Monday, June 22, 2009

ಒಂದು ಸ್ನೇಹ; ಒಂದು ಮೋಹ

ಅಲ್ಲೇ, ಮಂಟಪದ ಪಕ್ಕದಲ್ಲೇ ನಿಂತಿದ್ದೆ ನಾನು. ಯಾರೋ ಅಕ್ಷತೆಯ ಕಾಳುಗಳನ್ನು ಹಂಚಿ ಹೋದರು. ಮೊಳಗತೊಡಗಿದ ಗಟ್ಟಿಮೇಳದಲ್ಲಿ ಪುರೋಹಿತರ ‘ಮಾಂಗಲ್ಯಂ ತಂತು ನಾನೇನಾ..’ ಮುಳುಗುತ್ತಿದ್ದಹಾಗೇ ನಾನು ಅಕ್ಷತೆಯನ್ನು ಅವರತ್ತ ತೂರಿದೆ. ಪಟಪಟನೆ ಸದ್ದಾಯಿತು. ತಗ್ಗಿಸಿದ ಮೊಗದಲ್ಲಿನ ಅವಳ ಮುಗುಳ್ನಗೆಯನ್ನು ಕದ್ದು ನೋಡುತ್ತಾ ಅವನು ತಾಳಿ ಕಟ್ಟಿದ. ನನ್ನ ಅತ್ಯಾಪ್ತ ಗೆಳತಿ ಭಾವನಾ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಳು.

ಹಂಚಿದ ಸಿಹಿಯನ್ನು ಬಾಯಿಗಿಟ್ಟುಕೊಳ್ಳುತ್ತಾ ನಾನು ಕಲ್ಯಾಣ ಮಂಟಪದ ಸಭಾಂಗಣದ ಸಾಲು ಖುರ್ಚಿಗಳೆಡೆ ನಡೆದೆ. ಇದೇನು ಸೆಖೆ! ಹಹ್! ಬಾಗಿಲ ಬಳಿ ಪಾನಕ ಇಟ್ಟಿರಬೇಕು, ಕುಡಿಯಬೇಕೆಂದುಕೊಂಡೆ. ನಾನು ಪಾನಕ ತೆಗೆದುಕೊಳ್ಳುತ್ತಿರಬೇಕಾದರೆ ಯಾರೋ ಹೆಗಲಿನ ಮೇಲೆ ಕೈ ಹಾಕಿದಂತಾಗಿ ತಿರುಗಿ ನೋಡಿದರೆ ಚಂದ್ರು! ಚಂದ್ರು ಅಂದ್ರೆ ಚಂದ್ರಶೇಖರ, ನನ್ನ ಎಕ್ಸ್-ಕಲೀಗು. "ಅರೆ ವ್ಹಾ, ಈಗ ಬರ್ತಿದಿಯೇನೋ ದೇವ್ರೂ?" ಎನ್ನುತ್ತಾ ಅವನಿಗೊಂದು ಪಾನಕದ ಗ್ಲಾಸ್ ಕೊಟ್ಟು, ಇಬ್ಬರೂ ದೂರದ ಖುರ್ಚಿಯೊಂದರೆಡೆಗೆ ಹೋಗಿ ಕುಳಿತೆವು. ಮಂಟಪದಲ್ಲಿದ್ದ ಭಾವನಾ ಚಂದ್ರುವನ್ನು ನೋಡಿ ಮುಗುಳ್ನಕ್ಕಳು. ಚಂದ್ರು ಕೈ ಮಾಡಿದ.

"ಇದು ಹೇಗಯ್ಯಾ ಆಯ್ತು? ಆದ್ರೂ ನೀನು ಹೇಗೋ ಇಷ್ಟೊಂದು ಖುಶಿಯಿಂದ ಇದೀಯಾ? ನಾನೇನೋ ನೀನು ಮದುವೆಗೆ ಬರೋದೇ ಇಲ್ಲ ಅಂದ್ಕೊಂಡಿದ್ದೆ.. ರೂಮಲ್ಲಿ ಒಬ್ನೇ ದೇವದಾಸ್ ಥರ ಕುಡೀತಾ ಕೂತಿರೋ ಚಿತ್ರಾನಾ ಕಲ್ಪಿಸಿಕೊಂಡು ಬಂದಿದ್ದೆ" ಸಣ್ಣ ದನಿಯಲ್ಲಿ ಹೇಳಿದ ಚಂದ್ರು. ಚಂದ್ರುವಿನಿಂದ ನಿರೀಕ್ಷಿಸದ ಪ್ರತಿಕ್ರಿಯೆಯೇನು ಅಲ್ಲ ಇದು.. ಚಂದ್ರುವೇನು, ಬಹುಶಃ ನನ್ನ ಸ್ನೇಹಿತರೆಲ್ಲರನ್ನೂ ಕಾಡ್ತಿರೋ ಪ್ರಶ್ನೇನೂ ಹೌದು: "ಭಾವನಾ ಮತ್ತು ಅಂಶು ಲವರ‍್ಸ್ ಆಗಿರ್ಲಿಲ್ವಾ? ಅಷ್ಟೊಂದು ಕ್ಲೋಸ್ ಇದ್ರು ಮತ್ತೆ? ಯಾವಾಗ ನೋಡಿದ್ರೂ ಒಟ್ಟೊಟ್ಟಿಗೆ ಇರ್ತಿದ್ರು.. ಈಗ ಭಾವನಾ ಯಾರನ್ನೋ ಮದುವೆ ಆಗ್ತಿದಾಳೆ.. ಮತ್ತೆ ಅಂಶು ತಮ್ಮ ಮನೆಯದೇ ಮದುವೆಯೇನೋ ಅನ್ನೋ ಹಾಗೆ ಸಂಭ್ರಮದಿಂದ ಓಡಾಡ್ತಿದಾನೆ.. ಇದು ಹ್ಯಾಗೆ ಸಾಧ್ಯ?"

ಹೇಳಬೇಕು ಎಲ್ಲರಿಗೂ ಒಂದು ತಂಪು ಸಂಜೆಯಲ್ಲಿ ಕೂರಿಸಿಕೊಂಡು: ಭಾವನಾ ಎಂಬ ನನ್ನ ಪ್ರೀತಿಯ ಗೆಳತಿಯ ಬಗ್ಗೆ. ಭಾವನಾ ಎಂಬ ಪ್ರವಾದಿಯ ಬಗ್ಗೆ. ನನ್ನ ಭಾವಕೋಶದ ಶಕ್ತಿಯ ಬಗ್ಗೆ. ನನ್ನನ್ನು ಇಲ್ಲಿಯವರೆಗೆ ಕರೆತಂದ ಮಾಯಾಯುಕ್ತಿಯ ಬಗ್ಗೆ. ಧೃತಿಯ ಮತ್ತೊಂದಾವೃತಿಯ ಬಗ್ಗೆ. ಭಾವನಾ ಮತ್ತು ಅಂಶು ಪ್ರೇಮಿಗಳಾಗಿರಲಿಲ್ಲ. ಅವರು ಅಪ್ಪಟ ಸ್ನೇಹಿತರಾಗಿದ್ದರು. ಸ್ನೇಹವೆಂಬ ಶಬ್ದದ ಅರ್ಥವನ್ನು ಹೊಸ ಬಣ್ಣಗಳಲ್ಲಿ ಬರೆದಿದ್ದರು ಅಂತ.

ಕವಿಸಮಯ ಜಾರಿಗೆ ಬಂದ ಯಾವುದೋ ಕವಿ ‘ಕಾರಿರುಳ ಖಿನ್ನತೆಯಲ್ಲಿ ಬೆಳುದಿಂಗಳಿಳಿದಂತೆ, ಮುಂಗಾರು ಮೂಡಿದಂತೆ, ತಂಗಾಳಿ ತೀಡಿದಂತೆ...’ ಎಂದೆಲ್ಲ ಬರೆಯುತ್ತಿದ್ದ ಘಳಿಗೆಯಲ್ಲೇ ಇತ್ತ ನನ್ನ ಸ್ನೇಹಕ್ಷೇತ್ರದಲ್ಲಿ ಕಾಲಿಟ್ಟವಳು ಭಾವನಾ. ಇಂಟರ್‌ವ್ಯೂಗೆಂದು ನನ್ನ ಸರದಿಗಾಗಿ ಕಾಯುತ್ತ ಕೂತಿದ್ದ ಆ ರಿಸೆಪ್ಷನ್ ಹಾಲಿನ ಏಸಿಯ ಗಾಳಿಯ ಮೌನವನ್ನು ಒಮ್ಮೆಲೇ ಕಲಕುವಂತೆ "ನೀವೂ ಮಲ್ಲೇಶ್ವರಮ್ಮಾ?" ಅಂತ ಕೇಳಿದ್ದಳು. "ಹೂಂ, ನಿಮಗೆ ಹೇಗೆ ಗೊತ್ತಾಯ್ತು?" ಅವಳ ಮುಖವನ್ನು ನೇರವಾಗಿ ನೋಡದೇ ಕೇಳಿದೆ. "ನಿಮ್ಮ ಕೈಯಲ್ಲಿರೋ ರೆಸ್ಯೂಮ್‌ನಿಂದ ಗೊತ್ತಾಯ್ತು" ಉತ್ತರಿಸಿದಳು. ನನಗಿಂತ ಮೊದಲು ಅವಳಿಗೆ ಕರೆ ಬಂತು. ನನ್ನೆದುರಿಂದ ಎದ್ದು ಹೋಗುವಾಗ ಕಂಡ ಅವಳ ರೆಸ್ಯೂಮಿನಿಂದ ಹೆಸರು ಭಾವನಾ ಅಂತ ಗೊತ್ತಾಯ್ತು. ಹತ್ತು ನಿಮಿಷದ ನಂತರ ಹೊರಬಂದ ಭಾವನಾ, ಹೆದರಿಕೆಯಿಂದ ಚಡಪಡಿಸುತ್ತಾ ಕೂತಿದ್ದ ನನ್ನ ಬಳಿ ಬಂದು ಸಣ್ಣ ದನಿಯಲ್ಲಿ "ಏನೂ ನರ್ವಸ್ ಆಗ್ಬೇಡಿ.. ಇಂಟರ್‌ವ್ಯೂವರ್ ಇಸ್ ಟೂ ಕೂಲ್. ಸ್ವಲ್ಪಾನೂ ಟೆನ್ಷನ್ ಮಾಡಿಕೊಳ್ಳದೇ ಅಟೆಂಡ್ ಮಾಡಿ. ಆಲ್ ದಿ ಬೆಸ್ಟ್!" ಅಂದು ನಗೆಹೂವಿನೊಂದಿಗೆ ಹೊರಟು ಹೋಗಿದ್ದಳು.

ಆಮೇಲೆ ಆ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದ್ದು, ಕೆಲಸದ ಮೊದಲ ದಿನ ರಿಸೆಪ್ಷನ್‌ನಲ್ಲಿ ಮತ್ತೆ ಸಿಕ್ಕಿದ್ದು, ತೀರಾ ಹಳೆಯ ಪರಿಚಿತರಂತೆ ಒಬ್ಬರಿಗೊಬ್ಬರು ಕೈ ಕುಲುಕಿ ಪರಸ್ಪರ ‘ಕಂಗ್ರಾಟ್ಸ್’ ಹೇಳಿಕೊಂಡಿದ್ದು ...ಆಹ್, ಎಲ್ಲಾ ನಮ್ಮ ಸ್ನೇಹದ ಡಾಕ್ಯುಮೆಂಟರಿಯ ಅಡಿಯಲ್ಲಿ ನೆನಪಾಗಿ ಬೆಚ್ಚಗಿವೆ. ಮಧ್ಯಾಹ್ನ ಒಟ್ಟಿಗೇ ಕಾಫಿ ಕುಡಿಯುವಾಗ ಹೇಳಿದ್ದೆ: "ನೀವವತ್ತು ಹಾಗೆ ಹುರಿದುಂಬಿಸಿ ಹೋಗಿರದಿದ್ದರೆ ನಾನು ಇಂಟರ್‌ವ್ಯೂನ ಅಷ್ಟೊಂದು ನಿರ್ಭಯವಾಗಿ ಫೇಸ್ ಮಾಡ್ಲಿಕ್ಕೆ ಆಗ್ತಾನೇ ಇರ್ಲಿಲ್ಲ, ಇಲ್ಲಿವತ್ತು ಹೀಗೆ ಮತ್ತೆ ಸಿಗ್ತಾನೂ ಇರ್ಲಿಲ್ಲ" -ಅಂತ.

ಭಾವನಾ ಅತ್ಯಂತ ಚಟುವಟಿಕೆಯ, ಆತ್ಮವಿಶ್ವಾಸದ ಹುಡುಗಿ. ಆಕೆಯ ಚುರುಕು ನಡಿಗೆ, ಸೆಳೆಯುವ ಕಣ್ಣು, ಅಸ್ಖಲಿತ ಭಾಷೆ ಮತ್ತು ಯಾರೊಂದಿಗಾದರೂ ಅಷ್ಟು ಬೇಗನೆ ಬೆರೆಯುವ ರೀತಿ -ಎಲ್ಲಾ ಕೆಲವೇ ತಿಂಗಳಲ್ಲಿ ಕಂಪನಿಯ ಪ್ರಶಂಸೆಗೆ ಒಳಗಾದವು. ಹಾಗೆಯೇ ನನ್ನ ಸಂಕೋಚ, ಸೋಮಾರಿತನ, ಕೀಳರಿಮೆಯ ಸ್ವಭಾವ ಮತ್ತು ಹಳ್ಳಿಯಿಂದ ಬಂದ ಭಾಷೆಯ ದುರ್ಬಲತೆ -ಅಲ್ಲೇ ಉಳಿಯುವಂತೆ ಮಾಡಿದವು. ಭಾವನಾ ಸೀನಿಯರ್ ಆದಳು; ನಾನು ಹಿಂದೆಯೇ ಉಳಿದೆ.

ಅದೊಮ್ಮೆ ನಾನು ಮಾಡಿದ ಪುಟ್ಟ ತಪ್ಪಿನಿಂದಾಗಿ ಅನಾಹುತವೊಂದು ಆಗುವುದಿತ್ತು. ಎಮ್.ಡಿ. ಕೆಂಡಾಮಂಡಲವಾಗಿದ್ದರು. ಆದರೆ ಭಾವನಾ ಅದರ ಸಂಪೂರ್ಣ ಹೊಣೆಗಾರಿಕೆ ಹೊತ್ತು, ಜಾಣ್ಮೆಯಿಂದ ನಿರ್ವಹಿಸಿ, ನನ್ನನ್ನು ಸಂಕಷ್ಟದಿಂದ ಪಾರು ಮಾಡಿದಳು. ನನಗೆ ಒಂದೇ ಪ್ರಶ್ನೆ: ಇದ್ಯಾಕೆ ಈ ಪರಿ ನನ್ನನ್ನು ಹಚ್ಚಿಕೊಳ್ಳುತ್ತಾಳೆ ಈ ಹುಡುಗಿ? ಭಾವನಾ ಮತ್ತು ನಾನು ಪ್ರತಿದಿನ ಒಟ್ಟಿಗೇ ಊಟ ಮಾಡುವುದು, ಕಂಪನಿಯ ಬಸ್ಸಿನಲ್ಲಿ ಓಡಾಡುವಾಗ ಒಟ್ಟಿಗೇ ಕೂರುವುದು, ಇಬ್ಬರ ಮನೆಯೂ ಇರುವುದು ಒಂದೇ ಏರಿಯಾದಲ್ಲಾದ್ದರಿಂದ ಭಾನುವಾರಗಳಲ್ಲಿ ಸಹ ಸಿಗುವುದು. ಅವಳ ನನ್ನನ್ನು ತನ್ನ ಮನೆಗೆ ಕರೆಯುತ್ತಾಳೆ. ಮನೆಯಲ್ಲೆಲ್ಲರಿಗೂ ‘ಮೈ ಕಲೀಗ್ ಅಂಡ್ ಬೆಸ್ಟ್ ಫ್ರೆಂಡ್’ ಅಂತ ಪರಿಚಯಿಸಿದ್ದಾಳೆ. ನನ್ನ ರೂಮಿಗೆ ಬರುತ್ತಾಳೆ. ಪ್ರಪಂಚದ ಎಲ್ಲ ವಿಷಯವನ್ನೂ ಮಾತಾಡುತ್ತಾಳೆ. ನನ್ನಂತಹ ಮೌನಿಯನ್ನೂ ಮಾತಾಡುವಂತೆ ಮಾಡುತ್ತಾಳೆ. ಒಳ್ಳೆಯ ಪುಸ್ತಕಗಳನ್ನು ರೆಫರ್ ಮಾಡುತ್ತಾಳೆ. ಎಲ್ಲಾ ತರಹದ ಎಸ್ಸೆಮ್ಮೆಸ್ಸುಗಳನ್ನೂ ಫಾರ್ವರ್ಡ್ ಮಾಡುತ್ತಾಳೆ. ನಾನು ಒಬ್ಬ ಹುಡುಗಿಯೊಂದಿಗೆ ಇಷ್ಟು ಸಲಿಗೆಯಿಂದ ಬೆರೆಯುತ್ತಿದ್ದುದು ಇದೇ ಮೊದಲು... ಕೇಳಿಕೊಳ್ಳುತ್ತೇನೆ ಮತ್ತೆ: ಇದು ಪ್ರೀತಿಯಾ? ಅವಳೊಂದಿಗೆ ಶಾಪಿಂಗ್-ಗೀಪಿಂಗ್ ಅಂತ ಹೋದಾಗ ಎದುರಾಗುವ ಚಂದ ಹುಡುಗಿಯರನ್ನು ನನಗೆ ತೋರಿಸಿ ಕಿಚಾಯಿಸುವುದು.. "ಒಂದು ಗರ್ಲ್‌ಫ್ರೆಂಡ್ ಮಾಡ್ಕೊಳೋ ಬೇಗ" ಅನ್ನೋದು... ಏನು ಇವೆಲ್ಲಾ? ಏಕಾಂತದ ಕ್ಷಣಗಳಲ್ಲಿ ಕಾಡುತ್ತದೆ ತುಮುಲ: ಒಬ್ಬ ಹುಡುಗನೊಂದಿಗೆ ಒಬ್ಬ ಹುಡುಗಿ ಇಷ್ಟೊಂದು ಕ್ಲೋಸ್ ಆಗಿ ಇರಬಹುದಾ? ಇದು ಕೇವಲ ಸ್ನೇಹವಾ? ಕಲೀಗುಗಳ ಮಧ್ಯೆಯಂತೂ ನಮ್ಮ ಒಡನಾಟ ದೊಡ್ಡ ಗಾಸಿಪ್ಪು. ಹಾಗಾದರೆ ಅವರು ಹೇಳುವಂತೆ ಇದು ಪ್ರೇಮವಾ?

ಆದರೆ ಹಾಗಂದುಕೊಳ್ಳಲಿಕ್ಕೇ ನನಗೆ ಧೈರ್ಯವಾಗುತ್ತಿರಲಿಲ್ಲ.. ಬಹುಶಃ ಭಾವನಾಳ ಆ ಆತ್ಮವಿಶ್ವಾಸದ ಗಟ್ಟಿತನವೇ ನನಗೆ ಆಕೆಯನ್ನು ನನ್ನ ಪ್ರೇಯಸಿಯೆಂದು ಕಲ್ಪಿಸಿಕೊಳ್ಳಲಿಕ್ಕೆ ಹಿಂಜರಿಯುವಂತೆ ಮಾಡುತ್ತಿತ್ತು. ನನಗೆ ಭಾವನಾಳನ್ನು ಒಬ್ಬ ಫ್ರೆಂಡ್ ಅಂತ ಅಂದುಕೊಂಡರೇನೇ ಹೆಚ್ಚು ಹಿತವೆನಿಸುತ್ತಿತ್ತು. ನನ್ನ ದುಃಖಗಳನ್ನು ತನ್ನೊಂದಿಗೆ ಹಂಚಿಕೊಳ್ಳಬಲ್ಲವಳು, ನನ್ನ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲವಳು, ನಾನು ಮೂಡಿನಲ್ಲಿಲ್ಲದಿದ್ದಾಗ ಹುರಿದೊಂಬಿಸಿ ನಗಿಸುವವಳು, ನನ್ನ ಸಣ್ಣ ಗೆಲುವುಗಳನ್ನು ತುಂಬು ಪ್ರೀತಿಯಿಂದ ಅಭಿನಂದಿಸುವವಳು ಮತ್ತು ನನ್ನಲ್ಲಿ ಹೊಸ ಕನಸುಗಳನ್ನು ಚಿಗುರಿಸಿ ಅವುಗಳನ್ನು ನನ್ನವಾಗಿಸಿಕೊಳ್ಳುವಂತೆ ಪ್ರೇರೇಪಿಸುವವಳು -ಇಂತಹ ಗೆಳತಿಯೊಬ್ಬಳು ನನಗೆ ಬೇಕಿದ್ದಳು. ಮತ್ತು ಭಾವನಾ ಅವೆಲ್ಲವೂ ಆಗಿದ್ದಳು. ನಾನೂ ಕಂಪನಿಯ ಕೆಲಸಗಳಲ್ಲಿ ಸಾಧನೆಗೈದಿದ್ದು, ನನಗೊಂದು ರೆಕಗ್ನಿಷನ್ ಸಿಗುವಂತಾದದ್ದು -ಎಲ್ಲಾ ಭಾವನಾಳ ಕೃಪೆಯಿಂದಲೇ. ಅದ್ಯಾವುದೋ ಮುಹೂರ್ತದಲ್ಲಿ ನಿರ್ಧರಿಸಿಬಿಟ್ಟಿದ್ದೆ: ನನಗೆ ಇದಕ್ಕಿಂತ ಹೆಚ್ಚಿನದೇನೂ ಬೇಡ ಭಾವನಾಳಿಂದ. ಇದನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದಿಲ್ಲ. ಇದು ಪ್ರೀತಿಯಾಗಿರಬೇಕಾದ ಅವಶ್ಯಕತೆಯೇ ಇಲ್ಲ. ಆಕೆ ನನ್ನ ಗೆಳತಿಯಾಗೇ ಇರಲಿ.

ಪ್ರಾಜೆಕ್ಟೊಂದನ್ನು ಮುಗಿಸಲಿಕ್ಕಾಗಿ ಭಾವನಾ ಡೆಲ್ಲಿಗೆ ಹೋಗಬೇಕಾಗಿ ಬಂತು. ಆಕೆ ತನ್ನೊಬ್ಬಳಿಂದ ಡೆಡ್‌ಲೈನ್ ಒಳಗೆ ಇದನ್ನು ಮುಗಿಸಲು ಸಾಧ್ಯವೇ ಇಲ್ಲ ಅಂತ ನನ್ನನ್ನೂ ಜತೆಗೆ ಕರೆದೊಯ್ದಳು. ರೂಮ್ ಬುಕ್ ಮಾಡುವಾಗ ಒಂದೇ ರೂಮ್ ಸಾಕು ಎಂದಳು. ಐದು ದಿನಗಳ ಪ್ರಾಜೆಕ್ಟ್ ಮುಗಿಸಿ ವಾಪಸಾಗುವಾಗ ವಿಮಾನದ ಸೀಟಿಗೊರಗಿ ಮಾತಾಡಿದಳು ಭಾವನಾ:

"ನಿಂಗೆ ಆಶ್ಚರ್ಯ ಅಲ್ವಾ ನಾನು ನಿಂಜೊತೆ ಯಾಕೆ ಇಷ್ಟೊಂದು ಕ್ಲೋಸಾಗಿ ಇರ್ತೀನಿ ಅಂತ? ಅದರ ಜೊತೆಗೇ ಮನಸ್ಸಿನಲ್ಲಿ ನೂರಾರು ಅನುಮಾನದ ಪ್ರಶ್ನೆಗಳು ಅಲ್ವಾ? ಬಾಯಿಬಿಟ್ಟು ಕೇಳಲಿಕ್ಕೆ ಸಾಧ್ಯವೇ ಇಲ್ಲದಷ್ಟು ಹಿಂಜರಿಕೆ ಅಲ್ವಾ? ಹೂಂ..?" ಮಾತು ಬೆಳೆಯುವ ಮುನ್ನವೇ ಹೇಳಿಬಿಟ್ಟೆ: "ನೀನು ‘ಮೈ ಆಟೋಗ್ರಾಫ್’ ಸಿನಿಮಾ ನೋಡಿದೀಯಾ ಭಾವನಾ? ಅದರಲ್ಲಿನ ಮೀನಾಳ ಪಾತ್ರ ನಂಗೆ ತುಂಬಾ ಇಷ್ಟ.. ಆಕೆ ಸುದೀಪ್‌ನನ್ನು ಕೇವಲ ಸ್ನೇಹದ ಬಲದಿಂದ ಬೆಳೆಸೋ ರೀತಿ, ಫೆಂಟಾಸ್ಟಿಕ್! ಅವಳ ಬಿಹೇವಿಯರ್, ಅವಳ ಮ್ಯಾನರಿಸಂ, ಅವಳ ವ್ಯಕ್ತಿತ್ವದ ಉನ್ನತಿ... ಓಹ್! ಯು ನೋ ವ್ಹಾಟ್? ನಂಗೆ ನಿನ್ನಲ್ಲಿ ಮೀನಾ ಕಾಣ್ತಾಳೆ.. ನೀನು ಕೇಳಿದ ಪ್ರಶ್ನೆಗಳೆಲ್ಲಾ ಸತ್ಯ. ಆದರೆ ನಂಗೆ ಅದ್ಯಾವುದಕ್ಕೂ ಉತ್ತರ ಬೇಡ. ನೀನು ಕೇವಲ ನನ್ನ ಗೆಳತಿಯಾಗಿದ್ದರೆ ಸಾಕು.. ಮೈ ಬೆಸ್ಟ್ ಫ್ರೆಂಡ್, ಲೈಕ್ ನೌ!"

ಭಾವನಾಳಿಗಾದ ಖುಶಿಯನ್ನು ವ್ಯಕ್ತಪಡಿಸಲು ಅವಳ ಇಷ್ಟಗಲ ಅರಳಿದ ಮುಖಕ್ಕೂ ಸಾಧ್ಯವಾಗಲಿಲ್ಲ. "ಥ್ಯಾಂಕ್ಯೂ ಡಿಯರ್.. ಥ್ಯಾಂಕ್ಯೂ ವೆರಿ ಮಚ್! ನನ್ನ ಭಾರ ಕಡಿಮೆ ಮಾಡಿದೆ. ಜಗತ್ತು ಏನೇ ಆದ್ರೂ ನಾವಿಬ್ಬರೂ ಫ್ರೆಂಡ್ಸ್. ಮುಂದಿನ ತಿಂಗಳು ನನ್ನ ಮದುವೆ. ನಿನ್ನ ಬಳಿ ಹೇಳಿಕೊಳ್ಳದೇ ಮುಚ್ಚಿಟ್ಟಿದ್ದ ಸಂಗತಿ ಅಂದ್ರೆ ಇದೊಂದೇ, ಸಾರಿ.." ಅಂದು ಬ್ಯಾಗಿನಿಂದ ಇನ್ವಿಟೇಶನ್ ತೆಗೆದು ಕೊಟ್ಟಳು. ವಿಮಾನದ ಕಿಟಕಿಯಿಂದ ನೋಡಿದವನಿಗೆ ಮುಗಿಲು ಮುಗಿಯುವುದೇ ಇಲ್ಲವೇನೋ ಅನ್ನಿಸಿತು.

* * *

ಇಡೀ ಕಲ್ಯಾಣ ಮಂಟಪ ಸುತ್ತಾಡಿಕೊಂಡು ಬಂದ ಚಂದ್ರು ಯೋಚನಾಮಗ್ನನಾಗಿ ಕೂತಿದ್ದ ನನ್ನನ್ನು ತಟ್ಟಿ ಎಬ್ಬಿಸಿ ಕೇಳಿದ: "ಅಂತೂ ಈಗ ಶುರುವಾಯ್ತಾ ಡಿಪ್ರೆಶನ್ನು? ಎಲ್ಲಾ ಮುಗಿದ ಮೇಲೆ? ಆವಾಗ್ಲೇ ಒಂದು ಪ್ರಪೋಸ್ ಮಾಡೋ ಅಂದ್ರೆ ಕೇಳಲಿಲ್ಲ... ಇನ್ನು ಅವಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗೀ ಕೊರಗೀ.. .." ಚಂದ್ರುವಿನ ಅಭಿನಯಕ್ಕೆ ನಕ್ಕೆ ನಾನು. ಇವರಿಗೆ ನಂಬಿಕೆ ಬರುವಂತೆ ತಿಳಿಸಿ ಹೇಳಲಿಕ್ಕಾದರೂ ಆಗುತ್ತಾ ಇದನ್ನೆಲ್ಲಾ? ಸಾಧ್ಯವೇ ಇಲ್ಲವೆನಿಸಿತು.. ಮಂಟಪದತ್ತ ನೋಡಿದೆ. ಗಂಡನೊಂದಿಗೆ ಇನ್ನೂ ಏನೇನೋ ಪೂಜೆ, ಹವನಗಳಲ್ಲಿ ಮುಳುಗಿದ್ದಳು ಭಾವನಾ. ಅವಳು ಸೆಖೆಯಲ್ಲಿ ಬೆವರುತ್ತಾ ಕಷ್ಟ ಪಡುತ್ತಿದ್ದುದನ್ನು ಕಂಡು ಈ ಬೇಸಿಗೆ ಕಾಲದಲ್ಲೇ ಯಾಕೆ ಎಲ್ಲರೂ ಮದುವೆಯಾಗುತ್ತಾರೋ ಅನ್ನಿಸಿತು.

[ಪ್ರಕಟ: ಕನ್ನಡ ಪ್ರಭದ 'ಸಖಿ' ಪಾಕ್ಷಿಕ . ಟಾಪಿಕ್: Intimate friendship between a boy n girl]

^^^^^^^^^^^^

"..ಅವಳ ಸೌಂದರ್ಯಕ್ಕೆ ಆ ಅಪರಾತ್ರಿ ಕೂಡ ಬೆರಗಾದಂತಿತ್ತು. ಹಚ್ಚಿಟ್ಟ ದೀಪಕ್ಕೆ ಹಾಲು ಬೆರೆಸಿದಂಥ ಬಣ್ಣ. ತನಗಿರುವ ಶ್ರದ್ಧೆಯನ್ನೆಲ್ಲ ಬಳಸಿ ಅವಳ ರೂಪು ತಿದ್ದಿರಬೇಕು ಭಗವಂತ. ಅವಳ ಕಣ್ಣುಗಳಲ್ಲಿದ್ದುದು ಸಾತ್ವಿಕ ಚೆಲುವು. ನಕ್ಕರೆ ಅದೆಂಥದೋ ಸೌಮ್ಯ ಕಳೆ. ಒಂದು ಕೆನ್ನೆಯ ಮೇಲೆ ಮಾತ್ರ ಗುಳಿ ನೆಗ್ಗುತ್ತದೆ. ಮುಂದಲೆಯಲ್ಲಿ ಸುಳಿದಿರುಗಿದ ಮಿನ್ನಾಗರಗಳಂತಹ ದಟ್ಟ ಗುಂಗುರು ಕೂದಲು. ಅವಳ ಹುಬ್ಬುಗಳಲ್ಲಿ ಒಂದು ಕಾನ್ಫಿಡೆನ್ಸು ಸರಿದಾಡುತ್ತದೆ. ಕೆಳ ತುಟಿಗೆ ಮೆತ್ತಿಕೊಂಡಂತಿರುವ ಪುಟ್ಟ ಮಚ್ಚೆಯಲ್ಲಿ ಅದೆಂಥದೋ ಅಮಾಯಕತೆ..."

ನಾನು ಮೊದಲ ವರುಷದ ಕಾಲೇಜು ಹುಡುಗನಾಗಿದ್ದಾಗ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ‘ಹೇಳಿ ಹೋಗು ಕಾರಣ’ ಧಾರಾವಾಹಿ ಬರುತ್ತಿತ್ತು. ಡಾಕ್ಟರಾಗಬೇಕೆಂದು ಬೀದಿಯಲ್ಲಿ ನಿಂತು ಕನಸು ಕಂಡ ಹುಡುಗಿ ಪ್ರಾರ್ಥನಾಳನ್ನು ಮಿಠಾಯಿ ಅಂಗಡಿ ಹುಡುಗ ಹಿಮವಂತ ಚನ್ನರಾಯಪಟ್ಟಣದಿಂದ ಶಿವಮೊಗ್ಗದವರೆಗೆ ನಡೆಸಿಕೊಂಡು ಬಂದಿದ್ದ. ಮನೆಯನ್ನು ತಿರಸ್ಕರಿಸಿ, ಹಿಮವಂತನೆಂಬ ಹುಡುಗನೆಡೆಗೆ ಅದ್ಯಾವುದೋ ನಂಬಿಕೆ ಇರಿಸಿ ಬರಿಗೈಯಲ್ಲಿ ಹೊರಟ ಅವಳ ಬಲಗಾಲ ಹೆಬ್ಬೆರಳಿಗೆ ಎಡವಿ ಗಾಯವಾಗಿತ್ತು. ಶಿವಮೂರ್ತಿ ಸರ್ಕಲ್ಲಿನ ಬಳಿಯ ಒಂದೇ ಕೋಣೆಯ ಹಿಮವಂತನ ಗೂಡಿನೊಳಗೆ ದಾಖಲಾದ ಹುಡುಗಿ ಬೆಳಗ್ಗೆ ಎದ್ದು, ಸ್ನಾನ ಮಾಡಿ ಬಂದು, ಪದ್ಮಾಸನ ಹಾಕಿ ಕುಳಿತು ‘ಯಾಕುಂದೇಂದು ತುಷಾರ ಹಾರ ಧವಳಾ..’ ಅಂತ ಪ್ರಾರ್ಥನೆ ಮಾಡುತ್ತಿದ್ದಳು. ಹಿಮವಂತನೆಡೆಗೆ ಅವಳಿಗೊಂದು ದೈವೀಕ ಪ್ರೀತಿಯಿತ್ತು. ಆರಾಧನೆಯಿತ್ತು. ನಿಷ್ಠೆಯಿತ್ತು.

ಮತ್ತು ನನಗದು ಇಷ್ಟವಾಗಿತ್ತು! ಕಾಲೇಜಿನ ಹುಡುಗಿಯರಲ್ಲೆಲ್ಲಾ ಪ್ರಾರ್ಥನಾಳನ್ನು ಹುಡುಕುತ್ತಿದ್ದೆ. ಮನೆಗೆ ಬಂದು ಮತ್ತೆ ಪತ್ರಿಕೆ ತೆರೆದು ‘ಆ ಹುಡುಗಿ ಪ್ರಾರ್ಥನಾಳೊಂದಿಗೆ ಮ್ಯಾಚ್ ಆಗುತ್ತಾಳಾ?’ ಅಂತ ನೋಡುತ್ತಿದ್ದೆ. ಕಣ್ಣಲ್ಲಿ ಸಾತ್ವಿಕ ಚೆಲುವು, ನಗುವಿನಲ್ಲಿ ಸೌಮ್ಯ ಕಳೆ, ಒಂದೇ ಕೆನ್ನೆ ಮೇಲೆ ಗುಳಿ, ಹುಬ್ಬಿನಲ್ಲಿ ಕಾನ್ಫಿಡೆನ್ಸು, ಕೆಳತುಟಿ ಕೆಳಗಿನ ಮಚ್ಚೇಲಿ ಅಮಾಯಕತೆ! ಹಹ್! ಕೆನ್ನೆ ಮೇಲೆ ಗುಳಿ ಬೀಳೋ ಹುಡುಗಿಯರೇನೂ ಬಹಳ ಇದ್ದರು; ಆದರೆ ಈ ಮಚ್ಚೆ ಮಾತ್ರ ನಂಗೆ ಸಿಗಲೇ ಇಲ್ಲ! ಮತ್ತೆ ಇನ್ನುಳಿದ ಗುಣವಿಶೇಷಣಗಳನ್ನೆಲ್ಲಾ ಗುರುತಿಸುವುದು ಹೇಗೆಂದೇ ನನಗಾಗ ಗೊತ್ತಿರಲಿಲ್ಲ. ಹೀಗಾಗಿ, ನನ್ನ ಪ್ರಾರ್ಥನಾಳಂತಹ ಹುಡುಗಿಯ ಹುಡುಕಾಟ ಅವಿರತವಾಗಿಬಿಟ್ಟಿತು.

ಆದರೆ, ಅಂತಹ-ಹಾಗಿದ್ದ ಪ್ರಾರ್ಥನಾ, ದಾವಣಗೆರೆಗೆ ಮೆಡಿಕಲ್ ಓದಲಿಕ್ಕೆಂದು ಹೋಗಿ, ಅವಳಿಗೆ ಹೊರ ಪ್ರಪಂಚದ ಪರಿಚಯ ಆಗಿ, ಮನಸು ಹಕ್ಕಿಯಾಗಿ, ದೇಬಶಿಶು ಎಂಬ ಬುದ್ಧಿವಂತ ಫ್ಲರ್ಟ್‌ನ ಮೋಹಕ್ಕೆ ಬೀಳುತ್ತಾಳೆ. ತನ್ನನ್ನೇ ಪ್ರಪಂಚವೆಂದು ಭಾವಿಸಿದ್ದ, ಕೇವಲ ತನಗಾಗಿಯೇ-ತನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿಯೇ ದೂರದೂರಿನಲ್ಲಿ ಹಗಲೂ-ರಾತ್ರಿ ದುಡಿಯುತ್ತಿದ್ದ ಹಿಮವಂತನಿಗೆ ವ್ಯವಸ್ಥಿತವಾಗಿ ಮೋಸ ಮಾಡುವ ಸಂಚು ಹೂಡುತ್ತಾಳೆ. ದೇಬುವಿನ ರೂಪ, ಬುದ್ಧಿ, ಶ್ರೀಮಂತಿಕೆಗಳ ಮುಂದೆ ಹಿಮವಂತ ಏನೂ ಅಲ್ಲ ಅಂತ ಅನ್ನಿಸುತ್ತದೆ. ‘ಹಿಮವಂತ ದೇವರಂಥವನು, ನಿಜ. ಆದರೆ ದೇವರನ್ನು ಯಾರಾದರೂ ಪ್ರೀತಿಸಲಿಕ್ಕೆ-ಮದುವೆಯಾಗಲಿಕ್ಕೆ ಆಗುತ್ತದಾ?’ ಅಂತ ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಾಳೆ. ಕೊನೆಗೆ ಕಾದಂಬರಿ ಏನೇನೋ ಆಗಿ ಮುಗಿಯುತ್ತದೆ.

ಈ ಮಧ್ಯೆ, ನನ್ನ ರಾತ್ರಿಯ ಕನಸುಗಳ ರ್ಯಾಂಪಿನ ಮೇಲೆ, ಕಾಲೇಜಿನ ಒಬ್ಬೊಬ್ಬ ಹುಡುಗಿಯೂ ತುಟಿ ಕೆಳಗೆ ಕಾಡಿಗೆಯಿಂದ ಕಪ್ಪು ಚುಕ್ಕಿ ಇಟ್ಟುಕೊಂಡು, ಮುಖಕ್ಕೆ ಫೇರೆಂಡ್ ಲವ್ಲೀ ಹಚ್ಚಿ ತಿಕ್ಕಿ ‘ಕಳೆ’, ‘ಸಾತ್ವಿಕ ಚೆಲುವು’ ಎಲ್ಲಾ ಹೆಚ್ಚಿಸಿಕೊಂದು, ಹುಬ್ಬಿನಲ್ಲಿ ಕಾನ್ಫಿಡೆನ್ಸಿನಂತಹದೇ ಏನನ್ನೋ ಕುಣಿಸುತ್ತಾ ಬಂದು ‘ಯಾಕುಂದೇಂದು..’ ಹೇಳಿ ಹೋಗುತ್ತಿದ್ದಳು. ಬಹುಶಃ ಆ ದಿನಗಳಲ್ಲಿ ನನ್ನನ್ನು ನಾನು ಹಿಮವಂತ ಅಂತ ಬಲವಾಗಿ ಕಲ್ಪಿಸಿಕೊಂಡಿದ್ದೆನಿರಬೇಕು! ಯಾವಾಗ ಪ್ರಾರ್ಥನಾ ಹಿಮವಂತನಿಗೆ ಮೋಸ ಮಾಡುವುದು ಖಚಿತ ಆಯಿತೋ, ಆ ಕನಸುಗಳೆಲ್ಲಾ ಸಡನ್ನಾಗಿ ಬಂದ್ ಆಗಿ ನಿದ್ರೆ ಖಾಲಿ ಹೊಡೆಯತೊಡಗಿತು.

[ಪ್ರಕಟ: ವಿಜಯ ಕರ್ನಾಟಕ ಸಾಪ್ತಾಹಿಕ. ಟಾಪಿಕ್: Crush at a novel character.]

Thursday, June 04, 2009

ನೀತಿ

ಮೊಟ್ಟೆಯೊಡೆದು ಹೊರಬಂದರೂ
ಚಿಪ್ಪಿನೊಳಗೆ ತೂರಿಕೊಳ್ಳುವ ಸವಲತ್ತು
ಸುಸ್ತಾದರೆ, ನಾಚಿಕೆಯಾದರೆ,
ನಿದ್ರೆ ಬಂದರೆ ಅಥವಾ ಬಂದರೆ ಆಪತ್ತು.

ಏಕೆ ಅರ್ಥವೇ ಆಗುವುದಿಲ್ಲ ನಿನಗೆ..?
ನನ್ನ ಕನಸುಗಳನ್ನು ನೀನೂ
ಕಾಣಬಲ್ಲೆಯಾದರೆ ಮಾತ್ರ
ನೀನು ನನ್ನವನು. ನಾವು ಒಂದು.

ಇಷ್ಟಕ್ಕೂ ಮೊಲದೊಂದಿಗೆ ನನಗೀಗ
ಸ್ಪರ್ಧೆಯೇ ಇಲ್ಲ. ಗೆದ್ದಾಗಿದೆ ಎಂದೋ.
ಮೊಲಕ್ಕೂ ಈಗ ಬುದ್ಧಿ ಬಂದಿದೆ;
ಹಾಗೆಲ್ಲ ನಿದ್ದೆ ಮಾಡುವುದಿಲ್ಲ.

ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ.

ಆಕಾಶದಲ್ಲಿದ್ದಾಗ ನೀನು
ಜನ ನಕ್ಕರೆಂದು ಸಿಡುಕಿ
ಕೆಳಗುರುಳಿದರೆ ಬಿಟ್ಟು ಕಚ್ಚಿದ ಕೊಕ್ಕೆ-
ಪಾಪ, ತಪ್ಪು ಹೊತ್ತೊಯ್ದ ಹಕ್ಕಿಗಳದಲ್ಲ.

ಎರಡು ಚಿಪ್ಪುಗಳನ್ನು ಒಂದಾಗಿಸಿದರೆ
ಅದೊಂದು ಗೋಲ. ಇರಬಹುದು ಒಳಗೆ ಸೆಖೆ.
ಸಹಿಸಬೇಕು ಮುತ್ತಾಗುವಾಗ ಹನಿ;
ಕಾಯಬೇಕು ಜೀವ ಬರುವವರೆಗೂ ಹೊರಗೆ.

Friday, May 29, 2009

ದೇವದಾಸ

ನನ್ನ ಕನಸುಗಳ ಲಲಾಟದಲ್ಲಿ
ಹುಟ್ಟುವಾಗಲೇ ಸಾವಿನ ಷರಾ
ಬರೆದಿರುತ್ತದೆ.
ಸತ್ತಾಗ ಆಗುವ ಶೋಕಕ್ಕೆ
ಒಂದು ಸಿಗರೇಟು ಸಾಕು.
ಸುಟ್ಟು ಉಳಿಯುವ ಅದರ
ಚಿತೆಯ ಬೂದಿಗೆ ಕಣ್ಣೀರ ಹನಿಗಳು ಸೇರಿ
ಹೊಸ ಚಿಗುರು ಒಡೆಯುತ್ತದೆ.
ಬೂದಿಯಿಂದ ಅರಳಿದ ಬಳ್ಳಿ
ಬೂದುಗುಂಬಳವಾಗಿ ಬೀದಿಯ ಜನವೆಲ್ಲ
ಬಿದ್ದೂ ಬಿದ್ದು ನಗುತ್ತಿದ್ದರೆ, ಈ
ಕಾಯಿಯನ್ನೇ ನೆಚ್ಚಿ ಇನ್ನೂ ತಬ್ಬಿ ಕುಳಿತಿರುವ ನಾನು
ಮದಿರೆಯ ನಶೆಯ ಜತೆ ನಿಧನಿಧಾನವಾಗಿ ಬಾಡಿ
ಕುಂಬಳದೊಂದಿಗೇ ಕೊಳೆತು
ಇಲ್ಲವಾಗುತ್ತೇನೆ.

ನನ್ನ ಹೃದಯದ ಒಳಗೆ
ಕನ್ನೆಯಾಗಿಯೆ ಇದ್ದ ಇನ್ನೆಷ್ಟೊ ಕನಸುಗಳು
ಕಮ್ಮಗರಳಿರೆ ಮೊಳಕೆ, ಅಣಿ-
ಬ್ರಹ್ಮಲಿಪಿ ಬರೆಯಲು ಅದೆಷ್ಟೊಂದು ಕೈಗಳು!

Wednesday, May 20, 2009

ರಿಂಗ್‌ರೋಡು

ಎಲ್ಲ ರಸ್ತೆಗಳೂ ನಗರಿಯ
ಕಣ್ಣು ಮೂಗು ಎದೆ ಹೊಕ್ಕುಳು ತೊಡೆ
ಸಂದಿ ಗೊಂದಿಗಳನ್ನು ಹೊಕ್ಕು ಹಾದು
ಹೋಗುತ್ತಿದ್ದರೆ ಇದು ಮಾತ್ರ ಹೊರಗೇ
ಉಳಿದಿದೆ. ಇಡೀ ನಗರಿಯನ್ನೇ
ತನ್ನ ಬಾಹುಗಳಿಂದ ಬಳಸಿ ನಿಂತಿದೆ.

ಇಲ್ಲಿ, ಇಲ್ಲಿಂದ ಹೊರಟರೆ ಇಲ್ಲಿಗೇ ಬರಬಹುದು..

ದಾರಿ ತಪ್ಪಿಸುವವರೇ ಹೆಚ್ಚಿರುವ ಈ ಊರಿನಲ್ಲಿ
ತಪ್ಪು ದಾರಿ ಹಿಡಿದರೂ ಮರಳಿ ಅಲ್ಲಿಗೇ ತಂದು
ಬಿಡುವ ಪುಣ್ಯಾತ್ಮ ಈ ರಸ್ತೆ.

ಮನೆಯಲ್ಲಿ ಅಮ್ಮ ಹೇಳಿ ಕಳುಹಿಸಿದ್ದಳು,
ಹಾಗೆ ಅಂತಹ ಒಳ್ಳೆಯವರ ಸಂಗ ಮಾಡು ಎಂದು..

ಆದರೆ ನನಗೆ ಜಯನಗರದಿಂದ ರಾಜಾಜಿನಗರಕ್ಕೆ
ಹೋಗಬೇಕಿದೆ,
ರಿಂಗ್‌ರೋಡು ಹಿಡಿದರೆ ಪ್ರಯೋಜನವಿಲ್ಲ.
ಎಂಜಿ ರೋಡಿನಲ್ಲಿ ಹೋದವರ್ಯಾರೂ ಮಹಾತ್ಮರಾಗಿಲ್ಲ;
ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಅಡ್ಡಾಡಿದವರು ದೊರೆಗಳಾಗಿಲ್ಲ.

ನಾಗರೀಕನಾಗ ಬಂದವನಿಗೆ ದಾರಿ ತಪ್ಪಿದರೂ ಚಿಂತಿಲ್ಲ;
ಹೊಸ ದಾರಿ ಸಿಕ್ಕಂತಾಗುತ್ತದೆ..
ಇದೇ-ಇಂಥದೇ ದಾರಿಯಲ್ಲಿ ಹೋಗಬೇಕೆನ್ನುವ ತಲೆಬಿಸಿಯೆಲ್ಲಾ
ಗುರಿಯಿದ್ದವನಿಗೆ.. ಅನಿಕೇತನನಿಗೆ ಯಾವ ದಾರಿಯಾದರೂ
ಆದೀತು: ರಿಂಗ್‌ರಸ್ತೆಯೊಂದನ್ನು ಬಿಟ್ಟು.

ತೀರಾ ತಪ್ಪಿಯೇ ಹೋದರೆ ದಾರಿ, ಮೆಜೆಸ್ಟಿಕ್ಕಿಗೆ ಹೋದರಾಯಿತು:
ಅಲ್ಲಿಂದ ಬದುಕನ್ನೇ ಪುನರಾರಂಭಿಸಬಹುದು.
ಗುಟ್ಟು: ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!

Wednesday, May 06, 2009

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ..

ಜಯಂತ್ ಬರೆದಿದ್ದರು ಒಮ್ಮೆ: "ನಗರಗಳಲ್ಲಿ ಊಳಿಗ ಮಾಡಿಕೊಂಡಿರುವ ಏಕಾಕಿ ಜೀವಿಗಳು ಹೆದರುವುದು ಯಾವುದಕ್ಕೆ? ಇದ್ದಕ್ಕಿದ್ದಂತೆ ಎದ್ದೇಳುವ ಕೋಮು ಗಲಭೆ, ಲಾಕೌಟ್, ಬಂದ್, ಕರ್ಫ್ಯೂಗಳಿಗೇ? ಊಹೂಂ, ಅದಕ್ಕೆಲ್ಲ ಅವರು ಹೆದರುವುದಿಲ್ಲ. ಹೋಟೆಲುಗಳೆಲ್ಲ ಮುಚ್ಚಿದ್ದರೆ ರಸ್ತೆಬದಿಯ ಶೇಂಗಾ ತಿಂದು ನೀರು ಕುಡಿದು ಬದುಕಿರಬಲ್ಲರು ಅವರು. ಊರಿನ ವಿಳಾಸದಿಂದ ಬರುವ ಹಠಾತ್ ಟೆಲಿಗ್ರಾಮುಗಳಿಗೆ? ಊಹುಂ, 'ತಂದೆ ತೀರಿಕೊಂಡಿದಾನೆ, ಹೊರಡು', 'ಅಮ್ಮನಿಗೆ ಸೀರಿಯಸ್, ಹೊರಡು' ಇಂತಹ ತಂತಿಗಳನ್ನು ಆತ ಊಹಿಸಿ ಊಹಿಸಿಯೇ ಗಟ್ಟಿಯಾಗಿಬಿಟ್ಟಿರುತ್ತಾನೆ. ರಸ್ತೆಯಲ್ಲೆದುರಾಗುವ ಆಕ್ಸಿಡೆಂಟ್‍ನಲ್ಲಿ ಸತ್ತ ಅನಾಥ ಶವಗಳನ್ನು ಕಂಡಾಗಲೇ? ಊಹುಂ, ನಿತ್ಯ ಕಾಣುವ ಇಂತಹ ದೃಶ್ಯಗಳನ್ನು ನೋಡೀ ನೋಡಿ ಆತ ತನ್ನ ಸಾವೂ ಇಂಥದ್ದರಲ್ಲೇ ಆಗೋದು ಅಂತ ಯಾವತ್ತೋ ಮನಸಿಗೆ ಹೇಳಿಕೊಂಡುಬಿಟ್ಟಿರುತ್ತಾನೆ. ಹೆದರುವುದಿಲ್ಲ.

ಹಾಗಾದರೆ ದೂರದೂರಿನಿಂದ ಬಂದು ನಗರದಲ್ಲಿ ಅಡ್ನಾಡಿ ಬದುಕು ಬಾಳಿಕೊಂಡಿರುವ ಈ ಮನುಷ್ಯ ಏನಕ್ಕೂ ಹೆದರುವುದೇ ಇಲ್ಲವೇ? ಇಲ್ಲ, ಆತ ಸಹ ಹೆದರುತ್ತಾನೆ. ಕೇವಲ ಒಂದೇ ವಿಷಯಕ್ಕೆ: ಕಾಯಿಲೆ ಬೀಳುವುದಕ್ಕೆ! ನಿಜ, ಕಾಯಿಲೆ ಬೀಳುವ ಕಲ್ಪನೆಗೆ ಸಹ ಆತ ಭಯದಿಂದ ಕಂಪಿಸಬಲ್ಲ. ಹೇಳುವವರಿಲ್ಲದ ಕೇಳುವವರಿಲ್ಲದ ಈ ಕುರೂಪಿ ನಗರಿಯಲ್ಲಿ ಕಾಯಿಲೆ ಬೀಳುವುದಕ್ಕಿಂತ ದೊಡ್ಡ ಯಾತನೆ ಮತ್ತೊಂದಿಲ್ಲ. ಇಡೀ ಜಗತ್ತೇ ತನ್ನನ್ನು ಬಿಟ್ಟು ಮುಂದೆ ಸಾಗಿದಂತೆನಿಸುತ್ತದೆ. ಯಾರಿಗೂ ಅವನ ಕೈ ಹಿಡಿದು ಆಸ್ಪತ್ರೆಗೆ ಕರೆದೊಯ್ಯುವ ದರ್ದಿಲ್ಲ. ಯಾರೂ ಅವನಿಗೆ ಗಂಜಿ ಬೇಯಿಸಿ ಹಾಕುವುದಿಲ್ಲ. ಯಾರೂ ಪಕ್ಕದಲ್ಲಿ ಕೂತು ಹಣೆಗೆ ಒದ್ದೆ ಬಟ್ಟೆ ಹಾಕಿ ತೆಗೆಯುವುದಿಲ್ಲ. ಕಾಯಿಲೆ ಬಿದ್ದ ಏಕಾಂಗಿ ಮನುಷ್ಯನಷ್ಟು ನತದೃಷ್ಟ ವ್ಯಕ್ತಿ ಶಹರದಲ್ಲಿ ಮತ್ಯಾರೂ ಇಲ್ಲ.."

ಮೊನ್ನೆ ಜ್ವರದ ಕಣ್ಣಲ್ಲಿ ಇದನ್ನು ಮತ್ತೆ ಓದುವಾಗ ಎಷ್ಟೊಂದು ಹೌದು ಹೌದು ಅನ್ನಿಸಿತು.. ಕಣ್ಣು ಸಹ ಬಿಡಲಾಗದಷ್ಟು ಜೋಂಪು. ಭಾರ ತಲೆ. ಮಂಪರು. ಎದ್ದು ಹೋಗಿ ಒಂದು ಲೋಟ ನೀರು ಕುಡಿಯೋಣವೆಂದರೆ ಇದೇನಿದು ಏಳಲಿಕ್ಕೇ ಆಗುತ್ತಿಲ್ಲ..? ಆಫೀಸಿಗೆ ಫೋನ್ ಮಾಡಿ ಬರಲಾಗುತ್ತಿಲ್ಲ ಎಂದರೆ "ನಿನ್ನೆ ಆರಾಮಾಗೇ ಇದ್ರಲ್ಲ, ಅದು ಹೇಗೆ ಇದ್ದಕ್ಕಿದ್ದಂಗೆ ಜ್ವರ ಬಂತು?" -ಸಂಶಯದ ಪ್ರಶ್ನೆ. ಹೌದು ಸಾರ್, ನಂಗೂ ಗೊತ್ತಿಲ್ಲ. ಆದರೆ ಜ್ವರ ಬಂದಿದೆ. ಸುಳ್ಳು ಹೇಳ್ತಿಲ್ಲ ಸಾರ್. ಬರಲಿಕ್ಕೆ ಆಗಲ್ಲ. ಲೀವ್ ಬೇಕು. ಅಯ್ಯೋ, ಯಾಕೆ ಅರ್ಥವೇ ಆಗ್ತಿಲ್ಲ ನಾನು ಹೇಳ್ತಿರೋದು?

ಛೇ, ಇವತ್ತೇ ಯಾಕೆ ಇಷ್ಟೊಂದು ಕ್ಲೈಂಟ್ ಕಾಲ್‌ಗಳು? ಯಾರು ಇವರಿಗೆಲ್ಲ ನನ್ನ ಮೊಬೈಲ್ ನಂಬರ್ ಕೊಟ್ಟಿದ್ದು? ಯಾವಾಗಲೂ ತಡವಾಗಿ ಹೋಗುವ ರೂಂಮೇಟ್ ಇವತ್ತೇ ಯಾಕೆ ಬೇಗ ಹೋದ ಆಫೀಸಿಗೆ? ಕಷ್ಟ ಪಟ್ಟು ಎದ್ದು ಹೋಗಿ ಎರಡು ಲೋಟ ನೀರು ಕುಡಿಯುತ್ತೇನೆ.. ಸ್ವಲ್ಪ ಚೈತನ್ಯ ಬಂದಂತೆನಿಸುತ್ತದೆ.. ಬೇಕರಿಗೆ ಹೋಗಿ ಬ್ರೆಡ್-ಜಾಮ್ ತಂದುಕೊಳ್ಳುತ್ತೇನೆ. ಹಸಿವೆನಿಸಿದರೂ ಎರಡು ಬ್ರೆಡ್ ಮೇಲೆ ತಿನ್ನಲಿಕ್ಕೇ ಆಗುತ್ತಿಲ್ಲವಲ್ಲ, ಏನಾಗಿದೆ ನನಗೆ? ಕಾಫಿ ಕುಡಿಯಬೇಕು. ಸ್ಟ್ರಾಂಗ್ ಕಾಫಿ. ಥೂ, ಕಹಿ ಕಹಿ. ಇಲ್ಲೇ ಇಟ್ಟಿದ್ದೆನಲ್ಲ ಕ್ರೋಸಿನ್ ಸ್ಟ್ರಿಪ್ಪು, ಎಲ್ಲಿ ಹೋಯ್ತು? ನುಂಗಿ ಬೆಚ್ಚಗೆ ಹೊದ್ದು ಮಲಗಿದರೆ ಮಧ್ಯಾಹ್ನದೊಳಗೆ ಎಲ್ಲಾ ವಾಸಿಯಾಗುತ್ತೆ.

ಎಷ್ಟೋ ಹೊತ್ತಿನ ಮೇಲೆ ಎಚ್ಚರಾಗೊತ್ತೆ.. ಎಲ್ಲಿದ್ದೇನೆ ನಾನು? ಏನಾಗಿದೆ ನನಗೆ? ಸಮಯವೆಷ್ಟು ಈಗ? ಆಂ, ನಾಲ್ಕೂವರೆಯೇ? ಆಗಲೇ ಸಂಜೆಯಾಯಿತಾ? ಮೈಯೇಕೆ ಹೀಗೆ ಸುಡುತ್ತಿದೆ ಇನ್ನೂ? ಥರ್ಮಾಮೀಟರ್ ಎಲ್ಲಿ? ಏನೂ, ನೂರಾಮೂರು ಡಿಗ್ರಿಯಾ? ಛೇಛೆ, ಕಣ್ಣೇ ಮಂಜಾಗಿರಬೇಕು ನನಗೆ..

ನಾಲ್ಕು ದಿವಸಗಳಾಗಿವೆ.. ಎರಡು ಬಾರಿ ಡಾಕ್ಟರ್ ಬಳಿ ಹೋಗಿ ಬಂದದ್ದಾಯ್ತು. ಇಂಜೆಕ್ಷನ್ ಬೇಡ, ಟ್ಯಾಬ್ಲೆಟ್ಸಲ್ಲೇ ಗುಣ ಆಗುತ್ತೆ, ವೈರಲ್ ಫೀವರ್ ಎಂದಿದ್ದರು ಡಾಕ್ಟರು. ಆದರೆ ಇದ್ಯಾಕೋ ನನಗೆ ಹುಷಾರಾಗುವ ಲಕ್ಷಣವೇ ಕಾಣುತ್ತಿಲ್ಲ.. ರೂಂಮೇಟು ಪಾಪ ಕಾದಾರಿದ ನೀರು ಕುಡಿ ಅಂತ ಕಾಯಿಸಿಟ್ಟು ಹೋಗಿದ್ದಾನೆ. ತಿಳಿಸಾರು, ಮೆತ್ತನೆ ಅನ್ನ ಮಾಡಿಕೊಟ್ಟಿದ್ದಾನೆ. ಗಂಜಿ ಬೇಕು ಎಂದರೆ ಕುಕ್ಕರನ್ನು ಐದು ಸಲ ಕೂಗಿಸಿದ್ದಾನೆ. ಮನೆಯಲ್ಲಿ ಒಬ್ಬನೇ ಭೂತದ ಥರ ಮಲಗಿಕೊಂಡಿದ್ದೇನೆ. ಯಾವುದಾದರೂ ಪುಸ್ತಕವನ್ನಾದರೂ ಓದೋಣವೆಂದರೆ ಅದನ್ನು ಹಿಡಿದುಕೊಳ್ಳಲೂ ತ್ರಾಣವಿಲ್ಲ. ಸ್ವಲ್ಪ ಓದುವಷ್ಟರಲ್ಲೇ ಸುಸ್ತು ಸುಸ್ತು. ಮನೆಗೆ ಇನ್ನೂ ಹೇಳಿಲ್ಲ. ಹೇಳಿದರೆ ಟೆನ್ಷನ್ ಮಾಡಿಕೊಳ್ಳುತ್ತಾರೆ. "ಈಗ್ಲೇ ಕಳುಸ್ತೀನಿ ಅಮ್ಮನ್ನ" ಅಂತಾನೆ ಅಪ್ಪ. ಬೇಡ, ಇನ್ನೂ ಒಂದೆರಡು ದಿನ ನೋಡೋಣ; ಹಾಗೇ ಆರಾಮಾಗಬಹುದು. ಒಂದಿಬ್ಬರು ಫ್ರೆಂಡ್ಸು ಬಂದು ನೋಡಿಕೊಂಡು ಹೋಗಿದ್ದಾರೆ. "ಗ್ಲುಕೋಸು, ಎಳನೀರು ಅಥ್ವಾ ಜ್ಯೂಸು ಕುಡೀತಿರು, ಅದಿಲ್ಲಾಂದ್ರೆ ಲಿಕ್ವಿಡ್ ಕಂಟೆಂಟ್ಸ್ ಇಲ್ದೇ ಡಿಹೈಡ್ರೇಷನ್ ಆಗುತ್ತೆ" ಎಂದಿದ್ದಾನೆ ಕಲೀಗು ಫೋನಿನಲ್ಲಿ. ಹೌದು, ವಿಪರೀತ ಬಾಯಾರಿಕೆ. ಹೀಟು. ಈ ಪರಿ ಡಜನ್‍ಗಟ್ಟಲೆ ಮಾತ್ರೆ ತಿಂದರೆ ಮತ್ತಿನ್ನೇನಾಗತ್ತೆ?

ಬಹುಶಃ ನನಗೆ ಜ್ವರ ಬಂದು ಏಳೆಂಟು ದಿನಗಳೇ ಆಗಿವೆ.. ಆಫೀಸಿಗೆ ಹೊರಟ ರೂಂಮೇಟು ಎಬ್ಬಿಸುತ್ತಿದ್ದಾನೆ: "ಏಯ್ ಏಳು.. ಏಳು ಸಾಕು.. ಇದ್ಯಾಕೋ ಟೈಫಾಯ್ಡಿಗೆ ಎಳೆಯೋ ಹಾಗಿದೆ. ಮೊದಲು ಹೋಗಿ ಬ್ಲಡ್ಡು, ಯೂರಿನ್ನು ಟೆಸ್ಟ್ ಮಾಡ್ಸೋಣ, ನಡಿ.." ಥೂ, ಈ ಆಟೋ ಯಾಕೆ ಹೀಗೆ ಕುಲುಕಾಡುತ್ತೆ? ಸಿರಿಂಜ್ ಚುಚ್ಚಿ ರಕ್ತವನ್ನು ಎಳೆದುಕೊಳ್ಳುತ್ತಿದ್ದಾರೆ ಸರ್ಜನ್.. ರಿಪೋರ್ಟು ಮಧ್ಯಾಹ್ನ ಸಿಗುತ್ತೆ ಅಂತಿದಾರೆ.. ಅಲ್ಲಿಯವರೆಗೆ ನಾನೇನು ಮಾಡಲಿ? ಇಲ್ಲೇ ಬೆಂಚಿನ ಮೇಲೆ ಮಲಗಿರಲಾ? "ಇದು ಪ್ಯಾರಾಟೈಫಾಯ್ಡ್. ತುಂಬಾನೇ ನಿಶ್ಯಕ್ತಿ ಆಗಿದೆ ನಿಮಗೆ. ಡ್ರಿಪ್ ಹಾಕ್ಬೇಕು. ಅಡ್ಮಿಟ್ ಆಗಿಬಿಡಿ ಈಗಲೇ" ಕನ್ನಡಕದ ಡಾಕ್ಟರು ಒಂದೇ ಸಮನೆ ಮಾತಾಡುತ್ತಿದ್ದಾರೆ. ಅಯ್ಯೋ ಬೇಡ ಡಾಕ್ಟ್ರೇ.. ಇಲ್ಲಿ ನಾನು ಅಡ್ಮಿಟ್ ಆಗಲ್ಲ.. ನನ್ನ ನೋಡ್ಕೊಳ್ಳೋರು ಯಾರೂ ಇಲ್ಲ.. ನಾನು ಊರಿಗೆ ಹೋಗ್ತೇನೆ.. ಬೇಕಾದ್ರೆ ಅಲ್ಲೇ ಯಾವುದಾದರೂ ಹಾಸ್ಪಿಟಲ್‍ಗೆ ಹೋಗ್ತೇನೆ.. ಊರಿಗೆ ಹೋದರೆ ಸಾಕು, ಅಮ್ಮನ ಕೈತುತ್ತೂಟ ಉಂಡರೆ ಎಲ್ಲ ಆರಾಮಾಗುತ್ತೆ.. ನನ್ನ ಬಿಟ್ಬಿಡಿ ಈಗ..

ಮನೆಗೆ ಫೋನ್ ಮಾಡಿ ಹೇಳ್ತಿದ್ದೇನೆ.. "ಯಾಕೆ ಇಷ್ಟೆಲ್ಲ ಆದ್ರೂ ಹೇಳ್ಲಿಲ್ಲ ನಮಗೆ? ನಾವೆಲ್ಲಾ ಇರೋದು ಏನಕ್ಕೆ? ಈಗ ಒಬ್ನೇ ಹ್ಯಾಗೆ ಬರ್ತೀಯಾ?" ಇಲ್ಲಮ್ಮಾ, ಸ್ಲೀಪರ್ ಕೋಚ್ ಬಸ್ಸು.. ಊರಿಗೆ ಹೋಗೋರು ಯಾರಾದ್ರೂ ಇದ್ದೇ ಇರ್ತಾರೆ.. ಅಪ್ಪಂಗೆ ಬಸ್‍ಸ್ಟಾಂಡ್ ಹತ್ರ ಬರ್ಲಿಕ್ಕೆ ಹೇಳು ಅಷ್ಟೇ.. ಏನು ಭಯ ಬೇಡ..

ನಾನು ಹೋಗುವಷ್ಟರಲ್ಲೇ ನನಗೆ ಟೈಫಾಯ್ಡ್ ಆಗಿರುವುದು ಊರಿಗೆಲ್ಲ ಸುದ್ದಿಯಾಗಿಬಿಟ್ಟಿದೆ! ಎಲ್ಲರೂ ಕೇಳುವವರೇ: ಜ್ವರನಂತೆ? ಈಗ ಹೇಗಿದೆ? ತುಂಬಾ ಕೇರ್ ತಗೋಬೇಕು.. ಖಾರದ ಪದಾರ್ಥ ಸ್ವಲ್ಪಾನು ತಿನ್ಬೇಡ.. ಛೇ ಪಾಪ, ಒಂದು ವಾರದಲ್ಲಿ ಹೆಂಗೆ ತೆಳ್ಳಗಾಗಿ ಹೋಗಿದೀಯ ನೋಡು.. "ಮದ್ದಾಲೆ ಚಕ್ಕೆ ಕಷಾಯ ಮಾಡಿಕೊಡಿ ಅವಂಗೆ, ಎಂಥಾ ಜ್ವರ ಇದ್ರೂ ಎರಡೇ ದಿನದಲ್ಲಿ ಓಡಿಹೋಗುತ್ತೆ.. ನಮ್ಮನೆ ಸರೋಜಂಗೆ ಅದ್ರಲ್ಲೇ ಹುಶಾರಾಗಿದ್ದು" ಗಣಪತಿ ಭಟ್ಟರು ಸಲಹೆ ಕೊಡುತ್ತಿದ್ದಾರೆ. ಅಮ್ಮನಿಗಂತೂ ಉಪಚಾರ ಮಾಡಿದಷ್ಟೂ ಸಾಕಾಗ್ತಿಲ್ಲ.. ರವೆಗಂಜಿ ಮಾಡ್ಕೊಡ್ಲಾ? ಬಾರ್ಲಿ ನೀರು ಬತ್ತಿಸಿದ್ದಿದೆ ಕುಡೀತೀಯಾ? ಇವತ್ತು ಮಧ್ಯಾಹ್ನದ ಅಡುಗೆಗೆ ಏನು ಮಾಡ್ಲಿ? ಒಂದೆಲಗನ ತಂಬುಳಿ ಪರ್ವಾಗಿಲ್ವಾ? ಇಲ್ಲೇ ಹಾಲಲ್ಲಿ ಮಲ್ಕೋ.. ರೂಮಲ್ಲಿ ಸೆಖೆ ಅಂದ್ರೆ ಸೆಖೆ.

ಆ ಕಡೆ ಈ ಕಡೆ ಶತಪತ ಮಾಡುವ ಅಪ್ಪ. ಪಿಸುಗಣ್ಣೀರು ಹಾಕುವ ಅಜ್ಜ. ಬರೀ ಗಲಾಟಿ ಮಾಡುವ ಬೇಸಿಗೆ ರಜೆಗೆ ಬಂದಿರುವ ನೆಂಟರ ಮಕ್ಕಳು. ಒಂದೇ ಸಮನೆ ರಿಂಗಾಗುವ ಫೋನು. ಬೆಂಕಟವಳ್ಳಿಯಿಂದ ಮಾವನಂತೆ.. ನಾನು ಈಗ ಹೇಗಿದ್ದೀನಿ ಅಂತ ಕೇಳೋಕೆ ಮಾಡಿದ್ದಂತೆ. ಅತ್ತೆ ನಾಳೆ ಬರ್ತಿದ್ದಾಳಂತೆ. ನನ್ನ ನೋಡಿಕೊಂಡು ಹೋಗಲಿಕ್ಕೆ. ಛೇ! ನಂಗೇನು ಮಾರಣಾಂತಿಕ ಕಾಯಿಲೆ ಬಂದಿದೆಯೇನಪ್ಪಾ? ಜ್ವರ ಅಷ್ಟೇ. ಯಾಕೆ ಈ ಆಪ್ತೇಷ್ಟರಿಗೆ ಈ ಪರಿ ಕಾಳಜಿ? ಕನಸಿನಲ್ಲಿ ಯಾರೋ ಹೇಳುತ್ತಿದ್ದಾರೆ: ಅದು ಹಾಗಲ್ಲ, ನೀನು ಆರಾಮಾಗಿದ್ದಾಗ ಯಾರೂ ಬಾರದೇ ಇದ್ರೂ ನಡೆಯುತ್ತೆ, ಆದರೆ ತೊಂದರೇಲಿ ಇದ್ದಾಗ ಬಂದು ವಿಚಾರಿಸಿಕೊಂಡು ಹೋಗಬೇಕು.. ಅದೇ ನಿಯಮ.. ಸ್ನೇಹ, ಬಂಧುತ್ವ, ನೆರೆಹೊರೆ ಅಂದರೆ ಅದು.. ಕಷ್ಟದಲ್ಲಿದ್ದಾಗ ನೆರವಾಗೋದು. ನಗರಗಳಲ್ಲಿ ಅದೆಲ್ಲ ಇಲ್ಲ. ನೀನು ವಾರಗಟ್ಟಲೆ ಮಲಗಿದ್ರೂ ಅಕ್ಕಪಕ್ಕದ ಮನೆಯ ಒಬ್ಬರಾದ್ರೂ ಬಂದು ಕೇಳಿದ್ರಾ- ಯಾಕಪ್ಪಾ ಏನಾಗಿದೆ ಯಾಕೆ ಆಫೀಸಿಗೆ ಹೋಗ್ತಿಲ್ಲ ಅಂತ? ಅಲ್ಲಿ ಜನಗಳಿಗೆ ಮನುಷ್ಯತ್ವವನ್ನು ಪ್ರಕಟಿಸಲಿಕ್ಕೆ ಸಮಯವೂ ಇಲ್ಲ; ಪ್ರಜ್ಞೆಯೂ ಇಲ್ಲ.

"ಥೂ ಅಮ್ಮಾ, ಇದೇನಿದು ಕಿಚಿಪಿಚಿ ಕಿರುಚಾಟ? ನಿದ್ರೆ ಮಾಡ್ಲಿಕ್ಕೇ ಬಿಡ್ತಿಲ್ಲ?" ಮಗ್ಗುಲಿನಲ್ಲಿ ಮಲಗಿದ ನಾನು ಅಂಗಾತವಾಗುತ್ತ ಗೊಣಗುತ್ತೇನೆ. "ಗುಬ್ಬಚ್ಚಿಗಳು ಕಣೋ.. ಪಾಪ ಗೂಡು ಕಟ್ಕೊಳ್ತಿವೆ.. ಎರಡು ದಿನದಿಂದ ಹುಲ್ಲು ಹೆಕ್ಕಿ ತರೋದು, ಜೋಡಿಸಿ ಜೋಡಿಸಿ ಇಡೋದು -ಇದೇ ಕೆಲಸ ಸರಭರ. ಅವು ನೆಲಕ್ಕೆ ಬೀಳಿಸಿದ ಹುಲ್ಲುಕಡ್ಡಿಗಳನ್ನ ಗುಡಿಸೋ ಕೆಲಸ ಒಂದು ನಂಗೆ ಹೆಚ್ಚಿಗೆ ಅಷ್ಟೇ!" ಅರೆ, ಈ ಅಮ್ಮನಿಗೇಕೆ ಈ ಗುಬ್ಬಚ್ಚಿಗಳ ಮೇಲೆ ಕರುಣೆ? ಬೇರೆ ಎಲ್ಲಾದ್ರೂ ಕಟ್ಟಿಕೋಬಹುದಪ್ಪ ಗೂಡು.. ನಮ್ಮನೆ ಸಜ್ಜಾನೇ ಬೇಕಾ? ಗಲಾಟೆ ಅಂದ್ರೆ ಗಲಾಟೆ. "ಬೇರೆ ಕಡೆ ಅಂದ್ರೆ ಎಲ್ಲಿಗೆ ಹೋಗ್ತಾವೋ ಪಾಪ? ಅದ್ರಲ್ಲಿ ಹೆಣ್ಣುಹಕ್ಕಿ ಬಸುರಿ ಇರ್ಬೇಕು.. ಹೊಟ್ಟೆ ನೋಡಿದ್ರೆ ಹಾಗೇ ಅನ್ಸುತ್ತಪ್ಪ.." ಸಂಭ್ರಮದ ದನಿಯಲ್ಲಿ ಹೇಳುತ್ತಿದ್ದಾಳೆ ಅಮ್ಮ.

ಹತ್ತು ದಿನ ಆದ್ರೂ ಇನ್ನೂ ಹೋಗಿಲ್ಲ ಜ್ವರ.. ನೂರಾ ಎರಡು ಡಿಗ್ರಿ.. ಸೊರಬದ ಡಾಕ್ಟರ್ ಬಳಿ ಹೋಗುವುದು ಅಂತ ತೀರ್ಮಾನವಾಗಿದೆ. "ಎರಡು ಡ್ರಿಪ್ ಹಾಕಿದ್ರೆ ಎಲ್ಲ ಸರಿ ಆಗುತ್ತೆ.. ನೀವ್ ಏನೂ ಹೆದರ್ಬೇಡಿ.. ನಾನು ಸರಿ ಮಾಡಿ ಕಳುಸ್ತೀನಿ ನಿಮ್ಮ ಮಗನ್ನ" ಡಾ| ಎಂ.ಕೆ. ಭಟ್ಟರು ಹುರುಪುನಿಂದಲೇ ಹೇಳುತ್ತಿದ್ದಾರೆ. ಸಲೈನಿನ ಹನಿಗಳು ಒಂದೊಂದೆ ಒಂದೊಂದೇ ಆಗಿ ಸೇರಿಕೊಳ್ಳುತ್ತಿವೆ ದೇಹದಲ್ಲಿ.. ಸ್ವಲ್ಪ ಚೇತರಿಕೆ ಕಾಣಿಸುತ್ತಿದೆ ಈಗ.. ಇನ್ನು ಎರಡು ದಿನ. ಇದೊಂದು ಕೋರ್ಸ್ ಟ್ಯಾಬ್ಲೆಟ್ ತಗೊಂಡ್ರೆ ಫುಲ್ ರೆಡಿಯಾಗ್ತೀನಿ. ಹಾಗಂತ ನಂಗೇ ಅನ್ನಿಸ್ತಿದೆ.

...ಒಂದು ದಿನ ಮುಂಜಾನೆ ಥಟ್ಟನೆ ಎಚ್ಚರಾದಂತಾಗಿ ಕಣ್ಣು ಬಿಡುತ್ತೇನೆ. ಆಹ್ಲಾದವೆನಿಸುವ ಹಾಗೆ ಸೂರ್ಯರಶ್ಮಿ ಕಣ್ಣಿಗೆ ಬೀಳುತ್ತಿದೆ. ಅಪ್ಪ ಹತ್ತಿರ ಬಂದು ಡಿಗ್ರಿ ಕಡ್ಡಿ ಇಟ್ಟು ನೋಡುತ್ತಿದ್ದಾನೆ. ಇಲ್ಲ, ಜ್ವರ ಇಲ್ಲ; ನಾರ್ಮಲ್ ಟೆಂಪರೇಚರ್! ಹೌದು, ಜ್ವರ ಹೊರಟುಹೋಗಿದೆ. ನಿಜವಾಗಿಯೂ. ಆಹ್, ಅಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಓಡುತ್ತಿದ್ದಾಳೆ. ಅಜ್ಜ ಉಟ್ಟ ಸಾಟಿಪಂಚೆಯಿಂದಲೇ ಒರೆಸಿಕೊಳ್ಳುತ್ತಿದ್ದಾನೆ ಕಂಬನಿ. ಸುತ್ತ ನಿಂತ ಮಕ್ಕಳು "ಹಂಗಾದ್ರೆ ಇವತ್ತಿಂದ ನಮ್ ಜೊತೆ ಕ್ರಿಕೆಟ್ ಆಡ್ಬಹುದು ನೀನು?" ಕೇಳುತ್ತಿದ್ದಾರೆ ಉತ್ಸಾಹದಲ್ಲಿ. "ಪೂರ್ತಿ ರಿಕವರ್ ಆಗ್ಲಿಕ್ಕೆ ಇನ್ನೂ ಒಂದು ತಿಂಗಳು ಬೇಕು ನಿಂಗೆ. ಈಗ್ಲೇ ಹೊರಡ್ತೀನಿ ಬೆಂಗಳೂರಿಗೆ ಅಂತೆಲ್ಲ ಹಟ ಮಾಡ್ಬೇಡ. ವಾರ ಬಿಟ್ಟು ಹೋಗು" -ತಾಕೀತು ಅಪ್ಪನಿಂದ.

ಮಂಚದಿಂದಿಳಿದು ಮುಚ್ಚೆಕಡೆ ಬಾಗಿಲಿನೆಡೆಗೆ ಹೊರಟಿದ್ದೇನೆ. ಫಕ್ಕನೆ ಮೈಮೇಲೆ ಏನೋ ಬಿದ್ದಂತಾಗಿದೆ. ಏನಿದು? ಒಂದು ಹುಲ್ಲುಕಡ್ಡಿ. ಮೇಲೆ ನೋಡುತ್ತೇನೆ. ಒತ್ತೊತ್ತಾಗಿ ಚಂದವಾಗಿ ಜೋಡಿಸಿ ನಿರ್ಮಿತವಾಗಿರುವ ಗೂಡಿನಿಂದ ಬಸುರಿ ಗುಬ್ಬಚ್ಚಿ ಹೊರಗಿಣುಕಿ ನೋಡುತ್ತಿದೆ ನನ್ನನ್ನೇ: "..ಚಿಲಿಪಿಲಿ ಚಿಲಿಪಿಲಿ.." ಹೇ... ನನಗೆ ಒಮ್ಮೆಲೆ ಖುಶಿ ಉಕ್ಕಿ ಬರುತ್ತಿದೆ.. ಎಲ್ಲಿಂದಲೋ ಪುರ್ರನೆ ಹಾರಿಬಂದ ಗಂಡುಹಕ್ಕಿ ಗೂಡಿನ ಬಳಿ ಕೂತು ಹೆಂಡತಿಗೆ ಅದೇನೋ ಹೇಳುತ್ತಿದೆ. ಅಂದು ಗಲಾಟೆಯಂತೆ ಕೇಳಿದ್ದ ಇವುಗಳ ಮಾತು ಇಂದು ಹಿತವಾಗಿ ಕಲರವದಂತೆ ಕೇಳಿಸುತ್ತಿದೆ. ಎವೆ ಬಡಿಯದೇ ನೋಡುತ್ತಿದ್ದೇನೆ ನಾನು. ಪುಟ್ಟ ಸಂಸಾರಕ್ಕೆ ಇನ್ನೇನು ಬಂದು ಸೇರಲಿರುವ ಹೊಸದೊಂದು ಜೀವಕ್ಕೆ ಸ್ವಾಗತ ಕೋರುವ ತಯಾರಿಯಲ್ಲಿವೆ ಗುಬ್ಬಚ್ಚಿ ದಂಪತಿಗಳು.

* * *

ಈ ನಡುವೆ, ಏಪ್ರಿಲ್ ೨೬ಕ್ಕೆ ನನ್ನ ಬ್ಲಾಗಿನ ಮೂರನೇ ವರ್ಷದ ಹುಟ್ಟುಹಬ್ಬ ಕಳೆದುಹೋಗಿದೆ! ಸಿಂಗಾರಬಂಗಾರವಾಗಿ ಕಂಗೊಳಿಸಬೇಕಿದ್ದ ನನ್ನ ಬ್ಲಾಗು, ಪಾಪ ಒಡೆಯನ ಅನಾರೋಗ್ಯದಿಂದ ಯಾವುದೇ ಆಚರಣೆಯಿಲ್ಲದೆ ಸೊರಗಿ ಬೇಸರದಲ್ಲಿ ನಿಂತಿದೆ. ಸಮಾಧಾನ ಮಾಡಲು ನಾನು ಕರ್ಚೀಫು ಹುಡುಕುತ್ತಿದ್ದೇನೆ.

ನಾನು ಬ್ಲಾಗು ಶುರು ಮಾಡುವಾಗ ಕನ್ನಡದಲ್ಲಿದ್ದ ಬ್ಲಾಗುಗಳು ಬೆರಳೆಣಿಕೆಯಷ್ಟು. ಬ್ಲಾಗು ಎಂದರೇನು, ಬರಹ ಎಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು, ಯುನಿಕೋಡ್ ಬಳಸುವುದು ಹೇಗೆ, ಲಿಂಕಿಂಗ್ ಮಾಡುವುದು ಹೇಗೆ, ಬೇರೆಯವರಿಗೆ ನನ್ನದೂ ಒಂದು ಬ್ಲಾಗ್ ಇದೆ ಅಂತ ತಿಳಿಸುವುದು ಹೇಗೆ -ಇತ್ಯಾದಿ ಸಹಸ್ರ ಪ್ರಶ್ನೆಗಳಿದ್ದವು ನನ್ನ ಮುಂದೆ.

ಹೈಸ್ಕೂಲು ಕಾಲದಿಂದ ಬರೆಯುತ್ತಿದ್ದರೂ ಅವನ್ನು ಯಾರಿಗೂ ತೋರಿಸದೇ ಮುಚ್ಚಿಡುತ್ತ ಬಂದಿದ್ದ ನನಗೆ, ನನ್ನ ಬರಹಗಳು ಬೇರೆಯವರೂ ಓದುವಂತಿದೆಯೋ ಇಲ್ಲವೋ ಎಂಬುದೇ ದೊಡ್ಡ ಕುತೂಹಲವಾಗಿತ್ತು. ಬಹುಶಃ ನಾನು ಬ್ಲಾಗ್ ಶುರು ಮಾಡಿದ್ದು ಅದನ್ನು ಪರೀಕ್ಷಿಸಲೆಂದೇ ಇರಬೇಕು! ತೀರಾ ಪತ್ರಿಕೆಗಳಿಗೆ ನಾನು ಬರೆದ ಕತೆ-ಕವನ ಕಳುಹಿಸಿ ಅವು ರಿಜೆಕ್ಟ್ ಆಗಿ ವಾಪಸು ಬರುವುದಕ್ಕಿಂತ ಈ ಬ್ಲಾಗಿಂಗು ಸೇಫು ಅನ್ನಿಸಿತು ನನಗೆ. ಇಲ್ಲಿ ಇದನ್ನು ಅಕಸ್ಮಾತಾಗಿ ಯಾರಾದರೂ ಓದಿ ಚೆನ್ನಾಗಿದೆ ಅಂದುಬಿಟ್ಟರೆ ನಾನು ಗೆದ್ದೆ; ಅದಿಲ್ಲದಿದ್ದರೆ ಬೇಸರವಂತೂ ಇಲ್ಲ. ಯಾರೂ ಓದಲೇ ಇಲ್ಲವೇನೋ ಅಂದುಕೊಂಡು ಸುಮ್ಮನಿದ್ದರಾಯಿತು! ಬ್ಲಾಗು, ನನ್ನ ಬರಹಗಳ ಪ್ರಯೋಗಕ್ಕೊಂದು ವೇದಿಕೆಯಾಗಲಿ - ಆದೀತು ಎಂಬುದು ನನ್ನ ಆಶಯವಾಗಿತ್ತು.

ನಾನು ಬ್ಲಾಗಿಂಗ್ ಶುರುಮಾಡುವಾಗ ಇದ್ದ ಕನ್ನಡ ಬ್ಲಾಗುಗಳಲ್ಲಿ ಹೆಚ್ಚಿನವು ಪರ್ಸನಲ್ ಬ್ಲಾಗುಗಳೇ ಆಗಿದ್ದವು. ಕೆಲವರು ಕತೆ-ಕವನ ಬರೆಯುತ್ತಿದ್ದರು. ಇನ್ನುಳಿದಂತೆ ಪ್ರವಾಸ ಕಥನಗಳು, ಲಹರಿಗಳು, ಲಲಿತ ಪ್ರಬಂಧಗಳು, ಹೆಚ್ಚೆಂದರೆ ಯಾವುದೋ ಕಾರ್ಯಕ್ರಮದ ವರದಿ. ಬ್ಲಾಗುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಂತೆ ಬ್ಲಾಗರುಗಳಲ್ಲೇ ಕ್ಲಾಸಿಫಿಕೇಶನ್ನುಗಳು, ಗುಂಪುಗಳು ಪ್ರಾರಂಭವಾದವು. ಬ್ಲಾಗ್ ಜಗತ್ತಿಗೆ ರಾಜಕೀಯ, ಸ್ತ್ರೀವಾದ, ಧೋರಣೆಗಳು, ಎಡಪಂಥ-ಬಲಪಂಥ, ವಿಚಾರವಾದ, ಕಮ್ಯೂನಲಿಸಮ್ಮು, ಟೆರರಿಸಮ್ಮು, ಪಾರ್ನು, ಸೆಲೆಬ್ರಿಟಿಗಳು(!), ಪರಸ್ಪರ ಆರೋಪಗಳು, ಕಚ್ಚಾಟಗಳು, ಪ್ರತಿಕ್ರಿಯಾ ಪ್ರತಿಭಟನೆ -ಇತ್ಯಾದಿ ಸಾಮಾನ್ಯ ಮನುಷ್ಯರಿಗೆ ಅರ್ಥವಾಗದ ಎಲ್ಲಾ ವಿಚಾರಗಳೂ ಕಾಲಿಟ್ಟವು.

ಒಬ್ಬ ಬರೆದ ಒಂದು ಬರಹವನ್ನೇ ಎದುರಿಗಿಟ್ಟುಕೊಂಡು "ಆತ ಇಂಥವ" ಅಂತ ಹಣೆಪಟ್ಟಿ ಕೊಡುವ ಪರಿ ಶುರುವಾಯ್ತು. ಅವನಿಗೊಂದು ವಿರೋಧಿ ಗುಂಪೇ ತಯಾರಾಗಿ ಹೋಗಿದೆಯೇನೋ ಎಂಬಂತೆ ಆತನ ಮುಂದಿನ ಬರಹಗಳಿಗೆಲ್ಲವಕ್ಕೂ ಬೈಗುಳಗಳ ಸುರಿಮಳೆಯೇ ಬೀಳತೊಡಗಿದವು. ಅನಾನಿಮಸ್ ಹೆಸರಿನಲ್ಲಿ, ಬೇರೆಯವರ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಜಾಸ್ತಿಯಾದವು. 'ರೆಸ್ಪಾನ್ಸಿಬಲ್ ಕಮೆಂಟಿಂಗ್'ಅನ್ನು ಕಲಿಯಲು ನಮಗಿನ್ನು ಕಾಲವೇ ಬೇಕೇನೋ ಅಂತ ನಾವು ಆಕಾಶ ನೋಡುವಂತಾಯಿತು. ಸಮಸ್ಯೆಯೆಂದರೆ, ಆವಾಗಿನಿಂದಲೂ ಕತೆ-ಕವನ-ಲಹರಿ ಅಂತ ಬರೆದುಕೊಂಡು ಬಂದಿದ್ದ ನನ್ನಂಥವರಿಗೆ, ಎಲ್ಲೋ ಆಫೀಸಿನ ಬಿಡುವಿನ ವೇಳೆಯಲ್ಲಿ ರಿಲಾಕ್ಸ್ ಆಗೋಣ ಅಂತ ಬ್ಲಾಗ್‍ಗಳ ಕಡೆಗೆ ಕಣ್ಣು ಹಾಯಿಸಿದರೆ, ಬರೀ ಇಂತಹ ಸೀರಿಯಸ್ಸಾದ ಚರ್ಚೆಗಳೋ, ಚರ್ಚೆಯಾಗಿ ಉಳಿದಿರದ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳೇ ಕಣ್ಣಿಗೆ ಬೀಳತೊಡಗಿ -ಛೇ, ಇದೇನಪ್ಪಾ ಆಗಿಹೋಯ್ತು ಕನ್ನಡ ಬ್ಲಾಗಿಂಗ್ ಪರಿಸ್ಥಿತಿ ಅಂತ ಬೇಸರ ಪಟ್ಟುಕೊಳ್ಳುವಂತಾಯ್ತು.

ಇರಲಿ, ಯಾವುದೇ ಮಾಧ್ಯಮದಲ್ಲಿ ಆಗುವಂತೆ ಇವೂ ಸಹ ಬ್ಲಾಗ್ ಮಾಧ್ಯಮದಲ್ಲಿ ಕನ್ನಡ ಬೆಳೆಯುತ್ತಿರುವ ಲಕ್ಷಣಗಳು ಅಂತ ಸಧ್ಯ ನಾನಂತೂ ಸಮಾಧಾನ ಮಾಡಿಕೊಂಡಿದ್ದೇನೆ.

ಇತ್ತೀಚೆಗೆ ಪ್ರತಿಕ್ರಿಯೆಗಳಿಗಾಗಿ ದಾಹ ಪಡುವ, ಒತ್ತಡ ಹೇರುವ ಬ್ಲಾಗರುಗಳು ಒಂದು ದೊಡ್ಡ ತಲೆನೋವಾಗಿದ್ದಾರೆ. ಬ್ಲಾಗರ್-ಬ್ಲಾಗರುಗಳ ನಡುವೆಯೇ ವೈಮನಸ್ಸುಗಳು ಉಂಟಾಗಿವೆ. ಬ್ಲಾಗರುಗಳಿಗಾಗಿ ಕಮ್ಯೂನಿಟಿಗಳಾಗಿವೆ, ಪರಸ್ಪರ ಪರಿಚಯಕ್ಕೆ-ಸ್ನೇಹಕ್ಕೆ ವೇದಿಕೆಗಳಾಗಿವೆ. ನನ್ನ ಗೂಗಲ್ ರೀಡರಿನಲ್ಲಿಯೇ ಹೆಚ್ಚುಕಮ್ಮಿ ಆರುನೂರು ಕನ್ನಡ ಬ್ಲಾಗುಗಳ ಫೀಡ್ ಇದೆ. ಇಪ್ಪತ್ತು ದಿನಗಳ ರಜೆಯಿಂದ ಮೊನ್ನೆ ವಾಪಸು ಬಂದು ನೋಡಿದರೆ ೧೦೦೦+ ಅಪ್‍ಡೇಟ್‍ಗಳನ್ನು ತೋರಿಸುತ್ತಿದೆ ರೀಡರ್! ಯಾವಾಗ ಓದಿ ಮುಗಿಸುತ್ತೇನೋ?

ಅವೆಲ್ಲ ಏನೇ ಇದ್ದರೂ, ಮುಂಬಯಿಯಲ್ಲಿ ಭಯೋತ್ಪಾದಕರ ದಾಳಿಯಾದಾಗ ಒಬ್ಬ ಬ್ಲಾಗರ್ ನೀಡಿದ ಕರೆಗೆ ಸ್ಪಂದಿಸಿ ನಾವು ಎಷ್ಟೊಂದು ಬ್ಲಾಗರುಗಳು ನಮ್ಮ ಬ್ಲಾಗುಗಳ ಹಣೆಗೆ ಕಪ್ಪುಪಟ್ಟಿ ಹಚ್ಚಿಕೊಂಡಿದ್ದು; ಯಾರದೋ ಬ್ಲಾಗಿನ ಹುಟ್ಟುಹಬ್ಬ ಎಂದರೆ ಅಲ್ಲಿ ಹೋಗಿ ಅವರಿಗೆ ಶುಭಾಶಯ ಹೇಳುವುದು; ಒಬ್ಬರ ಬ್ಲಾಗ್ ಮೆಚ್ಚಿ ಮತ್ತೊಬ್ಬರು ಬರೆಯುವುದು; ಕಮ್ಯೂನಿಟಿಗಳಲ್ಲಿ ಬ್ಲಾಗರುಗಳು ಪರಸ್ಪರ ಸ್ನೇಹ ಬಯಸಿ ರಿಕ್ವೆಸ್ಟ್ ಕಳುಹಿಸುವುದು -ಎಲ್ಲಾ ಖುಶಿ ಪಡಬೇಕಾದ ವಿಷಯಗಳೇ. ಎಷ್ಟೊಂದು ಬ್ಲಾಗರುಗಳು ಪೋಸ್ಟಿನಿಂದ ಪೋಸ್ಟಿಗೆ ಪಕ್ವವಾಗುತ್ತ ಹೋಗಿರುವುದು ನಮ್ಮ ಕಣ್ಮುಂದಿದೆ. ಯಾವಾಗ ಮುಂದಿನ ಪೋಸ್ಟು ಅಂತ ಕಾಯುವಂತೆ ಮಾಡುವ ಬಹಳಷ್ಟು ಬ್ಲಾಗರ್ ಗೆಳೆಯ-ಗೆಳತಿಯರು ನಮ್ಮೊಂದಿಗಿದ್ದಾರೆ. ಈಗೀಗ ಬ್ಲಾಗುಗಳು ಇವೆಂಟ್ ನೋಟಿಫಿಕೇಶನ್‍ನಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಪರಿಸರ, ಸಮಾಜ, ಪುಸ್ತಕ, ಸಂಗೀತ, ಸಿನೆಮಾಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಬ್ಲಾಗುಗಳು ಶುರುವಾಗಿವೆ. ಅನೇಕ ಹಿರಿಯರು ಉತ್ಸಾಹದಿಂದ ಬ್ಲಾಗಿಸುತ್ತಿದ್ದಾರೆ. ಸುಮಾರು ಬ್ಲಾಗರುಗಳು ಬ್ಲಾಗ್ ಮುಚ್ಚುತ್ತಿದ್ದೇನೆ, ಅಲ್ಪವಿರಾಮ, ಪೂರ್ಣವಿರಾಮ ಅಂತೆಲ್ಲ ಹೇಳಿಕೆ ಕೊಟ್ಟೂ ನಂತರ ಮತ್ತೆ ಬರೆಯಲು ಶುರು ಮಾಡಿದ್ದಾರೆ.. ಹಾಗೇ ಇದು: ಬಿಟ್ಟೇನೆಂದರೂ ಬಿಡದೀ ಮಾಯೆ!

ಬಹುಶಃ ಬ್ಲಾಗಿಂಗಿನ ದೊಡ್ಡ ಲಾಭವೆಂದರೆ ಇದು ನಮ್ಮ ಪ್ರತಿಭೆಗೆ ಕಲ್ಪಿಸಿಕೊಡುವ ವೇದಿಕೆ, ಆ ಪ್ರತಿಭೆಯನ್ನು ಮುಂದುವರೆಸಲು ಸಿಗುವ ಪ್ರೋತ್ಸಾಹ, ತಿದ್ದಿಕೊಳ್ಳಲು ಅವಕಾಶಗಳು, ಗಳಿಸಿಕೊಡುವ 'ಐಡೆಂಟಿಟಿ' ಮತ್ತು ಸಂಪಾದಿಸಿಕೊಡುವ ಹೊಸ ಸ್ನೇಹಗಳು. ಅದು ದುರುಪಯೋಗವಾಗದಂತೆ ಕಾಯ್ದುಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮೂರು ವರ್ಷಗಳಿಂದ ಕನ್ನಡ ಬ್ಲಾಗಿಂಗನ್ನು ಶ್ರದ್ಧೆಯಿಂದಲೇ ಗಮನಿಸಿಕೊಂಡು ಬರುತ್ತಿರುವ ಒಬ್ಬ ಬ್ಲಾಗರ್ ಆಗಿ ನಾನು ಇಷ್ಟೆಲ್ಲ ಬರೆಯಬೇಕಾಯ್ತು ಅಷ್ಟೇ.

ಒಂದೊಂದೇ ಹುಲ್ಲುಕಡ್ಡಿ ಸೇರಿಸುತ್ತ ನಾವೇ ಕಟ್ಟಿಕೊಂಡಿರುವ ಗುಬ್ಬಚ್ಚಿ ಗೂಡು ಇದು.. ಇಲ್ಲಿ ಕಚ್ಚಾಟಗಳು ಬೇಡ. ಪರಸ್ಪರ ಪ್ರೀತಿಯಿಂದ ಇರೋಣ. ಗುಬ್ಬಚ್ಚಿ ಗೂಡಿನಿಂದ ಹೊರಬೀಳುವ ಚಿಲಿಪಿಲಿ ಕಲರವ ಕೇಳುಗರ ಕಿವಿಗೆ ಇಂಪಾಗಿರಲಿ; ನಮ್ಮ ವರ್ತನೆ ನೋಡುಗರ ಕಣ್ಣಿಗೆ ತಂಪಾಗಿರಲಿ.

ಈ ಮೂರು ವರ್ಷದ ಹಾದಿಯಲ್ಲಿ ಸಿಕ್ಕ ಎಲ್ಲರಿಗೂ ನನ್ನ ಧನ್ಯವಾದ. ಪಯಣ ಮುಂದುವರೆಯುತ್ತದೆ. ಹ್ಯಾಪಿ ಬ್ಲಾಗಿಂಗ್. ಲವ್ಯೂ ಆಲ್!