Showing posts with label ಅಂತರ್ಜಾಲೀ ಕನ್ನಡಿಗರ ಮುಖಾಮುಖಿ. Show all posts
Showing posts with label ಅಂತರ್ಜಾಲೀ ಕನ್ನಡಿಗರ ಮುಖಾಮುಖಿ. Show all posts

Monday, March 17, 2008

ಪ್ರಣತಿಯ ಖುಷಿಗೊಂದು ಬ್ಲಾಗರ್ಸ್ ಮೀಟ್

ಮತ್ತೊಂದು ಖುಷಿಯ ದಿನ ನಿನ್ನೆ. ತಿಂಗಳಿಂದ ಪಟ್ಟಿದ್ದ ಶ್ರಮ ಸಾರ್ಥಕವಾಯ್ತು. ವಾರದಿಂದ ಮಾಡಿಕೊಂಡಿದ್ದ ಟೆನ್ಷನ್ನೆಲ್ಲ ಕಳೆದು ಒಂದು ಸುಧೀರ್ಘ ನಿಟ್ಟುಸಿರು ಬಿಡುವಂತಾಯ್ತು.

ನೂರಿಪ್ಪತ್ತಕ್ಕೂ ಹೆಚ್ಚು ಬ್ಲಾಗಿಗರಿಂದ, ಓದುಗರಿಂದ, ಸಾಹಿತ್ಯಪ್ರೇಮಿಗಳಿಂದ, ಕನ್ನಡಿಗರಿಂದ ತುಂಬಿ ತುಳುಕುತ್ತಿತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಸಭಾಂಗಣ. ನಮ್ಮೆಲ್ಲರ ಪ್ರೀತಿಯ ಪವನಜ, ನಾಡಿಗ್, ರಶೀದ್, ಶ್ಯಾಮ್ ತುಂಬಾ ಚೆನ್ನಾಗಿ ಮಾತಾಡಿದ್ರು. ನಂತರ ನಡೆದ ಚರ್ಚೆ ಸಹ ಫಲಪ್ರದವಾಗಿತ್ತು. ಚಹ, ಹವೆಗೆ ತಕ್ಕಷ್ಟೇ ಬಿಸಿ ಇತ್ತು. ಯಾರ್ಯಾರೆಲ್ಲ ಬಂದಿದ್ರು, ಎಷ್ಟೆಷ್ಟು 'ಹಾಯ್'ಗಳು ವಿನಿಮಯವಾದ್ವು, ಎಷ್ಟು ಜನ ಎಷ್ಟು ಜನರ ಕೈ ಕುಲುಕಿದ್ರು, ಆಹ್! ಒಂದು ಯಶಸ್ವೀ ಕಾರ್ಯಕ್ರಮ ಕೊಟ್ಟ ಸಂಭ್ರಮದಲ್ಲಿ ಪ್ರಣತಿ, ನೋಡಿ, ಹೇಗೆ ನರ್ತಿಸುತ್ತಾ ಬೆಳಗುತ್ತಿದೆ..!

ಬಂದವರಿಗೆ, ಬರಕ್ಕಾಗಲ್ಲ ಅಂತ ಎಲ್ಲೆಲ್ಲಿಂದಲೋ ವಿಶ್ ಮಾಡಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್.

ದಟ್ಸ್ ಕನ್ನಡದಲ್ಲಿ ವರದಿ
ಕೆಂಡಸಂಪಿಗೆಯಲ್ಲಿ ವರದಿ

Monday, March 10, 2008

ಆ ಸಂಜೆ, ನಾವೆಲ್ಲ ಸೇರ್ತಿದೀವಿ...

ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತೇನೆ: ನನ್ನ ಸ್ನೇಹಿತರ ಸಂಖ್ಯೆ ಹೆಚ್ಚಾಗಿದ್ದು ಇಂಟರ್ನೆಟ್ಟಿನ ಕೃಪೆಯಿಂದ! ನಾನೇನಾದರೂ 'ನೆಟ್ಟಿಗ'ನಾಗದೇ ಉಳಿದಿದ್ದರೆ ಅದೆಷ್ಟು ಚಿಕ್ಕ ಲೋಕದಲ್ಲಿರುತ್ತಿದ್ದೆನೋ ಎಂದು ಯೋಚಿಸಿದಾಗ ದಿಗ್ಭ್ರಾಂತಿಯೂ ಜತೆಗೇ ಹಿತಾನುಭವವೂ ಆಗುತ್ತದೆ. ಎಲ್ಲೋ ಯಾರೋ ತೋರಿಸಿಕೊಟ್ಟರು: ಜಿ-ಮೇಲು ಅಂತ ಬಂದಿದೆ ನೋಡು.. ಚನಾಗಿದೆ.. ಒಂದು ಅಕೌಂಟ್ ಕ್ರಿಯೇಟ್ ಮಾಡ್ಕೋ, ನಾನು ಇನ್ವಿಟೇಶನ್ ಕಳುಹಿಸ್ತೀನಿ ಅಂತ.. ಜಿ-ಮೇಲಿನಿಂದ ಆರ್ಕುಟ್ಟು, ಅದಾದಮೇಲೆ ಬ್ಲಾಗು ಎಲ್ಲಾ ಗೊತ್ತಾಯ್ತು.. ತೆರೆದದ್ದಾಯ್ತು, ಬರೆದದ್ದಾಯ್ತು.. ಯಾರ್ಯಾರೋ ನಾನು ಬರೆದದ್ದನ್ನೆಲ್ಲ ಓದಿ, ಕಂಡು ಕೇಳರಿಯದ ಲೋಕಗಳಿಂದೆಲ್ಲ ಫ್ರೆಂಡ್ ರಿಕ್ವೆಸ್ಟುಗಳು ಬರತೊಡಗಿದವಲ್ಲ..? ಯಾರ್ಯಾರೋ ನನಗೆ ಫ್ಯಾನಂತೆ, ಯಾರಿಗೋ ನನ್ನ ಮೇಲೆ ಕ್ರಶ್ಶಂತೆ... ಆಹ್! ಇದೇನಾಗಿ ಹೋದೆ ನಾನು ಅಂತ ನನಗೇ ಒಮ್ಮೊಮ್ಮೆ ಯೋಚನೆಯಾಗುತ್ತದೆ!

ಇಂಟರ್ನೆಟ್ಟಿನಲ್ಲೇ ಎಷ್ಟೊಂದು ಮಂದಿ ಪರಿಚಯವಾಯ್ತು.. ಸಿಕ್ಕ ಅಕ್ಕಂದಿರು, ಪ್ರೀತಿ ತಂಗಿಯರು, 'ಏಕವಚನದಲ್ಲಿ ಕರೆಯೋ' ಎಂದವರು, ಹೆಸರೇ ಹೇಳದೇ ಕಾಡಿದವರು, ಸುಳ್ಳೇ 'ನೀನಿಷ್ಟ' ಎಂದವರು... ಓಹ್! ಇಂಟರ್ನೆಟ್ಟಿನಲ್ಲೇ ಪ್ರೀತಿ, ಪ್ರಪೋಸಲ್ಲು, ಮೋಸ, ವಿರಹ, ಜಗಳ, ಶಾಪ, ದ್ವೇಷ, ಹಪಹಪಿ... ಎಲ್ಲವನ್ನೂ ನೋಡಿದ್ದಾಯ್ತು. ಏನೆಲ್ಲ ಮಾಡಿದ್ದಾಯ್ತು.

ಬರೆದದ್ದನ್ನೆಲ್ಲ ಸುಮ್ಮನೆ ಮುಚ್ಚಿ ಬಚ್ಚಿಡುತ್ತಿದ್ದ ನನ್ನಂಥವರಿಗೆ ಬ್ಲಾಗುಗಳು ತೆರೆದಿಟ್ಟ ಲೋಕ ನಿಜಕ್ಕೂ 'ಕೃತಜ್ಞತಾವರ್ತ್'. ಆದರೆ ಹೀಗೆ ಬರೆದುಕೊಳ್ಳುತ್ತಿರುವ ನಾವು, ನಮ್ಮಲ್ಲೆಷ್ಟೋ ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನಮ್ಮ ಪುಸ್ತಕ 'ಚಿತ್ರಚಾಪ'ವನ್ನ ಪ್ರಕಟಿಸಿತ್ತಲ್ಲ, 'ಪ್ರಣತಿ ಪ್ರಕಾಶನ', ಹಾಂ ಅದು, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, 'ವಿಶ್ವಕನ್ನಡ'ದ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಪ್ರೀತಿಯಿಂದ,

-ಸು