Monday, November 14, 2016

ವಾಗತಿ

ಇಲ್ಲರಳಿದ್ದಲ್ಲರಳದೇ ಎಂದವರು ಕಿತ್ತು
ಕೊಟ್ಟಿದ್ದ ಸೇವಂತಿಗೆ ಗಿಡದ ಹಿಳ್ಳು
ಯಾಕೋ ಮುದುಡಿದೆ ಕೊಟ್ಟೆಯಲ್ಲಿ
ವಾಗತಿಯೆಲ್ಲಾ ಮಾಡಿಯಾಗಿತ್ತು ಸರಿಯಾಗಿಯೇ
ಸುಡಿಮಣ್ಣು, ಎರೆಗೊಬ್ಬರ, ಹೊತ್ತೊತ್ತಿಗೆ ನೀರು
ಕಮ್ಮಿ ಮಾಡಿರಲಿಲ್ಲ ಏನೂ
ಆದರೂ ಜೋತಿದೆ ನೆಲದತ್ತ ಬಾಡಿ
ಬಿಟ್ಟುಕೊಟ್ಟಂತೆ ಬದುಕುಳಿವ ಆಸೆ

ಹೀಗಾಗಿದ್ದು ಇದೇ ಮೊದಲೇನಲ್ಲ
ಹಾಗಂತ ಯಾರ ಮೇಲೂ ಆರೋಪವಿಲ್ಲ
ಎಲ್ಲೆಲ್ಲಿಂದಲೋ ಬಂದು ಬೇರೂರಿದವರೇ ತುಂಬಿದ
ಸರ್ವಪ್ರಬೇಧದ ಶಾಂತಿಯ ಅಂಗಳವಿದು
ಇನ್ನೇನು ಹೊರಡುವ ಹೊತ್ತಿಗೆ ಅತ್ತೆ ಕಿತ್ತುಕೊಟ್ಟ
ಗೆಂಟೆಹೂವು, ಬೇಡ ಎಂದರೂ ಕೇಳದೆ ಶಾಂತಕ್ಕ
ಹೆರೆ ಮುರಿದುಕೊಟ್ಟ ಕೆಂಪು ದಾಸವಾಳ,
ಭಾರೀ ಆಸೆಪಟ್ಟು ಅಮ್ಮ ತವರಿಂದ ತಂದ
ತಿಳಿಹಳದಿ ಲಿಲ್ಲಿ... ಇಲ್ಲಿ ಚಿಗುರಿ ನಳನಳಿಸುತ್ತಿದೆ.

ತಂದುಕೊಟ್ಟದ್ದಿದೆ ನಾನೂ- ಗುಂಡಿಯಿಂದೆತ್ತಿ ಗೊಬ್ಬರ
ಹಾಯಿಸಿದ್ದಿದೆ ನೀರು- ಟ್ಯಾಂಕಿನಿಂದೆಳೆದು ಪೈಪು
ಕುಳಿತದ್ದೂ ಇದೆ- ಗಿಡ ಅಡ್ಡಟಿಸಿಲೊಡೆವ ಬೆರಗ ನೋಡುತ
ಭಾವಿಸಿದ್ದಿದೆ- ಅರಳಿದ ಹೂಗಳೆಲ್ಲ ಅಮ್ಮನ
ಕಣ್ಣಿಂದ ಹೊರಟ ಸಂಭ್ರಮದ ಕಿರಣಗಳೇ ಎಂದು
ದುಃಖಿಸಿದ್ದಿದೆ ಕ್ಷಣ ನಗರದ ಗಿಜಿಗಿಜಿಯಲ್ಲಿ ಕೂತು
ಊರ ಮನೆಯಂಗಳದ ಸೊಬಗ ನೆನೆದು

ಇವತ್ತಿಲ್ಲಿ ಮತ್ತೊಂದು ಬೆಳಗು
ನಾಲ್ಕು ದಿನ ತುಳಸೀಗಿಡಕ್ಕೆ ನೀರು ಹಾಕಲು ಹೇಳಿ ಹೋಗಿದ್ದಾರೆ
ಪ್ರವಾಸ ಹೊರಟ ಪಕ್ಕದ ಮನೆಯವರು
ಊರಿಂದ ಬಂದ ಅಮ್ಮ ಬಗ್ಗಿಬಗ್ಗಿ ಹನಿಸುತ್ತಿದ್ದಾಳೆ ಪಾಟಿಗೆ
ಅಲ್ಲಿ ಅಂಗಳದಲ್ಲಿ ತಾನೂರಿಬಂದ ಡೇರೆಗಿಡದ ಕೊಟ್ಟೆಗಳಿಗೆ
ಅಪ್ಪ ಬೆಳಿಗ್ಗೆ ನೀರು ಹಾಕಿದರೋ ಇಲ್ಲವೋ ಎಂದು ಯೋಚಿಸುತ್ತ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

2 comments:

Unknown said...

ಮನೆಯ ನೆನಪಾಯಿತು. ನಿಮ್ಮ್ ಬರಹಗಳೆ ಹೀಗೆ ಮನಸ್ಸನ್ನ ಒಂದ್ ಸಲ ಮನೆ ಸುತ್ತ ಗಿರಕಿ ಹಾಕುಸುತ್ತವೆ.

Unknown said...

ಮನೆಯ ನೆನಪಾಯಿತು. ನಿಮ್ಮ್ ಬರಹಗಳೆ ಹೀಗೆ ಮನಸ್ಸನ್ನ ಒಂದ್ ಸಲ ಮನೆ ಸುತ್ತ ಗಿರಕಿ ಹಾಕುಸುತ್ತವೆ.