Monday, December 17, 2018

ಅವಳು ಇತ್ತೀಚೆಗೆ

ಮಗಳು ಮಲಗಿದ ಸಮಯದಲ್ಲಿ ಅವಳು ಚಪಾತಿ ಒರೆಯುತ್ತಾಳೆ
ಲೊಟಗುಡುವ ಮಣೆಯ ಮನದಲ್ಲೆ ಬೈದುಕೊಳ್ಳುತ್ತಾಳೆ
ಲಟ್ಟಣಿಗೆಯ ನೆಲಕ್ಕಿಡುವಾಗ ಸದ್ದಾಗದಂತೆ ಎಚ್ಚರ ವಹಿಸುತ್ತಾಳೆ
ತೆಳುಲಯದ ಮೆದುಹಾಳೆಯ ಕಾವಲಿಯ ಮೇಲೆ ಹಾಕುವಾಗ
ಅಕಸ್ಮಾತ್ ಕಟ್ಟಿದ ನೆರಿಗೆಯ ಸಾವಕಾಶ ಬಿಡಿಸುತ್ತಾಳೆ
ಉಬ್ಬುಬ್ಬಿ ಬರುವ ಚಪಾತಿ ಕರಕಲಾಗದಂತೆ ಸಟ್ಟುಗದಿಂದ
ತಿರುವುವಾಗ ನೀರವವರ ಪಾಲಿಸೆಂದು ಪ್ರಾರ್ಥಿಸುತ್ತಾಳೆ-
ಕೆಲಹೊತ್ತಿನ ಹಿಂದಷ್ಟೆ ಹಿಟ್ಟನ್ನು ದಬರಿಗೆ ಸುರಿವಾಗ
ಪಾರಿಜಾತಪಾತಕ್ಕೆ ಮೈಮರೆತು ನಿಂತಿದ್ದ ಹುಡುಗಿ.

ಏಕಿಷ್ಟು ನಯ ಏಕಿಷ್ಟು ನಿಧಾನ ಏಕಿಷ್ಟು ಹುಷಾರು
ಮಗಳ ಮಲಗಿಸಲು ಪಟ್ಟ ಹರಸಾಹಸದ ಕತೆಯೇ ಇದೆ ಹಿಂದೆ
ಕೂತಲ್ಲೆ ಕೂತು ತೂಗಿತೂಗಿತೂಗಿದ ನೋವು ಇನ್ನೂ
ಹಾಗೆಯೇ ಇದೆ ಬೆನ್ನಲ್ಲಿ ಪಣುವಾಗಿ
ಗುನುಗಿದ ನೂರಾರು ಲಾಲಿಹಾಡುಗಳು ಇನ್ನೂ
ಸುಳಿದಾಡುತ್ತಿವೆ ಕೋಣೆಯಲ್ಲಿ, ಅಂಟಿಕೊಂಡಿವೆ ಗೋಡೆಯಲ್ಲಿ
ಕಥೆಗಳ ಖಜಾನೆಯಿಂದ ರಾಜ-ರಾಣಿ-ಗುಲಾಮರೆಲ್ಲ
ಬಂದುಹೋಗಿದ್ದಾರೆ ಕಾಗಕ್ಕ-ಗುಬ್ಬಕ್ಕರ ಜೊತೆಗೆ
ನಂಬಿಸಿದ್ದಾಗಿದೆ ನಿದ್ದೆಯಿಂದೆದ್ದಾದಮೇಲೆ ಸಿಗಲಿರುವ
ವಿಧವಿಧ ತಿಂಡಿ ಆಟಿಕೆ ಆಟಗಳ ಆಮಿಶವೊಡ್ಡಿ

ಚಪಾತಿಯಾದರೆ ಆಯಿತೆ? ಅದಕೊಂದು ಸಬ್ಜಿ
ಮನೆಯ ತುಂಬ ಹರಡಿರುವ ವಸ್ತುಗಳ ಹೆಕ್ಕಿ
ಗುಡಿಸಿ ಸಾರಿಸಿ ಮೈಗೊಂದಿಷ್ಟು ನೀರೆರೆದುಕೊಂಡು
ಕಿಣಿಗುಡುವ ಮೊಬೈಲಿನ ಸಂದೇಶಗಳಿಗುತ್ತರಿಸಿ
ದಿನದ ಸುದ್ದಿಗಳ ಗಾಸಿಪ್ಪುಗಳ ಕಡೆಗೊಂದು ಕಣ್ಣು ಹರಿಸಿ
ಒಣಗಿದ ಬಟ್ಟೆಗಳ ಮಡಿಚಿಟ್ಟು ಒಳಗೆ

ಹಾರಿಹೋಗುತ್ತಿರುವ ಸಮಯದಲ್ಲಿ ತನ್ನ ಸಮಯವ
ಹಿಡಿಯಲು ಹಾತೊರೆಯುತ್ತಾಳೆ ಚಡಪಡಿಸುತ್ತಾಳೆ
ಕಿವಿಗೆ ಹಾಡೊಂದನು ತುರುಕಿಕೊಂಡು
ಪೆನ್ನು ಹಾಳೆ ಹಿಡಿದು ಒರಗಿ ಕೂತು ಕುರ್ಚಿಗೆ
ಚಿತ್ರ ಬಿಡಿಸುತ್ತಾಳೆ, ಮುಳುಗುತ್ತಾಳೆ ಗೆರೆಗಳೊಳಗೆ
ಇನ್ನೇನು ಏಳಲಿರುವ ಕಂದ ಸೃಷ್ಟಿಸಲಿರುವ
ಪ್ರಳಯವನೆದುರಿಸಲು ತಯಾರಾಗುತ್ತಾಳೆ ಅಲ್ಲಿಂದಲೇ.

Monday, December 03, 2018

ಕೊಲ್ಲುವ ಸುಲಭ ವಿಧಾನ

ನೀವೆಷ್ಟೇ ಸ್ಕೆಚ್ಚು ಹಾಕಿ ಏನೇ ಪ್ಲಾನು ಮಾಡಿ
ಯಾರ್ಯಾರಿಗೂ ಕಾಣದಂತೆ ಚಾಣಾಕ್ಷತನದಿಂದ
ರಿವಾಲ್ವರಿನಿಂದ ಗುಂಡು ಹಾರಿಸಿ ಕೊಲ್ಲಿರಿ
ಆಮೇಲದನ್ನು ಯಾರಿಗೂ ಕಾಣದಂತೆ ಅಡಗಿಸಿಡಿ
ಹುಡುಕಬೇಕು ಎಂದಾದರೆ ಹುಡುಕುತ್ತಾರೆ ಹುಡುಕುವವರು
ಯಾವ ಕಂಪನಿಯ ರಿವಾಲ್ವರಿನಿಂದ
ಯಾವ ಅಳತೆಯ ಗುಂಡು ಬಳಸಿ
ಎಷ್ಟು ಹೊತ್ತಿಗೆ ಎಷ್ಟು ದೂರದಲ್ಲಿ ಎಷ್ಟು ಎತ್ತರದಲ್ಲಿ
ನಿಂತು ಹೊಡೆದು ಎತ್ತ ಪರಾರಿಯಾದಿರೆಂದು
ಪತ್ತೆ ಹಚ್ಚುತ್ತಾರೆ ಇಂಚಿಂಚು ವಿವರ ಸಮೇತ

ಬೇಡ, ಹರಿತ ಚಾಕುವಿನಿಂದ ಇರಿಯಿರಿ
ಕರುಳಿನೊಂದಿಗೆ ಹೊರಬಂದ ರಕ್ತ ಸೋರುವ ಚಾಕು
ಸಿಂಕಿನಲ್ಲಿ ತೊಳೆಯಿರಿ ಕೆಂಪು ಹೋಗುವವರೆಗೆ
ಬೆರಳಚ್ಚನ್ನು ಅತಿನಾಜೂಕಿನಿಂದ ಅಳಿಸಿಹಾಕಿ
ಬಿಸಿರುಧಿರದ ಕಮಟು ಹೋಗುವಂತೆ ಪರಿಮಳ ಪೂಸಿ
ಸಿಸಿಟಿವಿ ಪಿಸಿಟಿವಿ ಮಣ್ಣು ಮಸಿ ಲವಲೇಶವನೂ ಬಿಡದೆ
ಹೊತ್ತೊಯ್ಯಿರಿ ಅನುಮಾನ ಬರದಂತೆ ಮಾಯವಾಗಿ
ಹಿಡಿಯಬೇಕೆಂದರೆ ಕಂಡುಹಿಡಿಯುತ್ತಾರೆ ಕಂಡುಹಿಡಿಯುವವರು
ಇದೇ ಇವರದೇ ಅಂಗಡಿಯಲ್ಲಿ ಕೊಂಡ ಚಾಕು
ಇಂಥದೇ ಬಣ್ಣದ ಹಿಡಿಕೆ ಅದಕೆ ಇಷ್ಟುದ್ದದ ಫಳಫಳ ಮೈ
ಹೀಗೆ ನಿಂತು ಹೀಗೆ ಬಾಗಿ ಇಷ್ಟೆತ್ತರ ಕೈಯೆತ್ತಿ ಹೀಗೆ ಇರಿದು
ಕರಾರುವಾಕ್ ಬಿಡಿಸಿಡುತ್ತಾರೆ ಕ್ಷಣಕ್ಷಣದ ಚಿತ್ರ

ಯಾಕೆ‌ ತಲೆಬಿಸಿ? ಒಂದು ಹಗ್ಗದಿಂದ ಕೊರಳಿಗೆ ಬಿಗಿದು
ಉಸಿರುಗಟ್ಟಿಸಿ ಗಟ್ಟಿಯಾಗಿ ಹಿಡಿದು ಕೊಂದುಬಿಡಿ
ಆಮೇಲೆ ಆ ಹಗ್ಗವನ್ನು ಸುರುಳಿ ಸುತ್ತಿ
ನಿರ್ಜನ ಪ್ರದೇಶಕ್ಕೊಯ್ದು ಸುಟ್ಟುಹಾಕಿಬಿಡಿ
ತಲೆಮರೆಸಿಕೊಂಡಿರಿ ಒಂದಷ್ಟು ಕಾಲ
ಆದರೂ ಬಚಾವಾಗುವುದು ಸುಲಭವಲ್ಲ ಸಾರ್
ನೀವಿದ್ದಲ್ಲಿಗೇ ಬರುತ್ತಾರೆ ಹುಡುಕಿಕೊಂಡು
ಬೂದಿ ಕೆದಕಿದಂತೆ ಕೆದಕುತ್ತಾರೆ ಹಿಂದಿನದನ್ನೆಲ್ಲ
ಪ್ರಶ್ನೆಯ ಮೇಲೆ ಪ್ರಶ್ನೆಯೆಸೆದು ಸಿಕ್ಕಿಹಾಕಿಸುತ್ತಾರೆ
ನಿಮ್ಮದೇ ಬಲೆಯಲ್ಲಿ ನಿಮ್ಮನು, ಹಾಗೇ ಹೊತ್ತೊಯ್ಯುತ್ತಾರೆ

ಕೊಲ್ಲುವ ಸುಲಭ ಮಾರ್ಗ ಹೇಳುವೆ ಕೇಳಿ
ಅವರು ಬಯಸಿದ್ದನ್ನು ಅವರಿಗೆ ಕೊಡಬೇಡಿ
ನಿರೀಕ್ಷೆಯ ಉತ್ತುಂಗದಲ್ಲವರು ಕರಗಿ ಮೆತ್ತಗಾಗಿದ್ದಾಗ
ಮುಖ ತಿರುಗಿಸಿ ಹೊರಟುಬಿಡಿ
ಏನನೋ ಹೇಳಲವರು ಬಾಯ್ತೆರೆದು ಗೊಣಗುಟ್ಟಿದಾಗ
ಕಿವಿ ಕೇಳದವರಂತೆ ಮುನ್ನಡೆಯಿರಿ
ಕಣ್ಣಹನಿಗಳ ಕಂಡೂ ಕಾಣದವರಂತೆ ಮುಗುಮ್ಮಾಗಿರಿ
ಚಾಚಿದ ಕೈ ಅಲಕ್ಷಿಸಿ ಧಿಮಾಕು ತೋರಿ

ಅಷ್ಟೇ. ಪುಪ್ಪಸದಲ್ಲಿದ್ದ ಚೂರು ಉಸಿರೂ ಇಂಗಿಹೋಗಿ
ಹಾಗೇ ಮೂಕರಾಗಿ ಕೃಷರಾಗಿ ಖಾಲಿಯಾಗಿ ಸತ್ತುಹೋಗುವರು
ಅವರೆದೆಯೊಳಗಿದ್ದ ಗುಟ್ಟು ಸಹ ಹೊರಬರಲಾಗದೆ ಮಣ್ಣಾಗುವುದು
ಯಾರಿಗೂ ಯಾರ್ಯಾರಿಗೂ ತಿಳಿಯದೆ ನೀವು ಬಚಾವಾಗುವಿರಿ
ಅಯ್ಯೋ, ಪಾಪಪ್ರಜ್ಞೆಯ ಬಗ್ಗೆಯೆಲ್ಲಾ ಹೆದರಲೇಬೇಡಿ
ಅದು ಈ ಶಹರದ ಟ್ರಾಫಿಕ್ಕಿನಲ್ಲಿ ಸಾವಿರ ವಾಹನಗಳ
ತುಳಿತಕ್ಕೊಳಗಾಗಿ ಕೆಲವೇ ದಿನಗಳಲ್ಲಿ ನಾಮಾವಶೇಷವಾಗುವುದು.

ಈ ಸಲದ ದೀಪಾವಳಿ

ಹದಿನೈದು ದಿನದ ಹಿಂದೆ ಅಮ್ಮ ಹೇಳಿದ್ದಳು ಫೋನಿನಲ್ಲಿ
ನಮ್ಮನೆ ಹಿತ್ತಲಿಗೆ ಜಿಂಕೆಗಳು ಬಂದಿದ್ದವಂತೆ
ಕೋತಿಗಳೇ ಹೆಚ್ಚಿರುವ ನಮ್ಮೂರ ಕಾಡಿನಲ್ಲಿ
ಜಿಂಕೆಗಳೂ ಇರುವುದು ಗೊತ್ತೇ ಇರಲಿಲ್ಲ ನನಗೆ
ಅಪ್ಪನ ಕರೆದು ಫೋಟೋ ತೆಗೆಯಲು ಹೇಳುವಷ್ಟರಲ್ಲಿ
ಮಾಯವಾದವಂತೆ ಅವು
ಬಂದಿದ್ದವು ಮಾಯಾಜಿಂಕೆಗಳೇ ಹಾಗಾದರೆ
ಅಂತ ಕೇಳಿದೆ; ರಾಮರಾಮಾ, ಗೊತ್ತಿಲ್ಲ ಎಂದಿದ್ದಳು ಅಮ್ಮ

ದೀಪಾವಳಿಗೆ‌ ಊರಿಗೆ ಹೋದಾಗ ಆ ಜಿಂಕೆಗಳು
ಮತ್ತೆ ಬರಬಹುದು ಅಂತ ಕಣ್ಣು-ಕಿವಿಗಳ ಹಿತ್ತಿಲಲ್ಲಿಟ್ಟು ಕಾದೆ
ಗೋಪೂಜೆಯ ದಿನ ಜಿಂಕೆಯ ಚಿಂತ್ಯಾಕೋ ಅಂದ ಅಪ್ಪ
ಹಾಗೂ ಅವೇನಾದರೂ ಬಂದಿದ್ದರೆ
ಇನ್ನೂ ನಾಯಿಮರಿಗಳಿಗೂ ಜಿಂಕೆಗಳಿಗೂ
ವ್ಯತ್ಯಾಸ ಗುರುತಿಸದ ಮಗಳು ಅವನ್ನು ನೋಡಿದ್ದರೆ
ಬೌಬೌ ಎಂದು ಖುಷಿ ಪಡುತ್ತಿದ್ದಳು
ಬಾಬಾ ಎಂದು ಕರೆದು ಸಂಭ್ರಮಿಸುತ್ತಿದ್ದಳು
ಮಗಳು ಕರೆದರೆ ಅವು ಬಂದೇ ಬರುತ್ತಿದ್ದವು
ಆಗ ಅವಕ್ಕೆ ಚಿಗುರುಹುಲ್ಲು ತಿನ್ನಿಸಬಹುದಿತ್ತು

ಆಮೇಲೆ ನಾನು ಮಗಳಿಗೆ ಮಾರೀಚನೆಂಬ ರಾಕ್ಷಸ
ಜಿಂಕೆಯ ರೂಪದಲ್ಲಿ ಬಂದುದನ್ನೂ
ರಾಮ ಅದರ ಬೆನ್ನಟ್ಟಿ ಹೋದುದನ್ನೂ
ಆಗ ರಾವಣ ಸೀತೆಯನ್ನು ಹೊತ್ತೊಯ್ದುದನ್ನೂ
ನಂತರ ರಾಮ-ಲಕ್ಷ್ಮಣ-ವಾನರರೆಲ್ಲ ಲಂಕೆಗೆ
ದಂಡೆತ್ತಿ ಹೋದುದನ್ನೂ ರಾವಣನನ್ನು ಸಂಹರಿಸಿದ
ಕಥೆಯನ್ನೂ ಹೇಳಬಹುದಿತ್ತು

ಆದರೆ ಆಗ ಅವಳಿಗೆ ಜಿಂಕೆಗಳ ಬಗೆಗಿದ್ದ
ನೋಟವೇ ಬದಲಾಗಿಹೋಗುತ್ತಿತ್ತು ಎನಿಸಿ ಬೆವರಿದೆ
ಜಿಂಕೆಗಳು ಬಾರದೇ ಇದ್ದುದೇ ಒಳ್ಳೆಯದಾಯಿತು
ಎನಿಸಿ ನಿಟ್ಟುಸಿರುಬಿಟ್ಟೆ
ಯಾವ ಕಥೆ ಯಾವಾಗ ಹೇಗೆ ಹೇಳಬೇಕೋ
ಹಾಗೇ ಹೇಳಬೇಕು ಎಂಬುದು ಹೊಳೆದು
ಹಣತೆಗೆ ಎರಡು ಹುಟ್ಟು ಜಾಸ್ತಿ ಎಣ್ಣೆಯೆರೆದೆ.

ಪಾತ್ರ ನಿರ್ವಹಣೆ

ಮಗಳು ಹೋಗಿದ್ದಾಳೆ ಅಜ್ಜನ ಮನೆಗೆ

ಅವಳ ಗೊಂಬೆಗಳೀಗ ಬಾಕ್ಸಿನಲಿ ಬಿಕ್ಕುತ್ತಿರಬಹುದೇ?
ಮಿಸ್ ಮಾಡಿಕೊಳ್ಳುತ್ತಿರಬಹುದೇ ಅವಳನ್ನು
ಚಿಂಟು ಟೀವಿಯ ಕರಡಿಗಳು?
ಬೆಲ್ಲದ ಡಬ್ಬಿ ಅಲ್ಲಾಡದ ಸುಳಿವರಿತು
ಮುತ್ತಲು ಧೈರ್ಯ ಮಾಡಿರಬಹುದೇ ಇರುವೆಗಳು?
ಫ್ರಿಜ್ಜಿನಲ್ಲಿನ ದಾಳಿಂಬೆಯೊಳಗಿನ ಕಾಳುಗಳು
ಕೆಂಪಗೆ ಹಲ್ಲು ಗಿಂಜುತ್ತಿರಬಹುದೇ?
ಹರಿಯದೇ ಉಳಿದ ಇಂದಿನ ನ್ಯೂಸ್‌ಪೇಪರು
ತನ್ನೊಳಗಿನ ಸುದ್ದಿಗಳ ತಾನೇ ಓದುತ್ತಿರಬಹುದೇ?
ಮೌನ ಬೇಸರ ಬಂದು ಆಕಳಿಸುತ್ತಿರಬಹುದೇ
ಚೀಂವ್‌ಚೀಂವ್ ಚಪ್ಪಲಿಯೊಳಗಿನ ಪುಟ್ಟ ಪೀಪಿ?

ಎಂದೆಲ್ಲ ಅನಿಸಿ ಈ ನಡುರಾತ್ರಿ ಚಡಪಡಿಸಿಹೋಗಿ
ಅವಳ ಆಟಿಕೆಗಳನೆಲ್ಲ ಹರವಿ
ಟೀವಿ ಹಚ್ಚಿ ಕಾರ್ಟೂನಿಗೆ ಟ್ಯೂನು ಮಾಡಿ
ಬೆಲ್ಲದ ಡಬ್ಬಿ ಕೆಳಗಿಳಿಸಿ ದಾಳಿಂಬೆ ಬಿಡಿಸಿ
ಪೇಪರು ಹರಿದು ಚೂರ್ಚೂರು ಮಾಡಿ
ಚಪ್ಪಲಿಯ ಕೈಯಿಂದ ಒತ್ತಿ ಶಬ್ದ ಬರಿಸಿ

ಏನೆಲ್ಲ ಮಾಡಿ ಅವಕ್ಕೆ ಸಮಾಧಾನ ಮಾಡಿ
ನಾನು ಸಮಾಧಾನಗೊಳ್ಳುವ ಸಲುವಾಗಿ

ಆದರೆ ಅವಂದವು:
ನಮಗೆ ಪುಟ್ಪುಟ್ಟ ಬೆರಳುಗಳು ಬೇಕು
ಮೃದುಪಾದ ಬೇಕು
ಮುದ್ದುಮಾತು ಬೇಕು
ಸಣ್ಣ ಮುಷ್ಠಿಯಲಿ ಬರಗಿ ತಿನ್ನಬೇಕು
ಬೆರಗಲಿ ನೋಡಬೇಕು ನಮ್ಮನು ನಿಜಜೀವಿಗಳೆಂದು ಬಗೆದು

ನಾನು ಮಗಳಾಗಲಾಗದೆ ಸೋತು
ಈ ರಾತ್ರಿ ಜಾಗರ.

ಆ ವೃದ್ಧೆಗೆ

ನಿನ್ನನ್ನು ಮುಟ್ಟದೇ ನಿನ್ನ ಬಗ್ಗೆ ಬರೆಯಲಾರೆ
ಅದು ಅಪಚಾರವಾದೀತು

ಫೋಟೋಫ್ರೇಮಿನ ಅಂಗಡಿಯವ ಪೇಪರಿನಲ್ಲಿ
ಫೋಟೋ ಸುತ್ತಿಕೊಡುವಾಗ
ನಿನ್ನ ದಪ್ಪ ಕನ್ನಡಕದ ಹಿಂದಿನ ಕಣ್ಣಿನಲ್ಲಿ
ಪಸೆಯಿತ್ತೆಂದ ಮಾತ್ರಕ್ಕೆ
ಸಣ್ಣ ಪರ್ಸಿನಿಂದ ದುಡ್ಡು ತೆಗೆದುಕೊಡುವಾಗ
ನಿನ್ನ ಸುಕ್ಕುಗಟ್ಟಿದ ಕೈ ನಡುಗುತ್ತಿತ್ತೆಂಬ ಮಾತ್ರಕ್ಕೆ
ಅಲ್ಲಿಂದ ಹೊರಬೀಳುವಾಗ ನಿನ್ನ ಹೆಜ್ಜೆಗಳು
ಭಾರವಾಗಿದ್ದವೆಂಬ ಮಾತ್ರಕ್ಕೆ
ಆ ಫೋಟೋದಲ್ಲಿದ್ದ ನೀಲಿ ಜುಬ್ಬಾದ ವೃದ್ಧ
ನಿನ್ನ ಗಂಡನೇ ಎಂದು ಊಹಿಸಿ
ಅವರು ಈಗಿಲ್ಲವೆಂದೂ, ಅವರ ಫೋಟೋಗೆ
ನೀನೇ ಫ್ರೇಮು ಹಾಕಿಸಿ ದುಡ್ಡು ಕೊಟ್ಟು
ಇಸಕೊಂಡು ಬಂದೆಯೆಂದೂ
ಈಗ ಮನೆಗೆ ತೆರಳಿ ಆ ಫೋಟೋವನ್ನು
ಹಳೆಯ ಮೊಳೆಯೊಂದಕ್ಕೆ ನೇತುಹಾಕಿ
ಕುಂಕುಮ ಹಚ್ಚುತ್ತೀಯೆಂದೂ
ಈ ಕ್ಷಣದಲ್ಲೂ ಹತ್ತಿರವಿಲ್ಲದ ಮಕ್ಕಳ ನೆನೆದು
ಒಂಟಿಮನೆಯ ಬೆತ್ತದ ಕುರ್ಚಿಯಲ್ಲಿ ಕೂತು
ಅಳುತ್ತೀಯೆಂದೂ ಪದ್ಯ ಬರೆದು ಚಪ್ಪಾಳೆ ಗಿಟ್ಟಿಸಲಾರೆ

ಮಳೆ ಬಂದುಹೋದ ಈ ಸಂಜೆ
ರಸ್ತೆಬದಿ ನಿಂತ ನೀರನ್ನು ನಿನ್ನ ಮೇಲೆ ಅನಾಮತ್
ಹಾರಿಸಿ ಹೋದ ಕಾರಿನವನ್ನು ಬೈಯದೇ
ಛತ್ರಿಯರಳಿಸಿ ಪಶ್ಚಿಮದತ್ತ ನಡೆಯುತ್ತಿರುವ ನಿನ್ನ
ಕೈ ಹಿಡಿದು ಮನೆವರೆಗೆ ತಲುಪಿಸಲಾರದ ನಾನು

ಹೀಗೆ ಫುಟ್‌ಪಾತಿನ ಮೇಲೆ ನಿಂತು
ಪರಿಚಯವೇ ಇಲ್ಲದ ನಿನ್ನ ಜೀವನದ ಕಥೆಯನ್ನು
ಪೂರ್ತಿ ತಿಳಿದವನಂತೆ ಬರೆಯಲು ಕುಳಿತರೆ
ನಿನ್ನನ್ನು ನನ್ನ ಕಲ್ಪನೆಯ ಫ್ರೇಮಿನೊಳಗೆ ಬಂಧಿಸಿಡಲು
ಹವಣಿಸಿದರೆ ಅದಕ್ಕಿಂತ ಆತ್ಮದ್ರೋಹ ಮತ್ತೊಂದಿಲ್ಲ

ಸ್ಪರ್ಶಕ್ಕೆ ಸಿಲುಕದ ವಸ್ತುಗಳ ಬಗ್ಗೆ ಕವಿತೆ ಬರೆಯುವ ಚಾಳಿ
ಇನ್ನಾದರೂ ಬಿಡಬೇಕೆಂದಿದ್ದೇನೆ.

ಒಳ್ಳೆಯ ಸುದ್ದಿ

ವಾರ್ತಾಪ್ರಸಾರದ ಕೊನೆಯಲ್ಲಿ ಬರುತ್ತಿದ್ದ ಹವಾ ವರ್ತಮಾನ
ಈಗ ದಿನವಿಡೀ ಬಿತ್ತರವಾಗುತ್ತಿದೆ
ಕೆಂಪಗೆ ಹರಿವ ನೀರು, ಕುಸಿದ ಗುಡ್ಡಗಳು, ನಿರಾಶ್ರಿತ ಜನಗಳು,
ಸಹಾಯ ಮಾಡೀ ಎನ್ನುತ್ತಿರುವವರ ಭಯಗ್ರಸ್ತ ಕಂಗಳು
ಹೊರಗೆ ನೋಡಿದರೆ ಮ್ಲಾನ ಕವಿದ ವಾತಾವರಣ
ಮನೆಯ ಒಳಗೂ ಕತ್ತಲೆ ಕತ್ತಲೆ

ಇಂತಹ ಮುಂಜಾನೆ ಬಂದು ನೀನು ಬಾಗಿಲು ತಟ್ಟಿದ್ದೀ
ಕೈಯಲ್ಲೊಂದು ಚೀಲ, ಕಂದು ಸ್ವೆಟರು, ಕೆದರಿದ ಕೂದಲು
ಟೀವಿಯಲ್ಲಿ ಕಾಣುತ್ತಿರುವ ಆ ಆರ್ತರಲ್ಲೊಬ್ಬನೇ
ಎದ್ದು ಬಂದಂತೆ, ದಿಢೀರೆಂದು ಹೀಗೆ ಎದುರಿಗೆ ನಿಂತಿದ್ದೀ
ಮನೆಯಲ್ಲೆಲ್ಲ ಕ್ಷೇಮ ತಾನೇ? ಊರಿಗೇನೂ ಆಗಿಲ್ಲವಷ್ಟೇ?
ಬಾ, ಕುಳಿತುಕೋ ಗೆಳೆಯಾ, ಕೈಚೀಲವನ್ನಿತ್ತ ಕೊಡು

ಮಬ್ಬು ತುಂಬಿಕೊಂಡಿರುವ ಈ ಋತುವಿನಲ್ಲಿ
ಕಳೆಗುಂದಿರುವ ಮನಸಿಗೆ ಹಿತವಾಗುವಂತಹ
ಒಳ್ಳೆಯ ಸುದ್ದಿಗಳ ಹೇಳು
ಬಿಸಿಯಾದ ಚಹಾ ಮಾಡಿಸುವೆ
ಡೇರೆಯ ಗಿಡದಲಿ ಹೂವರಳಿರುವ
ಡೊಂಬರ ಲೋಕೇಶ ಶಾಲೆಗೆ ಹೊರಟಿರುವ
ಮಂಜಿ ಗದ್ದೆಗೆ ತಂದ ಬುತ್ತಿಯಲ್ಲಿ ಎಳ್ಳುಂಡೆಯಿದ್ದ
ಕೆಳಮನೆ ದ್ಯಾವ ಹೊಸ ಜೋಡೆತ್ತು ಕೊಂಡ
ನಲವತ್ತರ ಮಾಲತಿಗೆ ಮದುವೆ ನಿಕ್ಕಿಯಾಗಿರುವ
ಸಂತೆ ಮೈದಾನದ ಮಳಿಗೆಗಳ ಹೆಂಚು ಬದಲಿಸಿದ
ಸಿಹಿ ಸುದ್ದಿಗಳ ಹಂಚಿಕೋ

ಬೇಕಿದ್ದರೆ ನೀನು ತಂದಿರುವ ಹಲಸಿನಕಾಯಿಯ ಚಿಪ್ಸು ಸೀಸನಲ್ಲು,
ಅದು ನಮ್ಮನೆ ಆಲೂಗಡ್ಡೆ ಚಿಪ್ಸಿಗಿಂತ ಶ್ರೇಷ್ಠ ಅಂತ
ಜಗಳಾಡು
ಹಳೆಯ ಗೆಳೆಯರ, ಮಾಡಿದ ಕೀಟಲೆಗಳ ನೆನೆದು
ನಗೋಣ
ಆದರೆ ಹಾಗೆ ನಿಗೂಢವಾಗಿ ನೋಡಬೇಡ
ಯಾವುದೋ ದುಃಖದ ಸುದ್ದಿಯನ್ನೇ ಹೇಳಲು ಬಂದವನಂತೆ
ಮೌನ ಮುರಿಯಲು ಒದ್ದಾಡುತ್ತಿರುವವನಂತೆ ವರ್ತಿಸಬೇಡ
ಈ ವೆದರಿನಲ್ಲಿ ಕಣ್ಣೀರೂ ಬೇಗ ಒಣಗುವುದಿಲ್ಲ ಮಾರಾಯಾ

ಇಕೋ ಟವೆಲು, ಗೀಸರಿನಲ್ಲಿ ನೀರು ಬಿಸಿಯಿದೆ,
ಬೆಚ್ಚಗೆ ಸ್ನಾನ ಮಾಡಿಬಂದು ಈ ಖಿನ್ನಹವೆಯ
ತಿಳಿಗೊಳಿಸುವಂತಹ ಒಳ್ಳೊಳ್ಳೆಯ ಸುದ್ದಿಗಳ ಹೇಳು.


ಹೀಗೇ ಅಲ್ಲವೇ

ಇದುವರೆಗೆ ನಡೆಯುವಾಗ ಹೊಸ್ತಿಲ ಬಳಿ ಕುಳಿತು ದಾಟುತ್ತಿದ್ದ
ಮೆಟ್ಟಿಲ ಬಳಿ ಕುಳಿತು ಹತ್ತುತ್ತಿದ್ದ ಮಗಳು
ಮೊನ್ನೆಯಿಂದ ಬಗ್ಗದೆ ತಗ್ಗದೆ ಮುಂದರಿಯುತ್ತಿದ್ದಾಳೆ
ಅದು ಹೇಗೆ ಧೈರ್ಯ ಮಾಡಿದೆ ಮಗಳೇ ಎಂದರೆ
ಎದೆಯುಬ್ಬಿಸಿ ನಗೆಯಾಡುತ್ತಾಳೆ
ಏನೋ ಸಮಜಾಯಿಷಿ ನೀಡುತ್ತಾಳೆ
ಅವಳದೇ ಭಾಷೆಯಲ್ಲಿ

ಆದರೂ ನನಗದರ್ಥವಾಗುತ್ತದೆ
ಹೀಗೇ ಅಲ್ಲವೇ ನಾನೂ ಮೊದಲ ಸಲ
ಸೈಕಲ್ಲಿನ ಪೆಡಲಿನ ಮೇಲೆ ಹೆಜ್ಜೆಯಿಟ್ಟಿದ್ದು
ಒಳಪೆಡ್ಲಿನಿಂದ ಬಂಪರಿಗೆ
ಬಂಪರಿನಿಂದ ಸೀಟಿಗೆ ಏರಿದ್ದು
ಢವಗುಡುವೆದೆಯ ಸದ್ದನು
ಟ್ರಿಣ್‌ಟ್ರಿಣ್ ಬೆಲ್ ಮಾಡಿಯೇ ಮರೆಸಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಪೇರಲೆ ಮರದ ಕೆಳರೆಂಬೆಗಳ ದಾಟಿ ಮೇಲೇರಿದ್ದು
ತುದಿಯಲಿ ಜೋತ ಹಣ್ಣುಗಳ ಬಗ್ಗಿ ಹಿಡಿದದ್ದು
ಇಡೀ ಗಿಡವೇ ಬಾಗಿ ಹೆರೆಯೇ ಮುರಿಯಿತೆನಿಸಿ 
ಕಣ್ಣು ಮೇಲಾದಾಗಲೂ ಉಸಿರು ಬಿಗಿಹಿಡಿದುಕೊಂಡದ್ದು
ಕೆಳಗಿಳಿಯಲು ಕಾಲು ಸಿಗದೇ ಮೇಲಿಂದಲೇ ಹಾರಿದ್ದು
ಆದ ಗಾಯದ ಉರಿಯನು ಹಣ್ಣಿನ ರುಚಿಯಲಿ ಮಾಯಿಸಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಮಹಾನಗರದ ಬಸ್ಸು ಹತ್ತಿದ್ದು
ಮೆಜೆಸ್ಟಿಕ್ಕಿನ ನುಣ್ಣನೆ ಕಾಂಕ್ರೀಟು ನೆಲದಲಿ ಪಾದವೂರಿದ್ದು
ಹವಾಯಿ ಗಂಧರ್ವ ಪುಟುಪುಟು ಕಾಲೆತ್ತಿಟ್ಟಿದ್ದು 
ಅತ್ತಿತ್ತ ನೋಡುತ್ತ ಹುಸಿನಗೆಯಾಡುತ್ತ
ಎಲ್ಲ ತಿಳಿದವನಂತೆ ತಿಳಿಯದ ದಾರಿಯಲಿ ನಡೆದದ್ದು
ಸಿಗ್ನಲ್ಲು ಬಿದ್ದಾಗ ಪಕ್ಕದವನೊಂದಿಗೇ ರಸ್ತೆ ದಾಟಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಫಳಫಳ ಹೊಳೆವ ರಿಸೆಪ್ಷನ್ನಿನಲ್ಲಿ ಸರತಿಯಲ್ಲಿ ಕಾದದ್ದು
ಹೆಸರು ಕರೆದಾಗ ರೆಸ್ಯೂಮ್ ಹಿಡಿದು ಕದ ತಳ್ಳಿದ್ದು
ಗರಿಗರಿ ಇಸ್ತ್ರಿಯಂಗಿಗಳ ಇಂಗ್ಲೀಷು ವಾಗ್ಝರಿಗೆ
ಹರುಕುಮುರುಕು ಪದಗಳ ಜೋಡಿಸಿ ಉತ್ತರಿಸಿದ್ದು 
ಕೆಲಸದ ಮೊದಲ ದಿನ ತಿರುಗುಕುರ್ಚಿಯಲಿ ಕುಳಿತು
ಮೆಲ್ಲಗೆ ಒರಗಿದ್ದು, ಸುತ್ತಲೂ ನೋಡಿ ನಕ್ಕಿದ್ದು 

ಸರಿಯಿದೆ ಮಗಳೇ
ಹೀಗೇ ನಿನಗೆ ನೀನೇ ಧೈರ್ಯವಾಗಿ
ನಿನಗೆ ನೀನೇ ಸಾಟಿಯಾಗಿ
ಹುಸಿನಗೆ ಮೊಂಡೆದೆ ದೃಢದನಿಯಲಿ
ಇಡುವೆ ಇಂತಹ ಹೆಜ್ಜೆಗಳ ಮುಂದೆಯೂ
ದಡ ಸೇರಿ ಖುಷಿಪಡುವೆ ನಿನ್ನ ಬಗೆಗೇ ನೀನು 
ಚಪ್ಪಾಳೆ ತಟ್ಟುವೆ ನೋಡುತ್ತ ಕನ್ನಡಿಯಲಿ ನಾನು.

Friday, June 01, 2018

ಕಸದಿಂದಲೇ ವಿರಸ

ಹೋಯ್, ವಿಷಲ್ ಊದಿದ ಶಬ್ದ.. ಕಸದವ್ರು ಬಂದಿದಾರೆ ಅನ್ಸುತ್ತೆ ನೋಡ್ರೀ ಅಂತ ಹೆಂಡತಿ ಕೂಗಿದಳು ಅದ್ರೆ ನಾನು ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೇ ಬಿಟ್ಟು ಟೆರೇಸಿಗೆ ಓಡಬೇಕು ಅಂತ ಅರ್ಥ. ಇದು ನಮ್ಮ ಮನೆಯಲ್ಲಿ ಹೆಚ್ಚುಕಮ್ಮಿ ಪ್ರತಿದಿನ ಬೆಳಿಗ್ಗೆ ನಡೆಯುವ ಪ್ರಸಂಗ. ನಮ್ಮ ಮನೆ ಇರುವುದು ರಾಜಧಾನಿಯ ಜನನಿಬಿಡ ವಸತಿ ಪ್ರದೇಶಗಳೊಂದರಲ್ಲಿ, ಕಟ್ಟಡದ ಮೂರನೇ ಮಹಡಿಯಲ್ಲಿ. ಮನೆ ರಸ್ತೆಗೆ ಅಭಿಮುಖವಾಗಿ ಇರದೆ ಕಟ್ಟಡದ ಹಿಂಭಾಗದಲ್ಲಿರುವುದರಿಂದ ನಮಗೆ ರಸ್ತೆಯಲ್ಲಿ ಏನು ನಡೆಯುತ್ತಿದೆ ಅಂತ ನೋಡಬೇಕೆಂದರೆ ಕೆಳಗಿಳಿದು ರಸ್ತೆಗೇ ಬರಬೇಕು ಅಥವಾ ಟೆರೇಸಿಗೆ  ಹೋಗಿ ಬಗ್ಗಬೇಕು. ಮತ್ತೂ ಒಂದು ಸಮಸ್ಯೆಯೆಂದರೆ, ನಮ್ಮ ಮನೆಯ ಸುತ್ತಲೂ ಮೂರ್ನಾಲ್ಕು ರಸ್ತೆಗಳು ಹತ್ತತ್ತಿರದಲ್ಲೇ ಇರುವುದು. ಹೀಗಾಗಿ ಕಸದ ತಳ್ಳುಗಾಡಿಯವರು ಬಂದು ವಿಷಲ್ ಊದಿದಾಗ ಅವರು ನಮ್ಮ ಮನೆಯಿರುವ ರಸ್ತೆಯಲ್ಲೇ ಇದ್ದಾರೋ ಅಥವಾ ಹಿಂದಿನ / ಅಕ್ಕಪಕ್ಕದ ಯಾವುದಾದರೂ ರಸ್ತೆಯಲ್ಲಿದ್ದಾರೋ ಎಂಬುದು ತಿಳಿಯದೇ ಹೋಗುವುದು. ಈ ಕಾರಣದಿಂದ ಪ್ರತಿದಿನ ವಿಷಲ್ ಸದ್ದು ಕೇಳಿದಾಗಲೂ ನಾನು ಟೆರೇಸಿಗೆ ಓಡಿ, ಕಸದ ಗಾಡಿ ನಮ್ಮ ರಸ್ತೆಯಲ್ಲೇ ಇದೆ ಮತ್ತು ಅವರು ಹಸಿ /ಒಣ ಕಸವನ್ನೇ ಸ್ವೀಕರಿಸುತ್ತಿದ್ದಾರೆ ಅಂತ ಖಚಿತಪಡಿಸಿಕೊಂಡು ನಂತರ ಡಸ್ಟ್‌‍ಬಿನ್ನು ಹಿಡಿದು ಕೆಳಗೋಡಬೇಕು. ಹಾಗೆ ನೋಡದೇ ಕೇವಲ ಶಬ್ದವನ್ನಾಧರಿಸಿ ಶಬ್ದವೇಧಿ ಕಲಿತವನ ಗತ್ತಿನಲ್ಲಿ ನಮ್ ರೋಡಲೇ ಇದಾರೆ ಬಿಡು ಅಂದುಕೊಂಡು ಕೆಳಗಿಳಿದೆನೋ, ಖಾಲಿ ರಸ್ತೆ ನೋಡಿಕೊಂಡು, ವಾಸನೆ ಸೂಸುವ ಕಸದ ಬುಟ್ಟಿಯೊಂದಿಗೆ ವಾಪಸ್ ಮೆಟ್ಟಿಲು ಹತ್ತಬೇಕು. 
 
ಬೆಂಗಳೂರಿಗೆ ಬಂದಮೇಲೆ ನಾನು ಅನುಭವಿಸಲು ಶುರುಮಾಡಿದ ಮಹಾನ್ ಕಷ್ಟಗಳಲ್ಲಿ ಇದೂ ಒಂದು. ಊರಲ್ಲಾದರೆ ಈ ಕಸದ ವಿಲೇವಾರಿ ಇಷ್ಟೆಲ್ಲಾ ಕಷ್ಟ ಎಂದೂ ಆದದ್ದಿಲ್ಲ. ಯಾವ ಕಸವಿರಲಿ, ಅದು ಮಣ್ಣಲ್ಲಿ ಕರಗುವ ವಸ್ತು ಎಂದಾದರೆ ಬೀಸಾಡಲು ಗೊಬ್ಬರದ ಗುಂಡಿಯೊಂದು ಇದ್ದೇ ಇರುತ್ತಿತ್ತು. ಕರಗದ ವಸ್ತುವೋ, ಸುಡಲು ಬಚ್ಚಲೊಲೆ ಸಿದ್ಧವಿರುತ್ತಿತ್ತು. ಉಂಡು ಮಿಕ್ಕಿದ ಆಹಾರ ಪದಾರ್ಥ ನಮಗೆ ಎಂದೂ ವ್ಯರ್ಥವೆನಿಸಿದ್ದಿಲ್ಲ: ಅದನ್ನು ತಿನ್ನಲು ಕೊಟ್ಟಿಗೆಯಲ್ಲಿ ಜಾನುವಾರುಗಳು ಕಾಯುತ್ತಿರುತ್ತಿದ್ದವು. ಅನ್ನ ಮಿಕ್ಕರೆ ಹಿಂಡಿಯ ಜೊತೆ, ಸಾರು ಮಿಕ್ಕರೆ ಅಕ್ಕಚ್ಚಿನ ಜೊತೆ ಅವು ಜಾನುವಾರಿನ ಹೊಟ್ಟೆ ಸೇರುತ್ತಿದ್ದವು. ಮನೆ ಗುಡಿಸಿದಾಗ ಸಿಕ್ಕ ಧೂಳನ್ನಾಗಲೀ, ಅಂಗಳ ಗುಡಿಸಿದಾಗ ಸಂಗ್ರಹವಾದ ತರಗೆಲೆಗಳನ್ನಾಗಲೀ, ತಲೆ ಬಾಚಿದಾಗ ಉದುರಿದ ಕೂದಲನ್ನಾಗಲೀ, ಹಣ್ಣು ಬಿಡಿಸಿದಾಗ ಉಳಿದ ಸಿಪ್ಪೆಯನ್ನಾಗಲೀ ಎಲ್ಲಿಗೆಸೆಯಬೇಕು ಅಂತ ನಾವೆಂದೂ ಯೋಚಿಸುವಂತಾಗಿರಲಿಲ್ಲ. ಅವಕ್ಕೆಲ್ಲ ಬೇಕಾದಷ್ಟು ಜಾಗ ಮತ್ತು ಅವಕಾಶ ಹಳ್ಳಿಯ ಮನೆಯಲ್ಲಿರುತ್ತಿತ್ತು.

ಆದರೆ ಬೆಂಗಳೂರಿನ ಮನೆಯಲ್ಲಿ ಹಾಗಲ್ಲ. ಉಪ್ಪಿಟ್ಟಿನ ತಟ್ಟೆಯಲ್ಲಿ ಸಿಕ್ಕ ಒಂದು ಮೆಣಸಿನಕಾಯಿಯ ಚೂರೂ ಬೃಹತ್ ಕಸದಂತೆ ಕಾಣತೊಡಗಿತು. ಅದನ್ನು ತಟ್ಟೆಯಲ್ಲೇ ಬಿಡುವುದೋ ಅಥವಾ ತಿಂದುಬಿಡುವುದೋ? ಬಿಟ್ಟರೆ ಅದನ್ನು ಎಸೆಯುವ ಸಮಸ್ಯೆ; ಹಾಗಂತ ತಿಂದರೆ ಖಾರ ನೆತ್ತಿಗೇರಿ...  

ನಾನು ಮೊದಲಿಗೆ ಇದ್ದ ಬ್ಯಾಚುಲರ್ಸ್ ಬಿಡಾರದಲ್ಲಿ ಇದು ಭಯಂಕರ ಸಮಸ್ಯೆಯಂತೆ ಅನಿಸಿರಲಿಲ್ಲ. ಆ ಮನೆಯಿದ್ದುದು ಗ್ರೌಂಡ್ ಫ್ಲೋರಿನಲ್ಲಿ. ಅಲ್ಲದೇ ತುಂಬಿದ ಕಸದ ಬುಟ್ಟಿಯನ್ನು ಗೇಟಿನ ಹೊರಗೆ ಇಟ್ಟರೆ ಸಾಕು, ಕಸದವರೇ ಅದನ್ನು ಎತ್ತಿ ಗಾಡಿಗೆ ಸುರಿದುಕೊಂಡು ಹೋಗುತ್ತಿದ್ದರು. ಹಾಗೂ ಮರೆತರೂ ಕಸದ ಗಾಡಿಯವರು ಆಗ ಬಾರಿಸುತ್ತಿದ್ದ ಟಿಣಿಟಿಣಿ ಗಂಟೆ ನಮ್ಮ ಕಿವಿಗೇ ರಾಚುತ್ತಿದ್ದುದರಿಂದ ಓಡಿಹೋಗಿ ಕಸ ಸುರಿದು ಬರುವುದು ಸುಲಭವಿತ್ತು. 

ಆದರೆ ಮದುವೆಯಾಗಿ ಈ ಮೂರನೇ ಮಹಡಿಯ ಮನೆಗೆ ಬಂದಮೇಲೆ ಕಸದ ನಿವಾರಣೆಯೊಂದು ದೊಡ್ಡ ತೊಡಕಾಗಿಹೋಯಿತು. ಮೂರನೇ ಮಹಡಿಯಾದ್ರೆ ಏನಾಯ್ತು, ಮನೆ ಚನಾಗಿದ್ಯಲ್ಲ ಎಂದುಕೊಂಡು ಉತ್ಸಾಹದಲ್ಲಿ ಮನೆ ಬಾಡಿಗೆಗೆ ಪಡೆದದ್ದು ಎರಡೇ ತಿಂಗಳೊಳಗೆ ಅರವತ್ತು ಮೆಟ್ಟಿಲುಗಳನ್ನು ಹತ್ತಿಳಿಯುವುದು ಸುಸ್ತಿನ ಕ್ರಿಯೆಯೆನಿಸತೊಡಗಿತು. ದಿನಕ್ಕೆ ಒಂದೆರಡು ಸಲ ಮಾತ್ರ ಹತ್ತಿಳಿಯುವುದು ನಿಜವಾದರೂ, ಅಕಸ್ಮಾತ್ ಏನನ್ನಾದರೂ ಮರೆತು ಬಿಟ್ಟುಬಂದರೆ ಅದನ್ನು ತರಲು ಮತ್ತೆ ಅರವತ್ತು ಮೆಟ್ಟಿಲು ಹತ್ತಿಳಿಯುವುದು ದುಬಾರಿಯೆನಿಸುತ್ತಿತ್ತು. ಎಲ್ಲಕ್ಕಿಂತ ಕಷ್ಟವೆನಿಸಿದ್ದು ಈ ಕಸ ಒಗೆದು ಬರುವ ಪ್ರಕ್ರಿಯೆ. ಈ ಕಸದವರಾದರೂ ನಿಗಧಿತ ಸಮಯಕ್ಕೆ ಬರುತ್ತಾರೋ? ಇಲ್ಲ. ಅವರು ಬರುವ ಸಮಯಕ್ಕೆ ಕಾದು, ನಮ್ಮ ರಸ್ತೆಯಲ್ಲೇ ಇದ್ದಾರೆಂದು ಖಚಿತಪಡಿಸಿಕೊಂಡು, ಕಸದ ಬುಟ್ಟಿ ಹಿಡಿದು ಕೆಳಗೆ ಓಡುವುದು ಪ್ರಯಾಸದ ಕೆಲಸವೆನಿಸಿತು. ಎಷ್ಟೋ ಸಲ ನಾವು ಬೆಳಗಿನ ತಿಂಡಿ ತಿನ್ನುತ್ತಿರುವಾಗಲೋ, ಸ್ನಾನ ಮಾಡಿ ಪೂರ್ತಿ ರೆಡಿಯಾಗಿ ಆಫೀಸಿಗೆ ಹೊರಟಾಗಲೋ, ಅಥವಾ ನಾವಿಬ್ಬರೂ ಆಫೀಸಿಗೆ ಹೋದಮೇಲೆಯೋ ಈ ಕಸದವರು ಬರುತ್ತಿದ್ದುದರಿಂದ ನಮ್ಮ ಮನೆಯಲ್ಲಿ ಒಗೆಯದ ಕಸ ರಾಶಿರಾಶಿಯಾಗಿ ಶೇಖರವಾಗತೊಡಗಿತು. 

ಹೀಗಾಗಿ ನಾವು ಒಂದು ಉಪಾಯ ಕಂಡುಕೊಂಡೆವು. ಮನೆಯಿಂದ ಅನತಿ ದೂರದಲ್ಲಿ ಒಂದು ಖಾಲಿ ಸೈಟ್ ಇರುವುದನ್ನು ಪತ್ತೆ ಹಚ್ಚಿದೆವು. ಅಲ್ಲಿ ಬಹಳಷ್ಟು ಜನ ಕಸ ಒಗೆಯುತ್ತಿದ್ದುದರಿಂದ ಅದೊಂಥರಾ ಅಘೋಷಿತ ಡಂಪಿಂಗ್ ಯಾರ್ಡ್ ಆಗಿತ್ತು. ನಾವು ಎಷ್ಟೇ ಸಾಮಾಜಿಕ ಕಳಕಳಿ ಇರುವವರು, ನಗರವನ್ನು ಸ್ವಚ್ಛವಾಗಿಡುವಲ್ಲಿ ನಮ್ಮ ಪಾತ್ರವೇ ಮುಖ್ಯವೆಂಬ ಅರಿವು ಇರುವವರೂ ಆಗಿದ್ದರೂ, ಮನೆಯಲ್ಲಿ ಸಂಗ್ರಹವಾಗಿದ್ದ ಹೇರಳ ಕಸವನ್ನು ಹಾಗೇ ಇಟ್ಟುಕೊಂಡಿರಲು ಸಾಧ್ಯವಿರುತ್ತಿರಲಿಲ್ಲ. ನಮಗೇ ಖಾಯಿಲೆ ಬರಬಹುದಾದ ಸಾಧ್ಯತೆ ಇತ್ತು. ಆದ್ದರಿಂದ ನಮ್ಮ ಸಾಮಾಜಿಕ ಜವಾಬ್ದಾರಿಗಳಿಗೆಲ್ಲ ಆ ಸಂದರ್ಭದಲ್ಲಿ ತಿಲಾಂಜಲಿಯಿಟ್ಟು, ರಾತ್ರಿ ಹೊತ್ತು ಕಸವನ್ನೆಲ್ಲಾ ಒಂದು ಕವರಿನಲ್ಲಿ ತುಂಬಿಕೊಂಡು ಹೋಗಿ, ಯಾರಿಗೂ ಕಾಣದಂತೆ ಆ ಖಾಲಿ ಸೈಟಿನಲ್ಲಿ ಬೀಸಾಡಿ ಬಂದುಬಿಡುತ್ತಿದ್ದೆವು. ಆಮೇಲೆ ನಗರದ ಎಲ್ಲೆಡೆ ಕಸ ತುಂಬಿ ತುಳುಕ್ತಾ ಇದೆ.. ಜನ ಎಲ್ಲೆಂದರಲ್ಲಿ ಕಸ ಚೆಲ್ತಾರೆ. ಪಾಲಿಕೆಯವರು ಸರಿಯಾಗಿ ಕಾರ್ಯ ನಿರ್ವಹಿಸ್ತಾ ಇಲ್ಲ. ಸರ್ಕಾರ ನಿದ್ದೆ ಮಾಡ್ತಿದೆಯಾ?’ ಅಂತೇನಾದ್ರೂ ಟೀವಿಯಲ್ಲಿ ಸುದ್ದಿ ಬಂದರೆ ನಾವೂ, ಹೂಂ ಕಣ್ರೀ, ಹಾಗೆಲ್ಲಾ ಕಸವನ್ನ ಬೇಕಾಬಿಟ್ಟಿ ಬೀಸಾಡ್ಬಾರ್ದು. ಜನಕ್ಕೆ ಸ್ವಲ್ಪಾನೂ ರೆಸ್ಪಾನ್ಸಿಬಿಲಿಟಿ ಇಲ್ಲ ಅಂತ ನಾಲ್ಕು ಜನರೆದುರಿಗೆ ಅಮಾಯಕರಂತೆ ಹೇಳಿಕೊಳ್ಳುತ್ತಿದ್ದೆವು. 

ನಮ್ಮ ಈ ಗುಪ್ತ ಚಟುವಟಿಕೆ ಹೆಚ್ಚು ಕಾಲ ನಡೆಯಲಿಲ್ಲ. ಒಂದು ದಿನ ಆ ಖಾಲಿ ಸೈಟನ್ನು ಸ್ವಚ್ಛಗೊಳಿಸಿ ಅದರ ಮಾಲೀಕ ಮನೆ ಕಟ್ಟಿಸಲು ಶುರುವಿಟ್ಟರು.  ಹೆಚ್ಚುಕಮ್ಮಿ ಆ ಹೊತ್ತಿನಲ್ಲೇ ಮಾನ್ಯ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಅಭಿಯಾನವೂ ಶುರುವಾಯಿತು. ಜನನಾಯಕರೂ, ಗಣ್ಯವ್ಯಕ್ತಿಗಳೂ, ಸೆಲೆಬ್ರಿಟಿಗಳೂ ಕಸ ಗುಡಿಸುವ ಚಿತ್ರಗಳು ಎಲ್ಲೆಲ್ಲೂ ರಾರಾಜಿಸತೊಡಗಿದವು. ಇದಕ್ಕೆ ಎಲ್ಲೆಡೆಯಿಂದ ಬೆಂಬಲವೂ ಪ್ರಶಂಸೆಗಳೂ ಕೇಳಿಬಂದವು. ನಗರ ಪಾಲಿಕೆಯವರೂ ಹಿಂದಿಗಿಂತ ಹೆಚ್ಚು ಚುರುಕಾದಂತೆ ನನಗೆ ಅನ್ನಿಸಿತು. ಒಣ ಕಸ ಹಸಿ ಕಸಗಳನ್ನು ಬೇರ್ಪಡಿಸಿ ಕೊಡಬೇಕು ಎಂಬ ನಿಯಮ ಬೇರೆ ಜಾರಿಯಾಯಿತು. ಒಣ ಕಸವನ್ನು ಕೆಂಪು ಬುಟ್ಟಿಯಲ್ಲೂ ಹಸಿ ಕಸವನ್ನು ಹಸಿರು ಬುಟ್ಟಿಯಲ್ಲೂ ಹಾಕಬೇಕು ಅಂತೆಲ್ಲ ಜಾಹೀರಾತು ಕೊಟ್ಟರು. ಅದನ್ನು ನೋಡಿ ನಾನು ಅಂಗಡಿಗೆ ಹೋಗಿ ಒಂದು ಕೆಂಪು - ಒಂದು ಹಸಿರು ಬಣ್ಣದ ಡಸ್ಟ್‌ಬಿನ್ ಕೊಡಿ ಅಂತ ಕೇಳಿದೆ. ಅದಕ್ಕವರು ಆ ಬಣ್ಣದ್ದು ಇಲ್ಲ ಸಾರ್, ಬೇರ್ಬೇರೆ ಇದಾವೆ, ಕೊಡ್ಲಾ?’ ಅಂದರು. ನಾನು ಇಲ್ಲ ಇಲ್ಲ, ಕೆಂಪು-ಹಸಿರೇ ಬೇಕು. ಅಡ್ವರ್ಟೈಜ್ ನೋಡ್ಲಿಲ್ವಾ?’ ಅಂದೆ. ಅಂಗಡಿಯವನಿಗೆ ರೇಗಿಹೋಯಿತು: ರೀ, ತಲೆ ಇಲ್ವೇನ್ರೀ ನಿಮ್ಗೆ? ಕೆಂಪು-ಹಸಿರೇ ಇರಕ್ಕೆ ಅದೇನು ಟ್ರಾಫಿಕ್ ಸಿಗ್ನಲ್ ಲೈಟಾ? ಬೇರೆ ಬಣ್ಣದ್ರಲ್ಲಿ ಹಾಕ್ಕೊಟ್ರೆ ಕಸದವ್ರೇನು ಒಯ್ಯಲ್ಲಾ ಅಂತಾರಾ? ಅವ್ರು ಹೇಳಿದ್ರಂತೆ, ಇವ್ರು ಕೇಳಿದ್ರಂತೆ. ಕಾಮನ್‍ಸೆನ್ಸ್ ಇಲ್ಲ ಜನಕ್ಕೆ. ಬೇಕಿದ್ರೆ ತಗಂಡೋಗಿ ಇಲ್ಲಾಂದ್ರೆ ಬಿಡಿಅಂತ ಗೊಣಗಿದ. ಈ ಕಸದ ರಾಶಿಯೊಳಗೆ ಮುಳುಗಿ ನನಗೂ ಸೆನ್ಸ್ ಕಮ್ಮಿಯಾಗಿದೆ ಅನ್ನಿಸಿತು. ಕೆಂಪು-ಹಸಿರು ಎಂಬುದನ್ನು ಕೇವಲ ಪ್ರಾತಿನಿಧಿಕವಾಗಿ ತೋರಿಸಿದ್ದಷ್ಟೇ ಅಲ್ವಾ ಅಂದುಕೊಂಡು, ಯಾವುದೋ ಬಣ್ಣದ ಡಸ್ಟ್‍ಬಿನ್ನುಗಳನ್ನು ಕೊಂಡು ತಂದೆ. 

ಈ ವಿಂಗಡನೆ ಒಂದು ರೀತಿಯಲ್ಲಿ ನಮಗೆ ಒಳ್ಳೆಯದನ್ನೇ ಮಾಡಿತು. ಒಣ-ಹಸಿ ಕಸಗಳನ್ನೆಲ್ಲಾ ಒಟ್ಟಿಗೇ ಒಂದೇ ಬುಟ್ಟಿಗೆ ಹಾಕಿ ಅದು ಆಳೆತ್ತರದ ರಾಶಿಯಾಗಿ ನಮಗೆ ಕಿರಿಕಿರಿಯಾಗುವುದು ತಪ್ಪಿತು. ಅಭ್ಯಾಸವಾಗಲು ಸ್ವಲ್ಪ ದಿನ ಹಿಡಿದರೂ, ಕೊಳೆತು ಹೋಗುವ ಹಸಿ ಕಸದಿಂದ ಬೇರೆಯಾಗಿರುವ ಒಣ ಕಸವನ್ನು ನಾವು ವಾರ-ಹತ್ತು ದಿನಕ್ಕೊಮ್ಮೆ ಬೀಸಾಡಿದರೂ ಸಮಸ್ಯೆಯಿರಲಿಲ್ಲ. ಆದರೆ ಈ ಕಸ ಸಂಗ್ರಹಿಸುವ ಕಾರ್ಮಿಕರೇ ಇದನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲವಾದ್ದರಿಂದ, ನಾವು ಎಷ್ಟೇ ಬೇರ್ಪಡಿಸಿ ಕೊಟ್ಟರೂ ಅವರು ಅದನ್ನೆಲ್ಲಾ ಒಟ್ಟಿಗೆ ಸೇರಿಸಿ ಗಾಡಿಗೆ ಸುರಿದುಕೊಳ್ಳುತ್ತಿದ್ದರು. ಒಂದಷ್ಟು ದಿನಗಳ ನಂತರ ಇನ್ಮೇಲೆ ವಾರಕ್ಕೆರಡು ದಿನ ಮಾತ್ರ ಒಣ ಕಸ ಒಯ್ತೀವಿ, ಅದಕ್ಕೆ ಬೇರೆ ಗಾಡೀನೇ ಬರ್ತದೆ ಎಂದರು. ಈಗ ನನ್ನ ಸಮಸ್ಯೆ ಬಿಗಡಾಯಿಸಿತು. ವಿಷಲ್ ಸದ್ದು ಕೇಳಿದಾಕ್ಷಣ ಟೆರೇಸಿಗೆ ಓಡಿ ಕಸದ ಗಾಡಿಯವರು ನಮ್ಮ ಬೀದಿಯಲ್ಲೇ ಇದ್ದಾರಾ ಅಂತ ಖಚಿತ ಪಡಿಸಿಕೊಳ್ಳುವುದರ ಜೊತೆಗೆ ಅವರು ಯಾವ ಕಸ ತೆಗೆದುಕೊಳ್ಳುತ್ತಿದ್ದಾರೆ ಅಂತಲೂ ನೋಡಿಕೊಂಡು ನಾನು ಕೆಳಗಿಳಿಯಬೇಕಿತ್ತು. ಏಕೆಂದರೆ ಒಣ ಕಸದವರು ಹಸಿ ಕಸ ಒಯ್ಯುತ್ತಿರಲಿಲ್ಲ; ಹಸಿ ಕಸದವರು ಒಣ ಕಸ ಒಯ್ಯುತ್ತಿರಲಿಲ್ಲ. ನಾನು ಕಿವಿಯನ್ನಲ್ಲದೇ ಕಣ್ಣನ್ನೂ ಚುರುಕಾಗಿಸಿಕೊಳ್ಳುವುದು ಅನಿವಾರ್ಯವಾಯಿತು. 

ಈ ನಡುವೆ, ಈ ಕಸದ ಉತ್ಪತ್ತಿಯ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆಯೇ ಅಂತ ನಾವು ಯೋಚಿಸಿದ್ದಿದೆ. ಅವರೆಕಾಯಿ ತಂದು, ಅದನ್ನು ಬಿಡಿಸಿ, ಸಿಪ್ಪೆಯನ್ನು ಬೀಸಾಡುವುದಕ್ಕಿಂತ ಬಿಡಿಸಿದ ಅವರೆ ಕಾಳುಗಳನ್ನೇ ತಂದರೆ? ಇಡೀ ಸ್ವೀಟ್‌ಕಾರ್ನ್ ಕುಂಡಿಗೆ ತರುವುದರ ಬದಲು ಬಿಡಿಸಿಟ್ಟ ಜೋಳವನ್ನೇ ತಂದರೆ? ಪಿಜ್ಜಾ ಆರ್ಡರ್ ಮಾಡಿದಾಗ ಅವರು ತಂದುಕೊಡುವ ರಟ್ಟಿನ ಪೆಟ್ಟಿಗೆಗಳನ್ನು ಅವರೊಂದಿಗೇ ವಾಪಸ್ ಕಳುಹಿಸಿದರೆ? ನಮ್ಮ ಈ ಯೋಜನೆಗಳು ಕೇಳಲಿಕ್ಕೆ ಚೆನ್ನಾಗಿದ್ದವೇ ಹೊರತು ಜಾರಿಗೆ ತರಲು ಕಷ್ಟವಿತ್ತು. ಒಂದು ಕಲ್ಲಂಗಡಿ ಹಣ್ಣು ಕತ್ತರಿಸಿದರೆ ಒಂದು ಬುಟ್ಟಿ ಸಿಪ್ಪೆ ಸಂಗ್ರಹವಾಗುತ್ತಿತ್ತು. ಸೀಜನ್ನಲ್ಲಿ ತಿನ್ಬೇಕು ಅಂತ ಆಸೆಪಟ್ಟು ಶೇಂಗ ತಂದು ಬೇಯಿಸಿದರೆ ಸಿಪ್ಪೆಯ ರಾಶಿಯೇ ದೊಡ್ಡದಾಯಿತು. ನಾಲ್ಕು ಜನರನ್ನು ಕರೆದು ಸಣ್ಣದೊಂದು ಪಾರ್ಟಿ ಮಾಡಿದೆವೆಂದರೆ ಎರಡು ಬುಟ್ಟಿ ಕಸ ತಯಾರಾಯಿತು ಅಂತಲೇ ಅರ್ಥ. ಎಷ್ಟೋ ದಿನ ಈ ಕಸದ ವಿಷಯವಾಗಿಯೇ ನಮ್ಮ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ವಾಗ್ವಾದಗಳಾಗುತ್ತಿದ್ದವು: ನಿನ್ನೆ ಬೆಳಿಗ್ಗೆ ಕಸದವ್ರು ಬಂದಾಗ ನೀವು ಹಾಕಿ ಬರ್ಬೇಕಿತ್ತು, ಈಗ ನೋಡಿ ಹುಳ ಆಗಿದೆ ಅಂತ ಅವಳೂ, ನೀನೇ ಹಾಕಿ ಬಂದಿದ್ರೆ ಗಂಟು ಹೋಗ್ತಿತ್ತಾ ಅಂತ ನಾನೂ ಗರಂ ಆಗುವೆವು. ಯಕಃಶ್ಚಿತ್ ಕಸ ನಮ್ಮಿಬ್ಬರ ನಡುವಿನ ವಿರಸಕ್ಕೆ ಕಾರಣವಾಗುತ್ತಿರುವುದು ನೋಡಿದರೆ ಅದಕ್ಕಿರುವ ಶಕ್ತಿಯ ಬಗ್ಗೆ ಆಶ್ಚರ್ಯವಾಗಿತ್ತಿತ್ತು.

ಊರಿನಿಂದ ಯಾರಾದರೂ ನೆಂಟರು ಬಂದರಂತೂ ಮುಗಿದೇಹೋಯಿತು. ನಮ್ಮ ಈ ಕಸ ನಿರ್ವಹಣೆಯ ಕಷ್ಟ ನೋಡಿ ಅವರಿಗೆ ಬಹುಶಃ ಯಾಕೆ ಬಂದೆವೋ ಅನ್ನಿಸುವಷ್ಟಾಗುತ್ತಿತ್ತು. ಸಂಜೆಯ ಹೊತ್ತಿಗೆ ವಿಷಲ್ ಸದ್ದು ಕೇಳಿದರೂ ಕಸದವ್ರು ಬಂದ್ರು ಅನ್ಸುತ್ತೆ ನೋಡಿ ಅನ್ನುತ್ತಿದ್ದರು. ಕವಳ ಹಾಕುವ ಚಟವಿರುವ ನೆಂಟರಿಗಂತೂ ಇಲ್ಲಿ ಉಗುಳುವುದಕ್ಕೆ ಜಾಗವೇ ಕಾಣದೇ ಒದ್ದಾಡಿಹೋದರು. ಸಿಂಕಿಗೆ ಉಗಿದರೆ ಪೈಪು ಕಟ್ಟಿಕೊಳ್ಳುತ್ತಿತ್ತು, ಕಮೋಡಿಗೆ ಉಗಿಯಲು ಹೇಸಿಗೆ, ಬಾಯ್ತುಂಬಿಕೊಂಡದ್ದನ್ನು ಉಗಿಯಲು ಅವರು ಮೂರು ಮಹಡಿ ಇಳಿದು ರಸ್ತೆಗೇ ಹೋಗಬೇಕಿತ್ತು. ಸಧ್ಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ದಂಡ ಹಾಕುವ ಪದ್ಧತಿಯಿನ್ನೂ ಈ ನಗರದಲ್ಲಿ ಬಂದಿಲ್ಲವಾದ್ದರಿಂದ ಅವರು ಬಚಾವ್ ಆದರು.

ಹಾಗೆ ನೋಡಿದರೆ, ನಾವು ಮನೆ ಬದಲಿಸಲು ತೀರ್ಮಾನಿಸಿದ್ದರ ಹಿಂದಿರುವ ಮುಖ್ಯ ಕಾರಣ ಈ ಕಸದ ನಿರ್ವಹಣೆಗೆ ಮುಕ್ತಿ ಕೊಡುವುದೇ. ನೆಲಮಹಡಿಯಲ್ಲೋ ಮೊದಲ ಮಹಡಿಯಲ್ಲೋ ಮನೆಯಿದ್ದು, ಅಲ್ಲಿಂದ ರಸ್ತೆ ಕಾಣುವಂತಿದ್ದರೆ ಅನುಕೂಲ ಎಂಬುದು ನಮ್ಮ ಭಾವನೆ. ಆದರೆ ನಾವು ಅಂದುಕೊಂಡ ತಕ್ಷಣ ಮನೆ ಸಿಗಬೇಕಲ್ಲ? ನಮಗೆ ಬೇಕಾದ ರೀತಿಯ, ನಮ್ಮ ಜೇಬಿಗೆ ಹೊಂದುವಷ್ಟು ಬಾಡಿಗೆಯ ಮನೆ ಈ ಮಹಾನಗರದಲ್ಲಿ ಸಿಗುವುದು ಸುಲಭವಲ್ಲ. ಅಲ್ಲದೇ ಒಂದು ಮನೆಗೆ ಹೊಂದಿಕೊಂಡಮೇಲೆ ಮತ್ತೊಂದು ಮನೆ ಪೂರ್ತಿಯಾಗಿ ಹಿಡಿಸುವುದು ಕಷ್ಟವೇ. ಒಂದಿಲ್ಲೊಂದು ಕೊರತೆ ಎದ್ದು ಕಾಣುತ್ತದೆ. ನೋಡಲು ಹೋದ ಮನೆಗಳಲ್ಲೆಲ್ಲಾ ನಾನು ಮರೆಯದೇ ಕೇಳುತ್ತಿದ್ದುದು ಒಂದೇ: ಈ ಏರಿಯಾದಲ್ಲಿ ಕಸ ಒಗೀಲಿಕ್ಕೆ ಸರಿಯಾದ ವ್ಯವಸ್ತೆ ಇದೆಯಾ?’ ಅಂತ. ನನ್ನ ಪ್ರಶ್ನೆಗೆ ಆ ಮನೆಯ ಮಾಲೀಕರು ಕಕ್ಕಾಬಿಕ್ಕಿಯಾಗುತ್ತಿದ್ದರು. ಬೋರ್‌ವೆಲ್ ಇದೆಯಾ, ಕಾವೇರಿ ನೀರು ಸರಿಯಾಗಿ ಬರುತ್ತಾ, ಸೆಕ್ಯುರಿಟಿ ಇದೆಯಾ ಅಂತೆಲ್ಲ ಕೇಳೋವ್ರನ್ನ ನೋಡಿದೀವಿ; ಇದೇನ್ರೀ ನೀವು ಕಸದ ಬಗ್ಗೆ ಕೇಳ್ತಿದೀರಾ! ಅಂತ ಕೆಲವು ಮಾಲೀಕರು ಕೇಳಿಯೂಬಿಟ್ಟರು.  ಅಲ್ಲ, ಅದು ಹಂಗಲ್ಲ, ಅದೂ ಇಂಪಾರ್ಟೆಂಟ್ ಅಲ್ವಾ?’ ಅಂತೇನೋ ಹೇಳಿ ನಾನು ಜಾರಿಕೊಂಡೆ.

ಅಂತೂ ಮೊನ್ನೆ ನೋಡಿದ ಒಂದು ಮನೆ ಇಬ್ಬರಿಗೂ ಇಷ್ಟವಾಗಿದೆ. ಮೊದಲ ಮಹಡಿಯಲ್ಲಿ ಮನೆಯಿದ್ದು, ರಸ್ತೆಗೆ ಅಭಿಮುಖವಾಗಿಯೇ ಮುಂಬಾಗಿಲು ಇರುವುದರಿಂದ ಕಸದ ಗಾಡಿಯವರು ಬಂದಿದ್ದು ಸುಲಭವಾಗಿ ತಿಳಿಯುತ್ತದೆ, ಬೀಸಾಡಿ ಬರಬಹುದು ಎಂದುಕೊಂಡಿದ್ದೇವೆ. ಇಲ್ಲಿ ಕಸದ ಗಾಡಿಯವ್ರು ದಿನಾಲೂ ಬರ್ತಾರೆ ಅಂತ ಬೇರೆ ಮಾಲೀಕರು ಹೇಳಿದ್ದಾರೆ.  ಇನ್ನು ಆ ಮನೆಗೆ ಸ್ಥಳಾಂತರವಾಗಿ, ದಿನದಲ್ಲಿ ಸಂಗ್ರಹವಾದ ಕಸವನ್ನು ಮರುದಿನವೇ ಒಗೆದು, ಸ್ವಚ್ಛ ಮತ್ತು ಜವಾಬ್ದಾರಿಯುತ ನಾಗರೀಕರಾಗಿರಲು ಪಣ ತೊಟ್ಟಿದ್ದೇವೆ. ಕಸದಿಂದಲೇ ನಮ್ಮಿಬ್ಬರ ನಡುವೆ ಶುರುವಾಗುತ್ತಿದ್ದ ವಿರಸವಾದರೂ ಕಮ್ಮಿಯಾಗಲಿ ಅಂತ ಮನಸಲ್ಲೇ ಅಂದುಕೊಳ್ಳುತ್ತಿದ್ದೇವೆ. 

[ಹೊಸ ದಿಗಂತ ಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ]

Saturday, March 24, 2018

ಈಗ ಮತ್ತೊಮ್ಮೆ ಮುಖ್ಯಾಂಶಗಳು

ಮತ್ತೊಮ್ಮೆ ಮುಖ್ಯಾಂಶಗಳನ್ನು ಹೇಳಿದಮೇಲೆ
ವಾರ್ತೆ ಮುಗಿದುಹೋಗುತ್ತದೆ
ಹಾಗಂತ ಭೂಮಿ ತಿರುಗುವುದು ನಿಲ್ಲುವುದಿಲ್ಲ
ತನ್ನ ಪರಿಕ್ರಮದಲ್ಲಿ ಸೂರ್ಯನನ್ನು ಸುತ್ತುತ್ತಾ
ಬಿಸಿಲಿಗೋ ಮಳೆಗೋ ಮೈಯೊಡ್ಡುತ್ತಾ
ತಿರುಗುತ್ತಲೇ ಇರುತ್ತದೆ ಅನವರತ
ಹಸಿದ ತುಂಬಿ ತುಂಬಿದ ಹೂವನರಸಿ ಹಾರುತ್ತೆ
ಸಿಗ್ನಲ್ಲಿನ ಕೆಂಪುದೀಪ ವಾಹನಗಳ ನಿಲ್ಲಿಸುತ್ತೆ
ಲಕ್ಷ್ಮಣರೇಖೆಯ ಕಂಡು ಇರುವೆ ದಾರಿ ಬದಲಿಸುತ್ತೆ
ಕಂಕುಳ ಕೂದಲ ಒದ್ದೆ ಮಾಡುತ್ತೆ ಚಿಮ್ಮಿದತ್ತರು

ಹೀಗೆಲ್ಲ ಇದ್ದಾಗ್ಯೂ ಇವಳ್ಯಾಕೆ ನಿಂತಿದಾಳೆ ಹೀಗೆ
ಸಂದಣಿಯ ಜನರ ನಗುವಿಗೂ ಅಲುಗಾಡದೇ
ಮಾಸಲು ಅಂಗಿ ಹರಿದಿದೆ ಅಲ್ಲಲ್ಲಿ
ಲಾಲ್‌ಗಂಧ ತೀಡಿದೆ ಲಲಾಟದಲ್ಲಿ
ಬಿರಿಬಿರಿ ಕಣ್ಣುಗಳು ಒಣಗಿದ ತುಟಿಗಳು
ಹಾಯುತ್ತಿವೆ ಸಾವಿರ ಕಾಲುಗಳು ಪಕ್ಕದಲ್ಲೇ
ಗೊತ್ತಿರುವ ಗಮ್ಯದೆಡೆಗೆ ಬಿಡುಬೀಸಿನಲ್ಲಿ
ಪಕ್ಕದ ಅಂಗಡಿಯ ಬೋರ್ಡಿನ ಹಾಳಾದ ದೀಪ
ಇವಳ ಮೈಮೇಲೆ ಪತರಗುಟ್ಟುತ್ತಿದೆ ಬಿಳಿಬಿಳಿ

ಇಳಿಬಿಟ್ಟ ಎಡಗೈ ತರ್ಪಣಮುದ್ರೆಯಲ್ಲಿದೆ
ಎತ್ತಿ ಹಿಡಿದಿದ್ದಾಳೆ ಬಲಗೈ ಆಶೀರ್ವದಿಸುವಂತೆ
ಅದರಿಂದ ಉದುರುತ್ತಿವೆ ನಾಣ್ಯಗಳು
ಹೊಸವು ಹಳೆಯವು, ಹೊಳೆಯುತ್ತಿವೆ ಫಳಫಳ
ಎದುರು ನಿಂತು ದಿಟ್ಟಿಸಿದರೆ ಥೇಟು ಆ
ಕ್ಯಾಲೆಂಡರಿನ ಲಕ್ಷ್ಮಿಯೇ ಪ್ರತ್ಯಕ್ಷವಾದಂತಿದೆ
ಪುಟ್ಟ ಬಾಲಕಿಯ ರೂಪದಲ್ಲಿ

ಯಾರೂ ಕೆಮರಾ ತರಬೇಡಿ, ದಮ್ಮಯ್ಯ
ಇದು ಬ್ರೇಕಿಂಗ್ ನ್ಯೂಸ್ ಐಟಮ್ ಅಲ್ಲ
ಮುಖ್ಯಾಂಶವಂತೂ ಆಗುವುದಿಲ್ಲ
ಇಲ್ಲ ಇಲ್ಲ, ಈಕೆ ಬೈಟ್ ನೀಡುವುದಿಲ್ಲ
ಕವರ್ ಮಾಡಲು ಎಷ್ಟೆಲ್ಲ ಸುದ್ದಿಗಳಿವೆ ಸುತ್ತ
ಹೊರಡಿ ನೀವು ನಿಮ್ಮ ಮೈಕು ತೆಗೆದುಕೊಂಡು

ನಾನೀಕೆಗೆ ಸ್ನಾನ ಮಾಡಿಸುವೆ,
ಬೇಕಿದ್ದರೆ ನೀವು ನೀರು ಹೊಯ್ಯಿರಿ
ಹೊಸ ಅಂಗಿ ತೊಡಿಸುವೆ,
ಬೇಕಿದ್ದರೆ ನೀವು ಬಳೆ ಇಡಿಸಿರಿ
ಎಣ್ಣೆ ಹಾಕಿ ತಲೆ ಬಾಚುವೆ,
ಬೇಕಿದ್ದರೆ ನೀವು ಸಿಕ್ಕು ಬಿಡಿಸಿರಿ
ಮೊಸರನ್ನವನ್ನು ತುತ್ತು ಮಾಡಿ ತಿನಿಸುವೆ,
ಬೇಕಿದ್ದರೆ ನೀವು ಹಾಲು ಕುಡಿಸಿರಿ
ಕಣ್ಣಾಮುಚ್ಚಾಲೆ ಆಟವಾಡುವೆ,
ಬೇಕಿದ್ದರೆ ನೀವೂ ಬಚ್ಚಿಟ್ಟುಕೊಳ್ಳಿರಿ

ಯಾವುದಕ್ಕೂ ಸ್ವಲ್ಪ ಇಕೋ ಈಕೆಯ ಕೈ ಹಿಡಿದುಕೊಳ್ಳಿ
ಆ ಆಟೋ ನಿಲ್ಲಿಸಿ, ಅದರಲ್ಲಿ ಇವಳನ್ನು ಕೂರಿಸಿಕೊಡಿ

ಓಹ್, ಎಷ್ಟು ಜನ ಸಹಾಯಕ್ಕೆ ಬರ್ತಿದೀರಿ..
ನಂಗೆ ಗೊತ್ತಿತ್ತು ಸಾರ್, ನೀವು ಬರ್ತೀರಿ ಅಂತ
ಒಳ್ಳೆಯತನ ಸತ್ತು ಹೋಗಿಲ್ಲ ಸಾರ್
ನಮ್ಮೆಲ್ಲರ ಕಣ್ಣಲ್ಲೂ ನೀರಿದ್ದೇ ಇದೆ ಸಾರ್.

Wednesday, March 21, 2018

ಗುರುತು

ನಗರದ ಮನೆಗಳಿಗೆ ಶೋಕಿ ಜಾಸ್ತಿ
ಪ್ರತಿ ಹೊಸ ಸಂಸಾರ ಬರುವಾಗಲೂ
ಬಣ್ಣ ಸವರಿ ನಿಲ್ಲುವುದು ಅದರ ಪರಿ
ಏನೆಂದರೆ ಹಾಗೆ ಬಣ್ಣ ಹೊಡೆಯುವವರ ನಿಷ್ಕರುಣೆ
ಅಲ್ಲಿಲ್ಲಿ ಗಾಯಗೊಂಡ ಗೋಡೆ, ಕೆದರಿದ ಕಟ್ಟೆಯಂಚು,
ವಾರ್ಡ್‌ರೋಬಿನ ಬಾಗಿಲಿಗಂಟಿಸಿದ ಬ್ರಾಂಡ್ ಸ್ಟಿಕರು,
ಕೊನೆಗೆ, ಹೊಡೆದ ಮೊಳೆಗಳನ್ನೂ ಇಕ್ಕಳದಿಂದೆಳೆದು ತೆಗೆದು
ಚರ್ಮ ಕಿತ್ತು ಬಂದಲ್ಲೆಲ್ಲ ಪಟ್ಟಿ ಹಚ್ಚಿ ಸಪಾಟು ಮಾಡಿ
ಬಳಿದು ಬಣ್ಣ ರೋಲಾಡಿಸಿ ಎರಡೆರಡು ಸಲ ಮಾಲೀಕನಣತಿಯಂತೆ

ಇಷ್ಟಿದ್ದೂ ನೀವು ಮನೆ ಹೊಕ್ಕು ಗೋಡೆಗೆ ಕಿವಿಗೊಟ್ಟು ಆಲಿಸಿದರೆ
ಹಿಡಿಯುವುದು ಅಸಾಧ್ಯವೇ ಹಳೆಯ ಸ್ವರಗಳ ತಂತು?
ಸ್ಥಿರ ನಿಂತು ಕಣ್ಣು ವಿಶಾಲಗೊಳಿಸಿ ನಿರುಕಿಸಿದರೆ
ಕಾಣದಿರುವುದೆ ನಿಕಟಪೂರ್ವ ನಿವಾಸಿ ಚಿಣ್ಣರ ಗೀಚು?
ಕೈಚಾಚಿ ಸವರಿದರೆ ಅಪ್ಪನ ಫೋಟೋ ನೇತುಬಿಡಲು
ಎಟುಕಲಾರದೆ ಹಳೆಯ ಮೊಳೆ ಹೊಡೆದ ಗುರುತು?

ನಾಡಿಯ ಒಮ್ಮೆ ಹಿಡಿಯುವುದಷ್ಟೇ ಕಷ್ಟ.
ನಂತರ ಮಿಡಿತದ ಲೆಕ್ಕ, ರಕ್ತಸಂಚಾರ,
ಸುಪ್ತ ಮನಸಿನ ಬಯಕೆಗಳು, ಪೂರ್ವಜನ್ಮದ ರಹಸ್ಯಗಳು
ಎಲ್ಲಾ ಖುಲ್ಲಂಖುಲ್ಲಾ.

ಮರಳಿ ಬಂದ ಜಂಗಮಜೀವಿಯೇ, ನಿರಾಶನಾಗಬೇಡ.
ಹುಡುಕು ಎದೆಹೊಕ್ಕು: ಇರಲೇಬೇಕಲ್ಲಿ ಚೂರಾದರೂ
ಕರಗದೆ ಉಳಿದ ನೆನಪಿನ ಹುಡಿ. ಹಿಡಿಯದನು
ನಿನ್ನ ನಡುಗುಬೆರಳುಗಳಲಿ. ಬಳಿಯದನವಳ ಭ್ರುಕುಟಿಗೆ.
ನೋಡೀಗ ನಯನದ್ವಯಗಳರಳುವುದ ನಿನ್ನ ಕಣ್ತುಂಬ.

Thursday, February 08, 2018

ಲಘಿಮಾ

ಪಾರ್ಕಿನ ಬೆಂಚಿನ ಮೇಲೆ ಕುಳಿತು
ಹಗುರ ಎಂದರೇನು ಅಂತ ಕೇಳಿದ ಹುಡುಗಿಗೆ
ನೀನೇ ಎಂದುತ್ತರಿಸಿದ್ದೆ ಚುಟುಕಾಗಿ.
ಅಷ್ಟಕ್ಕೆ ಪಾರಾಗಲಿಲ್ಲ. ಪಾರಾಗುವುದಷ್ಟು ಸುಲಭವೂ ಅಲ್ಲ.
ಅಲ್ಲೇ ಇದ್ದ ಹೂವನೊಂದ ಕೊಯ್ದು ನನ್ನ ಕೈಗಿತ್ತು
ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು.
ಹೌದೌದು, ಹೂವೇ ಹಗುರೆಂದೆ ಪೆಚ್ಚಾಗಿ ನಗುತ್ತಾ.
ಹೂವನರಸಿ ಬಂದ ಚಿಟ್ಟೆ ತೋರಿಸಿ ಗೆಲುವ ನಗೆ ಬೀರಿದಳು.
ಅವಳೆದುರು ಸೋಲುವುದೇನು ಹೊಸತೇ?
ನೀನೇ ಗೆದ್ದೆಯೆಂದೆ.
ಆದರೆ ತೆಳ್ಳಗೆ ಬೀಳಹಿಡಿದ ಮಂಜು ಇಬ್ಬರನೂ ಸೋಲಿಸಿತ್ತು.
ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.

ಆ ಹಳೆಯದೆಲ್ಲ ನೆನಪಾಗಲು
ಬೀನ್‌ಬ್ಯಾಗ್ ಚಟ್ಟಿ ಸಣ್ಣಗಾಗಿದ್ದೇ ಕಾರಣ ಎಂಬುದು ನಿಜ.
ಫ್ಲಿಪ್‌ಕಾರ್ಟಿನ ಹುಡುಗ ತಂದುಕೊಟ್ಟ ರೀಫಿಲ್ಲಿನೊಳಗಿನ
ಉರೂಟು ಥರ್ಮಕೋಲ್ ಗುಂಡುಗಳನ್ನು
ಚಟ್ಟಿದ ಬ್ಯಾಗಿನ ಬಾಯಿ ತೆರೆದು ತುಂಬಿಸುವ
ಕಸರತ್ತಿನಲ್ಲಿಬ್ಬರೂ ಮಗ್ನರಾಗಿರುವಾಗ,
ಅದು ಹೇಗೋ ಚೀಲ ಬಾಯಿ ಬಿಚ್ಚಿಕೊಂಡು

ನಿರ್ಭಾರ ಕೋಶಗಳು ಇಡೀ ಹಾಲಿನ ತುಂಬ ಹರಡಿ
ಫ್ಯಾನಿನ ಗಾಳಿ, ಕಿಟಕಿಯಿಂದ ಬರುವ ಗಾಳಿ,
ಕೊನೆಗೆ ಜೋರಾಗಾಡಿದ ಉಸುರಿಗೂ ಹಾರಿ
ಹಿಡಿಯಹೊರಟರೆ ಮೈಕೈಗೆಲ್ಲ ಅಂಟಿಕೊಂಡು
ಅಲಕ್ಷಿಸಿದರೆ ಮತ್ತಷ್ಟು ಜಾರಿ
ಬೊಗಸೆಗೆ ಬಾರದ ಸೊಗಸಿನ ಚೂರುಗಳು

ಹೇಳಿದವು ಸ್ವಚ್ಛಂದ ತೇಲುತ್ತಾ ಬಿಳಿಬಿಳಿ:
ಈ ಮನೆಗಡಿಯಿಟ್ಟಾಗ ಇದ್ದುದೊಂದು ಚಾಪೆಯಷ್ಟೇ
ಆಮೇಲೆ ಹಾಸಿಗೆ ಖುರ್ಚಿ ಮಂಚ
ಮಲಗಿಯೇ ಟೀವಿ ನೋಡಲೆಂದು ದೀವಾನ್
ಹಾಯಾಗಿರಲೆಂದು ಸೋಫಾ
ಮೆತ್ತಗಿರಲೆಂದು ಬೀನ್‌ಬ್ಯಾಗ್....
ಎಲವೋ ನೀವು ಹೊತ್ತಿರುವ ಭಾರ ನೋಡಿರಿ ಈಗ
ಬಿಟ್ಟಿರಲಾರಿರಿ ಯಾವುದನ್ನೂ
ಕುಸಿಯಿತೋ ಬೀನ್‌ಬ್ಯಾಗಿನ ಎತ್ತರ,
ಆರ್ಡರ್ ಮಾಡುವಿರಿ ಹೊಸ ರೀಫಿಲ್
ಕೂರಲಾಗದೀಗ ನೆಲಕ್ಕೆ, ಊಟಕ್ಕೂ ಡೈನಿಂಗ್ ಟೇಬಲ್
ಹಿಡಿಯಿರಿ ನಮ್ಮನ್ನು, ಓಹ್ ಬಗ್ಗಲಾಗದು ಮೈಯೇರಿ

ಕಿಟಕಿಯಿಂದ ಹೊರನೋಡಿದರೆ
ಪಾರ್ಕಿನ ಬೆಂಚಿನ ಮೇಲೊಂದು ಹೊಸಜೋಡಿ ಕುಳಿತಿದೆ
ಏನೋ ಕೀಟಲೆಯ ಮಾತಾಡುತ್ತಿದ್ದಾರೆ
ಅವಳೊಂದು ಹೂವು ಕಿತ್ತು ಕೊಡುತ್ತಿದ್ದಾಳೆ
ಅಂವ ಪೆಚ್ಚುಮೋರೆ ಹಾಕುತ್ತಿದ್ದಾನೆ
ಇದು ಕಿಟಕಿಯೋ ಹಳೆಯದನ್ನು ತೋರಿಸುವ
ಮಾಯಾಕನ್ನಡಿಯೋ ತಿಳಿಯದಾಗಿದೆ.

[ಅಷ್ಟಸಿದ್ಧಿಗಳ ಸರಣಿಯ ಎರಡನೇ ಪದ್ಯ]

ಗೈರೋಡಿಜೈನು ಮತ್ತು ಅಜ್ಜಿಯ ಪೌಚು




‘ಪಾಪು ಹುಟ್ಟಿದ್ಮೇಲೆ ನಂಗೆ ನಂದೂ ಅಂತ ಒಂದು ಲೈಫೇ ಇಲ್ದೇಹೋದಂಗೆ ಆಗಿದೆ’ ಅಂತ ಹೆಂಡತಿ ಹೇಳಿದಾಗ ನಾನೇನು ಅದನ್ನ ಅಲ್ಲಗಳೆಯಲು ಹೋಗಲಿಲ್ಲ. ಏಕೆಂದರೆ ವಿಷಯ ಕಣ್ಮುಂದೆಯೇ ಇತ್ತು: ಇಪ್ಪತ್ನಾಕು ತಾಸೂ ತನ್ನೊಂದಿಗೆ ಯಾರಾದರೂ ಇರಬೇಕು ಅಂತ ಬಯಸುವ ಮಗಳು, ನಾನು ಆಫೀಸಿಗೆ ಬಂದಮೇಲೆ ಅವಳಮ್ಮನಿಗೆ ಕೊಡುವ ಕಾಟವನ್ನು ನಾನು ಕಲ್ಪಿಸಿಕೊಳ್ಳಬಲ್ಲವನಾಗಿದ್ದೆ. ಯಾವ ಆಟದ ವಸ್ತು ಕೊಟ್ಟರೂ ಐದೇ ನಿಮಿಷಕ್ಕೆ ಅದವಳಿಗೆ ಬೇಜಾರ ಬಂದು ಮತ್ತೆ ಅಮ್ಮನಿಗೆ ಜೋತುಬೀಳುವುದೇ. ಮಗಳು ಮಲಗುವುದೂ ಕಡಿಮೆಯಾದ್ದರಿಂದ ಅವಳಮ್ಮನಿಗೆ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಮಯ ಸಿಗುವುದೇ ದುರ್ಲಬವಾಗಿತ್ತು.

ಇಂತಿದ್ದ ಹೆಂಡತಿ, ನಾನು ಒಂದು ದಿನ ಆಫೀಸು ಮುಗಿಸಿ ಮನೆಗೆ ಕಾಲಿಡುವಾಗ ಇಡೀ ಹಾಲಿನ ತುಂಬ ಪೇಪರು-ಪೆನ್ನುಗಳನ್ನು ಹರಡಿಕೊಂಡು ಚಿತ್ರ ಬಿಡಿಸುತ್ತ ಕೂತಿದ್ದಳು. ಮಗಳು ಬೇರೆ ಒಂದು ಮೂಲೆಯಲ್ಲಿ ಅದೇ ಪೇಪರುಗಳನ್ನು ಚೂರು ಮಾಡುತ್ತಾ ಆಡುತ್ತಿದ್ದಳು. 'ಇದೇನೇ ನಿನ್ ಕಥೆ?' ಅಂತ ಕೇಳಿದೆ. ಚಿತ್ರ ಬಿಡಿಸುವುದರಲ್ಲಿ ಮಗ್ನಳಾಗಿದ್ದ ಅವಳು ಮಾತಾಡಲಿಲ್ಲ. ಹೋಗಿ ಅದೇನು ಬಿಡಿಸುತ್ತಿದ್ದಾಳೇಂತ ನೋಡಿದೆ, ಏನೋ ಚಕ್ರ-ಚಕ್ರ ಮಾಡುತ್ತಿದ್ದಳು. ಅರ್ಥವಾಗಲಿಲ್ಲ. ಮನೆಗೆ ಬಂದಮೇಲೆ ಮಗಳನ್ನು ನೋಡಿಕೊಳ್ಳುವುದು ನನ್ನ ಪಾಳಿಯಾದ್ದರಿಂದ ನಾನೂ ಮಗಳನ್ನೆತ್ತಿಕೊಂಡು ಗರ್ಕನಾದೆ.

ಪೂರ್ತಿ ಬಿಡಿಸಿಯಾದಮೇಲೆ ಆ ಪೇಪರನ್ನು ನನ್ನತ್ತ ಹಿಡಿದು 'ಮಂಡಲ ಆರ್ಟ್. ಚನಾಗಿದ್ಯಾ?' ಕೇಳಿದಳು. ಎಷ್ಟು ಹೊತ್ತಿನಿಂದ ಬಿಡಿಸುತ್ತಿದ್ದಳೋ ಏನೋ, ಭಯಂಕರ ಸೂಕ್ಷ್ಮ ವಿವರಗಳಿದ್ದ ಆ ಚಿತ್ರ ನೋಡಿ ಅವಳ ತಾಳ್ಮೆಗೆ ತಲೆದೂಗಿದೆ. ಭೇಷ್ ಎಂದೆ.
ಆದರೆ ಹೆಂಡತಿಯ ಈ 'ಹುಚ್ಚು' ಆ ಒಂದು ದಿನಕ್ಕೆ ಮುಗಿಯಲಿಲ್ಲ. ಮರುದಿನಕ್ಕೂ, ಅದರ ಮರುದಿನಕ್ಕೂ, ಮುಂದಿನ ವಾರಕ್ಕೂ ಮುಂದುವರಿಯಿತು. ಮನೆ ತುಂಬಾ ಬಣ್ಣದ ಪೆನ್ನುಗಳು, ಪೇಪರುಗಳು. ನಾನು ಊಟಕ್ಕೆ ಕರೆದರೆ, 'ನೀವು ಮಾಡಿ. ನಾನು ಇದೊಂದಕ್ಕೆ ಕಲರ್ ತುಂಬಿ ಆಮೇಲೆ ಊಟ ಮಾಡ್ತೇನೆ' ಎಂದಳು. 'ಅಲ್ಲ ಮಾರಾಯ್ತೀ, ಬೆಳಗಿನಿಂದ ಪಾಪು ಜೊತೆ ಒದ್ದಾಡಿ ಸುಸ್ತಾಗಿರತ್ತೆ, ನಾನು ಆಫೀಸಿನಿಂದ ಬಂದಮೇಲಾದ್ರೂ ನೀನು ಅರಾಮಾಗಿರು, ಟೀವಿ ನೋಡು, ನಿಶ್ಚಿಂತೆಯಿಂದ ಊಟ ಮಾಡು ಅಂದ್ರೆ ಕಣ್ಣು ಕಿರಿದು ಮಾಡ್ಕೊಂಡು ಚಿತ್ರ ಬಿಡಿಸ್ತಾ ಮತ್ತೂ ಕಷ್ಟ ಪಡ್ತಾ ಕೂತಿದೀಯಲ್ಲಾ?' ಅಂದೆ. 'ಇಲ್ಲ, ಇದು ಕಷ್ಟ ಅಲ್ಲ; ನಂಗೆ ಇಷ್ಟ. ಸ್ಟ್ರೆಸ್‌ಬಸ್ಟರ್ ಥರ ಕೆಲಸ ಮಾಡ್ತಿದೆ ಇದು. ಅಡಿಕ್ಟ್ ಆಗ್‌ಹೋಗಿದೀನಿ' ಅಂದ್ಲು. ಹತ್ತಿರ ಹೋಗಿ ನೋಡಿದರೆ ಇಂದಿನ ಮಂಡಲ ಇನ್ನೂ ಮೊದಲ ಹಂತದಲ್ಲಿತ್ತು. ಬಲೆಬಲೆಯಾಗಿದ್ದ ವೃತ್ತಗಳನ್ನ ನೋಡಿ 'ಏ ಮಾರಾಯ್ತಿ, ಇದನ್ನ ಮಾಡಕ್ಕೆ ಇಷ್ಟೆಲ್ಲ ಕಷ್ಟ ಯಾಕೆ ಪಡ್ತಿದೀಯಾ, ಗೈರೋಡಿಜೈನ್ ಇದ್ರೆ ಅರ್ಧ ನಿಮಿಷದಲ್ಲಿ ಮಾಡ್ಬಹುದು' ಅಂದೆ. ಅವಳಿಗೆ ಅದೇನೆಂದು ಗೊತ್ತಿರಲಿಲ್ಲ. 'ಏನದು ಗೈರೋಡಿಜೈನ್?' ಕೇಳಿದಳು. 'ಏ ಗೈರೋಡಿಜೈನ್ ಕಣೇ. ಜಾತ್ರೇಲೆಲ್ಲಾ ಇಟ್ಕೊಂಡ್ ಮಾರ್ತಾರಲ್ಲ, ಒಂದು ಗ್ಲಾಸಿನ ವ್ಹೀಲ್ ಇರುತ್ತೆ, ಅದ್ರೊಳಗೆ ಮತ್ತೆ ಸಣ್ಸಣ್ಣ ವ್ಹೀಲ್ಸ್ ಹಾಕ್ಕೊಂಡು, ಅದ್ರಲ್ಲಿರೋ ಕಿಂಡಿಗಳಲ್ಲಿ ಪೆನ್ ಇಟ್ಟು ತಿರುಗಿಸಿದ್ರೆ ನೀನು ಈಗ ಮಾಡಿರೋ ಥರದ್ದೇ ಡಿಸೈನ್ ಕ್ಷಣದಲ್ಲಿ ರೆಡಿ ಆಗುತ್ತೆ' ಅಂದೆ.

ಅವಳ ಕಣ್ಣರಳಿತು. ತಾನು ನೋಡೇ ಇಲ್ಲ, ತಂದ್ಕೊಡಿ ಹಾಗಾದ್ರೆ ಅಂದಳು. ಈ ಬೆಂಗಳೂರಲ್ಲಿ ಎಲ್ಲೀಂತ ಹುಡುಕ್ಕೊಂಡು ಹೋಗೋಣ? ಕಡ್ಲೆಕಾಯಿ ಪರಿಷೆಯಲ್ಲಿ ನೋಡಿದಂತಿತ್ತಾದ್ರೂ ಇನ್ನು ಮುಂದಿನ ವರ್ಷದ ಪರಿಷೆಯವರೆಗೆ ಕಾಯಬೇಕು. ಹೋಗಲಿ, ಯುಟ್ಯೂಬಲ್ಲಿ ಅದರ ವೀಡಿಯೋಗಳು ಇರಬಹುದು ಅಂದುಕೊಂಡು, 'ಗೈರೋಡಿಜೈನ್ ಆರ್ಟ್ಸ್' ಅಂತ ಸರ್ಚ್ ಮಾಡಿದರೆ ನಾನು ಹುಡುಕುತ್ತಿದ್ದುದು ಸಿಗಲಿಲ್ಲ. ಎಲಾ, ಕಂಡ್‌ಕಂಡಿದ್ದೆಲ್ಲ ಸಿಗೋ ಇಂಟರ್ನೆಟ್ಟಲ್ಲಿ ಒಂದು ಪುಟಗೋಸಿ ಗೈರೋಡಿಜೈನ್ ಇಲ್ವಲ್ಲಾ ಅಂತ ಆಶ್ಚರ್ಯ ಆಯ್ತು. ನಾನೇ ಅದರದ್ದೊಂದು ವೀಡಿಯೋ ಮಾಡಿ, ಒಂದು ಆರ್ಟಿಕಲ್ ಬರೆದು ಫುಲ್ ಫೇಮಸ್ ಆಗಬಹುದು ಅಂದುಕೊಂಡೆ. ಆದರೆ ಸುಮಾರು ತಡಕಾಡಿ ಕೊನೆಗೆ ಹೆಂಡತಿಯೇ ಕಂಡುಹಿಡಿದಳು: ಅದರ ಸರಿಯಾದ ಹೆಸರು ಗೈರೋಡಿಜೈನ್ ಅಲ್ಲ, 'ಸ್ಪೈರೋಗ್ರಾಫ್ ಆರ್ಟ್' ಎಂದು. ಸಾಗರದ ಜಾತ್ರೆಯಲ್ಲಿ ಮಾರಲ್ಪಡುತ್ತಿದ್ದ ಇದರ ಡಬ್ಬಿಯ ಮೇಲೆ 'ಗೈರೋಡಿಜೈನ್' ಅಂತಲೇ ಬರೆದುಕೊಂಡಿರುತ್ತಿದ್ದರಿಂದ ನಾವೂ ಅದನ್ನು ಹಾಗೇ ಕರೆಯುತ್ತಿದ್ದುದು. ಸ್ಪೈರೋಗ್ರಾಫ್ ಆರ್ಟ್ ಬಗ್ಗೆ ಈಗಾಗಲೇ ಸುಮಾರು ಬರಹಗಳು, ಚಿತ್ರಗಳು, ವೀಡಿಯೋಗಳು ಅಂತರ್ಜಾಲದಲ್ಲಿ ಇರುವುದು ತಿಳಿದು, ನಾನು ಫೇಮಸ್ ಆಗುವುದು ಮಿಸ್ ಆದುದಕ್ಕೆ ಬೇಸರವಾಯ್ತು.

ಸರಿ, ಈಗ ಇದನ್ನು ಹೆಂಡತಿಗೆ ತೋರಿಸಬೇಕಲ್ಲ? ಮನೆಯಲ್ಲಿ ನಾನು ಆಟವಾಡುತ್ತಿದ್ದ ಕಾಲದಲ್ಲಿ ಈ ಗೈರೋಡಿಜೈನಿನ ಒಂದು ಸೆಟ್ ಇತ್ತು. ಈಗ ಇದೆಯೋ ಇಲ್ಲವೋ ಗೊತ್ತಿರಲಿಲ್ಲ. ಯಾವುದಕ್ಕೂ ನೋಡೋಣ ಅಂತ ಅಪ್ಪನಿಗೆ ಮೆಸೇಜ್ ಮಾಡಿದೆ. ಅವನು ಇದನ್ನು ಯಾವುದೋ ಪೆಟ್ಟಿಗೆಯಲ್ಲಿ ಹುಡುಕಿ, 'ಇದೆ. ನಾಡಿದ್ದು ಬರುವಾಗ ತರ್ತೀನಿ' ಅಂತ ರಿಪ್ಲೇ ಮಾಡಿದ.
ನಿನ್ನೆ ಬಂದ ಅಪ್ಪ ಗೈರೋಡಿಜೈನ್ ಸೆಟ್ ತಂದಿದ್ದಾನೆ. ಇಪ್ಪತ್ತೈದು ವರ್ಷಕ್ಕೂ ಹಳೆಯದಾದ ಈ ಗಾಜಿನ ಪುಟ್ಟ ಉಪಕರಣಗಳು ಇನ್ನೂ ಹಾಗೆಯೇ ಇರುವುದು ನಿಜಕ್ಕೂ ಆಶ್ಚರ್ಯವೇ ಆಗಿತ್ತು. ಆದರೆ ಅದಕ್ಕೂ ಆಶ್ಚರ್ಯದ ವಿಷಯವೆಂದರೆ, ಈ ಗೈರೋಡಿಜೈನಿನ ಸೆಟ್ ಹಾಕಿಟ್ಟಿದ್ದ ಚರ್ಮದ ಪೌಚು! ಈ ಚರ್ಮದ ಸಂಚಿಗೆ ಕನಿಷ್ಟ ಎಪ್ಪತ್ತು ವರ್ಷವಾಗಿದೆ. ಅಜ್ಜಿ ತಾನೇ ನಿಂತು ಹೊಲಿಸಿ ಮಾಡಿಸಿದ ಸಂಚಿಯಂತೆ ಇದು. ಇದು ಅವಳ ವ್ಯಾಲೆಟ್ ಆಗಿತ್ತು! ಇದರಲ್ಲಿ ಅವಳು ಎರಡು-ಐದು-ಹತ್ತು ಪೈಸೆಗಳ ನಾಣ್ಯಗಳನ್ನು ಇಟ್ಟುಕೊಂಡಿರುತ್ತಿದ್ದಳು. ಆ ಪೈಸೆಗಳು ಬೆಲೆ ಕಳೆದುಕೊಳ್ಳುವಷ್ಟರಲ್ಲಿ ಅವಳ ಸಂಚಿಯೂ ಅಪ್‌ಗ್ರೇಡ್ ಆಗಿದ್ದರಿಂದ, ಸಾಗರದ ಜಾತ್ರೆಯಿಂದ ಅಪ್ಪ ತಂದಿದ್ದ ಈ ಗೈರೋಡಿಜೈನಿನ ಸೆಟ್ಟನ್ನು ನಾನು ಈ ಪೌಚಿನಲ್ಲಿ ಹಾಕಿಟ್ಟುಕೊಂಡಿದ್ದೆ. ಹಾಗೆ ಅಂದು ಹಾಕಿಟ್ಟಿದ್ದು ಇನ್ನೂ ಹಾಗೆಯೇ ಇರುವುದು, ಮತ್ತು ಆ ಸಂಚಿ ಸಹ ಹಾಳಾಗದೇ ಇರುವುದರ ಕಥೆಯನ್ನು ನಾನೂ-ಅಪ್ಪನೂ ಹೆಂಡತಿಗೆ ಹೇಳಿದೆವು. ಅವಳೂ ಆಶ್ಚರ್ಯ ಪಟ್ಟಳು.

ಆದರೆ ನಮ್ಮ ಈ ಸುಮಧುರ ನೆನಪಿನ ಕಲಾಪ ಹನ್ನೊಂದು ತಿಂಗಳ ಮಗಳಿಗೆ ಹೇಗೆ ಅರ್ಥವಾಗಬೇಕು? ತಾನು ನೋಡದ ಮುತ್ತಜ್ಜಿಯ ಕಾಲದ ಪೌಚು ಅವಳಿಗೆ ಹೊಸ ಆಟದ ಸಾಮಾನಿನಂತೆ ಕಂಡು, ಅದನ್ನು ಹಿಡಿಯಲೆಂದು ಆ ಮೂಲೆಯಿಂದ ಓಡಿ ಬರುವಾಗ, ಆ ಪೌಚನ್ನೂ ಅದರೊಳಗಿದ್ದ ಗಾಜಿನ ಉಪಕರಣಗಳನ್ನೂ ರಕ್ಷಿಸಿಕೊಳ್ಳಲು ನಾನೂ-ಅಪ್ಪನೂ ಒಮ್ಮೆಲೇ ಓಡಿ ಅದನ್ನು ಹಿಡಿದುಕೊಂಡಾಗ, ಸುಕ್ಕು ಕೈಗಳ ಅಜ್ಜಿಯನ್ನೇ ಸ್ಪರ್ಶಿಸಿದಂತೆ ಎನಿಸಿತು.