Tuesday, August 08, 2017

ಗುಡ್ಡೆಗರಕು

ಕ್ಯಾಲೆಂಡರಿನ ಮೇ ತಿಂಗಳ ಹಾಳೆ
ಅದೊಂದು ಧಗಧಗಗುಟ್ಟುವ ಉರಿಪುಳ್ಳೆ
ತೋಟ-ಗದ್ದೆಗಳಿಂದ ವಾಪಸಾಗುತ್ತಿರುವ ಜನರು
ರಜೆಯ ಮಜದಲಿ ಅಂಗಳದಲ್ಲಾಡುತ್ತಿರುವ ಚಿಣ್ಣರು
ಸಂಜೆಯಾದರೂ ಇಳಿಯುತ್ತಿರುವ ಬೆಮರು
ಜತೆಗೆ, ಎತ್ತಲಿಂದಲೋ ಮೂಗಿಗಡರುತ್ತಿರುವ ಬೆಂಕಿಯ ಕಮರು...

ಎಲ್ಲಿಂದ ಎಲ್ಲಿಂದ? ತೋಟದ ಆಚೆದಿಂಬದಿಂದಲೇ?
ಮೇಲುಹಿತ್ತಿಲ ಹಿಂದಣ ಬಂಡಿಹಾದಿಯ ಬಳಿಯಿಂದಲೇ?
ಮೈಲು ದೂರದ ಕರಡದ ಬ್ಯಾಣದಿಂದಲೇ?
ಇಳಿಸಂಜೆಗೆ ಆತಂಕವ ತುಂಬುತ್ತಿರುವ ಈ ಘಮದ ಗಮನವೆಲ್ಲಿಂದ?

ಕತ್ತು ಸುತ್ತ ತಿರುಗಿಸಿ ಮೂಗರಳಿಸಿ ಗ್ರಹಿಸಬೇಕು..
ಎತ್ತರದ ದಿಣ್ಣೆಯನ್ನೇರಿ ತುದಿಗಾಲಲ್ಲಿ ನಿಂತು ನೋಡಬೇಕು
ಸೂರ್ಯ ಮುಳುಗಿ ತಾಸು ಕಳೆದರೂ
ಪಡುವಣವಲ್ಲದ ಅಕೋ ಆ ದಿಗಂತದಲ್ಲೇನದು ಕೆಂಪುಕೆಂಪು?
ಓಹೋ, ಅಲ್ಲೇ ಅಲ್ಲೇ ಅಲ್ಲಿಂದಲೇ
ಗಾಳಿಯಲ್ಲಿ ಹಾರಿ ಬರುತ್ತಿರುವ ಬೂದಿಚೂರುಗಳು
ಹಿಡಿದರೆ ಅಪ್ಪಚ್ಚಿ, ಆದರಿನ್ನೂ ಇದೆ ಒಡಲಲ್ಲಿ ಸ್ವಲ್ಪ ಬಿಸಿ

ಕಂಡುಹಿಡಿದಾದಮೇಲೆ ಮೂಲ, ಇನ್ನು ಓಟ ಜರೂರು
ಊರವರೆಲ್ಲ ಹೌಹಾರಿ ಗದ್ದಲವೆಬ್ಬಿಸಿ ಕೈಗೆ ಸಿಕ್ಕಿದ
ಕೊಡ ಬಕೇಟು ಕೌಳಿಗೆ ಚೊಂಬು ಕ್ಯಾನು ದೊಡ್ಡ ಉಗ್ಗ ಹಿಡಿದು..
ತೊಟ್ಟಬಟ್ಟೆಯಲ್ಲೇ ಆತುರಾತುರವಾಗಿ ಓಡುವ ಗಂಡಸರು;
ತಾವೂ ನೆರವಿಗೆ ಬರುವೆವೆನ್ನುವ ಹೆಂಗಸರು
ಅಲ್ಲೇ ದಾರಿ ಬದಿ‌ ಬಗ್ಗಿದ ಮರದ ಹಸಿಹಸಿ ಸೊಪ್ಪಿನ ಚಂಡೆ
ಕತ್ತಿಯಿಂದ ಕಡಿದು, ಊರಿಗೂರೇ ವೀರಾವೇಷದಿಂದ
ಸೇನೆಯಂತೆ ನುಗ್ಗಿ ಆಕ್ರಮಿಸಿ ರಣರಂಗ

ಬ್ಯಾಣದ ಆಚೆತುದಿಯಿಂದ ಹಬ್ಬುತ್ತಿರುವ ಬೆಂಕಿ..
ಗಾಳಿಗೆ ಚುರುಕುಗೊಳ್ಳುತ್ತ ಪೊದೆಯಿದ್ದಲ್ಲಿ ಆಕಾಶದೆತ್ತರಕ್ಕೆದ್ದು
ನಡುವೆಲ್ಲೋ ಗುಪ್ತಗಾಮಿನಿಯಂತೆ ನೆಲಮಟ್ಟದಲಿ ಹರಿದು
ಬುಕ್ಕೆಗಿಡ-ಕೌಳಿಮಟ್ಟಿಗಳ ಹಸಿರೆಲೆಗಳ ದಳದಳ ಕೆಂಪಾಗಿಸುತ್ತ
ಊರತ್ತಲೇ ಧಾವಿಸುತ್ತಿರುವಂತೆನಿಸುತ್ತಿರುವ ಅಗ್ನಿಯಟ್ಟಹಾಸ

ಯಾರು ಬೀಡಿ ಹಚ್ಚಿ ಎಸೆದ ಕಡ್ಡಿಯೋ
ಯಾರು ಬೇಕಂತಲೇ ಎಸಗಿದ ದುಷ್ಕೃತ್ಯವೋ
ತಾನಾಗಿಯೇ ಹೊತ್ತಿಕೊಂಡ ಪ್ರಕೃತಿಮಾಯೆಯೋ
ಬೈದುಕೊಳ್ಳುತ್ತಲೇ ಕಾಣದ ಕೈಗಳ, ಶಪಿಸುತ್ತಲೇ ವಿಧಿಯ
ಹರಕೆ ಹೊರುತ್ತಲೇ ಆಗದಿರಲೆಂದು ಯಾವುದೇ ಅನಾಹುತ
ಪ್ರಾರ್ಥಿಸುತ್ತ ಅಗ್ನಿದೇವನ ಶಮನವಾಗಲೆಂದು ಕೋಪ

ಕೊಡ ಬಕೇಟು ಬಿಂದಿಗೆಗಳಿಂದ ಎರಚಿ ಎರಚಿ ನೀರು
ಹಸಿಸೊಪ್ಪ ಹೆಣಿಕೆಯಿಂದ ಬಡಿಬಡಿದು ಬೆಂಕಿಮೈಗೆ
ದೊಡ್ಡಮರಗಳಿಗೆ ತಗುಲದಂತೆ ಬುಡ ಬಿಡಿಸಿಕೊಡುತ
ಮಸಿಮೆತ್ತಿದ ಲುಂಗಿ-ಬನೀನುಗಳ ವೀರರು;
ಒದ್ದೆನೈಟಿ-ಸೀರೆಗಳ ರಣಚಂಡಿಯರು
ತಾಕುವ ಬಿಸಿಯ ಲೆಕ್ಕಿಸದೆ
ಸುಡುವ ಅಂಗಾಲುರಿಯ ನಿರ್ಲಕ್ಷಿಸಿ
ಅಪ್ಪಳಿಸುವ ಝಳಕ್ಕೆ ಬೆದರದೆ
ಸಮರೋಪಾದಿಯಲ್ಲಿ ಇಡೀ ಊರ ಜನ ಒಂದಾಗಿ
ಪರಸ್ಪರ ನೆರವಾಗುತ್ತ, ದಾರಿಹೋಕರೂ ಸೇರಿಕೊಳ್ಳುತ್ತ...

ಯಜ್ಞವನ್ನು ನಿಲ್ಲಿಸುವುದೂ ಒಂದು ಯಜ್ಞ.
ಬೇಕದಕ್ಕೆ ರಾಕ್ಷಸಬಲ. ನೂರಾರು ಕೈ.
ದೂರದ ಬಾವಿಯಿಂದ ನೀರ ಹೊತ್ತುತರಲು ಗಟ್ಟಿರಟ್ಟೆ.
ಏದುಸಿರು ಬಿಡುತ್ತಲೇ ಓಡಲು ಕಾಲಲ್ಲಿ ನೆಣ.
ಬಿಂದಿಗೆಯನು ಒಬ್ಬರಿಂದೊಬ್ಬರಿಗೆ ದಾಟಿಸಲು ಒಕ್ಕೂಟ ವ್ಯವಸ್ಥೆ.
ಎತ್ತಲಿಂದ ಎರಗಿದರೆ ಆಕ್ರಮಣವ ತಡೆಯಬಹುದೆಂಬುದ
ಅಂದಾಜಿಸಲು ಸಮರ್ಥ ತಂತ್ರ.
ಜ್ವಾಲೆಯ ಹೊಡೆತವನ್ನೆದುರಿಸಿ ನುಗ್ಗಲು ದಿಟ್ಟ ಗುಂಡಿಗೆ.

ಹಾಗೆಂದೇ, ಅಲ್ಲೀಗ ಯುದ್ಧ ಗೆದ್ದ ನಿರಾಳ..
ಗಂಟೆಗಟ್ಟಲೆ ಹೋರಾಟದ ತರುವಾಯ
ಕಪ್ಪುಬಯಲ ಹಿಂದೆಬಿಟ್ಟು ವಾಪಸಾಗುವಾಗ ನಿಟ್ಟುಸಿರು
ಊರನುಳಿಸಿಕೊಂಡ, ಹೊಲ-ಗದ್ದೆ-ತೋಟ-ಮನೆಗಳ
ಸುಡಗೊಡದೆ ಹೋರಾಡಿ ಜಯಿಸಿದ ನಿರುಮ್ಮಳ
ಮನೆಮನೆಗಳ ನಡುವಿನ ಸಣ್ಣಪುಟ್ಟ ಜಗಳಗಳ
ವೈಮನಸ್ಸುಗಳ ಮರೆತು ಒಂದಾಗಿ ಆಪತ್ತನೆದುರಿಸಿದ ಖುಷಿ
ತಬ್ಬಿಕೊಳ್ಳುತ್ತಿದ್ದಾರೆ ಒಬ್ಬರನ್ನೊಬ್ಬರು
ಬಾಷ್ಪಕೆ ಕಾರಣ ಕಣ್ಣಿಗೆ ಹೊಕ್ಕ ಹೊಗೆ ಎಂದು ಸುಳ್ಳೇ ಹೇಳುತ್ತಿದ್ದಾರೆ
ಎಂದೂ ಹೊಗದ ಮನೆ ಹೊಕ್ಕು ಹದಮಜ್ಜಿಗೆ ಬೆರೆಸಿ ಕುಡಿಯುತ್ತಿದ್ದಾರೆ
ಸುಮ್ಮಸುಮ್ಮನೆ ನಗುತ್ತಿದ್ದಾರೆ
ಮುಂದಿನ ವರ್ಷ ಬೇಸಿಗೆಗೂ ಮುನ್ನವೇ ಗುಡ್ಡೆಗರಕು
ತೆಗೆದುಬಿಡಬೇಕೆಂದು ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನೂ ಸಣ್ಣಗೆ ಹೊಗೆಯಾಡುತ್ತಿರುವ ಬ್ಯಾಣದ
ಕಪ್ಪು ನೆಲದ ಮೇಲೀಗ ಸುರಿಯುತ್ತಿರುವ ಇಬ್ಬನಿ...
ನಾಲಿಗೆ ಚಾಚಿದರೆ ಅದಕ್ಕೆ ಸಕ್ಕರೆಯ ಸಿಹಿ
ಬೂರುಗದ ಮರದ ಪೊಟರೆಯಲ್ಲಿದ್ದ ಹಕ್ಕಿಯೊಂದು
ಈ ಅಪರಾತ್ರಿ ಹೊರಬಂದು ಹಾಡಲು ಶುರುಮಾಡಿದೆ:
ತಾನಿಟ್ಟ ಮೊಟ್ಟೆಗಳೊಡಲ ಮರಿಗಳಿಗಷ್ಟೇ ಅಲ್ಲ,
ಸಲುಹಿದ ಗ್ರಾಮಸ್ಥರಿಗೆಲ್ಲ ತಲುಪುವಂತಿದೆ ಈ ಕೂಜನ
ಗುಡಿಸಿದಂತಿದೆ ತರಗು ಚೆಲ್ಲಿ ಕೀರ್ಣವಾಗಿದ್ದ ಮನ.

No comments: