Friday, February 26, 2016

ಮಾರುವೇಷ

ಭಾವಗಳ ಅಭಿವ್ಯಕ್ತಿ ಬಲು ಸುಲಭ ಈಗ.
ಬೆರಳಂಚಲ್ಲಿ ಎಮೋಟಿಕಾನುಗಳು:
ನಗುವೋ, ಮುಗುಳ್ನಗುವೋ, ಗಹಗಹವೋ,
ಅಳುವೋ, ಬೇಸರವೋ, ಕೋಪವೋ,
ಯಾವುದೆಂದರಿಯಲಾಗದ ಬರಿಮೌನವೋ-
ಹುಡುಕಿ ಕಳುಹಿಸಿದರೆ ಖಂಡಾಂತರ ದಾಟಿ
ತಲುಪಬೇಕಾದವರ ತಲುಪುವುದು ಕ್ಷಣದಲ್ಲೇ.
ಓಹೋ, ಅತ್ತಲಿಂದಲೂ ಪ್ರತಿಕ್ರಿಯೆ ಮರುಕ್ಷಣವೇ.

ವಾದಗಳ ಮಾಡುವುದೂ ಬಲು ಸುಲಭ ಈಗ.
ಬೆರಳಂಚಲ್ಲಿ ಮಾಹಿತಿಗಳ ಸಮೃದ್ಧಿ:
ನಂಬಿದ ಸೂತ್ರಗಳ, ಮೂಗನೇರ ಕಂಡ ದೃಶ್ಯಗಳ,
ಸುಳ್ಳುಗಳ, ನಿಜಗಳ, ಹೇಳಿದ್ದ, ಮಾಡಿದ್ದ, ನೋಡಿದ್ದ,
ಬರೆದಿದ್ದ, ತಿರುಚಿದ್ದ -ಏನು ಬೇಕೆಂದರದನ್ನ ಕ್ಷಣದಲ್ಲಿ ಹುಡುಕಿ ತೆಗೆದು
ಪ್ರಸ್ತುತಪಡಿಸಿ ಸಮಜಾಯಿಷಿ ನೀಡಿ ನಿಬ್ಬೆರಗಾಗುವಂತೆ
ದಾಖಲೆಯೊದಗಿಸಿ ಪಟ್ಟು ಸಡಿಲಿಸದೆ ಬಿಗಿಹಿಡಿದು.
ನೋನೋ, ಇಳಿಸಬೇಡಿ ಬಿಲ್ಲು, ಅತ್ತಲಿಂದಿನ್ನೇನು ಬರಲಿದೆ ತಿರುಗುಬಾಣ.

ಸಂಜೆಯಾಯಿತೋ, ಸೂರ್ಯ ಮುಳುಗಿದನೋ,
ಮುಟ್ಟಬೇಕಾದವರಿಗೆ ಮುಟ್ಟಿತೋ, ನಾಟಬೇಕಾದವರಿಗೆ ನಾಟಿತೋ,
ಕೊಡಬೇಕೆಂದುಕೊಂಡದ್ದನ್ನು ಕೊಟ್ಟಾಯಿತೋ-
ಮುಗಿಯಿತು ನಿಮ್ಮ ಕೆಲಸ.
ನಾಳೆ ಬೆಳಗಾದರೆ ಹೊಸ ಎಮೋಟಿಕಾನುಗಳು
ಪರದೆಯ ಮೇಲೆ ಹೊಳೆಯುತ್ತ ನರ್ತಿಸುತ್ತವೆ.
ಪ್ರತಿಪಾದಿಸಲು ಹೊಸ ವಿಷಯ ಸಿದ್ಧವಿರುತ್ತದೆ.
ಹಳೆಧೂಳ ಕೊಡವಿಕೊಂಡು ಮುಂದೆ ಹೋದರಾಯಿತು.

ಯಾರಲ್ಲಿ ಬಿಕ್ಕಳಿಸುತ್ತಿರುವವರು ನಮ್ಮ ಬಳಿ ಕರ್ಚೀಫ್ ಇಲ್ಲ.
ಯಾರಲ್ಲಿ ರಕ್ತ ಕಾರಿಕೊಂಡು ಬಿದ್ದವರು ಬ್ಯಾಂಡೇಡ್ ಮೆಡಿಕಲ್ಲಿನಲ್ಲಿ ಸಿಗುತ್ತದೆ.
ಯಾರಲ್ಲಿ ಬಿದ್ದೂಬಿದ್ದು ನಗುತ್ತಿರುವವರು ಬೀಳಲಿ, ಈಗ ನಮಗೆ ಪುರುಸೊತ್ತಿಲ್ಲ.
ಯಾರಲ್ಲಿ ಹಸಿದು ಅಡ್ಡಾದವರು ಮೊಬೈಲಲ್ಲೇ ಊಟ ಆರ್ಡರ್ ಮಾಡ್ಬಹುದು,
ಆದರೆ ಅವನಿಗೆ ವಿಳಾಸವಿಲ್ಲವಲ್ಲ.

ಪರರ ಪಾಡು ಕಡೆಗಿರಲಿ, ಈಗಷ್ಟೆ ನಾನು ತಿಂದ ಪಲಾವಿನ ರುಚಿ ಹೇಗಿತ್ತು,
ದಾಟಿ ಬಂದ ಹೂಬನದಲ್ಲಿ ಯಾವ ಕಂಪಿತ್ತು, ಸ್ನಾನ ಮಾಡಿದ ನೀರು
ಎಷ್ಟು ಬೆಚ್ಚಗಿತ್ತು, ಕೇಳಿಸಿದ ದನಿಯಲ್ಲಿ ಎಷ್ಟು ಮಾರ್ದವವಿತ್ತು,
ಆ ಸಾಲ್ಸಾ ನೃತ್ಯದಲದೆಂತ ಸೊಬಗಿತ್ತು ಅಂತೆಲ್ಲ ಯೋಚಿಸಲೂ ಸಮಯವಿಲ್ಲ.

ಬಟ್ಟೆಯ ಮೇಲೆ ಬಟ್ಟೆಯ ಧರಿಸಿ ಏನೂ ತಾಕುತ್ತಿಲ್ಲ.
ಕಡುಗಪ್ಪು ಕನ್ನಡಕದ ಮೂಲಕ ಏನೂ ಕಾಣಿಸುತ್ತಿಲ್ಲ.
ಬಳಿದುಕೊಂಡ ಢಾಳ ಬಣ್ಣ ದಾಟಿ ಏನೂ ಇಳಿಯುತ್ತಿಲ್ಲ.
ಇಯರ್ಫೋನು ಕಿವಿಯೊಳಗೇ ಹೊಕ್ಕು ಏನೂ ಕೇಳಿಸುತ್ತಿಲ್ಲ.

ನಿನ್ನೆ ಏನಾಯಿತು ಗೊತ್ತಾ?
ಕನ್ನಡಿಯೊಳಗೆ ನನ್ನನ್ನೇ ನಾನು ನೋಡಿಕೊಂಡು ಬೆಚ್ಚಿಬಿದ್ದೆ. 

Tuesday, February 09, 2016

ಕದ, ಬೆಳಕು ಮತ್ತು ಸದ್ದು

ಕದ ಹಾಕುವುದು ಸದ್ದಡಗುವ ಮುನ್ಸೂಚನೆ.
ದೀಪ ನಿಧಾನಕೆ ಡಿಮ್ಮಾಗುತ್ತಾ ಪೂರ್ತಿ ಕತ್ತಲಾವರಿಸಿದಮೇಲೆ
ಅಂಬಲದ ತುಂಬ ಮೌನದೊಡೆತನ, ಹೆಚ್ಚೆಂದರೆ ಪಿಸುಮಾತು.
ಆಮೇಲೆ ನಾಟಕವೋ ಸಿನಿಮಾವೋ ಶುರುವಾಗುವುದು ಸರಿಯೇ;
ಆದರೆ, ಆಶ್ಚರ್ಯ ನನಗೆ: ಈ ಕದ ಹಾಕುವ ದೀಪವಾರುವ ಪ್ರಕ್ರಿಯೆ
ಪ್ರತಿ ಸಲ ಮೌನದ ಕರೆಯಾಗುವ ರೀತಿಗೆ.

ಅಂತೂ ಅವತ್ತು ನಗರ ದಾಟುತ್ತಿದ್ದಂತೆಯೇ ನೈಟ್‌ಬಸ್ಸಿನ ಕದ ಹಾಕಲ್ಪಟ್ಟು,
ಆವಾರದಲ್ಲಿ ತುಂಬಿದ್ದ ಬೆಳಕೆಲ್ಲ ಆರಿ ನೀವಿನ್ನು ಮಲಗಬೇಕೂ
ಎಂಬ ಚಾಲಕನ ಮೌನ ತಾಕೀತಿಗೆ ಬೆದರಿ ಪ್ರಯಾಣಿಕರೆಲ್ಲ ಹರಟೆ ನಿಲ್ಲಿಸಿ
ಸೀಟು ಹಿಂದೆ ಮಾಡಿಕೊಂಡು ಕಣ್ಮುಚ್ಚಿಕೊಂಡು ನಿದ್ರಿಸಲೆಣಿಸುತ್ತಾ...

ಆದರೆ ಅವಳು ಮಾತ್ರ ಯಾಕೆ ಹಾಗೆ ಕಣ್ಬಿಟ್ಟುಕೊಂಡು...
ಎಲ್ಲರಿಂದ ಬೇರ್ಪಟ್ಟವಳಂತೆ, ಜನರಲ್ ವಾರ್ಡಿನ ನಿದ್ರೆ ಬಾರದ ರೋಗಿಯಂತೆ...
ಚಿರಂತನ ತಿಮಿರದಲ್ಲಿ ಮುಳುಗಿದವಳಂತೆ...

ಕತ್ತಲಾದಾಗಲಾದರೂ ಕಣ್ಮುಚ್ಚು. ಕಹಿಯನ್ನೂ, ಆತಂಕವನ್ನೂ,
ಜಗತ್ತನ್ನೂ ಮರೆ. ಹಾಗೆ ಕಿಟಕಿಯಿಂದ ಹೊರಗೆ ನಿರುಕಿಸಬೇಡ.
ಹಾಯುವ ವಾಹನಗಳ ಕೋರೈಸುವ ಬೆಳಕು
ನಿನ್ನ ಎದೆಬಡಿತ ಕಿತ್ತುಕೊಂಡಾವು. ಎವೆಯಿಕ್ಕು.
-ಎಂದೆಷ್ಟೇ ಅನುನಯದಿಂದ ಹೇಳಿದರೂ ರೆಪ್ಪೆಯಲ್ಲಾಡಿಸದೆ,
ಸೀಟಿಗೊರಗದೆ, ಚೂರೂ ಕದಲದೆ. ಹಾ! ಅವಳದದೆಂಥ ಹಟ.

ಆ ಅಪರಿಚಿತೆಯ ಕಣ್ಣಲ್ಲಿ ಪ್ರಜ್ವಲಿಸುತ್ತಿದ್ದ ಹಾಯ್ವ ವಾಹನಗಳ ಬೆಳಕು
ಈಗ ಈ ಕೋಣೆಯಲ್ಲಿ ನನ್ನ ನಿದ್ರೆಗೆಡಿಸುತ್ತಿರುವಾಗ
ಅವಳ ಹೃದಯದಲ್ಲಿದ್ದ ಕತ್ತಲೆಯ ಮೇಲೊಂದು ಕವಿತೆ ಬರೆಯಬೇಕಿದೆ.

ಕವಿತೆಯೇನು, ಕಲ್ಪನೆಯ ಸ್ವಚ್ಛಂದದಲ್ಲಿ ಕತೆಯೂ ಬರೆದೇನು.
ಸುತ್ತ ಕತ್ತಲಾವರಿಸಿದೆ, ರಂಗದ ಮೇಲೆ ಅಲ್ಲಲ್ಲಿ ಬೆಳಕಿದೆ.
ಅವಳ ಜೀವನದ ಪಾತ್ರಧಾರಿಗಳೆಲ್ಲ ಅಲ್ಲಿದ್ದಾರೆ.
ಅವರು ಹೆಜ್ಜೆಯಿಟ್ಟೆಡೆಗೆಲ್ಲ ಬೆಳಕೂ ಚಲಿಸುತ್ತಿದೆ.
ಇನ್ನೇನು, ಅವಳೆದೆಯ ಘನೀಕೃತ ಮೌನಕ್ಕೆ ಕಾರಣರಾರು,
ದೀಪವಾರಿಸಿದ ಗಾಳಿ ಯಾವ ದಿಕ್ಕಿನದು,
ಬಾಗಿಲು ಮುಚ್ಚಿದ ಕೈಯಲ್ಲೆಂಥ ಹೊಳೆವ ಉಂಗುರವಿತ್ತು
ಎಂದೆಲ್ಲ ಕಲ್ಪಿಸಿ ಬರೆದು ನಿರೂಪಿಸಬಲ್ಲೆ.

ಅಷ್ಟರಲ್ಲಿ ಚಕ್ಕನೆ ಹಿಂದಿಂದ ಕದ ತೆರೆದು ಬಂದವರಾರು?
ಶುರುವಲ್ಲೇ ಇದೆಂಥ ತಿರುವು?