Thursday, April 26, 2007

ಮೌನಗಾಳಕ್ಕೆ ಒಂದು ವರ್ಷ..!


ಬೆಂಗಳೂರಿನಲ್ಲಿ ದಿನವೂ ಮಳೆಯಾಗುತ್ತಿದೆ. ಪುಟ್ಟೇನಹಳ್ಳಿಯ ನಿವಾಸಿಗಳು ಮನೆಯೊಳಗೆ ನಿಂತ ನೀರನ್ನು ಬಕೆಟ್ಟುಗಳಲ್ಲಿ ಮೊಗೆ ಮೊಗೆದು ಹೊರಗೆ ಚೆಲ್ಲುತ್ತಿರುವ ಫೋಟೋ ಪೇಪರಿನಲ್ಲಿದೆ. ಮುಖ್ಯಮಂತ್ರಿಗಳು ಮಳೆಪೀಡಿತ ಪ್ರದೇಶಗಳಿಗೆ ಭೇಟಿಯಿತ್ತು ಫೋಟೋ ತೆಗೆಸಿಕೊಂಡಿದ್ದಾರೆ. ಹಾನಿಗೊಳಗಾದವರಿಗೆ ಪರಿಹಾರ ಘೋಷಿಸಿದ್ದಾರೆ.

ನೀಲಿ ಕಂಗಳ ಚೆಲುವೆ ಐಶ್ವರ್ಯಾ ರೈ ಕೊನೆಗೂ ತನ್ನ ಅಸಂಖ್ಯ ಆರಾಧಕರನ್ನು ನಿರಾಶೆಗೊಳಿಸಿ ಮದುವೆ ಮಾಡಿಕೊಂಡಿದ್ದಾಳೆ. ತಿರುಪತಿಯಲ್ಲಿ ಪತಿ ಅಭಿಶೇಕ್ ಜೊತೆ ಪೂಜೆ ಸಲ್ಲಿಸುತ್ತಿರುವ ಅವಳ ಕೆಂಪು ರೇಶ್ಮೆ ಸೀರೆಯ ಫೋಟೋಗಳಲ್ಲಿ ಏನೋ ಲವಲವಿಕೆ ಇದೆ. ಸಲ್ಲು ಭಾಯ್‍ನನ್ನು ವಿವೇಕ್ ಭಾಯ್ 'ಮುಂಗಾರು ಮಳೆ' ನಾಯಕನ ಶೈಲಿಯಲ್ಲಿ ಸಮಾಧಾನ ಮಾಡುತ್ತಿದ್ದಾನೆ: "ನಿನ್ ಕಷ್ಟ ನಂಗ್ ಅರ್ಥ ಆಗುತ್ತೆ ಭಾಯ್.. ಪ್ರೀತಿ... ನಿಂಗೆ ಐಶ್ವರ್ಯಾ ಅಂದ್ರೆ ತುಂಬಾ ಪ್ರೀತಿ ಅಲ್ಲಾ..? ಹ್ಮ್..! ಪ್ರೀತಿ... ಹೃದಯಾನ ಹಿಂಡುತ್ತೆ...!" ಪ್ರೀತಿಸಿ ಮೋಸ ಮಾಡುವ ಎಲ್ಲ ಹುಡುಗಿಯರ ಪ್ರತಿನಿಧಿಯಂತೆ ಕಾಣಿಸುತ್ತಿದ್ದಾಳೆ ಐಶ್.

ವರ್ಲ್ಡ್‍ಕಪ್ ಫೈನಲ್‍ಗೆ ಹಸಿರು ಮೈದಾನ ಸಜ್ಜಾಗುತ್ತಿದೆ. ಹಳದಿ ಬಣ್ಣದ ಅಂಗಿಗಳು - ನೀಲಿ ಬಣ್ಣದ ಅಂಗಿಗಳು ಮೈದಾನಕ್ಕಿಳಿಯಲು ತಾಲೀಮು ನಡೆಸುತ್ತಿವೆ. "ಯಾರಿಗೆ ಹೋಗಬಹುದು ಕಪ್ಪು?" "ಈ ವರ್ಷವೂ ಆಸ್ಟ್ರೇಲಿಯಾಕ್ಕೇ ಬಿಡು" "ಏ.. ಛಾನ್ಸೇ ಇಲ್ಲ.. ಈ ಸಲ ಶ್ರೀಲಂಕಾಕ್ಕೆ ಹೋಗುತ್ತೆ ನೋಡ್ತಿರು.."

ಜೆಸಿಬಿ ಯಂತ್ರಗಳು ಮಣ್ಣನ್ನು ಎತ್ತಿ ಎತ್ತಿ ಹಾಕುತ್ತಿವೆ... ಟೀವಿ ಛಾನೆಲ್‍ಗಳು ಈ 'ಕಾರ್ಯಕ್ರಮ'ವನ್ನು ಲೈವ್ ತೋರಿಸುತ್ತಿವೆ. ಜನ ವರ್ಲ್ಡ್‍ಕಪ್ ನೋಡುವುದನ್ನು ಬಿಟ್ಟು ಇದನ್ನೇ ನೋಡುತ್ತಿದ್ದಾರೆ. "ಏ, ಅದೇನ್ ಕ್ರಿಕೆಟ್ ನೋಡ್ತೀಯಾ? ಇಲ್ಲಿ ನೋಡು.. ಒಳ್ಳೇ ಸಸ್ಪೆನ್ಸ್ ಶೋ! ಲಾಸ್ಟಿಗೆ ಏನಾಗೊತ್ತೆ ಅಂತ ಯಾರಿಗೂ ಗೊತ್ತಿಲ್ಲ..!" "ಇನ್ನೂ ಇರಬಹುದಾ ಉಸಿರು..?" "ಇದ್ದರೂ ಇರಬಹುದು.." "ಓ ದೇವರೇ..! ಬಾಲಕ ಬದುಕಿ ಹೊರಬರಲಿ.."

ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ವಿಶ್ವ ಗೋ ಸಮ್ಮೇಳನ ನಡೆಯುತ್ತಿದೆ. ಕಳೆದ ಬಾರಿ ನಾನು ಊರಿಗೆ ಹೋದಾಗಲೇ ಊರ ಜನಗಳ ನಾಲಿಗೆಯ ಮೇಲೆ ಮಠದ ಕಾರ್ಯಕ್ರಮಗಳ ಬಗ್ಗೆ ಮಾತು ತುಯ್ದಾಡುತ್ತಿತ್ತು. ಊರ ಜನಗಳೆಲ್ಲ ಅಕ್ಷತೆ ಬಟ್ಟಲು ಹಿಡಿದು ಸಮ್ಮೇಳನಕ್ಕೆ ಕರೆಯಲು ಹೊರಟಿದ್ದರು. ಮಠಗಳು, ಸ್ವಾಮೀಜಿಗಳು, ದೇವರುಗಳು, ಇತ್ಯಾದಿಗಳ ಬಗೆಗಿನ ನನ್ನ ವಿಚಾರ ಸಂಘರ್ಷಗಳು ಏನೇ ಇರಲಿ. ಆದರೆ ನನಗೆ ಈ ಅಕ್ಷತೆ ಹಂಚುವ ಕಾರ್ಯ ತುಂಬಾ ಇಷ್ಟವಾಯಿತು. ಗುರುಗಳ ಆಜ್ಞೆಯಂತೆ ಗೋ ಸಮ್ಮೇಳನಕ್ಕೆ ಕರೆಯಲು ನಮ್ಮವರು ಪ್ರತಿ ಜಾತಿ, ಪ್ರತಿ ಮತ, ಪ್ರತಿ ಧರ್ಮದವರ ಮನೆಯ ಮೆಟ್ಟಿಲನ್ನೂ ಹತ್ತಿ ಇಳಿಯುತ್ತಿದ್ದಾರೆ. ಹರಿಜನ ಕೆಲಸಗಾರರನ್ನು ಇವತ್ತಿಗೂ ನಮ್ಮೂರುಗಳಲ್ಲಿ ಬ್ರಾಹ್ಮಣರು ಅಸ್ಪೃಶ್ಯರನ್ನಾಗಿ ಕಾಣುತ್ತಾರೆ. ಅವರನ್ನು ಮನೆಯೊಳಗೆ ಬರಗೊಡುವುದಿಲ್ಲ. ಅಕಸ್ಮಾತ್ ಮೈಗೆ ಮೈ ತಗುಲಿದರೆ ಸ್ನಾನ ಮಾಡುವ ಕರ್ಮಟ ಬ್ರಾಹ್ಮಣರೂ ಇದ್ದಾರೆ ನಮ್ಮ ಕಡೆ. ನಮ್ಮ ಮನೆ ಕೊನೆಕಾರ ಬಂಗಾರಿಯ ಮನೆ ಹೇಗಿದೆ ಅಂತಲೇ ನೋಡಿಲ್ಲ ನಾವು. ಅಂಥದರಲ್ಲಿ, ಗೋ ಸಮ್ಮೇಳನ ಎಂಬ ನೆಪದಲ್ಲಾದರೂ ನಮ್ಮ ಜನಗಳು ಅವರುಗಳ ಮನೆಗಳಿಗೆ ಹೋಗಿ ಬರುವಂತಾಯ್ತಲ್ಲ...? ನನಗೆ ಅದೇ ಖುಷಿಯೆನಿಸುತ್ತಿತ್ತು. ಉಳವಿಯ ಮುಸ್ಲಿಮರಿಗೆ ಅರೆಕೆಂಬಣ್ಣದ ಅಕ್ಕಿಕಾಳು ಕೊಟ್ಟು ಗೋಸಮ್ಮೇಳನಕ್ಕೆ ಆಮಂತ್ರಿಸುವ ಪರಿಕಲ್ಪನೆಯೇ ನನಗೆ ತೀರಾ ವಿಸ್ಮಯ ಮತ್ತು ಕುತೂಹಲಕರವಾಗಿ ಕಂಡಿತ್ತು. ಈಗ ಇಪ್ಪತ್ತನಾಲ್ಕು ಗಂಟೆಗಳ ಕೊಳಲ ಮೆಲುನಿನಾದದ ಹಿನ್ನೆಲೆಯಲ್ಲಿ ಗೋ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ವಿಚಿತ್ರ ಖುಷಿ... ಏನೋ ಹುಮ್ಮಸ್ಸು... ನಾನು ಹೋಗಬೇಕು ನಾಳೆ ರಾತ್ರಿ...

ಊಹುಂ, ವಿಷಯ ಇದ್ಯಾವುದೂ ಅಲ್ಲ. ನಿಜವಾದ ಖುಷಿ ಏನೆಂದರೆ, ಇವತ್ತು ನನ್ನ ಬ್ಲಾಗಿನ ಹುಟ್ಟುಹಬ್ಬ! ಎರಡುಸಾವಿರದ ಆರನೇ ಇಸವಿಯ ಏಪ್ರಿಲ್ ಇಪ್ಪತ್ತಾರರ ಒಂದು ಸುಡುಮಧ್ಯಾಹ್ನ ಆಫೀಸಿನಲ್ಲಿ ಕೆಲಸವಿಲ್ಲದ ಸಮಯದಲ್ಲಿ 'ಸುಮ್ನೆ, ಟೈಂಪಾಸಿಗೆ' ಎಂಬಂತೆ ಶುರು ಮಾಡಿದ್ದ ಬ್ಲಾಗ್ ಬರವಣಿಗೆ ಇಲ್ಲಿಯವರೆಗೆ ನಿರಂತರವಾಗಿ ಹರಿದು ಬಂದಿರುವುದು ನನಗಂತೂ ಖುಷಿಯ ವಿಷಯ. ಹಾಗಂತ, ಬ್ಲಾಗ್ ಶುರು ಮಾಡುವ ಮುನ್ನ ಕನಸು ಕಟ್ಟಿರಲಿಲ್ಲ ಎಂದಲ್ಲ. ಆದರೆ ನನಗೆ ನನ್ನ ಮೇಲೇ ಕಾನ್ಫಿಡೆನ್ಸ್ ಇರಲಿಲ್ಲ. 'ನಾನು ಬರೆದದ್ದು ನಾಕು ಜನ ಓದಬಹುದಾದಂಥದ್ದೇ?' ಎನ್ನುವ ಅನುಮಾನ ಇತ್ತು. ಸುಮ್ಮನೆ ಬರೆದು ಮುಚ್ಚಿಟ್ಟಿದ್ದ ಅದೆಷ್ಟೋ ಕವನಗಳನ್ನು ಇಲ್ಲಿ ಹಾಕುವ ಉದ್ದೇಶವಿಟ್ಟುಕೊಂಡಿದ್ದೆ ಅಷ್ಟೆ. ಆದರೆ ಬರೆಯುತ್ತಾ ಹೋದಂತೆ ಎಲ್ಲಾ ಸರಾಗವಾಯಿತು. ಕಾಮೆಂಟುಗಳು, ಮೆಚ್ಚುಗೆಗಳು ಬರುತ್ತಾ ಹೋದಂತೆ ನನಗೂ ಓಘ ಸಿಕ್ಕಿತು. ಇನ್ ಫ್ಯಾಕ್ಟ್, ಶುರು ಮಾಡಿದಾಗ ಈ ಬ್ಲಾಗಿಗೆ 'About Me, About U & About Them!' ಅಂತ ಹೆಸರು ಕೊಟ್ಟಿದ್ದೆ. ಕೊನೆಗೆ, ಬರೆಯುವುದೆಲ್ಲಾ ಕನ್ನಡದಲ್ಲಾದ್ದರಿಂದ ಈ ಇಂಗ್ಲೀಷಿನ ಟೈಟಲ್ಲು ಸರಿಹೊಂದುವುದಿಲ್ಲ ಎಂದೆನಿಸಿ, ನವೆಂಬರ್ ಒಂದರಂದು, 'ಮೌನಗಾಳ' ಅಂತ ಮರುನಾಮಕರಣ ಮಾಡಿದೆ.

ಕೃತಜ್ಞತೆ ಹೇಳಬೇಕು. ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ, ತಿದ್ದಿದವರಿಗೆ, ರೇಗಿದವರಿಗೆ, ಬೈದವರಿಗೆ, ಸಲಹಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್. ಸ್ಪೆಶಲಿ, ಶ್ರೀನಿಧಿ ಮತ್ತು ಸಿಂಧು ಅಕ್ಕರಿಗೆ ಸಲಹೆ-ಸೂಚನೆ ನೀಡಿದ್ದಕ್ಕೆ; ಸಂದೀಪನಿಗೆ 'ಟೆಕ್ನಿಕಲೀ' ಸಹಾಯ ಮಾಡಿದ್ದಕ್ಕೆ; ದಟ್ಸ್‍ಕನ್ನಡ.ಕಾಂ ನಲ್ಲಿ ನನ್ನ ಬ್ಲಾಗ್ ಬಗ್ಗೆ ಪ್ರಕಟಿಸಿದ್ದಕ್ಕೆ; ಇನ್ನೂ ಕೆಲವರಿಗೆ ವಿಷಯ ಒದಗಿಸಿದ್ದಕ್ಕೆ... ಹಾಗೆಲ್ಲಾ ಹೆಸರು ಹೇಳಲು ಹೊರಡುವುದೇ ತಪ್ಪು ಬಿಡಿ, ಎಲ್ಲರಿಗೂ ಥ್ಯಾಂಕ್ಸ್. ಐದು ಸಾವಿರಕ್ಕೂ ಮಿಕ್ಕಿ ಹಿಟ್ಟು ಬಿದ್ದಿವೆ. ಹೀಗಾಗಿ ಹಿಡಿದ ಮೀನನ್ನು ಕರಿಯಲು ಮಸಾಲೆಗೆ ಬೇರೆ ಹಿಟ್ಟು ತರಲು ನಾನು ಹುಡುಕಬೇಕಿಲ್ಲ; ಇದೇ ಸಾಕು. :)

ಒಂದು ವರ್ಷವಾಗಿದೆ. ಗಾಳಕ್ಕೆ ಹತ್ತತ್ತಿರ ಐವತ್ತು ಮೀನುಗಳು ಸಿಕ್ಕಿವೆ. ಕೊಳದಲ್ಲಿ ಇನ್ನೂ ಸಾಕಷ್ಟು ಮೀನುಗಳು ಇರುವ ವರ್ತಮಾನವಿದೆ. ಯಾವಾಗ ಗಾಳಕ್ಕೆ ಸಿಲುಕುತ್ತವೋ ಗೊತ್ತಿಲ್ಲ. ಗಾಳದ ತುದಿಗೆ ಸಿಕ್ಕಿಸಲು ಹುಳಗಳೂ ನಾ ಮುಂದು ತಾ ಮುಂದು ಅಂತ ಕಾಯುತ್ತಿವೆ. ಅತ್ಯುತ್ಸಾಹದಿಂದ ಕೊಳಕ್ಕಿಳಿಯುತ್ತಿವೆ. ಗಾಳಗಾರಿಕೆಗೆ ಜೊತೆಗಾರರಾಗಿ ನೀವಿದ್ದೀರಿ. ಇನ್ನೇನು ಬೇಕು ಹೇಳಿ? ಈ ಸಹಚರ್ಯಕ್ಕೆ, ಪ್ರೀತಿಗೆ ಋಣಿ.

ಗಾಳಗಾರಿಕೆ ಕಂಟಿನ್ಯೂಸ್...!

Tuesday, April 17, 2007

ಮತ್ತೇರಿಸುವ ಮುತ್ತು

ಶಿಲ್ಪಾ ಶೆಟ್ಟಿಗೆ ರಿಚರ್ಡ್ ಗೇರ್ ಮೊನ್ನೆ ಮುತ್ತು ಕೊಟ್ಟಿದ್ದು ಇವತ್ತಿನ ಪೇಪರುಗಳಲ್ಲಿ ದೊಡ್ಡ ಸುದ್ದಿ. ಸಿಟ್ಟಿಗೆದ್ದ ಶಿಲ್ಪಾ ಅಭಿಮಾನಿಗಳು ಅವಳ ಪೋಸ್ಟರುಗಳಿಗೆ ಬೆಂಕಿಯಿಡುತ್ತಿರುವ ಚಿತ್ರಗಳು. ರಿಚರ್ಡ್ ಗೇರ್ ವಿರುದ್ಧ ಕೂಗುತ್ತಿರುವ ಘೋಷಣೆಯ ಸದ್ದೂ ಇದೆ ಪೇಪರಿನಲ್ಲಿ. 'ಗೇರ್ ತನ್ನ ಈ ಹೊಲಸು ವರ್ತನೆಗಾಗಿ ಕ್ಷಮೆ ಕೋರಬೇಕು; ಇಲ್ಲವೇ ತಕ್ಷಣ ಭಾರತ ಬಿಟ್ಟು ತೊಲಗಬೇಕು' ಎಂದು ಪ್ರತಿಭಟನಾಕಾರರು ಕೂಗಾಡುತ್ತಿದ್ದಾರೆ. ಈ ಸುದ್ದಿಯನ್ನು ವೈಭವೀಕರಿಸಿ ಬರೆಯುತ್ತಿರುವ ಮೀಡಿಯಾದ ಮೇಲೆ ಶಿಲ್ಪಾ ಸಿಟ್ಟಾಗಿದ್ದಾಳೆ. 'ಇಂಥಾ ಸುದ್ದಿಯನ್ನೆಲ್ಲಾ ದೊಡ್ಡದು ಮಾಡಿದರೆ ನಾವು ವಿದೇಶಿಯರ ದೃಷ್ಟಿಯಲ್ಲಿ ಸಣ್ಣವರಾಗುತ್ತೀವಿ' ಎಂದು ಅಲವತ್ತುಕೊಂಡಿದ್ದಾಳೆ. ಒಂದು ಮುತ್ತನ್ನು ಅರಗಿಸಿಕೊಳ್ಳಲು ಅವಳು ಪಡುತ್ತಿರುವ ಪಾಡು ನೋಡಿದರೆ ಬೇಸರವಾಗುತ್ತದೆ.

ಆದರೆ ನನ್ನ ಆಶ್ಚರ್ಯ ಏನೆಂದರೆ, ಮುತ್ತು ಪಡೆವಾಗ ಆದ ರೋಮಾಂಚನವನ್ನು ಶಿಲ್ಪಾ ಎಲ್ಲೂ ಹೇಳಿಕೊಂಡಿಲ್ಲ. ಗೇರ್ ನಂತಹ ಗೇರ್. ಜಗತ್ತಿನ ಅತ್ಯಂತ 'ಸೆಕ್ಸಿ ಮ್ಯಾನ್' ಎಂಬ ಖ್ಯಾತಿಯ ಗೇರ್. ಶ್ರೀಮಂತ ಹಾಲಿವುಡ್ ನಟ ಗೇರ್. ಆತ ಕೊಟ್ಟ ಮುತ್ತು ಶಿಲ್ಪಾಗೆ ಯಾವ ರೀತಿಯ ಖುಷಿಯನ್ನು ಕೊಟ್ಟಿರಬಹುದು? ಸಿನಿಮಾಗಳಲ್ಲಿ ಅಭಿನಯಿಸುವಾಗ ಇಂತಹ ಎಷ್ಟೋ ಮುತ್ತೆತ್ತಿರಾಯರಿಂದ ಮುತ್ತು ಕೊಡಿಸಿಕೊಳ್ಳುವ ಶಿಲ್ಪಾಗೆ ಇದು ಏನೂ ಅನ್ನಿಸಲಿಲ್ಲವೇ? ಅದು ಹೇಗೆ ಸಾಧ್ಯ? ಒಂದು ಮುತ್ತು.. ಅಚಾನಕ್ಕಾಗಿ ಪಡೆದ ಒಂದು ಚುಂಬನ.. ಹುಡುಗಿ ಶಿಲ್ಪಾಳಲ್ಲಿ ಒಂದು ಮಧುರ ಅಲೆ ಎಬ್ಬಿಸಲಿಲ್ಲವೇ? ಆಕೆಯ ರಾತ್ರಿಯ ಅಂದಿನ ಕನಸಿನಲ್ಲಿ ಗೇರ್ ಬರಲಿಲ್ಲವೇ? ಗೇರ್‌ನ ಮುತ್ತು ಸಹ ಮತ್ತು ತರಿಸುವುದಿಲ್ಲವೆಂದರೆ ಹುಡುಗಿಯರು ಇನ್ನು ಯಾರ ಮೊರೆ ಹೋಗಬೇಕು?

ಹೋಗಲಿ, ಚುಂಬಿಸುವಾಗ ತುಟಿಗಂಟಿದ ಶಿಲ್ಪಾಳ ಮುಖದ ಕ್ರೀಮು, ಪೌಡರು, ಎಟ್ಸೆಟ್ರಾ.. ಗೇರ್‌ನನ್ನು ಕಾಡುತ್ತಿಲ್ಲವೇ? ಬಾಗಿದಾಗ ಮೈಗಂಟಿದ ಅವಳ ಸೀರೆಯ ಅತ್ತರು ರಿಚರ್ಡ್‌ನ ಧೃತಿಯನ್ನು ಸ್ವಲ್ಪವಾದರೂ ಕೆಡಿಸಲಿಲ್ಲವೇ?

ಈ ಪ್ರಶ್ನೆಗಳಿಗೆ ಉತ್ತರ 'ಇಲ್ಲ' ಎಂಬುದಾದರೆ ಅದು ಸುಳ್ಳು. ಸುಳ್ಳಲ್ಲ; ಅದು ಸತ್ಯ ಎಂದಾದರೆ ನಾವೆಲ್ಲಾ ಸಿನಿಮಾ ನೋಡಿ, ನಮ್ಮ ಪ್ರೀತಿಯ ನಟ-ನಟಿಯರನ್ನು ನೋಡಿ ಕಲ್ಪಿಸಿಕೊಳ್ಳುವ ಮಧುರ ಆಲೋಚನೆಗಳಿಗೆ ಅರ್ಥವೆಲ್ಲಿದೆ? ಎಲ್ಲಾ ಕನ್ನಡಿಯೊಳಗಿನ ಗಂಟು ಎಂದಾಯ್ತಲ್ಲಾ?

* * *

ಒಂದ್ಸಲ ನಮ್ಮನೆ ಆಳು ಗುತ್ಯಪ್ಪ ಹೇಳ್ತಿದ್ದ: ಪಕ್ಕದ ಊರಿನ ರಾಯರ ಮನೆಗೆ ಅವನು ಕೆಲಸಕ್ಕೆ ಹೋಗಿದ್ನಂತೆ. ಅವತ್ತು ಭಾನುವಾರ. ಟೀವಿಯಲ್ಲಿ ಯಾವುದೋ ಪಿಚ್ಚರ್ ಬರುತ್ತಿತ್ತು. ತುಂಬಾ ಜನ ಕುಳಿತು ಪಿಚ್ಚರ್ ನೋಡುತ್ತಿದ್ದರು. ರಾಯರ ಮಗಳೂ ಇದ್ದಳಂತೆ. ಸಿನಿಮಾದ ಮಧ್ಯೆ ಹೀರೋ ಹೀರೋಯಿನ್ನಿಗೆ ಮುತ್ತು ಕೊಡುವ ಸೀನ್ ಬಂತಂತೆ. ಅವಾಗ ರಾಯರ ಮಗಳು 'ಅಯ್ಯೋ! ಅದು ಹೆಂಗೆ ಮುತ್ತು ಕೊಡಿಸಿಕೊಳ್ತಾರೇನೋ! ನಮಗಾದ್ರೆ ಒಂಥರಾ ಆಗೊತ್ತಪ್ಪ. ನಾಚ್ಕೆ ಆಗುತ್ತೆ!' ಅಂದಳಂತೆ! ಜನ ಎಲ್ಲ ಮುಸಿಮುಸಿ ನಕ್ಕರಂತೆ. ನಮ್ಮನೆ ಆಳು ಗುತ್ಯಪ್ಪನ ಪ್ರಕಾರ 'ರಾಯರ ಮಗಳು ಹಂಗೆ ಹೇಳಿದ್ಲು ಅಂದಮೇಲೆ ಅವಳಿಗೆ ಮುತ್ತು ಕೊಡಿಸಿಕೊಂಡು ಗೊತ್ತಿರಬೇಕಲ್ಲವೇ?! ಅವಳು ಸಾಮಾನ್ಯದವಳಲ್ಲ! ಸಿಕ್ಕಾಪಟೆ ಜೋರಿದಾಳೆ!' ಗುತ್ಯಪ್ಪನ ಮಾತಿಗೆ ಅವನ ಯೋಚನಾಲಹರಿಗೆ ನಾನು ತಲೆದೂಗಿದ್ದೇನು ಸುಳ್ಳಲ್ಲ.

* * *

ಮುತ್ತಿನ ಬಗ್ಗೆ ಮತ್ತಷ್ಟು ಹುಡುಕಿದಾಗ ಕೆಲವು ಆಸಕ್ತಿಕರ ವಿಷಯಗಳು ದೊರಕಿದವು. ಒಬ್ಬ ಅವರೇಜ್ ಮನುಷ್ಯ ತನ್ನಾಯಸ್ಸಿನ ೨೦,೧೬೦ ನಿಮಿಷಗಳನ್ನು ಮುತ್ತು ಕೊಡುವುದರಲ್ಲಿ ಕಳೆಯುತ್ತಾನಂತೆ! ಒಂದು ನಿಮಿಷದ ಚುಂಬನಕ್ಕೆ ೨೬ ಕ್ಯಾಲೋರಿಯಷ್ಟು ಶಕ್ತಿ ವ್ಯಯವಾಗುತ್ತದಂತೆ. ಪ್ರಪಂಚದ ಐವತ್ತು ಪ್ರತಿಶತಕ್ಕೂ ಹೆಚ್ಚು ಜನ ತಮ್ಮ ಹದಿನಾಲ್ಕನೇ ವಯಸ್ಸಿನ ಒಳಗೇ ಪ್ರಥಮ ಚುಂಬನದ ಅನುಭವ ಪಡೆದಿರುತ್ತಾರಂತೆ. (ಮಗುವಾಗಿದ್ದಾಗ ಪಡೆಯುವ 'ಪಪ್ಪಿ'ಯನ್ನೂ ಇದರಲ್ಲಿ ಸೇರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ!). ಮುತ್ತು ಕೊಡುವುದಕ್ಕೆ ಒಟ್ಟು ಮೂವತ್ನಾಲ್ಕು ಮೂಳೆಗಳು ಏಕಕಾಲದಲ್ಲಿ ಕೆಲಸ ಮಾಡಬೇಕಾಗುತ್ತದಂತೆ. ೧೮೯೬ರಲ್ಲಿ ಬಿಡುಗಡೆಯಾದ 'ದಿ ಕಿಸ್' ಅನ್ನೋ ಸಿನಿಮಾದಲ್ಲಿ ಮೊದಲ ಕಿಸ್ಸಿಂಗ್ ಸೀನ್ ತೋರಿಸಿದ್ದಂತೆ.

ಚುಂಬನದಿಂದ ಅನೇಕ ಲಾಭಗಳಿವೆ. ಮುತ್ತು ಕೊಟ್ಟುಕೊಳ್ಳುವುದರಿಂದ (ಕೊಟ್ಟು - ಕೊಳ್ಳುವುದು!) ಬಾಯಲ್ಲಿ ಲಾಲಾರಸ ಹೆಚ್ಚುತ್ತದಂತೆ. ಇದರಿಂದ ಹಲ್ಲುಗುಳಿ (tooth decay) ಆಗುವುದು ಕಮ್ಮಿಯಾಗುತ್ತದಂತೆ. ಮುತ್ತು ಕೊಡುವುದು ಟೆನ್ಷನ್ನನ್ನು ಕಮ್ಮಿ ಮಾಡುತ್ತದಂತೆ. (ಆದರೆ ಗೇರ್-ಶಿಲ್ಪಾ ಕೇಸಲ್ಲಿ ಇದು ಉಲ್ಟಾ ಆಯ್ತು; ಪಾಪ!). ಸುದೀರ್ಘ ಚುಂಬನ ದೇಹದ ತೂಕವನ್ನು ಕಮ್ಮಿ ಮಾಡುತ್ತದೆ ಎಂಬುದು ಇತ್ತೀಚಿನ ಶೋಧದಿಂದ ತಿಳಿದು ಬಂದಿದೆ. ಅದು ದೇಹದ 'ಫಿಟ್‌ನೆಸ್' ಕಾಯ್ದುಕೊಳ್ಳಲು ಸಹಾಯ ಮಾಡುತ್ತದಂತೆ.

ಮುತ್ತು ಸಾಮಾನ್ಯವಾಗಿ ಸಿಹಿಯಾಗಿರುತ್ತದೆ (ಅಂತೆ). ಕಹಿಮುತ್ತು ಅನ್ನೋ ಪದ ಬಳಕೆಯಲ್ಲಿದ್ದಂತಿಲ್ಲ. ತುಟಿಗೆ ತುಟಿ ಸೇರಿಸಿದರೆ ಅದು ಸ್ಮೂಚಿಂಗ್. ಕೆನ್ನೆಗೋ ಗಲ್ಲಕ್ಕೋ ಹಣೆಗೋ ಮತ್ತೆಲ್ಲಿಗೋ ಕೊಟ್ಟರೆ ಅದು ಬರೀ ಮುತ್ತು. ನಲ್ಲೆಯ ಮುತ್ತಿನಿಂದ ಮೈಮರೆಯುವ ನಲ್ಲ ಅವಳನ್ನು ಮದುವೆಯಾಗಿ ಆಮೇಲೆ ಪ್ರತಿದಿನವೂ ಅವಳಿಂದ ಮುತ್ತು-ರತ್ನದ ಬೇಡಿಕೆ ಸ್ವೀಕರಿಸುವ ಕಷ್ಟಕ್ಕೆ ಬೀಳುವುದು ತೀರಾ ಸಾಮಾನ್ಯ ಸಂಗತಿ.

ಮುತ್ತಿನಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಕೆಲವು:

  • ಕೆನ್ನೆಗೆ ಮುತ್ತು (Cheek Kiss): ಸ್ನೇಹಕ್ಕಾಗಿ ಕೊಟ್ಟುಕೊಳ್ಳುವ ಸಾಮಾನ್ಯ ಮುತ್ತು. ಮೊದಲ ‘ಡೇಟ್’ ದಿನ ಈ ಮುತ್ತು ಕೊಟ್ಟುಕೊಳ್ಳುವುದು ಸಾಮಾನ್ಯ. ಸಂಗಾತಿಯ ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಕೆನ್ನೆಗೆ ಮುತ್ತೊತ್ತಬೇಕು.
  • ಕಿವಿಗೆ ಮುತ್ತು (Earlobe Kiss): ಕಿವಿಯನ್ನು ಕಚ್ಚಿ (ಜೋರಾಗಲ್ಲಾರೀ!), ಚೀಪುವುದು! ಈ ಪ್ರಕ್ರಿಯೆಯಲ್ಲಿ ಜಾಸ್ತಿ ಶಬ್ದ ಮಾಡುವುದು ಅಪಾಯ. ಏಕೆಂದರೆ ನಿಮ್ಮ ಸಂಗಾತಿ ಕಿವುಡಾಗುವ ಸಂಭವವಿರುತ್ತದೆ!
  • ಮೂಗು ಮರ್ದನ (Eskimo Kiss): ಇಬ್ಬರೂ ತುಂಬಾ ಹತ್ತಿರ ಬಂದು ಪರಸ್ಪರರ ಮೂಗನ್ನು (ಮೂಗಿನಿಂದಲೇ) ತಿಕ್ಕಾಡುವುದು. ಇದನ್ನೂ ಮುತ್ತಿನ ಪಟ್ಟಿಗೆ ಸೇರಿಸಿದ ಮಹಾನುಭಾವರು ಯಾರೋ ಗೊತ್ತಿಲ್ಲ.
  • ಹಣೆಗೆ ಮುತ್ತು (Forehead Kiss): ‘ಮದರ್ಲಿ ಕಿಸ್’ ಎಂದು ಜನಜನಿತವಾದ ಇದು ಕೇವಲ ಸ್ನೇಹದ ದ್ಯೋತಕ. ಈ ಮುತ್ತು ‘ಮುತ್ತಿಸಿಕೊಂಡವ’ರಿಗೆ ಏನೋ ಸಮಾಧಾನ ನೀಡುತ್ತದೆ.
  • ಹಣ್ ಮುತ್ತು (Fruity Kiss): ಇಬ್ಬರ ಬಾಯಲ್ಲೂ ಹಣ್ಣಿನ ಚೂರನ್ನು ಕಚ್ಚಿಕೊಂಡು (ದ್ರಾಕ್ಷಿ, ಸ್ಟ್ರಾಬೆರಿಯಂತ ರಸಭರಿತ ಹಣ್ಣು ಇದಕ್ಕೆ ಸೂಕ್ತ), ತುಟಿಗೆ ತುಟಿ ಹಚ್ಚಿ ಚುಂಬಿಸುವುದು. ಹಣ್ಣಿನ ರಸ ಹೀರಿ ಖಾಲಿಯಾದರೂ ಅಧರದ ಮಾಧುರ್ಯವನ್ನು ಹೀರುತ್ತಾ ಚುಂಬನವನ್ನು ಮುಂದುವರಿಸಲು ಅಡ್ಡಿಯಿಲ್ಲ.
  • ವ್ಯಾಘ್ರ ಚುಂಬನ (Tiger Kiss): ಸಂಗಾತಿಗೆ ತಿಳಿಯದಂತೆ ಹಿಂದಿನಿಂದ ಹೋಗಿ ಗಬ್ಬಕ್ಕನೆ ‘ಗ್ರಾಬ್’ ಮಾಡಿ ಜೋರಾಗಿ ಮುತ್ತಿಡುವುದು. ಈ ಸಪ್ರೈಸ್ ಚುಂಬನ ಆಕೆ/ಆತ ನನ್ನು ರೋಮಾಂಚನಗೊಳಿಸುತ್ತದೆ.
  • ಪಾತರಗಿತ್ತಿ ಮುತ್ತು (Butterfly Kiss): ಉಸಿರಿನಷ್ಟು ಸಮೀಪಕ್ಕೆ ಹೋಗಿ ನಿಮ್ಮ ಸಂಗಾತಿಗೆ ಮುತ್ತೊತ್ತುವಾಗ ನಿಮ್ಮ ಕಣ್ಣುಗಳು ಪಟಪಟನೆ ಬಡಿದುಕೊಂಡರೆ ಅದು ಪಾತರಗಿತ್ತಿ ಮುತ್ತು! ಈ ಥರದ ಮುತ್ತು ಸಂಗಾತಿಯೆಡೆಗೆ ನಿಮ್ಮ ಹೃದಯ ತೆರೆದುಕೊಳ್ಳುವಂತೆ ಮಾಡುತ್ತವೆ.
  • ಮಾತಿನಲ್ಲೇ ಮುತ್ತು (Talking Kiss): ಸಂಗಾತಿಯ ಬಾಯ ಸಮೀಪಕ್ಕೆ ಹೋಗಿ ಏನನ್ನೋ ಉಸುರುವುದು! ಯಾರಾದರೂ ನೋಡಿ ಸಿಕ್ಕಿಬಿದ್ದರೆ, ‘ಇಲ್ಲ, ನಾನು ಅವಳಿಗೆ ಮುತ್ತು ಕೊಡುತ್ತಿರಲಿಲ್ಲ. ಗುಟ್ಟು ಹೇಳುತ್ತಿದ್ದೆ’ ಎಂದು ಹೇಳಿ ತಪ್ಪಿಸಿಕೊಳ್ಳುವುದು!
  • ಇಂಟರ್‌ನೆಟ್ ಮುತ್ತು (Internet Kiss): ಇಷ್ಟೆಲ್ಲಾ ಹೇಳಿ ಇದನ್ನು ಹೇಳದಿದ್ದರೆ ನೀವು ಮುನಿಸಿಕೊಳ್ಳುತ್ತೀರಿ. ಏನಿಲ್ಲ, ತೀರಾ ಸುಲಭ. ಚಾಟಿಂಗ್ ಮಾಡುವಾಗ ಅಥವಾ ಸ್ಕ್ರಾಪ್ ಬರೆಯುವಾಗ ಈ ಚಿಹ್ನೆಯನ್ನು ಬಳಸಿದರಾಯ್ತು: :-*

ಸಾಕು. ತುಂಬಾ ಜಾಸ್ತಿ ಆಯ್ತು. ಯಕ್ಚುವಲೀ, ಇವತ್ತು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಬೆಳಗಿನಿಂದ ನನಗೆ ಮೂಡ್ ಔಟ್. ನನ್ನ ಮೂಡೇ ಆವಿಯಾಗಿ ಹೋಗಿ ಆಗಸದಲ್ಲಿ ಮೋಡವಾದಂತಿದೆ. ಹೀಗಾಗಿ, ಏನಾದರೂ ಇಂಟರೆಸ್ಟಿಂಗ್ ವಿಷಯವನ್ನು ಓದಿ ಮನಸ್ಸನ್ನು ಸರಿ ಮಾಡಿಕೊಳ್ಳೋಣ ಅಂತ ಇಂಟರ್‌ನೆಟ್ಟಿನಲ್ಲಿ ಹುಡುಕ ಹೊರಟೆ. ಆಗ ಸಿಕ್ಕಿದ್ದು ಇದು! ಹೀಗಾಗಿ, ನಿಮಗೆ ಈ ಮಾಹಿತಿಯಿಂದ ಮತ್ತೇರಿ, ಯಾವುದಾದರೂ ವಿಧಾನವನ್ನು ಪ್ರಯೋಗ ಮಾಡಲು ಹೋಗಿ ಹೆಚ್ಚು-ಕಮ್ಮಿ ಆದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಇಲ್ಲಿರುವ ಮಾಹಿತಿಯೆಲ್ಲವನ್ನೂ ನಾನು ಪಡೆದದ್ದು ಅಂತರ್ಜಾಲದಿಂದ. ನನ್ನ ಅನುಭವ ಎಳ್ಳಷ್ಟೂ ಇಲ್ಲ.

ಮತ್ತೊಂದು ವಿಷಯ: ನೀವು ಈ ವಿಧಾನವನ್ನು ಪ್ರಯೋಗಿಸಲೇಬೇಕು ಎಂದಾದರೆ ದಯವಿಟ್ಟು ಅದನ್ನು ನಿಮ್ಮ ಸಂಗಾತಿಯ ಮೇಲೇ ಪ್ರಯೋಗಿಸಿ. ಅದಿಲ್ಲದಿದ್ದರೆ ‘ಪ್ರಥಮ ಚುಂಬನಂ ದಂತ ಭಗ್ನಂ’ ಆದೀತು; ಎಚ್ಚರ!

Saturday, April 14, 2007

ಕನಸು ಕಟ್ಟಲು ಮೀಸಲು ಈ ಸಲದ ಬೇಸಿಗೆ ರಜೆ...

ಹೇ ಕಳ್ಳಾ...!

ಕಳ್ಳ ಅನ್ನದೇ ಮತ್ತೇನೋ ಅನ್ಲಿ? ಹೇಳ್ದೇ ಕೇಳ್ದೆ ಮೊದಲ ನೋಟದಲ್ಲೇ ನನ್ನ ಹೃದಯಕ್ಕೆ ಲಗ್ಗೆಯಿಟ್ಟೆ. ಗೊತ್ತೇ ಇಲ್ಲದಿದ್ದ ಹೊಸ ಹೊಸ ಭಾವಗಳ ಅಲೆ ಎಬ್ಬಿಸಿದೆ. ಆಸೆಗಳ ಕೆರಳಿಸಿದೆ. ನನ್ನ ಹೃದಯವನ್ನೇ ಕದ್ದೆ. ಈಗ ನೋಡು, ನೂರಾರು ಮೈಲಿ ದೂರದಲ್ಲಿದ್ದರೂ ನನ್ನ ಮನಸಿನ ಮೂಲೆಯಲ್ಲೆಲ್ಲೋ ಅವಿತು ಕುಳಿತೇ ಇದ್ದೀಯ. ನಿನ್ನನ್ನ ಸುಮ್ನೆ ಬಿಡಲ್ಲ ಕಣೋ, ಮದ್ವೆ ಮದುವೆ ಆಗ್ಬಿಡ್ತೀನಿ!

ಮೊನ್ನೆ ಬಸವನಗುಡಿಯಲ್ಲಿ ಒಂದು ಪ್ರೋಗ್ರಾಂ ಇತ್ತು. ನನ್ನಿಷ್ಟದ ಪ್ರೇಮಕವಿ ಕೆ.ಎಸ್.ನ.ಗೆ ಕವನ ನಮನ ಕಾರ್ಯಕ್ರಮ. ಜೊತೆಗೆ ಡಾ| ರಾಜ್‍ಕುಮಾರ್ ನೆನಪು. ನಾನು ಹೋಗೋಷ್ಟರಲ್ಲಿ ಅಪರ್ಣಾ ಮೈಕ್ ಹಿಡಿದು ನಿರೂಪಣೆ ಶುರು ಮಾಡಿಬಿಟ್ಟಿದ್ಲು. ರಾಜ್‍ರ ಫೋಟೋಗೆ ಹೂವು ಹಾಕೋದರ ಮೂಲಕ ಕಾರ್ಯಕ್ರಮವನ್ನ ಮೂಡಲಮನೆ ಕೆ.ಎಸ್.ಎಲ್. ಸ್ವಾಮಿ ಉದ್ಘಾಟನೆ ಮಾಡಿದ್ರು. ರಾಷ್ಟ್ರಕವಿ ಜಿ.ಎಸ್.ಎಸ್. ಮೆಲುದನಿಯಲ್ಲಿ ಪ್ರೇಮಕವಿಯ ಕವನವೊಂದನ್ನು ಓದಿದರು. ಆಮೇಲೆ ಒಬ್ಬೊಬ್ರಾಗಿ ಕವನ ಓದಿದ್ದು. ಮುಖ್ಯಮಂತ್ರಿ ಚಂದ್ರು, ಬಿ‍ಆರೆಲ್, ಮಾಸ್ಟರ್ ಕಿಶನ್ (ನೀನು ಚಿಕ್ಕವ್ನಿದ್ದಾಗ ಅವ್ನಂಗೆ ಇದ್ದೆ ಕಣೋ, ಈಗ ನೆನಪಾಗ್ತಿದೆ), ನಾಗಾಭರಣ, ಡಾ. ಪೂರ್ಣಿಮಾ.... ಇನ್ನೂ ಯಾರ್‍ಯಾರೋ.. ರವಿ ಬೆಳಗೆರೆ ಒಂದಷ್ಟು ಡೈಲಾಗ್ ಹೊಡ್ದು ಚಪ್ಪಾಳೆ ಗಿಟ್ಟಿಸಿದ.. ಮತ್ತೇನು ಗೊತ್ತಾ? ಕೆ.ಎಸ್.ನ. ಅಜ್ಜನ ಹೆಂಡತಿ ವೆಂಕಮ್ಮ ಅವ್ರೂ ಬಂದಿದ್ರು ಪ್ರೋಗ್ರಾಮಿಗೆ. ನಂಗೆ ಅವ್ರುನ್ನ ನೋಡಿದಾಗಲೆಲ್ಲ ಕಲ್ಪನಾಲೋಕದಲ್ಲಿ ವಯಸ್ಸಾದ ನನ್ನ ಚಿತ್ರ, ಪಕ್ಕದಲ್ಲಿ ಹಣ್‍ಹಣ್ಣು ಮುದುಕ ನಿನ್ನ ಚಿತ್ರ ತೇಲಿಬರುತ್ತೆ.. ಆಮೇಲೆ ಸಿ. ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಶಂಕರ್ ಶಾನ್‍ಭಾಗ್, ಅಜಯ್ ವಾರಿಯಾರ್ ಎಲ್ರಿಂದ ಹಾಡೂ ಹಾಡು! ಪ್ರೇಮಗೀತೆಯ ಗುಂಗಿನಲ್ಲಿ ನಾನು ಮುಳುಗಿ ಹೋಗಿದ್ದೆ... ಕುಂತಲ್ಲೇ ಕನಸತೊಡಗಿದ್ದೆ. ಕನಸಿನೊಳಗೊಂದು ಕನಸು. ಆ ಒಂದಿರುಳ ಕನಸಿನಲಿ ನಾನೇ ನಿನ್ನನ್ನ ಕೇಳ್ತಾ ಇದ್ದೆ: ನಮ್ಮೂರು ಚಂದವೋ ನಿಮ್ಮೂರು ಚಂದವೋ ಹೇಳೋ ಹಳ್ಳಿಮುಕ್ಕಾ ಅಂತ.. ಉತ್ತರವನ್ನೇ ಕೊಡದೆ ನೀನು ಗೇರು ಮರ ಹತ್ತಿ ನನಗಾಗಿ ಹಣ್ಣುದುರಿಸುತ್ತಿದ್ದೆ..

ಹಾಗೇ ಕನಸು ಕಾಣುತ್ತಾ ಕಹಳೆ ಬಂಡೆಯ ಮೇಲೆ ಕುಳಿತಿದ್ದುಬಿಡುತ್ತಿದ್ದೆನೇನೋ? ನಿನ್ನ ನೆನಪಿನ ಮಳೆಯಲ್ಲಿ ತೋಯುತ್ತಾ? ಆದರೆ ಅಷ್ಟರಲ್ಲಿ ನಿಜವಾದ ಮಳೆ ಶುರುವಾಗಿಬಿಟ್ಟಿತು. ಮಳೆಯ ಮೇಲೆ ಮಳೆ. ಹಾಡುವವರೆಲ್ಲಾ ದಿಕ್ಕಾಪಾಲು. ಆಮೇಲೆಲ್ಲಾ ಮಳೆಯ ಹಾಡು. ಮಣ್ಣ ವಾಸನೆ. ನೆನೆಯುವ ನನ್ನ ಹುಚ್ಚು. ಆ ಕಹಳೆ ಬಂಡೆ ಪಾರ್ಕ್ ಇದೆಯಲ್ಲಾ? ಅಲ್ಲಿ ಸಂಜೆ ಹೊತ್ತಿಗೆ ನೀನೊಮ್ಮೆ ಹೋಗಿ ನೋಡ್ಬೇಕು: ಅದೆಷ್ಟು ಹಕ್ಕಿಗಳಿವೆ ಮಾರಾಯ ಅಲ್ಲಿ...! ನಾನು ಹೋದಾಗ ಅದಿನ್ಯಾವಥರ ಚಿಲಿಪಿಲಿಚಿಲಿಪಿಲಿ ಅಂತ ಕಲರವ ಮಾಡ್ತಿದ್ವು ಅಂತೀಯಾ? ಬೆಂಗಳೂರಿನಲ್ಲೂ ಇಂಥದ್ದೊಂದು ಜಾಗ ಇದೆಯಲ್ಲಪ್ಪಾ ಅಂತ ನಂಗೆ ಆಶ್ಚರ್ಯ.. ಆದ್ರೆ ವಾಪಸು ಹೋಗುವಾಗ ಸ್ವಲ್ಪಾನೂ ಶಬ್ದ ಕೇಳಿಸ್ತಿರಲಿಲ್ಲ.. ಆ ಪರಿಯ ಮಳೆ ಬಂದಿತ್ತಲ್ಲ? ಏನಾದ್ವೋ ಏನೋ ಅಂತ ನಂಗೆ ಕಳವಳ.. ಮಳೆಯಲ್ಲಿ ನೆಂದು ಮರಿಹಕ್ಕಿಗಳಿಗೆ ಜ್ವರ-ಗಿರ ಬಂತೋ ಏನೋ? ಮನೆ ಮುಟ್ಟುವವರೆಗೂ ಅದನ್ನೇ ಯೋಚಿಸುತ್ತಿದ್ದೆ..

ನನಗೆ ಹೀಗೆ ಪ್ರಕೃತಿಯ ಬಗ್ಗೆ, ಹಕ್ಕಿಗಳ ಬಗ್ಗೆ, ಹೂವುಗಳ ಬಗ್ಗೆ, ಹಣ್ಣುಗಳ ಬಗ್ಗೆ ಆಸಕ್ತಿ ಕೆರಳುವಂತೆ ಮಾಡಿದ್ದೇ ನೀನು. ಆಗಿನ್ನೂ ನಾನು ಊರಲ್ಲಿದ್ದೆ. ಒಂಭತ್ತನೇ ತರಗತಿಯ ಪರೀಕ್ಷೆಗಳು ಮುಗಿದು, ರಿಸಲ್ಟ್ ಬಂದು, ನಾನು ಪೂರ್ತಿ ನೈಂಟಿಸಿಕ್ಸ್ ಪರ್‍ಸೆಂಟ್ ತಗೊಂಡು ಪಾಸಾಗಿ, ಖುಷಿಗೆ ಅಮ್ಮ ಮಾಡಿದ್ದ ಕೊಬ್ರಿ ಮಿಠಾಯಿ ಪ್ಯಾಕ್ ಮಾಡ್ಕೊಂಡು ಸೀದಾ ಅಜ್ಜನ ಮನೆಗೆ ಬಂದಿದ್ದೆ. ಪ್ರತಿ ಬೇಸಿಗೆ ರಜೆಯನ್ನೂ ಹೆಚ್ಚುಪಾಲು ನಾನು ಕಳೆಯುತ್ತಿದ್ದುದು ಅಜ್ಜನ ಮನೆಯಲ್ಲೇ. ಯಾಕೇಂದ್ರೆ ಅಲ್ಲಿ ನನಗೆ ಆಡಲಿಕ್ಕೆ ಮಾವನ ಮಗಳು ಪಲ್ಲವಿ ಇದ್ಲು. ಅಲ್ದೇ ಮನೇಲಿದ್ರೆ ಅದೂ ಇದೂ ಅಮ್ಮಂಗೆ ಕೆಲ್ಸ ಮಾಡಿಕೊಡ್ತಾ, 'ಹೋಮ್‍ವರ್ಕ್ ಮಾಡ್ಕೊಳೇ' ಅನ್ನೋ ಬೆದರಿಕೆಯನ್ನ ದಿನಕ್ಕೆ ನಾಲ್ಕು ಸಲ ಕೇಳಿಸಿಕೊಳ್ತಾ ಇರಬೇಕು. ಅಜ್ಜನ ಮನೇಲಾದ್ರೆ ಹಾಗಲ್ಲ. ಒಂದು ಏರ್‌ಬ್ಯಾಗ್ ತುಂಬಾ ಬಟ್ಟೆ ತುಂಬ್ಕೊಂಡು ಬಂದುಬಿಟ್ರೆ ಮುಗೀತು. ನಾನೂ ಪಲ್ಲವಿ ಗಲಾಟೆಯ ಸಾಮ್ರಾಜ್ಯವನ್ನೇ ಸ್ಥಾಪಿಸಿಬಿಡುತ್ತಿದ್ದೆವು. ಆಟ ಆಟ ಆಟ! ಆಮೇಲೇ, ಅಜ್ಜನ ಮನೇಲಿ ಸಿಗೋಷ್ಟು ಹಣ್ಣುಗಳು, ತಿರುಗಾಡೋಕೆ ಗದ್ದೆ, ತೋಟ, ಗುಡ್ಡಗಳು ನಮ್ಮೂರಲ್ಲಿ ಇಲ್ವೇ ಇಲ್ಲ. ನಾವು ಬೇಸಿಗೆ ರಜೆಯ ಆ ಎರಡು ತಿಂಗಳು ಪೂರ್ತಿ ಕಾಡು ಸುತ್‍ತಾ ಇದ್ದುಬಿಡ್ತಿದ್ವಿ. ಕಚಗಟ್ಟೆ ಪೇರಲೇಕಾಯಿಯಲ್ಲೂ ಪರಮ ರುಚಿ!

ಆ ವರ್ಷದ ರಜೆಯಲ್ಲಿ ನೀನು ಸಿಕ್ಕಿದೆ. ಅಜ್ಜನ ಮನೆ ಪಕ್ಕದ ಮನೆ ಗಣಪತಣ್ಣನಿಗೆ ಮಗನೊಬ್ಬನಿದ್ದಾನೆ, ದಾವಣಗೆರೆಯಲ್ಲಿ ಓದ್ತಾ ಇದಾನೆ, ಇಷ್ಟೊಂದು ಸ್ಮಾರ್ಟು, ಇಷ್ಟೊಂದು ಕ್ಯೂಟು, ಇಷ್ಟೊಂದು ಹ್ಯಾಂಡ್‍ಸಮ್ಮು ಅಂತೆಲ್ಲ ನಂಗೆ ಗೊತ್ತೇ ಇರ್ಲಿಲ್ಲ. ಊಹುಂ, ಗೊತ್ತಿತ್ತು; ಆದ್ರೆ ಮರೆತುಹೋಗಿತ್ತು. ನೀನು ಚಿಕ್ಕವನಿದ್ದಾಗ ನಾನು ನೋಡಿದ್ದೆ ಅಷ್ಟೇ. ನಾವಿಬ್ರೂ ಆಟಾನೂ ಆಡಿದ್ವಿ. ಆದರೆ ಆಮೇಲೆ ನೀನು ನಿನ್ನ ಅಜ್ಜನ ಮನೇಲಿ ಓದ್ಲಿಕ್ಕೆ ಅಂತ ಹೋದೆ. ಅಲ್ಲಿಂದ ದಾವಣಗೆರೆಗೆ. ನನ್ನ ಸ್ಮೃತಿಪಟಲದಿಂದ ಹೆಚ್ಚೂಕಮ್ಮಿ ಅಳಿಸಿಯೇ ಹೋಗಿತ್ತು ನಿನ್ನ ಚಿತ್ರ. ಆದರೆ ಎಲ್ಲವನ್ನೂ ಮತ್ತೆ ಎದುರಿಗೇ ತಂದು ನಿಲ್ಲಿಸಿಬಿಟ್ಟೆಯಲ್ಲೋ ಮನ್ಮಥಾ... ಇಷ್ಟು ವರ್ಷ ರಜೆಯಲ್ಲೂ ಯಾಕೋ ಮನೆಗೆ ಬರಲಿಲ್ಲ? ಈಗ ಯಾಕೋ ಬಂದೆ? ಬಂದವನೇ ಏಕೆ ಹೀಗೆ ನನ್ನ ಭಾವನೆಗಳ ಮೇಲೆ ದಾಳಿ ಮಾಡಿದೆಯೋ? ಇಲ್ಲ, ಏನನ್ನೂ ಕೇಳಲಿಲ್ಲ ನಿನ್ನ ಬಳಿ. ನೀನು ಚಿಕ್ಕವನಿದ್ದಾಗ ಇದ್ದ ಗಣಪತಣ್ಣನ ಮಗ ಮಹೇಶನಾಗಿ ಉಳಿದಿರಲೇ ಇಲ್ಲ. ಈಗ ನಿನ್ನನ್ನು ನೋಡಿದಾಕ್ಷಣ ಎಲ್ಲಿಂದಲೋ ನನ್ನಲ್ಲಿ ಉದ್ಭವಿಸಿದ ನಾಚಿಕೆಗೆ ಮಾತೆಲ್ಲಾ ಇಂಗಿಹೋಗಿದ್ದವು.

ಆ ವರ್ಷದ ರಜೆಯಲ್ಲಿ ಕಾಡು ಸುತ್ತಲಿಕ್ಕೆ ನನ್ನ-ಪಲ್ಲವಿ ಜೊತೆ ನೀನೂ ಇದ್ದೆ. ನೀನು ಕೊಯ್ದು ಕೊಡುತ್ತಿದ್ದ ಬಿಳಿಬಿಳೀ ಮುಳ್ಳು ಹಣ್ಣುಗಳಿಗೆ ಇಷ್ಟು ವರ್ಷಕ್ಕಿಂತ ವಿಶೇಷವಾದ ರುಚಿ ಪ್ರಾಪ್ತವಾಗಿತ್ತು. ಗೇರುಹಣ್ಣುಗಳಲ್ಲಿ ಜಾಸ್ತಿ ರಸ ತುಂಬಿತ್ತು. ಹಲಗೆ ಹಣ್ಣಿನ ಸಿಹಿ ಹೆಚ್ಚಿತ್ತು. ಈ ಕೌಳಿ ಹಣ್ಣುಗಳು ಮಾತ್ರ ಖೋಡಿ, ನನ್ನಲ್ಲಿ ಹುಚ್ಚು ಲಹರಿಯನ್ನೇ ಹುಟ್ಟಿಸಿದ್ದವು. ಮಾವಿನ ಕಾಯಿ ಕೊಯ್ದು ತಂದು ಅತ್ತೆ ಹತ್ರ ಉಪ್ಪು-ಖಾರ ಮಾಡಿಸ್ಕೊಂಡು ದೊಡ್ಡ ತಟ್ಟೆಯಲ್ಲಿಟ್ಟುಕೊಂಡು ತಿನ್ನುವಾಗ ನನ್ನ ಕೈ ನಿನ್ನ ಕೈಗೆ ತಾಗಿ ರೋಮಾಂಚನ.

ಪಲ್ಲವಿಗೆ ನಾನು ಹೇಳುವ ಮೊದಲೇ ಎಲ್ಲಾ ಅರ್ಥ ಆಗಿಬಿಟ್ಟಿತ್ತು. 'ಅಮೃತಾ ಯಾಕೋ ಭಾರೀ ಖುಷಿಯಾಗಿದ್ದಂಗೆ ಕಾಣ್ಸುತ್ತಲಾ?' ಅನ್ನುತ್ತಾ ಛೇಡಿಸುತ್ತಿದ್ದಳು. ನಿಜ ಹೇಳಬೇಕೆಂದರೆ ನಿನ್ನಲ್ಲಿ ನಾನು ಮೆಚ್ಚಿದ್ದು ಸ್ಮಾರ್ಟ್‍ನೆಸ್ಸನ್ನಲ್ಲ. ನೀನು ಹ್ಯಾಂಡ್‍ಸಮ್ ಅಂತ ಅಲ್ಲ. ನಂಗಿಷ್ಟವಾದದ್ದು ಪ್ರಕೃತಿಯೆಡೆಗೆ ನಿನಗಿದ್ದ ವ್ಯಾಮೋಹ ಮತ್ತು ನಿನ್ನ ಭಾವಲೋಕ. ಅದಾಗಲೇ ಸಾಹಿತ್ಯದಲ್ಲಿ ನಿನಗಿದ್ದ ಅಪಾರ ಜ್ಞಾನ. ನೀನೇ ಗೀಚುತ್ತಿದ್ದ ಪುಟ್ಟ ಪುಟ್ಟ ಹನಿಗವನಗಳು. ಸೋಗೆ ಅಟ್ಲಿನ ಬಳಿ ಸಿಕ್ಕಿದ ಗಾಯಗೊಂಡ ಮರಿಗಿಣಿಯನ್ನು ನೀನು ತಂದು ಗೂಡಿನಲ್ಲಿಟ್ಟು ಅದೆಷ್ಟು ಚೆನ್ನಾಗಿ ಆರೈಕೆ ಮಾಡಿದ್ದೆ... 'ಓದ್ತೀನಿ. ಆದ್ರೆ ಎಲ್ಲರ ಹಂಗೆ ಬೆಂಗ್ಳೂರಿಗೆ ಹೋಗಿ ಕೆಲಸ ತಗೊಂಡು ಜೀವಮಾನ ಇಡೀ ಅಲ್ಲೇ ಇರಲ್ಲ. ನಂಗೆ ಈ ಊರು ಇಷ್ಟ...' ಅಂತ ಎಷ್ಟು ಸ್ಪಷ್ಟವಾಗಿ ಹೇಳಿದ್ದೆ...

ಈಗ ನೋಡು, ಎಸ್ಸೆಸೆಲ್ಸಿ ಮುಗಿದು, ನಾನು ಡಿಸ್ಟಿಂಗ್ಶನ್‍ನಲ್ಲಿ ಪಾಸಾಗಿ, ನಾನು ಎಷ್ಟೇ ಇಷ್ಟವಿಲ್ಲ ಎಂದರೂ ಬಿಡದೇ 'ಇಲ್ಲೀ ಕಾಲೇಜುಗಳು ಒಂದೂ ಚೆನ್ನಾಗಿಲ್ಲ. ನೀನು ಬೆಂಗಳೂರಿಗೆ ಹೋಗು. ಚಿಕ್ಕಪ್ಪನ ಮನೇಲಿ ಇದ್ಕೊಂಡು ಓದು' ಅಂತ ಬಲವಂತ ಮಾಡಿ ಇಲ್ಲಿಗೆ ತಂದು ಸೇರಿಸಿದ್ದಾರೆ. ಏನಿದೆ ಗೆಳೆಯಾ ಇಲ್ಲಿ..? ಟ್ರಾಫಿಕ್ಕೊಂದು ಬಿಟ್ಟು? ಹೀಗೆ ಅಪರೂಪಕ್ಕೆ ಸಿಗುವ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಬಿಟ್ಟು? ದೂರಕ್ಕೊಂದು ಕಾಣುವ ಪಾರ್ಕುಗಳನ್ನು ಬಿಟ್ಟು? ಇಂದು ಇಲ್ಲಿ ಸಿಕ್ಕ ಹಕ್ಕಿ ಕಲರವ ನನಗೆ ಗೊತ್ತಿದ್ದಂತೆ ಮತ್ತೆಲ್ಲೂ ಇಲ್ಲ ಬೆಂಗಳೂರಿನಲ್ಲಿ... ಯಾಕಿರಬೇಕು ಹೇಳು ಇಲ್ಲಿ?

ನೀನು ಹೇಳಿದ್ದೇ ಸರಿ. ಹಳ್ಳಿಯೇ ಚಂದ. ನನಗಿನ್ನು ಕೇವಲ ಒಂದು ಎಕ್ಸಾಮ್ ಇದೆ. ಆಮೇಲೆ ಎರಡೂ ವರೆ ತಿಂಗಳು ರಜ. ಸೀದಾ ಊರಿಗೆ ಬರುತ್ತೇನೆ. ಅಲ್ಲಿಂದ ಅಜ್ಜನ ಮನೆಗೆ. ನೀನೂ ಬರುತ್ತಿದ್ದೀಯಾ ತಾನೆ? ನಿಂಗೆ ದಾವಣಗೆರೆಯಲ್ಲಿ ಇದೇ ಕೊನೆ ವರ್ಷ ಅಲ್ವಾ? ಆಮೇಲೆ ಏನು ಮಾಡುತ್ತೀ? ತಾಳು, ಊರಲ್ಲಿ ಸಿಕ್ಕಾಗ ಎಲ್ಲಾ ಮಾತಾಡೋಣ. ಈ ಸಲದ ಬೇಸಿಗೆ ರಜವನ್ನು ಕನಸು ಕಟ್ಟಲಿಕ್ಕೇ ಮೀಸಲಿಡೋಣ. ಪಲ್ಲವಿಗೆ ಸುಮ್ಮನೆ ಮನೆಯಲ್ಲಿರಲು ಹೇಳಿ ನಾವಿಬ್ಬರೇ ಕಾಡು ಸುತ್ತೋಣ. ಆಯ್ತಾ?

ಊಂಪ್ಚ್! ಅದು ಮುತ್ತು. ಸಿಗೋವರಿಗೆ ಇಟ್ಕೋ ಅಂತ ಕೊಟ್ಟೆ. ಮಜಾ ಮಾಡು...! ಸೀ ಯೂ..

-ಅಮೃತಾ

[ ದಟ್ಸ್‍ಕನ್ನಡ.ಕಾಂ ನಲ್ಲಿ ಪ್ರಕಟಿತ ] Related article: ನಲ್ಮೆಯ ನಮನ

Monday, April 09, 2007

ಒಂದು ಕೀ-ಕತೆ!

"ಕಾ ಕಾ" ಅನ್ನುವುದು ಕಾಗೆ, "ಕೂ ಕೂ" ಅನ್ನುವುದು ಕೋಗಿಲೆ, "ಕೋ ಕೋ" ಅನ್ನುವುದು ಕೋಳಿ, ಹಾಗಾದ್ರೆ "ಕೀ ಕೀ" ಅನ್ನುವುದು ಯಾರು?

ಉ: ಕೀ ಕಳಕೊಂಡವರು!

-ಅದೊಂದು ಜೋಕು. ಆದರೆ ಈ ಜೋಕುಗಳು ಜೋಕಿಗೀಡಾದವರಿಗೆ ಜೋಕಾಗಿರುವುದಿಲ್ಲ ನೋಡಿ. ಐ ಮೀನ್, ವ್ಹಾಟ್ ಐ ವಾಂಟ್ ಟು ಸೇ ಈಸ್, ಯಾರು ಈ ಜೋಕೀ-ಘಟನೆಯಲ್ಲಿ ಪಾತ್ರಧಾರಿಗಳಾಗಿರುತ್ತಾರೋ ಅವರಿಗೆ ಅದು ನಗಲಿಕ್ಕೂ ಆಗದ ಧರ್ಮಸಂಕಟವಾಗಿರೊತ್ತೆ. ಇನ್ನೂ ಅರ್ಥ ಆಗ್ಲಿಲ್ವಾ? ಹೋಗ್ಲಿ ಬಿಡಿ, ಬಿಟ್ ಹಾಕಿ.

ಮೊನ್ನೆ ಏನಾಯ್ತು ಅಂದ್ರೆ, ನಾನು ಯುಗಾದಿಗೆ ಊರಿಗೆ ಹೋಗಿದ್ನಲ್ಲಾ? ಹೋಗಿದ್ದೆ ತಾನೆ? ಹೋಗಿ, ಬೆಂಗಳೂರಿಗೆ ವಾಪಾಸ್ ಬರಬೇಕಾದ್ರೆ ನನ್ನ ರೂಮಿನ ಕೀಯನ್ನು ಊರಿನಲ್ಲೇ ಬಿಟ್ಟುಬಂದುಬಿಟ್ಟೆ! ಊರಿನಿಂದ ಸೊರಬಕ್ಕೆ ಬಂದು, ಸೊರಬದಿಂದ ಬೆಂಗಳೂರಿನ ಬಸ್ಸು ಹತ್ತಿ, ಪುಶ್‍ಬ್ಯಾಕ್ ಸೀಟನ್ನು ಹಿಂದಕ್ಕೆ ಪುಶ್ ಮಾಡುವಾಗಲೇ ಗೊತ್ತಾಗಿಹೋಯಿತು ಕೀ ಮನೆಯಲ್ಲೇ ಉಳಿದಿದೆ ಅಂತ. ಆದರೆ ಏನು ಮಾಡುವುದು? ಬಸ್ಸು ಆಗಲೇ ಹೊರಡಲಿಕ್ಕೆ ರೆಡಿಯಾಗಿದೆ. ಈಗ ಮತ್ತೆ ಊರಿಗೆ ಹೋಗಿ ಕೀ ತರುವುದಂತೂ ಸಾಧ್ಯವಿಲ್ಲ. ಸರಿ ಮತ್ತೇನು ಮಾಡಲಿಕ್ಕಾಗುತ್ತೆ, ಓನರ್ ಬಳಿ ಇನ್ನೊಂದು ಕೀ ಹೇಗಂದರೂ ಇರೊತ್ತೆ; ಅವನಿಂದ ಕೇಳಿ ಪಡೆದರಾಯಿತು ಅಂದುಕೊಂಡು ಸೀಟಿಗೊರಗಿದೆ. ಆದರೂ ಈ ಟೆನ್ಷನ್ ಯಾರಪ್ಪನ ಮನೇದು ಹೇಳಿ? ಪಾಪಿ, ರಾತ್ರಿಯಿಡೀ ನಿದ್ದೆಗೊಡಲಿಲ್ಲ.

ನಾನು ಟೆನ್ಷನ್‍ನಲ್ಲಿರುವುದು ಬಸ್ಸಿನಲ್ಲಿನ ಮತ್ಯಾವುದೇ ಜೀವಿಗೂ ಗೊತ್ತಿರಲಿಲ್ಲ. ಎಲ್ಲರೂ ಅವರವರ ಸೀಟಿಗೊರಗಿ, ಅವರವರ ಕಣ್ಣು ಮುಚ್ಚಿ, ಅವರವರ ಕನಸು-ನಿದ್ರೆಯ ಲೋಕದಲ್ಲಿ ಮುಳುಗಿದರು. ಶಿರಾಳಕೊಪ್ಪದಲ್ಲಿ ಬಸ್ಸು ನಿಂತಿದ್ದಾಗ ಒಳನುಗ್ಗಿದ್ದ ಸೊಳ್ಳೆಗಂತೂ ನನ್ನ ಮೇಲೆ ಅದೇನು ಪ್ರೀತಿಯೋ ಕಾಣೆ: ಬೆಂಗಳೂರು ಮುಟ್ಟುವವರೆಗೂ ನನ್ನ ಕಾಲಿಗೆ, ಕೈಗೆ, ಮುಖಕ್ಕೆ ಮುತ್ತುಕೊಡುತ್ತಲೇ ಇತ್ತು. ಕೆಲವೊಮ್ಮೆ ಅದು ನನ್ನ ಕಿವಿಯ ಬಳಿ ಬಂದು ಎಷ್ಟು ಇಂಪಾಗಿ ತನ್ನ 'ಗುಂಯ್-ಗಾನ' ಹಾಡುತ್ತಿಂದರೆ ಅಷ್ಟೆಲ್ಲಾ ಅಬ್ಬರದಿಂದ ಬಸ್ಸು ಹಾಡುತ್ತಿದ್ದ 'ಬುರ್-ಗಾನ' ಇದರ ಮುಂದೆ ಡಲ್ಲಾಗಿಬಿಡುತ್ತಿತ್ತು.

ಆರೂವರೆಗೆ ಸರಿಯಾಗಿ ಬಸ್ಸು ಬೆಂಗಳೂರು ಮುಟ್ಟಿತು. ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ಪೇಪರ್ ಹುಡುಗರು ಫುಟ್‍ಪಾತ್ ಮೇಲೆ ಕುಕ್ಕರಗಾಲಲ್ಲಿ ಕುಳಿತು ಪೇಪರ್ ಬಂಡಲುಗಳನ್ನು ಒಡೆದು ಗರಿಗರಿ ಮೇನ್ ಪೇಪರಿನ ಒಡಲಿಗೆ ಸಪ್ಲಿಮೆಂಟನ್ನು ಸೇರಿಸುತ್ತಾ ಕೌಂಟ್ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರನ್ನೆಲ್ಲಾ ಹಾದು ನಾನು ಮನೆ ಮುಟ್ಟಿದೆ. ಓನರ್ ಮನೆ ಬಾಗಿಲು ಮುಚ್ಚಿತ್ತು. ಈಗ ಬೆಲ್ ಮಾಡಿ ಅವರನ್ನು ಎಬ್ಬಿಸುವುದು ನನಗೆ ಒಳಿತಾಗಿ ಕಾಣಲಿಲ್ಲ. ಬಾಗಿಲು ತೆರೆಯುವವರೆಗೆ ಕಾಯೋಣ ಅಂತ ತೀರ್ಮಾನಿಸಿದೆ. ನನ್ನ ಬ್ಯಾಗನ್ನು ನನ್ನ ರೂಮಿನ ಬಾಗಿಲಲ್ಲೇ ಇಟ್ಟು, ಅದಾಗಲೇ ತೆರೆದಿದ್ದ ಮೂಲೆ ಅಂಗಡಿಗೆ ಹೋಗಿ ಎರಡು ರೂಪಾಯಿಯ 'ಬೆಡ್-ಕಾಫಿ' ಕುಡಿದೆ. ಪೇಪರ್ ಎಣಿಸುತ್ತಿದ್ದ ಹುಡುಗರ ಬಳಿ ಹೋಗಿ ಯಾವುದೋ ಒಂದು ಪೇಪರ್ ಕೊಂಡು ಅವರ ಜೊತೆಯಲ್ಲೇ ಅಂಗಡಿಕಟ್ಟೆಯ ಮೇಲೆ ಕುಳಿತು ಪೇಪರ್ ಓದತೊಡಗಿದೆ. ಎಲ್ಲೆಲ್ಲೋ ಏನೇನೋ ಆಗಿದೆ ಎನ್ನುತ್ತಿತ್ತು ಪೇಪರು. 'ಎಲ್ಲಿ ಏನಾಗಿದ್ದರೆ ನಿನಗೇನು? ಕೀ ಸಿಗುವವರೆಗೆ ಕಾಯುವ ನಿನ್ನ ಕಷ್ಟ ನಿನಗೆ. ನಿನ್ನ ಜೇಬಲ್ಲಿ ಎರಡು ರೂಪಾಯಿ ಕಾಸಿದೆಯಾ? ಇದ್ದರೆ ಕೊಟ್ಟು ಇನ್ನೊಂದು ಕಾಫಿ ಕುಡಿ' ಅನ್ನುತ್ತಿತ್ತು ಮುಂಜಾನೆ.

ಏಳೂಕಾಲು ಗಂಟೆಗೆ ಓನರ್ ಮನೆಯ ಕದ ತೆರೆದುಕೊಂಡಿತು. ನಾನು ತಕ್ಷಣವೇ ಒಳನುಗ್ಗಿ ನನ್ನ ಸಂಕಷ್ಟವನ್ನು ತೋಡಿಕೊಂಡೆ. ಪ್ರಾಬ್ಲೆಮ್ ಏನಾಗಿತ್ತಪ್ಪಾಂದ್ರೆ, ನಮ್ಮ ಓನರ್ರು ಇದೇ ಏರಿಯಾದಲ್ಲೇ ಸುಮಾರು ಎಂಟ್‍ಹತ್ತು ಮನೆಗಳನ್ನು ಹೊಂದಿದ್ದಾನೆ. ಒಟ್ಟು ನೂರಾರು ಕೀಗಳು. ಅದರಲ್ಲಿ ನನ್ನ ರೂಮಿನ ಕೀ ಹುಡುಕಿ ತೆಗೆಯುವುದು ಅಷ್ಟು ಸುಲಭವಿರಲಿಲ್ಲ. 'ಕೀ ನಂಬರ್ ಗೊತ್ತಾ?' ಕೇಳಿದರು ಓನರ್ರು. ಕೀ ನಂಬರೆಲ್ಲಾ ಯಾರು ನೆನಪಿಟ್ಟುಕೊಳ್ಳುತ್ತಾರ್ರೀ ಈಗಿನ ಕಾಲದಲ್ಲಿ? ಈ ಮೊಬೈಲು ಬಂದಮೇಲೆ ಫೋನ್ ನಂಬರುಗಳನ್ನೇ ನೆನಪಿಟ್ಟುಕೊಳ್ಳುವುದನ್ನು ಬಿಟ್ಟಾಗಿದೆ. ನಾನು 'ಗೊತ್ತಿಲ್ಲ' ಅಂದೆ. ಮನೆಗೆ ಫೋನ್ ಮಾಡಿ ನಾನು ಮಾಡಿಕೊಂಡಿರುವ ಅಚಾತುರ್ಯವನ್ನು ಅಮ್ಮ-ಅಪ್ಪರಿಗೆ ಅರುಹಿ ಬೆಳಗಾ ಮುಂಚೆ ಅವರನ್ನೂ ಟೆನ್ಷನ್ನಿಗೆ ನೂಕಿದೆ. ಕೀ ಹುಡುಕಿ ನಂಬರ್ ಹೇಳುವಂತೆ ತಿಳಿಸಿದೆ. ಐದು ನಿಮಿಷ ಬಿಟ್ಟು ಅವರು ಫೋನ್ ಮಾಡಿ ಕೀ ಮಂಚದ ಕಾಲಬುಡದಲ್ಲೇ ಇತ್ತೆಂದು ತಿಳಿಸಿದರು. ಅರ್ಧಕ್ಕರ್ಧ ಅಳಿಸಿಹೋಗಿದ್ದ ನಂಬರನ್ನು ಕಷ್ಟಪಟ್ಟು ಓದಿ ಹೇಳಿದರು: 'ಟೂ ಫೈವ್ ಟೂ ಏಟ್ ಇರಬೇಕು, ಅಥವಾ ಟೂ ಫೈವ್ ಟೂ ಥ್ರೀ'. ಎರಡೂ ನಂಬರುಗಳನ್ನೂ ನಾನೂ ಓನರ್ರೂ ಸೇರಿ ಜಾಲಾಡಿದೆವು. ಬೆಳಬೆಳಗಾಮುಂಚೆ ಈ ಪರಿ ಕಾಟ ಕೊಡುತ್ತಿರುವುದಕ್ಕೆ ನಮ್ಮ ಓನರ್ ಮನಸ್ಸಿನಲ್ಲಿ ಹಾಕುತ್ತಿರಬಹುದಾದ ಶಾಪಗಳಿಂದ ನನಗೆ ನರಕದಲ್ಲಿ ಸೀಟೊಂದು ರಿಸರ್ವ್ ಆಗಿರೊತ್ತೆ ಅಂದುಕೊಂಡೆ.

ಬಹಳ ಹೊತ್ತು ಹುಡುಕಿದರೂ ಕೀ ಸಿಗಲಿಲ್ಲ. ಕೊನೆಗೆ ಬಾಗಿಲು ಒಡೆದು ತೆಗೆಯುವುದೊಂದೇ ಮಾರ್ಗ ಉಳಿಯಿತು. 'ಒಂಬತ್ತು ಗಂಟೆಗೆ ಪಕ್ಕದ ಮನೆ ಕೆಲಸಕ್ಕೆ ಕಾರ್ಪೆಂಟರ್ ಬರುತ್ತಾನೆ, ಅವನ ಬಳಿ ಹೇಳಿದರಾಯಿತು' ಎಂದು ತೀರ್ಮಾನಿಸಿದೆವು. ನಾನು ಒಂಭತ್ತು ಗಂಟೆಗೆ ಆಫೀಸಿನಲ್ಲಿರಬೇಕಾಗಿತ್ತು. ಆ ಯೋಜನೆಗೆ ಕಲ್ಲು ಬಿತ್ತು. ಒಂಭತ್ತಕ್ಕೆ ಬರಬೇಕಿದ್ದ ಕಾರ್ಪೆಂಟರ್ ಹತ್ತು ಗಂಟೆಗೆ ಬಂದ. ಇತ್ತೀಚೆಗೆ ನಾನು ಒಂದೆರಡು ತಾಸೆಲ್ಲ ತಡವಾದರೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ. ಅರ್ಥಾತ್, ಭಾರತೀಯನಾಗುತ್ತಿದ್ದೇನೆ. ಕಾರ್ಪೆಂಟರ್ ಬಾಗಿಲು ಒಡೆಯದೇ ಕೀ ತೆಗೆಯಲು ಬಹಳ ಕಸರತ್ತು ಮಾಡಿದ. ಈ ಇನ್‍ಸೈಡ್ ಡೋರ್‌ಲಾಕ್‍ಗಳದು ಇದೊಂದು ರಗಳೆ ನೋಡಿ. ಇಲ್ಲಿ ಕೀ ಕಳೆದುಹೋಯಿತೆಂದರೆ ಬೀಗ ಒಡೆಯಲು ಸಾಧ್ಯವೇ ಇಲ್ಲ; ಬಾಗಿಲನ್ನೇ ಒಡೆಯಬೇಕು! ಕಾರ್ಪೆಂಟರು ಉಳಿ, ಚಾಣ, ಸುತ್ತಿಗೆ, ಬೈರಿಗೆ ಇತ್ಯಾದಿ ಏನೇನೋ ಉಪಕರಣಗಳನ್ನು ನನ್ನ ರೂಮಿನ ಬಾಗಿಲ ಮೇಲೆ ಬಳಸಿದ. ಯಾವುದಕ್ಕೂ ಜಗ್ಗಲಿಲ್ಲ ಬಾಗಿಲು. ನನಗೆ ತಲೆಬಿಸಿಯಲ್ಲೂ ಹೆಮ್ಮೆಯೆನಿಸುತ್ತಿತ್ತು: ಇಷ್ಟೊಂದು ಗಟ್ಟಿ-ಸುರಕ್ಷಿತ ಬಾಗಿಲಿನ ಹಿಂದೆ ನಾನು ಇಷ್ಟು ದಿನ ಜೀವಿಸುತ್ತಿದ್ದೆನಲ್ಲ ಎಂದು! ಸುಮಾರು ಅರ್ಧ ಗಂಟೆ ಗುದ್ದಾಡಿ ಬಾಗಿಲು ಒಡೆದದ್ದಾಯಿತು.

ಒಡೆದ ಬಾಗಿಲ ರೂಮಿನೊಳಹೊಕ್ಕೆ. ಖುರ್ಚಿಯ ಮೇಲೆ ಕುಳಿತರೆ ಯಾವುದೋ ಪಾಳುಮನೆಯಲ್ಲಿ ಕುಳಿತಂಥ ಅನುಭವ... ಬಾಗಿಲು ರಿಪೇರಿ ಮಾಡಿ, ಹೊಸ ಬೀಗ ಹಾಕುವವರೆಗೆ ನಾನು ನಾನಾಗಿಯೇ ಇರಲಿಲ್ಲ. ನನ್ನ ರೂಮಿನ ಬಗ್ಗೆ ಏನೋ ಅಭದ್ರತೆ ಕಾಡುತ್ತಿತ್ತು. ತಿಂಗಳ ಕೊನೆಯಲ್ಲಿ ರೆಂಟಿನ ಜೊತೆ ಬಾಗಿಲು ಒಡೆದ ಕಾರ್ಪೆಂಟರ್ ಕೂಲಿ, ಹೊಸ ಬೀಗ ಹಾಕಿಸಿದ ಚಾರ್ಜು ಎಲ್ಲವನ್ನೂ ಕೊಡಬೇಕಾಗಿ ಓನರ್ ಹೇಳಿದ. ನಿರುಪಾಯನಾಗಿ ಒಪ್ಪಿಕೊಂಡೆ. ರಾತ್ರಿ ಮನೆಗೆ ಫೋನ್ ಮಾಡಿದಾಗ 'ಸುಮ್ನೆ ಅನವಶ್ಯಕ ಎಷ್ಟು ಟೆನ್ಷನ್ ತಗೊಂಡೆ.. ದುಡ್ಡು ಬೇರೆ ಖರ್ಚು.. ಪ್ಚ್!' ಎಂದ ಅಮ್ಮನಿಗೆ ಅಂದೆ: 'ಇಂಥಾ ಅನುಭವ ಒಂದು ಸಲ ಆಗ್ಬೇಕು ಬಿಡಮ್ಮ. ಇನ್ನೇನು ಜೀವಮಾನದಲ್ಲಿ ಕೀ ಬಿಟ್ಟು ಹೋಗಲ್ಲ...'

Thursday, April 05, 2007

ತೇಜಸ್ವಿ ನನ್ನೊಂದಿಗೇ ಇದ್ದಾರೆ...

ಡಿಪ್ಲೋಮಾ ಎರಡನೇ ವರ್ಷ... ಮಧ್ಯಾಹ್ನದ ಪೀರಿಯಡ್ಡು... ನಿದ್ರೆ ಬರುತ್ತಿದ್ದರೂ ನಿದ್ರೆ ಮಾಡಬಾರದಂತಹ ಕ್ಲಾಸು. ಸಂಜೀವನ್ ಸರ್ ಕ್ಲಾಸು. ಸಂಜೀವನ್ ಸರ್ ಬರೀ ಲೆಕ್ಚರ್ ಕೊಡುತ್ತಿರಲಿಲ್ಲ; ಪಠ್ಯೇತರ ವಿಷಯಗಳ ಬಗ್ಗೆಯೂ ಹೇಳುತ್ತಿದ್ದರು. ಅಂದು ಅವರು ನಮ್ಮನ್ನು ಕೇಳಿದರು: 'ನಿಮ್ಮಲ್ಲಿ ಸಾಹಿತ್ಯಾಸಕ್ತರು ಯಾರಾದರೂ ಇದ್ದೀರಾ? ನೀವು ತೇಜಸ್ವಿಯವರನ್ನು ಓದಿದ್ದೀರಾ?' ಇನ್ನೂ ಓದಿರಲಿಲ್ಲ. ಮನೆಗೆ ಬರುತ್ತಿದ್ದ ಮ್ಯಾಗಜೀನುಗಳನ್ನು ಓದುತ್ತಿದ್ದೆ. ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದೆ. ತ್ರಿವೇಣಿಯನ್ನು ಓದಿದ್ದೆ. ಎಂ.ಕೆ. ಇಂದಿರಾರನ್ನು ಓದಿದ್ದೆ. ಭೈರಪ್ಪನವರ ಬಗ್ಗೆ ಕೇಳಿದ್ದರೂ ಎರಡು ಸಾಲು ಹೇಳುತ್ತಿದ್ದೆ. ಆದರೆ ತೇಜಸ್ವಿ ಇನ್ನೂ ನನಗೆ ಸಿಕ್ಕಿರಲೇ ಇಲ್ಲ.

ಆದರೆ ಅಂದಿನ ಕ್ಲಾಸು ಮುಗಿಸಿ ಮನೆಗೆ ಹೊರಡುವ ಮುನ್ನ ಲೈಬ್ರರಿಗೆ ಹೊಕ್ಕೆ. ಕಾಲೇಜಿನ ಎದುರಿಗೇ ಲೈಬ್ರರಿ. ಸೊರಬದ ಲೈಬ್ರರಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಜಾಲಾಡಿದಾಗ 'ಕಿರಗೂರಿನ ಗಯ್ಯಾಳಿಗಳು' ಪುಸ್ತಕ ಸಿಕ್ಕಿತು. ಮನೆಗೆ ಬಂದು ಇದ್ದಬದ್ದ ಪುಸ್ತಕಗಳನ್ನೆಲ್ಲ ಪಕ್ಕಕ್ಕಿಟ್ಟು ಇದನ್ನು ಓದುತ್ತಾ ಕುಳಿತರೆ ಸಂಜೆಯಾದದ್ದು ಯಾವಾಗ, ರಾತ್ರಿಯಾದದ್ದು ಯಾವಾಗ, ಊಟ ಮಾಡಿದ್ದು ಯಾವಾಗ, ಮಲಗಿದ್ದು ಯಾವಾಗ? ಕನಸಿನಲ್ಲೂ ಆ ಪುಸ್ತಕದ ಪಾತ್ರಗಳು. ಜೋರು ಗಾಳಿಗೆ ಮನೆಯ ಪಕ್ಕದ ಹೆಬ್ಬಲಸಿನ ಮರ ಉರುಳಿ ಬಿದ್ದಿತ್ತು. ಸೋನ್ಸ್ ಉರುಳಿಸಿದ ದಿಮ್ಮಿ ನನ್ನತ್ತಲೇ ಉರುಳಿ ಬರುತ್ತಿತ್ತು. ಅಪ್ಪನ ಸೊಂಟ ಉಳುಕಿಹೋಗಿತ್ತು... ರಹಸ್ಯ ವಿಶ್ವ ನಾನೂ ಕಂಡಿದ್ದೆ.

ಆಮೇಲೆ ತೇಜಸ್ವಿಯವರ ಪುಸ್ತಕಗಳನ್ನು ಒಂದರ ಮೇಲೊಂದರಂತೆ ಓದುತ್ತಾ ಹೋದೆ. ಅವರು ಕಟ್ಟಿಕೊಟ್ಟ, ಎಂದಿಗೂ ಮಾಸಲಾರದ ಚಿತ್ರಣಗಳು ಅವೆಷ್ಟೋ? ಪೇಟೆಯಲ್ಲಿ ವಲ್ಲಗೆ ನಡೆದುಕೊಂಡು ಹೋಗುತ್ತಿರುವ ಕೃಷ್ಣೇಗೌಡನ ಆನೆ, ಜೇನಿನ ಡಬ್ಬಿಯನ್ನೆಲ್ಲ ಮೈಮೇಲೆ ಕೆಡಗಿಕೊಂಡಿರುವ ಮಂದ, ಜೊಲ್ಲು ಸುರಿಸುತ್ತಾ ಮಲಗಿರುವ ಜೂಲುಜೂಲು ಕೂದಲಿನ ಕಿವಿ, ಈಚಲ ಬಯಲಿನಲ್ಲಿ ಸಾಗುತ್ತಾ ಇರುವ ಚಕ್ಕಡಿ, ಸಹ್ಯಾದ್ರಿಯ ಅಂಚಿನಲ್ಲಿ ಕೊನೆಗೂ ಕೈತಪ್ಪಿಹೋದ ಓತಿ.... ಒಂದೇ ಎರಡೇ? ಜುಗಾರಿ ಕ್ರಾಸಿನ ಸುರೇಶನ ಭಯ-ತಲ್ಲಣಗಳನ್ನು ನಾವೂ ಅನುಭವಿಸಿದ್ದು ಸುಳ್ಳೇ? ಬಿರಿಯಾನಿಯ ರುಚಿ ನೋಡಿರದಿದ್ದರೂ ಕರಿಯಪ್ಪ ಮಾಡಿದ ಬಿರಿಯಾನಿಯ ವಾಸನೆಯನ್ನು ಓದಿನಲ್ಲೇ ಆಸ್ವಾದಿಸಿದ್ದು ಸುಳ್ಳೇ? ಬೋಬಣ್ಣನ ಹತಾಶೆ ಕಂಡು ಕಣ್ಣು ತೇವ ಮಾಡಿಕೊಂಡದ್ದು ಸುಳ್ಳೇ? ತಬರನ ಕತೆಯಲ್ಲಿ ನಮ್ಮನ್ನೇ ಕಂಡದ್ದು ಸುಳ್ಳೇ?

ಇವತ್ತೂ ಅಂಥದೇ ಒಂದು ಮಧ್ಯಾಹ್ನ. ಆಗಷ್ಟೇ ಊಟ ಮಾಡಿ ಬಂದಿದ್ದೆ. ಉಳಿದ ಕೆಲಸಗಳನ್ನು ಬೇಗನೆ ಪೂರೈಸಿದರೆ ಅವರಿವರೊಂದಿಗೆ ಚಾಟಿಂಗಾದರೂ ಮಾಡಬಹುದು ಎಂದಾಲೋಚಿಸಿ ಬೇಗಬೇಗನೆ ಕೆಲಸ ಮಾಡುತ್ತಿದ್ದೆ. ಕೀಬೋರ್ಡಿನಲ್ಲಿ ಕುಟ್ಟಿದ್ದು ಮಾನಿಟರಿನ ಪರದೆಯ ಮೇಲೆ ಅಕ್ಷರವಾಗುತ್ತಿತ್ತು. ಫಕ್ಕನೆ ಒಂದು ಪಾಪ್-ಅಪ್ ವಿಂಡೋ ಉದ್ಭವವಾಯಿತು. ಮಾನಿಟರಿನ ಕೆಳಾಗಡೆ ಮೂಲೆಯಲ್ಲಿದ್ದ ಜೀಟಾಕಿನ ಪುಟ್ಟ ಐಕಾನಿನಿಂದ ಎದ್ದು ಬಂದಿದ್ದ ಆ ವಿಂಡೋದಲ್ಲಿ ಶ್ರೀನಿಧಿ ಅಂದ: 'ಬ್ಯಾಡ್ ನಿವ್ಸ್!'

'ಏನು?' ಅಂತ ಕೇಳಿದೆ.

'ತೇಜಸ್ವಿ ತೀರಿಕೊಂಡರಂತೆ!'

ಅರ್ಥವಾಗಲಿಲ್ಲ. ಮತ್ತೊಮ್ಮೆ ಕೇಳಿದೆ. ಮತ್ತೆ ಮತ್ತೆ ಕೇಳಿದೆ. ನನಗೆ ಆ ವಿಷಯ ಪೂರ್ತಿ ತಲೆಗೆ ಹೋಗುವಷ್ಟರಲ್ಲಿ ಮೂರ್ನಾಕು ವಿಂಡೋಗಳು ಪಾಪ್ ಆಗಿ 'ಬ್ಯಾಡ್ ನಿವ್ಸ್' 'ಬ್ಯಾಡ್ ನಿವ್ಸ್' ಅನ್ನತೊಡಗಿದವು. ಮೊಬೈಲೂ ವೈಬ್ರೇಟ್ ಆಗತೊಡಗಿತು.

ತೇಜಸ್ವಿ ಸತ್ತು ಹೋಗಿದ್ದಾರಾ? ಅದು ಹೇಗೆ ಸಾಧ್ಯ? ನನ್ನ ಕಣ್ಣ ಮುಂದೇ ಇದ್ದಾರಲ್ಲ ಇನ್ನೂ ಕುಬಿ, ಇಯಾಲ, ಗೌರಿ, ಪ್ಯಾರ, ಯೆಂಗ್ಟ, ದಾನಮ್ಮ, ಕರ್ವಾಲೋ, ಇಂಗ್ಲಿಷ್ ಗೌಡ... ಕಣ್ಣೆದುರಿಗೇ ಓಡುತ್ತಿದೆಯಲ್ಲಾ ಇನ್ನೂ ಖುದ್ದೂಸ್ ಎಕ್ಸ್‍ಪ್ರೆಸ್... ಇಡೀ ಊರಿಗೆ ಊರೇ ಹೊತ್ತಿ ಉರಿಯುತ್ತಿರುವಾಗ, ದಟ್ಟ ಹೊಗೆ ಕವಿದಿರುವಾಗ, ಇವರಿಬ್ಬರೇ ಪ್ರೇಮಿಗಳು ಬೆಟ್ಟದ ಮೇಲೆ.. ಮೇಲೆ....

ತೇಜಸ್ವಿ ನನ್ನೊಂದಿಗೆ ಅಮರವಾಗಿದ್ದಾರೆ... ಅವರು ಸೃಷ್ಟಿಸಿದ ಪಾತ್ರಗಳೊಂದಿಗೆ ಜೀವಂತವಾಗಿದ್ದಾರೆ... ಕಗ್ಗಾಡಿನ ಮಧ್ಯೆ ಹಸಿರಾಗಿದ್ದಾರೆ... ರತ್ನಮಾಲ ಹೊಳೆಯಲ್ಲಿನ ಕೆಂಪು ವಜ್ರದಂತೆ...

ಎಲ್ಲೋ ಓದಿದ್ದೆ: ಕುವೆಂಪುರವರ ಅತ್ಯುತ್ತಮ ಕೃತಿ 'ತೇಜಸ್ವಿ'ಯಂತೆ! ಅಲ್ಲ ಅನ್ನುವುದು ಹೇಗೆ? ಸರ್, ನಿಮಗೊಂದು ಭಾವಪೂರ್ಣ ಶ್ರದ್ಧಾಂಜಲಿ.

Monday, April 02, 2007

ಪ್ರೈಮರಿ ಶಾಲೆಯ ದಿನಗಳ ನೆನೆದು...

ಆನಂದ್ ಮೇಷ್ಟ್ರು! ಹೆಸರು ಕೇಳಿದರೆ ಇವತ್ತಿಗೂ ರೋಮಾಂಚನವಾಗುತ್ತದೆ. ನನ್ನ ಪ್ರೈಮರಿ ಸ್ಕೂಲ್ ಮೇಷ್ಟ್ರು. ಚಿತ್ರ ಸ್ಪಷ್ಟವಿಲ್ಲ; ಮಸುಕಾಗಿದೆ. ಗುಂಡು ಗುಂಡಿ-ಗುಂಡಿ ಮುಖ, ತುಂಬಾ ಬೆಳ್ಳಗೇನಲ್ಲ; ಎಣ್ಣೆಗಪ್ಪು ಬಣ್ಣ. ಮೂಗಿನ ಮೇಲೆ ಬ್ಯಾಡಿತ್ತೇನೋ ಅನ್ನಿಸುವ ಕನ್ನಡಕ. ಮೂವತ್ತು ದಾಟದ ವಯಸ್ಸು. ಪ್ರತಿ ಮಾತಿನಲ್ಲೂ, ಪ್ರತಿ ನಡಿಗೆಯಲ್ಲೂ ಉತ್ಸಾಹ. ಪ್ರೈಮರಿ ಸ್ಕೂಲ್ ಮೇಷ್ಟ್ರು ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ರು ನಮ್ ಆನಂದ್ ಮೇಷ್ಟ್ರು.

ನಮ್ಮ ಮನೆ ಹತ್ರಾನೇ ಮೇಷ್ಟ್ರ ಮನೆ. ಅದೊಂದು ಬಾಡಿಗೆ ಮನೆ. ನಮ್ಮೂರಿನಂತಹ ಹಳ್ಳಿಯಲ್ಲೂ ಒಂದು ಬಾಡಿಗೆ ಮನೆ ಇದೆ ಎಂದರೆ ಅಚ್ಚರಿ ಪಡಬೇಡಿ. ಅದು ಇಂತಹ ಮೇಷ್ಟ್ರುಗಳಿಗಾಗಿಯೇ ಊರಿನವರು ಕಟ್ಟಿಸಿರುವ ಮನೆ. ತಿಂಗಳಿಗೆ ಬರೀ ಮೂವತ್ತು ರೂಪಾಯಿ ಬಾಡಿಗೆ. ಎದುರಿಗೇ ಸರ್ಕಾರಿ ಬಾವಿ ಇದೆ. ಟ್ವೆಂಟಿ ಫೋರ್ ಅವರ್ಸ್ ವಾಟರ್!

ಮೇಷ್ಟ್ರು ಒಬ್ಬರೇ ಇರುತ್ತಿದ್ದರು. ನಮ್ಮೂರಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಉಳವಿಗೆ ತಮ್ಮ ಸೈಕಲ್ ಏರಿ 'ಶಾಪಿಂಗ್'ಗೆ ಹೋಗುತ್ತಿದ್ದರು. ಆನಂದ್ ಮೇಷ್ಟ್ರು ಉಳವಿಗೆ 'ಏನಕ್ಕೋ ಹೋಗುತ್ತಾರೆ' ಅಂತ ನಮ್ಮ ಮನೆಗಳಲ್ಲಿ ಹಿರಿಯರು ಮಾತಾಡಿಕೊಳ್ಳುತ್ತಿದ್ದರಾದರೂ ನಮಗೆ ಅವೆಲ್ಲಾ ಅರ್ಥವಾಗುತ್ತಿರಲಿಲ್ಲ. ಆನಂದ್ ಮೇಷ್ಟ್ರು ನಮ್ಮ ಪಾಲಿಗೆ ತುಂಬಾ ಒಳ್ಳೆಯವರಿದ್ರು.

ನಾನು ಚಿಕ್ಕವನಿರಬೇಕಾದರೆ ಓದಿನಲ್ಲಿ ತುಂಬಾ ಚುರುಕಿದ್ದೆ. ಶಾಲೆಗೆ ಸೇರುವ ಮೊದಲೇ, ಅಂದರೆ ನಾನು ಸುಮಾರು ನಾಲ್ಕು ವರ್ಷದವನಿದ್ದಾಗಲೇ ಬರೆಯುವುದು, ಓದುವುದು ಕಲಿತುಬಿಟ್ಟಿದ್ದೆ. ಕನ್ನಡವಷ್ಟೇ ಅಲ್ಲ; ಇಂಗ್ಲಿಷಿನಲ್ಲಿಯೂ ಎಲ್ಲರ ಹೆಸರನ್ನೂ ಬರೆಯುತ್ತಿದ್ದೆ. ಈಗಿನ ಮಕ್ಕಳ ಕಥೆ ಬಿಟ್‍ಹಾಕಿ. ಆದರೆ ಅವಾಗಿನ ಕಾಲದಲ್ಲಿ ಹಳ್ಳಿ ಮೂಲೆಯಲ್ಲಿನ ಹುಡುಗನೊಬ್ಬ ಹೀಗೆ ಓದುವುದರಲ್ಲಿ ಚುರುಕಾಗಿದ್ದಾನೆಂದರೆ ಅದು ಜನಗಳಿಗೆ ಅಗ್ರರಾಷ್ಟ್ರೀಯ ವಾರ್ತೆ! ಆನಂದ ಮೇಷ್ಟ್ರು ನನ್ನ ಪಾಂಡಿತ್ಯವನ್ನು ಕಂಡು ಸಂಪ್ರೀತರಾಗಿ (!) ನನ್ನನ್ನು ಐದನೇ ವರ್ಷಕ್ಕೇ ಶಾಲೆಗೆ ಸೇರಿಸಿಕೊಂಡುಬಿಟ್ಟರು. ನಾನೂ, ಬೇರೆ ಮಕ್ಕಳಂತೆ ಶಾಲೆಗೆ ಹೋಗಲು ರಗಳೆ ಮಾಡದೆ ಶಿಸ್ತಾಗಿ ಶಾಲೆಗೆ ಹೋಗತೊಡಗಿದೆ.

ಶಾಲೆಯಲ್ಲಿ ನಾನು ಉಳಿದವರಿಗಿಂತ ಸ್ವಲ್ಪ ಭಿನ್ನವಾಗಿ ಟ್ರೀಟ್ ಆಗುತ್ತಿದ್ದೆ. ಶಾಲೆಯಲ್ಲಿದ್ದುದು ಒಂದೇ ಕೊಠಡಿ. ಅದರಲ್ಲೇ ಒಂದರಿಂದ ನಾಲ್ಕನೇ ತರಗತಿವರೆಗಿನ ಎಲ್ಲಾ ಹುಡುಗರೂ ಕೂರುತ್ತಿದ್ದುದು. ಕೂರಲು ಮಣೆ ಇತ್ತು. ಸ್ಲೇಟು-ಕಡ್ಡಿ-ಪಾಟಿಚೀಲ ಇತ್ಯಾದಿಗಳೊಂದಿಗೆ 'ಅಣ್ಣನು ಮಾಡಿದ ಗಾಳಿಪಟ' ಹಾರುತ್ತಿತ್ತು. ಆನಂದ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಒಂದು ತರಗತಿಯವರಿಗೆ ಪಾಠ ಮಾಡುವಾಗ ಉಳಿದ ತರಗತಿಯವರಿಗೆ ಏನನ್ನಾದರೂ ಓದಿಕೊಳ್ಳಲಿಕ್ಕೋ, ಮಗ್ಗಿ ಬರೆಯಲೋ, ಇಲ್ಲಾ ಕಕಾಕಿಕೀ ಬರೆಯಲೋ ಹೇಳಿರುತ್ತಿದ್ದರು. ನಾನು ಅದನ್ನು ಮಾಡುತ್ತಲೇ ಮೇಷ್ಟ್ರು ಬೇರೆ ತರಗತಿಯವರಿಗೆ ಮಾಡುವ ಪಾಠದ ಕಡೆಗೂ ಒಂದು ಕಿವಿ ಇಟ್ಟಿರುತ್ತಿದ್ದೆ.

ಒಂದು ಘಟನೆ ತುಂಬಾ ಚೆನ್ನಾಗಿ ನೆನಪಿದೆ. ನಾನಾಗ ಒಂದನೇ ಕ್ಲಾಸಿನಲ್ಲಿದ್ದೆ. ಆನಂದ್ ಮೇಷ್ಟ್ರು ನಾಲ್ಕನೇ ಕ್ಲಾಸಿನವರಿಗೆ ಪಾಠ ಮಾಡುತ್ತಿದ್ದರು. ಪಾಠ ಮುಗಿದ ಮೇಲೆ 'ಮೋಹನ' ಅನ್ನೋ ಹುಡುಗನನ್ನು ಎಬ್ಬಿಸಿ ನಿಲ್ಲಿಸಿ ಏನೋ ಪ್ರಶ್ನೆ ಕೇಳಿದರು. ಮೋಹನ ಪಾಪ, ಉತ್ತರಿಸಲಿಲ್ಲ. ಅದೇ ಸಮಯಕ್ಕೆ ನಾನು ಕೈಯೆತ್ತಿಬಿಟ್ಟೆ! 'ಏನೋ, ನಿಂಗ್ ಉತ್ರ ಗೊತ್ತಾ?' ಕೇಳಿದ್ರು ಮೇಷ್ಟ್ರು. 'ಹೂಂ' ಅಂತ ತಲೆ ಗುಂಡು ಹಾಕಿದೆ. 'ಏನು ಹೇಳು ನೋಡೋಣ' ಅಂದ್ರು ಮೇಷ್ಟ್ರು. ನಾನು ಸರಿಯಾಗಿ ಉತ್ತರಿಸಿಬಿಟ್ಟೆ. ಇಡೀ ಕ್ಲಾಸೇ ಧಂಗಾಗಿಬಿಟ್ಟಿತು. ಮೇಷ್ಟ್ರು ಮೋಹನನಿಗೆ ಬೈಯತೊಡಗಿದರು: 'ಒಂದನೇ ಕ್ಲಾಸಿನ ಹುಡುಗ ಉತ್ರ ಹೇಳ್ತಿದಾನೆ ನಾಕ್ನೇ ಕ್ಲಾಸಿನವರ ಪ್ರಶ್ನೆಗೆ, ನಿಂಗೆ ನಾಚ್ಕೆ ಆಗಲ್ವೇನೋ......' ಮೋಹನ ತಲೆ ತಗ್ಗಿಸಿ ನಿಂತಿದ್ದ. ಮೇಷ್ಟ್ರು ನನಗೆ ಆದೇಶವಿತ್ತರು: 'ಏಯ್, ಅವನ ಕೆನ್ನೆಗೆ ಹೊಡಿಯೋ!' ನಾನು ಮೋಹನನತ್ತ ನಡೆಯತೊಡಗಿದೆ... ನನಗೆ ಮೋಹನನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ಎಲ್ಲಾ ಹುಡುಗರಂತೆಯೇ ಅವನೂ ಪಾಪ. ಅವನ ಊರು ಹೊಸಕೊಪ್ಪ; ನಮ್ಮೂರಿಗೆ ಹೊಂದಿಕೊಂಡಂತೆ ಇರುವ ಊರು. ಜೋಯಿಸರ ಮನೆ ರಾಘು, ಅಣ್ಣಪ್ಪ, ದೀಪ್ತಿ, ಭೈರಪ್ಪ ಮುಂತಾದ ಹುಡುಗರ ಜೊತೆ ತಾನೂ ಕೌಳಿಮಟ್ಟಿ ಸುತ್ತಿಕೊಂಡು ಶಾಲೆಗೆ ಬರುತ್ತಿದ್ದ. ನಾಲ್ಕನೇ ಕ್ಲಾಸು ಮುಗಿದ ಮೇಲೆ ತನ್ನ ಅಪ್ಪ ದನ ಕಾಯಲಿಕ್ಕೆ ಹಾಕೇ ಹಾಕುತ್ತಾನೆ ಎಂಬ ಅಂಶ ಅವನಿಗೆ ಆಗಲೇ ತಿಳಿದಿತ್ತೋ ಏನೋ, ಓದಿನಲ್ಲಿ ತುಂಬಾ ಹಿಂದಿದ್ದ. ನನಗೆ ಅವನನ್ನು ಹೊಡೆದು ಆಗಬೇಕಾದ್ದು ಏನೂ ಇರಲಿಲ್ಲ. ಮೇಷ್ಟ್ರು ಕೇಳಿದ್ದ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು; ಕೈಯೆತ್ತಿಬಿಟ್ಟೆ. ಈಗ ಮೇಷ್ಟ್ರು ಹೊಡೆಯಲಿಕ್ಕೆ ಹೇಳಿದರು; ಹೊಡೆಯಲಿಕ್ಕೆ ಹೊರಟಿದ್ದೆ. ಅಷ್ಟೆ!

ಮಣೆಯ ಮೇಲೆ ನಿಂತಿದ್ದ ಮೋಹನ ತನ್ನೆಡೆಗೆ ಯುದ್ಧಸನ್ನದ್ಧನಾಗಿ ಬರುತ್ತಿರುವ ನನ್ನನ್ನೇ ಕಿರುಗಣ್ಣಿನಿಂದ ನೋಡಿದ. ಇನ್ನೇನು ಅಳು ಬಂದುಬಿಡುತ್ತದೇನೋ ಎಂಬಂತಿತ್ತು ಅವನ ಮುಖ. ಅವನ ಕಣ್ಣುಗಳಲ್ಲಿ ನನ್ನೆಡೆಗೊಂದು ರಿಕ್ವೆಸ್ಟ್ ಇತ್ತು: 'ನಿಧಾನಕ್ಕೆ ಹೊಡಿಯೋ ಸುಶ್ರುತಾ' ಎಂದವು ಹೇಳುತ್ತಿದ್ದಂತೆ ನನಗನ್ನಿಸಿತು. ಅವನು ಸಿಂಬಳವನ್ನು ಏರಿಸಿ ನನಗೆ ಮೂಗು ಹಿಡಿಯಲಿಕ್ಕೆ ಅನುವು ಮಾಡಿಕೊಟ್ಟ. ನಾನು ಮೂಗು ಹಿಡಿಯಲಿಕ್ಕೆ ಕೈ ಹಾಕಿದೆ.. ಅವನು ನನಗಿಂತ ತುಂಬಾ ಎತ್ತರ ಇದ್ದ. ನಾನು ತುದಿಗಾಲ ಮೇಲೆ ನಿಂತೆ. ಅವನ ಮೂಗು ಹಿಡಿದೆ. ನನ್ನ ಪುಟ್ಟ ಅಂಗೈಯಿಂದ ಅವನ ಕೆನ್ನೆಗೆ ಒಂದೇಟು ಹಾಕಿದೆ. 'ಝೊಳ್' ಎಂದು ಸದ್ದಾಯಿತು. ಏನೂಂತ ನೋಡಿದರೆ, ಮೋಹನ ಪಾಪ ಉಚ್ಚೆ ಹೊಯ್ದುಕೊಂಡಿದ್ದ! ನನಗೆ ಆಘಾತವಾಯಿತು. ಹಾಗಾದರೆ ನಾನು ಅಷ್ಟೆಲ್ಲಾ ಜೋರಾಗಿ ಹೊಡೆದೆನೇ? ನಿಜ ಹೇಳ್ತೀನಿ ಕಣ್ರೀ, ನಾನು ಅವತ್ತು ಹೊಡೆದದ್ದು ಇಂದಿಗೂ ಸರಿಯಾಗಿ ನೆನಪಿದೆ. ನಾನು ಎಷ್ಟು ನಿಧಾನಕ್ಕೆ ಹೊಡೆದಿದ್ದೆ ಅಂದ್ರೆ, ಅಷ್ಟು ನಿಧಾನಕ್ಕೆ ಹೊಡೆದರೆ ಈಗಿನ ಕಾಲದಲ್ಲಿ ಸೊಳ್ಳೆ ಸಹ ಸಾಯುವುದಿಲ್ಲ. (ಹಿಂದಿನ ಕಾಲಕ್ಕಿಂತ ಈಗ ಸೊಳ್ಳೆಗಳು ಪ್ರಬಲವಾಗಿವೆ ಅಂತ ನನ್ನ ನಂಬುಗೆ, ಅದಿರಲಿ!).

ಮೇಷ್ಟ್ರು ತಕ್ಷಣ ಅಲ್ಲಿಗೆ ಧಾವಿಸಿದರು. 'ಏಯ್ ಏನೋ ನಿಂದು? ಇಲ್ಲೇ ಉಚ್ಚೆ ಮಾಡ್ಕೊಂಡ್ಯಲ್ಲೋ.. ಥೂ ನಿನ್ನ! ಹೋಗಿ ಗೋಣಿಚೀಲ ತಗಂಬಂದು ವರ್ಸು ಹೋಗು' ಎಂದು ಅವನನ್ನು ತಳ್ಳಿದರು. ಮೋಹನ ಎರಡು ಹೆಜ್ಜೆ ಮುಂದಿಟ್ಟರೆ ಇನ್ನೂ ಅವನ ಚಡ್ಡಿಯಿಂದ ನೀರು ಸೋರುತ್ತಲೇ ಇತ್ತು. ಮೇಷ್ಟ್ರು ಅವನನ್ನು ತಡೆದರು. 'ಏಯ್ ನೀನಿಲ್ಲೇ ನಿಂತ್ಕೋ. ಏಯ್ ನಟರಾಜಾ, ನೀನು ಗೋಣಿಚೀಲ ತಗಂಬಾರೋ' ಅಂದ್ರು. ನಟರಾಜ ಗೋಣಿಚೀಲ ತಂದು ಮೋಹನನ ಕಾಲ ಬುಡಕ್ಕೆ ಹಾಕಿದ. ಮೋಹನ ಎಲ್ಲವನ್ನೂ ಒರೆಸಿ ಚೊಕ್ಕ ಮಾಡಿದ. ಇಡೀ ಘಟನೆಯಲ್ಲಿ ನನ್ನದೇನೂ ತಪ್ಪಿರಲಿಲ್ಲವಾದರೂ ನಾನೇ ಅಪರಾಧಿಯೇನೋ ಎಂಬಂತೆ ನರಳಿದೆ.

ಆನಂದ ಮೇಷ್ಟ್ರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಧ್ಯಾರ್ಥಿಗಳನ್ನು ತಯಾರು ಮಾಡುವಲ್ಲಿ ಬಹಳ ಮುಂದಿದ್ದರು. ಅವರು ಮೇಷ್ಟ್ರಾಗಿದ್ದ ಕಾಲದಲ್ಲಿ ನಡೆದ ಶಾಲೆಯ ಯೂನಿಯನ್‍ಡೇಗಳನ್ನು ಊರಿನ ಜನಗಳು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅವರು ವರ್ಗವಾಗಿ ಹೋದಮೇಲೆ ನಮ್ಮ ಶಾಲೆಗೆ ಅನೇಕ ಬೇರೆ ಶಿಕ್ಷಕರು ಬಂದರು. ಯಶೋಧ ಟೀಚರ್ರು, ವೇದಾವತಿ ಟೀಚರ್ರು, ಯಲ್ಲಪ್ಪ ಮೇಷ್ಟ್ರು, ಈಶ್ವರಪ್ಪ ಮೇಷ್ಟ್ರು.. ಇತ್ಯಾದಿ ಇತ್ಯಾದಿ.

ಪ್ರೈಮರಿ ಶಾಲೆಯಲ್ಲಿ ನಮಗೆ ಕುಳಿತುಕೊಳ್ಳಲು ಊದ್ದ ಮಣೆ ಇತ್ತಲ್ಲಾ, ಆ ಮಣೆಯನ್ನು ನಾವು ಮೇಷ್ಟ್ರು ಇಲ್ಲದ ಹೊತ್ತಿನಲ್ಲಿ ಕಿಟಕಿಕಟ್ಟೆಗೆ ಸಾಚಿ ಜಾರುಬಂಡೆ ತರ ಮಾಡಿಕೊಂಡು ಆಟವಾಡುತ್ತಿದ್ದೆವು. ಮೇಷ್ಟ್ರು ಬಂದರೆ ಹೊರಗಡೆ ಇದ್ದ ಯಾರಾದರೂ ಹುಡುಗರು 'ಮೇಷ್ಟ್ರು ಬಂದ್ರು' ಅಂತ ಸಿಗ್ನಲ್ ಕೊಡುತ್ತಿದ್ದರು. ತಕ್ಷಣ ಮಣೆಗಳನ್ನು ಕೆಳಗಿಳಿಸಿ ಯಥಾಸ್ಥಾನದಲ್ಲಿರಿಸುತ್ತಿದ್ದೆವು.

ಬೆಳಗ್ಗೆ ಒಂಭತ್ತೂ ಮುಕ್ಕಾಲಿಗೆ ಶಾಲೆ ಶುರುವಾಗುತ್ತಿತ್ತು. ಪ್ರಾರ್ಥನೆ ಮಾಡಿ ಒಳಬಂದರೆ ಎರಡು ತಾಸು ಮೇಷ್ಟ್ರು ಮಾಡುವ ಪಾಠ ಕೇಳಬೇಕು. ಆಮೇಲೆ ರೀಸಸ್ಸಿಗೆ ಬಿಡುತ್ತಿದ್ದರು. ಹುಡುಗಿಯರು ಹೊಸಕೊಪ್ಪಕ್ಕೆ ಹೋಗುವ ದಾರಿಯಲ್ಲಿನ ಕೌಳಿಮಟ್ಟಿಯ ಮರೆಯನ್ನು ಆಶ್ರಯಿಸುತ್ತಿದ್ದರೆ ನಾವು ಶಾಲೆ ಪಕ್ಕದಲ್ಲಿದ್ದ ಅಕೇಶಿಯಾ ಮರಗಳ ತೋಪನ್ನು ಆರಿಸಿಕೊಂಡಿದ್ದೆವು. ಆಗೆಲ್ಲಾ ಉಚ್ಚೆ ಹೊಯ್ಯುವುದೂ ಒಂದು ಆಟವೇ! ಯಾರು ಹೆಚ್ಚು ದೂರ ಹಾರಿಸುತ್ತಾರೆ ಎಂದು! ಉಚ್ಚೆ ಹೊಯ್ಯಲಿಕ್ಕೆಂದು 'ಉಚ್ಚೆಗುಂಡೆ' ಅಂತ ಮಾಡಿಕೊಂಡಿದ್ದೆವು. ಎಲ್ಲರೂ ಅದಕ್ಕೇ ಉಚ್ಚೆ ಹೊಯ್ಯುವುದು. ಹೊಯ್ದ ಉಚ್ಚೆ ಸಾಗಿ ಹೋಗಲಿಕ್ಕೆ ಒಂದು ಒಗದಿಯನ್ನೂ ಕೊರೆದಿರುತ್ತಿದ್ದೆವು. ಉಚ್ಚೆ ಹೊಯ್ದಾದಮೇಲೆ ಒಂದು ಕಣ್ಣಿನ ರೆಪ್ಪೆಯನ್ನು ಕಿತ್ತು ಅದಕ್ಕೆ ಹಾಕಿ ಬರುತ್ತಿದ್ದೆವು. 'ಒಬ್ರು ಹೊಯ್ದ ಉಚ್ಚೆಯ ಮೇಲೆ ಮತ್ತೊಬ್ರು ಹೊಯ್ದ್ರೆ ಹೀಗೆ ಕಣ್ರೆಪ್ಪೆ ಕಿತ್ತು ಹಾಕ್ಬೇಕು' ಎಂದು ಆಗ ಯಾರೋ ರೂಮರ್ರು ಹಬ್ಬಿಸಿದ್ದರು! ಅದರ ಬಗ್ಗೆ ವಿಶ್ಲೇಷಿಸುವಷ್ಟೆಲ್ಲಾ ವಿವೇಕ ಆಗ ಇದ್ದರೆ ತಾನೇ! ಮಧ್ಯಾಹ್ನ ಒಂದೂ ಕಾಲಿಗೆ ಊಟಕ್ಕೆ ಬಿಡುತ್ತಿದ್ದರು. ಮನೆಗೆ ಬಂದು ಊಟ ಮಾಡಿ, ಎರಡು ಗಂಟೆ ಹೊತ್ತಿಗೆ ಮತ್ತೆ ಶಾಲೆಗೆ. ಮೂರೂ ವರೆಗೆ ಮತ್ತೆ ರೀಸಸ್ಸು; ನಾಲ್ಕೂ ಕಾಲಿಗೆ ಆಟ! ಎಷ್ಟೊಂದು ಆಟಗಳು ಗೊತ್ತಿದ್ದವು ನಮಗಾವಾಗ... ಅಜ್ಜಿ ಮನೆ ಆಟ, ಕೆರೆ-ದಡ ಆಟ, ಬಸ್ ಆಟ, ಕಣ್ಣಾಮುಚ್ಚಾಲೆ, ಐಸ್-ಪೀಸ್ ಕಂಬ, ವಿಮಾನ, ಅನ್ನ-ಆಸೆ ಆಟ.... ಶಾಲೆಯ ಕಸ ಗುಡಿಸುವುದಕ್ಕೆ ಪಾಳಿ ಮಾಡಿಕೊಂಡಿದ್ದೆವು. ದಿನಾ ಒಬ್ಬೊಬ್ಬರು ಗುಡಿಸುವುದು. ನೀರು ತರಲಿಕ್ಕೂ ಪಾಳಿ. ವಾರಕ್ಕೊಮ್ಮೆ ಇಡೀ ಶಾಲೆಯ ಆವರಣದ ಕಸ ಹೆಕ್ಕುತ್ತಿದ್ದೆವು. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಸರಸ್ವತಿ ಪೂಜೆಯ ದಿನಗಳಿಗಂತೂ ಹೂವು ತರುವ ಸಂಭ್ರಮ. ಆಗೆಲ್ಲಾ ಸರ್ಫ್ ಎಕ್ಸೆಲ್ ಇರಲಿಲ್ಲ: ಬಿಳೀ ಯೂನಿಫಾರ್ಮ್ ಕೊಳೆಯಾಗದಂತೆ ನೋಡಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು ಗೊತ್ತಾ? ಶಾಲೆಯ ಅಕ್ಕಪಕ್ಕ ನಾವು ನೆಟ್ಟ ಗಿಡಗಳು ಈಗ ಆಳೆತ್ತರ, ಊಹೂಂ, ಮುಗಿಲಿನೆತ್ತರಕ್ಕೆ ಬೆಳೆದು ನಿಂತಿವೆ. ಊರಿಗೆ ಹೋದಾಗ, ಶಾಲೆ ಹಾದು ಹೋಗುವಾಗ ಏನೋ ಆಪ್ಯಾಯಮಾನ ಅನುಭವ...

ಪ್ರೈಮರಿ ಸ್ಕೂಲು ಎಂದಕೂಡಲೇ ನನಗೆ ನೆನಪಾಗುವುದು ಇನ್ಸ್‍ಪೆಕ್ಟರು! ಅವರ ಬಗ್ಗೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ! ಅವರೊಂಥರಾ ಲೋಕಾಯುಕ್ತ ವೆಂಕಟಾಚಲ ಇದ್ದಹಂಗೆ. ಯಾವಾಗ ಬರುತ್ತಾರೆ ಅಂತ ಹೇಳಲಿಕ್ಕಾಗೊಲ್ಲ. ಅವರು ಬಂದಾಗ ಏನಾದರೂ ಒಂದು ಗಂಢಾಂತರ ನಡೆದೇ ನಡೆಯುತ್ತಿತ್ತು. ಒಂದೋ ಮೇಷ್ಟ್ರೇ ಅವತ್ತು ಇರುತ್ತಿರಲಿಲ್ಲ; ಅಥವಾ ಅವರು ಕೇಳಬಹುದಾದ ಪ್ರಶ್ನೆಗಳಿಗೆ ನಾವು ಸಿದ್ಧರಾಗಿರುತ್ತಿರಲಿಲ್ಲ. ಅವರಾದರೂ ಏನು ಮಿಲಿಯನ್ ಡಾಲರ್ ಪ್ರಶ್ನೆ ಕೇಳುತ್ತಿರಲಿಲ್ಲ. ಯಾರನ್ನಾದರೂ ಎಬ್ಬಿಸಿ ನಿಲ್ಲಿಸಿ 'ಎಂಟ್ನಾಕ್ಲೆ ಎಷ್ಟು?' ಅಂತ ಕೇಳುತ್ತಿದ್ದರು. ಅಥವಾ 'ನಿಮ್ಮ ಜಿಲ್ಲೆಯ ಹೆಸರೇನು?' ಅಂತ ಕೇಳುತ್ತಿದ್ದರು. ಬಹಳ ಸಲ ಉತ್ತರ ಗೊತ್ತಿದ್ದರೂ ಇನ್ಸ್‍ಪೆಕ್ಟರ್ ಎದುರಿಗೆ ಕೈಕಾಲು ಥರಥರ ನಡುಗಿ ಏನನ್ನೂ ಹೇಳುತ್ತಿರಲಿಲ್ಲ. ಆನಂದ್ ಮೇಷ್ಟ್ರು ಕೈ-ಕಣ್ಸನ್ನೆಗಳ ಮೂಲಕ ಉತ್ತರ ಹೇಳಿಕೊಡುತ್ತಿದ್ದರೂ ನಮಗೆ ಅದನ್ನೆಲ್ಲಾ ಗಮನಿಸುವಷ್ಟು ವ್ಯವಧಾನ ಇರುತ್ತಿರಲಿಲ್ಲ. ಸಾಮಾನ್ಯವಾಗಿ ಇನ್ಸ್‍ಪೆಕ್ಟರಿಂದ ಬೈಯಿಸಿಕೊಳ್ಳುವುದು ಇದ್ದೇ ಇರುತ್ತಿತ್ತು. ಅವರು ನಮಗಿಂತಲೂ ಹೆಚ್ಚಾಗಿ ಮೇಷ್ಟ್ರಿಗೆ ಬೈಯುತ್ತಿದ್ದರು: 'ಏನ್ರೀ, ಇದನ್ನೇ ಏನ್ರೀ ನೀವು ಕಲ್ಸಿದ್ದು ಮಕ್ಳಿಗೇ?' ಅಂತ. ನಾವು ಪೆಕರರಂತೆ ನೋಡುತ್ತಿದ್ದೆವು.

ಮೊನ್ನೆ ಯುಗಾದಿಗೆ ಊರಿಗೆ ಹೋಗಿದ್ದೆನಲ್ಲ, ಹಬ್ಬದ ಹಿಂದಿನ ದಿನ ಹೊಸಕೊಪ್ಪದಲ್ಲಿ ಒಂದು ಬಯಲಾಟ ಇತ್ತು. ಗಣೇಶಣ್ಣ-ಮಧು ಜೊತೆ ನಾನೂ ಹೋಗಿದ್ದೆ. ಯಕ್ಷಗಾನ ಚೆನ್ನಾಗಿಯೇ ಇತ್ತು. ನನ್ನ ಹೈಸ್ಕೂಲು ಕ್ಲಾಸ್‍ಮೇಟು ದುರ್ಗಪ್ಪ ಬೋಂಡದ ಅಂಗಡಿ ಇಟ್ಟಿದ್ದ. ನಾವು ಬೋಂಡ ತಗೊಂಡೆವು. ದುಡ್ಡು ಕೊಡಲು ಹೋದರೆ 'ಏಯ್ ಸುಮ್ನಿರೋ.. ನೀವೆಲ್ಲ ಎಂಥ ದುಡ್ಡು ಕೊಡೋದು..' ಅಂದ. 'ನಿಂಗೆ ಗೊತ್ತಾಗಲ್ಲ ಸುಮ್ನಿರು. ವ್ಯಾಪಾರ ಅಂದ್ರೆ ವ್ಯಾಪಾರ' ಅಂದು ದುಡ್ಡನ್ನು ಜೇಬಿಗೆ ತುರುಕಿ ಬಂದೆವು. ಗುಂಡಾಲಿ ಆಟಾ ನೋಡೋಣ ಅಂತ ಆ ಕಡೆ ಹೋದೆವು. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಗುಡುಗುಡಿ ಮಂಡ್ಲ ಜೋರಾಗಿ ಸಾಗಿತ್ತು. 'ಸೂರ್ಯ ಚಂದ್ರ ಖಾಲಿ! ಹಾಕ್ಕೊಳಿ ಹಾಕ್ಕೊಳಿ' ಅಂತ ಕೂಗುತ್ತಿದ್ದರು. ಡಬ್ಬಿಯೊಳಗನ ಕಾಯಿ 'ಕಣಕಣಕಣ' ಸದ್ದು ಮಾಡುತ್ತಿತ್ತು. ಯಾರೋ ಕಳವಾರಿಗೆ ನೂರರ ನೋಟು ಎಸೆದರು. ನಾನು ಗಮನವಿಟ್ಟು ನೋಡುತ್ತಿದ್ದೆ. ಯಾರದೋ ನೆರಳ ಹಿಂದೆ ಯಾರೋ ಸರಿದಂತಾಯಿತು. ಫಕ್ಕನೆ ನೋಡಿದೆ: ಮೋಹನ! ಹೌದು, ನೋ ಡೌಟ್, ಮೋಹನನೇ. ಮಾತಾಡಿಸೋಣ ಅಂದುಕೊಂಡೆ. ಆದರೆ ಅವನೇ ನನ್ನ ಕಣ್ಣು ತಪ್ಪಿಸುತ್ತಿದ್ದಾನೆ ಅನ್ನಿಸಿತು. ನನಗೂ ಏನೋ ತಡೆದಂತಾಗಿ ಸುಮ್ಮನಾಗಿಬಿಟ್ಟೆ.