Thursday, February 07, 2008

ಚಿತ್ರಚಾಪ -ಇದು ಮೊದಲ ತೊದಲು

ಸೂರ್ಯ ತನ್ನತ್ತ ವಾಲುತ್ತಲೇ ಪಶ್ಚಿಮದ ದಿಗಂತ ನಾಚಿ ಕೆಂಪಾಗಿಬಿಟ್ಟಿತ್ತು. ಹಕ್ಕಿಗಳು ಗುಂಪುಗುಂಪಾಗಿ ಮನೆ ಕಡೆ ಹೊರಟಿದ್ದವು. ಸಂಜೆ, ತನ್ನ ಸೌಂದರ್ಯಕ್ಕೆ ತಾನೇ ಮೈಮರೆತಂತಿತ್ತು. ಗಂಧರ್ವ ಲೋಕದತ್ತ ನಡೆಯುವವರಂತೆ ಸುಮಂತ ಮತ್ತು ರಾಜಿ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದರು. ಸುಮಂತ ರಾಜಿಗಾಗಿ ಹಿತ್ತಿಲ ಬೇಲಿಯ ಗಿಡದಲ್ಲಿದ್ದ ಗೌರಿ ಹೂವನ್ನು ಕೊಯ್ದುಕೊಟ್ಟ. ಸಂಜೆ ಮುಗಿಲ ಬಣ್ಣ ಗೌರಿ ಹೂವಿನ ಬಣ್ಣಕ್ಕೇ ತಿರುಗಿತು. ಸ್ವಲ್ಪ ಮುಂದೆ ನಡೆದ ಸುಮಂತ, ಮುತ್ತುಗದ ಹೂವಿನ ಗೊಂಚಲೊಂದನ್ನು ಕೊಯ್ದು ತಾನೇ ರಾಜಿಯ ಮುಡಿಗೇರಿಸಿದಮೇಲಂತೂ ಸಂಜೆಗೆ ಅಲ್ಲೇ ರಾತ್ರಿಯ ಮಾದಕತೆ ಪ್ರಾಪ್ತವಾಗಿಬಿಟ್ಟಿತು.

ಶಾಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪುಗಳಲ್ಲಿ ಕೆಲಸ ಮಾಡಿ ಗೊತ್ತಿದ್ದ ಸುಮಂತ ರಾಜಿಗಾಗಿ ಮರ ಹತ್ತಿ ಸೀತೆಪೇರಲೆ ಹಣ್ಣನ್ನು ಕೊಯ್ದು ಕೊಟ್ಟ. ಮುಂದೆ ಅವರು ಪರಗಿ ಮಟ್ಟಿ ನುಗ್ಗಿ ಪುಟ್ಟ ಪುಟ್ಟ ಪರಗಿ ಹಣ್ಣುಗಳನ್ನು ಒಂದು ಮುಷ್ಟಿಯಾಗುವಷ್ಟು ಸಂಗ್ರಹಿಸಿದರು. ಒಂದೊಂದೇ ಹಣ್ಣನ್ನು ಬಾಯಿಗೆ ಎಸೆದುಕೊಳ್ಳುತ್ತಾ ಅವರು ಕಾಲುದಾರಿಯಲ್ಲಿ ಸಾಗಿದರು. ಒಂದು ದೊಡ್ಡ ಚಂದ್ರಪೇರಲೆ ಹಣ್ಣಿನ ಗಿಡ ಸಿಕ್ಕಿತು. ಮರದ ಮೇಲ್ಗಡೆ ಎತ್ತರದಲ್ಲಿ ಎರಡು ದೋರಗಾಯಿಗಳು ಕಂಡವು. ಸುಮಂತ ಬಡಿಗೆ ಬೀಸಿ ಒಂದನ್ನು ಕೆಡವಿದ. ‘ನಿಂಗಿಲ್ವಲ್ಲೋ?’ ಎಂದ ರಾಜಿಗೆ ‘ಪರ್ವಾಗಿಲ್ಲ, ನೀನು ತಿನ್ನು’ ಎಂದ. ಆದರೂ ರಾಜಿ ತಾನೇ ಬಡಿಗೆ ತಗೊಂಡು ಬೀಸಲಿಕ್ಕೆ ನೋಡಿದಳು. ಆದರೆ ಅವಳು ಎಸೆದದ್ದು ಆ ರೆಂಬೆಯ ಹತ್ತಿರಕ್ಕೂ ಹೋಗಲಿಲ್ಲ. ಸುಮಂತ ರಾಜಿಯನ್ನು ರೇಗಿಸಿದ. ಅದಕ್ಕೆ ರಾಜಿಯ ಮುಖ ಕೆಂಪಾದದ್ದು ಕಂಡು ಸಂಜೆ ತಾನು ಕಪ್ಪಾಗತೊಡಗಿತು.

ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ಒಡಗೂಡತೊಡಗಿದವು. ಮಳೆಗಾಲದಲ್ಲಿ ನೀರಾಗಿ ಸುರಿದೂ ಅಳಿದುಳಿದಿದ್ದ ಮೋಡಗಳು ಅದ್ಯಾವುದೋ ಮಾಯೆಯ ಗಾಳಿಗೆ ಒತ್ತಿಕೊಂಡು ಸೀದಾ ಇಲ್ಲಿಗೆ ಬಂದಿದ್ದವು. ಆಗಲೇ ಕತ್ತಲಾವರಿಸಲಾರಂಭಿಸಿದ್ದರಿಂದ ಸುಮಂತನಿಗಾಗಲೀ ರಾಜಿಗಾಗಲೀ ಈ ಪರಿಣಾಮ ತಕ್ಷಣ ಗೊತ್ತಾಗಲಿಲ್ಲ. ತಣ್ಣನೆಯ ಗಾಳಿ ಬೀಸಲಾರಂಭಿಸಿದಾಗ ಅವರು ಆಗಸದತ್ತ ನೋಡಿದರು.

“ಓಹ್! ಮಳೆ ಬರುವಂತಿದೆ ಕಣೇ ರಾಜೀ..” ಎಂದ ಸುಮಂತ.
“ಅಯ್ಯೋ.. ಬೇಗ ಬೇಗ ಮನೆ ಸೇರಿಕೊಳ್ಳೋಣ ಬನ್ನಿ..” ರಾಜಿ ಅವಸರಿಸಿದಳು.

ಅವರು ಕಾಡ ತಂಪು, ಹೂಗಳ ಕಂಪು, ಜೀರುಂಡೆಗಾನದ ಇಂಪು ಮತು ಸಂಜೆಯ ಕೆಂಪನ್ನು ಸವಿಯುತ್ತಾ ತುಂಬಾ ಮುಂದೆ ಬಂದುಬಿಟ್ಟಿದ್ದರು. ಈಗ ವಾಪಸು ಹೋಗಲಿಕ್ಕೆ ಕನಿಷ್ಟ ಅರ್ಧಗಂಟೆ ಹಾದಿ ಸವೆಸಬೇಕಿತ್ತು. ನಡೆಯತೊಡಗಿದರು. ಮಿಂಚು-ಗುಡುಗುಗಳು ಶುರುವಾದವು. ರಾಜಿ ಸುಮಂತನ ಕೈ ಹಿಡಕೊಂಡಳು. ಸರಸರನೆ ಹೆಜ್ಜೆ ಹಾಕಿದರು. ಮಳೆ ಹನಿಗಳು ಬೀಳತೊಡಗಿದವು...


* * *

ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.

ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ 'ಪುಸ್ತಕ ಲೋಕ'ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು... ಹೇಗೋ ಏನೋ ಅರಿಯೆವು... ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ...

ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ
ಸಮಯ: ಬೆಳಗ್ಗೆ 10:30
ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ನಿಮಗಾಗಿ ಕಾಯುತ್ತಿರುತ್ತೇನೆ.. ಯಾಕೇಂದ್ರೆ, ನೀವು ಬಂದೇ ಬರ್ತೀರಿ ಅಂತ ನಂಗೊತ್ತು...

ಪ್ರೀತಿಯಿಂದ,

-ಸು

Monday, February 04, 2008

ಕಮಲ ಹೇಳಿದ ಕತೆ

ನಮಸ್ಕಾರ. ನನ್ನ ಹೆಸರು ಕಮಲ. 'ಇವರು' ನನ್ನನ್ನು 'ಕಮಲು' ಅಂತ ಕರೀತಾರೆ. ಆಗ ನನಗೆ ಒಂಥರಾ ನಾಚಿಕೆಯಾಗುತ್ತೆ. ಯಾಕೆಂದರೆ, ಎಲ್ಲರೆದುರಿಗೆ ಇವರು 'ಕಮಲಾ..' ಅಂತಲೇ ಕೂಗುವುದು; ಆದರೆ ಯಾರೂ ಇಲ್ಲವೆಂದಾಗ, ನಾವಿಬ್ಬರೇ ಇರುವ ಏಕಾಂತ ಸಮಯಗಳಲ್ಲಿ ಮಾತ್ರ, ಒಲುಮೆ ದೇವತೆ ನದಿಯಾಗಿ ಮೈಯಲ್ಲಿ ಸಂಚರಿಸುವಂತೆ 'ಕಮಲೂ..' ಎಂದು ಕೂಗುತ್ತಾರೆ. ಈ ಅಡುಗೆ ಮನೆಯ ಅಗ್ಗಿಷ್ಟಿಕೆಗೂ ಗೊತ್ತು: ಆ ಕರೆಗೂ ಪ್ರೀತಿಗೂ ವ್ಯತ್ಯಾಸವಿಲ್ಲವೆಂದು. ಅದಕ್ಕೇ, ಒಲೆಯ ಮೇಲಿಂದ ಅನ್ನದ ಚರಿಗೆಯನ್ನು ಇಳಿಸುವಾಗಲೂ, ಆ ಹಬೆಯ ದಗೆಯಲ್ಲೂ ರೋಮಾಂಚಿತಳಾಗುತ್ತೇನೆ ನಾನು. ಸಾರಿನಲ್ಲಿ ತೇಲುತ್ತಿರುವ ಈ ಸಣ್ಣ ಮೀನುಗಳು ಹೊಟ್ಟೆ ಸೇರಿಬಿಟ್ಟರೆ ಆಯಿತು: ಚಿಮಣಿ ದೀಪ ಆರಿಸಿ ನಾವು ಮಲಗಿಬಿಡುತ್ತೇವೆ. ಹೊದ್ದ ಕಂಬಳಿಯಡಿಯಲ್ಲಿ ದೊಡ್ಡ ಮೀನೊಂದು ಎಚ್ಚರಗೊಳ್ಳುತ್ತದೆ.

ಪೇಟೆಗೆ ಹೋಗಿ ನಾಲ್ಕು ದಿವಸವಾಗಿದ್ದ ಇವರು ಇವತ್ತು ತಾನೇ ವಾಪಸಾಗಿದ್ದಾರೆ. ಬರುವಾಗ ಇನ್ನು ಮೂರ್‍ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಸಾಮಾನುಗಳನ್ನು ತಂದಿದ್ದಾರೆ. ಈ ಊರಿನವರೆಲ್ಲ ಹೀಗೇ. ಪೇಟೆಗೆ ಹೋಗುವುದೇ ಎರಡೋ-ಮೂರೋ ತಿಂಗಳಿಗೊಮ್ಮೆ. ಮೈಲಿ ನಡೆದು, ಹೊಳೆದಂಡೆ ತಲುಪಿ, ದೋಣಿ ಆಚೆ ದಡದಲ್ಲಿದ್ದರೆ 'ಕೂಹೂಯ್..' ಎಂದು ಕೂಗಿ-ಕಿರುಚಿ ಕರೆದು ಈಚೆ ದಡಕ್ಕೆ, ಅದರಲ್ಲಿ ಕೂತು ಹೊಳೆ ದಾಟಿ, ಮತ್ತೆ ಮೈಲಿ ನಡೆದು.... ದಿನಕ್ಕೊಂದೇ ಬಸ್ಸು ನಮ್ಮೂರಿಗೆ ಇರುವುದು.. ಅದು ತಪ್ಪಿದರೆ ಪೂರ್ತಿ ಹನ್ನೆರಡು ಮೈಲಿ ನಡೆಯಬೇಕು.. ಸುತ್ತ ಗುಡ್ಡ; ಮಧ್ಯೆ ಈ ಊರು..

ಈ ಬಾರಿ ಪೇಟೆಯಿಂದ ಬರುವಾಗ ಇವರು ನನಗೊಂದು ಹೊಸ ಸೀರೆ ತಂದಿದ್ದಾರೆ. ಹೊರಡುವಾಗಲೇ ಕೇಳಿದ್ದರು: 'ಪ್ಯಾಟಿಂದ ನಿಂಗೇನು ತರ್‍ಬೇಕೇ ಕಮಲೂ?' ಅಂತ. 'ನಂಗೇನೂ ಬ್ಯಾಡ' ಅಂದಿದ್ದೆ. ಆದರೂ ತಂದಿದ್ದಾರೆ. ಗೊತ್ತಿತ್ತು ನನಗೆ -ಮೊನ್ನೆ ಅಡುಗೆ ಮಾಡುತ್ತಿದ್ದ ನಾನು ಇದ್ದಕ್ಕಿದ್ದಂತೆ ಎದ್ದು ಗದ್ದೆ ಹಳುವಿಗೆ ಓಡಿ ಬಗ್ಗಿ ಕಾರಿಕೊಂಡ ಮೇಲೆ, ಮತ್ತೆ ನಾಲ್ಕೈದು ಬಾರಿ ವಾಂತಿಯಾದದ್ದು ನೋಡಿದ ಮೇಲೆ ರಾಯರ ಮುಖದಲ್ಲಿ ಮೂಡಿ ಸ್ಥಾಪಿತವಾಗಿದ್ದ ಮುಗುಳ್ನಗೆಯ ರಾಜ್ಯಭಾರ ಗಮನಿಸಿದಾಗಲೇ ಅಂದುಕೊಂಡಿದ್ದೆ- ತಂದೇ ತರುತ್ತಾರೆ ಪೇಟೆಯಿಂದ ನನಗಾಗಿ ಏನಾದರೂ ಅಂತ. ನಾನು ಚೊಚ್ಚಿಲ ಬಸುರಿ.. ಮದುವೆಯಾಗಿ ನಾಲ್ಕು ತಿಂಗಳಾಯಿತು.

ಇವರು ಹೀಗೆ ಪೇಟೆಗೆ ಹೋದಾಗಲೆಲ್ಲ ನಾನು ಇವರ ಅಣ್ಣ -ನನ್ನ ಭಾವಮೈದುನ- ನ ಮನೆಯಲ್ಲಿ ತಂಗಿರುತ್ತೇನೆ. ಅಕ್ಕ ಒಳ್ಳೆಯವಳು. ಅವಳಿಗೆ ಎರಡು ಮಕ್ಕಳು. ಮೊನ್ನೆ ಅಲ್ಲಿಗೆ ಬೆಂಗಳೂರಿನಿಂದ ಆರು ಜನ ಹುಡುಗರು ಬಂದಿದ್ದರು. ಎಲ್ಲಾ ಸಾಗರ-ಶಿರಸಿ-ಶಿವಮೊಗ್ಗದ ಕಡೆಯವರಂತೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವುದಂತೆ. ಅವರಲ್ಲೊಬ್ಬಾತ ಕಳೆದ ವರ್ಷ ಇಲ್ಲಿಗೆ ಬಂದಿದ್ದನಂತೆ. ನಮ್ಮೂರು ಎಂದರೆ ಅವನಿಗೇನೋ ಆಕರ್ಷಣೆಯಂತೆ. ತನ್ನ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಬಂದಿದ್ದ.

ನಮ್ಮೂರಿಗೆ ಹೀಗೆ ಪ್ರವಾಸಿಗರು ಬಂದುಹೋಗುವುದು ಹೊಸದಾಗಿಯೇನು ಉಳಿದಿಲ್ಲ. "ಈಗ ನಾಲ್ಕು ವರ್ಷವಾಯ್ತು, ತಿಂಗಳಾ ಎರಡ್ಮೂರು ತಂಡ ಬರ್ತದೆ ಹೀಂಗೆ.." ಅನ್ನುತ್ತಿದ್ದರು ಭಾವ. ನಮ್ಮೂರಿನ ಹಿಂದೆ, ಇದೇ ಹೀಗೇ ನಮ್ಮ ಮನೆಯ ಹಿಂದಿನಿಂದ ಗುಡ್ಡ ಹತ್ತಿ, ಮೂರ್ನಾಕು ಮೈಲಿ ನಡೆದು ಹೋದರೆ, ಅಲ್ಲೊಂದು ಜಲಪಾತವಿದೆಯಂತೆ. ನಾನಿನ್ನೂ ನೋಡಿಲ್ಲ. ನನ್ನ ಮದುವೆಯಾಗಿ ಇನ್ನೂ ನಾಲ್ಕು ತಿಂಗಳಾಯಿತು ಅಷ್ಟೇ ಅಂತ ಹೇಳಿದೆನಲ್ಲವೇ? ಇವರ ಬಳಿ ಸುಮಾರು ಸಲ ಕೇಳಿದೆ; ಆದರೆ ಒಮ್ಮೆಯೂ ನನ್ನನ್ನು ಕರೆದುಕೊಂಡು ಹೋಗುವ ಮನಸು ಮಾಡಲಿಲ್ಲ. ನನಗೆ ಒಬ್ಬಳೇ ಹೋಗಲಿಕ್ಕೆ ಭಯ. ಅಕ್ಕನನ್ನು ಕರೆದರೆ ಅವಳು ಯಾವಾಗಲೂ ಏನಾದರೂ ಕೆಲಸವಿದೆ ಅನ್ನುತ್ತಾಳೆ. ಕಾಡಿನಲ್ಲಿ ಹುಲಿ, ಕಾಡೆಮ್ಮೆಗಳು ಬೇರೆ ಇವೆಯಂತೆ. ಹೌದು, ಈಗೊಂದು ಹದಿನೈದು ದಿನದ ಹಿಂದೆ -ರಾತ್ರಿ ಹನ್ನೆರಡರ ಜಾವ- ಹುಲಿ ಗುರುಗುಡುತ್ತಿದ್ದುದನ್ನು ನಾನೇ ಕೇಳಿದ್ದೇನೆ.. ಬೆಚ್ಚಿ ಇವರನ್ನು ತಬ್ಬಿದ್ದೇನೆ...

ನಮ್ಮೂರಿಗೆ ಜಲಪಾತ ನೋಡಲಿಕ್ಕೆ ಮಾತ್ರವಲ್ಲ ಹೀಗೆ ಪ್ರವಾಸಿಗರು ಬರುವುದು.. ಅವರಿಗೆ ಈ ಊರೊಂದು ಶಾಪಗ್ರಸ್ತ ಗಂಧರ್ವರ ಸ್ವರ್ಗದಂತೆ ಭಾಸವಾಗುತ್ತದಂತೆ. ಶಾಪವೇ? ಏನು ಶಾಪ ಎಂದಿರಾ? ಈ ಊರೆಂಬ ಊರು ಇನ್ನು ಕೆಲವೇ ತಿಂಗಳಲ್ಲಿ ನಾಮಾವಶೇಷವಾಗಲಿದೆ. ಸರ್ಕಾರದವರು ಇದನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇಗೋ, ಇಲ್ಲೇ ಪಕ್ಕದಲ್ಲೇ ಎದ್ದು ನಿಂತಿದೆಯಲ್ಲಾ ಅಣು ವಿದ್ಯುತ್ ಸ್ಥಾವರ, ಆಚೆ ಪಕ್ಕ ದೊಡ್ಡದೊಂದು ಡ್ಯಾಮ್, ಅದಕ್ಕಾಗಿ ಈ ಊರೂ, ಅಕ್ಕಪಕ್ಕದ ಹಳ್ಳಿಗಳೂ ಬಲಿಯಾಗುತ್ತಿವೆ.

ಬೆಂಗಳೂರಿನಿಂದ ಬಂದ ಹುಡುಗರಿಗೆ ಭಾವ ಹೇಳುತ್ತಿದ್ದರು "ಈ ಊರಲ್ಲಿ ಮೊದಲು ನೂರ್-ನೂರೈವತ್ತು ಮನೆಗಳಿದ್ವು.. ಈಗ ಒಂದೊಂದೆ ಮನೆಗಳವರು ಬಿಟ್ ಹೋಗ್ತಾ, ನಿಧಾನಕ್ಕೆ ಊರು ಖಾಲಿಯಾಗ್ತಿದೆ.. ಸಧ್ಯಕ್ಕೆ ಒಂದು ನಲ್ವತ್ತು ಮನೆಗಳಿಗೆ ಜೀವ ಇರ್ಬವ್ದು.. ಅವೂ ಇನ್ನೊಂದು ನಾಕೈದು ತಿಂಗ್ಳೊಳಗೆ ಖಾಲಿಯಾಗ್ತಾವೆ.. ಎಲ್ಲಾ ಖಾಲಿ ಮನೆಗ್ಳು.. ನಮ್ಗೆ ನಾಟ್ಕ ಪ್ರಾಕ್ಟೀಸ್ ಮಾಡಕ್ಕೆ ಚೊಲೋ ಆಗಿದೆ.. ಹಹ್ಹ!"

"ಗೌರ್ಮೆಂಟು ಪರಿಹಾರ ಸಿಗ್ತಾ?" ಕೇಳಿದರು ಅವರಲ್ಯಾರೋ.

"ಹುಂ! ಎಕರೆಗೆ ಇಪ್ಪತ್ನಾಕು ಸಾವ್ರ ಅಂತ ಪಿಕ್ಸ್ ಮಾಡಿದಾರೆ. ನಮ್ದು ಗದ್ದೆ, ಈ ಮನೆ ಜಾಗ ಎಲ್ಲಾ ಕೊಟ್ರೆ ಒಂದು ಐವತ್ ಸಾವ್ರ ಸಿಗ್ಬಹುದೇನೋ.. ಅದನ್ನ ತಗೊಂಡು ಊರು ಬಿಡ್ಬೇಕಂತೆ. ಹುಂ! ಐವತ್ ಸಾವ್ರ ಇಟ್ಕೊಂಡು ಏನ್ ಮಾಡ್ಲಿಕ್ಕಾಗ್ತದೆ ಈಗಿನ ಕಾಲದಲ್ಲಿ..? ನಮ್ ತಾತ-ಮುತ್ತಾತನ ಕಾಲದಿಂದಲೂ ವಾಸವಾಗಿರೋ ಊರು ಇದು.. ಇದನ್ನ ಬಿಟ್ಟು ಈಗ ಏಕಾಏಕಿ ಎಲ್ಲಿಗೇಂತ ಹೋಗೋದು?"

ಹುಡುಗರು ಭಾವನ ಮಾತಿಗೆ ಹೌದೌದೆಂದು ಹೇಳಿ, ನಾಲ್ಕು ಸಮಾಧಾನದ ಮಾತು ಸೇರಿಸುತ್ತಿದ್ದರು: "ನಿಮ್ಗೆಲ್ಲ ಅಲ್ಲಿ ಕೆಲಸನಾದ್ರೂ ಕೊಡಬಹುದಿತ್ತು.." "ಅಯ್ಯೋ..! ಅಲ್ಲಿರೋರೆಲ್ಲ ತಮಿಳ್‍ನಾಡು, ಕೇರ್‍ಅಳ ಕಡ್ಯೋರು.. ಇಲ್ಲಿಯೋರಿಗೆ ಏನೂ ಕೆಲ್ಸ ಕೊಡಲ್ಲ.."

ರಾತ್ರಿ ಅವರೆಲ್ಲ ಭಾವನ ಮನೆಯ ಜಗುಲಿಯಲ್ಲೇ ಮಲಗಿದ್ದರು. ಈ ಊರಿನ ಕೊನೆಕೊನೆಯ ನೆಂಟರಂತೆ ಕಾಣಿಸುವ ಅವರಿಗೆ ನಾನು-ಅಕ್ಕ ಸೇರಿ ಅಡುಗೆ ಮಾಡಿ ಹಾಕಿದೆವು. ನಮ್ಮ ಮನೆಯ ಕುಚ್ಚುಲಕ್ಕಿ ಅನ್ನವನ್ನೇ, ಬೇಳೆಯಿಲ್ಲದೇ ಬರೀ ಕಾಯಿ ಬೀಸಿ ಹಾಕಿ ಮಾಡಿದ್ದ ಹುಳಿಯನ್ನೇ, ರುಚಿರುಚಿಯೆಂದುಕೊಂಡು ಉಂಡರು.

ನಿನ್ನೆ ಬೆಳಗ್ಗೆ ಅವರೆಲ್ಲ ಜಲಪಾತ ನೋಡಲಿಕ್ಕೆಂದು ಹೊರಟರು. ಮಧ್ಯಾಹ್ನ ಒಂದರ ಒಳಗೆ ಬರುತ್ತೇವೆ ಎಂದಿದ್ದವರು ಮೂರಾದರೂ ಬಾರದ್ದು ನೋಡಿ ಭಾವ ಆತಂಕ ಮಾಡಿಕೊಂಡಿದ್ದರು. ಅಂತೂ ಮೂರೂವರೆ ಹೊತ್ತಿಗೆ ಅವರೆಲ್ಲ ವಾಪಸು ಬಂದರು. ದಾರಿಯಲ್ಲಿ ಎರಡ್ಮೂರು ಕಡೆ ದೊಡ್ಡ ದೊಡ್ಡ ಬಂಡೆಗಳನ್ನು ಹತ್ತುವುದು ತುಂಬಾ ಕಷ್ಟವಾಯಿತೆಂದು ಹೇಳಿದರು ಭಾವನ ಬಳಿ. ಜಲಪಾತ ಅದ್ಭುತ, ಅಮರಾವತಿಯ ಸದೃಶ ಎಂದೆಲ್ಲ ಹೊಗಳಿದರು. ತಮ್ಮ ಕ್ಯಾಮೆರಾದಲ್ಲಿ ತೆಗೆದಿದ್ದ ಫೋಟೋಗಳನ್ನು ನಮಗೆಲ್ಲ ತೋರಿಸಿದರು. ಟೀವಿಯಲ್ಲಿ ಕಾಣುವಂತೆ ನೀರು ಬೀಳುವುದನ್ನೂ ತೋರಿಸಿದರು. ನನಗಂತೂ ಅದನ್ನು ನೋಡಿದ ಮೇಲೆ, ಈ ಊರು ಬಿಡುವುದರೊಳಗೆ ಒಮ್ಮೆ ಆ ಜಲಪಾತವನ್ನು ನೋಡಲೇಬೇಕೆಂಬ ಆಸೆಯಾಗಿದೆ. ಹೇಳಬೇಕು ಇವರ ಬಳಿ...

ಬಿಗಿಯಪ್ಪುಗೆಯಿಂದ ಕೊಂಚ ಸಡಿಲಿಸಿಕೊಂಡು ಹೇಳುತ್ತೇನೆ: "ಹೋಯ್.. ಮೊನ್ನೆ ಬೆಂಗ್ಳೂರಿಂದ ಆರು ಜನ ಹುಡುಗ್ರು ಬಂದಿದ್ರು.. ಭಾವನ್ ಮನೇಲಿ ಉಳ್ಕೊಂಡಿದ್ರು.. ಅವ್ರು ಜಲಪಾತದ ಫೋಟ ಎಲ್ಲ ತೋರ್ಸಿದ್ರು.. ಎಷ್ಟು ಚನಾಗದೆ! ಅಲ್ಲಾ, ಎಲ್ಲೆಲ್ಲಿಂದೆಲ್ಲ ಇದ್ನ ನೋಡಕ್ಕೇಂತ ಬರ್ತಾರೆ; ಇನ್ನೂ ನಾವೇ ನೋಡಿಲ್ಲಾಂದ್ರೆ ಹೇಗೆ?"

ಇವರು ಸಿಡುಕುತ್ತಾರೆ "ಥೋ ನಿಂದೊಳ್ಳೆ ಕಾಟ ಮಾರಾಯ್ತಿ..! ಅಲ್ಲಿ ಏನಿದೆ ಅಂತ? ಸುಮ್ನೆ ಎತ್ರದಿಂದ ನೀರು ಬೀಳ್ತದೆ ಅಷ್ಟೆ. ಅದ್ನ ನೋಡಕ್ಕೆ ಅಲ್ಲಿಗೆ ಹೋಗ್ಬೇಕಾ? ನೋಡು, ಅದೇ ನೀರೇ ಇಲ್ಲಿಗೆ ಹರಿದು ಬರೋದು.. ನೀನು ದಿನಾ ಕುಡಿಯೋದು ಅದೇ ನೀರು.. ಅಲ್ದೇ ನೀವು ಹೆಂಗಸ್ರೆಲ್ಲ ಹೋಗೋಂತ ದಾರೀನೇ ಅಲ್ಲ ಅದು.. ಆ ದೊಡ್‍ದೊಡ್ ಬಂಡೇನೆಲ್ಲ ಹತ್ತಿಳ್ದು ನೀನು ಹೋಗ್ಯಾತು ಉದ್ಧಾರ.. ಅದೂ ಅಲ್ದೇ ಈ ಸ್ಥಿತೀಲಿ.." ಎನ್ನುತ್ತಾ ನನ್ನ ಹೊಟ್ಟೆಯ ಮೇಲೆ ಕೈಯಾಡಿಸಿದರು. ನಾನು ಮಗ್ಗುಲಾದೆ.

ನನಗ್ಯಾಕೋ ಇವತ್ತು ನಿದ್ರೆಯೇ ಬರುತ್ತಿಲ್ಲ.. ಆ ಹುಡುಗರೇನೋ ಸರಿಯಾಗಿ ಉಂಡು, ಇಲ್ಲಿಯ ಎಲ್ಲವನ್ನೂ ಹೊಗಳಿ, ನಮ್ಮ ಪರಿಸ್ಥಿತಿ-ಭವಿಷ್ಯದ ಬಗ್ಗೆ ಎರಡು ವಿಷಾದದ ಮಾತಾಡಿ, ನಮ್ಮ ಫೋಟೋಗಳನ್ನೂ ತೆಗೆದುಕೊಂಡು, ಟಾಟಾ ಮಾಡಿ, ದೋಣಿ ಹತ್ತಿ ನಡೆದುಬಿಟ್ಟರು. ಇಷ್ಟು ಹೊತ್ತಿಗೆ ನಮ್ಮೂರು ಅವರಿಗೆ ಮರೆತೇ ಹೋಗಿರಬಹುದು. ಅಥವಾ ಗೆಳೆಯರ ಬಳಿ ಹೇಳಿಕೊಂಡು ನೆನಪನ್ನೇ ಕಮ್ಮಗೆ ಮೆಲ್ಲುತ್ತಿರಬಹುದು. ಅಥವಾ ನಿದ್ರೆ ಹೋಗಿರಬಹುದು. ಅವರ್‍ಯಾರಿಗೂ ಭವಿಷ್ಯದ ಬಗ್ಗೆ, ನೆಲೆಯ ಬಗ್ಗೆ ಚಿಂತೆಯಿಲ್ಲ.. ಈ ಊರು ಅವರಿಗೊಂದು ಪ್ರವಾಸೀ ಸ್ಥಳ; ಅಷ್ಟೇ. ಊಟ ಮಾಡುವಾಗ ಅವರಲ್ಲೊಬ್ಬ ಹೇಳುತ್ತಿದ್ದ, ಪಕ್ಕದವನಿಗೆ: "ಬದುಕು ಸುಂದರ, ಅಲ್ಲವೇ ದೋಸ್ತಾ?" ಆದರೆ.... ನಮ್ಮ ಬದುಕು?

ಅಷ್ಟಿಷ್ಟು ಓದಿಕೊಂಡಿರುವ, ತೀರಾ ದೊಡ್ಡದಲ್ಲದಿದ್ದರೂ ಸಣ್ಣ ಪೇಟೆಯಲ್ಲಿ ಹುಟ್ಟಿ ಬೆಳೆದಿರುವ ನನ್ನನ್ನು, ಇಂತಹ ಮುಳುಗುತ್ತಿರುವ ಹಳ್ಳಿಯೊಂದಕ್ಕೆ ಮದುವೆ ಮಾಡಿಕೊಡುವ ಮುನ್ನ ಅಪ್ಪ ಯೋಚಿಸಿರಲಿಲ್ಲವೆಂದಲ್ಲ.. ಒಂದು ಬೆಂಕಿಪೊಟ್ಟಣ ಬೇಕೆಂದರೂ ಹನ್ನೆರಡು ಮೈಲಿ ಸಾಗಬೇಕು ಇಲ್ಲಿ. ಕರೆಂಟೇ ಇಲ್ಲ; ಚಿಮಣಿ ದೀಪ. ಆದರೆ ಅಪ್ಪನ ಯೋಜನೆಯೇ ಬೇರೆಯಿತ್ತು: "ಹೆಂಗಿದ್ರೂ ನಮ್ಮೊಬ್ಳೇ ಮಗಳು ನೀನು.. ಮನೆಯಾಳ್ತನ.. ಇನ್ನು ಮೂರ್ನಾಕು ತಿಂಗಳು ಅಷ್ಟೇ. ಆಮೇಲೆ ಎಲ್ಲಾ ಆ ಹಳ್ಳೀನ ಬಿಟ್ಟು ಹೊರಡ್ತಾರೆ. ನೀನೂ-ನಿನ್ ಗಂಡ ಇಲ್ಲೇ ಬಂದು ಇರುವಂತ್ರಿ. ಪರಿಹಾರದ ದುಡ್ಡಲ್ಲಿ ನಿನ್ ಗಂಡ ಒಂದು ಅಂಗಡಿ ಹಾಕ್ಕೊಳ್ಲಿ. ಜೀವನಕ್ಕೇನೂ ತೊಂದ್ರೆ ಇಲ್ಲ" ನನಗೂ ಈ ಯೋಜನೆ ಸರಿಯೆನಿಸಿತ್ತು. ದೂರದ ನೆಂಟರದೇ ಸಂಬಂಧ. ಅಲ್ಲದೇ ನಾನು ಹುಟ್ಟಿದ ಮನೆಯಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇರಬಹುದಲ್ಲಾ ಎಂಬ ಖುಷಿ ಬೇರೆ.

ಆದರೆ ಇವರ ಸ್ವಾಭಿಮಾನವೇ ಅದಕ್ಕೀಗ ಅಡ್ಡಿಯಾಗಿದೆ. ಹೆಂಡತಿಯ ಮನೆಯಲ್ಲಿರುವುದಕ್ಕೆ ಇವರಿಗೆ ಅವಮಾನವಂತೆ. ಬೇರೆಲ್ಲಿಗಾದರೂ ಹೋಗಿ ಹೇಗಾದರೂ ಬದುಕೋಣ ಎನ್ನುತ್ತಿದ್ದಾರೆ. ಈ ಊರವರೆಲ್ಲ ಸೇರಿ ಆಗೀಗ ನಾಟಕ ಆಡುತ್ತಾರೆ. ಅದರಲ್ಲಿ ಇವರೂ ಪಾತ್ರ ಮಾಡುತ್ತಾರೆ. ಆ ನಾಟಕಗಳಲ್ಲಿ ಆಡುವ ನಾಯಕನ ಆದರ್ಶದ ಮಾತುಗಳನ್ನೇ ತಮಗೂ ಆರೋಪಿಸಿಕೊಂಡುಬಿಟ್ಟಿದ್ದಾರೆ ಇವರು.. ನೆಲೆಯೇ ನಾಶವಾಗುತ್ತಿದ್ದರೂ ಸ್ವಾಭಿಮಾನ ಬಿಡದು. ಎಲ್ಲಿಗಾದರೂ ಎಂದರೆ ಎಲ್ಲಿಗೆ ಹೋಗುವುದು? ಹೋಗಿ ಏನು ಮಾಡುವುದು? ಪುಸಲಾಯಿಸಿ ಕೇಳಿದರೆ ಸುಮ್ಮನೆ ಸಿಡುಕುತ್ತಾರೆ.

ಯಾವುದೋ ಊರುಗಳವರಿಗೆ ಕರೆಂಟು ಕೊಡುವ ಭರದಲ್ಲಿ ನಾವು ನಮ್ಮ ಊರನ್ನು ಕಳೆದುಕೊಳ್ಳುತ್ತಿದ್ದೇವೆ... ನಮ್ಮ ಮನೆಗಳ ಚಿಮಣಿ ದೀಪಗಳನ್ನು ನಂದಿಸಿ, ಅದನ್ನೂ ಚೀಲದೊಳಗೆ ತುಂಬಿಕೊಂಡು ಹೊರಡಬೇಕಿದೆ ನಾವು... ಎಲ್ಲಿಗೆ? ಯೋಚಿಸಿದಷ್ಟೂ ಕತ್ತಲೆ ದಟ್ಟವಾಗುತ್ತದೆ.. ಇವರು ನನ್ನನ್ನು ತಮ್ಮ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತಾರೆ.. ನಾನು ಕಳೆದುಹೋಗುತ್ತೇನೆ.

ನೈಜ ಮತ್ತು ಕಾಲ್ಪನಿಕ ಕತೆಗಳು

ನನ್ನ 'ಬಿರ್‌ಗೇಡ್' ಕತೆ ಮುಂದುವರೆಯುವುದನ್ನು ನೀವೆಲ್ಲ ಕಾಯುತ್ತಿದ್ದಿರಬಹುದು. ನಾನೂ ಮುಂದುವರೆಸೋಣ ಅಂದುಕೊಂಡೆ. ಬರೆದೂ ಬರೆದೆ. ಆದರೆ ಯೋಚಿಸಿದಂತೆಲ್ಲ ನನ್ನ ಕಲ್ಪನೆಯಲ್ಲಿ ಆ ಕತೆ ಮುಂದುವರೆಯುತ್ತಲೇ ಇದೆ..! ಅದೆಲ್ಲಾದರೂ ಕಾದಂಬರಿ-ಗೀದಂಬರಿ ಆಗಿಬಿಟ್ಟೀತೇನೋ ಎಂಬ ಭಯ ನನಗೆ!

ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಕಟ್ಟಲ್ಪಡುತ್ತಿರುವುದು ಈ 'Brigade Gateway' ಎಂಬ ದೊಡ್ಡ apartment building. ಆವತ್ತೊಂದು ಶನಿವಾರ ಸಂಜೆ ಬೇರೇನೂ ಕೆಲಸವಿಲ್ಲದೆ, ಕಿಲೋಮೀಟರುಗಟ್ಟಲೆ ಅಗಲಕ್ಕಿರುವ ಅದರ ಸುತ್ತ, ಹೀಗೇ ಸುಮ್ಮನೆ ಒಂದು walk ಹೋಗಿಬಂದೆ. ಹಾಗೆ ಅದನ್ನು ಸುತ್ತುತ್ತಿದ್ದಾಗ ಮೂಡಿದ ಕತೆ ಅದು. ಅದು ಹೇಗೆ ಮೂಡಿತೋ ಎಷ್ಟು ಮೂಡಿತೋ ಅಷ್ಟನ್ನೇ ಮನೆಗೆ ಬಂದವನು ಬರೆದಿಟ್ಟುಬಿಟ್ಟೆ. ನನಗ್ಯಾಕೋ ಅದು incomplete ಅಂತ ಅನ್ನಿಸಲೇ ಇಲ್ಲ. ಹೀಗಾಗಿ ಅದನ್ನು ಮುಂದುವರೆಸಲಿಕ್ಕೆ ಹೋಗಲೇ ಇಲ್ಲ. ಬರೆದದ್ದನ್ನು ಹಾಗೇ ಟೈಪ್ ಮಾಡಿ ಬ್ಲಾಗಿಗೂ ಪೋಸ್ಟ್ ಮಾಡಿಬಿಟ್ಟೆ. ಆದರೆ ನಿಮ್ಮಲ್ಲನೇಕರು 'ಇದು incomplete ಅನ್ನಿಸ್ತಿದೆ' ಎನ್ನತೊಡಗಿದ ಮೇಲೆ ನನಗೂ ಹಾಗೇ ಎನಿಸಲು ಶುರುವಾಯಿತು! ಸರಿ, ನಾನು ಕಲ್ಪನೆಯಲ್ಲೇ ಆ ಕತೆಯನ್ನು ಬೆಳೆಸತೊಡಗಿದೆ.

ಹೇಗೆ ಬೇಕಾದರೂ ಬೆಳೆಸಬಹುದಿತ್ತು ನಾನು. ಪೂರ್ಣಿಮಾ ಬೆಂಗಳೂರಿಗೆ ಬಂದದ್ದು, ಅವಳಿಗೆ ನಗರದ ಏಕತಾನತೆ -ಇಷ್ಟು ದೊಡ್ಡ ಬಂಗಲೆಯಲ್ಲಿ ತಾನೊಬ್ಬಳೇ ಇರುವುದು- ಬೇಸರ ಬರುವುದು, ಒಂದು ದಿನ ಅಚಾನಕ್ಕಾಗಿ ಬಾಲ್ಯವೇ ಮರುಕಳಿಸಿದಂತೆ ನಾಗರತ್ನ ಅವಳ ಮನೆಗೆ ಬಂದದ್ದು, ಹಳೆಯ ನೆನಪುಗಳು ಮರುಕಳಿಸಿದ್ದು, ನಾಗರತ್ನಳ ಬದುಕಿಗೂ ತನ್ನ ಬದುಕಿಗೂ ಇರುವ ಕೇವಲ ಸಿರಿವಂತಿಕೆಯಲ್ಲಿನ ವ್ಯತ್ಯಾಸವನ್ನು ಬ್ರಿಗೇಡ್ ಗೇಟ್‌ವೇ ಅಪಾರ್ಟ್‍ಮೆಂಟಿನ ಗೋಡೆಗಳು ಪಿಸುಗುಡುವುದು... ಎಲ್ಲವನ್ನೂ ಬರೆಯಬಹುದಿತ್ತು. ಗಂಡನ 'party daily' ಸಂಸ್ಕೃತಿಯನ್ನು ಸಹಿಸದ ಪೂರ್ಣಿಮಾ, ಕುಡಿದು ಬರುವ ಗಂಡನ ಬಗ್ಗೆ ಸಿಟ್ಟು ತೋರುವ ನಾಗರತ್ನ... ಪೂರ್ಣಿಮಾಳ ಗಂಡ ಅಮೇರಿಕಾಗೆ ಹೋಗುವುದನ್ನೂ, ನಾಗರತ್ನಳ ಗಂಡ ಬೇರೆ ಯಾರೊಂದಿಗೋ ಸಂಬಂಧ ಬೆಳೆಸುವುದನ್ನೂ... ಹೇಗೆ ಬೇಕಾದರೂ ಬರೆಯಬಹುದಿತ್ತು.

ಅಷ್ಟೆಲ್ಲ ಬರೆದರೂ ಅದು 'complete' ಆಗುತ್ತಿತ್ತೇ? I doubt! 'ಕತೆ, ಹರಿಯುವ ನದಿಗೆ ಒಂದು ಚೌಕಟ್ಟು ಹಾಕುತ್ತದೆ' ಎಂದಿದ್ದರು ಯಾರೋ.. ಯಾರು ಜೋಗಿಯಾ? ಚಿತ್ತಾಲರಾ? ತೇಜಸ್ವಿಯಾ? ಯಾರೋ. ನಿಜ, ಯಾವ ಕತೆಯೂ ಮುಗಿಯುವುದಿಲ್ಲ. ನಾವೇ ಮುಗಿಸಬೇಕು. ಅದು ಕಾಲ್ಪನಿಕ ಕತೆಗಳ ದುರಂತ ಮತ್ತು ಲಾಭ.

ಆದರೆ ನೈಜ ಕತೆಗಳು ಕಲ್ಪನೆಯ ಕತೆಗಳಂತಲ್ಲ. ಇಲ್ಲಿ ವಾಸ್ತವಕ್ಕೆ ಅಪಚಾರವಾಗಬಾರದು. ಗೊತ್ತಿಲ್ಲದ ವಿವರಗಳಿಗೆ ಅಷ್ಟಿಷ್ಟು ಕಲ್ಪನೆಯನ್ನು ಬೆರೆಸಿದರೂ ಅದು ಸತ್ಯಕ್ಕೆ ದೂರವಾಗಬಾರದು. ಮತ್ತು ಬರೆದದ್ದು 'ವರದಿ'ಯಾಗದೇ 'ಕಥೆ'ಯಾಗಬೇಕು! ಕಷ್ಟ!

ಕಳೆದ ವಾರ ನಾವು ಆರು ಹುಡುಗರು ಮುಗಿದುಹೋಗುತ್ತಿರುವ ಹಳ್ಳಿಯೊಂದಕ್ಕೆ ಚಾರಣ ಹೋಗಿದ್ದೆವು. ಪಕ್ಕದಲ್ಲಿರುವ ಅಣು ವಿದ್ಯುತ್ ಸ್ಥಾವರ ಮತ್ತು ಡ್ಯಾಮ್ ಒಂದರ ಭದ್ರತಾ ದೃಷ್ಟಿಯಿಂದ ಸರ್ಕಾರ ಆ ಹಳ್ಳಿಯನ್ನು ವಶಪಡಿಸಿಕೊಳ್ಳುತ್ತಿದೆ. ಇನ್ನು ಐದಾರು ತಿಂಗಳೊಳಗೆ ಆ areaದ ಸುತ್ತ ಒಂದು compound ಏಳುತ್ತದೆ. ಅಲ್ಲಿಗೆ ಸಾರ್ವಜನಿಕ ಪ್ರವೇಶ ನಿಶೇಧವಾಗುತ್ತದೆ. ಅಲ್ಲಿನ ಮುಗ್ಧ ಜನಗಳ ಬದುಕು ಎತ್ತಂಗಡಿಯಾಗುತ್ತಿದೆ. ಅಲ್ಲಿನ ಸ್ನಿಗ್ಧ ಸೌಂದರ್ಯ ಮುಚ್ಚಿಹೋಗಲಿದೆ. ಜಲಪಾತದ ಹರಿವು ಮಾತ್ರ ಅನವರತವಾಗಿ ಉಳಿಯಲಿದೆ.

ಅದರ ಸುತ್ತ ಹೆಣೆದ ಕತೆಯಲ್ಲದ ಕತೆ ಈಗ ನಿಮ್ಮ ಮುಂದಿದೆ. ಇದೂ ನಿಮಗೆ incomplete ಅನ್ನಿಸಿದರೆ, I am sorry! ತಲುಬು ತೀರಾ ಕಾಡಿದರೆ 'ಬಿರ್‌ಗೇಡ್' ಕತೆಯ ಮುಂದುವರೆದ ಭಾಗವನ್ನು ಯಾವತ್ತಾದರೂ post ಮಾಡುತ್ತೇನೆ. ಆದರೆ 'ಕಮಲ ಹೇಳಿದ ಕತೆ'ಯನ್ನು ಮಾತ್ರ ನಾನು ಮುಂದುವರೆಸಲಾರೆ. ಏಕೆಂದರೆ, ಇದನ್ನು ಹೇಗೆ ಮುಂದುವರೆಸಬೇಕೆಂದು ನನಗೆ ಗೊತ್ತಿಲ್ಲ. ಏಕೆಂದರೆ, ಇದು ಹೇಗೆ ಮುಂದುವರೆಯುತ್ತದೆಂದು ಅವರಿಗೂ ಗೊತ್ತಿಲ್ಲ!

Thursday, January 17, 2008

ಬಿರ್‌ಗೇಡ್

ಪಿಯೂಸಿ ಮುಗಿಸಿದ ಮೇಲೆ ಮುಂದೆ ಓದದೇ ಮನೆಯಲ್ಲೇ ಉಳಿದಿದ್ದ ಮಗಳು ಪೂರ್ಣಿಮಾಳನ್ನು ಕಾಲಿಗೊರಗಿಸಿಕೊಂಡು ಅವಳ ಬಿಚ್ಚಿದ ಕೂದಲ ನಡುವೆ ಹೇನು ಹುಡುಕುತ್ತಾ ಹಿತ್ಲಕಡೆ ಮೆಟ್ಟಿಲ ಮೇಲೆ ಕೂತಿದ್ದ ಶರಾವತಿ, ಓಡಿಹೋಗುತ್ತಿದ್ದ ದೊಡ್ಡದೊಂದು ಗೂಳಿ ಹೇನನ್ನು ಹೆಕ್ಕಿ ತನ್ನ ಎಡಗೈ ಹೆಬ್ಬೆರಳ ಉಗುರ ಮೇಲಿಟ್ಟುಕೊಂಡು, ಬಲಗೈ ಹೆಬ್ಬೆರಳ ಉಗುರಿನಿಂದ 'ಚಟ್' ಎನಿಸುತ್ತಾ ಒರೆಯುವಾಗ "ಅಮಾ ಎಲ್ಲಿ ಎಲ್ಲಿ? ಎಷ್ಟು ದೊಡ್ಡದು?" ಎಂದು ಕೇಳಿದಳು ಪೂರ್ಣಿಮಾ. "ನೋಡೋದೆಂತಿದ್ದು ಅದ್ರಲ್ಲಿ? ಗೂಳಿ ಹೇನು! ಆ ಮೇಸ್ತ್ರಿ ಮಗಳು ನಾಗ್ರತ್ನನ ಜೊತೆ ಸೇರಡ ಅಂದ್ರೆ ಕೇಳದಿಲ್ಲೆ.. ಅವ್ವೆಲ್ಲ ವಾರಕ್ಕೊಂದು ಸಲ ಸ್ನಾನ ಮಾಡೋದು.. ಹೇನಾಗ್ದೆ ಇರ್ತಾ? ನೀನು ಅವಳ ಜೊತೆ ಸುತ್ತಿದ್ರೆ ಅವಳ ತಲೆ ಹೇನೆಲ್ಲ ನಿನ್ ತಲೇಗೆ ಸೇರ್ಕ್ಯಳ್ತು ಅಷ್ಟೆ.. ಇನ್ನು ನಾಕು ತಿಂಗ್ಳಾದ್ರೆ ಮದ್ವೆ ನಿಂಗೆ.. ಸ್ವಲ್ಪಾನೂ ಜವಾಬ್ದಾರಿ ಇಲ್ಲೆ" ಬೈದಳು ಅಮ್ಮ. ಮಗಳು ಮುಖ ಊದಿಸಿಕೊಂಡಳು.

ನಾಗರತ್ನಳ ಜೊತೆ ಅದು ಹೇಗೆ ತಾನೆ ಸೇರದಿರುವುದು? ...ಪೂರ್ಣಿಮಾಗೆ ತಿಳಿಯುವುದಿಲ್ಲ. ಮೊದಲಿನಿಂದಲೂ ಅವರಿಬ್ಬರೂ ಫ್ರೆಂಡ್ಸು. ಅವರಿಬ್ಬರೂ ಒಟ್ಟಿಗೇ ಶಾಲೆಗೆ ಹೋಗಿದ್ದು, ಒಟ್ಟಿಗೇ ಓದಿದ್ದು, ಒಟ್ಟಿಗೇ ಆಡಿದ್ದು, ಒಟ್ಟಿಗೇ ಉಂಡದ್ದು, ಒಟ್ಟಿಗೇ ಬೆಳೆದದ್ದು ಮತ್ತು, ದೊಡ್ಡವರಾದಮೇಲೆ ತಮ್ಮ ಯೌವನದ ಗುಟ್ಟುಗಳನ್ನು ಪರಸ್ಪರ ಹಂಚಿಕೊಂಡದ್ದು, ನಕ್ಕಿದ್ದು, ಕನಸು ಕಂಡಿದ್ದು. ಪೂರ್ಣಿಮಾ ನಾಗರತ್ನಳ ಮನೆಗೆ ಹೋದಾಗ ನಾಗರತ್ನಳ ಅಮ್ಮ ಬಂಗಾರಮ್ಮ ಇವಳಿಗೆ ಉಪ್ಪು ಹಾಕಿ ಬೇಯಿಸಿದ ಗೆಣಸು ಕೊಡುತ್ತಾಳೆ.. ಅದು ಪೂರ್ಣಿಮಾಗೆ ಇಷ್ಟ.. ಅದಕ್ಕಿಂತಲೂ, ಬಂಗಾರಮ್ಮ ಹೆರೆದು ಅಂಗಳದಲ್ಲಿ ಒಣಗಲು ಹಾಕಿರುವ ಹುಳಿಹುಳಿ ವಾಟೆಕಾಯಿಯ ಸಿಪ್ಪೆ ಎಂದರೆ ಪೂರ್ಣಿಮಾಗೆ ಪ್ರಾಣ.. ಅದಲ್ಲದೆ, ನಾಗರತ್ನ ಅಡುಗೆಮನೆಯಿಂದ ಕದ್ದು, ಇಷ್ಟೇ ಮೆಣಸಿನಪುಡಿ, ಇಷ್ಟೇ ಉಪ್ಪು ಬೆರೆಸಿ, ಒಳ್ಳುಕಲ್ಲಿನ ಮೇಲಿಟ್ಟು ಜಜ್ಜಿ ತಂದುಕೊಡುತ್ತಿದ್ದ ಹುಣಸೇಹಣ್ಣಿನ ಚೂರುಗಳು ಪೂರ್ಣಿಮಾಗೆ ನಾಗರತ್ನಳ ಮೇಲೆ ಮುದ್ದು ಮಾಡುವಷ್ಟು ಪ್ರೀತಿಯನ್ನು ತರುತ್ತಿದ್ದವು. ಅವಳ ಸಂಗದಿಂದ ತಲೆಯಲ್ಲಿ ಹೇನಾಗುತ್ತದೆ ಎಂಬ ಒಂದೇ ಕಾರಣಕ್ಕೆ ಇವನ್ನೆಲ್ಲ ಕಳೆದುಕೊಳ್ಳಲಿಕ್ಕೆ ಪೂರ್ಣಿಮಾ ತಯಾರಿರಲಿಲ್ಲ.

ಅವಳ ಅಪ್ಪ ರಘುರಾಮ, ಮೇಸ್ತ್ರಿಯಾಗಿ ಈ ಊರಿಗೆ ಬಂದದ್ದಂತೆ. ಪೂರ್ಣಿಮಾಳ ಅಪ್ಪ ಕೃಷ್ಣಮೂರ್ತಿ ಶಾಸ್ತ್ರಿಗಳೇ ಅವನನ್ನು ಕರೆತಂದದ್ದು. ಪುರೋಹಿತಿಕೆಗೆಂದು ಕರ್ಕಿಕೊಪ್ಪಕ್ಕೆ ಹೋಗಿದ್ದ ಕೃಷ್ಣಮೂರ್ತಿ ಶಾಸ್ತ್ರಿಗಳು, ಅಲ್ಲಿ ತಮ್ಮ ಖಾಯಂ ಪುರೋಹಿತಿಕೆಯ ಮನೆಯೊಂದರ ಗೃಹಪ್ರವೇಶ ಮಾಡಿಸಿದವರು, ಆ ಮನೆ ಕಟ್ಟಿದವರಾರೆಂದು ವಿಚಾರಿಸಿ, ರಘುರಾಮ ಮೇಸ್ತ್ರಿಯನ್ನು ತಮಗೊಂದು ಹೊಸ ಮನೆ ಕಟ್ಟಿ ಕೊಡುವಂತೆ ಊರಿಗೆ ಕರೆತಂದಿದ್ದರು. ಅವನ ಮಗಳು ನಾಗರತ್ನಳೊಂದಿಗೆ ಪೂರ್ಣಿಮಾ ಕುಂಟಲ್ಪೆ, ಅನ್ನ-ಆಸೆ, ಹುಲಿ-ಹಸು ಆಟಗಳನ್ನು ಆಡುತ್ತಿದ್ದಳು. ಮರಳ ರಾಶಿಯಲ್ಲಿ ಇಬ್ಬರೂ ಸೇರಿ ಗುಬ್ಬಚ್ಚಿ ಗೂಡು ಮಾಡುತ್ತಿದ್ದರು. ಪೂರ್ಣಿಮಾಳನ್ನು ಶಾಲೆಗೆ ಸೇರಿಸುವಾಗ ಶರಾವತಿ ರಘುರಾಮನಿಗೆ ಹೇಳಿ ನಾಗರತ್ನಳನ್ನೂ ಒಟ್ಟಿಗೇ ಸೇರಿಸಿದ್ದಳು.

ಮೊದಲು ಒಂದು ಸಣ್ಣ ಬಿಡಾರ ಹೂಡಿಕೊಂಡು ವಾಸವಾಗಿದ್ದ ರಘುರಾಮ, ಕೃಷ್ಣಮೂರ್ತಿ ಶಾಸ್ತ್ರಿಗಳ ಮನೆ ಕಟ್ಟಿಯಾದಮೇಲೂ ಒಂದಾದ ಮೇಲೊಂದರಂತೆ ಕೆಲಸಗಳು ಸಿಗತೊಡಗಿ, ಇಲ್ಲೇ ನೆಲೆಯೂರುವಂತಾಯಿತು. ಬಿಡಾರದ ಜಾಗದಲ್ಲೊಂದು ಗಟ್ಟಿ ಮನೆ ಎದ್ದು ನಿಂತಿತು. ಊರವರೂ ಯಾರೂ ಆಕ್ಷೇಪಿಸಲಿಲ್ಲ. ಮನೆ, ಗೋಬರ್ ಗ್ಯಾಸ್ ಡ್ಯೂಮ್ ಕಟ್ಟುವುದು, ಇತ್ಯಾದಿಗಳಲ್ಲಿ ಚಾಣಾಕ್ಷತೆ ಪಡೆದ ರಘುರಾಮ ಸುತ್ನಾಲ್ಕೂರುಗಳಲ್ಲಿ ಹೆಸರು ಮಾಡಿದ. ಸಾಗರ ಪೇಟೆಯಲ್ಲಿ ಎರಡು ದೊಡ್ಡ ಕಟ್ಟಡಗಳನ್ನು ತಾನೇ ಮುಖ್ಯ ಮೇಸ್ತ್ರಿಯಾಗಿ ನಿಂತು ಕಟ್ಟಿಸಿದ ಮೇಲೆ ಅವನ ದೆಸೆಯೇ ಬದಲಾಗಿಹೋಯಿತು. ಈಗ್ಗೆ ಎಂಟೊಂಭತ್ತು ವರ್ಷಗಳ ಹಿಂದೆ ಯಾರದೋ ಸಂಪರ್ಕ ಸಿಕ್ಕು ಬೆಂಗಳೂರಿಗೆ ಹೋದವನು ಒಂದು ವರ್ಷ ಮನೆಗೇ ಬಂದಿರಲಿಲ್ಲ. ಎಲ್ಲಿಗೆ ಹೋದ ಏನಾದ ಅಂತ ತಿಳಿಯದೇ ಕಂಗಾಲಾಗಿದ್ದ ಬಂಗಾರಮ್ಮನಿಗೆ ಒಂದು ತಿಂಗಳಾದಮೇಲೆ, ಡೈರೆಕ್ಟ್-ಬೆಂಗಳೂರು ಬಸ್ಸಿನ ಕಂಡಕ್ಟರ್ ಶಿವರಾಮು ಸುದ್ದಿ ಮುಟ್ಟಿಸಿದ ಮೇಲೇ ತಿಳಿದದ್ದು ಗಂಡ ಬೆಂಗಳೂರಿನಲ್ಲಿ ಸುರಕ್ಷಿತವಾಗಿದ್ದಾನೆ, ಈಗ ದೊಡ್ಡ ದೊಡ್ಡ ಕಾಂಟ್ರಾಕ್ಟರುಗಳ ಕೈಕೆಳಗೆ ಕೆಲಸ ಮಾಡುತ್ತಿದ್ದಾನೆ ಎಂದು. ದುಡ್ಡು ಮಾಡಿಕೊಂಡು ಚಿನ್ನ-ಬೆಳ್ಳಿ ಹೊತ್ತು ತರುವ ಗಂಡನಿಗಾಗಿ ಬಂಗಾರಮ್ಮ, ಹಣ್ಣು-ಚಾಕ್ಲೇಟು-ಹೊಸ ಅಂಗಿ ತರುವ ಅಪ್ಪನಿಗಾಗಿ ನಾಗರತ್ನ ಕಾಯತೊಡಗಿದರು.

ಒಂದು ವರ್ಷವಾದಮೇಲೆ ರಘುರಾಮ ಊರಿಗೆ ಮರಳಿದ್ದೇನೋ ನಿಜ; ಆದರೆ ಹೆಂಡತಿ-ಮಗಳ ಚಿನ್ನ-ಬಟ್ಟೆಯ ಕನಸುಗಳು ಮಾತ್ರ ನನಸಾಗಲೇ ಇಲ್ಲ. 'ರಘುರಾಮ ಸರಿಯಾಗಿ ದುಡ್ಡು ಮಾಡಿ ಬ್ಯಾಂಕಿನಲ್ಲಿಟ್ಟಿರಬಹುದು, ಚಿನ್ನ-ಬಟ್ಟೆ ಎಂದೆಲ್ಲ ಪ್ರದರ್ಶಿಸಿದರೆ ಊರವರಿಗೆ ಹೊಟ್ಟೆಕಿಚ್ಚಾಗಬಹುದೆಂದು ತಂದಿಲ್ಲವೇನೋ' ಎಂದೆಲ್ಲ ಊರವರು ಮಾತಾಡಿಕೊಂಡರು. ಅಕ್ಕಿ ಕೇರಿಕೊಡಲು ಬಂದ ಬಂಗಾರಮ್ಮ ಮಾತ್ರ ಶರಾವತಿಯ ಬಳಿ 'ನಮ್ಮನ್ಯೋರಿಗೆ ದುಡ್ದಿದ್ದೆಲ್ಲ ಉಣ್ಣಕ್ಕೆ, ಕುಡಿಯಕ್ಕೆ, ಬೀಡಿಗೇ ಹೋಯ್ತದಂತೆ.. ಬೆಂಗ್ಳೂರು ಅಂದ್ರೇನು ತಮಾಸೇನಾ? ಅಲ್ಲಿ ಎಲ್ಲಾದಕ್ಕೂ ಕಾಸು ಬಿಚ್ಬೇಕು' ಎಂದಿದ್ದಳು.

ಈಗ ಒಂದು ವರ್ಷದ ಹಿಂದೆ ರಘುರಾಮ ಊರಿಗೆ ಬಂದಿದ್ದಾಗ ಬೆಂಗಳೂರಿನ ರಾಜಾಜಿನಗರದಲ್ಲಿ ತಾವೊಂದು ದೊಡ್ಡ ಅಪಾಲ್ಟ್‍ಮೆಂಟ್ ಕಟ್ಟುತ್ತಿರುವುದಾಗಿ ಹೇಳಿಕೊಂಡಿದ್ದ. ಅದೆಂಥದು ಅಪಾಲ್ಟ್‍ಮೆಂಟು ಎಂದು ಪೂರ್ಣಿಮಾ ನಾಗರತ್ನಳ ಬಳಿ ಕೇಳಿದಾಗ 'ಅದೇನೋ ನಂಗ್ ಸರಿಯಾಗಿ ಗೊತ್ತಿಲ್ಲ ಕಣೇ.. ಬಿರ್‌ಗೇಡ್ ಅಂತ ಹೆಸ್ರಂತೆ.. ದೊಡ್ಡ ಮನೆಯಂತೆ.. ಮನೆ ಅಂದ್ರೇನು, ಒಂದು ಬಿಲ್ಡಿಂಗ್ನಾಗೆ ಮೂರ್ನಾಕು ಸಾವ್ರ ಮನೆ ಇದಾವಂತೆ.. ಹತ್ತೆಕರೆ ಜಾಗದಲ್ಲಿ ಕಟ್ತಿದಾರಂತೆ.. ಅದ್ರಲ್ಲೇ ಇಸ್ಕೂಲು, ಸಿನ್ಮಾ ಟಾಕೀಸು, ದೊಡ್ ದೊಡ್ ಅಂಗಡಿ ಎಲ್ಲಾ ಇದಾವಂತೆ.. ಸಾವ್ರಾರು ಜನ ಹಗ್ಲೂ-ರಾತ್ರಿ ಕೆಲಸ ಮಾಡ್ತಿದಾರಂತೆ' ಎಂದೆಲ್ಲ ಇಷ್ಟು ದೊಡ್ಡದಾಗಿ ಕಣ್ಣರಳಿಸುತ್ತಾ ಹೇಳಿದ್ದಳು ನಾಗರತ್ನ. 'ಅಷ್ಟು ದೊಡ್ಡ ಮನೆಯಲ್ಲಿ ಯಾರೇ ಇರ್ತಾರೆ ನಾಗಿ?' ಎಂದ ಪೂರ್ಣಿಮಾಗೆ ನಾಗರತ್ನ, 'ಅಲ್ಲೆಲ್ಲ ತುಂಬಾ ಜನ ಸಾವ್ಕಾರು ಇದಾರಲ್ವಾ, ಅವ್ರೇ ಯಾರೋ ಇರ್ಬೋದು' ಎಂದಿದ್ದಳು. 'ನಿಮ್ಮಪ್ಪ ಇನ್ನೂ ಎಷ್ಟು ವರ್ಷ ಬೆಂಗ್ಳೂರಲ್ಲೇ ಇರ್ತಾರಂತೆ?' ಎಂದು ಪೂರ್ಣಿಮಾ ಕೇಳಿದ್ದಕ್ಕೆ, 'ಬರ್ತಾನಂತೆ ಕಣೇ.. ಇನ್ನೊಂದು ಐದಾರ್ ವರ್ಷ ಅಲ್ಲಿದ್ದು ಆಮೇಲೆ ಇಲ್ಲಿಗೇ ಬಂದು ಇರ್ತಾನಂತೆ' ಎಂದಿದ್ದಳು.

ಹೀಗೆ ಮೇಸ್ತ್ರಿ ರಘುರಾಮ ಅವಾಗಿವಾಗ ಊರಿಗೆ ಬಂದು, ಏನೇನೋ ತಮಗರ್ಥವಾಗದ ಭಾಷೆಯಲ್ಲಿ ಬೆಂಗಳೂರಿನ ಸುದ್ದಿಗಳನ್ನು ರಂಜನೀಯವಾಗಿ ಹೇಳುವಾಗ, ಊರವರಿಗೆ ಆತ ಸಹ ಒಬ್ಬ ಸಾಫ್ಟ್‍ವೇರ್ ಇಂಜಿನಿಯರಿನಂತೆ, ಮೇಲಿನ ಮನೆ ಗೋಪಿಯಂತೆ ಅಥವಾ ಸುಬ್ಬಣ್ಣನ ಮಗ ಚಿನ್ಮಯನಂತೆ ಕಾಣಿಸುತ್ತಿದ್ದ. ಬೆಂಗಳೂರೆಂಬ, ದಿನವೂ ಟೀವಿ-ಪೇಪರುಗಳಲ್ಲಿ ಸುದ್ದಿಯಾಗುವ, ರಸ್ತೆ ತುಂಬಾ ಕಾರು-ಬೈಕುಗಳೇ ಓಡಾಡುವ ಸಿಟಿಯಲ್ಲಿ ಬದುಕನ್ನು ಒಲಿಸಿಕೊಂಡ ವೀರನಂತೆ ಕಾಣಿಸುತ್ತಿದ್ದ. ಮೇಲಿನ ಮನೆ ಗೋಪಿಯಂತೆ ಕಾರಿನಲ್ಲಿ ಬರುವುದೋ, ಚಿನ್ಮಯನಂತೆ ಮನೆಗೆ ಬರುವಾಗಲೆಲ್ಲ ಹೊಸ ವಸ್ತುವೇನನ್ನಾದರೂ ತರುವುದೋ ಮಾಡದಿದ್ದರೂ, ರಘುರಾಮ ಬೆಂಗಳೂರಿನಿಂದ ಊರಿಗೆ ಬಂದಿದ್ದಾನೆ ಎಂದರೇ ಜನ ಒಮ್ಮೆ ಅತ್ತ ಸುಳಿದಾಡಿ ಬರುವಂತಹ ಆಕರ್ಷಣೆ ಅವನಿಗೆ ಲಭಿಸಿತ್ತು.

* *

ಜಡೆ ಹೆಣಿಸಿಕೊಂಡ ಪೂರ್ಣಿಮಾ ಅವಲಕ್ಕಿ-ಮೊಸರನ್ನೂ ತಿನ್ನದೇ ನಾಗರತ್ನಳ ಮನೆಗೆ ಓಡಿದಾಗ ಅವಳಿಗೊಂದು ಅಚ್ಚರಿ ಕಾದಿತ್ತು. ಕೇವಲ ಮೂರು ತಿಂಗಳ ಹಿಂದಷ್ಟೇ ಬಂದುಹೋಗಿದ್ದ ರಘುರಾಮ ಇವತ್ತು ಮತ್ತೆ ಬಂದಿದ್ದ. ಮನೆಯ ಅಂಗಳದಲ್ಲೇ ಬೀಡಿ ಸೇದುತ್ತಾ ನಿಂತಿದ್ದ ಅವನು ಪೂರ್ಣಿಮಾಳನ್ನು ಕಂಡದ್ದೇ "ಏನು ಸಣ್ಣಮ್ಮಾರು.. ಪುಲ್ ಡ್ರೆಸ್ಸಾಗಿ ಬಂದೀರಿ..?" ಎಂದ. ಅವನಿಂದ ಮಾರು ದೂರದಲ್ಲಿ ಚುಪುರು ಗಡ್ಡದ ಯುವಕನೊಬ್ಬ ತೆಂಗಿನ ಮರಕ್ಕೆ ಒರಗಿಕೊಂಡು ಬೀಡಿ ಸೇದುತ್ತಿದ್ದ. ಸುಮ್ಮನೆ ಮುಗುಳ್ನಕ್ಕು ಮನೆಯ ಒಳನಡೆದ ಪೂರ್ಣಿಮಾ, ನಾಗರತ್ನಳನ್ನು ಕೌಳಿ ಹಣ್ಣಿಗೆ ಹೋಗಲು ಕರೆದಳು. ಆದರೆ ನಾಗರತ್ನ "ಇವತ್ತು ನಾನು ಬರಾಕಿಲ್ಲ ಕಣೇ.. ನಮ್ಮನಿಗೆ ನೆಂಟ್ರು ಬಂದಾರೆ.." ಎಂದು ಒಳಹೋಗಿಬಿಟ್ಟಳು. ಅವಳ ವರ್ತನೆ ಪೂರ್ಣಿಮಾಗೆ ವಿಚಿತ್ರವೆನಿಸಿದರೂ ಏನೂ ಹೇಳದೇ ಮನೆಗೆ ಮರಳಿದಳು.

ಮರುದಿನ ಬೆಳಗ್ಗೆ ಹೊತ್ತಿಗೆ, 'ರಘುರಾಮ ಬೆಂಗಳೂರಿನಿಂದ ಮಗಳಿಗೆ ವರನನ್ನು ಕರೆತಂದಿದಾನಂತೆ, ಅವನೂ ಮೇಸ್ತ್ರಿಯಂತೆ, ಇವನ ಜೊತೆಯಲ್ಲೇ ಕೆಲಸ ಮಾಡೋದಂತೆ' ಎಂದೆಲ್ಲ ಸುದ್ದಿಯಾಯಿತು. ಅವತ್ತು ಕೆಲಸಕ್ಕೆ ಬಂಗಾರಮ್ಮ ಬರಲಿಲ್ಲ. ಪೂರ್ಣಿಮಾಳಿಗೂ ಏನೋ ತಡೆದಂತಾಗಿ ನಾಗರತ್ನಳನ್ನು ಕಾಣಲು ಹೋಗಲಿಲ್ಲ. ಎರಡು ದಿನ ಬಿಟ್ಟು ಅವರು ವಾಪಸು ಹೋದಮೇಲೆ ಸಂಜೆ ಹೊತ್ತಿಗೆ ಮನೆಗೆ ಬಂದ ಬಂಗಾರಮ್ಮ ವಿಷಯ ಹೌದೆಂದು ಖಚಿತಪಡಿಸಿ, ಇನ್ನು ಒಂದು ತಿಂಗಳಲ್ಲಿ ನಾಗರತ್ನಳ ಮದುವೆ ಎಂದು ಹೇಳಿದಳು. ಖರ್ಚಿಗೆ ದುಡ್ಡೆಲ್ಲಾ ರಘುರಾಮನೇ ತರುತ್ತಿರುವುದಾಗಿಯೂ, ಇನ್ನು ಹತ್ತು ದಿನದೊಳಗೆ ಅವನು ಬರುತ್ತಿರುವುದಾಗಿಯೂ ಹೇಳಿದಳು.

"ಹುಡುಗ ಏನ್ ಮಾಡ್ತಿದಾನೆ ಬಂಗಾರಮ್ಮ?" ಕೇಳಿದರು ಶಾಸ್ತ್ರಿಗಳು.
"ಇವ್ರ ಜತೀಗೇ ಕೆಲ್ಸ ಮಾಡ್ತಾನಂತೆ.. ಒಳ್ಳೇ ಸಂಮಂದ ಅನ್ನುಸ್ತಂತೆ.. ಮೂಲ ಊರು ಬಳ್ಳಾರಿ ಕಡೀಗಂತೆ.. ನಮ್ಮೋರೇ.. ಬೆಂಗ್ಳೂರಾಗೆ ದುಡಿಯಾಕ್ ಹಿಡ್ದು ಆಗ್ಲೇ ಏಳೆಂಟ್ ವರ್ಸ ಆಯ್ತಂತೆ.. ಚನಾಗ್ ದುಡ್ ಮಾಡಿ ಮಡ್ಗಿದಾನಂತೆ.. ನಮ್ ಮನ್ಯೋರಿಗೆ ಮೊದ್ಲಿಂದ್ಲೂ ಗೊತ್ತಂತೆ.. ನಾನೂ ನೋಡಿದ್ನಲ್ಲ, ಒಳ್ಳೇ ಗುಣ" ಹೇಳಿದಳು ಬಂಗಾರಮ್ಮ.
"ಒಪ್ಗೆ ಆಯ್ತಾ ಅವ್ನಿಗೆ?" ಕೇಳಿದರು ಶಾಸ್ತ್ರಿಗಳು.
"ಹೂಂ.. ಒಂದೇ ಪಟ್ಗೆ ಒಪ್‍ಗಂಡ.. ಆದ್ರೆ ನಮ್ ನಾಗೀಗೇ ಒಪ್ಗೆ ಇಲ್ಲ ಅನ್ಸುತ್ತೆ.. ಒಂದೇ ಸಮನೆ ಅಳ್ತಾ ಕೂತಿದೆ.. 'ಇಷ್ಟ್ ಬೇಗ ತಂಗೆ ಮದುವೆ ಬ್ಯಾಡ.. ಅಷ್ಟು ದೂರ ಬ್ಯಾಡ' ಅನ್ತಾ.. ಆದ್ರೆ ನಮ್ಮನೆಯೋರು ಬಿಡ್ಬೇಕಲ್ಲ? 'ಒಳ್ಳೇ ಸಂಮಂದ.. ಬಿಟ್ಕಂಡ್ರೆ ಸಿಗಾಕಿಲ್ಲ.. ಅಲ್ದೇ ನಿಂಗೂ ಬೆಂಗ್ಳೂರ್ ಪ್ಯಾಟೆ ಸೇರೋ ಅವ್ಕಾಸ' ಅಂತೆಲ್ಲ ಹೇಳಿ ನಂಬ್ಸಿದಾರೆ.."

ಪೂರ್ಣಿಮಾಗೆ ನಾಗರತ್ನಳ ಬಗ್ಗೆ ಯೋಚಿಸಿ ಬೇಸರವಾಯ್ತು. ಮೊನ್ನೆ ಅವಳ ಮನೆಯೆದುರು ಬೀಡಿ ಸೇದುತ್ತಾ ನಿಂತಿದ್ದ ಕೆಂಪಿಕಣ್ಣು - ಚುಪುರು ಗಡ್ಡದ ಯುವಕನ ಚಿತ್ರ ಕಣ್ಮುಂದೆ ಬಂತು. ನಾಗರತ್ನಳ ಮನೆಗೆ ಓಡಿ ಅವಳನ್ನು ಸಮಾಧಾನ ಮಾಡಲೆತ್ನಿಸಳು. ಇಬ್ಬರು ಗೆಳತಿಯರೂ ಪರಸ್ಪರ ಅಗಲಲೇಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಂಡರು. ನೋಡನೋಡುತ್ತಿದ್ದಂತೆ ನಾಗರತ್ನಳ ಮನೆ ಮುಂದೆ ಚಪ್ಪರ ಎದ್ದುನಿಂತು, ವಾಲಗ ಊದಲ್ಪಟ್ಟು, ಭರ್ಜರಿಯೇ ಎನ್ನುವಷ್ಟು ಜೋರಾಗಿ ಮದುವೆ ನಡೆದು, ನಾಗರತ್ನ ರಾಜಧಾನಿ ಸೇರಿಬಿಟ್ಟಳು.

ಪೂರ್ಣಿಮಾ ಒಂಟಿಯಾದಳು. ಕೌಳಿ ಮಟ್ಟಿಯ ಹಾದಿಗೆ, ಬುಕ್ಕೆ ಹಣ್ಣಿನ ಗಿಡಗಳಿಗೆ, ಒಣಗಿಸಿದ ವಾಟೆ ಸಿಪ್ಪೆಗಳಿಗೆ ಬೇಸರದ ಮೋಡ ಕವಿಯಿತು. ಕುಂಟ್-ಹಲ್ಪೆ ಬೇರೆ ಕಲ್ಲುಗಳೊಡನೆ ಸೇರಿತು. ಬಂಗಾರಮ್ಮ ಗೆಣಸು ಕೀಳುವುದನ್ನೇ ಬಿಟ್ಟಳು.

* *

ಪೂರ್ಣಿಮಾಳ ಮನೆಯಲ್ಲಿ 'ಹುಡುಗಿ ನೋಡುವ ಶಾಸ್ತ್ರ'. ಹುಡುಗನಿಗೆ ಇಲ್ಲೇ ಬೆಳೆಯೂರು. ಬೆಂಗಳೂರಿನಲ್ಲಿದ್ದಾನೆ. ಸಾಫ್ಟ್‍ವೇರ್ ಇಂಜಿನಿಯರ್. ಅವನ ಜುಬ್ಬಾದ ಘರಿಘರಿ ಸ್ಪರ್ಶವನ್ನು ಕೃಷ್ಣಮೂರ್ತಿ ಶಾಸ್ತ್ರಿಗಳ ಮನೆಯ ಮರದ ಸೋಫಾ ಅನುಭವಿಸುತ್ತಿದೆ. ಕಾಫಿ ಕಪ್ಪುಗಳನ್ನಿಟ್ಟ ಟ್ರೇ ಹಿಡಿದು ಬರುತ್ತಿರುವ ಪೂರ್ಣಿಮಾಳ ಹೆಜ್ಜೆಗಳಿಗೆ ಗೆಜ್ಜೆ ದನಿಯಿದೆ. ಗಲ್ಲಕ್ಕೆ ಲಜ್ಜೆ ಲಗ್ಗೆ ಇಟ್ಟಿದೆ. ಉದ್ದ ಜಡೆಗೆ ಮೊಗ್ಗೆ ಮಲ್ಲಿಗೆ ದಂಡೆ. ಪೂರ್ಣಿಮಾಳ ಕಣ್ಣೋಟದಿಂದಲೇ ಬಿಸಿಯಾಗಿದೆಯೇನೋ ಎನಿಸುವ ನೊರೆನೊರೆ ಕಾಫಿ, ಗುಡ್-ಡೇ ಬಿಸ್ಕೇಟಿಗಿಂತ ರುಚಿಯೆನಿಸಿದೆ ಸಾಫ್ಟ್‍ವೇರ್ ಇಂಜಿನಿಯರ್ರಿಗೆ.

ಹುಡುಗನ ಸಂಬಂಧಿಕರು ಶುರು ಮಾಡಿದರು: "ಅಂದ್ನಲ್ಲಾ, ಸಾಫ್ಟ್‍ವೇರ್ ಇಂಜಿನಿಯರ್ರು. ಮುಂದಿನ್ ವರ್ಷ ಅಮೆರಿಕಾ. ಬೆಂಗ್ಳೂರಲ್ಲಿ ಓನ್ ಅಪಾರ್ಟ್‍ಮೆಂಟು. ಕಾರು. ಊರಲ್ಲಿ ಎರಡು ಎಕರೆ ತೋಟ."
"ನಮ್ಮನೆ ಮಾಣಿಗೆ ಹೆಚ್ಗೆ ಓದಿದವರು ಬ್ಯಾಡ ಹೇಳಿ. ಜಸ್ಟ್ ಪೀಯೂಸಿ ಆಗಿದ್ರೂ ಸಾಕು. ತಾನು ಹೆಂಗಂದ್ರೂ ದುಡಿತ. ಮನೇಲಿ ಹೆಂಡತಿ ಆರಾಮಾಗಿ ಅಡುಗೆ ಮಾಡ್ಕ್ಯಂಡು ಇರ್ಲಿ ಹೇಳಿ" ಎಂದರು ಹುಡುಗನ ತಂದೆ.
"ಮನೆ ಯಾವ ಏರಿಯಾದಲ್ಲಿ ಮಾಡಿದ್ದೆ?" ಕೇಳಿದರು ಶಾಸ್ತ್ರಿಗಳು.
"ರಾಜಾಜಿನಗರದಲ್ಲಿ. ಬ್ರಿಗೇಡ್ ಗೇಟ್‍ವೇ ಅಂತ. ಅದ್ರಲ್ಲಿ ನಾರ್ತ್ ಬ್ಲಾಕಲ್ಲಿ ಎಯ್ತ್ ಫ್ಲೋರಲ್ಲಿ ನಾ ಖರೀದಿ ಮಾಡಿರೋ ಅಪಾರ್ಟ್‍ಮೆಂಟು." ಹೇಳಿದ ಹುಡುಗ.
"ಬಿರ್‌ಗೇಡಾ?" ಇಷ್ಟು ಹೊತ್ತೂ ತಲೆತಗ್ಗಿಸಿ ಕೂತಿದ್ದ ಪೂರ್ಣಿಮಾ ಸಟ್ಟನೆ ಕೇಳಿ ನಾಲಿಗೆ ಕಚ್ಚಿಕೊಂಡಳು.
"ಹಾಂ! ಬ್ರಿಗೇಡೇ! ಯಾಕೆ?" ಕೇಳಿದರು ಹುಡುಗನ ತಂದೆ.
"ಯಾಕೂ ಇಲ್ಲೆ"
"ಮನೆ ಅಂದ್ರೆ ಏನು ಮಾಡಿದ್ದೆ? ಅದ್ರಲ್ಲೇ ಎಲ್ಲಾನೂ ಇದ್ದು. ಅಲ್ಲೇ ಶಾಪಿಂಗ್ ಮಾಲು, ಅಲ್ಲೇ ಟಾಕೀಸು, ಅಲ್ಲೇ ಪಾರ್ಕು, ಅಲ್ಲೇ ಹುಡುಗ್ರಿಗೆ ಆಟದ ಬಯಲು, ಅಲ್ಲೇ ಸ್ವಿಮ್ಮಿಂಗ್ ಪೂಲು... ಯಾವ್ದಕ್ಕೂ ಹೊರಗಡೆ ಹೋಗೋದೇ ಬ್ಯಾಡ... ಗೊತ್ತಾತಲ?"
ತಲೆಯಾಡಿಸಿದಳು ಪೂರ್ಣಿಮಾ. ಎಲ್ಲರೂ ತಲೆದೂಗಿದರು.

ಇನ್ನರ್ಧ ಗಂಟೆಯಲ್ಲಿ ಮಾತುಕತೆ ಮುಗಿಯಿತು: ಎರಡು ತಿಂಗಳೊಳಗೆ ನಿಶ್ಚಿತಾರ್ಥ. ಮಳೆಗಾಲ ಬರುವುದರೊಳಗೆ ಮದುವೆ.

ಪೂರ್ಣಿಮಾ ಸೀರೆ ಬಿಚ್ಚಿ ಹಾಕಿ ನೈಟಿ ತೊಡುತ್ತಿದ್ದಾಗ ರೂಮಿಗೆ ಬಂದ ಶರಾವತಿ "ಎಂಥಾ ಆಶ್ಚರ್ಯ ನೋಡು ಅಮ್ಮೀ.. ಈ ಮನೆ ಕಟ್ಟಿದ್ದೂ ರಘುರಾಮ ಮೇಸ್ತ್ರಿ. ಈಗ ನೀ ಹೋಗ್ತಿರೋ ಮನೆ ಕಟ್ಟಿರೋದೂ ರಘುರಾಮ ಮೇಸ್ತ್ರಿ. ಜತೆಗೆ ನಿನ್ನ ನೆಚ್ಚಿನ ಗೆಳತಿಯ ಗಂಡ! ಎಂಥಾ ವಿಚಿತ್ರ ಅಲ್ದಾ?" ಎಂದಳು. ಬಿಚ್ಚಿ ಹಾಕಿದ್ದ ಸೀರೆಯ ಗುಡ್ಡೆಯನ್ನೇ ನೋಡುತ್ತಿದ್ದಳು ಪೂರ್ಣಿಮಾ.

Wednesday, January 09, 2008

ಬೆಟ್ಟ, ಚಿಟ್ಟೆ..

"ಶೆಡ್ತಿಕೆರೆಯಾ?" ಉದ್ಘರಿಸಿದರು ಭಟ್ಟರು.
"ಹೌದು. ಯಾಕೆ ಅಲ್ಲಿ ಯಾರಾದ್ರೂ ಗೊತ್ತಾ ನಿಮಗೆ?" ಕೇಳಿದೆ.
"ಹಾಂ! ನಮ್ಮನೆಯವಳಿಗೆ ಅಲ್ಲೇ ವರದಾಮೂಲ! ಏಯ್ ಏನೇ, ನಿಮ್ಮೂರು ಕಡೆಯೋರು ಬಂದಿಯಾರೆ ನೋಡು.." ಭಟ್ಟರು ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕೂಗಿದರು.
ಒಳಗಿನಿಂದ ಬಂದ ಭಟ್ರ ಹೆಂಡತಿಯನ್ನು ಅಡುಗೆ ಒಲೆಯ ಮಶಿ ಬಡಿದು ಬಡಿದೇ ಹೀಗಾಗಿದೆಯೇನೋ ಎನಿಸುವಷ್ಟು ಕಪ್ಪು ಬಣ್ಣದ ಸೀರೆಯೊಂದು ಸುತ್ತಿತ್ತು. ಆ ಸೀರೆಗೆ ಹೊಳೆಯುವ ಹಸಿರು ಗೆರೆಗಳಿದ್ದವು. ಕೈಯ ಬಳೆಗಳಿಗೆ ಅದು ಮ್ಯಾಚಿಂಗ್ ಆಗುತ್ತಿತ್ತು.
"ಶೆಡ್ತಿಕೆರೆಯಾ? ಯಾರ ಮನೆ?" ಕೇಳಿದರು ಭಟ್ರ ಹೆಂಡತಿ.
"ಹೊಸೊಕ್ಲೋರ ಮನೆ ಅಂತಾರೆ. ನನ್ನ ಅಪ್ಪನ ಹೆಸರು ಅನಂತರಾವ್ ಅಂತ"
"ನಿನ್ನ ಅಮ್ಮಂಗೆ ಯಾವೂರು ಹೇಳು? ತುಮರಿ ಅಲ್ದಾ?"
"ಹಾಂ, ತುಮರಿಯೇ"
"ಗೊತ್ತಾತು ಬಿಡು.. ವನಮಾಲ ಅಲ್ದಾ ಹೆಸರು? ನಂಗೆ ವರದಾಮೂಲ. ಶಂಕರ ಭಟ್ರ ಮನೆ.. ನೀವು ಈಗಿನ ಹುಡುಗ್ರಿಗೆ ಗೊತ್ತಿರೂದಿಲ್ಲ ಬಿಡು.."

ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಪೆಚ್ಚು ನಗೆ ನಕ್ಕೆ. ಇವರು ಹವಿಗನ್ನಡ, ಮಂಗಳೂರು ಕನ್ನಡ ಮಿಕ್ಸ್ ಮಾಡಿ ಮಾತಾಡುತ್ತಿದ್ದರು. ಅದಕ್ಕಾಗಿ ನಾನು ಪೂರ್ತಿ ಪೇಟೆ ಭಾಷೆಯಲ್ಲೇ ಮಾತಾಡುತ್ತಿದ್ದೆ. ಹೊರಗೆ ಇಳಿಯುತ್ತಿದ್ದ ಸಂಜೆಗತ್ತಲೆ, ಜಗುಲಿಯಲ್ಲಿದ್ದ ಅಲ್ಪ ಬೆಳಕನ್ನೂ ಆಹುತಿ ತೆಗೆದುಕೊಳ್ಳುತ್ತಿತ್ತು. ಜಗುಲಿಯ ಬಲಮೂಲೆಯಲ್ಲಿದ್ದ ಕಿಟಕಿಯಿಂದ ಭಟ್ಟರ ಮನೆಯ ಧರೆ ಕಾಣುತ್ತಿತ್ತು. ಬಳಿಯೇ ಹೋಗಿ ಬಗ್ಗಿ ನೋಡಿದರೆ ಇಡೀ ಬೆಟ್ಟ ಕಾಣಬಹುದೆಂದು ನಾನು ಊಹಿಸಿದೆ. "ಇನ್ನು ನೀನು ಕೆಳಗಿಳೀಲಿಕ್ಕೆ ಆಗೂದಿಲ್ಲ. ನಮ್ಮಲ್ಲೇ ಉಳ್ದು ಬೆಳಗ್ಗೆ ಮುಂಚೆ ಹೊರಡು" ಎಂದರು ಭಟ್ಟರು. ಸುಸ್ತಾಗಿದ್ದ ನನಗೂ ಗತ್ಯಂತರವಿರಲಿಲ್ಲ. ಭಟ್ಟರ ಹೆಂಡತಿ ಜಗುಲಿಯ ಲೈಟಿನ ಸ್ವಿಚ್ಚು ಒತ್ತಿ ಕಾಫಿ ತರುವುದಾಗಿ ಹೇಳಿ ಒಳಹೋದರು. ನಾನು ಬಟ್ಟೆ ಬದಲಿಸಲೆಂದು ಎದ್ದೆ. ಟ್ಯೂಬ್‍ಲೈಟು ಫಕಫಕನೆ ಹೊತ್ತಿಕೊಂಡಿತು.

ಇಲ್ಲಿಗೆ ಚಾರಣಕ್ಕೆ ಹೊರಡುವ ಮೊದಲೇ 'ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲಿಕ್ಕೆ ಸಾಧ್ಯವೇ ಇಲ್ಲ, ನೀನು ಭಟ್ಟರ ಮನೆಯಲ್ಲಿ ಪರಿಚಯ ಹೇಳಿಕೊಂಡು ಇರು, ಕತ್ತಲಾದಮೇಲೂ ಮುಂದುವರೆಯುವ ಸಾಹಸ ಮಾಡಬೇಡ, ಒಬ್ಬನೇ ಬೇರೆ ಹೋಗುತ್ತಿದ್ದೀಯಾ, ತುಂಬಾ ದಟ್ಟ ಕಾಡಿದೆ, ಆನೆ ಹಿಂಡೂ ಇದೆಯಂತೆ' ಎಂದೆಲ್ಲ ನನ್ನ ಸ್ನೇಹಿತರು ಹೆದರಿಸಿದ್ದರು. ಅವರು ಅಷ್ಟೆಲ್ಲಾ ಅಂದಿದ್ದರೂ ನನಗೆ ನಾವು ಹಿಂದೊಮ್ಮೆ ಮಾಡಿದ ಸಾಹಸದ ನೆನಪಿದ್ದಿದ್ದರಿಂದ 'ಏಯ್ ಅವ್ಕೆಲ್ಲ ನಾನು ಕೇರ್ ಮಾಡಲ್ಲ. ಒಂದೇ ದಿನದಲ್ಲಿ ಹತ್ತಿಳಿದು ತೋರಿಸ್ತೇನೆ ನೋಡ್ತಿರಿ' ಅಂದು ಬಂದಿದ್ದೆ.

ಆದರೆ ಕಳೆದ ಬಾರಿಯಂತೆ ಈ ಬಾರಿ ಹತ್ತಿಳಿಯುವುದು ಸುಲಭವಿರಲಿಲ್ಲ. ನನ್ನ ಸ್ಪೋರ್ಟ್ಸ್ ಶೂ ಹೊಸದಾಗಿದ್ದರಿಂದ ಅದಿನ್ನೂ ಕಾಲಿಗೆ ಹೊಂದಿಕೊಂಡಿರಲಿಲ್ಲ. ಬೆಟ್ಟದ ಕಲ್ಲು ಹಾದಿಯಲ್ಲಿ ಇಳಿಯುವಾಗ ಪಾದಕ್ಕೆ, ಹೆಬ್ಬೆರಳುಗಳಿಗೆ ಒತ್ತೀ ಒತ್ತಿ ತುಂಬಾ ನೋಯುತ್ತಿತ್ತು. ಹೆಜ್ಜೆ ಎತ್ತಿಡುವುದೆಂದರೆ ಜೀವ ಹೋದಂತಾಗುತ್ತಿತ್ತು. ಭಟ್ಟರ ಮನೆ ಬಳಿ ಬರುವುದರೊಳಗೆ ನಾನು ಪೂರ್ತಿ ಬಸವಳಿದುಹೋಗಿದ್ದೆ. ನನ್ನ ಜೊತೆ ತಾನೂ ಇಳಿಯುತ್ತಿದ್ದ ಸೂರ್ಯ, ನಾನು ಭಟ್ಟರ ಮನೆ ಬಳಿ ಬರುವಷ್ಟರಲ್ಲಿ ತಾನಿನ್ನು ಮರೆಯಾಗುವುದಾಗಿ ಹೇಳಿ ಟಾಟಾ ಮಾಡುತ್ತಿದ್ದ. ನನ್ನ ಬ್ಯಾಗಿನೊಳಗಿದ್ದ ಪೆನ್-ಟಾರ್ಚನ್ನು ಒಮ್ಮೆ ತಡವಿಕೊಂಡೆ. ಅದು ತಾನು ಬೇಕಾದರೆ ಒಂದೆರೆಡು ತಾಸು ಉರಿಯಬಲ್ಲೆ ಎಂದು ಅಭಯ ನೀಡಿತು. ಆದರೆ ಪೂರ್ತಿ ಬೆಟ್ಟ ಇಳಿಯುವುದಕ್ಕೆ ಇನ್ನೂ ಮೂರು ತಾಸಾದರೂ ಬೇಕೆಂದು ನನ್ನ ಹಿಂದಿನ ಅನುಭವ ಹೇಳುತ್ತಿತ್ತು. ಆನೆಯ ಹಿಂಡಿನ ನೆನಪಾಯಿತು. ಧೈರ್ಯ ಸಾಲಲಿಲ್ಲ. ಭಟ್ಟರ ಮನೆಯಲ್ಲೇ ಉಳಿದು ನಾಳೆ ಬೆಳಗ್ಗೆ ಅವರೋಹಣ ಮುಂದುವರೆಸುವುದೇ ಸರಿಯಿಂದು ನಿಶ್ಚಯಿಸಿದೆ. ಅಲ್ಲದೇ ಭಟ್ಟರ ಹೆಂಡತಿಯ ಊರಿನವನೇ ಅಂತ ಹೇಳಿಕೊಂಡಿದ್ದರಿಂದ ನನಗೆ ಇವತ್ತು ಇಲ್ಲಿ ಉಳಕೊಳ್ಳಲಿಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿತ್ತು. ಅದನ್ನು ನಿರಾಕರಿಸುವ ಗೋಜಿಗೆ ಹೋಗದೇ, ಬಟ್ಟೆ ಬದಲಿಸಿದವನು ಕೈಕಾಲು ತೊಳೆದು ಬರುವುದಾಗಿ ಹೇಳಿ, ಬಚ್ಚಲು ಮನೆ ಕೇಳಿಕೊಂಡು ಮನೆಯ ಒಳಹೊಕ್ಕೆ.

ಮೊದಲಿನದು ಜಗುಲಿ. ನಂತರ ಕತ್ತಲ ಒಳಮನೆ. ಆಮೇಲೆ ಕೈಸಾಲೆ. ಅದರ ಪಕ್ಕದಲ್ಲೇ ಅಡುಗೆಮನೆ. ಕೈಸಾಲೆಯಿಂದ ಹೊರಗೆ ನಡೆದರೆ ಅಲ್ಲೇ ಬಚ್ಚಲುಮನೆ. "ಬಿಸೀ ನೀರಿದ್ದು. ಬೇಕಾದ್ರೆ ಸ್ನಾನ ಮಾಡೋದಿದ್ರೆ ಮಾಡು" ಎಂದರು ಭಟ್ಟರ ಹೆಂಡತಿ. ಬಿಂದಿಗೆ ಬಿಂದಿಗೆ ಹೊಯ್ದುಕೊಂಡೆ. ಗೂಡಿನಲ್ಲಿದ್ದ ಅವರ ಲೈಫ್‍ಬಾಯ್ ಸೋಪನ್ನೇ ಬಳಸಿಕೊಂಡೆ. ಘಮಘಮ ಪರಿಮಳ. ಹಬೆ. ಹಿತಾನುಭವ. ನಾನು ಸ್ನಾನ ಮುಗಿಸಿ, ಬರೀ ಟವಲು ಸುತ್ತಿಕೊಂಡು ಕೈಸಾಲೆಗೆ ಬಂದೆ.

ಕೈಸಾಲೆಯ ಮೂಲೆಯಲ್ಲಿ ಒಂದು ಹುಡುಗಿ ಕೂತಿತ್ತು. ಬರೀ ಮೈಯಲ್ಲಿ ಬಂದ ನನ್ನನ್ನು ನೋಡಿದ ಅದು ನಾಚಿದಂತೆ ಮುಖವನ್ನು ಗೋಡೆಯ ಕಡೆ ತಿರುಗಿಸಿಕೊಂಡಿತು. ನೆಲ್ಲಿಕಾಯಿಯನ್ನೋ ಏನನ್ನೋ ತಿನ್ನುತ್ತಿದ್ದಂತಿತ್ತು. ಓರೆಗಣ್ಣಿನಿಂದ ನೋಡುತ್ತಾ ನಾನು ಒಳಮನೆ ದಾಟಿ ಜಗುಲಿಗೆ ಹೋಗಿ ಒಂದು ತೆಳು ಬನೀನು, ಬರ್ಮುಡಾ ಧರಿಸಿ, ತಲೆ ಬಾಚಿ ರೆಡಿಯಾಗುವಷ್ಟರಲ್ಲಿ ಭಟ್ಟರ ಹೆಂಡತಿ ಒಳಗೆ ಕರೆದರು. ಅಡುಗೆ ಮನೆಯಲ್ಲಿ ಮಣೆ ಹಾಕಿ ಕೂರಿಸಿ ನನಗೆ ಮಸಾಲೆ ಅವಲಕ್ಕಿ, ಒಂದು ದೊಡ್ಡ ಲೋಟದ ತುಂಬ ಕಾಫಿ ಕೊಟ್ಟರು. ಹಸಿವಾಗಿದ್ದ ನನ್ನ ಹೊಟ್ಟೆಗೆ ಖುಷಿಯಾಯಿತು. ಕೈ ತೊಳೆಯಲು ಬಚ್ಚಲಿಗೆ ಹೋಗುವಾಗ ಕೈಸಾಲೆಯ ಮೂಲೆ ನೋಡಿದರೆ ಅಲ್ಲಿ ಆ ಹುಡುಗಿ ಇರಲಿಲ್ಲ.

ಜಗುಲಿಗೆ ಬಂದು ಕೂತೆ. ಭಟ್ಟರು ಟೀವಿ ನೋಡುತ್ತಿದ್ದರು. ದೂರದರ್ಶನದ ಏಳು ಗಂಟೆ ವಾರ್ತೆ ಬರುತ್ತಿತ್ತು. ನನ್ನ ಅರೆತೆರೆದ ಕಣ್ಗಳು ನಿದ್ರೆಯನ್ನು ಬಯಸುತ್ತಿದ್ದವು. ಆದರೆ ವಾರ್ತೆ ಮುಗಿಯುತ್ತಿದ್ದಂತೆಯೇ ಭಟ್ಟರು ನನ್ನ ಬಗ್ಗೆಯೆಲ್ಲಾ ವಿಚಾರ ಮಾಡಲು ಶುರು ಮಾಡಿದ್ದರಿಂದ ನಾನು ಕಷ್ಟಪಟ್ಟು ನಿದ್ರೆಯನ್ನು ತಡೆಹಿಡಿಯಲೇ ಬೇಕಾಯಿತು. ಊರು, ಕೇರಿ, ಅಪ್ಪ, ಕೆಲಸ... ಎಲ್ಲಾ ವಿಚಾರಿಸಿದ ಅವರು, ತಮ್ಮ ಬಗ್ಗೆಯೂ ಹೇಳಿಕೊಂಡರು. ಇಲ್ಲಿಗೆ ತಾವು ಬಂದದ್ದು, ಹೀಗೆ ಒಂಟಿ ಮನೆ ಮಾಡಿಕೊಂಡು ಸಂಸಾರ ಮಾಡುತ್ತಿರುವುದು, ಈ ಪಾಳುಗುಡಿಯ ಪೂಜೆ... ಎಲ್ಲಾ ಕಾರಣ, ಕತೆ, ಹಿನ್ನೆಲೆಗಳನ್ನು ಹೇಳಿದರು. "ಕುಮಾರ ಪರ್ವತವನ್ನು ಒಂದೇ ದಿನದಲ್ಲಿ ಹತ್ತಿಳಿಯೋದಕ್ಕೆ ಗಂಡೆದೆ ಬೇಕು" ಎಂದರು. ಇಲ್ಲಿಗೆ ಬರುವವರೆಲ್ಲರು ಅಡುಗೆ-ಆಹಾರವನ್ನೆಲ್ಲ ತಂದುಕೊಂಡು, ಮೇಲ್ಗಡೆ ಟೆಂಟು ಹಾಕಿ ಉಳಿದು ಮರುದಿನ ಕೆಳಗಿಳಿಯುತ್ತಾರಂತೆ. ಆದರೆ ಹಿಂದೊಮ್ಮೆ ನಾವು ಆರು ಜನ ಹುಡುಗರು ಸಾಹಸ ಮಾಡಿ ಒಂದೇ ದಿನದಲ್ಲಿ ಹತ್ತಿಳಿದ ಕತೆಯನ್ನು ನಾನು ಅವರಿಗೆ ಹೇಳಿದೆ. ಭಟ್ಟರು "ಭಯಂಕರ ಬಿಡ್ರಪ್ಪ.. ಅದೂ ಪುಳಿಚಾರು ತಿನ್ನೋ ಬ್ರಾಮಣ್ರ ಹುಡುಗ್ರಾಗಿ.. ಆಂ?" ಎಂದು ನಕ್ಕರು. ಆ ಹಿಂದಿನ ಬಾರಿಯ ಚಾರಣವನ್ನು ನೆನೆಸಿಕೊಳ್ಳುತ್ತಾ ನಾನೂ ನಕ್ಕೆ.

ಬೆಂಗಳೂರಿನಿಂದ ರಾತ್ರಿ ಹನ್ನೊಂದರ ಹೊತ್ತಿಗೆ ರಾಜಹಂಸ ಬಸ್ಸಿಗೆ ಹೊರಟ ನಾವು ಆರು ಜನ ಹುಡುಗರು ಸೋಮವಾರಪೇಟೆಯಲ್ಲಿ ಇಳಿದಾಗ ಮೂಲೆ ಹೋಟಿಲಿನ ಕಾಫಿಯೋ ಚಹಾವೋ ಗೊತ್ತಾಗದಂತಹ ಬಣ್ಣದ ದ್ರವವೊಂದು ಸ್ವಾಗತ ಕೋರಿತ್ತು. ಅಲ್ಲೇ ನಾವೆಲ್ಲ ಮುಖ ತೊಳೆದು, ಹಲ್ಲುಜ್ಜಿ, ಮೈಮುರಿದು ತಯಾರಾದೆವು. ನೀರಿಗಿಂತಲೂ ತೆಳ್ಳಗಿದ್ದ ಸಾರಿನಲ್ಲಿ ಇಡ್ಲಿಯ ಚೂರುಗಳನ್ನು ಮುಳುಗಿಸಿ ಎತ್ತಿ ಬಾಯಿಗೆಸೆದುಕೊಂಡು ಅಗಿಯದೇ ನುಂಗಿ ಬೆಳಗಿನ ತಿಂಡಿ ಮುಗಿಸಿದ್ದೆವು. ಅಲ್ಲಿಂದ ಬೆಟ್ಟದ ಬುಡದವರೆಗೆ ಒಂದು ಕಾರು. ನಂತರ ಒಂದೇ ಸಮನೆ ಆರೋಹಣ.

ಕರ್ನಾಟಕದ ಅತ್ಯಂತ ದುರ್ಗಮ ಚಾರಣದ ಹಾದಿಯೂ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವೂ ಆಗಿರುವ ಕುಮಾರ ಪರ್ವತವನ್ನು ಹತ್ತಲಿಕ್ಕೆ ಎರಡು ದಾರಿಗಳಿವೆ. ಒಂದು, ಸೋಮವಾರಪೇಟೆಯಿಂದ ಶುರುವಾಗುವುದು. ಇನ್ನೊಂದು, ಸುಬ್ರಹ್ಮಣ್ಯದಿಂದ ಶುರುವಾಗುವುದು. ನಾವು ಸೋಮವಾರಪೇಟೆಯಿಂದ ಹತ್ತಿ ಸುಬ್ರಹ್ಮಣ್ಯದಲ್ಲಿ ಇಳಿಯುವ ಯೋಜನೆ ಹಾಕಿಕೊಂಡಿದ್ದೆವು. ಬೆಟ್ಟ ಹತ್ತಲಿಕ್ಕೆ ಮುಂಚೆ ಅರಣ್ಯ ಮಂಡಲಿಯವರದೊಂದು ಆಫೀಸಿದೆ. ಅಲ್ಲಿ ಒಂದು ಡಿಕ್ಲರೇಶನ್ ಬರೆದುಕೊಡಬೇಕು. ಪ್ರತಿ ಚಾರಣಿಗನಿಗೆ ೧೧೫ ರೂಪಾಯಿ ಫೀಸು. ಸುಮಾರು ಮುಕ್ಕಾಲು ಬೆಟ್ಟ ಹತ್ತುವವರೆಗೆ ಬೆಟ್ಟವೇ ಕಾಣುವುದಿಲ್ಲ. ಸುಮ್ಮನೆ ಕಾಡ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು: ಹಕ್ಕಿ ಹಾಡು ಕೇಳುತ್ತಾ. ತುಂಬಾ ಕಡಿದಾಗಿಯೂ ಇಲ್ಲದ, ಅಲ್ಲಲ್ಲಿ ಏರು ಅಲ್ಲಲ್ಲಿ ಇಳುಕಲಿನ ದಾರಿ: ನಾವು ಬೆಟ್ಟವನ್ನೇ ಹತ್ತುತ್ತಿದ್ದೇವೋ ಇಲ್ಲಾ ತಪ್ಪು ದಾರಿ ಹಿಡಿದು ಯಾವುದೋ ಊರ ಕಡೆ ಹೋಗುತ್ತಿದ್ದೇವೋ ಎಂದು ಅನುಮಾನ ಬರುವಂತೆ. ನಾವು ಅಲ್ಲಲ್ಲಿ ನಿಂತು ನೀರು ಕುಡಿಯುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ, ಕತೆ ಹೇಳುತ್ತಾ, ಚೆರ್ರಿ ಹಣ್ಣು ತಿನ್ನುತ್ತಾ ನಡೆಯುತ್ತಿದ್ದೆವು. ಯಾರಿಗೂ ಸುಸ್ತೇನು ಆದಂತೆ ಕಾಣುತ್ತಿರಲಿಲ್ಲ. ಮಧ್ಯೆ ಮಧ್ಯೆ ಸುಮಾರು ಜನ ಬೆಟ್ಟ ಇಳಿಯುತ್ತಿದ್ದವರು ಸಿಗುತ್ತಿದ್ದರು. ಅವರ ಬಳಿ 'ಇನ್ನೆಷ್ಟು ದೂರ?' ಅಂತ ಕೇಳುವುದು. ಅವರು 'ಇನ್ನೂ ಒಂದು-ಒಂದೂ ವರೆ ತಾಸು ಬೇಕು ತುದಿ ಮುಟ್ಟಲಿಕ್ಕೆ' ಎನ್ನುವುದು. ನಂತರ ಅವರು ನಮ್ಮ ಬಳಿ 'ಕೆಳಗಿಳಿಯಲಿಕ್ಕೆ ಇನ್ನೂ ಎಷ್ಟು ದೂರ?' ಅಂತ ಕೇಳುವುದು. ನಾವು 'ಇನ್ನೂ ಎರಡು ತಾಸು ಬೇಕು' ಎನ್ನುವುದು. ಮಧ್ಯೆ ಎರಡ್ಮೂರು ದೊಡ್ಡ ಬಂಡೆಗಳಿವೆ. ಹತ್ತಬೇಕಾದರೆ ಸ್ವಲ್ಪ ಹುಷಾರಾಗಿರಬೇಕು. ಉಳಿದಂತೆ ಕುಮಾರ ಪರ್ವತವನ್ನು ಸೋಮವಾರಪೇಟೆಯ ಕಡೆಯಿಂದ ಹತ್ತುವುದು ಕಷ್ಟದ ವಿಷಯವೇನಲ್ಲ.

ನಾವು ಶೃಂಗವನ್ನು ಮುಟ್ಟಿದಾಗ ಮಧ್ಯಾಹ್ನ ಒಂದೂ ವರೆ. ಸುಡು ಬಿಸಿಲು. ಬಿಸಿ ಗಾಳಿ. ಅಲ್ಲಲ್ಲಿ ಟೆಂಟು ಹಾಕಿ ಅಡುಗೆ ಮಾಡಿಕೊಳ್ಳುತ್ತಿದ್ದ ಗುಂಪುಗಳು. ನಾವೂ ಅಲ್ಲೇ ಒಂದು ಕಡೆ ತಂಪಲು ಅರಸಿ ಕೂತು, ಕಟ್ಟಿಕೊಂಡು ಹೋಗಿದ್ದ ಚಪಾತಿ ತಿಂದು ಮುಗಿಸಿದೆವು. ಕತ್ತಲಾಗುವುದರೊಳಗೆ ಕೆಳಗಿಳಿಯಲೇಬೇಕಿದ್ದರಿಂದ, ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಅವರೋಹಣವನ್ನು ಶುರುಮಾಡಿಯೇ ಬಿಟ್ಟೆವು. ಶೃಂಗದಿಂದ ಸ್ವಲ್ಪ ಇಳಿದ ಮೇಲೆ ಎಡಕ್ಕೊಮ್ಮೆ ತಿರುಗಿ ನೋಡಬೇಕು. ಅಲ್ಲಿಂದ ಕಾಣುತ್ತದೆ ಕುಮಾರ ಪರ್ವತದ ರುದ್ರ ರಮಣೀಯ ದೃಶ್ಯ... ಇದೇ ಬೆಟ್ಟವನ್ನಾ ನಾವು ಹತ್ತಿ ಬಂದಿದ್ದು ಎನಿಸುವಂತೆ ದಂಗುಬಡಿಸುವ ದೃಶ್ಯ. ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಕೊನೆಯ ಅಧ್ಯಾಯವನ್ನು ಸಟ್ಟನೆ ನೆನಪಿಸುವಂತಹ ದೃಶ್ಯ. ಇಲ್ಲೇ, ಹೀಗೇ, ಆ ಓತಿ ತನ್ನ ರೆಕ್ಕೆಗಳನ್ನು ಪವಾಡದಂತೆ ಬಿಚ್ಚಿ ದಿಗಂತದತ್ತ ಸ್ವಚ್ಚಂದ ಪಯಣ ಹೋದದ್ದು.. ಇದೇ, ಇಲ್ಲೇ, ಕರ್ವಾಲೊ, ತೇಜಸ್ವಿ, ಕರಿಯಪ್ಪ, ಮಂದಣ್ಣ, ಯೆಂಗ್ಟ, ಕಿವಿ... ದಿಗ್ಭ್ರಮೆಗೊಂಡು ಶೂನ್ಯದತ್ತ ನೋಡಿದ್ದುದು.. ಕುಮಾರ ಪರ್ವತವನ್ನು ಹತ್ತಿದ್ದು ಸಾರ್ಥಕವಾಯ್ತೆಂದೆನಿಸುತ್ತದೆ ಇಲ್ಲಿಗೆ ಬಂದಾಗ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

ಭಟ್ಟರ ಜೊತೆ ಮಾತಾಡುತ್ತಲೇ ಯೋಚಿಸುತ್ತಿದ್ದ ನನಗೆ ಹಳೆಯದೆಲ್ಲ ತುಂಬಾ ಆಪ್ಯಾಯಮಾನವಾಗಿ ಕಾಣತೊಡಗಿದ್ದವು. ಭಟ್ಟರ ಹೆಂಡತಿ ಊಟಕ್ಕೆ ಕರೆದರು. ನಾನೂ ಭಟ್ಟರೂ ಒಳಹೋದೆವು. "ಇವಳು ನನ್ನ ಮಗಳು. ಶ್ಯಾಮಲಾ ಅಂತ. ಫಸ್ಟ್ ಇಯರ್ ಡಿಗ್ರೀ. ಮಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿ ಇದ್ಕಂಡು ಓದ್ತಾ ಇದ್ದು.." ಭಟ್ಟರು ಕೈಸಾಲೆಯ ಮೂಲೆಯಲ್ಲಿ ಕೂತಿದ್ದ ಹುಡುಗಿಯನ್ನು ಪರಿಚಯಿಸಿಕೊಟ್ಟರು. ಹುಡುಗಿ ನನ್ನೆಡೆಗೆ ನೋಡಿ ಮುಗುಳ್ನಕ್ಕಳು. "ಡಿಗ್ರಿ, ಯಾವುದ್ರಲ್ಲಿ?" ನಾನು ಕೇಳಿದೆ. "ಬಿಎಸ್ಸಿ" ಅವಳೆಂದಳು. ನಾನು ಭಟ್ಟರ ಹಿಂದೆ ಅಡುಗೆ ಮನೆಗೆ ಹೋದೆ. ನಮ್ಮಿಬ್ಬರಿಗೂ ಅಡುಗೆಮನೆಯಲ್ಲೇ ಬಾಳೆ ಹಾಕಿದ ಭಟ್ಟರ ಹೆಂಡತಿ, ಮಗಳಿಗೆ ಕೈಸಾಲೆಯ ಮೂಲೆಯಲ್ಲೇ ಬಾಳೆ ಹಾಕಿದರು. ಇದೇನು ಹೀಗೆ ಅಂತ ನಾನು ಯೋಚಿಸುತ್ತಿರುವಾಗಲೇ "ಅವ್ಳು ಒಳಗೆ ಬರೂಹಂಗಿಲ್ಲೆ ಇವತ್ತು.. ಹಹ್ಹ!" ಎಂದರು ಭಟ್ಟರ ಹೆಂಡತಿ. ಹುಡುಗಿ ಸಿಟ್ಟು ಮಾಡಿಕೊಂಡವಳಂತೆ ಅಮ್ಮನೆಡೆಗೆ ಒಮ್ಮೆ ಬಿರುಗಣ್ಣು ಬಿಟ್ಟು ತಲೆತಗ್ಗಿಸಿ ಅನ್ನ ಕಲಸತೊಡಗಿದಳು. "ನಿಧಾನ ಊಟ ಮಾಡು" ಎಂದರು ನನ್ನ ಬಳಿ ಭಟ್ಟರ ಹೆಂಡತಿ. ಶ್ಯಾಮಲಾಳ ಮುಗುಳ್ನಗೆ, ಬಿರುಗಣ್ಣು, ನೆಲ್ಲಿಕಾಯಿ ಹಿಡಿದಿದ್ದ ಚಿಗುರು ಬೆರಳುಗಳು ನನಗೆ ಬಾಳೆ ಎಲೆಯ ಮೇಲೆಲ್ಲ ಕಾಣಿಸಿ ಕಾಡತೊಡಗಿದ್ದರಿಂದ ಊಟ ತನ್ನಿಂತಾನೇ ನಿಧಾನವಾಗಿತ್ತು.

"ಕವಳ ಹಾಕ್ತೀಯೇನು?" ಭಟ್ಟರು ತಬಕನ್ನು ನನ್ನ ಮುಂದೆ ದೂಡಿದರು. ನಾನು ಬರೀ ಎರಡು ಅಡಿಕೆಯ ಹೋಳುಗಳನ್ನು ಬಾಯಿಗೆಸೆದುಕೊಂಡೆ. "ಸುಸ್ತಾಯ್ದು ನಿಂಗೆ. ಮೆತ್ತಿನ ಮೇಲೆ ಹಾಸಿಗೆ ಹಾಸ್ತಿ. ಮಲಗೂವಂತೆ" ಭಟ್ಟರು ಬಾಯೊಳಗಿನ ಕವಳದ ರಸವನ್ನು ಕುಲುಕಿಸುತ್ತ ಒಳನಡೆದರು. ನನಗೆ ಕಣ್ಣು ಎಳೆಯುತ್ತಿದ್ದವು.

ಅಷ್ಟೊತ್ತಿಗೆ ಕರೆಂಟು ಹೋಯಿತು! ಭಟ್ಟರ ಹೆಂಡತಿ ಇನ್ನೂ ಊಟ ಮಾಡುತ್ತಿದ್ದರು ಅನ್ನಿಸೊತ್ತೆ. "ಥೋ! ಕರೆಂಟ್ ಹೋಯ್ತಲ್ಲಪ್ಪ.. ಹೋಯ್, ಒಂಚೂರು ಲಾಟೀನ್ ಹಚ್ಚಿ ಬನ್ನಿ.." ಗಂಡನನ್ನು ಕೂಗಿದರು. ಭಟ್ಟರು ನನ್ನ ಹಾಸಿಗೆ ತಯಾರು ಮಾಡುವುದಕ್ಕೆ ಮಹಡಿಯ ಮೇಲಿದ್ದರು. ಅವರು ಮೆಟ್ಟಿಲಿಳಿದು ಬರುವುದಕ್ಕೆ ಸಮಯವಾಗಬಹುದೆಂದು ಬಗೆದು ನಾನೇ ಎದ್ದು, "ಎಲ್ಲಿದ್ದು ಅಕ್ಕಾ ಲಾಟೀನು..? ನಾನೇ ಹಚ್ತಿ.." ಎನ್ನುತ್ತಾ, ತಡಕಾಡುತ್ತಾ ಒಳಮನೆ ದಾಟಿ, ಅಡುಗೆ ಮನೆ ಇಲ್ಲೇ ಇರಬೇಕೆಂದು ಕೈಸಾಲೆ ಬಳಿ ಅತ್ತಿತ್ತ ಕೈಚಾಚುತ್ತಾ ಹುಡುಕಾಡುತ್ತಿರಬೇಕಾದರೆ, ಯಾರಿಗೋ ಕೈ ತಾಕಿದಂತಾಗಿ, ಅವರು ಸರಕ್ಕನೆ ಅತ್ತ ಸರಿದು, ಅದು ಯಾರೆಂದು ಕ್ಷಣದಲ್ಲಿ ಮೆದುಳಿಗೆ ಗೊತ್ತಾಗಿ, ಮೈಯಲ್ಲಿ ರೋಮಾಂಚನವಾಗಿ, ಕತ್ತಲಲ್ಲದು ಯಾರಿಗೂ ತಿಳಿಯದೇ ಹೋಗಿ, ನಾನು "ಎಲ್ಲಿದೆ ಲಾಟೀನು?" ಎಂದು ಮತ್ತೊಮ್ಮೆ ಕೇಳುವಷ್ಟರಲ್ಲಿ ಕರೆಂಟೇ ಬಂದುಬಿಟ್ಟಿತು. "ಹಾಳು ಕರೆಂಟು.. ಒಂದು ನಿಮಿಷಕ್ಕೆ ಹೋಗ್ತು, ಮತ್ತೊಂದು ನಿಮಿಷಕ್ಕೆ ಬರ್ತು!" ಗೊಣಗಿದರು ಭಟ್ಟರ ಹೆಂಡತಿ. ಸ್ಪರ್ಶವನ್ನಷ್ಟೇ ನನ್ನ ಕೈಗೆ ದಾಟಿಸಿದ ಆ ಚಿಟ್ಟೆ ಹಾರಿ ಆಗಲೇ ಕೈಸಾಲೆಯ ಮೂಲೆ ಸೇರಿತ್ತು. ನಾನು ಒಂದು ನಿಮಿಷ ಅಡುಗೆಮನೆಯ ಬಾಗಿಲಲ್ಲಿ ನಿಂತಿದ್ದು, ನಂತರ ಸೀದಾ ಮೆತ್ತಿಗೆ ಹೋಗಿ, ಭಟ್ಟರು ಹಾಸಿಕೊಟ್ಟ ಹಾಸಿಗೆಯಲ್ಲಿ ಪವಡಿಸಿಬಿಟ್ಟೆ: ಅಷ್ಟೆಲ್ಲ ಸುಸ್ತಾಗಿದ್ದರೂ ನಿದ್ರೆ ಬರದಿರುವಂತೆ ಮಾಡಿದ ಆ ಚಿಟ್ಟೆಯ ಸ್ಪರ್ಶಕ್ಕೆ ಮನಸಿನಲ್ಲೇ ಶಾಪ ಹಾಕುತ್ತಾ.

ಬೆಳಗ್ಗೆ ಭಟ್ಟರ ಮನೆಯಲ್ಲಿ ದೋಸೆ ತಿಂದು, ಊರಿಗೆ ಹೋದಾಗ ಶೆಡ್ತಿಕೆರೆಗೆ-ನಮ್ಮ ಮನೆಗೆ ಹೋಗಿಬರುವಂತೆ ಭಟ್ಟರ ಹೆಂಡತಿಗೆ ಹೇಳಿ, ನನ್ನ ಸ್ಪೋರ್ಟ್ಸ್ ಶೂಗೆ ಲೇಸ್ ಬಿಗಿಯುತ್ತಿದ್ದಾಗ, ಚಿಟ್ಟೆ ಶ್ಯಾಮಲಾ ಒಳಮನೆಯ ಬಾಗಿಲ ಹಿಂದೆ ನಿಂತಿದ್ದಳು. ಆಗತಾನೆ ಮಿಂದು ಬಂದಿದ್ದ ಅವಳ ಹೆರಳು ವಾಸ್ತುಬಾಗಿಲಿಗೆ ಇಳಿಬಿಟ್ಟ ತೋರಣವಾಗಿತ್ತು. ಜಿಂಕೆ ಕಣ್ಣು ಕಳ್ಳ ಕಣ್ಣಾಗಿದ್ದವು. "ಮತ್ತೆ ಸಿಗೋಣ?" ಮುಗುಳ್ನಗುತ್ತಾ ನಾನು ಕೈ ಚಾಚಿದೆ: ಇನ್ನು ಸಿಗುತ್ತದೋ ಇಲ್ಲವೋ ಎಂಬ ಸ್ಪರ್ಶ ಇದೊಮ್ಮೆ ದೊರಕಿಬಿಡಲಿ ಎಂಬಾಸೆಯಿಂದ. ಮೃದು ಬೆರಳುಗಳು ನನ್ನ ಹಸ್ತದೊಳಗೆ ಅರೆಕ್ಷಣವಿದ್ದು ಮರೆಯಲಾಗದಂತಹ ಬೆಚ್ಚನೆ ರಹಸ್ಯಕ್ಕೆ ಒಪ್ಪಂದವೆಂಬಂತೆ ಲಾಘವ ಮಾಡಿಕೊಂಡವು.

ಚುರುಕು ಬಿಸಿಲಲ್ಲಿ ಬೆಟ್ಟ ಇಳಿಯುವಾಗ ಹಿಂದಿನ ಬಾರಿ ಇಳಿದ ಘೋರ ನೆನಪುಗಳು.. 'ಕರ್ವಾಲೋ ಪಾಯಿಂಟಿ'ನಿಂದ ಒಂದೇ ಸಮನೆ ಇಳಿಜಾರು. ಇಳಿ ಇಳಿ ಇಳಿ. ಒತ್ತುವ ಕಲ್ಲುಗಳು. ಜಾರಿದರೆ ಪ್ರಪಾತ. ಸುಮಾರು ಒಂದು ತಾಸು ಇಳಿದ ಮೇಲೆ ಕಾಣಿಸತೊಡಗುವ ಭಟ್ಟರ ಮನೆ. ಅದೇ ಭಟ್ಟರ ಮನೆಯಾ ಎಂಬ ಅನುಮಾನ. ಇಳಿದು ಇಳಿದು ಇಳಿದು... ಕಾಲುಗಳಿಗೆ ಕೆಳಕೆಳಗೆ ಹೆಜ್ಜೆಯಿಡುವುದೊಂದು ಯಾಂತ್ರಿಕ ಕ್ರಿಯೆಯಂತಾಗಿ, ನಮಗಿನ್ನು ಸಮತಟ್ಟು ನೆಲದಲ್ಲಿ ನಡೆಯಲಿಕ್ಕೇ ಬರುವುದಿಲ್ಲವೇನೋ ಎಂದು ಭಯ ಹುಟ್ಟಿ... ಇನ್ನೇನು ಬಂದೇ ಬಿಟ್ಟಿತು ಎಂಬಂತೆ ತೋರಿದರೂ ಮತ್ತೆ ದೂರ ದೂರ ಹೋಗುವ 'ಭಟ್ಟರ ಮನೆ' ಎಂಬ ಮರೀಚಿಕೆ... ಭಟ್ಟರ ಮನೆಗಿಂತಲೂ ಮುಂಚೆ ಅರಣ್ಯ ಇಲಾಖೆಯವರ ಕಛೇರಿ. ಸುಸ್ತಾಗಿದ್ದ ನಾವೆಲ್ಲ ಅಲ್ಲೇ ಉಳಿದಿದ್ದ ತಿಂಡಿ ತಿಂದು, 'ಇಲ್ಲಿಂದ ದಾರಿ ಚೆನ್ನಾಗಿದೆ.. ಎರಡು ತಾಸಿನಲ್ಲಿ ಸುಬ್ರಹ್ಮಣ್ಯ ಮುಟ್ಟಬಹುದು' ಎಂಬ ಫಾರೆಸ್ಟರಿನ ಮಾತು ನಂಬಿ, ಭಟ್ಟರ ಮನೆಯಲ್ಲಿ ಅರ್ಧ ತಾಸು ರೆಸ್ಟ್ ತಗೊಂಡು ಹೋಗಬೇಕೆಂದಿದ್ದ ನಮ್ಮ ಯೋಜನೆಯನ್ನು ರದ್ದು ಮಾಡಿ, ದಢದಢನೆ ಇಳಿಯತೊಡಗಿದ್ದು. ಕತ್ತಲು.. ಕಾಡು.. ಕಲ್ಲು.. ಜೀವ ಹೋಗುವಂತೆ ನೋಯುತ್ತಿದ್ದ ಕಾಲು.. ಸುಸ್ತು.. ಆನೆ ಭಯ..

ಈಗ ಯೋಚಿಸಿದರೂ ಭಯವಾಗುತ್ತದೆ.. ಅಂಥದ್ದೊಂದು ದುಸ್ಸಾಹಸಕ್ಕೆ ಮುಂದಾಗಿದ್ದ ನಮ್ಮ ಹುಂಬತನದ ಬಗ್ಗೆ.. ಆದರೆ ಜೀವನದ ಅತ್ಯದ್ಭುತ ಚಾರಣಾನುಭವವನ್ನು ಕಲ್ಪಿಸಿದ ಆ ದಿನದ ಬಗ್ಗೆ ಖುಷಿಯಿದೆ. ಮಾಡಿದ ಸಾಹಸದ ಬಗ್ಗೆ ಏನೋ ಹೆಮ್ಮೆಯಿದೆ.

ಚಿಟ್ಟೆ ಸ್ಪರ್ಶದ ಗುಂಗಿನಲ್ಲಿ ನಾನು ಸುಮ್ಮನೆ ಇಳಿಯುತ್ತೇನೆ.. ದೂರದಲ್ಲಿ ಸುಬ್ರಹ್ಮಣ್ಯದ ದೇವಸ್ಥಾನದ ಘಂಟೆಯ ಶಬ್ದ ಕೇಳಿಸುತ್ತದೆ.. ಇನ್ನೇನು ಸ್ವಲ್ಪ ದೂರ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.. ಕಾಡ ನೆರಳು, ಇಣುಕು ಬಿಸಿಲು, ಹಕ್ಕಿ ಕುಕಿಲು, ನೆನಪ ಹೊನಲು... ಕುಮಾರ ಪರ್ವತದ ಎತ್ತರಕ್ಕೆ ಶರಣು.