Saturday, February 08, 2014

ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು

ಈಗ ಶಾರ್ಪನರಿನ ಗಿರಣಿಗೊಡ್ಡಿದ ಪೆನ್ಸಿಲ್
ಸರಸರನೆ ಕೆತ್ತಬೇಕು. ಹೊರಬಂದ ಸುರುಳಿಯ
ಕೈಯಲ್ಲಿ ಹಿಡಿದು ಮೈಮರೆಯುವ ಹಾಗಿಲ್ಲ.
ಸೀಸದ ಚೂಪಿನ ಸ್ಪರ್ಶಕ್ಕೆಂದೇ ಕಾಯುತ್ತಿರುವ
ಬಿಳಿಹಾಳೆಯ ಕೆನ್ನೆಗೆ ಮೋಸ ಮಾಡುವುದು ಸಲ್ಲ.

ಈಗ ಆಮೆಯೂ ಬೇಗ ಬೇಗ ನಡೆಯಬೇಕು
ರಸ್ತೆ ಮೇಲೆ ಹಾಸಿದ ಅವರೆಯ ಕಾಳಿನ ಸಿಪ್ಪೆಯ
ಅಂದ ನೋಡುತ್ತ ನಿಂತರೆ ಕೆಟ್ಟಂತೆಯೇ ಕೆಲಸ
ಹಾಗೆಲ್ಲ ಕೈ ಮಾಡಿದ್ದಕ್ಕೆಲ್ಲ ನಿಲ್ಲಿಸುವುದಿಲ್ಲ ಬಸ್ಸು
ಅಲ್ಲೂ ಭಾರೀ ಪೈಪೋಟಿ; ಎರಡು ಟಿಕೀಟು
ಗೆದ್ದರೆ ಜಾಸ್ತಿ, ಅದೇ ಪರಮ ಆಸ್ತಿ.

ಅಂಜೂರದ ಹಣ್ಣನ್ನು ಬಿಡಿಸಿದಾಗ ಹುಳುವೊಂದು ಸಿಕ್ಕರೆ
ನಾನು ತಿನ್ನದೇ ಬಿಟ್ಟುಬಿಡುವುದಕ್ಕೆ ಹುಳು ಬದುಕಿಕೊಳ್ಳಲಿ
ಎಂಬ ಸಹಾನುಭೂತಿಯೇ ಕಾರಣ ಎಂದರೆ,
ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅಲೆಮಾರಿಯಾಗುವ ಕನಸೇಕೆ ಎಂದು ಪ್ರಶ್ನಿಸುತ್ತೀ ನೀನು.
ಉಲ್ಕೆಯೊಂದು ಜಾರಿ ಬೀಳುವಾಗ ಕಣ್ಮುಚ್ಚಿ ನಿಲ್ಲುವ
ನಾಸ್ತಿಕನನ್ನು ತೋರಿಸಿ ಮುಗುಳ್ನಗುತ್ತೇನೆ ನಾನು.

ನಿನ್ನ ಸ್ಥಾನದಲ್ಲಿ ನಾನು - ನನ್ನ ಸ್ಥಾನದಲ್ಲಿ ನೀನು
ನಿಂತು ನೋಡಬೇಕು ಎನ್ನುವುದೆಲ್ಲ ಬಾಯಿಮಾತಾಯ್ತು.
ನಿನ್ನಿಷ್ಟದ ಬದನೆಯ ಎಣ್ಣೆಗಾಯಿ ನನಗೆ ಅಲರ್ಜಿ
ನನ್ನಿಷ್ಟದ ಅರಿಶಿಣ ಕೊಂಬಿನ ತಂಬುಳಿ ನಿನಗೆ ಸೇರದು
ಸ್ಥಾನಮಾನಗಳ ಕತೆಯೆಲ್ಲ ಆಮೇಲೆ, ಮೊದಲು ಇವತ್ತಿನ
ಅಡುಗೆಗೆ ಏನು ಎಂಬುದಾಗಬೇಕು ನಿಷ್ಕರ್ಷೆ.

ತಿರುಮಲೇಶರು ಹೇಳಿದ್ದು, ಅಬೀಡ್ಸಿನಲ್ಲಿ ರಸ್ತೆಯನ್ನು
ದಾಟುವುದು ಕಷ್ಟ ಎಂದೇ ಹೊರತು
ವಾಹನಗಳಗುಂಟ ಬಿರಬಿರನೆ ನಡೆಯುವುದೇನಲ್ಲ
ಹೀಗೆ ನಡುರಸ್ತೆಯಲ್ಲಿ ವಾದ ಮಾಡುತ್ತ ನಿಂತರೆ ಹೇಗೆ?
ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು
ಸಿಕ್ಕ ತರಕಾರಿ ಕೊಂಡು ನಡೆಯೋಣ ಬೇಗ ಮನೆಗೆ
ಉಳಿದರೆ ಸಮಯ, ಇದ್ದೇ ಇದೆ ಮಾತು-ಕತೆ-ಕಲಾಪ
ಎಂದಿಗೂ ಮುಗಿಯದ ನಮ್ಮಿಬ್ಬರ ವ್ಯರ್ಥಾಲಾಪ.


[ಫೆಬ್ರವರಿ 2012ರ  'ಮುಗುಳು' ಪತ್ರಿಕೆಯಲ್ಲಿ ಪ್ರಕಟಿತ]