Saturday, September 28, 2019

ನಾನು ಹೇಳುವುದು ಹೇಳುತ್ತೇನೆ

ಇಂತಹ ಸಂಜೆಮಳೆಯ ದಿನಗಳಲ್ಲಿ
ಹಲಸಿನ ಹಪ್ಪಳ ತಿನ್ನಬೇಕು
ಅಂಗಡಿಯಿಂದ ಉದ್ದಿನ ಹಪ್ಪಳ ತಂದು ತಿನ್ನುವೆ
ಎನ್ನುವ ಅರಸಿಕರ ಸಂಗ ಬಿಟ್ಟುಬಿಡಿ

ಸೂಚನೆ ಕೊಡದೆ ಬರುವ ಮಳೆ
ಗಾಳಿ ನುಸುಳದ ಡಬ್ಬಿಯಲ್ಲಿ ದಾಸ್ತಾನಿರುವ
ಊರಿಂದ ಕಳುಹಿಸಿದ ಹಪ್ಪಳ
ಕಾದೆಣ್ಣೆ, ಎಣ್ಣೆಜಿಡ್ಡಿನ ಚಿಮ್ಮಟಿಗೆ
ಮತ್ತು ಇಳಿಸಂಜೆ

ಕೇಳಬಹುದು ನೀವು- ಏನು ಮಹಾ ವ್ಯತ್ಯಾಸ?

ವ್ಯತ್ಯಾಸವಿದೆ ಮಹಾಜನಗಳೇ-
ಆ ಹಪ್ಪಳಕ್ಕಾಗಿ, ಬೆಳೆದ ಕಾಯಿಯ ಬಿಟ್ಟುಕೊಟ್ಟ
ಹಿತ್ತಿಲ ಮರ ಬೆಳ್ಳಗೆ ಕಣ್ಣೀರು ಸುರಿಸಿದೆ
ತೊಳೆ ಬಿಡಿಸಿದ ಅಪ್ಪನ ಕೈಗಂಟಿದಂಟು
ತೊಡೆಯಲು ಅಜ್ಜಿ ಕೊಬ್ರಿ ಎಣ್ಣೆ ಹನಿಸಿದ್ದಾಳೆ
ಬಿಡಿಸಿದ ತೊಳೆಗಳ ನುಣ್ಣಗಾಗಿಸಲು
ತೊಳೆದೊರಳು ಗುಡುಗುಡುಗುಟ್ಟಿದೆ
ಬೆರೆಸಲು ಬೀಸಿದ ಮಸಾಲೆಯ ಖಾರಕ್ಕೆ
ಅಮ್ಮನ ಕೈ ಎರಡು ದಿನ ಭುಗುಗುಟ್ಟಿದೆ

ಆ ಹಪ್ಪಳದಲ್ಲಿ, ಮನೆಯವರೆಲ್ಲ ರಾತ್ರಿಯಿಡೀ ಕೂತು
ಬಾಳೆಯೆಲೆ ನುಣ್ಣನೆ ಪ್ಲಾಸ್ಟಿಕ್ ಕವರು ಹಳೆಸೀರೆಗಳ
ಮೇಲೆ ಒತ್ತೊತ್ತಿ ಹಚ್ಚಚ್ಚಿ ತಟ್ಟಿದ ಬೆರಳುಗಳ ಅಚ್ಚಿದೆ
ಅಂಗಳದ ಬಿಸಿಲಿನಲಿ ಸಪಾಟುಗೋಲಗಳ
ಕಾಗೆ ಗುಬ್ಬಿ ನಾಯಿ ಬೆಕ್ಕುಗಳಿಂದ ಕಾದು
ರಕ್ಷಿಸಿದ ಮಕ್ಕಳ ಸೈನ್ಯವಿದೆ
ರುಚಿಹಿಟ್ಟನ್ನೇ ಕದ್ದು ಮೆದ್ದು ಖಾಲಿವೃತ್ತಗಳ
ಸೃಷ್ಟಿಸಿದ ತುಂಟಕೃಷ್ಣರ ಪಡೆಯಿದೆ

ಮತ್ತಾ ಹಪ್ಪಳಗಳಲ್ಲಿ ಊರ ಬಿಸಿಲಿದೆ
ತೆಂಗಿನಮರದ ನೆರಳಿದೆ
ಬಾಳೆಯೆಲೆಯ ಕಂಪಿದೆ
ಹಿಟ್ಟು ಹಚ್ಚಿದ ರಾತ್ರಿ ಧ್ವನಿಸಿದ ನಾನಾ ಕಥೆಗಳಿವೆ

ನಾನು ಹೇಳುವುದು ಕೇಳಿ
ಅರಸಿಕರ ಸಂಗ ಬಿಡಿ
ಈ ಇಳಿಸಂಜೆ, ಕಾದೆಣ್ಣೆ, ಎಣ್ಣೆಜಿಡ್ಡಿನ ಚಿಮ್ಮಟಿಗೆ,
ಸುರಿಮಳೆ, ಕಟ್ಟೊಡೆದ ಹಲಸಿನ ಹಪ್ಪಳ

ಇನ್ನು ನಿಮಗೆ ಬಿಟ್ಟಿದ್ದು.

2 comments:

Unknown said...

Rayare,

nimma happala namma nAlige nIlu bidiside. kAla cakra dalli nAvu bAylli nIru barisi kAdu kuLit nenapide. I ga sigade bI hAri hOguva nenapide.

Narayan Bhat said...

ನೀವು ಹೇಳುವದನ್ನು ಹೇಳಿ, ಸಾರ್,
ನಾನೂ ಹೇಳಲೇಬೇಕಾದ್ದನ್ನು ಹೇಳುತ್ತಿದ್ದೇನೆ -
ನಿಮ್ಮ ಕವನವೂ ತುಂಬಾ ಚೆನ್ನಾಗಿದೆ -
ಹಲಸಿನ ಹಪ್ಪಳದಂತೆ.