Wednesday, December 29, 2010

ಇಹವ ಮರೆಸುವ ನಶೆಯ ಬೇಡುತ...

ನನ್ನ ಬೆಂಗಳೂರಿನ ಬ್ಯಾಚುಲರ್ಸ್ ಬಿಡಾರಕ್ಕೆ ಬಂದವರನೇಕರು “ಅರೆ, ನೀನು ಮನೇಲಿ ಟೀವೀನೇ ಇಟ್ಕೊಂಡಿಲ್ವಾ?” ಅಂತ ಕೇಳುತ್ತಾರೆ. ಅದ್ಯಾಕೋ, ಟೀವಿ ನನಗೊಂದು ಅವಶ್ಯಕ ವಸ್ತು ಅಂತ ಇದುವರೆಗೆ ಅನ್ನಿಸಿಯೇ ಇಲ್ಲ. ಇಷ್ಟಕ್ಕೂ ಯಾರಾದರೂ -ಅದರಲ್ಲೂ ನಗರವಾಸಿಗಳು- ಟೀವಿ ಇಟ್ಟುಕೊಳ್ಳುವುದಾದರೂ ಯಾಕೆ ಅಂತ ನಾನು ಯೋಚಿಸಿದ್ದಿದೆ. ಆಗ ನನಗೆ ಹೊಳೆದ ಕೆಲ ಪಾಯಿಂಟುಗಳು ಇವು: (೧) ನಿಮ್ಮ ಮನೆಯಲ್ಲಿ ದಿನವಿಡೀ ಮನೆಯಲ್ಲೇ ಇರುವವರಿದ್ದರೆ, ಐ.ಇ., ಕೆಲಸಕ್ಕೆ ಹೋಗದ ಹೆಂಡತಿ, ವಯಸ್ಸಾದ ತಂದೆ-ತಾಯಿ, ನಿರುದ್ಯೋಗಿ ಸಹೋದರಿ ಅಥವಾ ಸಹೋದರ -ಇವರ ಮನರಂಜನೆಗೆ ಟೀವಿ ಬೇಕಾದೀತು. ಅಥವಾ ನಿಮ್ಮದೇ ಬಿಡುವಿನ ವೇಳೆಯಲ್ಲಿ ಮನರಂಜನೆಗೆ ಬೇರ್ಯಾವುದೇ ಆಕರ ನಿಮಗಿಲ್ಲದಿದ್ದರೆ ಟೀವಿಯ ಮೊರೆ ಹೋಗಬಹುದು. (೨) ನಿತ್ಯದ -ಕ್ಷಮಿಸಿ- ಕ್ಷಣಕ್ಷಣದ ಸುದ್ದಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ನಿಮಗಿದ್ದರೆ, ಉದಾಹರಣೆಗೆ, (ಅ) ಶೇರುಪೇಟೆಯಲ್ಲಿ ಇಂಥಾ ಶೇರಿನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಬ) ಇಂಥಾ ಶಾಸಕನ ಬೆಲೆ ೧೦.೫೦ಕ್ಕೆ ಎಷ್ಟಿತ್ತು, ೧೦.೫೨ಕ್ಕೆ ಎಷ್ಟಾಯಿತು, (ಕ) ಸರ್ಕಾರದ ಯಾವ ಹಗರಣ ೧೦.೫೦ಕ್ಕೆ ಬಯಲಾಗಿತ್ತು, ೧೦.೫೨ಕ್ಕೆ ಯಾವುದಾಯಿತು, (ಡ) ಬಂಗಾರಪ್ಪ ೧೦.೫೦ಕ್ಕೆ ಯಾವ ಪಕ್ಷದಲ್ಲಿದ್ದರು, ೧೦.೫೨ಕ್ಕೆ ಯಾವುದಕ್ಕೆ ಹಾರಿದರು, ಇತ್ಯಾದಿ. (೩) ನೀವು ಕ್ರಿಕೆಟ್, ಇತ್ಯಾದಿ ಆಟದ ಹುಚ್ಚಿನವರಾಗಿದ್ದರೆ. (೪) ನೀವೇ ನಿತ್ಯ ಟೀವಿಯಲ್ಲಿ ಬರುವವರಾಗಿದ್ದರೆ! ಉದಾ, ನೀವು- ನಟ/ನಟಿ/ ಲೈಮ್‌ಲೈಟಿನಲ್ಲಿರುವ ತಾರೆ, ಸಂದರ್ಶಕ, ಯಾಂಕರು, ಹಳ್ಳಿಗೋ ಕಾಡಿಗೋ ಸುಡುಗಾಡಿಗೋ ಹೋಗೋ ಪ್ಯಾಟೆ ಹುಡ್ಗಿ -ಆಗಿದ್ದರೆ. (೫) ನೀವು ಅಮೃತಾಂಜನದ ವಾಸನೆಯ ವ್ಯಸನಿಯಾಗಿದ್ದರೆ, ಅಂದರೆ, ಟೀವಿ ನೋಡಿ ತಲೆನೋವು ಬರಿಸಿಕೊಂಡು ಅಮೃತಾಂಜನ ಸವರಿಕೊಂಡು ಸುಖ ಅನುಭವಿಸುವ ಜಾತಿಯವರಾಗಿದ್ದರೆ ....ನಿಮಗೆ ಟೀವಿ ಬೇಕಾಗಬಹುದು.

ನನಗೆ ಈ ಯಾವ ನಂಬರೂ ತಾಳೆ ಹೊಂದದ ಕಾರಣ ನಾನು ಟೀವಿ ಇಟ್ಟುಕೊಂಡಿಲ್ಲ ಅಂತ ಅಂದುಕೊಂಡಿದ್ದೇನೆ. ಅಲ್ಲದೇ ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ವಾಪಸು ತಲುಪುವ ನಾನು, ಆಮೇಲೆ ಅಡುಗೆ ಮಾಡಿಕೊಂಡು ಉಂಡು, ಪಾತ್ರೆ-ಗೀತ್ರೆ ತೊಳೆದು, ಆ-ಈ ಮ್ಯಾಗಜೀನುಗಳನ್ನು ಓದಿ ಮುಗಿಸಿ, ಪುಸ್ತಕದ ಗೂಡಿನಲ್ಲಿರುವ ಓದದ ಪುಸ್ತಕಗಳನ್ನು ಓದಿ, ಹಾರ್ಡ್‌ಡಿಸ್ಕಿನಲ್ಲಿರುವ ಸಿನೆಮಾ ನೋಡಿ, ಅಷ್ಟರಮೇಲೆ ಬರೆಯುವ ತಲುಬು ಬಂದರೆ ಬರೆದು -ಇಷ್ಟೆಲ್ಲಾ ಮಾಡುವಷ್ಟರಲ್ಲಿ ಬೆಳಗಾಗಲಿಕ್ಕೆ ಇನ್ನು ನಾಲ್ಕೇ ತಾಸಿರುವುದು ಎಂಬ ಸತ್ಯ ಹೊಳೆದು, ಆಹ್- ಇನ್ನು ಟೀವಿ ಎಷ್ಟೊತ್ತಿಗೆ ನೋಡಲಿ, ನಿದ್ರೆ ಎಷ್ಟೊತ್ತಿಗೆ ಮಾಡಲಿ! (ಇದನ್ನೆಲ್ಲಾ ಹೇಳುವುದೂ ಕಷ್ಟ; ಜನ ಮದ್ವೆ ಮಾಡ್ಕೋ ಅಂತಾರೆ!) ಅಲ್ಲದೇ, ನನಗೆ ಜಾಹೀರಾತುಗಳ ಮಧ್ಯದಲ್ಲಿ ಅಷ್ಟಿಷ್ಟು ಸಿನೆಮಾ ನೋಡುವುದಕ್ಕಾಗಲಿ, ಹೇಳಿದ ಸುದ್ದಿಯನ್ನೇ ಹೇಳುವ ನ್ಯೂಸ್‌ಚಾನಲುಗಳನ್ನು ಸಹಿಸಿಕೊಳ್ಳುವುದಕ್ಕಾಗಲೀ, ಹುಚ್ಚುಚ್ಚು ಚರ್ಚೆಗಳ ಕಾಮಿಡಿ ಕಂಡು ಸುಮ್ಮನಿರುವುದಕ್ಕಾಗಲೀ, ಒಂದು ಹಾಡಿನ ಬಂಡಿಯಲ್ಲಿ ಸೋತಿದ್ದಕ್ಕೆ ಪುಟ್ಟ ಮಕ್ಕಳನ್ನು ಜೀವನವೇ ಮುಗಿಯಿತೇನೋ ಎಂಬಂತೆ ತೋರಿಸುವ ರಿಯಾಲಿಟಿ ಶೋಗಳನ್ನು ನೋಡುವುದಕ್ಕಾಗಲಿ, ಸಂಸಾರದ ಸಮಸ್ಯೆಗಳ ಧಾರಾವಾಹಿಗಳನ್ನು ನೋಡಿ ಜೀವನದ ಬಗ್ಗೆ ಜಿಗುಪ್ಸೆ ತಾಳುವುದಕ್ಕಾಗಲೀ ಬಿಲ್‌ಕುಲ್ ಇಷ್ಟವಿಲ್ಲ. ಕ್ರಿಕೆಟ್ಟೊಂದನ್ನು ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೆನೇನೋ, ಆದರೆ ಬಹಳಷ್ಟು ಮ್ಯಾಚುಗಳು ನನ್ನ ಆಫೀಸಿನ ಸಮಯದಲ್ಲೇ ಇದ್ದು, ಕ್ರಿಕ್ಕಿನ್ಫೋದವನು ಪ್ರತಿ ಬಾಲಿಗೂ ಕಮೆಂಟರಿ ಕೊಟ್ಟು ಉಪಕಾರ ಮಾಡುತ್ತಾನಾದ್ದರಿಂದ -ಟೀವಿ ಇನ್ನೂ ನನ್ನ ಮನೆಗೆ ಪ್ರವೇಶ ಪಡೆದಿಲ್ಲ.

ಆದರೆ ಈ ಟೀವಿ ಇಲ್ಲದಿರುವುದರಿಂದ ನನಗಾಗದಿದ್ದ ಸಾಕ್ಷಾತ್ಕಾರವೊಂದು ಮೊನ್ನೆ ಗೆಳೆಯನ ಮನೆಯಲ್ಲಿ ಟೀವಿ ನೋಡುತ್ತಿದ್ದಾಗ ಆಗಿಹೋಯಿತು! ನನಗೆ ಜೀವನದ ಕಷ್ಟಗಳು ಮತ್ತು ಭವಿಷ್ಯದ ಪ್ರಪಂಚದ ಬಗೆಗೆ ಇದ್ದ ಕೆಲ ಕಲ್ಪನೆಗಳು ಅತಿರಂಜಿತವಾಗಿದ್ದವೇನೋ ಅನ್ನಿಸಲು ಶುರುವಾಗಿಬಿಟ್ಟಿತು. ಈ ಟೀವಿ ಜಾಹೀರಾತುಗಳು ಬಹಳವೇ ಆಕರ್ಷಕವಾಗಿರುತ್ತವೆ. ಅವುಗಳನ್ನು ನೋಡುತ್ತ ನೋಡುತ್ತ ನಾನು ಜೀವನ ಎಂದರೆ ನೀರು ಕುಡಿದಷ್ಟು ಸರಾಗ ಎಂಬಂತಹ ತೀರ್ಮಾನಕ್ಕೆ ಬಂದೆ. ಅಡುಗೆ ಮಾಡುವುದು ಈಗೊಂದು ಸಮಸ್ಯೆಯೇ ಅಲ್ಲ- ಕೈಲಾಶ್ ಕುಕ್ಕರ್, ಮಿಕ್ಸಿ, ಗ್ರೈಂಡರ್, ಜ್ಯೂಸ್ ಮೇಕರ್, ತವಾ -ಏನು ಬೇಕಾದರೂ ಇದೆ. ಒಂದು ನಿಮಿಷದಲ್ಲಿ ಹೊಸ ಸೊಸೆ ಅಡುಗೆ ಮಾಡಿ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಾಳೆ. ಸೆಖೆಯಾಯಿತೋ ಕೇತಾನ್ ಫ್ಯಾನಿದೆ, ಸುವಾಸನೆಯೂ ಬೇಕೆಂದರೆ ಏಸಿಯಿದೆ. ಸೊಳ್ಳೆ ಬಂತೋ, ಆಲೌಟ್ ಹಚ್ಚಿ. ಸಂತೂರಿನಿಂದ ಸ್ನಾನ ಮಾಡಿದರೆ ನನ್ನ ಮಮ್ಮಿಯೂ ಹುಡುಗಿಯಾಗುತ್ತಾಳೆ. ಕೋಂಪ್ಲಾನ್ ಕುಡಿದರೆ ಮಾವಿನಕಾಯಿ ಕೈಗೇ ಸಿಗುತ್ತದೆ. ತಲೆಹೊಟ್ಟಾದರೆ ಹೆಡ್ಡೆಂಡ್ ಶೋಲ್ಡರ್ಸ್, ತಲೆನೋವಾದರೆ ಮೆಂಥಾಲ್ ಪ್ಲಸ್, ತಲೆಬಿಸಿಯಾದರೆ ನವರತ್ನ ತೈಲ, ತಲೆ ತಿರುಗಿದರೆ ತಂಪು ಪಾನೀಯ. ಏಶಿಯನ್ ಪೇಯಿಂಟ್ಸ್ ಬಳಿದರೆ ಇದ್ದ ಮನೆಯೇ ಹೊಸತಾಗುತ್ತದೆ, ಡೈರಿಮಿಲ್ಕ್ ತಿನ್ನಿಸಿದರೆ ಉದ್ವಿಗ್ನ ಹೆಂಡತಿ ಶಾಂತಳಾಗುತ್ತಾಳೆ, ವ್ಹಿಸ್ಪರ್ ಹಾಕಿಕೊಂಡ ಹೆಣ್ಣುಮಕ್ಕಳು ಕುಣಿದಾಡತೊಡಗುತ್ತಾರೆ, ಏನಾದ್ರೂ ಏಕ್ಸ್ ಸ್ಪ್ರೇ ಮಾಡ್ಕೊಂಡ್ರೋ- ಸೆಕ್ಸೀ ಹುಡ್ಗೀರೆಲ್ಲಾ ನಿಮ್ ಕಡೀಗೇ! ಆಕ್ವಾಗಾರ್ಡಿನ ನೀರು ಕುಡಿದರೆ, ಲೈಫ್‌ಬಾಯ್‌ನಿಂದ ಸ್ನಾನ ಮಾಡಿದರೆ, ಡೆಟ್ಟಾಲ್‌ನಿಂದ ಕೈ ತೊಳೆದರೆ, ಕೋಲ್ಗೇಟ್‌ನಿಂದ ಹಲ್ಲು ತಿಕ್ಕಿದರೆ, ಡಾಬರ್ ಛವನ್‌ಪ್ರಾಶ್ ತಿಂದರೆ -ನಿಮಗೆ ಯಾವ ಖಾಯಿಲೆಯೂ ಬರುವುದಿಲ್ಲ. ವಯಸ್ಸಾದ ಮೇಲೂ ಚಿಂತೆಯಿಲ್ಲ, ಪೆನ್ಷನ್ ಪ್ಲಾನುಗಳಿವೆ. ಸತ್ತರೆ ವಿಮೆಯಿದೆ, ದೂರದೂರಿನ ಮಗನಿಗೆ ಸುದ್ದಿ ಮುಟ್ಟಿಸಲು ಯಾವಾಗಲೂ ಸಿಗುವ ವೋಡಫೋನ್ ನೆಟ್ವರ್ಕ್ ಇದೆ, ಅವನು ಮನೆ ಮುಟ್ಟಲು ಸೂಪರ್‌ಫಾಸ್ಟ್ ಬೈಕು-ಕಾರುಗಳಿವೆ. ಇನ್ನೇನು ಬೇಕು ಬದುಕಿಗೆ?

“ಈ ಥರ ಎಲ್ಲಾದರ ಬಗ್ಗೇನೂ ವ್ಯಂಗ್ಯ ಮಾಡಬಹುದು” ಅಂದ ಗೆಳೆಯ. ಅದು ನಿಜ. ಆದರೆ ಇವುಗಳ ಬಗ್ಗೆ  ಕನಿಷ್ಟ ವ್ಯಂಗ್ಯವನ್ನಾದರೂ ಮಾಡದಿದ್ದರೆ ನಾನು ಈ ದಿಕ್ಕುತಪ್ಪಿರುವ ಜಗತ್ತಿನಲ್ಲಿ ಆಶಾವಾದಿಯಾಗಿ ಉಳಿಯುವುದಾದರೂ ಹೇಗೆ ಎನ್ನುವುದು ನನ್ನ ಪ್ರಶ್ನೆ. ಎಷ್ಟು ಉಗಿದರೂ ಒರೆಸಿಕೊಳ್ಳುವ, ಒಂದು ಗುಲಗುಂಜಿಯಷ್ಟೂ ಮರ್ಯಾದೆ ಇರುವವರ ಹಾಗೆ ಕಾಣದ ರಾಜಕಾರಣಿಗಳ ಹೊಲಸು, ಲಂಚಕೋರ ಸರ್ಕಾರಿ ಅಧಿಕಾರಿಗಳ ದರ್ಪ, ದಿನಸಿ-ಆಟೋ-ಬ್ಯಾಂಕು-ಹೋಟೆಲ್-ಮಠ-ಐಟಿ-ಮೀಡಿಯಾ-ಆಟ ಎಲ್ಲೆಡೆ ತೋರುವ ಮೋಸ, ಇವತ್ತು ಇಷ್ಟು ಚಂದ ಎದುರಿಗೆ ಮಾತಾಡಿದ ವ್ಯಕ್ತಿಯ ಬಗ್ಗೆ ನಾಳೆ ಬರುವ ಆರೋಪ .....ಇವನ್ನೆಲ್ಲ ಇದ್ದಿದ್ದನ್ನು ಇದ್ದ ಹಾಗೇ - ‘ಲೈಟ್’ ಆಗಿ ತೆಗೆದುಕೊಳ್ಳುವುದು ಹೇಗೆ? ಲೇವಡಿ ಸಹ ಮಾಡದಿದ್ದರೆ, ನಾಳೆ ಇವರುಗಳೊಂದಿಗೇ ವ್ಯವಹರಿಸುವುದಾದರೂ ಹೇಗೆ? ಒಂಥರಾ ಇಡೀ ಜಗತ್ತೇ ದುಡ್ಡಿನ ಹಿಂದೆ ಬಿದ್ದು ಓಡುತ್ತಿರುವಾಗ, ನನ್ನನ್ನು ಬಿಟ್ಟು ಉಳಿದೆಲ್ಲರೂ ಬುದ್ಧಿವಂತರಂತೆ - ವಾಸ್ತವವಾದಿಗಳಂತೆ ಕಾಣುತ್ತಿರುವಾಗ, ನಾನು ಮಾತ್ರ ಭಾವನೆ, ಪ್ರೀತಿ, ಕರುಣೆ, ನಿಷ್ಠೆ, ಪ್ರಾಮಾಣಿಕತೆ ಅಂತೆಲ್ಲ ಆದರ್ಶಗಳನ್ನು ಮೈಮೇಲೆ ಹೇರಿಕೊಂಡು ಹುಚ್ಚನಾಗಿದ್ದೇನೆಯೇ? ಅಥವಾ ಬೇರೊಬ್ಬನ ದೃಷ್ಟಿಯಲ್ಲಿ ನಾನೂ ಭ್ರಷ್ಟನೇ?

೨೦೧೦ರ ಇಡೀ ವರ್ಷದ ನ್ಯೂಸ್‌ಪೇಪರುಗಳನ್ನು ತಿರುವಿ ಹಾಕಿದರೆ, ಪ್ರತಿದಿನ ಒಂದಲ್ಲಾ ಒಂದು ಹಗರಣ - ಒಂದಲ್ಲಾ ಒಂದು ಕ್ಷೇತ್ರದಲ್ಲಿ ಇದ್ದೇ ಇತ್ತು. ಅದಿಲ್ಲದಿದ್ದರೆ ದುರಂತ. ಖುಶಿಯ ಸುದ್ದಿ ಓದಿದ್ದು ನೆನಪಿಗೇ ಇಲ್ಲದಷ್ಟು. ಅದೇನು ಮಾಧ್ಯಮಗಳೇ ಅವನ್ನು ನಮ್ಮ ಕಣ್ಣಿಗೆ ರಾಚುವಂತೆ ಕಟ್ಟಿಕೊಟ್ಟವೋ ಅಥವಾ ನಮಗೇ ಅವನ್ನು ಚಪ್ಪರಿಸಿಕೊಂಡು ಸವಿಯುವುದು ಅಭ್ಯಾಸವಾಗಿಹೋಯಿತೋ, ಅರಿಯೆ. ನಾಳೆ ಏನಾದರೂ ಸಂತಸದ ವಾರ್ತೆಯಿರಬಹುದು ಅಂತ ಕಾತರಿಸುವುದಕ್ಕೂ ಇವತ್ತು ಭರವಸೆಯೇ ಉಳಿದಿಲ್ಲವಾಗಿದೆ.

ಹೀಗಿದ್ದಾಗಲೂ ಹೊಸ ವರ್ಷ ಬಂದಿದೆ. ಹೊಸ ಕನಸು ಕಾಣಬೇಕಿದೆ. ಹೊಸ ಹಾಡು ಕೇಳಬೇಕಿದೆ. ಹೊಸ ಗಾಳಿಗೆ ಮೈಯೊಡ್ಡಬೇಕಿದೆ. ಹೊಸ ಸ್ಪರ್ಷಕ್ಕೆ ರೋಮಾಂಚಗೊಳ್ಳಬೇಕಿದೆ. ಬತ್ತಿದ ಪುಪ್ಪುಸಗಳಲಿ ಹೊಸ ಉಸಿರು ತುಂಬಬೇಕಿದೆ. ಮನೆಯ ಬಾಗಿಲಿಗೆ ತೋರಣ ಕಟ್ಟಬೇಕಿದೆ. ಅಂಗಳದಲ್ಲಿ ರಂಗೋಲಿ ಹಾಕಬೇಕಿದೆ. ದಾರಿ ಸಾರಿಸಿ ಎಲ್ಲ ಒಪ್ಪ ಮಾಡಬೇಕಿದೆ. ಹೊಸ ಬಟ್ಟೆಯುಟ್ಟು ಸಿಹಿಯಡುಗೆ ಮಾಡಿ ಹೊಸದೇನಕ್ಕೋ ಕಾಯಬೇಕಿದೆ.

ಇಸವಿ ಎರಡುಸಾವಿರದ ಹನ್ನೊಂದು ಎಲ್ಲರ ಮನಸಿಗೂ ಹಿತ ತರಲಿ. ಇಹವ ಮರೆಸುವ ನಶೆ ಕೊಡಲಿ. ಇನಿತು ಕಹಿಗೆ ಬೊಗಸೆ ಸಿಹಿಯಿರಲಿ. ಶುಭಾಶಯಗಳು.

Thursday, December 16, 2010

ಆಯ್ಕೆ ಎಂಬುದು, ಕೆಲವೊಮ್ಮೆ

ಆಯ್ಕೆ ಎಲ್ಲಾ ಸಲ ಸೂಪರ್‌ಮಾರ್ಕೆಟ್ಟಿನ ವ್ಯಾಪಾರದ ಹಾಗಲ್ಲ
ಮುಟ್ಟಿ ಹಿಡಿದು ಒತ್ತಿ ನೋಡಿ ವಜನು ಪರಿಶೀಲಿಸಿ ಕೊಳ್ಳಲು
ಆಗುವುದಿಲ್ಲ. ಕೆಲವೊಮ್ಮೆ ಕಣ್ಣೆದುರಿಗೇ ಹೋದರೂ ಮೋಸ,
ಬಾಯ್ಮುಚ್ಚಿ ನಿಲ್ಲಬೇಕು.

ಆಯ್ಕೆ ಸಂತೆಯ ವ್ಯಾಪಾರದ ಹಾಗೂ ಅಲ್ಲ
ನಾಲ್ಕು ಕಡೆ ವಿಚಾರಿಸಿ ಗಂಟೆಗಟ್ಟಲೆ ನಿಂತು ಚೌಕಾಶಿ ಮಾಡಿ
ಸರೀ ರೇಟಿಗೆ ಕುದುರಿಸಿ ತರುವ ತರಕಾರಿ-
ಯಂತಲ್ಲ. ಕೆಲವೊಮ್ಮೆ ತಾಜಾ ಕಂಡ ಹಣ್ಣು
ಕತ್ತರಿಸಿದಾಗಲೇ ಬಣ್ಣ ಬಯಲು.

ಆಯ್ಕೆಯ ವಸ್ತು ದಿನಾ ಮನೆಬಾಗಿಲಿಗೆ ಬರುವುದಿಲ್ಲ
ತಳ್ಳುಗಾಡಿಯವನನ್ನು ಹೇಳಿ ನಿಲ್ಲಲು
ಬುಟ್ಟಿ ಹಿಡಿದು ಬಂದು ಕೊಳ್ಳುವಷ್ಟು ಸುಲಭ
ಅಲ್ಲ. ಕೆಲವೊಮ್ಮೆ ನಾವು ಕಾತರಿಸಿದ್ದು
ಮೆಟ್ಟಿಲಿಳಿದು ಬರುವಷ್ಟರಲ್ಲಿ ಬೇರೆ ಬೀದಿಯಲ್ಲಿ.

ಆಯ್ದದ್ದು ಈಬೇ ಅಮೆಜಾನುಗಳಲ್ಲಿ ಸಿಗಲೇಬೇಕೆಂದಿಲ್ಲ
ಸರೀ ಎನಿಸಿದ ಬೆಲೆಯ ಸಮಾ ಎನಿಸಿದ ಐಕಾನು ಕ್ಲಿಕ್ಕಿಸಿ,
ಒತ್ತಿ ಕಾರ್ಡಿನ ನಂಬರು ಹಾಕಿಕೊಂಡು ಕಾರ್ಟಿಗೆ, ಬರುವು
ಕಾದಂತಲ್ಲ. ಕೆಲವೊಮ್ಮೆ ಸರಕೇ ಇರುವುದಿಲ್ಲ, ಅಥವಾ
ಬಂದ ಮಾಲು ಚಿತ್ರದಲ್ಲಿದ್ದಂತಿರುವುದಿಲ್ಲ.

ಆಯ್ಕೆ ಎಂಬುದು ಶೆಟ್ಟರ ಅಂಗಡಿಯ ವ್ಯಾಪಾರದಂತೆ.
ನಮ್ಮೆಲ್ಲ ಪಟ್ಟಿ ಕೇಳಿ ಆತ ಚೀಲಕ್ಕೆ ತುಂಬಿ ಕೊಟ್ಟಂತೆ.
ತಕ್ಕಡಿಯ ತೂಕ ನಂಬಿದಂತೆ. ಹೇಳಿದ ಬೆಲೆ ತೆತ್ತಂತೆ.
ಕೊಂಡಾದ ನಂತರ ಖರೀದಿಯ ನೈಪುಣ್ಯತೆಯ ಬಗ್ಗೆ
ದಾರಿಯಿಡೀ ಯೋಚಿಸಿದಂತೆ. ತಲೆ ಸವರಿಕೊಂಡಂತೆ.

Tuesday, December 07, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ


ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.

ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ. ;)

Wednesday, December 01, 2010

ಕಾರಿರುಳೊಳಾಗಸದಿ ತಾರೆ ನೂರಿದ್ದೇನು..

ಓಂಪಿ ಫೋನ್ ಮಾಡಿದ್ದಿದ್ದ, ಓಂಪ್ರಕಾಶ್. ಹೋಗೀ ಹೋಗಿ ಈ ಆಸಾಮಿಗೆ ಭಾನುವಾರ ಬೆಳಗಾಮುಂಚೆ, ಅದೂ ಅಜಮಾಸು ಎರಡು ವರ್ಷಗಳ ನಂತರ, ನನಗೆ ಫೋನಿಸುವ ತಲುಬಾದರೂ ಯಾಕೆ ಬಂತಪ್ಪಾ ಅಂತ ಗೊಣಗಿಕೊಳ್ಳುತ್ತಲೇ ಎತ್ತಿದ್ದೆ ಫೋನು, ಎರಡು ಮಿಸ್ಕಾಲುಗಳ ನಂತರ. “ಹಾಯ್ ಅಂಶು.. ಹೇಗಿದೀಯಾ? ಯಾರೂಂತ ಗೊತ್ತಾಯ್ತಾ?” ಕೇಳಿದ. ಅದೇ ಧ್ವನಿ. ಅಥವಾ, ಇನ್ನೂ ಸ್ಟೋರಾಗಿಯೇ ಇದ್ದ ಅವನ ಹೆಸರು ಮೊಬೈಲಿನ ಪರದೆಯಲ್ಲಿ ಡಿಸ್‌ಪ್ಲೇ ಆಗಿದ್ದರಿಂದ, ಇದು ಓಂಪಿ ಕಾಲ್ ಅಂತ ಗೊತ್ತಾಗಿಬಿಟ್ಟಿದ್ದರಿಂದ, ಮನಸು ಅವನ ಧ್ವನಿಯನ್ನು ಎದುರಿಸಲು ತಯಾರಾಗಿಬಿಟ್ಟಿದ್ದರಿಂದ ನನಗೆ ಹಾಗೆ ಅನ್ನಿಸಿದ್ದಿರಬೇಕು: ‘ಅದೇ ಧ್ವನಿ’ ಅಂತ. ಅದಿಲ್ಲದಿದ್ದರೆ, ಓಂಪಿ ಬೇರೆ ಯಾವುದಾದರೂ ನಂಬರಿನಿಂದ ಫೋನ್ ಮಾಡಿದಿದ್ದರೆ ನನಗೆ ಹಾಗೆ ಅನಿಸುತ್ತಿರಲಿಲ್ಲವೇನೋ. ಬಹುಶಃ ಗುರುತೂ ಸಿಗುತ್ತಿರಲಿಲ್ಲವೇನೋ. “ಹೇ ಓಂಪಿ.. ನಿನ್ ವಾಯ್ಸ್ ಮರೀಲಿಕ್ಕೆ ಆಗತ್ತೇನೋ? ಹೌ ಆರ್ ಯೂ ಮ್ಯಾನ್? ಇಷ್ಟು ಕಾಲದ ನಂತರ ನನ್ನ ನೆನಪಾದದ್ದು ಹೇಗೆ?” ತುಂಬಾ ಕಷ್ಟಪಟ್ಟು, ಆದಷ್ಟೂ ಆತ್ಮೀಯತೆ ನಟಿಸುತ್ತ ಕೇಳಿದೆ.

“ಅಯಾಮ್ ಫೈನ್ ಮ್ಯಾನ್.. ಇವತ್ತು ಬೆಳಗ್ಗೆ ನ್ಯೂಸ್‌ಪೇಪರಲ್ಲಿ ನಿನ್ನ ಹೆಸರು ನೋಡ್ತಿದ್ದ ಹಾಗೇ ನೆನಪಾಯ್ತು.. ಹಾಗೇ ಕಾಲ್ ಮಾಡ್ಬಿಟ್ಟೆ” ಅಂದ.

‘ನ್ಯೂಸ್‌ಪೇಪರಲ್ಲಿ? ನನ್ ಹೆಸರು??’ ಎರಡು ಕ್ಷಣದ ಮೇಲೆ ಹೊಳೆಯಿತು, ಓಹ್, ಈ ವಾರದ ಸಾಪ್ತಾಹಿಕದಲ್ಲಿ ನನ್ನ ಕತೆ ಬರುತ್ತೆ ಅಂತ ಸಂಪಾದಕರು ಮೇಲ್ ಮಾಡಿದ್ದರು. ಪಬ್ಲಿಷ್ ಆಗಿರಬೇಕು ಹಾಗಾದರೆ. “ಓಹ್ ಫೈನ್.. ನಿಜ ಹೇಳ್ಬೇಕೂಂದ್ರೆ ಇನ್ನೂ ನಾನೇ ನೋಡಿಲ್ಲ ಅದನ್ನ.. ಸಂಡೇ ಅಲ್ವಾ? ಈಗಷ್ಟೇ ಎದ್ದೆ. ಹೆಹ್ಹೆ! ಕತೆ ಬಂದಿದ್ಯಾ? ಓಕೆ ಓಕೆ..” ಮಾತಾಡುತ್ತಲೇ ವರಾಂಡಕ್ಕೆ ನಡೆದು, ಕಿಟಕಿ ಬಳಿ ಬಿದ್ದಿದ್ದ ಪೇಪರ್ ಎತ್ತಿಕೊಂಡೆ.

“ಯಾ.. ನಿನ್ನ ಬ್ಲಾಗ್ ನೋಡ್ತಿರ್ತೀನಿ ನಾನು.. ಆದ್ರೆ ನಮ್ ಆಫೀಸಲ್ಲಿ ಕಮೆಂಟ್ ಮಾಡ್ಲಿಕ್ಕೆ ಆಗಲ್ಲ.. ಅದೇನೋ, ಐಪಿ ಬ್ಲಾಕ್ ಮಾಡ್ಬಿಟ್ಟಿದಾರೆ. ತುಂಬಾ ದಿನದಿಂದ ಕಾಲ್ ಮಾಡ್ಬೇಕೂ ಅಂದ್ಕೋತಿದ್ದೆ; ಅಂತೂ ಇವತ್ತು ಮುಹೂರ್ತ ಸಿಗ್ತು” ನಗಾಡಿದ.

“ಇವತ್ತಾದ್ರೂ ಸಿಕ್ತಲ್ಲ!” ನಾನೂ ನಕ್ಕೆ. 

“ಹೇ, ಇವತ್ತು ಏನ್ ಪ್ರೋಗ್ರಾಂ ನಿಂದು? ಏನೂ ಇಲ್ಲಾಂದ್ರೆ ವೈ ಕಾಂಟ್ ವಿ ಮೀಟ್ ಟುಡೇ ಫಾರ್ ಲಂಚ್? ಎಲ್ಲಾದ್ರೂ ಇಬ್ರಿಗೂ ಹತ್ರ ಆಗೋಂತ ಪ್ಲೇಸಲ್ಲಿ? ಯಾಕೋ ತುಂಬಾ ಮಾತಾಡ್ಬೇಕು ಅನ್ನಿಸ್ತಿದೆ ನಿನ್ ಹತ್ರ” ಕೇಳಿದ.

ಇವತ್ತು ಏನು ಪ್ರೋಗ್ರಾಂ ಇದೆ ಅಂತ ಯೋಚಿಸಿದೆ, ಏನೂ ಹೊಳೆಯಲಿಲ್ಲ. ಓಂಪಿಗೆ ಸಿಗುವುದರಿಂದ ಏನಾದ್ರೂ ತೊಂದರೆ ಇದೆಯಾ ಅಂತ ಯೋಚಿಸಿದೆ, ಏನೂ ಇಲ್ಲ ಅನ್ನಿಸಿತು. “ಪ್ರೋಗ್ರಾಂ ಏನೂ ಇದ್ದಂತಿಲ್ಲ. ಯಾವ್ದಕ್ಕೂ ನಾನು ನಿಂಗೆ ಮೆಸೇಜ್ ಮಾಡ್ತೇನೆ. ಸಿಗೋದಾದ್ರೆ ಎಷ್ಟೊತ್ತಿಗೆ, ಎಲ್ಲಿ ಅಂತ. ರೈಟ್?” ಹೇಳಿದೆ.

“ಆಲ್ ರೈಟ್! ಸೀ ಯೂ ದೆನ್” ಅಂತಂದು ಕಾಲ್ ಡಿಸ್‌ಕನೆಕ್ಟ್ ಮಾಡಿದ.

ಈ ಓಂಪ್ರಕಾಶ್ ನನ್ನ ಎಕ್ಸ್-ಕಲೀಗು. ಮಂಗಳೂರಿನ ಹುಡುಗ. ಹಳೆಯ ಆಫೀಸಿನಲ್ಲಿ ನನ್ನ ಜೊತೆ ಕೆಲಸ ಹಂಚಿಕೊಂಡವ. ಪ್ರತಿ ತಿಂಗಳು ಇಪ್ಪತ್ತೈದನೇ ತಾರೀಖಿನ ಹೊತ್ತಿಗೆ ವ್ಯಾಲೆಟ್ಟು ಖಾಲಿ ಮಾಡಿಕೊಂಡು “ಅಂಶು, ಇನ್ನು ಸಂಬಳ ಆಗೋವರೆಗೆ ನೀನೇ ನನ್ನ ದೈವ” ಎಂದು ಕೈಚಾಚಿ ಕೂರುತ್ತಿದ್ದವ. “ಸಂಬಳ ಲೇಟಾಗಿ ಆದಷ್ಟೂ ಒಳ್ಳೇದು ನೋಡು. ಜಾಸ್ತಿ ದಿನಕ್ಕೆ ಬರುತ್ತೆ. ಅದಿಲ್ಲಾ, ಒಂದನೇ ತಾರೀಖೇ ಆಗಿಬಿಟ್ರೆ, ಹೀಗೆ ಮಂತ್ ಎಂಡ್ ಹೊತ್ತಿಗೆ ಕೈ ಖಾಲಿಯಾಗಿಬಿಡತ್ತೆ!” ಎನ್ನುತ್ತ ಪೇಲವ ನಗೆ ನಗುತ್ತಿದ್ದವ.

“ಅದು ಹ್ಯಾಗೆ ಓಂಪಿ? ನಮಗೆಲ್ಲ ತಿಂಗಳು ಅಂದ್ರೆ ಸಂಬಳದ ದಿನದಿಂದ ಸಂಬಳದ ದಿನದವರೆಗೆ. ಐದನೇ ತಾರೀಖು ಸಂಬಳ ಕೊಟ್ಟರೆ ಮುಂದಿನ ತಿಂಗಳ ಐದರವರೆಗೆ ತಿಂಗಳು; ಏಳನೇ ತಾರೀಖು ಕೊಟ್ಟರೆ ಮುಂದಿನ ಏಳರವರೆಗೆ ತಿಂಗಳು! ಒಂದನೇ ತಾರೀಖಿನಿಂದ ಮೂವತ್ತೊಂದು ಅನ್ನೋದು ಕ್ಯಾಲೆಂಡರಿನಲ್ಲಿ ಅಷ್ಟೇ” ನಾನು ವಾದಿಸುತ್ತಿದೆ.

“ಅದು ಹಾಗಲ್ಲ ಅಂಶು.. ನನ್ನ ಫ್ರೆಂಡ್ಸ್ ಎಲ್ಲರೂ ಸಾಫ್ಟ್‌ವೇರು-ಐಟಿಗಳಲ್ಲಿ ಕೆಲಸ ಮಾಡೋರು. ಅವರಿಗೆಲ್ಲ ಪ್ರತಿ ತಿಂಗಳೂ ಮೂವತ್ತನೇ ತಾರೀಖೇ ಸಂಬಳ ಅಕೌಂಟಿಗೆ ಕ್ರೆಡಿಟ್ ಆಗಿಬಿಡತ್ತೆ. ತಿಂಗಳ ಮೊದಲ ವೀಕೆಂಡು ಫುಲ್ ಪಾರ್ಟಿ. ನನ್ನೂ ಕರೀತಾರೆ, ಹೋಗದೇ ಇರ್ಲಿಕ್ಕೆ ಆಗಲ್ಲ. ಹೋದ್ರೆ ದುಡ್ಡು ಖರ್ಚಾಗತ್ತೆ. ಅದೇ ಸಂಬಳವೇ ಆಗಿರ್ಲಿಲ್ಲ ಅಂದ್ರೆ, ‘ನನ್ ಸ್ಯಾಲರಿ ಇನ್ನೂ ಇನ್ನೂ ಆಗಿಲ್ಲಪ್ಪ’ ಅಂತಂದು ಜಾರಿಕೊಳ್ಳಬಹುದು. ಅಷ್ಟು ದುಡ್ಡಾದ್ರೂ ಉಳಿಯುತ್ತೆ” ಅಂತ ತರ್ಕ ಮುಂದಿಡುತ್ತಿದ್ದ.

ಈ ವಕೀಲಿ ವೃತ್ತಿಯೇ ಹೀಗೆ. ಡಿಗ್ರಿ ಮುಗಿಯುತ್ತಿದ್ದಂತೆಯೇ ಒಳ್ಳೆಯ ಸಂಬಳದ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತ ಇರುವವರು, ದುಡ್ಡುಮಾಡಬೇಕು ಅಂತ ಇರುವವರು ಈ ಫೀಲ್ಡಿಗೆ ಬರಲೇಬಾರದು. ತಂದೆಯೋ ತಾಯಿಯೋ ಲಾಯರ್ರೇ ಆಗಿದ್ದರೆ ಸರಿ; ಅದಿಲ್ಲದಿದ್ದರೆ ಯಾರೋ ಸೀನಿಯರ್ ಕೆಳಗೆ ಸೇರಿಕೊಂಡು, ಕೋಟ್ ಹಾಕಿಕೊಂಡು ಅವರ ಹಿಂದೆ ಪ್ರತಿದಿನ ಫೈಲ್ಸ್ ಹಿಡಿದು ಹೋಗುವುದಿದೆಯಲ್ಲ, ಥೇಟ್ ನಾಯಿ ಪಾಡು ಅದು. ತಿಂಗಳ ಕೊನೆಗೆ ಅವರು ಕೊಡುವ ಒಂದಿಷ್ಟು ದುಡ್ಡು -ಅದು ಈ ಬೆಂಗಳೂರಿನ ಬದುಕಿಗೆ ಒಂದು ವಾರಕ್ಕೂ ಸಾಲುವುದಿಲ್ಲ. ನಾವೂ ಒಂದಷ್ಟು ಕ್ಲೈಂಟುಗಳನ್ನು ಸಂಪಾದಿಸಿ, ಕೈಲೊಂದಿಷ್ಟು ಕಾಸು ಮಾಡಿಕೊಂಡು, ಸ್ವಂತ ಆಫೀಸು-ಗೀಫೀಸು ಅಂತ ಮಾಡಿಕೊಳ್ಳುವ ಹೊತ್ತಿಗೆ ಮೀಸೆ ಹಣ್ಣಾಗಿರುತ್ತೆ. ಆಮೇಲೆ ಎಷ್ಟು ಸಂಪಾದಿಸಿದರೆ ಏನು ಪ್ರಯೋಜನ?

ಆದರೆ ಈ ಕೆಲಸ ಬಿಟ್ಟು ಎಲ್‌ಪಿ‌ಒ ಒಂದಕ್ಕೆ ಸೇರಿಕೊಂಡಮೇಲೆ ಓಂಪಿಯ ರಿವಾಜೇ ಬದಲಾಗಿಹೋಯ್ತು. ನಾನು ತೆಗೆದುಕೊಳ್ಳುತ್ತಿದ್ದ ಸಂಬಳದ ಎರಡರಷ್ಟು ಅವನಿಗೆ ಅಲ್ಲಿ ಸೇರುವಾಗಲೇ ಸಿಕ್ಕಿಬಿಟ್ಟಿತು. ಮೊದಲ ಸಂಬಳದಲ್ಲಿ ಒಳ್ಳೆಯದೊಂದು ರೆಸ್ಟುರೆಂಟಿನಲ್ಲಿ ತನ್ನೆಲ್ಲ ಐಟಿ ಫ್ರೆಂಡುಗಳನ್ನೂ ಕರೆದು ಪಾರ್ಟಿ ಕೊಟ್ಟ. ಪಾರ್ಟಿ ತುಂಬ ಹುರುಪಿನಿಂದ ಓಡಾಡುತ್ತಿದ್ದ ಓಂಪಿಯನ್ನು ನೋಡಿ ‘ಬಚಾವಾಗಿಬಿಟ್ಟ ಹುಡುಗ’ ಅಂತ ಅಂದುಕೊಂಡೆ. ಆಮೇಲೆ ಒಂದೆರಡು ತಿಂಗಳು ಆಗೀಗ ಕಾಲ್ ಮಾಡ್ತಿದ್ದ. ಆರೇಳು ತಿಂಗಳ ನಂತರ ನಾನೇ ಒಮ್ಮೆ ಫೋನಿಸಿದರೆ, ರಿಸೀವ್ ಮಾಡದೇ ಕಟ್ ಮಾಡಿ, ‘ಡೆಲ್ಲಿಯಲ್ಲಿದ್ದೀನಿ. ರೋಮಿಂಗ್. ವಾಪಸ್ ಬಂದಮೇಲೆ ಕಾಲ್ ಮಾಡ್ತೀನಿ’ ಅಂತ ಎಸ್ಸೆಮ್ಮೆಸ್ ಮಾಡಿದ. ಆಮೇಲೆ ಅದೇನಾನಿಯಿತೋ, ಅವನೂ ಕಾಲ್ ಮಾಡಲಿಲ್ಲ, ನನಗೂ ಆಗಲಿಲ್ಲ; ಓಂಪಿಯೊಂದಿಗಿನ ಸಂಪರ್ಕವೇ ಕಡಿದುಹೋಗಿತ್ತು.

ಈಗ ಹೆಚ್ಚುಕಮ್ಮಿ ಎರಡು ವರ್ಷಗಳ ನಂತರ ಇದ್ದಕ್ಕಿದ್ದಂತೆಯೇ ಫೋನ್ ಮಾಡಿ ಊಟಕ್ಕೆ ಸಿಗೋಣ ಅಂತ ಕರೆದಿದ್ದ ಅವನ ಆಮಂತ್ರಣವನ್ನು ಯಾಕೋ ಬೇಡ ಅನ್ನಲಾಗಲಿಲ್ಲ. ಪತ್ರಿಕೆಯವರು ನಾನು ಕಳುಹಿಸಿದ್ದ ಕತೆಯನ್ನು ಎಲ್ಲೆಲ್ಲೋ ಎಡಿಟ್ ಮಾಡಿ ಪ್ರಕಟಿಸಿದ್ದರು. ಇವರಿಗೆ ಕಳುಹಿಸುವುದಕ್ಕಿಂತ ಸುಮ್ಮನೆ ಬ್ಲಾಗಿನಲ್ಲಿ ಹಾಕಿಕೊಳ್ಳುವುದು ಬೆಸ್ಟು ಅಂತ ಬೈದುಕೊಳ್ಳುತ್ತ ಪೇಪರನ್ನು ಟೀಪಾಯ್ ಮೇಲೆ ಎಸೆದೆ. ‘ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟ್, ಕನ್ನಿಂಗ್‌ಹ್ಯಾಂ ರೋಡ್’ ಅಂತ ಓಂಪಿಗೆ ಎಸ್ಸೆಮ್ಮೆಸ್ ಮಾಡಿದೆ.

* * *

ರೆಸ್ಟುರೆಂಟಿನ ರೂಫ್ ಗಾರ್ಡನ್ನಿನ ಅಂಗಣದಲ್ಲಿ ಗಿಜಿಗಿಜಿಯಿತ್ತು. ಪುಟ್ಟ ಪುಟ್ಟ ದ್ವೀಪಗಳಂತೆ ಅಲ್ಲಲ್ಲಿರಿಸಿದ ರೌಂಡ್ ಟೇಬಲ್ಲುಗಳ ಸುತ್ತ ಕೂತು ಅವರವರದೇ ಮಾತು-ನಗೆ-ತಿಂಡಿ-ತೀರ್ಥಗಳಲ್ಲಿ ಮುಳುಗಿದ್ದ ಕುಟುಂಬಗಳು, ಜೋಡಿಗಳು, ಗೆಳೆಯರ ಗುಂಪುಗಳು. ಹೊರಗೆ ಮಧ್ಯಾಹ್ನದ ಬಿಸಿಲಿದ್ದರೂ ಒಳಗೆ ಕತ್ತಲೆ ಸೃಷ್ಟಿಸಿ ದೀಪಗಳನ್ನು ಉರಿಸಿದ್ದರು. ಮೂಲೆಯಲ್ಲೆಲ್ಲೋ ಕೂತಿದ್ದ ಓಂಪಿ ಎದ್ದು ನಿಂತು ‘ಇಲ್ಲಿದ್ದೀನಿ’ ಅಂತ ಕೈ ಮಾಡಿದ. ಅತ್ತಲೇ ಹೋದೆ.

“ಸಾರಿ, ನಾನು ಬಂದು ಆಗಲೇ ಅರ್ಧ ಗಂಟೆ ಆಯ್ತು. ಸುಮ್ನೆ ಕೂರೋಕೆ ಆಗದೇ ಮುಂದುವರೆಸಿಬಿಟ್ಟೆ!” ಅಂತ, ಟೇಬಲ್ಲಿನ ತುದಿಯಲ್ಲಿದ್ದ ಎರಡು ಖಾಲಿ ಬಿಯರ್ ಬಾಟಲಿಗಳನ್ನು ತೋರಿಸಿದ.

“ಹೇ, ಸರಿಯಾಯ್ತು ಬಿಡು. ಮನೆ ಕ್ಲೀನ್ ಮಾಡ್ತಾ ಕೂತೆ, ಹೊರಡೋದು ಲೇಟ್ ಆಯ್ತು” ಎಂದು ಕೈ ಕುಲುಕಿದೆ.

“ಸೋ? ಬಿಯರ್?” ಕೇಳಿದ.

ಮಧ್ಯಾಹ್ನದ ಹೊತ್ತಿಗೆಲ್ಲಾ ಬಿಯರ್ ಕುಡಿಯುವುದು ನನಗೆ ಸಹ್ಯವೇ ಅಲ್ಲದಿದ್ದರೂ, ಕುಡಿಯದಿದ್ದರೆ ಓಂಪಿಯೊಂದಿಗೆ ಸರಿಯಾಗಿ ಪಾಲ್ಗೊಳ್ಳುವುದಕ್ಕೆ ಆಗುವುದಿಲ್ಲವೇನೋ ಎನ್ನಿಸಿ, “ಪಿಂಟ್ ಸಾಕು” ಎಂದೆ.

“ಎಂಥಾ ಪಿಂಟ್? ಒಂದು ಬಿಯರ್ ಕುಡಿ, ಏನೂ ಆಗಲ್ಲ” ಅಂತಂದು, ಅವನೇ ವೆಯ್ಟರ್‌ನನ್ನು ಕರೆದು ಆರ್ಡರ್ ಮಾಡಿದ. ಮೌನ ಕವಿಯಿತು.

“ಸೂಪರ್. ಇವತ್ತಿನ ಕತೆ ಚೆನ್ನಾಗಿತ್ತು” ಅವನೇ ಮಾತಿಗೆ ಶುರು ಮಾಡಿದ. “ನೀನು ಬರೀತಿರೋದು ನಂಗೆ ತುಂಬಾ ಖುಶಿ ನೋಡು.. ಆವಾಗ ನಾನು-ನೀನು ಒಟ್ಟಿಗೆ ಕೆಲಸ ಮಾಡ್ತಿರಬೇಕಾದ್ರೆ ನೀನು ಬರೀತಿರ್ಲಿಲ್ಲ ಅಲ್ವಾ? ತುಂಬಾ ಓದ್ತಿದ್ದೆ, ಅದು ನಂಗೊತ್ತು. ಮಾತಾಡ್ಬೇಕಾದ್ರೂ ಒಂಥರಾ ಸಾಹಿತಿ ಥರ ಮಾತಾಡ್ತಿದ್ದೆ. ಕೆಲವರು ವೇದಿಕೆಯಲ್ಲಿ ಬರೆದುಕೊಂಡು ಬಂದ ಭಾಷಣಾನಾ ಓದ್ತಾರಲ್ಲ, ಹಹ್ಹ, ಹಾಗೆ. ಆದ್ರೂ ಮಜಾ ಇತ್ತು ಆ ದಿನಗಳು.. ಕೈಯಲ್ಲಿ ಕಾಸಿಲ್ದಿದ್ರೂ ತುಂಬಾ ಖುಶಿಯಾಗಿ ಇರ್ತಿದ್ವಿ, ಅಲ್ವಾ?”

ವೇಯ್ಟರ್ ಬಂದು ನನ್ನ ಮುಂದೊಂದು ಗ್ಲಾಸ್ ಇಟ್ಟು ಬಿಯರ್ ಬಗ್ಗಿಸಿ ಹೋದ. ತಣ್ಣಗಿತ್ತು. ಓಂಪಿಯ ಬಿಯರು ಆಗಲೇ ಕೆಲಸ ಮಾಡುತ್ತಿತ್ತು, ಅವನು ಮುಂದುವರೆಸಿದ: “ಬದುಕು ಹೇಗೆಲ್ಲ ಬದಲಾಗಿಹೋಗತ್ತೆ ಅಂತ ಯೋಚಿಸಿದರೆ ಆಶ್ಚರ್ಯ ಆಗುತ್ತೆ ಅಲ್ವಾ ಅಂಶು..? ನಾನು ನಿನ್ ಜೊತೆ ಕೆಲಸ ಮಾಡ್ತಿರಬೇಕಾದ್ರೆ ಲೋಕಲ್ ಬಾರಿಗೆ ಹೋಗಲಿಕ್ಕೆ ದುಡ್ಡು ಇರ್ತಿರಲಿಲ್ಲ. ಸಾಲ ಮಾಡ್ತಿದ್ದೆ ನಿನ್ನ ಹತ್ರ.  ಈಗ ನೋಡು, ದುಬಾರಿ ರೆಸ್ಟುರೆಂಟಿನಲ್ಲಿ ಕೂತಿದೀನಿ. ಕಾರು ಇದೆ, ಸ್ವಂತ ಫ್ಲಾಟ್ ಖರೀದಿ ಮಾಡಿದೀನಿ, ಇನ್ನು ಎರಡು ವರ್ಷ: ನನ್ನದೇ ಕಂಪನಿ ಶುರು ಮಾಡ್ತೀನಿ..” ಓಂಪಿ ಹೇಳುತ್ತ ಹೋದ.

ಯೋಚಿಸುತ್ತಿದ್ದೆ: ತಪ್ಪುತಪ್ಪು ಇಂಗ್ಲೀಷ್ ಬಳಸುತ್ತಿದ್ದ, ಬಾಸ್ ಬಳಿ ಮಾತಾಡಲು ಹೆದರುತ್ತಿದ್ದ, ರೆಸ್ಯೂಮ್ ಮಾಡಿಕೊಡು ಅಂತ ನನ್ನ ಬಳಿ ದುಂಬಾಲು ಬೀಳುತ್ತಿದ್ದ, ತನ್ನ ಕಾಲೇಜ್ ದಿನಗಳ ಹುಡುಗಿಯನ್ನು ನೆನೆದು ಭಾವುಕನಾಗುತ್ತಿದ್ದ ಓಂಪಿ ಇವನೇನಾ ಅಂತ. ಹಣ ಕೊಡುವ ಆತ್ಮವಿಶ್ವಾಸ ಎಂದರೆ ಇದೇ ಇರಬೇಕು. ತನ್ನ ಅಪ್ಪ-ಅಮ್ಮನ ಬಗ್ಗೆ ನನ್ನೊಡನೆ ಹಂಚಿಕೊಂಡಿದ್ದ ಓಂಪಿ. ತನಗೊಬ್ಬ ತಂಗಿಯಿರಬೇಕಿತ್ತು ಅಂತ ಆಶೆ ಪಟ್ಟಿದ್ದ ಓಂಪಿ. ಪತ್ರಿಕೆಯೊಂದರಲ್ಲಿ ಬರುತ್ತಿದ್ದ ಪ್ರೇಮಪತ್ರದ ಅಂಕಣವನ್ನೆಲ್ಲ ಕತ್ತರಿಸಿ ಇಟ್ಟುಕೊಂಡಿದ್ದ ಓಂಪಿ. ತನ್ನ ರೂಂಮೇಟ್ಸ್‌ಗೆ ಹೇಗೆ ಅಡುಗೆ ಮಾಡಲಿಕ್ಕೇ ಬರುವುದಿಲ್ಲ ಅಂತ ಹೇಳಿಕೊಂಡು ನಗುತ್ತಿದ್ದ ಓಂಪಿ. ತಾನು ದುಡಿದ ದುಡ್ಡಲ್ಲಿ ಕೊಂಡ ಮೊಬೈಲನ್ನು ಅತ್ಯಂತ ಅಕ್ಕರಾಸ್ಥೆಯಿಂದ ಸವರಿದ್ದ ಓಂಪಿ. ಹಾಗಾದರೆ, ಶ್ರೀಮಂತನಾದ ನಿಟ್ಟಿನಲ್ಲಿ ಆ ದಿನಗಳ ಆ ಭಾವುಕತೆಯನ್ನೆಲ್ಲ ಕಳಕೊಂಡುಬಿಟ್ಟಿದ್ದಾನಾ ಇವನು ಅಂತ ನಾನು ಆಲೋಚಿಸುತ್ತಿರುವಾಗಲೇ ಓಂಪಿ ನನ್ನಾಲೋಚನೆಯನ್ನು ತುಂಡು ಮಾಡಿದ:

“ಆದರೆ ನಾನು ಮೊದಲಿನಷ್ಟು ಖುಶಿಯಾಗಿಲ್ಲ ಅನ್ನಿಸ್ತಿದೆ ಅಂಶು.. ಮೊದಲಾದರೆ ಸ್ಯಾಲರಿ ಯಾವಾಗ ಬರುತ್ತೆ ಅಂತ ಕಾಯಬೇಕಿತ್ತು. ಬರ್ತಿದ್ದ ಸ್ವಲ್ಪ ದುಡ್ಡಲ್ಲಿ ಲೈಫನ್ನ ಅಡ್ಜಸ್ಟ್ ಮಾಡೋದ್ರಲ್ಲಿ ಏನೋ ಥ್ರಿಲ್ ಇರ್ತಿತ್ತು. ಅವರಿವರ ಹತ್ರ ಸಾಲ ಮಾಡ್ಕೊಂಡು, ಅವರು ವಾಪಸ್ ಕೇಳ್ದಾಗ ‘ಕೊಡ್ತೀನಿ ಕೊಡ್ತೀನಿ’ ಅಂತ ಮುಂದಿನ ತಿಂಗಳವರೆಗೆ ಸಾಗಹಾಕೋದರಲ್ಲಿ ಮಜಾ ಇರ್ತಿತ್ತು. ರೂಂಮೇಟ್ಸ್ ಜೊತೆ ಜಗಳ ಮಾಡೋದರಲ್ಲಿ, ಭಿಕಾರಿಗಳ ಥರ ಕುಡಿದು ಬೀಳೋದರಲ್ಲಿ ವಿಲಕ್ಷಣ ಸುಖ ಇತ್ತು. ನೆನಪಿದೆಯಲ್ಲ ನಿಂಗೆ, ಬಿ‌ಎಂಟಿಸಿ ಬಸ್ಸಿಗೆ ಬಂದ್ರೆ ದುಡ್ಡು ಖರ್ಚಾಗುತ್ತೆ ಅಂತ, ವೈಯಾಲಿಕಾವಲ್‌ನಿಂದ ಆಫೀಸಿಗೆ ಮೂರು ಕಿಲೋಮೀಟರ್ ನಡೆದೇ ಬರ್ತಿದ್ದೆ. ಬೆಳಗ್ಗೆ ಬೇಗ ಹೊರಟು, ಲೇಟಾಯ್ತು ಅಂತ ಸರಸರ ಹೆಜ್ಜೆ ಹಾಕಿ ಬರೋದರಲ್ಲಿ ಎಂಥಾ ಟೆನ್ಷನ್ ಇರ್ತಿತ್ತು.. ಬಾಸ್ ಬೈದರೆ ಅನ್ನೋ ಹೆದರಿಕೆ..

“ಆದರೆ ಈಗ ನೋಡು, ದುಡ್ಡು ನಂಗೊಂದು ತಲೆಬಿಸಿಯ ಸಂಗತಿಯೇ ಅಲ್ಲ. ಸಂಬಳ ಯಾವತ್ತೋ ಅಕೌಂಟಿಗೆ ಕ್ರೆಡಿಟ್ ಆಗಿರುತ್ತೆ, ನನಗೆ ಅತ್ತಕಡೆ ಗಮನಿಸುವ ಗೋಜೂ ಇಲ್ಲ. ಜೇಬಲ್ಲಿ ಹಣ ಇಲ್ಲ ಅಂದಾಗ ಎಟಿ‌ಎಂಗೆ ಹೋಗಿ ಡ್ರಾ ಮಾಡ್ಕೋತೀನಿ. ಶಾಪಿಂಗ್ ಮಾಡ್ಬೇಕು ಅಂದ್ರೆ ಕಾರ್ಡುಗಳಿವೆ. ಅಷ್ಟು ದೊಡ್ಡ ಫ್ಲಾಟಲ್ಲಿ ನಾನು ಒಬ್ಬನೇ ಇರ್ತೀನಿ. ವೀಕೆಂಡುಗಳಲ್ಲಿ ಕಲೀಗುಗಳು, ಬ್ಯುಸಿನೆಸ್ ಪಾರ್ಟ್‌ನರ್‌ಗಳ ಜೊತೆ ಐಶಾರಾಮಿ ಕ್ಲಬ್ಬುಗಳಲ್ಲಿ ಪಾರ್ಟಿ. ಕುಡಿದದ್ದು ಜಾಸ್ತಿಯಾದರೆ ಡ್ರೈವರ್ ಇದಾನೆ, ಕಾರು ಮನೆ ಮುಟ್ಟಿಸುತ್ತೆ. ಒಂಥರಾ ವಿಚಿತ್ರ ನಿರಾಳತೆ.. ತಾಳು, ನಿಂಗೆ ಇನ್ನೊಂದು ಬಿಯರ್ ಹೇಳ್ತೀನಿ” ಓಂಪಿ ಮಾತಾಡಲಿಕ್ಕೇ ಬಂದವನಂತಿದ್ದ.

ನನಗೆ ಇಲ್ಲಿಗೆ ಬರುವ ಮುನ್ನ, ಓಂಪಿಯನ್ನು ಬಾಹ್ಯವಾಗಿ ಎದುರಿಸುವ ಮುನ್ನ ಕೊಂಚ ಹಿಂಜರಿಕೆಯಿತ್ತು. ಅದೇ ಆಫೀಸು, ಅದೇ ಮನೆ, ಓಂಪಿಗೆ ಯಾವ ರೀತಿಯಲ್ಲೂ ಸರಿಸಮವಲ್ಲದ ದುಡಿಮೆ, ಒಂದೇ ತರಹದ ಜೀವನಕ್ರಮ, ಅವವೇ ಕನಸುಗಳು, ಹುಚ್ಚುಚ್ಚು ಧ್ಯೇಯಗಳು, ನೂರಾರು ಗೊಂದಲಗಳನ್ನಿಟ್ಟುಕೊಂಡು ಬಾಳ್ವೆ ಮಾಡುತ್ತಿರುವ ನಾನು, ಈಗ ಪೂರ್ತಿ ಬದಲಾಗಿರಬಹುದಾದ ಓಂಪಿಯನ್ನು ಹೇಗೆ ಸ್ವೀಕರಿಸಲಿ ಎಂಬ ಅಳುಕಿತ್ತು. ಭವಿಷ್ಯದ ಬಗ್ಗೆ ಸ್ವಲ್ಪವೂ ಮುಂದಾಲೋಚನೆ ಇಲ್ಲದೆ, ನಾಳೆ ಬೆಳಗಾದರೆ ಏನು ಎಂಬ ಬಗ್ಗೆ ಕಲ್ಪನೆ ಸಹ ಇಲ್ಲದೆ, ಬದುಕು ಹೇಗೆ ಬರುತ್ತದೋ ಹಾಗೆ ಎದುರಿಸುವ ತೀರ್ಮಾನದೊಂದಿಗೆ ದಿನಗಳನ್ನು ಕಳೆಯುತ್ತಿರುವ ನಾನು, ಈಗ ಸುಭದ್ರ ನೆಲೆಯ ಮೇಲೆ ನಿಂತಿರಬಹುದಾದ, ಸ್ಪಷ್ಟ ನಿರ್ಧಾರಗಳ, ಪೂರ್ತಿ ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡಿರಬಹುದಾದ ಓಂಪ್ರಕಾಶನೊಂದಿಗೆ ಏನು ಮಾತನಾಡಿಯೇನು ಎಂಬ ಆತಂಕವಿತ್ತು. ‘ಅರೆ ನೀನೇನೋ, ಇನ್ನೂ ಹಾಗೇ ಇದೀಯ?’ ಅಂತ ಅವನು ಕೇಳಿಬಿಟ್ಟರೆ ಕೊಡಲಿಕ್ಕೆ ನನ್ನ ಬಳಿ ಗಟ್ಟಿಯಾದ ಉತ್ತರ ಸಹ ಇರಲಿಲ್ಲ. ಆದರೆ ಓಂಪಿ, ಆರ್ಥಿಕ ಸ್ವಾತಂತ್ರ್ಯ ಗಳಿಸಿರುವುದೊಂದನ್ನು ಹೊರತುಪಡಿಸಿದರೆ, ನನ್ನ ತರಹುದೇ ಗೊಂದಲಗಳಿಂದ ಬಳಲುತ್ತಿರುವ ಮನುಷ್ಯನಂತೆ ಕಾಣತೊಡಗಿದ. ದೆಸೆಯಿಲ್ಲದ, ಅಂತ್ಯ ಗೋಚರಿಸದ ಸಾಗರದಲ್ಲಿ ದಿಕ್ಕುತಪ್ಪಿದ ಒಂಟಿದೋಣಿಯ ಅಂಬಿಗರೇ ಎಲ್ಲರೂ? ಬಿಯರ್ ಕಹಿ ಕಳೆದುಕೊಳ್ಳತೊಡಗಿತು.

“ಅಮೃತಾಗೆ ಮದುವೆ ಆಯ್ತು” ಥಟ್ಟನೆ ಹೇಳಿದ ಓಂಪಿ, “ಯು ಸೀ, ಈಗ ಕತೆ ಬರೀಬಹುದು ನೀನು ನನ್ನ ಲೈಫ್ ಬಗ್ಗೆ, ಹಹಹಾ, ಕತೆ!” ಬಿಯರಿಗೆ ಕಹಿ ಮರುಕಳಿಸಿತು. ಜೊತೆಗೆ ಕೆಲಸ ಮಾಡಬೇಕಾದರೆ ದಿನಕ್ಕೊಮ್ಮೆಯಾದರೂ ಪ್ರಸ್ತಾಪವಾಗುತ್ತಿದ್ದ ವಿಷಯ. ಕಾಲೇಜು ದಿನಗಳಿಗೆ ಅವನನ್ನು ಸವಿಸವಿ ನೆನಪಿನ ಮೆರವಣಿಗೆಯಲ್ಲಿ ಒಯ್ಯುತ್ತಿದ್ದ ವಿಷಯ. ಆಫೀಸಿನ ಬಿಜಿಯ ನಡುವೆ, ಟೀಯೊಂದಿಗಿನ ಸಿಹಿಸಿಹಿ ಬಿಸ್ಕೇಟಾಗುತ್ತಿದ್ದ ವಿಷಯ. ಗಿಜಿಗಿಜಿಗುಡುವ ಧಗೆಯ ಸಂತೆಯಲ್ಲಿ ಇದ್ದಕ್ಕಿದ್ದಂತೆ ಮಧುರ ಮಳೆಯೊಂದು ಸುರಿಯತೊಡಗಿ ಎಲ್ಲರನ್ನೂ ಇದ್ದಲ್ಲೆ ಮೋಹಕರನ್ನಾಗಿ ಮಾಡುವಂತೆ, ಓಂಪಿ ತನ್ನ ಹುಡುಗಿಯ ನೆನಪಾದೊಡನೆ ಈಗಷ್ಟೆ ಅರಳಿದ ಹೂವಾಗುತ್ತಿದ್ದ. ನನ್ನ ಬಳಿ ಕತೆ ಹೇಳುತ್ತಿದ್ದ. ಹೇಗಾದ್ರೂ ಮಾಡಿ ಫೋನ್ ನಂಬರ್ ಪತ್ತೆ ಮಾಡಿಕೊಡು ಅಂತ ದುಂಬಾಲು ಬೀಳುತ್ತಿದ್ದ.

ಅಮೃತಾ ಇವನ ಕಾಲೇಜಿನ ಕ್ಲಾಸ್‌ಮೇಟು. ಥೇಟು ಸಿನಿಮಾ ಶೈಲಿಯಲ್ಲಿತ್ತು ಪ್ರೇಮದ ಕತೆ. ಈ ಪ್ರೀತಿಯಲ್ಲಿ ನೋಡಿದ ತಕ್ಷಣ ಇಷ್ಟವಾಗಿಬಿಡುವುದು ಅಂತೊಂದು ಇರುತ್ತದಲ್ಲ, ಹಾಗೇ ಆಗಿತ್ತು ಓಂಪಿಗೂ. ತಾನು ಇಷ್ಟಪಟ್ಟಿದ್ದ, ಮನಸಲ್ಲೇ ಆರಾಧಿಸಿದ್ದ ಹುಡುಗಿಯನ್ನೇ ಗೆಳೆಯರು ಎತ್ತಿಕಟ್ಟಿದ್ದರು ಕಾಲೇಜಿನ ಗೆಟ್-ಟುಗೆದರ್ ಸಮಾರಂಭದಂದು. ಆವತ್ತು ಕಾಲೇಜಿನಲ್ಲಿ ಬಣ್ಣಬಣ್ಣದ ಸೀರೆಗಳ ಸರಭರ. ಎಷ್ಟೇ ಬೇಡವೆಂದರೂ ಕಣ್ಸೆಳೆವ ತರಳೆಗಳ ನಡುವೆ ಈ ಹಂಸಬಿಳುಪಿನ ಸೀರೆಯ ಹುಡುಗಿ ಸ್ಟೇಜಿಗೆ ಹೋದಳು. ಗಾನದೇವತೆ ಒಲಿದು ಬಂದಂತೆ, ದೂರದಲ್ಲಿ ಕೂತಿದ್ದ ಓಂಪಿ ಪರವಶನಾಗುವಂತೆ ಹಾಡಿದಳು:


ಕೋಟಿಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||

ಅಚಾನಕ್ ಎಂಬಂತೆ, ಪಕ್ಕದಲ್ಲಿದ್ದ ಹುಡುಗ ಇವನ ಕಿವಿಯಲ್ಲಿ ಉಸುರಿಬಿಟ್ಟ: “ಹೇ ನೋಡು, ನಾ ಹೇಳ್ತಿರ್ತಿದ್ದೆನಲ್ಲ, ನಿನ್ ಹಾಗೇ ಇದಾಳೆ ಪಕ್ಕದ ಡಿಪಾರ್ಟ್‌ಮೆಂಟಿನ ಹುಡುಗಿ ಒಬ್ಬಳು ಅಂತ, ಇವಳೇ ಅದು. ಫೇಸ್‌ಕಟ್ಟು, ನಡೆಯೋ ಸ್ಟೈಲು, ಮಾತಾಡೋ ರೀತಿ -ಎಲ್ಲಾ, ಥೇಟ್ ನಿನ್ ಥರಾನೇ. ನಿಂಗೆ ಹಾಗನ್ಸಲ್ವಾ?” ಹೌಹಾರಿಬಿಟ್ಟ ಓಂಪಿ. ಇಷ್ಟು ದಿನ ಯಾವ ಹುಡುಗಿಯನ್ನು ಮನಸಲ್ಲೇ ಅರಸಿಯಂತೆ ಭಾವಿಸಿ ಅರ್ಚಿಸಿದ್ದೆನೋ ಅವಳನ್ನೇ ಗೆಳೆಯರು ಸೇರಿ ತನಗೆ ಎತ್ತಿ ಕಟ್ಟಿದ್ದು ಕಂಡು ಓಂಪಿ ರೋಮಾಂಚಿತನಾದ. ಆಗ ಹೊಳೆದ ಅವನ ಕಣ್ಣ ಮಿಂಚೇ ಸಾಕಾಯಿತು ಕಾಲೇಜೆಲ್ಲ ಹಬ್ಬಲು: ಓಂಪ್ರಕಾಶ್-ಅಮೃತಾ ಪೂಜಾರ್ ಸೂಪರ್ ಜೋಡಿ. ಸ್ವಲ್ಪೇ ದಿನಗಳಲ್ಲಿ ಅದು ಅವಳಿಗೂ ಗೊತ್ತಾಯಿತು. ಮತ್ತಿನ್ನೇನು- ಕಣ್ಣ ಇಷಾರೆ, ಮಾತು, ಸಂಚಲನ, ಸುತ್ತಾಟ, ಪಬ್ಬಾಸ್ ಪಾರ್ಲರಿನಲ್ಲಿ ಐಸ್‌ಕ್ರೀಮು. ಮಂಗಳೂರಿನ ಪ್ರತಿ ಬೀಚಿನ ಮರಳ ಮೇಲೆ ಇವರು ಪರಸ್ಪರರ ಹೆಸರು ಬರೆದರು. ತೆರೆ ಬಂದು ಅಳಿಸಿ ಹೋದಂತೆ ಮತ್ತೆ ಮತ್ತೆ ಬರೆದರು.

“ಈಗಲೂ ನೆನಪಾಗ್ತಾಳೆ ಅಂಶು.. ಹಾಳಾದವಳು, ಯಾರನ್ನೋ ಮದುವೆ ಮಾಡ್ಕೊಂಡು ಹಾಯಾಗಿದಾಳೆ. ಐಟಿ - ಐಟಿ ಹುಚ್ಚಲ್ಲ ನಮ್ಮ ಜನಕ್ಕೆ- ಯಾರೋ ಸಾಫ್ಟ್‌ವೇರ್ ಇಂಜಿನಿಯರನ್ನೇ ಮದುವೆ ಆದಳು. ಆಗಷ್ಟೆ ಎಲ್‌ಎಲ್‌ಬಿ ಮುಗಿಸಿ ಎರಡು ಸಾವಿರ ರೂಪಾಯಿ ಸಂಬಳಕ್ಕೆ ಯಾರೋ ಸೀನಿಯರ್ ಕೆಳಗೆ ಚಾಕರಿ ಮಾಡ್ತಿರೋ ಬಡ ಲಾಯರ್‌ನ ಯಾರು ಒಪ್ತಾರೆ? ನೋ ನೋ, ಐ ಹ್ಯಾವ್ ನೋ ಕಂಪ್ಲೇಂಟ್ಸ್, ಸರಿಯಿತ್ತು ಅವಳು ಮಾಡಿದ್ದು ಆಗಿನ ಸಮಯಕ್ಕೆ. ಅಪ್ಪನ ದಬಾಯಿಸುವಿಕೆಯ ನಡುವೆ, ಅಳೋ ಅಮ್ಮನ ಮುಂದೆ ಯಾವ ಹುಡುಗಿಯೂ ಕಾನ್ಫಿಡೆನ್ಸ್ ಸಹ ಇಲ್ಲದ ಹುಡುಗನನ್ನ ನೆಚ್ಚಿಕೊಂಡು ಕನಸು ಕಾಣ್ತಾ ಕೂರಲ್ಲ. ಶಿ ವಾಸ್ ರೈಟ್. ಸರಿಯಿತ್ತು ಅವಳ ನಿರ್ಧಾರ. ಆದರೆ ಈಗ ಸಮಸ್ಯೆಯೇನಿದ್ರೂ ನಂದು ಅಷ್ಟೆ: ಇಷ್ಟೆಲ್ಲ ದುಡಕೊಂಡು ನಾನೇನು ಮಾಡ್ಲಿ ಅನ್ನೋದು” ಓಂಪಿಗೆ ನಾನು ಕತೆ ಬರೆಯಬೇಕಿತ್ತು, ಸಿಪ್ಪಿಗೊಂದು ಬಿಕ್ಕಿನ ಕತೆ ಹೇಳಿದ. ನನಗೆ ಹೇಳಬೇಕೆನಿಸುತ್ತಿತ್ತು: ‘ಇಲ್ಲ ಅಂಶೂ.. ಇವಿಷ್ಟನ್ನೇ ಇಟ್ಟುಕೊಂಡು ನಂಗೆ ಕತೆ ಬರೀಲಿಕ್ಕೆ ಆಗಲ್ಲ.. ಜಗತ್ತಿನ ತೊಂಬತ್ತು ಪ್ರತಿಶತ ಪ್ರೇಮವೈಫಲ್ಯದ ಕತೆಗಳೂ ಹೀಗೇ ಇರ್ತವೆ. ಅವನ್ನಾದರೂ ಎಷ್ಟು ಅಂತ ಓದ್ತಾರೆ ಜನ? ಪ್ರೀತಿಯ ಕತೆಗಳನ್ನ ನೋಡಿದರೆ ಸಾಕು, ವಾಕರಿಕೆ ಬರುತ್ತೆ -ಅಷ್ಟೊಂದು ಕತೆಗಳಾಗಿದಾವೆ ಆಗಲೇ. ಐ ಕಾಂಟ್ ರೈಟ್..’ ಊಹುಂ, ಆದರೆ ಓಂಪಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಸಧ್ಯ, ಅವನೇ ವಿಷಯ ಬದಲಿಸಿದ:

“ಹೋಗಲಿ, ಸಾರಿ, ನಿನ್ನ ಕತೆ ಹೇಳು. ಬಾಸ್ ಸರಿಯಾಗಿ ಸಂಬಳ ಕೊಡ್ತಿದಾರಾ? ಕ್ಲೈಂಟೇಲ್ ಹೇಗಿದೆ? ಹೇ, ಯಾವುದಾದರೂ ಹುಡುಗೀನ ಲವ್-ಗಿವ್ ಮಾಡಿದ್ಯೇನೋ? ನಿನ್ನ ಆರ್ಕುಟ್ ಫ್ರೆಂಡ್‌ಲಿಸ್ಟ್ ನೋಡಿದೆ.. ಬರೀ ಹುಡುಗೀರೇ ತುಂಬಿಕೊಂಡಿದಾರೆ. ಬಿಟ್ಟಿರಲ್ಲ ನೀನು, ಯಾರನ್ನಾದ್ರೂ ಸೆಟ್ ಮಾಡ್ಕೊಂಡಿರ್ತೀಯಾ. ಈಗಂತೂ ಸಾಹಿತಿ ಬೇರೆ, ಎರಡು ಕವಿತೆಯ ಸಾಲು ಹೇಳಿದ್ರೆ ಸಾಕು, ಹುಡುಗೀರು ಬಿದ್ದುಹೋಗ್ತಾರೆ. ಟೆಲ್ ಮಿ, ಏನು ವಿಷಯ?”

ಸಡನ್ನಾಗಿ ನನಗೆ ಸಿಕ್ಕ ಈ ಮಾತನಾಡುವ ಅವಕಾಶದಿಂದಾಗಿ ಅರೆಕ್ಷಣ ತಬ್ಬಿಬ್ಬಾದೆ. ಹೇಳಬೇಕಿನಿಸಿತು, ಹೇಳಿಬಿಟ್ಟೆ: “ನಿಜ ಹೇಳ್ತೀನಿ ಓಂಪಿ, ನಂಗೆ ಪ್ರೀತಿ-ಪ್ರೇಮಗಳಲ್ಲಿ ಒಂಥರಾ ನಂಬಿಕೆಯೇ ಹೊರಟುಹೋಗಿದೆ. ನನ್ನ ಫ್ರೆಂಡ್ಸ್ ಸರ್ಕಲ್ಲಿನಲ್ಲೇ ಅದೆಷ್ಟು ಲವ್ ಫೇಲ್ಯೂರ್ ಕೇಸುಗಳನ್ನ ನೋಡಿಬಿಟ್ಟೆ ಅಂದ್ರೆ, ಬಹುಶಃ ನಾನಿನ್ನು ಬದುಕಿನಲ್ಲಿ ಯಾರನ್ನಾದರೂ ಪ್ರಾಮಾಣಿಕವಾಗಿ-ಮನಸಾರೆ ಪ್ರೀತಿಸಿಯೇನಾ ಅಂತ ಅನುಮಾನ ಶುರುವಾಗಿಬಿಟ್ಟಿದೆ!  ಈ ‘ಲವ್ ಆಗೋದು’, ‘ಫಾಲಿಂಗ್ ಇನ್ ಲವ್’ ಅನ್ನೋದೆಲ್ಲ ಮೀನಿಂಗ್‌ಲೆಸ್. ಆ ಥರ ಎಲ್ಲ ಏನೂ ಇಲ್ಲ. ಈಗಿನ ಕಾಲದ ಯಾವ ಹುಡುಗಿಯೂ ಹುಡುಗನ ರೂಪ, ಹಣ, ಕೆಲಸ, ಬ್ಯಾಕ್‌ಗ್ರೌಂಡು, ಆಸಕ್ತಿಗಳನ್ನ ಸ್ಟಡೀ ಮಾಡದೆ ಪ್ರೀತಿಸಲಿಕ್ಕೆ ಶುರು ಮಾಡಲ್ಲ. ಹುಡುಗನೂ ಅಷ್ಟೇ, ಇವಳು ನನಗೆ ತಕ್ಕ ಜೋಡಿಯಾ, ಮನೆಗೆ ತಕ್ಕ ಸೊಸೆಯಾ, ನನ್ನ ಅಭಿರುಚಿಗಳಿಗೆ ಸರಿಸಾಟಿಯಾ ಅಂತೆಲ್ಲ ಯೋಚಿಸದೆ ಮುಂದುವರೆಯುವುದಿಲ್ಲ. ಮತ್ತೆ ಏನು ಗೊತ್ತಾ? ನಮಗೆಲ್ಲ ‘ಅಡ್ಜಸ್ಟ್‌ಮೆಂಟ್ಸ್’ ಅನ್ನೋ ಕಾನ್ಸೆಪ್ಟೇ ಇಲ್ಲವಾಗಿದೆ. ಅದು ಏನೇ ಇರ್ಲಿ, ಸ್ವಲ್ಪ ಸರಿಯಾಗ್ಲಿಲ್ಲ ಅಂದ್ರೂ ಬಿಸಾಕಿಬಿಡ್ತೀವಿ. ಪ್ರೀತಿ-ಬಾಂಧವ್ಯಗಳಿಗೂ ಅನ್ವಯಿಸುತ್ತೆ ಅದು. ಹುಡುಗ - ಹುಡುಗಿ ಇಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಅನ್ನೋದು ಸಿಕ್ಕಿರುವಾಗ, ಪರಸ್ಪರ ಅವಲಂಬನೆಯ ಅವಶ್ಯಕತೆ ಇಲ್ಲದಿರುವಾಗ, ಇವನಿಲ್ಲದಿದ್ದರೆ ಮತ್ತೊಬ್ಬ ಅನ್ನೋ ಜಾಯಮಾನ ಬಂದುಬಿಟ್ಟಿದೆ ಅನ್ನಿಸುತ್ತೆ ನಂಗೆ..”

“ಯೆಸ್, ಯೂ ಆರ್ ಹಂಡ್ರೆಡ್ ಪರ್ಸೆಂಟ್ ರೈಟ್. ದಿಸ್ ಥಾಟ್ ಆಫ್ ಯುವರ್ಸ್ ಡಿಮಾಂಡ್ಸ್ ಒನ್ ಮೋರ್ ಚಿಯರ್ಸ್!” ಅಂತಂದು ನನ್ನ ಗ್ಲಾಸಿಗೆ ತನ್ನ ಗ್ಲಾಸು ತಂದು ಕುಟ್ಟಿದ ಓಂಪಿ. ನಾನೂ “ಚಿಯರ್ಸ್” ಎಂದೆ ನಗುತ್ತ.

ಎರಡು ನಿಮಿಷ ಇಬ್ಬರೂ ಮಾತಾಡಲಿಲ್ಲ. ನಮ್ಮ ಹಿಂದಿನ ಟೇಬಲ್ಲಿನವರು ಊಟ ಮುಗಿಸಿ ಹೊರಟಿದ್ದರು. ವೇಯ್ಟರ್ ಬಂದು ನಮಗೆ ಫುಡ್‌ಗೆ ಆರ್ಡರ್ ತೆಗೆದುಕೊಂಡು ಹೋದ. ಓಂಪಿ ಮುಂದುವರೆಸಿದ: “ಆದರೆ, ಇಷ್ಟೆಲ್ಲ ಆಧುನಿಕವಾಗಿರೋ - ಹಣವೊಂದಿದ್ದರೆ ಏನು ಬಯಸ್ತೀವೋ ಅದನ್ನು ಪಡೆಯುವ ವ್ಯವಸ್ಥೆಯಿರುವ ಈ ದಿನಗಳಲ್ಲಿ ಸಹ ಮನುಷ್ಯ ಅಂತರಾಳದಲ್ಲಿ ತುಂಬಾ ಡೆಲಿಕೇಟ್ ಆಗಿದಾನೆ ಅಂತ ನಂಗೆ ಅನ್ಸುತ್ತೆ. ನಾನು ನಿಂಗೆ ಮತ್ತೊಂದು ಘಟನೆ ಹೇಳ್ತೀನಿ, ತುಂಬಾ ಪರ್ಸನಲ್ ಆದದ್ದು. ಓಂಪಿ ಪೂರ್ತಿ ಹಾಳಾಗಿಹೋಗಿದಾನೆ ಅಂತ ಅಂದ್ಕೋಬೇಡ. ಈಗ ಮೂರು ತಿಂಗಳ ಹಿಂದೆ ನಾನು ಒಬ್ಬ ಹುಡುಗಿಯ ಪರಿಚಯ ಮಾಡ್ಕೊಂಡೆ. ಇಟ್ ವಾಸ್ ಫಾರ್ ಸೆಕ್ಸ್. ಎಲ್ಲಾ ಇಂಟರ್‌ನೆಟ್‌ನಲ್ಲಿ ಆಗಿದ್ದು ವ್ಯವಹಾರ. ಜ್ಯೋತಿ ಅಂತ ಅವಳ ಹೆಸರು. ಸೆಕ್ಸ್‌ಗಾಗಿ ಅಂತಲೇ ಮೀಟ್ ಆದ್ವಿ. ಅದು ಮೂರ್ನಾಲ್ಕು ವೀಕೆಂಡುಗಳಿಗೆ ಮುಂದುವರೀತು. ಕೇಳು, ಅವಳೊಬ್ಬ ಪ್ರೊಫೆಶನಲ್ ಎಸ್ಕಾರ್ಟ್ ಮತ್ತು ನಂಗೆ, ಲೆಟ್ ಮಿ ಬಿ ಫ್ರಾಂಕ್, ಇಟ್ ವಾಸ್ ನಾಟ್ ಮೈ ಫಸ್ಟ್ ಟೈಮ್. ಅಂತಹವಳ ಜೊತೆ, ಯು ಬಿಲೀವ್ ಮಿ, ನಂಗೆ ಪ್ರೀತಿ ಆಗಿಹೋಯ್ತು! ನಾನು ಅವಳನ್ನ ಮಿಸ್ ಮಾಡಲಿಕ್ಕೆ ಶುರು ಮಾಡಿದೆ. ಅದೆಷ್ಟು ಹಚ್ಚಿಕೊಂಡು ಬಿಟ್ಟೆ ಅವಳನ್ನ ಅಂದ್ರೆ, ಅವಳಿಗೆ ಈ ಮೊದಲೇ ಮದುವೆ ಆಗಿತ್ತು, ಈಗ ಡೈವೋರ್ಸ್ ಪ್ರೊಸೀಜರ್ ನಡೀತಾ ಇದೆ ಅಂತ ಗೊತ್ತಾದಮೇಲೂ, ನಂಗೆ ಅವಳನ್ನ ಬಿಟ್ಟಿರಲಿಕ್ಕೆ ಆಗಲಿಲ್ಲ. ಅಷ್ಟು ದಿನ ಮರೆತುಹೋಗಿದ್ದ ಆದರ್ಶಗಳೆಲ್ಲ ಮೈಮೇಲೆ ಅಡರಿಕೊಂಡವು. ಸೆಕೆಂಡ್ ಮ್ಯಾರೇಜು, ಇಂಥವಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು, ಬಾಳು ಕೊಡುಬೇಕು ಅಂತೇನೇನೋ ಚಿಂತನೆಗಳು! ಕೊನೆಗೆ ಅವಳೇ ಸಮಾಧಾನ ಮಾಡಿದಳು: ‘ನಿಂಗೆ ವಯಸ್ಸಾದ ಅಪ್ಪ-ಅಮ್ಮ ಇದಾರೆ.. ನಿನ್ನ ಕಂಪನಿಯಲ್ಲಿ, ನಿನ್ನ ಸ್ನೇಹವಲಯದಲ್ಲಿ, ನೀನು ವಾಸಿಸೋ-ವ್ಯವಹರಿಸೋ ಸಮಾಜದಲ್ಲಿ ನಿಂಗೊಂದು ಹೆಸರು ಇದೆ. ನಿಂಗೊಂದು ಬದುಕು-ಭವಿಷ್ಯ ಇದೆ, ಕನಸುಗಳು ಇವೆ. ಆದರೆ ನನಗೆ ಅದ್ಯಾವುದೂ ಇಲ್ಲ ಮತ್ತೆ ನಾನು ನಿನಗೆ ಯಾವ ಥರದಲ್ಲೂ ಜೋಡಿಯಾಗಲ್ಲ. ನಾನು ಇನ್ನು ಯಾವ ಸಂಬಂಧದ ಜೊತೆಗೂ ಬಾಳುವುದಿಲ್ಲ ಅಂತ ತೀರ್ಮಾನಿಸಿಯೇ ಈ ಗಂಡನಿಗೆ ಡೈವೋರ್ಸ್ ಕೊಡ್ತಿರೋದು... ನಾನು ಇಷ್ಟರೊಳಗೆ ನಿನ್ನೊಂದಿಗೆ ಹೇಳಿಕೊಂಡಿರುವ ನನ್ನ ಬಗೆಗಿನ ಬಹಳಷ್ಟು ಸಂಗತಿಗಳು ಸುಳ್ಳು. ನನ್ನ ನಿಜವಾದ ಹೆಸರು ಜ್ಯೋತಿ ಸಹ ಅಲ್ಲ’ ಅಂತೆಲ್ಲ ಕಪಾಳಕ್ಕೆ ಹೊಡೆದಂತೆ ಹೇಳಿ, ಆಮೇಲೆ ನನ್ನ ಸಂಪರ್ಕಕ್ಕೂ ಸಿಗದಹಾಗೆ ತಪ್ಪಿಸಿಕೊಂಡು ಹೋಗಿಬಿಟ್ಳು. ಹೆಹೆ, ಅದಿಲ್ಲದಿದ್ದರೆ ಇಷ್ಟೊತ್ತಿಗೆ ನಾನು ಏನಾಗಿರ್ತಿದ್ದೆನೋ?” ನಕ್ಕ ಓಂಪಿ. ಕ್ಷಣ ಬಿಟ್ಟು ಕೇಳಿದ: “ನಿಂಗೇನನ್ಸುತ್ತೆ ಇದನ್ನ ಕೇಳಿದಾಗ? ಹಹ್ಹಹ್ಹಾ, ಕತೆಗಾರ, ಹೇಳೋ ಫ್ರೆಂಡ್.. ನಿಂಗೇನಾದರೂ ಆಗಿದೆಯಾ ಇಂಥಾ ಅನುಭವ?”

ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ನಾವು ಕುಳಿತಿದ್ದ ಟೇಬಲ್‌ನ ಪಕ್ಕದಲ್ಲೊಂದು ಕಿಟಕಿಯಿತ್ತು. ಅದರಿಂದ ಬೆಳಕು ಒಳಬರದಂತೆ ಪೂರ್ತಿ ದಪ್ಪ ಪರದೆ ಮುಚ್ಚಿದ್ದರು. ಕಿಟಕಿಯ ಕಟ್ಟೆಯ ಮೇಲೊಂದು ಹೂದಾನಿ. ಅದರೊಳಗೆ ನೀರಿರಬಹುದೇನೋ ಎಂಬ ಭ್ರಮೆ. ಅದರಲ್ಲಿಟ್ಟಿರುವ ಅರೆಗೆಂಪು ಗುಲಾಬಿ ನಿಜವಾದ್ದೋ ಪ್ಲಾಸ್ಟಿಕ್ಕಿನದೋ ಗುಮಾನಿ. ಆ ಹೂವಿನ ಮೇಲಿರುವ ನೀರಹನಿ ತಾಜಾನೋ ಅಥವಾ ಕೃತಕವಾದ್ದೋ -ಈ ಮತ್ತ ಕಣ್ಣುಗಳಿಂದ ಪತ್ತೆ ಹಚ್ಚಲಿಕ್ಕಾಗುತ್ತಿಲ್ಲ..

“ಓಕೆ. ಈಗ ಬಹಳ ಇಂಪಾರ್ಟೆಂಟ್ ಆದ ವಿಷಯ ಹೇಳ್ತೇನೆ ನಿಂಗೆ..” ಓಂಪಿ ಎಚ್ಚರಿಸಿದ, “ಈಗ ಒಂದು ತಿಂಗಳ ಕೆಳಗೆ ನನಗೆ ಆರ್ಕುಟ್ಟಿನಿಂದ ಒಬ್ಬ ಹುಡುಗಿ ಪರಿಚಯ ಆದ್ಲು. ವಿನಿಷಾ ಅಂತ ಹೆಸರು. ನನ್ನ ಪ್ರೊಫೈಲ್ ನೋಡಿ, ‘ನಿನ್ನ ಆಸಕ್ತಿಗಳು ಮತ್ತು ನನ್ನ ಆಸಕ್ತಿಗಳು ತುಂಬಾ ಸಿಮಿಲರ್ ಇವೆ ಅನ್ನಿಸ್ತು, ಅದಕ್ಕೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ’ ಅಂತ ಅಂದ್ಲು.  ಚಾಟ್‌ನಲ್ಲಿ ಸಿಕ್ಕಾಗ ಏಕದಂ ಕ್ಲೋಸ್ ಆಗಿ ಮಾತಾಡಲಿಕ್ಕೆ ಶುರುವಿಟ್ಟಳು. ಎಷ್ಟರ ಮಟ್ಟಿಗೆ ಅಂತೀಯ, ತನ್ನ ಪೂರ್ವಾಪರಗಳನ್ನೆಲ್ಲ ನನ್ನ ಬಳಿ ಹೇಳಿಕೊಂಡುಬಿಟ್ಟಳು. ಅವಳ ಫ್ಯಾಮಿಲಿ ಬಗ್ಗೆ, ಅವಳ ಕೆಲಸದ ಬಗ್ಗೆ, ಆಸಕ್ತಿಗಳ ಬಗ್ಗೆ, ಈಗ ಇರೋ ಪಿಜಿಯ ಗೆಳತಿಯರ ಬಗ್ಗೆ, ನೋಡಿದ ಸಿನಿಮಾ ಬಗ್ಗೆ... ಏನೆಲ್ಲ. ಆದರೆ ನಾನು ಅವಳನ್ನ ನಂಬಲಿಲ್ಲ. ಅವಳು ಹೇಳ್ತಿರೋದು ನಿಜವೋ ಸುಳ್ಳೋ ಯಾರಿಗ್ಗೊತ್ತು? ಸುಳ್ಳೇ ನನ್ನ ಜೊತೆ ಫ್ಲರ್ಟ್ ಮಾಡ್ತಿರಬಹುದು. ಅಥವಾ ಅವಳಿಗೆ ಈಗ ಟೈಮ್‌ಪಾಸ್‌ಗೆ, ಜೊತೆಗೆ ಚಾಟ್ ಮಾಡೋಕೆ ಯಾರಾದರೂ ಬೇಕಿರಬಹುದು. ನನ್ನನ್ನ ಈ ಕಾರ್ಯಕ್ಕೆ ಬಳಸಿಕೊಳ್ತಿರಬಹುದು. ನಾನು ಈ ಸಲವೂ ಪೆಗ್ಗು ಬೀಳಬಾರದು ಅಂತ ಗಟ್ಟಿ ಮಾಡಿಕೊಂಡೆ. ಆದರೂ ಅವಳ ಜೊತೆ ಮೃದುವಾದಂತೆ ನಟಿಸಿದೆ. ನನ್ನ ಕತೆಗಳನ್ನೂ ಹಂಚಿಕೊಂಡಂತೆ ಮಾಡಿದೆ.

“ಆದರೆ ಈಗ ಒಂದು ವಾರದಿಂದ ಅನ್ನಿಸ್ತಿದೆ, ಅವಳದು ಸುಮ್ಮನೆ ಫ್ಲರ್ಟಿಂಗ್ ಅಲ್ಲ, ನಿಜವಾಗಿಯೂ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ ಅಂತ. ನಾನು ಚೆನ್ನಾಗಿ ಮಾತಾಡಿದ ದಿನ ಅವಳೂ ಖುಶಿಯಾಗಿರ್ತಾಳೆ. ನಾನು ಅಲಕ್ಷ್ಯ ಮಾಡಿದ ದಿನ ಬೇಜಾರಾಗಿರ್ತಾಳೆ. ಅವಳ ಸ್ಟೇಟಸ್ ಮೆಸೇಜುಗಳೆಲ್ಲ ನನಗಾಗಿಯೇನೇನೋ ಅಂತ ಅನ್ನಿಸುವಂತಿರುತ್ತೆ. ಹೊರಗೆ ಮೋಡ ಕಟ್ಟಿದ್ದರೆ ಅಲ್ಲಿ ‘ಗರಿಬಿಚ್ಚಿದ ನವಿಲಾಗಿದೀನಿ.. ಮಳೆ ಬಾರದಿದ್ದರೂ ನೀ ಬಾ’ ಅಂತ ಇರುತ್ತೆ, ಜೋರುಮಳೆ ಬಂತೆಂದರೆ ‘ನಿನ್ನ ಪ್ರೀತಿಮಳೆಯ ಮುಂದೆ ಇದು ತುಂತುರು’ ಅಂತ ಇರುತ್ತೆ, ನಾನು ಇನ್ವಿಸಿಬಲ್ ಆದರೆ ಸಾಕು, ‘ಸಣ್ಣ ಕಲ್ಲುಗಳ ಡೊಗರೇ, ಬಚ್ಚಿಟ್ಟುಕೊಳ್ಳುವ ಮೀನಿಗೆ ಏನು ಶಿಕ್ಷೆ?’ ಅಂತ ಹಾಕಿಕೊಂಡಿರುತ್ತಾಳೆ. ‘ನಂಗೆ ಆ ಮೂವಿಗೆ ಹೋಗಬೇಕು, ಒಬ್ಬಳೇ ಹೋಗಲಿಕ್ಕೆ ಆಗಲ್ಲ, ಕರ್ಕೊಂಡು ಹೋಗು’ ಅಂತ ಹೇಳ್ತಾಳೆ. ‘ನಿಂಗೆ ನನ್ನ ಬಗ್ಗೆ ಸ್ವಲ್ಪಾನೂ ಕೇರೇ ಇಲ್ಲ’ ಅಂತ ಕಂಪ್ಲೇಂಟ್ ಮಾಡ್ತಾಳೆ. ‘ಯಾಕೆ ನೀನು ನನ್ನನ್ನ ಅವಾಯ್ಡ್ ಮಾಡ್ತಿದೀಯಾ? ನಾವು ಮೀಟ್ ಆಗೋದು ನಿಂಗೆ ಇಷ್ಟ ಇಲ್ವಾ?’ ಅಂತೆಲ್ಲ ಥೇಟು ಸಿನೆಮಾ ಶೈಲಿಯಲ್ಲಿ ಕೇಳ್ತಿದಾಳೆ. ಆದರೆ ನನಗೆ ಇದು ನನ್ನ ಬದುಕಿನ ಮತ್ತೊಂದು ಸಿನಿಮಾ ಕತೆ ಆಗಲಿಕ್ಕೆ ಇಷ್ಟ ಇಲ್ಲ.

“ಈಗ ನೀನು ಹೇಳು ಅಂಶು, ನಾನೇನು ಮಾಡಲಿ? ಡು ಯು ಥಿಂಕ್ ಐ ಶುಡ್ ಗೋ ಅಹೆಡ್? ಹೇಳು ನೀನು.. ಇಂಥವನ್ನೆಲ್ಲ ನೀನು ಕರೆಕ್ಟಾಗಿ ಜಡ್ಜ್ ಮಾಡ್ತೀಯ. ಆವಾಗ ಒಟ್ಟಿಗಿದ್ದಾಗ ಹೀಗೆ ನಾನು ಸಮಸ್ಯೆ ಹೇಳ್ಕೊಂಡಾಗಲೆಲ್ಲ ಏನಾದರೂ ಪರಿಹಾರ ಹೇಳ್ತಿದ್ದೆ.. ಕಮಾನ್, ಏನು ಮಾಡಲಿ ನಾನೀಗ?”

ಒಂದು ಕೈಯಲ್ಲಿ ಕೊನೆಯ ಅರ್ಧ ಗ್ಲಾಸು ಬಿಯರು, ಇನ್ನೊಂದು ಕೈಯಲ್ಲಿ ಈಗಷ್ಟೆ ಸರ್ವರ್ ಬಡಿಸಿ ಹೋಗಿದ್ದ ಜೀರಾ ರೈಸ್ ತುಂಬಿದ್ದ ಚಮಚ ಹಿಡಿದು ನನ್ನೆದುರು ಮ್ಲಾನವಾಗಿ ಕೂತಿದ್ದ ಓಂಪ್ರಕಾಶನ ಮುಖವನ್ನೇ ನೋಡಿದೆ. ಮೂರು ವರ್ಷದ ಹಿಂದೆ ಒಂದು ಫೈಲ್ ಹಿಡಿದು ಇಂಟರ್‌ವ್ಯೂಗೆಂದು ನಮ್ಮ ಆಫೀಸಿಗೆ ಬಂದಿದ್ದ ಓಂಪಿ, ಕೆಲಸದ ಮೊದಲ ದಿನ ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಓಂಪಿ, ಊಟಕ್ಕೆ ದುಡ್ಡು ಜಾಸ್ತಿಯೆಂದು ರೈಸ್‌ಬಾತ್ ತಿನ್ನುತ್ತಿದ್ದ ಓಂಪಿ, ಕೈಕೊಟ್ಟ ಹುಡುಗಿಯ ಕತೆ ಹೇಳುತ್ತ ಕಣ್ತುಂಬಿಸಿಕೊಂಡಿದ್ದ ಓಂಪಿ, ದೊಡ್ಡ ಸಂಬಳದ ಕೆಲಸ ಸಿಕ್ಕಾಗ ಖುಶಿಯಿಂದ ನನ್ನನ್ನು ತಬ್ಬಿಕೊಂಡಿದ್ದ ಓಂಪಿ -ಈಗ ಹಣವಂತ, ಸಕಲ ಸೌಕರ್ಯಗಳನ್ನೂ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವ, ಕಾರಿನಲ್ಲಿ ಜಮ್ಮಂತ ಓಡಾಡುವವ, ಐಷಾರಾಮಿ ಪಬ್ಬುಗಳಲ್ಲಿ ವೀಕೆಂಡುಗಳನ್ನು ಹರವಿಕೊಂಡವ... ಕೊನೆಗೂ ಹಂಬಲಿಸುತ್ತಿರುವುದು ಹಿಡಿ ಪ್ರೀತಿಗಾಗಿಯೇ? ಡಿವಿಜಿಯವರ ಮಂಕುತಿಮ್ಮನ ಕಗ್ಗ ನೆನಪಾಯಿತು.. ಏನ ಹೇಳಲಿ ಇವನಿಗೆ..? ‘ಪ್ರೀತಿ-ಪ್ರೇಮಗಳಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ’ ಅಂತ ಕೇವಲ ಅರ್ಧ ಗಂಟೆ ಮುಂಚೆ ಹೇಳಿದ್ದ ನಾನು ಈಗ ಹೇಗೆ ಇವನಿಗೆ ಸಮಾಧಾನ ಮಾಡಲಿ? ಕೊನೆಗೂ ಜಗತ್ತಿನ ಕಟ್ಟಕಡೆಯ ಜೀವಿಯ ಹೃದಯವೂ ತುಡಿಯುವುದು ಪ್ರೀತಿಸಖ್ಯವೊಂದರ ಸಾಂಗತ್ಯಕ್ಕಾಗಿಯೇ?

“ಎಕ್ಸ್‌ಕ್ಯೂಸ್ ಮಿ..” ಸಕಾಲಕ್ಕೆಂಬಂತೆ ಬಂದ ಯಾವುದೋ ಮೊಬೈಲ್ ಕಾಲ್ ಅಟೆಂಡ್ ಮಾಡಲೆಂದು ಓಂಪಿ ಎದ್ದು ರೆಸ್ಟ್‌ರೂಮ್ ಕಡೆ ನಡೆದ. ನಾನು ನೀಳ ನಿಟ್ಟುಸಿರು ಬಿಟ್ಟೆ. ಗ್ಲಾಸುಗಳು ಮುಗಿದಿದ್ದವು. ಕ್ಲೀನರ್ ಬಂದು ಖಾಲಿ ಬಾಟಲುಗಳನ್ನು ಎತ್ತಿಕೊಂಡು ಹೋದ. ಟೇಬಲ್ಲಿನ ತುಂಬ ಇದ್ದ ಗೋಬಿ ಮಂಚೂರಿ, ಚಿಕನ್ ಟಿಕ್ಕ, ಜೀರಾ ರೈಸ್, ಆಲೂ ಚಿಪ್ಸ್‌ಗಳ ಸಶೇಷಗಳ ಪ್ಲೇಟುಗಳು, ನೀರಿನ ಗ್ಲಾಸುಗಳು, ತಳದಲ್ಲಿ ಚೂರೇ ಉಳಿದಿದ್ದ ಬಿಯರಿನ ಗ್ಲಾಸುಗಳು, ಪುಟ್ಟ ಆಶ್ ಟ್ರೇ, ನಿಂಬೆಹಣ್ಣಿನ ಚೂರು ತೇಲುತ್ತಿದ್ದ ಫಿಂಗರ್‌ಬೌಲ್, ಈಗಷ್ಟೆ ತಂದಿಟ್ಟುಹೋಗಿದ್ದ ಬಿಲ್ ಕೆಳಗಿನ ಬಡೇಸೋಪಿನ ಬಟ್ಟಲು.. ಎಲ್ಲವುಗಳಲ್ಲಿ ಓಂಪಿ ಕೇಳಿದ ಪ್ರಶ್ನೆಗಳಿದ್ದವು. ಇವನ್ನೆಲ್ಲ ಇಲ್ಲೇ ಬಿಟ್ಟುಹೋಗಿಬಿಡಬಹುದು; ಆದರೆ ಪ್ರಶ್ನೆಗಳು? ಅಕ್ಕ-ಪಕ್ಕ-ಹಿಂದೆ-ಮುಂದಿನ ಟೇಬಲ್ಲುಗಳಲ್ಲಿ ಈಗ ಬೇರೆ ಬೇರೆ ಗುಂಪುಗಳು-ಜೋಡಿಗಳು ಕೂತು ಅವರವರದೇ ಲೋಕಗಳಲ್ಲಿ ಅವರವರದೇ ಸತ್ಯ-ಸುಳ್ಳುಗಳ ವಿನಿಮಯದಲ್ಲಿ ಮುಳುಗಿದ್ದರು. ಕೈ ಬೀಸಿ ನಡೆದ ಅಮೃತಾ, ಬುದ್ಧಿ ಹೇಳಿ ಹೋದ ಜ್ಯೋತಿ, ಪ್ರೀತಿಸು ಎನ್ನುತ್ತಿರುವ ವಿನಿಷಾ.. ಇವರೆಲ್ಲ ಏನು ಮಾಡುತ್ತಿರಬಹುದು ಇವತ್ತಿನ ಈ ಕ್ಷಣದಲ್ಲಿ?

“ಅಮ್ಮ ಫೋನ್ ಮಾಡಿದ್ದಳು.. ನೋಡದೆ ತಿಂಗಳಾಯ್ತು, ಊರಿಗೆ ಬಾ ಅಂತಿದಾಳೆ. ಇವತ್ತು ಸಂಜೆ ಬೇರೆ ವಿನಿಷಾಗೆ ಸಿಗಬೇಕು. ರಾತ್ರಿ ಬಸ್ಸಿಗೆ ಹೋಗಿಬಿಡಲಾ ಅಂತ ನೋಡ್ತಿದ್ದೇನೆ ಮಂಗಳೂರಿಗೆ.. ಈಗ ವಿನಿಷಾ-ಗಿನಿಷಾ ಅಂತ ಸುದ್ದಿ ಎತ್ತಿದ್ರೆ ಸಾಕು, ಹಾಂ, ಅವ್ಳುನ್ನೇ ಮದುವೆ ಮಾಡ್ಕೋ ಅಂತಾಳೆ! ಏಯ್, ಏನೋ ಯೋಚಿಸ್ತಾ ಕೂತಿದೀಯಾ? ನೀನು ತಲೆ ಕೆಡಿಸಿಕೋಬೇಡವೋ, ನಂಗೊತ್ತು, ನನ್ನ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇಲ್ಲ ಅಂತ. ಏನು ಹ್ಯಾಗೆ ಬರುತ್ತೋ ಹಾಗೆ ಸ್ವೀಕರಿಸೋದು. ಆ ಕ್ಷಣಕ್ಕೆ ಏನು ಅನ್ನಿಸುತ್ತೋ ಹಾಗೆ ಮಾಡೋದು. ಕಮಾನ್, ಲೆಟ್ಸ್ ಗೆಟ್ ಔಟ್ ಆಫ್ ಹಿಯರ್..” ಅಂತಂದು, ವೇಯ್ಟರಿಗೆ ಬಿಲ್ ಹಣ-ಟಿಪ್ಸು ಕೊಟ್ಟು, ನನ್ನ ಹೆಗಲ ಮೇಲೆ ಕೈ ಹಾಕಿ ಎಳೆದುಕೊಂಡು, ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ಮೆಟ್ಟಿಲುಗಳನ್ನು ಇಳಿಸತೊಡಗಿದ ಓಂಪಿ. ಓಂಪ್ರಕಾಶನನ್ನು ಈ ಭುವಿಗೆ - ಸಾಮಾನ್ಯ ಸ್ಥಿತಿಗೆ ತರಬಲ್ಲ ಏಕೈಕ ವ್ಯಕ್ತಿಯಾಗಿ ಅಲ್ಲೆಲ್ಲೋ ಇರುವ ಅವನ ಅಮ್ಮ ಕಂಡಳು ನನಗೆ.

“ಕಾರು ಎಲ್ಲಿ ಪಾರ್ಕ್ ಮಾಡಿದೀಯಾ?” ಕೇಳಿದೆ. 

“ಕಾರ್ ತರ್ಲಿಲ್ಲ. ಈ ಟ್ರಾಫಿಕ್ಕಲ್ಲಿ ಯಾರು ಡ್ರೈವ್ ಮಾಡ್ತಾರೆ ಮಾರಾಯಾ.. ಅಲ್ಲದೇ ಇವತ್ಯಾಕೋ ಹಿಂದಿನ ಥರ ಬಸ್ಸಲ್ಲಿ ಓಡಾಡೋಣ ಅನ್ನಿಸ್ತು, ಅದಕ್ಕೇ ಮಿಲ್ಲರ್ಸ್ ರೋಡ್‌ವರೆಗೆ ಬಸ್ಸಲ್ಲಿ ಬಂದು, ಅಲ್ಲಿಂದ ವಾಕ್ ಮಾಡ್ಕೊಂಡು ಬಂದೆ. ಕಾರಿನಲ್ಲಿ ಗ್ಲಾಸುಗಳನ್ನೆಲ್ಲ ಏರಿಸಿ ಕೂತಿದ್ದರೆ ನಾನು ತೀರ ಒಂಟಿ ಅನ್ನಿಸಲಿಕ್ಕೆ ಶುರು ಆಗುತ್ತೆ. ಆದರೆ ಇಲ್ಲಿ ರಸ್ತೆಯಲ್ಲಿ ನೂರಾರು ಜನರ ಮಧ್ಯೆ ನಡೀತಿದ್ರೆ ನಾನೂ ಎಲ್ಲರ ಹಾಗೆ ಅನ್ನೋ ಥರದ ಫೀಲು.. ಕಳೆದುಹೋಗಲಿಕ್ಕೊಂದು ಅವಕಾಶವೂ ಸಿಗತ್ತೆ ನೋಡು..!” ಅಂದು ಪೇಲವವಾಗಿ ನಕ್ಕ.

ಮನದುಂಬಿ ಬಂದಂತಾಗಿ ಓಂಪಿಯನ್ನು ತಬ್ಬಿಕೊಂಡೆ. “ತುಂಬಾ ಖುಶಿಯಾಯ್ತು, ಇಷ್ಟು ಕಾಲದ ನಂತರ ನಿನ್ನನ್ನ ಮೀಟ್ ಮಾಡಿ.. ಥ್ಯಾಂಕ್ಸ್, ಬಂದಿದ್ದಕ್ಕೆ..” ಅಂದವನು, “ಹೇ, ನೋಡು, ನೀನು ನನ್ನ ಮೇಲೆ ಕತೆ ಬರೆದರೆ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡು. ಬೇಕಿದ್ರೆ ವಿನಿಷಾಳನ್ನೇ ಮದುವೆ ಆಗಿ ಆಮೇಲೆ ಸುಖವಾಗಿದ್ದ ಅಂತ ಬರೆ.  ಐ ಲೈಕ್ ಸ್ಟೋರೀಸ್ ವಿತ್ ಹ್ಯಾಪಿ ಎಂಡಿಂಗ್!” ಅಂತಂದು ಕಣ್ಣು ಹೊಡೆದ. ಮತ್ತೊಮ್ಮೆ ಕೈ ಕುಲುಕಿದವನು, ಹಿಂದೆ ಸರಿದು ವೇವ್ ಮಾಡಿ, ಸೀದಾ ಫುಟ್‌ಪಾತ್‌ಗುಂಟ ಬಿರಬಿರನೆ ನಡೆಯತೊಡಗಿದ. ನೋಡನೋಡುತ್ತಿದ್ದಂತೆಯೇ ಕನ್ನಿಂಗ್‌ಹ್ಯಾಂ ರಸ್ತೆಯ ಜನಜಂಗುಳಿಯ ನಡುವೆ ಕರಗಿಹೋದ.

[2010ರ 'ಅಕ್ಕ' ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿ 'ದೀಪ ತೋರಿದೆಡೆಗೆ' ಸಂಕಲನದಲ್ಲಿ ಸೇರಿಕೊಂಡಿರುವ ನನ್ನ ಕತೆ.]

Tuesday, November 16, 2010

ಕನಸ ಬೇಯಿಸಲು..

ತಳ್ಳುಗಾಡಿಯ ಮೇಲೊಂದು ಸಿಲಾವರದ ಪಾತ್ರೆ-
ಬೇಯಿಸುತ್ತಿದ್ದಾನೆ ಲುಂಗಿಯುಟ್ಟವ ಬಿಸಿನೀರಲ್ಲಿ
ರಾಶಿ ರಾಶಿ ಕಡಲೇಕಾಯಿ ಹಬೆ ಹಬೆ
ಉದ್ದ ಹಿಡಿದರೆ ಎಂಟು; ಜೋತಾಡಿಸಿದರೆ ಗಂಟು
ಒಡೆದರೆ ಎರಡು ಪುಟ್ಟ ಶಿಶುಗಳು ಗರ್ಭದಲ್ಲಿ
ಕೆಲವೊಮ್ಮೆ, ಅದೃಷ್ಟ ಜೋರಿದ್ದರೆ, ಮೂರು.

ಒಂದು ದಿನ, ಯಾರೋ ಹತ್ತಿರ ಬಂದು
ಕೂತುಬಿಡುತ್ತಾರೆ. ಕೈ ಹಿಡಿದು ಕತೆ ಹೇಳುತ್ತಾರೆ.
ಅಪ್ಪ-ಅಮ್ಮ ತುಂಬಾ ಒಳ್ಳೆಯವರು.
ದೊಡ್ಡಪ್ಪ ಚಿಕ್ಕವನಿದ್ದಾಗಲೇ ಮನೆಯಿಂದ ಓಡಿಹೋಗಿದ್ದಂತೆ.
ಅತ್ತೆ ಇದ್ದಾಳಲ್ಲ -ಅದೇ, ಅಪ್ಪನ ತಂಗಿ-
ಅವಳಿಗೆ ಕಿವಿ ಸ್ವಲ್ಪ ಮಂದ
ಆದರೆ ಸನ್ನೆಯಲ್ಲೇ ಎಲ್ಲಾ ಅರ್ಥ ಮಾಡಿಕೊಳ್ಳುತಾಳೆ
ಮಾವನಿಗೆ ಅವಳ ಮೇಲೆ ಯಾವಾಗಲೂ ಸಿಡುಕು
ಗೊತ್ತಾ? ನನ್ನ ತಂಗಿಗೆ ಗಾಜಿನ ಹೂಜಿಯಲ್ಲಿ
ಮೀನು ಸಾಕಬೇಕು ಅಂತ ಆಸೆಯಿತ್ತು

ಇಳಿದು ನೋಡಿದರೆ ಕಣ್ಣಾಳ, ಅದೆಷ್ಟೊಂದು ಕತೆಗಳು
ನಿನ್ನಲ್ಲಿ.. ಇಡಲಾಗದೇ ಈ ಪುರಾಣ, ಇತಿಹಾಸ, ಭೂತ-
ವನ್ನೆಲ್ಲ ಕಟ್ಟಿ ಆಚೆ? ಅಳಿಸಿ ಉಳಿದೆಲ್ಲ ಚಿತ್ರ,
ಬಿಡಲಾಗದೆ ಬರೀ ನಾವಿಬ್ಬರ ಮೌನಭಿತ್ತಿಯಲ್ಲಿ?

ಕಾಯುತ್ತಿದ್ದಾನೆ ತಳ್ಳುಗಾಡಿಯಲ್ಲಿ ಕಡಲೆಕಾಯಿಯವ..
ಒಂದಷ್ಟು ಬೇಯಿಸದ ಕಾಯಿಗಳೂ ಇವೆಯಂತೆ ಅವನ ಬಳಿ
ಕೇಳಿದರೆ, ಪುಟ್ಟ ಪೊಟ್ಟಣದಲ್ಲಿ ಕಟ್ಟಿಕೊಟ್ಟಾನು
ಬಿಡಾರದಲ್ಲಿ ಒಲೆಯಿದೆ; ಸೂರಂಚಿಂದ ಸುರಿವ ಮಳೆಯಿದೆ
ಹೊಸನೀರಿನಲ್ಲಿ ಬೇಯಿಸೋಣ ಕನಸುಗಳನ್ನು.
ಹಾರೈಸೋಣ ಸಾಕು- ಒಡಲ ಹೂರಣ ಕಹಿಯಿರದಿರಲೆಂದು.

Thursday, November 11, 2010

ಪ್ರೊ. ಜಿ.ವಿ. -ಎರಡು ಮಾತು

ಪ್ರಣತಿಯ ಉದ್ಘಾಟನೆ ಮತ್ತು ಚಿತ್ರಚಾಪ ಬಿಡುಗಡೆ: ಹೊಸ ಸಂಸ್ಥೆ, ಮೊದಲ ಪುಸ್ತಕ ಎಂದಾಗ ಎಲ್ಲರಿಗಿರುವ ಭಯವೇ ನಮಗೂ ಇತ್ತು. ನಾವೇನೋ ಹುಮ್ಮಸ್ಸಿನಲ್ಲಿ ಬರಹ, ಕರೆಕ್ಷನ್ಸು, ಕವರ್ ಪೇಜು, ಒಳಪುಟಗಳಿಗೆ ರೇಖಾಚಿತ್ರಗಳು, ಮುದ್ರಣ, ಇನ್ವಿಟೇಶನ್ನು ಅಂತೆಲ್ಲ ತಯಾರಿ ನಡೆಸಿದ್ದೆವು. ಆದರೆ ಪುಸ್ತಕ ಬಿಡುಗಡೆಗೆ ಯಾರನ್ನು ಕರೆಸುವುದು ಎನ್ನುವ ಗೊಂದಲ ಮಾತ್ರ ದೊಡ್ಡದಾಗಿ ಕಾಡ್ತಿತ್ತು. ಹೇಳಿಕೇಳಿ ನಾವೆಲ್ಲ ಬ್ಲಾಗಿಗಳು. ಅಲ್ಲದೆ ಇನ್ನೂ ಹುಡುಗರು. ಎಲ್ಲೋ ಆಗೀಗ ನಮ್ಮ ಲೇಖನಗಳು-ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರಬಹುದು ಅಷ್ಟೇ. ಉಳಿದಂತೆ ಹೊರಜಗತ್ತಿಗೆ ನಾವು ಯಾರು ಅಂತಲೇ ಗೊತ್ತಿಲ್ಲ. ಹಾಗಿದ್ದಾಗ, ಈಗ ಇದ್ದಕ್ಕಿದ್ದಂತೆ ಪುಸ್ತಕ ಮಾಡಿದೀವಿ, ಬನ್ನಿ, ಬಿಡುಗಡೆ ಮಾಡಿ ಅಂತ ಕರೆಯೋದಾದರೂ ಹೇಗೆ? ನಮ್ಮ ಪರಿಚಯ ಮಾಡಿಕೊಳ್ಳೋದು ಹೇಗೆ? -ಅಂತೆಲ್ಲ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದೆವು.

ವಸುಧೇಂದ್ರ, ‘ಹಾಗೆಲ್ಲ ಏನೂ ಇಲ್ಲ ಕಣೋ. ಪುಸ್ತಕ ಬಿಡುಗಡೆ ಅಂದ್ರೆ ಯಾರನ್ನ ಕರೆದ್ರೂ ಬರ್ತಾರೆ. ಬೇಕಿದ್ರೆ ಅನಂತಮೂರ್ತಿಗಳನ್ನ ಕರೀರಿ, ಹೊಸ ಹುಡುಗರ ಬೆನ್ನು ತಟ್ಟಲಿಕ್ಕೆ ಅಂತ ಬರ್ತಾರೆ. ಏನೂ ಮುಜುಗರ ಪಟ್ಕೋಬೇಡಿ. ಅರಾಮಾಗಿ ಹೋಗಿ ಕೇಳಿ’ ಅಂತ ಧೈರ್ಯ ತುಂಬಿದ್ರು. ಆದ್ರೂ ನಮಗೆ ಒಳಗೊಳಗೆ ಪುಕುಪುಕು.

ಕೊನೆಗೆ ಅರುಣ, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಹೆಸರನ್ನ ಸೂಚಿಸಿದ. ‘ಅವರು ತನ್ನ ತಾಯಿಗೆ ಪರಿಚಯ. ಆ ಮೂಲಕ ಪರಿಚಯ ಮಾಡ್ಕೋಬಹುದು ನಮ್ಮನ್ನ. ಏನಾದ್ರಾಗ್ಲಿ, ಹೋಗಿ ಕೇಳೋದು ಕೇಳೋಣ’ ಅಂತ. ಆದ್ರೆ ಜಿ.ವಿ. ಹೆಸರು ಕೇಳಿ ನಮಗೆ ಭಯ ಇನ್ನೂ ಜಾಸ್ತಿ ಆಯ್ತು! ಜಿ.ವಿ. ಅಂದ್ರೆ ನಿಘಂಟು ತಜ್ಞ. ನಾವು ಬರೆದಿರೋದರಲ್ಲಿ ಏನಾದ್ರೂ ತಪ್ಪುಗಳಿದ್ರೆ ಅಲ್ಲೇ ಓದಿ ಸರಿಯಾಗಿ ಬೈದು, ‘ಇಂತಾ ಪುಸ್ತಕ ಮಾಡ್ಲಿಕ್ಕೆ ನಾಚ್ಕೆ ಆಗಲ್ವಾ?’ ಅಂತಂದು ಕಳುಹಿಸಿಬಿಟ್ರೆ? ಆದರೆ ನಮಗೆ ಗತ್ಯಂತರವಿರಲಿಲ್ಲ. ಲೈಮ್‌ಲೈಟಿನಲ್ಲಿರೋ, ಯುವ ಸಾಹಿತಿಗಳನ್ನ ಕೇಳಿ ಇಲ್ಲಾ ಅನ್ನಿಸಿಕೊಳ್ಳೋದಕ್ಕಿಂತ ಇದು ವಾಸಿ ಎನ್ನಿಸಿ, ಜಿ.ವಿ.ಯವರನ್ನೇ ಕರೀಲಿಕ್ಕೆ ಮನಸು ಮಾಡಿದೆವು.

ಮೊದಲು ಅರುಣ ಮತ್ತೆ ವಿಜಯಾ ಜಿ.ವಿ.ಯವರ ಮನೆಗೆ ಫೋನ್ ಮಾಡಿ ಪರಿಚಯ ಹೇಳಿಕೊಂಡು ಒಂದು ದಿನ ಹೋಗಿ ಪುಸ್ತಕದ ಹಸ್ತಪ್ರತಿ ಕೊಟ್ಟುಬಂದ್ರು. “ಏನ್ ಹೇಳಿದ್ರೂರಿ ಜೀವಿ?” ಅಂತ ನಾವೆಲ್ಲ ಒಕ್ಕೊರೊಲಿನಿಂದ ಕೇಳಿದೆವು. “ಏನೂ ಹೇಳ್ಲಿಲ್ಲ ಇನ್ನೂ. ಏನ್ ಮಾಡ್ತಿದೀರಾ ನೀವೆಲ್ಲ ಅಂತ ಕೇಳಿದ್ರು. ಯಾವಾಗಿಂದ ಬರೀತಿದೀರಾ, ಏನು ಓದ್ತೀರಾ, ಯಾರು ನಿಮ್ಮ ಇಷ್ಟದ ಸಾಹಿತಿ ಅಂತೆಲ್ಲ ಕೇಳಿದ್ರು. ನಂಗೆ ಮೊದಲೇ ಟೆನ್ಷನ್ನು, ಅಡಿಗರನ್ನ ಓದ್ತಿರ್ತೀನಿ ಅಂತ ಹೇಳಿದೆ. ಅಡಿಗರ ಕಾವ್ಯದಲ್ಲಿ ಏನು ಇಷ್ಟ ಅಂತ ಕೇಳಿದ್ರು. ಅಯ್ಯೋ, ಅದೆಲ್ಲ ನಂಗೇನ್ ಗೊತ್ತು? ಇಷ್ಟ ಆಗಿದ್ದೆಲ್ಲ ಓದೋವ್ನು ನಾನು! ಏನೋ, ತೋಚಿದ್ದು ಹೇಳಿದೆ ಬೆವರ್ತಾ.. ಆಮೇಲೆ ಅವರೇ ಅಡಿಗರ ಕಾವ್ಯದ ಬಗ್ಗೆ ಸುಮಾರು ಹೊತ್ತು ಮಾತಾಡಿದ್ರು. ನಿಮ್ಮಂತ ಹುಡುಗರು ಓದ್ತಿರೋದು, ಬರೀತಿರೋದು ಖುಶಿ ವಿಷಯ ಅಂತ ಹೇಳಿದ್ರು” ಅಂತ ಹೇಳಿದ ಅರುಣ. “ಹಾಗಾದ್ರೆ ಬರ್ತಾರಂತಾ ಪ್ರೋಗ್ರಾಮಿಗೆ?” ಕೇಳಿದ್ವು. “ಹೂನಪ್ಪಾ. ಖುಶಿಯಿಂದ ಒಪ್ಪಿಕೊಂಡ್ರು” ಅಂತ ಅರುಣ ಹೇಳಿದಾಗ ನಮಗೆಲ್ಲ ನಿರಾಳ.

ಆಮೇಲೊಂದು ದಿನ, ಕಾರ್ಯಕ್ರಮಕ್ಕೆ ಒಂದು ವಾರ ಮುಂಚೆ, ನಾವು ಚಿತ್ರಚಾಪದಲ್ಲಿ ಬರೆದಿದ್ದ ಐದೂ ಗೆಳೆಯರು ವಿಜಯಾ ಜೊತೆ ಜಿ.ವಿ. ಮನೆಗೆ ಹೋದ್ವು. ಎಲ್ಲರಿಗೂ ಭಯ. ಈಗಾಗ್ಲೇ ಜಿ.ವಿ. ನಮ್ಮ ಹಸ್ತಪ್ರತಿ ಓದಿರ್ತಾರೆ. ಏನು ಹೇಳ್ತಾರೋ ಏನೋ ಅಂತ. ಪುಟ್ಟ ಮನೆಯ ಕದ ತೆರೆದ ಬಿಳಿ ವಸ್ತ್ರಧಾರಿ ನಮ್ಮೆಲ್ಲರಿಗಿಂತ ಕುಳ್ಳಗಿದ್ದರು. ಆಹ್ವಾನ ಪತ್ರಿಕೆ ಕೊಟ್ವಿ. “ಪ್ರಣತಿ -ಹೆಸರು ಯಾರು ಇಟ್ಟಿದ್ದು?” ಕೇಳಿದ್ರು ಜಿ.ವಿ. ಇದ್ದುದರಲ್ಲೇ ನಮ್ಮಲ್ಲಿ ವಿಜಯಾ ಧೈರವಂತೆ! ಮಾತಾಡಿದ್ಲು. ಆಮೇಲೆ ಜಿ.ವಿ. ನಮ್ಮೆಲ್ಲರ ಬಗ್ಗೆ ವಿಚಾರಿಸಿದ್ರು. “ಚನಾಗಿದೆ. ಓದಿದೆ ಎಲ್ಲಾನೂ. ಚಿತ್ರಚಾಪ ಅನ್ನೋ ಹೆಸರೂ ಅರ್ಥಪೂರ್ಣವಾಗಿದೆ....” ಅಂತೆಲ್ಲ ಸುಮಾರು ಹೊತ್ತು ಮಾತಾಡಿದ್ರು. ನಮಗೆ ಸ್ವಲ್ಪ ಧೈರ್ಯ ಬಂತು. “ಕಾರ್ಯಕ್ರಮದ ದಿನ ನಮಗೆ ಒಂದಷ್ಟು ಸಲಹೆಗಳನ್ನೂ ಕೊಡಿ ಸರ್.. ನಮ್ಮ ಹಾಗೇ ಸುಮಾರು ಹೊಸ ಬರಹಗಾರರು ಬಂದಿರ್ತಾರೆ ಅಲ್ಲಿ” ಅಂತ ಕೇಳಿಕೊಂಡ್ವು. “ಖಂಡಿತ ಖಂಡಿತ.. ಆದ್ರೆ.. ಕಾರ್ಯಕ್ರಮದ ದಿನ ಏನಾದ್ರೂ ವಾಹನಕ್ಕೆ ವ್ಯವಸ್ಥೆ ಮಾಡ್ಲಿಕ್ಕೆ ಆಗತ್ತಾ? ಕಾಲು ನೋವು. ಅದಿಲ್ಲಾಂದ್ರೆ ನೆಡ್ಕೊಂಡೇ ಬರ್ತಿದ್ದೆ..!” ಅಂತ ಅದೆಷ್ಟು ಸಣ್ಣ ದನಿಯಲ್ಲಿ ಕೇಳಿದ್ರು ಅಂದ್ರೆ, “ಅಯ್ಯೋ ಖಂಡಿತ ಸರ್.. ಕಾರ್ ಕಳುಹಿಸ್ತೀವಿ” ಅಂತ ಎಲ್ಲರೂ ಒಟ್ಟಿಗೇ ಹೇಳಿದೆವು ನಾವು.

ಜಿ.ವಿ. ಕಾರ್ಯಕ್ರಮದ ದಿನ ಹೇಳಿದ ಸಮಯಕ್ಕೆ ಬಂದರು. ಪ್ರಣತಿಯನ್ನ ಉದ್ಘಾಟಿಸಿದರು, ಚಿತ್ರಚಾಪವನ್ನ ಬಿಡುಗಡೆ ಮಾಡಿದ್ರು. ನಂತರ ನಮ್ಮೈವರ ಬರಹಗಳ ಬಗ್ಗೆಯೂ ವಿವರವಾಗಿ ಮಾತಾಡಿದ್ರು. ಕನ್ನಡದ ಬಗ್ಗೆ, ಸಾಹಿತ್ಯದ ಬಗ್ಗೆ, ನಗರದ ಜನಗಳ ಭಾಷೆಯ ಬಗ್ಗೆ ಅವರಾಡಿದ ಮೌಲಿಕ ನುಡಿಗಳಿಗೆ ಪ್ರೇಕ್ಷಕರೆಲ್ಲ ತಲೆದೂಗಿದರು. “ಇಲ್ಲಿಯ ಬರಹಗಳನ್ನ ನಾನು ಒಂದಲ್ಲ, ಎರಡು ಸಲ ಓದಿದೆ. ಇವರೆಲ್ಲರಿಗೂ ಉತ್ತಮ ಭವಿಷ್ಯವಿದೆ” ಎಂದಾಗಲಂತೂ ನಮಗಾದ ಸಂತೋಷ ಅಷ್ಟಿಷ್ಟಲ್ಲ. ವಯಸ್ಸು ನೂರಕ್ಕೆ ಸಮೀಪಿಸುತ್ತಿರುವ ಹಿರಿಯರೊಬ್ಬರ ಈ ಹಾರೈಕೆಗಿಂತ ನಮಗಾದರೂ ಇನ್ನೇನು ಬೇಕಿತ್ತು? ಜಿ.ವಿ. ನಮಗೆಲ್ಲ ಹಸ್ತಾಕ್ಷರ ಕೊಟ್ಟರು, ನಾವು ಫೋಟೋ ಬೇಕೆಂದಲ್ಲೆಲ್ಲ ನಿಂತು ಸಹಕರಿಸಿದರು, ಪುಸ್ತಕ ಬಿಡುಗಡೆಯ ನಂತರವಿದ್ದ ಸಂಗೀತ ಕಾರ್ಯಕ್ರಮ ಮುಗಿಯುವವರೆಗೂ ಕೂತಿದ್ದರು.

ಚಿತ್ರಚಾಪ ಬಿಡುಗಡೆ ಸಂದರ್ಭದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯ
ನಂತರವೂ ಅಷ್ಟೇ. ನಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಯಲು ಹೋದಾಗಲೆಲ್ಲ ಆತ್ಮೀಯವಾಗಿ ಸ್ವಾಗತಿಸುವರು, ಯಾವುದೇ ಹಮ್ಮು-ಬಿಮ್ಮು ತೋರಿಸದೆ ನಮ್ಮೊಂದಿಗೆ ಮಾತಾಡುವರು. ನಾವು ಕೇಳುವ ಕನ್ನಡದ ಕುರಿತಾದ, ವ್ಯಾಕರಣದ ಕುರಿತಾದ, ಶಬ್ದಪ್ರಯೋಗದ ಕುರಿತಾದ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವರು.

ಈ ಹಿರಿಯರಿಗೆ, ಮೇಧಾವಿಗೆ, ನಿರಹಂಕಾರಿಗೆ, ಶಬ್ದಬ್ರಹ್ಮಗೆ ಈಗ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆದಾಗಲೆಲ್ಲ ಇವರಿಗಿಂತ ಸೂಕ್ತರು ಮತ್ಯಾರಿದ್ದರು ಈ ಸ್ಥಾನಕ್ಕೆ ಎಂದೆನಿಸುತ್ತದೆ. ಪ್ರೊ. ಜಿ. ವೆಂಕಟಸುಬ್ಬಯ್ಯರಿಗೆ ನನ್ನ ಮತ್ತು ಪ್ರಣತಿಯ ಅಭಿವಂದನೆ, ನಮಸ್ಕಾರ.

Wednesday, November 03, 2010

ಚಳಿ, ದೀಪಾವಳಿ, ಪಿರೂತಿ, ಬ್ಲಾ ಬ್ಲಾ

‘ಕಿಲಾಡಿ ಮಾಡಿದರೆ ದೂತರು ಬರುತಾರೆ.. ಕಿನ್ನರಾ, ಹುಷಾರು’
‘ಏನ್ ಮಾಡ್ತಾರೆ ಅಮ್ಮಾ ದೂತರು? ಯಾರವರು?’
‘ದೂತರು ಇ‌ಇ‌ಇಷ್ಟು ದಪ್ಪಗಿರ್ತಾರೆ.. ಬಿಳೀ ಗಡ್ಡ.. ದೊಗಲೆ ದೊಗಲೆ ಅಂಗಿ.. ಕಪ್ಪು ಪೈಜಾಮ.. ತಲೆಗೊಂದು ಕೋನ್ ಟೊಪ್ಪಿ..’
‘ಹಾನ್! ಗೊತ್ತಾಯ್ತು.. ದೂತರು ಎಂದರೆ ಕ್ರಿಸ್‌ಮಸ್ ತಾತ ಅಲ್ವಾ ಅಮ್ಮಾ?’
‘ಅಲ್ಲ ಅಲ್ಲ.. ಕ್ರಿಸ್‌ಮಸ್ ತಾತ ಅಲ್ಲ.. ದೂತರ ಮುಖ ಕಪ್ಪ್ಪ್‌ಪಗಿರೊತ್ತೆ.. ಅಲ್ಲಲ್ಲಿ ಗುಳಿ ಬಿದ್ದಿರೊತ್ತೆ.. ಅವರು ಚೂರೂ ನಗೆಯಾಡುವುದಿಲ್ಲ.. ಚೇಷ್ಟೆ ಮಾಡಿದ ಪುಟ್ಟನನ್ನ ಎತ್ಕೊಂಡ್ ಹೋಗೀ...’
‘ಹೋಗೀ...?’
‘ಎತ್ಕೊಂಡ್ ಹೋಗಿ.. ತುಂಬಾ ಕಚಗುಳಿ ಇಟ್ಟು.. ಇಲ್ಲೆಲ್ಲ ಇಲ್ಲೆಲ್ಲ..’
‘ಹಿಹಿಹಿಹಿ... ಏಯ್ ಬಿಡಮ್ಮ.. ಬಿಡಮ್ಮಾ.. ಕಿಕಿಕಿಕಿ..’
‘..ಇಲ್ಲೆಲ್ಲ ಹೀಗೆಲ್ಲ ಕಚಗುಳಿ ಇಟ್ಟು ಪುಟ್ಟನನ್ನ ನಗಿಸ್ತಾರೆ..!’

* * *

ಹಕ್ಕಿಗಳೆಲ್ಲ ತಡವಾಗಿ ಏಳುತ್ತಿವೆ. ಈ ಚಳಿಯಲ್ಲಿ ಮುಂಜಾನೆಯೇ ಹೊರಹಾರಹೊರಟರೆ ರೆಕ್ಕೆಗಳೆಲ್ಲ ಮರಗಟ್ಟಿಹೋಗಲಾರವೇ? ಗೂಡಿನೊಳಗೆ ಬೆಚ್ಚಗೆ, ಹುಲ್ಲಿನೊಳಗೆ ಇನ್ನೂ ಇನ್ನೂ ಇನ್ನೂ ಮುದುಡಿಕೊಂಡು, ಅಮ್ಮನ ರೆಕ್ಕೆ ತೆಕ್ಕೆಯಡಿಯಲ್ಲಿ ಮುರುಟಿಕೊಂಡು ಮಲಗಿರಬೇಕು. ಉಹುಂ, ನಿದ್ದೆ ಮಾಡಬಾರದು; ಎಚ್ಚರಿರಬೇಕು.. ಅಮ್ಮನ ಬಿಸಿ ಉಸಿರು, ಅಪ್ಪನ ಗೊರಕೆ ಸದ್ದು, ದೂರ ಹೊರಳಿ ಹೋಗಿರುವ ತಮ್ಮನ ಬೇರ್ಪಡಿಕೆ, ಎಲ್ಲವನ್ನು ಮುಗುಳ್ನಗುತ್ತ ಅನುಭವಿಸುತ್ತ. ಇಷ್ಟು ಮುಂಚೆ ಹೊರಗೆ ಹಾರಿದರೆ ಈ ಇಬ್ಬನಿಯಲ್ಲಿ ಆಹಾರ ಕಂಡೀತಾದರೂ ಹೇಗೆ? ನಾಲ್ಕು ಮಾರಿನ ಮುಂದೆ ಮತ್ತೇನೂ ಕಾಣುವುದಿಲ್ಲ. ಎಲ್ಲಾ ಬಿಳಿ ಬಿಳಿ ಬೆಳ್ಳಗೆ. ಅಲಾರ್ಮಿಗೆ ಬೈದುಕೊಳ್ಳುತ್ತಾ ನೀನು ಏಳುತ್ತೀ ಹಾಸಿಗೆಯಿಂದ..

ದುಂಬಿಗಳೂ ತಡವಾಗಿ ಏಳುತ್ತಿವೆ.. ಹೂವು ಅರಳುವುದೇ ತಡ ಈಗ. ಸೂರ್ಯನ ಒಲೆಯಲ್ಲಿ ಶಾಖ ಹೆಚ್ಚಾಗಿ, ಮಂಜೆಲ್ಲ ಕರಗಿ, ಕಿರಣಗಳು ಹೂಮೇಲೆ ಬಿದ್ದು, ಅದು ಅರಳುವ ಹೊತ್ತಿಗೆ ಇನ್ನೊಂದು ಗುಕ್ಕು ನಿದ್ರೆ ತೆಗೆಯಬಹುದು. ದುಂಬಿಗಳಿಗಷ್ಟೇ ಗೊತ್ತು ಹೂವುಗಳ ಚಡಪಡಿಕೆ. ಬೇಗ ಅರಳಬೇಕೆಂಬ ತುಡಿತ. ತಮ್ಮೊಡಲಿನ ಕಂಪನ್ನು ಮೂಜಗಕೆಲ್ಲ ಹರಡಬೇಕೆಂಬ ತಪನೆ. ಸಹಾಯಕ್ಕೆ ಬಾರದ ಸೂರ್ಯನ ಬಗ್ಗೆ ಅಸಹನೆ. ನಿನ್ನ ಮುಡಿಯೇರಿ ನನ್ನ ಕಣ್ಸೆಳೆಯುವ ಚಪಲ.

ನೀರೂ ಕಾಯುವುದಿಲ್ಲ ಬೇಗ.. ಕಾಯಿಲ್ ಹಾಕಿಟ್ಟು ಎಷ್ಟೊತ್ತಾಯ್ತು? ಗಡಿಯಾರ ನೋಡಿದ್ದೇ ನೋಡಿದ್ದು. ಗಡಿಯಾರ ನಿಂತು ಹೋಗಿದೆಯೇ ಎಂದು ಪರಿಕಿಸಲು ವಾಚು ನೋಡಿದ್ದು. ಆದರೂ ನಂಬಿಕೆ ಬರದೇ ಮೊಬೈಲು ನೋಡಿದ್ದು. ಹೌದು, ಅರ್ಧ ಗಂಟೆ ಮೇಲಾಯ್ತು. ಇನ್ನೂ ಕಾದಿಲ್ಲ ನೀರು. ಮುಟ್ಟಿ ನೋಡಿದರೆ ಐಸ್ ಮುಟ್ಟಿದಂತೆ. ತಣ್ಣಗೆ. ಹಾಗೇ ತಣ್ಣೀರೇ ಹೊಯ್ದುಕೊಂಡರೆ ನಿನ್ನ ಬಂಗಾರು ಬಣ್ಣದ ಮೈತುಂಬ ಚಳಿಗುಳ್ಳೆಗಳೆದ್ದು, ಮೈಪುಳಕಗೊಂಡು, ನನ್ನ ನೆನಪಾಗಿ... ಬೇಡ ಬೇಡ, ನೀರು ಕಾಯಲಿ ಬಿಡು.

ಬಸ್ಸೂ ತಡವಾಗಿ ಬರುತ್ತದೆ.. ಡ್ರೈವರ್ ಎದ್ದರೂ ಮಂಕಿ ಕ್ಯಾಪ್ ಹಾಕಿದ ಕಂಡಕ್ಟರಿಗಿನ್ನೂ ನಿದ್ದೆ. ಅವನ ಚರ್ಮದ ಚೀಲದೊಳಗೆ ನಾಣ್ಯಗಳೊಂದಿಗೆ ನಿದ್ದೆ ಹೋಗಿರುವ ಪೀಪಳಿ. ನಾಲ್ಕು ಸಲ ಬಟನ್ ಒತ್ತಿದರೂ ಸ್ಟಾರ್ಟಾಗಲು ಒಲ್ಲದ ತಂಡಿ ಬಡಿದ ಎಂಜಿನ್. ಗಾಲಿಗಳಿಗೂ ಒದ್ದೆ ರಸ್ತೆಯ ಮೇಲೆ ಓಡಲು ಸೋಮಾರಿತನ. ನಿನಗೆ ಕಾದೂ ಕಾದೂ ಬೇಸರ. ಆಫೀಸಿನಲ್ಲಿ ಬಾಸ್ ಬೈಯುತ್ತಾರೇನೋ ಅಂತ ಟೆನ್ಷನ್.

ಎಲ್ಲರಿಗಿಂತ ನೀನೇ ಲೇಟೇನೋ ಅಂದುಕೊಂಡು ಆಫೀಸಿಗೆ ಕಾಲಿಟ್ಟರೆ ಅಂಗಣವೆಲ್ಲ ಬಿಕೋ ಬಿಕೋ.. ಪಾರ್ಕಿಗೆ ಜಾಗಿಂಗಿಗೆ ಹೋಗಿದ್ದ ಬಾಸ್ ಮುದ್ದು ಅಳಿಲಿನ ಮೀಸೆ ಮೇಲೆ ನಿಂತಿದ್ದ ಇಬ್ಬನಿಹನಿಯನ್ನು ನೋಡುತ್ತ ಮೈಮರೆತು ನಿಂತುಬಿಟ್ಟಿದ್ದರಂತೆ.. ಕಲೀಗುಗಳೆಲ್ಲ ಹೊಸದಾಗಿ ಮದುವೆಯಾದವರು: ಹೇಗೆ ತಾನೆ ಬಂದಾರು ಅಷ್ಟು ಮುಂಚೆ? ಸಿಸ್ಟಮ್ ಆನ್ ಮಾಡಿದರೆ ಕಿಂಗ್‌ಫಿಷರ್ ಹಕ್ಕಿಯ ಬ್ಯಾಕ್‌ಗ್ರೌಂಡಿನ ಮೇಲೆ ಪುಟ್ಟ ಪುಟ್ಟ ಐಕಾನುಗಳು. ನಿನ್ನ ಪುಟ್ಟ ಬೆರಳುಗಳಿಂದ ಅದುಮಿದರೆ ಮೌಸೂ ಉಲಿಯುತ್ತದೆ ಹಿತವಾಗಿ ಕ್ಲಿಕ್. ತೆರೆದುಕೊಂಡ ವಿಂಡೋದಲ್ಲಿ ನನ್ನದೇ ಮೇಯ್ಲ್: "ಚಿನಕುರುಳಿ ಹುಡುಗಿಗೆ ಗುಡ್ ಮಾರ್ನಿಂಗ್! ಪಿಂಕ್ ಡ್ರೆಸ್ಸಲ್ಲಿ ಚನಾಗ್ ಕಾಣ್ತಿದೀಯ. ಇನ್ನು ಆರು ದಿನ ನಾನಿರಲ್ಲ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗ್ತಿದೀನಿ. ಅಷ್ಟು ದಿನಕ್ಕೆ ಬೇಕಾದಷ್ಟು ಪ್ರೀತೀನ ಇಕೋ ಈ ಮೇಯ್ಲಲ್ಲೇ ಕೊಡ್ತಿದೀನಿ: ತುಂಬಿಸಿಕೋ. ಹ್ಯಾಪಿ ದಿವಾಲಿ. ಲವ್ಯೂ!"

ಡ್ರೆಸ್ಸಿನ ಪಿಂಕನ್ನೂ ಮೀರಿ ಏರಿದ ಮುಖದ ಕೆಂಪಿಗೆ ತುಟಿಯಂಚ ಮುಗುಳ್ನಗೆ ಮ್ಯಾಚ್ ಆಗುತ್ತದೆ. ಟಕಟಕನೆ ಟೈಪಿಸುತ್ತೀಯ ಎಸ್ಸೆಮ್ಮೆಸ್ ಮೊಬೈಲಿನಲ್ಲಿ: "ಥ್ಯಾಂಕ್ಯೂ ಕಣೋ ಗೂಬೆ.. ನಿಂಗೂ ಹ್ಯಾಪಿ ದೀಪಾವಳಿ. ಊರಲ್ಲಿ ಮಜಾ ಮಾಡು. ಲವ್ಯೂ!" ಗಾವುದಗಳಾಚೆಗಿನ ನನ್ನೂರಲ್ಲಿ ಸಿಗ್ನಲ್ಲನ್ನೇರಿ ಬರುತ್ತದೆ ಸಂದೇಶ ಟಿಣ್ ಟಿಣ್. ನಾನು ಹೊದಿಕೆಯಡಿಯಿಂದ ಕೈತೆಗೆದು ಮೊಬೈಲಿಗಾಗಿ ತಡಕಾಡುತ್ತೇನೆ.

* * *

ವರುಷಗಳ ಹಿಂದೆ ಬರೆದು ಅರ್ಧಕ್ಕೇ ಬಿಟ್ಟಿದ್ದ ಲಹರಿ.  ಯಾಕೋ ಈಗ ಈ ಚಳಿಗೆ ಈ ಹವೆಗೆ ಈ ಇದಕ್ಕೆ ಮತ್ತು ಹೊಸದೇನನ್ನೂ ಬರೆಯಲಾಗದ ಬಿಜಿಗೆ, ಸ್ವಲ್ಪ ಸೋಮಾರಿತನಕ್ಕೆ ಸೂಟ್ ಆಗುತ್ತದೆ ಎನ್ನಿಸಿತು; ಕೊನೆಯಲ್ಲಿಷ್ಟು ತೀಡಿ ಪೋಸ್ಟ್ ಮಾಡಿದ್ದೇನೆ. ಈ ದೀಪಾವಳಿಗೆ ಇಷ್ಟೇ.

ಶುಭಾಶಯಗಳೂ..

Thursday, October 14, 2010

ಹಳಿಗಳನ್ನು ದಾಟುವಾಗ

ಮೂರುಮಲ್ಲಿಗೆ ತೂಕದವಳ ದಾವಣಿಯಲ್ಲಿ ಚಿಟ್ಟೆಗಳಿದ್ದವು..
ಕುಸುಮಕರೆಯ ಸಿಹಿಗನಸನೇ ಉಂಡು ಬೆಳೆದವು-
ರೆಕ್ಕೆ ಬಲಿತಾಗ ಹಾರಲೇ ಇಲ್ಲ; ಮರಳಿ ಕಂಬಳಿ
ಹುಳುಗಳಾಗಿ ಮೈಗೇ ಚುಚ್ಚಿದವು
ಅತ್ತರಿನ ಸಿಡಿಗಾಳಿಗೆ ಒಡ್ಡಿದ ಬಗಲು-
ಹೊಸ ಕಚಗುಳಿಗೆ ಮೈ ನವಿರೇಳಲೇ ಇಲ್ಲ
ಬೋಗುಣಿಯಲ್ಲಿನ ದ್ರಾಕ್ಷಿಗಳನು ಸುತ್ತ ಕೂತ ಜನ
ಹುರಿದು ಮುಕ್ಕುವಾಗ ಸಹ ಬಾರದ ದೇವರು
ಈಗ ಬಂದು ವರವ ಕೇಳು ಎನ್ನುತ್ತಿದ್ದಾನೆ..

ನೈವೇದ್ಯಕ್ಕಿಲ್ಲಿ ಇನ್ನೇನೂ ಉಳಿದಿಲ್ಲ ಬಾಂಧವಾ..
ಮೊಳೆಯಿಂದ ತಲೆಯವರೆಗೂ ಸುತ್ತಿಯಾಗಿದೆ ಜಾಟಿ.
ಬಿಡುವುದಷ್ಟೇ ಬಾಕಿ ಕೈಬೀಸಿ. ತಿರುಗಿ ತಿರುತಿರು ತಿರುಗಿ
ಸತ್ವ ಮುಗಿದು ಒರಗುವವರೆಗೆ ತಿರುಗಲಿ ಬುಗರಿ.
ನುಣುಪು ನೆಲ ಮಲಗಿಸಿಕೊಳ್ವುದು ಹಾಸಿ ಲೇಪು
ನೇವರಿಸುವುದು ಧೂಳಿನೆಲರು, ಗುನುಗಿ ಜೋ-ಲಾಲಿ

ಯೋಚಿಸುತ್ತ ನಿಂತೆ ಯಾಕೆ?
ಹಳಿಗಳನ್ನು ದಾಟುವಾಗ ನಿಧಾನ ಮಾಡಬೇಡ..
ಬೆಣಚುಕಲ್ಲುಗಳ ರಾಶಿ ಮೇಲೆ ಊದ್ದಕೆ ಪವಡಿಸಿರುವ
ಈ ಕಂಬಿಗಳು ಎಲ್ಲೂ ಕೂಡುವುದೇ ಇಲ್ಲವಂತೆ
ಭರ್ರನೆ ಹಾದು ಬರುವ ರೈಲು ನೀನು ಹೆಜ್ಜೆ
ಕದಲಿಸುವ ಮೊದಲೇ ಅಪ್ಪಳಿಸಿಬಿಟ್ಟೀತು

ಎಷ್ಟೊ ಹರಿದಾರಿಯಾಚೆಗಿದೆ ನಿನ್ನ ನಿಲ್ದಾಣ
ಬಂದ ಬಂಡಿಯ ಇಚ್ಛಾನುಸಾರ ನನ್ನ ಪಯಣ
ಮತ್ಯಾವುದೋ ನಿಲ್ಮನೆ, ಇನ್ಯಾವುದೋ ಬಂದರು
ಗೋಗರೆಯದಿರು, ಋಣವಿದ್ದಲ್ಲಿ ಮತ್ತೆ ಸಿಗೋಣ
ಕಾಮನಬಿಲ್ಲನ್ನು ಭೂಮಿಗಿಳಿಸಲು ಸಾಧ್ಯವಾಗುತ್ತದೋ
ನೋಡೋಣ.

Thursday, October 07, 2010

ಅರಿಕೆ

ಸಂಜೆಮಳೆಯ ದಿನಗಳಿವು..
ಕೊಚ್ಚಿ ಹೋಗುತ್ತಿರುವ ಚಿಂದಿ ಕನಸುಗಳನ್ನೆಲ್ಲ ಆಯ್ದು
ಒಂದು ಮಾಡಿ ತಿದ್ದಿ ತೀಡಿ ಒಪ್ಪ ಮಾಡುತ್ತಿರುವೆ,
ನೀನು ಅಡ್ಡ ಬರಬೇಡ..

ಯಾವುದೋ ಮರದ ಕರಿಯೆಲೆ ತೆಗೆದು ಹುಬ್ಬಿಗಿಟ್ಟಿದ್ದೇನೆ
ಯಾವುದೋ ಹೂವಿನ ಪಕಳೆ ಹಿಡಿದು ತುಟಿಗಿಟ್ಟಿದ್ದೇನೆ
ಹರಿದ ಸರದ ಮುತ್ತುಗಳು ಇಲ್ಲಿ ಒಡವೆಯಾಗಿವೆ
ಮುರಿದ ಮಂಟಪ ಕಂಬಗಳು ಕಾಲಾಗಿವೆ
ಸಂಪಿಗೆ ಸಿಗದ್ದಕ್ಕೆ ಬೋರೆಹಣ್ಣು ಇಡಲಿದ್ದೇನೆ ಮೂಗಿಗೆ-
ಈಗ ನೀನು ಅಡ್ಡ ಬರಬೇಡ..

ನಿನ್ನೊನಪು ಒಯ್ಯಾರ ಈಕೆಗಿಲ್ಲ,
ಹಾಗಂತ ನಾನು ವಿಚಲಿತನಾಗಿಲ್ಲ..
ಇವಳು ಹಲವು ಕನಸುಗಳಿಂದೊಡೆದ ಚೂರುಗಳ ಒಟ್ಟುರೂಪ
ನೂರು ನಿರ್ನಿದ್ರೆ ರಾತ್ರಿಗಳ ನಿಟ್ಟುಸಿರ ಶಾಪ
ಹೊಸಪ್ರೀತಿಯಿಂದಲೇ ತುಂಬಬೇಕಿದೆ ಜೀವಭಾವ

ಹಾರೈಸಲಣಿಯಾಗು ಅಥವಾ ದಾರಿಬಿಟ್ಟು ನಿಲ್ಲು..
ತೀಡುಗಾಳಿಗೆ ಕಾರುಮೋಡಗಳು ತೇಲಿಹೋಗಲಿ
ಮಿಂಚ ಹೊಳಪಲಿ ಗುಡುಗಿನಬ್ಬರ ಕ್ಷೀಣವಾಗಲಿ
ಮತ್ತೆ ಹೊಮ್ಮಿ ಅರಳಲಿ ಚಿಕ್ಕೆ ಹೂದೋಟ
ನನ್ನ ಕಿನ್ನರಿಗಾಗಲಿ ಚಂದ್ರಿಕೆಯ ಪ್ರಭಾತ.

Wednesday, September 08, 2010

ಗೆಜ್ಜೆವಸ್ತ್ರ

ಕಳೆದ ವರ್ಷದ ಗಣೇಶ ಚತುರ್ಥಿಯಂದು ಅಜ್ಜನ ಮನೆಗೆ ಹೋದಾಗ, “ಸತತ ಇಪ್ಪತ್ತಾರನೇ ವರ್ಷದ ಅಟೆಂಡೆನ್ಸು ಇದು” ಅಂತ ಅಪ್ಪ ಹೇಳಿದಾಗಲೇ ನನಗೂ ಅರಿವಾದದ್ದು ಅದು. ‘ಅರೆ, ಹೌದಲ್ಲಾ!’ ಎಂದುಕೊಂಡೆ. “ಮೊದಲನೇ ಸಲ ಹೊಸಹಬ್ಬಕ್ಕೆ ಅಂತ ನಿಂಗ ಗಂಡ-ಹೆಂಡ್ತಿ ಬಂದಿದ್ದೇ ಇನ್ನೂ ಮೊನ್‌ಮೊನ್ನೆ ಬಂದಂಗಿದ್ದು ನೋಡು ಭಾವಾ” ಅಂತ ಮಾವ ನೆನಪು ಮಾಡಿಕೊಂಡ. ಅದರ ಮುಂದಿನ ಸಲದ ಹಬ್ಬಕ್ಕೆ ಬಹುಶಃ ಅಮ್ಮ ನನ್ನನ್ನೂ ಕರೆದುಕೊಂಡು ಹೋಗಿದ್ದಳಿರಬೇಕು ಅಂತ ಹೊಳೆದು ನಾನು ನಸುನಕ್ಕೆ.

ಕಳೆದ ಇಪ್ಪತ್ತಾರು ವರ್ಷಗಳಿಂದ ಒಂದು ವರ್ಷವೂ ತಪ್ಪಿಸದೆ ಅಪ್ಪ-ಅಮ್ಮ ಅಥವಾ ನಾನು-ಅಮ್ಮ ಅಥವಾ ನಾನು-ಅಪ್ಪ ಅಥವಾ ನಾವು ಮೂವರೂ ಅಥವಾ ಕನಿಷ್ಟ ನಮ್ಮಲ್ಲಿ ಯಾರಾದರೂ ಒಬ್ಬರು, ಚೌತಿ ಹಬ್ಬದ ದಿನ ನನ್ನ ಅಜ್ಜನ ಮನೆಗೆ ಹೋಗೇ ಹೋಗುತ್ತಿದ್ದೇವೆ. ಯಾಕೆಂದರೆ, ಅಜ್ಜನ ಮನೆಯಲ್ಲಿ ಚೌತಿ ಹಬ್ಬಕ್ಕೆ ಗಣಪತಿ ತರುತ್ತಾರೆ. ಮತ್ತು ನಮ್ಮ ಮನೆಯಲ್ಲಿ ತರುವುದಿಲ್ಲ.

ಚೌತಿ ಹಬ್ಬಕ್ಕೆ ಒಂದು ತಿಂಗಳಿದೆ ಎನ್ನುವಾಗಲೇ ಅಮ್ಮನಿಗೆ ಗಡಿಬಿಡಿ ಶುರುವಾಗುತ್ತಿತ್ತು. ಅದು ಹಬ್ಬಕ್ಕೆ ನೆಂಟರು ಬರುತ್ತಾರೆ ಅಂತಲೋ, ಮನೆ ಸುತ್ತಮುತ್ತ ಸ್ವಚ್ಚ ಮಾಡಬೇಕು ಅಂತಲೋ, ಚಕ್ಕುಲಿ-ಪಂಚಕಜ್ಜಾಯ ಮಾಡಲು ಸಾಮಗ್ರಿ ತರಿಸಬೇಕು ಅಂತಲೋ ಅಲ್ಲ. ಬದಲಿಗೆ, ಅಮ್ಮನಿಗೆ ಚೌತಿ ಬರುವುದರೊಳಗೆ ‘ಗೆಜ್ವಸ್ತ್ರ’ ಮಾಡಿ ಮುಗಿಸಬೇಕಿರುತ್ತಿತ್ತು. ಪ್ರತಿವರ್ಷದ ಹಬ್ಬಕ್ಕೂ ಅಮ್ಮ ತನ್ನ ತವರುಮನೆಗೆ ಬರುವ ಗಣಪತಿಗೆಂದು ಗೆಜ್ವಸ್ತ್ರ ತಯಾರಿಸುತ್ತಿದ್ದಳು. ಏಕೆಂದರೆ, ಮಾವಂದಿರಿಗಿನ್ನೂ ಮದುವೆಯಾಗಿರಲಿಲ್ಲ. ಅಮ್ಮಮ್ಮನಿಗೆ ವಯಸ್ಸಾಗಿತ್ತು. “ಅವ್ಳಿಗೆ ಹರಿತಲ್ಲೆ. ದಿನಾ ಅಡುಗೆ-ಕಸಮುಸುರೆ ಮಾಡಹೊತ್ತಿಗೇ ಸಾಕ್‌ಸಾಕಾಗಿರ್ತು. ಚೌತಿ ಬಂತು ಅಂದ್ಮೇಲೆ ತಯಾರಿ ಬೇರೆ ಮಾಡ್ಕ್ಯಳವು. ಅಂತಾದ್ರಗೆ ಗೆಜ್ವಸ್ತ್ರ ಹೊಸ್ಕೋತ ಕೂರಕ್ಕೆ ಟೈಮ್ ಎಲ್ಲಿದ್ದು ಅವ್ಳಿಗೆ? ಅದ್ಕೇ ನಾನೇ ಮಾಡ್ಕೊಡ್ತಿ” ಅಂತ ಅಮ್ಮ, ಯಾರೂ ಕೇಳದಿದ್ದರೂ ತನಗೇ ಸಮರ್ಥಿಸಿ ಹೇಳಿಕೊಳ್ಳುತ್ತಿದ್ದಳು.

ಗೆಜ್ವಸ್ತ್ರ ಎಂದರೆ ಗೆಜ್ಜೆವಸ್ತ್ರ. ಹತ್ತಿಯಿಂದ ಮಾಡಿದ, ಬಿಂದಿ, ಬೇಗಡೆ, ಸಂತ್ರದ ತಗಡು, ಅರಿಶಿಣ-ಕುಂಕುಮಗಳಿಂದ ಅಲಂಕರಿಸಿದ ಮಾಲೆ. ಹತ್ತಿಯನ್ನು ಎಳೆಯೆಳೆಯಾಗಿ ಬಿಡಿಸಿ, ಮಣೆಯ ಮೇಲಿಟ್ಟು ಹೊಸೆದು, ಅದರಲ್ಲೇ ಹೂವುಗಳನ್ನು ಮಾಡಿ, ಹೊಸೆದ ದಾರದಿಂದ ಸುತ್ತುವರೆಸಿ, ಹೂವುಗಳ ಒಡಲಲ್ಲಿ ಬಣ್ಣಬಣ್ಣದ ಸಂತ್ರದ ತಗಡನ್ನು ಕತ್ತರಿಸಿ ಅಂಟಿಸಿ, ಬಳ್ಳಿಗಳಿಗೆ ಹಸಿರು ಬಣ್ಣ ಹಚ್ಚಿ, ಬಿಂದಿಗಳನ್ನು ಅಲ್ಲಲ್ಲಿ ಇಟ್ಟು -ಒಯ್ದು ಗಣಪತಿಯ ಕೊರಳಿಗೆ ಹಾಕಿದರೆ, ಗಣಪತಿ ಚೆಂದವೋ ಗೆಜ್ಜೆವಸ್ತ್ರ ಚೆಂದವೋ? ಉತ್ತರ ಹುಡುಕುವ ಗೊಂದಲದಲ್ಲಿ ಮನಸು ತನ್ಮಯವಾಗಬೇಕು.

ಅಮ್ಮ ಮಾಡಿದ ಗೆಜ್ಜೆವಸ್ತ್ರ ಅವಳ ತವರೂರಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಚೌತಿಯ ಸಂಜೆ ಗಣಪತಿ ನೋಡಲು ಬರುವ ಗುಂಪಿನಲ್ಲಿ ಹಲವರು ಬರುವುದು ಗಣಪತಿ ನೋಡಿ ನಮಸ್ಕರಿಸಿ ಅವನ ಕೃಪೆಗೆ ಪಾತ್ರರಾಗಲಲ್ಲ; ಗಣಪತಿಗೆ ಮಾಡಿದ ಅಲಂಕಾರ ನೋಡಲು. ಗಂಡಸರು-ಮಕ್ಕಳಿಗೆ ಯಾರ್ಯಾರ ಮನೆಯಲ್ಲಿ ಎಷ್ಟು ದೊಡ್ಡ ಮೂರ್ತಿ ತಂದಿದ್ದಾರೆ, ಮಂಟಪ ಹೇಗೆ ಕಟ್ಟಿದ್ದಾರೆ, ದೀಪಾಲಂಕಾರ ಹೇಗೆ ಮಾಡಿದ್ದಾರೆ ಎಂಬುದು ಮುಖ್ಯವಾದರೆ, ಹೆಂಗಸರಿಗೆ ಮಂಟಪಕ್ಕೆ ಎಷ್ಟು ಹೂವು ಹಾಕಿದ್ದಾರೆ, ಪಂಚಕಜ್ಜಾಯದ ರುಚಿ ಹದವಾಗಿದೆಯಾ, ಮನೆಯೊಡತಿ ಎಂಥ ಸೀರೆ ಉಟ್ಟಿದ್ದಾಳೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಷ ಯಾವ ಥರದ ಗೆಜ್ಜೆವಸ್ತ್ರ ಮಾಡಿದ್ದಾರೆ ಎಂಬುದು ಗಮನಿಸುವ ವಿಷಯವಾಗುತ್ತದೆ.  “ಈ ವರ್ಷ ಏನ್ ಚನಾಗ್ ಮಾಡಿದ್ಲೇ ಗೆಜ್ವಸ್ತ್ರ ಗೌರೀ.. ದೃಷ್ಟಿ ಆಪಹಂಗೆ ಇದ್ದು” ಅಂತ ದೇವಕಕ್ಕ ಹೇಳಿದರೆ, “ಹೂವಿನ್ ಡಿಸೈನ್ ಅಂತೂ ಹೈಕ್ಲಾಸ್ ಬಿಡು! ಅಷ್ಟ್ ನಾಜೂಕಾಗಿ ಮಾಡಕ್ಕೆ ಎಷ್ಟು ದಿನ ತಗೈಂದ್ಲೇನ” ಅಂತ ಸುಮತಿ ಅತ್ತೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಳು.

ಚೌತಿ ಬಂತೆಂದರೆ ಅಮ್ಮನ ಗಡಿಬಿಡಿಯ ಜೊತೆ ನನ್ನ ಸಂಭ್ರಮವೂ ಸೇರಿಕೊಳ್ಳುತ್ತಿತ್ತು. ಸಾಮಾನ್ಯವಾಗಿ ರಾತ್ರಿ ಮನೆ ಕೆಲಸವನ್ನೆಲ್ಲ ಬೇಗಬೇಗನೆ ಮುಗಿಸಿ, ಕಸಮುಸುರೆ ಪೂರೈಸಿ, ಹಾಲಿಗೆ ಹೆಪ್ಪನ್ನೂ ಹಾಕಿದ ಮೇಲೆ ಅಮ್ಮ ಗೆಜ್ಜೆವಸ್ತ್ರದ ತಯಾರಿಗೆ ಕೂರುತ್ತಿದ್ದುದು. ಪ್ರತಿರಾತ್ರಿ ಕಣ್ಣಿಗೆ ನಿದ್ರೆ ಹತ್ತುವವರೆಗೆ ಗೆಜ್ವಸ್ತ್ರ ಮಾಡುವ ಕುಶಲ ಕೆಲಸದಲ್ಲಿ ಅಮ್ಮ; ಅವಳ ಪಕ್ಕ ಶಾಲೆಯಲ್ಲಿ ಕೊಟ್ಟಿರುತ್ತಿದ್ದ ಹೋಮ್‌ವರ್ಕ್ ಮಾಡುತ್ತ ಕೂತಿರುತ್ತಿದ್ದ ನಾನು. ದೇವರ ಮುಂದೋ, ಸೆಖೆಯಾಗುತ್ತಿದ್ದರೆ ತೆರೆದ ಹಿತ್ಲಕಡೆ ಬಾಗಿಲಿನ ಬಳಿಯೋ ಕೂತು ಕಾರ್ಯತತ್ಪರರಾದ ನಮ್ಮಿಬ್ಬರ ನಡುವಣ ಮೌನಕ್ಕೆ, ಹಾಳೆಯ ಮೇಲೆ ಓಡುವ ನನ್ನ ಪೆನ್ನು ಮತ್ತು ಗುಚ್ಚಿನಿಂದ ಎಳೆಯುವಾಗ ಹತ್ತಿಯೆಳೆಗಳು ಮೃದುಮಧುರ ರವವನ್ನು ಬೆರೆಸುತ್ತಿದ್ದವು. ಎರಡು ಲೆಕ್ಕ ಬಿಡಿಸಿಯೋ ನಾಲ್ಕು ಸಾಲು ಬರೆದೋ ನಾನು ಕತ್ತೆತ್ತಿ ನೋಡಿದರೆ ಅಮ್ಮನ ಕೈಯಲ್ಲಿ ಬಿಳಿಬಿಳಿಯ ಹೂಗಳು ಬಣ್ಣದ ಬೇಗಡೆ ಹಚ್ಚಿಸಿಕೊಂಡು ಸುಂದರಿಯರಾಗುತ್ತಿದ್ದವು.

ಒಂದು ವರ್ಷ ಅಮ್ಮ, ಚೌತಿಗೆ ತಿಂಗಳಿದೆ ಎನ್ನುವಾಗ, “ಅಪ್ಪೀ, ಇವತ್ತು ಶಾಲಿಂದ ಬರಕ್ಕರೆ ಸಂತ್ರದ ತಗಡು ತಗಂಬಾ. ಗೆಜ್ವಸ್ತ್ರ ಮಾಡಕ್ಕೆ ಶುರು ಮಾಡವು” ಎಂದಳು. ನಾನಾಗ ಉಳವಿಯ ಮೆಡ್ಲಿಸ್ಕೂಲಿಗೆ ಹೋಗುತ್ತಿದ್ದೆ. ಶಾಲೆಯಿಂದ ಬರುವಾಗ ಹೆಗಡೇರ ಅಂಗಡಿಗೆ ಹೋಗಿ “ಸಂತ್ರದ ತಗಡು ಇದೆಯಾ?” ಅಂತ ಕೇಳಿದೆ. “ಹೋ ಇದೆ. ಎಷ್ಟ್ ಬೇಕು?” ಅಂತ ಜಿತೇಂದ್ರಣ್ಣ ಕೇಳಿದ. ಅಮ್ಮ ನನ್ನ ಬಳಿ ಐದು ರೂಪಾಯಿ ಕೊಟ್ಟು ಯಾವುದಾದರೂ ಎರಡು ಬಣ್ಣದ ಸಂತ್ರದ ತಗಡು ತರುವಂತೆ ಹೇಳಿದ್ದಳು. ಜಿತೇಂದ್ರಣ್ಣ ಒಟ್ಟು ಐದು ಬಣ್ಣದ ಸಂತ್ರದ ತಗಡುಗಳನ್ನು ತೋರಿಸಿದ. ಕೆಂಪಿ, ಹಸಿರು, ನೀಲಿ, ಅರಿಶಿಣ ಮತ್ತು ಗುಲಾಬಿ... “ಎಷ್ಟ್  ರೂಪಾಯಿ ಒಂದಕ್ಕೆ?” ಅಂತ ಕೇಳಿದೆ. ಜಿತೇಂದ್ರಣ್ಣ “ಒಂದು ರೂಪಾಯಿಗೆ ಒಂದು” ಅಂತ ಹೇಳಿದ. ನನ್ನ ಕಣ್ಣರಳಿತು. “ಹಾಗಾದ್ರೆ ಎಲ್ಲಾ ಬಣ್ಣದ್ದೂ ಒಂದೊಂದು ಕೊಡಿ” ಅಂತ ಕೊಂಡುತಂದೆ. ದಾರಿಯಲ್ಲೆಲ್ಲ ಅಮ್ಮನಿಗೆ ಐದು ಬಣ್ಣದ ತಗಡು ತೋರಿಸಿದಾಗ ಅವಳು ಖುಶಿ ಪಡುವುದನ್ನೂ, ಅಷ್ಟನ್ನೂ ಬಳಸಿ ಅವಳು ತಯಾರಿಸಿದ ಗೆಜ್ವಸ್ತ್ರ ಸುಂದರವಾಗಿ ಮೂಡಿಬರುವುದನ್ನೂ ಕಲ್ಪಿಸಿ ಹಿಗ್ಗಿದೆ.

ಆದರೆ ಅಮ್ಮ ನನ್ನ ಕಲ್ಪನೆಗಳಿಗೆ ಸಂಪೂರ್ಣ ತದ್ವಿರುದ್ದವಾಗಿ ವರ್ತಿಸಿದಳು. “ಎರಡು ಸಂತ್ರದ ತಗಡು ತಗಂಬಾ ಅಂತ ಹೇಳಿದ್ರೆ ಕೊಟ್ಟಿದ್ದಷ್ಟೂ ದುಡ್ಡು ಖರ್ಚು ಮಾಡ್ಕ್ಯಂಡ್ ಬೈಂದ್ಯಲೋ.. ದುಡ್ಡಿನ ಬೆಲೆಯೇ ಗೊತ್ತಿಲ್ಲೆ ನಿಂಗೆ” ಅಂತ ಅಮ್ಮ ಬೈದುಬಿಟ್ಟಳು! ನಾನು ಸಣ್ಣ ಮುಖ ಮಾಡಿಕೊಂಡೆ.  ಐದು ರೂಪಾಯಿಯೆಂದರೆ ಅವಳಿಗೆ ಗಂಟೆಗಟ್ಟಲೆ ಕೂತು ಕೈ ನೋವು ಮಾಡಿಕೊಂಡು ಅಡಿಕೆ ಸುಲಿದು ಸಂಪಾದಿಸಿದ ದುಡ್ಡು. ಅದನ್ನು ನಾನು ಬಣ್ಣದ ತಗಡಿನ ಮೋಹಕ್ಕೆ ತೂರಿಬಂದದ್ದು ಅವಳ ಸಿಟ್ಟಿಗೆ ಕಾರಣವಾಗಿತ್ತು. ಆದರೂ ಎಲ್ಲೋ ವರ್ಷಕ್ಕೊಂದು ಸಲ -ಅದೂ ದೇವರಿಗೆಂದು ಮಾಡುವ ಗೆಜ್ಜೆವಸ್ತ್ರಕ್ಕಾಗಿ ನಾನು ಖರ್ಚು ಮಾಡಿದ ದುಡ್ಡಿಗೆ ಅಮ್ಮ ಇಷ್ಟೆಲ್ಲ ರಂಪ ಮಾಡಬಾರದಿತ್ತು ಅಂತ ನನಗನ್ನಿಸಿತು. ಅವಳು ಅವಲಕ್ಕಿ-ಮೊಸರು ಕೊಡಲು ಬಂದರೆ “ಬ್ಯಾಡ” ಅಂತ ಸಿಟ್ಟು ತೋರಿದೆ. ಕೊನೆಗೆ ಅವಳೇ, “ಎರಡೇ ಬಣ್ಣದ್ದು ತರಕ್ ಹೇಳಿದ ಅಮ್ಮಂಗೆ ಐದೈದ್ ಬಣ್ಣದ್ದು ತಗಬಂದು ಕೊಟ್ರೆ ಖುಶಿಯಾಗ್ತು ಅಂದ್ಕಂಡ್ಯಾ? ಇಲ್ಲೆ.. ಎರಡೇ ಬಣ್ಣ ಬಳಸಿಯೂ ತುಂಬಾ ಚನಾಗ್ ಕಾಣೋಹಂಗೆ ಗೆಜ್ವಸ್ತ್ರ ಮಾಡ್ಲಕ್ಕು. ದೇವರಿಗೆ ನಾವು ಎಷ್ಟು ಖರ್ಚು ಮಾಡಿದ್ದು ಅನ್ನೋದು ಮುಖ್ಯ ಆಗದಿಲ್ಲೆ; ಎಷ್ಟು ಭಕ್ತಿ ಇಟ್ಟು ಮಾಡಿದ್ದು ಅನ್ನೋದು ಮುಖ್ಯ. ಅದು ನಿಂಗೆ ಗೊತ್ತಾಗ್ಲಿ ಅಂತ ಸಿಟ್ಟು ಮಾಡಿದ್ದು ಅಷ್ಟೇ” ಅಂತ ಸಮಾಧಾನ ಮಾಡಿದಳು. ಮತ್ತು ನನಗೆ ಬೇಜಾರಾಗದಿರಲಿ ಅಂತ, ಆ ವರ್ಷ ಐದೂ ಬಣ್ಣದ ಸಂತ್ರದ ತಗಡು ಬಳಸಿ ಅಮ್ಮ ಗೆಜ್ಜೆವಸ್ತ್ರ ಮಾಡಿದಳು.

ಮಾವನಿಗೆ ಮದುವೆಯಾದಮೇಲೆ ಅಮ್ಮ ತವರಿಗಾಗಿ ಗೆಜ್ವಸ್ತ್ರ ಮಾಡುವುದನ್ನು ಬಿಟ್ಟಳು. “ಶಾಂತತ್ಗಿಗೆ ಯನಗಿಂತ ಎಷ್ಟೋ ಚನಾಗ್ ಮಾಡಕ್ ಬರ್ತು. ನಾ ಮಾಡಿದ್ ತಗಂಡ್ ಹೋದ್ರೆ ನೆಗ್ಯಾಡ್ತ ಅಷ್ಟೇ” ಅಂತ ಕಾರಣ ಕೊಟ್ಟಳು. ಅವಳು ಹೇಳಿದ್ದು ಸತ್ಯವೂ ಆಗಿತ್ತು. ನಾನು ಚೌತಿಗೆ ಅಜ್ಜನ ಮನೆಗೆ ಹೋದಾಗ, ಮಂಟಪದಲ್ಲಿನ ಗಣೇಶ ಶಾಂತತ್ತೆಯ ಹೊಚ್ಚಹೊಸ ಮಾದರಿಯ ಗೆಜ್ಜೆವಸ್ತ್ರದಿಂದ ಕಂಗೊಳಿಸುತ್ತಿದ್ದ.  ತವರಿಗೆ ಮಾಡುವುದನ್ನು ಬಿಟ್ಟರೂ ಅಮ್ಮ ಮನೆದೇವರಿಗೆಂದು ಪ್ರತಿ ಚೌತಿಗೂ ಗೆಜ್ವಸ್ತ್ರ ಮಾಡುತ್ತಿದ್ದಳು. ಆದರೆ ಅದರಲ್ಲಿ ಹಿಂದಿನ ವರ್ಷಗಳಲ್ಲಿರುತ್ತಿದ್ದ ಕುಶಲತೆ-ಚಂದ ಇರುತ್ತಿರಲಿಲ್ಲ. ಯಾಕೆ ಅಂತ ಕೇಳಿದರೆ, “ಅಲ್ಲಿಗಾದ್ರೆ ಗಣಪತಿ ಬರ್ತು. ಸುಮಾರ್ ಜನ ನೋಡಕ್ ಬರ್ತ. ಅವ್ರಿಗೆ ಚಂದ ಕಾಣಹಂಗೆ ಇರಕ್ಕಾತಲ? ಇಲ್ಲಾದ್ರೆ ಯಾರೂ ನೋಡೋರ್ ಇಲ್ಲೆ. ನಮ್ಮನೆ ದೇವ್ರಿಗೆ ಇಷ್ಟೇ ಸಾಕು” ಎನ್ನುತ್ತಿದ್ದಳು. ಗೂಡಿನಲ್ಲಿದ್ದ ದೇವರು ಈ ತಾರತಮ್ಯ ಕಂಡು ನಿಟ್ಟುಸಿರು ಬಿಡುತ್ತಿದ್ದ; ಮೂರು ದಿನವಿರುವ ಮಣ್ಣ ಗಣೇಶನ ಸೌಭಾಗ್ಯಕ್ಕೆ ಹೊಟ್ಟೆಕಿಚ್ಚು ಪಡುತ್ತಿದ್ದ.

ನಮ್ಮ ಮನೆಯಲ್ಲಿ ಅಜ್ಜಿ ತೀರಿಕೊಂಡಮೇಲೆ ಅಮ್ಮ ಚೌತಿ ಹಬ್ಬದ ದಿನ ತವರಿಗೆ ಹೋಗುವುದೂ ಕಡಿದುಹೋಯಿತು. “ಮನೇಲಿ ನೈವೇದ್ಯಕ್ಕೆ ಅನ್ನ ಮಾಡೋರೂ ಇಲ್ಲೆ, ನಾ ಹೆಂಗೆ ಬಿಟ್ಟಿಕ್ ಹೋಗದು?” ಎಂದು ತನ್ನ ಅಳಲನ್ನು ತೋಡಿಕೊಂಡಳು. ಅದು ಹೌದೆಂದು ಎಲ್ಲರೂ ಒಪ್ಪಿದೆವು. ಹೀಗಾಗಿ ಈಗ ನಾಲ್ಕೈದು ವರ್ಷಗಳಿಂದ ಬರೀ ನಾನು-ಅಪ್ಪನೇ ಚೌತಿಗೆ ಅಜ್ಜನ ಮನೆಗೆ ಹೋಗುವುದಾಗಿದೆ.

ಹೋದವರ್ಷ ಹೀಗೇ ಚೌತಿಗೆಂದು ನಾವು ಹೊರಟಿದ್ದಾಗ ಬಂದ ಮಧು ತಮಾಷೆ ಮಾಡುತ್ತಿದ್ದ: “ಇಷ್ಟು ವರ್ಷ ಪ್ರತಿ ಹಬ್ಬಕ್ಕೂ ಅಜ್ಜನ್ ಮನಿಗೆ ಹೋಪ್ದಾತು; ಇನ್ನು ಮದ್ವೆ ಆದ್ಮೇಲೆ ಹೆಂಗಂದ್ರೂ ಹೆಂಡ್ತಿ ಮನಿಗೆ ಹೋಪ್ದಾತು! ನೀನು ಮನೇಲಿ ಹಬ್ಬ ಮಾಡೋದು ಯಾವಾಗ?” ಅಂತ.

ಇವತ್ತು ಅದು ನೆನಪಾದದ್ದೇ ಮನೆಗೆ ಫೋನ್ ಮಾಡಿದೆ: “ಅಮ್ಮಾ, ಈ ವರ್ಷ ಗೆಜ್ವಸ್ತ್ರ ಮಾಡಿದ್ಯಾ? ಮುಂಚೆಯೆಲ್ಲಾ ಎಷ್ಟ್ ಚನ್‌ಚನಾ ಡಿಸೈನ್ಸ್ ಮಾಡ್ತಿದ್ದೆ.. ಬಿಡಡ ಅಮ್ಮಾ.. ಅದೂ ಒಂದು ಕಲೆ. ಬಿಟ್ರೆ ಮರ್ತೇ ಹೋಗ್ತು” ಅಂತ ಹೇಳಿದೆ.
“ಇನ್ನು ಮರೆತರೆ ಎಷ್ಟು ಬಿಟ್ರೆ ಎಷ್ಟು ಬಿಡಾ.. ಮುಂದೆಲ್ಲ ಇದ್ನೆಲ್ಲ ಕೇಳೋರಾದ್ರೂ ಯಾರಿದ್ದ?” ಎಂದಳು.
“ಹಂಗಲ್ಲ ಅಮ್ಮಾ, ಈಗ ನೀನು ನೆನಪು ಇಟ್ಕಂಡಿದ್ರೆ ಮುಂದೆ ನಿನ್ ಸೊಸೆಗೆ ಹೇಳಿಕೊಡ್ಲಕ್ಕು.. ಅವ್ಳಿಗೂ ಇಂತಹುದರಲ್ಲಿ ಆಸಕ್ತಿ ಇದ್ದು ಅಂತ ಆದ್ರೆ, ಅತ್ತೆ ನೋಡಿ ಅವಳೂ ಕಲಿತ” ಎಂದೆ.
“ಆಂ, ಎಂತಂದೇ? ಸೊಸೆಯಾ?” ಅಮ್ಮ ಆ ಕಡೆಯಿಂದ ಧ್ವನಿಯೇರಿಸಿದಳು.
“ಎಂತಿಲ್ಲೆ” ಎಂದವನೇ ನಕ್ಕು ಫೋನ್ ಇಟ್ಟುಬಿಟ್ಟೆ.

* * *

ಗೆಜ್ಜೆವಸ್ತ್ರ ಧರಿಸಿದ ಬ್ರಹ್ಮಚಾರಿ ಗಣೇಶ ನಿಮಗೆ ಒಳ್ಳೇದು ಮಾಡಲಿ. ಶುಭಾಶಯಗಳು.

Monday, August 30, 2010

ಆಗಸ್ಟ್ ತಿಂಗಳೇ ಹೀಗೆ

ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ
ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ
ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು
ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು
ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ
ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ
ಈ ಆಗಸ್ಟ್ ತಿಂಗಳೇ ಹೀಗೆ

ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ
ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು
ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ
ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು
ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು
ಛೇ, ಈ ಆಗಸ್ಟ್ ತಿಂಗಳೇ ಹೀಗೆ

ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು
ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್‌ಪಾಸ್ ಕೆಳಗೆ ಕಾಮಕೇಳಿ
ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ
ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ
ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ

ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾ‌ಎಂಟು ಸಲ ಸ್ನಾನ
ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ
ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ
ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ
ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ
ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ
ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ.

Thursday, August 26, 2010

ಆಮ್‌ಲೆಟ್ಟು -೨

ಆಮ್ಲೆಟ್ ಆಗದ ಒಂದು ಮೊಟ್ಟೆ
ತಾನೂ ಕವಿತೆಯಾಗುತ್ತೇನೆ ಎಂದಿತು
ಪರ್ಮನೆಂಟ್ ಮಾರ್ಕರ್ ಪೆನ್ನಿನಿಂದ
ಅದಕ್ಕೆ ಕಣ್ಣು ಮೂಗು ಬಾಯಿ ಬರೆದು
ಶೋಕೇಸಿನಲ್ಲಿಟ್ಟು

ದೋಶಮುಕ್ತನಾಗಲು ತೀರ್ಥಯಾತ್ರೆಗೆ ಹೊರಟೆ
ವಾಪಸು ಬಂದು ನೋಡಿದರೆ
ಅಂಗಳದ ತುಂಬ ಪುಟ್ಟಪುಟ್ಟ ಮರಿಗಳು
ಕಿಂವ್‌ಕಿಂವ್‌ಕಿಂವ್‌ಕಿಂವ್ ಗಲಾಟಿ
ಯಾವುದೋ ಒಂದು ಮರಿ ಎತ್ತಿಕೊಂಡು
ಹೆಸರೇನು ಕೇಳಿದೆ
ಕವಿತೆ ಅಂತ ಹೇಳಿತು

ಒಳಗೆ ಹೋಗಿ ನೋಡಿದರೆ
ಮುಖ ಒಡೆದು ಚೂರಾಗಿ
ಶೋಕೇಸೆಲ್ಲ ರಾಡಿ.
ಕಾಲಿಗೆ ಬಂದು ಮುತ್ತಿಕೊಳ್ಳುವ ಮರಿಗಳನ್ನು ನೋಡುತ್ತ
ಒಂದು ಮೊಟ್ಟೆಯೊಳಗೆ ಒಂದೇ ಕೋಳಿ
ಒಂದು ಕೋಳಿಯಿಂದ ನೂರಾರು ಮೊಟ್ಟೆ
ಅಂತೆಲ್ಲ ಬರೆಯಬಹುದು ಎಂದುಕೊಂಡೆ,
ಅಂತೂ ಚರ್ಚೆ ಮುಗಿಸಿದ ಮಹಾನುಭಾವರು ಹೊರಬಂದು
ಹೋಯ್, ಭಾರೀ ಲಾಯ್ಕಿವೆಯೋ ಮರಿಗಳು
ಎಂದರು.

Monday, August 23, 2010

ಆಮ್‌ಲೆಟ್ಟು

ಮೊಟ್ಟೆ ವೆಜ್ಜೋ ನಾನ್ವೆಜ್ಜೋ ಎಂಬ
ಕುರಿತು ನಿನ್ನೆ ಆದ ಭಾರೀ ಚರ್ಚೆ
ಯಲ್ಲಿ ನಾನು ಭಾಗವಹಿಸಲಿಲ್ಲ.
ಕಾರಣ ಇಷ್ಟೇ:
ಸ್ವಲ್ಪ ಅಬ್ಬೊತ್ತಿದರೂ ಒಡೆದು
ಹೋಗಿಬಿಡುತ್ತದೇನೋ ಎನಿಸುವ ಮೊಟ್ಟೆಯ
ತಲೆಯನ್ನಷ್ಟೇ ಚಮಚೆಯಿಂದ ತಟ್ಟಿ ಒಡೆದು
ಹಾರಿಸುವ ಕಾರ್ಯದಲ್ಲಿ ನಾನು ಗರ್ಕನಾಗಿದ್ದೆ.
ಅದರೊಡಲ ಸರ್ವಸಾರವನ್ನೂ
ಬಸಿದು ಲೋಟಕೆ ಪುಳಕ್ಕನೆ
ಈರುಳ್ಳಿ-ಮೆಣಸಿನಕಾಯಿಗಳೊಂದಿಗೆ ಇಷ್ಟೇ
ಉಪ್ಪು ಹಾಕಿ ಲೊಳಲೊಳ ಕಲಸಿ
ಹೊಯ್ದು ಚೊಂಯನೆ ಕಾದ ಕಾವಲಿಯ ಮೇಲೆ
ಇಷ್ಟಗಲವಾಪ ಭೂಪಟದ್ಯಾವುದೋ ಖಂಡದಂತ
ದೋಸೆಯನ್ನು ಬಿಸಿಬಿಸಿ ಸವಿಯುವ
ನನ್ನಿಷ್ಟದ ಕೈಂಕರ್ಯದಲ್ಲಿ ನಿಮಗ್ನನಾಗಿದ್ದೆ.

ಜಗುಲಿಯಲ್ಲಿಯ ಮಾತು ಕೇಳಿಸುತ್ತಿತ್ತು:
ರಕ್ತವಿರುವುದಿಲ್ಲ, ಹಾಗಾಗಿ ತಿನ್ನಲಡ್ಡಿಯಿಲ್ಲ ಎಂದರು ಯಾರೋ.
ಮತ್ಯಾರೋ ಅಂದರು,
ಸಸ್ಯಜನ್ಯವಾಗಿದ್ದರೆ ಮಾತ್ರ ಅದು ಸಸ್ಯಾಹಾರ
ಅಲ್ಲದೇ,
ಯಾವ ಜಾತಿಯವರ ಮನೆಯ ಕೋಳಿಯೋ ಏನೋ
ಏನು ತಿಂದು ಬೆಳೆದಿತ್ತೋ ಏನೋ
ಎಂಥ ಹುಂಜವ ಕೂಡಿತ್ತೋ ಏನೋ
ಈಯ್ದು ಎಷ್ಟು ದಿನವಾಯ್ತೋ ಏನೋ
ಇಂಥ ಕುಲ-ಜಾತಿ-ಭೂತಗಳ ತಿಳಿಯದ
ಪದಾರ್ಥ ಸೇವನೆಗೆ ವರ್ಜ್ಯವೇ ಸರಿ
ಎಂಬ ತೀರ್ಮಾನಕ್ಕೆ ಅವರು ಬರುವಷ್ಟರಲ್ಲಿ

ನಾನು ತೇಗಿ, ಆಹ್, ಅದ್ಭುತವಾಗಿತ್ತು ಆಮ್ಲೆಟ್ಟು
ಎಂದದ್ದಕ್ಕೆ ಎಲ್ಲರೂ ತಿರುಗಿ ನನ್ನನ್ನೇ
ನೋಡಿದರು.
ಅಂಡಾಕೃತಿಯ ಅವರ ತಲೆಯ
ಮೇಲುಳಿದಿದ್ದ ಕೆಲವೇ ಕೂದಲುಗಳೂ
ನಿಮಿರಿ ನಿಂತಿದ್ದನ್ನು ನಾನು ಗಮನಿಸಿದೆ.

Tuesday, August 10, 2010

ಕೀರಂ, ಬೇಂದ್ರೆ, ಸಿದ್ದಲಿಂಗಯ್ಯ ಮತ್ತು ಮಂಜು ಮುಚ್ಚಿದ ಮುಳ್ಳಯ್ಯನ ಗಿರಿ

ಮೆಜೆಸ್ಟಿಕ್ಕಿನ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಒಟ್ಟೊಟ್ಟಿಗೆ ಐದಾರು ಗೆಳೆಯರ ಎಸ್ಸೆಮ್ಮೆಸ್ಸುಗಳು ಬಂದವು. ಎಲ್ಲದರಲ್ಲೂ ಇದ್ದಿದ್ದು ಒಂದೇ ಸಾಲು: ಕಿ.ರಂ. ನಾಗರಾಜ್ ಇನ್ನಿಲ್ಲ. ಮುಳ್ಳಯ್ಯನಗಿರಿಯ ಚಾರಣಕ್ಕೆಂದು ಹೊರಟಿದ್ದ ನಾನು ಹನ್ನೊಂದು ಗಂಟೆಗಿದ್ದ ಚಿಕ್ಕಮಗಳೂರಿನ ಬಸ್ ಕಾಯುತ್ತ ನಿಂತಿದ್ದೆ. ಈ ಎಸ್ಸೆಮ್ಮೆಸ್ಸುಗಳನ್ನು ಓದುತ್ತಿದ್ದಂತೆ ನಾನು ನಿಂತಿದ್ದ ಸ್ಥಳ, ಸುತ್ತಲಿದ್ದ ಜಂಗುಳಿ, ಗಂಟಲು ಸರಿ ಮಾಡಿಕೊಳ್ಳುತ್ತಿದ್ದ ಮೈಕು, ಬರಬೇಕಿದ್ದ ಬಸ್ಸು, ಇನ್ನೂ ಕೂಡಿಕೊಳ್ಳಬೇಕಿದ್ದ ಗೆಳೆಯರು -ಎಲ್ಲಾ ಅರೆಕ್ಷಣ ಮಾಯವಾಗಿ, ಕಣ್ಮುಂದೆ ಜಟೆ ಹರಡಿದ ಕೀರಂರ ಮುಖ, ಕಿವಿಯಲ್ಲಿ ಅವರ ಸಣ್ಣ ಒಡಕಲು ದನಿ ತುಂಬಿಕೊಂಡವು.

ಪ್ರಣತಿಯ ಬ್ಲಾಗರ್ಸ್ ಮೀಟ್‌ನಲ್ಲಿ ಮಾತಾಡುತ್ತಿರುವ ಕಿ.ರಂ. ನಾಗರಾಜ್
ಈ ಕೀರಂರ ಬಗ್ಗೆ ರಶೀದ್ ತಮ್ಮ ಮೈಸೂರ್‌‍ ಪೋಸ್ಟ್ ಬ್ಲಾಗಿನಲ್ಲಿ ಬರೆದಿದ್ದು ಓದಿದ್ದೆ. ಒಮ್ಮೆ ಮಂಗಳೂರಿಗೆ ಬಂದಿದ್ದ ಕೀರಂರನ್ನು ರಶೀದ್ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಕಡಲು ತೋರಿಸಲು ಕರೆದೊಯ್ದದ್ದು, ಅಲ್ಲೊಂದು ಮುಳುಗಿದ ಹಡಗು ತೋರಿಸಿದ್ದು, ಅದ್ಯಾವುದೋ ಮೀನಿನ ಕಥೆ ಹೇಳಿದ್ದು, ಆ ಮೀನು ಹೆಕ್ಕಿಕೊಂಡು ಬರುವ ಮೊಹಮ್ಮದ್ ಅಲಿ ಎಂಬ ಪಾತ್ರ, ಇವನ್ನೆಲ್ಲ ಪುಟ್ಟ ಹುಡುಗನಂತೆ ನೋಡುತ್ತ ನಿಂತಿದ್ದ ಕೀರಂ.. ಆ ಬರಹ ಎಷ್ಟು ಚೆನ್ನಾಗಿತ್ತೆಂದರೆ, ನನಗೆ ಕೀರಂ ಎಂದರೆ ಕಡಲನ್ನು ನೋಡುತ್ತ ನಿಂತ ಪುಟ್ಟ ಬಾಲಕ ಎಂಬ ಚಿತ್ರವೇ ಮನಸಲ್ಲಿ ಅಚ್ಚಾಗಿಹೋಗಿತ್ತು. ಮುಂದೆ ಕೀರಂ ನಾವು ಪ್ರಣತಿಯಿಂದ ಆಯೋಜಿಸಿದ್ದ ಬ್ಲಾಗರ್ಸ್ ಮೀಟ್‌ಗೆ ಅಭ್ಯಾಗತರಂತೆ ಬಂದುಬಿಟ್ಟಿದ್ದರು. ನಮಗೋ ಭಯ: ಮೊದಲೇ ಚಿಕ್ಕದೊಂದು ಹಾಲ್ ಬುಕ್ ಮಾಡಿಕೊಂಡು ನೂರಾರು ಜನರನ್ನು ಕರೆದುಬಿಟ್ಟಿದ್ದೇವೆ, ಈಗ ಇಂತಹ ಹಿರಿಯರೆಲ್ಲ ಬಂದುಬಿಟ್ಟರೆ, ಹಾಲ್ ತುಂಬಿಹೋಗಿಬಿಟ್ಟರೆ, ಇವರನ್ನೆಲ್ಲ ಎಲ್ಲಿ ಕೂರಿಸೋದಪ್ಪ ಅಂತ.. ಆದರೆ ಕೀರಂ ಮಾತ್ರ ಸಭೆಯೊಳಗೆ ಎಲ್ಲರಂತೆ ಕೂತಿದ್ದು, ಕೊನೆಗೆ ಚರ್ಚೆಯ ಸಮಯ ಬಂದಾಗ ಮುಂದೆ ಹೋಗಿ, ಸರಳ ಕನ್ನಡದ ಕುರಿತೇನೋ ತಮ್ಮ ಒಡಕಲು ದನಿಯಲ್ಲಿ ಮಾತಾಡಿದ್ದರು. ಆಗಲೂ ಅವರು ನನಗೆ ಪುಟ್ಟ ಹುಡುಗನಂತೆಯೇ ಕಂಡಿದ್ದರು. ಮತ್ತೊಮ್ಮೆ ಮೇಫ್ಲವರಿನಲ್ಲಿ ಲಂಕೇಶ್ ಬಗ್ಗೆ ಮಾತಾಡುವಾಗ - ನಾನು ತೀರ ಅವರ ಹತ್ತಿರದಲ್ಲೇ ಕೂತಿದ್ದೆ, ಅವರು ನಗುವಾಗಲೂ ಪುಟ್ಟ ಹುಡುಗಂತೆಯೇ ಕಾಣುತ್ತಾರೆ ಅಂತ ಅವತ್ತು ನಂಗೆ ತುಂಬ ಅನಿಸಿತ್ತು. ಆಮೇಲೆ ಅವರು ಛಂದ ಕಾರ್ಯಕ್ರಮದಲ್ಲಿ ಕುಂವೀ ಬಗ್ಗೆ ಮಾತಾಡುವಾಗಲೂ ಅಷ್ಟೇ.

ಈಗ ಹೀಗೆ ಅಚಾನಕ್ಕಾಗಿ ಬಂದ ಕೀರಂರ ಸಾವಿನ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕೋ ತಿಳಿಯಲಿಲ್ಲ. ಅಷ್ಟೊತ್ತಿಗಾಗಲೇ ಬಂದು ಸೇರಿಕೊಂಡಿದ್ದ ಅರುಣ, ಕೀರಂ ತನ್ನ ಅಮ್ಮನ ಸಾಲಿನಲ್ಲಿ ಹೇಗೋ ನೆಂಟರು, ಅಮ್ಮನಿಗೆ ಗೊತ್ತಾಗಿದೆಯೋ ಇಲ್ವೋ, ತಿಳಿಸ್ತೀನಿ ಅಂತ ಫೋನಿಗೆ ಟ್ರೈ ಮಾಡತೊಡಗಿದ. ಅಷ್ಟೊತ್ತಿಗೆ ಶ್ರೀಕಾಂತನೂ ಬಂದ. ಬಸ್ ಹುಡುಕಲು ಹೊರಟೆವು.

ಚಿಕ್ಕಮಗಳೂರಿನಲ್ಲಿ ತುಂತುರು ಹನಿಗಳ ಮುಂಜಾವಿನಲ್ಲಿ ಇಳಿದು ಪೇಪರ್ ಕೊಂಡರೆ ಮುಖಪುಟದಲ್ಲೇ ಕೀರಂ ಸಾವಿನ ಸುದ್ದಿ ಬಂದಿತ್ತು. ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ಬಸ್ಸಿನಲ್ಲಿ ಹೋಗಿ ಮಧ್ಯದಲ್ಲೆಲ್ಲೋ ಇಳಿದು ನಾವು ಟ್ರೆಕ್ ಶುರು ಮಾಡಬೇಕಿತ್ತು. ಆಗಷ್ಟೆ ತೆರೆದ ಕಾಮತ್ ಹೋಟೆಲಿನಲ್ಲಿ ತಿಂಡಿ ತಿಂದ ನಾವು, ಬಾಬಾಬುಡನ್ ಗಿರಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ನಾನು ಜೋಗಿಯವರ ರೂಪರೇಖೆ ಅಂಕಣ ಓದಿದೆ. ಯಾರದೋ ಕತೆಯಲ್ಲಿ ಓದುಗ ಒಂದಾಗುವ ಕುರಿತು ಬರೆಯಹೊರಟಿದ್ದ ಜೋಗಿ, ಬೇಂದ್ರೆ ಕವನವೊಂದನ್ನು ಉದಾಹರಿಸಿದ್ದರು. ಅದರಲ್ಲೂ ಕೀರಂ ಪ್ರಸ್ತಾಪವಿತ್ತು. ಅದು ಕೀರಂಗೆ ಇಷ್ಟವಾದ ಬೇಂದ್ರೆಯವರ ಕವನವಂತೆ. ಕವನ ಓದುತ್ತ ಓದುತ್ತ ನಾನೂ ಅದರಲ್ಲಿ ಒಂದಾದೆ. ಊರಾಚೆಗೊಂದು ಕೈಮರ, ಅಲ್ಲೊಂದು ತಣ್ಣಗೆ ಹರಿವ ಗುಪ್ತಗಾಮಿನಿ, ಅದರಾಚೆಗೊಂದು ದಟ್ಟ ಕಾಡು, ನಡುವಲ್ಲೊಂದು ತಪ್ಪಿ ಬೆಳೆದ ಮಾಮರ, ಆ ಮರದಲ್ಲಿ ಕೂತು ದಿನವಿಡೀ ಕುಹೂ ಕುಹೂ ಎಂದು ಹಾಡುವ ಕೋಗಿಲೆ. ಕವಿತಾನಾಯಕಿಗೆ ಈ ಕೋಗಿಲೆ ಹಾಡು ಎಂದರೆ ಏನೋ ಸೆಳೆತ. ಹಾಡು ಕೇಳುತ್ತ ಕೇಳುತ್ತ ಆಕೆ ಮೈಮರೆಯುತ್ತಾಳೆ. ಎಲ್ಲಿ ಹೋದರೂ ಹಾಡು ಅವಳನ್ನು ಹಿಂಬಾಲಿಸುತ್ತದೆ, ದಿನವಿಡೀ ಕಾಡುತ್ತದೆ -ಎನ್ನುವಾಗ ಅದು ಬರೀ ಕೋಗಿಲೆ ದನಿಯಲ್ಲ, ಅತೀತದೆಡೆಗಿನ ಕರೆ ಎಂಬರ್ಥ ಪಡೆಯುತ್ತದೆ ಕವನ. ಅಷ್ಟರಲ್ಲಿ ನಾವು ಇಳಿಯಬೇಕಿದ್ದ ಸ್ಥಳ ಬಂದಿತ್ತು, ಬೇಂದ್ರೆ ಕರೆದೊಯ್ದಿದ್ದ ಕಾಡಿನಲ್ಲಿ ಕಳೆದುಹೋಗಿದ್ದ ನನ್ನನ್ನು ತಟ್ಟಿ ಎಚ್ಚರಿಸಿದ ಅರುಣ್. ಕೆಳಗಿಳಿದರೆ ಎದುರಿಗೆ ಅಂಬರಚುಂಬಿತ ಗಿರಿ.

ಬೇಂದ್ರೆಯ ಕವಿತೆಯ ನಾಯಕಿಯಂತೆಯೇ ಇರಬೇಕು ನಮ್ಮೆಲ್ಲರ ಪಾಡು. ಏಕೆಂದರೆ, ಕೋಟೆ ಬೆಟ್ಟ ಹತ್ತಿಳಿದು ತಿಂಗಳಾಗಿರಲಿಲ್ಲ, ಮತ್ತೆ ಕರೆದಿತ್ತು ಚಾರಣದ ಹಾದಿ. ಇದೆಂತಹ ಹುಚ್ಚೋ- ಭಾರಚೀಲ ಹೊತ್ತು ಬೆಟ್ಟವೇರುವುದು? ಸುರಿವ ಮಳೆಯಲಿ ತೊಯ್ದು ಜ್ವರ ಬರಿಸಿಕೊಳ್ಳುವುದು? ತಂಡಿಗಾಳಿಗೆ ಮುಖವೊಡ್ಡಿ ತಲೆನೋವಿಗೀಡಾಗುವುದು? ಮಂಜಮುಂಜಾವಿನ ದಟ್ಟಹಸಿರಲಿ ದಾರಿ ತಪ್ಪಿ ಕಕ್ಕಾಬಿಕ್ಕಿಯಾಗುವುದು? ನೋಯ್ವ ಕಾಲನು ತೀಡಿ ಮತ್ತೆ ನಡೆಯಲಣಿಯಾಗುವುದು? ಮುಳ್ಳಯ್ಯನಗಿರಿಯ ಏರು ಸರ್ಪದಾರಿಯಲಿ ಬರೀ ಬೇಂದ್ರೆಯದೇ ಕನವರಿಕೆ.

ಅರುಣ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ..’ ಅಂತ ಸಿದ್ದಲಿಂಗಯ್ಯನವರ ಹಾಡು ಹೇಳತೊಡಗಿದ. ಇದ್ದಕ್ಕಿದ್ದಂತೆ ಬೆಟ್ಟಕ್ಕೆ ಕವಿದಿದ್ದ ಶ್ವೇತವರ್ಣದ ಮಂಜೆಲ್ಲ ಬೆಳದಿಂಗಳಾಗಿಹೋಯಿತು. ಬೇಂದ್ರೆಯ ಹುಡುಗಿಯ ಚೆಲುವಾದ ಮೈಬಣ್ಣವನ್ನು ಸುಡುತ್ತಿರುವ ಬೆಳ್ಳಿಕಿರಣಗಳು ಸುತ್ತೆಲ್ಲ ಸುರಿಯುತ್ತಿರುವಂತೆ ಭಾಸವಾಯಿತು. ‘ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ..’ ಹಾಡಿಗೆ ನಮ್ಮ ಏದುಸಿರು ಮತ್ತು ಸುರಿವ ಮಳೆಯ ತಟ್ತಟ ಸಾಥ್ ಆದವು. ನೀರಹನಿಯಾಶ್ರಿತ ಜೊಂಡು ಹುಲ್ಲುಗಳೆಲ್ಲ ಮೊಲದ ಹಿಂಡಿನಂತೆ ಕಾಲಿಗೆ ಮುತ್ತತೊಡಗಿದವು. ಈ ಹಾಡನ್ನ ಎಸ್ಪಿಬಿಯ ಸುಶ್ರಾವ್ಯ ಕಂಠದಲ್ಲಿ ಕೇಳುವುದಕ್ಕಿಂತ ಅಪ್ಪಗೆರೆ ತಿಮ್ಮರಾಜು ಕುಣಿದಾಡಿಕೊಂಡು ಹಾಡುವ ಶೈಲಿಯೇ ಚಂದ ಅಂತ ಎಷ್ಟೋ ಬಾರಿ ನಾನು ಯೋಚಿಸಿದ್ದೆ. ಸಿದ್ದಲಿಂಗಯ್ಯನವರ ಎದುರಿಗೇ ಅವರು ಹಾಡಿದ್ದನ್ನು ನಾನು ನೋಡಿದ್ದೆ. ಸಭೆಯನ್ನೊಮ್ಮೆ, ಪಕ್ಕವಾದ್ಯದವರನ್ನೊಮ್ಮೆ, ಕವಿಯನ್ನೊಮ್ಮೆ ನೋಡುತ್ತ, ತುಂಬುನಗೆ ಚಿಮ್ಮಿಸುತ್ತ, ಮಧ್ಯದಲ್ಲೊಂದು ಸಲ ಮುಗಿದೇಹೋಯಿತೇನೋ ಎನ್ನುವಂತೆ ಹಾಡಿನ ಬಂಡಿಯನ್ನು ಗಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿ, ಇಡೀ ಪ್ರೇಕ್ಷಕವೃಂದದ ಎದೆಬಡಿತವನ್ನು ಕ್ಷಣಕಾಲ ಹಿಡಿದು-ಬಿಟ್ಟಂತೆ, ಗಳಿಗೆಯ ನಂತರ ಮತ್ತೆ ಮುಂದುವರೆಸುವ ಪರಿ.. ವಾಹ್! ಕವಿಯ ಕಣ್ಣಲ್ಲಿ ಮಂಜ ಪದರ! ಆ ಹಾಡು, ಈ ಭಾವ, ಆ ಮಂಜು, ಈ ನೋಟ ಯಾಕೆ ನಿರಂತರವಾಗಬಾರದು? ಆಗಿಬಿಟ್ಟರೆ ಇದೂ ಬೇಸರ ಬಂದು ಮತ್ತೇನಕ್ಕೋ ತುಡಿಯುತ್ತೇವೆಯೋ? ರೇಖಾ ತನಗೆ ನಿಪ್ಪಟ್ಟು ಬೇಕು ಅಂತ ಹಟ ಶುರು ಮಾಡಿದ್ದಳು.

ಮುಳ್ಳಯ್ಯನ ಗಿರಿಯ ಸೌಂದರ್ಯವೂ ನಾಶವಾಗುವುದಕ್ಕೆ ಇನ್ನು ಹೆಚ್ಚು ಕಾಲ ಬೇಕಿಲ್ಲ ಅಂತ ಮೇಲೆ ತಲುಪಿದಾಗ ನಮಗೆ ತಿಳಿಯಿತು. ಶೃಂಗದವರೆಗೂ ಪ್ರವಾಸೋದ್ಯಮ ಇಲಾಖೆಯವರು ಟಾರ್ ಎಳೆದುಬಿಟ್ಟಿದ್ದಾರೆ. ಇಂಥ ಮಳೆಗಾಲದಲ್ಲೇ ಅಲ್ಲಿ ಹದಿನೈದಿಪ್ಪತ್ತು ಕಾರು-ಜೀಪುಗಳಿದ್ದವು. ಏರಿಸಿದ ಅರೆಪಾರದರ್ಶಕ ಗಾಜಿನ ಹಿಂದೆ ಗ್ಲಾಸುಗಳು ಖಾಲಿಯಾಗುತ್ತಿದ್ದವು. ರಸ್ತೆಬದಿಯಲ್ಲೆಲ್ಲ ಒಡೆದ ಬಾಟಲಿಗಳು. ಸಿಗರೇಟಿನ ಪ್ಯಾಕುಗಳು. ಇನ್ನೆರಡು ವರ್ಷಗಳಲ್ಲಿ ಇಲ್ಲಿ ರೆಸಾರ್ಟುಗಳು ಬಂದು, ಐಷಾರಾಮಿ ಲಾಡ್ಜುಗಳು ತಲೆಯೆತ್ತಿ, ವೆಬ್‌ಸೈಟುಗಳು ಪ್ರವಾಸಿಗರನ್ನು ಆಕರ್ಶಿಸಿ... ‘ಮುಗೀತು ಬಿಡು, ಇನ್ನು ನಾವು ಒಂದು ದಿನದ ಟ್ರೆಕ್‌ಗೆ ಹೊಸ ಜಾಗ ಹುಡುಕ್ಕೋಬೇಕು’ ಅಂತ ಶ್ರೀಕಾಂತ ನಿಟ್ಟುಸಿರು ಬಿಟ್ಟ. ಟಾರು ಬಳಿದ ಕಡುಗಪ್ಪು ರಸ್ತೆಯಲ್ಲಿ ಮಾತೇ ಇಲ್ಲದೆ ನಾವು ವಾಪಸು ನಡೆಯತೊಡಗಿದೆವು. ಬೇಂದ್ರೆಯ ಹಾಡಿನ ಹುಡುಗಿಯ ಮೇಲೆ ಸುರಿದ ಸಿದ್ದಲಿಂಗಯ್ಯನವರ ಕವಿತೆಯ ಬೆಳದಿಂಗಳ ಬಗ್ಗೆ ಕೀರಂ ಸ್ವರ್ಗದಲ್ಲಿ ಉಪನ್ಯಾಸ ಕೊಡುತ್ತಿದ್ದರು.

// ಫೋಟೋಸ್ //

Monday, August 02, 2010

ಸ್ಥಿತ್ಯಂತರ

"ಹೂವಿಗಿಂತ ಅರಳು ಮೊಗ್ಗು ಯಾಕೆ ಚಂದ ಹೇಳು? -ಪೂರ್ತಿ ಬಿರಿಯದೆ, ಒಳಗೆ ಸೊಬಗಿದೆ ಅಂತ ಹೇಳುವ ಬಗೆಗೆ.."
-ಸಿಂಧು

* *

ಸುರುಗಿಟ್ಟರೆ ಮಾಲೆಯಲ್ಲೇ ಅರಳಿತು
ಚೂರೂ ತೋರಲಿಲ್ಲ ನಗುವಾಗ ಅಳುಕು.
ಚುಚ್ಚಿದಾಗ ಸೂಜಿ, ಹೊರ-
ಬಂದ ಬಿಳೀರಕ್ತ: ತಡೆಯಲೇ ಇಲ್ಲ
ನಿರ್ದಯಿ ಕೈ.
ಒತ್ತೊತ್ತಿ ತಲೆಯೆತ್ತಿ ಕೇಳಿತು:
ಪ್ರೇಯಸಿಯ ಮುಡಿಗೋ, ದೇವತೆಯ ಅಡಿಗೋ?
ಅವೆರಡಕ್ಕೂ ನಿನ್ನ ಸ್ಪರ್ಶದ ಅರ್ಹತೆಯೇ ಇಲ್ಲ ಅಂತಂದು,
ಮೃದುನೀಳಕಾಯ ನೇವರಿಸಿ
ಬಿಸಿಲ ಬಯಲ ಕಲ್ಲುಬಂಡೆಯ ಮೇಲೆ ಇಟ್ಟು
ಪಕ್ಕದಲ್ಲಿ ತೆಪ್ಪಗೆ ತಲೆತಗ್ಗಿಸಿ ಕೂತುಬಿಟ್ಟೆ.

ಕವಿತೆ ಬರೆದು ಮುಗಿಯುವಷ್ಟರಲ್ಲಿ
ಕಲ್ಲು ಕರಗಿ, ಸಂಜೆ ಮಾಗಿ
ಸೊರಗಿದ ಹೂವುಗಳ ಮೊಗದಲ್ಲಿ
ಹೊಳೆದ ವಿನೀತ ಕಾಂತಿ ಕಂಡು-
ಸೊಬಗ ತೋರದ ಮೊಗ್ಗು,
ಘಮವ ಬೀರಿದ ಹೂವುಗಳಿಗಿಂತ
ನೋವ ಮೀರಿದ ಈ ಬಾಡಿದ ಬೆಕ್ಕೇ ಚಂದ
ಎಂದೆನಿಸಿ ಮುದ್ದು ಉಕ್ಕಿ ಬಂದುಬಿಟ್ಟಿತು.

Thursday, July 15, 2010

ನಾನೂ ಪಾಕಕ್ರಾಂತಿ ಮಾಡಿದೆ!

ಹೆಚ್ಚುಕಮ್ಮಿ ಎರಡೂವರೆ ವರ್ಷಗಳಿಂದ ಜೊತೆಗಿದ್ದ ನನ್ನ ರೂಂಮೇಟು ರೂಮ್ ಬಿಟ್ಟು ಹೋದದ್ದು ಎಲ್ಲದಕ್ಕೂ ನಾಂದಿ. ಊರಲ್ಲಿ ಅಂಗಡಿ ತೆರೆಯುವುದಾಗಿ ಹೇಳಿ ಬೆಂಗಳೂರು ಬಿಟ್ಟುಹೊರಟ ಅವನನ್ನು ನಾನೂ ಖುಶಿಯಿಂದಲೇ ಕಳುಹಿಸಿಕೊಟ್ಟೆ. ಖುಶಿ ಯಾಕಪ್ಪಾ ಅಂದ್ರೆ, ಎಲ್ಲರೂ ಊರು ಬಿಟ್ಟು ಬೆಂಗಳೂರು ಸೇರಿಕೊಳ್ಳುತ್ತಿರುವಾಗ ಇವನೊಬ್ಬ ಧೈರ್ಯ ಮಾಡಿ ವಾಪಸು ಊರಿಗೆ ಹೋಗುತ್ತೀನಿ ಎನ್ನುತ್ತಿದ್ದಾನಲ್ಲಾ ಅಂತ. ಊರಿಗೆ ಹೊರಡುವ ಹಿಂದಿನ ದಿನ ಅವನು ಕೇಳಿದ್ದ: "ನಾ ಬಿಟ್ ಹೋದ್ಮೇಲೆ ನಿನ್ ಗತಿ ಏನು? ಬೇರ್ ರೂಂಮೇಟ್ ಹುಡುಕ್ಕೊಳ್ತೀಯೋ ಅಥವಾ ಒಬ್ಬನೇ ಇರ್ತೀಯೋ?" ಅಂತ. ಅದಕ್ಕೆ ನಾನು, "ಅದೇನಯ್ಯಾ ಪಿಚ್ಚರ್ರಲ್ಲಿ ಮೊದಲನೇ ಹೆರಿಗೆ ಟೈಮಲ್ಲಿ ಹೆಂಡ್ತಿ ಕೇಳ್ದಂಗೆ ಕೇಳ್ತಿದೀಯಾ? ಯಾರನ್ನಾದ್ರೂ ಸೇರಿಸಿಕೊಳ್ತೇನಪ್ಪಾ, ಒಬ್ಬನೇ ಯಾಕೆ ಇಷ್ಟೆಲ್ಲ ರೆಂಟ್ ಪೇ ಮಾಡ್ಕೊಂಡ್ ಇರ್ಲಿ? ಯಾರಾದ್ರೂ ಸಿಗೋವರೆಗೆ ಒಬ್ಬನೇ ಇರ್ತೀನಿ" ಅಂತ ಹೇಳಿ ಜೋಶಲ್ಲೇ ಕಳುಹಿಸಿಕೊಟ್ಟಿದ್ದೆ.

ಆದರೆ ಆತ ಅದೇನು ಶಾಪ ಹಾಕಿ ಹೋಗಿದ್ದನೋ ಏನೋ, ಸುಮಾರು ಮೂರು ತಿಂಗಳಾದರೂ ನನಗೊಬ್ಬ ಹೊಸ ರೂಂಮೇಟ್ ಸಿಗಲಿಲ್ಲ. ಬೆಂಗಳೂರಿನಲ್ಲಿ ಕೆಲಸ ಸಿಗುವುದು ಕಷ್ಟ, ಒಳ್ಳೆಯ ಬಾಡಿಗೆ ಮನೆ ಸಿಗುವುದು ಕಷ್ಟ, ಸೂಪರ್ರಾಗಿರೋ ಹುಡುಗಿ ಸಿಗುವುದು ಕಷ್ಟ ಅಂತೆಲ್ಲ ಗೊತ್ತಿತ್ತು; ಆದರೆ ಒಬ್ಬ ಪುಟಗೋಸಿ ರೂಂಮೇಟ್ ಸಿಗುವುದು ಇಷ್ಟೊಂದು ಕಷ್ಟ ಅಂತ ಖಂಡಿತ ಗೊತ್ತಿರಲಿಲ್ಲ. ಸುಮಾರು ಫ್ರೆಂಡ್ಸಿಗೆ ಹೇಳಿದೆ, ಎಸ್ಸೆಮ್ಮೆಸ್ ಕಳುಹಿಸಿದೆ, ಗೂಗಲ್ಲಿನಲ್ಲಿ ಸ್ಟೇಟಸ್ ಮೆಸೇಜ್ ಮಾಡ್ಕೊಂಡೆ... ಊಹುಂ, ಏನೂ ಉಪಯೋಗ ಆಗಲಿಲ್ಲ. ಇನ್ನು ವಿಜಯ ಕರ್ನಾಟಕದಲ್ಲಿ ಜಾಹೀರಾತು ಕೊಡೋದೊಂದೇ ಉಳಿದ ಮಾರ್ಗ ಅನ್ನೋ ಹಂತ ಹೆಚ್ಚುಕಮ್ಮಿ ತಲುಪಿಯೇಬಿಟ್ಟಿದ್ದೆ.

ನನ್ನ ಹುಡುಕಾಟದ ಸಂದರ್ಭದಲ್ಲಿ ಕೆಲವರು ಹೇಳಿದ್ರು, ‘ಇನ್ನೂ ಎಂಥಾ ರೂಂಮೇಟ್ ಹುಡುಕ್ತಾ ಕೂರ್ತೀಯಾ? ಮದ್ವೆ ಆಗ್ಬಿಡು’ ಅಂತ. ಅಲ್ಲ ಸಾರ್, ಒಬ್ನೇ ಇದ್ರೆ ಖರ್ಚು ಜಾಸ್ತಿ ಅಂತ ರೂಂಮೇಟ್ ಹುಡುಕ್ತಾ ಇದ್ರೆ, ಇವ್ರು ಖರ್ಚು ಡಬಲ್ ಆಗೋ ದಾರಿ ಹೇಳ್ತಿದಾರಲ್ಲಾ..? ಅದ್ಯಾಕೆ ಎಲ್ಲರೂ ಮತ್ತೊಬ್ಬರನ್ನು ಗುಂಡಿಗೆ ತಳ್ಳಲಿಕ್ಕೇ ನೋಡ್ತಾರೆ? ನಾನು ಸುಖವಾಗಿರೋದು ಜನಕ್ಕೆ ಬೇಕಾಗೇ ಇಲ್ಲ. ಇದೊಂದು ಪಾಪಿ ಜನರ ಹಾಳು ದುನಿಯಾ -ಅಂತೆಲ್ಲ ಜನಗಳಿಗೆ, ಈ ಜಗತ್ತಿಗೆ ಹಿಡಿ ಶಾಪ ಹಾಕಿದ್ದೆ.

ಹಾಗಂತ ರೂಂಮೇಟ್ ಇಲ್ಲದಿದ್ದುದಕ್ಕೆ ಅಷ್ಟೆಲ್ಲ ವ್ಯಥೆ ಪಡುವ ಅವಶ್ಯಕತೆಯೇನೂ ನನಗಿರಲಿಲ್ಲ. ಏಕಾಂಗಿತನವನ್ನೇ ಬಹುವಾಗಿ ಇಷ್ಟಪಡುವ ನಾನು, ಅವನು ಹೊರಡುತ್ತಿದ್ದೇನೆ ಎಂದಾಗ ನನಗೆ ಸಿಗಬಹುದಾದ ಅಲ್ಟಿಮೇಟ್ ಪ್ರೈವೆಸಿಯನ್ನು ನೆನೆದು ಖುಶಿ ಪಟ್ಟಿದ್ದೆ ಸಹ. ಆದರೆ ಅವನು ಊರಿಗೆ ಹೋದದ್ದರ ಪರಿಣಾಮ ಆದ ದೊಡ್ಡ ನಷ್ಟವೆಂದರೆ, ಕನಿಷ್ಟ ರಾತ್ರಿಯಾದರೂ ನಮ್ಮ ಮನೆಯಲ್ಲಿ ಮಾಡಲ್ಪಡುತ್ತಿದ್ದ ನಳಪಾಕಕಾರ್ಯ ನಿಂತುಹೋಯಿತು!

ನನ್ನ ರೂಂಮೇಟು ತುಂಬಾ ಒಳ್ಳೆಯ ಕುಕ್ ಆಗಿದ್ದ. ಸಾರು ಸಾಂಬಾರುಗಳಲ್ಲದೇ, ತಂಬುಳಿ, ಗೊಜ್ಜು, ಸಾಸ್ವೆ ಇತ್ಯಾದಿ ನಮ್ಮೂರ ಕಡೆ ಅಡುಗೆ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಹೇಗೆ ಕೆಟ್ಟ ಚಟಗಳ ದಾಸನಾಗಿ ಹಾದಿತಪ್ಪಿದ ಹುಡುಗನೊಬ್ಬ ಮದುವೆಯಾದಮೇಲೆ ಹೆಂಡತಿಯ ದೆಸೆಯಿಂದ ಸದ್ಗೃಹಸ್ತನಾಗಿ ಬದಲಾಗಿಬಿಡುತ್ತಾನೋ ಹಾಗೆ ಹೋಟೆಲ್ ಊಟದ ಪ್ರೀತಿಯಲ್ಲಿ ಕುರುಡನಾಗಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡುವುದರಲ್ಲಿ ಈತ ಯಶಸ್ವಿಯಾಗಿದ್ದ. ಕಟ್ಟು ಸಾರು, ತೊವ್ವೆ, ಮಾವಿನ್‌ಕಾಯಿ ನೀರ್ಗೊಜ್ಜು, ಕೆಂಪು ಹರಿವೆಸೊಪ್ಪಿನ ಮುಧುಳಿ, ಟೊಮೆಟೋ ಸಾಸ್ವೆ, ಸೌತೆಕಾಯಿ ಬೀಸ್ಗೊಜ್ಜುಗಳೇ ಮೊದಲಾದ ಹಳ್ಳಿ ಅಡುಗೆ ಮಾಡಿ ಬಡಿಸಿ ನನ್ನನ್ನು ಮೋಡಿ ಮಾಡಿದ್ದ. ಮದುವೆಯಾದರೆ ಇವನಂಥವಳನ್ನೇ -ಐ ಮೀನ್, ಇವನ ಹಾಗೆ ಅಡುಗೆ ಮಾಡುವವಳನ್ನೇ ಮದುವೆಯಾಗಬೇಕು ಎಂಬ ತೀರ್ಮಾನಕ್ಕೆ ನಾನು ಬರುವಂತೆ ಮಾಡಿದ್ದ.

ಹಾಗಂತ ನಾನೇನು ಅವನ ನಳಪಾಕದ ಮೋಡಿಗೆ ಮರುಳಾಗಿ ಪೂರ್ತಿ ಶರಣಾಗಿ ಹೋಗಿದ್ದೆನೆಂದುಕೊಳ್ಳಬೇಡಿ.. ಹೇಗೆ ನಾಲ್ಕು ಪೋಲಿಗಳ ಮಧ್ಯೆ ಒಬ್ಬ ಸಭ್ಯ ಹುಡುಗನಿದ್ದರೆ ಅವನನ್ನೂ ತಮ್ಮೆಡೆಗೇ ಎಳೆದುಕೊಳ್ಳಲು ಪೋಲಿಗಳು ಗಾಳ ಹಾಕುತ್ತಿರುತ್ತಾರೋ ಹಾಗೇ ನಾಲ್ಕು ಜನ ಒಳ್ಳೆಯವರ ಮಧ್ಯೆ ಒಬ್ಬ ಕೆಟ್ಟು ಹೋದವನಿದ್ದರೆ ಅವನನ್ನೂ ತಮ್ಮೆಡೆಗೇ ಎಳೆದುಕೊಂಡು ತಮ್ಮಂತೆಯೇ ಸಜ್ಜನನನ್ನಾಗಿ ಮಾಡುವ ಹವಣಿಕೆಯಲ್ಲಿರುತ್ತಾರೆ ಒಳ್ಳೆಯವರು. ಈ ಸದ್ಗೃಹಸ್ತನಾಗುವುದು, ಸಭ್ಯಸಾಚಿಯಾಗುವುದು, ಒಳ್ಳೆಯ ಮಾಣಿಯಾಗುವುದು ಸಹ ಅತ್ಯಂತ ಡೇಂಜರಸ್ ನಡೆ. ಏಕೆಂದರೆ ಒಮ್ಮೆ ನೀವು ‘ಒಳ್ಳೇ ಜನ’ ಅಂತ ಪೇಟೆಂಟ್ ಆಗಿಬಿಟ್ಟಿರಿ ಎಂದರೆ, ಆಮೇಲೆ ಒಳ್ಳೆಯವರಾಗೇ ಇರಬೇಕಾಗುತ್ತದೆ! ಒಳ್ಳೆಯವನಾಗಿರುವ ಕಷ್ಟಗಳು ಅಷ್ಟಿಷ್ಟಲ್ಲ. ಆ ಮೃತ್ಯುಕೂಪದಿಂದ ಕಷ್ಟಪಟ್ಟು ಹೊರಬಂದಿದ್ದ ನನಗೆ ಮತ್ತೆ ಅದಕ್ಕೇ ಬೀಳುವ ಮನಸ್ಸಿರಲಿಲ್ಲ. ಹೀಗಾಗಿ, ನನ್ನ ರೂಂಮೇಟು ರಾತ್ರಿ ಮಲಗುವ ಮುನ್ನ ‘ಕಷಾಯ ಕುಡಿತ್ಯೇನಲೇ ಭಟ್ಟಾ?’ ಅಂತೇನಾದರೂ ಕೇಳಿದರೆ, ನಾನು ಸುತಾರಾಂ ನಿರಾಕರಿಸುತ್ತಿದ್ದೆ. ಕಷಾಯ ಕುಡಿಯುವುದು ನನ್ನ ಪ್ರಕಾರ ಅತ್ಯಂತ ಕಡು-ಒಳ್ಳೆಯವರ ಲಕ್ಷಣ. ಕಾಫಿಯನ್ನೋ, ಕೋಲಾವನ್ನೋ ಅಥವಾ ಯು ನೋ, ಇನ್ನೇನನ್ನೋ ಕುಡಿಯುವುದು ನನ್ನಂಥವರಿಗೆ ಹೇಳಿಸಿದ್ದು ಎಂಬುದು ನನ್ನ ನಂಬುಗೆಯಾಗಿತ್ತು. ಆದ್ದರಿಂದ, ಅವನು ಬಾರ್ಲಿ ಹಾಲುನೀರು, ಅತ್ತಿಚಕ್ಕೆ ಕಷಾಯ, ಜೀರ್ಗೆ ಬಿಸ್ನೀರು ಅಂತೆಲ್ಲ ಘಮಘಮದ ಪೇಯಗಳನ್ನು ಮಾಡಿಕೊಂಡು ಕುಡಿಯುವಾಗ ನನಗೂ ಟೇಸ್ಟ್ ನೋಡುವ ಆಶೆಯಾಗುತ್ತಿತ್ತಾದರೂ ‘ಒಳ್ಳೆಯವ’ನಾಗಿಬಿಡುವ ಭಯಕ್ಕೆ ತಡೆದುಕೊಂಡು ಸುಮ್ಮನಿರುತ್ತಿದ್ದೆ.

ಇವನು ಬಿಟ್ಟುಹೋದಮೇಲೆ ನಾನು ಡೈವೊರ್ಸ್ ಪಡೆದ ಗಂಡನಂತಾದೆ. ಹಳೇ ಫ್ರೆಂಡುಗಳ ಪಡ್ಡೆ ಗ್ಯಾಂಗ್ ಹುಡುಕಿಕೊಂಡು ಹೋಗುವವನಂತೆ ಮತ್ತೆ ಹೋಟೆಲುಗಳತ್ತ ಮುಖ ಮಾಡಿದೆ. ಆದರೆ ಇಷ್ಟು ದಿನ ತಮ್ಮನ್ನು ನಿರ್ಲಕ್ಷಿಸಿದ್ದಕ್ಕೆ ನನ್ನ ಮೇಲೆ ಕೋಪಗೊಂಡಿದ್ದ ಹೋಟೆಲ್ ಫುಡ್ಡು, ನನಗೆ ಅವು ರುಚಿಯೇ ಅಲ್ಲ ಎನಿಸುವಂತೆ ಮಾಡಿದುವು. ಮನೆ ಊಟಕ್ಕಾಗಿ ಹಾತೊರೆಯುವಂತಾಯಿತು. ರೂಂಮೇಟನ್ನು ಮಿಸ್ ಮಾಡಿಕೊಳ್ಳತೊಡಗಿದೆ.

ಆದರೆ ನಾನೇನು ತೀರಾ ಪಾಕಶಾಸ್ತ್ರವೆಂಬ ಸಬ್ಜೆಕ್ಟಿನಲ್ಲಿ ಫೇಲ್ ಆದವನೇನಲ್ಲ. ಡಿಸ್ಟಿಂಕ್ಷನ್ನು, ಫಸ್ಟ್‌ಕ್ಲಾಸು ಅಲ್ಲದಿದ್ದರೂ ಜಸ್ಟ್ ಪಾಸಿಗಿಂತ ಸ್ವಲ್ಪ ಮೇಲೇ ಇದ್ದೆ. ಚಿಕ್ಕವನಿದ್ದಾಗಲೇ ಮನೆಯಲ್ಲಿ ಬೆಲ್ಲ ಕಾಯಿಸಿ ಚಾಕಲೇಟ್ ತಯಾರಿಸಿ ಊರ ಹುಡುಗರ ಮೆಚ್ಚುಗೆ ಗಳಿಸಿದ್ದೆ. ಬೆಂಗಳೂರಿಗೆ ಬಂದಮೇಲೂ ನನ್ನ ರೂಂಮೇಟ್ ಆಫೀಸಿನಿಂದ ಬರುವುದು ತಡವೆಂದಾದಾಗಲೆಲ್ಲ ನಾನೇ ಅಡುಗೆ ಮಾಡುವ ಅನಿವಾರ್ಯತೆಗೆ ಬಿದ್ದು, ಎಂಟಿ‌ಆರ್ ರಸಂ, ಬೀಟ್‌ರೂಟ್ ಹುಳಿ, ಹುಣಿಸೇಹಣ್ಣಿನ ಗೊಜ್ಜು, ಇತ್ಯಾದಿ ಪಾಕಗಳಲ್ಲಿ ಸೈ ಎನಿಸಿಕೊಂಡಿದ್ದೆ. ಅಷ್ಟೇ ಅಲ್ಲ; ಹಾಲು ಕಾಯಿಸಲು ಇಟ್ಟು ಏನನ್ನೋ ಓದುತ್ತಾ ಮೈಮರೆತು ಅದು ಅಲ್ಲಿ ಉಕ್ಕಿ ಪಾತ್ರೆ ಪೂರ್ತಿ ಸೀದುಹೋದಮೇಲೂ, ಒಲೆ, ಗ್ಯಾಸ್‌ಕಟ್ಟೆ, ಪಾತ್ರೆಯನ್ನೆಲ್ಲ ಕ್ಲೀನ್ ಮಾಡಿ ರೂಂಮೇಟ್ ಬರುವುದರೊಳಗೆ ಮತ್ತರ್ಧ ಲೀಟರ್ ಹಾಲು ತಂದು ಕಾಯಿಸಿಟ್ಟು ಏನೂ ಆಗದವನಂತೆ ನಾಟಕ ಮಾಡುವ ಕಲೆ ಕರಗತ ಮಾಡಿಕೊಂಡಿದ್ದೆ. ಪೂರ್ಣಚಂದ್ರ ತೇಜಸ್ವಿಯವರ ಪಾಕಕ್ರಾಂತಿಯಿಂದ ಪಾಠ ಕಲಿತಿದ್ದ ನಾನು, ಅವರು ಮಾಡಿದ ತಪ್ಪುಗಳೊಂದನ್ನೂ ಮಾಡಬಾರದು ಅಂತ ನಿರ್ಧಸಿದ್ದೆ.

ಕುಕ್ಕರ್ ಇಡುವಾಗ ತಳದಲ್ಲಿ ನೀರು ಸರಿಯಾಗಿ ಹಾಕದೆ ಇಟ್ಟೋ ಅಥವಾ ಅಡಿಯ ಪ್ಲೇಟ್ ಇಡದೆಯೋ ಅಥವಾ ಗ್ಯಾಸ್ಕೆಟ್ ಹಾಕುವುದನ್ನು ಮರೆತೋ ಹೋಗಿ ಆಮೇಲೆ ಅನಾಹುತವಾದಮೇಲೆ ತಲೆಯ ಮೇಲೆ ಕೈ ಹೊತ್ತು ಕೂರುವ ಸಾಮಾನ್ಯ ಅರೆಪಾಕತಜ್ಞರಂಥವ ನಾನಾಗಿರಲಿಲ್ಲ. ಬದಲಿಗೆ, ಕುಕ್ಕರ್ ಒಲೆಯ ಮೇಲಿಟ್ಟು ಬಂದು ಅರ್ಧ ಗಂಟೆಯಾದರೂ ಅದು ಕೂಗದಿದ್ದಾಗ -ಕನಿಷ್ಟ ಬುಸುಬುಸು ಸದ್ದು ಮಾಡುವುದಕ್ಕೂ ಶುರುವಿಡದಿದ್ದಾಗ- ಅರೆ, ಇದೇನಾಯ್ತೆಂದು ಒಳಗೆ ಹೋಗಿ ನೋಡಿದರೆ, ಸ್ಟೊವ್ ಆನ್ ಮಾಡುವುದನ್ನೇ ಮರೆತಿದ್ದೆ! ಸ್ಟೊವ್ ಹಚ್ಚದಿದ್ದರೂ ಕೂಗುವುದಕ್ಕೆ ಅದೇನು ಸೋಲಾರ್ ಕುಕ್ಕರ್ರೇ? ಅಥವಾ ಸೋಲಾರ್ ಕುಕ್ಕರ್ ಆಗಿದ್ದರೂ ಕೂಗುವುದಕ್ಕೆ ಇದೇನು ಹಗಲೇ? ಅಥವಾ ರಾತ್ರಿಯಾಗಿದ್ದರೂ ಬೆಳಗುವುದಕ್ಕೆ ಸೂರ್ಯನಿಗೇನು ಮರುಳೇ? ಇರಲಿ, ಆದರೂ ತಪ್ಪು ಮಾಡಿ ಮರುಳಾಗುವ ಉಳಿದ ನಳರಿಗಿಂತ ನಾನು ಕಡಿಮೆ ಬೆಪ್ಪನಾಗಿದ್ದಕ್ಕೆ ಖುಶಿ ಪಟ್ಟೆ.

ಅಂದು ಸಂಜೆ ಆಫೀಸಿನಿಂದ ಬಂದವನು, ತರಕಾರಿ ಕೊಳ್ಳಲೆಂದು ಅಂಗಡಿ ಮುಂದೆ ನಿಂತಿದ್ದಾಗ ವಿನಾಯಕ ಕೋಡ್ಸರ ಎಂಬ ಗೆಳೆಯ ಫೋನ್ ಮಾಡಿದ. “ಏನಯ್ಯಾ ಮಾಡ್ತಿದೀಯಾ?” ಅಂತ ಕೇಳಿದ. “ತರಕಾರಿ ಕೊಳ್ಳೋಕೆ ಅಂತ ಬಂದಿದೀನಿ ಮಾರಾಯ. ಇಲ್ಲಿ ಹತ್ತಾರು ಶೆಲ್ಫುಗಳಲ್ಲಿ ನೂರಾರು ಜಾತಿಯ ಹಲವಾರು ಬಣ್ಣದ ತರಕಾರಿಗಳನ್ನ ಇಟ್ಟಿದಾರೆ. ಯಾವ್ದುನ್ನ ತಗಳೋದು ಯಾವ್ದುನ್ನ ಬಿಡೋದು ಗೊತ್ತಾಗ್ತಾ ಇಲ್ಲ. ಎಲ್ಲಾ ಸಿಕ್ಕಾಪಟ್ಟೆ ರೇಟ್ ಬೇರೆ” ಅಂತ ಹೇಳಿದೆ. ಅದಕ್ಕೆ ಅವನು, “ಒಂದು ಕೋಸ್ಗೆಡ್ಡೆ ತಗೊಂಬಿಡಪ್ಪಾ.. ನಿಂಗೆ ಎರಡು ದಿನಕ್ಕೆ ಸಾಕು. ಚೀಪ್ ಅಂಡ್ ಬೆಸ್ಟ್” ಅಂತ ಸಲಹೆ ಕೊಟ್ಟ. ಹಾಗೆ ಹೇಳುವುದರ ಮೂಲಕ ಅವನು ನನ್ನನ್ನು ಎಂತಹ ತಪ್ಪು ದಾರಿಗೆ ಎಳೆಯುತ್ತಿದ್ದಾನೆ ಎಂಬ ಅರಿವು ನನಗೆ ಆ ಕ್ಷಣದಲ್ಲಿ ಆಗಲಿಲ್ಲ. ಎಲೆಕೋಸಿನ ಗೆಡ್ಡೆ ಕೊಂಡು ತಂದುಬಿಟ್ಟೆ.

ಮನೆಗೆ ಬಂದು ಕತ್ತರಿಸಿ, ಅದರ ಸ್ವಲ್ಪ ಭಾಗವನ್ನು ಬಳಸಿ, ಅವತ್ತಿಗೆ ಒಂದು ಭರ್ಜರಿ ಸಾಂಬಾರು ಮಾಡಿ ಉಂಡುಬಿಟ್ಟೆ. ಮರುದಿನ ಮತ್ತೆ ತರಕಾರಿ ಕೊಳ್ಳುವ ಗೋಜಿಲ್ಲದಿದ್ದುದರಿಂದ ಆಫೀಸಿನಿಂದ ನೇರವಾಗಿ ಮನೆಗೆ ಬಂದೆ. ತರಕಾರಿ ಬಾಸ್ಕೆಟ್ಟಿನಲ್ಲಿ ಎಲೆಕೋಸು ಮುದ್ದಾಗಿ ಕೂತಿತ್ತು. ಮತ್ತಷ್ಟು ಕತ್ತರಿಸಿ ಈ ಸಲ ಪಲ್ಯ ಮಾಡಿದೆ. ಬರೀ ಪಲ್ಯ ಕಲಸಿಕೊಂಡು ತಿನ್ನಲಿಕ್ಕಾಗುತ್ತದೆಯೇ? ಮಜ್ಜಿಗೆ ತಂಬುಳಿ ಮಾಡಿಕೊಂಡೆ. ಮರುದಿನ ಬಂದು ಬಾಸ್ಕೆಟ್ ನೋಡಿದರೆ ಕೋಸುಗೆಡ್ಡೆ ಇನ್ನೂ ಹಾಗೇ ಇದೆ! ನನಗೆ ಎಲೆಕೋಸಿನ ಗೆಡ್ಡೆ ಒಂದು ಮುಗಿಯದ ಸಂಪತ್ತಾಗಿ ಕಂಡಿತು. ಒಂದೇ ಒಂದು ಗೆಡ್ಡೆ ಕೊಂಡುತಂದರೆ ಮೂರ್ನಾಲ್ಕು ದಿನಕ್ಕಾಗುವ ಇದು ಅತ್ಯಂತ ಒಳ್ಳೆಯ ತರಕಾರಿ ಅಂತ ತೀರ್ಮಾನಿಸಿದೆ. ಯಾಕೋ ಜನರಿಗೆ ಇದರ ಅರಿವೇ ಇಲ್ಲ, ಇದನ್ನು ಸರಿಯಾಗಿ ಪ್ರಮೋಟ್ ಮಾಡಿದ್ದೇ ಹೌದಾದರೆ ನಮ್ಮ ದೇಶದ ಬಡತನ ನಿವಾರಣೆ ಶೀಘ್ರದಲ್ಲೇ ಆಗುತ್ತದೆ, ಯಾರೂ ಹಸಿವಿನಿಂದ ಸಾಯುವುದು ಬೇಕಿಲ್ಲ ಅನ್ನಿಸಿತು. ದ್ರೌಪದಿಯ ಸೀರೆಯಂತೆ ಎಷ್ಟು ಬಿಡಿಸಿದರೂ ಮುಗಿಯದ ಇದರ ಪದರಗಳನ್ನು ಬಿಡಿಸುತ್ತಾ ಭವ್ಯ ಭಾರತದ ಕನಸು ಕಂಡೆ. ಮೊಸರು ಬೆರೆಸಿ ಸಾಸ್ವೆ ಮಾಡುವುದರೊಂದಿಗೆ, ನನ್ನ ರೂಮಿನಲ್ಲಿ ಮೂರನೇ ದಿನವೂ ಕೋಸ್ಗೆಡ್ಡೆ ಅಮೋಘ ಪ್ರದರ್ಶನ ಕಂಡಿತು.

ಸಮಸ್ಯೆ ಶುರುವಾದದ್ದು ನಾಲ್ಕನೇ ದಿನ ಬೆಳಗ್ಗೆ! ಸಾಮಾನ್ಯವಾಗಿ ಏಳುತ್ತಿದ್ದಂತೆಯೇ ಹಸಿವಾಗುವ ಹೊಟ್ಟೆ, ಇವತ್ಯಾಕೋ ತುಂಬಿಕೊಂಡೇ ಇದ್ದಂತೆ, ಭಾರ ಭಾರ ಅನ್ನಿಸಿತು. ಒಂದು ಕಾಫಿ ಕುಡಿದರೆ ಸರಿಯಾದೀತು ಅಂತ ನೋಡಿದರೆ, ಎರಡು ಸಿಪ್ ಕುಡಿಯುವಷ್ಟರಲ್ಲಿ ಮುಂದೆ ಕುಡಿಯುವುದು ಸಾಧ್ಯವೇ ಇಲ್ಲ ಎಂಬಂತೆ ವಾಕರಿಕೆ ಬರಲಾರಂಭಿಸಿತು. ಸರಿ, ಟಾಯ್ಲೆಟ್ಟಿಗೆ ಹೋಗಿಬಂದೆ. ಯಾಕೋ ಕಾರಣವೇ ಇಲ್ಲದೆ ತೀರಾ ಆಲಸಿತನದ ಭಾಸವಾದರೂ ತಯಾರಾಗಿ ಆಫೀಸಿಗೆ ಹೊರಟೆ. ಮಧ್ಯೆ ಹೋಟೆಲ್ಲಿನಲ್ಲಿ ತಿಂಡಿ ತಿನ್ನಲು ಪ್ರಯತ್ನಿಸಿದರೆ ಅದೂ ಸಾಧ್ಯವಾಗಲಿಲ್ಲ. ಮಧ್ಯಾಹ್ನ ಊಟಕ್ಕೆ ಅಂತ ಹೋಗಿ, ಒಂದು ತುತ್ತು ತಿನ್ನುವಷ್ಟರಲ್ಲಿ ತೇಗು ಬಂತು! ಅದರ ಮೇಲೆ ಮತ್ತೆರಡು ತೇಗು! ಆಗ ಅರ್ಥವಾಯಿತು, ನನ್ನ ಹೊಟ್ಟೆಯೊಳಗೆ ಪೂರ್ತಿ ಗ್ಯಾಸ್ ತುಂಬಿಕೊಂಡಿದೆ!

ಗೋಬರ್ ಗ್ಯಾಸು, ಸಿಲಿಂಡರ್ ಗ್ಯಾಸು, ಹೈಡ್ರೋಜನ್ ಗ್ಯಾಸು, ಟಿಯರ್ ಗ್ಯಾಸುಗಳಂತೆ ಈ ಹೊಟ್ಟೆಯೊಳಗೆ ತುಂಬಿಕೊಳ್ಳುವ ಗ್ಯಾಸೂ ಒಂದು. ಆದರೆ ಅವೆಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೊಳಗಾಗುತ್ತವಾದರೆ, ಈ ಗ್ಯಾಸಿನಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ, ಟ್ರಬಲ್ಲೇ ಹೆಚ್ಚು! ಉದಾನವಾಯು, ಅಪಾನವಾಯುಗಳಂತಹ ಕ್ರಿಯೆಗಳಿಂದ ಮಾತ್ರ ಇದನ್ನು ಹೊರಹಾಕಲಿಕ್ಕೆ ಸಾಧ್ಯ. ಸರಿ, ಮೊದಲಿಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನನಗೇ ಗೊತ್ತಿದ್ದ ಒಂದೆರಡು ಮಾತ್ರೆ ನುಂಗಿದೆ. ಸರಿ ಹೋದೀತೆಂದು ಕಾದೆ. ಆದರೆ ಊಹುಂ, ತೇಗಮೊರೆತ ಮುಂದುವರೆಯಿತು. ಮನೆಗೆ ಫೋನ್ ಮಾಡಿ ಹೇಳೋಣವೆನಿಸಿದರೂ ಸುಮ್ಮನೆ ಅವರಿಗೂ ಟೆನ್ಷನ್ ಕೊಡೋದು ಬೇಡ ಅಂತ ಸುಮ್ಮನಾದೆ. ಕಷ್ಟ ಪಟ್ಟು ಆ ರಾತ್ರಿ ಕಳೆದೆದ್ದರೆ, ಮರುದಿನ ಬೆಳಗ್ಗೆ ಹೊಟ್ಟೆನೋವು ಸಹ ಸೇರಿಕೊಂಡಿತು. ಅದಕ್ಕೂ ಮಾತ್ರೆಗಳನ್ನು ನುಂಗಿದೆ. ಎರಡನೇ ದಿನ ಸಂಜೆಯೂ ಸಮಸ್ಯೆ ಗುಣವಾಗುವ ಲಕ್ಷಣ ಕಾಣದೇ ಹೋದ್ದರಿಂದ, ಇದು ಯಾಕೋ ಗ್ರಹಚಾರ ಕೆಟ್ತಲ್ಲಪ್ಪಾ ಅಂತ, ಸೀದಾ ಅಮ್ಮನಿಗೆ ಫೋನ್ ಮಾಡಿದೆ:

ನಾನು: ಎಂಥಕ್ ಹಿಂಗಾತು ಅಂತ ಗೊತ್ತಿಲ್ಲೆ ಅಮ್ಮ, ಹೊಟ್ಟೇಲಿ ಗ್ಯಾಸ್ ತುಂಬಿಕೊಂಡಿದ್ದು ಅನ್‌ಸ್ತು, ಬರೀ ತೇಗು.
ಅಮ್ಮ: ಏನು ತಿಂದೆ ನಿನ್ನೆ?
ನಾನು: ಕೋಸುಗೆಡ್ಡೆ ಸಾಸ್ವೆ
ಅಮ್ಮ: ಮೊನ್ನೆ?
ನಾನು: ಕೋಸುಗೆಡ್ಡೆ ಪಲ್ಯ, ತಂಬ್ಳಿ
ಅಮ್ಮ: ಆಚೆ ಮೊನ್ನೆ?
ನಾನು: ಕೋಸುಗೆಡ್ಡೆ ಹುಳಿ

‘ನಿಂಗೇನಾದ್ರೂ ತಲೆ ಸರಿ ಇದ್ದಾ?’ ಅಂತ ಬೈದಳು ಅಮ್ಮ. ನನ್ನ ತಲೆ ಸರಿಯಿರುವುದರ ಬಗ್ಗೆ ಅಮ್ಮನಿಗೆ ಅನುಮಾನಗಳಿರುವುದು ನನಗೆ ಗೊತ್ತಿರಲಿಲ್ಲ. ಈಗ ಆತಂಕವಾಯಿತು: ಮಗನ ತಲೆಯ ಬಗ್ಗೆ ಅಮ್ಮನಿಗೇ ಅನುಮಾನಗಳಿದ್ದುಬಿಟ್ಟರೆ, ಮೊದಲೇ ಮದುವೆಯಾಗದ ಹುಡುಗ, ಇನ್ನು ಬೇರೆಯವರನ್ನು ಹೇಗಪ್ಪಾ ನಂಬಿಸೋದು ಅಂತ.. ಅಮ್ಮ ಮುಂದುವರಿಸಿದಳು: ‘ಎಲೆಕೋಸು ಅಜೀರ್ಣಕ್ಕೆ ನಂಬರ್ ವನ್ನು. ಒಂದು ದಿನ ತಿಂದ್ರೇ ಕಷ್ಟ; ಇನ್ನು ನೀನು ಮೂರ್ಮೂರ್ ದಿನ ಅದನ್ನೇ ತಿಂದಿದ್ಯಲ, ಆರೋಗ್ಯ ಹಾಳಾಗ್ದೇ ಮತ್ತಿನೆಂತಾಗ್ತು?’ ಈಗ ನನಗೆ ಅರ್ಥವಾಯಿತು. ಹೊಟ್ಟೆಯೊಂದೇ ನನಗೆ ಸರಿಯಿಲ್ಲದಿರುವುದು, ತಲೆ ಸರಿಯಿದೆ ಅಂತ ಸಮಾಧಾನ ಮಾಡಿಕೊಂಡೆ. 'ಎಲೆಲೆ ಕೋಸೇ!' ಅಂದುಕೊಂಡೆ. ಆಮೇಲೆ ಅಮ್ಮ, ಓಮಿನ ಕಾಳು ಬತ್ತಿಸಿದ ನೀರು ಕುಡಿಯುವಂತೆ, ಬೆಳ್ಳುಳ್ಳಿ-ಶುಂಟಿ ಜಜ್ಜಿ ಮೊಸರಿಗೆ ಹಾಕಿಕೊಂಡು ಉಣ್ಣುವಂತೆ, ಹೆಸರುಬೇಳೆ ಬೇಯಿಸಿ ಹಾಲು-ಸಕ್ಕರೆ ಬೆರೆಸಿ ಸೇವಿಸುವಂತೆ, ಇಷ್ಟೆಲ್ಲ ಮಾಡಿದಮೇಲೂ ಹುಷಾರಾಗದಿದ್ದರೆ ಹೋಗಿ ಡಾಕ್ಟರನ್ನು ಕಾಣುವಂತೆ ಸೂಚಿಸಿ ಫೋನಿಟ್ಟಳು. ಇಷ್ಟೆಲ್ಲ ಮಾಡಿದ ಮೇಲೆ ಗುಣವಾಗದಿರುವುದಕ್ಕೆ ಛಾನ್ಸೇ ಇಲ್ಲ ಅಂತ ನನಗನ್ನಿಸಿತು.

ಈ ಹಿಂದೆಯೂ ಇಂಥದೇನಾದರೂ ತೊಂದರೆಯಾದರೆ ನಾನು ರೂಂಮೇಟಿಗೂ ಹೇಳದೆ ಇಂಗ್ಲೀಷ್ ಮಾತ್ರೆ ನುಂಗಿ ಹುಷಾರು ಮಾಡಿಕೊಳ್ಳುತ್ತಿದ್ದೆ. ಅವನಿಗೆ ಹೇಳಿದರೆ ಅಮ್ಮನ ಹಾಗೆಯೇ, ಒಳ್ಳೆಯವರ ಹುಟ್ಟುಲಕ್ಷಣದಂತೆ, ಏನೇನೋ ಹಳ್ಳಿ ಔಷದಿ ಮಾಡಿಕೊಂಡು ಕುಡಿಯುವಂತೆ ಹೇಳುತ್ತಿದ್ದ. ಹಾಗಾಗಿ ನಾನು ಅವನಿಗೆ ಹೇಳಲಿಕ್ಕೇ ಹೋಗುತ್ತಿರಲಿಲ್ಲ. ಆದರೆ ಈ ಸಲದ ಖಾಯಿಲೆ ಇಂಗ್ಲೀಷ್ ಔಷಧಿಗಳಲ್ಲಿ ಹುಷಾರಾಗುವ ಹಾಗೆ ಕಾಣಲಿಲ್ಲ. ಅಮ್ಮ ಹೇಳಿದ ಸಲಹೆಗಳನ್ನು ಜಾರಿಗೆ ತರಲೆಂದು ನಾನು ಅಡುಗೆ ಮನೆಗೆ ಹೋದೆ. ಓಮಿನ ಕಾಳಿನ ಕಷಾಯ, ಶುಂಟಿ ಕಷಾಯ, ಬೆಳ್ಳುಳ್ಳಿ ಗೊಜ್ಜು -ಇವನ್ನೆಲ್ಲ ಮಾಡಲಿಕ್ಕೆ ಐಟೆಮ್ ಎಲ್ಲಿದೆಯಪ್ಪಾ ಅಂತ ಶೆಲ್ಫಿನ ಡಬ್ಬಿಗಳಲ್ಲಿ ತಡಕಾಡತೊಡಗಿದೆ. ನನ್ನ ರೂಂಮೇಟು ಬಿಟ್ಟು ಹೋಗಿದ್ದ ಸರಕಿನಲ್ಲಿ ಅವೆಲ್ಲ ಇರಲೇಬೇಕೆಂಬುದು ನನ್ನ ಅಂದಾಜು. ಸರಿಯಾದ ಟೈಮಿಗೆ ಅವನೇ ಫೋನ್ ಮಾಡಿದ:

"ಎಂಥ ಮಾಡ್ತಿದ್ಯೋ? ಡಬ್ಬಿ ಮುಚ್ಚಳ ತೆಗ್ದು-ಹಾಕಿ ಮಾಡೋ ಸೌಂಡ್ ಬರ್ತಾ ಇದ್ದು?" ಕೇಳಿದ.

"ಹೆಹೆ.. ಎಂತಿಲ್ಲೆ ಮಾರಾಯಾ.. ಈ ಓಮಿನ್ ಕಾಳು ಮತ್ತೆ ಶುಂಟಿ ಎಲ್ಲಿದ್ದು ಅಂತ ಹುಡುಕ್ತಿದ್ದಿ.." ಎಂದೆ.

"ಏನಂದೇ..?! ಓಮಿನ್ ಕಾಳಾ? ನಿಂಗಾ? ನಾನು ಯಾರ ಹತ್ರ ಮಾತಾಡ್ತಾ ಇದ್ದಿ ಅಂತ ಕನ್‌ಫ್ಯೂಸ್ ಆಗ್ತಾ ಇದ್ದು.. ಹಲೋ..?" ಬೇಕಂತಲೇ ನಾಟಕ ಮಾಡಿದ.

ಅವನಿಗೆ ವಿಷಯ ಹೇಳದೇ ವಿಧಿಯಿರಲಿಲ್ಲ; ಹೇಳಿದೆ. ನಾನೂ ತೇಜಸ್ವಿಯವರಂತೆ ಪಾಕಕ್ರಾಂತಿ ಮಾಡುವುದಕ್ಕೆ ಮುಂದಾದದ್ದು, ಆ ಕ್ರಾಂತಿಯಿಂದಾದ ಪರಿಣಾಮಗಳು, ಈಗ ಉಂಟಾಗಿರುವ ಕರುಣಾಜನಕ ಸ್ಥಿತಿ, ಎಲ್ಲಾ.

ಆ ಕಡೆಯಿಂದ ಗಹಗಹ ನಗು: "ನನ್ ಮಗನೇ, ನಾ ಇದ್ದಾವಾಗ ಒಂದು ದಿನ ಕಷಾಯ ಕುಡಿ ಅಂದ್ರೆ ಕುಡಿತಿರ್ಲೆ ಹೌದಾ? ಈಗ ನೋಡು.. ಹೆಂಗಾತು ಧಗಡಿ! ಹಹ್ಹಹ್ಹಾ..!"

ನನಗೆ ವಿಪರೀತ ಕೋಪ ಬಂದರೂ ಈ ಅಸಹಾಯಕತೆಯಲ್ಲಿ ಏನೂ ಹೇಳಲಿಕ್ಕೆ ಮನಸು ಬರಲಿಲ್ಲ. ಕೊನೆಗೆ ಅವನೇ ತಡೆದುಕೊಂಡು, ನೋಡು ಇಂಥಾ ಸಣ್ಣ ಕರಡಿಗೆಯಲ್ಲಿ ಇದೆ ಓಮಿನ್ ಕಾಳು ಅಂತ ಹೇಳಿದ. ಅಲ್ಲೇ ಇತ್ತು. ಬತ್ತಿಸಿಕೊಂಡು ಕುಡಿದೆ. ಇವತ್ತು ಮುಂಜಾನೆ ಏಳುವ ಹೊತ್ತಿಗೆ ಸಮಸ್ಯೆಯೆಲ್ಲ ಮಾಯ!

ಪ್ರೀತಿಯುಕ್ಕಿ, ರೂಂಮೇಟಿಗೆ ಎಸ್ಸೆಮೆಸ್ ಮಾಡಿದೆ: "ಥ್ಯಾಂಕ್ಯೂ ದೋಸ್ತಾ.. ಹುಷಾರಾತು.. ಎಲ್ಲಾ ಓಮಿನ್ ಕಾಳಿನ ದೆಸೆ." ನಿಮಿಷದೊಳಗೆ ಅವನಿಂದ ರಿಪ್ಲೇ: "ಯು ಆರ್ ವೆಲ್ಕಮ್ಮು. ಬರೀ ಅಡುಗೆ ಮಾಡಕ್ಕೆ ಬಂದ್ರೆ ಆಗಲ್ಲೆ, ಯಾವ್ದುನ್ನ ಎಷ್ಟ್ ಮಾಡವು ಅಂತಾನೂ ಗೊತ್ತಿರವು. ತಿಳ್ಕ: ಕೋಸು ಮತ್ತು ಕೂಸು -ಈ ಎರಡೂ ವಿಷ್ಯಗಳಲ್ಲಿ ಭಾಳಾ ಹುಷಾರಾಗಿರವು. ಇನ್ಮೇಲಿಂದ ಡೈಲೀ ರಾತ್ರಿ ಮಲ್ಗಕ್ಕರೆ ಕಷಾಯ ಮಾಡ್ಕ್ಯಂಡ್ ಕುಡಿ. ಯಾವ ಖಾಯಿಲೆಯೂ ಬರದಿಲ್ಲೆ."

ಈಗ ರಾತ್ರಿಯಾಗಿದೆ. ನಾನು ಮನೆಯಲ್ಲಿ ಒಬ್ಬನೇ ಇದ್ದೇನೆ. ಅಕ್ಕಪಕ್ಕದ ಮನೆಯವರೆಲ್ಲ ಮಲಗಿದ್ದಾರೆ. ನಿಧಾನಕ್ಕೆ ಅಡುಗೆ ಮನೆಗೆ ಹೋಗುತ್ತೇನೆ. ಎರಡನೇ ಶೆಲ್ಫಿನ ಮೂಲೆಯಲ್ಲಿರುವ ಪುಟ್ಟ ಕರಡಿಗೆಯ ಮುಚ್ಚಳ ತೆರೆಯುತ್ತೇನೆ. ಯಾವುದೋ ಮರದ ಚಕ್ಕೆ. ಕಲ್ಲಿನ ಮೇಲಿಟ್ಟು ಜಜ್ಜಿ ಹಾಲಿಗೆ ಹಾಕಿ ಕುದಿಸುತ್ತೇನೆ. ಉದ್ದ ಲೋಟಕ್ಕೆ ಬಗ್ಗಿಸಿಕೊಂಡು ಬಂದು ಖುರ್ಚಿಯಲ್ಲಿ ಕೂತು ಒಂದೊಂದೆ ಗುಟುಕು ಕುಡಿಯುತ್ತೇನೆ. ಕಿಟಕಿ-ಬಾಗಿಲುಗಳು ಮುಚ್ಚಿವೆ. ಯಾರೂ ನೋಡುತ್ತಿಲ್ಲ, ನಾನು ಒಳ್ಳೆಯವನಾದದ್ದು ಯಾರಿಗೂ ಗೊತ್ತಾಗಲಿಲ್ಲ ಅಂತ ಧೈರ್ಯ ತಂದುಕೊಳ್ಳುತ್ತೇನೆ. ಬಿಸಿಬಿಸಿ ಕಷಾಯದ ಲೋಟದಿಂದ ಹೊಮ್ಮುತ್ತಿರುವ ಘಮಘಮ ಹಬೆಯ ಹಿಂದೆ ತೇಲುತ್ತಿರುವ ವಿಧವಿಧ ಚಿತ್ರಗಳು: ಪದರ ಪದರದ ಕೋಸು, ಅದನ್ನು ರೆಕಮಂಡ್ ಮಾಡಿದ ಮಾಣಿ, ಫೋನ್ ಹಿಡಿದ ಅಮ್ಮ, ಗಹಗಹ ನಕ್ಕ ರೂಂಮೇಟ್, ಇವೆಲ್ಲವನ್ನೂ ದಾಟಿ ಬರುತ್ತಿರುವ ಅದ್ಯಾವುದೋ ಸೂಪ್-ಸೂಪರ್ ಕೂಸು... ಕಷಾಯ ಭಲೇ ರುಚಿಯೆನಿಸುತ್ತದೆ. ಮತ್ತೆ ಅಡುಗೆ ಮನೆಗೆ ಹೋಗಿ, ಖಾಲಿ ಲೋಟಕ್ಕೆ ಪಾತ್ರೆಯ ತಳದಲ್ಲಿದ್ದ ಚೂರು ದ್ರವವನ್ನೂ ಬಗ್ಗಿಸಿಕೊಂಡು... ...

[ಮಾರ್ಚ್ ೨೦, ೨೦೧೦]

Wednesday, July 07, 2010

ರೇಶಿಮೆ ಸೀರೆ

ಬೆರಳು ಮಾಡಿ ತೋರಿಸಿದ ಸೀರೆಯನ್ನು
ಮೆತ್ತೆ ತುಂಬ ಹಾಸಿ ತೋರಿಸಿ
ಸರಭರ ಸದ್ದಿಗೆ ಪಟಪಟ ಮಾತು ಬೆರೆಸುವ
ಸೆರಗಿನ ಬಂಗಾರು ಶಂಕುಗಳನ್ನು
ಸವರಿ ನವಿರಲಿ ನೆರಿಗೆ
ಮೂಡದ ಹಾಗೆ ಇಡುವವ
ಕನಸು ಕಂಗಳ ಹುಡುಗನೇ ಇರಬೇಕು
ಎಂದೆನಿಸಿದ ಕ್ಷಣವೇ ಕಚ್ಚಿಕೊಂಡದ್ದು
ನಾಲಗೆ.

ಎಲ್ಲಾ ಸರಿ, ನೀನು ಹೀಗೆ,
ಹಣೆಯ ಮೇಲೆ, ಬೈತಲೆ ದಾರಿ
ಶುರುವಿಗೂ ಮುನ್ನ, ಒಂದು ಹುಂಡಿ
ಹುಡಿ ಕುಂಕುಮ ಇಟ್ಟುಕೊಂಡರೆ
ಲಕ್ಷಣವಾಗಿ ಕಾಣುತ್ತೀ-
ನನ್ನಮ್ಮನ ಹಾಗೆ
ಎಂದ ನಿನ್ನ ಬೆನ್ನಿಗೆ ಸದಾ
ಕಾಮನಬಿಲ್ಲಿತ್ತು.
ಬಿಸಿಲಲ್ಲೇ ಸುರಿಯತೊಡಗಬೇಕಾದರೆ
ಮಳೆಗೆ ಹುಚ್ಚೆಷ್ಟಿರಬೇಡ ಹೇಳು?

ಶಾರೆ ನೀರು ಸಾಕು;
ಹಸಿಹಸಿರು ಹೆಸರುಕಾಳು, ಸೆಖೆಯುಬ್ಬೆಯಲ್ಲೂ
ಬಿಳಿ ಹೊಟ್ಟೆಯೊಡೆದು
ಇಷ್ಟುದ್ದ ಬಯಕೆ ಮೊಳಕೆ.
ಇಷಾರೆ ನೋಟ ಸಾಕಾಯ್ತು;
ಪ್ರೀತಿಯುಕ್ಕಿ, ಕೆಂಪು ಹಳದಿ
ಸೀರೆ ತೆರೆ ಮರೆ ಅಟ್ಟಣಿಗೆ ಕುಲುಕು
ಪಿಸುಮಾತು.

ನಂಬಿ ಬಂದಿದ್ದೇನೆ ಹುಡುಗಾ..
'ಒಂದಲ್ಲಾ ಒಂದು ದಿನ, ಈ
ದುಡಿದ ಚಿಲ್ಲರೆ ಕಾಸಿನಿಂದಲೇ
ಅಮ್ಮನಿಗೊಂದು ರೇಶಿಮೆ ಸೀರೆ ಕೊಂಡೊಯ್ತೇನೆ ನೋಡು'
ಎಂಬ ನಿನ್ನ ಒದ್ದೆ ಆಶೆ ಕೇಳಿದಾಗಲೇ
ಚಿತ್ತೈಸಿಹೋದದ್ದು ಈ ಸಂಲಗ್ನ.

'ಬಾಯಿ ಮುಚ್ಚೇ ಬೋಸುಡಿ'
ಎಂಬ ನನ್ನಮ್ಮನ ಬೈಗುಳಕ್ಕೆ
ಬಾಗಿಲನ್ನೇ ಮುಚ್ಚಿ ಬಂದಿದ್ದೇನೆ..
ಈಗ ನೀನೇ ಗತಿ, ನೀನೇ ಧೃತಿ.
ಅತ್ತೆಯ ಬಳಿಗೆ ಕರೆದೊಯ್ಯಿ,
ಕಾಲು ಮುಟ್ಟಿ ನಮಸ್ಕಾರ ಮಾಡುತ್ತೇನೆ.

Wednesday, June 16, 2010

ಉದ್ಯಾನದಲ್ಲೊಂದು ಸಂಜೆ..

ಇಂದು ಸಂಜೆ ಹೀಗಾಯಿತು
ಬರಬೇಕಿದ್ದ ಮಳೆ
ಬಾರದೆ ಹೋಯಿತು.

ಉದ್ಯಾನದ ನವಿಲು ಕಾಲಿಗೆ
ಗೆಜ್ಜೆಕಟ್ಟಿ ಇಷ್ಟಗಲ
ಗರಿಬಿಚ್ಚಿ ಕುಣಿದಿದ್ದಷ್ಟೇ ಬಂತು,
ಯಾವುದೋ ಗಾಳಿಗೆ ತೇಲಿ ಮೋಡ
ದೂರ ಹೋಗಿಬಿಟ್ಟಿತು.
ಕೊನೆಗದು ಪಾಪ ಸುಸ್ತಾಗಿ
ಇದ್ದ ಎರಡು ಕಾಳು ತಿಂದು
ನಾಲ್ಕು ಕೊಕ್ಕು ನೀರು ಕುಡಿದು
ಕಣ್ಮುಚ್ಚಿ ಮಲಗಿಬಿಟ್ಟಿತು.

ಅಷ್ಟರಮೇಲೇ ಶುರುವಾದದ್ದು ಇವೆಲ್ಲ ರಗಳೆ:
ಅವಳ ಕಣ್ಣನ್ನು ಕೊಳಕ್ಕೆ
ಹೋಲಿಸುವ ಬದಲು ಬಾಯ್ತಪ್ಪಿ
ಹೊಂಡಕ್ಕೆ ಹೋಲಿಸಿದ್ದಕ್ಕೆ
ಶರಂಪರ ಕಿತ್ತಾಡಿ ರಂಪ.
ಹೋಗಿದ್ದು ಕೊಂಚ ತಡವಾಗಿತ್ತಷ್ಟೇ,
ಅಷ್ಟಕ್ಕೇ
ಕಿತ್ತಿಟ್ಟುಕೊಂಡಿದ್ದ ಹೂಗಿಡದ
ಪಕಳೆಗಳನ್ನೆಲ್ಲ ಮೈಮೇಲೆ ಅರ್ಚಿಸಿ
ಓಟ.

ಹೂಮಳೆ ತೋಯ್ದ ರೋಮಾಂಚನಕ್ಕೆ
ಹೋದರೆ ಅಟ್ಟಿಸಿಕೊಂಡು, ಮಲಗಿದ್ದ
ನವಿಲಿಗೆ ಎಚ್ಚರಾಗಿ ಬೆದರಿ
ಗರಿ ಫಡಫಡಿಸಿದ ಗಾಳಿಗೆ
ಮೋಡ ಮಳೆಯಾಗಿ ಒದ್ದೆ ತೊಪ್ಪೆ.

ಈಗ ನವಿಲ ಗೂಡಿನಲ್ಲಿ
ಮೂವರು: ಚಳಿಯಿಂದ ರಕ್ಷಣೆಗೆ
ಒಂದಕ್ಕೆ ರೆಕ್ಕೆ, ಇನ್ನೆರಡಕ್ಕೆ ತೆಕ್ಕೆ.
ತಬ್ಬಿ ನಿದ್ದೆ.

[02 ಡಿಸೆಂಬರ್, 2009]

Monday, June 07, 2010

ರಂಗೋಲಿ


ಕಾವಲಿಯ ಮೇಲೆ ಹಾಕಿದ ರವೆ
ದೋಸೆಯಂತೆ ಅದನ್ನೂ ನೀಟಾಗಿ ಸಟ್ಟುಗದಿಂದ
ಎತ್ತುವಂತಿದ್ದರೆ ಮಡಿಚಿ
ಚೀಲದಲ್ಲಿಟ್ಟು ಒಯ್ಯುತ್ತಿದ್ದೆ ನಾನು..

ತಾಸುಗಟ್ಟಲೆ ಕೂತು ತದೇಕ,
ಜತನದಿಂದ ಹಾಕಿದ್ದ ಆ ರಂಗೋಲಿ*
ಆಮೇಲೆ ಏನಾಯಿತು?
ಬಿಳಿ ಬಣ್ಣದ ಪುಡಿಹಾಸ ಮೇಲೆ
ಕೈಕೈ ಹಿಡಿದಾಡುತ್ತಿದ್ದ ಪುಟ್ಟ ಬಾಲಕರು
ಇನ್ನೂ ಎಷ್ಟು ಹೊತ್ತು ಹಾಗೇ ಇದ್ದರು?
ಹಸಿಹಸಿರು ಗಿಡದ ರೆಂಬೆ
ಬಾಡಲಿಲ್ಲ ತಾನೆ?
ಎವೆಯಿಕ್ಕದ ಗೂಬೆಯ ಕಣ್ಣನ್ನು
ಹಾರಿ ಬಂದ ಹರಾಮಿ ಧೂಳು ಮುಚ್ಚಿತಾ?
ಕಳೆಗುಂದಿದವೇ ಚಂದ್ರ-ಚುಕ್ಕಿ
ಕರಗಿದಂತೆ ಇರುಳು?

ಮರುಮುಂಜಾನೆ ಕಸ ಗುಡಿಸಲು ಬಂದ
ಕೆಲಸದವಳು ನಿಂತಳೇ ಬೆರಗಾಗಿ?
ಗೂಬೆ-ಗಿಡ-ಹುಡುಗರ ಹೆಡೆಮುರಿ
ಕಟ್ಟಿ ಒಯ್ಯುವ ಮುನ್ನ ಅವಳು,
ಪೊರಕೆ ಮೈತಡವಿದ ಕ್ಷಣ ಆದ
ಕಚಗುಳಿಗೆ ರಂಗೋಲಿಯ ಕಣಗಳು
ನಾಚಿದವಾ?
ಬದುಕಲ್ಲಿ ಖುಶಿ ಕ್ಷಣಿಕ ಎಂದು
ಬಿಕ್ಕಳಿಸಿತಾ ಮಿಶ್ರಬಣ್ಣ?

ಬಣ್ಣಗಳು ಬಿಡಿಬಿಡಿಯಾಗಿದ್ದರಷ್ಟೇ ಅರ್ಥ.
ಕಲಸಿಬಿಟ್ಟರೆ ಎಲ್ಲಿ ರಂಗೋಲಿ?


ಎಂದು ಬರೆದಿಟ್ಟಿದ್ದ ನನ್ನ ಕವನ ಓದಿದ ಗೆಳೆಯ,
"ಅಯ್ಯೋ ಭಾವುಕ ಹುಚ್ಚನೇ,
ವರುಷಗಟ್ಟಲೆ ಜೋಪಾನ ಮಾಡಿದ್ದ ನನ್ನ ಹುಡುಗಿಗೆ
ನಿನ್ನೆ ಯಾರೊಂದಿಗೋ ಮದುವೆಯಾಯ್ತು"
ಎಂದು, ನಗುತ್ತ ಹೊರಟುಹೋದ.

--
* ಛಂದ ಪುಸ್ತಕ, ತನ್ನ ಸ್ಪರ್ಧೆಯಲ್ಲಿ ಗೆದ್ದ ಮುಖಪುಟವನ್ನು ಪುಸ್ತಕ ಬಿಡುಗಡೆ ಸಮಾರಂಭದ ದಿನ ರಂಗೋಲಿ ಹಾಕಿಸಿತ್ತು.

Monday, May 31, 2010

ಮಾವಿನ್‌ಕಾಯ್ ನೀರ್ಗೊಜ್ಜು ಎಂಬ ಅಮೃತಪಾನವು...

ಸುಖಗಳಲ್ಲಿ ಉತ್ಕೃಷ್ಟವಾದ ಸುಖಕ್ಕೆ ಪರಮಸುಖ ಅಂತಲೂ ರುಚಿಗಳಲ್ಲಿ ಶ್ರೇಷ್ಠವಾದ ರುಚಿಗೆ ಪರಮರುಚಿ ಅಂತಲೂ ಹೆಸರು. ಈ ಪರಮಸುಖ ಎಂಬುದು ಅತ್ಯಂತ ಕಾಸ್ಟ್ಲೀ ಐಟಮ್ ಆಗಿದ್ದು, ಇದನ್ನು ಪಡೆಯಲು ಕಠಿಣ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ವಿದಿತ. ಅಂದರೆ ಸಾಮಾನ್ಯ ಮನುಷ್ಯರಾದ ನಮಗೆ ಪರಮಸುಖವನ್ನು ಅನುಭವಿಸುವ ಯೋಗವಿಲ್ಲ ಎಂದಾಯಿತು. ಹಾಗೆಂದಾಗ, ಇದಕ್ಕೊಂದು ಶಾರ್ಟ್‌ಕಟ್ ಇರಬೇಕಲ್ಲವೇ? ತನಗೆ ದುರ್ಗಮವಾದ ಎಲ್ಲವಕ್ಕೂ ಶಾರ್ಟ್‌ಕಟ್ ಕಂಡುಹಿಡಿದಿರುವ ಮನುಷ್ಯ, ಇದಕ್ಕೂ ಒಂದು ಮಾರ್ಗವನ್ನು ಶೋಧಿಸಿದ್ದಾನೆ. ನನ್ನ ಪ್ರಕಾರ, ಪರಮಸುಖವನ್ನು ಪಡೆಯಲಿಕ್ಕಿರುವ ಸರಳವಾದ ಮಾರ್ಗ ಪರಮರುಚಿಯಾದ ಆಹಾರವನ್ನು ಸೇವಿಸುವುದು! ಇನ್ನೂ ನೇರವಾಗಿ ಹೇಳಬೇಕೆಂದರೆ, ಮಾವಿನ್‌ಕಾಯ್ ನೀರ್ಗೊಜ್ಜನ್ನು ನಿಧನಿಧನಿಧಾನವಾಗಿ ಕುಡಿಯುವುದು!

ನಾನೀಗ ಹೇಳುತ್ತಿರುವ ಮಾವಿನಕಾಯಿ ನೀರುಗೊಜ್ಜು ಎಂಬ ಪೇಯವನ್ನು ಇಷ್ಟರೊಳಗೆ ಸೇವಿಸಿಲ್ಲ ಎಂದಾದರೆ ಜಗತ್ತಿನ ಅತಿ ನತದೃಷ್ಟ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಎಳನೀರು, ಕಬ್ಬಿನಹಾಲು, ಕಾಫಿ, ಟೀ, ಜ್ಯೂಸು, ಕೋಕು -ಗಳಂತಹ ಪದಾರ್ಥಗಳನ್ನು ಕುಡಿಯುತ್ತಾ ಮೈಮರೆತಿರುವ ನೀವು, ಭಗವದ್ದರ್ಶನಕ್ಕೊಳಗಾಗಬಹುದಾದ ನೀರ್ಗೊಜ್ಜಿನಂತಹ ಪೇಯದ ರುಚಿಯಿಂದ ವಂಚಿತರಾಗಿದ್ದೀರಿ. ಬಿಯರು, ವಿಸ್ಕಿ, ರಮ್ಮು, ವೈನುಗಳೇ ಮೊದಲಾದ ಮಾದಕ ದ್ರವ್ಯಗಳಿಗೂ ಸಡ್ಡು ಹೊಡೆಯಬಲ್ಲಂತಹ ಕಿಕ್ಕು ನಮ್ಮ ಮಾವಿನಕಾಯಿ ನೀರ್ಗೊಜ್ಜು ಸೇವಿಸುವುದರಿಂದ ಸಿಗುತ್ತದೆ ಎಂದರೆ ನೀವು ನಂಬಲಾರಿರಿ.

ಹಾಗೆ ನೋಡಿದರೆ ಮಾವಿನಕಾಯಿ ನೀರುಗೊಜ್ಜು ಒಂದು ಪೇಯವಲ್ಲ. ಮೂಲತಃ ಇದು ಅನ್ನಕ್ಕೆ ಬೆರೆಸಿಕೊಂಡು ಉಣ್ಣಬೇಕಾದ ಪದಾರ್ಥ. ಬಿರುಬೇಸಗೆಯ ಮಧ್ಯಾಹ್ನಗಳಲ್ಲಿ, ಸಾಂಬಾರು-ಸಾರುಗಳಂತಹ ಬಿಸಿ ಪದಾರ್ಥಗಳನ್ನು ಉಣ್ಣಲು ನಿರಾಕರಿಸುವ ಬಾಯಿಗೆ, ಹಿತವೆನಿಸುವಂತಹ ತಣ್ಣನೆಯ ನೀರು-ನೀರು ಅಡುಗೆ ಇದು. ಚೂರೇ ಅನ್ನವಿದ್ದರೂ ತಟ್ಟೆತುಂಬ ಗೊಜ್ಜು ಹೊಯ್ದುಕೊಂಡು ಸುರಿಯುವುದು ಮಲೆನಾಡ ಮನೆಗಳ ಊಟದ ಸರ್ವೇಸಾಮಾನ್ಯ ದೃಶ್ಯ.

ವಸಂತ ಮಾಸ ಪ್ರಕೃತಿಗೆ ತರುವ ಸಿರಿಗಳಲ್ಲೊಂದು ಚಿಗುರಿದ ಮಾವು ಎನ್ನಬೇಕೋ ಅಥವಾ ಚಿಗುರಿದ ಮಾವಿನ ತರುವಿನ ಸಿರಿಯೇ ವಸಂತ ಮಾಸ ಎನ್ನಬೇಕೋ ಎಂಬ ಗೊಂದಲ ಕವನ ಬರೆಯಲು ಕುಳಿತ ಕವಿಗಳನ್ನು ಅದೆಷ್ಟೋ ವರ್ಷಗಳಿಂದ ಕಾಡುತ್ತ ಬಂದಿದೆ. ಆದರೆ, ಈ ಹಚ್ಚನೆ ಹಸುರಿನ ಮಾಮರದೆಲೆಗಳ ಮರೆಯಲಿ ಜೋತುಕೊಳ್ಳತೊಡಗುವ ಪುಟ್ಟಪುಟ್ಟ ಮಾವಿನ ಮಿಡಿಗಳು ಕೋಗಿಲೆ ಕೂಗಿಗೆ ಹುಳಿ ತುಂಬಿಕೊಳ್ಳುತ್ತಾ ಹಿಗ್ಗಿ ಹಿಗ್ಗಿ ಕಾಯಿಯಾಗುವ ಪರಿಯಿದೆಯಲ್ಲ, ಅದು ಈ ಕವಿಗಳ ಉಪಮೆ-ರೂಪಕ ಅಲಂಕಾರಗಳ ಮೇರೆ ಮೀರಿದ ಅದ್ಭುತ.

ಹೀಗೆ ಬೆಳೆದ ಎರಡು ಮಾವಿನಕಾಗಳನ್ನು ನೀವೀಗ ಕತ್ತರಿಸಿ ತರುತ್ತೀರಿ. ಹುಷಾರು: ಅಲ್ಲೂ ನಿಯಮವಿದೆ. ಮಾವಿನಕಾಯಿಯನ್ನು ನೀವು ತೊಟ್ಟಿನ ಸಮೇತ ಕತ್ತರಿಸಬೇಕು. ಏಕೆಂದರೆ, ಮಾವಿನಕಾಯಿಯ ಪರಿಮಳ ಇರುವುದು ಅದರ ತೊಟ್ಟಿನ ಬುಡದಲ್ಲಿ ಶೇಖರವಾಗಿರುವ ಸೊನೆಯಲ್ಲಿ. ಈ ಸೊನೆಯನ್ನು ನಾವು ಮುಂದೆ ಮಾಡಲಿರುವ ಗೊಜ್ಜಿಗೆ ಬೆರಸಿದರೇನೇ ದೊರೆಯುವುದು ನೀರ್ಗೊಜ್ಜಿನ ನಿಜವಾದ ಸೊಗಸು. ಹೀಗಾಗಿ, ಕೊಯ್ಯುವಾಗ ಮಾವಿನಕಾಯಿಯನ್ನು ಒಂದರ್ಧ ಅಡಿಯಷ್ಟು ತೊಟ್ಟನ್ನು ಬಿಟ್ಟೇ ಕೊಯ್ಯಬೇಕು. ಈಗ, ಕೊಯ್ದು ತಂದ ಮಾವಿನಕಾಯಿಯನ್ನು ಪಾತ್ರೆಯ ಮೇಲೆ ಹಿಡಿದು ತೊಟ್ಟಿನ ಬುಡದಲ್ಲಿ ಮುರಿಯಿರಿ. ಸೊನೆಯಷ್ಟೂ ಪಾತ್ರೆಗೆ ಸುರಿಯಿತಾ? ಈಗ ಮಾವಿನ ಕಾಯಿಯನ್ನು ಸಣ್ಣ ಸಣ್ಣ ಸ್ಲೈಸುಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಿ. ಹಾಗೇ ಸ್ವಲ್ಪ ತೆಂಗಿನಕಾಯಿಯನ್ನೂ ತುರಿದು ಹಾಕಿ. ಬೀಸಿ. ಹಸಿಮೆಣಸು ನುರಿಯಿರಿ. ಉಪ್ಪು ಹಾಕಿ. ನೀರು ಬೆರೆಸಿ. ಕೊಬ್ಬರಿ ಎಣ್ಣೆ-ಹಿಂಗು-ಸಾಸಿವೆ ಕಾಳಿನ ಒಗ್ಗರಣೆ ಕೊಡಿ. ಅಷ್ಟೇ: ಅಪರೂಪದ, ಪರಿಮಳಭರಿತ, ಪರಮರುಚಿಯ ನೀರ್ಗೊಜ್ಜು ಇದೀಗ ರೆಡಿ!

ದೇವಾನುದೇವತೆಗಳ ಕಾಲದಿಂದಲೂ ಚಾಲ್ತಿಯಲ್ಲಿರುವ ಈ ಅಡುಗೆ ಮಲೆನಾಡಿನ ಪರಂಪರೆಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿದೆ ಎಂದೆಲ್ಲ ನಾನು ಹೇಳುವುದಿಲ್ಲ. ಹಾಗೆ ಹೇಳಲಿಕ್ಕೆ ನನ್ನ ಬಳಿ ಯಾವುದೇ ಆಧಾರವಿಲ್ಲ. ರಿಸರ್ಚ್ ಮಾಡುವಷ್ಟೆಲ್ಲ ಸಮಯವಿಲ್ಲ. ನಾನು ಹೇಳುವುದಿಷ್ಟೇ: ಈ ನೀರ್ಗೊಜ್ಜನ್ನು ನೀವು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಚಕ್ಲುಪಟ್ಟೆ ಹೊಡೆದು ಕುಳಿತುಕೊಳ್ಳಿ. ಕಣ್ಣು ಮುಚ್ಚಿಕೊಳ್ಳಿ. ಚರಾಚರ ವಸ್ತುಗಳಿಂದ ಕೂಡಿದ ಇಹಲೋಕವನ್ನು ಕ್ಷಣಕಾಲ ಮರೆತುಬಿಡಿ. ದೇವರನ್ನು ಕಾಣುವ ಸಮಯ ಸನ್ನಿಹಿತವಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಬಟ್ಟಲನ್ನು ಬಾಯಿಯ ಬಳಿಗೆ ಒಯ್ಯಿರಿ. ಪರಿಮಳವನ್ನು ಆಘ್ರಾಣಿಸಿ. ಬಟ್ಟಲನ್ನು ತುಟಿಗೆ ತಾಗಿಸಿ. ಹಾಗೇ ಒಂದು ಸಿಪ್ ಗುಟುಕರಿಸಿ. ಯೆಸ್ಸ್ಸ್ಸ್!

ಕಾಲ ಹಾಳಾಗಿದೆ, ಮನುಷ್ಯ ಹಾಳಾಗಿದ್ದಾನೆ, ಬದುಕು ಬರಡಾಗಿದೆ, ಸ್ವಾರಸ್ಯವೆಲ್ಲ ಹೊರಟೋಗಿದೆ ...ಇತ್ಯಾದಿ ನಿಮ್ಮ ನಿರಾಶಾವಾದವನ್ನೆಲ್ಲ ಕಳೆದು ಮತ್ತೆ ಬದುಕಿನತ್ತ ಮುಖ ಮಾಡಿಸುವ ಅಮೃತ ಈ ಮಾವಿನಕಾಯಿ ಗೊಜ್ಜು. ಇದು ಹುಳಿಯಿದ್ದಷ್ಟೂ ರುಚಿ, ಖಾರವಿದ್ದಷ್ಟೂ ಬಾಯಿಸೆಳೆತ, ಪರಿಮಳವಿದ್ದಷ್ಟೂ ಮಜಾ ಮತ್ತು ಹೇರಳವಾಗಿದ್ದಷ್ಟೂ ಖರ್ಚು! ಮಾವಿನಕಾಯಿ ನೀರ್ಗೊಜ್ಜನ್ನು ಗುಟುಕು-ಗುಟುಕಾಗಿ ಕುಡಿಯಬೇಕು... ಒಂದು ಬಟ್ಟಲು ಮುಗಿಯುತ್ತಿದ್ದಂತೆ ಮತ್ತೊಂದು ಬಟ್ಟಲು. ಇದರ ಗಮ್ಮತ್ತೇ ಅಂಥದು: ಖಾರವೆನಿಸಿದರೂ ಬಿಡಲಾಗದು, ಹುಳಿಯೆನಿಸಿದರೂ ಮುಖ ಹಿಂಡಲಾಗದು!

ಹುಳಿಯಿರುವ ಯಾವುದೇ ಮಾವಿನಕಾಯಿಯಿಂದಲಾದರೂ ನೀರ್ಗೊಜ್ಜನ್ನು ಮಾಡಬಹುದಾದರೂ ಅಪ್ಪೆ, ಕಂಚಪ್ಪೆ, ಜೀರಿಗೆಗಳಂತಹ ಜಾತಿಯ ಕಾಯಿಗಳು ಹೆಚ್ಚು ಪ್ರಸಿದ್ಧ. ಅವು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳವನ್ನು ಗೊಜ್ಜಿಗೆ ನೀಡುವುದರಿಂದ ಪೇಯದ ಸೊಗಡು ಹೆಚ್ಚುತ್ತದೆ.

ಮಾವಿನಕಾಯಿ ನೀರ್ಗೊಜ್ಜು ಕುಡಿಯಲು ಸ್ವಲ್ಪ ಮಟ್ಟಿನ ರಸಿಕತೆಯೂ ಬೇಕಾಗುತ್ತದೆ ಎಂದರೆ ತಪ್ಪಾಗಲಾರದು. ನಾನು ನೋಡಿದ ಹಾಗೆ, ಸಾಮಾನ್ಯವಾಗಿ ಹುಳಿಯನ್ನು ದ್ವೇಷಿಸುವ ಗಂಡಸರೇ ಮಾವಿನಕಾಯಿ ನೀರ್ಗೊಜ್ಜನ್ನು ಕುಡಿಯುವುದು ಹೆಚ್ಚು! ಹೆಂಗಸರು ಅದೇಕೋ ಇದನ್ನು ಅನ್ನಕ್ಕೆ ಬೆರೆಸಿ ಉಣ್ಣುವುದನ್ನೇ ಇಷ್ಟ ಪಡುತ್ತಾರೆ. ಆದರೆ ಗಂಡಸರು ಬಟ್ಟಲಿಗೆ ಹಾಕಿಕೊಂಡು ಕುಡಿಯುತ್ತಾರೆ. ಅದು ಸರಿಯೇ: ನೀರ್ಗೊಜ್ಜನ್ನು ಅನ್ನಕ್ಕೆ ಬೆರೆಸಿ ಉಣ್ಣುವುದರಲ್ಲಿ ಅಂತಹ ಮಜಾ ಏನೂ ಇಲ್ಲ. ಆದರೆ ಅದನ್ನು ಕುಡಿಯುವುದುದಿದೆಯಲ್ಲ, ಆಹ್! ಬ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ!

ಮಲೆನಾಡು ಹವ್ಯಕರ ಮದುವೆಮನೆ ಊಟಗಳಲ್ಲಿ ನೀರ್ಗೊಜ್ಜು ಒಂದು ಖಾಯಂ ಐಟಮ್ಮು. ಅದು ಮಾವಿನಕಾಯಿಯ ಸೀಸನ್ ಆಗಿರಬೇಕಷ್ಟೇ: ತಿಳಿಸಾರು, ಸಾಂಬಾರು, ಚಿತ್ರಾನ್ನಗಳು ಆದಮೇಲೆ ಬರುವ ಪದಾರ್ಥವೇ ನೀರ್ಗೊಜ್ಜು. ಈ ನೀರ್ಗೊಜ್ಜನ್ನು ದೊನ್ನೆಗೆ ಹಾಕಿಸಿಕೊಂಡು ಕುಡಿಯಬೇಕು. ನೀರ್ಗೊಜ್ಜನ್ನು ದೊನ್ನೆಯಲ್ಲಿ ಕುಡಿಯುವ ಅನುಭವವೇ ಬೇರೆ. ಹೊಂಬಾಳೆಯಿಂದ ಮಾಡಿದ ಈ ದೊನ್ನೆ ಅದಾಗಲೇ ತಿಳಿಸಾರು ಹಾಕಿಸಿಕೊಂಡಿದ್ದ ದೊನ್ನೆ. ಈಗ ಅದನ್ನೇ ಖಾಲಿಮಾಡಿ ನೀರ್ಗೊಜ್ಜು ತುಂಬಿಸಿಕೊಳ್ಳುವುದು. ನೀರ್ಗೊಜ್ಜಿನ ನಂತರ ಬರುವ ಖೀರಿಗೂ ಇದೇ ದೊನ್ನೆ! ನೀರ್ಗೊಜ್ಜು ಬಡಿಸುವವರು ಮತ್ತೊಂದು ರೌಂಡು ಬರಲೇಬೇಕು. ಅದಿಲ್ಲದಿದ್ದರೆ ಪಂಕ್ತಿಯಲ್ಲಿರುವ ಎಲ್ಲರೂ ಅವರಿಗೆ ಶಾಪ ಹಾಕುವುದು ಖಾಯಂ. ಉರಿಬಿಸಿಲ ದಗೆಯಲ್ಲಿ, ಚಪ್ಪರದ ಕೆಳಗೋ ಶಾಮಿಯಾನಾದ ಕೆಳಗೋ ಬೆವರುತ್ತ ಊಟಕ್ಕೆ ಕೂತಿರುವವರಿಗೆ ಈ ನೀರ್ಗೊಜ್ಜು ಕೊಡುವ ರಿಲೀಫು -ಅದು ಶಬ್ದಗಳಿಗೆ ಮೀರಿದ್ದು. ಗ್ರಂಥಗಳೇನಾದರೂ ಹೊಮ್ಮುವುದಿದ್ದರೆ ಆಮೇಲೇ ಅದು ಹೊಮ್ಮುವುದು! ಮತ್ತೀ ಬಡಿಸುತ್ತಿರುವವರಿದ್ದಾರಲ್ಲಾ, ಇವರೂ ಈಗಾಗಲೇ ಕನಿಷ್ಟ ಎರಡು ದೊನ್ನೆ ನೀರ್ಗೊಜ್ಜು ಕುಡಿದಿರುತ್ತಾರೆಂಬುದನ್ನು ನೀವು ಗಮನಿಸಬೇಕು. ಅಡುಗೆಮನೆಯಲ್ಲಿ ನೀರ್ಗೊಜ್ಜಿನ ದೊಡ್ಡ ಕೌಳಿಗೆಗೇ ‘ಡೈರೆಕ್ಟ್ ಅಕ್ಸೆಸ್’ ಇರುವ ಇವರು, ತಾವು ಮೂರನೆಯದೋ-ನಾಲ್ಕನೆಯದೋ ಪಂಕ್ತಿಗೆ ಕೂರುವಷ್ಟರಲ್ಲಿ ಖಾಲಿಯಾಗಿಬಿಟ್ಟಿದ್ದರೆ ಎಂಬ ಮುಂಜಾಗ್ರತೆಯಿಂದ, ಅಲ್ಲೇ ಇರುವ ದೊನ್ನೆಗಳಲ್ಲಿ ಗೊಜ್ಜನ್ನು ಬಗ್ಗಿಸಿ ಬಗ್ಗಿಸಿಕೊಂಡು ಕುಡಿದು ಬಾಯಿ ಚಪ್ಪರಿಸಿಕೊಂಡಿರುತ್ತಾರೆ.

ನೀರ್ಗೊಜ್ಜು ಕುಡಿದುಬಿಟ್ಟರೆ ಅಷ್ಟಕ್ಕೇ ಮುಗಿಯಲಿಲ್ಲ; ಕೈ ತೊಳೆದು ಬಂದು ಸಣ್ಣದೊಂದು ಕವಳ ಹಾಕಿ ಗೋಡೆಗೊರಗುತ್ತೀರಿ ನೋಡಿ, ಆಮೇಲೆ ಇರುವುದು ಮಜಾ! ತೂಕಡಿಸಿ ತೂಕಡಿಸಿ ಬರುವ ಜೋಂಪು ನಿಮ್ಮನ್ನು ನಿದ್ರಿಸದೇ ಇರಲು ಸಾಧ್ಯವೇ ಇಲ್ಲವೆಂಬಂತೆ ಮಾಡುತ್ತದೆ. ಅದಕ್ಕೇ ನಾನು ಮೊದಲೇ ಹೇಳಿದ್ದು: ಯಾವ ಮಾದಕ ದ್ರವ್ಯಕ್ಕಿಂತಲೂ ಕಮ್ಮಿಯೇನಲ್ಲ ಇದು ಎಂದು. ಮಾವಿನಕಾಯಿ ನೀರ್ಗೊಜ್ಜು ಕುಡಿದಮೇಲೆ ಮಲಗಲೇಬೇಕು. ಅದಕ್ಕೆ ತಯಾರಾಗಿಯೇ ನೀವು ಇದನ್ನು ಸೇವಿಸಬೇಕು. ಊಟದ ನಂತರ ಯಾವುದೋ ಕೆಲಸ ಇಟ್ಟುಕೊಂಡು ಇದನ್ನು ಕುಡಿಯುವುದು ತರವಲ್ಲ. ಮಲೆನಾಡ ಹವ್ಯಕರು ಮಧ್ಯಾಹ್ನವೂ ಸೊಂಪು ನಿದ್ರೆ ತೆಗೆಯುವುದಕ್ಕೆ ಬರೀ ಕೆಲಸವಿಲ್ಲದಿರುವ - ಸೋಮಾರಿತನವಷ್ಟೇ ಕಾರಣವಲ್ಲ; ಅದರ ಹಿಂದೆ ಮಾವಿನ್‌ಕಾಯ್ ನೀರ್ಗೊಜ್ಜಿನ ಕೈವಾಡವೂ ಇದೆ ಎಂಬುದು ಕೆಲವರಿಗಷ್ಟೇ ತಿಳಿದ ಗುಟ್ಟು.

ಒಮ್ಮೆ ಈ ಗೊಜ್ಜಿನ ಪಾನದಲ್ಲಿರುವ ಸ್ವರ್ಗಸುಖಕ್ಕೆ ಬಲಿಯಾದಿರೋ, ನೀವಿದರ ಫ್ಯಾನ್ ಆದಿರಿ ಅಂತಲೇ ಅರ್ಥ. ಇನ್ನು, ತರಕಾರಿ ಮಾರ್ಕೆಟ್ಟಿಗೆ ಹೋಗಿ ಮಾವಿನಕಾಯಿ ಕೊಂಡುತಂದು ಸ್ವತಃ ಗೊಜ್ಜು ತಯಾರಿಸುತ್ತೀರೋ ಅಥವಾ ಅಧಿಕಮಾಸ ಕಳೆದು ಇದೀಗ ಶುರುವಾಗಿರುವ ಸಾಲುಸಾಲು ಮಲೆನಾಡ ಮದುವೆಮನೆಗಳಿಗೆ ಲಗ್ಗೆ ಇಡುತ್ತೀರೋ, ನಿಮಗೆ ಬಿಟ್ಟಿದ್ದು.


[ನೋಟ್: ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ. ಬರೆಯುವ ಭರದಲ್ಲಿ ಮಾವಿನಮರ ಚಿಗುರಿದ ಮೇಲೆ ಕಾಯಿ ಬಿಡುತ್ತೆ ಅಂತೇನೋ ಆಗಿಬಿಟ್ಟಿತ್ತು; ಅದನ್ನಿಲ್ಲಿ ತಿದ್ದಿದ್ದೇನೆ. ಮತ್ತೆ ಕೆಲವರು "ತಮ್ಮ ಕಡೆ ನೀರ್ಗೊಜ್ಜಿಗೆ 'ಅಪ್ಪೆಹುಳಿ' ಅಂತ ಕರೀತಾರೆ, 'ಮಾವಿನ್‌ಕಾಯ್ ಟ್ರೊಂಯ್' ಅಂತ ಕರೀತಾರೆ, ನೀವದನ್ನ ಮೆನ್ಷನ್ನೇ ಮಾಡಿಲ್ಲ, ನಮ್ಗೆ ಸಖತ್ ಬೇಜಾರಾಯ್ತು" ಅಂತ ಆಕ್ಷೇಪವೆತ್ತಿದ್ದಾರೆ. ಅವರಿಗೆ ನಮ್ಮನೆಗೆ ಬಂದ್ರೆ ಒಂದೊಂದ್ ಲೋಟ ಗೊಜ್ಜು ಕುಡಿಸುವುದಾಗಿ ಹೇಳಿ ಸಮಾಧಾನ ಮಾಡಿದ್ದೇನೆ. ಥ್ಯಾಂಕ್ಯೂ. ;) ]

Thursday, May 13, 2010

ಪ್ರಶ್ನೆ -೨

ಮ್ಯಾಂಗೋ ಫ್ಲೇವರಿನ ಐಸ್‌ಕ್ರೀಂ
ತಿಂದು ಮಲಗಿದ ರಾತ್ರಿ
ಕನಸಲ್ಲಿ ರಸಪುರಿ ಹಣ್ಣು
ತೂಗುತ್ತಿರುವ ಮಾವಿನ ಮರ ಕಂಡಿತ್ತು,
ಹಸುರೆಲೆಗಳ ನಡುವೆ ಕೂತಿದ್ದ ಕಪ್ಪು
ಕೋಗಿಲೆ ಕೂಗಿದ್ದಕ್ಕೆ ಎಚ್ಚರಾಯ್ತು
ಎಂದು ನಾ ಹೇಳಿದರೆ ನೀನು ಕ್ಲೀಷೆಯೆಂದು
ಬದಿಗೆ ಸರಿಸಿಬಿಡಬೇಡ-
ನನ್ನ ಸತ್ಯ ನನಗೆ
ಯಾವ ಕನಸೂ ಸುಳ್ಳಲ್ಲ
ಎಲ್ಲ ವಿಸ್ಮಯಗಳಿಗೂ ಅರ್ಥ ಬೇಕೆಂದು
ಹಾತೊರೆಯುವುದಾದರೂ ಏಕೆ?
ಉತ್ತರ ಸಿಕ್ಕಮೇಲೆ ಪ್ರಶ್ನೆಗೆ ಬೆಲೆಯೆಲ್ಲಿ?

ಕೇಳದೇ ಉಳಿದ ಪ್ರಶ್ನೆಗಳನ್ನು
ಕೆಡದಂತೆ ಇಡಲು ಹಾಟ್‌ಬಾಕ್ಸು,
ಫ್ಲಾಸ್ಕು, ಫ್ರಿಜ್ಜು -ಏನೂ ಬೇಕಿಲ್ಲ;
ಮನದ ಮೂಲೆಗೆ ಬೀಸಾಡಿದರೂ ಸಾಕು
ಹಾಗೇ ಇರುತ್ತವೆ, ಪಾಪ.

ರಾತ್ರಿಯೆಲ್ಲ ಕೂತು ಉರು
ಹೊಡೆದುಕೊಂಡು ಬಂದ ಭಾಷಣ
ವೇದಿಕೆ ಹತ್ತುವವರೆಗೂ ಸರಿಯಾಗಿಯೇ ನೆನಪಿತ್ತು
ಗಂಟಲೊಣಗಿದ್ದು, ತಡವರಿಸಿದ್ದು
ಆಮೇಲೇ.
ಅತಿಥಿಗಳ ಬಗ್ಗೆ ಸಭಾಸದರಿಗೂ ಅನುಕಂಪ
ಇದೂ ಕನಸಾಗಿದ್ದರೆ ಅಂತ ಎಷ್ಟೇ ಬಯಸಿದರೂ

ಕೋಗಿಲೆ ಕೂಗುವುದೇ ಇಲ್ಲ.

Friday, May 07, 2010

ಪ್ರಶ್ನೆ -೧

ಕೇಳಬೇಕಾದ ಪ್ರಶ್ನೆಗಳನ್ನು
ಕೇಳಬೇಕಾದಾಗಲೇ ಕೇಳಬೇಕು
ಕಳುಹಿಸಬೇಕಾದ ಪತ್ರಗಳನ್ನು
ಕಳುಹಿಸಬೇಕಾದಾಗಲೇ ಕ....

ಶುಭ್ರ ಬಿಳಿ ಹಾಳೆಯಲ್ಲಿ
ಕಡುಗಪ್ಪು ಅಕ್ಷರಗಳಲ್ಲಿ ಬರೆದ ಪ್ರಶ್ನೆಗಳನ್ನು
ತುಸುಹಳದಿ ಬಣ್ಣದ ಕವರಿನೊಳಗೆ
ಮಡಿಚಿ ಮಡಿಚಿ ಹಾಕಿ
ಕೆಂಪು ಬಣ್ಣದ ಅಂಚೆಪೆಟ್ಟಿಗೆಯೊಳಗೆ
ಬೀಳಿಸಿದರೆ ಟಣ್ ಎಂಬ ಶಬ್ದ.
ಏಕೆ ಕೈ ತಡೆಯಬೇಕು?

ನೋಡಲ್ಲಿ, ನೀನು ನಂಬಬೇಕೆಂದಿಲ್ಲ-
ಕುರೂಪಿ ಕಾಗೆ ಹೇಗೆ ಕ್ರಾಗುಟ್ಟುತ್ತಿದೆ
ಅಪಶಕುನ! ಅಪಶಕುನ!!

ನಿಜಕ್ಕೂ ಬರೆದೆನಾ ಪತ್ರ?
ಇಲ್ಲ, ಕೈ ತಡೆದುದು ಪತ್ರ ಹಾಕುವಾಗಲ್ಲ;
ಬರೆಯುವಾಗಲೇ!
ಮತಿ ಹೇಳುತ್ತದೆ:
ಪ್ರತಿ ಮಾತನ್ನೂ ಯೋಚಿಸಿ ಆಡುವುದನ್ನು
ರೂಢಿಸಿಕೊಂಡ ದಿನದಿಂದಲೇ ಆದದ್ದು
ಈ ಹಿನ್ನಡೆ.
ನುಗ್ಗಿಬಿಟ್ಟಿದ್ದರೆ ಅಂದೇ,
ಇನ್ನೆಲ್ಲೋ ಇರುತ್ತಿದ್ದೆ.
ಇದೇ ನಿನ್ನ ಮಿತಿ.

ಇದ್ದೀತೇನೋ, ಸ್ಮೃತಿಯ ಕಡಲಲಿ
ಮುಳುಗಿದವ ಕ್ಷಮಾದಾಯಿಯ ಮುಂದೆ
ಸದಾ ಸ್ವಯಂ ಅಭ್ಯರ್ಥಿ;
ಪ್ರಶ್ನೆ ಪ್ರಚ್ಛನ್ನ.

Monday, April 26, 2010

ನಾಲ್ಕು ವರ್ಷಗಳ ಕೊನೆಗೆ ನಾಲ್ಕು ಮಾತು

ಕೈಯಲ್ಲಿ ಅಕ್ಷರಗಳ ಮೂಟೆಯಿದೆ. ಅದನ್ನು ತೂಗಲಿಕ್ಕೆ, ಅದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವೇ ಇಲ್ಲ. ಏ-ಫೋರ್ ಅಳತೆಯ, ಅತ್ಯುತ್ತಮ ಗುಣಮಟ್ಟದ ಹಾಳೆ ಬಳಸಿದ, ಮುನ್ನೂರಾ ಇಪ್ಪತ್ತು ಪುಟಗಳ ಈ ಬೃಹತ್ ಪುಸ್ತಕದ ಪುಟಗಳನ್ನು ತೆರೆದರೆ, ಕನ್ನಡ ಸಾರಸ್ವತ ಲೋಕದ ಅಷ್ಟೂ ಮುಂಚೂಣಿ ಮಂದಿ ಅಲ್ಲಿದ್ದಾರೆ. ಕುವೆಂಪು-ಬೇಂದ್ರೆ-ಮಾಸ್ತಿಯವರ ಕೈಬರಹಗಳನ್ನು ನೋಡಿ ತೆರೆದ ಪುಟದಲ್ಲೇ ಪುಳಕಗೊಂಡು ನಿಂತುಬಿಡುವ ಮನವನ್ನು ತಹಬಂದಿಗೆ ತಂದುಕೊಳ್ಳುತ್ತಾ ಮುಂದೆ ಹೋದರೆ, ಅನಂತಮೂರ್ತಿ, ಕಾರ್ನಾಡ, ಕಾಯ್ಕಿಣಿ, ಚಿತ್ತಾಲ, ಕಾಗಿನೆಲೆ, ರಶೀದ್, ಸುನಂದಾ, ಜೋಗಿ, ನುಗಡೋಣಿ, ವಸುಧೇಂದ್ರ, ವೈದೇಹಿ, ಪ್ರತಿಭಾ, ಕುಂವೀ, ಎಚ್ಚೆಸ್ವಿ, ಕಂಬಾರ, ಬಿ‌ಆರ್‌ಎಲ್.... ಹೀಗೆ ನೀವು ಅತಿ ಪ್ರೀತಿ ಪಟ್ಟು ಓದುವ ಅಷ್ಟೂ ಬರಹಗಾರರು ಇಲ್ಲಿ ಒಟ್ಟಿಗೇ ಎದುರುಗೊಂಡು ನಿಮಗೆ ಎಚ್ಚರ ತಪ್ಪುವಂತೆ ಮಾಡುತ್ತಾರೆ. ನಿಮಗೆ ಇಷ್ಟವಾಗುವ ಎಲ್ಲದೂ ಇಲ್ಲಿದೆ. ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಪರಿಚಯ, ಚಿತ್ರ, ಸಂವಾದ, ಲೇಖನ.... ಯಾವುದೇ ಭಾಷೆಯ ಸಾಹಿತ್ಯ ಪ್ರಾಕಾರವೊಂದರಲ್ಲಿ ಏನೇನು ಇರಲಿಕ್ಕೆ ಸಾಧ್ಯವೋ ಅಷ್ಟೂ ಇಲ್ಲಿವೆ. ಪುಟಗಳ ಸಂಯೋಜನೆಯಂತೂ ಅದೆಷ್ಟು ಮುದ್ದಾಗಿದೆಯೆಂದರೆ, ಓದುವುದು ಹಾಗಿರಲಿ; ಈ ಪುಸ್ತಕವನ್ನು ನೋಡಿ ಮುಗಿಸಲಿಕ್ಕೇ ಒಂದು ತಾಸು ಬೇಕು! ಕಷ್ಟಸಾಧ್ಯವಲ್ಲ; ವರ್ಣಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿನ ಪುಸ್ತಿಕೆಯೊಂದನ್ನು ಕೈಗೆ ಬಂದಿದೆ. ಇಂಥದೊಂದು ಅದ್ಭುತ ಕೆಲಸವೊಂದು ಕನ್ನಡದಲ್ಲಿ ಆಗಿದೆ, ಅದರ ಬಿಡುಗಡೆಗೆ ನಾವು ಸಾಕ್ಷಿಯಾಗಿದ್ದೇವೆ, ಆ ಗ್ರಂಥವನ್ನು ಗರಿಗರಿಯಾಗಿ ಪಡೆಯುವಲ್ಲಿ - ಅದರ ಮೈ ಸವರುವಲ್ಲಿ - ಪುಟಗಳ ಹೊಸ ಪರಿಮಳದೊಂದಿಗೆ ಓದುವ ಆನಂದದಲ್ಲಿ ಭಾಗಿಯಾಗಿದ್ದೇವೆ ಎನ್ನುವುದು ಬಹುಶಃ ನಮ್ಮ ಭಾಗ್ಯ ಎಂತಲೇ ನನಗನಿಸುತ್ತದೆ. ಇಷ್ಟೊಂದು ಖುಶಿ-ಉದ್ವೇಗಗಳನ್ನು ನಮಗೆ ಕೊಟ್ಟಿರುವ, ಇಂಥದೊಂದು ಹೆಮ್ಮೆ ಪಡಬಹುದಾದ ಅಕ್ಷರಗುಚ್ಛವನ್ನು ಕೈಗಿಟ್ಟಿರುವ ವಿವೇಕ ಶಾನಭಾಗ್ ಮತ್ತು ಬಳಗದವರಿಗೆ ಹ್ಯಾಟ್ಸ್ ಆಫ್! ಇದು ‘ದೇಶ ಕಾಲ’ ಪತ್ರಿಕೆಯ ವಿಶೇಷ ಸಂಚಿಕೆ.

* * *

ಪ್ರತಿಯೊಂದರಲ್ಲೂ ಮನರಂಜನೆಯೇ ಮೂಲಮಂತ್ರವಾಗಿರುವ ಇಂದಿನ ಮನುಜ ಮನಸ್ಥಿತಿಯ ನಡುವೆ ಇಂಥ ಅಪರೂಪಗಳೇ ಇರಬೇಕು ನಮ್ಮನ್ನು ಇನ್ನೂ ಸೃಜನಶೀಲವಾಗಿ ಇಟ್ಟಿರುವ ಆಕರಗಳು. ಒಂದು ಕತೆ ಓದಿದಾಗ ಆಗುವ ಖುಶಿ, ಒಂದು ಕವಿತೆ ಓದುವಾಗ ಆಗುವ ಅನುಭವ, ಒಂದು ಕಾದಂಬರಿ ಓದಿ ಮುಗಿಸಿದಾಗ ಆಗುವ ಬದಲಾವಣೆ, ಒಂದು ಒಳ್ಳೆಯ ಸಿನೆಮಾ ನೋಡಿದಾಗ ಆಗುವ ಆನಂದ, ಒಂದು ಅತ್ಯುತ್ತಮ ಕಲಾಕೃತಿ ನೋಡುತ್ತಾ ಮೈಮರೆಯುವ ಸುಖ, ಒಂದ್ಯಾವುದೋ ಹಾಡು ಕೇಳುತ್ತಾ ಕಳೆದುಹೋಗುವುದರಲ್ಲಿನ ಮಜ... ಇವನ್ನು ಅನುಭವಿಸದ ಮನುಷ್ಯ ನಿಜಕ್ಕೂ ಅದೃಷ್ಟಹೀನ. ಇವು ಕೇವಲ ನಮ್ಮ ದಿನದ ಭವಗಳನ್ನು ಗೆಲ್ಲುವ ಮನರಂಜನೆಯ ಸಾಧನಗಳಾಗಿರದೆ ನಮ್ಮ ನಾಳೆಯ ನಡಿಗೆಗೆ ಕಿಂಚಿತ್ತು ಉತ್ಸಾಹ ತುಂಬುವ ಮಾನಸೋಲ್ಲಾಸದಾಯಕ ಔಷಧಿಗಳಾಗಿವೆ.

ಇವನ್ನು ನಮಗೆ ಕೊಡಮಾಡುವ ಮಂದಿ ನಮ್ಮಿಂದ ಆದಷ್ಟೂ ದೂರವಿದ್ದಷ್ಟೂ ಒಳ್ಳೆಯದು ಅಂತ ಗೆಳೆಯ ಕಾರ್ತಿಕ್ ಪರಾಡ್ಕರ್ ಬರೆದಿದ್ದ. ಎಷ್ಟು ಸತ್ಯ! ಲೇಖಕನಿರಬಹುದು, ನಟನಿರಬಹುದು, ಆಟಗಾರನಿರಬಹುದು, ಹಾಡುಗಾರನಿರಬಹುದು- ಆತ ನಮ್ಮಿಂದ ತುಸು ದೂರದ ವೇದಿಕೆಯ ಮೇಲೇ ನಿಂತು ಯಕ್ಷಿಣಿ ಮಾಡುತ್ತಿರಬೇಕು. ಆಗಲೇ ಅದು ಚಂದ. ಆಗಲೇ ಅದಕ್ಕೊಂದು ಮಾಂತ್ರಿಕ ಪುಳಕ. ಆಗಲೇ ಅದರೆಡೆಗೊಂದು ಕಾತರ. ಅದೇ ಆ ವ್ಯಕ್ತಿಯೊಂದಿಗೆ ನಾವು ಒಡನಾಡುತ್ತಿದ್ದೆವಾದರೆ ಅಥವಾ ಆತನ ವೈಯಕ್ತಿಕ ಬದುಕಿನ ಫ್ಯಾಂಟಸಿಗಳು ಜಾಹೀರಾಗಿಬಿಟ್ಟವೆಂದರೆ ಆಗುವ ನಿರಾಶೆಯಿದೆಯಲ್ಲ, ಅದು ಹೇಳತೀರದ್ದು.

ಮೊನ್ನೆ ರಾಜಾಜಿನಗರದ ಟಿವಿ ಶೋರೂಮ್ ಒಂದನ್ನು ಹಾದುಹೋಗುತ್ತಿದ್ದೆ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಚಾಂಪಿಯನ್ಸ್ ಲೀಗ್ ಅರ್ಹತಾ ಸುತ್ತಿನ - ಆರ್‌ಸಿಬಿ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಿನ ಪಂದ್ಯ ನಡೆಯುತ್ತಿತ್ತು. ಶೋರೂಮಿನವನು ರಸ್ತೆಗೆ ಅಭಿಮುಖವಾಗಿ ಇಟ್ಟಿದ್ದ ದೊಡ್ಡ ಸ್ಕ್ರೀನಿನ ಟೀವಿಯಲ್ಲಿ ಈ ಪಂದ್ಯವನ್ನು ನೋಡುತ್ತ ಸುಮಾರು ಜನ ಫುಟ್‌ಪಾತಿನಲ್ಲಿ ನಿಂತಿದ್ದರು. ನಾನೂ ನಿಂತುಕೊಂಡೆ. ಹಿಂದಿನ ದಿನವಷ್ಟೇ ಐಪಿ‌ಎಲ್‌ನಲ್ಲಿನ ಹಗರಣಗಳು, ಮ್ಯಾಚ್ ಫಿಕ್ಸಿಂಗಿನ ಅವ್ಯವಹಾರಗಳು ಸುದ್ದಿಯಾಗಿದ್ದವಷ್ಟೇ? ಡೆಕ್ಕನ್ ಚಾರ್ಜರ್ಸ್ ತಂಡದ ವಿಕೆಟ್ಟುಗಳು ಒಂದರ ಹಿಂದೆ ಒಂದು ಬೀಳತೊಡಗಿದಂತೆ ಅಲ್ಲಿದ್ದ ಗುಂಪಿನಲ್ಲಿದ್ದವನೊಬ್ಬ "ಥೂ, ಎಲ್ಲಾ ಫಿಕ್ಸಿಂಗು ಕಣ್ರೋ.. ಎಲ್ಲಾ ಮೋಸ. ನಾವ್ ಒಳ್ಳೇ ಬಕರಾಗಳ ಥರ ಅವರ ವಿಕೆಟ್ ಹೋದ್ರೆ ಖುಶಿ ಪಡ್ತಾ ನಮ್ಮವರದ್ದು ಹೋದ್ರೆ ಬೇಜಾರ್ ಮಾಡ್ಕೊಳ್ತಾ, ಅವರು ಸೋತ್ರೆ ಪಟಾಕಿ ಹೊಡೀತಾ ನಮ್ಮವರು ಸೋತ್ರೆ ಸಿಗರೇಟು ಸೇದ್ತಾ ಮನಸಿಗೆಲ್ಲ ಹಚ್ಕೊಂಡು ಫೀಲ್ ಮಾಡ್ಕೊಳ್ತಾ ಇರ್ತೀವಿ. ಆದ್ರೆ ಅಲ್ಲಿ ನಡೆಯೋದು ಎಲ್ಲಾ ಮುಂಚೇನೇ ಡಿಸೈಡೆಡ್ಡು. ಕರ್ಮ, ನಮಗೆ ಬುದ್ಧಿ ಇಲ್ಲ" ಅಂತಂದು, ಗುಂಪಿನಿಂದ ಅಗಲಿ ದಢದಢನೆ ನಡೆದು ಹೋಗಿಬಿಟ್ಟ!

ಕ್ರೀಡೆ- ಆಡುವವನಿಗೆ ಮಾತ್ರ ಪಂದ್ಯ, ದುಡ್ಡು ತರುವ ಜಾಬ್; ನೋಡುವವನಿಗೆ ಯಾವತ್ತೂ ಮನರಂಜನೆ. ಸಿನೆಮಾ ಅಥವಾ ಧಾರಾವಾಹಿ- ಅಭಿನೇತ್ರುವಿಗೆ ಅದೊಂದು ವೃತ್ತಿ, ಅನ್ನ ಕೊಡುವ ಉದ್ಯಮ; ಅದೇ ನೋಡುವವನಿಗೆ ಅದರಲ್ಲಿನ ಕತೆ, ತಿರುವು, ಸಂಭಾಷಣೆ -ಎಲ್ಲಾ ನಿತ್ಯಸಂತೋಷ ಕರುಣಿಸುವ ಸಾಧನಗಳು. ಕತೆ, ಕವಿತೆ, ಹಾಡು- ಅವುಗಳ ಕರ್ತೃವಿಗೆ ತನ್ನ ಸೃಜನಶೀಲತೆಯನ್ನು ಹೊರಹಾಕುವ ಮಾರ್ಗಗಳು; ಅದೇ ಅವನ್ನು ಓದುವ-ಆಲಿಸುವ ಸಾಮಾನ್ಯ ಮನುಷ್ಯನಿಗೆ ಅವು ಮನಸ್ಸಂಪ್ರೀತಿಗೊಳಿಸುವ ಕೇಂದ್ರಗಳು. ಆದರೆ ನಮ್ಮನ್ನು ಮರುಳು ಮಾಡುವ ಇವೆಲ್ಲಕ್ಕೂ ಕೇವಲ ಯಕ್ಷಿಣಿಗಾರನ ಮೇಲೆ ಬೀಳುವ ಒಂದು ಕಲ್ಲು ಮಸುಕು ತೊಡಿಸಿಬಿಡುತ್ತದೆ. ನಮ್ಮನ್ನು ಎಚ್ಚರಗೊಳಿಸುತ್ತದೆ, ಆದರೆ ಅಷ್ಟೇ ಮಟ್ಟಿಗೆ ಅದರಿಂದಾಗಿ ನಾವು ಅನುಭವಿಸುತ್ತಿದ್ದ ಮುಗ್ಧಸುಖ ಇಲ್ಲವಾಗುತ್ತದೆ.

* * *

ಊರಲ್ಲಿದ್ದಾಗ, ಮನೆಗೆ ಬರುತ್ತಿದ್ದ ಪತ್ರಿಕೆಗಳಲ್ಲಿರುತ್ತಿದ್ದ ಕತೆಗಳು, ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳನ್ನು ಓದುವಾಗ ನನ್ನಲ್ಲಿ ಇರುತ್ತಿದ್ದ ಮುಗ್ಧತೆ ಈಗ ಇಲ್ಲವಾಗಿದೆ. ಅದಕ್ಕೂ ಮುಂಚೆ ಬಾಲಮಂಗಳ-ಚಂದಮಾಮ ಓದುತ್ತಿದ್ದಾಗಿನ ದಿನಗಳಂತೂ ಬಿಡಿ. ಡಿಂಗ, ಫಕ್ರು, ಲಂಬೋದರರು ನನ್ನ ಹೀರೋಗಳಾಗಿದ್ದರು. ಕಿಂಕಿಣಿ ಹಕ್ಕಿ ನನ್ನ ಫ್ರೆಂಡ್ ಆಗಿತ್ತು. ವಿಕ್ರಮಾದಿತ್ಯನ ರಾಜಧಿರಿಸು ಕಣ್ಮುಂದೆ ಬರುತ್ತಿತ್ತು. ಬೇತಾಳ ರಾತ್ರಿಯ ಕನಸಲ್ಲೂ ಬಂದು ಎಚ್ಚರಾಗಿಸುತ್ತಿತ್ತು. ಆಮೇಲೆ ಸ್ವಲ್ಪ ದೊಡ್ಡವನಾದಮೇಲೆ ಓದತೊಡಗಿದ ಕತೆಗಳೆಲ್ಲ ಸುಮ್ಮನೆ ಖುಶಿ ಕೊಡುತ್ತಿದ್ದವು. ಕಾದಂಬರಿಯೊಂದನ್ನು ಓದಿ ಅದರ ನಾಯಕ/ನಾಯಕಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ, ಹಾಗೆಯೇ ಆಗುವ ಕನಸು ಕಾಣುತ್ತಿದ್ದೆ. ಯಾವುದೋ ಪಾತ್ರವನ್ನು ನನ್ನೊಂದಿಗೆ ಹೋಲಿಸಿ ಖುಶಿಸಬಹುದಾದ-ದುಃಖಿಸಬಹುದಾದ ಸಾಧ್ಯತೆ ಇತ್ತು ಆಗ.

ಆದರೆ ದೊಡ್ಡವನಾಗುತ್ತ ಹೋದಂತೆ, ಮುಗ್ಧತೆಯನ್ನು ಕಳೆದುಕೊಳ್ಳುತ್ತ ಹೋದಂತೆ - ದಿನಗಳಲ್ಲಿದ್ದ ಸ್ವಾರಸ್ಯವೂ ಇಲ್ಲವಾಗತೊಡಗಿದೆ. ಬಹುಶಃ ಬದುಕೇ ಬೇರೆ ಕಲೆಯೇ ಬೇರೆ ಎಂಬ ಅರಿವೇ ಇದಕ್ಕೆ ಕಾರಣವಿರಬೇಕು. ಈಗ ಎಲ್ಲವೂ ಸ್ವಲ್ಪೇ ದಿನಕ್ಕೆ, ಸ್ವಲ್ಪೇ ಹೊತ್ತಿಗೆ ಬೇಸರ ಬರುತ್ತದೆ. ಬೆಂಗಳೂರು, ಕೆಲಸ, ಟ್ರಾಫಿಕ್ಕು, ಮಾಲುಗಳು, ಶಾಪಿಂಗು, ಪಾರ್ಟಿಗಳು, ಟಿವಿ, ಇಂಟರ್ನೆಟ್ಟು, ಮೊಬೈಲು, ಫ್ಲರ್ಟಿಂಗು, ಬ್ಲಾಗಿಂಗು, ಕಾರ್ಟೂನು, ಪಾರ್ನು.... ಎಲ್ಲವೂ ಬೇಸರ ಬಂದು - ಅಥವಾ ಕೇವಲ ಆ ಕ್ಷಣಕ್ಕೆ ಸುಖ ಕೊಡುವ, ಮುಗುಳ್ನಗೆ ಹೊಮ್ಮಿಸುವ ಸಾಧನಗಳಷ್ಟೇ ಆಗಿ ಉಳಿದುಬಿಟ್ಟಿರುವ ಈ ದಿನಗಳಲ್ಲಿ, ನನ್ನನ್ನು ಇನ್ನೂ ಆಶಾವಾದಿಯಾಗಿಯೇ ಉಳಿಸಲು ಇರುವ ಉಪಕರಗಳೇನು? ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದಂತೆ ಹೆಚ್ಚೆಚ್ಚು ಗೊಂದಲಗಳಿಗೀಡಾಗುತ್ತಿರುವ ನನ್ನನ್ನು ಕೂರಿಸಿಕೊಂಡು ಸಮಾಧಾನ ಹೇಳುವ ಪ್ರವಾದಿ ಹಿಮಾಲಯದ ಯಾವ ತಪ್ಪಲಲ್ಲಿದ್ದಾನೆ?

ಕನಿಷ್ಟ ನನ್ನ ವಿಷಯದಲ್ಲಿ ಇನ್ನೂ ಸಾಹಿತ್ಯ ಈ ಕೆಲಸವನ್ನು ಮಾಡುತ್ತಿದೆ. ಮೊದಲಿನ ಮುಗ್ಧತೆಯಿಂದಲ್ಲದಿದ್ದರೂ, ಈಗಲೂ ಕತೆ ಓದಿ ಕಣ್ತುಂಬಿಸಿಕೊಳ್ಳುತ್ತೇನೆ. ಕವಿತೆಯ ಕಾಡುವಿಕೆಗೆ ಮನಸೋಲುತ್ತೇನೆ. ಪ್ರಬಂಧದ ಗುಂಗನ್ನು ಮನಸಾ ಅನುಭವಿಸುತ್ತೇನೆ. ಪ್ರವಾಸಕಥನದ ನಾಯಕನೊಂದಿಗೆ ಗುಡ್ಡವೇರುತ್ತೇನೆ. ಲಹರಿಗಳ ಝರಿಯಲ್ಲಿ ತೇಲುತ್ತೇನೆ.

ಈ ನನ್ನ ಸಂತೋಷವಾದರೂ ಚಿರವಾಗಿರಲಿ. ಯಕ್ಷಿಣಿಗಾರನ ಇಂದ್ರಜಾಲ ಮೋಡಿ ಮಾಡುತ್ತಿರಲಿ ಎಂಬುದಷ್ಟೇ ಸಧ್ಯದ ಪ್ರಾರ್ಥನೆ.

* * *

ಬ್ಲಾಗು ಶುರುಮಾಡಿ ನಾಲ್ಕು ವರ್ಷ ಆಗಿದೆ! ಎಲ್ಲದರಂತೆ ಇದರಲ್ಲೂ ಉತ್ಸಾಹ ಕಮ್ಮಿಯಾಗಿದ್ದು ನಿಜ. ಈ ವರ್ಷ ನಾನು ಮಾಡಿದ ಒಟ್ಟು ಪೋಸ್ಟುಗಳ ಸಂಖ್ಯೆ ಕೇವಲ ಮೂವತ್ತು. ಅದರಲ್ಲಿ ಕವಿತೆಗಳೇ ಹನ್ನೊಂದು. ಈಗಲೂ ಪೆನ್ನು ಹಿಡಿದರೆ ಯಾಕೋ ಕವಿತೆಯೇ ಮೂಡುತ್ತದೆ. ಉಳಿದಂತೆ ಆರು ಪ್ರಬಂಧ, ಮೂರ್ನಾಲ್ಕು ಲಹರಿ, ಒಂದಷ್ಟು ಸಾಂದರ್ಭಿಕ ಬರಹಗಳನ್ನು ಬರೆದಿದ್ದೇನೆ. ಈ ವರ್ಷ ಒಂದೇ ಒಂದೂ ಕತೆ ಬರೆಯಲಾಗಲಿಲ್ಲ ಎಂಬುದು ಸಾಧನೆ! ಹಾಗೆಯೇ ಈ ವರ್ಷ ಒಂದೇ ಒಂದು ಚಾರಣವನ್ನೂ ಮಾಡಲಿಲ್ಲ ಎಂಬುದೂ! ‘ಹೊಳೆಬಾಗಿಲು’ -ನನ್ನ ಮೊದಲ ಪ್ರಬಂಧ ಸಂಕಲನ ಹೊರಬಂದಿದ್ದು, ಸುಮಾರು ಜನ ಅದನ್ನೋದಿ ‘ಚನಾಗಿದೆ’ ಅಂದದ್ದು ಖುಶಿ ಕೊಟ್ಟ ಸಂಗತಿ. ‘ಪ್ರಣತಿ’ಯಿಂದಲೂ ಈ ವರ್ಷ ಹೆಚ್ಚು ಕಾರ್ಯಕ್ರಮ ಮಾಡಲಾಗಲಿಲ್ಲ. ನನ್ನ-ಶ್ರೀನಿಧಿಯ ಪುಸ್ತಕ ಬಿಡುಗಡೆ, ನಂತರದ್ದೊಂದು ಗಮಕ ಕಾರ್ಯಕ್ರಮ ಬಿಟ್ಟರೆ, ಆಮೇಲೇನೂ ನಡೆದಿಲ್ಲ. ಕನಿಷ್ಟ ನಮ್ಮ ಟೀಮ್‍ಗೆ ತಿಂಗಳಿಗೊಮ್ಮೆ ಒಟ್ಟಿಗೆ ಸೇರಲೂ ಆಗುತ್ತಿಲ್ಲವೆಂಬುದು ಕಹಿಸತ್ಯ.

ಆದರೂ ದಕ್ಕಿರುವ ಗೆಳೆಯರ ಪ್ರೀತಿ ಹಾಗೆಯೇ ಇದೆ ಎಂಬುದೊಂದು ಸಮಾಧಾನ. ಸಿಗುತ್ತಿರುವ ಹೊಸ ಗೆಳೆಯರು ಮತ್ತು, ನಾಳೆ ಏನಾದರೂ ಆಗಿಬಿಡಬಹುದೇನೋ ಎಂಬ ಕ್ಷೀಣ ಆಸೆಯೊಂದಿಗೆ ಬದುಕು ಮುಂದುವರೆದಿದೆ. ಬಿರುಬಿಸಿಲಿನ ದಿನಗಳಲ್ಲೇ ಸಂಜೆಹೊತ್ತಿಗೊಂದು ಸಣ್ಣಮಳೆ, ಕೆಲವೊಮ್ಮೆ ಗಾಳಿ - ಬೀಳುವ ಮರಗಳು, ಗುಡುಗಿಗೆ ನಡುಗುವ - ಮಿಂಚಿಗೆ ಹೊಳೆಯುವ ಭೂಮಿ. ತೇಲಿ ಬರುವ ಎಂಡಿ ಪಲ್ಲವಿ ಹಾಡು, ನೆನಪಾಗುವ ಜಯಂತ ಕಾಯ್ಕಿಣಿ ಕತೆ, ಬರೆಯಲು ಬೇಡುವ ಕವಿತೆ.

ಬದುಕು ಸಾಗಿದೆ. ನಿಮ್ಮ ಪ್ರೀತಿಗೆ ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ದಗಳು ಇಲ್ಲವಾಗಿದೆ. ಥ್ಯಾಂಕ್ಯೂ. :-)

Monday, April 19, 2010

ಗೋಕುಲ ವಿರಹ

ರಾತ್ರಿ ಅಂಥಾ ಮಳೆ ಬಂದಿತ್ತು ಅಂತ
ಗೊತ್ತಾಗಿದ್ದು ಬೆಳಗ್ಗೆ ಎದ್ದಮೇಲೇ.

ನಂಬಲಿಲ್ಲ ನಾನು,
ಚೂರೂ
ಒದ್ದೆಯಾಗಿರಲಿಲ್ಲವಲ್ಲ ನೀನು
ನಡೆದು ಬರುವಾಗ ತಡರಾತ್ರಿ
ಕನಸಿನಲ್ಲಿ?

ನೆಂದಿದ್ದರೆ, ಮೆತ್ತನೆ ವಸ್ತ್ರದಲ್ಲಿ
ನಿನ್ನ ತಲೆ ಒರೆಸಿ
ಗರಿಗರಿ ಷರಾಯಿ ತೊಡಿಸಿ
ಬೆಚ್ಚನೆ ಹಾಲು ಕುಡಿಸಿ
ಅಂತಃಪುರದ ಸೋಪಾನದಲ್ಲಿ
ರಜಾಯಿ ಸಮೇತ ಬಳಸಿ
ತಟ್ಟುತ್ತಿದ್ದೆ ಚುಕ್ಕು.

ಆದರೆ, ಬಂದ ನೀನು
ಒದ್ದೆಯಾಗಿರಲೇ ಇಲ್ಲವಲ್ಲ..?
ಹಾಗಾದರೆ ಗಂಧವತೀ ಭೂಮಿ
ಸುಳ್ಳು ಹೇಳುತಿದೆಯೇ?
ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?
ಭವಂತಿ ಅಂಗಳದಲ್ಲಿ ನೀರು ಹೇಗೆ?

ಎಚ್ಚರಾದಾಕ್ಷಣ ಪಕ್ಕದಲ್ಲಿ ತಡವಿ
ನೀನಿಲ್ಲದ್ದು ತಿಳಿದು ಬಾಗಿಲಿಗೆ ಓಡೋಡಿ ಬಂದು
ಎಲ್ಲಿ ಹೋದ ನನ್ನಿನಿಯ ಎಲ್ಲಿ ಹೋದ ಕಾಂತ
ಅಂತ ಅರಮನೆಯನ್ನೆಲ್ಲ ಹುಚ್ಚಿಯಂತೆ ಹುಡುಕುವಾಗ
ಸಖಿಯರು ಬಂದು ಸಮಾಧಾನ ಮಾಡುತ್ತಾರೆ:
ಬಿಡು, ಬಿದ್ದದ್ದು ಎಂದಿನಂತೆ ಒಣ ಕನಸು ಅಂತ.

ಹೌದು, ಬಿಡದ ಭ್ರಮೆ ನನಗೆ..
ಕೃಷ್ಣ ಬಿಟ್ಟುಹೋದಮೇಲೆ
ಗೋಕುಲದಲ್ಲಿ ಮಳೆಯೆಲ್ಲಿ ಆಗಿದೆ?
ಈ ಒದ್ದೆ, ಈ ಒಸರು ಎಲ್ಲ
ರಾಧೆ ಮತ್ತವಳ ಸಖಿಯರ
ಕಣ್ಣೀರ ಹರಿವಿನ ಕುರುಹು
ಎಂಬುದು ಹೊಳೆಯದೆ ಹೋಯಿತಲ್ಲ..

Monday, April 12, 2010

ಬಿಸಿಲಿದು ಬರಿ ಬಿಸಿಲಲ್ಲವೋ..

ಬಿಸಿಲು.. ಹಂಸತೂಲಿಕಾತಲ್ಪದ ಮೇಲೆ ಮುದುಡಿ ಮಲಗಿದ್ದ ರಾಜಕುವರಿಯಂಥ ಚೆಲುವೆಯ ಕೆನ್ನೆ ಮೇಲೆ ಎಳೆಕಿರಣಗಳನ್ನು ಹೊಳೆಸಿ ಎಬ್ಬಿಸಿ ಬೆಳಗಾಗಿಸಿದ ಬಿಸಿಲು.. ಬೆಚ್ಚನೆಯ ಗೂಡಿನ ಮೆತ್ತನೆಯ ಹಾಸಿನ ಮೇಲೆ ಕಂದಮ್ಮಗಳೊಂದಿಗೆ ತಂಗಿದ್ದ ಅಮ್ಮ ಹಕ್ಕಿಗೆ ಕಾಳು ತರುವ ನೆನಪು ತರಿಸಿದ ಬಿಸಿಲು.. ರಾತ್ರಿಯಿಡೀ ಕತ್ತು ತಿರುಗಿಸಿ ತಿರುಗಿಸಿ ದಣಿದಿದ್ದ ಮುದಿ ಗೂಬೆ ಹಕ್ಕಿಗೆ ಬೆಳಗಾದ ಸುದ್ದಿ ಹೇಳಿ ವಿರಾಮ ಒದಗಿಸಿದ ಬಿಸಿಲು.. ಪ್ರತಿದಿನ ಬರುವ ಬಿಸಿಲು. ಪ್ರತಿ ರಾತ್ರಿಗೆ ಇತಿಶ್ರೀ ಹಾಡುವ ಬಿಸಿಲು. ಪ್ರತಿ ಪರ್ಣದಲ್ಲಿ ಪತ್ರಹರಿತ್ತು ತುಂಬುವ ಬಿಸಿಲು.

ಮಳೆಯ ಹಾಗಲ್ಲ ಬಿಸಿಲು. ಚಳಿಯ ಹಾಗಲ್ಲ ಬಿಸಿಲು. ಮಳೆ ಬಾರದೆ ಹೋಗಬಹುದು. ಚಳಿ ಬೀಳದೆ ಹೋಗಬಹುದು. ಆದರೆ ಬಿಸಿಲು ಹಾಗಲ್ಲ. ಅದು ಎಲ್ಲ ದಿನ ಬರುತ್ತದೆ ಕಿರಣಗಳನ್ನು ಹೊತ್ತು. ಅದು ಸೂರ್ಯನಿಷ್ಠೆ. ಕುವೆಂಪು ಹಾಡಿದಂತೆ: ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ..

ಸೂರ್ಯೋದಯಕ್ಕಿಂತ ಮೊದಲು ಅರುಣೋದಯ. ಮೂಡಲ ಮನೆಯ ಗೋಡೆಗೆ ಕೆಂಬಣ್ಣ ಬಳಿಯುತ್ತ ಬರುವ ಅವ.. ಆ ಕೆಂಪ ಹಿನ್ನೆಲೆಯಲ್ಲಿ ಗಿಳಿವಿಂಡು ಹಾರುತ್ತ ಹೋದಂತೆ, ತಾನ್ ಮೇಲೇರಿ ಬರುತ್ತಾನೆ ರವಿ.. ದಿನವರಳಿದ ಜಗದ ತುಂಬ ಅವಸರ ಈಗ. ಎಲ್ಲರಿಗು ತರಾತುರಿ. ಪೇಪರ್ ಹುಡುಗರು, ಹಾಲಿನ ಹುಡುಗರು, ಹೂವಿನ ಹುಡುಗಿಯರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳದಂತೆ ಕಾಯುತ್ತದೆ ಬಿಸಿಲು. ಪಾರ್ಕಿನ ಗಾರ್ಡುಗಳು ಜಾಗಿಂಗ್‌ಗೆ ಬರುವ ದಪ್ಪ ಮನುಷ್ಯರನ್ನು ಆಕಳಿಸುತ್ತ ಒಳಬಿಟ್ಟುಕೊಳ್ಳುವಾಗ ಅವರ ಬಾಯೊಳಗೂ ಪ್ರವೇಶಿಸುತ್ತದೆ ಬಿಸಿಲು. ದೊಡ್ಡ ಅಪಾರ್ಟ್‌ಮೆಂಟ್ ಬಿಲ್ಡಿಂಗಿನ ಬೇಸ್‌ಮೆಂಟ್ ಫ್ಲೋರಿನ ಕಾರ್ ಗರಾಜಿನಲ್ಲಿ ಮಲಗಿದ್ದ ಸೆಕ್ಯುರಿಟಿಯವನ ಮೈಮೇಲೂ ಬಿದ್ದು ಅವನನ್ನೂ ಎಚ್ಚರಿಸುತ್ತದೆ ಬಿಸಿಲು. ಕೋಲು ಹಿಡಿದ ಗೊಲ್ಲ ಕೂಗುತ್ತ ಹೋಗುತ್ತಾನೆ ಹಳ್ಳಿಯ ಮನೆ ಮನೆ ಮುಂದೆ: ದನ ಹೊಡಿರೋ...

ದನದ ಮಂದೆ ಬೆಟ್ಟದ ಹುಲ್ಲುಗಾವಲಿನತ್ತ ಸಾಗುತ್ತ ಸಾಗುತ್ತ ಹೋದಹಾಗೆ ಬಿಸಿಲು ಏರುತ್ತ ಏರುತ್ತ ಹೋಗುತ್ತದೆ. ಸೂರ್ಯ ಮೇಲೇರಿದಷ್ಟೂ ಬಿಸಿಲಿನ ಪ್ರಖರತೆ ಹೆಚ್ಚು. ಅಮ್ಮ ಈಗ ಸಂಡಿಗೆ ಹಚ್ಚಿದ ಚಾಪೆಯನ್ನು ಅಂಗಳದಲ್ಲಿ ತಂದು ಹಾಸುತ್ತಿದ್ದಾಳೆ. ತೊಳೆದ ಬಟ್ಟೆಗಳನ್ನು ತಂದು ಟೆರೇಸಿನಲ್ಲಿ ಒಣಗಿಸುತ್ತಿದ್ದಾಳೆ ಕೆಲಸದವಳು. ತನ್ನ ಕ್ಯಾಬಿನ್ನಿನ ಎ.ಸಿ. ಆನ್ ಮಾಡುವಂತೆ ಹೇಳುತ್ತಿದ್ದಾನೆ ಬಾಸ್ ಆಫೀಸ್ ಬಾಯ್‌ಗೆ. "ಅರೆ, ಇದೇನಣ್ಣ ಬಿಸಿಲು ಹಿಂಗೆ ಏರ್ತಿದೆ?" ಕೇಳುತ್ತಾನೆ ದಾರಿಹೋಕ ಎಳನೀರಿನವನಿಗೆ. ದೊಡ್ಡ ರಾಶಿಯಿಂದ ಸರೀ ಸೀಯಾಳ ಹುಡುಕಿ ತೆಗೆಯುತ್ತ ಉತ್ತರಿಸುತ್ತಾನೆ ಎಳನೀರಿನವ: "ಬೇಸಿಗೆ ಅಲ್ವೇನಣ್ಣೋ.."

ಬಿಸಿಲಿಗೆ ಬೇಸಗೆಯಲ್ಲಿ ಹಬ್ಬ. ಎಲ್ಲರೂ ತನಗೆ ಹೆದರುವವರೇ! ಮೀಸೆ ತಿರುವುತ್ತಾನೆ ಸೂರ್ಯ. ಆತ ವರ್ಷ, ಶರದ್, ಹೇಮಂತ, ಶಿಶಿರ -ಅಂತ ಹೆಚ್ಚುಕಮ್ಮಿ ನಾಲ್ಕು ಋತು ಕಾದಿದ್ದಾನೆ. ಇದೀಗ ತನ್ನ ಮಹಿಮೆಯನ್ನು ತೋರಿಸುವ ಸಮಯ. "ಈ ಸಲ ಮಳೆ ಸರಿಯಾಗಿ ಆಗ್ಲೇ ಇಲ್ಲ", "ಯಾಕೋಪ್ಪ, ಈ ವರ್ಷ ಚಳೀನೇ ಬೀಳ್ಲಿಲ್ಲ" ಇತ್ಯಾದಿ ದೂರುಗಳು ಅವನಿಗೂ ಕೇಳಿಸಿವೆ. ಹಾಗಂತ ಆತ ಹಿಂಜರಿದು ಕೂತಾನೆಯೇ? ಇಲ್ಲ.. ಮಳೆಗಾಲದಲ್ಲಿ ಮಳೆ ಬರಲಿ ಬಾರದಿರಲಿ, ಚಳಿಗಾಲದಲ್ಲಿ ಚಳಿ ಬೀಳಲಿ ಬೀಳದಿರಲಿ; ಆದರೆ ಬೇಸಗೆಯಲ್ಲಿ ಬಿಸಿಲು ಮಾತ್ರ ಇರಲೇಬೇಕು. ಅದು ಸೂರ್ಯನಿಷ್ಠೆ!

ವಾಚು ನೋಡಿಕೊಳ್ಳುತ್ತಿರುವ ಸೂರ್ಯ, ಗಂಟೆ ಹನ್ನೆರಡು ದಾಟಿದ್ದೇ ಈಗ ಸೀದ ನೆತ್ತಿಗೆ ಬಂದಿದ್ದಾನೆ. ಕಟ್ಟಿಗೆ ಒಡೆಯುತ್ತಿರುವ ಆಳಿನ ಬರಿಮೈಯಿಂದ ಅದೇನದು ಹಾಗೆ ದಂಡಿದಂಡಿ ಇಳಿಯುತ್ತಿರುವುದು? ಬಸ್ಸಿಗಾಗಿ ಗಂಟೆಯಿಂದ ಕಾಯುತ್ತಿರುವ ಗೃಹಿಣಿ ಅದೇನದು ನಿಮಿಷಕ್ಕೊಮ್ಮೆ ಕರ್ಚೀಫಿನಿಂದ ಒರೆಸಿಕೊಳ್ಳುತ್ತಿರುವುದು? ಬೈಕಿನಲ್ಲಿ ಊರೆಲ್ಲ ಸುತ್ತಿದ ಸೇಲ್ಸ್‌ಬಾಯ್‌ನ ಅಂಗಿಯೇಕೆ ಹಾಗೆ ಒದ್ದೆಮುದ್ದೆಯಾಗಿದೆ? ಎಲ್ಲಕ್ಕು ಉತ್ತರ ಬೆವರು! ಎಲ್ಲಕ್ಕು ಕಾರಣ ಅಗೋ, ಅಲ್ಲಿ ನೆತ್ತಿಯಲ್ಲಿ ಉರಿಯುತ್ತಿರುವ ಬೆಂಕಿಯುಂಡೆ. ಕಣ್ಬಿಟ್ಟು ನೋಡಲೂ ಆಗದಷ್ಟು ಪ್ರಜ್ವಲತೆ.

ಜ್ಯೂಸ್ ಅಂಗಡಿಯವನ ಮಿಕ್ಸರುಗಳಿಗೀಗ ಬಿಡುವೇ ಇಲ್ಲ. ಒಂದಾದ ತಕ್ಷಣ ಮತ್ತೊಂದು ಜಾರ್ ತೊಳೆದು, ಕತ್ತರಿಸಿದ ಹಣ್ಣು ಹಾಕಿ ಗುರ್‌ಗುಡಿಸುತ್ತಾರೆ ಹುಡುಗರು. ಐಸ್‌ಕ್ಯಾಂಡಿಯವನ ನೀಲಿಡಬ್ಬಿ ನೋಡನೋಡುತ್ತಲೇ ಖಾಲಿಯಾಗಿದೆ. ರಸ್ತೆಬದಿಯಲ್ಲಿ ಹಾಕಿಕೊಂಡಿರುವ ಕಲ್ಲಂಗಡಿ ರಾಶಿ ಮುಂದೆ ಜನವೋ ಜನ. ನಂದಿನಿ ಕೌಂಟರಿನವನು ನಿನ್ನೆಯೇ ಹೇಳಿ ತರಿಸಿದ್ದಾನೆ ನೂರು ಪ್ಯಾಕ್ ಎಕ್ಸ್‌ಟ್ರಾ ಮಸಾಲಮಜ್ಜಿಗೆ. "ಕೋಲ್ಡ್ ಬಿಸ್ಲೇರಿ ಖಾಲಿಯಾಗಿದೆ" ಅಂದಿದ್ದಕ್ಕೆ "ಇಟ್ಸೋಕೆ. ವಾರ್ಮೇ ಕೊಡಿ" ಅಂತ ಇಸಕೊಂಡು, ಅಲ್ಲೇ ಬಾಟಲಿಯ ಮುಚ್ಚಳವನ್ನು ಕರಕರನೆ ತಿರುಗಿಸಿ ತೆರೆದು ಕುಡಿಯುತ್ತಿದ್ದಾನೆ ಗ್ರಾಹಕ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಟೈಮ್‌ಔಟಿನಲ್ಲಿ ಸ್ಲೈಸು, ಮಾಜಾಗಳನ್ನು ‘ಸರ್ ಉಠಾಕೆ’ ಕುಡಿಯುತ್ತಿದ್ದಾರೆ ಕ್ರೀಡಾಪಟುಗಳು. ಆದರೂ ಹಿಂಗುತ್ತಿಲ್ಲವಲ್ಲ ದಾಹ, ಇದೆಂತಹ ಬಿಸಿಲು..

ಪಾರ್ಕಿನಲ್ಲಿ ಚಿಮ್ಮುತ್ತಿರುವ ಕಾರಂಜಿಯಲ್ಲಿ ರೆಕ್ಕೆಗಳನ್ನು ಫಡಫಡಿಸುತ್ತ ಮೀಯುತ್ತಿದೆ ಯಾವುದೋ ಒಂದು ಹಕ್ಕಿ. ಆ ತುಂತುರಿಂದ ಹಾದ ಬೆಳಕು ಪಕ್ಕದ ಮರದ ಗೆಲ್ಲುಗಳ ಮೇಲೆ ಮೂಡಿಸಿರುವ ಸಣ್ಣ ಕಾಮನಬಿಲ್ಲು ಯಾರ ಕಣ್ಣಿಗೂ ಬೀಳದೆಹೋಗುತ್ತಿದೆ. ಮಕ್ಕಳೆಲ್ಲ ಹಾರಿಕೊಂಡಿದ್ದಾರೆ ಈಜುಕೊಳದಲ್ಲಿ. ಬಿಂದಿಗೆ ಬಿಂದಿಗೆ ತಣ್ಣೀರನ್ನು ಮೈಮೇಲೆ ಹೊಯ್ದುಕೊಳ್ಳುತ್ತ ಕುಣಿದಾಡುತ್ತಿದ್ದಾನೆ ರಜೆಯ ಮಜದಲ್ಲಿರುವ ಯುವಕ. ಕಾಗೆ ಹಾರಿಸಲು ಬಂದಿದ್ದ ಗೃಹಿಣಿ ಒಂದೆರಡು ಹಪ್ಪಳ ಮುಟ್ಟಿನೋಡಿ ಇವತ್ತು ಸಂಜೆಯೇ ತೆಗೆಯಬಹುದು ಅಂತ ತೀರ್ಮಾನಿಸಿದ್ದಾಳೆ. ಕತ್ತಲ ಒಳಮನೆಯಲ್ಲೀಗ ನೆಲದಿಂದ ಸೂರಿನ ಗವಾಕ್ಷಿಯವರೆಗೆ ಒಂದು ಬೆಳಕಕೋಲು ನೆಟ್ಟುನಿಂತಿದೆ. ಸ್ನಾನ ಮಾಡಿ ಮಲಗಿಸಿದ್ದ ಹಸಿಗೂಸಿಗೆ ಎಚ್ಚರಾಗಿ ಅಂಬೆ ಹರಿದುಕೊಂಡು ಬಂದು ಈ ಬಿಸಿಲಕೋಲನ್ನು ಕೈಚಾಚಿ ಅಚ್ಚರಿಯಿಂದ ಮುಟ್ಟುತ್ತಿದೆ. ಬತ್ತುತ್ತಿರುವ ಈ ನದಿಯಿಂದ ಬೇರೆ ದೊಡ್ಡ ನದಿಗೆ ಆದಷ್ಟು ಬೇಗ ಸೇರಿಕೊಳ್ಳುವ ತವಕದಲ್ಲಿ ಈಜುತ್ತಿದೆ ಒಂದು ಒಂಟಿಮೀನು. ವಿಧಾನಮಂಡಳದ ಕಲಾಪದ ನಡುವೆಯೇ ದಣಿವಿಗೆ ನಿದ್ರೆ ಹೋಗಿದ್ದಾರೆ ಯಾರೋ ಸಚಿವರು. ಇದೇ ಅವಕಾಶ ನೋಡಿ ಅವರ ಫೋಟೋ ತೆಗೆಯುತ್ತಿದ್ದಾನೆ ಫೋಟೋ ಜರ್ನಲಿಸ್ಟ್.

ಗಂಟೆಯೀಗ ಮೂರಾಗಿದೆ. ಪಶ್ಚಿಮದತ್ತ ಜಾರಲೋ ಬೇಡವೋ ಎಂದು ಯೋಚಿಸುತ್ತಿರುವ ಸೂರ್ಯನ ಬ್ಯಾಟಿಂಗ್ ಇನ್ನೂ ಬಿರುಸಿನಿಂದಲೇ ಸಾಗಿದೆ. ಗೊಲ್ಲರ ಹುಡುಗ ಈಗ ದನಕರುಗಳನ್ನೆಲ್ಲ ತಪ್ಪಲಲ್ಲಿ ಮೇಯಲು ಬಿಟ್ಟು ತಾನೊಂದು ಮರದ ತಣ್ಣೆಳಲ್ಲಿ ಮಲಗಿ ನಿದ್ದೆ ಹೋಗಿದ್ದಾನೆ. ಇಂದಾದರೂ ಮಳೆ ಬಂದೀತೆ ಎಂದು ಮುಗಿಲಿನತ್ತ ಕೈ ಅಡ್ಡ ಹಿಡಿದು ತಲೆಯಿತ್ತಿ ನೋಡುತ್ತಿದ್ದಾನೆ ಉತ್ತರ ಕರ್ನಾಟಕದ ರೈತ. ಊಹುಂ, ಮೋಡಗಳ ಸುಳಿವೇ ಇಲ್ಲ. ಮರದ ಒಂದೆಲೆಯೂ ಅಲ್ಲಾಡುತ್ತಿಲ್ಲ. ಮದುವೆಗೆ ಹೆದರಿದ ಕಪ್ಪೆಗಳು ಎಲ್ಲೋ ಕಲ್ಲಸಂದಿಯಲ್ಲಿ ಅಡಗಿ ಕೂತಿವೆ. ಆಫೀಸಿನಲ್ಲಿರುವವರಿಗೂ ತೂಕಡಿಕೆ ಬರುತ್ತಿದೆ. ಯಾಕೋ ಸುಮ್ಮನೆ ಸುಸ್ತು. ಮಧ್ಯಾಹ್ನ ಊಟ ಮಾಡಲೂ ಸೇರಲಿಲ್ಲ. ತುಂಬಿ ತಂದಿಟ್ಟುಕೊಂಡ ಬಾಟಲಿಯಲ್ಲಿನ ನೀರು ಇದ್ದಲ್ಲೇ ಬಿಸಿಯಾಗಿದೆ. ದೇವಸ್ಥಾನದ ಕಲ್ಲು ಹಾಸಿನಮೇಲೆ ಬರಿಗಾಲಲ್ಲಿ ನಡೆಯುತ್ತಿರುವ ದಂಪತಿಗಳ ಕಾಲು ಚುರುಕ್ ಎಂದಿದೆ. ಭಟ್ಟರು ಪರ್ಜನ್ಯ ಮಾಡಿಸುವ ಯೋಚನೆ ಮಾಡುತ್ತಿದ್ದಾರೆ. ಸ್ಕೂಲ್ ಮುಗಿಸಿ ಹೊರಟ ಹುಡುಗನ ಸೈಕಲ್ಲಿನ ಚಕ್ರಕ್ಕೆಲ್ಲ ಟಾರು ರಸ್ತೆಯ ಡಾಂಬರು ಕರಗಿ ಅಂಟಿದೆ. ರಸ್ತೆ ಬದಿಯಲ್ಲಿ ನಿಂತು ಬಗ್ಗಿ ನೋಡಿದರೆ ದೂರ, ಭುವಿಯೊಳಗಿನ ನೀರೇ ಆವಿಯಾಗುತ್ತಿರುವಂತೆ ಹಬೆಯಾಡುವುದು ಕಾಣಿಸುತ್ತದೆ.

ಸಂಜೆಯಾಗುವ ಲಕ್ಷಣಗಳು ಈಗ.. ಊಹುಂ, ಸೂರ್ಯನ ಪ್ರತಾಪವಿನ್ನೂ ಮುಗಿದಿಲ್ಲ. ಒಂದು ನಕ್ಷತ್ರದ ಒಡಲಲ್ಲಿ ಅದೆಷ್ಟು ಬೆಂಕಿ ಹಾಗಾದರೆ? ಅಳಿದುಳಿದ ಕಿರಣಗಳನ್ನೆಲ್ಲ ಬೀಸುತ್ತಿದ್ದಾನೆ ಸೂರ್ಯ.. ಉದುರಿದ ಎಲೆಗಳ ಮೇಲೆ ಭಾರ ಹೆಜ್ಜೆಗಳನ್ನಿಡುತ್ತ ನಡೆದಿರುವ ಮುದುಕನೇ, ಪಡುವಣ ಬಾನಂಚಿನಲ್ಲಿ ಹೊಳೆಯುತ್ತಿರುವ ದಿನಕರನನ್ನು ನೋಡದಿರು.. ಮೊದಲೇ ಮಂಜಾಗಿರುವ ನಿನ್ನ ಕಣ್ಣು ಸುಟ್ಟುಹೋದೀತು. ಒಂದು ಬೇಸಗೆಯ ಈ ಒಂದು ದಿನ ಅದೆಷ್ಟು ನೀರು ಕುಡಿದರು ಜನ? ಎಷ್ಟು ಬೆವರು ಹರಿಸಿದರು? ಅವರು ಹಾಕಿದ ಶಾಪಗಳೆಲ್ಲ ಸೂರ್ಯನ ಯಜ್ಞಕುಂಡಕ್ಕೆ ತುಪ್ಪವಾಯಿತೆ? ಅವರು ಬಿಟ್ಟ ನಿಟ್ಟುಸಿರೆಲ್ಲ ಉರಿವ ಬೆಂಕಿಗೆ ಧೂಪವಾಯಿತೆ? ಪ್ರಶ್ನೆಗಳು ಮುಗಿಯುವ ಮೊದಲೇ ಮರೆಯಾಗುತ್ತಿದ್ದಾನೆ ಸೂರ್ಯ..

ಕತ್ತಲಾವರಿಸಿದರೂ ಸೆಖೆಯೇನು ಕಮ್ಮಿಯಾಗಿಲ್ಲ.. ಕೊಟ್ಟಿಗೆಗೆ ಮರಳಿದ ಜಾನುವಾರು ಬಕೀಟುಗಟ್ಟಲೆ ನೀರು ಕುಡಿಯುತ್ತಿವೆ. ಕೆಲಸ ಮುಗಿಸಿ ಮನೆಗೆ ಬಂದವರೆಲ್ಲ ಬೆವರ ವಾಸನೆಯ ಬಟ್ಟೆ ಬಿಚ್ಚೊಗೆದು ಫ್ಯಾನಿನ ಕೆಳಗೆ ಅಂಗಾತ ಬಿದ್ದಿದ್ದಾರೆ. ಇಂದು ರಾತ್ರಿಯ ಊಟಕ್ಕೆ ನೀರುಮಜ್ಜಿಗೆ ಸಾಕು. ಹೆಚ್ಚೆಂದರೆ ಒಂದು ಹುಣಸೇಹಣ್ಣಿನ ಗೊಜ್ಜು. ಬಿಸಿಬಿಸಿಯ ಸಾರು-ಹುಳಿ ಯಾರಿಗೂ ಬೇಡ. ಜ್ವರ ಬರುತ್ತೆ ಅಂತ ಹೆದರಿಸಿದರೂ ಕೇಳುತ್ತಿಲ್ಲ, ಮಗಳು ಫ್ರಿಜ್ ವಾಟರೇ ಬೇಕೆಂದು ಹಟ ಮಾಡುತ್ತಿದ್ದಾಳೆ. ರಸ್ತೆಯ ಮೇಲೆ ಕಾರ್ಪೋರೇಶನ್ ನೀರಿಗೆ ಕಾದ ಸಾಲು ಕೊಡಗಳು. ಪಕ್ಕದ ಮನೆಯ ಬ್ಯಾಚುಲರ್ ಹುಡುಗರು ಟೆರೇಸಿನ ಮೇಲೆ ಚಾಪೆ ಹಾಸಿ ಮಲಗುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಅಂತೆ, ಕರೆಂಟ್ ಹೋಯ್ತು. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಳೆ ಕೊಡಬೇಕಿರುವ ಲೆಕ್ಚರಿಗೆ ತಯಾರಾಗುತ್ತಿದ್ದ ಪ್ರೊಫೆಸರ್ ಉಫ್ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಸಿಗಾಳಿ ಬೀಸುತ್ತಿದ್ದ ಫ್ಯಾನೂ ಇಲ್ಲ ಈಗ. ನಿದ್ರೆ ಬಾರದೆ ಹೊರಳಾಡುತ್ತಿರುವ ಎಲ್ಲ ಜೀವಗಳ ತಪನೆ ಒಂದೇ: ಬೀಸಿಬರಬಾರದೆ ಒಂದು ಹೊಯ್ಲು ತಣ್ಣನೆ ಗಾಳಿ? ಇದ್ದಕ್ಕಿದ್ದಂತೆ ಸುರಿಯಲು ಶುರುವಿಡಬಾರದೇ ಒಂದು ಅಡ್ಡಮಳೆ?

ಊಹುಂ, ಬೇಸಗೆಯ ಬವಣೆಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮರುಮುಂಜಾನೆ ಮತ್ತೆ ಅದೇ ಹಾಳು ಸೂರ್ಯ ಹುಟ್ಟುತ್ತಿದ್ದಾನೆ. ಬಿದ್ದ ಇಬ್ಬನಿಯಿಂದ ಕೊಂಚ ತಣ್ಣಗಾಗಿದ್ದ ಭುವಿಯ ತಂಪು ಕಸಿಯಲು ಮತ್ತೆ ಬರುತ್ತಿದ್ದಾನೆ. ಇನ್ನೇನು, ಬಿಸಿಲ ಬಲೆ ಬೀಸಲಿದ್ದಾನೆ..

[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ]

Tuesday, April 06, 2010

ಬೆಳಕ ಹೆಜ್ಜೆಯನರಸಿ...

ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನನ್ನ ಕಥೆ ಓದಿ, ಅದು ಹೇಗೋ ವಿಳಾಸ ಪತ್ತೆ ಮಾಡಿ ಪತ್ರ ಬರೆದಿದ್ದ, ಸಿರಗುಪ್ಪದ ವಿ. ಹರಿನಾಥ ಬಾಬು ತಮ್ಮ ಚೊಚ್ಚಿಲ ಕವನ ಸಂಕಲನ 'ಬೆಳಕ ಹೆಜ್ಜೆಯನರಸಿ' ಕಳುಹಿಸಿಕೊಟ್ಟಿದ್ದಾರೆ. ಸಧ್ಯ ಗಂಗಾವತಿಯಲ್ಲಿ ಉಪ ಖಜಾನಧಿಕಾರಿಯಾಗಿರುವ ಬಾಬು ಅವರ ಕವಿತೆಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಲ್ಲ ಉತ್ತರ ಕರ್ನಾಟಕದ ಕವಿಗಳಂತೆ ಬಾಬು ಅವರ ಕವಿತೆಗಳಲ್ಲೂ ಬಿಸಿಲು, ಕರಿಮಣ್ಣು, ಅವ್ವ, ರೊಟ್ಟಿ, ಬಡತನ, ಹಟ್ಟಿ, ಹಸಿವು, ಜಾತಿ, ಜೀತಗಳಿವೆ. ರಾಜಕಾರಣಿಗಳ ಭ್ರಷ್ಟತೆಯೆಡೆಗಿನ ಪ್ರತಿಭಟನೆಯಿದೆ. ಮತ-ಧರ್ಮಗಳಂಥ ವಿಷಯಗಳ ಮುಂದೆ ಮೌಲ್ಯ ಕಳೆದುಕೊಳ್ಳುತ್ತಿರುವ ಮಾನವೀಯತೆಯ ಬಗ್ಗೆ ತುಡಿತವಿದೆ. ದೊಡ್ಡ ದೇಶಗಳು ಯುದ್ಧದಂಥ 'ಆಟ' ಆಡಿಸುವುದರಿಂದ ಆಗುವ ಹಾನಿಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನವಿದೆ.

"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.

ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.

ಅಮ್ಮ ಸುಟ್ಟ ರೊಟ್ಟಿ
  • ವಿ. ಹರಿನಾಥ ಬಾಬು

ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ
ನಮಗೆ ಪಂಚಪ್ರಾಣ

ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್ರಗಾದ
ಬಿಳಿ ಮೂರು ಕಲ್ಲು,
ಮೇಲೊಂದು ಕರ್ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು

ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಒರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನುಣ್ಣನೆಯ
ಮೂರ್ತಿ ಮಾಡಿದವಳು

ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಎದೆಯ ತುಡಿತಗಳ ಮಿಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು

ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯ
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು

ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಕಟ್ಟಿಗೆಯೊಟ್ಟಿಗೆ ಸುಟ್ಟು
ಹೊಗೆಯೊಳಗೆ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!

['ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.]