Showing posts with label ಖುಶಿ. Show all posts
Showing posts with label ಖುಶಿ. Show all posts

Monday, April 26, 2010

ನಾಲ್ಕು ವರ್ಷಗಳ ಕೊನೆಗೆ ನಾಲ್ಕು ಮಾತು

ಕೈಯಲ್ಲಿ ಅಕ್ಷರಗಳ ಮೂಟೆಯಿದೆ. ಅದನ್ನು ತೂಗಲಿಕ್ಕೆ, ಅದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವೇ ಇಲ್ಲ. ಏ-ಫೋರ್ ಅಳತೆಯ, ಅತ್ಯುತ್ತಮ ಗುಣಮಟ್ಟದ ಹಾಳೆ ಬಳಸಿದ, ಮುನ್ನೂರಾ ಇಪ್ಪತ್ತು ಪುಟಗಳ ಈ ಬೃಹತ್ ಪುಸ್ತಕದ ಪುಟಗಳನ್ನು ತೆರೆದರೆ, ಕನ್ನಡ ಸಾರಸ್ವತ ಲೋಕದ ಅಷ್ಟೂ ಮುಂಚೂಣಿ ಮಂದಿ ಅಲ್ಲಿದ್ದಾರೆ. ಕುವೆಂಪು-ಬೇಂದ್ರೆ-ಮಾಸ್ತಿಯವರ ಕೈಬರಹಗಳನ್ನು ನೋಡಿ ತೆರೆದ ಪುಟದಲ್ಲೇ ಪುಳಕಗೊಂಡು ನಿಂತುಬಿಡುವ ಮನವನ್ನು ತಹಬಂದಿಗೆ ತಂದುಕೊಳ್ಳುತ್ತಾ ಮುಂದೆ ಹೋದರೆ, ಅನಂತಮೂರ್ತಿ, ಕಾರ್ನಾಡ, ಕಾಯ್ಕಿಣಿ, ಚಿತ್ತಾಲ, ಕಾಗಿನೆಲೆ, ರಶೀದ್, ಸುನಂದಾ, ಜೋಗಿ, ನುಗಡೋಣಿ, ವಸುಧೇಂದ್ರ, ವೈದೇಹಿ, ಪ್ರತಿಭಾ, ಕುಂವೀ, ಎಚ್ಚೆಸ್ವಿ, ಕಂಬಾರ, ಬಿ‌ಆರ್‌ಎಲ್.... ಹೀಗೆ ನೀವು ಅತಿ ಪ್ರೀತಿ ಪಟ್ಟು ಓದುವ ಅಷ್ಟೂ ಬರಹಗಾರರು ಇಲ್ಲಿ ಒಟ್ಟಿಗೇ ಎದುರುಗೊಂಡು ನಿಮಗೆ ಎಚ್ಚರ ತಪ್ಪುವಂತೆ ಮಾಡುತ್ತಾರೆ. ನಿಮಗೆ ಇಷ್ಟವಾಗುವ ಎಲ್ಲದೂ ಇಲ್ಲಿದೆ. ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಪರಿಚಯ, ಚಿತ್ರ, ಸಂವಾದ, ಲೇಖನ.... ಯಾವುದೇ ಭಾಷೆಯ ಸಾಹಿತ್ಯ ಪ್ರಾಕಾರವೊಂದರಲ್ಲಿ ಏನೇನು ಇರಲಿಕ್ಕೆ ಸಾಧ್ಯವೋ ಅಷ್ಟೂ ಇಲ್ಲಿವೆ. ಪುಟಗಳ ಸಂಯೋಜನೆಯಂತೂ ಅದೆಷ್ಟು ಮುದ್ದಾಗಿದೆಯೆಂದರೆ, ಓದುವುದು ಹಾಗಿರಲಿ; ಈ ಪುಸ್ತಕವನ್ನು ನೋಡಿ ಮುಗಿಸಲಿಕ್ಕೇ ಒಂದು ತಾಸು ಬೇಕು! ಕಷ್ಟಸಾಧ್ಯವಲ್ಲ; ವರ್ಣಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿನ ಪುಸ್ತಿಕೆಯೊಂದನ್ನು ಕೈಗೆ ಬಂದಿದೆ. ಇಂಥದೊಂದು ಅದ್ಭುತ ಕೆಲಸವೊಂದು ಕನ್ನಡದಲ್ಲಿ ಆಗಿದೆ, ಅದರ ಬಿಡುಗಡೆಗೆ ನಾವು ಸಾಕ್ಷಿಯಾಗಿದ್ದೇವೆ, ಆ ಗ್ರಂಥವನ್ನು ಗರಿಗರಿಯಾಗಿ ಪಡೆಯುವಲ್ಲಿ - ಅದರ ಮೈ ಸವರುವಲ್ಲಿ - ಪುಟಗಳ ಹೊಸ ಪರಿಮಳದೊಂದಿಗೆ ಓದುವ ಆನಂದದಲ್ಲಿ ಭಾಗಿಯಾಗಿದ್ದೇವೆ ಎನ್ನುವುದು ಬಹುಶಃ ನಮ್ಮ ಭಾಗ್ಯ ಎಂತಲೇ ನನಗನಿಸುತ್ತದೆ. ಇಷ್ಟೊಂದು ಖುಶಿ-ಉದ್ವೇಗಗಳನ್ನು ನಮಗೆ ಕೊಟ್ಟಿರುವ, ಇಂಥದೊಂದು ಹೆಮ್ಮೆ ಪಡಬಹುದಾದ ಅಕ್ಷರಗುಚ್ಛವನ್ನು ಕೈಗಿಟ್ಟಿರುವ ವಿವೇಕ ಶಾನಭಾಗ್ ಮತ್ತು ಬಳಗದವರಿಗೆ ಹ್ಯಾಟ್ಸ್ ಆಫ್! ಇದು ‘ದೇಶ ಕಾಲ’ ಪತ್ರಿಕೆಯ ವಿಶೇಷ ಸಂಚಿಕೆ.

* * *

ಪ್ರತಿಯೊಂದರಲ್ಲೂ ಮನರಂಜನೆಯೇ ಮೂಲಮಂತ್ರವಾಗಿರುವ ಇಂದಿನ ಮನುಜ ಮನಸ್ಥಿತಿಯ ನಡುವೆ ಇಂಥ ಅಪರೂಪಗಳೇ ಇರಬೇಕು ನಮ್ಮನ್ನು ಇನ್ನೂ ಸೃಜನಶೀಲವಾಗಿ ಇಟ್ಟಿರುವ ಆಕರಗಳು. ಒಂದು ಕತೆ ಓದಿದಾಗ ಆಗುವ ಖುಶಿ, ಒಂದು ಕವಿತೆ ಓದುವಾಗ ಆಗುವ ಅನುಭವ, ಒಂದು ಕಾದಂಬರಿ ಓದಿ ಮುಗಿಸಿದಾಗ ಆಗುವ ಬದಲಾವಣೆ, ಒಂದು ಒಳ್ಳೆಯ ಸಿನೆಮಾ ನೋಡಿದಾಗ ಆಗುವ ಆನಂದ, ಒಂದು ಅತ್ಯುತ್ತಮ ಕಲಾಕೃತಿ ನೋಡುತ್ತಾ ಮೈಮರೆಯುವ ಸುಖ, ಒಂದ್ಯಾವುದೋ ಹಾಡು ಕೇಳುತ್ತಾ ಕಳೆದುಹೋಗುವುದರಲ್ಲಿನ ಮಜ... ಇವನ್ನು ಅನುಭವಿಸದ ಮನುಷ್ಯ ನಿಜಕ್ಕೂ ಅದೃಷ್ಟಹೀನ. ಇವು ಕೇವಲ ನಮ್ಮ ದಿನದ ಭವಗಳನ್ನು ಗೆಲ್ಲುವ ಮನರಂಜನೆಯ ಸಾಧನಗಳಾಗಿರದೆ ನಮ್ಮ ನಾಳೆಯ ನಡಿಗೆಗೆ ಕಿಂಚಿತ್ತು ಉತ್ಸಾಹ ತುಂಬುವ ಮಾನಸೋಲ್ಲಾಸದಾಯಕ ಔಷಧಿಗಳಾಗಿವೆ.

ಇವನ್ನು ನಮಗೆ ಕೊಡಮಾಡುವ ಮಂದಿ ನಮ್ಮಿಂದ ಆದಷ್ಟೂ ದೂರವಿದ್ದಷ್ಟೂ ಒಳ್ಳೆಯದು ಅಂತ ಗೆಳೆಯ ಕಾರ್ತಿಕ್ ಪರಾಡ್ಕರ್ ಬರೆದಿದ್ದ. ಎಷ್ಟು ಸತ್ಯ! ಲೇಖಕನಿರಬಹುದು, ನಟನಿರಬಹುದು, ಆಟಗಾರನಿರಬಹುದು, ಹಾಡುಗಾರನಿರಬಹುದು- ಆತ ನಮ್ಮಿಂದ ತುಸು ದೂರದ ವೇದಿಕೆಯ ಮೇಲೇ ನಿಂತು ಯಕ್ಷಿಣಿ ಮಾಡುತ್ತಿರಬೇಕು. ಆಗಲೇ ಅದು ಚಂದ. ಆಗಲೇ ಅದಕ್ಕೊಂದು ಮಾಂತ್ರಿಕ ಪುಳಕ. ಆಗಲೇ ಅದರೆಡೆಗೊಂದು ಕಾತರ. ಅದೇ ಆ ವ್ಯಕ್ತಿಯೊಂದಿಗೆ ನಾವು ಒಡನಾಡುತ್ತಿದ್ದೆವಾದರೆ ಅಥವಾ ಆತನ ವೈಯಕ್ತಿಕ ಬದುಕಿನ ಫ್ಯಾಂಟಸಿಗಳು ಜಾಹೀರಾಗಿಬಿಟ್ಟವೆಂದರೆ ಆಗುವ ನಿರಾಶೆಯಿದೆಯಲ್ಲ, ಅದು ಹೇಳತೀರದ್ದು.

ಮೊನ್ನೆ ರಾಜಾಜಿನಗರದ ಟಿವಿ ಶೋರೂಮ್ ಒಂದನ್ನು ಹಾದುಹೋಗುತ್ತಿದ್ದೆ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಚಾಂಪಿಯನ್ಸ್ ಲೀಗ್ ಅರ್ಹತಾ ಸುತ್ತಿನ - ಆರ್‌ಸಿಬಿ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಿನ ಪಂದ್ಯ ನಡೆಯುತ್ತಿತ್ತು. ಶೋರೂಮಿನವನು ರಸ್ತೆಗೆ ಅಭಿಮುಖವಾಗಿ ಇಟ್ಟಿದ್ದ ದೊಡ್ಡ ಸ್ಕ್ರೀನಿನ ಟೀವಿಯಲ್ಲಿ ಈ ಪಂದ್ಯವನ್ನು ನೋಡುತ್ತ ಸುಮಾರು ಜನ ಫುಟ್‌ಪಾತಿನಲ್ಲಿ ನಿಂತಿದ್ದರು. ನಾನೂ ನಿಂತುಕೊಂಡೆ. ಹಿಂದಿನ ದಿನವಷ್ಟೇ ಐಪಿ‌ಎಲ್‌ನಲ್ಲಿನ ಹಗರಣಗಳು, ಮ್ಯಾಚ್ ಫಿಕ್ಸಿಂಗಿನ ಅವ್ಯವಹಾರಗಳು ಸುದ್ದಿಯಾಗಿದ್ದವಷ್ಟೇ? ಡೆಕ್ಕನ್ ಚಾರ್ಜರ್ಸ್ ತಂಡದ ವಿಕೆಟ್ಟುಗಳು ಒಂದರ ಹಿಂದೆ ಒಂದು ಬೀಳತೊಡಗಿದಂತೆ ಅಲ್ಲಿದ್ದ ಗುಂಪಿನಲ್ಲಿದ್ದವನೊಬ್ಬ "ಥೂ, ಎಲ್ಲಾ ಫಿಕ್ಸಿಂಗು ಕಣ್ರೋ.. ಎಲ್ಲಾ ಮೋಸ. ನಾವ್ ಒಳ್ಳೇ ಬಕರಾಗಳ ಥರ ಅವರ ವಿಕೆಟ್ ಹೋದ್ರೆ ಖುಶಿ ಪಡ್ತಾ ನಮ್ಮವರದ್ದು ಹೋದ್ರೆ ಬೇಜಾರ್ ಮಾಡ್ಕೊಳ್ತಾ, ಅವರು ಸೋತ್ರೆ ಪಟಾಕಿ ಹೊಡೀತಾ ನಮ್ಮವರು ಸೋತ್ರೆ ಸಿಗರೇಟು ಸೇದ್ತಾ ಮನಸಿಗೆಲ್ಲ ಹಚ್ಕೊಂಡು ಫೀಲ್ ಮಾಡ್ಕೊಳ್ತಾ ಇರ್ತೀವಿ. ಆದ್ರೆ ಅಲ್ಲಿ ನಡೆಯೋದು ಎಲ್ಲಾ ಮುಂಚೇನೇ ಡಿಸೈಡೆಡ್ಡು. ಕರ್ಮ, ನಮಗೆ ಬುದ್ಧಿ ಇಲ್ಲ" ಅಂತಂದು, ಗುಂಪಿನಿಂದ ಅಗಲಿ ದಢದಢನೆ ನಡೆದು ಹೋಗಿಬಿಟ್ಟ!

ಕ್ರೀಡೆ- ಆಡುವವನಿಗೆ ಮಾತ್ರ ಪಂದ್ಯ, ದುಡ್ಡು ತರುವ ಜಾಬ್; ನೋಡುವವನಿಗೆ ಯಾವತ್ತೂ ಮನರಂಜನೆ. ಸಿನೆಮಾ ಅಥವಾ ಧಾರಾವಾಹಿ- ಅಭಿನೇತ್ರುವಿಗೆ ಅದೊಂದು ವೃತ್ತಿ, ಅನ್ನ ಕೊಡುವ ಉದ್ಯಮ; ಅದೇ ನೋಡುವವನಿಗೆ ಅದರಲ್ಲಿನ ಕತೆ, ತಿರುವು, ಸಂಭಾಷಣೆ -ಎಲ್ಲಾ ನಿತ್ಯಸಂತೋಷ ಕರುಣಿಸುವ ಸಾಧನಗಳು. ಕತೆ, ಕವಿತೆ, ಹಾಡು- ಅವುಗಳ ಕರ್ತೃವಿಗೆ ತನ್ನ ಸೃಜನಶೀಲತೆಯನ್ನು ಹೊರಹಾಕುವ ಮಾರ್ಗಗಳು; ಅದೇ ಅವನ್ನು ಓದುವ-ಆಲಿಸುವ ಸಾಮಾನ್ಯ ಮನುಷ್ಯನಿಗೆ ಅವು ಮನಸ್ಸಂಪ್ರೀತಿಗೊಳಿಸುವ ಕೇಂದ್ರಗಳು. ಆದರೆ ನಮ್ಮನ್ನು ಮರುಳು ಮಾಡುವ ಇವೆಲ್ಲಕ್ಕೂ ಕೇವಲ ಯಕ್ಷಿಣಿಗಾರನ ಮೇಲೆ ಬೀಳುವ ಒಂದು ಕಲ್ಲು ಮಸುಕು ತೊಡಿಸಿಬಿಡುತ್ತದೆ. ನಮ್ಮನ್ನು ಎಚ್ಚರಗೊಳಿಸುತ್ತದೆ, ಆದರೆ ಅಷ್ಟೇ ಮಟ್ಟಿಗೆ ಅದರಿಂದಾಗಿ ನಾವು ಅನುಭವಿಸುತ್ತಿದ್ದ ಮುಗ್ಧಸುಖ ಇಲ್ಲವಾಗುತ್ತದೆ.

* * *

ಊರಲ್ಲಿದ್ದಾಗ, ಮನೆಗೆ ಬರುತ್ತಿದ್ದ ಪತ್ರಿಕೆಗಳಲ್ಲಿರುತ್ತಿದ್ದ ಕತೆಗಳು, ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳನ್ನು ಓದುವಾಗ ನನ್ನಲ್ಲಿ ಇರುತ್ತಿದ್ದ ಮುಗ್ಧತೆ ಈಗ ಇಲ್ಲವಾಗಿದೆ. ಅದಕ್ಕೂ ಮುಂಚೆ ಬಾಲಮಂಗಳ-ಚಂದಮಾಮ ಓದುತ್ತಿದ್ದಾಗಿನ ದಿನಗಳಂತೂ ಬಿಡಿ. ಡಿಂಗ, ಫಕ್ರು, ಲಂಬೋದರರು ನನ್ನ ಹೀರೋಗಳಾಗಿದ್ದರು. ಕಿಂಕಿಣಿ ಹಕ್ಕಿ ನನ್ನ ಫ್ರೆಂಡ್ ಆಗಿತ್ತು. ವಿಕ್ರಮಾದಿತ್ಯನ ರಾಜಧಿರಿಸು ಕಣ್ಮುಂದೆ ಬರುತ್ತಿತ್ತು. ಬೇತಾಳ ರಾತ್ರಿಯ ಕನಸಲ್ಲೂ ಬಂದು ಎಚ್ಚರಾಗಿಸುತ್ತಿತ್ತು. ಆಮೇಲೆ ಸ್ವಲ್ಪ ದೊಡ್ಡವನಾದಮೇಲೆ ಓದತೊಡಗಿದ ಕತೆಗಳೆಲ್ಲ ಸುಮ್ಮನೆ ಖುಶಿ ಕೊಡುತ್ತಿದ್ದವು. ಕಾದಂಬರಿಯೊಂದನ್ನು ಓದಿ ಅದರ ನಾಯಕ/ನಾಯಕಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ, ಹಾಗೆಯೇ ಆಗುವ ಕನಸು ಕಾಣುತ್ತಿದ್ದೆ. ಯಾವುದೋ ಪಾತ್ರವನ್ನು ನನ್ನೊಂದಿಗೆ ಹೋಲಿಸಿ ಖುಶಿಸಬಹುದಾದ-ದುಃಖಿಸಬಹುದಾದ ಸಾಧ್ಯತೆ ಇತ್ತು ಆಗ.

ಆದರೆ ದೊಡ್ಡವನಾಗುತ್ತ ಹೋದಂತೆ, ಮುಗ್ಧತೆಯನ್ನು ಕಳೆದುಕೊಳ್ಳುತ್ತ ಹೋದಂತೆ - ದಿನಗಳಲ್ಲಿದ್ದ ಸ್ವಾರಸ್ಯವೂ ಇಲ್ಲವಾಗತೊಡಗಿದೆ. ಬಹುಶಃ ಬದುಕೇ ಬೇರೆ ಕಲೆಯೇ ಬೇರೆ ಎಂಬ ಅರಿವೇ ಇದಕ್ಕೆ ಕಾರಣವಿರಬೇಕು. ಈಗ ಎಲ್ಲವೂ ಸ್ವಲ್ಪೇ ದಿನಕ್ಕೆ, ಸ್ವಲ್ಪೇ ಹೊತ್ತಿಗೆ ಬೇಸರ ಬರುತ್ತದೆ. ಬೆಂಗಳೂರು, ಕೆಲಸ, ಟ್ರಾಫಿಕ್ಕು, ಮಾಲುಗಳು, ಶಾಪಿಂಗು, ಪಾರ್ಟಿಗಳು, ಟಿವಿ, ಇಂಟರ್ನೆಟ್ಟು, ಮೊಬೈಲು, ಫ್ಲರ್ಟಿಂಗು, ಬ್ಲಾಗಿಂಗು, ಕಾರ್ಟೂನು, ಪಾರ್ನು.... ಎಲ್ಲವೂ ಬೇಸರ ಬಂದು - ಅಥವಾ ಕೇವಲ ಆ ಕ್ಷಣಕ್ಕೆ ಸುಖ ಕೊಡುವ, ಮುಗುಳ್ನಗೆ ಹೊಮ್ಮಿಸುವ ಸಾಧನಗಳಷ್ಟೇ ಆಗಿ ಉಳಿದುಬಿಟ್ಟಿರುವ ಈ ದಿನಗಳಲ್ಲಿ, ನನ್ನನ್ನು ಇನ್ನೂ ಆಶಾವಾದಿಯಾಗಿಯೇ ಉಳಿಸಲು ಇರುವ ಉಪಕರಗಳೇನು? ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದಂತೆ ಹೆಚ್ಚೆಚ್ಚು ಗೊಂದಲಗಳಿಗೀಡಾಗುತ್ತಿರುವ ನನ್ನನ್ನು ಕೂರಿಸಿಕೊಂಡು ಸಮಾಧಾನ ಹೇಳುವ ಪ್ರವಾದಿ ಹಿಮಾಲಯದ ಯಾವ ತಪ್ಪಲಲ್ಲಿದ್ದಾನೆ?

ಕನಿಷ್ಟ ನನ್ನ ವಿಷಯದಲ್ಲಿ ಇನ್ನೂ ಸಾಹಿತ್ಯ ಈ ಕೆಲಸವನ್ನು ಮಾಡುತ್ತಿದೆ. ಮೊದಲಿನ ಮುಗ್ಧತೆಯಿಂದಲ್ಲದಿದ್ದರೂ, ಈಗಲೂ ಕತೆ ಓದಿ ಕಣ್ತುಂಬಿಸಿಕೊಳ್ಳುತ್ತೇನೆ. ಕವಿತೆಯ ಕಾಡುವಿಕೆಗೆ ಮನಸೋಲುತ್ತೇನೆ. ಪ್ರಬಂಧದ ಗುಂಗನ್ನು ಮನಸಾ ಅನುಭವಿಸುತ್ತೇನೆ. ಪ್ರವಾಸಕಥನದ ನಾಯಕನೊಂದಿಗೆ ಗುಡ್ಡವೇರುತ್ತೇನೆ. ಲಹರಿಗಳ ಝರಿಯಲ್ಲಿ ತೇಲುತ್ತೇನೆ.

ಈ ನನ್ನ ಸಂತೋಷವಾದರೂ ಚಿರವಾಗಿರಲಿ. ಯಕ್ಷಿಣಿಗಾರನ ಇಂದ್ರಜಾಲ ಮೋಡಿ ಮಾಡುತ್ತಿರಲಿ ಎಂಬುದಷ್ಟೇ ಸಧ್ಯದ ಪ್ರಾರ್ಥನೆ.

* * *

ಬ್ಲಾಗು ಶುರುಮಾಡಿ ನಾಲ್ಕು ವರ್ಷ ಆಗಿದೆ! ಎಲ್ಲದರಂತೆ ಇದರಲ್ಲೂ ಉತ್ಸಾಹ ಕಮ್ಮಿಯಾಗಿದ್ದು ನಿಜ. ಈ ವರ್ಷ ನಾನು ಮಾಡಿದ ಒಟ್ಟು ಪೋಸ್ಟುಗಳ ಸಂಖ್ಯೆ ಕೇವಲ ಮೂವತ್ತು. ಅದರಲ್ಲಿ ಕವಿತೆಗಳೇ ಹನ್ನೊಂದು. ಈಗಲೂ ಪೆನ್ನು ಹಿಡಿದರೆ ಯಾಕೋ ಕವಿತೆಯೇ ಮೂಡುತ್ತದೆ. ಉಳಿದಂತೆ ಆರು ಪ್ರಬಂಧ, ಮೂರ್ನಾಲ್ಕು ಲಹರಿ, ಒಂದಷ್ಟು ಸಾಂದರ್ಭಿಕ ಬರಹಗಳನ್ನು ಬರೆದಿದ್ದೇನೆ. ಈ ವರ್ಷ ಒಂದೇ ಒಂದೂ ಕತೆ ಬರೆಯಲಾಗಲಿಲ್ಲ ಎಂಬುದು ಸಾಧನೆ! ಹಾಗೆಯೇ ಈ ವರ್ಷ ಒಂದೇ ಒಂದು ಚಾರಣವನ್ನೂ ಮಾಡಲಿಲ್ಲ ಎಂಬುದೂ! ‘ಹೊಳೆಬಾಗಿಲು’ -ನನ್ನ ಮೊದಲ ಪ್ರಬಂಧ ಸಂಕಲನ ಹೊರಬಂದಿದ್ದು, ಸುಮಾರು ಜನ ಅದನ್ನೋದಿ ‘ಚನಾಗಿದೆ’ ಅಂದದ್ದು ಖುಶಿ ಕೊಟ್ಟ ಸಂಗತಿ. ‘ಪ್ರಣತಿ’ಯಿಂದಲೂ ಈ ವರ್ಷ ಹೆಚ್ಚು ಕಾರ್ಯಕ್ರಮ ಮಾಡಲಾಗಲಿಲ್ಲ. ನನ್ನ-ಶ್ರೀನಿಧಿಯ ಪುಸ್ತಕ ಬಿಡುಗಡೆ, ನಂತರದ್ದೊಂದು ಗಮಕ ಕಾರ್ಯಕ್ರಮ ಬಿಟ್ಟರೆ, ಆಮೇಲೇನೂ ನಡೆದಿಲ್ಲ. ಕನಿಷ್ಟ ನಮ್ಮ ಟೀಮ್‍ಗೆ ತಿಂಗಳಿಗೊಮ್ಮೆ ಒಟ್ಟಿಗೆ ಸೇರಲೂ ಆಗುತ್ತಿಲ್ಲವೆಂಬುದು ಕಹಿಸತ್ಯ.

ಆದರೂ ದಕ್ಕಿರುವ ಗೆಳೆಯರ ಪ್ರೀತಿ ಹಾಗೆಯೇ ಇದೆ ಎಂಬುದೊಂದು ಸಮಾಧಾನ. ಸಿಗುತ್ತಿರುವ ಹೊಸ ಗೆಳೆಯರು ಮತ್ತು, ನಾಳೆ ಏನಾದರೂ ಆಗಿಬಿಡಬಹುದೇನೋ ಎಂಬ ಕ್ಷೀಣ ಆಸೆಯೊಂದಿಗೆ ಬದುಕು ಮುಂದುವರೆದಿದೆ. ಬಿರುಬಿಸಿಲಿನ ದಿನಗಳಲ್ಲೇ ಸಂಜೆಹೊತ್ತಿಗೊಂದು ಸಣ್ಣಮಳೆ, ಕೆಲವೊಮ್ಮೆ ಗಾಳಿ - ಬೀಳುವ ಮರಗಳು, ಗುಡುಗಿಗೆ ನಡುಗುವ - ಮಿಂಚಿಗೆ ಹೊಳೆಯುವ ಭೂಮಿ. ತೇಲಿ ಬರುವ ಎಂಡಿ ಪಲ್ಲವಿ ಹಾಡು, ನೆನಪಾಗುವ ಜಯಂತ ಕಾಯ್ಕಿಣಿ ಕತೆ, ಬರೆಯಲು ಬೇಡುವ ಕವಿತೆ.

ಬದುಕು ಸಾಗಿದೆ. ನಿಮ್ಮ ಪ್ರೀತಿಗೆ ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ದಗಳು ಇಲ್ಲವಾಗಿದೆ. ಥ್ಯಾಂಕ್ಯೂ. :-)

Wednesday, March 31, 2010

ತೋಯ್ದೆ!

ನಿನ್ನೆ ಸಂಜೆ ಬೆಂಗಳೂರಿಗೆ ಮಳೆ ಬಂತು.

ನಾನು ತೋಯ್ದೆ. :-) :-) :-)