Sunday, January 01, 2017

ಒಡೆದ ಹಿಮ್ಮಡಿಯೊಂದಿಗೆ ಬಂದ ಹೊಸವರ್ಷಕ್ಕೆ...


ಗೂರಲು ಕೆಮ್ಮಿನ ಅಜ್ಜ ಚಳಿ ಕಾಯಿಸಲು ಒದ್ದೆ ಕಟ್ಟಿಗೆಗೆ ಸೀಮೆ‌ಎಣ್ಣೆ ಸುರುವಿ ಬೆಂಕಿ ಹಚ್ಚಲು ಒದ್ದಾಡುತ್ತಿರುವಾಗ, ಬೆಳ್ಳಂಬೆಳಗ್ಗೆ ಅರಳಬೇಕೆಂಬ ಬೇಸರದೊಂದಿಗೆ ಇಬ್ಬನಿ ಹನಿಗಳ ತಂಪಿಗೆ ಮೊಗ್ಗುಗಳು ನಡುಗುತ್ತಿರುವಾಗ, ಜಾಗಿಂಗ್ ಹೊರಟ ಹುರುಪಿನ ಶೂಗಳ ಬಿಗಿಯಲು ಲೇಸಿನ ದಾರದ ಅಂಚುಗಳು ತಯಾರಾಗುತ್ತಿರುವಾಗ, ಪ್ರತಿಸಲದಂತೆ ಚಳಿಗಾಲದಲ್ಲೇ ಬಂದಿದೆ ಹೊಸವರ್ಷ -ತನ್ನ ಒಡೆದ ಹಿಮ್ಮಡಿಯೊಂದಿಗೆ.. ಮೊದಲ ಹಾರಯಿಕೆ ಅದಕ್ಕೇ ಬೇಕಿದೆ; ಮೊದಲ ಆರಯಿಕೆ ಅದಕ್ಕೇ ಆಗಬೇಕಿದೆ.   ಸರಿಯಾದ ಮುಲಾಮು ಹಚ್ಚಿ ಮಾಲೀಶು ಮಾಡಬೇಕಿದೆ, ಖುಷಿಯ ಹಾಡು ಹೇಳಿ ನೋವ ತೊಲಗಿಸಬೇಕಿದೆ, ಅದರ ಹೆಜ್ಜೆಯೊಡನೆ ನಮ್ಮ ಹೆಜ್ಜೆ ಬೆರೆಸಿ ನಡೆಸಬೇಕಿದೆ ಮುನ್ನೂರರವತ್ತೈದು ದಿನಗಳ ದೂರದಾರಿ... ಅದಕೇ, ಗುನುಗಿಕೊಳ್ಳೋಣ ಒಂದಷ್ಟು ಆಶಯದ ನುಡಿ: ಹಾರೈಸಿಕೊಳ್ಳೋಣ ಒಳ್ಳೊಳ್ಳೆ ಚಿತ್ರಗಳ ದೃಶ್ಯಾವಳಿ:


ನಮ್ಮ ಬಟ್ಟಲಿಗೆ ಬಿದ್ದ ಪಾಯಸದಲ್ಲಿ ಇರಲೆಂದು ಯಥೇಚ್ಛ ಗೋಡಂಬಿ-ದ್ರಾಕ್ಷಿಗಳು
ಬೋರು ತರಿಸುವ ಮೊದಲೇ ಮುಗಿಯಲೆಂದು ಧಾರಾವಾಹಿಗಳು
ಮಳೆ ಬರುವ ಮೊದಲೇ ಒಣಗಲೆಂದು ತಂತಿಯ ಮೇಲಿನ ಬಟ್ಟೆಗಳು
ಸಂಜೆ ಸಂತೆಗೆ ಹೋದವರಿಗೂ ಸಿಗಲೆಂದು ತಾಜಾ ಟೊಮೆಟೊಗಳು
ಅಲಾರ್ಮಿನ ಸ್ನೂಸುಗಳ ನಡುವಿನ ಕಿರುನಿದ್ರೆಯಲೂ ಸಿಹಿಗನಸೇ ಇರಲೆಂದು
ಆಸ್ಪತ್ರೆಯ ಕಿಟಕಿ ಬಳಿ ಕೂತ ರೋಗಿಗೆ ಪುಟ್ಟಮಗು ಹಣ್ಣು ತಂದು ಕೊಡಲೆಂದು
ನಾವು ಹೊಕ್ಕ ಎಟಿ‌ಎಮ್ಮಿನಲಿ ಬೇಕಾದಷ್ಟು ದುಡ್ಡಿರಲೆಂದು
ಟ್ರಾಫಿಕ್ಕಿನಲಿ ಸಿಲುಕಿದ ಆಂಬುಲೆನ್ಸಿಗೆ ಸುಲಭ ದಾರಿ ಕಾಣಲೆಂದು
ಸರ್ಕಸ್ಸಿನ ಗಿಳಿ ಹೊಡೆದ ಪಟಾಕಿ ಡೇರೆಯೊಳಗಿನ ಮಗುವ ಎಚ್ಚರಗೊಳಿಸದಿರಲೆಂದು
ಮಚ್ಚು-ಲಾಂಗಿಲ್ಲದ ಸಿನೆಮಾಯುಗ ಬಂದರೂ ಕುಲುಮೆಗಳಿಗೆ ಆದಾಯವಿರಲೆಂದು
ಪೆಡಲು ತುಳಿಯದೆಯೆ ಲೂನಾ ಏರು ಹತ್ತಲೆಂದು
ಪ್ರೇಮಿಗಳೇ ತುಂಬಿದ ಪಾರ್ಕಿನಲ್ಲಿ ಸುಸ್ತಾದ ಅಜ್ಜನಿಗೊಂದು ಬೆಂಚಿರಲೆಂದು
ಳಕ್ಷಜ್ಞದೊಂದಿಗೆ ಮುಗಿದ ಅಕ್ಷರಮಾಲೆಯ ಪಠಣ ಮತ್ತೆ ಶುರುವಾಗಲೆಂದು-
ಅಕಾರದಿಂದ.

ನಿಮಗೆಲ್ಲಾ ಹೊಸ ವರ್ಷದ ಶುಭಾಶಯಗಳು.

-ಸುಶ್ರುತ ದೊಡ್ಡೇರಿ


Tuesday, December 06, 2016

ಜಾತ್ರೆ ಮುಗಿದ ಬೀದಿ

ಜಾತ್ರೆಯಲ್ಲಿ ನಾನು ಭೇಟಿಯಿಡದ ಅಂಗಡಿಗಳಲ್ಲಿ ಏನಿತ್ತು?
ಹೊಸಾತಂಗಿಗಿಷ್ಟದ ನವಿಲಿನಾಕಾರದ ಹೇರ್‌ಕ್ಲಿಪ್ಪು,
ಮಡದಿಗೊಪ್ಪುವ ಬಣ್ಣದ ಟಾಪಿಗೆ ಮ್ಯಾಚಾಗುವ ಕಿವಿಯೋಲೆ,
ನೆರೆಮನೆ ಪುಟ್ಟಿಗೆ ಪುಟ್ಟಸೀರೆಯುಡಿಸಿದ ದಿನಕ್ಕೊಂದು ಮುಂದಲೆಬೊಟ್ಟು,
ಅತ್ತೆಮಗನಿಗೆ ಕೊಟ್ಟೂದಿಸಬಹುದಾಗಿದ್ದ ಈಷ್ಟುದ್ದದ ಪೀಪಿ,
ಮನೆಯ ವಾಸ್ತುಬಾಗಿಲಿಗೆ ಇಳಿಬಿಡಬಹುದಾಗಿದ್ದ ಪಿಳಿಪಿಳಿ ತೋರಣ...

ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು,
ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು,
ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು,
ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು

ನಾನು ಕೊಳ್ಳದ ಬಲೂನು ಕೊನೆಗೂ ಬಿಕರಿಯಾಗದೆ,
ಜಾತ್ರೆ ಮುಗಿದ ದಿನ ಅದರ ಬಾಯಿಗೆ ಕಟ್ಟಿದ್ದ ಗಂಟು ಬಿಚ್ಚಿ
ಅದರೊಳಗಿದ್ದ ಉಸಿರನ್ನೆಲ್ಲ ಫುಸ್ಸನೆ ಹೊರತೆಗೆದು
ಇಷ್ಟು ಸಣ್ಣಕಾದ ರಬ್ಬರಿನ ಮುದ್ದೆಯನ್ನು ಕೈಚೀಲದೊಳಗಿಟ್ಟು
ಗುಡಾರ ಸಮೇತ ಮತ್ಯಾವ ಊರಿಗೆ ಹೋದ ಆ ಅಂಗಡಿಯವ?
ಇಂದು ಎಲ್ಲಿ ತೇರು? ಯಾವ ದೇವರಿಗೆ ಉತ್ಸವ?

ನಾನು ಖರೀದಿಸದ ವಸ್ತುಗಳೆಲ್ಲ ಇನ್ಯಾವುದೋ ಊರಲ್ಲೀಗ
ವಿಕ್ರಯಕ್ಕಿರಬಹುದು. ಕೊನೆಗೂ ಎಲ್ಲಕ್ಕೂ ಯೋಗದ ನಂಟು:
ಯಾವ ಕ್ಲಿಪ್ಪು ಯಾರ ಮುಡಿಗೋ
ಯಾವ ಓಲೆ ಯಾರ ಕಿವಿಗೋ
ಹಸಿರು ತೋರಣ ಯಾರ ಮನೆ ಸಂಭ್ರಮಕ್ಕೋ
ಚೌಕಾಶಿಗೊಗ್ಗದೆ ನಾ ಬಿಟ್ಟುಬಂದ ಆ
ಚಿತ್ರಖಚಿತ ತಟ್ಟೆಯಲ್ಲಿ ಯಾರಿಗೆ ಊಟವೋ

ಜಾತ್ರೆ ಮುಗಿದ ಬೀದಿ ಬಿಕೋ ಎನ್ನುತ್ತಿದೆ
ಮೂಲೆಮೂಲೆಗೂ ಹರಡಿರುವ ಕಸದ ತುಣುಕುಗಳು
ಸಂಭ್ರಮ ಗಿಜಿಗಿಜಿ ವ್ಯಾಪಾರ ಲಾಭ ನಷ್ಟಗಳ ಕತೆ ಹೇಳುತ್ತಿವೆ
ಬಿಕರಿಯಾಗದ ಬಲೂನಿನೊಳಗಿಂದ ಹೊರಬಿದ್ದ ಉಸಿರು
ಇನ್ನೂ ಇಲ್ಲೇ ಹರಿದಾಡುತ್ತಿರಬೇಕು:
ಅದಕ್ಕೇ ಈ ಬೀದಿ ಈ ಕಾವಳದ ರಾತ್ರಿಯಲ್ಲೂ ಬೆಚ್ಚಗಿದೆ.

Monday, November 14, 2016

ವಾಗತಿ

ಇಲ್ಲರಳಿದ್ದಲ್ಲರಳದೇ ಎಂದವರು ಕಿತ್ತು
ಕೊಟ್ಟಿದ್ದ ಸೇವಂತಿಗೆ ಗಿಡದ ಹಿಳ್ಳು
ಯಾಕೋ ಮುದುಡಿದೆ ಕೊಟ್ಟೆಯಲ್ಲಿ
ವಾಗತಿಯೆಲ್ಲಾ ಮಾಡಿಯಾಗಿತ್ತು ಸರಿಯಾಗಿಯೇ
ಸುಡಿಮಣ್ಣು, ಎರೆಗೊಬ್ಬರ, ಹೊತ್ತೊತ್ತಿಗೆ ನೀರು
ಕಮ್ಮಿ ಮಾಡಿರಲಿಲ್ಲ ಏನೂ
ಆದರೂ ಜೋತಿದೆ ನೆಲದತ್ತ ಬಾಡಿ
ಬಿಟ್ಟುಕೊಟ್ಟಂತೆ ಬದುಕುಳಿವ ಆಸೆ

ಹೀಗಾಗಿದ್ದು ಇದೇ ಮೊದಲೇನಲ್ಲ
ಹಾಗಂತ ಯಾರ ಮೇಲೂ ಆರೋಪವಿಲ್ಲ
ಎಲ್ಲೆಲ್ಲಿಂದಲೋ ಬಂದು ಬೇರೂರಿದವರೇ ತುಂಬಿದ
ಸರ್ವಪ್ರಬೇಧದ ಶಾಂತಿಯ ಅಂಗಳವಿದು
ಇನ್ನೇನು ಹೊರಡುವ ಹೊತ್ತಿಗೆ ಅತ್ತೆ ಕಿತ್ತುಕೊಟ್ಟ
ಗೆಂಟೆಹೂವು, ಬೇಡ ಎಂದರೂ ಕೇಳದೆ ಶಾಂತಕ್ಕ
ಹೆರೆ ಮುರಿದುಕೊಟ್ಟ ಕೆಂಪು ದಾಸವಾಳ,
ಭಾರೀ ಆಸೆಪಟ್ಟು ಅಮ್ಮ ತವರಿಂದ ತಂದ
ತಿಳಿಹಳದಿ ಲಿಲ್ಲಿ... ಇಲ್ಲಿ ಚಿಗುರಿ ನಳನಳಿಸುತ್ತಿದೆ.

ತಂದುಕೊಟ್ಟದ್ದಿದೆ ನಾನೂ- ಗುಂಡಿಯಿಂದೆತ್ತಿ ಗೊಬ್ಬರ
ಹಾಯಿಸಿದ್ದಿದೆ ನೀರು- ಟ್ಯಾಂಕಿನಿಂದೆಳೆದು ಪೈಪು
ಕುಳಿತದ್ದೂ ಇದೆ- ಗಿಡ ಅಡ್ಡಟಿಸಿಲೊಡೆವ ಬೆರಗ ನೋಡುತ
ಭಾವಿಸಿದ್ದಿದೆ- ಅರಳಿದ ಹೂಗಳೆಲ್ಲ ಅಮ್ಮನ
ಕಣ್ಣಿಂದ ಹೊರಟ ಸಂಭ್ರಮದ ಕಿರಣಗಳೇ ಎಂದು
ದುಃಖಿಸಿದ್ದಿದೆ ಕ್ಷಣ ನಗರದ ಗಿಜಿಗಿಜಿಯಲ್ಲಿ ಕೂತು
ಊರ ಮನೆಯಂಗಳದ ಸೊಬಗ ನೆನೆದು

ಇವತ್ತಿಲ್ಲಿ ಮತ್ತೊಂದು ಬೆಳಗು
ನಾಲ್ಕು ದಿನ ತುಳಸೀಗಿಡಕ್ಕೆ ನೀರು ಹಾಕಲು ಹೇಳಿ ಹೋಗಿದ್ದಾರೆ
ಪ್ರವಾಸ ಹೊರಟ ಪಕ್ಕದ ಮನೆಯವರು
ಊರಿಂದ ಬಂದ ಅಮ್ಮ ಬಗ್ಗಿಬಗ್ಗಿ ಹನಿಸುತ್ತಿದ್ದಾಳೆ ಪಾಟಿಗೆ
ಅಲ್ಲಿ ಅಂಗಳದಲ್ಲಿ ತಾನೂರಿಬಂದ ಡೇರೆಗಿಡದ ಕೊಟ್ಟೆಗಳಿಗೆ
ಅಪ್ಪ ಬೆಳಿಗ್ಗೆ ನೀರು ಹಾಕಿದರೋ ಇಲ್ಲವೋ ಎಂದು ಯೋಚಿಸುತ್ತ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಚಿತ್ರ

ಅಂಗಡಿಗೆ ಹೊದಿಸಿದ ಗಾಜು
ಹೋಟೆಲಿನ ಟೇಬಲ್ಲಿನ ಮೇಲಿನ ಗಾಜು
ತುಂಬ ದಿನದಿಂದ ಚಲಿಸದೆ ನಿಂತ ಕಾರಿನ ಗಾಜು-
ಗಳ ಮೇಲೆ ಕೂತ ಧೂಳಿನ ಮೇಲೆಯೇ
ಚಿತ್ರ ಬಿಡಿಸುವ ವ್ಯಕ್ತಿಯೊಬ್ಬನನ್ನು ಮೊನ್ನೆ ನೋಡಿದೆ.

ಬಹಳ ಆಸಕ್ತಿಕರ ಎನಿಸಿ ಹಿಂಬಾಲಿಸಿದೆ.
ಆತ ಗಾಜುಹೊದಿಕೆಗಳ ಹುಡುಕಿಕೊಂಡು ಹೋಗುವುದೇ
ಕುತೂಹಲಕಾರಿಯಾಗಿತ್ತು. ಸುಮಾರು ದಿನದಿಂದ
ಒರೆಸದ ಗಾಜುಗೋಡೆಗಳು, ಚಾಲಕನಿಲ್ಲದೆ ಸುಮ್ಮನೆ ನಿಂತ
ಕಾರುಗಳು, ಕಛೇರಿಯೊಂದರ ಮೂಲೆಗಿರಿಸಿದ ಅಲಕ್ಷಿತ
ಟೀಪಾಯಿ, ಪಬ್ಲಿಕ್ ಟಾಯ್ಲೆಟ್ಟಿನ ಸಿಂಕಿನ ಮೇಲಿನ ಕನ್ನಡಿ,
ಕೆಲವೊಮ್ಮೆ, ಮುಚ್ಚಿದ ಮನೆಯ ಕಿಟಕಿಯ ಗಾಜು-
ಧೂಳು ಕೂತ ಯಾವ ನುಣ್ಣನೆ ವಸ್ತು ಕಂಡರೂ
ಇವನ ಮುಖ ಫಳಫಳ ಅರಳುತ್ತಿತ್ತು.
ಸುತ್ತಮುತ್ತ ಯಾರೂ ಇಲ್ಲದ ಸಮಯ ನೋಡಿ
ಕಳ್ಳನಂತೆ ಹೆಜ್ಜೆಯಿಡುತ್ತ ಧೂಳಾಕ್ರಮಿತ ವಸ್ತುವಿನ ಬಳಿ ಸಾಗಿ
ಅತ್ತಿತ್ತ ಮತ್ತೊಮ್ಮೆ ನೋಡಿ ಎಲ್ಲ ಪೂರ್ವನಿರ್ಧಾರಿತವೋ,
ಲೆಕ್ಕಾಚಾರ-ತಯಾರಿಯೆಲ್ಲಾ ಮನಸಲ್ಲೇ ಆಗಿತ್ತೋ ಎಂಬಂತೆ
ತನ್ನ ನಿಪುಣ ಬೆರಳುಗಳಿಂದ ಪಟಪಟನೆ ಚಿತ್ರ ಬರೆದು
ಅಲ್ಲಿಂದ ಪರಾರಿಯಾಗುತ್ತಿದ್ದ. ಕೆಲ ಚಿತ್ರಗಳ ಕೆಳಗೆ
ಅಡಿಬರಹವನ್ನೂ ಬರೆಯುತ್ತಿದ್ದ.

ಒಂದು ದಿವಸ ಇವನನ್ನು ಹಿಡಿದು ನಿಲ್ಲಿಸಿ ವಿಚಾರಿಸಿದೆ.
ಅವನು ಏನು ಹೇಳಿದ ಎಂದು ನಿಮಗೆ ಹೇಳುವುದಿಲ್ಲ.
ಆದರೆ ಮರುದಿನದಿಂದ ನಾನವನ ಹಿಂಬಾಲಿಸಲಿಲ್ಲ.

ಬದಲಿಗೆ, ಅವ ಬಿಡಿಸಿ ಬಿಟ್ಟುಹೋದ ಚಿತ್ರಗಳ ಬಳಿ
ಮರೆಯಾಗಿ ನಿಂತು ಕಾಯತೊಡಗಿದೆ.
ಮೊದಲ ದಿನ ಮಳೆ ಬಂದು ಗಾಜುಗೋಡೆಯ ಮೇಲಣ ಚಿತ್ರ
ತೊಳೆದುಹೋಯಿತು. ಇನ್ನೊಂದು ದಿನ ಕಾರಿನ ಹಿಂದೆ ನಿಂತು ಕಾದೆ.
ಅದರ ಚಾಲಕ ಆ ಚಿತ್ರದೆಡೆ ಕಣ್ಣೂ ಹಾಯಿಸದೆ
ಕಾರೇರಿ ಬುರ್ರನೆ ಹೊರಟುಹೋದ.
ಹೋಟೆಲಿನ ಮೂಲೆಟೇಬಲಿನಿಂದ ಅನತಿದೂರದಲ್ಲಿ ಕೂತು
ನಿರೀಕ್ಷಿಸತೊಡಗಿದೆ. ಕ್ಲೀನರ್ ಹುಡುಗ ಎತ್ತಲೋ ನೋಡುತ್ತ
ಇದನೊರೆಸಿಬಿಟ್ಟ. ತಡೆಯಬೇಕೆಂದು ಕೈಚಾಚಿದರೆ
ಏನ್ಕೊಡ್ಲಿ ಸಾರ್ ಅಂತ ನನ್ನ ಬಳಿಯೇ ಬಂದ.

ಅರಸುವಾಸೆಯನ್ನಿನ್ನೇನು ಬಿಡಬೇಕೆನ್ನುವಷ್ಟರಲ್ಲಿ
ಮನೆಯಿಂದ ಹೊರಬಂದ ಯುವತಿಯೊಬ್ಬಳು
ಕಿಟಕಿಯ ತಿಳಿಧೂಳ ಮೇಲಣ ರೇಖೆಗಳ ಅಳಿಸಲು ಹಿಂಜರಿದು
ಕೈಬಟ್ಟೆ ಸಮೇತ ನಿಂತದ್ದು ಕಾಣಿಸಿತು. ಕಾದೆ.
ಏನನಿಸಿತೋ, ಸ್ವಲ್ಪ ಹೊತ್ತಲ್ಲಿ ಆ ರೇಖೆಗಳಿಗೆ ಇನ್ನಷ್ಟು ಸೇರಿಸಿ
ಚಿತ್ರವನ್ನೇ ಬದಲಿದಳು. ಆಮೇಲಾಕೆ ಒಳಹೋಗಿ ಆ ರೇಖೆಗಳಿಂದ
ಒಳತೂರುವ ಬೆಳಕು ನೆಲಹಾಸಿನ ಮೇಲೆ ಮೂಡಿಸಿದ
ಚಿತ್ತಾರ ನೋಡುತ್ತ ಕೂತಳೆಂದು ನಾನು ಕಲ್ಪಿಸಿದೆ.

ಅಂದು ನಾನು ಮನೆಗೆ ತೆರಳಿ ಆ ಹುಡುಗಿ
ಬೆಳಕು ಮೂಡಿಸಿದ ಚಿತ್ರವನ್ನೇ ತನ್ನ ಬೆರಳುಗಳಿಂದ
ಬದಲಿಸಲು ಯತ್ನಿಸುತ್ತಿರುವ ಚಿತ್ರ ಬಿಡಿಸಿದೆ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಏಯ್ತ್ ಮೇನ್

ಅಲ್ಲೇ ನಮಗೆಲ್ಲ ಎಚ್ಚರಾದದ್ದು
ಕ್ಲೀನರಿನ ಕೂಗಿಗೆ ದಡಬಡಾಯಿಸಿ ಎದ್ದಿದ್ದು
ಕಣ್ಣೊರಿಸಿಕೊಂಡು ಕಿಟಕಿಯಿಂದಾಚೆ ನೋಡಿದ್ದು
ಹೊಸದೇ ಲೋಕ ತಲುಪಿದ ಬೆರಗಲ್ಲಿ
ಹೊಸದೇನೋ ಇಲ್ಲಿಂದಲೇ ತೆರೆದುಕೊಳ್ಳುವುದೆಂಬ ಭ್ರಮೆಯಲ್ಲಿ
ಹೊಸಬದುಕಿಗಿದೆ ಹೆಬ್ಬಾಗಿಲೆಂಬ ಹುಸಿಖುಷಿಯಲ್ಲಿ
ಕಣ್ಕಣ್ಬಿಟ್ಟು ನೋಡಿದ್ದು ಹೊಸ ಬೆಳಗನ್ನು
ಹೊಚ್ಚಹೊಸದೇ ಆದ ಭಯದಲ್ಲಿ

ಕೈಚಾಚಿದರೆ ಸಿಗುವಷ್ಟು ಸಮೀಪ ಚಲಿಸುವ ವಾಹನಗಳು
ತಲೆಯೆಷ್ಟೆತ್ತಿದರೂ ದಿಟ್ಟಿಗೆ ನಿಲುಕದಷ್ಟೆತ್ತರದ ಕಟ್ಟಡಗಳು
ತಿರುತಿರುಗಿ ಎಣಿಸಿದರೂ ಲೆಕ್ಕ ಸಿಗದಷ್ಟು ಜನಗಳು-
ತುಂಬಿದ ನಗರಿಗೆ ಬಂದು ತಲುಪಿಯೇಬಿಟ್ಟ ದಿಗ್ಭ್ರಾಂತಿಯಲ್ಲಿ
ಕೂತ ಬಸ್ಸಿನ ಸೀಟಲ್ಲೇ ಚಡಪಡಿಸಿದ್ದು
ಎಲ್ಲ ತಿಳಿದವನ ಗತ್ತಲ್ಲಿ ಪಕ್ಕ ಕೂತಿದ್ದ ಅಪರಿಚಿತನಿಗೆ
ಈ ತಳಮಳ ತಿಳಿಯದಂತೆ ಎಚ್ಚರ ವಹಿಸಿದ್ದು, ಒಣನಗೆ ಬೀರಿದ್ದು

ಯಾರ ಉನ್ಮಾದವನ್ನೂ ಹುಸಿ ಮಾಡದು ನಗರ
ಸೋಗೆಯಟ್ಟಲ ಕೆಳಗಿನ ಹಕ್ಕಿಮರಿಯನ್ನು ಕುಕಿಲಕರೆಯಲ್ಲೇ
ತನ್ನ ಐಷಾರಾಮಿ ಗೂಡಿಗೆ ಸೆಳೆದುಕೊಂಡ ನಗರ
ಗುಣಮಟ್ಟದ ಗುಟುಕನ್ನೇ ಕೊಟ್ಟು ಪೊರೆಯಿತು
ಹೊಟ್ಟೆ ತುಂಬತೊಡಗಿದಂತೆ ಗುಟುಕಿನ ಲೆಕ್ಕ ಮರೆಯಿತು
ಏಯ್ತ್ ಮೇನಿನ ನಂತರದ ಮೇನುಗಳು ಏನಾದವು?
ಇಳಿಯುವವರು ಘನಗಾಂಭೀರ್ಯದಿಂದ ಅವರವರ
ನಿಲ್ದಾಣದಲ್ಲಿಳಿಯುತ್ತಿದ್ದರು, ಲಗೇಜೆಲ್ಲ ಸರಿಯಿದೆಯೇ
ಎಂದು ಮತ್ತೊಮ್ಮೆ ನೋಡಿ ಖಚಿತಪಡಿಸಿಕೊಂಡು
ಹೊಸ ನಿಲ್ದಾಣಗಳು ಹೊಸ ಮುಖಗಳು ಹೊಸ ಹೆಸರುಗಳು
ಎಂಥ ಪುಳಕವಿತ್ತು ಹೊಸ ಅನುಭವಕೆ ಒಳಗಾಗುವುದರಲ್ಲಿ
ಗೂಡೊಳಗಿನ ತಂಪು-ಬಿಸಿಗಳ ಹದವರಿತ ಹವೆಗೆ
ಎಂಥ ಮೈಮರೆಸುವ ತಾಕತ್ತಿತ್ತು-
ತಪ್ಪಿಸುವಂತೆ ಉರುಳಿದ ದಿನಗಳ ಎಣಿಕೆ

ಆಮೇಲೆ ಅದೆಷ್ಟು ಸಲ ಊರಿಂದ ಬರುತ್ತ
ಇದೇ ಏಯ್ತ್ ಮೇನನ್ನು ಬೈದುಕೊಂಡಿದ್ದು
ಕೊನೆಯಿರದಿರಲಿ ಎಂದುಕೊಂಡಿದ್ದ ರಾತ್ರಿ
ಅನವರತವಿರಲಿ ಎಂದುಕೊಂಡಿದ್ದ ಪಯಣ
ಮುಗಿದೇಹೋದದ್ದಕ್ಕೆ ಕ್ರುದ್ಧನಾದದ್ದು

ತಮ್ಮ ಫೋನ್ ಮಾಡಿದ್ದ
ಟೆಲಿಫೋನಿಕ್ ಇಂಟರ್ವ್ಯೂನಲ್ಲೇ ಆಯ್ಕೆಯಾಗಿದೆ,
ಕಾಲ್ ಲೆಟರ್ ಬಂದಿದೆ, ನಾನೂ ಬರ್ತಿದ್ದೀನಿ ಅಣ್ಣಾ ಸಿಟಿಗೆ-
ಎಂದವನ ದನಿಯ ತುಂಬ ಉಕ್ಕುವುತ್ಸಾಹವಿತ್ತು.
ಅಲಾರ್ಮ್ ಕೂಗಿ ಹೇಳುತ್ತಿದೆ ಬೆಳಗಾಯಿತೆಂದು
ಇಷ್ಟೊತ್ತಿಗೆ ಅವನ ಬಸ್ಸೂ ಏಯ್ತ್ ಮೇನಿನ ಬಳಿ ಬಂದಿರುತ್ತೆ
ಕ್ಲೀನರ್ ಹುಡುಗ ಕೂಗಿ ಎಬ್ಬಿಸಿರುತ್ತಾನೆ
ಧಿಗ್ಗನೆದ್ದು ಕೂತ ಅವನು ಕಣ್ಣೊರೆಸಿಕೊಳ್ಳುತ್ತ
ಮೊಬೈಲ್ ಹೊರತೆಗೆದು ನನಗೆ ಡಯಲ್ ಮಾಡುತ್ತಾನೆ
ಅಣ್ಣಾ, ನಾನು ಬಂದೇಬಿಟ್ಟೆ, ಬಾ ಪಿಕ್ ಮಾಡಲು.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]