Tuesday, June 17, 2025

ಬಡಿಸುವ ಬಳಗ

ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್‌ಲೈನ್ ನಂಬರಿಗೆ ಫೋನು ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್ ಆದನಂತರ ಫೋನ್ ಎತ್ತಿದ ಅಮ್ಮ, “ಎಂತಾದ್ರೂ ಅರ್ಜೆಂಟ್ ವಿಷಯ ಇದ್ರೆ ಹೇಳು. ಇಲ್ಲೇಂದ್ರೆ ಸಂಜೆ ವಾಪಸ್ ಮಾಡ್ತಿ. ನಾನು ಭದ್ರಾವತಿಗೆ ಬಡಿಸಕ್ಕೆ ಬೈಂದಿ. ಈಗ ಎರಡನೇ ಪಂಕ್ತಿ.  ಫುಲ್ ಬಿಜಿ” ಅಂತ ಹೇಳಿ, ನನ್ನ ಉತ್ತರಕ್ಕೂ ಕಾಯದೇ ಫೋನು ಕಟ್ ಮಾಡಿದಳು.  ಅಲ್ಲೇ ಊರು, ಪಕ್ಕದೂರು, ಪಕ್ಕದ ಸೀಮೆ ಅಂತ ಬಡಿಸಲು ಹೋಗುತ್ತಿದ್ದ ಅಮ್ಮ ಈ ಸಲ 70 ಮೈಲಿ ದೂರದ ಭದ್ರಾವತಿಗೆ ಬಡಿಸಲು ಬಂದಿರುವುದು ತಿಳಿದು ‘ಎಲಾ’ ಅಂದುಕೊಂಡೆ.  ಇನ್ನಷ್ಟು ಕಾಲ ಕಳೆದರೆ ಅಮ್ಮ ಒಂದು ದಿನ ಬೆಂಗಳೂರಿಗೂ ಬಡಿಸಲು ಬರಬಹುದೇನೋ ಅಂದುಕೊಂಡು ನಕ್ಕೆ.

ಅಮ್ಮ ಹೀಗೆ ಶುಭಕಾರ್ಯದ ಮನೆಗಳಿಗೆ ಊಟ ಬಡಿಸಲು ಹೋಗುವುದು ಹೊಸದೇನಲ್ಲ. ಆಕೆ ಒಂದು ಬಡಿಸುವ ಬಳಗವನ್ನು ಸೇರಿಕೊಂಡು, ಹೀಗೆ ಬಿಡುವಿನ ದಿನಗಳಲ್ಲಿ ಯಾವುದಾದರೂ ಶುಭಕಾರ್ಯಗಳಿದ್ದು ಕರೆ ಬಂದರೆ, ಆ ತಂಡದೊಂದಿಗೆ ಹೋಗಿ ಊಟವನ್ನು ಬಡಿಸಿ ಅಲ್ಲಿಯೇ ಊಟ ಮಾಡಿ ಬರುವುದು ನಾಲ್ಕೈದು ವರ್ಷಗಳಿಂದ ರೂಢಿಯಾಗಿದೆ. ಈ ಬಡಿಸುವ ಬಳಗ ಎಂಬುದು ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾಗದಲ್ಲಿ ಸಾಮಾನ್ಯವಾಗಿಹೋಗಿದೆ. ಮನೆಯಲ್ಲಿ ಮದುವೆ-ಮುಂಜಿ-ಚೌಲ-ತಿಥಿ ಮೊದಲಾದ ಕಾರ್ಯಕ್ರಮವಿದೆ ಎಂದಾದರೆ, ಓಲಗದವರು, ಮಂಟಪ ಕಟ್ಟುವವರು, ಪುರೋಹಿತರು, ಕೆಲಸದವರು, ಅಡುಗೆಯವರು ಇತ್ಯಾದಿ ಸೇವೆಯವರ ಜೊತೆ ಈ ಊಟಕ್ಕೆ ಬಡಿಸುವ ಬಳಗದವರಿಗೂ ಕರೆ ಕೊಡುವುದನ್ನು ಮರೆಯುವಂತಿಲ್ಲ. ಸೀಮೆಯ ಒಂದಷ್ಟು ಉತ್ಸಾಹಿ ಗಂಡಸರು-ಹೆಂಗಸರು ಸೇರಿ ಕಟ್ಟಿಕೊಂಡಿರುವ ಈ ‘ಬಡಿಸೋ ಸೆಟ್’ನ ನಾಯಕ ಅಥವಾ ನಾಯಕಿಗೆ ತಿಂಗಳುಗಳ ಮೊದಲೇ ಫೋನು ಮಾಡಿ ಬುಕ್ ಮಾಡಿಕೊಂಡಿದ್ದರೆ ಬಚಾವ್, ಅದಿಲ್ಲದಿದ್ದರೆ ಶುಭಕಾರ್ಯಗಳ ಸೀಸನ್ನುಗಳಲ್ಲಿ ಇವರು ಸಿಗುವುದೇ ಕಷ್ಟ.

ಮೊದಲಾದರೆ ಹೀಗಿರಲಿಲ್ಲ. ಊರಿನ ಯಾವುದೇ ಶುಭಕಾರ್ಯ, ತಿಥಿ ಅಥವಾ ಜನ ಸೇರುವ ಸಾಂಸ್ಕೃತಿಕ ಕಾರ್ಯಕ್ರಮವಿರಲಿ, ಗ್ರಾಮಸ್ಥರೇ ಪಂಚೆ-ಶಲ್ಯದೊಡನೆ ಬಂದು, ನೆಂಟರ ಪಂಕ್ತಿಗಳಿಗೆಲ್ಲ ಬಡಿಸಿ, ಕೊನೆಯ ಪಂಕ್ತಿಗೆ ತಾವು ಕುಳಿತು ಊಟ ಮಾಡಿ ಬರುತ್ತಿದ್ದರು.  ಯಾರದೇ ಮನೆಯಲ್ಲಿ ಜನ ಸೇರುವ ಯಾವುದೇ ಕಾರ್ಯಕ್ರಮವಿರಲಿ, ಗ್ರಾಮಸ್ಥರು ಎಲ್ಲ ಕೆಲಸಗಳಿಗೂ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಛತ್ರ-ಕಲ್ಯಾಣ ಮಂಟಪಗಳ ದರಬಾರು ಶುರುವಾಗುವ ಮೊದಲು ಎಲ್ಲ ಕಾರ್ಯಕ್ರಮಗಳೂ ಸ್ವಗೃಹಗಳಲ್ಲೇ ನಡೆಯುತ್ತಿದ್ದುದು.   ‘ನಮ್ಮೂರಲ್ಲಿ ಗ್ರಾಮಸ್ಥರ ಸಹಕಾರ-ಒಗ್ಗಟ್ಟು ತುಂಬಾ ಚೆನ್ನಾಗಿದೆ. ಹೀಗಾಗಿ ಎಷ್ಟು ದೊಡ್ಡ ಕಾರ್ಯ ಮಾಡೋಕೂ ಹಿಂಜರಿಕೆ ಇಲ್ಲ’ ಎಂದು ಮನೆಯ ಯಜಮಾನರು ನಿರಾಳವಾಗಿರುತ್ತಿದ್ದರು.   ಮನೆಯ ಅಂಗಳ ಹದಗೊಳಿಸುವುದು, ಚಪ್ಪರ ಹಾಕವುದು, ತೋರಣ ಕಟ್ಟುವುದು, ಮಂಟಪ ನಿರ್ಮಿಸುವುದು, ಕಾರ್ಯದ ಹಿಂದಿನ ದಿನ ದೊನ್ನೆ-ಬಾಳೆ ತಯಾರಿಸುವುದು, ಅಡುಗೆಗೆ ತರಕಾರಿ ಹೆಚ್ಚುವುದು, ಊಟ ಬಡಿಸುವುದು, ನಂತರ ಬಾಳೆಯೆಲೆ ತೆಗೆದು ನೆಲವನ್ನು ಸ್ವಚ್ಛಗೊಳಿಸುವುದು –ಎಲ್ಲವೂ ಗ್ರಾಮಸ್ಥರ ನೆರವಿನಿಂದಲೇ ಆಗುತ್ತಿದ್ದುದು. ಊರಲ್ಲೊಬ್ಬರ ಮನೆಯಲ್ಲಿ ಕಾರ್ಯಕ್ರಮ ಎಂದರೆ ಅದು ನಮ್ಮ ಮನೆಯದೇ ಕಾರ್ಯಕ್ರಮ ಎಂಬಂತೆ ಊರವರೆಲ್ಲ ಒಂದಾಗಿ ಅಲ್ಲಿರುತ್ತಿದ್ದರು ಮತ್ತು ಸಂಭ್ರಮಿಸುತ್ತಿದ್ದರು.

ಎಷ್ಟೇ ವಿಜ್ರಂಭಣೆಯ ಕಾರ್ಯವಾದರೂ ಎಲ್ಲರೂ ಕೊನೆಗೆ ಮಾತನಾಡುವುದು ‘ಊಟ ಹೇಗಿತ್ತು’ ಅಂತಲೇ ಎಂಬ ಮಾತಿದೆ.  ಹೀಗಾಗಿ ಒಳ್ಳೆಯ ಬಾಣಸಿಗರನ್ನು ಕರೆಸಿ ಒಳ್ಳೊಳ್ಳೆಯ ಅಡುಗೆ ಮಾಡಿಸುವ ಎಚ್ಚರ ಸಾಮಾನ್ಯವಾಗಿ ಯಜಮಾನರಿಗಿರುತ್ತದೆ. ರುಚಿಕಟ್ಟಾದ ಊಟ ತಯಾರಿಸಿದರೆ ಸಾಕೇ? ಅದನ್ನು ಬಂದವರಿಗೆ ಅಚ್ಚುಕಟ್ಟಾಗಿ ಬಡಿಸಬೇಕಷ್ಟೇ? ಹೀಗೆ ಬಡಿಸುವಲ್ಲಿ ನಾವೆಲ್ಲ ಗ್ರಾಮಸ್ಥರು ತುದಿಗಾಲಲ್ಲಿ ನಿಲ್ಲುತ್ತಿದ್ದೆವು. ಮೊದಲೇ ಸ್ವಚ್ಛಗೊಳಿಸಿದ ಬಾಳೆಯೆಲೆಗಳನ್ನು ಸಾಲಾಗಿ ಇರಿಸಿ, ಪ್ರತಿ ಎಲೆಯ ಪಕ್ಕವೂ ನೀರಿನ ಲೋಟವನ್ನಿರಿಸಿ, ನಂತರ ಎಡೆಶೃಂಗಾರಕ್ಕೆ ಪದಾರ್ಥಗಳನ್ನು ಬಡಿಸುವುದು. ಜನವೆಲ್ಲ ಬಂದು ಕುಳಿತು, ಊಟ ಶುರುಮಾಡಲು ಅಣತಿ ಸಿಕ್ಕ ನಂತರ, ಅನ್ನ-ಸಾರುವಿನಿಂದ ಶುರುವಾಗುವ ಬಡಿಸುವ ಸಾಲು ಕೊನೆಯ ಮಜ್ಜಿಗೆಯವರೆಗೆ ಅವ್ಯಾಹತ ನಡೆಯಬೇಕು. ಮೊದಲಿಗೆ ಯಾವ ಪದಾರ್ಥ ಹೋಗಬೇಕು, ನಂತರ ಯಾವ ಪದಾರ್ಥ, ಯಾವು ಖಾದ್ಯವನ್ನು ಬಾಳೆಯ ಯಾವ ಭಾಗದಲ್ಲಿ ಬಡಿಸಬೇಕು, ಯಾವುದಕ್ಕೆ ಎಷ್ಟು ಒತ್ತಾಯ ಮಾಡಬೇಕು –ಎಲ್ಲವನ್ನೂ ತಿಳಿದ ಅನುಭವಸ್ಥರೊಬ್ಬರು ಇದರ ಮೇಲ್ವಿಚಾರಕರಾಗಿ ನಿಂತಿರುವರು. ಅವರ ಸೂಚನೆಯಂತೆ ಬಡಿಸುವ ಕಾರ್ಯ ನಡೆಯುವುದು. ಊಟಕ್ಕೆ ನಿರೀಕ್ಷೆಗಿಂತ  ಜಾಸ್ತಿ ಜನ ಬಂದುಬಿಟ್ಟಿದ್ದರೆ, ಮಾಡಿಸಿದ ಯಾವುದಾದರೂ ಪದಾರ್ಥ ಕಡಿಮೆಯಾಗುವ ಸಾಧ್ಯತೆಯಿದ್ದರೆ, ಅದನ್ನು ಬಡಿಸುವಾಗ ಹೆಚ್ಚು ಒತ್ತಾಯ ಮಾಡುವಂತಿಲ್ಲ. ಅದೇ ಯಾವುದಾದರೂ ಪದಾರ್ಥ ಹೇರಳವಾಗಿದ್ದರೆ ಕೈಬಿಚ್ಚಿ ಬಡಿಸಬಹುದು: ಒಂದು ಜಿಲೇಬಿ ಹಾಕುವಲ್ಲಿ, ‘ದಾಕ್ಷಿಣ್ಯ ಮಾಡ್ಕೋಬೇಡಿ’ ಅಂತ ಹೇಳಿ ಎರಡು ಜಿಲೇಬಿ ಹಾಕಬಹುದು! ಮುಂದಿನ ಪಂಕ್ತಿಗೆ ತಿಳಿಸಾರು ಕಮ್ಮಿಯಾಗುವಂತೆ ಕಂಡರೆ ಸ್ವಲ್ಪ ನೀರು-ಉಪ್ಪು ಬೆರೆಸಿ ಇರುವುದನ್ನೇ ‘ಉದ್ದ’ ಮಾಡುವ ಕಲೆಯೂ ಈ ಮೇಲ್ವಿಚಾರಕರಿಗೆ ಸಿದ್ಧಿಸಿರುತ್ತೆ.  ಬಡಿಸುವವರಲ್ಲೂ ಹೆಚ್ಚು ನೈಪುಣ್ಯವಿರುವವರು ಅನ್ನ-ಸಾಂಬಾರು-ಸಿಹಿಗಳಂತಹ ದೊಡ್ಡ ಪದಾರ್ಥಗಳನ್ನು ವಹಿಸಿಕೊಂಡರೆ, ಅನನುಭವಿ ಚಿಕ್ಕ ಮಕ್ಕಳು ನೀರು ಬಡಿಸುವುದಕ್ಕೆ ಮೀಸಲು. ಹಿಂದೆ ನೆಲದಮೇಲೇ ಊಟ ಹಾಕಬೇಕಿದ್ದ ಕಾಲದಲ್ಲಿ ಬಗ್ಗಿ ಬಗ್ಗಿ ಬಡಿಸಿ ಕೊನೆಯ ಪಂಕ್ತಿಯ ಹೊತ್ತಿಗೆ ಬಡಿಸುವವರು ಸುಸ್ತಾಗಿಹೋಗುತ್ತಿದ್ದರು.  ಟೇಬಲ್ಲು-ಕುರ್ಚಿಗಳು ಬಂದಮೇಲೆ ಇದು ಸ್ವಲ್ಪ ಸುಲಭವಾಯಿತು.

ಹೀಗೆ ಬಡಿಸುವ ಜವಾಬ್ದಾರಿ ವಹಿಸಿಕೊಂಡ ಗ್ರಾಮಸ್ಥರು ಕೊನೆಯ ಪಂಕ್ತಿಗೆ ಊಟಕ್ಕೆ ಕೂರುವುದು ರೂಢಿ. ಕೆಲವೊಮ್ಮೆ ಕೊನೆಯ ಪಂಕ್ತಿಯ ಹೊತ್ತಿಗೆ ಮಾಡಿಸಿದ ಒಂದೆರಡು ಪದಾರ್ಥಗಳು ಖಾಲಿಯಾಗಿಬಿಟ್ಟಿರುತ್ತವೆ ಮತ್ತು ಅಷ್ಟೊತ್ತಿಗೆ ಬಹಳ ಸಮಯವೂ ಆಗಿ ಹಸಿವಾಗಿರುತ್ತದೆ.  ಹೀಗಾಗಿ, ಈ ಬಡಿಸುವ ಜನ ದೊಡ್ಡ ಪಾತ್ರೆಯಿಂದ ಎತ್ತಿಕೊಂಡು ಇನ್ನೇನು ಖಾಲಿಯಾಗಲಿರುವ ಬಜ್ಜಿ ತಿನ್ನುವುದೋ, ನೀರ್ಗೊಜ್ಜು ಕುಡಿಯುವುದೋ ಮಾಡಿ ಬುದ್ಧಿವಂತಿಕೆಯಿಂದ ಹೊಟ್ಟೆ ತುಂಬಿಸಿಕೊಂಡಿರುತ್ತಾರೆ. ಕೊನೆಯ ಪಂಕ್ತಿಗೆ ಊಟಕ್ಕೆ ಕೂರುವುದರ ಮಜವೂ ಬೇರೆಯೇ. ಅವರವರಲ್ಲೇ ಷರತ್ತು ಕಟ್ಟಿಕೊಂಡು ಜಿಲೇಬಿ ತಿನ್ನುವುದಿರಬಹುದು, ಹಾಡು-ಗ್ರಂಥಗಳನ್ನು ಎಸೆಯುವುದಿರಬಹುದು, ಪರಸ್ಪರ ತಮಾಷೆ ಮಾಡಿಕೊಳ್ಳುವುದಿರಬಹುದು –ಒಟ್ಟಿನಲ್ಲಿ ಕೊನೆಯ ಪಂಕ್ತಿ ಮುಗಿಯಲು ಹಿಂದಿನ ಪಂಕ್ತಿಗಳಿಗಿಂತ ಜಾಸ್ತಿ ಸಮಯ ಬೇಕು.

ಮಲೆನಾಡು-ಕರಾವಳಿಗಳ ಹಲವು ಊರುಗಳಲ್ಲಿ ಶುಭಕಾರ್ಯದ ಮನೆಗಳಲ್ಲಿ ಹೀಗೆ ಗ್ರಾಮಸ್ಥರೇ ನೆರವಾಗುವ ಪದ್ಧತಿ ಈಗಲೂ ಇದೆಯಾದರೂ, ಪ್ರಾಯಶಃ ಯುವಜನತೆಯು ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಿರುವುದರಿಂದ ಗ್ರಾಮಸ್ಥರೇ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗಿದೆ. ಹೀಗಾಗಿ ಹಲವು ಕೆಲಸಗಳಿಗೆ ಹೊರಗುತ್ತಿಗೆ ಕೊಡುವುದು ಅನಿವಾರ್ಯವಾಗಿದೆ. ಈ ಅನಿವಾರ್ಯತೆಯಿಂದಾಗಿಯೇ ಹುಟ್ಟಿಕೊಂಡಿರುವುದು ‘ಬಡಿಸುವ ಬಳಗ’ಗಳು.

ಮೊದಮೊದಲು ಎಲ್ಲೋ ತಾಲೂಕಿಗೆ ಒಂದೆರಡು ಇದ್ದ ಈ ಬಡಿಸುವ ತಂಡಗಳು ಈಗ ಊರಿಗೊಂದರಂತೆ ಇವೆ. ಪೈಪೋಟಿಯಂತೆ ಬಡಿಸುವ ಗುತ್ತಿಗೆ ವಹಿಸಿಕೊಳ್ಳುವ ಇವು ಆಸಕ್ತಿ ಮತ್ತು ಅವಶ್ಯಕತೆಯಿರುವವರಿಗೆ ಆದಾಯ ತರುವ ಉದ್ಯೋಗವನ್ನೂ ಸೃಷ್ಟಿಸಿವೆ.  ಲವಲವಿಕೆಯ ಗೆಳೆಯ-ಗೆಳತಿಯರ ಈ ಬಳಗಗಳು ದೂರದೂರುಗಳಿಗೂ ಪಯಣಿಸಿ ಅಪರಿಚಿತರಿಗೆ ಉಣಬಡಿಸಿ, ತಾವೂ ಊಟ ಮಾಡಿ, ಬಡಿಸಿದ್ದಕ್ಕೆ ಹಣ ಪಡೆದು ಸಂಜೆಯೊಳಗೆ ಮನೆ ಸೇರಿಕೊಳ್ಳುವವು. ಕೆಲವು ಕಲ್ಯಾಣಮಂಟಪಗಳಲ್ಲಿ ಖಾಯಂ ಆಗಿ ನಿಯೋಜನೆಗೊಂಡಿರುವ ಬಡಿಸುವ ಬಳಗಗಳೂ ಇವೆ. ಬಡಿಸಲು ಸ್ವಯಂಸೇವಕರ ಕೊರತೆಯಿರುವ ಊರುಗಳಲ್ಲಿ ಈ ಬಳಗಗಳು ವರದಾನವೂ ಆಗಿವೆ. ಶಾಲೆ-ಕಾಲೇಜುಗಳಿಗೆ ಹೋಗುವ ಹುಡುಗರಿಗೆ ‘ಕೈಕಾಸು’ ಮಾಡಿಕೊಳ್ಳುವ ದಾರಿಯೂ ಆಗಿದೆ. ಎಷ್ಟೋ ಬಡ-ಮಧ್ಯಮ ವರ್ಗದ ಹುಡುಗರು, ತಮ್ಮ ಶಾಲೆ-ಕಾಲೇಜುಗಳಿಗೆ ರಜೆಯಿದ್ದ ದಿನಗಳಲ್ಲಿ ಇಂತಹ ಬಡಿಸುವ ತಂಡಗಳಲ್ಲಿ ಸೇರಿಕೊಂಡು ತಮ್ಮ ಖರ್ಚಿಗೆ, ಓದಿನ ಫೀಸಿಗೆ ದುಡ್ಡು ಮಾಡಿಕೊಳ್ಳುತ್ತಾರೆ. ಬೇಸಿಗೆ ರಜೆ ಮುಗಿಯುವಷ್ಟರಲ್ಲಿ ಎಷ್ಟೋ ಹುಡುಗರ ಕಾವಿ ಪಂಚೆಗಳು ಸವೆದು ಹೋಗಿರುತ್ತವೆ.

ರಾತ್ರಿ ನಾವು ಊಟಕ್ಕೆ ತಯಾರಿ ನಡೆಸುತ್ತಿದ್ದಾಗ, ಭದ್ರಾವತಿಯಿಂದ ವಾಪಸು ಬಂದ ಅಮ್ಮ ಫೋನ್ ಮಾಡಿ, ಇವತ್ತು ತಾನು ಬಡಿಸಲು  ಹೋಗಿದ್ದ ಮದುವೆಮನೆಗೆ ದೊಡ್ಡದೊಡ್ಡ ರಾಜಕಾರಣಿಗಳು - ಸಿನೆಮಾ ನಟನಟಿಯರು ಬಂದಿದ್ದರೆಂದೂ, ಅವರಿಗೆಲ್ಲ ಊಟ ಬಡಿಸಿ ತನಗೆ ಖುಷಿಯಾಯ್ತು ಅಂತಲೂ ಹೇಳಿದಳು.  ‘ಸೆಲ್ಫಿ ತೆಕ್ಕಂಡಿದ್ದಿ. ಅಪ್ಪ ಬಂದಕೂಡ್ಲೇ ಕಳಿಸಕ್ಕೆ ಹೇಳ್ತಿ’ ಎಂದಳು. ಯಾರದೋ ಮದುವೆಗೆ ಬಂದಿದ್ದ ಯಾವುದೋ ಸೆಲೆಬ್ರಿಟಿಗಳಿಗೆ ಯಾರೋ ತಯಾರಿಸಿದ ಅಡುಗೆಯನ್ನು ಬಡಿಸಿ ಖುಷಿ ಪಡುವ ಅಮ್ಮ ಮತ್ತು ಈ ವ್ಯವಸ್ಥೆಯ ಬಗ್ಗೆ ಯೋಚಿಸುತ್ತಾ, ಅಪ್ಪ ಕಳುಹಿಸಲಿರುವ ಸೆಲ್ಫಿಗೆ ಕಾಯುತ್ತಾ, ನಾವು ಊಟದ ತಯಾರಿ ಮುಂದುವರೆಸಿದೆವು.

[ಈ ಬರಹದ ಸಂಕ್ಷಿಪ್ತ ರೂಪವು 2024ರ 'ಕಾಲನಿರ್ಣಯ' ಕ್ಯಾಲೆಂಡರಿನಲ್ಲಿ ಪ್ರಕಟಗೊಂಡಿದೆ.]

Friday, April 12, 2024

ಉತ್ತಿ ಬಿತ್ತಿದ್ದು

ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು
ತಿಕ್ಕಬೇಕವನ್ನು ಗಸಗಸ ಪ್ರತಿದಿನ
ಇರಿಸಿಕೊಳ್ಳಬೇಕು ಆದಷ್ಟೂ ಸ್ವಚ್ಛ
ಚಾಕ್ಲೇಟು ಬಿಸ್ಕೇಟುಗಳ ಕಡಿಮೆ ಮಾಡಿ
ತರಹೇವಾರಿ ಟೂತ್‌ಪೇಸ್ಟು ಬಳಸಿ
ಆದಾಗ್ಯೂ ಬಿದ್ದರೆ ಕುಳಿ, ತುಂಬಿಸಿ ಬೇಗಡೆ

ಹೀಗೆ ಸಹಜವಾಗಿ ಬಿದ್ದು ಅದಾಗೇ ಹುಟ್ಟುವ
ವಸ್ತು-ವಿಷಯಗಳ ಬಗ್ಗೆ ಅಷ್ಟು ಚಿಂತಿಸಬೇಕಿಲ್ಲ ಬಿಡು

ಆದರೆ ಕೆಲವೊಂದನ್ನು ನಾವೇ ಬಿತ್ತಿ ಬೆಳೆಸಬೇಕು
ಒಳ್ಳೆಯ ಬೀಜವನ್ನೇ ಆಯ್ದು, ಒಳ್ಳೆಯ ಗೊಬ್ಬರ ಹಾಕಿ,
ಪಾತಿ ಮಾಡಿ ನೆಟ್ಟು, ದಿನವೂ ನೀರೆರೆದು, ಕಳೆ ತೆಗೆದು,
ದಾಳಿ ಮಾಡುವ ಹಕ್ಕಿಪಿಕ್ಕಿ ಕಾಡುಮೃಗಗಳಿಂದ ಕಾಪಾಡಿಕೊಂಡು
ಫಲ ತೆಗೆಯುವುದೊಂದು ಧ್ಯಾನ ಮಗಳೇ...
ಬೀಜ ಬಿತ್ತುವುದಕ್ಕೂ ಮೊದಲು ಮಾಡಿಸಿರಬೇಕು ಮಣ್ಣಿನ ಪರೀಕ್ಷೆ
ಎಲ್ಲ ಗಿಡಗಳೂ ಎಲ್ಲ ಹವೆಯಲ್ಲೂ ಬೆಳೆಯುವುದಿಲ್ಲ
ಕೃಷಿಗೆ ಕೈ ಹಾಕುವ ಮೊದಲೇ ತಿಳಕೊಂಡಿರಬೇಕು ರೈತಧರ್ಮ

ಹಾಗೆ ಉತ್ತಿ ಬಿತ್ತಿಯೇ ಬೆಳೆಯಬೇಕು
ಒಳ್ಳೆಯ ಗೆಳೆಯರ ಒಳ್ಳೆಯ ವ್ಯಸನಗಳ
ಒಳಿತೆನಿಸಿದ ದಾರಿಯ ಸರಿಯೆನಿಸಿದ ಆಯ್ಕೆಗಳ
ಗಟ್ಟಿ ನಿರ್ಧಾರಗಳ ತಳೆವ ಧೃತಿಯ
ಹದಗೊಳಿಸಿಕೊಳ್ಳಬೇಕು ನಿನ್ನ ಮನವ ನೀನೇ

ಎಷ್ಟೆಲ್ಲ ವಹಿಸಿದರೂ ಜಾಗ್ರತೆ,
ಬಂದುಬಿಡಬಹುದು ಒಮ್ಮೊಮ್ಮೆ ಹಲ್ಲುನೋವು
ಸಹಿಸಬೇಕು ತುಟಿ ಕಚ್ಚಿ
ತಲುಪಿದರದು ಸಹಿಸಲಾಗದ ಹಂತ
ಇರಬೇಕು ಕಿತ್ತೊಗೆಯುವಷ್ಟು ಸ್ಥೈರ್ಯ

ಎಲ್ಲವನ್ನೂ ನಾ ಹೇಳಿಯೇ ನೀ ತಿಳಿದುಕೊಳ್ಳಬೇಕಂತಲ್ಲ;
ಆದರೆ ಈಗ ಹುಟ್ಟುವ ಈ ಹೊಸ ಹಲ್ಲುಗಳು
ನಿನಗೆ ಎಂಬತ್ತೋ ತೊಂಬತ್ತೋ ವರ್ಷವಾದಾಗ
ಮತ್ತೆ ಅಲುಗಲಾರಂಭಿಸುತ್ತವೆ...
ಆಗ ಅಕಸ್ಮಾತ್ ನೀನಿದನ್ನು ಓದಿದರೆ,
ನನಗೆ ನಂಬಿಕೆಯಿದೆ:
ಆಗಷ್ಟೆ ಹಲ್ಲು ಬಿದ್ದ ನಿನ್ನ ಮರಿಮಕ್ಕಳಿಗೆ
ಇದನ್ನು ಓದಿ ಹೇಳುವೆ.

ಡಿಲೀಟೆಡ್ ಮೆಸೇಜ್


ಡಿಲೀಟಿಸಿದ ಮೆಸೇಜುಗಳಿಗಿಂತ ಕಾವ್ಯವಿಲ್ಲ
ತುಂಬಿರುತ್ತವೆ ಅದರಲ್ಲಿ ಎಷ್ಟೋ ಅವ್ಯಕ್ತ ಭಾವಗಳು
ಪರರ ಮನಕಿಳಿದು ಪರಾಮರ್ಶಿಸುವುದಿರಲಿ,
ಕ್ಷಣ ನಿಂತು ಊಹಿಸುವಷ್ಟೂ ಸಮಯವಿಲ್ಲದ ಜಂಜಾಟದ ಈ ದಿನಗಳಲ್ಲಿ
ಏನನೋ ಕಳುಹಿಸಿ ಮರುಕ್ಷಣದಲ್ಲಿ ಅಳಿಸುವ
ಧಾರ್ಷ್ಟ್ಯ ತೋರುವೆಯಲ್ಲ, ಇರುವರೇ ನಿನಗಿಂತ ದುಷ್ಟರು ಈ ಜಗದಲ್ಲಿ?

ಹೇಳದೇ ಸುಮ್ಮನುಳಿದರೆ ಅದೊಂದು ರೀತಿ
ಕ್ಷಮಿಸಿಬಿಡಬಹುದು ಮೌನವನ್ನು
ಆದರೆ ನೀ ಹೇಳಿದಾಕ್ಷಣ ನಾನು ಕೇಳಿಸಿಕೊಳ್ಳಲಿಲ್ಲ
ಎಂಬುದನ್ನೇ ಲಾಭವಾಗಿ ಬಳಸಿ
ನೀನು ಹೀಗೆ ಮಾಡುವುದು ಎಷ್ಟು ಸರಿ?
ಮಾತಿಗೂ ಇದೆಯೇ ವ್ಯಾಲಿಡಿಟಿ?

ಹಿಂದೆಲ್ಲ ಹೇಳುತ್ತಿದ್ದರು: ಮಾತು ಆಡಿದರೆ ಹೋಯ್ತೆಂದು
ಈಗ ಹಾಗೇನಿಲ್ಲ, ಆಡಿದ ಮಾತನು ವಾಪಸು ಪಡೆಯಬಹುದು
ಹೇಳಿಯೇ ಇಲ್ಲವೆಂದು ವಾದಿಸಬಹುದು
ಇಲ್ಲ ಇಲ್ಲ, ಏನೋ ಹೇಳಿದ್ದೆ, ಮತ್ತೊಮ್ಮೆ ಹೇಳು
ಎಂದು ಎಷ್ಟು ಗೋಗರೆದರೂ
ರೈಲು ಹೋದಮೇಲೆ ಟಿಕೇಟಿಲ್ಲ ಎಂದು
ಡೈಲಾಗು ಹೊಡೆಯುತ್ತೀ

ಜೀವವಿಲ್ಲದ ವಾಟ್ಸಾಪು ನಿರ್ವಿಕಾರವಾಗಿ ತೋರಿಸುತ್ತೆ:
'This message was deleted'.
ಯಾರಿಗೋ ಕಳುಹಿಸುವ ಓಲೆಯ ತಪ್ಪಾಗಿ ನನಗೆ ಕಳುಹಿಸಿದೆಯೋ
ಅವಸರದಲ್ಲಿ ಏನೋ ಹೇಳಿ ನಂತರ ಬೇಡವೆಂದಳಿಸಿದೆಯೋ
ಅಥವಾ ನೀನಾಡಿದ್ದನ್ನು ತಕ್ಷಣವೇ ಕೇಳಿಸಿಕೊಳ್ಳಲಿಲ್ಲವೆಂದು
ಕೋಪಗೊಂಡು ಮಾತನ್ನೇ ನಿರ್ನಾಮ ಮಾಡಿದೆಯೋ
ಯಾರು ಪರಿಹರಿಸುವರು ಅನಂತ ಗೊಂದಲಗಳ?

ಉತ್ತರಕ್ಕೆಂದು ಆಕಾಶ ನೋಡಿದರೆ
ದುರುಗುಟ್ಟುವ ಸೂರ್ಯ ಕಣ್ಣು ಕುಕ್ಕಿ,
ವಾಪಸು ಮೊಬೈಲು ನೋಡಿದರೆ ಬವಳಿ ಬಂದಂತಾಗಿ
ಒಂದು ಎಳನೀರಿಗೆ ಐವತ್ತು ರೂಪಾಯಿ
ಕುಡಿಯುವ ನೀರಿಗೂ ತತ್ವಾರ
ಎಲ್ಲಿದೆ ಪ್ರೀತಿ - ನಂಬಿಕೆ - ಭರವಸೆಗಳಿಗೆ ಅರ್ಥ?


ಕಿಂಚಿತ್ತು ಮೌನ

ಇಂಥದೇ ಒಂದು ಬಿರುಬಿಸಿಲಿನ ಮಧ್ಯಾಹ್ನ
ಅಚಾನಕ್ಕಾಗಿ ಶೋರೂಮೊಂದರ ಒಳಹೊಕ್ಕ ಆಗಂತುಕ
ಅಲ್ಲಿಟ್ಟಿದ್ದ ನೂರಾರು ಟೀವಿಗಳನ್ನು ನೋಡಿ ಅವಾಕ್ಕಾದ
ಹಲವು ಬ್ರಾಂಡುಗಳು ಹಲವು ಅಳತೆಗಳು
ಒಂದೊಂದಕ್ಕೂ ಒಂದೊಂದು ಬೆಲೆ
ಪ್ರತಿ ಟೀವಿಯಲ್ಲೂ ಬೇರೆಬೇರೆ ದೃಶ್ಯಗಳು

ಕೆಲವು ಟೀವಿಗಳಲ್ಲಿ ದೈನಂದಿನ ಧಾರಾವಾಹಿ, ಸಂಸಾರದಲ್ಲಿ ಕಲಹ
ಮತ್ತೊಂದರಲ್ಲಿ ಯಾವುದೋ ಸಿನೆಮಾ,‌ ಸಮಸ್ಯೆಯಲ್ಲಿ ಹೀರೋ
ತಾಜಾ ಸುದ್ದಿ ತೋರಿಸುವ ಕೆಲವು ಟೀವಿಗಳಲ್ಲಿ ಅಪಘಾತದ ಚಿತ್ರಗಳು
ಮತ್ತೆ ಕೆಲವದರಲ್ಲಿ ಕ್ರಿಕೆಟ್ಟು ಫುಟ್‌ಬಾಲ್ ದೈತ್ಯದೇಹಿಗಳ ಬಡಿದಾಟ

ಒಂದು ಟೀವಿಯನ್ನು ಕೊಂಡೊಯ್ದೇ ಬಿಡೋಣ ಎಂದುಕೊಂಡ
ಸಾ...ರ್, ಇದಕ್ಕೆ ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟು ಸಾರ್..
ಇದರ ಜೊತೆ ಸೆಟ್‌ಟಾಪ್ ಬಾಕ್ಸ್ ಫ್ರೀ ಸರ್.. ಸ್ಮಾರ್ಟ್ ಟೀವಿ ಸಾರ್,
ಇದನ್ನು ಕೊಂಡರೆ ಒಟಿಟಿಯೆಲ್ಲ ಆರು ತಿಂಗಳು ಪುಕ್ಕಟೆ ಬರ್ತವೇ
ಅಲ್ಟ್ರಾ ಎಚ್‌ಡಿ ಸಾರ್, ಸರೌಂಡ್ ಸೌಂಡು, ಥಿಯೇಟರ್ ಎಫೆಕ್ಟು

ಒಂದು ಟೀವಿಯ ಜತೆಜತೆ ಏನೆಲ್ಲ ಬರುವವು...
ಹಾಡು ನೃತ್ಯ ಹಾಸ್ಯ ಫೈಟಿಂಗ್ ಮರ್ಡರ್ ಮಿಸ್ಟರಿ
ಸಪ್ತಸಾಗರದಾಚೆಯ ಬೆಟ್ಟದಲಿ ಸುರಿಯುತ್ತಿರುವ ಲಾವಾ
ದ ಬಗೆಗಿನ ವಿವರಣೆ ವಿಶ್ಲೇಷಣೆ ಕೌತುಕ
ಇಪ್ಪತ್ನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್
ಸುಂದರಿಯ ಹಾರುಮುಂಗುರುಳೂ, ಸಣ್ಣ ಮಗುವಿನ ಕಣ್ಣೀರೂ,
ನೀರಿನಿಂದ ಛಂಗನೆ ಜಿಗಿದ ಶಾರ್ಕಿನ ಶಾರ್ಪುಹಲ್ಲೂ
ಹೈ ಡೆಫಿನಿಷನ್ನಿನಲ್ಲಿ ಎಷ್ಟು ಸ್ಪಷ್ಟವಾಗಿ ಕಾಣುವವು...

ಒಂದು ಟೀವಿಯ ಜತೆಗೆ ಎಷ್ಟೊಂದು ಸುದ್ದಿ ವಿವರ ಮನರಂಜನೆಗಳ
ಮೂಟೆ ಕಟ್ಟಿ ಒಯ್ದು ಮನೆಯ ಜಗಲಿಯ ತುಂಬಿಸಿಬಿಡಬಹುದು
ಕದಡಿಬಿಡಬಹುದು ನೀರವವ ರಿಮೋಟಿನೊಂದು ಗುಂಡಿಯಿಂದ

ಯಾವುದನ್ನು ಕೊಳ್ಳಲಿ ಯಾವುದನ್ನು ಕೊಳ್ಳಲಿ
ಇಡೀ ಶೋರೂಮನ್ನು ಮತ್ತೊಂದು ಸುತ್ತು ಹಾಕಿದ ಆಗಂತುಕ
ಹಿಂದಿಂದೇ ಬರುತ್ತಿದ್ದ ಸೇಲ್ಸ್‌‌ಮನ್
ಇತ್ತಲೇ ಇತ್ತು ಬಿಲ್ಲಿಂಗ್ ಕೌಂಟರಿನಲ್ಲಿದ್ದ ಯಜಮಾನನ ಕಣ್ಣು

ಚಲಿಸುವ ಚಿತ್ರಗಳ ತೋರುವ ಸಾಲುಸಾಲು ಪರದೆಗಳ ನಡುವೆ
ಒಂದು ಆಫ್ ಆಗಿದ್ದ ಟೀವಿ..
ಎಲ್ಲ ಟೀವಿಗಳೂ ಮ್ಯೂಟಿನಲ್ಲಿದ್ದರೂ
ಈ ಆಫಾದ ಟೀವಿಮೊಗದಲಿ ಮಾತ್ರ ಶಾಂತಮೌನವಿದ್ದಂತಿತ್ತು

ಕ್ಷಣ ಯೋಚಿಸಿ ಹೇಳಿದ ಆಗಂತುಕ:
ಸಾರ್, ಇದನ್ನೇ ಕೊಡಿ‌.

ಸ್ಕೂಲ್ ಟ್ರಿಪ್

ಶಾಲಾಪ್ರವಾಸ ಹೊರಟ ಮಗಳು
ಬಸ್ಸಿನ ಕಿಟಕಿಯಿಂದ ಕೈ ಬೀಸಿದಳು
ಅಪ್ಪ-ಅಮ್ಮರ ಜತೆಯಿಲ್ಲದೆ ಮೊದಲ ಪಯಣ:
ಸರ್ವಸ್ವತಂತ್ರ, ಯಾರೂ ಹಿಡಿವವರಿಲ್ಲವೆನಿಸಿದರೂ
ಸಣ್ಣ ಭಯ ಇದ್ದದ್ದೇ ಎದೆಯೊಳಗೆ;
ಅಪ್ಪ-ಅಮ್ಮರಿಗಿರುವಷ್ಟಲ್ಲ, ಅಷ್ಟೇ!
ಸುತ್ತಲೆಲ್ಲ ಗೆಳೆಯರು,‌ ಕಾಯಲೊಬ್ಬ ಮ್ಯಾಮು
ಹಾಡು ಮಾತು ಆಟ ಅಂತ್ಯಾಕ್ಷರೀ ಕುರ್ಕುರೇ

ಮೊದಲು ನೋಡಿದ್ದೇ ಜಾಗ,‌ ಈಗ ಗೆಳೆಯರೊಡನಿರುವಾಗ
ಹೇಗೆ ಎಲ್ಲ ಬೇರೆಯೆನ್ನಿಸುತ್ತಿದೆ..
ಮನೆಯಲ್ಲಿ ಸೇರದ ಇಡ್ಲಿ, ಉಪ್ಪಿಟ್ಟು,
ಬಿಸಿಬೇಳೆಬಾತುಗಳು ಇಲ್ಲಿ ಹೇಗೆ ಇಷ್ಟವಾಗುತ್ತಿದೆ..
ಶಾಲೆಯಲ್ಲಿ ಕಟ್ಟುನಿಟ್ಟೆನಿಸುವ ಟೀಚರು
ಇಲ್ಲಿ ಹೇಗೆ ಎಲ್ಲರೊಂದಿಗೆ ನಗುನಗುತ್ತಿದ್ದಾರೆ..
ಅರೆ, ಅವರೂ ಹಾಡುತ್ತಿದ್ದಾರೆ, ಆಡುತ್ತಿದ್ದಾರೆ,
ನಮ್ಮೊಡನೆಯೇ ತಿನ್ನುತ್ತಿದ್ದಾರೆ, ಖಾರಕ್ಕೆ ಬಾಯಿ ಸೆಳೆಯುತ್ತಿದ್ದಾರೆ..

ಇತ್ತ ಮಗಳಿಲ್ಲದೇ ಮನೆಯೆಲ್ಲ ಬಿಕೋ ಬಿಕೋ..
ಹುಷಾರಾಗಿ ತಲುಪಿದಳೇ ಮಗಳು
ವಾಂತಿಯಾಯಿತೇ ಬಸ್ಸಿನಲ್ಲಿ
ಹುಡುಹುಡುಗರು ತಳ್ಳಾಡಿಕೊಂಡು ಬಿದ್ದರೋ
ತಿಂದಳೋ ಕೊಟ್ಟ ಊಟ ದಾಕ್ಷಿಣ್ಯ ಬಿಟ್ಟು

ಅಪ್ಪ-ಅಮ್ಮರಿಗೂ ತಮ್ಮ ಶಾಲೆಯ ಪ್ರವಾಸದ ನೆನಪು:
ಪಕ್ಕದೂರ ದೇವಸ್ಥಾನಕ್ಕೆ ಕರೆದೊಯ್ದಿದ್ದ
ಪ್ರೈಮರಿ ಶಾಲೆಯ ಒಳ್ಳೆಯ ಟೀಚರು
ಪಕ್ಕದ ತಾಲೂಕಿನ ಹೊಳೆದಂಡೆಗೆ ಕರೆದೊಯ್ದಿದ್ದ
ಮೆಡ್ಲಿಸ್ಕೂಲಿನ ಗುರುವೃಂದ
ಚಿತ್ರದುರ್ಗದ ಕಲ್ಲಿನಕೋಟೆಯ ತೋರಿಸುತ್ತ
'ಕನ್ನಡನಾಡಿನ ವೀರರಮಣಿಯ' ಹಾಡೇಬಿಟ್ಟಿದ್ದ
ಸಮಾಜಶಾಸ್ತ್ರದ ಮೇಷ್ಟ್ರು
ಅದು ಹೇಗೋ ಕೊನೆಯ ದಿನದ ಹೊತ್ತಿಗೆ
ಟೂರಿನ ದುಡ್ಡು ಹೊಂಚಿ ಕೊಡುತ್ತಿದ್ದ ಅಪ್ಪ
ಹಣ ಕೊಡಲಾಗದೆ ಸಪ್ಪಗಾಗಿದ್ದ ವಿದ್ಯಾರ್ಥಿಯ
ವೆಚ್ಚ ತಾವೇ ಭರಿಸಿದ್ದ ಹೈಸ್ಕೂಲಿನ ಹೆಡ್‌ಮೇಷ್ಟ್ರು..

ಕಾಲೇಜ್ ಪಿಕ್‌ನಿಕ್ಕಿನ ಬಸ್ಸಿನಲ್ಲಿ ಆ ಅತಿನಾಚಿಕೆಯ ಹುಡುಗಿ
ಪಕ್ಕದಲ್ಲೇ ಕುಳಿತುಕೊಳ್ಳುವಂತಾಗಿ ಮೈ ಬೆವರಿದ್ದು...
ಬೇರೆ ಹುಡುಗರೆಲ್ಲ ಸುಳ್ಸುಳ್ಳೇ ಹಾಡು ಕಟ್ಟಿ ಕಿಚಾಯಿಸುವಾಗ
ಟಚ್ಚುಟಚ್ಚಿಗೂ ಮೈ ಪುಳಕಗೊಂಡದ್ದು...

ಸಂಜೆಯಾಗುತ್ತಲೇ ಬಂದಿದೆ
ಮಗಳನು ಕರೆದೊಯ್ದಿದ್ದ ಬಸ್ಸು ಸುರಕ್ಷಿತ ವಾಪಸು
ಹಾರಿ ಇಳಿದ ವಿಜಯೀ ಮಗಳು ಬೀಗುತ್ತಿದ್ದಾಳೆ ಹಿಗ್ಗಿನಿಂದ
ಮನೆಯ ಹಾದಿಯಲಿ ಕಥೆಯೋ ಕಥೆ ಏನೇನಾಯ್ತು ಹೆಂಗೆಂಗಾಯ್ತು
ಏನೇನು ತಿಂದೆ ಏನೇನು ನೋಡಿದೆ ಏನೇನು ಮಾಡಿದೆ
ಅಜ್ಜ-ಅಜ್ಜಿಯರಿಗೆ ಫೋನಿಸಿ ವಿವರಿಸುತ್ತಿದ್ದಾಳೆ
ತಾನು ಮಾಡಿದ ಸಾಹಸಕಾರ್ಯ...

ಪೂರ್ವದಿಂದ ಪಶ್ಚಿಮಕ್ಕೆ ದಿನವೂ ಟೂರು ಹೋಗುವ ರವಿ
ಅಕೋ ಅಲ್ಲಿ ಕಿಟಕಿಯ ಗಾಜಿನಲ್ಲಿ ಹೊಳೆಯುತ್ತಿದ್ದಾನೆ ಫಳಫಳ
ಕಾದು ಕಾದು ಮೈಯೆಲ್ಲ ಕೆಂಪಾಗಿದ್ದರೂ,
ನನ್ನ ಮಗಳನೂ ಕಾದಿದ್ದಾನೆ ಇಡೀದಿನ.