Friday, July 27, 2007

ಮೀಟಿಂಗ್ ಮುಗಿಸಿದ್ದು

ರಿಸೆಪ್ಷನಿಷ್ಟ್ ರಜೆಯಲ್ಲಿದ್ದಳು. ಇಪಿಎಬಿಎಕ್ಸ್ ನಾನೇ ಹ್ಯಾಂಡ್ಲ್ ಮಾಡುತ್ತಿದ್ದೆ. ಕ್ಲೈಂಟ್ ಜೊತೆ ಬಾಸ್ ಕಾನ್ಫರೆನ್ಸ್ ರೂಮ್‍ನಲ್ಲಿ ಮೀಟಿಂಗಿನಲ್ಲಿದ್ದರು. ಆ ಕ್ಲೈಂಟುಗಳು ಜಾಸ್ತಿ ತಲೆತಿನ್ನುತ್ತಿದ್ದರು ಅಂತ ಕಾಣ್ಸುತ್ತೆ. ಬಾಸ್ ಅಲ್ಲಿಂದಲೇ ನನ್ನ ಮೊಬೈಲಿಗೆ ಎಸ್ಸೆಮ್ಮೆಸ್ ಮಾಡಿದರು: 'Call me on the intercom and tell me that somebody is coming for meeting. I'll tell u to postopone it. U call again after 2 mins and tell me that they r already on the way'.

ಮೆಸೇಜು ಓದಿದಾಕ್ಷಣ ನಗು ಬಂತಾದರೂ ಇಂತಹ ಹಲ್ಕಾ ಕೆಲಸಗಳನ್ನು ಮಾಡಿ ನನಗೆ ರೂಢಿಯಿತ್ತಾದ್ದರಿಂದ ತಕ್ಷಣ ರಿಸೀವರ್ ಎತ್ತಿ ಟೂ ಏಟ್ ಒತ್ತಿದೆ. ಬಾಸ್ ಎತ್ತಿದರು. 'Sir, Mr. Dhyan from GE Countrywide is coming for a meeting' ಅಂದೆ. 'Now? Why isn't it been entered in the dairy? Call him and tell him to come tomorrow.' ರಿಸೀವರ್ ಇಟ್ಟ ಸದ್ದು. ಸದ್ದಾಗದಂತೆ ನಗುತ್ತಾ ನಾನೂ ಫೋನ್ ಇಟ್ಟೆ.

ಎರಡು ನಿಮಿಷ ಬಿಟ್ಟು ರಿಸೀವರ್ ಎತ್ತಿ ಮತ್ತೆ ಟೂ ಏಟ್ ಒತ್ತಿದೆ. 'Sir they have already left from their office' ಅಂದೆ. 'Oh shit! They are on the way is it? Ok... Let them come.. I'll conclude this meeting then..'

ಐದು ನಿಮಿಷದಲ್ಲಿ ಮೀಟಿಂಗ್ ಮುಗಿಯಿತು. ಆರನೇ ನಿಮಿಷದಲ್ಲಿ ಬಾಸ್ ಛೇಂಬರಿನಲ್ಲಿ ಕೇಳಿಬರುತ್ತಿದ್ದ ನನ್ನ-ಅವರ ಜೋರು ನಗೆಗೆ ಹ್ಯಾಂಗ್ ಮಾಡಿದ್ದ ಕೋಟು, ಟೇಬಲ್ ಕ್ಲಾಕು ಮತ್ತು ಡೈರಿಯ ಒಡಲಿನಿಂದ ಇಣುಕುತ್ತಿದ್ದ ಪಾರ್ಕರ್ ಪೆನ್ನಿನ ಮೂತಿ ಕಿವಿಯಾಗಿದ್ದವು.

Tuesday, July 24, 2007

ಕೋಗಿಲೆಯ ವಿಷಾದ

ನನ್ನ ಹಾಡೆಂದರೆ ಎಲ್ಲರಿಗೂ ಇಷ್ಟ
ನನಗಷ್ಟೇ ಗೊತ್ತು ನನ್ನ ಕಷ್ಟ

* *

ದಟ್ಟಡವಿಯಲೊಂದು ಒಂಟಿ ಒಣಮರ
ರೆಂಬೆಯ ಮೇಲೆ ಕುಳಿತಿದ್ದ ಅವನು
ಕಣ್ಣಲೇನೋ ಅಸಹನೆ..
ನನ್ನಲೇನೋ ಮಿಡಿತ;
ಎದೆಯಲೇನೋ ತುಡಿತ..

ಜೊತೆಗೆ ಕರೆದೊಯ್ದು,
ಹಣ್ಣು ಕೊಟ್ಟು ಸಂತೈಸಿ
ಕಣ್ಣಲಿ ಕಣ್ಣಿಟ್ಟು ಪ್ರೀತಿಬೀಜ ಹುಟ್ಟಿಸಿ
ಅದನವನ ಎದೆಯ ಕವಾಟದಲಿ ಹುದುಗಿಸಿಟ್ಟು
ಅದು ಮೊಳಕೆಯೊಡೆದು ಬಳ್ಳಿಯಾಗಿ
ಕೊನೆಗೆ ನಿವೇದನೆಯ ಹೂವಾಗಿ
ಅವನಿಂದಲೇ ಹೊರಬಂದಾಗ ನನಗೆಷ್ಟು ಸಂಭ್ರಮ..!

ಕಣ್ಣರಳಿಸಿ, ಕಾಲ್ಕೆದರಿ, ಕೊಕ್ಕು ತಿವಿಯುತ್ತಾ
ಮೇಲೆರಗಿ ಬಂದರವನು ನನ್ನ ಮೈಯೆಲ್ಲಾ ಅದುರು.

ಅಂದು ಗೂಡಿನಲ್ಲಿ ಮೈಥುನದ ಆಟ..
ಕಣ್ಮುಚ್ಚಿ, ಕಟಿ ಬಿಗಿದು, ಮೈ ಸೆಟೆದು,
ಸೇರಿ ಬೆರೆತು, ಬೆರೆತು ಬೆವರಿ, ಗಟ್ಟಿಯುಸಿರುಬಿಟ್ಟು
...ಆಟ ಮುಗಿಯುವುದರೊಳಗೆ ರೆಕ್ಕೆಯ ಪುಕ್ಕಗಳೆಲ್ಲಾ ಅಸ್ತವ್ಯಸ್ತ;
ಗೂಡೆಲ್ಲಾ ನುಜ್ಜುಗುಜ್ಜು;
ನೋಡಿ ನಾಚಿ ನಸುನಕ್ಕ ಹಸಿರು ಎಲೆ, ಮಿಣುಕು ಹುಳ...

* *

ಅವನ ಹೃದಯದಲಿ ಇನ್ನೂ ಮೂರು ಕವಾಟಗಳಿವೆ,
ಅದರಲ್ಲಿ ಪ್ರೀತಿಬೀಜ ನೆಡಲು ಬೇರೆ ಹಕ್ಕಿಗಳು ಕಾಯುತಿವೆ
ಎಂಬ ಸತ್ಯ ಸಹ ಗೊತ್ತಿಲ್ಲದ ಮುಗ್ದೆ ನಾನು..
ಅಂದು ಬೆಳಕು ಹರಿಯುವ ಮುನ್ನವೇ ಅವನು
ಹಾರಿ ಪರಾರಿಯಾದಾಗಲೇ ಆದದ್ದು ನನಗೆ ವಾಸ್ತವದ ಅರಿವು..

* *

ಆದರೆ ಅವನ ವೀರ್ಯ ನನ್ನ ರೆಕ್ಕೆ ಮುಚ್ಚಿದ್ದ
ಪುಟ್ಟ ಹೊಟ್ಟೆಯಲ್ಲಿ ಮೊಟ್ಟೆಯಾಗಿ ಬೆಳೆದು
ನಾನದನ್ನು ಹೊತ್ತು ಹಾರಿ, ಹೆಣಗಿ ವಾಯಸನ ಗೂಡರಸಿ
ಕದ್ದು ಪ್ರಸವಿಸಿ ಅಲ್ಲಿಂದ ಎದ್ದು ಹಾರಿ ಬರುವಾಗ
ನಿಟ್ಟುಸಿರು ಬಿಟ್ಟರೂ ತೀರದ ಆಯಾಸ.

* *

ಒಂಟಿ ಒಣಮರದ ಮೇಲೆ ಈಗ ನಾನು..
ಮತ್ಯಾರದೋ ಗೂಡಿನ ಬೆದೆಯಲ್ಲಿ ನನ್ನ ಅವನು..
ಯಾರದೋ ರೆಕ್ಕೆಯಡಿಯ ಕಾವಿಗೆ ಬೆಳೆದು ಹೊರಬರುವ ನನ್ನ ಕಂದಮ್ಮಗಳು..
ರೆಕ್ಕೆ ಬಲಿತು ಹಾರಿ ಎದುರಿಗೇ ಹಾದುಹೋದರೂ
ಮಕ್ಕಳನ್ನೇ ಗುರುತಿಸಲಾಗದ ತಾಯಿಯ ಅಸಹಾಯಕತೆ..
ಹೆತ್ತ ತಾಯಿಯ ಋಣ ದೊಡ್ಡದೋ,
ಕಾವು ಕೊಟ್ಟು ಮರಿ ಮಾಡಿ ಹಾರಾಟ ಕಲಿಸಿದ ಪೋಷಕರ ವಾತ್ಸಲ್ಯ ದೊಡ್ಡದೋ
ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿಲ್ಲ ಉತ್ತರ..
ಎಲೆ ಹಣ್ಣಾಗಿ ಬೀಳುತ್ತದೆ; ಮಿಣುಕು ಹುಳ ನಿದ್ರೆ ಹೋಗುತ್ತದೆ..

ಮತ್ತೆ ವಸಂತ.. ಚಿಗುರುವ ಮಾವು..
ಹಾಡಲೇಬೇಕಾದ ನನ್ನ ಅನಿವಾರ್ಯತೆ...

* *

ನನ್ನ ಹಾಡೆಂದರೆ ಎಲ್ಲರಿಗೂ ಇಷ್ಟ
ನನಗಷ್ಟೇ ಗೊತ್ತು ನನ್ನ ಕಷ್ಟ

Monday, July 16, 2007

ಚುಂಚು ಎಂಬ ಮರಿಹಕ್ಕಿ

(ಹಕ್ಕಿ ಕತೆ ಮುಂದುವರೆದುದು...)

ಮರಿಹಕ್ಕಿಗಳ ಹಾರಾಟದ ಕಲಿಕೆ ಅವ್ಯಾಹತವಾಗಿ ನಡೆದಿತ್ತು. ಅಪ್ಪಹಕ್ಕಿ ಈಗ ಆಹಾರ ತರಲಿಕ್ಕೆ ಬೆಳಿಗ್ಗೆ ಸ್ವಲ್ಪ ತಡವಾಗಿ ಹೊರಡುತ್ತಿತ್ತು. ಕರೆಯಲು ಬಂದ ಗೆಳೆಯರನ್ನು 'ನೀವು ಮುಂದೆ ಹೋಗಿ, ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ' ಎಂದು ಹೇಳಿ ಮುಂದೆ ಕಳುಹಿಸಿ ತಾನು ಮಕ್ಕಳನ್ನು ಎಬ್ಬಿಸಿ ಹಾರಾಟ ಕಲಿಸುತ್ತಿತ್ತು. ಮರಿಗಳಿಗೆ ಅಷ್ಟು ಮುಂಚೆ ಏಳುವುದಕ್ಕೆ ಸೋಮಾರಿತನ... ಇನ್ನೂ ಮುಗಿಯದ ನಿದ್ದೆ... ಆದರೂ ಏಳುತ್ತಿದ್ದವು. ನನಗಂತೂ ಈ ಹಾರಾಟದ ಪ್ರಾಕ್ಟೀಸ್ ನೋಡುವುದೇ ಸಂಭ್ರಮವಾಗಿಬಿಟ್ಟಿತ್ತು. ಎಷ್ಟು ಖುಷಿಯಿಂದ ಅಪ್ಪಹಕ್ಕಿ ಹೇಳಿಕೊಡುತ್ತಿತ್ತು.. ಮರಿಹಕ್ಕಿಗಳು ಎಷ್ಟು ಶ್ರದ್ಧೆಯಿಂದ ಅದನ್ನು ಕಲಿಯುತ್ತಿದ್ದವು.. ಹಾರುವುದಕ್ಕೆ ಹೇಗೆ ದೇಹವನ್ನು ಅಣಿಗೊಳಿಸಿಕೊಳ್ಳಬೇಕು, ಒಮ್ಮೆಲೇ ಕಾಲಿನ ಮೇಲೆ ಭಾರ ಹಾಕಿ, ತಕ್ಷಣ ರೆಕ್ಕೆ ಬಿಚ್ಚಿ, ಪಟಪಟನೆ ಬಡಿದು ಮೇಲಕ್ಕೇರಬೇಕು... ಹಾಗೇ ಗಾಳಿಯಲ್ಲಿ ತೇಲುವಂತೆ ರೆಕ್ಕೆಯನ್ನು ಬಿಚ್ಚಿಟ್ಟುಕೊಂಡಿರಬೇಕು... ಕೆಳಗಿಳಿಯಬೇಕೆಂದರೆ ತಲೆಯನ್ನು ಬಗ್ಗಿಸಬೇಕು... ಮತ್ತೆ ಮೇಲೇರಬೇಕೆಂದರೆ ರೆಕ್ಕೆ ಬಡಿಯಬೇಕು... ಎಲ್ಲವನ್ನೂ ಹೇಳಿಕೊಡುತ್ತಿತ್ತು. ಮರಿಗಳಿಗೆ ಸ್ವಲ್ಪ ಹೊತ್ತು ರೆಕ್ಕೆ ಬಡಿದರೂ ಸಾಕು ಬಳಲಿ ಬಂದುಬಿಡುತ್ತಿತ್ತು. ಆಗ ಅಪ್ಪ 'ಈಗ ರೆಸ್ಟ್!' ಅಂತ ಘೋಷಿಸುವುದು. ಮರಿಗಳು ಒಳಗೆ ಹೋಗಿ ಅಮ್ಮ ಮಾಡಿದ್ದ ತಿಂಡಿ ತಿಂದು, ನೀರು ಕುಡಿದು ಮತ್ತೆ ಹೊರಬರುವುದು. ಮತ್ತೆ ಉತ್ಸಾಹದಿಂದ ರೆಕ್ಕೆ ಬಡಿಯುವುದು... ಮೇಲಿನಿಂದಲೇ ಆಹಾರವನ್ನು ಗುರ್ತಿಸುವುದು ಹೇಗೆ, ಬೇರೆ ಹಕ್ಕಿಗಳ ಕಣ್ಣಿಗೆ ಅದು ಬೀಳುವುದರೊಳಗೆ ಡೈವ್ ಹೊಡೆದು ಹೋಗಿ ಅದನ್ನು ಕಬಳಿಸುವುದು ಹೇಗೆ, ಕೊಕ್ಕಿನಲ್ಲಿ ಕಚ್ಚಿ ಹಿಡಿದುಕೊಂಡು ಗೂಡಿಗೆ ಮರಳುವುದು ಹೇಗೆ... ಎಲ್ಲವನ್ನೂ ಕಲಿಸಿಕೊಡುತ್ತಿತ್ತು ಅಪ್ಪಹಕ್ಕಿ. ಮರಿಗಳು ಬಲುಬೇಗನೆ ಎಲ್ಲವನ್ನೂ ಕಲಿತವು. ನಾನು ಗೆಳೆಯರಿಗೆ ಮೆಸೇಜಿಸಿದೆ:

ಮರಿಹಕ್ಕಿಗಳು ಈಗ ಸುಮಾರಿಗೆ ಹಾರಲು ಕಲಿತಿವೆ. ಹತ್ತಿರದ ಮರದ ರೆಂಬೆಗಳಿಗೆಲ್ಲ ಇವನ್ನು ತಮ್ಮ ಮೇಲೆ ಕೂರಿಸಿಕೊಂಡು ತೂಗುವ ಸಂಭ್ರಮ. ನಾನು ಮನೆಯಲ್ಲಿದ್ದರೆ ಇವು ಬಂದು ಕಿಟಕಿ ಸರಳ ಮೇಲೆ ಕೂತು ಪಟ್ಟಾಂಗ ಹೊಡೆಯುತ್ತವೆ..
'ಏನೋ ಮಾಡ್ತಿದೀಯಾ?' -ಕೇಳುತ್ತೆ ಮರಿ.
'ಕತೆ ಓದ್ತಿದೀನಿ'
'ನಮ್ಗೂ ಹೇಳು ಕತೆ..'
ಈ ಪುಟ್ಟ ಹಕ್ಕಿಗಳಿಗೆ ಯಾವ ಕತೆ ಹೇಳುವುದಪ್ಪಾ ಅಂತ ಯೋಚಿಸ್ತೇನೆ.. ಮತ್ತು ಶುರು ಮಾಡ್ತೇನೆ:
'ಒಂದು ಊರಲ್ಲಿ ಒಬ್ಬ ರಾಜ ಇದ್ನಂತೆ...'
ಏನು ನಿದ್ರೆ ಬರ್ತಿದೆಯಾ? ಹ್ಮ್, ಅಭ್ಯಾಸ ಬಲ! ಹಹ್ಹ! ಮಲಗಿ..

ನಮಗೆಲ್ಲಾ ಹಾಗೇ ಅಲ್ವಾ ಚಿಕ್ಕವರಿದ್ದಾಗ? ಅಜ್ಜನೋ ಅಜ್ಜಿಯೋ ಅಮ್ಮನೋ ಅತ್ತೆಯೋ ಕತೆ ಶುರು ಮಾಡುತ್ತಿದ್ದರು.. ಆ ಕತೆಗಳೆಲ್ಲ ಶುರುವಾಗುತ್ತಿದ್ದುದು 'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ...' ಅಂತಲೇ! ಸ್ವಲ್ಪ ಹೊತ್ತು ಕೇಳುತ್ತಿದ್ದಂತೆಯೇ ನಿದ್ರೆ ಬರುತ್ತಿತ್ತು.. ಮರುದಿನ ಮತ್ತೆ ಅದೇ ಕತೆ ಮುಂದುವರೆಯುತ್ತಿತ್ತು.. ಅದೊಂಥರ ಎಂದೂ ಮುಗಿಯದ ಕತೆ. ಅದಕ್ಕೇ ನೋಡಿ, ಅದು ಎಂದೂ ಮರೆಯದ ಕತೆ..!

ಈ ಮರಿಹಕ್ಕಿಗಳಲ್ಲಿ ಒಂದು ಮರಿ ಭಾರೀ ಜೋರಿದೆ. 'ಚುಂಚು' ಅಂತ ಅದರ ಹೆಸರು. ಇವತ್ತು ಅದು ಕೇಳ್ತು: 'ನಿಂಗೆ ಲವ್ ಮಾಡಿ ಗೊತ್ತಿದ್ಯೇನೋ?' ಅಂತ! ನಾನು ಫುಲ್ ಶಾಕು! ಇಷ್ಟು ಚಿಕ್ಕ ಮರಿ ಆಡೋ ಮಾತಾ ಇದು? 'ಏಯ್ ಲವ್ ಅಂದ್ರೆ ಏನು ಅಂತನಾದ್ರೂ ಗೊತ್ತಿದ್ಯೇನೇ ನಿಂಗೆ?' ಗದರಿಸಿದೆ ನಾನು. ಅದಕ್ಕಿ ಮರಿ ಅಂತು: 'ಆಗ್ಲೆ ಪಾರ್ಕಿಗೆ ಹೋಗಿದ್ನಲ್ಲ, ಅಲ್ಲಿ ಒಂದು ಹುಡುಗ-ಹುಡುಗಿ ಲವ್ ಮಾಡೋದು ನೋಡ್ದೆ.. ಕೈ ಕೈ ಹಿಡ್ಕೊಂಡು.. ಅದೇನು ಮಾತಾಡ್ತಿದ್ರು ಅಂತೀಯಾ? ಬರೀ ಚ್ವೀತ್ ನಥಿಂಗ್ಸ್! ಸಕ್ಕತ್ತಾಗಿತ್ತು! ನೀನು ಯಾರನ್ನಾದ್ರೂ ಲವ್ ಮಾಡೋ.. ಮಜಾ ಇರೊತ್ತೆ..! ನಮ್ಗೂ ಅತ್ಗೆ ಜೊತೆ ಆಟ ಆಡ್ಬಹುದು..!' ನನಗೆ ನಗು ಬಂತು.. ಜತೆಗೇ ಕನಸ ತೇರು ತೇಲಿ ಬಂತು.. 'ಆಕೆ' ಕುಳಿತಿದ್ದಳು ರಥದಲ್ಲಿ..

ನಾನು ಈ ಮೆಸೇಜಿಂಗನ್ನು ಶುರು ಮಾಡಿದ್ದಾಗ ಎಲ್ಲರೂ ಇದನ್ನು ನಾನು ನನ್ನ ಕನಸ ತೇರ ಸಾರಥಿಗಾಗಿಯೇ ಸೃಷ್ಟಿಸುತ್ತಿರುವುದು ಎಂದು ತಿಳಿದಿದ್ದರು. ಕೆಲವರು ಫೋನಿಸಿ ಕೇಳಿದರು ಕೂಡ: 'ಏನೋ ಯಾವ್ದೋ ಹುಡುಗಿಗೆ ಬಲೆ ಬೀಸ್ತಿರೋ ಹಾಗಿದೆ?' ಅಂತ! 'ಏನ್ಸಾರ್ ಮಾಡೋದು? ಏನಾದ್ರೂ ಮಾಡ್ಬೇಕಲ್ಲ... ಲೈಫು..!!' ಅಂತಂದು ಹಾರಿಕೆಯ ಉತ್ತರ ಕೊಟ್ಟು ಸುಮ್ಮನಾಗಿಸಿದ್ದೆ. ನಾನು ಯಾವ ಉದ್ಧೇಶ ಇಟ್ಟುಕೊಂಡು ಶುರುಮಾಡಿದ್ದೆನೋ, ಈಗಂತೂ ಅದು ಅನೇಕ ಮನಸುಗಳ ನಡುವೆ ಹರಿದಾಡುವ, ಯಾರದೋ ಭಾವಕೋಶಕ್ಕೆ ಲಗ್ಗೆಯಿಡುವ, ಮತ್ಯಾರದೋ ಮನದ ಸುನೀತ ತಂತಿಯನ್ನು ಮೀಟುವ ಬೆರಳ ತುದಿಯ ಲಹರಿಯಾಗಿಬಿಟ್ಟಿತ್ತು.

ನನಗೆ ಈ ಮರಿಗಳನ್ನು ಮತ್ತಷ್ಟು ಪರಿಚಯ ಮಾಡಿಸಬೇಕು ಅನ್ನಿಸಿತು: ನಿಮಗೆ ಈ ಮರಿಗಳ ಬಗ್ಗೆ ಸ್ವಲ್ಪ ಹೇಳ್ಬೇಕು. ಚುಂಚುವಿನ ಅಕ್ಕನ ಹೆಸರು ಮಿಂಚು. ತಮ್ಮ ಡಿಂಚು. ಅಕ್ಕ ತುಂಬಾ ಗಂಭೀರೆ. ತಮ್ಮ ನನ್ನಂತೆಯೇ ಮೌನಿ. ಈ ಮಧ್ಯದ ಚುಂಚು ಮಾತ್ರ ಸಿಕ್ಕಾಪಟ್ಟೆ ತರ್ಲೆ! ತಲೆ ಚಿಟ್ ಹಿಡೀಬೇಕು, ಅಷ್ಟು ಮಾತಾಡತ್ತೆ. ಆಗ್ಲೆ ಸಂಜೆ ಮಳೆ ಬರ್ತಿತ್ತಲ್ಲ, ತರಕಾರಿ ತರಲಿಕ್ಕೇಂತ ನಾನು ಕೊಡೆ ಹಿಡಿದು ಹೊರಟೆ. ಗೂಡಿನಿಂದ ಪುರ್ರನೆ ಹಾರಿಬಂದ ಇದು ನನ್ನ ಹೆಗಲ ಮೇಲೆ ಕೂರ್ತು. ದಾರೀಲಿ ಹುಡುಗೀರು ಕಂಡ್ರೆ ಸಾಕು, 'ಏಯ್ ಇವ್ಳಿಗೆ ಕಾಳು ಹಾಕೋ' ಅನ್ನೋದು ನನ್ ಹತ್ರ! (ಈ ಮೇಸೇಜು ಓದಿ ಕೆಲ ಹುಡುಗಿಯರು ತಮ್ಮನ್ನು ಚುಂಚುವಿಗೆ ಹೋಲಿಸಿಕೊಂಡರು!)

ಚುಂಚು ಹೀಗೆ ತರಲೆ ಮಾಡಿದಾಗಲೆಲ್ಲ ನಾನು ಬೈದು ಸುಮ್ಮನಾಗಿಸುತ್ತಿದ್ದೆ. ಆದರೆ ಈ ಮಾತು-ಕತೆಗಳಿಂದಾಗಿ ಚುಂಚು ನಂಗೆ ತುಂಬಾ ಆತ್ಮೀಯವಾಗಿಬಿಟ್ಟಿತ್ತು. ಪುಟ್ಟ ತಂಗಿಯಂತೆ ಕಾಣಿಸುತ್ತಿತ್ತು. ಏನಾದರೂ ಹಣ್ಣು ತಂದರೆ ತಪ್ಪದೇ ಅದಕ್ಕೆ ಒಂದು ಪಾಲು ಎಟ್ಟಿರುತ್ತಿದ್ದೆ. ಶನಿವಾರ, ಭಾನುವಾರಗಳ ಸಂಜೆ ವಿಹಾರಕ್ಕೆ ಚುಂಚುವನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದೆ:

'ಚುಂಚೂ ಚುಂಚೂ' -ಗೂಡಿನ ಕೆಳಗೆ ನಿಂತು ಕರೆದೆ ನಾನು. 'ಯಾರೂ?' ಎನ್ನುತ್ತಾ ಬಸುರಿ ಹಕ್ಕಿ ಗೂಡಿನಿಂದ ಹೊರಬಂತು. 'ಚುಂಚು ಇಲ್ವಾ?' -ಕೇಳಿದೆ. 'ಡ್ರೆಸ್ ಮಾಡ್ಕೊಳ್ತಾ ಇದಾಳೆ.. ತಾಳಿ, ಕರೀತೀನಿ.. ಏಯ್ ಚುಂಚೂ.. ಅಣ್ಣ ಕರೀತಿದಾನೆ ನೋಡೇ..' -ಅಮ್ಮನ ಕರೆಗೆ 'ಬಂದೇಮ್ಮಾ..' ಎನ್ನುತ್ತಾ ಚುಂಚು ಹೊರಬಂತು.
ಜುಟ್ಟಿಗೆ ರಿಬ್ಬನ್, ಹಣೆಯ ಮೇಲೊಂದು ಬಿಂದಿ, ಕಣ್ ಹುಬ್ಬಿಗೆ ಕಪ್ಪು, ಕೊಕ್ಕಿಗೆ ಲಿಪ್‍ಸ್ಟಿಕ್ -ಸಿಂಗರಿತ ಪುಟ್ಟ ಮರಿ 'ಏನೋ ಚುಚ್ಚುತಾ..?' ಎನ್ನುತ್ತಾ ಗೂಡಿನಿಂದ ಹೊರಬಂತು. 'ಚಂದ ಕಾಣ್ತಿದೀಯ!' ಎಂದೆ. ಮುಖ ಕೆಂಪೇರಿತು. 'ಥ್ಯಾಂಕ್ಸ್' -ಉಲಿ. 'ಬಾ ಸುತ್ತಾಡಿ ಬರೋಣ' -ನಾನು ಕರೆದು ಮುಗಿಯುವುದರ ಒಳಗೇ ಹೆಗಲ ಮೇಲಿತ್ತು ಚುಂಚು.
ಕೆಂಪು ಸಂಜೆ, ಬಿಸಿ ಗಾಳಿ, ಮುಳುಗೋ ಸೂರ್ಯ, ಚುಂಚು ಮಾತು, ನನ್ನ ಮೌನ...

...ಹಕ್ಕಿ ಕತೆ ಮುಂದುವರೆಯುತ್ತದೆ...!

Monday, July 09, 2007

ಗಂಗಮ್ಮನ ಜೀರಿಗೆ

ನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಓದಿ: ನನ್ನ ಅಮ್ಮನಿಗೆ ಹುಳಿ ಅಂದ್ರೆ ಪಂಚಪ್ರಾಣ. ಅವಳು ಮಾಡಿದ ಅಡುಗೆ ಯಾವಾಗಲೂ ಹುಳ್‍ಹುಳ್ಳಗಿರುತ್ತದೆ. ಅದಕ್ಕೇ ಅಪ್ಪ ಅದನ್ನು ಬಡಿಸಿಕೊಳ್ಳುವ ಮುನ್ನ ಪ್ಲೇಟಿನ ತುದಿಗೆ ಒಂದೇ ಒಂದು ಹನಿ ಬಿಟ್ಟುಕೊಂಡು, ನಾಲಿಗೆಯಿಂದ ಚಪ್ಪರಿಸಿ ಎಷ್ಟು ಹುಳಿಯಾಗಿದೆ ಎಂದು ನೋಡಿ, ಆ ನಂತರ ಅನ್ನಕ್ಕೆ ಬಡಿಸಿಕೊಳ್ಳುತ್ತಾನೆ. ಏಕೆಂದರೆ ಅಪ್ಪನಿಗೆ ಹುಳಿ ದೂರ.

ಅಮ್ಮನ ನೆನಪನ್ನು ಹತ್ತಿಕ್ಕಲಾಗದೇ ಊಟ ಮಾಡುತ್ತಲೇ ಮನೆಗೆ ಫೋನಿಸಿದೆ. ಫೋನಿತ್ತಿದವಳು ಅಮ್ಮನೇ. ಊರಲ್ಲಿ ಜೋರು ಮಳೆಯಂತೆ. 'ಹುಚ್ಚಾಪಟ್ಟೆ ಗಾಳಿ ಸಹ' ಎಂದಳು ಅಮ್ಮ. ಹುಣಸೇಹಣ್ಣಿನ ಗೊಜ್ಜಿಗೆ ಹುಳಿ ಜಾಸ್ತಿಯಾಗಿರುವುದನ್ನು ಹೇಳಿದ ನಾನು 'ಈ ವರ್ಷ ಗಂಗಮ್ಮನ ಜೀರಿಗೆ ಫಸಲು ಬಂದಿದೆಯಾ?' ಎಂದು ಕೇಳಲು ಮರೆಯಲಿಲ್ಲ. ಈ ಗಂಗಮ್ಮನ ಜೀರಿಗೆ ಎಂಬುದು ನಮ್ಮ ಸೀಮೆಯಲ್ಲೆಲ್ಲಾ ಫೇಮಸ್ಸಾಗಿರುವ ಒಂದು ಮಾವಿನ ಮರ. ನಮ್ಮೂರಲ್ಲಿ ಪ್ರಮೋದ ಅಂತ ಎರಡನೇ ಕ್ಲಾಸಿಗೆ ಹೋಗುವ ಒಬ್ಬ ಹುಡುಗನಿದ್ದಾನೆ. ಪ್ರಮೋದನ ಅಪ್ಪ ಪ್ರಕಾಶಣ್ಣ. ಪ್ರಕಾಶಣ್ಣನ ಅಪ್ಪ ಸೀತಾರಾಮಣ್ಣ. ಸೀತಾರಾಮಣ್ಣನ ಅಪ್ಪ ಶೀನಪ್ಪಜ್ಜ. ಶೀನಪ್ಪಜ್ಜನ ಅಮ್ಮ ಗಂಗಮ್ಮ. ಈ ಗಂಗಮ್ಮ ತನ್ನ ತವರಿನಿಂದ ತಂದಿದ್ದ ಮಾವಿನಕಾಯಿಯಿಂದ ಗೊಜ್ಜು ಮಾಡಿ ಅದರ ಓಟೆಯನ್ನು ತೋಟದಲ್ಲಿ ಎಸೆದಿದ್ದಂತೆ. ಹಾಗೆ ಎಸೆಯಲ್ಪಟ್ಟಿದ್ದ ಓಟೆ, ಬಂದ ಮುಂಗಾರು ಮಳೆಯ ಹನಿಗಳ ಮಾಯಾಸಿಂಚನಸ್ಪರ್ಶಕ್ಕೆ ಒಳಗಾಗಿ, ಅಲ್ಲೇ ನೆಲದಲ್ಲಿ ಬೇರೂರಿ, ಮೇಲೆ ಪುಟ್ಟ ಮೊಳಕೆಯಾಗಿ ಒಡೆದು, ಗಿಡವಾಗಿ ಬೆಳೆದು, ಆಮೇಲೆ ಮರವಾಗಿ, ಈಗ ಹೆಮ್ಮರವಾಗಿ ನಿಂತಿರುವುದು ಒಂದು ಇತಿಹಾಸ. ಈ ಮರ ಎಷ್ಟು ದೊಡ್ಡದಾಗಿದೆಯೆಂದರೆ, ಇದನ್ನು ಒಂದು ರೌಂಡು ಸುತ್ತಿ ಬರಲು ಕನಿಷ್ಟ ಎರಡು ನಿಮಿಷ ಬೇಕು. ಸೀತಾರಾಮಣ್ಣನ ಮನೆ ತೋಟಕ್ಕೂ ಮಹಾಬಲಗಿರಿಯಣ್ಣನ ಮನೆ ತೋಟಕ್ಕೂ ಮಧ್ಯೆ ಹಾಕಲಾಗಿರುವ ಜಂಬಿಟ್ಟಿಗೆ ಪಾಗಾರ ಇದರ ಕಾಂಡದವರೆಗೆ ಬಂದು ನಿಲ್ಲುತ್ತದೆ. ಮತ್ತೆ ಕಾಂಡ ಮುಗಿದಮೇಲೆ ಆ ಕಡೆಯಿಂದ ಮುಂದುವರೆಯುತ್ತದೆ.

ನಾಲ್ಕಾರು ತಲೆಮಾರುಗಳನ್ನು ಕಂಡಿರುವ ಈ ಮರ ಈಗ ತನ್ನ ವಿನಾಶದ ಅಂಚಿನಲ್ಲಿದೆ ಎಂದರೆ ಅದಕ್ಕೆ ಅವಮಾನ ಮಾಡಿದಂತೆ. ಸ್ವರ್ಗದಲ್ಲಿರುವ ಗಂಗಮ್ಮ ನಿಮ್ಮನ್ನು ಶಪಿಸಿಯಾಳು. ಈ ಮರಕ್ಕೆ ವಯಸ್ಸಾಗಿದೆ ನಿಜ. ಪೂರ್ತಿ ಲಡ್ಡಾಗಿದೆ ನಿಜ. ತೋಟಕ್ಕೆ ಅಡಿಕೆ ಹೆಕ್ಕಲು ಹೋದಾಗ ಜೋರು ಗಾಳಿ ಬೀಸಿದರೆ ಇದರ ಕೊಂಬೆಗಳು ಮುರಕೊಂಡು ತಲೆಮೇಲೇ ಬೀಳುತ್ತವೆ ನಿಜ. ಹಾಗಂತ ನೀವಿದರ ಆಯಸ್ಸೇ ಮುಗಿದಿದೆ ಎಂದು ತೀರ್ಮಾನಿಸುವಂತಿಲ್ಲ. ಮರ ಲಡ್ಡಾದರೂ ಅದರ ಕಾಯಿಯ ಹುಳಿ ಮುಕ್ಕೇ? ಗಂಗಮ್ಮನ ಜೀರಿಗೆ ಮರ ಈಗ ಪೂರ್ತಿ ಜೀರ್ಣವಾಗಿರುವುದರಿಂದ ಅದನ್ನು ಹತ್ತಿ ಮಿಡಿ ಇಳಿಸುವ ಸಾಹಸವನ್ನು ಇತ್ತೀಚಿನ ವರ್ಷಗಳಲ್ಲಿ ಯಾರೂ ಮಾಡಿಲ್ಲ. ಮರದಲ್ಲಿ ಫಸಲು ಬಂದರೆ ಅದು ಹಣ್ಣಾಗಿ ಉದುರುವವರೆಗೂ ಕಾಯಬೇಕು. ಉದುರಿದ ಹಣ್ಣನ್ನೇ ಹೆಕ್ಕಿಕೊಂಡು ಬಂದು, ಅದರ ಹುಳಿ ಹಿಂಡಿ, ನೀರುಗೊಜ್ಜನ್ನೋ ಮಂದನಗೊಜ್ಜನ್ನೋ ಮಾಡಿ ಉಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ ಊರ ಜನ. ಈ ಮರ ಶೀನಪ್ಪಜ್ಜನ ಮನೆಗೆ ಸೇರಿದ ಆಸ್ತಿಯಾದರೂ ಅವರ ಮನೆಯವರೇನು ಯಾರು ಬಂದು ಹಣ್ಣು ಹೆಕ್ಕಿಕೊಂಡು ಹೋದರೂ ಆಕ್ಷೇಪಿಸುವುದಿಲ್ಲ.

ಗಂಗಮ್ಮನ ಜೀರಿಗೆ ಅದರ ಹುಳಿಗಿಂತಲೂ ಪರಿಮಳಕ್ಕೆ ಪ್ರಸಿದ್ಧ. ಈಗ ಐದಾರು ವರ್ಷಗಳ ಹಿಂದೆ ಕೊನೆಕಾರ ಶೀನ ಭಾರೀ ಧೈರ್ಯ ಮಾಡಿ ಈ ಮರ ಹತ್ತಿದ್ದ. ಸುಮಾರಿನವರೆಲ್ಲ ಹತ್ತುವ ಮರವೇ ಅಲ್ಲ ಇದು. ಸುಮಾರು ಎಂಟು ಅಂಕಣಕ್ಕಿರುವ ಇದಕ್ಕೆ ಏಣಿ ಹಾಕಿ, ಹಗ್ಗ ಬಿಗಿದು, ಏನೇನೋ ಕಸರತ್ತು ಮಾಡಿ ಮರ ಹತ್ತಿದ್ದ ಶೀನ. ಆದಷ್ಟೂ ಮೇಲೆ ಹೋಗಿ ಜಾಸ್ತಿ ಮಿಡಿ ಬಂದಿದ್ದ ಒಂದಷ್ಟು ರೆಂಬೆಗಳನ್ನು ಕಡಿದು ಉರುಳಿಸಿದ್ದ. ಆಗ ಈ ಮಿಡಿಗಳನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ ಜನಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು. 'ಒಂದು ಹತ್ತು ಮಿಡಿ ಸಿಕ್ಕಿದ್ರೆ ಸಾಕಿತ್ತೇ, ನಮ್ಮನೆ ಉಪ್ಪಿನ್‍ಕಾಯಿ ಜೊತಿಗೆ ಸೇರುಸ್ತಿದ್ದಿ' ಎಂದ ಸರೋಜಕ್ಕನಿಂದ ಹಿಡಿದು 'ಕೊನಿಗೆ ಎರ್ಡು ಚಮಚ ಸೊನೆನಾದ್ರೂ ಸಿಕ್ಕಿದ್ರೇ...' ಎಂದು ಆಸೆ ಪಟ್ಟುಕೊಂಡ ಗೌರಕ್ಕನವರೆಗೆ ಊರ ಜನಗಳ ಸಾಲಿತ್ತು. ಊರವರಷ್ಟೇ ಅಲ್ಲ, ಇಡೀ ಸೀಮೆಯವರು, ಅಷ್ಟೇ ಏಕೆ, ಬೆಂಕಟವಳ್ಳಿಯಿಂದ ನನ್ನ ಮಾವ ಫೋನ್ ಮಾಡಿ 'ಜೀರಿಗೆ ಮಾವಿನ ಮಿಡಿ ಇಳಿಸಿದ್ರಡ, ಸುದ್ದಿ ಗೊತ್ತಾತು, ಒಂದು ನಾಲ್ಕು ಮಿಡಿ ನಮ್ಮನಿಗೆ ಎತ್ತಿಡಕ್ಕಾಗ್ತಾ ನೊಡಿ' ಎಂದು ಅರ್ಜಿ ಇಟ್ಟಿದ್ದ! ಹೀಗೆ, ಆ ವರ್ಷ ನಮ್ಮೂರಿನ ಗಂಗಮ್ಮನ ಜೀರಿಗೆಯ ಮಿಡಿಗಳು ಯಾವ್ಯಾವುದೋ ಊರಿನ ಯಾರ್ಯಾರದೋ ಮನೆಯ ಅಡುಗೆಮನೆ ನಾಗಂದಿಗೆ ಮೇಲಿದ್ದ ಉಪ್ಪಿನಕಾಯಿ ಜಾರಿಯ ಒಡಲು ಸೇರಿಕೊಂಡುಬಿಟ್ಟವು.

ನೀವು ಏರಿಸಿದ್ದ ಹುಬ್ಬನ್ನು ಈಗಾಗಲೇ ಇಳಿಸಿರುತ್ತೀರಿ ಎಂದು ನನಗೆ ನಂಬಿಕೆ ಇದ್ದರೂ 'ಊರಲ್ಲಿ ಗಾಳಿಮಳೆ' ಎಂದಾಕ್ಷಣ ನನಗೆ ಈ ಜೀರಿಗೆ ಮಾವಿನ ಮರ ನೆನಪಾದದ್ದು ಯಾಕೆ ಎಂಬ ನಿಮ್ಮ ಸಂಶಯವನ್ನು ನಾನು ಈಗ ಪರಿಹರಿಸುತ್ತೇನೆ. ನಾನು ಊರಲ್ಲಿದ್ದಾಗ ಮನೆಯಲ್ಲಿದ್ದರೆ ಈ ಗಂಗಮ್ಮನ ಜೀರಿಗೆ ಹಣ್ಣು ಹೆಕ್ಕುವ ಪಾಳಿ ನನ್ನದಾಗಿರುತ್ತಿತ್ತು. ಜೋರು ಗಾಳಿ ಬೀಸಿದರೆ, ಮಳೆ ಬಂದರೆ ಮರ ಹಣ್ಣುಗಳನ್ನು ಉದುರಿಸುತ್ತಿತ್ತು. ಇದನ್ನು ಅರಿತಿದ್ದ ಊರ ಜನ ಅಲ್ಲಿಗೆ ಮುತ್ತಿಗೆ ಹಾಕುತ್ತಿದ್ದರು. ಅದರಲ್ಲೂ ಮಾಬ್ಲಗಿರಣ್ಣ ಮತ್ತು ಅನ್‍ಪೂರ್ಣಕ್ಕ! ಅವರಿಗೆ ಕಾಂಪಿಟಿಶನ್ ಕೊಡಲಿಕ್ಕೆ ನಾನು! ನಮ್ಮನೆ ಎದುರುಗಡೆಯೇ ತೋಟಕ್ಕೆ ಇಳಿಯಲಿಕ್ಕೆ ಒಂದು ದಾರಿಯಿದೆ. ಗಾಳಿ ಬೀಸತೊಡಗಿ, ಮಾಬ್ಲಗಿರಣ್ಣ ನಮ್ಮನೆ ಎದುರಿಗೆ ಚಬ್ಬೆ ಹಿಡಿದು ತೋಟಕ್ಕೆ ಇಳಿದದ್ದು ಕಂಡಿತೋ, ನಾನು ಪುಸಕ್ಕನೆ ಗೇಟು ದಾಟಿ ನಡೆದು ಮೇಲ್ಗಡೆ ತೋಟಕ್ಕೆ ಇಳಿಯುವ ದಾರಿಯಲ್ಲಿ ಇಳಿದು, ಮಾಬ್ಲಗಿರಣ್ಣ ಬರುವ ಮೊದಲೇ ಮರದ ಜಾಗವನ್ನು ತಲುಪಿಬಿಡುತ್ತಿದ್ದೆ! 'ಏನೋ? ಸಿಕ್ಚನೋ?' ಎಂದ ಮಾಬ್ಲಗಿರಣ್ಣನಿಗೆ 'ಇಲ್ಯಾ, ಎರಡೇ ಸಿಕ್ಕಿದ್ದು' ಎನ್ನುತ್ತಾ ಕೈಯಲ್ಲಿದ್ದ ಎರಡು ಹಣ್ಣನ್ನು ಮಾತ್ರ ತೋರಿಸಿ ತುಂಬಿದ್ದ ಚೀಲವನ್ನು ಲುಂಗಿಯಿಂದ ಮುಚ್ಚಿಕೊಳ್ಳುತ್ತಿದ್ದೆ.

ಅಮ್ಮ ಈ ವರ್ಷವೂ ಗಂಗಮ್ಮನ ಜೀರಿಗೆ ಫಸಲು ಬಂದಿರುವುದನ್ನು ಹೇಳಿದಳಲ್ಲದೇ ನಾನು ಮಾಡಿದ ಹುಣಸೇಹಣ್ಣಿನ ಗೊಜ್ಜಿಗೆ ಇನ್ನಷ್ಟು ಬೆಲ್ಲ ಹಾಕುವುದರ ಮೂಲಕ ಹುಳಿ ಕಮ್ಮಿ ಮಾಡಬಹುದೆಂದೂ ಹೇಳಿದಳು. ಆದರೆ ಅವಳು ಹೇಳುವ ಹೊತ್ತಿಗಾಗಲೇ ನನ್ನ ಊಟ ಮುಗಿಯಲು ಬಂದಿತ್ತಾದ್ದರಿಂದ ಆ ಸಲಹೆಯಿಂದ ಪ್ರಯೋಜನವೇನು ಆಗಲಿಲ್ಲ. ಊಟ ಮುಗಿದು, ಫೋನಿಟ್ಟು, ಎದ್ದು ಕೈ ತೊಳೆದು ತೇಗುವಾಗ ಅದೇ ಗಂಗಮ್ಮನ ಜೀರಿಗೆಯ ಪರಿಮಳ ನನ್ನ ನೆನಪಿನಾಳದಿಂದ ತೇಲಿ ಬಂದದ್ದು ಮಾತ್ರ ನಿಮ್ಮ ನಾಲಿಗೆಯಡಿ ಜಿನುಗಿದ ನೀರಿನಷ್ಟೇ ಸತ್ಯ.

[ಈ ಲೇಖನ, ದಿನಾಂಕ ೨೬.೦೮.೨೦೦೭ರ ವಿಜಯ ಕರ್ನಾಟಕ - ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದೆ.]

Thursday, July 05, 2007

ಹಕ್ಕಿ ಕಥೆ ಮುಂದುವರೆದುದು...!

ಶ್ರೀನಿಧಿಯ ಬ್ಲಾಗಿನಿಂದ ಮುಂದುವರೆದುದು...

ಹಾಗೆ ದಾರಿ ತಪ್ಪಿ ಹೋಗಿದ್ದ ಹಕ್ಕಿಗೆ ಶ್ರೀನಿಧಿ ದಾರಿ ತೋರಿಸಿ ಒಳ್ಳೇ ಕೆಲಸ ಮಾಡಿದ. ಗೂಡಿಗೆ ಹಕ್ಕಿ ಮರಳಿದಾಗ ಹೆಂಡತಿ-ಮಕ್ಕಳಿಗೆ ಆದ ಖುಷಿ ಅಷ್ಟಿಷ್ಟಲ್ಲ.. ನನಗೂ ಪರೀಕ್ಷೆ ಬರೆಯಲು ನೆಮ್ಮದಿಯಾಯ್ತು.. ಹಿಂದಿನ ರಾತ್ರಿ ನಾನು ಕಳುಹಿಸಿದ್ದ ಈ ಮೆಸೇಜನ್ನು ಓದಿ ನನ್ನ ಅನೇಕ ಗೆಳೆಯರು ಟೆನ್ಷನ್ನಿಗೆ ಒಳಗಾಗಿದ್ದರು. ಬೆಳಗಿನಿಂದಲೇ ಕೆಲವರು ಮೆಸೇಜು ಮಾಡಿ 'ಹಕ್ಕಿ ವಾಪಾಸ್ ಬಂತಾ?' ಎಂದೆಲ್ಲ ಕೇಳಿದ್ದರು. ಅಂದು ರಾತ್ರಿ ಎಲ್ಲರಿಗೂ ಮೆಸೇಜು ಕಳುಹಿಸಿದೆ:

ಹಕ್ಕಿ ವಾಪಸಾಗಿದೆ. ಪಾಪ, ದಾರಿ ತಪ್ಪಿ ಹೋಗಿತ್ತಂತೆ ನಿನ್ನೆ, ನನ್ನ ಗೆಳೆಯನೊಬ್ಬ ವಿಳಾಸ ಕೊಟ್ಟು ಕಳುಹಿಸಿದ್ದಾನೆ. ಇವತ್ತು ಗೂಡಿನಲ್ಲಿ ಸಂಭ್ರಮ.. ಸಂಭ್ರಮಕ್ಕೆ ಮತ್ತೂ ಒಂದು ಕಾರಣವಿದೆ: ಇವತ್ತು ಮೊದಲನೇ ಮರಿಯ ಹುಟ್ಟುಹಬ್ಬ! ಸಂಜೆ ಹೊತ್ತು ನಾನು ಅವರೊಟ್ಟಿಗೆ ಸೇರಿ ಸಿಡಿಸಿದ ಪಟಾಕಿ ಸದ್ದು ಕೇಳಿಸಿರ್ಬೇಕಲ್ಲ ನಿಂಗೂ? ಹಾರಿಸಿದ ರಾಕೆಟ್ಟು ಉದುರಿಸಿದ ನಕ್ಷತ್ರಗಳು ಕಾಣಿಸಿರಬೇಕಲ್ಲ ನಿಂಗೂ? ಆ ನಕ್ಷತ್ರಗಳೇ ಗುಡ್ ನೈಟ್ ಎಂದು ರಂಗೋಲಿ ಎಳೆದದ್ದೂ?

ಈ ಮೆಸೇಜು ಅನೇಕರನ್ನು ಸಮಾಧಾನಗೊಳಿಸ್ತು ಅನ್ಸುತ್ತೆ. ತಕ್‍ತಕ್ಷಣ ಸುಮಾರು ರಿಪ್ಲೇಗಳು ಬಂದ್ವು. 'ಹಕ್ಕಿಯ ಮನೆಯಲ್ಲಿ ದೀಪಾವಾಳಿಯೇ? ಹೌದೇ ಹೌದು. ಚಂದ್ರನ ಬಳಿಯಿದ್ದ ನಕ್ಷತ್ರವೂ ಸಂಭ್ರಮಿಸಿ ಸಾಕ್ಷಿ ನುಡಿಯುತ್ತಿದೆ..!' ಅಂತ ನಯ್ನಿ ರಿಪ್ಲೇ ಮಾಡಿದ್ದಳು. ಅವಳು ಹಾಗ್ಯಾಕೆ ಅಂದ್ಲು ಅಂದ್ರೆ, ಅವತ್ತು ಶುಕ್ರಗ್ರಹ ಚಂದ್ರನ ತುಂಬ ಸಮೀಪ ಬಂದಿತ್ತು. ಶ್ರೀ ಮಾಡಿದ ರಿಪ್ಲೇ ಸಹ ಹೆಚ್ಚುಕಮ್ಮಿ ಹಾಗೇ ಇತ್ತು: 'ನಿಧಿ ಹೇಳಿದ, ಹಕ್ಕಿ ವಾಪಾಸ್ ಕಳುಹಿಸಿದೆ ಅಂತ. ಇವತ್ತು ಶುಕ್ರ-ಚಂದ್ರ ಮೀಟ್ ಆಗಿದ್ದು ಇದೇ ಹಕ್ಕಿ ಸುದ್ದಿ ಮಾತಾಡ್ಲಿಕ್ಕೇ ಅಂತೆ? ಒಳ್ಳೇದಾಯ್ತು ಬಿಡು.. ಹಕ್ಕಿ ಸಂಸಾರಕ್ಕೂ ನಿಂಗೂ ಗುಡ್ ನೈಟ್!'

ತಂಗಿ ರಂಜನಾ ಮಾತ್ರ ಸ್ವಲ್ಪ ಜಾಸ್ತೀನೇ ಎಕ್ಸೈಟ್ ಆದವಳಂತೆ ಕಂಡಳು. ಅವಳದೊಂಥರಾ ಹುಚ್ಚು ಕಾಳಜಿ ಎಲ್ಲರ ಬಗ್ಗೆಯೂ, ಎಲ್ಲದರ ಬಗ್ಗೆಯೂ. ಆ ಕಾಳಜಿಯ ನೆರಳು ಹಕ್ಕಿ ಸಂಸಾರದ ಮೇಲೂ ಬೀಳಲಿ ಅಂತ ಬಯಸಿದಳೇನೋ? 'ಆ ಗರ್ಭಿಣಿ ಹಕ್ಕೀನ ಡಾಕ್ಟರ್ ಹತ್ರ ಚೆಕ್ ಅಪ್ ಮಾಡಸ್ತಾ ಇದಾರೋ ಇಲ್ವೋ ವಿಚಾರ್ಸು.. ಯಾವುದೇ ಕಾರಣಕ್ಕೂ ನಿನ್ನ ಸೆಲ್‍ನ ಸೈಲೆಂಟ್ ಮೋಡ್‍ನಲ್ಲಿ ಇಡ್ಬೇಡ. ರಾತ್ರಿ ಏನಾದ್ರು ಹೆಚ್ಚು-ಕಮ್ಮಿ ಆದ್ರೆ ಅವಕ್ಕೆ ಮತ್ಯಾರೂ ಇಲ್ಲ.. ಶ್ರೀನಿಧಿ ಬೇರೆ ತುಂಬಾ ದೂರ.. ಆ ಹಕ್ಕಿ ಹತ್ರ ಕಿವಿಗೆ ಹತ್ತಿ ಇಟ್ಕೊಂಡು ಬೆಚ್ಚಗಿರಲಿಕ್ಕೆ ಹೇಳು.. ಸ್ವೆಟರ್ ಹಾಕ್ಕೊಂಡು ಹುಷಾರಾಗಿರ್ಲಿಕ್ಕೆ ಹೇಳು.. ಬೇಕಿದ್ರೆ ನನ್ನ ಸೆಲ್ ನಂಬರ್ ಕೊಡು..' ಎಂದೆಲ್ಲ ತುಂಬಾ ಆಸ್ಥೆಯಿಂದ ರಿಪ್ಲೇ ಮಾಡಿದ್ದಳು.

ನನ್ನ ಡಿಪ್ಲೋಮಾ ಮುಗಿದಮೇಲೆ ಕೆಲಸಕ್ಕೆ ಸೇರಿಕೊಂಡುಬಿಟ್ಟೆನಲ್ಲ? ಆಮೇಲೆ ಅದೇನೇನೋ ಕೋರ್ಸುಗಳನ್ನು ಮಾಡುತ್ತಾ ಸಮಯ ಕಳೆದೆ. ಈಗ, ತೀರಾ ಪುರುಸೊತ್ತು ಮಾಡಿಕೊಂಡು 'ಒಂದು ಡಿಗ್ರಿ ಸರ್ಟಿಫಿಕೇಟ್ ತಗಳುವಾ' ಅಂತ ಮನಸು ಮಾಡಿದೆ. ಪರೀಕ್ಷೆಗೆ ಕಟ್ಟಿದೆ. ಕ್ಲಾಸಿಗೆ ಹೋಗಿ ಕೂತು ಕೇಳುವಷ್ಟು ವ್ಯವಧಾನ ನನ್ನಲ್ಲಿ ಉಳಿದಿದ್ದಂತೆ ಕಾಣಲಿಲ್ಲವಾದ್ದರಿಂದ ಕರೆಸ್ಪಾಂಡೆನ್ಸ್ ಕೋರ್ಸು ತಗೊಂಡಿದ್ದೆ. ಓದಲಿಕ್ಕೆ ಮೂಡಂತೂ ಸ್ವಲ್ಪವೂ ಇರಲಿಲ್ಲ.. ಆದರೂ ಎಕ್ಸಾಮಿಗೆ ಎರಡು ದಿನವಿರಬೇಕಾದರೆ ಜ್ಞಾನೋದಯವಾದಂತಾಗಿ ಓದಲು ಶುರು ಮಾಡಿದ್ದೆ. ಎಲ್ಲೆಲ್ಲೋ ಹರಿದು ಹೋಗುತ್ತಿದ್ದ ಮನಸ ಕುದುರೆಯನ್ನು ಕಡಿವಾಣ ಹಾಕಿ ನಿಲ್ಲಿಸುವುದೇ ಒಂದು ಸವಾಲಾಗಿತ್ತು. ಮಧ್ಯದಲ್ಲಿ ಪೀಂಗುಟ್ಟುವ ಮೊಬೈಲು ಬೇರೆ! ಓದಲು ಬಹಳ ಇದ್ದುದರ ಟೆನ್ಷನ್ನಿಗೆ ನನಗೆ ನಿದ್ರೆ ಬರುತ್ತಿರಲಿಲ್ಲ. ಹೀಗಾಗಿ ಅವತ್ತು ರಾತ್ರಿ ಸುಮ್ನೇ ಮೊಬೈಲು ಕೈಗೆತ್ತಿಕೊಂಡು ಹೊರಗಡೆ ಹೋದೆ. ಅಲ್ಲಿ ಮರದಲ್ಲಿ ಒಂದು ಹಕ್ಕಿ ಗೂಡು ಕಾಣ್ತು. ಹೊಳೆದ ಏನೋ ಲಹರಿಯನ್ನು ಹಾಗೇ ಟೈಪಿಸಿ ಗೆಳೆಯರಿಗೆಲ್ಲ ಕಳುಹಿಸಿದ್ದೆ. ಆ ಅಂತಹ ಮೆಸೇಜೊಂದು ಹೀಗೆ ಬೆಳೆಯುತ್ತಿರುವ ಸೊಗ ಕಂಡು ನನಗೆ ಅಚ್ಚರಿ...

ಹಕ್ಕಿ ಕತೆಯನ್ನು ಮುಂದುವರಿಸಲೇಬೇಕಿತ್ತು. ಮರುದಿನ ರಾತ್ರಿ ಎಲ್ಲರಿಗೂ ಕಳುಹಿಸಿದೆ:

ಆ ಗಂಡುಹಕ್ಕಿ ಹೆಂಡತಿಯನ್ನು ಎಷ್ಟು ಪ್ರೀತಿ ಮಾಡುತ್ತೆ ಗೊತ್ತಾ? ತನ್ನ ರೆಕ್ಕೆ ಚಾದರ ಹೊದಿಸಿ ಹೆಂಡತಿಯನ್ನು ಮುಚ್ಚಿ ಮುದ್ದಿಸುವುದನ್ನು ನೀವೊಮ್ಮೆ ನೋಡಬೇಕು.. ಆಗ ಮರಿಗಳೆಲ್ಲ 'ಅಮ್ಮ ಎಲ್ಲಿ?' ಅಂತ ಅರೆಕ್ಷಣ ಗಾಭರಿಯಾಗುತ್ತವೆ.. ಗೂಡಿನಲ್ಲಿ ಅರಸುತ್ತವೆ ಅವು: ಅಡುಗೆ ಮನೆ, ದೇವರ ಕೋಣೆ, ಮೇಲ್ಮೆತ್ತು, ಎಲ್ಲ... 'ಅಪ್ಪಾ ನೀನು ನೋಡಿದ್ಯಾ?' ಎಂದರೆ ಅಪ್ಪ ಗಂಭೀರವಾಗಿ 'ಇಲ್ವಲ್ಲ!' ಎನ್ನುತ್ತಾನೆ. ಕೊನೆಗೆ ಅವು ಗೂಡಿನಿಂದ ಹೊರಗಿಣುಕುತ್ತವೆ. ಕಂಡ ನನ್ನ ಬಳಿ 'ನೀ ನೋಡಿದ್ಯಾ?' ಅಂತ ಕೇಳ್ತವೆ...

ಅಷ್ಟು ಕಳುಹಿಸಿದ್ದಷ್ಟೇ. ರಂಜು ರಿಪ್ಲೇ ಮಾಡಿದ್ಲು: 'ಅಣ್ಣಾ, ಆಮೇಲೆ ಮುಂದೆ ಹೇಳು: ನಿಂಗೆ ಗೊತ್ತಿದ್ರೂ 'ಇಲ್ಲ' ಅಂತ ಹೇಳ್ತೀಯ.. ನಿನಗೂ ನಿನ್ನವಳು ನೆನಪಾಗ್ತಾಳೆ...'

ಹೌದಲ್ಲ, ನನಗೆ ನನ್ನವಳೇ ನೆನಪಾಗ್ತಾಳೆ... ಹೀಗೇ ಅಲ್ವಾ ನಾನು ಅವಳಿಗೆ ಬೆಚ್ಚನೆ ಚಾದರ ಹೊದಿಸಿ, ಚುಕ್ಕು ತಟ್ಟಿ, ಮುಂಗುರುಳು ಹಿಂದಕ್ಕೆ ಸರಿಸಿ... ಹೌದೌದು... ನನಗೆ ಅವಳೇ ನೆನಪಾಗ್ತಾಳೆ... ಹಕ್ಕಿ ಹಾಡುತ್ತಿದ್ದರೆ ಅವಳ ಹಾಡು, ಹಕ್ಕಿ ಹಾರುತ್ತಿದ್ದರೆ ಅವಳ ನಡೆ, ಹಕ್ಕಿ ಗುಟುಕು ನೀಡುತ್ತಿದ್ದರೆ, ಹಕ್ಕಿ ನಿದ್ರೆ ಮಾಡುತ್ತಿದ್ದರೆ, ಹಕ್ಕಿ ಗೂಡಿಗೆ ಬಾರದಿದ್ದರೆ... ಏನೇ ಮಾಡಿದರೂ, ಏನೇ ಆದರೂ ಅವಳೇ ನೆನಪಾಗ್ತಾಳೆ... ಏನೂ ಆಗದಿದ್ದರೂ ಅವಳೇ ನೆನಪಾಗ್ತಾಳೆ... ಕನಸಲ್ಲ, ನಿಜ; ನಿಜವಲ್ಲ, ಕನಸು...

ಮರುದಿನ ಒಂದು ಪುಟ್ಟ ಅಪಘಾತವಾಯ್ತು. 'ಇವತ್ತೊಂದು ಪುಟ್ಟ ಅವಘಢವಾಯ್ತು. ಮಳೆ ಬರುವ ಸೂಚನೆ ಇದ್ದುದರಿಂದ ಗಂಡುಹಕ್ಕಿ ಹೊರಗಡೆ ಹೋಗದೆ ಗೂಡಿನಲ್ಲೇ ಇದ್ದುಕೊಂಡು ಮರಿಗಳಿಗೆ ಹಾರಾಟ ಪ್ರಾಕ್ಟೀಸ್ ಮಾಡಿಸುತ್ತಿತ್ತು. ಸಂಜೆ ಮಳೆ ಬಿತ್ತಲ್ಲ, ರೆಂಬೆಯೆಲ್ಲ ಒದ್ದೆಯಾಗಿತ್ತು.. ಜಾರುತ್ತಿತ್ತು.. ಅದೇನೋ ಹೆಚ್ಚುಕಮ್ಮಿಯಾಗಿ ಮರಿಹಕ್ಕಿಯೊಂದು ಜಾರಿ ಬಿದ್ದುಬಿಟ್ಟಿತ್ತು!! ಇಲ್ಲ, ಭಯ ಪಡಬೇಕಿಲ್ಲ. ಸ್ವಲ್ಪ ತರಚು ಗಾಯ ಆಗಿದೆ ಅಷ್ಟೇ. ಸೊಪ್ಪಿನ ರಸ ಬಿಟ್ಟಿದ್ದೇವೆ. ಉರಿ ಕಮ್ಮಿಯಾಗಿದೆಯಂತೆ.. ನಗುನಗ್ತಾ ಎಲ್ರಿಗೂ ಗುಡ್ ನೈಟ್ ಹೇಳಿದೆ ಮರಿಹಕ್ಕಿ.. ಮಲಗಿ ನೀವು..'

ಹಕ್ಕಿ ಕತೆ ಅನೇಕರನ್ನು ಮೋಡಿ ಮಾಡಿದ್ದು ಅವರ ರಿಪ್ಲೇಗಳಿಂದಲೇ ಗೊತ್ತಾಗುತ್ತಿತ್ತು. ರಂಜನಾ ಹೇಳಿದ್ಲು 'ಅಣ್ಣಾ ನಂಗೆ ಆ ಹಕ್ಕೀನ ನೋಡ್ಬೇಕು ಅನ್ನಿಸ್ತಿದೆ..' ಅಂತ. ನಾನೆಂದೆ 'ನಮ್ಮನೆಗೆ ಬಾ, ತೋರಿಸ್ತೀನಿ.. 'ನನ್ ತಂಗಿ' ಅಂತ ಪರಿಚಯ ಮಾಡಿ ಕೊಡ್ತೀನಿ.. ಹೆಣ್ಣು ಹಕ್ಕಿ ನಿಂಗೆ ಕಣ ಕೊಟ್ಟು, ಕುಂಕುಮ ಹಚ್ಚಿ ಕಳ್ಸುತ್ತೆ..' ಅಂತ. 'ಏಯ್ ನಂಗೆ ಆಸೆ ಜಾಸ್ತಿ ಮಾಡ್ಬೇಡ ಪ್ಲೀಸ್' -ಆ ಕಡೆಯಿಂದ ರಿಪ್ಲೇ. ಸಮಾಧಾನ ಮಾಡಿದೆ ನಾನು: 'ಮಲ್ಕೋ.. ಆ ಹಕ್ಕಿ ಬಂದು ತನ್ನ ರೆಕ್ಕೆ ಚಾಮರದಿಂದ ನಿಂಗೆ ಗಾಳಿ ಬೀಸ್ತಾ ಜೋಗುಳ ಹಾಡ್ತಾ ಇದೆ ಅಂತ ಕಲ್ಪಿಸಿಕೋ.. ಹಾಯಾಗಿ ನಿದ್ರೆ ಬರುತ್ತೆ' ಅಂತ. ಅದ್ಕೆ ಅವಳಂದ್ಲು: 'ಥ್ಯಾಂಕ್ಸ್.. ಆದ್ರೆ ಬೇಡ, ಆ ಹಕ್ಕಿಗೆ ಆಹಾರ ಹುಡುಕಿ ಸುಸ್ತಾಗಿರೊತ್ತೆ. ಪಾಪ, ನಂಗೆ ಗಾಳಿ ಬೀಸ್ತಾ ಕೂತ್ರೆ ಮತ್ತೂ ಸುಸ್ತಾಗತ್ತೆ.. ಅದು ತನ್ನ ಹೆಂಡತಿ ಒಟ್ಟಿಗೆ ಹಾಯಾಗಿ ನಿದ್ರೆ ಮಾಡ್ಲಿ. ಬೇಕಾದ್ರೆ ನಾನೇ ಗಂಡ, ಹೆಂಡತಿ, ಮಕ್ಕಳಿಗೆಲ್ಲ ಗಾಳಿ ಬೀಸಿ ನಿದ್ರೆ ಮಾಡಿಸ್ತೀನಿ' ಅಂತ.

ಬದಲಾದ ಬೆಂಗಳೂರಿನ ಹವೆ ಪಕ್ಷಿ ಸಂಕುಲದ ಮೇಲೂ ಪರಿಣಾಮ ಬೀರಿದ್ದು ಸುಳ್ಳಲ್ಲ! ಮರುದಿನದ ನನ್ನ ಮೆಸೇಜಿನಲ್ಲಿ ಅದು ಕಾಣಿಸಿಕೊಂಡಿತ್ತು: ಬಸುರಿ ಹಕ್ಕಿಗೆ ಸಣ್ಣಗೆ ಜ್ವರ ಬಂದಿದೆ. ಗಂಡಹಕ್ಕಿ ಇವತ್ತೂ ಮನೆಯಲ್ಲೇ ಉಳಿದಿದೆ. ಬಿಸಿಬಿಸಿ ಮೆಣಸಿನ ಸಾರು ಮಾಡಿದೆ ಅಡುಗೆಗೆ. 'ದಿನಾ ನೀವು ಮನೆಯಲ್ಲೇ ಇದ್ರೆ ಊಟದ ಗತಿ ಏನು?' ಎಂದು ಆತಂಕ ವ್ಯಕ್ತಪಡಿಸಿದ ಅಮ್ಮನಿಗೆ ಮರಿಹಕ್ಕಿಗಳು 'ನಾವು ಹೋಗಿ ಆಹಾರ ತರ್ತೀವಿ ಬಿಡಮ್ಮಾ' ಎಂದಿದ್ದಾವೆ.. ಭಾವುಕನಾದ ಅಪ್ಪ ಮರಿಗಳನ್ನೆಲ್ಲಾ ಒಮ್ಮೆ ತಬ್ಬಿ 'ಇನ್ನೂ ಚೆನ್ನಾಗಿ ಹಾರೋದನ್ನ ಕಲೀಬೇಕು ನೀವು.. ನನ್ನ ಜೊತೆ ಬಂದು ಕಾಡಿನ ಪರಿಚಯ ಮಾಡ್ಕೋಬೇಕು.. ಆಮೇಲೆ ನೀವು ಸ್ವತಂತ್ರವಾಗಿ ಹಾರಾಡಬಹುದು' ಎಂದಿದ್ದಾನೆ...

ನಮ್ಮೆಲ್ಲರ ಆರೈಕೆಯಿಂದಾಗಿ ಬಸುರಿ ಹಕ್ಕಿ ಬಲುಬೇಗನೆ ಚೇತರಿಸಿಕೊಂಡಿತು. ನಮ್ಮ ಆರೈಕೆ ಅನ್ನುವುದಕ್ಕಿಂತ ಗಂಡಹಕ್ಕಿಯ ಪ್ರೀತಿ ಎಂದರೇ ಹೆಚ್ಚು ಸೂಕ್ತವೇನೋ? ಮರುದಿನ ಗೆಳೆಯರಿಗೆ ನಾನು ಹಕ್ಕಿ ಅರಾಮಾಗಿರುವ ಸುದ್ದಿಯನ್ನು ಮೆಸೇಜಿಸಿದೆ: ಬಸುರಿ ಹಕ್ಕಿಯ ಜ್ವರ ಕಮ್ಮಿಯಾಗಿದೆ. ಆದ್ರೂ ಕಾದಾರಿದ ನೀರನ್ನೇ ಕುಡಿಯುವಂತೆ ಹೇಳಿದ್ದೇವೆ ನಾವೆಲ್ಲ. ಈಗ ಹೀಗೇ ಹೊರಗಡೆ ಹೋಗಿದ್ನಲ್ಲ, ಗೂಡಿನಿಂದ ಪಿಸುಮಾತು ಕೇಳಿಸುತ್ತಿತ್ತು: 'ಹುಟ್ಟುವ ಮರಿಗೆ ಏನಂತ ಹೆಸರಿಡೋಣ?' 'ಅದು ಹೆಣ್ಣೋ ಗಂಡೋ ಎಂಬುದೇ ಇನ್ನೂ ಗೊತ್ತಿಲ್ಲ..!' 'ನಾ ಹೇಳ್ತೀನಿ, ಈ ಸಲ ಹೆಣ್ಣೇ ಆಗೋದು..' 'ಅದು ಹ್ಯಾಗೆ ಹೇಳ್ತೀಯಾ?' 'ನಿನ್ನ ಮುಖದಲ್ಲಿನ ಕಳೆಯೇ ಹೇಳ್ತಿದೆ, ಹೊಟ್ಟೆಯೊಳಗಿನ ಮೊಟ್ಟೆಯೊಳಗಿಂದ ಹೊರಬರಲಿರುವ ಜೀವ ಹೆಣ್ಣು ಅಂತ' (ತುಂಟ ನಗು) 'ಥೂ! ಸಾಕು, ಮಲಗಿ..!' 'ಹಹ್ಹ! ಗುಡ್ ನೈಟ್'

ಎಲ್ಲಾ ಕಲ್ಪನೆಯಷ್ಟೇ ಎನ್ನಬೇಡಿ.. ಹಕ್ಕಿಗಳ ಲೋಕದಲ್ಲಿ ಹೀಗೆಲ್ಲಾ ಆಗೊತ್ತಾ ಅನ್ಬೇಡಿ.. ಹಕ್ಕಿ ಹೊಟ್ಟೆಯಲ್ಲಿ ಒಂದಲ್ಲ, ಎರಡ್ಮೂರು ಮೊಟ್ಟೆಗಳೂ ಇರಬಹುದು ಎಂದು ವಿಜ್ಞಾನದ ಮಾತಾಡ್ಬೇಡಿ.. ಎಲ್ಲಾ ಸಾಧ್ಯತೆಯಿದೆ.. ನೋಡುವ ಕಣ್ಣಿದ್ದರೆ.. ಕೇಳುವ ಕಿವಿಯಿದ್ದರೆ.. ಅನುಭವಿಸುವ ಹೃದಯವಿದ್ದರೆ.. ಶ್ರೀ ಅವತ್ತೆಲ್ಲೋ ರಿಪ್ಲೇನಲ್ಲಿ ಹೇಳಿದ್ದಳು: 'ಈ ಹಕ್ಕಿ ಸಂಸಾರದಿಂದಾಗಿ ಬದುಕೆಷ್ಟು ಸುಂದರ!' ಅಂತ. ಹೌದಲ್ವಾ? ಎಷ್ಟೊಂದು ಸುಂದರ ಅಲ್ವಾ?

ಹೀಗೆ, ಅಸ್ತಿತ್ವದಲ್ಲೇ ಇಲ್ಲದ ಹಕ್ಕಿಯೊಂದು ಭಾವಜೀವಿಗಳ ಮೊಬೈಲಿನಿಂದ ಮೊಬೈಲಿಗೆ ಎಸ್ಸೆಮ್ಮೆಸ್ಸಾಗಿ ಹಾರಾಡುತ್ತಿದೆ.. 'ಅಸ್ತಿತ್ವದಲ್ಲಿ ಇಲ್ಲ' ಅಂತ ಹೇಳೋದೂ ತಪ್ಪೇ! ಯಾಕಿಲ್ಲ? ಖಂಡಿತ ಇದೆ ಆ ಹಕ್ಕಿ.. ನೋಡಿ, ನಿಮ್ಮ ಕಣ್ಣೆದುರೂ ಹಾರಾಡ್ತಾ ಇಲ್ವಾ ಅದು ಈಗ..? ನಿಜ ಹೇಳಿ..? :)

...ಹಕ್ಕಿ ಕತೆ ಮುಂದುವರೆಯುತ್ತದೆ...!

Monday, July 02, 2007

ಬೆನ್ನ ಮೇಲಿನ ಮಚ್ಚೆ

ನನ್ನ ರೂಂಮೇಟ್ ಹೇಳಿದ:
'ನಿನ್ನ ಬೆನ್ನಲ್ಲೊಂದು ಮಚ್ಚೆಯಿದೆ.'

ಇಷ್ಟರೊಳಗೆ ನಾನು ನನ್ನ ಬೆನ್ನನ್ನು ನೋಡಿಕೊಂಡೇ ಇಲ್ಲ ನೋಡಿ,
ಹಾಗಾಗಿ ಗೊತ್ತೇ ಇರಲಿಲ್ಲ ನನಗೆ ಇದು...
ಹಾಗಂತ ಅವನು ಹೇಳಿದ್ದನ್ನು ನಾನು ತಕ್ಷಣ ನಂಬಲಿಲ್ಲ;
'ಸಾಕ್ಷ್ಯ ಬೇಕು, ಪುರಾವೆ ಬೇಕು, ಹಾಗೆಲ್ಲ ಸುಲಭಕ್ಕೆ
ಏನನ್ನೂ ನಂಬುವುದಿಲ್ಲ ನಾನು' ಎಂದೆಲ್ಲ ದೊಡ್ಡದಾಗಿ ಹೇಳಿದೆ.

ನನ್ನನ್ನು ಒಂದು ನಿಲುವುಗನ್ನಡಿಯ ಮುಂದೆ ಅಂಗಿ ಬಿಚ್ಚಿ ನಿಲ್ಲಿಸಿದ ಅವನು
ಹಿಂದಿನಿಂದ ಮತ್ತೊಂದು ಕನ್ನಡಿ ಹಿಡಿದು ಏನೇನೋ ಕಸರತ್ತು ಮಾಡಿ
ನನಗೆ ನನ್ನ ಬೆನ್ನ ಮಚ್ಚೆಯನ್ನು ತೋರಿಸಲಿಕ್ಕೆ ಪ್ರಯತ್ನಿಸಿದ.
ಏನೇ ಮಾಡಿದರೂ ನನಗೆ ಕಾಣಿಸಲಿಲ್ಲ ಮಚ್ಚೆ.

ಬಗೆಬಗೆಯಾಗಿ ಅವನನ್ನು ಪ್ರಶ್ನಿಸಿ ಪೀಡಿಸಿದೆ:
'ಹೇಗಿದೆ ಅದು? ಎಷ್ಟು ಅಗಲಕ್ಕಿದೆ? ಬಣ್ಣ ಕಪ್ಪಾ? ಅಥವಾ ಜೇನು ಬಣ್ಣವಾ?
ಆಕಾರ ಯಾವುದು? ಎಲ್ಲಿದೆ ಮುಟ್ಟಿ ತೋರಿಸು..' ಇತ್ಯಾದಿ ಇತ್ಯಾದಿ.
'ತಾಳು ಮಾರಾಯ, ಒಂದು ಉಪಾಯ ಮಾಡ್ತೀನಿ' ಎಂದ ಅವನು
ತನ್ನ ಮೊಬೈಲ್ ಕೆಮೆರಾದಿಂದ ನನ್ನ ಬೆನ್ನಿನದೊಂದು ಫೋಟೋ ತೆಗೆದು
ನನ್ನ ಮುಂದೆ ಹಿಡಿದ.

ಹೇಳಿದೆನಲ್ಲ, ನಾನು ಹಾಗೆಲ್ಲಾ ಸುಲಭಕ್ಕೆ ಏನನ್ನೂ ನಂಬುವುದಿಲ್ಲ ಎಂದು,
ಹಾಗೆಯೇ ಇದನ್ನೂ ನಂಬಲಿಲ್ಲ..!
'ಇದು ನನ್ನ ಬೆನ್ನೇ ಅಲ್ಲ' ಎಂದು ವಾದಿಸಿದೆ.
ರೂಂಮೇಟ್‍ಗೆ ಸಿಟ್ಟು ಬಂತು:
'ನನ್ನ ಮೇಲೆ ಇಷ್ಟು ಅನುಮಾನವಾ ನಿಂಗೆ?
ನಾನ್ಯಾಕೆ ಸುಮ್ಮನೇ ಸುಳ್ಳು ಹೇಳಲಿ?
ಏನಾದರೂ ಮಾಡಿಕೊಂಡು ಸಾಯಿ' ಎಂದೆಲ್ಲಾ ಬೈದು
ಉಪ್ಪಿಟ್ಟಿಗೆ ಉಪ್ಪು ಜಾಸ್ತಿ ಹಾಕಿಟ್ಟು ಆಫೀಸಿಗೆ ಹೋಗಿಬಿಟ್ಟ.

'ಸರಿ ಬಿಡಪ್ಪ, ನಂಬ್ತೀನಿ' ಎಂದು
ರಾತ್ರಿ ಮನೆಗೆ ಮರಳಿದ ಅವನನ್ನು ಸಮಾಧಾನ ಮಾಡಿದೆ.
ಹಾಗಂತ ನಾನೇನು ನಂಬಲಿಲ್ಲ, ನಂಬಿದಂತೆ ನಟಿಸಿದೆ ಅಷ್ಟೆ!

ಇದೆಲ್ಲಾ ಆಗಿದ್ದು ಈಗ ಆರು ತಿಂಗಳ ಹಿಂದೆ.
ಮೊನ್ನೆ ಯಾರೋ ಯಾರ ಬಗ್ಗೆಯೋ 'ಅವನು ಹೇಗೆ?' ಅಂತ ಕೇಳಿದರು ನೋಡಿ,
ನನ್ನ ಬೆನ್ನ ಮೇಲಿನ ಮಚ್ಚೆಯ ಬಗ್ಗೆಯೇ ಗೊತ್ತಿಲ್ಲದ ನಾನು
ಇನ್ಯಾರದೋ ಬಗ್ಗೆ 'ಅವನು ಹೀಗೇ' ಅಂತ ಹೇಗೆ ಹೇಳಲಿ,
ಅಥವಾ ನಾನು ಹೇಳಿದರೂ ಅದನ್ನು ಅವರು ನಂಬುತ್ತಾರೆಯೇ,
ನಂಬದಿದ್ದರೆ ನನಗೆ ಖಂಡಿತ ಸಿಟ್ಟು ಬರುತ್ತದಲ್ಲವೇ,
-ಎಂದೆಲ್ಲಾ ಎನಿಸಿ, ಇದೆಲ್ಲಾ ನೆನಪಾಗಿ ಕಾಡಿ,
ಅನಿರ್ವಚನನಾಗಿ ನಿಂತುಬಿಟ್ಟೆ.

ಹೋಗಲಿ ಬಿಡಿ, ನೀವೂ ಇದನ್ನೆಲ್ಲ ನಂಬಲೇಬೇಕೆಂದೇನು ಇಲ್ಲ.