Wednesday, December 01, 2021

ಜೀವ


ಪುಷ್ಯ ಮಾಸದ ಆಕಾಶ ಕಡುನೀಲಿ
ರಾತ್ರಿ ಕಟ್ಟಿಕೊಂಡಿದ್ದ ಇಬ್ಬನಿ ಮೋಡಗಳೂ ಕರಗಿ
ರವಿ ಮೂರಾಳೆತ್ತರಕ್ಕೇರುವ ವೇಳೆಗೆ
ಎಲ್ಲಾ ಶುಭ್ರ ನಿರಭ್ರ

ಬೇಕಿದ್ದರೆ ಒಂದು ಕುಂಚ ಹಿಡಿದು
ಇದೇ ನೀಲಿಗದ್ದಿ ತೆಗೆದು
ಮಣ್ಣ ಮೂರುತಿಗೆ ಬಳಿದು
ಅದನು ಕೃಷ್ಣನನ್ನಾಗಿಸಬಹುದು

ಆಮೇಲಾ ಕೃಷ್ಣನಿಗೆ ಊದಲು ಕೊಡಲು
ಬೇಕೊಂದು ಕೊಳಲು
ಈಗಷ್ಟೆ ಕಳೆದ ಮಳೆಗಾಲದ ನೀರು ಕುಡಿದು
ಮೊಳೆತು ಚಿಗುರಿದೆ ಬಿದಿರು
ನುಗ್ಗಿ ಮೆಳೆಯೊಳಗೆ ತೆಗೆದು ಸಿಗುರು
ಇಟ್ಟಾಗಿದೆಯೀಗ ಶ್ಯಾಮನ ಕೈಗೆ
ಇನ್ನು ಭುವಿಯ ಜನರೆಲ್ಲ ಮರುಳು

ನವಿಲುಗರಿಯದೇ ಸಮಸ್ಯೆ
ಮೋಡವಿದ್ದರೆ ಹಿತ್ತಿಲಿಗೆ ಬಂದ ನವಿಲು
ಉನ್ಮಾದದಲಿ ಕುಣಿದು
ಒಂದಷ್ಟು ಗರಿಗಳನುದುರಿಸಿ ಹೋಗುತ್ತಿತ್ತು
ಹೊಸ ಗರಿಯಿಲ್ಲದಿರೆಯೇನು,
ನಾಗಂದಿಗೆಯಲಿದೆ ಒಂದಿಡೀ ಕಟ್ಟು
ತೆಗೆದು ಜುಟ್ಟಿಗೆ ಸಿಕ್ಕಿಸಿದರಾಯ್ತು

ಬೃಂದಾವನದ ಜೌಗುಮಣ್ಣಲಿ ಶಿಲ್ಪ ರಚಿಸಿ
ಆಗಸದ ನೀಲಿಯ ಮೈಗೆ ಬಳಿದು
ಹಸಿಹಸಿ ಗಾಳಿಯ ಪುಪ್ಪುಸಕೆ ತುಂಬಿ
ಯಮುನೆಯ ನೀರು ಕುಡಿಸಿ
ತನ್ನೆದೆಯದೇ ಪ್ರೇಮಾಗ್ನಿಯಲಿ ಬೇಯಿಸಿ

ಪಂಚಭೂತಗಳಿಂದಾದ ಚಿತ್ರಕ್ಕೆ
ಜೀವ ತುಂಬಿದ್ದಾಗಿದೆಯೀಗ

ನಿದ್ದೆಯಿಂದೆಚ್ಚರವಾದವನಂತೆ
ಎದ್ದು ನಿಂತ ಕೃಷ್ಣ ತಕ್ಷಣವೇ
ಹೊರಟು ನಿಂತಿದ್ದಾನೆ
ದಿಟ್ಟತನದಲಿ ಮಥುರೆಯೆಡೆಗೆ
ಪೋಗದಿರೆಂದರೂ ಕೇಳದೆ

ಇತ್ತ ರಾಧೆ ಅಲವತ್ತುಕೊಳ್ಳುತ್ತಿದ್ದಾಳೆ:
ಹೀಗೆಂದು ಮೊದಲೇ ತಿಳಿದಿದ್ದರೆ
ಬಾಲಕೃಷ್ಣನನ್ನೇ ರಚಿಸುತ್ತಿದ್ದೆ
ಕನಿಷ್ಟ ಬಾಲ್ಯ ಕಳೆವವರೆಗಾದರೂ ಸಿಗುತ್ತಿತ್ತು ಸಖ್ಯ
ಬೆಣ್ಣೆ ಮೆದ್ದುಕೊಂಡು, ಸೀರೆ ಕದ್ದುಕೊಂಡು,
ಗೋಪಿಕೆಯರಿಂದ ಮುದ್ದಾಡಿಸಿಕೊಂಡು,
ದನಕರುಗಳ ಮೇಯಿಸಿಕೊಂಡು
ಕೊಳಲ ನಾದದಲೆಲ್ಲರ ತೇಲಿಸಿಕೊಂಡು
ಇರುತ್ತಿದ್ದ ಕಣ್ಣೆದುರೇ ಓಡಾಡಿಕೊಂಡು

ಕುಳಿತಿದ್ದಾಳೆ ರಾಧೆ ಪಡಸಾಲೆಯಲ್ಲಿ ದಿಗ್ಭ್ರಮೆಯಲ್ಲಿ
ಉಳಿದ ಒಂದಷ್ಟು ಮಣ್ಣು, ಬಣ್ಣ,
ಬಿಂದಿಗೆಯಲ್ಲಿನ ನೀರು, ಅಲಂಕಾರಕ್ಕೆಂದು
ತಂದಿಟ್ಟುಕೊಂಡಿದ್ದ ಸಾಮಗ್ರಿಗಳ ನಡುವೆ
ತನ್ನ ಮೂರ್ಖತನಕ್ಕೆ ತನ್ನನೇ ಹಳಿದುಕೊಳ್ಳುತ್ತ
ಜೀವದಂಶವೊಂದು ಎದ್ದು ನಡೆದ ದಿಕ್ಕ ದಿಟ್ಟಿಸುತ್ತ

[ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]

1 comment:

Preethi Shivanna said...

Kannada innu jeevanta...nimmantavarinda :)