ಮೂರುಮಲ್ಲಿಗೆ ತೂಕದವಳ ದಾವಣಿಯಲ್ಲಿ ಚಿಟ್ಟೆಗಳಿದ್ದವು..
ಕುಸುಮಕರೆಯ ಸಿಹಿಗನಸನೇ ಉಂಡು ಬೆಳೆದವು-
ರೆಕ್ಕೆ ಬಲಿತಾಗ ಹಾರಲೇ ಇಲ್ಲ; ಮರಳಿ ಕಂಬಳಿ
ಹುಳುಗಳಾಗಿ ಮೈಗೇ ಚುಚ್ಚಿದವು
ಅತ್ತರಿನ ಸಿಡಿಗಾಳಿಗೆ ಒಡ್ಡಿದ ಬಗಲು-
ಹೊಸ ಕಚಗುಳಿಗೆ ಮೈ ನವಿರೇಳಲೇ ಇಲ್ಲ
ಬೋಗುಣಿಯಲ್ಲಿನ ದ್ರಾಕ್ಷಿಗಳನು ಸುತ್ತ ಕೂತ ಜನ
ಹುರಿದು ಮುಕ್ಕುವಾಗ ಸಹ ಬಾರದ ದೇವರು
ಈಗ ಬಂದು ವರವ ಕೇಳು ಎನ್ನುತ್ತಿದ್ದಾನೆ..
ನೈವೇದ್ಯಕ್ಕಿಲ್ಲಿ ಇನ್ನೇನೂ ಉಳಿದಿಲ್ಲ ಬಾಂಧವಾ..
ಮೊಳೆಯಿಂದ ತಲೆಯವರೆಗೂ ಸುತ್ತಿಯಾಗಿದೆ ಜಾಟಿ.
ಬಿಡುವುದಷ್ಟೇ ಬಾಕಿ ಕೈಬೀಸಿ. ತಿರುಗಿ ತಿರುತಿರು ತಿರುಗಿ
ಸತ್ವ ಮುಗಿದು ಒರಗುವವರೆಗೆ ತಿರುಗಲಿ ಬುಗರಿ.
ನುಣುಪು ನೆಲ ಮಲಗಿಸಿಕೊಳ್ವುದು ಹಾಸಿ ಲೇಪು
ನೇವರಿಸುವುದು ಧೂಳಿನೆಲರು, ಗುನುಗಿ ಜೋ-ಲಾಲಿ
ಯೋಚಿಸುತ್ತ ನಿಂತೆ ಯಾಕೆ?
ಹಳಿಗಳನ್ನು ದಾಟುವಾಗ ನಿಧಾನ ಮಾಡಬೇಡ..
ಬೆಣಚುಕಲ್ಲುಗಳ ರಾಶಿ ಮೇಲೆ ಊದ್ದಕೆ ಪವಡಿಸಿರುವ
ಈ ಕಂಬಿಗಳು ಎಲ್ಲೂ ಕೂಡುವುದೇ ಇಲ್ಲವಂತೆ
ಭರ್ರನೆ ಹಾದು ಬರುವ ರೈಲು ನೀನು ಹೆಜ್ಜೆ
ಕದಲಿಸುವ ಮೊದಲೇ ಅಪ್ಪಳಿಸಿಬಿಟ್ಟೀತು
ಎಷ್ಟೊ ಹರಿದಾರಿಯಾಚೆಗಿದೆ ನಿನ್ನ ನಿಲ್ದಾಣ
ಬಂದ ಬಂಡಿಯ ಇಚ್ಛಾನುಸಾರ ನನ್ನ ಪಯಣ
ಮತ್ಯಾವುದೋ ನಿಲ್ಮನೆ, ಇನ್ಯಾವುದೋ ಬಂದರು
ಗೋಗರೆಯದಿರು, ಋಣವಿದ್ದಲ್ಲಿ ಮತ್ತೆ ಸಿಗೋಣ
ಕಾಮನಬಿಲ್ಲನ್ನು ಭೂಮಿಗಿಳಿಸಲು ಸಾಧ್ಯವಾಗುತ್ತದೋ
ನೋಡೋಣ.
Thursday, October 14, 2010
Thursday, October 07, 2010
ಅರಿಕೆ
ಸಂಜೆಮಳೆಯ ದಿನಗಳಿವು..
ಕೊಚ್ಚಿ ಹೋಗುತ್ತಿರುವ ಚಿಂದಿ ಕನಸುಗಳನ್ನೆಲ್ಲ ಆಯ್ದು
ಒಂದು ಮಾಡಿ ತಿದ್ದಿ ತೀಡಿ ಒಪ್ಪ ಮಾಡುತ್ತಿರುವೆ,
ನೀನು ಅಡ್ಡ ಬರಬೇಡ..
ಯಾವುದೋ ಮರದ ಕರಿಯೆಲೆ ತೆಗೆದು ಹುಬ್ಬಿಗಿಟ್ಟಿದ್ದೇನೆ
ಯಾವುದೋ ಹೂವಿನ ಪಕಳೆ ಹಿಡಿದು ತುಟಿಗಿಟ್ಟಿದ್ದೇನೆ
ಹರಿದ ಸರದ ಮುತ್ತುಗಳು ಇಲ್ಲಿ ಒಡವೆಯಾಗಿವೆ
ಮುರಿದ ಮಂಟಪ ಕಂಬಗಳು ಕಾಲಾಗಿವೆ
ಸಂಪಿಗೆ ಸಿಗದ್ದಕ್ಕೆ ಬೋರೆಹಣ್ಣು ಇಡಲಿದ್ದೇನೆ ಮೂಗಿಗೆ-
ಈಗ ನೀನು ಅಡ್ಡ ಬರಬೇಡ..
ನಿನ್ನೊನಪು ಒಯ್ಯಾರ ಈಕೆಗಿಲ್ಲ,
ಹಾಗಂತ ನಾನು ವಿಚಲಿತನಾಗಿಲ್ಲ..
ಇವಳು ಹಲವು ಕನಸುಗಳಿಂದೊಡೆದ ಚೂರುಗಳ ಒಟ್ಟುರೂಪ
ನೂರು ನಿರ್ನಿದ್ರೆ ರಾತ್ರಿಗಳ ನಿಟ್ಟುಸಿರ ಶಾಪ
ಹೊಸಪ್ರೀತಿಯಿಂದಲೇ ತುಂಬಬೇಕಿದೆ ಜೀವಭಾವ
ಹಾರೈಸಲಣಿಯಾಗು ಅಥವಾ ದಾರಿಬಿಟ್ಟು ನಿಲ್ಲು..
ತೀಡುಗಾಳಿಗೆ ಕಾರುಮೋಡಗಳು ತೇಲಿಹೋಗಲಿ
ಮಿಂಚ ಹೊಳಪಲಿ ಗುಡುಗಿನಬ್ಬರ ಕ್ಷೀಣವಾಗಲಿ
ಮತ್ತೆ ಹೊಮ್ಮಿ ಅರಳಲಿ ಚಿಕ್ಕೆ ಹೂದೋಟ
ನನ್ನ ಕಿನ್ನರಿಗಾಗಲಿ ಚಂದ್ರಿಕೆಯ ಪ್ರಭಾತ.
ಕೊಚ್ಚಿ ಹೋಗುತ್ತಿರುವ ಚಿಂದಿ ಕನಸುಗಳನ್ನೆಲ್ಲ ಆಯ್ದು
ಒಂದು ಮಾಡಿ ತಿದ್ದಿ ತೀಡಿ ಒಪ್ಪ ಮಾಡುತ್ತಿರುವೆ,
ನೀನು ಅಡ್ಡ ಬರಬೇಡ..
ಯಾವುದೋ ಮರದ ಕರಿಯೆಲೆ ತೆಗೆದು ಹುಬ್ಬಿಗಿಟ್ಟಿದ್ದೇನೆ
ಯಾವುದೋ ಹೂವಿನ ಪಕಳೆ ಹಿಡಿದು ತುಟಿಗಿಟ್ಟಿದ್ದೇನೆ
ಹರಿದ ಸರದ ಮುತ್ತುಗಳು ಇಲ್ಲಿ ಒಡವೆಯಾಗಿವೆ
ಮುರಿದ ಮಂಟಪ ಕಂಬಗಳು ಕಾಲಾಗಿವೆ
ಸಂಪಿಗೆ ಸಿಗದ್ದಕ್ಕೆ ಬೋರೆಹಣ್ಣು ಇಡಲಿದ್ದೇನೆ ಮೂಗಿಗೆ-
ಈಗ ನೀನು ಅಡ್ಡ ಬರಬೇಡ..
ನಿನ್ನೊನಪು ಒಯ್ಯಾರ ಈಕೆಗಿಲ್ಲ,
ಹಾಗಂತ ನಾನು ವಿಚಲಿತನಾಗಿಲ್ಲ..
ಇವಳು ಹಲವು ಕನಸುಗಳಿಂದೊಡೆದ ಚೂರುಗಳ ಒಟ್ಟುರೂಪ
ನೂರು ನಿರ್ನಿದ್ರೆ ರಾತ್ರಿಗಳ ನಿಟ್ಟುಸಿರ ಶಾಪ
ಹೊಸಪ್ರೀತಿಯಿಂದಲೇ ತುಂಬಬೇಕಿದೆ ಜೀವಭಾವ
ಹಾರೈಸಲಣಿಯಾಗು ಅಥವಾ ದಾರಿಬಿಟ್ಟು ನಿಲ್ಲು..
ತೀಡುಗಾಳಿಗೆ ಕಾರುಮೋಡಗಳು ತೇಲಿಹೋಗಲಿ
ಮಿಂಚ ಹೊಳಪಲಿ ಗುಡುಗಿನಬ್ಬರ ಕ್ಷೀಣವಾಗಲಿ
ಮತ್ತೆ ಹೊಮ್ಮಿ ಅರಳಲಿ ಚಿಕ್ಕೆ ಹೂದೋಟ
ನನ್ನ ಕಿನ್ನರಿಗಾಗಲಿ ಚಂದ್ರಿಕೆಯ ಪ್ರಭಾತ.
Subscribe to:
Posts (Atom)