Friday, September 28, 2007

ದಾರದ ದಾರಿಯ ದೂರ

ರಾತ್ರಿಗೆ ಈಗ ಹನ್ನೆರಡರ ಜಾವ. ಒಂಟಿ ರೂಮಿನಲ್ಲಿ ಒಂಟಿ ನಾನು. ಒಂಟಿ ಹಾಸಿಗೆ. 'ಬಾ, ನನ್ನ ಮೇಲೆ ಮಲಗು' ಎಂದು ಸುತ್ತಿ ಸುತ್ತಿ ಕೂತಿರುವ ಅದು ಕರೆಯುತ್ತಿದೆ ಹತ್ತಿರದಿಂದ. ನನಗೋ ನಿದ್ರೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಈ 'ಯಯಾತಿ' ಎಂಬ ಹೆಸರಿನ ಪುಸ್ತಕವನ್ನು ಹಿಡಿದು ಕುಳಿತುಬಿಟ್ಟಿದ್ದೇನೆ. ಇದೇನು ಕಾದಂಬರಿಯೋ, ಕಥೆಯೋ, ಗ್ರಂಥವೋ ನನಗೆ ಹೆಸರು ಕೊಡಲು ಸಾಧ್ಯವಾಗುತ್ತಿಲ್ಲ. ಅಮರ ಪ್ರೇಮ ಕಾವ್ಯ ಎಂದರೆ ಸರಿಯಾಗಬಹುದೇನೋ. ಯಯಾತಿಯ ದುಃಖ, ಶಮಾಳ ಪ್ರೀತಿ, ಕಚನ ತತ್ವ, ದೇವಯಾನಿಯ ದುರುಳತನ... ಅಬ್ಬ, ಅದು ಹೇಗೆ ಬರೆದಿದ್ದಾರೆ ವಿ.ಎಸ್. ಖಾಂಡೇಕರ್! ಅದೆಷ್ಟು ಅದ್ಭುತವಾಗಿ ಕನ್ನಡಕ್ಕೆ ತಂದಿದ್ದಾರೆ ವಿ.ಎಂ. ಇನಾಂದಾರ್! ಅದರೊಳಗೇ ಮುಳುಮುಳುಗಿ ಹೋಗುತ್ತೇನೆ ನಾನು.. ಮುಳುಗಿನಲ್ಲೇ ತೇಲಿ ಮತ್ತೆಲ್ಲೋ ಏಳುತ್ತೇನೆ..

ದೂರದ ಚರ್ಚಿನಲ್ಲಿ ಘಂಟೆ ಹೊಡೆದ ಸದ್ದು. ಮೇನ್ ರೋಡಿನಲ್ಲಿ ಏರು ಹತ್ತುತ್ತಿರುವ ಲಾರಿಯ ಸದ್ದು. ಬಲಕಿವಿಯ ಕಡೆಯಿಂದ ಶುರುವಾಗಿ ಎಡಕಿವಿಯ ಕೊನೆಯಲ್ಲಿ ಮುಗಿದುಹೋದಂತೆ ಹಾದುಹೋದ ಯಮಾಹಾ ಬೈಕಿನ ರೊಂಯ್ ಸದ್ದು. ಯಯಾತಿಯ ಇನ್ನೂರಾ ಮೂವತ್ತೇಳನೇ ಪುಟದ ಮೇಲ್ಗಡೆ ಎಡತುದಿಯನ್ನು ಕಿವಿಯಂತೆ ಸಣ್ಣಗೆ ಮಡಿಚಿ ಗುರುತು ಮಾಡಿ ಮುಚ್ಚಿಟ್ಟು ನಾನು ಗೂಡಿನಿಂದ ಹೊರಬರುತ್ತೇನೆ.

ಆಕಾಶದ ಅಂಗಳದ ತುಂಬ ಯಾರೋ ಚುಕ್ಕಿಗಳನ್ನಿಟ್ಟು ಹೋಗಿದ್ದಾರೆ. ಯಾರದಿರಬಹುದು ಕೆಲಸ..? ದೂರದಲ್ಲಿ ಚಂದ್ರ ಕಾಣಿಸುತ್ತಾನೆ... ಪೋಲಿ, ಇವನದೇ ಕೆಲಸ ಇದು ಅಂದುಕೊಳ್ಳುತ್ತೇನೆ. ನನ್ನ ಕವಿಕಲ್ಪನೆಗೆ ಚಂದ್ರ ಮುಗುಳ್ನಗುತ್ತಾನೆ.

ತಣ್ಣನೆ ಟೆರೇಸು. ಒಂದು, ಎರಡು, ಮೂರು, ನಾಲ್ಕು ....ಐದನೇ ಹೆಜ್ಜೆ ಇಟ್ಟವನು, ಏನೋ ತಡೆದಂತಾಗಿ ಹಿಂದಡಿಯಿಡುತ್ತೇನೆ. ಏನೋ ತಡೆದಂತಾಯಿತು. ತಂತಿಯಂತಹುದು. ಅಥವಾ ಹಗ್ಗ. ಇನ್ನೆರೆಡು ಹೆಜ್ಜೆ ಹಿಂದಿಟ್ಟು ನಾನು ಕಣ್ಣನ್ನು ಕಿರಿದು ಮಾಡಿ ನೋಡುತ್ತೇನೆ. ಹೌದು, ಹಗ್ಗ. ಒಂದು ದಾರ. ಹೊಲಿಯಲು ಬಳಸುತ್ತಾರಲ್ಲ, ಅಂತಹ ಒಂದು ದಾರ. ನನ್ನ ಎದೆ ಮಟ್ಟದಲ್ಲಿ ಟೆರೇಸಿನಲ್ಲಿ ಅಡ್ಡ ಹೋಗಿದೆ. ನಾನು ಆಚೆ ದಾಟದಂತೆ, ಬೇಲಿಯಂತೆ, ಗಡಿರೇಖೆಯಂತೆ ನನ್ನನ್ನು ತಡೆದು ನಿಲ್ಲಿಸಿದೆ. ಬೆಳದಿಂಗಳ ಬೆಳಕಿಗೆ ಬೆಳ್ಳಗೆ ಹೊಳೆಯುತ್ತಿದೆ. ತಂಬೂರಿಯ ತಂತಿಯಂತೆ ನಾನದನ್ನು ಮೀಟುತ್ತೇನೆ. ಗಾಳಿಯಲ್ಲೊಮ್ಮೆ ತುಯ್ದಾಡುತ್ತದೆ ದಾರ. ಸಂಜೆ ಮನೆಗೆ ಬರುವಾಗ ಇರಲಿಲ್ಲವಲ್ಲ ಈ ದಾರ? ಈಗೆಲ್ಲಿಂದ ಬಂತು ಇದು? ಎಲ್ಲಿಗೆ ಹೋಗಿದೆ? ಯಾರು ಎಳೆದದ್ದು ಇದನ್ನು? ಯಾಕೆ ಎಳೆದದ್ದು?

ನನಗೆ ಏನೋ ನೆನಪಾದಂತಾಗುತ್ತದೆ. ಕ್ಷಣದಲ್ಲೇ ಆ ನೆನಪು ಸ್ಪಷ್ಟವಾಗುತ್ತದೆ. ಚಿಕ್ಕವನಿದ್ದಾಗ ನಾನೂ ಹೀಗೇ ದಾರ ಎಳೆದು ಆಟವಾಡುತ್ತಿದ್ದುದು... ನಾವು ಟೆಲಿಫೋನ್ ಆಟ ಆಡುತ್ತಿದ್ದೆವು. ಒಂದು ಟೂಥ್‍ಪೇಸ್ಟ್ ಡಬ್ಬಿಯನ್ನು ಮಧ್ಯದಲ್ಲಿ ಕತ್ತರಿಸಬೇಕು. ಈಗ ಎರಡು ಪುಟ್ಟ ಪುಟ್ಟ ಡಬ್ಬಿಗಳಾಗುತ್ತವಲ್ಲ, ಒಂದು ಊದ್ದ ದಾರ ತೆಗೆದುಕೊಂಡು ಒಂದು ತುದಿಯನ್ನು ಒಂದು ಡಬ್ಬಿಯ ತುದಿಗೆ ಕಟ್ಟುವುದು. ದಾರದ ಮತ್ತೊಂದು ತುದಿಯನ್ನು ಮತ್ತೊಂದು ಡಬ್ಬಿಯ ತುದಿಗೆ ಕಟ್ಟುವುದು. ಒಂದು ಡಬ್ಬಿಯನ್ನು ಒಬ್ಬರು ಹಿಡಿದುಕೊಂಡು ಇಲ್ಲೇ ನಿಲ್ಲುವುದು. ಮತ್ತೊಬ್ಬರು ದೂರ ದೂರ ಹೋಗುವುದು. ದೂರ ಹೋಗಿ ಸಣ್ಣಗೆ ಮಾತಾಡುವುದು. ಅದು ಈಚೆಗಿರುವವರಿಗೆ ದಾರದ ಮೂಲಕ ಹರಿದು ಬಂದು ಡಬ್ಬಿಯಲ್ಲಿ ಗುನುಗುಗುನುಗಾಗಿ ಕೇಳಿಸುತ್ತದೆ.

ಅಪ್ಪ ಹೇಳಿಕೊಟ್ಟದ್ದು ಅದನ್ನು ನನಗೆ. ಸಾಗರದಿಂದ ತಂದ ಹೊಸ ಕೋಲ್ಗೇಟ್ ಡಬ್ಬಿಯನ್ನು ಕತ್ತರಿಸಿ ನನಗವನು ಮಾಡಿಕೊಟ್ಟಿದ್ದ ಈ ಫೋನು. ಅವನು ಟೆಲಿಫೋನ್ ತಯಾರಿಸುವಾಗ ಪಕ್ಕದಲ್ಲಿ ಕೂತು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ ನಾನು. ತಯಾರಾದಮೇಲೆ ತಾನೊಂದು ತುದಿ ಹಿಡಿದು ಜಗುಲಿಯ ಮೇಲೆ ನಿಂತು ಮತ್ತೊಂದು ತುದಿಯನ್ನು ನನಗೆ ಕೊಟ್ಟು ದೂರಕ್ಕೆ ಹೋಗುವಂತೆ ಹೇಳಿದ. ನಾನು ಡಬ್ಬಿಯನ್ನು ಹಿಡಿದು ಅಂಗಳಕ್ಕೆ ಓಡಿದೆ. ದಾರ ಬರುವವರೆಗೂ ಹೋಗಿ, ದಾರ ಜಗ್ಗುವಂತಾದಾಗ ನನ್ನನ್ನು ಅಲ್ಲೇ ನಿಲ್ಲುವಂತೆ ಹೇಳಿದ ಅಪ್ಪ. 'ಫೋನ್ ಕಿವೀಲಿ ಇಟ್ಕೋ' ಎಂದ. ನಾನು ಕಿವಿಗೆ ಹಿಡಿದೆ. 'ಹಲೋ ಹಲೋ.. ಪಾಪು.. ಕೇಳ್ತಾ ಇದ್ದಾ..?' ಕೇಳಿದ. ಅಪ್ಪನ ಪಿಸುಮಾತು ದಾರದಲ್ಲಿ ಹರಿಹರಿದು ಬಂದು ಈ ಡಬ್ಬಿಯಲ್ಲಿ ಅಪ್ಪನೇ ಹತ್ತಿರ ನಿಂತು ಮಾತಾಡಿದಂತೆ ಕೇಳಿಸಿ ಏನೋ ಒಂಥರಾ ಭಯವಾದಂತಾಗಿ ನನಗೆ ರೋಮಾಂಚನ! 'ಹಲೋ ಹಲೋ.. ಕೇಳ್ತಾ ಇದ್ದಾ..? ನೀನೂ ಮಾತಾಡು..' ಅಪ್ಪ ಹೇಳುತ್ತಿದ್ದ. ನನಗೆ ಕೇಳಿಸುತ್ತಿತ್ತು. 'ಹಾಂ, ಕೇಳ್ತಾ ಇದ್ದು' ಎಂದೆ. 'ಇನ್ನೂ ಮಾತಾಡು..' ಎಂದ. ಆದರೆ ಅಪ್ಪನ ಜೊತೆ ಇನ್ನೂ ಏನು ಮಾತಾಡುವುದು ಅಂತಲೇ ನನಗೆ ಹೊಳೆಯಲಿಲ್ಲ. ಅಚಾನಕ್ಕಾಗಿ ಅಪ್ಪನ ಜೊತೆ, ಅದೂ ಫೋನಿನಲ್ಲಿ ಏನಂತ ಮಾತಾಡುವುದು? ನಾನು-ಅಪ್ಪ ಸಾಧಾರಣವಾಗಿ ಮಾತಾಡಿಕೊಳ್ಳುತ್ತಿದ್ದುದೇ ಕಮ್ಮಿ. ಅಂಥದರಲ್ಲಿ ಈಗ ಫೋನಿನಲ್ಲಿ ಏನು ಮಾತಾಡುವುದು? ಅಲ್ಲದೆ ನಾನು ಅಷ್ಟರೊಳಗೆ ಫೋನಿನಲ್ಲಿ ಮಾತಾಡಿರಲೇ ಇಲ್ಲ. ನಮ್ಮೂರಿನಲ್ಲಿ ಆಗ ಪಾಪಣ್ಣನ ಮನೆಯಲ್ಲಿ ಮಾತ್ರ ಫೋನಿತ್ತು. ವಿಪಿಟಿ ಫೋನು. ಡಾಕ್ಟ್ರ ಮನೆಯಲ್ಲೂ ಇತ್ತು ಅನ್ಸುತ್ತೆ. ನಾನು ಫೋನಿನಲ್ಲಿ ಮಾತಾಡಿರಲೇ ಇಲ್ಲ. ಪಾಪಣ್ಣನ ಮನೆಗೆ ಹೋದಾಗ ಯಾರಾದರೂ ಮಾತಾಡುತ್ತಿರುವುದನ್ನು ನೋಡಿದ್ದೆ ಅಷ್ಟೆ. ಅದು ಬಿಟ್ಟರೆ ಭಾನುವಾರದ ಸಿನಿಮಾಗಳಲ್ಲಿ ನೋಡಿದ್ದೆ. ನನಗಂತೂ ಅಪ್ಪನೊಟ್ಟಿಗೆ ಏನು ಮಾತಾಡುವುದು ಅಂತಲೇ ತಿಳಿಯದೆ, ತೀರಾ ಸಂಕೋಚವಾಗಿ ಸುಮ್ಮನೆ ನಿಂತುಬಿಟ್ಟಿದ್ದೆ.

ಇದೂ ಹಾಗೆಯೇ ಟೆಲಿಫೋನ್ ವ್ಯವಸ್ಥೆಯಾ? ದಾರದಗುಂಟ ನಾನು ಟೆರೇಸಿನ ತುದಿಗೆ ಬರುತ್ತೇನೆ. ನಮ್ಮ ಪಕ್ಕದ ಮನೆಯ ಟೆರೇಸಿನಿಂದ ಉದ್ಭಸಿದಂತೆ ಕಾಣಿಸುತ್ತದೆ ದಾರದ ತುದಿ. ಹೌದಾ? ಏನೋ, ಸರಿಯಾಗಿ ಕಾಣುತ್ತಿಲ್ಲ. ಇವತ್ತು ಹುಣ್ಣಿಮೆಯಾಗಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತೇನೋ. ಈಗಿನ ಕಾಲದಲ್ಲೂ ಹೀಗೆ ದಾರ ಎಳೆದು ಫೋನ್ ಮಾಡಿಕೊಂಡು ಆಟವಾಡುವ ಮಕ್ಕಳಿದ್ದಾರಾ? ಅದೂ ಬೆಂಗಳೂರಿನಲ್ಲಿ? ಚಿಕ್ಕ ಹುಡುಗರ ಕೈಯಲ್ಲೂ ಮೊಬೈಲುಗಳಿರುವಾಗ ಈ ದಾರ ಎಳೆಯುವ ರಿಸ್ಕು ಯಾರು ತಾನೆ ತೆಗೆದುಕೊಂಡಾರು ಎಂದೆನಿಸಿ ನಗು ಬಂತು.

ಹಾಗಾದರೆ ಏನಿದು ದಾರ? ಹಾಂ, ಹೊಳೆಯಿತು. ಇದು ಗಾಳಿಪಟದ ದಾರ. ಹೌದು, ಸಂಜೆ ಹೊತ್ತಿಗೆ ಪಕ್ಕದ ಮನೆ ಟೆರೇಸಿನ ಮೇಲೆ ನಿಂತು ಇಬ್ಬರು ಹುಡುಗರು ಗಾಳಿಪಟ ಹಾರಿಸುತ್ತಿದ್ದರು. ಬಹುಶಃ ಗಾಳಿಪಟ ಯಾವುದೋ ಮರಕ್ಕೋ, ಟವರ್ರಿಗೋ, ದೊಡ್ಡ ಕಟ್ಟಡದ ತುದಿಗೋ ಸಿಕ್ಕಿಕೊಂಡಿರಬೇಕು. ಕತ್ತಲಾದ್ದರಿಂದ ದಾರವನ್ನು ಹಾಗೇ ಬಿಟ್ಟು ಹೋಗಿದ್ದಾರೆ ಹುಡುಗರು.

ಆದರೂ ನನಗೇಕೋ ಅನುಮಾನ.. ಇದು ಗಾಳಿಪಟದ ದಾರವೇ ಹೌದೇ? ಅಥವಾ ನಾನು ಆಗ ಅಂದುಕೊಂಡಂತೆ ಟೆಲಿಫೋನ್ ಲೈನೇ? ಆ ಕಡೆಯ ಮನೆಯಲ್ಲಿ ಒಬ್ಬ ಹುಡುಗ, ಈ ಕಡೆಯ ಮನೆಯಲ್ಲಿ ಒಬ್ಬ ಹುಡುಗಿ ಇರಬಹುದೇ? ಅವರಿಬ್ಬರೂ ಪ್ರೇಮಿಗಳೇ? ರಾತ್ರಿಹೊತ್ತು, ಎಲ್ಲರೂ ಮಲಗಿರಲು, ಇವರಿಬ್ಬರೇ ಟೆರೇಸಿಗೆ ಬಂದು, ಒಬ್ಬರನ್ನೊಬ್ಬರು ದೂರದೂರದಿಂದ ನೋಡಿಕೊಳ್ಳುತ್ತ, ಈ ಫೋನಿನ ಮೂಲಕ ಪಿಸುಮಾತನಾಡಿಕೊಳ್ಳುತ್ತ, ಬೆಳದಿಂಗಳು ಚೆಲ್ಲಿದ ಟೆರೇಸಿನಮೇಲೆ ನಡೆದಾಡುತ್ತಿರುತ್ತಾರೆಯೇ? ಮಾತು ಸಾಕಾಗಿ, ಕಣ್ಣು ನಿದ್ರೆ ಬಯಸಿ, ಕೆಳಗಿಳಿದುಹೋಗುವ ಮುನ್ನ ಇಬ್ಬರೂ ಫ್ಲೈಯಿಂಗ್ ಕಿಸ್ ರವಾನಿಸಿಕೊಂಡು, ಗುಡ್‍ನೈಟ್ ಹೇಳಿ... ಇಲ್ಲ, ನಾನು ಇಷ್ಟೆಲ್ಲ ಕಲ್ಪನೆ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಯೋಚಿಸುತ್ತಿದ್ದೇನೆ. ತಪ್ಪು ಸುಶ್, ತಪ್ಪು.

ಗಾಳಿಪಟ ಏನಕ್ಕೆ ಸಿಲುಕಿಕೊಂಡಿದೆ? ನಾನು ಟೆರೇಸಿನ ಆಚೆ ತುದಿಗೆ ನಡೆಯುತ್ತೇನೆ. ದಾರದ ಮೈಯನ್ನೇ, ಕಣ್ಣು ನಿಲುಕುವವರೆಗೂ ದೃಷ್ಟಿ ಹಾಯಿಸಿ ನೋಡುತ್ತೇನೆ. ಸ್ವಲ್ಪ ದೂರದವರೆಗೆ ಕಾಣುತ್ತದೆ ಅಷ್ಟೆ. ಆಮೇಲೆ ಏನಾಗಿದೆಯೋ ಎಲ್ಲಿಗೆ ಹೋಗಿದೆಯೋ ಹೇಗೆ ಮುಂದುವರೆದಿದೆಯೋ ಗೋಚರಿಸುವುದಿಲ್ಲ. ಬೆಳಗ್ಗೆ ಎದ್ದಕೂಡಲೇ ನೋಡಬೇಕು ಎಂದುಕೊಳ್ಳುತ್ತೇನೆ. ಆಕಳಿಕೆ ಬರುತ್ತದೆ.

ಟಾಯ್ಲೆಟ್ಟಿಗೆ ಹೋಗಿಬಂದು ರೂಮಿನೊಳಸೇರುವಾಗ ಮತ್ತೆ ನೆನಪು ಮುಂದುವರೆಯುತ್ತದೆ: ಅಪ್ಪ ಮಾಡಿಕೊಟ್ಟ ಫೋನು ನನಗೆ ತುಂಬಾ ಇಷ್ಟವಾಗಿಬಿಟ್ಟು, ನಾನು ಊರ ಹುಡುಗರಿಗೆಲ್ಲ ತೋರಿಸಿ, ಕೊನೆಗೆ ನಮ್ಮ ಮನೆಗೂ ಮಧು ಮನೆಗೂ ಒಂದು ಟೆಲಿಫೋನ್ ಲೈನ್ ಎಳೆದಿದ್ದೆವು ನಾವು! ಆದರೆ 'ತಾಂತ್ರಿಕ ಅಡಚಣೆ'ಗಳಿಂದಾಗಿ ನಮ್ಮ ಟೆಲಿಫೋನ್ ವ್ಯವಸ್ಥೆ ಸಕ್ಸಸ್ ಆಗಿರಲಿಲ್ಲ. ಮಧು 'ಕೇಳ್ತಾ ಇದ್ದನಾ?' ಎಂದು ಕೂಗುತ್ತಿದ್ದುದು ನನಗೆ ಡೈರೆಕ್ಟಾಗಿಯೇ ಕೇಳಿಸುತ್ತಿತ್ತು. ಇಂತಹ ಸಾಹಸ ಕಾರ್ಯ ಮಾಡಿದುದಕ್ಕೆ ಇಬ್ಬರ ಮನೆಯಿಂದಲೂ ಪ್ರಶಂಸೆ ಸಿಗುತ್ತದೆ ಎಂದೆಲ್ಲ ಕಲ್ಪಿಸಿಕೊಂಡು ಶುರುಮಾಡಿದ್ದ ನಮಗೆ ಒಂದು ಪೂರ್ತಿ ನೂಲಿನುಂಡೆ ವೇಸ್ಟ್ ಮಾಡಿದ್ದಕ್ಕಾಗಿ ಬೈಗುಳದ ಬಹುಮಾನ ಸಿಕ್ಕಿದ್ದು ಬಿಟ್ಟರೆ ಮತ್ತಿನ್ನೇನೂ ಸಿಕ್ಕಿರಲಿಲ್ಲ.

ಹಾಸಿಗೆ ಬಿಚ್ಚಿ ಮಲಗುವ ಮುನ್ನ ಹೊಳೆಯುತ್ತದೆ: ಹೌದು, ಇತ್ತೀಚೆಗೆ ನನ್ನ ದಿನಗಳಲ್ಲಿ ಯಾವುದೇ ಸ್ವಾರಸ್ಯ ಇಲ್ಲದಾಗಿದೆ. ರೊಟೀನ್ ಲೈಫು. ಬೆಳಗ್ಗೆ ಎದ್ದಕೂಡಲೆ ಸ್ನಾನ ಮಾಡಿ ಆಫೀಸಿಗೆ ಹೊರಡುವುದು, ಸಂಜೆಯವರೆಗೂ ಆಫೀಸು, ಆಫೀಸು ಮುಗಿಸಿ, ಮಧ್ಯದಲ್ಲೇ ಎಲ್ಲೋ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಬರುವುದು. ಒಂದಷ್ಟು ಹೊತ್ತು ಏನನ್ನಾದರೂ ಓದಿ ಮಲಗಿಬಿಡುವುದು. ಮತ್ತೆ ಮರುದಿನ ಬೆಳಗ್ಗೆ ಆಫೀಸು.

ಆದರೆ ನಾಳೆ ಬೆಳಗ್ಗೆ ಎಂದಿನಂತಲ್ಲ. ಇದಕ್ಕೊಂದು ಉದ್ದೇಶವಿದೆ. ಎದ್ದಕೂಡಲೇ ಹೊರಗೆ ಹೋಗಿ ನೋಡಬೇಕಿದೆ. ಪರಿಕಿಸಬೇಕಿದೆ. ದಾರದ ಬಗೆಗಿನ ನನ್ನ ಅನುಮಾನವನ್ನು ಪರಿಹರಿಸಿಕೊಳ್ಳಬೇಕಿದೆ. ಕಂಡುಕೊಳ್ಳಬೇಕಿದೆ: ಮನೆಯಿಂದ ಮನೆಗೆ, ಮನದಿಂದ ಮನಕ್ಕೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಇರುವ ದಾರದ ದಾರಿಯ ದೂರ...


[೨೪.೦೫.೨೦೦೫; ರಾತ್ರಿ ೧]

Thursday, September 13, 2007

ಗಣೇಶ ಬಂದು ಹೋದ

ಸರ್ವಜಿತು ಸಂವತ್ಸರದ ಭಾದೃಪದ ಶುಕ್ಲದ ಚೌತಿಯ ದಿನ. ಬೆಳಗ್ಗೆ ನಾಲ್ಕು ಗಂಟೆಯಾಗುತ್ತಿತ್ತು. ಈಶ್ವರ ಬಂದು ಗಣೇಶನನ್ನು ಎಬ್ಬಿಸಿದ:

“ಏಳು ಮಗನೇ.. ಗಂಟೆ ನಾಲ್ಕಾಗುತ್ತಿದೆ. ಇವತ್ತು ಚೌತಿ, ಭುವಿಗೆ ಹೋಗಬೇಕು ನೀನು. ಜನ ಎಲ್ಲಾ ಕಾಯ್ತಿರ್ತಾರೆ ಚಕ್ಲಿ, ಮೋದಕ, ಪಂಚಕಜ್ಜಾಯ, ಇನ್ನೂ ಏನೇನೋ ಮಾಡ್ಕೊಂಡು.. ಏಳು.. ಎದ್ದೇಳು.. ಡ್ರೆಸ್ ಮಾಡ್ಕೊಂಡು ಹೊರಡುವ ಹೊತ್ತಿಗೆ ತಡವಾಗೊತ್ತೆ..”

‘ಮೋದಕ’ ಶಬ್ದ ಕೇಳಿದ್ದೇ ತಡ, ಗಣೇಶ ದಡಬಡಿಸಿ ಎದ್ದ. ಅವನಿಗಾಗಲೇ ಹಸಿವಾಗಲಿಕ್ಕೆ ಶುರುವಾಯಿತು. ಅಲ್ಲೇ ಪಕ್ಕದ ಟೀಪಾಯಿಯ ಮೇಲಿಟ್ಟಿದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ. ತನ್ನ ತರಹದ್ದೇ ಸಾವಿರಾರು ರೂಪಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಂದೊಂದು ದಿಕ್ಕಿಗೂ ಒಬ್ಬೊಬ್ಬರು ಹೋಗುವಂತೆ ಪ್ಲಾನ್ ಮಾಡಿದ. ಅದರಲ್ಲೇ ಒಂದು ರೂಪ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಹೊರಟಿತು.

ಇಲಿ ಜೋರಾಗಿ ಓಡುತ್ತಿತ್ತು. ಗಣೇಶ ಬೈದ: "ಏಯ್ ಸ್ವಲ್ಪ ನಿಧಾನ ಹೋಗೋ.. ಸಿಕ್ಕಾಪಟ್ಟೆ ಜಂಪ್ ಆಗ್ತಿದೆ..!"

"ಹೂಂ ಕಣಣ್ಣ.. ಈ ವರ್ಷ ಮಳೆ ಜಾಸ್ತಿ ಆಗಿರೋದ್ರಿಂದ ರೋಡೆಲ್ಲ ಪೂರ್ತಿ ಹಾಳಾಗ್ ಹೋಗಿದೆ.. ಎಲ್ಲಾ ಆ ವರುಣಂದೇ ತಪ್ಪು!" ಇಲಿ ತಪ್ಪನ್ನು ವರುಣನ ಮೇಲೆ ಹೊರಿಸಿತು.

“ಅಲ್ಲಾ, ಇಷ್ಟು ವರ್ಷ ಮಳೆ ಇಲ್ಲ ಅಂತ ಜನ ಒದ್ದಾಡ್ತಿದ್ರು. ಸುಮಾರು ಜನ ನನ್ ಮುಂದೆ ಅಪ್ಲಿಕೇಶನ್ ಇಟ್ಟು ‘ವರುಣಂಗೆ ಸ್ವಲ್ಪ ಶಿಫಾರಸು ಮಾಡ್ಸಯ್ಯಾ’ ಅಂದಿದ್ರು. ನಂಗೂ ದೂರು ತಗೊಂಡೂ ತಗೊಂಡೂ ಬೇಜಾರ್ ಬಂದುಹೋಗಿತ್ತು. ಅದಕ್ಕೇ ನಾನೇ ವರುಣನ ಹತ್ರ ಹೇಳಿ ಈ ವರ್ಷ ಸ್ವಲ್ಪ ಜಾಸ್ತಿ ಮಳೆ ಗ್ರಾಂಟ್ ಮಾಡ್ಸಿದೆ. ಈಗ ನೋಡಿದ್ರೆ...”

“ಹ್ಮ್.. ಏನೂ ಮಾಡ್ಲಿಕ್ಕಾಗಲ್ಲ ಬಿಡಣ್ಣಾ.. ಆದ್ರೆ ಇಷ್ಟೆಲ್ಲಾ ರಸ್ತೆ ಹಾಳಾಗಿದ್ರೂ ಸರ್ಕಾರದವ್ರು ಇತ್ಲಾಗೆ ಗಮನಾನೇ ಕೊಡದೆ ಬರೀ ‘ಅಧಿಕಾರ ಹಸ್ತಾಂತರ’ ‘ಅಧಿಕಾರ ಹಸ್ತಾಂತರ’ ಅಂತ ಹೇಳ್ತಾ ಕೂತಿದಾರಲ್ಲಾ, ಏನ್ ಮಾಡೋಣ ಹೇಳು ಇವ್ರಿಗೆ?”

“ಏನದು ಅಧಿಕಾರ ಹಸ್ತಾಂತರ?”

“ಅದೇ ಕುಮಾರಸ್ವಾಮಿ ಇದಾರಲ್ಲಾ..?”

“ಯಾರು ನನ್ನ ಅಣ್ಣಾನಾ?”

“ಅವ್ರಲ್ಲ ಒಡೆಯಾ, ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕುಮಾರಸ್ವಾಮಿ, ಅವ್ರು ಯಡಿಯೂರಪ್ಪನವ್ರಿಗೆ ಎರಡೂವರೆ ವರ್ಷ ಆದ್ಮೇಲೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡ್ತೀನಿ ಅಂದಿದ್ರಂತೆ. ಈಗ ನೋಡಿದ್ರೆ ‘ಅಪ್ಪನ್ ಕೇಳ್ಬೇಕು’ ಅಂತಿದಾರಂತೆ!”

“ಅಯ್! ಹೌದಾ! ಹಾಗಾದ್ರೆ ಆ ಕುಮಾರಸ್ವಾಮಿಗೆ ಒಂದು ಶಾಪ ಕೊಟ್ಬಿಡ್ಲಾ?”

“ಸುಮ್ನಿರೀ ಒಡೆಯಾ.. ನಮಗ್ಯಾಕೆ ರಾಜಕೀಯ.. ಏನಾದ್ರೂ ಮಾಡ್ಕೊಂಡು ಸಾಯ್ಲಿ.. ಅವ್ರಪ್ಪ ದೇವೇಗೌಡ್ರು ಬೇರೆ ದಿನಾ ಯಾವ್ಯಾವ್ದೋ ದೇವ್ರಿಗೆಲ್ಲಾ ಹರಕೆ ಹೊತ್ಕೋತಿದಾರೆ.. ನೀನೀಗ ಶಾಪ ಕೊಡೋದು, ಕೊನೆಗೆ ಮತ್ತಿನ್ಯಾರೋ ಬಂದು ‘ಗೌಡ್ರು ನಂಗೆ ಹರಕೆ ಹೊತ್ಕೊಂಡಿದಾರೆ, ಅವ್ರ ಆಸೇನಾ ನಾನು ಈಡೇರಿಸ್ಲೇಬೇಕು, ನಿನ್ ಶಾಪ ಹಿಂದಕ್ ತಗೋ’ ಅಂದ್ರೆ ಕಷ್ಟ. ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”

“ಹ್ಮ್.. ನೀ ಹೇಳೋದೂ ಒಂದ್ರೀತಿ ಸರಿ ಇಲಿರಾಯ..”

ಬೆಂಗಳೂರಿನ ಬೀದಿಬೀದಿಗಳಲ್ಲೂ ಶಾಮಿಯಾನಾ ಹಾಕಿ, ಸ್ಟೇಜು ಕಟ್ಟಿ, ದೊಡ್ಡ ದೊಡ್ಡ ಬಣ್ಣಬಣ್ಣದ ಮಡಿ ಉಟ್ಟ ತನ್ನದೇ ಮೂರ್ತಿಗಳನ್ನಿಟ್ಟಿದುದನ್ನು ನೋಡುತ್ತಾ, ಖುಷಿ ಪಡುತ್ತಾ, ಗಣೇಶ ಮುಂದೆ ಸಾಗಿದ. ಒಂದೊಂದೇ ಭಕ್ತರ ಮನೆ ಮೆಟ್ಟಿಲು ಹತ್ತಿಳಿದು ಬರಲಾರಂಭಿಸಿದ. ಎಲ್ಲರ ಮನೆಯಲ್ಲೂ ಪೂಜೆ ನಡೆಯುತ್ತಿತ್ತು. ಭಟ್ಟರಿಗಂತೂ ಪುರುಸೊತ್ತೇ ಇರಲಿಲ್ಲ. ಐದೇ ನಿಮಿಷದಲ್ಲಿ ಮಿಣಿಮಿಣಿಮಿಣಿ ಮಂತ್ರ ಹೇಳಿ ಪೂಜೆ ಮುಗಿಸಿ, ದುಡ್ಡಿಸಕೊಂಡು, ಮುಂದಿನ ಮನೆಗೆ ಹೋಗುತ್ತಿದ್ದರು. ಯಾರದೋ ಮನೆಯಲ್ಲಿ ಗಣೇಶ ಮೊಬೈಲಿನಲ್ಲೇ ಮಂತ್ರ ಪಠಣ ಮಾಡಿಸಿಕೊಂಡು ಪೂಜೆ ಮುಗಿಸಿಕೊಂಡ. ಮತ್ತಿನ್ಯಾರೋ ಭೂಪ ಕಂಪ್ಯೂಟರ್ ಮುಂದೆ ಕೂತು ಗೂಗಲ್ಲಿನಲ್ಲಿ ಸರ್ಚ್ ಮಾಡಿ ಆನ್‌ಲೈನ್ ಪೂಜೆ ಮಾಡಿ ಮುಗಿಸಿಬಿಟ್ಟ! ಪರಮೇಶ್ವರ ಪುತ್ರನಿಗೆ ಪರಮಾಶ್ಚರ್ಯ! ದೇವಲೋಕಕ್ಕೆ ಮರಳಿದಮೇಲೆ ಸರಸ್ವತಿಯನ್ನು ಕಂಡು ‘ನಿನ್ನ ಆಶೀರ್ವಾದದಿಂದ ಭೂಲೋಕದಲ್ಲಿ ಜನ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ’ ಎಂದು ಹೇಳಬೇಕೆಂದುಕೊಂಡ.

ಸಂಜೆ ಹೊತ್ತಿಗೆ ಈ ಬೀದಿ ಶಾಮಿಯಾನಾ ಸ್ಟೇಜುಗಳಿಂದ ಕರ್ಕಶವಾದ ದನಿ ಕೇಳಿಬರುತ್ತಿತ್ತು. ಗಣೇಶ ಏನಾಯಿತೆಂದು ನೋಡಲಾಗಿ, ತನ್ನ ಮೂರುತಿಯ ಎದುರು ನಿಂತು ಒಂದಷ್ಟು ತರುಣಿಯರೂ-ತರುಣರೂ ‘ಕೆಂಚಾಲೋ ಮಂಚಾಲೋ..’ ಎಂದು ಹಾಡುತ್ತಿದ್ದರು. “ಇದ್ಯಾವ ಭಾಷೆ?” ಕೇಳಿದ ಗಣೇಶ ಇಲಿಯ ಬಳಿ. ಇಲಿ “ಗೊತ್ತಿಲ್ಲ” ಅಂತು. ಸ್ಲೀವ್‌ಲೆಸ್ ಹುಡುಗಿಯರನ್ನು ಬ್ರಹ್ಮಚಾರಿ ಗಣೇಶ ನೋಡದಾದ. ಮೈಕಿನ ದನಿ ಕೇಳೀ ಕೇಳೀ ಗಣೇಶನಿಗೆ ತಲೆನೋವು ಬಂತು.

ರಾತ್ರಿ ಹನ್ನೊಂದರ ಹೊತ್ತಿಗೆ ಲಾರಿಗಳ ಮೇಲೆ ಆ ದೊಡ್ಡ ದೊಡ್ಡ ಮೂರ್ತಿಗಳನ್ನೆಲ್ಲ ಇಟ್ಟುಕೊಂಡು ಜನ ಕೆರೆಯ ಕಡೆ ಹೊರಟರು. ಗಣೇಶನೂ ಇಲಿಯ ಮೇಲೆ ಕೂತು ಅವರನ್ನು ಫಾಲೋ ಮಾಡಿದ. ಲಾರಿಯ ಎದುರಿಗೆ ‘ಢಂಕಣಕ ಢಂಕಣಕ’ ಅಂತ ಬಡಿಯುತ್ತ ಒಂದಷ್ಟು ಜನ ತೈತೈ ಎಂದು ಕುಣಿದಾಡುತ್ತಿದ್ದರು. ತನ್ನಪ್ಪ ನಟರಾಜನಿಗಿಂತ ಜೋರಾಗಿ ಕುಣಿಯುತ್ತಿರುವ ಈ ಮಂದಿಯನ್ನು ನೋಡಿ ಗಣೇಶ ದಂಗಾದ. ಅವರೆಲ್ಲರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. “ಏನದು ವಾಸನೆ?” ಕೇಳಿದ ಗಣೇಶ. ಈ ಬಾರಿ ಹಾವು ಉತ್ತರಿಸಿತು: “ನೀವೆಲ್ಲಾ ಸಂತಸದ ಘಳಿಗೆಗಳಲ್ಲಿ ಮಧುಪಾನ ಮಾಡ್ತೀರಲ್ವಾ? ಹಾಗೇನೇ ಇವ್ರೂ ಮಾಡಿದಾರೆ.” “ಓಹ್ ಹಾಗಾ, ಎಲ್ಲಾ ಓಕೆ; ಆದ್ರೆ ವಾಸ್ನೆ ಯಾಕೆ?” “ಇದು ಆ ಮಧುವಿಗಿಂತ ಸ್ವಲ್ಪ ಸ್ಟ್ರಾಂಗು, ಅದಕ್ಕೇ ವಾಸ್ನೆ!”

ಮೂರ್ತಿಗಳನ್ನೆಲ್ಲಾ ಕೆರೆಯೊಳಗೆ ಮುಳುಗಿಸಿದರು. ಅವುಗಳ ಜೊತೆಗೇ ಹೂವು, ಹಣ್ಣು, ಕಾಯಿ, ಕುಂಕುಮ, ಅರಿಶಿಣ.. ಮಣ್ಣ ಗಣೇಶ ನಿಧನಿಧಾನವಾಗಿ ಕೆರೆಯ ನೀರಿನಲ್ಲಿ ಕರಗತೊಡಗಿದ. ಅವನ ಮೈಯ ಬಣ್ಣ ಕೆರೆಯ ನೀರಿನೊಂದಿಗೆ ಬೆರೆಯತೊಡಗಿತು. ಇಡೀ ಕೆರೆಗೆ ಕೆರೆ ಕೊಳಚೆ ಗುಂಡಿಯಂತೆ ಕಾಣತೊಡಗಿತು..

ಇಲಿಯೂ, ಹಾವೂ ಬೆರಗುಗಣ್ಣುಗಳಿಂದ ಇವನ್ನೆಲ್ಲಾ ನೋಡಿದವು.. ಗಣೇಶನಿಗಂತೂ ತಾನೇ ಆ ಕೆರೆಯ ನೀರಿನಲ್ಲಿ ಕರಗುತ್ತಿದ್ದಂತೆ, ತನ್ನ ಅಂತಃಸತ್ವವೇ ಅಲ್ಲಿ ಲೀನವಾಗುತ್ತಿದ್ದಂತೆ ಭಾಸವಾಗತೊಡಗಿತು.. ಹೊಟ್ಟೆ ತೊಳೆಸಲಾರಂಭಿಸಿತು.. ಇಲಿಗೆ ಆದೇಶವಿತ್ತ: “ಇಲ್ಲಿನ್ನು ಅರೆಕ್ಷಣ ಇರಲಾರೆ.. ಬೇಗ ನಡೆ.. ದೇವಲೋಕಕ್ಕೆ ಹೋಗೋಣ..” ಬೆಕ್ಕು ಕಂಡವನಂತೆ ಇಲಿರಾಯ ಓಡತೊಡಗಿದ.

ಗಣೇಶ ಮರುದಿನ ಬೆಳಗ್ಗೆ ಎದ್ದು ಭೂಲೋಕದತ್ತ ಬಗ್ಗಿ ನೋಡಿದರೆ ಒಂದಷ್ಟು ಜೆಸಿಬಿ ಯಂತ್ರಗಳು, ಮಿನಿ ಕ್ರೇನುಗಳು ಕೆರೆಯ ಹೂಳೆತ್ತುತ್ತಿದ್ದವು. ಅರೆಬರೆ ಕರಗಿದ ಗಣೇಶನ ಮೂರ್ತಿಗಳನ್ನು ದಡಕ್ಕೆಳೆದು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದವು. ಅವನ್ನೆಲ್ಲಾ ಒಡೆದು ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದಾಗಿ ಜನ ಮಾತಾಡಿಕೊಳ್ಳುತ್ತಿರುವುದು ದೇವಲೋಕದವರೆಗೂ ಕೇಳುತ್ತಿತ್ತು. ಹಿಂದಿನ ದಿನ ಹೊಟ್ಟೆಬಿರಿಯೆ ತಿಂದಿದ್ದ ತಿಂಡಿಗಳನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಗಣೇಶ ಟಾಯ್ಲೆಟ್ಟಿನತ್ತ ನಡೆದ.

[ಎಲ್ಲರಿಗೂ ಚೌತಿಯ ಶುಭಾಷಯಗಳು.]