿದ ಹೊಟ್ಟೆಯ ಈ ಟೊಣಪನಿಗೆ ಆಹಾರ ಎಲ್ಲಿದೆ ಎಂದು ಪತ್ತೆಹಚ್ಚಿ, ಅಲ್ಲಿಗೆ ಕರೆದೊಯ್ದು ಕೊಡಿಸುವ ಆಶ್ವಾಸನೆಯನ್ನು ಇಲಿ ಕೊಟ್ಟಿರಬೇಕು. ಹಾಗಾಗೇ ಇವನು ಇಲಿಗೆ ತನ್ನ ಟ್ರಾವೆಲ್ ಕಾಂಟ್ರಾಕ್ಟ್ ವಹಿಸಿಕೊಟ್ಟಿರುವುದು. ಹಾಗೆ ನೋಡಿದರೆ, ಪ್ರಥಮಪೂಜಿತ ಗಣೇಶನ ವಾಹನವನ್ನು ನಾವೆಲ್ಲಾ ಅರ್ಚಿಸಿ ಗೌರವಿಸಬೇಕು. ಆಫ್ಟರಾಲ್ ಒಬ್ಬ ಮಂತ್ರಿಯ ಕಾರಿಗೆ - ಅದರ ಡ್ರೈವರಿಗೆ ಎಷ್ಟು ಗೌರವ ಇರುತ್ತದೆ ಯೋಚಿಸಿ? ಮೊದಲು ಅವನಿಗೆ ಸೆಲ್ಯೂಟ್ ಹೊಡೆದೇ 'ಸಾಯೇಬ್ರು ಯಾವ ಮೂಡಲ್ಲವ್ರೆ?' ಅಂತ ಕೇಳೋದಿಲ್ಲವಾ? ಅಂಥಾದ್ದರಲ್ಲಿ, ಗಜಮುಖನ ವಾಹನವೆಂದಾದರೂ ನಾವು ಇಲಿಗೆ ಸ್ವಲ್ಪ ಕನ್ಸಿಡರೇಶನ್ ಕೊಡಬಹುದಿತ್ತು. ಆದರೆ ಅದರದ್ದು ಅದೇನು ಕರ್ಮವೋ ಏನೋ, ಜನ ಅದನ್ನು ತಮ್ಮ ಆಜನ್ಮ ಶತ್ರುವೆಂಬಂತೆ ಪರಿಗಣಿಸಿಬಿಟ್ಟಿದ್ದಾರೆ. ಕಣ್ಣಿಗೆ ಬಿದ್ದರೆ ಹೊಡೆಯಲಿಕ್ಕೆ ದೊಣ್ಣೆ ಎಲ್ಲಿದೆ ಹುಡುಕುತ್ತಾರೆ.

ನಮ್ಮ ಹಳೆ ಮನೆಯಲ್ಲಿ ಇಲಿಗಳ ಕಾಟ ಜೋರಿತ್ತು. ಅದು ಮಣ್ಣುಗೋಡೆಯ ಮನೆಯಾಗಿದ್ದರಿಂದ ಇವಕ್ಕೆ ಬಿಲ ತೋಡಲಿಕ್ಕೆ ಬಹಳ ಸುಲಭವಾಗಿತ್ತು. ರಾತ್ರಿಯಾಯಿತೆಂದರೆ ಸಾಕು, ಕೊಟ್ಟಿಗೆ ಮನೆಯಿಂದಲೋ ಮತ್ತೆಲ್ಲಿಂದಲೋ ಮನೆಯೊಳಗೆ ಟುಕುಟುಕನೆ ಆಗಮಿಸುತ್ತಿದ್ದ ಇವು ಕಣ್ಣು ಮಿಟುಕಿಸುವುದರೊಳಗೆ ಒಳಗೆಲ್ಲೋ ಹೋಗಿ ಸೇರಿಕೊಂಡುಬಿಡುತ್ತಿದ್ದವು. ಮಂಚದಡಿಗೋ, ಕಪಾಟಿನ ಕೆಳಗೋ ಅಡಗಿಕೊಂಡಿರುತ್ತಿದ್ದ ಇವು ನಾವು ಲೈಟೆಲ್ಲಾ ಆಫ್ ಮಾಡಿ ಮಲಗಿದಮೇಲೆ ಕಾರ್ಯಾಚರಣೆಗೆ ಇಳಿಯುತ್ತಿದ್ದವು. ಸೀದಾ ಅಡುಗೆಮನೆಗೆ ಹೋಗಿ ಸ್ಟ್ಯಾಂಡ್ ಹತ್ತಿ ಢಣಾರನೆ ಯಾವುದಾದರೂ ಪಾತ್ರೆ ಕೆಡವುವುದೋ, ಗೋಡೌನಿಗೆ ಹೋಗಿ ಕೊರಕೊರ ಎಂದು ಹೊಸ ಕನ್ನ ಕೊರೆಯುವುದೋ ಮಾಡುತ್ತಾ, ತಮ್ಮತಮ್ಮಲ್ಲೇ ಕಿಚಪಿಚ ಎಂದು ಕಾನ್ವರ್ಸೇಶನ್ ಮಾಡಿಕೊಳ್ಳುತ್ತಾ ನಮ್ಮ ನಿದ್ದೆಗೆಡಿಸುತ್ತಿದ್ದವು. ಆಗ ಅಜ್ಜಿ "ಥೋ, ಈ ಇಲಿ ಕಾಲದಲ್ಲಿ ಆಗಲ್ಯೇ" ಎಂದು ಗೊಣಗುತ್ತಾ ಲೈಟ್ ಹಾಕಿದ್ದೇ ತಡ, ಸದ್ದು ಬಂದ್! ಅಡುಗೆಮನೆಗೆ ಹೋಗಿ ಬಿದ್ದಿದ್ದ ಪಾತ್ರೆ ಎತ್ತಿಟ್ಟು ಬಂದು, ದೀಪವಾರಿಸಿ ಮಲಗಿದ ಐದು ನಿಮಿಷಕ್ಕೆ ಮತ್ತೆ ಶುರುವಾಗುತ್ತಿತ್ತು ಸದ್ದು..!

ನೋಡೀ, ವಿನಾಕಾರಣ ಈ ಮಲಗಿದ್ದ ಮನುಷ್ಯನ ನಿದ್ದೆ ಕೆಡಿಸುವುದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಆಗ ಆತನ ಕೋಪ ನೆತ್ತಿಗೇರಿಬಿಡುತ್ತದೆ. ಆತ ತನ್ನ ನಿದ್ರಾಹರಣಕ್ಕೆ ಕಾರಣರಾದವರನ್ನು ಮುಗಿಸಲಿಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಅದಕ್ಕೆ ನನ್ನ ಅಜ್ಜಿಯೇ ಉದಾಹರಣೆ. ಅಜ್ಜಿಯ ಮಂಚದ ಪಕ್ಕದಲ್ಲಿ ಯಾವಾಗಲೂ ಒಂದು ದೊಣ್ಣೆ ಇರುತ್ತಿತ್ತು. ನಿದ್ದೆಗಣ್ಣ ಆಕೆ ಅದನ್ನು ಕೈಗೆತ್ತಿಕೊಳ್ಳುತ್ತಿದ್ದಳು. 'ಎಲಾ ಇಲಿಯೇ, ಎಲ್ಲಿರುವೆ ನೀನು? ನನ್ನ ಮುಂದೆ ನಿನ್ನಾಟವೇನೂ ನಡೆಯದು. ಇಗೋ, ನಿನ್ನ ಆಯುಷ್ಯ ಇಂದಿಗೆ ಮುಗಿಯಿತೆಂದೇ ತಿಳಿದುಕೋ' ಎಂದು ಮನಸಿನಲ್ಲಿಯೇ ಅಬ್ಬರಿಸಿ, ರಣಚಂಡಿ ಅವತಾರ ತಾಳಿ ಇಲಿ ಎಲ್ಲೈತೆ ಎಲ್ಲೈತೆ ಎಂದು ಹುಡುಕುತ್ತಾ ಮನೆಯನ್ನೆಲ್ಲಾ ಜಾಲಾಡಿ ಒಂದಾದರೂ ಇಲಿಯನ್ನು ಹೊಡೆದು ತನ್ನ ದೊಣ್ಣೆಗೆ ಸವರಿದ್ದ ನೆತ್ತರನ್ನು 'ಜೋಗಿ' ಚಿತ್ರದ ಶಿವರಾಜ್‍ಕುಮಾರ್ ಸ್ಟೈಲಲ್ಲಿ ನೋಡಿ ಸಂತೃಪ್ತಿ ಪಟ್ಟುಕೊಂಡ ನಂತರವೇ ಮಲಗುತ್ತಿದ್ದಳು. ಅಷ್ಟರಲ್ಲೇ ಒಂದೆರಡು ರೌಂಡು ಸಣ್ಣ ನಿದ್ರೆಗಳನ್ನು ಪೂರೈಸಿ ಎಚ್ಚರಾಗಿರುತ್ತಿದ್ದ ನಾನು, ಅಜ್ಜಿ ಈ ಹತ್ಯಾಕಾಂಡಕ್ಕೆ ಮುಂದಾಗುವಾಗ ಅವಳ ಹಿಂದೆಯೇ ಹೋಗಿ, ಅವಳು ಕೊಲೆ ಎಸಗುವುದನ್ನು ಕಣ್ತುಂಬ ನೋಡಿ, ಆಮೇಲಷ್ಟೇ 'ಕ್ರೈಂ ಡೈರಿ' ವೀಕ್ಷಕನಂತೆ ನಿದ್ರೆ ಹೋಗುತ್ತಿದ್ದೆ.

ಈ ದೇವರು ಎಂಬಾತ, ಪ್ರಾಣಿಗಳಿಗೆ ಬುದ್ಧಿಶಕ್ತಿಯನ್ನು ಅಲಾಟ್ ಮಾಡುವಾಗ ತುಂಬಾನೇ ಪಕ್ಷಪಾತ ಮಾಡಿಬಿಟ್ಟ. ಮನುಷ್ಯನಿಗೆ ಸಿಕ್ಕಾಪಟ್ಟೆ ಬುದ್ಧಿ ಕೊಟ್ಟು, ಉಳಿದ ಪ್ರಾಣಿಗಳಿಗೆ ತಮ್ಮ ಆಹಾರ ಹುಡುಕಿಕೊಳ್ಳಲಿಕ್ಕೆ - ಬದುಕಿಕೊಳ್ಳಲಿಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬುದ್ಧಿ ಕೊಟ್ಟ. ಈ ಮನುಷ್ಯ ಏನು ಮಾಡಿದಾ, ಇಲಿಗತ್ತರಿ - ಇಲಿಬೋನು ಇತ್ಯಾದಿ ಮಷಿನ್ನುಗಳನ್ನು ಕಂಡುಹಿಡಿದ. ಇಲಿಪಾಶಾಣದಂತಹ ವಿಷಗಳನ್ನು ಕಂಡುಹಿಡಿದ. 'ಪ್ರತಿದಿನ ನಿದ್ರೆ ಕೆಡಿಸಿಕೊಂಡು ಇಲಿ ಹೊಡೆಯುವುದ್ಯಾಕ? ಇಟ್ಟರೆ ಒಂದು ಹಿಡಿ ಪಾಶಾಣ ಸಾಕ!' ಎಂದು ಜಾಹೀರಾತು ಮಾದರಿಯಲ್ಲಿ ತನಗೆ ತಾನೇ ಹೇಳಿಕೊಂಡು, ಇಲಿಗೆ ಪ್ರಿಯವಾಗುವ ಯಾವುದೇ ತಿಂಡಿಯ ಜೊತೆ ಈ ಪುಡಿಯನ್ನು ಕಲಸಿ, ಅದು ಓಡಾಡುವ ದಾರಿಯಲ್ಲಿ ಇಟ್ಟುಬಿಟ್ಟ. ಇಲಿ ಪಾಪ ವಾಸನೆ ಗ್ರಹಿಸಿಕೊಂಡು ಬಂತು, 'ತನಗಾಗಿಯೇ' ಎಂಬಂತೆ ಇಟ್ಟಿರುವ ಆಹಾರವನ್ನು ತಿಂತು, ಅಟ್ಟದ ಮೇಲೋ ಗೋಡೌನಿನ ಮೂಲೆಗೋ ಹೋಗಿ ಸತ್ತಿತು. ಆಮೇಲೆ ಮನೆಯಿಡೀ ದುರ್ನಾತ! "ಓಹ್ ಎಲ್ಲೋ ಇಲಿ ಸತ್ತಿದ್ದು ಕಾಣ್ತು" ಎನ್ನುತ್ತಾ ಮೂಗಿಗೆ ಸೆರಗು ಮುಚ್ಚಿಕೊಳ್ಳುವ ಅಮ್ಮ; ಬ್ಯಾಟರಿ ಬಿಟ್ಟುಕೊಂಡು ಹುಡುಕುವ ಅಪ್ಪ; ಗೂಡಚರ ಸಂಸ್ಥೆಯ ವಕ್ತಾರನಂತೆ ಕತ್ತಲ ಮೂಲೆಯಲ್ಲಿ ಹಾರಾಡುವ ನೊಣಗಳಿಂದಾವೃತ ಹೆಣವನ್ನು ಪತ್ತೆಹಚ್ಚುತ್ತಿದ್ದ ನಾನು; ನಂತರ ಶವದ ವಿಲೇವಾರಿ.

ಇವೆಲ್ಲಾ ಸ್ವಲ್ಪ ರಗಳೆಯ ವಿಷಯ ಎನ್ನಿಸಿತು ನಮಗೆ. ಅಲ್ಲದೇ ಈ ಪಾಶಾಣವನ್ನು ತಿಂದಮೇಲೆ ಕುಡಿಯಲಿಕ್ಕೆ ನೀರೇನಾದರೂ ಸಿಕ್ಕಿಬಿಟ್ಟರೆ ಇಲಿ ಬದುಕಿಕೊಂಡುಬಿಡುತ್ತಿತ್ತು. ವಿಷ ತಿಂದೂ ಅರಗಿಸಿಕೊಂಡು ತನ್ನ ಬಾಸ್ ಗಣೇಶನ ಬಳಿ 'ನಿನ್ನಪ್ಪ ವಿಷಕಂಠನಿಗಿಂತ ನಾನೇನು ಕಮ್ಮಿ?' ಎಂಬಂತೆ ಮೀಸೆ ತಿರುವುತ್ತಿತ್ತು. ಈ ಬಾರಿ ಅಜ್ಜಿ ಇಲಿಗತ್ತರಿ ಎಂಬ ಹತಾರವನ್ನು ಉಪಯೋಗಿಸಿದಳು. ಒಂದು ಸಣ್ಣ ಕಾಯಿಚೂರನ್ನೋ, ಬೋಂಡವನ್ನೋ ಈ ಕತ್ತರಿಯ ಮಧ್ಯಕ್ಕೆ ಸಿಕ್ಕಿಸಬೇಕು. ಇದೊಂದು ಭಾರೀ ಅಪಾಯದ ಅಸ್ತ್ರ. ಇದನ್ನು ಹೂಡಿ ಇಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಕೈಯೇ ತುಂಡಾಗುವ ಸಾಧ್ಯತೆ ಇರುತ್ತದೆ. ತಿಂಡಿಯನ್ನು ತಿನ್ನಲಿಕ್ಕೆಂದು ಈ ಕತ್ತರಿಯನ್ನೇರಿ ಇಲಿ ಬಾಯಿ ಹಾಕಿದ್ದೇ ಇದರ ಎರಡಲಗುಗಳೂ ಮುಚ್ಚಿಕೊಂಡು, ಇಲಿ ಮಧ್ಯದಲ್ಲಿ ಸಿಕ್ಕಿಕೊಂಡು, 'ಸ್ಪಾಟ್ ಡೆತ್' ಆಗುತ್ತದೆ! ಅಜ್ಜಿ ಪರಮಾನಂದತುಂದಿಲಳಾಗಿ ಮರುದಿನ ಅದನ್ನು ಹೊರಗೆಸೆಯುತ್ತಾಳೆ. ಕಾಗೆಗಳು 'ಥ್ಯಾಂಕ್ಸ್ ಫಾರ್ ದಿ ಬ್ರೇಕ್‍ಫಾಸ್ಟ್' ಅಂತಂದು ಕಚ್ಚಿಕೊಂಡು ಹೋಗುತ್ತವೆ.

ಇಲಿಗತ್ತರಿಯ ನಂತರ ನಮ್ಮ ಮನೆಗೆ ಬಂದ ಇಲಿಸಂಹಾರೀ ಯಂತ್ರ ಇಲಿಬೋನು. ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದ ಇದು, ಶತ್ರುವನ್ನು ಕೊಲ್ಲುತ್ತಿರಲಿಲ್ಲ; ಸಜೀವ ಸೆರೆ ಹಿಡಿಯುತ್ತಿತ್ತು! ಅಗೇನ್ ಇದರ ಪ್ರಯೋಗಕ್ಕೆ ಬೇಕಾದ ಮದ್ದೂ ಒಂದು ಕಾಯಿಚೂರು ಅಥವಾ ಕರಿದ ತಿಂಡಿ. ಬೋನಿನೊಳಗೆ ಇಳಿಬಿಟ್ಟಿದ್ದ ಕೊಕ್ಕೆಗೆ ತಿಂಡಿಯನ್ನು ಸಿಕ್ಕಿಸಿಡುವುದು. ಕತ್ತಲಲ್ಲಿ ಇಲಿ ಇದರೊಳಗೆ ಹೋಗಿ ತಿಂಡಿಯನ್ನು ಕಚ್ಚಿದಾಕ್ಷಣ ಬೋನಿನ ಬಾಗಿಲು ಹಾಕಿಕೊಂಡು ಇಲಿ ಬಂಧಿಯಾಗಿಬಿಡುತ್ತಿತ್ತು! ಬೆಳಗ್ಗೆ ಎದ್ದು ನೋಡಿದರೆ, ದಿಕ್ಕೆಟ್ಟು ಜೈಲಿನೊಳಗೆ ಅತ್ತಿತ್ತ ಓಡಾಡುತ್ತಾ, ಕಿಂಡಿಗಳಿಂದ ತನ್ನ ಮೂತಿಯನ್ನು ಹೊರತೂರಿಸುತ್ತಾ ಒದ್ದಾಡುತ್ತಿರುವ ಇಲಿರಾಯ! ನನಗೆ ಖುಷಿಯೋ ಖುಷಿ. ಸದ್ಧಾಂ ಸಿಕ್ಕಿಬಿದ್ದಾಗ ಅಮೇರಿಕನ್ನರೂ ಅಷ್ಟು ಹಾರಾಡಿದ್ದರೋ ಇಲ್ಲವೋ, ನಾನಂತೂ ಬೋನೆತ್ತಿಕೊಂಡು ಕೇಕೆ ಹಾಕುತ್ತಾ ಇಡೀ ಮನೆಯೆಲ್ಲಾ ಹಾರಾಡುತ್ತಿದ್ದೆ. ನಂತರ ಒಂದು ಬಕೆಟ್ಟಿಗೆ ನೀರು ತುಂಬಿ ಅದರಳೊಗೆ ಬೋನನ್ನು ಮುಳುಗಿಸುವುದು. ಇಲಿ ಉಸಿರುಗಟ್ಟಿ ಸಾಯುತ್ತಿತ್ತು.

ಹಾಗಂತ ಇಲಿಗಳು ನಮ್ಮ ಯುದ್ಧತಂತ್ರಗಳಿಂದ ತಪ್ಪಿಸಿಕೊಂಡು ಹೋದ ಘಟನೆಗಳೂ ಇಲ್ಲದಿಲ್ಲ. ಇಲಿಗತ್ತರಿಯಂತಹ ಅಪಾಯಕಾರಿ ಶಸ್ತ್ರದಲ್ಲೂ ಸಿಕ್ಕಿ ಸಾಯದೇ ಅದರಲ್ಲಿಟ್ಟಿದ್ದ ತಿಂಡಿಯನ್ನಷ್ಟೇ ಇವು ಎಗರಿಸಿಕೊಂಡು ಹೋದದ್ದಿದೆ. ಇಲಿ ತುಂಬಾ ಲೈಟ್‍ವೆಯ್ಟ್ ಆಗಿದ್ದರೆ ಆಗ ಕತ್ತರಿ ಆಪರೇಟ್ ಆಗುತ್ತಲೇ ಇರಲಿಲ್ಲ. ಇಲಿ ಆರಾಮಾಗಿ ತಿಂಡಿ ತಿಂದುಕೊಂಡು ಹೋಗಿಬಿಡುತ್ತಿತ್ತು. (ಈ ಗುಟ್ಟು ಎಲ್ಲಾ ಇಲಿಗಳಿಗೂ ಗೊತ್ತಾಗಿದ್ದರೆ, ಅವೆಲ್ಲಾ ಡಯಟ್ ಮಾಡಿ ತೂಕ ಇಳಿಸಿಕೊಂಡು ಕತ್ತರಿಯನ್ನು ಒಂದು ನಿಶ್ಪ್ರಯೋಜಕ ಅಸ್ತ್ರವನ್ನಾಗಿ ಮಾಡಿಬಿಡುತ್ತಿದ್ದವೇನೋ?!) ಮತ್ತೆ ಕೆಲ ಶಕ್ತಿಶಾಲೀ ಹೆಗ್ಗಣಗಳು ಬೋನಿನ ಬಾಗಿಲನ್ನು ತಳ್ಳಿಕೊಂಡು ಹೊರಗೋಡಿಹೋದದ್ದೂ ಇದೆ. ಕೆಲ ಪುಟಾಣಿ ಇಲಿಗಳು ಬೋನಿನಲ್ಲಿ ಸಿಕ್ಕಿಬಿದ್ದರೂ, ಬೋನಿನ ಸಣ್ಣ ಕಿಂಡಿಯಿಂದಲೇ ತೂರಿ, ತಿಂಡಿಯನ್ನೂ ತಿಂದು ಪರಾರಿಯಾಗಿ ನಮಗೆ ಚಳ್ಳೇಹಣ್ಣು ತಿನ್ನಿಸಿದ್ದಿದೆ.

ಇಷ್ಟಕ್ಕೂ ಇಲಿ ಕಾಟದ ಪರಿಹಾರಕ್ಕೆ ಎಲ್ಲರಂತೆ ನಾವೂ ಬೆಕ್ಕು ಸಾಕಲಿಲ್ಲವೇ ಎಂದು ನೀವು ಯೋಚಿಸಬಹುದು. ನಮ್ಮ ಪಕ್ಕದ ಮನೆಯಲ್ಲಿ ಸಾಕಿದ್ದರು. ಆದರೆ ಅದು ಮರಿಬೆಕ್ಕು. ಅದಕ್ಕೆ ಯಾವ ಇಲಿಯೂ ಹೆದರುತ್ತಿರಲಿಲ್ಲ. ಅವು ಗುಂಪಾಗಿ ಬಂದು 'ಇಲಿಗೆ ಚೆಲ್ಲಾಟ; ಬೆಕ್ಕಿಗೆ ಪ್ರಾಣಸಂಕಟ' ಎಂಬಂತೆ ಬೆಕ್ಕನ್ನೇ ಹೆದರಿಸುತ್ತಿದ್ದವು. ದಡಿಯ ಹೆಗ್ಗಣಗಳನ್ನು ಕಂಡರಂತೂ ಈ ಬೆಕ್ಕಿನ ಮರಿ ತಾನೇ ಓಡಿ ಹೋಗುತ್ತಿತ್ತು. ಇದನ್ನು ನೋಡಿದ್ದ ನನಗೆ ಬೆಕ್ಕು ಸಾಕುವ ತಲುಬು ಬರಲೇ ಇಲ್ಲ. ಅಲ್ಲದೇ ಹಿಂದೊಮ್ಮೆ ನಾಯಿಮರಿ ಸಾಕಿ, ಅದು ನನಗೆ ಅತಿಯಾಗಿ ಹೊಂದಿಕೊಂಡುಬಿಟ್ಟು, ನಾನು ಹೋದಲ್ಲೆಲ್ಲಾ ಹಚ್ ನೆಟ್‍ವರ್ಕಿನಂತೆ ನನ್ನ ಹಿಂದೆಯೇ ಬರತೊಡಗಿ, ಒಂದು ದಿನ ತೋಟಕ್ಕೆ ಹೋಗುತ್ತಿದ್ದಾಗ ನನ್ನ ಹಿಂದೆ ಬಂದ ಇದನ್ನು ಪಟೇಲರ ಮನೆಯ ನಾಯಿ ಕಚ್ಚಿ ಕೊಂದು ಹಾಕಿದ ಮೇಲೆ ನಾನು ಇನ್ನು ಯಾವ ಪ್ರಾಣಿಯನ್ನೂ ಸಾಕಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೆ. ಪ್ರೀತಿಪಾತ್ರ ಸಾಕುಪ್ರಾಣಿಗಳನ್ನು ಕಳೆದುಕೊಳ್ಳುವ ದುಃಖ ಯಾವ ದುಃಖಕ್ಕೂ ಕಮ್ಮಿಯಲ್ಲ.

ನಾವು ಹೊಸ ಮನೆಗೆ ಬಂದಮೇಲೆ ಇಲಿಗಳ ಕಾಟ ಪ್ರಾಯಶಃ ನಿಂತೇ ಹೋಯಿತು. ಸಿಮೆಂಟ್ ಗೋಡೆ-ಟೈಲ್ಸ್ ನೆಲ ಅವಕ್ಕೆ ಸರಿ ಬರಲಿಲ್ಲವೇನೋ, 'ನಿಮ್ಮ ಹೊಸಮನೆ ನಿಮಗೇ ಇರ್ಲಿ' ಅಂತ ಬಿಟ್ಟುಕೊಟ್ಟು ಅವು ಹಳೆಯ ಕೊಟ್ಟಿಗೆ ಮನೆ, ಕಟ್ಟಿಗೆ ಮನೆ, ಬಚ್ಚಲು ಮನೆಗಳಲ್ಲೇ ಸಂಸಾರ ಹೂಡಿದವು. ಹಿಂಡಿಚೀಲಕ್ಕೆ ತೂತು ಮಾಡುವುದು, ಗೋಧಿಬೂಸ ಮೆಲ್ಲುವುದು, ಜಾನುವಾರುಗಳಿಗೆಂದು ಇಟ್ಟಿದ್ದ ಆಹಾರವನ್ನು ತಿನ್ನುವುದು -ಇತ್ಯಾದಿ ಕಡಿಮೆ ಪ್ರಮಾಣದ ಕಾಟ ಕೊಡುವುದರಲ್ಲಿ ನಿರತವಾದವು. ಕೊಟ್ಟಿಗೆ ಕಡೆ ಹೋದಾಗ ಎಲ್ಲೋ ಒಮ್ಮೊಮ್ಮೆ 'ಹಾಯ್' ಎಂದು ಕಣ್ಮರೆಯಾಗುತ್ತಿದ್ದ ಇವನ್ನು ನಾವೂ ಕಡೆಗಣಿಸಿದೆವು.

ಕಳೆದ ಬಾರಿ ಗಣೇಶ ಚತುರ್ಥಿಗೆ ನಾನು ಊರಿಗೆ ಹೋದಾಗ, ಅಮ್ಮ ಹೇಳಿದ ಮಜಾ ಘಟನೆಯೊಂದನ್ನು ಹಂಚಿಕೊಂಡು ನಾನು ಈ ಲೇಖನವನ್ನು ಮುಗಿಸುತ್ತೇನೆ. ಚೌತಿಗೆ ಒಂದು ವಾರವಿರಬೇಕಾದರೆ ಬಚ್ಚಲು ಮನೆಯಲ್ಲಿಟ್ಟಿದ್ದ ಅಪ್ಪನ ರೇಸರ್ ಸೆಟ್ ಕಾಣೆಯಾಯಿತಂತೆ. ಅಪ್ಪ ಅಲ್ಲಿಲ್ಲಿ ಹುಡುಕಿದ, ಸಿಗದಿದ್ದರಿಂದ ಹೊಸ ರೇಸರ್ ಕೊಂಡು ಶೇವಿಂಗ್ ಮಾಡಿಕೊಂಡ. ಮಾರನೇ ದಿನ ನೋಡಿದರೆ ಮೈಸೋಪು ಇಲ್ಲ! ಹೊಸ ಸೋಪು.. ನಿನ್ನೆ ತಾನೇ ಒಡೆದದ್ದು.. ಹನ್ನೆರಡು ರೂಪಾಯಿ.. ಶೋಧಿಸಿದರು. ಸಿಕ್ಕಲಿಲ್ಲ. ಹೊಸ ಸೋಪಿನ ಪ್ಯಾಕು ಒಡೆದರು. ಅದರ ಮರುದಿನ ಮೈ ತಿಕ್ಕುವ ಬ್ರಶ್ ಇಲ್ಲ! 'ಎಲಾ! ಇದು ಇಲಿಗಳದ್ದೇ ಕೆಲಸ' ಅಂತ ಗೊತ್ತಾಯಿತು. ಅಮ್ಮ-ಅಪ್ಪ ಸೇರಿ ಹುಡುಕಿದರು. ಬಾವಿಕಟ್ಟೆಯ ಸಂದಿಗೆ ಒಂದು ಬಿಲ. ಅದರ ಬಾಗಿಲಲ್ಲಿ ಕಳೆದುಹೋಗಿದ್ದ ರೇಸರ್ ಸೆಟ್ಟು, ಅರ್ಧಮರ್ಧ ಕೊರೆಯಲ್ಪಿಟ್ಟಿದ್ದ ಸೋಪು, ಹರಿದು ಕೆದರಿಹೋಗಿದ್ದ ಬ್ರಶ್ಶು!

ಕಥೆ ಕೇಳಿ ನನಗೆ ನಗುವೋ ನಗು. ಬಹುಶಃ ಚೌತಿಗೆ ಗಣೇಶಾರೂಢ ಇಲಿ, ಚಂದ ಶೇವಿಂಗ್-ಗೀವಿಂಗ್ ಮಾಡಿಕೊಂಡು, ಸ್ನಾನ ಮಾಡಿ ಫ್ರೆಶ್ಶಾಗಿ ಬರುತ್ತೇನೋ ಎಂದುಕೊಂಡು ಕಾಯತೊಡಗಿದೆವು... ಅಡುಗೆ ಮನೆಯಿಂದ ಕಾಯಿಕಡುಬು - ಚಕ್ಕುಲಿಯ ಪರಿಮಳ.

* * *

ಮೂಷಿಕವಾಹನನ ಆಗಮನ ನಿಮ್ಮ ಮನೆಗೆ ಸಂತಸ ತರಲಿ. ಶುಭಾಶಯಗಳು.

Monday, August 25, 2008

ಸಂಪಿಗೆ ಮರ

ನೀವು ಸಾಗರದಿಂದ ಗುಬ್ಬಗೋಡಿಗೆ ಹೋಗುವ ಟಾರ್ ರಸ್ತೆಯಲ್ಲಿ ಸುಮಾರು ಏಳು ಕಿಲೋಮೀಟರ್ ಸಾಗಿಬಂದ ನಂತರ, ರಸ್ತೆಯ ಎಡಗಡೆಗೆ ಒಂದು ತ್ರಿಕೋಣಾಕೃತಿಯ ಕಟ್ಟೆಯೂ, ಆ ಕಟ್ಟೆಯ ಗೋಡೆಯ ಮೇಲೆ ಕಪ್ಪಕ್ಷರದಿಂದ ಬರೆದ 'ಬೆಂಕಟವಳ್ಳಿ' ಎಂಬ ಬೋರ್ಡೂ ಕಾಣುತ್ತದೆ. ಅದೇ ನನ್ನ ಅಜ್ಜನ ಮನೆಯು. 'ಅದೇ' ಎಂದರೆ ಆ ಕಟ್ಟೆಯಲ್ಲ; ಆ ಕಟ್ಟೆಯ ಪಕ್ಕದ, ತಿರುವುಮುರುವಿನ, ಸೀದಾ ಇಳುಕಲಿನ, ಒಂದು ಕಡೆ ಬೆಟ್ಟವೂ ಇನ್ನೊಂದು ಕಡೆ ಪ್ರಪಾತವೂ ಇರುವ ಮಣ್ಣಿನ ರಸ್ತೆಯಲ್ಲಿ ಇಳಿದು ಹೋದರೆ ಸಿಗುವುದು ನನ್ನ ಅಜ್ಜನ ಮನೆ. ಅಜ್ಜನ ಮನೆಯ ಹಿಂದಿರುವ ಬೆಟ್ಟವನ್ನು ಈ ಕಡೆಯಿಂದ ಹತ್ತಿ ಆ ಕಡೆ ಇಳಿದರೆ ನೀವು ವರದಹಳ್ಳಿಯಲ್ಲಿರುತ್ತೀರಿ. ಹಿಂದೆಲ್ಲ ನನ್ನ ಅಮ್ಮ-ಮಾವಂದಿರೆಲ್ಲ ಪ್ರತಿ ಶನಿವಾರ-ಭಾನುವಾರ ಶ್ರೀಧರ ಸ್ವಾಮಿಗಳ ಪ್ರವಚನ ಕೇಳಲು ಇದೇ ಗುಡ್ಡ ಹತ್ತಿಳಿದು ವರದಹಳ್ಳಿಗೆ ಹೋಗುತ್ತಿದ್ದರಂತೆ. ಪ್ರವಚನ ಮುಗಿದ ನಂತರ ಶ್ರೀಧರ ಸ್ವಾಮಿಗಳು ಎಲ್ಲರಿಗೂ ಮಂತ್ರಾಕ್ಷತೆ ಕೊಡುತ್ತಿದ್ದರಂತೆ ಮತ್ತು ಅಮ್ಮ-ಮಾವರಂತಹ ಸಣ್ಣ ಮಕ್ಕಳಿಗೆ ತಮ್ಮ ಬಳಿಯಿದ್ದ ಹಣ್ಣು-ಹಂಪಲನ್ನೆಲ್ಲ ಕೊಡುತ್ತಿದ್ದರಂತೆ. "ಆವಾಗ ಪ್ರವಚನ ಎಲ್ಲಾ ನಮ್ಗೆ ಎಲ್ಲಿ ಅರ್ಥ ಆಗ್ತಿತ್ತು? ಹಣ್ಣು ಸಿಗ್ತಲಾ ಅಂತ ಗುಡ್ಡ ಹತ್ತಿಳ್ದು ವದ್ಧಳ್ಳಿಗೆ ಹೋಗ್ತಿದ್ಯ. ಈಗ ಹಣ್ಣು ಬಿಟ್ಟು ಏನು ಕೊಡ್ತಿ ಅಂದ್ರೂ ಗುಡ್ಡ ಹತ್ತಕ್ಕೆ ಹರಿಯದಿಲ್ಲೆ..!" ನೆನಪು ಮಾಡಿಕೊಳ್ಳುತ್ತಾ ಹೇಳುತ್ತಾಳೆ ಅಮ್ಮ.

ಅದಿರಲಿ, ನಾನಾಗ ಹೇಳಿದೆನಲ್ಲ, ಸಾಗರದಿಂದ ಏಳು ಕಿಲೋಮೀಟರ್ ಸಾಗಿಬಂದ ನಂತರ ಸಿಗುವ ಕಟ್ಟೆ, ಈ ಕಟ್ಟೆಯ ಬಾಜೂ, ಕಟ್ಟೆಗೆ ಸದಾ ನೆರಳಾಗಿ, ಒಂದು ಬೃಹತ್ ಸಂಪಿಗೆ ಮರವಿದೆ. ರಸ್ತೆಯ ಬಲಬದಿಗೆ ಲೋಕೋಪಯೋಗಿ ಇಲಾಖೆಯವರು ಕಟ್ಟಿಸಿದ ಬಸ್‌ಸ್ಟ್ಯಾಂಡ್ ಇದೆಯಾದರೂ ಯಾರೂ ಅದನ್ನು ಬಳಸುವುದಿಲ್ಲ. ಸದಾ ಅದರೊಳಗೆ ಹೇರಳ ಕಸ ಶೇಖರವಾಗಿರುತ್ತದೆ. ಬಿಂದಿಲು-ಬಲೆ ಕಟ್ಟಿಕೊಂಡಿರುತ್ತದೆ. ದನಕರುಗಳು ಅದನ್ನು ಕೊಟ್ಟಿಗೆ ಎಂದೇ ಭಾವಿಸಿ ಅಲ್ಲೇ ಮಲಗಿ ಮೆಲುಕು ಹಾಕುತ್ತಿರುವುದನ್ನೂ ಕಾಣಬಹುದು. ವರ್ಷ-ಎರಡು ವರ್ಷಕ್ಕೊಮ್ಮೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಬಸ್‌ಸ್ಟಾಂಡನ್ನು ನವೀಕರಣಗೊಳಿಸುವ ನೆಪದಲ್ಲಿ ಪೇಯಿಂಟ್ ಮಾಡಿಸಿ, ಒಡೆದ ಹಂಚುಗಳನ್ನು ಬದಲಿಸಿ, ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಾರೆ. ಬಸ್ಸಿಗೆ ಕಾಯುವ ಊರಿನ ಜನ ಯಾವಾಗಲೂ ನಿಲ್ಲುವುದು ಸಂಪಿಗೆ ಮರದ ಕೆಳಗೇ. ಬಸ್ ಬರುವುದು ತಡವಾಗಿ, ನಿಂತೂ ನಿಂತೂ ಸುಸ್ತಾದರೆ ಸಂಪಿಗೆ ಮರದ ಬುಡದಲ್ಲಿರುವ ತ್ರಿಕೋಣಾಕಾರದ ಕಟ್ಟೆಯ ಮೇಲೆ ಕೂರುತ್ತಾರೆ. ಕೆಲವರು ಮರದ ಬುಡದಲ್ಲೇ, ಮೇಲೆದ್ದು ಬಂದಿರುವ ಮರದ ಬೃಹತ್ ಬೇರುಗಳ ಮೇಲೇ ಅಂಡೂರುತ್ತಾರೆ. ಇನ್ನು ಕೆಲವರು ಟಾರ್ ರೋಡಿನ ಮೇಲೂ ಕೂರುವುದುಂಟು.

ಈ ಮರ ಯಾವುದೇ ಸಾಧಾರಣ ಸಂಪಿಗೆ ಮರದಂತೆ ಕಂಡರೂ ಇದಕ್ಕೊಂದು ಮಹತ್ವವಿದೆ. ಬೆಂಕಟವಳ್ಳಿ ಊರಿನ ಜನ ತಮ್ಮೂರಿನ ಬಸ್ ಇಳಿದು-ಹತ್ತುವ ಜಾಗವನ್ನು ಎಲ್ಲಾ ಊರಿನವರಂತೆ 'ಬಸ್‌ಸ್ಟ್ಯಾಂಡ್' ಎಂದು ಕರೆಯುವುದಿಲ್ಲ; 'ಸಂಪಿಗೆ ಮರ' ಅಂತ ಕರೆಯುತ್ತಾರೆ. ನಾವಾದರೆ 'ಬಸ್‌ಸ್ಟ್ಯಾಂಡಲ್ ಕಾದೂ ಕಾದೂ ಸಾಕಾಯ್ತು ಮಾರಾಯಾ, ಕೃಷ್ಣಾ ಬಸ್ ಬರಲೇ ಇಲ್ಲ!' ಎನ್ನುತ್ತೇವೆ. ಆದರೆ ಬೆಂಕಟವಳ್ಳಿಯ ಜನ 'ಬೇಗ್ ಬೇಗ ನಡೆ.. ಎರಡೂ ವರೆಗೆ ಕರೆಕ್ಟಾಗಿ ಬರತ್ತೆ ವರದಾ ಬಸ್ಸು ಸಂಪಿಗೆ ಮರದ ಹತ್ರ' ಎನ್ನುತ್ತಾರೆ. ಇವರು 'ಬಸ್‌ಸ್ಟ್ಯಾಂಡ್' ಶಬ್ದವನ್ನು ಬಳಸುವುದೇ ಇಲ್ಲ. ಅದರ ಜಾಗದಲ್ಲಿ ಸದಾ ಸಂಪಿಗೆ ಮರ ತೂಗುತ್ತಿರುತ್ತದೆ.

ವಸಂತ ಮಾಸದಲ್ಲಿ ನೀವೇನಾದರೂ ಇಲ್ಲಿಗೆ ಬಂದರೆ ಈ ಮರದ ಗೆಲ್ಲ ಮೇಲೆ ಕೋಗಿಲೆ ಕೂತು ಹಾಡುವುದನ್ನು ಕೇಳಬಹುದು. 'ಸಂಪಿಗೆಯೆಲ್ಲೋ ಕೋಗಿಲೆಯೆಲ್ಲೋ?' ಎಂಬ ಉದ್ಘಾರ ನಿಮ್ಮಿಂದ ಹೊರಬೀಳುವುದಂತೂ ಖಚಿತ. ಆದರೆ ಹಾಗೆ ಹಾಡು ಕೇಳಬೇಕೆಂದರೆ ನೀವು ಈ ಮರದಿಂದ ತುಸು ದೂರದಲ್ಲಿ, ಮರೆಯಲ್ಲಿ ನಿಂತಿರಬೇಕಾಗುತ್ತದೆ. ಮರದ ಕೆಳಗೇ ಇದ್ದರೆ ಕೋಗಿಲೆಗೆ ಸಂಕೋಚವಾಗಿ ಹಾಡುವುದಿಲ್ಲ. ಭಯಗೊಂಡು ಹಾರಿಹೋದರೂ ಹೋಗಬಹುದು. ನೀವು ದೂರದಲ್ಲಿ, ಅಗೋ, ಆ ಟ್ರಾನ್ಸ್‌ಫಾರ್ಮರ್ ಕಂಬದ ಬಳಿ ಒಂದು ಸಣ್ಣ ಗುಡ್ಡ ಇದೆಯಲ್ಲ, ಅದರ ಮೇಲೆ ಕುಳಿತುಕೊಳ್ಳಬೇಕು. ಆಗ ಈ ಕೋಗಿಲೆ, ವಧುವನ್ನು ನೋಡಲು ವರನ ಮನೆಯವರು ಹೋದಾಗ ತಲೆ ತಗ್ಗಿಸಿಕೊಂಡು ನಾಚುತ್ತಾ ಹಾಡುವ ಹುಡುಗಿಯಂತೆ, ಸುಮಧುರವಾಗಿ ಹಾಡುತ್ತದೆ. ಆ ಕೋಗಿಲೆ ಹಾಡು, ಪಕ್ಕದ ಗಹ್ವರದಲ್ಲಿಳಿದು, ಗಿರಿಗೆ ಬಡಿದು, ದೊಡ್ಡ ಮರಗಳ ಕಂಕುಳಲ್ಲಿ ಕಚಗುಳಿಯಾಗುವಂತೆ ಹಾದು ಪ್ರತಿಧ್ವನಿಸುವಾಗ ನಿಮಗದು ಹತ್ತಿರದಲ್ಲೆಲ್ಲೋ ಮತ್ತೊಂದು ಕೋಗಿಲೆ ಇದೆಯೇನೋ ಎಂಬ ಭ್ರಮೆ ತರಿಸುತ್ತದೆ. ಎರಡು ಕೋಗಿಲೆಗಳ ಜುಗಲ್‌ಬಂದಿಯಂತೆ ಭಾಸವಾಗುತ್ತದೆ.

ಸಂಪಿಗೆ ಮರ ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಆಗ ಈ ಮರದ ಸುತ್ತೆಲ್ಲ ಸಂಪಿಗೆಕಂಪು ಪೂಸಿಕೊಂಡಿರೊತ್ತೆ. ಬಸ್ಸಿಗೆ ಹೋಗಲೆಂದು ಬೆಂಕಟವಳ್ಳಿಯ ಮಣ್ಣು ರಸ್ತೆಯ ಏರು ಹತ್ತುತ್ತಿರುವವರು ಕೊನೆಯ ತಿರುವಿನಲ್ಲಿರುವಾಗಲೇ ಇದರ ಘಮ ಮೂಗಿಗಡರಿ ಅವರ ಏದುಸಿರೂ ಆಪ್ಯಾಯಮಾನವಾಗುತ್ತದೆ. ತಮ್ಮ ತಮ್ಮ ವಾಹನಗಳಲ್ಲಿ ಟಾರು ರಸ್ತೆಯಲ್ಲಿ ಗುಬ್ಬಗೋಡಿನ ಕಡೆ ಹೊರಟವರು, ಗುಬ್ಬಗೋಡಿನಿಂದ ಸಾಗರಕ್ಕೆ ಹೊರಟವರು ಸಂಪಿಗೆ ಮರ ಹೂ ಬಿಡುವ ಕಾಲದಲ್ಲಿ ಇಲ್ಲಿ ಐದು ನಿಮಿಷ ನಿಲ್ಲಿಸಿ, ಬಡಿಗೆಯಿಂದ ಬಡಿದು, ಒಂದೆರಡಾದರೂ ಹೂವುದುರಿಸಿಕೊಂಡು, ಅದರ ಪರಿಮಳ ಹೀರುತ್ತಾ ಮುಂದೆ ಸಾಗುತ್ತಾರೆ.

ನನ್ನ ಅಜ್ಜನ ಮನೆ ಊರಿನಲ್ಲಿ ಸಾಗರದ ಕಾಲೇಜಿಗೆ ಹೋಗುವ ಅತಿ ಚಂದದ ಹುಡುಗಿಯರು ಇದ್ದಾರೆ ಎಂದು ನಾನು ಹೇಳಿದರೆ ನೀವದನ್ನು ಆತ್ಮಪ್ರಶಂಸೆ ಎಂದು ಭಾವಿಸಬಾರದು. ಏಕೆಂದರೆ, ಹಾಗೆ ಹೇಳಿಕೊಳ್ಳುವುದರಿಂದ ನನಗೇನೂ ಲಾಭವಿಲ್ಲ. ಲಾಭವೇನಿದ್ದರೂ ಇರುವುದು ಬೆಂಕಟವಳ್ಳಿ ಮತ್ತು ಅಕ್ಕಪಕ್ಕದ ಊರಿನ ಹುಡುಗರಿಗೆ! ಬಸ್ಸು ಬರುವುದಕ್ಕೂ ಕನಿಷ್ಟ ಅರ್ಧ ಗಂಟೆ ಮುಂಚಿತವಾಗಿಯೇ ಇಲ್ಲಿಗೆ ಬಂದು ಸೇರುವ ಹುಡುಗರು, ಹುಡುಗಿಯರಿಗಾಗಿ ಕಾಯತೊಡಗುತ್ತಾರೆ. ಬೆಂಕಟವಳ್ಳಿಯ ಹಿಂದು-ಮುಂದಿನ ಊರಿನ ಹುಡುಗರೂ ಸಹ ಇಲ್ಲಿಗೇ ಬಂದು ಬಸ್ಸು ಹತ್ತುತ್ತಾರೆಂದರೆ ಅದರ ಹಿಂದೊಂದು ಗುಟ್ಟಿರಬೇಕಲ್ಲವೇ? ಅದು ಮತ್ತೇನೂ ಅಲ್ಲ: ಬಿಳಿ ಚೂಡಿದಾರು, ಮುಖಕ್ಕೆ ಕ್ರೀಮು-ಪೌಡರು, ಚಂದ ಬಾಚಿದ ಕೂದಲು, ಮ್ಯಾಚಿಂಗ್ ಕಲರ್ ಸ್ಲಿಪ್ಪರು -ಧರಿಸಿ ಚಂದದ ಬೊಂಬೆಗಳಂತೆ ತಯಾರಾಗಿ ಕಾಲೇಜಿಗೆ ಹೊರಟಿರುವ ಈ ಹುಡುಗಿಯರಿಗೆ ಸಂಪಿಗೆಯ ಪರಿಮಳ ಕೇಳಿ ಅದನ್ನು ಮುಡಿಯಬೇಕೆಂಬ ಆಸೆಯಾಗುತ್ತದಾದರೂ, ಬಡಿಗೆ ಹುಡುಕಿ, ಎತ್ತಿ ಎಸೆದು, ಹೂವು ಬೀಳಿಸಿ ಮುಡಿದುಕೊಳ್ಳಲಿಕ್ಕೆ -ತಮ್ಮ ಅಲಂಕಾರವೆಲ್ಲಾ ಎಲ್ಲಿ ಹಾಳಾಗುತ್ತದೋ ಎಂಬ ಹಿಂಜರಿಕೆ. ಇದನ್ನರಿತಿರುವ ಚಾಣಾಕ್ಷಮತಿ ಹುಡುಗರು, ಮುಂಚೆಯೇ ಇಲ್ಲಿಗೆ ಬಂದು ಹೂವನ್ನೆಲ್ಲಾ ಹುಡುಕಿ ಬಡಿದು ಕೆಡವಿ ಗುಡ್ಡೆ ಮಾಡಿ, ಹುಡುಗಿಯರು ಬರುವಷ್ಟರಲ್ಲಿ ಬೊಗಸೆ ತುಂಬ ಹೂ ಹಿಡಿದು ನಿಂತಿರುತ್ತಾರೆ. ಹೀಗಾಗಿ, ಸಂಪಿಗೆ ಹೂ ಬಿಡುವ ಕಾಲದಲ್ಲಿ ನೀವು ಈ ಕಡೆ ಬಂದರೆ, ಇನ್ನೂ ಮಂಜು ಮುಸುಕಿದ ಮುಂಜಾವಿನಲ್ಲಿ, ಮೊದಲ ಬಸ್ಸಿನ್ನೂ ಬರುವುದಕ್ಕೆ ಸಮಯವಿರಲು, ಬೆಂಕಟವಳ್ಳಿಯ ಸಂಪಿಗೆ ಮರದ ಕೆಳಗೆ ಹುಡುಗರು ಹುಡುಗಿಯರಿಗೆ ಹೂ ಕೊಟ್ಟು ಪ್ರತಿದಿನವೂ 'ಪ್ರಪೋಸ್' ಮಾಡುವ ಅಮೋಘ ಸಿನಿಮಾ ದೃಶ್ಯವನ್ನು ಕಾಣಬಹುದು!

ಹಾಂ, ಸಿನಿಮಾ ಎಂದಾಕ್ಷಣ ನೆನಪಾಯಿತು. ಪುಟ್ಟಣ್ಣ ಕಣಗಾಲರ 'ಅಮೃತ ಘಳಿಗೆ' ಸಿನಿಮಾ ಇದೆಯಲ್ಲಾ, ಆ ಸಿನಿಮಾ ಚಿತ್ರೀಕರಿಸಲ್ಪಟ್ಟಿರುವುದು ಇದೇ ಸಂಪಿಗೆ ಮರದ ಸುತ್ತಲಿನ ಪ್ರದೇಶದಲ್ಲಿ. ಈ ಸಂಪಿಗೆ ಮರವೂ ಆ ಚಿತ್ರದಲ್ಲಿ ಹಸಿರು ಸೀರೆ ಉಟ್ಟು ಚಂದ ಪೋಸ್ ಕೊಟ್ಟಿರುವುದನ್ನು ನೋಡಿದರೆ ಇದಕ್ಕೆ ಅಭಿನಯದಲ್ಲಿ ಆಸಕ್ತಿಯಿತ್ತೇ ಎಂಬ ಅನುಮಾನ ಬರುತ್ತದೆ. ಈ ಸಂಪಿಗೆ ಮರದಿಂದ ಸುಮಾರು ಒಂದೂ ವರೆ ಮೈಲಿ ದೂರದಲ್ಲಿರುವ 'ತುಂಬೆ' ಎಂಬ ಊರಿನಲ್ಲಿ ಒಬ್ಬ ಭಾರೀ ಶ್ರೀಮಂತರ ಮನೆಯಿದೆ. 'ತುಂಬೆ ಹೆಗ್ಡೇರು' ಅಂತಲೇ ಅವರು ಜನಜನಿತರು. ಅವರ ಮನೆಯಲ್ಲೇ ನಡೆದದ್ದು 'ಅಮೃತ ಘಳಿಗೆ'ಯ ಮುಕ್ಕಾಲು ಪಾಲು ಚಿತ್ರೀಕರಣ. ಅದು ನಡೆಯುವಾಗ ಅಮ್ಮ ತನ್ನ ಗೆಳತಿಯರೊಡಗೂಡಿ ಅಲ್ಲಿಗೆ ಹೋದದ್ದು, ಅಲ್ಲಿ ಶ್ರೀಧರ್, ರಾಮಕೃಷ್ಣ, ಪುಟ್ಟಣ್ಣ -ಮುಂತಾದವರನ್ನು ನೋಡಿದ್ದನ್ನು ನೆನಪಿಟ್ಟುಕೊಂಡಿದ್ದಾಳೆ. 'ಅಮೃತ ಘಳಿಗೆ' ಸಿನಿಮಾ ನಮ್ಮೂರ ಡಾ| ವೆಂಕಟಗಿರಿ ರಾವ್ ಅವರ 'ಅವಧಾನ' ಕಾದಂಬರಿಯನ್ನು ಆಧರಿಸಿದ್ದು ಎಂದೆಲ್ಲ ಹೇಳಿದರೆ ನಾನು ಸಂಪಿಗೆ ಮರ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತಿದ್ದೇನೆ ಎಂದು ನೀವು ಆಪಾದಿಸಬಾರದು. ಏನು ಮಾಡಲಿ? ಸಂಪಿಗೆ ಮರ ಎಂದಾಕ್ಷಣ ನನಗೆ ಅವೆಲ್ಲ ನೆನಪಾಗುತ್ತದೆ.

ಬೆಂಕಟವಳ್ಳಿ ಬಸ್‌ಸ್ಟ್ಯಾಂಡ್‌ನ ಹತ್ತಿರದಲ್ಲಿ ಯಾವುದೇ ಮನೆಯಾಗಲೀ, ಅಂಗಡಿಯಾಗಲೀ ಇಲ್ಲವಾದ್ದರಿಂದ - ಅದೊಂದು ನಿರ್ಜನ ಪ್ರದೇಶವಾದ್ದರಿಂದ, ಅದರ ಸುತ್ತ ಕೆಲವೊಂದು ನಿಗೂಢ ಘಟನೆಗಳೂ ನಡೆದ ಸುದ್ಧಿಗಳಿವೆ. ಉದಾಹರಣೆಗೆ, ಸಂಪಿಗೆ ಮರದ ಕೆಳಗೆ ಬಸ್ಸಿಗೆ ಕಾಯುತ್ತಿದ್ದ ಸುಜಾತಕ್ಕನನ್ನು ಯಾರೋ ಬೆದರಿಸಿ ದುಡ್ಡು ಕಿತ್ತುಕೊಂಡರಂತೆ ಎಂಬುದು; ಬಸ್‌ಸ್ಟ್ಯಾಂಡ್ ಒಳಗೆ ಪ್ರಕಾಶಣ್ಣ ಒಂದು ಮೂಟೆ ಕಂಡನೆಂದೂ - ಅದು ಕಳ್ಳಸಾಗಣೆದಾರರು ಬಚ್ಚಿಟ್ಟಿದ್ದ ಗಂಧವೆಂದೂ - ಮರುದಿನ ನೋಡುವಷ್ಟರಲ್ಲಿ ಇರಲಿಲ್ಲವೆಂದೂ; ಬಸ್‍ಸ್ಟ್ಯಾಂಡ್ ಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್ ಪದೇ ಪದೇ ಹೋಗುವುದಕ್ಕೆ ಕಾರಣ ಸಂಪಿಗೆ ಮರದಲ್ಲಿರುವ ಯಾವುದೋ ಕ್ಷುದ್ರಶಕ್ತಿಯೆಂದೂ -ಹೀಗೆ. ಮತ್ತೆ, ಇವೆಲ್ಲಕ್ಕಿಂತಲೂ ಆಸಕ್ತಿಕರವಾದ ಮತ್ತೊಂದು ಘಟನೆಗೆ ಕಣ್ಣು-ಕಿವಿಯಾಗುವ ಅವಕಾಶ ನನಗೊದಗಿ ಬಂತು.

ಈ ಸಂಪಿಗೆ ಮರದ ಬಳಿ ಒಬ್ಬ ಬೆತ್ತಲೆ ಹುಡುಗಿ ಓಡಾಡುತ್ತಿದ್ದಳು ಎಂಬ ಸುದ್ಧಿ ಸ್ಪೋಟವಾದದ್ದು ಬಿರುಬೇಸಿಗೆಯ ಸಂಜೆಯೊಂದರಲ್ಲಿ. ನಾನು ಬೇಸಿಗೆ ರಜೆಗೆಂದು ಅಜ್ಜನ ಮನೆಗೆ ಹೋಗಿದ್ದೆ. ಅದಾಗ ತಾನೆ ಆರೂವರೆ ಬಸ್ಸಿಗೆ ಸಾಗರದಿಂದ ಬಂದ ನನ್ನ ಮಾವನಿಗೆ, ಮಾವನೊಂದಿಗೇ ಬಸ್ಸಿಳಿದ ರಾಘವೇಂದ್ರಣ್ಣ ಬೆಳಗ್ಗೆ ತಾನು ಕಂಡ ದೃಶ್ಯವನ್ನು ವಿವರಿಸಿದನಂತೆ: "ಚಾಲಿ ಸುಲ್ಸಿದ್ದು ನಾಕು ಚೀಲ ಆಗಿತ್ತಾ.. ಮಂಡಿಗೆ ಸಾಗ್ಸಲೆ ಆನಂದ್ ಗೌಡನ ರಿಕ್ಷಾಕ್ಕೆ ಬರಕ್ ಹೇಳಿದಿದ್ದಿ.. ಅಂವ ಒಂಭತ್ ಗಂಟಿಗೆ ಬಂದ.. ಚೀಲ ಹೇರ್ಕ್ಯಂಡು, ಆನೂ ಹೊಂಟಿ ರಿಕ್ಷಾದ್ ಮೇಲೇ ಹೇಳ್ಯಾತು.. ಸಂಪ್ಗೆ ಮರದ್ ಬುಡಕ್ ಬಪ್ಪ ಹೊತ್ತಿಗೆ ಅಲ್ಲೊಂದು ಹೆಂಗ್ಸು ಮಾರಾಯಾ.. ಎಂಥಾ? ದುಂಡಗೆ!! ಫುಲ್ ದುಂಡಗ್ ನಿಂತಿದ್ಲಪಾ..! ಕೈ ಮಾಡಿದ ಯಂಗ್ಳ ರಿಕ್ಷಾಕ್ಕೆ.. ಯಂಗಂತು ಹೆದ್ರಿಕೆ ಆಗೀ.. ಆನಂದ ಜೋರಾಗ್ ಹೊಡ್ದ ನೋಡು ರಿಕ್ಷಾನಾ.. ಕರ್ಕಿಕೊಪ್ಪದ್ ಇಳುಕ್ಲು ಇಳಿಯಹೊತ್ತಿಗೆ ಇಬ್ರಿಗೂ ಬೆವ್ರು ಇಳ್ದ್ ಹೋಗಿತ್ತು! ಎಂಥಾ- ದುಂಡಗೆ ಮಾರಾಯಾ..!"

ಮಾವ, ರಾಘವೇಂದ್ರಣ್ಣ ತನಗೆ ಹೇಳಿದ್ದನ್ನು ಹಾಗೇ ಹೇಳಿದ. ಕೇಳಿದ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಸಂಪಿಗೆ ಮರದ ಬಳಿ! ಬೆತ್ತಲೆ ಹುಡುಗಿ! "ಯಾರೂಂತ ಏನಾರು ಗೊತ್ತಾತನಾ?" ಎಂದು ಮಾವ ರಾಘವೇಂದ್ರಣ್ಣನ ಬಳಿ ಕೇಳಿದನಂತೆ. ರಾಘವೇಂದ್ರಣ್ಣ "ಎಂಥೇನ, ಸರಿಯಾಗ್ ನೋಡಕ್ ಆಗಲ್ಲೆ. ಆದರೆ ನಮ್ಮ ಕಡೆಯೋರಂತೂ ಯಾರೂ ಅಲ್ಲ ನೋಡು" ಎಂದನಂತೆ. ಅದರಲ್ಲಿ 'ಸರಿಯಾಗಿ ನೋಡಕ್ಕಾಗಲ್ಲೆ' ಎಂಬ ಮಾತು ನನಗೆ ಮೋಟುಗೋಡೆಯಾಚೆಗಿನ ಆಲೋಚನೆಗಳಿಗೆ ಕೊಂಕಾಯಿತಾದರೂ, ದೇವರ ಮನೆಯಿಂದ ಬಂದ ಅಜ್ಜಿ "ಮಾಣೀ, ಮೂರ್ ಸಂಜೆ ದೀಪ ಹಚ್ಚೋ ಹೊತ್ತಿಗೆ ಎಂಥೆಂತೆಲ್ಲಾ ಹೇಳಡ.. ಮೊದ್ಲು ಕೈಕಾಲ್ ತೊಳ್ಕಂಡ್ ಬಂದು ಕಾಪಿ ಕುಡಿ" ಎಂದದ್ದರಿಂದ ನನ್ನ ಆಲೋಚನೆಗಳಿಗೆ ಕಡಿವಾಣ ಹಾಕಬೇಕಾಯಿತು. ಆದರೆ ಅಂತಹ ರೋಚಕ ಸುದ್ಧಿ ಪ್ರಕಟಗೊಂಡಾಗ ಅದರ ಬಗ್ಗೆ ನಾಲ್ಕು ಮಾತಾಡದೇ, ಚರ್ಚಿಸದೇ ಅಲ್ಲಿಗೇ ನಿಲ್ಲಿಸಲಿಕ್ಕೆ ಬರುತ್ತದೆಯೇ? ಮಾವ ಹಾಗೆ ಕಥೆ ಹೇಳುವಾಗ ಅಲ್ಲಿ ಏಳು ಗಂಟೆ ವಾರ್ತೆ ನೋಡಲಿಕ್ಕೆಂದು ಬಂದು ಕೂತಿದ್ದ ಅಕ್ಕಪಕ್ಕದ ಮನೆಯವರನೇಕರೂ ಇದ್ದರು. ಹೀಗಾಗಿ, ಅಜ್ಜಿಯ ಕಿವಿಮಾತು ಯಾರ ಕಿವಿಗೂ ಬೀಳಲಿಲ್ಲ. "ಅಲ್ದಾ, ಬದ್ಧನಡನಾ?" ಎಂದು ಅನಂತಣ್ಣ ಬಾಯಿ ಹಾಕಿದರೆ, "ಇಶೀ, ಅದು ಹೆಂಗ್ ಸಾಧ್ಯನಾ? ರಾಘವೇಂದ್ರಣ್ಣ ಏನ್ ನೋಡಿ ಏನ್ ತಿಳ್ಕಂಡ್ನಾ ಎಂಥೇನ!" ಎಂದು ಯಶೋಧಕ್ಕ ರಾಘವೇಂದ್ರಣ್ಣನ ಲೌಕಿಕ ಜ್ಞಾನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದಳು.

"ರಾಘವೇಂದ್ರಣ್ಣ ಒಬ್ನೇ ಏನು ಅಲ್ದಲಾ? ಆನಂದ್ ಗೌಡನೂ ನೋಡಿದ್ದ.. ರಿಕ್ಷಾದ ಹಿಂದಕೇ ಅದು ಸುಮಾರ್ ದೂರ ಓಡ್ಯೂ ಬಂತಡ.. ಕನ್ನಡೀಲಿ ಕಾಣ್ತಿತ್ತಡ ಆನಂದಂಗೆ.." ಎಂದ ಮಾವ. ನಾನಾಗ ಇನ್ನೂ ಮೊದಲ ವರ್ಷದ ಕಾಲೇಜು ಹುಡುಗನಾಗಿದ್ದರಿಂದ 'ಇಂತಹ' ವಿಷಯದ ಬಗ್ಗೆ ಆಸಕ್ತಿ ಇರುವವನಂತೆ ನಡೆದುಕೊಳ್ಳುವುದು ಉಚಿತವಲ್ಲೆಂದರಿತು ಸುಮ್ಮನಿದ್ದೆ. ಏಕೆಂದರೆ, ನಾನೇನಾದರೂ ಬಾಯಿ ಬಿಟ್ಟಿದ್ದರೆ, ತಕ್ಷಣ ಎಲ್ಲರೂ ನನ್ನೆಡೆಗೆ ನೋಡುತ್ತಿದ್ದರು ಮತ್ತು ಅಜ್ಜಿ "ಅಪ್ಪೀ ನಿಂಗೆ ಇವೆಲ್ಲ ಎಂಥೂ ಗೊತ್ತಾಗ್ತಲ್ಲೆ; ನೀ ಸುಮ್ಮನ್ ಕೂತ್ಗ" ಎಂದು ಬಾಯಿ ಮುಚ್ಚಿಸುತ್ತಿದ್ದಳು. ನಮ್ಮ ಮನೆಗೆ ಫೋನ್ ಮಾಡಿದಾಗ ಅಮ್ಮನ ಬಳಿ ಸೂಕ್ಷ್ಮವಾಗಿ 'ಅಪ್ಪಿಯ ಬಗ್ಗೆ ಒಂದು ಕಣ್ಣಿಟ್ಟರಲು' ಅಜ್ಜಿ ಸೂಚನೆ ಕೊಟ್ಟರೂ ಕೊಡುವ ಸಾಧ್ಯತೆ ಇತ್ತು. ಹೀಗಾಗಿ, ನಾನು ಏನೂ ಅರಿಯದವನಂತೆ ಸುಮ್ಮನಿದ್ದುಬಿಟ್ಟಿದ್ದೆ. ಒಟ್ಟಿನಲ್ಲಿ ಮರುದಿನ ಬೆಳಗಾಗುವುದರೊಳಗಾಗಿ ಈ ಪ್ರಕರಣ ಬೆಂಕಟವಳ್ಳಿ ಊರಲೆಲ್ಲ ಗುಸುಗುಸು ಸುದ್ಧಿಯಾಗಿತ್ತು. ರಾಘವೇಂದ್ರಣ್ಣನ ಹೆಂಡತಿ ಮಾತ್ರ ಯಾಕೋ ಸೆಟಗೊಂಡ ಮುಖದಲ್ಲಿ ಓಡಾಡುತ್ತಿರುವುದನ್ನೂ ನಾನು ಗಮನಿಸದಿರಲಿಲ್ಲ.

ಅದಾಗಿ ಮೂರ್ನಾಲ್ಕು ದಿನಗಳ ನಂತರ, ಕಲ್ಲುಕೊಪ್ಪದ ಬಳಿ ಹೀಗೇ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂದು ಸುದ್ಧಿಯಾಯಿತು. ಕಲ್ಲುಕೊಪ್ಪವೆಲ್ಲಿ ಬೆಂಕಟವಳ್ಳಿಯೆಲ್ಲಿ? ಕಲ್ಲುಕೊಪ್ಪ ಬೆಂಕಟವಳ್ಳಿಗೆ ಹದಿನೈದಿಪ್ಪತ್ತು ಮೈಲಿ ದೂರದಲ್ಲಿರುವ ಹಳ್ಳಿ. ಹಾಗಾದರೆ ಇದೂ ಅದೇ ಹುಡುಗಿಯೇ? ಅಥವಾ ಬೇರೆ ಹುಡುಗಿಯೇ? ಅರಳಿಕಟ್ಟೆ ಬಳಿ, ಅಡಿಕೆ ಸುಲಿಯುವಲ್ಲಿ, ರಸ್ತೆ-ತೋಟದಲ್ಲಿ ಯಾರಾದರೂ ಎದುರು ಸಿಕ್ಕಾಗ -ಹೀಗೆ ಎರಡು ಬಾಯಿ ಸೇರಿತೆಂದರೆ ಅಲ್ಲಿ ಬೆತ್ತಲೆ ಹುಡುಗಿ ಕಾಣಿಸಿಕೊಂಡ ಬಿಸಿಬಿಸಿ ಸುದ್ಧಿ ಚರ್ಚೆಯಾಯಿತು. 'ಜೋಗದಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆಯಂತೆ. ಅಲ್ಲಿಂದೊಬ್ಬ ನಟಿ ಕಾಣೆಯಾಗಿದ್ದಾಳಂತೆ. ಪೋಲೀಸರು ಹುಡುಕುತ್ತಿದ್ದಾರಂತೆ' ಎಂದು ಸಹ ಯಾರೋ ಹೇಳಿಬಿಟ್ಟರು. ಈ ಎಲ್ಲ ಸುದ್ಧಿಗಳು ಹವೆಗೆ ಭಯವನ್ನು ಬೆರೆಸಿಬಿಟ್ಟವು. ಜನ ಸಂಪಿಗೆ ಮರದ ಬಳಿ ಒಬ್ಬರೇ ಹೋಗುವುದಕ್ಕೆ ಹೆದರತೊಡಗಿದರು. ಹೆಂಗಸರನ್ನು ಬಸ್ ಹತ್ತಿಸಲಿಕ್ಕೆ ಜೊತೆಗೆ ಯಾರಾದರೂ ಗಂಡಸರು ಬರಬೇಕಾದಂತಹ ಪರಿಸ್ಥಿತಿ ಬಂತು. ಬಸ್ಸು ಹತ್ತಿದ ಹೆಂಗಸರು ತಮ್ಮ ಗಂಡಂದಿರಿಗೆ 'ಬೇಗ ಮನೆ ಮುಟ್ಕ್ಯಳಿ' ಎಂದು ಎಚ್ಚರಿಕೆ ನೀಡುವುದನ್ನೂ ಮರೆಯುತ್ತಿರಲಿಲ್ಲ.

ನಾನು ಈ ವಿದ್ಯಮಾನವನ್ನೆಲ್ಲಾ ಕಂಡೂ-ಕೇಳಿಯೂ ಸುಮ್ಮನೆ ಓಡಾಡಿಕೊಂಡಿದ್ದೆ. ಯಾರಿಗೂ ತಿಳಿಯದಂತೆ ನಾನೊಬ್ಬನೇ ಸಂಪಿಗೆ ಮರದ ಬಳಿ ಹೋಗಿ ಸುಮಾರು ಒಂದು ತಾಸು ಅಡ್ಡಾಡಿಕೊಂಡು ಬಂದಿದ್ದೆ. ಇದರ ಹಿಂದಿರುವ ರಹಸ್ಯವನ್ನು ಒಂಟಿಯಾಗಿ ಭೇದಿಸಿ ಭೇಷ್ ಎನಿಸಿಕೊಳ್ಳಬೇಕೆಂಬ ಇರಾದೆಯೂ ನನಗಿತ್ತೋ ಏನೋ ಈಗ ನೆನಪಿಲ್ಲ. ಆದರೆ ನನ್ನ ದುರಾದೃಷ್ಟಕ್ಕೆ ಆಗ ಯಾವ ನಗ್ನ ಸುಂದರಿಯ ದರ್ಶನವೂ ನನಗಾಗಲಿಲ್ಲ.

ಈ ಬಿಸಿಬಿಸಿ ಸುದ್ಧಿಯ ಗುಸುಗುಸು-ಪಿಸಪಿಸಗಳು ನಿಲ್ಲಬೇಕಾದರೆ ಮತ್ತೊಂದು ಗರಮಾಗರಂ ಸುದ್ಧಿ ಬರಬೇಕಾಯಿತು: ಸಂಪಿಗೆ ಮರದಿಂದ ಮೂವತ್ತು ಮೈಲಿಗೂ ಹೆಚ್ಚು ದೂರದಲ್ಲಿರುವ ಕಾನುಬೈಲು ಎಂಬ ಊರಿನ ಕೆರೆಯಲ್ಲಿ ಒಂದು ಹೆಣ್ಣಿನ ಶವ ಸಿಕ್ಕಿತಂತೆ, ಜನ ಸೇರಿ, ಪೋಲೀಸರು ಬಂದು, ಪೋಸ್ಟ್‌ಮಾರ್ಟೆಮ್ ಮಾಡಿ, ಶವವನ್ನು ಯಾರೂ ಗುರುತಿಸದಿದ್ದರಿಂದ, ಅವರೇ ಗುಂಡಿ ತೋಡಿ ಹುಗಿದುಬಿಟ್ಟರಂತೆ ಎಂಬುದೇ ಆ ಸುದ್ಧಿ. ಆದರೆ ಬೆಂಕಟವಳ್ಳಿ ಸಂಪಿಗೆ ಮರದ ಬಳಿ ಕಾಣಿಸಿಕೊಂಡ ಬೆತ್ತಲೆ ಹುಡುಗಿಗೂ, ಕಲ್ಲುಕೊಪ್ಪದ ಬಳಿಯೂ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂಬ ಸುದ್ಧಿಗೂ, ಕಾನುಬೈಲಿನ ಕೆರೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶವಕ್ಕೂ ಅದು ಹೇಗೆ ತಳಕು ಕಲ್ಪಿಸಿಕೊಂಡರೋ ಗೊತ್ತಿಲ್ಲ; ಅಂತೂ 'ರಾಘವೇಂದ್ರಣ್ಣ ನೋಡಿದ ಬೆತ್ತಲೆ ಹೆಂಗಸು ಕೊಲೆಯಾಗಿ ಸತ್ತು ಹೋದಳಂತೆ' ಎಂದು ಜನ ಮಾತಾಡಿಕೊಂಡರು. ಅವರಲ್ಲಡಗಿದ್ದ ಭಯವೂ ಹೋದಂತನಿಸಿತು. ನಾನು ಅಜ್ಜನ ಮನೆ ಪ್ರವಾಸ ಮುಗಿಸಿ ವಾಪಸು ಊರಿಗೆ ಹೊರಟಾಗ, ಯಾಕೋ ಈ ಸಂಪಿಗೆ ಮರವನ್ನು ಮೂರ್ನಾಲ್ಕು ಸುತ್ತು ಸುತ್ತಿ ಬಂದು, ಅದರ ಕಾಂಡವನ್ನು ತಡವಿ, ಅದರ ಎದ್ದು ಬಂದಿರುವ ಬೇರುಗಳ ಮೇಲೆಲ್ಲ ಓಡಾಡಿ, ಕೆಳಗೆ ಬಿದ್ದಿದ್ದ ಒಂದೆರಡು ತರಗೆಲೆಯನ್ನೆತ್ತಿ ಮೂಸಿ, ಬಿಸಾಕಿ ಬಂದಿದ್ದೆ. ಸಂಪಿಗೆ ಮರ ಮಾತ್ರ ನಿರುಮ್ಮಳವಾಗಿ ನೆರಳು ಸೂಸುತ್ತ ನಿಂತಿತ್ತು.

ಮೊನ್ನೆ ಊರಿಗೆ ಹೋದವನು ಅಪ್ಪನ ಬೈಕೆತ್ತಿಕೊಂಡು ಅಜ್ಜನ ಮನೆಗೆ ಹೋಗಿದ್ದೆ. ವಾಪಸು ಬರುವಾಗ ಸಂಪಿಗೆ ಮರ ಕಣ್ಣಿಗೆ ಬಿದ್ದದ್ದೇ ಹಳೆಯದೆಲ್ಲ ಕ್ಷಣದಲ್ಲಿ ನೆನಪಾಗಿ, ಹಳೇ ಪ್ರಿಯತಮೆಯನ್ನು ಕಂಡಂತಾಗಿ, ಬೈಕು ನಿಲ್ಲಿಸಿ, ಆಫ್ ಮಾಡಿದೆ. ಫಕ್ಕನೆ ಮೌನ ಕವಿಯಿತು. ಈ ಮರದ ಬಗ್ಗೆ ಏನಾದರೂ ಬರೆಯಬೇಕು ಎನಿಸಿತು ನನಗೆ... ಮೇಲೆ ಸೊಂಪಾಗಿ ಚಪ್ಪರದಂತೆ ಒತ್ತರಿಸಿಕೊಂಡಿರುವ ಇದರ ಹಸಿರೆಲೆರಾಶಿಯನ್ನು ನೋಡುತ್ತಿದ್ದೆ...

ಯಾರೋ ಕಿಟಾರನೆ ಕಿರುಚಿಕೊಂಡಂತಾಯಿತು. ಹೆಂಗಸಿನ ಧ್ವನಿ. ನನಗೆ ಒಮ್ಮೆಲೇ ಭಯವಾಗಿ, ಮೈನಡುಗಿ, ಒಂದೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಮಾಡಿ, ಎಂಭತ್ತರ ವೇಗದಲ್ಲಿ ಓಡಿಸತೊಡಗಿದೆ.

Wednesday, August 13, 2008

ಡೇರೆ-ಗುಲಾಬಿ

ಹೊಸ ಮಳೆಗಾಲ; ಹೊಸ ಮಳೆ:
ಮಣ್ಣಾಳದಿಂದೆದ್ದು ಬರುತ್ತದೆ ಡೇರೆ ಗಿಡ...
ದುಬುದುಬನೆ ಬೆಳೆಯುತ್ತದೆ ತಲೆಯೆತ್ತಿ
ಬಲಿಷ್ಟವಾಗುತ್ತ ಕಾಂಡ ಬಾಗದಂತೆ...
ಹೂವಾಗುತ್ತದೆ ತಿಂಗಳಲ್ಲಿ ಮೊಗ್ಗರಳಿ
ಪಕಳೆ ಪಕಳೆಯಲ್ಲೂ ಚೆಲ್ಲಿ ಚೆಲುವು.

ಅಂಗಳದಲ್ಲೀಗ ಇದರದೇ ರಾಜ್ಯಭಾರ:
ಒಡತಿ ಡೇರೆಯನ್ನೇ ಮುಡಿಯುತ್ತಾಳೆ
ದೇವರ ಗೂಡಿನಲ್ಲೂ ಇದರದೇ ಅಲಂಕಾರ
ದಾರಿಹೋಕರ ಕಣ್ಣಿಗೂ ಡೇರೆಯೇ ಚಂದ
ದುಂಬಿಗಂತೂ ಕಹಿ ಬೇರೆ ಹೂವ ಮಕರಂದ!

ವರುಷವಿಡೀ ಹೂ ಬಿಡುವ ಗುಲಾಬಿಗೆ ಹೊಟ್ಟೆಉರಿ!
ಮೈಮೇಲಿನ ಮಳೆಹನಿಯನೆಲ್ಲ ಕಣ್ಣೀರಂತೆ ಉದುರಿಸುತ್ತಾ
ಅಳು ಅಳು ಅಳುತ್ತದೆ ಗುಲಾಬಿ...
ತಾನೆಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದೆನೋ,
ಪ್ರೀತಿಯೆಲ್ಲ ಎಲ್ಲಿ ಬೇರೆಯವರ ಪಾಲಾಯಿತೋ
ಎಂದು ಕರುಬುತ್ತದೆ...
ಮುಳ್ಳುಮುಳ್ಳಿನ ತನ್ನ ಶರೀರ
ಕುರೂಪದಂತೆ ಭಾಸವಾಗುತ್ತದೆ;
ವಿಧಿಯನ್ನು ಶಪಿಸುತ್ತದೆ; ಡೇರೆಯನ್ನು ದ್ವೇಷಿಸುತ್ತದೆ;
'ಈ ಜಗತ್ತು ಮೃಗಜಲ; ಪ್ರೀತಿ ಪ್ರೇಮ ಎಲ್ಲಾ ಸುಳ್ಳು'
ಎಂದು ಹತಾಶ ದನಿಯಲ್ಲಿ ಉಸುರುತ್ತದೆ.

ಜಗತ್ತೂ ಸುಮ್ಮನಿದೆ ನೋಡುತ್ತ ಇವನ್ನೆಲ್ಲ
ಪ್ರತಿ ಅಂಗಳದಲ್ಲೂ ಇದ್ದದ್ದೇ ಈ ವರಾತ
ನೋಡೀ ನೋಡಿ ಬಂದಿದೆ ಅದಕ್ಕೂ ಬೇಸರ
ನಕ್ಕು ಸುಮ್ಮನಾಗುತ್ತದೆ ಅದು:

'ಹುಚ್ಚು ಹೂವೇ, ಈ ಡೇರೆಯ ಮೆರೆತ
ಹೆಚ್ಚೆಂದರೆ ಇದೊಂದು ತಿಂಗಳು...
ಆಮೇಲೆ ಬೇಕು ಮತ್ತೆ ನೀನೇ...
ವರುಷವಿಡೀ ಗೆಡ್ಡೆಯಾಗಿ ಅಡಗಿದ್ದು
ಹೀಗೆಲ್ಲೋ ಋತುವೊಂದರಲ್ಲಿ ಚಿಗಿತು ಬೆಳೆದು
ಸುಂದರಿಯಂತೆ ಕಂಡುಬಿಟ್ಟರೆ ಆಗಲಿಲ್ಲ...
ಮೈತುಂಬ ಮುಳ್ಳನಿಟ್ಟುಕೊಂಡೂ,
ಗ್ರೀಷ್ಮದ ಉರಿಬಿಸಿಲಲ್ಲೂ ಬಾಡದೇ,
ಕೊರೆವ ಹುಳುಗಳಿಗೂ ಜಗ್ಗದೇ
ಅರಳಿ ನಿಂತು ನಯನವನಾಕರ್ಷಿಸುವುದು ಇದೆಯಲ್ಲ-
ಅದು ದೊಡ್ಡದು... ಅದು ಶಾಶ್ವತ...
ನೆನಪಿಡು: ನೀನು ಗುಲಾಬಿ; ಪ್ರೀತಿಯ ಸಂಕೇತ'

ಗುಲಾಬಿಗೀಗ ಚೂರು ಸಮಾಧಾನ...
ಇಷ್ಟಗಲ ಹೂ ಬಿಟ್ಟುಕೊಂಡು ನಿಂತ ಡೇರೆ
ಬಜಾರಿಯಂತೆ ಕಾಣುತ್ತದೆ...
ತನ್ನ ಹೂವೋ, ಪುಟ್ಟಕೆ, ಕೆಂಪಗೆ, ಲಘುವಾಗಿ-
ಆಹಾ! ತನ್ನ ಸೌಂದರ್ಯಕ್ಕೆ ತಾನೇ ಮಾರುಹೋದಂತೆ
ತೂಗುತ್ತದೆ ಗುಲಾಬಿಗಿಡ...
ಕಾಯತೊಡಗುತ್ತದೆ ನಿರೀಕ್ಷೆಯಲ್ಲಿ:

ಡೇರೆ ಮುಡಿದು ಬೇಸರ ಬಂದು-
ಒಡತಿ ಬರುವುದ ತನ್ನೆಡೆಗೆ ಮತ್ತೆ;
ಮಳೆ ಮಧ್ಯದಲ್ಲೇ ನಿಂತು, ಡೇರೆಗಿಡ ಬಾಡಿ-
ದೇವರಿಗೆ ಗುಲಾಬಿಯೇ ಗತಿಯಾಗಿ ಮತ್ತೆ;
ಡೇರೆಯಂಕುರಗಳಲಿ ಖಾಲಿಯಾಗಿ ಜೇನು-
ತನ್ನನರಸಿ ಬರುವ ದುಂಬಿಗಾಗಿ ಮತ್ತೆ;
ದಾರಿಗರ ಕಣ್ಣಲ್ಲಿ ತಾನೇ ಬಿಂದುವಾಗಿ-
ಮತ್ತೆ!

Monday, July 28, 2008

ಪಯಣ

"ಮಿನೂ,"

"ಮ್?"

"ಚಂದ್ರನಿಗೆ ಶಶಾಂಕ ಅಂತ ಯಾಕೆ ಹೆಸರು ಗೊತ್ತಾ?"

"ಇಲ್ಲ, ಗೊತ್ತಿಲ್ಲ"

"ಶಶ ಅಂದ್ರೆ ಮೊಲ. ಚಂದ್ರನ ಮೇಲೆ ಮೊಲದ ಚಿತ್ರದ ಅಂಕ -ಅಂದ್ರೆ ಸೈನ್- ಇದೆ ಅಲ್ವಾ, ಅದಕ್ಕೇ ಅವನನ್ನ ಶಶಾಂಕ ಅಂತ ಕರೀತಾರೆ"

"ಓಹ್! ಗೊತ್ತೇ ಇರ್ಲಿಲ್ಲ ನಂಗೆ... ಥ್ಯಾಂಕ್ಯೂ ವೆರಿ ಮಚ್ ಫಾರ್ ದಿ ಇನ್‌ಫಾರ್ಮೇಶನ್ ಮಿ. ಶಶಾಂಕ್! ಆದ್ರೆ ನಿಮಗೆ ಎಲ್ಲಿ ಮೊಲದ ಗುರುತು ಇದೆ ಅಂತ ಕೇಳಬಹುದಾ?"

"ಅಗತ್ಯವಾಗಿ ಕೇಳಬಹುದು. ಆದ್ರೆ ನಾನು ಮಾತ್ರ ಹೇಳಲ್ಲ! ಯಾಕೇಂದ್ರೆ ನಂಗೆ ಎಲ್ಲೂ ಮೊಲದ ಗುರುತಿನ ಮಚ್ಚೆ ಇಲ್ಲ!"

"ಮತ್ಯಾಕಪ್ಪಾ ನೀನು ಶಶಾಂಕ ಅಂತ ಹೆಸರಿಟ್ಕೊಂಡಿದೀಯಾ?"

"ಏಯ್... ನಾನಾ ಇಟ್ಕೊಂಡಿರೋದು? ಅಪ್ಪ ಇಟ್ಟಿದ್ದಪ್ಪ"

"ಹ್ಮ್... ಅದು ನಿಜ... ಶಶೂ, ಈಗ ಹೀಗೆ ನಮ್ಮಿಬ್ರುನ್ನೂ ಒಟ್ಟಿಗೇ ನೋಡಿದ್ರೆ ನಿಮ್ಮಪ್ಪ ಹೇಗೆ ರಿಸೀವ್ ಮಾಡ್ಬಹುದು?"

"ಹೆದರಬೇಡ್ವೋ... ಅಪ್ಪ ತುಂಬಾ ಸೋಶಿಯಲ್ ಅಂಡ್ ಪ್ರಾಕ್ಟಿಕಲ್... ಮೊದಲಿಗೆ ಶಾಕ್ ಆಗ್ತಾರೆ... ಆಮೇಲೆ ತಿಳಿಸಿ ಹೇಳಿದ್ರೆ ಒಪ್ಕೋತಾರೆ"

"ಆದ್ರೂ ನಂಗ್ಯಾಕೋ ತುಂಬಾ ಭಯ ಆಗ್ತಿದೆ ಶಶೂ..."

ಮಿನುಗು ನನ್ನ ಎದೆಗೆ ಒರಗಿದಳು. ಅವಳು ಅಷ್ಟೊಂದು ಭಯ ಪಡಬೇಕಾದ ಅವಶ್ಯಕತೆಯೇ ಇಲ್ಲ ಎನಿಸಿ, ಅವಳ ಬೆನ್ನ ಮೇಲಿಂದ ಕೈ ಹಾಕಿ ಬಳಸಿ ಮತ್ತಷ್ಟು ಬಿಗಿಯಾಗಿ ನನ್ನೆದೆಗೆ ತಬ್ಬಿಕೊಂಡೆ.

ನಾವು ಕುಳಿತಿದ್ದ ವೋಲ್ವೋ ಬಸ್ಸು 'ಸುಂಯ್' ಸದ್ದು ಮಾಡುತ್ತಾ ಓಡುತ್ತಿತ್ತು. ಕಿಟಕಿಗೆ ಇಳಿಬಿಟ್ಟಿದ್ದ ಪರದೆಯನ್ನು ನಾನು ಪಕ್ಕಕ್ಕೆ ಸರಿಸಿದ್ದೆನಾದ್ದರಿಂದ ಚಂದ್ರ ಒಳಬಂದು ನಮ್ಮಿಬ್ಬರ ಮೇಲೂ ಬೆಳದಿಂಗಳ ಹೊದಿಕೆ ಹೊಚ್ಚಿದ್ದ. ಮಿನುಗು ಕಣ್ಣು ಮುಚ್ಚಿಕೊಂಡಿದ್ದಳು. ನಾನು ಅವಳ ಮುಖವನ್ನೇ ನೋಡಿದೆ. ಅವಳ ಬಲಕಿವಿಯ ಲೋಲಕ್‌ನ ತುದಿ ಈಗ ಕೆನ್ನೆಯ ಮೇಲಿತ್ತು. ಮುಂಗುರುಳೊಂದು ಅದರ ಪಕ್ಕ. ನಾನು ಅದನ್ನು ಅವಳ ಕಿವಿಯ ಹಿಂದೆ ಸರಿಸಿದೆ. ಅವಳ ನುಣುಪು ಕೆನ್ನೆ, ಮೂಗು, ಅರ್ಧವಷ್ಟೇ ಕಾಣುತ್ತಿದ್ದ ತುಟಿಗಳು, ಗರಿಗರಿ ಚೂಡಿಯನ್ನು ಬಳಸಿದ್ದ ಮಿದು ಸ್ವೆಟರ್... ಎಲ್ಲಾ ಈ ಬೆಳದಿಂಗಳ ಬೆಳಕಿನಲ್ಲಿ ಹಿತವಾಗಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಂತೆ ಕಾಣುತ್ತಿದ್ದವು. ನಾನು ನಮ್ಮೊಂದಿಗೇ ಓಡಿ ಬರುತ್ತಿದ್ದ ಚಂದ್ರನತ್ತ ದೃಷ್ಟಿ ಹೊರಳಿಸಿದೆ.

ಈ ಚಂದಿರನೊಬ್ಬ ಅಂದಿನಿಂದ ಇಂದಿನವರೆಗೂ ನನ್ನೊಂದಿಗೇ ಬರುತ್ತಿದ್ದಾನೆ. ಎಲ್ಲರಿಗೂ ಚಂದಿರ ಸದಾ ಹಸನ್ಮುಖಿಯಂತೆ ಕಾಣುತ್ತಾನಂತೆ. ನನಗೆ ಮಾತ್ರ ಹಾಗಲ್ಲ. ಆತ ನನ್ನ ಪರಿಸ್ಥಿತಿಗಳ ಅಭಿವ್ಯಕ್ತಿಯಂತೆ ಕಾಣಿಸುತ್ತಾನೆ ನನಗೆ. ನಾನು ಬೇಸರದಲ್ಲಿದ್ದರೆ ಚಂದ್ರನ ಮುಖ ಬಾಡಿರುತ್ತದೆ, ನಾನು ಕೋಪದಲ್ಲಿದ್ದರೆ ಚಂದ್ರನ ಮುಖ ಗಂಟಿಕ್ಕಿಕೊಂಡಿರುತ್ತದೆ, ನಾನು ಆತಂಕದಲ್ಲಿದ್ದರೆ ಚಂದಿರನ ಮುಖವೂ ಚಿಂತೆಯಲ್ಲಿದ್ದಂತೆ ಗೋಚರಿಸುತ್ತದೆ, ನಾನು ನಗುತ್ತಿದ್ದರೆ, ಅಫ್ ಕೋರ್ಸ್, ಚಂದಿರನೂ ನಗುತ್ತಿರುತ್ತಾನೆ. ಏಕೆಂದರೆ ಚಂದಿರ ನನ್ನ ಗೆಳೆಯ. ಅಲ್ಲ, ಚಂದಿರ ಎಂದರೆ ನಾನೇ.

ಮಿನುಗು ನನ್ನ ಪ್ರಪೋಸಲ್ಲನ್ನು ಒಪ್ಪಿಕೊಳ್ಳುವ ಮುನ್ನ ರೇಗಿಸುತ್ತಿದ್ದಳು. "ಹೇಳೀ ಕೇಳೀ ನೀನು ಶಶಾಂಕ, ಅದೆಷ್ಟು ನಕ್ಷತ್ರಗಳು ಪ್ರೀತಿಸ್ತಿದಾವೇನೋ? ನೀನು ಎಷ್ಟು ನಕ್ಷತ್ರಗಳಿಗೆ ಲೈನು ಹಾಕಿ ಕಾಯ್ತಿದೀಯೇನೋ? ನಿನ್ನಂಥವನನ್ನು ನಂಬುವುದು ಹೇಗೆ ಮಾರಾಯಾ...?" ಆದರೆ ಅವಳು ನನ್ನನ್ನೇ ನಂಬಿರುವುದು, 'ಗುಪ್ತ್ ಗುಪ್ತ್' ಆಗಿ ನನ್ನನ್ನೇ ಪ್ರೀತಿಸುತ್ತಿರುವುದು ಅವಳ ಚಹರೆಯಲ್ಲೇ ಗೊತ್ತಾಗುತ್ತಿತ್ತು. ಸುಮ್ಮನೆ ನಕ್ಕು ಹೇಳಿದ್ದೆ: "ಕಾಯ್ತಿರಬಹುದು... ಆದರೆ ನಿನ್ನಂತಹ 'ಮಿನುಗು'ತಾರೆಯನ್ನು ಕಂಡಮೇಲೆ ಈ ಶಶಾಂಕನ ಕಣ್ಣೇ ಮಂಕಾಗಿಹೋಗಿದೆ ದೇವೀ...! ನನ್ನ ಪೋಷಕ ಸೂರ್ಯನಿಗಿಂತ ಪ್ರಖರ ನಿನ್ನ ಪ್ರಭೆ... ಎಷ್ಟೋ ಬಾರಿ ಅನಿಸುತ್ತದೆ: ನನ್ನ ಬಾಹ್ಯ ರೂಪ ಮಾತ್ರ ಭೂಮಿಯನ್ನು ಸುತ್ತುತ್ತಿರುವುದು; ಮನಸು ಸದಾ ಈ ಮಿನುಗು ಅನ್ನೋ ನಕ್ಷತ್ರವನ್ನು ಸುತ್ತುತ್ತಿರುತ್ತೆ ಅಂತ. ಈ ಬಡ ಚಂದ್ರನ ಪ್ರೀತಿಯನ್ನು ಒಪ್ಪಿಕೋ ತಾರೇ..." ಮಿನುಗುವಿನ ಕಣ್ಣಲ್ಲಿ ಎಂಥಾ ನಕ್ಷತ್ರ ಮಿನುಗಿತ್ತು ಆ ಕ್ಷಣದಲ್ಲಿ...!

ಬಹುಶಃ ಅದು ನನ್ನ ಬಾಳಿನ ಇದುವರೆಗಿನ ಅದ್ಭುತ ಘಳಿಗೆ ಮತ್ತು ದಿನ. ಆಗಸದ ಮುಖ ಕೆಂಪೇರಿದ್ದು ಸಂಜೆಯಾದ್ದರಿಂದಲೋ ಅಥವಾ ಈ ಕಿನ್ನರ ಜೀವಿಗಳ ಪ್ರೇಮ ಸಾಕಾರವಾಗುತ್ತಿರುವ ಪರಿಯನ್ನು ನೋಡುತ್ತಾ ನಾಚಿದ್ದರಿಂದಲೋ ಹೇಳಲಾಗುತ್ತಿರಲಿಲ್ಲ. ಸೂರ್ಯ ಸಹ 'ಇವಳು ಒಪ್ಪುತ್ತಾಳೋ ಇಲ್ಲವೋ ನೋಡಿಕೊಂಡೇ ಮುಳುಗೋಣ' ಎಂದು ನಿರ್ಧರಿಸಿದವನಂತೆ ನಿಧನಿಧಾನವಾಗಿ ಕೆಳಗೆ ಸರಿಯುತ್ತಿದ್ದ. ಮಿನುಗು ಒಪ್ಪಿದಳು. ಇಲ್ಲ, ಮಿನುಗು ಒಪ್ಪದಿರಲಿಕ್ಕೆ ಸಾಧ್ಯವೇ ಇರಲಿಲ್ಲ. 'ಇಂದು ಬಾನಲ್ಲಿ ಚಂದಿರ ಮೂಡುವ ಮೊದಲು ಮಿನುಗುವಿನ ಬಾಳಲ್ಲಿ ಈ ಶಶಾಂಕನ ಪ್ರೀತಿಗೆ ಅಧಿಕೃತ ಒಪ್ಪಿಗೆ ಸಿಕ್ಕಿರುತ್ತೆ' ಅಂತ ಬೆಳಗ್ಗೆ ಎದ್ದು ಟೆರೇಸಿಗೆ ಬಂದಾಗಲೇ ನಾನು ತೀರ್ಮಾನಿಸಿದ್ದೆ. ಎದುರಿನ ಸಿತಾಳೆ ಮರದ ಗೆಲ್ಲ ಮೇಲೆ ಕೂತಿದ್ದ ಹಕ್ಕಿಯೊಂದು ಹಾರಿ ಎಲೆಯ ಮೇಲೆಲ್ಲ ನಿಂತಿದ್ದ ಇಬ್ಬನಿ ಹನಿಗಳು ತಟತಟನೆ ಭಾಷ್ಪವಾಗಿ ನನ್ನ ತೀರ್ಮಾನಕ್ಕೆ ಅಸ್ತು ಅಸ್ತು ಎಂದಿದ್ದವು. ಹಾಗೆ ಬಿದ್ದ ಹನಿಗಳು- ಆವಿಯಾಗಿ ಹೋಗಿ ಹಿಮಗಟ್ಟಿ ಉದುರಿದ ಪಾವನ ಯಮುನೆಯ ನೀರೇ ಇರಬೇಕು -ಎಂದುಕೊಂಡೆ.

ನನಗೇ ನಂಬಲಾಗುವುದಿಲ್ಲ; ನಾನೇನಾ ಈ ಮಿನುಗುವನ್ನು ಒಲಿಸಿಕೊಂಡದ್ದು? ಮಥುರೆಯನ್ನು ಜಯಿಸಿಕೊಂಡದ್ದು? ಬದುಕನ್ನು ಕಟ್ಟಿಕೊಂಡದ್ದು? ಈಗ ಹೀಗೆ ಈಕೆಯನ್ನು ಕರೆದುಕೊಂಡು ಹೋದರೆ 'ಇಲ್ಲ' ಎನ್ನಲಾಗದೆ ಒಪ್ಪಿಕೊಳ್ಳುವಂತೆ ಅಪ್ಪನನ್ನೂ ಮಾನಸಿಕವಾಗಿ ಮಾರ್ಪಡಿಸಿದ್ದು? ಊರು, ಬಂಧುಗಳು, ಸನ್ಮಿತ್ರರನ್ನೆಲ್ಲಾ ಎದುರು ಹಾಕಿಕೊಂಡಾದರೂ -ಇಲ್ಲ, ಅವರೆಲ್ಲ ಭಯ-ವಿಸ್ಮಯ-ಮಿಶ್ರಿತ ನಗೆಯೊಂದಿಗೆ ಮಹಾವಿಶ್ವಾಸಿಗಳಂತೆ ಮೆಲು ನಗೆಯಾಡುತ್ತಾ ಕೈಕುಲುಕುವಂತೆ ಮಾಡಿಕೊಂಡು- ಈಕೆಯನ್ನು ಮದುವೆಯಾಗುವೆನೆಂಬ ಧೈರ್ಯ ಒಡಗೂಡಿಸಿಕೊಂಡದ್ದು? ಅದೇ ಊರ ಜನ, ಬಂಧುಗಳು, ಮಿತ್ರರು ಎಲ್ಲರೂ 'ಶಶಾಂಕ ಹಕ್ಲ್ ಹತ್ತಿ ಹೋದ ತಗ... ಮುಗತ್ತು ಇನ್ನು ಅವನ್ ಕಥೆ!' ಎಂದು ಮಾತಾಡಿಕೊಳ್ಳುವುದು ಕಿವಿಗೆ ಬಿದ್ದಾಗ ಭುಗಿಲೆದ್ದಿದ್ದ ಈ ಛಲದ ಬೆಂಕಿ ಇನ್ನೂ ಉರಿಯುತ್ತಲೇ ಇರುವುದು... ಆಹ್! ಎಲ್ಲಡಗಿತ್ತು ಈ ಆತ್ಮವಿಶ್ವಾಸ ನನ್ನಲ್ಲಿ ಮುಂಚೆ?

ಊರು ಬಿಟ್ಟು ಹೊರಟ ಆ ಕಾವಳದ ರಾತ್ರಿ... ಅಪ್ಪ ಬಸ್‌ಸ್ಟ್ಯಾಂಡಿನವರೆಗೆ ಬ್ಯಾಟರಿ ಹಿಡಿದು ಬಂದಿದ್ದ. "ಅಲ್ಲ ಪಾಪು, ಹೋಗ್ಲೇಬೇಕಾ?" ಎಷ್ಟು ಸಣ್ಣ ದನಿಯಲ್ಲಿ ಕೇಳಿದ್ದ! ಆ ದನಿಯ ತಗ್ಗಿನಲ್ಲಿ ಅದೆಷ್ಟು ಪಶ್ಚಾತ್ತಾಪವಿತ್ತು! 'ಇಲ್ಲ ಮಗನೇ, ಇನ್ನೊಂದು ಸಲ ಹಾಗೆಲ್ಲ ಮಾತಾಡೊಲ್ಲ... ನೀನು ಮನೆ ಬಿಟ್ಟು ಹೊರಡುವಷ್ಟು ಕಠಿಣ ತೀರ್ಮಾನ ತೆಗೆದುಕೊಳ್ತೀಯಾ ಅಂತ ಗೊತ್ತಿದ್ರೆ ಹಾಗೆ ಹೇಳ್ತಿರಲಿಲ್ಲ... ನೀನು ಇಷ್ಟೊಂದು ಗಂಭೀರವಾಗಿ ಪರಿಗಣಿಸ್ತೀಯಾ ಅಂದುಕೊಂಡಿರಲಿಲ್ಲ... ನೀನೀಗ ಹೋಗೋದಿಲ್ಲ ಅಂತಾದ್ರೆ ಬೇಕಾದ್ರೆ ತಪ್ಪಾಯ್ತು ಅಂತ ಕೇಳ್ತೀನಿ... ನನಗೂ ವಯಸ್...' ಹೌದು, ಅಪ್ಪ ಅದನ್ನೆಲ್ಲ ಹೇಳಬಯಸಿದ್ದ. ನನಗದು ಗೊತ್ತಾಗುತಿತ್ತು. ಆಗಾಗ ಬೆಳಗುತ್ತಿದ್ದ ಬ್ಯಾಟರಿಯ ಬೆಳಕಿನಲ್ಲಿ ಕಾಣುತ್ತಿದ್ದ ಅಪ್ಪನ ಮುಖ ಪೂರ್ತಿ- ಪೂರ್ತಿ ಕುಗ್ಗಿಹೋಗಿತ್ತು. ಅಪ್ಪನನ್ನು ಸಮೀಪಿಸಿ, ಅವನ ಕೈಮುಟ್ಟಿ ಹೇಳಿದ್ದೆ: "ಬೇಜಾರಾಗಡ... ನೀ ಹೇಳಿದೆ ಅಂತ ಅಲ್ಲ ನಾ ಹೋಗ್ತಾ ಇರೋದು... ನೀನಷ್ಟೇ ಅಲ್ಲ; ಇಡೀ ಊರೇ ಮಾತಾಡಿಕೊಳ್ತಾ ಇದ್ದು ಕದ್ದು ಮುಚ್ಚಿ ಒಳಗೊಳಗೇ ನಗ್ತಾ.. 'ತಾಯಿ ಒಂದು ಹೋದ್ಮೇಲೆ ವಿನಾಯಕಣ್ಣನ ಮನೆ ಮಾಣಿ ಉಂಡಾಡಿಯಾಗಿಹೋತು... ಅದು ಇರೋ ತನಕ ಹಿಡಿತದಲ್ಲಿದ್ದ ಅಂವ... ಈಗಂತು ಯಾರ ಕೈಗೂ ಸಿಗದಿಲ್ಲೆ...' ಅವ್ರಿಗೆಲ್ಲ ಒಂದು ಉತ್ತರ ಹೇಳೋದು ಬ್ಯಾಡದಾ ಅಪ್ಪಾ? ತೋರುಸ್ತಿ ಅಪ್ಪಾ ನಾ ಯಾರು ಅಂತ..." ಅಪ್ಪನ ಕೈ ತಣ್ಣಗಿತ್ತು.

ಬೆಂಗಳೂರಿನ ಬಸ್ಸು ಹತ್ತಿದಾಗ ಏನಿತ್ತು ನನ್ನ ಕೈಯಲ್ಲಿ? ಮೂರು ವರ್ಷ ಟೆಕ್ಸ್‌ಟೈಲ್ ಡಿಪ್ಲೋಮಾ ಮಾಡಿದ್ದಕ್ಕೆ ಕುರುಹಾಗಿ ಒಂದಷ್ಟು ಸರ್ಟಿಫಿಕೇಟುಗಳು... ಕಿರಣನ ಅಂಗಡಿಯಲ್ಲಿ ಕೂತು ನ್ಯೂಸ್‌ಪೇಪರುಗಳನ್ನು ತಡಕಾಡಿ ಗೀಚಿಕೊಂಡು ಇಟ್ಟುಕೊಂಡಿದ್ದ ಒಂದಷ್ಟು ಜಾಹೀರಾತುಗಳು, ಕಂಪನಿಗಳ ವಿಳಾಸಗಳು... ಎರಡು ವರ್ಷದ ಹಿಂದೆ ಯಾವುದೋ ಕೆಲಸದ ಮೇಲೆ ಹೋಗಿ ಓಡಾಡಿಕೊಂಡು ದಿಗಿಲಿನ ಕಣ್ಣಲ್ಲಿ ನೋಡಿಕೊಂಡು ಬಂದಿದ್ದ ಬೃಹತ್ ಬೆಂಗಳೂರಿನ ಸೆಳೆತ... 'ಏನಕ್ಕಾದ್ರೂ ಬೇಕಾಗ್ತು ಇಟ್ಗ... ಹಂಗೆಲ್ಲ ತೀರಾ ಭಂಡತನ ಮಾಡ್ಲಾಗ' ಎಂದು ಅಪ್ಪ ಕೊನೆಯ ಘಳಿಗೆಯಲ್ಲಿ ಜೇಬಿಗೆ ತುರುಕಿದ್ದ ಸಾವಿರದಿನ್ನೂರು ರೂಪಾಯಿ ಎಣಿಸುವ ನೋಟುಗಳು... ಅಷ್ಟೇ, ಅಷ್ಟೇ ನನ್ನ ಬಳಿ ಇದ್ದದ್ದು.

ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಇದ್ದದ್ದು ಛಲ! ತಲೆಯೊಳಗೆ ತುಂಬಿಕೊಂಡು ಕೊರೆಯುತ್ತಿದ್ದ -ಅಪ್ಪ ಬೆಳಿಗ್ಗೆ ಕಣದಲ್ಲಿ ಅಡಿಕೆ ಹರವುತ್ತಿದ್ದಾಗ ಹೇಳಿದ್ದ ಮಾತುಗಳು... "ಅಡಿಕೆ ಹರವಿಕ್ಕೆ, ಕೃಷ್ಣಾ ಬಸ್ಸಿಗೆ ಒಂಚೂರು ಸಾಗರಕ್ಕೆ ಹೋಗ್ಬರ್ತಿ ಅಪ್ಪಾ... ಕೆಲ್ಸಿದ್ದು" ಎಂದು ನಾನು ಅಲಕ್ಷ್ಯದಿಂದ ಹೇಳಿದ್ದೆ ತಡ, ಅಪ್ಪ ತಿರುಗಿಬಿದ್ದವನಂತೆ ಕೂಗಿದ್ದ: "ಸಾಕು! ಅದೆಂಥಕೆ ಸಾಗರಕ್ಕೆ ಹೋಗವು ಈಗ? ಏನು ಕೆಲ್ಸಿದ್ದು? ಅಲ್ಲಿ ಆ ಕಿರಣನ ಅಂಗಡೀಲಿ ಕುಂತ್ಗಂಡು ಕತೆ ಹೊಡಿಯಕ್ಕಾ? ಎದ್ರಿಗೆ ಕಾಲೇಜ್ ಹುಡ್ಗೀರ್ ಹೋದಕೂಡ್ಲೆ ಡೈಲಾಗ್ ಹೊಡ್ಕೋತ ನಿಗ್ಯಾಡಕ್ಕಾ? ಮತ್ತೆ ಹತ್ತು ಪ್ಯಾಕೆಟ್ ಗುಟ್ಕಾ ತಿನ್ನಕ್ಕಾ? ಊರೋರೆಲ್ಲ ನಿನ್ ಬಗ್ಗೆ ಏನೇನ್ ಮಾತಾಡಿಕೊಳ್ತ ಗೊತ್ತಿದ್ದಾ ನಿಂಗೆ? ನಿನ್ ಕಾಲದಲ್ಲಿ ನಂಗೂ ಮರ್ಯಾದಿ ಇಲ್ಲೆ. ಎಲ್ಲಿಗೆ ಹೋಪ್ದೂ ಬ್ಯಾಡ. ನಾನಂತೂ ಒಂದ್ರುಪಾಯ್ ಕೊಡದಿಲ್ಲೆ. ತ್ವಾಟಕ್ ಹೋಗಿ ಸ್ವಾಂಗೆ ಸಾಚಿಕ್ ಬಾ. ಒಂದು ರೌಂಡ್ ಬ್ಯಾಣಕ್ ಹೋಗ್ಬಾ. ಸ್ವಲ್ಪನಾದ್ರೂ ಜವಾಬ್ದಾರಿ ಇದ್ದನಾ ನಿಂಗೆ? ದಿನಾ ಪೆನ್ಸಿಲ್ಲು, ಬಣ್ಣ ಇಟ್ಗಂಡು ಏನೇನೋ ಚಿತ್ರ ಬಿಡಿಸ್ತಾ ಕೂತ್ರೆ ಆಗಲ್ಲೆ. ಹಿಂಗೇ ಮಳ್ ಹರಕೋತ ಮನೇಲಿದ್ರೆ ಹೆಣ್ಣು ಕೊಡ್ತ್ವಲ್ಲೆ ನಿಂಗೆ, ತಿಳ್ಕ!" ಅಪ್ಪ ಬಾಯಿಬಿಟ್ಟು ನನ್ನನ್ನು ಒಮ್ಮೆಯೂ ಹೀಗೆ ಬೈದವನಲ್ಲ. ನಾನು ಮನೆಯಲ್ಲಿರುವುದರ ಬಗ್ಗೆ ಅವನಿಗೆ ಅಂತಹ ಅಸಮಾಧಾನವೂ ಇರಲಿಲ್ಲ. ಅಮ್ಮ ತೀರಿಕೊಂಡಮೇಲೆ ಒಂಟಿಯಾಗಿಹೋದೆನೇನೋ ಎಂಬಂತೆ ಚಡಪಡಿಸುತ್ತಿದ್ದ ಅಪ್ಪನಿಗೆ ಮಗ ಜೊತೆಯಲ್ಲಿರುವುದು ಹಿತವಾಗಿಯೇ ಇತ್ತು. ಅದಿಲ್ಲವೆಂದರೆ ಮನೆಯಲ್ಲಿ ತಾನೊಬ್ಬನೇ... ಏನಂತ ಮಾಡುವುದು?

ಆದರೆ ಅಪ್ಪ ಇವತ್ತು ಹೀಗೆ ಬೆಳಬೆಳಗ್ಗೆ ಸಿಟ್ಟಿಗೆದ್ದವನಂತೆ ಕೂಗಿಕೊಂಡದ್ದು -ಅದೂ ಕಣದಲ್ಲಿ, ಅಕ್ಕಪಕ್ಕದ ಮನೆಯವರಿಗೆಲ್ಲ ಕೇಳುವಂತೆ -ನನಗೆ ಕೆರಳಿಹೋಗಿತ್ತು. "ನೀನೇನು ನಂಗೆ ದುಡ್ಡು ಕೊಡೋದು ಬ್ಯಾಡ. ನಾ ಸಾಗರಕ್ಕೆ ಹೋಗವು ಅಂದ್ಮೇಲೆ ಹೋಗವು. ಹೆಂಗಾದ್ರೂ ಹೋಗ್ಬರ್ತಿ" ಅಂತಂದು, ಅರ್ಧ ಹರವಿದ್ದ ಅಡಿಕೆ ಚಾಪೆಯನ್ನು ಹಾಗೆಯೇ ಬಿಟ್ಟು ಒಳಬಂದು, ಪ್ಯಾಂಟು ಹಾಕಿ ಹೊರಟಿದ್ದೆ. ಜೇಬಲ್ಲಿ ನೂರಿನ್ನೂರು ರೂಪಾಯಿಯಂತೂ ಇತ್ತು. ಸಾಗರಕ್ಕೆ ಬಂದು, ಕಿರಣನ ಅಂಗಡಿಯಲ್ಲಿ ಚಡಪಡಿಸುತ್ತಾ ಕೂತಿದ್ದಾಗ ಕಿರಣ "ಏಯ್ ನಿಂದು ಡಿಪ್ಲೋಮಾ ಆಯ್ದಲಾ ಮಾರಾಯಾ... ನನ್ನ ಹಾಗಲ್ಲ. ಬೆಂಗಳೂರಲ್ಲಿ ಒಂದಲ್ಲಾ ಒಂದು ಕೆಲಸ ಸಿಗ್ತು. ಸುಮ್ನೆ ಊರಲ್ಲಿದ್ದು ಹಿಂಗೆ ದಿನಾ ಒಬ್ಬೊಬ್ರ ಹತ್ರ ಏನು ಹೇಳಿಸ್ಕ್ಯಳ್ತೆ? ಹೋಗ್ಬುಡು. ಏನಾದ್ರೂ ಮಾಡ್ಲಕ್ಕು. ಅಲ್ಲಿ ನಿನ್ನನ್ನ ಯಾರೂ ಕೇಳೋರು ಇರೋದಿಲ್ಲೆ. ಜನ ಒಂದಷ್ಟು ದಿನ ಆಡಿಕೊಳ್ತ. ಆಮೇಲೆ ನಿಂಗೂ 'ಜೆಸ್' ತಿರುಗಿ ಏನಾದ್ರೂ ದುಡ್ಡು-ಗಿಡ್ಡು ಮಾಡಿಕೊಂಡು ಬಂದ್ರೆ ಅದೇ ಜನ ನಿನ್ನನ್ನ ಹೆಂಗೆ ಮಾತಾಡಿಸ್ತ ನೋಡ್ಲಕ್ಕಡ" ಎಂದಿದ್ದ. ಅದೇನು ನಾನೂ ಯೋಚಿಸದ ಪರಿಹಾರವಲ್ಲ. ಕಿರಣ ನನ್ನ ಬಳಿ ಹೀಗೆ ಹೇಳುತ್ತಿದ್ದುದೂ ಮೊದಲನೇ ಸಲವಲ್ಲ. ಆದರೆ ಆವತ್ತು ನಿರ್ಧರಿಸಿಬಿಟ್ಟೆ. 'ಮನೆಯಲ್ಲಿದ್ದರೆ ಹೆಣ್ಣು ಸಹ ಸಿಕ್ಕುವುದಿಲ್ಲ!' -ಆಹ್, ಅದು ಒತ್ತಟ್ಟಿಗಿರಲಿ, ಇನ್ನು ಊರಲ್ಲಿದ್ದರೆ ನಾನು ಕೊಳೆತೇಹೋಗುತ್ತೇನೆ ಎಂಬುದಂತೂ ವಿಧಿತವಿತ್ತು. ಕಿರಣನಿಂದ ಒಂದು ಸಾವಿರ ರೂಪಾಯಿ ತೆಗೆದುಕೊಂಡೆ. ವಾಪಸು ಮನೆಗೆ ಬರುವಷ್ಟರಲ್ಲಿ ನನ್ನ ನಿರ್ಧಾರ ದೃಢವಾಗಿತ್ತು. ಬಟ್ಟೆಯನ್ನೆಲ್ಲಾ ಬ್ಯಾಗಿಗೆ ತುರುಕಿಕೊಂಡು ಅಪ್ಪನ ಬಳಿ ನನ್ನ ತೀರ್ಮಾನ ಹೇಳಿದಾಗ ಅಪ್ಪ ಇದ್ದಕ್ಕಿದ್ದಂತೇ ಕುಸಿದುಹೋದ. ಏನೂ ಹೇಳಲಿಲ್ಲ.

ಅವತ್ತೂ ಚಂದ್ರ ಇದ್ದ ನನ್ನ ಜೊತೆ: ಬಸ್ಸ ಕಿಟಕಿಯಾಚೆ, ನನ್ನೊಂದಿಗೇ ಬರುತ್ತಾ. ಮುಗುಳ್ನಗುತ್ತಾ. ಆತ್ಮವಿಶ್ವಾಸ ತುಂಬುತ್ತಾ. ಹಾಗೆ ಆ ಚಂದ್ರನೊಂದಿಗೆ ಶುರುವಾದ ನನ್ನ ಪಯಣ ಆಹಾ, ಇದೆಲ್ಲಿಗೆ ತಂದು ಮುಟ್ಟಿಸಿತು ನನ್ನ? ಇಲ್ಲ, ಮುಟ್ಟಿಸಿಲ್ಲ, ಮುಂದುವರೆಯುತ್ತಲೇ ಇದೆ... ನಿಲ್ಲಲಾರದು ಚಂದಿರನಿರುವವರೆಗೆ.

ಮಿನುಗು ಸಣ್ಣಗೆ ಮಿಸುಕಿದಳು.

"ನಿದ್ರೆ ಬಂತಾ ಮಿನು?" -ಕೇಳಿದೆ.

"ಹುಂ" -ನನ್ನ ಮೈಗೊತ್ತಿ.

ಒಂದು ತಿಂಗಳು ಹಿಡಿಯಿತು ಕೆಲಸವೊಂದು ಸಿಗಲಿಕ್ಕೆ: "ಟೆಕ್ಸ್‌ಟೈಲಲ್ಲಿ ಬರೀ ಡಿಪ್ಲೋಮಾ ಮಾಡಿಕೊಂಡ್ರೆ ಸಾಕಾಗಲ್ಲಪ್ಪಾ... ವಿ ಆರ್ ಲುಕಿಂಗ್ ಫಾರ್ ಗ್ರಾಜುಯೇಟ್ಸ್!" "ಯು ಆರ್ ವೆರಿ ಪೂರ್ ಇನ್ ಇಂಗ್ಲಿಷ್" "ಕಂಪ್ಯೂಟರ್ ಲಿಟರಸಿ ಇಸ್ ಮಸ್ಟ್" -ಎಲ್ಲಾ ಮುಗಿದು, ಕೊನೆಗೆ ಯಾವುದೋ ಕಂಪನಿಯಲ್ಲಿ ಸಿಕ್ಕಿದ ಎರಡೂವರೆ ಸಾವಿರ ರೂಪಾಯಿಯ ಕೆಲಸ. ನಾನು ನಿರಾಳ ನಿಟ್ಟುಸಿರು ಬಿಟ್ಟಿದ್ದೆ. ನನಗೆ ಸಹಾಯಕವಾದದ್ದು ಅದೇ ನನ್ನ ಚಿತ್ರ ಬಿಡಿಸುವ ಕಲೆ. ಡಿಸೈನಿಂಗ್ ವಿಭಾಗದಲ್ಲಿ ನನಗೆ ಕೆಲಸ. ಚಂದಿರನಿಗೆ ಥ್ಯಾಂಕ್ಸ್ ಹೇಳಿದ್ದೆ. ಕಲಿತೆ, ನಿಧಾನವಾಗಿ; ಕಲಿಸಿತು ಬೆಂಗಳೂರು, ಬದುಕು, ಛಲ: ಇಂಗ್ಲೀಷು, ಕಂಪ್ಯೂಟರು, ಡಿಸೈನಿಂಗು, ಎಲ್ಲ. ಅದೊಂದು ದಿನ 'ನಮ್ಮ ಕಂಪನಿಯ ಮುಖ್ಯ ಕಚೇರಿಯಿರುವ ಮಥುರೆಗೆ ನೀನು ಹೋಗುತ್ತೀಯಾ?' ಎಂದು ಎಂ.ಡಿ. ಕೇಳಿದಾಗ ಒಂದೇ ಕ್ಷಣದಲ್ಲಿ ಒಪ್ಪಿಕೊಂಡಿದ್ದೆ. ಬದುಕ ಪಯಣಕ್ಕೆ ಸಿದ್ಧಗೊಂಡು, ಮೇಣದಂತೆ ಅಂಟಿಕೊಂಡಿದ್ದ ಊರಿನ ಜಾಡ್ಯವನ್ನೇ ಬಿಡಿಸಿಕೊಂಡು ಹೊರಟಿದ್ದವನಿಗೆ ಬೆಂಗಳೂರಾದರೇನು, ಮಥುರೆಯಾದರೇನು? ಮನೆಗೆ ಫೋನ್ ಮಾಡಿ ಹೇಳಿದೆ. ಅಪ್ಪ ಮನವಿಯೇನೋ ಎಂಬಂತೆ ಹೇಳಿದ: "ಹೋಗ್ಲಕ್ಕಡ... ಒಂದ್ಸಲ ಮನೆಗೆ ಬಂದು ಹೋಗಾ ಅಪ್ಪೀ.. ನೋಡದೇ ಬ್ಯಾಸರ ಆಗಿಹೋಯ್ದು..." ತಿರಸ್ಕರಿಸಲಾಗಲಿಲ್ಲ. ಒಂದು ವಾರ ಸಮಯ ಕೇಳಿಕೊಂಡು ಊರಿಗೆ ಬಂದೆ.

ಊರು ಹಾಗೆಯೇ ಇತ್ತು. ಆದರೆ ಜನ ಬದಲಾಗಿಹೋಗಿದ್ದರು. ಕನಿಷ್ಟ ನನ್ನ ಪಾಲಿಗೆ! "ಅದೆಲ್ಲೋ ಫಾರಿನ್ನಿಗೆ ಹೋಗ್ತಾ ಇದ್ಯಡ?" -ಕೇಳಿಕೊಂಡು ಬಂದ ವಿಶ್ವೇಶ್ವರಣ್ಣ. 'ಫಾರಿನ್ನಿಗಲ್ಲ ಮಾರಾಯಾ.. ಭಾರತಾನೇ! ಮಥುರೆ. ಯು.ಪಿ.' -ನಾನು ಸರಿ ಮಾಡಲು ಹೋಗಲಿಲ್ಲ. ನಕ್ಕೆ ಅಷ್ಟೇ. "ಬೆಂಗ್ಳೂರಗೆ ಸೈಟ್ ತಗಂಡ್ಯಡ, ಹೌದೇ?" -ವಿಚಾರಿಸುವ ಕೋಮಲಕ್ಕ. 'ಇನ್ನೂ ತಗಳಲ್ಲೆ ಮಾರಾಯ್ತಿ... ಹಾಗಂತ ತಗಳದೇನೂ ದೂರ ಇಲ್ಲೆ!' -ನಾನು ಹೇಳಲು ಹೋಗಲಿಲ್ಲ. ನಕ್ಕೆ ಅಷ್ಟೇ. "ಮಾಣಿಗೆ ಮದುವೆ ಮಾಡ್ತ್ರನಾ ಈ ವರ್ಷ? ಅಲ್ಲ, ಎನ್ನ ಭಾವನ ಮಗಳೂ ಓದಿಕೊಂಡಿದ್ದು. ಬೆಂಗ್ಳೂರಗ್ ಇಪ್ಪೋರೇ ಬೇಕು ಹೇಳಿ ಹಟ ಅದ್ರುದ್ದು..." -ನನಗೆ ಕೇಳಿಸುವಂತೆ ಸುಬ್ಬಣ್ಣನ ಮಾತು ಅಪ್ಪನ ಬಳಿ. ಅಪ್ಪ ನನ್ನ ಕಡೆ ನೋಡಿದ್ದು ಗೊತ್ತಾದರೂ ನಾನು ಮಾತಾಡಲಿಲ್ಲ. ನಕ್ಕೆ ಅಷ್ಟೇ.

ಅಪ್ಪ ಈಗ ಗಟ್ಟಿ ಕೂತಿದ್ದ ತನ್ನ ಕುರ್ಚಿಯ ಮೇಲೆ. ಮಗ... ತನ್ನ ಮಗ... ಏನು ಮಾತಾಡುವುದು ಅವನ ಬಳಿ? ಈಗವನು ಪೂರ್ತಿ ಗಂಭೀರನಾಗಿದ್ದಾನೆ. ಅವನಿಗೆ ಬೈಯುವಂತಿಲ್ಲ. ಏನಾದರೂ ಕೆಲಸ ಹೇಳಲಿಕ್ಕೂ ಹಿಂಜರಿಕೆ. ಯಾವುದಾದರೂ ವಿಷಯ ಪ್ರಸ್ತಾಪಿಸಲೂ ಭಯ. ಆದರೆ ಅಪ್ಪನಿಗೂ ಅದೇ ಬೇಕಿತ್ತು ಎನಿಸುತ್ತೆ. ಅವನು ನನ್ನ ಅಭ್ಯುದಯವನ್ನು ಮನಸಾರೆ ಸವಿಯುತ್ತಿದ್ದಂತೆನಿಸಿತು. ಊರಲ್ಲಿ, ನೆಂಟರಲ್ಲಿ ಇದಾಗಲೇ ಮಗನಿಂದ ಮರುಪ್ರಾಪ್ತವಾಗಿದ್ದ ಗೌರವ ಅವನಿಗೆ ಚೂರು ಗರ್ವವನ್ನೂ ತಂದುಕೊಟ್ಟಿತ್ತಿರಬೇಕು. ಅಪ್ಪ ಒಂದು ವಿಚಿತ್ರ ಸಂಭ್ರಮದಲ್ಲಿದ್ದ. ಸಂಭ್ರಾಂತಿಯಲ್ಲಿದ್ದ. ಮಗನೊಂದಿಗೆ ಎಂದೂ ಹೆಚ್ಚು ಮಾತನಾಡದ ಅವನು ಈಗ ಮಗ ಏನು ಹೇಳಿದರೂ 'ಹಾಂ ಸರಿ ಸರಿ' ಅಂತ ಒಪ್ಪಿಕೊಂಡುಬಿಡುತ್ತಾನೇನೋ ಎಂಬಂತೆ ಕಾಣುತ್ತಿದ್ದ. ಮಗ, ಬಹುಶಃ ಈಗ ಅವನಿಗೆ, ದೊಡ್ಡವನಾದಂತೆ ಕಾಣುತ್ತಿದ್ದ. ಅಪ್ಪ ನನ್ನನ್ನು ಅದು ಎಷ್ಟರ ಮಟ್ಟಿಗೆ ಒಪ್ಪಿಕೊಂಡುಬಿಟ್ಟಿದ್ದನೆಂದರೆ, ನಾನು ಹಿತ್ತಿಲಿಗೆ ಹೋಗಿ ಸಿಗರೇಟ್ ಸೇದುತ್ತಿದ್ದಾಗ ಅಲ್ಲಿಗೆ ಬಂದು, "ಅದೆಂತಕೆ ಇಲ್ಲಿಗ್ ಬರ್ತೆ ಸಿಗರೇಟ್ ಸೇದಕ್ಕೆ? ಮನೇಲೇ ಸೇದು" ಎಂದಿದ್ದ. ಇಷ್ಟು ದೊಡ್ಡವನಾಗಿರುವ ಮಗನಿಗೆ ಬೈಯಬಾರದು ಎಂದುಕೊಂಡನೇ? ಅಥವಾ ತಾನೂ ಸಿಗರೇಟು ಸೇದುವವನಾಗಿ ಮಗನಿಗೆ ಬೈದರೆ ಅವನು ತಿರುಗಿ ಹೇಳಿಯಾನು ಎಂದು ಹಿಂಜರಿದನೇ? ಗೊತ್ತಿಲ್ಲ.

ಚಂದಿರ ಕೈಬಿಡಲಿಲ್ಲ. ನನ್ನ ಜೊತೆ ಮಥುರೆಗೂ ಬಂದ: ರೈಲಿನ ಕಿಟಕಿಯಲ್ಲಿ. ಕೃಷ್ಣ ಹುಟ್ಟಿದ ಭೂಮಿ ಮಥುರೆ. ಕೃಷ್ಣ ಆಡಿ ನಲಿದ ಧರೆ ಮಥುರೆ. ಕೃಷ್ಣ ಈಜಾಡಿದ ಯಮುನೆಯ ತಟದಲ್ಲಿನ ಊರು ಮಥುರೆ. ಕೃಷ್ಣ ಬೆಣ್ಣೆ ಕದ್ದು ಜಾರಿ ಬಿದ್ದು ಮೊಣಕಾಲೂದಿಸಿಕೊಂಡಾಗಿನ ಸ್ಪರ್ಶದ ನೆನಪಿರುವ ನೆಲ ಮಥುರೆ. ಕೃಷ್ಣನ ಕೊಳಲ ದನಿಯನ್ನು ಇನ್ನೂ ಪ್ರತಿಧ್ವನಿಸುವ ಬೃಂದಾವನೀ ಮಥುರೆ. ಮಥುರೆ ನನ್ನನ್ನು ಮೊದಲ ನೋಟದಲ್ಲೇ ಸೆಳೆದುಬಿಟ್ಟಿತು. ಕೆಲಸ, ಹವೆ ಒಗ್ಗಿಕೊಂಡಿತು.

ಒಂದು ರವಿವಾರದ ಶ್ಯಾಮಲ ಸಂಜೆ. ಯಮುನೆಯ ತಟದಲ್ಲಿ, ಬೆಂಚೊಂದರಲ್ಲಿ ಕೂತು, ನನ್ನಿಷ್ಟದ ಹವ್ಯಾಸವಾದ ಚಿತ್ರ ಬಿಡಿಸುತ್ತಿದ್ದೆ. ಕಿಲ್ಲ ನಗುವಿನೊಂದಿಗೆ ಹುಡುಗಿಯರ ಗುಂಪೊಂದು ಬಂತು. ತಲೆಯೆತ್ತಿ ನೋಡಿದೆ. ಮಧ್ಯದಲ್ಲೊಂದು ಮಿನುಗುತಾರೆ. ತಟ್ಟನೆ ನನ್ನತ್ತ ನೋಡಿದ ತಾರೆಯ ಕಣ್ಣುಗಳು. ಮಥುರೆಯಂತೆಯೇ ಸೆಳೆವ ನೋಟ. ಬಾಯ್ಕಳೆದು ನೋಡುತ್ತಿದ್ದ ನನ್ನನ್ನು ದಾಟುವಾಗ ತೊಡೆಯ ಮೇಲಿದ್ದ ಅರ್ಧ ಬಿಡಿಸಿದ್ದ ಚಿತ್ರದೆಡೆಗೆ ಬಿದ್ದ ದೃಷ್ಟಿ. ಸೂರೆ ಹೋದ ಮನಸು. ಪೂರ್ತಿಯಾಗದ ಆ ಚಿತ್ರ; ನಿದ್ರೆಯಿಲ್ಲದ ಆ ರಾತ್ರಿ ಕ್ಯಾನ್ವಾಸಿನಲ್ಲಿ ಮೂಡಿ ನಿಂತ ಅದೇ ಹುಡುಗಿಯ ಚಿತ್ರ. ಚಿತ್ರದ ಕೆಳಗೆ 'ಮಿನುಗುತಾರೆ' ಅಂತ ಬರೆದು, ದಿನಾಂಕ, ಸಹಿ ಹಾಕಿ ಎದುರಿಗಿಟ್ಟುಕೊಂಡು ಅದನ್ನೇ ನೋಡುತ್ತಾ ಮಲಗಿದೆ.

ಮರುವಾರ ಸಂಜೆ ಆ ಚಿತ್ರ ಹಿಡಿದು ಯಮುನೆಯ ತಟದ ಅದೇ ಬೆಂಚಿನಲ್ಲಿ ಕೂತಿದ್ದೆ. ನನ್ನ ಎಣಿಕೆ ಸುಳ್ಳಾಗಲಿಲ್ಲ: ಮಿನುಗು ಬಂದಳು. ತನ್ನೊಬ್ಬಳೇ ಗೆಳತಿಯೊಂದಿಗೆ, ನನ್ನೆಡೆಗೆ ಕಳ್ಳನೋಟ ಬೀರುತ್ತಾ. ಆಕೆ ಹಾಗೆ ನಡೆದು ಬರುತ್ತಿದ್ದರೆ, ಸಖಿಯೊಂದಿಗೆ ಕೃಷ್ಣನೆಡೆಗೆ ನಡೆದು ಬರುತ್ತಿರುವ ರಾಧೆಯಂತೆ ಕಾಣುತ್ತಿದ್ದಳು.

ಮಿನುಗು ನನಗಾಗಿಯೇ ಬಂದಿದ್ದಳು. ನನ್ನ ತೊಡೆಯ ಮೇಲಿದ್ದ ತನ್ನದೇ ಚಿತ್ರ ನೋಡಿದಳು. ತಡೆದು ನಿಂತಳು. ನಾನೂ ಎದ್ದು ನಿಂತೆ. "ದಿಸಿಸ್ ಫಾರ್ ಯೂ, ಇಫ್ ಯು ಡೋಂಟ್ ಮೈಂಡ್..." ಚಿತ್ರವನ್ನು ಆಕೆಯತ್ತ ಚಾಚಿದೆ, ನಡುಗುವ ಕೈಯಿಂದ. ಮಿನುಗು ಅದನ್ನು ತೆಗೆದುಕೊಂಡಳು. "ಏನಿದು ಕೆಳಗಡೆ ಬರೆದಿರುವುದು?" ಓದಲು ಬಾರದ ಕನ್ನಡ ಅಕ್ಷರಗಳನ್ನು ಬೆರಳಲ್ಲಿ ಸವರುತ್ತಾ ಕೇಳಿದಳು, ಇಂಗ್ಲೀಷಿನಲ್ಲಿ. "ಮಿನುಗುತಾರೆ ಅಂತ ಬರೆದಿದ್ದೇನೆ. ಅಂದ್ರೆ ಬ್ಲಿಂಕಿಂಗ್ ಸ್ಟಾರ್. ನಿಮ್ಮನ್ನು ನಾನು ಮೊದಲ ಬಾರಿ ನೋಡಿದಾಗ ನೀವು ನಂಗೆ ಗೋಚರಿಸಿದ್ದೇ ಹಾಗೆ. ನಿಮ್ಮನ್ನ ಮಿನುಗು ಅಂತ ಕರೆದರೆ ಬೇಜಾರಿಲ್ವಲ್ಲ?" ಕಣ್ಣನ್ನೇ ನೋಡುತ್ತಾ ಕೇಳಿದೆ. "ಹಹ್ಹ..! ಚೆನ್ನಾಗಿದೆ. ಇಷ್ಟವಾಯ್ತು. ನನಗೆ ಚಿತ್ರಕಲೆ ಅಂದ್ರೆ ತುಂಬಾ ಇಷ್ಟ. ನೀವೊಬ್ಬ ಒಳ್ಳೆಯ ಆರ್ಟಿಸ್ಟ್" -ಹೊಳೆಯುವ ಕಂಗಳಲ್ಲಿ ತುಂಬಿದ್ದ ಹೊಗಳಿಕೆ. "ಥ್ಯಾಂಕ್ಸ್" -ಕಾರ್ಡ್ ಕೊಟ್ಟೆ.

ನಂತರದ ರವಿವಾರದ ಸಂಜೆ ಆ ಬೆಂಚು ನಮ್ಮಿಬ್ಬರನ್ನೂ ಅಕ್ಕಪಕ್ಕದಲ್ಲಿ ಕೂರಿಸಿಕೊಂಡಿತ್ತು. ಮಿನುಗು ನನ್ನನ್ನು ತಮ್ಮ ಮನೆಗೆ ಕರೆದೊಯ್ದಳು. ತಂದೆ- ತಾಯಿಯರಿಗೆ ಪರಿಚಯಿಸಿದಳು. ತನ್ನ ಕೋಣೆಗೆ ಕರೆದೊಯ್ದು ತಾನು ಮಾಡಿದ್ದ ಪೇಂಟಿಂಗ್‌ಗಳನ್ನು ತೋರಿಸಿದಳು. ಅವಳ ತಂದೆ ಕಾನ್ಪುರದ ದೊಡ್ಡ ಚಪ್ಪಲಿ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿದ್ದರು. ಅಮ್ಮ ಮನೆಯಲ್ಲಿ. ಮಿನುಗು ಹುಟ್ಟಿ ಬೆಳೆದದ್ದೆಲ್ಲಾ ಮಥುರೆಯಲ್ಲಿ. ಆರ್ಟ್ ಸ್ಕೂಲ್ ಒಂದರಲ್ಲಿ ಕಲಿಯುತ್ತಿದ್ದಳು. ನಮ್ಮ ಸ್ನೇಹಕ್ಕೆ ಅವಳ ಮನೆಯಲಿ ಯಾವ ಅಡ್ಡಿಯೂ ಬರಲಿಲ್ಲ. ಅದು ಸ್ನೇಹವಷ್ಟೇ ಅಲ್ಲ ಎಂಬುದು ತಿಳಿದೂ, ಮಿನುಗುವಿನ ಅಮ್ಮ ನಾನು ಹೋದಾಗಲೆಲ್ಲ ಚೆನ್ನಾಗಿ ಉಪಚರಿಸುತ್ತಿದ್ದರು.

ನನ್ನ ಕಂಪನಿಯ ವತಿಯಿಂದ ಒಮ್ಮೆ ಬ್ಯಾಂಕಾಕಿಗೆ ಹೋಗಬೇಕಾಗಿ ಬಂತು. ಒಂದು ವಾರದ ಟ್ರಿಪ್. ವಾಪಸು ಬಂದವನೇ ಊರಿಗೆ ಹೋದೆ. ಅಪ್ಪನಿಗೆಂದು ತಂದಿದ್ದ ಕ್ವಾರ್ಟ್ಸ್ ವಾಚು ಕೊಟ್ಟೆ. ಜತೆಗೇ, ಹಿಂಜರಿಯುತ್ತಲೇ, ಎರಡು ವಿದೇಶಿ ಸಿಗರೇಟ್ ಪ್ಯಾಕು, ಒಂದು 'ಥಾಯಿ ವೈನ್' ಬಾಟಲು ಕೊಟ್ಟೆ. ಅಪ್ಪ ಏನೆಂದರೆ ಏನೂ ಹೇಳಲಿಲ್ಲ. ಅರೆಕ್ಷಣ ನನ್ನನ್ನೇ ನೋಡಿ, ಆ ಬಾಟಲು, ಪ್ಯಾಕುಗಳನ್ನು ಒಳಗೆ ತೆಗೆದುಕೊಂಡು ಹೋದ. ನನಗೆ ಆ ನೋಟದಲ್ಲಿದ್ದ ಭಾವವನ್ನು ಗ್ರಹಿಸಲಾಗಲಿಲ್ಲ. ಮರುದಿನ ಅಟ್ಟದ ಮೆಟ್ಟಿಲ ಬಳಿ ಖಾಲಿ ಬಾಟಲಿ ಇದ್ದುದು ನೋಡಿ ರಾತ್ರಿ ತನ್ನ ಕೋಣೆಯಲ್ಲಿ ಕೂತು ಕುಡಿದಿರಬಹುದು ಎಂದುಕೊಂಡೆ. ಆಮೇಲೂ ಅಪ್ಪ ಆ ವಿಷಯವಾಗಿ ಒಂದೇ ಒಂದು ಮಾತು ಸಹ ಎತ್ತಲಿಲ್ಲ, ಬೇರೆ ಏನೇನೋ ಮಾತಾಡಿದ: ನನ್ನ ದುಗುಡವನ್ನು ಕಮ್ಮಿ ಮಾಡುವಂತೆ.

ಮೊದಲೆಲ್ಲಾ ನಾನು-ಅಪ್ಪ ಅಷ್ಟೆಲ್ಲಾ ಮಾತೇ ಆಡಿಕೊಳ್ಳುತ್ತಿರಲಿಲ್ಲ. ಆದರೆ ನಾನು ಹೊರ ಹೊರಟಮೇಲೆ, ನನ್ನ ಕಾಲ ಮೇಲೆ ನಿಂತಮೇಲೆ, ನನಗೂ ನನ್ನದೇ ಆದ 'ಐಡೆಂಟಿಟಿ'ಯೊಂದು ಸಿಕ್ಕಮೇಲೆ, ಅಪ್ಪನಿಗೆ ಆಗಾಗ ಫೋನ್ ಮಾಡುವುದು, ಅವನ ಹುಟ್ಟಿದ ದಿನ, ಫಾದರ್ಸ್ ಡೇ, ಇತ್ಯಾದಿ ದಿನಗಳಂದು ಶುಭಾಶಯ ಹೇಳುವುದು -ಹೀಗೆ ನನಗೂ ಅಪ್ಪನಿಗೂ ನಡುವೆ ಈಗ ಒಂದು ಬೇರೆಯದೇ ತೆರನಾದ ಸಂಬಂಧ ಸೃಷ್ಟಿಯಾಗಿಬಿಟ್ಟಿತ್ತು.

ಬದುಕು ನನ್ನನ್ನು ಎಲ್ಲೆಲ್ಲಿಗೋ ಕಳುಹಿಸಿತು, ಏನೇನನ್ನೋ ಕಲಿಸಿತು. ನನ್ನನ್ನು ಬದಲಿಸಿತು. ಆದರೆ ಅಪ್ಪ ಹೇಗೆ ಬದಲಾದ? ಈ ಕಾಲಕ್ಕೆ ಹೊಂದಿಕೊಂಡ? ಅವನನ್ನು ನಾನು ಬದಲಾಯಿಸಿದೆನೇ? ಎಷ್ಟೆಲ್ಲ ಪಯಣ ಮಾಡಿದೆ ನಾನು... ಆದರೆ ಅಪ್ಪ ಅಲ್ಲೇ ಇದ್ದುಕೊಂಡು ಎಲ್ಲೆಲ್ಲಿಗೋ ಹೋದ: ಚಂದಿರನಂತೆ. ನನ್ನೊಂದಿಗೇ ಬಂದ. ಹಿಂದುಳಿಯಲಿಲ್ಲ. ಕಾಲ-ದೇಶಗಳ ಬಗ್ಗೆ ಚಕಾರವೆತ್ತಲಿಲ್ಲ. ಇದು ಅಪ್ಪನ ಮೇಲಿನ ನನ್ನ ಪ್ರಭಾವವಾ? ಅಥವಾ ಅಪ್ಪನ ಬಯಕೆಯೇ ನಾನು ಹೀಗಾಗಬೇಕು ಎಂಬುದಾಗಿತ್ತಾ?

ಬಸ್ಸು ಡಾಬಾವೊಂದರ ಬಳಿ ನಿಂತಿತು. ಮಿನುಗುವಿಗೂ ಎಚ್ಚರವಾಯಿತು. "ಕೆಳಗೆ ಹೋಗಬೇಕಾ?" -ಕೇಳಿದೆ. ಇಲ್ಲವೆಂದಳು. "ಏನಾದ್ರೂ ತರಬೇಕಾ?" -ಕೇಳಿದೆ. ಬೇಡವೆಂದಳು. ನಾನೊಬ್ಬನೇ ಕೆಳಗಿಳಿದು ಹೋದೆ.

ರಸ್ತೆ ದಾಟಿ ಹೋಗಿ ನಿಂತು, ದಿಗಂತದ ಕತ್ತಲೆಯಲ್ಲಿ ತೂಕಡಿಸುತ್ತಿದ್ದ ಬಿಳಿ ಬಿಳೀ ನಕ್ಷತ್ರಗಳನ್ನು ನೋಡುತ್ತಾ, ಉಚ್ಚೆ ಹೊಯ್ದೆ. ನಿರಾಳವಾದಂತೆನಿಸಿತು. ಪ್ಯಾಂಟಿನ ಜಿಪ್ಪೆಳೆದು ಇತ್ತ ತಿರುಗಿದೆ. ಅನತಿ ದೂರದಲ್ಲಿ ಕಿಟಕಿ ಕಿಟಕಿ ಕಿಟಕಿಗಳಲ್ಲಿ ಒಳಗಿನ ಬೆಳಕನ್ನು ತೋರುತ್ತಾ ನಿಂತಿದ್ದ ನಮ್ಮ ಬಸ್ಸು ಒಂದು ದೊಡ್ಡ ರೇಡಿಯೋ ಪೆಟ್ಟಿಗೆಯಂತೆ ಕಂಡಿತು. ಹೌದು, ಅಲ್ಲಿ ಕೂತಿರುವ ಒಂದೊಂದು ಜೀವವೂ ಒಂದೊಂದು ಛಾನೆಲ್ಲಿನಂತೆ. ಸ್ವಲ್ಪ ಟ್ಯೂನ್ ಮಾಡಿದರೆ ಸಾಕು, ಶುರು ಹಚ್ಚಿಕೊಳ್ಳುತ್ತವೆ ಅವು ತಮ್ಮ ತಮ್ಮದೆ ಹಾಡು, ವಾರ್ತೆ, ವರದಿ, ಸುದ್ದಿ, ಪ್ರವಾಸ ಕಥನ. ಪ್ರತಿ ಜೀವಕ್ಕೂ ತನ್ನದೇ ಅನುಭವಗಳು, ಅಭಿಪ್ರಾಯಗಳು, ತುಮುಲಗಳು, ಪ್ರಶ್ನೆಗಳು, ನೀತಿ ಸಂಹಿತೆಗಳು, ಪಯಣದ ಸುಸ್ತು. ಇವರೆಲ್ಲರ ಜೊತೆ ಮಿನುಗು, ನಾನು. ದೂರದಲ್ಲಿ ಅಪ್ಪ. ಮೇಲೆ ಚಂದ್ರ.

ವಾಪಸು ಬಸ್ಸು ಹತ್ತಿ ಸೀಟಿನಲ್ಲಿ ಕೂತೆ. ಪಕ್ಕದ ಸೀಟಿನವರು ಬಿಡಿಸುತ್ತಿದ್ದ ಕಿತ್ತಳೆ ಹಣ್ಣಿನ ಪರಿಮಳ ಅಲ್ಲೆಲ್ಲ ಇತ್ತು. ಪೂರ್ತಿ ಎಚ್ಚರಾಗಿದ್ದ ಮಿನುಗು ಈಗ ಕಿಟಕಿಯಾಚೆ ನೋಡುತ್ತಿದ್ದಳು.

"ಮಿನೂ, ನಾನು ಮೊದಲಿಂದಲೂ ಇಂಟಲಿಜೆಂಟ್ ಇದ್ದೆ. ಅಪ್ಪ ಅದನ್ನು ಗಮನಿಸಿಯೇ ನನ್ನ ಬಗ್ಗೆ ಕನಸು ಕಟ್ಟಿದ್ದ ಅನ್ನಿಸುತ್ತೆ. ಅವನಿಗೂ ಆ ಊರು, ಆ ಏಕತಾನತೆ, ಜನಗಳ ಸಂಕುಚಿತ ಮನೋಭಾವ, ಸಣ್ಣದನ್ನೂ ಆಡಿಕೊಂಡು ಒಳಗೊಳಗೇ ನಗಾಡುವ ರೀತಿ, ಎಲ್ಲಾ ಬೇಸರ ತಂದಿರಬೇಕು. ಎಲ್ಲರ ಮಕ್ಕಳೂ 'ಏನೇನೋ' ಆಗುವುದನ್ನು, ಹೆಸರು ಮಾಡುತ್ತಿರುವುದನ್ನು ನೋಡುತ್ತಾ ಅವನಿಗೆ ಸುಮ್ಮನಿರಲಿಕ್ಕಾಗುತ್ತಿರಲಿಲ್ಲ. ಅವನಿಗೆ ತನ್ನ ಮಗ 'ಏನೋ' ಆಗಬೇಕಿತ್ತು. ತನಗೆ ಸ್ವತಃ ಗಳಿಸಲಾಗದ 'ಐಡೆಂಟಿಟಿ'ಯೊಂದನ್ನು ಪಡೆಯಲಿಕ್ಕೆ ಅವನು ಮಗನನ್ನು ಆಶ್ರಯಿಸಿದ ಅನ್ನಿಸುತ್ತೆ. ಅಪ್ಪ ಆ ವಿಷಯದಲ್ಲಿ ತುಂಬಾ ಪ್ಯಾಶನೇಟ್!" ಹೇಳಿದೆ.

"ಹೀಗೇ ಅಂತ ಹೇಗೆ ಹೇಳ್ತೀಯಾ ಶಶೂ...? ನಿನ್ನ ಅಪ್ಪನ ಮನಸು ಓದೋದಕ್ಕೆ ಸಾಧ್ಯವಾ ನಿಂಗೆ? ಅದು ಚಂದ್ರನನ್ನು ನೋಡಿ ಏನೇನೋ ಅಂದಂತೆ. ಅವನೊಡಲೊಳಗಾಗುವ ತಳಮಳಗಳೇನೋ, ಭೂಕಂಪಗಳೇನೋ? ನಮಗೇನು ಕಾಣುತ್ತೆ? ನಮಗೆ ಕಾಣುವುದು ಚಂದ ಮೇಲ್ಮೈ ಅಷ್ಟೇ. ಅದನ್ನೇ ನೋಡಿ ಏನೇನೋ ಕಲ್ಪಿಸಿಕೊಂಡು ಆಡುತ್ತೇವೆ..."

ಮಿನುಗು ಕವಿಯಂತೆ, ದಾರ್ಶನಿಕಳಂತೆ ಮಾತಾಡುತ್ತಿದ್ದಳು. ನಾನು ನಿರ್ಧರಿಸಿದೆ: ವಾಪಸು ಹೋಗುವಾಗ ಅಪ್ಪನನ್ನೂ ಕರೆದುಕೊಂಡು ಹೊರಡಬೇಕು. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಆಯೋಜಿಸಿರುವ ನನ್ನ ಚಿತ್ರಗಳ ಪ್ರದರ್ಶನದಲ್ಲಿ ಅಪ್ಪ ಇರಬೇಕು. ಹೊಸ ಪಂಚೆ, ಗರಿ ಗರಿ ಜುಬ್ಬಾ ಧರಿಸಿದ ಅಪ್ಪ ಒಂದು ಶಲ್ಯ ಹೊದ್ದು ಹಾಲಿನಲ್ಲಿ ಓಡಾಡುತ್ತಾ ನನ್ನ ಚಿತ್ರಗಳನ್ನೆಲ್ಲಾ ಮೆಚ್ಚುಗೆಯ ಕಣ್ಣಲ್ಲಿ ನೋಡಬೇಕು. ಪ್ರದರ್ಶನ ಉದ್ಘಾಟಿಸಲು, ವೀಕ್ಷಿಸಲು ಬರುವ ಗಣ್ಯರಿಗೆ ಅಪ್ಪನನ್ನು ಪರಿಚಯಿಸಿಕೊಡಬೇಕು. ಅವರು ಚಿತ್ರ ನೋಡಿ ನನ್ನ ಹೆಗಲು ತಟ್ಟುವಾಗ ಅಪ್ಪ ಸೆರೆಯುಬ್ಬಿ ಬಂದ ಕೊರಳಲ್ಲಿ ಬೀಗಬೇಕು. ಹೌದು, ಅಪ್ಪನಿಗೆ ಅವೆಲ್ಲ ಇಷ್ಟ. ಮತ್ತು ಅಪ್ಪ ಅವಕ್ಕೆಲ್ಲ ಅರ್ಹ.

ಡ್ರೈವರ್ ಹತ್ತಿ ಹಾರ್ನ್ ಮಾಡಿದ. ಕಂಡಕ್ಟರ್ ಒಮ್ಮೆ ಕೊನೆಯ ಸೀಟಿನವರೆಗೂ ಹೋಗಿ ಎಲ್ಲರೂ ಬಂದಿದ್ದಾರಾ ನೋಡಿಕೊಂಡು ಬಂದ. ಬಸ್ ಸ್ಟಾರ್ಟ್ ಆಯಿತು. ಹೆಡ್‌ಲೈಟ್ ಬೆಳಕಿನಲ್ಲಿ ಎದುರಿನ ದಾರಿ ಕೋರೈಸತೊಡಗಿತು. ಹೊಸ ಹುರುಪಿನೊಂದಿಗೆ ಓಡತೊಡಗಿತು ಬಸ್ಸು.


['ದ ಸಂಡೇ ಇಂಡಿಯನ್' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ.]

Monday, July 21, 2008

ಚರಣಗಳ ಮಧ್ಯದ ಮೌನಚಣ..

ಗಿಜಿಗುಡುವ ದಿನಗಳು. ಮಳೆಗಾಲವಾದರೂ ಬಾರದ ಮಳೆ - ಧಗೆಯ ದಿನಗಳು. ದಿನಬೆಳಗಾದರೆ ಆಫೀಸು, ಶೆಡ್ಯೂಲು, ಟೆನ್ಷನ್ನು, ಟ್ರಾಫಿಕ್ಕು, ಒಂದಲ್ಲಾ ಒಂದು ಕಿರಿಕ್ಕು. ಕೋರಮಂಗಲದಲ್ಲೆಲ್ಲೋ ಹುಡುಗ, ರಾಜಾಜಿನಗರದಲ್ಲೆಲ್ಲೋ ಹುಡುಗಿ; ಎಸ್ಸೆಮ್ಮೆಸ್ಸಿನ ತುಂಬ ಬರೀ ಮಿಸ್ಯೂ; ಅದೂ ಬಾರದ ದಿನ ಬದುಕೆಂಬುದು ಕರೆಂಟಿಲ್ಲದ ಬೆಂಗಳೂರು. ಸಾಯಿಬಾಬಾ ಕಣ್ಣು ಬಿಟ್ಟರೂ ಮುಗಿಯದ ಹಣದುಬ್ಬರ; ಬಿಜೆಪಿ ಬಂದರೂ ಅಷ್ಟೇ, ಯಡಿಯೂರಪ್ಪ ಗೆದ್ದರೂ ಅಷ್ಟೇ, ಅದೇ ಹೊಲಸು ರಾಜಕೀಯ; ಬದಲಾಗದ ಜೀವನ ಕ್ರಮ; ದಿನವೂ ಕರ್ಮಕಾಂಡ. ಇದನ್ನೆಲ್ಲಾ ಬಿಟ್ಟು ಎಲ್ಲಿಗಾದರೂ ಓಡಿ ಹೋಗಿಬಿಡಬೇಕೆಂಬ ತಪನೆ; ಸಾಧ್ಯವಾಗದ ಅಸಹಾಯಕತೆ; ಬದುಕು ಮಾಯೆಯ ಆಟ.

ಸರಿ. ಹಾಗಾದರೆ ಏನು ಮಾಡಬೇಕು? ಈ ಏಕತಾನತೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಬದುಕಿಗೂ ಬೆಂಗಳೂರಿಗೂ ನಡುವೆ ಫರಕು ಕಲ್ಪಿಸುವ ಬಗೆಯೆಂತು?

ಊರಲ್ಲಾದರೂ ಮಳೆ ಬರುತ್ತಿದ್ದಿದ್ದರೆ ಗಂಟು ಮೂಟೆ ಕಟ್ಟಿಕೊಂಡು, ಕನಿಷ್ಟ ಒಂದು ವಾರ ರಜ ಹಾಕಿ ಹೋಗಿಬಿಡಬಹುದಿತ್ತು. ದಟ್ಟ ಮೋಡಕಟ್ಟಿದ ಮುಗಿಲು ನೋಡುತ್ತ ಬೆಳಗಾ ಮುಂಚೆ ಬಸ್‍ಸ್ಟಾಂಡಿನಲ್ಲಿ ಇಳಿಯಬಹುದಿತ್ತು. ಕಂಬಳಿ ಕೊಪ್ಪೆ ಹೊದ್ದು - ಉಗ್ಗ ಹಿಡಿದು ಗದ್ದೆಗೆ ಹೊರಟ ಆಳುಗಳು 'ಓಹ್ ಹೆಗ್ಡೇರು ಬೆಂಗ್ಳೂರಿಂದ ಬಂದ್ರಾ?' ಎಂದು ಕೇಳುವಾಗ 'ಹೌದು, ನೀ ಅರಾಮಿದೀಯಾ?' ಎನ್ನುತ್ತಾ ಮಣ್ಣು ರಸ್ತೆಯಲ್ಲಿ ಜಾರುತ್ತಾ ಮನೆ ಕಡೆ ಹೆಜ್ಜೆ ಹಾಕಬಹುದಿತ್ತು. ಕಟ್ಟೆ ಮೇಲೆ ತನ್ನ ದಿನದ ಮೊದಲ ಕವಳದ ತಯಾರಿಕೆಯಲ್ಲಿ ತೊಡಗಿದ್ದ ಕನ್ನಡಕ ಹಾಕಿಕೊಳ್ಳದ ಮಂಜುಗಣ್ಣಿನ ಅಜ್ಜನ ಎದುರು ನಿಂತು 'ಯಾರು ಬಂದಿದ್ದು ಹೇಳು ನೋಡನ?' ಎಂದು ಕೇಳಬಹುದಿತ್ತು. ದನಿಯಿಂದಲೇ ಮೊಮ್ಮಗನನ್ನು ಗುರುತಿಸಿದ ಅವನು 'ಓಹೊಹೋ, ಮಾಣಿ! ಇದೇನೋ ಇದ್ದಕ್ಕಿದ್ದಂಗೆ?' ಎಂದು ಆನಂದಾಶ್ಚರ್ಯದಿಂದ ಕೇಳುವಾಗ 'ನಿನ್ನ ನೋಡವು ಅನ್‍ಸ್ಚು; ಹಂಗೇ ಬಂದಿ' ಎಂದು ಅವನ ಖುಷಿಯನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು. ಅಮ್ಮ ದೋಸೆಯನ್ನು ಎರೆದೆರೆದು ಹಾಕುವಾಗ ಬಾಳೆಲೆಯಲ್ಲಿ ಜೋನಿ ಬೆಲ್ಲ, ಹೆರೆಗಟ್ಟಿದ ತುಪ್ಪ, ಚೂರೇ ಉಪ್ಪಿನಕಾಯಿ, ಗಟ್ಟಿ ಮೊಸರು ಹಾಕಿಕೊಂಡು ಹೊಟ್ಟೆ ತುಂಬ ತಿನ್ನಬಹುದಿತ್ತು; ಕುಕ್ಕರಗಾಲಲ್ಲಿ ಕೂತ ಅಪ್ಪನಿಗೆ ಬೆಂಗಳೂರಿನ ಕತೆ ಹೇಳಬಹುದಿತ್ತು. ಕೊಟ್ಟಿಗೆಗೆ ಹೋಗಿ ಶಂಕ್ರಿ ಹಾಕಿದ ಹೊಸ ಕರುವಿಗೆ ಹಿಂಡಿಯ ಚೂರು ಕೊಟ್ಟು 'ಫ್ರೆಂಡ್' ಮಾಡಿಕೊಳ್ಳಬಹುದಿತ್ತು; ಬೆದರಿದಂತಾಡುವ ಅದರ ಕಣ್ಣು ನೋಡುತ್ತಾ ಯಾರನ್ನೋ ನೆನಪು ಮಾಡಿಕೊಳ್ಳಬಹುದಿತ್ತು.

ಅಮ್ಮ ಅಂಗಳದಲ್ಲಿ ಹಾಕಿದ ಸೌತೆಬೀಜ ಮಳೆನೀರು ಕುಡಿದು ದಪ್ಪಗಾಗಿ, ಮೊಳಕೆಯೊಡೆದು, ತಾನು ಹುದುಗಿದ್ದ ನೆಲವನ್ನು ತಳ್ಳಿಕೊಂಡು ಹೊರಬಂದು, ರವಿಕಿರಣ ಉಂಡು ಮೊಳಕೆ ಬಲಿತು ಸಣ್ಣ ಎಲೆಗಳು ಮೂಡಿ, ಹರಿತ್ತು ಹರಿದು ಬಳ್ಳಿ ಬೆಳೆದು ಇಡೀ ಅಂಗಳವನ್ನಾವರಿಸಿ... ದೊಡ್ಡ ದೊಡ್ಡ ಎಲೆಗಳ ಬಳ್ಳಿಯಲ್ಲಿ ಪುಟ್ಟ ಪುಟ್ಟ ಬಿಳಿ ಹೂಗಳು ಅರಳಿ, ಬಣ್ಣ ಬಣ್ಣದ ಚಿಟ್ಟೆಗಳು ಆ ಹೂವನರಸಿ ಬಂದು, ಮಕರಂದ ಹೀರಿ, ಊಹೂಂ ದಾಹ ತೀರದೇ ಮತ್ತೊಂದು ಹೂವಿಗೆ ಹೋಗಿ ಕುಳಿತದ್ದೇ ಪರಾಗಸ್ಪರ್ಶವೇರ್ಪಟ್ಟು, ಹೂವ ತಾಯಿಯಾಗುವ-ಕಾಯಿಯಾಗುವ ಕನಸು ನನಸಾಗಿ... ಹೂವ ಅಂಡಿನಲ್ಲೇ ಕಿರಿದಾದೊಂದು ಮಿಡಿ ಮೂಡಿ, ಆ ಮಿಡಿಯೇ ದೊಡ್ಡ ಸೌತೆಕಾಯಿಯಾಗಿ, ತಿಂಗಳೊಳಗೆ ಅದು ಹಣ್ಣಾಗಿ, ಆ ಹಣ್ಣೊಡಲ ತುಂಬ ನೂರಾರು ಬೀಜಗಳು; ಆ ಬೀಜಗಳ ತುಂಬ ಮತ್ತೆ ಧರೆಯೊಡಲು ಸೇರಿ ಮೊಳಕೆಯಾಗಿ ಬಳ್ಳಿಯಾಗಿ ಹೂವಾಗಿ ಕಾಯಾಗುವ ಕನಸುಗಳು... ಈ ಪ್ರಕೃತಿ ಎಷ್ಟೊಂದು ಸುಂದರ ಮತ್ತು ಸಹಜ..! ಅದರಲ್ಲೇ ಮುಳುಗಿಹೋಗುವ ಆನಂದಕಿಂತ ಮಿಗಿಲು ಮತ್ತೇನಿದೆ? -ಎಂದುಕೊಳ್ಳುತ್ತ ನಾನು ಅಂಗಳ - ಹಿತ್ತಿಲು - ತೋಟ ಎಂದೆಲ್ಲ ಓಡಾಡುತ್ತಾ...

ಆದರೆ ಈ ಬಾರಿ ಮಳೆಯೇ ಇಲ್ಲ. ಬರೀ ಅಪ್ಪನ ನಿಟ್ಟುಸಿರನ್ನೇ ಕೇಳಿಸುವ ಮೊಬೈಲಿನ ಸ್ಪೀಕರು. ಮೋಡಗಳ ಸುಳಿವೇ ಇಲ್ಲವಂತೆ. ಹೋರಾಡಿ ಪಡೆದ ಗೊಬ್ಬರ ಚೀಲದಲ್ಲೇ ಉಳಿದಿದೆಯಂತೆ. ಊರಲ್ಲೂ ಬವಣೆ, ದಾಹ, ನೀರು ತಳಕಂಡಿರುವ ಬಾವಿ, ಬರದ ಭಯ. ಅಂದರೆ, ಈಗ ಅಲ್ಲಿಗೆ ಹೋದರೆ ಪ್ರಯೋಜನವಿಲ್ಲ. ಹಾಗಾದರೆ ಏನು ಮಾಡಬೇಕು?

ಏನಿಲ್ಲ, ಒಂದಷ್ಟು ಗೆಳೆಯರನ್ನು ಕರೆದುಕೊಂಡು, ಬುತ್ತಿ ಕಟ್ಟಿಕೊಂಡು, ಚಾರಣ ಹೊರಟುಬಿಡಬೇಕು. ಮಡಿಕೇರಿಯ ಬಸ್‍ಸ್ಟಾಂಡ್ ಹೋಟೆಲು ತೆರೆಯುವುದನ್ನೇ ಕಾದು ಬಿಸಿಬಿಸಿ ಕಾಫಿ ಕುಡಿಯಬೇಕು. ಒತ್ತುಶಾವಿಗೆಗೆ ಸಿಹಿಹಾಲು ಹಾಕಿಕೊಂಡು ತಿನ್ನಬೇಕು. ಅಲ್ಲಿಂದ ಒಂದು ಜೀಪು ಮಾಡಿಸಿಕೊಂಡು 'ಕೋಟೆ ಬೆಟ್ಟ'ದ ಬುಡದವರೆಗೆ ಹೋಗಬೇಕು. ಅಲ್ಲಿಂದ ಆರೋಹಣ.

ಮೊದಲರ್ಧ ತಂಪು ಬಂಡಿಹಾದಿ; ಇಕ್ಕೆಲಗಳಲ್ಲಿ ಎಸ್ಟೇಟು. ದಾರಿಯುದ್ದಕ್ಕೂ ಅಲ್ಲಲ್ಲಿ ಅಡ್ಡ ಸಿಗುವ ಹರಿವ ತೊರೆಗಳು. ತಣ್ಣಗೆ ಕೊರೆವ ಶುದ್ಧಜಲ. ಬಾಟಲಿಗೆ ತುಂಬಿಸಿಕೊಳ್ಳಬೇಕು. ಕಾಲಿಗೆ ಹತ್ತಿಕೊಂಡ ಇಂಬಳವನ್ನು ಪ್ರೀತಿಯಿಂದ ಕಿತ್ತು ತೆಗೆಯಬೇಕು. ಸೋರುವ ರಕ್ತವನ್ನು ಕಡೆಗಣಿಸಿ, ಏದುಸಿರು ಬಿಡುತ್ತಾ ಬೆಟ್ಟ ಹತ್ತಬೇಕು. ಹಾದಿಯಲ್ಲಿ ಆನೆ ಹೆಜ್ಜೆ ಕಂಡು ಬೆಚ್ಚಬೇಕು. ಹಸಿರೆಲೆಗಳ ನಡುವೆ ಮಿಡತೆ ಮರಿಗಳೆರಡು ಆಟವಾಡುವುದನ್ನು ಕೆಮೆರಾದ ಮ್ಯಾಕ್ರೋ ಮೋಡಿನಲ್ಲಿ ಸೆರೆಹಿಡಿಯಬೇಕು. ಕಾಡುಹರಟೆ ಹೊಡೆಯುತ್ತ ಮೇಲೇರುತ್ತ ಏರುತ್ತ ಹೋದಂತೆಲ್ಲ ಬದುಕು-ಬ್ಯುಸಿ-ಬೆಂಗಳೂರು ಎಲ್ಲಾ ಮರೆತು ದೂರವಾಗುವುದನ್ನು, ಜಗತ್ತು ವಿಶಾಲವಾಗುವುದನ್ನು ಅರಿತುಕೊಳ್ಳುತ್ತ, ತಿನ್ನುವ ಚಾಕಲೇಟಿನಲ್ಲಿ ಕರಗಬೇಕು. ಮುಕ್ಕಾಲು ಬೆಟ್ಟ ಹತ್ತಿದ ನಂತರ ನಿಂತರೆ ಕಾಣುವ ಬೆಟ್ಟದ ಅಪೂರ್ವ ದೃಶ್ಯವನ್ನು ಕಣ್ತುಂಬ ಉಣ್ಣಬೇಕು. 'ಕುಹೂಊ' ಎಂದು ಕೂಗಬೇಕು. ಆ ಕೂಗು ಮಾರ್ದನಿಯಾಗಿ 'ಕುಹೂಊ' 'ಕುಹೂಊ' 'ಕುಹೂಊ' ಆಗುವುದನ್ನು ಕೇಳುತ್ತಾ ಮೈಮರೆಯಬೇಕು.

'ಇನ್ನೇನು, ಒಂದು ತಾಸು ಅಷ್ಟೇ. ಅದೋ, ಅಲ್ಲಿ ಕಾಣ್ತಿದೆಯಲ್ಲಾ, ಅದೇ ಶೃಂಗ' ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಪರಸ್ಪರ ಹುರಿದುಂಬಿಸುತ್ತಾ, ಹಸಿದ ಹೊಟ್ಟೆಯಲ್ಲಿ ದಡದಡನೆ ನಡೆಯಬೇಕು. ಜೋಕಿಗೆ ಹೊಟ್ಟೆ ಹುಣ್ಣಾಗುವಂತೆ ನಗಬೇಕು. ಮಧ್ಯಾಹ್ನವಾಯಿತು ಎನ್ನುವಾಗ ತುದಿಯಲ್ಲಿರಬೇಕು.

ಅಲ್ಲೊಂದು ಗುಡಿ. ಗುಡಿಯೊಳಗ್ಯಾವುದೋ ದೇವರು ಕತ್ತಲೆಯಲ್ಲಿ. ಮರದ ಬಾಗಿಲಿಗೆ ಬೀಗ. ಬಡಿದರೆ ಮೌನಕ್ಕೆ ಢಂಡಣ ಬೆರೆಸುವ ಘಂಟೆಗಳು ಅಕ್ಕ-ಪಕ್ಕ. ಗುಡಿಯೆದುರು ಸುಮ್ಮನೆ ನೋಡುತ್ತ ಕೂತಿರುವ ಮೂರ್ನಾಲ್ಕು ಕಲ್ಲ ನಂದಿಗಳು. ಗುಡಿಯ ಕಟ್ಟೆಯ ಮೇಲೆ ಕೂತು, ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ತಿನ್ನಬೇಕು. ಚಟ್ನಿಯ ಖಾರಕ್ಕೆ ಬಾಯಿ ಸೆಳೆದುಕೊಳ್ಳಬೇಕು. ನೀರು ಕುಡಿಯಬೇಕು. ಹೊಟ್ಟೆ ತುಂಬಿದ ಹಿಗ್ಗಿನಲ್ಲಿ ಮತ್ತೆ ಎಲ್ಲರೂ ಹೊರಬಂದು ಶೃಂಗದ ತುದಿಯ ಬಂಡೆಗಳ ಮೇಲೆ ಒಬ್ಬರಿಗೊಬ್ಬರು ಒರಗಿ ಕುಳಿತುಕೊಳ್ಳಬೇಕು.

'ಯಾರಾದರೂ ಹಾಡು ಹೇಳಿ..?'
'ಹ್ಮ್, ಶ್ರೀಕಾಂತ್?'
'ಊಹುಂ, ನನಗಿಂತ ಶ್ರೀನಿವಾಸ್ ಚನಾಗ್ ಹಾಡ್ತಾನೆ'
'ಹೂಂ, ಶ್ರೀನಿವಾಸ್, ಹಾಡಿ'

ಬೀಸುತ್ತಿರುವ ತಂಗಾಳಿ. ಶ್ರೀನಿವಾಸ್ ಹಾಡತೊಡಗುತ್ತಾನೆ: 'ವ್ಯಥೆಗಳ ಕಳೆಯುವ ಕತೆಗಾರ.. ನಿನ್ನ ಕಲೆಗೆ ಯಾವುದು ಭಾರ..' ಅಶ್ವತ್ಥ್, ಬೆಟ್ಟದ ಮೇಲೆ ಅನುರಣಿಸುತ್ತಾರೆ. ಆ ಹಾಡಿನ ಚರಣಗಳ ಮಧ್ಯೆ, ಅಲ್ಲಲ್ಲಿ, ಚೂರೂ ಅಡಚಣೆಯಿಲ್ಲದ ಮೌನ... ಶ್ರೀನಿವಾಸ್ ನಂತರ ಅರುಣ್. ಆಮೇಲೆ ಶ್ರೀಕಲಾ. ಹಾಗೇ ವಿಜಯಾ. 'ಸುಶ್, ನೀನೂ ಹಾಡೋ' ಎನ್ನುವ ಶ್ರೀನಿಧಿ. ಫೋಟೋ ತೆಗೆಯುವ ಅಮರ್. ಅಷ್ಟರಲ್ಲಿ, ಬೀಸುವ ಗಾಳಿಯಲ್ಲಿ ಚಳಿಯ ಕಣಗಳು ಜಾಸ್ತಿಯಾಗಿ, ಎಲ್ಲರಿಗೂ ಮೈ ನಡುಗಿ, ಗುಡಿಯಲ್ಲಿ ಬಿಟ್ಟು ಬಂದಿದ್ದ ಜಾಕೆಟ್ಟುಗಳೆಡೆಗೆ ಓಟ.

ಮೈ-ಕೈ-ತಲೆ-ಮುಖ ಎಲ್ಲಾ ಮುಚ್ಚುವಂತೆ ಹೊದ್ದುಕೊಂಡು, ಮುದುಮುದುಡಿಕೊಂಡು ಹೊರಬಂದರೆ, ಬೆಳ್ಳಗೆ ಸುರಿಯತೊಡಗಿರುವ ಹಿಮ. ಎದುರಿಗಿರುವವರು ಯಾರು? ಊಹುಂ, ಕಾಣುತ್ತಿಲ್ಲ. ಮೋಡದ ಮೊಟ್ಟೆಯೊಳಗೆ ಅವಿತಿರುವ ನಾವು, ಆ ಹಿಮಕಣಗಳು ಪದರ ಪದರವಾಗಿ ಗಾಳಿಯಲ್ಲಿ ತೇಲಿ ತೇಲಿ ಬಂದು ಮೈಗಪ್ಪಳಿಸುವುದನ್ನು, ಗಿಡಗಳೆಲೆಗಳಿಂದ ನೀರು ತೊಟ್ಟಿಕ್ಕುವುದನ್ನು ನೋಡುತ್ತಾ, 'ಸ್ವರ್ಗ ಅಂದರೆ ಇದೇ ಇರಬೇಕು ಅಲ್ವೇನೋ ದೋಸ್ತಾ?' ಎಂದುಸುರುತ್ತಾ, ಸಮಯ ಉರುಳುತ್ತಿರುವುದೇ ತಿಳಿಯದಾಗಿ, ಹಾಗೇ ಸಂಜೆಯಾಗಿ.

ಕೆಳಗೆ ಕಾಯುತ್ತಿರುವ ಜೀಪಿನವನಿಲ್ಲದಿದ್ದರೆ ನಾವು ಅಲ್ಲೇ ಇರುತ್ತಿರಲಿಲ್ಲವೇ ಅವತ್ತು? ಯಾರಿಗೆ ಬೇಕಿತ್ತು ಈ ಜಗತ್ತು? ಮಂಜುಮುಚ್ಚಿದ ಬೆಟ್ಟದ ಮೇಲಿಂದ ಇಳಿಯುವ ದರ್ದಾದರೂ ಏನಿತ್ತು? ನಾಳೆ ಬೆಳಗಾದರೆ ಬೆಂಗಳೂರು, ಮತ್ತೆ ಟ್ರಾಫಿಕ್ಕು, ಅದೇ ಆಫೀಸು, ಹಾಳು ಮೊಬೈಲು, ಚೆಕ್ ಮಾಡಲೇಬೇಕಿರುವ ಈಮೇಲು, ಒಟ್ಟಿನಲ್ಲಿ ಬ್ಯುಸಿ, ತೈತೈ ಕುಣಿದಾಟ.

ಯಾಕೆ ಅಲ್ಲೇ ಉಳಿದುಬಿಡಲಿಲ್ಲ ನಾವು ಅವತ್ತು? ಆ ಬೆಟ್ಟ, ಆ ಹಸಿರು, ಆ ಕುಕಿಲು, ಆ ಹಾಡು, ಆ ಮಂಜು... ಯಾಕಾಗಬಾರದು ನಿರಂತರ? ಇಲ್ಲೆಲ್ಲಿ ಕ್ರೆಡಿಟ್ ಕಾರ್ಡುಜ್ಜಿದರೆ ಸಿಕ್ಕೀತು ಆ ಹಾಡಿನ ಮಧ್ಯದ ಮೌನ? ಇಲ್ಯಾವ ಪಾರ್ಕಿನ ಹೂವಿನ ಗಿಡದಲ್ಲಿ ಕಾಣಸಿಕ್ಕೀತು ಆ ಮಿಡತೆಯಾಟ? ಇಲ್ಲೆಷ್ಟೆತ್ತರದ ಬಿಲ್ಡಿಂಗು ಹತ್ತಿದರೆ ಕಂಡೀತು ಆ ಬೆಟ್ಟದ ಮೇಲಣ ರಮಣೀಯ ದೃಶ್ಯ?

ಗೊತ್ತು ನಮಗೂ, ಸಿಗುವುದಿಲ್ಲವೆಂದು. ಈ ಬೆಂಗಳೂರ ಬದುಕಿನ ಹಾಡೇ ಹೀಗೇ. ಈ ಹಾಡ ನಡುನಡುವೆ ಬೇಕು ಸಣ್ಣ ಸಣ್ಣ ಮೌನದ ಕ್ಷಣಗಳು. ಅದಕ್ಕೇ, ನಾವು ಹೊರಡುತ್ತೇವೆ ಚಾರಣ. ಈ ಸಲ ಕೋಟೆಬೆಟ್ಟ. ಮಳೆ ಬರಲಿ ಸಾಕು, ಸೀದಾ ಊರು. ಸೌತೆ ಬಳ್ಳಿಯ ನಡುವೆ ಎಳೇಕಾಯಿಗಾಗಿ ಹುಡುಕಾಟ. ಉಪ್ಪು-ಕಾರ.

Monday, July 14, 2008

ಕೀಟಾಣೂ, ಐ ಲವ್ ಯೂ!

ತಿಂಗಳು ಜೂನಿಗೆ ಕಾಲಿಡುತ್ತಿದ್ದ ಕಾಲ. ಬಂದ ಸಣ್ಣಮಳೆಯೊಂದು ಚಳಿಗೆ 'ಕೋ' ಕೊಟ್ಟು ಪರಾರಿಯಾಗಿತ್ತು. ಗಾಳಿಯೊಂದಿಗೆ ಸೇರಿಕೊಂಡ ಆ ಚಳಿ ನಮ್ಮನ್ನು ರ್‍ಯಾಗಿಂಗ್ ಮಾಡುತ್ತಿತ್ತು. ಸಂಜೆ ಏಳರ ಹೊತ್ತಿಗೆ ಆಫೀಸಿನಿಂದ ಬಂದ ನಾನೂ ನನ್ನ ರೂಂಮೇಟೂ ಪ್ಲಾಸ್ಟಿಕ್ ಕಪ್ಪಿನಲ್ಲಿ ಬೈಟೂ ಟೀ ಕುಡಿಯುತ್ತಾ, ‘ಅಂಬೊಡೆ’ ಎಂದು ರೋಡ್‌ಸೈಡ್ ಅಂಗಡಿಯವನು ಬಾಣಲಿಯಿಂದ ಎತ್ತಿಕೊಟ್ಟ ಗಟ್ಟಿಮುಟ್ಟಾದ ಬಿಸಿಬಿಸಿ ಪದಾರ್ಥವನ್ನು ಉಫು‌ಉಫು ಮಾಡಿಕೊಂಡು ಬಾಯೊಳಗಿಟ್ಟುಕೊಂಡು ಚಳಿಗೆ ಬುದ್ಧಿ ಕಲಿಸಿದ ಖುಶಿಯಲ್ಲಿ ಹಿಗ್ಗುತ್ತಿದ್ದೆವು.

ಅಂಬೊಡೆಯ ಖಾರಕ್ಕೆ ಬಾಯಿ ಸೆಳೆದುಕೊಳ್ಳುತ್ತಾ ರೂಂಮೇಟು “ದೋಸ್ತಾ, ಈ ಚಳೀಲಿ ಬಿಸಿಬಿಸಿ ಕರಿದ ಪದಾರ್ಥ ತಿನ್ನೋಕಿಂತ ಸುಖ ಪ್ರಪಂಚದಲ್ಲಿ ಮತ್ತಿನ್ನೇನೂ ಇಲ್ಲ ನೋಡು!” ಎಂದ. ಅವನು ಹಾಗೆ ಹೇಳುವುದರ ಮೂಲಕ ಮತ್ತೆರಡು ಅಂಬೊಡೆ ಆರ್ಡರ್ ಮಾಡುವುದಕ್ಕೆ ಪೀಠಿಕೆ ಹಾಕುತ್ತಿದ್ದಾನೆ ಎಂಬುದು ನನಗೆ ತಕ್ಷಣ ಹೊಳೆದರೂ “ಕರೆಕ್ಟ್ ಹೇಳ್ದೆ ನೋಡು” ಎಂದು ತಲೆಯಾಡಿಸಿದೆ. ಮತ್ತೆ, ಅಂಬೊಡೆ ರುಚಿರುಚಿಯಾಗಿತ್ತು. ಅಲ್ಲದೇ ಆ ಅಂಬೊಡೆ ಕರಿಯುತ್ತಿದ್ದ ದೊಡ್ಡ ಬಾಣಲಿಯ ಸುತ್ತಲಿನ ಸುಮಾರು ಜಾಗ ಬೆಚ್ಚಬೆಚ್ಚಗಿತ್ತು. ಆದರೂ ಉಳಿದಿದ್ದ ಚೂರುಪಾರು ಚಳಿಯನ್ನು ಓಡಿಸಲೆಂದು ರಸ್ತೆಯಲ್ಲಿ ಇಬ್ಬರು ಟೈಟ್ ಜೀನ್ಸಿನ ಹುಡುಗಿಯರು ಪಾಸಾಗುತ್ತಿದ್ದರು. ಹೀಗಾಗಿ ಚಳಿ, ಇನ್ನು ಇವರ ಬಳಿ ತನ್ನ ಆಟ ನಡೆಯುವುದಿಲ್ಲ ಎಂದರಿತು ಕಾಲಿಗೆ ಬುದ್ಧಿ ಹೇಳಲು ರೆಡಿಯಾಗಿತ್ತು.

ಚುಳ್ಳನೆ ನೋವಾಯಿತು. ಎಲ್ಲಿ ಅಂತ ಮೊದಲು ಗೊತ್ತಾದದ್ದು ಬಹುಶಃ ಕೈಗೆ. ಅದು ಹೋಗಿ ಗದ್ದವನ್ನು ಹಿಡಿದುಕೊಂಡಿತು. ಮುಖದ ಎಕ್ಸ್‌ಪ್ರೆಶನ್ನೂ ಬದಲಾಯಿತಿರಬೇಕು, ರೂಂಮೇಟು “ಏನಾಯ್ತೋ?” ಎಂದ. “ಹಲ್ಲು..” ಎಂದೆ. ಅವನಿಗೆ ವಿಷಯ ವಿಷದವಾಯಿತು. “ಮಗನೇ ಆ ಹಲ್ಲು ಹೋಗಿದೆ, ಡಾಕ್ಟರ್ ಹತ್ರ ತೋರಿಸ್ಕೊಂಡು ಬಾ ಅಂತ ಬಡ್ಕೋತಿದೀನಿ ಒಂದು ತಿಂಗ್ಳಿಂದ, ನೀನು ಹೋಗ್ಬೇಡ! ನೋಡು ಈಗ, ನೋವು ಬಂತು ಅನ್ಸುತ್ತೆ” ಬೈದ. ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾಶೆಯಾಯಿತಿರಬೇಕು. “ಸಾಕು ಬಾ ಹೋಗೋಣ” ಎಂದು, ಅಂಗಡಿಯವನಿಗೆ ದುಡ್ಡು, ಕರುಣಾಜನಕ ಸ್ಥಿತಿಯಲ್ಲಿದ್ದ ನನ್ನನ್ನು ಕರೆದುಕೊಂಡು ಮನೆಕಡೆ ಹೊರಟ.

ನಾನು ಯಾವಾಗಲೂ ಹಾಗೇ. ಬೇರೆಯವರು ಹೇಳಿದ ಮಾತನ್ನೆಲ್ಲಾ ಅಷ್ಟು ಸುಲಭವಾಗಿ ಕೇಳುವುದಿಲ್ಲ. ಅದರಲ್ಲೂ ಆರೋಗ್ಯಭಾಗ್ಯದ ವಿಷಯದಲ್ಲಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ನಾನು ಡಾಕ್ಟರ ಬಳಿಗೆ ಹೋಗುವುದಿಲ್ಲ. ನನಗೇ ಗೊತ್ತಿರುವ ಮಾತ್ರೆಗಳನ್ನು ತಿಂದುಕೊಂಡು ಹಾಯಾಗಿರುತ್ತೇನೆ. ಅಲ್ಲಿಗೆ ಹೋದಕೂಡಲೇ, ಏನೋ ಪುರುಸೊತ್ತು ಮಾಡಿಕೊಂಡು ಬಂದಿದ್ದಾರೆ ಪಾಪ ಅನ್ನುವ ಕರುಣೆಯನ್ನೂ ತೋರದೇ, ನೂರಾರು ಅಪರಿಚಿತ ಖಾಯಿಲೆಗಳ ಹೆಸರು ಹೇಳಿ ಹೆದರಿಸಿ, ‘ಹೀಗೆ ಮಾಡಿಸಿ, ಹಾಗೆ ಮಾಡಿಸಿ, ಅದಿಲ್ಲಾಂದ್ರೆ ಮುಂದೆ ತೊಂದ್ರೆ ಆಗತ್ತೆ’ ಅಂತೆಲ್ಲಾ ಹೇಳಿ, ದುಡ್ಡು ವಸೂಲಿ ಮಾಡುವ ಡಾಕ್ಟರನ್ನು ಕಂಡರೆ ಯಾರಿಗೇ ತಾನೇ ಇಷ್ಟವಾಗತ್ತೆ ಹೇಳಿ? ಆದರೂ ‘ಇಷ್ಟ’ ಪಡಬೇಕಾಗುವಂತಹ ಸಂದರ್ಭ ಸಧ್ಯದಲ್ಲೇ ನನಗೆ ಬರಲಿತ್ತು!

ಮನೆಗೆ ಬಂದವನೇ ನನಗೆ ಈ ಪರಿ ನೋವುಂಟು ಮಾಡುತ್ತಿರುವ ಹಲ್ಯಾವುದು ಅಂತ ಕನ್ನಡಿಯಲ್ಲಿ ನೋಡಿಕೊಂಡೆ. ಬೆಂಗಳೂರಿನ ರಸ್ತೆ ಕಂಡಂತಾಗಿ ಬೆಚ್ಚಿಬಿದ್ದೆ. ಕಪ್ಪು ಬಣ್ಣ. ಅಲ್ಲಲ್ಲಿ ಪಾತ್‌ಹೋಲ್‌ಗಳು. ಓಹೋ, ಈ ಗುಂಡಿಯನ್ನೆಲ್ಲಾ ಮುಚ್ಚಿಸುವಷ್ಟರಲ್ಲಿ ನನ್ನ ‘ಸರ್ಕಾರ’ ಮಗುಚಿಬೀಳುವುದಂತೂ ಗ್ಯಾರೆಂಟಿ ಅಂತ ಲೆಕ್ಕ ಹಾಕಿದೆ. ಆದರೂ ಈ ತಿಂಗಳ ಬಜೆಟ್ಟಿನಲ್ಲಿ ಒಂದೆರಡಾದರೂ ಗುಂಡಿ ತುಂಬಿಸದಿದ್ದರೆ ನಾನೆಂಬ ಪ್ರಜೆಗೆ ಊಟ ಮಾಡುವುದಕ್ಕೂ ತೊಂದರೆಯಾಗುವುದು ನಿಶ್ಚಿತವಿತ್ತು. ‘ಸಧ್ಯಕ್ಕಿರಲಿ’ ಅಂತ ಒಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿದವನೇ ನಾಳೆ ದಂತವೈದ್ಯರನ್ನು ಕಾಣುವುದೇ ಸೈ ಅಂತ ನಿರ್ಧರಿಸಿದೆ. ರೂಂಮೇಟಿಗೂ ಹೇಳಿದೆ. ಅವನು ‘ಗುಡ್ ಗುಡ್’ ಅಂದ. ಕಷ್ಟ ಪಟ್ಟು ಊಟ ಮಾಡಿ ಮಲಗಿದೆ. ನೋವಿನ ಮಧ್ಯೆಯೇ ಚೂರುಪಾರು ನಿದ್ರೆ.

* *

ಮರುದಿನ. ಆಫೀಸಿನಿಂದ ಬರುತ್ತಿದ್ದೇನೆ. ಪ್ಲಸ್ ಚಿಹ್ನೆಯ ಪಕ್ಕದ ‘ಡೆಂಟಲ್ ಕ್ಲಿನಿಕ್’ ಎಂಬ ಕೆಂಪಕ್ಷರದ ಬೋರ್ಡು ಕಂಡದ್ದೇ ಬೈಕು ನಿಲಿ ಸಿ ಒಳನುಗ್ಗಿದೆ. “ಕನ್ಸಲ್ಟೇಶನ್ನಾ ಸರ್?” ಎಂದು ತನ್ನ ಮೃದುವಾದ ದನಿಯಲ್ಲಿ ಕೇಳಿದ ರಿಸೆಪ್ಷನಿಸ್ಟು, ಒಂದು ರಿಜಿಸ್ಟರಿನಲ್ಲಿ ನನ್ನ ಹೆಸರು ನಮೂದಿಸಿಕೊಂಡು, ಕಾಯಲು ಹೇಳಿದಳು. ಸೋಫಾದಲ್ಲಿ ಕೂತು, ಟೀಪಾಯಿಯ ಮೇಲಿದ್ದ ಯಾವುದೋ ಮ್ಯಾಗಜೀನೆತ್ತಿಕೊಂಡು ಚಿತ್ರಗಳನ್ನು ನೋಡತೊಡಗಿದೆ. ನಿಶ್ಯಬ್ದ. ಆಸ್ಪತ್ರೆಯ ವಾಸನೆ. ಹತ್ತು ನಿಮಿಷದ ನಂತರ ನನಗೆ ಕರೆ ಬಂತು. ‘ಪುಶ್ ಮಿ’ ಡೋರು ತಳ್ಳಿಕೊಂಡು ಒಳಗೆ ಹೋದೆ.

ಏನನ್ನೋ ಬರೆಯುತ್ತ ಖುರ್ಚಿಯಲ್ಲಿ ಕೂತ್ತಿದ್ದ ಡಾಕ್ಟರು ತಲೆಯಿತ್ತಿದರು. ಹೇಳ್ತೀನಲ್ಲ, ಹುಡುಗಿಯರು ಅಷ್ಟೊಂದು ಚೆನ್ನಾಗಿ ಇರಬಾರದು. ಅವನೆಂಥಾ ಹುಡುಗನೇ ಇರಲೀರಿ, ಮೊದಲ ನೋಟಕ್ಕೇ, ನಾನು ಹೇಳ್ತೀನಲ್ಲ, ಮೊದಲ ನೋಟಕ್ಕೇ ಬಿದ್ದು ಹೋಗ್ಬೇಕು, ಅಷ್ಟು ಚೆನ್ನಾಗಿದ್ದರು ಆ ಡಾಕ್ಟರು. ಈ ಬೆಳದಿಂಗಳ ರಾತ್ರೀಲಿ ದೇವತೆಯೊಬ್ಬಳು ನಮ್ಮೆಡೆಗೇ ನಡೆದು ಬಂದಹಾಗೆ ನಮಗೆ ಆಗಾಗ ಕನಸು ಬೀಳುತ್ತೆ ನೋಡಿ, ಹಾಂ, ಆ ದೇವತೆಯ ಹಾಗಿದ್ದರು ಡಾಕ್ಟರು. ಬಾಬ್ ಮಾಡಿದ, ನನ್ನ ಹಲ್ಲಿನ ಬಣ್ಣದ್ದೇ ಕೂದಲು. ಪುಟ್ಟ ಫ್ರೇಮಿಲ್ಲದ ಕನ್ನಡಕ. ಅದರ ಹಿಂದೆ ಕೂದಲಿಗಿಂತ ಕಪ್ಪು ಬಣ್ಣದ ಪಿಳಿಪಿಳಿ ಕಣ್ಗಳು. ಪುಟ್ಟ ಮೂಗು. ಯು ನೋ, ಮುದ್ದು ಬರಬೇಕು, ಹಾಗೆ ಪುಟ್ಟ ಮೂಗು. ತುಟೀನಂತೂ ಕೇಳಲೇಬೇಡಿ. ನಾನು ಒಂದು ಕ್ಷಣ ಹಾಗೇ ನಿಂತುಬಿಟ್ಟೆ. ಡಾಕ್ಟರು ಮುಗುಳ್ನಕ್ಕರು. ನಾನು ಎಚ್ಚೆತ್ತುಕೊಂಡು ಮುಂದೆ ನಡೆದು, ‘ಹಲೋ ಡಾಕ್ಟರ್’ ಅಂತ ಕೈ ಚಾಚಿದೆ. ಮುಗುಳ್ನಗೆಗೆ ಮತ್ತಷ್ಟು ಪರ್ಸೆಂಟ್ ಸೇರಿಸಿ, ಮತ್ತಷ್ಟು ಚಂದ ಚಂದ ಕಾಣುತ್ತಾ, ಅವರೂ ‘ಹಲೋ’ ಅಂದು ಕೈ ಕುಲುಕಿದರು. ಆಹ್, ಈ ಡಾಕ್ಟರ ದನಿಯೂ ಎಷ್ಟು ಇನಿ..! ನಕ್ಕಾಗ ಕಂಡ ಅವರ ಹಲ್ಲನ್ನೂ ಗಮನಿಸಿದೆ. ಬಹುಶಃ ದಂತವೈದ್ಯರಾಗಲು ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅನಿಸೊತ್ತೆ- ಅವರ ಹಲ್ಲನ್ನು ಹುಣ್ಣಿಮೆ ಚಂದ್ರ ನೋಡಿದರೆ ಅವಮಾನಗೊಂಡು ನಾಳೆಯೇ ಅಮಾವಾಸ್ಯೆ ಘೋಷಿಸಬೇಕು -ಅಷ್ಟು ಬೆಳ್ಳಗಿದ್ದವು ಅವು. ಮತ್ತೆ ಕುಲುಕಿದ ಆ ಹಸ್ತ ಅದೆಷ್ಟು ಮೃದುವಾಗಿತ್ತು ಅಂದ್ರೆ, ಛೇ, ಹೋಗ್ಲಿ ಬಿಡಿ.

“ಸೋ, ವ್ಹಾಟೀಸ್ ಯುವರ್ ಪ್ರಾಬ್ಲಮ್?” ಕೇಳಿದರು. ಇಷ್ಟೊಂದು ಚಂದದ ಹುಡುಗಿಯೆದುರು ನನ್ನ ಪ್ರಾಬ್ಲಮ್ಸ್ ಹೇಳಿಕೊಳ್ಳುವುದು, ಬಾಯಿಬಿಟ್ಟು ನನ್ನ ಕೆಟ್ಟ ದಂತಪಂಕ್ತಿಯನ್ನು ತೋರಿಸುವುದು ನನಗೆ ಸರಿಯೆನಿಸಲಿಲ್ಲ. ಅವಮಾನವೆನಿಸಿತು. ಸಣ್ಣವನಿದ್ದಾಗ ಅಷ್ಟೊಂದು ಚಾಕ್ಲೇಟ್ ತಿನ್ನಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟುಕೊಂಡೆ. ಆದರೂ ಡಾಕ್ಟರು ಹಾಗೆ ಕೇಳುತ್ತಿರುವಾಗ ಏನು ಸುಳ್ಳು ಹೇಳುವುದು ಅಂತ ಹೊಳೆಯದೇ ನನ್ನ ಪ್ರಾಬ್ಲಮ್ಮುಗಳನ್ನೆಲ್ಲ ಹೇಳಿಕೊಂಡೆ. ಮತ್ತೆ ಮುಗುಳ್ನಕ್ಕ ಡಾಕ್ಟರು, “ಫೈನ್, ಕಮ್ ವಿತ್ ಮಿ. ಐ ವಿಲ್ ಚೆಕ್ ಇಟ್” ಎನ್ನುತ್ತಾ ನನ್ನನ್ನು ಒಳಗಡೆಗೆ ಕರೆದೊಯ್ದದು.

ಈ ಸಿನಿಮಾಗಳಲ್ಲಿ ತೋರಿಸುತ್ತಾರಲ್ಲ, ಆಪರೇಶನ್ ಥಿಯೇಟರ್, ಹಾಗಿದ್ದ ಕೋಣೆ. ಮಂಚದಂತಿದ್ದ ಖುರ್ಚಿಯನ್ನು ತೋರಿಸುತ್ತಾ, “ಪ್ಲೀಸ್ ಸಿಟ್” ಎಂದರು ಡಾಕ್ಟರು. ಸೆಲೂನಿನಲ್ಲಿ ಬಿಟ್ಟರೆ ಇಷ್ಟೊಳ್ಳೆ ಖುರ್ಚಿ ಇರುವುದು ದಂತವೈದ್ಯರಲ್ಲೇ ಇರಬೇಕು. ಈ ಖುರ್ಚಿಯಲ್ಲ್ಲಿ ಕೂತು ಒರಗಲು ನೋಡಿದರೆ ಇದು ನನ್ನನ್ನು ಮಲಗಿಸಿಕೊಂಡುಬಿಟ್ಟಿತು. ಇದಕ್ಕೆ ಅನೇಕ ಬಾಹುಗಳಿದ್ದವು. ಅವನ್ನೆಲ್ಲಾ ಡಾಕ್ಟರು ತಮ್ಮ ಕಡೆ ಎಳೆದುಕೊಂಡರು. ಮೇಲ್ಗಡೆ ಕೈಯಾಡಿಸಿ ಟಕ್ಕೆಂದು ಒಂದು ಸ್ವಿಚ್ಚದುಮಿದ್ದೇ ಲೈಟೊಂದು ಆನಾಗಿ ನನ್ನ ಕಣ್ಣಿಗೆ ಕುಕ್ಕಲಾರಂಭಿಸಿತು. ನಾನು ತಲೆ ಸರಿಸಿ ಡಾಕ್ಟರನ್ನೇ ನೋಡತೊಡಗಿದೆ. ಅವರೀಗ ತಮ್ಮ ಮೂಗು, ಬಾಯಿ ಮುಚ್ಚುವಂತೆ ಮಫ್ಲರಿನಂತಹ ಹಸಿರು ಬಟ್ಟೆಯೊಂದನ್ನು ಕಟ್ಟಿಕೊಂಡರು. ನನಗೀಗ ಅತೀವ ಅವಮಾನವಾಯಿತು.

ಹುಡುಗಿಯೊಬ್ಬಳು, ಅದರಲ್ಲೂ ಚಂದದ ಹುಡುಗಿಯೊಬ್ಬಳು, ನಾನು ಪ್ರಪೋಸ್ ಮಾಡಲಾ ಅಂತ ಯೋಚಿಸುತ್ತಿರುವವಳು, ನನ್ನೆಡೆಗೆ ಬಗ್ಗಿ, ನನ್ನನ್ನು ಮುಟ್ಟುವಂತಹ ಸಂದರ್ಭ... ಆಗ ಅವಳು ಈ ಹುಡುಗನ ಬಾಯಿಯಿಂದ ದುರ್ವಾಸನೆ ಬರಬಹುದೆಂದು ಬಗೆದು, ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದೆಂದರೆ... ಛೇ! ಹೀಗೇಂತ ಗೊತ್ತಿದ್ದರೆ ನಾನು ಮತ್ತೊಮ್ಮೆ ಬ್ರಶ್ ಮಾಡಿಕೊಂಡೇ ಬರುತ್ತಿರಲಿಲ್ಲವಾ ಕ್ಲಿನಿಕ್ಕಿಗೆ? “ಓಪನ್ ಯುವರ್ ಮೌತ್.. ಆ...” ಡಾಕ್ಟರು ನಿರ್ದೇಶಿಸಿದರು. ಎಲ್ಲ ಅವಮಾನಗಳನ್ನೂ ನುಂಗಿಕೊಂಡು, ಬ್ರಹ್ಮಾಂಡ ತೋರಿಸಲು ಅಣಿಯಾಗಿ ನಾನು ಬಾಯಿ ತೆರೆದೆ. ಲೈಟು ಸರಿಹೊಂದಿಸಿಕೊಂಡರು. ಟಿಣ್ ಟಿಣ್ ಶಬ್ದ ಮಾಡುತ್ತಾ ತಟ್ಟೆಯಲ್ಲಿದ್ದ ಅದ್ಯಾವುದೋ ಸ್ಟೀಲಿನ ಹತಾರವೊಂದನ್ನು ಹುಡುಕಿ ಹಿಡಿದು ನನ್ನೆಡೆಗೆ ಬಗ್ಗಿದರು. ನನ್ನ ಮುಖವನ್ನು ತಮ್ಮ ಎಡಗೈಯಲ್ಲಿ, ನಾನು ಬಾಯಿ ಮುಚ್ಚಲಾಗದಂತೆ ಹಿಡಿದುಕೊಂಡರು. ಸ್ಟೀಲಿನ ಉಪಕರಣವನ್ನು ನನ್ನ ಬಾಯೊಳಗೆ ಹಾಕಿ ಜಾಲಾಡಿದರು. ಒಂದೆರಡು ಹಲ್ಲಿಗೆ ಬಡಿದರು. ಕುಕ್ಕಿದರು. “ಓಹ್! ದೇರಾರ್ ಸೋ ಮೆನಿ ಡಿಕೇಸ್!” ಉದ್ಘರಿಸಿದರು. ನಾನು ಡಾಕ್ಟರ ಕನ್ನಡಕದ ಹಿಂದಿನ ಕಣ್ಣನ್ನೇ ನೋಡುತ್ತಿದ್ದೆ. ಮತ್ತೆ, ಅವರ ಕೆನ್ನೆ. ಈ ಪಾಲಿಶ್ ಮಾಡಿದ ಅಮೃತಶಿಲೆ ಇರುತ್ತಲ್ಲ, ಅಷ್ಟು ನುಣುಪಾಗಿತ್ತು ಅದು. ಕುಂಚದಿಂದ ಬರೆದಂತಹ ಕಡುಗಪ್ಪು ಹುಬ್ಬುಗಳ ಮಧ್ಯದಲ್ಲೊಂದು ಕಂಡೂ ಕಾಣದಷ್ಟು ಸಣ್ಣ ಕಪ್ಪು ಸ್ಟಿಕರ್. ಅವರು ಮಾತಾಡುವಾಗ ಅವರ ಮಿತಪಾರದರ್ಶಕ ಹಸಿರು ಬಟ್ಟೆಯ ಹಿಂದಿನ ತುಟಿಗಳು ಊಂ, ಚಂದ ಕಾಣುತ್ತಿದ್ದವು. ‘ಹೀಗೇ ನೀವು ನನ್ನ ಪಕ್ಕದಲ್ಲಿ, ಇಷ್ಟು ಹತ್ತಿರದಲ್ಲಿ ನಿಂತಿರ್ತೀರಾ ಅಂದ್ರೆ ಮೂವತ್ತೆರಡೂ ಹಲ್ಲು ಹಾಳು ಮಾಡಿಕೊಂಡು ಬರ್ತೀನಿ ಡಾಕ್ಟ್ರೇ’ ಅಂತ ಮನಸಿನಲ್ಲೇ ಹೇಳಿಕೊಂಡೆ. ಆದರೆ “ಓಹ್..” “ಟೂ ಬ್ಯಾಡ್..” “ಈವನ್ ದಿಸ್ ಟೀತ್” ಎಂದೆಲ್ಲ ಅವರು ಉದ್ಘರಿಸುವಾಗ ಕಟುವಾಸ್ತವ ನೆನಪಾಗಿ, ನನಗಾಗುತ್ತಿದ್ದ ಅವಮಾನವನ್ನು ಹೀಗೆ ಬಾಯಿ ಕಳೆದುಕೊಂಡು ವ್ಯಕ್ತಪಡಿಸುವುದು ಹೇಗೆಂದು ತಿಳಿಯದೇ, ಒದ್ದಾಡಿದೆ. ಸುಮಾರು ಐದು ನಿಮಿಷದ ನಂತರ, “ಓಕೆ. ಗೆಟಪ್” ಎಂದು ಹೇಳಿ, ಅಂತೂ ಆ ಸುಖಾಸನದಿಂದ ನನ್ನನ್ನೆಬ್ಬಿಸಿದರು.

ನನ್ನ ಊಹೆಯ ಪ್ರಕಾರ ಈ ಡಾಕ್ಟರುಗಳ ಹೃದಯ ತುಂಬಾ ಗಟ್ಟಿಯಿರುತ್ತದೆ. ಅಥವಾ ಅವರಿಗೆ ಹೃದಯವೇ ಇರುವುದಿಲ್ಲ. ಅವರು ಯಾರ ಮೈಯ ಯಾವ ಭಾಗವನ್ನು ಬೇಕಾದರೂ ಕತ್ತರಿಸಬಲ್ಲರು. ಅವರಿಗೆ ತರಕಾರಿಯೂ ಒಂದೇ ಮನುಷ್ಯರೂ ಒಂದೇ. ಎಲ್ಲಿಗೆ ಬೇಕಾದರೂ ಹೊಲಿಗೆ ಹಾಕಬಲ್ಲರು. ಅವರು ಏನಕ್ಕೂ ಅಂಜುವುದಿಲ್ಲ. ಸುಲಭಕ್ಕೆಲ್ಲ ಪೆಗ್ಗು ಬೀಳುವುದಿಲ್ಲ. ಮರುಳಾಗುವುದಿಲ್ಲ. ಮೃದುವಾಗುವುದಿಲ್ಲ. ಅವರಿಗೆ ತಮ್ಮದೇ ಆದ ಸ್ಪಷ್ಟ ನಿಲುವುಗಳಿರುತ್ತವೆ. ತುಂಬಾ ಗಂಭೀರ ಸ್ವಭಾವದವರು. ಹಾಗಿದ್ದಾಗ, ಸೀ, ಈಗ ಇವಳ ಮೇಲಂತೂ ನನಗೆ ಪ್ರೀತಿಯಾಗಿಬಿಟ್ಟಿದೆ, ಇನ್ನು ಒಲಿಸಿಕೊಳ್ಳುವುದು ಹೇಗೆ? ನಾನು ಚಿಂತೆಗೆ ಬಿದ್ದೆ. ನಾನು ಕ್ಲಿನಿಕ್ಕಿಗೆ ಹೊಕ್ಕ ಕ್ಷಣದಿಂದಲೂ ಇವಳ ಕಣ್ಣಿನಲ್ಲಿ ಅವಮಾನಿತ ಬೇರೆ. ನಾನು ಇವಳಿಗೆ ಒಬ್ಬ ಪೇಶೆಂಟು ಅಷ್ಟೇ. ಹಲ್ಲನ್ನೆಲ್ಲಾ ಹುಳುಕು ಹಿಡಿಸಿಕೊಂಡಿರುವ ಒಬ್ಬ ಬಾಯ್ಕುರೂಪಿ. ನನ್ನ ಪ್ರೀತಿಯನ್ನು ಇವಳು ಒಪ್ಪಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಇವಳೇನಾದರೂ ಪ್ರೀತಿಸಿದರೆ ಎಲ್ಲಾ ಮೂವತ್ತೆರಡೂ ಹಲ್ಲೂ ಸರಿಯಿರುವ, ಫಳಫಳನೆ ಹೊಳೆಯುವಂತಿರುವ, ದಿನಕ್ಕೆ ಕನಿಷ್ಟ ಐವತ್ತು ಸಲ ಬ್ರಶ್ ಮಾಡುವ ಹುಡುಗನನ್ನೇ ಪ್ರೀತಿಸುತ್ತಾಳೆ. ಬಹುಶಃ ಕೋಲ್ಗೇಟ್ ಕಂಪನಿ ಓನರ್ರಿನ ಮಗನನ್ನೇ ಮದುವೆಯಾಗಬಹುದು. ಗ್ಯಾರೆಂಟಿ. ನೋ ಡೌಟು.

ಡಾಕ್ಟರು ನನ್ನನ್ನು ಮತ್ತೆ ತಮ್ಮ ಛೇಂಬರಿಗೆ ಕರೆದೊಯ್ದರು. ತಮ್ಮ ಡ್ರಾವರಿನಿಂದ ಪುಸ್ತಕವೊಂದನ್ನು ಹೊರತೆಗೆದು ಬರೆದುಕೊಳ್ಳತೊಡಗಿದರು:

“ಯುವರ್ ನೇಮ್?”
“ಸುಶ್ರುತ”
“ಸುಶ್ರುತ? ಓಹ್.. ಇಫ್ ಯು ಡೋಂಟ್ ಮೈಂಡ್, ಕ್ಯಾನೈ ಆಸ್ಕ್ ಯೂ ಸಮ್‌ಥಿಂಗ್? ಯೂ ಆರ್ ದಿ ಸೇಮ್ ಸುಶ್ರುತ ಹೂ ರೈಟ್ ಇನ್ ಬ್ಲಾಗ್ಸ್? ಸುಶ್ರುತ ದೊಡ್ಡೇರಿ?”
“ಯೆಸ್! ನಾನೇ!” ಇಷ್ಟಗಲ ಕಣ್ಣು ಬಿಡುತ್ತಾ ನಾನು ಹೇಳಿದೆ.
“ಓಹ್! ನಾನು ನಿಮ್ಮ ಬ್ಲಾಗಿನ ದೊಡ್ಡ ಫ್ಯಾನು! ವೆರಿ ನೈಸ್ ಮೀಟಿಂಗ್ ಯೂ! ತುಂಬಾ ಚನಾಗ್ ಬರೀತೀರಾ ನೀವು..”, ಖುರ್ಚಿಯಲ್ಲಿ ಕೂತಿರಲಾಗದೇ ಜಿಗಿದಾಡುತ್ತಾ ಹೇಳಿದಳು, “ಐ ಯಾಮ್ ಸೋ ಎಕ್ಸೈಟೆಡ್!”
ನಾನೂ ಅದೇ ಆಗಿದ್ದೆ. “ಓಹ್ ಥ್ಯಾಂಕ್ಯೂ ವೆರಿ ಮಚ್! ಥ್ಯಾಂಕ್ಯೂ..!” ಏನು ಹೇಳುವುದು ಅಂತಲೇ ಗೊತ್ತಾಗದೇ ಒದ್ದಾಡಿದೆ.
“ನಿಮ್ಮ ರೀಸೆಂಟ್ ಆರ್ಟಿಕಲ್.. ..” ಅವಳು ಇನ್ನೂ ಏನೇನೋ ಹೇಳತೊಡಗಿದಳು. ನಾನಾಗಲೇ ಆಕಾಶದಲ್ಲಿದ್ದೆ.

ನೋಡಿ, ನಾನು ಈ ಅದೃಷ್ಟ ಪಿದೃಷ್ಟಗಳನ್ನೆಲ್ಲಾ ಯಾವಾಗಲೂ ನಂಬಿದವನಲ್ಲ. ಆದರೂ ಕೆಲವೊಮ್ಮೆ ನಂಬುವಂತಾಗುತ್ತದೆ. ನಾನು ಚಿಕ್ಕವನಿದ್ದಾಗ ಸಿಕ್ಕಾಪಟ್ಟೆ ಚಾಕ್ಲೇಟು ತಿನ್ನುತ್ತಿದ್ದುದು, ಕೀಟಾಣುಗಳೆಲ್ಲಾ ಸೇರಿ ನನ್ನ ಹಲ್ಲಿನ ಮೇಲೆ ದಾಳಿ ಮಾಡಿ ಕುಳಿ ತೋಡಿದ್ದು, ನಾನು ಸರಿಯಾಗಿ ಬ್ರಶ್ ಮಾಡದೇ ಇದ್ದುದು, ನಿನ್ನೆ ಅಂಬೊಡೆ ತಿಂದಿದ್ದು, ಆಗ ಅದರಲ್ಲಿದ್ದ ಕಡಲೆ ಬೇಳೆ ಒತ್ತಿ ಹಲ್ಲಿನಲ್ಲಿ ನೋವು ಕಾಣಿಸಿಕೊಂಡದ್ದು, ರೂಂಮೇಟಿನ ಸಲಹೆಗೆ ಗೌರವ ತೋರಿಸಿ ಡಾಕ್ಟರನ್ನು ನೋಡುವ ತೀರ್ಮಾನ ತೆಗೆದುಕೊಂಡದ್ದು, ಹುಡುಹುಡುಕಿಕೊಂಡು ಇದೇ ಕ್ಲಿನಿಕ್ಕಿಗೆ ಬಂದದ್ದು, ಇಲ್ಲಿ ಇದೇ ಡಾಕ್ಟರು ಇದ್ದದ್ದು, ಇವರು ನನ್ನ ಬರಹಗಳನ್ನೆಲ್ಲಾ ಓದಿದ್ದು... ಯು ನೋ, ದೇರೀಸ್ ಸಮ್‌ಥಿಂಗ್ ಯಾರ್! ಏನಿರಬಹುದು ಅದು?

“ಅದು ಏನೂ ಅಲ್ಲ” ನನಗಿಂತ ಮೊದಲು ವಾಸ್ತವಕ್ಕೆ ಬಂದ ಡಾಕ್ಟರು ಹೇಳಿದರು, “ಅದು ಕೀಟಾಣು. ಜರ್ಮ್ಸ್ ಅಷ್ಟೇ. ಐದು ಡಿಕೇಸ್ ಇವೆ. ಕ್ಯಾವಿಟಿ ಫಿಲ್ ಮಾಡಿದ್ರೆ ಆಯ್ತು; ಯು ವಿಲ್ ಬಿ ಆಲ್ರೈಟ್. ಐದು ದಿನ ಬರಬೇಕಾಗತ್ತೆ. ಒಂದೊಂದು ದಿನ ಒಂದೊಂದು ಹಲ್ಲು. ಯಾವಾಗ ಬರ್ತೀರಾ?”
“ಆಂ.. ಯಾವಾಗಾದ್ರೂ ಓಕೇ. ನಾಳೆ? ಸಂಜೆ ಆರರ ನಂತರವಾದರೆ ಉತ್ತಮ” -ಹೇಳಿದೆ.
“ಸರಿ ಹಾಗಾದ್ರೆ. ನಾಳೆ ಸಿಕ್ಸ್ ಥರ್ಟಿಗೆ ಬನ್ನಿ” -ತಮ್ಮ ಕಾರ್ಡೊಂದನ್ನು ತೆಗೆದು ಕೊಟ್ಟರು.
“ಥ್ಯಾಂಕ್ಯೂ ಡಾಕ್ಟರ್” ನಾನು ಎದ್ದು ನಿಂತು ಕುಲುಕಲಿಕ್ಕೆ ಕೈ ಚಾಚಿ ಹೇಳಿದೆ.
“ಅಯ್ಯೋ.. ಡಾಕ್ಟರ್ ಅಂತೆಲ್ಲ ಕರೀಬಾರದು ನೀವು. ಪ್ರೀತಿಯಿಂದ ಹೆಸರು ಹೇಳಿ ಕರೀರಿ. ನಿಮ್ಮನ್ನ ಮೀಟ್ ಮಾಡಿ ತುಂಬಾ ಖುಶಿಯಾಯ್ತು ನಂಗೆ..” ಈ ಸಲ ತುಂಬಾ ಹೊತ್ತು ಅವರ ಕೈ ನನ್ನ ಹಸ್ತದಲ್ಲಿತ್ತು. ಮತ್ತದು ಆಗಿನಕಿಂತ ಮೃದುವಾಗಿತ್ತು. ಅಲೆಲೆಲೆ! ‘ಪ್ರೀತಿಯಿಂದ ಕರೀರಿ’ -ಹೌದಲ್ವಾ, ಹಾಗೇ ಹೇಳಿದಳಲ್ವಾ? ಗುನುಗುನು ಹಾಡುತ್ತಾ ಹೊರಬಂದೆ. ಕಾಯುತ್ತಿದ್ದ ಪೇಶೆಂಟುಗಳಲ್ಲಿ ಕೆಲವರು ಗದ್ದದ ಮೇಲೆ ಕೈ ಇಟ್ಟುಕೊಂಡಿದ್ದರು, ಕೆಲವರ ಮುಖ ಇಷ್ಟು ದೊಡ್ಡಕೆ ಊದಿಕೊಂಡಿತ್ತು, ಕೆಲವರದು ಮುದುಕರ ಕೆನ್ನೆಯಂತೆ ಬೊಚ್ಚಾಗಿತ್ತು... ಛೇ, ಇವರಿಗೆಲ್ಲಾ ಹೋಲಿಸಿದರೆ ನನ್ನದು ಏನೂ ಅಲ್ಲ. ಐದಾರು ಕುಳಿಗಳು ಅಷ್ಟೇ. ಮುಚ್ಚಿಸಿಬಿಟ್ಟರೆ ಮುಗಿಯಿತು. ನಾನೇ ರಾಜಕುಮಾರ. ಮತ್ತೆ ಅವಳೇ ರಾಜಕುಮ್..? ಯಾ ಯಾ ಯಾ..! ಏನಂದಳು? ‘ಪ್ರೀತಿಯಿಂದ..’ ರೈಟ್? ಗೆದ್ದೆ ನಾನು.

ಕೀಟಾಣೂಗೆ ಜೈ. ಅಂಬೊಡೆ ಅಂಗಡಿಯವನಿಗೆ ಜೈ. ರೂಂಮೇಟಿಗೂ ಜೈ.

* *

“ಏಯ್ ಏನಾಯ್ತೋ? ಜೈ ಜೈ ಅಂತಿದೀಯಾ? ಯಾವುದೋ ಚಳುವಳೀಲಿ ಭಾಗವಹಿಸಿದ ಕನಸು ಬಿತ್ತಾ?” ರೂಂಮೇಟು ತಟ್ಟಿ ಎಬ್ಬಿಸಿ ಕೇಳಿದ.
ಕಣ್ಬಿಟ್ಟೆ. ಕತ್ತಲೆ. ಎದ್ದು ಕೂತು ಲೈಟ್ ಹಾಕಿದೆ. ಗದ್ದವನ್ನು ಒತ್ತಿ ನೋಡಿಕೊಂಡೆ. ಹಲ್ಲು ಇನ್ನೂ ನೋಯುತ್ತಿತ್ತು. “ಥೂ ಇದರಜ್ಜಿ! ನಾನು ನಾಳೆ ಡಾಕ್ಟರ್ ಹತ್ರ ಹೋಗಲ್ಲ ಕಣೋ. ಸುಮ್ನೇ ಎಲ್ಲಾ ಕನಸು. ಅವಳು ನನ್ನನ್ನ ಒಪ್ಪಲ್ಲ. ಯಾವ ಡಾಕ್ಟ್ರೂ ಹಲ್ಲು ಹುಳುಕಾಗಿರೋ ಪೇಶೆಂಟ್‌ನ ಲವ್ ಮಾಡಲ್ಲ. ಶಿಟ್!” ಎಂದು ಬೈದುಕೊಂಡು, ಗೂಡಿನಲ್ಲಿದ್ದ ಮತ್ತೊಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿ ನೀರು ಕುಡಿದೆ.
“ಲವ್ವಾ? ಎಲ್ಲೋ? ಯಾವ ಡಾಕ್ಟ್ರೋ? ಏನೋ ಹೇಳ್ತಿದೀಯಾ?” ರೂಂಮೇಟು ಎದ್ದು ಕೂತು ಕೇಳಿದ.
“ಏನೂ ಇಲ್ಲ” ನಾನು ಲೈಟ್ ಆಫ್ ಮಾಡಿದೆ.
“ನಿಂಗೆಲ್ಲೋ ತಲೆ ಕೆಟ್ಟಿದೆ! ಹಲ್ಲಿನ ಕೀಟಾಣು ತಲೇಗೂ ದಾಳಿ ಮಾಡಿರ್ಬೇಕು” ಅವನು ಗೊಣಗಿಕೊಂಡ. ನನಗೂ ಹಾಗೇ ಅನಿಸಿತು. ಆದರೂ ಕನಸಿನಲ್ಲಾದರೂ ಒಬ್ಬ ಇಷ್ಟು ಚಂದದ ಹುಡುಗಿ ನನ್ನನ್ನು ಮುಟ್ಟುವಂತೆ, ಇಷ್ಟ ಪಡುವಂತೆ, ಪ್ರೀತಿ ಮಾಡುವಂತೆ ಮಾಡಿದ ಕೀಟಾಣೂಗೆ ಮನಸಿನಲ್ಲೇ ಥ್ಯಾಂಕ್ಸ್ ಮತ್ತು ಲವ್ಯೂ ಹೇಳುತ್ತಾ, ನಿದ್ರೆ ಮಾಡಲು ಪ್ರಯತ್ನಿಸಿದೆ.